ನೈಪುಣ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೈಪುಣ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಏಪ್ರಿಲ್ 12, 2013

ನರಕದ ಮೂರು ಬಾಗಿಲುಗಳು


೧೨.೦೪.೧೩
ಮಾಂಟ್ರಿಯಾಲ್, ಕೆನಡಾ


ಪ್ರ: ಆಪ್ತ ಗುರೂಜಿ, ನನಗೆ ಸಹಾಯವಾಗಿರುವ ವ್ಯಕ್ತಿಗೆ, ಅವರು ನನಗೆ ನೀಡಿರುವಂಥಹ ಎಲ್ಲಾ ಸಹಾಯ ಮತ್ತು ಕಾಳಜಿಗೆ ನಾನು ಹೇಗೆ ಕೃತಜ್ಞನಾಗಿರಲಿ? ನಾನು ನನ್ನ ಹಾದಿಯನ್ನು ಹಿಡಿದು ನಡೆಯಬಯಸುತ್ತೇನೆ ಎಂದು ಅವರಿಗೆ ನೋಯಿಸದೆ ಹೇಗೆ ಹೇಳಲಿ?

ಶ್ರೀ ಶ್ರೀ: ಅದನ್ನು ನೈಪುಣ್ಯದಿಂದ ಮಾಡಿ. ಈಗ ಅದೇನು ನೈಪುಣ್ಯ ಎಂದು ನನ್ನನ್ನು ಕೇಳಬೇಡಿ.
ಈ ಒಂದು ನುಡಿಯನ್ನು ನೆನಪಿನಲ್ಲಿಟ್ಟುಕೊಳ್ಳಿ, ಇದು ಬಹಳ ಉಪಯುಕ್ತ, ನರಕಕ್ಕೆ ಮೂರು ಬಾಗಿಲುಗಳು.
ನರಕ ಸೇರಲು ಮೂರು ಬಾಗಿಲುಗಳಿವೆ - ಕಾಮ, ಲೋಭ ಮತ್ತು ಕ್ರೋಧ. ಲೋಭ ನಿಮ್ಮನ್ನು ಆಳಿದರೆ, ಅದು ನಿಮ್ಮನ್ನು ನರಕಕ್ಕೆ ತಲುಪಿಸಲಿದೆ. ಅದಕ್ಕಾಗಿಯೇ, ಲೋಭವನ್ನು ಎಸೆದುಬಿಡಿ. ಕ್ರೋಧ ಮತ್ತು ಕಾಮಗಳೂ ಹೀಗೆಯೇ. ನೀವು ಬಹಳ ಕಾಮುಕರಾಗಿದ್ದರೆ, ನೀವು ಬೇರೆಯವರ ಭಾವನೆಗಳ ಬಗ್ಗೆ ಎಷ್ಟು ಕುರುಡಾಗುವಿರೆಂದರೆ ನೀವು ಅವರ ವೈಯಕ್ತಿಕತೆಯನ್ನು ಅತಿಕ್ರಮಿಸುತ್ತೀರಿ. ಕಾಮವೂ ನಿಮ್ಮನ್ನು ನರಕಕ್ಕೆಳೆಯುತ್ತದೆ. ಹಾಗಾಗಿ, ಕಾಮ, ಲೋಭ ಮತ್ತು ಕ್ರೋಧ, ಇವು ಮೂರು ನಿಮ್ಮ ಹಿಡಿತದಲ್ಲಿರದಿದ್ದರೆ, ಅವು ನಿಮ್ಮನ್ನು ವಶಪಡಿಸಿಕೊಳ್ಳುತ್ತವೆ ಮತ್ತು ನೀವು ನರಕ ಸೇರುತ್ತೀರಿ. ಅವು ನಿಮ್ಮ ವಶದಲ್ಲಿದ್ದರೆ ಆಗ ನೀವು ಭದ್ರವಾಗಿದ್ದೀರಿ. ಇದು ಸ್ಪಷ್ಟವಾಯಿತೇ?

ನಿಮ್ಮ ಸ್ವಂತ ಜೀವನದಲ್ಲಿ ಈ ಮೂರು ನಿಮ್ಮನ್ನು ಸೋಲಿಸಿವೆಯೋ ಎಂದು ನೋಡಿಕೊಳ್ಳಿ. ಹಾಗಿದ್ದರೆ ಅದು ನಿಮ್ಮನ್ನು ದೀನಗೊಳಿಸಿದೆ.

ನರಕ ಎಂದರೇನು? ದುಃಸ್ಥಿತಿ; ನಿಮ್ಮನ್ನು ಸಂಪೂರ್ಣವಾಗಿ ದುಃಖಕ್ಕೊಳಪಡಿಸುತ್ತದೆ. ಆದರೆ ಅವುಗಳು ನಿಮ್ಮ ಹತೋಟಿಯಲ್ಲಿದ್ದರೆ, ನೀವು ಹೇಳಿದಂತಿದ್ದರೆ, ನೀವು ಶಕ್ತಿವಂತರಾಗುತ್ತೀರಿ ಮತ್ತು ಅದು ನಿಮಗೆ ಹೆಚ್ಚಿನ ಸಂತೋಷವನ್ನು ತರುತ್ತದೆ.

ಪ್ರ: ಗುರುದೇವ, ನೀವು ಹೇಳಿದ್ದೀರಿ, ಒಬ್ಬ ವ್ಯಕ್ತಿ ತನಗೆ ಹಿಡಿಸದ ವ್ಯಕ್ತಿಯ ಬಗ್ಗೆ ಬಹಳ ಆಲೋಚಿಸುತ್ತಿದ್ದರೆ, ಆಗ ಆ ವ್ಯಕ್ತಿಯಂತೆ ಆಗಲಾರಂಭಿಸುತ್ತಾನೆ ಅಂತ. ನಾನು ನಿರಂತರವಾಗಿ ನನಗೆ ಇಷ್ಟವಾಗದಿರುವವರ ಬಗ್ಗೆ ಯೋಚಿಸುತ್ತಿರುತ್ತೇನೆ ಮತ್ತು ಅವರ ಗುಣಗಳು ಬೆಳೆಯುತ್ತಿವೆ. ನಾನು ಹೀಗೆ ಮಾಡುವುದನ್ನು ಹೇಗೆ ತಡೆಯಲಿ?

ಶ್ರೀ ಶ್ರೀ: ನೋಡಿ, ನಾನು ಇಷ್ಟು ಹೇಳುತ್ತೇನೆ, ವಿರಕ್ತಿಯಿಲ್ಲದೆ ಜೀವನದಲ್ಲಿ ಬೆಳವಣಿಗೆಯಿಲ್ಲ. ನಿಮಗೆ ಜೀವನದಲ್ಲಿ ಮುನ್ನಡೆಯಬೇಕಿದ್ದರೆ, ನಿಮ್ಮಲ್ಲಿ ವಿರಕ್ತಿಯಿರಬೇಕು. ವಿರಕ್ತಿಯು ನಿಮ್ಮ ಮನಸ್ಸಿಗೆ ಬಿಡುಗಡೆ ತರುತ್ತದೆ. ವಿರಕ್ತಿಯು ನಿಮ್ಮನ್ನು ವರ್ತಮಾನ ಕ್ಷಣದಲ್ಲಿರಿಸುತ್ತದೆ. ವಿರಕ್ತಿಯು ನಿಮ್ಮ ಮುಖದಲ್ಲಿ ಆ ಮುಗುಳ್ನಗೆಯನ್ನು ತರುತ್ತದೆ; ಅದು ನಿಮ್ಮಲ್ಲಿ ಆ ಶಕ್ತಿ ಮತ್ತು ಲವಲವಿಕೆಯನ್ನು ತರುತ್ತದೆ.

ನೀವು ಯಾವುದಕ್ಕೆ ಗಂಟು ಬಿದ್ದಿದ್ದೀರಿ? ಯಾರನ್ನೋ ದ್ವೇಷಿಸುತ್ತೀರಾ? ಯಾತಕ್ಕಾಗಿ?

ಈ ಜಗತ್ತು ಅಂಥ ಜನರನ್ನು ಖಂಡಿತ ಹೊಂದಿರುತ್ತದೆ, ಯಾವಾಗಲೂ. ಈ ಭೂಮಿ ಮೇಲೆ, ಇತಿಹಾಸದಲ್ಲಿ ದುಷ್ಟರು ಇಲ್ಲದೇ ಇದ್ದಂಥ ಒಂದು ಸಮಯವನ್ನು ನನಗೆ ಹೇಳಿ ಅಥವಾ ಇತರರಿಗೆ ತೊಂದರೆ ಕೊಡದಂಥ  ಜನರು ಇದ್ದುದನ್ನು ಹೇಳಿ? ಅಂಥ ಜನರು ಯಾವತ್ತೂ ಇದ್ದು ಬಂದಿದ್ದಾರೆ, ಮತ್ತು ಈ ಜಗತ್ತು ಅಂಥ ಜನರನ್ನು ಹೊಂದುವುದನ್ನು ಮುಂದುವರಿಸುತ್ತದೆ.

ಈಗ ನೀವವರನ್ನು ನಿಮ್ಮ ಜಗತ್ತಿನಲ್ಲಿಟ್ಟು ಕೊಳ್ಳಬಯಸುತ್ತೀರಾದರೆ, ನಾವೇನು ಮಾಡಬಹುದು? ಇದನ್ನು ಸಾಧ್ಯವಾಗಿಸುತ್ತಿರುವುದು ನೀವು, ನಿಮ್ಮ ತಲೆಯಲ್ಲಿ ಅವರನ್ನು ಇಟ್ಟುಕೊಳ್ಳುವುದರಿಂದ. ದುರದೃಷ್ಟಕರ ಘಟನೆಯೊಂದು ನಡೆಯಿತು, ಅದು ನಡೆದಾಯಿತು, ನೀವು ಮುನ್ನಡೆಯಬೇಕು. ಕುಳಿತು ಅದನ್ನೇ ಮೆಲ್ಲುತ್ತಿರಬೇಡಿ.

ವಿರಕ್ತಿಯೆಂದರೆ ಹಿಂದೆ ನಡೆದುದನ್ನು ಬಿಟ್ಟುಬಿಡುವುದು ಮತ್ತು ಎಲ್ಲವೂ ಒಂದು ದಿನ ಕೊನೆಗೊಳ್ಳಲಿದೆ, ಅವರನ್ನೂ ನಿಮ್ಮನ್ನೂ ಸೇರಿಸಿ ಎಲ್ಲರೂ ಎಲ್ಲರೂ ಕಾಲಾಧೀನವಾಗಲಿದ್ದಾರೆ, ಕನಿಷ್ಟ ಪಕ್ಷ ಅದಕ್ಕಾಗಿಯಾದರೂ ನಿಮ್ಮ ಮನಸ್ಸನ್ನು ಖಾಲಿಯಾಗಿಟ್ಟುಕೊಳ್ಳಿ. ಇವೆಲ್ಲ ವಿವಿಧ ಪಾತ್ರಗಳ ನಿರ್ವಹಣೆ ಎಂದು ತಿಳಿದಿರಿ. ಕೆಲವೊಮ್ಮೆ, ಇದೊಂದು ಭಯಾನಕ ಚಲನಚಿತ್ರದಂತೆ, ಏನ್ನು ಮಾಡಬಹುದು? ಅದರ ಅರ್ಥ, ಭಯಾನಕ ಘಟನೆಗಳಾಗುತ್ತಿರುವಾಗ ನೀವು ಜಡವಾಗಿರಿ ಎಂದಲ್ಲ.

ದರೋಡೆ ನಡೆಯುತ್ತಿರುವಾಗ, ಬಲಾತ್ಕಾರ ನಡೆಯುತ್ತಿರುವಾಗ, ಅಥವಾ ಸಮಾಜದಲ್ಲೇನೋ ದುಷ್ಕೃತ್ಯ ನಡೆಯುತ್ತಿರುವಾಗ, ಅದನ್ನು ನಿಲ್ಲಿಸುವುದಕ್ಕಾಗಿ ನೀವು ಎದ್ದು ನಿಲ್ಲಬೇಕು. ಇದನ್ನು ಮಾಡುವ ಶಕ್ತಿ ನಿಮಗೆ ಯಾವಾಗ ಸಿಗುತ್ತದೆ? ನಿಮ್ಮ ಮನಸ್ಸಿನಲ್ಲಿ ವಿರಕ್ತಿಯಿದ್ದಾಗ. ಆಗ ನೀವು ಎದ್ದು ನಿಲ್ಲಬಹುದು, ಇಲ್ಲವಾದರೆ ನೀವೆಂಥ ಕೃತ್ಯ ನಡೆಸುತ್ತೀರೆಂದರೆ ಅದರಿಂದ ನೀವು ತೊಳಲಾಟ ಅನುಭವಿಸುತ್ತೀರಿ. ನೀವು ಸ್ವತಃ ಒಬ್ಬ ಅಪರಾಧಿಯಾಗುತ್ತೀರಿ.

ಒಬ್ಬ ಅಪರಾಧಿ ಇನ್ನೊಬ್ಬ ಅಪರಾಧಿಯಿಂದ ನಾಶವಾಗುವುದಿಲ್ಲ. ನೀವು ಆ ಅಪರಾಧಿಯನ್ನು ತೊಲಗಿಸಲು ಪ್ರಯತ್ನಿಸುತ್ತೀರಿ ಮತ್ತು ನೀವು ಇನ್ನೊಬ್ಬ ಅಪರಾಧಿಯಾಗುತ್ತೀರಿ. ಒಬ್ಬ ಬಲಿಪಶುವು ಇನ್ನೊಬ್ಬ ಬಲಿಪಶುವನ್ನು ತೊಲಗಿಸಲಾಗುವುದಿಲ್ಲ. ನಿಮ್ಮ ಸ್ವಂತ ಕ್ರೋಧ ಮತ್ತು ಸಿಟ್ಟಿಗೆ ನೀವು ತುತ್ತಾದವರಾಗಿದ್ದರೆ, ನೀವು ಇನ್ನೊಬ್ಬ ತುತ್ತಾದವರಿಗೆ ಹೇಗೆ ಸಹಾಯ ಮಾಡಬಹುದು?

ಅಪರಾಧಿಗಳನ್ನು ತೊಲಗಿಸುವುದಕ್ಕಾಗಿ ನೀವೂ ಒಬ್ಬ ಅಪರಾಧಿಯಾದರೆ, ನೀವು ಕೂಡಾ ಕಾರಾಗೃಹ ಸೇರಿಕೊಳ್ಳುತ್ತೀರಿ.
ಬಹಳ ಮಂದಿಗೆ ಆಗಿರುವುದು ಇದೇ. ಕಾರಾಗೃಹ ಸೇರಿಕೊಳ್ಳುವ ಬಹಳಷ್ಟು ಜನ ಅಷ್ಟೊಂದು ನೈತಿಕ ಆಚಾರದವರಾಗಿರುತ್ತಾರೆ. ಅವರು ಹೇಳುತ್ತಾರೆ, ’ಆ ವ್ಯಕ್ತಿ ನನಗೆ ಹಾಗೆ ಮಾಡಿದ್ದರಿಂದ ನಾನು ಇದನ್ನು ಮಾಡಿದ್ದು.’ ಇಲ್ಲ!

ಸೇಡು ತೀರಿಸಿಕೊಳ್ಳುವಿಕೆ ಏನನ್ನೂ ಸುಧಾರಿಸುವುದಿಲ್ಲ. ಅದು ಸಂಪೂರ್ಣ ಜಗತ್ತನ್ನು ಕುರುಡಾಗಿಸುತ್ತದೆ. ನಾವು ವಿರಕ್ತಿಯೊಂದಿಗೆ ಎದ್ದೇಳಬೇಕು ಮತ್ತು ಉನ್ನತ ಸಮಾಜಕ್ಕಾಗಿ ಕಾರ್ಯನಿರತರಾಗಬೇಕು; ಹಿಂಸಾ ಮುಕ್ತ ಸಮಾಜಕ್ಕಾಗಿ, ಇನ್ನೂ ಆಧ್ಯಾತ್ಮಿಕವಾಗಿರುವ ಸಮಾಜಕ್ಕಾಗಿ ಕೆಲಸ ಮಾಡಬೇಕು.

ಈ ಸಂಪೂರ್ಣ ಸಮಾಜವನ್ನು ಹೇಗೆ ಅಕ್ಷರಸ್ಥವನ್ನಾಗಿಸಿದ್ದೀರೋ ಹಾಗೆಯೇ. ಓದುವುದು ಮತ್ತು ಬರೆಯುವುದು ಹೇಗೆಂದು ಎಲ್ಲರಿಗೂ ಗೊತ್ತು. ಅವರು ಪ್ರಕಟಣಾ ಫಲಕಗಳನ್ನು ಓದಬಲ್ಲರು. ಕೆನಡಾದಲ್ಲಿ ಪ್ರಕಟಣಾ ಫಲಕಗಳನ್ನು ಓದಲು ತಿಳಿಯದ ಒಬ್ಬ ವ್ಯಕ್ತಿಯಿಲ್ಲ. ಯಾರಾದರೂ ಇದ್ದಾರೆಯೇ? ಇಲ್ಲ. ಅವರು ಯಾವ ವಿಷಯದಲ್ಲೂ ವಿದ್ವಾಂಸರಲ್ಲದಿದ್ದರೂ, ಕನಿಷ್ಠ ಪಕ್ಷ ಪ್ರಕಟಣಾ ಫಲಕಗಳನ್ನು ಓದಬಲ್ಲರು. ಅವರು ಓದುವುದು ಹೇಗೆ ಮತ್ತು ಬರೆಯುವುದು ಹೇಗೆ ಎಂದು ಬಲ್ಲರು. ನಾನು ಆಧ್ಯಾತ್ಮಿಕತೆಯು ಹಾಗೆ ಆಗಬೇಕೆಂದು ಬಯಸುತ್ತೇನೆ.

ನಾವು ಸರಿಯಾಗಿ ನಡೆದುಕೊಳ್ಳಬೇಕು ಮತ್ತು ಜನರಿಗೆ ಅನುಕಂಪ ಮತ್ತು ಸ್ನೇಹಮಯರಾಗಿರಬೇಕು. ನಾವು ಈ ದಿಕ್ಕಿನಲ್ಲಿ ಸಾಗಲು ನಮ್ಮ ಪ್ರಯತ್ನ ಹಾಕಬೇಕು. ಅದು ೧೦೦% ನೆರವೇರದಿರಬಹುದು, ಎಲ್ಲಾ ಜನರೂ ಹಾಗಾಗುವುದಿಲ್ಲ, ಆದರೆ ಕನಿಷ್ಠ ಪಕ್ಷ ಈ ಸಮಾಜದ ದೊಡ್ಡ ಭಾಗ ಒಳಿತಿಗಾಗಿ ಪರಿವರ್ತಿತವಾಗುತ್ತದೆ ಮತ್ತು ಅದು  ಸಾಕಷ್ಟು ಒಳ್ಳೆಯದು.

ಮತ್ತೊಮ್ಮೆ ನಾನು ಹೇಳುತ್ತೇನೆ, ನಾವು ಅಂಥ ಸಮಾಜದ ಕನಸು ಕಾಣಬಹುದು, ಆದರೆ ಅದು ವಾಸ್ತವವಾಗಬೇಕಾದರೆ ಸಮಯ ತೆಗೆದುಕೊಳ್ಳುತ್ತದೆ. ಅಪರಾಧವೇ ಇಲ್ಲದಂಥ ಒಂದು ಸಮಾಜವು ವಾಸ್ತವವಾಗುವುದು ಒಂದು ದೂರದ ಮಾತು; ಅದು ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ಕನಿಷ್ಠ ಆ ದಿಕ್ಕಿನಲ್ಲಿ ನಡೆಯಬೇಕು.

ಪ್ರ: ನನ್ನ ಪ್ರೀತಿಪಾತ್ರರಿಗೆ ನಾನು ಧಾರಾಳವಾಗಿ ನೀಡುತ್ತೇನೆ. ಆದರೆ, ಸಾಮಾನ್ಯವಾಗಿ ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಮೊದಲು ನಾನು ಇತರರ ಕಾಳಜಿವಹಿಸುತ್ತೇನೆ, ನಂತರ ನಾನು ವ್ಯಥಿಸುತ್ತಾ ಮುನಿಸಿಕೊಳ್ಳುತ್ತೇನೆ. ನಾನು ಇನ್ನೂ ಒಳ್ಳೆಯ ರೀತಿಯಲ್ಲಿ ಹೇಗೆ ನೀಡುವುದು?

ಶ್ರೀ ಶ್ರೀ: ನೋಡಿ, ನಿಮಗೆ ಬಹಳ ಬಿಡುವಿದ್ದಂತೆ ಕಾಣುತ್ತದೆ. ನೀವು ಯಾಕಷ್ಟು  ಯೋಚಿಸುತ್ತೀರಿ? ನಿಮಗೆ ಕೊಡಬೇಕನ್ನಿಸಿತೋ, ಹಾಗಾದರೆ ಕೊಡಿ ಮತ್ತು ಅದರ ಬಗ್ಗೆ ಮರೆತು ಬಿಡಿ! ಹಿಂದಿಯಲ್ಲಿ ಒಂದು ಹೇಳಿಕೆಯಿದೆ, ’ನೇಕಿ ಕರ್ ಔರ್ ದರಿಯಾ ಮೈ ಡಾಲ್’, ಅದರ ಅರ್ಥ ಏನೆಂದರೆ, ಒಳ್ಳೆಯ ಕೆಲಸಗಳನ್ನು ಮಾಡಿ ಅದನ್ನು ಸಾಗರದಲ್ಲಿ ಬಿಟ್ಟುಬಿಡಿ. ಅದರ ಬಗ್ಗೆ ಚಿಂತಿಸಬೇಡಿ.

’ನಾನು ಮಾಡಿದ್ದೇನೆ, ನಾನು ಮಾಡಿದ್ದೇನೆ’ ಎಂದು ನೀವು ಯೋಚಿಸುತ್ತಿದ್ದರೆ, ನೀವೇನು ಮಾಡಿದ್ದೀರಿ? ಬೇರೆಯವರಿಗೆಂದು ನಿಶ್ಚಯವಾಗಿರದ ಯಾವುದನ್ನೂ ನೀವು ಕೊಡಲು ಸಾಧ್ಯವಿಲ್ಲ. ಅದು ಅಸಾಧ್ಯ. ನೀವು ಕೊಡಬೇಕೆಂದಿದ್ದರೂ, ಆ ವ್ಯಕ್ತಿಗೆ ಅದನ್ನು ತೆಗೆದುಕೊಳ್ಳುವ ಸಮಯ ಬಂದಿರದಿದ್ದರೆ, ಅವರಿಗೆ ಅದನ್ನು ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ನೀವು ಕೊಡಿ, ನಂತರ ಮರೆತು ಬಿಡಿ.

ಕೇವಲ ಸಹಜವಾಗಿರಿ, ನೀವು ಅದರ ಬಗ್ಗೆ ಜಾಸ್ತಿ ಯೋಚಿಸಬೇಕಾಗಿಲ್ಲ.

ನಿಮಗೇನಾದರೂ ಅಗತ್ಯವಿದ್ದಾಗ, ಪಾಪ ಪ್ರಜ್ಞೆ ತಾಳಬೇಕಾಗಿಲ್ಲ, ಸುಮ್ಮನೆ ಹೋಗಿ ಅದನ್ನು ಖರೀದಿಸಿ. ಅಷ್ಟೇ.

ನೀವು ಪ್ರತಿಯೊಬ್ಬರ ಆಸೆಗಳನ್ನು ಯಾವಾಗಲೂ ತೃಪ್ತಗೊಳಿಸಲು ನಿಮಗಾಗುವುದಿಲ್ಲ, ಆದರೆ ನಿಮಗೆ ಏನೇನು ಮಾಡಲು ಸಾಧ್ಯವಾಗುತ್ತದೋ, ನೀವು ಮಾಡಬೇಕು. ಹಾಗೆಂದು ’ಇಲ್ಲ, ನನಗೆ ಮಾಡಲು ಇಷ್ಟವಿಲ್ಲ’ ಎಂದು ನಿಮಗೆ ಹೇಳಲಾಗುವುದಿಲ್ಲ. ಆಗ ಅದು ನಿಮ್ಮನ್ನು ಚುಚ್ಚುತ್ತದೆ.

ನಿಮಗೇನೋ ನಿಜವಾಗಿಯೂ ಅಗತ್ಯವಿದೆ, ಮತ್ತು ಬೇರೆಯವರಿಗೆ ಕೊಡಲಾಗುವುದಿಲ್ಲ ಎಂದಿರುವಾಗ, ಅದು ನಿಮ್ಮನ್ನು ಚುಚ್ಚುವುದಿಲ್ಲ. ಅದು ನಿಮ್ಮನ್ನು ಯಾವಾಗ ಚುಚ್ಚುತ್ತದೆ? ನಿಮಗೆ ಮಾಡಲು ಸಾಧ್ಯವಿದೆ ಮತ್ತು ನೀವು ಅದನ್ನು ಮಾಡದಿರುತ್ತೀರಿ, ಆಗ.

ಪ್ರ: ಪ್ರಿಯ ಗುರೂಜಿ, ಉಪನಿಷತ್ತುಗಳಿಂದ ಕೆಲವು ರಹಸ್ಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

ಶ್ರೀ ಶ್ರೀ: ಉಪನಿಷತ್ತಿನ ರಹಸ್ಯವೆಂದರೆ, ನೀನು ಓಂ. ನಿನ್ನ ನಿಜವಾದ ಹೆಸರು ಓಂ. ನಿಮ್ಮ ಹೆಸರೇನಿದ್ದರೂ, ಅದನ್ನು ಈ ಜೀವನದಲ್ಲಿ ನಿಮ್ಮ ಪೋಷಕರಿಂದ ಕೊಡಲಾಯಿತು, ಆದರೆ ಈ ಜೀವಕ್ಕಿಂತ ಮೊದಲು ನೀವೇನಾಗಿದ್ದಿರಿ? ನಿಮ್ಮ ಹೆಸರೇನಾಗಿತ್ತು? ಓಂ. ಮತ್ತು ಭವಿಷ್ಯದಲ್ಲಿ, ಈ ಶರೀರ ತೊರೆದ ನಂತರ ನಿಮ್ಮ ಹೆಸರು ಏನಾಗಿರುತ್ತದೆ? ಓಂ.

ಹೀಗೆ ಎಲ್ಲವೂ ಓಂನಿಂದ ಸೃಜನವಾಗಿದೆ, ಚೈತನ್ಯದಲ್ಲಿ ಎಂದಿಗೂ ಅನುರಣಿಸುತ್ತಿರುವ ಆ ಒಂದು ವಿಶ್ವವ್ಯಾಪ್ತ  ಶಬ್ದದಿಂದ, ಮತ್ತು ನೀವೆಲ್ಲರೂ ಆ ಶಬ್ದದಿಂದ ಜನಿಸಿದ್ದೀರಿ, ಮತ್ತು ನಾವದರಲ್ಲಿ ವಾಸವಾಗಲು ಮುಂದುವರಿಯುತ್ತಿದ್ದೇವೆ. ಈ ಕ್ಷಣದಲ್ಲೂ,  ಅದು ಎಂದೆಂದೂ ಇದೆ.

ನೀವು ಈ ಶರೀರವನ್ನು ತೊರೆದಾಗ, ನೀವು ನಿಮ್ಮ ಹೆಸರನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೀರೆಂದು ಯೋಚಿಸದಿರಿ. ನಿಮ್ಮ ಹೆಸರು ಈ ಶರೀರದೊಂದಿಗೆ ಹೋಗುತ್ತದೆ. ಆದರೆ ನೀವು ಯಾವ ಪ್ರಕಾಶವಾಗಿದ್ದೀರೋ, ಯಾವ ಚೈತನ್ಯವಾಗಿದ್ದೀರೋ, ಅದಕ್ಕೆ ಕೇವಲ ಒಂದೇ ಹೆಸರಿದೆ, ಮತ್ತದು, ಓಂ.

ಪ್ರಾರ್ಥನೆಗಳಲ್ಲಿ ಹೇಳಿರುವುದು ಅದನ್ನೇ, ’ಎಕ್ ಓಂಕಾರ್(ಭಗವಂತ ಒಬ್ಬ), ಸತ್ನಾಮ್(ಅವನ ಹೆಸರು ಸತ್ಯ), ಕರ್ತ-ಪೂರಕ್(ಅವನು ಸೃಷ್ಟಿಕರ್ತ), ನಿರ್ಭಯ್(ಅವನು ಭಯವಿಲ್ಲದವನು), ನಿರ್ವೈರ್(ಅವನು ಯಾರಿಗೂ ಶತ್ರುತ್ವ ಉಂಟುಮಾಡದವನು), ಅಕಾಲ್-ಮೂರತ್(ಅವನು ಎಂದೂ ಸಾಯುವುದಿಲ್ಲ), ಅಜುನಿ ಸಭಮ್(ಅವನು ಜನನ ಮತ್ತು ಮರಣವನ್ನು ಮೀರಿದವನು), ಗುರು ಪರ್ಸಾದ್(ಅವನು ಪರಮ ಗುರುಗಳ ಕೃಪೆಯ ಸಾಕ್ಷಾತ್ಕಾರದಿಂದ ಗುರುತಿಸಲ್ಪಟ್ಟವನು), ಜಪ್(ಅವನ ಹೆಸರನ್ನು ಪುನರಾವರ್ತಿಸಿ), ಆದ್ ಸಚ್(ಅವನು ಸತ್ಯ, ಏನಾದರೂ ಸೃಷ್ಟಿಯಾಗುವುದಕ್ಕಿಂತ ಮೊದಲಿನಿಂದಲೇ), ಜುಗಾದ್ ಸಚ್(ಅವನು ಎಂದಿನಿಂದಲೂ ಸತ್ಯವಾಗಿದ್ದಾನೆ), ಹೈ ಭೀ ಸಚ್(ಅವನು ಈಗ ಸತ್ಯ), ನಾನಕ್ ಹೋಸೇ ಭೀ ಸಚ್(ಅವನು ಭವಿಷ್ಯದಲ್ಲಿ ಸತ್ಯವಾಗಿರುತ್ತಾನೆ)’. ಇರುವುದು ಒಂದೇ ಓಂಕಾರ, ಅವನು ಎಲ್ಲವನ್ನೂ ಮಾಡುವವನು, ಮತ್ತು ಅವನು ಪ್ರಾಚೀನ ಕಾಲದಿಂದಲೂ ಆ ಸೃಷ್ಟಿಕರ್ತ, ಅವನಲ್ಲೇ ಎಲ್ಲವೂ ಸೃಷ್ಟಿಯಾಗುತ್ತಿದೆ.

ನಿರ್ಭಯ ಎಂದರೆ, ಭಯವಿಲ್ಲದ, ದ್ವೈತವಿಲ್ಲದ, ಅಲ್ಲಿ ಎರಡೆಂಬುದಿಲ್ಲ. ಅದು ನಿರ್ಮಲವಾದದ್ದು, ಅದು ಪರಿಪೂರ್ಣವಾಗಿ ಶುದ್ಧ.
ಆದ್ ಸಚ್, ಜುಗಾದ್ ಸಚ್, ಹೈ ಭೀ ಸಚ್, ಅದು ಸಂಪೂರ್ಣ ಸತ್ಯ, ಅದು ನಿಜವಾದುದು. ನಮ್ಮ ಸೃಜನ ಆ ಸತ್ಯದಿಂದಾಗಿದೆ. ಆದಿ ಎಂದರೆ, ನಿಮ್ಮ ಮೂಲ; ಯಾವುದರಿಂದ ಎಲ್ಲವೂ ಉಂಟಾಗಿದೆಯೋ ಅಥವಾ ಎಲ್ಲವೂ ಸೇರಿಕೊಂಡಿದೆಯೋ ಅದು.

ನಮ್ಮ ಮೂಲವು ಸತ್ಯ, ನಮ್ಮ ಗುರಿಯು ಸತ್ಯ, ಮತ್ತು ಇದು ವಾಸ್ತವ, ’ಎಕ್ ಓಂಕಾರ್, ಸತ್ನಾಮ್...’

ಇದು ಉಪನಿಷತ್ತುಗಳ ಸಾರ, ಮತ್ತು ಉಪನಿಷತ್ತುಗಳು ಹೇಳುವುದು ಇದನ್ನೆ.

’ಶಿವಂ ಶಾಂತಂ ಅದ್ವೈತಂ ಚತುರ್ಥಂ ಮಾನ್ಯಂತೇ, ಸ ಆತ್ಮಾ, ಸ ವಿಜ್ಞೇಯಃ’

ಆ ಸತ್ಯ, ಯಾವುದು ಶಿವವೋ, ಯಾವುದು ಶಾಂತವೋ, ಆ ಅಪಾರ ಶಾಂತಿ; ಯಾವುದು ಅದ್ವೈತವೋ, ಅವಿಭಾಜಿತವೋ, ಅದನ್ನು ಚತುರ್ಥವೆಂದು ಹೇಳಲಾಗುತ್ತದೆ. ಅದು ಚೈತನ್ಯದ ಮೂರು ಅವಸ್ಥೆಗಳನ್ನು ಮೀರಿದುದು; ಜಾಗೃತ ಅವಸ್ಥೆ, ಸ್ವಪ್ನಾವಸ್ಥೆ ಮತ್ತು ನಿದ್ರಾವಸ್ಥೆ, ಆ ನಾಲ್ಕನೆಯ ಅವಸ್ಥೆಯು ಆತ್ಮ, ಅದು ತಿಳಿಯತಕ್ಕದ್ದು(ಸ ವಿಜ್ಞೇಯಃ).

ತಿಳಿಯಲು ಯೋಗ್ಯವಾದುದೆಂದರೆ ಆ ನಾಲ್ಕನೆಯ ಸ್ಥರ, ಯಾವುದು ಜಾಗೃತಿಯೂ ಅಲ್ಲ, ಸ್ವಪ್ನವೂ ಅಲ್ಲ ಅಥವಾ ನಿದ್ರೆಯೂ ಅಲ್ಲ, ಆದರೆ ಈ ಸಂಪೂರ್ಣ ಸೃಷ್ಟಿಯ ಆಧಾರವಾಗಿರುವಂಥ ನಾಲ್ಕನೆಯ ಸ್ಥಿತಿ. ಅದು ತಿಳಿದುಕೊಳ್ಳಬೇಕಾದುದು; ಗಮನಿಸಬೇಕಾದುದು.

ಪ್ರ: ಪೂಜ್ಯ ಗುರುದೇವ, ನನ್ನ ಅಮ್ಮ ಹೇಳುವುದು ದೇವರು ನಮ್ಮ ಹೃದಯಗಳಲ್ಲಿ ಇದ್ದಾನೆ, ಮತ್ತು ಏನಾದರೂ ತೊಂದರೆ ಇದ್ದಾಗ, ನಾನು ಕೇವಲ ನನ್ನೊಳಗೆ ನೋಡಿ ಪ್ರಾರ್ಥಿಸಬೇಕು ಅಷ್ಟೆ ಎಂದು. ಆದರೆ ಸಾವಿರಗಟ್ಟಲೆ ಮಕ್ಕಳು ಪ್ರಾರ್ಥಿಸಿಯೂ ಬದುಕುವುದಿಲ್ಲ, ಅಂಥವರ ಬಗ್ಗೆ ಏನು?

ಶ್ರೀ ಶ್ರೀ: ಹೌದು, ಇದು ಪ್ರಕೃತಿಯ ಒಂದು ಭಾಗ. ಅದರಲ್ಲಿ ಇನ್ನೂ ರಹಸ್ಯಗಳಿವೆ.

ಒಂದು ಮಗು ಹೇಗೆ ಹುಟ್ಟುತ್ತದೆ, ಮತ್ತು ಅದು ಕೇವಲ ಸ್ವಲ್ಪ ಕಾಲವಷ್ಟೇ ಏಕೆ ಬದುಕುತ್ತದೆ, ಇದು ಬಹಳ ಸಂರಕ್ಷಿತ ರಹಸ್ಯ. ನಿನಗೊಂದು ದಿನ ಅವು ಅರ್ಥವಾಗುತ್ತವೆ.

ಹಲವು ಬಾರಿ, ಮಗುವೊಂದು ಜನಿಸಿದ ನಂತರ, ಪತಿ ಹಾಗೂ ಪತ್ನಿಯ ನಡುವಿನ ಪ್ರೀತಿ ಕಾಣೆಯಾಗುತ್ತದೆ. ಯಾವಾಗಲೂ ಅಲ್ಲ, ಆದರೆ ಕೆಲವು ಸಲ. ಹೀಗಾಗುವುದು ಯಾಕೆಂದರೆ, ಆತ್ಮವು ಎರಡು ಜನರನ್ನು ಆಕರ್ಷಿಸುತ್ತದೆ. ಅವರಲ್ಲಿ ಹೊಂದಿಕೆ ಇಲ್ಲದೇ ಇರಬಹುದು, ಆದರೆ ಅವರಿಬ್ಬರು ಹತ್ತಿರ ಬರುವಂತೆ ಆತ್ಮವು ಅಂಥ ಗಾಢ ಆಕರ್ಷಣೆಯನ್ನು ಮಾಡುತ್ತದೆ, ಅವರು ಮದುವೆಯಾಗಿ ಮಗುವನ್ನು ಪಡೆಯುತ್ತಾರೆ, ಮತ್ತೆ ಮಗು ಜನಿಸಿದ ನಂತರ ಅಷ್ಟೆ, ಅವರ ನಡುವಿನ ಎಲ್ಲಾ ಬಂಧುತ್ವ ಕಾಣೆಯಾಗುತ್ತದೆ.

ನೀವಿದನ್ನು ಸಮಾಜದಲ್ಲಿ ಆಗುತ್ತಿರುವುದನ್ನು ನೋಡಿದ್ದೀರಾ? ಇದು ಏಕೆಂದರೆ, ಆ ಆತ್ಮವು ಅವರಿಬ್ಬರನ್ನು ಜೊತೆಗೂಡಿಸಿದೆ. ಅದು ತನಗೆ ಬೇಕಾದುದನ್ನು ನಡೆಸಿತು, ಕೇವಲ ಅಷ್ಟೆ. ಹೀಗಾಗುತ್ತದೆ, ಮತ್ತು ಇದು ಬಹಳ ಕುತೂಹಲಕಾರಿ.

ಪ್ರ: ನನ್ನ ಅಮ್ಮ ನನ್ನನ್ನು ಟೀಕಿಸುತ್ತಿರುತ್ತಾರೆ, ನಾನು ಏನು ಮಾಡಲಿ?

ಶ್ರೀ ಶ್ರೀ: ಹಾ, ಅದು ಅವರ ಕೆಲಸ. ಅಮ್ಮ ಕೇವಲ ನೀನೆಷ್ಟು ಬಲಿಷ್ಠವಾಗಿದ್ದೀಯ, ಎಷ್ಟು ತಾಳ್ಮೆ ಹೊಂದಿದ್ದೀಯ ಎಂದು ನೋಡುತ್ತಿರುವುದು. ಅಮ್ಮಂದಿರು ಸಾಮಾನ್ಯವಾಗಿ ನಿಮಗೆ ಹೆಚ್ಚು ತಾಳ್ಮೆಯಿಂದಿರಲು ಸಹಾಯವಾಗುತ್ತಾರೆ.  ಒಂದಾ ನೀವು ನಿಮ್ಮಮ್ಮನಿಗೆ  ಹಾಗೆ ಮಾಡುತ್ತೀರಿ, ಇಲ್ಲವಾದರೆ ನಿಮ್ಮಮ್ಮ ನಿಮಗೆ ಹಾಗೆ ಮಾಡುತ್ತಾರೆ. ನಿಜವೆಂದರೆ ನೀವು ಒಬ್ಬರ ನಂತರ ಒಬ್ಬರಂತೆ ಈ ಕೆಲಸ ಮಾಡುತ್ತಿರುತ್ತೀರಿ!

ಪ್ರ: ಗುರುದೇವ, ನನ್ನ ತಂದೆ-ತಾಯಿಯರಿಗೆ ವಯಸ್ಸಾಗಿದೆ, ಆದರೂ ಅವರು ವಾದ ಮತ್ತು ಜಗಳ ಮಾಡುತ್ತಿರುತ್ತಾರೆ, ಮದುವೆಯಾಗಿ ೫೦ವರ್ಷಗಳಾದ ಮೇಲೆ. ಅವರು ಎಂದಾದರೂ ಬದಲಾಗುತ್ತಾರೆಯೇ?

ಶ್ರೀ ಶ್ರೀ: ಓಹ್, ಅವರು ತಮ್ಮ ಜೀವನದಲ್ಲಿ ವಿನೋದದಿಂದಿದ್ದಾರೆ, ನೀವೇಕೆ ಅದನ್ನು ನಿಲ್ಲಿಸಬಯಸುತ್ತೀರಿ? ವಾದ ಮತ್ತು ಜಗಳಗಳಿಲ್ಲದೆ ಜೀವನವು ಅಷ್ಟು ಬೇಸರವುಳ್ಳದ್ದಾಗುತ್ತದೆ, ರುಚಿಯಿಲ್ಲದ್ದಾಗುತ್ತದೆ. ಅವರು ಒಂದು ಮಸಾಲಾ ಭೋಜನವನ್ನು ಭೋಗಿಸುತ್ತಿದ್ದಾರೆ, ಅವರು ಅದನ್ನು ಅನುಭವಿಸಲಿ. ನೀವೇಕೆ ಅದನ್ನು ಸಪ್ಪೆಯಾಗಿಸ ಬಯಸುತ್ತೀರಿ? ಅದು ತುಂಬಾ ಖಾರವಾದರೆ, ನಡುವಿನಲ್ಲ ಸ್ವಲ್ಪ ತುಪ್ಪ, ಸ್ವಲ್ಪ ಬೆಣ್ಣೆ ಹಾಕಿ. ಅದು ಆಗುತ್ತದೆ, ಏನು ಮಾಡುವುದು?

ಯಾರೋ ಒಬ್ಬ ಸಭ್ಯನನ್ನು ಕೇಳಿದನು, ’ನೀನು ನಿನ್ನ ಹೆಂಡತಿಯೊಡನೆ ಏಕಷ್ಟು ಜಗಳವಾಡುತ್ತೀಯ?’ ಅವನು ಹೇಳಿದನು, ’ಹಾಗಂದರೆ? ನಾನು ಅವಳನ್ನು ಪ್ರೀತಿಸುತ್ತೇನೆ, ಹಾಗಾಗಿ ಜಗಳವಾಡುತ್ತೇನೆ. ಮತ್ತೆ ಯಾರೊಡನೆ ನಾನು ಜಗಳವಾಡಲಿ’, ಮತ್ತು ಅದು ಸತ್ಯ. ಅದು ಕೆಲವೊಮ್ಮೆ ಆಗುತ್ತದೆ.

ಪ್ರ: ಪ್ರೀತಿಯ ಗುರೂಜಿ, ನಾನು ಈ ಜ್ಞಾನವನ್ನು ಬಹಳ ಜನರಿಗೆ ಹರಡಬೇಕೆಂದಿದ್ದೇನೆ, ಆದರೆ ನನ್ನ ಗೆಳೆಯರಿಗೆ ಇದನ್ನು ಹೇಳಬೇಕಾದಾಗ ಬಹಳ ಅಂಜುತ್ತೇನೆ. ನಾನಿದರಿಂದ ಹೇಗೆ ಹೊರಬರಲಿ?

ಶ್ರೀ ಶ್ರೀ: ನಿನ್ನ ಭಯವೇನು? ಅವರು ನಿನ್ನನ್ನು ಗೇಲಿ ಮಾಡುತ್ತಾರೆಂದೆ? ಸರಿ, ಅದನ್ನು ವಿನೋದದಿಂದ ಅನುಭವಿಸು, ಅವರು ನಿನ್ನ ಮೇಲೆ ನಗಲಿ, ಅದಕ್ಕೇನು? ನೀನು ಅವರ ಹಾಸ್ಯಕ್ಕೊಳಗಾಗಲು ತಯಾರಿದ್ದರೆ,  ಮತ್ತು ಅದನ್ನು ಇಚ್ಚಿಸಿದರೆ, ಆಗ ಅದು ನಿನ್ನನ್ನು ನೀನು ಅನುಭವಿಸುತ್ತಿರುವ ಸಂಕೋಚದಿಂದ ಹೊರಬರುವಂತೆ ಮಾಡುತ್ತದೆ.

ಅದನ್ನು ಸುಮ್ಮನೆ ಮಾಡಿ ನೋಡು ಏನಾಗುತ್ತದೆಂದು.

ಪ್ರ: ಪೂಜ್ಯ ಗುರೂಜಿ, ನಾನು ಜ್ಞಾನವನ್ನು ಓದುತ್ತಿದ್ದರೂ, ನನ್ನ ಸಾಧನೆಯನ್ನು ಮತ್ತು ಸೇವೆಗಳನ್ನು ಮಾಡುತ್ತಿದ್ದರೂ, ನನ್ನ ಮನಸ್ಸು ಕೆಲವೊಮ್ಮೆ ಸ್ಮಾರ್ಟ್ ಫೋನ್, ಬಟ್ಟೆಗಳು ಇಂಥ ಐಹಿಕ ವಸ್ತುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ದಯವಿಟ್ಟು ಇವೆಲ್ಲವುಗಳಿಂದ ಮುಕ್ತವಾಗುವಂತೆ ನನ್ನನ್ನು ಅನುಗ್ರಹಿಸಿ.

ಶ್ರೀ ಶ್ರೀ: ಅದು ಸಾಮಾನ್ಯವೇ. ಅದು ಸಮಯ ತೆಗೆದುಕೊಳ್ಳುತ್ತದೆ. ನೀವು ಸ್ವಲ್ಪ ಅಂಟಿಕೊಳ್ಳುವ ಸ್ವಭಾವದವರಾಗಿದ್ದರೆ, ನಿಮ್ಮನ್ನು ಕದಡಿಸಲು ಇನ್ನೂ ಸ್ವಲ್ಪ ಶಾಖ ಅಗತ್ಯ. ನಿಮಗೆ ಗೊತ್ತೆ, ನಾವು ಹಲ್ವಾ ಮಾಡುವಾಗ, ಅದು ಮೊದಲು ಪಾತ್ರೆಗೆ ಅಂಟಿಕೊಳ್ಳುತ್ತಿರುತ್ತದೆ, ಆದರೆ ನೀವದನ್ನು ಉರಿಯ ಮೇಲೆ ಕಲಕುತ್ತಿದ್ದಂತೆ, ಅದು ನಿಧಾನವಾಗಿ ಅಂಟುವುದನ್ನು ಬಿಡುತ್ತದೆ.

ಪ್ರ: ಪೂಜ್ಯ ಗುರೂಜಿ, ನಾನು ಇನ್ನುಳಿದ ಜೀವನವನ್ನು ಆಶ್ರಮದಲ್ಲಿ ಬಂದು ಜೀವಿಸಬೇಕೆಂಬ ಆಳವಾದ ಇಚ್ಚೆ ನನಗಿದೆ. ನಾನು ಆಶ್ರಮದಲ್ಲಿ ಸೇವೆ ಮಾಡುತ್ತಾ ನನ್ನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ನನ್ನ ಪತ್ನಿಯೂ ಹೀಗೆ ಮಾಡಲು ಒಪ್ಪಿಕೊಂಡಿದ್ದಾಳೆ. ದಯವಿಟ್ಟು ನಮಗೆ ಉಪದೇಶ ನೀಡಿ.

ಶ್ರೀ ಶ್ರೀ: ಅದು ಸರಿ, ಬನ್ನಿ.

ನಿಮ್ಮಲ್ಲಿ ಯಾರು ಇಲ್ಲಿ, ಅಥವಾ ಬೂನ್ ಆಶ್ರಮದಲ್ಲಿ ಪೂರ್ತಿ ಸಮಯ ಇರಲು ಇಚ್ಚಿಸುತ್ತೀರೋ, ಅವರಿಗೆ ಸ್ವಾಗತ.  ಆದರೆ ನಿಮಗೆ ಬಹಳ ಅವಶ್ಯಕತೆಯಿದ್ದರೆ, ಆಗ ಅದು  ಕಷ್ಟ.  ನಿಮ್ಮ ಅವಶ್ಯಕತೆಗಳು ಸರಳವಾಗಿದ್ದರೆ, ಆಗ ಆಶ್ರಮದ ಜೀವನ ಬಹಳ ಒಳ್ಳೆಯದು.

ನಿಮ್ಮ ಬದುಕು ಸರಳ ಮತ್ತು ಯೋಚನೆ ಶ್ರೇಷ್ಠವಾಗಿದ್ದರೆ, ಆಗ ಆಶ್ರಮದ ಜೀವನ ಒಳ್ಳೆಯದು. ನಿಮ್ಮ ಬದುಕು ಶ್ರೇಷ್ಠ ಮಟ್ಟದ್ದು ಮತ್ತು ಆಲೋಚನೆ ಸಾಮಾನ್ಯದ್ದಾಗಿದ್ದರೆ, ಆಗ ಆಶ್ರಮದ ಜೀವನ ನಿಮಗೆ ಕಷ್ಟವಾಗಬಹುದು.

ಪ್ರ: ಪೂಜ್ಯ ಗುರೂಜಿ, ನಾವು ನಮ್ಮ ಆತ್ಮನೆಡೆಗೆ ನಡೆಯುತ್ತಿದ್ದೇವೆ ಎಂಬುದಕ್ಕೆ ಸೂಚನೆ ಏನು?

ಶ್ರೀ ಶ್ರೀ: ನೀವು ನಿಮ್ಮ ಆತ್ಮನೆಡೆಗೆ ನಡೆಯಬೇಕಾಗಿಲ್ಲ, ಆತ್ಮವೂ ಆಗಲೇ ಇದೆ, ಎಲ್ಲೆಲ್ಲೂ ಇದೆ.  ನಿಮ್ಮೊಳಗೇನೋ ಒಂದು ನಿಶ್ಚಲವಾದದ್ದು, ಸದಾ ಅಖಂಡವಾದ್ದದ್ದು ಇದೆ; ಅದು ಆತ್ಮ.

ಪ್ರ: ಪೂಜ್ಯ ಗುರೂಜಿ, ನನಗೆ ಬಹುಕಾಲ ಶಾಖಾಹಾರ ಸೇವಿಸುತ್ತಿರಲು ಕಷ್ಟವಾಗುತ್ತದೆ. ನಾನು ಸಸ್ಯಾಹಾರಿ ಪ್ರೋಟೀನ್ ಸೇವಿಸುತ್ತಿದ್ದರೂ, ಅದು ನನಗೆ ಸಾಲುತ್ತಿಲ್ಲ. ನಾನು ಮತ್ತೂ ಮಾಂಸದ ಪ್ರೋಟೀನಿಗಾಗಿ ಹಾತೊರೆಯುತ್ತೇನೆ, ಮತ್ತು ನಾನದನ್ನು ತಿಂದಾಗ, ನನಗೆ ಒಳ್ಳೆಯದೆನಿಸುತ್ತದೆ. ನಾನು ದೃಢನಿಷ್ಠೆಯ ಸಸ್ಯಾಹಾರಿಯಾಗಿರಲು ಬಯಸುತ್ತೇನೆ, ಯಾಕೆಂದರೆ ನಾನು ದೃಢವಾಗಿ ಅಹಿಂಸೆಯ ಮಾರ್ಗದಲ್ಲಿದ್ದೇನೆ. ನಿಮ್ಮಲ್ಲಿ ನನಗೇನಾದರೂ ಉಪದೆಶವಿದೆಯೇ?

ಶ್ರೀ ಶ್ರೀ: ಇದು ಕೇವಲ ನಿಮ್ಮ ಮನಸ್ಸಿನಲ್ಲಿರುವುದು, ನಿಮಗೆ ಪ್ರೋಟೀನ್ ಬೇಕೆಂಬುದು. ನಿಮಗೆ ಗೊತ್ತೇ, ಕುದುರೆಗಳಿಗೆ ಬಹಳ ಶಕ್ತಿಯಿದೆ, ಅವುಗಳಲ್ಲಿ ಬಹಳ ಪ್ರೋಟೀನ್ ಇದೆ ಮತ್ತು ಅವು ಸಸ್ಯಾಹಾರಿಗಳಾಗಿವೆ. ಆನೆಗಳು ಸಸ್ಯಾಹಾರಿಗಳು. ಆನೆಗಳಿಗೆ ಅದೆಂಥ ಶಕ್ತಿಯಿದೆ! ನಿಮಗೆ ಊಹಿಸಲೂ ಸಾಧ್ಯವಿಲ್ಲ. ಗೂಳಿಗಳು ಸಸ್ಯಾಹಾರಿಗಳು. ನಾವು ಹಾರ್ಸ್ ಪವರ್ ಎಂದು ಹೇಳುತ್ತೇವೆ. ಶಕ್ತಿಯನ್ನು ಯಾವಾಗಲೂ ಕುದುರೆಯ ಶಕ್ತಿಯ ಆಧಾರದಿಂದ ಅಳೆಯಲಾಗುತ್ತದೆ. ಕುದುರೆಗಳು ಕೇವಲ ಹೆಸರು ಕಾಳು ಮತ್ತು ಹುಲ್ಲನ್ನು ತಿನ್ನುತ್ತವೆ. ಸಸ್ಯಾಹಾರದಲ್ಲಿ ಬಹಳ ಪ್ರೋಟೀನ್ ಇರುವುದು. ಅದೆಲ್ಲ ಇರುವುದು ನಿಮ್ಮ ಮನಸ್ಸಿನಲ್ಲಿ, ನಿಮ್ಮ ಯೋಚನಾ ಲಹರಿಯಲ್ಲಿ, ಆದರೆ ವಾಸ್ತವವಾಗಿ ಅಲ್ಲ. ಬೀಜ ಕಾಯಿಗಳನ್ನು, ಮತ್ತು ಧಾನ್ಯಗಳನ್ನು ಸೇವಿಸಿ, ಅವುಗಳಲ್ಲೆಲ್ಲಾ ಪ್ರೋಟೀನ್ ಇದೆ. ನೀವು ಗೋಧಿ ಹುಲ್ಲಿನ ರಸವನ್ನು ಅಥವಾ ಸ್ಪಿರುಲೀನಾ ಸೇವಿಸಬಹುದು. ಇಲ್ಲಿ ಉತ್ತರ ಅಮೇರಿಕಾದಲ್ಲಿ ಇದೆಲ್ಲ ಬಹಳ ಸಾಮಾನ್ಯ.

ಉತ್ತರ ಅಮೇರಿಕಾದ ದೊಡ್ಡ ಭಾಗದಷ್ಟು ಜನಸಂಖ್ಯೆ ಸಸ್ಯಾಹಾರಿಗಳಾಗುತ್ತಿದ್ದಾರೆ. ಹಾಗಾಗಿ ನಿಮ್ಮ ತಲೆಯೊಳಗಿಂದ ಇದು ಅಗತ್ಯ ಎಂಬುದನ್ನು ಹೊರ ತೆಗೆಯಿರಿ. ನಿಮಗೆ ನಿಜವಾಗಿಯೂ ಇದರ ಅಗತ್ಯವಿಲ್ಲ. ನಿಮ್ಮ ಶರೀರವು ಸಸ್ಯಾಹಾರಕ್ಕಾಗಿ ರಚಿಸಲ್ಪಟ್ಟಿದೆ. ನಿಮ್ಮ ಎಂಜಲಿನಲ್ಲಿ ’ಟ್ಯಾಲ್ಲಿನ್’ ಎಂದು ಒಂದು ಪದಾರ್ಥವಿದೆ. ಅದು ಕೇವಲ ಸಸ್ಯಾಹಾರಿ ಜೀವಿಗಳಲ್ಲಿ ಇದೆ. ನೀವದನ್ನು ಸಿಂಹಗಳಲ್ಲಿ, ತೋಳಗಳಲ್ಲಿ ಅಥವಾ ಹುಲಿಗಳಲ್ಲಿ ಪಡೆಯುವುದಿಲ್ಲ.

ಸಸ್ಯಾಹಾರಿ ಪ್ರಾಣಿಗಳಿಗೆ ದೊಡ್ಡ ಕರುಳಿದೆ, ನಿಮಗೂ ದೊಡ್ಡ ಕರುಳಿದೆ. ಸಿಂಹಗಳಿಗೆ ಅದಿಲ್ಲ, ನಾಯಿಗಳಿಗೆ ಅದಿಲ್ಲ.
ನಿಮ್ಮ ಶರೀರ ಅದನ್ನು ತೋರಿಸುತ್ತದೆ. ಮಾನವ ಶರೀರ ರಚನೆಯ ಪ್ರತಿ ಚಿಹ್ನೆಯೂ ಸಸ್ಯಾಹಾರ ಶೈಲಿಗಾಗಿ ಮಾಡಲ್ಪಟ್ಟಿದೆ.

ನಿಮಗೆ ಮಾಂಸಾಹಾರಿ ಪ್ರಾಣಿಗಳಿಗಿರುವಂಥ ಹಲ್ಲುಗಳಿಲ್ಲ. ನಿಮಗೆ ನಿಮ್ಮ ನೇರ ಪೂರ್ವಜರಾದ ಮಂಗಗಳು, ದನಗಳು ಮತ್ತು ಆನೆಗಳಿಗಿರುವ ಥರದ ಹಲ್ಲುಗಳಿವೆ. ನಾನು ಆನೆಯ ಕೋರೆ ಹಲ್ಲಿನ ಬಗ್ಗೆ ಮಾತನಾಡುತ್ತಿಲ್ಲ, ಆನೆಯ ಬಾಯೊಳಗಿನ ಹಲ್ಲುಗಳು ನಮ್ಮ ಹಲ್ಲುಗಳಂತಿವೆ.

ಇದು ಮನಸ್ಸೊಳಗಿನ ತಪ್ಪು ತಿಳುವಳಿಕೆ - ನಾನು ಮಾಂಸ ತಿನ್ನುವುದನ್ನು ನಿಲ್ಲಿಸಿದ್ದರಿಂದ ನನಗೆ ನಿತ್ರಾಣವೆನಿಸುತ್ತಿದೆ ಎಂಬುದು, ಇಲ್ಲ! ಇದು ಮನಸ್ಸಿನಲ್ಲಿರುವ ಸಾಮಾನ್ಯ ಭಾವನೆಯಷ್ಟೇ ಆಗಿದೆ.

ಪ್ರ: ಪೂಜ್ಯ ಗುರೂಜಿ, ನಾನು ಸುದರ್ಶನ ಕ್ರಿಯೆಯೊಂದಿಗೆ ಇತರ ಮಾರ್ಗಗಳನ್ನು ಅನುಸರಿಸಬಹುದೇ, ಉದಾಹರಣೆಗೆ ಪರಮಹಂಸ ಯೋಗಾನಂದರ ಕ್ರಿಯಾ ಯೋಗ?

ಶ್ರೀ ಶ್ರೀ: ನೀವು ಕೇವಲ ಒಂದನ್ನು ಮಾಡಿ, ಅದು ಸಾಕಾಗುವುದು.

ನೀವು ಬಹಳ ಮಾರ್ಗಗಳನ್ನು ಅನುಸರಿಸಿದರೆ, ಅದೊಂದು ದೊಡ್ಡ ಗೊಂದಲವಾಗಿ ಬಿಡುತ್ತದೆ. ಬೇರೆ ಬೇರೆ ಕಡೆಗೆ ಹೋಗಿ ಅತಿ ಹೆಚ್ಚು ಸಾಧನೆಗಳನ್ನು ಮಾಡುವವರು ಮತ್ತು ಅವರ ಶಕ್ತಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವುದನ್ನು ನಾನು ನೋಡಿದ್ದೇನೆ. ಅದು ಅಗತ್ಯವಿಲ್ಲ.

ನೀವದನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದರೆ, ಸರಿ, ಸುದರ್ಶನಕ್ರಿಯೆ ಮಾಡಿದನಂತರ ನೀವು ಧ್ಯಾನಕ್ಕೆ ಕುಳಿತಿಕೊಳ್ಳಬಹುದು. ಏನಾದರೂ ಆದರೆ, ಅದು ಆಗುತ್ತದೆ, ಅದು ಸಾಮಾನ್ಯ. ಆ ಮಂತ್ರಗಳು ಬಂದರೆ, ಚಿಂತೆಯಿಲ್ಲ, ಆದರೆ ನೀವು ಪ್ರಯತ್ನಪೂರ್ವಕವಾಗಿ ಮಾಡಿದರೆ, ಅಥವಾ ಹೆಚ್ಚು ಕಲಿತರೆ, ಅದು ಬಹಳ ಗೊಂದಲವನ್ನು ಸೃಷ್ಟಿಸಬಹುದು.

ಭಾನುವಾರ, ಏಪ್ರಿಲ್ 7, 2013

ತುಳಿತಕ್ಕೆ ಒಳಗಾಗದಿರೋಣ

ಬೂನ್, ನಾರ್ತ್ ಕ್ಯಾರೋಲಿನ
೦೭ ಏಪ್ರಿಲ್ ೨೦೧೩


ದು  ನೀವು ಧರಿಸಿರುವ ಟೋಪಿಯನ್ನು ಬದಲಾಯಿಸುವ ವಿಷಯ. ಧರಿಸಿರುವ ಟೋಪಿಯನ್ನು ಬದಲಾಯಿಸುತ್ತಾ  ಇರಿ ಮತ್ತು ಹೇಳುತ್ತಾ ಇರಿ-ಎಲ್ಲವುದನ್ನೂ ಯಾವುದು ನಡೆಸುತ್ತಿದೆಯೋ ಅದಕ್ಕೆ  “ಹ್ಯಾಟ್ಸ್ ಆಫ್“ ಹೇಳುತ್ತಿರಿ.


ಇನ್ನೊಮ್ಮೆ ಹೇಳಬೇಕೆಂದರೆ ಎಲ್ಲವುದನ್ನೂ ಯಾವುದು ನಡೆಸುತ್ತಿದೆಯೋ ಇದಕ್ಕೆ  “ಹ್ಯಾಟ್ಸ್ ಆಫ್“ ಹೇಳುತ್ತಿರಿ.  ಅದು ಎಂದರೆ ಎಲ್ಲೋ ಹೊರಗಡೆ ದೂರವಿದ್ದಂತೆ ಅನಿಸುತ್ತದೆ. ಇದು ಎಂದು ಹೇಳಿದರೆ “ಇಲ್ಲೇ ಈ ಕ್ಷಣದಲ್ಲಿ “ ಎನಿಸುತ್ತದೆ.

ಪ್ರ : ಪ್ರೀತಿಯ ಗುರುದೇವ , ನೀವು ಬಿಟ್ಟು ಬಿಡುವುದರ ಬಗ್ಗೆ ಹೇಳಿದ್ದೀರಿ. ಆದರೆ-ಒಬ್ಬ ವ್ಯಕ್ತಿ ಪದೇ ಪದೇ ಅದೇ ತಪ್ಪು ಮಾಡುತ್ತಿರುವಾಗ ಏನು ಮಾಡಬೇಕು ?ಎಷ್ಟು ಬಾರಿ ಹೇಳಿ ಬಿಟ್ಟು ಬಿಡುವುದು?ಮೊದಲ  ಸಾರಿ ಸುಮ್ಮನಾಗ ಬಹುದು, ಎರಡನೇ ಸಾರಿ ಸುಮ್ಮನೆ ಬಿಟ್ಟು ಬಿಡಬಹುದು.ಮೂರನೇ ಬಾರಿ ಸುಮ್ಮನಿರಲು ಸಾಧ್ಯವಿಲ್ಲ. ಆಗ ಅವನಿಗೆ ಹೇಳಬೇಕೆ ಅಥವಾ  ಬೋಧನೆ ಮಾಡಬೇಕೆ ಅಥವಾ ಇನ್ನೇನಾದರೂಮಾಡಬೇಕೆ? ದಯವಿಟ್ಟು ಸಹಾಯ ಮಾಡಿ.

ಶ್ರೀ ಶ್ರೀ : ಹೌದು, ನೀವು ಅವರಿಗೆ ಹೇಳಬೇಕು ಮತ್ತು ಬೋಧಿಸಬೇಕು, ಆದರೆ ಅವರನ್ನು ಮನಸ್ಸಿನಿಂದ ಹೊರಗೆ ಇಡಬೇಕು. ಬಿಟ್ಟು ಬಿಡುವುದು ಎಂದರೆ ಸುಮ್ಮನೆ ಇರುವುದು ಎಂದರ್ಥವಲ್ಲ.

ನೀವು ಯಾರಾದರೂ ತಪ್ಪು ಮಾಡುತ್ತಿರುವಾಗ “ನೀನು ಹೀಗೆ ಮಾಡಬೇಡ. ಹೀಗೆ ಮಾಡುತ್ತಿರುವುದು ನನಗೆ ನೋವಾಗುತ್ತಿದೆ.
ಆದ್ದರಿಂದ ನೀನು ಮಾಡಬೇಡ” ಎಂದು ಹೇಳಿದರೆ ಅವರು ಹಾಗೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಅದರ ಬದಲು “ನೀನು ಹೀಗೆ ತಪ್ಪು ಮಾಡಬೇಡ. ಹೀಗೆ ತಪ್ಪು ಮಾಡುವುದರಿಂದ ನಿನಗೆ ತೊಂದರೆಯಾಗುತ್ತದೆ” ಎಂದು ಹೇಳಿದರೆ ಅವರು ಅದನ್ನು ಮಾಡುವುದಿಲ್ಲ.

ಇದು ಗುರು ಮತ್ತು ಬಲಿಪಶು ವಿನ ನಡುವೆ ಇರುವ ವ್ಯತ್ಯಾಸ.

ಒಬ್ಬ ಬಲಿಪಶು ಹೇಳ್ತಾನೆ-“ ನಾನು ಬಲಿಪಶು. ನೀನು ಅಪರಾಧಿ. ಆದ್ದರಿಂದ ನೀನು ತಪ್ಪು ಮಾಡದೆ ಇರೋದು ಒಳ್ಳೇದು”.

ಒಬ್ಬ ಬಲಿಪಶು ಒಬ್ಬ ಅಪರಾಧಿಯನ್ನು ಸರಿ ಮಾಡಲು ಸಾಧ್ಯವಿಲ್ಲ. ಆದರೆ ನೀವೊಬ್ಬ ಗುರು ಆಗಿದ್ದರೆ ಅಪರಾಧಿಯನ್ನು ಸರಿ ಮಾಡಲು ಸಾಧ್ಯ.

ಒಬ್ಬ ಗುರು ಏನು ಮಾಡ್ತಾನೆ? ಅವನು ತಪ್ಪು ಮಾಡುವವನಿಗೆ ಹೇಳ್ತಾನೆ ”ನೋಡು ನೀನು ಏನು ಮಾಡ್ತಾ ಇದ್ದೀಯಾ ಅದು ನಿನಗೆ ನೋವು ಕೊಡುತ್ತೆ. ಆದ್ದರಿಂದ ನೀನು ಅದನ್ನ ಮಾಡಬೇಡ. ನಾನು ಇದನ್ನ ನಿನ್ನ ಮೇಲಿನ ಪ್ರೀತಿಯಿಂದ ಮತ್ತು ಕರುಣೆಯಿಂದ ಹೇಳುತಿದ್ದೇನೆ, ಆದ್ದರಿಂದ ಈ ತಪ್ಪನ್ನು ಮಾಡಬೇಡ ಯಾಕೆಂದರೆ ಅದು ನಿನಗೆ ಇನ್ನೂ ಜಾಸ್ತಿ ನೋವನ್ನುಂಟು ಮಾಡುತ್ತದೆ.”

ಆಗ ತಪ್ಪು ಮಾಡುವವನ ಹೃದಯದಲ್ಲಿ ಏನೋ ಕಲಕಿದ ಹಾಗೆ ಆಗುತ್ತೆ. ಆಗ ಅವರು ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ತಮ್ಮ ನಡೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಆದ್ದರಿಂದ ಇದನ್ನು ನೆನಪಿಟ್ಟುಕೊಳ್ಳಿ - ಒಬ್ಬ ಬಲಿಪಶು ಒಬ್ಬ ಅಪರಾಧಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಮತ್ತು ನೀವು ಯಾರನ್ನಾದರೂ ಸರಿಪಡಿಸಬೇಕು ಅಥವಾ ಅವರಿಗೆ ಪಾಠ ಕಲಿಸ ಬೇಕೆಂದಿದ್ದರೆ ನಿಮಗೆ ಗುರುವಿನ ವೈಶಾಲ್ಯ ವಿರಬೇಕು. ನಿಮಗೆ ಕರುಣೆ , ವಿಶಾಲವಾದ ದೃಷ್ಟಿಕೋನ ಮತ್ತು ಸಮಚಿತ್ತತೆ ನಿಮ್ಮೊಳಗೆ ಇರಬೇಕು.

ಮೂರು ಗುಣಗಳು ಅವಶ್ಯಕ.-ಹೃದಯ ವೈಶಾಲ್ಯತೆ, ಸಮಚಿತ್ತತೆ ಮತ್ತು ದಕ್ಷತೆ. ಆಗ ನೀವು ಅವರ ತಪ್ಪುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ನೋಡಿ, ತಪ್ಪುಗಳು ಈ ಭೂಮಿ ಮೇಲೆ ನಡೆಯುತಿರುತ್ತವೆ. ನೀವು ತಪ್ಪುಗಳಾಗದಂತೆ ತಡೆಯಲು ಆಗುವುದಿಲ್ಲ. ಅದು ನಡೀತಾನೇ ಇರುತ್ತೆ, ಅದು ಹೀಗೆ ಯುಗಗಳಿಂದ ನಡೆದು ಬರುತ್ತಿದೆ. ಯಾವಾಗ ನೀವು ಒಬ್ಬ ನಿಶ್ಚಿತ ವ್ಯಕ್ತಿ ತಪ್ಪು ಮಾಡುವುದು ಬೇಡವೋ ಯಾಕೆಂದರೆ ನೀವು ಅವನನ್ನು ನಿಮ್ಮ ಒಂದು ಭಾಗವಾಗಿ ಪರಿಗಣಿಸಿದ್ದೀರಿ, ನೀವು ಅವರು ಕಷ್ಟ ಪಡುವುದನ್ನು ನೋಡಲಾಗದೆ ಅವರು ಅದರಿಂದ ಹೊರ ಬರಬೇಕೆಂದು ನಿಮಗೆ ಅನಿಸುತ್ತದೆ ಯಾಕೆಂದರೆ ಅದು ಅವರಿಗೆ ಒಳ್ಳೆಯದು, ಆಗ ನೀವು ಅವರಿಗೆ ಅದರಿಂದ ಹೊರ ಬರಲು ದಾರಿ ತೋರಬಹುದು. ತಿಳಿಯಿತೆ?

ನೀವು ಎಲ್ಲೂ ಚರಂಡಿ ಇರಬಾರದೆಂದು ಹೇಳಲು ಸಾಧ್ಯವಿಲ್ಲ, ಅಥವಾ ಪ್ರಪಂಚದಲ್ಲಿ ಎಲ್ಲೂ ಕೊಳಕು ಜೌಗು ಪ್ರದೇಶ ಇರಬಾರದೆಂದು ಹೇಳಲು ಸಾಧ್ಯವಿಲ್ಲ. ಜೌಗು ಪ್ರದೇಶಗಳು ಭೂಮಿಯ ಮೇಲಿವೆ, ಆದರೆ ನೀವು ನಿಮ್ಮ ಗೆಳೆಯ/ಗೆಳತಿ  ಅಥವಾ ಪ್ರೀತಿ ಪಾತ್ರರು ಅದರಲ್ಲಿ ಬೀಳಬಾರದೆಂದು ಅಪೇಕ್ಷಿಸುವಿರಿ. ಆದ್ದರಿಂದ ನೀವು ಅವರನ್ನು ಹೊರಗೆ ಕಳಿಸಬೇಕು ಅಥವಾ ಅದರಿಂದ ದೂರಕ್ಕೆ ದಾರಿ ತೋರಿಸಬೇಕು. ಅದಕ್ಕೆ ಕರುಣೆ ಇರಬೇಕು. ನೋಡಿ ಹೇಗೆ ನೀವು ಕಂದಕಕ್ಕೆ ಬಿದ್ದವರನ್ನು ರಕ್ಷಿಸುತ್ತೀರಿ?

ಬರೀ ಅಲ್ಲಿ ನಿಂತುಕೊಂಡು “ಏ ಕಂದಕದಿಂದ ಹೊರಕ್ಕೆ ಬಾ “ ಎಂದು ಹೇಳಿ ಪ್ರಯೋಜನವಿಲ್ಲ. ನೀವು ನಿಮ್ಮ ಕೈಯನ್ನು ಚಾಚಬೇಕು. ಮತ್ತು ಅವರು ನಿಮ್ಮ ಕೈ ಹಿಡಿಯುವ ಮುಂಚೆ ನೀವು ಅವರಿಗೆ ಖ೦ಡಿತವಾಗಿ ಹೊರಬರಲು ಸಹಾಯ ಮಾಡುವಿರೆಂದೂ ಅವರು ನಿಮ್ಮನ್ನು ಸಂಪೂರ್ಣವಾಗಿ ನಂಬಬೇಕು.

ನೀವು ಅವರನ್ನು ಆ ಪರಿಸ್ಥಿತಿ ಯಿಂದ ಹೊರಗೆ ತರಲು ಯಾವಾಗ ಸಾಧ್ಯವೆಂದರೆ ನೀವು ಅವರ ಕೈ ಹಿಡಿಯಲು ಸಾಧ್ಯವಾದಾಗ ಮಾತ್ರ. ಆಗ ಮಾತ್ರ ನೀವು ಜನರನ್ನು ಬದಲಾಯಿಸಲು ಸಾಧ್ಯ. ಬರೀ ಅವರ ತಪ್ಪನ್ನು ತೋರಿಸಿದಾಗ ಸಾಧ್ಯವಾಗುವುದಿಲ್ಲ.

ನಿಮಗೆ ಆ ಹೃದಯ ವೈಶಾಲ್ಯ, ಸಮತೆ, ಮತ್ತು ಆ ನೈಪುಣ್ಯ  ಇರಬೇಕು.

ನಿಮಗೆ ನಿಪುಣತೆ ಮತ್ತು ಹೃದಯ ವೈಶಾಲ್ಯ ವಿರಬಹುದು , ಆದರೆ ಸಮಚಿತ್ತತೆಯೂ ನಿಮ್ಮಲ್ಲಿರಬೇಕು.

ನಿಮಗೆ ಸಮಚಿತ್ತತೆ ಇರಬಹುದು ಮತ್ತು ಬೇರೆಯವರು ತಪ್ಪು ಮಾಡಿದಾಗ ಶಾಂತವಾಗಿರಬಹುದು. ನಿಮ್ಮಲ್ಲಿ ಅವರನ್ನು ಸರಿಪಡಿಸುವ ನಿಪುಣತೆಯೂ ಇರಬಹುದು. ಆದರೆ ನಿಮ್ಮಲ್ಲಿ ಅವರನ್ನು ಸ್ವೀಕರಿಸಿ ಉದ್ದರಿಸುವ  ಹೃದಯ ವೈಶಾಲ್ಯ ವಿಲ್ಲದಿದ್ದರೆ ಆಗಲೂ ಪ್ರಯೋಜನ ವಾಗದು. ಇದನ್ನು ನಾವು ಗಮನಿಸಿರುವುದು.

ಆದ್ದರಿಂದ ನೀವು ಅಪರಾಧಿಯನ್ನು ಜೊತೆಯಾಗಿ  ಈ ಮೂರು ವಿಷಯಗಳಿಂದ ಬದಲಾಯಿಸಬಹುದು. ಹೃದಯ ವೈಶಾಲ್ಯತೆ, ಸಮಚಿತ್ತತೆ, ಮತ್ತು ನೈಪುಣ್ಯತೆ.

ಈ ವಿಷಯ ನಿಮಗೆಲ್ಲರಿಗೆ ಸರಿಯಾದುದು. ಏಕೆಂದರೆ ನಿಮ್ಮಲ್ಲಿ ಕೆಲವರು ಜೀವನ ಕಲೆ ಯ (ಆರ್ಟ್ ಆಫ್ ಲಿವಿಂಗ್) ಶಿಕ್ಷಕರು ಮತ್ತು ಕೆಲವರು ವಿವಿಧ ಸ್ಥಳಗಳ ಸಂಘಟಕರು.

ನಾನು ಈ ಘಟನೆ ಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಒಮ್ಮೆ ಮುಂಬೈ ನಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಮುಂಬೈನಲ್ಲಿ ಕಡಿಮೆ ಸಂಖ್ಯೆ ಯಲ್ಲಿ ಆರ್ಟ್ ಆಫ್ ಲಿವಿಂಗ್ ಹಿರಿಯ ಶಿಕ್ಷಕರಿದ್ದಾರೆ. ಅಪಕ್ಸ್ ಬಾಡಿಯ ಸಂಘಟಕರೂ ಕಾರ್ಯಕ್ರಮದ ವ್ಯವಸ್ಥೆ ಮಾಡುತ್ತಿದ್ದರು.

ಹಿರಿಯ ಶಿಕ್ಷಕರು ಬಹಳ ವರ್ಷಗಳಿಂದ ಈ ತರಹದ ಕಾರ್ಯಕ್ರಮ ಗಳನ್ನು ಆಯೋಜಿಸುತಿದ್ದರು. ಅಲ್ಲಿನ ಹೊಸ ಸದಸ್ಯರಿಗೆ ಅವರು ಆಯೋಜಿಸುವ ರೀತಿ ಇಷ್ಟವಾಗಲಿಲ್ಲ.

ಯಾವಾಗಲೂ ಹಿರಿಯ ಶಿಕ್ಷಕರು ಈ ರೀತಿಯ ಕಾರ್ಯಕ್ರಮದ ನೇತೃತ್ವ ವಹಿಸುತ್ತಿದರು. ಹೊಸ ಸದಸ್ಯರು ತಾವೂ ಕೊಡುಗೆ ನೀಡಲು ಅವಕಾಶಕ್ಕಾಗಿ ಕಾಯುತಿದ್ದರು ಮತ್ತು ಕೆಲಸದ ಜವಾಬ್ದಾರಿ ಹೊರಲು ತಯಾರಿದ್ದರು. ಹೊಸ ಸದಸ್ಯರು ಬೇರೆಯವರನ್ನು ಬಲಪಡಿಸಲು ತೊಡಗಿದಾಗ ಹಿರಿಯ ಸದಸ್ಯರು ಅದನ್ನು ಸರಿಯಾಗಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ.

ಎಲ್ಲರೂ ಸಭೆ ಸೇರಿದರು. ಹಿರಿಯ ಸದಸ್ಯರೆಲ್ಲರೂ ಸೇರಿ ಒಕ್ಕೊರಳಿನಲ್ಲಿ ಹೊಸ ಕಿರಿಯ ಸದಸ್ಯರನ್ನು ನಿಂದಿಸಿದರು. ಇದಾದ ನಂತರ ಎಲ್ಲ ಸಂಘಟಕರು(ಆರ್ಗನೈಸರ್ಸ್) ರಾಜೀನಾಮೆ ಕೊಟ್ಟರು. ಇದು ನಡೆದದ್ದು ಕಾರ್ಯಕ್ರಮ ನಡೆಯುವ ಎರಡು ವಾರಗಳ ಮುಂಚೆ.

ಆಗ ನಾವು ಹಿರಿಯ ಸದಸ್ಯರಿಗೆ ಕರೆ ಮಾಡಿ ಹೇಳಿದೆವು “ನೋಡಿ ನೀವು ನಿಂದಿಸಿ ಸಲಹೆ ಕೊಟ್ಟಾಗ ಅವರು ಕೇಳಿದರೆ?” .ಅವರು ನುಡಿದರು “ಇಲ್ಲ”. ನಾವು ಹೇಳಿದೆವು “ ನಿಮಗೆ ತಿಳಿದಿತ್ತು ಅವರು ನಿಮ್ಮ ಸಲಹೆ ಯನ್ನು ಒಪ್ಪುವುದಿಲ್ಲವೆಂದು. ಆದ್ದರಿಂದ ನೀವು ಯಾಕೆ ಸಲಹೆ ಕೊಡುವಿರಿ? ಮತ್ತು ನಿಂದಿಸಿ ಹೇಳುವುದರಿಂದ ಅವರು ಖಂಡಿತ ನಿಮ್ಮ ಸಲಹೆಯನ್ನು ಒಪ್ಪುವುದಿಲ್ಲ.

ನಿಸ್ಸಂದೇಹವಾಗಿ ನೀವು ನಿಮ್ಮ ಹೃದಯಾಂತರಾಳದ ಮಾತುಗಳನ್ನು ಹೇಳಿದ್ದೀರಿ. ಆದರೆ ಅದರಿಂದ ಏನು ಪ್ರಯೋಜನವಾಯ್ತು? ಎಲ್ಲವೂ ಇನ್ನೂ ರಚನಾತ್ಮಕ ವಾಗಿ ಆಯಿತೋ ಅಥವಾ ಇನ್ನೂ ಹದಗೆಟ್ಟಿತೋ? ಅವರು ನುಡಿದರು, “ಇನ್ನೂ ಹದಗೆಟ್ಟಿತು”.

ಆದ್ದರಿಂದ ನಾವು ಇದನ್ನು ನೋಡಲು ಬಯಸುತ್ತೇವೆ.

ಉದಾಹರಣೆಗೆ ನೀವು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತೀರಿ ಎಂದು ಅಂದು ಕೊಳ್ಳಿ.ನಿಮಗೆ ಒಂದು ಒಳ್ಳೆಯ ಐಡಿಯಾ ಹೊಳೆಯುತ್ತದೆ. ನೀವು ನಿಮ್ಮ ಬಾಸ್ ಬಳಿಗೆ ಹೋಗಿ ಅವರು ಮಾಡುತ್ತಿರುವುದು ತಪ್ಪು ಎಂದು ಹಳಿದರೆ ನಿಮ್ಮ ಹೊಸ ಆಲೋಚನೆ (ಐಡಿಯಾ)ಯನ್ನು ಅವರು ಕೇಳುತ್ತೀರೆಂದು ತಿಳಿದಿದ್ದೀರಾ?. ಇಲ್ಲ ಅವರು ಕೇಳಿಸಿಕೊಳ್ಳುವುದಿಲ್ಲ .ಹೀಗಿರುವಾಗ ಯಾಕೆ ನೀವು ಉಪಯೋಗವಿಲ್ಲದ್ದನ್ನು ಮಾಡಬೇಕು? ಅದು ನಿಮ್ಮ ಶಕ್ತಿ ಮತ್ತು ಸಮಯವನ್ನು ಬಹಳವಾಗಿ ಹಾಳು ಮಾಡುತ್ತದೆ.

ನಿಮ್ಮ ಭಾವನೆಗಳನ್ನು ಹೊರಹಾಕಿ ನೀವು ಹಗುರಾಗುತ್ತೀರಿ, ನಿಜ. ಆದರೆ ಹೀಗೆ ಮಾಡುವುದು ನಿಮಗೆ ಯಾವ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ಆದ್ದರಿಂದ ನಾವು ಹೊಸ ಸದಸ್ಯರಿಗೆ ಹೇಳಿದೆವು- ಹಿರಿಯ ಸದಸ್ಯರೆಲ್ಲರೂ ಸಮಾಜದಲ್ಲಿ ಸ್ಥಾನಮಾನ ಗಳಿಸಿರುವುದರಿಂದ ಅವರ್ಯಾರೂ ಮಾತು ಕೇಳುವುದಿಲ್ಲ. ಅವರೆಲ್ಲರೂ ದೊಡ್ಡ ದೊಡ್ಡ ವರ್ತಕರಾದ್ದರಿಂದ ಅವರಿಗೆ ತಾವು ಏನು ಮಾಡುತ್ಥಿದ್ದೇವೆಂದು ತಿಳಿದಿದೆ. ಅಥವಾ ಅವರು ತಮಗೆ ತಿಳಿದಿದೆ ಎಂದು ಯೋಚಿಸುತ್ತಾರೆ. ಮತ್ತು ತಮ್ಮದು ತಪ್ಪಿದ್ದರೂ ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳುವುದಿಲ್ಲ. ಅವರು ಯಾರೋ ಹೇಳಿದ್ದನ್ನು ಅಥವಾ ಕಿರಿಯರು ಹೇಳಿದ್ದನ್ನು ಕೇಳುವುದಿಲ್ಲ. ಸಮಾಜದಲ್ಲಿ ಬೇರೆ ಬೇರೆ ಸ್ತರದ ಅಡೆತಡೆಗಳಿವೆ. ವಯಸ್ಸಿನ ತಡೆ, ಸ್ಥಾನಮಾನ ದ ತಡೆ ಮುಂತಾದವು. ಯಾವ ತದೆಯೂ ಇಲ್ಲದಿದ್ದರೆ ಅಹಂಕಾರದ ತಡೆ.

ಮರುದಿನ, ಎಲ್ಲರೂ ಮತ್ತೆ ಸಭೆ ಸೇರಿದರು. ಎರಡು ವರ್ಷಗಳ ನಂತರ ನಾವು ಮುಂಬೈ ಗೆ ಭೇಟಿ ಕೊಡುತ್ಥಿದ್ದರಿಂದ ಜನರಿಗೆ ನಾವು ಅಲ್ಲಿಗೆ ಹೋಗಬೇಕೆಂಬ ಬಲವಾದ ಅಭಿಲಾಷೆ ಇತ್ತು. ನಂತರ ಅಂತಿಮವಾಗಿ ಎಲ್ಲವೂ ಚೆನ್ನಾಗಿ ನಡೆಯಿತು.

ನಾವು ಏನು ಹೇಳಿತಿದ್ದೀವಿ ಎಂದರೆ ಹೃದಯ ವೈಶಾಲ್ಯತೆ, ಸಮಚಿತ್ತತೆ, ಮತ್ತು ನೈಪುಣ್ಯತೆ ಮೂರೂ ಗುಣಗಳು ಇರಬೇಕು. ಈ ಘಟನೆ ತಕ್ಷಣ ಹಿರಿಯ ಸದಸ್ಯರ ಮನಸ್ಸನ್ನು ತೆರೆಯಿಸಿತು. ಅದು ಸರಿಯಾದ ಮಾರ್ಗ ಎಂದು ಒಪ್ಪಿಕೊಂಡರು. ಆದ ತಪ್ಪನ್ನು ಎತ್ತಿ ತೋರಿಸುವುದರಿಂದ ಪ್ರಯೋಜನವಿಲ್ಲ,ಜನರು ಕೇಳುವುದಿಲ್ಲ ಮತ್ತು ಅವರು ತಮ್ಮ ತಪ್ಪನ್ನು  ಸಮರ್ಥಿಸಿಕೊಳ್ಳುತ್ತಾರೆ, ಪ್ರಯೋಜನವಿಲ್ಲ ಎಂದು ತಿಳಿಯಿತು.

ಈ ಪರಿಸ್ಥಿತಿ ಇರುವಾಗ ಈ ನಡವಳಿಕೆ ಯಿಂದ ಏನು ಪ್ರಯೋಜನ? ನೀವು ನಿಮ್ಮ ಸಲಹೆಯನ್ನು ಧನಾತ್ಮಕ ವಾಗಿ ಅವರ ಮುಂದಿಡಬೇಕೆ ಹೊರತು ಅವರು ಮಾಡಿದ ತಪ್ಪನ್ನು ತೋರಿಸುವುದಲ್ಲ.  ಅದರ ಬದಲಾಗಿ “ ಬಹುಶಃ ಈ ರೀತಿ ಮಾಡುವುದು ಒಳಿತು” ಎಂದು ಹೊಸ ಆಲೋಚನೆ ಯನ್ನು ಮುಂದಿಡಬೇಕು.

ಇನ್ನೊಂದು ಜ್ಯೋತಿಷಿಯ ಕಥೆಯನ್ನು ಹೇಳಲು ಇಚ್ಚಿಸುತ್ತೇವೆ.

ಒಮ್ಮೆ ಒಬ್ಬ ಜ್ಯೋತಿಷಿ ರಾಜನ ಬಳಿಗೆ ಹೋದ. ರಾಜನು ಆ ಜ್ಯೋತಿಷಿಯನ್ನು  ಬಹಳವಾಗಿ ಗೌರವಾದರ ಗಳಿಂದ ಕಂಡು, ಕೂರಿಸಿ ಉಡುಗೊರೆಗಳನ್ನು ಕೊಟ್ಟು ಮರ್ಯಾದೆ ಮಾಡಿದನು. ನಂತರ ರಾಜನು ತನ್ನ ಹಸ್ತವನ್ನು ಮತ್ತು ತನ್ನ ಜಾತಕವನ್ನು ಜ್ಯೋತಿಷಿಗೆ ತೋರಿಸಿದ. ಜ್ಯೋತಿಷಿ ಎಲ್ಲವನ್ನೂ ಪರೀಕ್ಷಿಸಿ ರಾಜನಿಗೆ ಹೀಗೆ ಹೇಳಿದ, “ ಹೇ ಪ್ರಭು, ನೀವು ನಿಮ್ಮ ಸಕಲ ಕುಟುಂಬವನ್ನೂ ಕಳೆದು ಕೊಳ್ಳುತ್ತೀರಿ. ಎಲ್ಲರೂ ನಿಮಗಿಂತ ಮುಂಚಿತವಾಗಿ ಸಾಯುತ್ತಾರೆ. ನೀವು ಕೊನೆಯಲ್ಲಿ ಸಾಯುತ್ತೀರಿ”.

ಇದನ್ನು ಕೇಳಿ ರಾಜನು ಬಹಳ ಭಾವೋದ್ವೇಗಕ್ಕೆ ಒಳಗಾಗಿ ಆ ಜ್ಯೋತಿಷಿ ಯನ್ನು ಸೆರೆಮನೆಗೆ ಹಾಕಿದನು.

ಈ ಸಮಾಚಾರವು ಜ್ಯೋತಿಷಿಗಳ ಸಮುದಾಯವನ್ನೇ ಅಲುಗಾಡಿಸಿತು. ಅವರು ಹೀಗೆಂದು ಯೋಚಿಸಿದರು- “ನಾವು ರಾಜನಿಗೆ ಸತ್ಯವನ್ನು ಹೇಳಲು ಆಗುವುದಿಲ್ಲ. ಹಾಗೆ ಸತ್ಯವನ್ನು ಹೇಳಿದ್ದೇ ಆದರೆ ಅವನು ನಮ್ಮನ್ನು ಸೆರೆಮನೆಗೆ ದೂಡುತ್ತಾನೆ. ಈಗ ಏನು ಮಾಡುವುದು?"

ಋಣಾತ್ಮಕ ಭವಿಷ್ಯ ವಾಣಿ ಯನ್ನು ನುಡಿದಾಗ ಯಾರಿಗೂ ಹಿಡಿಸುವುದಿಲ್ಲ. ಖಂಡಿತ ಆವರು ಏನಾದರೂ ಒಳ್ಳೆಯದು ಮತ್ತು ಧನಾತ್ಮಕ ವಾದದ್ದು ಕೇಳಲು ಇಚ್ಚಿಸುತ್ತಾರೆ. ಅದೇ ರೀತಿ ರಾಜನೂ ಕೂಡ.

ಆನಂತರ ರಾಜನು ಮತ್ತೊಬ್ಬ ಜ್ಯೋತಿಷಿಯನ್ನು ಕರೆಸಿದ. ಬಹಳಷ್ಟು ಜನ ರಾಜನ ಕರೆಯನ್ನು ಉಪಾಯದಿಂದ ತಪ್ಪಿಸಿಕೊಂಡರು ಆದರೆ ಒಬ್ಬ ಹಿರಿಯ ಜ್ಯೋತಿಷಿ ರಾಜನ ಬಳಿಗೆ ಬರಲು ಒಪ್ಪಿಕೊಂಡ. ಅವನು ರಾಜನ ಬಳಿಗೆ ಬಂದಾಗ ರಾಜನು ಬಹಳವಾಗಿ ಮರ್ಯಾದೆಯಿಂದ ಮತ್ತು ಉಡುಗೊರೆಗಳಿಇಂದ ಸ್ವಾಗತಿಸಿದ, ನಂತರ ತನ್ನ ಹಸ್ತವನ್ನು ಮುಂದೆ ಹಿಡಿದ. ಆಗ ಜ್ಯೋತಿಷಿಯು “ ಹೆ ರಾಜ, ಎಂಥ ದೊಡ್ಡ ಅದೃಷ್ಟ ನಿನ್ನದು. ನಿನ್ನದು ತುಂಬಾ ಒಳ್ಳೆಯ ಜಾತಕ. ಇತಿಹಾಸದಲ್ಲೇ ನಿನ್ನಂಥ ದೀರ್ಘಾಯುಷಿಗಳು ಕಂಡು ಬಂದಿಲ್ಲ. ನಿನ್ನ ಸಾಮ್ರಾಜ್ಯ ದಲ್ಲೇ ನಿನ್ನಷ್ಟು ದೀರ್ಘಾಯುಷಿಗಳು ಇಲ್ಲ“.

ಜ್ಯೋತಿಷಿಯು ರಾಜನೂ ತನ್ನ ರಾಜ ವಂಶಸ್ಥ ರೆಲ್ಲರಿಗಿಂತ ಜಾಸ್ತಿ ದಿನಗಳು ಬದುಕುತ್ತಾನೆಂದು ಹೇಳಲಿಲ್ಲ. ಅದರ ಬದಲು ರಾಜನ ಗ್ರಹಗತಿ ಚೆನ್ನಾಗಿದೆಯೆಂದೂ ರಾಜನಿಗೆ ದೀರ್ಘಾಯುಷ್ಯ ದ ಅನುಗ್ರಹ ಇದೆಯೆಂದೂ ಹೇಳಿದ.ರಾಜನು ತನ್ನ ದೀರ್ಘಾಯುಷ್ಯ ಮತ್ತು ಒಳ್ಳೆಯ ಆರೋಗ್ಯದ ವಿಷಯ ಕೇಳಿ ಉಬ್ಬಿ ಹೋದ. ಅವನು ಜ್ಯೋತಿಷಿಗೆ ಹೇಳಿದ” ನಿನಗೆ ಏನು ಉಡುಗೊರೆ ಬೇಕೋ ಕೇಳು. ನಾನು ಕೊಡುತ್ತೇನೆ.” ಜ್ಯೋತಿಷಿ ರಾಜನಿಗೆ ಹೇಳಿದ. “ ದಯವಿಟ್ಟು ಸೆರೆಮನೆಯಲ್ಲಿರುವ ನನ್ನ ಬಡ ಸಹೋದ್ಯೋಗಿಯನ್ನು ಬಿಡುಗಡೆ ಗೊಳಿಸು.” ಹೀಗೆ ಇನ್ನೊಬ್ಬರೊಡನೆ ಮಾತನಾಡುವಾಗ ಬಳಸುವ ನೈಪುಣ್ಯತೆ ಬಹಳ ದೊಡ್ಡ ವ್ಯತ್ಯಾಸವನ್ನು ತಂದಿತು.

ಕನ್ನಡದಲ್ಲಿ ಒಂದು ಪದ್ಯವಿದೆ. ಅದರಂತೆ “ ಮಾತಿನಿಂದ ತಮಾಷೆ,ಮಾತಿನಿಂದ ನಗೆಯು,ಮತ್ತು ಮಾತಿನಿಂದಲೇ ಶತ್ರುತ್ವ ಉಂಟಾಗುತ್ತದೆ. “ ನಾವು ಆಡುವ ಮಾತು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಸಂಘರ್ಷ ಏನಿದೆ? ಅವು ಮತ್ತು ಅಮೆರಿಕ ನಡುವೆ ಏನು ನಡೀತಾ ಇದೆ?

ಅದೆಲ್ಲ ನಡೆಯುತ್ತಿರುವುದು ಉಪಯೋಗಿಸಿದ ಪದಗಳಿಂದ; ಎಲ್ಲ ನಡೆಯುತ್ತಿರುವುದು ಆಡಿದ ಮಾತುಗಳಿಂದ. ಅಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಜಗಳ ಅಥವಾ ಇನ್ನೇನೂ ಇಲ್ಲ.

ಕನ್ನಡದಲ್ಲಿ ಒಂದು ಹಾಡಿದೆ.ಅದರಲ್ಲಿ “ ನಿಮ್ಮ ಮಾತು ಎಷ್ಟು ಸಿಹಿಯಾಗಿ ಮತ್ತು ಸುಂದರವಾಗಿ ಇರಬೇಕೆಂದರೆ ಭಗವಂತ ಶಿವನೂ ಕೇಳಿಸಿಕೊಂಡು ಸಂತೋಷದಿಂದ  ತಲೆದೂಗಿ “ಹೌದು,ಹೌದು” ಎನ್ನಬೇಕು. ನಿಮ್ಮ ಮಾತು ಅಷ್ಟು ಮನೋಹರವಾಗಿರಬೇಕು.

ಪ್ರ : ಪ್ರೀತಿಯ ಗುರುದೇವ, ಮಮಕಾರವನ್ನು ಹೇಗೆ ಮೀರುವುದು? ನಿಮ್ಮೆಡೆಗೆ ಇರುವ ಕಕ್ಕುಲತೆಯ ಬಗೆಗೆ ಏನು ಮಾಡಬೇಕು?ಈ ದಿನಗಳಲ್ಲಿ ಬಹಳ ನೋವುಂಟು ಮಾಡುತ್ತಿದೆ. ದಯವಿಟ್ಟು ವಿವರಿಸಿ.

ಶ್ರೀ ಶ್ರೀ : ನೀವು ಪ್ರೀತಿಯನ್ನು ಬಚ್ಚಿಡಲೂ  ಸಾಧ್ಯವಿಲ್ಲ, ಸಂಪೂರ್ಣವಾಗಿ ಬಿಚ್ಚಿಡಲೂಸಾಧ್ಯವಿಲ್ಲ. ಯುಗಯುಗಗಳಿಂದ ಇದು ಪ್ರೀತಿಯ ಕತೆಯಾಗಿದೆ. ಪ್ರೇಮವಿರುವಾಗ ಅದು ಸ್ರವಿಸುತ್ತದೆ ಮತ್ತು ಅದನ್ನು ನಿಮ್ಮ ಕಣ್ಣುಗಳಲ್ಲಿ ಹಾಗೂ ನೀವು ಮಾಡುವ ಕಾರ್ಯಗಳಲ್ಲಿ ಕಾಣಬಹುದು. ಪ್ರೇಮ ವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ ಮತ್ತು ಸಂಪೂರ್ಣವಾಗಿ ಬಿಚ್ಚಿಡಲೂಸಾಧ್ಯವಿಲ್ಲ.

ಸಂಪೂರ್ಣವಾಗಿ ಬಿಚ್ಚಿಡಲು ಎಷ್ಟೇ ಪ್ರಯತ್ನ ಪಟ್ಟರೂ ನಿಮಗೆ ಅನಿಸುತ್ತದೆ ನಿಮಗೆ ಬೇಕಾದಂತೆ ನೀವು ಪ್ರೀತಿಯನ್ನು ತೋರಿಸಲಿಲ್ಲವೆಂದು. ಇದೇ ಸಮಸ್ಯೆ, ಮತ್ತು ಅದರ ಜೊತೆ ನೋವು ಬಂದೇ ಬರುತ್ತದೆ.

ಸತ್ಯಕ್ಕೂ ಹಾಗೆ-ನೀವು ಸತ್ಯವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದೇ ಸಮಯದಲ್ಲಿ ಸತ್ಯವನ್ನು ವಿವರಿಸಿ ಸ್ಪಷ್ಟಪಡಿಸಲು ಆಗುವುದಿಲ್ಲ. ಅದೇ ರೀತಿ ಸೌಂದರ್ಯವನ್ನು ತೊರೆಯಲೂ ಸಾಧ್ಯವಿಲ್ಲ ಸ್ವಾಧೀನ ಪಡಿಸಿಕೊಳ್ಳಲೂ ಸಾಧ್ಯವಿಲ್ಲ. ಆದ್ದರಿಂದ ಮಾನವ ಜನಾಂಗ ಈ ಸಮಸ್ಯೆಯಲ್ಲಿ ಸಿಲುಕಿ ಕೊಂಡಿದೆ. ಮನುಷ್ಯನಿಗೆ ಇದೆಲ್ಲವೂ ಬೇಕು. – ಪ್ರೀತಿ, ಸತ್ಯ ಮತ್ತು ಸೌಂದರ್ಯ. ಹೇಳಿ ಯಾರಿಗೆ ಸತ್ಯ ಬೇಡ? ನಿಮ್ಮ ಸುತ್ತ ಇರುವರೆಲ್ಲರೂ ಸುಳ್ಳು ಹೇಳುತ್ತಿದ್ದಾರೆ ನೀವು ಸಹಿಸಿಕೊಳ್ಳುತ್ತೀರಾ? ನೀವು ಒಳಗೇ ಕುದಿಯುತ್ತೀರಿ. ನಿಮಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನೀವು ಎಲ್ಲರೂ ಸತ್ಯವಂತರಾಗಿರಬೇಕೆಂದು ನಿರೀಕ್ಷಿಸುತ್ತೀರಿ. ಹೌದಲ್ಲವೇ?

ಎಲ್ಲರೂ ಅಲ್ಲದಿದ್ದರೂ ಸ್ವಲ್ಪ ಮಂದಿಯಾದರೂ ನಿಮ್ಮೊಂದಿಗೆ ಸತ್ಯ ಹೇಳಬೇಕೆಂದು ನಿರೀಕ್ಷಿಸುತ್ತೀರಿ. ನಿಮಗೆ ಅದರಲ್ಲೂ ಕೊರತೆ ಕಂಡುಬಂದಲ್ಲಿ ನಿಮಗೆ ನಿರಾಸೆ ಆಗುತ್ತದೆ. ಆದರೆ ನೀವು ನಿಮ್ಮ ಸುತ್ತ ಇರುವ ಎಲ್ಲರೊಂದಿಗೆ  ಸತ್ಯತೆಯಿಂದ ನಡೆದುಕೊಳ್ಳುತ್ತಿದ್ದೀರಾ?. ಇದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ಅದೇ ಕಾರಣಕ್ಕೆ ಸತ್ಯವನ್ನು ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಅಥವಾ ನಿವಾರಿಸಲೂ ಸಾಧ್ಯವಿಲ್ಲ. ಹಾಗೆಯೇ ಸತ್ಯವೇನೆಂದು ವಿವರಿಸಿ ಸ್ಪಷ್ಟಪಡಿಸಲು ಆಗುವುದಿಲ್ಲ.

ಈ ಕ್ಷಣದಲ್ಲಿ ನಿಮಗೆ ಏನು ಸತ್ಯವಾಗಿದೆಯೋ ಅದು ಮತ್ತೊಬ್ಬರಿಗೆ ಸತ್ಯವಲ್ಲದಿರ ಬಹುದು. ನಾವು ಏನು ಹೇಳುತ್ತಿದ್ದೇವೆಂದು ನಿಮಗೆ ತಿಳಿಯುತ್ತಿದೆಯೇ?

ಉದಾಹರಣೆಗೆ ನೀವು ಸತ್ಯವೆಂದು ಏನನ್ನೋ ನಂಬುತ್ತೀರಿ. ಇನ್ನೂ ಸ್ವಲ್ಪ ಮುಂದೆ ಹೋದರೆ, “ನಾನು ಸತ್ಯ ವೆಂದು ಏನನ್ನು ಅಂದುಕೊಂಡೆನೋ ಅದು ಸುಳ್ಳಾಯ್ತು.” ಎಂದು ನಿಮಗೆ ಅನಿಸುತ್ತದೆ.

ಎಷ್ಟು ಜನರಿಗೆ ಈ ಅನುಭವ ಆಗಿದೆ? ನೀವು ಏನನ್ನೋ ಸತ್ಯವೆಂದು ಕೊಂಡಿದ್ದೀರಿ ಅದು ಹಾಗಿಲ್ಲವೆಂದು ಆಮೇಲೆ ಅನಿಸಿದೆ. ಕೈ ಮೇಲೆತ್ತಿ. (ಬಹಳಷ್ಟು ಜನ ಕೈ ಎತ್ತುತ್ತಾರೆ.) ಆದ್ದರಿಂದ ಹೇಗೆ ಸತ್ಯವನ್ನು ಖಚಿತಪಡಿಸಿಕೊಳ್ಳುವುದು? ಸತ್ಯವೇನೆಂದು ಸ್ಪಷ್ಟ ಪಡಿಸಿಕೊಳ್ಳುವುದಕ್ಕಾಗುತ್ತದೆಯೇ? ಇಲ್ಲ.

ನೀವು ಅಕ್ಬರ್ ಮತ್ತು ಬೀರ್ಬಲ್ ನ ಕತೆ ಕೇಳಿದ್ದೀರಾ?

ಈ ಕಥೆಯನ್ನು ನಾವು ಈ ಮುಂಚೆ ಹೇಳಿದ್ದೇವೆ. ಭಾರತ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ, ಅವನ ಹೆಸರು ಅಕ್ಬರ್. ಒಂದು ದಿನ ಅವನಿಗೆ ಒಂದು ಆಲೋಚನೆ ಬಂದಿತು. ಅದರ ಪ್ರಕಾರ ಯಾರು ಸುಳ್ಳು ಹೇಳುತ್ತಾರೋ ಅವರಿಗೆ  ನೇಣು ಹಾಕಿ ಗಲ್ಲಿಗೇರಿಸುವಂತೆ ಕಾನೂನನ್ನು  ಜಾರಿಗೊಳಿಸಲಾಯ್ತು. ಈ ಕಾನೂನನ್ನು ಪ್ರಚಾರ ಮಾಡಿದಾಗ ರಾಜಧಾನಿಯಲ್ಲಿ ಎಲ್ಲೆಡೆ ಗಾಬರಿ ಮೂಡಿತು.

ಮೊದಲಿಗೆ, ಎಲ್ಲ ವಾಣಿಜ್ಯ ವ್ಯಾಪಾರಿಗಳೂ ಸೇರಿಕೊಂಡರು, ಮತ್ತು ಹೇಳಿದರು-“ ಇದೊಂದು ಕಠಿಣವಾದ ಕಾನೂನು. ನಾವು ಯಾವಾಗ ಸಾಮಾನು ಸರಂಜಾಮುಗಳನ್ನು ಮಾರುವಾಗಲೂ ಇದೇ ಅತ್ಯುತ್ತಮವಾದ ಉತ್ಪನ್ನ ವೆಂದು ಹೇಳಿ ಮಾರಾಟ ಮಾಡುತ್ತೇವೆ. ನಾವು ರೇಷ್ಮೆಯನ್ನು ಮಾರುವಾಗ ನಮ್ಮದು ಅತ್ಯುತ್ತಮವಲ್ಲವೆಂದು ಸಂಪೂರ್ಣವಾಗಿ ಗೊತ್ತಿದ್ದರೂ ಇದೇ ಸಿಗುವ ರೇಷ್ಮೆಯಲ್ಲೆಲ್ಲಾ ಅತ್ಯುತ್ತಮವಾದದ್ದು ಎಂದು ಹೇಳಿ ಮಾರುತ್ತೇವೆ. ದಕ್ಷಿಣದಲ್ಲಿ ಉತ್ತಮವಾದ ರೇಷ್ಮೆ ಸಿಗುತ್ತದೆ. ಆದರೆ ನಾವು ನಮ್ಮ ಉತ್ಪನ್ನಗಳನ್ನು ಮಾರ ಬೇಕಷ್ಟೆ. ಏನು ಮಾಡುವುದು? ಇಲ್ಲದಿದ್ದರೆ ನಾವು ನಮ್ಮ ವ್ಯವಹಾರವನ್ನು ನಡೆಸಲಾಗುವುದಿಲ್ಲ.

ನಂತರ ವೈದ್ಯರ ಸಮುದಾಯ ನೆರೆಯಿತು. ವೈದ್ಯರು ತಮ್ಮಲ್ಲೇ ಚರ್ಚಿಸಿದರು,” ನಾವು ಔಷಧಿಯನ್ನು ಕೊಡುವಾಗಲೆಲ್ಲ ಏನು ಸಮಸ್ಯೆ ಇರಬಹುದೆಂದು ಊಹಿಸಿ ಕೊಡುತ್ತೇವೆ. ರೋಗವನ್ನು ವಾಸಿಮಾಡುವುದೆಂಬ ಭರವಸೆಯಿಂದ ನಾವು ಔಷಧಿ ಕೊಡುತ್ತೇವೆ, ಆದರೆ ರೋಗಿಗೆ ಆ ಔಷಧಿಯು ಖಂಡಿತವಾಗಿ ಸಮಸ್ಯೆಯಿಂದ ಬಿಡುಗಡೆ ಮಾಡಿ ಅವನ ಆರೋಗ್ಯ ಉತ್ತಮವಾಗಿಸುತ್ತದೆ ಎಂದು ಭರವಸೆ ಕೊಡುತ್ತೇವೆ. ಆಕಸ್ಮಾತ್ ನಾವು ಕೊಟ್ಟ ಔಷಧಿ ಕೆಲಸ ಮಾಡಲಿಲ್ಲವೆಂದಾದರೆ ನಮ್ಮೆಲ್ಲರನ್ನೂ ಗಲ್ಲಿಗೇರಿಸುತ್ತಾರೆ. ಎಲ್ಲ ವೈದ್ಯರು ರಾಜನಿಗೆ ಹುಚ್ಚು ಹಿಡಿದಿದೆಯೆಂದು ತೀರ್ಮಾನಿಸಿದರು. ಈ ಕಾನೂನಿನಿಂದ ಅವರು ಮುಂದುವರೆಯಲಾಗಲಿಲ್ಲ. ಇಡೀ ವೈದ್ಯ ಸಮುದಾಯವೇ ಭಯದಿಂದ ಕಂಪಿಸಿತು.

ನಂತರ ಎಲ್ಲ ಜ್ಯೋತಿಷಿಗಳು ಒಂದಾಗಿ ಸೇರಿದರು. ಅವರು ಹೇಳಿದರು , “ ಈ ರಾಜನೂ ನಮ್ಮ ವ್ಯವಹಾರವನ್ನು ಹಾಳು ಮಾಡುತ್ತಿದ್ದಾನೆ.ನಾವು ಭವಿಷ್ಯವನ್ನು ತೀರ್ಮಾನಿಸುವಾಗ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ ಮತ್ತು ಕೆಲವು ವಿಷಯಗಳನ್ನು ಊಹಿಸುತ್ತೇವೆ. ನಂತರ ಭವಿಷ್ಯವನ್ನು ನಿರ್ಧರಿಸುತ್ತೇವೆ. “

ಅಕ್ಬರ್ ನ ರಾಜಧಾನಿಯಲ್ಲಿ ಎಲ್ಲ ಜ್ಯೋತಿಷಿಗಳೂ ಭಯಭೀತರಾದರು. ಈ ಕಾನೂನು ಅನರ್ಥಕಾರಿ ಮತ್ತು ತಾವು ಜೀವನ ಮಾಡಲು  ಪ್ರಾಯಶಃ ಅಮೆರಿಕ ದೇಶಕ್ಕೆ ಓಡಿಹೋಗಬೇಕೆಂದು ಆಲೋಚಿಸಿದರು!

ನಂತರ ನ್ಯಾಯವಾದಿಗಳ ಗುಂಪು ಸೇರಿ ಅವರಲ್ಲೇ ಯೋಚಿಸಿದರು,”ಈ ಕಾನೂನು ನ್ಯಾಯವಾಗಿಲ್ಲ. ನಾವು ಜೀವನ ಮಾಡುವುದೇ ಕಪ್ಪನ್ನು ಬಿಳಿ ಮತ್ತು ಬಿಳಿಯನ್ನು ಕಪ್ಪು ಎಂದು ಹೇಳುತ್ತಾ. ಆದ್ದರಿಂದ ಜನಗಳು ನಮ್ಮ ಬಳಿ ಬರುತ್ತಾರೆ. “ ನ್ಯಾಯವಾದಿಗಳೂ ಸಂಕಷ್ಟದಲ್ಲಿ ಸಿಲುಕಿದರು.

ನಂತರ ಪುರೋಹಿತ ಸಮುದಾಯದವರೂ ಸಂಕಷ್ಟದಲ್ಲಿ ಸಿಕ್ಕಿಕೊಂಡರು.

ಈ ಕಾನೂನಿನಿಂದ ಎಲ್ಲ ಸಮುದಾಯದವರೂ ಬಹಳ ಸಂಕಷ್ಟಕ್ಕೀಡಾದರು.ಅವರೆಲ್ಲರೂ ಯೋಚಿಸಿದರು”ಈಗ ಯಾರು ಬೆಕ್ಕಿಗೆ ಗಂಟೆ ಕಟ್ಟುತ್ತಾರೆ ಮತ್ತು ನಮ್ಮನ್ನು ಈ ಕಾನೂನಿನಿಂದ ಪಾರು ಮಾಡುತ್ತಾರೆ?”

ಆಗ ಅವರು ಬಹಳ ಬುದ್ಧಿವಂತನಾದ ಮತ್ತು ಆಸ್ಥಾನ ವಿದೂಷಕನಾದ ಬೇರ್ಬಲ್ ನನ್ನು ಸಂಪರ್ಕಿಸಿದರು. ಅವನು ಅಕ್ಬರ್ ಚಕ್ರವರ್ತಿ ಗೆ ಬಹಳ ಪ್ರೀತಿ ಪಾತ್ರನಾಗಿದ್ದ. ಬೀರ್ಬಲ್ ಅವರ ಎಲ್ಲ ಕಷ್ಟಗಳನ್ನು ಕೇಳಿದ.

ಹೀಗಿರುವಾಗ ಒಂದು ದಿನ ಬೀರ್ಬಲ್ ರಾಜನ ಒಳ ಕೋಣೆಗೆ ನಡೆದು ಹೋಗುತ್ತಿದ್ದ. ಹೊರಗೆ ಕಾವಲು ಕಾಯುತ್ತಿದ್ದ ಕಾವಲು ಪಡೆಯವರು ಅವನನ್ನು ತಡೆದು ”ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದರು.

ಬೀರ್ಬಲ್ ಉತ್ತರಿಸಿದ, “ನನ್ನನ್ನು ನಾನು ನೇಣು ಹಾಕಿಸಿ ಕೊಳ್ಳಲು ಹೋಗುತ್ತಿದ್ದೇನೆ”, ಹಾಗೆ ಹೇಳಿದ್ದು ಸ್ಫುಟವಾಗಿ ಸತ್ಯವಾಗಿರಲಿಲ್ಲ.

ಈ ಸಮಾಚಾರವು ತಕ್ಷಣ ರಾಜನನ್ನು ತಲುಪಿತು. ನಿಜವಾಗಿ ಬೀರ್ಬಲ್ ತಾನು ರಾಜನ ಒಳ ಕೋಣೆಗೆ ಹೋಗಿ ನೇಣು ಹಾಕಲ್ಪಡುವುದಾಗಿ ಸುಳ್ಳು ಹೇಳಿದ್ದನು. ಆದರೆ ಈಗ ಅವನನ್ನು ಅವರು ನೇಣು ಹಾಕಿದರೆ ಅವನು ಹೇಳಿರುವುದು ಸತ್ಯವಾಗುವುದು ಮತ್ತು ಅವನನ್ನು ನೇಣಿಗೆ ಹಾಕುವುದರಿಂದ ಒಬ್ಬ ಮುಗ್ಧನನ್ನು ಶಿಕ್ಷೆಗೆ ಗುರಿಪಡಿಸಿದಂತಾಗುತ್ತದೆ. ಆ ದಿನಗಳಲ್ಲಿ ರಾಜ ಒಬ್ಬ ಮುಗ್ಧನಿಗೆ ಶಿಕ್ಷೆ ಕೊಟ್ಟರೆ ರಾಜನೂ ಆ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಇದು ಆ ದಿನಗಳ ನಿಯಮ. ಅದು ಮಹಾಪರಾಧವಾಗಿತ್ತು.

ಈಗ ರಾಜನು ಅವನನ್ನು ಸ್ವತಂತ್ರವಾಗಿ ಯಾವ ಶಿಕ್ಷೆಯೂ ಇಲ್ಲದೆ ಬಿಟ್ಟು ಬಿಟ್ಟರೆ ಆಗ ತಾನು ಮಾಡಿದ ಹೊಸ ಕಾನೂನನ್ನೇ ಮುರಿದಂತಾಗುತ್ತದೆ. ಮತ್ತು  ಅವನನ್ನು ಶಿಕ್ಷೆಗೆ ಒಳಪಡಿಸಿದರೆ ರಾಜನು  ಇನ್ನೊಂದು ಕಾನೂನನ್ನು ಮುರಿದಂತಾಗುತ್ತದೆ.

ರಾಜನು ಗೊಂದಲಕ್ಕೀಡಾದ. ಅವನು ತನ್ನ ವಿದ್ವಾಂಸರನ್ನು ಕರೆಸಿ ಈ ವಿಚಾರವನ್ನು ಚರ್ಚಿಸಿದ.” ನಾವು ಈ ಪ್ರಕರಣದಲ್ಲಿ ಬೀರ್ಬಲ್ ಬಗ್ಗೆ ಏನು ಮಾಡುವುದು?” ರಾಜ ಅವರನ್ನು ಕೇಳಿದ. “ ವಾಸ್ತವವಾಗಿ ಬೀರ್ಬಲ್ ಈ ಪ್ರಕರಣದಲ್ಲಿ ಸುಳ್ಳು ಹೇಳಿದ್ದಾನೆ. ಆದ್ದರಿಂದ ಅವನನ್ನು ಶಿಕ್ಷೆಗೆ ಗುರಿಪಡಿಸಬೇಕೋ ಬೇಡವೋ?”

ಆಗ ಬೀರ್ಬಲ್ ಬಂದು ಹೇಳಿದ “ ನೋಡಿ , ಸತ್ಯವೆಂದರೆ ಏನು ವ್ಯಕ್ತಪಡಿಸುತ್ತೇವೋ ಅಥವಾ ಏನು ಹೇಳುತ್ತೀವೋ ಅದಲ್ಲ. ಏನಿದೆಯೋ ಅದು ಸತ್ಯ.ಮತ್ತು ಏನಿದೆಯೋ ಅದನ್ನು ತಿಳಿದುಕೊಳ್ಳುವುದು ಸಂಪೂರ್ಣವಾಗಿ ಬೇರೆಯ ವಿಷಯವೇ ಆಗಿದೆ.”

ಅವರು ಆ ಕಾನೂನನ್ನು ತೆಗೆದು ಹಾಕಿದರು ಮತ್ತು ಆನಂತರ ಎಲ್ಲರೂ ಸಂತೋಷವಾಗಿ ಬಾಳಿದರು. ಇದು ಕಥೆಯ ಅಂತ್ಯ.

ಆದ್ದರಿಂದ ನೀವು ಏನು ಮಾತನಾಡುತ್ತೀರಿ ಅದು ಸತ್ಯವಲ್ಲ(ಅದು ಪದಗಳಿಂದ ಸೀಮಿತವಾಗಿಲ್ಲ.) ಅದು ಭೂತ, ವರ್ತಮಾನ ಮತ್ತು ಭವಿಷ್ಯ ಕಾಲವನ್ನು ಮೀರಿದ್ದು. ಕಾಲದ ಪರೀಕ್ಷೆಯನ್ನು ಮೀರಿ ನಿಲ್ಲುವುದು ಸತ್ಯ. ಆದ್ದರಿಂದಲೇ ಸತ್ಯವನ್ನು ವಿವರಿಸಿ ಸ್ಪಷ್ಟ ಪಡಿಸಲು ಆಗುವುದಿಲ್ಲ.

ನೀವು ಸತ್ಯದಿಂದ ತಪ್ಪಿಸಿಕೊಳ್ಳಲೂ ಆಗುವುದಿಲ್ಲ. ಸೌಂದರ್ಯವೂ ಹಾಗೇ. ಸೌಂದರ್ಯವನ್ನು ತೊರೆಯಲು ಸಾಧ್ಯವಿಲ್ಲ. ನೀವು ತೊರೆಯಲು ಆಗುವಂತದ್ದು ಏನಾದರೂ ಇದ್ದರೆ ಅದು ಸೌಂದರ್ಯವಾಗಿರಲು ಸಾಧ್ಯವಿಲ್ಲ. ಮತ್ತು ಸೌಂದರ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ತಿಳಿಯಿತೇ?

ಇವು ಮೂರು ಮಾನವನ ಅಸ್ತಿತ್ವದ ಅಗತ್ಯ ಅಂಶಗಳು.

ಪ್ರ : ಪ್ರೀತಿಯ ಗುರುದೇವ, ನಾನು ಪ್ರತಿಫಲನದ ಬಗ್ಗೆ ಸ್ವಲ್ಪ ತಿಳಿದಿದ್ದೇನೆ. ಎಷ್ಟು ಪ್ರತಿಫಲನಗಳು ಇವೆ ಮತ್ತು ಅದರ ಅರ್ಥವೇನು?

ಶ್ರೀ ಶ್ರೀ : ನೀವು ಒಂದು ಪದ ಹೇಳಿದಾಗ ನೀವು ಅದಕ್ಕೆ ಅರ್ಥವನ್ನೂ ಹಚ್ಚುತ್ತೀರಿ. ಪ್ರತಿಫಲನ ಎಂದರೆ ಪ್ರತಿಫಲನ. ನೀವು ಏನು ಹೊರಗಡೆ ನೋಡುತ್ತೀರೊ ಅದು. ನೀವು ಏನಾಗಿದ್ದೀರೋ ಅದು ನಿಮ್ಮ ಕ್ರಿಯೆಯ ಪ್ರತಿಫಲನ. ನಿಮ್ಮ ಆಲೋಚನೆಗಳು, ನಿಮ್ಮ ಮನಸ್ಸು, ನಿಮ್ಮ ಭಾವನೆಗಳು ಎಲ್ಲವೂ ನೀವು ಏನಾಗಿದ್ದೇರೋ ಅದರ ಪ್ರತಿಫಲನ. ಇನ್ನೊಂದರ್ಥದಲ್ಲಿ ನಿಮ್ಮ ದೇಹವೂ ನೀವೇನಾಗಿದ್ದೀರೋ ಅದರ ಪ್ರತಿಫಲನ.

ನೀವು ಈ ಸತ್ಯದ ಬಗ್ಗೆ ಚಿಂತನೆ ನಡೆಸಿದಾಗ ಅದು ಮತ್ತಷ್ಟು ಚೆನ್ನಾಗಿ ತಿಳಿಯುತ್ತದೆ.

ನಾವು ಹೇಳುತ್ತೇವೆ – “ಅಸಂಗೋಹಮ್ ಅಸಂಗೋಹಮ್ ಪುನಃ ಪುನಃ (ಮತ್ತೆ ಮತ್ತೆ ನಾನು ನಿರ್ಮಮಕಾರಿ)". ಇದರ ಅರ್ಥ – ‘ನಾನು ಇದಲ್ಲ, ನಾನು ಇದಲ್ಲ. ನಾನು ಇದೆಲ್ಲದರಿಂದ ಬೇರೆ ಮತ್ತು ಅಸ್ಪರ್ಶಿ. ನಾನು ನನ್ನ ದೇಹವಲ್ಲ, ಆಲೋಚನೆಗಳಲ್ಲ, ಭಾವನೆಗಳಲ್ಲ, ಮತ್ತು ನಾನು ಮಾಡಿರುವ ಎಲ್ಲ ಕ್ರಿಯೆಗಳು ನಾನಲ್ಲ.“

ಆಗ ನಾವು ‘ಸಾಕ್ಷಿ’ ಆಗಲು ಆರಂಭಿಸುತ್ತೇವೆ ಮತ್ತು ಏನೆಲ್ಲಾ ನಡೆಯುತ್ತದೋ ಅವುಗಳಿಂದ ದೂರವಿರಲು ತೊಡಗುತ್ತೇವೆ.