ಬುಧವಾರ, ಡಿಸೆಂಬರ್ 25, 2013

ಪ್ರಾರ್ಥಿಸುವ ವಿಧಾನ

ಡಿಸೆಂಬರ್ ೨೫, ೨೦೧೩
ಬೂನ್, ನಾರ್ತ್ ಕೆರೋಲಿನಾ

ಡೇವಿಡ್ ಎಂಬ ಹೆಸರನ್ನು ಉಲ್ಲೇಖಿಸಿದಾಗ ನನಗೆ ಹೊಳೆಯಿತು, ಇಂಗ್ಲೀಷಿನಲ್ಲಿ ಅಥವಾ ಹಿಬ್ರೂ ಭಾಷೆಯಲ್ಲಿ ಡೇವಿಡ್ ಎಂಬ ಹೆಸರಿಗೆ ಯಾವುದಾದರೂ ಅರ್ಥವಿದೆಯೇ ಎಂದು. ಡೇವಿಡ್ ಅಂದರೆ ಏನರ್ಥ?

(ಸಭಿಕರು ಹೇಳುತ್ತಾರೆ: ಡೇವಿಡ್ ಅಂದರೆ ಜ್ಞಾನದ ರಾಜ)

ಸಂಸ್ಕೃತದಲ್ಲಿ ದೇವಿದ್, ದೇವ್-ವಿದ್ ಅಂದರೆ ದೇವರನ್ನು ತಿಳಿದವನೊಬ್ಬನು ಎಂದರ್ಥ. ಅದು ಡೇವಿಡ್ ಎಂಬುದರ ಸಂಸ್ಕೃತ ಅರ್ಥವಾಗಿದೆ. ದೇವ್-ವಿದ್ ಎಂಬುದು ಡೇವಿಡ್ ಎಂದಾಗುತ್ತದೆ. ವಿದ್ ಅಂದರೆ ತಿಳಿಯುವುದು.

ದೇವರಿಗೆ ಯಾವುದೇ ರೂಪವಿಲ್ಲ, ಆದರೆ ಅವನು ಎಲ್ಲಾ ರೂಪಗಳಲ್ಲಿದ್ದಾನೆ. ದೇವರಿಗೆ ಕಣ್ಣುಗಳಿಲ್ಲ, ಆದರೆ ಅವನು ಎಲ್ಲಾ ಸಮಯವೂ ಎಲ್ಲವನ್ನೂ ನೋಡುತ್ತಿರುತ್ತಾನೆ. ದೇವರಿಗೆ ಕಿವಿಗಳಿಲ್ಲ, ಆದರೆ ಒಂದು ಯೋಚನೆ ಏಳುವ ಮುನ್ನವೇ ಅವನು ನಿಮ್ಮನ್ನು ಕೇಳಿಸಿಕೊಳ್ಳುತ್ತಾನೆ. ನೀವದನ್ನು ಹೇಳಬೇಕಾಗಿ ಬರುವ ಮೊದಲೇ, ಅವನು ಅದಾಗಲೇ ನಿಮ್ಮನ್ನು ಕೇಳಿಸಿಕೊಳ್ಳುತ್ತಾನೆ. ದೇವರು ಒಂದು ಭಾಷೆಯಲ್ಲಿ ಮಾತನಾಡಬೇಕಾಗಿಲ್ಲ, ಅವನು ನೇರವಾಗಿ ಭಾವನೆಯನ್ನು ತಿಳಿಯಪಡಿಸುತ್ತಾನೆ.

ನೀವು ಜ್ಞಾನವನ್ನು ಕೇಳಿಸಿಕೊಳ್ಳುವಾಗ ಏನಾಗುವುದೆಂದರೆ, ನಿಮ್ಮ ಮೆದುಳು ಅದನ್ನು ಪರಿಷ್ಕರಿಸುತ್ತದೆ ಮತ್ತು ನಂತರ ನಿಮಗೆ ಅರ್ಥವಾಗುತ್ತದೆ. ಪದಗಳು ನಿಮ್ಮ ಕಿವಿಗಳೊಳಗೆ ಪ್ರವೇಶಿಸುತ್ತವೆ, ನಂತರ ಅದಕ್ಕೊಂದು ಅರ್ಥ ಸಿಗುತ್ತದೆ ಹಾಗೂ ನಂತರ ನಿಮಗದು ತಿಳಿಯುತ್ತದೆ. ದೇವರು ಹಾಗೆ ಮಾಡಬೇಕಾಗಿಲ್ಲ. ಅಲ್ಲಿ ಯಾವುದೇ ಮಾತುಗಳಿಲ್ಲ, ಆದರೆ ಅವನು ನಿಮಗೊಂದು ನೇರವಾದ ಅರಿವನ್ನು ನೀಡುತ್ತಾನೆ. ಅದು ಸುಂದರವಲ್ಲವೇ?

ಸಂಸ್ಕೃತದಲ್ಲಿ ವಿರೂಪಾಕ್ಷ  ಎಂದು ಕರೆಯಲ್ಪಡುವ ಒಂದು ಸುಂದರವಾದ ಹೆಸರಿದೆ. ಅದರರ್ಥ, ಒಂದು ರೂಪವಿಲ್ಲದ ಕಣ್ಣುಗಳು. ಕಣ್ಣುಗಳಿಲ್ಲದೆಯೇ ಅವನು ಎಲ್ಲರ ಕಡೆಗೂ ನೋಡುತ್ತಾನೆ. ಅಕ್ಷ ಎಂದರೆ ಕಣ್ಣುಗಳು, ವಿರೂಪ ಎಂದರೆ ರೂಪವಿಲ್ಲದ; ರೂಪವಿಲ್ಲದ ಕಣ್ಣುಗಳು, ಅಂದರೆ, ಅರಿವು; ಅರಿವನ್ನು ತರುವ ಆ ಸಾನ್ನಿಧ್ಯ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚುವಾಗ ನಿಮಗೇನನ್ನಿಸುತ್ತದೆ? ನಿಮಗೆ ಅರಿವಿನ ಅನುಭವವಾಗುತ್ತದೆ ಸರಿಯಾ? ತಿಳಿದಿರುವಿಕೆ. ಅದು ವಿರೂಪಾಕ್ಷ. ಅದು ಶಿವ ತತ್ವ, ಅದು ದೈವಿಕತೆ.

ಶಿವ ಅಂದರೆ, ಯಾರಿಗೆ ಕಣ್ಣುಗಳಿಲ್ಲವೋ ಆದರೆ ಎಲ್ಲವನ್ನೂ ನೋಡುವನೋ ಅವನು. ಅಲ್ಲೊಂದು ರೂಪವಿಲ್ಲ, ಆದರೂ ಅವನಿಲ್ಲದೆ ಯಾವ ರೂಪವೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ; ಅವನು ಪ್ರತಿಯೊಂದು ರೂಪದಲ್ಲಿರುವನು. ಇದು ಬಹಳ ಸುಂದರವಾಗಿದೆ!

ಪ್ರತಿಯೊಂದೂ ನಿಮಗೊಂದು ಸಂದೇಶವನ್ನು ಕೊಡುತ್ತಿದೆ. ಕ್ರಿಸ್‌ಮಸ್ ಮರವು ನಿಮಗೆ ಹೀಗೆಂದು ಹೇಳುತ್ತಿದೆ, ’ಕ್ರಿಸ್‌ಮಸ್ ಮರದಂತಿರು, ಯಾವತ್ತೂ ಹಸುರಾಗಿ’.

ನಮ್ಮ ಜೀವನವು ಒಂದು ಕ್ರಿಸ್‌ಮಸ್ ಮರದಂತಿರಲಿ. ಚಳಿಗಾಲದಲ್ಲಿರಲಿ ಅಥವಾ ಬೇಸಿಗೆಗಾಲದಲ್ಲಿರಲಿ, ಶರದೃತು ಅಥವಾ ವಸಂತಕಾಲದಲ್ಲಿರಲಿ, ಕ್ರಿಸ್‌ಮಸ್ ಮರವು ಅದೇ ರೀತಿ ಇರುತ್ತದೆ. ಹೀಗೆ ಜೀವನದಲ್ಲಿ, ಪ್ರತಿಯೊಂದು ಪರಿಸ್ಥಿತಿಯಲ್ಲೂ ನಿಮ್ಮನ್ನು ಹಸುರಾಗಿ ಇಟ್ಟುಕೊಳ್ಳಿ!

ಕ್ರಿಸ್‌ಮಸ್ ಮರವು ಎಲ್ಲರಿಗೂ ಉಡುಗೊರೆಗಳನ್ನು ಹೊತ್ತಿರುತ್ತದೆ. ಜೀವನದಲ್ಲಿ ನಿಮಗೆ ನೀಡಲಾಗಿರುವುದೆಲ್ಲಾ ಎಲ್ಲರಿಗಾಗಿರುವುದು. ನೀವು ಹೊಂದಿರುವ ಯಾವುದೇ ಉಡುಗೊರೆಯೂ ನಿಮಗಾಗಿಯಲ್ಲ, ಅದು ಪ್ರಪಂಚಕ್ಕಾಗಿ. ನಿಮ್ಮೆಲ್ಲಾ ಪ್ರತಿಭೆಗಳು, ನಿಮಗೆ ದಯಪಾಲಿಸಲಾಗಿರುವ ಎಲ್ಲವೂ; ಅದೆಲ್ಲವೂ ಇತರರಿಗೆ ಸಹಾಯ ಮಾಡಲಿಕ್ಕಾಗಿ ಇರುವುದು. ಹಾಗಾಗಿ ಸೇವೆ ಮಾಡಿ, ಮುಗುಳ್ನಗಿ ಮತ್ತು ಆಚರಿಸಿ!

ಇದು ಯೇಸು ಕ್ರಿಸ್ತನ ಸಂದೇಶವಾಗಿದೆ: ಒಳಗೆ ಮತ್ತು ಸುತ್ತಲೆಲ್ಲಾ ಪ್ರೇಮವನ್ನು ಕಂಡುಕೊಳ್ಳಿ.

ನೀವು ಎರಡು ಸ್ಥಾನಗಳಲ್ಲಿರಬಹುದು: ಒಂದನೆಯದು, ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಿದೆ. ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಾದಾಗ, ಅದನ್ನು ಜೀವಿಸಲು ನಿಮಗೆ ಸಾಧ್ಯವೆಂದು ಹೆಮ್ಮೆ ಪಡಬೇಡಿ. ಜ್ಞಾನದಲ್ಲಿ ಜೀವಿಸಿಕೊಂಡಿರುವಂತೆ ನಿಮ್ಮನ್ನು ಹರಸಲಾಗಿದೆ; ಜ್ಞಾನಿಯಾಗಿರುವಂತೆ ನಿಮ್ಮನ್ನು ಹರಸಲಾಗಿದೆ ಎಂಬುದನ್ನು ತಿಳಿಯಿರಿ. ನೀವು ಜ್ಞಾನಿಯಾಗಿರುವಿರಿ ಎಂಬುದನ್ನು ನೀವು ಗುರುತಿಸಿದಾಗ, ಜ್ಞಾನಿಯಾಗಿರುವ ಅಥವಾ ಪರಿಪೂರ್ಣರಾಗಿರುವ ನಿಮ್ಮ ಗುರುತಿಸಿಕೊಳ್ಳುವಿಕೆಯು ನಿಮ್ಮಲ್ಲಿ ದುರಹಂಕಾರ ಅಥವಾ ಅಹಂಕಾರವನ್ನು ತರದಿರುವಂತೆ ನೋಡಿಕೊಳ್ಳಿ. ವಿನಮ್ರತೆಯಿರಬೇಕು. ನೀವೊಬ್ಬ ಉತ್ತಮ ಮಾತುಗಾರರಾಗಿರಬಹುದು, ಒಬ್ಬ ಉತ್ತಮ ಸಂಯೋಜಕರಾಗಿರಬಹುದು, ಹಲವಾರು ರೀತಿಗಳಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿರಬಹುದು. ಬೇರೆ ಯಾರಿಗಿಂತಲೂ ನೀವು ಉತ್ತಮರಾಗಿರುವಿರೆಂಬ ಆ ಜ್ಞಾನವು ನಿಮ್ಮನ್ನು ಬಿಗಿಯಾಗಿ, ಕಠೋರ ಹಾಗೂ ದುರಹಂಕಾರಿಯನ್ನಾಗಿ ಮಾಡಲು ಬಿಡಬೇಡಿ.

ನಿಮ್ಮಲ್ಲಿ ಆ ಗುಣ ಇಲ್ಲದಿರುವಾಗ. ನಿಮ್ಮಲ್ಲಿ ಬಹಳ ಬಲಹೀನವಾದ ಸಂಕಲ್ಪ, ಬಹಳ ಬಲಹೀನವಾದ ಇಚ್ಛಾ ಶಕ್ತಿಯಿದೆಯೆಂದೂ, ನಿಮ್ಮಲ್ಲಿ ಪ್ರತಿಭೆಯಿಲ್ಲವೆಂದೂ, ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಾಗುತ್ತಿಲ್ಲವೆಂದೂ ಮತ್ತು ನೀವು ಹಳೆಯ ಚಟಗಳಿಗೆ ಈಡಾಗುತ್ತಿದ್ದೀರೆಂದೂ, ನೀವು ಸಂಪೂರ್ಣವಾಗಿ ಬಲಹೀನವಾಗಿ ಅಥವಾ ನಿಸ್ಸಹಾಯಕರಾಗಿರುವುದಾಗಿಯೂ ನಿಮಗನಿಸುತ್ತದೆ ಎಂದಿಟ್ಟುಕೊಳ್ಳೋಣ. ಆಗ ನೀವು ಹೀಗೆಂದು ಪ್ರಾರ್ಥಿಸುತ್ತೀರಿ, ’ಓ ದೇವರೇ, ನನಗೆ ಸಾಧ್ಯವಿಲ್ಲ! ನೀನೇ ನನ್ನನ್ನು ಈ ದುರವಸ್ಥೆಯಿಂದ ಹೊರತೆಗೆ!’

ನಿಮ್ಮಲ್ಲಿ ಜ್ಞಾನವಿರುವಾಗ ವಿನಮ್ರತೆ ಮತ್ತು ಕೃತಜ್ಞತೆ, ಹಾಗೂ ಅದಿಲ್ಲದಿರುವಾಗ, ನೋವನ್ನು ಅನುಭವಿಸುವುದು ಮತ್ತು ಪ್ರಾರ್ಥನಾಪೂರ್ಣರಾಗಿರುವುದು. ಯಾವುದೇ ಮೂರನೆಯ ಆಯ್ಕೆಯು ನನಗೆ ಕಾಣಿಸುವುದಿಲ್ಲ. ಯಾವುದಾದರೂ ಇದ್ದರೆ ನನಗೆ ಹೇಳಿ. ನಾನು ತಿಳಿಯಲು ಬಯಸುತ್ತೇನೆ.

ಹಾಗಾಗಿ ಪ್ರಾರ್ಥನಾಪೂರ್ಣರಾಗಿರಿ. ನಿಮ್ಮ ಬಲಹೀನತೆಯನ್ನು ನೀವು ಗುರುತಿಸಿ ಅದರ ನೋವನ್ನು ಅನುಭವಿಸಿದಾಗ ನೀವು ಪ್ರಾರ್ಥನಾಪೂರ್ಣರಾಗುವಿರಿ. ಮತ್ತು ನೀವು ಜ್ಞಾನದೊಂದಿಗೆ ಶಕ್ತಿಯನ್ನು ಅನುಭವಿಸಿದಾಗ, ಕೃತಜ್ಞತಾಪೂರ್ಣರಾಗಿರಿ, ಆಗ ನಿಮ್ಮ ಜ್ಞಾನದ ಶಕ್ತಿಯು ಹಲವು ಪಟ್ಟುಗಳಷ್ಟು ಹೆಚ್ಚಾಗುತ್ತದೆ. ನೀವು ಶಕ್ತಿ, ಸಾಮರ್ಥ್ಯ ಮತ್ತು ಕೃತಜ್ಞತೆಯನ್ನು ಅನುಭವಿಸುವಾಗ, ನಿಮ್ಮ ಶಕ್ತಿಯು ಹಲವು ಪಟ್ಟುಗಳಷ್ಟು ಹೆಚ್ಚಾಗುತ್ತದೆ.

ಜೀವನವು ಈ ಎರಡು ವಿಷಯಗಳ ನಡುವಿನ ಒಂದು ಉಯ್ಯಾಲೆಯಾಗಿದೆ ಮತ್ತು ಉಯ್ಯಾಲೆಯು ನಿಂತಾಗ ಅಷ್ಟೇ, ನೀವು ಜೀವನದಿಂದ ಮುಕ್ತರಾಗುವಿರಿ! ಮುಂದೆ ಯಾವುದೇ ತೂಗುವಿಕೆಯಿಲ್ಲ ಮತ್ತು, ’ನಾನು ಜ್ಞಾನೋದಯ ಹೊಂದಿರುವೆನು, ನಾನು ಮುಕ್ತನಾಗಿರುವೆನು’ ಎಂದು ನೀವು ಘೋಷಿಸಬಹುದು. ಯಾರೂ ನಿಮಗೊಂದು ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ!

ನಿಸ್ಸಹಾಯಕತೆಯ, ಬಲಹೀನತೆಯ ಪ್ರತಿಕ್ಷಣವೂ ನಿಮ್ಮನ್ನು ಪ್ರಾರ್ಥನೆಯ ಕಡೆಗೆ ಮುನ್ನಡೆಸುತ್ತದೆ ಮತ್ತು ಪ್ರಾರ್ಥನೆಯು ನಿಮ್ಮನ್ನು ನಕಾರಾತ್ಮಕತೆಯಿಂದ ಹೊರಗಿರಿಸುತ್ತದೆ ಹಾಗೂ ಖಿನ್ನತೆಯೊಳಕ್ಕೆ ಆಳವಾಗಿ ಕೆಳಗೆ ಬೀಳುವುದರಿಂದ ನಿಮ್ಮನ್ನು ತಡೆಯುತ್ತದೆ. ಇಲ್ಲದಿದ್ದರೆ, ಯಾವಾಗೆಲ್ಲಾ ನೀವು ನಿಮ್ಮ ನಿಸ್ಸಹಾಯಕತೆಯನ್ನು ಗುರುತಿಸುವಿರೋ ಆಗಲೇ ನೀವು ಖಿನ್ನತೆಗೊಳಗಾಗುವುದು. ಅಲ್ಲವೇ?

ನೀವು ಯಾವಾಗ ಖಿನ್ನತೆಗೊಳಗಾಗುತ್ತೀರಿ? ನೀವು ಜ್ಞಾನವನ್ನು ತಿಳಿದಿರುವಾಗ ಮತ್ತು ಅದನ್ನು ಜೀವಿಸಲು ನಿಮಗೆ ಸಾಧ್ಯವಿಲ್ಲದಿರುವಾಗ. ಈಗ ಖಿನ್ನತೆಗೊಳಗಾಗಬೇಡಿ. ಖಿನ್ನತೆಗೆ ಬೀಳುವ ಬದಲು, ಪ್ರಾರ್ಥನಾಪೂರ್ಣರಾಗಿರಿ.
ಇದುವೇ ಯೇಸುವಿನ ಇಡೀ ಸಂದೇಶ; ಪ್ರಾರ್ಥನಾಪೂರ್ಣರಾಗಿರಿ.

ಪ್ರಾರ್ಥಿಸುವುದು ಹೇಗೆ? ನಂತರ ಅವನು ಪ್ರಾರ್ಥಿಸುವುದನ್ನು ತೋರಿಸಿದನು. ಕೊನೆಕ್ಷಣದಲ್ಲಿ ಅವನನ್ನು ಶಿಲುಬೆಗೇರಿಸುವಾಗ ಕೂಡಾ ಅವನು ಪ್ರಾರ್ಥಿಸಿದನು. ಅವನು ನಿಸ್ಸಹಾಯಕತೆಯನ್ನು ಅನುಭವಿಸಿದನು ಮತ್ತು ಹೀಗೆಂದು ಹೇಳಿದನು, "ಓ ತಂದೆಯೇ, ನೀನು ನನ್ನ ಕೈಬಿಟ್ಟಿರುವೆಯಾ?" ನಿಸ್ಸಹಾಯಕತೆಯ ಆ ಭಾವನೆ; ದೇವರು ಕೂಡಾ ನನ್ನನ್ನು ತೊರೆದಿರುವನು! ಆದರೆ ಕೂಡಲೇ ಅದು ಪ್ರಾರ್ಥನೆಯಾಗಿ ತಿರುಗಿತು. ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿಯದು, ಆದುದರಿಂದ ಅವರನ್ನು ಕ್ಷಮಿಸು.

ಆ ಕ್ಷಣದಲ್ಲಿ ಅವನಿಗೆ ತಾನು ಸಂಪೂರ್ಣವಾಗಿ ನಿಸ್ಸಹಾಯಕನೆನಿಸಿತು. ಆತ್ಮವು ಇಚ್ಛಿಸುತ್ತಿದೆ, ಆದರೆ ಮಾಂಸವು ಬಲಹೀನವಾಗಿದೆ. ’ನನ್ನ ಶಿಷ್ಯರು ಹಾಗಿರಲಿ, ದೇವರೂ ನನ್ನನ್ನು ತೊರೆದಿರುವನು!’

ಎಲ್ಲಾ ಶಿಷ್ಯರು ಗುರುವನ್ನು ಪರಿತ್ಯಜಿಸಿದ್ದ ಒಂದು ಘಟನೆಯಾಗಿತ್ತು ಅದು. ಎಲ್ಲರೂ ಓಡಿಹೋದರು. ಆ ಸಮಯದಲ್ಲಿ ಅವನಿಗೆ ಎಷ್ಟೊಂದು ನೋವಾಗಿದ್ದಿರಬಹುದೆಂದು ನೋಡಿ. ಪ್ರತಿಯೊಬ್ಬರೂ ಅವನನ್ನು ತೊರೆದಿದ್ದರು! ಆದರೆ ಆ ಸಂಪೂರ್ಣ ನಿಸ್ಸಹಾಯಕತೆಯು ಕೂಡಲೇ ಪ್ರಾರ್ಥನೆಯಾಗಿ ಬದಲಾಯಿತು.

ಹೀಗಾಗಿ, ಈ ಎರಡು ಪರಿಸ್ಥಿತಿಗಳನ್ನು ನೆನಪಿಟ್ಟುಕೊಳ್ಳಿ: ನೀವು ಶಕ್ತಿಶಾಲಿಯಾಗಿರುವಾಗ ಕೃತಜ್ಞತೆ ಮತ್ತು ನೀವು ಬಲಹೀನರಾದಂತೆ ಅನ್ನಿಸುವಾಗ ಪ್ರಾರ್ಥನಾಪೂರ್ಣತೆ ಹಾಗೂ ಕೋಪಗೊಳ್ಳದಿರುವುದು. ನೀವು ಶಕ್ತಿಶಾಲಿಯಾಗಿರುವಾಗ ನಿಮಗೆ ಕೋಪ ಬರುವುದಿಲ್ಲ. ನಿಮಗೆ ಯಾವಾಗ ಕೋಪ ಬರುತ್ತದೆ? ನೀವು ಬಲಹೀನತೆ ಮತ್ತು ನಿಸ್ಸಹಾಯಕತೆಯನ್ನು ಅನುಭವಿಸುವಾಗ. ನಿಮಗೆ ಕೋಪ ಬರುವುದು ಮತ್ತು ಹತಾಶೆಯಾಗುವುದು ಆಗಲೇ. ನಿಮಗೆ ನೀವೇ ಹೊಡೆದುಕೊಳ್ಳುವಂತೆ ಅನ್ನಿಸುತ್ತದೆ. ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ನಿಮಗೆ ತಿಳಿಯುವುದಿಲ್ಲ. ನೀವು ಪ್ರಾರ್ಥನೆಯೊಳಕ್ಕೆ ಕರಗಿ ಹೋಗಬಹುದಾದುದು ಆ ಕ್ಷಣವೇ.

ನೀವು ಹಿಂತಿರುಗಿ ನೋಡಿದರೆ, ನೀವು ಬಹಳ ಶಕ್ತಿಶಾಲಿಯಾಗಿದ್ದ ದಿನಗಳಲ್ಲಿ, ನಿಮಗೆ ಯಾವತ್ತೂ ಕೋಪ ಬರಲಿಲ್ಲ, ನಿಮಗೆ ದುಃಖವಾಗಲಿಲ್ಲ. ಯಾರಾದರೂ ಏನನ್ನಾದರೂ ಮಾಡಿದರೆ, ನಿಮಗೆ, ’ಇದು ಏನೂ ಅಲ್ಲ. ನಾನಿದನ್ನು ನೋಡಿಕೊಳ್ಳಬಲ್ಲೆ. ಓ, ಇದೊಂದು ಆನೆಯ ಪಾದದ ಮೇಲಿನ ಒಂದು ಇರುವೆ. ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅನ್ನಿಸುತ್ತದೆ.

ಆದರೆ ನೀವು ದುಃಖಿತರಾಗಿರುವಾಗ, ನೀವು ನಿಸ್ಸಹಾಯಕರೆಂದೂ ಬಲಹೀನರೆಂದೂ ನಿಮಗನ್ನಿಸಿದಾಗ, ನಿಮಗೆ ಕೋಪ ಬರುತ್ತದೆ, ತಳಮಳವಾಗುತ್ತದೆ ಮತ್ತು ನಿಮ್ಮ ತಲೆಚಚ್ಚಿಕೊಳ್ಳಬೇಕೆಂದು ಅನ್ನಿಸುತ್ತದೆ. ನೀವು ಅಳುತ್ತೀರಿ! ನಿಮಗೆ ನಿಸ್ಸಹಾಯಕತೆ ಅನ್ನಿಸಿದಾಗ ಈ ಎಲ್ಲಾ ವಿಪರೀತ ಭಾವನೆಗಳು ಬರುತ್ತವೆ. ’ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ನಿಮಗನ್ನಿಸಿದಾಗ, ಆ ಸಮಯದಲ್ಲಿ ನಿಮಗೆ ಹಾಗೆ ಅನ್ನಿಸಿದಾಗ, ಅದೊಂದು ಪ್ರಾರ್ಥನೆಯಾಗಲು ಅತ್ಯಂತ ಶಕ್ತಿಶಾಲಿ ಕ್ಷಣವಾಗಿದೆ.

ಪ್ರಾರ್ಥನೆಯು ಎಂತಹ ಶಕ್ತಿಯನ್ನು ಹೊಂದಿದೆ ಎಂದು ನಿಮಗೆ ತಿಳಿಯದು. ಪ್ರಾರ್ಥನಾಪೂರ್ಣತೆಯು ನಿಮಗೆ ಸಂಪೂರ್ಣ ಶಕ್ತಿಯನ್ನು ತರುತ್ತದೆ. ಅದು ಚಕ್ರವನ್ನು ಪೂರ್ತಿಗೊಳಿಸುತ್ತದೆ. ಯಾರು ಪ್ರಾರ್ಥಿಸುವರೋ ಮತ್ತು ಯಾರಲ್ಲಿ ಅವರು ಪ್ರಾರ್ಥಿಸುವರೋ, ಪ್ರಾರ್ಥನೆಯಲ್ಲಿ ಒಂದಾಗುತ್ತಾರೆ. ಅದು ಎಲ್ಲವನ್ನೂ ಬದಲಾಯಿಸುತ್ತದೆ. ಅದು ಅಷ್ಟೊಂದು ಅದ್ಭುತ ವಿದ್ಯಮಾನ, ಚೇತನದ ಅಂತಹ ಒಂದು ಕಾರ್ಯವಿಧಾನವಾಗಿದೆ. ಬಹಳ ಆಸಕ್ತಿಕರ!

ಯೇಸುವು ಈ ಎರಡೂ ಪರಿಸ್ಥಿತಿಗಳನ್ನು ಎದುರಿಸಿದನು. ಮಾರಾಟಗಾರರನ್ನು ಹೊರಹಾಕಲು ಅವನು ದೇವಾಲಯಕ್ಕೆ ಹೋದಾಗ, ತಾನು ಸಂಪೂರ್ಣವಾಗಿ ಶಕ್ತಿಯುತನಾಗಿರುವೆನೆಂದು ಅವನಿಗನ್ನಿಸಿತು. ಅವನು ಜ್ಞಾನವನ್ನು ನೀಡುತ್ತಿದ್ದಾಗ, ಅವನು ಸಂಪೂರ್ಣವಾಗಿ ಶಕ್ತಿಯುತನಾಗಿದ್ದನು.

ಕೆಲವು ಸಲ ಅವನು ಸಂಪೂರ್ಣ ನಿಸ್ಸಹಾಯಕತೆಯನ್ನು ಮತ್ತು ಬಲಹೀನತೆಯನ್ನು ಅನುಭವಿಸಿದನು, ಯಾಕೆಂದರೆ ತಾನೇನನ್ನು ಮಾಡಲು ಬಯಸಿದ್ದನೋ ಅದನ್ನು ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ತಾನು ಬಯಸಿದ್ದ ರೀತಿಯಲ್ಲಿ ಸಮಾಜವನ್ನು ಬದಲಾಯಿಸಲು ಅವನಿಗೆ ಸಾಧ್ಯವಾಗಲಿಲ್ಲ. ಯಾವುದನ್ನು ತಿಳಿಯಪಡಿಸಲಿತ್ತೋ ಅದನ್ನು ಜನರು ಅರ್ಥಮಾಡಿಕೊಳ್ಳುವಂತೆ ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ಅವರಿಗೆ ಹಲವಾರು ರೀತಿಗಳಲ್ಲಿ, ಹಲವಾರು ಕಥೆಗಳಲ್ಲಿ ಹೇಳಿದನು, ಆದರೂ ಜನರಿಗೆ ಅದು ಅರ್ಥವಾಗುತ್ತಿರಲಿಲ್ಲ.

ನೀವೊಬ್ಬರು ಶಿಕ್ಷಕರು ಮತ್ತು ನೀವು ಯಾವುದೋ ಮಹತ್ತರವಾದ ಜ್ಞಾನವನ್ನು ನೀಡುತ್ತಿದ್ದೀರೆಂದು ಊಹಿಸಿಕೊಳ್ಳಿ. ಮತ್ತು ಅವರು ಕೆಲವು ಬಹಳ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ; ನಾನು ನನ್ನ ಮೂಗಿನ ಮೂಲಕ ಉಸಿರಾಡಬೇಕೇ ಅಥವಾ ನನ್ನ ಬಾಯಿಯ ಮೂಲಕವೇ ಅಥವಾ ನನ್ನ ಕಿವಿಗಳ ಮೂಲಕವೇ ಎಂದು.

ನೀವು ಹೀಗೆಂದು ಹೇಳುವಿರಿ, "ಓ ದೇವರೇ! ನಾನು ನಿನಗೆ ಉಸಿರಾಟದ ಅಭ್ಯಾಸಗಳನ್ನು ಇಷ್ಟು ದೀರ್ಘ ಕಾಲದವರೆಗೆ ಕಲಿಸಿದೆ ಮತ್ತು ಆದರೂ ನನ್ನ ನಾಲಿಗೆಯೆಲ್ಲಿರಬೇಕೆಂದು ನೀನು ಕೇಳುತ್ತಿರುವೆ!"

ಇದೇ ರೀತಿಯ ಪರಿಸ್ಥಿತಿಯ ಅನುಭವ ಯೇಸುವಿಗಾಯಿತು. ಅವನ ನಿಕಟ ಶಿಷ್ಯರು ಅವನನ್ನು ಒಂದು ಬಹಳ ದೀರ್ಘಕಾಲದವರೆಗೆ ಸಂಶಯಿಸುತ್ತಾ ಇದ್ದರು. ಸಂತ ಥೋಮಸ್ ಅವರಲ್ಲಿ ಒಬ್ಬನಾಗಿದ್ದನು.

ನೀವು ಒಬ್ಬರಲ್ಲಿ ಹಲವಾರು ಸಾರಿ, "ಅಡುಗೆಮನೆ ಅಲ್ಲಿದೆ ಮತ್ತು ಆಹಾರ ತಯಾರಾಗಿದೆ. ನಿನಗೆ ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ, ನೀನೇ ಹೋಗಿ ನೋಡು" ಎಂದು ಹೇಳಿದರೆ ಹೇಗೆಯೋ ಅದನ್ನೇ ಯೇಸುವು ಹೇಳಿದುದು, "ನಾನು ಹೇಳುತ್ತಿರುವುದನ್ನು ನೀವು ನಂಬದೇ ಇದ್ದರೆ, ನೀವು ಬೇರೆ ಯಾರನ್ನಾದರೂ ಕೇಳಿ."

ಅದುವೇ ಥೋಮಸ್‌ನೊಂದಿಗೂ ಆಯಿತು. ಯೇಸುವು, "ನೀನು ಯಾಕೆ ಭಾರತಕ್ಕೆ ಹೋಗಿ ನೀನೇ ನೋಡಬಾರದು" ಎಂದು ಹೇಳಿದನು. ಹೀಗಾಗಿ ಶಿಲುಬೆಗೇರಿಸಿದ ನಂತರ, ಥೋಮಸ್ ಭಾರತಕ್ಕೆ ಹೋದನು ಮತ್ತು ಅವನು ಅಲ್ಲಿ ಮರಣ ಹೊಂದಿದನು.

ನಿಮಗಿದು ಗೊತ್ತೇ? ಸಂತ ಥೋಮಸ್ ಭಾರತಕ್ಕೆ ಹೋದಾಗ, ಅವನು ಕೇರಳಕ್ಕೆ ಬಂದಿಳಿದನು ಮತ್ತು ಅವನು ಅಲ್ಲಿ ಸಂತ ಥೋಮಸ್ ಚರ್ಚ್ ಎಂದು ಕರೆಯಲ್ಪಡುವ ತನ್ನದೇ ಆದ ಚರ್ಚನ್ನು ಆರಂಭಿಸಿದನು. ಅವರು ಮರ್ ಥೋಮಾ ಎಂದು ಕರೆಯಲ್ಪಡುತ್ತಾರೆ. ಇವತ್ತಿಗೂ ಕೂಡಾ ಅವರು ಕೇಸರಿ ನಿಲುವಂಗಿಗಳನ್ನು ಧರಿಸುತ್ತಾರೆ. ಅವರು ಬಿಳಿ ನಿಲುವಂಗಿಗಳನ್ನು ಧರಿಸುವುದಿಲ್ಲ. ಅಲ್ಲಿನ ಬಿಷಪ್ ಕೇಸರಿ ನಿಲುವಂಗಿಗಳನ್ನು ಧರಿಸುತ್ತಾರೆ ಮತ್ತು ಅವುಗಳಲ್ಲಿ ರುದ್ರಾಕ್ಷ ಮಣಿಗಳಿರುತ್ತವೆ. ಅವರು ಬಹುತೇಕ ಎಲ್ಲಾ ಹಿಂದೂ ಸನ್ಯಾಸಿ ಸಂಪ್ರದಾಯಗಳನ್ನು ಸ್ವೀಕರಿಸಿದ್ದಾರೆ. ಅದು ಕೆಥೋಲಿಕ್ ಚರ್ಚಿಗೆ ಸಂಬಂಧಪಟ್ಟದ್ದಲ್ಲ, ಆದರೆ ಅವುಗಳು ಅಲ್ಲಿ ಅಸ್ತಿತ್ವದಲ್ಲಿವೆ. ಅವರು ತಮ್ಮ ವಿಶಿಷ್ಟ ಗುರುತನ್ನು ಇಟ್ಟುಕೊಂಡಿದ್ದಾರೆ; ಮರ್ ಥೋಮಾ ಕ್ರಿಶ್ಚಿಯನ್ನರು. ಚರ್ಚ್ ಅಲ್ಲಿ ಕ್ರಿ.ಶ. ೬೨ ರಿಂದ ಇದೆ.

ಸಂತ ಥೋಮಸನು ಚೆನ್ನೈನಲ್ಲಿ, ಮೈಲಾಪುರದಲ್ಲಿ ಮರಣ ಹೊಂದಿದನು. ಅಲ್ಲಿಯೇ ಯೇಸುವು ೧೨ ವರ್ಷಗಳ ಕಾಲ ವೇದಾಂತ ಮತ್ತು ಉಪನಿಷತ್ತುಗಳ ಅಧ್ಯಯನ ಮಾಡಿದುದು. ನಂತರ ಸಂತ ಥೋಮಸನು ಹೋಗಿ ಅವುಗಳನ್ನು ಅಧ್ಯಯನ ಮಾಡಿದನು, ಕಲಿತನು ಮತ್ತು ಹಲವಾರು ಯೋಗಿಗಳನ್ನು ಭೇಟಿಯಾದನು.

ಇವತ್ತಿಗೂ ಕೂಡಾ ಆ ಚರ್ಚ್ ಅಲ್ಲಿದೆ ಮತ್ತು ಅವನ ಶರೀರವು ಅಲ್ಲಿದೆ. ಅಲ್ಲೊಂದು ಚಿಕ್ಕ ಗುಡ್ಡವಿದೆ. ಅದರ ಮೇಲೆ ಅವನು ಕುಳಿತು ಧ್ಯಾನ ಮಾಡಿದನು ಮತ್ತು ನಾನು ಮತ್ತು ನನ್ನ ತಂದೆ ಒಬ್ಬರೇ; ನಾನು ಅದಾಗಿರುವೆನು! ಸೋ ಹಮ್! ಎಂಬುದನ್ನು ಅರಿತನು. ಅದುವೇ ಸೋ ಹಮ್ ಎಂದರೆ, ನಾನು ಮತ್ತು ನನ್ನ ತಂದೆ ಒಬ್ಬರೇ! ಅವನು ಅಲ್ಲಿ ಆ ಜ್ಞಾನವನ್ನು ಗಳಿಸಿದನು.
ನಿಜವಾಗಿಯೂ ಯೇಸುವು ಜನಿಸಿದುದು ಕ್ರಿಸ್‌ಮಸ್ ದಿನದಂದಲ್ಲ. ಈ ವಾಸ್ತವವು ನಿಮ್ಮಲ್ಲಿ ಎಷ್ಟು ಮಂದಿಗೆ ತಿಳಿಯದು?

ಕ್ರಿಸ್‌ಮಸ್ ಅವನ ಜನ್ಮದಿನವಲ್ಲ. ಯೇಸುವು ಮಾರ್ಚಿನಲ್ಲಿ ಜನಿಸಿದನು, ಅವನು ಮೀನ ರಾಶಿಯವನು. ಅದಕ್ಕಾಗಿಯೇ ಕ್ರೈಸ್ತ ಧರ್ಮವು ಎರಡು ಮೀನುಗಳ ಸಂಕೇತವನ್ನು ಹೊಂದಿದ್ದುದು. ಅವನು ಆ ಮಾಸದಲ್ಲಿ ಜನಿಸಿದನು ಯಾಕೆಂದರೆ, ಪರಿಶುದ್ಧ ಗರ್ಭಧಾರಣೆಯು ಜೂನ್‌ನಲ್ಲಾಗಿತ್ತು. ಗರ್ಭಧಾರಣೆಯ ೬ ತಿಂಗಳುಗಳ ಬಳಿಕ ಜನಿಸಿದ ಅಪಕ್ವ ಶಿಶುವಾಗಿರಲಿಲ್ಲ ಯೇಸು.
ನಿಜವಾಗಿಯೂ ಭಗವಾನ್ ಬುದ್ಧನಂತೆ, ಯೇಸುವಿನ ಜನನ ಮತ್ತು ಪುನರುತ್ಠಾನ ಬಹುತೇಕ ಒಂದೇ ಸಮಯಕ್ಕೆ ಆಗಿತ್ತು.

ಬುದ್ಧನು ಜನಿಸಿದುದು, ಆತ್ಮ ಸಾಕ್ಷಾತ್ಕಾರ ಹೊಂದಿದುದು ಮತ್ತು ಮರಣ ಹೊಂದಿದುದು ಒಂದೇ ದಿನದಂದು ಎಂಬುದು ನಿಮಗೆ ಗೊತ್ತೇ? ಅದು ಬುದ್ಧ ಪೌರ್ಣಿಮೆಯಂದು. ಬಹಳ ಸದೃಶವಾದ ಸಂಗತಿಯು ಯೇಸುವಿನೊಂದಿಗೆ ಆಯಿತು. ಅವನು ಮಾರ್ಚ್‌ನಲ್ಲಿ ಜನಿಸಿದನು ಮತ್ತು ಸುಮಾರು ಅದೇ ಸಮಯದಲ್ಲಿ ಅವನನ್ನು ಶಿಲುಬೆಗೇರಿಸಲಾಯಿತು. ಬಹುಶಃ ಕೇವಲ ಒಂದು ವಾರದ ವ್ಯತ್ಯಾಸ, ಅಷ್ಟೇ. ಇದು ಬಹಳ ಆಸಕ್ತಿಕರವಾದುದು.

ವ್ಯಕ್ತಿತ್ವವಲ್ಲ, ಸಂದೇಶ; ಜ್ಞಾನ ಅತ್ಯಂತ ಹೆಚ್ಚು ಮುಖ್ಯವಾದುದು ಎಂಬುದನ್ನು ನೀವು ತಿಳಿದಿರಬೇಕು. ನಾವೆಲ್ಲರೂ ಇಲ್ಲಿದ್ದೇವೆ ಮತ್ತು ನಾವೆಲ್ಲರೂ ಒಂದು ದಿನ ಹೋಗಲಿದ್ದೇವೆ, ಆದರೆ ಈ ಪ್ರಪಂಚಕ್ಕೆ ನಾವು ಏನನ್ನು ಕೊಡುವೆವೋ ಅದು ಪ್ರಪಂಚದಲ್ಲಿ ಉಳಿಯುತ್ತದೆ. ಹೀಗಾಗಿ, ನಾವು ಮನೆಗೆ ಏನನ್ನು ಒಯ್ಯಬೇಕೆಂದರೆ, ನಾನು ಹೇಗೆ ಪ್ರಯೋಜನಕಾರಿಯಾಗಬಹುದು, ನಾನು ಈ ಭೂಮಿಯ ಮೇಲೆ ಇರುವಲ್ಲಿಯವರೆಗೆ ನಾನು ಯಾವ ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದು.

ಈ ಒಂದು ಯೋಚನೆ, ಅದು ವಾರಕ್ಕೊಮ್ಮೆಯಾದರೂ ಬಂದರೆ, ಜೀವನವು ವಿಭಿನ್ನವಾಗುವುದು. ಇಲ್ಲದಿದ್ದರೆ ನಾವು ನಮ್ಮ ದಿನಚರಿಯಲ್ಲಿ ಮತ್ತು ಚಿಕ್ಕ ವಿಷಯಗಳಲ್ಲಿ ಬಹಳಷ್ಟು ಮುಳುಗಿಹೋಗುತ್ತೇವೆ. ದಿನಚರಿಯು ನಿಮ್ಮ ಜೀವನವನ್ನು ತಿಂದುಹಾಕುತ್ತದೆ. ಎಲ್ಲೋ ನಾವು ಎಚ್ಚೆತ್ತುಕೊಳ್ಳಬೇಕು. ಕೆಲವು ಗಂಟೆಗಳ ಕಾಲದ ಎಚ್ಚರ ಕೂಡಾ, ’ನಾನು ಈ ಭೂಮಿಗೆ ಒಂದು ಉದ್ದೇಶಕ್ಕಾಗಿ ಬಂದಿರುವೆನು, ನಾನಿಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕು’, ಇದು ಜೀವನದಲ್ಲಿ ರಸವನ್ನು ತರುವುದು. ಇಲ್ಲದಿದ್ದರೆ, ನೀವು ದಿನಚರಿಯಲ್ಲಿ ಸಂಪೂರ್ಣವಾಗಿ ಮುಳುಗಿದ್ದರೆ, ಅದು ಜೀವನವನ್ನು ನಾಶಪಡಿಸಬಲ್ಲದು. ಅದೇ ವೇಳೆಗೆ, ದಿನಚರಿಯು ಆವಶ್ಯಕವಾಗಿದೆ.

ನೀವು ನಿಮ್ಮ ದಿನಚರಿಯನ್ನು ಹೊಂದಿರಬಾರದೆಂದು ನಾನು ಹೇಳುತ್ತಿಲ್ಲ. ಒಂದು ದಿನಚರಿಯಿಲ್ಲದೆ ಜೀವಿಸುವುದು ಅಸಾಧ್ಯ. ನಿಮಗದು ಬೇಕು, ಆದರೆ ಅದರಲ್ಲಿ ೧೦೦% ಮುಳುಗಬೇಡಿ. ಕಡಿಮೆಪಕ್ಷ ನಿಮ್ಮ ಮೂಗನ್ನು ಅದರಿಂದ ಮೇಲೆ ಇಡಿ! ಇವುಗಳು ಅಂತಹ ಸಂದರ್ಭಗಳಾಗಿವೆ.

ಎಲ್ಲಾ ಉತ್ಸವಗಳು ನಿಮಗೆ ಹೀಗೆಂದು ಹೇಳಲು ಪ್ರಯತ್ನಿಸುತ್ತಿವೆ, "ಬಾ, ನಿನ್ನ ಮೂಗನ್ನು ದಿನಚರಿಯಿಂದ ಮೇಲಿಡು.’

ದುರದೃಷ್ಟವಶಾತ್ ಉತ್ಸವಗಳು ಕೂಡಾ ಒಂದು ದಿನಚರಿಯಾಗಿವೆ! ಕಾಲದಿಂದ ಕಾಲಕ್ಕೆ ಸುಮ್ಮನೇ ಎಚ್ಚೆತ್ತುಕೊಂಡು ನೋಡಿ, ನಾನು ನನ್ನ ದಿನಚರಿಯಲ್ಲಿ ಮತ್ತು ಇತರ ಚಿಕ್ಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಹೆಚ್ಚು ಅಮೂಲ್ಯವಾದುದಾಗಿದೆ ಜೀವನ. ನಾನು ಜನರಿಗೆ ಪ್ರಯೋಜನಕಾರಿಯಾಗಿರಬೇಕು. ನಾನು ಸ್ವಲ್ಪ ಸಂತೋಷವನ್ನು ಹರಡಬೇಕು. ಈ ಯೋಚನೆಯನ್ನು ನಾವು ನಮ್ಮೊಂದಿಗೆ ಒಯ್ಯಬೇಕು. ನೀವೇನು ಹೇಳುತ್ತೀರಿ?

ಈ ಎರಡು ವಿಷಯಗಳನ್ನು ನೀವು ನೆನಪಿನಲ್ಲಿಡುವಿರೇ? ಅದು ಸುಮ್ಮನೆ ಇನ್ನೊಂದು ಬದಿಯಿಂದ ಹೊರಹೋಗಬಾರದು.

ಏನದು? ನನಗೆ ನಿಸ್ಸಹಾಯಕತೆ ಮತ್ತು ಬಲಹೀನತೆಯ ಅನುಭವವಾದಾಗ ನಾನು ಪ್ರಾರ್ಥಿಸುವೆನು ಮತ್ತು ನಾನು ಶಕ್ತಿಶಾಲಿಯೆಂಬ ಅನುಭವ ನನಗಾದಾಗ ನಾನು ಧನ್ಯವಾದವನ್ನರ್ಪಿಸುವೆನು ಮತ್ತು ಕೃತಜ್ಞತಾಪೂರ್ಣನಾಗಿರುವೆನು. ಅದು ಕೂಡಾ ಒಂದು ಪ್ರಾರ್ಥನೆಯಾಗಿದೆ.

ಪ್ರಶ್ನೆ: ನಾನು ದೇವರೆಂಬುದನ್ನು ನಾನು ಅರಿತುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
’ನಾನು ದೇವರು, ನಾನು ದೇವರು’ ಎಂದು ನೀವು ಹೇಳುತ್ತಾ ಹೋಗಬಾರದು. ಜನರು ನಿಮ್ಮನ್ನು ಹುಚ್ಚಾಸ್ಪತ್ರೆಗೆ ಸೇರಿಸುವರು. ಅದು ಘೋಷಿಸಲಿರುವ ಒಂದು ವಿಷಯವಲ್ಲ. ಅದು ಕೇವಲ ಒಂದು ಆಂತರಿಕ ಸಾಕ್ಷಾತ್ಕಾರವಾಗಿದೆ.

ದೇವರಲ್ಲದೇ ಇರುವುದು ಯಾವುದೂ ಇಲ್ಲ. ಈ ಆಕಾಶದಲ್ಲಿ, ವಾಯುವಲ್ಲದಿರುವುದು ಅಥವಾ ಆಕಾಶವಲ್ಲದಿರುವುದು ಏನಾದರೂ ಇದೆಯೇ? ವಾಯುವು ಆಕಾಶದಲ್ಲಿದೆ, ನೀವು ಆಕಾಶದಲ್ಲಿರುವಿರಿ, ನಾನು ಆಕಾಶದಲ್ಲಿರುವೆನು, ನಿಮ್ಮ ಶರೀರದಲ್ಲಿರುವ ಪ್ರತಿಯೊಂದು ಕೋಶವೂ ಆಕಾಶದಲ್ಲಿದೆ. ಇದು ಸಾಕ್ಷಾತ್ಕಾರವಾಗಿದೆ.

ಆ ಒಂದು ವಿಷಯವಲ್ಲದೆ ಬೇರೇನೂ ಅಸ್ತಿತ್ವದಲ್ಲಿಲ್ಲ ಎಂಬುದನ್ನು ತಿಳಿ, ಮತ್ತು ಆ ಒಂದು ವಿಷಯವೇ ನಾನಾಗಿರುವೆನು ಮತ್ತು ಎಲ್ಲರೂ ಆಗಿರುವರು.

ಇದನ್ನು ಅನುಭವಿಸಲು ಮತ್ತು ಸಾಕ್ಷಾತ್ಕರಿಸಿಕೊಳ್ಳಲು, ಹೃದಯವು ಅರಳಬೇಕು ಮತ್ತು ಅದಾಗುವುದು ಹಾಡುವುದರ ಮೂಲಕ. ಅದಕ್ಕಾಗಿಯೇ ನೀವು ಹಾಡುವಾಗ ಅಥವಾ ನೀವು ಧ್ಯಾನದಲ್ಲಿ ಕರಗುವಾಗ, ಇರುವುದು ಕೇವಲ ಆನಂದ ಮಾತ್ರ ಹಾಗೂ ಆನಂದವು ದೇವರ ಸ್ವಭಾವವಾಗಿದೆ!

ನೀವು ಸತ್ಯದೊಂದಿಗೆ ಇರುವಾಗ, ನೀವು ದೇವರೊಂದಿಗೆ ಇರುತ್ತೀರಿ. ನೀವೊಂದು ಆನಂದಪೂರ್ಣ ಸ್ಥಿತಿಯಲ್ಲಿರುವಾಗ, ನೀವು ದೇವರಲ್ಲಿರುತ್ತೀರಿ.

ಶನಿವಾರ, ನವೆಂಬರ್ 30, 2013

ಭಾರತದಲ್ಲಿ ಗುರು ಪರಂಪರೆ: ಒಂದು ವಿಶ್ಲೇಷಣೆ

ನವಂಬರ್ ೩೦, ೨೦೧೩

ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಆಸಾರಾಮ್ ಬಾಪು ಘಟನೆಯ ಬಳಿಕ, ನನ್ನ ಸ್ನೇಹಿತರು ಆರ್ಟ್ ಆಫ್ ಲಿವಿಂಗ್‌ನಲ್ಲಿ ನನಗಿರುವ ನಂಬಿಕೆಯ ಬಗ್ಗೆ ಪ್ರಶ್ನಿಸತೊಡಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ವಿಭಿನ್ನವಾದುದೆಂದು ಅವರಿಗೆ ಮನವರಿಕೆ ಮಾಡಿಸಲು ನಾನು ಅವರಿಗೆ ಏನೆಂದು ಹೇಳಬಹುದು?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ಮನವರಿಕೆ ಮಾದಿಕೊಡಿ. ಅಪಘಾತಗಳು ಸಂಭವಿಸುತ್ತವೆಯೆಂದ ಮಾತ್ರಕ್ಕೆ ನೀವು ರಸ್ತೆಯ ಮೇಲೆ ನಡೆಯುವುದನ್ನು ನಿಲ್ಲಿಸುವುದಿಲ್ಲ, ಅಲ್ಲವೇ? ನೀವು ಹಾಗೆ ಮಾಡಿದರೆ, ಆಗ ಅದು ಮಾನಸಿಕ ಅಸಂತುಲನ ಅಥವಾ ಭ್ರಮೆ ಎಂದು ಕರೆಯಲ್ಪಡುತ್ತದೆ. ಇಲ್ಲೂ ಕೂಡಾ ಹಾಗೆಯೇ.
ಉದಾಹರಣೆಗೆ, ವೈದ್ಯಕೀಯ ವೃತ್ತಿಯಲ್ಲಿ, ಮೂತ್ರಜನಕಾಂಗಗಳನ್ನು ಕದಿಯುವ ವೈದ್ಯರಿದ್ದಾರೆ. ವೈದ್ಯರು ಮೂತ್ರಜನಕಾಂಗಗಳನ್ನು ಕದಿಯುತ್ತಿದ್ದರೆಂದು ಕಂಡುಬಂದ ಒಂದು ದೊಡ್ಡ ಹಗರಣವಾಗಿತ್ತು. ಆದರೆ ಕೆಲವು ವೈದ್ಯರು ಮೂತ್ರಜನಕಾಂಗಗಳನ್ನು ಕದಿಯುತ್ತಿರುವುದು ಕಂಡುಬಂದ ಕಾರಣ ಮಾತ್ರಕ್ಕೆ, ನೀವು ವೈದ್ಯರ ಬಳಿಗೆ ಹೋಗುವುದನ್ನು ನಿಲ್ಲಿಸಬೇಕೆಂದು ಅರ್ಥವಲ್ಲ, ಸರಿಯಾ? ಜನರನ್ನು ಅವರ ಹಣದಿಂದ ವಂಚಿತಗೊಳಿಸಿರುವ ಕಂಪೆನಿಗಳು ಮತ್ತು ಉದ್ಯಮಿಗಳಿದ್ದಾರೆ, ಆದರೆ ಅದರರ್ಥ ನೀವು ಕಂಪೆನಿಗಳಲ್ಲಿ ಬಂಡವಾಳ ಹೂಡುವುದನ್ನು ನಿಲ್ಲಿಸಬೇಕೆಂದಲ್ಲ.

ಹೀಗಾಗಿ ಮೊತ್ತ ಮೊದಲನೆಯದಾಗಿ, ಒಬ್ಬ ಸಜ್ಜನರ ಮೇಲೆ ಏನೋ ತಪ್ಪು ಮಾಡಿದ ಆರೋಪ ಹೊರಿಸಲಾಗಿದೆ. ಮತ್ತು ಅದು ಸಾಬೀತಾಗಿಯೂ ಇಲ್ಲ. ಅವರು ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಯಿತೆಂದು ಇಟ್ಟುಕೊಳ್ಳೋಣ; ಕಾಂಚಿ ಮಠದ ಮುಖ್ಯಸ್ಥರಾದ ಶಂಕರಾಚಾರ್ಯರ (ಇತ್ತೀಚೆಗೆ ನಡೆದ, ಭಾರತದಲ್ಲಿನ ಒಂದು ಆಧ್ಯಾತ್ಮಿಕ ಸಂಸ್ಥೆಯಾದ ಕಾಂಚಿಯ ಮಠಾಧೀಶರ ಖುಲಾಸೆಯ ವಿಷಯವನ್ನು ಉಲ್ಲೇಖಿಸುತ್ತಾ) ವಿಷಯದಲ್ಲಿ ಸಂಭವಿಸಿದಂತೆ. ಒಂಭತ್ತು ವರ್ಷಗಳ ಹಿಂದೆ ಅವರ ಮೇಲೊಂದು ಕೊಲೆಯ ಆರೋಪವನ್ನು ಹೊರಿಸಲಾಗಿತ್ತು. ಇವತ್ತು, ಅವರನ್ನು ಎಲ್ಲಾ ದೋಷಾರೋಪಣೆಗಳಿಂದ ಮುಕ್ತಗೊಳಿಸಲಾಗಿದೆ. ಒಂಭತ್ತು ದೀರ್ಘ ವರ್ಷಗಳವರೆಗೆ ಅವರು ತಪ್ಪು ಆರೋಪದ ಹೊರೆಯನ್ನು ಹೊರಬೇಕಾಯಿತು. ಇದರ ಬಗ್ಗೆ ನೀವೇನು ಹೇಳುವಿರಿ?

೧೭ ಅಥವಾ ೧೯ ವರ್ಷಗಳ ಮೊದಲೇನೋ ಭಾರತದಲ್ಲಿ ಸಂಭವಿಸಿದ ಒಂದು ಘಟನೆಯ ಬಗ್ಗೆ ನಾನು ನಿಮಗೆ ಹೇಳಲು ಬಯಸುತ್ತೇನೆ. ೧೯೯೮ ರಲ್ಲಿ, ದೇಶದ ಒಬ್ಬರು ಶ್ರೇಷ್ಠ ವಿಜ್ಞಾನಿಗಳ ಮೇಲೆ ಗೂಢಚಾರಿಕೆಯ ಆರೋಪವನ್ನು ಹೊರಿಸಲಾಯಿತು. ಅವರು ಬಹಳಷ್ಟು ಚಿತ್ರಹಿಂಸೆಯ ಮೂಲಕ ಹಾದುಹೋದರು. ಅವರ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದ ರಿಕ್ಷಾ ಚಾಲಕರಿದ್ದರು. ಕ್ರಯೋಜೆನಿಕ್ ತಂತ್ರಜ್ಞಾನದ ಮೇಲೆ ಸಂಶೋಧನೆ ನಡೆಸಿ, ಅಮೇರಿಕಾವು ಮಾಡಿದ ಬಾಹ್ಯಾಕಾಶ ನೌಕೆಗೆ ತಗಲಿದ ವೆಚ್ಚದ ಕೇವಲ ಮೂರರಲ್ಲಿ ಒಂದು ಭಾಗ ವೆಚ್ಚ ಮಾತ್ರ ತಗಲುವ ಬಾಹ್ಯಾಕಾಶ ನೌಕೆಯನ್ನು ತಯಾರು ಮಾಡಿದ ಶ್ರೇಷ್ಠ ವಿಜ್ಞಾನಿಗಳಲ್ಲಿ ಅವರು ಒಬ್ಬರು. ಅದು ಎಷ್ಟೋ ಹೆಚ್ಚು ಸಮರ್ಥವಾಗಿತ್ತು ಮತ್ತು ಹಾಗಿದ್ದರೂ, ಸಾಧಾರಣವಾಗಿ ಬಾಹ್ಯಾಕಾಶ ನೌಕೆಯನ್ನು ಮಾಡಲು ತಗಲುವ ವೆಚ್ಚದ ಮೂರರಲ್ಲಿ ಒಂದು ಭಾಗದಷ್ಟು ವೆಚ್ಚ ಮಾತ್ರ ಉಳ್ಳದ್ದಾಗಿತ್ತು. ರಷ್ಯಾವು ಈ ಯೋಜನೆಯಲ್ಲಿ ಅವರೊಂದಿಗೆ ಪಾಲುದಾರನಾಗಲು ಬಯಸಿತ್ತು. ಸಂಯುಕ್ತ ಸಂಸ್ಥಾನಗಳು ಕೂಡಾ ಅವರೊಂದಿಗೆ ಪಾಲುದಾರನಾಗಲು ಬಯಸಿತ್ತು. ಅವರು ನಾಸಾದಿಂದ ಆಮಂತ್ರಿತರಾಗಿದ್ದರು ಮತ್ತು ಅಮೇರಿಕಾದ ಅಧ್ಯಕ್ಷರು ಅವರಲ್ಲಿ, "ನಾನು ನಿಮಗೆ ಅಮೇರಿಕಾದ ಪೌರತ್ವವನ್ನು ನೀಡಲು ಬಯಸುತ್ತೇನೆ. ದಯವಿಟ್ಟು ಇಲ್ಲಿ ನೆಲೆಸಿ ನಿಮ್ಮ ಕೆಲಸವನ್ನು ಮುಂದುವರೆಸಿ" ಎಂದು ಹೇಳಿದ್ದರು.

ಅವರು ಹತ್ತು ತಿಂಗಳುಗಳವರೆಗೆ ನಾಸಾದಲ್ಲಿದ್ದರು. ನಂತರ ಅವರು ಇಲ್ಲಿ ಇಸ್ರೋದಲ್ಲಿನ ಬಾಹ್ಯಾಕಾಶ ಸಂಶೋಧನೆಯ ಮುಖ್ಯಸ್ಥರಾಗಿದ್ದ ವಿಕ್ರಂ ಸಾರಾಭಾಯಿ ಅವರನ್ನು ಸಂಪರ್ಕಿಸಿದರು. ಶ್ರೀ ಸಾರಾಭಾಯಿಯವರು ಅವರಲ್ಲಿ ತಮ್ಮ ಕೆಲಸವನ್ನು ಮುಂದುವರೆಸುವುದಕ್ಕಾಗಿ ಭಾರತಕ್ಕೆ ಮರಳುವಂತೆ ಹೇಳಿದರು. ಹೀಗಾಗಿ ಅವರು ಮರಳಿ ಬಂದರು ಮತ್ತು ಭಾರತದ ಅಧ್ಯಕ್ಷರಾಗಿದ್ದ ಶ್ರೀ ಅಬ್ದುಲ್ ಕಲಾಮ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರೂ ಸಹೋದ್ಯೋಗಿಗಳಾಗಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು.

ಆಗ ಅಲ್ಲಿ ಭಾರತೀಯ ಕಚೇರಿಯಲ್ಲಿ ಒಬ್ಬರು ಸಜ್ಜನರಿದ್ದರು. ಅವರು ಈ ವಿಜ್ಞಾನಿಯ ಮೇಲೆ, ಅವರು ಗೂಢಚಾರಿಕೆ ನಡೆಸುತ್ತಿರುವುದಾಗಿ ಹೇಳುತ್ತಾ ಒಂದು ಸುಳ್ಳು ಮೊಕದ್ದಮೆಯನ್ನು ಹಾಕಿದರು. ಅವರು ಗೂಢಚಾರಿಕೆ ನಡೆಸುತ್ತಿರುವುದಾಗಿ ಮತ್ತು ನಮ್ಮೆಲ್ಲಾ ರಹಸ್ಯಗಳನ್ನು ಮೊರಿಷಿಯಸ್ ಅಥವಾ ಮಾಲ್ಡೀವ್ಸ್‌ನಲ್ಲಿ ಯಾವುದೋ ಮಹಿಳೆಗೆ ಮಾರುತ್ತಿರುವುದಾಗಿ ಅವರ ಮೇಲೆ ಆರೋಪ ಹೊರಿಸಿದರು.

ವಾಸ್ತವವಾಗಿ ಮಾಲ್ಡೀವ್ಸ್‌ನಿಂದ ಬಂದ ಇಬ್ಬರು ಮಹಿಳೆಯರಿದ್ದರು. ಅವರು ಕೇವಲ ಎಂಟನೇ ತರಗತಿ ಪಾಸಾದವರಾಗಿದ್ದರು. ಈ ವಿಜ್ಞಾನಿಗಳು ತಂಗಿದ್ದ ಮನೆಯ ಪಕ್ಕದ ಮನೆಯಲ್ಲಿ ಅವರು ಅತಿಥಿಗಳಾಗಿ ತಂಗಿದ್ದರು. ಹೀಗಾಗಿ ಮೊಕದ್ದಮೆಯು ಹತ್ತು ವರ್ಷಗಳವರೆಗೆ ಸಾಗುತ್ತಾ ಹೋಯಿತು. ಹತ್ತು ವರ್ಷಗಳ ಬಳಿಕ ಕೊನೆಗೂ ಅವರು ನಿರ್ದೋಷಿಯೆಂದು ಸಾಬೀತಾಯಿತು. ಅಷ್ಟರಲ್ಲಿ, ಅವರು ಮಾಡಿದ್ದ ಎಲ್ಲಾ ಸಂಶೋಧನಾ ಕೆಲಸವೂ ಮುಗಿದುಹೋಗಿತ್ತು.

ಇಡೀ ತಂತ್ರಜ್ಞಾನದ ಕಾರ್ಯಕ್ರಮವು ಕುಸಿದು ಬೀಳಲೆಂದು, ತನ್ನ ವಿರುದ್ಧ ಒಂದು ಸುಳ್ಳು ಆರೋಪವನ್ನು ಹಾಕಲು ಸಿ.ಐ.ಎ. ಯು ಈ ಜನರಿಗೆ ಹಣವನ್ನು ಕೊಟ್ಟಿತ್ತೆಂದು ಅವರು ಅನುಮಾನಿಸಿದರು. ಅದರ ನಂತರ, ವಿಷಯಗಳು ನಿಂತುಹೋದವು ಮತ್ತು ದೇಶವು ತನ್ನ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸತೇನನ್ನೂ ಕಂಡುಹಿಡಿಯಲಿಲ್ಲ. ಅವರು ನನಗೆ ಈ ಇಡೀ ಕಥೆಯನ್ನು ಹೇಳುತ್ತಿದ್ದರು. ನೀವು ಈ ಕಥೆಯನ್ನು ನೋಡಿರಬೇಕು. ಟೈಮ್ಸ್ ನೌ ವಾರ್ತಾ ವಾಹಿನಿಯಲ್ಲಿ ಕೂಡಾ ಇದು ಪ್ರಸಾರವಾಗಿತ್ತು.
ನಾನಿಲ್ಲಿ ಹೇಳುತ್ತಿರುವುದೇನೆಂದರೆ, ಹಲವು ಸಾರಿ ಆರೋಪಗಳು ತಪ್ಪಾಗಿರಬಹುದು. ಮತ್ತು ಕೆಲವೊಮ್ಮೆ ಅದು ನಿಜವಾಗಿರಲೂಬಹುದು ಕೂಡಾ. ಪ್ರಶ್ನೆಯಲ್ಲಿರುವ ವ್ಯಕ್ತಿಯು ಯಾವುದಾದರೂ ತಪ್ಪನ್ನು ಮಾಡಿರಲೂಬಹುದು. ಅಂತಹ ಪ್ರಸಂಗಗಳಲ್ಲಿ ನಾವು ಅವರ ಬಗ್ಗೆ ಕೇವಲ ಕರುಣೆಯನ್ನು ಹೊಂದಿರಬಹುದಷ್ಟೆ, ಯಾಕೆಂದರೆ ಅವರು ಅಂತಹದೇನನ್ನೋ ಮಾಡುವಂತೆ ಮಾಡಿದುದು ಯಾವುದು, ಅಂತಹ ಹೀನವಾದ ಅಪರಾಧವನ್ನು ಅವರು ಮಾಡುವಂತೆ ಮಾಡಿದುದು ಯಾವುದು ಎಂಬುದು ನಮಗೆ ತಿಳಿಯದು. ಒಬ್ಬರು ೭೫ ವರ್ಷದ ವ್ಯಕ್ತಿಯು ಅಂತಹ ಒಂದು ಕೆಲಸವನ್ನು ಮಾಡುವರೆಂದು ಯೋಚಿಸಲೂ ಸಾಧ್ಯವಿಲ್ಲ.

ಎರಡನೆಯದಾಗಿ, ಅಪರಾಧ ಮಾಡಿರುವ ವ್ಯಕ್ತಿಯ ಬಗ್ಗೆ ಕರುಣೆ ಅಥವಾ ಕನಿಕರ ತೋರುವ ಬದಲಾಗಿ ನಾವು ಆ ವ್ಯಕ್ತಿಯನ್ನು ದ್ವೇಷಿಸಲು ತೊಡಗುತ್ತೇವೆ. ನಿಮಗೆ ಗೊತ್ತಿದೆಯೇ, ಅತ್ಯಂತ ಕೆಟ್ಟ ಅಪರಾಧಿ ಅಥವಾ ಒಬ್ಬ ಅಪರಾಧಿಯೆಂದು ಸಾಬೀತಾಗಿರುವ ಒಬ್ಬ ವ್ಯಕ್ತಿಯ ಕಡೆಗೆ ಕೂಡಾ, ನಮ್ಮ ಮನೋಭಾವವು ದ್ವೇಷದ್ದಾಗಿರಬಾರದು. ಬದಲಾಗಿ ನಮ್ಮಲ್ಲಿ ಕನಿಕರವಿರಬೇಕು. ಮತ್ತು ಅಂತಹ ಕೆಲಸಗಳು ನಿಮ್ಮ ಮೂಲಕ ಸಂಭವಿಸಲಿಲ್ಲ ಎಂಬುದಕ್ಕೆ ದೇವರಿಗೆ ಧನ್ಯವಾದವನ್ನರ್ಪಿಸಿ. ನೀವು ಅಂತಹ ತಪ್ಪುಗಳನ್ನು ಅಥವಾ ಪ್ರಮಾದಗಳನ್ನು ಎಸಗಲಿಲ್ಲವೆಂಬುದು ಅದೃಷ್ಟವೆಂದು ಭಾವಿಸಿ. ಒಬ್ಬರು ಏನು ಮಾಡಲು ಸಾಧ್ಯ? ಪ್ರತಿಯೊಂದು ಕ್ಷೇತ್ರದಲ್ಲೂ ಅಂತಹ ಜನರಿರುತ್ತಾರೆ. ನಿಮಗೆ ಗೊತ್ತಾ, ರಾವಣನು ಒಬ್ಬ ಸನ್ಯಾಸಿಯ ಮಾರುವೇಷದಲ್ಲಿ ಬಂದು ಸೀತಾದೇವಿಯನ್ನು ವಂಚಿಸಿದ. ಇದು ಹೊಸತೇನೂ ಅಲ್ಲ.

ವಿಜಯ ನಗರ ಸಾಮ್ರಾಜ್ಯವು ಹೇಗೆ ಪತನಗೊಂಡಿತು ಎಂಬುದು ನಿಮಗೆ ಗೊತ್ತೇ? ಅದು, ಸನ್ಯಾಸಿಗಳಂತೆ ನಟಿಸಿದ ಐದು ಕುಟಿಲ ಜನರಿಂದಾಗಿ.

ವಿಜಯನಗರ ಸಾಮ್ರಾಜ್ಯವು ಎಷ್ಟೊಂದು ಬಲಿಷ್ಠವೂ, ಶಕ್ತಿಶಾಲಿಯೂ ಆಗಿತ್ತೆಂದರೆ ಅದನ್ನು ನಡುಗಿಸಲು ಯಾರಿಗೂ ಸಾಧ್ಯವಿರಲಿಲ್ಲ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಕಥೆ ಗೊತ್ತಿಲ್ಲ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ವಿಜಯನಗರ ಸಾಮ್ರಾಜ್ಯವು ಬಹುತೇಕ ಅರ್ಧದಷ್ಟು ಭಾರತವನ್ನು ವ್ಯಾಪಿಸಿತ್ತು ಮತ್ತು ಆಳ್ವಿಕೆ ನಡೆಸಿತ್ತು, ಮತ್ತು ವಾಸ್ತವವಾಗಿ ಶ್ರೀಲಂಕಾದಲ್ಲಿ ಕೂಡಾ ಅದರ ವ್ಯಾಪ್ತಿಯಿತ್ತು. ಆ ಸಮಯದಲ್ಲಿ ಅದು ಭೂಮಿಯ ಮೇಲೆ ಅತ್ಯಂತ ಹೆಚ್ಚು ಸಮೃದ್ಧ ಪ್ರಾಂತ್ಯವಾಗಿತ್ತು. ಚೈನಾದ ಪ್ರಯಾಣಿಕರು ಅದನ್ನು, ನಂಬಲಸಾಧ್ಯವಾದುದೇನೋ ಎಂದು ವರ್ಣಿಸಿದ್ದರು. ಅದರ ರಸ್ತೆಗಳ ಮೇಲೆ ವರ್ತಕರು ವಜ್ರಗಳನ್ನು ’ಲೀಟರ್’ಗಳಲ್ಲಿ ಅಳತೆ ಮಾಡುತ್ತಿದ್ದರು. ಮುತ್ತುಗಳನ್ನು ಭಾರಕ್ಕನುಸಾರವಾಗಿಯಲ್ಲ, ಆದರೆ ಘನಪ್ರಮಾಣಕ್ಕನುಸಾರವಾಗಿ ಅಳತೆ ಮಾಡಲಾಗುತ್ತಿತ್ತು.

ಈ ಸಾಮ್ರಾಜ್ಯವು ಒಂದು ಬೃಹತ್ತಾದ ಸಶಸ್ತ್ರ ಪಡೆಯನ್ನು ಹೊಂದಿತ್ತು. ಅದು ೧೦,೦೦೦ ಆನೆಗಳು ಮತ್ತು ಒಂದು ಲಕ್ಷ ಸೈನಿಕರನ್ನು ಹೊಂದಿತ್ತು. ಆದರೆ ಸಂಪೂರ್ಣ ಸಾಮ್ರಾಜ್ಯವು, ಯಾವುದೇ ಯುದ್ಧವನ್ನು ಮಾಡದೆಯೇ ಕೇವಲ ೧೦ ನಿಮಿಷಗಳಲ್ಲಿ ನಾಶವಾಯಿತು. ಏನಾಯಿತೆಂದು ನಿಮಗೆ ಗೊತ್ತೇ? ಐವರು ಬಹ್ಮನಿ ಸುಲ್ತಾನರು ಸಾಧುಗಳಂತೆ ಅಥವಾ ಸ್ವಾಮಿಗಳಂತೆ ವೇಷ ಧರಿಸಿ ಬಂದರು ಮತ್ತು ಅವರು ನದಿಯ ಇನ್ನೊಂದು ಬದಿಯಲ್ಲಿ ಒಂದು ಡೇರೆಯಲ್ಲಿ ಉಳಕೊಂಡರು. ಅವರು ರಾಜನಿಗೆ, "ದಯವಿಟ್ಟು ಬಂದು ಸ್ವಾಮಿಯರನ್ನು ಭೇಟಿಯಾಗಿ. ಅವರು ನದಿಯನ್ನು ದಾಟರು ಮತ್ತು ಅರಮನೆಗೆ ಬರರು. ಹಾಗಾಗಿ ನೀವು ಬಂದು ಅವರನ್ನು ಭೇಟಿಯಾಗಲೇಬೇಕು" ಎಂಬ ಸಂದೇಶವನ್ನು ಕಳುಹಿಸಿದರು. ಹೀಗಾಗಿ ರಾಜನು ಎಲ್ಲಾ ಆದರಗಳೊಂದಿಗೆ ಅವರನ್ನು ಭೇಟಿಯಾಗಲು ಬಂದನು. ಸಂಪ್ರದಾಯದ ಪ್ರಕಾರ, ರಾಜನು ಋಷಿಗಳು ಅಥವಾ ಸಂತರ ಬಳಿಗೆ ಹೋಗಿ, ಆಶೀರ್ವಾದಗಳನ್ನು ಪಡೆಯಲು ತಲೆಬಾಗುತ್ತಾನೆ.

"ನೀನು ಒಬ್ಬಂಟಿಯಾಗಿ ಬಂದು ನಮ್ಮನ್ನು ಭೇಟಿಯಾಗಬೇಕು ಮತ್ತು ನಿನ್ನೆಲ್ಲಾ ಸಶಸ್ತ್ರ ಪಡೆಗಳೊಂದಿಗಲ್ಲ ಎಂಬುದಾಗಿ ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.  

ಆದುದರಿಂದ ರಾಜನು ಸರಳವಾದ ಉಡುಪನ್ನು ಧರಿಸಿ, ಫಲ ಪುಷ್ಪಗಳನ್ನು ತೆಗೆದುಕೊಂಡು ಸಂತರನ್ನು ಭೇಟಿಯಾಗಲು ಹೋದನು. ಆದರೆ ಅವರು ನಿಜವಾಗಿಯೂ ಸಂತರಾಗಿರಲಿಲ್ಲ. ಅವರು ಸುಲ್ತಾನರ, ಮಾರುವೇಷದಲ್ಲಿನ ಸೇನಾಪತಿಗಳು ಮತ್ತು ಸೈನಿಕರಾಗಿದ್ದರು. ಅವರು ಅಲ್ಲಿಯೇ ರಾಜನ ಶಿರಚ್ಛೇದ ಮಾಡಿದರು ಮತ್ತು ಅವನ ತಲೆಯನ್ನು ಹಂಪಿ ನಗರದ ಕೇಂದ್ರದಲ್ಲಿ ಒಂದು ಕಂಬದಲ್ಲಿ ನೇತಾಡಿಸಲಾಯಿತು. ಹತ್ತು ನಿಮಿಷಗಳಲ್ಲಿ ಸಂಪೂರ್ಣ ರಾಜ್ಯವು, ಯುದ್ಧವಿಲ್ಲದೆಯೇ ಜಯಿಸಲ್ಪಟ್ಟಿತು.
ರಾಜನು ಕೊಲ್ಲಲ್ಪಟ್ಟಾಗ, ರಾಜ್ಯದ ಜನತೆ ಏನು ಮಾಡಲು ಸಾಧ್ಯ? ಹೀಗಾಗಿ ಅವರು ದಾಳಿಕೋರರಿಗೆ ಶರಣಾಗಬೇಕಾಯಿತು. ಅದರ ನಂತರ ಬಹ್ಮನಿಯರು ರಾಜ್ಯವನ್ನು ಧ್ವಂಸ ಮಾಡಿದರು. ಅವರ ಸೈನ್ಯವೂ ಕೂಡಾ ರಾಜ್ಯವನ್ನು ಲೂಟಿ ಮಾಡಲು ಮಾರುವೇಷದಲ್ಲಿ ಕಾಯುತ್ತಿದ್ದರು. ಆ ನಗರವನ್ನು ಕೊಳ್ಳೆ ಹೊಡೆಯಲು ಅವರಿಗೆ ಆರು ತಿಂಗಳುಗಳು ಹಿಡಿದವು ಎಂದು ಹೇಳಲಾಗುತ್ತದೆ.

ಸ್ವಾತಂತ್ರ್ಯದ ಬಳಿಕ, ಜವಹರ್‌ಲಾಲ್ ನೆಹರೂ ಅವರಿಗೆ, ಭಾರತದ ಚರಿತ್ರೆಯನ್ನು ಅಡಗಿಸಿಡುವ ಈ ಮಹಾನ್ ಕಲ್ಪನೆಯು ಬಂತು, ಯಾಕೆಂದರೆ ಕೆಟ್ಟ ಘಟನೆಗಳು ಪ್ರಮುಖವಾಗಿ ಗೋಚರಿಸುವುದನ್ನು ಅಥವಾ ತಿಳಿಯುವುದನ್ನು ಅವರು ಬಯಸಿರಲಿಲ್ಲ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸದೆ ಇರುವ ಒಂದು ಪಾಠವನ್ನು ಇದು ಕಲಿಸುತ್ತಿತ್ತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ. ಬದಲಾಗಿ ಅವರು ಅದನ್ನೆಲ್ಲಾ ಮುಚ್ಚಿಹಾಕಿದರು ಮತ್ತು ಎಲ್ಲವೂ ಚೆನ್ನಾಗಿತ್ತೆಂಬಂತೆ ನಟಿಸಿದರು. ಹೀಗೆ ಅವರು ಸತ್ಯಕಥೆಗಳನ್ನು ಕಂಬಳಿಯ ಅಡಿಗೆ ತಳ್ಳಿಹಾಕಿದರು ಮತ್ತು ಬಹಳ ಅನುಕೂಲಕರವಾಗಿ ಎಲ್ಲಾ ವೈಭವದ ದಿನಗಳನ್ನು ಕೂಡಾ ಮರೆತರು.

ಹೀಗೆ ನಮ್ಮ ದೇಶದ ಚರಿತ್ರೆಯು ಯಾವುದೇ ರುಚಿಯಿಲ್ಲದೆ; ಸಿಹಿಯೂ ಇಲ್ಲದೆ (ಭಾರತದ ಚರಿತ್ರೆಯ ವೈಭವಗಳನ್ನು ಉಲ್ಲೇಖಿಸುತ್ತಾ), ಉಪ್ಪೂ ಇಲ್ಲದೆ (ಭಾರತದ ಚರಿತ್ರೆಯಲ್ಲಿನ ಕತ್ತಲಿನ ಮತ್ತು ತ್ರಾಸದಾಯಕ ಅವಧಿಗಳು ಅಥವಾ ಘಟನೆಗಳನ್ನು ಉಲ್ಲೇಖಿಸುತ್ತಾ) ಸಪ್ಪೆಯಾಯಿತು.

ಈ ಪ್ರಯತ್ನಗಳಿಗೆ ಸಹಾಯ ಮಾಡಿದವರು ಸಮತಾವಾದಿ (ಕಮ್ಯುನಿಸ್ಟ್) ಚರಿತ್ರೆಗಾರರಾಗಿದ್ದರು. ಅವರು, ಹಿಂದಿನದೆಲ್ಲಾ ಕಚಡಾ ಮತ್ತು ಅಷ್ಟೊಂದು ವೈಭವದ್ದಾಗಿರಲಿಲ್ಲವೆಂದು ಚಿತ್ರಿಸಲು ಬಯಸಿದ್ದರು. ನೀವು ಅವರ ತತ್ವಶಾಸ್ತ್ರವನ್ನು ಓದಿದರೆ, ಮುಂದಿರುವ ದಾರಿ ಸಮತಾವಾದ ಒಂದೇ ಎಂಬುದಾಗಿ ಅವರು ತೋರಿಸಿರುವುದು ಕಾಣಿಸುತ್ತದೆ. ಹೀಗಾಗಿ ಅವರು, ಶ್ರೀಕೃಷ್ಣ ಪರಮಾತ್ಮ, ಭಗವಾನ್ ಶ್ರೀರಾಮ, ಮೊದಲಾದಂತಹ ಭಾರತದ ಚರಿತ್ರೆಯ ಎಲ್ಲಾ ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಪೌರಾಣಿಕ ವ್ಯಕ್ತಿಗಳೆಂದು ಅನುಕೂಲಕರವಾಗಿ ಬದಿಗೆ ತಳ್ಳಿಹಾಕಿದರು. ಮಹಾನ್ ಮಹಾಭಾರತ ಯುದ್ಧವು ನಿಜವಾಗಿ ನಡೆದೇ ಇರಲಿಲ್ಲ ಮತ್ತು ಅದು ಕೇವಲ ಒಬ್ಬರ ಕಲ್ಪನೆಯ ಕಟ್ಟುಕಥೆ, ಕಾಲ್ಪನಿಕ ಕಥೆ ಎಂಬುದಾಗಿ ಸಹ ಅವರು ಹೇಳಿದರು. ಸುಮ್ಮನೇ ಊಹಿಸಿಕೊಳ್ಳಿ, ಯೇಸುಕ್ರಿಸ್ತನು ನೀರಿನ ಮೇಲೆ ನಡೆದನು ಅಥವಾ ಬ್ರೆಡ್ ಮತ್ತು ದ್ರಾಕ್ಷಾರಸವನ್ನು ಹಲವುಪಟ್ಟುಗಳಷ್ಟು ಹೆಚ್ಚಿಸಿದನು ಎಂದ ಕಾರಣಕ್ಕೆ ಮಾತ್ರ, ಇವುಗಳೆಲ್ಲಾ ಕಥೆಗಳು ಹಾಗೂ ಅವುಗಳು ನಿಜಕ್ಕೂ ಸಂಭವಿಸಲಿಲ್ಲ ಎಂದು ಅವರು ಹೇಳುತ್ತಾರೆ. ಯಾವುದಾದರೂ ಪವಾಡವನ್ನು ಹೆಕ್ಕಿ, ಅದು ’ತಾರ್ಕಿಕ’ವಾಗಿ ಕಾಣಿಸುವುದಿಲ್ಲವಾದುದರಿಂದ, ಅದು ಅರ್ಥವಾಗುವುದಿಲ್ಲವೆಂಬ ಕಾರಣದಿಂದ ಅದು ನಿಜಕ್ಕೂ ಸಂಭವಿಸಿಯೇ ಇಲ್ಲ ಎಂದು ಹೇಳುವುದಕ್ಕೆ ಇದು ಬಹಳ ಹೋಲಿಕೆಯಾಗುತ್ತದೆ.

ಹೀಗೆ ಕಮ್ಯುನಿಸ್ಟ್ ಚರಿತ್ರೆಗಾರರು ಭಾರತದ ಚರಿತ್ರೆಯಲ್ಲಿ ಇಂತಹ ರೀತಿಯ ವಿಕೃತಿಗಳನ್ನು ಪರಿಚಯಿಸಲು ತೊಡಗಿದರು. ಭಾರತವು ಅನಾಗರಿಕ ಹಾಗೂ ಅವಿದ್ಯಾವಂತ, ವಿಭಾಗಿಸಲ್ಪಟ್ಟ, ಹಲವಾರು ಮೂಢನಂಬಿಕೆಗಳನ್ನು ಹೊಂದಿರುವ, ಸಂಸ್ಕೃತಿಯೇ ಇಲ್ಲದ ಜನರ ಭೂಮಿಯೆಂಬುದು ಅವರ ತತ್ವವಾಗಿತ್ತು. ಇದು ಅವರ ದಾವೆಯಾಗಿತ್ತು ಮತ್ತು ಅವರು ಇದನ್ನು ಸಾಬೀತುಪಡಿಸಲು ಬಯಸಿದರು. ಇದು ಅತ್ಯಂತ ದುರದೃಷ್ಟಕರವಾಗಿದೆ.

ಅವರಿಗೆ ಸಂಸ್ಕೃತದ ಅ-ಆ-ಇ-ಈ ತಿಳಿಯದು. ಈ ದೇಶದ ಅಡಿಪಾಯವು ಸಂಸ್ಕೃತ ಭಾಷೆಯಾಗಿದೆ ಮತ್ತು ಒಂದು ಕಾಲಘಟ್ಟದಲ್ಲಿ ಇಡೀ ದೇಶವನ್ನು ಒಂದಾಗಿ ಜೋಡಿಸಿದುದು ಇದಾಗಿತ್ತು. ಈ ದೇಶದಲ್ಲಿನ ಪ್ರತಿಯೊಂದು ಇತರ ಭಾಷೆಯೂ ಸಂಸ್ಕೃತದಿಂದ ಉದ್ಭವವಾಗಿದೆ. ನಿಮಗೆ ಸಂಸ್ಕೃತ ತಿಳಿದಿಲ್ಲವಾದರೆ ಅಥವಾ ನಿಮಗೆ ಪಾಲಿ ಬರಹ ತಿಳಿದಿಲ್ಲವಾದರೆ, ನಿಮಗೆ ಈ ದೇಶದ ಚರಿತ್ರೆಯನ್ನು ತಿಳಿಯಲು ಸಾಧ್ಯವೇ ಇಲ್ಲ.

ಇದೇ ರೀತಿ ದಕ್ಷಿಣ ಭಾರತದ ಭಾಷೆಗಳು ಕೂಡಾ. ತಮಿಳು ಒಂದು ಬಹಳ ಪ್ರಧಾನವಾದ ಭಾಷೆಯಾಗಿದೆ. ಈ ಜನರಲ್ಲಿ (ಕಮ್ಯುನಿಸ್ಟ್) ಯಾರಿಗೂ ತಮಿಳು ಅಥವಾ ಮಲಯಾಳಂ ಅಥವಾ ತೆಲುಗು ಅಥವಾ ಕನ್ನಡ ಅಥವಾ ಸಂಸ್ಕೃತ ಕೂಡಾ ತಿಳಿದಿರಲಿಲ್ಲ. ಅವರಿಗೆ ಸ್ವಲ್ಪ ಇಂಗ್ಲಿಷ್ ಮತ್ತು ಸ್ವಲ್ಪ ಹಿಂದಿ ಮಾತ್ರ ಗೊತ್ತಿತ್ತು, ಅಷ್ಟೇ. ಆದರೂ ಅವರು ಭಾರತದ ಚರಿತ್ರೆಯ ಬಗ್ಗೆ ಸಂಪುಟಗಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವತ್ತು ಅವುಗಳು ಸಂಪೂರ್ಣವಾಗಿ ಅಪ್ರಚಲಿತ ಎಂದು ಸಾಬೀತಾಗಿವೆ. ಆ ಪುಸ್ತಕಗಳನ್ನು ಓದುವುದು ಸಂಪೂರ್ಣವಾಗಿ ಸಮಯವನ್ನು ವ್ಯರ್ಥಗೊಳಿಸುವುದಾಗಿದೆ. ಆದರೂ ಅವುಗಳು ಇನ್ನೂ ಹಲವಾರು ಗ್ರಂಥಾಲಯಗಳ ಕಪಾಟುಗಳನ್ನು ಆಕ್ರಮಿಸಿಕೊಂಡಿವೆ.  

ಸಂಪೂರ್ಣ ವಿಜಯನಗರ ಸಾಮ್ರಾಜ್ಯವು ಯಾವುದೇ ಯುದ್ಧವಿಲ್ಲದೆ ಹತ್ತು ನಿಮಿಷಗಳಲ್ಲಿ, ಸಾಧುಗಳ ಮತ್ತು ಸ್ವಾಮಿಗಳ ಮಾರುವೇಷದಲ್ಲಿದ್ದ ಕೆಲವು ವ್ಯಕ್ತಿಗಳಿಂದ ಜಯಿಸಲ್ಪಟ್ಟಿತು. ಇಂತಹ ಸಂಗತಿಗಳು ಹಿಂದೆ ಸಂಭವಿಸಿವೆ. ಆದರೆ ಈ ಕಾರಣದಿಂದಾಗಿ, ಈ ದೇಶದಲ್ಲಿನ್ನು ಒಳ್ಳೆಯ ಜನರಿಲ್ಲ ಅಥವಾ ಈ ದೇಶದಲ್ಲಿ ಯಾವುದೇ ಸಂತರಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ.

ಪಟ್ಟಭದ್ರ ಹಿತಾಸಕ್ತಿಗಳಿದ್ದ ಜನರಿಂದ ಸಂತ ಕಬೀರ್ ದಾಸನು ದೂಷಿಸಲ್ಪಟ್ಟನು. ಯೇಸು ಕ್ರಿಸ್ತನನ್ನು ಕೂಡಾ ಹಿಂಸಿಸಲಾಯಿತು ಮತ್ತು ದೂಷಿಸಲಾಯಿತು. ಭಗವಾನ್ ಬುದ್ಧನು, ತನ್ನ ವಿರುದ್ಧ ತಿರುಗಿ ನಿಂತ ತನ್ನದೇ ಸೋದರ ಸಂಬಂಧಿಯಿಂದ ಹಿಂಸಿಸಲ್ಪಟ್ಟನು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ವಾಸ್ತವ ತಿಳಿದಿರಲಿಲ್ಲ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ)

ಭಗವಾನ್ ಬುದ್ಧನು ಧ್ಯಾನವನ್ನು ಕಲಿಸುತ್ತಿದ್ದನು ಮತ್ತು ಅವನ ನಿಕಟ ಶಿಷ್ಯನೂ ಆಗಿದ್ದ ಅವನ ಸ್ವಂತ ಸೋದರ ಸಂಬಂಧಿಯು ಬುದ್ಧನ ಮೇಲೆ ಬಹಳ ಅಸೂಯೆಪಟ್ಟನು. ಅವನ ಮೆದುಳಿನಲ್ಲೇನಾಯಿತು ಎಂಬುದು ನನಗೆ ತಿಳಿಯದು. ಬಹುಶಃ ಅವನ ಸರ್ಕ್ಯೂಟ್‌ಗಳಲ್ಲಿ (ಮೆದುಳು) ಯಾವುದೋ ಹಾನಿ ಸಂಭವಿಸಿರಬೇಕು!

ಹೀಗಾಗಿ ಅವನು ಭಗವಾನ್ ಬುದ್ಧನು ಕುಳಿತುಕೊಂಡು ಧ್ಯಾನವನ್ನು ಕಲಿಸುತ್ತಿದ್ದ ಜಾಗದ ಹಿಂದಿನ ಬೆಟ್ಟದ ತುದಿಗೆ ಹೋದನು. ಬೆಟ್ಟದ ತುದಿಯಲ್ಲಿ ಒಂದು ಬೃಹತ್ತಾದ ಬಂಡೆಕಲ್ಲಿತ್ತು, ಮತ್ತು ತನ್ನ ಅನುಯಾಯಿಗಳಲ್ಲಿ ಕೆಲವರೊಂದಿಗೆ ಅವನು ದೊಡ್ಡ ಬಂಡೆಕಲ್ಲನ್ನು ಬುದ್ಧನ ದಿಕ್ಕಿನಲ್ಲಿ ತಳ್ಳಿದನು. ಬುದ್ಧನು ಕುಳಿತಲ್ಲಿಂದ ಅವನ ತಲೆಯು ಬಂಡೆಕಲ್ಲಿನಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿತು. ಇದರ ಹೊರತಾಗಿಯೂ, ಭಗವಾನ್ ಬುದ್ಧನು ಇದೆಲ್ಲದರಿಂದ ಅವಿಚಲಿತನಾಗಿ ಕುಳಿತನು. ಅಲ್ಲಿ ಕುಳಿತಿದ್ದ ಇತರ ಎಲ್ಲಾ ಭಕ್ತರು ಮತ್ತು ಶಿಷ್ಯರು ಇದನ್ನು ನೋಡಿ ವಿಚಲಿತರಾದರು ಮತ್ತು ಗಾಬರಿಗೊಂಡರು. ಭಗವಾನ್ ಬುದ್ಧನು ಆಳವಾದ ಕರುಣೆಯಿಂದ ಸುಮ್ಮನೇ ಮುಗುಳ್ನಕ್ಕನು. "ಪಾಪ, ಈ ವ್ಯಕ್ತಿಯ (ಇದನ್ನು ಮಾಡಿದ) ಒಳಗೆ ಬಹಳಷ್ಟು ನೋವು ಮತ್ತು ದುಃಖಗಳಿವೆ" ಎಂದು ಅವನು ಹೇಳಿದನು.

ಪ್ರಶ್ನೆ: ಪ್ರೀತಿಯ ಗುರುದೇವ, ಪರಮ ಶಾಂತಿ ಮತ್ತು ಸಂತೋಷದ ಕಡೆಗೆ ಕೊಂಡೊಯ್ಯುವ ಪಥ ಇದೊಂದೇ?

ಶ್ರೀ ಶ್ರೀ ರವಿ ಶಂಕರ್: ನಿನ್ನ ಬಾಯಾರಿಕೆಯನ್ನು ಇಂಗಿಸಲು ನೀರೊಂದೇ ಉತ್ತರವೇ ಎಂದು ನೀನು ನನ್ನಲ್ಲಿ ಕೇಳಿದರೆ, ನಾನೇನು ಹೇಳಲು ಸಾಧ್ಯ? ಶ್ವಾಸಕೋಶಗಳನ್ನು ತುಂಬಿಸಲಿರುವ ಮಾರ್ಗ ಉಸಿರಾಟ ಮಾತ್ರವೇ ಎಂದು ನೀನು ನನ್ನಲ್ಲಿ ಕೇಳಿದರೆ ನಾನೇನು ಹೇಳಲು ಸಾಧ್ಯ? ನಿನ್ನನ್ನು ಆಂತರಿಕ ಶಾಂತಿಗೆ, ಸಮಚಿತ್ತತೆಗೆ, ಆನಂದ ಮತ್ತು ಪ್ರೇಮಕ್ಕೆ ಕೊಂಡೊಯ್ಯುವ ಯಾವುದೇ ಪಥವಾದರೂ ಅದು ಸರಿ. ಎಲ್ಲಾ ಪಥಗಳೂ ಮೂಲಭೂತವಾಗಿ ಒಂದೇ. ವಿಧಾನಗಳು ಹಲವಾರು ಇರಲೂಬಹುದು.

ಒಬ್ಬರು ನಿಮಗೆ, "ಪ್ರಾಣಾಯಾಮವನ್ನು ಹೀಗೆ ಮಾಡಿ" ಎಂದು ಹೇಳಿಕೊಡಬಹುದು. ಇನ್ನೊಬ್ಬರು ನಿಮಗೆ, "ಪ್ರಾಣಾಯಾಮವನ್ನು ಹೀಗೆ ಮಾಡಿ" ಎಂದು ಒಂದು ವಿಭಿನ್ನವಾದ ರೀತಿಯಲ್ಲಿ ಹೇಳಿಕೊಡಬಹುದು. ಒಬ್ಬರು ನಿಮ್ಮಲ್ಲಿ ಅದನ್ನು ಮಾಡದೇ ಇರಲು ಕೂಡಾ ಹೇಳಬಹುದು. ಹೀಗೆ ಹಲವಾರು ವಿಭಿನ್ನ ವಿಧಾನಗಳಿವೆ. ಇಷ್ಟು ವರ್ಷಗಳಲ್ಲಿ ನಾವು ನೋಡಿದುದೇನೆಂದರೆ, ಈ ವಿಧಾನಗಳು (ಆರ್ಟ್ ಆಫ್ ಲಿವಿಂಗ್‌ನಿಂದ ಕಲಿಸಲಾಗುವ) ಈ ಕಾಲಕ್ಕೆ, ನಮ್ಮ ಪೀಳಿಗೆಗೆ ಮತ್ತು ಜನರಿಗೆ ಸೂಕ್ತವಾದವು  ಎಂಬುದಾಗಿ. ಇದೊಂದು ಕಾಲದ ಪರೀಕ್ಷೆಗೆ ಒಳಪಟ್ಟ ವಿಷಯ ಮತ್ತು ಪ್ರತಿಯೊಬ್ಬರಿಗೂ ಇದು ಹಿತಕರವಾಗಿದೆ.

ನೋಡಿ, ಹಿಂದಿನ ಕಾಲದಲ್ಲಿ ಜನರಿಗೆ ಮಾಡುವುದಕ್ಕೆ ಹೆಚ್ಚೇನೂ ಇರಲಿಲ್ಲ. ಅವರು ಬೀಜಗಳನ್ನು ಹೊಲದಲ್ಲಿ ಎಸೆಯುತ್ತಿದ್ದರು ಮತ್ತು ಅವುಗಳು ಬೆಳೆಯುವುದನ್ನು ನೋಡಲು ಸುಮ್ಮನೇ ಕುಳಿತುಕೊಳ್ಳುತ್ತಿದ್ದರು. ಪಕ್ಷಿಗಳು ತಮ್ಮ ಬೆಳೆಯನ್ನು ನಾಶಪಡಿಸುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಅವರು ನೋಡಿಕೊಂಡು ಇರುತ್ತಿದ್ದರು. ಹೀಗೆ ಅವರಲ್ಲಿ ಸಮಯವಿತ್ತು, ಮತ್ತು ಅವರಿಗೆ ಎಂಟು ಗಂಟೆಗಳ ಕಾಲವೆಷ್ಟೋ ಧ್ಯಾನ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಪ್ರತಿದಿನವೂ ಎಂಟು ಗಂಟೆಗಳವರೆಗೆ ನೀವು ಧ್ಯಾನ ಮಾಡಬೇಕಾದ ಅಗತ್ಯವಿಲ್ಲ. ಪ್ರತಿದಿನವೂ ಹತ್ತು ನಿಮಿಷಗಳ ಕಾಲ ಕೇವಲ ಸುದರ್ಶನ ಕ್ರಿಯೆಯನ್ನು ಮಾಡಿ, ಅದು ಒಳ್ಳೆಯದು.

ಕೆಲವು ಜನರು ಹತ್ತು ದಿನಗಳವರೆಗಿನ ವಿಪಾಸನ ಧ್ಯಾನ ಶಿಬಿರಕ್ಕೆ ಹೋಗುತ್ತಾರೆ. ಅಲ್ಲಿ ಅವರು ಹತ್ತು ದಿನಗಳವರೆಗೆ ಉಸಿರಾಟವನ್ನು ಗಮನಿಸುತ್ತಾರೆ, ಮತ್ತು ನಂತರ ಅಂತಿಮವಾಗಿ ಹತ್ತು ದಿನಗಳ ಕೊನೆಯಲ್ಲಿ, ಅವರಿಗೆ ಶರೀರದಲ್ಲಿ ಸ್ವಲ್ಪ ಸಂವೇದನೆಗಳ ಅನುಭವವಾಗುತ್ತದೆ. ಅದೇ ಸಂವೇದನೆಗಳನ್ನು ನೀವು, ಆ ಹತ್ತು ನಿಮಿಷಗಳ ಸುದರ್ಶನ ಕ್ರಿಯೆ ಮಾಡುವಿಕೆಯಲ್ಲಿ ಕೂಡಾ ಅನುಭವಿಸಬಹುದು. ನಿಮ್ಮ ಶರೀರದಲ್ಲಿ ಸಂವೇದನೆಯಿದೆ ಎಂಬುದನ್ನು ಅಥವಾ ನಿಮ್ಮ ಶರೀರವು ಟೊಳ್ಳು ಮತ್ತು ಖಾಲಿಯಾಗಿದೆ ಎಂಬುದನ್ನು ಕಂಡುಹಿಡಿಯಲು ನೀವು ಎಂಟರಿಂದ ಹತ್ತು ದಿನಗಳವರೆಗೆ ಕುಳಿತುಕೊಳ್ಳಲು ಬಯಸುವಿರೇ ಎಂಬ ಆಯ್ಕೆ ನಿಮಗೆ ಬಿಟ್ಟದ್ದು. ಅದು ಕೆಟ್ಟದು ಅಥವಾ ಆ ರೀತಿಯದ್ದೇನೋ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ಮೌಲ್ಯವಿದೆ.  

ನಾಲ್ಕು ಅಥವಾ ಐದು ದಿನಗಳ ಉನ್ನತ ಧ್ಯಾನ ಶಿಬಿರದಲ್ಲಿ ನೀವು ಮೌನವನ್ನು ಪಾಲಿಸಿ, ವಿವಿಧ ಧ್ಯಾನಗಳನ್ನು ಮಾಡಿ, ನಂತರ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡಲು ಎದ್ದುನಿಂತಾಗ, ಅದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಶರೀರಕ್ಕೆ ಚೈತನ್ಯವನ್ನು ನೀಡುತ್ತದೆ. ಅದರೊಂದಿಗೆಯೇ ಅದು ಅನುಭವಗಳನ್ನು ಕೂಡಾ ತರುತ್ತದೆ.

ಅದೃಷ್ಟವಶಾತ್ ದಿ ಆರ್ಟ್ ಆಫ್ ಲಿವಿಂಗ್‌ನಲ್ಲಿ, ನಮಗೆ ಎಲ್ಲಾ ದಾರಿಗಳೂ ತೆರೆದಿವೆ (ಒಬ್ಬರು ಒಳಕ್ಕೆ ಆಳವಾಗಿ ಹೋಗಲು). ನಮ್ಮಲ್ಲಿ ಜ್ಞಾನವಿದೆ, ನಾರದ ಭಕ್ತಿ ಸೂತ್ರಗಳಲ್ಲಿ (ಪ್ರೇಮದ ಸೂತ್ರಗಳ ಬಗ್ಗೆ ನಾರದ ಮಹರ್ಷಿಗಳ ವ್ಯಾಖ್ಯಾನ) ನಾವು ಭಕ್ತಿಯ ಅಂಶವನ್ನು ಹೊಂದಿದ್ದೇವೆ; ಮತ್ತೆ ಅಷ್ಟಾವಕ್ರ ಗೀತೆಯಲ್ಲಿ ನಮಗೆ ಬೌದ್ಧಿಕ ವಿಚಾರಣೆ ಮತ್ತು ಉತ್ತೇಜಕಗಳಿವೆ. ಪತಂಜಲಿ ಯೋಗ ಸೂತ್ರಗಳ ಮೂಲಕ ನಮ್ಮಲ್ಲಿ ಯೋಗದ ಜ್ಞಾನವಿದೆ. ಹೀಗೆ ಎಲ್ಲಾ ಮಗ್ಗಲುಗಳಿಂದಲೂ ಇದು ಸಂಪೂರ್ಣವಾಗಿದೆ; ನಮ್ಮ ಅರಿವಿಗಾಗಿ, ನಮ್ಮ ಯೋಗಕ್ಷೇಮಕ್ಕಾಗಿ ಮತ್ತು ಇದು ಬಹಳ ವೈಜ್ಞಾನಿಕವೂ ಆಗಿದೆ.

ನಾವೊಂದು ವೈಜ್ಞಾನಿಕ ರೀತಿಯಲ್ಲಿ ಮುಂದುವರಿಯಬೇಕು ಮತ್ತು ಕುರುಡು ನಂಬಿಕೆಗಳ ಮೂಲಕವಲ್ಲ ಎಂಬುದು ನನ್ನ ನಂಬಿಕೆ. ಅದು ಆರ್ಟ್ ಆಫ್ ಲಿವಿಂಗ್‌ನ ವಿಶೇಷತೆಯಾಗಿದೆ. ಜನರು ಸಾಮಾನ್ಯವಾಗಿ ಉಪವಾಸ ಮಾಡುವುದರ ಬಗ್ಗೆ ಯಾವುದೇ ವೈಜ್ಞಾನಿಕ ತಿಳುವಳಿಕೆಯಿಲ್ಲದೆಯೇ ಉಪವಾಸ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಹಗಲಿಡೀ ಉಪವಾಸ ಮಾಡುತ್ತಾರೆ ಮತ್ತು ನಂತರ ರಾತ್ರಿ ಗಡದ್ದಾಗಿ ಭೋಜನ ಮಾಡುತ್ತಾರೆ. ಅಥವಾ ಅವರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ಕರಿದ ತಿಂಡಿಗಳನ್ನು ತಿನ್ನುವುದರ ಮೂಲಕ ಅದನ್ನು ಮುರಿಯುತ್ತಾರೆ.

ನವರಾತ್ರಿಯ ಸಮಯದಲ್ಲಿ ಹಲವಾರು ಹಿಂದೂಗಳು ಸಾಮಾನ್ಯವಾಗಿ ಉಪವಾಸ ಮಾಡುತ್ತಾರೆ ಮತ್ತು ಕೇವಲ ಕರಿದ ಆಲೂಗಡ್ಡೆ (ಚಿಪ್ಸ್ ಅಥವಾ ವೇಫರ್‌ಗಳು), ಸಿಹಿತಿಂಡಿಗಳು, ಮೊದಲಾದವನ್ನು ಮಾತ್ರ ತಿನ್ನುತ್ತಾರೆ. ಸಿಹಿತಿಂಡಿಗಳನ್ನು ತಿನ್ನುವುದಾದರೂ ಪರವಾಗಿಲ್ಲ, ಆದರೆ ಉಪವಾಸದ ಸಮಯದಲ್ಲಿ ಕರಿದ ಆಲೂಗಡ್ಡೆಯನ್ನು ತಿನ್ನುವುದು ಒಳ್ಳೆಯದಲ್ಲ. ದಕ್ಷಿಣ ಭಾರತದಲ್ಲಿ, ಇಡ್ಲಿಗಳನ್ನು ತಿನ್ನಬಹುದು, ಆದರೆ ಅನ್ನವಲ್ಲ ಎಂದು ಜನರು ಹೇಳುತ್ತಾರೆ. ಅವಲಕ್ಕಿಯನ್ನು ತಿನ್ನಬಹುದು, ಆದರೆ ಅವರು ಅದರೊಂದಿಗೆ ಇತರ ಆಹಾರಗಳನ್ನು ಕೂಡಾ ತಿನ್ನುತ್ತಾರೆ. ಇದು ಉಪವಾಸ ಮಾಡುವ ತಪ್ಪಾದ ವಿಧಾನವಾಗಿದೆ.
ಮುಸ್ಲಿಮರು ಕೂಡಾ ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ನಂತರ ಸಂಜೆ ಉಪವಾಸವನ್ನು ಮುರಿಯುವ ಸಮಯದಲ್ಲಿ ಅವರು ಬಹಳಷ್ಟು ತಿನ್ನುತ್ತಾರೆ. ಅದು ಬಹಳ ದೈಹಿಕ ಆಘಾತವನ್ನುಂಟುಮಾಡುತ್ತದೆ ಮತ್ತು ಇದು ಉಪವಾಸ ಮಾಡುವ ಒಂದು ಬಹಳ ಅವೈಜ್ಞಾನಿಕ ವಿಧಾನವಾಗಿದೆ. ಇಲ್ಲಿ ನಾವು ಯಾವತ್ತೂ ವಿಜ್ಞಾನವನ್ನು ಅನುಸರಿಸಬೇಕು. ಉಪವಾಸ ಮಾಡುವುದು ಒಳ್ಳೆಯದು, ಆದರೆ ನೀವು ಅದನ್ನು ಮಾಡುವ ಒಂದು ವೈಜ್ಞಾನಿಕ ಮಾರ್ಗವನ್ನು ಅನುಸರಿಸಬೇಕು. ಉಪವಾಸದ ಸಮಯದಲ್ಲಿ ಹಣ್ಣಿನ ರಸಗಳನ್ನು ಮತ್ತು ಹಣ್ಣುಗಳನ್ನು ತಿನ್ನಿ. ನೀವು ನಿಮ್ಮ ಉಪವಾಸದಿಂದ ಹೊರಬರಬೇಕಾದಾಗ, ಬಹಳ ಮೆತ್ತಗೆ ನೀವು ಅದರಿಂದ ಹೊರಬರಬೇಕು (ಅಂದರೆ, ಉಪವಾಸದ ಮೂಲಕ ಶುದ್ಧೀಕರಣಗೊಂಡ ಶರೀರಕ್ಕೆ ಭಾರವಾಗದಂತೆ). ಆಗ ಅದು ಶರೀರ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು.

ಪ್ರಶ್ನೆ: ಗುರುದೇವ, ನಿನ್ನೆ ನೀವು, ಭಗವಾನ್ ಬುದ್ಧನ ಜನ್ಮಸ್ಥಳ ಭಾರತವಾದುದರಿಂದ ಬೌದ್ಧ ದೇಶಗಳನ್ನು ಭಾರತದಲ್ಲಿ ಒಟ್ಟುಸೇರಿಸಲು ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡಿದಿರಿ. ಇವತ್ತಿಗೂ ಇದು ಸಾಧ್ಯವಿದೆಯೇ ಮತ್ತು ಅದನ್ನು ಯಾರಿಂದ ಮಾಡಲು ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಒಟ್ಟುಸೇರಬೇಕು ಎಂದು ನನಗನ್ನಿಸುತ್ತದೆ. ಅದನ್ನೇ ನಾವು ದಿ ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಾಡುತ್ತಿರುವುದು. ಒಂದು ಏಕ ಪ್ರಪಂಚ ಕುಟುಂಬ ಆಗಿ ನಾವು ಎಲ್ಲರನ್ನೂ ಒಂದುಗೂಡಿಸುತ್ತಿದ್ದೇವೆ. ಅದಕ್ಕಾಗಿಯೇ ’ವಸುಧೈವ ಕುಟುಂಬಕಮ್’ (ಎಲ್ಲರೂ ಒಂದು ಕುಟುಂಬ ಮತ್ತು ಒಬ್ಬರು ದೇವರಿಗೆ ಸೇರಿದವರು) ಎಂದು ಹೇಳಲಾಗಿರುವುದು. ವಾಯುವಿಗೆ ಯಾವುದೇ ಸೀಮೆಗಳಿಲ್ಲ, ಸೂರ್ಯನಿಗೆ ಯಾವುದೇ ಸೀಮೆಗಳಿಲ್ಲ. ವಾಸ್ತವವಾಗಿ ಭೂಮಿಯ ಮೇಲೆ ಯಾವುದೇ ಸೀಮೆಯಿಲ್ಲ. ಅವುಗಳೆಲ್ಲವೂ ಬೇರೆ ಬೇರೆ ಜನರ ನಡುವೆ ಮಾನವನು ಮಾಡಿದ ವಿಭಜನೆಗಳಾಗಿವೆ. ಇಡೀ ಪ್ರಪಂಚವು ಒಂದು ಮಾನವಕುಲವಾಗಿ, ಆಧ್ಯಾತ್ಮಿಕತೆಯ ಉತ್ಸಾಹದಲ್ಲಿ ಒಂದಾಗುವುದರ ಕನಸನ್ನು ನಾವು ಕಾಣಬೇಕು. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು ಈ ಕಲ್ಪನೆಯೊಂದಿಗೆ ಸ್ಥಾಪಿಸಲ್ಪಟ್ಟಿತು, ಆದರೆ ದುರದೃಷ್ಟವಶಾತ್ ಅಲ್ಲಿ ಆಧ್ಯಾತ್ಮಿಕ ಅಂಶದ ಕೊರತೆಯಿಂದಾಗಿ, ಅದಕ್ಕೆ ಯಶಸ್ಸು ಸಿಗಲಿಲ್ಲ.

ಪ್ರಶ್ನೆ: ಗುರುದೇವ, ನಮ್ಮ ಶರೀರದಲ್ಲಿರುವ ನಿಜವಾದ ಪದಾರ್ಥವನ್ನು ಒಂದು ಬೆಂಕಿಪೆಟ್ಟಿಗೆಯಲ್ಲಿ ತುಂಬಬಹುದು ಮತ್ತು ಉಳಿದುದು ಕೇವಲ ಖಾಲಿ ಜಾಗ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ನೀವು ದಯವಿಟ್ಟು ತೇಲುವಿಕೆಯ ವಿದ್ಯಮಾನಗಳ ಬಗ್ಗೆ ವಿವರಿಸಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ನೀನು ಎದ್ದು ನಿಲ್ಲಲು ಬಯಸುವಾಗ, ನೀನೇನು ಮಾಡುವೆ? ನಿನ್ನ ಸಂಪೂರ್ಣ ಶರೀರವು ನೆಲದ ಮೇಲಿದೆ. "ಸರಿ, ಈಗ ಎದ್ದುನಿಲ್ಲು" ಎಂದು ನಿನ್ನ ಮನಸ್ಸು ಶರೀರಕ್ಕೆ ಹೇಳುವಾಗ, ೬೫ ರಿಂದ ೭೦ ಕಿಲೋಗಳ ಈ ಸಂಪೂರ್ಣ ಭಾರವು ಎದ್ದುನಿಲ್ಲುತ್ತದೆ ಮತ್ತು ನಡೆಯಲು ತೊಡಗುತ್ತದೆ. ನೀನು ನಿನ್ನ ಕಾಲ್ಬೆರಳುಗಳ ಆಧಾರವನ್ನು ಪಡೆಯುವೆ ಮತ್ತು ನಿನ್ನ ಕಾಲ್ಬೆರಳುಗಳ ಆಧಾರವನ್ನು ಪಡೆದು ನಡೆಯುವೆ. ನಿನ್ನ ಶರೀರವು ಮೇಲಕ್ಕೆ ಎತ್ತಲ್ಪಡುವುದು ಹಾಗೆ. ಹಾಗಾದರೆ ಅದು ಸಂಭವಿಸುತ್ತಿರುವುದು ಹೇಗೆ? ಅದೆಲ್ಲವೂ ಮನಸ್ಸಿನಲ್ಲಿ, ಪ್ರಜ್ಞೆಯಲ್ಲಿ ಒಂದು ಏಕೈಕ ಯೋಚನೆಯೊಂದಿಗೆ ಪ್ರಾರಂಭವಾಗುತ್ತದೆ.
ಹೀಗಾಗಿ ಮನಸ್ಸು ಬಹಳ ಸುಸಂಬದ್ಧವಾದಾಗ, ಅದು ಶರೀರವನ್ನು ಒಂದು ಏಕೈಕ ಯೋಚನೆಯಿಂದ ಎತ್ತಬಲ್ಲದು. ಆದರೆ ನಾನು ನಿನಗೆ ಹೇಳುತ್ತೇನೆ ಕೇಳು, ತೇಲಿಕೊಂಡು ತಮ್ಮ ಶರೀರವನ್ನು ಗಾಳಿಯಲ್ಲಿ ತೂಗುಹಾಕಿದ ಯಾರನ್ನೂ ನಾನು ನೋಡಿಲ್ಲ. ಹೌದು, ಶರೀರವು ನೆಲದಿಂದ ಮೇಲೆತ್ತಲ್ಪಡುತ್ತದೆ. ಹಲವು ಜನರಿಗೆ ಇಷ್ಟರಮಟ್ಟಿಗೆ ಅನುಭವವಾಗಿದೆ. ಆದರೆ ಗಾಳಿಯಲ್ಲಿ ತೇಲಲು ತೊಡಗಿದ ಯಾರನ್ನೂ ನಾನು ನೋಡಿಲ್ಲ. 

ಶುಕ್ರವಾರ, ನವೆಂಬರ್ 29, 2013

ಹೊರಲಾರದ ಹೊರೆ ಹೊರುವಂತೆ ಪ್ರಕೃತಿ ಪ್ರೇರಿಸದು

ನವೆಂಬರ್ ೨೯, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ದೇವರಿಂದಾಗಿ ನೊಂದರೆ ಅವನು ಎಲ್ಲಿಗೆ ಹೋಗುವುದು?

ಶ್ರೀ ಶ್ರೀ ರವಿ ಶಂಕರ್: ಹೋಗಲು ಯಾವ ಜಾಗವೂ ಇಲ್ಲ! ದೇವರು ನಿಮ್ಮನ್ನು ನೋಯಿಸುವುದು ಅಸಾಧ್ಯ!

ಕನ್ನಡದಲ್ಲಿ ಒಂದು ಸುಂದರವಾದ ದ್ವಿಪದಿಯಿದೆ. ಅದನ್ನು ನಾವು ಶಾಲೆಯಲ್ಲಿ ಕಲಿಯುತ್ತಿದ್ದೆವು. ಅದು ಹೀಗೆಂದು ಹೇಳುತ್ತದೆ, ನೀವು ಕಬ್ಬನ್ನು ಹೆಚ್ಚು ಹಿಂಡಿದಷ್ಟೂ ಹೊರಬರುವ ರಸವು ಹೆಚ್ಚು ಸಿಹಿಯಾಗಿರುತ್ತದೆ. ನೀವೊಂದು ವಜ್ರವನ್ನು ಹೆಚ್ಚು ತುಂಡರಿಸಿದಷ್ಟೂ, ಅದು ಹೆಚ್ಚು ಹೊಳೆಯುತ್ತದೆ. ಚಿನ್ನವನ್ನು ಹೆಚ್ಚು ಬಡಿದು ಬೆಂಕಿಯಲ್ಲಿ ಹಾಕಿದಷ್ಟೂ, ಅದು ಹೆಚ್ಚು ಹೊಳೆಯುತ್ತದೆ. ಗಂಧವನ್ನು ನೀವು ಹೆಚ್ಚು ತೇದಷ್ಟೂ, ಅದರ ಸುವಾಸನೆಯು ಹೆಚ್ಚು ಹರಡುತ್ತದೆ.

ಪ್ರಕೃತಿಯು ನಿಮ್ಮನ್ನು ವಿವಿಧ ಕಾರ್ಯಗಳು ಮತ್ತು ಪರೀಕ್ಷೆಗಳಿಗೆ ಒಡ್ಡುತ್ತದೆ, ಮತ್ತು ನೀವು ಅದೆಲ್ಲದರಿಂದ ಹೊಳೆಯುತ್ತಾ ಹೊರಬರುತ್ತೀರಿ. ನಿಮಗೆ ಹೊರಲು ಸಾಧ್ಯವಿಲ್ಲದ ಭಾರವನ್ನು ಪ್ರಕೃತಿಯು ನಿಮಗೆ ನೀಡದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ಒಂದು ಪ್ರಾಣಿಯು ತನ್ನ ಬಾಲವನ್ನು ಸುಲಭವಾಗಿ ಅಲ್ಲಾಡಿಸಲು ಸಾಧ್ಯವಾಗಲೆಂದು, ದೇವರು ಮೊದಲು ಬಾಲವನ್ನು ಅಳತೆ ಮಾಡುತ್ತಾನೆ ಮತ್ತು ನಂತರ ಅದನ್ನು ಪ್ರಾಣಿಯ ಮೇಲೆ ಇಡುತ್ತಾನೆ. ಒಂದು ಇಲಿಗೆ ಒಂದು ಆನೆಯ ಬಾಲವಿದ್ದರೆ ಹೇಗಿರುತ್ತದೆಯೆಂದು ಸುಮ್ಮನೇ ಊಹಿಸಿ, ಅದನ್ನು ಎತ್ತಲೂ ಕೂಡಾ ಅದಕ್ಕೆ ಸಾಧ್ಯವಿಲ್ಲ!

ಪ್ರಕೃತಿಯು ಬಹಳ ಬುದ್ಧಿಶಾಲಿಯಾಗಿದೆ. ನಿಮಗೆ ನಿರ್ವಹಿಸಲು ಸಾಧ್ಯವಿರುವ ಸಮಸ್ಯೆಯನ್ನು ಮಾತ್ರ ಅದು ನಿಮಗೆ ನೀಡುತ್ತದೆ.

ಪ್ರಶ್ನೆ: ಗುರುದೇವ, ನಾನು ಮಾತನಾಡಲು ಸಾಧ್ಯವಿಲ್ಲದಿರುವಂತಹ ಒಂದು ರಹಸ್ಯವು ನನ್ನಲ್ಲಿ ಆಳವಾಗಿ ಬೇರೂರಿದೆ. ನಾನದನ್ನು ಹೇಳಿದರೆ, ನಾನು ಎಲ್ಲವನ್ನು ಮತ್ತು ಎಲ್ಲರನ್ನು ಕಳೆದುಕೊಳ್ಳುವೆನು. ನಾನೊಂದು ಐಹಿಕ ಪ್ರಪಂಚದಲ್ಲಿರುವೆನು, ಸಂಪೂರ್ಣವಾಗಿ ಶರಣಾಗತನಾಗಲು ನನಗೆ ಸಾಧ್ಯವಿಲ್ಲ ಮತ್ತು ನಾನು ಸೋಲಿನ ಬಗ್ಗೆ ಭಯಭೀತನಾಗಿರುವೆನು. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನೀನು ಪರಿಣಾಮಗಳನ್ನು ನೋಡು, ಹಾಗಾದರೆ ಅದರಿಂದ ಏನೂ ಸಿಗುವುದಿಲ್ಲವೆಂದರೆ ನೀನೇಕೆ ಅದನ್ನು ಮಾಡುವೆ?

ತಪ್ಪೊಪ್ಪಿಕೊಳ್ಳುವಿಕೆ ಎಂದು ಕರೆಯಲ್ಪಡುವುದೊಂದಿದೆ. ಈಗ, ನೀನು ಯಾರು ಯಾರಲ್ಲಿಗೋ ಹೋಗಿ ತಪ್ಪೊಪ್ಪಿಕೊಳ್ಳಲು ಸಾಧ್ಯವಿಲ್ಲ, ಆದರೆ ವಿಷಯಗಳನ್ನು ರಹಸ್ಯವಾಗಿ ಇಟ್ಟುಕೊಳ್ಳುವ ಒಬ್ಬ ಜ್ಞಾನಿಯಲ್ಲಿ ನೀನು ತಪ್ಪೊಪ್ಪಿಕೊಳ್ಳಬಹುದು. ಇದನ್ನು ಇಗರ್ಜಿಗಳಲ್ಲಿ ಕೂಡಾ ನಡೆಸಲಾಗುತ್ತದೆ; ಚರ್ಚಿನಲ್ಲಿ ಒಂದು ಜಾಗವಿರುತ್ತದೆ, ಅಲ್ಲಿಗೆ ಹೋಗಿ ನೀವು ತಪ್ಪೊಪ್ಪಿಕೆಗಳನ್ನು ಮಾಡಬಹುದು, ತನ್ನೊಂದಿಗೆ ಯಾರು ಮಾತನಾಡುತ್ತಿರುವರೆಂಬುದನ್ನು ಪಾದ್ರಿ ಕೂಡಾ ನೋಡುವುದಿಲ್ಲ. ನೀವು ಹೋಗಿ ತಪ್ಪೊಪ್ಪಿಕೊಂಡಾಗ, ಆ ಒಂದು ಚಿಕ್ಕ ಕಿಟಿಕಿಯಿಂದ ಪಾದ್ರಿಯು ನಿಮಗೊಂದು ಪರಿಹಾರವನ್ನು ಕೊಡುತ್ತಾರೆ, ಇದರಿಂದ ನಿಮ್ಮ ಉತ್ಸಾಹ ಹೆಚ್ಚುವುದು.

ಅದಕ್ಕಾಗಿಯೇ ನೀನು ಇಲ್ಲಿರುವುದು ಕೂಡಾ; ಟೊಳ್ಳು ಮತ್ತು ಖಾಲಿಯಾಗಲು. ನೀನು ನಿನ್ನ ಸಮಸ್ಯೆಯನ್ನು ಬರೆದು ಬುಟ್ಟಿಯಲ್ಲಿ ಹಾಕು ಮತ್ತು ಮುಕ್ತನಾಗು.

ಹಿಂದೆ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದರೂ, ಅದು ಮುಗಿಯಿತು, ಅದು ಹೋಗಿದೆ. ನೀನು ಯಾಕೆ ಅದಕ್ಕೆ ಜೋತುಬಿದ್ದು ನಿನ್ನ ವರ್ತಮಾನ ಮತ್ತು ಭವಿಷ್ಯವನ್ನು ದುಃಖಕರವಾಗಿಸುವೆ? ಹಾಗಾಗಿ ಬರೆ ಮತ್ತು ಹೋಗಲು ಬಿಡು!

ಅದನ್ನು ಹೇಳುವುದರಿಂದ ಏನಾದರೂ ಲಾಭವಿದೆಯೆಂದು ನಿನಗನ್ನಿಸಿದರೆ ಅಥವಾ ಹೇಳದಿರುವುದರಿಂದ ಅದು ಇತರ ಮುಗ್ಧ ಜನರಿಗೆ ತೊಂದರೆಯನ್ನುಂಟುಮಾಡುವುದು ಎಂದು ನಿನಗನ್ನಿಸಿದರೆ, ಆಗ ಅವರೊಂದು ಬಲೆಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕಾಗಿ, ಇತರರ ಕಡೆಗೆ ಕರುಣೆಯೊಂದಿಗೆ ಮಾತನಾಡು. ಆದರೆ ಅದನ್ನು ಹೇಳುವುದು ಯಾರಿಗೂ ಒಳ್ಳೆಯದಲ್ಲವಾಗಿದ್ದರೆ, ಆಗ ಅಂತಹ ವಿಷಯಗಳನ್ನೆತ್ತಿ, ಅದನ್ನೇ ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಒಬ್ಬ ಜ್ಞಾನಿಯಲ್ಲಿ ತಪ್ಪೊಪ್ಪಿಕೋ, ಕೇವಲ ಒಬ್ಬ ವ್ಯಕ್ತಿಯಲ್ಲಿ; ಅಥವಾ ಅದನ್ನು ಬರೆದು ದೇವರಿಗೆ ಸಮರ್ಪಿಸು ಮತ್ತು ಮುಕ್ತನಾಗು!

ಪ್ರಶ್ನೆ: ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಿರುವುದು ಮತ್ತು ಬಡವರು ಇನ್ನೂ ಹೆಚ್ಚು ಬಡವರಾಗುತ್ತಿರುವುದು ಯಾಕೆ? ಒಂದು ಊಟ ಮಾಡಲು ಬಡವರು ಹೋರಾಡುತ್ತಿರುವಾಗ ದೇವರು ಅವರನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ?

ಶ್ರೀ ಶ್ರೀ ರವಿ ಶಂಕರ್: ನಾನು ಗಮನಿಸಿದ ಪ್ರಕಾರ ಬಡಜನರು ಬಡವರಾಗಿರುವುದು ದೇವರು ಅವರನ್ನು ಶಿಕ್ಷಿಸಿದ ಕಾರಣದಿಂದಲ್ಲ; ಜನರನ್ನು ಬಡವರಾಗಿ ಇರಿಸಿರುವುದು ಮದ್ಯಸಾರವಾಗಿದೆ. ಒಬ್ಬ ಕೂಲಿ ಕೆಲಸಗಾರನು ಬಹುತೇಕ ನಗರದಲ್ಲಿನ ಒಬ್ಬ ಸಾಮಾನ್ಯ ಕಚೇರಿ ಕೆಲಸಗಾರ ಸಂಪಾದಿಸುವಷ್ಟೇ ಹಣವನ್ನು ಸಂಪಾದಿಸುತ್ತಾನೆ. ಆದರೆ ಅವನು ತನ್ನ ಸಂಪಾನೆಯಲ್ಲಿ ಮೂರರಲ್ಲಿ ಎರಡು ಭಾಗಗಳನ್ನು ಮದ್ಯಸಾರದ ಮೇಲೆ ಖರ್ಚು ಮಾಡುತ್ತಾನೆ, ಹಾಗಾಗಿ ಅವನು ಬಡವನಾಗಿ ಉಳಿಯುತ್ತಾನೆ.

ಬಡತನಕ್ಕಿರುವ ಎರಡನೆಯ ಕಾರಣವೆಂದರೆ, ಆಲಸ್ಯ/ಸೋಮಾರಿತನ. ಇವತ್ತು ಕೂಡಾ ನೀವೊಬ್ಬ ಬಡ ಬಾಲಕ ಅಥವಾ ಬಾಲಕಿಯನ್ನು ನೋಡಿದರೆ, ಅವರು ಕಷ್ಟಪಟ್ಟರೆ ನಿಜವಾಗಿಯೂ ಅವರು ಮೇಲೆ ಬರಬಹುದು. ಪಿರಮಿಡ್ಡಿನ ಕೆಳಭಾಗದಿಂದ ನಿಜವಾಗಿಯೂ ಮೇಲ್ಭಾಗಕ್ಕೆ ಜನರು ಏರುತ್ತಿರುವ ಹಲವಾರು ಉದಾಹರಣೆಗಳಿವೆ. ನಿಮ್ಮಲ್ಲಿ ಅದನ್ನು ಮಾಡುವ ಆ ಹುರುಪು,ಇಚ್ಛೆ ಮತ್ತು ಉತ್ಸಾಹ ಬೇಕು; ಹಲವು ಸಲ ಜನರಲ್ಲಿ ಇದರ ಕೊರತೆಯಿರುತ್ತದೆ.  

ನಾವು ಮೊದಲ ಸಲ ಇಲ್ಲಿಗೆ, ಬೆಂಗಳೂರಿನ ಈ ಜಾಗಕ್ಕೆ ಬಂದಾಗ, ಈ ಆಶ್ರಮವು ಕೇವಲ ಒಂದು ಬರಡು ಭೂಮಿಯಾಗಿತ್ತು. ಯಾರಿಗೂ ಈ ಜಾಗ ಬೇಕಾಗಿರಲಿಲ್ಲ. ಇಲ್ಲಿ ಹುಲ್ಲಾಗಲೀ, ಮರವಾಗಲೀ ಏನೂ ಬೆಳೆಯುತ್ತಿರಲಿಲ್ಲ. ೬೦ ಎಕರೆಗಳಷ್ಟು ಜಾಗದಲ್ಲಿ ಕೇವಲ ಒಂದೇ ಒಂದು ಮರವಿತ್ತು. ಸುಮ್ಮನೆ ಊಹಿಸಿ! ಬೇರೆ ಯಾವುದೇ ಮರಗಳೂ ಇರಲಿಲ್ಲ! ಇಲ್ಲಿ ಏನೂ ಇರಲಿಲ್ಲ, ಅದು ಕಲ್ಲುಬಂಡೆಗಳಿಂದ ಕೂಡಿತ್ತು, ನೀರಿಲ್ಲದ, ಸಾಗುವಳಿಯಿಲ್ಲದ ಭೂಮಿಯಾಗಿತ್ತು.

ಆ ದಿನಗಳಲ್ಲಿ, ಫಿಲಿಪ್, ಪ್ರಮೀಳಾ, ಕಿರಣ್, ವಿನೋದ್ ಮೆನನ್ ಮತ್ತು ಇಲ್ಲಿದ್ದ ಇತರ ಹಲವರು ಈ ಎಲ್ಲಾ ಮರಗಳನ್ನು ನೆಟ್ಟರು. ಮೊದಲ ದಿನಗಳಲ್ಲಿ ಅವರು ಮರಗಳಿಗೆ ಬಕೆಟುಗಟ್ಟಲೆ ನೀರನ್ನು ಎರೆಯುತ್ತಿದ್ದರು.

ಆಶ್ರಮದ ಸುತ್ತಲೂ ಜನರು ಹುಲ್ಲು ಛಾವಣಿಯ ಗುಡಿಸಲುಗಳಲ್ಲಿ ಜೀವಿಸುತ್ತಿದ್ದರು. ನನ್ನ ನೆನಪು ಸರಿಯಾಗಿದ್ದರೆ, ಪಕ್ಕದ ಹಳ್ಳಿಯಲ್ಲಿ ಒಂದೇ ಒಂದು ಹಂಚಿನ ಛಾವಣಿಯ ಮನೆಯಿತ್ತು. ಅದು ಈ ಹಳ್ಳಿಯ ಮುಖಂಡರಿಗೆ ಸೇರಿದುದಾಗಿತ್ತು. ಇತರ ಪ್ರತಿಯೊಂದು ಮನೆಯೂ ಒಂದು ಹುಲ್ಲಿನ ಛಾವಣಿಯದಾಗಿತ್ತು. ಅದು ಮಳೆಯಲ್ಲಿ ಸೋರುತ್ತಿತ್ತು ಮತ್ತು ಬಲವಾದ ಗಾಳಿಯಿದ್ದರೆ ಹಾರಿಹೋಗುತ್ತಿತ್ತು. ಈ ಹಳ್ಳಿಯಲ್ಲಿ ಮಾತ್ರವಲ್ಲ, ಇಲ್ಲಿ ಸುತ್ತಲೆಲ್ಲಾ ಸಂಗತಿ ಇದಾಗಿತ್ತು.

ಮೇಲಾಗಿ, ಈ ಕನಕಪುರ ರಸ್ತೆಯಲ್ಲಿ ಕೇವಲ ಎರಡು ಬಸ್ಸುಗಳು ಮಾತ್ರ ಇದ್ದವು - ಒಂದು ಬೆಳಗ್ಗೆ ಮತ್ತು ಇನ್ನೊಂದು ಸಂಜೆ. ಮತ್ತು ಕೆಳಗಿನ ನದಿಯಿಂದ ನಗರಕ್ಕೆ ಮರಳು ಒಯ್ಯುವ ಲಾರಿಗಳಿದ್ದವು. (ಸುದರ್ಶನ ಕ್ರಿಯೆಯ ಟೇಪುಗಳಲ್ಲಿ ಕೂಡಾ ನೀವು ಲಾರಿಗಳ ಶಬ್ದವನ್ನು ಕೇಳಬಹುದು!) ಆ ಕಾಲದಲ್ಲಿ, ಜಯನಗರದಿಂದ ಆಶ್ರಮಕ್ಕೆ ಬರಲು ನೀವು ಎರಡು ಬಸ್ಸುಗಳನ್ನು ಹಿಡಿಯಬೇಕಾಗುತ್ತಿತ್ತು.

ನಾವು ಈ ಜಾಗಕ್ಕೆ ಬಂದಾಗ, ಇದೊಂದು ಸಂಪೂರ್ಣವಾಗಿ ಗ್ರಾಮೀಣ ಪ್ರದೇಶವಾಗಿತ್ತು. ಪಕ್ಕದ ೨೦ ಗ್ರಾಮಗಳಿಂದ ನಾವು ಎಲ್ಲಾ ಮಕ್ಕಳನ್ನು ಸೇರಿಸಿ ಅವರಿಗಾಗಿ ಒಂದು ಶಾಲೆಯನ್ನು ತೆರೆದೆವು. ಸುತ್ತಲಿದ್ದ ಜನರು ಬಹಳ ಬಡವರಾಗಿದ್ದರು. ನಮ್ಮಲ್ಲಿ ಆರ್ಟ್ ಆಫ್ ಲಿವಿಂಗ್‌ನಲ್ಲಿ ಕೂಡಾ ಸೀಮಿತವಾದ ಸಂಪನ್ಮೂಲಗಳಿದ್ದವಷ್ಟೆ. ಹೆಚ್ಚಾಗಿ ನಾವು ಆಶ್ರಮಕ್ಕಾಗಿ ಬ್ಯಾಂಕಿನಿಂದ ಸ್ವಲ್ಪ ಹೆಚ್ಚು ಹಣ ಪಡೆಯುವ ಸೌಲಭ್ಯ ತೆಗೆದುಕೊಳ್ಳುತ್ತಿದ್ದೆವು ಮತ್ತು ಎರಡು-ಮೂರು ತಿಂಗಳುಗಳ ಬಳಿಕ ನಾವು ಅವರಿಗೆ ಮರುಪಾವತಿ ಮಾಡುತ್ತಿದ್ದೆವು.

ಬಹುಶಃ ತೊಂಭತ್ತರ ದಶಕದಲ್ಲಿ ಯಾವಾಗಲೋ, ನಾನು ಈ ಪ್ರದೇಶದ ಸುತ್ತಲಿನ ಎಲ್ಲಾ ಬಡ ನಿರುದ್ಯೋಗಿ ಯುವಕರನ್ನು ಕರೆದೆ; ಅವರು ೨೦ ರಿಂದ ೩೫ ವರ್ಷ ವಯಸ್ಸಿನ ನಡುವಿನವರಾಗಿರಬೇಕು. ಅವರಿಗೆ ಯಾವುದಾದರೂ ಉದ್ಯೋಗವಿರಬೇಕೆಂದು ನಾನು ಬಯಸುವುದಾಗಿ ನಾನು ಅವರಿಗೆ ಹೇಳಿದೆ. ಅವರು ಏನನ್ನೂ ಮಾಡದೆಯೇ ಸುಮ್ಮನೇ ಅವರ ಕುಟುಂಬಗಳ ಮೇಲೆ ಒಂದು ಹೊರೆಯಾಗಿದ್ದರು; ಇಡೀ ದಿನ ಕುಳಿತುಕೊಂಡು, ರೇಡಿಯೋ ಕೇಳಿಕೊಂಡು, ಇಸ್ಪೀಟು ಅಥವಾ ಕ್ರಿಕೆಟ್ ಆಡಿಕೊಂಡು ಇರುತ್ತಿದ್ದರು, ಮತ್ತು ಸಂಜೆಯಲ್ಲಿ ಅವರು ಹೋಗಿ ಕುಡಿಯುತ್ತಿದ್ದರು. ನಾವು ಮಕ್ಕಳಿಗಾಗಿ ಶಾಲೆಯನ್ನು ಮಾಡಿದೆವು, ಆದರೆ ಯುವಕರು ನಿರುದ್ಯೋಗಿಗಳಾಗಿದ್ದರು. ಅವರು ತಮ್ಮ ಹತ್ತನೆಯ ತರಗತಿಯನ್ನು ಪಾಸು ಮಾಡಿಕೊಂಡಿದ್ದರು ಮತ್ತು ಹೊಲಕ್ಕೆ ಹೋಗಿ ಕೆಲಸ ಮಾಡುವುದು ಅಥವಾ ಯಾವುದೇ ಕೃಷಿ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಯಾರು ಶಾಲೆಗೆ ಹೋಗಲಿಲ್ಲವೋ ಅಥವಾ ಯಾರು ಪ್ರಾಥಮಿಕ ಶಾಲೆಯವರೆಗೆ ಮಾತ್ರ ಓದಿರುವರೋ ಅವರು ಕೃಷಿ ಮಾಡುವುದು ಎಂಬುದು ಅವರ ಮನೋಭಾವವಾಗಿತ್ತು. ತಾವು ಯಾಕೆ ಕೃಷಿ ಮಾಡುವುದು? ಅವರು ಹೊಲಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿರಲಿಲ್ಲ.

ನಾನು ಕರ್ನಾಟಕ ಸರಕಾರದಿಂದ ಸಣ್ಣ ಕೈಗಾರಿಕೆಗಳ ನಿರ್ದೇಶಕರನ್ನು ಕರೆದೆ ಮತ್ತು ಈ ೨೦೦ ನಿರುದ್ಯೋಗಿ ಹುಡುಗರ ಮುಂದೆ, ತಮಗೆ ಸಾಧ್ಯವಿರುವ ಎಲ್ಲಾ ಯೋಜನೆಗಳನ್ನು ಪ್ರಸ್ತುತ ಪಡಿಸಲು ಹೇಳಿದೆ. ಅವರು ಏನಾದರೂ ಮಾಡಬೇಕೆಂಬುದು ನನ್ನ ಬಯಕೆಯಾಗಿತ್ತು. (ನಮ್ಮದು ಕೂಡಾ ಒಂದು ಹುಲ್ಲಿನ ಛಾವಣಿಯ ಹಜಾರವಾಗಿತ್ತು. ಅಲ್ಲಿ ನಾವು ಅಷ್ಟಾವಕ್ರ ಪ್ರವಚನವನ್ನು ಕೊಡುತ್ತಿದ್ದೆವು; ಅದೇ ಜಾಗದಲ್ಲಿ ನಾನು ಈ ಹುಡುಗರನ್ನು ಮತ್ತು ನಿರ್ದೇಶಕರನ್ನು ಕರೆದೆನು.)

ನಿರ್ದೇಶಕರು ಬಹಳ ಉತ್ಸಾಹದಿಂದ ಬಂದರು. ಮೂರರಿಂದ ನಾಲ್ಕು ಗಂಟೆಗಳ ಕಾಲ ಬಹಳ ಎಚ್ಚರಿಕೆಯ ಪ್ರಯತ್ನದೊಂದಿಗೆ ಅವರು ಸುಮಾರು ೨೨೫ ಯೋಜನೆಗಳನ್ನು ವಿವರಿಸಲು ಪ್ರಯತ್ನಿಸಿದರು. ಮತ್ತು ಅದನ್ನು ಮಾಡಲು ಹೇಗೆ ಸಾಧ್ಯವಾಗದು ಮತ್ತು ಇದನ್ನು ಮಾಡಲು ಹೇಗೆ ಸಾಧ್ಯವಾಗದು ಎಂದು ಹೇಳಲು ಹುಡುಗರಿಗೆ ಒಂದು ನೆಪ ಇರುತ್ತಿತ್ತು! ನಿರ್ದೇಶಕರು ವಿವರಿಸುತ್ತಿದ್ದ ಪ್ರತಿಯೊಂದು ಯೋಜನೆಗೂ ಅವರು, "ಗುರುದೇವ, ಇದು ಸಾಧ್ಯವಿಲ್ಲ!" ಎಂದು ಹೇಳುತ್ತಿದ್ದರು. ಕೊನೆಗೆ ನಾನು ಅವರಲ್ಲಿ ಕೇಳಿದೆ, "ಯಾವುದು ಸಾಧ್ಯವಾಗುತ್ತದೆ?"

ಅವರಂದರು, "ದಯವಿಟ್ಟು ನಮಗೆ ಪೋಲಿಸ್ ಇಲಾಖೆಯಲ್ಲಿ ಕೆಲಸ ಕೊಡಿಸಿ ಅಥವಾ ನನ್ನನ್ನೊಬ್ಬ ಬಸ್ ಕಂಡಕ್ಟರನನ್ನಾಗಿ ಮಾಡಿ."

ಆರಕ್ಷಕ ದಳದೊಂದಿಗೆ ಅಥವಾ ಸರಕಾರೀ ಕಂಡಕ್ಟರನಾಗಿ ನಿಮಗೆ ಎಷ್ಟು ಉದ್ಯೋಗಗಳು ಸಿಗಲು ಸಾಧ್ಯ? ಒಬ್ಬ ವಾಣಿಜ್ಯೋದ್ಯಮಿಯಾಗಲು ಯಾರೂ ಬಯಸುವುದಿಲ್ಲ, ಯಾವುದೇ ಪ್ರಯತ್ನವನ್ನು ಹಾಕಲು ಯಾರೂ ಬಯಸುವುದಿಲ್ಲ.

ಈ ಜನರು ಬಡವರಾಗಿಯೇ ಉಳಿಯಲು ಬಯಸುತ್ತಾರೆ, ನೀವೇನು ಮಾಡಲು ಸಾಧ್ಯ? ಇದು ನಾವು ಯೂತ್ ಲೀಡರ್‌ಶಿಪ್ ಟ್ರೈನಿಂಗ್ ಪ್ರೋಗ್ರಾಮ್ (ವೈ.ಎಲ್.ಟಿ.ಪಿ.) ಪ್ರಾರಂಭಿಸಿದಾಗ. ನಾವು ಅವರೆಲ್ಲರಿಗೂ ಮೂರು ತಿಂಗಳುಗಳ ಕಠಿಣ ತರಬೇತಿಯನ್ನು ನೀಡಿದೆವು. ಅವರು ತಮ್ಮ ಆಲಸ್ಯದಿಂದ ಹೊರಬರಲೆಂದು ಬೆಳಗ್ಗೆ ವ್ಯಾಯಾಮ ಮಾಡುವಂತೆ ಮಾಡಿದೆವು. ಅವರು ಕ್ರಿಯೆ ಮತ್ತು ಧ್ಯಾನ ಮಾಡಲು ಪ್ರಾರಂಭಿಸಿದಾಗ, ನಾವು ಅವರಿಗೆ ಮೂರು ತಿಂಗಳುಗಳಿಗಾಗಿ ಉದ್ಯೋಗ ನೀಡಿದೆವು. ಹೀಗಿದ್ದರೂ, ನೀವು ಏನಾದರೂ ಮಾಡಬೇಕೆಂದು ನಾವು ಅವರಿಗೆ ಹೇಳಿದೆವು. ಇವತ್ತು, ಅವರಲ್ಲಿ ಹಲವರು ವಾಣಿಜ್ಯೋದ್ಯಮಿಗಳಾಗಿರುವರು.

ಈಗ, ಆಶ್ರಮದ ಸುತ್ತ ಯಾವುದಾದರೂ ಹುಲ್ಲಿನ ಛಾವಣಿಗಳನ್ನು ನೀವು ನೋಡುತ್ತೀರೇ? ಇಲ್ಲ! ಜನರು ಮನೆಗಳನ್ನು ಕಟ್ಟಿದ್ದಾರೆ; ಈ ಹಳ್ಳಿಯಲ್ಲಿ ಮಾತ್ರವಲ್ಲ, ಆದರೆ ಸುತ್ತಲಿರುವ ಎಲ್ಲಾ ಹಳ್ಳಿಗಳು ಈಗ ಅಭಿವೃದ್ಧಿ ಹೊಂದುತ್ತಿವೆ. ಆರ್ಥಿಕ ಸ್ಥಿತಿ ಮುನ್ನಡೆಯುತ್ತಿದೆ; ಈಗ ನಿಮಗೆ ಈ ಪ್ರದೇಶದಿಂದ ಕಾರ್ಮಿಕರು ಸಿಗುವುದಿಲ್ಲ, ಅವರು ಇತರ ಪ್ರದೇಶಗಳಿಂದ ಬರುತ್ತಾರೆ.

ಅದೇ ರೀತಿಯಲ್ಲಿ, ಇಲ್ಲಿ ನಮ್ಮ ದ್ವಾರಪಾಲಕನಾಗಿದ್ದ ಒಬ್ಬ ಹುಡುಗನಿದ್ದ. ಇವತ್ತು, ಅವನ ಕೈಕೆಳಗೆ ೪೦೦ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಹುಡುಗನ ಕಥೆಯು ಬಹಳ ಆಸಕ್ತಿದಾಯಕವಾಗಿದೆ. ಮಗುವಾಗಿದ್ದಾಗ ಅವನು ಶಾಲೆಯಲ್ಲಿ ತೊಂದರೆ ನೀಡುವವನಾಗಿದ್ದ. ಅವನು ಇತರ ಪ್ರತಿಯೊಬ್ಬ ಹುಡುಗನೊಂದಿಗೂ ಜಗಳವಾಡುತ್ತಿದ್ದ ಮತ್ತು ಯಾವುದೇ ಶಾಲೆಯೂ ಅವನನ್ನು ಸ್ವೀಕರಿಸುತ್ತಿರಲಿಲ್ಲ. ಅವನ ಹೆತ್ತವರು ಅವನಿಂದಾಗಿ ರೋಸಿಹೋಗಿದ್ದರು ಮತ್ತು ದಣಿದಿದ್ದರು. ಹೀಗಾಗಿ ಅವರು ಬಂದು ಅವನನ್ನು ಇಲ್ಲಿ ಬಿಟ್ಟರು. ನಮಗೇನು ಬೇಕೋ ಅದನ್ನು ನಾವು ಮಾಡಬೇಕೆಂದು ಅವರು ನಮ್ಮಲ್ಲಿ ಹೇಳಿದರು. ಅವನು ಮನೆಯಲ್ಲಿರುವುದು ಅವರಿಗೆ ಬೇಕಿರಲಿಲ್ಲ, ಯಾಕೆಂದರೆ ಅವನು ಎಲ್ಲರಿಗೆ ಹೊಡೆಯುತ್ತಿದ್ದನು, ಎಲ್ಲವನ್ನೂ ಒದೆಯುತ್ತಿದ್ದನು ಮತ್ತು ಸುತ್ತಲೆಲ್ಲಾ ಬಹಳಷ್ಟು ತೊಂದರೆ ಸೃಷ್ಟಿಸುತ್ತಿದ್ದನು. ಹೀಗೆ ಅವನು ಶಕ್ತಿ ಕುಟೀರದ ಹೊರಗೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದನು ಮತ್ತು ಜನರು ನನ್ನ ಕೋಣೆಗೆ ಬರುವುದನ್ನು ತಡೆಯುತ್ತಿದ್ದನು. ಆ ದಿನಗಳಲ್ಲಿ ನಾವು ಇತರ ಯಾವುದೇ ಕಾವಲುಗಾರರನ್ನು ಹೊಂದಿರಲಿಲ್ಲ, ಅವನು ಇದ್ದ ಒಬ್ಬನೇ ವ್ಯಕ್ತಿಯಾಗಿದ್ದನು! ಅವನು ಎಲ್ಲರನ್ನೂ ನಿಲ್ಲಿಸುತ್ತಿದ್ದನು, ನನ್ನ ತಾಯಿಯನ್ನು ಕೂಡಾ! ಹಲವು ಸಾರಿ, ಆಹಾರದೊಂದಿಗೆ ಬರಲು ಅವಳು ಅವನೊಂದಿಗೆ ಜಗಳ ಮಾಡಬೇಕಾಗುತ್ತಿತ್ತು.
ನೋಡಿ, ಸುಮ್ಮನೇ ಇಲ್ಲಿದ್ದುದರಿಂದ ಅವನಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಯಾಯಿತು. ನಂತರ ಅವನು ಹಿಂದಿರುಗಿ ಹೋದನು ಮತ್ತು ಮದುವೆಯಾದನು. ಅವನೊಂದು ದೊಡ್ದ ವ್ಯಾಪಾರವನ್ನು ಪ್ರಾರಂಭಿಸಿದನು; ಅವನು ಹೆಚ್ಚೇನೂ ಕಲಿತಿಲ್ಲ, ಆದರೂ ಅವನು ಸುಮಾರು ೩೦೦-೪೦೦ ನೌಕರರನ್ನು ಹೊಂದಿದ್ದಾನೆ.

ಇತರ ಹಲವಾರು ಜನರೊಂದಿಗೆ ಹೀಗೆಯೇ ಆಗಿದೆ; ಇತರ ಹಲವಾರು ಉದಾಹರಣೆಗಳಿವೆ, ಒಂದಲ್ಲ; ಆಲಸ್ಯವು ದೂರಹೋಗಲೇಬೇಕು.

ಈ ದೇಶದ ಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರು ಒಂದು ಕಾಲದಲ್ಲಿ ಒಬ್ಬ ಚಹಾ ಮಾರಾಟಗಾರರಾಗಿದ್ದರು. ಅವರು ಒಂದು ಬಹಳ ಬಡ ಕುಟುಂಬದಿಂದ ಬಂದರು; ಇವತ್ತು ಅವರೊಂದು ರಾಜ್ಯದ ಮುಖ್ಯಮಂತ್ರಿಯಾಗಿರುವರು.

ಇನ್ನೊಂದು ಉದಾಹರಣೆಯು ರಾಮನಾಥ ಗೊಯೆಂಕಾಜಿಯವರದ್ದು. ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ್ನು ಪ್ರಾರಂಭಿಸಿದರು. ಇಂಡಿಯನ್ ಎಕ್ಸ್‌ಪ್ರೆಸ್‌ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಎದುರು ಹಾಕಿಕೊಂಡಂತಹ ಪತ್ರಿಕೆ. ಅವರು ಕೇವಲ ಎರಡನೆಯ ತರಗತಿಯವರೆಗೆ ಮಾತ್ರ ಕಲಿತಿದ್ದರು. ಅವರು ಮುಂಬೈಯ ಮಾರ್ಗಗಳಲ್ಲಿ ಒಂದು ಗಾಡಿಯಲ್ಲಿ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಮಾರುತ್ತಿದ್ದರು. ಒಂದು ಬಹಳ ಬಡ ಕುಟುಂಬದಿಂದ ಬಂದರೂ, ಇವತ್ತು ಅವರೊಂದು ಸಾಮ್ರಾಜ್ಯವನ್ನು ಕಟ್ಟಿರುವರು.

ನೀವು ಆ ಆಧ್ಯಾತ್ಮಿಕ ಶಕ್ತಿ, ವಿಶ್ವಾಸ ಮತ್ತು ಬಡತನದಿಂದ ಹೊರಬರಲಿರುವ ಇಚ್ಛೆಯನ್ನು ತರಬೇಕಾಗಿದೆ; ಇದನ್ನೇ ನಾವು ಮಾಡಬೇಕಾದುದು. ಕೇವಲ ಬಡವರಿಗೆ ಆಹಾರ ಮತ್ತು ವಸ್ತುಗಳನ್ನು ನೀಡುವುದರಿಂದ ಪ್ರಯೋಜನವಿಲ್ಲ.

ಇಥಿಯೋಪಿಯಾವು ಇನ್ನೊಂದು ಉದಾಹರಣೆಯಾಗಿದೆ. ಏಳು ವರ್ಷಗಳವರೆಗೆ ಇಥಿಯೋಪಿಯಾದಲ್ಲಿ ಒಂದು ಕ್ಷಾಮವಿತ್ತು. ದೇಶವು ಅಷ್ಟು ದೀರ್ಘ ಕಾಲದವರೆಗೆ ಒಂದು ಕ್ಷಾಮದ ಮೂಲಕ ಹಾದುಹೋದುದರಿಂದ, ಜನರು ಕೆಲಸ ಮಾಡಲಿಲ್ಲ.

ಎಂಟನೆಯ ವರ್ಷದಲ್ಲಿ, ಮಳೆ ಬಂದಾಗ ಕೂಡಾ ಯಾರೂ ಕೆಲಸ ಮಾಡಲು ಬಯಸಲಿಲ್ಲ! ಇದು ಯಾಕೆಂದರೆ, ಇತರ ದೇಶಗಳಿಂದ ಸಹಾಯ ಪಡೆಯುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಬೇರೊಬ್ಬರು ತಮಗೆ ಸಹಾಯ, ಆಹಾರ ಮತ್ತು ವಸ್ತುಗಳನ್ನು ಕೊಡಬೇಕೆಂದು ಅವರು ನಿರೀಕ್ಷಿಸಿದರು. ಇವತ್ತೂ ಕೂಡಾ, ಇಥಿಯೋಪಿಯಾವು ಅಷ್ಟೊಂದು ವಿಶಾಲವಾದ ಭೂಮಿಯನ್ನು ಹೊಂದಿದೆ, ಆದರೆ ಇಥಿಯೋಪಿಯಾದಲ್ಲಿ ನೆಲವನ್ನು ಖರೀದಿಸಿ ಅಲ್ಲಿ ಕೃಷಿ ಮಾಡುತ್ತಿರುವುದು ಚೈನೀಯರು ಮತ್ತು ಭಾರತೀಯರಾಗಿರುವರು, ಯಾಕೆಂದರೆ ಜನರಲ್ಲಿ ಏನನ್ನಾದರೂ ಮಾಡಲಿರುವ ಉತ್ಸಾಹವು ಹೋಗಿದೆ.

ಇಥಿಯೋಪಿಯಾದಲ್ಲಿ ಇನ್ನೊಂದು ಬಹಳ ವಿಚಿತ್ರವಾದ ಸಂಗತಿಯಿದೆ. ಯಾವುದೋ ಧಾರ್ಮಿಕ ನಂಬಿಕೆಯಿಂದಾಗಿ ಜನರು ವರ್ಷದಲ್ಲಿ ಆರು ತಿಂಗಳುಗಳ ಕಾಲ ಯಾವುದೇ ಹಾಲಿನ ಉತ್ಪನ್ನಗಳನ್ನು ಉಪಯೋಗಿಸುವುದಿಲ್ಲ. ಹಾಗಾಗಿ ಈಗ, ಒಂದು ಹಾಲಿನ ಉತ್ಪನ್ನಗಳ ವ್ಯಾಪಾರವನ್ನು ತೆರೆಯಲು ಯಾರೂ ಬಯಸುವುದಿಲ್ಲ, ಯಾಕೆಂದರೆ ಆರು ತಿಂಗಳುಗಳ ಕಾಲ ಉತ್ಪನ್ನವು ಮಾರಾಟವಾಗದು.

ಬಹುಶಃ ಪ್ರಾಚೀನ ಕಾಲದಲ್ಲಿ, ಚಳಿಗಾಲದಲ್ಲಿ ಒಬ್ಬರು ತಂಪಾದ ಹಾಲನ್ನು ಕುಡಿಯಬಾರದು ಎಂದು ಹೇಳಿದ್ದಿರಬೇಕು, ಅಥವಾ ಅಲ್ಲಿ ಬೇರೆ ಯಾವುದಾದರೂ ತಾರ್ಕಿಕವಾದ ತೀರ್ಮಾನವಿದ್ದಿರಬಹುದು. ಹೀಗಿದ್ದರೂ, ಒಂದು ಧಾರ್ಮಿಕ ನಂಬಿಕೆಯಾಗಿ ಆರು ತಿಂಗಳುಗಳವರೆಗೆ ಜನರು ಹಾಲನ್ನು ಕುಡಿಯದಿರುವುದು ಅಥವಾ ಯಾವುದೇ ಹಾಲಿನ ಉತ್ಪನ್ನಗಳನ್ನು ಉಪಯೋಗಿಸದಿರುವುದು ಇಡೀ ಉದ್ಯಮವು ಬಹಳಷ್ಟು ಬಳಲುವಂತೆ ಮಾಡುತ್ತದೆ.

ಬಡತನದಿಂದ ಹೊರಬರಲು ಒಬ್ಬನು ಒಂದು ಸರಿಯಾದ ಮನೋಭಾವವನ್ನು ಹೊಂದಿರಬೇಕು. ನಾನು ಹೆಳುವುದಾದರೆ, ನಾನೊಬ್ಬ ಬಲಿಪಶು ಎಂಬ ಮನೋಭಾವವು ಸ್ವಯಂಪ್ರೇರಿತವಾಗಿದೆ."ನಾನೊಬ್ಬ ಬಲಿಪಶು, ಯಾರಲ್ಲೋ ಹಣವಿದೆ, ನನ್ನಲ್ಲಿ ಅದು ಇಲ್ಲ" ಎಂದು ಅಂಥವರು ಹೇಳುತ್ತಾರೆ!

ನಿಮ್ಮಲ್ಲಿ ಅದು ಯಾಕಿಲ್ಲ? ಅದು ಯಾಕೆಂದರೆ ನೀವು ಅದರ ಕಡೆಗೆ ಕೆಲಸ ಮಾಡಲಿಲ್ಲ. ಖಂಡಿತವಾಗಿಯೂ, ಜನರನ್ನು ಶೋಷಿಸುವಂತಹ ಇತರ ಭಾಗಗಳೂ ಈ ಚಿತ್ರಣಕ್ಕಿವೆ ಮತ್ತು ಅದು ಕೂಡಾ ಸರಿಯಲ್ಲ!

ಪ್ರಶ್ನೆ: ಗುರುದೇವ, ನಾನು ಬೇಯಿಸಿದ ಅಕ್ಕಿಯನ್ನು ಮುಟ್ಟಿದ ಮೇಲೆ ನನ್ನ ಕೈಗಳನ್ನು ತೊಳೆಯುವಂತೆ ನನ್ನ ಅತ್ತೆ ಮಾವ ಬಲವಂತಪಡಿಸುತ್ತಾರೆ. ನನ್ನ ಋತುಚಕ್ರದ ಸಮಯದಲ್ಲಿ, ದೇವರಕೋಣೆಯನ್ನು, ಅಡುಗೆಕೋಣೆಯನ್ನು ಪ್ರವೇಶಿಸಲು ಅಥವಾ ಬಟ್ಟೆಗಳನ್ನು ಮುಟ್ಟಲು ಅವರು ನನಗೆ ಅನುಮತಿಸುವುದಿಲ್ಲ. ಅವರು ಯಾಕೆ ಈ ಸಂಪ್ರದಾಯಗಳನ್ನು ಅನುಸರಿಸುತ್ತಾರೆ? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ಸಂಪ್ರದಾಯವನ್ನು ಸಾಬೀತುಪಡಿಸಲು ಅಥವಾ ಅಲ್ಲಗಳೆಯಲು ನೀನು ವೈಜ್ಞಾನಿಕ ಪ್ರಯೋಗಗಳನ್ನು ಮಾಡಬೇಕು.  ಒಂದು ಪ್ರಯೋಗವನ್ನು ಮಾಡದೆಯೇ, ಒಂದು ಸಂಪ್ರದಾಯವು ತಪ್ಪು ಅಥವಾ ಸರಿ ಎಂದು ಹೇಳಲು ನಿನಗೆ ಸಾಧ್ಯವಿಲ್ಲ! ಉದಾಹರಣೆಗೆ, ಸಾಂಪ್ರದಾಯಿಕ ಮನೆಗಳಲ್ಲಿ, ಶೌಚಾಲಯಕ್ಕೆ ಹೋಗುವ ಮುನ್ನ ಜನರು ಜನಿವಾರವನ್ನು ತಮ್ಮ ಕಿವಿಯ ಸುತ್ತಲೂ ಕಟ್ಟುತ್ತಿದ್ದರು; ಹಲವು ಸಲ ಇದು ಅಸಂಬದ್ಧವಾಗಿ ಕಾಣಿಸುತ್ತಿತ್ತು. ಕೊಡಲಾಗುತ್ತಿದ್ದ ವಿವರಣೆಯೇನೆಂದರೆ, ಬಹುಶಃ ಜನಿವಾರವು ಉದ್ದವಾಗಿ, ಅತಿಯಾಗಿ ಕೆಳಕ್ಕೆ ನೇತಾಡುತ್ತದೆ, ಅದು ಎಲ್ಲೂ ಸಿಕ್ಕಿಹಾಕಿಕೊಳ್ಳದಂತೆ ಅದನ್ನು ಕಿವಿಗೆ ಕಟ್ಟಿ ಎಂದು. ಹೀಗಿದ್ದರೂ, ನ್ಯೂಯೋರ್ಕಿನ ವಿಜ್ಞಾನಿಯೊಬ್ಬರು ಒಂದು ಅಧ್ಯಯನವನ್ನು ಪ್ರಕಟಿಸಿದರು. ಕಿವಿಗಳ ಹಿಂಭಾಗ ಮತ್ತು ಕಿವಿಹಾಲೆಗಳು ಕರುಳಿನೊಂದಿಗೆ ಸಂಪರ್ಕ ಹೊಂದಿದೆ ಎಂದು ಅದು ಹೇಳಿಕೆ ನೀಡಿತು.

ಹೀಗಾಗಿ ಕಿವಿಗಳನ್ನು ಹಿಂಡಿದಾಗ, ರಕ್ತದೊತ್ತಡವು ಕಡಿಮೆಯಾಗುತ್ತದೆ ಮತ್ತು ಮಲ ವಿಸರ್ಜನೆ ಉತ್ತಮವಾಗುತ್ತದೆ. ಹೀಗೆ ಸಂಪ್ರದಾಯವು ವ್ಯವಸ್ಥೆಯ ಮೇಲೆ ಒಂದು ಪ್ರಭಾವವನ್ನು ಹೊಂದಿದೆ. ಇದಕ್ಕಾಗಿಯೇ ನೀನು ಅದನ್ನು ಮೂಢನಂಬಿಕೆಯೆಂದು ಹೇಳಲು ಸಾಧ್ಯವಿಲ್ಲ; ಒಂದು ಮಟ್ಟದಲ್ಲಿ ಅದೊಂದು ಮೂಢನಂಬಿಕೆಯಾಗಿದ್ದರೂ, ಇನ್ನೊಂದು ಮಟ್ಟದಲ್ಲಿ, ಆ ಅಭ್ಯಾಸಕ್ಕೆ ಅಲ್ಲೊಂದು ವೈಜ್ಞಾನಿಕ ಪುಷ್ಟೀಕರಣವಿತ್ತು.

ಅದೇ ರೀತಿಯಲ್ಲಿ, ಆಹಾರದಲ್ಲಿ ಮತ್ತು ಪಾತ್ರೆಗಳನ್ನು ತೊಳೆಯುವಲ್ಲಿ ಅರಸಿನದ ಉಪಯೋಗ ಕೂಡಾ ಒಂದು ಮೂಢನಂಬಿಕೆಯೆಂದು ಜನರು ಯೋಚಿಸಿದ್ದರು. ಬಹಳಷ್ಟು ಆಹಾರ ತಯಾರಿಕೆಗಳಲ್ಲಿ, ಬೇಯಿಸಿದ ಬಳಿಕ ಆಹಾರದ ಮೇಲ್ಭಾಗದಲ್ಲಿ ಅವರೊಂದು ತುಳಸಿ ಎಲೆಯನ್ನು ಹಾಕುತ್ತಿದ್ದರು. ಎಂಭತ್ತರ ದಶಕದಲ್ಲಿನ ವಿಜ್ಞಾನಿಗಳು ದೀರ್ಘಕಾಲದವರೆಗೆ ಅರಸಿನವನ್ನು "ಓ, ಇದು ಕೇವಲ ಬಣ್ಣ, ವರ್ಣದ್ರವ್ಯ ಮಾತ್ರ; ಅದಕ್ಕೆ ಯಾವುದೇ ದೊಡ್ಡ ಬೆಲೆಯಿಲ್ಲ, ಅರಸಿನವೇನೂ ಪವಿತ್ರವಾದುದಲ್ಲ, ಅದು ಆಹಾರಕ್ಕೆ ಯಾವುದೇ ಮೌಲ್ಯವನ್ನು ಸೇರಿಸುವುದಿಲ್ಲ" ಎಂದು ಗುರಿಯಾಗಿಸಿದರು. ತೊಂಭತ್ತರ ದಶಕದ ಹೊತ್ತಿಗೆ, ಅರಸಿನವು ಅತ್ಯುತ್ತಮವಾದ ಉತ್ಕರ್ಷಣ ನಿರೋಧಕ (ಏಂಟಿ ಓಕ್ಸಿಡೆಂಟ್) ಎಂದು ವಿಜ್ಞಾನಿಗಳು ಕಂಡುಹಿಡಿದರು.

ಅರಸಿನವು ವಯಸ್ಥಾಪನವಾಗಿ; ಅಂದರೆ ವಯಸ್ಸಾಗುವಿಕೆಯನ್ನು ನಿಲ್ಲಿಸುವ ಒಂದು ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಯುರ್ವೇದದ ವೈದ್ಯರುಗಳು ಹೇಳಿದರು. ಆದರೆ ಯಾರೂ ಅವರನ್ನು ನಂಬಲಿಲ್ಲ. ಇದೆಲ್ಲವೂ ಅಸಂಬದ್ಧವೆಂದು ಎಂ.ಬಿ.ಬಿ.ಎಸ್ ವೈದ್ಯರು ಹೇಳುತ್ತಿದ್ದರು. ಆನಂತರದಲ್ಲಿ, ಅರಸಿನವು ಆರೋಗ್ಯಕ್ಕೆ ಬಹಳ ಒಳ್ಳೆಯದೆಂದು ವಿಜ್ಞಾನಿಗಳು ಸಾಬೀತುಪಡಿಸಿದರು; ಅದು ಕ್ಯಾನ್ಸರನ್ನು ಕೂಡಾ ತಡೆಯುತ್ತದೆ. ಹಾಗಾಗಿ, ತಪ್ಪೆಂದು ಸಾಬೀತುಪಡಿಸದ ಹೊರತು ನೀವು ಯಾವುದೇ ಸಂಪ್ರದಾಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಮತ್ತೆ, ನಾನು ಹೇಳುವುದೇನೆಂದರೆ, ನಾವೊಂದು ಮುಕ್ತ ಮನಸ್ಸು ಇಟ್ಟುಕೊಳ್ಳಬೇಕು; ಒಂದು ಸಮಯದಲ್ಲಿ ಅದು ಸರಿಯೆಂದು ಸಾಬೀತಾಗಿ, ನಂತರದಲ್ಲಿ ಅಲ್ಲಗಳೆಯಲ್ಪಟ್ಟಿದ್ದಿರಲೂಬಹುದು.
ನೆಲಗಡಲೆ ಎಣ್ಣೆ ಬಹಳ ಕೆಟ್ಟದೆಂದು ಈ ದೇಶದಲ್ಲಿ ಒಂದು ದೊಡ್ಡ ಅಲೆಯೆದ್ದಿತ್ತು. ದಕ್ಷಿಣ ಭಾರತೀಯ ಮನೆಗಳಲ್ಲಿ, ಅವರು ಕೇವಲ ನೆಲಗಡಲೆ ಎಣ್ಣೆ ಮತ್ತು ಎಳ್ಳೆಣ್ಣೆಗಳನ್ನು ಬಳಸುತ್ತಿದ್ದರು. ಪಾಮ್ ಎಣ್ಣೆಯನ್ನು ಪ್ರಚಾರ ಮಾಡಲು ಬಯಸಿದ್ದ ಕಂಪೆನಿಯೊಂದು, ತೆಂಗಿನೆಣ್ಣೆ; ಈ ಇತರ ಎಣ್ಣೆಗಳು ಕೆಟ್ಟದು ಪಾಮ್ ಎಣ್ಣೆ ಅತ್ಯುತ್ತಮವಾದ ಎಣ್ಣೆ ಎಂದು ಹೇಳಿತು. ಕೂಡಲೇ ಎಲ್ಲರೂ ಪಾಮ್ ಎಣ್ಣೆಯನ್ನು ಬಳಸಲು ತೊಡಗಿದರು.

ಈಗ ಸಂಶೋಧನೆಯು ಅದನ್ನು ಅಲ್ಲಗಳೆದಿದೆ, ಮತ್ತು ನೆಲಗಡಲೆ ಎಣ್ಣೆ ಬಹಳ ಒಳ್ಳೆಯದು, ಅದು ಅತ್ಯುತ್ತಮವಾದುದು ಎಂದು ಕಂಡುಹಿಡಿದಿದೆ. ಅವರು ನೆಲಗಡಲೆ ಎಣ್ಣೆಯ ವೈಭವವನ್ನು ಹಾಡುತ್ತಾರೆ. ವಾಸ್ತವವಾಗಿ, ಇಲ್ಲಿ ಜನರು ಶತಮಾನ, ಸಹಸ್ರಮಾನಗಳಿಂದ ನೆಲಗಡಲೆ ಎಣ್ಣೆಯನ್ನು ಬಳಸುತ್ತಿದ್ದರು! ತಮಿಳುನಾಡಿನಲ್ಲಿ ಎಳ್ಳೆಣ್ಣೆಯು ನಲ್ಲ ಎಣ್ಣೈ ಎಂದು ಕರೆಯಲ್ಪಡುತ್ತದೆ, ಅಂದರೆ ಬಹಳ ಒಳ್ಳೆಯ ಎಣ್ಣೆ ಎಂದು. ಅದು ನಮ್ಮ ಶರೀರದ ವ್ಯವಸ್ಥೆಗೆ ಬಹಳಷ್ಟು ಒಳ್ಳೆಯದನ್ನು ಮಾಡುವುದೆಂದು ಭಾವಿಸಲಾಗಿದೆ.

ಎಣ್ಣೆ ಮಾರುಕಟ್ಟೆಯು ಆ ಎಲ್ಲಾ ಮಲೇಷಿಯಾದ ಪಾಮ್ ಎಣ್ಣೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಬಯಸಿದ್ದರಿಂದ, ಕೆಲವು ಸಂಶೋಧಕರು ಈ ರೀತಿಯ ಕಥೆಗಳನ್ನು ಕಟ್ಟಿದರು. ಸಂಶೋಧನೆಗೆ ಕಂಪೆನಿಯಿಂದ ಅನುದಾನ ದೊರಕಿತ್ತು, ಮತ್ತು ಅದು ಒಂದು ತಪ್ಪು ಭಾವನೆಯನ್ನು ಸೃಷ್ಟಿಸಿತು. ಹೀಗಾಗಿ, ನಡೆಸಲಾಗುವ ಸಂಶೋಧನೆಯು ಪ್ರಾಮಾಣಿಕವಾಗಿರಬೇಕು ಮತ್ತು ಹೆಚ್ಚಿನ ಸಂಶೋಧನೆಗಾಗಿ ನಾವು ನಮ್ಮ ಮನಸ್ಸನ್ನು ತೆರೆದಿಡಬೇಕು. ಭವಿಷ್ಯದಲ್ಲಿ, ಇನ್ನೊಂದು ಸಂಶೋಧನೆಯು ಬಂದು ಇದು ತಪ್ಪೆಂದು ಹೇಳಿದರೆ, ನಾವು ಇದನ್ನೇ ಹಿಡಿದಿಟ್ಟುಕೊಳ್ಳಬಾರದು, ನಾವದನ್ನು ಆಲಿಂಗಿಸಿಕೊಳ್ಳಲು ತಯಾರಿರಬೇಕು.
ಪ್ರಾಚೀನ ಆಯುರ್ವೇದ ವ್ಯವಸ್ಥೆಯಲ್ಲಿನ ಸೌಂದರ್ಯವೇನೆಂದರೆ, ಅದು ೫,೦೦೦ ವರ್ಷಗಳ ಕಾಲ-ಪರೀಕ್ಷೆಗೊಳಪಟ್ಟಿದೆ!

ಅದಕ್ಕಾಗಿಯೇ ಸಂಪ್ರದಾಯವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಹೀಗೆ ಹೇಳುವುದರೊಂದಿಗೆ, ಹಲವು ಸಾರಿ ಸಂಪ್ರದಾಯವು ಪ್ರಕ್ಷೇಪಿಸಿಕೊಂಡಿದೆ; ಸಂಪ್ರದಾಯದ ಹೆಸರಿನಲ್ಲಿ ಬಹಳಷ್ಟು ಸಂಗತಿಗಳನ್ನು ಇಟ್ಟುಕೊಳ್ಳಲಾಗಿದೆ.
ಉದಾಹರಣೆಗೆ, ಒಂದು ಚಿಕ್ಕ ಮಗುವಿನ ಶರೀರದ ಮೇಲೆ ಬಿಸಿಯಾದ ಪಾಯಸವನ್ನು ಹಚ್ಚಬೇಕು, ಆಗ ಮಗುವು ಚೆನ್ನಾಗಿ ಬೆಳೆಯುವುದು ಎಂದು ಜನರು ಹೇಳುತ್ತಾರೆ; ಅಥವಾ ಕೆಲವು ನಿಮಿಷಗಳವರೆಗೆ ಮಗುವನ್ನು ತಲೆಕೆಳಗಾಗಿ ನೇತಾಡಿಸಬೇಕು, ಬಹುಶಃ ಯಾವುದೋ ದೇವರು ಪ್ರಸನ್ನಗೊಳ್ಳುವನು ಅಥವಾ ಏನಾದರೂ; ಇವುಗಳೆಲ್ಲವೂ ಮೂರ್ಖ ಸಂಗತಿಗಳು. ಈ ಅಭ್ಯಾಸಗಳು ಬಹಳ ದೂರದವು; ಬಹುಶಃ ಕೆಲವು ಜನರು ಯಾವುದೋ ಕೆಲವು ಹಳ್ಳಿಗಳಲ್ಲಿ ಧರ್ಮದ ಹೆಸರಿನಲ್ಲಿ ಈ ಅಭ್ಯಾಸಗಳನ್ನು ಅನುಸರಿಸುತ್ತಿರಬೇಕು; ಅದು ಹಾಸ್ಯಾಸ್ಪದ.

ಸಂಪ್ರದಾಯವು ಹೇಳುತ್ತಿರುವುದನ್ನೆಲ್ಲಾ ಅನುಸರಿಸಬೇಕೆಂದು ನಾನು ಹೇಳುತ್ತಿಲ್ಲ; ಅದೇ ವೇಳೆಗೆ, ನೀವು ಸಂಪ್ರದಾಯವನ್ನು ಸಂಪೂರ್ಣವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ; ಮಧ್ಯದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

ಮನೆಯಲ್ಲಿ ಯಾರಾದರೂ ತೀರಿಹೋಗಿದ್ದರೆ ಅಥವಾ ಒಂದು ಮಗುವು ಜನಿಸಿದ್ದರೆ, ಅವರಿಗೆ ಸೂತಕವಿರುತ್ತದೆ. ಅಂದರೆ, ಹತ್ತು ದಿನಗಳವರೆಗೆ ಅವರನ್ನು ಮುಟ್ಟುವಂತಿಲ್ಲ. ಇದು ಅತೀ ಹತ್ತಿರದ ಸಂಬಂಧಿಕರಿಂದ ಅಭ್ಯಸಿಸಲ್ಪಡುತ್ತದೆ. ಅವರು ಏನನ್ನೂ ಆಚರಿಸುವುದಿಲ್ಲ ಅಥವಾ ಯಾರ ಮನೆಗೂ ಹೋಗುವುದಿಲ್ಲ; ಅವರ ಮನೆಯಿಂದ ಯಾರೂ ಏನನ್ನೂ ತೆಗೆದುಕೊಳ್ಳುವುದಿಲ್ಲ ಅಥವಾ ತಿನ್ನುವುದಿಲ್ಲ. ಇದರ ಹಿಂದಿರುವ ಕಾರಣವೇನು? ಯಾರಾದರೂ ಸತ್ತುಹೋದಾಗಲೆಲ್ಲಾ, ಜನರು ಎಷ್ಟು ದುಃಖದಲ್ಲಿರುತ್ತಾರೆಂದರೆ ಅವರ ದುಃಖದ ಕಂಪನಗಳು ಅವರ ಮನೆಗಳಲ್ಲಿ, ಅವರ ವಾತಾವರಣದಲ್ಲಿರುತ್ತವೆ, ಹೀಗಾಗಿ ಅವರು ಎಲ್ಲಾ ಜವಾಬ್ದಾರಿಗಳಿಂದ ಮುಕ್ತರಾಗಿರುತ್ತಾರೆ, ಅಷ್ಟೇ.ನೀವು ಯಾರನ್ನಾದರೂ ಮುಟ್ಟಿದರೆ ನಿಮಗೇನಾದರೂ ಆಗುವುದೆಂದಲ್ಲ. ಹತ್ತು ದಿನಗಳವರೆಗೆ ಕಂಪನವು ಹಾಗಿರುತ್ತದೆ, ದುಃಖದಿಂದ ತುಂಬಿಕೊಂಡು ಎಂದು ಮಾತ್ರ.

ಒಬ್ಬರಿಗೆ ಯಾವುದೇ ದುಃಖವಿಲ್ಲವೆಂದಿಟ್ಟುಕೊಳ್ಳೋಣ! ಕುಟುಂಬದಲ್ಲಿ ಒಂದು ದೀರ್ಘಕಾಲದವರೆಗೆ ಯಾರಾದರೂ ಅನಾರೋಗ್ಯದಿಂದಿದ್ದರೆ, ಅವರು ನಿಧನರಾಗುವಾಗ ಕುಟುಂಬವು ಸಂತೋಷಗೊಳ್ಳುತ್ತದೆ. "ಸರಿ, ಒಳ್ಳೆಯದು ಅವರು ಮುಕ್ತರಾದರು, ನಾನು ಅವರಿಗಾಗಿ ಸಂತೋಷಪಡುತ್ತೇನೆ ಮತ್ತು ನಾನು ನನಗಾಗಿ ಸಂತೋಷಪಡುತ್ತೇನೆ" ಎಂದು ಅವರು ಹೇಳುತ್ತಾರೆ. ಆಗ ಅಲ್ಲಿ ಯಾವುದೇ ಋಣಾತ್ಮಕವಾದ, ಖಿನ್ನತೆಯ, ದುಃಖಕರವಾದ ಕಂಪನಗಳಿರುವುದಿಲ್ಲ, ಯಾಕೆಂದರೆ ಅವರು ಅವರಿಗಾಗಿ ಸಂತೋಷಪಡುತ್ತಾರೆ! ಯಾವತ್ತಾದರೂ ಎಲ್ಲರೂ ಹೋಗಲೇಬೇಕು!

ಅದೇ ರೀತಿಯಲ್ಲಿ, ಒಂದು ಮಗುವು ಜನಿಸಿದಾಗ ಜನರು ಬಹಳ ಹರ್ಷಿತರಾಗಿರುತ್ತಾರೆ, ಅತಿಯಾಗಿ ಸಂತೋಷಗೊಂಡಿರುತ್ತಾರೆ. ಆಗ ಕೂಡಾ ಕಂಪನಗಳು ಶಾಂತಿಯುತವಾಗಿರುವುದಿಲ್ಲ. ಹೀಗಾಗಿ ಅಂತಹ ಸಮಯಗಳಲ್ಲಿ ಕೂಡಾ ಒಬ್ಬರು ಎಲ್ಲಾ ಕಟ್ಟುಪಾಡುಗಳಿಂದ ಮುಕ್ತರಾಗಿರುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಜನರು ಇದನ್ನು ಎಷ್ಟರಮಟ್ಟಿಗೆ ಎಳೆಯುತ್ತಾರೆಂದರೆ, ಅದು ನಿಮ್ಮ ಬುದ್ಧಿಗೆ ಮೆಚ್ಚುಗೆಯಾಗುವುದಿಲ್ಲ.

ಋತುಚಕ್ರದ ಸಮಯದಲ್ಲಿ ಒಬ್ಬಳು ಸ್ತ್ರೀಯು ಚೆನ್ನಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಹೀಗೆ, ಇದು ಕೇವಲ ಆ ತಡೆಯನ್ನು ಇಟ್ಟುಕೊಳ್ಳಲು, ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವುದು ಬೇಡವೆಂದು ಸ್ತ್ರೀಯರಿಗೆ ಹೇಳುವುದಕ್ಕಾಗಿ ಈ ಸಂಪ್ರದಾಯವನ್ನು ಉಳಿಸಿಕೊಳ್ಳಲಾಗಿದೆ. ಇದು, ಸ್ತ್ರೀಯರು ಸುಮ್ಮನೆ ವಿಶ್ರಾಂತಿ ತೆಗೆದುಕೊಳ್ಳಲು, ನಿದ್ರಿಸಲು, ವಿಶ್ರಾಮ ಮಾಡಲು, ಓದಲು, ಸ್ವಲ್ಪ ಹೆಣಿಗೆ ಅಥವಾ ಏನನ್ನಾದರೂ ಮಾಡಲು ಅನುಮತಿಸುವುದಕ್ಕಾಗಿ. ಇಲ್ಲದಿದ್ದರೆ, ಸ್ತ್ರೀಯರು ಕೆಲಸ ಮಾಡಲು ಪ್ರಾರಂಭಿಸುವಾಗ, ಅವರು ಅತಿಯಾಗಿ ಕೆಲಸ ಮಾಡುತ್ತಾರೆ.

ಅನ್ನ ಮತ್ತು ಬೇಯಿಸಿದ ಆಹಾರದ ಬಗ್ಗೆ ಹೇಳುವುದಾದರೆ; ಪ್ರಾಚೀನ ದಿನಗಳಲ್ಲಿ, ಬೇಯಿಸಿದ ಆಹಾರವು ಅಂಟಂಟಾಗಿರುತ್ತಿತ್ತು. ಸಾಮಾನ್ಯವಾಗಿ ಅದು ಪಾತ್ರೆಯಿಂದ ತುಂಬಿ ಹೊರಚೆಲ್ಲುತ್ತಿತ್ತು. ನೀವು ಪಾತ್ರೆಯನ್ನು ಮುಟ್ಟಿ ನಂತರ ಬೇರೇನನ್ನಾದರೂ ಮುಟ್ಟಿದಾಗ, ಎಲ್ಲವೂ ಅಂಟಂಟಾಗುತ್ತಿತ್ತು. ನೀವು ಆಹಾರವನ್ನು ಮುಟ್ಟಿದರೆ, ಅದು ನಿಮ್ಮ ಕೈಗಳಿಗೆ ಅಂಟುತ್ತಿತ್ತು. ಹಾಗಾಗಿ ನಿಮ್ಮ ಕೈಗಳನ್ನು ತೊಳೆಯುವುದು ಒಳ್ಳೆಯದು; ಇದಾಗಿತ್ತು ಕಾರಣ. ಇವತ್ತು ನೀವದನ್ನು ಕೈಯಿಂದ ಮುಟ್ಟುವುದಿಲ್ಲ, ನೀವು ಚಮಚಗಳನ್ನು ಬಳಸುತ್ತೀರಿ.

ಆ ದಿನಗಳಲ್ಲಿ, ಶುಚಿತ್ವದ ಪ್ರಜ್ಞೆಯು ಬಹಳಷ್ಟು ಚೆನ್ನಾಗಿತ್ತು; ಹೀಗಾಗಿ, ನೀವು ಪಿಷ್ಟದಿಂದ್ ಕೂಡಿದ ಆಹಾರವನ್ನು ಮುಟ್ಟಿದಾಗ, ನೀವು ನಿಮ್ಮ ಕೈಗಳನ್ನು ತೊಳೆಯಬೇಕು. ಅವರು ಹಣ್ಣುಗಳನ್ನು ಕೂಡಾ ಪ್ರತ್ಯೇಕವಾಗಿ ಇಡುತ್ತಿದ್ದರು. ಹೀಗಿದ್ದರೂ, ಯಾರಾದರೂ ಈ ಪದ್ಧತಿಗಳ ಬಗ್ಗೆ ಸಂಶೋಧನೆ ಮಾಡಬೇಕು.

ಯಹೂದಿಯರಲ್ಲಿ ಕೂಡಾ ಇದೇ ರೀತಿಯ ಒಂದು ಸಂಪ್ರದಾಯವಿದೆ; ನೀವು ಹಾಲನ್ನು ಮುಟ್ಟಿದರೆ, ಆಗ ನೀವು ಮಾಂಸವನ್ನು ಮುಟ್ಟುವುದಿಲ್ಲ; ಅವರಲ್ಲಿ ನಿರ್ದಿಷ್ಟ ನಿಯಮಗಳಿವೆ.

ಜಪಾನೀಯರಲ್ಲೂ ಕೂಡಾ ಇಂತಹ ಪದ್ಧತಿಗಳಿವೆ; ಸಾಂಪ್ರದಾಯಿಕ ಜಪಾನೀ ಜನರು ಅತಿಥಿಗಳಿಗಾಗಿ ಪ್ರತ್ಯೇಕ ಲೋಟಗಳನ್ನು ಮತ್ತು ಪಾತ್ರೆಗಳನ್ನು ಇಡುತ್ತಾರೆ; ಅತಿಥಿಗಳ ತೊಳೆದಿಟ್ಟ ಪಾತ್ರೆಗಳನ್ನಿರಿಸಲಾದ ಪ್ರತ್ಯೇಕವಾದ ಕಪಾಟೊಂದನ್ನು ಅವರು ಹೊಂದಿರುತ್ತಾರೆ. ಅವರು ಅತಿಥಿಗಳ ಪಾತ್ರೆಗಳನ್ನು ಉಪಯೋಗಿಸುವುದಿಲ್ಲ ಮತ್ತು ತಮ್ಮ ಪಾತ್ರೆಗಳನ್ನು ಬೇರೆ ಯಾರಾದರೂ ಉಪಯೋಗಿಸುವುದಕ್ಕೂ ಅವರು ಬಿಡುವುದಿಲ್ಲ. ಜಪಾನಿನಲ್ಲಿ ಇದನ್ನು ನೋಡಿ ನನಗೆ ಬಹಳ ಅಚ್ಚರಿಯಾಯಿತು. ಭಾರತದಲ್ಲಿ ಕೂಡಾ, ತಮ್ಮ ಲೋಟಗಳನ್ನು ಮತ್ತು ತಟ್ಟೆಗಳನ್ನು ಪ್ರತ್ಯೇಕವಾಗಿರಿಸುವ ಈ ಸಂಪ್ರದಾಯವನ್ನು ಕೆಲವು ಜನರು ಅನುಸರಿಸುತ್ತಿದ್ದರು. ಜಪಾನಿನಲ್ಲಿ, ಸಂಪ್ರದಾಯಸ್ಥ ಕುಟುಂಬದ ಮನೆಗಳಲ್ಲಿ ಮತ್ತು ಮಠಗಳಲ್ಲಿ ಇದು ಬಹಳ ಚಾಲ್ತಿಯಲ್ಲಿದೆ.

ಈ ಅಭ್ಯಾಸಗಳಲ್ಲಿ ಹಲವು ಒಂದು ವೈಜ್ಞಾನಿಕ ಹಿನ್ನೆಲೆಯನ್ನು ಅಥವಾ  ಯಾವುದೇ ಕಾರಣವನ್ನು ಹೊಂದಿಲ್ಲ, ಆಗ ನಾವು ಅವುಗಳನ್ನು ಅಭ್ಯಸಿಸುವುದನ್ನು ನಿಲ್ಲಿಸಬೇಕು. ಯಾವುದಾದರೂ ಅಭ್ಯಾಸಗಳು ಇದ್ದರೆ, ಅದು ಒಳ್ಳೆಯದೇ ಎಂಬುದನ್ನು ನಾವು ನೋಡಬೇಕು, ಅಥವಾ ಕಡಿಮೆಪಕ್ಷ ಆ ದಿಕ್ಕಿನಲ್ಲಿ ಸ್ವಲ್ಪ ಪ್ರಯೋಗವನ್ನಾದರೂ ಮಾಡಬೇಕು.

ಪ್ರಶ್ನೆ: ಗುರುದೇವ, ಮಾದಕ ದ್ರವ್ಯಗಳ ವ್ಯಸನಕ್ಕೆ ಬಿದ್ದಿರುವ, ತನ್ನನ್ನು ಹಾಗೂ ಇತರರನ್ನು ನೋಯಿಸುವುದನ್ನು ಮುಂದುವರಿಸುತ್ತಿರುವ ಒಬ್ಬ ವ್ಯಕ್ತಿಯನ್ನು ನೀವು ಸ್ವೀಕರಿಸುವುದು ಹೇಗೆ? ಅವನ ಅನುರಾಗ, ಶೌರ್ಯ ಮತ್ತು ಶರಣಾಗತಿಯ ನಡುವೆ ನೀವೊಂದು ಗೆರೆಯನ್ನೆಳೆಯುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್: ಅವನನ್ನು ಅದರಿಂದ ಹೊರಕ್ಕೆ ತರಲು ನೀವು ನಿಮ್ಮಿಂದ ಸಾಧ್ಯವಾದುದನ್ನೆಲ್ಲಾ ಮಾಡಬೇಕು. ಯುಕ್ತಿ, ಶಕ್ತಿ, ಪ್ರೀತಿ; ಪ್ರೀತಿಯಿಂದ, ಯುಕ್ತಿಯಿಂದ ಮತ್ತು ಸ್ವಲ್ಪ ಶಕ್ತಿಯಿಂದ, ಹೇಗಾದರೂ ಅದರಿಂದ ಹೊರಬರಲು ನೀವು ಅವನಿಗೆ ಸಹಾಯ ಮಾಡಬೇಕು. ಅತ್ಯುತ್ತಮವಾದುದೆಂದರೆ, ಅವರನ್ನು ಒಂದು ಪುನರ್ವಸತಿಯಲ್ಲಿ ಸೇರಿಸುವುದು. ನಾವು ಕೋಲ್ಕತ್ತಾದಲ್ಲಿ ಒಂದನ್ನು ಹೊಂದಿದ್ದೇವೆ ಮತ್ತು ಎಲ್ಲೆಡೆಗಳಲ್ಲಿ ಇತರ ಹಲವಾರು ಪುನರ್ವಸತಿ ಕೇಂದ್ರಗಳಿವೆ. ಅವನನ್ನು ಅಂತಹ ಒಂದು ಕೇಂದ್ರಕ್ಕೆ ಕರೆದುಕೊಂಡು ಹೋಗು, ಅವನು ಸುದರ್ಶನ ಕ್ರಿಯೆ ಮಾಡುವಂತೆ ಮಾಡು. ಅವನು ಕ್ರಿಯೆ ಮತ್ತು ಪ್ರಾಣಾಯಾಮಗಳನ್ನು ಕಲಿತರೆ, ಅದೊಂದು ದೊಡ್ಡ ಬದಲಾವಣೆಯನ್ನುಂಟುಮಾಡುತ್ತದೆ. ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುವಾಗ ಹಲವಾರು ಜನರು ಮಾದಕದ್ರವ್ಯಗಳನ್ನು ಮತ್ತು ಮದ್ಯಸಾರವನ್ನು ಬಿಟ್ಟಿದ್ದಾರೆ.

ಪ್ರಶ್ನೆ: ಗುರುದೇವ, ಈ ದಿನಗಳಲ್ಲಿ ಬಹಳಷ್ಟು ಜನರು ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ. ಒಬ್ಬರು ಈ ರೋಗವನ್ನು ಹೇಗೆ ತಡೆಯಬಹುದು? ಬಳಲುವಿಕೆಯನ್ನು ಕಡಿಮೆಮಾಡಲು ರೋಗಿ ಮತ್ತು ಅವನ ಕುಟುಂಬದ ಸದಸ್ಯರು ಏನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಜೀವನಶೈಲಿಯಲ್ಲಿ ಒಂದು ಬದಲಾವಣೆಯು ಸಹಾಯಕವಾಗಬಲ್ಲದು. ನೀವು ಮಲಗಲು ಹೋಗುವಾಗ, ನಿಮ್ಮೆಲ್ಲಾ ಇಲೆಕ್ಟ್ರೋನಿಕ್ ಸಾಧನಗಳನ್ನು ಆಫ್ ಮಾಡಿ; ನೀವು ನಿದ್ರಿಸಲು ಹೋಗುವಾಗ ನಿಮ್ಮ ಐ-ಫೋನ್, ಐ-ಪ್ಯಾಡ್‌ಗಳು, ವೈಫೈ, ಎಲ್ಲವನ್ನೂ ಆಫ್ ಮಾಡಿ. ಸುತ್ತಲೂ ಅಷ್ಟೊಂದು ವಿದ್ಯುನ್ಮಾನ (ಇಲೆಕ್ಟ್ರೋನಿಕ್) ಕಂಪನಗಳನ್ನು ಹೊಂದಿರುವುದು ಒಳ್ಳೆಯದಲ್ಲ.

ಹೆಚ್ಚಾಗಿ, ಸರಿಯಲ್ಲದ ಆಹಾರಗಳನ್ನು ನೀವು ತಿನ್ನುತ್ತೀರಿ. ನೀವು ಸಾಕಷ್ಟು ಧ್ಯಾನ ಮಾಡದಿದ್ದರೆ, ದೇಹಕ್ಕೆ ಹಾನಿಯುಂಟಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ತಿನ್ನಿ. ತ್ರಿಫಲ, ಚ್ಯವನಪ್ರಾಶ ತೆಗೆದುಕೊಳ್ಳಿ. ಅರಸಿನವನ್ನು ಬಳಸಿ; ಇವುಗಳೆಲ್ಲವೂ ಶರೀರದೊಳಕ್ಕೆ ಹೋಗಬೇಕಾದ ಉತ್ಕರ್ಷಣ ನಿರೋಧಕಗಳಾಗಿವೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್:

Hard work is always rewarded

ಗುರುವಾರ, ನವೆಂಬರ್ 28, 2013

ಆಘಾತದ ಚತುರ್ವಿಧ ಅವಲೋಕನ

ನವೆಂಬರ್ ೨೮, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ನಿರೀಕ್ಷೆಯಿಲ್ಲದೆಯೇ ಪ್ರೀತಿಸುತ್ತಾ ಇರುವುದು ಹೇಗೆ? ಅದು ಹೇಗೆ ಸಾಧ್ಯ? ಪ್ರೇಮದಲ್ಲಿ ನಿರೀಕ್ಷೆಗಳು ಏಳುತ್ತವೆ ಮತ್ತು ಅವುಗಳು ಈಡೇರದಿದ್ದರೆ, ಅದು ನೋವನ್ನುಂಟುಮಾಡುತ್ತದೆ. 

ಶ್ರೀ ಶ್ರೀ ರವಿ ಶಂಕರ್: ಹೌದು, ನೀವು ಈ ಕಸರತ್ತುಗಳ ಮೂಲಕ ಹಾದುಹೋಗಬೇಕಾಗುವುದು. ನಿಮ್ಮಲ್ಲಿ ವಿವೇಕವಿದ್ದರೆ, ಕಲಿಯುವುದಕ್ಕಾಗಿ ನೀವು ನೋವಿನ ಮೂಲಕ ಹಾದುಹೋಗಬೇಕಾಗಿಲ್ಲ. ವಿವೇಕದ ಕೊರತೆಯಿರುವಾಗ ನೀವು ನೋವಿನ ಮೂಲಕ ಹಾದುಹೋಗುವಿರಿ, ಆದರೆ ಸ್ವಲ್ಪ ಸಮಯದಲ್ಲೇ ನೀವು ಅದರಿಂದ ಹೊರಬರುವಿರಿ, ಚಿಂತಿಸಬೇಡಿ. ಇದಕ್ಕಾಗಿಯೇ ಒಬ್ಬರು ಜೀವನದಲ್ಲಿ ಒಂದು ವಿಶಾಲವಾದ ದೃಷ್ಟಿಕೋನವನ್ನು ಹೊಂದಿರುವುದು ಮುಖ್ಯವಾಗಿರುವುದು. ನೀವು ವಿಶಾಲ ದೃಷ್ಟಿಕೋನವನ್ನು ಹೊಂದಿರುವಾಗ, ಈ ಎಲ್ಲಾ ಕ್ಷುಲ್ಲಕ ವಿಷಯಗಳು ನಿಜವಾಗಿಯೂ ನಿಮಗೆ ತೊಂದರೆಯುಂಟುಮಾಡುವುದಿಲ್ಲ. ಅವುಗಳೆಲ್ಲವೂ ಸಾಗರದ ಮೇಲಿನ ಅಲೆಗಳಂತೆ, ಅವುಗಳು ಏಳುತ್ತವೆ ಮತ್ತು ಬೀಳುತ್ತವೆ; ಸರೋವರದಲ್ಲಿನ ತರಂಗಗಳಂತೆ, ಗಾಳಿ ಬೀಸುವಾಗ ಅವುಗಳು ಏಳುತ್ತವೆ ಮತ್ತು ಗಾಳಿಯಿಲ್ಲದಿರುವಾಗ ಅಲ್ಲಿ ತರಂಗಗಳಿರುವುದಿಲ್ಲ. ಹಾಗಾಗಿ, ವಿಶಾಲ ದೃಷ್ಟಿಕೋನವನ್ನು ಹೊಂದಿ. ಅದು ಆತ್ಮ ಜ್ಞಾನವಾಗಿದೆ; ಯಾವುದಕ್ಕೂ ನನ್ನನ್ನು ನಡುಗಿಸಲು ಸಾಧ್ಯವಿಲ್ಲ, ನಾನು ಭಾವನೆಗಳಿಗಿಂತ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು, ನಾನು ನನ್ನ ಸುತ್ತಲಿರುವ ಪ್ರಪಂಚಕ್ಕಿಂತ, ನನ್ನ ಸುತ್ತಲಿರುವ ಜನರಿಗಿಂತ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು. ಅವರ ಹೊಗಳಿಕೆ ಮತ್ತು ದೂಷಣೆ ವಿಷಯವಲ್ಲ. ನಾನು ಇದೆಲ್ಲದಕ್ಕಿಂತಲೂ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು! ಈ ಅರಿವು ನಮ್ಮನ್ನು ಮೇಲೆತ್ತುತ್ತದೆ, ಆಗ ಒಬ್ಬನು ಭಾವನೆಗಳು ಮತ್ತು ನೋವಿನ ಸಾಗರದಲ್ಲಿ ಮುಳುಗುವುದಿಲ್ಲ.

ನೋವಿನ ಕಡೆಗೆ ನೋಡಲಿರುವ ನಾಲ್ಕು ವಿಧಾನಗಳಿವೆ.

೧. ನಿಮ್ಮನ್ನು ನೋಯಿಸಿರುವ ಒಬ್ಬರು ನೊಂದಿದ್ದಾರೆ. ಅವರಲ್ಲಿ ಗಾಯದ ಗುರುತುಗಳಿವೆ, ಅವರು ಅಸಂತುಷ್ಟರಾಗಿಯೂ ದುಃಖಿತರಾಗಿಯೂ ಇದ್ದಾರೆ. ತಮ್ಮಲ್ಲೇನಿದೆಯೋ ಅದನ್ನು ಮಾತ್ರ ಹಂಚಲು ಅವರಿಗೆ ಸಾಧ್ಯ. ಅವರು ನೊಂದಿದ್ದಾರೆ ಮತ್ತು ಅವರು ಆ ನೋವನ್ನು ನಿಮ್ಮೊಂದಿಗೆ ಹಂಚುತ್ತಿದ್ದಾರೆ.

ಹೀಗೆ ನಿಮ್ಮಲ್ಲಿ ನೋವನ್ನುಂಟುಮಾಡುವ ಅಥವಾ ನಿಮ್ಮನ್ನು ನೋಯಿಸುವ ಜನರು, ಅವರದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರುವರೆಂದು ನೀವು ಅಂದುಕೊಳ್ಳುತ್ತೀರಿ. ವಾಸ್ತವವಾಗಿ ಅದು ಯಾಕೆಂದರೆ, ಅವರೊಳಗೆ ಸಂತೋಷವಿಲ್ಲ, ಅವರಲ್ಲಿ ಆನಂದವಿಲ್ಲ, ಅವರಲ್ಲಿ ಶಾಂತಿಯಿಲ್ಲ. ಅವರಲ್ಲಿ ನೋವಿದೆ ಮತ್ತು ಅವರು ಗಾಯಗೊಂಡಿದ್ದಾರೆ, ಹಾಗಾಗಿ ಅವರು ನಿಮಗೆ ನೋವನ್ನುಂಟುಮಾಡುತ್ತಿದ್ದಾರೆ. ಹೀಗೆ, ಒಬ್ಬ ಗಾಯಗೊಂಡಿರುವ ವ್ಯಕ್ತಿಗೆ ಏನು ಬೇಕಾಗಿದೆ? ಕರುಣೆ. ಹೀಗಾಗಿ, ನಿಮ್ಮನ್ನು ಯಾರು ನೋಯಿಸುವರೋ ಅವರ ಮೇಲೆ ನೀವು ಕರುಣೆ ತೋರಬೇಕು. ಯಾಕೆಂದರೆ ಅವರು ನೊಂದಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಇದು ಒಂದನೆಯದು.

೨. ನಿಮಗೆ ಯಾರು ನೋವನ್ನುಂಟುಮಾಡುತ್ತಿದ್ದಾರೋ ಅವರು ಅಜ್ಞಾನಿಗಳು. ಅವರಲ್ಲಿ ಜೀವನದ ಬಗ್ಗೆ ಒಂದು ವಿಶಾಲ ದೃಷ್ಟಿಕೋನವಿಲ್ಲ. ಅವರು ತಮ್ಮನ್ನು ತಾವೇ ತಿಳಿದಿಲ್ಲ, ಮತ್ತು ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿಯದು. ಅವರು ಅಜ್ಞಾನಿಗಳು ಮತ್ತು ಅಹಂಕಾರಿಗಳಾಗಿರುವರು. ಅವರಿಗಾಗಿ ನೀವು ಕೇವಲ ವಿಷಾದವನ್ನು ತೋರಬಹುದು ಮತ್ತು ಯಾವತ್ತಾದರೂ ಒಂದು ದಿನ ಅವರು ಬುದ್ಧಿಶಾಲಿಗಳಾಗಬಹುದೆಂದು ಆಶಿಸಬಹುದು. ತಮ್ಮ ಕೃತ್ಯಗಳು ಇತರರಿಗೆ ನೋವನ್ನುಂಟುಮಾಡುತ್ತಿವೆಯೆಂಬುದು ಅವರಿಗೆ ತಿಳಿಯದು, ಮತ್ತು ಅವರು ಹೆಚ್ಚು ಸಂವೇದನಾಶೀಲರಾಗಲೆಂದು ನೀವು ಅವರಿಗೆ ಹಾರೈಸಿ.

೩. ಅದು ಕೇವಲ ಕರ್ಮ. ನೀವು ಈ ನೋವನ್ನು ಪಡೆಯಲೇಬೇಕಿತ್ತು ಮತ್ತು ಈ ವ್ಯಕ್ತಿಯಲ್ಲದಿದ್ದರೆ ಬೇರೆ ಯಾರಾದರೂ ಅದನ್ನು ನಿಮಗೆ ಕೊಡುತ್ತಿದ್ದರು. ಭೂತಕಾಲದಲ್ಲಿ ನಾವು ಯಾರಿಗೋ ಏನೋ ನೋವನ್ನುಂಟುಮಾಡಿರಬೇಕು, ಹಾಗಾಗಿ ಪ್ರಕೃತಿಯು ಅದನ್ನು ನಮಗೆ ಈಗ ಹಿಂತಿರುಗಿ ತರುತ್ತಿದೆ. ಅದು ಕೇವಲ ಕರ್ಮದ ಮರುಪಾವತಿ ಎಂಬುದು ನಿಮಗೆ ತಿಳಿದಿರುವಾಗ, ನಿಮಗೆ ಬಹಳವಾಗಿ ಸ್ಥಿರವಾದಂತೆ ಅನ್ನಿಸುತ್ತದೆ. ಅಲ್ಲವೇ?

೪. ನಿಮ್ಮನ್ನು ಬಲಶಾಲಿಗಳನ್ನಾಗಿ ಮಾಡುವುದಕ್ಕಾಗಿ ಅದನ್ನು ಮಾಡಲಾಗಿದೆ. ನೀವು ಬಲಶಾಲಿಗಳಾಗಲಿಯೆಂದು; ನಿಮ್ಮೊಳಗಿರುವ ಶಕ್ತಿ ಸಾಮರ್ಥ್ಯಗಳನ್ನು ನೀವು ಕಂಡುಕೊಳ್ಳಲಿಯೆಂದು ಪ್ರಕೃತಿಯು ಇದನ್ನು ನಿಮಗೆ ತರುತ್ತಿದೆ.

ಸಾಮಾನ್ಯವಾಗಿ ಚಪ್ಪರಗಳನ್ನು ಹಾಕುವಾಗ, ಒಂದು ಕಂಬವನ್ನು ಅದರ ಜಾಗದಲ್ಲಿ ಹಾಕಿದ ನಂತರ ಅದು ಸಾಕಷ್ಟು ಬಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಅವರು ಕಂಬವನ್ನು ಅಲ್ಲಾಡಿಸುತ್ತಾರೆ. ನೋವೆಂಬುದು ಹಾಗೆಯೇ, ನೀವು ನಿಮ್ಮಲ್ಲಿಯೇ ಚೆನ್ನಾಗಿ ಸ್ಥಾಪಿತರಾಗಿರುವಿರೇ, ನೀವು ಜ್ಞಾನದಲ್ಲಿರುವಿರೇ ಅಥವಾ ಇಲ್ಲವೇ ಎಂಬುದನ್ನು ನೋಡಲು.
ಪ್ರತಿಯೊಂದು ನೋವೂ ನಿಮ್ಮನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿದೆ, ನೀವು ಬಲಶಾಲಿಗಳಾಗಿರುವಿರೇ ಅಥವಾ ಇಲ್ಲವೇ ಎಂದು ನೋಡಲು. ಅದು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಅದು ನಿಮ್ಮನ್ನು ಹೆಚ್ಚು ಬಲಶಾಲಿಗಳನ್ನಾಗಿ ಮಾಡುವುದಕ್ಕಾಗಿ.

ಒಬ್ಬ ಬುದ್ಧಿವಂತ ವ್ಯಕ್ತಿ ಅಥವಾ ಯಾರೋ ಜ್ಞಾನಿಗಳು ನಿಮ್ಮನ್ನು ನೋಯಿಸುತ್ತಿರುವರೆಂದು ನಿಮಗನ್ನಿಸಿದರೆ, ಆಗ ನೀವು ಕೃತಜ್ಞರಾಗಿರಬೇಕು ಯಾಕೆಂದರೆ ಅದರಲ್ಲಿ ಏನೋ ಉದ್ದೇಶವಿರುತ್ತದೆ. ನೀವು ಬಲಶಾಲಿಗಳಾಗಿರಬೇಕೆಂದು ಅವರು ಬಯಸುತ್ತಾರೆ.

ನಿಮ್ಮ ತಾಯಿಯು ನಿಮ್ಮನ್ನು ಬೈಯುತ್ತಿದ್ದರೆ, ಅವಳು ಅದನ್ನೊಂದು ಕೆಟ್ಟ ಉದ್ದೇಶದಿಂದ ಮಾಡುತ್ತಿರುವುದಲ್ಲ. ನಿಮ್ಮ ತಂದೆಯು ನಿಮ್ಮನ್ನು ಬೈಯುತ್ತಿದ್ದರೆ, ನೀವು, "ಓ ನನ್ನ ತಂದೆಯು ನನ್ನನ್ನು ನೋಯಿಸಿದರು! ನನ್ನ ತಾಯಿ ನನ್ನನ್ನು ನೋಯಿಸಿದಳು!" ಎಂದು ಹೇಳಲು ಸಾಧ್ಯವಿಲ್ಲ.

ನಿಮ್ಮ ಹೆತ್ತವರು ನಿಮ್ಮನ್ನು ನೋಯಿಸುತ್ತಿರುವುದಿಲ್ಲ; ಅವರು ನಿಮ್ಮ ಬಗ್ಗೆ ಕಾಳಜಿಯನ್ನು ಮತ್ತು ಚಿಂತೆಯನ್ನು ಹೊಂದಿರುತ್ತಾರೆ. ತಮ್ಮ ಸೀಮಿತ ತಿಳುವಳಿಕೆ ಮತ್ತು ನಿಮ್ಮ ಮೇಲಿನ ಪ್ರೇಮದಿಂದಾಗಿ ಅವರು ಹಾಗೆ ಮಾಡುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು.

ನಿಮಗೆ ನೋವಾದಾಗ ನೀವು ಅನುಭವಿಸುವ ಎರಡು ಪ್ರಧಾನ ವಿಷಯಗಳಿವೆ - ಸಂಪರ್ಕದ ಕೊರತೆ ಮತ್ತು ತಿಳುವಳಿಕೆಯ ಕೊರತೆ. ನೋವಿಗಿರುವ ಇನ್ನೊಂದು ಕಾರಣವನ್ನು ನೀವು ಲೆಕ್ಕ ಹಾಕಲು ಬಯಸುವುದಾದರೆ ಅದು, ಅಸಂಬದ್ಧ ಅಥವಾ ಕ್ಷಣಿಕವಾದ ವಿಷಯಗಳಿಗೆ ಅತಿಯಾಗಿ ಸಂವೇದನಾಶೀಲರಾಗಿರುವುದು. ಘಟನೆಗಳೆಲ್ಲಾ ನಶ್ವರವಾದವು, ಅವುಗಳೆಲ್ಲವೂ ಮುಂದೆ ಸಾಗುತ್ತವೆ. ಎಲ್ಲವೂ ಬದಲಾಗುತ್ತಿವೆ. ನೀವು ಅತಿಯಾಗಿ ಸಂವೇದನಾಶೀಲರಾಗಬೇಕಾದ ಅಗತ್ಯವಿಲ್ಲ, "ಓ ಅವನು ನನಗೆ ಹೀಗೆ ಹೇಳಿದ, ಅವಳು ನನಗೆ ಹೀಗೆ ಹೇಳಿದಳು!" ಎಂದು.

ಕನ್ನಡದಲ್ಲೊಂದು ಗಾದೆ ಮಾತಿದೆ, ’ಎಲುಬಿಲ್ಲದ ನಾಲಿಗೆ; ದೇವರು ನಾಲಿಗೆಯಲ್ಲಿ ಎಲುಬನ್ನು ಇಟ್ಟಿಲ್ಲ; ನಾಲಿಗೆ ಹೊರಳಾಡುತ್ತದೆ, ಎಲ್ಲಾ ದಿಕ್ಕುಗಳಲ್ಲೂ ಚಲಿಸುತ್ತದೆ.’ ಜನರ ಬಾಯಿಗಳಿಂದ ಯಾವ ಪದಗಳು ಹೊರಬರುತ್ತವೆಯೆಂಬುದರ ಬಗ್ಗೆ ಚಿಂತಿಸಬೇಡಿ.

ಇವತ್ತು ಪ್ರಪಂಚದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಹಲವಾರು ರೋಗಗಳು ಮತ್ತು ಸಂಘರ್ಷಗಳ ಮೂಲ ಕಾರಣವೆಂದರೆ, ನಾವು ಬಾಯಿಯೊಳಕ್ಕೆ ಏನನ್ನು ಹಾಕಬೇಕು ಎಂಬುದು ನಮಗೆ ತಿಳಿಯದು ಮತ್ತು ಬಾಯಿಯಿಂದ ಏನು ಹೊರಕ್ಕೆ ಬರಬೇಕು ಎಂಬುದು ನಮಗೆ ತಿಳಿಯದು! ಜನರು ಎಲ್ಲಾ ರೀತಿಯ ವಸ್ತುಗಳನ್ನು ತಮ್ಮ ಬಾಯಿಗಳಲ್ಲಿ ತುಂಬಿಸುತ್ತಿರುತ್ತಾರೆ. ಈ ಚಿಕ್ಕ ರಂಧ್ರದಲ್ಲಿ, ಟನ್ನುಗಟ್ಟಲೆ ಆಹಾರವು ಒಳಕ್ಕೆ ಹೋಗುತ್ತದೆ ಮತ್ತು ಬಹಳ ಪ್ರಮಾಣದ ಕಸವು ಹೊರಬರುತ್ತದೆ; ಇದು ಪ್ರಪಂಚದ ದುಃಖವಾಗಿದೆ.

ಮತ್ತೆ, ಕನ್ನಡದ ಒಬ್ಬ ಕವಿಯು ಹೀಗೆಂದು ಹೇಳಿದ್ದಾರೆ, "ಪ್ರಪಂಚದಲ್ಲಿ ಜನರು ಮೋಜು ಪಡುವುದೆಲ್ಲಾ ಮಾತಿನ ಮೂಲಕ!"
ಮಾತಿನ ಕಾರಣದಿಂದಾಗಿ ಹಾಸ್ಯವು ನಡೆಯುತ್ತದೆ, ಎಲ್ಲಾ ಸಂಘರ್ಷಗಳು ಮತ್ತು ಹಗೆತನವು ಕೂಡಾ ಮಾತಿನ ಮೂಲಕ. ಮನೋರಂಜನೆಯನ್ನು ನೀಡುವುದು, ನಿಮ್ಮನ್ನು ನಗಿಸುವುದು ಮಾತಾಗಿದೆ. ಮತ್ತೆ, ಸಮಾಜದಲ್ಲಿ ವಿಭಜನೆಗಳನ್ನು ಮತ್ತು ಜನರ ನಡುವೆ ಹಗೆತನವನ್ನು ಸೃಷ್ಟಿಸುವುದು ಮಾತಾಗಿದೆ.

ನಿಮ್ಮ ಮಾತಿನಿಂದಾಗಿ ನಿಮಗೆ ಎಲ್ಲಾ ವಿವಿಧ ರೀತಿಯ ಸಂಪತ್ತುಗಳು ಬರುತ್ತವೆ. ಮಾತೆಂಬುದು ಪ್ರಪಂಚದಲ್ಲಿ ಒಂದು ನಿಜವಾದ ಮಾಣಿಕ್ಯವಾಗಿದೆ. ಹಾಗಾಗಿ ಎಲ್ಲಾ ನೋವು ಕೇವಲ ಮಾತಾಗಿದೆ. ಕೆಲವು ಶಬ್ದಗಳು ಹೊರಬರುತ್ತವೆ ಮತ್ತು ಒಬ್ಬರು, "ಓ, ನನಗೆ ನೋವಾಯಿತು" ಎಂದು ಹೇಳುತ್ತಾರೆ!

ಈಗ, ಯಾರಾದರೂ ನಿಮ್ಮನ್ನು ದೈಹಿಕವಾಗಿ ನೋಯಿಸಲು ಪ್ರಯತ್ನಿಸುತ್ತಿರುವುದಾದರೆ, ನೀವು ಜಾಗರೂಕರಾಗಿರಿ, ನಿಮ್ಮನ್ನು ಸನ್ನದ್ಧರಾಗಿಸಿಕೊಳ್ಳಿ. ಯಾರಾದರೂ ನಿಮ್ಮನ್ನು ನೋಯಿಸಲು ಬಂದರೆ ನೀವು ಅವರ ಕಾಲುಗಳಿಗೆ ಬೀಳಿ ಎಂದು ನಾನು ಹೇಳುತ್ತಿಲ್ಲ. ಇಲ್ಲ, ನೀವು ಬುದ್ಧಿವಂತರಾಗಿರಿ ಮತ್ತು ನಿಮ್ಮನ್ನು ನೀವೇ ಸಂರಕ್ಷಿಸಿಕೊಳ್ಳಿ; ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು, ಅವರು ಅಲ್ಲಿ ಇಲ್ಲಿ ಒಬ್ಬಂಟಿಯಾಗಿ ಹೋಗಬಾರದು.

ಸಮಸ್ಯೆಯೆಂದರೆ, ಮದ್ಯಪಾನದ ಪ್ರಮಾಣವು ಮೂರು ಪಟ್ಟು ಜಾಸ್ತಿಯಾಗಿದೆ ಮತ್ತು ಅದಕ್ಕನುಸಾರವಾಗಿ ಹಿಂಸಾಚಾರವೂ ಕೂಡಾ ಪ್ರಪಂಚದಲ್ಲಿ ಹೆಚ್ಚಾಗಿದೆ. ಗಂಡಸರು ಕೆಟ್ಟವರಲ್ಲ, ಆದರೆ ಅವರನ್ನು ಕೆಟ್ಟವರನ್ನಾಗಿಸುವುದು ಯಾವುದೆಂದರೆ ಮದ್ಯಸಾರ. ಭಾರತದಲ್ಲಿರುವವರೆಲ್ಲಾ ಕೆಟ್ಟ ಗಂಡಸರು ಮತ್ತು ಹಲವಾರು ಕೆಟ್ಟ ಸಂಗತಿಗಳು ಮಹಿಳೆಯರ ಮೇಲೆ ನಡೆಯುತ್ತಿವೆ ಎಂದು ಯೋಚಿಸಬೇಡಿ; ಅದು ಮದ್ಯಸಾರದ ಪ್ರಭಾವವಾಗಿದೆ.

ಒಬ್ಬ ವ್ಯಕ್ತಿಯು ಮಾಡುವ ಒಂದೇ ಒಂದು ಕೆಟ್ಟ ಕೆಲಸವೆಂದರೆ ಅದು ಅವನು ಕುಡಿಯುವುದು. ಅವನು ಕುಡಿದಾಗ, ಅವನು ಅವನಾಗಿ ಇರುವುದಿಲ್ಲ ಮತ್ತು ಕುಡಿದ ಜನರ ಸುತ್ತ ಮಹಿಳೆಯರು ಸುರಕ್ಷಿತರಲ್ಲ. ಈ ಎಲ್ಲಾ ಮದ್ಯಸಾರದ ವ್ಯಾಪಾರವನ್ನು ಮುಚ್ಚಿ ಹಾಕುವ ಕೆಲಸವನ್ನು ಮಹಿಳೆಯರು ತೆಗೆದುಕೊಳ್ಳಬೇಕು; ಅದಕ್ಕೆ ಬದಲಾಗಿ ಮಹಿಳೆಯರು ಕೈಜೋಡಿಸುತ್ತಿದ್ದಾರೆ ಮತ್ತು ಅವರೊಂದಿಗೆ ಕುಡಿಯುತ್ತಿದ್ದಾರೆ!

ಮಹಿಳೆಯರ ಸುರಕ್ಷತೆಗಾಗಿ ಈ ದೊಡ್ಡ ಸಂಗತಿಯು ನಡೆಯಿತು; ಮದ್ಯಪಾನ ಅಥವಾ ಉತ್ಪನ್ನವನ್ನು ತಡೆಗಟ್ಟುವುದರ ಬಗ್ಗೆ ಯಾರೂ ಮಾತನಾಡಿಲ್ಲ. ಮದ್ಯಪಾನ ನಿಷೇಧವನ್ನು ಪರಿಚಯಿಸಲಾದ ಭಾರತದ ರಾಜ್ಯಗಳಲ್ಲಿ, ನಿಷೇಧವಿಲ್ಲದಿರುವ ರಾಜ್ಯಗಳಿಗೆ ಹೋಲಿಸಿದರೆ ಅಪರಾಧದ ಪ್ರಮಾಣಗಳು ಕಡಿಮೆಯಾಗಿವೆ.

ಜನರನ್ನು ಸಂರಕ್ಷಿಸುವುದಕ್ಕಾಗಿ ಎಲ್ಲಾ ದೇವದೇವತೆಯರೂ ಕೂಡಾ ಆಯುಧಗಳನ್ನು ಹೊಂದಿದ್ದಾರೆ. ಶ್ರೀರಾಮನು ಒಂದು ಧನುಸ್ಸನ್ನು ಹೊಂದಿದ್ದಾನೆ, ಶ್ರೀಕೃಷ್ಣನು ಒಂದು ಸುದರ್ಶನ ಚಕ್ರವನ್ನು ಹೊಂದಿದ್ದಾನೆ. ಹೀಗಾಗಿ, ಅತಿಯಾಗಿ ಮುಗ್ಧರಾಗಿರಬೇಡಿ ಮತ್ತು ಎಲ್ಲೆಂದರಲ್ಲಿ ಓಡಾಡಬೇಡಿ. ವಿಶೇಷವಾಗಿ ಚುನಾವಣೆಗಳು ಮತ್ತು ರಜಾದಿನಗಳಿರುವಾಗ ಮದ್ಯಪಾನದ ಪ್ರಮಾಣವು ಹೆಚ್ಚಾಗುತ್ತದೆ, ಜನರು ಹೆಚ್ಚು ಕುಡಿಯುತ್ತಾರೆ, ಆ ದಿನಗಳಲ್ಲಿ ನೀವು ಜಾಗರೂಕರಾಗಿರಬೇಕು.

ಪ್ರಶ್ನೆ: ಗುರುದೇವ, ನಾನು ಅತ್ಯಂತ ಹೆಚ್ಚು ಬಯಸುವ ವಸ್ತುಗಳು ನನಗೆ ಸಿಗುವುದಿಲ್ಲ. ನನ್ನ ಬಯಕೆಯು ಒಂದು ಅಡ್ಡಿಯೇ?

ಶ್ರೀ ಶ್ರೀ ರವಿ ಶಂಕರ್: ತಾಳ್ಮೆಯಿಂದಿರು. ನಿನಗೇನು ಬೇಕೋ ಅದನ್ನು ಸಾಧಿಸಲು ಮೂರು ವಿಷಯಗಳು ಅಗತ್ಯವಾಗಿವೆ.

೧. ನಿಜವಾದ ಉದ್ದೇಶ - ನಿನಗೇನು ಬೇಕೋ ಅದನ್ನು ಹೊಂದಲು ಅಲ್ಲೊಂದು ನಿಜವಾದ ಅಗತ್ಯವಿರಬೇಕು. ನಮ್ಮ ಬಯಕೆಗಳು ಬದಲಾಗುತ್ತಾ ಇರುತ್ತವೆ, ಆದರೆ ಅದು ನಮ್ಮ ಆವಶ್ಯಕತೆಯಾಗಿದ್ದರೆ ನಾವದನ್ನು ಪಡೆಯುವೆವು. ಬಯಕೆಯು ನಮ್ಮ ಆವಶ್ಯಕತೆಯಾಗಬೇಕು.

೨. ಸ್ವಪ್ರಯತ್ನ - ನಿನಗೇನು ಬೇಕೋ ಅದಕ್ಕಾಗಿ ನೀನು ಪ್ರಯತ್ನವನ್ನು ಹಾಕಬೇಕು. ನೀನು ಸುಮ್ಮನೆ ಕುಳಿತುಕೊಂಡು, "ನನಗಿದು ಬೇಕು, ನನಗದು ಬೇಕು’ ಎಂದು ಬಯಸುತ್ತಾ ಇರಲು ಸಾಧ್ಯವಿಲ್ಲ! ನೀನು ನಿನ್ನ ಪ್ರಯತ್ನವನ್ನು ಹಾಕಿರುವೆಯಾ? ಬಯಕೆಯು ನಿನ್ನ ಆವಶ್ಯಕತೆಯಾಗಿದೆಯೇ? ಅದರ ಕಡೆಗೆ ನೀನು ಕೆಲಸ ಮಾಡಿರುವೆಯಾ? ನೀನು ನಿನ್ನ ೧೦೦% ಹಾಕಿರುವೆಯಾ? ಇದು ಆವಶ್ಯಕವಾದುದು.

೩. ಕಾಲ ಅಥವಾ ಕರ್ಮ - ಅಲ್ಲಿ ಕರ್ಮವಿದ್ದರೆ, ಸಮಯವು ಸರಿಯಾಗಿದ್ದರೆ, ನಿನಗದು ಸಿಗುವುದು! ನಾನು ಈಗ, ಒಂದು ಕತ್ತಲೆಯ ರಾತ್ರಿಯಲ್ಲಿ ಚಂದ್ರನನ್ನು ನೋಡಲು ಬಯಸುತ್ತೇನೆಂದು ಇಟ್ಟುಕೋ. ಯಾವುದೇ ಉದ್ದೇಶವನ್ನು ನಾನು ಇಟ್ಟುಕೊಳ್ಳಲಿ, ನಾನೀಗ ಚಂದ್ರನನ್ನು ನೋಡಲು ಹೇಗೆ ಸಾಧ್ಯ? ಪೂರ್ಣ ಚಂದ್ರನನ್ನು ನೋಡಲು ನಾನು ಇನ್ನೊಂದು ೧೫ ದಿನಗಳವರೆಗೆ ಕಾಯಬೇಕು. ಅಮವಾಸ್ಯೆಯ ದಿನದಂದು ನೀನು ಪೂರ್ಣಚಂದ್ರನನ್ನು ನೋಡಲು ಬಯಸಿದರೆ, ಆಗ ನೀನು ಕಾಯಲೇಬೇಕು.

ನೀನು ಇವತ್ತೊಂದು ದಾಳಿಂಬೆ ಗಿಡವನ್ನು ನೆಟ್ಟು, "ಇಲ್ಲ, ನನಗೆ ಈಗಲೇ ಹಣ್ಣು ಬೇಕು" ಎಂದು ಹೇಳಿದರೆ! ಹೇ, ನೀನು ಇನ್ನೊಂದು ಮೂರು ವರ್ಷಗಳ ಕಾಲ ಕಾಯಬೇಕು! ದಾಳಿಂಬೆ ಮರವು ಎರಡರಿಂದ ಮೂರು ವರ್ಷಗಳಲ್ಲಿ ಮಾತ್ರ ನಿಮಗೆ ಹಣ್ಣು ಕೊಡುವುದು. ಹೀಗೆ, ಕಾಲ ಅಥವಾ ಕರ್ಮವು ಒಂದು ಅಂಶವಾಗಿದೆ.

ಪ್ರಶ್ನೆ: ನಿರಾಕಾರವನ್ನು ತಲುಪಲು ನಾವೊಂದು ಆಕಾರವನ್ನು ಯಾಕೆ ಪ್ರೀತಿಸಬೇಕು?

ಶ್ರೀ ಶ್ರೀ ರವಿ ಶಂಕರ್: ಆಕಾರದ ಕಡೆಗೆ ಮಾತ್ರ ಭಾವನೆಗಳು ಹರಿಯಲು ಸಾಧ್ಯ. ನಿರಾಕಾರದ ಕಡೆಗೆ ಭಾವನೆಗಳನ್ನು ಹೊಂದಲು ನಿಮಗೆ ಸಾಧ್ಯವಿಲ್ಲ. ನೋಡು, ನೀನು ನನ್ನೊಂದಿಗೆ ಮಾತ್ರ ಸಂಪರ್ಕಿಸಬಹುದು, ನನ್ನ ಪಕ್ಕದಲ್ಲಿರುವ ಖಾಲಿ ಜಾಗದೊಂದಿಗೆ ಸಂಪರ್ಕಿಸಲು ನಿನಗೆ ಸಾಧ್ಯವಿಲ್ಲ. ನೀನೊಂದು ಖಾಲಿ ಜಾಗದೊಂದಿಗೆ ಸಂಪರ್ಕಿಸುತ್ತಿರುವೆಯೆಂದು ನೀನು ಹೇಳಿದರೆ, ಆಗ ಅಲ್ಲೇನೋ ಎಡವಟ್ಟಾಗಿದೆ. ನೀನೊಂದು ಸ್ವರೂಪದೊಂದಿಗೆ ಮಾತ್ರ ನಿನ್ನ ಭಾವನೆಗಳನ್ನು ವ್ಯಕ್ತಪಡಿಸಬಹುದು, ನೋಡಬಹುದು, ಸ್ಪರ್ಷಿಸಬಹುದು, ಆಘ್ರಾಣಿಸಬಹುದು, ರುಚಿ ನೋಡಬಹುದು ಮತ್ತು ಸಂಪರ್ಕಿಸಬಹುದು. ಯಾವುದೇ ಭಾವನೆಯ ಸಂಪೂರ್ಣತೆಯು ನಿಮ್ಮನ್ನು, ಎಲ್ಲಾ ಆಕಾರಗಳ ಮೂಲವಾಗಿರುವ, ಸಂಪೂರ್ಣವಾಗಿ ನಿರಾಕಾರವಾದ ಒಂದು ಆಕಾಶಕ್ಕೆ ಕರೆದೊಯ್ಯುತ್ತದೆ.

ಸಂಸ್ಕೃತದಲ್ಲಿ ಎರಡು ಸುಂದರವಾದ ಪದಗಳಿವೆ, ವಿರೂಪಾಕ್ಷ ಮತ್ತು ವಿಶ್ವರೂಪ. ವಿರೂಪಾಕ್ಷ ಎಂದರೆ, ಆಕಾರವಿಲ್ಲದೆ ಕಣ್ಣುಗಳು; ಹಲವು ಜನರು ಈ ಪದವನ್ನು ಒಂದು ಹೆಸರಾಗಿ ಬಳಸುತ್ತಾರೆ. ವಿರೂಪ ಎಂದರೆ, ರೂಪವಿಲ್ಲದ, ಮತ್ತು ಅಕ್ಷ ಎಂದರೆ ಕಣ್ಣುಗಳು. ಇದರರ್ಥ ರೂಪವಿಲ್ಲದ ಕಣ್ಣುಗಳು.

ನೀವು ಇನ್ನೂ ಸ್ವಲ್ಪ ಆಳಕ್ಕೆ ಹೋಗುವಾಗ, ಪ್ರಜ್ಞೆಯು ಕಣ್ಣುಗಳಿಲ್ಲದೆಯೇ ನೋಡಬಹುದು, ಚರ್ಮವಿಲ್ಲದೆಯೇ ಸ್ಪರ್ಶ ಅನುಭವಿಸಬಹುದು, ನಾಲಿಗೆಯಿಲ್ಲದೆಯೇ ರುಚಿ ನೋಡಬಹುದು ಮತ್ತು ಕಿವಿಗಳಿಲ್ಲದೆಯೇ ಕೇಳಿಸಬಹುದು ಎಂಬುದು ನಿಮಗೆ ಕಾಣಿಸುತ್ತದೆ; ಇದು ಯೋಗ ಸಮಾಧಿಯಾಗಿದೆ. ಆಳವಾದ ಸಮಾಧಿಯಲ್ಲಿ ಅಂತಹ ಸಂಗತಿಗಳು ನಡೆಯಲು ತೊಡಗುತ್ತವೆ, ಕನಸುಗಳಲ್ಲಿರುವಂತೆಯೇ. ಐದು ಇಂದ್ರಿಯಗಳಲ್ಲಿ ಯಾವುದೂ ಇಲ್ಲದೆಯೇ ನೀವು ಕನಸು ಕಾಣುತ್ತೀರಿ; ನೀವು ಆಘ್ರಾಣಿಸುತ್ತೀರಿ, ರುಚಿ ನೋಡುತ್ತೀರಿ, ನೀವು ಎಲ್ಲವನ್ನೂ ಮಾಡುತ್ತೀರಿ, ಸರಿಯಾ? ಹೀಗೆ, ವಿರೂಪಾಕ್ಷ ಎಂದರೆ, ಕಣ್ಣುಗಳಿರುವ ಆದರೆ ರೂಪವಿಲ್ಲದ ಪ್ರಜ್ಞೆ.

ವಿಶ್ವರೂಪ ಎಂದರೆ, ಅದು ಪ್ರತಿಯೊಂದು ರೂಪದಲ್ಲೂ ಇದೆ. ಈ ವಿಶ್ವವೇ ದೇವರ ರೂಪವಾಗಿದೆ; ದೇವರು ಮರಗಳ, ಬೆಟ್ಟಗಳ, ನದಿಗಳ ರೂಪದಲ್ಲಿದ್ದಾನೆ. ಸಂಪೂರ್ಣ ವಿಶ್ವವು ದೇವರ ಪ್ರಕಟನೆಯಲ್ಲದೆ ಮತ್ತೇನೂ ಅಲ್ಲ; ದೇವರ ಶರೀರ. ದೇವರು ಅಲ್ಲೆಲ್ಲೋ ಸ್ವರ್ಗದಲ್ಲಿ, ಸೃಷ್ಟಿಯಿಂದ ದೂರದಲ್ಲಿ ಕುಳಿತಿಲ್ಲ, ಅವನೇ ಸೃಷ್ಟಿಯಾಗಿರುವನು.

ದೇವರು ಮತ್ತು ಸೃಷ್ಟಿ ಬೇರೆ ಬೇರೆಯಲ್ಲ. ಅದು, ಒಂದು ಎಳ್ಳಿನ ಬೀಜದೊಳಗೆ ಹೇಗೆ ಎಣ್ಣೆಯಿದೆಯೋ ಹಾಗೆಯೇ. ಅದೇ ರೀತಿಯಲ್ಲಿ, ಈ ಸೃಷ್ಟಿಯ ಪ್ರತಿಯೊಂದು ಪರಮಾಣುವಿನಲ್ಲೂ ಪ್ರಜ್ಞೆಯಿದೆ. ಅದು, ನೃತ್ಯ ಮತ್ತು ನರ್ತಕನನ್ನು ಹೇಗೆ ಬೇರೆ ಬೇರೆ ಮಾಡಲು ಸಾಧ್ಯವಿಲ್ಲವೋ ಹಾಗೆ. ನೀವೊಂದು ನೃತ್ಯವನ್ನು ನೋಡುತ್ತಿದ್ದರೆ, ಅದರರ್ಥ ನೀವು ನರ್ತಕನನ್ನು ನೋಡುತ್ತಿರುವಿರೆಂದು. ನರ್ತಕನಿಲ್ಲದ ಒಂದು ನೃತ್ಯವನ್ನು ನೋಡಲು ನಿಮಗೆ ಸಾಧ್ಯವೇ? ಹೀಗೆ ಈ ವಿಶ್ವವು ನೃತ್ಯವಾಗಿದೆ, ಮತ್ತು ಅದು ನರ್ತಿಸುವಂತೆ ಮಾಡುತ್ತಿರುವುದು ಯಾರು? ನರ್ತಕ!

ಪ್ರತಿಯೊಂದು ಮರದಲ್ಲೂ, ಪ್ರತಿಯೊಂದು ಪ್ರಾಣಿಯಲ್ಲೂ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಜೀವ ಯಾವುದು? ಅದು ದೇವರು! ದೇವರು ಪಂಚ ಭೂತಾತ್ಮಿಕ, ಪಂಚಭೂತಗಳಲ್ಲಿ. ಅವನು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶವಾಗಿರುವನು; ಪಂಚಭೂತಗಳ ಆತ್ಮವು ಅವನಾಗಿರುವನು. ದೇವರು ಪಂಚಭೂತಗಳಾಗಿ ಮತ್ತು ಪ್ರಜ್ಞೆಯಾಗಿ ಇರುವನು. ದೇವರು ಬೇರೆಲ್ಲೋ ಸ್ವರ್ಗದಲ್ಲಿ ಕುಳಿತಿದ್ದಾನೆ ಎಂದು ಹೇಳುವುದು ತಪ್ಪು ಪರಿಕಲ್ಪನೆಯಾಗಿದೆ.

ಇನ್ನೊಂದು ಬಹಳ ಸುಲಭವಾದ ಉದಾಹರಣೆ, ಗಾಳಿಯು ಎಲ್ಲೆಡೆಯೂ ಇದೆ. ಈಗ ಕೂಡಾ ಗಾಳಿ ಇದೆ. ಗಾಳಿಯಿಲ್ಲದೆ ನೀವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಹಾಗಿದ್ದರೂ, ಕೆಲವೊಮ್ಮೆ ನಿಮಗೆ ಸೆಖೆಯಾದಾಗ, ನಿಮಗೆ ಗಾಳಿಯ ಅನುಭವವಾಗುವುದಿಲ್ಲ; ಆಗ ನೀವೊಂದು ಗಾಳಿ ಬೀಸುವ ಫ್ಯಾನಿನ ಸಮೀಪದಲ್ಲಿ ಕುಳಿತಾಗ, ನಿಮಗದರ ಅನುಭವವಾಗುತ್ತದೆ. ಇತರ ಸಮಯಗಳಲ್ಲಿ, ನಿಮಗೆ ಸೆಖೆ ಹಾಗೂ ಬೆವರುವಾಗ, ನಿಮಗೆ ಗಾಳಿಯ ಅನುಭವವಾಗುತ್ತಿರುವುದಿಲ್ಲ, ಆದರೆ ಅದು ಅಲ್ಲಿದೆ. ಅಲ್ಲಿ ಗಾಳಿಯಿಲ್ಲವೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ಆದರೂ, ನೀವೊಂದು ಎ.ಸಿ. ಅಥವಾ ಒಂದು ಫ್ಯಾನಿನ ಬಳಿ ಕುಳಿತುಕೊಳ್ಳುವಾಗ ನೀವದನ್ನು ಅನುಭವಿಸಬಹುದು. ಧ್ಯಾನ, ಸಮಾಧಿ, ಸಾಕ್ಷಾತ್ಕಾರದೊಂದಿಗೆ ಸಂಭವಿಸುವುದು ಇದೇ.

ಪ್ರಶ್ನೆ: ಗುರುದೇವ, ನನಗೆ ನಿಜವಾಗಿಯೂ ಬೇಕಾದುದು ಏನು ಎಂಬುದರ ಬಗ್ಗೆ ನಾನು ಗೊಂದಲಗೊಂಡಿದ್ದೇನೆ. ನಾನು ಬಯಸುವ ಪ್ರಾಪಂಚಿಕ ವಸ್ತುಗಳನ್ನು ಕೇಳುವುದಕ್ಕಾಗಿ ನಾನು ಆಶ್ರಮಕ್ಕೆ ಬರುತ್ತೇನೆ, ಆದರೆ ನಾನು ಕೊನೆಯಲ್ಲಿ ಅತ್ಯಾನಂದವನ್ನು ಕೇಳಿ ಅದನ್ನು ಮನೆಗೆ ಒಯ್ಯುತ್ತೇನೆ. ಅತ್ಯಾನಂದವು ಒಳ್ಳೆಯದು, ಆದರೆ ಅದರರ್ಥ ಜೀವನದಲ್ಲಿ ನನಗೆ ಪ್ರಾಪಂಚಿಕ ವಸ್ತುಗಳು ಸಿಗದು ಎಂದೇ?

ಶ್ರೀ ಶ್ರೀ ರವಿ ಶಂಕರ್: ಹಲವು ಸಲ ನೀವು ನಿಮಗೇನೋ ಬೇಕು ಎಂದು ಹೇಳುತ್ತೀರಿ, ಮತ್ತು ನಂತರ ನೀವು, "ಇಲ್ಲ, ನನಗದು ಬೇಡ" ಎಂದು ಹೇಳುವ ಮೂಲಕ ನಿಮ್ಮದೇ ಬಯಕೆಗಳನ್ನು ತುಂಡರಿಸುತ್ತೀರಿ. ನಿಮ್ಮದೇ ಸಂಕಲ್ಪವು ನಿಮ್ಮದೇ ವಿಕಲ್ಪಗಳಿಂದ (ಸಂಶಯಗಳು) ತುಂಡರಿಸಲ್ಪಡುತ್ತದೆ. ಏನೋ ಒಂದು ಸಂಭವಿಸಬೇಕೆಂದು ನೀವು ನಿಜವಾಗಿಯೂ ಬಯಸುವಾಗ, ಅದು ಖಂಡಿತವಾಗಿಯೂ ಸಂಭವಿಸುವುದು. ನೀವು ಆಶೀರ್ವಾದವನ್ನು ಕೇಳಿಕೊಂಡಾಗ ಅದು ಸಂಭವಿಸುತ್ತದೆ.

ಮಹಾಭಾರತ ಯುದ್ಧದಲ್ಲಿ, ಶ್ರೀಕೃಷ್ಣ ಪರಮಾತ್ಮನು, "ಯುದ್ಧ ಮಾಡಬೇಡ, ನಾವು ಈ ಯುದ್ಧವನ್ನು ಮಾಡುವುದು ಬೇಡ. ಶಾಂತಿ ಸಂಧಾನಕ್ಕೆ ಬಾ. ನಾವು ಕುಳಿತುಕೊಳ್ಳೋಣ, ನಾವು ಒಪ್ಪೋಣ" ಎಂದು ಹೇಳಲು ದುರ್ಯೋಧನನ ಬಳಿಗೆ ಮೂರು ಸಲ ಹೋದನು.

ಯುದ್ಧವು ಸಂಭವಿಸುತ್ತದೆ ಮತ್ತು ಅದರಿಂದ ಗೀತೆಯು ಹೊರಬರಲಿದೆಯೆಂಬುದು ಶ್ರೀಕೃಷ್ಣ ಪರಮಾತ್ಮನಿಗೆ ಗೊತ್ತಿತ್ತು, ಆದರೂ ಅವನು ಶಾಂತಿ ಸಂಧಾನಕ್ಕಾಗಿ ಮೂರು ಸಲ ಹೋದನು. ಯಾಕೆ? ಯಾಕೆಂದರೆ, ಒಂದು ಮಟ್ಟದಲ್ಲಿ, ಏನನ್ನು ಮಾಡಬೇಕೋ ಅದನ್ನು ನೀವು ಮಾಡುತ್ತಾ ಇರಬೇಕು. ಮಹಾಭಾರತದಲ್ಲಿ, ಪಾಂಡವರಿಗೆ ಐದು ಗ್ರಾಮಗಳನ್ನು ಕೊಡಲು ದುರ್ಯೋಧನನು ಶ್ರೀಕೃಷ್ಣ ಪರಮಾತ್ಮನಿಗೆ ಒಪ್ಪಿಗೆಯನ್ನು ನೀಡಿದನು ಎಂದಿಟ್ಟುಕೊಳ್ಳೋಣ ಮತ್ತು ಯಾವುದೇ ಯುದ್ಧವೂ ನಡೆಯುತ್ತಿರಲಿಲ್ಲ, ಅಂತಹ ಒಂದು ಪರಿಸ್ಥಿತಿಯನ್ನು ಸುಮ್ಮನೇ ಊಹಿಸಿಕೊಳ್ಳಿ. ಆಗ ಗೀತೆಯೇ ಇರುತ್ತಿರಲಿಲ್ಲ! ಮಹಾಭಾರತ ಗ್ರಂಥ ಕೂಡಾ ಬರುತ್ತಿರಲಿಲ್ಲ!  
    
"ಈ ಕೃತ್ಯವು ಫಲವನ್ನು ನೀಡುವುದಿಲ್ಲವೆಂಬುದು ನಿನಗೆ ಬಹಳ ಚೆನ್ನಾಗಿ ತಿಳಿದಿರುವಾಗ ನೀನಿದನ್ನು ಮಾಡುವುದಾದರೂ ಯಾಕೆ?" ಎಂದು ಯಾರಾದರೂ ಕೇಳುವಾಗ, ಅದಕ್ಕಿರುವ ಉತ್ತರವೆಂದರೆ, "ಪ್ರತಿಯೊಂದು ಕರ್ಮಕ್ಕೂ ಒಂದು ಮಹತ್ತರ ಉದ್ದೇಶವಿದೆ, ಮತ್ತು ಅದು ಕರ್ಮದ ಫಲದೊಂದಿಗೆ ಸಂಬಂಧ ಹೊಂದಿಲ್ಲ. ಇದರಿಂದ ನನಗೇನು ಸಿಗುತ್ತದೆ ಎಂಬುದು ಪ್ರಶ್ನೆಯಲ್ಲ; ಪರಿಸ್ಥಿತಿಯಲ್ಲಿ ನಾನು ಕರ್ತವ್ಯ ಮಾಡಿದೆನೇ ಅಥವಾ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ."

ಆಸ್ಪತ್ರೆಯಲ್ಲಿ, ಹಲವು ಸಲ ರೋಗಿಯು ಬದುಕುಳಿಯುವುದಿಲ್ಲವೆಂಬುದು ಬಹಳ ಚೆನ್ನಾಗಿ ಗೊತ್ತಿದ್ದರೂ ಆ ರೋಗಿಯನ್ನು ಗುಣಪಡಿಸಲು ವೈದ್ಯರು ತಮ್ಮೆಲ್ಲಾ ಪ್ರಯತ್ನವನ್ನು ಹಾಕುತ್ತಾರೆ. ರೋಗಿಯು ಬದುಕುಳಿಯುವುದಿಲ್ಲವೆಂಬುದು ವೈದ್ಯರಿಗೆ ಗೊತ್ತಾದ ತಕ್ಷಣ, ಅವರು ರೋಗಿಯ ಆರೈಕೆಯನ್ನು ನಿಲ್ಲಿಸುವರೇ? ಇಲ್ಲ! ಎಲ್ಲಿಯವರೆಗೆ ಹೃದಯವು ಬಡಿಯುತ್ತಾ ಇರುವುದೋ, ಉಸಿರು ಚಲಿಸುತ್ತಾ ಇರುವುದೋ ಅಲ್ಲಿಯವರೆಗೆ ವೈದ್ಯರು ರೋಗಿಯ ಆರೈಕೆ ಮಾಡುತ್ತಾರೆ; ಅದರಿಂದೇನೂ ಪ್ರಯೋಜನವಿಲ್ಲವೆಂಬುದು ಅವರಿಗೆ ತಿಳಿದಿದ್ದರೂ ಕೂಡಾ.

ಆದರೆ ನಾವು, "ಅದಾಗಲಿ; ಹೇಗಿದ್ದರೂ ಎಲ್ಲರೂ ಹುಟ್ಟುತ್ತಾರೆ, ಎಲ್ಲರೂ ಸಾಯುತ್ತಾರೆ. ರೋಗಿಷ್ಠರು ಅಥವಾ ಆರೋಗ್ಯವಂತ ಜನರು ಹೇಗಿದ್ದರೂ ಸಾಯುತ್ತಾರೆ, ಹೀಗಾಗಿ ಯಾರಾದರೂ ಯಾರ ಬಗ್ಗೆಯಾದರೂ ಯಾಕೆ ಕಾಳಜಿ ವಹಿಸಬೇಕು? ನಾವು ಸುಮ್ಮನೆ ಕುಳಿತುಕೊಳ್ಳೋಣ!" ಎಂದು ಹೇಳುವಂತಿಲ್ಲ. ಹೀಗೆ ಮಾಡುವುದು ಸರಿಯಲ್ಲ; ನಾವು ಅದರ ಕಡೆಗೆ ಗಮನ ಹರಿಸಬೇಕು.

ಸುನಾಮಿ ಸಂಭವಿಸಿದಾಗ ಸ್ವಾಮಿ ಸದ್ಯೋಜತಃ ಮತ್ತು ನಾನು ಶ್ರೀಲಂಕಾಕ್ಕೆ ಹೋದೆವು. ಕೊಲ್ಲಿಯ ನಮ್ಮ ಕೇಂದ್ರಗಳು ಬಟ್ಟೆ ಹಾಗೂ ಔಷಧಿಗಳ ಹಲವಾರು ಮೂಟೆಗಳನ್ನು ಅಲ್ಲಿಗೆ ಕಳುಹಿಸಿದ್ದವು ಮತ್ತು ನಮ್ಮ ಸ್ವಯಂಸೇವಕರು ಕೂಡಾ ಅಲ್ಲಿದ್ದರು.
ಅಲ್ಲಿ ಸೇನೆಯಿಂದ ಈ ಒಬ್ಬ ಸಿಂಹಳೀಯ ವಿಮಾನ ಚಾಲಕನಿದ್ದನು. ಅವನು ನಮಗೆ ಶ್ರೀಲಂಕಾದ ದಕ್ಷಿಣ-ಪೂರ್ವ ಭಾಗದಲ್ಲಿ ಸಹಾಯ ಮಾಡುತ್ತಿದ್ದನು. ಅವನು ನನ್ನಲ್ಲೊಂದು ಬಹಳ ದುಃಖಕರವಾದ ನಿವೇದನೆಯನ್ನು ಮಾಡಿಕೊಂಡನು. ೬೦೦ ಮಕ್ಕಳು ಓದುತ್ತಿದ್ದ, ತಮಿಳಿನ ಭಾಗದ ಒಂದು ಶಾಲೆ ಮತ್ತು ಒಂದು ಆಸ್ಪತ್ರೆಯ ಮೇಲೆ ಬಾಂಬ್ ಹಾಕಲು ತನ್ನಲ್ಲಿ ಹೇಳಿದ್ದಾಗಿ ಅವನು ಹೇಳಿದನು. "ನಾನು ಈ ಕೆಲಸವನ್ನು ಮಾಡಬೇಕಾಗಿ ಬಂದಾಗ ನನ್ನ ಹೃದಯವು ಒಡೆಯಿತು ಮತ್ತು ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ" ಎಂದು ಅವನಂದನು.

ನಂತರ, ಖಂಡಿತವಾಗಿಯೂ, ಅವನು ಸುದರ್ಶನ ಕ್ರಿಯೆಯನ್ನು ಮಾಡಿದನು. ಅವನು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಅವನು ತನ್ನ ಇಡೀ ಜೀವನವನ್ನು ಸೇವೆ ಮಾಡುವುದಕ್ಕಾಗಿ ಮುಡಿಪಾಗಿಟ್ಟನು; ಮಕ್ಕಳ ಜೀವನವನ್ನು ಉತ್ತಮಪಡಿಸುವುದಕ್ಕಾಗಿ; ಅವನು ಅನಾಥಾಶ್ರಮಗಳಲ್ಲಿ ಸಹಾಯ ಮಾಡಿದನು. ತನ್ನ ಹಿರಿಯಾಧಿಕಾರಿಗಳ ಆಜ್ಞೆಯನ್ನು ಅನುಸರಿಸದೆ ಬೇರೆ ಆಯ್ಕೆಯಿಲ್ಲ ಎಂಬಂತಹ ಆ ಒಂದು ಘಟನೆಯು ಅವನ ಇಡೀ ಜೀವನವನ್ನು ಬದಲಾಯಿಸಿತು. ಅವನೊಬ್ಬ ಬೌದ್ಧ ಧರ್ಮದ ಅನುಯಾಯಿ ಮತ್ತು ಹಿಂಸೆಯು ಅಷ್ಟೊಂದು ದೊಡ್ಡ ಪಾಪ ಎಂಬುದು ಅವನಿಗೆ ತಿಳಿದಿತ್ತು. ಹಲವಾರು ವರ್ಷಗಳವರೆಗೆ ಅದು ಅವನಿಗೆ ಬಹಳ ಕಠಿಣವಾಗಿತ್ತು.

ಸುನಾಮಿಯು ಸಂಭವಿಸಿದಾಗ ಈ ವ್ಯಕ್ತಿಯು ಆರ್ಟ್ ಆಫ್ ಲಿವಿಂಗ್‌ನೊಂದಿಗೆ ಬಹಳಷ್ಟು ಸೇವೆಯನ್ನು ಮಾಡಿದನು. ಒಬ್ಬರಿಗೆ ಇಂತಹ ಆಘಾತದಿಂದ ಹೊರಬರಲು ಬಹಳ ದೀರ್ಘಕಾಲ ಹಿಡಿಯುತ್ತದೆ. ಆದರೆ ಜ್ಞಾನ, ಅಷ್ಟಾವಕ್ರ ಗೀತೆ, ಕ್ರಿಯೆ ಮತ್ತು ಧ್ಯಾನಗಳ ಸಹಾಯದಿಂದ ಈ ವ್ಯಕ್ತಿಯು, "ಮೊದಲ ಬಾರಿಗೆ ನನಗೆ ಮುಗುಳ್ನಗಲು ಸಾಧ್ಯವಾಗಿದೆ; ನನ್ನ ಜೀವನದಲ್ಲಿ ಸಂತೋಷವು ಮರಳಿ ಬಂದಿದೆ" ಎಂದು ಹೇಳಿದನು.

ಈ ಜ್ಞಾನ, ಈ ಅರಿವು ಅಪಾರವಾಗಿ ಬೆಲೆಬಾಳುವುದಾಗಿದೆ. ಅದು  ಬಹಳ ಸುಂದರವೂ, ಅಪಾರವಾಗಿ ಶಕ್ತಿಶಾಲಿಯೂ ಆಗಿದೆ. ಅದು ಜನರನ್ನು ಎಂತಹ ಆಳವಾದ ಗಾಯಗಳು, ಪಾಪ ಪ್ರಜ್ಞೆ, ನೋವು ಮತ್ತು ದುಃಖಗಳಿಂದ ಬೇಕಾದರೂ ಹೊರತೆಗೆಯಬಲ್ಲದು. ಅದೊಂದು ಹೊಸ ಬೆಳಕನ್ನು ನೀಡಬಲ್ಲದು ಮತ್ತು ಒಬ್ಬರ ಚೇತನವನ್ನು ಮೇಲೆತ್ತಬಲ್ಲದು. ಅದು ಬಹಳ ಹೃದಯಸ್ಪರ್ಷಿಯಾಗಿದೆ.

ಮೊದಲು, ಅಷ್ಟಾವಕ್ರ ಗೀತೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿರಲಿಲ್ಲ. ಭಾರತದಲ್ಲಿ ಕೂಡಾ, ಪ್ರತಿಯೊಂದು ಕೇಂದ್ರದಲ್ಲಿ ನಾವು ಎರಡರಿಂದ ಮೂರು ಟೇಪುಗಳನ್ನು ಮಾತ್ರ ಹೊಂದಿದ್ದೆವು ಮತ್ತು ಸ್ವಲ್ಪ ಮುಂದುವರಿದ ಜನರಿಗೆ ಮಾತ್ರ ನಾವು ಈ ಕೋರ್ಸುಗಳನ್ನು ನಡೆಸುತ್ತಿದ್ದೆವು. ನಂತರ ನಾನು, ಜನರು ಆ ಹಂತವನ್ನು ತಲಪುವಲ್ಲಿಯವರೆಗೆ ನಾವು ಕಾಯಲು ಸಾಧ್ಯವಿಲ್ಲವೆಂದು ನಿರ್ಧರಿಸಿದೆ. ಅವರು ಯಾವುದೇ ಹಂತದಲ್ಲಿರಲಿ, ಅವರೆಲ್ಲೇ ಇರಲಿ, ಕೆಲವೇ ಕೆಲವು ವಾಕ್ಯಗಳು ಕೂಡಾ ಜನರ ಜೀವನದಲ್ಲಿ ಒಂದು ಬದಲಾವಣೆಯನ್ನು ಉಂಟುಮಾಡಬಲ್ಲವು. ಅಷ್ಟಾವಕ್ರ ಗೀತೆಯನ್ನು ಕೇಳಲು ಎಲ್ಲರಿಗೂ ಅನುಮತಿ ನೀಡಲಾದುದು ಇದರ ನಂತರವೇ; ನಾವದನ್ನು ತೆರೆದೆವು.

ಅಷ್ಟಾವಕ್ರ ಗೀತೆಯು ಉನ್ನತವಾದ ಜ್ಞಾನವಾಗಿದೆ, ಅದು ಉನ್ನತವಾದ ಗಣಿತ ಶಾಸ್ತ್ರವನ್ನು ಕಲಿಯುವಂತೆ. ಗಣಿತಶಾಸ್ತ್ರದ ಮೂಲಭೂತ ಜ್ಞಾನವಿಲ್ಲದೆ ನಿಮಗದನ್ನು ಮಾಡಲು ಸಾಧ್ಯವಿಲ್ಲ. ಪ್ರಾಚೀನ ಜನರು ಹೊಂದಿದ್ದುದು ಈ ವಾದವನ್ನಾಗಿದೆ.

ಪ್ರಾಥಮಿಕ ಶಾಲೆಯಲ್ಲಿ ಕ್ವಾಂಟಮ್ ಭೌತಶಾಸ್ತ್ರವನ್ನು ಕಲಿಸಲು ಸಾಧ್ಯವಿಲ್ಲ. ಹೀಗಿದ್ದರೂ, ಒಬ್ಬನನ್ನು ಕರ್ತೃತ್ವದಿಂದ ಮೇಲೆತ್ತುವುದು ಮತ್ತು ವಿಷಯಗಳನ್ನು ಅವುಗಳಿರುವಂತೆಯೇ ನೋಡುವುದು - ಇದು ಅಷ್ಟಾವಕ್ರ ಗೀತೆಯಲ್ಲಿನ ಬಹಳ ಅಮೂಲ್ಯವಾದ ಜ್ಞಾನವಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಯಾವುದಾದರೂ ಮುಖ್ಯವಾದ ಕೆಲಸವನ್ನು ಮಾಡಲು ಅಥವಾ ಓದಲು ನಾನು ಬಯಸುವಾಗಲೆಲ್ಲಾ ನನ್ನ ಮನಃಸ್ಥಿತಿಯು ನನ್ನ ದಾರಿಗೆ ಅಡ್ಡವಾಗಿ ಬರುತ್ತದೆ. ನನ್ನ ಕೆಲಸಗಳಲ್ಲಿ ಹೆಚ್ಚಿನವುಗಳಿಗೆ ನಾನು ನನ್ನ ಮನಃಸ್ಥಿತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿದ್ದೇನೆ. ಮನಃಸ್ಥಿತಿಗಳನ್ನು ತೊಡೆದುಹಾಕುವುದು ಹೇಗೆ?     

ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ಅದರ ಅರಿವೇ ಅದನ್ನು ಅರ್ಧ ಮಾಡಿಸುತ್ತದೆ. ನಿನ್ನನ್ನು ಅಲ್ಲಾಡಿಸುವುದು ಮನಃಸ್ಥಿತಿ ಎಂಬುದನ್ನು ಈಗ ನೀನು ಅರಿತಿರುವೆ. ಅದರರ್ಥ, ಬುದ್ಧಿಯು ಎಚ್ಚೆತ್ತುಕೊಳ್ಳುತ್ತಿದೆ. ಅದು, "ಹೇ, ನಾನು ಅಷ್ಟೊಂದು ಮೂಡಿ ಆಗಿರುವುದಿಲ್ಲ" ಎಂದು ಹೇಳುತ್ತದೆ. ನೀನು ಆ ನಿರ್ಧಾರವನ್ನು ತೆಗೆದುಕೋ.

ನೀನು ನಿನ್ನ ಮನಃಸ್ಥಿತಿಯ ಅನುಸಾರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರುವ ಹಲವಾರು ಪರಿಸ್ಥಿತಿಗಳು ಜೀವನದಲ್ಲಿವೆ. ಉದಾಹರಣೆಗೆ, ನೀನೊಂದು ವಿಮಾನದಲ್ಲಿದ್ದು, ಅಚಾನಕ್ಕಾಗಿ ನಿನಗೆ ಪ್ರಯಾಣವನ್ನು ಮುಂದುವರಿಸುವುದು ಬೇಡವೆಂದು ಅನ್ನಿಸಿದರೆ; ಅರ್ಧದಾರಿಯಲ್ಲಿ ನಿನ್ನ ಮನಃಸ್ಥಿತಿ ಬದಲಾದರೂ ನಿನಗೆ ವಿಮಾನದಿಂದ ಹೊರಗಿಳಿಯಲು ಸಾಧ್ಯವಿಲ್ಲ! ನೀನು ಅಲ್ಲಿರಲೇಬೇಕು. ಅದು ನೀನು ಚಲಾಯಿಸುತ್ತಿರುವ, ಹಿಂದಕ್ಕೆ ತಿರುಗಿಸಬಲ್ಲಂತಹ ಒಂದು ಕಾರಲ್ಲ. ಕಾರಿಗೆ ಕೂಡಾ, ನೀನು ಹಿಂದಕ್ಕೆ ತಿರುಗಿಸಲು ನಿರ್ಗಮನ ದಾರಿಯನ್ನು ಕಂಡುಹಿಡಿಯಬೇಕು. ಎಲ್ಲೆಂದರಲ್ಲಿ ನೀನು ತಿರುಗಿಸಲು ಸಾಧ್ಯವಿಲ್ಲ.

ಹೀಗೆ, ನೀವು ಜ್ಞಾನವನ್ನು ಗೌರವಿಸದಿದ್ದರೆ, ಜೀವನವು ನಿಮಗೆ ಕಠಿಣವಾದ ಪಾಠಗಳನ್ನು ಕಲಿಸುತ್ತದೆ. ಜೀವನವು ಬದ್ಧತೆಗಳೊಂದಿಗೆ ಚಲಿಸುತ್ತದೆ, ಮನಃಸ್ಥಿತಿಗಳೊಂದಿಗಲ್ಲ ಎಂಬುದನ್ನು ತಿಳಿಯಿರಿ. ಮನಃಸ್ಥಿತಿಯು ಬಹಳ ಅಸ್ಥಿರವಾಗಿದೆ, ಅವುಗಳು ಬರುತ್ತವೆ, ಅವುಗಳು ಬದಲಾಗುತ್ತವೆ. ಆದರೆ, ಬದ್ಧತೆ ಮತ್ತು ಜ್ಞಾನಗಳು ಯಾವತ್ತೂ ಶ್ರೇಷ್ಠ ಫಲಿತಾಂಶಗಳನ್ನು ತರುತ್ತವೆ.

ಪ್ರಶ್ನೆ: ಗುರುದೇವ, ದೇವರು ಮಾಡಲು ಸಾಧ್ಯವಿಲ್ಲದಿರುವುದು ಏನಾದರೂ ಇದೆಯೇ? ಅದು ಯಾವುದು?

ಶ್ರೀ ಶ್ರೀ ರವಿ ಶಂಕರ್: ಅವನನ್ನು ಅಚ್ಚರಿಪಡಿಸಲು ಸಾಧ್ಯವಿಲ್ಲ! ದೇವರು ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಿಲ್ಲ; ಅದು ಅಸಾಧ್ಯ!

ಪ್ರಶ್ನೆ: ಗುರುದೇವ, ’ಯೋಗಃ ಕರ್ಮಸು ಕೌಶಲಮ್’ ಎಂಬುದನ್ನು ನೀವು ದಯವಿಟ್ಟು ವಿವರಿಸಬಲ್ಲಿರೇ? ಅದನ್ನು ನಾನು ನನ್ನ ಜೀವನದಲ್ಲಿ ಹೇಗೆ ಅಳವಡಿಸಬಹುದು? 

ಶ್ರೀ ಶ್ರೀ ರವಿ ಶಂಕರ್: ನೀನು ಕುಶಲತಾಪೂರ್ಣನಾಗಿರಲು ಬಯಸುವೆಯೆಂಬುದನ್ನು ಈ ಪ್ರಶ್ನೆಯೇ ಸೂಚಿಸುತ್ತದೆ; ಅಷ್ಟೇ, ನೀನು ಈಗಾಗಲೇ ಕುಶಲತಾಪೂರ್ಣನಾಗಿರುವೆ. ನೀನು ಕುಶಲತಾಪೂರ್ಣನಾಗಿರಲು ಬಯಸುವುದಾದರೆ, ನೀನು ಈಗಾಗಲೇ ಕುಶಲತಾಪೂರ್ಣನಾಗಿರುವೆ; ಸುಮ್ಮನೇ ಮುಂದುವರೆ. ನೀನು ಕಲಿಯಲು ಬಯಸುವುದಾದರೆ, ನೀನು ಈಗಾಗಲೇ ಕಲಿಯುತ್ತಿರುವೆ. ನೀನು ಮತದಾನ ಮಾಡಲು ಹೋಗುವಾಗ, ನೀನು ಅದಾಗಲೇ ಮತ ಚಲಾಯಿಸಿರುವೆ, ತಿಳಿಯಿತೇ?

ಹಾಗಾಗಿ, ನಾನು ಕಲಿಯಲು ಬಯಸುತ್ತೇನೆ ಅಂದರೆ, ಅದನ್ನು ಅದಾಗಲೇ ಅರ್ಧ ಮಾಡಿಯಾಯಿತು, ಕಲಿಯುವಿಕೆಯು ಆರಂಭವಾಗಿದೆ ಎಂದು ಅರ್ಥ.

ಗುರುವಾರ, ಅಕ್ಟೋಬರ್ 17, 2013

ಮಂತ್ರ ಮಹತ್ವಪೂರ್ಣ, ಮನೋಲ್ಲಾಸಕರ

ಅಕ್ಟೋಬರ್ ೧೭, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಂದು ಮಂತ್ರವನ್ನು ಗುಟ್ಟಾಗಿ; ಅಷ್ಟೊಂದು ರಹಸ್ಯವಾಗಿ ಯಾಕೆ ಕೊಡಲಾಗುವುದು? ಎಲ್ಲರ ಎದುರಿನಲ್ಲಿ ಕೊಟ್ಟರೆ ಮಂತ್ರವು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ಮನಃಶಾಸ್ತ್ರವು ಏನೆಂದು ಹೇಳುವುದೆಂದು ನಿಮಗೆ ಗೊತ್ತಾ, ನಿಮಗೆ ತೊಂದರೆ ನೀಡುವ ಯಾವುದಾದರೂ ವಿಷಯವು ನಿಮ್ಮ ಮನಸ್ಸಿನಲ್ಲಿದ್ದರೆ, ಅದನ್ನು ಮಾತನಾಡಿ ಎಂದು. ಅದನ್ನು ಅಭಿವ್ಯಕ್ತಿಯ ಕ್ಷೇತ್ರಕ್ಕೆ ತನ್ನಿ. ಆಗ ನೀವು ಅದರಿಂದ ಮುಕ್ತರಾಗುತ್ತೀರಿ.

ಮಂತ್ರವು ಒಳಗೆ ಉಳಿಯಬೇಕೆಂದು ನಾವು ಬಯಸುತ್ತೇವೆ. ಅದು ಅಭಿವ್ಯಕ್ತಿಯ ಕ್ಷೇತ್ರದಲ್ಲಿರಬೇಕೆಂದು ನಾವು ಬಯಸುವುದಿಲ್ಲ. ಆ ಮಂತ್ರವು ಮನಸ್ಸಿನಲ್ಲುಳಿದು, ಮನಸ್ಸನ್ನು ಆಳಕ್ಕೆ ತೆಗೆದುಕೊಂಡು ಹೋಗಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ನಿಮ್ಮ ಮನಸ್ಸು ಆಳಕ್ಕೆ ಹೋಗಲು, ಅಭಿವ್ಯಕ್ತಿಯ ಕ್ಷೇತ್ರದಲ್ಲಿರದ; ರಹಸ್ಯವಾಗಿರುವ ಒಂದು ಮಂತ್ರವನ್ನು ನೀವು ಹೊಂದಿರಬೇಕು. ಅದಕ್ಕಾಗಿಯೇ ಅದನ್ನು ರಹಸ್ಯವಾಗಿ ನೀಡಲಾಗುವುದು. ಒಂದು ರಹಸ್ಯವು ನಿಮ್ಮ ಹೃದಯದಾಳದಲ್ಲಿ, ನಿಮ್ಮ ಚೇತನದ ಆಳದಲ್ಲಿ ಉಳಿಯುತ್ತದೆ.

ಹೀಗೆ ಮನಸ್ಸು ಚೇತನದಲ್ಲಿ ಇನ್ನೂ ಆಳಕ್ಕೆ ಹೋಗಲು ಮಂತ್ರವು ಒಂದು ವಾಹನವಾಗಿದೆ. ಅದಕ್ಕಾಗಿಯೇ ಅದನ್ನು ರಹಸ್ಯವಾಗಿ ಕೊಡಬೇಕಾಗಿರುವುದು. ನನಗೆ ನೀಡಲಾಗಿರುವ ಮಂತ್ರವು ಒಂದು ಬಹಳ ಸಾಮಾನ್ಯ ಮಂತ್ರವಾಗಿರಲೂಬಹುದು, ಆದರೆ, ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ಸಾಧ್ಯವಾಗುವುದಕ್ಕಾಗಿ ನನ್ನ ಮಂತ್ರವನ್ನು ನಾನೊಂದು ರಹಸ್ಯವಾಗಿ ಇಟ್ಟುಕೊಳ್ಳುತ್ತೇನೆ. ಪ್ರಾಚೀನ ಕಾಲದಿಂದಲೂ ಇರುವ ಕಲ್ಪನೆಯಾಗಿದೆ ಇದು. ಇದು ಬಹಳ ವೈಜ್ಞಾನಿಕವಾಗಿದೆ.

ಎಲ್ಲರೂ ಗಟ್ಟಿಯಾಗಿ ಪಠಿಸಬಹುದಾದಂತಹ ಮಹಾಮಂತ್ರಗಳಿವೆ. ಆದರೆ ಒಂದು ವೈಯಕ್ತಿಕ ಮಂತ್ರವನ್ನು ಒಬ್ಬನು ರಹಸ್ಯವಾಗಿಟ್ಟುಕೊಳ್ಳಬೇಕಾದುದು. ಅದನ್ನೇ ನಾವು ನಿಮಗೆ ಧ್ಯಾನದ ಶಿಬಿರದಲ್ಲಿ ನೀಡುವುದು, ಅಂದರೆ, ಸಹಜ ಮಂತ್ರ. ನೀವದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಮತ್ತು ಅದನ್ನು ಅಭಿವ್ಯಕ್ತಿಯ ಕ್ಷೇತ್ರಕ್ಕೆ ತರಬೇಡಿ. ಆದರೆ, ’ಓಂ ನಮಃ ಶಿವಾಯ’ ಮತ್ತು ’ಓಂ’ ಗಳಂತಹ ಮಂತ್ರಗಳನ್ನು ಗಟ್ಟಿಯಾಗಿ ಜಪಿಸಬಹುದು. ಅವುಗಳು ಕಂಪನಗಳನ್ನು ವೃದ್ಧಿಸುತ್ತವೆ.

ಪ್ರಶ್ನೆ: ಗುರುದೇವ, ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಸ್ವಧರ್ಮ ಮತ್ತು ಪರಧರ್ಮದ ಬಗ್ಗೆ ಮಾತನಾಡುತ್ತಾನೆ. ಆದರೆ ಮಹಾಭಾರತದ ಕಾಲಾವಧಿಯಲ್ಲಿ ಸನಾತನ ಧರ್ಮವಲ್ಲದೆ ಬೇರೆ ಧರ್ಮವಿರಲಿಲ್ಲ. ದಯವಿಟ್ಟು ನೀವು ಇದನ್ನು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಮತ ಮತ್ತು ಸಂಪ್ರದಾಯಗಳು ಬೇರೆ ಹಾಗೂ ಧರ್ಮವು ಬೇರೆ. ನೀನು ಇವುಗಳೆರಡರ ನಡುವೆ ಗೊಂದಲಗೊಂಡಿರುವೆ. ಸಂಪ್ರದಾಯವೆಂದರೆ ಪದ್ಧತಿಗಳು. ಧರ್ಮವನ್ನು ಬೇರೆ ಯಾವ ಭಾಷೆಗೂ ಅನುವಾದಿಸಲು ಸಾಧ್ಯವಿಲ್ಲ. ಅದು ವ್ಯಕ್ತಿಯ ಸ್ವಭಾವವಾಗಿದೆ. ಒಬ್ಬರು ಅನುವಾದಿಸಲೇ ಬೇಕಿದ್ದರೆ, ಅತ್ಯಂತ ಸಮಂಜಸವಾದ ಅನುವಾದವೆಂದರೆ, ಒಬ್ಬನ ಸದಾಚಾರ ಸ್ವಭಾವ ಎಂಬುದಾಗಿ. ಹಾಗಾಗಿ ಧರ್ಮವು ನಿಮ್ಮ ಸಹಜ ಪ್ರವೃತ್ತಿಗಳಾಗಿವೆ, ನಿಮ್ಮ ಜನ್ಮಜಾತ ಗುಣಗಳಾಗಿವೆ.

ಹಾಗಾಗಿ ಶ್ರೀಕೃಷ್ಣ ಪರಮಾತ್ಮನು, ’ಸ್ವಧರ್ಮೇ ನಿಧನಂ ಶ್ರೇಯಃ’ ಎಂದು ಹೇಳುವಾಗ ಅವನು ಹೇಳುತ್ತಿರುವುದು, ನಿಮ್ಮ ಜನ್ಮಜಾತ ಪ್ರವೃತ್ತಿಗಳು ಮತ್ತು ಜನ್ಮಜಾತ ಗುಣಗಳೊಂದಿಗಿರಿ ಮತ್ತು ಕೇವಲ ಇತರರನ್ನು ಅನುಕರಣೆ ಮಾಡಿಕೊಂಡಲ್ಲ ಎಂದು. ಸಹಜವಾಗಿರುವುದು, ನಿಮ್ಮದೇ ಸ್ವಭಾವದಲ್ಲಿರುವುದು ಸ್ವಧರ್ಮವಾಗಿದೆ.

ಪ್ರಶ್ನೆ: ಗುರುದೇವ, ಆತ್ಮ ಮತ್ತು ಪರಮಾತ್ಮ ಎಂದರೇನು ಹಾಗೂ ಇವುಗಳೆರಡರ ನಡುವಿರುವ ಸಂಬಂಧವೇನು? ಮತ್ತು ಬ್ರಹ್ಮ, ವಿಷ್ಣು ಮತ್ತು ಶಿವ ಇವರು ಯಾರು?

ಶ್ರೀ ಶ್ರೀ ರವಿ ಶಂಕರ್: ಆರಂಭದಲ್ಲಿ ಕೇವಲ ಚೈತನ್ಯ ಮಾತ್ರ ಇತ್ತು ಎಂದು ಹೇಳಲಾಗುತ್ತದೆ. ಆ ಒಂದು ಶಕ್ತಿ, ಆ ಒಂದು ದೈವಿಕ ಪ್ರಕಾಶವು, ನಾನು ಒಬ್ಬಂಟಿಯಾಗಿರುವೆನು, ನಾನು ಹಲವಾರಾಗಿ ವೃದ್ಧಿಸೋಣ ಎಂದು ಯೋಚಿಸಿತು. ಏಕೋಹಂ ಬಹುಸ್ಯಂ (ನಾನು ಒಂದು, ನಾನು ಹಲವಾಗಲಿ), ಮತ್ತು ಅದು ಪರಾಶಕ್ತಿಯ ರೂಪವನ್ನು ಧಾರಣೆ ಮಾಡಿತು. ನಂತರ ಅದರಿಂದ ಮೂರು ಶಕ್ತಿಗಳು ಹೊರಬಂದವು, ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ. ಸೃಜನಶೀಲ ಉತ್ತೇಜನೆ, ರಕ್ಷಣಾತ್ಮಕ ಉತ್ತೇಜನೆ ಮತ್ತು ಪರಿವರ್ತಕ ಅಥವಾ ವಿನಾಶಕಾರಿ ಉತ್ತೇಜನೆ. ಹೀಗೆ ಶಕ್ತಿಯ ಮೂರು ವಾಹಿನಿಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ ಎಂದು ಕರೆಯಲ್ಪಡುತ್ತವೆ. ಅದಕ್ಕಾಗಿಯೇ, ಆರಂಭದಲ್ಲಿ ಕೇವಲ ಒಂದು ಓಂಕಾರ ಮಾತ್ರವಿತ್ತು ಎಂದು ಹೇಳಲಾಗಿರುವುದು. ಮತ್ತು ಓಂಕಾರವು ’ಆ’, ’ಊ’ ಮತ್ತು ’ಮ’ ಆಯಿತು. ನಾವು ಯೋಚಿಸುವುದೇನೆಂದರೆ, ಆ’, ’ಊ’ ಮತ್ತು ’ಮ’ ಇವುಗಳು ಜೊತೆಯಲ್ಲಿ ಓಂಕಾರವನ್ನು ಮಾಡಿದುವು ಎಂದು. ಅಲ್ಲ! ಓಂ ಎಂಬುದು ಆರಂಭವಾಗಿತ್ತು ಮತ್ತು ಈ ಒಂದು ಉತ್ತೇಜನೆಯು ಮೂರು ವಿವಿಧ ಉತ್ತೇಜನೆಗಳು ಅಥವಾ ದೇವತೆಗಳಾಗಿ ವಿಸ್ತಾರಗೊಂಡಿತು.

ಹೀಗೆ ಒಬ್ಬ ಪರಮಾತ್ಮ ಅಥವಾ ಒಂದು ದೈವತ್ವವು ಹಲವಾಗಿ ವೃದ್ಧಿಸಿತು; ಈ ವೈವಿಧ್ಯಮಯ ಸೃಷ್ಟಿಯು ಅಸ್ತಿತ್ವಕ್ಕೆ ಬರಲೆಂದು.

ಆರಂಭದಲ್ಲಿ ಒಂದೇ ಒಂದು ಅಮೀಬಿಯಾಸಿಸ್ ಇತ್ತು ಎಂದು ಎಲ್ಲಾ ವಿಜ್ಞಾನಿಗಳು ಹೇಳುತ್ತಾರೆ. ಒಂದು ಅಮೀಬಿಯಾಸಿಸ್‌ನಿಂದ ವಿಶ್ವದಲ್ಲಿರುವ ಎಲ್ಲಾ ಬಗೆಯ ಜೀವಿಗಳು ಅಂಕುರಗೊಂಡಿವೆ.

ಪ್ರಶ್ನೆ: ಗುರುದೇವ, ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತದೆಯೆಂದು ನೀವು ಹೇಳಿರುವಿರಿ. ಕಾಲದಿಂದ ಕಾಲಕ್ಕೆ ಜ್ಞಾನ ಕೂಡಾ ಬದಲಾಗುತ್ತದೆಯೇ ಎಂದು ನಾನು ತಿಳಿಯಲು ಬಯಸುತ್ತೇನೆ. ಹಲವಾರು ವರ್ಷಗಳಿಂದ ನಾವು ಅದೇ ಭಗವದ್ಗೀತೆಯನ್ನು ಓದುತ್ತಿದ್ದೇವೆ. ಅದು ಇನ್ನೂ ಪ್ರಸ್ತುತವೇ?

ಶ್ರೀ ಶ್ರೀ ರವಿ ಶಂಕರ್: ಜ್ಞಾನದಲ್ಲಿ ವಿವಿಧ ಹಂತಗಳ ತಿಳುವಳಿಕೆಯಿದೆ. ಚೇತನದ ಬೇರೆ ಬೇರೆ ಸ್ಥಿತಿಗಳಲ್ಲಿ ಜ್ಞಾನವು ಒಂದು ಬೇರೆಯ ಮಗ್ಗುಲನ್ನು ತೆರೆಯುತ್ತದೆ. ಜ್ಞಾನವು ಬದಲಾಗುವುದಿಲ್ಲ, ಅದಲ್ಲಿದೆ, ಆದರೆ ನಿಮ್ಮ ಚೇತನವು ತೆರೆಯುವಾಗ; ನಿಮ್ಮ ಚೇತನವು ಅರಳುವಾಗ ಅದು ನಿಮಗೊಂದು ಹೆಚ್ಚಿನ ಅರ್ಥವನ್ನು ನೀಡುತ್ತದೆ.

ಪ್ರಶ್ನೆ: ಗುರುದೇವ, ಇಂದಿನ ಪ್ರಪಂಚದಲ್ಲಿ ಅಮೇರಿಕಾವು ಒಂದು ಆರ್ಥಿಕ ವಿಕ್ಷೇಪದ ಮೂಲಕ ಹಾದುಹೋಗುತ್ತಿದೆ, ಅದು ಹಲವಾರು ಇತರ ದೇಶಗಳ ಮೇಲೆ ಪ್ರಭಾವ ಬೀರುತ್ತಿದೆ. ದೇಶಗಳ ಮೇಲೆ ಒಟ್ಟಾಗಿ ಪ್ರಭಾವ ಬೀರುವಂತಹ ಯಾವುದಾದರೂ ಕರ್ಮ ಕೂಡಾ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಅಮೇರಿಕಾವು ಇರಾಕಿನೊಂದಿಗೆ ಯುದ್ಧ ಮಾಡಲು ಹೋದಾಗ ಅದೊಂದು ಬಹಳ ತಪ್ಪಾದ ಹೆಜ್ಜೆಯನ್ನು ತೆಗೆದುಕೊಂಡಿತು. ಹಲವಾರು ವರ್ಷಗಳವರೆಗೆ ಅದು ಪ್ರತಿದಿನವೂ ಒಂದು ಬಿಲಿಯನ್ ಡಾಲರ್‌ಗಳನ್ನು ವ್ಯಯಿಸಿತು. ಐದರಿಂದ ಆರು ವರ್ಷಗಳವರೆಗೆ ಅಮೇರಿಕಾವು ಪ್ರತಿದಿನವೂ ಒಂದು ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡುತ್ತಾ ಹೋಯಿತು. ನೀವು ಊಹಿಸಬಲ್ಲಿರೇ, ಇರಾಕಿನೊಂದಿಗಿನ ಈ ಯುದ್ಧದಲ್ಲಿ, ಯಾವತ್ತೂ ಇಲ್ಲದೇ ಇದ್ದ ಸಮೂಹ ನಾಶಕ ಶಸ್ತ್ರವನ್ನು ಕಂಡುಹಿಡಿಯುವುದಕ್ಕಾಗಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಖರ್ಚು ಮಾಡಲಾಯಿತೆಂಬುದನ್ನು? ಹೀಗಾಗಿ ಅದು ತನ್ನಲ್ಲಿದ್ದ ಬಹಳಷ್ಟು ಸಂಪನ್ಮೂಲಗಳನ್ನು ತಾನಾಗಿಯೇ ಬರಿದಾಗಿಸಿಕೊಂಡಿತು. ಸ್ವಾಭಾವಿಕವಾಗಿಯೇ ಈಗ ಒಂದು ದೊಡ್ಡ ವಿಷಮಸ್ಥಿತಿಯಿದೆ.

ಆದರೆ ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ, ಅಮೇರಿಕವು ಈ ಬಿಕ್ಕಟ್ಟಿನಿಂದ ಹೊರಬರುವುದು. ಇದರ ಬಗ್ಗೆ ನಾವು ಅತಿಯಾಗಿ ಚಿಂತಿಸುವುದಾಗಲೀ ಅಥವಾ ಕಾಳಜಿ ವಹಿಸುವುದಾಗಲೀ ಬೇಕಿಲ್ಲ.

ಒಂದೇ ವಿಷಯವೆಂದರೆ, ಅಮೇರಿಕವು ಎಲ್ಲಾದರೂ ಇನ್ನೊಂದು ಯುದ್ಧ ಮಾಡುವ ಸಾಹಸಕ್ಕೆ ಕೈಹಾಕಬಾರದು. ನೋಡಿ, ಇರುವ ದಾರಿಯು ಮಾತುಕತೆಯಾಗಿದೆ. ಇರಾಕ್ ಕೆಟ್ಟ ಸ್ಥಿತಿಯಿಂದ ಅತ್ಯಂತ ಕೆಟ್ಟ ಸ್ಥಿತಿಗೆ ಹೋಗಿದೆ. ಇವತ್ತು ಇರಾಕ್ ಅಂತಹ ಒಂದು ಕೆಟ್ಟ ಪರಿಸ್ಥಿತಿಯಲ್ಲಿದೆ. ಪ್ರತಿದಿನವೂ ಅಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಪ್ರತಿದಿನವೂ ಜನರು ಕೊಲ್ಲಲ್ಪಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೇ? ಯಾರಾದರೂ ಸ್ವಾಗತಿಸಿದ್ದಿರಬಹುದಾದ ಅಥವಾ ಇಷ್ಟಪಟ್ಟಿದ್ದಿರಬಹುದಾದ ಒಂದು ಹೊಸ ಬದಲಾವಣೆಯೇ ಇದು? ಇದು ಪಾಠಗಳಾಗಿವೆ. ಇವುಗಳು ನಾವು ಪರಿಶೀಲಿಸಬೇಕಾದ ದೊಡ್ಡ ಪ್ರಶ್ನೆಗಳಾಗಿವೆ.

ಅಮೇರಿಕಾವು ಹಲವಾರು ಸೈನಿಕರನ್ನು ಕಳೆದುಕೊಂಡಿತು ಮತ್ತು ಯುದ್ಧದಲ್ಲಿದ್ದ ಹಲವಾರು ಸೈನಿಕರು ಬಹಳಷ್ಟು ಆಘಾತಕ್ಕೊಳಗಾಗಿದ್ದಾರೆ. ಈ ಯುದ್ಧದಿಂದ ಯಾರಿಗೂ ಲಾಭವಾಗಿಲ್ಲ. ಪ್ರಪಂಚಕ್ಕೆ ಲಾಭವಾಗಿಲ್ಲ. ಅಮೇರಿಕಾಕ್ಕೆ ಲಾಭವಾಗಿಲ್ಲ. ಈ ಯುದ್ಧದಿಂದಾಗಿ ಇರಾಕಿಗಂತೂ ಖಂಡಿತವಾಗಿಯೂ ಏನೂ ಲಾಭವಾಗಿಲ್ಲ. ಬದಲಾಗಿ ಅಲ್ಲೊಂದು ಮಾತುಕತೆ ನಡೆದಿರುತ್ತಿದ್ದರೆ, ಭಾರತದಂತಹ ದೇಶಗಳು ಒಂದು ದೊಡ್ಡ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತಿತ್ತು. ಹಲವಾರು ಅಪಾರ್ಥಗಳನ್ನು ತಿಳಿಗೊಳಿಸುವ ಸಾಧ್ಯತೆಯಿತ್ತು. ಹೇಗಿದ್ದರೂ ಅದು ಆಗಿಹೋದ ವಿಚಾರ.

ಆದರೆ ಈ ಆಗಿಹೋದ ತಪ್ಪಿನಿಂದ ಕಲಿಯಿರಿ. ಭವಿಷ್ಯದಲ್ಲಿ, ಶಾಂತಿಗೆ ಶಸ್ತ್ರಗಳು ಅಥವಾ ಯುದ್ಧವು ಒಂದು ಉತ್ತರವಲ್ಲ ಎಂಬುದನ್ನು ತಿಳಿಯಿರಿ. ವಾಸ್ತವವಾಗಿ, ಯುದ್ಧದ ಉದ್ದೇಶವೆಂದರೆ ಶಾಂತಿಯನ್ನು ತರುವುದು. ಆದರೆ ಅದು ಸಂಪೂರ್ಣವಾಗಿ ವಿರುದ್ಧವಾಗುತ್ತದೆ.

ಪ್ರಶ್ನೆ: ಗುರುದೇವ, ಕೆಲವು ಧಾರ್ಮಿಕ ಬೋಧನೆಗಳು ಆತ್ಮ ಮತ್ತು ಚೇತನಗಳ ನಡುವೆ ಭೇದವನ್ನು ಕಲ್ಪಿಸುತ್ತವೆ. ವ್ಯಕ್ತಿಯು ಸಾಯುವಾಗ ಆತ್ಮವು ಹೊರದೂಡಲ್ಪಡುತ್ತದೆ ಮತ್ತು ಕೇವಲ ಚೇತನ ಮಾತ್ರ ಅವತರಿಸುತ್ತದೆ ಎಂದು ಹೇಳಲಾಗಿದೆ. ಅಹಂಕಾರವಿರುವ ಮನುಷ್ಯರಿಗೆ ಮಾತ್ರ ಪುನರ್ಜನ್ಮವಿರುವುದು. ವೈದಿಕ ವ್ಯಾಖ್ಯಾನವೇನು?

ಶ್ರೀ ಶ್ರೀ ರವಿ ಶಂಕರ್: ವೈದಿಕ ಕಲ್ಪನೆಯು ವಿಜ್ಞಾನದ ಉಷ್ಣಬಲ (ಥರ್ಮೋಡೈನಮಿಕ್ಸ್) ಸಿದ್ಧಾಂತಕ್ಕೆ ಬಹಳ ಸಮೀಪವಾಗಿದೆ. ಅಂದರೆ, ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ. ಶರೀರವು ಪಂಚಭೂತಗಳಾಗಿ ಭೂಮಿಗೆ ಮರಳಿಹೋಗುತ್ತದೆ. ಶಕ್ತಿಯಾಗಿರುವ ಆತ್ಮವು, ಆಧ್ಯಾತ್ಮಿಕ ಶರೀರದೊಂದಿಗೆ ಉಳಿಯುತ್ತದೆ. ಆತ್ಮವು, ನಂತರ ಪುನಃ, ತಾನು ಬಿಟ್ಟ ಶರೀರದ ಸಂಸ್ಕಾರಗಳಿಂದಾಗಿ, ಹಿಂದಿರುಗಿ ಬರುತ್ತದೆ. ಅದೊಂದು ಸೂಕ್ತವಾದ ಶರೀರವನ್ನು ಕಂಡುಕೊಳ್ಳುತ್ತದೆ ಮತ್ತು ಹಿಂದಿರುಗಿ ಬರುತ್ತದೆ.

ಇವತ್ತು ಪುನರ್ಜನ್ಮದ ಪ್ರಶ್ನೆಯು ಯಾವುದೇ ಅನುಮಾನವನ್ನು ಮೀರಿ ಸ್ಥಾಪನೆಯಾಗಿದೆ. ಇವತ್ತು ಪ್ರಪಂಚದಲ್ಲಿನ ಹಲವಾರು ಆಸ್ಪತ್ರೆಗಳು, ಜನರನ್ನು ಗುಣಪಡಿಸಲು ಮತ್ತು ಜನರಿಗೆ ಕ್ಷೇಮವನ್ನು ತರಲು ಕಳೆದ ಜನ್ಮದ ಪ್ರತಿಗಮನವನ್ನು (ಪಾಸ್ಟ್ ಲೈಫ್ ರಿಗ್ರೆಶನ್) ಒಂದು ಚಿಕಿತ್ಸೆಯಾಗಿ ಬಳಸುತ್ತಿವೆ. ಹೀಗಾಗಿ, ಪುನರ್ಜನ್ಮವಿದೆಯೇ ಅಥವಾ ಇಲ್ಲವೇ ಎಂಬ ಈ ಪ್ರಶ್ನೆಯನ್ನು ಅನುಮಾನವನ್ನು ಮೀರಿ ಸಾಬೀತುಪಡಿಸಲಾಗಿದೆ. ನಾನು ನಿಮಗೆ ಹೇಳುತ್ತೇನೆ ಕೇಳಿ, ಅದು ಇದೆ. ಅದು ಇದೆಯೆಂಬುದು ನನಗೆ ತಿಳಿದಿದೆ, ಆದುದರಿಂದ ನಾನು ನಿಮಗೆ ಅಧಿಕಾರಯುತವಾಗಿ ಹೇಳುತ್ತೇನೆ. ಅದನ್ನು ಸಾಬೀತುಪಡಿಸಿ ಎಂದು ನೀವು ನನ್ನಲ್ಲಿ ಕೇಳಿದರೆ, ನಾನದನ್ನು ನಿಮಗೆ ಸಾಬೀತುಪಡಿಸಲು ಸಾಧ್ಯವಿಲ್ಲ, ಆದರೆ ಅದು ಇದೆಯೆಂದು ನಾನು ನಿಮಗೆ ಹೇಳುತ್ತೇನೆ.

ಪ್ರಶ್ನೆ: ಗುರುದೇವ, ಮಂತ್ರವನ್ನು ೧೦೮ ಸಲ ಜಪಿಸುವುದರ ಮಹತ್ವವೇನು? ಒಂದು ಮಂತ್ರವನ್ನು ವೇಗವಾಗಿ ೧೦೮ ಸಲ ಜಪಿಸುವುದಕ್ಕಿಂತ ಅದನ್ನು ೧೦ ಸಲ ಗಮನವಿರಿಸಿ ಜಪಿಸುವುದು ಉತ್ತಮವೇ?

ಶ್ರೀ ಶ್ರೀ ರವಿ ಶಂಕರ್: ನೀನಿದನ್ನು ಈಗಾಗಲೇ ತಿಳಿದಿರುವೆ! ನಿನಗದನ್ನು ನಿಧಾನವಾಗಿ ಮತ್ತು ಗಮನವಿರಿಸಿ ಮಾಡಲು ಸಾಧ್ಯವಾದರೆ, ಅದು ಉತ್ತಮ. ನೀನದನ್ನು ವೇಗವಾಗಿ ಮಾಡಿದರೂ ಕೂಡಾ ಆಗಲೂ ಅದು ಒಳ್ಳೆಯದು. ಕಡಿಮೆಪಕ್ಷ ನೀನದನ್ನು ಮಾಡುತ್ತಿರುವೆ. ಹೇಗಾದರೂ ಮಾಡು.

ಈಗ, ೧೦೮ ಸಲ ಯಾಕೆ? ಯಾಕೆಂದರೆ ಒಂಭತ್ತು ಗ್ರಹಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳಿವೆ. ಒಂಭತ್ತು ಗ್ರಹಗಳು ಹನ್ನೆರಡು ನಕ್ಷತ್ರಪುಂಜಗಳ ಸುತ್ತಲೂ ತಿರುಗುವಾಗ, ಅದು ೧೦೮ ರೀತಿಯ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳಲ್ಲಿ ಯಾವುದಾದರೂ ದೋಷವಿದ್ದರೆ, ಅದನ್ನು ಮಂತ್ರಗಳ ಧನಾತ್ಮಕ ಶಕ್ತಿಯೊಂದಿಗೆ ಸರಿಪಡಿಸಬಹುದು.

ಪ್ರಶ್ನೆ: ಗುರುದೇವ, ಕೊನೆಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಲಾಗುವುದು: ನಾವು ಎಷ್ಟು ಪ್ರೀತಿಯನ್ನು ನೀಡಿದೆವು ಮತ್ತು ನಾವು ಎಷ್ಟು ಜ್ಞಾನವನ್ನು ತೆಗೆದುಕೊಂಡೆವು, ಎಂದು ನೀವು ಹೇಳುತ್ತೀರಿ. ನಾನು ಯಾವಾಗಲೂ ಪ್ರೀತಿಯನ್ನು ಪಡಕೊಂಡಿರುವೆನು ಮತ್ತು ಜ್ಞಾನವನ್ನು ನೀಡಿರುವೆನು. ಈಗ ನನ್ನ ವಿಧಿಯೇನಾಗುವುದು?

ಶ್ರೀ ಶ್ರೀ ರವಿ ಶಂಕರ್: ಕಡಿಮೆಪಕ್ಷ ನೀನು ಇಷ್ಟನ್ನು ಅರ್ಥಮಾಡಿಕೊಂಡಿರುವೆ!

ಇಲ್ಲಿಯವರೆಗೂ ನೀನು ಜ್ಞಾನವನ್ನು ನೀಡುವುದನ್ನು ಆನಂದಿಸಿರುವೆ, ಈಗ ಜ್ಞಾನವನ್ನು ಪಡಕೊಳ್ಳುವುದನ್ನು ಮತ್ತು ಪ್ರೀತಿಯನ್ನು ನೀಡುವುದನ್ನು ಆರಂಭಿಸು. ನೀನು ಎಷ್ಟು ಪ್ರೀತಿಯನ್ನು ಪಡೆಯುವೆಯೋ ಅದಕ್ಕಿಂತ ಹೆಚ್ಚನ್ನು ಇತರರಿಗೆ ನೀಡು ಮತ್ತು ಆಗ ಮುಗಿಯಿತು. ಆಗ ಕಾರು ಒಂದು 'U' ತಿರುವು ತೆಗೆದುಕೊಂಡಂತೆ. ಅದು ತಪ್ಪಾದ ದಿಕ್ಕಿನಲ್ಲಿ ಚಲಿಸುತ್ತಿತ್ತು, ಚಾಲಕನು ತನ್ನ ತಪ್ಪನ್ನು ಅರಿತುಕೊಂಡು ದಿಕ್ಕನ್ನು ಬದಲಾಯಿಸಿದನು.

ಅದರರ್ಥ ನಾವು ಜ್ಞಾನವನ್ನು ಹಂಚುವುದನ್ನು ನಿಲ್ಲಿಸಬೇಕೆಂದೇ? ಅಲ್ಲ, ನಿಲ್ಲಿಸುವ ಅಗತ್ಯವಿಲ್ಲ. ಜ್ಞಾನವನ್ನು ಕೊಡುವುದನ್ನು ಮುಂದುವರಿಸು. ನೀನು ಏನನ್ನೆಲ್ಲಾ ಪಡೆಯುವೆಯೋ, ಅದನ್ನು ನೀನು ನೀಡು ಮತ್ತು ಆ ಜ್ಞಾನವನ್ನು ಪ್ರೀತಿಯಿಂದ ನೀಡು. ಅದನ್ನು ನಿನ್ನ ಅಹಂಕಾರವನ್ನು ಹಿಗ್ಗಿಸಲು ನೀಡಬೇಡ. ಆ ವ್ಯಕ್ತಿಗೆ ಈ ಜ್ಞಾನದ ಅಗತ್ಯವಿದೆ, ಈ ಉದ್ದೇಶದೊಂದಿಗೆ ಜ್ಞಾನವನ್ನು ಹಂಚು.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

'Mantra' illuminates our heart

ಶುಕ್ರವಾರ, ಸೆಪ್ಟೆಂಬರ್ 27, 2013

ನಿಸ್ಪೃಹ ಸಾಧಕರಿಗೊಂದು ಆತ್ಮೀಯ ಕಿವಿಮಾತು

ಸೆಪ್ಟೆಂಬರ್ ೨೭, ೨೦೧೩
ಬೆಂಗಳೂರು, ಭಾರತ 

ಲ್ಲಿ ನಿಮ್ಮೊಂದಿಗೆ ಸಾಹಿತ್ಯಕ ಉತ್ಸವದಲ್ಲಿ ಪಾಲ್ಗೊಳ್ಳಲು ಮುದವೆನಿಸುತ್ತದೆ. ಸಾಹಿತ್ಯ ಹಾಗು ಆಧ್ಯಾತ್ಮಿಕತೆಯು ದೀರ್ಘ ಸಂಬಂಧ ಹೊಂದಿವೆ. ಈ ಪ್ರಪಂಚದಲ್ಲಿ ಆಧ್ಯಾತ್ಮಿಕತೆ ಇದೆ ಅಂದರೆ ಅದು ಸಾಹಿತ್ಯದ ಸಹಾಯದಿಂದ. ಕನಿಷ್ಠ ಪಕ್ಷ ಈ ದೇಶದಲ್ಲಿ ಹೆಚ್ಚಿನ ಪ್ರಚಲಿತದಲ್ಲಿರುವ, ಓದಿ ಆಚರಣೆಗೆ ತಂದಿರುವಂತಹ ಸಾಹಿತ್ಯವು ಆಧ್ಯಾತ್ಮಿಕತೆಯ ಬಂಧನ ಹೊಂದಿದೆ.

ಮತ್ತೆ, ಆಧ್ಯಾತ್ಮಿಕತೆ ಎಂದರೇನು? ಅದು ಹೊರಗಿರುವಂತದ್ದೆ? ಅಥವಾ, ಪ್ರಾಯೋಗಿಕವಾದುದೆ? ಯಾವುದು ನಿಮ್ಮ ಚೇತನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೊ ಅದನ್ನು ಆಧ್ಯಾತ್ಮಿಕತೆ ಎಂದು ಹೇಳಬಯಸುತ್ತೇನೆ.  ಪೂರ್ಣ ಸಾಹಿತ್ಯವು ನಿಮ್ಮನ್ನು ಎತ್ತರಕ್ಕೊಯ್ದು, ನಿಮ್ಮ ಮುಖದಲ್ಲಿ ಮುಗುಳ್ನಗೆ ಮೂಡಿಸಿ, ನಿಮ್ಮನ್ನು ವಿಶ್ರಾಂತಗೊಳಿಸಿ, ನೀವು ಕ್ಷೀಣಿಸುತ್ತಿರುವಾಗ ಚೈತನ್ಯ ತುಂಬಿ, ಎಲ್ಲವು ಅಲುಗಾಡುವ ಅಥವಾ ಅಭಾವದಿಂದಿರುವ ಸಂಧರ್ಭದಲ್ಲಿ ನಂಬಿಕೆ ತುಂಬುವುದೇ ಆಧ್ಯಾತ್ಮಿಕತೆ ಎಂದು ಹೇಳಬಯಸುತ್ತೇನೆ.

ವಸ್ತುತಃ ಎಲ್ಲ ಪದ್ಯಗಳು ಆಧ್ಯಾತ್ಮದೊಳಗಿಂದ ಒಡಮೂಡಿವೆ ಎನ್ನಬಯಸುತ್ತೇನೆ. ಇದೆಲ್ಲ ಒಳಗಿನ ಸಮಚಿತ್ತತೆ, ಪರೋಕ್ಷ ಅರಿವಿನಿಂದ ಬಂದಿವೆ.

ನಿಸ್ಪೃಹ ಸಾಧಕರಿಗೆ ಆತ್ಮೀಯ ಕಿವಿಮಾತು ಎಂಬ ಪುಸ್ತಕವು ಒಂದು ಗುಂಪಿನ ಯುವಜನರಿಗೆ ಪ್ರತಿ ಬುಧವಾರ ಸತತ ಏಳು ವರ್ಷಗಳ ಕಾಲ ನೀಡಿದ ಸಂವಾದದ ಫಲ. ಒಬ್ಬರನ್ನೊಬ್ಬರು ಪ್ರಶ್ನೆ ಕೇಳುತ್ತ, ಕೆಲವು ವಿಷಯವನ್ನು ಚರ್ಚಿಸುತ್ತ, ಬೌದ್ದಿಕ ಬುದ್ದಿ ಶಕ್ತಿಯನ್ನು ಮಥಿಸುತ್ತ, ಮತ್ತು ಯಾವುದೆಲ್ಲ ಹೊರಬರುತ್ತಿದ್ದವೋ ಅವನ್ನೆಲ್ಲ ಜ್ಞಾನ ಪುಟಗಳನ್ನಾಗಿ ಹೊರತರಲಾಯಿತು.

ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ, 'ವದೆ ವದೆ ಜಯತೆ ತತ್ವಭೋದಃ'. ಪ್ರತಿಯೊಂದು ಚರ್ಚೆಯು ಗ್ರಹಿಸುವಂತಹ ತತ್ವವನ್ನು ಹೊರತರುತ್ತದೆ. ನಮ್ಮ ಅನುಭವಗಳನ್ನು ಚರ್ಚಿಸಿದಾಗ ಅದರಿಂದ ಸುಂದರವಾದುದೊಂದು ಹೊರಬರುತ್ತದೆ. ಆದ್ದರಿಂದ ಚರ್ಚೆಯು ಸಾಹಿತ್ಯದ ಹಾಗು ಆಧ್ಯಾತ್ಮದ ಒಂದು ಭಾಗ.  ಒಂದು ಆಳವಾದ ತೃಪ್ತಿಯ ಹಾಗು ಸಮಾಧಾನದ ಭಾವ ಉಂಟಾದರೆ ಅದು ಆಧ್ಯಾತ್ಮದ ಸಂಕೇತ.

ಆರ್ಟ್ ಆಫ್ ಲಿವಿಂಗ್ ನಲ್ಲಿ ನಾವು ಉಸಿರಿನ (ಮನಸ್ಸು ಮತ್ತು ಉಸಿರು ನಿಕಟ ಕೊಂಡಿಗಳು) ಸಹಾಯದಿಂದ ದೇಹಕ್ಕೆ ಬೇಕಾದಂತಹ ಚೈತನ್ಯವನ್ನು ಒದಗಿಸಲಾಗುತ್ತದೆ.

ಇದು 'ಬರಹಗಾರನ ತಡೆ' ಎಂಬ ತೊಂದರೆಯಿಂದ ತಪ್ಪಿಸುತ್ತದೆ. ನೀವು ಬರಹಗಾರರಾಗಿದ್ದಲ್ಲಿ ಬರೆಯುವ ಮುಂಚೆ ಉಸಿರಿನ ವ್ಯಾಯಾಮ ಮಾಡಿ ವಿಶ್ರಮಿಸಿ.  ಯೋಗ ವಿಜ್ಞಾನದಲ್ಲಿ ಹೇಳಿರುವಂತೆ  'ಜ್ಞಾನ ನಾಡಿ'ಯು (ಅದೊಂದು ಶಕ್ತಿ ಪ್ರಸರಣದ ಮಾರ್ಗ)  ತೆರೆದುಕೊಳ್ಳುವುದನ್ನು ನೋಡುವಿರಿ. ನಂತರ ನೀವು ಬರೆಯಲು ಸಾಧ್ಯವಾಗುತ್ತದೆ. 'ಬರಹಗಾರನ ತಡೆ' ತೊಂದರೆಯು ಮಾಯವಾಗುತ್ತದೆ. ಇದು ಬರಹಗಾರರಿಗೆ ರಚನಾತ್ಮಕ,ಹೊಸದಾದ ಬರಹಗಳನ್ನು ಹೊರತರಲು ಸಹಾಯಮಾಡುತ್ತದೆ. ಕೆಲವು ನಿಮಿಷದ ಆಳವಾದ ಮೌನವು ನಮ್ಮನ್ನು ನಾವು ಚೆನ್ನಾಗಿ ವ್ಯಕ್ತಪಡಿಸಿಕೊಳ್ಳಲು ಸಹಾಯವಾಗುತ್ತದೆ. ನಿಮಗೀಗ ಏನಾಗುತ್ತಿದೆಯೆಂದು ಗಮನಿಸುತ್ತೀರ? ಪದಗಳ ಮಧ್ಯ ಓದಲು ಸಾಧ್ಯವೇ? ಮನಸ್ಸಿನಲ್ಲಿ ಏನೋ ಒಂದು ಸಮಸ್ಥಿತಿಗೆ ಬರುತ್ತಿರುವುದು ಗೊತ್ತಾಗುತ್ತಿದೆಯೇ?

ನಮ್ಮ ಆಲೋಚನೆಯ ಮಧ್ಯೆ ಇಲಿಯ ಓಟ ಸಾಗುತ್ತಿರುತ್ತದೆ. ಅದು ಕಡಿಮೆಯಾದಾಗ ಒಂದು ಸುಂದರವಾದುದೊಂದು ಸೃಷ್ಟಿಯಾಗಲು ಸಾಧ್ಯವಾಗುತ್ತದೆ.

ಬರಹಗಾರರು ಪ್ರಕೃತಿಯೊಂದಿಗೆ ಇರಲು ಬಯಸುತ್ತಾರೆ. ನಿಮಗೆ ಗೊತ್ತೇ ಪ್ರಕೃತಿಯೊಂದಿಗಿದ್ದಾಗ, ಸಮುದ್ರದ ದಂಡೆಯಲ್ಲಿ, ಪರ್ವತ ಪ್ರದೇಶದಲ್ಲಿ, ಉದ್ಯಾನವನದಲ್ಲಿ  ನಿಜವಾಗಿಯು  ಏನಾಗುವುದೆಂದು?   ಯಾವುದೋ ಒಂದು ಆಂತರ್ಯದಲ್ಲಿ ನಿಮ್ಮನ್ನು ನಿಧಾನಗೊಳಿಸುತ್ತದೆ. ಕಟ್ಟಳೆ ಕಡಿಮೆಯಾದಾಗ ರಚನಾತ್ಮಕತೆ ಹೆಚ್ಚುತ್ತದೆ.

ಇದೇ ತರಹ ಬರಹಗಾರರ ತಡೆಯು ಒಡೆದು ರಚನಾತ್ಮಕ ಕೆಲಸ ಸಾಧ್ಯವಾಗುತ್ತದೆ ಬರಹಗಾರರು  ಏಕಾಂತ ಸ್ಥಳಗಳಿಗೆ ಹೋದಾಗ.

ಬೆಳ್ಳಂಬೆಳಿಗ್ಗೆ ನೀವು ಏನನ್ನಾದರು ಬರೆಯಲು ಕುಳಿತಾಗ ನಿಮ್ಮಲ್ಲೊಂದು ಚೆಂದದ ಭಾವ ಉಂಟಾಗುತ್ತದೆ. ಅದು ವಾತಾವರಣದಿಂದಲೋ ಅಥವಾ ಸುತ್ತಲಿನ ಪರಿಸರದಿಂದಲೋ ಉಂಟಾಗುತ್ತದೆ. ಇಂತಹ ಪರಿಸರವನ್ನು ನೀವೇ ಸೃಷ್ಟಿಸಬಹುದು. ಇದಕ್ಕಾಗಿ ನೀವು ಬೇರೆಲ್ಲೋ ಇರಬೇಕಾಗಿಲ್ಲ, ನಿಮ್ಮ ಮನಶಕ್ತಿಯಿಂದ ನೀವಿದ್ದಲ್ಲೇ ಸೃಷ್ಟಿಸಬಹುದು. ಉಸಿರಿನತ್ತ ಗಮನ ಹರಿಸುತ್ತ ನಮ್ಮ ಮನಸನ್ನು ಶಾಂತಗೊಳಿಸಬಹುದು.

ನಾನು ೧೯೭೨ ರಲ್ಲಿ ಬರೆಯಲು ಶುರು ಮಾಡಿದಾಗ ನನಗೆ ೧೬ ವರ್ಷ. ನನ್ನ ಸ್ನೇಹಿತನ ತಂದೆಯು ಪ್ರಸಿದ್ಧ ಬರಹಗಾರರು. ಕೆಲವೊಮ್ಮೆ ನಾವುಗಳು ಅವರ ಜೊತೆ ಕುಳಿತು ಸಂಭಾಷಿಸುತ್ತಿದ್ದೆವು. ನಾವುಗಳು ಅಂತಹ ಶ್ರೇಷ್ಠ ವ್ಯಕ್ತಿಗಳಿಂದ ಸುತ್ತುವರಿದು ನಾವೂ ಏನಾದರು ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿಸುತ್ತಿದ್ದರು. ಅವರ ಪುಸ್ತಕಗಳನ್ನು ಅಥವಾ ಪದ್ಯಗಳನ್ನು ಓದಿದಾಗ ಅವರಲ್ಲಿ ಹೇಳುತ್ತಿದ್ದೆ, ನನಗೆ ಅನ್ನಿಸುವುದನ್ನು ನನ್ನಿಂದ ಬರೆಯಲಾಗುವುದಿಲ್ಲ, ಏಕೆಂದರೆ ಅದನ್ನೆಲ್ಲ ಆಗಲೇ ಬರೆದಾಗಿದೆ.
ನನ್ನ ಯುವ ಮತ್ತು ಉದಯೋನ್ಮುಖ ಬರಹಗಾರರೆ ನಿಮಗೆ ನನ್ನ ಸಲಹೆಯೆಂದರೆ ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲು ಹೋಗಬೇಡಿ ಅದರ ಬದಲು ವರ್ಣಚಿತ್ರಗಳನ್ನು ನೋಡಿ.

ಚಿತ್ರಗಾರರಿಗೆ ನನ್ನ ಸಲಹೆಯೆಂದರೆ ಇನ್ನೊಬ್ಬರ ಚಿತ್ರಗಳನ್ನು ನೋಡಲು ಹೋಗಬೇಡಿ. ಒಳ್ಳೆಯ ಪುಸ್ತಕಗಳನ್ನು ಓದಿ, ಅದರಿಂದ ಚೆನ್ನಾಗಿ ಚಿತ್ರಿಸಬಹುದು.

ಕೆಲವರು ಎಷ್ಟು ಚೆನ್ನಾಗಿ ಬರೆಯುತ್ತಾರೆಂದರೆ ಅದಕ್ಕಿಂತ ಚೆನ್ನಾಗಿ ನಿಮಗೆ ಬರೆಯಲು ಸಾಧ್ಯವಿಲ್ಲ ಎಂದೆನಿಸುತ್ತದೆ. ನಿಮಗೆ ಏನು ಹೇಳಬೇಕಾಗಿದೆಯೋ ಅದನ್ನು ಹೇಳಿ ಮುಗಿಸಿಯಾಗಿದೆ. ಸ್ಪಷ್ಟವಾಗಿ ಇಂತಹುದೇ ಭಾವ ಕೃಷ್ಣ, ಅಡಿಗರ ಅಥವಾ ಡಾ. ಡಿ.ವಿ ಗುಂಡಪ್ಪನವರ 'ಮಂಕುತಿಮ್ಮನ ಕಗ್ಗ' ಓದಿದಾಗ  ಉಂಟಾಯಿತು. ನಮ್ಮಲ್ಲಿ ಕೆಲವರಿಗೆ ಆಗಿರುವಂತಹ ಅನುಭವವನ್ನೇ ಬರೆದಿದ್ದಾರೆ. ಸಾಹಿತ್ಯವು ಮನುಷ್ಯನಲ್ಲಿ ಸಾಮಾನ್ಯ ಜ್ಞಾನದ ಹನಿ ಹನಿಯನ್ನು ತುಂಬುತ್ತದೆ. ಇದು ಕೆಲವರನ್ನು ಪೂರ್ವಗ್ರಹ ಪೀಡಿತರನ್ನಾಗಿ ಮತ್ತು ತಪ್ಪು ಭಾವ ಹಾಗು ಸಂಕುಚಿತ ಬುದ್ಧಿಯವರನ್ನಾಗಿ ಮಾಡಬಹುದು. ಇದನ್ನು ನಾವು ಚೀನ ಹಾಗು ಪ್ರಪಂಚದ ಇತರೆ ಭಾಗಗಳಲ್ಲಿ ನೋಡಿದ್ದೇವೆ. ಸಾಹಿತ್ಯದ ಮೂಲಕ ಕೆಲವು ಸಿದ್ದಾಂತಗಳು ಹುಟ್ಟಿಕೊಂಡು ತುಂಬಾ ಜನರು ತೊಂದರೆಪಟ್ಟರು. ಹಾಗು ಆ ಭಾಗಕ್ಕೆ ಅಂಟಿಕೊಂಡು ಲಕ್ಷ ಲಕ್ಷ ಮಂದಿ ಸಾವನ್ನಪ್ಪಿದರು.

ಚತ್ತೀಸ್ ಗಡ್, ನಾನು ಈ ದಿನ ಭೇಟಿ ಕೊಡಬೇಕಿರುವ ಸ್ಥಳ. ಈ ಸ್ಥಳವು ನಕ್ಸಲರ ಚಟುವಟಿಕೆಯಿಂದ ತ್ರಾಸವನ್ನನುಭವಿಸುತ್ತಿದೆ. ಇದೂ ಇದರದೇ ಆದ ಸಾಹಿತ್ಯವನ್ನು ಹೊಂದಿದೆ. ನಕ್ಸಲರು ಅದರಲ್ಲಿ ಬಹಳ ನಂಬಿಕೆಯಿಟ್ಟಿದ್ದಾರೆ ಹಾಗು ನೆಪೋಲಿಯನ್ ಅನ್ನು ಉಲ್ಲೇಖಿಸಿ ಹೇಳುತ್ತಾರೆ 'ಹಿಂಸೆಯೇ ದಾರಿ'!.

ನಾನು ಹೇಳಿದೆ, ನೆಪೋಲಿಯನ್ ಹೇಳಲಿಲ್ಲ ಅವನನ್ನು ಅಂಗೀಕರಿಸಿ ಎಂದು!. ಅವನು ರಾಜ್ಯವನ್ನು ಅವನ ಶಕ್ತಿಯಿಂದ ವಶಪಡಿಸಿಕೊಂಡ. ನಾವುಗಳು ನಮ್ಮ ಶಕ್ತಿಯತ್ತ ಗಮನಹರಿಸಬೇಕು.

ಇಂತಹ ದಾರಿ ತಪ್ಪಿಸುವಂತಹ ಅಥವಾ ಹಿಂಸೆಯ ಸಿದ್ದಾಂತವನ್ನು ಜನರಲ್ಲಿ ತುಂಬುವಂತಹ ಕೆಲಸ ಈ ಪ್ರಪಂಚದಲ್ಲಿ ತುಂಬಾ ನಡೆದಿದೆ. ತದ್ವಿರುದ್ದವಾಗಿ,  ಇಂತಹುದೇ ಸಂಭವಿಸಿದೆ ಶಾಂತಿ ನೆಲೆಸುವ ಮೂಲಕ. ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಹಾಗು ಇತರರುಗಳ ಬರಹಗಳು ಶಾಂತಿ, ತತ್ವಕ್ಕೆ ಬದ್ಧವಾದ, ಸಹನೆ, ಪ್ರೀತಿಯ ಹಂಚಿಕೆ ಇವುಗಳಿಂದ ತುಂಬಿತ್ತು. ಈ ದಿನಗಳಲ್ಲಿ ಇವುಗಳು ಬೇಕಾಗಿವೆ.

ಸಾಹಿತ್ಯವು ಶಾಂತಿಯಿಂದ ತಪ್ಪುದಾರಿಗೆ ಎಳೆಯಬಹುದು. ಹಾಗು ಶಾಂತಿಯನ್ನು ತರಬಹುದು. ಇದು ಕೋಪ, ಆಶಾಭಂಗ ಅಥವಾ ಪ್ರೀತಿ, ಒಂದೇ ಎಂಬ ಭಾವವನ್ನು ತರಬಹುದು. ಇದೆಲ್ಲ ನಮಗೆ ತಿಳಿದಿದೆ. ಇದರಲ್ಲಿ ಒಂದು ಅಥವಾ ಮತ್ತೊಂದು ಆಗಬೇಕೆಂದು ನಾನು ಹೇಳುತ್ತಿಲ್ಲ.

ಜೀವನವು ತುಂಬ ಕ್ಲಿಷ್ಟವಾದುದು. ಇದರಲ್ಲಿ ಎಲ್ಲ ರೀತಿಯ ಅಂಶಗಳು ಒಳಗೊಂಡಾಗ ಮಾತ್ರ ಪರಿಪೂರ್ಣವೆನಿಸುತ್ತದೆ. ಯಾವುದೇ ಸಾಹಿತ್ಯವು ಸ್ವಲ್ಪ ವ್ಯಂಗ್ಯ, ಸಂದೇಹ, ಪುಳಕಗಳನ್ನು ವಿಮರ್ಶಿಸಲು ಓದುಗರಿಗೆ ನೀಡಬೇಕು. ಎಲ್ಲವು ಸಾದಾ ಇರುವ ಬದಲು ಇಂತಹುದನ್ನು ನೀಡಬೇಕು.

ಜನರು ಅವರದೇ ಆದ ವಿಚಾರಗಳನ್ನು ಹೊರತರಬೇಕು. ಸಾಹಿತ್ಯದಲ್ಲಿ ಪ್ರತ್ಯೇಕತೆ ಇರಬೇಕು. ಸಾಹಿತ್ಯವು ಚಿತ್ತೋದ್ರೇಕದಿಂದ ಅಥವಾ ಯಾವುದೋ ಒಂದು ಮನೋಭಾವದಿಂದ ಕೂಡಿರುವ ಬದಲು ಪ್ರತ್ಯೇಕತೆ ಇರಬೇಕು ಅನ್ನುವುದು ನನ್ನ ಅನಿಸಿಕೆ. ಇದು ಜನರಿಗೆ ಅವರ ಬಗ್ಗೆ ಚಿಂತಿಸುವ, ರಚನಾತ್ಮಕತೆ, ಅವರದೇ ಆದ ವಿಚಾರ, ಮತ್ತು ಮಾನವೀಯ ಮೌಲ್ಯವನ್ನು ಗೌರವಿಸುವ ಗುಣವನ್ನು ತರುತ್ತದೆ.

ನಿಸ್ಪೃಹ ಸಾಧಕರಿಗೆ ನನ್ನದೊಂದು ಕಿವಿಮಾತು, 'ಉನ್ನತವಾದುದನ್ನು ಅರಸಿರಿ'. ನಿಮ್ಮ ಐದು ಗ್ರಹಣ ಶಕ್ತಿಗೂ ಮೀರಿದ, ಜೀವನಕ್ಕೂ ಅತೀತವಾದುದನ್ನು ಅರಸಿರಿ. ನಮ್ಮೆಲ್ಲರಲ್ಲಿ ಪ್ರಚಲಿತದಲ್ಲಿರುವ ಜೀವನದ ಒಂದು ಭಾಗವಾದ ಆಧ್ಯಾತ್ಮದ ಕಡೆಗೆ ಗಮನ ಹರಿಸಿ. ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಜೀವನವನ್ನು ಬರಿ ವಿಶಾಲ ದೃಷ್ಟಿಯಿಂದ ನೋಡಿ ಸಾಕು.

ನಿಮ್ಮನ್ನು ನೀವು ಕೇಳಿಕೊಳ್ಳಿ, ನಾನು ಯಾರು? ನಾನೇನು ಮಾಡುತ್ತಿದ್ದೇನೆ? ನನಗೇನು ಬೇಕು? ಈ ವಿಶ್ವವು ಯಾವುದಕ್ಕೆ ಸಂಬಂಧಿಸಿದೆ? ಇವೆಲ್ಲವೂ ಯಾವುದಕ್ಕಾಗಿ? ಈ ವಿಚಾರಣೆಯು ನಿಮ್ಮನ್ನು ಅನ್ವೇಷಕರನ್ನಾಗಿ ಮಾಡುತ್ತದೆ. ನನಗನ್ನಿಸುವ ಹಾಗೆ  ಪ್ರತಿಯೊಬ್ಬ ಸಾಕ್ಷರನು ಅನ್ವೇಷಕನಾಗಬೇಕು. ಅನ್ವೇಷಣೆಯು ಕೊನೆಯಾಗಬಾರದು.

ಅನ್ವೇಷಣೆಯು ಜೀವನದಲ್ಲಿ ಮುಂಚಿತವಾಗಿ ಬರುತ್ತದೆ. ಮೂರು ವರ್ಷದ ಮಗುವು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತದೆ, ಮತ್ತು ಇದು ನಮ್ಮ ಜೀವನದ ಕೊನೆಯವರೆಗೂ ಸಾಗಬೇಕು. ಎಲ್ಲಿ ನಮಗೆ ತಿಳಿಯಬೇಕೋ, ಎಲ್ಲಿ ನಾವು ಸತ್ಯವನ್ನು ಅರಿಯ ಬಯಸುತ್ತೇವೋ, ಮತ್ತು ಜೀವನವೆಂದರೇನು, ಇತರರ ಮನಸ್ಸನ್ನು ತಿಳಿಯುವುದು ಹಾಗು ನಮ್ಮ ಸ್ವಂತ ಮನಸ್ಸನ್ನು ಅರಿಯುವುದು,  ಈ ಎಲ್ಲ ಕ್ಲಿಷ್ಟ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದೇ ಮನುಷ್ಯ ಜೀವನದ ಉದ್ದೇಶ.

ನಮಗೆ ದಯಪಾಲಿಸಲಾಗಿರುವ ಧೀಶಕ್ತಿ ಬಗ್ಗೆ ಗಮನ ಹರಿಸೋಣ. - ಮನಸ್ಸು, ಪ್ರಜ್ಞೆ, ಸ್ಮರಣೆ, ಅಹಂ, ಮತ್ತು ಎಲ್ಲಕ್ಕೂ ಮೀರಿದ, ಆಲೋಚನಾ ಉತ್ಪತ್ತಿ ಕೇಂದ್ರ ಇವೆಲ್ಲವೂ ನಮ್ಮ ಜೀವನವನ್ನು ಶ್ರೀಮಂತಗೊಳಿಸುತ್ತದೆ. ಪೂರ್ವಗ್ರಹ ಇರಬಾರದು. ಎಲ್ಲ ಕ್ಷೇತ್ರದಲ್ಲೂ ವಿಶಾಲ ಹೃದಯದಿಂದಿರುವುದು  ಒಂದು ನಿಜವಾದ ಜ್ಞಾನ ಎಂಬುದು ನನ್ನ ಪರಿಗಣನೆ.

ಪ್ರ. ನಾನೊಬ್ಬ ವೃತ್ತಿಪರ ಬರಹಗಾರ. ನಾನು ಕಥೆಗಳನ್ನು ವಾಣಿಜ್ಯೋದ್ಯಮಕ್ಕಾಗಿ ಬರೆಯಲೇ? ಅಥವಾ ಹೃದಯಾಂತರಾಳದಿಂದ ಬಂದುದನ್ನು ಬರೆದು, ಅದು ಮಾರಾಟವಾಗದಿದ್ದರೂ ಸಹ ನನ್ನ ಕಲೆಗೆ ನಿಷ್ಠನಾಗಿರಲೆ?  

ಶ್ರೀಶ್ರೀ: ಇವೆರಡರಲ್ಲಿ ಒಂದನ್ನು ಮಾತ್ರ ಏಕೆ ಆಯ್ಕೆ ಮಾಡುತ್ತೀರಿ. ಎರಡನ್ನೂ ಒಟ್ಟಿಗೆ ಮಾಡಬಹುದಲ್ಲ? ವಾಣಿಜ್ಯೋದ್ಯಮಕ್ಕೆ ಸಂಬಂಧಿಸಿದಂತೆ ಬರೆಯಿರಿ. ಬರಹವು ಅಮರವಾಗುವಂತೆ ಬರೆಯಿರಿ.

(ಆದರೆ ಗುರುದೇವ್ ನನಗೆ ನನ್ನದೇ ಆದ ಗುರುತಿದೆ. ನಾನು ನನ್ನ ಗುರುತಿಗೆ ಅಂಟಿಕೊಳ್ಳಲೆ ಅಥವಾ ಎರಡೆರಡು ಗುರುತುಗಳನ್ನು ಹೊಂದಲೆ?)

ನೀವು ಎರಡೆರಡು ಗುರುತುಗಳನ್ನು ಹೊಂದಬಹುದು. ಒಂದೇ ಗುರುತಿಗೆ ಯಾಕೆ ಅಂಟಿಕೊಳ್ಳುತ್ತೀರಿ. ಎರಡನ್ನೂ ನಿಭಾಯಿಸಿ. ನನಗೆ ಇದರಲ್ಲೇನು ತೊಂದರೆ ಇಲ್ಲ ಎನಿಸುತ್ತದೆ.

ಪ್ರ. ಗುರುದೇವ್, ಜ್ಞಾನ ಹಾಗು ಲೋಕಜ್ಞಾನಕ್ಕೆ ವ್ಯತ್ಯಾಸವೇನು?

ಶ್ರೀ: ಶ್ರೀ: ಜ್ಞಾನವು ನಿಮ್ಮಲ್ಲಿ ಏನಿದೆ ಎಂಬುದನ್ನು ಸೂಚಿಸಿದರೆ ಲೋಕಜ್ಞಾನವು ನಿಮ್ಮ ಜೀವನದಲ್ಲಿ ಏನಿದೆ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಅನುಭವದಿಂದ ಬರುವುದು ಲೋಕಜ್ಞಾನ. ಓದಿ, ಕೇಳಿ ಅರಗಿಸಿಕೊಂಡಿದ್ದು ಜ್ಞಾನ. ಜ್ಞಾನವು ಮೆನುವನ್ನು ಓದಿದಂತೆ. ಲೋಕಜ್ಞಾನವು ಊಟವನ್ನು ಸವಿದಂತೆ.
ಪ್ರ. ಆಧ್ಯಾತ್ಮಿಕತೆಯು ನಮ್ಮ ದೇಶಕ್ಕೆ ಅಗತ್ಯವಾಗಿದೆ. ನಿಜಾಂಶವೇನೆಂದರೆ ಇದು ಶ್ರೀಮಂತರಿಗೆ ಅಥವಾ ದುಡ್ಡಿರುವವರಿಗೆ ಮಾತ್ರ ದಕ್ಕುತ್ತಿದೆ. ಸಾಮಾನ್ಯ ಪ್ರಜೆಯು ಶ್ರೀಮಂತನಾಗಿರದಿದ್ದರು ಆಧ್ಯಾತ್ಮಿಕತೆಯನ್ನು ಅನುಭವಿಸಬೇಕಾದರೆ ಏನು ಮಾಡಬೇಕು?
ಶ್ರೀಶ್ರೀ: ಆಧ್ಯಾತ್ಮಿಕತೆಗು ಹಣಕ್ಕೂ ಯಾವುದೇ ಸಂಬಂಧವಿಲ್ಲ. ಖಂಡಿತ ಇಲ್ಲ. ಬಡವರೂ ಶ್ರೀಮಂತರಷ್ಟೇ ಆಧ್ಯಾತ್ಮಿಕತೆಯನ್ನು ಹೊಂದಬೇಕು. ನಿಜ ಹೇಳಬೇಕೆಂದರೆ ನಾವು ಕಾರ್ಯಕ್ರಮವನ್ನು ಸುಮಾರು 40,000 ಹಳ್ಳಿಗಳಲ್ಲಿ ಹಾಗು ಸ್ಲಂಗಳಲ್ಲಿ ಮಾಡುತ್ತಿದ್ದೇವೆ.

ಬಡವರು ಆಧ್ಯಾತ್ಮಿಕತೆಗೆ ಬಂದರೆ ನಿಜಕ್ಕೂ ಅವರು ಪ್ರಾಮಾಣಿಕರಾಗಿರುತ್ತಾರೆ. ಅವರು ಕುಡಿತ ಹಾಗು ದುಶ್ಚಟಗಳಿಂದ ಪಾರಾಗುತ್ತಾರೆ.

ನಾವು ಕಾರ್ಯಕ್ರಮವನ್ನು ಜೈಲಿನಲ್ಲೂ ಹಮ್ಮಿಕೊಂಡಿದ್ದೇವೆ. ನಾನಿದನ್ನು ಒಪ್ಪುವುದಿಲ್ಲ, ಆಧ್ಯಾತ್ಮಿಕತೆಯು ಶ್ರೀಮಂತರಿಗೆ ಮಾತ್ರವೆಂದು. ಇದು ಎಲ್ಲರಿಗಾಗಿ. ಯಾವುದಾದರು ಮುಕ್ತವಾಗಿ ಸಿಕ್ಕಿದರೆ ಶ್ರೀಮಂತರು ಗೌರವಿಸುವುದಿಲ್ಲ. ಅವರು ಪಾವತಿಸಿದಾಗ ಮಾತ್ರ ಗೌರವದಿಂದ ಕಾಣುತ್ತಾರೆ. ನಂತರ ಇದರಿಂದ ಏನಾದರು ಪಡೆಯಬೇಕೆಂದು ಭಾವಿಸುತ್ತಾರೆ. ಇದೇ ಶ್ರೀಮಂತರ ನಡವಳಿಕೆ.

ಪ್ರ. ಗುರುದೇವ್, ಸ್ವಲ್ಪ ಸಮಯದ ನಂತರ ವಿವಿಧ ಮನೋಭಾವದಿಂದ ಶ್ರೇಷ್ಠ ಸಾಹಿತ್ಯಗಳು ಹೊರಬರುತ್ತವೆ. ಆದರೆ ಅವುಗಳು ನಕಾರಾತ್ಮಕ ಮನೋಭಾವ, ನೋವು, ಲಾಲಸೆಯಿಂದ  ಕೂಡಿದ್ದು ಅವುಗಳನ್ನು ಹೊಂದಲು ಯೋಗ್ಯವಾಗಿರುವುದಿಲ್ಲ. ನನಗನ್ನಿಸುತ್ತದೆ ಒಬ್ಬರು ಸಕಾರಾತ್ಮಕತೆಯಿಂದ ಮುಂದೆ ಹೋಗಬಹುದಾಗಿದೆ. ನಾನು ಇವೆರಡನ್ನೂ ಹೇಗೆ ಉಪಯೋಗಿಸಿಕೊಳ್ಳಲಿ?

ಶ್ರೀಶ್ರೀ: ನೀವು ಮೊದಲು ತಿಳಿದುಕೊಳ್ಳಬೇಕಾಗಿದೆ ವಿವಿಧ ಬಗೆಯ ಜನರಿದ್ದಾರೆಂದು. ನಾವು ಏಕಜಾತೀಯ ಸಮಾಜದಲ್ಲಿಲ್ಲ. ವಿಜಾತೀಯ ಸಮಾಜದಲ್ಲಿದ್ದೇವೆ. ಇನ್ನು ವ್ಯಕ್ತಿಗತವಾಗಿ ಒಬ್ಬನು ಕೊನೆಯವರೆಗೂ ಒಂದೇ ರೀತಿ ಇರುವುದಿಲ್ಲ. ಅವನ ಭಾವನೆ, ಮನಸ್ಥಿತಿಯು ಬದಲಾಗುತ್ತಿರುತ್ತದೆ. ಉದಾಹರಣೆಗೆ, ಯಾರಿಗಾದರು ಸಂಗೀತ ಕೇಳಬೇಕೆನಿಸಿದಾಗ ಕೆಲವೊಮ್ಮೆ ಅಶ್ರಾವ್ಯ ಸಂಗೀತ ಕೇಳುತ್ತಾರೆ. ಕೆಲವೊಮ್ಮೆ ಹಳಹಳಿ, ವಿಷಣ್ಣತೆಯಿಂದ ಕೂಡಿದ ಸಂಗೀತ ಕೇಳುತ್ತಾರೆ. ಜನರ ಮನೋಭಾವವು ಬದಲಾಗುತ್ತಿರುತ್ತದೆ. ಮನೋಭಾವ ಬದಲಾದಾಗ ಅವರ ಆಸಕ್ತಿಗೆ ತಕ್ಕಂತೆ ಸಾಹಿತ್ಯವನ್ನು ಆರಿಸಿಕೊಳ್ಳುತ್ತಾರೆ. ವ್ಯಕ್ತಿತ್ವಗಳು ಬೇರೆ ಬೇರೆ. ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

ಪ್ರಾಚೀನ ಭಾರತದಲ್ಲಿ ನವರಸ (ಒಂಭತ್ತು ಮನೋಭಾವ)ವೆಂಬ  ಪರಿಕಲ್ಪನೆಯಿತ್ತು. ಸಾಹಿತ್ಯವು  ಪೂರ್ಣವಾಗಬೇಕಾದರೆ ಈ ಒಂಬತ್ತು ಮನೋಭಾವವು ಇರಬೇಕಿತ್ತು. ಕೋಪ, ಶೌರ್ಯ, ಹತಾಶೆ, ದುಃಖ ಈ ಎಲ್ಲ ಭಾವಗಳು ಬೇರೆ ಬೇರೆ ಕಾಲದಲ್ಲಿ ಜನರನ್ನು ಆಕರ್ಷಿಸುತ್ತಿದ್ದವು. ಕೆಲವು ಜನರು ವಿನೋದವನ್ನು ಇಷ್ಟಪಡುತ್ತಾರೆ. ಕೆಲವರು ಎಲ್ಲಾ ಕಾಲದಲ್ಲಿ ವಿನೋದವನ್ನು ಇಷ್ಟಪಡುವುದಿಲ್ಲ. ಅವರುಗಳು ನೀನು ಹೇಳಿದ ಹಾಗೆ ಹೃದಯವನ್ನು ತಟ್ಟುವಂತಹ, ಕಣ್ಣೀರಾಗಿಸುವ, ಅಥವಾ ಸ್ವಲ್ಪ ಭಾವೋದ್ವೇಗವನ್ನು ಹೆಚ್ಚಿಸುವಂತಹ ಸಾಹಿತ್ಯವನ್ನು ಇಷ್ಟಪಡುತ್ತಾರೆ. ನೀನು ಸಮಾಜದ ಎಲ್ಲಾ ವರ್ಗದವರಿಗೂ ಉಣಬಡಿಸಬೇಕಾಗುತ್ತದೆ. ನಿಜವಾಗಿ, ಆ ಸಮಯದಲ್ಲಿ ನಿನಗೆ ಅನ್ನಿಸಿದ್ದನ್ನು ವ್ಯಕ್ತಪಡಿಸಬೇಕಾಗುತ್ತದೆ.

ನಿನ್ನನ್ನು ನೀನು ಹಾಸ್ಯವನ್ನು ಬರೆಯುವಂತೆ ಒತ್ತಾಯಿಸಲಾಗುವುದಿಲ್ಲ. ಅದೇ ರೀತಿ ಪ್ರೇಮ ಪುಸ್ತಕ ಅಥವಾ ಪ್ರೇಮ ಗೀತೆಯನ್ನು ಬರೆಯುವಂತೆ ಒತ್ತಾಯಿಸಲಾಗುವುದಿಲ್ಲ. ಅದು ನಿನ್ನೊಳಗಿಂದ ಬರದಿದ್ದರೆ ನನಗನ್ನಿಸುವ ಹಾಗೆ ಅದು ಫಲ ಕೊಡುವುದಿಲ್ಲ.

ಪ್ರ. ಕಲೆ ಅಥವಾ ಸಾಹಿತ್ಯವನ್ನು ಅಭಿನಂದಿಸುವುದು ಭಾವುಕತೆ, ಅಂದರೆ ಅದು ವ್ಯಕ್ತಿಯನ್ನು ಅಲುಗಿಸಿದಂತೆ. ಹಾಗಾದರೆ ಅದು ಬೌದ್ಧಿಕತೆಗಿಂತ ಭಾವುಕತೆಯೇ ಹೆಚ್ಚಾಗುತ್ತದೆ ಎನಿಸುವುದಿಲ್ಲವೇ?  

ಶ್ರೀಶ್ರೀ: ಸಾಹಿತ್ಯವು ಭಾವುಕತೆಯಿಂದಲೇ ತುಂಬಿರುವುದಿಲ್ಲ. ಅದು ಬರೀ ಮೃದು ಮೃದು ಬರವಣಿಗೆಯಿಂದಲೇ ತುಂಬಿದ್ದರೆ ಜನರು ಇಷ್ಟಪಡುವುದಿಲ್ಲ. ಓದು ಎನ್ನುವುದು ವೈಚಾರಿಕತೆಯಿಂದ ಕೂಡಿರುವಂತದ್ದು.

ಅದು ಶುಷ್ಕವಾಗಿರಬಾರದು, ತಾಂತ್ರಿಕ ಶಿಕ್ಷಣ ಪುಸ್ತಕದಂತೆ. ನಂತರ ಅದನ್ನು ಓದಲು ಇಚ್ಚೆಯಾಗುವುದಿಲ್ಲ. ಸಾಹಿತ್ಯವು ಸ್ವಲ್ಪ ಭಾವೋದ್ವೇಗದಿಂದ ಹಾಗು ವೈಚಾರಿಕತೆಯ ಹರಿತದಿಂದ ಕೂಡಿರಬೇಕು. ಆಧುನಿಕ ಕವಿತೆಯಂತೆ ವೈಚಾರಿಕವಾಗಿರಬೇಕು. ಇದು ನಿಮ್ಮ ವೈಚಾರಿಕತೆಯನ್ನು ಉದ್ದೇಪಿಸಿ, ಭಾವೋದ್ವೇಗದ ಕಿಡಿಯನ್ನು ಹೊತ್ತಿಸುತ್ತದೆ. ನನಗನ್ನಿಸುವ ಹಾಗೆ ಇವೆರಡು ಮಗ್ಗುಲುಗಳು ಸಾಹಿತ್ಯಕ್ಕೆ ಬಹಳ ಬೇಕಾದವುಗಳೆನಿಸುತ್ತವೆ.

ಪ್ರ. ಸರ್, ಎಲ್ಲ ಅನಿಷ್ಟಗಳಿಗೆ ಆಸೆಯೇ ಕಾರಣ ಎಂದು ಪುಸ್ತಕಗಳಲ್ಲಿ ಓದಿದ್ದೇನೆ. ಆಸೆಗಳನ್ನು ಗೆಲ್ಲಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಮುಂದೇನು ಮಾಡುವುದೆಂದು ತಿಳಿಯದಾಗಿದೆ.

ಶ್ರೀಶ್ರೀ: ಇದು ಇನ್ನೊಂದು ಆಸೆ. ಆಸೆಯನ್ನು ಗೆಲ್ಲಬೇಕೆಂಬುದು ಮತ್ತೊಂದು ಆಸೆಯೇ. ಅಲ್ಲವೇ?

ಪ್ರ. ಸರ್, ನನಗೆ ಕೆಲವೇ ಕೆಲವು ಆಸೆಗಳಿವೆ. ಆದರೆ ಆಧ್ಯಾತ್ಮಿಕತೆಯ ಹಾದಿಯಲ್ಲಿ ಮುಂದಿನ ದಾರಿ ಯಾವುದು?

ಶ್ರೀಶ್ರೀ: ಆಧ್ಯಾತ್ಮಿಕತೆಯಲ್ಲಿ ಮುಂದಿನ ದಾರಿ ಎಂದರೆ 'ಸಮಾಧಾನ'. ನಿಮ್ಮಲ್ಲಿ ಸಮಾಧಾನವಿದ್ದರೆ ಸಣ್ಣ ಸಣ್ಣ ಆಸೆಗಳು ನಿಮ್ಮಲ್ಲಿ ಭುಗಿಲೇಳುವುದಿಲ್ಲ. ಆದಾಗ್ಯೂ ನಿಮ್ಮಲ್ಲಿ ಆಸೆಯು ಚಿಗುರಿದರೆ ದೊಡ್ಡ ಆಸೆಯನ್ನಿಟ್ಟುಕೊಳ್ಳಿ. ನಾನು, ಎಲ್ಲರು ಸಂತೋಷದಿಂದಿರಲೆಂದು ಬಯಸುತ್ತೇನೆ. ಇಡೀ ಪ್ರಪಂಚವು ಶಾಂತಿಯಿಂದ ಇರಲು ಆಶಿಸುತ್ತೇನೆ. ಇಂತಹ ಆಸೆಗಳನ್ನು ನೀವು ಹೊಂದಬೇಕು. ಸಣ್ಣ ಆಸೆಗಳು ದೊಡ್ಡ ಆಸೆಗಳಾಗಬೇಕು, ದೊಡ್ಡ ಆಸೆಗಳು ನಿಮಗೆ ದುಗುಡವನ್ನುಂಟ್ಟು ಮಾಡುವುದಿಲ್ಲ. ಕೇವಲ ಸಣ್ಣ ಆಸೆಗಳೇ ನಿಮಗೆ ದುಗುಡವನ್ನುಂಟ್ಟು ಮಾಡಬಲ್ಲವು.

ಸಂಸ್ಕೃತದಲ್ಲಿ ಒಂದು ಉಕ್ತಿ ಇದೆ. 'ನಾಲ್ಪೆ ಸುಖಂ ಅಸ್ತಿ ಯೋ ವೈ ಭೂಮ ತತ್ ಸುಖಂ'. ಮನಸ್ಸು ಯಾವಾಗಲು ದೊಡ್ಡದನ್ನು ಬೇಡುತ್ತದೆ ಅಂದರೆ ದೊಡ್ಡದಾದ ಸಂತೋಷ, ದೊಡ್ಡದಾದ ಆನಂದ. ಅದು ಮನಸ್ಸಿನ ಗುಣ. ಅದನ್ನು ನೀವು ತಪ್ಪಿಸಲು ಸಾಧ್ಯವಿಲ್ಲ. ಮನಸ್ಸಿಗೆ ದೊಡ್ಡದಾದುದೇ ಬೇಕು. ಆಧ್ಯಾತ್ಮಿಕತೆಯು ದೊಡ್ಡದಾದ ಆನಂದ, ದೊಡ್ಡದಾದ ಸಂತೋಷವನ್ನು ಕೊಡುತ್ತದೆ.

ಒಂದು ವಿಧವಾದ ಸಂತೋಷವಿದೆ. ಅದು 'ಪಡೆಯುವುದರ' ಮೂಲಕ ಸಿಗುತ್ತದೆ. ನಾವು ಚಿಕ್ಕವರಿದ್ದಾಗ ಸಂತೋಷವನ್ನು ಪಡೆದಿದ್ದೇವೆ. ಒಬ್ಬ ವಯಸ್ಕನ ಸಂತೋಷವು 'ಕೊಡುವುದರಲ್ಲಿದೆ'. ಮನೆಯಲ್ಲಿ ತಾಯಿಯಿದ್ದ ಹಾಗೆ. ಅವಳು ಎಲ್ಲರಿಗು ಅಡಿಗೆ ಮಾಡಲು ಬಯಸುತ್ತಾಳೆ. ಅವಳಿಗೆ ಮಾತ್ರವೇ ಅಡಿಗೆ ಮಾಡುವುದಿದ್ದಾಗ ಅವಳು ಐದು-ಹತ್ತು ರೀತಿಯ ಭೋಜನವನ್ನು ಸಿದ್ಧಪಡಿಸಿ ತಿನ್ನುವುದಿಲ್ಲ. ಅವಳೆಂದಿಗೂ ಹಾಗೆ ಮಾಡುವುದಿಲ್ಲ. ಕಾಫಿ ಅಥವಾ ಚಾ ಜೊತೆಗೆ ಕುರುಕಲು ತಿನ್ನುತ್ತಾಳೆ ಅಷ್ಟೇ. ಆದ್ದರಿಂದ ಸಂತೋಷವು ಕೊಡುವುದರಲ್ಲಿದೆ. ಲೇಖಕರು ಹಾಗು ಸಾಹಿತ್ಯ ಲೋಕದ ದಿಗ್ಗಜರು ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ಸಂತೋಷವನ್ನನುಭವಿಸುತ್ತಾರೆ. ಅದರಲ್ಲಿ ಆನಂದವಿದೆ. ಅದನ್ನು ಪಡೆಯಿರಿ.

ಪ್ರ. ಗುರುದೇವ್, ಆಧ್ಯಾತ್ಮಿಕತೆಯು ಕೆಲವು ಜನರ ಮಧ್ಯೆ ಒಂದು ಝೇಂಕರಿಸುವ ಪದವಾಗಿದೆ.  ಎಲ್ಲರು ಹೇಳ ಬಯಸುತ್ತಾರೆ "ನಾನು ಧ್ಯಾನ ಮಾಡುತ್ತೇನೆ, ನಾನು ಆಧ್ಯಾತ್ಮಿಕ ವ್ಯಕ್ತಿ".  ಆಧ್ಯಾತ್ಮಿಕತೆ ಎಂದರೇನು?

ಶ್ರೀಶ್ರೀ: ನಾವೆಲ್ಲರು ವಿಷಯ ಹಾಗು ಚೇತನದಿಂದ ಮಾಡಲ್ಪಟ್ಟಿದ್ದೇವೆ ಅಲ್ಲವೇ? ನಮ್ಮ ಶರೀರವು ಕಾರ್ಬೋಹೈಡ್ರೇಟ್, ಮಿನರಲ್, ಪ್ರೋಟೀನ್ ನಿಂದ  ಮಾಡಲ್ಪಟ್ಟಿದೆ. ಚೇತನವು ಕ್ರಿಯೆ, ಸಂತೋಷ, ಶಾಂತಿ, ಕೋಪ ಮತ್ತು ಈ ಎಲ್ಲ ಭಾವನೆಗಳಿಂದ ಮಾಡಲ್ಪಟ್ಟಿದೆ. ಆಧ್ಯಾತ್ಮಿಕತೆಯು ಚೇತನವನ್ನು ಸಂಧಿಸುತ್ತಿದೆ. ನಾನು ಯಾರು? ನಾನು ಈ ಶರೀರವೇ? ಆಲೋಚನೆ ಎಂದರೇನು?  ಆಲೋಚನೆಯ ಮೂಲ ಯಾವುದು? ಭಾವನೆ ಎಂದರೇನು? ಭಾವನೆಗಳ ಮೂಲ ಯಾವುದು?  ಭಾವನೆಗಳ ಹಾಗು ಆಲೋಚನೆಗಳ ಬೇರನ್ನು ಹುಡುಕುತ್ತ ನಿಮ್ಮಲ್ಲಿ ಇನ್ನು ಅಂತರವಿರುವುದನ್ನು ಗಮನಿಸುತ್ತೀರ ಅದೇ ಆಧ್ಯಾತ್ಮಿಕತೆ. ನಂತರ ನಿಮಗೆ ಗೊತ್ತಾಗುತ್ತದೆ ಇದರಿಂದಲೇ ಎಲ್ಲವು ಮಾಡಲ್ಪಟ್ಟಿದೆ ಎಂದು!.

ನೀವು ಒಬ್ಬ ಭೌತ ವಿಜ್ಞಾನಿಯಾಗಿದ್ದರೆ, ನೀವು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯೇ. ಇವೆರಡನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಭೌತ ವಿಜ್ಞಾನಿಯು ಇದನ್ನೇ ಹೇಳುತ್ತಾನೆ. ಅದೆಂದರೆ ವಿಶ್ವವು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿದೆ ಎಂದು.

ಆಧ್ಯಾತ್ಮಿಕತೆಯು ಹೇಳುತ್ತದೆ "ಹೌದು, ನಾನೇನು ಆಗಿದ್ದೇನೋ ಎಲ್ಲರು ಅದರಿಂದಲೇ ಮಾಡಲ್ಪಟ್ಟಿದ್ದಾರೆ. ನಾವೆಲ್ಲರೂ ಒಂದೇ. ಪ್ರಪಂಚವೆಲ್ಲವು ಒಂದೇ ಜೀವಧಾರಿ ರಚನೆಯಾಗಿದೆ". ಈ ತಿಳಿವು ಧೃಡ ನಂಬಿಕೆ, ಶಾಂತಿ, ಶರತ್ತಿಲ್ಲದ ಪ್ರೀತಿಯನ್ನು ಕೊಡುತ್ತದೆ. ಎಲ್ಲರಲ್ಲೂ ಕೊಂಚವಾದರೂ ಆಧ್ಯಾತ್ಮಿಕತೆಯ ಲೇಪನವಿದೆ. ಆಧ್ಯಾತ್ಮಿಕತೆ ಕೊಂಚವಾದರೂ ಇಲ್ಲದ ಜನರಿಲ್ಲ ಈ ಪ್ರಪಂಚದಲ್ಲಿ.

ಪ್ರ. ಒಬ್ಬರು ಹೇಗೆ ಆಧ್ಯಾತ್ಮಿಕ ಗುರುವಾಗಬಲ್ಲರು?

ಶ್ರೀಶ್ರೀ: ಆಧ್ಯಾತ್ಮಿಕ ನಾಯಕನಾಗಲು ದಾರಿ ಇದೆಯೇ? ನನಗೆ ಹಾಗೆ ಅನ್ನಿಸುವುದಿಲ್ಲ. ಮತ್ತು ನನಗೆ ಗೊತ್ತಿಲ್ಲ. ಅದಕ್ಕೂ ದಾರಿಯಿರಬಹುದೆಂದು ನನಗೆ ತಿಳಿದಿಲ್ಲ!!. ನೀವು ನನ್ನನ್ನು ಕೇಳಬಹುದು ನಾನು ಹೇಗೆ ಆಧ್ಯಾತ್ಮಿಕ ಗುರುವಾದೆ ಎಂದು. ನನಗೆ ತಿಳಿದಿರುವ ಹಾಗೆ, ನಾನು ಏನನ್ನು ಕಲಿತೆನೋ ಅದನ್ನು ಇನ್ನೊಬ್ಬರಿಗೆ ಹಂಚುತ್ತ ಹೋದೆ ಅಷ್ಟೇ.

ನಾನು ಒಂದನ್ನು ಪಾಲಿಸುತ್ತಾ ಬಂದುದೆಂದರೆ, ನನ್ನ ಅನುಭವದ ಪರಿಧಿಗೆ ಒಳಪಡದಿರುವುದರ ಬಗ್ಗೆ ಮಾತನಾಡದಿರುವುದು. ಏನಿತ್ತೋ ಅದನ್ನು ಎಲ್ಲರಲ್ಲೂ ಹಂಚುತ್ತ ಬಂದಿದ್ದೇನೆ.

ಅದೇ ರೀತಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಗುರುಗಳೇ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೇರೆಯವರಿಗೆ ಉಪದೇಶಿಸುತ್ತ ಬಂದಿದ್ದೀರ. ನೀವು ನಿಮ್ಮ ಒಳ್ಳೆ ಕೃತ್ಯದಿಂದ ಅಥವಾ ನಿಮ್ಮ ತಪ್ಪುಗಳಿಂದ ಬೇರೆಯವರಿಗೆ ಉಪದೇಶ ನೀಡುತ್ತಿದ್ದೀರ. ನಿಮ್ಮ ಒಬ್ಬರ ತಪ್ಪಿನಿಂದ ನೀವೊಬ್ಬರೇ ಪಾಠ ಕಲಿಯುವುದಿಲ್ಲ, ನಿಮ್ಮ ಸುತ್ತ ಮುತ್ತಲಿನ ಜನರೆಲ್ಲಾ ಆ ತಪ್ಪಿನಿಂದ ಪಾಠ ಕಲಿಯುತ್ತಾರೆ. ನೀವು ಆಧ್ಯಾತ್ಮಿಕ ಗುರುವಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಈ ಪ್ರಪಂಚದಲ್ಲಿ. ನೀವು ನಿಮ್ಮ ಬಟ್ಟೆಯನ್ನು ಬದಲಿಸಿ ಧೋತಿ-ಕುರ್ತಾ ಹಾಕಬೇಕಾಗಿಲ್ಲ. ಅಥವಾ ಯಾವುದೇ ಆಧ್ಯಾತ್ಮಿಕ ಬಟ್ಟೆಯನ್ನು ಧರಿಸಬೇಕಾಗಿಲ್ಲ. ಉದ್ದ ಕೂದಲನ್ನು ಬಿಡಬೇಕಾಗಿಲ್ಲ. ಇವೆಲ್ಲದರ ಅಗತ್ಯವಿಲ್ಲ. ನಿಮಗೆ ಸಹಜವಾಗಿ ನಗಲು ಸಾಧ್ಯವಾದರೆ, ನಿಮ್ಮ ಪ್ರೀತಿ ಎಲ್ಲರಿಗು ಕೊಡಲು ಸಾಧ್ಯವಾದರೆ ನೀವು ಮಾತ್ರವೇ ಅಲ್ಲ ಬೇರೆಯವರೂ ನಿಮಗೆ ಅದೇ ಪ್ರೀತಿಯನ್ನು ತೋರಿಸುತ್ತಾರೆ. ಇದು ನಿಮ್ಮ ಜೀವನವನ್ನು ಶ್ರೀಮಂತಗೊಳಿಸುತ್ತದೆ. ಇದು ಹೊಸ ಆಯಾಮಕ್ಕೆ ದಾರಿ ತೋರಿಸುತ್ತದೆ. ನೀವು ಧ್ಯಾನಿಗಳಾಗಿದ್ದರೆ ನಿಮಗಿದು ತಿಳಿದಿರುತ್ತದೆ ಹಾಗು ನೀವು ನನ್ನೊಂದಿಗೆ ಸಮ್ಮತಿಸುತ್ತೀರ.

ಪ್ರ. ಗುರುದೇವ್, ಗುರಿಯು ಸಂಕಲ್ಪಕ್ಕಿಂತ ದೊಡ್ಡದೇ? ಉದಾಹರಣೆಗೆ, ಒಬ್ಬನ ಗುರಿಯು ಮ್ಯಾನೇಜರ್ ಆಗುವುದಾಗಿದ್ದರೆ, ಅವನು ನಟನಾಗಬಹುದೇ?

ಶ್ರೀಶ್ರೀ: ನಿನ್ನ ಕನಸಿಗೆ ಅಂಟಿಕೊ. ಅದು ಒಮ್ಮೆ ನಿಜವಾಗುತ್ತದೆ. ನಾನು ಈ ಊರಿನ ಒಬ್ಬ ವಿದ್ಯಾರ್ಥಿಯಾಗಿದ್ದೆ. ನಾನು ಯೋಚಿಸಿದೆ, ಈ ಪ್ರಪಂಚದಲ್ಲಿ ಸುತ್ತಾಡಿ ಎಲ್ಲ ದೇಶದವರನ್ನು ಒಂದು ಮನೆಯವರಂತೆ ಮಾಡಬೇಕೆಂದು. ಜನರು ನಾನೊಬ್ಬ ತಲೆತಿರುಕನೆಂದರು. ನಿಮಗೆ ಈ ತರಹದ ವಿಚಾರಗಳು ಮನಸ್ಸಿನಲ್ಲಿ ಬಂದಾಗ ಜನರು ಹಾಗೆಯೇ ತಿಳಿಯುತ್ತಾರೆ!. ನೀವು ನಿಮ್ಮ ಕನಸಿಗೆ ಜೋತುಬಿದ್ದರೆ ಅವುಗಳು ಒಂದು ದಿನ ನಿಜವಾಗುತ್ತವೆ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

An Intimate Note to the Sincere Seeker