ವಿವೇಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿವೇಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಏಪ್ರಿಲ್ 12, 2013

ಅಸೀಮ ಶಕ್ತಿಯ ಚೇತನ

ಅಮೃತಬಿ೦ದು’ ಸರಣಿಯ ಬರಹಗಳು

ಹದಿನೈದನೆಯ ಕ೦ತು


ಇರುವ ಬುದ್ಧಿ ಉಪಯೋಗಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೮.೦೭.೨೦೦೩ರಂದು ಪ್ರಕಟವಾಗಿತ್ತು)

’ಸ್ವಮಾತ್ರಾ ನಿರ್ಮಾಣಮಾಪಾದಯತಿ’
ಚೇತನ ಶಕ್ತಿಯು ತನ್ನಿಂದ ತಾನೇ ಈ ಸೃಷ್ಟಿಯನ್ನು ನಿರ್ಮಿಸಿಕೊಂಡಿದೆ - ಬೇರೆ ಬೇರೆ ಪ್ರಮಾಣ, ಪರಿಮಿತಿಗಳಲ್ಲಿ. ಒಂದೇ ಚೇತನ ಇರುವೆಗೆಷ್ಟು ಬುದ್ಧಿ ಕೊಡಬೇಕೋ ಅಷ್ಟೇ ಕೊಟ್ಟಿದೆ. ಮಂಗನಿಗೆ ಎಷ್ಟು ಬುದ್ಧಿ ಬೇಕೋ ಅಷ್ಟೇ ಬುದ್ಧಿ ಮಂಗನಿಗೆ ಕೊಟ್ಟಿದೆ. ಕ್ರಿಮಿಕೀಟಗಳಿಂದ ಮನುಷ್ಯನ ವರೆಗೆ ಎಲ್ಲವೂ ಅವುಗಳಿಗೆ ಬೇಕಾಗುವಷ್ಟು, ಬೇರೆ ಬೇರೆ ಪ್ರಮಾಣದ ಬುದ್ಧಿಶಕ್ತಿಯನ್ನು ಹೊಂದಿವೆ. ಬೇರೆ ಬೇರೆ ಪ್ರಾಣಿಗಳು ಅವುಗಳಿಗೆ ಎಷ್ಟೆಷ್ಟು ಬುದ್ಧಿ ಕೊಟ್ಟಿದೆಯೋ ಅಷ್ಟಷ್ಟು ಚೆನ್ನಾಗಿ ಉಪಯೋಗಿಸುತ್ತವೆ. ಆದರೆ ನಾವು, ಈ ಮನುಷ್ಯ ಜನ್ಮದಲ್ಲಿ ಹೆಚ್ಚು ಬುದ್ಧಿ ಇದ್ದರೂ ಉಪಯೋಗಿಸುವುದಿಲ್ಲ! ತುಂಬಾ ಜಿಪುಣತನ ಮಾಡ್ತೀವಿ. ಬರೀ ಜೇಬಿಗಷ್ಟೇ ಅಲ್ಲ, ಬುದ್ಧಿಗೂ ಜಿಪುಣತನಾನೇ! ಈ ಬಗ್ಗೆ ಪ್ರಚಲಿತವಿರುವ ಒಂದು ಜೋಕ್ (ವಿನೋದ) ನೀವೂ ಕೇಳಿರಬಹುದು.
ಒಂದು ಸಲ ಮೆದುಳಿನ ’ವಸ್ತು ಪ್ರದರ್ಶನ’ ಇತ್ತಂತೆ. ’ಮೆದುಳು ಮಾರಾಟ!’ ಏಕೆಂದರೆ ದೇವರು ಕೊಡಲು ಮರೆತಿದ್ದರಿಂದಲೋ, ಅಥವಾ ಅವಸರದಲ್ಲಿ ಮರೆತು ಬಂದದ್ದರಿಂದಲೋ ಪ್ರಪಂಚಕ್ಕೆ ಮೆದುಳು ಇಲ್ಲದೆ ಬಂದವರು ತುಂಬಾ ಜನ ಇದ್ದರು! ಅಂತೂ ಒಂದು ದೊಡ್ಡ ಪ್ರದರ್ಶನ ನಡೆಯಿತು ಮೆದುಳಿನದು!
ಇದರಲ್ಲಿ ವಿಖ್ಯಾತ ವಿಜ್ಞಾನಿಗಳದು, ವಿಶ್ವೇಶ್ವರಯ್ಯನವರದು ಹೀಗೆ ಖ್ಯಾತನಾಮರಿಂದ ಹಿಡಿದು ಮಂಕುತಿಮ್ಮಪ್ಪನ ವರೆಗೆ ಎಲ್ಲ ರೀತಿಯ ಮೆದುಳೂ ಇತ್ತು - ಬೇರೆ ಬೇರೆ ಬೆಲೆಚೀಟಿಯೊಂದಿಗೆ. ಇದರಲ್ಲಿ ವಿಶ್ವೇಶ್ವರಯ್ಯನವರ ಮೆದುಳಿನ ಬೆಲೆ ಬರೇ ಐದು ರೂಪಾಯಿ ಹಾಕಿದ್ದರಂತೆ. ತಿಮ್ಮಪ್ಪನ ಮೆದುಳಿಗೆ ಐದು ಲಕ್ಷ ರೂಪಾಯಿ!
ಹಾಗೇ, ಪ್ರದರ್ಶನ ನೋಡಲು ಬಂದವರೊಬ್ಬರು ಇದನ್ನು ಗಮನಿಸಿ - ’ಏನೋ ತಪ್ಪಾಗಿರಬೇಕು, ನೀವು ಅಂಟಿಸಿರುವ ’ಬಿಲ್’ಗಳು ಅದಲುಬದಲಾಗಿವೆಯೇನೋ, ಪರಿಶೀಲಿಸಿ ನೋಡಿ’ ಎಂದು ಹೇಳಿದಾಗ; ಆ ವ್ಯವಸ್ಥಾಪಕರು "ಇಲ್ಲಪ್ಪ, ಎಲ್ಲಾ ಸರಿಯಾಗಿಯೇ ಇದೆ. ವಿಶ್ವೇಶ್ವರಯ್ಯನವರು ತಮ್ಮ ಮೆದುಳು ಪೂರಾ ಉಪಯೋಗಿಸಿಕೊಂಡುಬಿಟ್ಟಿದ್ದಾರೆ, ಅದಕ್ಕೇ ಕಡಿಮೆ ಬೆಲೆ. ಈ ಮಂಕುತಿಮ್ಮಪ್ಪ ಮೆದುಳನ್ನು ಉಪಯೋಗಿಸದೆಯೇ ಹಾಗೇ ವಾಪಸ್ ಕೊಟ್ಟಿದ್ದಾನೆ, ಹಾಗೇ ಚೆನ್ನಾಗಿದೆ. ಅದಕ್ಕೆ ಇದರ ಬೆಲೆ ಜಾಸ್ತಿ" ಎಂದರಂತೆ.
ಹೆಚ್ಚು ಮಂದಿ ಇದೇ ರೀತಿ ಜಿಪುಣತನ ಮಾಡ್ತಾರೆ. ಮೆದುಳು ಉಪಯೋಗಿಸದೇ ಹಾಗೇ ಭದ್ರವಾಗಿಟ್ಟುಕೊಂಡು ಹಿಂದಿರುಗಿಸೋಣ ಅಂತ!!

* * * * *

ವಿದ್ಯೆ - ಅವಿದ್ಯೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೯.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ವಿದ್ಯಾ ಅವಿನಾಶೇ ಜನ್ಮ ವಿನಾಶಃ"
ಕುರುಚಲು ಗಿಡ, ಕಳೆ, ಬೆಳೆಯನ್ನು ತಿಂದುಹಾಕುವ ಹಾಗೆ ’ಅವಿದ್ಯೆ’ಯು ನಮ್ಮಲ್ಲಿರತಕ್ಕಂಥ ವಿದ್ಯೆಯನ್ನು ತಿಂದುಹಾಕುತ್ತದೆ. ಎಲ್ಲರಲ್ಲೂ ವಿವೇಕ ಇದೆ, ಪ್ರಜ್ಞೆ ಇದೆ. ಎಲ್ಲರಿಗೂ ಗೊತ್ತು ’ಎಲ್ಲರೂ ಸಾಯುವವರೇ’ ಅಂತ! ಆದರೂ, ಬೇರೆಯವರ ಸಾವಿನ ಸುದ್ದಿ ಕೇಳಿದಾಗ ’ಅಯ್ಯೋ ಪಾಪ, ಸತ್ತುಹೋಗಿಬಿಟ್ಟರು ನೋಡಿ’ ಅನ್ನುತ್ತೀವಿ. ಹಾಗೆಯೇ ನಾವೂ ಒಂದು ದಿನ ಸಾಯುವವರೇ! ಅದು ಜ್ಞಾಪಕಕ್ಕೆ ಬರುವುದಿಲ್ಲ!! ಯಾಕೆ? ’ವಿದ್ಯೆ’ಯ ಅರಿವಿಲ್ಲ. ’ಎಲ್ಲವೂ ನಶ್ವರ’ ಎನ್ನುವುದನ್ನು ಮರೆತುಬಿಡುತ್ತೀವಿ.
’ಅವರು ಹೀಗಂದರು. ಇವರು ಹಾಗಂದರು’ ಯಾಕೆ ಅವನ್ನೆಲ್ಲಾ ತಲೆಯಲ್ಲಿ ಹಿಡಿದಿಟ್ಟುಕೊಂಡು ಅವಸ್ಥೆ ಪಡಬೇಕು? ಅಂದಿದ್ದೆಲ್ಲಾ ಗಾಳೀಲಿ ತೂರಿಹೋಯ್ತು ಅಂತ ಈ ಕಿವಿಯಲ್ಲಿ ಕೇಳಿ ಆ ಕಿವಿಯಿಂದ ಬಿಟ್ಟುಬಿಡಿ. ಜನರ ಮಾತು, ಭಾವನೆ ಇವುಗಳಿಗೆ ಬೆಲೆಕಟ್ಟಿಕೊಂಡು ಇರೋದು ’ಅವಿದ್ಯೆ’, ಇದು ವಿದ್ಯೆಯ ವಿನಾಶ. ನಮ್ಮಲ್ಲಿರುವ ಸ್ವಲ್ಪವಾದರೂ ’ವಿದ್ಯೆ’ಯನ್ನು ನಾಶ ಮಾಡುವುದು ಹೀಗೇ! ಬೇಡದಿರುವ ಮಾತಾಡಿಕೊಂಡು ಹರಟೆಯಲ್ಲಿ, ಕಲಹದಲ್ಲಿ ಕಾಲಹರಣ ಮಾಡಿಕೊಂಡಿರೋದು. ಚಾಡಿಯಿಂದ, ಕಲಹದಿಂದ ಏನಾಗುತ್ತೆ? ನಮ್ಮಲ್ಲಿರತಕ್ಕಂಥ ಅಲ್ಪಸ್ವಲ್ಪ ವಿದ್ಯೆಯೂ ವಿನಾಶವಾಗುತ್ತೆ. ಜನರು ಸತ್ಸಂಗಕ್ಕೆ ಬಂದು ಎಲ್ಲ ಕೇಳಿಕೊಂಡು ಹೋಗುತ್ತಾರೆ, ಅದರಿಂದುಂಟಾದ ಉತ್ಸಾಹ, ಸಂತೋಷ ಎಲ್ಲವನ್ನೂ, ಏನೋ ಬೇಡದಿರುವ ಚಾಡಿಮಾತು, ಹರಟೆಯಿಂದಾಗಿ ಕಳೆದುಕೊಂಡುಬಿಡ್ತಾರೆ. ಮನಸ್ಸಿನಲ್ಲಿ ಎಲ್ಲಾ ತರಹದ ಭಯ, ಶಂಕೆ, ತಾಪತ್ರಯಗಳು ಎಲ್ಲ ಹುಟ್ಟಿಕೊಂಡುಬಿಡುತ್ತವೆ. ಮತ್ತೆ ಕುರುಚಲು(ಕಳೆ)ಗಿಡ ನೋಡಿ. ಕುರುಚಲು ಗಿಡಕ್ಕೆ ಏನೂ ಪ್ರಯಾಸ ಪಡಬೇಕಾಗಿಲ್ಲ, ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡು ಬಿಡುತ್ತೆ ಅದು! ಬೆಳೆ ಬೆಳೆಯಬೇಕಿದ್ದರೆ ಪ್ರಯತ್ನ ಪಡಬೇಕು, ಅಲ್ಲವಾ?

* * * * *

ಸೀಮಿತ ಕರ್ಮಫಲ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೦.೦೭.೨೦೦೩ರಂದು ಪ್ರಕಟವಾಗಿತ್ತು)

’ವಿದ್ಯಾ ಅವಿನಾಶೇ ಜನ್ಮ ವಿನಾಶಃ’
ಚಿಂತೆ ಮಾಡುವುದನ್ನು ಯಾರಿಗೂ ಯಾರೂ ಕಲಿಸಿಕೊಡುವುದಿಲ್ಲ. ತನ್ನಷ್ಟಕ್ಕೇ ಬಂದು ಬಿಡುತ್ತೆ. ಆದರೆ, ಸಂತೋಷವಾಗಿರುವುದು ಹೇಗೆ ಅಂತ ಕಲಿಸಿಕೊಡಬೇಕಾಗುತ್ತೆ. ’ವಿದ್ಯೆ’ಯಿದ್ದರೆ, ’ಜನ್ಮ ವಿನಾಶಃ’ ಮತ್ತೆ ಮತ್ತೆ ಜನ್ಮವೆತ್ತಿಕೊಂಡು ಬರುವುದಿಲ್ಲ. ನಮ್ಮ ಜನ್ಮ ಬಂದಿರುವುದು ಯಾವುದೋ ’ಅವಿದ್ಯೆ’ಯ, ಇಚ್ಛೆಯ, ದ್ವೇಷದ, ಕಲಹದ, ಕ್ಲೇಶದ ಕಾರಣದಿಂದ. ಇಲ್ಲಿ ಜನ್ಮ-ವಿನಾಶ ಅಂದರೇನು? ಮತ್ತೆ ಮತ್ತೆ ಮನಸ್ಸಿನಲ್ಲಿ ಉದ್ವೇಗ, ಆತಂಕ, ಅತೃಪ್ತಿ ಇವುಗಳು ಬರದೆ ನಿಶ್ಚಲವಾದ ನಿತ್ಯತತ್ವದಲ್ಲಿ ಸ್ಥಿರವಾಗಿರುತ್ತದೆ. ’ವಿದ್ಯಾ ಅವಿನಾಶೇ ಜನ್ಮ ವಿನಾಶಃ’ ಜನ್ಮ ಸಾರ್ಥಕವಾಗುತ್ತದೆ ಅಂತ.
ಮುಂದಿನ ಸೂತ್ರ ಹೇಳ್ತಾರೆ - "ಕವರ್ಗಾದಿಷು ಮಹೇಶ್ವರ್ಯಾಧ್ಯಾಃ ಪಶುಮಾತರಃ"..... ಬೇರೆ ಎಲ್ಲಾ ತರಹದ, ನಾವು ಮಾಡತಕ್ಕಂಥ ಪ್ರಯೋಗಗಳು, ಮಂತ್ರಗಳು ಇವೆಲ್ಲದಕ್ಕೂ ಸೀಮಿತವಾದ ಶಕ್ತಿಯಿದೆ. ಆದರೆ ಚೇತನಕ್ಕೆ ಮಾತ್ರ ಅಸೀಮವಾದ ಶಕ್ತಿಯಿದೆ.
ನಾವು ಮಾಡುವಂತಹ ಕರ್ಮ ಸೀಮಿತವಾದದ್ದು, ಆ ಕರ್ಮಫಲವೂ ಸೀಮಿತವಾಗಿರುತ್ತದೆ. ಯಾವುದೋ ಒಂದು ಒಳ್ಳೆಯ ಕೆಲಸ ಮಾಡಿದರೆ, ಅದರ ಫಲ ಒಂದಷ್ಟು ದಿನ ಇರುತ್ತದೆ. ಕೆಟ್ಟ ಕೆಲಸ ಮಾಡಿದ್ದೂ ಅಷ್ಟೆ.... ಅದರ ಫಲವೂ ಒಂದಷ್ಟು ದಿನ ಇರುತ್ತದೆ. ಇದನ್ನು ಚೆನ್ನಾಗಿ ತಿಳಿದುಕೊಳ್ಳಿ, ವಿಶ್ರಾಮ ಮಾಡಿ.... ’ಆತ್ಮನಲ್ಲಿ ವಿಶ್ರಾಮ ಮಾಡಿ’ ಅಂತ ಮತ್ತೆ ಮತ್ತೆ ಹೇಳ್ತಾರೆ. ಆಗಲೇ ಮನಸ್ಸಿನಲ್ಲಿ ದ್ವಂದ್ವ ನಿವಾರಣೆಯಾಗುತ್ತೆ. ಮನಸ್ಸು ಶಾಂತವಾಗುತ್ತೆ. ಆಗ ’ಸ್ವಾತ್ಮಾನಂದ ಪ್ರಕಾಶ ವಪುಷೇ’ ಮೊದಲನೆಯ ಸೂತ್ರಕ್ಕೆ ಮತ್ತೆ ನಾವು ಬಂದುಬಿಡುತ್ತೀವಿ.

* * * * *

ಸಾಕ್ಷಿತ್ವ ಅಥವಾ ನಾಲ್ಕನೆಯ ಅವಸ್ಥೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೧.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ತ್ರಿಷು ಚತುರ್ಥಂತೈಲವದಾಸೇಚ್ಯಂ" ಎಂದರೆ ಮೂರೂ ಅವಸ್ಥೆಗಳಲ್ಲಿ ನಾಲ್ಕನೆಯದನ್ನು ತೈಲದಂತೆ ಸಿಂಪಡಿಸಿಕೊಳ್ಳಬೇಕು ಅಂತ. ನಾವು ಮಾಡತಕ್ಕಂಥ ಎಲ್ಲಾ ತರಹದ ಚಟುವಟಿಕೆಗಳೂ ಬರೀ ಜಾಗೃತ್ ಅವಸ್ಥೆಗೆ ಮಾತ್ರ ಸೇರಿದೆ. ಆದರೆ ಧ್ಯಾನದಲ್ಲಿ ನಮಗೆ ಆಗುವಂತಹ ಅನುಭವ ಬರೀ ಜಾಗೃತ್ ಅವಸ್ಥೆ ಅಲ್ಲ. ಅದು ಸುಷುಪ್ತಿಗೂ ಹೋಗುತ್ತೆ. ಧ್ಯಾನ ಮಾಡಿದ ನಂತರ ನೀವು ಮಲಗಿ ನಿದ್ದೆ ಮಾಡಿದರೆ ಆ ನಿದ್ದೆಯ ತರಹ, ಗುಣಮಟ್ಟವೇ ಬೇರೆಯಾಗಿರುತ್ತೆ. ಜಾಗೃತ್, ಸ್ವಪ್ನ, ಸುಷುಪ್ತಿ ಈ ಮೂರೂ ಅವಸ್ಥೆಯಲ್ಲಿಯೂ ಚತುರ್ಥಾವಸ್ಥೆಯಾದ ಧ್ಯಾನದಲ್ಲಿ ಅನುಭವಿಸುವ ಆ ಶಾಂತವಾದ ಅವಸ್ಥೆಯ ಸೇಚನವಾಗುತ್ತದೆ. ನಾವೇನೂ ಮಾಡಬೇಕಾಗಿಲ್ಲ! ಅಂದರೇನು? ಈಗ ನೀವು ಮಾತನಾಡುತ್ತಾ ಇದ್ದರೂ, ನಿಮ್ಮಲ್ಲಿ ಸಾಕ್ಷಿತ್ವ ಇರುತ್ತೆ. ನಿದ್ದೆ ಮಾಡುವಾಗಲೂ ’ನಾನು ನಿದ್ದೆ ಮಾಡ್ತಾ ಇದೀನಿ’ ಅಂತ ಗೊತ್ತಾಗುತ್ತೆ. ಹಾಗೇ ಕನಸು ಕಾಣಬೇಕಾದರೂ ಸಾಕ್ಷಿತ್ವ ಇರುತ್ತದೆ. ಎಷ್ಟೋ ಸಲ ನಿಮಗೂ ಆಗಿರಬೇಕಲ್ಲವೆ ಈ ರೀತಿಯ ಅನುಭವ!
ಹಾಗೇ ಜಾಗೃತಾವಸ್ಥೆಯಲ್ಲಿ ಚಟುವಟಿಕೆ ಮಾಡುತ್ತಿರುವಾಗ, ’ಮಾಡ್ತಾ ಇದೀನಿ’ ಎನ್ನುವ ಸಾಕ್ಷೀಭಾವ ಬರುತ್ತೆ. ತಲೆಯಲ್ಲಿ ವಿಚಾರ ಬರುತ್ತಿದೆ, ಹೋಗುತ್ತಿದೆ ಅಂತ ಗೊತ್ತಾಗುತ್ತಿರುತ್ತೆ. ಹೌದಾ? ಯಾವುದೇ ತರಹದ ರಾಗ ದ್ವೇಷಗಳನ್ನು, ವಿಚಾರಗಳನ್ನು, ಅನುಭವಗಳನ್ನು ಸಾಕ್ಷಿಯಾಗಿ ನೋಡುತ್ತಾ ಬರಬೇಕು. ಆಗ ಮೂರು ಅವಸ್ಥೆಯನ್ನು ದಾಟಿ ಚೇತನ ವಿಸ್ತಾರವಾಗುತ್ತದೆ.

* * * * *

ಸ್ವಚಿತ್ತದಲ್ಲಿ ಮಗ್ನತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ಮಗ್ನಃ ಸ್ವಚಿತ್ತೇನ ಪ್ರವಿಶೇತ್".
ನಾವು ಯಾವಾಗಲೂ ಬೇರೆಯವರ ಚಿತ್ತವನ್ನು ಪ್ರವೇಶ ಮಾಡುತ್ತಿರುತ್ತೇವೆ. ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ, ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಅಂತ ಯೋಚನೆ ಮಾಡ್ತೀವಿ. ಬೆಳಿಗ್ಗೆ ಎದ್ದ ಕೂಡಲೇ ’ನಾನು ಅವರಿಗೇನು ಹೇಳಲಿ, ಅವರು ನನ್ನ ಬಗ್ಗೆ ಏನಂದುಕೋತಾರೆ, ಇವರಿಗೇನು ಜವಾಬು ಕೊಡಲಿ’ - ನಿಮ್ಮ ಚಿತ್ತದಲ್ಲಿ ಆಗತಕ್ಕಂಥ ಮುಕ್ಕಾಲು ಪಾಲು ವಿಚಾರವೆಲ್ಲವೂ ಬೇರೆಯವರ ಸಂಬಂಧವಾಗಿಯೇ ಇರುತ್ತದೆ.
’ಮಗ್ನಃ ಸ್ವಚಿತ್ತೇನ ಪ್ರವಿಶೇತ್’ - ಮಗ್ನರಾಗೋದು ಅಂದರೆ ಏನು? ಲೀನವಾಗುವುದು. ನಮ್ಮ ಚಿತ್ತದಲ್ಲೇ ನಾವು ಲೀನವಾಗುವುದು. ಬೇರೆಯವರು ಏನನ್ನುತ್ತಾರೆ ಅನ್ನುವ ಯೋಚನೆಯಿಲ್ಲ. ನಾವು ಯಾವಾಗ ಮಗ್ನರಾಗ್ತೀವಿ ಗೊತ್ತಾ? ಮನಸ್ಸು ತುಂಬಾ ಪ್ರಸನ್ನವಾದಾಗ ಮಾತ್ರ ನಾವು ಮಗ್ನರಾಗ್ತೀವಿ.
ಚಿಕ್ಕ ಮಗುವಿನ ಕೈಗೊಂದು ಲಾಲಿಪಪ್ಪು ಕೊಟ್ಟು ನೋಡಿ. ಆ ಲಾಲಿಪಪ್ಪು ತಿನ್ನುವಾಗ ಪೂರ್ಣವಾಗಿ ಮಗ್ನವಾಗಿರುತ್ತದೆ. "ಏನು ಪಾಪೂ ನಿನ್ನ ಹೆಸರು?" ಬಾಯಿ ಬಿಡೋದಿಲ್ಲ ಮಗು. ಬಾಯಿ ಬಿಟ್ಟರೂ ಶಬ್ದ ಬರೋದಿಲ್ಲ. ಏನು ಮಾತನಾಡಿಸಿದರೂ ಕೇಳಿಸಿಕೊಳ್ಳುವುದೇ ಇಲ್ಲ. ಆ ತಿನಿಸಿನಲ್ಲೇ ಅಷ್ಟು ಮಗ್ನವಾಗಿರುತ್ತೆ.
ಮಗು ಮಾಡತಕ್ಕಂಥ ಪ್ರತಿಯೊಂದು ಕೆಲಸದಲ್ಲಿಯೂ ಮಗ್ನತೆಯಿದೆ, ಅದಕ್ಕೇ ಮಗುವಿನಲ್ಲಿ ಆನಂದ ತುಂಬಿರುತ್ತದೆ. ಅದು ಸ್ವಚಿತ್ತದಲ್ಲಿರುತ್ತದೆ.

* * * * *

ಲೀಲೆ!
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೩.೦೭.೨೦೦೩ರಂದು ಪ್ರಕಟವಾಗಿತ್ತು)

’ಮಗ್ನಃ ಸ್ವಚಿತ್ತೇನ’..... ’ಸ್ವಚಿತ್ತೇನ ಪ್ರವಿಶೇತ್’
ಗುರಿ, ಲಕ್ಷ್ಯ ಇರುವಂಥಹ ಉದ್ದೇಶಪೂರ್ಣವಾದ ಚಟುವಟಿಕೆ ಬೇರೆ. ಉದ್ದೇಶ ರಹಿತವಾದ ಚಟುವಟಿಕೆ ಬೇರೆ. ಅನುದ್ದೇಶಪೂರ್ಣವಾದ ಚಟುವಟಿಕೆಯನ್ನು ’ಲೀಲೆ’ ಅಂತ, ’ಆಟ’ ಅಂತ ಕರೆಯುತ್ತೀವಿ. ಮಗು ಮಾಡುವುದೆಲ್ಲಾ ಲೀಲೆ!
ಮಗುವಿಗೆ ಯಾವಾಗಲೂ ಬೇರೆಯವರು ಏನಂದುಕೊಳ್ಳುತ್ತಾರೆ ಎನ್ನುವ ಯೋಚನೆ ಇಲ್ಲ. ಎಲ್ಲಿರುತ್ತದೋ ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತೆ. ಮಾಡಿ ಅದರಲ್ಲೇ ತಾಳಾನೂ ಹಾಕ್ತಾ ಇರುತ್ತೆ. ಅದನ್ನೆಲ್ಲಾ ಅಲ್ಲಿ ಸಾರಿಸಿಬಿಡುತ್ತೆ ಪೂರ್ತಿಯಾಗಿ! ಅದಕ್ಕೇನೂ ಗೊತ್ತಾಗೋದೇ ಇಲ್ಲ ಯಾಕೆ? ಭೇದ ಭಾವನೆಯೇ ಇಲ್ಲ, ಬೇರೆಯವರು ಅನ್ನುವ ಯೋಚನೆ ಇಲ್ಲ. ತನ್ನಿಷ್ಟ ಬಂದಿದ್ದನ್ನು ತಾನು ಮಾಡೋದು. ಆ ಚಟುವಟಿಕೆಗೆ ಒಂದು ಗುರಿ, ಒಂದು ಲಕ್ಷ್ಯ ಏನಿಲ್ಲ. ಈ ರೀತಿಯ ಉದ್ದೇಶರಹಿತ ಚಟುವಟಿಕೆಯನ್ನೇ ಆಟ, ಲೀಲೆ ಎನ್ನುವುದು. ಮಗು ಮಾಡುವುದೆಲ್ಲವೂ ಆಟ, ಲೀಲೆ. ಹಾಗೆಯೇ ಒಬ್ಬ ಜ್ಞಾನಿ ಮಾಡುವುದೆಲ್ಲವೂ ಲೀಲೆ. ಜ್ಞಾನಿಗೆ ಗುರಿಯಿಲ್ಲ. ತಾನೇ ಗುರಿ. ’ಸ್ವಚಿತ್ತೇ ಮಗ್ನಃ’ ನಿನ್ನ ಗುರಿ ಬೇರೆಲ್ಲೋ ಇದೆ ಅಂತ ನೀನು ಅಲ್ಲೆಲ್ಲೋ ಆಕಾಶ ನೋಡುತ್ತಾ ಕುಳಿತಿರಬೇಡ. ನಿನ್ನ ಚಿತ್ತದಲ್ಲಿ ಪ್ರವೇಶ ಮಾಡು. ಮಗ್ನನಾಗು. ಹಾಗೆ ಮಗ್ನರಾದವರು ತನ್ನ ಚಿತ್ತದಲ್ಲಿ, ತನ್ನ ಆತ್ಮನಲ್ಲಿ, ತನ್ನ ಶಾಂತವಾದ ಸ್ವಭಾವದಲ್ಲಿ ಪ್ರವೇಶ ಮಾಡಿ ಶಾಂತಿಯನ್ನು ಪಡೆಯುತ್ತಾರೆ. ನಮಗೆ ಶಾಂತಿ ಸಿಗಬೇಕಾದರೆ ಸ್ವಚಿತ್ತದಲ್ಲಿ ಪ್ರವೇಶವಾದಾಗಲೇ, ಮಗ್ನರಾದರೆ ಮಾತ್ರ ಶಾಂತಿ ಸಿಗುವುದು.

* * * * *

ಸ್ವಚಿತ್ತದಲ್ಲಿ ಪ್ರವೇಶಿಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೪.೦೭.೨೦೦೩ರಂದು ಪ್ರಕಟವಾಗಿತ್ತು)

"ಮಗ್ನಃ ಸ್ವಚಿತ್ತೇನ ಪ್ರವಿಶೇತ್"
ಮಗ್ನವಾದಾಗ ಮಾತ್ರ ನಿನ್ನ ಚಿತ್ತದಲ್ಲಿ ನೀನು ಪ್ರವೇಶ ಮಾಡಲು ಸಾಧ್ಯ. ಇಷ್ಟೆಲ್ಲಾ ಜ್ಞಾನವನ್ನು ತಿಳಿದುಕೊಂಡ ನಂತರವೂ ನಿನ್ನ ಚಿತ್ತ ಶಾಂತವಾಗಲಿಲ್ಲವೆಂದರೆ ಅದಕ್ಕೆ ಕಾರಣ ನಿನ್ನ ಆತ್ಮನಲ್ಲಿ ನೀನು ಮಗ್ನನಾಗಿಲ್ಲದಿರುವುದೇ. ಮಗ್ನನಾಗು, ಮುಳುಗು. ಇಲ್ಲಿ ಯಾರು ಮುಳುಗುತ್ತಾರೋ ಅವರು ತೇಲುತ್ತಾರೆ, ಪಾರಾಗುತ್ತಾರೆ. ಯಾವ ಕೆಲಸ ಮಾಡಿದರೂ, ಏನು ಮಾಡಿದರೂ ಅದರಲ್ಲಿ ಮುಳುಗುವುದನ್ನು ಕಲಿ. "ಮನಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು" ... ಮನಕರಗುವುದೆಂದರೆ ಮಗ್ನರಾಗುವುದು, ಸ್ವಚಿತ್ತದಲ್ಲಿ ಪ್ರವೇಶ ಮಾಡುವುದು.
ನಮ್ಮ ಚೇತನಕ್ಕೆ ಬಾಧೆ ತರುವಂತಹುದು ಯಾವುದು? ನಮ್ಮ ಮನಸ್ಸು. ಅದು ಚೇತನದ್ದೇ ಅಂಗವಾಗಿದೆ. ಆ ಚೇತನದ ರೂಪದಲ್ಲಿ ಬರುವ ಶಕ್ತಿಯನ್ನು ನಾವು ಮನಸ್ಸಿನಲ್ಲಿ ವಿಚಾರ ರೂಪದಲ್ಲಿ ಹೊರಗೆ ಹಾಕುತ್ತಿರುತ್ತೀವಿ. ಅದು ವ್ಯಯವಾಗಿ ಹೋಗಿ ಬಿಡುತ್ತೆ. ಒಬ್ಬ ಮಗ್ನನಾಗಿರುವ, ಪ್ರಸನ್ನವಾಗಿರುವ ವ್ಯಕ್ತಿ ತುಂಬ ಯೋಚನೆ ಮಾಡೋದಿಲ್ಲ. ಆ ವ್ಯಕ್ತಿಯ ಮುಖದಲ್ಲಿ ಎಷ್ಟು ಚೈತನ್ಯ, ತೇಜಸ್ಸು, ಕಾಂತಿ, ಲವಲವಿಕೆ ಇರುತ್ತದೆ! ಅದೇ ವ್ಯಕ್ತಿ ಚಿಂತೆ ಮಾಡುತ್ತಾ ಇದ್ದರೆ ಮುಖದಲ್ಲಿ ಗೆರೆ, ಸುಕ್ಕು ಬಂದು ಬಾಡಿ ಹೋಗಿರುತ್ತದೆ.
ಮನುಷ್ಯ ಚಿಂತೆಯಿಂದ ತುಂಬಾ ಬಾಡಿಹೋಗ್ತಾನೆ, ಕೆಲಸದಿಂದ ಬಾಡಲ್ಲ... ಅಲ್ವಾ! ಕೆಲಸ ಮಾಡುವುದರಿಂದ ದಣಿವಾಗುತ್ತದೆ. ಆದರೆ ಚಿಂತೆ ಮಾಡೋದರಿಂದ ಅದರ ನೂರರಷ್ಟು ಹೆಚ್ಚು ಸುಸ್ತಾಗುತ್ತದೆ. ಅದಕ್ಕೇ ಮಗ್ನವಾಗುವುದನ್ನು ಕಲಿ. "ಮಗ್ನಃ ಸ್ವಚಿತ್ತೇನ ಪ್ರವಿಶೇತ್".

* * * * *

ತಲ್ಲೀನರಾಗುವುದು ಹೇಗೆ?
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೫.೦೭.೨೦೦೩ರಂದು ಪ್ರಕಟವಾಗಿತ್ತು)

"ಮಗ್ನಃ ಸ್ವಚಿತ್ತೇನ ಪ್ರವಿಶೇತ್"
ಧ್ಯಾನದ ಮೂಲಕವಾಗಿ ಸ್ವಚಿತ್ತದಲ್ಲಿ ಪ್ರವೇಶ ಮಾಡು. ಆಗ ತಕ್ಷಣ ನೀನು ಮಗ್ನನಾಗಿಬಿಡುತ್ತೀಯ. ಧ್ಯಾನದಲ್ಲಿ ’ಅದು ಕಾಣಬೇಕು, ಇದು ಕಾಣಬೇಕು’ ಅಂದುಕೊಳ್ಳಬೇಡ. ಏನೂ ಕಾಣಬೇಕಿಲ್ಲ. ನಾನೆಲ್ಲಿದ್ದೀನಿ ಅನ್ನುವುದೇ ಗೊತ್ತಾಗಬೇಕಿಲ್ಲ. ಹಾಗೆ ಮಗ್ನರಾಗಿರಬೇಕು, ಮೈಮರೆತಿರಬೇಕು. ಮನಕರಗಿರಬೇಕು! ಆಗ ಪರಿಣಾಮ ತನ್ನಷ್ಟಕ್ಕೆ ತಾನೇ ಉಂಟಾಗುತ್ತೆ.
ಇಲ್ಲವೇ ಭಾವದಲ್ಲಿ ಮಗ್ನನಾಗು. ಆಗಲೂ ಸ್ವಚಿತ್ತದಲ್ಲಿ ಪ್ರವೇಶ ಮಾಡುತ್ತೀಯ. ಮನೆಯಲ್ಲಿ ಒಂದು ಆಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಒಂದು ಒಳ್ಳೆಯ ಮಧುರವಾದ ಗೀತೆಯನ್ನೋ, ಭಕ್ತಿಪೂರ್ವಕವಾದ ಭಜನೆಯನ್ನೋ ಹಾಕಿಕೊಂಡು ಹಾಗೇ ವಿಶ್ರಾಮಪೂರ್ವಕವಾಗಿ ಕೇಳಿ, ಕಣ್ಣು ತೆರೆದುಕೊಂಡು ಯಾವ ಚಟುವಟಿಕೆಯನ್ನೂ ಮಾಡಬೇಡಿ, ತಬಲಗಿಬಲ ಹೊಡೆಯಬೇಡಿ. ಆ ಸಂಗೀತದಲ್ಲೇ ಮುಳುಗಿಹೋಗಿಬಿಡಿ! ಹಾಗೆ ಮಗ್ನವಾಗಿದ್ದಾಗ ಒಂದು ಅಲೌಕಿಕ ಅನುಭವ, ಆನಂದ ಉಂಟಾಗುತ್ತೆ. ಆ ಸಂಗೀತ ಮುಗಿಯುತ್ತಿದ್ದಂತೆಯೇ ನಿಮ್ಮ ಚೇತನ ಧ್ಯಾನಮಯವಾಗಿರುತ್ತದೆ. ಹಾಗೆ ಸ್ವಚೇತನದಲ್ಲಿ ಮಗ್ನರಾದವರು ತಲ್ಲೀನರಾಗಿರುತ್ತಾರೆ. ಸ್ವಚಿತ್ತದಲ್ಲಿ ಪ್ರವೇಶ ಮಾಡುತ್ತಾರೆ. ಇದನ್ನು ಇಂದೇ ಮಾಡಿ ನೋಡಿ. ಒಂದೊಂದೇ ಸೂತ್ರವನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ಮೆಲುಕುಹಾಕಬೇಕು. ಮುಂದಿನ ಸೂತ್ರವೂ ಬಹಳ ಸೊಗಸಾದ ಸೂತ್ರ.

* * * * *

ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೬.೦೭.೨೦೦೩ರಂದು ಪ್ರಕಟವಾಗಿತ್ತು)

"ಪ್ರಾಣ ಸಮಾಚಾರೇ ಸಮದರ್ಶನಮ್"
ಪ್ರಾಣಾಯಾಮದಿಂದ ಶರೀರದಲ್ಲಿರುವ ಪ್ರಾಣಚೈತನ್ಯವನ್ನು ಹೆಚ್ಚು ಮಾಡಿಕೊಳ್ಳಿ. ಮನಸ್ಸಿನಲ್ಲಿ ತೀರಾ ಅಲ್ಲೋಲಕಲ್ಲೋಲ ಇದೆ. ಧ್ಯಾನದಲ್ಲಿಯೇ ಆಗಲಿ, ಭಾವದಲ್ಲಿಯೇ ಆಗಲಿ ಮಗ್ನರಾಗಲು ಸಾಧ್ಯವಾಗಲಿಲ್ಲ, ಈಗೇನು ಮಾಡೋದು? ಎಂದರೆ - "ಪ್ರಾಣ ಸಮಾಚಾರೇ ಸಮದರ್ಶನಮ್". ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಲು ಗಮನ ಕೊಡಿ. "ಸುದರ್ಶನ ಕ್ರಿಯೆ" ಮಾಡಿದಾಗ ನೋಡಿ, ಮನಸ್ಸಿನಲ್ಲಿ ಎಂತಹ ಆತಂಕ, ಶೋಕ, ದುಃಖ ಇದ್ದರೂ ಎಷ್ಟು ಹಗುರವಾಗಿಬಿಡುತ್ತದೆ! ಮನಸ್ಸು ಎಲ್ಲಿಂದೆಲ್ಲಿಗೋ ಬಂದ ಹಾಗೆ, ಹೊಸ ಜೀವನವೇ ಬಂದ ಹಾಗಾಗುತ್ತೆ. ಲಕ್ಷಾಂತರ ಜನ ಇದನ್ನು ಅನುಭವಿಸಿದ್ದಾರೆ. ಪ್ರಾಣ ಚೇತನ ಹೆಚ್ಚಾಗಬೇಕು, ಪ್ರಾಣ ಸಂಚಾರ ಸಮವಾಗಿರಬೇಕು.
ಈಗ, ನಮ್ಮಲ್ಲಿ ದುಃಖ ಇದ್ದಾಗ, ಒಳಗೆ ತೆಗೆದುಕೊಳ್ಳುವ ಉಸಿರು ಚಿಕ್ಕದಾಗಿರುತ್ತೆ. ಹೊರಗೆ ಬಿಡುವಾಗ ’ಹ್ಞು... ಹಾ...’ ನಿಟ್ಟುಸಿರು, ಜೋರಾಗಿ ಉಸಿರು ಬಿಡ್ತೀರ. ಸುಖ ಇದ್ದಾಗ ದೊಡ್ಡದಾಗಿ ಉಸಿರು ತೆಗೆದುಕೊಳ್ತೀವಿ, ಬಿಡೋದೇ ಗೊತ್ತಾಗೋದಿಲ್ಲ. ಸಂತೋಷ ಇದ್ದಾಗ, ಒಂದು ಸುಗಂಧಭರಿತವಾದ ಹೂವನ್ನು ಆಘ್ರಾಣಿಸಬೇಕಾದರೆ ಜೋರಾಗಿ ಉಸಿರು ತಗೋತೀರ. ’ಹಾ...’ ಎನ್ನುತ್ತೀರ, ಆದರೆ ಹೊರಗೆ ಬರುವ ಉಸಿರು ಕರಗಿಹೋಗಿರುತ್ತದೆ.
ಈಗೇನಾಯ್ತು? ಸುಖದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಪ್ರಾಣದ ಚಲನೆ ಸಮಾನವಾಗಿಲ್ಲ. ಆದ್ದರಿಂದ ಪ್ರಾಣವನ್ನು ಸಮಾನವಾಗಿ ಹರಿಯುವಂತೆ ಮಾಡಿ. ಶರೀರದಾದ್ಯಂತ ಪ್ರಾಣ ಸಮಾನವಾಗಿ ಚಲಿಸಬೇಕು.

* * * * *

ಇರಲಿ ಪ್ರಾಣದಲ್ಲಿ ಸ್ಥಿರತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೭.೦೭.೨೦೦೩ರಂದು ಪ್ರಕಟವಾಗಿತ್ತು)

"ಪ್ರಾಣ ಸಮಾಚಾರೇ ಸಮ ದರ್ಶನಮ್"
’ಪಂಚಪ್ರಾಣ’ ಅಂತ ಹೇಳುತ್ತೀವಿ. ಐದು ಭಾಗದಲ್ಲಿ ಪ್ರಾಣ ಸಂಚಾರ ಇರುತ್ತದೆ. ಒಂದು ಮಗು ಉಸಿರಾಡುವುದನ್ನೂ ನೋಡಿ, ನೀವು ಉಸಿರಾಡುವುದನ್ನೂ ನೋಡಿ, ತುಂಬಾ ವ್ಯತ್ಯಾಸ ಇದೆ. ಮಗು ಉಸಿರು ಒಳಗೆ ಎಳೆದುಕೊಂಡಾಗ ಹೊಟ್ಟೆ ಹೊರಗೆ ಬರುತ್ತೆ, ಹೊರಗೆ ಬಿಟ್ಟಾಗ ಒಳಗೆ ಹೋಗುತ್ತದೆ. ನಾವು ಉಸಿರಾಡುವಾಗ ಇದಕ್ಕೆ ವಿರುದ್ಧವಾಗಿಯೇ ಮಾಡ್ತೀವಿ. ಅದೂ ನಮ್ಮಲ್ಲಿ ಹೆಚ್ಚು ಆತಂಕ, ಶಂಕೆ, ಭಯ ಇದ್ದರೆ ನಮ್ಮ ಉಸಿರಿನಲ್ಲೇ ಗೊತ್ತಾಗುತ್ತದೆ. ನಾವು ತೆಗೆದುಕೊಳ್ಳುವ ಉಸಿರಿನಲ್ಲೂ ನಡುಕ, ಬಿಡುವ ಉಸಿರಿನಲ್ಲೂ ನಡುಕ ಇರುತ್ತದೆ. ಉಸಿರಿನಲ್ಲೇ ಕಂಪನವಿದ್ದರೆ ಜೀವನ ಇನ್ನೆಲ್ಲಿ ಸ್ಥಿರವಾಗಿರುತ್ತೆ? ಜೀವನವೇ ಕಂಪಿಸುತ್ತಾ ಇರುತ್ತದೆ. ಮನಸ್ಸು, ಚೇತನ ಎಲ್ಲಾ ಕಂಪಿತವಾಗಿರುತ್ತದೆ. ಆದರೆ, ಜೀವನ ಹಾತೊರೆಯುತ್ತಾ ಇದೆ; ಸಮತ್ವಕ್ಕೆ, ಪ್ರಸನ್ನತೆಗೆ, ಶಾಂತಿಗೆ. ನದಿ ಎಲ್ಲೀತನಕ ಸಾಗರವನ್ನು ಸೇರುವುದಿಲ್ಲವೋ, ಅಲ್ಲಿಯತನಕ ಅದು ಸುಮ್ಮನೆ ಇರುವುದಕ್ಕಾಗುವುದಿಲ್ಲ. ಅದು ಹರಿಯುತ್ತಲೇ ಇರಬೇಕು. ಹರಿಯುವುದು ನಿಲ್ಲಿಸಿದಾಗ ಅದು ನದಿಯಲ್ಲ, ಸರೋವರ ಆಯಿತು. ಹಾಗೆ ನಮ್ಮ ಚೇತನದಲ್ಲಿ ಸ್ಥಿರತೆ, ಆ ಶಾಂತತೆ ಬರಬೇಕಾದರೆ ’ಪ್ರಾಣ ಸಮಾಚಾರೇ ಸಮ ದರ್ಶನಮ್’ ಪ್ರಾಣವನ್ನು ನೋಡಿಕೊಳ್ಳಿ. ಆಗ ನಿಮ್ಮಲ್ಲಿ ಸಮತೆ ಉಂಟಾಗುತ್ತೆ ಎನ್ನುತ್ತದೆ ಈ ಸೂತ್ರ.

ಶನಿವಾರ, ಏಪ್ರಿಲ್ 6, 2013

ಏನೇ ಆದರೂ ಕುಗ್ಗದ ಮನೋಬಲ


ಬೂನ್, ನಾರ್ತ್ ಕೆರೋಲಿನಾ
೬ ಎಪ್ರಿಲ್ ೨೦೧೩

ನಿಮಗೆ ಗೊತ್ತಾ, ಜೀವನದಲ್ಲಿ ಯಾವತ್ತೂ ಸ್ವಲ್ಪ ತೊಂದರೆಯಿರುತ್ತದೆ, ಒಂದಲ್ಲ ಒಂದು ವಿಷಯದ ಬಗ್ಗೆ. ಅದಕ್ಕಾಗಿಯೇ ಇದು ಮಾಯೆ ಎಂದು ಕರೆಯಲ್ಪಡುವುದು. ಅದು ಅಂತಹ ಒಂದು ಭ್ರಮೆ. ಯಾವುದೇ ವಿಷಯವಾದರೂ ನಿಮಗೊಂದು ತೊಂದರೆಯಾಗಬಲ್ಲದು. ಯಾರಾದರೂ ನಿಮ್ಮನ್ನು ಪ್ರೀತಿಸಿದರೆ, ಅದೊಂದು ತೊಂದರೆಯಾಗುತ್ತದೆ, ಮತ್ತು ಅವರು ನಿಮ್ಮನ್ನು ಪ್ರೀತಿಸದೇ ಇದ್ದರೆ, ಆಗ ಕೂಡಾ ಅದೊಂದು ತೊಂದರೆಯಾಗುತ್ತದೆ.
ನಿಮ್ಮ ಮಿತ್ರರು ತೊಂದರೆಯ ಒಂದು ಮೂಲವಾಗಿದ್ದಾರೆ, ಮತ್ತು ನಿಮ್ಮ ಶತ್ರುಗಳೂ ಹಾಗೆಯೇ. ಅಲ್ಲವೇ? ಅದಕ್ಕಾಗಿಯೇ ಯೋಗ ಸೂತ್ರಗಳಲ್ಲಿ ಮಹಾಋಷಿ ಪತಂಜಲಿಯು, ’ಪರಿಣಾಮ ತಪ ಸಂಸ್ಕಾರ ದುಃಖೈ ಗುಣವೃತ್ತಿಃ, ವಿರೋಧತ್ ಚ ದುಃಖಮೇವ ಸರ್ವಂ ವಿವೇಕಿನಃ’ ಎಂದು ಹೇಳುತ್ತಾರೆ. (ಪತಂಜಲಿ ಯೋಗ ಸೂತ್ರಗಳು, ಅಧ್ಯಾಯ ೨, ಶ್ಲೋಕ ೧೫)
ಇದರರ್ಥವೇನೆಂದರೆ, ಯಾರಲ್ಲಿ ತೀಕ್ಷ್ಣವಾದ ವಿವೇಕವಿರುವುದೋ ಅವನಿಗೆ, ಈ ಪ್ರಪಂಚದಲ್ಲಿರುವ ಎಲ್ಲವೂ ಒಂದು ದುಃಖವೆಂಬುದು ಕಂಡುಬರುತ್ತದೆ. ನೀವು ಮಾತನಾಡಿದರೆ ಅದೊಂದು ಸಮಸ್ಯೆ; ನೀವು ಮಾತನಾಡದೇ ಇದ್ದರೆ, ಆಗ ಕೂಡಾ ಅದೊಂದು ಸಮಸ್ಯೆಯಾಗುತ್ತದೆ. ಜ್ಞಾನಿಯು ಇದನ್ನು ತಿಳಿದಿರುವಾಗ, ಅವನು ಅದರ ಬಗ್ಗೆ ಚಿಂತಿಸುವುದಿಲ್ಲ, ಯಾಕೆಂದರೆ ಅವನಿಗೆ ಯಾವುದೇ ಆಯ್ಕೆಯಿಲ್ಲವೆಂಬುದು ಅವನಿಗೆ ತಿಳಿದಿರುತ್ತದೆ. ಆದುದರಿಂದ, ಏನೇ ಆದರೂ ಪರವಾಗಿಲ್ಲ, ಅವನು ಸಂತೋಷವಾಗಿರುತ್ತಾನೆ.
’ಏನೇ ಬರಲಿ, ನಾನು ನನ್ನ ಸಂತೋಷವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಅವನು ಯೋಚಿಸುತ್ತಾನೆ. ಇದನ್ನೇ ಒಬ್ಬನು ಬಲವಾಗಿ ನಂಬಿಕೊಂಡಿರಬೇಕಾದುದು - ಏನೇ ಬರಲಿ, ನಾನು ನನ್ನ ಸಂತೋಷವನ್ನು ಕಳೆದುಕೊಳ್ಳಬಾರದು. ಉದಾಹರಣೆಗೆ, ನೀವೇನೋ ಮಾಡುತ್ತಿರುತ್ತೀರ ಮತ್ತು ಅದು ಚೆನ್ನಾಗಿ ಆಗುವುದಿಲ್ಲ. ನೀವು ಅದರ ಬಗ್ಗೆ ನಿಮ್ಮ ಸಂತೋಷವನ್ನು ಕೂಡಾ ಯಾಕೆ ಕಳೆದುಕೊಳ್ಳಬೇಕು? ಆಗ ಅದೊಂದು ಇಮ್ಮಡಿ ನಷ್ಟ, ಅಲ್ಲವೇ? ನೀವು ನಿಮ್ಮ ವ್ಯಾಪಾರದಲ್ಲಿ ನಷ್ಟಕ್ಕೀಡಾಗುವಿರಿ ಎಂದು ಇಟ್ಟುಕೊಳ್ಳೋಣ. ಈಗ ಹೇಗಿದ್ದರೂ ನಷ್ಟ ಸಂಭವಿಸಿದೆ. ಕಡಿಮೆಪಕ್ಷ ಅದರೊಂದಿಗೆ ನೀವು ನಿಮ್ಮ ಸಂತೋಷವನ್ನು ಕೂಡಾ ಕಳೆದುಕೊಳ್ಳಬಾರದು. ಇದು ಜ್ಞಾನ. ಈ ಆಧ್ಯಾತ್ಮಿಕ ಜ್ಞಾನವು ನಿಮ್ಮನ್ನು ತರಬೇಕಾದುದು ಈ ಸ್ಥಿತಿಗೇ. ಇದು ನಿಮ್ಮ ಬೆಳವಣಿಗೆಯ ಅಳತೆಯಾಗಿದೆ.
ನೀವು ನಿಮ್ಮ ವ್ಯಾಪಾರದಲ್ಲಿ ಅಥವಾ ಒಂದು ಸಂಬಂಧದಲ್ಲಿ ನಷ್ಟ ಅನುಭವಿಸಿರಲಿ; ಅಥವಾ ಜೀವನದ ಇತರ ಯಾವುದೇ ವಿಷಯದಲ್ಲಿ ಒಂದು ನಷ್ಟವನ್ನು ಅನುಭವಿಸಿರಲಿ; ನೀವು ನಿಮ್ಮ ಸಂತೋಷವನ್ನು ಕಳೆದುಕೊಳ್ಳಬಾರದು. ಆಗ ನೀವು ನಿಜವಾದ ವಿಷಯವನ್ನು ಹಿಡಿದುಕೊಂಡಿರುತ್ತೀರ.
ಸ್ವಾಮಿ ರಾಮದಾಸರು, ವೇದಾಂತದ (ಭಾರತೀಯ ತತ್ವಜ್ಞಾನದ ಒಂದು ಶಾಖೆ. ಇದರ ಅಕ್ಷರಶಃ ಅರ್ಥವೆಂದರೆ, ’ವೇದಗಳ ಗುರಿ ಅಥವಾ ಅಂತ್ಯ’ವೆಂದು) ಬಗ್ಗೆ ಮಾತನಾಡುವುದಕ್ಕಾಗಿ ಟೋಕಿಯೋಕ್ಕೆ ಆಮಂತ್ರಿಸಲ್ಪಟ್ಟರು. ಆದುದರಿಂದ ಅವರು ಭಾರತದಿಂದ ಬಹಳ ದೂರ ಹಡಗಿನಲ್ಲಿ ಪ್ರಯಾಣಿಸಿದರು, ಯಾಕೆಂದರೆ ಆ ದಿನಗಳಲ್ಲಿ ಅಷ್ಟೊಂದು ದೂರವನ್ನು ನೀವು ಹಡಗಿನ ಮೂಲಕ ಮಾತ್ರ ಪ್ರಯಾಣಿಸಬಹುದಿತ್ತು ಮತ್ತು ಅದು ಒಂದು ತಿಂಗಳು ತೆಗೆದುಕೊಳ್ಳುತ್ತಿತ್ತು. ಅವರೊಬ್ಬ ಸನ್ಯಾಸಿಯಾಗಿದ್ದರು ಮತ್ತು ತಾವು ಹೋದಲ್ಲೆಲ್ಲಾ ಕೇವಲ ಒಂದು ಜೊತೆ ಬಟ್ಟೆಗಳನ್ನು ಮಾತ್ರ ಕೊಂಡೊಯ್ಯುತ್ತಿದ್ದರು.
ಅವರು ಅಲ್ಲಿಗೆ ತಲುಪಿದಾಗ, ಕಾರ್ಯಕ್ರಮದ ಸಂಘಟಕರು ಮಾಯವಾಗಿದ್ದರು, ಮತ್ತು ಅಲ್ಲಿ ಯಾವುದೇ ಸಭಿಕರಿರಲಿಲ್ಲ. ಅವರು ಅಲ್ಲಿ ಸಾಗರ ತೀರದ ಬಳಿ ನಿಂತರು ಮತ್ತು ತಮ್ಮನ್ನೇ ಉದ್ದೇಶಿಸಿ ಮಾತನಾಡಿದರು. ಅವರು ತಮಗೇ ಒಂದು ಪ್ರವಚನವನ್ನು ನೀಡಿದರು ಮತ್ತು ಸಂತೋಷವಾಗಿ ಹಿಂತಿರುಗಿ ಬಂದರು (ನಗು). ಅವರು ಯಾರನ್ನೂ; ಸಂಘಟಕರನ್ನಾಗಲೀ, ಬರದೇ ಇದ್ದಂತಹ ಸಭಿಕರನ್ನಾಗಲೀ ದೂಷಿಸಲಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಳ್ಳಲು ಯಾರೂ ಇರಲಿಲ್ಲ, ಮತ್ತು ಅವರಿಗೆ ಜಪಾನೀಸ್ ಭಾಷೆ ತಿಳಿದಿರಲಿಲ್ಲ.
ಇದು ನಡೆದುದು ಹಲವಾರು ದಶಕಗಳ ಹಿಂದೆ, ಮತ್ತು ಆ ಕಾಲದಲ್ಲಿ, ಈಗಿರುವಂತೆ ಸತತ ಪ್ರವಾಸ ಯೋಜನೆಗಳು (ಫ್ರೀಕ್ವೆಂಟ್ ಟ್ರಾವೆಲರ್ ಪ್ರೋಗ್ರಾಮ್ಸ್) ಇರಲಿಲ್ಲ. ಆದುದರಿಂದ ಅವರು ತಮ್ಮ ಟಿಕೆಟಿನ ವೆಚ್ಚವನ್ನು ತಾವೇ ಭರಿಸಿಕೊಂಡರು ಮತ್ತು ಅಲ್ಲಿಗೆ ತಾವಾಗಿಯೇ ಹೋದರು. ಈ ಘಟನೆಯು ಸ್ವಾಮಿಗಳ ವಲಯದಲ್ಲಿ ಜನಪ್ರಿಯವಾದ ಒಂದು ದಂತಕತೆಯಾಗಿದೆ - ಸ್ವಾಮಿ ರಾಮದಾಸರು ಹೇಗೆ ವೇದಾಂತದ ಬಗ್ಗೆ ತಮಗೆ ತಾವೇ ಒಂದು ಪ್ರವಚನವನ್ನು ನೀಡಿದರು ಮತ್ತು ಭಾರತಕ್ಕೆ ಮರಳಿದರು ಎಂಬುದು.
ಇದೇ ರೀತಿಯದೊಂದು ಭಾರತದಲ್ಲಿ ಕೂಡಾ ಆಯಿತು.
ಸಮಯದಿಂದ ಸಮಯಕ್ಕೆ ನಾವು ಹಲವಾರು ಸಮ್ಮೇಳನಗಳನ್ನು ಇಟ್ಟಿರುತ್ತೇವೆ. ಜನರನ್ನು ಒಗ್ಗೂಡಿಸುವ ಮೂಲಕ ಸಮ್ಮೇಳನಗಳು ಸಾರ್ವಜನಿಕ ಬಾಂಧವ್ಯಗಳನ್ನು ನಿರ್ಮಿಸುವಲ್ಲಿ ಮತ್ತು ಪರಿಚಯ ಬೆಳೆಸುವಲ್ಲಿ ಸಹಾಯ ಮಾಡುತ್ತವೆ. ಜನರು ಬರುತ್ತಾರೆ, ಅವರು ಪರಸ್ಪರರನ್ನು ತಿಳಿಯುತ್ತಾರೆ, ಅವರು ಚರ್ಚಿಸುತ್ತಾರೆ ಮತ್ತು ಅವರು ಪರಸ್ಪರರಿಗೆ ವಿದಾಯ ಹೇಳುತ್ತಾರೆ. ಈ ಸಮ್ಮೇಳನಗಳಿಂದ ಹೆಚ್ಚೇನೂ ಫಲಿತಾಂಶವಿರುವುದಿಲ್ಲ, ಯಾಕೆಂದರೆ ಚರ್ಚಿಸಲ್ಪಟ್ಟ ವಿಷಯದ ಬಗ್ಗೆ ಆಳವಾದ ಜ್ಞಾನವಿರುವುದಿಲ್ಲ. ಹೀಗೆ ಒಂದು ಸಾರಿ ಏನಾಯಿತೆಂದರೆ, ಒಂದು ಸಮ್ಮೇಳನದಲ್ಲಿ ಜನರ ಈ ಒಂದು ದಳವಿತ್ತು ಮತ್ತು ಒಬ್ಬ ಸಜ್ಜನನು ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದನು. ಎಂ ಸಿ (ಕಾರ್ಯಕ್ರಮ ನಿರ್ವಾಹಕ)ಯು ಗಂಟೆಯನ್ನು ಬಾರಿಸುತ್ತಿದ್ದನು, ಆದರೆ ಭಾಷಣಕಾರನು ಅದನ್ನು ನಿರ್ಲಕ್ಷಿಸಿ ಮಾತನಾಡುವುದನ್ನು ಮುಂದುವರಿಸಿದನು. ಕೆಲವು ಜನರು, ಒಮ್ಮೆ ತಮಗೆ ಮೈಕ್ ಸಿಕ್ಕಿದರೆ ಅದನ್ನು ಬಿಡುವುದೇ ಇಲ್ಲ. ಅಂತಹ ಭಾಷಣಕಾರರಿಗೆ, ತಯಾರಾಗಲು ಅರ್ಧ ಘಂಟೆ ಬೇಕಾಗುತ್ತದೆ, ಮತ್ತು ನಂತರ ನಿಜವಾದ ಭಾಷಣ ಶುರುವಾಗುತ್ತದೆ. ಆದುದರಿಂದ, ನಂತರ ಎಂ ಸಿ ಹೋಗಿ ಭಾಷಣಕಾರನ ಅಂಗಿಯನ್ನು ಹಿಂದಿನಿಂದ ಎಳೆದನು, ಆದರೂ ಆ ಸಜ್ಜನನು ನಿಲ್ಲಿಸಲಿಲ್ಲ. ಎಂ ಸಿ ಯು ಇದನ್ನು ಮೂರನೇ ಬಾರಿಗೆ ಮಾಡಿದಾಗ, ಭಾಷಣಕಾರನು ತನ್ನ ಅಂಗಿಯನ್ನು ತೆಗೆದು ಎಂ ಸಿ ಗೆ ಕೊಟ್ಟನು ಮತ್ತು ಮಾತನಾಡುವುದನ್ನು ಮುಂದುವರಿಸಿದನು! (ನಗು) ಅವನು ತನ್ನ ಅಂಗಿಯಿಂದ ಬೇರೆಯಾಗಲು ಸಿದ್ಧನಿದ್ದನು ಆದರೆ ಮೈಕಿನಿಂದಲ್ಲ.

ಪ್ರಶ್ನೆ: ಒಲವಿನ ಗುರುದೇವ, ಸಾಧಾರಣವಾಗಿ ನಾನು ಸಂಪೂರ್ಣನೆಂದು ನನಗನ್ನಿಸುವುದು ನಾನೊಂದು ಸಂಬಂಧದಲ್ಲಿರುವಾಗ ಮಾತ್ರ. ಈ ಪ್ರವೃತ್ತಿಯಿಂದ ನಾನು ಹೊರಬರುವುದು ಹೇಗೆ, ಯಾಕೆಂದರೆ ಇದರಿಂದ ನನಗೆ ದುಃಖವುಂಟಾಗುವುದು. 
ಶ್ರೀ ಶ್ರೀ ರವಿ ಶಂಕರ್: ಇದು ಬಹಳ ಕಷ್ಟ. ನೀನೊಂದು ಕಷ್ಟಕರವಾದ ಸ್ಥಿತಿಯಲ್ಲಿರುವಾಗ, ಯಾವುದೇ ಸಲಹೆಯು ನಿನ್ನನ್ನು ಮುಳ್ಳುಗಳಂತೆ ಚುಚ್ಚುವುದಾಗಿ ತೋರುತ್ತದೆ ಮತ್ತು ಯಾವುದೂ ನಿಜವಾಗಿ ಸಾಕಷ್ಟು ಸಮಂಜಸವಾಗಿರುವುದಿಲ್ಲ. ನೀನು ಸುಮ್ಮನೇ ಒಂದು ಪ್ರಶ್ನೆಯನ್ನು ಕೇಳಿರುವೆ; ನಾವು ನಿನ್ನ ಮೇಲೆ ಸಹಾನುಭೂತಿ ತೋರಿಸುತ್ತೇವೆ.
ನಿಮಗೆ ಗೊತ್ತಾ, ಜನರು ಸಾಮಾನ್ಯವಾಗಿ ಕೇಳುವ ಐದು ರೀತಿಯ ಪ್ರಶ್ನೆಗಳಿವೆ. ನಾನು ಇದರ ಬಗ್ಗೆ ಮಾತನಾಡುವುದನ್ನು ನೀವು ಮೊದಲು ಕೂಡಾ ಕೇಳಿದ್ದೀರಿ. ನಾವದನ್ನು ಬೇರೆ ಯಾವಾಗಲಾದರೂ ತೆಗೆದುಕೊಳ್ಳೋಣ.
ಯಾರಾದರೂ ದುಃಖಿತರಾಗಿರುವಾಗಲೆಲ್ಲಾ ಅವರು ಮತ್ತೆ ಮತ್ತೆ ಈ ಪ್ರಶ್ನೆಯನ್ನು ಕೇಳುತ್ತಾರೆ, "ನನಗೆ ಯಾಕೆ? ಈ ಕಷ್ಟ ನನಗೆ ಯಾಕೆ? ದೇವರು ಯಾಕೆ ನನಗೆ ಅನ್ಯಾಯ ಮಾಡುತ್ತಿದ್ದಾರೆ? ನಾನು ಬಹಳ ದುಃಖಿತನಾಗಿರುವೆನು", ಮುಂತಾಗಿ.
ಒಬ್ಬರು ಇಂತಹ ಒಂದು ಸ್ಥಿತಿಯಲ್ಲಿರುವಾಗ, ನೀವವರಿಗೆ ಏನನ್ನಾದರೂ ಹೇಳಲು ಪ್ರಯತ್ನಿಸಿದರೂ ಕೂಡಾ, ತಾವು ಕಿವುಡರೇನೋ ಎಂಬಂತೆ ಅವರು ವರ್ತಿಸುವರು. ಅವರು ನೀವು ಹೇಳುವುದನ್ನು ಕೇಳಲಾರರು. ಮನೆಯಲ್ಲಿರುವ ಜನರೊಂದಿಗೆ ನಿಮಗೆ ಈ ಅನುಭವವಾಗಿದೆಯೇ? ವಯಸ್ಸಾದ ಜನರು ಬಹಳ ಅಸಂತುಷ್ಟರಾಗಿರುವಾಗ ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ನೀವವರಿಗೆ ಯಾವುದೇ ಉತ್ತರವನ್ನು ಕೊಡಿ, ಅವರು ಬೇರೆಲ್ಲೋ ನೋಡುತ್ತಾರೆ. ಅವರು ನಿಮ್ಮ ಉತ್ತರವನ್ನು ತೆಗೆದುಕೊಳ್ಳುವುದೇ ಇಲ್ಲ. ಹೀಗೆ, ದುಃಖಿತರಾಗಿರುವಾಗ ಜನರೊಳಗೆ ಒಂದು ಪ್ರಶ್ನೆಯಿರುತ್ತದೆ. ಅಂತಹ ಒಂದು ಸಂದರ್ಭದಲ್ಲಿ, ನೀವು ಸುಮ್ಮನಿರುವುದು ಒಳ್ಳೆಯದು.
ಎರಡನೆಯ ರೀತಿಯ ಪ್ರಶ್ನೆಯೆಂದರೆ, ಕೋಪದಲ್ಲಿರುವಾಗ ಜನರು ಕೇಳುವಂತಹುದು. ಅವರು, "ನನ್ನ ಕಡೆಗೆ ಯಾಕೆ ಈ ಅನ್ಯಾಯ?" ಎಂದು ಕೇಳುವರು. ಅವರು ಬಹಳ ತಾರ್ಕಿಕವಾಗಿರುತ್ತಾರೆ, ಆದರೆ ಅವರು ಕೋಪದಲ್ಲಿರುತ್ತಾರೆ. ಹೀಗೆ ಅವರಲ್ಲೂ ಒಂದು ದೊಡ್ಡ ಪ್ರಶ್ನೆಯಿರುತ್ತದೆ. ಪುನಃ, ಅವರಿಗೆ ಉತ್ತರಿಸುವುದರಲ್ಲಿ ಅರ್ಥವಿಲ್ಲ.
ಮೂರನೆಯ ರೀತಿಯ ಪ್ರಶ್ನೆಯು, ಮೊದಲೇ ಉತ್ತರ ತಿಳಿದರೂ ಕೇಳಲು ಬಯಸುವ ಜನರಿಂದ ಕೇಳಲ್ಪಡುತ್ತದೆ. ನಿಮಗೆ ಕೂಡಾ ಅದು ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅವರಿದನ್ನು ಮಾಡುತ್ತಾರೆ. ಅವರು ನಿಮಗೆ, "ಇಂತಿಂತಹ ಉಪನಿಷತ್ತಿನ ಮೂರನೆಯ ಶ್ಲೋಕದಲ್ಲಿ ಏನು ಹೇಳಲಾಗಿದೆಯೆಂದು ಹೇಳಿ" ಎಂಬಂತಹ ಪ್ರಶ್ನೆಗಳನ್ನು ಕೇಳುವರು. ಅವರಿಗಿದರ ಉತ್ತರ ತಿಳಿದಿದ್ದರೂ ಸಹ, ನಿಮಗೆ ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅವರಿದನ್ನು ಮಾಡುತ್ತಾರೆ.
ನಾಲ್ಕನೆಯ ರೀತಿಯ ಪ್ರಶ್ನೆಯು, ಕೇವಲ ತಮ್ಮ ಇರುವಿಕೆಯನ್ನು ತೋರಿಸಲು ಬಯಸುವ ಜನರಿಂದ ಕೇಳಲ್ಪಡುತ್ತದೆ. ಅವರು ಎದ್ದು ನಿಂತು ನಿಮಗೆ ಪ್ರಶ್ನೆಯನ್ನು ಕೇಳುವರು, ಮತ್ತು ನೀವು ಪ್ರಾಮಾಣಿಕವಾಗಿ ಪ್ರಶ್ನೆಗೆ ಉತ್ತರಿಸಲು ತೊಡಗುವಾಗ, ಅವರು ಬೇರೇನನ್ನೋ ಮಾಡಲು ತೊಡಗುವರು. ನಿಮ್ಮ ಉತ್ತರದ ಬಗ್ಗೆ ಅವರಿಗೆ ಯಾವುದೇ ಆಸ್ಥೆಯಿರುವುದಿಲ್ಲ. ಅವರಲ್ಲಿರುವರೆಂದು ಎಲ್ಲರೂ ಗಮನಿಸಲೆಂದು ಮತ್ತು ನಿಮಗೆ ಕೂಡಾ ಅವರಲ್ಲಿರುವರೆಂಬುದು ತಿಳಿಯಲೆಂದು ಅವರು ಕೇವಲ ಎದ್ದು ನಿಂತರು ಮತ್ತು ತಮ್ಮ ಅಂಶವನ್ನು ಮುಂದಿಟ್ಟರು.
ಐದನೆಯ ರೀತಿಯ ಪ್ರಶ್ನೆಯು ಯಾರಿಂದ ಕೇಳಲ್ಪಡುವುದೆಂದರೆ, ಯಾರು ಪ್ರಾಮಾಣಿಕವಾಗಿ ಉತ್ತರವನ್ನು ಬಯಸುವರೋ ಅವರಿಂದ; ಮತ್ತು ನಿಮಗದು ತಿಳಿದಿದೆಯೆಂಬುದು ಅವರಿಗೆ ತಿಳಿದಿರುತ್ತದೆ. ನೀವು ಹೇಳಲಿರುವ ಉತ್ತರವನ್ನು ಅವರು ತೆಗೆದುಕೊಳ್ಳುವರು.
ನೋಡಿ, ನಿಮಗೆ ಉತ್ತರ ತಿಳಿದಿದೆಯೆಂಬ ನಂಬಿಕೆಯಿಲ್ಲದೇ ಒಬ್ಬರು ಒಂದು ಪ್ರಶ್ನೆಯನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ.
ನೀವು ನಾರ್ತ್ ಕೆರೋಲಿನಾದವರೆಂದು ಇಟ್ಟುಕೊಳ್ಳೋಣ, ಮತ್ತು ಒಬ್ಬರು ನಿಮ್ಮಲ್ಲಿ ಕೇಳುತ್ತಾರೆ, "ರೇಲೈಗೆ ಪ್ರಯಾಣಿಸಲು ಎಷ್ಟು ಸಮಯ ಬೇಕಾಗುತ್ತದೆ?" ನಿಮಗೆ ಉತ್ತರ ತಿಳಿದಿರುವುದು. ಆದುದರಿಂದ, ಅವರು ಪ್ರಶ್ನೆಯನ್ನು ಕೇಳುವಾಗ, ನಿಮಗೆ ಉತ್ತರ ತಿಳಿದಿದೆಯೆಂಬುದು ಅವರಿಗೆ ಖಚಿತವಾಗಿ ಗೊತ್ತಿರುತ್ತದೆ, ಮತ್ತು ಉತ್ತರವನ್ನು ಪಡೆಯುವೆವೆಂಬ ಪ್ರಾಮಾಣಿಕತೆಯೊಂದಿಗೆ ಅವರು ಈ ಪ್ರಶ್ನೆಯನ್ನು ಕೇಳುತ್ತಾರೆ.
ಇದು ಉತ್ತರಿಸಲು ಯೋಗ್ಯವಾದ ಪ್ರಶ್ನೆ. ಇತರ ನಾಲ್ಕು ರೀತಿಗಳ ಪ್ರಶ್ನೆಗಳಿಗೆ, ಕೇವಲ ಒಂದು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿರಿ, ಮತ್ತು ಆ ಮುಗುಳ್ನಗೆಯು ಒಂದು ಅಳೆದ ಮುಗುಳ್ನಗೆಯಾಗಿರಬೇಕು. ಎಲ್ಲಾ ನಾಲ್ಕು ಪ್ರಶ್ನೆಗಳಿಗೆ ನೀವು ಒಂದೇ ಮುಗುಳ್ನಗೆಯನ್ನು  ಕೊಡಬಾರದು.
ಮೊದಲನೆಯ ರೀತಿಯ ಪ್ರಶ್ನೆಗೆ, ಮುಗುಳ್ನಗೆಯು ಸ್ವಲ್ಪವೇ ಇರಬೇಕು, ೨% ದಷ್ಟು. ಒಬ್ಬರು ದುಃಖಿತರಾಗಿರುವಾಗ, ಒಂದು ದೊಡ್ಡ ಮುಗುಳ್ನಗೆಯನ್ನು ಕೊಡಬೇಡಿ, ಇಲ್ಲದಿದ್ದರೆ ನೀವು ಕೂಡಾ ಏನಾದರೂ ’ದೊಡ್ಡದನ್ನು’ ತಿರುಗಿ ಪಡೆಯುವಿರಿ (ನಗೆ). ಒಬ್ಬರು ಕೋಪದಲ್ಲಿರುವಾಗ, ನಿಮ್ಮ ಮುಗುಳ್ನಗೆಯು ಕೇವಲ ೩% ಏನಾದರೂ ಇರಬೇಕು. ನಿಮ್ಮ ಮುಗುಳ್ನಗೆಯು, "ನನಗೆ ತಿಳಿಯದು" ಎಂಬ ಒಂದು ಮುಗ್ಧ ಭಾವನೆಯನ್ನು ತಿಳಿಯಪಡಿಸುವಂತಿರಬೇಕು. ಆದರೆ ಮೂರನೆಯ ಮತ್ತು ನಾಲ್ಕನೆಯ ರೀತಿಯ ಪ್ರಶ್ನೆಗೆ, ನೀವು ಸ್ವಲ್ಪ ದೊಡ್ಡದಾಗಿ ಮುಗುಳ್ನಗಬಹುದು.

ಪ್ರಶ್ನೆ: ಪ್ರೀತಿಯ ಗುರುದೇವ, ನೀವೇನು ಹೇಳಿದಿರೋ, ಅದನ್ನು ನಾನು ಕೆಲವೊಮ್ಮೆ ಮೊದಲು ಅನುಭವಿಸಿದ್ದೇನೆ. ಆದರೆ ಈಗ ನನಗೆ ಅದನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೇನು ಮತ್ತು ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಸುಮ್ಮನೆ ವಿಶ್ರಾಮ ಮಾಡು. ನೀನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವೆ. ನೋಡು, ಈ ಅನುಭವಗಳು ಬರುತ್ತವೆ ಮತ್ತು ಹೋಗುತ್ತವೆ. ಸುಮ್ಮನೆ ಅವುಗಳು ಬರುತ್ತಿರುವಂತೆ ಅವುಗಳನ್ನು ತೆಗೆದುಕೋ. ನೀನು ಅವುಗಳಿಗಾಗಿ ಹಾತೊರೆಯಲೂ ಬಾರದು, ಅವುಗಳನ್ನು ತಡೆಯಲು ಪ್ರಯತ್ನಿಸಲೂ ಕೂಡಾ ಬಾರದು. ಇದು ನಮ್ಮ ಸುವರ್ಣ ತತ್ವ.

ಪ್ರಶ್ನೆ: ಎಲ್ಲವೂ ಒಂದೇ ವಿಷಯವನ್ನು ಹೇಳುವಾಗ, ಅಷ್ಟೊಂದು ಉಪನಿಷತ್ತುಗಳಿರುವುದರ ಉದ್ದೇಶವೇನು?
ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದರ ನಡುವೆ ಚಿಕ್ಕ ವ್ಯತ್ಯಾಸಗಳಿವೆ. ಅವುಗಳೆಲ್ಲವೂ ಒಂದೇ ವಿಷಯವನ್ನು ಹೇಳುವುದಾದರೂ, ಶೈಲಿಯು ಬಹಳ ಅನನ್ಯವಾಗಿದೆ ಮತ್ತು ಅದು ಒಂದೇ ವಿಷಯವಲ್ಲ.
ಪ್ರತಿಯೊಂದಕ್ಕೂ ಅದರದ್ದೇ ಆದ ನಿರ್ದಿಷ್ಟ ಸ್ವಾದವಿದೆ. ಅದು, ನೀವೊಂದು ಐಸ್ ಕ್ರೀಂ ಅಂಗಡಿಗೆ ಹೋಗಿ, "ನೀವು ಯಾಕೆ ಇಷ್ಟೊಂದು ವಿವಿಧ ಸ್ವಾದಗಳ ಐಸ್ ಕ್ರೀಂ ಇಟ್ಟಿರುವಿರಿ?" ಎಂದು ಕೇಳುವಂತೆ. ಆದುದರಿಂದ, ಮೂಲತಃ ಅವುಗಳು ಐಸ್ ಕ್ರೀಂ, ಆದರೆ ಪ್ರತಿಯೊಂದರದೂ ವಿಭಿನ್ನ ಸ್ವಾದ. ಒಂದು ಚಾಕೊಲೇಟ್, ಒಂದು ಪಿಸ್ಟಾಚಿಯೋ, ಇನ್ನೊಂದು ಬಟರ್ ಸ್ಕೋಚ್, ಮೊದಲಾದವು. ನಿಜವಾಗಿ ಅದೆಲ್ಲವೂ ಸಕ್ಕರೆ ಮತ್ತು ಹಾಲು. ಬೇಕಾಗುವ ಸಾಮಗ್ರಿಗಳು ನಿಜವಾಗಿ ಒಂದೇ, ಆದರೆ ಪ್ರತಿಯೊಂದಕ್ಕೂ ಒಂದು ಬೇರೆಯ ಸ್ವಾದವಿದೆ.