ಸೌಂದರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೌಂದರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 14, 2013

ಸಾಧನೆಯಿ೦ದ ಪರಿವರ್ತನೆ


ಅಮೃತಬಿ೦ದು’ ಸರಣಿಯ ಬರಹಗಳು

ಹದಿನಾರನೆಯ ಕ೦ತು

ವಿಘ್ನಕ್ಕೆ ಬಾಗದಿರಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೮.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ - "ಮಧ್ಯೇs..ವರ ಪ್ರಸವಃ".
ನೀವು ಸಾಧನೆಯಲ್ಲಿ ತೊಡಗಿರುವಾಗ ಮಧ್ಯೆ ವಿಘ್ನಗಳು ಬರುವುದು ಸಹಜ. ಅದರ ಬಗ್ಗೆ ಯೋಚನೆ ಮಾಡಬೇಡಿ. ನೀವು ಧ್ಯಾನ ಮುಂತಾದ ಸಾಧನೆಗಳನ್ನು ಮಾಡಿದರೂ ನಿಮ್ಮಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ನಿಮಗೇ ಅನ್ನಿಸಬಹುದು. ನಿಮ್ಮ ಮನೆಯವರೂ, ಮಕ್ಕಳೂ, ನಿಮ್ಮನ್ನು ನೋಡಿದವರೂ ಈ ಬಗ್ಗೆ ಟೀಕಿಸಬಹುದು. "ನೀವು ಸತ್ಸಂಗಕ್ಕೆ ಹೋಗಿ ಧ್ಯಾನ, ಸಾಧನೆ ಮಾಡಿ ಪ್ರಯೋಜನವೇನಾಯ್ತು? ಒಂದೆರಡು ತಿಂಗಳು ಸರಿಯಾಗಿದ್ದಿರಿ, ಈಗ ಮತ್ತೆ ಕೋಪ ಬರುತ್ತದೆಯಲ್ಲ, ಮತ್ತೆ ಯಥಾಪ್ರಕಾರ!" "ನಿಮ್ಮಲ್ಲೇನು ಪರಿವರ್ತನೆ ಆಗಿದೆ ಮೊದಲು ತೋರಿಸಿ. ನಾವು ಹೋಗಿ ಮಾಡೋದೇನು?" ಬೆಳೆದ ಮಕ್ಕಳು ದೊಡ್ಡವರಿಗೆ ಹಾಕುವ ಸವಾಲು ಇದೇನೇ!
ಈ ರೀತಿ ಆದರೆ ಆಶ್ಚರ್ಯ ಪಡಬೇಕಿಲ್ಲ. ಯಾರಾದರೂ ಹೀಗೆಂದಾಗ ಅಥವಾ ನಿಮಗೇ ಅನಿಸಿದಾಗಲೂ ನೀವು ಸಾಧನೆ ಮಾಡುವ ಉತ್ಸಾಹ ಕಳೆದುಕೊಳ್ಳಬೇಡಿ. ಅದನ್ನು ಸಾಧಾರಣವಾಗಿಯೇ ತೆಗೆದುಕೊಳ್ಳಿ. ಏಕೆಂದರೆ ಅದು ಮತ್ತೆ ಸರಿಹೋಗಿಬಿಡುತ್ತದೆ.
ಹಾಗೆಯೇ ಆಲಸ್ಯ ಕೂಡಾ ಬರುತ್ತೆ ಮತ್ತೆ ಹೋಗುತ್ತೆ. ಇದೂ ಕೂಡಾ ಸಹಜ. ನೋಡಿ, ನಾವು ದೇವಸ್ಥಾನಗಳಲ್ಲಿಯೂ ಶಯನೋತ್ಸವ ಮಾಡ್ತೀವಿ. ದೇವರನ್ನು ಮಲಗಿಸಿ ನಿದ್ದೆ ಮಾಡಿಸಿಬಿಡ್ತೀವಿ. ’ಅನಂತ ಶಯನ!’ ನಿಮಗೆ ಯಾವಾಗಲೂ ಆಲಸ್ಯವಿರಲು ಸಾಧ್ಯವೇ ಇಲ್ಲ. ಎಂಥಾ ಆಲಸಿ ವ್ಯಕ್ತಿ ಕೂಡಾ ಒಂದಲ್ಲ ಒಂದು ದಿನ ಲವಲವಿಕೆಯಿಂದ, ಚೇತನದಿಂದ ತುಂಬಿಬಿಟ್ಟಿರುತ್ತಾನೆ. ಹಾಗೆಯೇ ತುಂಬಾ ಸಚೇತನನಾಗಿರುವ ವ್ಯಕ್ತಿಗೂ ಕೂಡಾ ಒಂದಲ್ಲ ಒಂದು ದಿನ ಸ್ವಲ್ಪ ಆಲಸ್ಯ ಬರಬಹುದು. "ಮಧ್ಯೇs..ವರ ಪ್ರಸವಃ" ಮಧ್ಯೆ ಕೆಲವೊಮ್ಮೆ ಆ ತರಹ ವಿಘ್ನಗಳು ಬಂದರೂ ಬರಬಹುದು. ಅದು ಸಹಜ. ಸಾಧನೆಯಲ್ಲಿ ಉತ್ಸಾಹ ತುಂಬಿರಲಿ ಹಾಗೂ ಅದು ನಿರಂತರವಾಗಿರಲಿ.

* * * * *

ಪರಿಣಾಮಿಗಳಾಗಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯.೦೭.೨೦೦೩ರಂದು ಪ್ರಕಟವಾಗಿತ್ತು)

ಗವಂತ ತುಂಬ ವಿನೋದಪ್ರಿಯ. ಅದಕ್ಕೇ ಇಷ್ಟೊಂದು ತರಹ ವೈವಿಧ್ಯತೆಯುಳ್ಳ ಪ್ರಕೃತಿ, ಪ್ರಾಣಿಗಳು, ಮನುಷ್ಯರು ಎಲ್ಲವನ್ನೂ ಸೃಷ್ಟಿ ಮಾಡಿದ್ದಾನೆ. ಈ ಪ್ರಕೃತಿ ನೋಡಿ, ಇದರಲ್ಲಿ ಎಲ್ಲವೂ ಪರಿಣಾಮಕಾರಿಯಾಗಿದೆ. ಅದೇ ಇದರಲ್ಲಿರತಕ್ಕಂಥ ರಹಸ್ಯ, ಸೌಂದರ್ಯ! ಹಾಗೇ ಆತ್ಮ ಪರಿಣಾಮಕಾರಿ. ಹಾಗೆಯೇ ನಾವು ಪರಿಣಾಮಿಗಳಾಗಿರಬೇಕು. ಹಾಗಿದ್ದರೆ ಮಾತ್ರ ನಾವು ನಮ್ಮ ಸಾಧನೆಯಲ್ಲಿ ಪ್ರಗತಿ ಹೊಂದುವುದು. ಅಕ್ಕ ಮಹಾದೇವಿಯವರು, "ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು" ಎಂದಿದ್ದಾರೆ. ನೈವೇದ್ಯ ಅಂತ ಯಾಕೆ ಹೇಳ್ತಾರೆ? ಅದು ತಿಂದ ತಕ್ಷಣ ಹೊಟ್ಟೆಯಲ್ಲಿ ಹಾಗೆಯೇ ಕೂತಿರುವುದಿಲ್ಲ ನೋಡಿ. ಈಗ ಒಂದು ಬಾಳೇಹಣ್ಣು ಬಾಯೊಳಗೆ ಹೋದ ತಕ್ಷಣವೇ ಅದು ಬದಲಾವಣೆ ಆಗುತ್ತೆ. ರಾಸಾಯನಿಕ ಮಿಶ್ರಣಗಳುಂಟಾಗಿ ಗಂಟಲಲ್ಲಿ ಬದಲಾಗಿ, ಹೊಟ್ಟೇಗೆ ಹೋಗಿ ಮತ್ತೆ ಬದಲಾಗಿ ಚಿಕ್ಕ ಕರುಳನ್ನು ಸೇರಿ, ದೊಡ್ಡ ಕರುಳಲ್ಲಿ ಹೋಗುವ ವೇಳೆಗೆ ಆ ಬಾಳೆಹಣ್ಣು ತಿಂದದ್ದು ಪೂರ್ಣ ಪರಿಣಾಮಕಾರಿಯಾಗಿರುತ್ತದೆ.
ನೈವೇದ್ಯ ಹೇಗೆ ಪರಿಣಾಮಕಾರಿಯೋ, ತಿಂದಿದ್ದೆಲ್ಲಾ ಹೇಗೆ ಪರಿವರ್ತನೆ ಆಗುತ್ತದೆಯೋ ಹಾಗೆ ಕಾಲ ಅನ್ನುವ ತತ್ವ ನಮ್ಮ ಜೀವನವನ್ನು ನುಂಗಿ ಹಾಕುತ್ತಿದೆ. ಅಂತಹ ಈ ಜೀವನದಲ್ಲಿ ನಾವು ಪರಿವರ್ತನೆಗೊಳ್ಳುತ್ತಾ, ಪರಿಣಾಮಿಗಳಾಗಬೇಕು. ಹಾಗೆ ನಮ್ಮಲ್ಲಿ ಪರಿವರ್ತನೆ ಪರಿಣಾಮ ಉಂಟಾಗುತ್ತಾ ಹೋದಂತೆ "ಪರಮ ಸುಖ"ದ ಪ್ರಾಪ್ತಿಯಾಗುತ್ತದೆ. ಅದಕ್ಕೇ ಅಕ್ಕನವರು ಹೇಳಿರುವುದು - ಪರಿಣಾಮಿಗಳಾಗಬೇಕೆಂದು.

* * * * *

ಪರಿವರ್ತನಶೀಲತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೦.೦೭.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ಪರಿವರ್ತನಶೀಲರಾಗಬೇಕು, ಪರಿಣಾಮಿಗಳಾಗಿರಬೇಕು. ಆಗಲೇ ನಾವು ನಮ್ಮ ಸಾಧನೆಯಲ್ಲಿ ಮುಂದುವರಿಯಲು ಸಾಧ್ಯ.
"ಪರಿಣಾಮಿಗಳಲ್ಲದವರಲಿ ನೈವೇದ್ಯವನೊಲ್ಲೆಯಯ್ಯಾ ನೀನು..." ಕಲ್ಲನ್ನು ಯಾರೂ ತಿನ್ನುವುದಕ್ಕೆ ಹೋಗಲ್ಲ, ಯಾಕೆ? ಕಲ್ಲು ಏನೂ ಪರಿಣಾಮಹೊಂದುವುದಿಲ್ಲ! ಮರಳು? ಯಾವ ರಾಸಾಯನಿಕ ಕ್ರಿಯೆಗೂ ಒಳಗಾಗುವುದೇ ಇಲ್ಲ. ’ಮರಳು’ ನೈವೇದ್ಯವಾಗುವುದಿಲ್ಲ. ಹಾಗೆ ಜೀವನದಲ್ಲಿ ನೀನು ಮರಳಿನಂತಿದ್ದರೆ ಏನೂ ಪ್ರಯೋಜನವಿಲ್ಲ. ಜೀವನದಲ್ಲಿ ಹಣ್ಣಿನಂತೆ, ಪತ್ರದಂತಿರು, ನೀನು ನೈವೇದ್ಯವಾಗಿರು.
’ಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ತ್ಯಾ ಪ್ರಯಚ್ಛತಿ...’
ನಿನ್ನ ಜೀವನ ಹೇಗಾದರೂ ಇರಲಿ, ಪತ್ರವಾಗಿರಲಿ, ನೀರಾಗಿರಲಿ, ಫಲವಾಗಿರಲಿ, ಹೂವಾಗಿರಲಿ ಅದನ್ನು ಭಕ್ತಿಯಿಂದ ಸಮರ್ಪಣೆ ಮಾಡು... ನಿನ್ನ ಜೀವನವೇ ಫಲ. ಸುಮ್ಮನೆ ಅಂಗಡಿಯಿಂದ ಬಾಳೆಹಣ್ಣು ತಂದು ದೇವರಿಗೆ ಸಮರ್ಪಣೆ ಮಾಡುವುದಲ್ಲ, ನೀನೇ ’ನೈವೇದ್ಯ’ವಾಗು. ನೀನು ಯಾವಾಗ ಪರಿಣಾಮಕಾರಿಯಾಗಿರುತ್ತೀಯೋ ಆಗ ನೀನು ಅರ್ಹನಾಗಿರುತ್ತೀಯ!
ಹಳೇದು, ನಿನ್ನೇದು, ಮೊನ್ನೇದು, ಹತ್ತು ವರ್ಷದ ಹಿಂದಿನದನ್ನೆಲ್ಲ ತಲೆಯಲ್ಲಿ ಹೊತ್ತುಕೊಂಡು ಕುಳಿತುಕೊಂಡರೆ ’ಮರಳು’ ನೀನು.... ಮರಳು ಜಡ! ಪ್ರತಿನಿತ್ಯ ನಿತ್ಯನೂತನ ಜೀವನವನ್ನು ನಾವು ಅನುಭವಿಸುತ್ತಿರಬೇಕು... ಅದೇ ನೈವೇದ್ಯ!!

* * * * *

ಶರೀರ ಶೋಷಣೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೧.೦೭.೨೦೦೩ರಂದು ಪ್ರಕಟವಾಗಿತ್ತು)

’ಶರೀರ ವೃತ್ತಿರ್ ವ್ರತಂ’ - ಇದು ಮುಂದಿನ ಸೂತ್ರ. ಮುಂದುವರೆದ ಸಾಧಕರಿಗೆ ಹಾಗೂ ಕೆಲವರು ತೀರಾ ಹಠದಿಂದ ವ್ರತ, ನಿಯಮ, ಉಪವಾಸ ಮಾಡಿ ಶರೀರವನ್ನು ಶೋಷಣೆಗೀಡುಮಾಡಿಕೊಳ್ಳುತ್ತಿರುತ್ತಾರಲ್ಲ ಅಂಥವರಿಗೆ.
ಪ್ರಪಂಚದಲ್ಲಿ ಜನ ಬೇರೆಯವರಿಗೆ ಕಷ್ಟ ಕೊಡ್ತಾರೆ, ತಮಗೆ ತಾವು ಕಷ್ಟ ಕೊಟ್ಟುಕೊಳ್ಳುತ್ತಾರೆ. ತುಂಬ ಜನ ವಿಪರೀತ ಉಪವಾಸ ಮಾಡೋದು, ತಮ್ಮ ಶರೀರಕ್ಕೆ ಪೀಡೆ ಮಾಡಿಕೊಳ್ಳುವುದು ಮಾಡ್ತಾರೆ. ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ ’ಶರೀರದಲ್ಲಿ ನಾನಿದ್ದೀನಿ. ನನಗೇ ಹಿಂಸೆ ಕೊಡ್ತಾರೆ ಇವರು, ಈ ಮೂಢ ಜನರು!’ ಅಂತ.
ನಾವು ಧರ್ಮ ಅನ್ನುವ ಹೆಸರಿನಲ್ಲಿ ನಮ್ಮನ್ನು ನಾವು ಶೋಷಣೆ ಮಾಡಿಕೊಳ್ತೀವಿ. ನಮ್ಮ ಶರೀರಕ್ಕೆ ತೀರಾ ತೊಂದರೆ ಉಂಟುಮಾಡಿಕೊಳ್ಳುತ್ತಿರುತ್ತೀವಿ. ವ್ಯಕ್ತಿ ನೋಡಿದರೆ ಗಾಳಿಗೆ ಹಾರಿಕೊಂಡು ಹೋಗುವ ಹಾಗಿರುತ್ತಾರೆ. ಸೋಮವಾರ ಶಿವನಿಗಾಗಿ ಉಪವಾಸ, ಗುರುವಾರ ಗುರುವಿಗೆ, ಶುಕ್ರವಾರ ದೇವಿಗೋಸ್ಕರ, ಶನಿವಾರ ರಾಮನಿಗಾಗಿ, ಆಂಜನೇಯನಿಗಾಗಿ, ಈ ರೀತಿ... ಉಪವಾಸ ಮಾಡೋದು! ಏನು, ಅನ್ನ ಒಂದು ತಿನ್ನಕೂಡದು ಅಷ್ಟೆ. ಬೇರೆ ಎಲ್ಲವನ್ನೂ ತಿನ್ನೋದು ಅಥವಾ ತೀರಾ ಉಪವಾಸ ಮಾಡಿ ಶರೀರವನ್ನು ದಂಡಿಸುವುದು. ಈ ಶರೀರವನ್ನು ನೀನು ದಂಡಿಸುತ್ತಾ ಇದರಲ್ಲಿರತಕ್ಕಂಥ ವೃತ್ತಿಗಳಿಗೆ ಆಘಾತ ಉಂಟು ಮಾಡ್ತಾ ಇದ್ದರೆ ’ಶಿವತುಲ್ಯೋ ಜಾಯತೆ...’ ಇಂತಹ ಆತ್ಮಪ್ರಕಾಶ ಉಂಟಾಗುವುದು ಹೇಗೆ ಸಾಧ್ಯ?
ಎಷ್ಟೋ ಜನ ಸಾಧಕರನ್ನು, ಸಾಧುಗಳನ್ನು ನೋಡಿ. ಅವರ ಮುಖದಲ್ಲಿ ಒಂದು ಪ್ರಸನ್ನತೇನೋ, ಶಾಂತಿಯೋ, ಶೋಭೇನೋ, ಮುಗ್ಧತೇನೋ ಕಾಣಿಸುವುದಿಲ್ಲ, ಯಾಕೆ? ಅವರು ಶರೀರದ ವೃತ್ತಿಯನ್ನು ಪೀಡೆ ಮಾಡಿಕೊಳ್ಳುತ್ತಿರುತ್ತಾರೆ. ಶರೀರವನ್ನು ದಂಡಿಸಿಕೊಳ್ಳುತ್ತಿರುತ್ತಾರೆ.

* * * * *

ವ್ರತ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೨.೦೭.೨೦೦೩ರಂದು ಪ್ರಕಟವಾಗಿತ್ತು)

’ಶರೀರ ವೃತ್ತಿರ್ ವ್ರತಂ’
ಎರಡು ತರಹೆಯ ಜನ ಇರುತ್ತಾರೆ. ಒಂದು: ಶರೀರವನ್ನೇ ಸರ್ವಸ್ವ ಎಂದು ತಿಳಿದುಕೊಂಡು ಅದರ ಪೋಷಣೆಯಲ್ಲೇ ಜೀವನವೆಲ್ಲಾ ಕಳೆದು ಬಿಡುವುದು. ಇನ್ನೊಂದು: ಈ ಶರೀರವನ್ನು ತೀರಾ ಸತಾಯಿಸಿ ಅದನ್ನು ದಂಡಿಸುವುದು ಹಾಗೂ ಅದರಲ್ಲೇ ತೃಪ್ತಿಪಡುವುದು ಇಂತಹವರಿರ್ತಾರೆ. ಈ ಎರಡೂ ತರಹೆಯ ಜನರಿಗೆ ’ಆತ್ಮಜ್ಞಾನ’ ಉಂಟಾಗುವುದು ಸಾಧ್ಯವೇ ಇಲ್ಲ. ಶರೀರ ಅಂದ ಮೇಲೆ ಅದಕ್ಕೆ ಹಸಿವಾಗುತ್ತಪ್ಪ, ಬಾಯಾರಿಕೆ ಆಗುತ್ತೆ, ನಿದ್ದೆ ಬರುತ್ತೆ, ಎಲ್ಲಾ ಮಾಡಬೇಕು ತಾನೆ?
’ಶರೀರ ವೃತ್ತಿರ್ ವ್ರತಂ’. ವ್ರತ ಅಂದರೇನು? ಯಾವುದನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡ್ತೀವೋ ಅದು ವ್ರತ. ’ಅಯ್ಯೋ ಮಾಡಬೇಕಲ್ಲಪ್ಪಾ’ ಅಂತ ಮಾಡೋದು ವ್ರತ ಅಲ್ಲ. ವ್ರತ ಯಾವುದು? ಎಲ್ಲಿ ಮನಸ್ಸು ಮಗ್ನವಾಗಿ ಸಂತೋಷದಿಂದ ತುಂಬಿಬಿಡುತ್ತದೋ ಅದು. ಮನೆಯಲ್ಲಿ ಶುಭಕಾರ್ಯ, ಸಂತೋಷ ಸಮಾರಂಭವಿದ್ದಾಗ, ಮನೆಗೆ ಬಂದವರನ್ನೆಲ್ಲಾ ನೋಡಿಕೊಳ್ಳುವುದರಲ್ಲೇ ತೃಪ್ತಿಯಾಗಿ ಬಿಡುತ್ತೆ. ಅವತ್ತು ಮನೆಯವರು ಸರಿಯಾಗಿ ಊಟ ಮಾಡಿರುವುದಿಲ್ಲ, ಮಾಡಲು ಮನಸ್ಸಾಗಲ್ಲ! ಮನಸ್ಸಂತೋಷವಾಗಿದ್ದಾಗ, ಪ್ರೇಮದಿಂದ ಮನಸ್ಸು ತುಂಬಿದ್ದಾಗ ಮಾಡತಕ್ಕಂಥಹುದು ವ್ರತ. ಈ ಸೂತ್ರವನ್ನು ಮುಂದೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.

* * * * *

ಸೂಕ್ಷ್ಮ ಸಂವೇದನೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೩.೦೭.೨೦೦೩ರಂದು ಪ್ರಕಟವಾಗಿತ್ತು)

"ಶರೀರ ವೃತ್ತಿರ್ ವ್ರತಂ"
ಈ ಶರೀರದಲ್ಲಿ ಉಂಟಾಗತಕ್ಕಂಥ ವೃತ್ತಿಗಳನ್ನು ಆದರದಿಂದ, ಪ್ರೇಮದಿಂದ ನೋಡತಕ್ಕಂಥಹುದೇ ವ್ರತ. ಹಸಿವಾಯ್ತಾ...? ಈ ಶರೀರದಲ್ಲಿರುವ ಭಗವಂತನೇ ’ಸ್ವಲ್ಪ ಊಟ ಬೇಕು’ ಅಂತ ಹೇಳುತ್ತಿದ್ದಾನೆ - ಎನ್ನುವ ಭಾವದಿಂದ ಊಟ ಕೊಡೋಣ, ಏಕೆಂದರೆ ಈ ಶರೀರ ನನ್ನ ಹತ್ತಿರದಲ್ಲಿದೆ. ಹತ್ತಿರದಲ್ಲಿದೆ, ಎಂಬ ಕಾರಣದಿಂದ ’ಈ’ ಶರೀರವೇ ’ನಾನು’ ಆಗುವುದಿಲ್ಲ. ಇದು ಹತ್ತಿರವಿರುವುದರಿಂದ ಇದರ ಸುಖ-ದುಃಖಗಳು, ಕಷ್ಟ-ಸುಖಗಳು ಹೆಚ್ಚು ಅನುಭವಕ್ಕೆ ಬರುತ್ತವೆ. ಹಾಗೆಯೇ ಮತ್ತೊಂದು ಶರೀರ ನನ್ನಿಂದ ದೂರ ಇದೆ ಎನ್ನುವ ಕಾರಣದಿಂದ ಅದು ’ನಾನಲ್ಲ’, ಬೇರೆಯದು ಎನಿಸುವುದಿಲ್ಲ - ಸೂಕ್ಷ್ಮತೆಯುಳ್ಳವರಿಗೆ.
ನೀವು ಎಲ್ಲಾದರೂ ಹೋಗುತ್ತಿರುತ್ತೀರ, ದಾರಿಯಲ್ಲಿ ಯಾರಿಗೋ ಅಪಘಾತವಾದುದನ್ನು ನೋಡುತ್ತೀರ ಎಂದುಕೊಳ್ಳೋಣ. ತಕ್ಷಣ ’ಅಯ್ಯೋ ದೇವರೇ...’ ಎಂದು ಮಿಡುಕಾಡುತ್ತೀರಿ, ಏನೋ ನಿಮಗೇ ಆದ ಹಾಗೆ ಎನಿಸಿಬಿಡುತ್ತೆ!
ಹೆಚ್ಚು ಸೂಕ್ಷ್ಮವಾದಷ್ಟೂ ವ್ಯಕ್ತಿಗೆ ಬೇರೆಯವರ ಕಷ್ಟ ಸುಖಗಳು ’ತನ್ನದೇ’ ಎನ್ನುವ ಭಾವನೆ ಉಂಟಾಗುತ್ತೆ. ಹಾಗೇನೇ ’ಈ’ ಶರೀರದಲ್ಲಿ ಉಂಟಾಗತಕ್ಕಂಥ ವೃತ್ತಿಗಳು, ಆಗುಹೋಗುಗಳು ನನ್ನದಲ್ಲ, ಹಾಗಿರುವಾಗ ಅದನ್ನು ದಂಡಿಸುವ ಅಧಿಕಾರವೂ ನನಗಿಲ್ಲ ಎಂದುಕೊಳ್ಳಿ. ’ಶರೀರ ವೃತ್ತಿರ್ ವ್ರತಂ’ ಆದ್ದರಿಂದ ಶರೀರಕ್ಕೆ ತೀರಾ ತೊಂದರೆಯುಂಟುಮಾಡಬೇಡಿ, ಸತಾಯಿಸಬೇಡಿ ಅನ್ನುವ ದೃಷ್ಟಿಯಿಂದ ಈ ಸೂತ್ರವನ್ನು ಹೇಳಿರುತ್ತಾರೆ.

* * * * *

ಜಪ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೪.೦೭.೨೦೦೩ರಂದು ಪ್ರಕಟವಾಗಿತ್ತು)

’ಕಥಾ ಜಪಃ’ ಯಾವುದು ನಮ್ಮ ಮನಸ್ಸಿನಲ್ಲಿ ಹುಟ್ಟುವುದರಿಂದ ಮನಸ್ಸು ಪ್ರಸನ್ನವಾಗುತ್ತದೋ ಅದು ಜಪ. ’ಜ’ ಎಂದರೆ ಹುಟ್ಟುವುದು, ’ಪ’ ಎಂದರೆ ಪಾಲನೆ ಮಾಡುವುದು. ಯಾವುದು ಮನಸ್ಸಿನಲ್ಲಿ ಹುಟ್ಟಿದಾಗ ಜೀವನದ ಪಾಲನೆಯಾಗುತ್ತದೆಯೋ, ಆಧ್ಯಾತ್ಮದ ಉತ್ಥಾನವಾಗುತ್ತದೆಯೋ ಅದು ಜಪ. ನಾವು ಆಡುವಂತಹ ಪ್ರತಿಯೊಂದು ಮಾತೂ ನಮ್ಮ ಜೀವನವನ್ನು ಊರ್ಧ್ವಗಾಮಿಯಾಗಿ ತೆಗೆದುಕೊಂಡು ಹೋದಾಗ ನಮ್ಮ ಪ್ರತಿಯೊಂದು ಮಾತೂ ಜಪವಾಯಿತು. ಬೇರೆ ಹಾಳೂಮೂಳೂ ವಿಚಾರ ತಲೆಗೆ ಬರದಿರಲಿ, ಜಪ ಮಾಡಿ. ಆಗ ನೀವು ಮೇಲೇರುತ್ತೀರ, ಶರೀರದಲ್ಲಿ ಚೈತನ್ಯದ ಸಂಚಾರವಾಗುತ್ತೆ. ಅದಕ್ಕಾಗಿ ಜಪ ಮಾಡಿ ಅಂತ ಹೇಳ್ತಾರೆ. ಯಾವ ಶಬ್ದವನ್ನು ಮತ್ತೆ ಮತ್ತೆ ಹೇಳುವುದರಿಂದ ಮನಸ್ಸಿನಲ್ಲಿ, ಶರೀರದಲ್ಲಿ ಊರ್ಧ್ವಗಾಮಿ ಚೇತನ, ಪ್ರೇಮಮಯಿ ಚೇತನ ಉಂಟಾಗುತ್ತದೆಯೋ ಅದು ಜಪ.
ಯಾವುದರಲ್ಲಿ ಮನಸ್ಸು ತಲ್ಲೀನವಾಯ್ತೋ, ಪ್ರೀತಿಯುಂಟಾಯ್ತೋ ಅದೇ ಮತ್ತೆ ಮತ್ತೆ ಬರುತ್ತಾ ಇರುತ್ತೆ, ಅನಾಯಾಸವಾಗಿ. ಇದಕ್ಕೇ ಜಪ ಅನ್ನುತ್ತೀವಿ. ಹಾಗಲ್ಲದೆ... ತಲೆಯಲ್ಲಿ ಬೇರೆ ಏನೋ ಓಡ್ತಾ ಇರುತ್ತೆ, ಮೇಲೆ ಮೇಲೆ ರಾಮ ರಾಮ ಅಥವಾ ಶಿವ ಶಿವಾ ಅಂತ ಹೇಳುತ್ತಾ ಇರೋದು... ಭಾವಕ್ಕೂ ಶಬ್ದಕ್ಕೂ ಯಾವುದೇ ಸಂಬಂಧವಿಲ್ಲದಿದ್ದಾಗ ಅದು ಜಪವಾಗುವುದಿಲ್ಲ. ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಮತ್ತೆ ಮತ್ತೆ ಸಹಜವಾಗಿ ಪುನರುಕ್ತಿಯಾಗತಕ್ಕಂಥ ಶಬ್ದವನ್ನು ಜಪ ಅನ್ನುತ್ತೀವಿ.

* * * * *

ಸಹಜತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೫.೦೭.೨೦೦೩ರಂದು ಪ್ರಕಟವಾಗಿತ್ತು)

’ಯತೀನಾಂ ಯಥ ಚಿತ್ತಾನಾಂ ಶಬ್ದಂ ಅರ್ಥಾನೊ ಧಾವತೆ’ ಎಂದರೆ ನಮ್ಮ ಚೇತನ ಪೂರ್ಣವಾಗಿ ಪ್ರಕಾಶವಾಗಿದ್ದಾಗ ಹೇಳಿದ ಒಂದು ಶಬ್ದದಲ್ಲಿ, ಮಾತಿನಲ್ಲಿ ಬೆಲೆಯಿರುತ್ತದೆ. ಸುಮ್ಮನೆ ಯಾರೋ ನಿಮಗೆ ’ನನಗೆ ನಿಮ್ಮ ಮೇಲೆ ತುಂಬ ಪ್ರೀತಿ ಇದೆ’ ಎನ್ನುತ್ತಾರೆ; ಬಾಯಿ ಉಪಚಾರದ ಮಾತಾದರೆ ಪ್ರಯೋಜನವಿಲ್ಲ. ಸಿನಿಮಾದಲ್ಲಿ ಅಭಿನಯ ಮಾಡೋರೆಲ್ಲ ಬೇಕಾದಷ್ಟು ಪ್ರೀತಿ, ಪ್ರೇಮ ತೋರಿಸ್ತಾರೆ. ಆದರೆ ಒಳಗಡೆ ಹನಿಯಷ್ಟೂ ಪ್ರೇಮ ಇರಲ್ಲ. ಪ್ರೀತಿ ಇರಲ್ಲ. ನಾಟಕ!
’ಕಥಾ ಜಪಃ’ ಆಡುವ ಪ್ರತಿಯೊಂದು ಶಬ್ದವೂ ಪ್ರೇಮಪೂರ್ವಕವಾಗಿ ಬರುತ್ತದೆ. ಇದು ಸಿದ್ಧರ ಲಕ್ಷಣ. ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಸೂತ್ರಗಳೆಲ್ಲವೂ ಸಿದ್ಧರ ಲಕ್ಷಣ, ಅಂದರೆ ಸಾಧನೆ ಸಂಪೂರ್ಣವಾಗಿ ಯಾರದ್ದಾಗಿದೆಯೋ, ಅವರ ಲಕ್ಷಣ ಅಂತ ಹೇಳಬಹುದು. ಅವರು ಶರೀರದಲ್ಲಿ ಆಗತಕ್ಕಂತಹ ವೃತ್ತಿಗಳನ್ನು ವ್ರತವನ್ನಾಗಿ ಆದರಿಸುತ್ತಾರೆ. ಅವರು ಶರೀರವನ್ನು ದೂಷಣೆ ಮಾಡುವುದಿಲ್ಲ ಮತ್ತು ಅವರು ಆಡತಕ್ಕಂಥ ಪ್ರತಿಯೊಂದು ಮಾತಿನಲ್ಲಿಯೂ ಪೂರ್ಣವಾಗಿ ಪ್ರೇಮವೇ ತುಂಬಿರುತ್ತದೆ.

* * * * *

ಪ್ರೀತಿಯಿರಲಿ ಮಾತಿನಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೬.೦೭.೨೦೦೩ರಂದು ಪ್ರಕಟವಾಗಿತ್ತು)

’ಕಥಾ ಜಪಃ’
ನಮ್ಮ ಜೀವನದಲ್ಲಿ ನಾವಾಡುವ ಸಾಕಷ್ಟು ಮಾತುಗಳೆಲ್ಲ ನಾಟಕೀಯವಾಗಿರುತ್ತವೆ. ಔಪಚಾರಿಕವಾದ ಜೀವನ ಆಗಿಬಿಟ್ಟಿದೆ. ಜೀವನದಲ್ಲಿ ಆಳವೇ ಬರ್ತಾ ಇಲ್ಲ ಜನಕ್ಕೆ. ’ಏನ್ರೀ ಹೇಗಿದ್ದೀರ, ಚೆನ್ನಾಗಿದೀರ?’ ಅಂತ ಕೇಳೋದರಲ್ಲೂ ಜೀವ ಇರಲ್ಲ.
ಮೇಲೆ ಮೇಲೆ ಕೇಳಿರುತ್ತಾರೆ, ಔಪಚಾರಿಕವಾಗಿ. ಮತ್ತೆ ಮತ್ತೆ ಕೇಳಿದ್ದನ್ನೇ ಕೇಳ್ತಾ ಇರ್ತಾರೆ. ಇವರು ಕೇಳಿದ್ದೂ ಜ್ಞಾಪಕ ಇರಲ್ಲ. ಅವರು ಹೇಳಿದ್ದನ್ನೂ ಸರಿಯಾಗಿ ಕೇಳಿಸಿಕೊಂಡಿರಲ್ಲ! ಹೆಚ್ಚು ಕಮ್ಮಿ ಎಲ್ಲಾ ಉತ್ಸವಗಳಲ್ಲಿ, ಸಮಾರಂಭದಲ್ಲಿ ಇದೇ ಆಗುತ್ತೆ. ಔಪಚಾರಿಕವಾದ ಮಾತುಕತೆ, ಔಪಚಾರಿಕವಾದ ವ್ಯವಹಾರ, ಔಪಚಾರಿಕವಾದ ಜೀವನ....!!
ಆದರೆ, ಒಬ್ಬ ಜ್ಞಾನಿಯ ಜೀವನ ಆ ತರಹ ಇರುವುದಿಲ್ಲ. ಜ್ಞಾನಿ ಒಂದು ಮಾತು ಕೇಳಿದರೆ ಅದರಲ್ಲಿ ಪೂರ್ಣಪ್ರೇಮ ತುಂಬಿರುತ್ತೆ. ಕಥಾ ಜಪ... ಆಡತಕ್ಕಂಥ ಪ್ರತಿಯೊಂದು ಮಾತೂ ಜಪಮಯವಾಗಿರುತ್ತದೆ. ಅದರಲ್ಲಿ ಸಹಜತೆ, ಸತ್ಯ ತುಂಬಿರುತ್ತೆ, ಪ್ರೇಮ ತುಂಬಿರುತ್ತೆ. ಹಾಗೆ ನೀವು ಆಡತಕ್ಕಂಥ ಪ್ರತಿಯೊಂದು ಮಾತನ್ನೂ ಜಾಗರೂಕವಾಗಿ ಆಡಿ, ಪ್ರೇಮಪೂರ್ವಕವಾಗಿ, ನೈಜತೆಯಿಂದ ಆಡಿ. ಏನೋ ಸುಮ್ಮನೆ ಉಪಚಾರಕ್ಕೆ ಅಂತ ಮಾತನಾಡಬೇಡಿ. ಅದನ್ನು ’ಕಥಾ ಜಪ’ ಎಂದು ಭಾವಿಸಿ.

* * * * *

ದಾ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೭.೦೭.೨೦೦೩ರಂದು ಪ್ರಕಟವಾಗಿತ್ತು)

’ದಾನಂ ಆತ್ಮಜ್ಞಾನಂ’
ಈ ಪ್ರಪಂಚದಲ್ಲಿ ನಾವಿರಬೇಕಾದರೆ ’ಆದಾನ-ಪ್ರದಾನ’ ಆಗುತ್ತಲೇ ಇರಬೇಕು, ಆಗುತ್ತಲೇ ಇರುತ್ತದೆ. ಉಸಿರು ಒಳಕ್ಕೆ ತೆಗೆದುಕೊಳ್ತೀವಿ. ಅಲ್ಲಿಯೇ ಇಟ್ಟುಕೊಳ್ಳಲಾಗುವುದಿಲ್ಲ. ಅದನ್ನು ಹೊರಗೆ ಬಿಟ್ಟು ಮತ್ತೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮಿಂದ ಬೇರೆಯವರಿಗೆ ಏನೋ ಕೊಡುತ್ತಿರುತ್ತೀವಿ. ಬೇರೆಯವರಿಂದ ಏನೋ ತೆಗೆದುಕೊಳ್ಳುತ್ತಿರುತ್ತೀವಿ. ಸ್ಥೂಲವಾಗಿಯೋ, ಸೂಕ್ಷ್ಮದಲ್ಲಿಯೋ ’ಆದಾನ-ಪ್ರದಾನ’ ಸತತವಾಗಿ ನಡೆಯುತ್ತಲೇ ಇರುತ್ತೆ. ಆದರೆ ಬೇರೆಲ್ಲಕ್ಕಿಂತ ಉತ್ತಮವಾದ ದಾನ, ಶ್ರೇಷ್ಠವಾದ ಕೊಡುಗೆ ಯಾವುದು? ಅದು ’ಆತ್ಮಜ್ಞಾನ’.
ಎಷ್ಟೋ ಸಲ ಜನರು ಮದುವೆ ಮುಂತಾದ ಸಮಾರಂಭಗಳಲ್ಲಿ ಯಾರು ಎಷ್ಟು ಬೆಲೆಯ ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡಿಕೊಂಡು, ಅವರಿಗೆ ಅದೇ ರೀತಿ ಉಡುಗೊರೆ ಕೊಡುತ್ತಾರೆ. ಇದು ದಾನ ಅಲ್ಲ.
ದಾನ ಇಲ್ಲದೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಒಂದು ಶುಭಕಾರ್ಯವಾಗಲೀ, ಅಶುಭ ಕಾರ್ಯವಾಗಲೀ ದಾನ ಕೊಡ್ತೀವಿ. ಕೊಡುವುದು, ಹಂಚಿಕೊಳ್ಳುವುದು ನಮ್ಮ ಸಂಸ್ಕೃತಿಯ ಬುನಾದಿ ಹಾಗೂ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಹಬ್ಬ ಹುಣ್ಣಿಮೆ ಅಂದರೆ ಕೊಡುಗೆ ಇದ್ದೇ ಇರುತ್ತೆ. ಅಕ್ಕಪಕ್ಕದವರಿಗೋ, ಸಮೀಪದ ಬಂಧುಬಾಂಧವರಿಗೋ ಯಾರಿಗಾದರೂ ಏನಾದರೂ ಕೊಡಬೇಕು ಅನ್ನುವ ಪದ್ಧತಿ ಇದೆ. ಇದರಲ್ಲಿ ಬಹಳ ಶ್ರೇಯಸ್ಸಿದೆ, ರಹಸ್ಯವೂ ಇದೆ.

ಗುರುವಾರ, ಏಪ್ರಿಲ್ 4, 2013

ಪ್ರೇಮ ಮತ್ತು ಕ್ಷಮೆ


ಎಪ್ರಿಲ್ ೦೪, ೨೦೧೩
ಅಟ್ಲಾಂಟಾ, ಜಾರ್ಜಿಯಾ

ಓಂ ಶಾಂತಿಃ ಶಾಂತಿಃ ಶಾಂತಿಃ (ವೈಯಕ್ತಿಕವಾಗಿ ಮತ್ತು ಸಮಸ್ತ ಜಗತ್ತಾಗಿ, ದೇವರು ನಮಗೆ ಶಾಂತಿಯನ್ನು ತರಲಿ)
ಇವತ್ತು ಪ್ರೇಮ ಮತ್ತು ಕ್ಷಮಾಪಣೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡುವುದು ನನಗೆ ಸಂತೋಷವನ್ನು ತರುತ್ತಿದೆ. ಈ ವಿಷಯವು ಬಹಳ ವಿಶಾಲವಾದುದು, ಬಹಳ ಮಹತ್ತಾದುದು ಮತ್ತು ಆದರೂ ನಮ್ಮ ಮಾನವೀಯ ಅಸ್ತಿತ್ವಕ್ಕೆ ಬಹಳ ಮೂಲಭೂತವಾದುದು. ಆದುದರಿಂದ, ಪ್ರೇಮ ಮತ್ತು ಕ್ಷಮಾಪಣೆಯ ವಿಷಯಕ್ಕೆ ನಾನು ಹೇಗೆ ನ್ಯಾಯವನ್ನು ಒದಗಿಸಬಹುದೆಂದು ನೋಡುತ್ತೇನೆ.

ಮೊದಲನೆಯದಾಗಿ, ಪ್ರೇಮವೆಂದರೆ ಅಡಗಿಸಿಡಲಾಗದ್ದು. ನಿಮಗೆ ಪ್ರೇಮವನ್ನು ಅಡಗಿಸಿಡಲೂ ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಅದು ನಿಮ್ಮ ಕಣ್ಣುಗಳಲ್ಲಿ, ನಿಮ್ಮ ಮುಗುಳ್ನಗೆಯಲ್ಲಿ, ನಿಮ್ಮ ಹಾವಭಾವಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಿಮಗೆ ಯಾವತ್ತಿಗೂ ಪ್ರೇಮವನ್ನು ಅಡಗಿಸಿಡಲು ಸಾಧ್ಯವಿಲ್ಲ; ಅದೇ ವೇಳೆ ನಿಮಗೆ ಪ್ರೇಮವನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಜಗತ್ತಿನ ಸುತ್ತಲೂ ಇರುವ ಎಲ್ಲಾ ಪ್ರೇಮಿಗಳು ಅನುಭವಿಸಿರುವ ಸಂಕಟವು ಇದೇ. ಅವರು ಎಷ್ಟೇ ವ್ಯಕ್ತಪಡಿಸಿದರೂ ಕೂಡಾ, "ನಾನು ಬಯಸುವ ರೀತಿಯಲ್ಲಿ ನನಗೆ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ" ಎಂದು ಭಾವಿಸುತ್ತಾರೆ. ಅದು ಪ್ರೇಮದ ಸ್ವಭಾವ.

ಅದೇ ರೀತಿಯಲ್ಲಿ, ಸತ್ಯವೆಂದರೆ ನೀವು ತಪ್ಪಿಸಲು ಸಾಧ್ಯವಾಗದೇ ಇರುವಂತಹದ್ದು. ನಿಮಗೆ ಸತ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದರೂ ನಿಮಗೆ ಸತ್ಯವನ್ನು ನಿರೂಪಣೆ ಮಾಡಲು ಸಾಧ್ಯವಿಲ್ಲ.

ಸೌಂದರ್ಯವೆಂದರೆ, ಯಾವುದನ್ನು ನಿಮಗೆ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲವೋ ಅದು, ಮತ್ತು ನಿಮಗೆ ಅದನ್ನು ತ್ಯಜಿಸಲು ಕೂಡಾ ಸಾಧ್ಯವಿಲ್ಲ. ನಿಮಗೆ ಯಾವತ್ತಿಗೂ ಸೌಂದರ್ಯವನ್ನು ತ್ಯಜಿಸಲು ಸಾಧ್ಯವಿಲ್ಲ. ಮತ್ತು ಜೀವನವು ಸತ್ಯ, ಪ್ರೇಮ ಮತ್ತು ಸೌಂದರ್ಯವಾಗಿದೆ; ಎಲ್ಲಾ ಮೂರು ವಿಷಯಗಳು ಜೊತೆಯಲ್ಲಿ. ಆದರೆ ನಮ್ಮ ಅನುಭವವು ಬೇರೇನೋ ಆಗಿದೆ.

ನಾವು ನಮ್ಮ ಜೀವನದಲ್ಲಿ ಎಲ್ಲಾ ವೇಳೆಯೂ ಪ್ರೇಮವನ್ನು ಅನುಭವಿಸುವುದಿಲ್ಲ. ನಮಗೆ ದ್ವೇಷ, ಮಾತ್ಸರ್ಯ, ಲೋಭ, ದುರಹಂಕಾರ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಕಂಡುಬರುತ್ತವೆ.

ಮಕ್ಕಳಾಗಿ, ನಾವೆಲ್ಲರೂ ಶುದ್ಧವಾದ ಪ್ರೇಮದೊಂದಿಗೆ ಹುಟ್ಟಿದೆವು. ನಾವು ದೊಡ್ಡವರಾಗಿ ಬೆಳೆಯುತ್ತಿದ್ದಂತೆ ಏನಾಯಿತು? ಈ ಮುಗ್ಧತೆಯನ್ನು ನಾವು ಎಲ್ಲಿ ಕಳೆದುಕೊಂಡೆವು? ನಮಗೇನಾಯಿತು?

ಈ ನಕಾರಾತ್ಮಕ ಭಾವನೆಗಳ ಶಾಸ್ತ್ರದ ಒಳಕ್ಕೆ ಆಳವಾಗಿ ನಾವು ನೋಡಿದರೆ, ಈ ನಕಾರಾತ್ಮಕ ಭಾವನೆಗಳ ಕೆಳಗೆ ಕೂಡಾ ಪ್ರೇಮವಿದೆಯೆಂಬುದು ನಮಗೆ ಕಂಡುಬರುತ್ತದೆ. ನಾವು ಕೋಪಗೊಳ್ಳುತ್ತೇವೆ ಯಾಕೆಂದರೆ ನಾವು ಪರಿಪೂರ್ಣತೆಯನ್ನು ಪ್ರೀತಿಸುತ್ತೇವೆ. ಯಾರೆಲ್ಲಾ ಪರಿಪೂರ್ಣತೆಯನ್ನು ಪ್ರೀತಿಸುವರೋ ಅವರೆಲ್ಲಾ ಕೋಪಕ್ಕೆ ಒಳಗಾಗುತ್ತಾರೆ. ವಿಷಯಗಳು ಪರಿಪೂರ್ಣವಾಗಿರಬೇಕೆಂದು ನೀವು ಬಯಸುವ ಕಾರಣ, ಅವುಗಳು ಪರಿಪೂರ್ಣವಾಗಿಲ್ಲದಿರುವಾಗ, ನೀವು ಕೋಪಗೊಳ್ಳುತ್ತೀರಿ.

ಅದೇ ರೀತಿಯಲ್ಲಿ ಲೋಭವೆಂದರೇನು? ವಸ್ತುಗಳು ಜನರಿಗಿಂತ ಹೆಚ್ಚು ಮುಖ್ಯವಾದವು ಎಂದು ನೀವು ಯೋಚಿಸುವಾಗ, ನೀವದನ್ನು ಲೋಭವೆಂದು ಕರೆಯುವಿರಿ. ಒಬ್ಬ ವ್ಯಕ್ತಿಯ ಕಡೆಗೆ ನಿಮಗಿರುವ ಪ್ರೇಮವು, ಆ ವ್ಯಕ್ತಿಯ ಕ್ಷೇಮಕ್ಕಿಂತ ಹೆಚ್ಚಾಗಿರುವಾಗ, ನೀವದನ್ನು ಮಾತ್ಸರ್ಯವೆಂದು ಕರೆಯುವಿರಿ. ನೀವು ನಿಮ್ಮನ್ನೇ ಅತಿಯಾಗಿ ಪ್ರೀತಿಸುವಾಗ, ನೀವದನ್ನು ದುರಹಂಕಾರವೆಂದು ಕರೆಯುವಿರಿ.

ಪ್ರೇಮದಿಂದ ಜ್ಞಾನವನ್ನು ಕಳೆದರೆ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಏಳುತ್ತವೆ. ಜ್ಞಾನದೊಂದಿಗಿನ ಪ್ರೇಮವು ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿರಿಸುವುದು ಮತ್ತು ದೈವತ್ವದ ಪಥದಲ್ಲಿರಿಸುವುದು. ಮತ್ತು ಅದುವೇ ಇಲ್ಲಿರುವ ಎಲ್ಲಾ ಪೂಜ್ಯರ ಸಂದೇಶವಾಗಿದೆ; ನಿಮ್ಮನ್ನು ಜ್ಞಾನದೊಂದಿಗೆ ಒಂದುಗೂಡಿಸುವುದು.

ಪ್ರೀತಿಸುವುದು ಹೇಗೆಂಬುದನ್ನು ನಾವು ಕಲಿಯಬೇಕಾಗಿಲ್ಲ. ಪ್ರೀತಿಯು ನಮ್ಮ ಸ್ವಭಾವವಾಗಿದೆ. ನಮ್ಮ ಶರೀರಗಳು ಅಮಿನೋ ಆಸಿಡ್, ಸಸಾರಜನಕಗಳು, ಕಾರ್ಬೋಹೈಡ್ರೇಟುಗಳು, ಮೊದಲಾದವುಗಳಿಂದ ಮಾಡಲ್ಪಟ್ಟಿರುವಂತೆ, ನಮ್ಮ ಆತ್ಮವು ಪ್ರೀತಿಯಿಂದ ಮಾಡಲ್ಪಟ್ಟಿದೆ. ನಾವು ಪ್ರೀತಿಯೇ ಆಗಿದ್ದೇವೆ. ಪ್ರೀತಿಯು ಕೇವಲ ಒಂದು ಭಾವನೆಯಲ್ಲ, ಯಾವುದೋ ರೀತಿಯ ಭಾವನಾತ್ಮಕ ಪ್ರಕೋಪವಲ್ಲ. ಪ್ರೀತಿಯು ನಮ್ಮ ಸ್ವಭಾವವೇ ಆಗಿದೆ. ದೇವರು ನಮಗದನ್ನು ದಯಪಾಲಿಸಿದ ರೀತಿಯಲ್ಲಿ ಅದನ್ನಿರಿಸಲು ನಮಗೆ ಜ್ಞಾನದ ಅಗತ್ಯವಿದೆ, ಮತ್ತು ಅದನ್ನೇ ಜಗತ್ತಿನಲ್ಲಿರುವ ಎಲ್ಲಾ ಧರ್ಮಗ್ರಂಥಗಳು ನಮಗೆ ಹೇಳುವುದು.

ಹಿಂದೂ ಧರ್ಮಗ್ರಂಥದಲ್ಲಿ, ದೇವರ ಸ್ವಭಾವವನ್ನು ಅಸ್ತಿ, ಭಾತಿ, ಪ್ರೀತಿ ಅಂದರೆ ಅಸ್ತಿತ್ವ, ಪ್ರಭೆ ಮತ್ತು ಪ್ರೀತಿಯೆಂದು ವಿವರಿಸಲಾಗಿದೆ.

ದೇವರು ಅಸ್ತಿತ್ವದಲ್ಲಿರುವರು. ಅವನು ಸ್ವಯಂ-ಪ್ರಭೆಯಾಗಿರುವನು ಮತ್ತು ಅವನು ಪ್ರೀತಿಯಾಗಿರುವನು. ಒಬ್ಬನೇ ಒಬ್ಬ ದೇವರಿರುವುದು, ಹಲವಾರಲ್ಲ. ಹೆಚ್ಚಾಗಿ ಜನರು, ಹಿಂದುತ್ವವೆಂದರೆ ಹಲವಾರು ದೇವರುಗಳೆಂದು ಯೋಚಿಸುತ್ತಾರೆ. ವಿಷಯ ಅದಲ್ಲ. ಅದು, ಒಬ್ಬ ದೇವರು ಹಲವಾರು ವೇಷಭೂಷಣಗಳಲ್ಲಿ, ತನ್ನನ್ನೇ ಹಲವಾರು ರೂಪಗಳಲ್ಲಿ ವ್ಯಕ್ತಪಡಿಸುವುದು. ಆದರೆ ಅದು ಒಬ್ಬನೇ ಒಬ್ಬ ದೇವರು. ನಿಮಗೆ ನಾನೊಂದು ಉದಾಹರಣೆಯನ್ನು ಕೊಡುತ್ತೇನೆ. ಒಂದೇ ಗೋಧಿಯಿಂದ ನಾವು ಕಾಲ್ಜ಼ೋನ್, ಕಪ್ ಕೇಕ್, ಬ್ರೆಡ್ ಮತ್ತು ಬೇಗಲ್ ಗಳನ್ನು ತಯಾರಿಸುತ್ತೇವೆ. ಇವುಗಳೆಲ್ಲವೂ ಗೋಧಿಯ ವಿವಿಧ ಅಭಿವ್ಯಕ್ತಿಗಳಾಗಿವೆ. ಅದೇ ರೀತಿಯಲ್ಲಿ, ಹಲವಾರು ರೂಪಗಳಲ್ಲಿ ವ್ಯಕ್ತಗೊಂಡಿರುವುದು ಒಂದೇ ದೈವತ್ವವಾಗಿದೆ.

ದೇವರೆಂದರೆ ಪ್ರೀತಿ ಮತ್ತು ನಾವು ಕೂಡಾ. ಎಲ್ಲೋ ನಾವು ಈ ಜ್ಞಾನವನ್ನು ಕಳಕೊಂಡೆವು. ನಾವು ಮುಗ್ಧತೆಯನ್ನು ಕಳಕೊಂಡೆವು. ನಾವು ನಮ್ಮ ನಡುವೆ ಗೋಡೆಗಳನ್ನು ಕಟ್ಟಲು ಪ್ರಾರಂಭಿಸಿದೆವು. ಆಗಲೇ ಪ್ರಪಂಚದಲ್ಲಿ ಎಲ್ಲಾ ನಕಾರಾತ್ಮಕ ಭಾವನೆಗಳು ಮತ್ತು ಪ್ರವೃತ್ತಿಗಳು ಶುರುವಾದುದು.

ನಮ್ಮನ್ನು ಅಭಿವೃದ್ಧಿಗೊಳಿಸಲು, ಮತ್ತು ಪ್ರಾರ್ಥನೆಯ ಆಳಕ್ಕೆ ಹೋಗಲು, ನಾವು ಐದು ವಿರಾಮದ ದಿನಗಳನ್ನು ತೆಗೆದುಕೊಳ್ಳಬೇಕು ಮತ್ತು ಐದು ಅನುಭವಗಳನ್ನು ಹೊಂದಬೇಕು.

ಮೊದಲನೆಯ ಅನುಭವವೆಂದರೆ, ನಾವು ಒಂದು ದಿನವನ್ನು  ಒಂದು ಸೆರೆಮನೆಯಲ್ಲಿ ಕಳೆಯಬೇಕು. ಸೆರೆಮನೆಯಲ್ಲಿ ಒಂದು ದಿನವನ್ನು ಕಳೆಯಲು ನೀವೊಂದು ಅಪರಾಧವನ್ನೆಸಗಬೇಕಾಗಿಲ್ಲ. ಸುಮ್ಮನೆ ಹೋಗಿ ಅಲ್ಲಿ ಒಂದು ದಿನವನ್ನು ಕಳೆಯಿರಿ ಮತ್ತು ಖೈದಿಗಳೊಂದಿಗೆ ಮಾತನಾಡಿ. ಈ ಜನರೊಂದಿಗೆ; ಉಳಿದ ಸಮಾಜದಿಂದ ಮತ್ತು ಜಗತ್ತಿನಿಂದ ನಿಂದಿಸಲ್ಪಟ್ಟವರೊಂದಿಗೆ ನೀವು ಮಾತನಾಡುವಾಗ, ಅವರಲ್ಲಿ ಪ್ರತಿಯೊಬ್ಬರೊಳಗೂ ಒಬ್ಬ ಸುಂದರವಾದ ವ್ಯಕ್ತಿಯು ಅಡಗಿರುವನು ಎಂಬುದನ್ನು ನೀವು ತಿಳಿಯುವಿರಿ, ಹಾಗೂ ಕ್ಷಮಾಪಣೆಯು ನಿಮ್ಮೊಳಗೆ ಸಹಜವಾಗಿ ಬರುವುದೆಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರತಿಯೊಬ್ಬ ಅಪರಾಧಿಯೊಳಗೆ, ಅಲ್ಲೊಬ್ಬ ಸಹಾಯಕ್ಕಾಗಿ ಕೂಗುವ ನಿರಪರಾಧಿಯಿರುತ್ತಾನೆ. ನೀವೊಂದು ವಿಶಾಲ ಕೋನವಿರುವ ಲೆನ್ಸಿನಿಂದ ನೋಡಿದಾಗ, ಒಬ್ಬ ಅಪರಾಧಿಯೂ ಕೂಡಾ ಒಬ್ಬ ನಿರಪರಾಧಿಯೆಂಬುದು ನಿಮಗೆ ಕಾಣಿಸುತ್ತದೆ.

ಅಪರಾಧಿಯೊಳಗಿರುವ ಆ ನಿರಪರಾಧಿಯನ್ನು ನೀವು ನೋಡುವಾಗ, ನೀವು ಕ್ಷಮಿಸುವ ಅಗತ್ಯವಿರುವುದಿಲ್ಲ, ಕ್ಷಮಾಪಣೆಯು ಆಗುತ್ತದೆ; ವಾಸ್ತವವಾಗಿ ಸಹಾನುಭೂತಿಯು ಸಹಜವಾಗಿ ನಿಮ್ಮ ಹೃದಯದಲ್ಲಿ ಉದಯಿಸುತ್ತದೆ. ಅಪರಾಧ ಸಂಭವಿಸುವುದು ತಿಳುವಳಿಕೆಯ ಕೊರತೆಯಿಂದ, ತಪ್ಪಾದ ಶಿಕ್ಷಣದಿಂದ, ತಪ್ಪಾದ ಉಪದೇಶದಿಂದ, ಭಾವನಾತ್ಮಕ ಪ್ರಕೋಪದಿಂದ; ಯಾಕೆಂದರೆ ನಮ್ಮ ಆಕ್ರೋಶವನ್ನು, ಕ್ರೋಧವನ್ನು ಮತ್ತು ನಿರಾಶೆಗಳನ್ನು ನಿಯಂತ್ರಿಸುವುದು ಹೇಗೆಂಬುದು ನಮಗೆ ತಿಳಿಯದು. ಅನಿಯಂತ್ರಿತವಾದ ಭಾವನೆಗಳು ಕಾರ್ಯಗತವಾಗುವಾಗ, ಅದೊಂದು ಅಪರಾಧವಾಗುತ್ತದೆ. ಈ ಅನಿಯಂತ್ರಿತ ಭಾವನೆಗಳನ್ನು ತಡೆಹಿಡಿಯುವುದು ಜ್ಞಾನವಾಗಿದೆ. ನೀವು ಕಾರ್ಯ ಮಾಡುವ ಮುನ್ನ ನೀವು ಯೋಚಿಸುವಂತೆ ಮಾಡುವುದು ಜ್ಞಾನವಾಗಿದೆ. ನೀವು ಮೊದಲು ಕಾರ್ಯ ಮಾಡಿ, ಅದರ ಬಗ್ಗೆ ನಂತರ ಯೋಚಿಸುವಾಗ ಅಪರಾಧವಾಗುತ್ತದೆ.

ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಿದವರಿದ್ದಾರೆ (ತಪ್ಪು ತಿಳುವಳಿಕೆ ಅಥವಾ ಸಿದ್ಧಾಂತಗಳ ಕಾರಣದಿಂದ), ಉದ್ದೇಶರಹಿತವಾಗಿ ತಪ್ಪುಗಳನ್ನು ಮಾಡಿದವರಿದ್ದಾರೆ (ತಿಳುವಳಿಕೆಯ ಕೊರತೆಯಿಂದ). ಒಬ್ಬರು ಒಂದು ಅಪರಾಧವನ್ನೆಸಗುವುದು ಅಥವಾ ಒಂದು ತಪ್ಪನ್ನು ಮಾಡುವುದು ಈ ಎರಡು ಸ್ಥಿತಿಗಳಿಂದಾಗಿದೆ. ಜನರು ತಪ್ಪುಗಳನ್ನೆಸಗುವುದು ಜ್ಞಾನದ ಕೊರತೆಯಿಂದ, ಸಂತೋಷದ ಕೊರತೆಯಿಂದ ಅಥವಾ ದೇವರೊಂದಿಗಿನ ಆಂತರಿಕ ಸಂಪರ್ಕದ ಕೊರತೆಯಿಂದ. ಸಂತೋಷವಾಗಿರುವ, ತೃಪ್ತರಾಗಿರುವ ಮತ್ತು ಪ್ರೀತಿಯಲ್ಲಿರುವ ಒಬ್ಬರು ಯಾರಿಗೂ ತೊಂದರೆಯನ್ನುಂಟುಮಾಡರು. ಅದು ಅಸಾಧ್ಯ.

ಒಬ್ಬರು ಇನ್ನೊಬ್ಬರಿಗೆ ತೊಂದರೆ ನೀಡಿದರೆ, ಅದು ಯಾಕೆಂದರೆ ಅವರೊಳಗೆ ಗುಣಮುಖವಾಗಬೇಕಾಗಿರುವ ಒಂದು ಆಳವಾದ ಗಾಯ ಅಥವಾ ಗಾಯದ ಗುರುತು ಇರುತ್ತದೆ. ಆದುದರಿಂದ ಒಂದು ದಿನವನ್ನು ಸೆರೆಮನೆಯಲ್ಲಿ ಕಳೆಯುವುದು ಒಂದು ಬಹಳ ಒಳ್ಳೆಯ ವಿಷಯ. ಅದು ನಮ್ಮ ಅರಿವನ್ನು ವಿಸ್ತಾರಗೊಳಿಸುವುದು ಮತ್ತು ಕ್ಷಮಾಪಣೆಯ ಅಗತ್ಯವಿರುವ ಆ ಜನರನ್ನು ನಾವು ಅರ್ಥಮಾಡಿಕೊಳ್ಳುವಂತೆ ಮಾಡುವುದು. ಆಗ ನಮಗೆ ಕ್ಷಮಾಪಣೆಯು ಸುಲಭವಾಗುತ್ತದೆ.

ಎರಡನೆಯ ಅನುಭವವೆಂದರೆ, ಆಸ್ಪತ್ರೆಯಲ್ಲಿ ಒಂದು ದಿನವನ್ನು ಕಳೆಯುವುದು. ಯಾತನೆಯನ್ನು ಅನುಭವಿಸುತ್ತಿರುವ ರೋಗಿಗಳನ್ನು ನೀವು ನೋಡುವಾಗ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನೀವು ದೇವರಿಗೆ ಧನ್ಯವಾದವನ್ನರ್ಪಿಸುವಿರಿ. ಸಹಾನುಭೂತಿ ಮತ್ತು ಕೃತಜ್ಞತೆಗಳು ನಿಮ್ಮೊಳಗೆ ಏಳುತ್ತವೆ.

ಮೂರನೆಯ ಅನುಭವವೆಂದರೆ, ಒಂದು ದಿನವನ್ನು ಒಬ್ಬ ಶಾಲಾ ಶಿಕ್ಷಕನಾಗಿ ಕಳೆಯುವುದು, ವಿಶೇಷವಾಗಿ ಸವಾಲುಗಳನ್ನೆದುರಿಸುತ್ತಿರುವ ಮಕ್ಕಳೊಂದಿಗೆ. ನೀವು ಅವರಿಗೆ ಕಲಿಸಬೇಕಿದ್ದರೆ ಮತ್ತು ಅವರು ಕಲಿಯದಿದ್ದರೆ, ಅವರನ್ನು ಸ್ವೀಕರಿಸಲು ಹಾಗೂ ಅವರು ಅದನ್ನು ಕಲಿಯುವ ವರೆಗೆ ಒಂದೇ ವಿಷಯವನ್ನು ಪುನಃ ಪುನಃ ಆವರ್ತಿಸಲು ಅದು ನಿಮಗೆ ತಾಳ್ಮೆಯನ್ನು ಕೊಡುತ್ತದೆ. ತಾಳ್ಮೆಯೊಂದಿಗೆ ಇತರರಿಗೆ ಅರ್ಥಮಾಡಿಸುವುದು ಹೇಗೆಂಬುದನ್ನು ನಾವು ಕಲಿಯಬಹುದು. ಒಬ್ಬ ಶಾಲಾಶಿಕ್ಷಕನಾಗುವುದು ಒಂದು ದೊಡ್ಡ ಸವಾಲಾಗಿದೆ.

ಜರ್ಮನಿಯಲ್ಲಿ ೪೦% ಶಾಲಾ ಶಿಕ್ಷಕರು ಖಿನ್ನತೆಗೊಳಗಾಗಿರುವರು ಎಂದು ಹೇಳುವ ಅಂಕಿ ಅಂಶಗಳ ಬಗ್ಗೆ ನಾನು ಕೇಳಿದ್ದೇನೆ.

ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಗೆ ಏನಾಗಬಹುದೆಂದು ಸುಮ್ಮನೆ ಊಹಿಸಿ. ಅವರು ದಿನವಿಡೀ ಒಂದು ಖಿನ್ನತೆಗೊಳಗಾದ ಮುಖವನ್ನು ನೋಡಬೇಕು ಮತ್ತು ಖಿನ್ನರಾಗಿ ಮನೆಗೆ ಮರಳಿ ಬರಬೇಕು.

ನಿಮ್ಮಲ್ಲೇನಿದೆಯೋ ಅದನ್ನು ಮಾತ್ರ ನಿಮಗೆ ಕೊಡಲು ಸಾಧ್ಯ. ನಿಮ್ಮಲ್ಲಿ ಆನಂದವಿದ್ದರೆ, ನೀವು ಆನಂದವನ್ನು ಕೊಡುವಿರಿ.

ನಿಮ್ಮಲ್ಲಿ ಪ್ರೀತಿಯಿದ್ದರೆ, ನೀವು ಪ್ರೀತಿಯನ್ನು ಕೊಡುವಿರಿ. ನೀವು ಖಿನ್ನರಾಗಿದ್ದರೆ, ನೀವು ಖಿನ್ನತೆಯನ್ನು ಮಾತ್ರ ಕೊಡಲು ಸಾಧ್ಯ.

ಇದು ದುರದೃಷ್ಟಕರ ಯಾಕೆಂದರೆ ನಮ್ಮ ಮನಸ್ಸು ಮತ್ತು ಭಾವನೆಗಳನ್ನು ನಿರ್ವಹಿಸುವುದು ಹೇಗೆಂಬುದು ನಮಗೆ ತಿಳಿಯದು.

ಒಬ್ಬ ಶಿಕ್ಷಕನಾಗಿ ಶಾಲೆಯಲ್ಲಿರುವುದು ನಮಗೆ, ಅಜ್ಞಾನವನ್ನು ಸಹಿಸಲಿರುವ ಮತ್ತು ಪ್ರೀತಿಯಿಂದ ಕಲಿಸಲಿರುವ ಅಗಾಧವಾದ ತಾಳ್ಮೆಯನ್ನು ನೀಡುವುದು. ಯಾರು ಪ್ರೀತಿಯನ್ನು ಬೇಷರತ್ತಾಗಿ ನೀಡುವನೋ ಅವನು ಒಬ್ಬ ಶಿಕ್ಷಕ.

ಒಬ್ಬರು ಒಮ್ಮೆ ನನ್ನಲ್ಲಿ ಕೇಳಿದರು, "ನೀವು ಮಾಡುತ್ತಿರುವ ಎಲ್ಲವನ್ನೂ ಮಾಡುವುದರಿಂದ ನಿಮಗೇನು ಸಿಗುತ್ತದೆ? ನೀವು ಯಾಕೆ ಹಗಲು ರಾತ್ರಿ ಜನರೊಂದಿಗೆ ಮಾತನಾಡುತ್ತಾ, ಉಸಿರಾಟ ವ್ಯಾಯಾಮದ ಕಾರ್ಯಾಗಾರಗಳನ್ನು ಮಾಡುತ್ತಾ ಅಷ್ಟೊಂದು ದೇಶಗಳಿಗೆ ಪ್ರಯಾಣ ಮಾಡುವಿರಿ? ನಿಮಗೇನು ಸಿಗುವುದು?"

ನಾನು ಅವನಲ್ಲಿ ಕೇಳಿದೆ, "ನೀನು ಲೈಫ್ ಆಫ್ ಪೈ ಸಿನೆಮಾವನ್ನು ನೋಡಿದ್ದೀಯಾ?"

ಅವನಂದನು, "ಹೌದು."

ನಾನು ಅವನಲ್ಲಿ ಕೇಳಿದೆ, "ಸಿನೆಮಾವನ್ನು ನೋಡಿದ ಮೇಲೆ, ನೀನು ಯಾರಿಗಾದರೂ ಕರೆ ಮಾಡಿ, ಅದೊಂದು ಒಳ್ಳೆಯ ಸಿನೆಮಾವೆಂದು ಹೇಳಿದ್ದೀಯಾ?"

ಅವನು ಉತ್ತರಿಸಿದನು, "ಹೌದು, ನಾನು ನನ್ನ ಹಲವಾರು ಮಿತ್ರರಿಗೆ ಕರೆ ಮಾಡಿ, ಅದೊಂದು ಉತ್ತಮ ಸಿನೆಮಾವೆಂದೂ, ಅವರದನ್ನು ನೋಡಬೇಕೆಂದೂ ಹೇಳಿದೆ."

ಹಾಗೆ ಮಾಡಲು ಅವನಿಗೆ ನಿರ್ಮಾಪಕರು ಏನಾದರೂ ಪ್ರೋತ್ಸಾಹಕ ಧನ ಅಥವಾ ಕಮಿಷನ್ ನೀಡಿದ್ದರೇ ಎಂದು ನಾನು ಅವನಲ್ಲಿ ಕೇಳಿದೆ.

ಅವನು ಉತ್ತರಿಸಿದನು, "ಇಲ್ಲ."

ನಾನು ಉತ್ತರಿಸಿದೆ, "ಆನಂದದ ಸ್ವಭಾವವೆಂದರೆ ಹಂಚುವುದು. ನಿನಗೆ ನಿನ್ನೊಳಗೆ ಸ್ವಲ್ಪ ಸಂತೋಷವು ಕಂಡುಬಂದರೆ, ನೀನದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವೆ. ಅದನ್ನೇ ನಾನು ಮಾಡುತ್ತಿರುವುದು. ಹಂಚುವುದು ಮತ್ತು ಕಾಳಜಿ ವಹಿಸುವುದು.

ನಾವು ಹೊಂದಬೇಕಾದ ನಾಲ್ಕನೆಯ ಅನುಭವವೆಂದರೆ, ಒಂದು ಮಾನಸಿಕ ಆಸ್ಪತ್ರೆಯಲ್ಲಿ ಒಂದು ದಿನವನ್ನು ಕಳೆಯುವುದು.

ನಿಮ್ಮ ಸುತ್ತಲಿರುವ ಎಲ್ಲಾ ಅಸಂಬದ್ಧ ಮಾತುಗಳನ್ನು ಕೇಳಿಸಿಕೊಳ್ಳಿ. ಸಂಪೂರ್ಣ ಜಗತ್ತು ಹಾಗೇ ಎಂಬುದು ನಿಮಗೆ ಅರ್ಥವಾಗುವುದು. ಪ್ರತಿಯೊಬ್ಬರೂ ಬಾಹ್ಯ ರೀತಿಯಲ್ಲೇ ಮಾತಾಡುತ್ತಾರೆ. ಒಮ್ಮೆ ನೀವಿದನ್ನು ಅರ್ಥಮಾಡಿಕೊಂಡರೆ, ನಂತರ ಮುಂದೆಂದೂ ನಿಮ್ಮನ್ನು ಕೆರಳಿಸಲು ಸಾಧ್ಯವಿಲ್ಲ. ನೀವು ಒಳಗಿನಿಂದ ಬಹಳ ಬಲವನ್ನು ಅನುಭವಿಸುವಿರಿ. ಯಾರಾದರೂ ನಿಮ್ಮ ಬಗ್ಗೆ ಒಂದು ಅವಹೇಳನಕಾರಿ ಹೇಳಿಕೆಯನ್ನು ಹೇಳಿದರೆ, ನೀವು ಸಮ ಭಾವ ಕಳೆದು ಕೊಳ್ಳಲಾರಿರಿ. ನೀವು ಟೀಕೆಗೆ ಎದ್ದು ನಿಲ್ಲುವಿರಿ. ಅದರಲ್ಲೇನಾದರೂ ಸತ್ಯವಿದ್ದರೆ, ನೀವು ಟೀಕೆಯನ್ನು ಸ್ವೀಕರಿಸುವಿರಿ. ಎಲ್ಲೆಲ್ಲಾ ಆವಶ್ಯಕತೆಯಿದೆಯೋ ಅಲ್ಲೆಲ್ಲಾ ರಚನಾತ್ಮಕ ಟೀಕೆಯನ್ನು ನೀಡಲು ನಿಮಗೆ ಸಾಧ್ಯವಾಗುವುದು. ಜನರು ಅಪ್ರಸ್ತುತ ವಿಷಯಗಳನ್ನು ಮಾತನಾಡುತ್ತಿರುವರೆಂಬುದನ್ನು ತಿಳಿದುಕೊಂಡು ನೀವು ಒಂದು ದಿನವನ್ನು ಕಳೆಯಲು ಸಾಧ್ಯವಾದರೆ, ಟೀಕೆಯನ್ನು ತೆಗೆದುಕೊಳ್ಳುವ ಹಾಗೂ ನೀಡುವ ಧೈರ್ಯವು ನಿಮಗೆ ಬರುತ್ತದೆ.

ಐದನೆಯ ಅನುಭವವೆಂದರೆ, ಒಂದು ಇಡೀ ದಿನವನ್ನು ಒಬ್ಬ ರೈತನೊಂದಿಗೆ ಒಂದು ಹೊಲದಲ್ಲಿ ಕಳೆಯುವುದು. ನೀವು ಈ ಗ್ರಹದ; ಈ ಭೂಮಿಯ ಬಗ್ಗೆ ಕಾಳಜಿ ವಹಿಸಲು ತೊಡಗುವಿರಿ. ನೀವು ಪರಿಸರದ ಬಗ್ಗೆ ಕಾಳಜಿ ವಹಿಸುವಿರಿ. ನಾವು ಇವತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸದೇ ಇದ್ದರೆ, ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ನಮಗೆ ಸಾಧ್ಯವಾಗದು. ಮುಂಬರುವ ಪೀಳಿಗೆಯು ಉತ್ತಮ ಸ್ಥಿತಿಗಳನ್ನು ಹೂಂದಲು : ಶುದ್ಧವಾದ ಗಾಳಿ, ನೀರು ಮತ್ತು ಭೂಮಿ. ರೋಗಗಳು ಹೆಚ್ಚಾಗುತ್ತಿವೆ ಯಾಕೆಂದರೆ ನಾವು ಹಲವಾರು ಅಪಾಯಕಾರಿ ರಾಸಾಯನಿಕಗಳು, ಗೊಬ್ಬರಗಳು ಮತ್ತು ಕ್ರಿಮಿನಾಶಕ ಔಷಧಿಗಳನ್ನು ಉಪಯೋಗಿಸಿದ್ದೇವೆ. ಪೋಷಕಾಂಶಗಳು ಭೂಮಿಯಿಂದ ಬರಿದಾಗಿದೆ.

ಅಮೇರಿಕಾದಲ್ಲಿ ಇವತ್ತು ಬೆಳೆಯಲಾಗುವ ಬಾಳೆಹಣ್ಣುಗಳಲ್ಲಿ, ೩೦ರ ಮತ್ತು ೪೦ರ ದಶಕಗಳಿಗೆ ಹೋಲಿಸಿದರೆ ಹೇಗೆ ಬಹಳ ಕಡಿಮೆ ಪೋಷಕಾಂಶಗಳಿವೆ ಎಂಬುದರ ಬಗ್ಗೆ ಅಮೇರಿಕಾದ ಪೌಷ್ಟಿಕತೆಯ ಸಂಸ್ಥೆಯು ಮಾತನಾಡುತ್ತದೆ. ನಮ್ಮ ತರಕಾರಿಗಳು ಗಾತ್ರದಲ್ಲಿ ದೊಡ್ಡದಾಗಿರಬಹುದು, ಆದರೆ ಅವುಗಳಲ್ಲಿ ಬಹಳ ಕಡಿಮೆ ಪೌಷ್ಟಿಕಾಂಶವು ಒಳಗೊಂಡಿರುತ್ತದೆ. ಇದು ಯಾಕೆಂದರೆ, ನಾವು ಕೀಟನಾಶಕಗಳು ಮತ್ತು ರಾಸಾಯನಿಕಗಳಿಂದ ಮಣ್ಣನ್ನು ಬರಿದು ಹಾಗೂ ಖಾಲಿಯಾಗಿಸಿದ್ದೇವೆ.

ನಾವು ಭೂಮಿತಾಯಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಭೂಮಿಗಾಗಿರುವ ಪ್ರೀತಿ, ಜನರ ಬಗ್ಗೆ ಪ್ರೀತಿಯು ದೇವರ ಬಗ್ಗೆಯಿರುವ ಪ್ರೀತಿಗೆ ಸಮಾನವಾದುದಾಗಿದೆ. ಅವುಗಳು ಒಂದೇ ನಾಣ್ಯದ ಎರಡು ಬದಿಗಳಾಗಿವೆ. ನೀವು ದೇವರನ್ನು ಪ್ರೀತಿಸುವಿರೆಂದೂ, ಆದರೆ ಅವನ ಜನರ ಕಡೆಗೆ ಕಾಳಜಿಯಿಲ್ಲವೆಂದೂ ಹೇಳಿದರೆ, ಆಗ ಅದಕ್ಕೆ ಯಾವುದೇ ಅರ್ಥವಿಲ್ಲ.

ನಾವು ಪ್ರೀತಿಗೆ ಬೇಡಿಕೆಯನ್ನೊಡ್ಡಲು ಪ್ರಾರಂಭಿಸಿದಾಗ, ಅದು ನಾಶವಾಗುತ್ತದೆ. ಸಂಬಂಧಗಳಲ್ಲಿ ಸಾಧಾರಣವಾಗಿ ಆಗುವುದು ಇದುವೇ. ನಾವು ಪ್ರೀತಿಯಲ್ಲಿ ಬೀಳುತ್ತೇವೆ ಮತ್ತು ನಾವು ಬಹಳ ಬೇಗನೇ ಪ್ರೀತಿಯಿಂದ ಹೊರಬೀಳುತ್ತೇವೆ. ಅದು ಉಸಿರನ್ನು ಒಳಕ್ಕೆಳೆಯುವಂತೆ ಮತ್ತು ಉಸಿರನ್ನು ಹೊರಕ್ಕೆ ಬಿಡುವಂತೆ. ಯಾಕೆ? ಅದು ಯಾಕೆಂದರೆ ನಾವು ಬೇಡಿಕೆಯನ್ನೊಡ್ಡಲು ಪ್ರಾರಂಭಿಸುತ್ತೇವೆ.

ಇಲ್ಲಿರುವ ದಂಪತಿಗಳಿಗೆ ನನ್ನದೊಂದು ಸಲಹೆಯಿದೆ. ನಿಮ್ಮ ಕಡೆಗಿರುವ ನಿಮ್ಮ ಸಂಗಾತಿಯ ಗಮನ ಅಥವಾ ಪ್ರೇಮದ ಅಭಿವ್ಯಕ್ತಿಯು ಕಡಿಮೆಯಾಗಿದೆಯೆಂದು ನಿಮಗೆ ಅನ್ನಿಸಿದಾಗ, "ನೀವು ನಿಜವಾಗಿ ನನ್ನನ್ನು ಪ್ರೀತಿಸುವಿರಾ?" ಎಂದು ಅವರಲ್ಲಿ ಕೇಳಬೇಡಿ. ಬದಲಾಗಿ, "ನೀವು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವಿರಿ?" ಎಂದು ಅವರಲ್ಲಿ ಕೇಳಿ. ಅವರು ನಿಮ್ಮನ್ನು ಪ್ರೀತಿಸದೇ ಇದ್ದರೂ ಕೂಡಾ, ಆಗ ನಿಮ್ಮ ಕಡೆಗಿರುವ ಅವರ ಪ್ರೀತಿಯು ಹೆಚ್ಚಾಗುವುದು.

ನೀವು ನಿಜವಾಗಿ ಒಬ್ಬರನ್ನು ಪ್ರೀತಿಸುವಿರೆಂಬುದನ್ನು ಸಾಬೀತುಪಡಿಸುವುದು ಒಂದು ದೊಡ್ಡ ಹೊರೆಯಾಗಿದೆ. ಪ್ರೀತಿಯನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನಾನು ಜಗತ್ತಿನಲ್ಲಿ ಒಂದು ವಿಚಿತ್ರ ವಿಷಯವನ್ನು ಗಮನಿಸಿದ್ದೇನೆ. ಪೂರ್ವದಲ್ಲಿ, ಅವರು ಪ್ರೀತಿಯನ್ನು ವ್ಯಕ್ತಪಡಿಸುವುದೇ ಇಲ್ಲ.

ಅವರು ಪ್ರೀತಿಯನ್ನು ಶಬ್ದಗಳಲ್ಲಿ ಹೇಳುವುದೇ ಇಲ್ಲ. ಮತ್ತು ಪಶ್ಚಿಮದಲ್ಲಿ, ನಾವು ಪ್ರೀತಿಯನ್ನು ಬಹಳವಾಗಿ ಶಬ್ದಗಳಲ್ಲಿ ಹೇಳುತ್ತೇವೆ. ನಾವು ’ಹನೀ, ಹನೀ’ ಎಂದು ಹೇಳುತ್ತಾ ಇರುತ್ತೇವೆ, ಮತ್ತು ನಂತರ ನಾವು ಸಿಹಿಮೂತ್ರ ರೋಗಿಗಳಾಗುತ್ತೇವೆ.

ಪೂರ್ವದಲ್ಲಿ, ಪತಿಯು ಯಾವತ್ತೂ, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ತನ್ನ ಪತ್ನಿಗೆ ತನ್ನ ಜೀವನಪರ್ಯಂತ ಹೇಳುವುದಿಲ್ಲ. ನಾವೊಂದು ಮಧ್ಯಮ ಬಿಂದುವನ್ನು ಕಂಡುಕೊಳ್ಳಬೇಕು; ಪೂರ್ವ ಮತ್ತು ಪಶ್ಚಿಮಗಳ ಒಂದು ಒಳ್ಳೆಯ ಸಂಯೋಗ.

ನನಗನ್ನಿಸುತ್ತದೆ, ಪ್ರೀತಿಯನ್ನು ವ್ಯಕ್ತಪಡಿಸಬೇಕು, ಆದರೆ ಅದೇ ಸಮಯದಲ್ಲಿ ಅದು ಅಡಗಿರಲೂಬೇಕು. ನೀವು ಪ್ರೀತಿಯನ್ನು ಶಬ್ದಗಳಲ್ಲಿ ಅತಿಯಾಗಿ ಹೇಳದಿರುವಾಗ, ಅದು ನಿಮ್ಮ ಕಾರ್ಯಗಳಲ್ಲಿ ಕಂಡುಬರುತ್ತದೆ. ಒಂದು ಬೀಜದಂತೆ. ನೀವೊಂದು ಬೀಜವನ್ನು ಮಣ್ಣಿನಲ್ಲಿ ಬಹಳ ಆಳದಲ್ಲಿ ಬಿತ್ತಿದರೆ, ಅದು ಮೊಳಕೆಯೊಡೆಯಲು ಸಾಧ್ಯವಿಲ್ಲ. ಅದನ್ನು ನೀವು ಮೇಲ್ಮೈಯಲ್ಲಿರಿಸಿದರೂ ಕೂಡಾ ಅದು ಮೊಳಕೆಯೊಡೆಯದು. ಅದು ಮೊಳ್ಕೆಯೊಡೆದು ಒಂದು ಗಿಡವಾಗಲು ನೀವದನ್ನು ಮಣ್ಣಿನಲ್ಲಿ ಸ್ವಲ್ಪ ಕೆಳಗೆ ಬಿತ್ತಬೇಕು. ನಮ್ಮ ಕ್ರಿಯೆಗಳಲ್ಲಿ ಧಾರಾಳವಾಗಿ ಪ್ರಕಟಗೊಳ್ಳಲು, ನಾವು ಪ್ರೀತಿಯನ್ನು ವ್ಯಕ್ತಪಡಿಸಬೇಕು, ಆದರೆ ಅದನ್ನು ಸ್ವಲ್ಪ ಒಳಮುಖವಾಗಿರಿಸಬೇಕು.

ನಾನೊಬ್ಬ ಚಿಕ್ಕ ಹುಡುಗನಾಗಿದ್ದಾಗ, ನನ್ನ ಷರ್ಟನ್ನು ಹೊಲಿಸಲು ನಾನೊಬ್ಬ ದರ್ಜಿಯ ಬಳಿಗೆ ಹೋದೆ. ಆ ದಿನಗಳಲ್ಲಿ ಅವರಲ್ಲಿ ಯಂತ್ರಗಳಿರಲಿಲ್ಲ, ಅವರದನ್ನು ಕೈಗಳಿಂದ ಹೊಲಿಯುತ್ತಿದ್ದರು. ಟೈಲರನು ಸೂಜಿಯನ್ನು ತನ್ನ ಟೊಪ್ಪಿಯಲ್ಲೂ, ಕತ್ತರಿಯನ್ನು ತನ್ನ ಪಾದಗಳ ಕೆಳಗೂ ಇಟ್ಟುಕೊಳ್ಳುತ್ತಿದ್ದನು. ಈ ವ್ಯಕ್ತಿಯು ಒಂದು ಸಂದೇಶವನ್ನು ನೀಡುತ್ತಿದ್ದನೆಂದು ನನಗನ್ನಿಸಿತು.

ಯಾವುದು ಕತ್ತರಿಸುವುದೋ, ಅದನ್ನು ಅವನು ತನ್ನ ಪಾದಗಳ ಕೆಳಗೆ ಇರಿಸಿದನು, ಮತ್ತು ಯಾವುದು ಹೊಲಿಯುವುದು ಹಾಗೂ ಒಂದುಗೂಡಿಸುವುದೋ, ಅದನ್ನವನು ತನ್ನ ತಲೆಯ ಮೇಲೆ ಇರಿಸುವುದರ ಮೂಲಕ ಅದಕ್ಕೆ ಗೌರವವನ್ನಿತ್ತನು.

ಜಗತ್ತಿನಲ್ಲಿನ, ಜನರನ್ನು ವಿಭಜಿಸುವ ಶಕ್ತಿಗಳನ್ನು ಕೆಳಕ್ಕೆ ಹಾಕಬೇಕು, ಮತ್ತು ಜನರನ್ನು ಒಂದುಗೂಡಿಸುವ ಶಕ್ತಿಗಳು ಗೌರವಿಸಲ್ಪಡಬೇಕು.

ಒಬ್ಬ ದರ್ಜಿಯು ಈ ಸಂದೇಶವನ್ನು ತಿಳಿಯಪಡಿಸಬಲ್ಲನು.

ಸಂಪೂರ್ಣ ಜಗತ್ತು, ಪ್ರೀತಿಯ ಸಂದೇಶಗಳಿಂದ ತುಂಬಿದೆ. ನಮಗೆ ಅದನ್ನು ನೋಡುವ ದೃಷ್ಟಿಯಿರಬೇಕು ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ನಿಮ್ಮ ಸಂಗಾತಿಯಿಂದ ಪ್ರೀತಿಗೆ ಬೇಡಿಕೆಯನ್ನೊಡ್ಡಬೇಡಿ; ನೀವು ಅವರಿಗಾಗಿರುವಿರಿ ಎಂಬುದನ್ನು ಅವರು ತಿಳಿಯಲು ಬಿಡಿ.

ತಮ್ಮ ಸಾಮೂಹಿಕ ಪ್ರಾರ್ಥನೆ, ಧರ್ಮೋಪದೇಶಗಳನ್ನು ನಡೆಸುವಾಗ ನಮ್ಮ ಪೂಜ್ಯರು ಮಾಡುವುದು ಅದನ್ನೇ. ಅವರು ಕೇವಲ ದೇವರ ಪ್ರೀತಿಯನ್ನು ಪ್ರವಹಿಸುತ್ತಾರೆ. ಅವರು ಆತ್ಮೀಯತೆಯ ಭಾವವನ್ನು ವ್ಯಕ್ತಪಡಿಸುತ್ತಾರೆ. ಅದೊಂದು ಸರ್ವೋಚ್ಛ ಕ್ರಿಯೆ, ಮತ್ತು ಮನೋಭಾವ.

ಆದುದರಿಂದ ಪ್ರೀತಿ ಮತ್ತು ಕ್ಷಮಾಪಣೆಗಳು ಕೈ ಕೈ ಹಿಡಿದುಕೊಂಡು ಸಾಗುತ್ತವೆ. ಕ್ಷಮಾಪಣೆಯು ಸಹಾನುಭೂತಿಯಾಗುವಾಗ ಅದು ಬಹಳಷ್ಟು ಸುಲಭವಾಗುತ್ತದೆ.

ನೀವು ಮನೆಗೆ ಹೋಗುವಾಗ, ನಿಮ್ಮ ಮನೆಯಲ್ಲಿರುವ ಒಂದು ನಾಯಿಮರಿ ಅಥವಾ ನಾಯಿ ಹೇಗೆ ಹುಚ್ಚೆದ್ದು ಕುಣಿಯುತ್ತದೆ; ತನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತದೆ ಎಂಬುದನ್ನು ನೋಡಿದ್ದೀರಾ? ಅದು ಯಾವುದನ್ನೂ ಶಬ್ದಗಳಲ್ಲಿ ಹೇಳುವುದಿಲ್ಲ, ಆದರೆ ನಿಮ್ಮ ಕಡೆಗಿರುವ ಅದರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಅದೇ ಪ್ರೀತಿಯು ಸಂಪೂರ್ಣ ಸೃಷ್ಟಿಯಲ್ಲಿ; ಮರಗಳಿಂದ, ಪ್ರಕೃತಿಯಿಂದ ವ್ಯಕ್ತವಾಗುತ್ತಿದೆ.

ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ನಿಮ್ಮೊಂದಿಗಿದ್ದೇನೆ. ದೇವರು ನಿಮ್ಮನ್ನು ಹರಸಲಿ.