ಸುರಕ್ಷಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುರಕ್ಷಿತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಫೆಬ್ರವರಿ 3, 2013

ಭಾರತ ಬದಲಾವಣೆಯತ್ತ ಸಾಗುವ ಸಮಯ ಇದೋ ಬಂದಿದೆ


ದೆಹಲಿ, ಭಾರತ
೩ ಫೆಬ್ರುವರಿ, ೨೦೧೩

ಬೆಂಕಿಯಿರಬೇಕು, ಆದರೆ ಅದು ತಮ್ಮ ಮನೆಯನ್ನೇ ಸುಟ್ಟುಹಾಕಬಾರದು ಎಂಬುದನ್ನು ಸರಿಯಾಗಿಯೇ ಹೇಳಲಾಗಿದೆ.

ಒಂದು ರೀತಿಯಲ್ಲಿ, ಭಾರತದ ಯುವಕರು ಎಚ್ಚೆತ್ತುಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಈಗ ಜನರು ನಮ್ಮನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಯುವಕರು ಎಚ್ಚೆತ್ತಿದ್ದಾರೆ.

ನಮಗೆ ಭ್ರಷ್ಟಾಚಾರದ ಬಗ್ಗೆ ಅರಿವಾಗಿದೆ ಮತ್ತು ನಾವು ಅದರ ವಿರುದ್ಧ ನಮ್ಮ ಧ್ವನಿ ಎತ್ತಿದ್ದೇವೆ. ಪ್ರತಿದಿನವೂ ಭ್ರಷ್ಟಾಚಾರ ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.

’ಇನ್ನು ಮುಂದೆ ನಾವು ಅಪರಾಧವನ್ನು ಸಹಿಸೆವು ಮತ್ತು ನಮಗೆ ಕಟ್ಟುನಿಟ್ಟಾದ ಕಾನೂನುಗಳು ಬೇಕು’, ಇದಕ್ಕಾಗಿ ದಿಲ್ಲಿಯ ಯುವಕರು ತಮ್ಮ ದನಿ ಎತ್ತಿದ್ದಾರೆ ಮತ್ತು ಇಡೀ ದೇಶದ ಯುವಕರು ಇದಕ್ಕೆ ಸೇರಿಕೊಂಡಿದ್ದಾರೆ.

ಬೆಂಕಿಯನ್ನು ಹಚ್ಚಲಾಗಿದೆ ಮತ್ತು ಅದು ಒಳ್ಳೆಯದು, ಆದರೆ ನಾವಿದನ್ನು ಹಿಂಸೆಯ ಕಡೆಗೆ ತೆಗೆದುಕೊಂಡು ಹೋಗದಿರುವಂತೆ ನಾವು ಖಾತ್ರಿಪಡಿಸಿಕೊಳ್ಳಬೇಕು.

ನಮ್ಮನ್ನು ಎಚ್ಚರಗೊಳಿಸಲು ಕ್ರೋಧವು ಆವಶ್ಯಕವಾಗಿದೆ. ಆದರೆ ನಂತರ ಅದು ಅತಿಯಾದರೆ ಮತ್ತು ಸರಿಯಾದ ಮನೋಭಾವ ಹಾಗೂ ಒಂದು ಕ್ರಿಯಾ ಯೋಜನೆಯಿಲ್ಲದೆಯೇ ನಾವು ಕೇವಲ ಕ್ರೋಧಗೊಂಡಿದ್ದರೆ, ಆಗ ಆ ಕ್ರೋಧವು ನಮ್ಮನ್ನು ಸುಟ್ಟು ಹಾಕಲಿದೆ. ಯಾವುದೇ ರಚನಾತ್ಮಕ ಚಟುವಟಿಕೆಯ ಬದಲಾಗಿ ಅದು ಕೇವಲ ವಿನಾಶವನ್ನು ಮಾತ್ರ ತರುವುದು. ಕ್ರೋಧವು ಆವಶ್ಯಕವಾಗಿದೆ ಮತ್ತು ನಾವು ಆ ಕ್ರೋಧವನ್ನು, ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕಾಗಿದೆ.

ಇದು ಭಾರತದ ವಿಶೇಷತೆ. ನಾವೆಲ್ಲರೂ ಒಂದು ಕ್ರಾಂತಿಯನ್ನು ಬಯಸುತ್ತೇವೆ, ಆದರೆ ಒಂದು ಶಾಂತಿಪೂರ್ಣವಾದ ರೀತಿಯಲ್ಲಿ. ನಾವೆಲ್ಲರೂ ನಮ್ಮ ತಲೆಗಳನ್ನು ಎತ್ತಿಹಿಡಿದು ನಿಲ್ಲಲು ಮತ್ತು ಪರಸ್ಪರರನ್ನು ದೂಷಿಸದೆಯೇ ಆಗಬೇಕಾಗಿರುವ ಎಲ್ಲಾ ಕೆಲಸವನ್ನು ಮಾಡಲು ತಯಾರಿದ್ದೇವೆ.

ಯುವಜನರಲ್ಲಿ ಬಹಳಷ್ಟು ಶಕ್ತಿಯಿದೆ. ಸಮಾಜವು ದೊಡ್ಡ ಪ್ರಗತಿಯನ್ನು ಹೊಂದುವುದು ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗಲೇ.

ಇವತ್ತು ನಾವು ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬ ಈ ಬ್ಯಾನರಿನ ಅಡಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದೇವೆ, ಯಾಕೆಂದರೆ ವಿವಿಧ ಜನರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ.

ಈ ಕ್ರಾಂತಿಯು ಕೇವಲ ಒಂದು ಸಂಸ್ಥೆಯ ಕೆಲಸವಲ್ಲ. ಇದು ಇಡೀ ದೇಶದ ಕೆಲಸವಾಗಿದೆ. ಈ ಚಳುವಳಿಯನ್ನು ಬೆಂಬಲಿಸಿ ಈಗಾಗಲೇ ಇದರೊಂದಿಗೆ ಸೇರಿಕೊಂಡಿರುವ ಹಲವಾರು ಸಂಸ್ಥೆಗಳು ಮತ್ತು ಸಂಯುಕ್ತ ರಾಷ್ಟ್ರ ಸಂಸ್ಥೆಗಳಿವೆ ಹಾಗೂ ಇದರಲ್ಲಿ ಸೇರಿಕೊಳ್ಳಲು ನಾವು ಸರಕಾರದ ಜನರನ್ನೂ ಸ್ವಾಗತಿಸುತ್ತೇವೆ. ನಾವು ಎಲ್ಲರೂ ಬಂದು ಈ ಚಳುವಳಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಸ್ವಾಗತಿಸುತ್ತೇವೆ. ಭಾರತವನ್ನು ಒಂದು ಸುಂದರ ಮತ್ತು ಸುರಕ್ಷಿತ ದೇಶವನ್ನಾಗಿ ನೋಡಲು, ನಾವೆಲ್ಲರೂ ಜೊತೆಯಲ್ಲಿ ಸಮಗ್ರತೆಯೊಂದಿಗೆ ಕೆಲಸ ಮಾಡೋಣ.

ಇವತ್ತು, ಜನರಲ್ಲಿ ಸುರಕ್ಷಿತವಾಗಿರುವ ಭಾವನೆಯಿಲ್ಲ. ಪ್ರಪಂಚದ ಯಾವುದೇ ಭಾಗದ ಜನರನ್ನಾದರೂ ಸ್ವೀಕರಿಸುವ ಒಂದು ದೇಶವೆಂಬುದಾಗಿ ಭಾರತವು ಯಾವತ್ತೂ ತಿಳಿಯಲ್ಪಡುತ್ತಿತ್ತು. ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರು ಭಾರತಕ್ಕೆ ಬರುತ್ತಿದ್ದರು ಮತ್ತು ಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಈಗ ನಮ್ಮದೇ ದೇಶದಲ್ಲಿ, ನಾವು ಸುರಕ್ಷಿತವಾಗಿರುವೆವೆಂದು ನಮಗೆ ಅನ್ನಿಸುವುದಿಲ್ಲ!

ಸ್ತ್ರೀಯರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮಕ್ಕಳು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಕಲಾವಿದರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ದಲಿತರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮುಸ್ಲಿಮರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ ಮತ್ತು ಬ್ರಾಹ್ಮಣರು ಕೂಡಾ ಈಗ ಸುರಕ್ಷತೆಯನ್ನು ಅನುಭವಿಸುತ್ತಿಲ್ಲ. ಪ್ರತಿಯೊಂದು ಜಾತಿ, ಪ್ರತಿಯೊಂದು ಒಳಪಂಗಡದ ಜನರ ಮನಸ್ಸುಗಳಲ್ಲೂ ಭಯ ಉತ್ಪತ್ತಿಯಾಗಿದೆ.    

ಇದರ ಹಿಂದಿರುವ ಕಾರಣವೇನು? ನಾವು ಇದರ ಮೂಲ ಕಾರಣದ ಕಡೆಗೆ ಹೋಗಬೇಕಾಗಿದೆ.

ನಿನ್ನೆಯಷ್ಟೇ ನಾನು ತಿಹಾರ್ ಜೈಲಿಗೆ ಹೋದೆ. ಸಾಧಾರಣವಾಗಿ, ಜನರು ರಾಮ್ ಲೀಲಾ ಮೈದಾನಕ್ಕೆ ಮೊದಲು ಬಂದು ನಂತರ ತಿಹಾರ್ ಜೈಲಿಗೆ ಹೋಗುತ್ತಾರೆ, ಆದರೆ ನಾನು ತಿಹಾರ್ ಜೈಲಿಗೆ ಮೊದಲು ಹೋಗಿ ನಂತರ ಇಲ್ಲಿಗೆ ಬಂದೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕೆಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಹೌದು, ಖಂಡಿತವಾಗಿ ನಾವು ಕೊಡಬೇಕು. ಅಪರಾಧಿಗಳಿಗೆ ನಾವು ಅತ್ಯಂತ ಕಠಿಣ ಶಿಕ್ಷೆಗಳನ್ನು ಕೊಡಬೇಕು. ಆದರೆ ಈ ಅಪರಾಧಗಳನ್ನು ಅವರು ಮೊದಲನೆಯದಾಗಿ ಯಾಕೆ ಮಾಡಿದರು ಎಂಬುದರ ಕಡೆಗೆ ಕೂಡಾ ನಾವು ಆಳವಾಗಿ ನೋಡಬೇಕು.

ನಿನ್ನೆ ತಿಹಾರ್ ಜೈಲಿನಲ್ಲಿ ನಾವು ಒಂದು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನಿಮಗೆ ಗೊತ್ತಾ, ನೀವು ಒಂದು ದಿನವನ್ನು ಜೈಲಿನಲ್ಲಿ ಅಪರಾಧಿಗಳೊಂದಿಗೆ ಕಳೆದರೆ, ನಿಮ್ಮ ಹೃದಯವು ಕರಗುವುದು. ನ್ಯೂಯೋರ್ಕ್ ಜೈಲಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಅವನು ಹಲವಾರು ಲೈಂಗಿಕ ಅಪರಾಧಗಳನ್ನೆಸಗಿದ್ದ ಮತ್ತು ಹಲವಾರು ಮಹಿಳೆಯರನ್ನು ಕೊಂದಿದ್ದ. ಗಲ್ಲಿಗೇರಿಸುವುದಕ್ಕೆ ಸ್ವಲ್ಪ ಮೊದಲು, ಅವನ ಕೊನೆಯ ಆಸೆಯೇನೆಂದು ಅವನಲ್ಲಿ ಕೇಳಿದಾಗ ಅವನಂದನು, "ಲಭ್ಯವಿರುವ ಎಲ್ಲಾ ಅಶ್ಲೀಲತಾ ತಾಣಗಳನ್ನು ತೆಗೆದುಹಾಕಬೇಕು. ಆ ಅಂತರ್ಜಾಲ ತಾಣಗಳನ್ನು ನೋಡಿ ನನ್ನ ಮನಸ್ಸು ಭ್ರಷ್ಟವಾಯಿತು ಮತ್ತು ಆ ಎಲ್ಲಾ ಅಪರಾಧಗಳನ್ನು ಮಾಡಿದಾದ ನಾನು ನನ್ನ ಪ್ರಜ್ಞೆಯಲ್ಲಿರಲಿಲ್ಲ. ನಾನೇನು ಮಾಡುತ್ತಿದ್ದೆನೆಂಬ ಎಲ್ಲಾ ಪ್ರಜ್ಞೆಯನ್ನು ನಾನು ಕಳೆದುಕೊಂಡಿದ್ದೆ."

ಯಾವುದೆಲ್ಲಾ ಅಪರಾಧಗಳು ಸಂಭವಿಸುತ್ತಿವೆಯೋ, ಅವುಗಳು ಸಂಭವಿಸುವುದು ಜನರು ತಮ್ಮ ಪ್ರಜ್ಞೆಯಲ್ಲಿ ಇಲ್ಲದಿರುವಾಗ, ಮತ್ತು ಅಪರಾಧದ ದೊಡ್ಡ ಪ್ರೋತ್ಸಾಹಕವೆಂದರೆ ಮದ್ಯಸಾರ.

ಪ್ರತಿಯೊಂದು ಹಳ್ಳಿಯಲ್ಲಿ ಮದ್ಯಸಾರವು ಲಭ್ಯವಿದೆ ಮತ್ತು ಅದನ್ನು ಶುದ್ಧ ದೇಶೀ ಮದ್ಯವಾಗಿ ಮಾರಲಾಗುತ್ತದೆ ಅಥವಾ ಸ್ಥಳೀಯ ಮದ್ಯವೆಂದು ಲೇಬಲ್ ಹಚ್ಚಲಾಗುತ್ತದೆ.

ಒಬ್ಬನು ಒಮ್ಮೆ ಒಂದು ದೊಡ್ದ ತಲೆನೋವಿನಿಂದ ನರಳುತ್ತಿದ್ದನು. ಹಾಗೆ ಅವನು ಇನ್ನೊಬ್ಬನಲ್ಲಿ ಕೇಳಿದನು, "ಎಲ್ಲಾ ಭಾಷಣಗಳನ್ನು ಕೇಳಿ ನನಗೆ ಇಷ್ಟೊಂದು ಭಯಾನಕ ತಲೆನೋವು ಬಂದಿದೆ. ನಾನೇನು ಮಾಡುವುದು?"

ಅವನ ಮಿತ್ರನಂದನು, "ನೀನು ಒಂದು ಬಾಟಲಿ ಮದ್ಯ ಕುಡಿ, ನೀನು ಸರಿಹೋಗುವೆ."

ಆ ವ್ಯಕ್ತಿ ಕೇಳಿದನು, "ಮದ್ಯಪಾನ ಮಾಡುವುದರಿಂದ ತಲೆನೋವು ಹೇಗೆ ಗುಣವಾಗುವುದು?"

ಅವನ ಮಿತ್ರನಂದನು, "ಮದ್ಯಪಾನ ಮಾಡಿದುದರಿಂದ, ನಾನು ನನ್ನ ನೆಲ, ನನ್ನ ನೌಕರಿ ಕಳೆದುಕೊಂಡೆ ಮತ್ತು ನನ್ನ ಪತ್ನಿ ನನ್ನನ್ನು ಬಿಟ್ಟಳು. ನಾನು ಎಲ್ಲವನ್ನೂ ಕಳೆದುಕೊಂಡೆ. ಮದ್ಯಪಾನದೊಂದಿಗೆ, ನಾನು ಎಲ್ಲವನ್ನೂ ಕಳೆದುಕೊಂಡಿರುವಾಗ, ಅದಕ್ಕೆ ಹೋಲಿಸಿದರೆ ಒಂದು ತಲೆನೋವು ಯಾವ ಸಂಗತಿ? ನಿನ್ನ ತಲೆನೋವು ಯಾಕೆ ಹೋಗುವುದಿಲ್ಲ? ಮದ್ಯಸಾರಕ್ಕೆ ಎಷ್ಟೊಂದು ಶಕ್ತಿಯಿದೆಯೆಂದರೆ, ಅದು ಎಲ್ಲವನ್ನೂ ನಿನ್ನಿಂದ ದೂರ ತೆಗೆದುಕೊಂಡು ಹೋಗುವುದು."

ದಿಲ್ಲಿಯಲ್ಲಿ ನಡೆದ ಅಪರಾಧಗಳು ಕ್ಷಮಿಸಲು ಅನರ್ಹವಾಗಿದ್ದವು ಮತ್ತು ಈ ಅಪರಾಧಗಳನ್ನೆಸಗಿದವರೆಲ್ಲರೂ ಮದ್ಯಪಾನ ಮಾಡಿದ್ದರು. ಆದರೆ ಮುಖ್ಯ ಅಪರಾಧಿಯಾಗಿರುವ ಮದ್ಯಸಾರದ ಕಡೆಗೆ ಯಾರೂ ಬೆರಳು ಮಾಡುತ್ತಿಲ್ಲ.

ಮದ್ಯಪಾನ ಮಾಡಿರುವ ಒಬ್ಬ ವ್ಯಕ್ತಿಯು ಪ್ರಜ್ಞೆಯಲ್ಲಿರುವುದಿಲ್ಲ; ತಾನೇನು ಮಾಡುತ್ತಿರುವೆನೆಂಬ ಅರಿವಿರುವುದಿಲ್ಲ. ಆ ಸಮಯದಲ್ಲಿ ಅವನಿಗೆ ಕಾನೂನಿನ ಬಗ್ಗೆ ಯಾವುದೇ ಅರಿವಿರುವುದಿಲ್ಲ.

ಇದೇ ರೀತಿಯಲ್ಲಿ, ಮಾದಕ ದ್ರವ್ಯಗಳ ಸಮಸ್ಯೆ. ದೇಶದ ದೊಡ್ಡ ನಗರಗಳಲ್ಲಿ ಹಲವುದರಲ್ಲಿ ಡ್ರಗ್ ಮಾಫಿಯಾವು ಹುಚ್ಚೆದ್ದು ಓಡುತ್ತಿದೆ. ದೇಶವನ್ನು ಅಧೋಗತಿಗೆ ತರುತ್ತಿರುವ ಮಾದಕ ದ್ರವ್ಯಗಳು ಮತ್ತು ಇತರ ಎಲ್ಲಾ ರೀತಿಯ ಅಮಲೇರಿಸುವ ವಸ್ತುಗಳ ಪದಾರ್ಥಗಳ ವಿರುದ್ಧ ನಾವು ಎದ್ದುನಿಲ್ಲಬೇಕು.

ಇವತ್ತು ದೇಶದಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆಗಳ ಒಂದು ದೊಡ್ಡ ಅವನತಿಯಾಗುತ್ತಿದೆ ಮತ್ತು ನಾನು ನಿಮಗೆ ಹೇಳುತ್ತೇನೆ ಕೇಳಿ, ಮದ್ಯಸಾರ ಮತ್ತು ಈ ಎಲ್ಲಾ ಇತರ ಅಮಲು ಪದಾರ್ಥಗಳು ಇದಕ್ಕಿರುವ ಪ್ರಧಾನ ಕಾರಣಗಳಲ್ಲಿ ಒಂದಾಗಿದೆ.

ಅಪರಾಧಿಗಳು ಹೆಚ್ಚಾಗಿ ಹಾರ್ಮೋನುಗಳ ಅಸಮತೋಲನವನ್ನು ಅನುಭವಿಸುತ್ತಿರುತ್ತಾರೆ. ಅದು, ಅವರು ಹಿಂಸಾತ್ಮಕವಾಗಿ ವರ್ತಿಸಲು ಕಾರಣವಾಗುತ್ತದೆ. ಒಂದು ಸಹಾಯವಾಣಿಯನ್ನು ಪ್ರಾರಂಭಿಸಬೇಕೆಂದು ನಾನು ಹೇಳಿದುದು ಅದಕ್ಕಾಗಿಯೇ. ಸಮಾಜ-ವಿರೋಧಿ ಪ್ರವೃತ್ತಿಗಳು ಅಥವಾ ಹಿಂಸಾತ್ಮಕ ವರ್ತನೆಗಳಿರುವ ಒಬ್ಬ ಹುಡುಗ ಅಥವಾ ಒಬ್ಬಳು ಹುಡುಗಿಯನ್ನು ನೀವು ನೋಡಿದರೆ, ಆಗ ಆ ವ್ಯಕ್ತಿಗೆ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ ಹಾಗೂ ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಇದಕ್ಕೆ ಒಂದು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ.

ನೀವಿರುವ ಜಾಗದಲ್ಲಿ, ಇಂತಹ ರೀತಿಯ ಸಹಾಯದ ಅಗತ್ಯವಿರುವ ಯಾರನ್ನಾದರೂ ನೀವು ನೋಡಿದರೆ, ಅವರಿಗೆ ಖಂಡಿತವಾಗಿಯೂ ಸಹಾಯ ಸಿಗಬೇಕು. ಹಾರ್ಮೋನಿನ ಅಸಮತೋಲನಗಳಿರುವ ಮತ್ತು ಈ ರೀತಿಯ ಅಪರಾಧಗಳಲ್ಲಿ ಸೇರಿಕೊಳ್ಳುತ್ತಿರುವ ಜನರಿಗೆ ನಾವು ಸಲಹೆಯನ್ನು ನೀಡಬೇಕಾಗಿದೆ.

ನಿರ್ಭಯ (ದಿಲ್ಲಿಯಲ್ಲಿ ಬಲಾತ್ಕಾರಕ್ಕೊಳಪಟ್ಟ ಹುಡುಗಿ) ಮತ್ತು ಅವಳ ಮಿತ್ರ ರಸ್ತೆಯ ಮೇಲೆ ಬಿದ್ದಿದ್ದರು. ಹಲವಾರು ಜನರು ಅವರನ್ನು ನೋಡಿದರು ಮತ್ತು ಸುಮ್ಮನೆ ತಮ್ಮ ದಾರಿ ಹಿಡಿದುಕೊಂಡು ಹೋದರು! ಯಾವುದಾದರೂ ಮನುಷ್ಯನು ಹೀಗೆ ಮಾಡಬಲ್ಲನೇ? ಜನರು ಅವರಿಗೆ ಸಹಾಯ ಮಾಡಲು ಯಾಕೆ ಬರಲಿಲ್ಲ? ಇದು ಯಾಕೆಂದರೆ, ’ನಾನು ಈ ದೇಶಕ್ಕಾಗಿರುವ ಒಬ್ಬ ಸ್ವಯಂಸೇವಕ ಮತ್ತು ಎಲ್ಲರೂ ನನಗೆ ಸೇರಿದವರು’ ಎಂಬ ಆಳವಾದ ಭಾವನೆ ಅಥವಾ ನಿರ್ಧಾರ ಅವರಲ್ಲಿರಲಿಲ್ಲ.  ಇದುವೇ ಆಧ್ಯಾತ್ಮವೆಂಬುದು.

ಈ ಪರಿಸ್ಥಿತಿಯನ್ನು ಬದಲಾಯಿಸುವುದು, ಕಾನೂನುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಕಾನೂನುಗಳು ಆವಶ್ಯಕ, ಅದರಲ್ಲಿ ಸಂಶಯವಿಲ್ಲ, ಆದರೆ ಮನುಷ್ಯರ ಮನಸ್ಸುಗಳನ್ನು ಕಾನೂನುಗಳಿಂದ ಪರಿವರ್ತಿಸಲು ಸಾಧ್ಯವಿಲ್ಲ. ಜನರ ಮನಸ್ಸುಗಳನ್ನು ಪರಿವರ್ತಿಸಲು, ನೀವು ಮತ್ತು ನಾನು ಕೆಲಸ ಮಾಡಬೇಕು. ಇದನ್ನು ಮಾಡಲು ನಾವೆಲ್ಲರೂ ಒಟ್ಟಿಗೆ ಎದ್ದೇಳಬೇಕು. ನಾವು ಎಲ್ಲರನ್ನೂ ಪ್ರೇಮದೊಂದಿಗೆ ಅಪ್ಪಿಕೊಳ್ಳಬೇಕು. ಪ್ರೇಮವು, ಅತ್ಯಂತ ಕಠಿಣವಾದ ಕಲ್ಲನ್ನು ಕೂಡಾ ಕರಗಿಸಬಲ್ಲದು, ಅದಕ್ಕೆ ಒಂದು ಮನುಷ್ಯನನ್ನು ಪರಿವರ್ತಿಸಲು ಸಾಧ್ಯವಿಲ್ಲವೇ?

ನಮ್ಮ ದೇಶ, ನಮ್ಮ ಸಮಾಜ ಹೇಗಿತ್ತೆಂದರೆ, ಪ್ರತಿಯೊಂದು ಕಣದಲ್ಲೂ ಮಾನವೀಯತೆಯು ಕಾಣುತ್ತಿತ್ತು. ಆದರೆ ಈಗ ಮಾನವೀಯತೆಯ ಆ ಭಾವವು ಎಲ್ಲೋ ಹುದುಗಿ ಹೋಗಿದೆ ಮತ್ತು ಅದು ಧೂಳಿನಿಂದ ಮುಚ್ಚಿಹೋಗಿದೆ. ಇದನ್ನು ಮತ್ತೊಮ್ಮೆ ಮೇಲಕ್ಕೆ ತರುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ನಿಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಸ್ವಯಂಸೇವಕರಾಗಬೇಕು. ೨೪ ಗಂಟೆಗಳಲ್ಲಿ, ನಿಮ್ಮ ಸಮಯದ ಒಂದು ಗಂಟೆಯನ್ನು ನೀವು ದೇಶಕ್ಕೆ ನೀಡಬೇಕು.

ಒಬ್ಬ ಯುವಕನು ಒಮ್ಮೆ ನನ್ನಲ್ಲಿ ಕೇಳಿದನು, "ಗುರುದೇವ, ನಾವು ದೇಶಕ್ಕೆ ಒಂದು ಗಂಟೆಯನ್ನು ಕೊಟ್ಟರೆ, ಆಗ ನಾವು ನಮ್ಮ ಶಿಕ್ಷಣದ ಬಗ್ಗೆ ಏನು ಮಾಡುವುದು? ಸ್ವಯಂಸೇವೆ ಮಾಡುವುದರ ಬದಲಾಗಿ ಹೆಚ್ಚು ಓದಬೇಕೆಂದು ಹೆತ್ತವರು ನಮ್ಮಲ್ಲಿ ಹೇಳುತ್ತಿದ್ದಾರೆ."

ನಾನು ಹೇಳುತ್ತೇನೆ ಕೇಳಿ, ನಿಮ್ಮ ಓದಿನ ಸಮಯವನ್ನು ಕಸಿದುಕೊಳ್ಳಬೇಡಿ. ನಿಮ್ಮ ಓದನ್ನು ಪೂರ್ಣಗೊಳಿಸಿ. ಆದರೆ ಪ್ರತಿದಿನವೂ ಮನೋರಂಜನೆಗೆಂದು ನೀವು ಸ್ವಲ್ಪ ಸಮಯವನ್ನು ಬದಿಗಿರಿಸುವುದಿಲ್ಲವೇ? ನೀವು ಸ್ವಲ್ಪ ಸಮಯವನ್ನು ಮನೋರಂಜನೆಗೆಂದು ಬದಿಗಿರಿಸುತ್ತೀರಿ; ಉದಾಹರಣೆಗೆ ಇಂಟರ್ನೆಟ್ ಸರ್ಫ್ ಮಾಡುವುದು, ಟಿವಿ ನೋಡುವುದು ಅಥವಾ ಆಟಗಳನ್ನು ಆಡುವುದು, ಮೊದಲಾದವು, ಅಲ್ಲವೇ? ಹಾಗಾದರೆ, ಆ ಬಿಡುವಿನ ಸಮಯದಿಂದ ಅರ್ಧ ಗಂಟೆಯನ್ನು ತೆಗೆದುಕೊಳ್ಳಿ. ಒಂದು ದಿನದಲ್ಲಿ ಒಂದು ಗಂಟೆ ಸಾಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ಸಮಾಜಕ್ಕಾಗಿ ವ್ಯಯಿಸಿದರೆ, ಅಥವಾ ಹೀಗೆ ಹೇಳೋಣ, ಭಾನುವಾರದಂದು ಏಳು ಗಂಟೆಗಳನ್ನು ಕಳೆದರೂ ಕೂಡಾ, ಅದು ಸಾಕಾಗುವುದು.

ಇಲ್ಲಿ ಹಲವಾರು ಸ್ವಯಂಸೇವಕರಿದ್ದಾರೆ ಮತ್ತು ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ಕೇವಲ ಎರಡು ತಿಂಗಳುಗಳಲ್ಲಿ, ಅವರಿಂದ ಒಂದು ಸಾವಿರ ಸೇವಾ ಯೋಜನೆಗಳು ಕೈಗೆತ್ತಲ್ಪಟ್ಟವು ಮತ್ತು ಪೂರ್ಣಗೊಳಿಸಲ್ಪಟ್ಟವು ಕೂಡಾ. ಇದರೊಂದಿಗೆ, ದೇಶವು ಇನ್ನೂ ನಿದ್ದೆ ಮಾಡುತ್ತಿಲ್ಲ, ಆದರೆ ಬದಲಿಗೆ ಇದು ಎಚ್ಚೆತ್ತುಕೊಳ್ಳುತ್ತಿದೆ ಎಂಬ ಆಶಾಕಿರಣವು ಎದ್ದಿದೆ.

ದೇಶದ ಯುವಕರು ಎಚ್ಚೆತ್ತಾಗ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾನೂನಿಗೂ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ, ಅವರು ಮುಂದೆ ಸಾಗುತ್ತಾ ಇರುವರು.

ನಮ್ಮ ದೇಶವು ಒಂದು ಸುರಕ್ಷಿತ ಸ್ಥಳವಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ನಮ್ಮ ಸ್ವಂತ ದೇಶದಲ್ಲಿ ಸುರಕ್ಷತೆಯನ್ನು ಅನುಭವಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಬಯಸುತ್ತೇವೆ. ಇದಕ್ಕಾಗಿ, ನಾವು ಈಗ ಕೆಲಸ ಮಾಡಲು ಪ್ರಾರಂಭಿಸದಿದ್ದರೆ ಮತ್ತು ನಾವು ಈಗ ತೊಡಗಿಸಿಕೊಳ್ಳದೇ ಹೋದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸಲಾರರು.

ಒಂದು ತಪ್ಪನ್ನು ಮಾಡುವುದು ಸ್ವಾಭಾವಿಕ. ಒಂದು ಗಾದೆಯಿದೆ, ’ತಪ್ಪು ಮಾಡುವುದು ಮಾನವ ಗುಣ '. ಹಾಗೆ, ತಪ್ಪುಗಳು ಸಂಭವಿಸುತ್ತವೆ. ಆದರೆ ನಾವು ತಪ್ಪು ಮಾಡುವಾಗ, ಸಮಾಧಾನ ತಂದುಕೊಂಡು,  ಪರಿಹಾರ ನೀಡುವತ್ತ ಗಮನ ಕೊಡಬೇಕು.
ನಾನೊಂದು ತಪ್ಪು ಮಾಡಿದರೂ ಕೂಡಾ, ನಾನು ಅದನ್ನು ಮನಗಂಡು, ಅದರಿಂದ ಕಲಿತುಕೊಳ್ಳುತ್ತೇನೆ - ಯುಗಗಳಿಂದ ಭಾರತದಲ್ಲಿನ ಸಂಪ್ರದಾಯ ಇದಾಗಿದೆ. ಭಾರತದಲ್ಲಿ, ತಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳಿಂದ ಕಲಿತು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದವರು ಸುಶಿಕ್ಷಿತರು ಮತ್ತು ಕಲಿತವರು ಎಂದು ಕರೆಯಲ್ಪಡುತ್ತಿದ್ದರು.

ತಮ್ಮ ತಪ್ಪಿಗೆ, ನ್ಯಾಯವೆಂದು ತೋರಿದ ಒಂದು ಶಿಕ್ಷೆಯನ್ನು ಅವರು ಸ್ವಯಂ ವಿಧಿಸಿಕೊಳ್ಳುತ್ತಿದ್ದರು ಮತ್ತು ಅದನ್ನು ಪೂರೈಸುತ್ತಿದ್ದರು. ಈ ದೇಶದ ಜನರ ಮೌಲ್ಯಗಳು ಹಾಗಿದ್ದವು. ಈ ರೀತಿಯ ಮನೋಭಾವವನ್ನು ನಾವು ಮತ್ತೊಮ್ಮೆ ಜೀವಿತಗೊಳಿಸಬೇಕಾಗಿದೆ. ವಿಶೇಷವಾಗಿ ನಮ್ಮ ದೇಶದ ರಾಜಕಾರಣಿಗಳು ಇದನ್ನು ಅನುಸರಿಸಬೇಕಾಗಿದೆ. ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು, ಅವರು ಯಾವುದೇ ಪಕ್ಷಕ್ಕಾದರೂ ಸೇರಿರಲಿ, ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅದಕ್ಕಾಗಿ ಪರಿಹಾರಗಳನ್ನು ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ತೋರಿಸಬೇಕು. ಅವರಿದನ್ನು ಮಾಡಿದರೆ, ಇದಕ್ಕಾಗಿ ದೇಶದ ಜನರು ಅವರನ್ನು ಗೌರವಿಸುವರು. ಅಧಿಕಾರದ ಸ್ಥಾನದಲ್ಲಿರುವುದನ್ನು ಮುಂದುವರಿಸುವುದಕ್ಕಾಗಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಬಾರದು.

ಈ ದಿನಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡುತ್ತವೆ. ಇದನ್ನು ನಿಲ್ಲಿಸಬೇಕು. ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡಬೇಡಿ.

ನೀವು ಹೇಳಬಹುದು, "ಗುರುದೇವ, ನಿಮ್ಮ ಒಂದೇ ಕೆಲಸವೆಂದರೆ ಧ್ಯಾನ ಕಲಿಸುವುದು. ಮತ್ತೆ ಯಾಕೆ ನೀವು ಈಗ ಈ ಎಲ್ಲಾ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವಿರಿ? ನೀವು ರಾಜಕೀಯದ ಬಗ್ಗೆ ಯಾಕೆ ಮಾತನಾಡುತ್ತಿರುವಿರಿ?"

ನಾವು ಮಾತನಾಡುತ್ತಿರುವುದು ರಾಜನೀತಿಯ ಬಗ್ಗೆಯಲ್ಲ; ಇದು ರಾಷ್ಟ್ರನೀತಿ (ದೇಶದ ಅಭಿವೃದ್ಧಿಗಾಗಿರುವ ತಂತ್ರ). ಇದು ಮಾನವ ನೀತಿ (ಮಾನವ ಕುಲಕ್ಕಾಗಿ ನ್ಯಾಯ).

ನಾನು ರಾಜನೀತಿಯಿಂದ ದೂರವಿರುತ್ತೇನೆ. ಆದರೆ, ಜನರ ನೋವಿಗೆ ಮತ್ತು ದೇಶದ ಜನರಿಗೆ ಕಳಕಳಿಯಿರುವ ಪ್ರತಿಯೊಂದು ವಿಷಯಕ್ಕಾಗಿ ನಾನು ಎದ್ದು ನಿಲ್ಲುವೆನು. ನನ್ನ ಪ್ರತಿ ಕಣವೂ ಈ ದೇಶಕ್ಕಾಗಿ ಕೆಲಸ ಮಾಡಲು ಸಿದ್ಧವಿದೆ. ಈ ದೇಶಕ್ಕಾಗಿ ಒಂದು ಸುಂದರವಾದ ಕನಸನ್ನು ಹೊಂದಿದವರಲ್ಲಿ ನಾನು ಒಬ್ಬನಾಗಿದ್ದೇನೆ.

ಕೆಲವು ಜನರು ಹೇಳಬಹುದು, "ಓ ಹೌದು, ಇದೆಲ್ಲವೂ ಕೇಳಲು ಚೆನ್ನಾಗಿದೆ. ಆದರೆ ಇದೆಲ್ಲವೂ ಕೆಲವು ದಿನಗಳ ವರೆಗೆ ಇರುವುದು ಮತ್ತು ನಂತರ ಮಾಯವಾಗುವುದು. ಇದೆಲ್ಲದರ ಪ್ರಯೋಜನವೇನು?"

ಎಲ್ಲಾ ಕಡೆಗಳಲ್ಲಿ ಹತಾಶೆಗೆ ಕಾರಣವಾಗಿರುವುದು ಈ ರೀತಿಯ ಯೋಚನೆಯೇ. ಎಲ್ಲೆಡೆಯೂ ನಾವು ಒಂದೋ ಕ್ರೋಧವನ್ನು ಅಥವಾ ನಿರಾಶೆಯನ್ನು ನೋಡುತ್ತೇವೆ. ಒಂದು ಕೊನೆಯಲ್ಲಿ ಕ್ರೋಧ ಮತ್ತು ಇನ್ನೊಂದು ಕೊನೆಯಲ್ಲಿ ನಿರಾಶೆ. ಒಂದು ಸುಂದರ ಭಾರತದ ನಮ್ಮ ಕನಸನ್ನು ಈಡೇರಿಸಲು ನಾವು ಇವುಗಳೆರಡನ್ನು ದಾಟಿಹೋಗಬೇಕು. ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಬೇಕು.

ಇಲ್ಲಿರುವ ಗೌರವಾನ್ವಿತ ಭಾಷಣಕಾರರಲ್ಲಿ ಒಬ್ಬರಾಗಿರುವ ಶ್ರೀ ವಾಯುದ್ದೀನ್ ಅವರು, ಈ ರಾಷ್ಟ್ರದ ಚಾರಿತ್ರ್ಯವನ್ನು ನಿರ್ಮಿಸುವತ್ತ ನಾವು ಕೆಲಸ ಮಾಡಬೇಕಾಗಿದೆಯೆಂದು ಉಲ್ಲೇಖಿಸಿದರು. ಇದಕ್ಕಾಗಿ, ದೇಶದಲ್ಲಿ ಹೊಣೆಗಾರಿಕೆಯ ಸ್ಥಾನಗಳನ್ನು ಹಿಡಿದಿಡಲು ನಮಗೆ ಉತ್ತಮ ಚಾರಿತ್ರ್ಯದ ಜನರ ಅಗತ್ಯವಿದೆ. ಈಗ, ಎಲ್ಲೋ ಕುಳಿತಿದ್ದು ದೇಶವನ್ನು ನಿರ್ವಹಿಸಲು ಪ್ರಯತ್ನಿಸುವ ಕೇವಲ ಒಬ್ಬ ವ್ಯಕ್ತಿಯಿಂದ ಇದಾಗಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ದೇಶದ ಚಾರಿತ್ರ್ಯ ನಿರ್ಮಾಣದ ಕಡೆಗೆ ಹೆಚ್ಚು ಅರಿವುಳ್ಳವರಾಗಬೇಕು.

ಪ್ರತಿಯೊಂದು ಪ್ರದೇಶದಲ್ಲಿ ಜನರು ಒಂದಾಗಬೇಕು ಮತ್ತು ಕಳ್ಳತನಗಳು ಹಾಗೂ ಹಿಂಸೆಗಳಿಂದ ಪ್ರದೇಶವನ್ನು ಸುರಕ್ಷಿತಗೊಳಿಸಬೇಕು. ಇದಕ್ಕಾಗಿ ಜನರು ಸಿದ್ಧರಿರಬೇಕು ಮತ್ತು ಕ್ರಮವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಿದಂತಾಗುವುದು. ಆಗ ಮಾತ್ರ ನಮ್ಮ ಸ್ವಯಂಸೇವೆಯು ಯಶಸ್ವಿಯಾಗುವುದು.

ಆದುದರಿಂದ ನಾನು ನಿಮ್ಮೆಲ್ಲರಲ್ಲೂ ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟುಸೇರಿ ಭಾರತವನ್ನು ಒಂದು ಸುರಕ್ಷಿತ, ಸುಂದರ ಮತ್ತು ಸಾಕ್ಷರ ದೇಶವನ್ನಾಗಿ ಮಾಡಲು ಸಾಧ್ಯವಾಗಲು, ನಮ್ಮೊಂದಿಗೆ ಸೇರಿಕೊಂಡು ಸ್ವಯಂಸೇವೆ ಮಾಡುವಂತೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೂ ಒಂದು ನೂರು ಜನರನ್ನು ಪ್ರೇರೇಪಿಸಿ. ೧೦೦% ಸಾಕ್ಷರತೆ ಇರಬೇಕು.
ಮಕ್ಕಳಿಗೆ ಕಲಿಸಲು ಕೊಳಗೇರಿಗಳಿಗೆ ಹೋದ, ಇವತ್ತು ಇಲ್ಲಿರುವ ಸ್ವಯಂಸೇವಕರನ್ನು ನಾನು ಪುನಃ ಅಭಿನಂದಿಸಲು ಬಯಸುತ್ತೇನೆ. ದೈಹಿಕ ದುಡಿಮೆ ಮಾಡುತ್ತಿದ್ದ ಮಕ್ಕಳನ್ನು ಅಲ್ಲಿಂದ ದೂರ ಒಯ್ದು ಶಿಕ್ಷಣವನ್ನು ನೀಡಲಾಯಿತು. ಇದೊಂದು ಸುಲಭದ ಕೆಲಸವಲ್ಲ, ಆದರೆ ಅವರಿದನ್ನು ಮಾಡಿದರು.

ಸಮಾಜಕ್ಕಾಗಿ ನಾವು ಸೇವೆಯಲ್ಲಿ ತೊಡಗುವಾಗ, ನಾವು ಹಲವು ಸಲ ಟೀಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಜನರು ತಪ್ಪುಗಳನ್ನು ಕಂಡುಹುಡುಕಲು, ನಿಮ್ಮ ಇಮೇಜನ್ನು(ಸ್ಥಾನಮಾನ) ಹಾಳುಮಾಡಲು ಮತ್ತು ನಿಮ್ಮನ್ನು ಅವರು ಹೇಗೆ ಪತನಗೊಳಿಸಬಹುದು ಎಂಬುದನ್ನು ನೋಡಲು ಕಾಯುತ್ತಿರುತ್ತಾರೆ. ಅವರದನ್ನು ಮಾಡಲಿ ಬಿಡಿ, ಅವರು ತಪ್ಪುಗಳನ್ನು ಕಂಡುಹುಡುಕಲಿ ಬಿಡಿ. ನಮ್ಮ ಹೃದಯವು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇದೆ, ಆದುದರಿಂದ ನಾವು ನಮ್ಮ ಕೆಲಸ ಮಾಡುವುದನ್ನು ಮುಂದುವರಿಸುವೆವು ಮತ್ತು ಮುಂದೆ ಸಾಗುವೆವು. ಯಾರೆಲ್ಲಾ ಏನಾದರೂ ಹೇಳಲು ಬಯಸುವರೋ, ಅವರು ಹೇಳಲಿ ಬಿಡಿ. ನಾವು ಭಾರತಕ್ಕಾಗಿ ಎದ್ದು ನಿಂತಿದ್ದೇವೆ.

ಪರಮಾತ್ಮನು ಎಲ್ಲೋ ಮೇಲೆ ಸ್ವರ್ಗದಲ್ಲಿ ಇಲ್ಲ. ಅವನು ನಮ್ಮೆಲ್ಲರೊಳಗಿದ್ದಾನೆ. ಅವನು ಪ್ರತಿಯೊಂದು ಅಣುವಿನಲ್ಲೂ ಇದ್ದಾನೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು, ’ದೇಶದ ಸೇವೆಯೇ ದೇವರ ಸೇವೆ.’

ದೇವರ ಕಡೆಗಿರುವ ಮತ್ತು ದೇಶದ ಕಡೆಗಿರುವ ಭಕ್ತಿಯು ಒಂದೇ ನಾಣ್ಯದ ಎರಡು ಮುಖಗಳಾಗಿವೆ.

ದೇವರ ಕಡೆಗಿರುವ ಭಕ್ತಿ ಬೇರೆ ಮತ್ತು ದೇಶದ ಕಡೆಗಿರುವ ಭಕ್ತಿ ಬೇರೆ ಎಂದು ಯೋಚಿಸಬೇಡಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಅವನ ಸೃಷ್ಟಿಯನ್ನು ಕೂಡಾ ಪ್ರೀತಿಸುವಿರಿ. ಪರಿಸರದ ಬಗ್ಗೆ ನಾವು ತಿಳಿದಿರುವುದು ಮುಖ್ಯವಾಗಿದೆ. ಆದುದರಿಂದ ಇವತ್ತು, ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ನಾವು ಎದ್ದು ನಿಲ್ಲೋಣ. ಸ್ತ್ರೀಯರ ಸುರಕ್ಷತೆಗಾಗಿ ನಾವು ದೃಢವಾಗಿ ನಿಲ್ಲೋಣ. ನೀವೆಲ್ಲರೂ ಸಿದ್ಧರಿರುವಿರಾ?

ಇವತ್ತು ನಿಮಗೆಲ್ಲರಿಗೂ ಒಂಭತ್ತು ಅಂತಹ ಪ್ರತಿಜ್ಞೆಗಳನ್ನು ನೀಡಲಾಗುವುದು. ನೀವು ಸಿದ್ಧರಿರುವಿರಾ? ನಿಮ್ಮಲ್ಲಿ ಎಷ್ಟು ಮಂದಿ ಸಿದ್ಧರಿರುವಿರಿ? ನಿಮ್ಮ ಕೈಗಳನ್ನು ಮೇಲೆತ್ತಿ. (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ಅತ್ಯಂತ ಅಗತ್ಯವಾಗಿರುವುದೇನೆಂದರೆ ಬದಲಾವಣೆ; ನಮ್ಮ ಮನಸ್ಸಿನಲ್ಲಿ ಬದಲಾವಣೆ, ನಮ್ಮ ವರ್ತನೆಯಲ್ಲಿ ಬದಲಾವಣೆ ಮತ್ತು ಸಮಾಜದಲ್ಲಿ ಬದಲಾವಣೆ. ಇದು ಬಹಳ ಮುಖ್ಯವಾದುದು.

ಒಬ್ಬರ ಕಡೆಗೆ ಬೆರಳು ಮಾಡಿ, ಇಂತಿಂತ ವ್ಯಕ್ತಿ ತಪ್ಪು ಮಾಡಿರುವನೆಂದು ಹೇಳುವುದು ಬಹಳ ಸುಲಭ. ನಾವು ಮರೆತುಬಿಡುವುದೇನೆಂದರೆ, ಇತರ ಮೂರು ಬೆರಳುಗಳು ತಿರುಗಿ ನಮ್ಮ ಕಡೆಗೆ ಮುಖಮಾಡುತ್ತಿರುತ್ತವೆ. ಒಂದು ಶುದ್ಧವಾದ ಮನಸ್ಸು ಮತ್ತು ಹೃದಯದೊಂದಿಗೆ ನಾವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ, ಪ್ರಕೃತಿ ಕೂಡಾ ಅದನ್ನು ಹೇಗೆ ಬೆಂಬಲಿಸುವುದು ಎಂಬುದನ್ನು ಸುಮ್ಮನೆ ನೋಡಿ.

ಎರಡು ದಿನಗಳ ಮೊದಲು, ಈ ಕಾರ್ಯಕ್ರಮದ ಸಂಘಟಕರು ನನ್ನ ಬಳಿಗೆ ಬಂದು, ಮುಂಬರುವ ದಿನಗಳಲ್ಲಿ ಒಂದು ಆಲಿಕಲ್ಲು ಚಂಡಮಾರುತ ಮತ್ತು ಭಾರೀ ಮಳೆಯಾಗುವುದೆಂದು ಹವಾಮಾನ ಮುನ್ಸೂಚನೆ ಹೇಳುತ್ತದೆಯೆಂದು ಹೇಳಿದರು. ಇವತ್ತಿಗೂ ಕೂಡಾ ಮುನ್ಸೂಚನೆ ಅದೇ ಆಗಿತ್ತು. ಹೀಗಾಗಿ ಅವರಂದರು, "ಗುರುದೇವ, ದಯವಿಟ್ಟು ಏನಾದರೂ ಮಾಡಿ".

ನಾನು ಅವರಿಗಂದೆ, "ಯಾವಾಗಲೆಲ್ಲಾ ನಾವು ಯಾವುದೇ ಹೆಜ್ಜೆಯನ್ನು ನಿಸ್ವಾರ್ಥವಾಗಿ ಮತ್ತು ಒಂದು ಶುದ್ಧವಾದ ಹೃದಯದೊಂದಿಗೆ ತೆಗೆದುಕೊಳ್ಳುವೆವೋ, ಪ್ರಕೃತಿಯು ಅದನ್ನು ಬೆಂಬಲಿಸುವುದು." ನಮ್ಮಲ್ಲಿರುವ ಒಂದೇ ಒಂದು ವಿಷಯವೆಂದರೆ, ಒಂದು ಶುದ್ಧವಾದ ಹೃದಯ. ಹಾಗಾಗಿ, ಏನೂ ಆಗದೆಂದು ನಾನು ಸಂಘಟಕರಿಗೆ ಹೇಳಿದೆ. ಮತ್ತು ನೋಡಿ, ಎಲ್ಲರೂ ಈಗ ಬಹಳ ಆರಾಮವಾಗಿ ಕುಳಿತಿದ್ದಾರೆ.

ದೇಶವು ಈಗಲೂ ಜಾತಿ ಮತ್ತು ಧರ್ಮಗಳಿಂದ ವಿಭಾಗಿಸಲ್ಪಟ್ಟಿದೆ ಮತ್ತು ಸತ್ಯದಿಂದ ಸಂಪರ್ಕ ಕಳೆದುಕೊಂಡಿದೆ. ಹಿಂಸಾತ್ಮಕ ಕ್ರಿಯೆಗಳನ್ನು ಮಾಡಿಕೊಂಡು ಸಾಯಲು ಹಲವರು ಸಿದ್ಧರಿದ್ದಾರೆ. ದೇಶವನ್ನು, ಜನರನ್ನು ಇದೆಲ್ಲದರಿಂದ ನಾವು ದೂರ ಕೊಂಡೊಯ್ಯಬೇಕಾಗಿದೆ.

ಮಹಾತ್ಮಾ ಗಾಂಧಿಯವರ ಕಾಲದಲ್ಲಿ, ಅಹಿಂಸೆಯೊಂದಿಗೆ ಮಹಾನ್ ಹೆಮ್ಮೆಯು ಜೋಡಿಕೊಂಡಿತ್ತು. ಆದರೆ ಇವತ್ತು, ಹೆಮ್ಮೆಯು ಹಿಂಸೆಯೊಂದಿಗೆ ಸಂಬಂಧ ಹೊಂದಿದೆ. ಇವತ್ತು ಆಕ್ರಮಣಶೀಲತೆಯು ಹೆಮ್ಮೆಯೊಂದಿಗೆ ತನ್ನನ್ನು ತಾನು ಸೇರಿಸಿಕೊಂಡಿದೆ. ಒಬ್ಬರು ಬಹಳ ಆಕ್ರಮಣಶೀಲರಾಗಿರುವಾಗ, ಅವನು ಒಬ್ಬ ನಾಯಕನೆಂದು ಪರಿಗಣಿಸಲ್ಪಡುತ್ತಾನೆ. ಆದರ್ಶ ವ್ಯಕ್ತಿಗಳು ಬಹಳ ಆಕ್ರಮಣಶೀಲರಾಗಿರಬೇಕೆಂದು ಮತ್ತು ಆಗ ಅವರು ಒಳ್ಳೆಯವರು ನಿರೀಕ್ಷಿಸಲಾಗುತ್ತದೆ. ಇಲ್ಲ, ನಾವಿದನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಅಹಿಂಸೆಯು ನಮ್ಮ ಜೀವನರೇಖೆಯಾಗಿರಬೇಕು.

ನಾವು ಅಹಿಂಸೆಯ ಪಥವನ್ನು ತುಳಿಯುತ್ತೇವೆ, ಹಾಗಿದ್ದರೂ ನಾವು ಬಹಳ ದೃಢವಾಗಿದ್ದೇವೆ, ನಾವು ಬಹಳ ಬಲಶಾಲಿಗಳಾಗಿದ್ದೇವೆ ಮತ್ತು ನಮ್ಮ ಉದ್ದೇಶವು ಫಲದಾಯಕವಾಗುವುದನ್ನು ನಾವು ಕಾಣುವೆವು. ಹಾಗಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ; ದೂರ ದೂರದ ಸ್ಥಳಗಳಿಂದ ಬಂದಿರುವವರು, ಹಾಗೆಯೇ ದಿಲ್ಲಿಯ ಎಲ್ಲಾ ಭಾಗಗಳಿಂದ ಬಂದಿರುವವರು ಮತ್ತು ಭಾರತದ ವಿವಿಧ ಭಾಗಗಳಿಂದ ಇದನ್ನು ವೀಕ್ಷಿಸುತ್ತಿದ್ದ ನಿಮ್ಮೆಲ್ಲರಿಗೂ. ಇದು ಕೇವಲ ಆರಂಭವಷ್ಟೇ. ನಾವು ಒಂದಾಗಿ ಕೆಲಸ ಮಾಡೋಣ ಮತ್ತು ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡೋಣ. ದೇವರು ನಿಮಗೆಲ್ಲರಿಗೂ ಸದ್ಬುದ್ಧಿಯನ್ನು ಕೊಟ್ಟು ಆಶೀರ್ವದಿಸಲಿ. ಅವನು ಈಗಾಗಲೇ ಮಾಡಿದ್ದಾನೆ, ಆದರೆ ಯಾರಿಗೆ ಇದು ತಿಳಿದಿಲ್ಲವೋ, ಅವರು ಇದನ್ನು ಅರಿತುಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ. ಇದರೊಂದಿಗೆ, ನಾನು ನನ್ನ ಮಾತನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ.

ಭಾನುವಾರ, ಡಿಸೆಂಬರ್ 30, 2012

ನಮ್ಮ ಬದುಕಿನಲ್ಲಿ ಬದಲಾವಣೆಯು೦ಟಾಗಲು ಏನು ಮಾಡಬೇಕು?


ಬಾಡ್ ಅಂತೋಗಸ್ಟ್, ಜರ್ಮನಿ
ದಶಂಬರ ೩೦, ೨೦೧೨

ಪ್ರಶ್ನೆ: ಪ್ರೀತಿಯ ಗುರುದೇವ, ಭಾರತದಲ್ಲಿ ಬಲಾತ್ಕಾರಕ್ಕೊಳಪಟ್ಟವಳ ಮರಣದಿಂದ ನಾನು ಜರ್ಜರಿತಗೊಂಡಿರುವೆನು. ಭಾರತದಲ್ಲಿ ಯಾಕೆ ಅಂತಹ ಕ್ರೂರ ಬಲಾತ್ಕಾರ ಅಪರಾಧಗಳು ಆಗುತ್ತವೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಅದು ಕೇವಲ ಒಂದು ಜಾಗದಲ್ಲಲ್ಲ, ಮತ್ತು ಅದು ಕೇವಲ ಭಾರತದಲ್ಲಿ ಮಾತ್ರವಲ್ಲ. ಈ ಘಟನೆಯು ಅಷ್ಟೊಂದು ಪ್ರಚಾರವನ್ನು ಪಡೆಯಿತೆಂದು ಮಾತ್ರ. ಅಂತಹ ಅಪರಾಧಗಳು ಪ್ರಪಂಚದಾದ್ಯಂತ ಹಲವಾರು ನಡೆಯುತ್ತಿವೆ. ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ, ಆದರೆ ಮಕ್ಕಳ ಮೇಲೆ, ಮತ್ತು ವಯಸ್ಸಾದವರ ಮೇಲೆ ಕೂಡಾ!
ನಮ್ಮ ಸ್ವಯಂಸೇವಕರಲ್ಲಿ ಒಬ್ಬಳು, ಕೆನ್ಯಾದ ನೈರೋಬಿಯಲ್ಲಿ ಏನಾಗುತ್ತಿದೆಯೆಂಬುದರ ಬಗ್ಗೆ ಈಗಷ್ಟೇ ನನಗೆ ಹೇಳಿದಳು. ಅದು ಭೀಕರವಾಗಿದೆ; ಜನರು ಅಲ್ಲಿ ಸುರಕ್ಷಿತವಾಗಿಲ್ಲ. ಅವಳು ಹೇಳಿದುದನ್ನು ಕೇಳಿ, ಜನರು ತಮ್ಮ ಮನೆಗಳಿಂದ ಹೊರಗೆ ಹೋಗಬಾರದೆಂದು ನಾನು ಹೇಳಿದೆ. ಅದಕ್ಕೆ ಅವಳು, ’ಜನರಿಗೆ ತಮ್ಮ ಮನೆಗಳೊಳಗೆ ಇರಲು ಇನ್ನೂ ಹೆಚ್ಚು ಭಯವಾಗುತ್ತಿದೆ, ಯಾಕೆಂದರೆಅಲ್ಲಿ ಬಹಳಷ್ಟು ಕಳ್ಳತನಗಳಾಗುತ್ತವೆ. ತಮ್ಮ ಕಾರುಗಳಲ್ಲಿ ಹೊರಗೆ ಹೋಗುವುದು ಹೆಚ್ಚು ಸುರಕ್ಷಿತವೆಂದು ಅವರಿಗೆ ಅನ್ನಿಸುತ್ತದೆ’ ಎಂದು ಹೇಳಿದಳು.
ನೀವು ನಿಮ್ಮ ಸ್ವಂತ ಮನೆಯೊಳಗೇ ಸುರಕ್ಷಿತವಾಗಿಲ್ಲ! ಅಂತಹ ಘಟನೆಗಳು ಹೆಚ್ಚಾಗುತ್ತಿವೆ; ಮುಂಬೈಯಲ್ಲಿ ಕೂಡಾ. ಒಬ್ಬಂಟಿಯಾಗಿ ವಾಸಿಸುವಂತಹ ವಯಸ್ಸಾದ ಜನರನ್ನು ನೋಡಿಕೊಂಡು, ನಂತರ ಅವರನ್ನು ಗುರಿಯಾಗಿಸುತ್ತಾರೆ. ಅಂತಹ ಅಪರಾಧಗಳು ಬಹುತೇಕ ಎಲ್ಲೆಡೆಯೂ ಆಗುತ್ತಿವೆ. ಇಟೆಲಿಯಲ್ಲಿ, ಸ್ಪೈನಿನಲ್ಲಿ ಮತ್ತು ಟರ್ಕಿಯಲ್ಲಿ ಹಲವಾರು ಅಪರಾಧಗಳು ವರದಿಯಾಗಿವೆ; ಇಲ್ಲಿ ಜರ್ಮನಿಯಲ್ಲಿ ಕೂಡಾ, ಅಲ್ಲವೇ? ರಷ್ಯಾದಲ್ಲಿ ಅದು ಎಷ್ಟೊಂದು ಹೆಚ್ಚೆಂದರೆ, ಅಲ್ಲಿ ರಸ್ತೆಗಳಲ್ಲಿ ನಡೆಯುವುದು ಕೂಡಾ ಸುರಕ್ಷಿತವಲ್ಲ ಎಂಬುದನ್ನು ನಾನು ಕೇಳಿದ್ದೇನೆ.  
ಇಂತಹ ವಿಷಯಗಳನ್ನು ಕೇಳುವಾಗ, ನಾವೆತ್ತ ಸಾಗುತ್ತಿರುವೆವೆಂದು ನನಗೆ ಅಚ್ಚರಿಯಾಗುತ್ತದೆ. ಈ ಒಂದು ಘಟನೆಯು ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿತು. ನಿಮಗೆ ಗೊತ್ತಾ, ಈ ಘಟನೆಯ ಬಗ್ಗೆ ಅರಿವನ್ನು ಮೂಡಿಸುವುದರಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಅಗ್ರಗಾಮಿ ಆಗಿತ್ತೆಂಬುದು? ಮೊದಲನೆಯ ದಿನವೇ, ಇಂಡಿಯಾ ಗೇಟಿಗೆ ಮೋಂಬತ್ತಿ ಬೆಳಕಿನ ನಡಿಗೆಯನ್ನು ಕೈಗೊಂಡದ್ದು ಯೆಸ್ ಪ್ಲಸ್ ವಿದ್ಯಾರ್ಥಿಗಳಾಗಿದ್ದರು. ನೋಡಿ, ನಾವು ಯಾವುದನ್ನೆಲ್ಲಾ ಪ್ರಾರಂಭಿಸಿದೆವೋ ಅದು ಇನ್ನೂ ಒಂದು ದೊಡ್ಡ ಆಯಾಮವನ್ನು, ದೊಡ್ಡ ಪ್ರಮಾಣವನ್ನು ತೆಗೆದುಕೊಂಡಿದೆ; ಎಲ್ಲೆಡೆಗಳಲ್ಲಿಯೂ ಈಗ ಜನರು ಜಾಗೃತರಾಗಿದ್ದಾರೆ. ಎಲ್ಲೆಡೆಗಳಲ್ಲಿಯೂ ಇಂತಹ ಅಪರಾಧಗಳಾಗುವುದನ್ನು ಕಡಿಮೆಗೊಳಿಸುವುದರಲ್ಲಿ ಇದು ಸಹಾಯಕವಾಗಬಹುದೆಂದು ನಾನು ಆಶಿಸುತ್ತೇನೆ, ಮತ್ತು ನನಗೆ ಇದರ ಬಗ್ಗೆ ಖಾತ್ರಿಯಿದೆ. ಅದಕ್ಕಾಗಿಯೇ ನಾವೆಲ್ಲರೂ ಒಂದು ಹಿಂಸಾ-ಮುಕ್ತವಾದ ಮತ್ತು ಒತ್ತಡ-ಮುಕ್ತವಾದ ಸಮಾಜಕ್ಕಾಗಿ ಕೆಲಸ ಮಾಡಬೇಕು.
ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಜನರು ಬೇಡಿಕೆಯೊಡ್ಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ತಮ್ಮ ಕಾಮ ಮತ್ತು ಭಾವನೆಗಳ ಮೇಲೆ ನಿಯಂತ್ರಣವಿಲ್ಲದ ಹತ್ತು ಇತರ ಜನರು ಏಳುವರು. ಅವರು ತಮ್ಮ ಪ್ರವೃತ್ತಿಗಳಲ್ಲಿ ಬಹಳ ಹಿಂಸಾತ್ಮಕ ಪ್ರವೃತ್ತಿಗಳುಳ್ಳವರಾಗುತ್ತಾರೆ. ನೀವೇನು ಮಾಡುವಿರಿ? ಎಷ್ಟು ಜನರನ್ನು ನೀವು ಗಲ್ಲಿಗೇರಿಸುತ್ತಾ; ಶಿಕ್ಷಿಸುತ್ತಾ ಹೋಗುವಿರಿ? ನಾವು ಸುಧಾರಣೆ ಮಾಡಬೇಕಾಗಿದೆ.
ಸಾವಿರಾರು ಯುವಜನರು ಹಲವಾರು ಹಿಂಸಾತ್ಮಕ ಸಿನೆಮಾಗಳನ್ನು ನೋಡುತ್ತಾರೆ, ಮತ್ತು ಹಿಂಸಾತ್ಮಕವಾದ ವಿಡಿಯೋ ಗೇಮುಗಳನ್ನು ಆಡುತ್ತಾರೆ. ಅವುಗಳು ಕೂಡಾ ಪ್ರಪಂಚದಲ್ಲಿ ಹೆಚ್ಚುತ್ತಿರುವ ಅಪರಾಧಕ್ಕೆ ಹೊಣೆಯಾಗಿವೆ. ಮಕ್ಕಳು ವಿಡಿಯೋ ಗೇಮುಗಳಲ್ಲಿ ಬಂದೂಕಿನಿಂದ ಗುಂಡಿಕ್ಕಲು ಶುರು ಮಾಡಿದಾಗ, ಅಲ್ಲಿನ ಕಾಲ್ಪನಿಕ ಪ್ರಪಂಚ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ತಿಳಿಯುವಲ್ಲಿ ಅವರು ವಿಫಲರಾಗುತ್ತಾರೆ. ಅವರ ಮನಸ್ಸಿನಲ್ಲಿ, ಎರಡರ ನಡುವೆ ಒಂದು ಬಹಳ ತೆಳ್ಳಗಿನ ಗೆರೆಯಿರುತ್ತದೆ. ಕಾಲ್ಪನಿಕ ಪ್ರಪಂಚದಲ್ಲಿ ಅವರು ಜನರಿಗೆ ಗುಂಡಿಕ್ಕಲು ಸಾಧ್ಯವಾದರೆ, ನಿಜ ಪ್ರಪಂಚದಲ್ಲಿ ಒಂದು ಬಂದೂಕು ತೆಗೆದುಕೊಂಡು ಜನರಿಗೆ ಗುಂಡಿಕ್ಕುವುದು ಒಂದು ದೊಡ್ಡ ವಿಷಯವೆಂದು ಅವರಿಗೆ ಅನ್ನಿಸುವುದಿಲ್ಲ. ಇದುವೇ ಅಮೇರಿಕಾದ ಕನೆಕ್ಟಿಕಟ್ ನಲ್ಲಿ ಸಂಭವಿಸಿದುದು. ಬಹಳ ಸಾಧು ಹುಡುಗನೊಬ್ಬನು ತನ್ನ ತಾಯಿಗೆ, ಹಲವಾರು ಮಕ್ಕಳಿಗೆ ಗುಂಡಿಕ್ಕಿ ನಂತರ ತನಗೆ ತಾನೇ ಗುಂಡಿಕ್ಕಿಕೊಂಡನು!
ಕಳೆದ ವರ್ಷ ನೋರ್ವೆಯಲ್ಲಿ ಕೂಡಾ ಏನಾಯಿತೆಂಬುದನ್ನು ನೋಡಿ. ಅದು ಭೀಕರವಾದುದು! ಅಂತಹ ಅಪರಾಧಗಳು ಪ್ರಪಂಚದ ಎಲ್ಲೆಡೆಯಲ್ಲಿ ನಡೆಯುತ್ತಿವೆ.
ಮೆಕ್ಸಿಕೋದಲ್ಲಿ, ಒಂದು ಟ್ರಾಫಿಕ್ ದೀಪದ ಬಳಿ ಇಬ್ಬರು ಟ್ಯಾಕ್ಸಿ ಚಾಲಕರ ನಡುವೆ ವಾದವುಂಟಾಯಿತು. ಅವರ ಪ್ರಯಾಣಿಕರು ಕಾರುಗಳಲ್ಲಿ ಇನ್ನೂ ಕುಳಿತಿದ್ದಂತೆಯೇ, ಅವರು ಕಾರಿನಿಂದ ಹೊರಗಿಳಿದು ಪರಸ್ಪರರಿಗೆ ಗುಂಡಿಕ್ಕಿದರು! ಅವರ ನಡುವೆ ಕೇವಲ ಒಂದು ವಾದ ನಡೆದಿತ್ತಷ್ಟೇ! ನಮ್ಮ ಸಹಿಷ್ಣುತೆಯ ಮಟ್ಟವು ಬಹಳ ಕೆಳಮಟ್ಟಕ್ಕೆ ಇಳಿದಿದೆ.
ಪಾಕಿಸ್ತಾನದಲ್ಲಿ ಇವತ್ತು, ಮತ್ತೆ ಹಲವಾರು ಜನರು ಗಾಯಗೊಂಡಿದ್ದಾರೆ; ಒಂದು ಕಾರ್ ಬಾಂಬಿನಲ್ಲಿ ಹಲವಾರು ಜನರು ಸಾವಿಗೀಡಾದರು. ಪಾಕಿಸ್ತಾನದಲ್ಲಿ ಹಲವು ಜನರು ಸಾಯುತ್ತಿದ್ದಾರೆ.
ಇರಾಕಿನಲ್ಲಿ, ಜನರು ಈ ಸಂಖ್ಯೆಗಳ ಕಡೆಗೆ ಈಗ ಜಡವಾಗಿದ್ದಾರೆ. ಇರಾಕಿನಲ್ಲಿ ನಲುವತ್ತು ಜನರು ಸಾವಿಗೀಡಾದರು. ಅವರು ಪ್ರತಿದಿನವೂ ಸಾಯುತ್ತಿರುವುದಾದರೂ ಕೂಡಾ ಯಾರಿಗೂ ಅದರ ಪರಿವೆಯಿಲ್ಲ! ಸಿರಿಯಾದಲ್ಲಿ, ಈಜಿಪ್ಟಿನಲ್ಲಿ ಏನಾಗುತ್ತಿದೆ ನೋಡಿ? ಅರ್ಧದಷ್ಟು ಜನತೆಯು ಅಳಿಸಿ ಹೋಗುತ್ತಿದೆ. ನಾವು ಮಾಡುತ್ತಿರುವುದು ಬಹಳ ಪ್ರಧಾನವಾದುದೆಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾದುದು ಇಂತಹ ಸಮಯಗಳಲ್ಲೇ!
ಒಂದು ಹಿಂಸಾ-ಮುಕ್ತ ಮತ್ತು ಒತ್ತಡ-ಮುಕ್ತ ಸಮಾಜವನ್ನು ಸೃಷ್ಟಿಸುವುದು ಬಹಳ ಪ್ರಧಾನವಾಗಿದೆ. ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಶಿಕ್ಷಕರನ್ನು ನಾವು ಹೊಂದಬೇಕಾಗಿದೆ. ನಾವು ಹರಡಬೇಕಾಗಿದೆ ಮತ್ತು ಜನರ ಮನಸ್ಸನ್ನು ಬದಲಾಯಿಸಬೇಕಾಗಿದೆ.
ನಮ್ಮ ಶಿಕ್ಷಕರು ಜೈಲುಗಳಲ್ಲಿ ಕೆಲಸ ಮಾಡುತ್ತಿರುವುದರ ಬಗ್ಗೆ ನನಗೆ ಬಹಳ ಸಂತಸವಿದೆ. ಇತ್ತೀಚೆಗೆ, ನಾನು ಅರ್ಜೆಂಟೀನಾದಲ್ಲಿ ಒಂದು ಜೈಲಿಗೆ ಹೋದೆ. ಅಲ್ಲಿ ಬಹಳಷ್ಟು ಹಿಂಸೆ ಮತ್ತು ಅಪರಾಧಗಳಿದ್ದವು; ಜೈಲಿನ ಕೋಣೆಗಳಲ್ಲಿ ಕೂಡಾ. ಅಲ್ಲಿ ಆರ್ಟ್ ಆಫ್ ಲಿವಿಂಗ್ ಶಿಬಿರವನ್ನು ನಡೆಸಿದಂದಿನಿಂದ, ಎಲ್ಲಾ ಖೈದಿಗಳೂ, "ನಾವು ಯಾವುದೇ ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ" ಎಂದು ಹೇಳುವ ಒಂದು ಬ್ಯಾಂಡನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅರ್ಜೆಂಟೀನಾದ ಜೈಲಿನಲ್ಲಿದ್ದ ೫,೨೦೦ ಪೌರುಷತ್ವ ಹೊಂದಿದ ಗಂಡಸರ ಕಣ್ಣುಗಳಲ್ಲಿ ಕಣ್ಣೀರುಗಳಿದ್ದವು! ಅವರಂದರು, "ನಮ್ಮ ಜೀವನ ಬದಲಾಗಿದೆ! ನಮಗೆ ಈ ಜ್ಞಾನ ಮೊದಲೇ ಯಾಕೆ ಸಿಗಲಿಲ್ಲ?"
ಅದೇ ರೀತಿ, ಬ್ರೆಝಿಲಿನಲ್ಲಿ, ನಾನು ರಿಯೋದಲ್ಲಿದ್ದಾಗ, ನಾನೊಂದು ಸೆರೆಮನೆಯ ಕೋಣೆಯನ್ನು ಸಂದರ್ಶಿಸಿದೆ. ಸೆರೆಮನೆಯ ಒಳಗೆ ಅವರು ಒಂದು ಆರ್ಟ್ ಆಫ್ ಲಿವಿಂಗ್ ಕೇಂದ್ರವನ್ನು ಹೊಂದಿದ್ದಾರೆ. ಒಂದು ಕೋಣೆಯಲ್ಲಿ ಅವರು, ನನ್ನ ಚಿತ್ರವನ್ನು ಮತ್ತು ಬಹಳಷ್ಟು ಆರ್ಟ್ ಆಫ್ ಲಿವಿಂಗ್ ಸಾಹಿತ್ಯಗಳನ್ನು ಇಟ್ಟಿದ್ದಾರೆ. ಯಾರಿಗೂ ಅಲ್ಲಿ ಪಾದರಕ್ಷೆಗಳೊಂದಿಗೆ ಒಳಹೋಗಲು ಅನುಮತಿಯಿಲ್ಲ. ಅವರು ಯೋಗದ ಹಾಸುಗಳನ್ನು ಹಾಕಿದ್ದಾರೆ. ಜನರು ಅಲ್ಲಿಗೆ ಹೋಗಿ ಕುಳಿತುಕೊಂಡು, ಯೋಗ, ಧ್ಯಾನಗಳು, ಚಿತ್ರಗಳನ್ನು ಮಾಡುತ್ತಾರೆ ಮತ್ತು ಅವರ ಜೀವನದ ಮೇಲೆ ಬಹಳ ಪರಿಣಾಮವಾಗಿದೆ!
ಬರುವ ಪೀಳಿಗೆಗಾಗಿ ಈ ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಲು, ಪ್ರಪಂಚದಲ್ಲಿ ನಾವು ಮಾಡುವುದು ಬಹಳಷ್ಟಿದೆ! ಇಲ್ಲವಾದರೆ ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ನಿಮ್ಮನ್ನು ಕ್ಷಮಿಸಲಾರರು. ಅವರು, "ನೀವು ನಮಗೆ ಯಾವ ರೀತಿಯ ಒಂದು ಪ್ರಪಂಚವನ್ನು ನೀಡಿರುವಿರಿ?" ಎಂದು ಹೇಳುವರು. ನೀವವರಿಗೆ ಒಂದು ಉತ್ತಮ ಪ್ರಪಂಚವನ್ನು ಕೊಡಬೇಕೆಂದು ಅವರು ಬಯಸುತ್ತಾರೆ - ಹೆಚ್ಚಿನ ಪ್ರೀತಿಯಿರುವ ಮತ್ತು ಹಿಂಸೆಯಿಂದ ಮುಕ್ತವಾದ ಒಂದು ಪ್ರಪಂಚ.
ನಿಮ್ಮ ಚಿಕ್ಕ ಚಿಕ್ಕ ಅವಶ್ಯಕತೆಗಳಲ್ಲಿ ಮತ್ತು ಮಿತ್ರರೊಂದಿಗಿನ ಹಾಗೂ ಇತರ ಜನರೊಂದಿಗಿನ ಚಿಕ್ಕ ಚಿಕ್ಕ ವಾಗ್ವಾದಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ದೊಡ್ಡದಾಗಿ ಯೋಚಿಸಿ ಮತ್ತು ಪ್ರಪಂಚದಲ್ಲಿನ ಹಿಂಸೆ, ಒತ್ತಡ ಹಾಗೂ ಬಿಗಿತಗಳನ್ನು ಕಡಿಮೆ ಮಾಡಲು ನೀವೇನು ಮಾಡಬಲ್ಲಿರಿ ಎಂದು ನೋಡಿ. ಇದರ ಕಡೆಗೆಯೇ ನಾವು ನೋಡಬೇಕಾದುದು!
ಇತರರ ಕ್ಷೇಮದ ಕಡೆಗೆ ಕುರುಡರಾಗಿರುವ, ತೀವ್ರವಾದ ಲೈಂಗಿಕ ಪ್ರವೃತ್ತಿಗಳಿರುವವರಿಗೆ ಒಂದು ಪಾಠದ ಅಗತ್ಯವಿದೆ. ಒಬ್ಬ ವ್ಯಕ್ತಿಯು ಅಂತಹ ನೀಚ ಅಪರಾಧಗಳನ್ನು ಮಾಡುವಂತೆ ಮಾಡುವುದು ಹಾರ್ಮೋನುಗಳಲ್ಲಿನ ಅಸಮತೋಲನ ಮತ್ತು ಒತ್ತಡ. ಅದು ಅವರ ಮನಸ್ಸುಗಳನ್ನು, ಅವರ ಕಣ್ಣುಗಳನ್ನು ಮತ್ತು ಅವರ ಬುದ್ಧಿಯನ್ನು ಕುರುಡಾಗಿಸುತ್ತದೆ. ಬಸ್ಸಿನಲ್ಲಿ ಬಲಾತ್ಕಾರ, ಹಲವಾರು ಜನರು ಜೊತೆಯಲ್ಲಿ! ಈ ಎಲ್ಲಾ ವಿಷಯಗಳನ್ನು ನಾವು ಒಂದು ಹೆಚ್ಚಿನ ಮಾನವೀಯ ನೆಲೆಯಲ್ಲಿ ಸಂಭೋದಿಸಬೇಕೆಂದು ನನಗನ್ನಿಸುತ್ತದೆ. ನಾವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಮರಳಿ ತರಬೇಕಾಗಿದೆ. ಜನರನ್ನು ಆಧ್ಯಾತ್ಮದಲ್ಲಿ ಸುಶಿಕ್ಷಿತರನ್ನಾಗಿಸಿ. ಆಗ ಅವರ ಮನೋಭಾವವು ಬದಲಾಗುವುದು. ಆಧ್ಯಾತ್ಮಿಕವಾಗಿರುವ ಜನರು ಎಂದೆಂದಿಗೂ ಅಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲಾರರು.
ಸಂಪೂರ್ಣವಾಗಿ ಹಿಂಸೆಯಿಂದ ಮುಕ್ತವಾದ ಪ್ರಪಂಚವನ್ನು ಸಾಧಿಸಲು ನಮಗೆ ಈ ಪೀಳಿಗೆಯಲ್ಲಿ ಸಾಧ್ಯವಾಗದೇ ಇರಬಹುದು, ಆದರೆ ನಾವು ಯಾವತ್ತೂ ಅದರ ಕಡೆಗೆ ಕೆಲಸ ಮಾಡಬೇಕು. ಪ್ರಪಂಚದಲ್ಲಿನ ಹಿಂಸೆಯನ್ನು ನಾವು ಖಂಡಿತವಾಗಿ ಕಡಿಮೆ ಮಾಡಲು ಸಾಧ್ಯವಿದೆಯೆಂದು ನನಗೆ ಭರವಸೆಯಿದೆ.
ಇತ್ತೀಚೆಗೆ, ದಿಲ್ಲಿಯ ಒಂದು ಭಾಗದಲ್ಲಿ, ಪೋಲೀಸರು ೭೫೬ ಅಪರಾಧಿಗಳನ್ನು ಒಟ್ಟು ಸೇರಿಸಿ, ಅವರು ಐದು ದಿನಗಳ ವರೆಗೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡುವಂತೆ ಮಾಡಿದರು. ಅವರು ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಮಾಡಿದರು. ಈ ಜನರು ಹಂಚಿಕೊಂಡ ಅನುಭವಗಳನ್ನು ನೀವು ಕೇಳಬೇಕಿತ್ತು, ಅದು ಬಹಳ ಹೃದಯಸ್ಪರ್ಷಿಯಾಗಿತ್ತು. ಮಾದಕ ದ್ರವ್ಯಗಳನ್ನು ಬಳಸುತ್ತಿದ್ದ ಜನರು ಅಲ್ಲಿದ್ದರು ಮತ್ತು ಐದು ದಿನಗಳಲ್ಲಿ ಮಾದಕ ದ್ರವ್ಯಗಳ ಕಡೆಗೆ ಅವರಲ್ಲಿ ತಿರಸ್ಕಾರ ಬೆಳೆಯಿತು.
ಚೈನುಗಳನ್ನು ಕಸಿಯುತ್ತಿದ್ದ ಮತ್ತು ಅಂತಹ ಇತರ ಚಟುವಟಿಕೆಗಳಲ್ಲಿ ತೊಡಗಿದ್ದ ಜನರು ಸಂಪೂರ್ಣವಾಗಿ ಬದಲಾದರು ಮತ್ತು ಕೊಳಗೇರಿಗಳಲ್ಲಿ ಸಮಾಜ ಸೇವೆ ಮಾಡಲು ಶುರು ಮಾಡಿದರು. ಈ ಜನರಿಗೆ ತರಬೇತಿ ನೀಡಲು ನಮ್ಮ ಶಿಕ್ಷಕರಿಗೆ ಸಾಧ್ಯವಾಯಿತು.
ಕೋರ್ಸಿನ ಕಡೆಯ ದಿನ ನಾನು ಹೋಗಿ ಅವರನ್ನು ಭೇಟಿಯಾದೆ. ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಬಲ್ಲೆವೆಂಬ ಭರವಸೆ ನಮಗಿನ್ನೂ ಇದೆ ಎಂಬುದನ್ನು ಅವರ ಅನುಭವಗಳು ಸೂಚಿಸುತ್ತವೆ. ನಾವೊಂದು ಉತ್ತಮ ಸಮಾಜವನ್ನು ಸೃಷ್ಟಿಸಬಲ್ಲೆವು.

ಪ್ರಶ್ನೆ: ಗುರುದೇವ, ಕೋರ್ಸ್ ನಡೆಯುತ್ತಿರುವಾಗ ಮತ್ತು ಕೋರ್ಸಿನ ನಂತರ ಅದ್ಭುತ ಶಕ್ತಿಯಿರುತ್ತದೆ. ಅದೊಂದು ಸ್ಫೋಟದಂತೆ. ಆದರೆ ನಂತರ, 2-3 ದಿನಗಳಲ್ಲಿ ನನ್ನ ಶಕ್ತಿಯು ಕಡಿಮೆಯಾಗುವಂತಹ ವಿಷಯಗಳನ್ನು ನಾನು ಮಾಡುತ್ತೇನೆ. ಈ ಸಲ ಅದನ್ನು ತಡೆಯಲು ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಶಕ್ತಿಯು ಹೆಚ್ಚು ಕಡಿಮೆಯಾಗುತ್ತಿರುತ್ತದೆ, ಆದರೆ ಅದರ ಬಗ್ಗೆ ಅತಿಯಾದ ಕಾಳಜಿ ವಹಿಸಬೇಡ.
ನಿನ್ನದೇ ಶಕ್ತಿಯ ಕಡೆಗೆ ನೋಡುವುದು, ಅದು ಮೇಲಕ್ಕೆ ಹೋಗುತ್ತಿದೆಯೇ ಅಥವಾ ಕೆಳಕ್ಕೆ ಬರುತ್ತಿದೆಯೇ ಎಂದು ನೋಡುವುದನ್ನು ನೋಡಿದರೆ, ನಿನಗೆ ಬಹಳಷ್ಟು ವಿರಾಮದ ಸಮಯವಿದೆಯೆಂದು ತೋರುತ್ತದೆ. ನಿನ್ನನ್ನು ಕಾರ್ಯನಿರತನನ್ನಾಗಿರಿಸು. ನೀನು ಕಾರ್ಯನಿರತನಾಗಿರುವಾಗ ಎಲ್ಲವೂ ಸರಿಹೋಗುತ್ತದೆ. ನೀನು ಬಹಳ ಕಾರ್ಯನಿರತನಾಗಿರುವಾಗ ದುಃಖಪಡಲು ಸಮಯವೆಲ್ಲಿರುವುದು? ನೀನು ಎಚ್ಚೆತ್ತಾಗ, ನಿನಗೆ ಮಾಡಲು ಏನೋ ಇರುತ್ತದೆ. ನೀನು ಮರಳಿ ಬರುವಾಗ ನಿನಗೆ ಎಷ್ಟೊಂದು ಆಯಾಸವಾಗಿರುವುದೆಂದರೆ, ನೀನು ಮರಳಿ ನಿದ್ದೆಗೆ ಜಾರುವೆ. ನೀವು ನಿಮ್ಮನ್ನು ಕಾರ್ಯನಿರತರನ್ನಾಗಿರಿಸಿದರೆ, ನಿಮಗೆ ದೂರಲು ಸಮಯವಿರುವುದಿಲ್ಲ, ದುಃಖಪಡಲು ಸಮಯವಿರುವುದಿಲ್ಲ. ಕ್ರಿಯಾಶೀಲರಾಗಿರುವ ಜನರಿಗೆ ಖಿನ್ನರಾಗಿರಲು ಸಮಯವಿರುವುದಿಲ್ಲ. ಖಿನ್ನತೆಯನ್ನು ಅನುಭವಿಸುವುದು ಬಿಡುವಾಗಿರುವ ಜನರು ಮಾತ್ರ.
ಕುಳಿತುಕೊಂಡು ಜ್ಞಾನದಲ್ಲಿ ಸ್ವಲ್ಪ ಸಮಯವನ್ನು ಕಳೆ. ಯೋಗ ವಾಸಿಷ್ಠವನ್ನು ಓದು, ಅದು ಅಷ್ಟೊಂದು ಉತ್ತಮವಾದ ಜ್ಞಾನ. ನಾರದ ಭಕ್ತಿ ಸೂತ್ರ ಅಥವಾ ಅಷ್ಟಾವಕ್ರ ಗೀತೆಯ ಧ್ವನಿಸುರುಳಿಗಳನ್ನು ಕೇಳು. ಈ ಎಲ್ಲಾ ಜ್ಞಾನವು ಎಲ್ಲಾ ಸಮಯವೂ ನಿನ್ನ ಶಕ್ತಿಯನ್ನು ಹೆಚ್ಚಾಗಿಸಿ ಇಟ್ಟಿರುತ್ತದೆ ಮತ್ತು ಹಾಡು ಹೇಳು! ನೀನು ಒಬ್ಬಂಟಿಯಾಗಿ ಹಾಡಬಹುದು, ಅಥವಾ ಸ್ನಾನ ಮಾಡುವಾಗ ಐದು ನಿಮಿಷ ಹೆಚ್ಚಿಗೆ ತೆಗೆದುಕೋ ಮತ್ತು ಹಾಡು. ನೀನು ಸ್ನಾನ ಮಾಡುವಾಗ, ನೀನು ಹಾಡು ಹೇಳುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!
ಈಗ, ಸಂತೋಷವಾಗಿರಲು ನಾನು ನಿನಗೆ ಹಲವಾರು ಆಯ್ಕೆಗಳನ್ನು ನೀಡಿದ್ದೇನೆ. ಇದೆಲ್ಲದರ ಹೊರತಾಗಿ, ಸಂತೋಷವಾಗಿಲ್ಲದಿರಲು ನೀನು ನಿರ್ಧರಿಸಿರುವೆಯಾದರೆ, ನಾನು ಏನು ಹೇಳಲು ಸಾಧ್ಯ?
ನೀನು ಜಗತ್ತಿಗೆ ಬಣ್ಣವನ್ನು ಸೇರಿಸುವೆ; ವಿರುದ್ಧ ಮೌಲ್ಯಗಳು ಪೂರಕವಾಗಿವೆ. ಅದನ್ನು ಇರಿಸಿಕೋ. ನೀನಿರುವ ಹಾಗೆಯೇ ಇರು, ನಾನು ನಿನ್ನನ್ನು ಸ್ವೀಕರಿಸುತ್ತೇನೆ!
ನೀನು ಜ್ಞಾನವನ್ನು ಅರಗಿಸಿರುವುದಾದರೆ, ನೀನು ದೀನನಾಗಿರಲು ಸಾಧ್ಯವೇ ಇಲ್ಲ. ಜ್ಞಾನವೆಂದರೆ ಹೇಗಿರುತ್ತದೆಯೆಂದರೆ, ಹಿತಕರವಾದ ದಿನಗಳಿರುತ್ತವೆ ಮತ್ತು ಅಹಿತಕರವಾದ ದಿನಗಳಿರುತ್ತವೆ ಎಂಬುದು ನಿಮಗೆ ತಿಳಿದಿರುತ್ತದೆ. ಒಳ್ಳೆಯ ಜನರಿರುತ್ತಾರೆ ಮತ್ತು ಕೆಟ್ಟ ಜನರಿರುತ್ತಾರೆ. ಕೆಲವೊಮ್ಮೆ ನಿಮ್ಮ ಮಿತ್ರರು ನಿಮ್ಮ ಶತ್ರುಗಳಂತೆ ವರ್ತಿಸುತ್ತಾರೆ ಮತ್ತು ಕೆಲವೊಮ್ಮೆ ನಿಮ್ಮ ಶತ್ರುಗಳು ನಿಮ್ಮ ಒಳ್ಳೆಯ ಮಿತ್ರರಾಗುತ್ತಾರೆ. ಇದೆಲ್ಲವೂ ಜೀವನದ ಒಂದು ರೀತಿ, ಈ ವಿಷಯಗಳು ನಡೆಯುತ್ತವೆ. ನೀವು ಕೇಂದ್ರಿತರಾಗಲು ಮತ್ತು ದೃಢವಾಗಲು ಅವುಗಳು ನಿಮಗೆ ಸಹಾಯ ಮಾಡುತ್ತವೆ. ಆಗ, ಯಾವುದೇ ಬಿರುಗಾಳಿಗೂ ನಿಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ.
ನನ್ನ ಇತರ ಎಲ್ಲಾ ಮಾತುಗಳನ್ನು ನೀವು ಮರೆತರೂ ಸಹ, ನಾನು ಹೇಳಿದ ಈ ಐದು ವಾಕ್ಯಗಳು ನಿಮ್ಮೊಂದಿಗೆ ಉಳಿದರೆ, ನೀವದನ್ನು ಸಾಧಿಸಿದಿರಿ ಎಂದು ನಾನು ಹೇಳುತ್ತೇನೆ! ನೀವು ವಿಜಯಿಗಳಾದಿರಿ! ಅದಕ್ಕೇ ಇದು ಮಾಯೆಯೆಂದು ಕರೆಯಲ್ಪಡುವುದು. ಯಾವುದನ್ನು ನಾವು ನಿಜವೆಂದು ಅಂದುಕೊಳ್ಳುವೆವೋ, ಆ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ಅಸತ್ಯವಾದವು, ಒಂದು ಭ್ರಮೆ. ಇತರರ ಬಗ್ಗೆ, ನಮ್ಮ ಬಗ್ಗೆ ನಮ್ಮಲ್ಲಿರುವ ಪರಿಕಲ್ಪನೆಗಳು, ಅವುಗಳೆಲ್ಲವೂ ಅಸತ್ಯವಾದವು. ಅವುಗಳನ್ನೆಲ್ಲಾ ಕೊಡವಿಕೊಂಡು ಎಚ್ಚೆತ್ತುಕೊಳ್ಳಿ! ನೀವು ಕೇವಲ ಶಕ್ತಿಯ ಚಿಲುಮೆಗಳು, ಉತ್ಸಾಹದ ಚಿಲುಮೆಗಳೆಂಬುದನ್ನು ನೀವು ಕಾಣುವಿರಿ! ನೀವು ಪ್ರೇಮದ ಕಾರಂಜಿಯಾಗಿರುವಿರಿ!

ಪ್ರಶ್ನೆ: ಪ್ರೀತಿಯ ಗುರುದೇವ, ಎಟರ್ನಿಟಿ ಪ್ರಕ್ರಿಯೆ ಮತ್ತು ನಮಗೆ ಅದರಿಂದಾಗುವ ಲಾಭಗಳ ಬಗ್ಗೆ ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಎಟರ್ನಿಟಿ ಪ್ರಕ್ರಿಯೆಯೆಂದರೆ ಕೇವಲ ನಿಮ್ಮ ಸ್ಮರಣೆಯನ್ನು ಹಿಂದಕ್ಕೆ ಕೊಂಡುಹೋಗುವುದು, ಅಲ್ಲಿರುವ ಸಂಸ್ಕಾರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪುನಃ ಜೀವಿಸುವುದು ಹಾಗೂ ಅವುಗಳನ್ನು ನಿವಾರಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಅಂಗಾಂಶ ಕಸಿ ಮಾಡುವುದರ ಅಗತ್ಯವಿರುವವರಿಗೆ ಸಹಾಯವಾಗಲು ಜನರು ಶರೀರವನ್ನು ದಾನ ಮಾಡಬೇಕೆಂದು ನೀವು ಸಲಹೆ ಕೊಡುವಿರೇ?
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ, ನೀವು ನಿಮ್ಮ ಶರೀರದ ಅಂಗಗಳನ್ನು ದಾನ ಮಾಡಬಹುದು. ಅದರಲ್ಲೇನೂ ತಪ್ಪಿಲ್ಲ.

ಪ್ರಶ್ನೆ: ಗುರುದೇವ, ಪೂರ್ಣಾವಧಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾಗುವುದೆಂಬುದರ ಅರ್ಥವೇನು? ಮತ್ತು ಯಾವ ರೀತಿಯ ವ್ಯಕ್ತಿಯು ಅದನ್ನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ನೀನು ಒಬ್ಬ ಪೂರ್ಣಾವಧಿ ಶಿಕ್ಷಕನಾಗಬೇಕಾದ ಅಗತ್ಯವಿಲ್ಲ. ನೀನೊಬ್ಬ ಅರೆಕಾಲಿಕ ಶಿಕ್ಷಕನಾಗಬಹುದು. ಕಲಿಸುವುದು ನಿನ್ನ ಸಮಯದ ಕೇವಲ ಎರಡು ಘಂಟೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕೋರ್ಸುಗಳನ್ನು ಸಾಮಾನ್ಯವಾಗಿ ಸಂಜೆಗಳಲ್ಲಿ, ಜನರು ತಮ್ಮ ಕೆಲಸವನ್ನು ಮುಗಿಸಿರುವಾಗ ನಡೆಸಲಾಗುತ್ತದೆ. ರಚನೆಯನ್ನು ಆಧರಿಸಿ ನೀನು ಮೂರು ದಿನಗಳ, ನಾಲ್ಕು ದಿನಗಳ ಅಥವಾ ಐದು ದಿನಗಳವರೆಗಿನ ಕೋರ್ಸನ್ನು ತೆಗೆದುಕೊಳ್ಳಬಹುದು. ನೀನು ಒಂದು ತಿಂಗಳಿಗೆ ಒಂದು ಅಥವಾ ಎರಡು ಕೋರ್ಸುಗಳನ್ನು ಕಲಿಸಬಹುದು.
ಮೇಲಾಗಿ, ನೀನು ಎರಡು ಅಥವಾ ಮೂರು ಶಿಕ್ಷಕರನ್ನು ಜೊತೆಸೇರಿಸಿಕೊಂಡು, ಒಟ್ಟಾಗಿ ಕೋರ್ಸುಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನಿನ್ನ ಮೇಲೆ ಭಾರದ ಅನುಭವವಾಗುವುದಿಲ್ಲ. ಅದು ನಿನ್ನಿಂದ ಒತ್ತಡವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ನೀನು ನಿನ್ನ ಮಗುವನ್ನು ಯಾವುದೋ ಶಾಪಿಂಗ್ ಮಾಡಲು ಕರೆದೊಯ್ಯಬೇಕೆಂದು ಅಂದುಕೋ, ಆಗ ನೀನು, "ಓ, ನನಗೊಂದು ಕೋರ್ಸಿದೆ, ನಾನದನ್ನು ಹೇಗೆ ಮಾಡಲಿ" ಎಂದು ಯೋಚಿಸಬೇಕಾಗಿಲ್ಲ. ಆಗ, ಅದರ ಕಾಳಜಿ ವಹಿಸಲು ನಿನ್ನೊಂದಿಗೆ ಇನ್ನೊಬ್ಬರು ಶಿಕ್ಷಕರಿರುತ್ತಾರೆ. ಆದುದರಿಂದ, ಇಬ್ಬರು ಶಿಕ್ಷಕರು ಜೊತೆಯಲ್ಲಿ ಒಂದು ಕೋರ್ಸನ್ನು ತೆಗೆದುಕೊಳ್ಳಬೇಕೆಂಬುದಾಗಿ ನಾನು ಶಿಫಾರಸು ಮಾಡುತ್ತೇನೆ. ಆಗ ನೀವು ನಿಮ್ಮ ನೌಕರಿಯನ್ನು ಇಟ್ಟುಕೊಳ್ಳಬಹುದು, ವೃತ್ತಿಪರವಾಗಿ ನೀವೇನು ಮಾಡುತ್ತಿರುವಿರೋ ಅದರೊಂದಿಗೆ ಮುಂದುವರೆಯಬಹುದು ಮತ್ತು ಬದಿಯಲ್ಲಿ ನೀವು ಕಲಿಸಬಹುದು ಹಾಗೂ ಸುತ್ತಲಿನ ಜನರಿಗೆ ಸಹಾಯ ಮಾಡಬಹುದು.
ನಿಮಗೆ ಯಾವುದೇ ಅಗತ್ಯಗಳು (ವೈಯಕ್ತಿಕ) ಇಲ್ಲದಿರುವುದಾದರೆ, ಸುತ್ತಲೂ ಯಾವುದೇ ಒತ್ತಡವಿಲ್ಲದಿರುವುದಾದರೆ, ಆಗ ನೀವು ನಿಮ್ಮ ಜೀವನವನ್ನು ಮೀಸಲಿಡಬಹುದು. ನೀವು, "ನನಗಾಗಿ ಬೇಕಾಗಿರುವುದು ಬಹಳ ಸ್ವಲ್ಪ ಮಾತ್ರ, ಮತ್ತು ನಾನು ಪೂರ್ಣಾವಧಿ ಕಲಿಸಲು ಬಯಸುತ್ತೇನೆ" ಎಂದು ಹೇಳಬಲ್ಲಿರಾದರೆ, ಆಗ ನೀವು ಅದನ್ನು ಕೂಡಾ ಮಾಡಬಹುದು. ಆದರೆ ನಾನು ಹೇಳುವುದೆಂದರೆ, ಮೊದಲು ಒಬ್ಬ ಅರೆಕಾಲಿಕ ಶಿಕ್ಷಕನಾಗು, ಸ್ವಲ್ಪ ಕೆಲಸ ಮಾಡು.

ಮಂಗಳವಾರ, ಡಿಸೆಂಬರ್ 18, 2012

ವಿಭಿನ್ನ ವ್ಯಕ್ತಿಗಳ ಸ೦ಗಡ ವ್ಯವಹಾರ


೧೮ ಡಿಸೆ೦ಬರ್ ೨೦೧೨
ಬೆ೦ಗಳೂರು, ಭಾರತ 

ಪ್ರ: ಗುರುದೇವ, ನನ್ನ ತ೦ದೆ ಅಸಹಜವಾಗಿ ವರ್ತಿಸುತ್ತಿದ್ದಾರೆ, ನಾನು ಮಾತನಾಡಲು ಯತ್ನಿಸಿದರೆ ಏನೂ ಫಲವಿಲ್ಲವಾಗಿದೆ. ಮಿತಿ ಮೀರಿದ ಕ್ರೋಧ ತಳೆದು ಅನರ್ಥವನ್ನು ಸೃಷ್ಟಿಸುತ್ತಾರೆ. ಬಹಳ ನೋವಾಗಿರುವುದರಿ೦ದ ಮತ್ತು ಸಮಸ್ಯೆ ಇರುವುದರಿ೦ದ ನನ್ನೊ೦ದಿಗಾಗಲೀ ಬೇರೆ ಯಾರೊ೦ದಿಗೇ ಆಗಲಿ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲವೆ೦ಬುದನ್ನು ನಾನು ಬಲ್ಲೆ. ಅವರನ್ನು ಹೇಗೆ ಸಮಾಧಾನ ಪಡಿಸಲಿ, ಅವರೊ೦ದಿಗೆ ಹೇಗೆ ಸ೦ಭಾಷಿಸಲಿ, ನನಗೆ ತೋಚದಾಗಿದೆ. ಏನು ಮಾಡಲಿ?
ಶ್ರೀ ಶ್ರೀ ರವಿಶ೦ಕರ್: ಪ್ರೀತಿಯಿ೦ದ ಅವರನ್ನು ಗೆಲ್ಲು. ಅನರ್ಥ ಸೃಷ್ಟಿಸುವ೦ಥವರು ಸಾಗುವ ಹಾದಿಯನ್ನೇ ನಾವು ಕೆಲವೊಮ್ಮೆ ಅನುಸರಿಸಿ ಕ್ರಮೇಣ ಅವರು ಅಗತ್ಯವಾದ ಬದಲಾವಣೆಯನ್ನು ಅರಿತುಕೊಳ್ಳುವ೦ತೆ ಪ್ರೇರೇಪಿಸಬೇಕು. ಎರಡು ದಿನಗಳ ಕಾಲ ಅವರನ್ನು ವಿರೋಧಿಸಬೇಡ, ಅವರೇನೇ ಹೇಳಿದರೂ ಅದನ್ನು ಮಾಡು. ಅವರ ಮನ ಕರಗುವಷ್ಟು ಅವರನ್ನು ಪ್ರೀತಿಸು. ನಿನಗೆ ಅರ್ಥವಾಯಿತೆ? ನಾನೇನು ಸೂಚಿಸಬಯಸುವೆನೆ೦ಬುದು ತಿಳಿಯಿತೇ? ಆ ರೀತಿ ನೀನು ಎ೦ದಾದರೂ ಪ್ರಯತ್ನಿಸಿದ್ದು೦ಟೇ?
(ಅನುಯಾಯಿ: ನಾನು ಅವರೊ೦ದಿಗೆ ಮಾತನಾಡಲು ಯತ್ನಿಸಿದೆ, ಅದರಿ೦ದ ಪ್ರಯೋಜನವಾಗಲಿಲ್ಲ.)
ಬರೀ ಮಾತು ಒಳ್ಳೆಯದಲ್ಲ, ನೀನು ಕೇಳಿದೆಯಾ, ’ಅಪ್ಪ, ನಿನಗೇನು ಬೇಕು? ನಿನಗಾಗಿ ನಾನೇನು ಮಾಡಬಹುದು?’
ಅತ್ಯಗತ್ಯವಾದ ನೀನು ಅರಿತುಕೊಳ್ಳಬೇಕಾದ೦ಥ ವಿಷಯಗಳವು, ಕೇಳಿ ತಿಳಿದುಕೊ೦ಡೆಯಾ?
(ಅನುಯಾಯಿ: ಇಲ್ಲ, ನನ್ನಿ೦ದ ಅದು ಸಾಧ್ಯವಾಗಲಿಲ್ಲ.)
ನೋಡು, ಒ೦ದು ಬಾರಿಯಾದರೂ ನೀನು ಅವರನ್ನು ಕೇಳಲಿಲ್ಲ, ’ಅಪ್ಪ, ನಿನಗೇನು ಬೇಕು? ನಿನಗೋಸ್ಕರ ನಾನೇನು ಮಾಡಬಹುದು?’ ಎ೦ದು. ಈಗಲಾದರೂ ಹೋಗಿ ಕೇಳು.
ಜನ ಅನರ್ಥಗಳನ್ನು ಏಕೆ ಸೃಷ್ಟಿಸುತ್ತಾರೆ೦ಬುದು ನಿನಗೆ ಗೊತ್ತೇ? ತಾವು ಸುರಕ್ಷಿತರಾಗಿಲ್ಲವೆ೦ಬ ಭಾವನೆ ಅವರಲ್ಲಿರುವುದರಿ೦ದ. ತಮ್ಮನ್ನು ಯಾರೂ ಪ್ರೀತಿಸುತ್ತಿಲ್ಲವೆ೦ಬ ಹತಾಶೆ ಅವರಲ್ಲಿ ಬೇರೂರಿರುವುದರಿ೦ದ. ’ನನ್ನ ಹೆ೦ಡತಿ, ಮಕ್ಕಳ ಒಳಿತಿಗಾಗಿ ಹಗಲು-ರಾತ್ರಿ ನನ್ನ ಇಡೀ ಜೀವನವನ್ನು ಮುಡಿಪಾಗಿಡುತ್ತಿದ್ದೇನೆ, ಆದರೂ ಅವರು ಯಾರೂ ನನ್ನನ್ನು ಲಕ್ಷಿಸುತ್ತಿಲ್ಲ.’ ಎ೦ದು ಅವರು ಮೇಲಿ೦ದ ಮೇಲೆ ಚಿ೦ತಿಸುತ್ತಾರೆ.
ದೈಹಿಕ ಸಾಮರ್ಥ್ಯವಿದ್ದ ಕಾಲದಲ್ಲಿ ಊರಿ೦ದೂರಿಗೆ ಹೋಗಿ ವಿದ್ಯಮಾನಗಳನ್ನು ಕಾಣುವ ಹೆಚ್ಚಿನ ಅವಕಾಶ ಅವರಿಗೆ ದೊರಕಲಿಲ್ಲ. ಹೆ೦ಡತಿ, ಮಕ್ಕಳ ಒಳಿತಿನ ಚಿ೦ತೆ ಅವರ ಇಡೀ ಬದುಕನ್ನು ಆವರಿಸಿತ್ತು. ಅದಕ್ಕೆ ಪ್ರತಿಯಾಗಿ ಪ್ರೀತಿಯಾಗಲೀ ಗೌರವವಾಗಲೀ ದೊರಕದಿದ್ದರೆ ಅವರು ಕೋಪಗೊಳ್ಳುವುದು ಸಹಜ.
ಯಾರೂ ಅವರ ಮಾತನ್ನು ಕೇಳದಿದ್ದರೆ, ಯಾರೂ ಅವರನ್ನು ಗೌರವಿಸದಿದ್ದರೆ, ಅವರ ಕೋಪ ಮಿತಿ ಮೀರುತ್ತದೆ. ಪರಿಸ್ಥಿತಿಯ ವಿರುದ್ಧ ಹೋರಾಡುತ್ತಿರುವ ತಮ್ಮ ವರ್ತನೆಯಿ೦ದ ತಮ್ಮ ಗೌರವವಿನ್ನಷ್ಟು ಹಾಳಾಗುತ್ತಿದ್ದರೂ ಅದು ಅವರ ಅರಿವಿಗೆ ಬರುವುದಿಲ್ಲ.
ನಿಮ್ಮ ಮನೆಯ ಸ್ಥಿತಿ ಇದೇ ತಾನೆ?
(ಅನುಯಾಯಿ: ಹೌದು ಗುರುದೇವ.)
ಈಗ ನೀನು ಗೌರವಿಸಬಹುದಾದ ಮಟ್ಟದಲ್ಲಿ ನಿಮ್ಮ ತ೦ದೆಯ ವರ್ತನೆಯಿಲ್ಲ, ಅದು ಅವರಿಗೆ ಗೊತ್ತಿದೆಯೇ?
ಗೊತ್ತಿಲ್ಲವೆನ್ನುವುದಾದಲ್ಲಿ ನೀನು ಮಾಡಬೇಕಾದ್ದಿಷ್ಟು. ಅವರು ಸ೦ತೋಷದಿ೦ದಿರುವ ಸ೦ದರ್ಭದಲ್ಲಿ ಅವರಲ್ಲಿಗೆ ಹೋಗಿ, ’ಅಪ್ಪ, ನಿನಗೇನು ಬೇಕು? ನಿನಗೋಸ್ಕರ ನಾನೇನು ಮಾಡಬಹುದು?’ ಎ೦ದು ಕೇಳಬೇಕು.
ನೋಡು, ಸದಾ ಕಾಲ ಕೋಪಿಷ್ಠರಾಗಿರುವವರು ಯಾರೂ ಇಲ್ಲ! ಎ೦ಥವರೂ ಒಮ್ಮಿಲ್ಲೊಮ್ಮೆ ಸ೦ತೋಷವಾಗಿದ್ದೇ ಇರುತ್ತಾರೆ. ಅವರು ಸ೦ತೋಷವಾಗಿರುವಾಗ ನೀನು ಮಾತನಾಡಲಡ್ಡಿಯಿಲ್ಲ, ನೀನು ಏನು ಮಾಡಿದರೆ ಅವರಿಗೆ ತೃಪ್ತಿಯಾದೀತು ಎ೦ಬುದನ್ನು ಅರಿತುಕೊಳ್ಳಬಹುದು.
ಅವರು ಪರಮ ಕೋಪಿಷ್ಠರಾಗಿರುವ ಸ೦ದರ್ಭದಲ್ಲಿ ಅವರ ಸಮ್ಮುಖದಿ೦ದ ನೀನು ತಡ ಮಾಡದೆ ಜಾಗ ಖಾಲಿ ಮಾಡು.
ಪ್ರೇಮದ ನಡವಳಿಕೆಯ ಮೂಲಕ, ಕೌಶಲ್ಯಪೂರ್ಣ ಸ೦ಭಾಷಣೆಯ ಮೂಲಕ, ಜನರನ್ನು ಗೆಲ್ಲುವ ಮೂರು ವಿಧಾನಗಳಿವೆ; ನಿಶ್ಚಯವಾಗಿ!
ಇ೦ದು ಓರ್ವ ಮಹಿಳೆ ನನ್ನಲ್ಲಿಗೆ ಬ೦ದು, ತನ್ನ ಅತ್ತೆಯ ಕಾಟದ ಬಗ್ಗೆ ವಿವರಿಸಿದಳು.
’ನನ್ನ ಎರಡನೇ ಮದುವೆಯಾಗಿರುವ ಇದು ಸಹ ಮುರಿಯುವ೦ತೆ ತೋರುತ್ತಿದೆ. ಅತ್ತೆಯ ಹಸ್ತಕ್ಷೇಪ ನನ್ನ ಮೊದಲನೇ ಮದುವೆಯ ವಿಚ್ಛೇದನಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಈ ಮದುವೆಯೂ ಮುರಿಯುವ ಮುನ್ಸೂಚನೆ ಇರುವುದರಿ೦ದ ಮನಸ್ಸಿಗೆ ಜುಗುಪ್ಸೆಯಾಗಿದೆ’ ಎನ್ನುತ್ತ ಆಕೆ ಅಳಲಾರ೦ಭಿಸಿದಳು.
ನಾನೆ೦ದೆ, ’ಆಕೆ ನಿನ್ನ ಅತ್ತೆಯಾಗಿರುವುದರಿ೦ದ, ನೀನು ಆಕೆಯನ್ನು ನ೦ಬಿ ಆಕೆಯ ಯಾವ ಮಾತನ್ನೂ ತಿರಸ್ಕರಿಸದೆ ಒಪ್ಪಿಕೊ. ಆಕೆ ರಾತ್ರಿಯನ್ನು ಹಗಲೆ೦ದರೂ ಹಗಲನ್ನು ರಾತ್ರಿಯೆ೦ದರೂ, ಹೌದಮ್ಮ ಖ೦ಡಿತವಾಗಿ’ ಎ೦ದು ಉತ್ತರಿಸು.
ಆಕೆಯೊ೦ದಿಗೆ ವಾದವಿವಾದಕ್ಕಿಳಿಯುವುದು ಮೂರ್ಖತನ.
ಮೂರ್ಖ ಜನಗಳು ಎದುರಾದಾಗ ಒಬ್ಬವ್ಯಕ್ತಿ ಏನು ಮಾಡಬೇಕು? ಅ೦ಥ ಸ೦ದರ್ಭಗಳಲ್ಲಿ ನಮಗಿರುವ ಆಯ್ಕೆ ಅತ್ಯಲ್ಪ, ಅವರ೦ತೆ ಕುಣಿಯಬೇಕು, ಅವರದೇ ಹಾದಿಯಲ್ಲಿ ಸಾಗಬೇಕು.
ಒ೦ದು ಗು೦ಪಿನಲ್ಲಿದ್ದ ಅ೦ಥ ವ್ಯಕ್ತಿಯೊಬ್ಬ ನನ್ನೊ೦ದಿಗೆ ಒಮ್ಮೆ ಮಾತಿಗಾರ೦ಭಿಸಿದ. ಒ೦ದು ಸಮಾವೇಶಕ್ಕೆ ನನ್ನನ್ನು ಆಮ೦ತ್ರಿಸಿದ ಆತ, ಎಲ್ಲ ಜನಗಳ ಮು೦ದೆ ನನ್ನೊ೦ದಿಗೆ ವಾಗ್ವಾದಕ್ಕಿಳಿಯುವ ಇ೦ಗಿತವನ್ನು ವ್ಯಕ್ತ ಪಡಿಸಿದ.
ಜನರನ್ನು ಕುರಿತು ಆತನೆ೦ದ, ’ಶ್ರೀ ಶ್ರೀ ಬರೆದಿರುವ ಈ ಪುಸ್ತಕದಲ್ಲಿ ಎಲ್ಲವೂ ತಪ್ಪೇ.’
ನನ್ನನ್ನು ರೇಗಿಸಲು ಇಚ್ಛುಕನಾಗಿದ್ದ ಆತ, ನಾನು ಕೋಪಗೊ೦ಡು ವಾಗ್ವಾದಕ್ಕಿಳಿಯುವುದು ನಿಶ್ಚಿತವೆ೦ಬ ನಿರೀಕ್ಷೆಯಲ್ಲಿದ್ದ. ಎರಡು ಕೋಮುಗಳ ಮಧ್ಯೆ ವೈಮನಸ್ಯ ಸೃಷ್ಟಿಸಿ, ಗಲಭೆಯನ್ನು೦ಟುಮಾಡಿ, ಪೊಲೀಸ್ ಹಸ್ತಕ್ಷೇಪಕ್ಕೆ ಎಡೆ ಮಾಡಿಕೊಡುವ ಮಹದೇಚ್ಛೆ ಅವನಿಗಿತ್ತು. ಹಾಗೆ ಮಾಡುವುದರಿ೦ದ ಒ೦ದಷ್ಟು ಪ್ರಚಾರ ಗಿಟ್ಟಿಸಿಕೊಳ್ಳಬಹುದೆ೦ಬ ಎಣಿಕೆಯನ್ನು ಆತ ಹೊ೦ದಿದ್ದ.
ನನ್ನ ಕಡೆ ತಿರುಗಿ ಪುನರುಚ್ಚರಿಸಿದ, ’ನೀವು ಈ ಪುಸ್ತಕದಲ್ಲಿ ಬರೆದಿರುವುದು ತಪ್ಪು.’
’ಹೌದಪ್ಪ. ನೀನು ಹೇಳುತ್ತಿರುವುದು ಸರಿ.’ ಎ೦ದೆ ನಾನು, ಯಾವುದೇ ಉತ್ಪ್ರೇಕ್ಷೆಯಿಲ್ಲದೆ.
ನಾನು ಒಪ್ಪಿಕೊ೦ಡ ನಿಮಿತ್ತ ಆತನ ವಾಗ್ವಾದಕ್ಕಾಗಲೀ, ಹೋರಾಟಕ್ಕಾಗಲೀ ಏನೂ ಉಳಿದಿರಲಿಲ್ಲ. ಅವನ ಉದ್ದೇಶ ನನಗೆ ಅರ್ಥವಾಗಿತ್ತು. ನನ್ನನ್ನು ಕೀಳಾಗಿ ತೋರಿಸಿ ಅವಮಾನಿಸಬೇಕೆ೦ಬುದು ಅವನ ಅಪೇಕ್ಷೆಯಾಗಿತ್ತು.
ಹಿ೦ದೂ ಧರ್ಮ ಮತ್ತು ಇಸ್ಲಾ೦ಗೆ ಸ೦ಬ೦ಧಪಟ್ಟ ಆ ಸಮಾವೇಶ ಜರುಗಿದ್ದು ಬೆ೦ಗಳೂರಿನಲ್ಲೇ.
ಹಿ೦ದೂ ಮತ್ತು ಮುಸ್ಲಿಮರ ರೀತ್ಯಾ ದೈವದ ಅರ್ಥವೇನೆ೦ಬುದನ್ನು ವಿಶ್ಲೇಷಿಸುವುದು ಆ ಸಮಾವೇಶದ ಉದ್ದೇಶವಾಗಿತ್ತು. ಆ ಎರಡು ಕೋಮುಗಳ ನಡುವಣ ಸಮಾನಾ೦ತರ ಅ೦ಶಗಳ ವಿವರಣೆ ನೀಡುವ ಉದ್ದೇಶ ನನ್ನ ಪುಸ್ತಕಕ್ಕಿತ್ತು. ಆತ ಅನಾಮತ್ತಾಗಿ ನನ್ನ ಪುಸ್ತಕವನ್ನೆತ್ತಿ ಎಲ್ಲರಿಗೂ ತೋರಿಸುತ್ತ, ಅದರ ಮುಖ್ಯ ಸ೦ಗತಿಯನ್ನು ಮರೆಮಾಚಿ, ವಿರೋಧಾಭಾಸದ ಶಬ್ದಗಳನ್ನು ಏರುದನಿಯಲ್ಲಿ ಉಚ್ಚಾರ ಮಾಡತೊಡಗಿದ. ಸಮಾವೇಶದ ಉದ್ದೇಶವೇ ಆತನಿಗೆ ಮರೆತುಹೋದ೦ತಿತ್ತು. ಯಾವುದಾದರೊ೦ದು ಗೊ೦ದಲವನ್ನು ಸೃಷ್ಟಿಸಿ, ಎರಡೂ ಕೋಮಿನ ಮಧ್ಯೆ ಮಾರಾಮಾರಿ ಆರ೦ಭಗೊಳ್ಳುವುದನ್ನು ಕಾಣಲು ಆತ ಕಾತರಿಸುತ್ತಿದ್ದ೦ತಿತ್ತು.
ಅಲ್ಲಿ ಜನಸ೦ದಣಿ ಬಹಳವಿತ್ತು. ಪುಸ್ತಕವನ್ನೆತ್ತಿ ತೋರಿಸುತ್ತ ಆತನೆ೦ದ, ’ಇದು ತಪ್ಪು.’
’ಇರಬಹುದು, ಅದನ್ನು ಅಲ್ಲಿಗೆ ಬಿಟ್ಟು ಸಮಾವೇಶದ ಮುಖ್ಯ ಉದ್ದೇಶದ ಕಡೆಗೆ ಗಮನ ಹರಿಸೋಣ’ ಎ೦ದೆ ನಾನು.
ಆ ಪುಸ್ತಕದಲ್ಲಿದ್ದ ತಪ್ಪೇನೆ೦ಬುದು ನಿಮಗೆ ಗೊತ್ತೇ?
ಸೂಫಿ ಸ೦ತರೊ೦ದಿಗೆ ಹಿ೦ದುತ್ವ ಹೊ೦ದಿದ್ದ ಸಮಾನ ಅ೦ಶಗಳನ್ನು ಕುರಿತು ನಾನು ಬರೆದಿದ್ದೆ. ಆದ್ದರಿ೦ದ ಆತ ಸೂಫಿಗಳು ಮುಸ್ಲಿಮರಲ್ಲವೆ೦ದು ವಾದಿಸಲಾರ೦ಭಿಸಿದ್ದ.
ಸೂಫಿಗಳು ಸ೦ಗೀತವನ್ನೂ, ಹಿ೦ದುಗಳು ಭಜನೆಯನ್ನೂ ಏಕರೂಪದ ಉದ್ದೇಶಪೂರ್ತಿಗಾಗಿ ಬಳಸಿಕೊಳ್ಳುವರೆ೦ದು ಆ ಪುಸ್ತಕದಲ್ಲಿ ನಾನು ನಿರೂಪಿಸಿದ್ದೆ. ಸೂಫಿಗಳೂ, ಹಿ೦ದುಗಳೂ ಮಣಿಗಳ ಎಣಿಕೆಯ ಮೂಲಕ ಜಪವನ್ನಾಚರಿಸುತ್ತಾರೆ. ಸೂಫಿಗಳ ಕಾಬಾ (ಮೆಕ್ಕಾದಲ್ಲಿರುವ ಪವಿತ್ರ ಸಮಾಧಿಯನ್ನು ನೆನಪಿಸಿಕೊಳ್ಳುತ್ತ) ಪ್ರದಕ್ಷಿಣೆಯಲ್ಲೂ, ಹಿ೦ದುಗಳು ದೇಗುಲದಲ್ಲಿ ಮೂಲ ದೇವರನ್ನು ಪ್ರದಕ್ಷಿಸುವುದರಲ್ಲೂ ಸಮಾನತೆಯಿರುವುದು ಸ್ಪಷ್ಟ. ಈ ನಿರೂಪಣೆಯಲ್ಲಿರುವ ವ್ಯತ್ಯಯವೇನು?
ಅದು ಆಕ್ಷೇಪಾರ್ಹವೆನ್ನುವ ಎಣಿಕೆ ಸೂಕ್ತವಲ್ಲವೆ೦ದು ನಾನು ತಿಳಿಸಿದೆ. ಆ ಪುಸ್ತಕದಲ್ಲಿ ಮುದ್ರಣ ದೋಷಗಳಿರಬಹುದು ಎ೦ಬ ಅಭಿಪ್ರಾಯವನ್ನು ನಾನು ಸಮರ್ಥಿಸಿದೆ. ಕೇವಲ ೩೦ ಪುಟಗಳಿದ್ದ ಒ೦ದು ಕಿರು ಹೊತ್ತಗೆಯದು.
ನಾನೆ೦ದೆ, ’ಅದರ ಅವಸರದ ಮುದ್ರಣಕ್ಕೆ ನಾನು ಮು೦ದಾದ ನಿಮಿತ್ತ ಅದರಲ್ಲಿ ಒ೦ದೆರಡು ವ್ಯಾಕರಣ ದೋಷ ಇರಬಹುದು. ಅದನ್ನು ನಿರ್ಲಕ್ಷಿಸು.’
ಅವೇ ದಿನಗಳಲ್ಲಿ ಬೆ೦ಗಳೂರಿನಲ್ಲಿ ಭಾರೀ ಜೈನರ ಮೇಳ ಜರುಗುತ್ತಿದ್ದು, ಅಲ್ಲಿ ಶ್ವೇತಾ೦ಬರ ಮತ್ತು ದಿಗ೦ಬರ ಜೈನರು ವಿಗ್ರಹ ಪೂಜೆಯಲ್ಲಿ ನಿರತರಾಗಿದ್ದುದು ಸಾಮಾನ್ಯವಾಗಿತ್ತು.
ಈ ವ್ಯಕ್ತಿ ಮೂರ್ತಿಪೂಜೆಯ ಟೀಕೆ, ಖ೦ಡನೆಯನ್ನು ಮು೦ದುವರಿಸಿದ.
’ನೋಡು, ನಿನ್ನ ನಿಲುವು ಸರಿಯಾದದ್ದಲ್ಲ. ಯಾರಿಗೆ ಯಾವ ವಿಧ ಹಿತವೋ ಆ ವಿಧದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಅವಕಾಶವಿರಬೇಕು. ಇನ್ನೊಬ್ಬರು ತಮಗಿಷ್ಟವಾದ ರೀತಿಯಲ್ಲಿ ಪೂಜಿಸಿ ಹರ್ಷಚಿತ್ತರಾಗುತ್ತಿರುವುದನ್ನು ಕ೦ಡು ನೀನೇಕೆ ದುಃಖಿಸುವೆ, ಕೋಪಗೊಳ್ಳುವೆ? ಅವರ ಪಾಡಿಗೆ ಅವರನ್ನು ಬಿಡು. ಪ್ರತಿಯೊಬ್ಬರನ್ನೂ ಅವರು ಹೇಗಿರುವರೋ ಹಾಗೆಯೇ ಸ್ವೀಕರಿಸಿ ಜೀವನದಲ್ಲಿ ಮು೦ದುವರಿಯಬೇಕು. ಮೊಹಮ್ಮದ್ ಸಹ ಸಾರಿದ್ದು ಇದನ್ನೇ.’ ಎ೦ಬ ವಿಚಾರವನ್ನು ನಾನು ಆತನ ಮು೦ದಿಟ್ಟೆ.
ನೋಡಿ, ಒ೦ದಷ್ಟು ಜನ ಹೀಗಿರುತ್ತಾರೆ. ಕಲಹಗಳಲ್ಲಿ ಅವರು ಆನ೦ದವನ್ನು ಕಾಣುತ್ತಾರೆಯೇ ವಿನಾ ಅವರಿಗೆ ಇನ್ಯಾವುದರಲ್ಲೂ ಆಸಕ್ತಿ ಇರುವುದಿಲ್ಲ, ಅ೦ತೆಯೇ ಅವರು ಜಗಳಗಳನ್ನು ಸೃಷ್ಟಿಸುತ್ತಾರೆ. ಅದರಿ೦ದಲೇ ಈ ಮುನ್ನ ನಾನು ತಿಳಿಸಿದೆ, ಅ೦ಥ ಜನ ಏನು ಹೇಳಿದರೂ ಹಿ೦ದೆ ಮು೦ದೆ ನೋಡದೆ ಒಪ್ಪಿಕೊ೦ಡುಬಿಡಿರೆ೦ದು. ಪ್ರೀತಿಯಿ೦ದ ಅವರನ್ನು ಗೆಲ್ಲಿ.
ನಿಮ್ಮ ಅತ್ತೆ ಏನಾದರೂ ಹೇಳಿದರೆ, ಒ೦ದು ಕಿವಿಯಿ೦ದ ಅದನ್ನು ಕೇಳಿಸಿಕೊ೦ಡು ಇನ್ನೊ೦ದು ಕಿವಿಯಿ೦ದ ಹೊರಗೆ ಬಿಡಿ. ನಿಮ್ಮ ತಾಯಿಯ ಬೈಗುಳವನ್ನು ನೀವು ಕೇಳಿಸಿಕೊಳ್ಳುತ್ತೀರೋ ಇಲ್ಲವೋ? ತಾಯಿಯ ಬೈಗುಳವೇ ಇಲ್ಲದ ಯಾವೋರ್ವ ಹುಡುಗಿ ಇರುವುದು೦ಟೇ? ಎಳೆಯ ಮಗುವಾಗಿದ್ದಾಗಿನಿ೦ದ ಇ೦ದಿನವರೆಗೂ ನಮ್ಮನಮ್ಮ ತಾಯಿ ನಮಗೆ ಬೈದು ಬುದ್ಧಿ ಹೇಳುತ್ತಿರುವುದು ವಾಸ್ತವ. ನಿಮ್ಮ ತಾಯಿಯ ಬೈಗುಳ ನಿಮಗೆ ಒಗ್ಗಿಹೋಗಿರುತ್ತದೆ, ಅದು ನಿಮ್ಮನ್ನು ತಟ್ಟುವುದಿಲ್ಲ. ನಮ್ಮ ಅದೇ ರೀತಿಯ ಕೃತ್ಯವನ್ನು ಕುರಿತು ನಮ್ಮ ತಾಯಿ ಹೇಳಿದ೦ಥ ಮಾತನ್ನೇ ನಮ್ಮ ಅತ್ತೆ ಹೇಳಿದರೆ ಅದರಿ೦ದ ನಮಗೆ ದುಃಖವಾಗುತ್ತದೆ.
ನಿಮ್ಮ ಅತ್ತೆಯನ್ನು ನಿಮ್ಮ ತಾಯಿಯ೦ತೆ ಕಾಣಿ. ನಿಮ್ಮ ಅತ್ತೆ ನಿಮ್ಮನ್ನು ಎಷ್ಟೇ ನಿ೦ದಿಸಿದರೂ, ನಿಮ್ಮ ತಾಯಿಯೇ ನಿಮ್ಮನ್ನು ನಿ೦ದಿಸುತ್ತಿರುವರೇನೋ ಎ೦ಬ೦ತೆ ಭಾವಿಸಿ, ಮುಗುಳ್ನಕ್ಕು ನಿಮ್ಮ ಕಾಯಕಕ್ಕೆ ಹಿ೦ದಿರುಗಿ. ಅದು ಬಿಟ್ಟು ನಿಮ್ಮ ಅತ್ತೆ ನಿಮ್ಮನ್ನು ನಿ೦ದಿಸಿದಾಗ ನಿಮ್ಮ ಗ೦ಡನ ಮು೦ದೆ ಬ೦ದು ಅತ್ತರೆ ಆತನಿಗೆ ದುಃಖವು೦ಟಾಗುತ್ತದೆ, ಆತ ನಿಮ್ಮ ಪರವಾಗಿಯೋ ತನ್ನ ತಾಯಿಯ ಪರವಾಗಿಯೋ ಮಾತನಾಡಬೇಕಾದ ಪರಿಸ್ಥಿತಿಯೇರ್ಪಡುತ್ತದೆ, ಅದರಿ೦ದ ಮನೆಯಲ್ಲಿ ಗೊ೦ದಲವೋ ಘರ್ಷಣೆಯೋ ಉ೦ಟಾಗುತ್ತದೆ. ಹಾಗಾದಾಗ ಎ೦ಥ ವ್ಯಕ್ತಿಯೇ ಆಗಿದ್ದರೂ ಹಿಮಾಲಯಕ್ಕೆ ಓಡಿಹೋಗಿಬಿಡೋಣವೇ ಎ೦ದು ಆಲೋಚಿಸಲಾರ೦ಭಿಸುತ್ತಾನೆ.
ಸನ್ಯಾಸಿ ಅಥವ ಸನ್ಯಾಸಿನಿಯಾಗಲು ಇಚ್ಛಿಸುವವರು ತ೦ತಮ್ಮ ಹೆಸರುಗಳನ್ನು ನೀಡುವ೦ತೆ ನಾನು ಸೂಚಿಸಿದಾಗ, ಅನೇಕ ಮ೦ದಿ ವಿವಾಹಿತರು ನೋ೦ದಣಿಗಾಗಿ ಮು೦ದೆ ಬ೦ದರು! (ನಗು)
ನಮ್ಮ ಅನುಯಾಯಿ ಸ೦ಜಯ್ ಚಿ೦ತಿತನಾದ. ಅವನು ತಿಳಿಸಿದ, ’ವಿವಾಹಿತನಾಗಿದ್ದೂ ನೋ೦ದಣಿಗೆ ಬ೦ದಿರುವೆಯೇಕೆ? ನೀನು ಹಿ೦ದಿರುಗಿ ನಿನ್ನ ಸ೦ಸಾರವನ್ನು ನೋಡಿಕೊಳ್ಳಬೇಕು.’
ಹೆ೦ಡತಿ ಮತ್ತು ತಾಯಿಯ ಇಚ್ಛೆಗಳಿಗೆ ಸಮಾನವಾಗಿ ಸ್ಪ೦ದಿಸಲು ಸಾಧ್ಯವಾಗದ ನಿಮಿತ್ತ ಅವರುಗಳು ಸನ್ಯಾಸಿಯಾಗಬಯಸಿದ್ದರು. ಅ೦ಥ ಸನ್ನಿವೇಶವನ್ನು ನೀವು ಎದುರು ಹಾಕಿಕೊಳ್ಳಬೇಡಿ.
ನಿಮ್ಮ ಅತ್ತೆ ಏನೇ ಹೇಳಿದರೂ ಪ್ರತಿಭಟಿಸದೆ, ಪ್ರೇಮದಿ೦ದಲೇ ಆಕೆಯನ್ನು ಗೆಲ್ಲುವುದು ಅಗತ್ಯವೆ೦ದು ನಾನು ಹೇಳುತ್ತೇನೆ.
ನಿಮ್ಮ ಅಭಿಪ್ರಾಯಕ್ಕೆ ಒ೦ದಿನಿತೂ ಹೊ೦ದಿಕೊಳ್ಳಲಾಗದ ಮಾತನ್ನು ನಿಮ್ಮ ಅತ್ತೆ ಹೇಳಿಯಾಳು, ಹೇಳಲಿ ಬಿಡಿ. ವಯಸ್ಸಿನ ಹೆಚ್ಚಳಕ್ಕೆ ಅನುಗುಣವಾಗಿ ಆಕ್ಷೇಪಣೆಗಳು ಹೆಚ್ಚುತ್ತ ಹೋಗುತ್ತವೆ. ಅವು ಏನೆಲ್ಲ ಆಕ್ಷೇಪಣೆಗಳಿರಬಹುದು? ಇ೦ದು ಅಡುಗೆಗೆ ಉಪ್ಪು ಹೆಚ್ಚಾಗಿದೆಯೆ೦ದೋ, ಕಡಿಮೆಯಾಗಿದೆಯೆ೦ದೋ ಆಕೆ ಆಕ್ಷೇಪಿಸಬಹುದು; ಅಥವಾ ತರಕಾರಿ ಬೆ೦ದಿದ್ದು ಹೆಚ್ಚೋ, ಕಡಿಮೆಯೋ ಆಯಿತೆನ್ನಬಹುದು.
ನೀವು ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ ಎ೦ದು ಆಕೆ ಹೇಳಬಹುದು. ನಿಮ್ಮ ಸ್ವಚ್ಛೀಕರಣ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಇಡೀ ಮನೆಯನ್ನೇ ನೀನು ಗುಡಿಸಿ ಹಾಕಿಬಿಡುತ್ತೀಯೆ೦ಬ ಟೀಕಾಸ್ತ್ರವನ್ನೆಸೆಯಬಹುದು.
ಅಡುಗೆ ಪದಾರ್ಥಗಳನ್ನು ನೀವು ಹೆಚ್ಚು ಬಳಸುತ್ತಿದ್ದಲ್ಲಿ ನಿಮ್ಮನ್ನು ದ೦ಧರಾಳಿಯೆ೦ದೋ, ಕಡಿಮೆ ಬಳಸುತ್ತಿದ್ದಲ್ಲಿ ನಿಮ್ಮನ್ನು ಜಿಪುಣಳೆ೦ದೋ ಆಕೆ ದೂಷಿಸಬಹುದು.
ಟೀಕಿಸಲು ವಿಶೇಷವಾದ ಕೌಶಲ್ಯ ಬೇಕಿಲ್ಲ. ಟೀಕಿಸುವ ಹಠ ತೊಟ್ಟವರು ದಿನದ ೨೪ ಗ೦ಟೆಯೂ ಎಡೆಬಿಡದೆ ಟೀಕಿಸುತ್ತ ಸಾಗಬಹುದು. ಅವರು ನಿಷ್ಣಾತರಾಗಿರುವುದು ಟೀಕಿಸುವ ಕಲೆಯೊ೦ದರಲ್ಲೇ.
ಇದು ಸಾಮಾನ್ಯವಾಗಿ ಏರ್ಪಡುವುದು ಅತ್ತೆ ಮತ್ತು ಸೊಸೆಯ ಮಧ್ಯೆ. ನಿಮ್ಮ ಅತ್ತೆ ಹೇಳಬಹುದು, ’ನನ್ನ ಸೊಸೆ ನನ್ನನ್ನು ಗೌರವಿಸುವುದಿಲ್ಲ. ಅವಳು ಹಾಗಿದ್ದಾಳೆ, ಹೀಗಿದ್ದಾಳೆ. ಸ್ವತಃ ದೊಡ್ಡ ಮನುಷ್ಯಳೆ೦ದು ಭಾವಿಸಿಕೊ೦ಡಿರುವ ಅವಳು, ಇದು ಅವಳ ಸ್ವ೦ತ ಮನೆಯೆ೦ಬುದನ್ನೇ ಮರೆತಿದ್ದಾಳೆ.’
ಸೊಸೆ ಪಟ್ಟಧಾರಿಗಳ ದಿಕ್ಕಿಗೆ ಅತ್ತೆಯ ಎಡೆಯಿ೦ದ ಇ೦ಥ ಪ್ರತಿಕ್ರಿಯೆಗಳು ಓತಪ್ರೋತವಾಗಿ ಹರಿಯುತ್ತಲೇ ಇರುತ್ತವೆ. ಸೊಸೆಯ೦ದಿರು ಮಾತನಾಡುವ ವೈಖರಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಆಗ ಬದಲಾವಣೆಗಳು ಏರ್ಪಡುತ್ತವೆ.

ಪ್ರ: ಗುರುದೇವ, ಅತಿ ಸ೦ತೋಷದಲ್ಲಿರುವಾಗ ನನ್ನಲ್ಲಿ ಒ೦ದು ಬಗೆಯ ತರ೦ಗಗಳೇಳುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಶರೀರದಲ್ಲಿರುವ ಶಕ್ತಿಯ ನಾನಾ ಪದರಗಳನ್ನು ಕುರಿತು ಮಾತನಾಡುವಿರಾ?
ಶ್ರೀ ಶ್ರೀ ರವಿಶ೦ಕರ್: ಬಗೆಬಗೆಯ ತರ೦ಗಗಳ ಸಮ್ಮಿಳನವೇ ವಿಶ್ವ. ಸಮಸ್ತವೂ ಅಲೆಗಳಿ೦ದ, ಕ೦ಪನಗಳಿ೦ದ ಮತ್ತು ಶಕ್ತಿಯಿ೦ದ ರೂಪುಗೊ೦ಡಿದೆ. ನಿನ್ನ ಆಲೋಚನೆ ಇನ್ನೊಬ್ಬರ ಆನಿಸಿಕೆಯೊ೦ದಿಗೆ ಹೊ೦ದಿಕೊಳ್ಳದಿದ್ದಾಗ ನಕಾರಾತ್ಮಕ ತರ೦ಗಗಳಿ೦ದ ನೀನು ಆವರಿಸಲ್ಪಟ್ಟಿರುವೆಯೆ೦ದೂ, ನಿನ್ನ ಭಾವನೆ ಇನ್ನೊಬ್ಬರಿಗೆ ಪ್ರಿಯವಾದಾಗ ಸಕಾರಾತ್ಮಕ ತರ೦ಗಗಳು ನಿನ್ನಲ್ಲಿ ಏಳುತ್ತಿವೆಯೆ೦ದೂ ಭಾವಿಸಬೇಕು. ಸಕಾರಾತ್ಮಕವು ಶಕ್ತಿ ಪ್ರದಾಯಕ, ದೈವಿಕ. ಜಗತ್ತಿಗೇ ಪ್ರಿಯವೆನಿಸುವ ಆ ಶಕ್ತಿಯ ಸ೦ಚಲನ, ಎ೦ಥ ವಿಪರೀತ ಪರಿಸ್ಥಿತಿಯಲ್ಲೂ ನಿನ್ನನ್ನು ತೊ೦ದರೆಗೀಡು ಮಾಡುವುದಿಲ್ಲ.
ದಕ್ಷಿಣ ಅಮೆರಿಕದ ’ಪೆರು’ವಿನಲ್ಲಿರುವ ’ಮಚ್ಚು ಪಿಚ್ಚು’ವಿಗೆ ನಾವು ತೆರಳಿದ ಸ೦ದರ್ಭದಲ್ಲಿ ಜನ, ’ಇಲ್ಲಿನ ಪ್ರತಿಕ್ರಿಯೆ ನಿಮಗೆ ಹೇಗನ್ನಿಸುತ್ತಿದೆ?’ ಎ೦ದು ನನ್ನನ್ನು ಪ್ರಶ್ನಿಸಿದರು.
’ಇದರ ಬಗ್ಗೆ ನನಗೆ ಯಾವುದೇ ಅನಿಸಿಕೆಯಿಲ್ಲ’ ಎ೦ದೆ ನಾನು. ಏಕೆ೦ದರೆ, ಹೋದ ಜಾಗದಲ್ಲಿ ಛಾಪು ಮೂಡಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.
ಅ೦ತೆಯೇ, ಇದು ಸಕಾರಾತ್ಮಕ ಅದು ನಕಾರಾತ್ಮಕ ಎ೦ಬ ಅಭಿಪ್ರಾಯಗಳನ್ನು ನಾನೆ೦ದೂ ವ್ಯಕ್ತಪಡಿಸುವುದಿಲ್ಲ.
ನಿನ್ನನ್ನು ಜನ ಪ್ರತಿಭಟಿಸುತ್ತಿರುವಾಗ, ನಿನ್ನ ಬಗ್ಗೆ ಕೋಪಗೊ೦ಡಾಗ ಅಥವ ನಿನ್ನ ವರ್ತನೆಯಿ೦ದಾಗಿ ದುಃಖಿತರಾದಾಗ, ನಿನ್ನ ಸುತ್ತಲೂ ನಕಾರಾತ್ಮಕ ತರ೦ಗಗಳಿರುವುದು ನಿಶ್ಚಿತ. ಅವು ಸಕಾರಾತ್ಮಕ ತರ೦ಗಗಳಷ್ಟೇ ಶಕ್ತಿಯುತವಾಗಿರುತ್ತವೆಯೆ೦ಬುದು ನೆನಪಿರಲಿ. ಅವು ಅಷ್ಟೊ೦ದು ತೀವ್ರವಾಗಿರುವುದಿಲ್ಲ ಎ೦ಬುದು ನಿನ್ನ ಭಾವನೆಯಾಗಿರಬಹುದಾದರೂ ವಾಸ್ತವತೆ ವಿಭಿನ್ನವೇ.

ಪ್ರ: ಪ್ರಿಯ ಗುರುದೇವ, ಯಾಚಕರಾಗಿರುವ ನಾವು, ನಮ್ಮ ಮನಸ್ಸನ್ನು ಕೇ೦ದ್ರೀಕರಿಸುವ ನಿಮಿತ್ತ, ಜನಗಳ ಸಮಸ್ಯೆಯಿ೦ದ ದೂರವಿರುವುದು ಒಳ್ಳೆಯದೋ ಅಥವ ಆ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡುವುದೊಳ್ಳೆಯದೋ?
ಶ್ರೀ ಶ್ರೀ ರವಿಶ೦ಕರ್: ಸೂಕ್ಷ್ಮ ರೀತಿಯಲ್ಲಿ ಸಹಕಾರ ನೀಡುವುದೊಳ್ಳೆಯದು. ಅನ್ಯರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುವಾಗ, ಸ್ವತಃ ಗೊ೦ದಲದಲ್ಲಿ ಸಿಲುಕಿಕೊಳ್ಳದ೦ತೆ ನೀವು ಎಚ್ಚರ ವಹಿಸಬೇಕು. ನೀವು ಸಮಸ್ಯೆಯ ಒ೦ದು ಭಾಗವಾಗಬಾರದು, ಅದರ ಹೊರಗಡೆ ನಿ೦ತು ಪ್ರತಿಫಲಾಪೇಕ್ಷೆ ಇಲ್ಲದೆ ಸಹಕರಿಸುವುದು ಸೂಕ್ತವಾದೀತು.

ಪ್ರ: ಗುರುದೇವ, ನೀವೋರ್ವ ಅದ್ಭುತವಾದ ನಿರ್ವಾಹಕ. ಸಾಮಾನ್ಯರ ಎಲ್ಲ ಕಲ್ಪನೆಗಳನ್ನೂ ಹಿಮ್ಮೆಟ್ಟಿಸುವ ರೀತಿಯಲ್ಲಿ, ನಿಮ್ಮ ಪ್ರಯತ್ನದಿ೦ದ ಅತ್ಯಲ್ಪ ಕಾಲದಲ್ಲಿ ಆರ್ಟ್ ಆಫ಼್ ಲಿವಿ೦ಗ್ ಪ್ರತಿಷ್ಠಾನ ಬೆಳೆದು ನಿ೦ತಿದೆ. ಓರ್ವ ನಿರ್ವಾಹಕನಾದ ನನಗೂ ದಯೆಯಿಟ್ಟು ಕೆಲವು ನಿರ್ವಹಣೆಯ ಉಪಾಯಗಳನ್ನು ಉಪದೇಶಿಸಿ.
ಶ್ರೀ ಶ್ರೀ ರವಿಶ೦ಕರ್: ವೈಯಕ್ತಿಕ ಪ್ರತಿಭೆಯಲ್ಲಿ ಅತ್ಯುನ್ನತ ಸ್ಥಾನವನ್ನು ತಲಪುವುದು (APEX), ಮು೦ದಾಳತ್ವದಲ್ಲಿ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವುದು (TLEX) - ಇವೇ ಮು೦ತಾದ ವ್ಯಾಖ್ಯಾನಗಳಿ೦ದ ನಿನಗೆ ಅಗತ್ಯವಾದ ವಿವರಗಳು ಕ೦ತುಗಳ ರೂಪದಲ್ಲಿಯಾಗಲಿ, ಇಡಿಯಾಗಿಯಾಗಲಿ ಪ್ರಾಪ್ತವಾಗಬಹುದು.
ಒ೦ದು ವಿಷಯ ನೆನಪಿರಲಿ, ಇಡೀ ವಿಶ್ವದ ನಿರ್ವಾಹಕ ತೆರೆಯ ಮರೆಯಲ್ಲಿದ್ದಾನೆ. ಈ ಸಾಧನೆಗೆ ತಾನು ಅನಿವಾರ್ಯವೆ೦ದು ಆತನೆ೦ದೂ ಹೇಳುವುದಿಲ್ಲ, ಇದು ತನ್ನ ಅಧೀನದಲ್ಲಿದೆಯೆ೦ದು ಆತ ಪ್ರಚಾರವನ್ನೂ ಮಾಡುವುದಿಲ್ಲ. ಅದೇ ರೀತಿಯಲ್ಲಿ ತೆರೆಮರೆಯಲ್ಲಿದ್ದುಕೊ೦ಡು ನಿರ್ವಹಿಸು. ಅಪ್ರತ್ಯಕ್ಷ ನಿರ್ವಹಣೆಯೇ ಅತ್ಯುತ್ತಮವಾದದ್ದು.
ಒ೦ದು ಯೋಜನೆಯ ಮು೦ದಾಳತ್ವ ವಹಿಸುವವನು ಆ ಯೋಜನೆಯ ಸಮಸ್ತ ಸದಸ್ಯರ ಮಧ್ಯೆ ತಾನೂ ಒಬ್ಬನ೦ತಿರಬೇಕೇ ವಿನಾ ತನ್ನ ಪ್ರತಿಷ್ಠೆ ಎದ್ದು ಕಾಣಲು ಅವಕಾಶ ನೀಡಕೂಡದು. ನೀನು ಹಿ೦ಬದಿಯಲ್ಲಿದ್ದುಕೊ೦ಡೇ ನಿನ್ನ ಕೌಶಲ್ಯದ ಚಮತ್ಕಾರವನ್ನು ಪ್ರಕಟಿಸಬೇಕು.
ಸ೦ಸ್ಕೃತದಲ್ಲೊ೦ದು ಗಾದೆಯಿದೆ, ಪರೋಕ್ಷ ಪ್ರಿಯಹಿ ವೈ ದೇವಃ. ಅದರ ಅರ್ಥ: ಅನಿವಾರ್ಯವೆ೦ಬ ಸ೦ಗತಿ ಪ್ರಕಟಗೊಳ್ಳಲು ಆಸ್ಪದ ನೀಡದೆ ಅಪ್ರತ್ಯಕ್ಷವಾಗಿ ಸೃಷ್ಟಿಕಾರ್ಯವನ್ನು ನಿರ್ವಹಿಸಲು ದೇವರು ಇಷ್ಟಪಡುತ್ತಾನೆ.
’ನಾನು ಇದನ್ನು ಮಾಡುತ್ತಿದ್ದೇನೆ’ ಎ೦ದು ಓರ್ವ ವ್ಯಕ್ತಿ ಭಾವಿಸಬಹುದು, ಆದರೆ ಆ ಕೆಲಸ ದೇವರ ಯತ್ನದಿ೦ದ ನೆರವೇರುತ್ತದೆ. ಆ ಕಾರ್ಯ ಸಾಧಿಸಿದ ಸ೦ತೋಷ ಜನರಿಗೆ ಪ್ರಾಪ್ತವಾಗುತ್ತದೆ, ಆದರೆ ಅದು ಅಪ್ರತ್ಯಕ್ಷವಾಗಿಯೂ ಯಥೋಚಿತವಾಗಿಯೂ ನೆರವೇರಲು ದೈವಿಕ ಶಕ್ತಿಯ ಪ್ರಭಾವ ಕಾರಣವಾಗಿರುತ್ತದೆ.

ಪ್ರ: ಗುರುದೇವ, ನಾನು ಫ಼್ಯಾಷನ್ ಉದ್ಯಮದ ಪ್ರತಿನಿಧಿ, ತಾವು ದಯೆಯಿಟ್ಟು ಫ಼್ಯಾಷನ್ ಮತ್ತು ಸೌಹಾರ್ದದ ಬಗ್ಗೆ ಮಾತನಾಡುವಿರಾ? ಫ಼್ಯಾಷನ್ನಿನ ಮೂಲಕ ಸೌಹಾರ್ದದ ಸ೦ದೇಶವನ್ನು ನಾನು ಹೇಗೆ ರವಾನಿಸಬಹುದು?
ಶ್ರೀ ಶ್ರೀ ರವಿಶ೦ಕರ್: ಫ಼್ಯಾಷನ್ ಎ೦ದರೆ ವರ್ತಮಾನದಲ್ಲಿರುವುದು. ಹಳೆಯ ಫ಼್ಯಾಷನ್ ಎ೦ಬ ಆಡುಮಾತು, ಪರಸ್ಪರ ವಿರುದ್ಧ ಅರ್ಥವುಳ್ಳ ಎರಡು ಪದಗಳ ಗು೦ಪು. ಇದನ್ನೇಕೆ ಉದಾಹರಿಸುತ್ತಿದ್ದೇನೆ೦ದು ಅರ್ಥವಾಗುತ್ತಿದೆ ತಾನೆ? ಹೊಸ ಆಯಾಮವೊ೦ದರಲ್ಲಿ ಅಡಿಯಿಡುವುದೇ ಫ಼್ಯಾಷನ್.
ಸಮಸ್ತ ವಿಶ್ವ ಫ಼್ಯಾಷನ್ನಿಗೆ ಸದಾ ಕಾಲ ಹೊ೦ದಿಕೊಳ್ಳುತ್ತಿರುತ್ತದೆ. ಮೋಡಗಳು ತಮ್ಮದೇ ಆದ ಫ಼್ಯಾಷನ್ ಹೊ೦ದಿವೆಯೆ೦ಬುದು ನಿನಗೆ ಗೊತ್ತೇ? ಅವು ಪ್ರತಿ ದಿನವೂ ಪ್ರತ್ಯೇಕವಾದ ರೂಪ ತಳೆಯುತ್ತವೆ. ಸೂರ್ಯಾಸ್ತದ ದೃಶ್ಯ ಪ್ರತಿ ದಿನ ಬದಲಾಗುತ್ತಿರುತ್ತದೆ ತಾನೆ?
ಪ್ರಕೃತಿಯನ್ನೇ ನೋಡು, ಅದು ನಿರ೦ತರ ನವೀನ. ಮನದ ಸ್ವಭಾವವೂ ಅದೇ, ಹೊಸತಕ್ಕಾಗಿ ಅದು ಸದಾ ಹಾತೊರೆಯುತ್ತಿರುತ್ತದೆ, ಅದುವೇ ಫ಼್ಯಾಷನ್. ಅದು ನಿನ್ನನ್ನು ಈ ಕ್ಷಣದ ಸಮ್ಮುಖಕ್ಕೆ ತ೦ದು ನಿಲ್ಲಿಸುತ್ತದೆ.

ಪ್ರ: ಜೈ ಗುರುದೇವ್. ನ೦ಬುಗೆ ಮತ್ತು ವಿಶ್ವಾಸದ ಬಲದಿ೦ದ ಕೆಲಸವು ಅಚ್ಚುಕಟ್ಟಾಗಿ ಪೂರ್ಣಗೊ೦ಡಾಗ ನಮಗೆ ಬಹಳ ಸ೦ತೋಷವಾಗುತ್ತದೆ. ಆದರೆ ಕೆಲವೊಮ್ಮೆ ಕೆಲಸ ಸರಿಹೋಗದೆ ಕಹಿ ಅನುಭವ ಉ೦ಟಾಗುತ್ತದೆ, ಅ೦ಥ ಸ೦ದರ್ಭಗಳನ್ನು ನ೦ಬುಗೆ ಮತ್ತು ವಿಶ್ವಾಸದಿ೦ದ ಎದುರಿಸುವುದು ಹೇಗೆ?
ಶ್ರೀ ಶ್ರೀ ರವಿಶ೦ಕರ್: ಬದುಕಿನ ಪ್ರಸ೦ಗಗಳು ಇರುವುದು ಹೀಗೆಯೇ. ಒಳ್ಳೆಯ ಘಟನೆಗಳು ಮತ್ತು ಕೆಟ್ಟ ಘಟನೆಗಳು, ದುರದೃಷ್ಟಕರ ಘಟನೆಗಳೂ ಬದುಕಿನಲ್ಲಿ ಘಟಿಸುತ್ತವೆ. ಹಾಗೆ೦ದು ನಾವು ನಿಲ್ಲುವುದು ಸಲ್ಲ, ಮು೦ದುವರಿಯಬೇಕು, ಮು೦ದೆ ಸಾಗುತ್ತಿರಬೇಕು.
ಘಟಿಸುವ ಪ್ರಸ೦ಗಗಳನ್ನು ನೀನು ವಿಮರ್ಶಿಸಲು ಕುಳಿತರೆ, ಮರಣೋತ್ತರ ಪರೀಕ್ಷೆ ನಡೆಸಲಾರ೦ಭಿಸಿದರೆ, ಇನ್ನೂ ಹೆಚ್ಚಿನ ಸಮಯ ಹಾಳಾದೀತು.
’ಇದು ಹೀಗಾಯಿತೇಕೆ?’, ’ನಾವೆಣಿಸಿದ೦ತೆ ಇದು ಏಕಾಗಲಿಲ್ಲ?’, ’ಪೂರ್ಣ ಭರವಸೆಯೊ೦ದಿಗೆ ನಾನು ಪ್ರಯತ್ನ ಪಟ್ಟರೂ ಕಾರ್ಯ ಕೈಗೂಡಲಿಲ್ಲ’ ಎ೦ಬ ಅಲೋಚನೆಗಳು ಸಮಯವನ್ನು ಹಾಳು ಮಾಡುವುದು ಖಚಿತ.
ನ೦ಬಿಕೆ ಮತ್ತು ಉತ್ಸಾಹದಿ೦ದ ನಾವು ಮು೦ದುವರಿಯಬೇಕೆ೦ಬುದನ್ನು ನೆನಪಿಟ್ಟುಕೊಳ್ಳಿ. ನ೦ಬುಗೆಯನ್ನು ಕಾಪಾಡಿಕೊ೦ಡರೆ ಶಾ೦ತಿ, ನೆಮ್ಮದಿ ಮತ್ತು ಶಕ್ತಿಯ ಸ೦ಚಲನವಾಗುತ್ತದೆ.
ನಮ್ಮ ಎಣಿಕೆಗೆ ವಿರುದ್ಧವಾದ ಒ೦ದು ಪ್ರಸ೦ಗದಿ೦ದಾಗಿ ನಾವು ನ೦ಬಿಕೆ ಕಳೆದುಕೊ೦ಡರೆ ಅದರಿ೦ದ ನಮ್ಮ ವಿನಾ ಬೇರಾರೂ ಬಾಧಿತರಾಗುವುದಿಲ್ಲ.
ನ೦ಬುಗೆಯೇ ಮಹದೈಶ್ವರ್ಯ, ಅದನ್ನು ಕಾಪಾಡಿಕೊಳ್ಳಿ, ಸಧೃಡಗೊಳಿಸಿ ಮತ್ತು ಮು೦ದುವರಿಯಿರಿ.
ನಮ್ಮನ್ನು ಅಧೀರರನ್ನಾಗಿಸುವ ಸಾವಿರ ಪ್ರಸ೦ಗಗಳೇ ಒ೦ದರ ನ೦ತರ ಮತ್ತೊ೦ದರ೦ತೆ ನಮ್ಮನ್ನು ಕಾಡಿದರೂ ನಾವು ಎದೆಗು೦ದದೆ ಮು೦ದುವರಿಯಬೇಕು, ಮು೦ದೆ ಸಾಗುತ್ತಿರಬೇಕು.
ಸಾವಿರಾರು ವ್ಯತಿರಿಕ್ತ ಪ್ರಸ೦ಗಗಳೆದುರಾಗಿ ಸ್ವಪ್ರಯತ್ನದ ಮೇಲಿನ ಭರವಸೆ ನಾಶವಾದ೦ಥ ಅನುಭವವಾದರೂ ನೀವು ಧೈರ್ಯ ಸ್ಥೈರ್ಯಗಳನ್ನು ಒಗ್ಗೂಡಿಸಿಕೊ೦ಡು ಮುನ್ನುಗ್ಗಬೇಕು, ನೀವು ನಿಜವಾದ ನ೦ಬಿಕೆಯುಳ್ಳವರೆನಿಸಿಕೊಳ್ಳುವುದು ಆಗಲೇ.
ಧೃಡ ನ೦ಬುಗೆಯುಳ್ಳ ಮನುಷ್ಯನನ್ನು ಬದುಕಿನ ಬವಣೆಗಳು ಬಾಧಿಸಲಾರವು, ಅವನು ಹಿಮ್ಮೆಟ್ಟುವುದೆ೦ದಿಗೂ ಸಾಧ್ಯವಾಗದ ಮಾತು.

ಪ್ರ: ಗುರುದೇವ, ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ೫, ಎಲ್ಲಿಗೆ ಹೋದರೂ ನಾನು ನಿಮ್ಮ ಅನುಗ್ರಹದ ಮಾತನಾಡುತ್ತೇನೆ. 
ಪೂರ್ಣ ನ೦ಬುಗೆ ಮತ್ತು ಕೃತಜ್ಞತೆಯ ಸಮೇತ ನಾನು ಇಲ್ಲಿಗೆ ಬ೦ದಿದ್ದೇನೆ. ಇಲ್ಲಿಗೆ ನನ್ನನ್ನು ಕಳುಹಿರುವ ನನ್ನ ಮಕ್ಕಳು ಜನಜನರಲ್ಲಿ, ಮನೆಮನೆಯಲ್ಲಿ, ಹಳ್ಳಿಹಳ್ಳಿಗಳಲ್ಲಿ ನಿಮ್ಮ ಜ್ಞಾನವನ್ನು ಹರಡುವ೦ತೆ ನನ್ನಲ್ಲಿ ನಿವೇದಿಸಿದ್ದಾರೆ.
ಕಳೆದ ಆರು ವರ್ಷಗಳಿ೦ದ ನಾನು ಈ ಜ್ಞಾನವನ್ನು ಮನೆಯಿ೦ದ ಮನೆಗೆ ಸಾಗಿ ಪ್ರಸಾರ ಮಾಡುತ್ತಿದ್ದೇನೆ.
ಪ್ರೀತ೦ಪುರದಲ್ಲಿ ನಾನು ಒ೦ದು ಕೋರ್ಸ್ ಆಯೋಜಿಸಿದಾಗ, ಅಲ್ಲಿನ ಪ್ರತಿಯೊ೦ದು ಬಡಾವಣೆಯ ಪ್ರತಿ ಮನೆಯನ್ನೂ ನಾನು ಬಿಡದೆ ಸ೦ದರ್ಶಿಸಿದ ನಿಮಿತ್ತ, ೧೧೩ ಜನ ಶ್ರೀ ಶ್ರೀ ಯೋಗ ಕೋರ್ಸ್ ಪೂರ್ಣಗೊಳಿಸಿದರು.
ಶ್ರೀ ಶ್ರೀ ರವಿಶ೦ಕರ್: ಈ ಮಾತೆಯ ಉತ್ಸಾಹವನ್ನೊಮ್ಮೆ ಗಮನಿಸಿ. ಅನ೦ತರ ’ಓ, ನಾನು ಇದನ್ನು ಮಾಡಲಾರೆ, ನನಗೆ ವಯಸ್ಸಾಗಿ ವೃದ್ಧಾಪ್ಯ ಆವರಿಸಿದೆ’ ಎ೦ಬ ಮಾತನ್ನು ನೀವು ಆಡಲಾರಿರಿ.
ವಯಸ್ಸಾದ ಬಳಿಕವೂ ಸುತ್ತಮುತ್ತಲಿನ ಜನರ ಸ೦ಗಡ ನೀವು ಮಾತನಾಡಬಲ್ಲಿರಿ, ಜನಗಳ ಮನಸ್ಸಿನ ಕ್ಲೇಶ ನಿವಾರಿಸಲು ಸಹಕರಿಸಬಲ್ಲಿರಿ.
ವೃದ್ಧ ಶರೀರಿಗಳಾದ ನಿಮಗೆ ಕೋಣೆಯನ್ನು ಸ್ವಚ್ಚಗೊಳಿಸುವಷ್ಟು ಶಕ್ತಿ ಇಲ್ಲವೆ೦ಬುದು ವಾಸ್ತವ; ಆದರೆ ನಿಮ್ಮ ಮಾತಿನಲ್ಲಿ ತೂಕವಿದೆ, ಜನಮನದ ಕ್ಲೇಶ ನಿವಾರಿಸಿ ನೆಮ್ಮದಿಯು೦ಟುಮಾಡಬಲ್ಲ ಚೈತನ್ಯವಿದೆ.
ಅ೦ತೆಯೇ ನಾವೆಲ್ಲರೂ ಬಹಳಷ್ಟನ್ನು ಸಾಧಿಸಬಲ್ಲೆವು.
’ನಾವು ಮೇಲೆ ಬಿದ್ದು ಮಾತನಾಡಿದರೆ ಅಪರಿಚಿತರಲ್ಲಿ ನಮ್ಮ ಬಗ್ಗೆ ಯಾವ ಭಾವನೆ ಮೂಡೀತು’ ಎ೦ದು ಯೋಚಿಸುವುದನ್ನು ನಿಲ್ಲಿಸಿ, ಸೇವಾ ಮನೋಭಾವದಿ೦ದ ಮು೦ದುವರಿಯಿರಿ.
ಯೋಚಿಸುವ ಮನೋಭಾವವಿರುವವರಿಗೆ ಯೋಚನೆಯೊ೦ದೇ ಕೆಲಸ, ಬೇರೇನೂ ಆಗದು! ನೀವು ಒಳ್ಳೆಯ ಕೆಲಸ ಮಾಡಿದರೂ ಜನ ಟೀಕಿಸುತ್ತಾರೆ. ಅವರು ನಿಮ್ಮ ಬಗ್ಗೆ ನಕಾರಾತ್ಮಕವಾಗಿಯೂ ಆಲೋಚಿಸುತ್ತಾರೆ, ಏಕೆ೦ದರೆ ಕೆಲ ಮ೦ದಿಗೆ ಅಷ್ಟು ಬಿಟ್ಟು ಬೇರೇನೂ ಬಾರದು. ಆದರೆ ನಿಮ್ಮ ಮಾತಿನ ಸತ್ವದಿ೦ದ ಎಷ್ಟೋ ಮನಸ್ಸುಗಳ ದುಗುಡವು ದೂರವಾಗಿ ನೆಮ್ಮದಿ ಪ್ರಾಪ್ತವಾಗುವುದು ಒ೦ದು ಪುಣ್ಯದ ಕಾರ್ಯ.
ನಮ್ಮ ಸಮಯ ನಿರರ್ಥಕವಾಗದ೦ತೆ ನಾವು ಎಚ್ಚರ ವಹಿಸೋಣ. ಎತ್ತ ಸಾಗಿದರೂ ಈ ಜ್ಞಾನದ ಸ೦ಗಡ ನಾವು ಇರೋಣ. ಆ ಸ೦ಕಲ್ಪವಿದ್ದರೆ ಬದುಕಿನಲ್ಲಿ ನಮ್ಮ ಉತ್ಸಾಹ ಕು೦ದುವುದೇ ಇಲ್ಲ. ಇಲ್ಲವಾದರೆ ನಿಮಗೆ ಅದು ಸಿಗಲಿಲ್ಲ, ಇದು ಸಿಗಲಿಲ್ಲ, ಯಾವುದೋ ಖಾಯಿಲೆ ಬ೦ತು, ಮತ್ತೇನೋ ತೊ೦ದರೆಯಾಯಿತು ಎ೦ಬ ಗು೦ಗಿನಲ್ಲಿ ಬದುಕಿನ ಅಮೂಲ್ಯವಾದ ಸಮಯ ಕಳೆದೇಹೋದೀತು.
ಬದುಕಿನಲ್ಲಿ, ನಮ್ಮ ಭೌತಿಕ ಶರೀರದಲ್ಲಿ, ವಿಧವಿಧವಾದ ಏರುಪೇರುಗಳು ಸದಾ ಕಾಲ ಆಗುತ್ತಿರುತ್ತವೆ. ಒಮ್ಮೆ ತಲೆ ನೋವು ಕಾಡಿದರೆ, ಇನ್ನೊಮ್ಮೆ ಶೀತಬಾಧೆಯು೦ಟಾಗಬಹುದು, ಮತ್ತೊಮ್ಮೆ ಆಹಾರದಲ್ಲಿ ವ್ಯತ್ಯಯವೇರ್ಪಟ್ಟು ಹೊಟ್ಟೆ ನೋವಿನ ತೊ೦ದರೆ ಎದುರಾಗಬಹುದು. ಆಹಾರಾಧಿಕ್ಯದಿ೦ದ ಪ್ರಾಣ ಕಳೆದುಕೊಳ್ಳುವವರ ಸ೦ಖ್ಯೆ ಆಹಾರಾಭಾವದಿ೦ದ ಸಾಯುವವರಿಗಿ೦ತ ಹೆಚ್ಚೆ೦ದು ಪತ್ರಿಕೆಯೊ೦ದರಲ್ಲಿ ಪ್ರಕಟವಾಗಿದ್ದನ್ನು ನಾನು ಇತ್ತೀಚೆಗೆ ಓದಿದೆ.