ಆಲೋಚನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಲೋಚನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಏಪ್ರಿಲ್ 6, 2013

ಭಕ್ತಿಪಥವನ್ನು ಅನುಸರಿಸಿ


ಬೂನ್, ಉತ್ತರ ಕ್ಯಾರೋಲೀನ್
೬ ಏಪ್ರಿಲ್ ೨೦೧೩

ಪ್ರ: ನಮ್ಮಲ್ಲಿ ನೆಲೆಸಿರುವ ದೇವರು ಏನು ಬೇಕಾದರೂ ಮಾಡಲು ಸಮರ್ಥನಿರುವಾಗ, ನಾವೂ ಸಹ ಏನು ಬೇಕಾದರೂ ಮಾಡಲು ಸಮರ್ಥರಲ್ಲವೇ? ಹಾಗಾದರೆ, ವಿಧಿ ಮತ್ತು ದೈವೀಕತೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

ಶ್ರೀ ಶ್ರೀ ರವಿಶಂಕರ್: ಅವೆರಡೂ ಸಮರ್ಪಕವಾಗಿ ಹೊಂದಿಕೊಳ್ಳುತ್ತವೆ. ನಿಮ್ಮ ಆಲೋಚನೆಗಳು ದಿವ್ಯತೆಯೊಂದಿಗೆ ಹೊಂದಿಕೊಂಡಾಗ, ಅದನ್ನು ಇಚ್ಛಾಸ್ವಾತಂತ್ರ್ಯವೆನ್ನುತ್ತಾರೆ. ನಿಮ್ಮ ಆಲೋಚನೆಗಳು ದೈವೀಕತೆಗೆ ವಿರುದ್ಧವಾಗಿದ್ದರೆ, ಅದನ್ನು ವಿಧಿಯೆನ್ನುತ್ತಾರೆ. ತಿಳಿಯಿತೇ?

ನೀವು ಪತಂಜಲಿಯ ಯೋಗಸೂತ್ರಗಳನ್ನು ಓದಿಲ್ಲದಿದ್ದರೆ, ಅದನ್ನು ಓದಬೇಕು. ಅದರಲ್ಲಿ ಮೊದಲಿಗೆ ಇದೇ ವಿಷಯವನ್ನು ಪ್ರಸ್ತಾಪಿಸಿರುವುದು. ಅದು ಮನಸ್ಸಿನ ಐದು ವಿಕಾರಗಳ ಬಗ್ಗೆ ತಿಳಿಸಿದೆ. ಅದರ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇವೆ. ಅದು ಬಹಳ ಮುಖ್ಯ.

ಮನಸ್ಸಿನ ಐದು ವಿಕಾರಗಳು ಹೀಗಿವೆ: ಪ್ರಮಾಣ. ಎಲ್ಲದಕ್ಕೂ ನಮಗೆ ಪ್ರಮಾಣ ಬೇಕು - ಪ್ರೀತಿ, ಸತ್ಯ, ಮತ್ತೊಬ್ಬರ ಪ್ರಾಮಾಣಿಕತೆ, ದೇವರು. ಎಲ್ಲವನ್ನೂ ಪ್ರಮಾಣೀಕರಿಸಬೇಕು.

ಎರಡನೆಯದು ವಿಪರ್ಯಾಯ (ತಪ್ಪು ಕಲ್ಪನೆ ಅಥವಾ ತಪ್ಪು ನಿರ್ಧಾರ). ವಿಪರ್ಯಾಯವೆಂದರೆ ಮನಸ್ಸು ತನ್ನದೇ ಆದ ಲೋಕವನ್ನು ಕಲ್ಪಿಸುವುದು, ವಾಸ್ತವವಾಗಿ ಇಲ್ಲದುದನ್ನು ಕಲ್ಪಿಸುವುದು. ಯೋಗಸೂತ್ರದಲ್ಲಿ ಹೀಗೆ ಹೇಳಲಾಗಿದೆ – ‘ವಿಪರ್ಯಾಯಾಹಮಿಥ್ಯಾಜ್ಞಾನಮೇತದ್ರೂಪಪ್ರತಿಷ್ಠಾಮ್.’ (ಯೋಗಸೂತ್ರ, ಅಧ್ಯಾಯ-1, ಶ್ಲೋಕ-8)
ನಿಮಗೆ ಗೊತ್ತೇ, 30 ವರ್ಷಗಳ ಹಿಂದೆ ‘ವಿಪರ್ಯಾಸ’ ಎನ್ನುವ ಪದವನ್ನು ಬಳಸುತ್ತಿದ್ದರು. ಅದರ ಅರ್ಥ ನೀವು ಆಲೋಚಿಸುವಂತೆ, ವಾಸ್ತವವಾಗಿ ನಡೆಯುತ್ತಿರಲಿಲ್ಲ. ಸತ್ಯದ ತಪ್ಪು ಕಲ್ಪನೆಯಿತ್ತು ನಿಮಗೆ. ಇವತ್ತು, ಆ ಪದಗಳು ಕಸದ ಬುಟ್ಟಿಗೆ ಸೇರಿದೆ, ಜನರು ಅದನ್ನು ಮರೆತಿದ್ದಾರೆ.

ವಿಪರ್ಯಾಯ ಎಂದರೆ ಆಸತ್ಯವನ್ನು ಸತ್ಯವೆಂದು ಮತ್ತು ಸತ್ಯವನ್ನು ಅಸತ್ಯವೆಂದು ಕಾಣುವುದು. ಯಾವುದು ತಾತ್ಕಾಲಿಕ, ಅಸ್ಥಿರ ಹಾಗೂ ನಶ್ವರವೋ, ಅದನ್ನು ಸ್ಥಿರ ಮತ್ತು ಶಾಶ್ವತ ಎಂದು ಪರಿಗಣಿಸುವುದು.

ಅದು ಹೇಗೆಂದರೆ, ಕೆಲವೊಮ್ಮೆ ಇತರರು ನಿಮ್ಮ ಬಗ್ಗೆ ಏನೋ ತಿಳಿದುಕೊಂಡಿರುತ್ತಾರೆ, ಅವರೂ ಇರುವುದಿಲ್ಲ ಮತ್ತು ಆ ಆಲೋಚನೆಯು ಹೊರಟುಹೋಗಿರುತ್ತದೆ, ಆದರೆ ನೀವು ಮಾತ್ರ ನಿಮ್ಮ ಮನಸ್ಸಿನಲ್ಲಿ ಆ ಆಲೋಚನೆಯನ್ನು ಹಿಡಿದುಕೊಂಡು ದುಃಖಪಡುತ್ತೀರ, ತಿಳಿಯಿತ್ತೇ? ಇದು ವಿಪರ್ಯಾಯ.

ಉದಾಹರಣೆಗೆ, ನೀವು ಯಾರದೋ ಮನೆಗೆ ಹೋಗುತ್ತೀರ. ನೀವು ಬರುವುದನ್ನು ಅವರು ನೋಡುವುದಿಲ್ಲ. ಜೋರಾಗಿ ಗಾಳಿ ಬೀಸುತ್ತಿದೆಯೆಂದೋ, ಅಥವಾ ಹಲ್ಲಿ ಮನೆಯೊಳಗೆ ಬರುವುದೆಂದೋ ಬಾಗಿಲು ಹಾಕುತ್ತಾರೆ, ಆದರೆ ನಿಮ್ಮ ಮುಖದ ಮೇಲೆ ಬಾಗಿಲು ಹಾಕಿದರೆಂದು ನೀವು ತಿಳಿಯುತ್ತೀರ.

ನೀವು ಬಾಗಿಲತ್ತ ನಡೆಯುವುದಕ್ಕೂ, ಅವರು ಬಾಗಿಲು ಹಾಕುವುದಕ್ಕೂ, ಕಾಕತಾಳೀಯವಷ್ಟೇ. ನೀವು ಅವರನ್ನು ನೋಡಿದ್ದರಿಂದ, ಅವರು ನಿಮ್ಮನ್ನು ನೋಡಿದರೆಂದುಕೊಳ್ಳುತ್ತೀರ. ಇದು ವಿಪರ್ಯಾಯದ ಒಂದು ಚಿಕ್ಕ ಉದಾಹರಣೆ.
ನೀವು ಕುಳಿತು ಆಲೋಚಿಸಿ, ‘ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸುತ್ತಿದ್ದಾರೆ’ ಎಂದು. ಆದರೆ ನಿಜವಾಗಿಯೂ  ನೀವು ಅವರನ್ನು ಕೇಳಿದರೆ, ‘ನಾನು ನಿಮ್ಮ ಬಗ್ಗೆ ಎಂದೂ ಆಲೋಚಿಸಿಲ್ಲ. ನನ್ನ ಕೆಲಸದಲ್ಲಿ ನಿರತನಾಗಿದ್ದೆ’ ಎನ್ನುವರು. ಜನರಿಗೆ ನಿಮ್ಮ ಬಗ್ಗೆ ಚಿಂತಿಸಲು ಎಲ್ಲಿದೆ ಸಮಯ?

ಮೂರನೆಯದು ವಿಕಲ್ಪ (ಭ್ರಮೆ ಅಥವಾ ಕಲ್ಪನೆ). ಮನಸ್ಸು ಯಾವುದು ಇಲ್ಲವೋ ಅದರ ಬಗ್ಗೆ ಚಿಂತಿಸುವುದು ಅಥವಾ ಅದರತ್ತ ಓಡುವುದು.

ಮುಂದಿನದು ನಿದ್ರೆ ಮತ್ತು ಕೊನೆಯದು ಸ್ಮೃತಿ (ನೆನಪು/ಜ್ಞಾಪಕ ಶಕ್ತಿ), ಅಂದರೆ ಯಾವುದರ ಬಗ್ಗೆಯೋ ಸ್ಮರಣೆಯಲ್ಲಿ ತೊಡಗಿರುವುದು ಅಥವಾ ಹಿಂದೆಂದೋ ನಡೆದ ಘಟನೆಯ ಬಗ್ಗೆ ಸದಾ ಚಿಂತಿಸುತ್ತಿರುವುದು.

ಮನಸ್ಸು ಈ ಐದು ವಿಕಾರಗಳಿಂದ ಹೊರಬರಬೇಕು.  ಅದನ್ನು ಯೋಗವೆನ್ನುವರು. ಆದ್ದರಿಂದಲೇ, ‘ಯೋಗ: ಚಿತ್ತವೃತ್ತಿನಿರೋಧ:’ ಎನ್ನುವುದು. (ಚಿತ್ತವನ್ನು ಅದರ ವಿಕಾರಗಳಿಂದ ಮುಕ್ತಗೊಳಿಸುವುದನ್ನೇ ಯೋಗ ಎಂದು ಕರೆಯುವುದು).
ಈ ವಿಕಾರಗಳನ್ನು ನಾಶಪಡಿಸಲು ಸಾಧ್ಯವಿಲ್ಲ; ಅವು ಇದ್ದೇ ಇರುತ್ತವೆ. ಆದರೆ ಅವುಗಳಿಂದ ಮನಸ್ಸನ್ನು ಹೊರತರಬಹುದು; ಆ ಕೌಶಲ್ಯವನ್ನೇ ಯೋಗವೆನ್ನುವುದು. ಅವುಗಳ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳದಿರುವ ಕೌಶಲ್ಯವೇ ಯೋಗ.

ಪ್ರ: ದೇವರ ಬಗ್ಗೆ ಅಜ್ಞಾನವೂ ಹೇಗೆ ದೈವವಾಗುವುದು? ಹಿಂಸೆ, ಒತ್ತಡ, ಅಜ್ಞಾನ, ದ್ವೇಷ ಇತ್ಯಾದಿ ಎಲ್ಲವೂ ದೇವರ ಸ್ವರೂಪವಾದರೆ, ಆ ದೇವರಿಂದ ಶಾಂತಿಯ ಕಡೆಗೇಕೆ ಚಲಿಸಬೇಕು? ನಾವೇಕೆ ದೇವರ ಕೆಲವು ಅಂಶದೆಡೆಗೆ ಚಲಿಸುತ್ತೇವೆ ಮತ್ತು ಇತರ ಅಂಶದಾಚೆಗೆ ಸರಿಯುತ್ತೇವೆ?

ಶ್ರೀ ಶ್ರೀ ರವಿಶಂಕರ್: ಮನುಷ್ಯರಾಗಿ ಹೀಗೆ ವರ್ತಿಸುವುದು ಸ್ವಾಭಾವಿಕ. ಒಂದು ಬ್ರೆಡ್ ತುಂಡು ಮತ್ತು ಹುಲ್ಲಿನ ಕಂತೆಯೊಂದು ನಿಮ್ಮ ಮುಂದಿದ್ದರೆ, ನೀವು ಹಸುವಾಗಿದ್ದರೆ ಹುಲ್ಲಿನೆಡೆಗೆ ನಡೆಯುತೀರ, ಮನುಷ್ಯರಾಗಿದ್ದರೆ ಬ್ರೆಡ್‍ನ ಕಡೆಗೆ ನಡೆಯುತ್ತೀರ.

ಇದೂ ಕೂಡ ಅಷ್ಟೇ ಸ್ವಾಭಾವಿಕ. ಆದರೆ ಹಸುವೂ ಸಹ ದೇವರೇ, ಹುಲ್ಲೂ ಸಹ ದೇವರೆ, ಬ್ರೆಡ್ ಸಹ ದೇವರೆ ಮತ್ತು ನೀವೂ ಸಹ ದೇವರೆ. ವಸ್ತುಸ್ಥಿತಿಯಿರುವುದೇ ಹೀಗೆ. ಅಗ್ನಿಯು ಮೇಲ್ಮುಖವಾಗಿ ಚಲಿಸುತ್ತದೆ, ಜಲ ಕೆಳಮುಖವಾಗಿ ಹರಿಯುತ್ತದೆ, ಎರಡೂ ದೈವವೇ. (ದೈವವು) ಅಗ್ನಿಯಂತೆ ಮೇಲ್ಮುಖವಾಗಿ ಮತ್ತು ಜಲದಂತೆ ಕೆಳಮುಖವಾಗಿ ಚಲಿಸುತ್ತದೆ. ಇದು ವಸ್ತುವಿಷಯಗಳ ನೈಜ ಸ್ವರೂಪ.

ಪ್ರಕೃತಿ (ಸೃಷ್ಟಿಯ ಅಸ್ತಿತ್ವ ಮತ್ತು ಕಾರ್ಯಗತಿಯನ್ನು ನಿಯಂತ್ರಿಸುವ ದಿವ್ಯಶಕ್ತಿ ಮತ್ತು ಬೌದ್ಧಿಕತೆ) ಹಾಗೂ ಪುರುಷ (ಸರ್ವವ್ಯಾಪಿಯಾದ ವಿಶ್ವ ಚೈತನ್ಯ) ರಿಂದ ನೀವು ರಚಿಸಲ್ಪಟ್ಟಿದ್ದೀರ. ಇದು ನಮ್ಮನ್ನು ಇನ್ನೊಂದು ವಿಷಯಕ್ಕೆ ಕರೆದೊಯ್ಯುತ್ತದೆ. ಸತ್ವ, ರಜಸ್ಸು ಮತ್ತು ತಾಮಸ ಎಂಬ ಗುಣಗಳಿರುತ್ತವೆ, ನೀವು ಈ ಗುಣಗಳಂತೆ ಕ್ರಿಯಾಶೀಲರಾಗುತ್ತೀರ.

ನಿಮ್ಮಲ್ಲಿ ತಮೋಗುಣ ಹೆಚ್ಚಿದ್ದರೆ, ಹಿಂಸೆಯತ್ತ ಚಲಿಸುತ್ತೀರ. ಸತ್ವ ಹೆಚ್ಚಿದಷ್ಟೂ ಸಾಮರಸ್ಯತೆಯತ್ತ ಸಾಗುತ್ತೀರ. ರಜೋಗುಣ ಹೆಚ್ಚು ತುಂಬಿದ್ದರೆ, ಕೆಲಸಕಾರ್ಯಗಳಲ್ಲಿ ಕಷ್ಟಪಡುತ್ತೀರ; ಇವೆರಡು ಸ್ಥಿತಿಗಳ ನಡುವೆ,  ಸ್ವಲ್ಪ ಶಾಂತಿ ಮತ್ತು ಸ್ವಲ್ಪ ಹಿಂಸೆಯಿರಬಹುದು. ಇದು ಸ್ವಾಭಾವಿಕ.

ಪ್ರ: ನಾವು ‘ಓಂ’ (ಸೃಷ್ಟಿಯ ಪ್ರಣವ ಶಬ್ದ) ಸ್ವರೂಪವಾಗಿದ್ದರೆ, ‘ಓಂ’ ಎನ್ನುವುದು ಶಬ್ದದ ಕಂಪನವೇ ಅಥವಾ ‘ಓಂ’ ಅನ್ನು ಪ್ರತಿನಿಧಿಸುವ ತತ್ವವೇ ಅಥವಾ ‘ಓಂ’ ಕಂಪನವು ಅಂತ್ಯಗೊಂಡ ನಂತರದ ಪರಿಣಾಮವೇ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ‘ಓಂ’ ಶಾಂತಿಯನ್ನು ಸ್ಥಾಪಿಸುವುದರಿಂದ, ನಾವೇ ಶಾಂತಿಯೇ ಅಥವಾ ಆ ಶಾಂತಿಯ ಪರಿಣಾಮವೇ?

ಶ್ರೀ ಶ್ರೀ ರವಿಶಂಕರ್: ಎಲ್ಲ ಉಕ್ತ ಮತ್ತು ಅನುಕ್ತವೆಲ್ಲವೂ ‘ಓಂ’. ಸರ್ವ ಸ್ಪಷ್ಟ ಮತ್ತು ಸರ್ವ ಗೊಂದಲಮಯವೂ ‘ಓಂ’. ಈಗ ಸ್ಪಷ್ಟವಾಯಿತೇ, ಅಥವಾ ಇನ್ನೂ ಗೊಂದಲವಿದೆಯೇ? ಆಗಲೂ ಎಲ್ಲವೂ ‘ಓಂ’ (ನಗೆ).

ನೀವು ಯಾವುದನ್ನು ಹೇಳುತ್ತೀರೋ ಅಥವಾ ಹೇಳುವುದಿಲ್ಲವೋ ಎಲ್ಲವೂ ‘ಓಂ’ ಆಗುತ್ತದೆ. ಕಂಪನವೋ ಅಥವಾ ಕಂಪನವಿಲ್ಲದಿದ್ದರೂ, ಆದಿಯೋ ಅಂತ್ಯವೋ, ಎಲ್ಲವೂ ‘ಓಂ’ ಆಗಿದೆ.

ಆದ್ದರಿಂದ ‘ಓಂ’ ಆದಿಯಾಗಿದೆ, ಅಂತ್ಯವಾಗಿದೆ ಮತ್ತು ಮಧ್ಯ ಸ್ಥಿತಿಯೂ ಆಗಿದೆ. ಕಾಲಾತೀತವಾದುದೆಲ್ಲವೂ - ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್‍ಕಾಲವೂ –ಓಂ ಆಗಿದೆ. ಇದನ್ನೇ ಹೇಳಲಾಗಿದೆ ಮತ್ತು ಇದೇ ಸತ್ಯ ಕೂಡ. ಆದ್ದರಿಂದಲೇ ಏನೇ ಶುಭವಾಗಲಿ, ನಾವು ‘ಓಂ’ ಎನ್ನುತ್ತೇವೆ. ಹಿರಿಯ ಋಷಿಗಳು ಶರೀರದಲ್ಲಿ ಯಾವುದೇ ನೋವಿದ್ದರೂ, ‘ಓಂ’ ಉಚ್ಚರಿಸುತ್ತಾರೆ.

ಇದು ನಮಗೆ ಒಬ್ಬ ಹಿರಿಯ ಸಾಧುವಿನ ಕತೆಯನ್ನು ಜ್ಞಾಪಿಸುತ್ತದೆ. ಬಹುಶಃ ನಾವಿದನ್ನು ಅಷ್ಟಾವಕ್ರ ಗೀತೆಯ ವಿವರಣೆಯನ್ನು ನೀಡುವ ಸಂದರ್ಭದಲ್ಲಿ ಹೇಳಿರಬಹುದು.

ಇದು ತೊಂಬತ್ತರ  ಮೊದಲ ಭಾಗದಲ್ಲಿ ಅಥವಾ ಎಂಬತ್ತರ ಮಧ್ಯ ಭಾಗದಲ್ಲಿ, ನಮ್ಮ ಆಶ್ರಮವು ಬಹಳ ಚಿಕ್ಕದಾಗಿದ್ದಾಗ ನಡೆದಂತಹ ಘಟನೆ. ನಮ್ಮ ಕೊಠಡಿಯನ್ನು ಒಬ್ಬ ಹಿರಿಯ ಸ್ವಾಮೀಜೀಗೆ ಉಳಿದುಕೊಳ್ಳಲು ಕೊಟ್ಟೆವು, ಅವರು ಅದನ್ನು ನಿರಾಕರಿಸಿದರು. ಅವರಿಗೆ ಸುಮಾರು 85 ವರ್ಷಗಳಾಗಿತ್ತು, ಆದರೂ ಎಂದೂ ಅನಾರೋಗ್ಯಕ್ಕೆ ತುತ್ತಾಗಿರಲಿಲ್ಲ. ಅವರಿಗೆ ತಾವು ಹೊರಗೆ ಮಲಗಬಹುದೆಂಬ ವಿಶ್ವಾಸ.

ಆಗ ಡಿಸೆಂಬರ್ ಸಮಯ, ಚಳಿ ಕೊರೆಯುತಿತ್ತು. ಆದರೂ ಅವರು ಹೊರಗೆ ಮಲಗಬೇಕೆಂದು ಇಚ್ಛಿಸಿದರು. ಹಾಗೆಯೇ ಮಾಡಿದರು. ಬೆಳಗಿನ ಹೊತ್ತಿನಲ್ಲಿ, ‘ಓಂ, ಓಂ’ ಎಂದು ಜೋರಾಗಿ ಪಠಿಸುತ್ತಿರುವುದು ಕೇಳಿಸುತ್ತಿತ್ತು. ಏಕೆ ಹೀಗೆ ಇಷ್ಟೊಂದು ಬಾರಿ ‘ಓಂ’ ಜಪಿಸುತ್ತಿದ್ದಾರೆಂದು ನಮಗೆಲ್ಲ ಅನಿಸಿತು. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಅಲ್ಲಿಗೆ ಹೋಗಿ ನೋಡಿದರೆ, ಅವರು ಚಳಿಯಿಂದ ಗಡ್ಡೆಯಾಗಿದ್ದರು! ಚಳಿಯಿಂದ ಅವರ ಭುಜ ಮತ್ತು ಕಾಲುಗಳು ಹೆಪ್ಪುಗಟ್ಟಿತ್ತು. ಅವರಿಗೆ ತಮ್ಮ ಶರೀರವನ್ನು ಅಲುಗಾಡಿಸಲಾಗುತ್ತಿರಲ್ಲಿಲ್ಲ. ಅವರ ಬೆನ್ನು ಗಡ್ಡೆಯಂತೆ ಸೆಟೆದುಕೊಂಡಿತ್ತು, ನಮಗೆ ಒಂದೇ ಒಂದು ಅವರಿಂದ ಕೇಳಿಸುತ್ತಿದ್ದುದ್ದೆಂದರೆ ಅದು ‘ಓಂ’ ಜಪ.

ಎಲ್ಲದಕ್ಕೂ ‘ಓಂ’ ಎನ್ನುವ ಈ ಶತಮಾನದ ಜನರಿದ್ದಾರೆ ಮತ್ತು ಅದನ್ನು ಭಾವುಕತೆಗೆ ತಕ್ಕಂತೆ ಬೇರೆ ಬೇರೆ ಧ್ವನಿಯಲ್ಲಿ ಉಚ್ಚರಿಸುತ್ತಾರೆ. ಅತಿ ತೀವ್ರ ಮತ್ತು ದೊಡ್ಡ ಧ್ವನಿಯಲ್ಲಿ ‘ಓಂ’ ಉಚ್ಚರಿಸಿದರೆ, ಅದರ ಅರ್ಥ ಸ್ವಾಮೀಜೀಗೆ  ಕೋಪ ಬಂದಿದೆಯೆಂದು, ಅದೇ ಸುಮಧುರವಾದ ಧ್ವನಿಯಲ್ಲಿ ‘ಓಂ’ ಉಚ್ಚರಿಸಿದರೆ, ಅವರು ಶಾಂತವಾಗಿದ್ದಾರೆ ಮತ್ತು ಸಂತೋಷವಾಗಿದ್ದಾರೆಂದು ಅರ್ಥ. ಹೀಗೆ, ಆ ಕಾಲದಲ್ಲಿ, ಏನೇ ಬರಲಿ ಕುಶಲೋಪರಿಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ರೀತಿಯಾಗಿತ್ತು. ನೋವಿನಲ್ಲೂ, ‘ಓಂ’ ಜಪಿಸುತ್ತಿದ್ದರು.

‘ಓಂ’ ಶಬ್ದ ಹಿಂದೂ ಸ್ವಾಮೀಜೀಗಳಿಗಷ್ಟೇ ಸೀಮಿತವಾಗಿಲ್ಲ. ಅದನ್ನು ಬೌದ್ಧ, ಜೈನ, ಸಿಖ್ಖ, ಟಾಓ ಮತ್ತು ಷಿಂಟೋ ಧರ್ಮದವರೂ ಜಪಿಸುತ್ತಾರೆ. ಇದಕ್ಕೆ ಕಾರಣ ಇವೆಲ್ಲಾ ಧರ್ಮಗಳಲ್ಲೂ ಧ್ಯಾನದ ಅಭ್ಯಾಸವಿದ್ದು, ಆಳವಾದ ಧ್ಯಾನದಲ್ಲಿ ಅವರಿಗೆ ಇದೊಂದೇ ಶಬ್ದ ಕೇಳಿಸಿತ್ತು. ಆದ್ದರಿಂದ ಅವರು ಜೈನರಾಗಲಿ, ಸಿಖ್ಖರಾಗಲಿ ಅಥವಾ ಲಾಓ-ಟ್ಜು (ಟಾಓ ಧರ್ಮೀಯರು)ರಾಗಲಿ, ‘ಓಂ’ ಶಬ್ದವನ್ನು ಜಪಿಸುತ್ತಾರೆ ಮತ್ತು ಒಂದು ಕೈಯಿಂದ ಚಪ್ಪಾಳೆ ತಟ್ಟುವುದನ್ನು ಅಭ್ಯಾಸ ಮಾಡುತ್ತಾರೆ. ‘ಆಮೆನ್’ (ಹಾಗೆಯೇ ಆಗಲಿ) ಪದ ‘ಓಂ’ ಶಬ್ದದ ಅಪಭ್ರಂಶವೆಂದು ನಮಗೆನಿಸುತ್ತದೆ. ಇಸ್ಲಾಂನಲ್ಲಿ ಹೇಗೆ ‘ಆಮೀನ್’ (ಹಾಗೆಯೇ ಆಗಲಿ) ಎನ್ನುವರೋ, ಅದು ಇದೇ ಎಂದು ನಮ್ಮ ಭಾವನೆ.

ಪ್ರ: ಗುರುದೇವ, ಆಕಾಶ ಮತ್ತು ಬ್ರಹ್ಮದ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಸುತ್ತೀರ?

ಶ್ರೀ ಶ್ರೀ ರವಿಶಂಕರ್: ಯಾವುದರಿಂದ ನಮ್ಮ ಮಾತು ಮತ್ತು ಮನಸ್ಸನ್ನು ಪುನಃ ಪಡೆಯಬಹುದೋ (ಅವುಗಳ ಆಕರ ಮತ್ತು ಸಾರಾಂಶ); ಯಾವುದನ್ನು ಮಾತು ಮತ್ತು ಮನಸ್ಸು ಹಿಡಿಯಲಾಗದೇ ಸೋಲುವುದೋ – ಅದೇ ಬ್ರಹ್ಮ.
ಇದನ್ನು ನಾವು ಸದಾ ಮೂಕನ ಸ್ವಾದಕ್ಕೆ ಹೋಲಿಸಿದ್ದೇವೆ. ಮೂಕನು ಏನನ್ನಾದರೂ ತಿಂದಾಗ ಅದನ್ನು ಹೇಗೆ ವ್ಯಕ್ತಪಡಿಸಲು ಸಾಧ್ಯ? ಅವನು ಮೂಗ, ಆದರೆ ಅವನೇನ್ನನ್ನೋ ರುಚಿ ನೋಡಿದ್ದಾನೆ. ಅದನ್ನು ಹೇಗೆ ವ್ಯಕ್ತಪಡಿಸಬಲ್ಲ? ಹಾಗೆಯೇ, ಮಾತು ಮತ್ತು ಮನಸ್ಸು ಬ್ರಹ್ಮವನ್ನು ಪಡೆಯಲಾಗದು. ಸ್ವಲ್ಪ ಮಟ್ಟಿಗೆ ಆಕಾಶವನ್ನು ವರ್ಣಿಸಬಹುದು, ಆದರೆ ಬ್ರಹ್ಮವನ್ನು ವರ್ಣಿಸಲು ಪದಗಳೂ ಸೋಲುವುದು, ಏಕೆಂದರೆ ಅದು ಪದಗಳಿಂದ ಮತ್ತು ವರ್ಣನೆಯಿಂದ ಅತೀತವಾಗಿದೆ.

ಪ್ರ: ದೇಹದ ವಿವಿಧ ಭಾಗಗಳು ಸೂಕ್ಷ್ಮ ದೇವತೆಗಳಿಗೆ ಹೇಗೆ ಸಂಪರ್ಕ ಹೊಂದಿದೆಯೆಂದು ತಿಳಿಸುವಿರಾ?

ಶ್ರೀ ಶ್ರೀ ರವಿಶಂಕರ್: ದೇಹದ ಪ್ರತಿಯೊಂದು ಭಾಗವೂ ಪ್ರತ್ಯೇಕ ದೇವತೆಗೆ ಸಂಬಂಧಿಸಿದೆ.

‘ಪ್ರಜನನೇ ಬ್ರಹ್ಮ ತಿಷ್ಠತು’ ಬ್ರಹ್ಮನು ಜನನಾಂಗಗಳಲ್ಲಿ ನೆಲೆಸಿರುವನೆಂದು ಹೇಳುತ್ತಾರೆ.

ನಂತರ, ‘ಪಾದ್ಯೋ ವಿಷ್ಣು ತಿಷ್ಠತು’ ಮಹಾವಿಷ್ಣುವು ಪಾದಗಳಲ್ಲಿ ನೆಲೆಸಿರುವನೆಂದು ಹೇಳಿದ್ದಾರೆ.

ಹಾಗೆಯೇ, ‘ಹಸ್ತಯೋ ಹರ ತಿಷ್ಠತು’ ಹರನು ಕೈಗಳಲ್ಲಿ ವಾಸಿಸಿರುವನೆಂದು ಹೇಳುತ್ತಾರೆ.

‘ಕರ್ಣಯೋ ಅಶ್ವಿನೋತಿಷ್ಠತು’ ಅವಳಿ ಅಶ್ವಿನೀ ಕುಮಾರರು (ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂಕೇತವಾಗಿರುವರು, ಮನುಷ್ಯರಿಗೆ ಐಶ್ವರ್ಯವನ್ನು ಮತ್ತು ಔಷಧಿಯನ್ನು ನೀಡುವ ವೈದಿಕ ದೇವತೆಗಳು) ಎರಡು ಕಿವಿಗಳಲ್ಲಿ ನೆಲೆಸಿರುವರು.

ಔಷಧೀಯ ಕಾಣಿಕೆಗೆ ಮತ್ತು ಆಯುರ್ವೇದ ಶಾಸ್ತ್ರಕ್ಕೆ ಕಾರಣಭೂತರಾದ ದೇವತೆಗಳು. ಆಯುರ್ವೇದ ಶಾಸ್ತ್ರವನ್ನು ಪ್ರತಿಪಾದಿಸಿದರೆಂದು ಹೇಳಲಾಗಿದೆ.

ಹಾಗೆಯೇ, ನಮ್ಮಕಣ್ಣುಗಳಿಗೆ ಸಂಬಂಧಿಸಿದ ದೇವತೆ ಸೂರ್ಯ.

ಹಣೆಯು ರುದ್ರನ ಸ್ಥಾನವೆಂದು ಹೇಳಲಾಗಿದೆ.

ಶ್ರೀರಾಮನು ನಾಭಿಯಲ್ಲಿ ನೆಲೆಸಿರುವನೆಂದು, ಅದನ್ನು ಅಗ್ನಿಯ ಸ್ಥಾನೆವೆಂದು ಹೇಳಲಾಗಿದೆ (ಇಲ್ಲಿ ಅಗ್ನಿಯೆಂದರೆ ಜಠರಾಗ್ನಿ).

ರುದ್ರ ಮತ್ತು ಶಿವ ಒಂದೇ ದೇವರ (ಶಿವನ) ಎರಡು ರೂಪಗಳು, ಆದರೆ ರುದ್ರ ಹಣೆಯಲ್ಲಿ ಸ್ಥಿತನಾಗಿದ್ದರೆ, ಶಿವ ಹೃದಯದಲ್ಲಿ ವಾಸಿಸುತ್ತಾನೆ.

ಹೀಗೆ, ಮನುಷ್ಯನ ಪ್ರತಿಯೊಂದು ಭಾಗಗಳೂ ಪ್ರತ್ಯೇಕ ದೇವತೆಯೊಂದಿಗೆ ಜೊತೆಗೂಡಿದೆ.

ಗುರುವಾರ, ಏಪ್ರಿಲ್ 4, 2013

ಚಿತ್ತವೃತ್ತಿಗಳ ನಿಯ೦ತ್ರಣ

ಅಮೃತಬಿ೦ದು’ ಸರಣಿಯ ಬರಹಗಳು

ಹನ್ನೊ೦ದನೆಯ ಕ೦ತು

ಸುಖದ ಕನಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೯.೦೫.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ಪ್ರತಿಯೊಂದು ಘಳಿಗೆಯೂ ನಾವು ಸಾವಿನ ಕಡೆಗೆ ಮುಂದುವರಿಯುತ್ತಿರುತ್ತೇವೆ. ಈ ಶರೀರ ಮಣ್ಣಾಗಿಯೋ ಬೂದಿಯಾಗಿಯೋ ಒಂದು ದಿನ ಮುಗಿದುಹೋಗಿಬಿಡುತ್ತೆ. ಈ ಅರಿವು ’ವಿದ್ಯೆ’ಯನ್ನು ತಂದುಕೊಡುತ್ತದೆ ನಮಗೆ. ’ವಿದ್ಯಾ ಸಂಹಾರೇ ತದುತ್ತ ಸ್ವಪ್ನದರ್ಶನಂ’. ವಿದ್ಯೆಯು ನಷ್ಟವಾದಾಗ ಸ್ವಪ್ನ ಕಾಣುವುದು ಹೆಚ್ಚಾಗುತ್ತದೆ. ನಾನಾ ಬಗೆಯ ಕನಸು..ಯಶಸ್ಸಿನ ಕನಸು, ಹೆಸರಿನ ಕನಸು, ಅಧಿಕಾರದ ಕನಸು.. ಹೀಗೇ ಇಂದ್ರಿಯ ಸುಖದ ಕನಸು ಅದರಲ್ಲಿ ಒಂದು ಬಗೆ.
ಮದುವೆಯಾದರೂ ಕೆಲವರು ಬೇರೆ ಬೇರೆ ವ್ಯವಹಾರವಿಟ್ಟುಕೊಳ್ಳುವುದು ಯಾಕೆ? ಮದುವೆಯಾದ ಮೇಲೂ ಕೆಲವರಿಗೆ ಯೋಚನೆ ಇರುತ್ತೆ, "ಓ! ಈ ತರಹ ಇರುವ ಹುಡುಗಿ ನಮಗೆ ಸಿಕ್ಕಿಬಿಟ್ಟಿದ್ದರೆ ಚೆನ್ನಾಗಿತ್ತು." "ಅಯ್ಯೋ ಮೊದಲು ಬಂದಿತ್ತಲ್ಲ, ಅವರನ್ನು ಮಾಡಿಕೊಂಡಿದ್ದರೆ ಚೆನ್ನಾಗಿತ್ತು", ಈ ರೀತಿ. ತೃಪ್ತಿ ಇರಲ್ಲ! ಈ ವಿಷಯದಲ್ಲಿ ಹೆಂಗಸರು ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡಿರುತ್ತಾರೆ, ಆದರೆ ಗಂಡಸರ ಮನಸ್ಸು ಹೆಚ್ಚು ಚಂಚಲ. ಹಿಂದಿನ ಕಾಲದ ರಾಜರು ಎಷ್ಟೆಷ್ಟೋ ಮದುವೆಗಳನ್ನು ಮಾಡಿಕೊಂಡರು. ಈಗಲೂ ಅರಬ್ ದೇಶದಲ್ಲೆಲ್ಲಾ ಬೇಕಾದಷ್ಟು ಮದುವೆ ಮಾಡಿಕೊಳ್ತಾರೆ.
ಸುಖದ ಬಗೆಗಿನ ಆಲೋಚನೆಗಳಿಗೆ, ಕನಸುಗಳಿಗೆ ಮನಸ್ಸಿನಲ್ಲಿ ಉತ್ತೇಜನ ಕೊಡುವುದರಿಂದಲೇ ತೀವ್ರವಾದ ಬಯಕೆಗಳುಂಟಾಗುವುದು. ಪ್ರಾಪಂಚಿಕವಾದ ಆಲೋಚನೆಗಳಾಗಲೀ ಅಥವಾ ದೈವಿಕವಾದ, ಆಧ್ಯಾತ್ಮಿಕವಾದ ಆಲೋಚನೆಗಳಾಗಲೀ ನೀವು ಯಾವುದಕ್ಕೆ ಪ್ರೋತ್ಸಾಹ ಕೊಟ್ಟರೂ ನಿಮ್ಮ ಮನಸ್ಸಿಗೆ ಆ ಕ್ಷಣದಲ್ಲಿ ಆ ಆಲೋಚನೆಗಳೇ ಹಿತವೆನಿಸುವುದು. ಆದರೆ ಪ್ರಾಪಂಚಿಕವಾದ ಸುಖದ ಬಯಕೆಗಳು ನಿಮ್ಮನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಕಡೆಗೆ ಹತಾಶೆ, ಖಿನ್ನತೆ ಹೀಗೆ ಕೆಳಮುಖವಾಗಿ ಸಾಗುವಂತೆ ಮಾಡಿದರೆ, ದೈವಿಕವಾದ ಆಲೋಚನೆಗಳು ಸಂತೋಷದಿಂದ ತೃಪ್ತಿಯೆಡೆಗೂ, ಪರಮಾನಂದದೆಡೆಗೂ ನಿಮ್ಮನ್ನು ಮೇಲೆತ್ತುತ್ತವೆ.
ಚಿತ್ತವನ್ನು ’ಈ ಕ್ಷಣ’ದಲ್ಲಿ ಇಟ್ಟುಕೊಂಡಾಗ ನಾನೇ ಸ್ವಯಂ ’ಸುಖಸಂಪೂರ್ಣ’ನಾಗಿದ್ದೇನೆ. ನಾನೇ ಸುಖ, ನಾನೇ ಆನಂದ, ಈ ಅನುಭವ ಉಂಟಾಗುವುದು.

* * * * *

ನಿಂದೆ - ಬೇಡ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೦.೦೫.೨೦೦೩ರಂದು ಪ್ರಕಟವಾಗಿತ್ತು)

ಟ್ಟೆ ಬಿಳಿಯಾಗಿದ್ದಷ್ಟೂ ಅದರಲ್ಲಿರುವ ಕೊಳೆ ಎತ್ತಿ ಕಾಣುತ್ತೆ. ಕಣ್ಣಲ್ಲಿ ಒಂದು ಚೂರು ಧೂಳು ಹೋದರೂ ಇರಿತ, ಕಡಿತ ಶುರುವಾಗುತ್ತೆ. ಆದರೆ ತಲೆಮೇಲೆ ಒಂದಷ್ಟು ಮಣ್ಣು ಹೊತ್ತರೂ ಏನೂ ಗೊತ್ತಾಗುವುದಿಲ್ಲ. ಹಾಗೆಯೇ ನಮ್ಮ ಮನಸ್ಸು ಹೆಚ್ಚು ಸೂಕ್ಷ್ಮವಾಗಿದ್ದಷ್ಟೂ ಯಾರಾದರೂ ಏನಾದರೂ ಚಿಕ್ಕಪುಟ್ಟ ಮಾತುಗಳನ್ನು ಅಂದರೆ ಮನಸ್ಸಿಗೆ ಬೇಜಾರಾಗುತ್ತೆ. ಈಗ ಯಾವುದೋ ಒಂದು ಸ್ಥಳಕ್ಕೆ ಹೋಗುತ್ತೀರ, ಸ್ವಲ್ಪ ಮುಂಚೆ ಅಲ್ಲಿ ಜಗಳವಾಡಿರುತ್ತಾರೆ ಜನ. ನೀವು ಹೋದ ತಕ್ಷಣ ನಿಮಗೂ ಟೆನ್ಶನ್ ಶುರುವಾಗಿಬಿಡುತ್ತೆ. ಚಿತ್ತ ಶುದ್ಧವಾಗಿದ್ದಷ್ಟೂ ಪರಿಸರದ ಪ್ರಭಾವ ಹೆಚ್ಚಾಗಿರುತ್ತೆ.
ಯಾವಾಗ ಚಿತ್ತ ಪ್ರಸನ್ನವಾಗಿರುತ್ತದೆಯೋ ಆಗ ಅದರಲ್ಲಿ ಲೋಭವೋ, ಈರ್ಷೆಯೋ, ಮೋಹವೋ, ಕಾಮ ಅಥವಾ ಕ್ರೋಧವೋ ಬಂದರೆ ಸಹಿಸುವುದು ಕಷ್ಟ. ನೀವು ಖುಷಿಯಾಗಿರ್ತೀರ - ಇದ್ದಕ್ಕಿದ್ದಂತೆ ಯಾರನ್ನಾದರೂ ನೋಡ್ತೀರಾ...ನಿಮ್ಮ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಶುರುವಾಗುತ್ತೆ ಅಂತ ಇಟ್ಕೊಳ್ಳಿ, ಎಷ್ಟು ಅಸಹ್ಯವಾಗುತ್ತೆ ಅಲ್ವಾ ಆಗ? ಆಗ ನೀವು ನಿಮ್ಮ ಚಿತ್ತವನ್ನು ಹೀಯಾಳಿಸುವುದಕ್ಕೆ ಶುರುಮಾಡ್ತೀರ. ನಮ್ಮನ್ನು ನಾವು ಹೀಯಾಳಿಸುವುದಕ್ಕೆ ಶುರುಮಾಡಿಕೊಂಡ ಕೂಡಲೇ ನಮ್ಮ ಪತನ ಶುರುವಾಗುತ್ತೆ. ಹೇಗೆ? ಮೊದಲು ನಮ್ಮನ್ನು ಬೈದುಕೊಳ್ತೀವಿ. ನಂತರ ಬೇರೆಯವರು ಸರಿಯಿಲ್ಲ - ’ಅವರು ಸರಿ ಇಲ್ಲ, ಇವರು ಸರಿ ಇಲ್ಲ’, ಬೇರೆಯವರು ಮಾಡಿದ್ದು ತಪ್ಪು ಅಂತ ಬೇರೆಯವರಲ್ಲಿ ದೋಷ ಕಂಡುಹಿಡಿಯುವುದಕ್ಕೆ, ಹೀಯಾಳಿಸುವುದಕ್ಕೆ ಸಿದ್ಧರಾಗಿಬಿಡ್ತೀವಿ. ಇದರಿಂದ ದ್ವೇಷ ಉಂಟಾಗುತ್ತೆ. ಸ್ವ-ದ್ವೇಷ, ಪರದ್ವೇಷದಿಂದ ಸಾಧನೆ ನುಚ್ಚುನೂರಾಗಿ ಬಿಡುತ್ತೆ. ಮನಸ್ಸಿನ ಪ್ರಫುಲ್ಲತೆ ಎಲ್ಲವೂ ಹಾಳಾಗುತ್ತೆ.
ಪ್ರಪಂಚವನ್ನಾಗಲೀ, ಸಾಧನೆಯ ಪಥವನ್ನಾಗಲೀ, ತನ್ನನ್ನೇ ತಾನಾಗಲೀ ನಿಂದಿಸದೆ ಪ್ರತಿಯೊಂದನ್ನೂ ಹೇಗಿದೆಯೋ ಹಾಗೆಯೇ ಕಾಣಲು ಒಂದು ನಿರ್ದಿಷ್ಟ ಮಟ್ಟದ ಪರಿಪಕ್ವತೆ ಉಂಟಾಗಬೇಕು. ಅದನ್ನು ಸಾಧನೆಯಿಂದ ಬೆಳೆಸಿಕೊಳ್ಳಬೇಕು.

* * * * *

ಚಿತ್ತವೇ ಆತ್ಮ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೧.೦೫.೨೦೦೩ರಂದು ಪ್ರಕಟವಾಗಿತ್ತು)

’ಆತ್ಮ ಚಿತ್ತಂ’, ಚಿತ್ತವೇ ಆತ್ಮ - ಬಹಳ ಅಮೂಲ್ಯವಾದ ಸೂತ್ರವಿದು. ಇದನ್ನು ತಿಳಿದುಕೊಂಡಾಗ ವಿವೇಕಜ್ಞಾನ ಉಂಟಾಗುತ್ತದೆ. ನಿನ್ನ ಚಿತ್ತವೂ ಆತ್ಮವೇ. ಈ ಒಂದೇ ಆಕಾಶದಲ್ಲೇ ಹಗಲೂ ಆಗುತ್ತೆ ರಾತ್ರಿಯೂ ಆಗುತ್ತೆ, ಮೋಡ ಬರುತ್ತೆ, ಬಣ್ಣಗಳು ಬರುತ್ತವೆ, ಮತ್ತೆ ಎಲ್ಲಾ ಸರಿದುಹೋಗಿಬಿಡುತ್ತೆ. ಹಾಗೆಯೇ ನಮ್ಮ ಚಿತ್ತದಲ್ಲಿ ಹಲವಾರು ಭಾವನೆಗಳು ಬರುತ್ತವೆ. ಬಂದ ಹಾಗೆ, ಹಾಗೆಯೇ ಹೋಗಿಬಿಡುತ್ತೆ ಅಲ್ವಾ?
ಇದೇ ರೀತಿ ನಿಮಗೆ ಕೋಪ ಎಷ್ಟೋ ಸಲ ಬಂದಿದೆ. ಆದರೆ ಯಾವಾಗಲೂ ಹಾಗೇ ಇರುತ್ತಾ ಕೋಪ? ಅದಕ್ಕೂ ಒಂದು ಉಚ್ಛ ಸ್ಥಿತಿ ಬರುತ್ತೆ, ಮತ್ತೆ ಸಂಜೆ ಆಗ್ತಾ ಬೆಳಕು ಕಡಿಮೆ ಆಗುವಂತೆ ಇಳೀತಾ ಹೋಗುತ್ತೆ. ಹೊಟ್ಟೇಕಿಚ್ಚೂ ಹಾಗೇ. ಪ್ರತಿಯೊಂದು ರಾಗಕ್ಕೂ, ದ್ವೇಷಕ್ಕೂ ಒಂದು ಕಾಲ ಇದೆ, ಒಂದು ನಿಯಮ ಇದೆ. ಒಂದು ಏಳುತ್ತೆ ಮತ್ತೊಂದು ಕುಸಿದು ಬೀಳುತ್ತೆ. ಎಲ್ಲಿ ಏಳುತ್ತೆ? ಎಲ್ಲಿ ಬೀಳುತ್ತೆ? ಎಲ್ಲಾ ನಮ್ಮ ಚಿತ್ತದಲ್ಲಿ. ಆ ಚಿತ್ತವೇ ಆತ್ಮ!
ಈ ಆಕಾಶದಲ್ಲಿ ಎಷ್ಟೋ ಮೋಡಗಳು ಬಂದರೂ ಹೋದರೂ, ಮೋಡ ಎಷ್ಟೇ ಕವಿದರೂ ಆಕಾಶದ ಶುದ್ಧತೆಗೆ ಸ್ವಲ್ಪವೂ ಕುಂದು ಬರುವುದಿಲ್ಲ. ಹಾಗೆಯೇ ಏನೇ ಭಾವನೆ ಬಂದರೂ ನಿನ್ನ ಮನಸ್ಸು ನಿನ್ನ ಚೇತನ ಕೆಟ್ಟು ಹೋಗುವುದಕ್ಕೆ ಸಾಧ್ಯವೇ ಇಲ್ಲ. ’ದುರಾತ್ಮ’ ಅನ್ನುವುದೇ ಇಲ್ಲ. ಕೋಪವೂ, ತಾಪವೂ, ಎಲ್ಲವೂ ಆತ್ಮನ ಸ್ವಭಾವವೇ! ಸ್ವಾಭಾವಿಕವೇ. ಈ ಮನಸ್ಸೂ ಪರಮಾತ್ಮನಿಗೆ ಸೇರಿದ್ದೇ. ಈ ಮನಸ್ಸಿನ ಗೊಂದಲಗಳೆಲ್ಲವೂ ಪರಮಾತ್ಮನದೇ ಆಟ, ಲೀಲೆ, ನಾಟಕ ಅಂತ ತೆಗೆದುಕೊಳ್ಳಬೇಕು. ನಿನ್ನನ್ನು ನೀನು ಬೈದುಕೊಳ್ಳಬೇಡ. ಈ ನಿನ್ನ ಚಿತ್ತವನ್ನು ಸಮರ್ಪಣೆ ಮಾಡಿಬಿಡು. ಚಿತ್ತವೂ ಪರಮಾತ್ಮನ ಅಂಗವೇ ಆಗಿದೆ. ಆತ್ಮ ಚಿತ್ತಂ - ಚಿತ್ತವೇ ಆತ್ಮ.

* * * * *

ಸಾಧನೆಯ ನಿರಂತರತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧.೬.೨೦೦೩ರಂದು ಪ್ರಕಟವಾಗಿತ್ತು)

ಸಾಧನೆ ಮಾಡಬೇಕೆಂದರೆ, ಪ್ರತಿದಿನವೂ ಸಾಧನೆ ಮಾಡಬೇಕೆಂದು ಹೇಳುತ್ತೀವಿ. ಏಕೆ ಗೊತ್ತಾ? ನಮ್ಮ ತಲೆಯಲ್ಲಿ ಕೋಟ್ಯಾಂತರ ತಂತುಗಳು, ಜೀವಾಣುಗಳು ಇವೆ. ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವೇ ತಂತುಗಳು ಕೆಲಸ ಮಾಡುತ್ತವೆ. ಇವತ್ತು ಕೆಲವು ಮಾಡುತ್ತವೆ, ನಾಳೆ ಕೆಲವು ಮಾಡುತ್ತವೆ, ಫ್ಯಾಕ್ಟರಿ ಷಿಫ್ಟ್ ತರಹ. ಫ್ಯಾಕ್ಟರಿ ಏನೋ ನಡೆಯುತ್ತಲೇ ಇರುತ್ತೆ. ಆದರೆ ಬೇರೆ ಬೇರೆ ಜನ ಬಂದು ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಹಾಗೆಯೇ ನಮ್ಮ ಚೇತನದಲ್ಲಿ ನ್ಯೂರಾನ್ಸ್ ಷಿಫ್ಟಿನಲ್ಲಿ ಕೆಲಸ ಮಾಡುತ್ತವೆ, ಬೇರೆ ಬೇರೆ ಸರದಿಯಲ್ಲಿ.
ಈಗ ’ಒಂದು ಊರಿನಲ್ಲಿ ಎಲ್ಲರೂ ವಿದ್ಯಾವಂತರು’ ಎನ್ನಬೇಕಾದರೆ - ಅಲ್ಲಿರುವ ಪ್ರತಿಯೊಬ್ಬರಿಗೂ ಶಿಕ್ಷಣ ಕೊಟ್ಟಾಗ ಮಾತ್ರ ಹಾಗೆ ಹೇಳಬಹುದು, ಅಲ್ಲವೇ? ಕೋಟ್ಯಾಂತರ ಅಣುಗಳಿವೆ ನಮ್ಮ ತಲೆಯಲ್ಲಿ. ಈಗ ನಾವು ಯಾವುದೋ ಒಂದು ಜ್ಞಾನದ ಅರಿವನ್ನು ತರಬೇಕಾದರೆ ಎಲ್ಲಾ ಅಣುಗಳಿಗೂ ಶಿಕ್ಷಣ ಕೊಡಬೇಕು. ಉದಾಹರಣೆಗೆ, ಇವತ್ತು ’ಓಂ ನಮಃ ಶಿವಾಯ’ ಅಂತ ಒಂದಷ್ಟು ಸಲ ಉಚ್ಛಾರಣೆ ಮಾಡುತ್ತೀವಿ. ಇವತ್ತು ಕೆಲವೆಲ್ಲಾ ಶಿಕ್ಷಿತರಾಗುತ್ತವೆ. ಮರುದಿನ ಮಾಡಿದಾಗ, ನಮ್ಮ ಚೇತನದ ಬೇರೆ ಕಣಗಳಿಗೆ ಶಿಕ್ಷಣ ಸಿಗುತ್ತೆ. ನಾಡಿದ್ದು ಪುನಃ ಬೇರೆ ಬೇರೆ ಕಣಗಳಿಗೆ.. ಹೀಗೆ ಸಾಧನೆ ಆಗ್ತಾ ಇದ್ದಾಗ ಸಿದ್ಧಿಯುಂಟಾಗುತ್ತದೆ. ಜಪ ಅಥವಾ ಧ್ಯಾನ ಪ್ರತಿದಿನ ಮಾಡಬೇಕು ಅನ್ನುವುದು ಏಕೆ ಗೊತ್ತಾ? ಒಂದು ದಿನ ಬಿಟ್ಟುಬಿಟ್ಟರೆ ಅಂದಿನ ಸರದಿಯಲ್ಲಿರುವವರಿಗೆ ನೀವು ಶಿಕ್ಷಣ ಕೊಟ್ಟಂತಾಗುವುದಿಲ್ಲ. ಅವರಿಗೆ ಒಂದು ವರ್ಷದ ವರೆಗೆ ಸರದಿ ಬರುವುದಿಲ್ಲ. ಅಲ್ಲಿಯವರೆಗೆ ಅವರು ಅಶಿಕ್ಷಿತರಾಗಿ ಒಳಗೆ ಕೂತಿರುತ್ತಾರೆ. ಅದಕ್ಕೇ ಪ್ರತಿದಿನವೂ ಶಿಕ್ಷಣ ಕೊಡಬೇಕು, ಅದಕ್ಕಾಗಿಯೇ ಪ್ರತಿದಿನವೂ ಸಾಧನೆ ಮಾಡಬೇಕು, ಆಗಲೇ ಸಿದ್ಧಿಯುಂಟಾಗುವುದು.

* * * * *

ಜ್ಯೋತಿಷ್ಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨.೬.೨೦೦೩ರಂದು ಪ್ರಕಟವಾಗಿತ್ತು)

ಮ್ಮಲ್ಲಿ ಜ್ಯೋತಿಷ್ಯ ಏಕಿದೆ? ಅದರ ಅರ್ಥವೇನು ಗೊತ್ತಾ?
ಯಾವುದೋ ಒಂದು ಘಟನೆ ಉಂಟಾಗಿದೆಯಪ್ಪ ನಿಮಗೆ ಸಂಬಂಧಿಸಿದಂತೆ. ಅದನ್ನು ಒಂದು ವಿಶಾಲವಾದ, ವಿಸ್ತಾರವಾದ ದೃಷ್ಟಿಯಿಂದ ನೋಡುವುದು.
"ಓ, ನನಗೆ ಈಗ ಶನಿಕಾಟ" ಅಂತ ಅಂದುಕೊಂಡಾಗ, ’ಬೇರೆಯವರು ಕಷ್ಟಕೊಟ್ಟರು’ ಎನ್ನದೆ, ’ಅವನು ಮನೆಹಾಳ’ ಎನ್ನದೆ, "ನನ್ನ ಗ್ರಹಚಾರ ಹೀಗಾಯ್ತು, ಅವನಿಂದ ಈ ತರಹ ಮಾತು ಕೇಳಬೇಕಾಯ್ತು" ಅಂತ ನಾವು ತೆಗೆದುಕೊಳ್ತೀವಿ. ಅಂದರೇನು? ಯಾವುದೇ ಘಟನೆಯನ್ನೂ ಸೀಮಿತವಾದ ದೃಷ್ಟಿಕೋನದಿಂದ ನೋಡದೆ ವಿಶಾಲವಾದ ದೃಷ್ಟಿಕೋನದಿಂದ ನೋಡುತ್ತೀವಿ. ಕನ್ನಡದಲ್ಲಿ ನಾವು ಉಪಯೋಗಿಸುತ್ತೇವಲ್ಲ "ನನ್ನ ಗ್ರಹಚಾರ" ಅಂತ, ತುಂಬ ಅರ್ಥಪೂರ್ಣವಾದ ಶಬ್ದ. ಏನೋ ಗ್ರಹಚಾರ ಅಂದುಕೊಂಡು ಬಿಟ್ಟುಬಿಡ್ತೀವಿ.
ಯಾವುದೋ ಗ್ರಹಗಳ ಗತಿಯಿಂದ ತಲೆಯಲ್ಲಿ ಈ ವಿಚಾರ ಬಂದಿದೆ, ಈ ತರಹ ವ್ಯವಹಾರ ನಡೆದಿದೆ ಎಂದು ಕಾರಣವನ್ನು ಮಹತ್ಕಾರಣವನ್ನಾಗಿ ನೋಡುವುದು ಜ್ಯೋತಿಷ್ಯದ ಉದ್ದೇಶ. ನಂತರ ಅದನ್ನು ಹೋಗಲಾಡಿಸಿಕೊಳ್ಳಲು ಪರಿಹಾರೋಪಾಯವನ್ನೂ ಹೇಳ್ತಾರೆ. ನಿನ್ನ ತರಂಗವನ್ನು ಬದಲಾಯಿಸಿಕೋ, ಅದಕ್ಕೆ ಧ್ಯಾನ ಮಾಡು, ಜಪ ಮಾಡು. ನಿನ್ನ ತಲೆಯಲ್ಲಿ ಕೋಟ್ಯಾಂತರ ಅಣುಗಳಿವೆ. ಎಲ್ಲರನ್ನೂ ಶಿಕ್ಷಿತರನ್ನಾಗಿ ಮಾಡು.
ನಮ್ಮ ಶರೀರವೂ ಒಂದು ನಗರ. ನಮಗೆ ಗೊತ್ತಿಲ್ಲದಿದ್ದರೂ, ನಮ್ಮೊಳಗೇ ಕೋಟ್ಯಾನುಕೋಟಿ ಅಣುಜೀವಿಗಳಿಂದ ಕೂಡಿರುವ ವ್ಯವಸ್ಥಿತವಾದ ಒಂದು ಪುರವಿದೆ. ಹಾಗೇ ಹಲವಾರು ತತ್ವಗಳು ನಮ್ಮ ಶರೀರದಲ್ಲಿ ಉಂಟಾಗುತ್ತಿರುತ್ತವೆ. ಅಗ್ನಿತತ್ವ, ವಾಯುತತ್ವ, ಜಲತತ್ವ...ನಮ್ಮ ಚೇತನದಲ್ಲಿ ಪ್ರತಿನಿತ್ಯವೂ ಉಂಟಾಗತಕ್ಕಂಥ ಘಟನೆಗಳನ್ನು ’ಕಲಾ ಕಾಷ್ಟ ಕಾಲ’ ಅಂದರೆ ತತ್ವಗಳ ಮೂಲಕ ತಿಳಿದುಕೊಳ್ಳಬಹುದು. ಇದರ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳೋಣ.

* * * * *

ತತ್ವ-ವಿವೇಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩.೬.೨೦೦೩ರಂದು ಪ್ರಕಟವಾಗಿತ್ತು)

ಗ ತತ್ವಗಳ ಬಗ್ಗೆ ತಿಳಿದುಕೊಳ್ಳೋಣ.
ಒಂದು ತತ್ವ ನಮ್ಮ ಶರೀರದಲ್ಲಿ ಉಂಟಾಗುತ್ತೆ, ಇನ್ನೊಂದು ವಾತಾವರಣದಲ್ಲಿ ಉಂಟಾಗುತ್ತೆ. ವಾತಾವರಣದಲ್ಲಿ ’ಅಗ್ನಿತತ್ವ’ ಬರುತ್ತಿರುವಾಗ, ಎಲ್ಲರೂ ಸುಮ್ಮನೇ ಶಾಂತವಾಗಿದ್ದರೂ, ಪ್ರಸನ್ನವಾಗಿದ್ದಾಗಲೂ, ಅವರ ಮಧ್ಯದಲ್ಲೇ ಒಂದು ಜಗಳ ಪ್ರಾರಂಭವಾಗಿಬಿಡುತ್ತೆ. ತತ್ವಜ್ಞಾನಿಗಳಿಗೆ ಇದು ಮೊದಲೇ ಗೊತ್ತಾಗುತ್ತದೆ. "ಇವರೆಲ್ಲಾ ಕಿತ್ತಾಡಿಕೊಳ್ತಾರೆ ನೋಡಿ" ಎಂದು ಮೊದಲೇ ಹೇಳಿಬಿಡುತ್ತಾರೆ! ಇದೇ ರೀತಿ ’ವಾಯುತತ್ವ’ದ ಸಂಚಾರವಾದಾಗ ಸುಮ್ಮನೆ ಕುಳಿತಿರುವವರಿಗೆಲ್ಲ ಎದ್ದು ಹೋಗೋಣ ಅಂತ ಮನಸ್ಸಾಗುತ್ತೆ. ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಕುಳಿತ ಕಡೆಯೇ ಕೈಕಾಲು ಆಡಿಸುವುದು, ಚಲನವಲನ ಶುರುವಾಗುತ್ತೆ. ಯಾರಾದರೂ ಬರೀತಾ ಕೂತಿದ್ದರೂ ಅವರ ಎದುರು ಇರುವ ಮೇಜಿನ ಮೇಲೇ ತಬಲಾ ಬಾರಿಸುತ್ತಿರುತ್ತಾರೆ, ಸಮಯ, ಸಂದರ್ಭ ಏನೂ ನೋಡುವುದಿಲ್ಲ. ಇವರಲ್ಲಿ ವಾಯುತತ್ವ ಹೆಚ್ಚಾಗಿರುತ್ತೆ. ಹಾಗೆಯೇ ಪಿತ್ಥ ಹೆಚ್ಚಾದಾಗ ವಿಪರೀತ ಯೋಚನೆಗಳು ಬರುತ್ತಿರುತ್ತವೆ. ಸುಮ್ಮಸುಮ್ಮನೆ ಚಿಂತೆ ಮಾಡೋದು.
ಮನೆಯವರು ಬರುವುದು ಒಂದು ಅರ್ಧ ಘಂಟೆ ತಡವಾದರೆ ಏನೇನೋ ಯೋಚನೆ ಮಾಡೋದು, "ಆಕ್ಸಿಡೆಂಟ್ ಆಯ್ತೋ ಏನೋ...!" ಊರಲ್ಲಿರುವ ಯೋಚನೆಯೆಲ್ಲಾ, ಮಾಡಬಾರದ ಯೋಚನೆಯೆಲ್ಲಾ ಮಾಡುವುದು. ಅಯ್ಯೋ ಈ ಯೋಚನೆ ಮಾಡಬಾರದು ಅಂತ ಅಂದುಕೊಳ್ಳುವುದು, ಮತ್ತೆ ಮತ್ತೆ ಅದನ್ನೇ ಮಾಡುವುದು. ಇದು ಏತಕ್ಕೆ...? ಅವಿವೇಕ! ಅವಿವೇಕದಿಂದ, ಅಜ್ಞಾನದಿಂದ ಈ ತರಹ ಚಿಂತೆ ಉಂಟಾಗುತ್ತಾ ಇರುತ್ತೆ.
ಯಾವುದೋ ಒಂದು ಘಟನೆಗೆ ಯಾರೋ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಪರಿಸರ, ಅವರ ಮನಃಸ್ಥಿತಿ, ಪರಿಸ್ಥಿತಿ, ಹಲವಾರು ವಿಷಯಗಳು ಅದರ ಹಿನ್ನೆಲೆಯಲ್ಲಿ ಇರುತ್ತವೆ. ಇದೆಲ್ಲವನ್ನೂ ತಿಳಿದುಕೊಳ್ಳತಕ್ಕಂಥಹುದು ವಿವೇಕ.

* * * * *

ಮಾಯೆ-ಅವಿವೇಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೪.೬.೨೦೦೩ರಂದು ಪ್ರಕಟವಾಗಿತ್ತು)

"ಕಲಾದೀನಾಂ ತತ್ವಾನಾಂ ಅವಿವೇಕೋ ಮಾಯಾ"
ಒಂದು ಘಟನೆ ನಡೆಯಬೇಕಾದರೆ ಹಲವಾರು ವಿಷಯಗಳು ಸೇರಿ ನಡೆಯುತ್ತದೆ. ನಮ್ಮ ಪ್ರಯತ್ನ, ಪರಿಸರದ ಅನುಕೂಲತೆ, ದೈವೀಸಹಾಯ, ಕ್ಷಮತೆ ಹಾಗೂ ಕಾಲ. ಬೀಜ ಬಿತ್ತಬೇಕಾದರೆ ಯಾವ ಕಾಲ ಎಂದು ನೋಡಿ ಬಿತ್ತಬೇಕು. ಎಲ್ಲರೂ ಫಸಲು ಕುಯ್ಯುವ ಕಾಲದಲ್ಲಿ ಹೋಗಿ ಬೀಜ ಬಿತ್ತಿ ಏನೂ ಫಲ ಬಂದಿಲ್ಲ ಅಂದುಕೊಂಡರೆ ಏನು ಪ್ರಯೋಜನ? ದೋಷ ಯಾರದಾಗುತ್ತೆ? ಇದು ಕಾಲದ ಪರಿಗಣನೆಯಲ್ಲ, ಹೌದಾ? ಸಕಾಲದಲ್ಲಿ ಬೀಜ ಬಿತ್ತಿದೆ, ಆದರೆ ನೀರು ಹಾಕಲಿಲ್ಲ. ಪುನಃ ತಪ್ಪಾಯ್ತು, ಅವಿವೇಕ ಉಂಟಾಯ್ತು, ಅಲ್ಲಿ ಪೂರಾ ಪ್ರಯತ್ನ ಮಾಡಿಲ್ಲ.
ಈ ಪ್ರಪಂಚ ಸರಳವಾಗಿಲ್ಲ, ನಿಗೂಢವಾಗಿದೆ. ಸೃಷ್ಟಿ ರಹಸ್ಯಮಯ, ಜಟಿಲವಾಗಿದೆ. ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಯಾವುದೋ ಒಂದು ಘಟನೆಗೆ ಬೇರೆಯವರು ಜವಾಬ್ದಾರರು ಅನ್ನುವುದನ್ನು ಬಿಟ್ಟು, ನಾನೇ ಜವಾಬ್ದಾರ ಅಂತ ಅಂದುಕೊಂಡು; ಒಂದು - ನಿಮ್ಮ ಮೇಲೆ ಜವಾಬ್ದಾರಿ ತೆಗೆದುಕೊಳ್ಳಿ ಅಥವಾ ಎಲ್ಲೋ ದೂರದಲ್ಲಿರುವ ’ಗ್ರಹ ನಕ್ಷತ್ರ’ದ ಮೇಲೆ ಬಿಡಿ. ಎರಡು ರೀತಿ ಮಾಡಿದಾಗಲೂ ನೀವು ಬೇರೆಯವರ ಜೊತೆ ಜಗಳ ಕಾಯುವುದು, ದ್ವೇಷ ಮಾಡೋದು ನಿಲ್ಲುತ್ತೆ.
ನಮ್ಮ ದೇಶದಲ್ಲಿ ಈ ಜ್ಯೋತಿಷ್ಯ ಶಾಸ್ತ್ರದ ದುರುಪಯೋಗ ಮಾಡಿಕೊಂಡು ಈ ವಿಜ್ಞಾನವನ್ನು ಹಾಳುಮಾಡಿಹಾಕಿಬಿಟ್ಟಿದೀವಿ ನಾವು. ’ನನಗೆ ಒಳ್ಳೆಯ ಸಮಯ ಮುಂದೆ ಬರುತ್ತೆ...’ ಅಂತ ಕಾಯ್ತಾ ಇರೋದು. ಯಾವಾಗಲೋ ಒಳ್ಳೆಯ ಕಾಲ ಬರುತ್ತೆ ಅಂತ ಮಾಡುವ ಪ್ರಯತ್ನ ಬಿಟ್ಟುಬಿಟ್ಟು ಸೋಮಾರಿಯಾಗಿ ಕುಳಿತುಕೊಳ್ಳುವುದು. ಜ್ಯೋತಿಷ್ಯ ಅನ್ನುವುದು ನಿಜವಾದ ವಿಜ್ಞಾನ. ಆದರೆ ಇದರ ಗೂಡಾರ್ಥ ಏನು ಅನ್ನುವ ಕಲ್ಪನೆ ಕೂಡಾ ಇಲ್ಲ. ಒಂದು - ಯಾವ ಜ್ಯೋತಿಷಿ ಏನು ಹೇಳಿದರೂ ಕಣ್ಮುಚ್ಚಿ ಅದನ್ನೇ ನಂಬಿಕೊಂಡು ಹೋಗುವುದು. ಇನ್ನೊಂದು - ಜ್ಯೋತಿಷ್ಯದ ಬಗ್ಗೆ ಏನೂ ಸರಿಯಾಗಿ ತಿಳಿದುಕೊಳ್ಳದೆ ’ಇವೆಲ್ಲ ಸುಳ್ಳು’ ಎಂದು ಒದರಿಬಿಡುವುದು. ನಿಜವಾದ ಸತ್ಯಾನ್ವೇಷಕರು ಬಹಳ ಕಡಿಮೆ ಜನ ಇರುವುದರಿಂದಲೇ ನಮ್ಮ ದೇಶದಲ್ಲಿ ಈ ವಿಜ್ಞಾನ ಕುಂದಿಹೋಗುತ್ತಾ ಇದೆ.

* * * * *

ನಿನ್ನ ಪ್ರಾಣ - ನಿನ್ನಲ್ಲಿರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೫.೬.೨೦೦೩ರಂದು ಪ್ರಕಟವಾಗಿತ್ತು)

"ಕಲಾದೀನಾಂ ತತ್ವಾನಾಂ ಅವಿವೇಕೋ ಮಾಯಾ" - ಮಾಯೆಯ ಕಾರಣದಿಂದ ’ನಾನು ಆತ್ಮ’ ಅನ್ನುವ ಜ್ಞಾನ ನನಗಿಲ್ಲ.
ನಾವು ’ಚಂದಮಾಮ’ದಲ್ಲಿ ಓದಿರುತ್ತೀವಲ್ಲ... ಯಾರೋ ಒಬ್ಬ ಮಹಾರಾಜ. ಅವನ ಪ್ರಾಣ, ಪಂಜರದಲ್ಲಿರುವ ಗಿಳಿಯೊಂದರಲ್ಲಿ, ಅದು ಏಳು ಸಮುದ್ರ, ಏಳು ಪರ್ವತಗಳಾಚೆಗಿರುವ ಕೋಟೆಯಲ್ಲಿ! ಅಲ್ಲಿ ಆ ಪಂಜರದಲ್ಲಿ ಆ ಗಿಳಿಯ ಕತ್ತು ಹಿಸುಕಿದರೆ ಇಲ್ಲಿ ರಾಜ ಸತ್ತು ಹೋಗ್ತಾನೆ... ಅಂತ.
ಹಾಗೆ ನಾವು ನಮ್ಮ ಆತ್ಮವನ್ನು, ನಮ್ಮ ಪ್ರಾಣವನ್ನು ಬೇರೆ ಎಲ್ಲೆಲ್ಲೋ ಇಟ್ಟುಕೊಂಡುಬಿಟ್ಟಿರುತ್ತೀವಿ. ಕೆಲವರು ಚುನಾವಣೆ ಟಿಕೆಟಿನಲ್ಲಿ! ಆ ಟಿಕೆಟ್ ಸಿಗಲಿಲ್ಲ ಅಂದರೆ ಇವರಿಗೆ ಪ್ರಾಣ ಹೋಯ್ತು. ಕೆಲವರು ಮಕ್ಕಳ ಹತ್ತಿರ... ಆ ಮಗನೋ, ಮಗಳೋ, ಮುಖ ತಿರುಗಿಸಿದರೆ; ಅಥವಾ ಸೊಸೆ ಬಂದು ಮಗನನ್ನು ಎಳೆದುಕೊಂಡು ಹೋದಳು ಅಂದರೆ ಇವರ ಪ್ರಾಣ ಹೋಗಿಬಿಡುತ್ತೆ.
ನಾವು ನಮ್ಮ ಪ್ರಾಣವನ್ನು ನಮ್ಮಲ್ಲಿ ಇಟ್ಟುಕೊಂಡೇ ಇಲ್ಲ. ಆಗಾಗ ಅದನ್ನು ಬದಲಾಯಿಸಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಇಡ್ತಾ ಇರ್ತೀವಿ. ಆಟದ ಸಾಮಾನಿನಲ್ಲಿ, ನೆರೆಹೊರೆಯವರಲ್ಲಿ, ಮಕ್ಕಳುಮರಿಯಲ್ಲಿ, ಲಾಟರಿ ಟಿಕೆಟಿನಲ್ಲಿ, ಹೀಗೆ ಎಲ್ಲೆಲ್ಲೋ ಬೇರೆ ಬೇರೆ ಕಡೆ ಇಟ್ಟಿರುತ್ತೀವಿ. ಅದಕ್ಕೇ ಜನರ ಮುಖದಲ್ಲಿ ಚೈತನ್ಯಜ್ಯೋತಿ ಕಾಣಿಸುವುದೇ ಇಲ್ಲ. ಏಕೆಂದರೆ ನಮ್ಮ ಪ್ರಾಣ ನಮ್ಮಲ್ಲಿಲ್ಲ!
’ಆತ್ಮ ಚಿತ್ತಂ’ ನಿನ್ನ ಚಿತ್ತವೇ ಆತ್ಮ. ನೀನು ಪರಮಾತ್ಮನ ಸ್ವರೂಪನೇ ಆಗಿದ್ದೀಯ. ನೀನು ಎಲ್ಲೋ ಹೋಗಿ ದೇವಸ್ಥಾನದಲ್ಲಿ, ಚರ್ಚಿನಲ್ಲಿ, ಮಸೀದಿಯಲ್ಲಿ ಘಂಟೆ ಬಾರಿಸಬೇಕಾಗಿಲ್ಲ. ನೀನು ಎಲ್ಲಿದ್ದೀಯೋ ಅಲ್ಲೇ ಪ್ರಸನ್ನ ಚಿತ್ತನಾಗು. ನಿನ್ನ ಚಿತ್ತದಲ್ಲಿ ವಿಶ್ರಾಮ ಮಾಡು. ಆ ಚಿತ್ತದ ತಪ್ಪುಗಳನ್ನು ತಿಳಿದುಕೋ. ನೀನೇ ಆತ್ಮ. ನಿನ್ನ ಶರೀರ, ನಿನ್ನ ವಾತಾವರಣ ಪರಮಾತ್ಮನಿಂದಾಗಿದೆ. ನೀನು ನೋಡುವ ಜನರೂ ಪರಮಾತ್ಮನಿಂದ ಆಗಿದ್ದಾರೆ. ಇದರಲ್ಲಿ ಆಗತಕ್ಕಂಥ ರಾಗ, ದ್ವೇಷ, ಅಸೂಯಾದಿ ಗುಣದೋಷಗಳೆಲ್ಲವೂ ಪರಮಾತ್ಮನಿಂದಲೇ ಉಂಟಾಗಿವೆ. ಆತ್ಮ ಚಿತ್ತಂ, ಇದನ್ನು ತಿಳಿದುಕೋ. ಇದನ್ನು ತಿಳಿದುಕೊಳ್ಳದಿರುವುದು ಅವಿವೇಕ, ಅದೇ ಮಾಯೆ. ಇವೆಲ್ಲಾ ಚಿತ್ತದಲ್ಲಿ ನಡೆಯುತ್ತಿವೆ.

* * * * *

ತತ್ವಮಯವೀ ಜಗವು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೬.೬.೨೦೦೩ರಂದು ಪ್ರಕಟವಾಗಿತ್ತು)

ಮ್ಮಲ್ಲಿರುವ ಒಂದೇ ಮನಸ್ಸು ಕಣ್ಣಿನಿಂದ ನೋಡುತ್ತೆ, ಕಿವಿಯಿಂದ ಕೇಳುತ್ತೆ, ನಾಲಿಗೆಯಿಂದ ರುಚಿಯನ್ನು ಕಂಡುಕೊಳ್ಳುತ್ತದೆ. ಇದೇ ಮನಸ್ಸೇ ನಮ್ಮ ಶರೀರದ ಕಣಕಣದಿಂದ ಸ್ಪರ್ಷವನ್ನು ಅನುಭವಿಸುತ್ತದೆ. ಈ ಐದೂ ಕೆಲಸವನ್ನು ಮಾಡುವುದು ಯಾವುದು? ಒಂದೇ ಮನಸ್ಸು ಐದು ತರಹದಲ್ಲಿ, ಐದು ಬಾಗಿಲಿನ ಮೂಲಕ ಪ್ರಪಂಚವನ್ನು ಅನುಭವಿಸುತ್ತದೆ. ಇವು ಸ್ಥೂಲವಾಗಿ ಅನುಭವಿಸುವ ಐದು ತತ್ವಗಳು.
ಹಾಗೇ ಮನಸ್ಸು ಯೋಚನೆ ಮಾಡುತ್ತೆ, ಬುದ್ಧಿ ವಿಚಾರ ಮಾಡುತ್ತೆ, ಚಿತ್ತ ಅದನ್ನು ಜ್ಞಾಪಕ ಇಟ್ಟುಕೊಳ್ಳುತ್ತೆ. ಅದನ್ನು ಅಹಂಕಾರವು, ನಾನು ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಹೀಗಿರಬೇಕು, ಹಾಗಿರಬೇಕು ಅಂತ ತನ್ನ ಬಗ್ಗೆ ಧೋರಣೆಯನ್ನು ವ್ಯಕ್ತಪಡಿಸುತ್ತೆ.
ಹೀಗೆ ಇಡೀ ಪ್ರಪಂಚ ಇಪ್ಪತ್ನಾಲ್ಕು ತತ್ವಗಳಿಂದ ಉಂಟಾಗಿದೆ. ಈ ತತ್ವಗಳ ಕೆಲಸವೆಲ್ಲ ತನ್ನಷ್ಟಕ್ಕೆ ತಾನೇ ನಡೆಯುತ್ತಾ ಹೋಗುತ್ತದೆ.
ಅಣುಶಕ್ತಿ ಎಲ್ಲದರಲ್ಲೂ ಒಂದೇ ಆಗಿದ್ದರೂ, ವಜ್ರದಲ್ಲಿ ಬೇರೆ ತರಹ ಇದೆ. ಇದ್ದಿಲಲ್ಲಿ ಬೇರೆ ತರಹ ಇದೆ.
ಒಂದೇ ಅಕ್ಕಿಯಿಂದ ಅನ್ನ, ದೋಸೆ, ಚಿತ್ರಾನ್ನ, ಇಡ್ಲಿ, ಸೇವಿಗೆ ಮುಂತಾದ ಖಾದ್ಯಗಳನ್ನು ಮಾಡ್ತೀವಿ. ಅವುಗಳೆಲ್ಲದರಲ್ಲಿ ಇರುವುದು ಅಕ್ಕಿಯೇ ಆದರೂ ಅವುಗಳನ್ನು ಒಂದಕ್ಕೊಂದು ಬೆರೆಸದೆ ಬೇರೆ ಬೇರೆಯಾಗಿಯೇ ಗುರುತಿಸುತ್ತೇವೆ, ಹಾಗೆಯೇ ಊಟ ಮಾಡುತ್ತೇವೆ.
ಹಾಗೆಯೇ ಈ ಪ್ರಪಂಚವೆಲ್ಲವೂ ಒಂದೇ ತತ್ವದಿಂದ ಉಂಟಾಗಿದ್ದರೂ ಕೂಡಾ, ಇದರಲ್ಲಿ ಬೇರೆ ಬೇರೆ ತತ್ವಗಳೂ, ಅವುಗಳ ಕೆಲಸಗಳು, ಕಾರ್ಯಗಳು ಇವೆ. ಅದರ ಬಗ್ಗೆ ತಿಳಿದುಕೊಳ್ಳದೇ ಇರುವುದು ಮಾಯೆ, "ತತ್ವಗಳ ಅವಿವೇಕ ಮಾಯೆ". ತಾತ್ವಿಕ ದೃಷ್ಟಿಯಿಂದ ನೋಡಿದರೆ ಎಲ್ಲವೂ ತತ್ವಗಳೇ ಅಂತ ಅರಿವಾಗುತ್ತದೆ.

* * * * *

ಕಾಮದಿಂದ ಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೭.೬.೨೦೦೩ರಂದು ಪ್ರಕಟವಾಗಿತ್ತು)

ಲ್ಲವೂ ಪರಿವರ್ತನಶೀಲವಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಜ್ಞಾನ. ಜ್ಞಾನ ನಮಗೆ ಉಂಟಾಗದೆ ಇರುವುದರ ಕಾರಣ ಮೋಹ! ಈ ಪ್ರಪಂಚದ ಸೃಷ್ಟಿ ಮತ್ತು ಸ್ಥಿತಿಗೆ ಕಾರಣೀಭೂತವಾಗಿರುವುದು ಎರಡು: ’ಕಾಮ ಮತ್ತು ಮೋಹ’. ಕಾಮ ಇಲ್ಲದಿದ್ದರೆ ಸೃಷ್ಟಿಯೇ ಇಲ್ಲ. ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿ, ಸಸ್ಯ, ಮನುಷ್ಯರು ಎಲ್ಲದರಲ್ಲೂ ಕಾಮ ವ್ಯಾಪ್ತವಾಗಿದೆ. ನಿಮ್ಮ ಸ್ರೋತ ಕಾಮದಿಂದ ಆಗಿದೆ. ಕಾಮದಿಂದ ಪ್ರತಿನಿತ್ಯವೂ ಸೃಷ್ಟಿಯಾಗುತ್ತಿದೆ ಈ ಪ್ರಪಂಚದಲ್ಲಿ. ಇದರ ಪಾಲನೆಯಾಗುವುದು ಮೋಹದಿಂದ. ಪ್ರಪಂಚದಲ್ಲಿ ಕಾಮವನ್ನು ಹೀಯಾಳಿಸದೆ ಇರುವ ಒಂದೇ ಒಂದು ಸಂಸ್ಕೃತಿಯೆಂದರೆ ಅದು ಭಾರತೀಯ ಸನಾತನ ಸಂಸ್ಕೃತಿ! ಅದಕ್ಕೇ ಲಿಂಗವನ್ನು ಪೂಜೆ ಮಾಡ್ತೀವಿ. ಲಿಂಗದಲ್ಲಿ ಏನು, ಯೋನಿ ಮತ್ತು ಲಿಂಗ! ಕಾಮ ದೇವ ಅಂತ ಮನ್ಮಥನ ಪೂಜೆ ಮಾಡ್ತೀವಿ. ಕಾಮನ ಹಬ್ಬ ಮಾಡ್ತೀವಿ.
ಯಾವುದನ್ನು ಪೂಜಿಸುತ್ತೇವೆಯೋ ಅದು ನಮ್ಮನ್ನು ಬಂಧಿಸುವುದಿಲ್ಲ. ಯಾರೊಂದಿಗೆ ಜಗಳ, ಘರ್ಷಣೆ, ಮನಸ್ತಾಪವಾಗಿರುತ್ತದೆಯೋ ಅವರನ್ನು ನಮ್ಮ ತಲೆಯಲ್ಲಿಯೇ ತುಂಬಿಕೊಂಡಿರುತ್ತೇವೆ. ಆಗ ನೀವು ದೇವಸ್ಥಾನಕ್ಕೆ ಹೋದರೂ ದೇವರು ತಲೆಯಲ್ಲಿರೋಲ್ಲ. ಪೂಜೆ ಮಾಡಿ, ಬಿಟ್ಟು ಬಿಡ್ತೀರ. ನಾವು ಯಾವುದನ್ನು ಪೂಜೆ ಮಾಡ್ತೀವೋ ಅದರಿಂದ ಮನಸ್ಸು ದೂರವಾಗುತ್ತೆ. ಇದು ಬಹಳ ಮನೋವೈಜ್ಞಾನಿಕವಾದ ದಾರಿ.
ನಮ್ಮಲ್ಲಿ ಪಕ್ವತೆ, ಭಕ್ತಿ ಪೂರ್ಣವಾಗಿ ಉದಯವಾಗುವವರೆಗೆ ಯಾವುದನ್ನು ನಾವು ಪೂಜೆ ಮಾಡ್ತೀವೋ ಅದರಿಂದ ನಮ್ಮ ಮನಸ್ಸು ಮುಕ್ತವಾಗುತ್ತದೆ. ಗೊತ್ತಾಗ್ತಾ ಇದೆಯಾ? ಯಾವುದನ್ನು ನಾವು ಹೀಯಾಳಿಸುತ್ತೇವೋ ಅದರ ಬಂಧನದಲ್ಲಿ ಸಿಕ್ಕಿಹಾಕಿಕೊಳ್ತೀವಿ. ಮೇಲಿಂದ ಮೇಲೆ ಕಾಮವನ್ನು ದೂರುತ್ತಾ ಇರತಕ್ಕಂಥ ಜನ ಒಳಗೆ ಕಾಮವನ್ನು ಯೋಚನೆ ಮಾಡ್ತಾ ಇರ್ತಾರೆ. ಮೇಲ್ಗಡೆ ದೂಷಣೆ ಮಾಡ್ತಾರೆ.