ಶನಿವಾರ, ಜುಲೈ 16, 2016

ನಿರ್ಧರಿಸುವ ಸಾಮರ್ಥ್ಯ

೧೬ ಜೂನ್ ೨೦೧೬
(ಲಂಡನ್ನಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಜೂನ್ ೧೬, ೨೦೧೬ರಂದು ಗುರುದೇವ ಶ್ರೀ ಶ್ರೀ ರವಿಶಂಕರ ಅವರು ನೀಡಿರುವ ಭಾಷಣ ಕೆಳಕಂಡಂತಿದೆ)

ನ್ನನ್ನು ಹೌಸ್ ಆಫ್ ಕಾಮನ್ಸಿಗೆ ಆಮಂತ್ರಿಸಿದ್ದಕ್ಕಾಗಿ ಸನ್ಮಾನ್ಯ ಮ್ಯಾಥ್ಯೂ ಅವರಿಗೆ ಧನ್ಯವಾದಗಳು! ಇಡೀ ಪ್ರಪಂಚಕ್ಕೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೊಡುಗೆಯನ್ನು ನೀಡಿರುವ ಈ ಕಟ್ಟಡದಲ್ಲಿ ನಿಮ್ಮೆಲ್ಲರೊಂದಿಗಿರುವುದು ಅಷ್ಟೊಂದು ಸಂತಸದ ವಿಷಯವಾಗಿದೆ.

ಇವತ್ತು ನಾವು, ಸೀಮೆಗಳು ಅಷ್ಟೊಂದು ದೊಡ್ಡ ವಿಷಯವಾಗಿಲ್ಲದೇ ಇರುವಂತಹ ಒಂದು ಯುಗದಲ್ಲಿ ಜೀವಿಸುತ್ತಿದ್ದೇವೆ; ಇದೊಂದು ಜಾಗತಿಕ ಗ್ರಾಮವಾಗಿದ್ದು, ಹಲವಾರು ದಶಕಗಳಷ್ಟು ಮೊದಲಿಗೆ ಹೋಲಿಸಿದರೆ ಸಂಪರ್ಕವು ಅನೇಕ ಪಟ್ಟುಗಳಷ್ಟು ಹೆಚ್ಚಾಗಿದೆ. ತಂತ್ರಜ್ಞಾನದಲ್ಲಿನ ಪ್ರಗತಿಯ ಈ ಯುಗದಲ್ಲಿ ನಾವು ಹಲವಾರು ಸವಾಲುಗಳನ್ನುಕೂಡಾ ಎದುರಿಸುತ್ತಿದ್ದು, ಅವುಗಳನ್ನು ಎದುರಿಸುವಷ್ಟು ನಾವು ಸಶಕ್ತರಾಗಿದ್ದೇವೆಯೇ ಎಂದು ನಾವು ನಮ್ಮಲ್ಲಿ ಕೇಳಿಕೊಳ್ಳಬೇಕು. ಇಂಗ್ಲೆಂಡಿನಂತಹ ಒಂದು ಬಹುಸಂಸ್ಕೃತಿ ಸಮಾಜದಲ್ಲಿ ಕೂಡಾ, ಜನರು ಪ್ರತ್ಯೇಕವಾಗಿ ವಾಸಿಸುವುದು ಅಥವಾ ತಮ್ಮ ಸಮುದಾಯಗಳೊಳಗೆ ಮಾತ್ರ ಪರಸ್ಪರ ಮಾತನಾಡುವುದು, ಇತರರನ್ನು ತಲುಪದೇ ಇರುವುದು ಇಂತಹ ಸಮಸ್ಯೆಗಳು ನಮಗೆ ಕಂಡುಬರುತ್ತವೆ.  

ನಾನೆಲ್ಲೇ ಹೋದರೂ ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ, ಸಮಾಜಕ್ಕೆ ನಾನು ಹೇಗೆ ಕೊಡುಗೆಯನ್ನು ನೀಡಬಹುದು, ನಾನು ಯಾವ ರೀತಿ ಪ್ರಯೋಜನಕಾರಿಯಾಗಬಹುದು? ಪರಿಸ್ಥಿತಿಯನ್ನು ಸುಧಾರಿಸಲು ನಾನು ಏನು ಮಾಡಬಹುದು? ಈ ಸಭಾಂಗಣಕ್ಕೆ ನಡೆದುಬರುತ್ತಿರಬೇಕಾದರೆ, ಸಮುದಾಯಗಳನ್ನುಒಂದುಗೂಡಿಸಲು, ತಡೆಗಳನ್ನು ಇಲ್ಲದಾಗಿಸಲು ಮತ್ತು ನಾವೆಲ್ಲರೂ ಜಾಗತಿಕ ನಾಗರಿಕರು ಎಂಬುದನ್ನು ಜನರಿಗೆ ತಿಳಿಯಪಡಿಸಲು ನಾವು ಏನನ್ನು ಮಾಡಬಹುದು ಎಂಬುದನ್ನು ತಿಳಿಯಲು ನಾನು ಮ್ಯಾಥ್ಯೂ ಅವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದೆ.

ನಾವು ಎರಡು ವಿಷಯಗಳ ಬಗ್ಗೆ ಗಮನ ಹರಿಸಬೇಕು:

೧. ಜನರ ನಡುವಣ ಸಂಪರ್ಕವನ್ನು ಸುಧಾರಿಸುವುದು.
೨. ಹತಾಶೆ ಮತ್ತು ಒತ್ತಡದ ಮಟ್ಟಗಳನ್ನು ಕಡಿಮೆ ಮಾಡುವುದು.

ಸಮಾಜದಲ್ಲಿ ಅಸಹಿಷ್ಣುತೆ, ಅಪರಾಧ ಮತ್ತು ಹಿಂಸಾಚಾರಗಳನ್ನು ತರುವುದು ಯಾವುದೆಂದರೆ, ಹೆಚ್ಚಿನ ಮಟ್ಟದ ಒತ್ತಡ ಮತ್ತು ಹತಾಶೆಗಳಾಗಿವೆ. ಅಪರಾಧವು ಹೆಚ್ಚಾಗಿದ್ದರೆ ಅದು ಯಾಕೆಂದರೆ, ಮೂಲ ಕಾರಣಕ್ಕೆ ನಾವು ಗಮನ ಹರಿಸಿಲ್ಲ. ಅಂದರೆ, ವ್ಯಕ್ತಿಗಳ ಒತ್ತಡ ಮಟ್ಟ. ಒತ್ತಡ ಮಟ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ತಂತ್ರಗಳನ್ನು ನಾವು ನೀಡುವುದು ಇಲ್ಲೇ.
ಇಲ್ಲಿ ಲಂಡನ್ನಿನಲ್ಲಿ ಥೇಮ್‌ಸೈಡ್ ಕಾರಾಗೃಹದಲ್ಲಿ ನಾವು ಶಿಬಿರಗಳನ್ನು ನಡೆಸಿದಾಗ, ಕೈದಿಗಳಿಂದ ಬಂದ ಪ್ರತಿಕ್ರಿಯೆಯು ಬಹಳ ಪ್ರೋತ್ಸಾಹದಾಯಕವಾಗಿತ್ತು. ತಾವು ಸರಳುಗಳ ಹಿಂದೆ ಸ್ವಾತಂತ್ರ್ಯವನ್ನು ಪಡೆದುದಾಗಿ ಅವರು ಹೇಳಿದರು.

ಮಾನವರು ಹೆಚ್ಚಾಗಿ ತಮ್ಮದೇ ನಕಾರಾತ್ಮಕ ಭಾವನೆಗಳಿಗೆ ಬಲಿಪಶುಗಳಾಗಿಬಿಡುತ್ತಾರೆ. ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ನಮ್ಮ ನಕಾರಾತ್ಮಕ ಭಾವನೆಗಳನ್ನು ಹೇಗೆ ನಿರ್ವಹಿಸುವುದೆಂದು ನಾವು ಕಲಿತಿಲ್ಲ. ಕೋಪ ಮತ್ತು ಮತ್ಸರಗಳಂತಹ ಭಾವನೆಗಳು ಬರುವುದು ಸಾಮಾನ್ಯ, ಆದರೆ ಈ ಭಾವನೆಗಳ ಪ್ರಭಾವವನ್ನು ನಿರ್ವಹಿಸಲು ಅಥವಾ ಹೋಗಲಾಡಿಸಲು ನಮಗೆ ತರಬೇತಿ ನೀಡಲಾಗಿಲ್ಲ ಅಥವಾ ಕಲಿಸಲಾಗಿಲ್ಲ.

ಉಸಿರಾಟವನ್ನುಪಯೋಗಿಸಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಒಳಗಿನಿಂದ ಪ್ರಸನ್ನವಾಗಿರಲು, ಜನರನ್ನು ತಲುಪಿ ನಕಾರಾತ್ಮಕ ಭಾವನೆಗಳನ್ನು ಹೇಗೆ ನಿರ್ವಹಿಸುವುದೆಂದು ಅವರಿಗೆ ಕಲಿಸಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ೩೫ ವರ್ಷಗಳ ಹಿಂದೆ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಒಮ್ಮೆ ನಿಮಗೆ ಆಂತರಿಕ ಶಾಂತಿಯ ಅನುಭವವಾದಾಗ, ನಿಮಗೆ ವಿಶ್ವಾಸ ಹೆಚ್ಚಿದ ಅನುಭವವಾಗುತ್ತದೆ ಮತ್ತು ನಿಮಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಾದಾಗ ಜೀವನದಲ್ಲಿ ಭಯವು ಮಾಯವಾಗುತ್ತದೆ. ಮತ್ತು ಭಯವಿಲ್ಲದಿರುವಾಗ, ಅಲ್ಲಿ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ಸ್ವಾತಂತ್ರ್ಯವಿರುವಾಗ, ನಿಮಗೆ ಜನರನ್ನು ತಲುಪಲು ಸಾಧ್ಯವಾಗುತ್ತದೆ; ನಿಮ್ಮ ಸಂವಹನ, ಅಭಿವ್ಯಕ್ತಿ ಮತ್ತು ಗ್ರಹಣ ಶಕ್ತಿ ಉತ್ತಮವಾಗುತ್ತವೆ. ಒಬ್ಬ ವ್ಯಕ್ತಿಯಲ್ಲಿನ ಗ್ರಹಣ ಶಕ್ತಿ, ಅವಲೋಕನೆ ಮತ್ತು ಅಭಿವ್ಯಕ್ತಿಯ ಸುಧಾರಣೆಯು ಅವನ ಜೀವನದಲ್ಲಿ ಒಂದು ದೊಡ್ಡ ಪರಿಣಾಮವನ್ನು ಬೀರಬಲ್ಲದು - ಪ್ರಪಂಚದಾದ್ಯಂತ ೧೫೫ ದೇಶಗಳಲ್ಲಿನ ನಮ್ಮ ಕೆಲಸದಲ್ಲಿ ಇದನ್ನೇ ನಾವು ಕಂಡುಕೊಂಡದ್ದು. ಸಮಾಜವನ್ನು ಪರಿವರ್ತಿಸಲು ಮತ್ತು ಹಿಂಸಾಚಾರ ಮುಕ್ತವಾದ ಒಂದು ಮಾದರಿ ಸಮಾಜವನ್ನು ಸೃಷ್ಟಿಸಲು ಒಂದು ಉತ್ಸಾಹದೊಂದಿಗೆ ಈ ಎಲ್ಲಾ ವರ್ಷಗಳೂ ಕೆಲಸ ಮಾಡುತ್ತಿರುವ ನಮ್ಮೆಲ್ಲಾ ಉತ್ತಮ ಅರ್ಹ ಶಿಕ್ಷಕರಿಗೆ ಇದರ ಶ್ರೇಯ ಸಲ್ಲುತ್ತದೆ. ನಾನು ನಿಜಕ್ಕೂ ಅವರನ್ನು ಅಭಿನಂದಿಸುತ್ತೇನೆ. ನಾನು ಅವರ ಪರವಾಗಿ ಶ್ರೇಯಸ್ಸನ್ನು ತೆಗೆದುಕೊಳ್ಳುವುದು ಮಾತ್ರ, ನಿಜವಾದ ಕೆಲಸವು ಮಾಡಲ್ಪಡುವುದು ಅವರಿಂದ. ಈ ಎಲ್ಲಾ ಕೆಲಸವನ್ನು ಮಾಡುತ್ತಾ ಬಂದಿರುವ ನೂರಾರು ಸಾವಿರಾರು ಸ್ವಯಂಸೇವಕರನ್ನು ನೀವು ಅಭಿನಂದಿಸಬೇಕು.

ಅದನ್ನು ಹೇಳಿದ ಮೇಲೆ ನಾನು ಹೇಳುವುದೇನೆಂದರೆ, ಸಂಸತ್ ಸದಸ್ಯರಾಗಿ ಅಥವಾ ಹಲವಾರು ಕ್ಷೇತ್ರಗಳಲ್ಲಿನ ಸಮಾಜದ ನಾಯಕರಾಗಿ, ಜವಾಬ್ದಾರಿ ತೆಗೆದುಕೊಳ್ಳದವರಲ್ಲಿ ಜವಾಬ್ದಾರಿಯನ್ನು ತರುವಂತಹ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ! ನಾವು ಜನರನ್ನು ಎಚ್ಚರಿಸಿ, ಶಾಂತಿಯ ಬಗ್ಗೆ, ಉತ್ಸಾಹದಿಂದ ಸವಾಲುಗಳನ್ನು ಎದುರಿಸುವುದರಲ್ಲಿ ಮತ್ತು ಒಂದು ಮುಗುಳ್ನಗೆಯೊಂದಿಗೆ ನಿರ್ವಹಿಸುವುದರಲ್ಲಿ ಅವರಿಗೆ ಶಿಕ್ಷಣ ನೀಡಬೇಕು; ಇದು ಬಹಳ ಮುಖ್ಯ! ಇದು ನಮ್ಮ ಸಮಾಜವನ್ನು ಒಂದು ಹೆಚ್ಚು ಸಂತೋಷಕರವಾದ, ಶಾಂತಿಯುತವಾದ ಮತ್ತು ಸಮೃದ್ಧಕರವಾದ ಸಮಾಜವನ್ನಾಗಿಸುವುದರ ಕಡೆಗಿನ ಸುದೀರ್ಘ ದಾರಿಯಲ್ಲಿ ಒಯ್ಯುತ್ತದೆ.

ಕಡೆಗೆ, ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ. ಒಬ್ಬನು ಏನೇ ಮಾಡುತ್ತಿದ್ದರೂ, ಅವನು ಮಾಡುವುದು ಸಂತೋಷವಾಗಿರುವುದಕ್ಕಾಗಿ. ನೀವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಿರೇ ಎಂದು ನೀವು ನಿಮ್ಮನ್ನೇ ಕೇಳಿಕೊಳ್ಳಬೇಕು.

ಹಲವು ಸಲ ಬರುವ ಉತ್ತರ, ಇಲ್ಲ! ನಮ್ಮ ಸುತ್ತಲೂ ಸಂತೋಷವನ್ನು ಸೃಷ್ಟಿಸುವ ಈ ಉದ್ದೇಶಕ್ಕೆ ಒಂದು ಪ್ರೇರಣೆ ಕೊಡಲು ನಾವೇನು ಮಾಡಬಹುದು? ಅಲ್ಲೇ ನಾವು ಕುಳಿತುಕೊಂಡು ಯೋಚಿಸಬೇಕಾಗಿರುವುದು - ನಾವೇನು ಮಾಡಬಹುದು, ಭಾಗೀದಾರರು ಯಾರು? ಸಮಾಜವನ್ನು ನಾವು ಹೇಗೆ ಸುಧಾರಿಸಬಹುದು?

ಇಲ್ಲಿನ ಮತ್ತು ಇತರ ಹಲವಾರು ಜಾಗಗಳಲ್ಲಿನ ನಮ್ಮ ಪ್ರಮುಖರ ಜೊತೆಯಲ್ಲಿ ಕೆಲವು ಭೇಟಿಗಳಲ್ಲಿ ನಾನು ಈ ಪ್ರಶ್ನೆಗಳ ಮೇಲೆ ವಿಮರ್ಶಿಸುತ್ತಿದ್ದೆ ಮತ್ತು ಮಕ್ಕಳಿಗಾಗಿ ಕೆಲವು, ಯುವಕರಿಗಾಗಿ ಕೆಲವು ಹಾಗೂ ಮಕ್ಕಳನ್ನು ಚೆನ್ನಾಗಿ ತಿಳಿಯಲು ಹೆತ್ತವರಿಗಾಗಿ ಕೆಲವು ಹೀಗೆ ೫೨ ವಿವಿಧ ಕಾರ್ಯಾಗಾರಗಳು ಮತ್ತು ಕೋರ್ಸುಗಳನ್ನು ತಯಾರು ಮಾಡಿದೆವು. ನಮ್ಮಲ್ಲಿ, "ನಿಮ್ಮ ಮಕ್ಕಳನ್ನು ತಿಳಿಯಿರಿ" ಮತ್ತು "ನಿಮ್ಮ ಹದಿಹರೆಯದವರನ್ನು ತಿಳಿಯಿರಿ" ಎಂಬ ಕಾರ್ಯಕ್ರಮಗಳಿವೆ. ಹೆತ್ತವರು ಮತ್ತು ಯುವಕರ ನಡುವೆ ಹೆಚ್ಚುತ್ತಿರುವ ಪೀಳಿಗೆಯ ಅಂತರವನ್ನು ಸರಿಯಾದ ಸಂವಹನದೊಂದಿಗೆ ಜೋಡಿಸಬಹುದು. ಪೀಳಿಗೆಗಳ ನಡುವೆ ಸಂಪರ್ಕವು ಮುರಿದುಬೀಳುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಅಲ್ಲವೇ?  ಹಲವು ಸಮುದಾಯಗಳಲ್ಲಿನ ದೊಡ್ಡ ಸಮಸ್ಯೆಗಳೆಂದರೆ, ಯುವಜನಜನತೆಯಲ್ಲಿರುವ ಒತ್ತಡ ಮತ್ತು ಚಡಪಡಿಕೆ. ಯುವ ಹಾಗೂ ಉನ್ನತ ಶಿಕ್ಷಣವನ್ನು ಪಡೆದ ಜನರು ಐಸಿಸ್‌ನ್ನು ಸೇರಿ ಏನಾಗುತ್ತಿದೆಯೆಂಬುದನ್ನು ನೋಡುವಾಗ ಗಾಬರಿಯಾಗುತ್ತದೆ.

ಒಂದು ಜಾಗತಿಕ ಕುಟುಂಬ ಮತ್ತು ಜಾಗತಿಕ ನಾಗರಿಕರಾಗಿರುವ ಕಲ್ಪನೆಯ ಕಡೆಗೆ ನಾವು ಜನರನ್ನು ನಡೆಸಬೇಕಾಗಿದೆ. ನಾವು ಜಗತ್ತಿನ ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಭಾಗದಿಂದಲೂ ಏನನ್ನಾದರೂ ಕಲಿಯಬೇಕು. ಒಂದು ಬಹು-ಸಂಸ್ಕೃತಿ ಮತ್ತು ಒಂದು ಬಹು-ಧರ್ಮೀಯ ಸಮಾಜದ ಕಡೆಗೆ ಒಬ್ಬನ ಅರಿವನ್ನು ವಿಶಾಲಗೊಳಿಸುವುದು ಮುಂದಿನ ಶತಮಾನದಲ್ಲಿ ಸಾಮರಸ್ಯದಿಂದ ಬಾಳುವುದಕ್ಕೆ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಸಿದ್ಧಪಡಿಸಬಹುದು. ಜಗತ್ತಿನ ಒಂದು ಚಿಕ್ಕ ಭಾಗ ಕೂಡಾ, "ನಾನು ಮಾತ್ರ ಸ್ವರ್ಗಕ್ಕೆ ಹೋಗುವುದು" ಎಂದು ಯೋಚಿಸಿದರೆ, ಉಳಿದವರೆಲ್ಲರೂ ನರಕಕ್ಕೆ ಹೋಗುತ್ತಾರೆ ಯಾಕೆಂದರೆ, ಆ ಚಿಕ್ಕ ಗುಂಪಿನ ಜನರು ಉಳಿದವರೆಲ್ಲರಿಗೂ ನರಕವನ್ನು ಸೃಷ್ಟಿಸುತ್ತಾರೆ, ಮತ್ತು ಅವರದನ್ನು ಈಗಾಗಲೇ ಮಾಡುತ್ತಿದ್ದಾರೆ! ಒಬ್ಬ ಜಾಗತಿಕ ಪ್ರಜೆಯ ಈ ವಿಶಾಲ ದೃಷ್ಟಿಕೋನವನ್ನು ನಾವು ತರಬೇಕಾಗಿದೆ.

ಯುರೋಪಿಯನ್ ಯೂನಿಯನ್‌ನಲ್ಲಿ ಇರಬೇಕೇ ಅಥವಾ ಅದರಿಂದ ಹೊರಬರಬೇಕೇ ಎಂಬುದರ ಬಗ್ಗೆ ಇಲ್ಲಿ ಬ್ರಿಟನ್‌ನಲ್ಲಿ ಒಂದು ದೊಡ್ಡ ವಾಗ್ವಾದ ನಡೆಯುತ್ತಿದೆಯೆಂದು ನನಗೆ ಗೊತ್ತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದ್ದರೂ, ಮುಖ್ಯವಾದುದೇನೆಂದರೆ, ನಮ್ಮಲ್ಲೇ ವಿಶ್ವಾಸ ಹೊಂದಿರುವುದು. ಭಯ ಮತ್ತು ಅನಿಶ್ಚಿತತೆಗಳು ನಮ್ಮನ್ನು ನಾವು ಇಷ್ಟಪಡುವ ಸಾಧ್ಯತೆಯಿಲ್ಲದ ಅಥವಾ ಯಾವುದು ನಮಗೆ ರುಚಿಸದಿರುವ ಸಾಧ್ಯತೆಯಿದೆಯೋ ಆ ದಿಕ್ಕಿನಲ್ಲಿ ಕೊಂಡೊಯ್ಯಬಹುದು.

ನಮ್ಮಲ್ಲಿ ಮತ್ತು ನಮ್ಮ ಒಳ್ಳೆಯತನದಲ್ಲಿರುವ ವಿಶ್ವಾಸವೇ ನಮಗೆ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುವುದು. ಮತ್ತೆ, ಅಪಾಯ ಅಂದರೇನು? ಎಲ್ಲಿ ಲಾಭ ಮತ್ತು ನಷ್ಟಕ್ಕೆ ಅವಕಾಶವಿದೆಯೋ ಅದು ಅಪಾಯ. ನಾವು ನಮ್ಮ ಆಂತರಿಕ ಕ್ಷಮತೆಗಳನ್ನು ಅಭಿವೃದ್ಧಿಪಡಿಸಲು ತೊಡಗುವಾಗ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವ ಈ ಸಾಮರ್ಥ್ಯ ಅಥವಾ ಅಂತರ್ಬೋಧ ಕೂಡಾ ಬರಬಲ್ಲದು. ಈ ಕ್ಷಮತೆಗಳನ್ನು ಸಕ್ಷಮಗೊಳಿಸಲು ಸಹಾಯ ಮಾಡುವ ಕೆಲವು ಸಲಕರಣೆಗಳಾಗಿವೆ ಧ್ಯಾನ ಮತ್ತು ಉಸಿರಾಟದ ತಂತ್ರಗಳು.

ನಾವು ಜನರನ್ನು ಎಚ್ಚರಿಸಿ, ಶಾಂತಿಯ ಬಗ್ಗೆ, ಸವಾಲುಗಳನ್ನು ಉತ್ಸಾಹದೊಂದಿಗೆ ಎದುರಿಸುವುದು ಹಾಗೂ ಒಂದು ಮುಗುಳ್ನಗೆಯೊಂದಿಗೆ ನಿರ್ವಹಿಸುವುದರ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು; ಇದು ಬಹಳ ಮುಖ್ಯ!

ಜಾಗತಿಕ ಪ್ರಜೆಗಳಾಗಿ, ತಂಡದಲ್ಲಿದ್ದು ಕಾರ್ಯ ನಿರ್ವಹಿಸುವುದನ್ನು ಜಪಾನಿನಿಂದ, ನಿಖರತೆಯನ್ನು ಜರ್ಮನಿಯವರಿಂದ (ಜರ್ಮನಿಯ ಯಂತ್ರಗಳಲ್ಲಿ ನಿಮಗೆ ತಪ್ಪು ಸಿಗಲಾರದು), ಪ್ರಚಾರ ತಂತ್ರಗಳನ್ನು ಅಮೇರಿಕದಿಂದ (ಅಮಾವಾಸ್ಯೆಯ ದಿನದಂದು ಅವರು ಚಂದ್ರನನ್ನು ಮಾರಬಲ್ಲರು), ಶಿಷ್ಟಾಚಾರ ಮತ್ತು ಸಭ್ಯತೆಗಳನ್ನು ಬ್ರಿಟಿಷರಿಂದ (ವಿವಿಧ ಸಂಸ್ಕೃತಿಗಳನ್ನು ಹೇಗೆ ಸೇರಿಸಿಕೊಳ್ಳುವುದೆಂದು ಅವರು ಜಗತ್ತಿಗೆ ತೋರಿಸಿದ್ದಾರೆ)ಮತ್ತು ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಭಾರತದಿಂದ ನಾವು ಕಲಿಯಬೇಕು. ನೀವು ಭಾರತದಲ್ಲಿ ಅತ್ಯಂತ ಹೊರಗೆ ದೂರದ ಭಾಗಕ್ಕೆ ಹೋದರೆ; ಬಡವರಲ್ಲಿ ಕಡುಬಡವರಲ್ಲಿಗೆ ಹೋದರೆ; ಅವರ ಬಳಿ ಕೇವಲ ಒಂದು ಲೋಟ ಮಜ್ಜಿಗೆಯಿರಬಹುದು, ಆದರೂ ಅವರು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕೊಡುವ ಮತ್ತು ಹಂಚುವ ಆ ಭಾವವನ್ನು ಭಾರತದ ಹಳ್ಳಿಗಳಲ್ಲಿ ನಾನು ನೋಡಿದ್ದೇನೆ. ಖಂಡಿತಾ, ನಗರಗಳು ಪ್ರಪಂಚದಾದ್ಯಂತ ಇವತ್ತು ಒಂದೇ ರೀತಿ ಆಗಿವೆ; ಹೆಚ್ಚುತ್ತಿರುವ ಅಪರಾಧದ ಪ್ರಮಾಣ, ವಾಹನ ಸಂಚಾರ ಮತ್ತು ಎಲ್ಲದರ ಸಮಸ್ಯೆಗಳು ಒಂದೇ ರೀತಿ ಇವೆ.  ಹೇಗಾದರೂ, ಗ್ರಾಮೀಣ ಭಾರತದಲ್ಲಿ ನಿಮಗೆ ಸಿಗುವ ಮೌಲ್ಯಗಳು ನಿಮ್ಮ ಹೃದಯವನ್ನು ತಟ್ಟುವಂಥದ್ದು. ಹೀಗೆ, ಜಗತ್ತಿನಲ್ಲಿ ಎಲ್ಲೆಡೆಯಿಂದ ನಾವು ಏನನ್ನಾದರೂ ಆಯ್ದುಕೊಳ್ಳಬಹುದು. ಇದೇ ಕಾರಣಕ್ಕೆ ನಾವು ವರ್ಲ್ಡ್ ಕಲ್ಚರ್ ಫೆಸ್ಟಿವಲ್ (ವಿಶ್ವ ಸಾಂಸ್ಕೃತಿಕ ಹಬ್ಬ)‌ನ್ನು ಆಯೋಜಿಸಿದುದು. ಅಲ್ಲಿ ೧೫೫ ದೇಶಗಳ ಜನರು ತಮ್ಮ ಸಂಸ್ಕೃತಿಗಳನ್ನು, ೭ ಎಕರೆಗಳಷ್ಟು ವ್ಯಾಪಿಸಿದ ಒಂದೇ ರಂಗಸ್ಥಳದ ಮೇಲೆ ಪ್ರದರ್ಶಿಸಿದರು. ಅದರ ಮೇಲೆ ೩೬,೦೦೦ ಕಲಾವಿದರು ಪ್ರದರ್ಶನ ನೀಡಿದರು. ಇಡಿಯ ಜಗತ್ತಿನೊಂದಿಗೆ ಕೆಲವು ವಿಚಾರಗಳನ್ನು ಮತ್ತು ಯೋಜನೆಗಳನ್ನು ಹಂಚಿಕೊಳ್ಳಲು ಮ್ಯಾಥ್ಯೂ ಅವರು ಅಲ್ಲಿದ್ದುದು ನಮಗೆ ಬಹಳ ಸಂತೋಷವಾಯಿತು; ಇಲ್ಲದಿದ್ದರೆ ಅದು ಅಷ್ಟು ಸಂಪೂರ್ಣವಾಗಿರುತ್ತಿರಲಿಲ್ಲ.

೨೦೧೧ ರ ಜುಲೈಯ ಆರಂಭದಲ್ಲಿ ಬರ್ಲಿನ್‌ನಲ್ಲಿ ನಾವು ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿದಾಗ, ಅದು ೭೫ ವರ್ಷಗಳ ಹಿಂದೆ ಹಿಟ್ಲರ್‌ನಿಂದ ಕಟ್ಟಿಸಲ್ಪಟ್ಟ ಒಂದು ಕ್ರೀಡಾಂಗಣದಲ್ಲಾಗಿತ್ತು; ಎಲ್ಲಿಂದ ಜಾಗತಿಕ ಯುದ್ಧವನ್ನು ಘೋಷಿಸಲಾಗಿತ್ತೋ ಆ ಜಾಗ. ಒಂದು ಶಾಂತಿಯ ಕರೆಯೊಂದಿಗೆ ಆ ಜಾಗವನ್ನು ಶುದ್ಧೀಕರಿಸುವ ಅಗತ್ಯವಿದೆಯೆಂದು ನನಗನ್ನಿಸಿತು, ಅದಕ್ಕಾಗಿಯೇ ನಾವು ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಅಲ್ಲಿ ಆಚರಿಸಿದುದು. ವಾತಾವರಣವನ್ನು ಶುದ್ಧೀಕರಿಸಲು ಮತ್ತು ಶಾಂತಿ ಹಾಗೂ ಸಂತೋಷದ ಅಲೆಗಳನ್ನು ಹರಡಲು ನಾವು ಅಲ್ಲೊಂದು ಧ್ಯಾನ ಮಾಡಿದೆವು. ಈ ವರ್ಷ ನಾವದನ್ನು ಭಾರತದಲ್ಲಿ ಆಚರಿಸಿದೆವು. ೫ ವರ್ಷಗಳ ಬಳಿಕ, ಮುಂದಿನ ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಿರ್ವಹಿಸಲು ನಮಗೊಂದು ಆಮಂತ್ರಣವಿದೆ. ಈ ರೀತಿಯಲ್ಲಿ, ಬಹುಸಾಂಸ್ಕೃತಿಕ ಚಟುವಟಿಕೆಗಳು ಜನರನ್ನು ಒಂದುಗೂಡಿಸಬಲ್ಲವೆಂದು ನನಗನ್ನಿಸುತ್ತದೆ.

ಉತ್ಸವಕ್ಕಾಗಿ ಭಾರತಕ್ಕೆ ಬಂದ ದೊಡ್ಡ ಸಂಖ್ಯೆಯ ಪಾಕಿಸ್ತಾನೀಯರನ್ನು ನೋಡಿ ಜನರಿಗೆ ಬಹಳ ಅಚ್ಚರಿಯಾಯಿತು; ಅಷ್ಟೊಂದು ದೊಡ್ಡ ರೀತಿಯಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸುತ್ತಿರುವುದಕ್ಕೆ ಅಲ್ಲಿ ಅಷ್ಟೊಂದು ಒಳ್ಳೆಯ ಭಾವನೆಯಿತ್ತು. ರಾಜಕಾರಣವನ್ನು ಹೊರತುಪಡಿಸಿ, ಜನರಿಂದ ಜನರಿಗಿರುವ ಸಂಪರ್ಕ ಹೆಚ್ಚಾದಾಗ, ಸಮುದಾಯಗಳ ನಡುವೆ ನಂಬಿಕೆ ಮತ್ತು ಆತ್ಮೀಯತೆಗಳ ಭಾವವು ಹೆಚ್ಚುತ್ತದೆ. ಒಂದು ರೀತಿಯಲ್ಲಿ ಇದು ಸಮಾಜದಲ್ಲಿ ಒಂದು ಬದಲಾವಣೆಯನ್ನು ತರಬಲ್ಲದೆಂದು ನನಗನ್ನಿಸುತ್ತದೆ. ನಿಮಗೇನನ್ನಿಸುತ್ತದೆ? ಯಾಕೆಂದರೆ, ಜನರನ್ನು "ಇತರರು" ಎಂದು ಯೋಚಿಸುವುದರಿಂದ ಭಯವುಂಟಾಗುತ್ತದೆ. ದೂರವು ಅನಿಶ್ಚಿತತೆ ಮತ್ತು ಭಯಗಳನ್ನು ಉಂಟುಮಾಡುತ್ತದೆ. ನಿಮ್ಮ ಮನೆಯೊಳಗೇ ಅಂತಹ ಒಂದು ವಾತಾವರಣವನ್ನು ಹೊಂದಿರುವುದು ಸಾಧ್ಯವಿಲ್ಲ. ಒಂದು ದೇಶದ ಅಥವಾ ಸಮಾಜದ ಸದಸ್ಯರು ಒಬ್ಬರನ್ನೊಬ್ಬರು ನಂಬದೇ ಇರುವಾಗ ಅಥವಾ ಪರಸ್ಪರರಲ್ಲಿ ಸಂಬಂಧವಿಲ್ಲದೇ ಇರುವಾಗ ಎಲ್ಲರೂ ಯಾತನೆಯನ್ನನುಭವಿಸುತ್ತಾರೆ.

ಇಲ್ಲಿ ನಾನು ಹೇಳಲು ಬಯಸುವ ಒಂದು ಕೊನೆಯ ವಿಷಯವೆಂದರೆ, ವಲಸೆಯ ಸಮಸ್ಯೆ. ಜನರು ವಿವಿಧ ಸ್ಥಳಗಳಿಂದ ಯಾವುದೇ ಒಂದು ದೇಶಕ್ಕೆ ಬರುವಾಗ, ಆ ನೆಲದ ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಅವರು ತಮ್ಮದೇ ಆದ ಪ್ರತ್ಯೇಕ ಸಂಸ್ಕೃತಿಯಲ್ಲಿ ಉಳಿಯಲು ಸಾಧ್ಯವಿಲ್ಲ; ಅವರು ತಮ್ಮ ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರಬಹುದು, ಆದರೆ ಎಲ್ಲೋ ಅವರು ತಾವು ವಾಸಿಸುತ್ತಿರುವ ನೆಲ ಹಾಗೂ ಸಂಸ್ಕೃತಿಗಳೊಂದಿಗೆ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ಇದಕ್ಕೊಂದು ಸೌಮ್ಯವಾದ ನಿರ್ದೇಶನ, ಜನರನ್ನು ಸೌಮ್ಯವಾಗಿ ತಲಪುವಿಕೆ ಬೇಕಾಗುತ್ತದೆ. ಇಂಗ್ಲೇಂಡಿನಲ್ಲಿದ್ದುಕೊಂಡು ಎಲ್ಲರೂ ಇಂಗ್ಲೀಷನ್ನು ಕಲಿಯಬೇಕು, ಅದು ಕಡ್ಡಾಯವಾಗಿರಬೇಕು; ಅವರು ತಮ್ಮ ಮಾತೃಭಾಷೆಯನ್ನು ಮನೆಯಲ್ಲಿ ಮಾತನಾಡಬಹುದು, ಆದರೆ ಅವರು ಸಮಾಜದ ಶಿಷ್ಟಾಚಾರವನ್ನು ಅನುಸರಿಸಬೇಕು. ಲಿಂಗ ಸಮಾನತೆ, ಎಲ್ಲರಿಗೂ ಸಮಾನ ಅವಕಾಶ, ವಿವಿಧತೆಯನ್ನು ಗೌರವಿಸುವುದು, ಈ ಎಲ್ಲಾ ಸಾಮಾನ್ಯವಾಗಿ ಹಂಚಿಕೊಂಡ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ಸಾಮಾನ್ಯ ಶಿಕ್ಷಣವನ್ನು ಜನರಿಗೆ ನೀಡಬೇಕಾಗಿದೆ. ಇದಿಲ್ಲದೆ ನಾವು ನಮ್ಮ ಮೇಲೆ ಸಮಸ್ಯೆಗಳನ್ನು ತಂದುಕೊಳ್ಳುವೆವು.    

ನೀವೆಲ್ಲಾ ನಿರ್ಣಾಯಕರೊಂದಿಗೆ ಈ ಕೆಲವು ಮಾತುಗಳನ್ನಾಡುವುದರೊಂದಿಗೆ, ಪ್ರತಿದಿನವೂ ಕುಳಿತುಕೊಂಡು ವಿಶ್ರಾಮ ಮಾಡಿಕೊಂಡು ನಿಮ್ಮದೇ ಮನಸ್ಸನ್ನು ಅವಲೋಕಿಸಿಕೊಳ್ಳಲು ನೀವು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬೇಕೆಂದು ನಾನು ಶಿಫಾರಸು ಮಾಡುತ್ತೇನೆ. ಇದು ಯಾಕೆಂದರೆ ನೀವು ಸಮಾಜಕ್ಕೆ ಬಹಳ ಮುಖ್ಯವಾದವರು, ಹಾಗೂ ನೀವೊಂದು ಸಂತೋಷಕರವಾದ, ಆರೋಗ್ಯಕರವಾದ, ಶಾಂತವಾದ ಹಾಗೂ ಕೇಂದ್ರೀಕೃತವಾದ ಮನಃಸ್ಥಿತಿಯನ್ನು ಹೊಂದಿರುವಾಗ ನೀವು ಸಮಾಜಕ್ಕೆ ಬಹಳಷ್ಟು ಒಳ್ಳೆಯದನ್ನು ಮಾಡಬಹುದು. 

ಭಾನುವಾರ, ಜೂನ್ 12, 2016

ದೇವರ ಮಾತಿಗೆ ಕಿವಿಗೊಡುವ ಕಲೆ

೧೨ ಜೂನ್ ೨೦೧೬, ಮ್ಯಾಂಚೆಸ್ಟರ್
ಲ್ಲರಿಗೂ ಶುಭ ಸಂಜೆ! ಇಲ್ಲಿ ನಿಮ್ಮೆಲ್ಲರೊಂದಿಗಿರಲು ಬಹಳ ಚೆನ್ನಾಗಿದೆ. ಸುಂದರವಾದ ಜನರನ್ನೊಳಗೊಂಡ ಒಂದು ಭವ್ಯವಾದ ಸಭಾಂಗಣವಾಗಿದೆ ಇದು! ಇಂದಿನ ವಿಷಯವು ಧ್ಯಾನವಾಗಿದೆ. ಧ್ಯಾನ ಮಾಡಬೇಕಾದರೆ, ನಾವೊಂದು ಅನೌಪಚಾರಿಕ ವಾತಾವರಣದಲ್ಲಿರಬೇಕು ಯಾಕೆಂದರೆ, ಒಂದು ಔಪಚಾರಿಕ ವಾತಾವರಣ ಅಥವಾ ಒಂದು ಔಪಚಾರಿಕ ಸೆಟ್ಟಿಂಗ್ ಧ್ಯಾನಕ್ಕೆ ಸರಿಹೊಂದುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಂತೆ ಹಾಯಾಗಿರಬೇಕು; ನಿಜಕ್ಕೂ ಆರಾಮವಾಗಿರಬೇಕು.

ನಾವು ನಮ್ಮ ದೈನಂದಿನ ಜೀವನದಲ್ಲಿ ಅದಲುಬದಲು ಮಾಡಿಕೊಳ್ಳುವ ಕುಶಲೋಪರಿಗಳಲ್ಲಿ ಹಲವು ಒಂದು ಔಪಚಾರಿಕತೆಯಾಗಿದೆ. ಉದಾಹರಣೆಗೆ, ನೀವು ವಿಮಾನದಿಂದ ಇಳಿಯುವಾಗ ಗಗನಸಖಿಯರು ನಿಮಗೊಂದು ಶುಭದಿನವನ್ನು ಹಾರೈಸುತ್ತಾರೆ, ಆದರೆ ಅವರದನ್ನು ನಿಜವಾದ ಅರ್ಥದಲ್ಲಿ ಹೇಳಿರುವುದಿಲ್ಲ! ನಾನವರಿಗೆ ಯಾವುದೇ ಅರ್ಥದಲ್ಲೂ ಅಪಮಾನ ಮಾಡುತ್ತಿಲ್ಲ, ಆದರೆ ಅದು ಅವರ ಹೃದಯದಾಳದಿಂದ ಬರುವ ಒಂದು ವಿಷಯವಲ್ಲ; ನಿಮ್ಮ ತಾಯಿ ಅಥವಾ ನಿಮ್ಮ ಅಜ್ಜಿ ನಿಮಗೆ ಜನ್ಮದಿನವನ್ನು ಹಾರೈಸುವಂತೆ. ನೀವು ಆ ಸಂಬಂಧವನ್ನು ಅನುಭವಿಸುವಾಗ, ನಿಮ್ಮ ಮಾತಿಗೆ ಸ್ವಲ್ಪ ಶಕ್ತಿ ಬರುತ್ತದೆ.

ನಾವು ನಮ್ಮ ಮಾತಿನ ಮೂಲಕ ತಿಳಿಸುವುದಕ್ಕಿಂತ ಹೆಚ್ಚು ನಮ್ಮ ಕಂಪನಗಳ ಮೂಲಕ ತಿಳಿಸುತ್ತೇವೆ. ನಿಮ್ಮ ಮನೆಯಲ್ಲೊಂದು ನಾಯಿಮರಿಯಿದೆಯೆಂದಿಟ್ಟುಕೊಳ್ಳಿ. ನೀವು ಕೆಲಸದಿಂದ ಹಿಂದಿರುಗಿದ ಬಳಿಕ ನಾಯಿಮರಿ ಏನು ಮಾಡುತ್ತದೆ? ಅದು ಹುಚ್ಚುಹಿಡಿದಂತೆ ಆಡುತ್ತದೆ! ಅದು ನಿಮ್ಮನ್ನು ನಿಜಕ್ಕೂ ಪ್ರೀತಿಸುತ್ತದೆಯೆಂಬುದನ್ನು ವ್ಯಕ್ತಪಡಿಸುತ್ತಾ ಅದು ನಿಮ್ಮ ಮೇಲೆಲ್ಲಾ ಜಿಗಿದಾಡುತ್ತದೆ, ಅಲ್ಲವೇ? ನಾವು ನಮ್ಮ ಕಂಪನಗಳ ಮೂಲಕ ಬಹಳಷ್ಟು ತಿಳಿಯಪಡಿಸುತ್ತೇವೆ. ಒಬ್ಬ ವ್ಯಕ್ತಿಯು ನಿಮ್ಮ ಬಳಿ ನಕ್ಕಾಗ, ಅದು ನಿಜಕ್ಕೂ ಒಳಗಿನಿಂದ ಬರುತ್ತಿಲ್ಲವಾದರೆ ಅದು ನಿಮಗೆಲ್ಲರಿಗೂ ತಿಳಿಯುತ್ತದೆಯೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಅದು ಕೇವಲ ಒಂದು ಔಪಚಾರಿಕತೆಯೆಂಬುದು ನಿಮಗೆ ಗೊತ್ತು, ಸರಿಯಾ? ಅದೇ ರೀತಿಯಲ್ಲಿ, ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೊಡನೆಯೂ ಕೇವಲ ಔಪಚಾರಿಕ ಸಂಬಂಧಗಳನ್ನು ಹೊಂದಿರುವ ಹಂತವನ್ನು ಜೀವನವು ತಲಪಿದಾಗ; ಅದು ನಿಮ್ಮ ಹೃದಯದಾಳದಿಂದ ಬರುತ್ತಿಲ್ಲವಾದರೆ, ಒಂದಲ್ಲ ಒಂದು ಸಮಯದಲ್ಲಿ ಖಿನ್ನತೆಯೆಂದು ಕರೆಯಲ್ಪಡುವ ಒಂದು ಸ್ಥಿತಿಗೆ ನೀವು ಹೋಗುತ್ತೀರಿ. ಜೀವನದಲ್ಲಿ ಒಂದು ರೀತಿಯ ಶುಷ್ಕತೆ ಇರುತ್ತದೆ.

ಈಗ ನೀವು ನನ್ನಲ್ಲಿ ಕೇಳಲೂಬಹುದು, "ಇದಕ್ಕೂ ಧ್ಯಾನಕ್ಕೂ ಸಂಬಂಧವೇನು? ನಾವಿಲ್ಲಿಗೆ ಧ್ಯಾನಕ್ಕಾಗಿ ಬಂದಿದ್ದೇವೆ" ಎಂದು. ಇದಕ್ಕೂ ಅದಕ್ಕೂ ಬಹಳಷ್ಟು ಸಂಬಂಧವಿದೆಯೆಂದು ನಾನು ಹೇಳುತ್ತೇನೆ.

ನಾವೆಲ್ಲರೂ ಜೀವಿಸುತ್ತಿರುವ ಒಂದು ಏಕತಾನತೆಯ ಬದುಕಿನಿಂದ; ರಸಹೀನವಾದ ಒಂದು ಬದುಕಿನಿಂದ; ಮೌಲ್ಯಗಳಿಲ್ಲದ ಒಂದು ಬದುಕಿನಿಂದ; ನಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕವಿಲ್ಲದ ಒಂದು ಬದುಕಿನಿಂದ ನಮ್ಮನ್ನು ಮೇಲೆತ್ತುವ ಒಂದು ಪರಿಹಾರವಾಗಿದೆ ಧ್ಯಾನ. ಧ್ಯಾನವು ಇವೆಲ್ಲವುಗಳನ್ನು ತಿರುಗಿಸಬಲ್ಲದು! ನಾವು ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡುತ್ತಿರಲಿ, ನಮ್ಮಲ್ಲಿ ಅಂತರ್ಜ್ಞಾನ ಮತ್ತು ನಾವೀನ್ಯತೆಗಳು ಇರಬೇಕು. ಧ್ಯಾನವು ಇವುಗಳೆರಡನ್ನೂ ಹೆಚ್ಚಿಸಬಲ್ಲದು. ಧ್ಯಾನವು ನಮ್ಮ ಜೀವನದಲ್ಲಿ ಶಕ್ತಿಯನ್ನು ಮರಳಿ ತರಬಲ್ಲದು!  

ಧ್ಯಾನವು ನಮ್ಮ ಜೀವನದಲ್ಲಿ ವಿಸ್ಮಯತೆಯನ್ನು ತರುತ್ತದೆ; ಅದು ಧ್ಯಾನಕ್ಕಿರುವ, ಒಂದುಗೂಡುವಿಕೆಗಿರುವ, ಯೋಗಕ್ಕಿರುವ ಒಂದು ಪೀಠಿಕೆಯಾಗಿದೆ! ಸಂಸ್ಕೃತದಲ್ಲಿ ಪ್ರಾಚೀನವಾದ ಒಂದು ಮಾತಿದೆ, "ವಿಸ್ಮಯ ಯೋಗ ಭೂಮಿಕ"; ಯೋಗಕ್ಕಿರುವ ಪೀಠಿಕೆಯು ವಿಸ್ಮಯತೆಯಾಗಿದೆ; ನಿಮ್ಮ ಸುತ್ತಲೂ ನೀವು ನೋಡುವಾಗ "ವಾಹ್" ಎಂಬ ಒಂದು ಭಾವ. ವಿಸ್ಮಯತೆಯ ಆ ಭಾವದಲ್ಲಿರಲು, "ವಾಹ್" ಎಂಬ ಆ ಭಾವದಲ್ಲಿರಲು ಜೀವನವು ನಿಮಗೆ ಹಲವಾರು ಸಂದರ್ಭಗಳನ್ನು ಅಥವಾ ಅವಕಾಶಗಳನ್ನು ನೀಡಿದೆ. ಇದನ್ನು ನೀವು ಕಳೆದುಕೊಂಡಾಗ, ನೀವು ಜೀವನವನ್ನೇ ಕಳೆದುಕೊಳ್ಳುತ್ತೀರಿ! ನೀವು ಆ ಏಕತಾನತೆಯ ಜೀವನದ ಮೂಲಕ ಹಾದುಹೋಗುತ್ತೀರಿ - ತಿನ್ನುವುದು, ಕುಡಿಯುವುದು, ನಿದ್ರಿಸುವುದು ಮತ್ತು ಟಿವಿ ನೋಡುವುದು; ಅಷ್ಟೇ! ವಿದಾಯ ಹೇಳಲೂ ಸಮಯವಿಲ್ಲದೆ ನೀವು ಹೋಗಿಯಾಗುತ್ತದೆ!

ಧ್ಯಾನವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ, ಅದು ಜೀವನದಲ್ಲಿ ವಿಸ್ಮಯತೆಯ ಆ ಭಾವವನ್ನು ಉಳಿಸಿಕೊಳ್ಳುತ್ತದೆ. ಮಕ್ಕಳಾಗಿ ನಾವೆಲ್ಲರೂ ವಿಸ್ಮಯತೆಯ ಒಂದು ಭಾವದಲ್ಲಿದ್ದೆವು; ನಾವು ವಿಸ್ಮಯಲೋಕದಲ್ಲಿದ್ದೆವು. ನಾವು ಈ ಭೂಮಿಗೆ "ವಾಹ್" ಎಂಬ ಒಂದು ಭಾವದೊಂದಿಗೆ, ಮುಗ್ಧತೆಯ ಒಂದು ಭಾವದೊಂದಿಗೆ, ಆತ್ಮೀಯತೆಯ ಒಂದು ಭಾವದೊಂದಿಗೆ, ನಮ್ಮ ಸುತ್ತಲಿರುವ ಎಲ್ಲರೊಂದಿಗೂ ಜೋಡಿಕೊಂಡಿರುವ ಒಂದು ಭಾವದೊಂದಿಗೆ ಬಂದೆವು. ಏನಾಯಿತು? ಅದನ್ನು ನಾವು ಎಲ್ಲಿ ಕಳೆದುಕೊಂಡೆವು? ನಾವದನ್ನು ನಿಜಕ್ಕೂ ಕಳೆದುಕೊಂಡಿಲ್ಲ, ಅದು ಎಲ್ಲಾ ಸಮಯದಲ್ಲೂ ನಮ್ಮೊಂದಿಗಿದೆ, ಅದು ಕೇವಲ ಮುಚ್ಚಿಹೋಯಿತಷ್ಟೆ. ನಾವು ಯಾರಾಗಿದ್ದೆವೋ, ನಾವು ಯಾರಾಗಿರುವೆವೋ ಮತ್ತು ನಾವು ಯಾರಾಗಲಿರುವೆವೋ ಆ ನಿಜವಾದ ಸ್ವಭಾವವನ್ನು ಯಾವುದು ತೆರೆಯುವುದೋ ಅದು ಧ್ಯಾನವಾಗಿದೆ! ಧ್ಯಾನವು ಸರಳತೆ ಮತ್ತು ಮುಗ್ಧತೆಯನ್ನು ತರುತ್ತದೆ. ಅದು ನಮ್ಮ ಬುದ್ಧಿಯನ್ನು ಇನ್ನೂ ತೀಕ್ಷ್ಣಗೊಳಿಸುತ್ತದೆ, ನಮ್ಮ ಭಾವನೆಗಳನ್ನು ಇನ್ನೂ ಕೋಮಲಗೊಳಿಸುತ್ತದೆ.

ಏಕಕಾಲದಲ್ಲಿ ವಿವೇಕಪೂರ್ಣರಾಗಿಯೂ ಸಂವೇದನಾಶೀಲರಾಗಿಯೂ ಇರಲು ನಾವು ಬಯಸುವುದಿಲ್ಲವೇ? ಕೆಲವರು ವಿವೇಕಪೂರ್ಣರಾಗಿಯೂ ಸದಾಚಾರಿಗಳಾಗಿಯೂ ಇರುತ್ತಾರೆ, ಆದರೆ ಅವರು ಸಂವೇದನಾಶೀಲರಾಗಿರುವುದಿಲ್ಲ. ಮತ್ತೆ ಕೆಲವರಿರುತ್ತಾರೆ, ಅವರು ಬಹಳ ಸಂವೇದನಾಶೀಲರಾಗಿರುತ್ತಾರೆ, ಆದರೆ ಅವರು ವಿವೇಚನೆಯನ್ನು ಕಳೆದುಕೊಳ್ಳುತ್ತಾರೆ. ನಮ್ಮಲ್ಲೇ ಮತ್ತು ನಮ್ಮ ಸುತ್ತಲಿನ ಜನರಲ್ಲಿ ಈ ಅಸಾಮರಸ್ಯವಾಗುತ್ತಿರುವುದು ನಮಗೆ ಕಾಣಿಸುವುದಿಲ್ಲವೇ?

ವಿವೇಕಪೂರ್ಣರಾಗಿರುವುದು ಮತ್ತು ಸಂವೇದನಾಶೀಲರಾಗಿರುವುದರ ನಡುವೆ, ಹೃದಯ ಮತ್ತು ಮನಸ್ಸುಗಳ ನಡುವೆ ಹೆಚ್ಚು ಅಗತ್ಯವಿರುವ ಸಮತೋಲನವನ್ನು ಧ್ಯಾನವು ತರುತ್ತದೆ. ಈ ಸಮತೋಲನವಿದ್ದರೆ ಅದರಿಂದ ಸಂತೋಷವು ಸಿಗುತ್ತದೆ; ಅದುವೇ ನಮಗೆಲ್ಲರಿಗೂ ಬೇಕಾಗಿರುವುದು ಮತ್ತು ಅದಕ್ಕಾಗಿಯೇ ನಾವೆಲ್ಲರೂ ಓಡುತ್ತಿರುವುದು!

ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್)ಗಿಂತಲೂ ಹೆಚ್ಚು ನಾವು ಗಮನ ನೀಡಬೇಕಾಗಿರುವುದು ಜಿಡಿಹೆಚ್‌ (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್) ನಕಡೆಗೆ ಎಂಬುದಾಗಿ ಇಂದು ಪ್ರಪಂಚದಾದ್ಯಂತ ಅಂಗೀಕರಿಸಲಾಗುತ್ತಿದೆ. ಧ್ಯಾನವು ನಮಗಿರುವ ರಹಸ್ಯವಾದ ಕೀಲಿಯಾಗಿದೆ; ಧ್ಯಾನವಿಲ್ಲದೆ ನಾವು ಆ ಸಂತೋಷವನ್ನು ಹೊಂದಲು ಸಾಧ್ಯವಿಲ್ಲ. ಧ್ಯಾನದ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳಿವೆ. ಕೆಲವರು ಹೇಳುತ್ತಾರೆ ಅದು ಮನಸ್ಸಿನ ಮೇಲೆ ಗಮನ ನೀಡುವುದೆಂದು, ಕೆಲವರು ಹೇಳುತ್ತಾರೆ ಅದರ ಸಂಬಂಧ ಧಾರ್ಮಿಕ ಮಂತ್ರೋಚ್ಛಾರಣೆ ಅಥವಾ ದೇವರನ್ನು ಪ್ರಾರ್ಥಿಸುವುದರೊಂದಿಗಿದೆಯೆಂದು. ಧ್ಯಾನವು ಏಕಾಗ್ರತೆಯಲ್ಲ; ನನ್ನ ಮನಸ್ಸಿಗೆ ಧ್ಯಾನವು ಅದಕ್ಕೆ ವಿರುದ್ಧವಾದುದು. ಯಾವುದೇ ಕೆಲಸವನ್ನು ಮಾಡಲು ನಾವು ಪ್ರಯತ್ನವನ್ನು ಹಾಕಬೇಕಾಗುತ್ತದೆ. ಧ್ಯಾನಕ್ಕೆ ನಿಮಗೆ ಯಾವುದೇ ಪ್ರಯತ್ನವೂ ಬೇಕಾಗಿಲ್ಲ. ಧ್ಯಾನವು ವಿಶ್ರಾಂತಿಯನ್ನು ಪಡೆಯುವ ಒಂದು ಅಪ್ರಯತ್ನವಾದ ಮಾರ್ಗವಾಗಿದೆ.

ಪ್ರಾರ್ಥನೆಯೆಂಬುದು ದೇವರಲ್ಲಿ ಏನನ್ನಾದರೂ ಕೇಳಿಕೊಳ್ಳುವುದಾದರೆ, ಧ್ಯಾನವೆಂಬುದು ದೇವರಲ್ಲಿ, "ನಾನು ಇಲ್ಲಿ ನೀನು ಹೇಳುವುದನ್ನು ಕೇಳಲಿಕ್ಕಾಗಿಯಿದ್ದೇನೆ, ನಿನಗೆ ಹೇಳುವುದೇನಿದೆ?" ಎಂದು ಹೇಳುವುದಾಗಿದೆ. ಊಹಿಸಿ ನೋಡಿ, ಒಂದು ಮಗುವು ಬಂದು ನಿಮ್ಮಲ್ಲಿ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ; ನೀವು ಹೇಳುವುದನ್ನೂ ಕೇಳಿಸಿಕೊಳ್ಳದೆ; ನಿಮಗೆ ಹೇಗನಿಸಬಹುದು? ನಿಮಗೆ ಹತಾಶೆಯಾಗದೇ? ದೇವರು ಕೂಡಾ ಅದೇ ಸ್ಥಿತಿಯಲ್ಲಿರಬೇಕೆಂದು ನನಗನಿಸುತ್ತದೆ! ನೀವು ಧ್ಯಾನ ಮಾಡುವಾಗ ಅದು ಹೇಗೆಂದರೆ, "ಹೌದು, ನಾನು ಇಲ್ಲಿ ನೀನು ಹೇಳುವುದನ್ನು ಕೇಳಲಿಕ್ಕಾಗಿಯಿದ್ದೇನೆ, ನಿನಗೆ ಏನು ಹೇಳಲಿದೆಯೋ ಅದನ್ನು ಹೇಳು" ಎಂದು ಹೇಳುವಂತೆ! ಅದು ಧ್ಯಾನದ ದೃಷ್ಟಿಕೋನವಾಗಿದೆ.

ಧ್ಯಾನವು ಎಲ್ಲಾ ಭಾಷೆಗಳ ಜನರನ್ನು ಒಗ್ಗೂಡಿಸುತ್ತದೆ. ಪ್ರಾರ್ಥನೆಗಳು ಹಲವಾರು ಭಾಷೆಗಳಲ್ಲಿರಬಹುದು; ಹಿಂದೂಗಳು ಸಂಸ್ಕೃತದಲ್ಲಿ ಪ್ರಾರ್ಥಿಸುತ್ತಾರೆ, ಕ್ರಿಶ್ಚಿಯನ್ನರು ಇಂಗ್ಲೀಷಿನಲ್ಲಿ ಪ್ರಾರ್ಥಿಸುತ್ತಾರೆ, ಯಹೂದ್ಯರು ಹೀಬ್ರೂವಿನಲ್ಲಿ ಪ್ರಾರ್ಥಿಸುತ್ತಾರೆ, ಬೌದ್ಧರು ಸಂಸ್ಕೃತ ಮತ್ತು ಪಾಲಿಯಲ್ಲಿ ಪ್ರಾರ್ಥಿಸುತ್ತಾರೆ. ಹೆಚ್ಚುಕಡಿಮೆ ಒಂದೇ ಸಾರದೊಂದಿಗೆ ಪ್ರಾರ್ಥನೆಗಳು ವಿವಿಧ ಭಾಷೆಗಳಲ್ಲಿರುವ ವೇಳೆಗೆ, ಧ್ಯಾನವು ಭಾಷೆ, ಧರ್ಮ, ರಾಷ್ಟ್ರೀಯತೆ ಮತ್ತು ಲಿಂಗವನ್ನು ಸಹ ಮೀರಿದೆ.

ಧ್ಯಾನಕ್ಕೆ ಮೂರು ಸ್ವರ್ಣ ನಿಯಮಗಳಿವೆ, ಅವುಗಳನ್ನು ನೀವು ನಿಮ್ಮ ಮನಸ್ಸಿನಲ್ಲಿರಿಸಬೇಕು. ನೀವು ಅವುಗಳನ್ನು ಸದಾಕಾಲವೂ ನೆನಪಿಸುತ್ತಿರಬೇಕಾಗಿಲ್ಲ, ಸುಮ್ಮನೆ ಅವುಗಳನ್ನು ಅಲ್ಲಿರಿಸಿ; ನಿಮಗೆ ನಿಜಕ್ಕೂ ಅಗತ್ಯವಿರುವಾಗ ಅವುಗಳು ಬರುತ್ತವೆ.

ನೀವು ಧ್ಯಾನ ಮಾಡಲು ಶುರು ಮಾಡುವಾಗ, ನೀವು ಈ ಕೆಳಗಿನ ಮೂರು ವಿಷಯಗಳನ್ನು ಹೇಳಬಲ್ಲಿರಾ? :

೧. ನನಗೇನೂ ಬೇಕಾಗಿಲ್ಲ.

ನೀವು, "ನನಗೆ ಬಾಯಾರಿಕೆಯಾಗಿದೆ, ನನಗೆ ಒಂದು ಲೋಟ ನೀರು ಬೇಕು" ಎಂದು ಹೇಳಿದರೂ ಕೂಡಾ ಧ್ಯಾನವು ಆಗಲಾರದು. ನೀವು ಆ ಒಂದು ಲೋಟ ನೀರನ್ನು ಕುಡಿದು ಮುಗಿಸುವುದು ಒಳ್ಳೆಯದು. ಇದು ಮೊದಲನೆಯ ಸ್ವರ್ಣ ನಿಯಮ. ಕೇವಲ ಆ ೨೦ ನಿಮಿಷಗಳಿಗಾಗಿ, "ನನಗೇನೂ ಬೇಕಾಗಿಲ್ಲ" ಎಂದು ಹೇಳಿ.

ನೀವು ಹೀಗೆಂದು ಯೋಚಿಸಲೂಬಹುದು, "ನಾನೊಬ್ಬ ಸನ್ಯಾಸಿ ಅಥವಾ ಏಕಾಂತವಾಸಿಯಾಗಲು ಬಯಸುವುದಿಲ್ಲ, ನನಗೆ ಮಾಡಲು ಹಲವಾರು ವಿಷಯಗಳಿವೆ!" ಹೌದು, ನನ್ನ ಪ್ರೀತಿಪಾತ್ರರೇ, ಒಪ್ಪಿದೆ, ನಿಮಗೆ ಹಲವಾರು ವಿಷಯಗಳು ಬೇಕು, ಆದರೆ ಕೇವಲ ೨೦ ನಿಮಿಷಗಳವರೆಗೆ ನೀವು ಆ ರೈನ್‌ಕೋಟನ್ನು ತೆಗೆದು, ಸ್ಥಿರವಾಗಿ ಕುಳಿತು, ಏನನ್ನೂ ಬಯಸದೇ ಇರಬಲ್ಲಿರಾ?

೨. ನಾನು ಏನನ್ನೂ ಮಾಡಬೇಕಾಗಿಲ್ಲ.

೩. ನಾನು ಏನೂ ಅಲ್ಲ. 

ನೀವೊಬ್ಬ ಬಹಳ ಬುದ್ಧಿವಂತ ವ್ಯಕ್ತಿಯೆಂದು ಅಥವಾ ಅತ್ಯಂತ ಕೆಟ್ಟ ವ್ಯಕ್ತಿಯೆಂದು ಅಥವಾ ಒಬ್ಬ ಮೂರ್ಖನೆಂದು ನೀವು ಯೋಚಿಸಿದರೆ, ಆಗ ಕೂಡಾ ಅಲ್ಲಿ ಧ್ಯಾನಕ್ಕೆ ಯಾವುದೇ ಅವಕಾಶವಿಲ್ಲ. ನಿಮಗೆ ಗೊತ್ತಾ ಒಂದು ಮಾತಿದೆ, ಒಬ್ಬ ಸಿರಿವಂತ ವ್ಯಕ್ತಿಯು ಸೂಜಿಯ ಕಣ್ಣಿನ ಮೂಲಕ ಹಾದುಹೋಗಲಾರನು. ಅದೇ ರೀತಿ, ನೀವು ಶ್ರೀಮಂತ ಅಥವಾ ಬಡವ ಅಥವಾ ಪರಮಪೂಜ್ಯ ವ್ಯಕ್ತಿ ಅಥವಾ ಅತ್ಯಂತ ಕೆಟ್ಟ ಪಾಪಿಯೆಂದು ನೀವು ಯೋಚಿಸಿದರೆ, ಆಗ ಕೂಡಾ ಧ್ಯಾನವು ಸಾಧ್ಯವಿಲ್ಲ. ನಾವು ನಮ್ಮ ಮೇಲೆಯೇ ಹಾಕಿಕೊಳ್ಳುವ ಎಲ್ಲಾ ಗುರುತುಪಟ್ಟಿಗಳನ್ನು ಸ್ವಲ್ಪ ಸಮಯಕ್ಕೆ ನಾವು ಅತ್ತಕಡೆ ಇಡಬೇಕು ಮತ್ತು, "ನಾನು ಏನೂ ಅಲ್ಲ, ನನಗೇನೂ ಬೇಕಾಗಿಲ್ಲ ಮತ್ತು ನಾನೇನೂ ಮಾಡಬೇಕಾಗಿಲ್ಲ" ಎಂದು ಹೇಳಬೇಕು. ಧ್ಯಾನವಾಗುವುದಕ್ಕೆ ಬೇಕಾಗಿರುವ ಮೂರು ನಿಯಮಗಳಾಗಿವೆ ಇವು. ಧ್ಯಾನದ ಪಯಣವು ಚಲನೆಯಿಂದ ಸ್ಥಿರತೆಯ ಕಡೆಗೆ ಮತ್ತು ಶಬ್ದದಿಂದ ಮೌನದ ಕಡೆಗೆ ಇರುವುದಾಗಿದೆ.   

ಬುಧವಾರ, ಫೆಬ್ರವರಿ 10, 2016

ಆತ್ಮಸಂವಾದ

ಫೆಬ್ರುವರಿ ೧೦, ೨೦೧೬
ಚೆನ್ನೈ, ಭಾರತ
ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು, ಫೆಬ್ರುವರಿ ೧೦, ೨೦೧೬ರಲ್ಲಿ "ದ ಲಿ ಮೆರಿಡಿಯನ್ ಹೋಟೆಲ್" ನಲ್ಲಿ ನಡೆದ ಚನ್ನೈಯ ಮಹತ್ತರ ಸಂಭಾಷಣೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದರು. ಅಲ್ಲಿ ಅವರು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ವ್ಯಾಪಾರ ಮುಖಂಡರು, ವ್ಯವಸ್ಥಾಪಕರು, ಉದ್ಯಮಿಗಳು, ಶಿಕ್ಷಣ ಶಾಸ್ತ್ರಜ್ಞರು, ಬುದ್ಧಿಜೀವಿಗಳು ಮತ್ತು ಮಾರ್ಕೆಟಿಂಗ್, ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಮಾನವ ಸಂಪನ್ಮೂಲ, ಮಾಧ್ಯಮ ಹಾಗೂ ಸೃಜನಶೀಲತೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಇತರ ನಾಯಕರನ್ನು ಒಳಗೊಂಡ ವೃತ್ತಿಪರರ ಒಂದು ದೊಡ್ಡ ಪ್ರೇಕ್ಷಕ ವರ್ಗವನ್ನು ಭೇಟಿಯಾದರು. ಈ ಕಾರ್ಯಕ್ರಮದಲ್ಲಿ ಗುರುದೇವರು ಹೇಳಿದುದು ಈ ಕೆಳಗಿನಂತಿದೆ:  

ನಾವು ನಮ್ಮ ಮಾತುಗಳ ಮೂಲಕ ಸಂಪರ್ಕಿಸುವುದರಿಂದ ಹೆಚ್ಚಾಗಿ ನಮ್ಮ ಕಂಪನಗಳ ಮೂಲಕ ಸಂಪರ್ಕಿಸುತ್ತೇವೆ. ನಾವೊಂದು ವಿಮಾನದಿಂದ ಇಳಿಯುವಾಗ ಗಗನಸಖಿಯು "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುತ್ತಾಳೆ. ಆದರೆ ಅವಳದನ್ನು ನಿಜವಾದ ಅರ್ಥದಲ್ಲಿ ಹೇಳುತ್ತಾಳೆಯೇ? ಅದನ್ನೇ ನಿಮ್ಮ ತಾಯಿ ಅಥವಾ ನಿಮ್ಮ ಅಜ್ಜಿ ಹೇಳಿದಾಗ, ಅದು ತನ್ನೊಂದಿಗೆ ಕೆಲವು ಕಂಪನಗಳನ್ನು ಒಯ್ಯುತ್ತದೆ. ಈ ಕಂಪನಗಳನ್ನು ಗ್ರಹಿಸುವ ನಮ್ಮ ಸಾಮರ್ಥ್ಯವು ನಾವು ಶಾಂತವಾಗಿರುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ನಾವು ನಮ್ಮ ಮನಸ್ಸಿನಲ್ಲಿ ಒಂದು ವಿಷಯದೊಂದಿಗೇ ಸಿಕ್ಕಿಹಾಕಿಕೊಂಡಿದ್ದರೆ, ಆಗ ನಾವು ಹಲವು ವಿಷಯಗಳನ್ನು ಕಳೆದುಕೊಳ್ಳುತ್ತೇವೆ. ಹಲವು ಸಲ ಜನರು ಒಂದು ಪ್ರಶ್ನೆಯೊಂದಿಗೆ ಕುಳಿತುಕೊಳ್ಳುತ್ತಾರೆ ಮತ್ತು ಇತರ ಎಲ್ಲದುದರ ಕಡೆಗೆ ಅವರು ಕಿವುಡರಾಗುತ್ತಾರೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನೀವು ಒಂದು ಪ್ರಶ್ನೆಗೆ ಅಂಟಿಕೊಂಡಿರುವಾಗ ನಿಮ್ಮ ಲೋಟವು ತುಂಬಿಹರಿಯುತ್ತಿರುತ್ತದೆ, ಆಗ ಅದರೊಳಗೆ ಹಾಕಲು ಇನ್ನೂ ಹೆಚ್ಚಿನದೇನೂ ಇರುವುದಿಲ್ಲ.

ಒಮ್ಮೆ ಒಬ್ಬ ಶಿಷ್ಯನು ಹಲವಾರು ಪ್ರಶ್ನೆಗಳೊಂದಿಗೆ ತನ್ನ ಗುರುವಿನ ಬಳಿಗೆ ಹೋದನು ಮತ್ತು ಅವರಲ್ಲಿ ಜ್ಞಾನವನ್ನು ಬೇಡಿದನು. ಗುರುವು ಹೀಗಂದರು, "ಬಾ, ಕುಳಿತುಕೋ ಮತ್ತು ಮೊದಲಿಗೆ ಒಂದು ಲೋಟ ಕಾಫಿ ಕುಡಿ". ಲೋಟವು ತುಂಬಿ ಹರಿದು, ಮೇಜು ಮತ್ತು ನಂತರ ನೆಲದ ಮೇಲೆ ಚೆಲ್ಲುವವರೆಗೆ ಗುರುವು ಲೋಟದೊಳಕ್ಕೆ ಕಾಫಿಯನ್ನು ಎರೆದರು.

ಶಿಷ್ಯನಂದನು, "ಗುರುದೇವ, ನೀವೇನು ಮಾಡುತ್ತಿರುವಿರಿ?"

ಗುರು ಅಂದರು, "ನೀನು ನನ್ನ ಬಳಿಗೆ ಒಂದು ತುಂಬಿಹರಿಯುತ್ತಿರುವ ಲೋಟದಂತೆ ಬಂದಿರುವೆ. ನಿನ್ನ ಹಿಡಿಯುವ ಸಾಮರ್ಥ್ಯವು ಬಹಳ ಚಿಕ್ಕದಾಗಿದೆ, ಆದರೆ ನಿನಗೆ ಕೆಲವು ಬಹಳ ದೊಡ್ಡ ಪ್ರಶ್ನೆಗಳಿಗೆ ಉತ್ತರಗಳು ಬೇಕು. ನಾನು ಸುರಿಯುವುದನ್ನು ಹಿಡಿದುಕೊಳ್ಳಲು ನಿನಗೆ ಸಾಧ್ಯವಾಗಲಾರದು. ನಾನು ಕೊಡಲು ಸಿದ್ಧ, ಆದರೆ ಪಡೆಯಲು ನೀನು ಸಿದ್ಧವಾಗಿರುವೆಯಾ? ನೀನು ಪಡೆಯಬೇಕಾದರೆ, ಆಗ ಮೊದಲಿಗೆ ನೀನು ಖಾಲಿಯಾಗಬೇಕು."

ಗೀತೆಯಲ್ಲಿ ಕೃಷ್ಣನು ಹೀಗಂದಿದ್ದಾನೆ,

"ನ ಹ್ಯಸನ್ನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ",

ನೀನು ನಿನ್ನ ಮನಸ್ಸಿನಲ್ಲಿ ಒಂದು ಯೋಚನೆಗೆ ಅಂಟಿಕೊಂಡಿದ್ದರೆ, ಆಗ ಹೊಸ ಜ್ಞಾನವನ್ನು ಪಡೆಯಲು ನಿನಗೆ ಸಾಧ್ಯವಾಗಲಾರದು.

ನೋಡಿ, ಒಬ್ಬಳು ತಾಯಿಯು ಮಗುವಿಗೆ, "ತೊಲಗಿ ಹೋಗು" ಎಂದು ಹೇಳಿದರೆ, ಅವಳದನ್ನು ನಿಜವಾದ ಅರ್ಥದಲ್ಲಿ ಹೇಳಿರುತ್ತಾಳೆಯೇ? ಇಲ್ಲ! ಅವಳು ಯಾವತ್ತೂ ನಿಜವಾದ ಅರ್ಥದಲ್ಲಿ ಅದನ್ನು ಹೇಳುವುದಿಲ್ಲ. ಸುಮ್ಮನೆ ಕೋಪದಿಂದ ಅವಳು ಹಾಗೆ ಹೇಳುತ್ತಾಳೆ. ನಾವು ಪದಗಳಿಗೆ ಅವುಗಳ ಅರ್ಥಗಳನ್ನು ಕೊಡುತ್ತೇವೆ ಮತ್ತು ನಾವು ನಮ್ಮ ಅಂತರಾಳದಿಂದ ಅವುಗಳಿಗೆ ಅವುಗಳ ಅರ್ಥವನ್ನು ಕೊಡುತ್ತೇವೆ. ಕಂಪನಗಳ ಮಟ್ಟದಿಂದ ನಾವು ಹೇಳುವಾಗ, ಅದು ಆತ್ಮಸಂವಾದನ - ಆತ್ಮದಿಂದ ಆತ್ಮಕ್ಕಿರುವ ಸಂಪರ್ಕ, ಮತ್ತು ಸಂಪರ್ಕದ ಈ ಮಟ್ಟದಲ್ಲಿ ಮಾತ್ರ ನಿಜವಾದ ಜ್ಞಾನವು ಉದಯಿಸುವುದು.

ಪ್ರಾಚೀನ ದಿನಗಳಲ್ಲಿ ಈ ದೇಶದಲ್ಲಿ ಉಪನಯನದ ಸಂಪ್ರದಾಯವಿತ್ತು. ಗುರುವು ಶಿಷ್ಯನನ್ನು ತಮ್ಮ ಹತ್ತಿರ ಕುಳಿತುಕೊಳ್ಳಿಸಿ, ಶಿಷ್ಯನ ಕಣ್ಣುಗಳೊಳಗೆ ನೋಡಿ ಅವನಿಗೆ ಜ್ಞಾನವನ್ನು ಹಸ್ತಾಂತರಿಸುತ್ತಿದ್ದರು. ಪ್ರತಿಯಾಗಿ ಶಿಷ್ಯನಿಗೆ ತನ್ನ ಗುರುವಿನ ಮೇಲೆ ನಂಬಿಕೆಯಿರುತ್ತಿತ್ತು.

ಗುರುವಿಗೆ ತಿಳಿಯದು ಎಂದು ನೀವು ಯೋಚಿಸಿದರೆ, ಮತ್ತೆ ಒಂದು ಪ್ರಶ್ನೆಯನ್ನು ಕೇಳುವುದಾದರೂ ಯಾಕೆ? ಗಿಂಡಿಗೆ ಹೋಗುವುದು ಹೇಗೆಂಬುದು ನಿನಗೆ ತಿಳಿಯದೆಂದು ನಾನು ಯೋಚಿಸಿದರೆ, ನಾನು ಯಾಕಾದರೂ ನಿನ್ನನ್ನು ಕೇಳುತ್ತೇನೆ? ನೀನು ಚೆನ್ನೈಯವನಾಗಿರುವುದರಿಂದ ನಾನು ನಿನ್ನನ್ನು ಕೇಳುತ್ತೇನೆ. ಆದರೆ ನೀನು ಬಿಹಾರಿನವನಾಗಿದ್ದು, ಕೇವಲ ಒಬ್ಬ ಭೇಟಿ ಕೊಡುವವನಾಗಿದ್ದರೆ, ನಾನು ನಿನ್ನನ್ನು ಕೇಳುವ ತೊಂದರೆಯನ್ನು ತೆಗೆದುಕೊಳ್ಳುವುದಿಲ್ಲ, ಅದು ಹಾಗಲ್ಲವೇ? ಆದ್ದರಿಂದ, ಅಲ್ಲಿ ವಿಶ್ವಾಸ ಮುಖ್ಯ. ವಿಶ್ವಾಸ ನಮ್ಮ ಜೀವನದ ಭಾಗವಾಗಿದೆ. ನಾವು ನಂಬಿಕೆಯೊಂದಿಗೆ ಜನಿಸಿದ್ದೇವೆ. ಒಂದು ಮಗುವಿಗೆ ತಾಯಿಯನ್ನು ಗೊತ್ತಿರುವುದಿಲ್ಲ, ಆದರೆ ಅದು ತಾಯಿಯ ಕಣ್ಣುಗಳನ್ನು ನೋಡುವಾಗ ಅದು ಪ್ರೇಮವನ್ನು ಅನುಭವಿಸುತ್ತದೆ. ಅದು ತಾಯಿಯಲ್ಲಿ, "ನಿನ್ನ ಹೆಸರೇನು? ನೀನು ಓದಿದ್ದು ಎಲ್ಲಿ? ನಿನ್ನ ಹೆತ್ತವರು ಯಾರು? ನೀನು ಎಲ್ಲಿಂದ ಬಂದಿರುವೆ? ನೀನೇನು ಮಾಡುತ್ತಿರುವೆ?" ಎಂದು ಕೇಳುವುದಿಲ್ಲ. ಮಗುವಿಗೆ ಏನೂ ಗೊತ್ತಿರುವುದಿಲ್ಲ, ಆದರೆ ಅದಕ್ಕೆ ಪ್ರೇಮದ ಅನುಭವವಾಗುತ್ತದೆ. ಮಗುವು ತಾಯಿಯನ್ನು ಒಂದು ತಿಳಿಯಲಿರುವ ವಸ್ತುವನ್ನಾಗಿ ಮಾಡುವುದಿಲ್ಲ. ಅದೇ ರೀತಿಯಲ್ಲಿ, ಅಷ್ಟೊಂದು ದೊಡ್ಡದಾಗಿರುವ ಮತ್ತು ಮಹತ್ತಾಗಿರುವ ಒಂದನ್ನು ನೀವು ತಿಳಿಯಲಿರುವ ಒಂದು ವಸ್ತುವನ್ನಾಗಿ ಮಾಡಲು ನಿಮಗೆ ಸಾಧ್ಯವಿಲ್ಲ. ಪ್ರೇಮವನ್ನು ನೀವು ಅನುಭವಿಸಿದಾಗ ಮಾತ್ರ ನಿಮಗೆ ಜ್ಞಾನವನ್ನು ಪಡೆಯಲು ಸಾಧ್ಯ. ಕೆಲವರು ಯೋಚಿಸುತ್ತಾರೆ, ನಿಮ್ಮಲ್ಲಿ ಜ್ಞಾನವಿದ್ದರೆ ಮಾತ್ರ ನಿಮಗೆ ಪ್ರೇಮವನ್ನು ಅನುಭವಿಸಲು ಸಾಧ್ಯವೆಂದು, ಅದು ಕೂಡಾ ಸರಿ.

ಕೆಲವು ಜನರು ಹೀಗೆಂದು ಹೇಳುತ್ತಾರೆ, "ನಾನು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸುತ್ತೇನೆ", ಆದರೆ ನೀವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಯಾಕೆ ಬಯಸುತ್ತೀರಿ? ನನ್ನ ಪ್ರೀತಿಪಾತ್ರರೇ, ನೀವು ದೇವರಿಂದ ದೂರ ಹೋಗಲಿಕ್ಕೇ ಸಾಧ್ಯವಿಲ್ಲ. ಅದು ಅಸಾಧ್ಯ! ಎಲ್ಲೆಡೆಯೂ ಗಾಳಿಯಿದೆ, ಆದರೆ ನೀವೊಂದು ಫ್ಯಾನಿನ ಹತ್ತಿರ ಕುಳಿತಾಗ ನಿಮಗದರ ತೀವ್ರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ, ದೇವರ ಉಪಸ್ಥಿತಿಯನ್ನು ಅನುಭವಿಸಲು ನಿಮಗೆ ಧ್ಯಾನ, ಸತ್ಸಂಗ ಹಾಗೂ ಒಬ್ಬರು ಗುರುಗಳ ಅಗತ್ಯವಿದೆ.  

ನಿಮ್ಮಲ್ಲಿ ಎಷ್ಟು ಮಂದಿ ಸಂಶಯದ ಬಗ್ಗೆ ಯೋಚಿಸಿದ್ದೀರಿ?

(ಸಭಿಕರಲ್ಲಿ ಅನೇಕರು ಕೈಗಳನ್ನೆತ್ತುತ್ತಾರೆ )

ನಿಮ್ಮಲ್ಲಿ ಎಷ್ಟು ಮಂದಿ ಸಂಶಯದ ಬಗ್ಗೆ ಯೋಚಿಸಿಲ್ಲ?

(ಸಭಿಕರಲ್ಲಿ ಕೆಲವರು ಕೈಗಳನ್ನೆತ್ತುತ್ತಾರೆ )

ಸಂಶಯವು ಯಾವತ್ತೂ ಸಕಾರಾತ್ಮಕವಾದುದರ ಬಗ್ಗೆ ಇರುತ್ತದೆ. ನೀವಿದನ್ನು ಗಮನಿಸಿದ್ದೀರಾ? ಒಬ್ಬರು ನಿಮ್ಮಲ್ಲಿ, "ಅವನು ತುಂಬಾ ಕೆಟ್ಟ ವ್ಯಕ್ತಿ" ಎಂದು ಹೇಳಿದರೆ ನೀವದನ್ನು ಒಪ್ಪುತ್ತೀರಿ ಮತ್ತು ಅದು ಹಾಗೇ ಎಂದು ಅಂದುಕೊಳ್ಳುತ್ತೀರಿ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಯಾರಾದರೂ "ಅವನೊಬ್ಬ ಒಳ್ಳೆಯ ವ್ಯಕ್ತಿ" ಎಂದು ಹೇಳಿದರೆ ನೀವು, "ಹಾಗೆಂದು ನೀನು ಯೋಚಿಸುತ್ತಿರುವೆ, ನೋಡೋಣ" ಎಂದು ಹೇಳುತ್ತೀರಿ.

ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ನಾವು ಸಂಶಯಿಸುತ್ತೇವೆ, ಆದರೆ ಒಬ್ಬ ವ್ಯಕ್ತಿಯ ಅಪ್ರಾಮಾಣಿಕತೆಯನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಅದೇ ರೀತಿ, ನಾವು ನಮ್ಮ ಸ್ವಂತ ಸಂತೋಷದ ಬಗ್ಗೆ ಸಂಶಯಿಸುತ್ತೇವೆ. ಯಾರಾದರೂ ನಿಮ್ಮಲ್ಲಿ "ನೀನು ಸಂತೋಷವಾಗಿದ್ದೀಯಾ?" ಎಂದು ಕೇಳಿದರೆ ನೀವು, "ನನಗೆ ಖಚಿತವಿಲ್ಲ" ಎಂದು ಹೇಳುತ್ತೀರಿ. ಆದರೆ ನಾವು ನಮ್ಮ ಖಿನ್ನತೆಯ ಬಗ್ಗೆ ಎಂದಿಗೂ ಸಂಶಯಿಸುವುದಿಲ್ಲ. "ನಾನು ಖಿನ್ನನಾಗಿದ್ದೇನೆಯೇ ಎಂದು ನನಗೆ ಖಚಿತವಾಗಿ ತಿಳಿಯದು" ಎಂದು ನೀವು ಯಾವತ್ತಾದರೂ ಹೇಳಿದ್ದೀರಾ? ಇಲ್ಲ! ನಮ್ಮ ಖಿನ್ನತೆಯ ಬಗ್ಗೆ ಹಾಗೂ ನಮ್ಮ ಕೋಪದ ಬಗ್ಗೆ ನಮಗೆ ಬಹಳ ಖಚಿತವಾಗಿ ತಿಳಿದಿದೆ, ಆದರೆ ನಮ್ಮ ಪ್ರೀತಿಯ ಬಗ್ಗೆ ನಮಗೆ ಖಚಿತವಾಗಿ ತಿಳಿಯದು.

ನಾವು ಜನರಲ್ಲಿ, "ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳುತ್ತೇವೆ. ಆದರೆ ನಾವು ಯಾರೊಡನೆಯೂ, "ನೀನು ನಿಜವಾಗಿಯೂ ನನ್ನಲ್ಲಿ ಕೋಪಗೊಂಡಿರುವೆಯಾ?" ಎಂದು ಯಾವತ್ತೂ ಕೇಳುವುದಿಲ್ಲ.

ಹೀಗೆ, ಸಕಾರಾತ್ಮಕವಾಗಿರುವ ಯಾವುದನ್ನಾದರೂ ನಾವು ಸಂಶಯಿಸುತ್ತೇವೆ ಮತ್ತು ಅದಕ್ಕಾಗಿಯೇ ದೇವರೆಂದು ಕರೆಯಲ್ಪಡುವ ಒಂದು ಶಕ್ತಿಯ ಅಸ್ತಿತ್ವದ ಬಗ್ಗೆ ನಾವು ಸಂಶಯಿಸುತ್ತೇವೆ. ಸಂಶಯಪಡುವುದು ಬಹಳ ಸಾಮಾನ್ಯವಾದ ಒಂದು ಸಂಗತಿ. ಜನರ ಒಳ್ಳೆಯತನದ ಬಗ್ಗೆ ನೀವು ಸಂಶಯಪಡುತ್ತೀರಿ, ಅದು ಕೂಡಾ ಸಹಜ. ನಿಮ್ಮಲ್ಲಿರುವ ಒಳ್ಳೆಯತನದ ಬಗ್ಗೆ ಅಥವಾ ನಿಮಗಾಗುತ್ತಿರುವ ಏನಾದರೂ ಒಳ್ಳೆಯದ್ದರ ಬಗ್ಗೆ ಕೂಡಾ ನೀವು ಸಂಶಯಪಡುತ್ತೀರಿ, ಅಲ್ಲವೇ? ಈ ಸಂಶಯವೆಂದರೇನು ಎಂಬುದನ್ನು ಒಮ್ಮೆ ನಾವು ತಿಳಿದುಕೊಂಡರೆ, ಅತ್ಯಂತ ಉನ್ನತವಾದ ಹಾಗೂ ಬಲಯುತವಾದ ಒಂದು ಹಂತಕ್ಕೆ ನಾವು ಜಿಗಿಯುತ್ತೇವೆ ಮತ್ತು ಅದುವೇ ನಿಜವಾದ ವಿಶ್ವಾಸ.

ಪ್ರೀತಿ ಮತ್ತು ವಿಶಾಸವನ್ನು ನಿಮಗೆ ಬೇರ್ಪಡಿಸಲು ಸಾಧ್ಯವಿಲ್ಲ. "ನನಗೆ ನಿನ್ನಲ್ಲಿ ವಿಶ್ವಾಸವಿದೆ, ಆದರೆ ನಾನು ನಿನ್ನನ್ನು ಪ್ರೀತಿಸುವುದಿಲ್ಲ" ಎಂದು ನೀವು ಹೇಳಲಾರಿರಿ. ಹಾಗೆಯೇ, "ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನನಗೆ ನಿನ್ನಲ್ಲಿ ವಿಶ್ವಾಸವಿಲ್ಲ" ಎಂದು ಕೂಡಾ ನೀವು ಹೇಳಲಾರಿರಿ. ಪ್ರೀತಿ ಮತ್ತು ವಿಶ್ವಾಸಗಳು ಒಂದೇ ನಾಣ್ಯದ ಎರಡು ಮುಖಗಳು.
ಸಮೃದ್ಧತೆಯ ಕಡೆಗೆ ಬರೋಣ. ಒಬ್ಬನು ಸಮೃದ್ಧತೆಯನ್ನು ಅನುಭವಿಸುವುದು ಹೇಗೆ? ೩೦ ವರ್ಷಗಳ ಹಿಂದೆ ಒಬ್ಬ ಉದ್ಯೋಗಿಯು ನನಗೆ ಇದೇ ಪ್ರಶ್ನೆಯನ್ನು ಕೇಳಿದನು. ನಾನು ಅವನಲ್ಲಿ ಹೀಗೆಂದು ಕೇಳಿದೆ, "ನಿನಗೆ ಎಷ್ಟು ಸಾಲವಿದೆ?" ಅವನಂದನು, "ನನಗೆ ೨೨,೦೦೦ ರೂಪಾಯಿಗಳಷ್ಟು ಸಾಲವಿದೆ ಮತ್ತು ನನಗೆ ನಾನು ಬಡವನೆಂದು ಅನ್ನಿಸುತ್ತದೆ".
ನಾನು ಅವನಲ್ಲಿ ಕೇಳಿದೆ, "ನಿನ್ನ ಕಂಪೆನಿಗೆ ಎಷ್ಟು ಸಾಲವಿದೆಯೆಂದು ನಿನಗೆ ಗೊತ್ತಾ? ಅದಕ್ಕೆ ೨೨ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿಗೆ ಇರಲೂಬಹುದು!"

ನಾನು ಅವನಿಗಂದೆ, "ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ದೇಶವಾದ ಅಮೇರಿಕಾಕ್ಕೆ ಎಷ್ಟು ಸಾಲವಿದೆಯೆಂದು ನಿನಗೆ ಗೊತ್ತಾ? ೨೨,೦೦೦ ರೂಪಾಯಿಗಳ ಸಾಲದೊಂದಿಗೆ, ಪ್ರಪಂಚ ನಿನ್ನ ಮೇಲೆ ಬಿದ್ದಿದೆಯೆಂದು ನಿನಗನಿಸುತ್ತದೆ. ಆದ್ದರಿಂದ ಈಗ ನನಗೆ ಹೇಳು ಯಾರು ಶ್ರೀಮಂತರು ಮತ್ತು ಯಾರು ಬಡವರು? ೨೨ ಕೋಟಿ ರೂಪಾಯಿಗಳಷ್ಟು ಸಾಲವಿರುವವರೊಬ್ಬರೇ ಅಥವಾ ೨೨,೦೦೦ ರೂಪಾಯಿಗಳಷ್ಟು ಸಾಲವಿರುವವರೊಬ್ಬರೇ?ನಿನಗೆ ನಾಲ್ಕು ಜನರ ಸೀಮಿತವಾದೊಂದು ಜವಾಬ್ದಾರಿಯಿದೆ, ಬೇರೊಬ್ಬರಿಗೆ ೧೦,೦೦೦ ಜನರನ್ನು ನೋಡಿಕೊಳ್ಳುವ ಒಂದು ಜವಾಬ್ದಾರಿಯಿದೆ".

ಬಡತನವಿರುವುದು ಕೇವಲ ಮನಸ್ಸಿನಲ್ಲಿ ಮಾತ್ರ. ಉತ್ತರ ಭಾರತದಲ್ಲಿ, ದೀಪಾವಳಿಗಿಂತ ಒಂದು ದಿನ ಮೊದಲು ಅವರು "ಧಂತೇರಸ್" ಆಚರಿಸುತ್ತಾರೆ. ಧಂತೇರಸ್‌ನಂದು ಅವರು ತಮ್ಮೆಲ್ಲಾ ಸಂಪತ್ತನ್ನು ಹೊರತಂದು ದೇವರ ಮುಂದಿಡುತ್ತಾರೆ ಮತ್ತು ಸಮೃದ್ಧತೆಯನ್ನು ಅನುಭವಿಸುತ್ತಾರೆ. ಅವರು ಯಾಕೆ ಇದನ್ನು ಮಾಡುತ್ತಾರೆ? ಅದು ಯಾಕೆಂದರೆ, ನಾವು ಒಳಗಿನಿಂದ ಸಮೃದ್ಧತೆಯನ್ನು ಅನುಭವಿಸುವಾಗ ಅದೊಂದು ಸಕಾರಾತ್ಮಕ ಮನೋಭಾವವನ್ನು, ಶಕ್ತಿ ಮತ್ತು ಉತ್ಸಾಹವನ್ನು ಹೊರತರುತ್ತದೆ ಹಾಗೂ ನಿಮಗೆ ಇನ್ನೂ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ನೀವೊಂದು "ಕೊರತೆ"ಯ ಪ್ರಜ್ಞೆಯಲ್ಲಿರುವಾಗ, ನಾನು ನಿಮಗೆ ಹೇಳುತ್ತೇನೆ ಕೇಳಿ, ನೀವು ಬಿತ್ತಿದ ಆ ಬೀಜವು ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧತೆಯನ್ನು ಕಡಿಮೆಗೊಳಿಸುತ್ತದೆ. ಸಮೃದ್ಧತೆಯು ನಿಮ್ಮೊಳಗೆ ಮೊದಲಿಗೆ ಒಂದು ಬೀಜವಾಗಿ ಆರಂಭವಾಗುತ್ತದೆ, ಆದ್ದರಿಂದ ಸಮೃದ್ಧತೆಯನ್ನು ಅನುಭವಿಸಿ. ನಿಮ್ಮೊಳಗೆ ಸಮೃದ್ಧತೆಯ ಬೀಜವಿರುವಾಗ, ಜಾದೂ ನಡೆಯುತ್ತದೆ!

ಹಿಂದಿನ ಕಾಲದಲ್ಲಿ, ಮಕ್ಕಳು ಕೆಲವರು ಸಿಹಿತಿಂಡಿಯನ್ನು ಕೇಳಿದರೆ, ಅಜ್ಜಿಯಂದಿರು ಅದು ಇಲ್ಲವೆಂದು ಯಾವತ್ತೂ ಹೇಳುತ್ತಿರಲಿಲ್ಲ. ಅವರು ಹೀಗೆಂದು ಹೇಳುತ್ತಿದ್ದರು, "ಬೇಕಾದಷ್ಟು ಸಿಹಿತಿಂಡಿಗಳಿವೆ, ಆದರೆ ನಾವು ಅಂಗಡಿಗೆ ಹೋಗಿ ಸ್ವಲ್ಪ ಖರೀದಿಸಬೇಕಷ್ಟೆ". ಇಲ್ಲಿನ ಪರಿಕಲ್ಪನೆ ಏನಾಗಿತ್ತೆಂದರೆ, ಅಲ್ಲಿ ಕೆಲವು ನಿರ್ದಿಷ್ಟ ದೇವತೆಗಳು ಸುತ್ತಾಡುತ್ತಿರಬಹುದು ಮತ್ತು ನೀವು, "ನನ್ನಲ್ಲಿ ಇದು ಇಲ್ಲ" ಎಂದು ಹೇಳಿದರೆ ಅವರು, "ತಥಾಸ್ತು" (ಅಂದರೆ, ಹಾಗೇ ಆಗಲಿ) ಎಂದು ಹೇಳಬಹುದು! ಈ ದೇವತೆಗಳು ಯಾವಾಗ ಸುತ್ತಾಡುತ್ತಿರಬಹುದು ಎಂಬುದು ನಿಮಗೆ ಗೊತ್ತಿಲ್ಲ. ಆದ್ದರಿಂದ ಯಾವಾಗಲೂ ಒಂದು ಸಕಾರಾತ್ಮಕ ಮನೋಭಾವವನ್ನಿಟ್ಟುಕೊಳ್ಳಲು ಅವರು ನಮಗೆ ಹೇಳುತ್ತಿದ್ದರು. ಇದೊಂದು ಸುಂದರವಾದುದು. ಎಲ್ಲಾ ಸಮಯದಲ್ಲೂ ನಾವು ಒಂದು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು.

ಪ್ರಾಣವು ಹೆಚ್ಚಾಗುವಾಗ, ಸಂಶಯಗಳು ಮಾಯವಾಗುತ್ತವೆ, ಪ್ರಶ್ನೆಗಳು ಮಾಯವಾಗುತ್ತವೆ ಮತ್ತು ಸಮಸ್ಯೆಗಳು ಮಾಯವಾಗುತ್ತವೆ. ಪ್ರಾಣವು ಕಡಿಮೆಯಿರುವಾಗ, ನಕಾರಾತ್ಮಕತೆಯು ಬರುತ್ತದೆ.

ನೀವು ಇವತ್ತಿನ ರಾಜಕಾರಣಿಗಳನ್ನು ದೂಷಿಸುತ್ತೀರಿ. ಕಾಲದ ಚರಿತ್ರೆಯಲ್ಲಿ ಅವರು ಇದಕ್ಕಿಂತ ಉತ್ತಮ ಯಾವಾಗ ಇದ್ದರೆಂದು ನನಗೆ ಹೇಳಿ ನೋಡೋಣ? ಮಾನವಕುಲದ ಚರಿತ್ರೆಯಲ್ಲಿ ಯಾವುದೇ ಹಿಂಸೆಯಿದ್ದಿರದ, ಯಾವುದೇ ದುರ್ಯೋಧನ ಅಥವಾ ಮರೀಚಿ ಅಥವಾ ರಾವಣ ಅಥವಾ ಕುಂಭಕರ್ಣ ಇದ್ದಿರದ ಒಂದು ಕಾಲವನ್ನು ನನಗೆ ಹೇಳಿ. ಹಿರಣ್ಯಕಶ್ಯಪು ಮತ್ತು ಹಿರಣ್ಯಾಕ್ಷ ಇದ್ದಿರಲಿಲ್ಲವೇ? ವಾಸ್ತವವಾಗಿ, ಪ್ರಾಚೀನ ಕಾಲದಲ್ಲಿ, ನೀವು "ಹರಿ ಓಂ" ಎಂದು ಹೇಳಿದರೆ, ಹಿರಣ್ಯಕಶ್ಯಪು ನಿಮ್ಮ ಮನೆಗೆ ಬಂದು ನಿಮ್ಮನ್ನು ಹಿಡಿಯುತ್ತಿದ್ದ. ಕನಿಷ್ಠಪಕ್ಷ ಈ ಯುಗದಲ್ಲಿ ಇದು ಉತ್ತಮವಾಗಿದೆ, ನಮ್ಮಲ್ಲಿ ಅಂತಹ ರಾಕ್ಷಸರಿಲ್ಲ.

ನಾವು ನಕಾರಾತ್ಮಕತೆಯ ಕಡೆಗೆ ಗಮನ ಕೊಡುವಾಗ ನಾವದಕ್ಕೆ ನಮ್ಮ ಮನಸ್ಸಿನಲ್ಲಿ ಆಶ್ರಯ ಕೊಡುತ್ತೇವೆ ಮತ್ತು ಚಡಪಡಿಸುತ್ತೇವೆ. ನೀವದನ್ನು ಇನ್ನೊಂದು ಕೋನದಿಂದ ನೋಡಬೇಕೆಂದು ನಾನು ಬಯಸುತ್ತೇನೆ: ನಕಾರಾತ್ಮಕ ಶಕ್ತಿಗಳಿವೆ, ಆದರೆ ಅವುಗಳಿರುವುದು ಒಳ್ಳೆಯ ಜನರನ್ನು ಒಂದುಗೂಡಿಸಲು. ಪ್ಯಾರಿಸ್‌ನಲ್ಲಿ ನಡೆದುದು ಒಂದು ಘೋರ ಅಪರಾಧ, ಆದರೆ ಅದೇನು ಮಾಡಿತು? ಅದು ಇಡೀ ದೇಶವನ್ನು ಒಗ್ಗೂಡಿಸಿತು. ಹತ್ತು ಲಕ್ಷ ಜನರು ಒಟ್ಟುಸೇರಿ ಒಳ್ಳೆಯತನಕ್ಕಾಗಿ ಎದ್ದುನಿಂತರು; ಏಕತೆಗಾಗಿ ನಡೆದರು. ಒಳ್ಳೆಯದು ಯಾವಾಗಲೂ ಜಯಿಸುತ್ತದೆ! ಅದು ನಮ್ಮ ದೇಶದ ಆದರ್ಶವಾಕ್ಯವೂ ಆಗಿದೆ: "ಸತ್ಯಮೇವ ಜಯತೆ" (ಸತ್ಯವೊಂದೇ ಜಯಿಸುವುದು). ಅದನ್ನು ನಾವು ಮರೆಯದಿರೋಣ! ಅದನ್ನು ನಾವು ನಮಗೆ ನೆನಪಿಸುತ್ತಾ ಇರಬೇಕು ಮತ್ತು ಇಲ್ಲಿರುವ ನಮ್ಮಲ್ಲಿ ಪ್ರತಿಯೊಬ್ಬರೂ ನೂರು ಅಥವಾ ಹೆಚ್ಚು ಜನರನ್ನು ತಲುಪಿ ಆನಂದದ ಒಂದು ಅಲೆಯನ್ನು ಸೃಷ್ಟಿಸಬೇಕು.

ನೀವು ಯಾರಲ್ಲಾದರೂ, ಅವರು ಮಾಡುತ್ತಿರುವುದನ್ನು ಅವರು ಯಾಕೆ ಮಾಡುತ್ತಿರುವರೆಂದು ಕೇಳಿದರೆ, ಅವರು ಏನು ಹೇಳಬಹುದು? ಸಂತೋಷಕ್ಕಾಗಿ, ಅಲ್ಲವೇ? ಈ ಭೂಮಿಯ ಮೇಲಿರುವ ಯಾರೇ ಆದರೂ ಏನನ್ನಾದರೂ ಮಾಡುವುದು ಸಂತೋಷಕ್ಕಾಗಿ, ಆದರೆ ನಿಜಕ್ಕೂ ಅವರಿಗೆ ಅದು ಸಿಗುತ್ತದೆಯೇ? ಬಹಳ ಕಡಿಮೆ ಜನರಿಗೆ ಅದು ಸಿಗುತ್ತದೆ. ಆದ್ದರಿಂದ, ನಮ್ಮ ಕರ್ತವ್ಯವೆಂದರೆ ನಿಜವಾದ, ದೀರ್ಘಕಾಲ ಉಳಿಯುವಂತಹ ಸಂತೋಷವನ್ನು ಮತ್ತು ಒಂದು ಅಳಿಸಲಾಗದ ಮುಗುಳ್ನಗೆಯನ್ನು ಕಂಡುಕೊಳ್ಳುವುದು, ಹಾಗೂ ಅದು ಆಧ್ಯಾತ್ಮವೆಂದು ಕರೆಯಲ್ಪಡುತ್ತದೆ. ಇದಕ್ಕೆ ದಾರಿಯೆಂದರೆ ಧ್ಯಾನದ ಮೂಲಕವಾಗಿದೆ.

ಯಾವುದು ಅಂತರ್ಜ್ಞಾನವನ್ನು ತರುವುದೋ, ಯಾವುದು ನಿಮ್ಮ ಬುದ್ಧಿವಂತಿಕೆಯನ್ನು ಎತ್ತರಕ್ಕೇರಿಸುವುದೋ ಮತ್ತು ಯಾವುದು ನಿಮ್ಮೊಳಗೆ ನವೀನತೆಯನ್ನು ತರುವುದೋ ಅದುವೇ ಧ್ಯಾನವಾಗಿದೆ. ಇದುವೇ ಇಂದಿನ ಸಮಾಜಕ್ಕೆ ಅತ್ಯಂತ ಆವಶ್ಯಕವಾದುದು. ಒತ್ತಡವೆಂದರೆ, ಮಾಡಲು ಅತಿಯಾದ ಕೆಲಸವಿರುವುದು, ಅತೀ ಕಡಿಮೆ ಸಮಯವಿರುವುದು ಮತ್ತು ಶಕ್ತಿಯಿಲ್ಲದಿರುವುದು. ಒತ್ತಡವು ನಮ್ಮ ಅಂತರ್ಜ್ಞಾನವನ್ನು ನಿಸ್ತೇಜಗೊಳಿಸುತ್ತದೆ, ನಮ್ಮ ಹೊಸತನ್ನು ಆವಿಷ್ಕರಿಸುವ ಉತ್ಸಾಹವನ್ನು ಮಸುಕುಗೊಳಿಸುತ್ತದೆ ಮತ್ತು ನಮ್ಮ ಬುದ್ಧಿವಂತಿಕೆಯನ್ನು ನಾಶಪಡಿಸುತ್ತದೆ. ಎಲ್ಲಾ ಮೂರರ (ಬುದ್ಧಿವಂತಿಕೆ, ನವೀನತೆ ಮತ್ತು ಅಂತರ್ಜ್ಞಾನ)ಶತ್ರುವಾಗಿದೆ ಒತ್ತಡ ಮತ್ತು ಅಪನಂಬಿಕೆ. ನಾವು ಇವುಗಳನ್ನು ತೊಡೆದುಹಾಕಬೇಕಾಗಿದೆ ಮತ್ತು ಹಾಗೆ ಮಾಡಲು ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಾಗ, ಒತ್ತಡವು ಇಲ್ಲದಾಗುತ್ತದೆ ಮತ್ತು ಅಂತರ್ಜ್ಞಾನವು ಕಾಣಿಸಿಕೊಳ್ಳುತ್ತದೆ.

ನಾನು ಯಾವತ್ತೂ ಚಿಕ್ಕ ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಆದರೆ ಇತ್ತೀಚೆಗೆ, ಮಕ್ಕಳಿಗಾಗಿ ಯಾಕೆ ನಾವು ಏನನ್ನಾದರೂ ಮಾಡಬಾರದೆಂದು ನಾನು ಯೋಚಿಸಿದೆ. ಹೀಗಾಗಿ ನಾವು ಮಕ್ಕಳಿಗಾಗಿ ಒಂದು ಅಂತರ್ಜ್ಞಾನದ ಶಿಬಿರವನ್ನು ನಡೆಸಿದೆವು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓದಲು ಈ ಮಕ್ಕಳಿಗೆ ಸಾಧ್ಯವಾಗುತ್ತದೆ. ಈ ಜ್ಞಾನವು ಶಿಕ್ಷಣದಲ್ಲಿ ಕ್ರಾಂತಿಯನ್ನು ತರಲಿದೆ. ಇನ್ನುಮುಂದೆ ನಿಮ್ಮ ಮಕ್ಕಳನ್ನು ಮೂರ್ಖರನ್ನಾಗಿಸಲು ನಿಮಗೆ ಸಾಧ್ಯವಿಲ್ಲ! ನೀವು ಮಕ್ಕಳಿಂದ ವಸ್ತುಗಳನ್ನು ಬಚ್ಚಿಡಲಾರಿರಿ, ಅದನ್ನು ನೀವು ಎಲ್ಲಿ ಬಚ್ಚಿಟ್ಟಿದ್ದೀರೆಂದು ಅವರಿಗೆ ಸರಿಯಾಗಿ ಗೊತ್ತಿರುತ್ತದೆ.

ಮೊನ್ನೆಯಷ್ಟೇ ಒಬ್ಬರು ಸಜ್ಜನರು, ತಾವೊಂದು ಪ್ರಧಾನವಾದ ಕಡತವನ್ನು ಕಳೆದುಕೊಂಡರೆಂದೂ, ಅದಕ್ಕಾಗಿ ಅವರು ಎಲ್ಲೆಡೆಯೂ ಹುಡುಕುತ್ತಿರುವರೆಂದೂ ನನಗೆ ಸಂದೇಶ ಕಳುಹಿಸಿದರು. ಅವರ ಮಗಳು ಅವರಲ್ಲಿ, "ಅಪ್ಪಾ, ನೀವು ಯಾಕೆ ಅದನ್ನು ಅಲ್ಲಿ ಇಲ್ಲಿ ಹುಡುಕುತ್ತಿದ್ದೀರಾ? ಅದು ನಿಮ್ಮ ಹಾಸಿಗೆಯ ಕೆಳಗಿರುವ ಪೆಟ್ಟಿಗೆಯೊಳಗಿದೆ" ಎಂದು ಹೇಳಿದಳು. ಮಕ್ಕಳು ಎಷ್ಟು ಅಂತರ್ಜ್ಞಾನಿಗಳಾಗಿದ್ದಾರೆಂದರೆ, ಅವರು ಗೋಡೆಗಳಾಚೆ ಇರುವುದನ್ನು ನೋಡಬಲ್ಲರು. ಪಕ್ಕದ ಕೋಣೆಯಲ್ಲಿ ನೀವು ಏನನ್ನಾದರೂ ಇಟ್ಟರೆ ಅದೇನೆಂದು ಅವರು ಹೇಳಬಲ್ಲರು.

ಬರೋಡಾದಲ್ಲಿ ಸುಮಾರು ೨೦೦ ಅಂಧ ಮಕ್ಕಳಿಗೆ ನಾವು ಒಂದು ಶಿಬಿರವನ್ನು ನಡೆಸಿದೆವು ಮತ್ತು ಅವರು ನೋಡಲು ಸಮರ್ಥರಾದರು. ಇದು ಮನಸ್ಸಿನ ಕಣ್ಣುಗಳ ಮೂಲಕ ಸಾಧ್ಯವಾಗುತ್ತದೆ. ಇದು ಅದ್ಭುತವಾದುದು! ಹೆಚ್ಚಿನ ಮಾಹಿತಿ ಮತ್ತು ವಿಡಿಯೋಗಳು ನಿಮಗೆ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಸಿಗಬಹುದು. ದೊಡ್ಡವರು ಕೂಡಾ ಈ ಅಂತರ್ಜ್ಞಾನದ ಶಕ್ತಿಯನ್ನು ಬೆಳೆಸಿಕೊಳ್ಳಬಹುದು, ಆದರೆ ಅದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಯಾಕೆ ಗೊತ್ತಾ ನಿಮಗೆ? ಅದು ಯಾಕೆಂದರೆ ದೊಡ್ಡವರಾಗಿ ನಾವು ರಾಗ ದ್ವೇಷಗಳನ್ನು ಹೊಂದಿದ್ದೇವೆ. ನಾವು ಇದನ್ನು ಇಷ್ಟಪಡುತ್ತೇವೆ, ನಾವು ಅದನ್ನು ಇಷ್ಟಪಡುವುದಿಲ್ಲ, ನಾವು ಈ ಜನರನ್ನು ಇಷ್ಟಪಡುತ್ತೇವೆ, ನಾವು ಈ ಜನರನ್ನು ಇಷ್ಟಪಡುವುದಿಲ್ಲ; ನಮ್ಮ ಮನಸ್ಸಿನಲ್ಲಿ ಅಡಚಣೆಯನ್ನು ಮಾಡುವ, ಎಲ್ಲಾ ರೀತಿಯ ಪೂರ್ವಾಗ್ರಹಗಳು ನಮ್ಮಲ್ಲಿವೆ. ಮೊದಲಿಗೆ ನಾವು ಅದರಿಂದ ಮುಕ್ತರಾಗಬೇಕು.

ಪೂರ್ವಾಗ್ರಹದಿಂದ ಮುಕ್ತವಾದ ಒಂದು ಬುದ್ಧಿಯು ಒಂದು ನಿಜವಾದ ಬುದ್ಧಿವಂತಿಕೆಯಾಗಿದೆ. ಬುದ್ಧಿವಂತರೆಂದು ಕರೆಯಲ್ಪಡುವ ಇಂದಿನ ಜನರನ್ನು ನಾನು ಬುದ್ಧಿವಂತರೆಂದು ಪರಿಗಣಿಸುವುದಿಲ್ಲ ಯಾಕೆಂದರೆ ಅವರು ಪೂರ್ವಾಗ್ರಹಿಗಳಾಗಿದ್ದಾರೆ. ನಿಮ್ಮಲ್ಲಿ ಪೂರ್ವಾಗ್ರಹವಿದ್ದರೆ ಅದರರ್ಥ ನಿಮ್ಮ ಬುದ್ಧಿವಂತಿಕೆಯು ಮುಚ್ಚಲ್ಪಟ್ಟಿದೆಯೆಂದು. ನಿಮ್ಮಲ್ಲಿ ಅದು ಇರಲೂಬಹುದು, ಆದರೆ ನೀವದನ್ನು ಉಪಯೋಗಿಸುವುದಿಲ್ಲ.

ಪ್ರಶ್ನೆ: ನೀವು ಸಂಸ್ಕೃತ ಮಾತನಾಡುವುದನ್ನು ಇನ್ನೂ ಸ್ವಲ್ಪ ಹೆಚ್ಚು ಕೇಳಲು ನಾನು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನೀನು ನನ್ನ ಮೌನವನ್ನು ಹೆಚ್ಚು ಕೇಳಲು ಕಲಿಯುವುದು ಒಳ್ಳೆಯದು, ನಾನು ಅದರಲ್ಲಿ ನಿಪುಣ. ಅದರಿಂದಲೇ ನಾನು ಯಾವುದೇ ಭಾಷೆಯಲ್ಲೂ ನಿಪುಣನಲ್ಲ.

ಶುಕ್ರವಾರ, ಜನವರಿ 29, 2016

ನಿಮ್ಮ ಒಳ್ಳೆಯ ಗುಣವು ಪ್ರಕಟವಾಗಲಿ

೨೯ ಜನವರಿ ೨೦೧೬
ಬೆಂಗಳೂರು

ಪ್ರಶ್ನೆ: ಜಾಗತಿಕ ಶಾಂತಿಯು ವೈಯಕ್ತಿಕ ಶಾಂತಿಯನ್ನು ಅವಲಂಬಿಸಿದೆಯೇ?

ಶ್ರೀ ಶ್ರೀ ರವಿ ಶಂಕರ್: ವೈಯಕ್ತಿಕ ಶಾಂತಿಯಿಲ್ಲದೆ ಜಾಗತಿಕ ಶಾಂತಿಯನ್ನು ಹೊಂದುವುದು ಅಸಾಧ್ಯ. ವೈಯಕ್ತಿಕ ಸಂತೋಷವು ಸಾಮೂಹಿಕ ಸಂತೋಷವನ್ನು ತರುತ್ತದೆ. ವ್ಯಕ್ತಿಯನ್ನು ಹೊರತುಪಡಿಸಿದ ಸಮಾಜವಿರುವುದು ಅಸಾಧ್ಯ.

ಶಾಂತಿಯು ವ್ಯಕ್ತಿಯ ಒಳಗಿರುತ್ತದೆ, ಒಬ್ಬನ ಮನಸ್ಸಿನಲ್ಲಿ ಮತ್ತು ಒಬ್ಬನ ಹೃದಯದಲ್ಲಿ. ಒಬ್ಬ ವ್ಯಕ್ತಿಯು ಶಾಂತಿಯುತವಾಗಿಲ್ಲದಿದ್ದರೆ ಆ ಕುಟುಂಬದಲ್ಲಿ ಶಾಂತಿಯಿರಲು ಅಸಾಧ್ಯ ಮತ್ತು ಕುಟುಂಬಗಳು ಸಾಮರಸ್ಯದಲ್ಲಿರದಿದ್ದರೆ ಅಥವಾ ಶಾಂತಿಯುತವಾಗಿರದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ. ಪ್ರತಿಯೊಂದು ಕುಟುಂಬದಲ್ಲಿ ಶಾಂತಿಯಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ, ಮತ್ತು ಸಮಾಜಗಳು ಪ್ರಪಂಚವನ್ನು ನಿರ್ಮಿಸುತ್ತವೆ. ಆದ್ದರಿಂದ ಜಾಗತಿಕ ಶಾಂತಿಯ ಮೂಲ ಘಟಕವು ವೈಯಕ್ತಿಕ ಶಾಂತಿಯಾಗಿದೆ. ವ್ಯಕ್ತಿಗೆ ಶಾಂತಿಯನ್ನು ತರುವುದು ಜ್ಞಾನವಾಗಿದೆ. ಎಲ್ಲಾ ಸೌಲಭ್ಯಗಳನ್ನು, ಉಪಕರಣಗಳನ್ನು, ಆಹಾರವನ್ನು, ಮನೋರಂಜನೆಯನ್ನು, ಸೌಕರ್ಯಗಳನ್ನು ಹೊಂದಿರುವ ಹೊರತಾಗಿಯೂ ಜ್ಞಾನವಿಲ್ಲದೇ ಇದ್ದರೆ ಒಬ್ಬ ವ್ಯಕ್ತಿಯಲ್ಲಿ ಯಾವುದೇ ಶಾಂತಿಯಿರುವುದಿಲ್ಲ. ಇವುಗಳೆಲ್ಲಾ ನಿಜವಾಗಿಯೂ ಶಾಂತಿಯನ್ನು ತರುವುದಿಲ್ಲ. ಶಾಂತಿಯನ್ನು ತರುವುದು ಯಾವುದೆಂದರೆ ವಿಶಾಲ ದೃಷ್ಟಿಕೋನ ಮತ್ತು ಜೀವನವನ್ನು ವ್ಯಾಪಕವಾದ ವಿಶ್ವದ ಹಿನ್ನೆಲೆಯಲ್ಲಿ ನೋಡುವ ಜ್ಞಾನ.

ತಮಾಷೆಯ ವಿಷಯವೆಂದರೆ, ಭೂಮಿಯ ಮೇಲಿರುವ ಜನರಲ್ಲಿ ಬಹಳ ಕಡಿಮೆ ಶೇಕಡಾದಷ್ಟು ಜನರು ಕೂಡಾ ನಿಜಕ್ಕೂ ಶಾಂತವಾಗಿದ್ದರೆ ಅವರು ಶಾಂತಿಸ್ಥಾಪಕರಾಗುತ್ತಾರೆ. ಶೀತ ಅಥವಾ ಕೆಮ್ಮಿನಂತಹ ಯಾವುದೇ ಸಾಂಕ್ರಾಮಿಕ ರೋಗದಷ್ಟೇ ಸಾಂಕ್ರಾಮಿಕವಾಗಿದೆ ಶಾಂತಿ. ಶಾಂತಿಯು ವೈರಲ್ ಆಗಿದೆ! ನಿಜವಾದ ಶಾಂತಿ ಮತ್ತು ಜ್ಞಾನವು ಸಾಂಕ್ರಾಮಿಕವಾಗಿದೆಯೆಂದು ನಾನು ಹೇಳುತ್ತೇನೆ.

ಪ್ರಶ್ನೆ: ಪ್ರಜ್ಞೆಯನ್ನು ಉನ್ನತಿಗೇರಿಸುವಲ್ಲಿ ಸಂಗೀತವು ಯಾವ ಪಾತ್ರವನ್ನು ವಹಿಸಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಸಂಗೀತವು ಸಾಮರಸ್ಯಪೂರ್ಣವಾದ ಧ್ವನಿಯಾಗಿದೆ. ಒಳಗಡೆ ಸಾಮರಸ್ಯವಿದ್ದಲ್ಲಿ ಆಗ ಸಂಗೀತವು ಒಂದು ಹೊರೆಯಾಗಿದೆ, ಆದರೆ ಒಳಗಡೆ ಸಾಮರಸ್ಯವಿಲ್ಲದಿರುವಾಗ ಖಂಡಿತವಾಗಿಯೂ ಸಂಗೀತದ ಬಾಹ್ಯ ಸಾಮರಸ್ಯವು ಆಂತರಿಕ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಸೃಷ್ಟಿಸಬಲ್ಲದು.

ಒಬ್ಬ ಧ್ಯಾನ ಮಾಡುವವನಿಗೆ, ಒಬ್ಬ ಯೋಗಿಗೆ ಸಂಗೀತವು ಸ್ವಲ್ಪ ಕರ್ಕಶವಾಗಿ ಅನಿಸುತ್ತದೆ, ಯಾಕೆಂದರೆ ಅವನು ಅಥವಾ ಅವಳು ಸಂಗೀತದ ಸಮರಸಕ್ಕಿಂತ ಹೆಚ್ಚು ಉತ್ತಮವಾದ ಒಂದರ ರುಚಿ ನೋಡಿರುತ್ತಾನೆ ಅಥವಾ ನೋಡಿರುತ್ತಾಳೆ - ಅದುವೇ ಮೌನದ ತಾಳ. ಅದನ್ನೇ ಪ್ರಾಚೀನ ಯೋಗಿಗಳು "ಒಂದು ಕೈಯ ಚಪ್ಪಾಳೆ" ಎಂದು ಕರೆದುದು. ಬ್ರಹ್ಮಾಂಡದ ಅನುಕಂಪನ, ಆದಿ ಧ್ವನಿ - ಈ ಎಲ್ಲಾ ಹೆಸರುಗಳನ್ನು ನೀಡಲಾಗಿರುವುದು ಆಳದಲ್ಲಿರುವ ಆ ಸಮರಸತೆಗೆ; ಮೂಲಭೂತವಾಗಿ ಅದು ಮೌನವೇ ಆಗಿದೆ.

ಪ್ರಶ್ನೆ: ಜೀವನವು ಮೊದಲಿಗಿಂತ ಅಷ್ಟೊಂದು ವ್ಯತ್ಯಸ್ತವಾಗಿರುವುದನ್ನು ಪರಿಗಣಿಸಿದಾಗ, ಇವತ್ತು ಸಂಸ್ಕೃತಿಯು ಎಷ್ಟು ಪ್ರಸ್ತುತ?

ಶ್ರೀ ಶ್ರೀ ರವಿ ಶಂಕರ್: ಈ ವಿಷಯಗಳನ್ನು ಯಾವತ್ತೂ ನೀವು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲಾ ರೀತಿಯ ಪರಿಸ್ಥಿತಿಗಳಿರುತ್ತವೆ, ಎಲ್ಲಾ ರೀತಿಯ ಜನರಿರುತ್ತಾರೆ, ಎಲ್ಲಾ ರೀತಿಯ ಸಂಸ್ಕೃತಿಗಳಿರುತ್ತವೆ. ಸಂಸ್ಕೃತಿಯಿಲ್ಲದೆ ಜೀವಿಸಲು ಜನರಿಗೆ ಸಾಧ್ಯವಿಲ್ಲ. ಸಂಸ್ಕೃತಿ ಬದಲಾಗಲೂಬಹುದು, ಆದರೆ ಒಂದು ಸಂಸ್ಕೃತಿಯಿಲ್ಲದೆ ಒಂದು ಸಮಾಜದಲ್ಲಿ ಬದುಕಲು ನಿಮಗೆ ಸಾಧ್ಯವಿಲ್ಲ. "ನಮ್ಮದು ಸಂಸ್ಕೃತಿಯಿಲ್ಲದ ಒಂದು ಸಮಾಜ" ಎಂದು ಯಾವುದಾದರೂ ಸಮಾಜವು ಹೇಳಿಕೊಂಡರೆ, ನಾನು ನಿಮಗೆ ಹೇಳುವುದೇನೆಂದರೆ, ಅದುವೇ ಒಂದು ಸಂಸ್ಕೃತಿಯೆಂದು. ಮತ್ತು ಪ್ರಪಂಚದಲ್ಲಿನ ಎಲ್ಲಾ ವಿವಿಧ ಸಂಸ್ಕೃತಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಯಾಕೆಂದರೆ, ಅವುಗಳು ಪ್ರಪಂಚದ ಪರಂಪರೆಯಾಗಿದೆ.

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?

ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

ಪ್ರಶ್ನೆ: ಜೀವನದಲ್ಲಿ ನಾವೊಂದು ಒಳ್ಳೆಯ ಹಾಸ್ಯಪ್ರಜ್ಞೆಯನ್ನು ಹೊಂದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನಿದರ ಬಗ್ಗೆ ಮರೆತುಬಿಡಬೇಕೆಂದು ನನಗನಿಸುತ್ತದೆ. ಹಾಸ್ಯವಿರಬೇಕೆಂದು ಬಯಸುವುದೇ ಹಾಸ್ಯವಿರುವುದಕ್ಕೆ ಒಂದು ತಡೆಯಾಗಿದೆ. ಅದು ಹೇಗೆಂದರೆ ಒಬ್ಬರು, "ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ" ಎಂದು ಹೇಳುವಂತೆ. ನಿದ್ರಿಸಲು ಬಯಸುವ ಆ ಜ್ವರತೆಯೇ ಒಂದು ತಡೆಯಾಗುತ್ತದೆ. ನೀವೊಂದು ಚಿಕ್ಕ ನಿದ್ರೆ ಮಾಡುವ ಆತುರದಲ್ಲಿದ್ದರೆ, ಅದು ಸಾಧ್ಯವಾಗದು. ಅದೇ ರೀತಿ, "ನಾನು ಹಾಸ್ಯಮಯವಾಗಿರಲು ಬಯಸುತ್ತೇನೆ" ಎಂದು ಯೋಚಿಸುವುದು; ಅದು ಸಾಧ್ಯವಾಗದು! ಸುಮ್ಮನೆ ಆರಾಮವಾಗಿರಿ ಮತ್ತು ಇತರರಿಗೆ ನಿಮ್ಮ ಮೇಲಿರುವ ಅಭಿಪ್ರಾಯದ ಬಗ್ಗೆ ಚಿಂತಿಸಬೇಡಿ. ಸೂತ್ರವೇನೆಂದರೆ, ನಿಮ್ಮ ಬಗ್ಗೆ ಇತರರು ಏನನ್ನು ಯೋಚಿಸುವರು ಎಂಬುದರ ಬಗ್ಗೆ ಚಿಂತಿಸಬೇಡಿ.

ಪ್ರಶ್ನೆ: ಬ್ರಹ್ಮಚರ್ಯವೆಂದರೇನು? ಹಲವಾರು ವಿಚಲನೆಗಳಿರುವಾಗ ನಾನು ಬ್ರಹ್ಮಚರ್ಯವನ್ನು ಅನುಸರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: "ಬ್ರಹ್ಮ" ಅಂದರೆ ಅನಂತತೆ. "ಚರ್ಯ" ಅಂದರೆ ಅನಂತತೆಯಲ್ಲಿ ಚಲಿಸುವುದು. ಅಂದರೆ, ಸಂಪೂರ್ಣ (ಅನಂತತೆ)ದ ಮೇಲೆ ಕೇಂದ್ರೀಕೃತವಾದ ಮನಸ್ಸಿನ ಸ್ಥಿತಿ - ಅಂತಹ ಒಂದು ಮನಸ್ಸಿನಲ್ಲಿ ಯಾವುದೇ ಸ್ವಾಧೀನತೆಯ ಭಾವವಿಲ್ಲ, ಯಾವುದೇ ಕಾಮುಕತೆಯಿಲ್ಲ, ಯಾವುದೇ ಲೋಭವಿಲ್ಲ; ಈ ನಕಾರಾತ್ಮಕ ಧಾರಣೆಗಳಲ್ಲಿ ಯಾವುದೂ ಮನಸ್ಸನ್ನು ಮಸುಕಾಗಿಸುವುದಿಲ್ಲ. ಇದುವೇ ಅದರ ಸರಿಯಾದ ಅರ್ಥ. ಇಂದ್ರಿಯ ನಿಗ್ರಹವು ಇದರ ಒಂದು ಫಲಿತಾಂಶವಾಗಿದೆ; ಅದು ಇದರ ಒಂದು ಭಾಗವಾಗಿದೆ.

ನೋಡಿ, ನಿಮಗೊಂದು ಪರೀಕ್ಷೆ ಅಥವಾ ಏನಾದರೂ ಮುಖ್ಯವಾದ ಕಾರ್ಯ ಮಾಡಲಿರುವಾಗ; ನಿಮ್ಮ ಮನಸ್ಸು ಅದರಲ್ಲಿರುವಾಗ, ಆಗ ಮನಸ್ಸು ಶರೀರದ ಯಾವುದೇ ಅಂಗದ ಕಡೆಗೂ ಹೋಗುವುದಿಲ್ಲ ಅಥವಾ ಯಾವುದಾದರೂ ಆಕರ್ಷಣೆ ಅಥವಾ ಲೈಂಗಿಕತೆಯ ಕಡೆಗೆ ಗಮನ ನೀಡುವುದಿಲ್ಲ. ನೀವು ವ್ಯಸ್ತರಾಗಿರುತ್ತೀರಿ. ನಿಮ್ಮ ಮನಸ್ಸು ಒಂದು ದೊಡ್ಡದರ ಕಡೆಗೆ ಸಾಗುತ್ತಿರುತ್ತದೆ. ಅದಲ್ಲವೇ ಒಬ್ಬರ ಅನುಭವ? ಆಗ ನೀವು ಬ್ರಹ್ಮಚರ್ಯದ ಕ್ಷಣಗಳನ್ನು ಅನುಭವಿಸುತ್ತೀರಿ. ನೀವು ಯಾವುದರಲ್ಲಾದರೂ ತೊಡಗಿದ್ದರೆ, ಅಥವಾ ನೀವು ಆಳವಾದ ಪ್ರೇಮದಲ್ಲಿರುವಾಗ ಕೂಡಾ ಇದು ತನ್ನಿಂತಾನೇ ಆಗುತ್ತದೆ. ಆದ್ದರಿಂದ ಬ್ರಹ್ಮಚರ್ಯವು ಒಂದು ಆಗುವಿಕೆಯಾಗಿದೆ, ಅದುವೇ ಒಂದು ಅಭ್ಯಾಸವಲ್ಲ. ನಿಮ್ಮ ಪ್ರಜ್ಞೆಯು ವಿಸ್ತರಿಸುವಾಗ ಆಗುವುದು ಅದು.

ಪ್ರಶ್ನೆ: ಋಗ್ವೇದದಲ್ಲಿ ಅಗ್ನಿ ಸೂಕ್ತವು ಹೀಗೆಂದು ಹೇಳುತ್ತದೆ, "ಅಗ್ನಿಯು ನಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ಯಬೇಕು". ಇದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಅಗ್ನಿ ಅಂದರೆ ಸಂಪೂರ್ಣ ವಿಶ್ವವನ್ನು ಆವರಿಸಿರುವ ಆ ಪ್ರಜ್ಞೆ, ಆ ಶಕ್ತಿ - ಆ ಪ್ರಜ್ಞೆಯಿಂದ ನೀವು ಮಾಡಲ್ಪಟ್ಟಿದ್ದೀರಿ, ಅದರಿಂದಲೇ ಎಲ್ಲವೂ ಮಾಡಲ್ಪಟ್ಟಿದೆ. ಹಲವು ಸಲ ಜನರು, "ಆತ್ಮದಲ್ಲಿರುವ ಅಗ್ನಿ" ಎಂದು ಹೇಳುತ್ತಾರೆ. ಈ ಅಗ್ನಿಯು ಒಂದು ಮರ್ತ್ಯ ಅಗ್ನಿಯಲ್ಲ, ನಿಮ್ಮ ಜೀವನವೇ ಅಗ್ನಿಯಾಗಿದೆ. ಪ್ರಜ್ಞೆಯು ಅಗ್ನಿಯಾಗಿದೆ. ಜ್ವಾಲೆಯು ಆಮ್ಲಜನಕದಿಂದಾಗಿ ಅಸ್ತಿತ್ವದಲ್ಲಿರುತ್ತದೆ, ಹಾಗೆಯೇ ನಿಮ್ಮ ಜೀವನವೂ ಆಮ್ಲಜನಕದಿಂದ ಅಸ್ತಿತ್ವದಲ್ಲಿದೆ. ನೀವೊಂದು ಗಾಜಿನಿಂದ ಮುಚ್ಚಲ್ಪಟ್ಟಿದ್ದೀರಿ ಎಂದು ಊಹಿಸಿಕೊಳ್ಳಿ, ಅದರಲ್ಲಿ ಆಮ್ಲಜನಕ ಇರುವಷ್ಟು ಕಾಲ ಮಾತ್ರ ನೀವು ಜೀವಂತವಾಗಿರುವಿರಿ. ಆದ್ದರಿಂದ ನಿಮ್ಮ ಪ್ರಾಣಶಕ್ತಿಯು ಬೆಂಕಿಗೆ ಸಮಾನವಾಗಿದೆ.

ಆ ಮಂತ್ರವು ಒಂದು ಸುಂದರವಾದ ಪ್ರಾರ್ಥನೆಯಾಗಿದೆ. ಅದು ಹೀಗೆಂದು ಹೇಳುತ್ತದೆ, "ನನ್ನನ್ನು ಒಂದು ಹೊಸ ಪಥದೊಳಕ್ಕೆ ಕೊಂಡೊಯ್ಯು. ಪ್ರಪಂಚದಲ್ಲಿರುವ ಜನರಿಗೆ ನಾನು ಒಳ್ಳೆಯದನ್ನು ಮಾಡುವಂತಾಗಲಿ. ವಿಶ್ವದಲ್ಲಿನ ಎಲ್ಲಾ ದೈವಿಕ ಶಕ್ತಿಗಳು ನನಗೆ ಸಹಾಯ ಮಾಡಲಿ, ನನ್ನನ್ನು ಜೊತೆಯಲ್ಲಿ ಕರೆದೊಯ್ಯು". ಇದು ಎಷ್ಟೊಂದು ಸುಂದರವಾದ ಪ್ರಾರ್ಥನೆ! ಪ್ರಾಚೀನ ಜನರಲ್ಲಿ ಅಂತಹ ಆಳವಾದ ಜ್ಞಾನವಿತ್ತು. ಪ್ರಾಥನೆಗಳಲ್ಲಿ ಕೂಡಾ ಅವರು ಎಲ್ಲರನ್ನೂ ಸೇರಿಸಿಕೊಂಡಿದ್ದರು. ಎಲ್ಲಾ ಮಂತ್ರಗಳ ತಾಯಿಯೆಂದು ಪರಿಗಣಿಸಲಾಗಿರುವ ಗಾಯತ್ರಿ ಮಂತ್ರ ಕೂಡಾ ಹೀಗೆಂದು ಹೇಳುತ್ತದೆ, "ದೈವಿಕತೆಯು ನನ್ನ ಬುದ್ಧಿಶಕ್ತಿಗೆ ಸ್ಫೂರ್ತಿ ನೀಡಲಿ ಮತ್ತು ನನ್ನ ಜೀವನಕ್ಕೆ ಸ್ಫೂರ್ತಿ ನೀಡಲಿ", ಯಾಕೆಂದರೆ ನಿಮ್ಮ ಜೀವನವು ಚಿಂತನೆಯ ಮೇಲೆ ಆಧರಿತವಾಗಿದೆ. ಚಿಂತನಾ ಪ್ರಕ್ರಿಯೆಯು ದೈವಿಕತೆಯಿಂದ ಸ್ಫೂರ್ತಿ ಪಡೆದರೆ, ಆಗ ಅಲ್ಲಿ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ, ಅಲ್ಲಿ ಯಾವುದೇ ವಿಷಾದಗಳಿರಲು ಸಾಧ್ಯವಿಲ್ಲ. ಯಾವುದೇ ದುಃಖವಿರುವುದಿಲ್ಲ.

ಪ್ರಶ್ನೆ: ನನ್ನಲ್ಲೊಂದು ವೈಜ್ಞಾನಿಕ ಮನೋಧರ್ಮ ಮತ್ತು ವಿಧಾನವಿರುವಾಗ ವಿಶ್ವದಲ್ಲಿನ ದೇವತೆಗಳಲ್ಲಿ ನಾನು ವಿಶ್ವಾಸವಿರಿಸಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಈ ಗ್ರಹದ ಮೇಲೆ ವಿವಿಧ ತರಂಗಾಂತರಗಳು ಮತ್ತು ಕಂಪನಗಳು ಇವೆಯೆಂಬುದನ್ನು ಒಂದು ವೈಜ್ಞಾನಿಕ ವಿಧಾನದದೊಂದಿಗೆ ಮಾತ್ರ ನಿಮಗೆ ನೋಡಲು ಸಾಧ್ಯ. ನೀವು ಯಾರು? ನೀವು ಕೇವಲ ಒಂದು ಆವರ್ತನ ವಿಶ್ಲೇಷಕ (ಫ್ರೀಕ್ವೆನ್ಸಿ ಅನಲೈಸರ್). ನಿಮ್ಮ ಮೆದುಳು ಒಂದು ಆವರ್ತನ ವಿಶ್ಲೇಷಕವಾಗಿದೆ. ಕೇವಲ ನಿರ್ದಿಷ್ಟವಾದ ಆವರ್ತನಗಳನ್ನು ಮಾತ್ರ ಹಿಡಿಯಲು ಅದು ಸಮರ್ಥವಾಗಿದೆ, ಅಲ್ಲವೇ? ನಿಮ್ಮ ಗ್ರಹಣ ಶಕ್ತಿಯು ಒಂದು ನಿರ್ದಿಷ್ಟವಾದ ಆವರ್ತನ ಶ್ರೇಣಿ (ಬ್ಯಾಂಡ್ ವಿಡ್ತ್)ಗೆ ಸೀಮಿತವಾಗಿದೆ. ಅದರಿಂದಾಚೆಗೆ ಹೋಗಲು ಅದಕ್ಕೆ ಸಾಧ್ಯವಿಲ್ಲ. ನಿಮ್ಮ ಗ್ರಹಣಾತ್ಮಕ ಸಾಮರ್ಥ್ಯವನ್ನು ಮೀರಿ ಗ್ರಹಿಸುವ ಸಾಮರ್ಥ್ಯವು ನಿಮಗೆ ಸಿಗುತ್ತದೆ ಎಂದು ಊಹಿಸೋಣ; ಇಲ್ಲದಿದ್ದರೆ ನೀವು ನೋಡದಿರುವ ಅನೇಕ ವಿಷಯಗಳನ್ನು ನೀವು ನೋಡಬಹುದು. ನೋಡಿ, ಯಾವುದು ನಿಮಗೆ ಕತ್ತಲೆಯಾಗಿದೆಯೋ ಅದು ಒಂದು ಬೆಕ್ಕು ಅಥವಾ ಒಂದು ಗೂಬೆಗೆ ಕತ್ತಲಲ್ಲ. ಒಂದು ಗೂಬೆಯ ಆವರ್ತನ ಶ್ರೇಣಿಯು ನಿಮ್ಮದಕ್ಕಿಂತ ದೊಡ್ಡದು. ಒಂದು ಗೂಬೆಯು ನಿಮಗಿಂತ ಹೆಚ್ಚು ನೋಡಬಲ್ಲದು. ದೇವತೆಗಳೆಂದರೆ ಕಿರೀಟವನ್ನು ಧರಿಸಿಕೊಂಡು ಮೇಲೆ ಸ್ವರ್ಗದಲ್ಲಿ ಕುಳಿತಿರುವ ಯಾವುದೋ ಜನರಲ್ಲ, ಅವರು ಪ್ರಜ್ಞೆಯ ಒಂದು ಅಭಿವ್ಯಕ್ತಿ - ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳಿರುವಂತೆಯೇ. ಸೂರ್ಯನ ಕಿರಣಗಳಲ್ಲಿ ಒಂದೇ ಒಂದು ಬಣ್ಣವಿರುತ್ತದೆ, ಆದರೆ ನೀವು ಸೂರ್ಯನ ಕಿರಣಗಳನ್ನು ಚದುರಿಸಿದಾಗ, ನಿಮಗೆ ಏಳು ಬೇರೆ ಬೇರೆ ಬಣ್ಣಗಳು ಸಿಗುತ್ತವೆ. ಅದೇ ರೀತಿಯಲ್ಲಿ, ನಿಮ್ಮ ಪ್ರಜ್ಞೆಯು ಹಲವಾರು ಸಾಮರ್ಥ್ಯಗಳನ್ನು, ಹಲವಾರು ರೂಪಗಳನ್ನು ಮತ್ತು ಹಲವಾರು ಜಟಿಲತೆಗಳನ್ನು ಹೊಂದಿದೆ. ಪ್ರಜ್ಞೆಯ ಈ ಸಂಕೀರ್ಣವಾದ ಪ್ರಕ್ರಿಯೆಗಳು ವಿವಿಧ ದೇವತೆಗಳೆಂದು ಕರೆಯಲ್ಪಡುತ್ತವೆ.

ಆಧ್ಯಾತ್ಮ ವಿಜ್ಞಾನದಲ್ಲಿ ನೀವು ಆಳವಾಗಿ ಹೋದಂತೆ ಅದು ಮನಸ್ಸನ್ನು ಆಶ್ಚರ್ಯಚಕಿತಗೊಳಿಸುತ್ತದೆ. ನಿಮ್ಮಲ್ಲೊಂದು ವೈಜ್ಞಾನಿಕ ಮನೋಧರ್ಮವಿರಲೇಬೇಕು, ಆಗ ಮಾತ್ರ ನಿಮಗೆ ಅದರೊಳಕ್ಕೆ ಹೋಗಲು ಸಾಧ್ಯ. ಕೇವಲ ನಂಬಿಕೆಯು ಕೆಲಸ ಮಾಡದು. ಕೊಲೊರಾಡೊದಿಂದ ಇಲ್ಲಿಗೆ ಒಬ್ಬ ವಿಜ್ಞಾನಿ ಬಂದಿದ್ದನು. ಅವನಲ್ಲೊಂದು ಟೈಟಾನಿಯಂ ರೇಡಾರ್ ಇತ್ತು. ಅದರಿಂದ ಶಕ್ತಿಯ ಮಟ್ಟವನ್ನು ಅಳೆಯಲು ಅವನಿಗೆ ಸಾಧ್ಯವಿತ್ತು. ನವರಾತ್ರಿಯ ಸಂದರ್ಭದಲ್ಲಿ ವಿವಿಧ ಮಂತ್ರೋಚ್ಛಾರಗಳು ಮತ್ತು ವಿವಿಧ ಆವಾಹನೆಗಳು ನಡೆಯುತ್ತಿದ್ದ ಸಮಯದಲ್ಲಿ ಅವನು ಶಕ್ತಿಯ ಮಟ್ಟಗಳನ್ನು ಅಳತೆ ಮಾಡಿದನು. ವಿವಿಧ ಮಂತ್ರೋಚ್ಛಾರಗಳನ್ನು ಮಾಡುತ್ತಿದ್ದಾಗ ಆಕಾಶದಲ್ಲಿ ಶಕ್ತಿಯು ಮೂಡುತ್ತಿದ್ದುದನ್ನು ವರ್ಣಮಯವಾದ ಚಿತ್ರಗಳೊಂದಿಗೆ ಅವನು ನಮಗೆ ತೋರಿಸಿದನು. ಒಂದು ಮಂತ್ರೋಚ್ಛಾರದಿಂದ ಇನ್ನೊಂದಕ್ಕೆ ಹೋದಂತೆ ಬಹಳ ವಿಶಿಷ್ಟವಾದ ವಿನ್ಯಾಸಗಳು ಕಂಡವು. ಅದು ನಿಜಕ್ಕೂ ಆಕರ್ಷಕವಾಗಿತ್ತು. ಕರ್ಲಿಯನ್ ಛಾಯಾಗ್ರಾಹಕರು ಕೆಲವು ಚಿತ್ರಗಳನ್ನು ತೆಗೆದರು. ವಿವಿಧ ದೇವತೆಗಳನ್ನು ಆಹ್ವಾನಿಸಿದಾಗ ಸಭಾಂಗಣದಲ್ಲಿನ ಇಡೀ ಬಣ್ಣ ಬದಲಾಯಿತು. ಆದ್ದರಿಂದ ಕೇವಲ ನಂಬಿಕೆಯ ಮೂಲಕ ಮಾಡುವುದಕ್ಕಿಂತ, ಒಂದು ವೈಜ್ಞಾನಿಕ ವಿಧಾನದಲ್ಲಿ ನೀವು ನಿಜಕ್ಕೂ ಎಷ್ಟೋ ಹೆಚ್ಚು ಅನ್ವೇಷಿಸಬಹುದು ಹಾಗೂ ಅರಿತುಕೊಳ್ಳಬಹುದು. 

ಭಾನುವಾರ, ಜನವರಿ 10, 2016

ಅಂತರ್ಮುಖಿ ಸದಾ ಸುಖಿ

೧೦ ಜನವರಿ ೨೦೧೬
ಬಾದ್ ಅಂತೋಗಸ್ತ್, ಜರ್ಮನಿ

ಮ್ಮ ಆತ್ಮದ ನಿಜವಾದ ಗುಣವು ಮೂರು ವಿಷಯಗಳಿಂದ ಮಂಕಾಗುತ್ತದೆ:

೧. ಬಯಕೆ: ಅದು ಯಾವುದೇ ಬಯಕೆಯಾಗಿರಬಹುದು. "ನನ್ನಲ್ಲಿ ಯಾವುದೇ ಬಯಕೆಯಿರುವುದು ಬೇಡ", ಎಂಬುದು ಕೂಡಾ ಒಂದು ಬಯಕೆ.
೨. ಬುದ್ಧಿಶಕ್ತಿ: ಅಂದರೆ ನಮ್ಮಲ್ಲಿರುವ ನಿರ್ಣಯಿಸುವ, ವಿವೇಚಿಸುವ, ತಿಳಿಯುವ ಕ್ಷಮತೆ.
೩. ಅಹಂ: "ನಾನು ಯಾರೋ ಒಬ್ಬ" ಎಂಬುದು ಅಹಂ.

ಈ ಮೂರು ವಿಷಯಗಳು ಆತ್ಮವನ್ನು ಮಸುಕಾಗಿಸುತ್ತವೆ, ಮತ್ತು ಧ್ಯಾನವೆಂದರೆ, ಎಲ್ಲಿ ನೀವು ಈ ಮೂರು ವಿಷಯಗಳನ್ನು ಕೆಲವು ಕ್ಷಣಗಳವರೆಗೆ ಹಾಗೇ ಸ್ತಬ್ಧಗೊಳಿಸುತ್ತೀರೋ ಅದು -  ಬುದ್ಧಿ, ಅಹಂ ಮತ್ತು ಬಯಕೆಗಳನ್ನು ಸ್ತಬ್ಧಗೊಳಿಸುವುದು. ಅದು ಸ್ವಲ್ಪ ಸಮಯದವರೆಗೆ ಮಾತ್ರ, ಆದ್ದರಿಂದ ಹೆದರಬೇಡಿ. ಆನಂತರ ನೀವು ಎಷ್ಟು ಬಯಕೆಗಳನ್ನು ಬೇಕಾದರೂ ಹೊಂದಬಹುದು.

ಎಲ್ಲಾ ಬಯಕೆಗಳೂ ಕೆಟ್ಟವೆಂದಲ್ಲ, ಕೆಲವು ಬಯಕೆಗಳು ಒಳ್ಳೆಯವು, ಕೆಲವು ಬಯಕೆಗಳು ಪರವಾಗಿಲ್ಲ ಮತ್ತು ಇತರ ಕೆಲವು ನಿಜಕ್ಕೂ ಕೆಟ್ಟವು. ಎಲ್ಲಾ ರೀತಿಯವೂ ಇವೆ, ಆದರೆ ನೀವು ಅವುಗಳನ್ನು ಸ್ತಬ್ಧವಾಗಿರಿಸಲು ಕಲಿತರೆ, ಆಗ ಸ್ಥಿರತೆಯು ಉದಯಿಸುತ್ತದೆ ಮತ್ತು ಅದುವೇ ಸಮಾಧಿ.

ಮಕ್ಕಳಲ್ಲಿ ಎಲ್ಲಾ ಮೂರು ವಿಷಯಗಳು ಇರುತ್ತವೆ, ಆದರೂ ಅವರು ಅವುಗಳನ್ನು ಬಹಳ ಸುಲಭವಾಗಿ ಸ್ತಬ್ಧಗೊಳಿಸುತ್ತಾರೆ. ಅದಕ್ಕಾಗಿಯೇ ನೀವು ಮಕ್ಕಳಲ್ಲಿ, "ನಿನಗೇನು ಬೇಕು?" ಎಂದು ಕೇಳಿದಾಗ ಅವರು, "ಏನೂ ಬೇಡ" ಎಂದು ಹೇಳುವುದು. ನೀವಿದನ್ನು ಗಮನಿಸಿದ್ದೀರಾ? ಅವರು ಯಾವುದರ ಬಗ್ಗೆಯೂ ಧಾರಣೆಯನ್ನು ಹೊಂದಿರುವುದಿಲ್ಲ. ಮಕ್ಕಳಲ್ಲಿ, ಆತ್ಮವನ್ನು ಮಂಕುಗೊಳಿಸುವಷ್ಟು ಅಹಂ ಪ್ರಮುಖವಾಗಿರುವುದಿಲ್ಲ, ಬುದ್ಧಿಯು ಪ್ರೌಢವಾಗಿರುವುದಿಲ್ಲ ಮತ್ತು ಅವರ ಬಯಕೆಗಳು ಸಾಕಷ್ಟು ಬಲವಾಗಿರುವುದಿಲ್ಲ.

ಇದು ಒಳ್ಳೆಯ ಜ್ಞಾನ. ಬೇರೆ ಯಾವಾಗಲಾದರೂ ನಾವು ಇದರ ಬಗ್ಗೆ ಆಳಕ್ಕೆ ಹೋಗೋಣ.

ಪ್ರಶ್ನೆ: ಬಯಕೆಗಳಿಗೂ ಅದೃಷ್ಟಕ್ಕೂ ಸಂಬಂಧವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಯಾವುದನ್ನು ಬದಲಾಯಿಸಲು ನಿಮಗೆ ಸಾಧ್ಯವಿಲ್ಲವೆಂದು ನೀವು ಯೋಚಿಸುವಿರೋ ಅದನ್ನು ನೀವು ಅದೃಷ್ಟವೆಂದು ಕರೆಯುತ್ತೀರಿ, ಅಲ್ಲವೇ? ಈಗ, ಪ್ರಾಚೀನ ಕಾಲದ ಕೆಲವು ಗುರುಗಳು ಏನು ಮಾಡುತ್ತಿದ್ದರೆಂದರೆ, ಅವರು ನಿಮ್ಮ ಬಯಕೆಗಳನ್ನು ಕತ್ತರಿಸಿಹಾಕುತ್ತಿದ್ದರು. ನೋಡಿ, ಎರಡು ಮಾರ್ಗಗಳಿವೆ:

೧. ನೀವು ಬಯಕೆಗಳನ್ನು ಪೂರೈಸಿ.
೨. ನೀವದನ್ನು ಸಂಪೂರ್ಣವಾಗಿ ಕತ್ತರಿಸಿಹಾಕಿ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ನಾವು, "ಸರಿ, ಸ್ವಲ್ಪ ಮಾತ್ರವೇ ಬಯಕೆ, ಅದು ಈಡೇರಲಿ" ಎಂದು ಹೇಳುತ್ತೇವೆ. ಆದರೆ ನೀವು ಹಿಂದಿನ ಪೀಳಿಗೆಯ ಗುರುಗಳನ್ನು ನೋಡಿದರೆ, ಅವರು ನಿಮ್ಮ ಬಯಕೆಗಳನ್ನು ಕತ್ತರಿಸಿಹಾಕುತ್ತಿದ್ದರು. ಉದಾಹರಣೆಗೆ ಮಹಾಋಷಿಯವರೊಂದಿಗೆ, ನೀವೇನಾದರೂ ಮಾಡಲು ಬಯಸುತ್ತೀರೆಂದು ನೀವು ಹೇಳಿದರೆ; ಉದಾಹರಣೆಗೆ, ಮಿಲಾನೋಕ್ಕೆ ಹೋಗಬೇಕೆಂಬ ಒಂದು ಬಯಕೆಯನ್ನು ವ್ಯಕ್ತಪಡಿಸಿದರೆ, ನೀವು ಅಲ್ಲಿಗೆ ಯಾವತ್ತೂ ಹೋಗಲು ಸಾಧ್ಯವಾಗದಂತೆ ಅವರು ನೋಡಿಕೊಳ್ಳುತ್ತಿದ್ದರು.

ಹೆಚ್ಚಿನವರೊಂದಿಗೆ, ಈಡೇರುವುದಕ್ಕಾಗಿ, ತಮ್ಮೆಲ್ಲಾ ಬಯಕೆಗಳನ್ನು ಅವರು ಬಿಟ್ಟುಬಿಡಬೇಕೆಂದು ಅವರು ಹೇಳುತ್ತಿದ್ದರು, ಆದರೆ ನಿಜವಾದ ಶಿಷ್ಯರೊಂದಿಗೆ, ಅವರು ಅವುಗಳನ್ನು ಬಿಟ್ಟುಬಿಡಲು ಕಲಿಯಲೆಂದು, ಅವರ ಬಯಕೆಗಳು ಯಾವತ್ತೂ ನೆರವೇರದಂತೆ ನೋಡಿಕೊಳ್ಳುತ್ತಿದ್ದರು. ನಿಮ್ಮಲ್ಲಿ ಕೋಪ ಮತ್ತು ದುಃಖಗಳನ್ನು ಸೃಷ್ಟಿಸುವುದು ಬಯಕೆಗಳಾಗಿವೆ ಮತ್ತು ನೀವು ಅವುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ನಿಮ್ಮ ಮೇಲೆ ಒತ್ತಡ ಹಾಕುತ್ತವೆ. ನಿಮಗೆ ಗೊತ್ತಾ, ಕೆಲವು ಮಕ್ಕಳಿಗೆ ನೀವು ಏನನ್ನಾದರೂ ಕೊಟ್ಟರೆ ಅವರು ಅದನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆಂದರೆ, ಅದನ್ನು ಅವರಿಂದ ಬಿಡಿಸಲು ನೀವು ಅವರಿಗೆ ಬೇರೆ ಏನನ್ನಾದರೂ ಕೊಡಬೇಕಾಗುತ್ತದೆ, ಅಲ್ಲವೇ? ಇಲ್ಲದಿದ್ದರೆ ಅವರು ದೊಡ್ಡ ಗಲಾಟೆ ಮಾಡುತ್ತಾರೆ. ಆದ್ದರಿಂದ, ಮುಂಚಿನ ಪೀಳಿಗೆಯ ಗುರುಗಳು ನೀವು ನಿಮ್ಮ ಬಯಕೆಗಳನ್ನು ಬಿಟ್ಟುಬಿಡುವಂತೆ ನೋಡಿಕೊಳ್ಳುತ್ತಿದ್ದರು. "ನಾನು ಇದನ್ನು ಇಷ್ಟಪಡುತ್ತೇನೆ ಅಥವಾ ನಾನು ಅದನ್ನು ಇಷ್ಟಪಡುತ್ತೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಹಾಗೆ ಹೇಳಿದರೆ ಮತ್ತೆ ಮುಗಿಯಿತು, ನೀವದನ್ನು ಎಂದಿಗೂ ಪಡೆಯಲಾರಿರಿ. ನೀವದನ್ನು ಬಿಟ್ಟುಬಿಡಲೇಬೇಕಾಗುತ್ತದೆ ಯಾಕೆಂದರೆ, ಯಾವುದೇ ಬಯಕೆ, ಅದು ಈಡೇರಿದ ಬಳಿಕವೂ, ಅದು ಏಳುವ ಮೊದಲು ನೀವು ಯಾವ ಜಾಗದಲ್ಲಿದ್ದಿರೋ ಅದೇ ಜಾಗದಲ್ಲಿ ನಿಮ್ಮನ್ನು ಬಿಡುತ್ತದೆ.

ಆದ್ದರಿಂದ ನೀವು ಗುರುಗಳ ಬಳಿಗೆ ಹೋಗಿ, "ಆ ವ್ಯಕ್ತಿಯು ನನ್ನನ್ನು ದೂಷಿಸುತ್ತಿದ್ದಾನೆ" ಎಂದು ಹೇಳಿದರೆ, ಅವರು, "ಒಳ್ಳೆಯದು, ಅವರು ನಿನ್ನನ್ನು ಇನ್ನೂ ದೂಷಿಸಲಿ" ಎಂದು ಹೇಳುತ್ತಿದ್ದರು. ನಾನು ಕೂಡಾ ಹೀಗೆ ಮಾಡುತ್ತೇನೆ. "ಈ ವ್ಯಕ್ತಿಯು ನನಗೆ ತೊಂದರೆ ಕೊಡುತ್ತಿದ್ದಾನೆ" ಎಂದು ಯಾರಾದರೂ ಹೇಳುತ್ತಾರೆಂದಿಟ್ಟುಕೊಳ್ಳಿ, ನಾನು, "ಅವರು ನಿನಗೆ ಇನ್ನೂ ಹೆಚ್ಚು ತೊಂದರೆ ಕೊಡಲು ನಾನು ಅವರಲ್ಲಿ ಹೇಳುತ್ತೇನೆ" ಎಂದು ಹೇಳುತ್ತೇನೆ. ಯಾಕೆ? ನೀವು ನಿಮ್ಮ ಅಹಂನ್ನು ತೊಲಗಿಸುವುದು ಹಾಗೆಯೇ.
ಒಂದು ಅಂಶವೆಂದರೆ, ನಿಮ್ಮ ಅಹಂನ್ನು ಇನ್ನೂ ದೊಡ್ಡದಾಗಿಸುವುದು ಮತ್ತು ಇನ್ನೊಂದು ಅಂಶವೆಂದರೆ, ನಿಮ್ಮ ಅಹಂನ್ನು ಮುರಿಯುವುದು. "ನೀನು ತುಂಬಾ ಮಹಾನ್" ಎಂದು ನಾನು ಹೇಳಿ ನಿನ್ನನ್ನು ಹೊಗಳುವಾಗ, ನಿನ್ನ ಅಹಂ ಉಬ್ಬಿ ದೊಡ್ಡದಾಗುತ್ತದೆ. ಆದರೆ ನಾನು, "ನೀನು ದೊಡ್ಡ ಮೂರ್ಖ" ಎಂದು ಹೇಳಿ, ಹಲವು ಜನರು ನಿನ್ನನ್ನು ನೋಡಿ ನಕ್ಕರೆ, ಆಗ ನಿನ್ನ ಅಹಂ ಮುರಿಯುತ್ತದೆ. ಅವಮಾನ ಮತ್ತು ನಗೆಯು ನಿನ್ನ ಅಹಂನ್ನು ನುಚ್ಚುನೂರಾಗಿಸುತ್ತದೆ. ಒಂದು ಹೊಗಳುವ ಮೂಲಕ, ಇನ್ನೊಂದು ಅಹಂನ್ನು ಮುರಿಯುವುದರ ಮೂಲಕ. ಹೀಗಾಗಿ, ಅವರು ಹೀಗೆ ಮಾಡುತ್ತಿದ್ದುದರಿಂದಾಗಿ ಆ ದಿನಗಳಲ್ಲಿ ಇದೊಂದು ಕಷ್ಟಕರವಾದ ಪಥವಾಗಿತ್ತು.

ಯಾವುದಾದರೂ ಕಾರ್ಯಕ್ರಮಕ್ಕೆ ೧೦,೦೦೦ ಜನರನ್ನು ನಾಮಾಂಕನ ಮಾಡುವಂತೆ ಮಹಾಋಷಿಯವರು ಯಾರಲ್ಲಾದರೂ ಹೇಳುತ್ತಿದ್ದರು ಮತ್ತು ಅವರು ಹೋಗಿ ನಾಮಾಂಕನ ಮಾಡುತ್ತಿದ್ದರು. ಒಂದು ತಿಂಗಳಿನ ಬಳಿಕ ಅವರು, "ನಾನು ೧೦,೦೦೦ ಜನರನ್ನು ನಾಮಾಂಕನ ಮಾಡಿದ್ದೇನೆ" ಎಂದು ಹೇಳುತ್ತಿದ್ದರು ಮತ್ತು ಆಗ ಮಹಾಋಷಿಯವರು, "ಹಾಗೆ ಮಾಡಲು ನಿನ್ನಲ್ಲಿ ಯಾರು ಹೇಳಿದರು?" ಎಂದು ಕೇಳುತ್ತಿದ್ದರು. ಈ ಸಮಯದಲ್ಲಿ ಒಬ್ಬರಿಗೆ, "ಓ ಮಹಾಋಷಿ, ಹಾಗೆ ಮಾಡಲು ನೀವೇ ನನಗೆ ಹೇಳಿದ್ದು" ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ವಿವರಣೆಯನ್ನು ಕೊಡಲು ಒಬ್ಬರಿಗೆ ಸಾಧ್ಯವೇ ಇಲ್ಲ.

೧೦,೦೦೦ ನಿರ್ವಾಹಕರನ್ನು ನಾಮಾಂಕನಗೊಳಿಸಲು ಈ ವ್ಯಕ್ತಿಯು ಅಷ್ಟೊಂದು ಕೆಲಸ ಮಾಡಿದ್ದನು; ಅವರಿಗೆ ಹಣವನ್ನು, ಭೂಮಿಯ ಮೇಲೆ ಸ್ವರ್ಗವನ್ನು ಮತ್ತು ಎಲ್ಲದರ ಭರವಸೆ ನೀಡಿದ್ದನು; ಮತ್ತು ಇದ್ದಕ್ಕಿದ್ದಂತೆ ಅವನ ಅಹಂಗೆ ಏನಾಯಿತು? ಅದು ಸಂಪೂರ್ಣವಾಗಿ ಚೂರುಚೂರಾಯಿತು. ಈಗ ಅವನಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ, ಅವನು ದೂರುವಂತಿಲ್ಲ, "ಆ ಜನರನ್ನು ನಾನು ಹೇಗೆ ಎದುರಿಸಲಿ" ಎಂದು ಅವನು ಹೇಳುವಂತಿಲ್ಲ, ಯಾಕೆಂದರೆ ಗುರುಗಳು, "ಅದು ನಿನ್ನ ಸಮಸ್ಯೆ, ನೀನು ಅವರನ್ನು ಎದುರಿಸು, ಅದು ನನ್ನ ಸಮಸ್ಯೆಯಲ್ಲ" ಎಂದು ಹೇಳುವರು.

ಯಾವುದರ ಬಗ್ಗೆಯೂ ನೀವು ಗುರುಗಳಲ್ಲಿ ದೂರುವಂತಿಲ್ಲ. ಅದು ಕೆಲವೊಮ್ಮೆ ಸಂಪೂರ್ಣವಾಗಿ ಹುಚ್ಚುತನದಿಂದ ಕೂಡಿರುತ್ತದೆ. ಆದರೆ ಇದು, ಯಾವತ್ತೂ ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಅಳುವ ಒಬ್ಬ ಬಲಹೀನ ವ್ಯಕ್ತಿಯಾಗದಂತೆ ನಿಮಗೊಂದು ಒಳ್ಳೆಯ ಗಟ್ಟಿಯಾದ ತರಬೇತಿಯನ್ನು ಕೊಡುತ್ತದೆ.

ಡಿ.ಎಸ್.ಎನ್. ಕೋರ್ಸ್‌ನಲ್ಲಿರುವಂತೆ (ಭಾಗವಹಿಸುವವರು ವೈಯಕ್ತಿಕ ತಡೆಗಳನ್ನು ಮತ್ತು ಗಡಿಗಳನ್ನು ಮೀರಿ, ಆಂತರಿಕ ಸ್ಥಿರತೆ ಮತ್ತು ಶಕ್ತಿಯನ್ನು ಹೊಂದಲು ಬಲವನ್ನು ನೀಡುವ ಒಂದು ಕಠಿಣವಾದ ಪರಿವರ್ತನಾ ತರಬೇತಿ) ನೀವು ಮಾಡಬೇಕಾಗಿರುವುದು ಇದನ್ನು ಎಂದು  ನಿಮಗೆ ಮೊದಲೇ ಹೇಳಲಾಗಿದ್ದರೆ, ಆಗ ಅದು ಬೀರುವ ಪ್ರಭಾವವು ಕಡಿಮೆಯೆಂದು ನನಗನಿಸುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಗೊತ್ತಿಲ್ಲದಿರುವಾಗ, ಮತ್ತು ನಿಮಗೆ ಕೂಡಾ ಗೊತ್ತಿಲ್ಲದಿರುವಾಗ ಹಾಗೂ ಇಂತಹ ರೀತಿಯಲ್ಲಿ ವಿಷಯ ನಡೆಯುವಾಗ (ಮೇಲಿನ ಉದಾಹರಣೆಯಲ್ಲಿ ನಡೆದಂತೆ ), ಆಗ ಅದು ಬಹಳ ಶಕ್ತಿಶಾಲಿ. ಅವರು ಯಾವುದೋ ಉದ್ದೇಶದೊಂದಿಗೆ ಮಾಡುತ್ತಿದ್ದಾರೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಬದಿಯಿಂದಲೂ, ನಿಮಗೆ ಅದರ ಅರಿವೂ ಇಲ್ಲ, ಮತ್ತು ಹೀಗಾಗಿ ನೀವು ಸಂಪೂರ್ಣವಾಗಿ ಛಿದ್ರವಾಗುತ್ತೀರಿ, ಹಾಗೂ ಅದು ನಿಮ್ಮ ವ್ಯಕ್ತಿತ್ವವನ್ನು ಬಲವಾಗಿಯೂ, ಹೊಂದಿಕೊಳ್ಳುವಂತಹದ್ದನ್ನಾಗಿಯೂ ಮಾಡುತ್ತದೆ.

ನೋಡಿ, ಯಾವುದು ನಿಮ್ಮನ್ನು ನಿಮ್ಮ ಸಮತೋಲನದಿಂದ ದೂರ ತಳ್ಳುವುದೋ ಅದು ಅಹಂ ಆಗಿದೆ. ಹಲವಾರು ವಿಷಯಗಳು ಮುರಿಯುವುದು ಹಾಗೂ ಹಲವಾರು ವಿಷಯಗಳು ಮಾಡಲ್ಪಡುವುದಕ್ಕೆ ಅಹಂ ಕಾರಣವಾಗಿದೆ. ನೀವು ಒಬ್ಬರ ಅಹಂನ್ನು ಉತ್ತೇಜಿಸಿದರೆ, ಅವರು ಏನಾದರೂ ಒಳ್ಳೆಯ ಕೆಲಸವನ್ನು ಮಾಡಬಹುದು ಮತ್ತು ನೀವು ಒಬ್ಬರ ಅಹಂನ್ನು ಚೂರುಚೂರು ಮಾಡಿದರೆ ಅವರು ಇತರ ವಿಷಯಗಳನ್ನು ಕೂಡಾ ಮುರಿಯಬಹುದು. ಅಹಂ ಹಾನಿಯನ್ನು ಸೃಷ್ಟಿಸಬಲ್ಲದು. ಅದು ಮುರಿಯಬಲ್ಲದು ಮತ್ತು ಅದು ನಿರ್ಮಿಸಬಲ್ಲದು. ನಿಮ್ಮ ಅಹಂನ್ನು ಹಿಟ್ಟಿನಂತೆ ಚೆನ್ನಾಗಿ ನಾದಿದಾಗ, ಅದು ಪದರದ ಮೇಲೆ ಪದರದೊಂದಿಗೆ ಒಂದು ಕ್ರಾಯಿಸೆಂಟ್‌ನಂತೆ (ಒಂದು ಖಾದ್ಯ)ಇರುತ್ತದೆ. ಕ್ರಾಯಿಸೆಂಟ್ ಹೇಗೆ ಮಾಡಲ್ಪಡುತ್ತದೆ ಮತ್ತು ಅದರಲ್ಲಿ ಪದರಗಳು ಹೇಗೆ ಬರುತ್ತವೆಂದು ನಿಮಗೆ ಗೊತ್ತಾ? ನೀವದನ್ನು ಮತ್ತೆ ಮತ್ತೆ ನಾದಿದಾಗ ಪದರಗಳು ಬರುತ್ತವೆ ಮತ್ತು ಅಹಂ ಪರಿವರ್ತಿತವಾಗುವುದು ಹಾಗೆಯೇ (ಅದನ್ನು ನಾದುವುದರಿಂದ).

ನನಗೆ ನೆನಪಿದೆ, ನಾವು ಸಾಲ್ಟ್ಸ್‌ಬರ್ಗ್‌ನಲ್ಲಿದ್ದಾಗ, ನಾನು ೨೦-೨೧ ವರ್ಷ ವಯಸ್ಸಿನವನಾಗಿದ್ದೆ. ಒಬ್ಬರು ಬಂದು ಮಹಾಋಷಿಯವರಲ್ಲಿ, ಇಂತಿಂತವರೊಬ್ಬರು ಹೀಗೆ ಮಾಡಿದರೆಂದು ದೂರಿದರು. ಅವರು ಇಡೀ ವಿಷಯವನ್ನು ತಿರುಗಿಸಿ ಅದನ್ನು ಈ ವ್ಯಕ್ತಿಯ ಮೇಲೆ ಹಾಕುತ್ತಾ ಹೀಗೆಂದರು, "ನೀನೂ ಅವನೊಂದಿಗೆ ಸೇರಿಕೊಂಡಿರುವೆ ಮತ್ತು ನೀನು ಇದೆಲ್ಲದರ ಭಾಗವಾಗಿರುವೆ". ಆ ವ್ಯಕ್ತಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಮಹಾಋಷಿಯವರು ಹೀಗೆಂದರು, "ನೀನು ಬಂದು ನನ್ನಲ್ಲಿ ದೂರು ಹೇಳಲು ಸಾಧ್ಯವಾಗುವುದಕ್ಕಾಗಿ, ಆ ವ್ಯಕ್ತಿಯು ಒಂದು ತಪ್ಪು ಮಾಡುವಲ್ಲಿವರೆಗೆ ನೀನು ಕಾಯುತ್ತಿದ್ದೆ. ಹೀಗಾಗಿ ನೀನು ಕೂಡಾ ಅದರ ಒಂದು ಭಾಗವಾಗಿರುವೆ". ಆ ವ್ಯಕ್ತಿಯು ಬಹಳಷ್ಟು ನಲುಗಿಹೋದನು ಮತ್ತು ಸಂಪೂರ್ಣವಾಗಿ ಗಾಬರಿಗೊಂಡನು. ಅದು ಆಘಾತ ಚಿಕಿತ್ಸೆಯಂತೆ ಇತ್ತು. ಅಹಂ, ಬಯಕೆ ಮತ್ತು ಬುದ್ಧಿಶಕ್ತಿಗಳೊಂದಿಗೆ ಆ ರೀತಿಯಲ್ಲಿ ವ್ಯವಹರಿಸಲಾಗುತ್ತಿತ್ತು.  

ಬುದ್ಧಿಶಕ್ತಿಯ ಬಗ್ಗೆ ಬಂದಾಗ, ಈ ಎಲ್ಲಾ ನೋಬೆಲ್ ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು ಅಲ್ಲಿರುತ್ತಿದ್ದರು ಮತ್ತು ಮಹಾಋಷಿಯವರು ಯಾವುದಾದರೂ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅವರು ಹೀಗೆ ಹೇಳುತ್ತಿದ್ದರು, ""ಆ" ಎಂಬುದು "ಗಾ" ಆಯಿತು ಮತ್ತು "ಗಾ" ಎಂಬುದು "ನಾ" ಆಯಿತು ಮತ್ತು "ನಾ" ಎಂಬುದು "ಯಾ" ಆಯಿತು". ಅವರು ಇಂತಹ ಕೆಲವು ವಿಷಯವನ್ನು ಹೇಳುತ್ತಿದ್ದರು ಮತ್ತು ಯಾರಿಗೂ ಅದು ಅರ್ಥವಾಗುತ್ತಿರಲಿಲ್ಲ. ವೈದಿಕ ಪಂಡಿತರನ್ನು ಒಳಗೊಂಡಂತೆ, ನಾವು ಸುಮ್ಮನೆ ಕುಳಿತಿರಬೇಕಾಗುತ್ತಿತ್ತು. ತಾನು ತೆಗೆದುಕೊಳ್ಳುವ ಸ್ಥಿತಿಯನ್ನು ಸುಮ್ಮನೆ ಬಿಟ್ಟುಬಿಡುವುದು ಬುದ್ಧಿಶಕ್ತಿಗೆ ಅಂತಹ ಒಂದು ಪರಿಶ್ರಮವಾಗಿತ್ತು.

ಪ್ರಶ್ನೆ: ತಮ್ಮ ಭಾವನೆಗಳ ಮೇಲೆ ನಿಜಕ್ಕೂ ಒಬ್ಬರು ನಿಗಾ ಇಡುವುದು ಮತ್ತು ಜಾಗೃತರಾಗಿರುವುದು ಹೇಗೆ? ಮತ್ತು ಒಬ್ಬರ ಭಾವನೆಗಳು ಅಲುಗಾಡಿದಾಗ ಏನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಹೌದು, ನಿಮ್ಮ ಭಾವನೆಗಳು ಅಲುಗಾಡಿದರೆ, ಅದು ಎಷ್ಟು ಸಾಧ್ಯವೋ ಅಷ್ಟು ಅಲುಗಾಡಲಿ. ನಿಮಗೆ ಗೊತ್ತಾ, ಇಲ್ಲಿ ಕರುಣೆಯೆಂದು ಕರೆಯಲ್ಪಡುವುದು ಏನೂ ಇಲ್ಲ. ಉನ್ನತ ಜ್ಞಾನದಲ್ಲಿ, ಕರುಣೆಯೆಂಬುದು ಮೂರ್ಖತನ. ಯಾಕೆ? ನೀವು ಬೇರೊಬ್ಬರಿಗೆ ಮಾತ್ರ ಕರುಣೆಯನ್ನು ತೋರಬಲ್ಲಿರಿ; ಯಾರು ನೀವಲ್ಲವೋ ಅವರಿಗೆ. ನಿಮ್ಮ ಕೈಗೆ ನೋವಾಯಿತೆಂದಿಟ್ಟುಕೊಳ್ಳೋಣ. "ನಾನು ನನ್ನ ಕೈಯ ಕಡೆಗೆ ಬಹಳ ಕರುಣೆಯನ್ನು ಹೊಂದಿದ್ದೇನೆ" ಎಂದು ನೀವು ಹೇಳುವುದಿಲ್ಲ. ನೀವು ಯಾವತ್ತಾದರೂ ಹಾಗೆ ಹೇಳುತ್ತೀರಾ? ಎಲ್ಲವೂ ನಿಮ್ಮ ಭಾಗವಾಗಿರುವರೆಂದು ನೀವು ಹೇಳುವಾಗ, ಅಲ್ಲಿ ಕರುಣೆಯೆಲ್ಲಿ ಬಂತು? ಸರಿ, ನಿಮಗೆ ನೋವಾಯಿತು, ನಿಮಗೆ ನೋವಾದುದು ನಿಮ್ಮದೇ ಮೂರ್ಖತನದಿಂದ. ಅದಕ್ಕೆ ಸ್ವಲ್ಪ ಮುಲಾಮು ಹಚ್ಚಿ ಮತ್ತು ಅದರ ಬಗ್ಗೆ ಮರೆತುಬಿಡಿ. ನಿಮಗೆ ನೋವಾಗುವಾಗ, ಅದು ನಿಮ್ಮ ಕರ್ಮ. ನೀವು ಯಾರಿಗೋ ಯಾವಾಗಲೋ ನೋವುಂಟುಮಾಡಿರಬೇಕು ಮತ್ತು ಅದಕ್ಕಾಗಿ ನೀವದನ್ನು ಈಗ ಹಿಂದಕ್ಕೆ ಪಡೆದಿದ್ದೀರಿ. ಒಂದು ಕಾರಣವಿಲ್ಲದೆ ಏನೂ ನಡೆಯುವುದಿಲ್ಲ. ಇದು ಅತ್ಯಂತ ಉನ್ನತ ಜ್ಞಾನ.

ಆದ್ದರಿಂದ, ನೀವು ಕಷ್ಟವನ್ನು ಅನುಭವಿಸುತ್ತಿದ್ದರೆ, ಅದು ಬೇರೊಬ್ಬರ ಕಾರಣದಿಂದ ಅಲ್ಲ, ಅದು ನಿಮ್ಮಿಂದಾಗಿಯೇ ಎಂದು ಕೆಲವು ಗುರುಗಳು ಯಾವತ್ತೂ ಹೇಳುವರು. ನೀವು ಆ ಕಷ್ಟವನ್ನು ಅನುಭವಿಸಿ ಅದನ್ನು ತೊಡೆದುಹಾಕುವುದು ಒಳ್ಳೆಯದು. ಅದಕ್ಕೆ ಬದಲಾಗಿ ನೀವು, "ನನ್ನ ಕಷ್ಟಕ್ಕೆ ಆ ವ್ಯಕ್ತಿ ಹೊಣೆಗಾರ" ಎಂದು ಹೇಳಿದರೆ, ಆಗ ನೀವು ಇನ್ನೂ ಹೆಚ್ಚು ಕರ್ಮವನ್ನು ಮಾಡುತ್ತೀರಿ ಮತ್ತು ಮುಂದಿನ ಜನ್ಮಕ್ಕೆ ಅದನ್ನು ಹೊತ್ತೊಯ್ಯುತ್ತೀರಿ. ಆದರೆ ನೀವು, "ನಾನು ದುಃಖ ಅನುಭವಿಸುತ್ತಿರುವುದು ನನ್ನಿಂದಾಗಿಯೇ, ಮತ್ತು ನಾನು ಕರ್ಮದ ಸ್ವಾಮಿತ್ವವನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರೆ, ಆಗ ನೀವು ಮುಕ್ತರಾಗುತ್ತೀರಿ.

"ನಾನು ಕಷ್ಟವನ್ನು ಅನುಭವಿಸುತ್ತಿರುವುದು ಆ ವ್ಯಕ್ತಿಯಿಂದಾಗಿ" ಎಂದು ಹೇಳುವುದು ಕರ್ಮವನ್ನು ಮುಂದುವರಿಸುತ್ತದೆ ಯಾಕೆಂದರೆ, ನಿಮ್ಮ ಮನಸ್ಸಿನಲ್ಲಿ ಆ ಅಚ್ಚು ಇರುತ್ತದೆ. ನೀವು ಒಳಗಡೆ ಯಾಕೆ ನೋಡುವುದಿಲ್ಲ? ನೀವು ಯಾಕೆ ಮುಂದೆ ಸಾಗುವುದಿಲ್ಲ? ಹಿಂದೆ ನಡೆದುಹೋದ ಒಂದು ಘಟನೆಯನ್ನು ಹಿಡಿದುಕೊಂಡು, ನಿಮ್ಮ ಕರ್ಮಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ಯಾಕೆ ನೀವು ದೂಷಿಸುತ್ತೀರಿ? ನೀವು ಹೀಗೆ ಮಾಡಿದರೆ, ನೀವು ದುಃಖಿತರಾಗಿರುವುದು ಮುಂದುವರಿಯುತ್ತದೆ.  

ಪ್ರಶ್ನೆ: ಗುರುದೇವ, ನನ್ನ ಮುಂದೆ ಯಾವುದೇ ದಾರಿಯಿಲ್ಲದಂತೆ ನನಗನಿಸುತ್ತದೆ ಮತ್ತು ಅದು ಬಹಳ ಹತಾಶೆಯನ್ನುಂಟುಮಾಡುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಅದು ನಿನ್ನ ಕರ್ಮ, ಯಾರಿಂದಲೂ ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಕೇವಲ ಇದನ್ನು ತಿಳಿದುಕೋ, (ಪ್ರಾಚೀನ ಕಾಲದ ಗುರುಗಳು ತಮ್ಮ ಶಿಷ್ಯಂದಿರೊಂದಿಗೆ ವ್ಯವಹರಿಸುತ್ತಿದ್ದ ರೀತಿಯನ್ನು ಸೂಚಿಸುತ್ತಾ, ತಾವೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ..)ಯಾರಿಂದಲೂ ಸಹಾಯ ಮಾಡಲು ಸಾಧ್ಯವಿಲ್ಲ, ಮುಗಿಯಿತು. ನೀನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ, ಆದರೆ ಯಾವುದೇ ಮಾರ್ಗವಿಲ್ಲ. ನಾನು ನಿನಗೆ ಹೇಳಲಾರೆ. ನಾನು ಯಾಕೆ ನಿನಗೆ ಹೇಳಬೇಕು?

ಯಾವುದೇ ದಾರಿಯಿಲ್ಲವೆಂದು ನೀನು ಈಗಾಗಲೇ ಹೇಳಿದೆ, ಆದ್ದರಿಂದ ಸತ್ತಂತಿರು ಮತ್ತು ಯಾತನೆಯನ್ನನುಭವಿಸು! ಒಬ್ಬರು ಗುರುಗಳು ಅಂತಹ ಒಂದು ರೀತಿಯಲ್ಲಿ ಪ್ರತಿಕ್ರಿಯಿಸುವಾಗ ಏನಾಗುತ್ತದೆ ನೋಡು: ಇದ್ದಕ್ಕಿದ್ದಂತೆ ಸ್ವಾತಂತ್ರ್ಯವು ಉದ್ಭವಿಸುತ್ತದೆ ಮತ್ತು ನೀನೊಂದು "ವಾಹ್" ಎಂಬ ಜಾಗವನ್ನು ತಲಪುವೆ. ಎಲ್ಲಿ ಮಾಡುವುದೇನೂ ಇರುವುದಿಲ್ಲವೋ ಅಂತಹ ಒಂದು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ ಜಾಗ. ಅಲ್ಲಿ ಕರ್ತೃತ್ವವಿಲ್ಲ, ಅಲ್ಲಿ ಅಹಂ ಇಲ್ಲ, ಅಲ್ಲಿ ಯಾವುದೇ ಬಯಕೆಯಿಲ್ಲ ಮತ್ತು ಹೊರಹೋಗುವ ದಾರಿಯನ್ನು ಕಂಡುಹುಡುಕಲು ಪ್ರಯತ್ನಿಸುತ್ತಿರುವ ಬುದ್ಧಿಶಕ್ತಿ ಕೂಡಾ ಸ್ತಬ್ಧವಾಗಿರುತ್ತದೆ.

ಅವರು (ಹಿಂದಿನ ಪೀಳಿಗೆಯ ಗುರುಗಳು)ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ, ಆದರೆ ಅವರು ಯಾವಾಗಲೂ ಇದನ್ನು ಈ ರೀತಿ ಮಾಡುತ್ತಿದ್ದರು. ನೀವು ನಿಮ್ಮ ಬುದ್ಧಿಶಕ್ತಿಗೆ ಬೀಗ ಹಾಕಿ ಇಟ್ಟಿರಬೇಕಾಗುತ್ತಿತ್ತು. ಅವರು ಇದನ್ನು ಹಿಂದಿಯಲ್ಲಿ ಕೂಡಾ ಹಲವು ಸಲ ಹೇಳುತ್ತಿದ್ದರು, "ನಿಮ್ಮ ಬುದ್ಧಿಶಕ್ತಿಗೆ ಬೀಗ ಹಾಕಿ ಕುಳಿತುಕೊಳ್ಳಿ. ನಿಮ್ಮ ಬುದ್ಧಿಶಕ್ತಿಯು ಹೊರಬಂದು ಅಲ್ಲಾಡಲು ಬಿಡಬೇಡಿ". ನಾನು ನಿಮಗೆ ಹೇಳುತ್ತೇನೆ ಕೇಳಿ, ಅಂತಹ ಒಂದು ವಾತಾವರಣದಲ್ಲಿ ನೀವು ಬದುಕಲಾರಿರಿ. ಒಂದು ದಿನ ಬದುಕಿರುವುದು ಕೂಡಾ ನಿಜಕ್ಕೂ ಕಷ್ಟಕರ. ಆ ಪೀಳಿಗೆಯವರು ಯಾರೂ ಈಗ ನಮ್ಮೊಂದಿಗಿಲ್ಲ. ಅವರೆಲ್ಲರೂ ಹಳೆಯ ಪೀಳಿಗೆಯವರು, ಮತ್ತು ಒಬ್ಬರಿಗೆ ಅವರನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಅದನ್ನೇ ನನ್ನಲ್ಲಿ ದೀಪಕ್ ಚೋಪ್ರಾ ಅವರು ಹೇಳುತ್ತಿದ್ದರು, "ಓ, ಈ ವ್ಯಕ್ತಿಯನ್ನು ನಾನು ಅರ್ಥಮಾಡಿಕೊಳ್ಳಲಾರೆ, ಅವರಲ್ಲಿ ಕರುಣೆಯೇ ಇಲ್ಲ. ಕರುಣೆಯ ಒಂದು ಹನಿಯೂ ಇಲ್ಲವೇ?"

ನಾನಂದೆ, "ಈ ವ್ಯಕ್ತಿಯಲ್ಲಿ ಕರುಣೆಯಿಲ್ಲವೇನೋ ಎಂಬ ರೀತಿಯಲ್ಲಿ ನೋಡಬೇಡ, ಇಲ್ಲದಿದ್ದರೆ ನಿನ್ನ ಮನಸ್ಸಿಗೆ ಹುಚ್ಚುಹಿಡಿದೀತು. ಕನಿಷ್ಠಪಕ್ಷ ನೀನು ನಿನ್ನ ಮನಸ್ಸನ್ನಾದರೂ ಕಾಪಾಡು".

ದೀಪಕ್ ಚೋಪ್ರಾ ಅವರು ನನ್ನಲ್ಲಿ ಒಂದು ಘಟನೆಯ ಬಗ್ಗೆ ಹೇಳುತ್ತಿದ್ದರು. ಅವರು ಮಹಾಋಷಿಯವರೊಂದಿಗೆ ಕುಳಿತಿದ್ದರು ಮತ್ತು ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಕೂಡಾ ಕುಳಿತಿದ್ದರು. ಸ್ವಲ್ಪ ಸಮಯದ ಬಳಿಕ ಈ ವ್ಯಕ್ತಿಯು ಎದ್ದು ಹೊರಟುಹೋದರು. ಅವರು ಹೋಗಿ ಕೆಲವೇ ನಿಮಿಷಗಳ ಬಳಿಕ ಯಾರೋ ಒಬ್ಬರು ಬಂದು ಮಹಾಋಷಿಯವರಲ್ಲಿ, ಮಾರ್ಗ ದಾಟುತ್ತಿದ್ದ ವೇಳೆ ಆ ವ್ಯಕ್ತಿಗೆ ಒಂದು ಲಾರಿ ಬಂದು ಹೊಡೆದು ಅವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಹಾಋಷಿಯವರಿಗೆ ಆ ಸುದ್ದಿ ಬಂದಾಗ, ಅವರು ಐದು ಸೆಕೆಂಡುಗಳ ಕಾಲ ಸುಮ್ಮನೆ ಮೌನವಾಗಿ ಕುಳಿತರು ಮತ್ತು ನಂತರ ತಮ್ಮ ಕೆಲಸ ಮಾಡಲುತೊಡಗಿದರು. ಅವರು ಹೊರಗೆ ಹೋಗಿ ನೋಡಲಿಲ್ಲ ಅಥವಾ ಏನಾಯಿತೆಂದು ಕೇಳಲಿಲ್ಲ, ಏನೂ ಇಲ್ಲ. ಅವರು ತಮ್ಮದೇ ಕೆಲಸವನ್ನು ಮುಂದುವರಿಸಲುತೊಡಗಿದರು. ಈ ಘಟನೆಯಿಂದ ತಾನು ಬಹಳ ಆಘಾತಗೊಂಡೆನೆಂದು ದೀಪಕ್ ಹೇಳಿದರು.

ನಾನು ಅವರಲ್ಲಿ ಹೇಳಿದೆ, "ನೋಡು, ಒಬ್ಬ ವ್ಯಕ್ತಿಯಲ್ಲಿ ಕರುಣೆಯಿಲ್ಲವೆಂದು ನೀನು ತೀರ್ಮಾನಿಸಬೇಕಾಗಿಲ್ಲ. ಅಲ್ಲಿ ಕರುಣೆ ಯಾಕಿರಬೇಕು? ನಿನ್ನ ಉಗುರುಗಳನ್ನು ಕತ್ತರಿಸುವಾಗ ನೀನು, "ಓ ನಾನು ನನ್ನ ಉಗುರುಗಳನ್ನು ಕತ್ತರಿಸುತ್ತಿದ್ದೇನೆ" ಎಂದು ಹೇಳುವುದಿಲ್ಲ. ಹಾಗೆಯೇ, ಪ್ರತಿದಿನವೂ ಇಲ್ಲಿ ಹಲವಾರು ಜನರು ಹುಟ್ಟುತ್ತಿದ್ದಾರೆ ಮತ್ತು ಪ್ರತಿದಿನವೂ ಹಲವರು ಸಾಯುತ್ತಿದ್ದಾರೆ. ಮತ್ತು ನಾವಿಲ್ಲಿಗೆ ಸಾವಿರಾರು ಬಾರಿ ಬಂದಿದ್ದೇವೆ ಹಾಗೂ ನಾವು ಹಲವಾರು ವಿಷಯಗಳನ್ನು ಮಾಡಿದ್ದೇವೆ. ಜೀವನವನ್ನೊಂದು ವಿಶಾಲವಾದ ದೃಷ್ಟಿಕೋನದಿಂದ ನೋಡು, ಆಗ ನಿನಗೊಂದು ಪೂರ್ತಿಯಾಗಿ ಭಿನ್ನವಾದ ಚಿತ್ರವು ಕಾಣಿಸುತ್ತದೆ".

ಇಲ್ಲಿಗೆ ಬರುವ ಸ್ವಲ್ಪ ಮೊದಲು, ಆಗತಾನೇ ತನ್ನ ಗಂಡನನ್ನು ಕಳಕೊಂಡ ಒಬ್ಬಳು ಆರ್ಟ್ ಆಫ್ ಲಿವಿಂಗ್ ಶಿಕ್ಷಕಿಯೊಡನೆ ನಾನು ಮಾತನಾಡಿದೆ. ಅವಳ ಗಂಡ ಕೂಡಾ ಒಬ್ಬ ಆರ್ಟ್ ಆಫ್ ಲಿವಿಂಗ್ ಶಿಕ್ಷಕನಾಗಿದ್ದ. ಅವಳೊಂದಿಗೆ ಮಾತನಾಡಲು ನಾನು ಒಂದು ದಿನ ಕಾದೆ ಮತ್ತು ಜನರೆಂದರು, "ಗುರುದೇವ, ಅವಳೊಂದಿಗೆ ಮಾತನಾಡಿ, ಅವಳೊಂದಿಗೆ ಮಾತನಾಡಿ".

ನಾನಂದೆ, "ಇಲ್ಲ, ಅವಳು ಒಂದು ದಿನ ದುಃಖದಲ್ಲಿರಲಿ, ಅವಳು ಅಂತ್ಯಸಂಸ್ಕಾರ ಮಾಡಲಿ ಮತ್ತು ನಂತರ ನಾನು ಅವಳೊಂದಿಗೆ ಮಾತನಾಡುವೆ". ಹಾಗೆ, ಇವತ್ತು ನಾನು ಅವಳೊಂದಿಗೆ ಮಾತನಾಡಿದೆ. ನಿಮಗೆ ಗೊತ್ತಾ, "ನನಗೆ ಯಾಕೆ ಹೀಗಾಯಿತು" ಮುಂತಾದ ಯಾವುದೇ ಗೋಳಾಟವಿಲ್ಲದೆ ಅವಳು ಅಷ್ಟೊಂದು ಗಟ್ಟಿಯಾಗಿದ್ದಾಳೆ. ಅವಳು ಬಹಳ ಸಾಮಾನ್ಯವಾಗಿ ಮಾತನಾಡುತ್ತಿದ್ದಳು ಮತ್ತು ಅವಳಂದಳು, "ನಾನು ಬಂದು ನಿಮ್ಮನ್ನು ನೋಡಲು ಬಯಸುತ್ತೇನೆ ಗುರುದೇವ". ನಾನಂದೆ, "ಸರಿ, ಬಾ". ಈ ಪಥದಲ್ಲಿನ ಸೌಂದರ್ಯ ಅದು. ಪಥವು ನಿಮಗೆ ಎಷ್ಟೊಂದು ಆಂತರಿಕ ಬಲವನ್ನು ಕೊಡುತ್ತದೆಯೆಂದರೆ, ನಿಮಗೆ ನಿರ್ವಹಿಸಲು ಸಾಧ್ಯವಾಗುತ್ತದೆ. ದುಃಖವು ಎಲ್ಲರಿಗೂ ಬರುತ್ತದೆಯೆಂದಲ್ಲ, ಅಲ್ಲ! ಅದು ಹಾಗಲ್ಲ. ಇಲ್ಲಿ, ಆರ್ಟ್ ಆಫ್ ಲಿವಿಂಗ್‌ನಲ್ಲಿ ನಿಮ್ಮೆಲ್ಲಾ ಬಯಕೆಗಳು ಈಡೇರುತ್ತವೆ, ಅಲ್ಲವೇ? ನೀವು ಏನನ್ನೇ ಬಯಸಿದರೂ ಅದು ಈಡೇರುತ್ತದೆ. ನೀವು ಏನನ್ನೇ ಯೋಚಿಸಿದರೂ ಅದು ಬಹುತೇಕ ತಕ್ಷಣವೇ ಆಗುತ್ತದೆ. ಕೆಲವು ಕಡೆಗಳಲ್ಲಿ ವಿಷಯವು ಹಾಗಿಲ್ಲ. ಈ ಅರ್ಥದಲ್ಲಿ, ನಾವು ನಮ್ಮ ಸ್ವಂತ ಮಂದಿಯನ್ನು ಬಲಹೀನರನ್ನಾಗಿಯೂ, ಹೆಚ್ಚು ಲೋಭಿಗಳನ್ನಾಗಿಯೂ ಮಾಡುತ್ತಿರುವೆವೋ ಏನೋ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ.

ಪ್ರಶ್ನೆ: ನಿಮ್ಮ ನಿಜವಾದ ಶಿಷ್ಯ ಯಾರೆಂಬುದು ನಿಮಗೆ ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಒಬ್ಬರು ನಿಜವಾದವರೇ ಅಲ್ಲವೇ ಎಂದು ನಾನು ಯಾಕೆ ತಿಳಿಯಬೇಕು? ಅವರು ಪ್ರಾಮಾಣಿಕರಾಗಿದ್ದರೆ, ಅವರು ಮೇಲಕ್ಕೇರುವರು. ಅವರು ಪ್ರಾಮಾಣಿಕರಲ್ಲವಾಗಿದ್ದರೆ, ಅವರು ಕೆಳಕ್ಕೆ ಬೀಳುವರು ಯಾಕೆಂದರೆ ಯಾರೊಬ್ಬರ ಬುದ್ಧಿಶಕ್ತಿಯೂ ಅವರ ನಿಯಂತ್ರಣದಲ್ಲಿಲ್ಲ.

ಒಬ್ಬರು ನಿಜವಾದವರೇ ಅಥವಾ ಅಲ್ಲವೇ ಎಂದು ಯಾರಾದರೂ ಯಾರ ಬಗ್ಗೆಯಾದರೂ ಯಾಕೆ ಸಂಶಯಪಡಬೇಕು? ನನ್ನ ಕಣ್ಣುಗಳಲ್ಲಿ, ಎಲ್ಲರೂ ಒಳ್ಳೆಯವರು, ಮತ್ತು ಅವರು ಏನಾದರೂ ತಪ್ಪು ಮಾಡಿದರೆ ಅವರು ಖಂಡಿತವಾಗಿಯೂ ಕೆಳಕ್ಕಿಳಿಯುತ್ತಾರೆ, ಆದರೆ ಅವರು ಮತ್ತೆ ಮೇಲಕ್ಕೆ ಬರುತ್ತಾರೆ. ಇದು ಬಹಳ ಸರಳವಾದ ಗಣಿತ.

ನನಗೆ ಯಾವುದೇ ಶಿಷ್ಯರಿಂದಲೂ ಏನೂ ಬೇಕಾಗಿಲ್ಲ. ಅವರು ಮೇಲಕ್ಕೆ ಸಾಗಿದರೆ ಬಹಳ ಒಳ್ಳೆಯದು. ಇಲ್ಲದಿದ್ದರೆ, ಅವರು ಅಹಿತಕರ ಫಲಿತಾಂಶವನ್ನು ಎದುರಿಸಲಿ. ನೋಡಿ, ಅಹಿತಕರ ಫಲಿತಾಂಶವನ್ನು ಎದುರಿಸುವುದು ಕೂಡಾ ಅವರನ್ನು ಒಳ್ಳೆಯವರನ್ನಾಗಿ ಮತ್ತು ಬಲಶಾಲಿಗಳನ್ನಾಗಿ ಮಾಡುತ್ತದೆ. ನಿಮಗೆ ಗೊತ್ತಾ, ನಾನು, "ಓ, ಅಯ್ಯೋ ಪಾಪ" ಎಂದು ಯಾರನ್ನೂ ಸಾಂತ್ವನಪಡಿಸಲು ಹೋಗುವುದಿಲ್ಲ. ನಿನಗೊಂದು ಸಮಸ್ಯೆಯಿದೆಯೇ? ಸರಿ, ಒಳ್ಳೆಯದು, ಅದನ್ನು ನಿಭಾಯಿಸಿಕೋ! ಇದು ಆತ್ಮೀಯವಾದ ಜ್ಞಾನ, ಜನಸಮೂಹದೊಂದಿಗೆ ಮಾತನಾಡುವಂತಹದ್ದಲ್ಲ. ಜ್ಞಾನದಲ್ಲಿ ಸಾಗುವುದು ಹೇಗೆ ಮತ್ತು ಪಥದಲ್ಲಿ ಸಾಗುವುದು ಹೇಗೆ ಎಂಬುದನ್ನು ಒಬ್ಬರಿಗೆ ಅರ್ಥಪಡಿಸಲಿಕ್ಕಾಗಿ ಇರುವುದು ಇದು. ಹೀಗೆ ಹಲವಾರು ವಿಧಾನಗಳಿವೆ.