ಧನಾತ್ಮಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಧನಾತ್ಮಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 22, 2013

ಜೀವನವೊ೦ದು ಶ್ರೀಮಂತ ಅನುಭವ

ಮಾರ್ಚ್ ೨೨, ೨೦೧೩
ಜರ್ಮನಿ

ಸ್ವಲ್ಪ ನೃತ್ಯ, ಸಂಗೀತ, ತತ್ವಜ್ಞಾನ, ವಿಜ್ಞಾನ, ಸೇವೆ ಮತ್ತು ಮೌನವಿರುವಾಗ ನಮ್ಮ ಜೀವನವು ಹೆಚ್ಚು ಶ್ರೀಮಂತವಾಗುವುದು. ಈ ಆರು ವಿಷಯಗಳು ನಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಬಲ್ಲವು. ಅವುಗಳಲ್ಲಿ ಯಾವುದಾದರೂ ಒಂದು ನಿಮಗೆ ತಪ್ಪಿಹೋದರೆ, ಆಗ ಜೀವನವು ಸಂಪೂರ್ಣವಲ್ಲ. ಇವತ್ತು, ನಾವು ಆಂತರಿಕ ಮೌನದ ಜೊತೆ ಮುಖಾಮುಖಿ ನಡೆಸೋಣ.
ಆಂತರಿಕ ಮೌನವು ಎಲ್ಲಾ ಸೃಜನಶೀಲತೆಯ ತಾಯಿಯಾಗಿದೆ, ಅಂತಃಸ್ಫುರಣೆಯ ಮೂಲವಾಗಿದೆ ಮತ್ತು ಚೈತನ್ಯದ ಉಗ್ರಾಣವಾಗಿದೆ ಹಾಗೂ ನಾವೆಲ್ಲರೂ ಇದನ್ನು ಹೊಂದಿದ್ದೇವೆ! ಒಂದೇ ಒಂದು ವಿಷಯವೆಂದರೆ, ನಾವದನ್ನು ಬಂಧಿಸಿದ್ದೇವೆ ಮತ್ತು ಬೀಗದ ಕೈಯನ್ನು ಮರೆತಿದ್ದೇವೆ. ಇದು, ನೀವು ನಿಮ್ಮ ಕಂಪ್ಯೂಟರಿನ ಪಾಸ್ ವರ್ಡನ್ನು ಕೆಲವೊಮ್ಮೆ ಹೇಗೆ ಮರೆಯುವಿರೋ ಹಾಗೆ. ಅದೇ ರೀತಿಯಲ್ಲಿ, ನಾವೆಲ್ಲರೂ, ನಮ್ಮ ಹೃದಯದಲ್ಲಿ ಈ ಅಗಾಧವಾದ ಸಿರಿವಂತಿಕೆಯಾದ ಮೌನವನ್ನು ಹೊಂದಿರುವೆವು, ಆದರೆ ಹೇಗೋ, ಅದನ್ನು ಹೇಗೆ ಸ್ಪರ್ಷಿಸಬೇಕೆಂಬುದನ್ನು ನಾವು ಮರೆತಿರುವೆವು. ಇದನ್ನು ತಿಳಿದುಕೊಳ್ಳಬೇಕಾಗಿದೆ.
ಇವತ್ತು ನಾವು ಸ್ವಲ್ಪ ನೃತ್ಯ, ಸ್ವಲ್ಪ ಸುಂದರವಾದ ಸಂಗೀತದಲ್ಲಿ ಪಾಲ್ಗೊಂಡೆವು; ಈಗ, ನಾವು ಸ್ವಲ್ಪ ತತ್ವಜ್ಞಾನವನ್ನು ಚರ್ಚಿಸಬೇಕು.
ನಮ್ಮ ಹೃದಯಕ್ಕೆ ಬಹಳ ಹತ್ತಿರವಾದ, ನಮ್ಮ ಜೀವನದಲ್ಲಿ ಬಹಳ ಪ್ರಿಯವಾದ ಯಾವುದನ್ನಾದರೂ ಚರ್ಚಿಸಲು ನಾವೊಂದು ಸೌಹಾರ್ದಯುತ ಮತ್ತು ಅನೌಪಚಾರಿಕ ವಾತಾವರಣದಲ್ಲಿರಬೇಕು. ನೀವೆಲ್ಲರೂ ಈಗ ಇಲ್ಲಿ ಹಾಯಾಗಿರುವಿರೇ? ನಮ್ಮ ಸುತ್ತಲೂ ಕುಳಿತಿರುವ ಜನರನ್ನು ಅಭಿವಂದಿಸಲು ನಾವು ೩೦ ಸೆಕೆಂಡುಗಳನ್ನು ತೆಗೆದುಕೊಳ್ಳೋಣ.
ಈಗ, ನೀವು ನಿಜವಾಗಿಯೂ ನಿಮ್ಮ ಪಕ್ಕದ ವ್ಯಕ್ತಿಗೆ ಅಭಿವಂದಿಸಿದಿರೇ? ಅಥವಾ ನೀವದನ್ನು ಕೇವಲ ಒಂದು ಔಪಚಾರಿಕತೆಯಾಗಿ ಮಾಡಿದಿರೇ? ಹೆಚ್ಚಾಗಿ, ನಾವು ಜೀವನದಲ್ಲಿ ಅದಲು ಬದಲು ಮಾಡಿಕೊಳ್ಳುವ ಈ ಕುಶಲೋಪರಿಗಳೆಲ್ಲವೂ ಒಂದು ಬಹಳ ಬಾಹ್ಯ ಮಟ್ಟದ್ದಾಗಿದೆ. ಉದಾಹರಣೆಗೆ, ಅನಾರೋಗ್ಯದಲ್ಲಿರುವ ಒಬ್ಬರನ್ನು ಭೇಟಿಯಾಗಲು ನೀವೊಂದು ಆಸ್ಪತ್ರೆಗೆ ಹೋಗುತ್ತೀರಿ ಮತ್ತು ನೀವು ಅವರಲ್ಲಿ, "ನೀವು ಹೇಗಿದ್ದೀರಾ?" ಎಂದು ಕೇಳುತ್ತೀರಿ. ಅವರು, "ನಾನು ಚೆನ್ನಾಗಿದ್ದೇನೆ" ಅನ್ನುತ್ತಾರೆ.
ಒಬ್ಬರು ನಿಮಗೆ ಒಂದು ಲೋಟ ನೀರು ತಂದುಕೊಡುವಾಗ ನೀವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳುತ್ತೀರಿ. ಆದರೆ ಅದನ್ನು ನಿಜವಾದ ಅರ್ಥದಲ್ಲಿ ಹೇಳಿರುವುದಿಲ್ಲ! ಒಂದು ಲೋಟ ನೀರು ಪಡೆದಾಗ ನೀವು, "ನಿಮಗೆ ಧನ್ಯವಾದಗಳು" ಎಂದು ಹೇಳಬಾರದೆಂದು ನಾನು ಹೇಳುತ್ತಿಲ್ಲ. ಆದರೆ, ಈ ಶಬ್ದಗಳು ನಿಜವಾದ ಭಾವವನ್ನು ಹೊಂದಿಲ್ಲವೆಂಬುದನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ. ಅವುಗಳು ಬಹುತೇಕ, ಒಬ್ಬಳು ಗಗನಸಖಿಯು ನಿಮಗೆ, "ನಿಮ್ಮ ದಿನವು ಶುಭವಾಗಿರಲಿ" ಎಂದು ಹಾರೈಸಿದಂತೆ.
ಹೇಗಾದರೂ, ಅದೇ ಶಬ್ದಗಳು ನಿಮಗೆ ಪ್ರಿಯವಾದ ಒಬ್ಬರ ಬಾಯಿಯಿಂದ ಬರುವಾಗ, ಅದು ಯಾವುದೋ ಕಂಪನಗಳನ್ನು ಹೊತ್ತು ತರುತ್ತದೆ ಮತ್ತು ಈ ಕಂಪನಗಳು ಶಬ್ದಗಳಿಗಿಂತ ಜಾಸ್ತಿ ತಿಳಿಯಪಡಿಸುತ್ತವೆ.
ನಮ್ಮಲ್ಲಿ ಧನಾತ್ಮಕ ಕಂಪನಗಳಿವೆ; ಆದರೆ ನಾವು ಒತ್ತಡದಲ್ಲಿದ್ದರೆ ಮತ್ತು ದುಃಖಿತರಾಗಿದ್ದರೆ, ನಾವು ಋಣಾತ್ಮಕ ಕಂಪನಗಳನ್ನು ಹೊರಸೂಸುತ್ತೇವೆ.
ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ಜನರಿಂದ ತಪ್ಪಿಸಿಕೊಳ್ಳಬೇಕೆಂದು ಅನ್ನಿಸುತ್ತದೆ, ಇದನ್ನು ನೀವು ಗಮನಿಸಿದ್ದೀರಾ? ಮತ್ತೆ ಕೆಲವೊಮ್ಮೆ, ಯಾವುದೇ ಸ್ಪಷ್ಟ ಕಾರಣವಿಲ್ಲದೇ, ಬೇರೊಬ್ಬರೊಂದಿಗೆ ನಿಮಗೆ ಬಹಳ ಹಿತವೆನಿಸುತ್ತದೆ. ಇದು ಕಂಪನಗಳಿಂದಾಗಿ.
ಶಾಲೆಯಲ್ಲಾಗಲೀ ಮನೆಯಲ್ಲಾಗಲೀ, ನಮ್ಮ ಕಂಪನಗಳನ್ನು ಧನಾತ್ಮಕವಾಗಿಸುವುದು ಹೇಗೆಂದು ನಮಗೆ ಯಾರೂ ಕಲಿಸಿಲ್ಲ.
ನಿಮಗೆ ನಕಾರಾತ್ಮಕತೆಯ ಅನುಭವವಾಗುತ್ತಿರುವುದಾದರೆ, ನಿಮ್ಮೊಳಗಿನ ಆ ಋಣಾತ್ಮಕ ಕಂಪನಗಳೊಂದಿಗೆ ನೀವು ಜೀವಿಸುತ್ತೀರಿ. ನೀವು ಖಿನ್ನತೆಗೊಳಗಾಗಿರುವುದಾದರೆ, ಕೋಪ ಅಥವಾ ದುಃಖಗೊಂಡಿರುವುದಾದರೆ, ಈ ಭಾವನೆಗಳನ್ನು ನೀವು ನಿಮ್ಮೊಂದಿಗೆ ಒಯ್ಯುತ್ತೀರಿ. ಇದು ಯಾಕೆಂದರೆ, ಈ ಮನಸ್ಸನ್ನು ನಿರ್ವಹಿಸುವುದು ಹೇಗೆಂಬುದನ್ನು ಅಥವಾ ನಮ್ಮ ಕಂಪನವನ್ನು ಬಹಳ ಧನಾತ್ಮಕ ಮತ್ತು ಶೋಭೆಯುಳ್ಳದ್ದಾಗಿ ಬದಲಾಯಿಸುವುದು ಹೇಗೆಂಬುದನ್ನು ಯಾರೂ ನಮಗೆ ಹೇಳಿಲ್ಲ. ಇಲ್ಲಿಯೇ ಆರ್ಟ್ ಆಫ್ ಲಿವಿಂಗ್ ಆವಶ್ಯಕವಾಗಿರುವುದು. ಋಣಾತ್ಮಕತೆಯನ್ನು ಧನಾತ್ಮಕತೆಯಾಗಿ ಬದಲಾಯಿಸುವುದು ಹೇಗೆಂಬುದನ್ನು ಅದು ನಮಗೆ ಕಲಿಸುತ್ತದೆ. ಇದು, ಕೆಲವು ಅಭ್ಯಾಸಗಳ ಮೂಲಕ; ನಮ್ಮ ಉಸಿರು, ಮನಸ್ಸು, ಎಚ್ಚರಿಕೆ, ಬುದ್ಧಿಗಳನ್ನು ಬಳಸುವುದರ ಮೂಲಕ ಸಾಧ್ಯ.
ಸರಿ, ಈಗ ನಾನು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ನೀವು ಬಯಸುವಿರಿ?

(ಸಭಿಕರು: ಸೇವೆ; ಶಾಂತಿ; ಪ್ರೇಮ; ಸರಿಯಾದ ನಿರ್ಧಾರಗಳನ್ನು ಮಾಡುವುದು; ಅಂತಃಸ್ಫುರಣೆಯನ್ನು ಹೆಚ್ಚಿಸುವುದು; ಅಪರಾಧಿ ಪ್ರಜ್ಞೆ; ಮೋಹ; ವಿಶ್ರಾಮ; ಸಮಯ; ಕ್ಷಮಾಪಣೆ; ಭಯ; ಕರ್ಮ; ಬಯಕೆಗಳು; ಏಕತೆ; ವಿಶ್ವಾಸ; ಸಂತೋಷ; ಗುರು; ಶಿಕ್ಷಣ; ಪ್ರಕೃತಿ; ಪ್ರಾಮಾಣಿಕತೆ; ಸಾವು; ಧ್ಯಾನ; ಜ್ಞಾನ.)

ನನಗೆ ಹೇಳಿ, ನೀವು ನಿಜವಾಗಿಯೂ ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯಲು ಬಯಸುವಿರಾ? ನೀವೊಂದು ಗ್ರಂಥಾಲಯಕ್ಕೆ ಹೋದರೆ ಅಥವಾ ಗೂಗಲ್ ಮಾಡಿದರೆ, ಈ ವಿಷಯಗಳ ಬಗ್ಗೆ ನಿಮಗೆ ಎಲ್ಲಾ ಮಾಹಿತಿಯು ಸಿಗುವುದು.
ಈ ವಿಷಯಗಳಲ್ಲಿ ಯಾವುದರ ಬಗ್ಗೆಯೂ ನನಗೆ ಏನೂ ತಿಳಿದಿಲ್ಲದಿದ್ದರೆ? ನಾವು ಯಾವ ವಿಷಯದ ಬಗ್ಗೆ ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ?
ನಾಲ್ಕು ಮಟ್ಟಗಳ ಸಂಪರ್ಕವಿದೆಯೆಂಬುದು ನಿಮಗೆ ಗೊತ್ತಾ?
ಮೊದಲಿಗೆ, ತಲೆಯಿಂದ ತಲೆಗಿರುವ ಸಂಪರ್ಕವಿದೆ. ಎರಡನೆಯದಾಗಿರುವ ಸಂಪರ್ಕವೆಂದರೆ ತಲೆಯಿಂದ ಹೃದಯಕ್ಕಿರುವುದು. ಮೂರನೆಯದು ಹೃದಯದಿಂದ ಹೃದಯಕ್ಕಿರುವ ಸಂಪರ್ಕ, ಮತ್ತು ನಾಲ್ಕನೆಯದು ಆತ್ಮದಿಂದ ಆತ್ಮಕ್ಕಿರುವ ಸಂಪರ್ಕ.
ನೀವು ಗಮನಿಸಿದ್ದೀರಾ, ಕೆಲವೊಮ್ಮೆ, ಇಬ್ಬರು ವ್ಯಕ್ತಿಗಳು ಒಂದೇ ವಿಷಯವನ್ನು ಹೇಳುತ್ತಿರುತ್ತಾರೆ, ಆದರೆ ಅವರು ಮಾತನಾಡುವಾಗ, ಅವರು ವಾದಿಸುತ್ತಿರುವರೇನೋ ಎಂಬಂತೆ ತೋರುತ್ತದೆ. ಇದಾಗುವುದು ಯಾಕೆಂದರೆ, ಹೃದಯದಿಂದ ಬರುವ ಭಾವನೆಯ ಅಂಶ ಅಥವಾ ನಂಬಿಕೆ ಅಲ್ಲಿಲ್ಲ.
ನಾವು ನಮ್ಮ ಮಾತಿಗಿಂತ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ನಾನು ಕುಳಿತುಕೊಂಡು ಪ್ರೇಮದ ಬಗ್ಗೆ ಒಂದು ಘಂಟೆಯ ಕಾಲ ಮಾತನಾಡಬಹುದು, ಆದರೆ ಕೇವಲ ಒಂದು ನೋಟವು ಆ ಒಂದು ಘಂಟೆಯ ಮಾತಿಗಿಂತ ಹೆಚ್ಚಿನದನ್ನು ತಿಳಿಯಪಡಿಸುವುದು. ಅಲ್ಲವೇ?
ನೀವು ಸುಮ್ಮನೇ ಮಕ್ಕಳ ಕಣ್ಣಿನೊಳಗೆ ನೋಡಿ, ಮತ್ತು ಅವುಗಳು ಪ್ರೇಮವನ್ನು ತಿಳಿಯಪಡಿಸುತ್ತವೆ. ನಿಮ್ಮ ಮನೆಯಲ್ಲಿರುವ ಒಂದು ನಾಯಿಮರಿ, ಒಂದು ನಾಯಿ ಸುತ್ತು ಸುತ್ತು ತಿರುಗುತ್ತದೆ ಮತ್ತು ತನ್ನೆಲ್ಲಾ ಪ್ರೀತಿಯನ್ನು ತಿಳಿಯಪಡಿಸುತ್ತದೆ. "ಓ, ನಾನು ನಿನ್ನನ್ನು ಬಹಳಷ್ಟು ಪ್ರೀತಿಸುತ್ತೇನೆ" ಎಂದು ಅದು ಹೇಳಬೇಕಾಗಿಲ್ಲ. ಒಂದು ಮಗು ಕೂಡಾ, "ಓ ಅಮ್ಮಾ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಬೇಕಾಗಿಲ್ಲ. ವಾಸ್ತವವಾಗಿ, ಪ್ರೇಮವನ್ನು ಶಬ್ದಗಳಲ್ಲಿ ಹೇಳುವುದು, ಪ್ರೇಮವನ್ನು ಕಡಿಮೆ ಮಾಡುತ್ತದೆ.
ಸಂತೋಷವಾಗಿರುವುದು ಹೇಗೆ ಎಂಬುದರ ಬಗ್ಗೆ ಮೂರು ಘಂಟೆಗಳ ಒಂದು ಉಪನ್ಯಾಸವನ್ನು ನೀಡಿದ ಒಬ್ಬರ ಬಗ್ಗೆ ನಾನು ಕೇಳಿದ್ದೆ. ಉಪನ್ಯಾಸದ ಕೊನೆಯಲ್ಲಿ, ಎಲ್ಲರೂ ಬಹಳ ಬೇಸರಗೊಂಡಿದ್ದರು, ಯಾಕೆಂದರೆ ಅವರು ಅತಿಯಾಗಿ ಮಾತನಾಡಿದ್ದರು. ಅವರು ಒಂದು ಘಂಟೆ ಮಾತನಾಡಬೇಕಾಗಿತ್ತು, ಆದರೆ ಅವರು ಮೂರು ಘಂಟೆಗಳ ವರೆಗೆ ಮಾತನಾಡಿದ್ದರು!
ವಿಷಯವೆಂದರೆ - ನಮ್ಮೆಲ್ಲರೊಳಗೆ ಆಳದಲ್ಲಿ ಏನೋ ಇದೆ. ನಮ್ಮೊಳಗಿರುವ ಈ ಮಗ್ಗುಲಿನೊಂದಿಗೆ ನಾವು ಸಂಪರ್ಕದಲ್ಲಿರುವಾಗ ನಾವು ವಿಶ್ವಾಸಾರ್ಹ, ಸಂತೋಷ ಮತ್ತು ಆನಂದಭರಿತರಾಗಿರುತ್ತೇವೆ. ನಮ್ಮೊಳಗೆ ಧನ್ಯತೆಯ ಒಂದು ಭಾವವಿರುತ್ತದೆ. ಧ್ಯಾನವೆಂದರೆ ನಮ್ಮೊಳಗಿರುವ ಆ ಆಳವಾದ ಮಗ್ಗುಲಿನ ಕಡೆಗೆ ಗಮನ ಹರಿಸುವುದು.
ನೋಡಿ, ಜೀವನವು ಬಹಳ ಚಿಕ್ಕದು; ೭೦-೮೦ ವರ್ಷಗಳ ಜೀವನವು ಬಹಳ ವೇಗವಾಗಿ ಹೋಗುತ್ತದೆ, ಅಲ್ಲವೇ? ಅರ್ಧದಷ್ಟು ಸಮಯವನ್ನು ನಾವು ನಿದ್ರಿಸುವುದರಲ್ಲಿ ಕಳೆಯುತ್ತೇವೆ ಮತ್ತು ಉಳಿದ ಸಮಯವನ್ನು ನಾವು ಬಚ್ಚಲುಮನೆಯಲ್ಲಿ, ಹೋಟೇಲುಗಳಲ್ಲಿ, ಟ್ರಾಫಿಕ್ ಜಾಮುಗಳಲ್ಲಿ, ದೂರುವುದರಲ್ಲಿ ಅಥವಾ ಚಿಂತಿಸುವುದರಲ್ಲಿ ಕಳೆಯುತ್ತೇವೆ; ಮತ್ತು ಜೀವನವು ಮುಗಿದುಬಿಡುತ್ತದೆ! ಅದಕ್ಕಾಗಿಯೇ ನಾನು ಹೇಳಿದುದು, ನಾವು ಈ ಆರು ವಿಷಯಗಳನ್ನು ಮರೆಯಬಾರದು. ಬೌದ್ಧಿಕವಾಗಿ ಉತ್ತೇಜಿಸುವ ತತ್ವಶಾಸ್ತ್ರ, ಸ್ವಲ್ಪ ಸಂಗೀತ, ಒಂದು ಸ್ವಲ್ಪ ನೃತ್ಯ, ವಿಜ್ಞಾನ ಮತ್ತು ಸೇವೆಗಳಲ್ಲಿ ಸಮಯವನ್ನು ಕಳೆಯಿರಿ.
ಹಾಗಾದರೆ ನಾನು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀನಾ? ಯಾವುದಾದರೂ ವಿಷಯ ಉಳಿದಿದೆಯಾ?

(ಸಭಿಕರು: ಸಾವು)

ಸಾವು ಅನಿವಾರ್ಯ. ಸಾವೆಂದರೆ ಮನಸ್ಸು ತನ್ನನ್ನು ತಾನು ಶರೀರದಿಂದ ಬೇರ್ಪಡಿಸಿಕೊಳ್ಳುವುದು ಮತ್ತು ಶರೀರ ಹಾಗೂ ಮನಸ್ಸಿನ ನಡುವಿನ ಕೊಂಡಿ; ಅಂದರೆ ಉಸಿರು ನಿಂತುಹೋಗುವುದಾಗಿದೆ. ಹೇಗಾದರೂ, ಥರ್ಮೋಡೈನಮಿಕ್ಸ್ ನಿಯಮದ ಪ್ರಕಾರ, ಪದಾರ್ಥ ಮತ್ತು ಚೈತನ್ಯವನ್ನು ಯಾವತ್ತೂ ನಾಶಪಡಿಸಲು ಸಾಧ್ಯವಿಲ್ಲವೆಂಬುದು ನಿಮಗೆ ಗೊತ್ತು. ಮನಸ್ಸು ಚೈತನ್ಯವಾಗಿದೆ, ಅದು ನಾಶವಾಗುವುದಿಲ್ಲ. ಆದುದರಿಂದ, ನೀವು ಶರೀರದಿಂದ ಬೇರೆಯಾದರೂ ಕೂಡಾ, ನೀವು ಇನ್ನೂ ಅಲ್ಲಿರುವಿರಿ. ನೀವು ಧ್ಯಾನದಲ್ಲಿ ಇನ್ನೂ ಹೆಚ್ಚು ಆಳಕ್ಕೆ ಹೋದ ಹಾಗೆ ನೀವು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಆಗ ನಿಮಗೆ, ನಿಮಗೆ ಸಾವೇ ಇಲ್ಲವೆಂಬುದು ಅರ್ಥವಾಗುತ್ತದೆ. ನೀವು ಕೇವಲ ಒಂದು ಶರೀರದಿಂದ ಇನ್ನೊಂದಕ್ಕೆ ಸಾಗುತ್ತಿರುತ್ತೀರಿ. ನಿಮ್ಮ ಸಾವಿನ ಭಯವು ದೂರವಾಗುತ್ತದೆ; ಅದು ಮಾಯವಾಗುತ್ತದೆ.

(ಸಭಿಕರು: ಮೋಹ )

ನೀವು ಮೋಹವನ್ನು ತೊಡೆದುಹಾಕಲು ಯಾಕೆ ಬಯಸುವಿರಿ? ಯಾಕೆಂದರೆ ಅದು ನಿಮಗೆ ನೋವನ್ನು ಕೊಡುತ್ತದೆ, ಸರಿಯಾ? ನೀವು ನಿಮ್ಮ ಮೋಹವನ್ನು ಯಾಕೆ ಇನ್ನೂ ದೊಡ್ಡದಾಗಿಸಬಾರದು? ನೀವು ನಿಮ್ಮ ಮಕ್ಕಳ, ಹೆತ್ತವರ, ಸಂಗಾತಿಯ, ಮಿತ್ರರ ಕಡೆಗೆ ಮೋಹಕ್ಕೊಳಗಾಗುವುದು ನಿಮಗೆ ಸ್ವಾಭಾವಿಕವಾದುದು; ಅದರಲ್ಲೇನೂ ತಪ್ಪಿಲ್ಲ. ಹೀಗಿದ್ದರೂ, ನೀವು ಸ್ವಾಮಿತ್ವ ಸ್ಥಾಪಿಸಬಾರದು. ನಿಮ್ಮ ಮೋಹವು ಸ್ವಾಮಿತ್ವವಾಗುವಾಗ, ನೀವು ಸಂಬಂಧಪಟ್ಟ ವ್ಯಕ್ತಿಗೆ ತೊಂದರೆ ಕೊಡುತ್ತಿರುತ್ತೀರಿ ಮತ್ತು ನೀವು ನಿಮಗೆ ಕೂಡಾ ತೊಂದರೆಯನ್ನು ತಂದುಕೊಳ್ಳಬಹುದು. ಆದುದರಿಂದ, ನಿಮ್ಮ ಮೋಹವನ್ನು ವಿಶಾಲಗೊಳಿಸಿ. ನೀವು ನಿಮ್ಮ ಮಕ್ಕಳ ಕಡೆಗೆ ಮೋಹಗೊಂಡಿರುವಂತೆಯೇ, ನೀವು ಇತರ ಮಕ್ಕಳ ಕಡೆಗೂ ಮೋಹಗೊಂಡಿರಬೇಕು. ಅದು ಒಂದೇ ಪ್ರಮಾಣದಲ್ಲಿರದಿದ್ದರೂ, ಅದು ಕನಿಷ್ಠಪಕ್ಷ ೫೦% ಅಥವಾ ಹೆಚ್ಚಿರಬಹುದು.

(ಸಭಿಕರು: ಸೇವೆ )

ಸೇವೆಯು ಆವಶ್ಯಕ. ನಾವೆಲ್ಲರೂ ಜೀವನದಲ್ಲಿ ಸ್ವಲ್ಪ ಸೇವೆಯನ್ನು ಮಾಡಬೇಕು. ಇತರರಿಗೆ ಸಹಾಯ ಮಾಡಲು, ಆನಂದ ತರಲು ಮತ್ತು ಇತರರಲ್ಲಿ ಒಂದು ನಗುವನ್ನು ತರಲು ನಮ್ಮಿಂದ ಏನೇನು ಸಾಧ್ಯವೋ ಅದನ್ನು ನಾವು ಮಾಡಬೇಕು.
ಸೇವೆಯು ನಿಮಗೆ ಅಪಾರ ತೃಪ್ತಿಯನ್ನು ತರುತ್ತದೆ. ನೀವು ಸೇವೆ ಮಾಡುವಾಗ, ನಿಮ್ಮ ಮೋಹವು ನಿಮ್ಮಲ್ಲಿ ದುಃಖವನ್ನು ಉಂಟುಮಾಡುವುದಿಲ್ಲ. ಒಬ್ಬರು ಹೆತ್ತವರಾಗಿ, ನೀವು ನಿಮ್ಮ ಮಕ್ಕಳ ಸೇವೆ ಮಾಡಲು ಇರುವಿರಿ; ಮಕ್ಕಳಾಗಿ, ನೀವು ನಿಮ್ಮ ಹೆತ್ತವರ ಸೇವೆ ಮಾಡಲು ಇರುವಿರಿ; ಒಬ್ಬರು ಸಂಗಾತಿಯಾಗಿ, ನೀವು ಪರಸ್ಪರರನ್ನು ಆಧರಿಸಲು ಇರುವಿರಿ. ಈ ಭಾವನೆಯೊಂದಿಗೆ, ಈ ಮನೋಭಾವದೊಂದಿಗೆ ನೀವು ಹೋಗುವಾಗ, ಜೀವನವು ಒಂದು ಬೇರೆಯ ಆಯಾಮವನ್ನು ತೆಗೆದುಕೊಳ್ಳುತ್ತದೆ.

(ಸಭಿಕರು: ಧ್ಯಾನ )

ಧ್ಯಾನವು ನಿಮ್ಮ ಶರೀರವನ್ನು ಬಲಪಡಿಸುವುದು. ಅದು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಸುತ್ತದೆ, ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅದು ನಿಮ್ಮ ಮನಸ್ಸು ಬಹಳ ಕೇಂದ್ರಿತವಾಗಿರುವಂತೆ ಮಾಡುತ್ತದೆ ಮತ್ತು ಬುದ್ಧಿಯು ಬಹಳ ತೀಕ್ಷ್ಣವಾಗಲು ಸಹಾಯ ಮಾಡುತ್ತದೆ. ಅದು ನಿಮ್ಮ ಭಾವನೆಗಳು ಬಹಳಷ್ಟು ಒಳ್ಳೆಯದಾಗುವಂತೆ ಮಾಡುತ್ತದೆ, ನಿಮಗೆ ಒಳಗಿನಿಂದ ಬಹಳ ಚೆನ್ನಾಗಿ ಅನಿಸುತ್ತದೆ ಮತ್ತು ನಿಮ್ಮ ಕಂಪನಗಳು ಬಹಳ ಧನಾತ್ಮಕವಾಗುತ್ತವೆ. ಇವುಗಳು ಲಾಭಗಳಲ್ಲಿ ಕೆಲವು. ಇನ್ನೂ ಹಲವಾರಿವೆ. ಮತ್ತೆ, ಧ್ಯಾನದೊಂದಿಗೆ ಒಳ್ಳೆಯ ಅದೃಷ್ಟ ಕೂಡಾ ಬರುತ್ತದೆ.

ಪ್ರಶ್ನೆ: ಶ್ರೀ ಶ್ರೀಯವರೆ, ದಯವಿಟ್ಟು ನಮಗೆ ಕ್ಷಮೆಯ ಬಗ್ಗೆ ತಿಳಿಸಿ. ನಾವು ಕ್ಷಮಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕ್ಷಮಿಸಬೇಡ, ಅದನ್ನು ಹಿಡಿದಿಟ್ಟುಕೋ! ಯಾರಿಗೆ ನಷ್ಟ? ಸಂಭವಿಸಿದ ಒಂದು ಘಟನೆ, ಅದು ಸಂಭವಿಸಿತು! ಅದು ನಿನ್ನ ತಪ್ಪಿದ್ದಿರಲಿ ಅಥವಾ ಬೇರೆ ಯಾರದ್ದೋ ತಪ್ಪಿದ್ದಿರಲಿ, ಅದು ಆಗಿ ಹೋಯಿತು. ಹೇಗಾದರೂ, ನೀನದನ್ನು ಹಿಡಿದಿಟ್ಟುಕೊಂಡಿದ್ದರೆ, ಆಗ ನೀನು ದುಃಖಿಸುತ್ತಿರುವೆ.
ನಿನ್ನ ಮೂಲಕ ಒಂದು ತಪ್ಪು ನಡೆಯುವ ಒಂದು ಸ್ಥಾನದಲ್ಲಿ ನೀನಿರುವುದಾಗಿ ಕಲ್ಪಿಸಿಕೋ. ಬೇರೊಬ್ಬರು ನಿನ್ನನ್ನು ಕ್ಷಮಿಸದೇ ಇದ್ದರೆ, ನಿನ್ನನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ನಿನ್ನ ಜೀವಮಾನವಿಡೀ ನಿನ್ನನ್ನು ಹೊಣೆಗಾರನನ್ನಾಗಿಸಿದರೆ, ನಿನಗೆ ಹೇಗನ್ನಿಸಬಹುದು? ನಿನಗೆ ಬಹಳ ಕೆಟ್ಟದನ್ನಿಸಬಹುದು, ಅಲ್ಲವೇ?
ನೀನು ಒಬ್ಬ ವ್ಯಕ್ತಿಯನ್ನು ಕ್ಷಮಿಸುವುದು ಅವರಿಗಾಗಿಯಲ್ಲ, ಆದರೆ ನಿನ್ನ ಸ್ವಂತ ಮನಸ್ಸಿಗಾಗಿ, ನೀನು ನಿನ್ನ ಮನಸ್ಸನ್ನು ರಕ್ಷಿಸಲು ಸಾಧ್ಯವಾಗುವುದಕ್ಕಾಗಿ. ನೋಡು, ಜೀವನದಲ್ಲಿ, ಕೆಲವು ಹಿತಕರ ವಿಷಯಗಳು ನಡೆಯುತ್ತವೆ, ಕೆಲವು ಅಹಿತಕರ ವಿಷಯಗಳು ನಡೆಯುತ್ತವೆ. ಕೆಲವು ವಿಷಯಗಳು ಆಗಬೇಕೆಂದು ನಾವು ಬಯಸುತ್ತೇವೆ, ಕೆಲವು ವಿಷಯಗಳು ಜೀವನದಲ್ಲಿ ಆಗಬೇಕೆಂದು ನಾವು ಬಯಸುವುದಿಲ್ಲ. ಏನೆಲ್ಲಾ ಸಂಭವಿಸಿತೋ, ಅದು ಸಂಭವಿಸಿತು; ಮುಗಿಯಿತು! ನೀನದನ್ನು ಹಿಂದಕ್ಕೆ ಹಾಕಿ ಮುಂದೆ ಸಾಗು - ಅದು ಬಹಳ ಮುಖ್ಯವಾದುದು. ನಿನ್ನ ಸ್ವಂತ ಮನಸ್ಸನ್ನು ರಕ್ಷಿಸುವುದಕ್ಕಾಗಿ ಮಾತ್ರ ಅದನ್ನು ಮಾಡು.
ವಾಸ್ತವವಾಗಿ, ನೀನೊಂದು ವಿಶಾಲ ದೃಷ್ಟಿಕೋನದಿಂದ ನೋಡಿದರೆ, ಒಂದು ಪರಿಸ್ಥಿತಿಯಲ್ಲಿ  ಪ್ರತಿಯೊಬ್ಬ ಅಪರಾಧಿಯೂ ಒಬ್ಬ ಅಜ್ಞಾನದ ಬಲಿಪಶುವಾಗಿದ್ದಾನೆ ಎಂಬುದು ನಿನಗೆ ಕಂಡುಬರುತ್ತದೆ. ವಿಷಯಗಳನ್ನು ನೀನು ಈ ದೃಷ್ಟಿಯಿಂದ ನೋಡುವಾಗ, ನೀನು ತನ್ನಿಂತಾನೇ ಸಹಾನುಭೂತಿಯನ್ನು ಹೊಂದುವೆ. ಸೆರೆಮನೆಗಳಲ್ಲಿ ನಾವು ಕಲಿಸುವಾಗ ಇದನ್ನು ನಾವು ಆ ಖೈದಿಗಳಲ್ಲಿ ನೋಡಿದ್ದೇವೆ. ಸೆರೆಮನೆಗಳಲ್ಲಿ ಖಂಡನೆಗೊಳಗಾಗಿರುವ  ಈ ಜನರು ಒಳ್ಳೆಯವರು, ಆದರೆ ಅಜ್ಞಾನದಿಂದಾಗಿ, ಅರಿವಿನ ಕೊರತೆಯಿಂದಾಗಿ, ಅವರೊಂದು ತಪ್ಪನ್ನು ಮಾಡಿದರು.
ನಿಮ್ಮ ಜೀವನವನ್ನು ಹೆಚ್ಚು ಶ್ರೀಮಂತವಾಗಿಸಲು, ನೀವು ಈ ಬೇರೆ ಬೇರೆ ಜಾಗಗಳಲ್ಲಿ ಐದು ದಿನಗಳನ್ನು ಕಳೆಯಬೇಕೆಂದು ನಾನು ಸಲಹೆ ನೀಡುತ್ತೇನೆ:
೧. ಮಕ್ಕಳೊಂದಿಗೆ ಶಾಲೆಯಲ್ಲಿ
೨. ಶಾಲೆಯಲ್ಲಿ ಒಬ್ಬ ಶಿಕ್ಷಕರಾಗಿ. ನೀವು ಮಕ್ಕಳಿಗೆ ಕಲಿಸುವಾಗ, ಕಲಿಸುವುದೆಂದರೆ ಏನು ಎಂಬುದು ನಿಮಗೆ ತಿಳಿಯುತ್ತದೆ. ಒಬ್ಬ ಶಿಕ್ಷಕರ ಪಾತ್ರವು ನಿಮ್ಮನ್ನು ಬಹಳ ಶ್ರೀಮಂತರನ್ನಾಗಿ ಮಾಡುತ್ತದೆ.
೩. ಒಂದು ಮಾನಸಿಕ ಆಸ್ಪತ್ರೆಯಲ್ಲಿ. ನೀವು ಮಾನಸಿಕವಾಗಿ ಅಸ್ವಸ್ಥರಾದ ಜನರೊಂದಿಗಿರುವಾಗ, ಅದು ಕೂಡಾ ಹೊರಗಿನ ಪ್ರಪಂಚದಲ್ಲಿರುವುದಕ್ಕೆ ಸಮಾನವಾದುದು ಎಂಬುದು ನಿಮಗೆ ತಿಳಿಯುತ್ತದೆ. ಜನರು ತಮಗೇನು ಬೇಕೋ ಅದನ್ನು ಸುಮ್ಮನೇ ಹೇಳಿಬಿಡುತ್ತಾರೆ. ಒಮ್ಮೆ ನಿಮಗೆ ಈ ಅನುಭವವಾದ ಮೇಲೆ, ಯಾರಿಗೂ ನಿಮ್ಮನ್ನು ದುಃಖಪಡಿಸಲು ಸಾಧ್ಯವಿಲ್ಲ.
೪. ಒಂದು ಸೆರೆಮನೆಯಲ್ಲಿ. ನೀವು ಆ ಖೈದಿಗಳೊಂದಿಗಿರುವಾಗ, ಒಬ್ಬ ನಿರಪರಾಧಿಯ ನೋವು ಮತ್ತು ದುಃಖ ನಿಮಗೆ ಅರ್ಥವಾಗುವುದು.
೫. ಒಂದು ಹೊಲದಲ್ಲಿ. ನೀವು ರೈತರೊಂದಿಗಿರುವಾಗ; ಮಣ್ಣು ಅಗೆದುಕೊಂಡು, ಬೀಜಗಳನ್ನು ಬಿತ್ತಿಕೊಂಡು, ಕೆಸರಿನಲ್ಲಿ ಕೆಲಸ ಮಾಡಿಕೊಂಡು, ಕೇವಲ ಅಲ್ಲಿರುವುದು, ನಿಮ್ಮನ್ನು ಯಾವುದೋ ತಿಳಿಯದ ರೀತಿಯಲ್ಲಿ ಶ್ರೀಮಂತವಾಗಿಸುತ್ತದೆ.
ಮತ್ತೆ ಒಂದು ದಿನ, ನೀವು ಕೇವಲ ನೀವಾಗಿಯೇ, ಪ್ರಕೃತಿಯೊಂದಿಗೆ ಕಳೆಯಬೇಕು.

ಪ್ರಶ್ನೆ: ಗುರುದೇವ, ನಾನು ಸಿಕ್ಕಿಹಾಕಿಕೊಂಡಿರುವೆನೆಂದು ನನಗನ್ನಿಸುತ್ತದೆ. ಆರ್ಟ್ ಆಫ್ ಲಿವಿಂಗಿನ ಜ್ಞಾನವನ್ನು ಹರಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ನಿನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ನೀನು ಮಾಡಬೇಕಾಗಿಲ್ಲ. ನಿನಗೆ ಮಾಡಲು ಸಾಧ್ಯವಾಗದೇ ಇರುವುದನ್ನು ನೀನು ಮಾಡಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ನಿನಗೆ ಯಾವುದನ್ನೆಲ್ಲಾ ಮಾಡಲು ಸಾಧ್ಯವಿದೆಯೋ, ನೀನು ಮಾಡಬೇಕು. ಇದು ಯಾಕೆಂದರೆ, ನಾವು ಸೇವೆ ಮಾಡುವಾಗ, ಅದು ಇತರ ಜನರಿಗೆ ಒಳ್ಳೆಯದನ್ನು ಮಾಡುತ್ತದೆ, ಮತ್ತು ಅದು ನಮಗೆ ಅಪಾರ ತೃಪ್ತಿಯನ್ನು ಕೂಡಾ ತರುತ್ತದೆ.
ಸರಿ, ನೀವು ಹೋಗುವ ಮೊದಲು, ನಿಮ್ಮೆಲ್ಲಾ ಚಿಂತೆಗಳನ್ನು ನೀವು ನನಗೆ ಕೊಡಬೇಕೆಂದು ನಾನು ಬಯಸುತ್ತೇನೆ. ನೀವೊಂದು ದೊಡ್ಡ ನಗುವಿನೊಂದಿಗೆ ಮನೆಗೆ ಹೋಗಬೇಕೆಂದು ನಾನು ಬಯಸುತ್ತೇನೆ. ಯಾವಾಗೆಲ್ಲಾ ನೀವು ಖಿನ್ನರಾಗಿರುವಿರೆಂದು, ದುಃಖದಲ್ಲಿರುವಿರೆಂದು, ಸಂತೋಷವಾಗಿ ಅಥವಾ ಚೆನ್ನಾಗಿಲ್ಲವೆಂದು ನಿಮಗೆ ಅನ್ನಿಸುವುದೋ, ನೀವು ಒಬ್ಬಂಟಿಯಲ್ಲವೆಂಬುದನ್ನು ನೆನಪಿಸಿಕೊಳ್ಳಿ! ನಾನು ನಿಮ್ಮೊಂದಿಗಿದ್ದೇನೆ! ಮತ್ತು ಇಡೀ ಆರ್ಟ್ ಆಫ್ ಲಿವಿಂಗ್ ಕುಟುಂಬ ನಿಮ್ಮೊಂದಿಗಿದೆ.
ನನ್ನ ಕನಸೆಂದರೆ, ಎಲ್ಲರನ್ನೂ ಒಂದು ದೊಡ್ಡ ನಗುವಿನೊಂದಿಗೆ ನೋಡುವುದು ಮತ್ತು ಸಂಪೂರ್ಣ ಪ್ರಪಂಚವನ್ನು ಒಂದು ಕುಟುಂಬವಾಗಿ ನೋಡುವುದು. ಒಂದು ಹಿಂಸಾ-ಮುಕ್ತ, ಒತ್ತಡ-ಮುಕ್ತ ಮತ್ತು ಸಂತೋಷವಾದ ಸಮಾಜವನ್ನು ಮಾಡಲು ನೀವೆಲ್ಲರೂ ನನ್ನೊಂದಿಗೆ ಈ ಕನಸಿನಲ್ಲಿ ಸೇರಿಕೊಳ್ಳಬೇಕೆಂದು ನಾನು ಬಯಸುತ್ತೇನೆ.

ಸೋಮವಾರ, ಮಾರ್ಚ್ 18, 2013

ಬದುಕಿಗೊ೦ದು ಪ್ರೇರಕ ಶಕ್ತಿ

ಝಗ್ರೇಬ್, ಕ್ರೊಯೇಷಿಯಾ
೧೮ ಮಾರ್ಚ್, ೨೦೧೩

ಹೃದಯದ ಭಾಷೆಯು ಶಬ್ದಗಳನ್ನು ಮತ್ತು ಭಾವನೆಗಳನ್ನು ಮೀರಿರುತ್ತದೆ.

ವಿಶ್ವದಲ್ಲಿ ನಾವು ತಿಳಿದಿರುವೆವೆಂದು ಯಾವುದನ್ನು ಅಂದುಕೊಂಡಿರುವೆವೋ ಅದು, ನಮಗೆ ಯಾವುದು ತಿಳಿದಿಲ್ಲವೋ, ಅದಕ್ಕೆ ಹೋಲಿಸಿದರೆ ಬಹಳ ಕಡಿಮೆ. ಯಾವುದು ನಮಗೆ ತಿಳಿದಿಲ್ಲವೋ ಅದು ಬಹಳಷ್ಟಿದೆ ಮತ್ತು ತಿಳಿಯದೇ ಇರುವುದಕ್ಕೆ ಧ್ಯಾನವು ಬಾಗಿಲಾಗಿದೆ. ಈ ಹೊಸ ಆಯಾಮದೊಂದಿಗೆ ಕೈಗಳನ್ನು ಕುಲುಕಿ.

ಧ್ಯಾನವು ಹಲವಾರು ಲಾಭಗಳನ್ನು ತರುತ್ತದೆ.

ಮೊದಲನೆಯದಾಗಿ, ಅದು ಬಹಳಷ್ಟು ಶಾಂತಿ ಮತ್ತು ಆನಂದವನ್ನು ತರುತ್ತದೆ. ಎರಡನೆಯದಾಗಿ, ಅದು ಎಲ್ಲರಿಗಾಗಿಯೂ ಅಪಾರ ಪ್ರೀತಿಯನ್ನು ತರುತ್ತದೆ. ಮೂರನೆಯದಾಗಿ, ಅದು ಸೃಜನಶೀಲತೆಯನ್ನು, ಅಂತಃಸ್ಫುರಣ ಸಾಮರ್ಥ್ಯವನ್ನು ಮತ್ತು
ಭೌತಿಕ ವಿಶ್ವವನ್ನು ಮೀರಿ ಇರುವುದರ ಬಗೆಗಿನ ಜ್ಞಾನವನ್ನು ತರುತ್ತದೆ.

ಶಿಶುಗಳಾಗಿ, ನಾವೆಲ್ಲರೂ ಕೆಲವು ವಿಶೇಷ ಕಂಪನಗಳನ್ನು ಹೊಂದಿದ್ದೆವು. ಪ್ರಪಂಚದ ಎಲ್ಲಿಯೇ ಇರುವ ಶಿಶುಗಳಾದರೂ ನಿಮ್ಮನ್ನು ಆಕರ್ಷಿಸುತ್ತಾರೆ. ಅವರಲ್ಲಿ ಒಂದು ನಿರ್ದಿಷ್ಟ ಶುದ್ಧತೆ, ಒಂದು ನಿರ್ದಿಷ್ಟ ಕಂಪನವಿದೆ. ಅವರು ಬಹಳ ವಿಶೇಷವಾದವರು. ನಾವು ದೊಡ್ಡವರಾಗಿ ಬೆಳೆದಂತೆ, ನಾವು ಮೂಲತಃ ಹುಟ್ಟುವಾಗ ಜೊತೆಯಲ್ಲಿದ್ದ ಆ ಚೈತನ್ಯದಿಂದ, ಆ ಶಕ್ತಿಯಿಂದ ಎಲ್ಲೋ ಬೇರ್ಪಟ್ಟೆವು.

ನಿಮಗೆಲ್ಲರಿಗೂ ಈ ಅನುಭವವಾಗಿದೆಯೇ - ಯಾವುದೇ ಕಾರಣವಿಲ್ಲದೆಯೇ ನಿಮಗೆ ಕೆಲವು ವ್ಯಕ್ತಿಗಳ ಕಡೆಗೆ ತಿರಸ್ಕಾರವುಂಟಾಗುತ್ತದೆ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆಯೇ ನೀವು ಕೆಲವು ಜನರ ಕಡೆಗೆ ಸೆಳೆಯಲ್ಪಡುತ್ತೀರಿ? ಇದು ನಿಮಗೆ ಆಗಲಿಲ್ಲವೇ? ಪ್ರತಿದಿನವೂ ಇದು ಆಗುತ್ತದೆ; ಎಲ್ಲಾ ಸಮಯದಲ್ಲೂ. ಇದು ಯಾಕೆಂದರೆ ನಮ್ಮ ಸಂಪೂರ್ಣ ಜೀವನವು ಕಂಪನಗಳಿಂದಾಗಿದೆ.

ನಮ್ಮಲ್ಲಿ ಪ್ರತಿಯೊಬ್ಬರೂ ಹೊರಹೊಮ್ಮುವ ಒಂದು ನಿರ್ದಿಷ್ಟ ಕಂಪನವಿದೆ. ಪ್ರತಿಯೊಬ್ಬರೂ ಚೈತನ್ಯವನ್ನು ಹೊರಹೊಮ್ಮುತ್ತಿರುತ್ತಾರೆ. ನಮ್ಮ ಮನಸ್ಸು ಸಿಕ್ಕಿಹಾಕಿಕೊಂಡಿರುವಾಗ, ಚೈತನ್ಯವು ಋಣಾತ್ಮಕವಾಗುತ್ತದೆ. ಮನಸ್ಸು ಮುಕ್ತವಾಗಿರುವಾಗ, ಚೈತನ್ಯವು ಬಹಳ ಧನಾತ್ಮಕವಾಗಿರುತ್ತದೆ.

ಮನೆಯಲ್ಲಾಗಲೀ ಶಾಲೆಯಲ್ಲಾಗಲೀ; ನಮ್ಮ ಚೈತನ್ಯವನ್ನು ಧನಾತ್ಮಕವಾಗಿಸುವುದು ಹೇಗೆಂಬುದನ್ನು ಯಾರೂ ನಮಗೆ ಕಲಿಸುವುದಿಲ್ಲ, ಅಲ್ಲವೇ? ನಕರಾತ್ಮಕತೆಯನ್ನು, ಕೋಪವನ್ನು, ಮಾತ್ಸರ್ಯವನ್ನು, ಲೋಭವನ್ನು, ನಿರಾಶೆಯನ್ನು, ಖಿನ್ನತೆಯನ್ನು ಧನಾತ್ಮಕ ಚೈತನ್ಯವಾಗಿ ನಾವು ಹೇಗೆ ಬದಲಾಯಿಸಬಹುದು ಎಂಬುದನ್ನು ನಾವು ಕಲಿಯಬೇಕಾಗಿದೆ, ಮತ್ತು ಅಲ್ಲಿಯೇ ಉಸಿರಾಟವು ಸಹಾಯ ಮಾಡುವುದು.

ಕೆಲವು ಉಸಿರಾಟದ ತಂತ್ರಗಳು ಮತ್ತು ಧ್ಯಾನದ ಮೂಲಕ ನಾವು ಋಣಾತ್ಮಕ ಚೈತನ್ಯವನ್ನು ಧನಾತ್ಮಕ ಚೈತನ್ಯವಾಗಿ ಬದಲಾಯಿಸಬಹುದು. ನಾವು ಧನಾತ್ಮಕವಾಗಿ ಮತ್ತು ಸಂತೋಷವಾಗಿರುವಾಗ, ನಾವು ನಮ್ಮ ಸುತ್ತಲೂ ಸಂತೋಷವನ್ನು ಹರಡುತ್ತೇವೆ. ಇದು ಒಂದು ಹಂತ; ಪ್ರಾಯೋಗಿಕವಾದ ಮತ್ತು ಅತ್ಯಂತ ಅಗತ್ಯವಿರುವ ಧ್ಯಾನದ ಲಾಭವಾಗಿದೆ.

ನಾನು ಹೇಳಿದಂತೆ, ಧ್ಯಾನದಿಂದ ಇತರ ಲಾಭಗಳಿವೆ. ನಾವು ಹೆಚ್ಚು ಸೃಜನಶೀಲರಾಗಲು, ಅಂತಃಸ್ಫುರಣ ಸಾಮರ್ಥ್ಯವನ್ನು ಹೊಂದಲು ಬಯಸುವಾಗ ಮತ್ತು ಐದರಿಂದ ಹತ್ತು ವರ್ಷಗಳ ಬಳಿಕ ನಮಗೆ ಏನಾಗಲಿದೆಯೆಂಬುದನ್ನು ನಾವು ತಿಳಿಯಲು ಬಯಸುವಾಗ, ಧ್ಯಾನವು ಅದಕ್ಕಿರುವ ಉತ್ತರವಾಗಿದೆ.

ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಲು ಸ್ವಲ್ಪ ಹೆಚ್ಚು ಪ್ರಯತ್ನದ ಅಗತ್ಯವಿದೆ. ಅಂದರೆ, ಪ್ರಯತ್ನವಿಲ್ಲದ ಪ್ರಯತ್ನ (ಧ್ಯಾನ). ನಿಜವಾಗಿ, ಅದು ಪ್ರಯತ್ನ ಕೂಡಾ ಅಲ್ಲ. ಅದು ಕೇವಲ, ಸ್ವಲ್ಪ ಹೆಚ್ಚು ಸಮಯದ ವಿಷಯ. ನಾವು ಒಂದು ವಾರದ ಅಥವಾ ಹತ್ತು ದಿನಗಳ ಸಮಯವನ್ನು ತೆಗೆದುಕೊಂಡು, ನಮ್ಮ ಸ್ವಂತ ಜೀವನದ ಅತೀಂದ್ರಿಯ ಕ್ಷೇತ್ರಗಳ ಆಳಕ್ಕೆ ಹೋಗಬೇಕಾಗಿದೆ. ನಾನು ಹೇಳುತ್ತೇನೆ ಕೇಳಿ, ಅದು ನಿಮ್ಮನ್ನು ಬಹಳ ಸಮರ್ಥರನ್ನಾಗಿ, ಶಕ್ತಿಶಾಲಿಗಳನ್ನಾಗಿ, ಪ್ರಸನ್ನರನ್ನಾಗಿ ಮತ್ತು ತೃಪ್ತರನ್ನಾಗಿ ಮಾಡುತ್ತದೆ.

ಪ್ರಾಚೀನ ಕಾಲದಲ್ಲಿ, ಜನರು ಧ್ಯಾನದ ಈ ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅವರು ಇದನ್ನೊಂದು ರಹಸ್ಯವಾಗಿ ಇಟ್ಟುಕೊಳ್ಳುತ್ತಿದ್ದರು ಮತ್ತು ಕೇವಲ ಕೆಲವೇ ವಿಶೇಷ ವ್ಯಕ್ತಿಗಳು ಇದನ್ನು ಹೊಂದಿದ್ದರು. ಸಾಧಾರಣವಾಗಿ ಇದನ್ನು ರಾಜಮನೆತನದವರಿಗೆ ಮತ್ತು ಹೆಚ್ಚಿನ ಬೌದ್ಧಿಕ ಮಟ್ಟ ಹೊಂದಿದ್ದ ಜನರಿಗೆ ಕೊಡಲಾಗುತ್ತಿತ್ತು. ನಾನು ವಿಭಿನ್ನವಾಗಿ ಯೋಚಿಸಿದೆ. ಇದು ಸಂಪೂರ್ಣ ಮಾನವಕುಲದ ಸ್ವತ್ತು ಮತ್ತು ಪ್ರತಿಯೊಬ್ಬ ಮನುಷ್ಯನೂ ಇದನ್ನು ಕಲಿಯಬೇಕೆಂದು ನಾನು ಯೋಚಿಸಿದೆ. ಇದು ಒಂದು ಸಂಸ್ಕೃತಿಯ, ಒಂದು ನಾಗರಿಕತೆಯ, ಒಂದು ಧರ್ಮದ ಅಥವಾ ಒಂದು ದೇಶದ ಸ್ವತ್ತಲ್ಲ. ಅದು ಸಂಪೂರ್ಣ ಮಾನವಕುಲಕ್ಕೆ ಸೇರಿದುದು. ನಾವು ನಂತರ ಇದನ್ನು ಜಗತ್ತಿನಲ್ಲಿ ಹರಡಲು ಶುರು ಮಾಡಿದೆವು ಮತ್ತು ಇವತ್ತು, ಪ್ರಪಂಚದ ಎಲ್ಲೆಡೆಗಳಲ್ಲಿ ಜನರು ಈ ಸುಂದರವಾದ ಜ್ಞಾನದಿಂದ ಲಾಭವನ್ನು ಪಡೆಯುತ್ತಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ, ನಾನು ಇಲ್ಲಿದ್ದಾಗ, ಬಹಳಷ್ಟು ಅನಿಶ್ಚಿತತೆಯಿತ್ತು. ಜನರು ಕೇಳುತ್ತಿದ್ದರು, "ಏನಾಗಬಹುದು, ನಾವೊಂದು ಬಹಳ ಯುವದೇಶವಾಗಿರುವೆವು."

ನಾನಂದೆ, "ಚಿಂತಿಸಬೇಡಿ, ದೇಶವು ಅಭಿವೃದ್ಧಿ ಹೊಂದುವುದು, ಅದು ಬಹಳ ಸ್ಥಿರವಾಗುವುದು."

ಇವತ್ತು ಪ್ರಪಂಚದ ಎಲ್ಲೆಡೆಗಳಲ್ಲಿ ಬಿಕ್ಕಟ್ಟಿದೆಯೆಂಬುದು ನನಗೆ ಗೊತ್ತು. ಪುನಃ ನಾನು ನಿಮಗೆ ಹೇಳುತ್ತಿದ್ದೇನೆ, ಚಿಂತಿಸಬೇಡಿ! ನಾವು ಈ ಕಷ್ಟಕಾಲವನ್ನು ಹಾದುಹೋಗುವೆವು, ಅಲ್ಲಿ ಬೆಳಕಿರುತ್ತದೆ.

ಎಲ್ಲಿ ಒಂದು ಬಿಕ್ಕಟ್ಟಿರುವುದೋ, ನಾನು ಅಲ್ಲಿಗೆ ಹೋಗಿ, "ಯಾವುದೇ ಬಿಕ್ಕಟ್ಟು ಇರಲಾರದು. ಸಂಗತಿಗಳು ಉತ್ತಮವಾಗುವುವು" ಎಂದು ಹೇಳುವುದು ನನ್ನ ಅಭ್ಯಾಸವಾಗಿ ಹೋಗಿದೆ ಎಂದು ನನಗನಿಸುತ್ತದೆ ಮತ್ತು ಅದು ಹಾಗೇ ಆಗುತ್ತದೆ. ಸಂಗತಿಗಳು ಉತ್ತಮವಾಗುತ್ತವೆ.

ಅಮೇರಿಕಾದಲ್ಲಿ, ೧೯೯೯ರಲ್ಲಿ, ಜನರು ಯೋಚಿಸಿದರು, ೨೦೦೦ದಲ್ಲಿ ಪ್ರಪಂಚ ಕೊನೆಯಾಗುವುದೆಂದು. ಜನರು ಹಾಲಿನ ಹುಡಿ ಮತ್ತು ಕಿರಾಣಿ ಸಾಮಾನುಗಳನ್ನು ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಿಡುತ್ತಿದ್ದರು. ಅಮೇರಿಕಾದ ಪಶ್ಚಿಮ ತೀರದಲ್ಲಿ ವಾಸಿಸುತ್ತಿದ್ದ ಹಲವಾರು ಜನರು ತಮ್ಮ ಮನೆಗಳನ್ನು ಮಾರಿ ಕೊಲರಾಡೋಕ್ಕೆ ಹೋಗುತ್ತಿದ್ದರು. ನಾನು ಹಲವಾರು ನಗರಗಳಿಗೆ ಪ್ರಯಾಣಿಸಿದೆ ಮತ್ತು, "ಚಿಂತಿಸಬೇಡಿ, ಏನೂ ಆಗುವುದಿಲ್ಲ. ಎಲ್ಲವೂ ಎಂದಿನಂತಿರುವುದು" ಎಂದು ಹೇಳಿದೆ ಮತ್ತು ಅದು ಎಂದಿನಂತೆಯೇ ಇದೆ!

ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನ ಹೃದಯದ ಆಳದಲ್ಲಿ ಎಷ್ಟೊಂದು ಸಂಪತ್ತನ್ನಿರಿಸಿದೆ, ನಮಗೊಂದು ಪಾಸ್ ವರ್ಡ್ ಮಾತ್ರ ಬೇಕಾಗಿದೆ ಮತ್ತು ನಾನು ನಿಮಗೆ ಹೇಳುತ್ತಿರುವ ಹಾಗೂ ನೀವು ಎಲ್ಲರಿಗೂ ವರ್ಗಾಯಿಸಬಹುದಾದ (ಸ೦ಕೇತ ಪದ) ಶಬ್ದ ಇಲ್ಲಿದೆ, ಅದು ’ಚಿಂತಿಸಬೇಡಿ.’

ವಿಶ್ವದಲ್ಲಿ ಒಂದು ಶಕ್ತಿ, ಒಂದು ಬಲವಿದೆ. ಅದು ನಿಮ್ಮನ್ನು, ನಿಮ್ಮ ಹೆತ್ತವರು ಪ್ರೀತಿಸಿದುದಕ್ಕಿಂತಲೂ, ನಿಮ್ಮ ಮಿತ್ರರು ಪ್ರೀತಿಸಿದುದಕ್ಕಿಂತಲೂ ಅಥವಾ ನಿಮ್ಮ ಸಂಗಾತಿ ಪ್ರೀತಿಸಿದುದಕ್ಕಿಂತಲೂ ಹೆಚ್ಚು ಪ್ರೀತಿಸುತ್ತದೆ. ನಿಮ್ಮ ಬಗ್ಗೆ ಕಾಳಜಿ ವಹಿಸುವ ಒಂದು ಕ್ಷೇತ್ರ, ಒಂದು ಚೈತನ್ಯವಿದೆ. ನೀವು ಸುಮ್ಮನೇ ವಿಶ್ರಾಮ ಮಾಡಬೇಕು.

ನಮ್ಮ ಪ್ರಜ್ಞೆಯು ಬಹಳ ಹಳೆಯದು, ಬಹಳ ಪ್ರಾಚೀನವಾದುದು. ಥರ್ಮೋಡೈನಮಿಕ್ಸಿನ ಮೂರನೆಯ ನಿಯಮದ ಪ್ರಕಾರ, ಚೈತನ್ಯವನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಪಡಿಸಲೂ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಮನಸ್ಸು ಅಂತಹ ಒಂದು ಚೈತನ್ಯ. ಅದು ಒಂದು ದೀರ್ಘ ಸಮಯದಿಂದ ಅಲ್ಲಿದೆ ಮತ್ತು ಈ ಪ್ರಜ್ಞೆಯು ಹಲವಾರು ಸಂಸ್ಕಾರಗಳನ್ನು ತೆಗೆದುಕೊಳ್ಳುತ್ತದೆ. ಇದರ ಅಧ್ಯಯನ ಮಾಡುವುದು ಬಹಳ ಸ್ವಾರಸ್ಯವಾದುದು.

ನಾನು ಪ್ರಪಂಚದ ಸುತ್ತಲೂ ಪ್ರಯಾಣ ಮಾಡುವಾಗ, ನಾನು ಅಪರಿಚಿತರನ್ನು ಭೇಟಿಯಾಗುತ್ತಿರುವೆನೆಂದು ನನಗನಿಸುವುದಿಲ್ಲ. ಅವರು ನನ್ನ ಭಾಗ ಮತ್ತು ನನಗೆ ಅವರನ್ನು ತಿಳಿದಿದೆಯೆಂದು ನನಗನಿಸುತ್ತದೆ. ನಮಗೆ ಪರಸ್ಪರರ ಹೆಸರುಗಳು ತಿಳಿಯದೇ ಇರಬಹುದು, ಆದರೆ ನಮಗೆ ಪರಸ್ಪರರ ಆತ್ಮಗಳು ತಿಳಿದಿದೆ; ನಮಗೆ ಸಂಬಂಧದ ಅನುಭವವಾಗುತ್ತದೆ. ನಾವೆಲ್ಲರೂ ಒಂದು ಕುಟುಂಬಕ್ಕೆ ಸೇರಿದವರು, ನಾವೆಲ್ಲರೂ ಪರಸ್ಪರರನ್ನು ತಿಳಿದಿದ್ದೇವೆ ಎಂದು ನನಗೆ ಯಾವತ್ತೂ ಅನಿಸಿದೆ.

ನಾನು ನಿಮಗೆ ಹೇಳಲು ಬಯಸುವ ಇನ್ನೊಂದು ವಿಷಯವೆಂದರೆ, ಸಂಶಯಗಳ ಬಗ್ಗೆ. ಸಂಶಯಗಳು ಯಾವತ್ತೂ ಇರುವುದು ಧನಾತ್ಮಕವಾದುದರ ಬಗ್ಗೆ.

ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಿದರೆ, ನೀವೇನು ಹೇಳುತ್ತೀರಿ? "ನಿಜವಾಗಿ?"
ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ದ್ವೇಷಿಸುತ್ತೇನೆ" ಎಂದು ಹೇಳಿದರೆ, ನೀವು, "ನಿಜವಾಗಿ?" ಎಂದು ಯಾವತ್ತೂ ಹೇಳುವುದಿಲ್ಲ. ನಾವು ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಂಶಯಿಸುತ್ತೇವೆ, ಆದರೆ ಒಬ್ಬರ ಅಪ್ರಾಮಾಣಿಕತೆಯನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಅದೇ ರೀತಿಯಲ್ಲಿ, ನೀವು ನಿಮ್ಮ ಸಾಮರ್ಥ್ಯಗಳನ್ನು ಸಂಶಯಿಸುತ್ತೀರಿ, ನೀವು ನಿಮ್ಮ ಬಲಹೀನತೆಗಳನ್ನು ಯಾವತ್ತೂ ಸಂಶಯಿಸುವುದಿಲ್ಲ, ಅಲ್ಲವೇ?

ನೀವು ಸಂತೋಷವಾಗಿರುವಾಗ, "ಇದು ನಿಜವೇ? ನಾನು ಕನಸು ಕಾಣುತ್ತಿರುವೆನೇ?" ಎಂದು ನೀವು ಕೇಳುತ್ತೀರಿ. ಆದರೆ ನೀವು ದುಃಖಿತರಾಗಿರುವಾಗ, "ಇದು ನಿಜವೇ?" ಎಂದು ನೀವು ಕೇಳುವುದಿಲ್ಲ. ನಿಮ್ಮ ಖಿನ್ನತೆಯ ಬಗ್ಗೆ ನೀವು ಬಹಳ ಖಚಿತವಾಗಿರುತ್ತೀರಿ. ನಾವು ನಮ್ಮ ಖಿನ್ನತೆಯನ್ನು ಯಾವತ್ತೂ ಸಂಶಯಿಸುವುದಿಲ್ಲ! ಹೀಗೆ, ಸಂಶಯವು ಯಾವತ್ತೂ ಧನಾತ್ಮಕವಾಗಿರುವ ವಿಷಯದ ಬಗ್ಗೆ ಇರುವುದು. ಋಣಾತ್ಮಕವಾದ ವಿಷಯವನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಒಬ್ಬ ಜ್ಞಾನಿಯು ಇದನ್ನು ತಿರುಗಿಸುತ್ತಾನೆ ಮತ್ತು ಋಣಾತ್ಮಕವಾದುದನ್ನು ಸಂಶಯಿಸಲು ತೊಡಗುತ್ತಾನೆ.

ಒಬ್ಬರು ಬಂದು ನಿಮ್ಮಲ್ಲಿ, ಇಂತಿಂತವರು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದರು ಅಂತ ಹೇಳುತ್ತಾರೆಂದಿಟ್ಟುಕೊಳ್ಳೋಣ, ನೀವು ಕೂಡಲೇ ಅದನ್ನು ನಂಬುತ್ತೀರಿ. ಹಾಗೆ ಮಾಡಬೇಡಿ. "ಇಲ್ಲ, ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ ಮತ್ತು ನೀವು ಆ ವ್ಯಕ್ತಿಯನ್ನು ಕರೆದು, "ನೀನು ಕೆಟ್ಟ ವಿಷಯಗಳನ್ನು ಹೇಳುವೆಯೆಂದು ಒಬ್ಬರು ಹೇಳುತ್ತಾರೆ, ಆದರೆ ನಾನು ಅದನ್ನು ನಂಬುವುದಿಲ್ಲ" ಎಂದು ಹೇಳಿ. ನೀವು ಹಾಗೆ ಹೇಳುವಾಗ, ಆ ವ್ಯಕ್ತಿಯು ನಿಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದ್ದರೂ ಕೂಡಾ, ಅವನ ಮನಸ್ಸು ಬದಲಾಗುವುದು.

ಒಬ್ಬ ವ್ಯಕ್ತಿಯು ಸಾಕಷ್ಟು ಸ್ಥಿತಿವಂತನಾಗಿಲ್ಲದಿದ್ದರೆ, ಅದು ಕುಟುಂಬದ ಮೇಲೆ ಪ್ರಭಾವ ಬೀರುತ್ತದೆ. ಅಂತಹ ಹಲವಾರು ಪೀಡಿತ ಕುಟುಂಬಗಳು ಸಮುದಾಯ ಮತ್ತು ದೇಶದ ಮೇಲೆ ಪ್ರಭಾವ ಬೀರುತ್ತವೆ. ತಿಳುವಳಿಕೆ ಅಥವಾ ಜ್ಞಾನವು ವ್ಯಕ್ತಿಗಳಿಗೆ ಸಾಮರ್ಥ್ಯವನ್ನು ತರುತ್ತದೆ ಮತ್ತು ಏನೇ ಬಂದರೂ ಒಬ್ಬರು ಒಂದು ಮುಗುಳ್ನಗೆಯನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ! ಹೀಗೆ, ಆರ್ಟ್ ಆಫ್ ಲಿವಿಂಗ್ ಎಂಬುದು, ಮುಗುಳ್ನಗೆಯನ್ನು ತಾಜಾ ಮತ್ತು ಜೀವಂತಿಕೆಯಲ್ಲಿರಿಸುವುದು ಹೇಗೆ ಮತ್ತು ಸಮಾಜಕ್ಕೆ ಸೇವೆ ಮಾಡುತ್ತಾ ಇರುವುದು ಹೇಗೆ ಎಂಬುದರ ಬಗ್ಗೆಯಾಗಿದೆ. ಮುಗುಳ್ನಗುತ್ತಾ ಇರಿ ಮತ್ತು ಸೇವೆ ಮಾಡಿ!
ನಿಮ್ಮಲ್ಲಿರುವ ಯಾವುದೇ ಒತ್ತಡ ಅಥವಾ ಯಾವುದೇ ತೊಂದರೆಯನ್ನು ನಿಮ್ಮಿಂದ ದೂರ ಒಯ್ಯಲು ನಾನು ಬಂದಿರುವೆನು. ನಿಮ್ಮ ಮುಖದ ಮೇಲೆ ಒಂದು ದೊಡ್ಡ ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ. ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಹಿಂದಿರುಗಿ ಹೋಗಿ! ನಿಮ್ಮೆಲ್ಲಾ ಚಿಂತೆಗಳನ್ನು ಮತ್ತು ಒತ್ತಡಗಳನ್ನು ನನಗೆ ಕೊಡಿ. ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಯಿದೆಯೆಂದು ಮತ್ತು ನೀವು ಒಬ್ಬಂಟಿಯೆಂದು ನಿಮಗೆ ಅನ್ನಿಸಿದಾಗಲೆಲ್ಲಾ, ನೀವು ಒಬ್ಬಂಟಿಯಲ್ಲವೆಂಬುದನ್ನು ತಿಳಿಯಿರಿ, ನಾನು ನಿಮ್ಮೊಂದಿಗಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನನಗೆ ಕೊಡಿ ಮತ್ತು ನೀವು ಮುಗುಳ್ನಗುವುದನ್ನು ಹಾಗೂ ಸೇವೆ ಮಾಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ.

ಪ್ರಶ್ನೆ: ಪ್ರಸ್ತುತದಲ್ಲಿ ಭೂಮಿಯು ಒಳಗಾಗುತ್ತಿರುವ ಕೆಲವು ಬದಲಾವಣೆಗಳ ಬಗ್ಗೆ ದಯವಿಟ್ಟು ನಮಗೆ ಹೇಳಿ.

ಶ್ರೀ ಶ್ರೀ ರವಿ ಶಂಕರ್: ಹೌದು, ಭೂಮಿಯು ನಿರಂತರವಾಗಿ ಬದಲಾಗುತ್ತದೆ. ಆದರೆ ಮಾನವ ಕುಲವು ಪರಿಸರದೊಂದಿಗೆ ಏನು ಮಾಡಿದೆಯೋ ಅದು ದುರದೃಷ್ಟಕರ. ಗಣಿಗಳನ್ನು ಮಾಡಲು, ಭೂಮಿಯ ಆಳದಿಂದ ಸಂಗ್ರಹಿಸಲು ನಾವು ಹಲವಾರು ಡೈನಾಮೈಟುಗಳನ್ನು ಹಾಕಿದ್ದೇವೆ. ಭೂಕಂಪಗಳು, ಸುನಾಮಿ ಮತ್ತು ಈ ಎಲ್ಲಾ ವಿಪತ್ತುಗಳು ಶುರುವಾಗಿರುವ ಕಾರಣ ಇದುವೇ. ಆದುದರಿಂದ, ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ನಾವು ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮತ್ತು ನಮ್ಮ ಭೂಮಿಯನ್ನು ನೋಡಿಕೊಳ್ಳದಿದ್ದರೆ, ಅದು ನಮಗೆ ಹೆಚ್ಚು ಹೆಚ್ಚು ಸವಾಲುಗಳನ್ನು ಸೃಷ್ಟಿಸುವುದು.
ನೋಡಿ, ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಲೇಬೇಕಾದ ಕೆಲವು ವಿಷಯಗಳಿವೆ.

೧. ಪರಿಸರ: ನಾವು ನಮ್ಮ ಹೊಲಗಳಿಗೆ ಎಷ್ಟೊಂದು ರಾಸಾಯನಿಕಗಳನ್ನು ಹಾಕುತ್ತೇವೆಂದರೆ, ನಾವು ಬೆಳೆಯುವ ಆಹಾರವು, ನಾವು ಸೇವಿಸುವುದಕ್ಕೆ ಅನರ್ಹವಾಗಿದೆ. ನಿಮ್ಮಲ್ಲಿ ಎಷ್ಟು ಮಂದಿಗೆ ನಿಮ್ಮ ಶರೀರದಲ್ಲಿ ನೋವುಗಳಿವೆ? ಯಾಕೆಂಬುದು ನಿಮಗೆ ಗೊತ್ತಿದೆಯಾ? ನಾವು ತಿನ್ನುವ ಆಹಾರವು ಹಲವಾರು ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಹೊಂದಿದೆ. ಕೇವಲ ತರಕಾರಿಗಳು ದೊಡ್ಡದಾಗಿ ಬೆಳೆಯುವಂತೆ ಮಾಡಲು, ನಾವು ನಮ್ಮ ಶರೀರಕ್ಕೆ ಒಳ್ಳೆಯದಲ್ಲದಿರುವ ಹಲವಾರು ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತೇವೆ. ಭೂಮಿಯು ಸಾವಯವವಾಗಬೇಕೆಂದು ನಾನು ಬಯಸುತ್ತೇನೆ.

ನಿಮಗೆ ಗೊತ್ತಾ, ಭಾರತದಲ್ಲಿ ಕೆಲವು ಬಹಳ ಪುರಾತನವಾದ ವ್ಯವಸಾಯ ತಂತ್ರಗಳಿವೆ. ಅವುಗಳನ್ನು ನಾನು ಈಗ ಭಾರತದಲ್ಲಿ ಬಹಳ ಹುರುಪಿನಿಂದ ಪ್ರಚಾರ ಮಾಡುತ್ತಿದ್ದೇನೆ.  ಅದು ಬಹಳಷ್ಟು ಬದಲಾವಣೆಯನ್ನು ತಂದಿದೆ. ಅದು ಶೂನ್ಯ ಬಂಡವಾಳದೊಂದಿಗೆ ಉತ್ಪಾದನೆಯನ್ನು ಸುಮಾರು ಮೂರೂವರೆ ಪಟ್ಟುಗಳಷ್ಟು ಹೆಚ್ಚಿಸಿದೆ. ನಾವದನ್ನು ಶೂನ್ಯ - ಬಂಡವಾಳ ವ್ಯವಸಾಯವೆಂದು ಕರೆಯುತ್ತೇವೆ. ರೈತನು ಹಣವನ್ನು ಸಾಲವಾಗಿ ಪಡೆಯಬೇಕಾಗಿಲ್ಲ, ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಹಾಕಬೇಕಾಗಿಲ್ಲ. ಕೇವಲ ನಿರ್ದಿಷ್ಟ ಪ್ರಾಕೃತಿಕ ವಸ್ತುಗಳಿಂದ, ನಿರ್ದಿಷ್ಟವಾದ ಗಿಡಗಳು ಮತ್ತು ಪ್ರಾಕೃತಿಕ ಗೊಬ್ಬರಗಳಿಂದ ಅವನು ತರಕಾರಿಗಳು ಹಾಗೂ ಧಾನ್ಯಗಳನ್ನು ಒಂದು ಬಹಳ ಕಡಿಮೆ ವೆಚ್ಚದಲ್ಲಿ, ಒಂದು ಉತ್ತಮ ಗುಣಮಟ್ಟದಲ್ಲಿ ಮತ್ತು ಒಂದು ಉತ್ತಮ ಪ್ರಮಾಣದಲ್ಲಿ ಬೆಳೆಯಬಹುದು. ಇಲ್ಲಿ ಕ್ರೊಯೇಷಿಯಾದಲ್ಲಿ ವ್ಯವಸಾಯ ಮಾಡಲು ಬಯಸುವ ಯಾರೊಂದಿಗಾದರೂ ಈ ಜ್ಞಾನವನ್ನು ಹಂಚಿಕೊಳ್ಳಲು ಆರ್ಟ್ ಆಫ್ ಲಿವಿಂಗಿಗೆ ಸಂತೋಷವಿದೆ. ನಾವೊಂದು ಮಾದರಿ ಹೊಲವನ್ನು; ಕಡಿಮೆ ವೆಚ್ಚದ ಮತ್ತು ಉತ್ತಮ ಉತ್ಪಾದನೆಯ ಒಂದು ಹೊಲವನ್ನು ಹೇಗೆ ಮಾಡಬಹುದು ಎಂಬುದನ್ನು ಅವರೊಂದಿಗೆ ಹಂಚಿಕೊಳ್ಳಲು ಮತ್ತು ಅವರಿಗೆ ತೋರಿಸಲು ನಾವು ಇಷ್ಟಪಡುತ್ತೇವೆ.

ನಿಮಗೆ ಗೊತ್ತಾ, ಮೊದಲು ೪೦,೦೦೦ ರೂಪಾಯಿಗಳನ್ನು ಪಡೆಯುತ್ತಿದ್ದ ಮತ್ತು ಈಗ ಒಂದು ವರ್ಷದೊಳಗೆ ೪,೦೦,೦೦೦ ರೂಪಾಯಿಗಳನ್ನು ಪಡೆಯಲು ತೊಡಗಿದ ರೈತರ ಒಂದು ದಾಖಲೆ ನಮ್ಮಲ್ಲಿದೆ. ಸಾವಯವ ಕೃಷಿಯೊಂದಿಗೆ, ಅವರಿಗೆ ೧೦ ಪಟ್ಟು ಹೆಚ್ಚು ವರಮಾನ ಗಳಿಸಲು ಸಾಧ್ಯವಾಯಿತು, ಅದು ಕೂಡಾ ಒಂದು ಕಡಿಮೆ ವೆಚ್ಚದಲ್ಲಿ.

೨. ಭ್ರಷ್ಟಾಚಾರ: ಇದೊಂದು ಬಹಳ ದೊಡ್ಡ ಸಮಸ್ಯೆ. ಪ್ರಪಂಚದ ಎಲ್ಲೆಡೆಗಳಲ್ಲಿ ಭ್ರಷ್ಟಾಚಾರವಿದೆ. ಇಲ್ಲಿ ಕ್ರೋಯೇಷಿಯಾದಲ್ಲಿ ಅದು ಹೇಗಿದೆಯೆಂಬುದು ನನಗೆ ತಿಳಿಯದು, ಆದರೆ ಭಾರತದಲ್ಲಿ, ಅದೊಂದು ದೊಡ್ಡ ಸಮಸ್ಯೆ. ಏಷಿಯಾ ಭೂಖಂಡದಲ್ಲಿ ಕೂಡಾ.

ಆತ್ಮೀಯತೆಯ ಭಾವವು ಎಲ್ಲಿ ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಆರಂಭವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಯಾರೂ, ತಾವು ಯಾರೊಂದಿಗೆ ಸಂಬಂಧ ಹೊಂದಿದ್ದೇವೆಂದು ಅಂದುಕೊಳ್ಳುವರೋ ಅವರೊಂದಿಗೆ ಭ್ರಷ್ಟರಾಗಿರುವುದಿಲ್ಲ.

ಯಾರನ್ನು ತಮ್ಮ ಸ್ವಂತದವರಲ್ಲವೆಂದು ಅಂದುಕೊಳ್ಳುತ್ತಾರೋ ಕೇವಲ ಅವರಿಂದ ಮಾತ್ರ ಒಬ್ಬರು ಲಂಚ ಕೇಳುತ್ತಾರೆ, ಅಲ್ಲವೇ? ನಾವಿದನ್ನು ಬದಲಾಯಿಸಬೇಕಾಗಿದೆ. ನಾವು, ಒಂದು ಉನ್ನತ ಆತ್ಮೀಯತಾ ಭಾವವನ್ನು ಸೃಷ್ಟಿಸಬೇಕಾಗಿದೆ.

ಇಲ್ಲಿ ಕ್ರೊಯೇಷಿಯಾದಲ್ಲಿರುವ ಎಲ್ಲರೂ, "ನಾನು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ" ಎಂಬ ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡರೆ; ಕಡಿಮೆ ಪಕ್ಷ ಒಂದು ವರ್ಷದ ಮಟ್ಟಿಗೆ, ದೇಶದ ಸಂಪೂರ್ಣ ಮುಖವು ಬದಲಾಗುವುದನ್ನು ನೀವು ನೋಡುವಿರಿ. ನಾವಿದನ್ನು ಮಾಡಬಲ್ಲೆವೇ? ಇಲ್ಲಿರುವ ನಾವೆಲ್ಲರೂ, ದೇಶದಲ್ಲಿರುವ ಇತರ ಎಲ್ಲರೊಂದಿಗೂ ಮಾತನಾಡೋಣ.

ನೋಡಿ, ಇಲ್ಲಿ ನಮ್ಮಲ್ಲಿ ನಲುವತ್ತು ಲಕ್ಷ ಜನರಿದ್ದಾರೆ. ಭಾರತಕ್ಕೆ ಹೋಲಿಸಿದರೆ ಅದು ಅಷ್ಟೊಂದು ದೊಡ್ಡದಲ್ಲ. ನಾನು ಯಾವ ನಗರದಿಂದ ಬಂದಿರುವೆನೋ ಅಲ್ಲಿ, ಬೆಂಗಳೂರಿನಲ್ಲಿ ಈಗ ನಾವು ಎಂಭತ್ತು ಲಕ್ಷ ಜನರನ್ನು ಹೊಂದಿದ್ದೇವೆ, ಅಂದರೆ ಕ್ರೊಯೇಷಿಯಾದ ಜನಸಂಖ್ಯೆಯ ದುಪ್ಪಟ್ಟು. ಆದುದರಿಂದ, ಜನರು ಭಾಗವಹಿಸುವಾಗ, ಕ್ರೊಯೇಷಿಯಾವನ್ನು ಒಂದು ಬಹಳ ಆದರ್ಶ ರಾಜ್ಯವನ್ನಾಗಿ ನೀವು ಮಾಡಬಲ್ಲಿರಿ ಎಂಬುದರ ಬಗ್ಗೆ ನನಗೆ ಬಹಳ ವಿಶ್ವಾಸವಿದೆ.

ಒಬ್ಬರಿಗೆ ಲಂಚ ತೆಗೆದುಕೊಳ್ಳುವುದರ ಕಡೆಗೆ ತೀವ್ರ ಬಯಕೆಯಿದ್ದರೆ, ಒಂದು ವರ್ಷದ ವರೆಗೆ ಕಾಯಿರಿ, ನೀವದನ್ನು ನಂತರ ಮಾಡಬಹುದು. ನೀವೆಲ್ಲರೂ, ಒಂದು ವರ್ಷದ ವರೆಗೆ, ನೀವು ಲಂಚ ಕೊಡುವುದೂ ಇಲ್ಲ, ಲಂಚ ತೆಗೆದುಕೊಳ್ಳುವುದೂ ಇಲ್ಲ ಎಂಬ ಈ ಪ್ರತಿಜ್ಞೆಯನ್ನು ತೆಗೆದುಕೊಂಡರೆ, ಅದೊಂದು ದೊಡ್ಡ ಬದಲಾವಣೆಯನ್ನು ಮಾಡುವುದು.

ಯಾವುದೇ ಕಾನೂನು ಭ್ರಷ್ಟಾಚಾರವನ್ನು ಹೋಗಲಾಡಿಸದು. ಅದು ಹೃದಯದಿಂದ ಬರಬೇಕು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಅರಳುತ್ತಿರುವಾಗ, ಸಮಾಜದಲ್ಲಿರುವ ದುಷ್ಟ ಅಂಶಗಳು ದೂರ ಹೋಗುತ್ತವೆ. ಹೊಸದಾಗಿ ಚುನಾಯಿಸಲ್ಪಟ್ಟ ಕರ್ನಾಟಕ ವಿಧಾನಸಭಾ ಸದಸ್ಯರು ಭ್ರಷ್ಟಾಚಾರ ಮುಕ್ತರಾಗಿರಲೆ೦ದು ನೀಡಿದ ಕರೆಗೆ ಲಿ೦ಕ್: http://www.siliconindia.com/blogs/blogs_new.php?D67w2GYto10Dh4CV79KAEa84rsv8OPHJ+8r90GZd171314698

೩. ವ್ಯಸನ: ಜನರು ಹಲವಾರು ವಿಷಯಗಳ ವ್ಯಸನದಲ್ಲಿ ಬಿದ್ದಿದ್ದಾರೆ; ಅಶ್ಲೀಲತೆಯ ವ್ಯಸನ, ಮದ್ಯಪಾನದ ವ್ಯಸನ, ಮಾದಕ ದ್ರವ್ಯಗಳ ವ್ಯಸನ. ಅವರು ಈ ವ್ಯಸನಗಳಿಂದ ಹೊರಬರಲು ನಾವು ಅವರಿಗೆ ಸಹಾಯ ಮಾಡಬೇಕು.

ಇಲ್ಲಿರುವ ಮತ್ತು ಜಗತ್ತಿನ ಇತರ ಕಡೆಗಳಲ್ಲಿರುವ ಸೆರೆಮನೆಗಳು ಜನರಿಂದ ತುಂಬಿರುವುದು ಈ ವ್ಯಸನಗಳ ಕಾರಣದಿಂದ. ಖಂಡಿತಾ, ನಾವು ಇಲ್ಲಿನ ಸೆರೆಮನೆಗಳಲ್ಲಿ ಈಗಾಗಲೇ ಕೆಲಸವನ್ನು ಮಾಡುತ್ತಿದ್ದೇವೆ, ಆದರೆ ಜನರು ಸೆರೆಮನೆಯೊಳಕ್ಕೆ ಹೋಗದಿರಲು ನಾವು ಅವರಿಗೆ ಸಹಾಯ ಮಾಡಬೇಕು. ಆದುದರಿಂದ ನಾವೆಲ್ಲರೂ ಒಂದು ಅಪರಾಧ-ಮುಕ್ತ, ಹಿಂಸಾ-ಮುಕ್ತ ಸಮಾಜದ ಬಗ್ಗೆ ಕನಸು ಕಾಣಬಹುದು ಮತ್ತು ಅದರ ಕಡೆಗೆ ಕೆಲಸ ಮಾಡಬಹುದು.