ಆಸಕ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಸಕ್ತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಫೆಬ್ರವರಿ 8, 2013

ಆಧ್ಯಾತ್ಮದೊಂದಿಗೆ ವ್ಯಾಪಾರದ ಸಂಬಂಧವೇನು?

ಫೆಬ್ರವರಿ ೮, ೨೦೧೩
ಬೆಂಗಳೂರು, ಭಾರತ

ವೇದಿಕೆಯ ಮೇಲೆ ಹಾಗೂ ಸಭಾಂಗಣದಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯರೇ,

ಇವತ್ತು ನಾವೆಲ್ಲರೂ ಇಲ್ಲಿ ಸೇರಿರುವುದು ಎರಡು ಪ್ರಮುಖ ಉಪಕರಣಗಳಿಂದ. ಒಂದು ಕತ್ತರಿ ಮತ್ತೊಂದು ಸೂಜಿ. ಇಲ್ಲದಿದ್ದರೆ ನಾವಿಂದು ತೊಟ್ಟಿರುವ ಉಡುಪುಗಳನ್ನು ತೊಡಲಾಗುತ್ತಿರಲಿಲ್ಲ.

ಒಂದು ವಸ್ತ್ರವನ್ನು ಕತ್ತರಿಸಿ, ಮತ್ತು ಅದನ್ನು ಹೊಲಿಯಬೇಕಾಗುತ್ತದೆ; ಹೀಗೆ ಎಲ್ಲ ಸೂಟುಗಳು, ಪೈಜಾಮ-ಕುರ್ತಾಗಳು ಮತ್ತು ನಾವು ತೊಟ್ಟಿರುವ ಎಲ್ಲ ಉಡುಪುಗಳೂ ಅಸ್ತಿತ್ವಕ್ಕೆ ಬಂದಿರುವವು. ಇದೇ ರೀತಿ, ವ್ಯಾಪಾರ ಮತ್ತು ಆಧ್ಯಾತ್ಮ -  ಒಂದು ಕತ್ತರಿಸುತ್ತದೆ ಮತ್ತೊಂದು ಜೋಡಿಸುತ್ತದೆ, ಇವೆರಡೂ ಅತ್ಯವಶ್ಯಕ.

ಒಂದು ಬಟ್ಟೆಯನ್ನು ಬರೀ ಕತ್ತರಿಸಿ, ಹೊಲಿಯದೇ ಇರಲಾಗದು. ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗೆಯೇ, ಬಟ್ಟೆಯನ್ನು ಕತ್ತರಿಸದೇ ಹೊಲಿಯಲು ಸಾಧ್ಯವಿಲ್ಲ.

ಕೆಲವೊಮ್ಮೆ ಜನರು ನಮ್ಮನ್ನು ಕೇಳುವರು, ‘ವ್ಯಾಪಾರಕ್ಕೂ ಆಧ್ಯಾತ್ಮಕ್ಕೂ ಸಂಬಂಧವೇನೆಂದು? ವ್ಯಾಪಾರವೆಂದರೆ ಆಸಕ್ತಿ, ಮತ್ತು ಆಧ್ಯಾತ್ಮವೆಂದರೆ ವಿರಕ್ತಿ. ಅವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆ.

ವ್ಯಾಪಾರ ಹೇಳುತ್ತದೆ, ‘ಆಕ್ರಮಣಕಾರಿಯಾಗಿ ಮುನ್ನುಗ್ಗಿ ಗಳಿಸು’, ಆಧ್ಯಾತ್ಮವೆನ್ನುವುದು, ‘ನಿನ್ನ ಸರ್ವಸ್ವವನ್ನೂ ತ್ಯಜಿಸು.’
ಮೇಲ್ನೋಟಕ್ಕೆ ಇವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆಯೆಂದು ಅನಿಸಿದರೂ, ನಾವು ಹೇಳುವೆವು, ಅವು ಪೂರಕವಾಗಿವೆಯೆಂದು; ನಿಮ್ಮ ಒಳ ಉಸಿರು ಮತ್ತು ಹೊರ ಉಸಿರಿನಂತೆ. ನೀವು ಉಸಿರು ತೆಗೆದುಕೊಂಡಾಗ, ಅದು ಆಸಕ್ತಿ; ಅದನ್ನು ಬಹಳ ಹೊತ್ತು ಹಿಡಿದಿಟ್ಟುಕೊಳ್ಳಲು ನಿಮ್ಮಿಂದಾಗುವುದಿಲ್ಲ. ಅದನ್ನು ಹೊರಗೆ ಬಿಡಲೇ ಬೇಕು, ಆ ಹೊರಗೆ ಬಿಡುವ ಉಸಿರೇ ವೈರಾಗ್ಯ.

ನಮಗೆ ತಿಳಿದಿರುವಂತೆ, ನಿಮಗೆ ವ್ಯಾಪಾರ ಮಾಡಲು ಐದು ಅಂಶಗಳ ಅವಶ್ಯಕತೆಯಿದೆ.

1. ಸೂಕ್ತ ಪರಿಸರ

ನಿಮಗೇನಾದರೂ ಕಾಶ್ಮೀರಕ್ಕೋ, ಅಫ್ಘಾನಿಸ್ತಾನಕ್ಕೋ ಅಥವಾ ಇರಾಕ್‍ಗೆ ಹೋಗಿ ವ್ಯಾಪಾರ ಮಾಡಲು ಹೇಳಿದರೆ, ನಿಮ್ಮ ಮೊದಲ ಉತ್ತರ ಇಲ್ಲ ಎಂದಾಗಿರುತ್ತದೆ.
ಉದಾಹರಣೆಗೆ, ಛತ್ತೀಸ್‍ಘಡ್ ತೆಗೆದುಕೊಳ್ಳಿ. ಯಾರೋ ನಿಮ್ಮನ್ನು, ‘ಬಸ್ತರ್‍ನಲ್ಲಿ ಒಂದು ಫ್ಯಾಕ್ಟರಿಯನ್ನು ಹಾಕಿ’ ಎಂದರೆ, ನೀವು ಸಾಧ್ಯವಿಲ್ಲವೆನ್ನುವಿರಿ. ಏಕೆಂದರೆ ಅಲ್ಲಿ ಶಾಂತಿಯಿಲ್ಲ.
ಶಾಂತಿಯಿಲ್ಲದಿದ್ದರೆ ಸಮೃದ್ಧಿಯಿಲ್ಲ ಮತ್ತು ಸಮೃದ್ಧಿಯಿಲ್ಲದಿದ್ದರೆ ಶಾಂತಿಯಿಲ್ಲ. ಶಾಂತಿ ಮತ್ತು ಸಮೃದ್ಧಿ ಒಂದಕ್ಕೊಂದು ಸಂಬಂಧಪಟ್ಟಿದೆ. ಸಮೃದ್ಧಿಯಿಂದ ಶಾಂತಿ ವ್ಯಾಪಿಸುತ್ತದೆ (ಯಾವಾಗಲೂ ಅಲ್ಲ), ಮತ್ತು ಶಾಂತಿಯಿಂದ ಸಮೃದ್ಧಿಯುಂಟಾಗುತ್ತದೆ.
ದೇಶದ 612 ಜಿಲ್ಲೆಗಳಲ್ಲಿ, 205 ಜಿಲ್ಲೆಗಳು ನಕ್ಸಲೈಟರಿಂದ ಬಾಧಿತಗೊಂಡಿವೆ ಹಾಗೂ ಈ ಜಿಲ್ಲೆಗಳು ಬಡತನದ ಬೇಗೆಯಲ್ಲಿವೆ. ಏಕೆ? ಶಾಂತಿಯಿಲ್ಲ. ಉಳಿದೆಲ್ಲ ಜಿಲ್ಲೆಗಳು ಸಮೃದ್ಧವಾಗಿವೆ.
ಮೊದಲಿಗೆ ಶಾಂತಿಯನ್ನು ತರಬೇಕು ನಂತರ ಸಮೃದ್ಧಿಯು ಅನುಸರಿಸುವುದು.

2. ವ್ಯಾಪಾರದಲ್ಲಿ ಆಸಕ್ತಿ

ಆಸಕ್ತಿ ಇರಲೇಬೇಕು; ಸವಾಲುಗಳನ್ನು ಎದುರಿಸುವ ಆಸಕ್ತಿ. ವ್ಯಾಪಾರವು ಸದಾ ಅಪಾಯವನ್ನು ತೆಗೆದುಕೊಳ್ಳುವುದಾಗಿರುತ್ತದೆ. ವ್ಯಾಪಾರ ಮಾಡಲು ಸವಾಲನ್ನು ಸ್ವೀಕರಿಸುವ ಸಾಮರ್ಥ್ಯವಿರಬೇಕು.

3. ಬಂಡವಾಳ ಮತ್ತಿತರ ಅಂಶಗಳು

ನಿಮಗೆ ಆಸಕ್ತಿಯಿದೆ ಆದರೆ ಸಲಕರಣೆಗಳೇ ಇಲ್ಲದಿದ್ದರೆ ಆಗ ನೀವು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.

4. ಕೌಶಲ್ಯ

ನಿಮ್ಮ ಬಳಿ ಎಲ್ಲ ಸಲಕರಣೆಗಳು ಇವೆ, ಸ್ಥಳವೂ ಸೂಕ್ತವಾಗಿದೆ ಆದರೆ ಕೌಶಲ್ಯವಿಲ್ಲದಿದ್ದರೆ, ನೀವು ಯಶಸ್ವಿಯಗುವುದಿಲ್ಲ.

5. ಯಾವುದೋ ಅಮೂರ್ತವಾದುದು, ಅದೃಷ್ಟವೆನ್ನುವರು.

ಕೇವಲ ಸ್ವಪರಿಶ್ರಮದಿಂದ ಸಮೃದ್ಧಿಯನ್ನು ಹೊಂದುವುದಾದರೆ, ಅನೇಕ ಜನರು ಪರಿಶ್ರಮಪಟ್ಟರೂ ಏಳಿಗೆಯಾಗುವುದಿಲ್ಲಏಕೆ?

ಬೆಂಗಳೂರಿನ ಕಮರ್ಷಿಯಲ್ ರಸ್ತೆಗೆ ಹೋದರೆ, ಅಲ್ಲಿ ಕೆಲವು ಅಂಗಡಿಗಳು ಬಹಳ ಏಳಿಗೆ ಹೊಂದಿದೆ, ಆದರೆ ಅವುಗಳ ಪಕ್ಕದಲ್ಲಿರುವ ಅಂಗಡಿಗಳು ನಷ್ಟ ಅನುಭವಿಸುತ್ತಿದೆ.

ನಮ್ಮೊಂದಿಗೆ ವಾಣಿಜ್ಯ ಮಂಡಳಿಯೂ ಸಹಮತಿಸುವುದು.

ಚಿಕ್ಕಪೇಟೆಯಲ್ಲೂ, ಒಂದು ಅಂಗಡಿಯು ಉತ್ತಮವಾಗಿ ವ್ಯಾಪಾರ ನಡೆಸುತ್ತಿದೆ ಮತ್ತು ಪಕ್ಕದ ಅಂಗಡಿಯು ದಿವಾಳಿಯಾಗುತ್ತಿದೆ.

ಒಂದು ಕಡೆ ಎಲ್ಲ ಆಭರಣಗಳ ಅಂಗಡಿ, ಒಂದು ಕಡೆ ಬಟ್ಟೆ ಅಂಗಡಿಗಳು, ಆದರೂ ಕೂಡ, ಒಂದೆಡೆ ವ್ಯಾಪಾರ ಉತ್ತಮವಾಗಿದೆ ಮತ್ತೊಂದೆಡೆ ನಷ್ಟವಾಗುತ್ತಿದೆ. ಇದು ಹೇಗೆ? ಯಾರಿಗೂ ಗೊತ್ತಿಲ್ಲ!

ಈ  ಅರಿವಿಲ್ಲದ ಕ್ಷೇತ್ರವೇ ಆಧ್ಯಾತ್ಮವೆಂಬುದು.

ನಾವು ನೋಡುವ ಇಡೀ ಲೌಕಿಕ ಜಗತ್ತು ಒಂದು ನಿರ್ದಿಷ್ಟವಾದ ಸ್ಪಂದನಾತ್ಮಕ ವಿಶ್ವದಿಂದ ನಡೆಯುತ್ತಿದೆ; ಅದು ನಾವು ನೋಡುವುದಕ್ಕಿಂತ ಬಹಳ ಸೂಕ್ಷ್ಮವಾಗಿದೆ. ಇಡೀ ವಿಶ್ವವು ಕಂಪನಗಳಿಂದ ಚಲಿಸುತ್ತಿದೆ.

ಎಷ್ಟೋ ಬಾರಿ ನೀವು ಯಾರನ್ನೋ ನೋಡಿದಾಗ ಅವರೊಂದಿಗೆ ಮಾತನಾಡುವ, ವ್ಯಾಪಾರ ಮಾಡುವ ಆಸೆಯಾಗುತ್ತದೆ; ಯಾರನ್ನೋ ನೋಡುತ್ತೀರ ಮತ್ತು ಕಾರಣವಿಲ್ಲದೇ ತಿರಸ್ಕಾರವುಂಟಾಗುತ್ತದೆ. ಅವರೊಂದಿಗೆ ವ್ಯಾಪಾರ ಮಾಡಲಿಚ್ಛಿಸುವುದಿಲ್ಲ. ಏಕೆ? ಇದಕ್ಕೆ ಕಾರಣ ನಿಮಗೇನೋ ಅನಿಸುತ್ತದೆ; ‘ನನಗೆ ಒಳ್ಳೆಯ ಸ್ಪಂದನೆ ಸಿಗುತ್ತಿಲ್ಲ’ ಎನ್ನುವಿರಿ.

ವಿಶ್ವವು  ಕಂಪನಗಳಿಂದ ನಡೆಯುತ್ತಿದೆ; ಸೂಕ್ಷ್ಮ ಜಗತ್ತಿನಿಂದ ನಡೆಯುತ್ತಿದೆ.

ಆದ್ದರಿಂದ, ಆಧ್ಯಾತ್ಮವು ಈ ಐದು ಅಂಶಗಳಿಗೆ ಸಂಬಂಧಿಸಿದೆ.

ಆಧ್ಯಾತ್ಮವು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ; ನಿಮ್ಮಲ್ಲಿರುವ ಕುಶಲತೆಯನ್ನು ಬೆಳಕಿಗೆ ತರುವುದು. ಸ್ವಲ್ಪ ಸಮಯದವರೆಗೆ ಶಾಂತತೆ ಹಾಗೂ ಮೌನ ನಿಮ್ಮ ಅಂತಃಸ್ಫುರಣೆಯನ್ನು ಜಾಗೃತಗೊಳಿಸಲು ಸಹಾಯಕವಾಗುವುದು.

ಬುದ್ಧಿವಂತಿಕೆ ಮತ್ತು ಅಂತಃಸ್ಫುರಣೆ -ಇವೆರಡೂ ಸಾಮರ್ಥ್ಯಗಳು ಆಧ್ಯಾತ್ಮದಿಂದ ಸಂಪನ್ನಗೊಳ್ಳುತ್ತವೆ.

ಪುನಃ, ಇಲ್ಲಿ ಆಧ್ಯಾತ್ಮವೆಂದರೆ ‘ಏನನ್ನೋ ಮಾಡುವುದಲ್ಲ’, ಬದಲಿಗೆ ‘ಶಾಂತ’ವಾಗಿರುವುದು. ಮನಸ್ಸನ್ನು ಶಾಂತವಾಗಲು ಬಿಡುವುದು; ಕೇಂದ್ರದಲ್ಲಿರುವುದು. ಆಂತರ್ಯದೊಳಗೆ ಆಳವಾಗಿ ಹೋಗುವುದು ಮತ್ತು ಜೀವನದ ಮೌಲ್ಯವನ್ನು ಸಂಪೂರ್ಣವಾಗಿ ಶ್ಲಾಘಿಸುವುದು; ಜೀವನವನ್ನು ಗೌರವಿಸುವುದು.

ಆಧ್ಯಾತ್ಮವು ಅಂತಃಸ್ಫುರಣೆಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ.

ನೋಡಿ, ನೀವು ಬಂಡವಾಳ ಹೂಡುವಾಗ, ಊಹಿಸುತ್ತೀರ, ಅಪಾಯವನ್ನು ತೆಗೆದುಕೊಳ್ಳುತ್ತೀರ. ಇಲ್ಲಿ ಅಂತಃಸ್ಫುರಣೆ ಮುಖ್ಯ. ಅಂತಃಸ್ಫುರಣೆಯೆಂದರೆ ಸೂಕ್ತ ಸಮಯದಲ್ಲಿ ಸೂಕ್ತ ಆಲೋಚನೆ, ಇದು ವ್ಯಾಪಾರದ ಯಶಸ್ಸಿಗೆ ಬಹಳ ಮುಖ್ಯವಾದ ಅಂಶ.

ನಿಮ್ಮ ಆಸಕ್ತಿಯನ್ನು ವಿರಕ್ತಿಯೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ; ನಿಮ್ಮ ಲಾಭವನ್ನು ಸೇವೆಯೊಂದಿಗೆ ಸರಿತೂಗಿಸಿದಾಗ; ಆಕ್ರಮಣಶೀಲತೆಯಿಂದ ವಸ್ತುಗಳನ್ನು ಪಡೆಯುವುದನ್ನು, ಸಮಾಜಕ್ಕೆ ಅನುಕಂಪದಿಂದ ಮರಳಿ ನೀಡುವುದರೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ.

ಆಕ್ರಮಣಶೀಲತೆಯೊಂದಿಗೆ ವ್ಯಾಪಾರ ನಡೆಸಲು ಉತ್ಸಾಹ ಇರಬಾರದೆಂದೇನಲ್ಲ, ಅಥವಾ ಬಹಳ ಶಾಂತ ಮತ್ತು ಮೃದು ಸ್ವಭಾವದವರಾಗಿರಬೇಕೆಂದಲ್ಲ.

ಮಾರಾಟಗಾರರಾಗಿ ನೀವು ಹೇಳುವಿರಿ, ‘ನನ್ನ ಉತ್ಪನ್ನ ಉತ್ತಮವಾಗಿದೆ ಆದರೆ ಇತರರ ವಸ್ತುಗಳೂ ಉತ್ತಮವಾಗಿವೆ’ ಆಗ ಅದು ಕೆಲಸ ಮಾಡುವುದಿಲ್ಲ.

ನೀವೆನ್ನಬಹುದು, ‘ನನ ಉತ್ಪನ್ನವೇ ಉತ್ತಮವಾದುದು’ ಆದರೆ ಅದೇ ವೇಳೆಗೆ ಇತರರನ್ನೂ ಅನುಕಂಪದಿಂದ ಕಾಣುವ, ನೈತಿಕತೆಯಿಂದ ಆದರಿಸುವುದೂ ಬಹಳ ಮುಖ್ಯ.

ಅಂತಃಸ್ಫುರಣೆ, ಬುದ್ಧಿವಂತಿಕೆಯ ತೀಕ್ಷಣತೆ, ಅರಿವು ಮತ್ತು ಸೂಕ್ಷ್ಮತೆ, ಅನುಕಂಪದೊಡನೆ ವೈರಾಗ್ಯ ಮತ್ತು ಆಸಕ್ತಿ ಇವೆಲ್ಲವೂ ಜೀವನವನ್ನು ಎಂಥ ಸಮಸ್ಥಿತಿಯಲ್ಲಿರಿಸುತ್ತದೆಯೆಂದರೆ, ವ್ಯಾಪಾರದಲ್ಲಿ ಲಾಭವಾಗಲಿ ನಷ್ಟವಾಗಲಿ, ನಮ್ಮ ಮುಗುಳ್ನಗೆಯನ್ನು ಸದಾ ಕಾದಿರಿಸುತ್ತದೆ. ಮುಗುಳ್ನಗೆಯೊಂದಿಗಿರುವುದೇ ಬಹಳ ಮುಖ್ಯ.

ನಿಮಗೆ ಏನೋ ನಷ್ಟವಾಗಿದ್ದರೆ, ಅದರೊಂದಿಗೆ ನಿಮ್ಮ ನಗೆಯನ್ನೂ ಏಕೆ ಕಳೆದುಕೊಳ್ಳುತ್ತೀರ?

ನೀವು ಷೇರ್ ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದರೆ, ನಿಮ್ಮ ಮುಗುಳ್ನಗೆಯನ್ನಾದಾರೂ ನಿಮ್ಮಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಅದು ಎರಡು ಪಟ್ಟು ನಷ್ಟವಾಗುತ್ತದೆ. ಮೂರನೆಯ ನಷ್ಟವೊಂದಾಗುವುದು, ಅದು ನಿಮ್ಮ ಆರೋಗ್ಯದ ಹಾನಿ.

ಸ್ವಹಿತಾಸಕ್ತಿ, ಪರಿಸರದ ಬಗ್ಗೆ ಹಾಗೂ ವ್ಯಾಪಾರದಲ್ಲಿ ನ್ಯಾಯಪರತೆಯ ಬಗ್ಗೆ ಕಾಳಜಿವಹಿಸುವುದು ಮುಖ್ಯ. ನಿಮ್ಮ ಕೆಳಗಿನವರು ನಿಮ್ಮನ್ನು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಅವರನ್ನು ಮೋಸಗೊಳಿಸುವಿರಿ?

ನಿಮ್ಮ ಗ್ರಾಹಕರು ಅಥವಾ ಮಾರಾಟಗಾರರು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಮೋಸಗೊಳಿಸುವಿರಿ?

ಇತರರು ನಿಮಗಿಷ್ಟವಾದುದನ್ನು  ಮಾಡಲಿಛ್ಛಿಸುವುದಿಲ್ಲವೆಂದ ಮೇಲೆ, ನೀವೂ ಸಹ ಅದನ್ನು ಇನ್ನೊಬ್ಬರಿಗೆ ಮಾಡಬಾರದು. ಈ ಮೂಲ ವಿಷಯವೇ ನೈತಿಕತೆಯ ನಿಯಮ. ‘ನನ್ನನ್ನು ಯಾರೂ ಮೋಸಗೊಳಿಸಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಯಾರಿಗೂ ಮೋಸ ಮಾಡುವುದಿಲ್ಲ.’

ಈಗ ನೀವು, ‘ನೂರು ಪ್ರತಿಶತ ಸತ್ಯಪರರಗಿದ್ದು ವ್ಯಾಪಾರ ಮಾಡುವುದು ಹೇಗೆ ?’ ಎಂದು ಕೇಳಿದರೆ, ಅದು ಸಾಧ್ಯವೆಂದು ನಾವು ಹೇಳುವೆವು. ಅಂತಹ ಅನೇಕ ಉದಾಹರಣೆಗಳನ್ನು ಇಲ್ಲಿ ಕುಳಿತಿರುವವರಲ್ಲಿ ಕಾಣಬಹುದು. ಈ ಸಮಾವೇಶವು ಅಂತಹ ಧ್ಯೇಯಗಳನ್ನು ಜನರು ರೂಢಿಸಿಕೊಂಡಿರುವುದನ್ನು ಬೆಳಕಿಗೆ ತರುವುದು.  ಅದು ವ್ಯಾಪಾರದಲ್ಲಿ ಹೇಗೆ ನ್ಯಾಯಪರತೆಯು ಸಾಧ್ಯವೆಂಬುದನ್ನು ಉದಾಹರಣೆಯ ಮೂಲಕ ತಿಳಿಸುತ್ತದೆ.

ಸತ್ಯ ಹರಿಶ್ಚಂದ್ರರಾಗಲು ನಿಮ್ಮನ್ನು ಹೇಳುತ್ತಿಲ್ಲ.

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ವ್ಯಾಪಾರಸ್ಥರಿಗೆ ಸುಳ್ಳು ಹೇಳುವುದಕ್ಕೆ ಕೆಲವು ಮಿತಿಯಿರುತ್ತದೆ.

ಹೇಗೆಂದರೆ, ಒಬ್ಬ ಸಾಧು ಸುಳ್ಳು ಹೇಳಲೇಬಾರದು. ರಾಜನಾದವನು ತನ್ನ ರಾಜ್ಯದ ಸುರಕ್ಷತೆ ಮತ್ತು ಭದ್ರತೆಗಾಗಿ ಒಂದು ಪ್ರತಿಶತ ಸುಳ್ಳು ಹೇಳಬಹುದು. ವೈದ್ಯನು ಶೇಕಡ ಎರಡರಷ್ಟು ಸುಳ್ಳು ಹೇಳಬಹುದು. ಒಬ್ಬ ವ್ಯಕ್ತಿಯು ಮರಣಿಸುತ್ತಿರುವನೆಂದು ತಿಳಿದಿದ್ದರೂ, ‘ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ’ ಎನ್ನಬಹುದು. ಆದರೆ ಒಬ್ಬ ವ್ಯಾಪಾರಸ್ಥನು, ಮೂರು ಪ್ರತಿಶತ ಸುಳ್ಳು ಹೇಳಬಹುದು, ಅದಕ್ಕಿಂತ ಹೆಚ್ಚಿಗೆ ಇಲ್ಲವೆಂದು ತಿಳಿಸಲಾಗಿದೆ.

ಶೇಕಡ ಮೂರರಷ್ಟೆಂದರೆ ಆಹಾರದಲ್ಲಿ ಉಪ್ಪಿದ್ದಂತೆ. ಉಪ್ಪಿನಲ್ಲಿ ಆಹಾರ ಸೇವಿಸಲು ಸಾಧ್ಯವಿಲ್ಲ, ಆದರೆ ಆಹಾರದಲ್ಲಿ ಸ್ವಲ್ಪ ಉಪ್ಪು ಪರವಾಗಿಲ್ಲ. ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ ಆಹಾರದಲ್ಲಿ ಉಪ್ಪಿರುವ ಬದಲು ಉಪ್ಪಿನಲ್ಲಿ ಆಹಾರವಿದೆ!

ಬೀರಬಲ್ಲನ ಕತೆಯೊಂದಿದೆ, ಅದನ್ನು ನಿಮ್ಮಲ್ಲಿ ಅನೇಕರು ಕೇಳಿರಬಹುದು.

ಒಮ್ಮೆ ಅಕ್ಬರನು ಸುಳ್ಳು ಹೇಳುವವರ ತಲೆಯನ್ನು ಕಡಿಯಲಾಗುವುದೆಂಬ ಕಾನೂನೊಂದನ್ನು ಹೊರಡಿಸಿದನು. ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು. ಇದನ್ನು ಕೇಳಿ, ಇಡೀ ದಿಲ್ಲಿಯು ನಡುಗಿತು; ಇ೦ದು ನಡುಗುತ್ತಿರುವ ಹಾಗೆ. ದಿಲ್ಲಿಯ ಇತಿಹಾಸವೇ ಕಂಪಿಸುವುದಿರಬೇಕು.

ಚಾಂದನಿ ಚೌಕದಲ್ಲಿ ಎಲ್ಲ ವ್ಯಾಪಾರಸ್ಥರು ನೆರೆದಿದ್ದರು. ‘ನಾವೆಲ್ಲರೂ ಗಲ್ಲು ಶಿಕ್ಷೆಗೊಳಗಾಗಬೇಕಾಗುವುದು ಏಕೆಂದರೆ ನಾವು ಸದಾ ನಮ್ಮ ಉತ್ಪನ್ನವೇ ಉತ್ತಮವೆಂದು, ಹಾಗಿಲ್ಲವೆಂದು ತಿಳಿದಿದ್ದರೂ, ಹೇಳುತ್ತೇವೆ. ಈಗ ಈ ಕಾನೂನು ನಮಗೆ ಆತ್ಮಹತ್ಯೆಯಂತಾಗಿದೆ.’

ನಂತರ ಜ್ಯೋತಿಷಿಗಳ ಸರದಿ ಬಂತು. ಅವರು ಇನ್ನೂ ಹೆಚ್ಚು ಚಿಂತಿತರಾಗಿದ್ದರು, ಏಕೆಂದರೆ ಅವರು ಊಹಿಸಿ ಭವಿಷ್ಯ ನುಡಿಯುತ್ತಿದ್ದರು, ಏನಾದರು ಕೆಡುಕಾದರೆ ಅವರೇನು ಮಾಡಬಲ್ಲರು? ಆದ್ದರಿಂದ ಜ್ಯೋತಿಷಿಗಳು ಕಷ್ಟದಲ್ಲಿ ಸಿಲುಕಿದ್ದರು.

ಅರ್ಚಕರು ಕಷ್ಟದಲ್ಲಿದ್ದರು, ವೈದ್ಯರು ಕಷ್ಟದಲ್ಲಿದ್ದರು, ಎಲ್ಲರೂ ಚಿಂತಿತರಾದರು ಏಕೆಂದರೆ ಈ ಕಾನೂನು ಅಸಂಬದ್ಧವಾಗಿದೆ. ನಂತರ ಅವರು, ‘ಬೀರಬಲ್, ನೀನೇ ನಮಗೆ ಸಹಾಯ ಮಾಡಬಲ್ಲೆ’ ಎಂದು ಕೇಳಿಕೊಂಡರು.

ಆದ್ದರಿಂದ ಬೀರಬಲ್ ರಾಜನ ಅರಮನೆಗೆ ಹೋದನು. ಕಾವಲುಗಾರರು ಅವನನ್ನು ತಡೆದು, ‘ಎಲ್ಲಿಗೆ ಹೋಗುತ್ತಿರುವೆ?’ ಎಂದು ಕೇಳಿದರು.

ಅವನು, ‘ನಾನು ನೇಣುಗಂಬವೇರುತ್ತಿರುವೆ, ನನ್ನನ್ನು ನೇಣು ಹಾಕುವರು’ ಎಂದನು. ಅದು ಸುಳ್ಳಾಗಿತ್ತು, ಏಕೆಂದರೆ ಅರಮನೆಯಲ್ಲಿ ಬಹಳ ಪ್ರಿಯವಾದ ವ್ಯಕ್ತಿಯನ್ನೇಕೆ ರಾಜನು ಶೂಲಕ್ಕೇರಿಸುವನು?

ಆದ್ದರಿಂದ ಅವನನ್ನು ರಾಜನ ಸಮ್ಮುಖದಲ್ಲಿ ನಿಲ್ಲಿಸಿ ಅವನು ಸುಳ್ಳು ಹೇಳಿದನೆಂದು ಹೇಳಲಾಯಿತು. ಈಗ, ಅವನನ್ನು ಶೂಲಕ್ಕೇರಿಸಿದರೆ ಅವನು ಹೇಳಿದ್ದು ನಿಜವಾಗುತ್ತಿತ್ತು. ನಿರಪರಾಧಿಯನ್ನು ಶಿಕ್ಷಿಸುವುದರಿಂದ ರಾಜನಿಗೆ ಕಳಂಕ ಬರುವುದು. ಅವನನ್ನು ಶಿಕ್ಷಿಸದಿದ್ದರೆ, ಕಾನೂನು  ಅಪ್ರಚಲಿತವಾಗುತ್ತಿತ್ತು.

ರಾಜನು ಗೊಂದಲಕ್ಕೀಡಾದನು. ಎಲ್ಲ ಪಂಡಿತರನ್ನು, ಮಂತ್ರಿಗಳನ್ನು ಕರೆದು ಕೇಳಿದನು. ನಂತರ ಬೀರಬಲ್ ಹೇಳಿದನು, ‘ಇದೇ ಅದು! ನೀವು ಏನು ನುಡಿಯುವಿರೋ ಅದು ಸತ್ಯವಲ್ಲ, ಉದ್ದೇಶವೇ ಸತ್ಯ.’

ಆದ್ದರಿಂದ ವ್ಯಾಪಾರಸ್ಥರು ಸ್ವಲ್ಪ ಸುಳ್ಳು ಹೇಳಬಹುದು ಇಲ್ಲದಿದ್ದರೆ ಯಾರೂ ಮಾರಲು ಸಾಧ್ಯವಾಗುವುದಿಲ್ಲ. ಯಾವ ವ್ಯಾಪಾರವೂ ಉಳಿಯುವುದಿಲ್ಲ. ಇವೆಲ್ಲ ನೈತಿಕತೆಯ ನಿಯಮಾವಳಿಗಳು.

ಇತರರು ನಿಮಗೇನು ಮಾಡಬಾರದೋ, ಅದನ್ನು ನೀವು ಇತರರಿಗೆ ಮಾಡಬೇಡಿ.

ಪ್ರಪಂಚವು ಹೋಳುಗಳಲ್ಲಿಲ್ಲ. ಸಮಾಜವು ಬಿಗಿಯಾದ ಕಕ್ಷೆಗಳಲ್ಲಿಲ್ಲ, ಆಧ್ಯಾತ್ಮ ಮತ್ತು ನೈತಿಕತೆಯು ಮಾನವನ ಅವಿಭಾಜ್ಯ ಅಂಗ.

ಚಾರಿತ್ರ್ಯವನ್ನು ಬೆಳೆಸುವುದು ಆಧ್ಯಾತ್ಮ, ಯಾರಿಗೆ ತಾನೆ ಸಚ್ಚರಿತ್ರರು ತಮ್ಮ ಕೆಲಸದಲ್ಲಿ ಬೇಕಿಲ್ಲ? ವ್ಯಾಪಾರವೆಂದರೆ ಜನರು, ಅಲ್ಲವೇ? ಜನರೊಡನೆ ನಿಮ್ಮ ಕೆಲಸವಿರುವುದು ಮತ್ತು ನಿಮ್ಮಲ್ಲಿ ಕೆಲಸ ಮಾಡುವವರು ಸಂದರ್ಭಗಳಲ್ಲಿ ಪ್ರಾಮಾಣಿಕತೆ, ಸತ್ಯತೆ, ನೇರ ಸ್ವಭಾವ ಮತ್ತು ಕೌಶಲ್ಯದಿಂದ ನಿಭಾಯಿಸುವುದು ನಿಮಗೆ ಬೇಡವೇ?

ಪ್ರತಿಯೊಂದು ವ್ಯಾಪಾರ ಮತ್ತು ಸಂಸ್ಥೆಯಲ್ಲಿ ಕಠಿಣ ಸನ್ನಿವೇಶಗಳು ಬರುತ್ತವೆ. ಅದನ್ನು ನಿಭಾಯಿಸಲು ಕೌಶಲ್ಯ ಬೇಕು. ಇವೆಲ್ಲವೂ ನಮ್ಮ ಆಂತರ್ಯದ ಸ್ಥಾನದಿಂದ ಬರುತ್ತದೆ, ಅದನ್ನು ಆಧ್ಯಾತ್ಮದ ಸ್ಥಾನವೆನ್ನುವರು.

ಆದ್ದರಿಂದ ಆಧ್ಯಾತ್ಮ, ವ್ಯಾಪಾರ, ರಾಜಕೀಯ, ಸೇವಾ ಚಟುವಟಿಕೆಗಳು ಎಲ್ಲವೂ ಸಮಗ್ರ ಜೀವನವನ್ನು ರೂಪಿಸುತ್ತದೆ. ಇವುಗಳಲ್ಲಿ ಯಾವುದಾದರೊಂದು ಇಲ್ಲವಾದರೂ, ಆನಂದವಲ್ಲ, ಅವ್ಯವಸ್ಥೆಯುಂಟಾಗುವುದು.

ಭಾರತದಲ್ಲಿ ವ್ಯಾಪಾರೋದ್ಯಮವನ್ನು ಕೆಲವು ಕ್ಷೇತ್ರಗಳಲ್ಲಿ ಇನ್ನೂ ಬಳಸದೇ ಇದ್ದು, ಅವುಗಳನ್ನು ನಿಮ್ಮೆಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಅವುಗಳಲ್ಲಿ ಒಂದು ಪ್ರವಾಸೋದ್ಯಮ. ಭಾರತದಲ್ಲಿ ಜನರು ಭೇಟಿ ನೀಡಲು ಬಯಸುವ ಅನೇಕ ಪ್ರವಾಸೀ ತಾಣಗಳಿವೆ, ಹಲವಾರು ಪ್ರಾಚೀನ ಸ್ಥಳಗಳಿವೆ. ಆದರೆ ಪ್ರವಾಸೋದ್ಯಮವನ್ನು ಹೆಚ್ಚು ಅಧ್ಯಯನ ಮಾಡಿಲ್ಲ.

ಮತ್ತೊಂದು ಕ್ಷೇತ್ರ, ಉಡುಪುಗಳು. ಇಲ್ಲಿ ಭಾರತದಲ್ಲಿ ಉಡುಪುಗಳು ಬಹಳ ವಿಶಿಷ್ಠವಾಗಿವೆ.

ಮೂರನೆಯದು ಆಹಾರದ ಉದ್ಯಮ. ಭಾರತದಲ್ಲಿ ಪ್ರವಾಸ ಮಾಡಿದರೆ, ಪ್ರತಿ ಮೈಲಿ ಅಥವಾ ಕಿಲೋಮೀಟರ್‍ಗಳಿಗೂ ವಿವಿಧ ಬಗೆಯ ತಿನಿಸುಗಳನ್ನು ನೋಡಬಹುದು.   ಒಮ್ಮೆ ಕುತೂಹಲದಿಂದ ನಾವು, ‘ಭಾರತದಲ್ಲಿ ಸಸ್ಯಾಹಾರ ಮೇಳವನ್ನು ಆಯೋಜಿಸೋಣ’ ಎಂದೆವು. ನಿಮಗೆ ಗೊತ್ತೇ, 5600 ಬಗೆಯ ಭಕ್ಷ್ಯಗಳನ್ನು ತಯಾರಿಸಿದ್ದರು. ಏಳು ಟನ್‍ಗಳಷ್ಟು ಬಗೆ ಬಗೆಯ ತಿನಿಸುಗಳನ್ನು ಸ್ವಯಂಸೇವಕರು ತಯಾರಿಸಿದ್ದರು.

ಅಹಮದಾಬಾದ್‍ನಲ್ಲಿ ಅನ್ನ ಬ್ರಹ್ಮ ಕಾರ್ಯಕ್ರಮವನ್ನು ಆಯೋಜಿಸಿದ್ದೆವು ಮತ್ತು ತಯಾರಿಸಿದ್ದ ಬಹಳಷ್ಟು ಭಕ್ಷ್ಯಗಳನ್ನು ಹಿಂದೆಂದೂ ಕೇಳಿರಲಿಲ್ಲ.

ನೀವು ತ್ರಿಪುರಾಗೆ ಹೋದರೆ, ಸಾಮಾನ್ಯ ಜನರಿಗೆ ತಿಳಿಯದ ಸುಮಾರು 40ರಿಂದ 50 ತರಹದ ಭಕ್ಷ್ಯಗಳಿರುವುದು. ಹಾಗೆಯೇ, ಕರ್ನಾಟಕದಲ್ಲೂ, ಕೆಲವು ವಿಶೇಷ ಭಕ್ಷ್ಯಗಳಿವೆ, ಒಬ್ಬಟ್ಟು, ಚಟ್ನಿಪುಡಿ, ಗೊಜ್ಜು, ವಿಳ್ಳೆಕಾಯಿ, ಜನರು ಇವುಗಳನ್ನು ಇಷ್ಟಪಡುವರು.

ಆಹಾರ ಉದ್ಯಮವನ್ನು ಸಾಧ್ಯವಾದಷ್ಟು ಉತ್ತಮವಾಗಿ ಪ್ರಚಾರಪಡಿಸಿಲ್ಲ.

ನಾಲ್ಕನೆಯ ಕ್ಷೇತ್ರ, ಆಭರಣಗಳು.

ನಂತರ 5000 ವರ್ಷಗಳಷ್ಟು ಪುರಾತನವಾದ ಆಯುರ್ವೇದ ವೈದ್ಯಶಾಸ್ತ್ರ; ಆಯುರ್ವೇದ ಮತ್ತು ಗಿಡಮೂಲಿಕೆಗಳು, ಶಿರೋಧಾರ ಮತ್ತು ಅಭ್ಯಂಗ ಮಾಲೀಶು ಇತ್ಯಾದಿಗಳು ಪ್ರವರ್ಧಮಾನವಾಗುತ್ತಿವೆ.

ಆಯುರ್ವೇದ ಸುವ್ಯವಸ್ಥಿತ ಶಾಸ್ತ್ರ. ಇದನ್ನು 21ನೇ ಶತಮಾನದ ವೈದ್ಯಶಾಸ್ತ್ರವೆನ್ನಬಹುದು. ಇದನ್ನು ಹಲವಾರು ಜನರು ಮೆಚ್ಚಿಕೊಂಡಿದ್ದು ವಿಶ್ವದಾದ್ಯಂತ ಸ್ಪಾಗಳಲ್ಲಿ ಬಹಳ ಯಶಸ್ವಿಯಾಗುತ್ತಿದೆ. ಆದರೆ ಇದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಬೇಕು.

ನಂತರ, ಯೋಗ, ಆಧ್ಯಾತ್ಮ ಮತ್ತು ವೇದಾಂತದ ಜ್ಞಾನ.

ಏಳನೆಯದು ಮಾಹಿತಿ ಮತ್ತು ತಂತ್ರಜ್ಞಾನದ ಉದ್ಯಮ. ಭಾರತವು ಇವತ್ತು ಪ್ರಖ್ಯಾತಿಯಾಗಿರುವುದು ಇದರಿಂದ. ಮಾಹಿತಿ ಮತ್ತು ತಂತ್ರಜ್ಞಾನದಿಂದ ಪ್ರಾರಂಭವಾಗಿ, ಯೋಗ ಮತ್ತು ಧ್ಯಾನವೂ ಇಡೀ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಯು.ಎಸ್. ದೇಶವೊಂದರಲ್ಲೇ, ಯೋಗ, 27 ಬಿಲಿಯನ್ ಡಾಲರ್ ಉದ್ಯಮವಾಗಿದೆಯೆಂದು ತಿಳಿಸಲಾಗಿದೆ.

ಕರ್ನಾಟಕದ ವಾಣಿಜ್ಯ ಮತ್ತು ಉದ್ಯಮ ಮಂಡಳಿಯು ಇವೆಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಬಹುದು. ಇವತ್ತು ರಷ್ಯಾ, ನೇಪಾಳ ಮತ್ತು ಇನ್ನೂ ಅನೇಕ ದೇಶಗಳಿಂದ ಆಗಮಿಸಿರುವ ವ್ಯಾಪಾರಸ್ಥರು ನಮ್ಮೊಂದಿಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕುಳಿತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಹೇಗೆ ಸಮೃದ್ಧಿಯನ್ನು ತರಬಹುದೆಂದು ಸಮಾಲೋಚಿಸಿದರೆ ಒಳ್ಳೆಯದು, ನಮಗೆ ಮತ್ತು ನಿಮಗಷ್ಟೇ ಅಲ್ಲ, ಎಲ್ಲರಿಗೂ ಒಳಿತಾಗುವುದು.

ಈ ಕೆಲವು ಮಾತುಗಳೊಂದಿಗೆ, ನಾವು ನಿಮ್ಮೆಲ್ಲರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ. ದೇವರು ನಿಮ್ಮೆಲ್ಲರನ್ನೂ ಹರಸಲಿ.

ಭಾನುವಾರ, ಫೆಬ್ರವರಿ 3, 2013

ಭಾರತ ಬದಲಾವಣೆಯತ್ತ ಸಾಗುವ ಸಮಯ ಇದೋ ಬಂದಿದೆ


ದೆಹಲಿ, ಭಾರತ
೩ ಫೆಬ್ರುವರಿ, ೨೦೧೩

ಬೆಂಕಿಯಿರಬೇಕು, ಆದರೆ ಅದು ತಮ್ಮ ಮನೆಯನ್ನೇ ಸುಟ್ಟುಹಾಕಬಾರದು ಎಂಬುದನ್ನು ಸರಿಯಾಗಿಯೇ ಹೇಳಲಾಗಿದೆ.

ಒಂದು ರೀತಿಯಲ್ಲಿ, ಭಾರತದ ಯುವಕರು ಎಚ್ಚೆತ್ತುಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಈಗ ಜನರು ನಮ್ಮನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಯುವಕರು ಎಚ್ಚೆತ್ತಿದ್ದಾರೆ.

ನಮಗೆ ಭ್ರಷ್ಟಾಚಾರದ ಬಗ್ಗೆ ಅರಿವಾಗಿದೆ ಮತ್ತು ನಾವು ಅದರ ವಿರುದ್ಧ ನಮ್ಮ ಧ್ವನಿ ಎತ್ತಿದ್ದೇವೆ. ಪ್ರತಿದಿನವೂ ಭ್ರಷ್ಟಾಚಾರ ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.

’ಇನ್ನು ಮುಂದೆ ನಾವು ಅಪರಾಧವನ್ನು ಸಹಿಸೆವು ಮತ್ತು ನಮಗೆ ಕಟ್ಟುನಿಟ್ಟಾದ ಕಾನೂನುಗಳು ಬೇಕು’, ಇದಕ್ಕಾಗಿ ದಿಲ್ಲಿಯ ಯುವಕರು ತಮ್ಮ ದನಿ ಎತ್ತಿದ್ದಾರೆ ಮತ್ತು ಇಡೀ ದೇಶದ ಯುವಕರು ಇದಕ್ಕೆ ಸೇರಿಕೊಂಡಿದ್ದಾರೆ.

ಬೆಂಕಿಯನ್ನು ಹಚ್ಚಲಾಗಿದೆ ಮತ್ತು ಅದು ಒಳ್ಳೆಯದು, ಆದರೆ ನಾವಿದನ್ನು ಹಿಂಸೆಯ ಕಡೆಗೆ ತೆಗೆದುಕೊಂಡು ಹೋಗದಿರುವಂತೆ ನಾವು ಖಾತ್ರಿಪಡಿಸಿಕೊಳ್ಳಬೇಕು.

ನಮ್ಮನ್ನು ಎಚ್ಚರಗೊಳಿಸಲು ಕ್ರೋಧವು ಆವಶ್ಯಕವಾಗಿದೆ. ಆದರೆ ನಂತರ ಅದು ಅತಿಯಾದರೆ ಮತ್ತು ಸರಿಯಾದ ಮನೋಭಾವ ಹಾಗೂ ಒಂದು ಕ್ರಿಯಾ ಯೋಜನೆಯಿಲ್ಲದೆಯೇ ನಾವು ಕೇವಲ ಕ್ರೋಧಗೊಂಡಿದ್ದರೆ, ಆಗ ಆ ಕ್ರೋಧವು ನಮ್ಮನ್ನು ಸುಟ್ಟು ಹಾಕಲಿದೆ. ಯಾವುದೇ ರಚನಾತ್ಮಕ ಚಟುವಟಿಕೆಯ ಬದಲಾಗಿ ಅದು ಕೇವಲ ವಿನಾಶವನ್ನು ಮಾತ್ರ ತರುವುದು. ಕ್ರೋಧವು ಆವಶ್ಯಕವಾಗಿದೆ ಮತ್ತು ನಾವು ಆ ಕ್ರೋಧವನ್ನು, ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕಾಗಿದೆ.

ಇದು ಭಾರತದ ವಿಶೇಷತೆ. ನಾವೆಲ್ಲರೂ ಒಂದು ಕ್ರಾಂತಿಯನ್ನು ಬಯಸುತ್ತೇವೆ, ಆದರೆ ಒಂದು ಶಾಂತಿಪೂರ್ಣವಾದ ರೀತಿಯಲ್ಲಿ. ನಾವೆಲ್ಲರೂ ನಮ್ಮ ತಲೆಗಳನ್ನು ಎತ್ತಿಹಿಡಿದು ನಿಲ್ಲಲು ಮತ್ತು ಪರಸ್ಪರರನ್ನು ದೂಷಿಸದೆಯೇ ಆಗಬೇಕಾಗಿರುವ ಎಲ್ಲಾ ಕೆಲಸವನ್ನು ಮಾಡಲು ತಯಾರಿದ್ದೇವೆ.

ಯುವಜನರಲ್ಲಿ ಬಹಳಷ್ಟು ಶಕ್ತಿಯಿದೆ. ಸಮಾಜವು ದೊಡ್ಡ ಪ್ರಗತಿಯನ್ನು ಹೊಂದುವುದು ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗಲೇ.

ಇವತ್ತು ನಾವು ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬ ಈ ಬ್ಯಾನರಿನ ಅಡಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದೇವೆ, ಯಾಕೆಂದರೆ ವಿವಿಧ ಜನರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ.

ಈ ಕ್ರಾಂತಿಯು ಕೇವಲ ಒಂದು ಸಂಸ್ಥೆಯ ಕೆಲಸವಲ್ಲ. ಇದು ಇಡೀ ದೇಶದ ಕೆಲಸವಾಗಿದೆ. ಈ ಚಳುವಳಿಯನ್ನು ಬೆಂಬಲಿಸಿ ಈಗಾಗಲೇ ಇದರೊಂದಿಗೆ ಸೇರಿಕೊಂಡಿರುವ ಹಲವಾರು ಸಂಸ್ಥೆಗಳು ಮತ್ತು ಸಂಯುಕ್ತ ರಾಷ್ಟ್ರ ಸಂಸ್ಥೆಗಳಿವೆ ಹಾಗೂ ಇದರಲ್ಲಿ ಸೇರಿಕೊಳ್ಳಲು ನಾವು ಸರಕಾರದ ಜನರನ್ನೂ ಸ್ವಾಗತಿಸುತ್ತೇವೆ. ನಾವು ಎಲ್ಲರೂ ಬಂದು ಈ ಚಳುವಳಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಸ್ವಾಗತಿಸುತ್ತೇವೆ. ಭಾರತವನ್ನು ಒಂದು ಸುಂದರ ಮತ್ತು ಸುರಕ್ಷಿತ ದೇಶವನ್ನಾಗಿ ನೋಡಲು, ನಾವೆಲ್ಲರೂ ಜೊತೆಯಲ್ಲಿ ಸಮಗ್ರತೆಯೊಂದಿಗೆ ಕೆಲಸ ಮಾಡೋಣ.

ಇವತ್ತು, ಜನರಲ್ಲಿ ಸುರಕ್ಷಿತವಾಗಿರುವ ಭಾವನೆಯಿಲ್ಲ. ಪ್ರಪಂಚದ ಯಾವುದೇ ಭಾಗದ ಜನರನ್ನಾದರೂ ಸ್ವೀಕರಿಸುವ ಒಂದು ದೇಶವೆಂಬುದಾಗಿ ಭಾರತವು ಯಾವತ್ತೂ ತಿಳಿಯಲ್ಪಡುತ್ತಿತ್ತು. ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರು ಭಾರತಕ್ಕೆ ಬರುತ್ತಿದ್ದರು ಮತ್ತು ಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಈಗ ನಮ್ಮದೇ ದೇಶದಲ್ಲಿ, ನಾವು ಸುರಕ್ಷಿತವಾಗಿರುವೆವೆಂದು ನಮಗೆ ಅನ್ನಿಸುವುದಿಲ್ಲ!

ಸ್ತ್ರೀಯರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮಕ್ಕಳು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಕಲಾವಿದರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ದಲಿತರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮುಸ್ಲಿಮರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ ಮತ್ತು ಬ್ರಾಹ್ಮಣರು ಕೂಡಾ ಈಗ ಸುರಕ್ಷತೆಯನ್ನು ಅನುಭವಿಸುತ್ತಿಲ್ಲ. ಪ್ರತಿಯೊಂದು ಜಾತಿ, ಪ್ರತಿಯೊಂದು ಒಳಪಂಗಡದ ಜನರ ಮನಸ್ಸುಗಳಲ್ಲೂ ಭಯ ಉತ್ಪತ್ತಿಯಾಗಿದೆ.    

ಇದರ ಹಿಂದಿರುವ ಕಾರಣವೇನು? ನಾವು ಇದರ ಮೂಲ ಕಾರಣದ ಕಡೆಗೆ ಹೋಗಬೇಕಾಗಿದೆ.

ನಿನ್ನೆಯಷ್ಟೇ ನಾನು ತಿಹಾರ್ ಜೈಲಿಗೆ ಹೋದೆ. ಸಾಧಾರಣವಾಗಿ, ಜನರು ರಾಮ್ ಲೀಲಾ ಮೈದಾನಕ್ಕೆ ಮೊದಲು ಬಂದು ನಂತರ ತಿಹಾರ್ ಜೈಲಿಗೆ ಹೋಗುತ್ತಾರೆ, ಆದರೆ ನಾನು ತಿಹಾರ್ ಜೈಲಿಗೆ ಮೊದಲು ಹೋಗಿ ನಂತರ ಇಲ್ಲಿಗೆ ಬಂದೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕೆಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಹೌದು, ಖಂಡಿತವಾಗಿ ನಾವು ಕೊಡಬೇಕು. ಅಪರಾಧಿಗಳಿಗೆ ನಾವು ಅತ್ಯಂತ ಕಠಿಣ ಶಿಕ್ಷೆಗಳನ್ನು ಕೊಡಬೇಕು. ಆದರೆ ಈ ಅಪರಾಧಗಳನ್ನು ಅವರು ಮೊದಲನೆಯದಾಗಿ ಯಾಕೆ ಮಾಡಿದರು ಎಂಬುದರ ಕಡೆಗೆ ಕೂಡಾ ನಾವು ಆಳವಾಗಿ ನೋಡಬೇಕು.

ನಿನ್ನೆ ತಿಹಾರ್ ಜೈಲಿನಲ್ಲಿ ನಾವು ಒಂದು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನಿಮಗೆ ಗೊತ್ತಾ, ನೀವು ಒಂದು ದಿನವನ್ನು ಜೈಲಿನಲ್ಲಿ ಅಪರಾಧಿಗಳೊಂದಿಗೆ ಕಳೆದರೆ, ನಿಮ್ಮ ಹೃದಯವು ಕರಗುವುದು. ನ್ಯೂಯೋರ್ಕ್ ಜೈಲಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಅವನು ಹಲವಾರು ಲೈಂಗಿಕ ಅಪರಾಧಗಳನ್ನೆಸಗಿದ್ದ ಮತ್ತು ಹಲವಾರು ಮಹಿಳೆಯರನ್ನು ಕೊಂದಿದ್ದ. ಗಲ್ಲಿಗೇರಿಸುವುದಕ್ಕೆ ಸ್ವಲ್ಪ ಮೊದಲು, ಅವನ ಕೊನೆಯ ಆಸೆಯೇನೆಂದು ಅವನಲ್ಲಿ ಕೇಳಿದಾಗ ಅವನಂದನು, "ಲಭ್ಯವಿರುವ ಎಲ್ಲಾ ಅಶ್ಲೀಲತಾ ತಾಣಗಳನ್ನು ತೆಗೆದುಹಾಕಬೇಕು. ಆ ಅಂತರ್ಜಾಲ ತಾಣಗಳನ್ನು ನೋಡಿ ನನ್ನ ಮನಸ್ಸು ಭ್ರಷ್ಟವಾಯಿತು ಮತ್ತು ಆ ಎಲ್ಲಾ ಅಪರಾಧಗಳನ್ನು ಮಾಡಿದಾದ ನಾನು ನನ್ನ ಪ್ರಜ್ಞೆಯಲ್ಲಿರಲಿಲ್ಲ. ನಾನೇನು ಮಾಡುತ್ತಿದ್ದೆನೆಂಬ ಎಲ್ಲಾ ಪ್ರಜ್ಞೆಯನ್ನು ನಾನು ಕಳೆದುಕೊಂಡಿದ್ದೆ."

ಯಾವುದೆಲ್ಲಾ ಅಪರಾಧಗಳು ಸಂಭವಿಸುತ್ತಿವೆಯೋ, ಅವುಗಳು ಸಂಭವಿಸುವುದು ಜನರು ತಮ್ಮ ಪ್ರಜ್ಞೆಯಲ್ಲಿ ಇಲ್ಲದಿರುವಾಗ, ಮತ್ತು ಅಪರಾಧದ ದೊಡ್ಡ ಪ್ರೋತ್ಸಾಹಕವೆಂದರೆ ಮದ್ಯಸಾರ.

ಪ್ರತಿಯೊಂದು ಹಳ್ಳಿಯಲ್ಲಿ ಮದ್ಯಸಾರವು ಲಭ್ಯವಿದೆ ಮತ್ತು ಅದನ್ನು ಶುದ್ಧ ದೇಶೀ ಮದ್ಯವಾಗಿ ಮಾರಲಾಗುತ್ತದೆ ಅಥವಾ ಸ್ಥಳೀಯ ಮದ್ಯವೆಂದು ಲೇಬಲ್ ಹಚ್ಚಲಾಗುತ್ತದೆ.

ಒಬ್ಬನು ಒಮ್ಮೆ ಒಂದು ದೊಡ್ದ ತಲೆನೋವಿನಿಂದ ನರಳುತ್ತಿದ್ದನು. ಹಾಗೆ ಅವನು ಇನ್ನೊಬ್ಬನಲ್ಲಿ ಕೇಳಿದನು, "ಎಲ್ಲಾ ಭಾಷಣಗಳನ್ನು ಕೇಳಿ ನನಗೆ ಇಷ್ಟೊಂದು ಭಯಾನಕ ತಲೆನೋವು ಬಂದಿದೆ. ನಾನೇನು ಮಾಡುವುದು?"

ಅವನ ಮಿತ್ರನಂದನು, "ನೀನು ಒಂದು ಬಾಟಲಿ ಮದ್ಯ ಕುಡಿ, ನೀನು ಸರಿಹೋಗುವೆ."

ಆ ವ್ಯಕ್ತಿ ಕೇಳಿದನು, "ಮದ್ಯಪಾನ ಮಾಡುವುದರಿಂದ ತಲೆನೋವು ಹೇಗೆ ಗುಣವಾಗುವುದು?"

ಅವನ ಮಿತ್ರನಂದನು, "ಮದ್ಯಪಾನ ಮಾಡಿದುದರಿಂದ, ನಾನು ನನ್ನ ನೆಲ, ನನ್ನ ನೌಕರಿ ಕಳೆದುಕೊಂಡೆ ಮತ್ತು ನನ್ನ ಪತ್ನಿ ನನ್ನನ್ನು ಬಿಟ್ಟಳು. ನಾನು ಎಲ್ಲವನ್ನೂ ಕಳೆದುಕೊಂಡೆ. ಮದ್ಯಪಾನದೊಂದಿಗೆ, ನಾನು ಎಲ್ಲವನ್ನೂ ಕಳೆದುಕೊಂಡಿರುವಾಗ, ಅದಕ್ಕೆ ಹೋಲಿಸಿದರೆ ಒಂದು ತಲೆನೋವು ಯಾವ ಸಂಗತಿ? ನಿನ್ನ ತಲೆನೋವು ಯಾಕೆ ಹೋಗುವುದಿಲ್ಲ? ಮದ್ಯಸಾರಕ್ಕೆ ಎಷ್ಟೊಂದು ಶಕ್ತಿಯಿದೆಯೆಂದರೆ, ಅದು ಎಲ್ಲವನ್ನೂ ನಿನ್ನಿಂದ ದೂರ ತೆಗೆದುಕೊಂಡು ಹೋಗುವುದು."

ದಿಲ್ಲಿಯಲ್ಲಿ ನಡೆದ ಅಪರಾಧಗಳು ಕ್ಷಮಿಸಲು ಅನರ್ಹವಾಗಿದ್ದವು ಮತ್ತು ಈ ಅಪರಾಧಗಳನ್ನೆಸಗಿದವರೆಲ್ಲರೂ ಮದ್ಯಪಾನ ಮಾಡಿದ್ದರು. ಆದರೆ ಮುಖ್ಯ ಅಪರಾಧಿಯಾಗಿರುವ ಮದ್ಯಸಾರದ ಕಡೆಗೆ ಯಾರೂ ಬೆರಳು ಮಾಡುತ್ತಿಲ್ಲ.

ಮದ್ಯಪಾನ ಮಾಡಿರುವ ಒಬ್ಬ ವ್ಯಕ್ತಿಯು ಪ್ರಜ್ಞೆಯಲ್ಲಿರುವುದಿಲ್ಲ; ತಾನೇನು ಮಾಡುತ್ತಿರುವೆನೆಂಬ ಅರಿವಿರುವುದಿಲ್ಲ. ಆ ಸಮಯದಲ್ಲಿ ಅವನಿಗೆ ಕಾನೂನಿನ ಬಗ್ಗೆ ಯಾವುದೇ ಅರಿವಿರುವುದಿಲ್ಲ.

ಇದೇ ರೀತಿಯಲ್ಲಿ, ಮಾದಕ ದ್ರವ್ಯಗಳ ಸಮಸ್ಯೆ. ದೇಶದ ದೊಡ್ಡ ನಗರಗಳಲ್ಲಿ ಹಲವುದರಲ್ಲಿ ಡ್ರಗ್ ಮಾಫಿಯಾವು ಹುಚ್ಚೆದ್ದು ಓಡುತ್ತಿದೆ. ದೇಶವನ್ನು ಅಧೋಗತಿಗೆ ತರುತ್ತಿರುವ ಮಾದಕ ದ್ರವ್ಯಗಳು ಮತ್ತು ಇತರ ಎಲ್ಲಾ ರೀತಿಯ ಅಮಲೇರಿಸುವ ವಸ್ತುಗಳ ಪದಾರ್ಥಗಳ ವಿರುದ್ಧ ನಾವು ಎದ್ದುನಿಲ್ಲಬೇಕು.

ಇವತ್ತು ದೇಶದಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆಗಳ ಒಂದು ದೊಡ್ಡ ಅವನತಿಯಾಗುತ್ತಿದೆ ಮತ್ತು ನಾನು ನಿಮಗೆ ಹೇಳುತ್ತೇನೆ ಕೇಳಿ, ಮದ್ಯಸಾರ ಮತ್ತು ಈ ಎಲ್ಲಾ ಇತರ ಅಮಲು ಪದಾರ್ಥಗಳು ಇದಕ್ಕಿರುವ ಪ್ರಧಾನ ಕಾರಣಗಳಲ್ಲಿ ಒಂದಾಗಿದೆ.

ಅಪರಾಧಿಗಳು ಹೆಚ್ಚಾಗಿ ಹಾರ್ಮೋನುಗಳ ಅಸಮತೋಲನವನ್ನು ಅನುಭವಿಸುತ್ತಿರುತ್ತಾರೆ. ಅದು, ಅವರು ಹಿಂಸಾತ್ಮಕವಾಗಿ ವರ್ತಿಸಲು ಕಾರಣವಾಗುತ್ತದೆ. ಒಂದು ಸಹಾಯವಾಣಿಯನ್ನು ಪ್ರಾರಂಭಿಸಬೇಕೆಂದು ನಾನು ಹೇಳಿದುದು ಅದಕ್ಕಾಗಿಯೇ. ಸಮಾಜ-ವಿರೋಧಿ ಪ್ರವೃತ್ತಿಗಳು ಅಥವಾ ಹಿಂಸಾತ್ಮಕ ವರ್ತನೆಗಳಿರುವ ಒಬ್ಬ ಹುಡುಗ ಅಥವಾ ಒಬ್ಬಳು ಹುಡುಗಿಯನ್ನು ನೀವು ನೋಡಿದರೆ, ಆಗ ಆ ವ್ಯಕ್ತಿಗೆ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ ಹಾಗೂ ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಇದಕ್ಕೆ ಒಂದು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ.

ನೀವಿರುವ ಜಾಗದಲ್ಲಿ, ಇಂತಹ ರೀತಿಯ ಸಹಾಯದ ಅಗತ್ಯವಿರುವ ಯಾರನ್ನಾದರೂ ನೀವು ನೋಡಿದರೆ, ಅವರಿಗೆ ಖಂಡಿತವಾಗಿಯೂ ಸಹಾಯ ಸಿಗಬೇಕು. ಹಾರ್ಮೋನಿನ ಅಸಮತೋಲನಗಳಿರುವ ಮತ್ತು ಈ ರೀತಿಯ ಅಪರಾಧಗಳಲ್ಲಿ ಸೇರಿಕೊಳ್ಳುತ್ತಿರುವ ಜನರಿಗೆ ನಾವು ಸಲಹೆಯನ್ನು ನೀಡಬೇಕಾಗಿದೆ.

ನಿರ್ಭಯ (ದಿಲ್ಲಿಯಲ್ಲಿ ಬಲಾತ್ಕಾರಕ್ಕೊಳಪಟ್ಟ ಹುಡುಗಿ) ಮತ್ತು ಅವಳ ಮಿತ್ರ ರಸ್ತೆಯ ಮೇಲೆ ಬಿದ್ದಿದ್ದರು. ಹಲವಾರು ಜನರು ಅವರನ್ನು ನೋಡಿದರು ಮತ್ತು ಸುಮ್ಮನೆ ತಮ್ಮ ದಾರಿ ಹಿಡಿದುಕೊಂಡು ಹೋದರು! ಯಾವುದಾದರೂ ಮನುಷ್ಯನು ಹೀಗೆ ಮಾಡಬಲ್ಲನೇ? ಜನರು ಅವರಿಗೆ ಸಹಾಯ ಮಾಡಲು ಯಾಕೆ ಬರಲಿಲ್ಲ? ಇದು ಯಾಕೆಂದರೆ, ’ನಾನು ಈ ದೇಶಕ್ಕಾಗಿರುವ ಒಬ್ಬ ಸ್ವಯಂಸೇವಕ ಮತ್ತು ಎಲ್ಲರೂ ನನಗೆ ಸೇರಿದವರು’ ಎಂಬ ಆಳವಾದ ಭಾವನೆ ಅಥವಾ ನಿರ್ಧಾರ ಅವರಲ್ಲಿರಲಿಲ್ಲ.  ಇದುವೇ ಆಧ್ಯಾತ್ಮವೆಂಬುದು.

ಈ ಪರಿಸ್ಥಿತಿಯನ್ನು ಬದಲಾಯಿಸುವುದು, ಕಾನೂನುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಕಾನೂನುಗಳು ಆವಶ್ಯಕ, ಅದರಲ್ಲಿ ಸಂಶಯವಿಲ್ಲ, ಆದರೆ ಮನುಷ್ಯರ ಮನಸ್ಸುಗಳನ್ನು ಕಾನೂನುಗಳಿಂದ ಪರಿವರ್ತಿಸಲು ಸಾಧ್ಯವಿಲ್ಲ. ಜನರ ಮನಸ್ಸುಗಳನ್ನು ಪರಿವರ್ತಿಸಲು, ನೀವು ಮತ್ತು ನಾನು ಕೆಲಸ ಮಾಡಬೇಕು. ಇದನ್ನು ಮಾಡಲು ನಾವೆಲ್ಲರೂ ಒಟ್ಟಿಗೆ ಎದ್ದೇಳಬೇಕು. ನಾವು ಎಲ್ಲರನ್ನೂ ಪ್ರೇಮದೊಂದಿಗೆ ಅಪ್ಪಿಕೊಳ್ಳಬೇಕು. ಪ್ರೇಮವು, ಅತ್ಯಂತ ಕಠಿಣವಾದ ಕಲ್ಲನ್ನು ಕೂಡಾ ಕರಗಿಸಬಲ್ಲದು, ಅದಕ್ಕೆ ಒಂದು ಮನುಷ್ಯನನ್ನು ಪರಿವರ್ತಿಸಲು ಸಾಧ್ಯವಿಲ್ಲವೇ?

ನಮ್ಮ ದೇಶ, ನಮ್ಮ ಸಮಾಜ ಹೇಗಿತ್ತೆಂದರೆ, ಪ್ರತಿಯೊಂದು ಕಣದಲ್ಲೂ ಮಾನವೀಯತೆಯು ಕಾಣುತ್ತಿತ್ತು. ಆದರೆ ಈಗ ಮಾನವೀಯತೆಯ ಆ ಭಾವವು ಎಲ್ಲೋ ಹುದುಗಿ ಹೋಗಿದೆ ಮತ್ತು ಅದು ಧೂಳಿನಿಂದ ಮುಚ್ಚಿಹೋಗಿದೆ. ಇದನ್ನು ಮತ್ತೊಮ್ಮೆ ಮೇಲಕ್ಕೆ ತರುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ನಿಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಸ್ವಯಂಸೇವಕರಾಗಬೇಕು. ೨೪ ಗಂಟೆಗಳಲ್ಲಿ, ನಿಮ್ಮ ಸಮಯದ ಒಂದು ಗಂಟೆಯನ್ನು ನೀವು ದೇಶಕ್ಕೆ ನೀಡಬೇಕು.

ಒಬ್ಬ ಯುವಕನು ಒಮ್ಮೆ ನನ್ನಲ್ಲಿ ಕೇಳಿದನು, "ಗುರುದೇವ, ನಾವು ದೇಶಕ್ಕೆ ಒಂದು ಗಂಟೆಯನ್ನು ಕೊಟ್ಟರೆ, ಆಗ ನಾವು ನಮ್ಮ ಶಿಕ್ಷಣದ ಬಗ್ಗೆ ಏನು ಮಾಡುವುದು? ಸ್ವಯಂಸೇವೆ ಮಾಡುವುದರ ಬದಲಾಗಿ ಹೆಚ್ಚು ಓದಬೇಕೆಂದು ಹೆತ್ತವರು ನಮ್ಮಲ್ಲಿ ಹೇಳುತ್ತಿದ್ದಾರೆ."

ನಾನು ಹೇಳುತ್ತೇನೆ ಕೇಳಿ, ನಿಮ್ಮ ಓದಿನ ಸಮಯವನ್ನು ಕಸಿದುಕೊಳ್ಳಬೇಡಿ. ನಿಮ್ಮ ಓದನ್ನು ಪೂರ್ಣಗೊಳಿಸಿ. ಆದರೆ ಪ್ರತಿದಿನವೂ ಮನೋರಂಜನೆಗೆಂದು ನೀವು ಸ್ವಲ್ಪ ಸಮಯವನ್ನು ಬದಿಗಿರಿಸುವುದಿಲ್ಲವೇ? ನೀವು ಸ್ವಲ್ಪ ಸಮಯವನ್ನು ಮನೋರಂಜನೆಗೆಂದು ಬದಿಗಿರಿಸುತ್ತೀರಿ; ಉದಾಹರಣೆಗೆ ಇಂಟರ್ನೆಟ್ ಸರ್ಫ್ ಮಾಡುವುದು, ಟಿವಿ ನೋಡುವುದು ಅಥವಾ ಆಟಗಳನ್ನು ಆಡುವುದು, ಮೊದಲಾದವು, ಅಲ್ಲವೇ? ಹಾಗಾದರೆ, ಆ ಬಿಡುವಿನ ಸಮಯದಿಂದ ಅರ್ಧ ಗಂಟೆಯನ್ನು ತೆಗೆದುಕೊಳ್ಳಿ. ಒಂದು ದಿನದಲ್ಲಿ ಒಂದು ಗಂಟೆ ಸಾಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ಸಮಾಜಕ್ಕಾಗಿ ವ್ಯಯಿಸಿದರೆ, ಅಥವಾ ಹೀಗೆ ಹೇಳೋಣ, ಭಾನುವಾರದಂದು ಏಳು ಗಂಟೆಗಳನ್ನು ಕಳೆದರೂ ಕೂಡಾ, ಅದು ಸಾಕಾಗುವುದು.

ಇಲ್ಲಿ ಹಲವಾರು ಸ್ವಯಂಸೇವಕರಿದ್ದಾರೆ ಮತ್ತು ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ಕೇವಲ ಎರಡು ತಿಂಗಳುಗಳಲ್ಲಿ, ಅವರಿಂದ ಒಂದು ಸಾವಿರ ಸೇವಾ ಯೋಜನೆಗಳು ಕೈಗೆತ್ತಲ್ಪಟ್ಟವು ಮತ್ತು ಪೂರ್ಣಗೊಳಿಸಲ್ಪಟ್ಟವು ಕೂಡಾ. ಇದರೊಂದಿಗೆ, ದೇಶವು ಇನ್ನೂ ನಿದ್ದೆ ಮಾಡುತ್ತಿಲ್ಲ, ಆದರೆ ಬದಲಿಗೆ ಇದು ಎಚ್ಚೆತ್ತುಕೊಳ್ಳುತ್ತಿದೆ ಎಂಬ ಆಶಾಕಿರಣವು ಎದ್ದಿದೆ.

ದೇಶದ ಯುವಕರು ಎಚ್ಚೆತ್ತಾಗ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾನೂನಿಗೂ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ, ಅವರು ಮುಂದೆ ಸಾಗುತ್ತಾ ಇರುವರು.

ನಮ್ಮ ದೇಶವು ಒಂದು ಸುರಕ್ಷಿತ ಸ್ಥಳವಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ನಮ್ಮ ಸ್ವಂತ ದೇಶದಲ್ಲಿ ಸುರಕ್ಷತೆಯನ್ನು ಅನುಭವಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಬಯಸುತ್ತೇವೆ. ಇದಕ್ಕಾಗಿ, ನಾವು ಈಗ ಕೆಲಸ ಮಾಡಲು ಪ್ರಾರಂಭಿಸದಿದ್ದರೆ ಮತ್ತು ನಾವು ಈಗ ತೊಡಗಿಸಿಕೊಳ್ಳದೇ ಹೋದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸಲಾರರು.

ಒಂದು ತಪ್ಪನ್ನು ಮಾಡುವುದು ಸ್ವಾಭಾವಿಕ. ಒಂದು ಗಾದೆಯಿದೆ, ’ತಪ್ಪು ಮಾಡುವುದು ಮಾನವ ಗುಣ '. ಹಾಗೆ, ತಪ್ಪುಗಳು ಸಂಭವಿಸುತ್ತವೆ. ಆದರೆ ನಾವು ತಪ್ಪು ಮಾಡುವಾಗ, ಸಮಾಧಾನ ತಂದುಕೊಂಡು,  ಪರಿಹಾರ ನೀಡುವತ್ತ ಗಮನ ಕೊಡಬೇಕು.
ನಾನೊಂದು ತಪ್ಪು ಮಾಡಿದರೂ ಕೂಡಾ, ನಾನು ಅದನ್ನು ಮನಗಂಡು, ಅದರಿಂದ ಕಲಿತುಕೊಳ್ಳುತ್ತೇನೆ - ಯುಗಗಳಿಂದ ಭಾರತದಲ್ಲಿನ ಸಂಪ್ರದಾಯ ಇದಾಗಿದೆ. ಭಾರತದಲ್ಲಿ, ತಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳಿಂದ ಕಲಿತು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದವರು ಸುಶಿಕ್ಷಿತರು ಮತ್ತು ಕಲಿತವರು ಎಂದು ಕರೆಯಲ್ಪಡುತ್ತಿದ್ದರು.

ತಮ್ಮ ತಪ್ಪಿಗೆ, ನ್ಯಾಯವೆಂದು ತೋರಿದ ಒಂದು ಶಿಕ್ಷೆಯನ್ನು ಅವರು ಸ್ವಯಂ ವಿಧಿಸಿಕೊಳ್ಳುತ್ತಿದ್ದರು ಮತ್ತು ಅದನ್ನು ಪೂರೈಸುತ್ತಿದ್ದರು. ಈ ದೇಶದ ಜನರ ಮೌಲ್ಯಗಳು ಹಾಗಿದ್ದವು. ಈ ರೀತಿಯ ಮನೋಭಾವವನ್ನು ನಾವು ಮತ್ತೊಮ್ಮೆ ಜೀವಿತಗೊಳಿಸಬೇಕಾಗಿದೆ. ವಿಶೇಷವಾಗಿ ನಮ್ಮ ದೇಶದ ರಾಜಕಾರಣಿಗಳು ಇದನ್ನು ಅನುಸರಿಸಬೇಕಾಗಿದೆ. ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು, ಅವರು ಯಾವುದೇ ಪಕ್ಷಕ್ಕಾದರೂ ಸೇರಿರಲಿ, ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅದಕ್ಕಾಗಿ ಪರಿಹಾರಗಳನ್ನು ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ತೋರಿಸಬೇಕು. ಅವರಿದನ್ನು ಮಾಡಿದರೆ, ಇದಕ್ಕಾಗಿ ದೇಶದ ಜನರು ಅವರನ್ನು ಗೌರವಿಸುವರು. ಅಧಿಕಾರದ ಸ್ಥಾನದಲ್ಲಿರುವುದನ್ನು ಮುಂದುವರಿಸುವುದಕ್ಕಾಗಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಬಾರದು.

ಈ ದಿನಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡುತ್ತವೆ. ಇದನ್ನು ನಿಲ್ಲಿಸಬೇಕು. ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡಬೇಡಿ.

ನೀವು ಹೇಳಬಹುದು, "ಗುರುದೇವ, ನಿಮ್ಮ ಒಂದೇ ಕೆಲಸವೆಂದರೆ ಧ್ಯಾನ ಕಲಿಸುವುದು. ಮತ್ತೆ ಯಾಕೆ ನೀವು ಈಗ ಈ ಎಲ್ಲಾ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವಿರಿ? ನೀವು ರಾಜಕೀಯದ ಬಗ್ಗೆ ಯಾಕೆ ಮಾತನಾಡುತ್ತಿರುವಿರಿ?"

ನಾವು ಮಾತನಾಡುತ್ತಿರುವುದು ರಾಜನೀತಿಯ ಬಗ್ಗೆಯಲ್ಲ; ಇದು ರಾಷ್ಟ್ರನೀತಿ (ದೇಶದ ಅಭಿವೃದ್ಧಿಗಾಗಿರುವ ತಂತ್ರ). ಇದು ಮಾನವ ನೀತಿ (ಮಾನವ ಕುಲಕ್ಕಾಗಿ ನ್ಯಾಯ).

ನಾನು ರಾಜನೀತಿಯಿಂದ ದೂರವಿರುತ್ತೇನೆ. ಆದರೆ, ಜನರ ನೋವಿಗೆ ಮತ್ತು ದೇಶದ ಜನರಿಗೆ ಕಳಕಳಿಯಿರುವ ಪ್ರತಿಯೊಂದು ವಿಷಯಕ್ಕಾಗಿ ನಾನು ಎದ್ದು ನಿಲ್ಲುವೆನು. ನನ್ನ ಪ್ರತಿ ಕಣವೂ ಈ ದೇಶಕ್ಕಾಗಿ ಕೆಲಸ ಮಾಡಲು ಸಿದ್ಧವಿದೆ. ಈ ದೇಶಕ್ಕಾಗಿ ಒಂದು ಸುಂದರವಾದ ಕನಸನ್ನು ಹೊಂದಿದವರಲ್ಲಿ ನಾನು ಒಬ್ಬನಾಗಿದ್ದೇನೆ.

ಕೆಲವು ಜನರು ಹೇಳಬಹುದು, "ಓ ಹೌದು, ಇದೆಲ್ಲವೂ ಕೇಳಲು ಚೆನ್ನಾಗಿದೆ. ಆದರೆ ಇದೆಲ್ಲವೂ ಕೆಲವು ದಿನಗಳ ವರೆಗೆ ಇರುವುದು ಮತ್ತು ನಂತರ ಮಾಯವಾಗುವುದು. ಇದೆಲ್ಲದರ ಪ್ರಯೋಜನವೇನು?"

ಎಲ್ಲಾ ಕಡೆಗಳಲ್ಲಿ ಹತಾಶೆಗೆ ಕಾರಣವಾಗಿರುವುದು ಈ ರೀತಿಯ ಯೋಚನೆಯೇ. ಎಲ್ಲೆಡೆಯೂ ನಾವು ಒಂದೋ ಕ್ರೋಧವನ್ನು ಅಥವಾ ನಿರಾಶೆಯನ್ನು ನೋಡುತ್ತೇವೆ. ಒಂದು ಕೊನೆಯಲ್ಲಿ ಕ್ರೋಧ ಮತ್ತು ಇನ್ನೊಂದು ಕೊನೆಯಲ್ಲಿ ನಿರಾಶೆ. ಒಂದು ಸುಂದರ ಭಾರತದ ನಮ್ಮ ಕನಸನ್ನು ಈಡೇರಿಸಲು ನಾವು ಇವುಗಳೆರಡನ್ನು ದಾಟಿಹೋಗಬೇಕು. ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಬೇಕು.

ಇಲ್ಲಿರುವ ಗೌರವಾನ್ವಿತ ಭಾಷಣಕಾರರಲ್ಲಿ ಒಬ್ಬರಾಗಿರುವ ಶ್ರೀ ವಾಯುದ್ದೀನ್ ಅವರು, ಈ ರಾಷ್ಟ್ರದ ಚಾರಿತ್ರ್ಯವನ್ನು ನಿರ್ಮಿಸುವತ್ತ ನಾವು ಕೆಲಸ ಮಾಡಬೇಕಾಗಿದೆಯೆಂದು ಉಲ್ಲೇಖಿಸಿದರು. ಇದಕ್ಕಾಗಿ, ದೇಶದಲ್ಲಿ ಹೊಣೆಗಾರಿಕೆಯ ಸ್ಥಾನಗಳನ್ನು ಹಿಡಿದಿಡಲು ನಮಗೆ ಉತ್ತಮ ಚಾರಿತ್ರ್ಯದ ಜನರ ಅಗತ್ಯವಿದೆ. ಈಗ, ಎಲ್ಲೋ ಕುಳಿತಿದ್ದು ದೇಶವನ್ನು ನಿರ್ವಹಿಸಲು ಪ್ರಯತ್ನಿಸುವ ಕೇವಲ ಒಬ್ಬ ವ್ಯಕ್ತಿಯಿಂದ ಇದಾಗಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ದೇಶದ ಚಾರಿತ್ರ್ಯ ನಿರ್ಮಾಣದ ಕಡೆಗೆ ಹೆಚ್ಚು ಅರಿವುಳ್ಳವರಾಗಬೇಕು.

ಪ್ರತಿಯೊಂದು ಪ್ರದೇಶದಲ್ಲಿ ಜನರು ಒಂದಾಗಬೇಕು ಮತ್ತು ಕಳ್ಳತನಗಳು ಹಾಗೂ ಹಿಂಸೆಗಳಿಂದ ಪ್ರದೇಶವನ್ನು ಸುರಕ್ಷಿತಗೊಳಿಸಬೇಕು. ಇದಕ್ಕಾಗಿ ಜನರು ಸಿದ್ಧರಿರಬೇಕು ಮತ್ತು ಕ್ರಮವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಿದಂತಾಗುವುದು. ಆಗ ಮಾತ್ರ ನಮ್ಮ ಸ್ವಯಂಸೇವೆಯು ಯಶಸ್ವಿಯಾಗುವುದು.

ಆದುದರಿಂದ ನಾನು ನಿಮ್ಮೆಲ್ಲರಲ್ಲೂ ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟುಸೇರಿ ಭಾರತವನ್ನು ಒಂದು ಸುರಕ್ಷಿತ, ಸುಂದರ ಮತ್ತು ಸಾಕ್ಷರ ದೇಶವನ್ನಾಗಿ ಮಾಡಲು ಸಾಧ್ಯವಾಗಲು, ನಮ್ಮೊಂದಿಗೆ ಸೇರಿಕೊಂಡು ಸ್ವಯಂಸೇವೆ ಮಾಡುವಂತೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೂ ಒಂದು ನೂರು ಜನರನ್ನು ಪ್ರೇರೇಪಿಸಿ. ೧೦೦% ಸಾಕ್ಷರತೆ ಇರಬೇಕು.
ಮಕ್ಕಳಿಗೆ ಕಲಿಸಲು ಕೊಳಗೇರಿಗಳಿಗೆ ಹೋದ, ಇವತ್ತು ಇಲ್ಲಿರುವ ಸ್ವಯಂಸೇವಕರನ್ನು ನಾನು ಪುನಃ ಅಭಿನಂದಿಸಲು ಬಯಸುತ್ತೇನೆ. ದೈಹಿಕ ದುಡಿಮೆ ಮಾಡುತ್ತಿದ್ದ ಮಕ್ಕಳನ್ನು ಅಲ್ಲಿಂದ ದೂರ ಒಯ್ದು ಶಿಕ್ಷಣವನ್ನು ನೀಡಲಾಯಿತು. ಇದೊಂದು ಸುಲಭದ ಕೆಲಸವಲ್ಲ, ಆದರೆ ಅವರಿದನ್ನು ಮಾಡಿದರು.

ಸಮಾಜಕ್ಕಾಗಿ ನಾವು ಸೇವೆಯಲ್ಲಿ ತೊಡಗುವಾಗ, ನಾವು ಹಲವು ಸಲ ಟೀಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಜನರು ತಪ್ಪುಗಳನ್ನು ಕಂಡುಹುಡುಕಲು, ನಿಮ್ಮ ಇಮೇಜನ್ನು(ಸ್ಥಾನಮಾನ) ಹಾಳುಮಾಡಲು ಮತ್ತು ನಿಮ್ಮನ್ನು ಅವರು ಹೇಗೆ ಪತನಗೊಳಿಸಬಹುದು ಎಂಬುದನ್ನು ನೋಡಲು ಕಾಯುತ್ತಿರುತ್ತಾರೆ. ಅವರದನ್ನು ಮಾಡಲಿ ಬಿಡಿ, ಅವರು ತಪ್ಪುಗಳನ್ನು ಕಂಡುಹುಡುಕಲಿ ಬಿಡಿ. ನಮ್ಮ ಹೃದಯವು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇದೆ, ಆದುದರಿಂದ ನಾವು ನಮ್ಮ ಕೆಲಸ ಮಾಡುವುದನ್ನು ಮುಂದುವರಿಸುವೆವು ಮತ್ತು ಮುಂದೆ ಸಾಗುವೆವು. ಯಾರೆಲ್ಲಾ ಏನಾದರೂ ಹೇಳಲು ಬಯಸುವರೋ, ಅವರು ಹೇಳಲಿ ಬಿಡಿ. ನಾವು ಭಾರತಕ್ಕಾಗಿ ಎದ್ದು ನಿಂತಿದ್ದೇವೆ.

ಪರಮಾತ್ಮನು ಎಲ್ಲೋ ಮೇಲೆ ಸ್ವರ್ಗದಲ್ಲಿ ಇಲ್ಲ. ಅವನು ನಮ್ಮೆಲ್ಲರೊಳಗಿದ್ದಾನೆ. ಅವನು ಪ್ರತಿಯೊಂದು ಅಣುವಿನಲ್ಲೂ ಇದ್ದಾನೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು, ’ದೇಶದ ಸೇವೆಯೇ ದೇವರ ಸೇವೆ.’

ದೇವರ ಕಡೆಗಿರುವ ಮತ್ತು ದೇಶದ ಕಡೆಗಿರುವ ಭಕ್ತಿಯು ಒಂದೇ ನಾಣ್ಯದ ಎರಡು ಮುಖಗಳಾಗಿವೆ.

ದೇವರ ಕಡೆಗಿರುವ ಭಕ್ತಿ ಬೇರೆ ಮತ್ತು ದೇಶದ ಕಡೆಗಿರುವ ಭಕ್ತಿ ಬೇರೆ ಎಂದು ಯೋಚಿಸಬೇಡಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಅವನ ಸೃಷ್ಟಿಯನ್ನು ಕೂಡಾ ಪ್ರೀತಿಸುವಿರಿ. ಪರಿಸರದ ಬಗ್ಗೆ ನಾವು ತಿಳಿದಿರುವುದು ಮುಖ್ಯವಾಗಿದೆ. ಆದುದರಿಂದ ಇವತ್ತು, ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ನಾವು ಎದ್ದು ನಿಲ್ಲೋಣ. ಸ್ತ್ರೀಯರ ಸುರಕ್ಷತೆಗಾಗಿ ನಾವು ದೃಢವಾಗಿ ನಿಲ್ಲೋಣ. ನೀವೆಲ್ಲರೂ ಸಿದ್ಧರಿರುವಿರಾ?

ಇವತ್ತು ನಿಮಗೆಲ್ಲರಿಗೂ ಒಂಭತ್ತು ಅಂತಹ ಪ್ರತಿಜ್ಞೆಗಳನ್ನು ನೀಡಲಾಗುವುದು. ನೀವು ಸಿದ್ಧರಿರುವಿರಾ? ನಿಮ್ಮಲ್ಲಿ ಎಷ್ಟು ಮಂದಿ ಸಿದ್ಧರಿರುವಿರಿ? ನಿಮ್ಮ ಕೈಗಳನ್ನು ಮೇಲೆತ್ತಿ. (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ಅತ್ಯಂತ ಅಗತ್ಯವಾಗಿರುವುದೇನೆಂದರೆ ಬದಲಾವಣೆ; ನಮ್ಮ ಮನಸ್ಸಿನಲ್ಲಿ ಬದಲಾವಣೆ, ನಮ್ಮ ವರ್ತನೆಯಲ್ಲಿ ಬದಲಾವಣೆ ಮತ್ತು ಸಮಾಜದಲ್ಲಿ ಬದಲಾವಣೆ. ಇದು ಬಹಳ ಮುಖ್ಯವಾದುದು.

ಒಬ್ಬರ ಕಡೆಗೆ ಬೆರಳು ಮಾಡಿ, ಇಂತಿಂತ ವ್ಯಕ್ತಿ ತಪ್ಪು ಮಾಡಿರುವನೆಂದು ಹೇಳುವುದು ಬಹಳ ಸುಲಭ. ನಾವು ಮರೆತುಬಿಡುವುದೇನೆಂದರೆ, ಇತರ ಮೂರು ಬೆರಳುಗಳು ತಿರುಗಿ ನಮ್ಮ ಕಡೆಗೆ ಮುಖಮಾಡುತ್ತಿರುತ್ತವೆ. ಒಂದು ಶುದ್ಧವಾದ ಮನಸ್ಸು ಮತ್ತು ಹೃದಯದೊಂದಿಗೆ ನಾವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ, ಪ್ರಕೃತಿ ಕೂಡಾ ಅದನ್ನು ಹೇಗೆ ಬೆಂಬಲಿಸುವುದು ಎಂಬುದನ್ನು ಸುಮ್ಮನೆ ನೋಡಿ.

ಎರಡು ದಿನಗಳ ಮೊದಲು, ಈ ಕಾರ್ಯಕ್ರಮದ ಸಂಘಟಕರು ನನ್ನ ಬಳಿಗೆ ಬಂದು, ಮುಂಬರುವ ದಿನಗಳಲ್ಲಿ ಒಂದು ಆಲಿಕಲ್ಲು ಚಂಡಮಾರುತ ಮತ್ತು ಭಾರೀ ಮಳೆಯಾಗುವುದೆಂದು ಹವಾಮಾನ ಮುನ್ಸೂಚನೆ ಹೇಳುತ್ತದೆಯೆಂದು ಹೇಳಿದರು. ಇವತ್ತಿಗೂ ಕೂಡಾ ಮುನ್ಸೂಚನೆ ಅದೇ ಆಗಿತ್ತು. ಹೀಗಾಗಿ ಅವರಂದರು, "ಗುರುದೇವ, ದಯವಿಟ್ಟು ಏನಾದರೂ ಮಾಡಿ".

ನಾನು ಅವರಿಗಂದೆ, "ಯಾವಾಗಲೆಲ್ಲಾ ನಾವು ಯಾವುದೇ ಹೆಜ್ಜೆಯನ್ನು ನಿಸ್ವಾರ್ಥವಾಗಿ ಮತ್ತು ಒಂದು ಶುದ್ಧವಾದ ಹೃದಯದೊಂದಿಗೆ ತೆಗೆದುಕೊಳ್ಳುವೆವೋ, ಪ್ರಕೃತಿಯು ಅದನ್ನು ಬೆಂಬಲಿಸುವುದು." ನಮ್ಮಲ್ಲಿರುವ ಒಂದೇ ಒಂದು ವಿಷಯವೆಂದರೆ, ಒಂದು ಶುದ್ಧವಾದ ಹೃದಯ. ಹಾಗಾಗಿ, ಏನೂ ಆಗದೆಂದು ನಾನು ಸಂಘಟಕರಿಗೆ ಹೇಳಿದೆ. ಮತ್ತು ನೋಡಿ, ಎಲ್ಲರೂ ಈಗ ಬಹಳ ಆರಾಮವಾಗಿ ಕುಳಿತಿದ್ದಾರೆ.

ದೇಶವು ಈಗಲೂ ಜಾತಿ ಮತ್ತು ಧರ್ಮಗಳಿಂದ ವಿಭಾಗಿಸಲ್ಪಟ್ಟಿದೆ ಮತ್ತು ಸತ್ಯದಿಂದ ಸಂಪರ್ಕ ಕಳೆದುಕೊಂಡಿದೆ. ಹಿಂಸಾತ್ಮಕ ಕ್ರಿಯೆಗಳನ್ನು ಮಾಡಿಕೊಂಡು ಸಾಯಲು ಹಲವರು ಸಿದ್ಧರಿದ್ದಾರೆ. ದೇಶವನ್ನು, ಜನರನ್ನು ಇದೆಲ್ಲದರಿಂದ ನಾವು ದೂರ ಕೊಂಡೊಯ್ಯಬೇಕಾಗಿದೆ.

ಮಹಾತ್ಮಾ ಗಾಂಧಿಯವರ ಕಾಲದಲ್ಲಿ, ಅಹಿಂಸೆಯೊಂದಿಗೆ ಮಹಾನ್ ಹೆಮ್ಮೆಯು ಜೋಡಿಕೊಂಡಿತ್ತು. ಆದರೆ ಇವತ್ತು, ಹೆಮ್ಮೆಯು ಹಿಂಸೆಯೊಂದಿಗೆ ಸಂಬಂಧ ಹೊಂದಿದೆ. ಇವತ್ತು ಆಕ್ರಮಣಶೀಲತೆಯು ಹೆಮ್ಮೆಯೊಂದಿಗೆ ತನ್ನನ್ನು ತಾನು ಸೇರಿಸಿಕೊಂಡಿದೆ. ಒಬ್ಬರು ಬಹಳ ಆಕ್ರಮಣಶೀಲರಾಗಿರುವಾಗ, ಅವನು ಒಬ್ಬ ನಾಯಕನೆಂದು ಪರಿಗಣಿಸಲ್ಪಡುತ್ತಾನೆ. ಆದರ್ಶ ವ್ಯಕ್ತಿಗಳು ಬಹಳ ಆಕ್ರಮಣಶೀಲರಾಗಿರಬೇಕೆಂದು ಮತ್ತು ಆಗ ಅವರು ಒಳ್ಳೆಯವರು ನಿರೀಕ್ಷಿಸಲಾಗುತ್ತದೆ. ಇಲ್ಲ, ನಾವಿದನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಅಹಿಂಸೆಯು ನಮ್ಮ ಜೀವನರೇಖೆಯಾಗಿರಬೇಕು.

ನಾವು ಅಹಿಂಸೆಯ ಪಥವನ್ನು ತುಳಿಯುತ್ತೇವೆ, ಹಾಗಿದ್ದರೂ ನಾವು ಬಹಳ ದೃಢವಾಗಿದ್ದೇವೆ, ನಾವು ಬಹಳ ಬಲಶಾಲಿಗಳಾಗಿದ್ದೇವೆ ಮತ್ತು ನಮ್ಮ ಉದ್ದೇಶವು ಫಲದಾಯಕವಾಗುವುದನ್ನು ನಾವು ಕಾಣುವೆವು. ಹಾಗಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ; ದೂರ ದೂರದ ಸ್ಥಳಗಳಿಂದ ಬಂದಿರುವವರು, ಹಾಗೆಯೇ ದಿಲ್ಲಿಯ ಎಲ್ಲಾ ಭಾಗಗಳಿಂದ ಬಂದಿರುವವರು ಮತ್ತು ಭಾರತದ ವಿವಿಧ ಭಾಗಗಳಿಂದ ಇದನ್ನು ವೀಕ್ಷಿಸುತ್ತಿದ್ದ ನಿಮ್ಮೆಲ್ಲರಿಗೂ. ಇದು ಕೇವಲ ಆರಂಭವಷ್ಟೇ. ನಾವು ಒಂದಾಗಿ ಕೆಲಸ ಮಾಡೋಣ ಮತ್ತು ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡೋಣ. ದೇವರು ನಿಮಗೆಲ್ಲರಿಗೂ ಸದ್ಬುದ್ಧಿಯನ್ನು ಕೊಟ್ಟು ಆಶೀರ್ವದಿಸಲಿ. ಅವನು ಈಗಾಗಲೇ ಮಾಡಿದ್ದಾನೆ, ಆದರೆ ಯಾರಿಗೆ ಇದು ತಿಳಿದಿಲ್ಲವೋ, ಅವರು ಇದನ್ನು ಅರಿತುಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ. ಇದರೊಂದಿಗೆ, ನಾನು ನನ್ನ ಮಾತನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ.