ಶುಕ್ರವಾರ, ಫೆಬ್ರವರಿ 28, 2014

ಮೋಕ್ಷದ ಹಾದಿ

ಫೆಬ್ರುವರಿ ೨೮, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಯೋಗಸೂತ್ರದಲ್ಲಿ ’ತೀವ್ರ ಸಂವೇಗನಂ ಆಸನ್ನಃ’ (ಜ್ವರತೆಯಿಲ್ಲದೆ ಹೃದಯಪೂರ್ಣವಾಗಿ ಮೋಕ್ಷವನ್ನು ಅನ್ವೇಷಿಸುವವರು ಮೋಕ್ಷವನ್ನು ಬೇಗನೇ ಗಳಿಸುತ್ತಾರೆ) ಎಂದು ಹೇಳಲಾಗಿದೆ. ಮೋಕ್ಷಕ್ಕಾಗಿ ಒಬ್ಬನಿಗೆ ವೇಗ ಬೇಕೇ ಅಥವಾ ಶಾಂತಿಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನಿಮಗೊಂದು ತೀವ್ರ ಗತಿ ಬೇಕು. ಹೆಚ್ಚಾಗಿ ನಾವು ಏನಾದರೂ ಒಳ್ಳೆಯದನ್ನು ಮಾಡಬೇಕಾಗಿರುವಾಗ ನಾವು ’ಇನ್ಶಾ ಅಲ್ಲಾಃ!’ ಎಂದು ಹೇಳುತ್ತೇವೆ (’ದೇವರು ಹಾಗೇ ಇಚ್ಛಿಸಲಿ’ ಎಂಬ ಅರ್ಥದ ಉರ್ದು ಆಶಯ) ಮತ್ತು ನಾವು ಹೆಚ್ಚಾಗಿ, ’ದೇವರು ಇದು ಅತ್ಯುತ್ತಮವಾದುದೆಂದು ಯೋಚಿಸಿದರೆ ಅದು ಆಗುವುದು’, ಮೊದಲಾದವನ್ನು ಹೇಳುತ್ತೇವೆ. ಅದು ನಮಗಾಗಿಯೇ ಆಗಿರುವಾಗ; ನಮಗೊಂದು ಕಾರು ಅಥವಾ ಒಂದು ನೌಕರಿ ಬೇಕಾದರೆ, ಅದನ್ನು ಪಡೆಯಲು ನಾವು ನಮ್ಮ ಸಂಪೂರ್ಣ ಪ್ರಯತ್ನವನ್ನು ಹಾಕುತ್ತೇವೆ. ಹೀಗಿದ್ದರೂ, ಇತರ ವಿಷಯಗಳಿಗೆ ನಾವು, ದೇವರು ಇಚ್ಛಿಸಿದರೆ ಅದು ಆಗುವುದು ಎಂದು ಹೇಳುತ್ತೇವೆ.

ಅದು ಆಶ್ರಮಕ್ಕೆ ಬರುವ ಬಗ್ಗೆಯಾದರೆ ನೀವು ಅನುಕೂಲಕರವಾಗಿ, ’ಗುರುದೇವರು ಇಚ್ಛಿಸುವಾಗ ಅವರು ನನ್ನನ್ನು ಅಲ್ಲಿಗೆ ಕರೆಯುವರು’ ಎಂದು ಹೇಳುತ್ತೀರಿ. ನೀವು ಬರಬೇಡಿರೆಂದು ಅಥವಾ ಧ್ಯಾನ ಮಾಡುವುದು ಬೇಡವೆಂದು ನಾನು ಯಾವಾಗ ಹೇಳಿದ್ದೇನೆ? ಆದರೆ ನೀವು, ಕರೆಯು ಬರುವಾಗ ನಾನು ಅಲ್ಲಿರುವೆನು ಎಂದು ಹೇಳುತ್ತೀರಿ.

ನೀವೊಂದು ಸಿನೆಮಾ ಅಥವಾ ಒಂದು ಹೋಟೇಲಿಗೆ ಹೋಗಬೇಕಿದ್ದರೆ ಆಗ ನೀವು, ದೇವರು ಕರೆಯುವಾಗ ಮಾತ್ರ ನೀವು ಹೋಗುವುದೆಂದು ಹೇಳುವುದಿಲ್ಲ. ನಿಮ್ಮ ಸ್ವಂತ ಮನೋರಂಜನೆಗಾಗಿ, ನೀವು ನಿಮ್ಮದೇ ಇಚ್ಛೆಯಿಂದ ಅಂತಹ ಕೆಲಸ ಮಾಡುತ್ತೀರಿ, ಆದರೆ ನಿಮ್ಮ ಸಾಧನೆಯನ್ನು (ಆಧ್ಯಾತ್ಮಿಕ ಅಭ್ಯಾಸಗಳು) ಮಾಡುವ ವಿಷಯಕ್ಕೆ ಬಂದಾಗ, ದೇವರು ಇಚ್ಛಿಸುವಾಗ ಮಾತ್ರ ಅದು ಆಗುವುದು ಎಂದು ನೀವು ಹೇಳುತ್ತೀರಿ. ಇದನ್ನು ಮಾಡುವುದರಲ್ಲಿ ನಿಮ್ಮ ಮನಸ್ಸು ಬಹಳ ಬುದ್ಧಿಶಾಲಿಯಾಗಿದೆ.

ಜೀವನದಲ್ಲಿ ನೀವು ಯಾವುದನ್ನೆಲ್ಲಾ ಪಡೆಯಲು ಬಯಸುವಿರೋ, ಅದನ್ನು ಕರ್ಮ ಅಥವಾ ವಿಧಿಗೆ ಬಿಡಿ, ಆದರೆ ಮೋಕ್ಷವು ನಿಮ್ಮ ಕೈಗಳಲ್ಲಿದೆ ಮತ್ತು ನಿಮ್ಮ ಪುರುಷಾರ್ಥ (ಪ್ರಯತ್ನಗಳು) ವನ್ನು ಅವಲಂಬಿಸಿದೆ.

ಪ್ರಶ್ನೆ: ಗುರುದೇವ, ವಿರೋಧಾತ್ಮಕ ಮೌಲ್ಯಗಳು ಪೂರಕವಾಗಿರುವಾಗ, ಅದರರ್ಥ, ಹೆಚ್ಚು ಜನರು ಧ್ಯಾನ ಮಾಡುವಾಗ ಹೆಚ್ಚು ಜನರು ಅಸೂಯೆ ಮತ್ತು ಹಿಂಸೆಗಳಂತಹ ನಕಾರಾತ್ಮಕ ಪ್ರವೃತ್ತಿಗಳನ್ನು ವ್ಯಕ್ತಪಡಿಸುವರೆಂದೇ?

ಶ್ರೀ ಶ್ರೀ ರವಿ ಶಂಕರ್: ಅದು ತಿಳಿಯದು (ನಗು).

ಈ ಎಲ್ಲಾ ನಕಾರಾತ್ಮಕ ಭಾವನೆಗಳು ಪ್ರೀತಿಯ ವಿಕೃತಿಗಳಾಗಿವೆ. ಅವುಗಳು ಪ್ರೀತಿಯ ಸಂತತಿಗಳಾಗಿವೆ. ಪ್ರೀತಿಯಿಲ್ಲದಿದ್ದರೆ, ಅಲ್ಲಿ ಮಾತ್ಸರ್ಯವಿರಲು ಸಾಧ್ಯವಿಲ್ಲ. ಅಸೂಯೆಯಿದ್ದರೆ ಅದರರ್ಥ ಅಲ್ಲಿ ಪ್ರೀತಿಯಿದೆಯೆಂದು.

ದರ್ಪವೆಂದರೆ, ತನ್ನ ಮೇಲೆಯೇ ಅತಿಯಾದ ಪ್ರೀತಿಯಾಗಿದೆ. ಮಾತ್ಸರ್ಯವು ಇನ್ನೊಬ್ಬ ವ್ಯಕ್ತಿಯ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ. ಕೋಪವೆಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ. ಲೋಭವೆಂದರೆ, ವಸ್ತುಗಳ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ.

ಕೋಪವೆಂಬುದು ತನ್ನದೇ ಆದ ಪರಿಕಲ್ಪನೆಗಳು ಮತ್ತು ಗ್ರಹಿಕೆಗಳ ಮೇಲೆ ಪ್ರೀತಿಯಿರುವಿಕೆಯಾಗಿದೆ. ಒಬ್ಬ ಕೋಪಿಷ್ಠ ವ್ಯಕ್ತಿಯು, "ವಿಷಯಗಳು ಹೀಗಿರಬೇಕೆಂದು ನಾನು ಗ್ರಹಿಸುತ್ತೇನೆ" ಎಂದು ಯೋಚಿಸುವನು, ಮತ್ತು ಅವುಗಳು ಹಾಗಿಲ್ಲವಾದರೆ, ಆಗ ಅವನು ಕೋಪಗೊಳ್ಳುತ್ತಾನೆ.
ಹೀಗೆ, ಬಹುತೇಕ ಪ್ರತಿಯೊಂದು ನಕಾರಾತ್ಮಕ ಭಾವನೆಯು ಪ್ರೀತಿಯ ಒಂದು ವಿಕೃತಿಯಾಗಿದೆ.

ಪ್ರಶ್ನೆ: ಗುರುದೇವ, ಶಾಂತಿಯು ನಮ್ಮ ಸ್ವಭಾವವಾಗಿದ್ದರೆ, ಆಗ ಹಿಂಸೆಯು ಏಳುವಂತೆ ಮಾಡುವುದು ಯಾವುದು?
ಶ್ರೀ ಶ್ರೀ ರವಿ ಶಂಕರ್: ಬಲಹೀನತೆ ಅಥವಾ ಭಯವು ಹಿಂಸೆಯ ಮೂಲವಾಗಿದೆ. ಅಳಿವು ಅಥವಾ ನಿರಾಕರಣೆಯ ಭಯವು ಹಿಂಸೆಗೆ ಕಾರಣವಾಗುತ್ತದೆ. ಒತ್ತಡವು ಹಿಂಸೆಯನ್ನು ಉಂಟುಮಾಡುತ್ತದೆ. ಒತ್ತಡವೆಂಬುದು ಕೂಡಾ ಒಂದು ರೀತಿಯ ಬಲಹೀನತೆಯಾಗಿದೆ. ಒತ್ತಡ ಅಥವಾ ಆಯಾಸ ಮತ್ತು ಶಕ್ತಿಯಿಲ್ಲದಿರುವುದು ಬಲಹೀನತೆಯಾಗಿದೆ ಹಾಗೂ ಅದು ಹಿಂಸೆಗೆ ಕಾರಣವಾಗುತ್ತದೆ. ತನ್ನ ಶಕ್ತಿಯ ಬಗೆಗಿನ ಅರಿವಿನ ಕೊರತೆಯು ಹಿಂಸೆಗೆ ಕಾರಣವಾಗುತ್ತದೆ. ಹಿಂಸೆಗೆ ಕಾರಣವಾಗುವ ವಿಷಯಗಳು ಯಾವುವು ಎಂಬುದರ ಬಗ್ಗೆ ನೀವು ಯೋಚಿಸಬಹುದು ಮತ್ತು ನೀವೊಂದು ದೊಡ್ಡ ಪಟ್ಟಿಯನ್ನು ಮಾಡಬಹುದು.

ಮೋಹ ಕೂಡಾ ಹಿಂಸೆಗೆ ಕಾರಣವಾಗುತ್ತದೆ. ವಿವೇಕವಿಲ್ಲದ ತೀವ್ರ ಅನುರಾಗವು ಹಿಂಸೆಯನ್ನು ಉಂಟುಮಾಡಬಲ್ಲದು. ನೀವು ಈ ಎಲ್ಲಾ ಕಥೆಗಳನ್ನು ವಾರ್ತಾಪತ್ರಿಕೆಯಲ್ಲಿ ಓದುತ್ತೀರಿ. ಮೊದಲು ಪರಸ್ಪರರನ್ನು ಪ್ರೇಮಿಸುವ ಇಬ್ಬರು ವ್ಯಕ್ತಿಗಳು ಆನಂತರ ಪರಸ್ಪರರ ಮೇಲೆ ಎಷ್ಟು ಹಿಂಸಾತ್ಮಕವಾಗುತ್ತಾರೆಂದರೆ, ಅವರು ಪರಸ್ಪರರನ್ನು ಕೊಲ್ಲುತ್ತಾರೆ. ಈ ವಿಷಯಗಳ ಬಗ್ಗೆ ನೀವು ಕೇಳಿಲ್ಲವೇ? ಜಗತ್ತಿನಾದ್ಯಂತ, ಪ್ರೀತಿಯಲ್ಲಿ ಸಿಲುಕುವುದು ಮತ್ತು ನಂತರ ಪರಸ್ಪರರನ್ನು ಇರಿದ ಜನರ ಬಗ್ಗೆ ನೀವು ಕೇಳುತ್ತೀರಿ. ಇದು ನಂಬಲಸಾಧ್ಯವಾಗಿದೆ. ಆದುದರಿಂದ ವಿವೇಕವು ಆವಶ್ಯಕವಾಗಿದೆ. ಕೇವಲ ಪ್ರೀತಿ ಅಥವಾ ಅನುರಾಗವು ಸಾಕಾಗುವುದಿಲ್ಲ.

ವಿವೇಕವಿಲ್ಲದ ಪ್ರೀತಿಯು ದುಃಖವಾಗಿದೆ. ನಿಮ್ಮಲ್ಲಿ ವಿವೇಕವಿಲ್ಲದಿದ್ದರೆ ಮತ್ತು ಸಮಚಿತ್ತರಾಗಿಲ್ಲದಿದ್ದರೆ, ಆಗ ಅದು ಹಿಂಸೆಯನ್ನು ಉಂಟುಮಾಡಬಲ್ಲದು. ಆದರೆ ನೀವು ಯಾವುದಕ್ಕಾದರೂ ಸಂಪೂರ್ಣವಾಗಿ ಮೀಸಲಾಗಿದ್ದರೆ, ಆಗ ಅದು ಬೇರೆ. ಆಗ ನೀವು ನಿಮ್ಮ ವಿವೇಕವನ್ನು ಕಳೆದುಕೊಳ್ಳುವುದಿಲ್ಲ.

ಈ ದಿನಗಳಲ್ಲಿ ನೀವು ವಾರ್ತಾಪತ್ರಿಕೆಯನ್ನು ಓದುವಾಗ ಅಥವಾ ಟಿವಿಯನ್ನು ಹಚ್ಚುವಾಗ, ಪ್ರತಿದಿನವೂ, ನಿಮಗೆ ಅಂತಹ ಕೆಲವು ಕಥೆಗಳು ಸಿಗುತ್ತವೆ ಮತ್ತು ವರದಿಯಾಗದೇ ಇರುವ ಇನ್ನೂ ಅನೇಕ  ಅಂತಹ ಘಟನೆಗಳು ಇರಬಹುದು.

ಪ್ರಶ್ನೆ: ಗುರುದೇವ, ನಿಮ್ಮ ವೃತ್ತಿಯಲ್ಲಿ, ಜನರು ನಿಮ್ಮ ಮೇಲೆ ಮೋಹಗೊಳ್ಳುವುದು ಒಂದು ದೊಡ್ಡ ಔದ್ಯೋಗಿಕ ಅಪಾಯವೇ? ನೀವದನ್ನು ಹೇಗೆ ನಿರ್ವಹಿಸುತ್ತೀರಿ? 

ಶ್ರೀ ಶ್ರೀ ರವಿ ಶಂಕರ್: ಅದನ್ನು ನನ್ನಲ್ಲಿ ಕೇಳಲೂಬೇಡ! (ನಗು). ಹಲವಾರು ಔದ್ಯೋಗಿಕ ಅಪಾಯಗಳಿವೆ. ಹಲವು ಸಲ ನಾನು ನಡೆಯುತ್ತಿರುತ್ತೇನೆ ಮತ್ತು ಒಬ್ಬರು ಹಿಂದಿನಿಂದ ನನ್ನ ಕಾಲುಗಳನ್ನು ಹಿಡಿಯುತ್ತಾರೆ. ಹಲವು ಸಲ ಮುಗ್ಗರಿಸಿ ಬೀಳದಂತೆ ನಾನು ನನ್ನನ್ನು ಸಂತುಲನದಲ್ಲಿರಿಸಬೇಕಾಗುತ್ತದೆ. ಜನರು ಹೇಳಿದ್ದನ್ನು ಕೇಳಬೇಕು. ನೋಡಿ ಈಗ ನೀವೆಲ್ಲರೂ ಕುಳಿತಿರುವಿರಿ.

ನಾನು ಹೋಗುವಾಗ ಕೂಡಾ, ನೀವು ಕುಳಿತುಕೊಂಡಿರಬೇಕು. ಯಾರೂ ಎದ್ದು ಓಡಬಾರದು. ನಾನದನ್ನು ಯಾವತ್ತೂ ಹೇಳುತ್ತಿರುತ್ತೇನೆ ಮತ್ತು ನೀವು ಎದ್ದು ನಿಲ್ಲುವಾಗಲೇ, ಕಳವು ಮಾಡಲು ಈ ಕಳ್ಳರಿಗೆ ನೀವೊಂದು ಅವಕಾಶವನ್ನು ಕೊಡುವುದು. ಅವರು ಗುಂಪುಗಳಲ್ಲಿ ಬರುತ್ತಾರೆ. ಒಬ್ಬನು ಇತರರನ್ನು ದೂಡುವನು ಮತ್ತು ಬಹಳಷ್ಟು ಭಕ್ತಿಯನ್ನು ತೋರಿಸುವಂತೆ ನಟಿಸುವನು ಹಾಗೂ ಆ ಸಮಯದಲ್ಲಿ ಇನ್ನೊಬ್ಬನು ಜೇಬುಗಳ್ಳತನ ಮಾಡುವನು.

ಅವರದೊಂದು ತಂಡವಿದೆಯೆಂಬುದಾಗಿ ನೀವು ಊಹಿಸಬಲ್ಲಿರಾ? ಅವರು ನಮ್ಮನ್ನು ಮಾನಸಿಕವಾಗಿ ಬಹಳ ಚೆನ್ನಾಗಿ ಅಧ್ಯಯನ ನಡೆಸಿದ್ದಾರೆ. ಜೈ ಜೈ ರಾಧಾರಮಣ ಹಾಡುತ್ತಿರುವಾಗ (ಆರ್ಟ್ ಆಫ್ ಲಿವಿಂಗ್ ಸತ್ಸಂಗಗಳನ್ನು ಮುಕ್ತಾಯಗೊಳಿಸುವ ಒಂದು ಭಕ್ತಿಗೀತೆ), ಎಲ್ಲರೂ ಸತ್ಸಂಗದ ಅತ್ಯಾನಂದದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಾರೆ, ಮತ್ತು ಆ ಸಮಯದಲ್ಲೇ ಅವರು ಒಬ್ಬರನ್ನು ದೂಡಿ ಹಿಂದಿನಿಂದ ಅವರ ಜೇಬಿಗೆ ಕನ್ನ ಹಾಕುವುದು.

ಅಂತಹ ಘಟನೆಗಳನ್ನು ತಡೆಗಟ್ಟಲು ನೀವೆಲ್ಲರೂ ಸಹಕರಿಸಬೇಕು ಮತ್ತು ಕುಳಿತುಕೊಂಡಿರಬೇಕು. ಹೇಗಿದ್ದರೂ, ನಾನು ಎಲ್ಲರನ್ನೂ ಭೇಟಿಯಾಗುತ್ತೇನೆ.

ಜನರು ಒಬ್ಬರ ಮೇಲೊಬ್ಬರು ಬಿದ್ದಾಗ ಮತ್ತು ಹಿರಿಯ ಹೆಂಗಸರು ಹಾಗೂ ಮಕ್ಕಳು ನೆಲದ ಮೇಲೆ ನೂಕಲ್ಪಟ್ಟಾಗ ನನಗೆ ಹಿತವಾಗುವುದಿಲ್ಲ. ಕೆಲವು ಜನರು ಮುಂದಕ್ಕೆ ಓಡುತ್ತಾರೆ ಮತ್ತು ಇತರರನ್ನು ಹಿಂದೆಹಾಕುತ್ತಾರೆ ಹಾಗೂ, "ಗುರುದೇವ, ದಯವಿಟ್ಟು ನನ್ನನ್ನು ಆಶೀರ್ವದಿಸಿ" ಎಂದು ಹೇಳುತ್ತಾ ಅವರಿಗಿಂತ ಮೊದಲು ನನ್ನ ಬಳಿಗೆ ಬರುತ್ತಾರೆ. ಆಗ ಅಲ್ಲೇನೋ ಸರಿಯಿಲ್ಲವೆಂದು ನನಗನಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯು ತಳ್ಳುತ್ತಾನೆ ಮತ್ತು ಮುಂದೆ ಬರಲು ಪ್ರಯತ್ನಿಸುತ್ತಾನೆ ಹಾಗೂ ಅಪರಾಧದಲ್ಲಿ ಅವನ ಸಂಗಾತಿಯು ಆಗ, ಈ ಗೊಂದಲದ ನಡುವೆ ಹಿಂದಿನಿಂದ ನಿಮ್ಮ ಜೇಬಿಗೆ ಕನ್ನ ಹಾಕುತ್ತಾನೆ.

ಈ ಹಳೆಕಾಲದ ಭಕ್ತರಲ್ಲಿ ಕೆಲವರು; ನೀವವರನ್ನು ಭಕ್ತರೆಂದು ಕೂಡಾ ಕರೆಯಲು ಸಾಧ್ಯವಿಲ್ಲದಿದ್ದರೂ ಸಹ; ಅವರು ಕೇಳುವುದೇ ಇಲ್ಲ. ಅವರು ಮುಂದೆ ಬಂದು ಕುಳಿತುಕೊಂಡು ಅವ್ಯವಸ್ಥೆಯನ್ನು ಸೃಷ್ಟಿಸಲು ಜನರ ಮೇಲಿನಿಂದ ಹಾರುತ್ತಾರೆ. ಏನು ಮಾಡಬೇಕೆಂದು ನನಗೆ ತಿಳಿಯದು (ಅಂತಹ ಜನರನ್ನು ಶಿಕ್ಷಿಸಬೇಕೆಂದು ಸಭಿಕರಲ್ಲಿ ಒಬ್ಬ ಸದಸ್ಯನು ಸಲಹೆ ನೀಡುತ್ತಾನೆ).

ಹೌದು, ಅವರಿಗೆ ಯಾವ ಶಿಕ್ಷೆ ನೀಡುವುದೆಂದು ನಾನು ಯೋಚಿಸುತ್ತಿದ್ದೇನೆ. ಅವರು ಅಶಿಸ್ತನ್ನು ಹರಡುತ್ತಾರೆ. ಒಬ್ಬರಿಗೆ ಇಲ್ಲವೆಂದು ಹೇಳುವುದು ಅಥವಾ ನಿಷ್ಠುರವಾಗಿರುವುದು ನನ್ನ ಸ್ವಭಾವದಲ್ಲಿಲ್ಲ, ಆದರೆ ಈ ಜನರು ನಾನಾಗಿಯೇ ಇರಲು ನನ್ನನ್ನು ಬಿಡುವುದಿಲ್ಲ. ಒಬ್ಬರನ್ನು ’ಮೂರ್ಖ’ ಎಂದು ಕರೆಯುವುದನ್ನು ಬಿಟ್ಟರೆ ಬೇರೆ ಯಾವ ಕೆಟ್ಟ ಪದಗಳನ್ನೂ ನಾನು ಯಾವತ್ತೂ ಬಳಸಿಲ್ಲ ಅಥವಾ ಯಾರನ್ನೂ ಬೈದಿಲ್ಲ. ಇದಕ್ಕಿಂತ ಹೆಚ್ಚು ಕಟ್ಟುನಿಟ್ಟಾಗಿರುವುದು ಹೇಗೆಂದು ನನಗೆ ತಿಳಿಯದು.

ಆದರೆ ಅವರು ನನ್ನ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆ. ಅದು ಪರವಾಗಿಲ್ಲ. ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ ಮತ್ತು ನಾವು ಎಲ್ಲರನ್ನೂ ಸ್ವೀಕರಿಸಬೇಕು.

ಪ್ರಶ್ನೆ: ಗುರುದೇವ, ತನ್ನನ್ನು ತಾನೇ ಸಂತೋಷವಾಗಿಟ್ಟುಕೊಳ್ಳುವುದು ಹೆಚ್ಚು ಮುಖ್ಯವೇ ಅಥವಾ ಸುತ್ತಲಿರುವ ಇತರರನ್ನು ಸಂತೋಷವಾಗಿಟ್ಟುಕೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ನೋಡು, ಎರಡೂ ಮುಖ್ಯ. ನೀನೊಬ್ಬ ಸಂತ ಅಥವಾ ಸನ್ಯಾಸಿಯಾಗಿದ್ದರೆ, ಆಗ ನೀನು ಇತರರನ್ನು ಸಂತೋಷವಾಗಿಟ್ಟುಕೊಳ್ಳಬೇಕು. ಆದರೆ ನೀನೊಬ್ಬ ಸಂಸಾರಿಯಾಗಿದ್ದರೆ, ಆಗ ನೀನು ನಿನ್ನನ್ನು ಹಾಗೂ ಇತರರನ್ನು ಸಂತೋಷವಾಗಿಟ್ಟುಕೊಳ್ಳಬೇಕು.

ಒಂದು ಸೈಕಲ್ಲಿಗೆ ಎರಡು ಚಕ್ರಗಳಿರುವಂತೆ, ನೀವು ಎರಡನ್ನೂ ಸಂತುಲನದಲ್ಲಿಟ್ಟುಕೊಳ್ಳಬೇಕು. ನೀವು ಕೇವಲ ಇತರರನ್ನು ಸಂತೋಷವಾಗಿರಿಸಲು ಮಾತ್ರ ಪ್ರಯತ್ನಿಸುತ್ತಿದ್ದರೆ, ಆಗ ನೀವು ದುಃಖಗೊಳ್ಳುವಿರಿ ಮತ್ತು ನೀವು ದುಃಖಿತರಾಗಿದ್ದರೆ, ಆಗ ನೀವು ಇತರರನ್ನು ಹೇಗೆ ಸಂತೋಷವಾಗಿರಿಸುವಿರಿ?

ನೀವು ಕೇವಲ ನಿಮ್ಮನ್ನು ಮಾತ್ರ ಸಂತೋಷವಾಗಿಟ್ಟುಕೊಳ್ಳುವಲ್ಲಿ ಆಸಕ್ತರಾಗಿದ್ದರೆ, ಆಗ ನಿಮ್ಮ ಸುತ್ತಲಿರುವ ಜನರು ದುಃಖಗೊಳ್ಳುವರು ಮತ್ತು ಅವರು ದುಃಖಿತರಾಗಿದ್ದರೆ, ನೀವು ಹೇಗೆ ಸಂತೋಷವಾಗಿರುವಿರಿ? ಎರಡೂ ಪರಸ್ಪರ ಅವಲಂಬಿತವಾಗಿವೆ. ಹೀಗಾಗಿ ಮಧ್ಯದಾರಿಯನ್ನು ತೆಗೆದುಕೊಳ್ಳಿ ಮತ್ತು ಸಂತೋಷವಾಗಿರಿ ಹಾಗೂ ಇತರರನ್ನು ಸಂತೋಷವಾಗಿರಿಸಿ.

ನಿಮಗಾಗಿ ಸಮಯವನ್ನು ತೆಗೆದಿರಿಸಿ. ನಿಮ್ಮ ಸ್ವಂತ ಆರೋಗ್ಯದ ಕಡೆಗೂ ಕಾಳಜಿ ವಹಿಸಿ ಮತ್ತು ನಂತರ ನೀವು ಇತರರನ್ನು ಸಂತೋಷವಾಗಿರಿಸಬಹುದು. ಯಾವತ್ತೂ ನೀವು ಹೇಳಿದ್ದೇ ನಡೆಯಬೇಕೆಂದು ನೀವು ಹಠ ಮಾಡಬಾರದು. ಕೆಲವೊಮ್ಮೆ ನೀವು ಬಗ್ಗಬೇಕು ಮತ್ತು ಇತರರನ್ನು ಕೂಡಾ ಸಂತೋಷವಾಗಿರಿಸಬೇಕು. ನೀವು ಹೇಳುವುದನ್ನು ಅಥವಾ ನಂಬುವುದನ್ನು ಮಾತ್ರ ಅನುಸರಿಸಬೇಕೆಂದು ನೀವು ಯಾವಾಗಲೂ ಒತ್ತಾಯಪಡಿಸಬಾರದು. ಇಲ್ಲ, ಮಧ್ಯದಾರಿಯನ್ನು ಸ್ವೀಕರಿಸಿ. ಕೆಲವೊಮ್ಮೆ ಇತರರು ಹೇಳುವುದನ್ನು ಕೇಳಿ, ಮತ್ತು ಕೆಲವೊಮ್ಮೆ ನಿಮಗೇನನಿಸುವುದೋ ಅದನ್ನು ಕೂಡಾ ಅನುಸರಿಸಿ.

ಪ್ರಶ್ನೆ: ಗುರುದೇವ, ಪ್ರೇಮವು ಒಂದು ದೈವಿಕ ಗುಣವಾಗಿದೆ. ಪ್ರೇಮವು ನಮ್ಮನ್ನು ಮುಕ್ತಗೊಳಿಸಬಹುದು ಎಂಬುದಾಗಿ ಹೇಳಲಾಗಿದೆ, ಆದರೆ ಪ್ರೇಮವು ನಿಜವಾಗಿಯೂ ನಮ್ಮನ್ನು ಬಂಧಿಸುತ್ತದೆಯೆಂಬುದು ಕಾಣಿಸುತ್ತದೆ. ವಿವಾಹವನ್ನು ಕೂಡಾ ಒಂದು ಬಂಧನವಾಗಿ ಕಾಣಲಾಗುತ್ತದೆ. ಹಾಗಾದರೆ ಈ ಬಂಧನವು ಸುಂದರವಾಗಿರಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಸಂಬಂಧದಲ್ಲಿ ಸ್ವಾರ್ಥತೆ ಇಲ್ಲದಿರುವಾಗ ಅದು ಸುಂದರವಾಗಿರುತ್ತದೆ. ಸಂಬಂಧದಲ್ಲಿ ತ್ಯಾಗ ಮಾಡುವ ಇಚ್ಛೆ ಇರುವಾಗ, ಅದು ಸುಂದರವಾಗುತ್ತದೆ.

ಶ್ರೀರಾಮನಿಗೆ ತನ್ನ ಸಹೋದರ ಭರತನೊಂದಿಗಿದ್ದ ಸಂಬಂಧವನ್ನು ನೋಡು. ಅದು ಅಷ್ಟೊಂದು ಬಲವಾದ ಬಂಧನವಾಗಿತ್ತು, ಆದರೆ ಅವರಿಬ್ಬರೂ, ಇನ್ನೊಬ್ಬನಿಗಾಗಿ ಏನನ್ನು ಬೇಕಾದರೂ ತ್ಯಾಗ ಮಾಡುವ ಇಚ್ಛೆಯುಳ್ಳವರಾಗಿದ್ದರು. ಯಾವುದೇ ಸ್ವಾರ್ಥತೆಯಿರದ ಅಂತಹ ಒಂದು ಸಂಬಂಧವು ಸುಂದರವಾದುದು. ಅಂತಹ ಒಂದು ಸಂಬಂಧದಲ್ಲಿ ಬಹಳಷ್ಟು ಪ್ರೇಮ ಮತ್ತು ಶಾಂತಿಯಿರುತ್ತವೆ.

ಪ್ರಶ್ನೆ: ಎರಡು ವಿಷಯಗಳ ನಡುವೆ ಒಂದು ಸಂಘರ್ಷವಿರುವಾಗ ಮತ್ತು ಎರಡೂ ಸರಿಯೆಂದು ಅನ್ನಿಸುವಾಗ, ಆಯ್ಕೆ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ವಿಶ್ರಾಮ ಮಾಡು. ಗೊಂದಲವಿದ್ದರೆ, ವಿಶ್ರಾಮ ಮಾಡು. ಸರಿಯಾದುದು ಅದರಷ್ಟಕ್ಕೇ ಬರುವುದು. ಯಾವುದು ದೀರ್ಘ ಕಾಲಾವಧಿಯಲ್ಲಿ ಸಂತೋಷ ನೀಡುವುದೋ ಅದನ್ನು ಆಯ್ಕೆ ಮಾಡು. ಅಲ್ಪ ಕಾಲಾವಧಿಯಲ್ಲಿ ಅದು ಅಷ್ಟೊಂದು ಹಿತಕರವಾಗಿಲ್ಲದಿದ್ದರೂ ಸಹ ಪರವಾಗಿಲ್ಲ. ಯಾವುದು ನಿನಗೆ ತತ್ಕಾಲಿಕವಾಗಿ ಸಂತೋಷವನ್ನು ಕೊಡುವುದೋ, ಆದರೆ ದೀರ್ಘಕಾಲಾವಧಿಯಲ್ಲಿ ವೇದನೆಗೆ ಕಾರಣವಾಗುವುದೋ, ಅದೊಂದು ಒಳ್ಳೆಯ ಆಯ್ಕೆಯಲ್ಲ.

ಪ್ರಶ್ನೆ: ಗುರುದೇವ, ವರ್ತಮಾನದ ಕ್ಷಣದಲ್ಲಿ ಯಾವ ಆಯ್ಕೆಯನ್ನು ಮಾಡಬೇಕೆಂಬುದನ್ನು  ಅರಿತುಕೊಳ್ಳಲು ಒಬ್ಬನು ಆಯ್ಕೆರಹಿತವಾದ ಅರಿವಿನಲ್ಲಿರುವುದು ಹೇಗೆ?  

ಶ್ರೀ ಶ್ರೀ ರವಿ ಶಂಕರ್: ನಿನ್ನ ಮುಂದೆ ತಿನ್ನುವುದಕ್ಕಾಗಿ ಒಂದು ತುಂಡು ಇದ್ದಿಲು ಮತ್ತು ಒಂದು ಬಾಳೆಹಣ್ಣನ್ನು ಇಡಲಾಗಿದ್ದರೆ, ನಿನ್ನ ಆಯ್ಕೆಯೇನು? ಅಲ್ಲೊಂದು ಆಯ್ಕೆಯಿದೆಯೇ? ಅದರ ಬಗ್ಗೆ ವಿಚಾರ ಮಾಡು.

ಅದೊಂದು ಬಾಳೆಹಣ್ಣು ಅಥವಾ ಇದ್ದಿಲು ಎಂಬುದು ನಿನಗೆ ತಿಳಿಯದಿರುವಾಗ ಅಲ್ಲೊಂದು ಆಯ್ಕೆಯಿರುತ್ತದೆ. ಆದರೆ, ಬಾಳೆಹಣ್ಣು ತಿನ್ನಲು ಸಾಧ್ಯವಾದಂತಹದ್ದು ಮತ್ತು ಇನ್ನೊಂದು ಇದ್ದಿಲು ಎಂಬುದು ನಿನಗೆ ತಿಳಿದಿದ್ದರೆ, ಆಗ ಆಯ್ಕೆ ಎಲ್ಲಿರುವುದು?

ಜ್ಞಾನವು ವಿವೇಕವನ್ನು ತರುತ್ತದೆ, ಅದು ಸ್ಪಷ್ಟತೆಯನ್ನು ತರುತ್ತದೆ. ಗೊಂದಲವೆಂದರೆ, ವಿವೇಕದ ಕೊರತೆ ಮತ್ತು ಆ ಕ್ಷಣದಲ್ಲಿ ಸ್ಪಷ್ಟತೆಯಿಲ್ಲದಿರುವುದು. ಹಾಗಾದರೆ ವಿವೇಕವನ್ನು ತರುವುದು ಹೇಗೆ? ವಿಶ್ರಾಮ ಮಾಡಿ ಮತ್ತು ಧ್ಯಾನ ಮಾಡಿ.

ಪ್ರಶ್ನೆ: ಗುರುದೇವ, ೨೦ ನಿಮಿಷಗಳ ಧ್ಯಾನದಲ್ಲಿ, ನನಗೆ ಕೇವಲ ೧ ನಿಮಿಷ ಮಾತ್ರ ಧ್ಯಾನ ಮಾಡಲು ಸಾಧ್ಯವಾಗುತ್ತದೆ, ಉಳಿದ ಸಮಯ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆಂದು ನನಗನ್ನಿಸುತ್ತದೆ. ನಾನು ಕನಸು ಕಾಣುತ್ತಿದ್ದೇನೆಯೇ ಅಥವಾ ಆ ಸಮಯದಲ್ಲಿ ನೀವು ನಿಜಕ್ಕೂ ನನ್ನೊಂದಿಗೆ ಮಾತನಾಡುತ್ತಿರುತ್ತೀರೇ? ಅಲ್ಲಿ ಯಾರಾದರೂ ಇರುವರೇ ಎಂದು ನೋಡಲು ಕೆಲವೊಮ್ಮೆ ನಾನು ನನ್ನ ಕಣ್ಣುಗಳನ್ನು ಸ್ವಲ್ಪ ತೆರೆಯುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ಅದು ಪರವಾಗಿಲ್ಲ, ನೀನು ೨% ಧ್ಯಾನವನ್ನು (ಕಣ್ಣುಗಳನ್ನು ಶೇ. ೨ ರಷ್ಟು ಮಾತ್ರ ತೆರೆದುಕೊಂಡು ಮಾಡುವ ಒಂದು ವಿಧವಾದ ಧ್ಯಾನವನ್ನು ಉಲ್ಲೇಖಿಸುತ್ತಾ) ಮಾಡಬಹುದು.

ನೋಡು, ಕೆಲವೊಮ್ಮೆ, ಕಣ್ಣುಗಳನ್ನು ಮುಚ್ಚುವುದರೊಂದಿಗೆ ನಾವು ಕನಸು ಕಾಣಲು ತೊಡಗುತ್ತೇವೆ ಮತ್ತು ಮನೋರಾಜ್ಯವೆಂದು ಕರೆಯಲ್ಪಡುವ, ನಮ್ಮ ಮನಸ್ಸಿನ ಕಲ್ಪನಾಲೋಕದೊಳಕ್ಕೆ ಒಯ್ಯಲ್ಪಡುತ್ತೇವೆ. ಕಣ್ಣುಗಳು ತೆರೆದಿರುವುದರೊಂದಿಗೆ, ನಾವು ಹೊರಜಗತ್ತಿನಲ್ಲಿರುತ್ತೇವೆ. ಎರಡರ ನಡುವೆ ಇರುವುದು ಮೌನವಾಗಿದೆ. ಅತಿಯಾಗಿ ಹೊರಜಗತ್ತಿನದ್ದೂ ಅಲ್ಲ ಮತ್ತು ಅತಿಯಾಗಿ ಕಲ್ಪನೆ ಮಾಡಿಕೊಳ್ಳುವುದು ಕೂಡಾ ಅಲ್ಲ. ಇವುಗಳೆರಡರ ನಡುವೆ ನಾವು ಧ್ಯಾನ ಮಾಡಬೇಕು.

ಸೃಷ್ಟಿ ಮತ್ತು ಸೃಷ್ಟಿಕರ್ತ

ಫೆಬ್ರುವರಿ ೨೮, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಂದು ದಿನ ನೀವು, ಬಾಗಿಲು ಹಾಗೂ ಕಿಟಿಕಿಗಳು ಆಗೂ ಅವುಗಳೆಲ್ಲವನ್ನೂ ಮರವಾಗಿ ನೋಡುವ ಉದಾಹರಣೆಯೊಂದಿಗೆ ದ್ವೈತ ಮತ್ತು ಅದ್ವೈತಗಳ ಬಗ್ಗೆ ಮಾತನಾಡಿದಿರಿ. ಹಾಗಾದರೆ ಇದೇ ಉದಾಹರಣೆಯಲ್ಲಿ ವಿಶಿಷ್ಟಾದ್ವೈತದ (ವೇದಾಂತ ತತ್ವಜ್ಞಾನದ ಒಂದು ಉಪಶಾಖೆ) ತತ್ವಜ್ಞಾನವು ಎಲ್ಲಿ ಹೊಂದುತ್ತದೆ?

ಶ್ರೀ ಶ್ರೀ ರವಿ ಶಂಕರ್: ಎರಡೂ (ಸೃಷ್ಟಿ ಮತ್ತು ಚೇತನಗಳು, ದ್ವೈತ ಮತ್ತು ಅದ್ವೈತಗಳೆರಡೂ ಆಗಿರುವುದು) ನಿಜವೆಂದು ವಿಶಿಷ್ಟಾದ್ವೈತವು ಹೇಳುತ್ತದೆ. ಹೀಗೆ ವಿಶಿಷ್ಟಾದ್ವೈತದ ಪ್ರಕಾರ, ಅದು ಕೂಡಾ ಸರಿ ಮತ್ತು ಇದು ಕೂಡಾ ಸರಿ. ಅದ್ವೈತವು ಸಾಮಾನ್ಯವಾಗಿ ಇತರ ವಿಷಯಗಳನ್ನು ನಿಜವೆಂದು ಪರಿಗಣಿಸುವುದಿಲ್ಲ (ಅಂದರೆ ಸೃಷ್ಟಿಯಲ್ಲಿ ನಿಜಕ್ಕೂ ಎರಡಿಲ್ಲವೆಂದು ಅದ್ವೈತವು ಪ್ರತಿಪಾದಿಸುತ್ತದೆ).

ನಿಮಗೆ ಗೊತ್ತೇ, ಸೃಷ್ಟಿಯು ’ಸೃಷ್ಟಿಸಲ್ಪಟ್ಟಿತು’ ಎಂಬ ಇಡೀ ಕಲ್ಪನೆಯೇ ತಪ್ಪು. ಅದು ಸೃಷ್ಟಿಸಲ್ಪಟ್ಟಿತೆಂದು ಯಾರು ಹೇಳಿದರು? ಅದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ. ಒಂದು ಮರೀಚಿಕೆಯು ಯಾವತ್ತೂ ಸೃಷ್ಟಿಸಲ್ಪಡುವುದಿಲ್ಲ. ಒಂದು ಬಿಸಿಲ್ಗುದುರೆಯೆಂದರೆ, ಯಾವುದು ಇರುವಂತೆ ಕಾಣಿಸುವುದೋ, ಆದರೆ ವಾಸ್ತವವಾಗಿ ಇಲ್ಲವೋ ಅಂತಹ ಒಂದು ಭ್ರಮೆ.

ನೀರಿರುವ ಒಂದು ಗಾಜಿನ ಪಾತ್ರೆಯಲ್ಲಿ ನೀವೊಂದು ಪೆನ್ನನ್ನು ಹಾಕಿದರೆ, ಅದು ಬಾಗಿದಂತೆ ಕಾಣಿಸುತ್ತದೆ. ಈ ಬಾಗುವಿಕೆಯು ಯಾವಾಗ ಸೃಷ್ಟಿಸಲ್ಪಟ್ಟಿತು? ಅದು ಸೃಷ್ಟಿಸಲ್ಪಡಲಿಲ್ಲ. ಅದು ಕೇವಲ ಹಾಗೆ ಕಾಣಿಸುತ್ತದೆ. ಹೀಗೆ ಆ ಅರ್ಥದಲ್ಲಿ, ಯಾರೂ ಈ ವಿಶ್ವವನ್ನು ಸೃಷ್ಟಿಸಲಿಲ್ಲ.  ಅದು ಕೇವಲ ಇದೆ. ಅದು ಕೇವಲ ಆ ರೀತಿಯಲ್ಲಿರುವಂತೆ ಕಾಣಿಸುತ್ತದೆ. ಅದು ನಿಜವಲ್ಲ.
ಸೂರ್ಯನು ಅಸ್ತಮಿಸುವಾಗ, ಅದು ನಿಜವಾಗಿಯೂ ಅಸ್ತಮಿಸುವುದಿಲ್ಲ. ಅದು ಅಸ್ತಮಿಸುವಂತೆ ಕಾಣಿಸುತ್ತದೆ. ಅಷ್ಟೇ.

ಪ್ರಶ್ನೆ: ಪ್ರೀತಿಯ ಗುರುದೇವ, ಪ್ರಾಚೀನ ಭಾರತವು ಹಲವಾರು ಪುರಾತನ ಸಂಪ್ರದಾಯಗಳಿಗೆ ಸಾಕ್ಷಿಯಾಗಿತ್ತು. ಅವುಗಳು ಈಗ ಅಳಿದು ಹೋಗಿವೆ. ಅಂತಹ ಒಂದು ಪದ್ಧತಿಯೆಂದರೆ ದೇವದಾಸಿ ಪದ್ಧತಿ. ಈ ಪದ್ಧತಿಯು ಪ್ರಪಂಚಕ್ಕೆ ಭರತನಾಟ್ಯಂ, ಒಡಿಸ್ಸಿ ಮೊದಲಾದಂತಹ ಸಾಂಪ್ರದಾಯಿಕ ನೃತ್ಯ ರೂಪಗಳನ್ನು ನೀಡಿದೆ. ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳನ್ನು ಅಭ್ಯಸಿಸುವವರು, ಇವುಗಳು ಶರೀರ, ಮನಸ್ಸು ಮತ್ತು ಆತ್ಮಗಳ ಯೋಗವೆಂಬುದನ್ನು (ಇಲ್ಲಿ ಸಂಯೋಗ ಎಂದು) ತಿಳಿದಿರುವರು. ಭಾರತದಲ್ಲಿ ಕಲಾರೂಪಗಳು ಮತ್ತು ಆಧ್ಯಾತ್ಮದ ನಡುವೆ ಒಂದು ಸಂಬಂಧ ಇರುವುದಾಗಿ ತೋರುತ್ತದೆ. ತಾವು ದಯವಿಟ್ಟು ಅದರ ಬಗ್ಗೆ ಸ್ವಲ್ಪ ಮಾತನಾಡಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತಾ. ಕಲೆ, ನೃತ್ಯ, ಸಂಗೀತ ಮತ್ತು ಆಧ್ಯಾತ್ಮಗಳು ಸಂಬಂಧ ಹೊಂದಿವೆ. ಆದರೆ ಮಧ್ಯಕಾಲೀನ ಯುಗಗಳಲ್ಲಿ, ಮೊಗಲರ ಆಳ್ವಿಕೆಯ ಕಾಲದಲ್ಲಿ, ಆ ಸಮಯದಲ್ಲಿ ಆಳುತ್ತಿದ್ದ ರಾಜರು ಇದನ್ನು ಬಹಳ ಒಳ್ಳೆಯದೆಂದು ಪರಿಗಣಿಸಿರಲಿಲ್ಲ. ವಿಶೇಷವಾಗಿ ಉತ್ತರ ಭಾರತದಲ್ಲಿ, ನರ್ತಕರು ಮತ್ತು ಈ ಕಲಾರೂಪಗಳನ್ನು ಅಭ್ಯಸಿಸುವವರನ್ನು ಅಸಡ್ಡೆಯಿಂದ ನೋಡಲಾಗುತ್ತಿತ್ತು. ಇದು ಮಧ್ಯ ಯುಗಗಳಲ್ಲಿ ಮಾತ್ರ ಆಯಿತು. ಅದರ ಮೊದಲು, ಸಂಗೀತಗಾರರು ಮತ್ತು ನರ್ತಕರು ಗೌರವಿಸಲ್ಪಡುತ್ತಿದ್ದರು.

ಆದರೆ ಅವರನ್ನು ಅಸಡ್ಡೆಯಿಂದ ಕಾಣುತ್ತಿದ್ದಾಗ, ನರ್ತಿಸುತ್ತಿದ್ದ ಮತ್ತು ತಮ್ಮ ಜೀವನವನ್ನು ನೃತ್ಯ ಹಾಗೂ ಸಂಗೀತಗಳಿಗೆ ಮುಡಿಪಾಗಿಟ್ಟಿದ್ದ ಸ್ತ್ರೀಯರನ್ನು ಒಂದು ವಿಧದಲ್ಲಿ ಪ್ರತ್ಯೇಕವಾಗಿರಿಸಲಾಯಿತು. ಜನರು ಅವರನ್ನು ವಿವಾಹವಾಗುತ್ತಿರಲಿಲ್ಲ ಮತ್ತು ಕುಟುಂಬದಲ್ಲಿ ಆ ಕ್ಷಮತೆಯಿರುವ ಜನರನ್ನು ಹೊಂದಿರುವುದು ಒಂದು ಒಳ್ಳೆಯ ವಿಷಯವೆಂದು ಪರಿಗಣಿಸಲಾಗುತ್ತಿರಲಿಲ್ಲ. ಹೀಗೆ ಅದು ತನ್ನದೇ ಆದ ಒಂದು ವರ್ಗವಾಯಿತು, ಮತ್ತು ನಂತರ ಅದು ದೇವದಾಸಿ ಎಂದು ಕರೆಯಲ್ಪಟ್ಟಿತು. ಅದು ದುರದೃಷ್ಟಕರ. ಆದರೆ ಆನಂತರ ಈ ಕಳಂಕವನ್ನು ತೆಗೆದುಹಾಕಲಾಯಿತು.

ನಿಮಗೆ ಗೊತ್ತೇ, ಭಾರತದ ಬಹಳ ಸುಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾದ, ಭಾರತದ ಕೋಗಿಲೆ ಎಂದು ಕೂಡಾ ತಿಳಿಯಲ್ಪಡುವ ಶ್ರೀಮತಿ ಎಮ್.ಎಸ್.ಸುಬ್ಬಲಕ್ಷ್ಮಿಯವರು ಹಾಡಲು ಪ್ರಾರಂಭಿಸಿದಾಗ, ಬಹುತೇಕ ಇಡೀ ಸಮಾಜವು ಅವರನ್ನು ಬಹಿಷ್ಕೃತಗೊಳಿಸಿತು. ಒಬ್ಬ ವ್ಯಕ್ತಿಯು ಅವರನ್ನು ವಿವಾಹವಾದನು ಮತ್ತು ಸಂಗೀತದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ಸಲ್ಲತಕ್ಕ ಮರ್ಯಾದೆಯನ್ನು ತಂದು ಕೊಟ್ಟನು. ಶ್ರೀಮಾನ್ ಕಲ್ಕಿ ಸದಾಶಿವಮ್ ಅವರು ಒಬ್ಬ ಬಹಳ ಮಹಾನ್ ಚಿಂತಕರು ಹಾಗೂ ಪತ್ರಕರ್ತರು. ಎಮ್.ಎಸ್. ಸುಬ್ಬಲಕ್ಷ್ಮಿಯವರ ಮೊದಲು, ಸಂಗೀತ ಹಾಗೂ ನೃತ್ಯ ರೂಪಗಳು ತಮಗೆ ಸಿಗಬೇಕಾಗಿದ್ದ ಆ ಉನ್ನತ ಗೌರವವನ್ನು ಪಡೆದಿರಲಿಲ್ಲ.

ಖಂಡಿತಾ, ಗಾಯಕರನ್ನು ಮೆಚ್ಚಲಾಗುತ್ತಿತ್ತು, ಆದರೆ ಗಾಯಕಿಯರನ್ನಲ್ಲ. ಯಾರಾದರೂ ಸಿನೆಮಾಗಳಲ್ಲಿ ನಟಿಸಿದರೆ ಅಷ್ಟೇ, ಅವರ ಮರ್ಯಾದೆ ಆಗಲೇ ಅಲ್ಲಿಯೇ ಮುಗಿಯಿತು. ಸಿನೆಮಾಗಳಲ್ಲಿ ಅಭಿನಯಿಸುವುದಕ್ಕೆ ಕೂಡಾ ದೊಡ್ಡದೊಂದು ಕಳಂಕ ಅಂಟಿಕೊಂಡಿತ್ತು, ಆದರೆ ಅದೃಷ್ಟವಶಾತ್ ನಾವು, ಜನರು ಅಷ್ಟೊಂದು ಭೇದಭಾವವನ್ನು ಹೊಂದಿದ್ದ ಆ ಕತ್ತಲಿನ ಯುಗಗಳನ್ನು ದಾಟಿದ್ದೇವೆ.

ಪ್ರಶ್ನೆ: ಗುರುದೇವ, ಒಂದು ಕ್ರಿಯೆಯು ಪ್ರಜ್ಞೆಯ ಮೇಲೆ ಒಂದು ಅಚ್ಚನ್ನು ಬಿಟ್ಟುಹೋಗುವುದು ಯಾವಾಗ? 

ಶ್ರೀ ಶ್ರೀ ರವಿ ಶಂಕರ್: ಒಂದು ಕ್ರಿಯೆಯು ಅತಿಯಾಗಿ ಸುಖದಾಯಕವಾಗಿರುವಾಗ ಅಥವಾ ಅತಿಯಾಗಿ ನೋವುದಾಯಕವಾಗಿರುವಾಗ, ಅದೊಂದು ಗುರುತನ್ನು ಬಿಡುತ್ತದೆ.

ಪ್ರಶ್ನೆ: ಗುರುದೇವ, ಭಗವಂತ ಶಿವ ಮತ್ತು ರುದ್ರಾಕ್ಷ ಮಣಿಗಳ ನಡುವೆ ಒಂದು ಸಂಬಂಧವಿರುವುದಾಗಿ ತೋರುತ್ತದೆ. ರುದ್ರಾಕ್ಷವು ಹಲವು ಮುಖಗಳನ್ನು ಹೊಂದಿದೆ; ಒಂದು ಮುಖ, ಎರಡು ಮುಖಗಳು, ಹನ್ನೆರಡು ಮುಖಗಳು, ಹೀಗೆ. ಅದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ನೀನು ಅದರ ಬಗ್ಗೆ ಚಿಂತಿಸಬೇಡ. ಅದು ಕೇವಲ, ರುದ್ರಾಕ್ಷವನ್ನು ಮಾರುವವರಿಂದ ಬಳಸಲಾಗುವ ಒಂದು ಮಾರ್ಕೆಟಿಂಗ್ ತಂತ್ರವಾಗಿದೆ. ಏಕಮುಖವುಳ್ಳ ರುದ್ರಾಕ್ಷ ಮಣಿಯು, ಎರಡು ಮುಖವುಳ್ಳದ್ದಕ್ಕಿಂತ ದೊಡ್ಡದಾಗಿದೆ ಅಷ್ಟೇ.

ಮುಖ್ಯವಾದ ಸಂಗತಿಯೆಂದರೆ ನೀವು ಏಕಮುಖಿಯಾಗಿರಬೇಕು (ಭಕ್ತಿಯಲ್ಲಿ). ನೀವು ಧರಿಸುವ ರುದ್ರಾಕ್ಷಕ್ಕೆ ಒಂದೋ ಅಥವಾ ಹತ್ತೋ ಅಥವಾ ಹದಿನೈದು ಮುಖಗಳಿವೆಯೋ ಎಂಬುದಾಗಿ ಚಿಂತಿಸಬೇಡಿ. ನಾನಿದಕ್ಕೆ ಅಷ್ಟೊಂದು ಮಹತ್ವವನ್ನು ನೀಡುವುದಿಲ್ಲ ಮತ್ತು ನೀವೂ ಕೊಡುವುದನ್ನು ನಾನು ಬಯಸುವುದಿಲ್ಲ.

ರುದ್ರಾಕ್ಷವು ಒಳ್ಳೆಯದಾಗಿದ್ದರೆ ಮತ್ತು ಅದು ನಿಮ್ಮ ಶರೀರಕ್ಕೆ ಏನಾದರೂ ಒಳ್ಳೆಯದನ್ನು ಮಾಡುವುದಾದರೆ, ಆಗ ಅಷ್ಟು ಸಾಕು. ನಿಮಗೆ ಅದನ್ನು ಧರಿಸಬೇಕನ್ನಿಸಿದರೆ, ಅದನ್ನು ಧರಿಸಿ, ಅಲ್ಲದಿದ್ದರೆ, ನೀವು ಧರಿಸದಿದ್ದರೆ ಅದೇನೂ ಪರವಾಗಿಲ್ಲ.
ರುದ್ರಾಕ್ಷಗಳು ಜೀವನ್ಮರಣದ ಪ್ರಶ್ನೆಯಲ್ಲ. ನೀವೊಂದು ಹತ್ತು ಮಣಿಗಳ ಮಾಲೆಯನ್ನು ಧರಿಸಿದರೆ ನಿಮಗೆ ಜ್ಞಾನೋದಯವಾಗುವುದೆಂದೇನೂ ಇಲ್ಲ. ಕಾಗೆಗಳು ಕೂಡಾ ರುದ್ರಾಕ್ಷ ಮರದ ಮೇಲೆ ಕುಳಿತುಕೊಳ್ಳುತ್ತವೆ, ಅವುಗಳಿಗೆ ಜ್ಞಾನೋದಯವಾಗುವುದಿಲ್ಲ. ನಮ್ಮ ಆಶ್ರಮದಲ್ಲಿ ಕೆಲವು ಮರಗಳಿವೆ.

ಹೌದು, ಅದು ಕೆಲವು ಶಾರೀರಿಕ ಹಾಗೂ ಶಕ್ತಿಯುತ ಪರಿಣಾಮವನ್ನು ಹೊಂದಿದೆ, ಆದರೆ ನೀವದಕ್ಕೆ ಅತಿಯಾದ ಪ್ರಾಮುಖ್ಯತೆಯನ್ನು ಕೊಡಬೇಕಾಗಿಲ್ಲ.

ಪ್ರಶ್ನೆ: ಗುರುದೇವ, ಶಿವನ ಆಸನವು ನಿರ್ವಾಣ, ಅವನ ಉಪಸ್ಥಿತಿಯು ಪರಮಾನಂದ ಮತ್ತು ಅವನು ತನ್ನ ಸುತ್ತಲೂ ಸಂತೋಷವನ್ನು ಹರಡುವನೆಂದು ನಿನ್ನೆ ನಮಗೆ ಹೇಳಲಾಯಿತು. ದಯವಿಟ್ಟು ನೀವು ಇದನ್ನು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ನೀನು ಯಾಕೆ ನನಗೆ ತೊಂದರೆಯನ್ನು ನೀಡುತ್ತಿರುವೆ? ನೀನದನ್ನು ಅರ್ಥಮಾಡಿಕೊಳ್ಳುವಂತೆ ನಾನು ನಿನ್ನನ್ನು ಪೀಡಿಸುವುದಿಲ್ಲ, ಹಾಗಾದರೆ ನಿನಗದನ್ನು ಅರ್ಥ ಮಾಡಿಸುವಂತೆ ನೀನು ಯಾಕೆ ನನ್ನನ್ನು ಪೀಡಿಸುವೆ?
ಇವುಗಳೆಲ್ಲಾ ನಿಮಗೆ ನೀಡಲಾಗಿರುವ ಸೂಕ್ತಿಗಳು ಮತ್ತು ಇವುಗಳನ್ನು ವಿಚಾರ ಮಾಡಲು ಹಾಗೂ ಅರ್ಥವನ್ನು ತಿಳಿಯಲಿರುವ ಬುದ್ಧಿಯನ್ನು ನಿಮಗೆ ನೀಡಲಾಗಿದೆ.

ಗುರುಗಳು ದೀರ್ಘವಾದ ಪ್ರವಚನಗಳನ್ನು ನೀಡಬೇಕಾಗಿಲ್ಲ. ಅವರು ನಿಮಗೆ ಕೇವಲ ಸಾರವನ್ನು ಮಾತ್ರ ನೀಡುವರು. ನೀವು ಅದನ್ನು ಮನನ ಮಾಡಿ,  ಅದರ ಮೇಲೆ ವಿಚಾರ ಮಾಡಬೇಕು ಹಾಗೂ ಅದು ನಿಮ್ಮೊಳಗೆ ತೆರೆದುಕೊಳ್ಳುವುದು.

ಪ್ರಶ್ನೆ: ಗುರುದೇವ, ಎಲ್ಲವನ್ನೂ ಬಿಟ್ಟುಬಿಡಿರೆಂದು ವೇದಾಂತವು ಹೇಳುತ್ತದೆ, ಆದರೆ ನಮ್ಮ ಧರ್ಮಗ್ರಂಥಗಳು ಎಲ್ಲವನ್ನೂ ಸ್ವೀಕರಿಸುವಂತೆ ಸಲಹೆ ನೀಡುತ್ತವೆ. ಉತ್ತಮವಾದ ಆಯ್ಕೆ ಯಾವುದು?

ಶ್ರೀ ಶ್ರೀ ರವಿ ಶಂಕರ್: ಬಿಟ್ಟುಬಿಡುವುದಕ್ಕಾಗಿ, ಮೊದಲಿಗೆ ನೀವು ಯಾವುದನ್ನಾದರೂ ಹಿಡಿದುಕೊಂಡಿರಬೇಕು. ಹೀಗಾಗಿ ಎರಡೂ ಸರಿ. ಒಬ್ಬನು ಬಸ್ಸಿನೊಳಕ್ಕೆ ಹತ್ತಲು ಹಾಗೂ ಇನ್ನೊಬ್ಬನು ಬಸ್ಸಿನಿಂದ ಇಳಿಯಲು ಹೇಳುತ್ತಿರುವುದಾದರೆ; ನೀವು ಬಸ್ಸಿನೊಳಕ್ಕೆ ಹತ್ತದೆ, ನಿಮಗೆ ಅದರಿಂದ ಇಳಿಯಲು ಸಾಧ್ಯವಿಲ್ಲ. ಹೀಗಾಗಿ ನೀವು ಎರಡನ್ನೂ ಮಾಡಬೇಕು.

ಪ್ರಶ್ನೆ: ಗುರುದೇವ, ಶಿವನು ಭೂತನಾಥನೆಂದು ಕರೆಯಲ್ಪಡುತ್ತಾನೆ ಹಾಗೂ ಅವನು ಭೂತಗಳು ಮತ್ತು ಆತ್ಮಗಳಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಭೂತಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ?

ಶ್ರೀ ಶ್ರೀ ರವಿ ಶಂಕರ್: ಶಿವನು ಅಸ್ತಿತ್ವದಲ್ಲಿರುವನೇ ಎಂದು ನೀನು ನನ್ನಲ್ಲಿ ಕೇಳಿದರೆ, ನಾನು ಉತ್ತರಿಸಬಲ್ಲೆ, ಹೌದು! ಆದರೆ ಅವನ ಸುತ್ತಲಿರುವ ಭೂತಗಳ ಬಗ್ಗೆ ನನಗೆ ತಿಳಿಯದು (ನಗು).

ಹೌದು, ಭೂತಗಳು ಅಸ್ತಿತ್ವದಲ್ಲಿವೆ, ಆದರೆ ಅವುಗಳು ಅವನಿಂದ ಭಿನ್ನವಾಗಿಲ್ಲ. ಅವುಗಳು ಅವನಲ್ಲಿವೆ.

ಐದು ತತ್ವಗಳು ಪಂಚಭೂತಗಳೆಂದು ಕರೆಯಲ್ಪಡುತ್ತವೆ. ಹೀಗೆ, ವಾಯು, ಜಲ, ಅಗ್ನಿ, ಭೂಮಿ ಮತ್ತು ಆಕಾಶ ಇವುಗಳು ಒಟ್ಟಾಗಿ ಐದು ಭೂತಾತ್ಮಗಳು ಎಂದು ಕರೆಯಲ್ಪಡುತ್ತವೆ. ಕೆಲವು ಆತ್ಮಗಳು ಕೂಡಾ ಭೂತಗಳಾಗುತ್ತವೆ ಮತ್ತು ಅದು ಯಾಕೆಂದರೆ, ಶರೀರವನ್ನು ತ್ಯಜಿಸಿದ ಬಳಿಕವೂ ಅವುಗಳಿಗೆ ತಮ್ಮ ವಾಸನೆಗಳನ್ನು (ಮನಸ್ಸಿನ ರಾಗದ್ವೇಷಗಳಿಂದಾಗಿ ಇರುವ ಅಚ್ಚುಗಳು) ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ಅದು ಯಾಕೆಂದರೆ, ಆತ್ಮವು ಶರೀರವನ್ನು ಬಿಟ್ಟುಹೋದ ಬಳಿಕವೂ, ಅದುವೇ ಅನಂತ ಪ್ರಕಾಶ ಅಥವಾ ಚೇತನವೆಂಬ ಅರಿವಿನ ಉದಯವಾಗುವುದಿಲ್ಲ.

ಅದು ಹೇಗೆಂದರೆ, ಆಹಾರವು ಅವರ ಮುಂದಿದೆ ಹಾಗೂ ಅವರು ತಿನ್ನಲು ಯೋಚಿಸುತ್ತಿದ್ದಾರೆ, ಆದರೆ ಅವರಿಗದನ್ನು ನಿಜಕ್ಕೂ ತಿನ್ನಲು ಸಾಧ್ಯವಾಗುವುದಿಲ್ಲ.

’ಭೂತಕಾಲ’ ಎಂಬ ಶಬ್ದದ ಅರ್ಥ ಹಿಂದೆ ಆಗಿಹೋದುದು ಎಂದು. ಇದು ಯಾಕೆಂದರೆ, ಅದು ಈಗಾಗಲೇ ಆಗಿಹೋಗಿದೆ, ಆದರೂ ಒಬ್ಬನು ಅದರ ಅಚ್ಚುಗಳನ್ನು ಹಿಡಿದಿಟ್ಟುಕೊಂಡಿದ್ದಾನೆ ಮತ್ತು ಅದನ್ನು ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ಭೂತಗಳು ಕೂಡಾ ಆತ್ಮಗಳು, ಆದರೆ ಅವುಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ತಾವು ಆತ್ಮಗಳು ಎಂಬುದನ್ನು ಅವುಗಳು ಅರಿತುಕೊಂಡಿಲ್ಲವಾದ್ದರಿಂದ ಅವುಗಳು ಶಕ್ತಿಹೀನವಾಗಿವೆ. ಆತ್ಮವು ಆತ್ಮ-ಜ್ಞಾನವನ್ನು ಹೊಂದಿದಾಗ ಅದು ಶಕ್ತಿಶಾಲಿಯಾಗುತ್ತದೆ. ಅವುಗಳು ಇದನ್ನು ಅರಿತುಕೊಂಡಾಗ, ಅವುಗಳು ಭೂತಗಳಾಗಿ ಉಳಿಯುವುದಿಲ್ಲ.


ಪ್ರಶ್ನೆ: ಗುರುದೇವ, ಎಲ್ಲವೂ ಶಿವತತ್ವ ಎಂದು ನಿನ್ನೆ ನೀವು ಹೇಳಿದಿರಿ. ಹಾಗಾದರೆ ಕೃಷ್ಣನ ಭಕ್ತರಿಗೆ ನಿಮ್ಮ ಸಂದೇಶವೇನು? ಹಾಗೆಯೇ, ನಾನು ಶಿವನನ್ನು ಪ್ರಾರ್ಥಿಸುವುದಿಲ್ಲ, ಕೇವಲ ಕೃಷ್ಣನನ್ನು ಮಾತ್ರ. ಇದು ಸರಿಯೇ?

ಶ್ರೀ ಶ್ರೀ ರವಿ ಶಂಕರ್: ಕೃಷ್ಣ ಪರಮಾತ್ಮ ಮತ್ತು ಭಗವಾನ್ ಶಿವ ಇಬ್ಬರೂ ಒಂದೇ. ಭಗವದ್ಗೀತೆಯ ಹತ್ತನೆಯ ಅಧ್ಯಾಯ, ವಿಭೂತಿ ಯೋಗದಲ್ಲಿ ಕೃಷ್ಣ ಪರಮಾತ್ಮನೇ ಹೀಗೆಂದು ಹೇಳುತ್ತಾನೆ,

’ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷ ರಕ್ಷಸಾಮ್ I
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ II’     (೧೦.೨೩)

’ರುದ್ರರಲ್ಲಿ ನಾನು ಭಗವಾನ್ ಶಿವನು’ ಎಂದು ಕೃಷ್ಣ ಪರಮಾತ್ಮನು ಹೇಳುತ್ತಾನೆ. ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,

’ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ I
ಸೇನಾನೀನಾಮಹಂ ಸ್ಕಂಧಃ ಸರಸಾಮಸ್ಮಿ ಸಾಗರಃ II’   (೧೦.೨೪)

’ಯುದ್ಧದ ಸೇನಾಪತಿಗಳಲ್ಲಿ ನಾನು ಭಗವಾನ್ ಕಾರ್ತಿಕೇಯನು’ ಎಂದು ಕೃಷ್ಣ ಪರಮಾತ್ಮನು ಹೇಳುತ್ತಾನೆ.
ಹೀಗೆ, ಕೃಷ್ಣ ಪರಮಾತ್ಮ ಮತ್ತು ಭಗವಾನ್ ಶಿವ ಇಬ್ಬರೂ ಒಂದೇ. ಯಾವುದೇ ವ್ಯತ್ಯಾಸವಿಲ್ಲ.

ಪ್ರಶ್ನೆ: ಗುರುದೇವ, ಪಥದ ಮೇಲೆ ಬಂದು ಆಮೇಲೆ ಬಿಟ್ಟುಬಿಡುವ ಹಲವಾರು ಜನರಿದ್ದಾರೆ. ಹಾಗಾಗುವುದು ಯಾಕೆ? ಅವರು ಅಷ್ಟೊಂದು ತೊಡಗಿಸಿಕೊಂಡಿರುತ್ತಾರೆ ಮತ್ತು ಇದ್ದಕ್ಕಿದ್ದಂತೆ ಅವರು ಬರುವುದನ್ನು ನಿಲ್ಲಿಸುತ್ತಾರೆ.

ಶ್ರೀ ಶ್ರೀ ರವಿ ಶಂಕರ್: ಎಷ್ಟು ಮಂದಿ ಹಾಗೆ ಮಾಡಿದ್ದಾರೆ? ಕೇವಲ ಕೆಲವೇ ಜನರಿರಬಹುದು ಮತ್ತು ಅದಕ್ಕೆ ಬೇರೆ ಬೇರೆಯ ಕಾರಣಗಳಿರಬಹುದು.

ಕೆಲವು ಜನರು, ಒಂದು ಹೋಟೇಲಿಗೆ ಹೋಗುವಂತೆ ಈ ಪಥದ ಮೇಲೆ ಬರುತ್ತಾರೆ. ನೀವೊಂದು ಹೋಟೇಲಿನಲ್ಲಿ ತಿಂದ ಬಳಿಕ, ನೀವು ಹೋಟೇಲಿನ ಬಗ್ಗೆ ಹಲವು ಗಂಟೆಗಳವರೆಗೆ ಯೋಚಿಸುವುದಿಲ್ಲ, ಸರಿಯಾ? ಹೀಗೆ, ಅವರಿಗೆ ಸಂತೃಪ್ತಿಯಾಗಿರುತ್ತದೆ ಮತ್ತು ಅವರು ಮರಳಿ ಬರುವುದಿಲ್ಲ.

ಇತರ ಜನರಿದ್ದಾರೆ, ಅವರು ಒಂದು ಕಷ್ಟಕಾಲದ ಮೂಲಕ ಹಾದುಹೋಗುತ್ತಿರಬಹುದು ಮತ್ತು ತಮ್ಮ ಕೆಟ್ಟ ಅಭ್ಯಾಸಗಳಿಂದಾಗಿ ಅವರು ಪಥವನ್ನು ಬಿಟ್ಟು ನಡೆಯುತ್ತಿರಲೂಬಹುದು. ಆದರೆ ಆಮೇಲೆ ಅವರು ಮರಳಿ ಬರುತ್ತಾರೆ ಕೂಡಾ. ೧೫, ೨೦ ಅಥವಾ ೨೫ ವರ್ಷಗಳ ಬಳಿಕವೂ ಜನರು ಪಥಕ್ಕೆ ಮರಳಿ ಬರುವುದನ್ನು ನಾನು ನೋಡಿದ್ದೇನೆ. ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.

ನಿಮ್ಮ ಕೆಲಸವು ಹೊಲದಲ್ಲಿ ಬೀಜಗಳನ್ನು ಎಸೆಯುವುದು. ಎಲ್ಲೆಲ್ಲಾ ಅದು ಬೆಳೆಯುವುದೋ, ಅದು ಬೆಳೆಯುತ್ತದೆ. ಬೆಳೆದಿದೆಯೇ ಅಥವಾ ಇಲ್ಲವೇ ಎಂದು ಪ್ರತಿಯೊಂದು ಬೀಜವನ್ನೂ ನೋಡಿಕೊಂಡಿರಲು ನಿಮಗೆ ಸಾಧ್ಯವಿಲ್ಲ.

ಪ್ರಶ್ನೆ: ಗುರುದೇವ, ನಿನ್ನೆಯ ಮಹಾಶಿವರಾತ್ರಿ ಆಚರಣೆಗಳಲ್ಲಿ ನಾನಿದ್ದೆ ಮತ್ತು ಅಲ್ಲಿನ ಚೈತನ್ಯವು ನಂಬಲಸಾಧ್ಯವಾದುದಾಗಿತ್ತು. ನನ್ನ ಪ್ರಶ್ನೆಯೇನೆಂದರೆ, ಈ ಹಬ್ಬದಲ್ಲಿ ನಮ್ಮ ಇರುವಿಕೆಯಿಂದಾಗಿ, ವಿಶ್ವ ಅಥವಾ ಭೂಮಿಯ ಮೇಲೆ ಪರಿಣಾಮವಾಗುವುದಾದರೆ, ನಾವು ಒಬ್ಬಂಟಿಯಾಗಿದ್ದರೂ ಅಥವಾ ದೊಡ್ಡ ಜನಸಂಖ್ಯೆಯೊಂದಿಗಿದ್ದರೂ ಅನುಭವವು ಒಂದೇ ಆಗಿರುವುದೇ?

ಶ್ರೀ ಶ್ರೀ ರವಿ ಶಂಕರ್: ಯಾರು ಇಲ್ಲಿಗೆ ಬರಲು ಬಯಸಿದ್ದರೋ ಆದರೆ ಬರಲು ಸಾಧ್ಯವಾಗಿಲ್ಲವೋ, ಅಥವಾ ಅದರ ಬಗ್ಗೆ ಯೋಚಿಸಿದ್ದರೋ ಅಥವಾ ಅದರಲ್ಲಿ ಯಾವುದೇ ರೀತಿಯಲ್ಲಾದರೂ ಭಾಗವಹಿಸಿದ್ದರೋ, ಅವರೆಲ್ಲರೂ ಆಶೀರ್ವಾದವನ್ನು ಪಡೆಯುತ್ತಾರೆ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ.

ಗುರುವಾರ, ಫೆಬ್ರವರಿ 27, 2014

ದೃಶ್ಯ, ದೃಷ್ಟ ಶಿವ

ಫೆಬ್ರುವರಿ ೨೭, ೨೦೧೪
ಬೆಂಗಳೂರು, ಭಾರತ

ವತ್ತು, ಮಹಾಶಿವರಾತ್ರಿಯ ಈ ಮಂಗಳಕರವಾದ ದಿನದಂದು ನೀವು ನಿಮ್ಮೊಂದಿಗೆ ಒಯ್ಯಬೇಕಾಗಿರುವ ವಿಷಯಗಳು ಕೇವಲ ಎರಡೇ. ಅವುಗಳು ತತ್‌ಕ್ಷಣವೇ ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ತರುವುವು.

೧. ’ದೇವರು ನನ್ನೊಂದಿಗೆ ಎಲ್ಲಾ ಸಮಯಗಳಲ್ಲೂ ಇದ್ದಾನೆ ಮತ್ತು ಅವನು ನನ್ನೆಲ್ಲಾ ಆವಶ್ಯಕತೆಗಳನ್ನು ಪೂರೈಸುವನು’ ಎಂಬುದನ್ನು ತಿಳಿಯಿರಿ. ದೇವರಿರುವುದು ನಿಮ್ಮ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಮಾತ್ರ.

೨. ಈ ದೃಢ ವಿಶ್ವಾಸದೊಂದಿಗೆ, ವಿಶ್ರಾಮ ಮಾಡಿ ಮತ್ತು ಆತ್ಮನಲ್ಲಿ ವಿರಮಿಸಿ.

ಆಳವಾದ ವಿಶ್ರಾಂತಿಯ ಸ್ಥಿತಿಗೆ ಬರುವುದೇ, ಮಹಾಶಿವರಾತ್ರಿ ವಿಶೇಷ. ಮಹಾಶಿವರಾತ್ರಿಯು ಮನಸ್ಸು ಮತ್ತು ಚೇತನಕ್ಕೆ ಆಳವಾದ ವಿಶ್ರಾಂತಿಯನ್ನು ತರುತ್ತದೆ. ಮನಸ್ಸು ಯಾವತ್ತೂ ಯಾವುದಾದರೊಂದರ ಹಿಂದೆ ಓಡುತ್ತಿರುತ್ತದೆ ಅಥವಾ ಒಂದಲ್ಲೊಂದನ್ನು ಬಯಸುತ್ತಿರುತ್ತದೆ; ಅದೊಂದು ಆಧ್ಯಾತ್ಮಿಕ ವಿಷಯವೇ ಆಗಿರಲಿ ಅಥವಾ ಒಂದು ಪ್ರಾಪಂಚಿಕ ವಸ್ತುವೇ ಆಗಿರಲಿ. ಹೀಗಾಗಿ, ನಿಮಗೆ ಎರಡನ್ನೂ ಒದಗಿಸಲು ದೇವರಿದ್ದಾರೆ ಎಂಬುದನ್ನು ಸುಮ್ಮನೇ ನೆನಪಿನಲ್ಲಿಡಿ ಮತ್ತು ವಿಶ್ರಾಮ ಮಾಡಿ.

ನೀವು ದೇವರೊಂದಿಗೆ ಆ ಆಳವಾದ ಸಂಬಂಧವನ್ನು ಸ್ಥಾಪಿಸಬೇಕು ಮತ್ತು ’ದೇವರು ನನಗೆ ಸೇರಿದವರು’ ಎಂಬುದನ್ನು ನೆನಪಿನಲ್ಲಿಡಬೇಕು. ನಿಮಗೇನೆಲ್ಲಾ ಬೇಕೋ ಅದನ್ನು ಖಂಡಿತವಾಗಿಯೂ ನಿಮಗೆ ನೀಡಲಾಗುವುದು ಎಂಬ ಈ ದೃಢ ವಿಶ್ವಾಸವನ್ನು ಹೊಂದಿ. ಈ ವಿಶ್ವಾಸವು ಒಳಗಿನಿಂದ ಉದಯವಾದ ಕ್ಷಣವೇ, ಮನಸ್ಸು ಸ್ಥಿರವಾಗುತ್ತದೆ ಮತ್ತು ವಿಶ್ರಾಂತಿಯ ಒಂದು ಸ್ಥಿತಿಗೆ ಬರುತ್ತದೆ.

ನೀವು ಕೀರ್ತನೆಯನ್ನು ಮಾಡುವಾಗಲೂ ನಿಮಗೆ ಅದೇ ರೀತಿಯ ಶಾಂತಿ ಮತ್ತು ಆಳವಾದ ವಿಶ್ರಾಂತಿಯು ದೊರಕುತ್ತದೆ. ನಿಮಗೆ ಗೊತ್ತಾ, ಕೇವಲ ಒಂದು ಮೇಲ್ನೋಟಕ್ಕೆ, ತೋರಿಕೆಗಾಗಿ ಭಜನೆಗಳನ್ನು ಹಾಡುವುದು ಒಳ್ಳೆಯದಲ್ಲ. ನೀವು ಹಾಡುಗಳನ್ನು ಕೇಳುವಾಗ ಮತ್ತು ಅದರೊಂದಿಗೆ ನೀವು ಹಾಡುವಾಗ, ನೀವು ತುಂಬುಹೃದಯದಿಂದ ಮತ್ತು ದೇವರ ಕಡೆಗೆ ಒಂದು ಆಳವಾದ ಭಕ್ತಿಯ ಭಾವದಿಂದ ಹಾಗೂ ಪ್ರೇಮದಿಂದ ಹಾಡಬೇಕು. ನೀವು ದೇವರನ್ನು ಕೂಗಿ ಕರೆಯಬೇಕು.

ತುಂಬುಹೃದಯದಿಂದ ಹಾಡುತ್ತಾ, ಹಾಡಿನೊಂದಿಗೆ ಒಂದಾಗುವಾಗ, ಕ್ಷಣಮಾತ್ರದಲ್ಲಿ ನೀವು ದೇವರೊಂದಿಗೆ ಒಂದಾಗುತ್ತೀರಿ.
ಭಗವಾನ್ ಶಿವನು ಹೊರಗಡೆಯಿಲ್ಲ; ಅವನೊಂದು ದೇವಸ್ಥಾನದಲ್ಲಿ ಅಥವಾ ಹಿಮಾಲಯಗಳಲ್ಲೆಲ್ಲೋ ದೂರದಲ್ಲಿ ಕುಳಿತಿಲ್ಲ; ಅವನು ಮಾನಸರೋವರದಲ್ಲಿ ಅಥವಾ ಕೈಲಾಸ ಪರ್ವತದಲ್ಲಿಲ್ಲ. ಭಗವಾನ್ ಶಿವನು ನಿಮ್ಮೊಳಗೆ ಇದ್ದಾನೆ ಮತ್ತು ಅವನು ಎಲ್ಲೆಡೆಯೂ ಇದ್ದಾನೆ. ಕೇವಲ ಇದನ್ನು ತಿಳಿದುಕೊಳ್ಳಿ ಮತ್ತು ವಿಶ್ರಾಮ ಮಾಡಿ.

ಅವನು ಸರ್ವವ್ಯಾಪಿ, ನೀವು ಹೋಗುವ ಎಲ್ಲೆಡೆಗಳಲ್ಲೂ ನಿಮಗೆ ವ್ಯಕ್ತವಾಗಿ ಕಾಣಿಸುವುದು ಅವನೇ ಆಗಿರುವನು; ಅದು ಬೆಟ್ಟಗಳಿರಲಿ, ಗಿಡಗಳು, ಮರಗಳು ಮೊದಲಾದವುಗಳಿರಲಿ. ಅವನು ದೃಶ್ಯವೂ ದೃಷ್ಟಾನೂ (ನೋಡುವವನು) ಆಗಿರುವನು. ಇದರ ಬಗ್ಗೆ ನಿಮಗೆ ನೀವೇ ಮತ್ತೆ ಮತ್ತೆ ನೆನಪಿಸಿಕೊಳ್ಳಿ ಮತ್ತು ವಿಶ್ರಾಮ ಮಾಡಿ. ಅಲ್ಪ ಸಮಯದಲ್ಲೇ ನೀವು ಅಂತಹ ಒಂದು ಆಳವಾದ ಸಮಾಧಿಯ ಸ್ಥಿತಿಯನ್ನು ಹೊಂದುವುದು ನಿಮಗೆ ಕಾಣಿಸುವುದು ಮತ್ತು ನಿಮ್ಮ ಮನಸ್ಸಿಗೆ ಅಷ್ಟೊಂದು ಸಂತೋಷ ಹಾಗೂ ಶಾಂತಿ ಸಿಗುವುದು. ನೀವು ಒಳಗಿನಿಂದ ಎಷ್ಟೊಂದು ಸಂಪೂರ್ಣವಾಗಿ ಅರಳುವಿರೆಂದರೆ, ಬೇರೇನೂ ಇರುವುದಿಲ್ಲ. ಅಷ್ಟೇ.

ಮಹಾಶಿವರಾತ್ರಿಯಂದು ಇದನ್ನೇ ನೀವು ಮಾಡಬೇಕಾಗಿರುವುದು - ಸುಮ್ಮನೇ ವಿಶ್ರಾಮ ಮಾಡಿ ಮತ್ತು ನಿಮ್ಮಲ್ಲಿಯೇ ಆಳವಾದ ವಿಶ್ರಾಂತಿಯನ್ನು ಪಡೆಯಿರಿ.

ನೀವು ಜ್ಞಾನವನ್ನು ಕೇಳುವಾಗ, ಅದು ನಿಮ್ಮ ಮನಸ್ಸು ಹಾಗೂ ಬುದ್ಧಿಗಳನ್ನು ಶುದ್ಧಗೊಳಿಸುತ್ತದೆ. ಮನಸ್ಸು ತಾನು ಸಿಕ್ಕಿಹಾಕಿಕೊಳ್ಳುವ ಸಣ್ಣಪುಟ್ಟ ಆಸೆಗಳನ್ನು ಹಾಗೂ ಬಯಕೆಗಳನ್ನು ಬಿಟ್ಟುಬಿಡುತ್ತದೆ ಮತ್ತು ನಿಮ್ಮ ಮನಸ್ಸು ಶುದ್ಧಗೊಳ್ಳುತ್ತದೆ. ಇದಕ್ಕಾಗಿಯೇ ಪೂಜೆಯಾಗುತ್ತಿರುವಾಗ ಅಥವಾ ಪೂಜೆಯ ಬಳಿಕ ನಾವು ಭಜನೆಗಳನ್ನು ಕೂಡಾ ಹಾಡುವುದು. ಅದು ಎಷ್ಟೊಂದು ಸುಂದರ ಹಾಗೂ ಧ್ಯಾನಕ್ಕೆ ಕರೆದೊಯ್ಯುವುದೆಂದರೆ, ಅಂತಹ ಒಂದು ಪೂಜೆಯ ಬಳಿಕ ಮಾತನಾಡುವುದು ಒಬ್ಬರಿಗೆ ಕಷ್ಟವಾಗುತ್ತದೆ.

ಗುರುದೇವರು ಇವತ್ತು ಸ್ವಲ್ಪ ಜ್ಞಾನವನ್ನು ನೀಡಬೇಕೆಂಬ ಈ ಒಂದು ಬಯಕೆಯು ಇಲ್ಲಿರುವ ಹಲವರ ಹೃದಯಗಳಲ್ಲಿದೆ ಎಂಬುದು ನನಗೆ ಗೊತ್ತು. ಅಲ್ಲವೇ? ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ನಾನು ಏನಾದರೂ ಮಾತನಾಡಬೇಕೆಂದು ಬಯಸಿದ್ದಿರಿ?

(ಸಭಿಕರಲ್ಲಿ ಹೆಚ್ಚಿನವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನಿಮಗೆ ಗೊತ್ತಾ, ನಾವು ಶಬ್ದಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದೇವೆ.

ಈಗ, ಜ್ಞಾನವು ಬುದ್ಧಿಯನ್ನು ಶುದ್ಧಗೊಳಿಸುವಂತೆಯೇ, ಭಜನೆಗಳನ್ನು ಹಾಡುವುದು ನಮ್ಮ ಭಕ್ತಿಯ ಭಾವನೆಯನ್ನು ಶುದ್ಧಗೊಳಿಸುತ್ತದೆ ಹಾಗೂ ಮೇಲಕ್ಕೇರಿಸುತ್ತದೆ. ನಿಮ್ಮ ಮನಸ್ಸು ಮತ್ತು ಭಾವನೆಗಳು ಎರಡೂ ಮೇಲಕ್ಕೆತ್ತಲ್ಪಟ್ಟಾಗ ಹಾಗೂ ಅಷ್ಟೊಂದು ಸಂಪೂರ್ಣವಾಗಿ ಅರಳಿದಾಗ, ನೀವು ಆತ್ಮನ ಅತ್ಯುನ್ನತ ಸ್ಥಿತಿಯನ್ನು ತಲಪಲು, ಎಲ್ಲವನ್ನೂ ದಾಟಿಹೋಗುತ್ತೀರಿ - ಅದುವೇ ಭಗವಾನ್ ಶಿವ, ಮತ್ತು ಅದುವೇ ನೀವು ಮತ್ತು ನಾನು ನಿಜಕ್ಕೂ ಆಗಿರುವುದು. ಆ ಸ್ಥಿತಿಯಲ್ಲಿರುವುದು ಅಥವಾ ಅದನ್ನು ತಲಪುವುದೇ ಮಹಾಶಿವರಾತ್ರಿಯ ಸಾರ.

ದೇವರೊಂದಿಗಿನ ಈ ಆಳವಾದ ಸಂಬಂಧವನ್ನು ಅನುಭವಿಸುವ ನಾಲ್ಕು ಹಂತಗಳಿವೆ. ಒಂದನೆಯದು ಸಾಮೀಪ್ಯ ಎಂದು ಕರೆಯಲ್ಪಡುತ್ತದೆ. ಇದರರ್ಥ, ನಾವು ದೇವರಿಗೆ ಬಹಳ ನಿಕಟರೂ, ಬಹಳ ಪ್ರಿಯರೂ ಆಗಿರುವೆವು ಎಂದು ಭಾವಿಸುವುದು.
ಈಗ, ನಿಮಗೆ ಈ ಅನುಭವವು ಯಾವಾಗ ಸಿಗುವುದು? ಈ ನಿಕಟತೆಯನ್ನು ನೀವು ನಾಳೆ, ನಾಡಿದ್ದು, ಹತ್ತು ದಿನಗಳ ಬಳಿಕ ಅಥವಾ ಕೆಲವು ತಿಂಗಳುಗಳ ಬಳಿಕ ಅನುಭವಿಸುವಿರೇ? ಇಲ್ಲ, ಈಗಲೇ, ಈ ಕ್ಷಣದಲ್ಲೇ, ನೀವು ದೇವರಿಗೆ ಅತೀ ನಿಕಟವಾಗಿರುವಿರಿ ಎಂದು ಭಾವಿಸಿ. ಇದನ್ನೇ ಒಬ್ಬರು ಗುರುಗಳು ಮಾಡುವುದು. ದೇವರೊಂದಿಗಿನ ಆ ಸಾಮೀಪ್ಯವನ್ನು, ಆ ನಿಕಟತೆಯನ್ನು ಅನುಭವಿಸಲು ಒಬ್ಬರು ಗುರುವು ನಿಮಗೆ ಸಹಾಯ ಮಾಡುವರು.

ಎರಡನೆಯ ಹಂತವೆಂದರೆ, ಸಾನ್ನಿಧ್ಯ - ಅಂದರೆ ದೇವರ ಇರುವಿಕೆಯನ್ನು ಅನುಭವಿಸುವುದು ಅಥವಾ ಪ್ರಾರ್ಥಿಸಿ ಕರೆಯುವುದು. ನೀವು ಧ್ಯಾನ ಮಾಡುವಾಗ, ನಿಮಗೆ ದೇವರ ಆ ಇರುವಿಕೆಯ ಅನುಭವವಾಗುತ್ತದೆ (ನಿಮ್ಮೊಳಗೆಯೇ). ಇದರರ್ಥ,  ದೇವರ ಅಸ್ತಿತ್ವದ ಬಗ್ಗೆ ನಿಮಗೆ ಅರಿವಾಗುತ್ತದೆ, ಇರುವಿಕೆಯನ್ನು ನೀವು ಅನುಭವಿಸುತ್ತೀರಿ.

ಉದಾಹರಣೆಗೆ, ಯಾವತ್ತೂ ನಾವು ಗಾಳಿಯಿಂದ ಆವರಿಸಲ್ಪಟ್ಟಿದ್ದೇವೆ, ಆದರೆ ಅದರ ಇರುವಿಕೆಯನ್ನು ನಾವು ಯಾವಾಗಲೂ ಅನುಭವಿಸುವುದಿಲ್ಲ. ನೀವೊಂದು ಆಳವಾದ ಉಸಿರನ್ನು ಒಳಕ್ಕೆಳೆದುಕೊಳ್ಳುವಾಗ, ನಿಮ್ಮ ಸುತ್ತಲೂ ಇರುವ ಗಾಳಿಯ ಇರುವಿಕೆಯು ನಿಮಗೆ ಅರಿವಾಗುತ್ತದೆ. ಅದೇ ರೀತಿಯಲ್ಲಿ, ನಾವು ಯಾವಾಗಲೂ ದೇವರಿಂದ ಆವರಿಸಲ್ಪಟ್ಟಿದ್ದೇವೆ, ಆದರೆ ಅವನ ಇರುವಿಕೆಯು ನಮಗೆ ಅನುಭವವಾಗುವುದಿಲ್ಲ. ದೇವರ ಇರುವಿಕೆಯನ್ನು ಅನುಭವಿಸಲು ನಾವು ಯಜ್ಞಗಳನ್ನು, ಪೂಜೆಗಳನ್ನು ಮಾಡುತ್ತೇವೆ ಹಾಗೂ ಈ ಎಲ್ಲಾ ವಿವಿಧ ಉತ್ಸವಗಳನ್ನು ಆಚರಿಸುತ್ತೇವೆ.

ಮುಂದಿನದು ಸಾರೂಪ್ಯ - ನಿಮ್ಮಲ್ಲಿಯೇ ಮತ್ತು ಎಲ್ಲೆಡೆಯಲ್ಲಿರುವ ಎಲ್ಲಾ ರೂಪಗಳಲ್ಲಿ ದೇವರನ್ನು ನೋಡುವುದು. ಇದರರ್ಥ, ’ದೇವರು ನನ್ನಲ್ಲಿರುವನು ಮತ್ತು ನಾನೇ ದೇವರು’ ಎಂಬ ಭಾವವನ್ನು ಅನುಭವಿಸುವುದು. ’ದೇವರು ನನ್ನ ರೂಪದಲ್ಲಿರುವನು ಮತ್ತು ನನ್ನ ಸುತ್ತಲಿರುವ ಎಲ್ಲಾ ರೂಪಗಳಲ್ಲಿರುವನು’ ಎಂಬುದನ್ನು ಅರಿತುಕೊಳ್ಳುವುದು. ರೂಪವಿಲ್ಲದಿದ್ದರೂ ಕೂಡಾ, ದೇವರು ಎಲ್ಲಾ ರೂಪಗಳಲ್ಲಿರುವನು.

ಅಂತಿಮವಾದ ಸ್ಥಿತಿಯು ಸಾಯುಜ್ಯ - ಅಂದರೆ ದೇವರೊಂದಿಗೆ ಸಂಪೂರ್ಣವಾಗಿ ಒಂದಾಗಿರುವುದನ್ನು ಅನುಭವಿಸುವುದು, ಎಷ್ಟೊಂದು ಪೂರ್ಣವಾಗಿ ಒಂದಾಗುವುದೆಂದರೆ, ನಿಮ್ಮ ಮತ್ತು ದೇವರ ನಡುವೆ ನಿಮಗೆ ಯಾವುದೇ ವ್ಯತ್ಯಾಸವೂ ಕಾಣಿಸುವುದಿಲ್ಲ. ಆ ಸ್ಥಿತಿಯಲ್ಲಿ ಅಲ್ಲಿ ಎರಡಿಲ್ಲ (ದ್ವಂದ್ವವಿಲ್ಲ), ಅಲ್ಲಿರುವುದು ಒಂದೇ ಒಂದು.

ಇದಾಗುವುದು ಆಳವಾದ ಅನುಭವದ ಮೂಲಕ ಮಾತ್ರ. ಒಬ್ಬರಿಗೆ ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ಸಂಪೂರ್ಣವಾದ ಐಕ್ಯತೆಯನ್ನು ಆಳವಾದ ಮೌನದಲ್ಲಿ,  ಆತ್ಮದ ಸ್ಥಿರತೆಯಲ್ಲಿ, ನೀವು ದೇವರೊಂದಿಗೆ ಸಂಪೂರ್ಣವಾಗಿ ಒಂದಾದಾಗ ಮಾತ್ರ ಅನುಭವಿಸಲು ಸಾಧ್ಯ.

ಹೀಗಾಗಿ ಇವತ್ತು, ನೀವು ಮೊದಲ ಎರಡು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು - ಮೊದಲನೆಯದು ಸಾಮೀಪ್ಯ, ಅಂದರೆ ದೇವರೊಂದಿಗೆ ಬಹಳ ನಿಕಟತೆಯನ್ನು ಅನುಭವಿಸುವುದು. ಎರಡನೆಯ ಹೆಜ್ಜೆಯೆಂದರೆ, ಸಾನ್ನಿಧ್ಯ - ಎಲ್ಲೆಡೆಯೂ ಎಲ್ಲದರಲ್ಲೂ ದೇವರ ಇರುವಿಕೆಯನ್ನು ಅನುಭವಿಸುವುದು.

ಇವುಗಳು ಜ್ಞಾನದ, ಸಮಾಧಿಯ ಮತ್ತು ಆತ್ಮಸಾಕ್ಷಾತ್ಕಾರದ ನಾಲ್ಕು ಘಟ್ಟಗಳಾಗಿವೆ. ಹೀಗೆ, ಆಳವಾದ ವಿಶ್ರಾಂತಿಯ ಒಂದು ಸ್ಥಿತಿಯಲ್ಲಿ, ನಾವು  ಸರ್ವಶ್ರೇಷ್ಠವಾದುದರೊಂದಿಗೆ, ಅಂದರೆ ಶಿವನೊಂದಿಗೆ ಒಂದಾಗುತ್ತೇವೆ. 

ಮಂಗಳವಾರ, ಫೆಬ್ರವರಿ 25, 2014

ಆಕಾರ, ನಿರಾಕಾರ

ಫೆಬ್ರುವರಿ ೨೫, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಸಾವಿನ ಬಳಿಕವೂ, ಆತ್ಮದ ರೂಪದಲ್ಲಿರುವ ಒಬ್ಬ ಮನುಷ್ಯನು ಒಂದು ಶರೀರಕ್ಕಾಗಿ ಹುಡುಕುತ್ತಿರುತ್ತಾನೆ. ಶರೀರಕ್ಕಾಗಿ ಅಷ್ಟೊಂದು ಮೋಹವಿರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಇದು ಯಾಕೆಂದರೆ, ಒಬ್ಬನ ಧರ್ಮವನ್ನು (ಒಬ್ಬನ ಕರ್ತವ್ಯಗಳು ಅಥವಾ ಕರ್ಮ) ಮಾಡಿಸಲಿರುವ ಸಾಧನವು ಶರೀರವಾಗಿದೆ. ’ಶರೀರ ಮಾಧ್ಯಮ್ ಧರ್ಮ ಖಲು ಸಾಧನಮ್’ ಎಂದು ಹೇಳಲಾಗಿದೆ. ಇದರರ್ಥ, ಒಬ್ಬನು ತನ್ನ ಕರ್ತವ್ಯಗಳನ್ನು ಅಥವಾ ತನ್ನ ಕರ್ಮವನ್ನು ಮಾಡಬೇಕಾದರೆ, ಅದನ್ನು ಭೌತಿಕ ಶರೀರದ ಮೂಲಕ ಮಾತ್ರ ಮಾಡಲು ಸಾಧ್ಯ. ಯಾರು ಅಶರೀರಿ - ಅಂದರೆ ಭೌತಿಕ ಶರೀರವಿಲ್ಲದವರಾಗಿರುವರೋ - ಅವರು ಅದನ್ನು ಮಾಡಲು ಸಾಧ್ಯವಿಲ್ಲ.

ದೇವತೆಗಳು ಕೂಡಾ ಮೋಕ್ಷವನ್ನು ಪಡೆಯುವುದಕ್ಕಾಗಿ ತಮ್ಮ ಧರ್ಮವನ್ನು ಮಾಡಲು ಒಂದು ಮಾನವ ರೂಪವನ್ನು ತೆಗೆದುಕೊಳ್ಳಬೇಕು ಎಂಬುದು ಅದೇ ಕಾರಣಕ್ಕಾಗಿ.

ಪ್ರಶ್ನೆ: ಗುರುದೇವ, ಗುರುಕುಲದ (ಆಶ್ರಮದಲ್ಲಿನ) ದೇವಸ್ಥಾನದಲ್ಲಿ ಪಂಚಮುಖಿ ಗಣಪತಿಯ ಒಂದು ಮೂರ್ತಿಯಿದೆ. ಪಂಚಮುಖಿಯ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ನಮ್ಮ ಶರೀರದಲ್ಲಿ ಐದು ಇಂದ್ರಿಯ ಜ್ಞಾನಗಳಿವೆ: ದೃಶ್ಯ, ವಾಸನೆ, ಸ್ಪರ್ಷ, ರುಚಿ ಮತ್ತು ಶ್ರವಣ ಜ್ಞಾನ, ಹಾಗೂ ಸೃಷ್ಟಿಯಲ್ಲಿ ಐದು ತತ್ವಗಳಿವೆ: ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಐದು ಜ್ಞಾನಗಳು ಮತ್ತು ಐದು ತತ್ವಗಳಿವೆ, ಈ ರೀತಿಯಲ್ಲಿ ದೇವರಿಗೆ ಐದು ಮಗ್ಗಲುಗಳಿವೆ. ಈ ಐದರಲ್ಲಿರುವ ಯಾವುದೇ ತಡೆಯನ್ನು ನಿವಾರಿಸಬಲ್ಲ ಸಾಮರ್ಥ್ಯವಿರುವ ದೇವರ ಆ ರೂಪವು ಪಂಚಮುಖಿ ಗಣಪತಿ ಎಂದು ಕರೆಯಲ್ಪಡುತ್ತದೆ.  

ಈ ಸೃಷ್ಟಿಯಲ್ಲಿರುವ ಎಲ್ಲವೂ ಈ ಐದು ತತ್ವಗಳ ಗಣಗಳಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಜಲ ತತ್ವವು ಹಲವಾರು ವಿವಿಧ ರೂಪಗಳನ್ನು ಹೊಂದಿದೆ - ಹಾಲು, ಮೊಸರು, ಮೊದಲಾದವು.

ಅದೇ ರೀತಿಯಲ್ಲಿ, ವಾಯು ತತ್ವವು ಒಂದು ರೀತಿಯದ್ದು ಮಾತ್ರವಲ್ಲ. ಅಂಗಾರಾಮ್ಲ, ಆಮ್ಲಜನಕ ಮತ್ತು ಸಾರಜನಕ ಮೊದಲಾದಂತಹ ಹಲವಾರು ವಿವಿಧ ಅನಿಲಗಳಿರುವುದನ್ನು ನೀವು ಕಾಣಬಹುದು. ಹೀಗಾಗಿ, ವಿವಿಧ ಅನಿಲಗಳ ಈ ಗಣವು ಒಟ್ಟಾಗಿ ವಾಯು ತತ್ವವನ್ನು ರಚಿಸುತ್ತದೆ.

ಅದೇ ರೀತಿಯಲ್ಲಿ, ವಿವಿಧ ರೀತಿಯ ದ್ರವಗಳು (ಒಂದು ಗಣ) ಒಟ್ಟಾಗಿ ಜಲ ತತ್ವವನ್ನು ನಿರ್ಮಿಸುತ್ತವೆ. ನೀರು ಒಂದು ಗಣವನ್ನು, ವಾಯು ಒಂದು ಗಣವನ್ನು ಹೊಂದಿದೆ ಮತ್ತು ಅದೇ ರೀತಿಯಲ್ಲಿ ಭೂಮಿ ತತ್ವವು ತನ್ನೊಳಗೆ ಚಿನ್ನ, ಬೆಳ್ಳಿ, ತಾಮ್ರ, ಕಲ್ಲುಗಳು, ಮಣ್ಣು ಮೊದಲಾದ ವಿವಿಧ ಲೋಹಗಳು ಹಾಗೂ ಖನಿಜಗಳ ಒಂದು ಗುಂಪನ್ನು ಹೊಂದಿದೆ.

ಆಕಾಶ ತತ್ವವೂ ತನ್ನೊಳಗೆ, ಆಂತರಿಕ ಆಕಾಶ, ಬಾಹ್ಯಾಕಾಶ ಮೊದಲಾದ ತನ್ನದೇ ಆದ ಗುಂಪನ್ನು ಹೊಂದಿದೆ.

ಭಗವಾನ್ ಗಣಪತಿಯು ಈ ಎಲ್ಲಾ ಗಣಗಳು ಅಥವಾ ಗುಂಪುಗಳ ಒಡೆಯನಾಗಿರುವನು, ಮತ್ತು ಐದು ಪ್ರಮುಖ ಗಣಗಳಿರುವುದರಿಂದ, ಈ ನಿರ್ದಿಷ್ಟ ರೂಪವು ಪಂಚಮುಖಿ ಗಣಪತಿ ಎಂದು ಕರೆಯಲ್ಪಡುತ್ತದೆ.

ಇಲ್ಲಿನ ಮುಖ್ಯ ಸಾರವೆಂದರೆ, ನಿರ್ಗುಣ ಮತ್ತು ನಿರಾಕಾರನಾದ ದೇವರನ್ನು ಈ ರೂಪದಲ್ಲಿ ಪ್ರತಿನಿಧೀಕರಿಸಿ, ಪವಿತ್ರ ಮಂತ್ರಗಳನ್ನು ಉಚ್ಛರಿಸುವುದರೊಂದಿಗೆ ಪೂಜಿಸಲಾಗುತ್ತದೆ.

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ಗುರುವಿನ ಪ್ರೇಮವನ್ನು ತನ್ನ ಪಾತ್ರತೆಗನುಸಾರವಾಗಿ ಪಡೆಯುತ್ತಾನೆಯೇ? ಅಥವಾ ಹೆಚ್ಚು ಅರ್ಹರಾಗಿರುವವರು ಅಥವಾ ಸಮರ್ಥರಾಗಿರುವವರು ನಿಮ್ಮನ್ನು ಹೆಚ್ಚು ವೇಗವಾಗಿ ತಲಪುತ್ತಾರೆಯೇ? 

ಶ್ರೀ ಶ್ರೀ ರವಿ ಶಂಕರ್: ಹಾಗೇನೂ ಇಲ್ಲ. ನೀನು ಈಗಾಗಲೇ ನನ್ನ ಬಳಿಗೆ ಬಂದಿರುವೆ. ಯಾರು ತಲುಪಿಲ್ಲವೋ ಅವರು, ನೀನು ಅವರನ್ನು ಇಲ್ಲಿಗೆ ಕರೆತರುವುದಕ್ಕಾಗಿ ಕಾಯುತ್ತಿದ್ದಾರೆ.

ಪ್ರಶ್ನೆ: ಗುರುದೇವ, ಭಗವದ್ಗೀತೆಯಲ್ಲಿ, ’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ. ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’ ಎಂದು ಬರೆಯಲಾಗಿದೆ. ಒಬ್ಬರು ಗುರುವಿಗಿಂತ ಮೊದಲು, ಧರ್ಮದ ವ್ಯಾಖ್ಯಾನವು ಬೇರೆಯಾಗುವುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ತಾನು ಹೇಳಲಿರುವುದೆಲ್ಲವನ್ನೂ ಹೇಳಿದ ಬಳಿಕ, ಭಗವದ್ಗೀತೆಯ ಕೊನೆಯಲ್ಲಿ ಕೃಷ್ಣ ಪರಮಾತ್ಮನು ಅರ್ಜುನನಲ್ಲಿ ಹೀಗೆಂದು ಹೇಳುತ್ತಾನೆ,

’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ. 
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’  (೧೮.೬೬)

ನಿನ್ನ ಧರ್ಮ ಅಥವಾ ನಿನ್ನಲ್ಲಿರುವ ಬೇರೆ ಯಾವುದೇ ನಂಬಿಕೆಯನ್ನು ಬಿಟ್ಟುಬಿಡು ಮತ್ತು ನನ್ನಲ್ಲಿ ಸಂಪೂರ್ಣ ಶರಣಾಗತನಾಗು. ಓ ಅರ್ಜುನಾ, ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳು ಮತ್ತು ಯಾತನೆಗಳಿಂದ ಮುಕ್ತಗೊಳಿಸುವೆನು. ಧರ್ಮವು ಸಾಬೂನಿದ್ದಂತೆ. ಆದರೆ, ನೀವು ನಿಮ್ಮ ಬಟ್ಟೆಗಳನ್ನು ೧೦೦ ರೂಪಾಯಿ ಬೆಲೆಬಾಳುವ ಒಂದು ದುಬಾರಿ ಸಾಬೂನಿನಿಂದ ತೊಳೆದಿದ್ದೀರಿ ಎಂಬ ಕಾರಣ ಮಾತ್ರಕ್ಕೆ ನೀವು, ’ಓ, ನಾನು ಸಾಬೂನನ್ನು ನನ್ನ ಬಟ್ಟೆಯಲ್ಲಿ ಇಟ್ಟುಕೊಳ್ಳುತ್ತೇನೆ, ಯಾಕೆಂದರೆ ಇದು ಅಷ್ಟೊಂದು ದುಬಾರಿ ಸಾಬೂನು’ ಎಂದು ಹೇಳುವುದಿಲ್ಲ. ನೀವದನ್ನು ತೊಳೆಯಲೇಬೇಕು.

ಒಬ್ಬರು ಜೀವನದಲ್ಲಿ ಅಂತಹ ಮೋಹಗಳಿಂದ ಮತ್ತು ತೊಡಕುಗಳಿಂದ ಮೇಲಕ್ಕೆ ಸರಿಯುವ ಒಂದು ಹಂತ ಬರುತ್ತದೆ (ಇಲ್ಲಿ ಮತವನ್ನು ಉಲ್ಲೇಖಿಸುತ್ತಾ) ಮತ್ತು ಒಂದು ಶರಣಾಗತಿಯಾಗುತ್ತದೆ; ’ಓ ದೇವರೇ! ನಾನು ನಿನ್ನವನು ಮತ್ತು ನಿನ್ನವನು ಮಾತ್ರ’ ಎಂಬ ಈ ಆಳವಾದ ಭಕ್ತಿಯ ಭಾವನೆಯೊಂದಿಗೆ ದೇವರಿಗೆ ಸಂಪೂರ್ಣವಾಗಿ ಶರಣಾಗುವುದು. ಈ ಶ್ಲೋಕದಲ್ಲಿ ವಿವರಿಸಲಾಗಿರುವುದು ಇದನ್ನೇ.

ಕೃಷ್ಣ ಪರಮಾತ್ಮನು ಅರ್ಜುನನಿಗೆ ಇದನ್ನು ಹೇಳಲೇಬೇಕಾಗಿತ್ತು, ಇಲ್ಲದಿದ್ದರೆ, ಅವನು ಅರ್ಜುನನಿಗೆ ಯಾವುದೇ ಜ್ಞಾನವನ್ನು ನೀಡಿದ್ದರೂ, ಅವನು ಅದರೊಂದಿಗೇ ಸಿಕ್ಕಿಹಾಕಿಕೊಳ್ಳುತ್ತಿದ್ದ ಮತ್ತು ಬಿಟ್ಟುಬಿಡುತ್ತಿರಲಿಲ್ಲ.

ಕೃಷ್ಣ ಪರಮಾತ್ಮನು ಅರ್ಜುನನಿಗೆ ’ಈ ರೀತಿ ಮಾಡು’ ಎಂದು ಹೇಳುವ ಮೂಲಕ ಸಲಹೆ ನೀಡಿರುತ್ತಿದ್ದರೆ, ಅವನು ಅದನ್ನು ಸುಮ್ಮನೇ ಅನುಸರಿಸುತ್ತಿದ್ದ ಮತ್ತು ಅಷ್ಟನ್ನು ಮಾತ್ರ ಮಾಡುತ್ತಿದ್ದ. ಅರ್ಜುನನು ಸಿಕ್ಕಿಹಾಕಿಕೊಳ್ಳಬಾರದೆಂಬ ಕಾರಣಕ್ಕಾಗಿ, ಕೊನೆಯಲ್ಲಿ ಕೃಷ್ಣ ಪರಮಾತ್ಮನು ಅವನಲ್ಲಿ ಹೀಗೆಂದು ಹೇಳಿದನು, ’ಎಲ್ಲಾ ಧರ್ಮ ಅಥವಾ ನಂಬಿಕೆಯನ್ನು ಬಿಟ್ಟುಬಿಡು ಮತ್ತು ಸುಮ್ಮನೆ ಬಂದು ನನ್ನಲ್ಲಿ ಶರಣಾಗು. ನೀನೇ ನಿನ್ನನ್ನು ನಿನ್ನ ಪಾಪಗಳಿಂದ ಮುಕ್ತನಾಗಿಸಲು ಸಾಧ್ಯವಿಲ್ಲ. ನಿನ್ನ ಎಲ್ಲಾ ಪಾಪಗಳು ಮತ್ತು ಯಾತನೆಗಳಿಂದ ನಿನ್ನನ್ನು ನಾನು ಮುಕ್ತಗೊಳಿಸುವೆನು, ಹೀಗಾಗಿ ಸುಮ್ಮನೇ ನನ್ನ ಬಳಿಗೆ ಬಾ.’

ನೀವೊಂದು ಕೆಟ್ಟ ಕೆಲಸವನ್ನು ಮಾಡುತ್ತೀರಿ ಮತ್ತು ’ಓ! ನಾನು ಅಷ್ಟೊಂದು ಕೆಟ್ಟ ಕೆಲಸವನ್ನು ಮಾಡಿದೆ. ನಾನು ಅದರಿಂದ ಹೇಗೆ ಮುಕ್ತನಾಗಬಹುದು? ನಾನೇನು ಮಾಡಲಿ?’ ಎನ್ನುತ್ತಾ ಮರುಗುತ್ತಾ ಹೋಗುತ್ತೀರಿ ಎಂದಿಟ್ಟುಕೊಳ್ಳೋಣ.

ಪ್ರಯತ್ನಗಳನ್ನು ಮಾಡುವುದರಿಂದ ನೀವು ನಿಮ್ಮನ್ನು ನಿಮ್ಮ ಪಾಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಕೃಷ್ಣ ಪರಮಾತ್ಮನು, ’ನಿನ್ನ ಎಲ್ಲಾ ಪಾಪಗಳು ಮತ್ತು ದುಃಖಗಳನ್ನು ಹೊರಲು ನಾನು ಸಿದ್ಧನಾಗಿದ್ದೇನೆ, ಹೀಗಾಗಿ ಎಲ್ಲವನ್ನೂ ಸುಮ್ಮನೇ ಬಿಟ್ಟುಬಿಡು ಮತ್ತು ಬಂದು ನನ್ನಲ್ಲಿ ಶರಣಾಗು’ ಎಂದು ಹೇಳುವುದು.

ಪ್ರಶ್ನೆ: ಗುರುದೇವ, ನೀವು ಹದಿನಾರು ಕಲೆಗಳ ಬಗ್ಗೆ (ಹದಿನಾರು ಅಸಾಮಾನ್ಯ ಸಾಮರ್ಥ್ಯಗಳು ಅಥವಾ ದೈವಿಕ ಗುಣಗಳ ಬಗ್ಗೆ ಉಲ್ಲೇಖಿಸುತ್ತಾ) ಮಾತನಾಡಿರುವಿರಿ. ಇವುಗಳು ಯಾವುವು ಮತ್ತು ಅವುಗಳ ಪ್ರಾಮುಖ್ಯತೆಯೇನು?

ಶ್ರೀ ಶ್ರೀ ರವಿ ಶಂಕರ್: ’ಕಲೆ’ ಎಂಬ ಶಬ್ದವು ಸಾಮಾನ್ಯವಾಗಿ, ಚಂದ್ರನು ಒಂದು ದಿನದಲ್ಲಿ ಎಷ್ಟರ ಮಟ್ಟಿಗೆ ಹಿಗ್ಗುತ್ತಾನೆ (ಅಥವಾ ಕುಗ್ಗುತ್ತಾನೆ) ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಈ ತಿಳುವಳಿಕೆಯಿಂದ, ಚಂದ್ರನು ೧೬ ಬೇರೆ ಬೇರೆ ಕಲೆಗಳನ್ನು ಹೊಂದಿದ್ದಾನೆ(ಚಂದ್ರನ ವಿವಿಧ ಅವಸ್ಥೆಗಳು). ನೀವಿದನ್ನು ಒಂದು ಅಮವಾಸ್ಯೆಯಿಂದ ಮುಂದಿನ ಹುಣ್ಣಿಮೆಯವರೆಗೆ ಗಮನಿಸಬಹುದು.

ಹೀಗೆ ನೀವು ಒಂದು ಅಮವಾಸ್ಯೆಯಿಂದ ಮುಂದಿನ ಹುಣ್ಣಿಮೆಯವರೆಗೆ ದಿನಗಳನ್ನು ಲೆಕ್ಕ ಹಾಕಿದರೆ, ಅದು ೧೬ ಆಗಿರುತ್ತದೆ. ಮತ್ತು ಅಮವಾಸ್ಯೆಯಿಂದ ಹುಣ್ಣಿಮೆಯವರೆಗಿನ ಪರಿವರ್ತನೆಯು, ಸೊನ್ನೆಯಿಂದ (ಏನೂ ಇಲ್ಲದಿರುವಿಕೆಯಿಂದ) ಸಂಪೂರ್ಣತೆಯವರೆಗೆ ಚಲಿಸುವುದರ ಸಂಕೇತ ಕೂಡಾ ಆಗಿದೆ.

ಅಮವಾಸ್ಯೆಯ ದಿನದಂದು ನೀವು ಚಂದ್ರನನ್ನು ನೋಡುವುದೇ ಇಲ್ಲ ಮತ್ತು ಹುಣ್ಣಿಮೆಯ ದಿನದಂದು ನೀವು ಪೂರ್ಣ ಚಂದ್ರನನ್ನು ನೋಡುತ್ತೀರಿ. ಇದರರ್ಥ ಅಮವಾಸ್ಯೆಯ ದಿನ ಚಂದ್ರನು ಅಲ್ಲಿಲ್ಲ ಎಂದಲ್ಲ. ಇಲ್ಲ, ಆಗಲೂ ಅದು ಅಲ್ಲಿದೆ. ಹೀಗೆ ಈ ತಿಳುವಳಿಕೆಯ ಪ್ರಕಾರ, ಇವುಗಳು ಹದಿನಾರು ಕಲೆಗಳು ಎಂದು ಕರೆಯಲ್ಪಡುತ್ತವೆ. ಉದಾಹರಣೆಗೆ, ಸೂರ್ಯ ಗ್ರಹಣದ ದಿನ, ಚಂದ್ರ ಅಲ್ಲಿದೆ, ಆದರೆ ಅದು ಕಾಣಿಸುವುದಿಲ್ಲ, ಅಷ್ಟೇ.

ಹೀಗೆ, ’ಕಲೆ’ ಎಂಬ ಶಬ್ದವು, ಒಬ್ಬನ ಸಾಮರ್ಥ್ಯದ ಅಥವಾ ಒಬ್ಬನು ಎಷ್ಟರ ಮಟ್ಟಿಗೆ ಅರಳಿದ್ದಾನೆ ಅಥವಾ ಪ್ರಗತಿ ಹೊಂದಿದ್ದಾನೆ ಎಂಬ ಅಳತೆಯ ಒಂದು ಮಾಪಕವಾಗಿದೆ. ಹೀಗೆ, ಒಬ್ಬರು ಒಂದು ಅರ್ಧ-ಚಂದ್ರನಂತಿರಬಹುದು, ಬೇರೊಬ್ಬರು ಚಂದ್ರನ ಮುಕ್ಕಾಲು ಭಾಗವನ್ನು ತಲಪಿರಲೂಬಹುದು ಮತ್ತು ಹೀಗೆ.

ಪ್ರಾಚೀನ ದಿನಗಳಲ್ಲಿ, ಇದೊಂದು ಅಳತೆಯ ಮಾರ್ಗವಾಗಿತ್ತು.

ಆ ದಿನಗಳಲ್ಲಿ ಹೀಗೆಂದು ಹೇಳಲಾಗುತ್ತಿತ್ತು: ಒಂದು ಕಲ್ಲಿನಲ್ಲಿರುವ ಪ್ರಾಣವು ಒಂದು ಕಲೆಗೆ ಸಮಾನ, ಜಲ ತತ್ವಕ್ಕೆ ಎರಡು ಕಲೆಗಳಿವೆ ಎಂದು. ಅಗ್ನಿಗೆ ಮೂರು ಕಲೆಗಳಿವೆ, ವಾಯುವಿಗೆ ನಾಲ್ಕು ಮತ್ತು ಆಕಾಶಕ್ಕೆ ಐದು ಕಲೆಗಳಿವೆ. ಗಿಡಗಳಿಗೆ ಮತ್ತು ಮರಗಳಿಗೆ ಆರು ಕಲೆಗಳಿವೆಯೆಂದು ಹೇಳಲಾಗುತ್ತದೆ. ಪ್ರಾಣಿಗಳಿಗೆ ಏಳು ಕಲೆಗಳಿವೆ. ಮನುಷ್ಯರಿಗೆ ಎಂಟು ಕಲೆಗಳಿವೆ.

ಒಬ್ಬ ಮನುಷ್ಯನು ಅಸಾಧಾರಣನಾಗಿದ್ದರೆ, ಅವನಿಗೆ ಒಂಭತ್ತು ಕಲೆಗಳಿವೆಯೆಂದು ಹೇಳಲಾಗುತ್ತದೆ. ಭಗವಾನ್ ಪರಶುರಾಮನು ಒಂಭತ್ತು ಕಲೆಗಳನ್ನು ಹೊಂದಿದ್ದನೆಂದು ಹೇಳಲಾಗುತ್ತದೆ. ಭಗವಾನ್ ರಾಮನು ೧೨ ಕಲೆಗಳನ್ನು ಹೊಂದಿದ್ದಾನೆಂದು ಹೇಳುತ್ತಾರೆ. ಈ ವಿಷಯದಲ್ಲಿ ಭಗವಾನ್ ಹನುಮಂತನು ಅವನಿಗಿಂತ ಹೆಚ್ಚಿನವನು ಮತ್ತು ೧೪ ಕಲೆಗಳನ್ನು ಹೊಂದಿದ್ದನೆನ್ನಲಾಗುತ್ತದೆ. ಅದಕ್ಕಾಗಿಯೇ ಅವನಿಗೆ ಭಗವಾನ್ ರಾಮನಿಗೆ ಸಹಾಯ ಮಾಡಲು ಸಾಧ್ಯವಾಯಿತು.

ನಮಗಿಂತ ಹೆಚ್ಚು ಶಕ್ತಿಶಾಲಿಯಾದ ಒಬ್ಬ ವ್ಯಕ್ತಿಗೆ ಮಾತ್ರ ನಮಗೆ ಸಹಾಯ ಮಾಡಲು ಸಾಧ್ಯ.

ದೇವಿಯು ’ಷೋಡಶಕಲೆ’ ಎಂದು ಕರೆಯಲ್ಪಡುತ್ತಾಳೆ. ಇದರರ್ಥ, ಅವಳು ಎಲ್ಲಾ ದೈವಿಕ ಮತ್ತು ಶ್ರೇಷ್ಠ ಗುಣಗಳನ್ನು ಹೊಂದಿರುವಳೆಂದು ಮತ್ತು ಯಾವುದೇ ಕೊರತೆಯೂ ಇಲ್ಲವೆಂದು.

ಕೃಷ್ಣ ಪರಮಾತ್ಮನೂ ಎಲ್ಲಾ ೧೬ ಕಲೆಗಳನ್ನು ಹೊಂದಿರುವನೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅವನು ಸೋಲಹ್ ಕಲಾ ಸಂಪೂರ್ಣ ಅಥವಾ ಪೂರ್ಣ ಅವತಾರ ಎಂದು ಕರೆಯಲ್ಪಡುವುದು.

ಎಲ್ಲಾ ೧೬ ಕಲೆಗಳನ್ನು ಹೊಂದಿರುವುದೆಂದರೆ, ದೈವಿಕತೆಯ ಸಂಪೂರ್ಣ ಅರಳುವಿಕೆ ಹಾಗೂ ಪ್ರಕಟತೆಗೆ ಕಾರಣವಾಗಿರುವ ಎಲ್ಲಾ ೧೬ ಗುಣಗಳನ್ನು ಅಥವಾ ಚಿಹ್ನೆಗಳನ್ನು ಹೊಂದಿರುವುದು.

ನೀವು ದೇವಿಯನ್ನು ನೋಡಿದರೆ, ಒಂದು ಬದಿಯಲ್ಲಿ ಅವಳು ಬಹಳಷ್ಟು ಸುಂದರಳೂ, ಪ್ರೇಮ ಹಾಗೂ ಕೃಪೆಯಿಂದ ತುಂಬಿದವಳೂ ಆಗಿರುವಳು, ಆದರೆ ಇನ್ನೊಂದು ಬದಿಯಲ್ಲಿ, ಅವಳು ಕಾಳಿಮಾತೆಯೂ ಆಗಿರುವಳು (ಭಯಾನಕವೂ, ಹಿಂಸಾತ್ಮಕವೂ ಆಗಿರುವ ಒಂದು ಸ್ವರೂಪ).

ಅವಳು ಆಕರ್ಷಕಳೂ, ಪ್ರಶಾಂತಳೂ ಆಗಿರುವಳು, ಆದರೆ ಅದೇ ಸಮಯದಲ್ಲಿ, ಒಂದು ಬಹಳ ಭಯಾನಕವೂ ಹಿಂಸಾತ್ಮಕವೂ ಆದ ಮಗ್ಗಲು ಕೂಡಾ ಆಕೆಗಿದೆ. ದುರ್ಗಾದೇವಿಯು ಬಹಳ ಭಯಾನಕವೂ, ವಿಸ್ಮಯ ಹುಟ್ಟಿಸುವವಳೂ ಆದರೆ, ಲಕ್ಷ್ಮಿದೇವಿಯು ಬಹಳ ಶಾಂತಳೂ, ಆಕರ್ಷಕಳೂ ಆಗಿರುವಳು. ದೈವಿಕತೆಯ ಎಲ್ಲಾ ವಿರೋಧಾತ್ಮಕ ಅಂಶಗಳೂ ದೇವಿಯಲ್ಲಿ ಒಂದಾಗಿ ಬರುವುದನ್ನು ನೀವು ನೋಡಬಹುದು.

ಎಲ್ಲವನ್ನು ಅನುಗ್ರಹಿಸುವ ಲಕ್ಷ್ಮಿದೇವಿಯು ನಿರುಪದ್ರವಕಾರಿಯಾದ ಗೂಬೆಯ ಮೇಲೆ ಸವಾರಿ ಮಾಡುತ್ತಾಳೆ ಮತ್ತು ದುಷ್ಟತೆ ಹಾಗೂ ಅಜ್ಞಾನಗಳನ್ನು ಜಯಿಸುವ ದುರ್ಗಾದೇವಿಯು ಉಗ್ರವಾದ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಸುಮ್ಮನೇ ಕಲ್ಪಿಸಿಕೊಳ್ಳಿ, ಗೂಬೆ ಮತ್ತು ಸಿಂಹ ಇವುಗಳೆರಡನ್ನೂ ನೀವು ಎಲ್ಲಿ ನೋಡುವಿರಿ!

ಅದೇ ರೀತಿಯಲ್ಲಿ ಕೃಷ್ಣ ಪರಮಾತ್ಮನೂ ಕೂಡಾ ಎಲ್ಲಾ ಹದಿನಾರು ಕಲೆಗಳನ್ನು ಹೊಂದಿದ್ದನೆಂದು ಹೇಳಲಾಗುತ್ತದೆ. ಇದು ಯಾಕೆ ಹಾಗೆ? ಕೃಷ್ಣ ಪರಮಾತ್ಮನಲ್ಲಿ ನೀವು ಎಲ್ಲಾ ವಿಧದಲ್ಲೂ ದೈವಿಕತೆಯ ಸಂಪೂರ್ಣ ಹಾಗೂ ಒಟ್ಟಾದ ಅಭಿವ್ಯಕ್ತಿಯನ್ನು ನೋಡುವಿರಿ. ಅವನು ಅಷ್ಟೊಂದು ಪರಿಪೂರ್ಣನು.

ಅವನು ಕಳ್ಳರ ರಾಜನು. ಅವನು ಚಿಕ್ಕ ವಸ್ತುಗಳನ್ನು ಕದಿಯುವುದಿಲ್ಲ, ಅವನು ನಿಮ್ಮ ಮನಸ್ಸನ್ನೇ ಕದ್ದೊಯ್ಯುತ್ತಾನೆ. ಅದಕ್ಕಾಗಿಯೇ ಅವನು ಚಿತ್ತಚೋರ ಎಂದು ಕರೆಯಲ್ಪಡುವುದು.

ಗುಜರಾತಿನಲ್ಲಿ ಅವನು ರಣಚೋಡ್‌ರಾಯ (ರಣರಂಗವನ್ನು ಬಿಟ್ಟು ಓಡಿಹೋದವನು)ಎಂದು ಕೂಡಾ ಕರೆಯಲ್ಪಡುತ್ತಾನೆ. ಯುದ್ಧದ ಮಧ್ಯದಲ್ಲಿ ಅವನು ಯುದ್ಧಭೂಮಿಯಿಂದ ಓಡಿಹೋದನೆಂದು ಅವರು ಹೇಳುತ್ತಾರೆ. ಆದರೆ ಇನ್ನೊಂದು ಕಡೆಯಲ್ಲಿ ಅವನು, ಭೀಷ್ಮ ಪಿತಾಮಹರನ್ನು ಸೋಲಿಸಲು ಸುದರ್ಶನ ಚಕ್ರವನ್ನು ಎತ್ತಿದನು. ಹೀಗೆ ಅವನು ಬಹಳ ಧೈರ್ಯಶಾಲಿ ಮತ್ತು ಪರಾಕ್ರಮಿ ಕೂಡಾ ಆಗಿರುವನು.

ಹೀಗೆ, ಒಂದು ಕಡೆಯಲ್ಲಿ ಅವನು ಬಹಳ ಧೈರ್ಯಶಾಲಿಯಾಗಿರುವನು ಮತ್ತು ಇನ್ನೊಂದು ಬದಿಯಲ್ಲಿ ಅವನೊಬ್ಬ ಹೇಡಿಯಂತಿರುವನು. ಅವನು ಎಷ್ಟೊಂದು ಸಂಪೂರ್ಣನೆಂದು ಒಬ್ಬನಿಗೆ ಊಹಿಸಲೂ ಕೂಡಾ ಸಾಧ್ಯವಿಲ್ಲ. ಅವನು ವಿಧೇಯನೂ ಆಗಿರುವನು, ಆದರೆ ಅವನು ನಿಯಮಗಳನ್ನು ಮುರಿಯುವ ಒಬ್ಬನೂ ಆಗಿರುವನು.

ಸಾಧ್ಯವಿರುವ ಎಲ್ಲಾ ಮಗ್ಗಲುಗಳಲ್ಲಿಯೂ ಕೃಷ್ಣ ಪರಮಾತ್ಮನು ಪರಿಪೂರ್ಣನೂ, ಸಂಪೂರ್ಣನೂ ಆಗಿರುವನೆಂದು ಭಾಗವತದಲ್ಲಿ ಹಲವು ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಕೃಷ್ಣ ಪರಮಾತ್ಮನೊಂದಿಗೆ ಒಬ್ಬನು ಪೈಪೋಟಿ ಮಾಡಬಾರದೆಂದು ಹೇಳಲಾಗಿರುವುದು ಅದಕ್ಕಾಗಿಯೇ. ಭಗವಾನ್ ಶ್ರೀರಾಮನ ಪಥವನ್ನು ಅನುಸರಿಸಿ ಮತ್ತು ಶ್ರೀಕೃಷ್ಣ ಪರಮಾತ್ಮ ಹೇಳುವುದನ್ನು ಕೇಳಿ. ಕೃಷ್ಣ ಪರಮಾತ್ಮನು ನಡೆದ ದಾರಿಯಲ್ಲಿ ನಡೆಯಬೇಡಿ. ನೀವು ಹೋಗಿ ಒಬ್ಬಳು ಸ್ತ್ರೀಯ ಬಟ್ಟೆಗಳನ್ನು ಕದ್ದರೆ, ನೀವೊಂದು ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕುವಿರಿ.

ಪ್ರಶ್ನೆ: ಗುರುದೇವ, ಸ್ವಾವಲಂಬನೆಯೊಂದಿಗೆ ಅಹಂಕಾರವು ಹೆಚ್ಚಾಗುವುದೇ?

ಶ್ರೀ ಶ್ರೀ ರವಿ ಶಂಕರ್: ಸ್ವತಂತ್ರತೆಯ ಹೆಚ್ಚಳದೊಂದಿಗೆ ಅಥವಾ ಸ್ವಾವಲಂಬನೆಯೊಂದಿಗೆ ಅಹಂಕಾರವು ಹೆಚ್ಚಾಗಬೇಕೆಂದೇನೂ ಇಲ್ಲ. ಸ್ವಾವಲಂಬಿಗಳಾಗಿರುವುದರ ಹೊರತಾಗಿಯೂ ನಾವು ದೇವರ ಮೇಲೆ ಅವಲಂಬಿತರಾಗಿದ್ದೇವೆ; ನಾವು ಪರಮಾತ್ಮನ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಪ್ರಶ್ನೆ: ಗುರುದೇವ, ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ. ಇತ್ತೀಚೆಗೆ ಪಾನ್ ಪರಾಗ್, ಗುಟ್ಕಾ, ತಂಬಾಕು ಮೊದಲಾದವುಗಳ ಬಳಕೆಯು ಮಕ್ಕಳಲ್ಲಿ, ದೊಡ್ದವರಲ್ಲಿ, ಹಾಗೆಯೇ ಮಹಿಳೆಯರಲ್ಲೂ ಕೂಡಾ ಬಹಳಷ್ಟು ಹೆಚ್ಚಿದೆ. ಇದನ್ನು ನಾವು ಹೇಗೆ ನಿಲ್ಲಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಇದು ಪ್ರಾಥಮಿಕವಾಗಿ ತಾಯಂದಿರ ಜವಾಬ್ದಾರಿಯಾಗಿದೆ. ಆರಂಭದಿಂದಲೇ ತಾಯಂದಿರು ತಮ್ಮ ಮಕ್ಕಳ ಮೇಲೆ ನಿರ್ಬಂಧವನ್ನು ಹಾಕಿದರೆ, ಆಗ ಅವರು ಯಾವತ್ತೂ ಅಂತಹ ತಪ್ಪುದಾರಿಯನ್ನು ಅವಲಂಬಿಸುವುದಿಲ್ಲ.

ಸಾಧಾರಣವಾಗಿ ಏನಾಗುತ್ತದೆಯೆಂದರೆ, ಈ ದಿನಗಳಲ್ಲಿ ತಾಯಂದಿರು ಮಕ್ಕಳನ್ನು ಮುಕ್ತವಾಗಿ ಹೋಗಲು ಬಿಡುತ್ತಾರೆ.

ಬಾಲ್ಯದ ದಿನಗಳಲ್ಲಿಯೇ, ತಾಯಂದಿರು ಮತ್ತು ತಂದೆಯಂದಿರು ಮನೆಯಲ್ಲಿನ ಮಕ್ಕಳ ಮನಸ್ಸುಗಳಲ್ಲಿ ಅಂತಹ ತಡೆಗಳನ್ನು ಸೃಷ್ಟಿಸಬೇಕು. ತಾವು ತಂಬಾಕನ್ನು ಮುಟ್ಟಲೂಬಾರದೆಂದು ಮಕ್ಕಳು ಯೋಚಿಸುವಂತೆ ಮಾಡಬೇಕು.

ಶಾಖಾಹಾರಿ ಮನೆಗಳಲ್ಲಿ, ಯಾವುದೇ ರೀತಿಯ ಮಾಂಸಾಹಾರ, ಮೊಟ್ಟೆಗಳು, ಮಾಂಸ ಅಥವಾ ಮೀನನ್ನು ಮುಟ್ಟದಂತೆ ಹೆತ್ತವರು ಮಕ್ಕಳ ಮನಸ್ಸುಗಳಲ್ಲಿ ಬಹಳ ಆರಂಭದಿಂದಲೇ ಒಂದು ಕಟ್ಟುನಿಟ್ಟಾದ ತಡೆಗೋಡೆಯನ್ನು ಸೃಷ್ಟಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸುಗಳಲ್ಲಿ ಇದೊಂದು ಕಟ್ಟುನಿಟ್ಟಾದ ಅಭ್ಯಾಸವಾದಾಗ, ಅವರು ಮಾಂಸಾಹಾರದ ಸನಿಹ ಕೂಡಾ ಹೋಗುವುದಿಲ್ಲ.

ಹೀಗಾಗಿ ಇದೇ ರೀತಿಯಲ್ಲಿ, ತಂಬಾಕು ಅಗಿಯುವುದರ, ಹೊಗೆಬತ್ತಿ ಸೇದುವುದರ ಮತ್ತು ಮದ್ಯಪಾನ ಮಾಡುವುದರ ವಿರುದ್ಧ ಹೆತ್ತವರು ಮಕ್ಕಳ ಮನಸ್ಸುಗಳಲ್ಲಿ ಕಟ್ಟುನಿಟ್ಟಾದ ತಡೆಗಳನ್ನು ಜಾರಿಗೊಳಿಸುವುದರ ಅಗತ್ಯವಿದೆ. ಇಲ್ಲಿ ಕುಳಿತಿರುವ ನಿಮ್ಮೆಲ್ಲರಲ್ಲೂ ನಾನು ಕೇಳಲು ಬಯಸುತ್ತೇನೆ. ಮಾದಕ ದ್ರವ್ಯ ಸೇವಿಸುವ ಅಥವಾ ಧೂಮಪಾನ ಮಾಡುವುದರ ವಿರುದ್ಧವಾಗಿ ನಿಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡಲಾಗಿಲ್ಲವೇ? ಅಲ್ಲವೇ? ಮಾದಕ ದ್ರವ್ಯಗಳು ಮತ್ತು ಧೂಮಪಾನ ಮಾಡುವುದರ ವಿರುದ್ಧವಾಗಿ ಇಲ್ಲಿರುವ ಎಷ್ಟು ಮಂದಿ ತಮ್ಮ ಮನೆಗಳಲ್ಲಿ ತಮ್ಮ ಹೆತ್ತವರಿಂದ ಈ ಕಟ್ಟುನಿಟ್ಟಾದ ತಡೆಯನ್ನು ಪಡೆದಿದ್ದೀರಿ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ).

ನೋಡಿ! ಹಲವಾರು ಮಂದಿಗೆ ತಮ್ಮ ಆರಂಭದ ದಿನಗಳಿಂದಲೇ ಸರಿಯಾದ ಅಭ್ಯಾಸವನ್ನು ಅನುಸರಿಸುವಂತೆ ಮಾಡಲಾಗಿದೆ.

ಅಂತಹ ವಸ್ತುಗಳನ್ನು ಮುಟ್ಟದಂತೆ ಅಥವಾ ಬಳಸದಂತೆ ಅವರಿಗೆ ಬಾಲ್ಯದಲ್ಲಿಯೇ ಅಂತಹ ತಡೆಗಳನ್ನು ಮಾಡಲಾಗಿದೆ. ಮಕ್ಕಳ ಮೇಲೆ ಈ ತಡೆಗಳನ್ನು ಜಾರಿಗೊಳಿಸಲು ತಾಯಂದಿರಿಗೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಮಕ್ಕಳನ್ನು ಇಲ್ಲಿಗೆ ಕರೆತನ್ನಿ ಮತ್ತು ಅವರು ಏಳರಿಂದ ಹತ್ತು ದಿನಗಳವರೆಗೆ ಕೋರ್ಸ್‌ಗಳನ್ನು ಮಾಡುವಂತೆ ಮಾಡಿ.  ಅವರ ಎಲ್ಲಾ ದುರಭ್ಯಾಸಗಳು ’ಸೋಹಂ’ನೊಂದಿಗೆ (ಸುದರ್ಶನ ಕ್ರಿಯೆಯನ್ನು ಉಲ್ಲೇಖಿಸುತ್ತಾ) ತೊಳೆದು ಹೋಗುವಂತೆ ನಾವು ಖಚಿತಪಡಿಸುವೆವು ಮತ್ತು ಅವರು ಶಕ್ತಿ ಕ್ರಿಯೆಯನ್ನು ಅಭ್ಯಾಸ ಮಾಡುವಂತೆ ಮಾಡಿ ಅವರನ್ನು ಶಕ್ತಿಶಾಲಿಗಳನ್ನಾಗಿಯೂ ಮಾಡುವೆವು.

ಪ್ರಶ್ನೆ: ಗುರುದೇವ, ಒಬ್ಬ ಧ್ಯಾನ ಮಾಡುವವನಾಗಿ, ಧ್ಯಾನವು ನನ್ನ ಸುತ್ತಲಿನ ಜನರ ಮೇಲೆ ಒಂದು ಪ್ರಭಾವ ಹೊಂದಿದೆ ಎಂಬುದು ನನಗೆ ತಿಳಿದಿದೆ. ಹಾಗಾದರೆ, ಧ್ಯಾನವು ಎಲ್ಲದಕ್ಕಿಂತ ದೊಡ್ಡ ಸೇವೆಯೇ?

ಶ್ರೀ ಶ್ರೀ ರವಿ ಶಂಕರ್: ಅದರರ್ಥ ನೀನು ಸುಮ್ಮನೆ ಕುಳಿತುಕೊಂಡು ಧ್ಯಾನ ಮಾಡಬೇಕು ಮತ್ತು ಯಾವುದೇ ಸೇವೆಯನ್ನೂ ಮಾಡುವುದು ಬೇಡವೆಂದೇ? ಇಲ್ಲ, ನಾನದನ್ನು ಒಪ್ಪುವುದಿಲ್ಲ. ನೀನು ಸೇವೆಯನ್ನು ಕೂಡಾ ಮಾಡಬೇಕು ಮತ್ತು ಧ್ಯಾನ ಕೂಡಾ ಆವಶ್ಯಕ.