ಮಂಗಳವಾರ, ಸೆಪ್ಟೆಂಬರ್ 25, 2012

ಮಾಯಾವೃತರು ನಾವೆಲ್ಲ

                        ಸೆಪ್ಟೆಂಬರ್ ೨೬, ೨೦೧೨
ಅಮೃತಬಿ೦ದು’ ಸರಣಿಯ ಬರಹಗಳು

ಎ೦ಟನೆಯ ಕ೦ತು

ಮಾಯಾ ಲೋಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೪/೦೪/೨೦೦೩ರ೦ದು ಪ್ರಕಟವಾಗಿತ್ತು)

’ಅವಿವೇಕೋ ಸೌಷುಪ್ತಿ ಮಾಯಾ’

ಜಾಗೃತ ಅವಸ್ಥೆ ಹಾಗೂ ಸ್ವಪ್ನಾವಸ್ಥೆಯ ಬಗ್ಗೆ ವಿಚಾರ ಮಾಡಿದೆವು. ಈಗ ನಿದ್ರಾವಸ್ಥೆ. ಎಂದರೆ ನಮ್ಮನ್ನು ಮುಸುಕಿರುವ ಮಾಯೆಯ ಬಗ್ಗೆ, ಅವಿವೇಕದ ಬಗ್ಗೆ ತಿಳಿದುಕೊಳ್ಳೋಣ. ಅರಿವು ಮೂಡದಿದ್ದರೆ ಮಾಯೆಯಿಂದ ಪಾರಾಗಲು ಸಾಧ್ಯವಿಲ್ಲ.

ಮಾಯಾ ಅಂದರೇನು? ನಿದ್ದೆ ಮಾಡುತ್ತೀರ ನೀವು. ಆಗ ಯಾವುದರ ಅರಿವೂ ಇರುವುದಿಲ್ಲ, ಅದು ಮಾಯಾ. ನಿದ್ರೆಯೆಂದರೆ ವಸ್ತುಸ್ಥಿತಿಯ ಪರಿಚಯವಿಲ್ಲದೇ ಇರತಕ್ಕಂಥಹುದು.

ನಮ್ಮ ಜೀವನವಿಡೀ ಒಂದು ದೀರ್ಘ ನಿದ್ರೆಯಂತಿದೆ. ಇದರಲ್ಲಿ ಎಚ್ಚೆತ್ತುಕೊಳ್ಳುವ ಘಳಿಗೆ ಬಹಳ ಕಡಿಮೆ. ನಿದ್ದೆಗಣ್ಣಿನಲ್ಲಿ ಮಕ್ಕಳು ಉಂಡು, ಕುಡಿದು ಮಲಗಿದಂತೆ. ಮಧ್ಯೆ ಮಧ್ಯೆ ನಮಗೆ ಅಲ್ಪಸ್ವಲ್ಪ ಎಚ್ಚರವಾದರೂ ಮತ್ತೆ ಮಗ್ಗಲು ಬದಲಿಸಿ ಮುಸುಕಿಟ್ಟು ಮಲಗಿಬಿಡುವಂತಿದೆ ನಿದ್ದೆಗಣ್ಣಿನ ನಮ್ಮ ಜೀವನ. ನಿದ್ರೆ ಎಂದರೆ ವಸ್ತುಸ್ಥಿತಿಯ ಪರಿಚಯವಿಲ್ಲದೇ ಇರುವಂಥಹುದು. ಅವಿವೇಕ! ನಿದ್ದೆಯಲ್ಲಿ ಹೊಸತೇನನ್ನೂ ಕಲಿಯಲಾಗುವುದಿಲ್ಲ. ಅಲ್ಲಿ ಅಭಾವವಿರುತ್ತೆ. ನಾವು ಮಾಡಿದ ತಪ್ಪನ್ನೇ ಮಾಡ್ತೀವಿ. ಹೊಸ ತಪ್ಪು ಮಾಡುವುದಿಲ್ಲ.

’ಅವಿವೇಕೋ ಮಾಯಾ ಸುಷುಪ್ತಿ’. ಮಾಯಾ ಅಂದರೇನು? ಯಾವುದು ಹೇಗಿಲ್ಲವೋ ಹಾಗೆ ಅದನ್ನು ತಿಳಿದುಕೊಳ್ಳುವುದು.

ಇಡೀ ಜೀವನದಲ್ಲಿ ನೋಡಿ - ಬೇರೆಯವರು ನನ್ನ ಬಗ್ಗೆ ಏನು ಅಂದ್ಕೋತಾರೆ ಅಂತ ನೀವೇ ಕಲ್ಪನೆ ಮಾಡಿಕೊಳ್ಳುತ್ತೀರ - ನಿಮ್ಮ ತಲೆಯಲ್ಲಿ.ಬೇರೆಯವರಿಗೆ ನಿಮ್ಮ ಬಗ್ಗೆ ಯೋಚನೆ ಮಾಡುವುದಕ್ಕೆ ಪುರುಸೊತ್ತೆಲ್ಲಿದೆ? ನಿಮ್ಮ ಮಾನ ಅಪಮಾನದ ಬಗ್ಗೆ ನೀವು ಕುಳಿತುಕೊಂಡು ಹಗಲು ರಾತ್ರಿಯಿಡೀ ಚಿಂತೆ ಮಾಡುತ್ತಾ ಇರುತ್ತೀರ. ಇದು ಮಾಯೆ. ನಾಳೆ ಈ ಬಗ್ಗೆ ಇನ್ನೂ ಆಳವಾಗಿ ತಿಳಿದುಕೊಳ್ಳೋಣ.

* * * * *

ನೀರ ಮೇಲಿನ ಗುಳ್ಳೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೫/೦೪/೨೦೦೩ರ೦ದು ಪ್ರಕಟವಾಗಿತ್ತು)

ನಸ್ಸಿನ ಮಾಯೆಗೆ ಒಂದು ನಿದರ್ಶನ.

ಒಬ್ಬಾಕೆಯ ಮಗ ಅನ್ಯ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡುಬಿಟ್ಟ. ಹಿಂದೆ ಆಕೆ ಬೇರೆ ಎಲ್ಲರಿಗೂ ಹೇಳೋದು ’ನನ್ನ ಮಗ ತುಂಬಾ ಒಳ್ಳೆಯವನು, ಅಂಥ ಮಗ, ಇಂಥ ಮಗ, ನಾವು ಹಾಕಿದ ಗೆರೆ ದಾಟಲ್ಲ’ ಅಂತ. ಯಾಕೆ ಅಂದರೆ ಬೇರೆಯವರು    ತಮಗಿ೦ತ ಕೀಳು ಎ೦ಬ ದೃಷ್ಟಿಕೋನವನ್ನಿಟ್ಟುಕೊ೦ಡು ಆಕೆ ಆಲೋಚನೆ ಮಾಡುತ್ತಾ ಇದ್ದರು. ಈಗ ತನ್ನ ಮಗನೇ ಈ ತರಹ ಆದ ನಿಮಿತ್ತ ಭಾರೀ ದೊಡ್ಡ ಆಘಾತ ಆಯ್ತು!

ಈಗೇನಾಯ್ತು, ಅವರು ಮನೆಯಲ್ಲೇ ಬೀಗ ಹಾಕಿಕೊಂಡು ಇದ್ದರು. ಬೇರೆಯವರಿಗೆ ಹೇಗೆ ಮುಖ ತೋರಿಸುವುದು, ಬೇರೆಯವರ ಮದುವೆಗೆ ಹೋಗುವುದು ಹೇಗೆ? ಅವರು ಕೇಳಲ್ಲವಾ, ’ಏನ್ರೀ ಹೀಗಾಯ್ತಂತೆ’ ಅಂತ! ನಮ್ಮ ಕುಲ, ಮಾನ, ಮರ್ಯಾದೆ ಎಲ್ಲಾ ಹೋಯ್ತಲ್ಲ ಅಂತ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಒಂದೆರಡು ದಿನ ಅಲ್ಲ, ವರ್ಷ ಆದರೂ ಆ ಹೆಂಗಸಿಗೆ ಮನೆ ಬಿಟ್ಟು ಬರಲು ಆಗಲಿಲ್ಲ. ’ಬೇರೆಯವರು ಏನೋ ಅಂದುಕೊಂಡುಬಿಡ್ತಾರೆ, ತನ್ನಬಗ್ಗೆ’ ಅಂತ. " ಅಮ್ಮಾ ನಿಮ್ಮ ಬಗ್ಗೆ ಬೇರೆಯವರು ಯೋಚನೆ ಮಾಡುವುದಕ್ಕೆ ಅವರಿಗೆ ಸಮಯಎಲ್ಲಿದೆಯಮ್ಮಾ? ಹಾಗೆ ನಿನ್ನ ನೋಡಿ ಏನಾದರೂ ಅಂದರೂ ಅಂದರು. ಅದರ ಬಗ್ಗೆ ನೀನ್ಯಾಕೆ ಅಷ್ಟು ಗೊಂದಲ ಎಬ್ಬಿಸಿಕೊಳ್ತೀಯಾ" - ಇದಕ್ಕೇ ಮಾಯಾ ಅನ್ನುವುದು.

ಬೇರೆಯವರು ನಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ನಾವು ಕುಳಿತುಕೊಂಡು ಯೋಚನೆ ಮಾಡ್ತಾ ಇರೋದು.ಪ್ರತಿಯೊಬ್ಬರ ವಿಚಾರ, ಆಲೋಚನೆ ಎಷ್ಟು ಕ್ಷಣಿಕವಾಗಿರುತ್ತದೆ ನೋಡಿ, ನಿಮ್ಮನ್ನು ಯಾರೋ ಒಳ್ಳೆಯವರು ಅಂದುಕೊಂಡಿರುತ್ತಾರೆ. ಎಷ್ಟು ಹೊತ್ತಾಗಬೇಕಪ್ಪ ಅವರ ಅಭಿಪ್ರಾಯ ಬದಲಿಸಿಕೊಳ್ಳಲಿಕ್ಕೆ! ಕೆಲವೇ ಕ್ಷಣ! ಕೆಟ್ಟವರು ಅಂತಲೂ ಅನ್ನಬಹುದು. ಎಷ್ಟೋ ಜನ ಕೆಟ್ಟವರು ಅಂದಿರುತ್ತಾರೆ. ಅವರ ಅಭಿಪ್ರಾಯ ಬದಲಾಯಿಸಿಕೊಳ್ಳುವುದಕ್ಕೆ ಎಷ್ಟು ಹೊತ್ತು ಆಗಬೇಕು?ಬೇರೆಯವರ ಅಭಿಪ್ರಾಯ ನೀರಿನ ಮೇಲಿನ ಗುಳ್ಳೆಯ ಹಾಗೆ. ನಾವು ಅದರ ಮೇಲೆ ನಮ್ಮ ಜೀವನದ ಅಸ್ತಿಭಾರವನ್ನು ಇಟ್ಟುಕೊಂಡರೆ ಎಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಆ ತರಹದ ಜೀವನ ಸ್ಥಾಯಿ ಹೇಗಾಗುತ್ತೆ?

’ಬೇರೆಯವರ ವಿಚಾರದ ಮೇಲೆ ನಮ್ಮ ಜೀವನವನ್ನು ಆಧರಿಸುವುದು ಮಾಯೆ, ಅವಿವೇಕ!’

* * * * *

ಮಾಯೆಯಿಂದ ವಿಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೬/೦೪/೨೦೦೩ರ೦ದು ಪ್ರಕಟವಾಗಿತ್ತು)

ಪ್ರತಿದಿನ ಈ ಪ್ರಪಂಚವನ್ನು ನೋಡುತ್ತಲೇ ಇರ್ತೀವಿ. ಆದರೂ ಏನೂ ಕಲಿಯುವುದೇ ಇಲ್ಲ. ಇದು ಅವಿವೇಕ. ಎಷ್ಟೋ ಜನ ಆಗಿಹೋಗಿದ್ದಾರೆ, ಎಷ್ಟೋ ಜನ ಸತ್ತಿದ್ದಾರೆ, ಹಾಗೇ ಸಾಯುತ್ತಾ ಇದ್ದರೆ, ನಾವೂ ಸಾಯ್ತೀವಿ ಒಂದು ದಿನ. ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ಇರ್ತೀವಿ. ಇದೇ ಮಾಯಾ, ಇದೇ ಅವಿವೇಕ, ನಿದ್ದೆ!

’ಅವಿವೇಕೋ, ಮಾಯಾ, ಸುಷುಪ್ತಿ, ತೃತೀಯ ಭೋಕ್ತಾ ವೀರೇಶಃ’.ಇಷ್ಟು ತಿಳಿದುಕೊಂಡುಬಿಟ್ಟರೆ ಸಾಕು. ’ಇದೆಲ್ಲಾ ಅವಿವೇಕ, ಮಾಯಾ’ ಎಂದುಕೊಂಡ ತಕ್ಷಣ, ತಿಳುವಳಿಕೆ ಬಂದ ತಕ್ಷಣ ಮಾಯೆ ದೂರವಾಗುತ್ತೆ. ಆ ನೀರಿನ ಕೆಳಗಿನ ಗುಳ್ಳೆ ನೀರಿನ ಮಟ್ಟಕ್ಕೆ ಬರುತ್ತಿದ್ದ ಹಾಗೇ ತನ್ನಷ್ಟಕ್ಕೇ ಮಾಯ ಆಗುವಂತೆ, ಮಾಯೆಯನ್ನು ಮಾಯೆ ಅಂತ ತಿಳಿದುಕೊಳ್ಳುವುದೇ ಜ್ಞಾನ. ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗ್ತಿದೆ ಅಂತ ತಿಳಿದುಕೊಳ್ಳುವುದೇ ಜ್ಞಾನ. ಇದನ್ನು ಯಾಕೆ ನಾವು ತಿಳಿದುಕೊಳ್ಳುವುದಿಲ್ಲ? ನಿದ್ರೆ ಮಾಡ್ತಾ ಇದ್ದೀವಿ. ನಾವು ನಿದ್ರೆ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತಾದ ತಕ್ಷಣ ಎಚ್ಚರ ಆಗಿಬಿಡ್ತೀವಿ, ಆಗದೇ! ಎಚ್ಚರ ಉಂಟಾದ ತಕ್ಷಣವೇ, ಮಾಯೆ ಅಂತ ಅರಿತುಕೊಂಡ ತಕ್ಷಣವೇ ಮಾಯೆಯಿಂದ ಹೊರಗೆ ಬರುತ್ತೀವಿ. ನಮ್ಮ ಆತ್ಮ ಚೇತನಕ್ಕೆ ಮರಳಿ ಹೊರಟುಹೋಗ್ತೀವಿ ’ನಮಃ ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶ ವಪುಷೇ!’

ನಾವು ತಪ್ಪು ಮಾಡಿದ್ದೀವಿ ಅಂತ ಜ್ಞಾನ ಉಂಟಾದಾಗ ತುಂಬಾ ಪಶ್ಚಾತ್ತಾಪ ಪಡ್ತೀವಿ. ಆಗ ನಾವು ಕ್ರೋಧದಿಂದ ತುಂಬಿಬಿಡ್ತೀವಿ. ನಮ್ಮನ್ನು ನಾವೇ ಹೀನಾಯ ಮಾಡಿಕೊಳ್ತೀವಿ, ಬೈದುಕೊಳ್ತೀವಿ; ಬೇರೆಯವರನ್ನು ಬೈಯುವುದಕ್ಕೆ ತಯಾರಾಗ್ತೀವಿ. ರೇಗಲು ಪ್ರಾರಂಭಿಸುತ್ತೀವಿ. ನಿನ್ನನ್ನು ನೀನು ತುಂಬಾ ಹೀನಾಯವಾಗಿ ಕಾಣ್ತಾ ಇದೀಯ, ನಿನ್ನ ಮೇಲೆ ನಿನಗೇ ಕೋಪ ಬಂದಿದೆ. ಒಳಗಿದೆ ಕೋಪದ ಬೆಂಕಿ, ಹೊರಗೆ ಇತರರನ್ನು ರೇಗುವುದು, ಬೈಯುವುದು ಅದರ ಶಾಖ ಮಾತ್ರ. ’ನಾನಿನ್ನೂ ಕಲಿತೇ ಇಲ್ಲವಲ್ಲ, ಎಷ್ಟು ಮಾಡಿದರೂ ಜೀವನದಲ್ಲಿ ಮುಂದುವರಿದೇ ಇಲ್ಲವಲ್ಲ’ ಅಂತ ನಿನ್ನ ಮೇಲೆ ನಿನಗೆ ಬೇಸರಿಕೆ. ಅದಕ್ಕೇ ಹೇಳುವುದು, ನೀನು ಧೈರ್ಯವಾಗಿರು.

’ತೃತೀಯ ಭೋಕ್ತಾ ವೀರೇಶಃ’ ಅಂತ ಹೇಳಿದರು. ವೀರೇಶ ಎಂದರೆ? ನಾಳೆ ತಿಳಿದುಕೊಳ್ಳೋಣ.

* * * * *

ವೀರೇಶ  
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೭/೦೪/೨೦೦೩ರ೦ದು ಪ್ರಕಟವಾಗಿತ್ತು)

’ತೃತೀಯ ಭೋಕ್ತಾ ವೀರೇಶಃ’ ಎಂದು ಹೇಳಿದರು.

ಇದು ಬಹಳ ಜಟಿಲವಾದ ಮುಖ್ಯವಾದ ಸೂತ್ರ. ನೀನು ನೂರು ಸಲ ಸೋತರೂ ನೂರ ಒಂದನೇ ಬಾರಿ ಗೆಲ್ಲಬಹುದು. ಅದರಿಂದ, ಗೆಲ್ಲುವ ಆಸೆಯನ್ನು ನೀನು ಬಿಡಬೇಡ, ಧೈರ್ಯವನ್ನು ಬಿಡಬೇಡ, ನೀನು ಗೆಲ್ತೀಯಾ. ಸೋಲುವುದಕ್ಕೆ ತಯಾರಾದರ್ರೆ ನೀನು ಗೆಲ್ಲುತ್ತೀಯ. ಸೋಲು ಒಪ್ಪಿಕೋ ಚೆನ್ನಾಗಿ. ಅದಕ್ಕೇ ’ವೀರೇಶ’ ಅಂದರು. ಅಂದರೆ ಸೋಲು ಒಪ್ಪಿಕೊಳ್ಳುವುದಕ್ಕೆ ತಯಾರಾಗಿರುವವನು ಅಂತ. ನಾವು ವಿರುದ್ಧವಾಗಿ ತಿಳಿದುಕೊಳ್ತೀವಿ. ಯಾರು ಸೋಲು ಒಪ್ಪಿಕೊಳ್ಳುವುದಿಲ್ಲವೋ ಅವನು ಗೆಲ್ತಾನೆ ಅಂತ. ಶುದ್ಧ ತಪ್ಪು! ಸೋಲು ಒಪ್ಪಿಕೊಂಡವನು ಶಾಂತವಾಗ್ತಾನೆ. ಯಾರು ಸೋಲು ಒಪ್ಪಿಕೊಳ್ಳುವುದಿಲ್ಲವೋ ಅವನು ಕುದೀತಾ ಇರ್ತಾನೆ, ಬೆಂಕಿಯಿಂದ, ಸೇಡಿನಿಂದ.

ಯಾರ ಮನಸ್ಸು, ಯಾರ ಬುದ್ಧಿ ಕುದಿಯುತ್ತಾ ಇದೆಯೋ, ಬೆಂದುಹೋಗಿದೆಯೋ ಅವನು ಸರಿಯಾಗಿ ಗೆಲ್ತಾನೆ ಅನ್ನೋದು ಆಗೋದೇ ಇಲ್ಲ. ಒಂದು ವೇಳೆ ಗೆದ್ದಂತೆ ಕಂಡುಬಂದರೂ, ಅವನದು ಹೊರಗಿನ ಗೆಲುವು ಅಷ್ಟೆ. ಅವನ ಮನಸ್ಸಿನಲ್ಲಿ ಸೋತೆ ಅನಿಸುತ್ತೆ. ಸೋಲು ಒಪ್ಪಿಕೊಳ್ಳಬೇಕು. ಸೋಲು ಒಪ್ಪಿಕೊಳ್ಳುವುದು ಅಂದರೇನು? ಧೈರ್ಯದಿಂದಿರಬೇಕು. ಸೋಲನ್ನು ಒಪ್ಪಿದವನೇ ಧೈರ್ಯದಿಂದಿರುವುದು ಸಾಧ್ಯ! ’ನಾನುಬ್ಈಗ ಸೋತೆ’ ಅಂತ ಅಂಗೀಕರಿಸಿದವನ ಮನಸ್ಸು ಶಾಂತವಾಗುತ್ತದೆ, ಸೇಡಿನಿಂದ ತುಂಬಿರುವುದಿಲ್ಲ. ಶಾಂತವಾಗಿರುವ ಮನಸ್ಸಿನಲ್ಲಿ ಧೈರ್ಯ ಉಂಟಾಗುತ್ತದೆ. ಅಶಾಂತವಾದ ಮನಸ್ಸಿನಲ್ಲಿ ಎಂದಿಗೂ ಧೈರ್ಯ ಬರುವುದೇ ಇಲ್ಲ. ’ತೃತೀಯ ಭೋಕ್ತಾ ವೀರೇಶಃ’ - ಜೀವನದಲ್ಲಿ ನಾವು ಯೋಗವನ್ನಂತೂ ಅನುಭವಿಸಿಲ್ಲ, ಭೋಗವನ್ನೂ ಅನುಭವಿಸಿಲ್ಲ. ಯೋಗದಲ್ಲೂ ತೃಪ್ತಿ, ಭೋಗದಲ್ಲೂ ತೃಪ್ತಿ ಸಿಗುತ್ತದೆ. ಆದರೆ ನಾವು ಭೋಗವನ್ನು ಕೂಡಾ ಅನುಭವಿಸಿಲ್ಲ!! ಲೋಭದ ಅರ್ಥವೇನು? ಸರಿಯಾಗಿ ಭೋಗಿಸಿಲ್ಲ! ಇದನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ - ಮುಂದಿನ ದಿನಗಳಲ್ಲಿ.
* * * * *

ಅನುಭೋಗ - ತೃಪ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೮/೦೪/೨೦೦೩ರ೦ದು ಪ್ರಕಟವಾಗಿತ್ತು)

ಒಂದು ಮಗುವನ್ನು ನೋಡಿ - ಒಂದು ಲಾಲಿಪಾಪ್ ತಿ೦ದ ನಂತರ ಆ ಮಗುವಿನ ಮುಖದಲ್ಲಿ ನೋಡಿ ಏನು ಖಳೆ, ಏನು ಆನಂದ! ಆ ಮಗುವಿನ ಕೈಗೆ ಒಂದು ಲಾಲಿಪಾಪ್ ಸಿಕ್ಕಿತು, ಅದನ್ನು ತಿಂದು ಮುಗಿಸಿತು ಅಷ್ಟೇ. ಅಷ್ಟಕ್ಕೇ ಆ ಮಗು ಸಂಪೂರ್ಣವಾಗಿ ಅದರ ಭೋಗ ಅನುಭವಿಸುತ್ತದೆ. ’ಎಷ್ಟು ತೃಪ್ತಿ’! ಆದರೆ, ರೆಸ್ಟರಾಂಟುಗಳಲ್ಲಿ ನೋಡಿ ದಿನಾ ಎಲ್ಲಾ ಜನ ಕುಳಿತು ತಿನ್ನುತ್ತಿರುತ್ತಾರೆ, ಆ ಮುಖದಲ್ಲಿ ತೃಪ್ತಿ ಇದೆಯಾ? ಹುಮ್ಮಸ್ಸು ಇದೆಯಾ? ಏನಿಲ್ಲ!

ಹಾಗೇ ಒಂದು ಮಗುವಿಗೆ ಒಂದು ಚಿಕ್ಕ ಹಾಡು, ಜೋಗುಳ ಹಾಡಿಬಿಡಿ. ಎಷ್ಟು ತಲ್ಲೀನವಾಗಿ ಮೈಮರೆತು ಆ ಸಂಗೀತ ಕೇಳ್ತಾ ಕೇಳ್ತಾ ನಿದ್ರೆ ಮಾಡಿಬಿಡುತ್ತೆ! ಆ ನಿದ್ರೆಯ ಮುಖದಲ್ಲೂ ಪ್ರಸನ್ನತೆಯಿದೆ. ಮಗು ನಿದ್ದೆ ಮಾಡಿ ಎದ್ದಿದೆ. ನಿದ್ರೆಯನ್ನು ಭೋಗಿಸಿದೆ, ಅನುಭವಿಸಿದೆ. ಮಗು ಎದ್ದ ತಕ್ಷಣ ಮುಖದಲ್ಲಿ ಒಂದು ಮುಗ್ಧತೆ, ಸಂತೋಷ, ಪ್ರೇಮ, ತೃಪ್ತಿ ಎಲ್ಲಾ ಕಾಣಿಸುತ್ತದೆ. ಅದೇ ನೀನೂ ನಿದ್ರೆ ಮಾಡ್ತೀಯಾ. ದಿನಾ ಎಲ್ಲಾ ನಿದ್ರೆ ಮಾಡಿ ಎದ್ದರೂ ಕೂಡಾ ಹಾಗೇ ಗೊಣಗಾಟ, ಏನಾದರೂ ಖಳೆ ಇದೆಯಾ ಆ ಮುಖದಲ್ಲಿ?ತುಂಬಾ ನಿದ್ರೆ ಮಾಡೋರ ಮುಖದಲ್ಲಿ ನೋಡಿ. ಎದ್ದ ತಕ್ಷಣ ಪ್ರಸನ್ನತೆ ಇದೆಯಾ, ತೃಪ್ತಿ ಇದೆಯಾ, ಸಂತೋಷ ಇದೆಯಾ? ಅಯ್ಯೋ ಏಳಬೇಕಲ್ಲಾ ಅಂತ ಏಳೋದು!

ಹಾಗೇ ನೋಡಿ, ಹೊಸದಾಗಿ ಮದುವೆಯಾದವರ ಮುಖದಲ್ಲಿನೋಡಿ. ಒಂದೆರಡು ದಿನ ಏನಾದರೂ ಖಳೆ ಇರಬಹುದು, ಮದುವೆಯ ಮುಂಚಿನ ದಿನಗಳಲ್ಲಿ. ಆದ ಮೇಲೆ ಭಯ, ಆತಂಕ, ಯೋಚನೆ, ತಾಪತ್ರಯ, ಒಂದು ತೃಪ್ತಿ ಇದೆಯಾ? ಆ ಭೋಗದ ತೃಪ್ತಿ ಇದೆಯಾ?

ಭೋಗದ ತೃಪ್ತಿ ಇದ್ದಿದ್ದರೆ ಪ್ರಪಂಚದಲ್ಲಿ ಇಷ್ಟೊಂದು ಹಿಂಸೆ, ಅತ್ಯಾಚಾರಗಳು ಆಗುತ್ತಾ ಇರಲಿಲ್ಲ! ಅತ್ಯಾಚಾರ ಹಿಂಸೆ ಮಾಡೋರ ಮುಖ ನೋಡಿ, ಬರೀ ಭೋಗದಲ್ಲೇ ಮುಳುಗಿರುತ್ತಾರೆ, ಅವರ ಮುಖದಲ್ಲಿ ಏನಾದರೂ ಖಳೆ ಇದೆಯಾ? ಸಂತೋಷ ಕಾಣಿಸುತ್ತಾ?ತೃಪ್ತಿ ಕಾಣಿಸುತ್ತಾ?

ರಾಜಕಾರಣಿಗಳನ್ನೇ ತೆಗೆದುಕೊಳ್ಳಿ. ತೃಪ್ತಿ ಇದೆಯಾ? ಪ್ರಸನ್ನತೆ? ಈ ಶಬ್ದಗಳಿಗೂ ಅವರಿಗೂ ತುಂಬಾ ದೂರ! ಹೀಗೇ ಸಾಧು, ಸನ್ಯಾಸಿ, ಮಹಾತ್ಮರು ಅನ್ನಿಸಿಕೊಂಡಿರುವವರ ಮುಖದಲ್ಲಿ, ಕಣ್ಣಲ್ಲಿ ಇಣುಕಿ ನೋಡಿ, ಎಲ್ಲಾದರೂ ತೃಪ್ತಿ ಇದೆಯಾ? ಶಾಂತಿ ಇದೆಯಾ?

ಅಧಿಕಾರದ ಲಾಲಸೆ, ಹಣಕಾಸಿನ ಲಾಲಸೆ, ಯಶಸ್ಸಿನ ಲಾಲಸೆ, ಶಿಷ್ಯರನ್ನು ಮಾಡಿಕೊಳ್ಳುವ ಉದ್ವೇಗ, ಈ ಎಲ್ಲಾ ತರಹದ ಲೋಭ!.. ಲೋಭದ ಅರ್ಥ ಏನು? ಸರಿಯಾಗಿ ಭೋಗಿಸಿಲ್ಲ!

ಊಟ ಸರಿಯಾಗಿ ಮಾಡದೇ ಇರುವವನಿಗೆ ಊಟದ ಚಿಂತೆ ಇಪ್ಪತ್ನಾಲ್ಕು ಘಂಟೆಯೂ ಇರುತ್ತೆ ಅಲ್ಲವೇ?

ಶನಿವಾರ, ಸೆಪ್ಟೆಂಬರ್ 22, 2012

ತೀವ್ರ ಅಂತಃ ಪರಿವರ್ತನೆ


ಆಚೆನ್, ಜರ್ಮನಿ
ಸೆಪ್ಟೆಂಬರ್ ೨೨, ೨೦೧೨

ಹಾಗಾದರೆ ಇವತ್ತಿನ ವಿಷಯ ಐ.ಟಿ - ಹೊಸ ಆಯಾಮಗಳು.
ನಿಮಗೆ ಗೊತ್ತಿದೆಯಾ, ನನಗೆ, ಐ.ಟಿ. ಎಂದರೆ ಇನ್ನರ್ ಟ್ರಾನ್ಸ್ಫಾರ್ಮೇಷನ್ (ಅಂತಃ ಪರಿವರ್ತನೆ) ಎಂದು ಅರ್ಥ. ಮತ್ತು ನೀವು ಐ.ಐ.ಟಿ ಎಂದು ಹೇಳಿದರೆ, ಅದರರ್ಥ ಇಂಟೆನ್ಸ್ ಇನ್ನರ್ ಟ್ರಾನ್ಸ್ಫಾರ್ಮೇಷನ್ (ತೀವ್ರ ಅಂತಃಪರಿವರ್ತನೆ).
ನಾವು, ತನ್ನಲ್ಲೇ ಒಂದು ಸಂಪೂರ್ಣ ತಂತ್ರಜ್ಞಾನವಾಗಿರುವ ನಮ್ಮ ಶರೀರದ ಬಗ್ಗೆ, ನಮ್ಮ ಮನಸ್ಸಿನ ಬಗ್ಗೆ, ನಮ್ಮ ಉಸಿರಿನ ಬಗ್ಗೆ ಮರೆಯುತ್ತೇವೆ. ಶರೀರವು ಒಂದು ಯಂತ್ರವಾಗಿದೆ ಮತ್ತು ಈ ಶರೀರವನ್ನು ನಿರ್ವಹಿಸುವ, ಈ ಶರೀರವನ್ನು ಬೆಳೆಸಲು ಸಹಾಯ ಮಾಡಿರುವ ಪ್ರಜ್ಞೆಯನ್ನು ನಾವು ನಿರ್ಲಕ್ಷಿಸಿದ್ದೇವೆ. ಅದರ ಕಡೆಗೆ ಕೂಡಾ ನಾವು ಗಮನ ನೀಡಬೇಕಾಗಿದೆ. ಆಗ ಜೀವನಕ್ಕೊಂದು ಹೊಸ ಆಯಾಮವು ತೆರೆದುಕೊಳ್ಳುತ್ತದೆ.
ಇವತ್ತು ಜಗತ್ತಿನಲ್ಲಿ ತಂತ್ರಜ್ಞಾನವು ಅಸ್ಥಿತ್ವದಲ್ಲಿರುವುದು ಪ್ರಜ್ಞೆಯ ಕಾರಣದಿಂದಾಗಿ. ಯಾರೋ ಒಬ್ಬರ ಮನಸ್ಸಿನಲ್ಲಿ ಆಲೋಚನೆಗಳು ಬರುತ್ತವೆ ಮತ್ತು ನಂತರ ಆ ಯೋಚನೆಗಳು ತಂತ್ರಜ್ಞಾನವಾಗಿ ಪ್ರಕಟಗೊಳ್ಳುತ್ತವೆ, ಮತ್ತು ಈ ಯೋಚನೆಗಳು ಬರುವುದು ಎಲ್ಲಿಂದ? ಮತ್ತು ಯೋಚನೆಗಳನ್ನು ವಾಸ್ತವವಾಗಿ ಅನುವಾದಿಸಲು ಸಹಾಯ ಮಾಡುವುದು ಯಾವುದು? ಅದು ಪ್ರಜ್ಞೆ.    
ಇವತ್ತು ನಮ್ಮಲ್ಲಿ ಸೆಲ್ ಫೋನುಗಳಿವೆ. ಆದರೆ ೨೦ರಿಂದ ೩೦ ವರ್ಷಗಳ ಹಿಂದೆ, ಸೆಲ್ ಫೋನುಗಳ ಬಗ್ಗೆ ನಮಗೆ ಯಾವುದೇ ಪರಿಕಲ್ಪನೆಯಿರಲಿಲ್ಲ. ಒಂದು ಸೆಲ್ ಫೋನನ್ನು ಮಾಡುವುದು ಹೇಗೆ - ಅಂತಹ ಒಂದು ಪರಿಕಲ್ಪನೆಯು ಯಾರದ್ದೋ ಪ್ರಜ್ಞೆಯೊಳಗೆ ಬಂತು, ಮತ್ತು ನಂತರ ಆ ಪರಿಕಲ್ಪನೆಯು ಪುನಃ ಪ್ರಜ್ಞೆಯಿಂದ ಆಭಿವೃದ್ಧಿಗೊಳಿಸಲ್ಪಟ್ಟಿತು. ಅಲ್ಲವೇ?!
ಪ್ರಪಂಚದಲ್ಲಿನ ಎಲ್ಲಾ ಸೃಜನಶೀಲತೆ, ಎಲ್ಲಾ ವೈಜ್ಞಾನಿಕ ಸಂಶೋಧನೆ, ಸಂಗೀತ, ಕಲೆ, ಫ್ಯಾಷನ್, ಚಲನಚಿತ್ರ, ಇವುಗಳೆಲ್ಲದರ ಎಲ್ಲಾ ಪ್ರಕಾರಗಳು ಮತ್ತು ಇತರ ಎಲ್ಲದಕ್ಕೂ ಕಾರಣವಾಗಿರುವ ಪ್ರಜ್ಞೆಗೆ ನಿಮ್ಮ ಗಮನದ ಆವಶ್ಯಕತೆಯಿದೆ.
ವೈಜ್ಞಾನಿಕ ಸಂಶೋಧನೆಗಳಾಗುವ, ಕಲೆ ಮತ್ತು ವಾಸ್ತುಶಿಲ್ಪವು ಅಭಿವೃದ್ಧಿ ಹೊಂದುವ ಅದೇ ಪ್ರಜ್ಞೆಯು, ಸಂತೋಷದ ಒಂದು ಭಂಡಾರ ಕೂಡಾ ಆಗಿದೆ. ಅದೇ ಪ್ರಜ್ಞೆಯು ಆರೋಗ್ಯವನ್ನು ಪ್ರಕಟಗೊಳಿಸಬಲ್ಲದು, ಸಂತೋಷವನ್ನು ಪ್ರಕಟಗೊಳಿಸಬಲ್ಲದು, ಪ್ರೀತಿ ಮತ್ತು ಸಹಾನುಭೂತಿಯನ್ನು ಪ್ರಕಟಪಡಿಸಬಲ್ಲದು. ನಮ್ಮ ಮೆದುಳು ಮತ್ತು ನಮ್ಮ ಶರೀರದ ವಿವಿಧ ಅಂಗಗಳಲ್ಲಿ ಕೆಲಸ ಮಾಡುತ್ತಿರುವ ಈ ಒಂದು ಪ್ರಜ್ಞೆಗೆ, ಹಲವಾರು ಸಾಮರ್ಥ್ಯಗಳಿವೆ. ಅದೇ ಪ್ರಜ್ಞೆಯು ಬಹಳ ತಾರ್ಕಿಕವಾಗಬಹುದು, ಅದು ತಿಳಿಯಬಲ್ಲದು, ಅದು ಗ್ರಹಿಸಬಲ್ಲದು, ಅದು ಸೃಷ್ಟಿಸಬಲ್ಲದು ಮತ್ತು ಅದು ಸಹಾನುಭೂತಿ, ಪ್ರೀತಿ, ಶಾಂತಿ ಹಾಗೂ ಆನಂದಗಳನ್ನು ಕೂಡಾ ಪ್ರಕಟಪಡಿಸಬಲ್ಲದು - ಸೆಲ್ ಫೋನಿನ ಹಾಗೆಯೇ.
ಒಂದು ಸೆಲ್ ಫೋನಿನಲ್ಲಿ ಎಷ್ಟೊಂದು ಕಾರ್ಯಗಳಿವೆಯೆಂದು (ಪ್ರೋಗ್ರಾಮ್) ನೋಡಿ. ಅಲ್ಲೊಂದು ಕ್ಯಾಮೆರಾವಿದೆ (ಶ್ರೀ ಶ್ರೀಯವರು ಸಭಿಕರ ಫೋಟೋಗಳನ್ನು ತೆಗೆಯುತ್ತಾರೆ). ನಂತರ ಟ್ವಿಟ್ಟರ್ ಇದೆ. ನಿಮಗೆ ನನ್ನ ಟ್ವಿಟ್ಟರ್ ಖಾತೆ ತಿಳಿದಿದೆಯೇ? @ಶ್ರೀಶ್ರೀಸ್ಪೀಕ್ಸ್ (@srisrispeaks). ಹಾಗೆ ಇದರಲ್ಲೊಂದು ಟ್ವಿಟ್ಟರ್ ಖಾತೆಯಿದೆ, ಇದರಲ್ಲಿ ಎಸ್.ಎಮ್.ಎಸ್. ಸೌಲಭ್ಯವಿದೆ, ಒಂದು ಟೆಲಿಫೋನ್ ಪುಸ್ತಕವಿದೆ ಮತ್ತೊಂದು ಸಂಗೀತ ವಾದಕ(ಮ್ಯೂಸಿಕ್ ಪ್ಲೇಯರ್)ವಿದೆ (ಶ್ರೀ ಶ್ರೀಯವರು ಸಂಗೀತ ವಾದಕದಲ್ಲಿ ಒಂದು ಸಂಗೀತವನ್ನು ಹಚ್ಚುತ್ತಾರೆ). ಈಗ, ಇದನ್ನು ನಿಲ್ಲಿಸುವುದು ಹೇಗೆಂಬುದು ಕೂಡಾ ನನಗೆ ತಿಳಿದಿರಬೇಕು (ಸಂಗೀತ ವಾದಕದ ಬಗ್ಗೆ). ನಾನು ಯಾವ ಗುಂಡಿಯನ್ನು ಅದುಮಬೇಕೆಂಬುದು ನನಗೀಗ ತಿಳಿಯಿತು. ಕೆಲವೊಮ್ಮೆ ನಮ್ಮ ಮನಸ್ಸು ಹಾಗಿರುತ್ತದೆ, ಅದು ತೊಡಗುತ್ತದೆ ಮತ್ತು ನಂತರ ಅದು ಮುಂದೆ ಮುಂದೆ ಹೋಗುತ್ತಾ ಇರುತ್ತದೆ ಮತ್ತು ಅದನ್ನು ನಿಲ್ಲಿಸುವುದು ಹೇಗೆಂಬುದು ನಮಗೆ ತಿಳಿದಿರುವುದಿಲ್ಲ, ಅಲ್ಲವೇ?!
ಒಂದು ಸೆಲ್ ಫೋನಿನಲ್ಲಿ ಹಲವಾರು ಅಪ್ಲಿಕೇಶನ್ಸ್ (ಸೌಲಭ್ಯಗಳು) ಇರುತ್ತವೆ, ಅಲ್ಲೊಂದು ಗಡಿಯಾರವಿದೆ! ಒಂದು ಸೆಲ್ ಫೋನಿನಲ್ಲಿ ಬಹು-ಕ್ರಿಯಾ ಸಾಮರ್ಥ್ಯಗಳು ಇರುತ್ತವೆ ಮತ್ತು ಹಾಗೆಯೇ ನಮ್ಮ ಮೆದುಳು ಹಾಗೂ ನಮ್ಮ ಜೀವನದಲ್ಲಿ ಇರುವುದು. ನಾವು ನಮ್ಮ ಪ್ರಜ್ಞೆಯನ್ನು ವಾಸ್ತವಿಕತೆಯ ವಿವಿಧ ಸ್ತರಗಳಿಗೆ ತೆರೆಯಬಹುದು. ಅಸ್ಥಿತ್ವದಲ್ಲಿರುವ ವಾಸ್ತವಿಕತೆಯು ಕೇವಲ ಇದೊಂದೇ ಅಲ್ಲ. ಆದುದರಿಂದ ನೀವು ಈ ಪ್ರಜ್ಞೆಯನ್ನು ಕೇವಲ ಕಲೆ ಅಥವಾ ಸಂಗೀತಕ್ಕಾಗಿ ಮಾತ್ರ ಕ್ರಿಯಾಶೀಲವಾಗಿಟ್ಟುಕೊಂಡಿದ್ದರೆ, ಮತ್ತು ಅಷ್ಟೇ ಆಗಿದ್ದರೆ, ಆಗ ಜೀವನವು ಸಂಪೂರ್ಣವಲ್ಲ. ಅಥವಾ ಅದು ಕೇವಲ ವಿಜ್ಞಾನ ಮತ್ತು ತರ್ಕಕ್ಕಾಗಿ ಆಗಿದ್ದರೆ, ಅದು ಸಂಪೂರ್ಣವಲ್ಲ.
ನೀವು ಕೇವಲ ಆನಂದವನ್ನು ಹೊಂದುವುದಕ್ಕೆ ಮತ್ತು ಸಂತೋಷವಾಗಿರುವುದಕ್ಕೆ ಮಾತ್ರ ಸಿದ್ಧರಿರುವುದಾದರೆ, ಆಗ ಜೀವನವು ಸಂಪೂರ್ಣವಲ್ಲ.
ಆದುದರಿಂದ, ಹೇಗೆ ನೀವು ಒಂದು ಸೆಲ್ ಫೋನಿನ ವಿವಿಧ ಕ್ರಿಯೆಗಳನ್ನು ಹಚ್ಚಬೇಕಾಗುವುದು ಮತ್ತು ನಿಲ್ಲಿಸಬೇಕಾಗುವುದೋ, ಅದೇ ರೀತಿಯಲ್ಲಿ ಪ್ರಕೃತಿಯು ನಮಗೆ ನೀಡಿರುವಂತಹ ಎಲ್ಲಾ ಸಾಮರ್ಥ್ಯಗಳನ್ನು ಹಚ್ಚುವ ಮತ್ತು ನಿಲ್ಲಿಸುವ ಸಾಮರ್ಥ್ಯವನ್ನು ನಾವು ಹೊಂದಬಹುದು.
ನಿಮ್ಮೊಳಗೆ ಒಂದು ನಿರ್ದಿಷ್ಟವಾದ ಸರಳತೆಯಿದೆ. ನಾವೆಲ್ಲರೂ ಆ ಮುಗ್ಧತೆ ಮತ್ತು ಸರಳತೆಯೊಂದಿಗೆ ಹುಟ್ಟಿದ್ದೇವೆ. ನಾವು ಬೆಳೆದಾಗ ಎಲ್ಲೋ ನಾವದನ್ನು ಕಳೆದುಕೊಂಡೆವು. ನಾವು ಬೆಳೆಯುತ್ತಿದ್ದಂತೆ ನಗುವುದನ್ನು ನಿಲ್ಲಿಸಿದೆವು, ಸಹಜತೆಯಿಂದಿರುವುದನ್ನು ನಾವು ನಿಲ್ಲಿಸಿದೆವು, ಸರಳತೆಯಿಂದಿರುವುದನ್ನು ನಾವು ನಿಲ್ಲಿಸಿದೆವು. ಅಲ್ಲವೇ!
ಆದುದರಿಂದ ಆವಶ್ಯಕವಾದುದೇನೆಂದರೆ ಎರಡೂ, ವಿವೇಚನೆ ಮತ್ತು ಸಂವೇದನಾಶೀಲತೆ.
ಸಂಪೂರ್ಣವಾಗಿ ತಾರ್ಕಿಕವಾಗಿರುವುದು, ತರ್ಕಬದ್ಧ ಚಿಂತನೆಯು ಮಾನವನಿಗೆ ಆವಶ್ಯಕವಾದುದು. ಯಾರೋ ಹೇಳುವರೆಂಬ ಕಾರಣಕ್ಕೆ ಯಾವುದನ್ನೂ ಒಪ್ಪಬೇಡಿ. ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಬೇಕು. ಇದು ಮನುಷ್ಯರ ಮೊದಲನೆಯ ಕ್ರಿಯೆಯಾಗಿದೆ. ತರ್ಕಬದ್ಧವಲ್ಲದ, ಕಾರಣಕ್ಕೆ ಅಷ್ಟಾಗಿ ಸರಿಹೊಂದದ  ಯಾವುದನ್ನಾದರೂ ನಾವು ಸ್ವೀಕರಿಸಬಾರದು.
ಆದುದರಿಂದ ಮೊದಲನೆಯದಾಗಿ ತರ್ಕ, ಈ ಕ್ರಿಯೆಯು ಮುಖ್ಯವಾದುದು ಯಾಕೆಂದರೆ ಅದು ವಿವೇಚನೆಯನ್ನು ಸೃಷ್ಟಿಸುತ್ತದೆ.
ಈಗ, ಕೇವಲ ವಿವೇಚನೆಯು ಸಾಕಾಗುವುದಿಲ್ಲ, ನಿಮ್ಮಲ್ಲಿ ಸಂವೇದನಾಶೀಲತೆಯಿರಬೇಕು. ಸಂವೇದನಾಶೀಲತೆಯು ಹೃದಯದ ಒಂದು ವಿಷಯವಾಗಿದೆ. ನೀವು ಬಹಳ ತರ್ಕಬದ್ಧವಾಗಿರಬಹುದು ಆದರೆ ಇತರರ ದೃಷ್ಟಿಕೋನಗಳನ್ನು ಕೂಡಾ ನೀವು ಅರ್ಥಮಾಡಿಕೊಳ್ಳಬೇಕು. ಹಲವು ಸಲ, ಜನರು ಏನನ್ನು ಹೇಳುವರೋ, ಅವರು ಸರಿಯಾಗಿ ಅದೇ ರೀತಿಯಲ್ಲಿ ವರ್ತಿಸುತ್ತಾರೆ. ಅವರು ಬಹಳ ಸರಿಯಾಗಿರುತ್ತಾರೆ, ಆದರೆ ಅವರು ಇತರರನ್ನು ಸುಲಭವಾಗಿ ನೋಯಿಸಬಲ್ಲರು. ಬಹಳ ಕೋಪದಲ್ಲಿರುವ ಯಾರಾದರೂ ತಮ್ಮ ಕೋಪವನ್ನು ತರ್ಕದೊಂದಿಗೆ ಸಮರ್ಥಿಸಿಕೊಳ್ಳುತ್ತಾರೆ, ಆದರೆ ತಮ್ಮ ಕೋಪವು ಇನ್ನೊಬ್ಬ ವ್ಯಕ್ತಿಯನ್ನು ನೋಯಿಸುತ್ತಿದೆಯೆಂಬುದು ಅವರಿಗೆ ತಿಳಿದಿರುವುದಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಮಾತ್ರವಲ್ಲ ಆದರೆ ತಮ್ಮನ್ನು ಕೂಡಾ. ಆದುದರಿಂದ ಎರಡನೆಯ ಮುಖ್ಯವಾದ ವಿಷಯವೆಂದರೆ ಸಂವೇದನಾಶೀಲರಾಗಿರುವುದು. ನಿಮಗೆ ಗೊತ್ತಿದೆಯಾ, ಒಬ್ಬರು ಮೂರ್ಖರಾಗಿರಬಹುದು, ಆದರೆ ನೀವವರನ್ನು ಒಬ್ಬ ಮೂರ್ಖನೆಂದು ಕರೆಯುವುದರಿಂದ, ಅವರ ಮೇಲೆ ರೇಗಾಡುವುದರಿಂದ, ಅವರನ್ನು ಬೈಯುವುದರಿಂದ ಸಹಾಯವಾಗುವುದಿಲ್ಲ. ನೀವು ಸಂವೇದನಾಶೀಲರಾಗಿರಬೇಕು.
ನಿಮಗೆ ಗೊತ್ತಾ, ಒಂದು ದಿನ, ಒಂದು ಕಾರ್ಯಕ್ರಮದಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿರದ ಒಬ್ಬರನ್ನು ಒಬ್ಬಳು ಮಹಿಳೆಯು ಬೈಯುತ್ತಿದ್ದಳು. ಆಗ ನಾನು ಆ ಮಹಿಳೆಯನ್ನು ಕರೆದು ಹೇಳಿದೆ, "ಕೇಳು, ನಿನ್ನ ಬೈಗುಳದಿಂದಾಗಿ ಆ ವ್ಯಕ್ತಿಯು ಬದಲಾಗಿರುವನೆಂದು ನಿನಗೆ ಅನ್ನಿಸುತ್ತದೆಯೇ?"
ಆ ಮಹಿಳೆಯಂದಳು, "ಇಲ್ಲ."
ನಾನಂದೆ, "ಹಾಗಾದರೆ ಆ ಮಹಿಳೆಯ ಕಡೆಗೆ ಅಷ್ಟೊಂದು ಚೀರಾಡುವುದರ ಪ್ರಯೋಜನವೇನು? ನೀನು ನಿನ್ನ ಬಗ್ಗೆಯಿರುವ ಧಾರಣೆಯನ್ನೇ ಹಾಳುಮಾಡಿಕೊಂಡೆ. ನೀನು ಯಾರನ್ನಾದರೂ ಬೈಯುವ ಕ್ಷಣದಲ್ಲಿ, ನೀನು ಅವರಿಗೆ ಒಂದು ಫಲದಾಯಕ ಅಥವಾ ಸೃಜನಾತ್ಮಕ ಸಲಹೆಯನ್ನು ನೀಡುತ್ತಿರುವುದಾದರೂ ಸಹ, ಅವರದನ್ನು ದೂರಕ್ಕೆ ತಳ್ಳುತ್ತಾರೆ. ನೀನು ರೇಗಾಡುವುದರ ಉದ್ದೇಶವೆಂದರೆ ಆ ವ್ಯಕ್ತಿಯಲ್ಲಿ ವಿವೇಕವನ್ನು ತರುವುದು, ಮತ್ತು ರೇಗಾಡುವುದರಿಂದ ಅದನ್ನು ಸಾಧಿಸಲಾಗದಿರುವಾಗ, ಪ್ರಯೋಜನವೇನು?"
ಅವಳಂದಳು, "ನೀವು ಹೇಳುವುದು ಸರಿ! ನನ್ನ ಜೀವಮಾನವಿಡೀ ನಾನಿದನ್ನು ಮಾಡುತ್ತಿದ್ದೇನೆ ಮತ್ತು ನನ್ನ ಸುತ್ತಲೂ ಹಲವಾರು ಶತ್ರುಗಳನ್ನು ಸೃಷ್ಟಿಸಿದ್ದೇನೆ."
ನಾನಂದೆ, "ಅದಕ್ಕಾಗಿಯೇ, ಒಂದು ಕತ್ತೆಯು ಒಂದು ಕುದುರೆಯಂತೆ ಓಡಬೇಕೆಂದು ನೀನು ನಿರೀಕ್ಷಿಸಲು ಸಾಧ್ಯವಿಲ್ಲ." ನೀವೊಂದು ಕತ್ತೆಯ ಮೇಲೆ ಕುಳಿತುಕೊಂಡು, ಅದೊಂದು ಕುದುರೆಯಂತೆ ಓಡಬೇಕೆಂದು ನಿರೀಕ್ಷಿಸುವಿರಿ, ಅದು ಸಾಧ್ಯವಿಲ್ಲ. ಆದುದರಿಂದ ಒಂದು ಕತ್ತೆಯನ್ನು ಒಂದು ಕತ್ತೆಯಾಗಿ ಸ್ವೀಕರಿಸಿ ಮತ್ತು ಒಂದು ಕುದುರೆಯನ್ನು ಒಂದು ಕುದುರೆಯಾಗಿ. ಆಗ ಕೋಪವೆಲ್ಲಿರುತ್ತದೆ?! ಇದು ವಿವೇಚನೆ - ಇತರರ ಭಾವನೆಗಳು ಮತ್ತು ಅವರ ಆವಶ್ಯಕತೆಗಳ ಕಡೆಗೆ ಸಂವೇದನಾಶೀಲರಾಗಿರುವುದು. ಇದು ಹೃದಯದ  ಗುಣ.
ಅತಿಯಾಗಿ ಸಂವೇದನಾಶೀಲರಾಗಿರುವ ಜನರಿದ್ದಾರೆ. ಅವರು ತಮ್ಮ ತರ್ಕಬದ್ಧತೆಯನ್ನು ಕಳೆದುಕೊಳ್ಳುತ್ತಾರೆ. ಅವರೊಂದು ಭಾವನಾತ್ಮಕವಾಗಿ ಒದ್ದೆಯಾದ ಶ್ಯಾವಿಗೆಯಂತಾಗುತ್ತಾರೆ. ಇದು ಕೂಡಾ ಒಳ್ಳೆಯದಲ್ಲ. ನಿಮ್ಮಲ್ಲಿ ಸಂವೇದನಾಶೀಲತೆ ಮತ್ತು ವಿವೇಚನೆಗಳ ಸರಿಯಾದ ಸಂತುಲನವಿರಬೇಕು. ನೀವೇನು ಹೇಳುವಿರಿ? ನಾನು ಹೇಳುತ್ತಿರುವುದು ಸರಿಯೇ?!
(ಸಭಿಕರು: ಹೌದು)
ಆದುದರಿಂದ ವಿವೇಚನಾಯುಕ್ತರಾಗಿ ಮತ್ತು ಸಂವೇದನಾಶೀಲರಾಗಿರುವುದು! ಇದು ಪ್ರಜ್ಞೆಯ ತಂತ್ರಜ್ಞಾನದ ಒಂದು ಕ್ರಿಯೆ. ನಂತರ ಬರುವುದು ಜೀವನದಲ್ಲಿ ಪ್ರಸನ್ನತೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ, ಕೆಲವು ಸೆಕೆಂಡುಗಳು ಅಥವಾ ಕೆಲವು ನಿಮಿಷಗಳ ವರೆಗಾದರೂ ಬಹಳ ಪ್ರಸನ್ನತೆಯನ್ನು ಅನುಭವಿಸಿರುತ್ತಾರೆ, ಮತ್ತು ನೀವು ಆ ಪ್ರಸನ್ನತೆಯನ್ನು ಅನುಭವಿಸುವಾಗ, ನೀವು ಮೌನವನ್ನು ಕೂಡಾ ಅನುಭವಿಸಿರುತ್ತೀರಿ ಹಾಗೂ ನೀವು ಬಹಳ ಆಧ್ಯಾತ್ಮಿಕತೆಯನ್ನು ಅನುಭವಿಸಿರುತ್ತೀರಿ; ಮೌನ ಮತ್ತು ಪ್ರಸನ್ನತೆಗಳ ಒಂದು ಆಳವಾದ ಭಾವ.
ನಮ್ಮ ಮೊಬೈಲ್ ಫೋನುಗಳಲ್ಲಿ ಹಲವುದರಲ್ಲಿ ಈ ಕ್ರಿಯೆಯು ಆರಿಸಲ್ಪಟ್ಟಿದೆ, ಅಥವಾ ನಾವದನ್ನು ಉಪಯೋಗಿಸಲೇ ಇಲ್ಲ. ನಮ್ಮ ಪ್ರಜ್ಞೆಯಲ್ಲಿ, ನಾವು ಈ ಕ್ರಿಯೆಯನ್ನು ಮುಟ್ಟಲೂ ಇಲ್ಲ - ಮತ್ತು ಅಲ್ಲಿಯೇ ಆರ್ಟ್ ಆಫ್ ಲಿವಿಂಗ್ ಬರುವುದು. ಅದು ನೀವು ಹೆಚ್ಚು ನಗಲು, ಹೆಚ್ಚು ಸೇವೆ ಮಾಡಲು ಸಹಾಯ ಮಾಡುತ್ತದೆ.
ನಿಮಗೆ ಗೊತ್ತಿದೆಯಾ, ಒಂದು ಶಿಶುವು ಒಂದು ದಿನಕ್ಕೆ ೪೦೦ ಸಾರಿ ನಗುವುದು. ಒಬ್ಬ ಹದಿಹರೆಯದವನು ಒಂದು ದಿನಕ್ಕೆ ಕೇವಲ ೧೭ ಸಾರಿ ಮಾತ್ರ ನಗುವನು, ಮತ್ತು ವಯಸ್ಕನು ನಗುವುದೇ ಇಲ್ಲ.
ಹೆಚ್ಚು ನಗುವುದು! ಆರ್ಟ್ ಆಫ್ ಲಿವಿಂಗ್ ನಿಮಗೆ ತರುವುದು ಅದನ್ನೇ! ನಗುನಗುತ್ತಾ ಸೇವೆ ಮಾಡುವುದು.
ವಿವೇಚನಾಯುಕ್ತರಾಗಿ ಮತ್ತು ಸಂವೇದನಾಶೀಲರಾಗಿರುವುದು.
ಮೌನ ಮತ್ತು ಪ್ರಸನ್ನತೆಯನ್ನು ಅನುಭವಿಸುವುದು.
ಅಷ್ಟೇ!

ಪ್ರಶ್ನೆ: ಪ್ರೀತಿಯ ಗುರುದೇವ, ಶಿಸ್ತು ಮತ್ತು ಸ್ವಾತಂತ್ರ್ಯದ ನಡುವೆ ಒಂದು ಸಂತುಲನವನ್ನು ಕಾಪಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅವುಗಳು ವಿರೋಧಾತ್ಮಕಗಳಾಗಿ ತೋರುತ್ತವೆ ಆದರೆ ಅವುಗಳು ಪೂರಕವಾದವು ಎಂಬುದನ್ನು ನೀನು ತಿಳಿಯಬೇಕು. ಶಿಸ್ತು ನಮಗೆ ಸ್ವಾತಂತ್ರ್ಯವನ್ನು ತರುತ್ತದೆ. ಒಬ್ಬ ಮಗುವಾಗಿ, ನೀನು ಪ್ರತಿ ದಿನ ಬೆಳಗ್ಗೆಯೂ ಮತ್ತು ಪ್ರತಿ ರಾತ್ರಿಯೂ ನಿನ್ನ ಹಲ್ಲುಗಳನ್ನುಜ್ಜುವಂತೆ ನಿನ್ನನ್ನು ಶಿಸ್ತುಬದ್ಧನನ್ನಾಗಿರಿಸಲಾಯಿತು. ಆ ಶಿಸ್ತು, ಹಲ್ಲು ನೋವು ಮತ್ತು ದಂತಕ್ಷಯದಿಂದ ನಿನಗೆ ಸ್ವಾತಂತ್ರ್ಯವನ್ನು ತಂದಿತು, ಅಲ್ಲವೇ?!
ಟ್ರೆಡ್ ಮಿಲ್ಲಿನ ಮೇಲೆ ನಡೆಯುವ ಶಿಸ್ತು ನಿನ್ನಲ್ಲಿದ್ದರೆ, ಆಗ ಅದು ಕೊಬ್ಬು ಮತ್ತು ಇತರ ಸಮಸ್ಯೆಗಳಿಂದ ನಿನಗೆ ಮುಕ್ತಿಯನ್ನು ತರುತ್ತದೆ.

ಪ್ರಶ್ನೆ: ಎಲ್ಲವನ್ನೂ ಮೌನವಾಗಿಸಿದ ಬಳಿಕ ಬರುವುದು ಯಾವುದು? ಮತ್ತು ಅದು ಸತ್ತು ಹೋಗಿರುವುದಕ್ಕಿಂತ ವ್ಯತ್ಯಸ್ತ ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅಗಾಧ ವ್ಯತ್ಯಾಸ! ಮೌನವು ಎಲ್ಲಾ ಸೃಜನಶೀಲತೆಯ ತಾಯಿಯಾಗಿದೆ. ಮೌನವು ಸೌಂದರ್ಯ ಮತ್ತು ಪ್ರೇಮದ ತಾಯಿಯಾಗಿದೆ. ಅಂತಃಸ್ಫುರಣೆ, ಶೋಧನೆ, ಕವಿತೆ, ಎಲ್ಲವೂ ಮೌನದಿಂದ ಹೊರಬರುತ್ತವೆ. ಸುದರ್ಶನ ಕ್ರಿಯೆ ಕೂಡಾ ಮೌನದಿಂದ ಹೊರಬಂತು.
ನಿಮ್ಮಲ್ಲಿ ಹೆಚ್ಚಿನವರು ಸುದರ್ಶನ ಕ್ರಿಯೆಯನ್ನು ಅನುಭವಿಸಿರುವಿರಿ ಎಂಬುದು ನನಗೆ ಗೊತ್ತು ಮತ್ತು ಅದರ ಬೆಲೆ ನಿಮಗೆ ತಿಳಿದಿದೆ.
ಈ ಸಲ ನಾನೊಂದು ಪ್ರವಾಸದಲ್ಲಿದ್ದೆ, ನಾನು ದಕ್ಷಿಣ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಹೋದೆ ಮತ್ತು ನಂತರ ದಕ್ಷಿಣ ಅಮೇರಿಕಾ, ನಂತರ ಉತ್ತರ ಅಮೇರಿಕಾ ಹಾಗೂ ಈಗ ಯುರೋಪಿಗೆ. ಎಲ್ಲವೂ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ. ಮತ್ತು ನಿಮಗೆ ಗೊತ್ತಿದೆಯಾ, ನಾನು ಬ್ರೆಝಿಲ್ ಮತ್ತು ಅರ್ಜೆಂಟೀನಾಗಳಲ್ಲಿನ ಜೈಲುಗಳನ್ನು ಸಂದರ್ಶಿಸಿದೆ. ಅರ್ಜೆಂಟೀನಾದಲ್ಲಿ, ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮತ್ತು ಸುದರ್ಶನ ಕ್ರಿಯೆಗಳನ್ನು ಮಾಡಿದ ೫೨೦೦ ಖೈದಿಗಳಿದ್ದರು ಹಾಗೂ ಅವರಲ್ಲಿ ಪ್ರತಿಯೊಬ್ಬರ ಕಣ್ಣುಗಳಲ್ಲೂ ಕಣ್ಣೀರಿತ್ತು. ಕಣ್ಣುಗಳು ಒದ್ದೆಯಾಗದ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಅಲ್ಲಿರಲಿಲ್ಲ. ಅವರೆಲ್ಲರೂ ತಮ್ಮ ಜೀವನದಲ್ಲಿ ಅಷ್ಟೊಂದು ದೊಡ್ಡ ಪರಿವರ್ತನೆಯನ್ನು ಕಂಡುಕೊಂಡಿದ್ದರು. ಅವರಂದರು, "ಮೊದಲು ನಾವು ಹೊರಗಿದ್ದೆವು ಮತ್ತು ನಾವು ಸ್ವತಂತ್ರರಾಗಿರಲಿಲ್ಲ. ಈಗ ನಾವು ಜೈಲಿನ ಒಳಗಿದ್ದೇವೆ ಮತ್ತು ನಾವು ಸ್ವತಂತ್ರರಾಗಿದ್ದೇವೆ ಹಾಗೂ ನಾವು ಸಂತೋಷವಾಗಿದ್ದೇವೆ. ನಿಮಗೆ ಬಹಳಷ್ಟು ಧನ್ಯವಾದಗಳು. ಈ ಕೋರ್ಸ್ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ."
ನಿಮಗೆ ಗೊತ್ತಿದೆಯಾ, ಪರಮೋಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳು ಕೂಡಾ ಸೆರೆಮನೆಯನ್ನು ಸಂದರ್ಶಿಸಲು ನನ್ನೊಂದಿಗೆ ಬಂದರು ಮತ್ತು ಅವರಂದರು, "ಗುರುದೇವ, ಇಲ್ಲೇನಾಯಿತೋ ಅದು ನಂಬಲಸಾಧ್ಯ. ಇದು ಎಲ್ಲಾ ಸೆರೆಮನೆಗಳಲ್ಲೂ ಪುನರಾವರ್ತಿಸಬೇಕೆಂದು ನಾವು ಆಶಿಸುತ್ತೇವೆ."
ಖಂಡಿತಾ, ಈ ಪರಿವರ್ತನೆಯ ಕಡೆಗೆ ನೋಡಿ ವಿಶ್ವವಿದ್ಯಾಲಯವು ನನಗೊಂದು ಡಾಕ್ಟರೇಟನ್ನು ಕೂಡಾ ನೀಡಿತು. "ಒಂದು ದಿನದಲ್ಲಿ ನಾನು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾದೆ" ಎಂದು ನಾನು ಹಾಸ್ಯ ಮಾಡುತ್ತಿದ್ದೆ.
ಇದನ್ನು ನಾನು ಯಾಕೆ ಹೇಳುತ್ತಿರುವೆನೆಂದರೆ, ಹಿಂಸೆಯಿಂದ ಮುಕ್ತವಾದ ಒಂದು ಸಮಾಜವನ್ನು ಸೃಷ್ಟಿಸಲು ನಮಗೆ ಸಾಧ್ಯವಿದೆ. ನನ್ನ ಕಲ್ಪನೆಯೆಂದರೆ, ಒಂದು ಹಿಂಸಾಮುಕ್ತವಾದ ಸಮಾಜ, ರೋಗಮುಕ್ತವಾದ ಶರೀರ, ಗೊಂದಲಮುಕ್ತವಾದ ಮನಸ್ಸು, ತಡೆಮುಕ್ತವಾದ ಬುದ್ಧಿ, ಆಘಾತಮುಕ್ತವಾದ ಸ್ಮರಣೆ ಮತ್ತು ದುಃಖಮುಕ್ತವಾದ ಆತ್ಮವನ್ನು ನೋಡುವುದು.
ಇವತ್ತು ಪ್ರಪಂಚದಲ್ಲಿ ಎಂತಹ ಹುಚ್ಚುತನ ನಡೆಯುತ್ತಿದೆಯೆಂಬುದನ್ನು ನೋಡಿ. ಕೇವಲ, ಯಾರೋ ಒಬ್ಬರು ಒಂದು ಚಲನಚಿತ್ರವನ್ನು ಮಾಡಿದರು ಎಂಬ ಕಾರಣಕ್ಕೆ, ದೇಶಗಳೆಲ್ಲಾ ಹೊತ್ತಿ ಉರಿಯುತ್ತಿವೆ. ಇದು ಹುಚ್ಚುತನವಲ್ಲವೇ! ಯಾಕೆ? ಅದು ಯಾಕೆಂದರೆ, ಬಹಳ ಅಗತ್ಯವಾಗಿರುವ ಅಹಿಂಸೆಯ ಶಿಕ್ಷಣವನ್ನು ಅವರಿಗೆ ನೀಡಲಾಗಿಲ್ಲ.

ಪ್ರಶ್ನೆ: ಒಬ್ಬರು ಗುರುವನ್ನು ಅನುಸರಿಸುವುದು ಇವತ್ತಿಗೂ ಕೂಡಾ ಆವಶ್ಯಕವೇ?
ಶ್ರೀ ಶ್ರೀ ರವಿ ಶಂಕರ್: ಈ ಪ್ರಶ್ನೆ ಯಾಕೆ? ಈ ಪ್ರಶ್ನೆಯನ್ನು ಕೇಳುವುದರ ಮೂಲಕ ನೀನು ನಿನ್ನನ್ನೇ ಒಂದು ಬಲೆಯಲ್ಲಿ ಬೀಳಿಸುತ್ತಿರುವೆ. ನಾನು ನಿನಗೊಂದು ಉತ್ತರವನ್ನು ಕೊಡುವಾಗ ಮತ್ತು ನೀನದನ್ನು ತೆಗೆದುಕೊಳ್ಳುವಾಗ, ಅದರರ್ಥ ನೀನು ಅದಾಗಲೇ ಅನುಸರಿಸುತ್ತಿರುವೆಯೆಂದು!
ನಾನು, "ಇಲ್ಲ, ಅನುಸರಿಸುವ ಅಗತ್ಯವಿಲ್ಲ" ಎಂದು ಹೇಳಿದರೆ ಮತ್ತು ನೀನು, "ಸರಿ, ನಾನು ಅನುಸರಿಸುವುದಿಲ್ಲ" ಎಂದು ಹೇಳಿದರೆ, ಆಗ ನೀನು ಅನುಸರಿಸಿದಂತಾಯಿತು.
ನಾನು "ಹೌದು" ಎಂದು ಹೇಳಿ ನೀನು ಅನುಸರಿಸಿದರೆ, ಅದರರ್ಥ ನೀನು ಅನುಸರಿಸಿದೆಯೆಂದು. ಆದುದರಿಂದ ನಾನು "ಇಲ್ಲ" ಎಂದು ಹೇಳುವುದು ಒಳ್ಳೆಯದು!
ಇದೊಂದು ಬಹಳ ಆಸಕ್ತಿಕರ ಪ್ರಶ್ನೆ, ಅಲ್ಲವೇ.
ನೋಡಿ, ಫುಟ್ಬಾಲ್ ಆಡಲು ನಿಮಗೊಬ್ಬರು ತರಬೇತಿದಾರರು ಬೇಕಾಗುವರು ಅಲ್ಲವೇ. ಪ್ರತಿಯೊಬ್ಬ ಸಾಕರ್ ಆಟಗಾರನಿಗೂ ಒಬ್ಬರು ತರಬೇತಿದಾರರು ಬೇಕಾಗುತ್ತಾರೆ. ಯಾವುದೇ ಆಟಕ್ಕಾಗಲೀ, ಯಾವುದೇ ಸಂಗೀತಕ್ಕಾಗಲೀ ನಿಮಗೊಬ್ಬರು ತರಬೇತಿದಾರರು ಬೇಕಾಗುತ್ತಾರೆ. ನೀವು ಶಾಲೆಗೆ ಹೋಗುವಾಗ ಮತ್ತು ಕೆಲವು ವಿಷಯಗಳಲ್ಲಿ ನೀವು ದುರ್ಬಲರಾಗಿರುವಾಗ ನಿಮಗೊಬ್ಬರು ತರಬೇತಿದಾರರು ಬೇಕಾಗುತ್ತಾರೆ. ಅದೇ ರೀತಿಯಲ್ಲಿ, ಆರಂಭದಲ್ಲಿ ಧ್ಯಾನ ಮತ್ತು ಯಾವುದೇ ಆಧ್ಯಾತ್ಮಿಕತೆಯನ್ನು ಕಲಿಯಲು ಸ್ವಲ್ಪ ಮಾರ್ಗದರ್ಶನ ಅಗತ್ಯವಾಗಿದೆ, ಅಲ್ಲವೇ! ಮತ್ತು ಅದಕ್ಕಾಗಿಯೇ ಅದು ಆವಶ್ಯಕ. ಮತ್ತು ಅದು ಆವಶ್ಯಕವಲ್ಲವೆಂದು ನಿನಗೆ ಅನ್ನಿಸಿದರೆ, ಆಗ ಅದು ನಿನಗೆ ಬಿಟ್ಟದ್ದು.

ಪ್ರಶ್ನೆ: ನಾನು ಮಾಡಿದ ತಪ್ಪಿನ ಕಡೆಗಿರುವ ತಪ್ಪಿತಸ್ಥ ಮನೋಭಾವದಿಂದ ನಾನು ನನ್ನನ್ನು ಬಿಡುಗಡೆಗೊಳಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಧ್ಯಾನ!

ಪ್ರಶ್ನೆ: ಇಲ್ಲಿ ಯುರೋಪಿನಲ್ಲಿ ಬಗೆಹರಿಸಬೇಕಾಗಿರುವ ಪ್ರಮುಖ ಸಮಸ್ಯೆ ಯಾವುದು?
ಶ್ರೀ ಶ್ರೀ ರವಿ ಶಂಕರ್: ಯುರೋಪಿನ ಬಗ್ಗೆ ನಾನು ಕೇಳುತ್ತಿರುವುದೇನೆಂದರೆ, ಜನತೆಯಲ್ಲಿ ೩೦% ದಿಂದ ೪೦% ಖಿನ್ನತೆಗೊಳಗಾಗುತ್ತಿರುವರು. ಹಲವಾರು ಜನರು ಪ್ರೋಝಾಕ್ ತೆಗೆದುಕೊಳ್ಳುತ್ತಿರುವರು ಮತ್ತು ಹಲವಾರು ಮಕ್ಕಳು ಆಟಿಸಂಗೆ ಗುರಿಯಾಗುತ್ತಿರುವರು. ಇದು ಕಳವಳಪಡುವಂತಹ ಒಂದು ವಿಷಯ. ನಾವಿದರ ಬಗ್ಗೆ ಗಮನ ಹರಿಸಬೇಕು.
ಅದಕ್ಕಾಗಿಯೇ ಧ್ಯಾನ, ಸುದರ್ಶನ ಕ್ರಿಯೆ, ಆರೋಗ್ಯ ಮತ್ತು ಆನಂದ ಕಾರ್ಯಾಗಾರವಿರುವುದು. ನಾವು ಜೀವನದಲ್ಲಿ ಈ ವಿಷಯಗಳನ್ನು ಸ್ವೀಕರಿಸುವಾಗ, ನಾವೊಂದು ಹೆಚ್ಚು ಸಂತೋಷದಾಯಕ ಸಮಾಜವಾಗಬಹುದು. ಇವುಗಳೊಂದಿಗೆ ನಾವೊಂದು ಸಂತೋಷದ ಅಲೆಯನ್ನು ಸೃಷ್ಟಿಸಬಹುದೆಂದು ನನಗೆ ಖಾತ್ರಿಯಿದೆ.

ಪ್ರಶ್ನೆ: ನಾನು ವ್ಯಾಯಾಮಗಳನ್ನು ಮಾಡುತ್ತೇನೆ, ಆದುದರಿಂದ ನಾನು ನಿಯಂತ್ರಿತ ಉಸಿರಾಟದಲ್ಲಿರುವೆನು. ಆರ್ಟ್ ಆಫ್ ಲಿವಿಂಗ್ ಕೋರ್ಸ್ ಹೇಗೆ ವಿಶೇಷವಾದುದು? ಈ ಕೋರ್ಸುಗಳು ಏನನ್ನು ಮಾಡುವುವೋ ಅವುಗಳನ್ನು ವ್ಯಾಯಾಮವು ನನಗೆ ನೀಡಬಹುದೆಂದು ನನಗನ್ನಿಸುತ್ತದೆ. ಈ ಕೋರ್ಸುಗಳು ನನಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಅದು ನಿನಗೆ ಹಲವಾರು ರೀತಿಗಳಲ್ಲಿ ಸಹಾಯ ಮಾಡಬಲ್ಲದು ಮತ್ತು ಅದಕ್ಕಾಗಿಯೇ ಅದು ಅಷ್ಟೊಂದು ಜನಪ್ರಿಯವಾಗಿರುವುದು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅದನ್ನು ಮಾಡಬೇಕಾದರೆ, ಅದರಲ್ಲಿ ಏನೋ ಇರಬೇಕು.
ನಾನು ನಿನಗೆ ಹೇಳುತ್ತೇನೆ ಕೇಳು, ಅದು ಬಹಳ ಆಳವಾಗಿದೆ, ತೀಕ್ಷ್ಣವಾಗಿದೆ ಮತ್ತು ಅದೇ ಸಮಯದಲ್ಲಿ, ಸರಳವೂ ಆಗಿದೆ. ಅದು ಕೇವಲ ಒಂದು ವ್ಯಾಯಾಮವಲ್ಲ. ಅದು ಶಕ್ತಿಯ ಆಧ್ಯಾತ್ಮಿಕ ಮೇಲೆತ್ತುವಿಕೆಯೊಂದಿಗಿನ ಒಂದು ವ್ಯಾಯಾಮವಾಗಿದೆ. ಕೋರ್ಸ್ ಮುಗಿಸಿ ನೀನು ಹೊರನಡೆಯುವಾಗ, ಜೀವನಕ್ಕೊಂದು ಹೊಸ ಆಯಾಮವನ್ನು ಸೇರಿಸಿಕೊಂಡು, ನೀನೊಂದು ದೊಡ್ಡ ನಗೆಯೊಂದಿಗೆ ಮತ್ತು ನಿನ್ನ ಹೃದಯದಲ್ಲಿ ತೃಪ್ತಿಯೊಂದಿಗೆ ಹೋಗುವುದು ಖಚಿತವಾಗಿದೆ.
ನಿಮಗೆ ಗೊತ್ತಿದೆಯಾ, ನಮ್ಮ ಮನಸ್ಸುಗಳಲ್ಲಿ ಹಲವಾರು ಪೂರ್ವಾಗ್ರಹಗಳಿರುತ್ತವೆ. ನಾವು ಪೂರ್ವಾಗ್ರಹಗಳನ್ನು ಬಿಡಬೇಕು. ಮನಸ್ಸಿನಲ್ಲಿ ವಿವಿಧ ರೀತಿಯ ಪೂರ್ವಾಗ್ರಹಗಳಿರುತ್ತವೆ. ನೋಡಿ, ನಾವು ಪ್ರಪಂಚದ ಪ್ರತಿಯೊಂದು ಭಾಗದ ಆಹಾರವನ್ನೂ ಸ್ವೀಕರಿಸುತ್ತೇವೆ. ನಾವು ಪ್ರಪಂಚದ ಪ್ರತಿಯೊಂದು ಭಾಗದ ಸಂಗೀತವನ್ನೂ ಸ್ವೀಕರಿಸುತ್ತೇವೆ, ಆದರೆ ಜ್ಞಾನ ಮತ್ತು ಜನರೊಂದಿಗೆ ಒಂದಾಗುವ ವಿಷಯಕ್ಕೆ ಬಂದಾಗ, ನಮ್ಮಲ್ಲಿ ಸ್ವಲ್ಪ ಪೂರ್ವಾಗ್ರಹಗಳಿರುತ್ತವೆ. ನಾವು ಈ ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು ಎಲ್ಲರೂ ನನಗೆ ಸೇರಿದವರು, ಸಂಪೂರ್ಣ ಪ್ರಪಂಚವು ಒಂದು ಕುಟುಂಬ ಎಂದು ಭಾವಿಸಬೇಕು.

ಬುಧವಾರ, ಸೆಪ್ಟೆಂಬರ್ 19, 2012

ಗಣೇಶನ ಸಾಂಕೇತಿಕ ಸ್ವರೂಪ

19
2012
Sep
ಬೆ೦ಗಳೂರು, ಭಾರತ

ಣೇಶ ಎಂದರೆ ನಿರಾಕಾರ, ದೈವಿಕತೆ - ಭಕ್ತರ ಅನುಕೂಲಕ್ಕಾಗಿ ಬೃಹದಾಕಾರದೊಳಗೆ ಅಡಕಗೊಳಿಸಲ್ಪಟ್ಟಿರುವ ರೂಪ. ಗಣ ಎಂದರೆ ಗುಂಪು. ಬ್ರಹ್ಮಾಂಡವು ಅಣುಗಳ ಮತ್ತು ವಿವಿಧ ಶಕ್ತಿಗಳ ಒಂದು ಗುಂಪು. ಈ ಅನೇಕ ಘಟಕಗಳನ್ನು ಆಳುವ ಯಾವುದೇ ಪರಮ ತತ್ವವಿಲ್ಲದೇ ಇದ್ದರೆ ಈ ಬ್ರಹ್ಮಾಂಡವು ಗೊಂದಲಮಯವಾಗಿರುತ್ತಿತ್ತು. ಈ ಎಲ್ಲಾ ಅಣುಗಳ ಮತ್ತು ಶಕ್ತಿಗಳ ಈಶ್ವರನು ಗಣೇಶ. ಅವನು ಎಲ್ಲವನ್ನೂ ವ್ಯಾಪಿಸಿರುವ ಮತ್ತು ಈ ಬ್ರಹ್ಮಾಂಡದಲ್ಲಿ ವ್ಯವಸ್ಥೆಯನ್ನು ತರುವ ಪರಮ ಪ್ರಧಾನ ಚೈತನ್ಯ.


ಆದಿಶಂಕರರಿಂದ ಗಣೇಶ ತತ್ವವು ಬಹಳ ಸುಂದರವಾಗಿ ತಿಳಿಸಲ್ಪಟ್ಟಿದೆ. ಗಣೇಶನು ಗಜಾನನ (ಆನೆಯ ಮುಖದವ)ನೆಂದು ಪೂಜಿಸಲ್ಪಟ್ಟರೂ, ಆ ಸ್ವರೂಪವಿರುವುದು ಪರಬ್ರಹ್ಮ (ನಿರಾಕಾರ) ರೂಪವನ್ನು ವ್ಯಕ್ತಪಡಿಸಲಿಕ್ಕಾಗಿ. ಅವನು’ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ’. ಅಂದರೆ ಗಣೇಶನು ಅಜಂ (ಜನ್ಮರಹಿತ), ಅವನು ನಿರ್ವಿಕಲ್ಪ(ಗುಣರಹಿತ), ಅವನು ನಿರಾಕಾರ (ಆಕಾರವರ್ಜಿತ) ಮತ್ತು ಅವನು ಸರ್ವವ್ಯಾಪಿ ಚೈತನ್ಯದ ಪ್ರತೀಕವಾಗಿದ್ದಾನೆ. ಈ ಬ್ರಹ್ಮಾಂಡಕ್ಕೆ ಹೇತುವಾಗಿರುವ ಶಕ್ತಿಯೇ ಗಣೇಶ. ಆ ಶಕ್ತಿಯಿಂದಲೇ  ಎಲ್ಲವೂ ಉದ್ಭವವಾಗುತ್ತದೆ ಮತ್ತು ಎಲ್ಲವೂ ಅದರಲ್ಲೇ ಲೀನವಾಗುತ್ತದೆ.

ಗಣೇಶನು ಹೇಗೆ ಗಜಮುಖನಾದನೆಂಬ ಕಥೆಯು ನಮ್ಮೆಲ್ಲರಿಗೂ ತಿಳಿದಿದೆಯಷ್ಟೇ. ಪಾರ್ವತಿಯು ಶಿವನೊಂದಿಗೆ ಸ೦ಭ್ರಮಿಸುತ್ತಿರುವಾಗ ಕೊಳೆಯಾದಳು. ಇದನ್ನರಿತಾಗ ಅವಳು ತನ್ನ ಶರೀರದ ಮೇಲಿನ ರಾಡಿಯನ್ನು ತೆಗೆದು ಅದರಿಂದ ಒಬ್ಬ ಹುಡುಗನನ್ನು ನಿರ್ಮಿಸಿದಳು. ನಂತರ ತಾನು ಸ್ನಾನ ಮಾಡುವಾಗ ಅಲ್ಲಿ ಕಾಯಲು ಅವನಿಗೆ ಹೇಳಿದಳು. ಶಿವನು ಮರಳಿದಾಗ, ಹುಡುಗನು ಅವನನ್ನು ಗುರುತಿಸಲಿಲ್ಲ ಮತ್ತು ಅವನ ಹಾದಿಯನ್ನು ತಡೆದನು. ಹಾಗಾಗಿ ಶಿವನು ಹುಡುಗನ ತಲೆಯನ್ನು ಕಡಿದು ಒಳಗೆ ಹೋದನು. ಇದನ್ನು ನೋಡಿದಾಗ ಪಾರ್ವತಿಯು ಆಘಾತಗೊಂಡಳು. ಅವಳು ಶಿವನಿಗೆ ಆತ ತಮ್ಮಿಬ್ಬರ ಮಗನೆಂದು ವಿವರಿಸಿ ಅವನನ್ನು ಹೇಗಾದರೂ ಕಾಪಾಡಬೇಕೆಂದು ಕೇಳಿಕೊಂಡಳು. ಆಗ ಶಿವನು ತನ್ನ ಸಹಾಯಕರಿಗೆ ಉತ್ತರ ದಿಕ್ಕಿಗೆ ತಲೆಮಾಡಿ ಮಲಗಿರುವವರೊಬ್ಬರ ತಲೆಯನ್ನು ತರಲು ಆದೇಶಿಸಿದನು. ಆ ಸಹಾಯಕರು ತಂದ ಒಂದು ಆನೆಯ ತಲೆಯನ್ನು ಶಿವನು ಆ ಹುಡುಗನ ಶರೀರಕ್ಕೆ ಜೋಡಿಸಿದಾಗ ಗಣೇಶನ ಜನ್ಮವಾಯಿತು.

ಈ ಕಥೆಯು ವಿಚಿತ್ರವೆನಿಸುತ್ತದೆಯೇ? ಪಾರ್ವತಿಯ ಶರೀರದಲ್ಲಿ ಕೊಳೆ ಏಕಾಗಬೇಕು? ಎಲ್ಲವನ್ನೂ ತಿಳಿದಿರುವ ಶಿವನಿಗೆ ತನ್ನ ಸ್ವಂತ ಮಗನ ಪರಿಚಯವಾಗಲಿಲ್ಲವೇ? ಶಿವ ಸದಾ ಧ್ಯಾನಸ್ಥ, ಶಾಂತಿಯ ಸ್ವರೂಪ, ತನ್ನ ಮಗನ ತಲೆಯನ್ನೇ ಕಡಿಯುವಷ್ಟು ಮುಂಗೋಪಿಯಾಗಿದ್ದನೇ? ಮತ್ತೆ ಗಣೇಶನಿಗೆ ಆನೆಯ ತಲೆಯೇಕೆ? ಇದಕ್ಕೆಲ್ಲಾ ಒಂದು ಇನ್ನೂ ಆಳವಾದ ಅರ್ಥವಿದೆ.

ಪಾರ್ವತಿಯು ಹಬ್ಬದ ಹುರುಪಿನ ಶಕ್ತಿಯ ಸಂಕೇತವಾಗಿದ್ದಾಳೆ. ಅವಳು ಕೊಳೆಯಾದಳೆಂದರೆ, ಉತ್ಸವಾಚರಣೆಯು ಸುಲಭದಲ್ಲೇ ರಾಜಸಿಕವಾಗಬಹುದು ಅಥವಾ ಉದ್ರಿಕ್ತವಾಗಬಹುದು ಮತ್ತು ನಿಮ್ಮನ್ನು ನಿಮ್ಮ ಕೇಂದ್ರದಿಂದ ವಿಚಲಿತಗೊಳಿಸಬಹುದು. ಕೊಳೆಯು ಅಜ್ಞಾನದ ಸಂಕೇತ, ಮತ್ತು ಶಿವನು ದಿವ್ಯವಾದ ಮುಗ್ಧತೆ, ಶಾಂತಿ ಮತ್ತು ಜ್ಞಾನದ ಸಂಕೇತ. ಹಾಗಾಗಿ ಗಣೇಶನು ಶಿವನ ಮಾರ್ಗವನ್ನು ತಡೆದಾಗ, ಅಜ್ಞಾನವು (ತಲೆಯ/ಬುದ್ಧಿಯ ಗುಣಸ್ಥಿತಿ) ಜ್ಞಾನವನ್ನು ಗುರುತಿಸುವುದಿಲ್ಲ. ಆಗ ಜ್ಞಾನವು ಅಜ್ಞಾನವನ್ನು ದಾಟಿ ನಡೆಯಬೇಕು. ಇದು ಶಿವನು ಆ ಹುಡುಗನ ತಲೆಯನ್ನು ಕಡಿದುದರ ಸಂಕೇತ.

ಮತ್ತೆ ಆನೆಯ ತಲೆಯೇಕೆ? ಆನೆಯು ಜ್ಞಾನಶಕ್ತಿ ಮತ್ತು ಕರ್ಮಶಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಆನೆಯ ಪ್ರಮುಖ ಗುಣಗಳೆಂದರೆ ವಿವೇಕ ಮತ್ತು ನಿರಾಯಾಸತ್ವ. ಆನೆಯ ಬೃಹತ್ತಾದ ತಲೆಯು ವಿವೇಕ ಮತ್ತು ಜ್ಞಾನವನ್ನು ಸೂಚಿಸುತ್ತದೆ. ಆನೆಗಳು ತಡೆಗಳ ಸುತ್ತ ಬಳಸಿ ನಡೆಯುವುದಿಲ್ಲ, ಅಲ್ಲದೇ ತಡೆಗಳಿಂದ ನಿಲ್ಲಿಸಲ್ಪಡುವುದೂ ಇಲ್ಲ. ಅವು ತಡೆಗಳನ್ನು ತೆಗೆದು ಮುನ್ನಡೆಯುತ್ತವೆ - ಇದು ನಿರಾಯಾಸತೆಯನ್ನು ಸೂಚಿಸುತ್ತದೆ. ನಾವು ಭಗವಾನ್ ಗಣೇಶನನ್ನು ಪೂಜಿಸಿದಾಗ ನಮ್ಮೊಳಗಿರುವ ಈ ಗಜಗುಣಗಳು ಬೆಳಗಿ ನಾವು ಈ ಗುಣಗಳ ಪ್ರಯೋಜನ ಪಡೆಯುತ್ತೇವೆ.

ಗಣೇಶನ ದೊಡ್ಡ ಹೊಟ್ಟೆಯು ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಗಣೇಶನ ಮೇಲ್ನೆತ್ತಿ, ಮುಮ್ಮುಖವಾಗಿರುವ ಕೈ ಅಭಯಹಸ್ತದ ಸಂಕೇತವಾಗಿದ್ದು, ’ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ. ಮತ್ತು ಅವನ ಹೊರಮುಖವಾಗಿರುವ ಕೆಳಗಿನ ಕೈಯು ನಿರಂತರವಾದ ಕೊಡುಗೆಯ ಸಂಕೇತ ಮತ್ತು ಶಿರ ಬಾಗಿಸಲು ಆಹ್ವಾನ ಕೂಡ. ಇದು ನಾವೆಲ್ಲರೂ ಒಂದು ದಿನ ಈ ಭೂಮಿಯಲ್ಲಿ ಲೀನವಾಗುತ್ತೇವೆಂಬ ಸಂಗತಿಯ ಚಿಹ್ನೆ. ಗಣೇಶನು ಏಕದಂತನೂ ಕೂಡ, ಇದು ಏಕ ಸೂಚಿತ್ವದ ಸಂಕೇತ. ಗಣೇಶನು ಧರಿಸುವ ಆಯುಧಗಳೂ ಸಾಂಕೇತಿಕ. ಅವನು ತನ್ನ ಕೈಗಳಲ್ಲಿ ಅಂಕುಶ (ಜಾಗೃತಿಯ ಸಂಕೇತ) ಮತ್ತು ಪಾಶ (ನಿಯತ್ರಣದ ಸಂಕೇತ)ವನ್ನು ಹಿಡಿದಿದ್ದಾನೆ. ಸ್ವ- ಜಾಗೃತಿಯಿಂದ ಬಹಳ ಶಕ್ತಿಯು ಹೊರಹುಮ್ಮುವುದು, ಇದರ ನಿಯಂತ್ರಣವಿಲ್ಲದಿದ್ದಲ್ಲಿ ಆ ಶಕ್ತಿಯು ಕಗ್ಗಂಟಾಗುವುದು.

ಮತ್ತೆ ಗಜಮುಖನಾದ ಭಗವಾನ್ ಗಣೇಶನು ಅಷ್ಟು ಚಿಕ್ಕದಾದ ಇಲಿಯ ಮೇಲೆ ಕುಳಿತು ಏಕೆ ಸಂಚರಿಸುತ್ತಾನೆ? ಇದು ಬಹಳ ಅಸಮಂಜಸವಲ್ಲವೇ?ಇದರಲ್ಲೂ ಬಹಳ ಆಳವಾದ ಸಾಂಕೇತಿಕತೆಯಿದೆ. ಕಟ್ಟಿಹಾಕುವಂಥ ಹಗ್ಗಗಳನ್ನು ಇಲಿಯು ಕಚ್ಚಿ ತಿಂದು ಒಗೆಯುತ್ತದೆ. ಹಲವಾರು ಪೊರೆಗಳ ಅಜ್ಞಾನವನ್ನೇ ಸೀಳಿ ನುಗ್ಗಬಲ್ಲ, ಪರಮ ಮೂಲವಾದ ಜ್ಞಾನ ಸ್ವರೂಪನಾದ ಗಣೇಶನ ಬಳಿ ಕರೆದೊಯ್ಯಬಲ್ಲ ಮಂತ್ರದಂತೆ ಇರುವುದು ಇಲಿ!

ನಮ್ಮ ಋಷಿಗಳು ಎಷ್ಟು ಆಳವಾದ ಜ್ಞಾನ ಹೊಂದಿದ್ದರೆಂದರೆ, ಅವರು ದೈವಿಕತೆಯನ್ನು ಪದಗಳಿಗಿಂತ ಹೆಚ್ಚು ಚಿಹ್ನೆಗಳ ಮೂಲಕ ವ್ಯಕ್ತಪಡಿಸುತ್ತಿದ್ದರು, ಏಕೆಂದರೆ ಸಮಯದೊಂದಿಗೆ ಪದಗಳು ಬದಲಾಗುತ್ತವೆ, ಆದರೆ ಚಿಹ್ನೆಗಳು ಬದಲಾಗದೆ ಉಳಿಯುತ್ತವೆ. ಸರ್ವ ವ್ಯಾಪಿಯನ್ನು ಗಣೇಶನ ರೂಪದಲ್ಲಿ ನಾವು ಅನುಭವಿಸುವಾಗ, ಈ ಸಾಂಕೇತಿಕತೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ, ಜೊತೆಗೇ ಗಣೇಶನು ನಮ್ಮೊಳಗೇ ಇದ್ದಾನೆಂದೂಸಂಪೂರ್ಣವಾಗಿ ಅರಿತಿರೋಣ. ನಾವು ಗಣೇಶ ಚತುರ್ಥಿಯನ್ನು ಆಚರಿಸುತ್ತಿರುವಂತೆ ಈ ವಿವೇಕವನ್ನು ಹೊಂದಿರಬೇಕು.

ಶುಕ್ರವಾರ, ಸೆಪ್ಟೆಂಬರ್ 14, 2012

ಬದುಕೆತ್ತ ಸಾಗಿದೆ, ನಿಂತು ನೋಡಿ

14
2012
Sep
ಲಿಮಾ, ಪೆರು



ಇಂದು ರಾತ್ರಿ ಏನು ಮಾತನಾಡೋಣ?
ನಾನು ಮಾತುಗಾರನ ಪಾತ್ರವಹಿಸುತ್ತಿದ್ದೇನೆ ಮತ್ತು ನೀವೆಲ್ಲರೂ ಕೇಳುಗರಾಗಿದ್ದೀರಿ.ನೀವಿಂದು ರಾತ್ರಿ ಏನು ತಿಳಿಯ ಬಯಸುತ್ತೀರೆಂಬುದನ್ನು ನಾನು ತಿಳಿಯುವುದು ಬಹಳ ಚೆನ್ನಾಗಿರುತ್ತದೆ.
ನೀವು ವಿಶಯಗಳನ್ನು ಯೋಚಿಸಬಹುದು.

ನಮ್ಮ ಹೃದಯಕ್ಕೆ ಬಲು ನೆಚ್ಚಿನ ವಿಷಯ ಮಾತನಾಡಲು ನಾವು ಒಂದು ಮಾಮೂಲಿನ(ಅನೌಪಚಾರಿಕವಾದ) ಪರಿಸರದಲ್ಲಿರಬೇಕು. ಔಪಚಾರಿಕ ವಾತಾವರಣವು ವಿವೇಕ ಮತ್ತು ನೈಜತೆಗೆ(ವಿಶ್ವಾಸಾರ್ಹತೆಗೆ) ಒಗ್ಗುವುದಿಲ್ಲ.
ನನಗೆ ಎಲ್ಲವನ್ನೂ ಅನೌಪಚಾರಿಕವಾಗಿ ಮಾಡುವ ಅಭ್ಯಾಸವಿದೆ.

ಹಾಗಾಗಿ ನಾವು ಸುತ್ತ ತಿರುಗಿ ನಮ್ಮ ಮುಂದೂ, ಹಿಂದೂ, ಪಕ್ಕದಲ್ಲೂ ಇರುವ ವ್ಯಕ್ತಿಗಳಿಗೆ ಅಭಿವಂದಿಸುವುದರೊಂದಿಗೆ ಪ್ರಾರಂಭಗೊಳ್ಳೋಣ. ನಿಮ್ಮ ಸುತ್ತಲಿನ ಎಲ್ಲರೊಂದಿಗೂ ಪರಿಚಿತರಾಗಿ.

ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ.
ನೀವು ನಿಜವಾಗಿಯೂ ಆ ವ್ಯಕ್ತಿಯನ್ನು ಅಭಿವಂದಿಸಿದಿರೇ, ಅಥವಾ ಅದನ್ನು ಔಪಚಾರಿಕವಾಗಿ ಮಾಡಿದಿರೇ?
ನೀವು ನಿಮ್ಮ ಪಕ್ಕದ ವ್ಯಕ್ತಿಗೆ ಅದನ್ನು ಹೇಳಬೇಕಾಗಿಲ್ಲ, ’ನಾನು ಔಪಚಾರಿಕತೆಗಷ್ಟೇ ನಿಮಗೆ ಅಭಿವಂದಿಸಿದ್ದು.’ ಎಂದು.
ನೀವು ನಿಮ್ಮನ್ನೇ ಕೇಳಿಕೊಳ್ಳಬೇಕು, ನೀವು ನಜವಾಗಿಯೂ ಆ ವ್ಯಕ್ತಿಗೆ ಅಭಿವಂದಿಸಿದಿರೇ?

ನಿಮಗೆ ಗೊತ್ತೇ, ನೀವು ವಿಮಾನದಿಂದ ಇಳಿಯುವಾಗ, ಗಗನ ಸಖಿಯರು ’ನಿಮ್ಮ ದಿನ ಚೆನ್ನಾಗಿರಲಿ’ ಎಂದು ನಿಮಗೆ ಹಾರೈಸುತ್ತಾರೆ, ಆದರೆ ಅವರಲ್ಲಿ ಆ ಭಾವ ಅಥವಾ ನಿಜವಾದ ಇಚ್ಛೆ ಇರುವುದಿಲ್ಲ. ಅದು ಕೇವಲ ಬಾಯಿ ಮಾತಾಗಿದೆ.
ಆದರೆ ನಿಮಗೆ ನಿಮ್ಮ ತಾಯಿ, ಅಥವಾ ತಂಗಿ, ಅಥವಾ ಆತ್ಮೀಯ ಸ್ನೇಹಿತರಿಂದ ಅದೇ ಮಾತುಗಳು ಬಂದರೆ ಅದರಲ್ಲಿ ಕೆಲವು ಕಂಪನಗಳು ಕೂಡಿರುತ್ತವೆ.
ಆದ್ದರಿಂದ ನಾವು ನಮ್ಮ ಕಂಪನಗಳಿಂದ ಇನ್ನೂ ಹೆಚ್ಚನ್ನು ತಿಳಿಸುತ್ತೇವೆ.

ಯಾರಾದರೂ ನಿಮಗೆ ಪ್ರೀತಿಯ ಬಗ್ಗೆ ಎರಡು ಘಂಟೆಗಳ ಕಾಲ ಭಾಷಣ ನೀಡಬಹುದು, ಆದರೆ ಒಂದು ಮಗು ಅಥವಾ ನಾಯಿಯು ನಿಮಗೆ ಕಂಪನಗಳಿಂದ ತಿಳಿಸುವುದನ್ನು ಅದು ತಿಳಿಸುವುದಿಲ್ಲ.
ಜನರು ಖಿನ್ನರಾಗಿರುವಂಥ ಸ್ಥಳಕ್ಕೆ ನೀವು ಹೋದಾಗ, ವಿನಾ ಕಾರಣ ನೀವೂ ಖಿನ್ನರಾಗಿರುವುದನ್ನು ನೀವು ಕಾಣುತ್ತೀರಿ.ಹಾಗೆಯೇ, ಜನರು ಆನಂದದಿಂದ ಇರುವಂಥ ಸ್ಥಳಕ್ಕೆ ನೀವು ಹೋದರೆ ನಿಮ್ಮೊಳಗೇ ಆನಂದ ತುಂಬಿಬರುವುದನ್ನು ನೀವು ಅನುಭವಿಸುತ್ತೀರಿ.

ಈ ಸಂಪೂರ್ಣ ಜಗತ್ತು ಕೇವಲ ಕಂಪನಗಳಿಂದ ಕೂಡಿದೆ, ಅಲೆಯ ಮೇಲೆ ಅಲೆ.
ನಮ್ಮ ಮನಸ್ಸು ಕಂಪನಗಳು, ನಮ್ಮ ಶರೀರವು ಪೂರ್ತಿಯಾಗಿ ಕಂಪನಗಳದ್ದು, ಆಲೋಚನೆಗಳು ಕಂಪನಗಳು ಮತ್ತು ನಮ್ಮೆಲ್ಲಾ ಭಾವನೆಗಳು ಕಂಪನಗಳು.ಆದರೆ ನಾವು ನಮ್ಮ ಕಂಪನಗಳನ್ನು ಸಂಸ್ಕರಿಸಲು, ನಮ್ಮ ಧನಾತ್ಮಕತೆಯನ್ನು ಅಭಿವೃದ್ದಿಸಲು ಏನೂ ಮಾಡುವುದಿಲ್ಲ. ಅಲ್ಲವೇ?!
ಅಂಥ ಒಂದು ಕ್ರಿಯೆ, ಯಾವುದರಿಂದ ನಿಮ್ಮ ಕಂಪನಗಳು ಆನಂದಮಯ, ಧನಾತ್ಮಕ ಮತ್ತು ಶಾಂತಿಯುತವಾಗುವುದೋ, ಅದು ಧ್ಯಾನ.
ಇದು ಪ್ರಾಣಾಯಾಮ ಮತ್ತು ಧ್ಯಾನಗಳಿಂದ ಬಹಳ ವೇಗವಾಗಿ ನೆರವೇರುತ್ತದೆ.

ಸಾಮಾನ್ಯವಾಗಿ ಧ್ಯಾನ ಎಂದಾಗ, ನೀವು ಎಲ್ಲವನ್ನೂ ಬಿಟ್ಟು ಹಿಮಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಯೋಚಿಸುತ್ತೀರಿ; ಅಲ್ಲ, ಅದು ಹಾಗಲ್ಲ.ನೀವು ಅದನ್ನು ನಿಮ್ಮ ಮನೆಯಲ್ಲೇ ಅನುಭವಿಸಬಹುದು.
ಮತ್ತೆ ಧ್ಯಾನದ ಪ್ರಯೋಜನಗಳೇನು?ನಾವೇಕೆ ಧ್ಯಾನ ಮಾಡಬೇಕು?ನಾನು ಆಗ ಹೇಳಿದಂತೆ, ನಮ್ಮ ಕಂಪನಗಳು ಧನಾತ್ಮಕವಾಗುತ್ತವೆ.

ಕೆಲವೊಮ್ಮೆ ನೀವು ಯಾರನ್ನಾದರೂ ಭೇಟಿಯಾದಾಗ ವಿಕರ್ಶಣೆ ಅಹವಾ ಅಸಹನೆಯನ್ನು ಅನುಭವಿಸುತ್ತೀರಿ ಮತ್ತು ನೀವು ಅವರೊಂದಿಗೆ ಮಾತನಾಡ ಬಯಸುವುದಿಲ್ಲ. ನೀವು ಇದನ್ನು ಅನುಭವಿಸಿದ್ದೀರೇ?
ಮತ್ತೆ ಕೆಲವರನ್ನು ನೀವು ಭೇಟಿಯಾದಾಗ, ನೀವು ಅವರೊಂದಿಗೆ ಮಾತನಾಡಲು ಮತ್ತು ಒಳ್ಳೆಯ ಸಂಬಂಧವಿರಿಸಲು ಬಯಸುತ್ತೀರಿ.ಇದೂ ಕೂಡ ಕಂಪನಗಳೇ.

ಅದೇ ರೀತಿ ನಿಮಗೆ ಕೆಲವು ಆಲೋಚನೆಗಳು ಬರುತ್ತವೆ, ಅವು ಪರಿಪೂರ್ಣವಾಗಿ ಸರಿಯಾಗಿರುತ್ತವೆ.ಮತ್ತೆ ಉಳಿದ ಸಲ, ನಿಮಗೆ ಸಂಪೂರ್ಣವಾಗಿ ತಪ್ಪಾದ ಆಲೋಚನೆಗಳು ಬರುತ್ತವೆ.ಹಾಗಾಗುವುದಿಲ್ಲವೇ?
ಇದು ನಾವು ಕತ್ತಲಲ್ಲಿ ನಮ್ಮ ಸ್ವಂತ ಚೈತನ್ಯದ ಅರಿವಿಲ್ಲದೇ ನಡೆಯುತ್ತಿರುವಂತೆ.ನೀವು ಚೈತನ್ಯವನ್ನು ಅರಿತರೆ, ಬಹಳ ಪರಿವರ್ತನೆಗಳಾಗಿ ನಿಮ್ಮ ಜೀವನ ಬಹಳ ಸಂತೋಷದಿಂದ ಕೂಡಿರುತ್ತದೆ.ನಮ್ಮ ಆರೋಗ್ಯ ಇನ್ನೂ ಚೆನ್ನಾಗಿರುತ್ತದೆ, ಜನರೊಂದಿಗೆ ನಮ್ಮ ಸಂಬಂಧಗಳು ಇನ್ನೂ ಚೆನ್ನಾಗಿರುತ್ತದೆ.
ಜೀವನದಲ್ಲಿ ಅಹಿಂಸಾತ್ಮಕ ಪ್ರವೃತ್ತಿಗಳು ಹೇಗೆ ಕುಂದುತ್ತವೆ ಎಂಬುದನ್ನು ನೀವು ಜನರಿಂದ ಕೇಳಿರಬಹುದು.ಮತ್ತೆ ಬಹಳ ಮುಖ್ಯವಾಗಿ, ನಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ.
ನಾಲ್ಕು ವಿಧದ ಜನರಿದ್ದಾರೆ.
ಕೆಲವರಿಗೆ ಆಸೆಗಳಿವೆ, ಅವರು ಮತ್ತೆ ಮತ್ತೆ ಹಂಬಲಿಸುತ್ತಾರೆ ಆದರೆ ಯಾವುದೂ ನೆರವೇರುವುದಿಲ್ಲ.
ಮತ್ತೆ ಕೆಲವರು ತಮ್ಮ ಆಸೆಗಳನ್ನು ನೆರವೇರಿಸಲು ಬಹಳ ಕಷ್ಟಪಟ್ಟು ದುಡಿಯುತ್ತಾರೆ, ಹಾಗೂ ಅದು ಬಹಳ ಸಮಯದ ನಂತರ ನೆರವೇರುತ್ತದೆ.
ಮತ್ತೆ ಮೂರನೆಯ ರೀತಿಯ ಜನರು ಇಚ್ಚಿಸುತ್ತಾರೆ ಮತ್ತು ಅಂತೆಯೇ ಅದು ಕೂಡಲೇ ನೆರವೇರುತ್ತದೆ, ಬಹಳ ಕಷ್ಟಕರ ಪರಿಶ್ರಮವಿಲ್ಲದೇ.
ಮತ್ತೆ ನಾಲ್ಕನೆಯ ರೀತಿಯ ಜನರಿಗೆ ಏನೆನ್ನೂ ಇಚ್ಚಿಸುವ ಅಗತ್ಯವೂ ಇಲ್ಲ, ಆಸೆಗಳುಂಟಾಗುವ ಮೊದಲೇ ಎಲ್ಲವೂ ಅಲ್ಲಿ ಆಗಲೇ ಸಿದ್ಧವಿರುತ್ತದೆ.
ನೀವು ಯಾವ ಪಂಕ್ತಿಯಲ್ಲಿ ಇರಲು ಬಯಸುತ್ತೀರಿ?ನಾಲ್ಕನೆಯದರಲ್ಲೇ?

ಹೌದು, ಅಲ್ಲಿರುವುದು ಅತ್ಯಂತ ಭಾಗ್ಯಶಾಲಿಗಳು.ಅದು ಈ ರೀತಿಯಾಗಿರುತ್ತದೆ- ನಿಮಗಿನ್ನೂ ಬಾಯಾರಿಕೆಯಾಗಲಿಲ್ಲ, ಹಾಗೂ ಆಗಲೇ ಅಲ್ಲಿ ನೀರಿದೆ.

ಭಾರತದಲ್ಲಿ ಒಂದು ಹೀಗೊಂದು ನಾಣ್ಣುಡಿಯಿದೆ, ’ನಿಮಗೆ ಹಲ್ಲಿದ್ದಾಗ ಶೇಂಗಾ ಸಿಗಲಿಲ್ಲ, ಮತ್ತೆ ಶೇಂಗಾ ಸಿಕ್ಕಾಗ ನಿಮಗೆ ಹಲ್ಲಿರಲಿಲ್ಲ.’

ಭಳ ಜನರು ಈ ಪರಿಸ್ಥಿತಿಯಲ್ಲಿದ್ದಾರೆ.ಅವರು ಜೀವನ ಪೂರ್ತಿ ಬಹಳ ಕಷ್ಟಪಟ್ಟು ದುಡಿದು, ಪೂರ್ಣ ಸಂಪಾದನೆ ಮಾಡಿ ಅದನ್ನು ಬ್ಯಾಂಕ್.ನಲ್ಲಿ ಇಟ್ಟು ಮತ್ತೆ ಸಾವನ್ನಪ್ಪುತ್ತಾಎ. ನಂತರ ಮಕ್ಕಳು ಪೋಷಕರ ಹಣಕ್ಕಾಗಿ ಜಗಳವಾಡುತ್ತಾರೆ.
ಜಗತ್ತಿನಲ್ಲಿ ೭೦% ನ್ಯಾಯಾಲಯ-ದಾವೆಗಳು ವಾರಸುದಾರಿಕೆಗೆ ಸಂಬಂಧಿಸಿವೆ.
ಈಗ ನೋಡಿ, ಯಾರೂ ತಾವು ಸಂಪದಿಸಿದ ಹಣಕ್ಕಾಗಿ ಜಗಳವಾದುವುದಿಲ್ಲ. ಹಾಗಾಗಿ, ನೀವೇನು ಮಾಡಿದ್ದೀರೆಂದರೆ, ನೀವು ಹಣ ಗಳಿಸಿದ್ದೀರಿ, ಅದನ್ನು ಬ್ಯಾಂಕ್.ನಲ್ಲಿ ಇಟ್ಟಿದ್ದೀರಿ ಮತ್ತು ನಿಮ್ಮ ಮಕ್ಕಳು ತಮ್ಮೊಳಗೇ ಆ ಹಣಕ್ಕಾಗಿ ಜಗಳವಾಡುವಂತೆ ಮಾಡಿದ್ದೀರಿ. ಇದು ಮಾಡಲು ಬುದ್ಧಿವಂತಿಕೆಯ ಕೆಲಸವೇ?

ನಾವು ನಮ್ಮ ಅರ್ಧದಷ್ಟು ಆರೋಗ್ಯವನ್ನು ಹಣ ಸಂಪಾದಿಸಲಿಕ್ಕಾಗಿ ವ್ಯಯಿಸುತ್ತೇವೆ, ಹಾಗೂ ನಂತರ ಆ ಆರೋಗ್ಯವನ್ನು ಮರಳಿ ಪಡೆಯಲು ನಮ್ಮ ಅರ್ಧದಷ್ಟು ಸಂಪಾದನೆಯನ್ನು ವ್ಯಯಿಸುತ್ತೇವೆ.
ಇದು ಅಷ್ಟೇನು ಜಾಣತನವಲ್ಲ! ಆರ್ಥಿಕವಾಗಿ ಒಪ್ಪವಾದುದಲ್ಲ.

ಜೀವನ ಎತ್ತ ಸಾಗುತ್ತಿದೆ ಎಂದುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.
ಒಬ್ಬ ವಿವೇಕಿ ಮೂರ್ಖನ ಕಥೆಯೊಂದಿದೆ!
ಒಬ್ಬ ವಿವೇಕಿ ಮೂರ್ಖ ಕತ್ತೆ ಮೇಲೆ ಕುಳಿತು ಅದನ್ನು ಓಡಿಸುತ್ತಿದ್ದ. ಅದು ಅದೇ ದಾರಿಯಲ್ಲಿ ಮತ್ತೆ ಮತ್ತೆ ಬಹಳ ಸಲ ಸುತ್ತಿತು.ಅದಕ್ಕೆ ಯಾರೋ ಈ ಮಹೋದಯನನ್ನು ಕೇಳಿದರು, ’ನೀವು ಹಲವು ಬಾರಿ ಮೇಲೆ ಮತ್ತೆ ಕೆಳಗೆ ಹೋಗುತ್ತಿರುವುದನ್ನು ನೋಡಿದೆ, ನಿಮಗೆ ಎಲ್ಲಿ ಹೋಗಬೇಕಾಗಿದೆ?’
ಅವನು ಉತ್ತರಿಸಿದ, ’ನನಗೆ ಗೊತ್ತಿಲ್ಲ, ಈ ಕತ್ತೆಯನ್ನು ಕೇಳಿ!’

ಬಹಳಷ್ಟು ಸಲ ನಮ್ಮ ಜೀವನವೂ ಹಾಗೆಯೇ ಇರುತ್ತದೆ. ನಾವು ಕೆಲಸ ಮಾಡುತ್ತಲೇ ಇರುತ್ತೇವೆ, ಚಟುವಟಿಕೆಗಳಲ್ಲಿ ಮತ್ತೆ ಮತ್ತೆ ತೊಡಗಿರುತ್ತೇವೆ- ಉದ್ದೇಶವೇನು ಎಂಬ ಅರಿವಿಲ್ಲದೇ! ಈ ಪ್ರಕೃತಿಯು ನಮಗೆ ಕೊಟ್ಟಿರುವಂಥದ್ದೆಲ್ಲವನ್ನೂ ಆನಂದದಿಂದ ಅನುಭವಿಸದೇ.

ನೋಡಿ ನಿಮ್ಮ ಮನಸ್ಸು ಕಹಿಯಾಗಿದ್ದಾಗ, ನೀವು ಜಗತ್ತಿನಲ್ಲೆಲ್ಲೂ ಸಂತೋಷವನ್ನು ಪಡೆಯಲಾಗುವುದಿಲ್ಲ. ಮನಸ್ಸು ಸಿಹಿಯಾಗಿದ್ದಾಗ, ನೀವು ಎಲ್ಲೆಲ್ಲೂ ಸಿಹಿತನವನ್ನು ಕಾಣುತ್ತೀರಿ.
ಹಾಗಾಗಿ ಧ್ಯಾನವೆಂದರೆ ನಮ್ಮ ಅಂತರಾಳದಲ್ಲಿ ಇರುವ ಸಿಹಿತನವನ್ನು ಕಂಡುಹಿಡಿಯುವುದೇ ಆಗಿದೆ.ನೀವು ಅದನ್ನು ಪಡೆದಾಗ, ನಿಮಗೆ ಏನು ಮಾಡಬೇಕೆನ್ನಿಸುತ್ತದೆ ಗೊತ್ತಾ?ನೀವು ಅದನ್ನು ಎಲ್ಲರಿಗೂ ಕೊಡ ಬಯಸುತ್ತೀರಿ.

ಜನರು ನನ್ನನ್ನು ಕೇಳುತ್ತಾರೆ, "ನಿಮ್ಮ ಸ್ಫೂರ್ತಿಯೇನು?ನಿಮಗೇನು ಸಿಗುತ್ತದೆ?ನೀವು ಯಾಕಾಗಿ ಜಗತ್ತಿನ ಸುತ್ತಲೂ ಈ ಎಲ್ಲಾ ಸ್ಥಳಗಳಿಗೆ ಯಾವತ್ತೂ ಓಡಾಡುತ್ತಿರುತ್ತೀರಿ?’
ನಾನು ಅವರಿಗೆ ಒಂದು ಪ್ರಶ್ನೆ ಕೇಳಿದೆ, ’ನೀವೊಂದು ಬಹಳ ಒಳ್ಳೆಯ ಸಿನೆಮಾ ನೋಡಿದಿರಿ ಅಂದುಕೊಳ್ಳಿ, ಆಗ ಏನು ಮಾಡುತ್ತೀರಿ?ನೀವು ನಿಮ್ಮ ಕೋಣೆಯಲ್ಲಿ ಸುಮ್ಮನೆ ಕೂರುತ್ತೀರಾ?ಅಥವಾ ಫೋನ್ ಎತ್ತಿ ಸ್ನೇಹಿತರೆಲ್ಲರಿಗೆ ಕರೆ ಮಾಡಿ ಹೇಳುತ್ತೀರಾ, ’ಓ, ಇದೊಂದು ಬಹಳ ಒಳ್ಳೆಯ ಸಿನೆಮಾ, ನೀವು ಹೋಗಿ ಈ ಸಿನೆಮಾ ನೋಡಲೇಬೇಕು.’ ಈಗ, ಹಾಗೆ ಮಾಡುವುದರಿಂದ ನಿಮಗೇನು ಸಿಗುತ್ತದೆ?ಸಿನೆಮಾ ನಿರ್ದೇಶಕರು ನಿಮಗೇನಾದರೂ ಮಧ್ಯಸ್ತಿಕೆ ನೀಡುತ್ತಾರೆಯೇ?ಅಥವಾ ನಟರು ನಿಮಗೆ ಹಣ ಕೊಡುತ್ತಾರೆಯೇ?ಆ ಎಲ್ಲಾ ಫೋನ್ ಕರೆಗಳನ್ನು ಮಾಡಿ ನಿಮಗೇನು ಸಿಗುತ್ತದೆ?ಆನಂದದ ಸ್ವಭಾವೇ ಹಂಚಿಕೆಯಾಗಿರುವುದರಿಂದ ನೀವು ಹಾಗೆ ಮಾಡುತ್ತೀರಿ.

ಆನಂದದ ಸ್ವಭಾವವೆಂದರೆ ಹಂಚಿಕೊಳ್ಳುವುದು.
ಎರಡು ರೀತಿಯ ಆನಂದಗಳಿವೆ, ಒಂದು ಕಸಿದುಕೊಳ್ಳುವ ಆನಂದ. ಮಕ್ಕಳಾಗಿ, ನಾವು ಈ ಪ್ರವೃತ್ತಿಯೊಂದಿಗೆ ಜನಿಸಿದ್ದೆವು. ಒಂದು ಮಗುವನ್ನು ನೀವು ಇಲ್ಲಿ ಬಿಟ್ಟರೆ, ಅದು ಹೋಗಿ ಈ ಹೂವನ್ನು ಕಿತ್ತುಕೊಳ್ಳುತ್ತದೆ, ಈ ಹೊದಿಕೆಯನ್ನು ಸೆಳೆದುಕೊಳ್ಳುತ್ತದೆ, ಆ ಕುರ್ಚಿಯನ್ನು ಎಳೆಯುತ್ತದೆ, ಸುತ್ತಲಿರುವ ಎಲ್ಲವನ್ನೂ ಮೇಲು-ಕೆಳಗೆ ಮಾಡಿ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ.
ಅದು ಏನನ್ನೂ ಹಿಡಿದಿಟ್ಟುಕೊಳ್ಳುತ್ತದೆ, ಅದು ಚೂರಿಯೂ ಆಗಿರಬಹುದು.ಗೊತ್ತಿಲ್ಲದೇ ಅದು ತನ್ನನೇ ನೋಯಿಸಿಕೊಳ್ಳುತ್ತದೆ, ಚೂರಿಯನ್ನು ಕಸಿದುಕೊಂಡಂಥ ಮಗು.ಆದರೆ ತಾಯಂದಿರು ಬಹಳ ನಿಪುಣೆಯರು, ಚೂರಿಯ ಮೇಲಿನ ಮಗುವಿನ ಹಿಡಿತವನ್ನು ಸಡಿಲಗೊಳಿಸಲು ಅವರು ಮಗುವಿಗೆ ಬೇರೆಯೇನಾದರೂ ಕೊಡುತ್ತಾರೆ.ಹಾಗಾಗಲ್ಲವೇ?
ಮಕ್ಕಳು ಒಳ್ಳೆಯದಲ್ಲವಾದುದನ್ನು ಏನಾದರೂ ಹಿಡಿದುಕೊಂಡರೆ, ನೀವು ಅವರಿಗೆ ಬೇರೆ ಏನಾದರನ್ನು ಕೊಡಬೇಕು.
ಹೀಗೆ, ಇದು ಒಂದು ರೀತಿಯ ಆನಂದ- ಏನನ್ನಾದರೂ ಪಡೆಯುವ, ಹೊಂದುವ ಆನಂದ. ಇದು ಬಾಲಿಷ ಆನಂದ; ಬಾಲಿಷ ಸಂತೋಷ.
ಇನ್ನೊಂದು ಬಗೆಯ ಸಂತೋಷ, ಆನಂದವಿದೆ, ಯಾವುದು ಕೊಡುವುದರಿಂದ ಬರುವುದೋ ಅದು.
ಇಲ್ಲಿರುವ ಹಲವು ಮಹಿಳೆಯರು, ನಿಮ್ಮ ಮನೆಗೆ ನೆಂಟರೋ ಅಥವಾ ಮಕ್ಕಳೋ ಬರಲಿರುವಾಗ ನೀವೇನು ಮಾಡುತ್ತೀರಿ?ನೀವು ಬಗೆ ಬಗೆಯಾದ ಅಡುಗೆ ಮಾಡಿ, ಅದನ್ನು ಅಲಂಕರಿಸಿ ಟೇಬಲ್ ಮೇಲೆ ಸಿದ್ಧಪಡಿಸುತ್ತೀರಿ. ಒಂದು ತಾಯಿಯಾಗಿ ನಿಮ್ಮ ಆನಂದವಿರುವುದು ಕೊಡುವುದರಲ್ಲಿ, ಅಲ್ಲವೇ!
ನಿಮ್ಮ ಅಜ್ಜ, ಅಜ್ಜಿಯರನ್ನು ನೋಡಿ, ಅವರು ಮಕ್ಕಳಿಗೆ ಉಡುಗೊರೆಗಳನ್ನು ಕೊಡಲು ಬಹಳ ಇಷ್ಟಪಡುತ್ತಾರೆ, ಅಲ್ಲವೇ?! ಕೊಡುವುದರಲ್ಲಿ ಒಂದು ಆನಂದವಿದೆ, ಮತ್ತು ಇದೊಂದು ಪಕ್ವವಾದ(ಪ್ರೊಢವಾದ) ಆನಂದ.
ನಾವು ಕೊಡುವುದರಲ್ಲಿರುವ ಆನಂದವನ್ನು ಅರ್ಥಮಾಡಿಕೊಳ್ಳದೇ, ಜೀವನವನ್ನು ಕೇವಲ ಪಡೆದುಕೊಳ್ಳುವ ಆನಂದದಿಂದ ಬದುಕಲಾಗುವುದಿಲ್ಲ.

ಒಮ್ಮೆ ನಿಮಗೆ ಕೊಡುವುದರಿಂದ ಬರುವ ಆನಂದದ ಕಿಂಚಿತ್ ರುಚಿ ತಿಳಿದರೆ, ನೀವು ಜೀವನವನ್ನು ಬಾಳುವುದು ಎಷ್ಟೊಂದು ಅಮೂಲ್ಯವೆಂದು ತಿಳಿಯುತ್ತೀರಿ, ಜೀವನವು ತೃಪ್ತಿದಾಯಕವೆಂದು ತಿಳಿಯುತ್ತೀರಿ.
ಹಾಗಾಗಿ, ಇನ್ನೂ ಹೆಚ್ಚು ಮುಗುಳ್ನಗಿ!

ನಿಮಗೆ ಗೊತ್ತೇ, ಒಂದು ಮಗುವು ದಿನಕ್ಕೆ 400 ಸಲ ಮುಗುಳ್ನಗುತ್ತದೆ, ಒಬ್ಬ ಯುವಕ ಕೇವಲ 17 ಸಲ ಮುಗುಳ್ನಗುತ್ತಾನೆ, ಮತ್ತು ಒಬ್ಬ ಹಿರಿಯ/ಪ್ರಬುದ್ಧ ವಿರಳವಾಗಿ ಮುಗುಳ್ನಗುತ್ತಾನೆ.ಮತ್ತೆ ನೀವು ಒಬ್ಬ ಅಧಿಕಾರಿಯೋ ಅಥವಾ ರಾಜಕಾರಣಿಯೋ ಆದರೆ, ಅದರ ಬಗ್ಗೆ ಮರೆತು ಬಿಡುತ್ತೀರಿ.ನಿಮ್ಮ ಮುಗುಳ್ನಗು ಮಾಯವಾಗುತ್ತದೆ, ದೂರ ಹಾರಿ ಹೋಗುತದೆ.

ಒಂದು ಮುಗುಳ್ನಗು ಎಂದರೆ ಕೃತಕವಾದಂಥದ್ದಲ್ಲ, ಅದು ಒಳಗಿನಿಂದ ಬರಬೇಕು.ಅದು ಕೇವಲ ಒತ್ತಡಗಳು ದೂರವಾದರೆ ಮಾತ್ರ ಸಾಧ್ಯ, ನಾವು ಧ್ಯಾನದಲ್ಲಿ ಆಳ ಹೋದಾಗ ಸಾಧ್ಯ.

ಯಾರಾದರೂ, ’ನಾನು ಧ್ಯಾನ ಮಾಡುತ್ತೇನೆ’ ಎಂದು ಹೇಳಿದರೆ, ಅದರರ್ಥ ಅವರು ಹೆಚ್ಚು ಮುಗುಳ್ನಗುತ್ತಾರೆ ಎಂದು; ಅವರಲ್ಲಿ ಪ್ರಶಾಂತತೆ, ಸಂವೇದನಶೀಲತೆ ಮತ್ತು ಹೃದಯವಂತಿಕೆ ಇದೆ ಎಂದು ಕೂಡ, ಮತ್ತು ಇದು ಆಧ್ಯಾತ್ಮಿಕತೆ.

ಆಧ್ಯಾತ್ಮಿಕತೆ ಎಂದರೆ ಹೃದಯವಂತಿಕೆ, ಸಂವೇದನಶೀಲತೆ, ಸಿಹಿತನ, ಮುಗುಳ್ನಗು; ಇವೆಲ್ಲವುಗಳ ಸಹಯೋಗ.

ಪ್ರ: ಒತ್ತಡಗಳು ಹೊರಗಿನಿಂದ ಬರುತ್ತಿದ್ದರೆ ನಾನೇನು ಮಾಡುವುದು? ಅದು ನನ್ನ ವಶದಲ್ಲಿ ಇಲ್ಲದ ಅಥವಾ ನನ್ನ ಹಿಡಿತವನ್ನು ಮೀರಿದುದಾದರೆ..ನಾನು ಶಾಂತಿಯನ್ನು ಹೇಗೆ ಪಸರಿಸಲಿ?

ಶ್ರೀ ಶ್ರೀ: ಆದ್ದರಿಂದಲೇ ನಾವು ಜನರಿಗೆ ತಮ್ಮ ಒತ್ತಡಗಳನ್ನು ಸಂಭಾಲಿಸುವುದರ ಬಗ್ಗೆ ಶಿಕ್ಷಣ ನೀಡಬೇಕು. ಕುಟುಂಬದಲ್ಲಿ ಒಬ್ಬರ ಆರೋಗ್ಯ ಕೆಟ್ಟರೆ, ಅದು ಪೂರ್ತಿ ಕುಟುಂಬವನ್ನು ಪರಿಣಮಿಸುವುದಿಲ್ಲವೇ?ಹೌದು, ಅದು ಪರಿಣಮಿಸುತ್ತದೆ.ಹಾಗೆಯೇ, ಸಮಾಜದಲ್ಲಿ ಕೆಲವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ, ಸಮಾಜದಲ್ಲಿ ಅಪರಾಧ ಹೆಚ್ಚುತ್ತದೆ.
ಸೆರೆಮನೆಗಳಲ್ಲಿ, ’ಓ, ನಮಗೀಗ ಅಹಿಂಸೆಯಲ್ಲಿ ಇರಲು ಇಷ್ಟವಿಲ್ಲ’ ಎಂದು ಹೇಳುವ ಜನರಿದ್ದಾರೆ, ಆದರೆ ಹೊರಗಡೆ ಇನ್ನೂ ಬಹಳ ಜನರು ಸಮಾಜಕ್ಕೆ ತೊಂದರೆಗಳನ್ನುಂಟು ಮಾಡುವವರಿದ್ದಾರೆ ಮತ್ತು ಆದ್ದರಿಂದಲೇ ನಾವು ಈ ಆಧ್ಯಾತ್ಮಿಕ ಶಿಕ್ಷಣವನ್ನು ಜನರಿಗೆ ನೀಡಬೇಕಾಗಿದೆ.

ನಾವು ಜನರಿಗೆ ಹೇಗೆ ಶಾಂತವಾಗಿರುವುದು, ಅವರ ನೇತ್ಯಾತ್ಮಕ ಭಾವನೆಗಳನ್ನು ಹೇಗೆ ಸಂಭಾಲಿಸುವುದು ಮತ್ತು ಅವರ ಮನಸ್ಸನ್ನು ಹೇಗೆ ಸಂಭಾಲಿಸುವುದು ಎಂಬುದನ್ನು ಕಲಿಸಬೇಕಾಗಿದೆ, ಯಾಕೆಂದರೆ ಮನೆಯಲ್ಲೂ, ಶಾಲೆಯಲ್ಲೂ ಯಾರೂ ನಮಗೆ ಮನಸ್ಸನ್ನು ಹೇಗೆ ಸಂಭಾಲಿಸುವುದು ಎಂದು ಹೇಳಿಕೊಡಲಿಲ್ಲ.
ಹಾಗೆ ಮತ್ತೆ ಸಿಟ್ಟು, ಮತ್ಸರ ಮತ್ತು ದ್ವೇಷ ಇವೆ, ಮತ್ತು ನೀವು ಈ ಭಾವನೆಗಳೊಂದಿಗೆ ಬದುಕಿದಾಗ ನೀವು ಅದನ್ನು ಸಾಧಿಸುತ್ತೀರಿ(ಕಾರ್ಯರೂಪಕ್ಕೆ ತರುತ್ತೀರಿ). ಅದರಿಂದ ಹೇಗೆ ಮುಕ್ತವಾಗುವುದು ಎಂಬುದು ನಿಮಗೆ ತಿಳಿದಿಲ್ಲ. ನೀವು ಅದನ್ನು ಹಿಡಿದಿಟ್ಟುಕೊಳ್ಳುತ್ತೀರಿ ಮತ್ತೆ ಆ ಮನೋಭಾವದಿಂದ ಕಾರ್ಯನಿರ್ವಹಿಸುತ್ತೀರಿ ಮತ್ತೆ ನಂತರ ಪಶ್ಚಾತ್ತಾಪ ಪಡುತ್ತೀರಿ. ಅದೇ ತೊಂದರೆ.
ಈ ಅಭ್ಯಾಸಗಳು ಮತ್ತು ಇಲ್ಲಿರುವ ಈ ಜ್ಞಾನವೇ ಪರಿಹಾರ.