ಧ್ಯಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಧ್ಯಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮಾರ್ಚ್ 19, 2013

ಆಗುವುದೆ೦ಬ ಛಲದಿ೦ದ ಮುನ್ನುಗ್ಗಿ

ಮಾರ್ಚ್ ೧೯, ೨೦೧೩
ಸ್ಪ್ಲಿಟ್, ಕ್ರೊಯೇಷಿಯಾ

ನಾವು, "ನಮಸ್ಕಾರ", "ಹಲೋ", "ನೀವು ಹೇಗಿದ್ದೀರಿ?", "ಸ್ವಾಗತ" ಎಂದು ಹೇಳುವ ಮೂಲಕ ಜನರೊಂದಿಗೆ ಹಲವಾರು ಕುಶಲೋಪರಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅದು ಬಹಳ ಮೇಲ್ನೋಟದ್ದು. ಅದು ನಿಜವಾಗಿ ನಿಮ್ಮ ಹೃದಯದಿಂದ ಬರುವುದಿಲ್ಲ. ನೀವೊಂದು ವಿಮಾನದಿಂದ ಕೆಳಗಿಳಿಯುವಾಗ ಗಗನಸಖಿಯು, "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುವುದರ ಮೂಲಕ ಹೇಗೆ ಅಭಿನಂದಿಸುವಳೋ ಅದೇ ರೀತಿ. ಅವಳದನ್ನು ನಿಜವಾದ ಮನಸ್ಸಿನಿಂದ ಹೇಳುವುದಿಲ್ಲ. ಹಲವಾರು ಸಾರಿ ನಾವು, "ಸ್ವಾಗತ", "ನಮಸ್ಕಾರ", "ಶುಭರಾತ್ರಿ", ಇದೆಲ್ಲವನ್ನೂ ಹೇಳುತ್ತೇವೆ, ಆದರೆ ಅದು ತನ್ನ ಹಿಂದೆ ಯಾವುದೇ ಭಾವನೆಯನ್ನು ಒಯ್ಯುವುದಿಲ್ಲ. ಹೀಗಾದರೂ, ಅದೇ ಶಬ್ದಗಳು ನಿಮ್ಮಲ್ಲಿಗೆ ನಿಮಗೆ ಬಹಳ ಹತ್ತಿರದ ಅಥವಾ ನಿಮಗೆ ಬಹಳ ಪ್ರಿಯವಾದವರಿಂದ ಬರುವಾಗ, ಅದು ಸ್ವಲ್ಪ ಕಂಪನಗಳನ್ನು, ಸ್ವಲ್ಪ ಭಾವನೆಯನ್ನು ತನ್ನ ಹಿಂದೆ ಒಯ್ಯುತ್ತದೆ. ನಿಮ್ಮ ಅಜ್ಜಿಯು ನಿಮ್ಮಲ್ಲಿ, "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಾಗ, ಅದು ಗಗನಸಖಿಯು "ನಿನ್ನ ದಿನವು ಶುಭವಾಗಿರಲಿ" ಎಂದು ಹೇಳುವಂತೆ ಅಲ್ಲ. ಅದರಲ್ಲಿ ಸ್ವಲ್ಪ ಭಾವನೆಗಳಿರುತ್ತವೆ, ಸ್ವಲ್ಪ ಕಂಪನಗಳಿರುತ್ತವೆ, ಅಲ್ಲವೇ?

ನಾವು ನಮ್ಮ ಜೀವನವನ್ನು ಮೇಲ್ನೋಟದ ಹಂತದಲ್ಲಿ ಜೀವಿಸಿದರೆ, ಜೀವನವು ಬಹಳ ಶುಷ್ಕವೂ ನಿರಾಸಕ್ತಿದಾಯಕವೂ ಆಗುತ್ತದೆ. ಆದರೂ, ನಾವು ನಮ್ಮ ಹೃದಯದಿಂದ ಪರಸ್ಪರರೊಂದಿಗೆ ಬೆರೆಯುವಾಗ, ಅಲ್ಲಿ ಸ್ವಲ್ಪ ನಿಷ್ಕಪಟತೆಯಿರುತ್ತದೆ. ಆ ನಿಷ್ಕಪಟತೆಯು ಜೀವನವನ್ನು ಹೆಚ್ಚು ಸುಂದರ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ. ನೀವದನ್ನು ಎಲ್ಲಾ ಸಮಯದಲ್ಲೂ ಮಾಡಲು ಸಾಧ್ಯವಾಗದೇ ಇರಬಹುದೆಂಬುದು ನನಗೆ ಅರ್ಥವಾಗುತ್ತದೆ, ಆದರೆ ನೀವದನ್ನು ದೈನಂದಿನ ಜೀವನದಲ್ಲಿ ಸ್ವಲ್ಪ ಸಮಯವಾದರೂ ಮಾಡಬೇಕು. ನಮ್ಮ ಮಾನವ ಅಸ್ತಿತ್ವಕ್ಕೆ ಬಹಳ ಕೇಂದ್ರವಾಗಿರುವ ಈ ಮಗ್ಗುಲಿನ ಕಡೆಗೆ ನಾವು ನೋಡುವಾಗ, ನಮ್ಮಲ್ಲಿ ಮತ್ತು ನಮ್ಮ ಪರಿಸರದಲ್ಲಿ ಒಂದು ದೊಡ್ಡ ಬದಲಾವಣೆಯಾಗುತ್ತದೆ.

ಎಲ್ಲವೂ ಆಗುವುದು ಕಂಪನಗಳ ಕಾರಣದಿಂದ. ನಾವು ಎಲ್ಲಾ ಸಮಯದಲ್ಲೂ ಕಂಪನಗಳನ್ನು ಹೊರಸೂಸುತ್ತಿರುತ್ತೇವೆ. ನಮ್ಮ ಕಂಪನಗಳು ಧನಾತ್ಮಕವಾಗಿದ್ದರೆ, ಆಗ ನಮ್ಮ ಸುತ್ತಲಿರುವ ಜನರು ಸಂತೋಷವಾಗಿರುತ್ತಾರೆ. ನಾವು ಸಂತೋಷವಾಗಿದ್ದರೆ, ಆಗ ಎಲ್ಲವೂ ನಮ್ಮ ಬಯಕೆಗನುಸಾರವಾಗಿ ನಡೆಯುತ್ತದೆ. ನಮ್ಮ ಕಂಪನಗಳು ಋಣಾತ್ಮಕವಾಗಿದ್ದರೆ, ಯಾರೂ ನಮ್ಮೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಮತ್ತು ನಾವು ನಮ್ಮಲ್ಲಿಯೇ ಸಂತೋಷವಾಗಿರುವುದಿಲ್ಲ.

ನಾವು ನಮ್ಮ ಕಂಪನಗಳನ್ನು ಧನಾತ್ಮಕವಾಗಿ ಮಾಡಿಕೊಳ್ಳಲು ಒಂದು ದಾರಿಯಿದೆ ಮತ್ತು ಅದುವೇ, ಉಸಿರಾಟದ ತಂತ್ರಗಳು, ಧ್ಯಾನ, ಜ್ಞಾನ ಹಾಗೂ ನಮ್ಮ ಅಸ್ತಿತ್ವದ ಪದರುಗಳಾದ ಶರೀರ, ಉಸಿರು, ಮನಸ್ಸು, ಬುದ್ಧಿ ಮೊದಲಾದವುಗಳ ಬಗ್ಗೆ ತಿಳಿಯುವುದರ ಮೂಲಕ. ಸ್ವಲ್ಪವೇ ಸ್ವಲ್ಪ ತಿಳುವಳಿಕೆಯೊಂದಿಗೆ ಮತ್ತು ನಮ್ಮಲ್ಲಿಯೇ ಆಳವಾಗಿ ವಿಶ್ರಾಮ ಮಾಡುವುದರೊಂದಿಗೆ, ನಮ್ಮ ಋಣಾತ್ಮಕ ಕಂಪನಗಳು ಬದಲಾಗಿ ಬಹಳ ಧನಾತ್ಮಕವಾಗುತ್ತವೆ.

ನೀವು ತೃಪ್ತರಾದಾಗ, ನಿಮ್ಮ ಹೃದಯವು ಶುದ್ಧ ಹಾಗೂ ಸ್ಪಷ್ಟವಾಗಿರುವಾಗ, ಮತ್ತು ನೀವು ಯಾರ ಬಗ್ಗೆಯೂ ಕೆಟ್ಟ ಭಾವನೆಗಳನ್ನು ಹೊಂದದೇ ಇರುವಾಗ, ಇತರರನ್ನು ಗುಣಪಡಿಸುವ ಮತ್ತು ಹರಸುವ ಶಕ್ತಿಯನ್ನು ನೀವು ಗಳಿಸುತ್ತೀರಿ. ಅದು ಸಾಧ್ಯವಿದೆ. ತಮ್ಮೊಳಗಿರುವ ಕಂಪನಗಳನ್ನು ಸಂಪೂರ್ಣವಾಗಿ ಧನಾತ್ಮಕ ಶಕ್ತಿಯನ್ನಾಗಿ ಬದಲಾಯಿಸಿದ ಪಕ್ಷದಲ್ಲಿ, ಪ್ರತಿಯೊಬ್ಬರಿಗೂ ಇತರರನ್ನು ಗುಣಪಡಿಸಲು ಸಾಧ್ಯವಿದೆ.

ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಂಡಾಗ, ನಾವು ಶಾಂತಿಯನ್ನು ಪಸರಿಸುತ್ತೇವೆ. ನಮಗೆ ತಿಳಿದಿದೆಯೆಂದು ನಾವು ಏನನ್ನು ಅಂದುಕೊಳ್ಳುತ್ತೇವೋ, ಅದು ವಾಸ್ತವಿಕತೆಯ ಕೇವಲ ಒಂದು ಸಣ್ಣ ಭಾಗ ಮಾತ್ರ. ಹಲವಾರು ರಹಸ್ಯಗಳಿವೆ, ವಾಸ್ತವಿಕತೆಯ ಹಲವಾರು ಮಟ್ಟಗಳಿವೆ. ನೀವು ಸ್ವಲ್ಪ ಹೆಚ್ಚು ಕಾಲಾವಕಾಶ ಮಾಡಿಕೊಂಡರೆ, ನಾವು ಜ್ಞಾನದಲ್ಲಿ ಆಳಕ್ಕೆ ಹೋಗಬಹುದು, ಮತ್ತು ಜ್ಞಾನವಿರುವಾಗ, ಯಾವುದಕ್ಕೂ ನಿಮ್ಮ ಸಂತೋಷವನ್ನು ದೂರ ಸರಿಸಲು ಸಾಧ್ಯವಿಲ್ಲ.

ನಿನ್ನೆ ಜ಼ಗ್ರೇಬಿನಲ್ಲಿ ನಾನು, "ಉತ್ತಮ ಕ್ರೊಯೇಷಿಯಕ್ಕಾಗಿ ಸ್ವಯಂಸೇವಕರಾಗಿ" ಎಂಬ ಒಂದು ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಅಲ್ಲಿ ಸುಮಾರು ೨,೫೦೦ ಜನರಿದ್ದರು. ನಾನು ಅವರಲ್ಲಿ ಪ್ರತಿಯೊಬ್ಬರೂ, ಸಮಾಜವನ್ನು ಒಂದು ಉತ್ತಮ ಜಾಗವನ್ನಾಗಿ ಮಾಡುವುದಕ್ಕಾಗಿ ಪ್ರತಿದಿನವೂ ಒಂದು ಗಂಟೆ ಅಥವಾ ಒಂದು ವಾರದಲ್ಲಿ ಏಳು ಗಂಟೆಗಳನ್ನು ಕೊಡಬೇಕೆಂದು ಹೇಳಿದೆ. ಅದನ್ನೇ ನಾವು ಇಲ್ಲೂ ಸಹ ಮಾಡಬೇಕೆಂದು ನಿಮಗೆ ಅನ್ನಿಸುತ್ತಿಲ್ಲವೇ?

ನಾವೆಲ್ಲರೂ ಸ್ವಲ್ಪ ಕೊಡುಗೆಯನ್ನು ನೀಡಬಹುದಾದಂತಹ  ಕೆಲವು ವಿಷಯಗಳು ಹೀಗಿವೆ:

ಮೊದಲನೆಯದಾಗಿ, ನಮಗೊಂದು ಒತ್ತಡಮುಕ್ತ ಮತ್ತು ಹಿಂಸಾಮುಕ್ತ ಸಮಾಜ ಬೇಕು. ಆತ್ಮೀಯರಾಗಿರುವುದು ಹೇಗೆ, ಸಹಕಾರಿಯಾಗಿರುವುದು ಹೇಗೆ ಎಂಬುದನ್ನು ನಾವು ಜನರಿಗೆ ಕಲಿಸಬೇಕಾಗಿದೆ ಮತ್ತು ಹಿಂಸಾತ್ಮಕ ಪ್ರವೃತ್ತಿಗಳನ್ನು ತೊಡೆದುಹಾಕಲು ಅವರಿಗೆ ಸಹಾಯ ಮಾಡಬೇಕು.

ಎರಡನೆಯದಾಗಿ, ನಾವು ಜನರಿಗೆ ವಿವಿಧ ರೀತಿಯ ವ್ಯಸನಗಳಿಂದ ದೂರವಾಗಲು ಸಹಾಯ ಮಾಡಬೇಕು. ಸುದರ್ಶನ ಕ್ರಿಯೆ ಮತ್ತು ಧ್ಯಾನಗಳ ನಿಯಮಿತ ಅಭ್ಯಾಸವು, ವ್ಯಸನಗಳಿಂದ ಹೊರಬರಲು ಜನರಿಗೆ ಸಹಾಯ ಮಾಡುವುವು.

ಮೂರನೆಯದಾಗಿ, ಭ್ರಷ್ಟಾಚಾರದಿಂದ ಮುಕ್ತವಾಗಿರುವ ಒಂದು ಸಮಾಜವು ನಮಗೆ ಬೇಕು. ಎಲ್ಲಿ ಆತ್ಮೀಯತೆಯ ಭಾವವು ಕೊನೆಯಾಗುವುದೋ ಅಲ್ಲಿಂದ ಭ್ರಷ್ಟಾಚಾರವು ಪ್ರಾರಂಭವಾಗುವುದಾಗಿದೆ.

ಜೊತೆಗೆ, ನಿಜವಾಗಿ ಸಹಾಯದ ಅವಶ್ಯಕತೆಯಿರುವ ಜನರ ಬಳಿಗೆ ನಾವು ತಲುಪಬೇಕಾಗಿದೆ. ಆದುದರಿಂದ, ನೀವೆಲ್ಲರೂ ಬೇರೆ ಬೇರೆ ಪ್ರದೇಶಗಳಲ್ಲಿ ೨೦ರಿಂದ ೩೦ ಜನರ ತಂಡಗಳನ್ನು ರೂಪಿಸಲು ಸಾಧ್ಯವಾದರೆ ಮತ್ತು ವಾರದಲ್ಲಿ ಏಳು ಗಂಟೆಗಳನ್ನು ನಗುತ್ತಾ ಸಮಾಜ ಸೇವೆ ಮಾಡುತ್ತಾ ಕಳೆಯಲು ಸಾಧ್ಯವಾದರೆ, ಆಗ ನಾವು ಸಂತೋಷದ ಅಲೆಗಳನ್ನು ಸೃಷ್ಟಿಸಬಹುದು.

ನೀವು ಪ್ರಶ್ನೆಗಳನ್ನು ಕೇಳುವ ಮೊದಲು ಇನ್ನೊಂದು ವಿಷಯ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಬಿಡಿ! ನೀವು ದೇಶದ ಬಗ್ಗೆ, ಕ್ರೊಯೇಷಿಯಾದ ಬಗ್ಗೆ, ಜಗತ್ತಿನ ಬಗ್ಗೆ ಚಿಂತಿಸಬೇಕೆಂದು ನಾನು ಬಯಸುತ್ತೇನೆ. ನಿಮ್ಮೆಲ್ಲಾ ವೈಯಕ್ತಿಕ, ಖಾಸಗಿ ಚಿಂತೆಗಳು ಮತ್ತು ದುಗುಡಗಳನ್ನು ನೀವು ನನಗೆ ನೀಡಿ.

ಪ್ರಶ್ನೆ: ಗುರುದೇವ, ಮೂಲಭೂತ ಸೌಕರ್ಯಗಳ ರಚನೆ ಮತ್ತು ವ್ಯವಸ್ಥೆಗಳನ್ನು ಸೃಷ್ಟಿಸುವುದರ ಮೂಲಕ ಶಾಂತಿಯನ್ನು ಸೃಷ್ಟಿಸಲು ಜಗತ್ತು ಬಿಲಿಯಗಟ್ಟಲೆ ಡಾಲರುಗಳನ್ನು ವ್ಯಯಿಸುತ್ತಿದೆ. ಆದರೂ, ಹೃದಯವನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಮಾನವರ ಮನಸ್ಸು ತಿಳಿಯದು. ಜಗತ್ತಿನಲ್ಲಿ ಶಾಂತಿಯ ನಿಮ್ಮ ಕರೆಗೆ ಓಗೊಡುವುದಕ್ಕಾಗಿ ನನ್ನ ಕಲ್ಪನೆಯೆಂದರೆ, ಮನಸ್ಸು ಮತ್ತು ಹೃದಯಗಳ ಈ ಜ್ಞಾನವನ್ನು ಜಗತ್ತಿನಲ್ಲಿ ಎಲ್ಲರಿಗೂ ತಲಪಿಸುವಂತೆ ಮಾಡುವುದು. ಹಾಗಾಗಿ ನಾವು ನಿಮ್ಮೊಂದಿಗೆ ಸಂಯುಕ್ತ ರಾಷ್ಟ್ರಗಳಿಗೆ, ಹಿಂಸೆಯಿಂದ ಜನರು ನರಳಾಡುತ್ತಿರುವ ಎಲ್ಲಾ ಪ್ರದೇಶಗಳಿಗೆ ಹೋಗಬಹುದು. 

ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು, ಒಳ್ಳೆಯದು, ಒಳ್ಳೆಯದು. ಫೆಬ್ರವರಿ ೩ ರಂದು ಭಾರತದ ನವದೆಹಲಿಯಲ್ಲಿ, ೧೦ ವಿವಿಧ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ನಾನು, ’ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಅದೊಂದು ಬಹಳ ಯಶಸ್ವಿ ಪ್ರಾರಂಭವಾಗಿತ್ತು, ಮತ್ತು ಅಂತಹ ಒಂದು ವಾತಾವರಣವನ್ನು ಸೃಷ್ಟಿಸಲು ನಾವು ಯುನಿಸೆಫ್ ಹಾಗೂ ಹಲವಾರು ಇತರ ಸಂಯುಕ್ತ ರಾಷ್ಟ್ರ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವೆವು.

ಇಲ್ಲಿ ಸ್ಪ್ಲಿಟ್ ನಲ್ಲಿರುವ ನಿಮ್ಮಲ್ಲಿ ಹಲವರು ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಾಗಿ ಈ ಸಂದೇಶವನ್ನು ಕ್ರೊಯೇಷಿಯಾದಲ್ಲಿ ಹರಡಬೇಕೆಂಬುದು ನನ್ನ ಇಚ್ಛೆಯಾಗಿದೆ. ನೀವು ಭಾರತಕ್ಕೆ ಬರುವಂತೆ ಆಹ್ವಾನಿಸಲೂ ನಾನು ಬಯಸುತ್ತೇನೆ. ನೀವು ಭಾರತಕ್ಕೆ ಬರುವಾಗ, ನೀವು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಬಹುದು, ಧ್ಯಾನಗಳನ್ನು ಮಾಡಬಹುದು ಮತ್ತು ಇನ್ನೂ ಆಳವಾದ ಅನುಭವಗಳನ್ನು ಪಡೆಯಬಹುದು. ಜೊತೆಗೆ, ನೀವು ಆಯುರ್ವೇದದ ಅನುಭವವನ್ನು ಕೂಡಾ ಪಡೆಯಬಹುದು.

ಬೆಂಗಳೂರಿನಲ್ಲಿ ನಾವು ಜಗತ್ತಿನಲ್ಲಿ ಅತ್ಯುತ್ತಮವಾದ ಆಯುರ್ವೇದ ಆಸ್ಪತ್ರೆಯನ್ನು ಹೊಂದಿದ್ದೇವೆಂಬುದು ನಿಮಗೆ ತಿಳಿದಿದೆಯೇ? ಅಲೋಪತಿಯಲ್ಲಿ ಚಿಕಿತ್ಸೆಯಿಲ್ಲದ, ಉಬ್ಬಿರುವ ರಕ್ತನಾಳಗಳಂತಹ ಸಮಸ್ಯೆಗಳನ್ನು ಅದು ಗುಣಪಡಿಸಬಲ್ಲದು. ಹಾಗೆಯೇ, ದಂತ ಚಿಕಿತ್ಸೆಯು ಬಹಳ ಚೆನ್ನಾಗಿದೆ. ನೋವಿಲ್ಲದೆಯೇ, ಒಂದು ಹನಿ ರಕ್ತ ಮತ್ತು ಅರಿವಳಿಕೆಯಿಲ್ಲದೆಯೇ ವೈದ್ಯರು ನಿಮ್ಮ ಹಲ್ಲುಗಳನ್ನು ಕೀಳಬಲ್ಲರು; ಅದೂ ಸಾಮಾನ್ಯ ವೆಚ್ಚದ ಐದರಲ್ಲಿ ಒಂದು ಅಥವಾ ಹತ್ತರಲ್ಲಿ ಒಂದು ಭಾಗದಷ್ಟು ವೆಚ್ಚದಲ್ಲಿ. ಆಯುರ್ವೇದ ಚಿಕಿತ್ಸೆಯು ಬಹಳ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ್ದಾಗಿದೆ. ಪ್ರಾಚೀನ ವೈದ್ಯಕೀಯ ವಿಜ್ಞಾನಗಳಿಂದ ನೀವು ಕಲಿಯಬಹುದಾದ ವಿಷಯಗಳು ಹಲವಾರಿವೆ.

ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಕೊಡಿ, ಮತ್ತು ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹೋಗಿ.

ಪ್ರಶ್ನೆ: ಇಲ್ಲಿರುವುದಕ್ಕಾಗಿ ಮತ್ತು ನೀವು ಹೇಳಿರುವ ಅಮೂಲ್ಯವಾದ ವಿಷಯಗಳಿಗಾಗಿ ನಾನು ನಿಮಗೆ ಧನ್ಯವಾದಗಳನ್ನರ್ಪಿಸಲು ಬಯಸುತ್ತೇನೆ. ’ಸಮಾಜ ಸೇವೆ’ ಎಂದು ನೀವು ಹೇಳಿದಾಗ ನೀವು ಉದ್ದೇಶಿಸಿದುದು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನೇ ಅಥವಾ ರೆಡ್ ಕ್ರಾಸಿನಲ್ಲಿ ಅಥವಾ ಅದಕ್ಕೆ ಸಮಾನವಾದುದರಲ್ಲಿ ಸ್ವಯಂಸೇವೆ ಮಾಡುವಂತೆ ಸೇವೆ ಮಾಡುವುದನ್ನೇ?

ಶ್ರೀ ಶ್ರೀ ರವಿ ಶಂಕರ್: ಹೌದು. ಏನೆಲ್ಲಾ ಮತ್ತು ಎಲ್ಲೆಲ್ಲಾ ಅದರ ಅಗತ್ಯವಿರುವುದೋ ಹಾಗೂ ಯಾವೆಲ್ಲಾ ರೀತಿಯಲ್ಲಿ ಅದರ ಅಗತ್ಯವಿದೆಯೋ ಹಾಗೆ.

ಗುರುವಾರ, ಮಾರ್ಚ್ 7, 2013

ಆಗುಹೋಗುಗಳು ನಮ್ಮ ಯತ್ನದಲ್ಲಿಲ್ಲ

ಮಾರ್ಚ್ ೧೭, ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ನಾನು ಶರಣಾಗತನಾದಾಗ ನನ್ನ ಬಗ್ಗೆ ಕಾಳಜಿ ವಹಿಸಲು ಗುರು ಅಥವಾ ದೇವರಿರುವರು ಎಂಬ ಸಂಪೂರ್ಣ ವಿಶ್ವಾಸದೊಂದಿಗೆ ಜೀವನವನ್ನು ಜೀವಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಾಡಲು ಸಾಧ್ಯವೇ ಇಲ್ಲ! ನೀನು ಆ ಹೊರೆಯನ್ನು ಸುಮ್ಮನೇ ಹೊರಬೇಕು. "ಏನೆಲ್ಲಾ ಸಂಭವಿಸುವುದೋ, ಸಂಭವಿಸುವುದು", ಕೇವಲ ಅದನ್ನು ಹೇಳು ಮತ್ತು ಏನಾಗುವುದೋ ನೋಡು.
ನೀನು ವಿಶ್ವಾಸವನ್ನು ತರಲು ಪ್ರಯತ್ನಿಸುತ್ತಿದ್ದರೆ, ಅದು ಕೆಲಸ ಮಾಡುವುದೇ ಇಲ್ಲ. "ನಾನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ಬಯಸುತ್ತೇನೆ", ಯಾವ ನಂಬಿಕೆಯನ್ನು ನೀನು ಉಳಿಸಿಕೊಳ್ಳಲು ಬಯಸುವೆ? ನಿನ್ನ ನಂಬಿಕೆಯನ್ನು ಎಸೆದು ಬಿಡು! ನಿನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ನೀನು ಪ್ರಯತ್ನಿಸುವುದು ಬಹಳ ದೊಡ್ಡ ಹೊರೆಯೆಂದು ನಾನು ಹೇಳುತ್ತೇನೆ. ಅದರ ಬದಲು, "ನನಗೆ ಚಿಂತೆಯಿಲ್ಲ" ಎಂದು ಹೇಳು!
ನಂಬಿಕೆಯಿದ್ದರೆ, ಅದಲ್ಲಿರುವುದು. ನಂಬಿಕೆಯಿಲ್ಲದಿದ್ದರೆ, ಅದಲ್ಲಿಲ್ಲ, ನಿನಗೇನು ಮಾಡಲು ಸಾಧ್ಯ? ಅದು ಅಷ್ಟೊಂದು ಸರಳವಾದುದು. ನಂಬಿಕೆ ಕೂಡಾ ಒಂದು ಉಡುಗೊರೆ. ನಿನ್ನ ತಲೆಯ ಮೇಲೆ ಅಥವಾ ನಿನ್ನ ಹೃದಯದ ಮೇಲೆ ನಂಬಿಕೆಯನ್ನು ಬಲವಂತವಾಗಿ ತುರುಕಲು ಪ್ರಯತ್ನಿಸುವುದು ನಿನಗೆ ಸಾಧ್ಯವಿಲ್ಲ.
ಕೆಲವೊಮ್ಮೆ, ತನ್ನೆಲ್ಲಾ ವಟಗುಟ್ಟುವಿಕೆಯೊಂದಿಗೆ ಮತ್ತು ತನ್ನೆಲ್ಲಾ ನಕಾರಾತ್ಮಕತೆಯೊಂದಿಗೆ ನಿಮ್ಮ ತಲೆಯು ನಂಬಿಕೆಯನ್ನು ತ್ಯಜಿಸುವಾಗ ಕೂಡಾ, ಆಗಲೂ ನಿಮ್ಮಲ್ಲಿರುವ ಏನೋ ಒಂದು ಕಲಕುವುದು ಮತ್ತು ಆ ದಿಕ್ಕಿನಲ್ಲಿ ನಿಮ್ಮನ್ನು ಎಳೆಯುವುದು. ಇದಾಗುವಾಗ ಕೇವಲ ಅದನ್ನು ಗುರುತಿಸಿ, ಮತ್ತು ಇದಾಗುತ್ತದೆ.
ಯಾರೋ ಒಬ್ಬರು ಹೇಳುತ್ತಾರೆ, "ನನಗೆ ಯಾವುದರಲ್ಲೂ ನಂಬಿಕೆಯಿಲ್ಲ", ಆದರೂ ಅವರು ಕುಳಿತುಕೊಂಡು ಧ್ಯಾನವನ್ನು ಮಾಡುತ್ತಾರೆ, ಮತ್ತು ನೀವು ಅವರಲ್ಲಿ, "ನೀವು ಯಾಕೆ ಧ್ಯಾನ ಮಾಡುತ್ತಿರುವಿರಿ?" ಎಂದು ಕೇಳಿದರೆ ಅವರು, "ಏನೋ ಒಂದು ಅದನ್ನು ಮಾಡುವಂತೆ ನನ್ನಲ್ಲಿ ಹೇಳುತ್ತಿದೆ" ಎಂದು ಹೇಳುತ್ತಾರೆ.
ಒಬ್ಬ ವ್ಯಕ್ತಿ ಹೇಳುತ್ತಾನೆ, "ನನಗೆ ಗುರುವಿನಲ್ಲಿ ನಂಬಿಕೆಯಿಲ್ಲ!" ಆದರೂ ಗುರುದೇವ ಬರುವಾಗ ಅವನು, "ನನಗೆ ಮಾಡಲು ಯಾವ ಕೆಲಸವೂ ಇಲ್ಲದಿರುವುದರಿಂದ, ನಾನಲ್ಲಿಗೆ ಹೋಗುತ್ತೇನೆ" ಎಂದು ಹೇಳುವನು ಮತ್ತು ಅವನಲ್ಲಿರುತ್ತಾನೆ. ಏನೋ ಒಂದು, ವ್ಯಕ್ತಿಯನ್ನು ಸೆಳೆಯುತ್ತದೆ, ಅವನು ವಿಮಾನ ನಿಲ್ದಾಣಕ್ಕೆ ಬರುವಂತೆ ಅಥವಾ ಸತ್ಸಂಗಕ್ಕೆ ಬರುವಂತೆ ಮಾಡುತ್ತದೆ. ಅದು ಯಾವುದು?
ನಿಮ್ಮಲ್ಲಿ ನಂಬಿಕೆಯಿಲ್ಲವೆಂಬುದಾಗಿ ನೀವು ನಿರ್ಧರಿಸಿರುವಿರಿ ಮತ್ತು ನಿಮ್ಮ ನಂಬಿಕೆಯನ್ನು ನಾಶಪಡಿಸಲು ಅಥವಾ ನಿಮ್ಮಲ್ಲಿ ಯಾವುದಾದರೂ ನಂಬಿಕೆಯಿರುವುದನ್ನು ಅಲ್ಲಗಳೆಯಲು ನೀವು ಕಷ್ಟಪಟ್ಟು ಪ್ರಯತ್ನಿಸಿದಿರಿ. ಆದರೂ, ಹೋಗಬಿಡಲು ನಿಮ್ಮನ್ನು ಬಿಡದ ಏನೋ ಒಂದು ಭಾವನೆ ಅಲ್ಲಿ ಬಂತು. ಅಲ್ಲಿ ನೀವು ಗುರುತಿಸಬೇಕು, "ಹೌದು, ನಂಬಿಕೆಯಿದೆ."
ಆದುದರಿಂದ, ನಂಬಿಕೆಯನ್ನು ಹೇರಲು ಸಾಧ್ಯವಿಲ್ಲ, ಅದು ಅಲ್ಲಿದೆ. ಒಮ್ಮೆ ಅದು ಬಂದರೆ, ಅದು ಉಳಿಯುತ್ತದೆ. ಅದು ಹೋದರೆ, ಅದು ನಿಮ್ಮನ್ನು ದುಃಖಿತರನ್ನಾಗಿಸುತ್ತದೆ. ನೀವು ದುಃಖಿತರಾದಾಗ, "ನಂಬಿಕೆಯು ಹೋಗಿದೆ, ಅದಕ್ಕಾಗಿಯೇ ನಾನು ದುಃಖಿತನಾಗಿರುವುದು" ಎಂಬುದನ್ನು ತಿಳಿಯಿರಿ, ಮತ್ತು ದುಃಖಿತರಾಗಲು ನೀವು ಬಯಸುವುದಿಲ್ಲ. ಆದುದರಿಂದ, "ನಾನು ದುಖಿತನಾಗಲು ಬಯಸುವುದಿಲ್ಲ" ಎಂದು ನೀವು ನಿರ್ಧರಿಸಿದ ಕ್ಷಣದಲ್ಲೇ ನಂಬಿಕೆಯು ಉಳಿಯುವುದು ಮುಂದುವರಿಯುತ್ತದೆ. ನಂಬಿಕೆಯು ಹೇಗಿದ್ದರೂ ಅಲ್ಲಿತ್ತು, ಅದು ಕೇವಲ ಪುನಃ ತಲೆದೋರುತ್ತದೆ.
ನಂಬಿಕೆಯನ್ನಿರಿಸಲು ನೀವು ಕಷ್ಟಪಟ್ಟು ಪ್ರಯತ್ನಿಸುವುದು ಒಂದು ಬಹಳ ಕಷ್ಟಕರವಾದ ಸಂಗತಿ. ಕೆಲವೊಮ್ಮೆ, ಕೇವಲ ದೇವರು ಅಥವಾ ಗುರುವಿನಿಂದಾಗಿ ತಾವು ತಮ್ಮ ನಂಬಿಕೆಯನ್ನಿರಿಸಿಕೊಳ್ಳುವುದೆಂದು ಜನರು ಭಾವಿಸುವರು; ದೇವರಿಗೋಸ್ಕರ ನೀವು ನಂಬಿಕೆಯನ್ನಿರಿಸುವುದೆಂದು. ನಿಮಗೆ ದೇವರಲ್ಲಿ ನಂಬಿಕೆಯಿಲ್ಲದಿದ್ದರೆ, ಅವನು ಅದರ ಬಗ್ಗೆ ಚಿಂತಿಸುವುದಿಲ್ಲವೆಂಬುದನ್ನು ನೆನಪಿನಲ್ಲಿಡಿ. ಅವನು, "ಸರಿ, ನಂಬಿಕೆಯಿಡಬೇಡ, ಅದರಿಂದೇನು? ನಾನಿಲ್ಲಿರುವೆನು! ನಾನಿಲ್ಲಿಲ್ಲವೆಂದು ನೀನು ಯೋಚಿಸುವುದಾದರೆ, ನೀನೇನು ಯೋಚಿಸಲು ಬಯಸುವೆಯೋ ಅದನ್ನು ಯೋಚಿಸಲು ನಿನಗೆ ಸ್ವಾತಂತ್ರ್ಯವಿದೆ" ಎಂದು ಹೇಳುತ್ತಾನೆ.
ಹಲವು ಜನರು ಹೇಳುತ್ತಾರೆ, "ಓ, ನಾನು ದೇವರನ್ನು ಅಷ್ಟೊಂದು ನಂಬುತ್ತೇನೆ." ನೀವು ಅಷ್ಟೊಂದು ನಂಬುತ್ತೀರಿ, ಅದರಿಂದೇನು? ಏನೆಲ್ಲಾ ಸಂಭವಿಸಬೇಕೋ, ಅದು ಸಂಭವಿಸುವುದು. ನಮ್ಮ ನಂಬಿಕೆಯು ಬಹಳ ಆಳವಿಲ್ಲದ್ದಾಗಿದೆ. ನಮ್ಮ ನಂಬಿಕೆಯು ಸುಖಕ್ಕಾಗಿ, ಚಿಕ್ಕ ವಿಷಯಗಳು ನೆರವೇರಬೇಕಾಗಿರುವುದಕ್ಕಾಗಿ ಇರುವುದು. ನಮ್ಮ ನಂಬಿಕೆಯು, ಪ್ರಧಾನವಾಗಿ, ನಮ್ಮ ಸ್ವಂತ ಆಕಾಂಕ್ಷೆಗಳನ್ನು ಪೂರೈಸುವುದಕ್ಕಾಗಿ ಇರುವುದು. ನಮ್ಮ ಆಕಾಂಕ್ಷೆಗಳು ನೆರವೇರಿದರೆ, ಆಗ ನಾವು, "ಓ, ನನ್ನಲ್ಲಿ ನಂಬಿಕೆಯಿದೆ" ಎಂದು ಹೇಳುತ್ತೇವೆ. ಅದು ಪೂರೈಸಲ್ಪಡದಿದ್ದರೆ ನಾವು, "ನನ್ನ ನಂಬಿಕೆಯು ಅಲ್ಲಾಡಿದೆ, ನನ್ನಲ್ಲಿ ನಂಬಿಕೆಯಿಲ್ಲ" ಎಂದು ಹೇಳುತ್ತೇವೆ. ಜೀವನವು ಆಕಾಂಕ್ಷೆಗಳಿಗಿಂತ ಎಷ್ಟೋ ಹೆಚ್ಚಿನದೆಂದು ನಾನು ಹೇಳುತ್ತೇನೆ, ಮತ್ತು ನಂಬಿಕೆಯು ಜೀವನಕ್ಕಿಂತಲೂ ಹೆಚ್ಚಿನದು.
ನಂಬಿಕೆಯು ಉಳಿಯುತ್ತದೆ ಮತ್ತು ಸತ್ವ ಅಥವಾ ಪವಿತ್ರತೆ ಅಥವಾ ಸಾಮರಸ್ಯವು ನಿಮ್ಮಲ್ಲಿ ಉಂಟಾದಾಗ ಅದು ತಲೆದೋರುತ್ತದೆ. ನೀವು ಮಾಡಬಹುದಾದುದೇನೆಂದರೆ, ಸಾಮರಸ್ಯವನ್ನು ಇಟ್ಟುಕೊಳ್ಳುವುದು ಹಾಗೂ ಸರಿಯಾದ ವ್ಯಾಯಾಮ, ಆಹಾರ ಮತ್ತು ಜ್ಞಾನದ ಮೂಲಕ ನಿಮ್ಮ ಮನಸ್ಸನ್ನು ಸ್ಪಷ್ಟವಾಗಿಟ್ಟುಕೊಳ್ಳುವುದು. ಇದೆಲ್ಲವೂ ಆ ದಿಕ್ಕಿನಲ್ಲಿ ಬೆಳೆಯಲು ನಿಮಗೆ ಸಹಾಯ ಮಾಡುವುದು.

ಪ್ರಶ್ನೆ: ಗುರುದೇವ, ಮೊದಲು ಅಜ್ಞಾನವು ನನ್ನನ್ನು ಭಯಪಡುವಂತೆ ಮಾಡುತ್ತಿತ್ತು, ಆದರೆ ಈಗ, ಕೆಲವೊಮ್ಮೆ, ಜ್ಞಾನವು ನನಗೆ ಹೆಚ್ಚಿನ ಗೊಂದಲವನ್ನು ತರುತ್ತಿದೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು! ಜ್ಞಾನದ ಉದ್ದೇಶವು ನಿಮ್ಮನ್ನು ಮತ್ತೆ ಮತ್ತೆ ಗೊಂದಲಪಡಿಸುವುದು. ಅದು ಸ್ಪಷ್ಟತೆಯನ್ನು ತರುವುದಕ್ಕಾಗಿಯಲ್ಲ. ಗೊಂದಲದ ಪ್ರತಿಯೊಂದು ಹಂತದಲ್ಲೂ, ನೀವು ಇನ್ನೂ ಒಂದು ಹೆಜ್ಜೆ ಮೇಲಕ್ಕೆ ನೆಗೆಯುವಿರಿ. ಆದುದರಿಂದ, ಚಿಂತಿಸಬೇಡಿ.
ಯಾವುದೇ ಗೊಂದಲವಿಲ್ಲದಿರುವಾಗ, ಅದು ಯಾವುದೇ ನೆಗೆತವಿರದ ಒಂದು  ಬೆಕ್ಕಿನ ನಡಿಗೆಯಂತೆ. ಆದರೆ ಕೆಲವೊಮ್ಮೆ, ಮೆಟ್ಟಿಲಿನಂತೆ, ಒಂದು ಮೆಟ್ಟಿಲನ್ನು ಬಿಟ್ಟು ಇನ್ನೊಂದು ಮೆಟ್ಟಿಲನ್ನೇರಿ, ಒಂದು ಮಟ್ಟ ಮೇಲೇರುವಿರಿ. ಆಗಲೇ ಗೊಂದಲವಾಗುವುದು. ಈಗ, "ಯಾವುದೇ ಗೊಂದಲವಿಲ್ಲದೆ, ನನ್ನ ಜೀವನದಲ್ಲಿ ನಾನು ಸ್ಪಷ್ಟವಾಗಿದ್ದರೆ, ಆಗ ಅಲ್ಲಿ ಯಾವುದೇ ಬೆಳವಣಿಗೆಯಿಲ್ಲವೆಂಬುದು ಇದರ ಅರ್ಥವೇ? ಅಥವಾ ನಾನು ಮುಂದುವರಿಯುತ್ತಿಲ್ಲವೇ? ನನಗೆ ಜ್ಞಾನದಿಂದ ಪ್ರಯೋಜನವಾಗುತ್ತಿಲ್ಲವೇ?" ಎಂದು ನನ್ನಲ್ಲಿ ಕೇಳಬೇಡಿ. ಹಾಗೇನೂ ಇಲ್ಲ! ನೀವೊಂದು ನೇರ ನಡಿಗೆಯಲ್ಲಿರುವಿರಿ, ಒಂದು ಸುಗಮ ನಡಿಗೆಯಲ್ಲಿರುವಿರಿ. ಅದಿಲ್ಲದಿರುವಾಗ ನೀವೊಂದು ರೋಲರ್ ಕೋಸ್ಟರ್ ಸವಾರಿಯಲ್ಲಿ; ಒಂದು ಉಬ್ಬುತಗ್ಗುಗಳಿರುವ ರಸ್ತೆಯಲ್ಲಿರುವಿರಿ, ಮತ್ತು ಅದು ಒಳ್ಳೆಯದು.

ಪ್ರಶ್ನೆ: ಗುರುದೇವ, ದಕ್ಷಿಣಾಮೂರ್ತಿಯ ಅರ್ಥವೇನು?
ಶ್ರೀ ಶ್ರೀ ರವಿ ಶಂಕರ್: ಅಮೂರ್ತವೆಂದರೆ, ಯಾವುದಕ್ಕೆ ಆಕಾರವಿಲ್ಲವೋ ಮತ್ತು ಯಾವುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲವೋ; ಯಾವುದನ್ನು ನೋಡಲು ಸಾಧ್ಯವಿಲ್ಲವೋ ಅದು ಎಂದು ಅರ್ಥ. ಪರಮಾತ್ಮ ಶಿವ, ಅನಂತ ಆಕಾಶದ ನಿರಾಕಾರ ಪ್ರಕಟನೆಯು, ಒಂದು ಆಕಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ಕಷ್ಟಸಾಧ್ಯ.
ಮೂರ್ತಿಯೆಂದರೆ ಯಾವುದಕ್ಕೆ ಒಂದು ಆಕಾರವಿರುವುದೋ ಮತ್ತು ಯಾವುದನ್ನು ನೋಡಬಹುದೋ ಅದು. ದಕ್ಷವೆಂದರೆ ಕುಶಲತಾಶೀಲರಾಗಿರುವುದು ಮತ್ತು ಸಮರ್ಥರಾಗಿರುವುದು.
ಆದುದರಿಂದ, ವ್ಯಕ್ತಪಡಿಸಲು ಸಾಧ್ಯವಿಲ್ಲದಿರುವ ದೈವಿಕತೆಯನ್ನು ಒಂದು ಬಹಳ ಕುಶಲತಾಪೂರ್ಣವಾದ ರೀತಿಯಲ್ಲಿ ವ್ಯಕ್ತಪಡಿಸುವಾಗ, ಅದು ದಕ್ಷಿಣಾ ಎಂದು ಕರೆಯಲ್ಪಡುತ್ತದೆ.
ನೋಡಿ, ನಮ್ಮೊಳಗಿರುವ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಸಾಧ್ಯವಿಲ್ಲ. ಹಲವಾರು ಸಾರಿ, ನಾವು ನಮ್ಮ ಭಾವನೆಗಳನ್ನು ಒಂದು ಹೂವನ್ನು ಅರ್ಪಿಸುವುದರ ಮೂಲಕ ವ್ಯಕ್ತಪಡಿಸುತ್ತೇವೆ. ಒಂದು ಹೂವನ್ನು ಅರ್ಪಿಸುವ ಕ್ರಿಯೆಯ ಮೂಲಕ, ನಾವು ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ, ಅಲ್ಲವೇ? ನಮ್ಮೊಳಗೆ ಆಳದಲ್ಲಿ ಏನಿದೆಯೋ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ನಾವು ನೀಡಬಹುದಾದುದು ಏನೂ ಇಲ್ಲ, ಆದರೂ ಏನನ್ನಾದರೂ ಕೊಡಲು ನಾವು ಪ್ರಯತ್ನಿಸುತ್ತೇವೆ. ಅದು ದಕ್ಷಿಣಾ ಎಂದು ಕರೆಯಲ್ಪಡುತ್ತದೆ.
ದಕ್ಷಿಣಾಮೂರ್ತಿಯೆಂದರೆ, ಯಾವುದನ್ನು ನೋಡಲು ಸಾಧ್ಯವಿಲ್ಲವೋ, ಆದರೂ ಅದನ್ನು ವ್ಯಕ್ತಪಡಿಸಲಾಗುವುದೋ ಅದು. ಯಾವುದು ಅಭಿವ್ಯಕ್ತಿಯನ್ನು ಮೀರಿದುದೋ, ಆದರೂ ಆಕಾರದ ಮೂಲಕ ವ್ಯಕ್ತಪಡಿಸಲಾಗುತ್ತಿರುವುದೋ ಅದು. ಅದು ಕಾಣಿಸುವುದಿಲ್ಲ, ಆದರೂ ಅದನ್ನು ನೋಡಲಾಗುತ್ತದೆ ಮತ್ತು ಎಲ್ಲವೂ ಅದರಿಂದಲೇ ಮಾಡಲ್ಪಟ್ಟಿದೆ. ಯಾವುದು ಅನಂತವೂ, ವ್ಯಕ್ತಪಡಿಸಲು ಅಥವಾ ಪ್ರಕಟಪಡಿಸಲು ಸಾಧ್ಯವಿಲ್ಲದುದೂ ಆಗಿದೆಯೋ, ಅದನ್ನು ಒಂದು ಆಕಾರದ ಮೂಲಕ ಬಹಳ ಕುಶಲತಾಪೂರ್ಣವಾಗಿ ವ್ಯಕ್ತಪಡಿಸಿದಾಗ, ಅದು ದಕ್ಷಿಣಾಮೂರ್ತಿ ಎಂದು ಕರೆಯಲ್ಪಡುತ್ತದೆ.
ಸೂರ್ಯ ಬಹಳ ದೊಡ್ಡದು ಮತ್ತು ನಮ್ಮಿಂದ ಹಲವಾರು ಮೈಲುಗಳಷ್ಟು ದೂರದಲ್ಲಿದೆ, ಆದರೆ ನೀವು ಸೂರ್ಯನನ್ನು ಒಂದು ಚಿಕ್ಕ ಕನ್ನಡಿಯನ್ನುಪಯೋಗಿಸಿ ನೋಡಿದರೆ, ನಿಮಗೆ ಸೂರ್ಯನ ಪ್ರತಿಬಿಂಬವು ಆ ಚಿಕ್ಕ ಗಾಜಿನ ತುಂಡಿನಲ್ಲಿ ಕಾಣಿಸುತ್ತದೆ. ವಾಸ್ತವವಾಗಿ ಸೂರ್ಯ ಅಷ್ಟೊಂದು ದೊಡ್ಡದಾಗಿದ್ದರೂ, ಸೂರ್ಯನ ಸಂಪೂರ್ಣ ಪ್ರತಿಬಿಂಬವನ್ನು ಕುಶಲತಾಪೂರ್ಣವಾಗಿ ಒಂದು ಕನ್ನಡಿಯಲ್ಲಿ ಹಿಡಿದು ನಿಮ್ಮ ಮನೆಯೊಳಗೆ ತರಲು ನಿಮಗೆ ಸಾಧ್ಯವಾಗುತ್ತದೆ. ಇದು ದಕ್ಷತೆಯೆಂದು ಕರೆಯಲ್ಪಡುತ್ತದೆ, ಮತ್ತು ಅದಕ್ಕಾಗಿಯೇ ಇದು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ.
ಪರಮಾತ್ಮ ಶಿವನು ಆದಿ ಗುರುವೆಂದು ಕರೆಯಲ್ಪಡುತ್ತಾನೆ (ಆದಿಕಾಲದಿಂದಲೂ ಇರುವ ಮತ್ತು ಕಾಲಾತೀತನಾದ ಗುರು). ಅವನು ಎಲ್ಲವೂ ಆಗಿರುವನು ಮತ್ತು ಎಲ್ಲೆಡೆಯೂ ಇರುವನು, ಆದರೂ ಅವನು ಒಬ್ಬ ಗುರುವಿನ ರೂಪದಲ್ಲಿ ಬರುವನು. ಆದುದರಿಂದ, ಅನಂತತೆಯು ಒಬ್ಬ ಗುರುವಿನ ರೂಪದಲ್ಲಿ ಬರುವಾಗ, ಅವನು ದಕ್ಷಿಣಾಮೂರ್ತಿಯೆಂದು ತಿಳಿಯಲ್ಪಡುತ್ತಾನೆ.
ಪ್ರಾಚೀನ ಕಾಲದಿಂದ, ಗುರು ತತ್ವದ ಪ್ರಧಾನ ರೂಪವು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ. ನೋಡಿ, ಗುರುವು ಒಬ್ಬ ವ್ಯಕ್ತಿಯಲ್ಲ. ಒಬ್ಬ ಗುರುವಿನ ಶರೀರದಲ್ಲಿರುವುದು ಒಂದು ಶಕ್ತಿಯಾಗಿದೆ; ಆ ಶಕ್ತಿಯು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತದೆ. ಯಾವುದು ಪ್ರಕಟವಾಗಿಲ್ಲವೋ ಮತ್ತು ಆದರೂ ಪ್ರಕಟವಾಗುವುದೋ ಆ ದೈವಿಕತೆ, ಆ ಸರ್ವವ್ಯಾಪಿ, ಅನಂತ, ಮಾರ್ಗದರ್ಶನವನ್ನೀಯುವ ಜ್ಞಾನವಾಗಿದೆ ಅದು.
ಆದುದರಿಂದ ಪರಮಾತ್ಮ ಶಿವನು ದಕ್ಷಿಣಾಮೂರ್ತಿ; ಆದಿ ಗುರುವೆಂದು ಕರೆಯಲ್ಪಡುತ್ತಾನೆ. ಕಥೆಯು ಸಾಗುವುದು ಹೀಗೆ: ಪರಮಾತ್ಮ ಶಿವನು ಮೌನವಾಗಿ ಕುಳಿತನು. ಅವನನ್ನು, ಒಬ್ಬ ಯುವ ಬಾಲಕನಾಗಿ, ಹಿರಿಯ ಶಿಷ್ಯರು ಅವನ ಮುಂದೆ ಜ್ಞಾನಾಪೇಕ್ಷಿಗಳಾಗಿ ಕುಳಿತಿರುವುದಾಗಿ ಚಿತ್ರಿಸಲಾಗಿದೆ. ಅವರು ಅವನ ಮುಂದೆ ಕುಳಿತ ಕೂಡಲೇ, ಮೌನದಲ್ಲಿ, ಅವರೆಲ್ಲರೂ ಜ್ಞಾನವನ್ನು ಪಡೆದರು ಮತ್ತು ಅವರೆಲ್ಲರ ಪ್ರಶ್ನೆಗಳು ಮಾಯವಾದವು. ಅವನ ಪ್ರವಚನವು ಮೌನದಲ್ಲಾಗಿತ್ತು. ಅದರರ್ಥ, ಅವರ ಚೈತನ್ಯವು ಮೇಲೆತ್ತಲ್ಪಟ್ಟಿತು. ಅದು ಗುರು ತತ್ವ. ಎಲ್ಲಿಂದ ಎಲ್ಲಾ ಜ್ಞಾನವು ಪ್ರಾರಂಭವಾಯಿತೋ ಆ ಮೂಲ ಗುರುವು ದಕ್ಷಿಣಾಮೂರ್ತಿಯೆಂದು ಕರೆಯಲ್ಪಡುತ್ತಾರೆ. ಆದುದರಿಂದ ಒಂದು ಬಹಳ ಕುಶಲತಾಪೂರ್ಣವಾದ ರೀತಿಯಲ್ಲಿ, ಅವ್ಯಕ್ತವಾದ ದೈವಿಕತೆಯು ವ್ಯಕ್ತಗೊಳಿಸಲ್ಪಡುತ್ತದೆ. ಅದು ದಕ್ಷಿಣಾಮೂರ್ತಿಯ ಸಂಪೂರ್ಣ ಸಾರವಾಗಿದೆ.

ಪ್ರಶ್ನೆ: ಗುರುದೇವ, ಕಾಳಿಯು ಶಿವನ ಮೇಲೆ ನಿಂತಿರುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಕಾಳಿಯು ಅಗಾಧವಾದ ಪರಿವರ್ತಕ ಶಕ್ತಿಯ; ವಿನಾಶದ ಶಕ್ತಿಯ ಸಂಕೇತವಾಗಿದೆ. ಅದು ಶಿವ ತತ್ವದ ಮೇಲೆ ನಿಂತಾಗ, ಅದು ಭದ್ರಕಾಳಿಯಾಯಿತು, ಅಂದರೆ, ಪರೋಪಕಾರಿ ಫಲಿತಾಂಶಗಳನ್ನು ಮಾತ್ರ ತರುವ ಶಕ್ತಿ. ಇಡೀ ವಿಷಯವು ಸಾಂಕೇತಿಕವಾದುದಾಗಿದೆ; ಪರೋಪಕಾರಿ ಫಲಿತಾಂಶಗಳನ್ನು ಮಾತ್ರ ತರುವ ಶಕ್ತಿಯನ್ನು ಅದು ಸೂಚಿಸುತ್ತದೆ.
ಶಿವ ಎಂಬುದು ಅತೀಂದ್ರಿಯ ಸ್ಥಿತಿಯಾಗಿದೆ; ಅದರರ್ಥ ಯಾರು ಪ್ರಪಂಚಕ್ಕೆ ಕೇವಲ ಪರೋಪಕಾರವನ್ನು ಮತ್ತು ಒಳ್ಳೆಯದನ್ನು ತರುವರೋ ಅವರು ಎಂದು. ಆದುದರಿಂದ, ಅಗಾಧವಾದ ವಿನಾಶಕಾರಿ ಶಕ್ತಿ ಕಾಳಿಯು ಕ್ರೋಧದಲ್ಲಿದ್ದಾಗ; ಆ ಕ್ಷಣದಲ್ಲಿ, ಶಿವನು ಬಂದು ಮಲಗಿದನು. ಅವಳು ಅವನ ಮೇಲೆ ಹೆಜ್ಜೆಯಿಟ್ಟಾಗ, ಕಾಳಿಯ ಶಕ್ತಿಯು ನಿಯಂತ್ರಿಸಲ್ಪಟ್ಟಿತು, ಸರಿಯಾದ ಮಾರ್ಗದಲ್ಲಿ ಪ್ರವಹಿಸಲ್ಪಟ್ಟಿತು ಮತ್ತು ಪರೋಪಕಾರಿಯಾಯಿತು. ಆದುದರಿಂದ, ಅಲ್ಲಿ ವಿನಾಶವಿದ್ದರೂ ಕೂಡಾ, ಅದು ಪರೋಪಕಾರಿಯಾಗಿರಬೇಕು.
ನೋಡಿ, ಹಳೆಯ ಕಟ್ಟಡಗಳನ್ನು ಕೆಡವಲು ಬಯಸುವಾಗ, ನೀವೇನು ಮಾಡುವಿರಿ? ನೀವು ಕಟ್ಟಡದ ಕೆಳಗೆ ಡೈನಮೈಟನ್ನು ಹಾಕುವಿರಿ, ಮತ್ತು ನಂತರ ಕಟ್ಟಡವು ಕೆಡವಲ್ಪಡುವುದು, ಅಲ್ಲವೇ? ಹೊಸದೇನನ್ನೋ ಸೃಷ್ಟಿಸಲು ಒಬ್ಬರು ಒಂದನ್ನು ನಾಶ ಮಾಡುತ್ತಾರೆ. ಆದುದರಿಂದ ಒಂದು ಒಳ್ಳೆಯ ಉದ್ದೇಶಕ್ಕಾಗಿ, ಪರೋಪಕಾರಕ್ಕಾಗಿ ನಾಶ ಮಾಡುವುದು, ಕ್ರೋಧದಿಂದ, ಮಾತ್ಸರ್ಯದಿಂದ, ದ್ವೇಷದಿಂದ ಮತ್ತು ಅಜ್ಞಾನದಿಂದ ನಾಶ ಮಾಡುವುದಕ್ಕಿಂತ ಬಹಳ ವ್ಯತ್ಯಸ್ತವಾಗಿದೆ. ಅದು, ಒಂದು ಪರಮಾಣು ನಾಶವಾಗುವಾಗ ಉತ್ಪನ್ನವಾಗುವಾಗ ಪರಮಾಣು ಶಕ್ತಿಯಂತೆ. ಹೀಗಾದರೂ, ಶಕ್ತಿಯನ್ನು ಸರಿಯಾಗಿ ಪ್ರವಹಿಸದಿದ್ದರೆ ಅಥವಾ ಉಪಯೋಗಿಸದಿದ್ದರೆ, ಅದು ಬಹಳ ವಿನಾಶಕಾರಿಯಾಗಬಹುದು. ಅದನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗ, ಅದು ವಿದ್ಯುತ್, ಪ್ರಕಾಶ ಮತ್ತು ಹಲವು ಸೌಕರ್ಯಗಳನ್ನು ತರುವುದಕ್ಕಾಗಿ ಬಳಸಲ್ಪಡುತ್ತದೆ.
ಅದುವೇ ವಿದ್ಯುತ್ತಿಗೂ ಅನ್ವಯಿಸುತ್ತದೆ. ನಿಜವಾಗಿ ನೋಡಿದರೆ, ಅದೊಂದು ವಿನಾಶಕಾರಿ ಶಕ್ತಿಯಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಶಕ್ತಿ ಎಲ್ಲಿ ಉತ್ಪನ್ನವಾಗುವುದೋ, ಅದರೊಂದಿಗೆ ನೀವು ಸಂಪರ್ಕಕ್ಕೆ ಬಂದರೆ, ನೀವು ನಾಶವಾಗಲು ಸಮಯವೇ ಬೇಡ. ಆದರೆ, ವಿದ್ಯುತ್ ಶಕ್ತಿಯು ಒಂದು ಉಪಕಾರಿ ಉದ್ದೇಶಕ್ಕಾಗಿ ಬಳಸಲ್ಪಟ್ಟಾಗ; ತಂತಿಗಳು ಮತ್ತು ಟ್ರಾನ್ಸ್ಫ಼ಾರ್ಮರುಗಳ ಮೂಲಕ; ಅದು ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಅದು ಜನರಿಗೆ ಸಿಗುವಂತೆ ಹಾಗೂ ಪ್ರಯೋಜನಕಾರಿಯಾಗುವಂತೆ ಮಾಡುತ್ತದೆ. ಅದೇ ರೀತಿಯಲ್ಲಿ, ಕಾಳಿಯ ಶಕ್ತಿಯು ವಿನಾಶಕಾರಿ ಶಕ್ತಿಯಾಗಿತ್ತು; ಕೆಟ್ಟ ವಿಷಯಗಳನ್ನು ನಾಶ ಮಾಡಲು ಅದು ತೋರ್ಪಟ್ಟಾಗ, ಅದು ಬಹಳ ಶಕ್ತಿಶಾಲಿಯಾಗಿತ್ತು. ಆದುದರಿಂದ, ವಿಶ್ವವನ್ನು ಸಂರಕ್ಷಿಸುವುದಕ್ಕಾಗಿ, ಅದನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಲು ಮತ್ತು ಅದನ್ನು ಪರೋಪಕಾರಿಯಾಗುವಂತೆ ಮಾಡಲು ಶಿವನು ಮಲಗಿದನು.
ಶಿವನು ಯಾವತ್ತೂ, ಯಾವುದು ಸಂಪೂರ್ಣ ಜಗತ್ತಿಗೆ; ಸಂಪೂರ್ಣ ವಿಶ್ವಕ್ಕೆ ಒಳ್ಳೆಯದೋ ಅದನ್ನು ಮಾಡುತ್ತಾನೆ; ಅವನು ವಿಷವನ್ನು ಕೂಡಾ ಕುಡಿದನು. ಒಂದು ಪೌರಾಣಿಕ ಕಥೆಯಿದೆ. ದೇವತೆಗಳು ಮತ್ತು ಅಸುರರು ಕ್ಷೀರ ಸಾಗರವನ್ನು ಕಡೆಯುತ್ತಿದ್ದಾಗ, ಮೊದಲು ಬಂದದ್ದೇನೆಂದರೆ, ವಿಷವಾಗಿತ್ತು. ವಿಷವು ಮೇಲೆ ಬಂದಾಗ, ಅದನ್ನು ತೆಗೆದುಕೊಂಡು ಕುಡಿದವನೆಂದರೆ ಶಿವ. ಅವನು ವಿಷವನ್ನು ಕುಡಿದುದರಿಂದ, ಅವನ ಗಂಟಲು ನೀಲಿಯಾಯಿತು. ಆದುದರಿಂದ ಅವನು ನೀಲಕಂಠನೆಂದು ಕರೆಯಲ್ಪಡುತ್ತಾನೆ; ನೀಲಿ ಗಂಟಲಿನೊಂದಿಗಿನ ಸುಂದರನಾದವನು. ಹಿಂದೂ ಪುರಾಣದಲ್ಲಿ ಕಥೆ ಸಾಗುವುದು ಹೀಗೆ.
ಕಾಳಿಯೆಂದರೆ ಜ್ಞಾನವೆಂಬ ಅರ್ಥ ಕೂಡಾ ಇದೆ; ಪರಿವರ್ತನೆಯ ಜ್ಞಾನ. ಕಾಳಿಯು ಸೌಭಾಗ್ಯದ ಮೇಲೆ; ಶಿವನ ಔದಾರ್ಯದ ಮೇಲೆ ನಿಂತಾಗ, ಅದು ಜಗತ್ತಿಗೆ ಒಳ್ಳೆಯದನ್ನು ತಂದಿತು. ಹೀಗೆ, ಅದೇ ಶಕ್ತಿಯು ಬಹಳ ಪರೋಪಕಾರಿಯಾಯಿತು ಮತ್ತು ಕಾಳಿಯು ನಂತರ ಎಂಥಹ ಪರೋಪಕಾರಿ ಹರಸುವವಳಾದಳೆಂದರೆ, ಅವಳು ವಿಶ್ವಕ್ಕೆ ಜ್ಞಾನವನ್ನು ನೀಡಿ ಹರಸಿದಳು. ಆದುದರಿಂದ ಅವಳು ಭದ್ರಕಾಳಿ ಎಂದು ಕೂಡಾ ಕರೆಯಲ್ಪಡುತ್ತಾಳೆ; ಯಾವತ್ತೂ ಒಳ್ಳೆಯದನ್ನು ಮಾಡುವವಳು.

ಪ್ರಶ್ನೆ: ಪ್ರೀತಿಯ ಗುರುದೇವ, ಪ್ರತಿಯೊಂದು ನಿರಾಕಾರವೂ ಶಿವನಾಗಿದ್ದರೆ ಮತ್ತು ಪ್ರತಿಯೊಂದು ಸಾಕಾರವೂ ಶಕ್ತಿಯಾಗಿದ್ದರೆ, ಸಾಕಾರವೂ ನಿರಾಕಾರವೂ ಎರಡೂ ಆಗಿರುವ ಉಸಿರು ಎಂಬುದೇನು?
ಶ್ರೀ ಶ್ರೀ ರವಿ ಶಂಕರ್: ಹೌದು, ನಿರಾಕಾರವು ಶಿವ ಮತ್ತು ಸಾಕಾರವು ಶಕ್ತಿ. ನೀನದನ್ನು ಯಾವುದೇ ರೀತಿಯಲ್ಲಿ ಬೇಕಾದರೂ ನಿರೂಪಿಸಬಹುದು.
ಪ್ರಾಣವು ಮುಖ್ಯಪ್ರಾಣವೆಂದು ಕೂಡಾ ತಿಳಿಯಲ್ಪಡುತ್ತದೆ. ಹನುಮಂತನು ಪ್ರಾಣದೊಂದಿಗೆ ಸಂಬಂಧ ಹೊಂದಿದ್ದಾನೆ, ವಾಯುವು ಪ್ರಾಣದೊಂದಿಗೆ ಸಂಬಂಧ ಹೊಂದಿದೆ, ಓಂಕಾರವು ಪ್ರಾಣದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ವಿಶ್ವದಲ್ಲಿ ಎಲ್ಲವೂ ಪ್ರಾಣವಾಗಿದೆ. ನಾವು ಪ್ರಾಣದ ಒಂದು ಸಾಗರದಲ್ಲಿದ್ದೇವೆ ಮತ್ತು ಪ್ರಾಣವು ಶಿವ ಹಾಗೂ ಶಕ್ತಿ ಇಬ್ಬರೂ ಆಗಿದೆ.
ಶಿವ ಮತ್ತು ಶಕ್ತಿಯರ ನಡುವೆ ನಿನಗೆ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಾಗದಂತಹ ಒಂದು ಸಂದರ್ಭ ಬರುತ್ತದೆ. ಸೀಮೆಯು ಮಾಯವಾಗುತ್ತದೆ, ಅದು ಅದೃಶ್ಯವಾಗುತ್ತದೆ. ಶಿವ ಮತ್ತು ಶಕ್ತಿಯರು ಒಂದಾಗುತ್ತಾರೆ. ಆಗಲೇ ಅದು ಬ್ರಹ್ಮನ್ ಎಂದು ಕರೆಯಲ್ಪಡುವುದು, ಅದರರ್ಥ, ಅದೆಲ್ಲವೂ ಒಂದೇ; ಎರಡನೆಯದು ಇಲ್ಲವೆಂದು.
ಅದ್ವೈತವೆಂದರೆ, ಎರಡನೆಯದಿಲ್ಲ, ಎರಡು ಎಂಬುದಿಲ್ಲವೆಂದು (ಒಂದು ಎಂದು ಎಣಿಸಬೇಕಾದರೆ ಕೂಡಾ, ಅಲ್ಲಿ ಎರಡಿರಬೇಕು. ಅದಕ್ಕಾಗಿಯೇ, "ಎರಡಿಲ್ಲ, ಕೇವಲ ಒಂದಿರುವುದು" ಎಂದು ಹೇಳಲಾಗಿರುವುದು). ಅದು ಚೈತನ್ಯದ ಒಂದು ಕ್ಷೇತ್ರ. ಅದಕ್ಕಿಂತ ಹೊರತಾದುದು ಯಾವುದೂ ಅಸ್ತಿತ್ವದಲ್ಲಿಲ್ಲ. ಅದ್ವೈತವೆಂದರೆ ಎರಡಿಲ್ಲದ; ಅದು ವಿಶ್ವದಲ್ಲಿನ ಎರಡಿಲ್ಲದ ಶಕ್ತಿ. ಇದು ಅತ್ಯುನ್ನತ ಜ್ಞಾನ, ಅಂದರೆ; ಎರಡಿಲ್ಲದಿರುವಿಕೆ, ಎರಡು ವಿಷಯಗಳಿಲ್ಲ. ಸಂಪೂರ್ಣ ವಿಶ್ವವು ಒಂದು ವಿಷಯದಿಂದ ಮಾಡಲ್ಪಟ್ಟಿದೆ.
ನೀವು ಒಂದು ಹೆಜ್ಜೆ ಕೆಳಗೆ ಬಂದಾಗ; ಅದು ಕ್ವಾಂಟಮ್ ಫಿಸಿಕ್ಸಿನಂತೆ. ಇನ್ನೂ ಒಂದು ಹೆಜ್ಜೆ ಕೆಳಗೆ ಬಂದರೆ, ಆಗ ಅದು ರಸಾಯನ ಶಾಸ್ತ್ರದಲ್ಲಿನ ಆವರ್ತಕ ಕೋಷ್ಟಕದಂತೆ. ನಿಮಗೆ ಆವರ್ತಕ ಕೋಷ್ಟಕ ತಿಳಿದಿದೆಯೇ? ನಿಮ್ಮಲ್ಲಿ ವಿವಿಧ ಮೂಲ ಅಂಶಗಳಿರುತ್ತವೆ, ವಿವಿಧ ಮಗ್ಗಲುಗಳು; ಇವುಗಳೆಲ್ಲವೂ ವಿವಿಧ ದೇವ ದೇವತೆಯರು.

ಪ್ರಶ್ನೆ: ಕೃಷ್ಣನು, "ಧರ್ಮಕ್ಕೆ ವಿರುದ್ಧವಾಗಿರದ ಬಯಕೆಯು ನಾನಾಗಿರುವೆನು" ಎಂದು ಹೇಳುತ್ತಾನೆ. ಧರ್ಮ ಸಮ್ಮತವಾದ ಮತ್ತು ಧರ್ಮಕ್ಕೆ ವಿರೋಧವಾದ ಬಯಕೆಗಳು ಯಾವುವೆಂದು ಗುರುತಿಸುವುದು ಹೇಗೆಂದು ನೀವು ನಮಗೆ ದಯವಿಟ್ಟು ತಿಳಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯವಾಗಿರುವ, ಸಹಜವಾಗಿರುವ ಮತ್ತು ನಿಮ್ಮಲ್ಲಿ ಯಾವುದೇ ತಪ್ಪಿತಸ್ಥ ಭಾವನೆಯನ್ನಾಗಲೀ ಭಯವನ್ನಾಗಲೀ ಅಥವಾ ಅಹಿತವನ್ನಾಗಲೀ ಉಂಟುಮಾಡದ ಬಯಕೆಗಳು ಅಥವಾ ನಿಮ್ಮನ್ನು ನಿಮ್ಮ ಸಹಜತೆಯಿಂದ ದೂರ ಕೊಂಡೊಯ್ಯದ ಬಯಕೆಗಳು ಧರ್ಮವೆಂದು ಕರೆಯಲ್ಪಡುತ್ತವೆ. ನಿಮ್ಮನ್ನು ಅಲುಗಾಡಿಸುವ, ಉರಿಸುವ ಅಥವಾ ನಿಮ್ಮಲ್ಲಿ ಅಹಿತವನ್ನುಂಟುಮಾಡುವ ಯಾವುದೇ ಆಗಲಿ; ಆ ಬಯಕೆಯಲ್ಲಿರುವ ಅಹಿತಕರ ಭಾವನೆಯು, ಅದು ಧರ್ಮವಲ್ಲವೆಂಬುದನ್ನು ಸೂಚಿಸುತ್ತದೆ. ಅದು ಧರ್ಮವಾದರೆ, ಅದು ಬಹಳ ಹಿತಕರವಾಗಿರುತ್ತದೆ. ಅದು ಧರ್ಮವಲ್ಲದಿದ್ದರೆ, ಆಗ ಆ ಬಯಕೆಯಲ್ಲಿ ಭಯ, ತಪ್ಪಿತಸ್ಥ ಮನೋಭಾವ ಅಥವಾ ಅಹಿತಕರ ಭಾವನೆಯಿರುತ್ತದೆ.

ಪ್ರಶ್ನೆ: ನಿಜವಾದ ಸೇವೆ ಯಾವುದು? ನನ್ನ ಪ್ರತಿಯೊಂದು ಕ್ರಿಯೆಯೂ ಹೇಗೆ ಸೇವೆಯಾಗಬಲ್ಲದು?
ಶ್ರೀ ಶ್ರೀ ರವಿ ಶಂಕರ್: ಸೇವೆಯೆಂದರೆ, ಅವನಂತೆ ಮಾಡುವುದು. ’ಅವನು’ ಎಂದರೆ, ಸೃಷ್ಟಿಕರ್ತ. ಅವನು ನಿಮಗಾಗಿ ಎಲ್ಲವನ್ನೂ ಮಾಡುತ್ತಾನೆ ಮತ್ತು ಅವನು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದುದರಿಂದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದು; ಇದು ಸೇವೆಯೆಂದು ಕರೆಯಲ್ಪಡುತ್ತದೆ.
ಖಂಡಿತವಾಗಿಯೂ ಅಲ್ಲೊಂದು ಪ್ರತಿಫಲವಿದೆ. ನಿಸ್ಸಂಶಯವಾಗಿ ಅದರಿಂದ ಒಂದು ಲಾಭವಿದೆ, ಆದರೆ ನೀವು ಪ್ರತಿಫಲವನ್ನು ನಿರೀಕ್ಷಿಸುವಾಗ, ಅದು ಸೇವೆಯಾಗುವುದಿಲ್ಲ. ಏನನ್ನೂ ನಿರೀಕ್ಷಿಸದೆಯೇ, ಏನನ್ನೂ ಬಯಸದೆಯೇ, ಕೇವಲ ಮಾಡುವುದಕ್ಕೋಸ್ಕರ ಮಾಡುವುದು ಸೇವೆಯೆಂದು ಕರೆಯಲ್ಪಡುತ್ತದೆ.

ಶುಕ್ರವಾರ, ಡಿಸೆಂಬರ್ 28, 2012

ನೃತ್ಯ ಮತ್ತು ನರ್ತಕ


೨೮ ಡಿಸೆಂಬರ್ ೨೦೧೨
ಬಾಡ್ ಅಂತೋಗಾಸ್ತ್, ಜರ್ಮನಿ

ಪ್ರ: ಪೂಜ್ಯ ಗುರೂಜಿ, ದಯವಿಟ್ಟು ನಮಗೆ ಗುರುಪರಂಪರೆಯ ಬಗ್ಗೆ ಇನ್ನೂ ಹೆಚ್ಚು ತಿಳಿಸುವಿರಾ?
ಶ್ರೀಶ್ರೀ: ಅದು ಹಲವು ಸಾವಿರ ವರ್ಷಗಳಿಂದ ನಡೆಯುತ್ತಿರುವುದರಿಂದ, ಸರಿಯಾಗಿ ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿದಿಲ್ಲ.

ಯೋಗದ ಜ್ಞಾನ, ಧ್ಯಾನ ಮತ್ತು ಈ ಸಂಪೂರ್ಣ ಬ್ರಹ್ಮಾಂಡವು ಒಂದು ಶಕ್ತಿಯಿಂದ ಸೃಷ್ಟಿಯಾಗಿದೆ ಎಂಬ ಜ್ಞಾನ, ಈ ಗುರುಪರಂಪರೆಯ ಮೂಲಕ ಮುಂದೆ ಸಾಗಿಸಲಾಗಿದೆ.
ಸಾಮಾನ್ಯವಾಗಿ ನೀವು ಏನನ್ನಾದರೂ ತಯಾರಿಸಿದಾಗ, ತಯಾರಿಸುವವನು ಆ ವಸ್ತುವಿನಿಂದ ಬೇರೆಯಾಗಿರುತ್ತಾನೆ. ಉದಾಹರಣೆಗೆ, ನೀವೊಂದು ಮೋಂಬತ್ತಿಯನ್ನು ತಯಾರಿಸಬೇಕಿದ್ದರೆ, ನೀವು ಆ ಮೋಂಬತ್ತಿಯು ನನ್ನಿಂದ ಬೇರೆ ಎಂದು ಯೋಚಿಸುತ್ತೀರಿ ಮತ್ತು ನೀವದನ್ನು ನಿಮ್ಮಿಂದ ಬೇರೆಯಾಗಿ ದೂರದಲ್ಲಿಡುತ್ತೀರಿ, ’ಅದು ನನ್ನ ಸೃಷ್ಟಿ ಆದರೆ ಅದು ನಾನಲ್ಲ.’

ಹಾಗೆ ಜನರು ಈ ರೀತಿಯಾಗಿ ಯೋಚಿಸುತ್ತಾರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡು ಬೇರೆ ಬೇರೆ ವಸ್ತುಗಳು ಎಂದು. ಆದರೆ ನೀವು ದೇವರು ಸರ್ವಾಂತರ್ಯಾಮಿ ಎಂದು ಹೇಳಿದರೆ, ಅಂದರೆ ಎಲ್ಲಾ ಕಡೆ ಇರುವವನಾಗಿದ್ದರೆ, ಅವನು ಸೃಷ್ಟಿಯ ಒಳಗೂ ಇರಬೇಕು.

ಏನಾದರೂ ಸರ್ವವ್ಯಾಪಿಯಾಗಿದ್ದರೆ, ಬೇರೇನಾದರೂ ಇದರಿಂದ ಹೊರಗಿರಲು ಎಲ್ಲಿ ಸ್ಥಳವಿದೆ? ಅಲ್ಲವೇ?! ನಾನು ಸರ್ವಶಕ್ತನಾಗಿದ್ದರೆ, ಏನಾದರೂ ಬೇರೆ ನನಗಿಂತಲೂ ಹೆಚ್ಚು ಶಕ್ತಿಯುತವಾದದ್ದು ಇರಲು ಸಾಧ್ಯವೇ? ಸಾಧ್ಯವಿಲ್ಲ. ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡು ಬೇರೆ ವಸ್ತುಗಳಲ್ಲ. ಇರುವುದು ಕೇವಲ ಒಂದೇ.

ಈಗ ನಾವಿದನ್ನು ಹೇಗೆ ಅರ್ಥಮಾಡಿಕೊಳ್ಳುವುದು - ಸೃಷ್ಟಿ ಮತ್ತು ಸೃಷ್ಟಿಕರ್ತ ಒಂದೇ ಎಂಬುದನ್ನು?
ನೃತ್ಯ ಮತ್ತು ನರ್ತಕನ ಉದಾಹರಣೆಯಿಂದ. ನಿಮಗೆ ಒಂದು ನೃತ್ಯವನ್ನು ಆ ನರ್ತಕನಿಂದ ಬೇರ್ಪಡಿಸಲು ಸಾಧ್ಯವೇ? ಇಲ್ಲ! ಅದು ಅಸಾಧ್ಯ. ನಿಮಗೆ ಆ ನೃತ್ಯ ನೋಡಬೇಕಿದ್ದರೆ, ನೀವು ಅದನ್ನು ಕೇವಲ ಆ ನರ್ತಕನ ಮೂಲಕ ನೋಡಬಲ್ಲಿರಿ. ಒಬ್ಬ ಕಲಾಕಾರ ಮತ್ತು ಅವನ ಚಿತ್ರಕಲೆ ಬೇರೆ ಬೇರೆಯಾಗಿವೆ. ಒಬ್ಬ ಕಲಾಕಾರ ಒಂದು ಚಿತ್ರವನ್ನು ಬಿಡಿಸಿ ಅದರಿಂದ ದೂರವಾಗಬಹುದು, ಮತ್ತು ಆಗಲೂ ಆ ಚಿತ್ರ ಇರುತ್ತದೆ.ಆದರೆ ಆ ನರ್ತಕ ತನ್ನ ನೃತ್ಯದಿಂದ ಬೇರೆಯಾಗಲು ಸಾಧ್ಯವಿಲ್ಲ.

ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ, ಆ ನೃತ್ಯ ಮತ್ತು ನರ್ತಕರಿದ್ದ ಹಾಗೆ. ಯಾವ ಶಕ್ತಿಯನ್ನು ನಾವು ಭಗವಂತ ಅಥವಾ ಪ್ರೀತಿ ಅಥವಾ ಬೆಳಕು ಎಂದು ಕರೆಯುತ್ತೇವೋ, ಅದು ಈ ಸಂಪೂರ್ಣ ಸೃಷ್ಟಿಯನ್ನು ಮತ್ತು ಈ ಬ್ರಹ್ಮಾಂಡದ ಪ್ರತಿಕಣವನ್ನೂ ವ್ಯಾಪಿಸಿಕೊಂಡಿದೆ.

ಇದು ಆ ಪ್ರಾಚೀನ ಜ್ಞಾನದ ಸಾರ, ಮತ್ತು ಆಧುನಿಕ ವಿಜ್ಞಾನ ಹಾಗೂ ಕ್ವಾಂಟಂ ಭೌತಶಾಸ್ತ್ರ ಇದನ್ನೇ ವಿವರಿಸುವುದು. ಈ ಸಂಪೂರ್ಣ ಜಗತ್ತು ಒಂದು ಕ್ಷೇತ್ರದಿಂದ, ಒಂದು ಶಕ್ತಿಯಿಂದ ರಚಿಸಲ್ಪಟ್ಟಿದೆ. ಇದು ವೇದಾಂತಿಗಳ ಹಲವಾರು ಒಗಟುಗಳನ್ನು ಬಿಡಿಸುತ್ತದೆ.

ಪ್ರ: ನಾವು ಕೊರತೆಯ ಆಲೋಚನೆಗಳನ್ನು ಸಮೃದ್ಧಿಯ ಆಲೋಚನೆಗಳಾಗಿ ಹೇಗೆ ಪರಿವರ್ತಿಸುವುದು?
ಶ್ರೀಶ್ರೀ: ನಿಮಗೆ ಅದನ್ನು ಮಾಡಬೇಕೆಂಬ ಆಲೋಚನೆಯಿರುವುದರ ಅರ್ಥ ನೀವು ಆಗಲೇ ಆ ಮಾರ್ಗದಲ್ಲಿ ನಡೆಯಲು ಆರಂಭಿಸಿದ್ದೀರಿ ಎಂದು.
ನಿಮ್ಮ ಅಗತ್ಯಗಳೇನೆಂಬುದನ್ನು ನೋಡಿ, ಮತ್ತು ಅವು ಯಾವಾಗಲೂ ಪೂರೈಸಲ್ಪಡುತ್ತವೆ ಎಂಬುದನ್ನು ನೀವು ನೋಡುತ್ತೀರಿ. ನಿಮಗೇನೇ ಬೇಕಿದ್ದರೂ ಅದು ಸದಾ ನಿಮ್ಮನ್ನು ತಲುಪುತ್ತದೆ. ಆದರೆ ಅದನ್ನು ಒಂದು ಮಿತಿ ಮೀರಿ ತೆಗೆದುಕೊಂಡು ಹೋಗಿ, ’ನಾನು ಏನೂ ಮಾಡದೇ, ಎಲ್ಲವೂ ನನ್ನ ಬಳಿಗೆ ಬರಲಿ’ ಎಂದು ಹೇಳಬೇಡಿ. ಇಲ್ಲ, ಅದು ಸರಿಯಲ್ಲ. ನೀವು ನಿಮ್ಮ ಪ್ರಯತ್ನವನ್ನು ಹಾಕಬೇಕು, ಮತ್ತು ನಿಮಗೆ ಧೈರ್ಯಬೇಕು. ಈ ಎರಡು ವಿಷಯಗಳು ನಿಮಗೆ ಸಂಪತ್ತನ್ನು ತರುತ್ತವೆ.

ಸಂಸ್ಕೃತದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ: ’ಉದ್ಯೋಗಿನೋ ಪುರುಷ ಸಿಂಹಂ ಉಪೈತಿ ಲಕ್ಷ್ಮೀ’.
ಅದರ ಅರ್ಥ ಒಂದು ಸಿಂಹದ ಧೈರ್ಯ ಹಾಗೂ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವವನ ಬಳಿ ಸಂಪತ್ತು ಬರುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿ ಮತ್ತು ಸಿಂಹದಂತೆ ಇರಿ. ನಿಮಗೆ ಗೊತ್ತೇ ಸಿಂಹವು ಅತ್ಯಂತ ಸೋಮಾರಿ ಮೃಗ. ಸಿಂಹಿಣಿಯು ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಅದನ್ನು ಸಿಂಹಕ್ಕೆ ನೀಡುವುದು. ಸಿಂಹವು ಸುಮ್ಮನೆ ಹೋಗಿ ಬೇಟೆಯನ್ನು ತಿನ್ನುತ್ತದೆ. ಸಿಂಹಿಣಿಯು ಕೆಲಸವನ್ನು ಮಾಡುವುದು. ಸಿಂಹವು ಆಹಾರಕ್ಕಾಗಿ ಬೇಟೆಯಾಡುವ ಕೆಲಸವನ್ನೂ ಮಾಡುವುದಿಲ್ಲ. ಅವನು ಆಲಸಿಯಾದರೂ ಅವನು ವನದ ರಾಜ ಮತ್ತು ಅವನಲ್ಲಿ ಆತ್ಮ ವಿಶ್ವಾಸವಿದೆ. ಹಾಗಾಗಿ ನಿಮ್ಮಲ್ಲಿ ಇರಬೇಕಾದುದು ಇದೇ – ಆತ್ಮ ವಿಶ್ವಾಸ ಮತ್ತು ಸಿಂಹದ ಘನತೆಯ ಪ್ರಜ್ಞೆ.

ನೀವು ನಿಮ್ಮ ೧೦೦% ಪ್ರಯತ್ನ ಹಾಕಬೇಕು ಮತ್ತು ಆಗಲೇ ಸಂಪತ್ತು ನಿಮ್ಮ ಬಳಿ ಬರುವುದು. ಕುಳಿತು ಅದರ ಬಗ್ಗೆ ಹಗಲುಗನಸು ಕಾಣುವುದು ಅಥವಾ ಅದರ ಬಗ್ಗೆ ಜ್ವರತೆಯಿಂದಿರುವುದು ನಿಮಗೆ ಫಲ ನೀಡುವುದಿಲ್ಲ. ಅದರ ಬಗ್ಗೆ ಜ್ವರತೆಯನ್ನು ಬಿಡಿ, ಸುಮ್ಮನೆ ಒಂದು ಕೆಲಸವನ್ನು ಕೈಗೆತ್ತಿಕೊಂಡು ಅದನ್ನು ಮಾಡಿ. ಮುಂದೊಮ್ಮೆ,  ಅದರೊಂದಿಗೆ ನೀವು ಸಂಪತ್ತನ್ನೂ ಪಡೆಯುತ್ತೀರಿ ಎಂಬುದನ್ನು ನೀವು ನೋಡುತ್ತೀರಿ.

ಪ್ರ: ಪೂಜ್ಯ ಗುರೂಜಿ, ಬೇರೆ ಬೇರೆ ವಿಧದ ಪ್ರಾಣಗಳು (ಜೀವದ ಸೂಕ್ಷ್ಮಶಕ್ತಿ) ಇವೆಯೆಂದು ನೀವು ಹೇಳಿದಿರಿ. ದಯವಿಟ್ಟು ಅವುಗಳ ಬಗ್ಗೆ ನೀವು ಇನ್ನೂ ಬಿಡಿಸಿ ಹೇಳಬಹುದೆ?
ಶ್ರೀಶ್ರೀ: ಹತ್ತು ಬಗೆಯ ಪ್ರಾಣಗಳಿವೆ (ಜೀವದ ಸೂಕ್ಷ್ಮಶಕ್ತಿ). ಇವುಗಳಲ್ಲಿ, ಐದು ಪ್ರಮುಖ ಮತ್ತು ಐದು ಸಣ್ಣ ಪ್ರಾಣಗಳಿವೆ. ಇವತ್ತು ನಾನು ಕೇವಲ ಪ್ರಮುಖ ಪ್ರಾಣಗಳ ಬಗ್ಗೆ ಮಾತನಾಡುತ್ತೇನೆ. ಪ್ರಮುಖ ಪ್ರಾಣಗಳಲ್ಲಿ ಮೊದಲನೆಯದನ್ನು ಪ್ರಾಣವೆಂದು ಕರೆಯುತ್ತಾರೆ, ಇದು ನಾಭಿ ಪ್ರದೇಶದಿಂದ ಉದ್ಭವಿಸಿ ತಲೆಯ ಮೇಲ್ಭಾಗದತ್ತ ಹರಿಯುತ್ತದೆ.

ಮತ್ತೆ ಇನ್ನೊಂದು ಪ್ರಾಣ ನಾಭಿಯಿಂದ ಕೆಳಮುಖವಾಗಿ ಹರಿಯುತ್ತದೆ, ಅದನ್ನು ಅಪಾನ ಎಂದು ಕರೆಯುತ್ತಾರೆ. ಪ್ರಾಣದ ಮಟ್ಟವು ಬಹಳ ಹೆಚ್ಚಿದ್ದಾಗ, ನಿಮಗೆ ನಿದ್ರಿಸಲಾಗುವುದಿಲ್ಲ; ನಿಮಗೆ ನಿದ್ರಾಹೀನತೆ ಉಂಟಾಗಬಹುದು ಮತ್ತು ನಿಮಗೆ ಆತಂಕ ಉಂಟಾಗಬಹುದು. ಅಲ್ಲದೇ ಅಪಾನದ ಮಟ್ಟವು ಏರಿದಾಗ, ನಿಮಗೆಷ್ಟು ಉದಾಸೀನವೆನಿಸಬಹುದೆಂದರೆ ನಿಮಗೆ ಹಾಸಿಗೆಯಿಂದ ಏಳಲೂ ಮನಸ್ಸಾಗದಿರಬಹುದು. ನಿಮಗೆ ಈ ಅನುಭವ ಉಂಟಾಗಿದೆಯೇ? ಕೆಲವೊಮ್ಮೆ ನಿಮಗೆ ಅಷ್ಟೊಂದು ಭಾರ ಮತ್ತು ಒಟ್ಟಾರೆ ಉದಾಸೀನತೆ ಅನಿಸುತ್ತದೆ. ಇದು ಅಪಾನದ ಅಸಮತೋಲನದಿಂದ ಉಂಟಾಗುತ್ತದೆ.

ಮೂರನೇ ರೀತಿಯ ಪ್ರಾಣವು ಸಮಾನ, ಯಾವುದು ನಮ್ಮ ಜೀರ್ಣ ಮಂಡಲದಲ್ಲಿ ಜೀರ್ಣಿಸುವ ಅಗ್ನಿಯಾಗಿ ಅಂದರೆ ಜಠರಾಗ್ನಿಯಾಗಿ ಉಪಸ್ಥಿತವಾಗಿದೆ ಅದು. ಈ ಅಗ್ನಿಯು ಆಹಾರವನ್ನು ಜೀರ್ಣಿಸಲು ಸಹಾಯಕವಾಗುವಂತಹ ಅಗ್ನಿ. ಸಮಾನ ಎಂಬುದು ಜೀರ್ಣ ಕ್ರಿಯೆಯಲ್ಲಿ ಸಹಾಯಕವಾದುದು, ಮತ್ತು ಅನ್ಯ ಶಾರೀರಿಕ ವ್ಯವಸ್ಥೆಗಳಲ್ಲು ಸಹಾಯಕವಾಗಿದೆ. ಅದು ಆ ವ್ಯವಸ್ಥೆಯ ಸಮತೋಲನ ಕಾಪಾಡುವುದರಲ್ಲಿ ಸಹಾಯಕವಾಗಿದೆ.

ಮತ್ತೆ ಉದಾನ ವಾಯು ಅಥವಾ ಉದಾನ ಪ್ರಾಣ ಇದೆ, ಇದು ಹೃದಯ ಭಾಗದ ಸಮೀಪದಲ್ಲಿರುವುದು ಮತ್ತು ಇದು ಎಲ್ಲಾ ಭಾವನೆಗಳಿಗೆ ಕಾರಣ.

ಮತ್ತೆ, ಐದನೆಯ ಪ್ರಾಣವನ್ನು ವ್ಯಾನ ಎನ್ನಲಾಗುತದೆ, ಇದು ಶರೀರದ ಎಲ್ಲಾ ಚಲನಗಳಿಗೆ ಕಾರಣ. ಇದು ಸಂಪೂರ್ಣ ಶರೀರದಲ್ಲಿ ಹಬ್ಬಿಕೊಂಡಿದೆ.
ಸುದರ್ಶನ ಕ್ರಿಯೆಯಲ್ಲಿ ನಿಮಗೆ ಒಂದು ಜೋಮುಹಿಡಿದ, ಸಂಪೂರ್ಣ ಶರೀರದಲ್ಲಿ ಒಂದು ಶಕ್ತಿಯ ಅನುಭವವಾಗುತ್ತದೆ. ನೀವೆಲ್ಲರೂ ಇದನ್ನು ಅನುಭವಿಸಿದ್ದೀರಾ? ಸುದರ್ಶನ ಕ್ರಿಯೆಯಲ್ಲಿ ಏನಾಗುವುದೆಂದರೆ, ಎಲ್ಲಾ ಪಂಚಪ್ರಾಣಗಳು ಸಮತೋಲನಗೊಳ್ಳುತ್ತವೆ, ಮತ್ತು ಅದರಿಂದಲೇ ನೀವು ಅಳುವುದು, ಅಥವಾ ನಗುವುದು, ಮತ್ತು ಮೈಯೆಲ್ಲ ಜೋಮುಹಿಡಿದಂತೆ ಅನುಭವವಾಗುವುದು. ಇದು ಸುದರ್ಶನ ಕ್ರಿಯೆಯ ವೈಶಿಷ್ಟ್ಯ. ಕ್ರಿಯೆಯ ಬಳಿಕ ನಿಮಗೆ ಬಹಳ ಹಸಿವೂ ಅನುಭವವಾಗುವುದುಂಟು, ಅಲ್ಲವೇ?

ಹಾಗಾಗಿ ಶರೀರದಲ್ಲಿನ ಈ ಪಂಚಪ್ರಾಣಗಳು ನಮ್ಮ ಜೀವನವನ್ನು ನಡೆಸುತ್ತವೆ. ಸಮಾನ ವಾಯು ಅಸಮತೋಲನವಾದರೆ, ಅದು ಜೀರ್ಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟು ಮಾಡುತ್ತದೆ, ಮತ್ತು ನಿಮಗೆ ಆಹಾರವನ್ನು ಸರಿಯಾಗಿ ಜೀರ್ಣಿಸಲಾಗುವುದಿಲ್ಲ, ಅಥವಾ ನಿಮಗೆ ಹೊಟ್ಟೆ ತೊಳಸಿದಂತಾಗಬಹುದು. ಇವೆಲ್ಲಾ ಸಮಾನ ಪ್ರಾಣದ ಅಸಮತೋಲನದಿಂದಾಗುವುದು.

ಉದಾನ ಪ್ರಾಣ ಸಿಕ್ಕಿಕೊಂಡಾಗ,  ನೀವು ಭಾವನೆಗಳಲ್ಲಿ ಅಡೆತಡೆಗಳನ್ನು ಅನುಭವಿಸುತ್ತೀರಿ ಮತ್ತು ಅದು ನಿಮ್ಮ ಆಲೋಚನೆಗಳ ಹಾಗೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಸಂಪೂರ್ಣ ಶರೀರದಲ್ಲಿರುವ ವ್ಯಾನ ಅಸಮತೋಲನಗೊಂಡಾಗ, ನಿಮಗೆ ಸಂಧಿಗಳಲ್ಲಿ ನೋವು, ಅಥವಾ ಚಲನೆಯಲ್ಲಿ ತೊಂದರೆ, ಮತ್ತು ನೀವು ಅತಿ ಗಾಬರಿ ಹಾಗೂ ಅವಿಶ್ರಾಂತಿ ಅನುಭವಿಸುತ್ತೀರಿ, ಅಥವಾ ನಿಮಗೆ ಏನನ್ನೂ ಮಾಡಲು ಮನಸ್ಸಾಗದಿರಬಹುದು. ಅಂಥ ಸ್ಥಿತಿಯಲ್ಲಿ ಓಡಾಡಿದಾಗ ಅಸಮಾಧಾನ ಮತ್ತು ಶರೀರದಲ್ಲಿ ಚಡಪಡಿಸುವಿಕೆಯನ್ನು ಉಂಟುಮಾಡುತ್ತದೆ. ಇವೆಲ್ಲಾ ವ್ಯಾನ ಪ್ರಾಣದ ಅಸಮತೋಲನದಿಂದ ಉಂಟಾಗುವುದು.

ಸುದರ್ಶನ ಕ್ರಿಯೆಯ ನಂತರ, ನೀವು ಗಮನಿಸಿರಬೇಕು, ಈ ಎಲ್ಲಾ ಅಸಮತೋಲನಗಳು ಹೋಗಿಬಿಡುತ್ತವೆ. ಇದು ನಿಮ್ಮೆಲ್ಲರಿಗೂ ಆಗಿಲ್ಲವೇ? ಹಿಂದೆ ಶರೀರದ ಚಲನೆಯಲ್ಲಿ ಇದ್ದಂಥ ಎಲ್ಲಾ ಅಹಿತ ಅನುಭವ, ಅಥವಾ ರಕ್ತ ಪರಿಚಲನೆಯಲ್ಲಿನ ತೊಂದರೆ, ಅಥವಾ ವ್ಯಾನ ಅಸಮತೋಲನದ ಒಂದು ನೋವು, ಎಲ್ಲವೂ ಸುದರ್ಶನ ಕ್ರಿಯೆಯ ನಂತರ ಕಣ್ಮರೆಯಾಗುತ್ತವೆ.

ಹಾಗೆ, ಇವು ಐದು ವಿವಿಧ ಪ್ರಾಣಗಳು.
ಐದು ಉಪ ಪ್ರಾಣಗಳೂ ಇವೆ, ಆದರೆ ನಾವು ಅದರ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

ಪ್ರ: ಬಾಳ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ವಿರಕ್ತಿಗಳು ಎಷ್ಟು ಸಮಂಜಸ?
ಶ್ರೀಶ್ರೀ: ನಿಮಗೆ ಜೀವನದಲ್ಲಿ ಅನುರಾಗ ಮತ್ತು ವೈರಾಗ್ಯ ಎರಡೂ ಆವಶ್ಯಕ. ಸಾಮಾನ್ಯವಾಗಿ ನಾವು ಯೋಚಿಸುತ್ತೇವೆ, ’ನನಗೆ ಅನುರಾಗವಿರುವಾಗ, ಹೇಗೆ ವಿರಕ್ತಿ ನನ್ನಲ್ಲಿರಬಹುದು? ನಾನು ವಿರಕ್ತನಾಗಿದ್ದರೆ, ನಾನು ಹೇಗೆ ಯಾವುದೇ ವಿಷಯದ ಕುರಿತು ಅನುರಾಗದಿಂದಿರುವುದು?’
ಇದು ಜನರ ಮನಸ್ಸಿನಲ್ಲಿ ಇರುವ ಸಾಮಾನ್ಯ ಪರಿಕಲ್ಪನೆ. ನಾನು ನಿಮಗೆ ಹೇಳುತ್ತೇನೆ, ಅದು ಆ ರೀತಿಯಲ್ಲ. ಅದು ಹೀಗಿರುವುದು, ನೀವು ಎಳೆಯುವ ಉಸಿರು ಅನುರಾಗ, ಹೊರಗೆ ಬಿಡುವ ಉಸಿರು ವಿರಕ್ತಿ ಮತ್ತು ಇವುಗಳೆರಡರ ನಡುವಿನಲ್ಲಿರುವುದು ಸಹಾನುಭೂತಿ. ನಮಗೆ ಎಲ್ಲಾ ಮೂರು ಅಗತ್ಯ.

ನಿಮಗೆ ಜೀವನದಲ್ಲಿ ಯಾವುದಾದರೊಂದರ ಬಗ್ಗೆ ಅನುರಾಗವಿರಬೇಕು, ಇಲ್ಲವಾದರೆ ನೀವು ಖಿನ್ನತೆಗೊಳಗಾಗುತ್ತೀರಿ. ಜ್ಞಾನದ ಬಗ್ಗೆ ಅನುರಾಗದಿಂದಿರಿ, ಸೇವೆ ಮಾಡುವುದರಲ್ಲಿ ಆಸಕ್ತಿಯಿರಲಿ, ಯೋಚಿಸುವುದರಲ್ಲಿ ಅಥವಾ ಯಾವುದರ ಬಗ್ಗೆಯಾದರೂ ಆಸಕ್ತಿಯಿಂದಿರಿ. ಜೀವನದಲ್ಲಿ ಒಂದಾದರೂ ವಿಷಯದ ಬಗ್ಗೆ ದಾಹ, ಆಸಕ್ತಿ ಖಂಡಿತ ಇರಬೇಕು. ನೀವು ವಿವೇಕದ ಬಗ್ಗೆಯೂ ಆಸಕ್ತಿ ಇಟ್ಟುಕೊಳ್ಳಬಹುದು. ಹಾಗಾಗಿ ಆಸಕ್ತಿಯು ಅತ್ಯಗತ್ಯ!

ವಿರಕ್ತಿಯೂ ಅತ್ಯಗತ್ಯವೇ. ವಿರಕ್ತಿಯಿಲ್ಲದೇ ಯಾವುದೇ ಆನಂದವಿಲ್ಲ; ಸಂತೋಷವಿಲ್ಲ. ನಿಮಗೆ ಚೂರೂ ವಿರಕ್ತಿಯಿಲ್ಲದಿದ್ದರೆ ನೀವು ದೀನತೆಗೊಳಗಾಗುತ್ತೀರಿ. ಮತ್ತೆ, ನಿಸ್ಸಂಶಯವಾಗಿ ಜೀವನದಲ್ಲಿ ದಯೆಯು ಆವಶ್ಯಕ. ಹಾಗಾಗಿ ಈ ಮೂರರಲ್ಲಿ ಎಲ್ಲವೂ ಅತ್ಯಗತ್ಯ.

ಪ್ರ: ನಾವು ಈ ಬಾರಿ ಮುಕ್ತಿ ಹೊಂದಲು ಅಸಫಲರಾದರೆ ಏನಾಗುತ್ತದೆ? ನಾವು ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಗಿರಬಹುದೇ?
ಶ್ರೀಶ್ರೀ: ಹೌದು, ಖಂಡಿತವಾಗಿ. ಅದರ ಬಗ್ಗೆ ಚಿಂತಿಸಬೇಡಿ.

ಪ್ರ: ಆಪ್ತ ಗುರೂಜಿ, ಅಷ್ಟೊಂದು ದಂಪತಿಗಳು ಮಕ್ಕಳನ್ನು ಪಡೆಯದಿರುವುದು ನನಗೆ ಆಶ್ಚರ್ಯವಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಏನಾಗುತ್ತಿದೆ?
ಶ್ರೀಶ್ರೀ: ಹ್ಞಾಂ, ಅದನ್ನುನೀವು ವೈದ್ಯರಲ್ಲಿ ಕೇಳಬೇಕು. ಅವರು ನಿಮ್ಮ ಸರಿಯಾದ ಪರಿಶೀಲನೆ ನಡೆಸುತ್ತಾರೆ. ನಾವು ಇದರ ಕುರಿತು ಸಾರ್ವತ್ರಿಕಗೊಳಿಸಲಾಗುವುದಿಲ್ಲ. ಅಲ್ಲದೇ ಮದ್ಯ ಮತ್ತು ಮಾದಕದ್ರವ್ಯಗಳ ಉಪಯೋಗ ಇದರ ಕಾರಣಗಳಲ್ಲಿ ಒಂದಾಗಿದೆ. ಅದರಲ್ಲೇನೂ ಒಳಿತಿಲ್ಲ. ಜನರು ತಮ್ಮ ಕಾಲೇಜು ದಿನಗಳಲ್ಲೇ ಅಥವಾ ಶಾಲಾದಿನಗಳಲ್ಲೇ ಮದ್ಯಪಾನ ಶುರುಮಾಡುತ್ತಾರೆ. ಅದು ಒಳ್ಳೆಯದಲ್ಲ. ಜನರು ಮಾದಕದ್ರವ್ಯಗಳಿಂದ ದೂರವಿದ್ದರೆ ಈ ಜಗತ್ತು ಇನ್ನೂ ಏಷ್ಟೋ ಒಳ್ಳೆಯದಾಗಿರುವುದು.