ಶುಕ್ರವಾರ, ಆಗಸ್ಟ್ 31, 2012

ಸೂಕ್ತ ನಿರ್ಧಾರಗಳು

ಬ್ರೆಜಿಲ್, ದಕ್ಷಿಣ ಅಮೆರಿಕ
ಆಗಸ್ಟ್ ೩೧, ೨೦೧೨

ನೂ ಕೆಟ್ಟದನ್ನು ಮಾಡದೆಯೇ ನೀವು ಶತ್ರುಗಳನ್ನು ಹೊಂದಿರುವಿರೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ಜನರು ನಿಮ್ಮ ಶತ್ರುಗಳಾಗುತ್ತಾರೆ. ನೀವು ಅವರಿಗೆ ಯಾವುದೇ ತೊಂದರೆಯನ್ನು, ಯಾವುದೇ ತಪ್ಪನ್ನು ಮಾಡಲಿಲ್ಲ ಮತ್ತು ಹಾಗಿದ್ದರೂ ಅವರು ಶತ್ರುಗಳಾಗುತ್ತಾರೆ. ಅದೇ ರೀತಿಯಲ್ಲಿ ಕೆಲವರಿಗೆ ನೀವು ಯಾವುದೇ ದೊಡ್ಡ ಉಪಕಾರಗಳನ್ನು ಮಾಡಲಿಲ್ಲ, ಆದರೆ ಅವರು ನಿಮ್ಮ ಬಹಳ ಒಳ್ಳೆಯ ಮಿತ್ರರಾದರು. ಅಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?
ನೋಡಿ, ಇದು ಅಷ್ಟೆ, ಜನರು ಮಿತ್ರರಾಗುವುದು ಮತ್ತು ಶತ್ರುಗಳಾಗುವುದು ಯಾವುದೋ ವಿಚಿತ್ರವಾದ ಕರ್ಮದಿಂದಾಗಿ, ಯಾವುದೋ ವಿಚಿತ್ರವಾದ ನಿಯಮದಿಂದಾಗಿ. ಯಾವುದೋ ವಿಚಿತ್ರವಾದ ನಿಯಮವಿರುತ್ತದೆ. ಇದರಿಂದಾಗಿ ಹಾಠಾತ್ತನೇ ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಒಳ್ಳೆಯ ಮಿತ್ರರಾಗುತ್ತಾರೆ. ಆದುದರಿಂದ, ಎಲ್ಲಾ ಮಿತ್ರರನ್ನು ಮತ್ತು ಶತ್ರುಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ ಮುಕ್ತರಾಗಿ.

ನೋಡಿ, ನಿಮ್ಮ ಮನಸ್ಸನ್ನು ತೊಂದರೆಗೊಳಪಡಿಸುವುದು ಒಂದೋ ನಿಮ್ಮ ಮಿತ್ರರು ಅಥವಾ ನಿಮ್ಮ ಶತ್ರುಗಳು. ಅಲ್ಲವೇ? ನೀವು ಧ್ಯಾನ ಮಾಡಲು ಕುಳಿತುಕೊಳ್ಳುವಾಗ, ನೀವು ಅವರೆಲ್ಲರನ್ನೂ; ನಿಮ್ಮ ಮಿತ್ರರನ್ನು, ಶತ್ರುಗಳನ್ನು ಮತ್ತು ಎಲ್ಲರನ್ನೂ ಒಂದು ಬದಿಯಲ್ಲಿರಿಸಬೇಕು. ಕುಳಿತುಕೊಳ್ಳಿ, ವಿಶ್ರಾಮ ಮಾಡಿ ಮತ್ತು ಮುಕ್ತರಾಗಿ.

ನೀವೇನು ಹೇಳುವಿರಿ? ಅದು ಸರಿಯಲ್ಲವೇ?

ನಿಮ್ಮ ಮನಸ್ಸು ತೃಪ್ತವಾದಾಗ, ಅದು ಮೌನವಾಗಿದ್ದು ಸಂತೋಷವಾಗಿರುವಾಗ, ಅದೊಂದು ಬಹಳ ಅಸಾಧಾರಣವಾದ ಶಕ್ತಿಯನ್ನು ಗಳಿಸುತ್ತದೆ, ಅದು ಯಾವುದೆಂದರೆ ಆಶೀರ್ವದಿಸುವ ಶಕ್ತಿ. ನೀವು ಸಂತೋಷವಾಗಿ ಮತ್ತು ತೃಪ್ತರಾಗಿರುವಾಗ, ಇತರರಿಗೆ ಆಶೀರ್ವಾದ ನೀಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ತಳಮಳಗೊಂಡಿದ್ದರೆ ಮತ್ತು ನಿಮ್ಮಲ್ಲಿ ಹಲವಾರು ಬಯಕೆಗಳಿದ್ದರೆ, ಆಗ ನಿಮಗೆ ಆಶೀರ್ವಾದ ನೀಡಲು ಸಾಧ್ಯವಿಲ್ಲ. ನೀವು ಆಶೀರ್ವಾದ ನೀಡಿದರೂ ಕೂಡಾ, ಅದು ಅಷ್ಟು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಆದುದರಿಂದ, ಸಮಯದಿಂದ ಸಮಯಕ್ಕೆ, ನಮ್ಮಲ್ಲಿ ತೃಪ್ತಿಯಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನೀವು ತೃಪ್ತರಾದಾಗ, ನಿಮ್ಮ ಬಯಕೆಗಳನ್ನು ಮಾತ್ರವಲ್ಲ, ಇತರರ ಬಯಕೆಗಳನ್ನು ಕೂಡಾ ಈಡೇರಿಸಲು ನಿಮಗೆ ಸಾಧ್ಯವಾಗುತ್ತದೆ.

ಪ್ರಶ್ನೆ: ದಯವಿಟ್ಟು ಸಹಾನುಭೂತಿಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿಶಂಕರ್: ಜೀವನದಲ್ಲಿ ಆವಶ್ಯಕವಾಗಿರುವ ಮೂರು ವಿಷಯಗಳಿವೆ:
೧. ಅನುರಾಗ
೨. ವೈರಾಗ್ಯ
೩. ಸಹಾನುಭೂತಿ
ಅನುರಾಗವು ಉಸಿರನ್ನು ಒಳಗೆಳೆದುಕೊಳ್ಳುವಂತೆ ಮತ್ತು ವೈರಾಗ್ಯವು ಉಸಿರನ್ನು ಹೊರಗೆ ಬಿಡುವಂತೆ. "ನಾನು ಉಸಿರನ್ನು ಕೇವಲ ಒಳಗೆಳೆದುಕೊಳ್ಳಲು ಬಯಸುತ್ತೇನೆ, ಉಸಿರನ್ನು ಹೊರಗೆ ಬಿಡಲು ನಾನು ಬಯಸುವುದಿಲ್ಲ" ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಅಸಾಧ್ಯ!
ಆದುದರಿಂದ, ಉಸಿರನ್ನು ಒಳಗೆಳೆದುಕೊಳ್ಳುವುದು ಆವಶ್ಯಕ, ಮತ್ತು ಅದು ಜೀವನದಲ್ಲಿನ ವಿಷಯಗಳ ಕಡೆಗಿರುವ ಅನುರಾಗ. ಮತ್ತೆ, ವೈರಾಗ್ಯದ ಆವಶ್ಯಕತೆಯೂ ಇದೆ. ವೈರಾಗ್ಯವೆಂದರೆ, ಎಲ್ಲವನ್ನೂ ಸುಮ್ಮನೆ ಹೋಗಬಿಡಲಿರುವ ಸಾಮರ್ಥ್ಯ. ವೈರಾಗ್ಯವು ನಿಮಗೆ ಸಮಾಧಾನವನ್ನು ತರುತ್ತದೆ ಮತ್ತು ನಂತರ ಸಹಾನುಭೂತಿಯು ನಿಮ್ಮ ಸ್ವಭಾವವಾಗುತ್ತದೆ.
ಆದುದರಿಂದ, ನೀವು ಕೆಲಸ ಮಾಡುವಾಗ ನಿಮ್ಮಲ್ಲಿ ಅನುರಾಗವಿರಬೇಕು. ನೀವು ವಿಶ್ರಾಂತಿ ತೆಗೆದುಕೊಳ್ಳಲು ಬಯಸುವಾಗ ವೈರಾಗ್ಯವಿರಬೇಕು ಮತ್ತು ಸಹಾನುಭೂತಿಯು ನಿಮ್ಮ ಸ್ವಭಾವವೇ ಆಗಿರಬೇಕು. ಅಷ್ಟೆ!

ಪ್ರಶ್ನೆ: ಧ್ಯಾನ ಮತ್ತು ವಿಶ್ರಾಮದ ಅಗತ್ಯವೇನು?
ಶ್ರೀ ಶ್ರೀ ರವಿಶಂಕರ್: ನೀವು ವಿಶ್ರಾಮ ಮಾಡುವಾಗ ಮನಸ್ಸು ವಿಸ್ತರಿಸುತ್ತದೆ. ನೀವು ಸಂತೋಷವಾಗಿರುವಾಗ ಏನಾಗುತ್ತದೆಯೆಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮೊಳಗಿರುವ ಏನೋ ಒಂದು ವಿಸ್ತರಿಸಲು ಶುರುವಾಗುತ್ತದೆ. ನೀವು ದುಃಖಿತರಾಗಿರುವಾಗ ಏನಾಗುತ್ತದೆ? ನಿಮ್ಮೊಳಗಿರುವ ಏನೋ ಒಂದು ಕುಗ್ಗಲು ಶುರುವಾಗುತ್ತದೆ. ಆದುದರಿಂದ ನೀವು ಶರೀರಕ್ಕೆ ವಿಶ್ರಾಂತಿ ನೀಡಿದಾಗ, ಮನಸ್ಸು ಅರಳಲು ಶುರುವಾಗುತ್ತದೆ.

ಪ್ರಶ್ನೆ: ದಯವಿಟ್ಟು ಅನ್ಯೋನ್ಯತೆಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿಶಂಕರ್: ಅನ್ಯೋನ್ಯತೆಯು ಬಹಳ ಸ್ವಾಭಾವಿಕ. ಒಂದು ಉನ್ನತ ಮನೋಸ್ಥಿತಿಯಲ್ಲಿ, ಅನ್ಯೋನ್ಯತೆಯು ತತ್ ಕ್ಷಣವಾಗಿರುತ್ತದೆ. ಒಬ್ಬರು ಸೂಕ್ಷ್ಮಮನಸ್ಸಿನವರಾಗಿಲ್ಲದಿರುವಾಗ ಮಾತ್ರ ಅಲ್ಲಿ ಅನ್ಯೋನ್ಯತೆ ಇರುವುದಿಲ್ಲ.
ಹೆಚ್ಚಾಗಿ ಜನರು ಕೆಟ್ಟ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾರೆ. ನೀವು ಯಾರನ್ನಾದರೂ ದೂಷಿಸಿದರೆ, ಅವರು ಕೂಡಲೇ ನಿಮ್ಮನ್ನು ದೂಷಿಸಲು ತಯಾರಾಗಿರುತ್ತಾರೆ. ನೀವು ಯಾರನ್ನಾದರೂ ಅವಮಾನಿಸಿದರೆ, ಅವರು ನಿಮ್ಮನ್ನು ಕೂಡಲೇ ಅವಮಾನಿಸುತ್ತಾರೆ, ಆದರೆ ಒಳ್ಳೆಯ ವಿಷಯಗಳ ಬಗ್ಗೆ ಅದು ಹಾಗಿರುವುದಿಲ್ಲ. ನೀವು ಏನಾದರೂ ಒಳ್ಳೆಯದನ್ನು ಮಾಡಿದರೆ, ತಾವು ಒಳ್ಳೆಯತನದಿಂದ ಪ್ರತಿಕ್ರಿಯೆ ಮಾಡಬೇಕೆಂದು ಎಲ್ಲರೂ ಯೋಚಿಸುವುದಿಲ್ಲ. ಅದಾಗುವುದು ಮನಸ್ಸು ಒಂದು ಉನ್ನತ ಸ್ಥಿತಿಯಲ್ಲಿರುವಾಗ ಮಾತ್ರ.

ಪ್ರಶ್ನೆ: ನಾನೊಂದು ಬೇರ್ಪಡುವಿಕೆಯ ಮೂಲಕ ಹಾದು ಹೋಗುತ್ತಿದ್ದೇನೆ. ನನ್ನ ಪತ್ನಿ ಮತ್ತು ನಾನು ವಿಭಿನ್ನ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಹಾಗೂ ಬೇರೆ ಬೇರೆ ಜೀವನವನ್ನು ಜೀವಿಸುತ್ತಿದ್ದೇವೆ. ನಾವಿಬ್ಬರೂ ನಮ್ಮ ಮಗುವು ನಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಇರಬೇಕೆಂದು ಬಯಸುತ್ತೇವೆ. ಈ ಪರಿಸ್ಥಿತಿಯಲ್ಲಿ ಮಾಡಬಹುದಾದ ವಿವೇಚನಾಯುಕ್ತ ಕೆಲಸವೇನು? 
ಶ್ರೀ ಶ್ರೀ ರವಿಶಂಕರ್: ಮಗುವನ್ನು ಎರಡೂ ಮಾರ್ಗಗಳಿಗೆ ತೆರೆದಿಡಬೇಕು ಮತ್ತು ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ದಂಪತಿಗಳ ನಡುವೆ ಒಪ್ಪಂದ ಇಲ್ಲದಿದ್ದರೆ, ಖಂಡಿತವಾಗಿ ಅದರಿಂದ ಮಗುವಿಗೆ ಪ್ರಯಾಸವಾಗುತ್ತದೆ. ತಂದೆ ತಾಯಿಯರಿಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಅವರು ಮಗುವಿನ ಮುಂದೆ ಪರಸ್ಪರರನ್ನು ದೂಷಿಸುತ್ತಾ ಹೋಗಬಾರದು. ಮಗುವನ್ನು ಹೆತ್ತವರಲ್ಲಿ ಒಬ್ಬರ ವಿರುದ್ಧವಾಗಿ ಇನ್ನೊಬ್ಬರು ಎತ್ತಿಕಟ್ಟುವುದು ಒಳ್ಳೆಯದಲ್ಲ. ಅದೊಂದು ಬಹಳ ಸಂಕುಚಿತ ಮನಸ್ಸಿನ ವಿಧಾನವಾಗಿದೆ.

ಪ್ರಶ್ನೆ: ಸಾವು ಎಂದರೇನೆಂದು ದಯವಿಟ್ಟು ನಮಗೆ ಹೇಳಿ.
ಶ್ರೀ ಶ್ರೀ ರವಿಶಂಕರ್: ಸಾವನ್ನು ವಿವರಿಸುವ ಅಗತ್ಯವಿಲ್ಲ. ಅದೊಂದು ಸ್ಪಷ್ಟವಾದ ವಿದ್ಯಮಾನ. ನಾವು ಹುಟ್ಟಿದ್ದೇವೆ ಮತ್ತು ಒಂದು ದಿನ ನಾವು ಸಾಯಲಿದ್ದೇವೆ. ನಾವು ಈ ಪ್ರಪಂಚಕ್ಕೆ ಬಂದಾಗ, ನಾವು ಮಾಡಿದ ಮೊದಲನೆಯ ಕೆಲಸವೆಂದರೆ ಒಂದು ದೀರ್ಘವಾದ ಉಸಿರನ್ನು ಒಳಗೆಳೆದುಕೊಂಡುದು, ಮತ್ತು ನಂತರ ನಾವು ಅಳಲು ಶುರು ಮಾಡಿದೆವು. ಈ ಜೀವನದಲ್ಲಿ ನಾವು ಮಾಡುವ ಕೊನೆಯ ಕೆಲಸವೆಂದರೆ ಉಸಿರನ್ನು ಹೊರಗೆ ಬಿಡುವುದು, ಮತ್ತು ನಂತರ ಇತರರು ಅಳುತ್ತಾರೆ. ನಾವು ಇತರರು ಅಳುವಂತೆ ಮಾಡದಿದ್ದರೆ, ಆಗ ನಾವು ಒಳ್ಳೆಯ ಜೀವನವನ್ನು ಜೀವಿಸಲಿಲ್ಲ ಎಂದಾಗುತ್ತದೆ.
ಆತ್ಮವು ಶರೀರವನ್ನು ಸಂಪೂರ್ಣ ತೃಪ್ತಿಯಿಂದ, ಬಹಳ ಪ್ರೀತಿ ಮತ್ತು ಜ್ಞಾನದೊಂದಿಗೆ ಬಿಟ್ಟು ಹೋಗುವಾಗ ಮರಳಿ ಬರಲು ಅದಕ್ಕೆ ಬಲವಂತವಿರುವುದಿಲ್ಲ. ಅದು ತನ್ನದೇ ಇಚ್ಛೆಯಿಂದ ಮರಳಿ ಬರಬಹುದು.

ಪ್ರಶ್ನೆ: ನಾನು ಸರಿಯಾದ ನಿರ್ಧಾರವನ್ನು ಮಾಡುತ್ತಿರುವೆನೇ ಎಂದು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನೀನು ಒಂದು ನಿರ್ಧಾರವನ್ನು ಮಾಡುವಾಗ, ಎಲ್ಲೋ ಒಂದು ಕಡೆ, "ಹೌದು, ಇದು ಸರಿ" ಎಂದು ಹೇಳುವ ಆಂತರಿಕ ದೃಢವಾದ ಅನ್ನಿಸಿಕೆಯು ನಿನ್ನಲ್ಲಿ ಬರುತ್ತದೆ. ನೀನು ತಿಳಿಯಬೇಕಾಗಿರುವ ಒಂದು ವಿಷಯವೆಂದರೆ, ನೀನೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡರೂ ಕೂಡಾ, ಅದು ಯಾವತ್ತೂ ನಿನ್ನನ್ನು ಪ್ರಗತಿಯ ಕಡೆಗೆ ಕರೆದೊಯ್ಯುತ್ತದೆ. ಒಳಗೆಲ್ಲೋ ಆಳದಲ್ಲಿ ನೀನು ಹೆಚ್ಚು ಶಕ್ತಿಶಾಲಿಯಾಗುವೆ, ನೀನೊಂದು ಪಾಠವನ್ನು ಕಲಿಯುವೆ. ಅದಕ್ಕಾಗಿಯೇ, ಚಿಂತಿಸಬೇಡ.

ಪ್ರಶ್ನೆ: ಗುರೂಜಿ, ಕೆಲವೊಮ್ಮೆ ನನಗೆ ಸಂತೋಷವನ್ನುಂಟು ಮಾಡುವ ವಿಷಯವು, ನನ್ನ ಕುಟುಂಬ ಮತ್ತು ಮಿತ್ರರ ನಿರೀಕ್ಷಣೆಗಳೊಂದಿಗೆ ಸಂಘರ್ಷಕ್ಕೊಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾನೇನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ಹೌದು, ನೀನು ಎರಡನ್ನೂ ಸಂತುಲನದಲ್ಲಿರಿಸಬೇಕು. ನಿನ್ನ ಸಂತೋಷದ ಹುಡುಕಾಟ ಮತ್ತು ನಿನ್ನಿಂದ ಇತರರು ನಿರೀಕ್ಷಿಸುವುದರ ಮಧ್ಯೆ ಸಂತುಲನವನ್ನು ಇರಿಸಿಕೋ. ಅದು ಸ್ವಲ್ಪ ನಾಜೂಕಾದುದು, ಆದರೆ ನೀನು ಖಂಡಿತವಾಗಿ ಪ್ರಯತ್ನವನ್ನು ಮಾಡಬೇಕು.

ಪ್ರಶ್ನೆ: ಮಾನವರಿಗಿರುವ ಅತ್ಯಂತ ದೊಡ್ಡ ಮಿತಿ  ಏನೆಂಬುದನ್ನು ದಯವಿಟ್ಟು ನಮಗೆ ತಿಳಿಸಿ. 
ಶ್ರೀ ಶ್ರೀ ರವಿಶಂಕರ್: ಶರೀರಕ್ಕೆ ಮಿತಿಯಿದೆ, ಮನಸ್ಸಿಗೆ ಮಿತಿಯಿದೆ, ಆದರೆ ಆತ್ಮಕ್ಕೆ ಯಾವುದೇ ಮಿತಿಯಿಲ್ಲ. ನೀನು ಶರೀರವೆಂದು ನೀನು ಯೋಚಿಸುವಾಗ ನಿನಗೆ ಮಿತಿಯಿರುತ್ತದೆ. ಆಗ ನಿನಗೆ ಅಷ್ಟು ಮಾತ್ರ ಮಾಡಲು ಸಾಧ್ಯವಾಗುತ್ತದೆ. ನೀನು ಮನಸ್ಸೆಂದು ನೀನು ಯೋಚಿಸುವಾಗ, ಮನಸ್ಸಿಗೆ ಕೂಡಾ ಸ್ವಲ್ಪ ಮಿತಿಯಿರುತ್ತದೆ. ಆದರೆ ನಿನ್ನ ಪ್ರೀತಿಗೆ ಯಾವುದೇ ಮಿತಿಯಿಲ್ಲ. ನಿನ್ನ ಪ್ರಜ್ಞೆಗೆ ಯಾವುದೇ ಮಿತಿಯಿಲ್ಲ. ನೋಡು, ಒಂದು ಚಿಕ್ಕ ಸೆಲ್ ಫೋನಿನೊಂದಿಗೆ ನೀನು ಹೇಗೆ ಇಡಿಯ ಪ್ರಪಂಚವನ್ನು ತಲಪಬಹುದು. ಒಂದು ಸೆಲ್ ಫೋನಿನೊಂದಿಗೆ ನೀನು ಎಷ್ಟು ಫೋನುಗಳನ್ನು ಬೇಕಾದರೂ ತಲಪಬಹುದು, ಅಲ್ಲವೇ? ಅದೇ ರೀತಿಯಲ್ಲಿ, ಸೆಲ್ ಫೋನನ್ನು ಆವಿಷ್ಕರಿಸಿದ ನಮ್ಮ ಮನಸ್ಸು ಸೆಲ್ ಫೋನಿಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ. ನೀನು ಕೇವಲ ಅದು ಲಭ್ಯವಾಗುವಂತೆ ಮಾಡಬೇಕು.

ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಬಹಳ ದುರಹಂಕಾರಿಯೆಂದು ಕೆಲವೊಮ್ಮೆ ನನಗನಿಸುತ್ತದೆ. ಈ ದುರಹಂಕಾರವನ್ನು ನಾನು ತೊಡೆದು ಹಾಕುವುದು ಹೇಗೆ? ನಾನು ಆರ್ಟ್ ಆಫ್ ಲಿವಿಂಗ್ ಕೋರ್ಸನ್ನು ಮಾಡಿದ್ದೇನೆ ಮತ್ತು ನಾನು ನನ್ನ ಅಭ್ಯಾಸಗಳನ್ನು ಮಾಡುತ್ತಿದ್ದೇನೆ.
ಶ್ರೀ ಶ್ರೀ ರವಿಶಂಕರ್: ಒಂದು ಸಂಗತಿಯನ್ನು ನೀನು ಗಮನಿಸಬೇಕು, ಮೊದಲು ಕೂಡಾ ನೀನು ದುರಹಂಕಾರಿಯಾಗಿದ್ದೆ, ಆದರೆ ನಿನಗೆ ಇದರ ಅರಿವಿರಲಿಲ್ಲ. ಆದರೆ ಈಗ ಕನಿಷ್ಠಪಕ್ಷ, ನೀನು ದುರಹಂಕಾರಿಯಾಗಿರುವೆಯೆಂಬುದು ನಿನಗೆ ಅರಿವಾಗಿದೆ. ಆ ಅರಿವು ಅಲ್ಲಿದೆ, "ಓ, ಇದು ಆಗುತ್ತಿದೆ." ಈ ಅರಿವನ್ನು ಹೊಂದಿರುವುದು ಒಳ್ಳೆಯದು. ಅದರಿಂದ ಹೊರಬರುವಲ್ಲಿ ಇದು ಮೊದಲನೆಯ ಹೆಜ್ಜೆ. ಎರಡನೆಯ ಹೆಜ್ಜೆಯೆಂದರೆ, ನಿನ್ನ ಸ್ವಂತ ಜೀವನದ ಬಗ್ಗೆ ಒಂದು ವಿಶಾಲವಾದ ದೃಷ್ಟಿಕೋನವನ್ನಿರಿಸುವುದು.
ನೀನು ಜ್ಞಾನದಲ್ಲಿ ಹೆಚ್ಚು ಹೆಚ್ಚು ಮುಳುಗಿದಷ್ಟೂ, ಮನಸ್ಸು ಆಡುವ ಈ ಎಲ್ಲಾ ಚಿಕ್ಕ ಆಟಗಳು ಒಂದು ಮಗುವು ಆಟವಾಡುವಂತೆ ಎಂಬುದನ್ನು ನೀವು ಕಾಣುವಿರಿ. ಒಮ್ಮೆ ನೀವು ಇದನ್ನು ನೋಡಿದ ಬಳಿಕ, ನೀವು ಇದನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಮತ್ತು ಇದರಿಂದಾಗಿ ನೀವಿದನ್ನು ಸ್ವೀಕರಿಸುವಿರಿ ಹಾಗೂ ಅದರಿಂದಾಚೆಗೆ ಸಾಗುವಿರಿ.
ಮನಸ್ಸೆಂಬುದು, ಒಂದು ಚಿಕ್ಕ ಮಗುವು ಆಟವಾಡುವಂತೆ ಎಂಬುದನ್ನು ನೀವು ಕಂಡುಕೊಂಡಾಗ, ನೀವದನ್ನು ಒಂದು ದೊಡ್ಡ ಹಿನ್ನೆಲೆಯಿಂದ, ಒಂದು ದೊಡ್ಡ ದೃಷ್ಟಿಯಿಂದ ನೋಡುವಿರಿ.

ಗುರುವಾರ, ಆಗಸ್ಟ್ 30, 2012

ಪ್ರಪಂಚದ ಅತ್ಯಮೂಲ್ಯ ವಸ್ತು

30
2012
Aug
ಬ್ರೆಜ಼ಿಲ್, ದಕ್ಷಿಣ ಅಮೇರಿಕಾ

ಗ ನಾನು ನಿಮಗೆ ಒಂದು ಬಹಳ ಗಂಭೀರವಾದ ಪ್ರಶ್ನೆಯನ್ನು ಕೇಳಲಿದ್ದೇನೆ: ನೀವು ನಿಜವಾಗಿ ಒಬ್ಬ ವ್ಯಕ್ತಿಗೆ ವಂದಿಸುತ್ತೀರಾ ಅಥವಾ ಅದನ್ನು ಒಂದು ಉಪಚಾರಕ್ಕಾಗಿ ಮಾಡುತ್ತೀರಾ?
ನೋಡಿ, ದಿನನಿತ್ಯ ನಾವು ಜನರಿಗೆ ವಂದಿಸುತ್ತೇವೆ, ನಾವು ಶುಭಾಶಯಗಳನ್ನು ಅದಲು ಬದಲು ಮಾಡಿಕೊಳ್ಳುತ್ತೇವೆ. ಅದೆಲ್ಲವೂ ಒಂದು ಬಹಳ ಔಪಚಾರಿಕ ನೆಲೆಯಲ್ಲಿ. ಅಲ್ಲವೇ? ಒಬ್ಬರು ಒಂದು ಲೋಟ ನೀರು ತಂದಾಗ ನಾವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳುತ್ತೇವೆ. ಆ ’ಬಹಳ’ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ನೀವು ಸಹಾರಾ ಮರುಭೂಮಿಯಲ್ಲಿದ್ದು, ನಿಮಗೆ ಬಹಳ ಬಾಯಾರಿಕೆಯಾಗಿದ್ದಾಗ ಯಾರಾದರೂ ನಿಮಗೆ ಒಂದು ಲೋಟ ನೀರು ತಂದು ಕೊಟ್ಟಲ್ಲಿ ನೀವು, "ನಿಮಗೆ ಬಹಳ ಧನ್ಯವಾದಗಳು" ಎಂದು ಹೇಳಿದರೆ, ಅದು ವಿಶ್ವಾಸಾರ್ಹವಾದುದು.
ಆದುದರಿಂದ ಜೀವನದಲ್ಲಿ, ಎಲ್ಲಾ ಸಮಯದಲ್ಲೂ ನಾವು ಕೇವಲ ಬಾಹ್ಯ ಮಟ್ಟದಲ್ಲಿ ವ್ಯವಹರಿಸುವಾಗ ಮತ್ತು ನಮ್ಮಲ್ಲಿ ಆಳತೆಯ ಕೊರತೆಯಿರುವಾಗ, ಜೀವನವು ಬಹಳ ಶುಷ್ಕವಾದುದು ಹಾಗೂ ಅರ್ಥವಿಲ್ಲದುದು ಎಂಬ ಅನುಭವವಾಗುತ್ತದೆ. ಸತ್ಯತೆಯ, ಪ್ರಾಮಾಣಿಕತೆಯ ಮತ್ತು ಹೃದಯದಿಂದ ಹೃದಯಕ್ಕೆ ನಿಜವಾದ ಸಂಬಂಧವಿರುವ ಇನ್ನೊಂದು ಮಟ್ಟಕ್ಕೆ ನಾವು ಹೋಗಬೇಕು. ಅದನ್ನೇ ನಾನು ಆಧ್ಯಾತ್ಮಿಕತೆ ಎಂದು ಕರೆಯುವುದು. ನಿಮ್ಮ ಅಸ್ತಿತ್ವದ ನೈಜತೆಯೊಂದಿಗೆ ನೀವು ನಿಮ್ಮನ್ನು ಗುರುತಿಸಿಕೊಳ್ಳುವಾಗ, ಅದು ಆಧ್ಯಾತ್ಮಿಕತೆ. ಮಕ್ಕಳಾಗಿ ನಾವೆಲ್ಲರೂ ಅದನ್ನು ಮಾಡುತ್ತಿದ್ದೆವು.
ನಿಮಗೆ ನೆನಪಿದೆಯೇ, ನೀವೊಂದು ಮಗುವಾಗಿದ್ದಾಗ, ಇಡಿಯ ಗ್ರಹವು, ಸಂಪೂರ್ಣ ವಿಶ್ವವು ಬಹಳಷ್ಟು ಜೀವಂತವಾಗಿತ್ತು. ಚಂದ್ರನು ಮಾತನಾಡುತ್ತಿದ್ದ, ಮರಗಳು ಮಾತನಾಡುತ್ತಿದ್ದವು ಮತ್ತು ಪ್ರಾಣಿಗಳು ಮಾತನಾಡುತ್ತಿದ್ದವು. ನಿಮ್ಮ ಮತ್ತು ಸಂಪೂರ್ಣ ವಿಶ್ವದ ನಡುವೆ ಒಂದು ಸಹಜವಾದ ಮಾತುಕತೆಯಿತ್ತು. ನಿಮಗೆ ನೆನಪಿದೆಯೇ? ಕಾರ್ಟೂನುಗಳಲ್ಲಿನ ಮಕ್ಕಳನ್ನು ನೀವು ನೋಡಿದ್ದೀರಾ? ಅವರೊಂದಿಗೆ ಮರಗಳು ಕೂಡಾ ಮಾತನಾಡುತ್ತವೆ. ಅದೊಂದು ಬೇರೆಯ ಪ್ರಪಂಚ.
ಈಗ ಇರುವ ಪ್ರಶ್ನೆಯೆಂದರೆ, ಈಗಲೂ ನಮಗೆ ಆ ಮುಗ್ಧತೆಯನ್ನು ಉಳಿಸಿಕೊಳ್ಳುವುದರ ಜೊತೆಯಲ್ಲಿಯೇ ಬುದ್ಧಿವಂತಿಕೆಯ ಉನ್ನತಿಗೇರಲು ಸಾಧ್ಯವಿದೆಯೇ?
ನಾನು ಹೇಳುತ್ತೇನೆ, "ಹೌದು, ನಮಗೆ ಸಾಧ್ಯವಿದೆ."
ಬುದ್ಧಿವಂತಿಕೆ ಮತ್ತು ಮುಗ್ಧತೆ ಜೊತೆಯಲ್ಲಿ, ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಅಮೂಲ್ಯವಾದುದು. ಬುದ್ಧಿವಂತರು ಮತ್ತು ಮೋಸಗಾರರಾಗಿರುವ ಜನರಿರುತ್ತಾರೆ. ಮುಗ್ಧ ಹಾಗೂ ಮೂರ್ಖರಾಗಿರಲು ಸುಲಭ. ಆದರೆ ನಿಜವಾಗಿ ಅಪೇಕ್ಷಾರ್ಹವಾದುದು ಯಾವುದೆಂದರೆ, ಬುದ್ಧಿವಂತಿಕೆಯನ್ನು ತರುವ ಹಾಗೂ ಅದೇ ಸಮಯದಲ್ಲಿ ಮುಗ್ಧತೆಯನ್ನು ಉಳಿಸಿಕೊಳ್ಳುವ ಶಿಕ್ಷಣ.
ಆದುದರಿಂದ, ಈಗ ನಾವು ಹಾಯಾಗಿರುವುದರಿಂದ ಮತ್ತು ಅನೌಪಚಾರಿಕತೆಯನ್ನು ಅನುಭವಿಸುತ್ತಿರುವುದರಿಂದ, ಇವತ್ತು ನಾನು ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ನೀವು ಬಯಸುವಿರಿ?
(ಸಭಿಕರು: ಪ್ರೀತಿ; ಹುಟ್ಟು; ಕ್ಷಮಾಪಣೆ; ಸಂಬಂಧ; ನಿರ್ಧಾರಗಳು; ದೇವರು; ಭ್ರಷ್ಟಾಚಾರ ಮತ್ತು ಶಾಂತಿ; ಸಹಾನುಭೂತಿ; ಕೋಪ; ಭಯ; ಬಂಡವಾಳಶಾಹಿತ್ವ; ಭರವಸೆ; ತಾಳ್ಮೆ)
ನಾನು ತಾಳ್ಮೆಯ ಬಗ್ಗೆ ಮಾತನಾಡಬೇಕೆಂದು ನೀವು ಬಯಸುತ್ತೀರಾ? ಅದನ್ನು ನಾನು ಮುಂದಿನ ವರ್ಷ ಮಾಡುತ್ತೇನೆ. ಆಮೇಲೆ......
ಹೇಳಿ, ಇವತ್ತು ನಾವು ಯಾವ ವಿಷಯದ ಬಗ್ಗೆ ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ? ನಿಮಗೆ ಗೊತ್ತಿದೆಯಾ, ನಾವು ನಮ್ಮ ಮಾತಿಗಿಂತಲೂ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಯಪಡಿಸುತ್ತೇವೆ. ಅಲ್ಲವೇ? ನಾವು ಏನು ಮಾತನಾಡುವೆವೆಂಬುದು ನಿಜಕ್ಕೂ ಮುಖ್ಯವೇ?
ಪ್ರಪಂಚವೆಲ್ಲಾ ಕೇವಲ ಕಂಪನಗಳು. ನೀವೊಬ್ಬ ಭೌತಶಾಸ್ತ್ರಜ್ಞನಲ್ಲಿ ಮಾತನಾಡಿದರೆ, ಸಂಪೂರ್ಣ ವಿಶ್ವವು ಒಂದು ತರಂಗ ಪ್ರಕ್ರಿಯೆಯಲ್ಲದೆ ಮತ್ತೇನೂ ಅಲ್ಲವೆಂದು ಅವನು ಹೇಳುವನು. ನಮ್ಮಲ್ಲಿ ಪ್ರತಿಯೊಬ್ಬರೂ ತರಂಗಗಳಲ್ಲದೆ ಮತ್ತೇನೂ ಅಲ್ಲ. ನೀವು ನಿಮ್ಮ ಕೇಂದ್ರದೊಂದಿಗೆ ಸಂಪರ್ಕದಲ್ಲಿದ್ದರೆ, ತರಂಗಗಳು ಧನಾತ್ಮಕವಾಗಿರುತ್ತವೆ. ನೀವು ನಿಮ್ಮ ಕೇಂದ್ರದೊಂದಿಗೆ ಸಂಪರ್ಕದಲ್ಲಿ ಇರದಿದ್ದರೆ ಮತ್ತು ಸಿಲುಕಿಹಾಕಿಕೊಂಡಿದ್ದರೆ, ಆಗ ನಿಮ್ಮ ತರಂಗಗಳು ಋಣಾತ್ಮಕವಾಗುತ್ತವೆ.
ಶಾಂತಿ, ಪ್ರೀತಿ, ಸಹಾನುಭೂತಿ, ಇವುಗಳೆಲ್ಲಾ ನಮ್ಮ ನಿಜವಾದ ತರಂಗಗಳಾಗಿವೆ; ವಿಕೃತಿಯಿಲ್ಲದ ನಮ್ಮ ನಿಜವಾದ ತರಂಗಗಳು. ಇವುಗಳು ನಮ್ಮಿಂದ ಬರುವ ಧನಾತ್ಮಕ ಕಂಪನಗಳು. ನೀವು ಕೋಪಗೊಂಡಾಗ, ದುಃಖಗೊಂಡಾಗ, ನಕಾರಾತ್ಮಕವಾದಾಗ, ನೀವೇನು ಮಾಡುವಿರಿ? ನೀವದನ್ನು ಧನಾತ್ಮಕವಾಗಿ ಬದಲಾಯಿಸಬೇಕು. ಆದರೆ ಇದನ್ನು ಮಾಡುವುದು ಹೇಗೆಂದು, ಮನೆಯಲ್ಲಾಗಲೀ ಶಾಲೆಯಲ್ಲಾಗಲೀ ಯಾರೂ ನಮಗೆ ಕಲಿಸಲಿಲ್ಲ. ಅಲ್ಲವೇ? ಅಜ್ಜಿ ನಮಗೆ ಹೇಳಿರಬಹುದು, "ಮೂಲೆಗೆ ಹೋಗಿ ಹತ್ತರವರೆಗೆ ಎಣಿಸು", ಅಷ್ಟೆ. ಈ ದಿನಗಳಲ್ಲಿ, ಹತ್ತರವರೆಗೆ ಅಥವಾ ನೂರರವರೆಗೆ ಎಣಿಸುವುರಿಂದ ಯಾವುದೇ ಉಪಕಾರವಾಗುವುದಿಲ್ಲ.
ನೀವು ನಿಮ್ಮ ಮನಸ್ಸನ್ನು ಗಮನವಿಟ್ಟು ನೋಡಿದರೆ, ನಿಮ್ಮ ಮನಸ್ಸು ಕಳೆದುಹೋದುದರ ಬಗ್ಗೆ ಕೋಪದಲ್ಲಿರುತ್ತದೆ ಅಥವಾ ಭವಿಷ್ಯದ ಬಗ್ಗೆ ಆತಂಕಗೊಂಡಿರುತ್ತದೆ. ಎರಡರಿಂದಲೂ ಯಾವುದೇ ಉಪಯೋಗವಿಲ್ಲ. ಅಲ್ಲವೇ? ಕಳೆದುಹೋದುದರ ಬಗ್ಗೆ ಕೋಪಗೊಳ್ಳುವುದರಲ್ಲಿ ಯಾವ ಅರ್ಥವಿದೆ, ಅದು ಅದಾಗಲೇ ಹೋಗಿಯಾಯಿತು. ಭವಿಷ್ಯದ ಬಗ್ಗೆ ಆತಂಕಗೊಳ್ಳುವುದರಲ್ಲಿ ಯಾವ ಅರ್ಥವಿದೆ? ಅದು ಅರ್ಥವಿಲ್ಲದ್ದು.
ಈಗ, ಯಾವುದು ವರ್ತಮಾನದ ಕ್ಷಣಕ್ಕೆ ಬರಲು ನಿಮಗೆ ಸಹಾಯ ಮಾಡುವುದೋ ಅದು ಧ್ಯಾನವಾಗಿದೆ. ನೋಡಿ, ಜನರಿಗೆ ಕೆಲವೇ ನಿಮಿಷಗಳ ಕಾಲ, ಪ್ರತಿದಿನವೂ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡುವುದು ಹೇಗೆಂದು ತಿಳಿದಿದ್ದರೂ, ಅವರಿಗೆ ಒತ್ತಡವನ್ನು ತೊಡೆದು ಹಾಕಿ ಸಂತೋಷವಾಗಿರಲು ಸಾಧ್ಯವಿದೆ.
ಹಿಂಸಾರಹಿತ ಸಮಾಜ, ರೋಗರಹಿತ ಶರೀರ, ಗೊಂದಲರಹಿತ ಮನಸ್ಸು, ತಡೆರಹಿತ ಬುದ್ಧಿ, ಆಘಾತರಹಿತ ನೆನಪು ಮತ್ತು ದುಃಖರಹಿತ ಆತ್ಮ - ಇದನ್ನು ನೋಡುವುದು ನನ್ನ ಕಲ್ಪನೆಯಾಗಿದೆ. ನಿಮ್ಮಲ್ಲಿ ಎಷ್ಟು ಮಂದಿ ಇದಕ್ಕೆ ಸೇರಿಕೊಳ್ಳಲು ಇಷ್ಟಪಡುವಿರಿ?
(ಸಭಿಕರಲ್ಲಿ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗಳಿಗೆ ನಾವು ಒಂದು ಉತ್ತಮವಾದ ಪ್ರಪಂಚವನ್ನು ನೀಡಬೇಕು. ಹೆಚ್ಚಿನ ಪ್ರೀತಿಯಿರುವ, ಹೆಚ್ಚಿನ ಸಹಾನುಭೂತಿಯಿರುವ ಮತ್ತು ಬಂದೂಕಿನ ಸಂಸ್ಕೃತಿಯಿಲ್ಲದಿರುವ ಒಂದು ಪ್ರಪಂಚವನ್ನು ನಾವು ಅವರಿಗೆ ಕೊಡಬೇಕು. ನಮ್ಮ ಮಕ್ಕಳಿಗೆ ಮಾದಕ ದ್ರವ್ಯಗಳ ಅಥವಾ ಹಿಂಸೆಯ ಸಂಸ್ಕೃತಿ ಬೇಕಾಗಿಲ್ಲ. ಹೆಚ್ಚಿನ ಪ್ರೀತಿಯಿರುವ, ಮಾನವೀಯತೆಯಿರುವ ಮತ್ತು ಸಹಾನುಭೂತಿಯಿರುವ ಸಮಾಜವನ್ನು, ಒಂದು ಆರೋಗ್ಯಕರ ಸಮಾಜವನ್ನು ಪಡೆಯಲು ಅವರು ಅರ್ಹರಾಗಿದ್ದಾರೆ. ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ಹಾಗಾದರೆ ನಾವು ಕೆಲಸ ಮಾಡಬೇಕಾಗಿರುವುದು ಅದರ ಕಡೆಗೆ.

ಪ್ರಶ್ನೆ: ಭೂಮಿಯ ಮೇಲೆ ನಮ್ಮ ಧ್ಯೇಯವೇನು?
ಶ್ರೀ ಶ್ರೀ ರವಿಶಂಕರ್: ಭೂಮಿಯ ಮೇಲೆ ನಮ್ಮ ಧ್ಯೇಯವಲ್ಲದುದು ಯಾವುದು? ಮೊದಲು ನಾವು ಅದರ ಒಂದು ಪಟ್ಟಿಯನ್ನು ಮಾಡಬೇಕು. ನಿಮ್ಮ ಧ್ಯೇಯವೆಂದರೆ, ದುಃಖಿತರಾಗದೇ ಇರುವುದು ಮತ್ತು ಇತರರನ್ನು ದುಃಖಿತರನ್ನಾಗಿಸದೇ ಇರುವುದು, ಸರಿಯಾ?! ಈಗ ನೀವು ನಿಮ್ಮ ಧ್ಯೇಯವಲ್ಲದೇ ಇರುವುದನ್ನು ತೆಗೆಯುತ್ತಾ ಹೋದರೆ, ಕೊನೆಯಲ್ಲಿ ನೀವು ನಿಮ್ಮ ಧ್ಯೇಯದ ಕಡೆಗೆ ಬರುವಿರಿ.

ಪ್ರಶ್ನೆ: ಇತರರು ನಕಾರಾತ್ಮಕವಾಗಿದ್ದರೆ, ಅದರಿಂದ ಪ್ರಭಾವಕ್ಕೊಳಗಾಗದೇ ಇರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನೀನು ಹೆಚ್ಚು ಕೇಂದ್ರಿತನಾಗು ಮತ್ತು ಕುಂದುಕೊರತೆಗೆ ಸ್ವಲ್ಪ ಜಾಗ ಬಿಡು. ಕೆಲವೊಮ್ಮೆ ನಾವು ಕುಂದುಕೊರತೆಗೆ ಜಾಗ ಬಿಡುವುದಿಲ್ಲ ಮತ್ತು ಇದರಿಂದಾಗಿ ನಾವು ತೊಂದರೆಗೊಳಗಾಗುತ್ತೇವೆ.
ಯಾರಾದರೂ ನಕಾರಾತ್ಮಕವಾಗಿದ್ದರೆ, ಸ್ವಲ್ಪ ಹೊತ್ತಿನ ವರೆಗೆ ನಕಾರಾತ್ಮಕವಾಗಿರಲು ಅವರಿಗೆ ಹಕ್ಕಿದೆ. ಅವರು ಹಾಗಿರಲಿ ಬಿಡಿ. ಅವರಿಗೆ ಸ್ವಲ್ಪ ಜಾಗ ಕೊಡಿ. ನಾನು ನಿಮ್ಮಲ್ಲಿ ಹೇಳುತ್ತಿದ್ದೇನೆ, ನಾನಿಲ್ಲಿರುವುದು ನಿಮ್ಮೆಲ್ಲಾ ಚಿಂತೆಗಳನ್ನು ಸಂಗ್ರಹಿಸಲು. ಆದುದರಿಂದ ನಿಮ್ಮೆಲ್ಲಾ ಸಮಸ್ಯೆಗಳನ್ನು, ತೊಂದರೆಗಳನ್ನು ಮತ್ತು ಚಿಂತೆಗಳನ್ನು ನನಗೆ ಕೊಡಿ. ನಿಮ್ಮ ಮುಖದ ಮೇಲೆ ಒಂದು ಮಾಸದ ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ.

ಪ್ರಶ್ನೆ: ನಮಗೆ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್: ಜೀವನದಲ್ಲಿ ಭಾವನೆಗಳಿಗಿಂತ ಎಷ್ಟೋ ಹೆಚ್ಚು ಮೂಲಭೂತವಾದುದು ಏನೋ ಒಂದಿದೆ ಎಂಬುದು ನಮಗೆ ತಿಳಿದಾಗ ನಾವು ಸುಲಭವಾಗಿ ಭಾವನೆಗಳಾಚೆಗೆ ಹೋಗಬಹುದು; ಮತ್ತು ಅದುವೇ ಆತ್ಮ, ಜೀವನ ಶಕ್ತಿ. ಅದು ಬದಲಾಗುವುದೇ ಇಲ್ಲ.

ಪ್ರಶ್ನೆ: ಪ್ರೇಮ ಮತ್ತು ಬಯಕೆ/ಕಾಮದ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಪ್ರೇಮದಲ್ಲಿ ಇನ್ನೊಬ್ಬರು ಮುಖ್ಯವಾಗಿರುತ್ತಾರೆ. ಕಾಮದಲ್ಲಿ ನೀವು ಮುಖ್ಯವಾಗಿರುತ್ತೀರಿ.

ಪ್ರಶ್ನೆ: ಪ್ರೀತಿಯ ಗುರೂಜಿ, ಮನಸ್ಸಿನಲ್ಲಿ ಬಹಳಷ್ಟು ವಿರೋಧವಿರುವ ಜನರಿಗೆ ನಾನು ಹೇಗೆ ಸಹಾಯ ಮಾಡಬಹುದು?
ಶ್ರೀ ಶ್ರೀ ರವಿಶಂಕರ್: ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರಿದ್ದಾರೆ. ನಾವು ಅವರೆಲ್ಲರನ್ನೂ ಅವರಿರುವಂತೆಯೇ ಸ್ವೀಕರಿಸಬೇಕು. ವಿರೋಧವಿರುವ ಜನರಿದ್ದಾರೆ. ಅದು ಪರವಾಗಿಲ್ಲ. ಅವರು ತಮ್ಮದೇ ಆದ ವೇಗದಲ್ಲಿ ನಡೆಯಲು ಬಿಡಿ. ಈ ಗ್ರಹದಲ್ಲಿ ಮೊಲಗಳಿವೆ, ಜಿಂಕೆಗಳಿವೆ ಮತ್ತು ಬಸವನ ಹುಳಗಳಿವೆ. ಒಂದು ಬಸವನ ಹುಳವು ಒಂದು ಮೊಲದಷ್ಟು ವೇಗವಾಗಿ ಓಡಬೇಕೆಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ, ಅಲ್ಲವೇ? ಇತರರು ಜಿಂಕೆಯಂತೆ ಓಡುತ್ತಿದ್ದರೂ ಒಬ್ಬರು ಒಂದು ಬಸವನ ಹುಳದ ಗತಿಯಲ್ಲಿ ನಡೆಯಲು ಬಿಡಿ. ಪ್ರಪಂಚವಿರುವುದೇ ಹಾಗೆ. ನಗುನಗುತ್ತಾ ಇರಿ ಮತ್ತು ಮುಂದಕ್ಕೆ ಸಾಗುತ್ತಾ ಇರಿ.

ಪ್ರಶ್ನೆ: ಜನರನ್ನು ಕ್ಷಮಿಸಲು ನನಗೆ ಕಷ್ಟವಾಗುತ್ತದೆ.
ಶ್ರೀ ಶ್ರೀ ರವಿಶಂಕರ್: ಅವರನ್ನು ಕ್ಷಮಿಸಬೇಡ, ಮತ್ತು ನಂತರ ನೋಡು, ಅದು ಸುಲಭವಾಗುವುದೇ ಎಂದು. ಒಬ್ಬರನ್ನು ನೀನು ಕ್ಷಮಿಸದೇ ಇದ್ದರೆ, ನೀನು ಯಾವತ್ತೂ ಅವರ ಬಗ್ಗೆ ಯೋಚಿಸುತ್ತಾ ಇರುವೆ.
ಒಬ್ಬರ ಕಡೆಗಿರುವ ಕೋಪವನ್ನು ಹಾಗೇ ಹಿಡಿದಿರಿಸಿಕೊಳ್ಳುವುದು ನಿಜವಾಗಿಯೂ ಸುಲಭವೇ? ದೇವರೇ, ನಮ್ಮ ಬಹಳಷ್ಟು ಶಕ್ತಿಯು ಅದರಲ್ಲಿ ವ್ಯರ್ಥವಾಗುತ್ತದೆ. ನೀವು ಇತರರನ್ನು ಯಾಕೆ ಕ್ಷಮಿಸುವಿರೆಂದು ನಿಮಗೆ ತಿಳಿದಿದೆಯೇ? ಅದು ನಿಮಗೋಸ್ಕರವೇ.
ನೀವೊಬ್ಬ ಅಪರಾಧಿಯನ್ನು ಒಬ್ಬ ಬಲಿಪಶುವನ್ನಾಗಿ ಕೂಡಾ ನೋಡುವಾಗ, ನಿಮಗೆ ಸುಲಭವಾಗಿ ಅವರನ್ನು ಕ್ಷಮಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಅಪರಾಧಿಯೂ ಅಜ್ಞಾನದ, ಸಂಕುಚಿತ ಮನಃಸ್ಥಿತಿಯ ಬಲಿಪಶುವಾಗಿದ್ದಾನೆ. ಅವರಿಗೆ ಜೀವನದ ವಿಶಾಲತೆಯ ಮತ್ತು ಸೌಂದರ್ಯದ ಬಗ್ಗೆ ತಿಳಿಯದು. ಆದುದರಿಂದ ಅವರು ಸ್ವಾರ್ಥಿಗಳಾಗಿರುವ ಹಾಗೂ ಇತರರ ಬಗ್ಗೆ ಕಾಳಜಿ ವಹಿಸದ ಈ ತಿಳಿಗೇಡಿ ತಪ್ಪುಗಳನ್ನು ಮಾಡುತ್ತಾರೆ. ಅದು ಯಾಕೆಂದರೆ ಅವರ ಮನಸ್ಸು ಚಿಕ್ಕದು. ಆದುದರಿಂದ ನಾವು ಅವರನ್ನು ಕ್ಷಮಿಸಬೇಕು. ಮತ್ತೆ, ನೀನು ಮಾಡಿದಂತೆ, ವಿಶಾಲವಾಗಿ ಯೋಚಿಸುವ ಹಾಗೂ ಉದಾರತೆಯನ್ನು ಅನುಭವಿಸುವ ಅವಕಾಶವು ಅವರಿಗೆ ಸಿಗಲಿಲ್ಲವೆಂಬುದನ್ನು ನೀನು ನೋಡಬೇಕು. ಆದುದರಿಂದ, ನೀನು ಅವರ ಬಗ್ಗೆ ಕೇವಲ ಸಹಾನುಭೂತಿ ವ್ಯಕ್ತಪಡಿಸಬಹುದು ಮತ್ತು ಅವರನ್ನು ಕ್ಷಮಿಸಬಹುದು.

ಮಂಗಳವಾರ, ಆಗಸ್ಟ್ 28, 2012

ಸರ್ವರಿಗೂ ಅತ್ಯಗತ್ಯವಾದ ಶಕ್ತಿ ಚಕ್ರ ಸ೦ಧಾನ


ಅಮೃತಬಿ೦ದು’ ಸರಣಿಯ ಬರಹಗಳು

ಏಳನೆಯ ಕ೦ತು


ನಮ್ಮ ವಿಶ್ವ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೪/೦೪/೨೦೦೩ರ೦ದು ಪ್ರಕಟವಾಗಿತ್ತು)

ಮ್ಮ ತಲೆಯೇ ನಮ್ಮ ಪ್ರಪಂಚ.

ಈ ತಲೆಯೊಳಗೆ ನಾವು ಪ್ರಪಂಚ ಇಟ್ಟುಕೊಂಡಿದ್ದೀವಿ. ವಾಸ್ತವವಾಗಿ ಪ್ರಪಂಚದಲ್ಲಿ ಇದೆಯೋ ಇಲ್ಲವೋ, ನಾವು ತಲೆಯಲ್ಲಿ ಬೇಕಾದಷ್ಟು ಕಲ್ಪನೆ ಮಾಡಿಕೊಂಡುಬಿಡುತ್ತೀವಿ.
ಜೀವನದಲ್ಲಿರತಕ್ಕಂಥ ಶೇಕಡಾ ಎಪ್ಪತ್ತೈದರಷ್ಟು ಸಮಸ್ಯೆಗಳು ನಮ್ಮ ತಲೆಯಲ್ಲಿ ಮೂಡುವ ಕಲ್ಪನೆಯಿಂದಲೇ ಉಂಟಾಗಿರುವಂಥವುಗಳು.
ನಿಮಗೆ ಸುಖ ಸಿಕ್ಕಿಲ್ಲ ಪ್ರಪಂಚದಲ್ಲಿ, ಆನಂದ ಸಿಕ್ಕಿಲ್ಲ ಜೀವನದಲ್ಲಿ ಅಂದರೆ ಅದಕ್ಕೆ ನಿಮ್ಮ ಪ್ರಪಂಚವೇ ಕಾರಣ. ನೀವು ಆ ತರಹ ’ವಿಶ್ವ’ವನ್ನು ರಚನೆ ಮಾಡಿಕೊಂಡಿದ್ದೀರ.
’ವಿಶ್ವ’ ಸಹ ತುಂಬ ವಿಸ್ಮಯಕರವಾದ ಶಬ್ದ. ’ಶ್ವ’ ಎಂದರೆ ಏನು ಗೊತ್ತಾ? ನಿನ್ನೆ ಅಥವಾ ನಾಳೆ. ’ವಿಶ್ವ’ ಎಂದರೆ ವಿಶೇಷವಾಗಿ ನಿನ್ನೆಯನ್ನು ಅಥವಾ ನಾಳೆಯನ್ನು (ಭೂತ, ಭವಿಷ್ಯ) ನಾವು ಮನಸ್ಸಿನಲ್ಲಿ ರಚನೆ ಮಾಡಿಕೊಳ್ಳುವುದು.
ಅದು ಹಾಗಿತ್ತೋ ಇಲ್ಲವೋ ಬಿಡಿ, ನಮ್ಮ ಮನಸ್ಸಿನಲ್ಲಿ ಅದನ್ನು ದೊಡ್ಡದಾಗಿ ವಿಶೇಷವಾಗಿ ರಚನೆ ಮಾಡಿಕೊಂಡುಬಿಡ್ತೀವಿ.

ನಿನ್ನೆಯ ಬಗ್ಗೆ ಚಿಂತೆ, ನಾಳೆಯ ಬಗ್ಗೆ ಕಲ್ಪನೆ. ಅದಕ್ಕೇ ನಮ್ಮ ಜೀವನದಲ್ಲಿ ಉತ್ಸಾಹ ಇಲ್ಲ, ಆನಂದ ಇಲ್ಲ, ಬೇಸರಿಕೆ.
ಜೀವನದ ಲಕ್ಷಣ ಉತ್ಸಾಹ. ಆದರೆ ಜೀವನ ಯಾವ ಕಡೆ ಹರಿಯುತ್ತಾ ಇದೆ, ನೋಡಿ ಸ್ವಲ್ಪ ಗಮನಿಸಿ.
ನಿಮ್ಮ ಜೀವನದಲ್ಲಿ ದಿನದಿನಕ್ಕೆ ಉತ್ಸಾಹ ಹೆಚ್ಚಾಗುತ್ತಿದೆಯೋ ಅಥವಾ ದಿನದಿನಕ್ಕೆ ನೀವು ಉತ್ಸಾಹ ಕಳೆದುಕೊಳ್ಳುತ್ತಿದ್ದೀರೋ? ಏನು?
ಒಂದು ಚಿಕ್ಕ ಮಗು ನೋಡಿ. ಐದಾರು ವರ್ಷದ ಮಕ್ಕಳನ್ನು ನೋಡಿ... ಏನು ಉತ್ಸಾಹ! ಅವರ ಶರೀರದ ಕಣಕಣದಿಂದಲೂ ತುಂಬಿ ತುಳುಕುತ್ತಾ ಇರುತ್ತೆ.
ಅದೇ ಸ್ವಲ್ಪ ದೊಡ್ಡವರಾದವರನ್ನು ನೋಡಿ. ದೊಡ್ಡವರಾಗ್ತಾ ಆಗ್ತಾ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಿದೆಯೋ, ಕಡಿಮೆಯಾಗಿದೆಯೋ?

ಈ ಬಗ್ಗೆವಿಶ್ಲೇಷಣೆಹಾಗೂಪರಿಹಾರಮುಂಬರುವಸಂಚಿಕೆಗಳಲ್ಲಿ…

* * * * *

ಶಕ್ತಿ  ಚಕ್ರ - ೧

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೫/೦೪/೨೦೦೩ರ೦ದು ಪ್ರಕಟವಾಗಿತ್ತು)

ಜೀವನದ ಲಕ್ಷಣ ಉತ್ಸಾಹ.

ಯಾವಾಗಿನಿಂದ ಉತ್ಸಾಹ ಕಳೆದುಕೊಳ್ಳಲು ಶುರು ಮಾಡುತ್ತೇವೋ ಆಗಿನಿಂದಲೇ ಸಾಯುವುದಕ್ಕೂ ಶುರು ಮಾಡಿಕೊಂಡುಬಿಟ್ಟೀದ್ದೀವಿ ಅಂತ ತಿಳಿದುಕೊಳ್ಳಬೇಕು.
ಈಗಂತೂ ಉತ್ಸಾಹದಿಂದ, ಪ್ರಸನ್ನ ಚಿತ್ತತೆಯಿಂದ ಇರುವಂಥ ಜನ ತುಂಬಾ ಕಡಿಮೆಯಾಗಿಬಿಟ್ಟಿದ್ದಾರೆ. ಇದು ಏಕೆ ಹೀಗಾಗ್ತಿದೆ? ನಮ್ಮ ’ವಿಶ್ವ’ದಿಂದ ನಮಗೆ ಹೀಗಾಗ್ತಿದೆ.
ಅಂದರೆ ನಾವು ಆ ತರಹ ಪ್ರಪಂಚವನ್ನು ನಮ್ಮ ಸುತ್ತಲೂ ಸೃಷ್ಟಿ ಮಾಡಿಕೊಂಡುಬಿಟ್ಟಿದ್ದೀವಿ.
ಆದರೆ ಇದನ್ನು ಬಿಡುವುದು ಹೇಗೆ? ಹಿಮಾಲಯಕ್ಕೆ ಓಡಿಹೋಗುವುದಾ? ಬೇರೆ ಎಲ್ಲಾದರೂ ಹೋಗಿಬಿಡೋದಾ?
ಬೇಡಾ...ಬೇಡಾ...ನಿನ್ನ ಶರೀರದಲ್ಲಿಯೇ ಇದೆ. ’ಶಕ್ತಿ ಚಕ್ರ ಸಂಧಾನೇ ವಿಶ್ವಸಂಹಾರ:’...

ನಿನ್ನ ಶರೀರದಲ್ಲಿಯೇ ವಿಭಿನ್ನ ಚಕ್ರಗಳಿವೆ.ಈ ಚಕ್ರಗಳನ್ನು ಅನುಸಂಧಾನ ಮಾಡು.ಇದರಲ್ಲಿ ಮನಸ್ಸಿಟ್ಟು ಧ್ಯಾನ ಮಾಡಿದಾಗ ’ಈ ವಿಶ್ವ’, ನಿನ್ನ ತಲೆಯಲ್ಲಿ ಓಡಾಡ್ತಾ ಇದೆಯಲ್ಲ ಚಿಂತೆ, ವಿಚಾರ.. ಅದೆಲ್ಲಾ ಸಂಹಾರವಾಗುತ್ತದೆ, ಶಾಂತವಾಗುತ್ತದೆ. ಬಹಳ ಮಹತ್ವಪೂರ್ಣವಾದ ಸೂತ್ರ ಇದು. ನಮ್ಮಲ್ಲಿ ಉಂಟಾಗುವ ಯಾವುದೇ ಆವೇಶ, ಭಾವನೆ, ಉದ್ವೇಗದಿಂದ ಏನಾಗುತ್ತೆ? ನಮ್ಮ ಶರೀರದ ವಿಭಿನ್ನ ಅಂಗಗಳಲ್ಲಿ ನಮಗೆ ಸಂವೇದನೆ ಉಂಟಾಗುತ್ತದೆ - ಗಮನಿಸಿದ್ದೀರಾ?

ಕೋಪ ಬಂದಾಗ ಎರಡೂ ಹುಬ್ಬಿನ ನಡುವೆ ತಲೆಯಲ್ಲಿ ಸಿಡಿತ ಉಂಟಾಗುತ್ತದೆ.. ದುಃಖ ಆದಾಗ ಗಂಟಲು ಬಿಗಿಹಿಡಿದಂತೆ.., ದ್ವೇಷ ಉಂಟಾದಾಗ ಹೃದಯದಲ್ಲಿ ಎಲ್ಲೋ ಒಂದು ಕಡೆ ಸಂವೇದನೆ ಉಂಟಾಗುತ್ತದೆ. ಹೊಟ್ಟೆಕಿಚ್ಚು ಉಂಟಾದಾಗ ಹೊಟ್ಟೆಯಲ್ಲಿ ಏನೋಕಸಿವಿಸಿ. ಅದಕ್ಕೆ ಅದನ್ನು ಹೊಟ್ಟೆಕಿಚ್ಚು ಎನ್ನುತ್ತೇವೆ. ಅಲ್ಲವೆ?
ಹೀಗೆ ಶರೀರದಲ್ಲಿ ಏಳು ಕೇಂದ್ರಗಳಿವೆ. ಆ ಏಳು ಕೇಂದ್ರಗಳಲ್ಲಿ ಶರೀರದಲ್ಲಿರತಕ್ಕಂಥ ಎಲ್ಲಾ ನಾಡಿಗಳು ಸೇರುತ್ತವೆ. ಅದಕ್ಕೇ ಇದನ್ನು ಚಕ್ರ ಅಂತ ಅಂದರು. ಇದರಲ್ಲಿ ಅಸದ್ಭಾವನೆಯೂ ಉಂಟಾಗುತ್ತದೆ. ಸದ್ಭಾವನೆಯೂ ಉಂಟಾಗುತ್ತದೆ. ನಮ್ಮಲ್ಲಿರುವ ಬಹುವಾದ ಅಸದ್ಭಾವನೆಗಳಿಂದ ಪಾರಾಗುವ ವಿಧಾನವನ್ನು ನಾಳೆ ತಿಳಿದುಕೊಳ್ಳೋಣ.

* * * * *

ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೬/೦೪/೨೦೦೩ರ೦ದು ಪ್ರಕಟವಾಗಿತ್ತು)

ತುಂಬಾ ಸಂತೋಷದಿಂದ ನಕ್ಕಾಗ ’ಹೊಟ್ಟೆ ತುಂಬಾ ನಕ್ಕೆವಪ್ಪ’ ಎನ್ನುತ್ತೀವಿ. ತೃಪ್ತಿ ಆದಾಗಲೂ ’ಹೊಟ್ಟೆ ತುಂಬಿತಪ್ಪ ನಮಗೆ’ ಅನ್ನುತ್ತೀವಿ.

ಸಂತೋಷದಲ್ಲಿ ನಮಗೆ ನಾಭೀ ಕೇಂದ್ರದಲ್ಲಿ ಸಂವೇದನೆ ಉಂಟಾಗುತ್ತದೆ. ಅದೇ ದ್ವೇಷ ಉಂಟಾದಾಗಲೂ, ಪ್ರೇಮ ಉಂಟಾದಾಗಲೂ ಹೃದಯದಲ್ಲಿ ಏನೋ ಸಂವೇದನೆ ಉಂಟಾಗುತ್ತದೆ. ಹಾಗೆಯೇ ದುಃಖ ಉಂಟಾದಾಗಲೂ, ಕೃತಜ್ಞತೆ ಉಂಟಾದಾಗಲೂ ಗಂಟಲಿನಲ್ಲಿ ಸಂವೇದನೆಯಾಗುತ್ತದೆ. ’ಕಂಠ ಬಿಗಿ ಹಿಡಿಯಿತು’, ’ಕಂಠ ತುಂಬಿ ಬಂತು’ ಅನ್ನುತ್ತೀವಿ. ಲೋಕಾರೂಢಿಯಲ್ಲಿಯೇ ಹೀಗೆ ಮಾತನಾಡುತ್ತೀವಿ.

ನಮ್ಮ ಜೀವನದ ಶಕ್ತಿ ಈ ಕೇಂದ್ರಗಳಲ್ಲಿ, ಶಕ್ತಿಚಕ್ರಗಳಲ್ಲಿ ಸರಳವಾಗಿ ಹರಿಯುತ್ತಾ ಇರುತ್ತದೆ. ನಮ್ಮಲ್ಲಿ ಒತ್ತಡ, ಬಿಗಿತ, ಮನಸ್ಸಿನಲ್ಲಿ ಉದ್ವೇಗ (ಸ್ಟ್ರೈನ್, ಟೆನ್ಷನ್) ಉಂಟಾದಾಗ ಈ ಕೇಂದ್ರಗಳಲ್ಲಿ ಗಂಟುಗಳುಂಟಾಗಿ ಅಲ್ಲಲ್ಲಿ ತಡೆ (ಬ್ಲಾಕ್) ಉಂಟಾಗಿಬಿಡುತ್ತದೆ. ಶಕ್ತಿ ಸಂಚಾರ ಕಡಿಮೆಯಾಗುತ್ತದೆ. ಶಕ್ತಿ ಕೇಂದ್ರಗಳಲ್ಲಿ ಸಂಧಾನ ಮಾಡಿ ನಿಮ್ಮ ಧ್ಯಾನವನ್ನಿಡಿ, ಆಗ ಅಲ್ಲಿರುವ ನಕಾರಾತ್ಮಕ ಭಾವನೆಗಳು ತನ್ನಷ್ಟಕ್ಕೆ ತಾನೇ ಕರಗುತ್ತವೆ. ದೋಷಗಳೆಲ್ಲಾ ನಿವೃತ್ತಿಯಾಗುತ್ತವೆ, ಗುಣ ಹೆಚ್ಚಾಗುತ್ತದೆ. ’ಹೊಟ್ಟೆಕಿಚ್ಚು ಉಂಟಾದಾಗ ನಾಭೀ ಕೇಂದ್ರದಲ್ಲಿ ಧ್ಯಾನ ಮಾಡಿದಾಗ ಹೊಟ್ಟೆಕಿಚ್ಚು ದೂರವಾಗುತ್ತದೆ, ತನ್ನಷ್ಟಕ್ಕೇ ಶಾಂತವಾಗುತ್ತದೆ.

ಎಷ್ಟೋ ಸಲ ನಾವು ನಮ್ಮ ತಪ್ಪು ಕೆಲಸಗಳನ್ನು ’ನಾ ಮಾಡಿದ್ದೇ ಸರಿ’ ಎಂದು ಸಾಧಿಸಲು ಹೋಗುತ್ತೇವೆ. ಆದರೆ, ಆ ಕೆಲಸ ಆಗಿದ್ದು ನಮ್ಮ ಶಕ್ತಿ ಚಕ್ರಗಳಲ್ಲಿ ಉಂಟಾಗುವ ದೋಷಗಳಿಂದ.

’ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ’.. ಈ ಕೇಂದ್ರಗಳಲ್ಲಿ ಸಂಧಾನ ಮಾಡಿ ಧ್ಯಾನ ಮಾಡುವುದರಿಂದ ನಾವೇ (ನಮ್ಮತಲೆಯಲ್ಲಿ) ನಿರ್ಮಿಸಿಕೊಂಡಿರುವ ’ವಿಶ್ವ’ ಸಂಹಾರವಾಗುತ್ತದೆ. ’ವಿಶ್ವ’ ಶಾಂತಿಯಾಗುತ್ತದೆ. ದೋಷ ನಿವೃತ್ತಿಯಾಗುತ್ತದೆ.

* * * * *

ಪ್ರಾಪಂಚಿಕತೆ - ಪುರುಷಾರ್ಥ - ೧

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೭/೦೪/೨೦೦೩ರ೦ದು ಪ್ರಕಟವಾಗಿತ್ತು)


ಒಂದು ಕಥೆ:

ಒಂದು ರಾಜ್ಯದಲ್ಲಿ ಬೀಗ ತಯಾರಿಸುವವನೊಬ್ಬನಿದ್ದ, ಅಪ್ರತಿಮ ಕೌಶಲ್ಯ ಅವನದು. ಅವನು ತಯಾರಿಸಿದ ಬೀಗಗಳನ್ನು ಒಡೆದು ತೆಗೆಯುವುದು ಸಾಧ್ಯವೇ ಇರಲಿಲ್ಲ. ಹೀಗಿರುವಾಗ ಒಂದು ರಾತ್ರಿ ಅವನು ಆ ದೇಶದ ರಾಜನೊಂದಿಗೆ ಎಲ್ಲಿಗೋ ಹೋಗುವ ಪ್ರಮೇಯ ಬಂತು. ಆ ಸಮಯದಲ್ಲಿ ದರೋಡೆಕೋರರ ಗುಂಪೊಂದು ಬಂದು ಇವರಿಬ್ಬರ ಕೈಗೂ ಬೇಡಿ ಹಾಕಿ ಬಳಿಯಿದ್ದುದನ್ನು ದೋಚಿಕೊಂಡು ಹೊರಟುಹೋಯಿತು.

ಬೀಗ ತಯಾರಿಸುವ ನಿಪುಣನೇ ಬಳಿಯಲ್ಲಿದ್ದುದರಿಂದ ರಾಜ ಧೈರ್ಯವಾಗಿಯೇ ಇದ್ದ. ’ಜೊತೆಯಲ್ಲಿ ನೀ ಇದ್ದೀಯಲ್ಲ ಹೇಗಿದ್ದರೂ ಯೋಚನೆಯಿಲ್ಲ’ ಅಂದ. ಬೆಳಗಾಯಿತು. ಬೀಗ ತಯಾರಕ ಬೇಡಿಯ ಬೀಗ ಹೇಗಿದೆ ಅಂತ ಪರೀಕ್ಷಿಸಿ ನೋಡಿ ಗೊಳೋ ಎಂದು ಅಳಲು ಪ್ರಾರಂಭಿಸಿದನಂತೆ. "ಈ ಬೀಗ ತೆಗೆಯುವುದಕ್ಕಾಗುವುದಿಲ್ಲ, ಏಕೆಂದರೆ ನಾನೇ ಮಾಡಿದ ಬೀಗ ಇದು! ನನ್ನ ಕೆಲಸ ಯಾವಾಗಲೂ ಅತ್ಯುತ್ತಮ ಗುಣಮಟ್ಟದ್ದು. ಇದನ್ನು ಒಡಿಯೋದು ಅಷ್ಟೊಂದು ಸುಲಭವಲ್ಲ, ಏಕೆಂದರೆ ನಾನೇ ಮಾಡಿದ್ದು!!"

ಹಾಗೆ ನಮ್ಮ ಕೈಗೆ ನಾವೇ ಬೇಡಿ ಹಾಕಿಕೊಂಡು ಕುಳಿತಿದ್ದೀವಿ ಪ್ರಪಂಚದಲ್ಲಿ!
ನಿಮ್ಮ ಬೇಡಿ, ನಿಮ್ಮ ಬಂಧನ ಯಾರೂ ಮಾಡಿಲ್ಲ. ನೀವೇ ಸ್ವತಃ ಮಾಡಿಕೊಂಡಿದ್ದೀರ. ಸ್ವಲ್ಪ ಎಚ್ಚೆತ್ತುಕೊಂಡು ನೋಡಿ, ನಿಮ್ಮ ಪ್ರಪಂಚ ಏನು? ಏನಿದೆ ಅದರಲ್ಲಿ?ಜೀವನ ನಡೆಸುವುದಕ್ಕಾಗಿ ನಾವು ಏನೋ ಮಾಡ್ತಾ ಇದ್ದೀವಿ. ಪುರುಷಾರ್ಥಕ್ಕೆ ಮಾಡುತ್ತಾ ಇದ್ದೀವಿ ಅಂತ ಅಂದುಕೊಳ್ಳುತ್ತೀವಿ. ಇದು ನಮ್ಮ ಭ್ರಮೆ!

ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕಾದರೆ ಪೂರ್ತಿ ಬೆವರು ಸುರಿಸುತ್ತೀರಾ, ಉಸಿರು ಉಸಿರು ಅದಕ್ಕೆ ಹಾಕ್ತೀರಾ. ಆದರೆ ಸ್ವಲ್ಪ ಏನಾದರೂ ಆತ್ಮವಿಚಾರ ಸಾಧನೆ ಮಾದಬೇಕಾದರೆ "ಅದಕ್ಕೆ ದೇವರ ದಯೆ ಬೇಕು, ದೇವರ ಕೃಪೆ ಯಾವಾಗ ಆಗುತ್ತದೋ ಆಗ ಅದು ಆಗುತ್ತೆ, ಯಾವಾಗ ಅವನ ಕೃಪೆ ಆಗುತ್ತದೋ ಆಗ ಆಗಲಿ" ಎನ್ನುತ್ತೀರಿ. ಅಲ್ಲವೆ?

* * * * *

ಪ್ರಾಪಂಚಿಕತೆ- ಪುರುಷಾರ್ಥ - ೨

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೮/೦೪/೨೦೦೩ರ೦ದು ಪ್ರಕಟವಾಗಿತ್ತು)


ನಿಮಗೆ ಜೀವನದಲ್ಲಿ ಸಿಗುವಂತಹ ಪ್ರಾಪಂಚಿಕವಾದ ಭೋಗ, ಸಾಮಗ್ರಿ, ಸವಲತ್ತು, ಸೌಲಭ್ಯ, ವಸತಿ ಇವೆಲ್ಲಕ್ಕೂ ಪ್ರಾರಬ್ಧ ಕಾರಣ, ನಿಮ್ಮ ಪ್ರಾರಬ್ಧದಿಂದ ನಿಮಗೆ ಪ್ರಪಂಚದಲ್ಲಿ ಸಿಗಬೇಕಾದುದೆಲ್ಲ ಸಿಗುತ್ತದೆ, ಬರೀ ಕೆಲಸದಿಂದ ಅಲ್ಲ, ಬರೀ ನಿಮ್ಮ ಪ್ರಯತ್ನದಿಂದಲ್ಲ! ಬರೀ ನಿಮ್ಮ ಉದ್ಯಮದಿಂದ ಆಗೋದಲ್ಲ ಇದು. ಅಲ್ವಾ? ಆದರೆ ನಿಮ್ಮ ಮನಸ್ಸಿನ ಸ್ತರ ಆತ್ಮನ ಉನ್ನತಿ ಹೆಚ್ಚುವುದು ನಿಮ್ಮ ಪುರುಷಾರ್ಥದಿಂದ. ಆದರೆ, ನಾವಿದನ್ನು ತಲೆ ಕೆಳಗಾಗಿ ಮಾಡುತ್ತೀವಿ. ಎಂದರೆ ಪ್ರಪಂಚದಲ್ಲಿ ನಮಗೆ ಏನು ಬೇಕಾಗಿದ್ದರೂ ಪೂರಾ ನಮ್ಮ ಉಸಿರು ಹಾಕಿ, ಬೆವರು ಸುರಿಸುತ್ತೀವಿ. ಅದೇ ಅಧ್ಯಾತ್ಮಿಕ ಸಾಧನೆ, ಧ್ಯಾನ ಮಾಡಬೇಕಾದರೆ "ದೇವರ ದಯೆ ಆದರೆ ಆಗುತ್ತೆ, ಅವನು ಕರೆಸಿಕೊಂಡಾಗ ಧ್ಯಾನ ಗೀನ ಮಾಡಲು ಹೋಗ್ತೀವಿ" ಅಂತೀವಿ. ಇದು ನಮ್ಮ ಪ್ರಪಂಚ!

ಧ್ಯಾನದಲ್ಲಿ ಕುಳಿತು ಶಕ್ತಿ ಕೇಂದ್ರಗಳಲ್ಲಿ ಸಂಧಾನ ಮಾಡಿದಾಗ ವಿಶ್ವ ಸಂಹಾರವಾಗುತ್ತದೆ. ನೀವೇ ಕಟ್ಟಿಕೊಂಡಿರುವ ’ವಿಶ್ವ’ವನ್ನು, ನಿಮ್ಮ ಬಂಧನವನ್ನು ನೀವೇ ಬಿಡಿಸಿಕೊಳ್ಳಬೇಕು. ನಮ್ಮ ಉನ್ನತ ಧ್ಯಾನ ಶಿಬಿರಗಳಲ್ಲಿ ಶಕ್ತಿ ಚಕ್ರದ ಅನುಸಂಧಾನ ಮಾಡ್ತೀವಿ. ಮೂರು ನಾಲ್ಕು ದಿನ ಮೌನ, ಧ್ಯಾನ ಮಾಡಿದಾಗ ನಮ್ಮ ಇಡೀ ಶರೀರ ಮನಸ್ಸು ಎರಡೂ ಎಷ್ಟು ಲವಲವಿಕೆಯಿಂದ ತುಂಬುತ್ತವೆ, ನಿರ್ಮಲವಾಗುತ್ತವೆ, ಶಾಂತವಾಗುತ್ತವೆ, ಪ್ರಸನ್ನವಾಗುತ್ತವೆ ಅಲ್ವಾ? ಸಾವಿರಾರು ಜನ ಈಗ ಇದನ್ನು ಅನುಭವಿಸಿದ್ದಾರೆ, ಮಾಡಿದ್ದಾರೆ. ವರ್ಷದಲ್ಲಿ ಅಥವಾ ಆರು ತಿಂಗಳಲ್ಲಿ ಮೂರು-ನಾಲ್ಕು ದಿನ ಇದಕ್ಕೋಸ್ಕರ ಕಾಲಾವಕಾಶ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಇದನ್ನು ಮಾಡಬೇಕು.

"ಶಕ್ತಿ ಚಕ್ರ ಸಂಧಾನೇ ವಿಶ್ವ ಸಂಹಾರಃ"

ವಿಶ್ವ ಸಂಹಾರ ಎಂದರೆ ಪ್ರಪಂಚವನ್ನು ಬಿಟ್ಟು ಓಡಿಹೋಗುವುದಲ್ಲ. ಮನೆ ಮಠ ಬಿಟ್ಟು ಎಲ್ಲೋ ಹೋಗಿ, ಹಿಮಾಲಯದ ಗುಹೆಗಳಲ್ಲಿ ಸೇರಿಕೊಳ್ಳುವುದಲ್ಲ. ಹಾಗೆ ಸೇರಿಕೊಂಡಾಕ್ಷಣ ಅವರಿಗೆ ಅಲ್ಲೇನೂ ಆನಂದ ಸಿಗುವುದಿಲ್ಲ. ನೀನೇ ಸೃಷ್ಟಿ ಮಾಡಿಕೊಂಡಿರುವ ನಿನ್ನ ಪ್ರಪಂಚ ನಿನ್ನ ತಲೆಯೊಳಗೇ ಇದೆ.. ಈ ಬೇಡಿಯಿಂದ ಹೊರಗೆ ಬಾ.. ನೀನೇ ಬಿಡಿಸಿಕೊಳ್ಳಬೇಕು ಇದನ್ನು..

ಶನಿವಾರ, ಆಗಸ್ಟ್ 25, 2012

ವೃತ್ತಿಯಿ೦ದ ಸತ್ವದ ಕಡೆಗೆ

ಅಮೃತಬಿ೦ದು’ ಸರಣಿಯ ಬರಹಗಳು

೨೬ ಆಗಸ್ಟ್ ೨೦೧೨
ಆರನೆಯ ಕ೦ತು

ತೃಪ್ತಿ ನಿನ್ನ ಸ್ವಭಾವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೧/೦೪/೨೦೦೩ರ೦ದು ಪ್ರಕಟವಾಗಿತ್ತು)

ಬಾಯಾರಿದವರು ನೀರನ್ನು ಹುಡುಕುತ್ತ ಹೊರಡುವ ಹಾಗೆ ಪೂರ್ಣತೆಯನ್ನರಸುತ್ತ ಮನವು ಅತ್ತಿ೦ದಿತ್ತ ಹೊಯ್ದಾಡುತ್ತಿರುತ್ತದೆ.
ಮನಸ್ಸಿಗೆ ಪೂರ್ಣತೆ ಬೇಕು. ತೃಪ್ತಿಯಿದ್ದಾಗ ಮನಸ್ಸು ಪ್ರಸನ್ನವಾಗುತ್ತದೆ, ತನ್ನಷ್ಟಕ್ಕೆ ತಾನೇ ಶಾಂತವಾಗುತ್ತದೆ.
ತೃಪ್ತಿ ಹೊ೦ದಲು ಹೋರಾಡುವುದೇ ಸಮಸ್ತ ಬದುಕಿನ ಕಾಯಕ. ಯಾವುದೇ ವಸ್ತುವಿನಿಂದಾಗಲೀ, ಪರಿಸ್ಥಿತಿಯಿಂದಾಗಲೀ ಆ ತೃಪ್ತಿ ಸಿಗುತ್ತದಾ? ಯಾವಕಾಲಕ್ಕೂಸಿಗುವುದಿಲ್ಲ.
ತೃಪ್ತಿ ನಿನ್ನ ಸ್ವಭಾವ, ನೀನೇ ತೃಪ್ತಿ, ಅದನ್ನು ಅರಿಯುವುದಕ್ಕೋಸ್ಕರವೇ ಉದ್ಯಮ ಮಾಡು ಅಂತ ಹೇಳುವುದು.

ಈಗ ನಿನ್ನಲ್ಲಿರುವ ರಜೋಗುಣ ಹೆಚ್ಚಾದರೆ ಶರೀರದಲ್ಲಿ ಏನಾಗುತ್ತೆ ಗೊತ್ತಾ? ಸುಮ್ಮನೆ ಕುಳಿತಿರುವುದಕ್ಕೆ ಬಿಡುವುದಿಲ್ಲ.
ಕಸಿವಿಸಿ, ಅದು ಮಾಡು - ಇದು ಮಾಡು, ಅಲ್ಲಿ ಹೋಗು - ಇಲ್ಲಿ ಹೋಗು, ಕೂತಿದ್ದರೂ ನೆಟಿಗೆ ತೆಗಿ, ಕೈ ಅಲ್ಲಾಡಿಸು, ಕಾಲಲ್ಲಾಡಿಸು, ಟೇಬಲ್ ಮೇಲೆ ತಬಲಾ ಬಾರಿಸು.
’ಲಾನ್’ನಲ್ಲಿ ಕುಳಿತಿದ್ದರೂ ತ೦ಗಾಳಿ - ದೃಶ್ಯಗಳನ್ನು ಆನ೦ದಿಸದೆ ಹುಲ್ಲು ಕೀಳುವ ಹುನ್ನಾರ! ಮಂಗನ ಚೇಷ್ಟೆ!!
ಇದೇನು? ರಜೋಗುಣದಿ೦ದ ಪ್ರೇರಿತವಾದ ಅತೃಪ್ತ ಶಾರೀರಿಕ ಸ್ಥಿತಿ, ಮಾನಸಿಕ ಅಲ್ಲೋಲಕಲ್ಲೋಲ.
ಇ೦ಥ ಚಡಪಡಿಕೆಯ ನಿವಾರಣೆಗಾಗಿ, ತೃಪ್ತ ಮನಸ್ಕರಾಗುವ ಸಲುವಾಗಿ ಏನು ಮಾಡಬೇಕು? ಯಾವುದಾದರೂ ಉದ್ಯಮ, ಕೆಲಸ ಮಾಡಬೇಕು.

ಕೆಲವರು ಅಂದುಕೊಳ್ಳುತ್ತಾರೆ, ’ಧ್ಯಾನವೊ೦ದು ಸೋಮಾರಿಗಳ ಲಕ್ಷಣ, ಕೆಲಸಕ್ಕೆ ಬಾರದವರು ಎಲ್ಲೋ ಕುಳಿತು ಧ್ಯಾನ ಮಾಡ್ತಾರೆ, ಭಜನೆ ಮಾಡ್ತಾರೆ’ ಅಂತ.
ಇದೊಂದು ತಪ್ಪು ಅಭಿಪ್ರಾಯ. ಚೆನ್ನಾಗಿ ಕೆಲಸ ಮಾಡುವವರಿಗೆ ಮಾತ್ರವೇ ಚೆನ್ನಾಗಿ ಧ್ಯಾನವನ್ನೂ ಮಾಡಲು ಸಾಧ್ಯ.
ತೃಪ್ತಿ ಹೊ೦ದಲು ವಿಪರೀತ ಕೆಲಸ ಮಾಡಬೇಕು ಎ೦ಬುದು ಅದರ ಅರ್ಥ ಅಲ್ಲ. ಕೆಲವರು ಹುಚ್ಚು ಹಿಡಿದ ಹಾಗೆ ಹಗಲೂ ರಾತ್ರಿ ಕೆಲಸ ಮಾಡ್ತಾರೆ. ಅವರಿಗೆ ನಿದ್ರೆ ಬಂದರೆ ಹೆಚ್ಚು, ಅಥವಾ ಧ್ಯಾನಕ್ಕೆ ಕುಳಿತುಕೊಂಡರೆ ನಿದ್ರೆ ಬಂದುಬಿಡುತ್ತದೆ.
ಒಂದು ಮಿತಿಯಲ್ಲಿ ಚೆನ್ನಾಗಿ ಕೆಲಸ ಮಾಡುವವರಿಗೆ ಧ್ಯಾನವು ಚೆನ್ನಾಗಿ ಆಗುತ್ತದೆ.
ನಾಳೆ ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.
* * * * *

ತ್ರಿಗುಣ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೨/೦೪/೨೦೦೩ರ೦ದು ಪ್ರಕಟವಾಗಿತ್ತು)

ಭಾನುವಾರ ಅಥವಾ ರಜಾ ದಿನಗಳಲ್ಲಿ ಹೆಚ್ಚಾಗಿ ಕೆಲಸ ಏನೂ ಹಚ್ಚಿಕೊಳ್ಳದೆ ಒಂದೆರಡು ಘಂಟೆ ಹೆಚ್ಚಿಗೆ ನಿದ್ದೆ ಮಾಡಿಬಿಡೋಣ ಅಂತ ಮಧ್ಯಾಹ್ನ ಒಳ್ಳೆಯ ಔತಣ ಮಾಡಿ ಮಲಗ್ತೀರಿ.
ಸಂಜೆ ಏಳುತ್ತಾ ಇದ್ದ ಹಾಗೆ ಮೈಯೆಲ್ಲ ಭಾರ. ನಿದ್ರೆ ಹೆಚ್ಚು ಮಾಡಿದಷ್ಟೂ ಶರೀರ ಭಾರ ಆಗುತ್ತೆ. ಇನ್ನೂ ಆಲಸ್ಯ,
ನಮ್ಮಲ್ಲಿರುವ ರಜೋಗುಣ ಹೆಚ್ಚಾಗುತ್ತದೆ. ಒಂದು ಮಿತಿಯಿಂದ ನಿದ್ರೆ ಮಾಡಬೇಕು.

ಕೆಲವು ಸಲ ನಿದ್ರೆಯಿಂದ ಎಚ್ಚೆತ್ತ ತಕ್ಷಣ ಮನಸ್ಸು ನಿರ್ಮಲವಾಗಿ, ನಿರಭ್ರವಾಗಿರುತ್ತದೆ. ಸತ್ವಗುಣವೂ ಹೆಚ್ಚಾಗುತ್ತದೆ.
ಆ ಸಮಯದಲ್ಲಿ ಧ್ಯಾನವೂ ಚೆನ್ನಾಗಿ ಆಗುತ್ತದೆ. ಒಂದು ಮಿತಿಯಲ್ಲಿ ಚೆನ್ನಾಗಿ ಕೆಲಸ, ಒಳ್ಳೆಯ ನಿದ್ರೆ ಎರಡೂ ಆದ ಮೇಲೆ ನಮ್ಮಲ್ಲಿ ಸತ್ವಗುಣ ಹೆಚ್ಚಾಗುತ್ತದೆ. ಸತ್ವ ಉಂಟಾದಾಗ ಮಾತ್ರ ಧ್ಯಾನ ಮಾಡಲು ಸಾಧ್ಯ.
ಸತ್ವ ಯಾವಾಗ ಉಂಟಾಗುತ್ತದೆ? ನಮ್ಮಲ್ಲಿರುವ ತಮೋಗುಣ, ಬೇಸರಿಕೆ, ಆಲಸ್ಯ ಹೋದಾಗ!

ಶಾಂತವಾದ ಮನಸ್ಸು, ಪ್ರಸನ್ನವಾದ ಚಿತ್ತ ಉಂಟಾಗಬೇಕಾದರೆ ಏನು ಆಗಬೇಕು? ರಜೋಗುಣ ಶಾಂತಿಯಾಗಬೇಕು, ತಮೋಗುಣ ನಿವಾರಣೆಯಾಗಬೇಕು.
ರಜೋಗುಣ ಹೇಗೆ ಶಾಂತಿಯಾಗುತ್ತದೆ? ನೀವು ನೂರಕ್ಕೆ ನೂರರಷ್ಟು ನಿಮ್ಮ ಶಕ್ತಿಯನ್ನು ಯಾವುದೇ ಕೆಲಸದಲ್ಲಿ ವಿನಿಯೋಗ ಮಾಡಿ, ಆಗ ರಜೋಗುಣ ಶಾಂತಿಯಾಗುತ್ತದೆ.
ಶಕ್ತಿಯ ವಿನಿಯೋಗದಿಂದಲೇ ತಮೋಗುಣವೂ ನಾಶವಾಗುತ್ತದೆ. ಶಾಂತಿಯಾಗುತ್ತದೆ, ಸತ್ವಗುಣ ಉಂಟಾಗುತ್ತದೆ.
ಆ ಸತ್ವಗುಣ ಹೆಚ್ಚು ಮಾಡಿಕೊಳ್ಳುವುದಕ್ಕೂ ಉದ್ಯಮ ಮಾಡಬೇಕು."ಉದ್ಯಮೋ ಭೈರವಃ".
ಭೈರವ ಎಂದರೆ ಪೂರ್ಣತೆ ಉ೦ಟುಮಾಡುವವನು, ಭರಣ - ಪೋಷಣೆ ಮಾಡತಕ್ಕಂಥವನು ಭೈರವ.
* * * * *

ರಾಗ - ದ್ವೇಷ; ಪ್ರಾಪಂಚಿಕತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೧೩/೦೪/೨೦೦೩ರ೦ದು ಪ್ರಕಟವಾಗಿತ್ತು)

ಯಾವುದೇ ಕೆಲಸವನ್ನಾದರೂ ನಮ್ಮ ಪೂರ್ಣ ಶಕ್ತಿ ವಿನಿಯೋಗಿಸಿ ಮಾಡಿದಾಗ ಪಶ್ಚಾತ್ತಾಪ ಉಂಟಾಗುವುದಿಲ್ಲ. ಪಶ್ಚಾತ್ತಾಪ ಉಂಟಾಗದಿದ್ದಾಗ ಮನಸ್ಸಿನಲ್ಲಿ ಭಯ, ಆತಂಕ ಇರುವುದಿಲ್ಲ. ಆಗ ಮನಸ್ಸು ಪೂರ್ಣವಾಗಿ ವರ್ತಮಾನದಲ್ಲಿ ಜಾಗೃತಗೊಳ್ಳುತ್ತದೆ. ಆ ಜಾಗೃತವಾದ ಚೇತನದಲ್ಲಿ ’ನಮಃ’ ಉಂಟಾಗುತ್ತದೆ. ಮನಸ್ಸು ಅಂತರ್ಮುಖವಾಗಿ ಶಾಂತಿಯನ್ನೂ ಶರಣಾಗತಿಯನ್ನೂ ಹೊಂದುತ್ತದೆ. ಶರಣಾಗತಿ ಹೊಂದಿದ ಮನಸ್ಸಿನಲ್ಲಿ ಶ್ರೀ, ಸಂಪತ್ತು, ವೈಭವ, ಶಾಂತಿ, ಪ್ರಸನ್ನತೆ, ಶ್ರೇಯಸ್ಸು ಎಲ್ಲಾ ಉಂಟಾಗಿ ’ಆನಂದ ವಪುಷೇ’... ಆನಂದ ವಾತಾವರಣದಲ್ಲಿ ಹರಡುತ್ತದೆ. ಮುಂದಿನ ಸೂತ್ರದ ಅವಶ್ಯಕತೆಯೇ ಇಲ್ಲ. ಒಂದು ವೇಳೆ ಹಾಗೆ ಮಾಡಲು ಆಗಲಿಲ್ಲವೆನ್ನಿ, ನಿಶ್ಶಕ್ತಿ... ಅಥವಾ ಮಾಡಿದಾಗಲೂ ಚಡಪಡಿಕೆ ಜಾಸ್ತಿಯಾಯ್ತು. ಆಗ ಮುಂದಿನ ಸೂತ್ರ ಬೇಕಾಗುತ್ತದೆ.

ಇಲ್ಲೊಂದು ಪ್ರಶ್ನೆ ಹುಟ್ಟುತ್ತದೆ. ತುಂಬಾ ಚೆನ್ನಾಗಿ ಕೆಲಸ ಮಾಡುವುದರಿಂದಲೇ ವ್ಯಕ್ತಿ ಉನ್ನತಿಗೇರಲು ಸಾಧ್ಯವಾಗುವಂತಿದ್ದರೆ, ತುಂಬಾ ಜನ ಕಷ್ಟಪಟ್ಟು ದುಡಿಯುತ್ತಾರೆ. ಬಿಸಿನೆಸ್ ಮಾಡುವವರನ್ನು ಕೇಳಿ ನೋಡಿ. ಅವರೇನೂ ಕಡಿಮೆ ಕೆಲಸ ಮಾಡುವುದಿಲ್ಲ. ಹಗಲು ರಾತ್ರಿ ಕೆಲಸ ಮಾಡ್ತಾರೆ. ಏತಕ್ಕೋಸ್ಕರ? ಲಾಭಕ್ಕೋಸ್ಕರ. ಬರೀ ಉದ್ಯಮದಿಂದಲೇ ಲಾಭ ಸಿಗುತ್ತಾ?

ಕೆಲವು ಸಲ ರಕ್ತದ ಒತ್ತಡ ಜಾಸ್ತಿಯಾಗುತ್ತೆ, ಅಲ್ಸರ್..ಅದೂ..ಇದೂ..ಪ್ರಪಂಚ - ರಾಗ - ದ್ವೇಷ ಸುತ್ತಿಕೊಳ್ಳುತ್ತದೆ. ’ಬೇಕು’ ’ಬೇಡ’ ಸುತ್ತಿಕೊಳ್ಳುತ್ತದೆ, ಜೀವನದಲ್ಲಿ ಈರ್ಷ್ಯೆ ಉಂಟಾಗುತದೆ.

ಶಾಲೆಯಲ್ಲಿ ನೋಡಿ, ಜೊತೆಯಲ್ಲಿಯೇ ಒಟ್ಟಾಗಿ ಓದುವ ಮಕ್ಕಳಲ್ಲೇ ಅಸೂಯೆ ಉಂಟಾಗಿಬಿಡುತ್ತೆ. ’ನಾನೂ ಅಷ್ಟೇ ಬರೆದೆ. ಅವಳೂ ಅಷ್ಟೇ ಬರೆದಿರುವುದು, ಮೇಡಂ ಅವಳಿಗೆ ಜಾಸ್ತಿ ನಂಬರ್ ಕೊಟ್ಟರು - ನನಗೆ ಕೊಟ್ಟಿಲ್ಲ, ಅವಳು ಮೊದಲ ರ‍್ಯಾಂಕ್, ನಾನು ಮೂರನೇ ರ‍್ಯಾಂಕ್... ಅಲ್ಲ? ಅಲ್ಲೂ ಈರ್ಷ್ಯೆ!
ನಿಮಗೆ ತುಂಬಾ ಬೇಕಾದವರು ಯಾರನ್ನೋ ನೋಡಿ ಮುಗುಳ್ನಕ್ಕರು, ಮಾತನಾಡಿದರು, ನಿಮಗೆ ಹೊಟ್ಟೆಯಲ್ಲಿ ಶುರುವಾಯ್ತು, ಕಸಿವಿಸಿ...!! ಪ್ರಪಂಚ ಸುತ್ತಿಕೊಂಡಿರಿ ಮತ್ತೆ! ಹೀಗೇಕೆ?
ನಾಳೆ ವಿಚಾರ ಮಾಡೋಣ.

ನಿಮ್ಮ ಬದುಕನ್ನೊಮ್ಮೆ ಗಮನಿಸಿ

25
2012
Aug
ಡರ್ಬನ್, ದಕ್ಷಿಣ ಆಫ್ರಿಕಾ

ಲ್ಲಿ ನಾವು ಅನೌಪಚಾರಿಕವಾಗಿರುತ್ತೇವೋ ಮತ್ತು ಪರಸ್ಪರರೊಂದಿಗೆ ಹಾಯಾಗಿರುತ್ತೇವೋ ಅಂತಹ ಒಂದು ಮನೆಯ ವಾತಾವರಣದಲ್ಲಿ ಮಾತ್ರ ಜ್ಞಾನವು ಅರಳಬಲ್ಲದು. ನೀವೆಲ್ಲರೂ ಈಗ ಪರಸ್ಪರರೊಂದಿಗೆ ಹಾಯಾಗಿರುವಿರಾ?


ನಾವೆಲ್ಲರೂ ಯಾಕೆ ನಮ್ಮ ಪಕ್ಕದಲ್ಲಿರುವ, ನಮ್ಮ ಹಿಂದಿರುವ ಹಾಗೂ ನಮ್ಮ ಮುಂದೆಯಿರುವ ವ್ಯಕ್ತಿಗೆ ವಂದಿಸಲು ಒಂದು ಕ್ಷಣವನ್ನು ತೆಗೆದುಕೊಳ್ಳಬಾರದು?
ಒಂದು ಔಪಚಾರಿಕ ವಾತಾವರಣವು ಜ್ಞಾನಕ್ಕೆ ಬಹಳ ಸರಿಹೊಂದುವುದಿಲ್ಲ. ಒಂದು ಹೃದಯದಿಂದ ಹೃದಯಕ್ಕಿರುವ ಮಾತುಕತೆಗೆ ನೀವು ಪರಸ್ಪರ ಅನೌಪಚಾರಿಕವಾಗಿರಬೇಕು ಮತ್ತು ಅದುವೇ ಜ್ಞಾನವಾಗಿದೆ. ಅದು ತಲೆಯಿಂದ ತಲೆಗಿರುವುದಲ್ಲ. ಒಂದು ತಲೆಯಿಂದ ತಲೆಗಿರುವ ಸಂಪರ್ಕದಲ್ಲಿ ಹಲವಾರು ವಾದಗಳಿರಬಹುದು. ಆದರೆ ಹೃದಯದಿಂದ ಹೃದಯಕ್ಕಿರುವುದರಲ್ಲಿ ಒಂದೇ ಒಂದು ಭಾಷೆಯಿರುವುದು - ಏಕ ಪ್ರಪಂಚ ಕುಟುಂಬ.
ಈಗ ಎಲ್ಲವನ್ನೂ ಬದಿಗಿಟ್ಟು, ಕೇವಲ ನಿಮ್ಮದೇ ಜೀವನದ ಕಡೆಗೆ ನೋಡಿ. ನಿಮ್ಮ ಜೀವನದಿಂದ ನಿಮಗೆ ಬೇಕಾಗಿರುವುದು ಏನು? ನೀವು ಯಾವತ್ತಾದರೂ ಕುಳಿತು ಅದರ ಬಗ್ಗೆ ಯೋಚಿಸಿದ್ದೀರಾ, "ನನಗೆ ನನ್ನ ಜೀವನದಲ್ಲಿ ಏನು ಬೇಕು?" ಅದನ್ನು ಮಾಡಲು ನಮಗೆ ಸಮಯ ಸಿಗುವುದು ವಿರಳ, ಮತ್ತು "ನಾನು ಯಾರು?" - ಅದರ ಬಗ್ಗೆಯೂ ನಾವು ಯೋಚಿಸುವುದಿಲ್ಲ. ಯಾರೋ ನಮಗೆ ಏನನ್ನೋ ಹೇಳಿದರು ಮತ್ತು ನಾವು ಅದನ್ನು ಕಲಿತೆವು. ನಾವು ಅಧ್ಯಯನ ಮಾಡಿದೆವು ಮತ್ತು ಶಿಕ್ಷಣ ಪಡೆದೆವು, ಆದರೆ "ನಾನು ಯಾರು? ನನಗೇನು ಬೇಕು?" - ಈ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುವುದು ಅಪರೂಪವಾಗಿ.
ನೀವು ೬೦, ೭೦ ಅಥವಾ ೮೦ ವರ್ಷಗಳ ನಿಮ್ಮ ಜೀವನವನ್ನು ನೋಡಿದರೆ, ಆ ೮೦ ವರ್ಷಗಳನ್ನು ನೀವು ಹೇಗೆ ಕಳೆಯುವಿರೆಂಬುದು ನಿಮಗೆ ತಿಳಿದಿದೆಯೇ? ನೀವು ನಿಮ್ಮ ಜೀವನದ ೪೦ ವರ್ಷಗಳನ್ನು ನಿದ್ರಿಸುವುದರಲ್ಲಿ ಕಳೆಯುವಿರಿ. ನೀವು ನಿಮ್ಮ ಜೀವನದ ಸುಮಾರು ಎಂಟು ವರ್ಷಗಳನ್ನು ಬಚ್ಚಲುಮನೆಗಳಲ್ಲಿ ಹಾಗೂ ಶೌಚಾಲಯಗಳಲ್ಲಿ ಕಳೆಯುವಿರಿ ಮತ್ತು ಸುಮಾರು ಅಷ್ಟೇ ವರ್ಷಗಳು ತಿನ್ನುವುದರಲ್ಲಿ ಕಳೆಯುತ್ತದೆ. ೧೦ರಿಂದ ೧೫ ವರ್ಷಗಳು ಟ್ರ್ಯಾಫಿಕ್ಕಿನಲ್ಲಿ, ಪ್ರಯಾಣ ಮಾಡುವುದರಲ್ಲಿ ಮತ್ತು ಕೆಲಸ ಮಾಡುವುದರಲ್ಲಿ ಕಳೆದುಹೋಗುತ್ತವೆ. ನಮ್ಮ ಜೀವನದಲ್ಲಿ, ಕಷ್ಟದಲ್ಲಿ ಎರಡರಿಂದ ಮೂರು ವರ್ಷಗಳು, ನಾವು ’ಸಂತೋಷದ ಜೀವನ’ ಎಂದು ಯಾವುದನ್ನು ಕರೆಯುತ್ತೇವೆಯೋ ಅದರಲ್ಲಿ ಕಳೆದುಹೋಗುತ್ತದೆ. ಅಲ್ಲವೇ? ಮತ್ತು ಅದುವೇ ಅಲ್ಲವೇ ನಿಮಗೆ ಬೇಕಾಗಿರುವುದು - ಸಂತೋಷ?
ಪ್ರಪಂಚದ ಎಲ್ಲಾ ಧರ್ಮಗ್ರಂಥಗಳೂ, ಪ್ರಾಚೀನ ಕಾಲದಿಂದ ಇತ್ತೀಚಿನ ಕಾಲದ ವರೆಗೆ; ಅವುಗಳೆಲ್ಲವೂ ಹೆಚ್ಚಿನ ಸಂತೋಷದ ಬಗ್ಗೆ ಮಾತನಾಡುತ್ತವೆ. ಅಲ್ಲವೇ? ಯಾಕೆಂದರೆ ಪುರುಷರು ಮತ್ತು ಸ್ತ್ರೀಯರು ಸಂತೋಷವನ್ನು ಬಯಸುತ್ತಾರೆ ಎಂಬುದು ಧರ್ಮಗ್ರಂಥಗಳಿಗೆ ತಿಳಿದಿದೆ.
ಸಂತೋಷವೆಂಬುದು ನೀವು ಎಲ್ಲೋ ಖರೀದಿಸಬಹುದಾದಂತಹ ಒಂದು ವಸ್ತುವಲ್ಲ. ಅದು ನೀವೆಲ್ಲಿರುವಿರೋ ಅಲ್ಲಿದೆ, ಇಲ್ಲಿಯೇ ಮತ್ತು ಈಗಲೇ. ಹಾಗೂ ಆ ಸಂತೋಷವನ್ನು ಕಂಡುಹುಡುಕಲಿರುವ ಮಾರ್ಗವೆಂದರೆ ಧ್ಯಾನ. ಧ್ಯಾನವು ನಮ್ಮ ಆರೋಗ್ಯವನ್ನು, ನಮ್ಮ ಮನಃಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಸಂತೋಷವನ್ನು ತರುತ್ತದೆ.
ಯಾವುದನ್ನೆಲ್ಲಾ ನಾವು ಇಲ್ಲಿ ಅಲ್ಲಿ ಹುಡುಕುತ್ತೇವೋ, ಅದು ಇಲ್ಲಿಯೇ ಇದೆ, ನಮ್ಮೊಳಗೆ. ನಾನಿಲ್ಲಿಗೆ ಬಂದಿರುವ ಉದ್ದೇಶವೆಂದರೆ, ನೀವು ಯಾವುದಕ್ಕಾಗಿಯೆಲ್ಲಾ ಹುಡುಕುತ್ತಿರುವಿರೋ ಅದು ನಿಮ್ಮೊಳಗೆ ಆಳದಲ್ಲಿ ಇದೆ ಮತ್ತು ಆ ಬೆಳಕು, ಆ ಚೈತನ್ಯವು ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತದೆ ಎಂಬುದನ್ನು ನಿಮಗೆ ಹೇಳುವುದು. ಆದುದರಿಂದ ಚಿಂತಿಸಬೇಡಿ. ನಿಮ್ಮೆಲ್ಲಾ ಚಿಂತೆಗಳನ್ನು ನನಗೆ ಕೊಡಿ. ನಾನು ಬಂದಿರುವುದು ಅವುಗಳನ್ನು ದೂರ ಒಯ್ಯಲು. ಎಲ್ಲಾ ಚಿಂತೆಗಳನ್ನು ಇಲ್ಲಿ ಬಿಡಿ, ಸಂತೋಷವಾಗಿರಿ ಮತ್ತು ಸಂತೋಷವನ್ನು ಹರಡಿ. ಜೀವನದಲ್ಲಿ ನಮ್ಮ ಗುರಿಯು ಇದಾಗಿರಬೇಡವೇ? ನಮ್ಮ ಗುರಿಯು ಯಾವುದಾಗಿರಬೇಕು? ಎಲ್ಲರನ್ನೂ ಅಲುಗಾಡಿಸಿ ಅವರಿಗೆ ಹೇಳಿ, "ಹೇ! ಎದ್ದೇಳು! ನಗು ಮತ್ತು ಮುಗುಳ್ನಗು." ನೀವು ಜನರನ್ನು ಸಂತೋಷಗೊಳಿಸಬೇಕು.
ನಿಮಗೆ ಗೊತ್ತಿದೆಯಾ, ನಮ್ಮಲ್ಲಿ ಇರುವಾಗಲೂ ನಾವು ದುಃಖಿತರಾಗಿರುತ್ತೇವೆ ಮತ್ತು ನಮ್ಮಲ್ಲಿ ಇಲ್ಲದಿರುವಾಗಲೂ ನಾವು ದುಃಖಿತರಾಗಿರುತ್ತೇವೆ.
ನಾನು ನಿಮಗೆ ಒಂದು ಕಥೆಯನ್ನು ಹೇಳಲು ಬಯಸುತ್ತೇನೆ. ಕೆನ್ಯಾದ ಒಬ್ಬ ಭಾರತೀಯ-ಆಫ್ರಿಕನ್ ವಲಸೆಗಾರನು ಲಂಡನ್ನಿನಲ್ಲಿದ್ದನು. ಇದು ಬಹಳ ಸಮಯದ ಹಿಂದೆ ನಾನು ಅಲ್ಲಿಗೆ ಹೋಗಿದ್ದಾಗ. ಈ ಸಂಭಾವಿತನು ನನ್ನ ಬಳಿಗೆ ಬಂದು ಹೇಳಿದನು, "ಗುರುದೇವ, ನಾನು ಒಂದು ಬಿ.ಎಮ್.ಡಬ್ಲ್ಯೂ. ಕಾರನ್ನು ಸ್ವಂತದ್ದಾಗಿಸಲು ಬಯಸುತ್ತೇನೆ. ದಯವಿಟ್ಟು ನನಗೆ ಆಶೀರ್ವಾದ ಮಾಡಿ." ನಾನಂದೆ, "ಸರಿ, ದೇವರ ಇಚ್ಛೆಯಿದ್ದಲ್ಲಿ ನಿನಗದು ಸಿಗುತ್ತದೆ."
ಆರು ತಿಂಗಳುಗಳ ಬಳಿಕ ಅವನು ಬಂದು ನನ್ನನ್ನು ಭೇಟಿಯಾದನು. ಅವನು ಸಂತೋಷವಾಗಿದ್ದನು ಮತ್ತು ಹೇಳಿದನು, "ಗುರುದೇವ, ನನಗದು ಸಿಕ್ಕಿತು (ಕಾರು). ಆದರೆ ಬರ್ಮಿಂಗ್ ಹ್ಯಾಮಿನ ರಸ್ತೆಗಳು ಎಷ್ಟು ಚಿಕ್ಕದಾಗಿವೆಯೆಂದರೆ, ಅದರ ಮೇಲೆ ಒಂದು ಗೀರಾಗದೆ ಅದನ್ನು ಅಲ್ಲಿ ಇಲ್ಲಿ ಪಾರ್ಕ್ ಮಾಡಲು ನನಗೆ ಬಹಳ ಅಸೌಕರ್ಯವಾಗುತ್ತಿದೆ. ಏನು ಮಾಡುವುದು?"
ನಿಮಗೆ ಗೊತ್ತಿದೆಯಾ, ಬರ್ಮಿಂಗ್ ಹ್ಯಾಮಿನಲ್ಲಿ ರಸ್ತೆಗಳು ಇಲ್ಲಿರುವುದಕ್ಕಿಂತಲೂ ಚಿಕ್ಕವು. ಕೆಲವು ತಿಂಗಳುಗಳ ಬಳಿಕ ಅವನಂದನು, "ಗುರುದೇವ, ಈ ಕಾರನ್ನು ಇಟ್ಟುಕೊಳ್ಳುವುದು ನನಗೆ ಒಂದು ಕಷ್ಟದ ಕೆಲಸವಾಗುತ್ತಿದೆ. ಈಗ ನನ್ನ ಸ್ಥಿತಿ ದಯನೀಯವಾಗಿದೆ. ನಾನು ಈ ಕಾರನ್ನು ಮಾರಲು ಬಯಸುತ್ತೇನೆ, ಆದರೆ ಅದನ್ನು ಕೊಂಡುಕೊಳ್ಳುವವರು ಯಾರೂ ಇಲ್ಲ." ನಿನ್ನಲ್ಲಿ ಅದು ಇರಲಿಲ್ಲ ಮತ್ತು ನೀನು ದುಃಖಿತನಾಗಿದ್ದೆ. ಈಗ ನಿನ್ನಲ್ಲಿ ಅದು ಇದೆ ಮತ್ತು ನೀನು ದುಃಖಿತನಾಗಿರುವೆ.
ನಾವು ಜೀವನದ ಕಡೆಗೆ ನೋಡುವ ರೀತಿಯಲ್ಲಿ ಏನೋ ಗಂಭೀರವಾದ ತಪ್ಪಾಗುತ್ತಿದೆ. ಇಲ್ಲಿಯೇ ನಮಗೆ ಆ ಜ್ಞಾನವಿರಬೇಕಾದುದು; ಅದನ್ನು ತಿರುಗಿಸಲು ಮತ್ತು ಸಂತೋಷವು, ನಮ್ಮಲ್ಲೇನಿದೆ ಅಥವಾ ನಮ್ಮಲ್ಲೇನಿಲ್ಲವೆಂಬುದರೊಂದಿಗೆ ಸಂಬಂಧ ಹೊಂದಿಲ್ಲ ಎಂದು ನೋಡಲು.  ಅದು ಕೇವಲ ನಮ್ಮ ಮನಃಸ್ಥಿತಿ.
ನಿಮಗೆ ಗೊತ್ತಿದೆಯಾ, ಯುರೋಪಿನ ೩೦% ಖಿನ್ನತೆಗೊಳಗಾಗಿದೆ. ಈ ಸಂಖ್ಯೆಯು ಕಳೆದ ದಶಕದ ಗಣತಿಯ ಪ್ರಕಾರ, ಈಗ ಇದು ಇನ್ನೂ ಹೆಚ್ಚಿದೆ. ಭೂತಾನಿನಂತಹ ಚಿಕ್ಕ ದೇಶವು ತನ್ನ ಸಂತೋಷಕ್ಕಾಗಿ ಗುರುತಿಸಲ್ಪಟ್ಟಿದೆ. ಬಾಂಗ್ಲಾದೇಶದಲ್ಲಿ ಕೂಡಾ ಹೆಚ್ಚು ಸಂತೋಷದಲ್ಲಿರುವ ಜನರಿದ್ದಾರೆ. ದಕ್ಷಿಣ  ಆಫ್ರಿಕಾವು ಈ ಪಟ್ಟಿಯಲ್ಲಿ ಎಲ್ಲಿ ಬರುವುದೆಂಬುದು ನನಗೆ ತಿಳಿಯದು, ಆದರೆ ಇವತ್ತು ಇಲ್ಲಿರುವ ನೀವೆಲ್ಲರೂ, ಸಂತೋಷವಾಗಿರುವ ಹಾಗೂ ಸಂತೋಷವನ್ನು ಹರಡುವ ಸಂಕಲ್ಪವನ್ನು ತೆಗೆದುಕೊಳ್ಳುವಿರೆಂಬ ಭರವಸೆ ನನಗಿದೆ.
ಇದೊಂದು ಒಳ್ಳೆಯ ಅಭಿಪ್ರಾಯವೇ? (ಸಭಿಕರು ಒಪ್ಪಿಗೆಯಿಂದ ತಲೆಯಲ್ಲಾಡಿಸುತ್ತಾ, "ಹೌದು")
ಒಂದು ಹಿಂಸಾರಹಿತ ಸಮಾಜ, ರೋಗರಹಿತ ಶರೀರ, ಒತ್ತಡರಹಿತ ಮನಸ್ಸು, ತಡೆರಹಿತ ಬುದ್ಧಿ, ಆಘಾತರಹಿತ ನೆನಪು ಮತ್ತು ಒಂದು ದುಃಖರಹಿತ ಆತ್ಮ, ಇವುಗಳು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕು.
(ಗುರೂಜಿಯವರು ಒಮ್ಮೆ ಹೊರಗಡೆ ನೋಡುತ್ತಾರೆ ಮತ್ತು ಹೊರಗಿನಿಂದ ಬರುವ ಜೋರಾದ ಸಂಗೀತವನ್ನು ಕೇಳುತ್ತಾರೆ)
ವಿಕರ್ಷಣೆಗಳು ಇರುವುದು, ನೀವು ಜ್ಞಾನವನ್ನು ಹಿಡಿಯಲು ಎಷ್ಟು ಉತ್ಸುಕರಾಗಿರುವಿರಿ ಎಂಬುದನ್ನು ನೋಡಲು. ಸಂಸ್ಕೃತದಲ್ಲಿ ಒಂದು ಮಾತಿದೆ, ’ಶ್ರೇಯಂಸಿ ಬಹು ವಿಘ್ನಾನಿ’, ಅಂದರೆ, ಏನಾದರೂ ಬಹಳ ಅಮೂಲ್ಯವಾದುದು ಇದ್ದರೆ ಆಗ ಅಲ್ಲಿ ಹಲವಾರು ವಿಘ್ನಗಳು ಅಥವಾ ವಿಕರ್ಷಣೆಗಳು ಅದರೊಂದಿಗೆ ಬರುತ್ತವೆ (ಉದ್ಧವ ಗೀತೆಯಿಂದ. ಈ ಉಕ್ತಿಯು ಕೃಷ್ಣ ಪರಮಾತ್ಮನು ತನ್ನ ಭಕ್ತನಾದ ಉದ್ಧವನಿಗೆ ನೀಡಿದ ಪ್ರವಚನದ ಭಾಗವಾಗಿದೆ). ಯಾವುದಕ್ಕಾದರೂ ಬಹಳಷ್ಟು ವಿಘ್ನಗಳು ಬಂದರೆ, ಆಗ ಅದು ಬಹಳಷ್ಟು ಅಮೂಲ್ಯವಾದುದಾಗಿರಬೇಕು.
ನೀವು ಏನಾದರೂ ತಪ್ಪನ್ನು ಮಾಡಲು ಬಯಸಿದರೆ, ಅದಕ್ಕೆ ಯಾವುದೇ ವಿಘ್ನಗಳು ಬರುವುದಿಲ್ಲ. ಆದರೆ ನೀವು ಏನಾದರೂ ಒಳ್ಳೆಯದನ್ನು ಮಾಡಲು ಬಯಸಿದರೆ ಅಥವಾ ಏನಾದರೂ ಅಮೂಲ್ಯವಾದುದನ್ನು ಕೈಗೆತ್ತಿಕೊಳ್ಳಲು ಬಯಸಿದರೆ, ಹಲವಾರು ವಿಘ್ನಗಳು ಎದುರಾಗಬಹುದು.
ಈ ಪ್ರಪಂಚವು ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಇದನ್ನೇ ಇವತ್ತಿನ ವಿಜ್ಞಾನಿಗಳು ಹೇಳಿರುವುದು ಮತ್ತು ಇದನ್ನೇ ಪ್ರಾಚೀನ ಕಾಲದಲ್ಲಿ ಋಷಿಗಳು ಕೂಡಾ ಹೇಳಿರುವುದು. ಪಂಚಭೂತಗಳು - ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಈಥರ್. ಅದಕ್ಕೇ ಅದು ಸಂಸ್ಕೃತದಲ್ಲಿ ಪ್ರಪಂಚ ಎಂದು ಕರೆಯಲ್ಪಟ್ಟಿರುವುದು. ಪಾಂಚ್ ಎಂದರೆ ಐದು, ಮತ್ತು ಪ್ರಪಂಚ ಎಂದರೆ ಪಂಚಭೂತಗಳ ಒಂದು ನಿರ್ದಿಷ್ಟವಾದ ಸಂಯೋಗ. ಇದರಿಂದ ಈ ವಿಶ್ವವು ಮಾಡಲ್ಪಟ್ಟಿದೆ.
ಅದುವೇ ನಮ್ಮ ಶರೀರಕ್ಕೂ ಅನ್ವಯಿಸುತ್ತದೆ. ನಮ್ಮ ಶರೀರದಲ್ಲಿ ೬೦% ಜಲ ಅಂಶವಿದೆ. ಶರೀರದಲ್ಲಿರುವ ಉಷ್ಣವು ಅಗ್ನಿ ಅಂಶವನ್ನು ಪ್ರತಿನಿಧೀಕರಿಸುತ್ತದೆ. ಭೌತಿಕ ಶರೀರವೇ ಪೃಥ್ವಿ ಅಂಶವನ್ನು ಸೂಚಿಸುತ್ತದೆ ಮತ್ತು ಖಾಲಿ ಜಾಗವು ಆಕಾಶ ತತ್ವವನ್ನು ಪ್ರತಿನಿಧೀಕರಿಸುತ್ತದೆ. ಹೀಗೆ ಈ ಪಂಚಭೂತಗಳು ನಮ್ಮ ಸಂಪೂರ್ಣ ಶರೀರವನ್ನು ಮತ್ತು ಈ ವಿಶ್ವದಲ್ಲಿರುವ ಎಲ್ಲವನ್ನೂ ಉಂಟುಮಾಡುತ್ತವೆ.
ನಾವೊಂದು ಚಿಕ್ಕ ಧ್ಯಾನ ಮಾಡೋಣ. ಧ್ಯಾನದ ಬಳಿಕ ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಯಜ್ಞವೆಂದರೆ, ವಿಶ್ವದ ತತ್ವಗಳನ್ನು ಒಂದುಗೂಡಿಸುವುದು. ಈ ವಿಶ್ವದೊಳಕ್ಕೆ ಲಕ್ಷಗಟ್ಟಲೆ ಕಿರಣಗಳು ಬರುತ್ತವೆ. ಬ್ರಹ್ಮಾಂಡ ಮತ್ತು ಅಣುಗಳು  ಪರಸ್ಪರ ಸಂಬಂಧ ಹೊಂದಿವೆ. ಇಲ್ಲಿ ತನ್ನ ರೆಕ್ಕೆಗಳನ್ನು ಬಡಿಯುವ ಪ್ರತಿಯೊಂದು ಚಿಕ್ಕ ಚಿಟ್ಟೆಯೂ ಮೋಡಗಳ ಮೇಲೆ ಪ್ರಭಾವ ಬೀರುತ್ತದೆ. ನೀವಿದರ ಬಗ್ಗೆ ಕೇಳಿದ್ದೀರಾ? ಅಮೆಝೋನ್ ಕಾಡುಗಳಲ್ಲಿರುವ ಒಂದು ಚಿಟ್ಟೆಯು ಸಂಪೂರ್ಣ ಕಾಡಿನ ಮೇಲೆ ಮತ್ತು ಚೈನಾದಲ್ಲಿರುವ ಮೋಡಗಳ ಮೇಲೆ ಪ್ರಭಾವ ಬೀರಬಲ್ಲದು.
ಒಂದು ಮಂಗನು ಏನನ್ನಾದರೂ ಮಾಡಿದರೆ, ಅದು ಹಲವಾರು ಇತರ ಮಂಗಗಳ ಮೇಲೆ ಪ್ರಭಾವ ಬೀರುತ್ತದೆ. ಆಫ್ರಿಕಾದಲ್ಲಿ ನೀವು ಇದರ ಬಗ್ಗೆ ಕೇಳಿದ್ದೀರಾ? ಆಫ್ರಿಕಾದಲ್ಲಿ ನಾವದನ್ನು ’ಬಿಗ್ ಫೈವ್’ (ದೊಡ್ಡ ಐದು) ಎಂದು ಕರೆಯುತ್ತೇವೆ; ’ಬಿಗ್ ಫೈವ್’ನ ನಾಡು (ಆಫ್ರಿಕಾದಲ್ಲಿ ಬೇಟೆಯಲ್ಲಿ ಬಳಸಲ್ಪಡುವ ಒಂದು ಪದ. ಆಫ್ರಿಕಾದಲ್ಲಿ ಕಾಲ್ನಡಿಗೆಯಲ್ಲಿ ಹೋಗಿ ಬೇಟೆಯಾಡಲು ಅತ್ಯಂತ ಹೆಚ್ಚು ಕಷ್ಟವಾಗಿರುವ ಐದು ಪ್ರಾಣಿಗಳು - ಸಿಂಹ, ಆಫ್ರಿಕಾದ ಆನೆ, ಕೇಪ್ ಬಫೆಲೋ, ಚಿರತೆ ಮತ್ತು ಖಡ್ಗಮೃಗ. ಇದನ್ನು ಆ ಪದವು ಸೂಚಿಸುತ್ತದೆ).
ಪ್ರತಿಯೊಂದು ಪ್ರಾಣಿಯು ತನ್ನೊಂದಿಗೆ ಒಂದು ನಿರ್ದಿಷ್ಟ ಕಂಪನವನ್ನು ತರುತ್ತದೆ; ಭೂಮಿಯ ಮೇಲೆ ಒಂದು ಕಾಸ್ಮಿಕ್ ವಿದ್ಯುತ್ಕಾಂತೀಯ ಕಂಪನವನ್ನು ತನ್ನೊಂದಿಗೆ ತರುತ್ತದೆ. ಅವುಗಳು ಇದನ್ನು ವಿಶ್ವದಿಂದ ಭೂಮಿಗೆ ಪ್ರವಹಿಸುವಂತೆ ಮಾಡುತ್ತವೆ. ಪ್ರತಿಯೊಂದು ಪ್ರಾಣಿಯೂ ಭೂಗ್ರಹಕ್ಕೆ ಒಂದು ನಿರ್ದಿಷ್ಟ ಕಂಪನವನ್ನು ತರುತ್ತದೆ. ಅದಕ್ಕಾಗಿಯೇ ಪ್ರತಿಯೊಂದು ಪ್ರಾಣಿಯೂ ಬಹಳ ಮುಖ್ಯವಾದುದು. ವೈದಿಕ ಕಾಲದ ಪ್ರಾಚೀನ ಋಷಿಗಳಿಗೆ ಇದರ ಬಗ್ಗೆ ತಿಳಿದಿತ್ತು. ಒಂದು ನಿರ್ದಿಷ್ಟ ಪಕ್ಷಿ, ಒಂದು ನಿರ್ದಿಷ್ಟ ರೀತಿಯ ಬೀಜ ಕೂಡಾ ಒಂದು ನಿರ್ದಿಷ್ಟ ಕಂಪನದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ಎಲ್ಲವೂ ಒಂದರಿಂದ ಇನ್ನೊಂದಕ್ಕೆ ಸಂಬಂಧ ಹೊಂದಿದೆ. ನಮ್ಮ ಶರೀರದಲ್ಲಿರುವಂತೆ, ನಾವು ಒಂದು ಕೋಶದಿಂದ ಹುಟ್ಟಿದ್ದರೂ, ಆ ಕೋಶದಲ್ಲಿ ೩೩ ವಿವಿಧ ವರ್ಣತಂತುಗಳಿವೆ ಮತ್ತು ಕೋಶದ ಡಿ.ಎನ್.ಎ ಯಲ್ಲಿರುವ ಆ ವಿವಿಧ ವರ್ಣತಂತುಗಳು, ನಮ್ಮ ಶರೀರದ ವಿವಿಧ ಭಾಗಗಳನ್ನು ರೂಪಿಸಲು ಕಾರಣವಾಗಿವೆ.
ಈ ವಿಶ್ವದಲ್ಲಿ ಅದರ ವಿವಿಧ ಭಾಗಗಳಿಂದ ಬರುವ ಹಲವಾರು ವಿವಿಧ ರೀತಿಯ ಕಂಪನಗಳಿವೆ.
ಆದುದರಿಂದ ಬ್ರಹ್ಮಾಂಡ ಮತ್ತು ಅಣುರೂಪಗಳು ಒಂದು ಬಹಳ ಅನನ್ಯವಾದ ರೀತಿಯಲ್ಲಿ ಒಂದುಗೂಡಿದೆ. ಅದನ್ನೇ ಪ್ರಾಚೀನ ಜನರು ಹೇಳಿದುದು. ಈಥರಿನಿಂದ ವಾಯುವಿಗೆ, ವಾಯುವಿನಿಂದ ಬೆಂಕಿಗೆ, ಬೆಂಕಿಯಿಂದ ನೀರಿಗೆ ಮತ್ತು ನಂತರ ಪೃಥ್ವಿ ಅಂಶಕ್ಕೆ ಹೋಗಿ ಸೃಷ್ಟಿಯು ಉಂಟಾಯಿತು.
ಆದುದರಿಂದ ಅವರು ಯಜ್ಞಗಳನ್ನು ಯೋಜಿಸಿದರು (ಈ ಪ್ರಕ್ರಿಯೆಯನ್ನು ವಿರುದ್ಧ ದಿಕ್ಕಿನಲ್ಲಿ ನಕಲು ಮಾಡಲು ಮತ್ತು ಅದನ್ನು ಪ್ರತಿನಿಧೀಕರಿಸಲು - ಪವಿತ್ರ ಮೂಲಿಕೆಗಳನ್ನು ಅರ್ಪಿಸುವುದರ ಮೂಲಕ (ಪೃಥ್ವಿ ಅಂಶ), ತುಪ್ಪವನ್ನು (ಜಲ ಅಂಶ)  ಅಗ್ನಿಗೆ ಅರ್ಪಿಸುವುದರ ಮೂಲಕ (ವಾಯು ಅಂಶದ ಉಪಸ್ಥಿತಿಯೊಂದಿಗೆ ಅಗ್ನಿ ಅಂಶ) ಇಲ್ಲಿಂದ ಕಂಪನಗಳು ಆಕಾಶಕ್ಕೆ (ಆಕಾಶ ಅಂಶ) ರವಾನಿಸಲ್ಪಡುತ್ತವೆ).
ಯಜ್ಞಗಳು ಶಾಂತಿಯನ್ನು ತರಲಿಕ್ಕಾಗಿ ಯೋಜಿಸಲ್ಪಟ್ಟಿವೆ.
ಒಂದು ಯಜ್ಞದ ಉದ್ದೇಶವೇನು? ಮೊದಲನೆಯದ್ದು ಸ್ವಸ್ತಿ - ಒಳ್ಳೆಯ ಆರೋಗ್ಯ; ನಂತರ ಸಮೃದ್ಧಿ, ಮನಃಶಾಂತಿ, ಸಂತೋಷ, ಎಲ್ಲರೊಂದಿಗೂ ಒಂದು ಒಗ್ಗಟ್ಟಿನ ಭಾವನೆ ಮತ್ತು ವಾತಾವರಣದಿಂದ ನಕಾರಾತ್ಮಕತೆಯನ್ನು ತೆಗೆದುಹಾಕುವುದು. ನೀವು ನಕಾರಾತ್ಮಕವಾಗಿರುವ ಪ್ರತಿಯೊಂದು ಸಮಯದಲ್ಲೂ ನೀವು ಕೋಪದ, ಮಾತ್ಸರ್ಯದ, ಲೋಭದ, ನಿರಾಶೆಯ ಮತ್ತು ದ್ವೇಷದ ಆ ನಕಾರಾತ್ಮಕ ಕಂಪನಗಳನ್ನು ಹೊರಸೂಸುತ್ತೀರಿ. ಯಜ್ಞಗಳಿರುವುದು ಅವುಗಳನ್ನೆಲ್ಲಾ ತಟಸ್ಥಗೊಳಿಸುವುದಕ್ಕಾಗಿ ಹಾಗೂ ತೊಡೆದುಹಾಕುವುದಕ್ಕಾಗಿ. ಅದಕ್ಕಾಗಿಯೇ ಈ ಸಲ, ಇದನ್ನು ದಕ್ಷಿಣ ಆಫ್ರಿಕಾಕ್ಕೂ ಕೂಡಾ ತೆಗೆದುಕೊಂಡುಹೋಗಬೇಕೆಂದು ನಾನು ಯೋಚಿಸಿದೆ.
ಇತ್ತೀಚೆಗೆ ಆಫ್ರಿಕಾದಲ್ಲಿ ನಡೆದ, ಹಲವಾರು ಕಿರಿಯರು ನಿಧನ ಹೊಂದಿದ ದೌರ್ಭಾಗ್ಯಕರ ಘಟನೆಯ ಬಗ್ಗೆ ನಾನು ಕೇಳಿದೆ.
ಆದುದರಿಂದ, ಎಲ್ಲಾ ಜನತೆಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲು, ಸಾವಿರಾರು ವರ್ಷಗಳಷ್ಟು ಹಿಂದಿನ ಪ್ರಾಚೀನ ಕಾಲದಲ್ಲಿ ಮಾಡುತ್ತಿದ್ದಂತೆ ವೈದಿಕ ಮಂತ್ರೋಚ್ಛಾರಣೆ ಮತ್ತು ನಿರ್ದಿಷ್ಟ ಮೂಲಿಕೆಗಳನ್ನು ಅರ್ಪಿಸುವುದರ ಮೂಲಕ ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಆದುದರಿಂದ ನೀವು ಅದಕ್ಕೆ ಕೂಡಾ ಸಾಕ್ಷಿಯಾಗಲಿರುವಿರಿ. ಅದು, ನಾವು ಒಬ್ಬ ಸರ್ವಶಕ್ತನಲ್ಲಿ ನಮಗೆ ಶಾಂತಿ, ಸಮೃದ್ಧಿ, ಸಂತೋಷ, ತೃಪ್ತಿ, ಒಗ್ಗಟ್ಟಿನ ಒಂದು ಭಾವನೆ, ಅತ್ಮೀಯತೆಯ ಭಾವನೆ ಮತ್ತು ಪರಸ್ಪರರ ಬಗ್ಗೆ ಕಾಳಜಿಯನ್ನು ನೀಡಲು ಪ್ರಾರ್ಥಿಸಿಕೊಂಡು ಮಾಡುವ ಒಂದು ಚಿಕ್ಕ ಪೂಜೆಯಂತೆ.
ಎಲ್ಲದಕ್ಕಿಂತ ಹೆಚ್ಚಾಗಿ ನಮಗೆ ಆ ಆಂತರಿಕ ತೃಪ್ತಿ ಬೇಕು. ನಿಮಗೆ ಗೊತ್ತಿದೆಯಾ, ನಮ್ಮಲ್ಲಿ ಆಂತರಿಕ ತೃಪ್ತಿಯಿದ್ದರೆ, ನಮಗೆ ಇತರರನ್ನು ಆಶೀರ್ವದಿಸುವ ಅನನ್ಯವಾದ ಸಾಮರ್ಥ್ಯವು ಲಭಿಸುತ್ತದೆ. ನಮಗೆ ನಮ್ಮ ಸ್ವಂತ ಬಯಕೆಗಳನ್ನು ಈಡೇರಿಸಲು ಸಾಧ್ಯವಾಗುವುದು ಮಾತ್ರವಲ್ಲ, ಇತರರ ಇಚ್ಛೆಗಳನ್ನು ಕೂಡಾ ಈಡೇರಿಸಲು ನಮಗೆ ಸಾಧ್ಯವಾಗುತ್ತದೆ. ತೃಪ್ತಿಯ ಅವಸ್ಥೆಯಲ್ಲಿದ್ದರೆ, ಮಾನವ ಚೈತನ್ಯವು ಆ ಉಡುಗೊರೆಯನ್ನು ಪಡೆದುಕೊಳ್ಳಬಹುದು.
ಆದುದರಿಂದ, ನಾವೊಂದು ಚಿಕ್ಕ ಯಜ್ಞವನ್ನು ಮಾಡೋಣ. ಅದರಲ್ಲಿ ಅವರು ೧೦,೦೦೦ ವರ್ಷಗಳಷ್ಟು ಹಳೆಯದಾದ ಪ್ರಾಚೀನ ಮಂತ್ರಗಳನ್ನು ಉಚ್ಛರಿಸುವರು. ಮಂತ್ರೋಚ್ಛಾರಣೆಯ ಸಂದರ್ಭದಲ್ಲಿ ನಾವು ಕೇವಲ ನಮ್ಮ ಕಣ್ಣುಗಳನ್ನು ಮುಚ್ಚುತ್ತೇವೆ, ಮಂತ್ರಗಳನ್ನು ಕೇಳುತ್ತಾ ಅದರಲ್ಲಿ ಮೀಯುತ್ತೇವೆ.
(ಗುರೂಜಿಯವರು ಎಲ್ಲರಿಗೂ ಧ್ಯಾನ ಮಾಡಿಸುತ್ತಾರೆ)
ಪ್ರಶ್ನೆ: ಜೈ ಗುರುದೇವ್! ಜೀವಮಾನದಲ್ಲಿ ಒಮ್ಮೆ ಬರುವ ಈ ಅವಕಾಶಕ್ಕಾಗಿ ನಿಮಗೆ ಧನ್ಯವಾದಗಳು. ದಯವಿಟ್ಟು ನನಗೆ ಹೇಳಿ, ನಾನು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿರುವೆನೇ  ಮತ್ತು ಇಲ್ಲಿ ನನ್ನ ಉದ್ದೇಶವನ್ನು ನೆರವೇರಿಸುತ್ತಿರುವೆನೇ ಎಂಬುದನ್ನು ನಾನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಒಳಗಿನಿಂದ ಬರುವ ದೃಢವಾದ ಅನಿಸಿಕೆ (ಗಟ್ ಫೀಲಿಂಗ್) ಎಂಬುದೊಂದಿದೆ. ನಿಮ್ಮೊಳಗೆ ಆಳದಲ್ಲಿರುವ ಏನೋ ಒಂದು ನಿಮಗೆ ಹೇಳುತ್ತದೆ, "ಇದು ಸರಿ", ಮತ್ತು ನೀವು ಅದನ್ನು ಆಯ್ಕೆ ಮಾಡಿಕೊಂಡಾಗ, ನಿಮಗೆ ಅದರ ಬಗ್ಗೆ ಸಂತೋಷವಾಗುತ್ತದೆ.
ನಾನು ನಿಮಗೆ ಹೇಳುತ್ತೇನೆ, ಸಂಶಯಗಳು ಸಾಧಾರಣವಾಗಿ ನಿಮಗೆ ಬರುವುದು ನೀವು ಸರಿಯಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡಾಗ. ಸಂಶಯವು ಯಾವತ್ತೂ ಯಾವುದಾದರೂ ಸಕಾರಾತ್ಮಕ ವಿಷಯಗಳ ಬಗ್ಗೆ ಇರುವುದು. ನೀವಿದನ್ನು ಗಮನಿಸಿದ್ದೀರಾ? ನಾವು ಯಾವತ್ತೂ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ಸಂಶಯಿಸುತ್ತೇವೆ; ಒಬ್ಬ ವ್ಯಕ್ತಿಯ ಅಪ್ರಾಮಾಣಿಕತೆಯ ಬಗ್ಗೆ ನಾವು ಯಾವತ್ತೂ ಸಂಶಯಿಸುವುದಿಲ್ಲ.
ನಾವು ನಮ್ಮ ಪ್ರೀತಿಪಾತ್ರರಲ್ಲಿ ಕೇಳುತ್ತೇವೆ, "ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯಾ?"
ಯಾರಾದರೂ ನಿಮ್ಮಲ್ಲಿ, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿದರೆ ನೀವು ಕೇಳುತ್ತೀರಿ, "ನಿಜವಾಗಿ?"
ಆದರೆ ಯಾರಾದರೂ, "ನಾನು ನಿನ್ನಲ್ಲಿ ಕೋಪಗೊಂಡಿದ್ದೇನೆ" ಎಂದು ಹೇಳಿದರೆ ನೀವು, "ನಿಜವಾಗಿ?" ಎಂದು ಯಾವತ್ತೂ ಕೇಳುವುದಿಲ್ಲ.
ಅದೇ ರೀತಿಯಲ್ಲಿ, ನಾವು ಯಾವತ್ತೂ ನಮ್ಮ ಸಾಮರ್ಥ್ಯಗಳ ಬಗ್ಗೆ ಸಂಶಯಿಸುತ್ತೇವೆ, ಆದರೆ ನಾವು ನಮ್ಮ ಅಸಾಮರ್ಥ್ಯದ ಬಗ್ಗೆ ಯಾವತ್ತೂ ಸಂಶಯಿಸುವುದಿಲ್ಲ.
ಯಾರಾದರೂ ನಿಮ್ಮಲ್ಲಿ ನೀವು ಸಂತೋಷವಾಗಿರುವಿರೇ ಎಂದು ಕೇಳಿದಾಗ ನೀವು ಹೇಳುತ್ತೀರಿ, "ನನಗೆ ಖಚಿತವಿಲ್ಲ." ಆದರೆ ನೀವು ಖಿನ್ನತೆಯಲ್ಲಿದ್ದಾಗ ಹೀಗೆ ಯಾವತ್ತೂ ಹೇಳಲಿಲ್ಲ. ನೀವು ನಿಮ್ಮ ಖಿನ್ನತೆಯ ಬಗ್ಗೆ ಬಹಳ ಖಚಿತವಾಗಿರುತ್ತೀರಿ. ನೀವು ನಕಾರಾತ್ಮಕತೆಗಳ ಬಗ್ಗೆ ಬಹಳ ಖಚಿತವಾಗಿರುತ್ತೀರಿ, ಆದರೆ ನೀವು ಯಾವತ್ತೂ ಜೀವನದಲ್ಲಿನ ಸಕಾರಾತ್ಮಕ ವಿಷಯಗಳನ್ನು ಪ್ರಶ್ನಿಸುತ್ತೀರಿ. ಆದುದರಿಂದ, ಸಂಶಯವು, ಅಲ್ಲಿ ಏನೋ ಸ್ವಲ್ಪ ಒಳ್ಳೆಯದಿರಬೇಕು ಎಂಬುದನ್ನು ಕೂಡಾ ಸೂಚಿಸುತ್ತದೆ.
ಪ್ರಶ್ನೆ: ನಾವು ಈ ಜನ್ಮದಲ್ಲಿ ಮೋಕ್ಷವನ್ನು ಪಡೆಯುವುದು ಹೇಗೆ ಮತ್ತು ನಾವು ನಮ್ಮೊಂದಿಗೆ ಜೀವಿಸುವ ನಕಾರಾತ್ಮಕ ಜನರನ್ನು ದೂರ ಮಾಡುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನಾನು ಹೇಳಿದುದು ನಿಮ್ಮ ಸಮಸ್ಯೆಗಳನ್ನು ಇಲ್ಲಿ ಬಿಟ್ಟು ಹೋಗಲು, ಆದರೆ ನೀವು ನಿಮಗೆ ತೊಂದರೆ ನೀಡುವ ನಿಮ್ಮ ಕುಟುಂಬದ ಸದಸ್ಯರನ್ನು ಇಲ್ಲಿ ಬಿಟ್ಟು ಹೋಗಬೇಡಿ! (ನಗು)
ಒಮ್ಮೆ ಹಾಗಾಯಿತು, ನಾನು ಅದನ್ನೇ ಆಶ್ರಮದಲ್ಲಿ ಹೇಳಿದೆ, "ನಿಮ್ಮೆಲ್ಲಾ ಸಮಸ್ಯೆಗಳನ್ನು ಇಲ್ಲಿ ಬಿಟ್ಟು ಹೋಗಿ." ಒಬ್ಬಳು ಮಹಿಳೆ ಹೇಳಿದಳು, "ನನ್ನ ಅತ್ತೆಯು ನನ್ನ ಅತೀ ದೊಡ್ಡ ಸಮಸ್ಯೆ, ಆದುದರಿಂದ ನಾನು ಅವರನ್ನು ಇಲ್ಲಿ ಬಿಟ್ಟು ಹೋಗಬಹುದೇ?"
ನಾನಂದೆ, "ನಾನು ನಿನ್ನ ಅತ್ತೆಯನ್ನು ಕೇಳುತ್ತೇನೆ, ಅವಳು ನಿನ್ನ ಬಗ್ಗೆ ಅದನ್ನೇ ಹೇಳಬಹುದು."
ನೋಡಿ, ಜೀವನದಲ್ಲಿ ಸವಾಲುಗಳಿವೆ. ಸವಾಲುಗಳು ಬರುತ್ತವೆ, ವಿಭಿನ್ನ ಮನೋಭಾವವಿರುವ ಜನರು ಬರುತ್ತಾರೆ, ಆದರೆ ನೀವು ನಿಮ್ಮ ದೃಷ್ಟಿಯನ್ನು ವಿಸ್ತರಿಸಿ ನಿಮ್ಮ ಜೀವನವನ್ನು ಒಂದು ವಿಶಾಲವಾದ ದೃಷ್ಟಿಕೋನದಿಂದ ನೋಡಿದಾಗ, ಈಗ ನಿಮಗೆ ಬಹಳ ಮಹತ್ವದ್ದೆಂದು ಕಾಣಿಸುವ ಈ ಎಲ್ಲಾ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಹೋಗಲುಬಿಡುತ್ತೀರಿ. ನೀವು ನಿಮ್ಮ ದೃಷ್ಟಿಯನ್ನು ವಿಶಾಲವಾಗಿಸಬೇಕು.
ಕೆಲವು ಜನರು ನಕಾರಾತ್ಮಕವಾಗಿರುವುದು ನಿಮಗೆ ಕಂಡುಬಂದರೆ, ಅವರನ್ನು ದೂರದಲ್ಲಿಡಿ. ಇದು ಒಂದನೆಯದು.
ಎರಡನೆಯ ವಿಷಯವೆಂದರೆ, ಅವರು ಯಾವತ್ತಿಗೂ ಹಾಗಿರಲಾರರು ಎಂಬುದನ್ನು ತಿಳಿಯಿರಿ. ಸಮಯದೊಂದಿಗೆ ಅವರು ಬದಲಾಗುವರು.
ಮೂರನೆಯ ಆಯ್ಕೆಯೆಂದರೆ, "ಸರಿ, ಅವರು ಹಾಗಿರಲಿ. ಅವರು ನನ್ನೊಳಗಿನಿಂದ ಉತ್ತಮ ಕುಶಲತೆಗಳನ್ನು ಹೊರತರಲಿದ್ದಾರೆ" ಎಂದು ಯೋಚಿಸುವುದು. ಅವರು, ಉತ್ತಮ ಸಂಪರ್ಕದ ಕುಶಲತೆ, ನಿಮ್ಮ ನೆಲೆಯಲ್ಲಿ ಸಕಾರಾತ್ಮಕವಾಗಿರುವ ಕುಶಲತೆಗಳನ್ನು ಹೊರತರುತ್ತಾರೆ.
ಕೊನೆಯ ವಿಷಯವೆಂದರೆ, ಅದನ್ನು ದೇವರಿಗೆ ಬಿಡುವುದು. ಅದನ್ನು ಬಗೆಹರಿಸುವುದನ್ನು ದೇವರಿಗೆ ಬಿಡಿ. ಇದನ್ನು ನಾವು ಮಾಹಾತ್ಮಾ ಗಾಂಧೀಜಿಯವರ ಮೆಚ್ಚಿನ ಹಾಡಿನಲ್ಲಿ ಹಾಡುತ್ತೇವೆ, "ಈಶ್ವರ್ ಅಲ್ಲಾ ತೇರೋ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" - ಎಲ್ಲರ ಮನಸ್ಸು ಮತ್ತು ಬುದ್ಧಿಯು ಪವಿತ್ರವಾಗಿರಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗಲಿ .
ಇದುವೇ ಗಾಯತ್ರಿ ಮಂತ್ರದಲ್ಲಿ ಕೂಡಾ ಇರುವುದು, "ಧಿಯೋ ಯೋ ನಃ ಪ್ರಚೋದಯಾತ್" - ದೇವರು ನನ್ನ ಬುದ್ಧಿಯನ್ನು ಪ್ರೇರೇಪಿಸಲಿ, ನನ್ನ ಬುದ್ಧಿಯು ಸಣ್ಣದಾದ, ಮೂರ್ಖತನದ ಅಭಿಪ್ರಾಯಗಳು ಮತ್ತು ಯೋಚನೆಗಳೊಂದಿಗೆ ಬರದಿರಲಿ. ಈ ಬುದ್ಧಿಯು ದೇವರ, ಸರ್ವಶಕ್ತನ ಇಚ್ಛೆಯನ್ನು ಪ್ರತಿಬಿಂಬಿಸಲಿ.
ಗಾಯತ್ರಿ ಮಂತ್ರವು, ಮಾನವ ಸಮಾಜವು ಪಡೆದ ಅತ್ಯಂತ ಸುಂದರವಾದ ಮಂತ್ರಗಳಲ್ಲಿ ಒಂದು. ಅದು ಕೂಡಾ ಅದನ್ನೇ ಹೇಳುತ್ತದೆ: ದೇವರ ಇಚ್ಛೆಯು ನನ್ನ ಇಚ್ಛೆ ಮತ್ತು ಯೋಚನೆಗಳಲ್ಲಿ; ಬುದ್ಧಿಯಲ್ಲಿ ಪ್ರತಿಬಿಂಬಿಸಲಿ. ನನ್ನ ಬುದ್ಧಿಯು ದೇವರೊಂದಿಗೆ ಜೋಡಿಸಲ್ಪಟ್ಟಿರಲಿ.
ಪ್ರಶ್ನೆ: ನನಗೆ ಬಹಳ ಹತ್ತಿರವಿರುವ ವ್ಯಕ್ತಿಯೊಬ್ಬನು ನಿರಂತರವಾಗಿ ಸುಳ್ಳು ಹೇಳುತ್ತಾನೆ ಮತ್ತು ಮೋಸ ಮಾಡುತ್ತಾನೆ. ಅದು ಅವನ ಎರಡನೆಯ ಸ್ವಭಾವದಂತಿದೆ, ಮತ್ತು ಸುಳ್ಳುಗಳು ಒಂದು ನೇರವಾದ ಮುಖದಿಂದ ಹೇಳಲ್ಪಡುತ್ತದೆ. ಜನರು ಯಾಕೆ ಹೀಗೆ ಮಾಡುತ್ತಾರೆ ಮತ್ತು ಅವರಿಗೇನಾಗಬಹುದು? ದಯವಿಟ್ಟು ಸಹಾಯ ಮಾಡಿ, ನಾನು ನನ್ನ ಮನಸ್ಸಿಗೆ ವಿಶ್ರಾಂತಿ ನೀಡಲು ಬಯಸುತ್ತೇನೆ. 
ಶ್ರೀ ಶ್ರೀ ರವಿಶಂಕರ್: ದೇವರು ವಿನೋದಪ್ರಿಯ ಎಂಬುದನ್ನು ನೀನು ನೆನಪಿಸಿಕೊಳ್ಳಬೇಕು. ಎಲ್ಲರೂ ನಿನ್ನಂತೆ ಇರುತ್ತಿದ್ದರೆ, ನೀವೆಲ್ಲರೂ ಫೋರ್ಡ್ ಕಂಪೆನಿಯಂತಿರುವಿರಿ. ಪ್ರಪಂಚವು, ಒಂದೇ ಒಂದು ರೀತಿಯ ಕಾರುಗಳನ್ನು ಉತ್ಪಾದಿಸುವ ಒಂದು ಫೋರ್ಡ್ ಕಂಪೆನಿಯಲ್ಲ. ಅವರು ಕೂಡಾ ಪ್ರತಿವರ್ಷವೂ ಮಾದರಿಯನ್ನು ಬದಲಾಯಿಸುತ್ತಾರೆ. ದೇವರು ವಿನೋದವನ್ನು ಪ್ರೀತಿಸುತ್ತಾರೆ ಮತ್ತು ಅವನು ಎಲ್ಲಾ ರೀತಿಯ ಜನರನ್ನು ನಿಮ್ಮ ಸುತ್ತಲೂ ಹಾಕುತ್ತಾನೆ.
ಕೇವಲ ನಿಮ್ಮೊಳಗೆ ನೋಡಿ, ನಿಮ್ಮಲ್ಲಿ ಎಷ್ಟು ನಕಾರಾತ್ಮಕ ಅಂಶಗಳಿವೆ ಮತ್ತು ನಿಮ್ಮಲ್ಲಿ ಎಷ್ಟು ಸಕಾರಾತ್ಮಕ ಅಂಶಗಳಿವೆ? ನೀವು ಹೇಗೆ ಸುಧಾರಿಸಬಹುದು, ಇದನ್ನು ನೀವು ಯೋಚಿಸಬೇಕಾಗಿರುವುದು ಮತ್ತು ನೀವು ಮಾಡಬಹುದಾದುದು. ಇತರರು ಹೇಗೆ ಸುಧಾರಿಸಬೇಕು - ಸದ್ಯಕ್ಕೆ ಅದನ್ನು ಅವರಿಗೆ ಬಿಡಿ. ನಿಮಗೆ ಸಾಧ್ಯವಿದ್ದರೆ, ಅವರಿಗೆ ಶಿಕ್ಷಣ ನೀಡಿ, ಆದರೆ ಅದನ್ನು ಸಹಾನುಭೂತಿಯೊಂದಿಗೆ ಮಾಡಿ. ಅಥವಾ ಅವರನ್ನು ಹತ್ತಿರದಲ್ಲಿರುವ ಜೀವನ ಕಲೆಯ ಶಿಕ್ಷಕರೊಬ್ಬರ ಬಳಿಗೆ ಕರೆದುಕೊಂಡುಹೋಗಿ. ಅವರು ಬದಲಾಗಲು ಶಿಕ್ಷಕರು ಸಹಾಯ ಮಾಡಬಹುದು. ನೀನು ಬಹಳಷ್ಟು ಸಹಾನುಭೂತಿಯುಳ್ಳವನಾಗಿದ್ದರೆ, ಅವನ ಜೀವನವು ಉತ್ತಮವಾಗಲೆಂದು ಮತ್ತು ಅವನು ಹೆಚ್ಚು ಪ್ರಾಮಾಣಿಕನಾಗಲೆಂದು ಪ್ರಾರ್ಥಿಸಿ. ಆದರೆ ನಾನು ಮೊದಲೇ ಹೇಳಿದಂತೆ, ಈ ಭೂಮಿಯಲ್ಲಿ ಎಲ್ಲಾ ನಮೂನೆಗಳ ಅಗತ್ಯವಿದೆ. ಅವರು ಪ್ರಪಂಚವನ್ನು ಹೆಚ್ಚು ವರ್ಣರಂಜಿತವನ್ನಾಗಿಸುತ್ತಾರೆ. ತಿಳಿಯಿತಾ? ಅವರು ನಿಮ್ಮಲ್ಲಿ ಕೆಲವು ನಿರ್ದಿಷ್ಟ ಗುಂಡಿಗಳನ್ನು ಒತ್ತುತ್ತಾರೆ ಮತ್ತು ನಿಮ್ಮಲ್ಲಿ ನಿರ್ದಿಷ್ಟ ಭಾವನೆಗಳನ್ನು ಏಳಿಸುತ್ತಾರೆ  ಹಾಗೂ ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುವಿರಿ ಎಂಬುದನ್ನು ನೋಡುತ್ತಾರೆ.
ಪ್ರಶ್ನೆ: ಜೈ ಗುರುದೇವ್! ನೀವು ಯುವಜನತೆ ಹಾಗೂ ಆಧ್ಯಾತ್ಮದ ಬಗ್ಗೆ ಮಾತನಾಡಬೇಕೆಂದು ನಾನು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್: ನಾವು ಪದಾರ್ಥ ಮತ್ತು ಚೈತನ್ಯ ಎರಡರಿಂದಲೂ ಮಾಡಲ್ಪಟ್ಟಿದ್ದೇವೆ. ನಮ್ಮ ಶರೀರವು ಕಾರ್ಬೋಹೈಡ್ರೇಟ್, ಪ್ರೊಟೀನ್, ಅಮಿನೋ ಆಸಿಡ್, ವಿಟಮಿನ್ ಮೊದಲಾದವುಗಳಿಂದ ಮಾಡಲ್ಪಟ್ಟಿದೆ ಮತ್ತು ನಮ್ಮ ಆತ್ಮವು ಉದಾರತೆ, ಪ್ರೀತಿ, ಸಹಾನುಭೂತಿ, ಶಕ್ತಿ, ವಿಸ್ತರಿಸುವಿಕೆ, ಸಮಗ್ರತೆ, ಪ್ರಾಮಾಣಿಕತೆ, ಸತ್ಯತೆ, ಬುದ್ಧಿ, ಸೂಕ್ಷ್ಮತೆ; ಈ ಎಲ್ಲಾ ಗುಣಗಳಿಂದ ಮಾಡಲ್ಪಟ್ಟಿದೆ.
ಈ ಆಂತರಿಕ ಗುಣಗಳನ್ನು (ಸೌಂದರ್ಯ, ಪ್ರೀತಿ, ಮೊದಲಾದವು) ಪಾಲನೆ ಮಾಡುವ ಯಾವುದೇ ಕ್ರಿಯೆಯು ಆಧ್ಯಾತ್ಮವಾಗಿದೆ. ಧ್ಯಾನ, ಹಾಡುವಿಕೆ, ಮಂತ್ರೋಚ್ಛಾರಣೆ, ಸೇವೆ ಮಾಡುವುದು, ಮೊದಲಾದವುಗಳೆಲ್ಲಾ ಆಧ್ಯಾತ್ಮದ ಭಾಗವಾಗಿದೆ. ಮತ್ತು ನಿಮ್ಮಲ್ಲಿ ಯೌವನವನ್ನು ಉಳಿಸುವುದು ಈ ಆಧ್ಯಾತ್ಮವಾಗಿದೆ. ಅದು ನಿಮಗೆ ಶಕ್ತಿಯನ್ನು ತರುತ್ತದೆ.
ನಿಮಗೆ ಗೊತ್ತಿದೆಯಾ, ಈಗ ನಾನು ನೇರವಾಗಿ ಭಾರತದಿಂದ, ೧೫ ಗಂಟೆಗಳ ವಿಮಾನ ಪ್ರಯಾಣದಿಂದ ಬಂದಿದ್ದೇನೆ. ನಾನು ಈಗಷ್ಟೇ ತಲುಪಿದೆ, ನನ್ನ ಬಟ್ಟೆಗಳನ್ನು ಬದಲಾಯಿಸಿದೆ ಮತ್ತು ಅರ್ಧ ಗಂಟೆಯಲ್ಲಿ ನಾನು ಇಲ್ಲಿಗೆ ಧಾವಿಸಬೇಕಾಯಿತು. ನನಗೆ ಜೆಟ್-ಲ್ಯಾಗ್ ಆದಂತೆ ಮತ್ತು ಆಯಾಸವಾದಂತೆ ಕಾಣಿಸುತ್ತಿದೆಯಾ?
(ಸಭಿಕರು ’ಇಲ್ಲ’ ಎಂದು ಹೇಳುತ್ತಾ ಪ್ರತಿಕ್ರಿಯಿಸುತ್ತಾರೆ)
ಒಬ್ಬರು ನನ್ನಲ್ಲಿ ಕೇಳಿದರು, "ಗುರೂಜಿ, ನಾವು ಕೇಪ್ ಟೌನಿಗೆ ವಿಮಾನದಲ್ಲಿ ಪ್ರಯಾಣಿಸಿದರೆ ನಮಗೆ ಬಹಳ ಜೆಟ್-ಲ್ಯಾಗ್ ಆಗುತ್ತದೆ. ನಿಮಗೆ ಜೆಟ್-ಲ್ಯಾಗ್ ಆಗುವುದಿಲ್ಲವೇ?"
ನಾನಂದೆ, "ಮನಸ್ಸು ತಾಜಾವಾಗಿರುವಾಗ ಮತ್ತು ಮನಸ್ಸು ಮೂಲಸ್ಥಾನದೊಂದಿಗೆ ಜೋಡಿರುವಾಗ, ಯಾವತ್ತೂ ತಾಜಾತನವಿರುತ್ತದೆ."
ಯೌವನವೆಂದರೆ ಮೂಲಸ್ಥಾನದೊಂದಿಗಿರುವ ಆ ಜೋಡಣೆ ಮತ್ತು ಯೌವನವೆಂದರೆ ಎಲ್ಲರೊಂದಿಗೂ ಜೋಡಿಕೊಳ್ಳುವ ಸಾಮರ್ಥ್ಯ ಹಾಗೂ ಕೇವಲ ಆಧ್ಯಾತ್ಮ ಮಾತ್ರ ಯುವಜನರಲ್ಲಿ ಇದನ್ನು ತರಬಲ್ಲದು.
ಪ್ರಶ್ನೆ: ಪ್ರೀತಿಪಾತ್ರರೊಬ್ಬರು ನಿಧನ ಹೊಂದಿದರೆ, ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಾಧಾರಣವಾಗಿ  ಹೇಳುವ ಮಾತೆಂದರೆ, "ಅವನು/ಅವಳು ಯಾವತ್ತೂ ನಿನ್ನೊಂದಿಗೆ ಇರುತ್ತಾನೆ/ಇರುತ್ತಾಳೆ." ಅದು ನಿಜವಾಗಿಯೂ ಸತ್ಯವೇ? ನಿಧನ ಹೊಂದಿದ ಪ್ರೀತಿಪಾತ್ರರೊಬ್ಬರು ನಿಜವಾಗಿಯೂ ನಿಮ್ಮೊಂದಿಗಿರುತ್ತಾರಾ ಮತ್ತು ಜೀವನದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರಾ?
ಶ್ರೀ ಶ್ರೀ ರವಿಶಂಕರ್: ನೀನು ಯಾಕೆ ಅವರಿಗೆ ಸ್ವಲ್ಪ ವಿರಾಮದ ಸಮಯವನ್ನು ನೀಡಬಾರದು? ಅವರಿಗೆ ಈ ಪ್ರಪಂಚದಲ್ಲಿ ಸಾಕಾಗುವಷ್ಟು ಆಗಿದೆ ಮತ್ತು ಅವರು ಹೋಗಿದ್ದಾರೆ. ಅವರು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಲಿ ಮತ್ತು ಅವರು ಮಾಡಲು ಬಯಸುವ ಬೇರೆ ಏನನ್ನಾದರೂ ಮಾಡಲಿ. ಅವರು ಸ್ವಲ್ಪ ಮೋಜು ಮಾಡಲಿ. ಅವರು  ಯಾಕೆ ನಿನಗೆ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ಮಾಡುತ್ತಿರಬೇಕು? (ನಗು) ಮಾರ್ಗದರ್ಶನ ಮಾಡಲು ಏನಿದೆ? ಇದು ಒಂದು ರೈಲಿನಲ್ಲಿ ಕುಳಿತುಕೊಳ್ಳುವಂತೆ. ರೈಲು ನಿಲ್ಲುವಾಗ ನೀವು ಕೆಳಗಿಳಿಯಲಿದ್ದೀರಿ. ಗುರಿಯು ನಿಶ್ಚಿತವಾಗಿದೆ. ಎಲ್ಲರೂ ಒಂದು ದಿನ ಸಾಯಲಿದ್ದಾರೆ. ನೀನು ನಿಧನ ಹೊಂದಿದಾಗ ನೀನು ಇನ್ನೊಂದು ಆಯಾಮವನ್ನು ಕೂಡಾ ನೋಡುವೆ. ಆದುದರಿಂದ ಚಿಂತಿಸಬೇಡ.
ನೀವು ಸಂತೋಷವಾಗಿ ಮತ್ತು ಶಾಂತವಾಗಿದ್ದರೆ, ನಿನ್ನ ಶಾಂತಿಯು ಈ ಪ್ರಪಂಚವನ್ನು ಮೀರಿ ಹೋಗುತ್ತದೆ ಮತ್ತು ಇನ್ನೊಂದು ತೀರವನ್ನು ಕೂಡಾ ತಲಪುತ್ತದೆ. ನೀವು ಪ್ರೀತಿ ಮತ್ತು ಭಕ್ತಿಯಿಂದ ತುಂಬಿದ್ದರೆ, ಅದರ ಒಂದು ಭಾಗವು, ಅದರ ಒಂದು ಕಿರಣವು ಅವರನ್ನು ಕೂಡಾ ತಲಪುತ್ತದೆ ಮತ್ತು ಅವರು ಸಂತೋಷಗೊಳ್ಳುತ್ತಾರೆ. ನೀವು ಏನಾದರೂ ಒಳ್ಳೆಯ ಸೇವೆಯನ್ನು ಮಾಡಿದಾಗ, ಆ ಸೇವೆಯು ಪುಣ್ಯವನ್ನು ತರುತ್ತದೆ ಮತ್ತು ಪುಣ್ಯವು ಕೂಡಾ ಇನ್ನೊಂದು ಬದಿಗೆ ಹೋದವರಿಗೆ ಸಹಾಯ ಮಾಡುತ್ತದೆ.
ಪ್ರಶ್ನೆ: ನೀವು ಮಹಾನ್! ಒಬ್ಬರು ತಡಮಾಡುವುದನ್ನು ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಇದಕ್ಕೆ ಉತ್ತರವನ್ನು ನಾನು ಮುಂದಿನ ವರ್ಷ ಕೊಡುತ್ತೇನೆ (ನಗು).
ಸುಮ್ಮನೇ ಊಹಿಸಿಕೊಳ್ಳಿ, ನೀವು ದರ್ಜಿಯ ಬಳಿ, ದೀಪಾವಳಿಗೆ ಅಥವಾ ನಿಮ್ಮ ಮದುವೆಗಾಗಿರಬಹುದು, ಬಟ್ಟೆ ಹೊಲಿಯಲು ಕೊಟ್ಟಿದ್ದೀರಿ. ಈಗ ನೀವು ನಿಮ್ಮ ಮದುವೆಗೆ ಒಂದು ವಾರ ಮೊದಲು, ನಿಮ್ಮ ಬಟ್ಟೆ ಸಿದ್ಧವಿರುವುದೆಂಬ ಭರವಸೆಯೊಂದಿಗೆ ದರ್ಜಿಯ ಬಳಿ ಹೋಗುತ್ತೀರಿ, ಮತ್ತು ದರ್ಜಿಯು ತಡಮಾಡುತ್ತಾನೆ ಹಾಗೂ ನಿಮಗೆ ಹೇಳುತ್ತಾನೆ, "ನಾನು ಬಟ್ಟೆಯನ್ನು ಆರು ತಿಂಗಳುಗಳ ಬಳಿಕ ಕೊಡುತ್ತೇನೆ". ನಿಮಗೆ ಹೇಗನಿಸುತ್ತದೆ? ನಿಮ್ಮ ಮನಸ್ಸಿನ ಸ್ಥಿತಿ ಹೇಗಿರುತ್ತದೆ?
ನಿಮ್ಮ ಹಲ್ಲು ನೋಯುತ್ತಿದ್ದು ನಿಮಗೆ ಒಬ್ಬರು ವೈದ್ಯರ ಅಗತ್ಯವಿದೆಯೆಂದಿಟ್ಟುಕೊಳ್ಳೋಣ. ನಿಮ್ಮ ವೈದ್ಯರು ಹೇಳುತ್ತಾರೆ, "ಮೂರು ತಿಂಗಳುಗಳ ಬಳಿಕ ಬಾ ಮತ್ತು ಏನಾದರೂ ಮಾಡಲು ಸಾಧ್ಯವಿದೆಯೇ ಇಲ್ಲವೇ ಎಂಬುದನ್ನು ನಾನು ನೋಡುತ್ತೇನೆ." ನೀವೇನು ಮಾಡುವಿರಿ?
ನಿಮ್ಮ ವೈದ್ಯರು ತಡಮಾಡುವುದು ಅಥವಾ ನಿಮ್ಮ ದರ್ಜಿಯು ತಡಮಾಡುವುದನ್ನು ಮತ್ತು ನಿಮಗೆ ಆವಶ್ಯಕವಾಗಿರುವ ಸೇವೆಗಳಲ್ಲಿ ಯಾವುದೂ ತಡವಾಗುವುದನ್ನು ನೀವು ಬಯಸುವುದಿಲ್ಲ. ಅವರಲ್ಲಿ ಪ್ರತಿಯೊಬ್ಬರೂ ಕೂಡಲೇ ಬಂದು, ಗೊತ್ತುಪಡಿಸಿದ ಸಮಯದಲ್ಲಿ ಸೇವೆ ಸಲ್ಲಿಸಬೇಕೆಂದು ನೀವು ಬಯಸುತ್ತೀರಿ.
ನೀವು ಕೇಳುವ ಪ್ರಶ್ನೆಗಳಿಗೆ ಕೂಡಾ, ಸರಿಯಾದ ಉತ್ತರಗಳು ನಿಮಗೆ ಕೂಡಲೇ ಬೇಕು! ಸರಿಯಾ?! ಆದರೆ ನೀವು ತಡಮಾಡಲು ಬಯಸುತ್ತೀರಾ? ಬನ್ನಿ, ಎಚ್ಚೆತ್ತುಕೊಳ್ಳಿ! ಈಗಲೇ ಎಚ್ಚೆತ್ತುಕೊಳ್ಳಿ!

ಸೋಮವಾರ, ಆಗಸ್ಟ್ 13, 2012

ನಂಬಿಕೆ ಮುಖ್ಯವೆ?

13
2012
Aug
ಬೆಂಗಳೂರು ಆಶ್ರಮ, ಭಾರತ




ಹೌದು, ಇವತ್ತಿಗೆ ನಿಮ್ಮ ಮೌನ ಮುಗಿಯಿತು!
(ಶ್ರೀ ಶ್ರೀಯವರು ಉನ್ನತ ಶಿಬಿರಾರ್ಥಿಗಳಿಗೆ ಹೇಳುತ್ತಾರೆ)
ಸರೋವರದ ಕಡೆಗೆ ನಡೆಯುತ್ತಿದ್ದ ಇಬ್ಬರು ಉನ್ನತ ಶಿಬಿರಾರ್ಥಿಗಳು ಮಾತನಾಡುವುದನ್ನು ನಾನು ಕೇಳಿಸಿಕೊಂಡೆ. ಒಬ್ಬನು ಕೇಳಿದ, "ಮೌನವು ಯಾವಾಗ ಮುಗಿಯುತ್ತದೆ?" ಇನ್ನೊಬ್ಬನಂದ, "ನಾಳೆ ಬೆಳಗ್ಗೆ! ನಾಳೆ ಬೆಳಗ್ಗೆ ಅದು ಮುಗಿಯುತ್ತದೆ."
(ನಗು)
ಹೀಗೆ, ಕೆಲವು ಜನರು ಅಂತಹ ಮೌನವನ್ನೂ ಇರಿಸಿದ್ದಾರೆ! ಮತ್ತು ಕೆಲವು ಜನರು ಸಂಪೂರ್ಣ ಭಕ್ತಿಯಿಂದ ಮೌನವಿರಿಸಿದ್ದಾರೆ.
ಮೌನದಲ್ಲಿ ನೀವು ಶಕ್ತಿಯನ್ನು ಉಳಿತಾಯ ಮಾಡುತ್ತೀರಿ. ಮಾತನಾಡುವುದರೊಂದಿಗೆ, ಬಹಳಷ್ಟು ಶಕ್ತಿಯು ವ್ಯಯವಾಗುತ್ತದೆ. ಅದಕ್ಕಾಗಿಯೇ ಸ್ವಲ್ಪ ಸಮಯದ ಮಟ್ಟಿಗೆ ಮೌನವಾಗಿರುವುದು ಒಳ್ಳೆಯದು. ವರ್ಷದಲ್ಲಿ ಎರಡು ಅಥವಾ ಮೂರು ಸಾರಿ, ಅಥವಾ ನಾಲ್ಕು ತಿಂಗಳುಗಳಿಗೊಮ್ಮೆ, ಮೂರರಿಂದ ನಾಲ್ಕು ದಿನಗಳ ಮೌನ ಶಿಬಿರ ಮಾಡುವುದು ಬಹಳ ಒಳ್ಳೆಯದು. ಇದನ್ನು ಮಾಡುವುದರಿಂದ ಬಹಳಷ್ಟು ಪ್ರಯೋಜನವಿದೆ. ಶಾರೀರಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ನರಮಂಡಲದಲ್ಲಿರುವ ಎಲ್ಲಾ ಒತ್ತಡವು ಬಿಡುಗಡೆಯಾಗುತ್ತದೆ. ನಿಮ್ಮ ಬ್ಯಾಟರಿಗಳು ಚಾರ್ಜ್ ಆಗುತ್ತವೆ ಮತ್ತು ನೀವು ಆನಂದಪೂರ್ಣರಾಗುತ್ತೀರಿ! ಮೌನದೊಂದಿಗೆ ನಮ್ಮ ಮಾತು ಶುದ್ಧವಾಗುತ್ತದೆ ಕೂಡಾ, ಮತ್ತು ನಂತರ ನಾವು ಹೇಳುವುದೆಲ್ಲಾ ಆಗಲು ಪ್ರಾರಂಭವಾಗುತ್ತದೆ. ಅದಕ್ಕೇ ಸಾಧನೆಗೆ ತನ್ನದೇ ಆದ ಮಹತ್ವವಿದೆ.

ಪ್ರಶ್ನೆ: ನಂಬಿಕೆಯು ಎಷ್ಟು ಪ್ರಮುಖವಾದುದು?
ಶ್ರೀ ಶ್ರೀ ರವಿಶಂಕರ್: ನಂಬಿಕೆಯಿಲ್ಲದೆ ನೀವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ!
ಕೇಳು, ನೀನಿಲ್ಲಿಗೆ ಒಂದು ಕಾರಿನಲ್ಲಿ ಬಂದಿರುವೆಯೆಂದು ಮತ್ತು ನೀನು ನಿನ್ನ ಕಾರನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿರುವೆಯೆಂದು ಇಟ್ಟುಕೊಳ್ಳೋಣ. ಈಗ ನೀನು ಇಲ್ಲಿ ಕುಳಿತಿರುವಾಗ, ನೀನು ಹಿಂತಿರುಗಿ ಹೋದಾಗ ಕಾರು ಅಲ್ಲಿರುವುದೆಂಬ ನಂಬಿಕೆ ನಿನ್ನಲ್ಲಿರುವುದು, ಅಲ್ಲವೇ?! ಆದುದರಿಂದ, ಈ ನಂಬಿಕೆಯಿಲ್ಲದೆ ನೀನು ಅಸ್ತಿತ್ವದಲ್ಲಿರಲು ಸಾಧ್ಯವೇ? ಇಲ್ಲ!
ಮೊದಲನೆಯದಾಗಿ, ನಿಮಗೆ ನಿಮ್ಮಲ್ಲಿ ನಂಬಿಕೆಯಿರಬೇಕು.
ಪ್ರಧಾನವಾದ ಮೂರು ರೀತಿಯ ನಂಬಿಕೆಗಳಿವೆ.
೧. ನಿಮ್ಮ ಮೇಲೆ ನಂಬಿಕೆ. ನಿಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲದಿದ್ದರೆ, ಅದು ಭ್ರಮೆಯೆಂದು ಕರೆಯಲ್ಪಡುತ್ತದೆ. ಅದೊಂದು ರೋಗ.
೨. ನಿಮ್ಮ ಸುತ್ತಲಿರುವ ಜನರ ಒಳ್ಳೆಯತನದಲ್ಲಿ ನಂಬಿಕೆ. ಪ್ರಪಂಚದಲ್ಲಿ ಒಳ್ಳೆಯ ಜನರಿದ್ದಾರೆ, ನಿಮ್ಮಲ್ಲಿ ಆ ನಂಬಿಕೆಯಿರಬೇಕು; ಇಲ್ಲದಿದ್ದರೆ ನಿಮಗೆ ಸಮಾಜದಲ್ಲಿ ಒಂದು ಅಂಗುಲದಷ್ಟೂ ಚಲಿಸಲು ಸಾಧ್ಯವಿಲ್ಲ.
೩. ತಿಳಿಯದೇ ಇರುವ ಒಂದರ ಬಗ್ಗೆ ನಂಬಿಕೆ; ಎಲ್ಲವನ್ನೂ ನಡೆಸುವಂತೆ ತೋರುವ ಒಂದು ಅಮೂರ್ತ ಶಕ್ತಿಯಲ್ಲಿ ನಂಬಿಕೆ. ಅದು ಮೂರನೆಯ ರೀತಿಯ ನಂಬಿಕೆ.
ಆದುದರಿಂದ, ಈ ಮೂರು ನಂಬಿಕೆಗಳಲ್ಲಿ, ಮೊದಲನೆಯ ಎರಡು ನಂಬಿಕೆಗಳು ಬಹಳ ಅಗತ್ಯ; ಮೂರನೆಯದು ಜೀವನವನ್ನು ಬಹಳಷ್ಟು ಉತ್ತಮಗೊಳಿಸುತ್ತದೆ.

ಪ್ರಶ್ನೆ: ಪ್ರಯತ್ನಗಳನ್ನು ಮಾಡಿದ ಬಳಿಕವೂ ನನಗೆ ಯಶಸ್ಸು ಸಿಗುವುದಿಲ್ಲ.
ಶ್ರೀ ಶ್ರೀ ರವಿಶಂಕರ್: ನಿನಗೆ ಕೇವಲ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಲು ಸಾಧ್ಯವಿಲ್ಲ. ಪ್ರಯತ್ನದೊಂದಿಗೆ ನಿನ್ನಲ್ಲಿ ಶ್ರದ್ಧೆ ಮತ್ತು ಭಕ್ತಿಯೂ ಇರಬೇಕು. ನಿನ್ನಲ್ಲಿ ಶ್ರದ್ಧೆ ಮತ್ತು ಭಕ್ತಿಗಳಿದ್ದು, ಅವುಗಳು ಜೊತೆಯಲ್ಲಿ ಸಾಗಿದರೆ, ಆಗ ನಿನಗೆ ಯಶಸ್ಸು ಸಿಗುತ್ತದೆ.
ಹಾಗೆಯೇ, ನಿಮ್ಮಲ್ಲಿ ಕೇವಲ ಭಕ್ತಿಯಿದ್ದರೆ ನಿಮಗೆ ಯಶಸ್ಸು ಸಿಗುವುದೆಂದಲ್ಲ. ಅಲ್ಲ! ನಿಮ್ಮಲ್ಲಿ ಭಕ್ತಿ ಮತ್ತು ಪ್ರಯತ್ನವಿರಬೇಕು; ಈ ಎರಡರ ಸಂಯೋಗವಿರುವುದು ಅಗತ್ಯವಾಗಿದೆ.

ಪ್ರಶ್ನೆ: ದಯವಿಟ್ಟು ನಮಗೆ ಅಹಂನ ಬಗ್ಗೆ ಹೇಳಿ.  
ಶ್ರೀ ಶ್ರೀ ರವಿಶಂಕರ್: ಪ್ರೀತಿಯಲ್ಲಿ ಒಂದು ಸೋಲು ಕೂಡಾ ಗೆಲುವಾಗುತ್ತದೆ, ಮತ್ತು ಅಹಂಕಾರದಲ್ಲಿ ಒಂದು ಗೆಲುವು ಕೂಡಾ ಸೋಲಾಗುತ್ತದೆ!

ಪ್ರಶ್ನೆ: ಗುರೂಜಿ, ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು, ಮಾಡುವ ಕೆಲಸವು ಪರಿಪೂರ್ಣವಾಗಿ ಸರಿಯಲ್ಲದಿದ್ದರೂ, ಯಾವುದೆಲ್ಲಾ ಸಹಜವಾಗಿ ಬರುವುದೋ ಅದನ್ನು ಮಾಡುತ್ತಾ ಇರು ಎಂದು ಹೇಳುತ್ತಾನೆ. ದಯವಿಟ್ಟು ಸಲಹೆ ನೀಡಿ.
ಶ್ರೀ ಶ್ರೀ ರವಿಶಂಕರ್: ಹೌದು, ನಿನ್ನ ಸಹಜತೆಯಲ್ಲಿರು, ಅಸಹಜವಾಗಿರಬೇಡ. ಯಾವುದು ನಿನಗೆ ಸಹಜವಲ್ಲವೋ ಅದನ್ನು ತೋರಿಸಿಕೊಳ್ಳಲು ಹೋಗಬೇಡ. ಆದರೆ ಅದರರ್ಥ ನೀನು ಮೂರ್ಖನಾಗಿರು ಎಂದಲ್ಲ, ಸರಿಯಾ!
ನೀನೊಂದು ಅಂತ್ಯಸಂಸ್ಕಾರಕ್ಕೆ ಹೋಗಿರುವೆಯೆಂದೂ ಮತ್ತು ನಿನಗೆ ನೃತ್ಯ ಮಾಡಬೇಕೆಂದನಿಸುವುದೆಂದೂ ಅಂದುಕೊಳ್ಳೋಣ. ನೀನಂದುಕೊಳ್ಳುವೆ, "ಸಹಜವಾಗಿರೆಂದು ಗುರೂಜಿ ಹೇಳಿದ್ದಾರೆ", ಮತ್ತು ಆದುದರಿಂದ ನೀನು ನೃತ್ಯ ಮಾಡಲು, ಚಪ್ಪಾಳೆ ತಟ್ಟಲು ಪ್ರಾರಂಭಿಸುವೆ. ಇಲ್ಲ, ಇದು ಕೆಲಸ ಮಾಡುವುದಿಲ್ಲ. ನೀನು ಔಚಿತ್ಯವನ್ನೂ ಕೂಡಾ ಉಳಿಸಿಕೊಳ್ಳಬೇಕು.
ನೀನಂದುಕೊಳ್ಳುವೆ, "ಗುರೂಜಿಯವರು, ’ಒಂದು ಪ್ರಪಂಚ ಕುಟುಂಬ, ಎಲ್ಲರನ್ನೂ ಅಪ್ಪಿಕೋ ಮತ್ತು ಮುಂದೆ ಸಾಗು’ ಎಂದು ಹೇಳಿದ್ದಾರೆ" ಹಾಗೂ ನೀವು ದಾರಿಯಲ್ಲಿ ಹೋಗುತ್ತಿರುವ ಒಬ್ಬಳು ಸ್ತ್ರೀಯನ್ನು ನೋಡಿ, ಹೋಗಿ, "ಹೇಗಿದ್ದರೂ, ಎಲ್ಲವೂ ನನ್ನದೇ!" ಎಂದು ಯೋಚಿಸುತ್ತಾ ಅವಳನ್ನು ಅಪ್ಪಿಕೊಳ್ಳುತ್ತೀರಿ. ನೀವು ಇದನ್ನು ಮಾಡಿದರೆ ನಿಮಗೊಂದು ಏಟು ಸಿಗುತ್ತದೆ. ಆದುದರಿಂದ ಹಾಗೆ ಮಾಡಬೇಡಿ.
ಹೌದು, ಬ್ರಹ್ಮ ಭಾವವನ್ನು ಬೆಳೆಯಿಸಿಕೊಳ್ಳುವುದು ಒಳ್ಳೆಯದು - ಎಲ್ಲವೂ ಒಂದು; ಇದೆಲ್ಲವೂ ನನ್ನ ಒಂದು ಭಾಗ. ಆದರೆ, ನೀವು ಒಬ್ಬರ ಜೇಬಿನಿಂದ ಕದ್ದು, ಇದೆಲ್ಲವೂ ನನ್ನದೇ ಎಂದು ಹೇಳಬೇಕೆಂದು ಇದರ ಅರ್ಥವಲ್ಲ.

ಪ್ರಶ್ನೆ: ಗುರೂಜಿ, ನನಗನ್ನಿಸುತ್ತದೆ, ನಾನು ಬೇಸರ ತರಿಸುವವನಾದುದರಿಂದ ಜನರು ನನ್ನನ್ನು ಸ್ವೀಕರಿಸುವುದಿಲ್ಲವೆಂದು. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಜನರು ನಿನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡ. ಒಂದು ಗುರಿಯನ್ನಿರಿಸು ಮತ್ತು ಮುಂದೆ ನಡೆ. ನೀನು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂದರೆ, ಒಬ್ಬಂಟಿಯಾಗಿ ನಡೆ ಮತ್ತು ಜೀವನದಲ್ಲಿ ನೀನು ಏನನ್ನು ಸಾಧಿಸಲು ಬಯಸುವೆಯೋ ಅದನ್ನು ಸಾಧಿಸು. ಆಗ ಎಲ್ಲರೂ ಜೊತೆಯಲ್ಲಿ ಬರುತ್ತಾರೆ.
ನಾನು ಕೂಡಾ ಬಹಳ ಬೇಸರ ತರಿಸುವವನೆಂದು ಯೋಚಿಸಿದ್ದೆ ಯಾಕೆಂದರೆ, ನನಗೆ ಕ್ರಿಕೆಟಿನ ಬಗ್ಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಆ ದಿನಗಳಲ್ಲಿ ಎಲ್ಲರೂ ಕ್ರಿಕೆಟಿನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ನಾನು ಕೇವಲ ದಿಟ್ಟಿಸಿ ನೋಡುತ್ತಿದ್ದೆ. ನಾನು ಹದಿಹರೆಯದವನಾಗಿದ್ದಾಗ ಅದು ನನ್ನಲ್ಲಿ ಆಸಕ್ತಿಯನ್ನುಂಟುಮಾಡಲಿಲ್ಲ. ನಾನದನ್ನು ಆನಂದಿಸುತ್ತಿರಲಿಲ್ಲ, ಆದರೆ ಜನರು ಹುಚ್ಚರಾಗಿಬಿಡುತ್ತಿದ್ದರು. ನಿರಂತರವಾಗಿ ಐದು ದಿನಗಳ ವರೆಗೆ ಅವರು ರೇಡಿಯೋವನ್ನು ಕಿವಿಗೆ ತಾಗಿಸಿಕೊಂಡು ಕಮೆಂಟರಿಗಳನ್ನು ಕೇಳುತ್ತಿದ್ದರು. ಆ ಸಮಯದಲ್ಲಿ, ಏನು ಮಾತನಾಡುವುದು ಎಂದು ನನಗನ್ನಿಸುತ್ತಿತ್ತು. ಎಲ್ಲರೂ ಕೇವಲ ಕ್ರಿಕೆಟಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದರು, ಬೇರೆ ಮಾತನಾಡುತ್ತಿರಲಿಲ್ಲ.
ನೀನು ನಿನ್ನದೇ ಪಥವನ್ನು ಮಾಡು ಮತ್ತು ಅದರ ಮೇಲೆ ನಡೆ. ನೀನು ನಿನ್ನನ್ನು ಅಳೆಯಬೇಡ ಮತ್ತು ಇತರರನ್ನು ಅಳೆಯಬೇಡ.

ಪ್ರಶ್ನೆ: ಗುರೂಜಿ, ಹಲವಾರು ಆಯ್ಕೆಗಳಿರುವಾಗ ಯಾವುದನ್ನು ಮಾಡುವುದು ಸರಿಯೆಂದು ನಮಗೆ ತಿಳಿಯುವುದು ಹೇಗೆ? ಅಂತೆಯೇ, ಅವುಗಳೆಲ್ಲವೂ ಸರಿಸಮಾನವಾಗಿ ಒಳ್ಳೆಯದಾಗಿರುವಾಗ, ನಾನು ಸರಿಯಾದುದನ್ನು ಹೆಕ್ಕುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಸರಿಯಾದ ಆಯ್ಕೆಯು ತಾನೇ ತಾನಾಗಿ ಕಂಡುಬರುತ್ತದೆ. ಅಂತಹ ಒಂದು ಪರಿಸ್ಥಿತಿ ಎದ್ದಾಗ, ತಾಳ್ಮೆಯಿಂದಿರು, ಸ್ವಲ್ಪ ಕಾದು ನೋಡು ಮತು ಅದು ಆಗುತ್ತದೆ.

ಪ್ರಶ್ನೆ: ಗುರೂಜಿ, ನನ್ನ ಸಹೋದರ ಮತ್ತು ನಾನು ಒಂದೇ ಶಿಕ್ಷಣವನ್ನು ಪಡೆದೆವು, ಆದರೆ ಅದೇ ಸಮಯದಲ್ಲಿ ನಾವಿಬ್ಬರೂ ಬಹಳ ಭಿನ್ನವಾಗಿದ್ದೇವೆ, ಅದು ಆ ರೀತಿ ಇರುವುದು ಹೇಗೆ?
ಶ್ರೀ ಶ್ರೀ  ರವಿಶಂಕರ್: ಇದು ಬಹಳ ಆಳವಾದ ವಿಜ್ಞಾನ. ನೀನು ಇದರ ಬಗ್ಗೆ ಸ್ವಲ್ಪ ಸಮಯ ಯೋಚಿಸಬೇಕು.
ಅಣುರೂಪ ಮತ್ತು ಬ್ರಹ್ಮಾಂಡಗಳು ಮಿಳಿತವಾಗಿವೆ. ನಿಜವಾಗಿ ಅದು ಒಂದೇ. ಆದರೆ ಅಣುರೂಪದಿಂದ ಬ್ರಹ್ಮಾಂಡಕ್ಕೆ ಒಂದು ಕೊಂಡಿಯಿದೆ. ಈ ಭೂಮಿಯಲ್ಲಿರುವ ಪ್ರತಿಯೊಂದು ಚಿಕ್ಕ ಧಾನ್ಯವೂ ಕೆಲವು ವಿಶೇಷ ರೀತಿಯಲ್ಲಿ ವಿಶ್ವದೊಂದಿಗೆ ಜೋಡಿಕೊಂಡಿದೆ. ಪ್ರಾಚೀನ ಜನರು ಇದನ್ನು ಅರಿತಿದ್ದರು. ಆದುದರಿಂದ, ನಮ್ಮ ಸೌರ ಮಂಡಲದಲ್ಲಿ ಒಂಭತ್ತು ಗ್ರಹಗಳಿವೆ ಮತ್ತು ಈ ಒಂಭತ್ತು ಗ್ರಹಗಳು ಒಂಭತ್ತು ವಿವಿಧ ಧಾನ್ಯಗಳೊಂದಿಗೆ, ಒಂಭತ್ತು ವಿವಿಧ ಪ್ರಾಣಿಗಳೊಂದಿಗೆ, ಒಂಭತ್ತು ವಿವಿಧ ಆಕಾರಗಳೊಂದಿಗೆ, ಒಂಭತ್ತು ವಿವಿಧ ಬಣ್ಣಗಳೊಂದಿಗೆ ಮತ್ತು ಒಂಭತ್ತು ವಿವಿಧ ವಸ್ತುಗಳೊಂದಿಗೆ ಜೋಡಿಕೊಂಡಿವೆ ಎಂದು ಅವರು ಹೇಳಿದರು. ಒಂದರಿಂದ ಇನ್ನೊಂದಕ್ಕಿರುವ ಸಂಬಂಧವನ್ನು ಅವರು ಹೇಗೆ ಪತ್ತೆಹಚ್ಚಿದರು ಎಂಬುದು ಅತ್ಯಾಶ್ಚರ್ಯಕರವಾಗಿದೆ. ಅದು ಬಹಳ ಸೋಜಿಗವಾದುದು!
ಭೂಮಿಯು ಗೋಲಾಕಾರದಲ್ಲಿದೆ ಮತ್ತು ಭೂಮಿಯು ಸೂರ್ಯನ ಸುತ್ತಲೂ ಚಲಿಸುತ್ತಿದೆ ಎಂಬುದನ್ನು ಮೊದಲಿಗೆ ಕಂಡುಹಿಡಿದವನು ಗೆಲಿಲಿಯೋ ಎಂದು ನಾವು ನಮ್ಮ ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಓದಿದ್ದೇವೆ. ಪಶ್ಚಿಮದಲ್ಲಿ ಯಾವತ್ತೂ, ಸೂರ್ಯನು ಭೂಮಿಯ ಸುತ್ತಲೂ ಚಲಿಸುವುದು ಎಂದು ಅಂದುಕೊಂಡಿದ್ದರು. ಆದರೆ ನೀವು ಭಾರತದಲ್ಲಿ ಯಾವುದೇ ದೇವಾಲಯಕ್ಕೆ ಹೋದರೂ, ಸೌರಮಂಡಲದ ಕೇಂದ್ರವು ಸೂರ್ಯನೆಂಬುದು ಅವರಿಗೆ ತಿಳಿದಿರುತ್ತದೆ. ಇದನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗಿದೆ. ಅವರು, ಸೂರ್ಯನನ್ನು ಮಧ್ಯದಲ್ಲಿ ಮತ್ತು ಗ್ರಹಗಳನ್ನು ಸುತ್ತಲೂ ಇರಿಸಿದರು, ಹಾಗೂ ಅವರು ಮಾಡಿದ ಇನ್ನೊಂದು ಕೆಲಸವೆಂದರೆ, ಪ್ರತಿಯೊಂದು ಗ್ರಹವನ್ನೂ ಒಂದು ಮಂತ್ರ ಮತ್ತು ಒಂದು ಯಂತ್ರದೊಂದಿಗೆ ಜೋಡಿಸಿದುದು. ಪ್ರಾಣ ಶಕ್ತಿಯು ಒಂದು ನಿರ್ದಿಷ್ಟ ಹರಳು ಮತ್ತು ಒಂದು ನಿರ್ದಿಷ್ಟ ಧಾನ್ಯದೊಂದಿಗೆ ಜೋಡಲ್ಪಟ್ಟಿದೆ. ಉದಾಹರಣೆಗೆ ಮಂಗಳ ಗ್ರಹವು ಕಡಲೆಬೇಳೆಯೊಂದಿಗೆ ಜೋಡಲ್ಪಟ್ಟಿದೆ, ಬುಧ ಗ್ರಹವು ಹೆಸರು ಬೇಳೆಯೊಂದಿಗೆ ಜೋಡಲ್ಪಟ್ಟಿದೆ, ಶನಿ ಗ್ರಹವು ಎಳ್ಳು ಬೀಜಗಳೊಂದಿಗೆ ಜೋಡಲ್ಪಟ್ಟಿದೆ, ಸೂರ್ಯ ಮತ್ತು ಚಂದ್ರನು ಅಕ್ಕಿ ಮತ್ತು ಗೋಧಿಯೊಂದಿಗೆ ಜೋಡಲ್ಪಟ್ಟಿವೆ. ಚಂದ್ರನ ಛೇದಬಿಂದುಗಳಾದ ರಾಹು ಮತ್ತು ಕೇತುಗಳು ಕೂಡಾ ವಿವಿಧ ಬೇಳೆಗಳೊಂದಿಗೆ ಜೋಡಲ್ಪಟ್ಟಿವೆ. ಹೀಗೆ ಪ್ರತಿಯೊಂದು ಗ್ರಹವೂ ಕೂಡಾ ಒಂದು ನಿರ್ದಿಷ್ಟ ಧಾನ್ಯದೊಂದಿಗೆ, ಒಂದು ನಿರ್ದಿಷ್ಟ ಆಕಾರ ಮತ್ತು ಬಣ್ಣದೊಂದಿಗೆ ಹಾಗೂ ನಮ್ಮ ಶರೀರದ ಒಂದು ನಿರ್ದಿಷ್ಟ ಭಾಗದೊಂದಿಗೆ ಜೋಡಲ್ಪಟ್ಟಿದೆ. ನಮ್ಮ ಶರೀರದ ಪ್ರತಿಯೊಂದು ಭಾಗವೂ ಒಂದು ನಿರ್ದಿಷ್ಟ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ನಿಮ್ಮ ಶರೀರದಲ್ಲಿ ಎಲ್ಲಾ ಗ್ರಹಗಳ ವ್ಯವಸ್ಥೆಗಳೂ ಇವೆ. ಇದೊಂದು ಅತ್ಯಾಶ್ಚರ್ಯಕರ ವಿಜ್ಞಾನ.
ಸಾಮುದ್ರಿಕ ಲಕ್ಷಣ ಎಂದು ಕರೆಯಲ್ಪಡುವ ಒಂದು ವಿಜ್ಞಾನವು ಬಳಕೆಯಲ್ಲಿತ್ತು. ಅದರಲ್ಲಿ, ಅವರು ನಿಮ್ಮ ಮುಖವನ್ನು ನೋಡಿ ನಿಮ್ಮ ಜಾತಕವನ್ನು ಬರೆಯುತ್ತಿದ್ದರು. ಕೆಲವೊಮ್ಮೆ, ಅವರು ನಿಮ್ಮ ಹಲ್ಲುಗಳನ್ನು ನೋಡಿ, ನೀವು ಯಾವ ವರ್ಷದಲ್ಲಿ ಹುಟ್ಟಿದಿರೆಂಬುದನ್ನು ನಿಖರವಾಗಿ ಹೇಳುತ್ತಿದ್ದರು. ಆದರೆ ಈ ವಿಜ್ಞಾನವು ಹೇಗೋ ಕಾಣೆಯಾಗಿದೆ. ಬಹಳಷ್ಟು ಜ್ಞಾನವು ದುರುಪಯೋಗಗೊಂಡಿದೆ ಮತ್ತು ಕಾಣೆಯಾಗಿದೆ.
ಇವತ್ತು, ವಿವಿಧ ದೇವಾಲಯಗಳಿಂದ ಪುರೋಹಿತರು ಬಂದಿದ್ದಾರೆ ಮತ್ತು ಅವರು, ಪ್ರಪಂಚದ ಹಾಗೂ ಜನರ ಒಳಿತಿಗಾಗಿ ಒಂಭತ್ತು ಗ್ರಹಗಳ ಒಂದು ಯಜ್ಞವನ್ನು ಮಾಡುತ್ತಿದ್ದಾರೆ. ಬರಲಿರುವ ಕೆಲವು ದಿನಗಳು ಬಹಳ ಕಷ್ಟಕರವಾಗಿರಬಹುದು, ಆದುದರಿಂದ ಪ್ರಪಂಚದಲ್ಲಿ ಹೆಚ್ಚಿನ ಸಕಾರಾತ್ಮಕ ಪ್ರಭಾವವನ್ನು ತರಲು ಹಾಗೂ ನಕಾರಾತ್ಮಕ ಕಂಪನಗಳನ್ನು ಕಡಿಮೆ ಮಾಡಲು ಅವರು ಇವತ್ತು ಮತ್ತು ನಾಳೆ ಈ ಯಜ್ಞವನ್ನು ಮಾಡುತ್ತಿದ್ದಾರೆ. ಇವುಗಳು ಪ್ರಾಚೀನ ವಿಷಯಗಳು. ಆದರೆ ಯಾರೂ ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಮತ್ತು ಇದನ್ನು ಮಾಡಲು ಸರಿಯಾದ ಜನರು ಕೂಡಾ ಇರಲಿಲ್ಲ. ಇಲ್ಲಿಯೇ ನಾವು ಯುವಜನರನ್ನು ಪ್ರೋತ್ಸಾಹಿಸಬೇಕಾಗಿರುವುದು. ಆದುದರಿಂದ, ಈ ಎಲ್ಲಾ ಪುರೋಹಿತರನ್ನು ಕರೆತಂದು ಯುವಜನರನ್ನು ತರಬೇತುಗೊಳಿಸುವಂತೆ ಅವರಲ್ಲಿ ಕೇಳಿಕೊಳ್ಳೋಣವೆಂದು ನಾನು ಯೋಚಿಸಿದೆ.

ಪ್ರಶ್ನೆ: ಒಬ್ಬನು ವ್ಯಸನಗಳಿಂದ ಹೊರಬರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಸಾಧನೆಯನ್ನು ಮಾಡುವುದರಿಂದ. ಯಾವುದೇ ವ್ಯಸನವನ್ನು ಹೋಗಲಾಡಿಸಲು ಸಹಾಯ ಮಾಡಬಲ್ಲ ಒಂದೇ ವಿಷಯವೆಂದರೆ ಸಾಧನೆ. ಇಲ್ಲಿಗೆ ಬಾ, ಕುಳಿತುಕೊಂಡು ಸಾಧನೆ ಮಾಡು. ಉನ್ನತ ಶಿಬಿರಗಳನ್ನು ಮಾಡು. ಕೇವಲ ಒಂದು ಅಥವಾ ಎರಡಲ್ಲ, ಆದರೆ ಮಾಡುತ್ತಾ ಇರು ಮತ್ತು ಆಗ ವ್ಯಸನಗಳು ಹೋಗುತ್ತವೆ. "ನಾನು ಯಾರು? ನಾನು ಯಾರು?" ಎಂದು ಕೇಳುತ್ತಾ ಇರು. ಅದು ಅತ್ಯುತ್ತಮವಾದುದು. ಅದರಿಂದಲೇ ನಿನಗೆ ಉತ್ತರ ಸಿಗುವುದು.

ಪ್ರಶ್ನೆ: ಗುರೂಜಿ, ನನಗೆ ಒಬ್ಬಳೇ ಒಬ್ಬಳು ಮಗಳಿರುವುದು. ಅವಳು ವಿವಾಹವಾಗಿ ಕೆನಡಾದಲ್ಲಿದ್ದಾಳೆ ಮತ್ತು ಒಂದೂವರೆ ವರ್ಷಗಳಿಂದ ನನಗೆ ಅವಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನನಗೆ ಅವಳನ್ನು ಭೇಟಿಯಾಗಲು ಸಾಧ್ಯವಾಗುವುದೇ?
ಶ್ರೀ ಶ್ರೀ ರವಿಶಂಕರ್: ಹೌದು, ಹೋಗಿ ಅವಳನ್ನು ಭೇಟಿಯಾಗು!
ನಿನ್ನ ಮಗಳಿಗೂ ಅನ್ನಿಸಬೇಕು, "ನನಗೆ ನನ್ನ ತಾಯಿಯನ್ನು ಭೇಟಿಯಾಗಬೇಕು."
ಆಗಿರುವುದೇನೆಂದರೆ, ಕೆಲವೊಮ್ಮೆ ನಾವು ನಮ್ಮ ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಿರುತ್ತೇವೆಂದರೆ, ಅವರಲ್ಲಿ ಯಾವುದೇ ಭಾವನೆ ಅಥವಾ ಸಹಾನುಭೂತಿ ಇರುವುದಿಲ್ಲ. ನಾವು ಅವರಿಗೆ ಸರಿಯಾದ ಮೌಲ್ಯಗಳನ್ನು ನೀಡಿರುವುದಿಲ್ಲ ಅಥವಾ ಅವರಿಗೆ ಯಾವುದೇ ಸದ್ಗುಣಗಳನ್ನು  ಕಲಿಸಿರುವುದಿಲ್ಲ, ಮತ್ತು ಹೀಗಾಗಿ ಅವರು ಹೊರದೇಶಕ್ಕೆ ಹೋದಾಗ, ಅವರು ಎಲ್ಲವನ್ನೂ ಮರೆತುಬಿಡುತ್ತಾರೆ ಮತ್ತು ಸ್ವಾರ್ಥಿಗಳಾಗುತ್ತಾರೆ.
ನೀನು ಹೋಗಲು ಬಿಡು ಮತ್ತು ಶಾಂತಳಾಗು! ಎಲ್ಲವೂ ಒಳ್ಳೆಯದಾಗುತ್ತದೆ!

ಭಾನುವಾರ, ಆಗಸ್ಟ್ 12, 2012

ಸಫಲ ವೈವಾಹಿಕ ಜೀವನದ ರಹಸ್ಯ

12
2012
Aug
ಬೆಂಗಳೂರು ಆಶ್ರಮ, ಭಾರತ



1356ಭಾವನೆ, ಶಬ್ಧ ಮತ್ತು ರಾಗಗಳ ನಡುವೆ ಒಂದು ಸಂಬಂಧವಿದೆ. ಕೊನೆಯದಾಗಿ ಹಾಡಿದ ಭಜನೆಯಲ್ಲಿ ಜೋಗಿಯ ರಾಗವಿತ್ತು. ಈ ರಾಗವನ್ನು ನೀವು ರಾಧೆಯೊಂದಿಗೆ ಜೋಡಿಸಲು ಸಾಧ್ಯವಿಲ್ಲ. ನೀವು "ಶಿವ, ಶಿವ" ಎಂದು ಹೇಳಿದರೆ, ಅದನ್ನು ವೈರಾಗ್ಯದ ರಾಗದೊಂದಿಗೆ ಜೋಡಿಸಬಹುದು.
ಒಮ್ಮೆ ಯಾರೋ ಒಬ್ಬರು ವಿವಾಹ ಸಮಾರಂಭವೊಂದಕ್ಕೆ ಆಮಂತ್ರಿಸಲ್ಪಟ್ಟಿದ್ದರು ಮತ್ತು ಅವರೊಡನೆ ಹಾಡಲು ವಿನಂತಿಸಲಾಯಿತು. ಅವರು ಹಾಡಲು ಶುರು ಮಾಡಿದರು, "ಈ ದೇಹದಿಂದ ದೂರವಾದೆ ಯಾಕೆ ಆತ್ಮನೇ? ಈ ಸಾವು ನ್ಯಾಯವೇ?" ಈ ಹಾಡು ಆ ಸಂದರ್ಭಕ್ಕೆ ಹೊಂದುತ್ತದೆಯೇ? ನೀವು ಯಾವುದೇ ಹಾಡನ್ನು ಎಲ್ಲಿ ಬೇಕಾದರೂ ಹಾಡಲು ಸಾಧ್ಯವಿಲ್ಲ. ಭಾವನೆ ಮತ್ತು ರಾಗಗಳು ಹೊಂದಿಕೆಯಾಗಬೇಕು.
ನಮ್ಮ ಜೀವನವು ಇದಕ್ಕೆ ಸರಿಸಮಾನವಾದುದಾಗಿದೆ. ಜೀವನದ ನದಿಯು ಹರಿಯುತ್ತಿದೆ, ಆದರೆ ಮುಂದಕ್ಕೆ ಹೋಗುವುದರಲ್ಲಿ ಗಮನವಿರಿಸುವುದರ ಬದಲು, ನಾವು ಹಿಂದಕ್ಕೆ ಹೋಗುತ್ತಿರುತ್ತೇವೆ. ಹರಿಯುತ್ತಿರುವ ನದಿಯ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಯಾವುದಾದರೂ ತಡೆಯಿದ್ದರೆ, ಅದು ಹಿಂದಕ್ಕೆ ಹರಿಯುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಎಲ್ಲೆಲ್ಲಾ ಹರಿವು ಹಿಂದಕ್ಕಿರುವುದೋ ಅಲ್ಲಿ ಕೊಳಕು ಸಂಗ್ರಹವಾಗುತ್ತದೆ. ಮುಂದಕ್ಕೆ ಹರಿಯುವ ನೀರು ಸ್ವಚ್ಛವಾಗಿರುತ್ತದೆ. ಅದೇ ರೀತಿಯಲ್ಲಿ, ನಾವು ಮುಂದಕ್ಕೆ ಚಲಿಸುತ್ತಾ ಇದ್ದರೆ, ಮನಸ್ಸಿನಲ್ಲಿ ಆಹ್ಲಾದವಿರುತ್ತದೆ. ನಾವು ಹಿಂದಿನದನ್ನೇ ಯೋಚಿಸುತ್ತಾ ಇದ್ದರೆ, ನಮ್ಮ ಮನಸ್ಸು ತಳಮಳ ಆಗುತ್ತದೆ. ಇದು ನನ್ನ ಅಭಿಪ್ರಾಯ. ನೀವೇನು ಹೇಳುತ್ತೀರಿ?
ಇವತ್ತು ಯಾರೂ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿಲ್ಲ! ಇದು ಕೇವಲ ಎರಡು ಕಾರಣಗಳಿಂದಾಗಿರಬಹುದು. ಒಂದು, ನಿಮಗೆಲ್ಲಾ ತಿಳಿದಿದ್ದರೆ. ಇನ್ನೊಂದು, ನಾನು ಹೇಳುತ್ತಿರುವುದರಲ್ಲಿ ನಿಮಗೆ ಒಂದೇ ಒಂದು ಶಬ್ದವೂ ಅರ್ಥವಾಗದಿದ್ದರೆ (ಗುರೂಜಿಯವರು ಕನ್ನಡದಲ್ಲಿ ಮಾತನಾಡುತ್ತಿದ್ದುದರಿಂದ ಹಾಗೂ ಅಲ್ಲಿ ಇತರ ಭಾಷೆಯವರು ಅನೇಕರಿದ್ದುದರಿಂದ). ನೀವು ಯಾವ ಪರಿಸ್ಥಿತಿಯಲ್ಲಿದ್ದೀರಿ?
ಸಭಿಕರು: ನಾವು ನಿಮ್ಮನ್ನು ನೋಡುವಾಗ, ನಮಗೆ ಎಲ್ಲಾ ಪ್ರಶ್ನೆಗಳೂ ಮರೆತು ಹೋಗುತ್ತವೆ!
ಅದು ಒಳ್ಳೆಯದು.
ಪ್ರಶ್ನೆ: ಒಂದು ವಿವಾಹವು ಸಫಲವಾಗುವಂತೆ ಮಾಡುವುದರ  ಹಿಂದಿನ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್: ನೀನು ತಪ್ಪಾದ ವ್ಯಕ್ತಿಯಲ್ಲಿ ಕೇಳುತ್ತಿರುವೆಯೆಂದು ನನಗನಿಸುತ್ತದೆ! ಇಲ್ಲೊಬ್ಬ ಜರ್ಮನಿಯ ಸಂಭಾವಿತನಿದ್ದ ಮತ್ತು ಒಬ್ಬಳು ಇಟೆಲಿಯ ಸ್ತ್ರೀಯಿದ್ದಳು. ಅವರಿಬ್ಬರೂ ಮೊದಲು ಹಲವಾರು ಸಾರಿ ಬೇರೆ ಬೇರೆ ಮದುವೆಯಾಗಿದ್ದರು. ಅವರಿಲ್ಲಿಗೆ ಬಂದು, "ಗುರೂಜಿ, ನಮಗೆ ನಿಮ್ಮ ಆಶೀರ್ವಾದ ಬೇಕು. ಕನಿಷ್ಠಪಕ್ಷ ಈ ಮದುವೆ ಸಫಲವಾಗಬೇಕು" ಎಂದು ಹೇಳಿದರು.
ನಾನು ಆ ಸಂಭಾವಿತನಲ್ಲಿ ಅವನಿಗೆ ಇಟಾಲಿಯನ್ ಗೊತ್ತಿದೆಯೇ ಎಂದು ಕೇಳಿದೆ ಮತ್ತು ಅವನು ಇಲ್ಲವೆಂದ. ನಾನು ಆ ಸ್ತ್ರೀಯಲ್ಲಿ ಅವಳಿಗೆ ಜರ್ಮನ್ ಗೊತ್ತಿದೆಯೇ ಎಂದು ಕೇಳಿದೆ ಮತ್ತು ಆಕೆಯು ಇಲ್ಲವೆಂದಳು. ಅವರಿಬ್ಬರಿಗೂ ಇಂಗ್ಲಿಷ್ ಗೊತ್ತಿರಲಿಲ್ಲ. ನಾನಂದೆ, "ನೀವಿಬ್ಬರೂ ಪರಸ್ಪರರ ಭಾಷೆಗಳನ್ನು ಕಲಿಯಬೇಡಿ, ಆಗ ಅದು ಸಫಲವಾಗುತ್ತದೆ!" ಕನ್ನಡದಲ್ಲಿ ಒಂದು ವಚನವಿದೆ, "ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಕೊಲೆಯು, ಮಾತಿನಿಂ ಸರ್ವ ಸಂಪದವು, ಲೋಕಕ್ಕೆ ಮಾತೇ ಮಾಣಿಕವು ಸರ್ವಜ್ಞ." ಆದುದರಿಂದ ಶಬ್ದಗಳನ್ನು ಮಿತವಾಗಿ ಬಳಸಬೇಕು.
ಸಾಧಾರಣವಾಗಿ, ಜನರಲ್ಲಿ ತಪ್ಪು ತಿಳುವಳಿಕೆಯಿರುವಾಗ ಅವರನ್ನುತ್ತಾರೆ, "ಅದನ್ನು ಮಾತನಾಡಿ ಬಗೆಹರಿಸೋಣ." ಮಾತನಾಡಿ ಬಗೆಹರಿಸುವುದು ಕೆಲಸ ಮಾಡುವುದೇ ಇಲ್ಲ. ನಾವು ಮಾತನಾಡಿ ಬಗೆಹರಿಸಬಾರದು. ಕೇವಲ ಮುಂದೆ ಸಾಗಿ, ಅಷ್ಟೆ! ಕುಳಿತುಕೊಂಡು ಹಿಂದಿನದನ್ನು ಚರ್ಚಿಸಬೇಡಿ. ಹಿಂದಿನದರ ಬಗ್ಗೆ ಯಾವುದೇ ವಿವರಣೆಯನ್ನು ಕೇಳಬೇಡಿ. ಒಂದು ತಪ್ಪು ನಡೆದಾಗ, ಅದು ಆಗಿ ಹೋಯಿತು, ಅಷ್ಟೆ. ನೀವು ಮುಂದೆ ಸಾಗಬೇಕು.
ನೀವೊಂದು ತಪ್ಪು ಮಾಡಿ, ಒಬ್ಬರು ನಿಮ್ಮಲ್ಲಿ ನೀವು ಮಾಡಿದ ತಪ್ಪಿಗೆ ವಿವರಣೆಯನ್ನು ಕೇಳುತ್ತಾ ಇರುವ ಒಂದು ಸ್ಥಿತಿಯನ್ನು ಊಹಿಸಿ. ಒಬ್ಬರಿಗೆ ವಿವರಣೆ ನೀಡುವುದು ಅಥವಾ ತನ್ನನ್ನು ಸಮರ್ಥಿಸಿಕೊಳ್ಳುವುದು ಎಷ್ಟೊಂದು ದೊಡ್ಡ ಭಾರ, ಅಲ್ಲವೇ? ಇನ್ನೊಬ್ಬ ವ್ಯಕ್ತಿಯು ತಪ್ಪಿತಸ್ಥ ಭಾವನೆ ಅನುಭವಿಸುವಂತೆ ಯಾವತ್ತೂ ಮಾಡಬೇಡಿ. ಇದು ಬಹಳ ಪ್ರಮುಖವಾದುದು. ಯಾರಲ್ಲಿ ನೀವು ತಪ್ಪಿತಸ್ಥ ಭಾವನೆ ಉಂಟಾಗುವಂತೆ ಮಾಡುವಿರೋ ಅವರು, ಎಲ್ಲೋ ಆಳವಾಗಿ ಒಳಗಡೆಯಲ್ಲಿ, ನಿಮ್ಮ  ಮಿತ್ರರಾಗಿರುವುದನ್ನು ನಿಲ್ಲಿಸುತ್ತಾರೆ. ಸ್ನೇಹದ ಬಂಧನವು ಸಡಿಲವಾಗುತ್ತದೆ.
ಒಬ್ಬನು ತಪ್ಪಿತಸ್ಥ ಭಾವನೆ ಹೊಂದದೆಯೇ ತನ್ನ ತಪ್ಪಿನ ಬಗ್ಗೆ ಅರಿವು ಮೂಡಿಸಿಕೊಳ್ಳುವಂತೆ ಮಾಡಲು ಒಂದು ಕುಶಲತೆಯಿದೆ. ಹಾಗಿದ್ದರೂ, ಮನುಷ್ಯರಲ್ಲಿರುವ ಸಾಧಾರಣ ಪ್ರವೃತ್ತಿಯೆಂದರೆ, ಒಬ್ಬರು ತಪ್ಪಿತಸ್ಥ ಭಾವನೆ ಹೊಂದುವಂತೆ ಮಾಡುವುದು ಮತ್ತು ಅದರ ಬಗ್ಗೆ ಸಂತೋಷ ಪಡುವುದು. ನಾವು ಈ ಸಾಧಾರಣ ಪ್ರವೃತ್ತಿಯಿಂದ ಮೇಲಕ್ಕೇರಬೇಕು ಮತ್ತು ಒಬ್ಬರು ತಪ್ಪಿತಸ್ಥ ಭಾವನೆ ಹೊಂದುವಂತೆ ಮಾಡಬಾರದು. ಆಗ ನಿಮ್ಮ ಸಂಬಂಧವು ದೀರ್ಘಕಾಲ ಉಳಿಯುತ್ತದೆ.
ಮಹಿಳೆಯರಿಗೆ ಒಂದು ಮತ್ತು ಪುರುಷರಿಗೆ ಒಂದು ರಹಸ್ಯವಿದೆ. ಬಹುಶಃ ನೀವು ಇದರ ಬಗ್ಗೆ ಆಲೋಚಿಸಿದರೆ, ಇದು ಫಲಪ್ರದವಾಗಬಹುದು.
ಮಹಿಳೆಯರಿಗೆ: ನೀವು ನಿಮ್ಮ ಪುರುಷನ ಅಹಂನ್ನು ತುಳಿಯಬಾರದು. ಇಡಿಯ ಪ್ರಪಂಚವೇ ಒಬ್ಬನನ್ನು, ಅವನಿಗೆ ಮೆದುಳಿಲ್ಲವೆಂದು ಹೇಳಬಹುದು, ಆದರೆ ಅವನ ಪತ್ನಿಯು ಯಾವತ್ತಿಗೂ ಹಾಗೆ ಹೇಳಬಾರದು. ಅವಳು ಯಾವತ್ತೂ, "ನೀನು ಈ ಭೂಮಿಯಲ್ಲೇ ಅತ್ಯಂತ ಬುದ್ಧಿಶಾಲಿ ವ್ಯಕ್ತಿ. ನೀನು ನಿನ್ನ ಮೆದುಳನ್ನು ಉಪಯೋಗಿಸುವುದಿಲ್ಲವೆಂದ ಮಾತ್ರಕ್ಕೆ ಅದು ನಿನ್ನಲ್ಲಿಲ್ಲವೆಂದು ಅದರರ್ಥವಲ್ಲ!" ಎಂದು ಹೇಳಬೇಕು. ಅವಳು ಯಾವತ್ತೂ ಅವನ ಅಹಂನ್ನು ಉಬ್ಬಿಸಬೇಕು. ಇದು ಬಹಳ ಅಗತ್ಯ. ಮಹಿಳೆಯು ತನ್ನ ಸಂಗಾತಿಯಲ್ಲಿ, "ನೀನು ಯಾವುದಕ್ಕೂ ಪ್ರಯೋಜನವಿಲ್ಲ. ನೀನೊಂದು ತರಕಾರಿ" ಎಂದು ಹೇಳುತ್ತಾ ಇದ್ದರೆ, ಅವನು ನಿಜವಾಗಿಯೂ ಹಾಗೇ ಆಗುತ್ತಾನೆ!
ಈಗ, ಪುರುಷರಿಗಿರುವ ರಹಸ್ಯ - ಒಬ್ಬ ಪುರುಷನು ಯಾವತ್ತಿಗೂ ಒಬ್ಬ ಮಹಿಳೆಯ ಭಾವನೆಗಳನ್ನು ತುಳಿಯಬಾರದು. ಅವಳು ತನ್ನ ಸಹೋದರನ ಬಗ್ಗೆ, ಅಥವಾ ತಾಯಿಯ ಬಗ್ಗೆ ಅಥವಾ ಕುಟುಂಬದವರ ಬಗ್ಗೆ ನಿಮ್ಮಲ್ಲಿ ದೂರಬಹುದು, ಆದರೆ ನೀವು ಅದರೊಂದಿಗೆ ಸೇರಿಕೊಳ್ಳಬಾರದು. ನೀವು ಅವಳ ದೂರುಗಳಿಗೆ ತಲೆದೂಗಲು ಶುರು ಮಾಡಿದ ಕ್ಷಣದಲ್ಲಿ, ಅವಳು ತಿರುಗಿಬಿಡುತ್ತಾಳೆ. ತನ್ನ ದೂರುಗಳ ಬಗ್ಗೆ ಯೋಚಿಸುವುದರ ಬದಲು, ಅವಳು ನಿಮ್ಮ ಬಗ್ಗೆ ದೂರುವಳು. ಅವಳು ಚಕ್ರವನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಲು ಶುರುಮಾಡುವಳು. ಅವಳು ಯಾವುದಾದರೂ ಧಾರ್ಮಿಕ ಕಾರ್ಯಕ್ರಮಕ್ಕೆ, ತೀರ್ಥಯಾತ್ರೆಗೆ, ಸಿನೆಮಾಕ್ಕೆ ಅಥವಾ ಶಾಪಿಂಗ್ ಹೋಗಲು ಬಯಸಿದರೆ ಸುಮ್ಮನೇ ಒಪ್ಪಿಗೆ ನೀಡಿ ಮತ್ತು ಅವಳಿಗೆ ಕ್ರೆಡಿಟ್ ಕಾರ್ಡನ್ನು ಕೊಡಿ! ಆದುದರಿಂದ, ನೀವು ಮಹಿಳೆಯ ಭಾವನೆಗಳನ್ನು ತುಳಿಯದೇ ಇದ್ದರೆ, ಎಲ್ಲವೂ ಸರಿಯಾಗುತ್ತದೆ.
ಈಗ ನಿಮಗಿಬ್ಬರಿಗೂ - ನಿಮ್ಮ ಬಗ್ಗೆ ಇನ್ನೊಬ್ಬ ವ್ಯಕ್ತಿಗಿರುವ ಪ್ರೀತಿಗೆ ಸಾಕ್ಷಿ ಕೇಳಬೇಡಿ. "ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಬೇಡಿ. ಒಬ್ಬರಿಗೆ, ನಿಮ್ಮ ಮೇಲೆ ಅವರಿಗಿರುವ ಪ್ರೀತಿಗೆ ಸಾಕ್ಷಿ ಒದಗಿಸುವ ಹೊರೆಯನ್ನು ನೀಡಬೇಡಿ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅವರಿಗೆ ನಿಮ್ಮ ಮೇಲಿರುವ ಪ್ರೀತಿ ಕಡಿಮೆಯೆಂದು ನಿಮಗನ್ನಿಸಿದರೆ ನೀವು, "ನೀನು ನನ್ನನ್ನು ಯಾಕೆ ಅಷ್ಟೊಂದು ಪ್ರೀತಿಸುವೆ?" ಎಂದು ಹೇಳಬೇಕು. "ನೀನು ನನ್ನನ್ನು ಪ್ರೀತಿಸುವುದಿಲ್ಲ", ಮತ್ತು ಅಂತಹ ಮಾತುಗಳನ್ನು ಹೇಳಬೇಡಿ.
ಪ್ರಶ್ನೆ: ಯಾರಾದರೂ ನಮ್ಮನ್ನು ಕೆರಳಿಸಿದರೆ, ನಾವು ಸುಮ್ಮನಿರಬೇಕೇ ಅಥವಾ ಅವರಿಗೊಂದು ಪಾಠ ಕಲಿಸಬೇಕೇ? ನಾವು ಸುಮ್ಮನಿದ್ದರೆ, ಆಗ ಅವರು ಅದನ್ನೊಂದು ಬಲಹೀನತೆಯೆಂದು ಪರಿಗಣಿಸುತ್ತಾರೆ ಮತ್ತು ನಾವು ಅವರಿಗೊಂದು ಪಾಠ ಕಲಿಸಿದರೆ, ನಾವು ಆಧ್ಯಾತ್ಮಿಕವಾಗಿ ಬೆಳೆದಿಲ್ಲವೆಂದು ಅವರು ಹೇಳುತ್ತಾರೆ. 
ಶ್ರೀ ಶ್ರೀ ರವಿಶಂಕರ್: ಒಬ್ಬರಿಗೆ ಒಂದು ಪಾಠವನ್ನು ಕಲಿಸಲು, ನೀವು ಶಾಂತರಾಗಿರಬೇಕು. ನಿಮ್ಮಲ್ಲಿ ಕೋಪವಿದ್ದರೆ, ನೀವು ವಿಚಲಿತರಾಗಿದ್ದರೆ, ಒಬ್ಬರಿಗೆ ಒಂದು ಪಾಠವನ್ನು ಕಲಿಸಲು ನಿಮಗೆ ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಎಲ್ಲಾ ಸಮಯದಲ್ಲೂ ಹೊಡೆಯಿಸಿಕೊಳ್ಳಲು ನೀವು ನಿಮ್ಮ ಇನ್ನೊಂದು ಕೆನ್ನೆಯನ್ನು ನೀಡುತ್ತಾ ಇರಲು ಸಾಧ್ಯವಿಲ್ಲ. ಪಾಠವನ್ನು ಕಲಿಸಿ, ಆದರೆ ಸಹಾನುಭೂತಿಯೊಂದಿಗೆ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಸ್ಥಿತಿಯನ್ನು ಮತ್ತು ಅವನು ನಿಮ್ಮನ್ನು ಯಾಕೆ ಕೆರಳಿಸುತ್ತಿರುವನೆಂಬುದನ್ನು ನೀವು ಅರ್ಥಮಾಡಿಕೊಂಡಾಗ, ನೀವು ಶಾಂತ ಹಾಗೂ ಅವಿಚಲಿತ ಮನಸ್ಸಿನಿಂದ ಅವರೊಂದಿಗೆ ವ್ಯವಹರಿಸುವಿರಿ.
ಪ್ರಶ್ನೆ: ನಮ್ಮ ಸುತ್ತಲೂ ನಿರಂತರವಾಗಿ ನಕಾರಾತ್ಮಕತೆಯನ್ನು ಹರಡುವ ಜನರನ್ನು ನಾವು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಮೊದಲನೆಯದಾಗಿ, ಯಾರಿಗೂ ನಿರಂತರವಾಗಿ ನಕಾರಾತ್ಮಕತೆಯನ್ನು ಹರಡಲು ಸಾಧ್ಯವಿಲ್ಲ ಎಂಬುದನ್ನು ತಿಳಿ. ಎರಡನೆಯದಾಗಿ, ಕುಶಲತೆಯಿಂದ ಅದರೊಂದಿಗೆ ವ್ಯವಹರಿಸು. ಮೂರನೆಯದೆಂದರೆ ನಿರ್ಲಕ್ಷಿಸುವುದು.
ಪ್ರಶ್ನೆ: ನಾನು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ನೀವು ದಯವಿಟ್ಟು ವಿವರಿಸುವಿರಾ? ನಾನೊಬ್ಬ ವ್ಯಕ್ತಿಯನ್ನು ಯಾವುದೇ ಅಪೇಕ್ಷೆಯಿಲ್ಲದೆ ಪ್ರೀತಿಸುತ್ತೇನೆ, ಆದರೆ ಆ ವ್ಯಕ್ತಿಯು ನನ್ನನ್ನು ಲಘುವಾಗಿ ತೆಗೆದುಕೊಳ್ಳುತ್ತಾನೆ. ಆ ನೋವನ್ನು ನಾನು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:  ಓ, ಅವರು ನಿನ್ನನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆಯೇ? ಅವರು ನಿನ್ನನ್ನು ತಿರುಗಿ ಪ್ರೀತಿಸುವುದಿಲ್ಲವೇ? ಅವರು ತಮಗೆ ನಿನ್ನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಿಲ್ಲ, ಅದು ಇರುವ ಸಮಸ್ಯೆಯೇ? ಸರಿ, ಅವರ ಪ್ರೀತಿಯನ್ನು ಪ್ರಶ್ನಿಸಬೇಡ. ಅವರು ಪ್ರೀತಿಯಿಂದಿಲ್ಲವೆಂದು ನಿನಗೆ ಅನ್ನಿಸಿದರೆ, "ನೀನು ನನ್ನನ್ನು ಪ್ರೀತಿಸುವುದಿಲ್ಲ" ಎಂದು ಆರೋಪಿಸುವುದರ ಬದಲು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಅವರನ್ನು ಕೇಳು.
ಕೇವಲ ಕಲ್ಪಿಸಿಕೋ, ಒಬ್ಬರು, ನೀನು ಅವರಿಗೆ ದಯೆಯನ್ನು ತೋರಿಸುವುದಿಲ್ಲ, ನೀನು ಅವರೊಂದಿಗೆ ಸಂತೋಷವಾಗಿಲ್ಲ, ನೀನು ಸ್ನೇಹಪೂರ್ವಕವಾಗಿಲ್ಲ ಎಂದು ನಿನ್ನ ಮೇಲೆ ಆರೋಪಿಸುತ್ತಾ ಇದ್ದರೆ, ನಿನಗೆ ಏನಾಗುತ್ತದೆ?
(ಉತ್ತರ : ನಮ್ಮನ್ನು ಕಾಡಿಸಿದ ಅನುಭವವಾಗುತ್ತದೆ )
ಹೌದು! ಈಗ ನೀನು ಇನ್ನೊಬ್ಬ ವ್ಯಕ್ತಿಗೆ ಏನು ಮಾಡುತ್ತಿರುವೆಯೆಂಬುದು ನಿನಗೆ ತಿಳಿಯಿತೇ? ಅರ್ಥವಾಯಿತೇ?
ಯಾವತ್ತೂ ದೂರುತ್ತಾ ಇರುವ ಒಬ್ಬ ವ್ಯಕ್ತಿಯ ಜೊತೆಯಲ್ಲಿರಲು ಯಾರೂ ಬಯಸುವುದಿಲ್ಲ. ನಿಮ್ಮನ್ನು ಕಾಡಿಸುವ, ಯಾರಿಗೆ ನೀವು ಯಾವತ್ತೂ ವಿವರಣೆ ನೀಡಬೇಕಾಗುತ್ತದೆಯೋ ಮತ್ತು ಯಾವತ್ತೂ ನಿಮ್ಮ ಪ್ರೀತಿಗೆ ಸಾಕ್ಷಿ ನೀಡಬೇಕಾಗುತ್ತದೆಯೋ, ಅಂತಹ ಒಬ್ಬ ವ್ಯಕ್ತಿಯ ಜೊತೆಯಲ್ಲಿರಲು ಯಾರಾದರೂ ಬಯಸುತ್ತೀರಾ? ಇಲ್ಲ! ಅದು ಅಷ್ಟೊಂದು ದೊಡ್ಡ ಹೊರೆ, ಅಷ್ಟೊಂದು ದೊಡ್ಡ ಬೇಸರಿಕೆ!
ಒಂದು ಒಳ್ಳೆಯ ಜೊತೆಯೆಂದರೆ, ಯಾರು ಯಾವತ್ತೂ ಉತ್ಸಾಹವನ್ನು ಹೆಚ್ಚಿಸುತ್ತಾರೋ  ಅವರು. ಯಾರಾದರೊಬ್ಬರು ಒಳ್ಳೆಯ ಮನಸ್ಥಿತಿಯಲ್ಲಿರದಿದ್ದರೆ, "ಹೇ, ಬಾ! ಅದರ ಬಗ್ಗೆ ಮರೆತುಬಿಡು. ನಾವು ಮುಂದೆ ಸಾಗೋಣ" ಎಂದು ಅವರು ಹೇಳುತ್ತಾರೆ. ಉತ್ಸಾಹದಲ್ಲಿರುವವರೊಬ್ಬರು, ನಿಮ್ಮನ್ನು ಯಾವತ್ತೂ ಮುಂದಕ್ಕೆ ತಳ್ಳುವವರೊಬ್ಬರು ಒಳ್ಳೆಯ ಜೊತೆಯಾಗಿರುತ್ತಾರೆ. ವಿವರಣೆಗಳನ್ನು ಕೇಳುವವರೊಬ್ಬರು, ನಿಮ್ಮ ಬಗ್ಗೆ ಸಂಶಯ ಪಡುವವರು ಮತ್ತು ನಿಮ್ಮನ್ನು ಪ್ರಶ್ನಿಸುವವರು ಒಳ್ಳೆಯ ಜೊತೆಯಲ್ಲ.
ಆದುದರಿಂದ, ಒಬ್ಬರಿಗೆ ನಿಮ್ಮ ಮೇಲಿರುವ ಪ್ರೀತಿಯ ಬಗ್ಗೆ ಸಂಶಯ ಪಡಬೇಡಿ. ಎಲ್ಲಾ ಸಮಯದಲ್ಲೂ ಪ್ರಶ್ನಿಸುತ್ತಾ ಅಥವಾ ದೂರುತ್ತಾ ಇರಬೇಡಿ. ಮುಂದೆ ಸಾಗಿ!
ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ಸೇರಿದಂತೆ, ಯೋಗ ಮತ್ತು ಧ್ಯಾನವನ್ನು ಕಲಿಸುವ ಅನೇಕ ಸಂಸ್ಥೆಗಳು ಭಾರತದಲ್ಲಿವೆ. ನಾವೆಲ್ಲರೂ, ಮಾನವಕುಲಕ್ಕೆ ಶಾಂತಿಯನ್ನು ತರುವ ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುವುದಾಗಿದ್ದರೆ, ಮತ್ತೆ ಯಾಕೆ ಈ ಎಲ್ಲಾ ಸಂಸ್ಥೆಗಳು ಅಷ್ಟೊಂದು ವಿಭಿನ್ನವಾಗಿವೆ?
ಶ್ರೀ ಶ್ರೀ ರವಿಶಂಕರ್: ಕೇಳು, ಒಂದೇ ಉದ್ದೇಶದ ಜನರು ಯಾವಾಗಲೂ ಜೊತೆಯಲ್ಲಿರುತ್ತಾರೆ. ಅವರು ಅದನ್ನು ವಿಭಿನ್ನ ರೀತಿಗಳಲ್ಲಿ ಮಾಡಿದರೂ, ಉದ್ದೇಶ ಒಂದೇ ಆಗಿರುವುದರಿಂದ ಅಲ್ಲಿ ಯಾವುದೇ ಸಂಘರ್ಷವಿರುವುದಿಲ್ಲ.
ನಿಮಗೆ ಗೊತ್ತಿದೆಯಾ, ಆತ್ಮವು ವೈವಿಧ್ಯತೆಯನ್ನು ಪ್ರೀತಿಸುತ್ತದೆ.
ನಾನು ಪಾಕಿಸ್ತಾನಕ್ಕೆ ಹೋದಾಗ, ಜನರು ನನ್ನಲ್ಲಿ, ಭಾರತದಲ್ಲಿ ನಮಗೆ ಯಾಕೆ ಅಷ್ಟೊಂದು ದೇವರಿದ್ದಾರೆ, ಒಬ್ಬನೇ ಒಬ್ಬ ದೇವರಿರಬೇಕು ಎಂದು ಕೇಳಿದರು.
ನಾನು ಅವರಿಗಂದೆ, "ನಿಮ್ಮಲ್ಲಿ, ಒಂದೇ ಗೋಧಿಯಿಂದ ಮಾಡಿದ ಅಷ್ಟೊಂದು ಬಗೆಯ ವ್ಯಂಜನಗಳು ಯಾಕಿವೆ? ದೇವರು ಹಲವಾರು ತರಕಾರಿಗಳನ್ನು ಸೃಷ್ಟಿಸಿದ್ದಾನೆ. ಅವನು ಕೇವಲ ಬದನೆಕಾಯಿಯನ್ನು ಮಾಡಿ, ’ನಿಮ್ಮ ಜೀವಮಾನವಿಡೀ ಇದನ್ನು ತಿನ್ನಿ’ ಎಂದು ಹೇಳಲಿಲ್ಲ. ಎಷ್ಟೊಂದು ಬಗೆಯ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ದೇವರು ಸೃಷ್ಟಿಸಿದ್ದಾರೆ ಎಂದು ನೋಡಿ, ಅಲ್ಲವೇ? ಹಾಗೆ! ಭಾರತದಲ್ಲಿ ಹಲವಾರು ದೇವರಿದ್ದಾರೆ, ಆದರೆ ಒಬ್ಬನೇ ಒಬ್ಬ ಪರಮಾತ್ಮ. ಒಬ್ಬ ದೇವರು ಹಲವಾರು ವಿಭಿನ್ನ ಹೆಸರುಗಳಲ್ಲಿ ಮತ್ತು ರೂಪಗಳಲ್ಲಿ ಇದ್ದಾನೆ. ಅದು ಆಚರಣೆ."
ನೋಡಿ, ಇಲ್ಲಿ ಎಲ್ಲರೂ ಎಷ್ಟೊಂದು ಬಣ್ಣಗಳನ್ನು ಧರಿಸಿದ್ದಾರೆ. ಎಲ್ಲರೂ ಒಂದು ಸಮವಸ್ತ್ರದಲ್ಲಿರುತ್ತಿದ್ದರೆ, ಇದೊಂದು ಸೇನಾ ಶಿಬಿರದಂತೆ ಕಾಣಿಸುತ್ತಿತ್ತು! ತಿಳಿಯಿತಾ? ವೈವಿಧ್ಯತೆಯು ಸೃಷ್ಟಿಯ ಸೌಂದರ್ಯವಾಗಿದೆ ಮತ್ತು ನಾವದನ್ನು ಗೌರವಿಸಬೇಕು.
ನಾನಿದನ್ನು ಹೇಳಿದಾಗ ಅವರು ಅದನ್ನು ಬಹಳ ಮೆಚ್ಚಿದರು ಮತ್ತು ಅವರಂದರು, "ಯಾರೂ ನಮಗೆ ಇದನ್ನು ಈ ರೀತಿಯಲ್ಲಿ ಮೊದಲು ವಿವರಿಸಿರಲಿಲ್ಲ!"
ಪ್ರಶ್ನೆ: ಒಬ್ಬ ವ್ಯಕ್ತಿಯು ದೇವರನ್ನು ನಂಬುತ್ತಾನೆ, ಆದರೆ ಮೋಸ ಮಾಡುತ್ತಾನೆ ಮತ್ತು ಕಳ್ಳತನ ಮಾಡುತ್ತಾನೆ. ಇನ್ನೊಬ್ಬನು ದೇವರನ್ನು ನಂಬುವುದಿಲ್ಲ, ಆದರೆ ಮೋಸ ಮಾಡುವುದಿಲ್ಲ. ಯಾರು ಸರಿ?
ಶ್ರೀ ಶ್ರೀ ರವಿಶಂಕರ್: ನೀನು ಈಗಾಗಲೇ ಉತ್ತರವನ್ನು ನೀಡಿರುವೆ! ಇದು, "ನಾನು ಒಂದು ತಟ್ಟೆಯಲ್ಲಿ ಇದ್ದಿಲನ್ನು ಮತ್ತು ಇನ್ನೊಂದು ತಟ್ಟೆಯಲ್ಲಿ ಬೆಣ್ಣೆಯನ್ನು ಇಟ್ಟಿರುವೆ. ನಿಮಗೆ ಯಾವುದು ಬೇಕು?" ಎಂದು ನನ್ನಲ್ಲಿ ಕೇಳಿದಂತಾಯಿತು. ಅದು ಬಹಳ ಸ್ಪಷ್ಟ.
ಯಾರಾದರೊಬ್ಬರು ದೇವರನ್ನು ನಂಬುವುದಿದ್ದರೆ, ಅವರು ಇತರರನ್ನು ಮೋಸಗೊಳಿಸಲು ಹೇಗೆ ಸಾಧ್ಯ? ನನಗಿದು ಅರ್ಥವಾಗುವುದಿಲ್ಲ. ಅದು ಹೀಗಿರಲೂಬಹುದು: ಇತರರನ್ನು ಮೋಸಗೊಳಿಸುತ್ತಿರುವುದಕ್ಕಾಗಿ ಆತನ ಮನಃಸಾಕ್ಷಿಯು ಆತನನ್ನು ಕೆಟ್ಟದಾಗಿ ಚುಚ್ಚುತ್ತಿರಬಹುದು ಮತ್ತು ಅವನು ದೇವರಲ್ಲಿ ಕ್ಷಮೆ ಕೇಳುತ್ತಿರಬಹುದು. ಮೋಸ ಮಾಡುವ ಒಬ್ಬ ವ್ಯಕ್ತಿಯು ಅಜ್ಞಾನದಲ್ಲಿ ಸಿಲುಕಿರುತ್ತಾನೆ. ಅಲ್ಲಿ ವೈಶಾಲ್ಯತೆಯಿರುವುದಿಲ್ಲ. ಅವನಲ್ಲಿ ಎಲ್ಲೋ ಭಯವಿರುತ್ತದೆ ಮತ್ತು ಅದಕ್ಕೇ ಅವನು ಅಂತಹ ಕೆಲಸಗಳನ್ನು ಮಾಡುವುದು.
ಪ್ರಶ್ನೆ: ನನ್ನ ಸ್ನೇಹಿತರಲ್ಲೊಬ್ಬನಿಗೆ ಹುಚ್ಚು ಹಿಡಿದಿದೆ. ಅವನು ೨೪X೭ ಕೆಲಸ ಮಾಡುತ್ತಾನೆ. ಅವನ ಹೆತ್ತವರಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್: ಈ ದಿನಗಳಲ್ಲಿ ಇದು ಬಹಳಷ್ಟು ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಬಹಳಷ್ಟು ಒತ್ತಡ ಇದೆ, ಪರೀಕ್ಷೆಗಳಲ್ಲಿ ಚೆನ್ನಾಗಿ ಮಾಡಲು ಒತ್ತಡ. ಆದುದರಿಂದ ಅವರು ಹಗಲಿರುಳು ಬಹಳಷ್ಟು ಓದುತ್ತಾ ಇರುತ್ತಾರೆ.
ಒಬ್ಬ ಯುವಕನು ನನ್ನಲ್ಲಿಗೆ ಬಂದು, ಅವನು, ನಾಲ್ಕು ದೊಡ್ಡ ಲ್ಯಾಂಪುಗಳು ತನ್ನ ಮೇಜಿನ ಮೇಲೆ ಪ್ರಕಾಶ ಬೀರುವಂತೆ ಇಟ್ಟು ಓದುವುದಾಗಿ ಮತ್ತು ತಾನು ಹಗಲಿರುಳು ಅಧ್ಯಯನ ಮಾಡುವುದಾಗಿ ಹೇಳಿದನು. ನಾವು ಮೆದುಳಿನ ಬಗ್ಗೆ ಜಾಗ್ರತೆ ವಹಿಸಬೇಕು. ನೀವು ಆ ರೀತಿಯಲ್ಲಿ ಮೆದುಳನ್ನು ಅತಿಯಾಗಿ ಬಳಸಲು ಸಾಧ್ಯವಿಲ್ಲ. ಆಗ ಹಠಾತ್ತನೆ ಏನೋ ಆಗುತ್ತದೆ ಮತ್ತು ಫ್ಯೂಸ್ ಹೋಗುತ್ತದೆ!
ಯೋಗ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡಿ. ಅದನ್ನು ಯಾವಾಗಾದರೊಮ್ಮೆ ಮಾಡಿದರೆ ಸಾಲದು. ಅಂತಹ ಎಲ್ಲಾ ಸಮಸ್ಯೆಗಳನ್ನು ಯೆಸ್ ಪ್ಲಸ್ ನ ಗಮನಕ್ಕೆ ತನ್ನಿ.

ಶನಿವಾರ, ಆಗಸ್ಟ್ 11, 2012

ಗುರು ತತ್ವ

11
2012
Aug
ಬೆಂಗಳೂರು ಆಶ್ರಮ, ಭಾರತ


ಅನ್ನಕೂಟ! (ವೇದಿಕೆಯ ಮೇಲೆ ಹರಡಿಟ್ಟ ತಿನಿಸುಗಳನ್ನು ನೋಡುತ್ತಾ ಹೇಳಿದರು)
ಇವತ್ತು ಮಹಿಳೆಯರು 451 ಬಗೆಯ ತಿನಿಸುಗಳನ್ನು ತಯಾರಿಸಿದ್ದಾರೆ.ಇದು ಗುಜರಾತಿನ ವೈಶಿಷ್ಟ್ಯ; 451 ಬಗೆಯ ಆಹಾರ ಪದಾರ್ಥಗಳು ಗುಜರಾತಿನ ಸ್ವಯಂಸೇವಕರಿಂದ ತಯಾರಿಸಲ್ಪಟ್ಟಿದೆ.

(ಅನ್ನಕೂಟವನ್ನು(ಅರ್ಥಾತ್ ಧಾನ್ಯಗಳ ರಾಶಿ) ಶ್ರೀ ಕೃಷ್ಣ ಇಂದ್ರನನ್ನು ಸೋಲಿಸಿದ ದಿನದಂದು ಆಚರಿಸಲಾಗುತ್ತದೆ. ಅನ್ನಕೂಟಕ್ಕಾಗಿ, ಆಹಾರದ ಪರ್ವತವನ್ನು ಅಲಂಕರಿಸಲಾಗುತ್ತದೆ, ಇದು ಗೋವರ್ಧನ ಗಿರಿಯನ್ನು ಶ್ರೀ ಕೃಷ್ಣನು ಮೇಲೆತ್ತಿ ಜನರನ್ನು ಇಂದ್ರನ ರೋಷದಿಂದ ಕಾಪಾಡಿದ್ದುದನ್ನೂ, ಗೋವರ್ಧನ ಪರ್ವತವನ್ನು ಸೂಚಿಸುತ್ತದೆ)

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದನು "ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಮ್ ದೇಹಮಾಶ್ರಿತಃ"
ನಾನು ಜಟರಾಗ್ನಿ’,(ಆಹಾರ ಪಚನಕ್ರಿಯೆಗೆ ಕಾರಣವಾದ ಅಗ್ನಿ).
ಎಲ್ಲಾ ಜೀವಿಗಳಲ್ಲಿ ಉಂಟಾಗುವ ಹಸಿವು ನಾನುಮತ್ತು ನಾಲ್ಕು ಬಗೆಯ ಆಹಾರವನ್ನು ಜೀರ್ಣಿಸುವವನು ನಾನು.’

ಆದರೆ ನಾವೇನು ಮಾಡುತ್ತೇವೆ?ನಾವು ಹಸಿವನ್ನು ಹುಟ್ಟಲೂ ಬಿಡುವುದಿಲ್ಲ. ನಮ್ಮ ಹೊಟ್ಟೆಯನ್ನು ಅಷ್ಟೊಂದು ಆಹಾರದೊಂದಿಗೆ ತುಂಬಿಸಿಕೊಳ್ಳುತ್ತಿರುತ್ತೇವೆ. ನಾವು ಭಗವಾನ್ ಕೃಷ್ಣನನ್ನು ಇರಲು ಬಿಡುವುದೂ ಇಲ್ಲ! ಆದ್ದರಿಂದಲೇ ಕಾಲಕ್ಕೊಮ್ಮೆ ಉಪವಾಸ ಮಾಡುವುದು ಒಳ್ಳೆಯದು.

ಅಷ್ಟಮಿಯಂದು ಸಾಮಾನ್ಯವಾಗಿ ಜನರು ಉಪವಾಸ ಆಚರಿಸುತ್ತಾರೆ, ಇದರಿಂದ ಹಸಿವು ಹೆಚ್ಚಾಗುತ್ತದೆ.ನಂತರ ಮಾರನೆಯ ದಿನ ಅವರು ವಿವಿಧ ಬಗೆಯ ಆಹಾರವನ್ನು ಭಗವಂತನಿಗೆ ಸಮರ್ಪಿಸುತ್ತಾರೆ.
ಹಾಗಾಗಿ, ನಿಮಗೆ ಹಸಿವಾದಾಗಲೆಲ್ಲಾ ಭಗವಾನ್ ಕೃಷ್ಣ ಬಂದಿದ್ದಾನೆಂದು ಯೋಚಿಸಿ.

ನಿಮ್ಮ ಜಟರದಲ್ಲಿನ ಅಗ್ನಿಯು ಭಗವಂತ, ಹಸಿವೂ ಭಗವಂತ ಮತ್ತು ಆಹಾರವೂ ಭಗವಂತ.
ಮತ್ತು ಆದ್ದರಿಂದ ಕೃಷ್ಣ ಹೇಳುವುದು, ’ನಾನು ನಿನ್ನ ಹೊಟ್ಟೆಯಲ್ಲಿನ ಹಸಿವು, ಮತ್ತು ನೀನು ಸೇವಿಸುವ ಆಹಾರವೂ ನಾನೇ.’
ಇದು ಬಹಳ ಅದ್ಭುತವಾದ ಜ್ಞಾನ. ನೀವು ಇಂಥ ಜ್ಞಾನವನ್ನು ಎಂದಾದರೂ ಪಡೆಯುವುದು ಬಹಳ ವಿರಳ.ನೀವು ಜಗತ್ತಿನ ಎಲ್ಲಾ ಪುಸ್ತಕಗಳನ್ನು ಓದಿದರೂ ಇಂಥ ಜ್ಞಾನವನ್ನು ಪಡೆಯುವುದಿಲ್ಲ.
ಬಹಳ ಮಂದಿ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಭಗವಂತ ಇದನ್ನು ಕೇವಲ ಹೇಳುತ್ತಿದ್ದನಷ್ಟೇ ಎಂದು ಅವರು ಅಂದುಕೊಂಡರು.ಆದರೆ ವಿವೇಕಿಗಳು ಮತ್ತು ಜ್ಞಾನಿಗಳಾಗಿರುವವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ.ಅವರು ಇದರ ಸತ್ಯವನ್ನು ಮತ್ತು ಇದರ ಹಿಂದಿರುವ ಸಾರವನ್ನು ಅರ್ಥಮಾಡಿಕೊಳ್ಳುತ್ತಾರೆ.

ಪ್ರ:451 ಬಗೆಯ ಆಹಾರಗಳಲ್ಲಿವೆ, ಆದರೆ ನೀವು ಸಿಹಿ ಇನ್ನುಣಿಸು(’Dessert’-ಊಟದ ಕೊನೆಯಲ್ಲಿ ಕೊಡುವ ಸಿಹಿವ್ಯಂಜನ). ನೀವು ಏನಂತೀರಿ?
ಶ್ರೀ ಶ್ರೀ: ಅದು ಸರಿ. ನಿಮಗೆ ಸಕ್ಕರೆ ಕಾಯಿಲೆ ಇಲ್ಲದಿದ್ದರೆ ಮತ್ತು ಸಿಹಿತಿನಿಸುಗಳ ಬಯಕೆಯಿದ್ದರೆ ನಾನು ಒಂದು ಸಿಹಿ ಇನ್ನುಣಿಸು!

ಪ್ರ: ಭಗವಾನ್ ಕೃಷ್ಣನು ದೇವತೆಗಳಲ್ಲಿ ಕಾರ್ತಿಕೇಯನೆಂದು ನಿನ್ನೆ ನೀವು ಹೇಳಿದಿರಿ .ದಯವಿಟ್ಟು ನಮಗೆ ಕಾರ್ತಿಕೇಯನ ಬಗ್ಗೆ ಸ್ವಲ್ಪ ಹೇಳಿ.
ಶ್ರೀ ಶ್ರೀ: ಭಗವಾನ್ ಶಿವನಿಂದ ಆಳಲ್ಪಟ್ಟ ಪಂಚ ಮಹಾಭೂತಗಳು(ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ) ಶಕ್ತಿಯೊಂದಿಗೆ(ನಿರ್ಮಲ ಚೈತನ್ಯದೊಂದಿಗೆ) ಸಂಘಟಿಸಿದಾಗ, ಭಗವಾನ್ ಕಾರ್ತಿಕೇಯ ಹುಟ್ಟಿದನು.
ಶಿವನನ್ನು ಪಂಚಾನನ(ಐದು ತಲೆಗಳುಳ್ಳವನು) ಎಂದು ಕರೆಯುತ್ತಾರೆ. ಐದು ತಲೆಗಳು ಪ್ರಕೃತಿಯಲ್ಲಿನ ಐದು ಮೂಲಧಾತುಗಳನ್ನು ನಿರೂಪಿಸುತ್ತವೆ. ಐದು ಧಾತುಗಳು ಆರನೆಯ ಧಾತುವಾದ ಚೈತನ್ಯ ಶಕ್ತಿಯೊಂದಿಗೆ ಸಂಘಟಿಸಿದಾಗ, ಷಡಾನನ(ಆರು ತಲೆಗಳುಳ್ಳವನು) ಜನ್ಮವಾಯಿತು, ಅವನನ್ನು ಭಗವಾನ್ ಕಾರ್ತಿಕೇಯನೆಂದೂ ಕರೆಯಲಾಗುತ್ತದೆ.
ನೀವು ಇದನ್ನು ಕುಂಡಲಿನಿ ಶಕ್ತಿ(ಬೆನ್ನುಹುರಿಯ ಮೂಲದಲ್ಲಿ ಸುರುಳಿಯಾಗಿರುವ ಮೂಲಭೂತ, ಸ್ತಬ್ಧ ಆದರೂ ಸಮರ್ಥವಾದ ಶಕ್ತಿ) ಸಂಬಂಧದಿಂದ ಅರ್ಥಮಾಡಿಕೊಳ್ಳಬಹುದು.
ನಮ್ಮೊಳಗೆ ಏಳು ಶಕ್ತಿ ಚಕ್ರಗಳಿವೆ. ಶಕ್ತಿಯು ಆರು ಚಕ್ರಗಳ ಮೂಲಕ ಉಕ್ಕಿ ಆರನೆಯ ಚಕ್ರದಲ್ಲಿ-ಆಜ್ಞಾ ಚಕ್ರದಲ್ಲಿ(ಹುಬ್ಬುಗಳ ನಡುವಿನಲ್ಲಿ ಇರುವಂಥದ್ದು) ಸ್ಥಿರಗೊಂಡಾಗ, ಅದು ಭಗವಾನ್ ಕಾರ್ತಿಕೇಯನಾಗಿ(ಗುರು ತತ್ತ್ವ ಸಾಂಕೇತಿಕ) ಅರಳುತ್ತದೆ. ಆಜ್ಞಾ ಚಕ್ರವು ಗುರು ತತ್ತ್ವದ ಸ್ಥಾನವಾಗಿದೆ.ಅಲ್ಲಿಯೇ ಗುರು ತತ್ತ್ವವು ಅರಳಿ ಪ್ರಕಟವಾಗುತ್ತದೆ.ಮತ್ತು ಗುರು ತತ್ತ್ವವೇ ಕಾರ್ತಿಕೇಯ ತತ್ತ್ವವೂ.

ಭಗವಾನ್ ಶಿವನು ದೈವತ್ವದ ಅವ್ಯಕ್ತತೆ(ಆಂತರ್ಯವಾದುದು), ಮತ್ತು ಭಗವಾನ್ ಕಾರ್ತಿಕೇಯನು ವ್ಯಕ್ತ ಸ್ವರೂಪ.
ಹಾಗಾಗಿ ನೀವು ಭಗವಾನ್ ಕಾರ್ತಿಕೇಯನನ್ನು ಕುಂಡಲಿನಿ ಶಕ್ತಿಯ ಸಾಂಕೇತಿಕವೆಂದು ಪರಿಗಣಿಸಬಹುದು.ಇಚ್ಚಾ ಶಕ್ತಿ ಮತ್ತು ಜ್ಞಾನ ಶಕ್ತಿ ಎರಡೂ ಕುಂಡಲಿನಿ ಶಕ್ತಿಯ ಒಡಗೂಡಿ ಬರುತ್ತವೆ.
ವಾಸ್ತವವೆಂದರೆ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿಗಳೆರಡೂ ಜ್ಞಾನ ಶಕ್ತಿ ಒಂದು ವ್ಯಕ್ತ ಸ್ವರೂಪವಾಗಿವೆ.
ಹಾಗಾಗಿ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿ ಎರಡು ಒಂದೇ ಕುಂಡಲಿನಿ ಶಕ್ತಿಯ(ಕಾರ್ತಿಕೇಯ) ಅಂಶವಾಗಿವೆ ಮತ್ತು ಅವು ವಲ್ಲಿ ಮತ್ತು ದೇವಯಾನಿ - ಭಗವಾನ್ ಕಾರ್ತಿಕೇಯನ ಇಬ್ಬರು ದೇವ ಪತ್ನಿಯರು ಆಗಿ ವ್ಯಕ್ತವಾಗಿವೆ. ಮತ್ತು ಭಗವಾನ್ ಕಾರ್ತಿಕೇಯ ಜ್ಞಾನದ ಸಾಕಾರ ರೂಪ. ಹಾಗಾಗಿ ಕಾರ್ತಿಕೇಯ ತತ್ತ್ವ ಎಂದರೆ ಕೇವಲ ಗುರು ತತ್ತ್ವ.

ಭಗವಾನ್ ಶಿವನು ಓಂಕಾರ-ಸೃಷ್ಟಿಯ ಮೂಲ ಶಬ್ದದಿಂದ ಪ್ರತಿಬಿಂಬಿಸಲ್ಪಡುವ  ತ್ರಿಮೂರ್ತಿಗಳಲ್ಲಿ(ಭ್ರಹ್ಮ, ವಿಷ್ಣು ಮತ್ತು ಮಹೇಶ್ವರ) ಒಬ್ಬ. ’ಓಂನಲ್ಲಿ ಮ್-ಕಾರವು ಭಗವಾನ್ ಶಿವನಿಗೆ ಸೇರಿದ್ದು.

ಪುರಾಣಗಳಲ್ಲಿ ಭಗವಾನ್ ಕಾರ್ತಿಕೇಯನ ಬಗ್ಗೆ ಒಂದು ಕಥೆಯಿದೆ.
ಭಗವಾನ್ ಕಾರ್ತಿಕೇಯ ಎಳೆಯ ಬಾಲಕನಾಗಿದ್ದಾಗ, ಅವನ ತಂದೆಯಾದ ಭಗವಾನ್ ಶಿವನು ಅವನನ್ನು ಭಗವಾನ್ ಬ್ರಹ್ಮನಿಂದ ಕಲಿತು ವಿದ್ಯಾರ್ಜನೆಯನ್ನು ಪಡೆಯಲು ಹೇಳಿದರು.

ಹಾಗಾಗಿ ಕಾರ್ತಿಕೇಯ  ಭಗವಾನ್  ಬ್ರಹ್ಮನ ಬಳಿ ಹೋಗಿ ಕೇಳಿಕೊಂಡದ, ’ದಯವಿಟ್ಟು ನನಗೆಓಂಕಾರದ ಅರ್ಥ ಹೇಳಿ’. ಭಗವಾನ್ ಬ್ರಹ್ಮ ಹೇಳಿದರು, ’ಮೊದಲು ಅಕ್ಷರಗಳನ್ನು ಕಲಿ! ನೀನು ನೇರವಾಗಿಓಂಕಾರದ ಅರ್ಥ ಕೇಳುತ್ತಿದ್ದಿಯೆ.’
ಕಾರ್ತಿಕೇಯ ಹೇಳಿದನು, ’ಇಲ್ಲ, ನನಗೆ ಪ್ರಥಮವಾಗಿ ಅತ್ಯುನ್ನತವಾದ ಜ್ಞಾನವನ್ನುತಿಳಿಯಬೇಕು - ಓಂ.’
ಈಗ ಭಗವಾನ್  ಬ್ರಹ್ಮನಿಗೆ ಅಕ್ಷರಗಳ ಬಗ್ಗೆ ಎಲ್ಲಾ ತಿಳಿದಿತ್ತು, ಆದರೆ ಅವರಿಗೆ ಓಂ-ಕಾರ(ಮೂಲ ಶಬ್ದ) ಅರ್ಥ ತಿಳಿದಿರಲಿಲ್ಲ.
ಆದ್ದರಿಂದ ಕಾರ್ತಿಕೇಯ ಭಗವಾನ್  ಬ್ರಹ್ಮನಿಗೆ ಹೇಳಿದನು, ’ನಿಮಗೆ ಓಂ-ಕಾರದ ಅರ್ಥ ತಿಳಿದಿಲ್ಲ, ನೀವು ನನಗೆ ಹೇಹೆ ಕಲಿಸುವಿರಿ? ನಾನು ನಿಮ್ಮ ಬಳಿ ಕಲಿಯುವುದಿಲ್ಲ.’ ಮತ್ತೆ ತನ್ನ ತಂದೆಯ ಬಳಿಗೆ ಹೋದ ಕಾರ್ತಿಕೇಯ.

ಭಗವಾನ್ ಬ್ರಹ್ಮನು ಭಗವಾನ್  ಶಿವನಿಗೆ ಹೇಳಿದರು, ’ನೀವೇ ನಿಮ್ಮ ಮಗನನ್ನು ನೋಡಿಕೊಳ್ಳುವುದು ಸಾಧ್ಯ. ನನ್ನಿಂದಾಗದು. ನಾನೊಂದು ಹೇಳಿದರೆ ಅವನು ಇನ್ನೊಂದನ್ನು ಹೇಳುತ್ತಾನೆ.ನಾನೇನು ಹೇಳಿದರೂ ಅವನು ತದ್ವಿರುದ್ಧ ನುಡಿಯುತ್ತಾನೆ.ಅವನಿಗೆ ಕಲಿಸುವುದು ನನ್ನಿಂದ ಸಾಧ್ಯವಾಗದು.ಹಾಗಾಗಿ ಯಾವುದು ಒಳ್ಳೆಯದೆಂದು ನೀವೇ ನಿರ್ಧರಿಸಿ ಅವನನ್ನು ನೋಡಿಕೊಳ್ಳಿ.’

ಇದನ್ನು ಕೇಳಿ ಭಗವಾನ್ ಶಿವನು ಮಗನನ್ನು ಕೇಳಿದರು, ’ಏನಾಯಿತು ಮಗ?ಬ್ರಹ್ಮ ಸಂಪೂರ್ಣ ಬ್ರಹ್ಮಾಂಡದ ಸೃಷ್ಟಿಕರ್ತ. ನೀನು ಅವರಿಂದ ಕಲಿಯಬೇಕು.’
ಇದಕ್ಕೆ ಕಾರ್ತಿಕೇಯನು ಹೇಳಿದನು, ’ಹಾಗಾದರೆ ನೀವು ಹೇಳಿ ಓಂಕಾರದ ಅರ್ಥವೇನು?’
ಇದನ್ನು ಕೇಳಿ ಭಗವಾನ್ ಶಿವ ನಕ್ಕು ಹೇಳಿದರು, ’ನನಗೂ ತಿಳಿದಿಲ್ಲ.’
ಕಾರ್ತಿಕೇಯ ಆಗ ಹೇಳಿದನು, ’ಹಾಗಿದ್ದರೆ ನಾನು ನಿಮಗೆ ಹೇಳುತ್ತೇನೆ ಯಾಕೆಂದರೆ ನನಗೆ ಓಂಕಾರದ ಅರ್ಥ ತಿಳಿದಿದೆ.’
ನಿನಗೆ ತಿಳಿದಿರುವುದರಿಂದ ನೀನು ನನಗೆ ಅದರ ಅರ್ಥ ತಿಳಿಸು’, ಎಂದರು ಭಗವಾನ್ ಶಿವ.
ನಾನು ನಿಮಗೆ ಹಾಗೆ ಹೇಳಲು ಆಗುವುದಿಲ್ಲ. ನೀವ ನನಗೆ ಗುರುವಿನ ಸ್ಥಾನವನ್ನು ನೀಡಬೇಕು.ನೀವು ನನ್ನನ್ನು ಗುರುವಿನ ಆಸನದಲ್ಲಿ ಕೂರಿಸಿದರೆ ಮಾತ್ರ ನಾನು ನಿಮಗೆ ಹೇಳಬಲ್ಲೆ’, ಎಂದನು ಕಾರ್ತಿಕೇಯ.

ಗುರು ಎಂದರೆ ಒಂದು ಎತ್ತೆರಆದ ಸ್ಥಾನ ಅಥವಾ ವೇದಿಕೆಯ ಮೇಲಿರಬೇಕು.ಶಿಕ್ಷಕನು ಒಂದು ಎತ್ತರವಾದ ಸ್ಥಾನದಲ್ಲಿ ಕುಳಿತಿದ್ದು ವಿದ್ಯಾರ್ಥಿಯು ಕೆಳಗೆ ಕುಳಿತುಕೊಂಡು ಗುರುವಿನ ಮಾತನ್ನು ಕೇಳಬೇಕು.
ಭಗವಾನ್ ಶಿವ ತನಗಿಂತ ಎತ್ತರವಾದ ಸ್ಥಾನವನ್ನು ಹೇಗೆ ಹುಡುಕಬಹುದು?ಯಾಕೆಂದರೆ ಅವರು ದೇವತೆಗಳಲ್ಲಿ ಅತ್ಯುನ್ನತ ಮತ್ತು ಪರಮಶ್ರೇಷ್ಠ. ಹಾಗಾಗಿ ಭಗವಾನ್ ಶಿವ ಬಾಲ ಕಾರ್ತಿಕೇಯನನ್ನು ಎತ್ತಿ ತನ್ನ ಭುಜದ ಮೇಲೆ ಕುಳ್ಳಿರಿಸಿದರು. ಮತ್ತಾಗ, ಭಗವಾನ್ ಶಿವನ ಕಿವಿಯಲ್ಲಿ, ಭಗವಾನ್ ಕಾರ್ತಿಕೆಯನು ಪ್ರಣವಮಂತ್ರ(ಓಂ) ಅರ್ಥವನ್ನು ವಿವರಿಸಿದರು. ಸಂಪೂರ್ಣ ಸೃಷ್ಠಿಯು ಓಂ-ಕಾರದಲ್ಲಿ ಅಡಕವಾಗಿದೆ ಎಂದು ಕಾರ್ತಿಕೇಯನು ವಿವರಿಸಿದನು.
ತ್ರಿಮೂರ್ತಿ- ಅಂದರೆ ಭಗವಾನ್ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಓಂ-ಕಾರದಲ್ಲಿ ಒಳಗೊಂಡಿದ್ದಾರೆ.
ಓಂ ಎಂದರೆ ಎಲ್ಲವೂ ಪ್ರೀತಿ ಎಂದು- ಅವಿರತವಾದ ಮತ್ತು ನಿಷ್ಚಲವಾದ ಪ್ರೀತಿಯು ಓಂ.ಇದು ಭಗವಾನ್ ಕಾರ್ತಿಕೇಯನು ಭಗವಾನ್ ಶಿವನಿಗೆ ವಿವರಿಸಿದ ಓಂ-ಕಾರದ ಸಾರ ಮತ್ತು ರಹಸ್ಯವೂ ಹೌದು.

ಇದನ್ನು ಕೇಳುತ್ತಿದಂತೆ ದೇವಿ ಪಾರ್ವತಿಯು(ಕಾರ್ತಿಕೇಯನ ತಾಯಿ, ದೈವಿಕ ಮಾತೃ ಸ್ವರೂಪ) ಹಿಗ್ಗಿ
ಹರ್ಷಪೂರ್ಣಳಾದರು.
ಅವರು ಹೇಳಿದರು, ’ನೀನು ನನ್ನ ನಾಥನಿಗೆ ಸ್ವಾಮಿಯಾಗಿರುವೆ!’
ಹೀಗೆ ಹೇಳುತ್ತ ಅವರು ತನ್ನ ಮಗನನ್ನುಸ್ವಾಮಿನಾಥಎಂದು ಕರಿದರು.ಅಂದಿನಿಂದ ಭಗವಾನ್ ಕಾರ್ತಿಕೇಯನು ಸ್ವಾಮಿನಾಥನೆಂದೂ ಕರೆಯಲ್ಪಟ್ಟನು.

ಹಾಗೆ ರೀತಿಯಲ್ಲಿ, ಭಗವಾನ್ ಕಾರ್ತಿಕೇಯ ಗುರುವಿನ ಸ್ಥಾನವನ್ನು ಸ್ವೀಕರಿಸಿ ಭಗವಾನ್ ಶಿವನ ಭುಜವನ್ನೇರಿ ಕುಳಿತು ಅವರಿಗೆ ಓಂ-ಕಾರದ ಅರ್ಥ ವಿವರಿಸಿದರು.

ಕಥೆಯ ಸಾರವೆಂದರೆ ಇದು- ಗುರು ತತ್ತ್ವವನ್ನು ಭಗವಾನ್ ಶಿವನಿಗಿಂತಲೂ ಎತ್ತರದಲ್ಲಿ ಇಡಲಾಗಿದೆ!
ಇದನ್ನು ವಿವರಿಸಲು ಕಥೆಯನ್ನು ಸ್ಕಂಧ ಪುರಾಣದಲ್ಲಿ ಬರೆಯಲಾಗಿದೆ.ಹಾಗಾಗಿ ಭಗವಾನ್ ಶಿವನೂ ಗುರುತತ್ತ್ವದ ಶಿಷ್ಯನಾಗಬೇಕಯಿತು.; ಹಾಗಾಗಿ ಗುರುತತ್ತ್ವ ಮತ್ತು ಕಾರ್ತಿಕೇಯತತ್ತ್ವಗಳೆರಡೂ ಒಂದೇ ಆಗಿವೆ.

ಹಿಂದಿಯಲ್ಲಿ ಒಂದುದೋಹಾಇದೆ, ಗುರು ಗೋವಿಂದ ದೌ  ಖಡೆ ಕಾಕೇ ಲಾಗೂ ಪಾಯ್; ಬಲಿಹಾರೀ ಗುರು ಆಪ್ನೇ ಗೋವಿಂದ್ ದಿಯೋ ಮಿಲಾಯೆ.’
(ಇಬ್ಬರೂ -ಗುರು ಮತ್ತು ಭಗವಂತ, ನನ್ನ ಮುಂದೆ ನಿಂತಿದ್ದಾರೆ, ನಾನು ಮೊದಲು ಯಾರ ಪಾದವನ್ನು ಮುಟ್ಟಲಿ? ನಾನು ಮೊದಲು ನನ್ನ ಗುರುವಿನ ಪಾದವನ್ನು ಮುಟ್ಟುತ್ತೇನೆ ಯಾಕೆಂದರೆ ಅವರಿಲ್ಲದೆ ನಾನು ಭಗವಂತನನ್ನು ಎಂದೂ ಗುರುತಿಸಲಾಗುತ್ತಿರಲಿಲ್ಲ)
ಭಗವಾನ್ ಕಾರ್ತಿಕೇಯನನ್ನು ದೇವ ಸೇನಾಪತಿಎಂದೂ ಕರೆಯುತ್ತಾರೆ- ದೈವೀ ಗುಣಗಳ ಪಾಲಕ ಮತ್ತು ರಕ್ಷಕ.ಭಗವಾನ್ ಶಿವ ತನ್ನ ಭಕ್ತರಿಗೆ, ಅವರು ರಾಕ್ಷಸರಾಗಿದ್ದರೂ, ಸುಲಭದಲ್ಲಿ ವರ ನೀಡುವುದಕ್ಕೆ ಗುರುತಿಸಲ್ಪಟ್ಟವರು. ಅವರು ಭೋಲೇ ಬಾಬಾ(ಮುಗ್ಧರು), ಹಾಗಾಗಿ ಯಾರಾದರೂ ಏನೇ ಅನುಗ್ರಹ ಅಥವಾ ವರವನ್ನು ಬೇಡಿದರೆ, ಅವರು ಅದನ್ನು ತತ್ಕ್ಷಣ ನೆರವೇರಿಸುತ್ತಿದ್ದರು ಮತ್ತೆ ಅವರು ತಾವೇ ಸಿಕ್ಕಿಹಾಕಿಕೊಳ್ಳುತ್ತಿದ್ದರು.

ತ್ರಿಮೂರ್ತಿಗಳಲ್ಲಿ ಎಲ್ಲಾ ಮೂವರೂ-ಭಗವಾನ್ ಬ್ರಹ್ಮ, ಭಗವಾನ್ ವಿಷ್ಣು ಮತ್ತು ಭಗವಾನ್ ಶಿವ ಯಾರೇವರ ಬೇಡಿದರು ಅವರನ್ನು ಅನುಗ್ರಹಿಸುತ್ತಿದ್ದರು, ನಂತರ ಅವರು ತಮ್ಮದೇ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಅಂಥ ಸಮಯದಲ್ಲಿ ಭಗವಾನ್ ಕಾರ್ತಿಕೇಯ ಅಸುರರ(ಅಂಥ ವರ ಪಡೆದವರ) ವಿರುದ್ಧ ಯುದ್ಧ ಮಾಡಲು ನಿಲ್ಲುತ್ತಿದ್ದರು. ಹಾಗಾಗಿ ಅವರನ್ನು ಭಗವಂತರ ಸೇನಾಧ್ಯಕ್ಷನಾಗಿ ಆರಿಸಲಾಗಿತ್ತು.

ಕಾರ್ತಿಕೇಯ ಎಂದರೆ ತತ್ತ್ವ- ಯಾವುದು ಶಾಂತಿಯುತವೂ, ಆದರೂ ಅಷ್ಟೇ ಕ್ರಿಯಾಶೀಲ.
ಸಾಮಾನ್ಯವಾಗಿ ಬಹಳ ಕ್ರಿಯಾಶೀಲ ವ್ಯಕ್ತಿಗಳು ಶಾಂತರಾಗಿ ಮತ್ತು ಮೌನವಾಗಿ ಇರುವುದಿಲ್ಲ. ಮತ್ತು ಮೌನಿಗಳು ಬಹಳ ಸಕ್ರಿಯರಾಗಿರುವುದಿಲ್ಲ(ಜಡ). ಹಾಗಾಗಿ ಕಾರ್ತಿಕೇಯ ತತ್ತ್ವ ಎಂಬುದು ಎರಡೂ ಆಗಿದೆ- ಶಾಂತವಾದುದು ಆದರೂ ಬಹಳ ಕ್ರಿಯಾಶೀಲ.

ಆಧ್ಯಾತ್ಮಿಕವಾಗಿ ಪರಿಪೂರ್ಣ ಹಾಗೂ ಪ್ರಾಪಂಚಿಕವಾಗಿ ವಿವೇಕಶೀಲರಾಗಿರುವುದು; ಎರಡು ಮುಖಗಳನ್ನು ಹೊಂದಿರುವುದು; ಹುರುಪಿನಿಂದ ಕ್ರಿಯಾಶೀಲರಾಗಿರುವುದು ಮತ್ತು ಗಾಢ ಮೌನ ಇವೆಲ್ಲ ಜೊತೆಗೇ ಕಾರ್ತಿಕೇಯ ತತ್ತ್ವವನ್ನು ರೂಪಿಸುತ್ತವೆ.
ಎಲ್ಲಿ ಇಚ್ಚಾ ಶಕ್ತಿ ಮತ್ತು ಕ್ರಿಯಾ ಶಕ್ತಿ ಎರಡೂ ಜ್ಞಾನ ಶಕ್ತಿಯೊಂದಿಗೆ ಇವೆಯೋ, ಅದು ಕಾರ್ತಿಕೇಯ ತತ್ತ್ವ. ಆದ್ದರಿಂದಲೇ ಹೇಳುವುದು, ಕ್ರಿಯಾ ಶಕ್ತಿ ಅಸ್ತಿತ್ತ್ವದ ಆಧಾರದಿಂದ ಭಗವಾನ್ ಕಾರ್ತಿಕೇಯನು ಸೇನಾಪತಿಯಾದನು- ದೇವತೆಗಳ ಸೈನ್ಯದ ಅಧ್ಯಕ್ಷನಾಗಿ ದೇವಿ ದೇವತೆಯರನ್ನು ಕಾಪಾಡಿದರು.

ಕಾರ್ತಿಕೇಯನು ತಾರಕಾಸುರನನ್ನು(ಒಬ್ಬ ಅಸುರ) ಯುದ್ಧದಲ್ಲಿ ಸೋಲಿಸಿದರು. ತಾರಕಾಸುರನು ಅಹಂಕಾರದ ಚಿಹ್ನೆ. ಯಾರಾದರುನಾನು ಎಲ್ಲವನ್ನೂ ಜಯಿಸಿದ್ದೇನೆ ಮತ್ತು ಎಲ್ಲವನ್ನೂ ಆಳುತ್ತಿದ್ದೇನೆ, ನಾನು ಎಲ್ಲವನ್ನೂ ತಿಳಿದಿದ್ದೇನೆ’, ಎಂದು ಯೋಚಿಸುತ್ತಿದ್ದರೆ, ಅಂಥ ಮನಃಸ್ಥಿತಿಯು ತಾರಕಾಸುರನಿಂದ ಪ್ರತಿನಿಧಿಸಲ್ಪಟ್ಟಿದೆ.

ಕೆಲವರಿದ್ದಾರೆ, ನೀವು ಅವರಿಗೆ ಏನು ಹೇಳಿದರೂ ಅವರು ಹೇಳುತ್ತಾರೆ, ’ಹೌದು ನನಗಾಗಲೇ ಗೊತ್ತು, ನನಗೆ ಹೇಳಬೇಕಾಗಿಲ್ಲ.’ ಅವರು ಎಂದೂ ಏನಾದರನ್ನೂ ತಿಳಿಯದಿರುವುದನ್ನು ಸ್ವೀಕರಿಸುವುದಿಲ್ಲ. ಅವರು ಎಲ್ಲವನ್ನೂ ತಿಳಿದಿರುವಂತೆ ನಡೆದುಕೊಳ್ಳುತ್ತಾರೆ.
ಹೆಮ್ಮೆಯ ಅಂಥಃ ತಪ್ಪು ಪ್ರಜ್ಞೆ, ತನ್ನ ಮುಂದೆ ಬರುವ ಎಲ್ಲವನ್ನೂ ನಿರ್ಲಕ್ಷಿಸುವಂಥ ದುರಹಂಕಾರವು ಒಂದು ಆಸುರೀ(ರಾಕ್ಷಸೀಯ) ಗುಣ.
ನಮ್ರತೆ, ಸರಳತೆ ಮತ್ತು ಸಹಜತೆ, ಎಲ್ಲಾ ಗುಣಗಳು ಅಹಂಕಾರದಿಂದ ಮುಚ್ಚಲ್ಪಡುತ್ತವೆ.ಹಾಗಾಗಿ ಅಂಥ ಅಹಂಕಾರವನ್ನು ನಾಶಮಾಡುವುದು ಕುಂಡಲಿನಿ ಶಕ್ತಿಯ-ಕಾರ್ತಿಕೇಯನ ಕೆಲಸ.ಹಾಗಾಗಿ ಕಾರ್ತಿಕೇಯನು ಅಹಂಕಾರವನ್ನು ವಧಿಸುವವನು.
ಕಥೆಯು ಹೀಗೆ ಹೇಳುತ್ತದೆ, ತಾರಕನು(ಅಹಂಕಾರವು) ಭಗವಾನ್ ಕಾರ್ತಿಕೇಯನಿಂದ ಸೋಲಿಸಲ್ಪಟ್ಟ ಮೇಲೆ, ಒಂದು ಹೂಂಜದ ರೂಪವನ್ನು ತಾಳಿದ. ಹೂಂಜ ನಿಃಶಕ್ತಿಯ, ಭದ್ರತೆಯಿಲ್ಲದ ಮತ್ತು ತಾಳ್ಮೆಯ ಕೊರತೆಯ  ಸಂಕೇತ.
ಸಾಮಾನ್ಯವಾಗಿ ಯಾರಾದರೂ ಹೇಡಿಯಾಗಿದ್ದರೆ, ’ನೀನು ಕೋಳಿಮರಿಎನ್ನುತ್ತಾರೆ ಅಲ್ಲವೆ?ಹಾಗಾಗಿ, ಕಾರ್ತಿಕೇಯನಿಂದ ಸೋಲಿಸಲ್ಪಟ್ಟ ನಂತರ, ತಾರಕಾಸುರನು ಹೂಂಜನಾದನು.ಕಾರ್ತಿಕೇಯನು ತಾರಕಾಸುರನನ್ನು ಸೋಲಿಸಿದರಿಂದ, ಅವನಿಗೆ ಜೀವಭಿಕ್ಷೆಯನ್ನು ನೀಡಿ ಅವನು ಏನು ವರವನ್ನು ಇಚ್ಚಿಸುತ್ತಾನೆಂದು ಕೇಳಿದನು.ಆಗ ತಾರಕನು ಸದಾ ಭಗವಂತನ ಚರಣದಲ್ಲಿರಲು ಪ್ರಾರ್ಥಿಸಿದನು, ಮತ್ತು ಭಗವಾನ್ ಕಾರ್ತಿಕೇಯನು ಅವನನ್ನು ತನ್ನ ಧ್ವಜ ಲಾಂಛನವನ್ನಾಗಿ ಮಾಡಿದರು.ಇದರ ಅರ್ಥ ಅಹಂಕಾರವನ್ನು ಸದಾ ನಿಗ್ರಹಿಸಿಡಬೇಕು.ಜೀವನದಲ್ಲಿ ಅಹಂಕಾರವು ಅವಶ್ಯ ಆದರೆ ಅದನ್ನು ನಿಗ್ರಹಿಸಿಡಬೇಕು.

ನೀವು ಕಾರ್ತಿಕೇಯನ ವಿಗ್ರಹವನ್ನು ನೋಡಿದರೆ, ಅವನು ಒಂದು ಕೈಯಲ್ಲಿ ಈಟಿಯನ್ನು ಧರಿಸಿದ್ದಾನೆ.ಅದನ್ನು ವೇಲ್ ಎಂದೂ ಕರೆಯುತ್ತಾರೆ.ಅದು ತ್ರಿಶೂಲವಲ್ಲ. ಅದು ಕುಂಡಲಿನಿ ಶಕ್ತಿಯ ಸಂಕೇತ. ತನ್ನ ಇನ್ನೊಂದು ಕೈಯಲ್ಲಿ ಅವನು ಹೂಂಜ ಲಾಂಛನವುಳ್ಳ ಒಂದು ಸಣ್ಣ ಧ್ವಜವನ್ನು ಹಿಡಿದಿದ್ದಾನೆ. ಹೂಂಜವು ಸದಾ ಭಗವಂತನೊಂದಿಗೆ ಧ್ವಜದ ರೂಪದಲ್ಲಿ ಇರಲು ಪ್ರಾರ್ಥಿಸಿದ ಅಸುರ ತಾರಕನ(ಅಹಂಕಾರ) ಚಿಹ್ನೆ. ತಮಿಳು ನಾಡಿನ ಮತ್ತು ದಕ್ಶಿಣ ಭಾರತದ ಹಲವು ಪ್ರದೇಶಗಳಲ್ಲೂ ಕಾರ್ತಿಕೇಯನನ್ನು ಮುರುಗಎಂದೂ ಕರೆಯುತ್ತಾರೆ.

ಪ್ರ: ಗುರೂಜಿ, ಭಗವಾನ್ ವಿಷ್ಣುವಿನ ಪರಶುರಾಮ ಅವತಾರದ ಬಗ್ಗೆ ಗೊಂದಲವಿದೆ. ಭಗವಾನ್ ರಾಮನು ಪರಶುರಾಮನಿದ್ದ ಸಮಯದಲ್ಲೇ ಜನಿಸುವುದು ಹೇಗೆ ಸಾಧ್ಯವಾಯಿತು, ಯಾಕೆಂದರೆ ಇಬ್ಬರೂ ಭಗವಾನ್ ನಾರಾಯಣನ ಅವತಾರಗಳೆಂದು ಪರಿಗಣಿಸಲ್ಪಡುತ್ತಾರೆ?
ಶ್ರೀ ಶ್ರೀ: ನಾವು ಮೊದಲುಅವತಾರ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅವತಾರವು ಒಂದು ನಿರ್ದಿಷ್ಟ ಸಮಯದಲ್ಲಿ ಒಂದೇ ಸ್ಥಳದಲ್ಲಿ ಇದ್ದು ಇನ್ನೊಂದು ಸ್ಥಳದಲ್ಲಿ ಇರುವುದಿಲ್ಲ ಎಂದಿಲ್ಲ. ಅವತಾರವು ಕೇವಲ ದೈವತ್ವದ ಅಂಶವನ್ನು ಸೂಚಿಸುತ್ತದೆ.ಮತ್ತು ದೈವತ್ವವನ್ನು ನೀವು ಎಲ್ಲಿ ತಾನೆ ಪಡೆಯುವುದಿಲ್ಲ?
ದೈವತ್ವದ ಒಂದು ಅಂಶವು ಎಲ್ಲೆಡೆಯೂ ಮತ್ತು ಎಲ್ಲದರಲ್ಲಿಯೂ ವಾಸವಾಗಿದೆ. ದೈವತ್ವದ ಮೂಲಾಂಶವು ಎಲ್ಲಾದರೂ ಸಂಪೂರ್ಣವಾಗಿ ಒಬ್ಬ ಅದನ್ನು ವೀಕ್ಷಿಸಲಾಗುವಂತೆ ಪ್ರಕಟವಾಗುವುದೋ, ಅದು ಅವತಾರ. ಅಷ್ಟೇ. ಅದು  ಆಕಾಶದಿಂದ ಎಲ್ಲೋ ಒಮ್ಮೆಲೇ ಗೋಚರವಾಗುವುದು ಎಂದಲ್ಲ. ಭಗವಂತನು ಸರ್ವವ್ಯಾಪಿ ಮತ್ತು ಅವನು ಎಲ್ಲದರಲ್ಲೂ ಇರುವನು.

ನೋಡಿ ಒಂದು ಮನೆಗೆ ನಾಲ್ಕು ಕಿಟಕಿಗಳಿರಬಹುದು, ಅಲ್ಲವೇ?ಮತ್ತು ನಾಲ್ಕೂ ಕಿಟಕಿಗಳಿಂದ ಒಬ್ಬನು ಸೂರ್ಯನನ್ನು ಪೂರ್ತಿಯಾಗಿ ನೋಡಬಹುದು, ಅಲ್ಲವೇ?
ನೀವು ಒಂದು ಜೀವಾತ್ಮದ(ಸ್ಥೂಲ ಶರೀರ ಉಳ್ಳ ಒಂದು ಜೀವಿ) ಬಗ್ಗೆ ನನ್ನನ್ನು ಕೇಳಿದರೆ; ಜೀವಾತ್ಮವು ಒಂದು ಸ್ಥಳದಲ್ಲಿ ಹುಟ್ಟಿ ಮತ್ತೊಂದು ಸ್ಥಳದಲ್ಲೂ ಒಂದೇ ಸಮಯದಲ್ಲಿ ಹುಟ್ಟುವುದು ಹೇಗೆ ಸಾಧ್ಯ? ಪ್ರಶ್ನೆ ನೀವು ಕೇಳಬಹುದು. ಆದರೆ ಇದು ಪರಮಾತ್ಮನಿಗೆ ಸತ್ಯ ಸಂಗತವಾಗುವುದಿಲ್ಲ. ಸರ್ವವ್ಯಾಪಿಯಾಗಿರುವ ದೈವತ್ವವು(ಪರಮಾತ್ಮ) ಎಲ್ಲಾದರೂ ರೂಪತಾಳಿ ಪ್ರಕಟವಾಗಬಹುದು.
ಭಗವಂತನನ್ನು ಪರಶುರಾಮನ ರೂಪದಲ್ಲಿ ಕಾಣಲು ಸಾಧ್ಯವಾಗುವುದು ಬಹಳ ಮೋಹಕ. ನೀವು ಪರಶುರಾಮನ ಜೀವನ ಕಥೆಯನ್ನು ವೀಕ್ಷಿಸಿದರೆಅವರು ಭಗವಂತನ ಅವತಾರವೆಂದು ನಿಮಗನ್ನಿಸುವಂತೆ ಮಾಡುವ ಅವರ ಯಾವುದೇ ಕೃತ್ಯವೂ ಇಲ್ಲ.
ಮೊದಲು ಅವರು ತನ್ನ ಸ್ವಂತ ತಾಯಿಯ ಶಿರಚ್ಛೇದನ ಮಾಡಿದರು.
ಯಾವುದೇ ಮಗುವಿಗೆ ತನ್ನದೇ ತಾಯಿಯ ಶಿರಚ್ಛೇದನ ಮಾಡುವುದು ಸುಲಭವೇ?ಇಲ್ಲ, ಅದು ಬಹಳ ಕಷ್ಟ. ವಾಸ್ತವದಲ್ಲಿ ಅದು ಅಸಾಧ್ಯ. ಮತ್ತೆ ನಂತರ ಅವರು ಎಲ್ಲಾ ಕ್ಷತ್ರಿಯರನ್ನು ಪರಾಜಯಿಸುತ್ತಾ ಹೋದರು.
ನನ್ನ ಪ್ರಕಾರ, ಇದು ಒಂದು ಮೂರ್ಖತನದ ಕೆಲಸ.ನಾವು ಇದಕ್ಕಿಂತ ಎಷ್ಟೋ ವಿಕಾಸವಾಗಿದ್ದೇವೆ.ಹಾಗಾದರೆ ಇದರ ಹಿಂದಿನ ಅರ್ಥವೇನು?ಇದರ ಅರ್ಥ, ಇಂಥಃ ಕ್ರೂರ ಕೃತ್ಯಗಳನ್ನೂ ಎಸಗಬಲ್ಲ ಒಂದು ಸ್ವಾರಸ್ಯಕರ ಪರಮ ಶಕ್ತಿ ಇದೆ.
ಪರಶುರಾಮನು ಮಾಡಿದ ಕೃತ್ಯಗಳು ಅಮಾನುಷ ಮತ್ತು ಸಮಾನ್ಯತೆಯನ್ನು ವರ್ಜಿಸಿದ್ದವು.ಸಾಮಾನ್ಯ ಮನುಷ್ಯನಿಗೆ ಅಂಥ ಕೃತ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಕೇವಲ ಭಗವಂತನು ತಾನಷ್ಟೇ ಅಂಥ ಕೃತ್ಯಗಳನ್ನು ಎಸಗಬಹುದು.ಹಾಗಾಗಿ ಪರಶುರಾಮ ಪರಮಾತ್ಮನದ್ದೇ ಒಂದು ಅವತಾರವಾಗಿರಬೇಕು.’ ಇದು ತಾತ್ಪರ್ಯವಾಗಿತ್ತು.ಪರಶುರಾಮನ ಅವತಾರವನ್ನು ಬೆಳಕಿನಲ್ಲಿ, ಅರ್ಥದಲ್ಲಿ ನೋಡಲಾಗುತ್ತದೆ.

ಪರಶುರಾಮನಿಂದ ಮಾಡಲ್ಪಟ್ಟ ಕೃತ್ಯಗಳು ಅಮಾನುಷ ಮತ್ತು ಒಬ್ಬ ಸಾಮಾನ್ಯ ಮನುಷ್ಯನಿಂದ ಮಾಡಲು ಯೋಗ್ಯವಾದುದಲ್ಲ. ಮತ್ತು ಯಾರೂ ಪರಶುರಾಮನ ಮಾರ್ಗವನ್ನು ಅನುಸರಿಸಲು ಬೋಧಿಸುವುದಿಲ್ಲ. ಅವರ ಕೃತ್ಯಗಳು ಅನುಕರಣೆಗೆ ಅಯೋಗ್ಯವಾದವು, ಆದರೂ ಅವು ಗೌರವಕ್ಕೆ ಅರ್ಹ. ಯಾಕೆ? ಮದಲನೆಯದಾಗಿ, ಅವರು ಯಾವುದೇ ಕಾರ್ಯ ಮಾಡಿದ್ದರೂ, ಅವನ್ನು ಕರ್ತೃತ್ವದ ಒಂದು ಭಾವನೆಯಿಲ್ಲದೇ ಮಾಡಿದರು, ಒಬ್ಬ ಸಾಕ್ಷಿಯಾಗಿ(ಸಾಕ್ಶೀ ಭಾವದಿಂದ) ಮಾಡಿದರು.
ಎರಡನೆಯದಾಗಿ, ನೀವು ಪರಶುರಾಮನಲ್ಲೂ ದೇವರನ್ನು ನೋಡಲು ಶಕ್ತರಾದರೆ, ಮತ್ತೆ ನೀವು ಕೇವಲ ದೇವರನ್ನೇ ಎಲ್ಲೆಡೆಯೂ ಕಾಣುತ್ತೀರಿ.ಪ್ರತಿ ಮಗುವಿನಲ್ಲಿ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ನೀವು ಅವತಾರವನ್ನು ನೋಡುತ್ತೀರಿ.
ಇದರಿಂದಾಗಿ ಪರಶುರಾಮ ಅವತಾರವೆಂದು ಪರಿಗಣಿಸಲಾಗುತ್ತಾರೆ.

ನಿಮಗೆ ಒಂದು ಮೀನಿನಲ್ಲಿ ದೇವರನ್ನು ನೋಡಲು ಸಾಧ್ಯವಾದರೆ(ಮತ್ಸ್ಯಾವತಾರ), ಒಂದು ಕಾಡು ಹಂದಿಯಲ್ಲಿ(ವರಾಹಅವತಾರ), ಒಂದು ಆಮೆಯಲ್ಲಿ(ಕೂರ್ಮ ಅವತಾರ), ಒಂದು ಸಿಂಹದಲ್ಲಿ(ನರಸಿಂಹ ಅವತಾರ), ಒಂದು ಹಂಸದಲ್ಲಿ, ಒಂದು ಕಾಗೆಯಲ್ಲಿ ಮತ್ತು ಹಾಗೆಯೇ ನಿಮ್ಮ ಸುತ್ತಲಿನ ಎಲ್ಲದರಲ್ಲೂ , ಸಾವಿರಾರು ಕ್ಷತ್ರಿಯ ಯೋಧರನ್ನು ಕೊಂದ ಪರಶುರಾಮನಂಥ ಕಲ್ಲು ಹೃದಯದ ಮನುಷ್ಯನಲ್ಲೂ ನಿಮಗೆ ದೇವರನ್ನು ಕಾಣುವುದು ಸಾಧ್ಯವಾದರೆ, ಮತ್ತೆ ಕೆಲಸ ಪೂರ್ಣಗೊಂಡಿತುಆಗ ನೀವು ಎಲ್ಲಾ ಸೃಷ್ಟಿಯಲ್ಲೂ, ನಿಮ್ಮ ಸುತ್ತಲೆಲ್ಲಾ ದೈವತ್ವವನ್ನು ಕಾಣಬಲ್ಲಿರಿ.ಅದರ ನಂತರ, ಜಗತ್ತಿನಲ್ಲಿ ದೈವತ್ವವಿರುವುದನ್ನು ಕಾಣಲಾಗದಂಥ ಯಾವುದೇ ವಸ್ತು ಇರುವುದಿಲ್ಲ.
ಜ್ಞಾನವನ್ನು ಅರ್ಥಮಾಡಿಕೊಳ್ಳಲು, ಪರಶುರಾಮನನ್ನು ದೇವರ ಅವತಾರವೆಂದು ಪರಿಗಣಿಸಲಾಗಿತ್ತು.ನಿಮಗಿದು ಅರ್ಥವಾಗಿದೆಯೇ?
ಹಾಗಾಗಿ ದೇವರು ಒಂದು ಧರ್ಮಕ್ಕೆ, ದೇಶಕ್ಕೆ ಅಥವಾ ಕಾಲಕ್ಕೆ ಸೀಮಿತವೆಂದು ಯೋಚಿಸಬೇಡಿ.ಭಗವಂತ ಸರ್ವವ್ಯಾಪಿ ಮತ್ತು ಸೃಷ್ಟಿಯ ಪ್ರತಿ ಕಣದಲ್ಲೂ ವಾಸವಾಗಿದ್ದಾನೆ.

ಭಗವಾನ್ ರಾಮ ಒಂದು ಅವತಾರವಾಗಿ ಮರ್ಯಾದಾಪುರುಷೋತ್ತಮನೆಂದು ಕರೆಯಲ್ಪಡುತ್ತಾರೆ(ನರರಲ್ಲಿ ಸರ್ವೋತ್ತಮ ಮತ್ತು ಧರ್ಮದ ಸಿದ್ಧಾಂತಗಳನ್ನು ಎತ್ತಿಹಿಡಿಯುವವನು), ಆದರೂ ಅವರು ವಿನಯದಿಂದ  ಬಾಗಿ ಸಾಧುಗಳ ಪಾದಸ್ಪರ್ಷ ಮಾಡುತ್ತಿದ್ದರು. ಅವರು ಪ್ರತಿಯೊಬ್ಬರನ್ನೂ ಉತ್ತಮ ಗೌರವ ಹಾಗೂ ಮನ್ನಣೆಯೊಂದಿಗೆ ನಡೆದುಕೊಳ್ಳುತ್ತಿದ್ದರು.ಅವರು ಅಗಸ್ತ್ಯ ಮಹರ್ಷಿಗಳ ಪಾದಗಳ ಬಳಿ ಕುಳಿತು ಅವರಿಂದ ಜ್ಞಾನವನ್ನು ಪಡೆದರು.
ಅವರ ಗುರುತ್ವ(ಮಹಾತ್ಮ್ಯೆ/ಔನ್ನತ್ಯಎಂಥದ್ದೆಂದರೆ, ತನ್ನ ತಮ್ಮ ಲಕ್ಷ್ಮಣನಿಗೆ ಅವರು ರಣರಂಗದಲ್ಲಿ ಸಾಯುತ್ತ ಮಲಗಿರುವ ರಾವಣನ ಪಾದಗಳನ್ನೂ ಸ್ಪರ್ಷಿಸಲು ಹೇಳಿದರು. ಹೀಗೆ ಅವರು ತನ್ನ ತಮ್ಮನನ್ನು ರಾವಣನ ಶಿಷ್ಯನಾಗಲು ಮತ್ತು ಅವನ ಕೊನೆಯ ಕ್ಷಣಗಳಲ್ಲಿ ಅವನಿಂದ ಜ್ಞಾನವನ್ನು ಪಡೆಯಲು ಕಳುಹಿಸಿದರು.
ಭಗವಾನ್ ರಾಮ ಹೇಳಿದರು, ’ನಾನು ರಾವಣನ ಬಳಿ ಹೋದರೆ, ಅವನು ತನ್ನ ದೇಹವನ್ನು ಬಿಟ್ಟು ಅವನ ಆತ್ಮವು ನನ್ನೊಳಗೆ ಲೀನವಾಗುತ್ತದೆ.ಹಾಗಾಗಿ ಅದಾಗುವ ಮೊದಲು, ಹೋಗಿ ಅವನಿಂದ ಏನು ಕಲಿಯಲು ಸಾಧ್ಯವೋ ಎಲ್ಲವನ್ನೂ ಕಲಿ.ಅದರ ನಂತರ ನಾನು ಅವನಿಗೆ ದರ್ಶನ ನೀಡುತ್ತೇನೆ ಮತ್ತು ಅವನ ಆತ್ಮ ನನ್ನೊಳಗೆ ಲೀನವಾಗುತ್ತದೆ.’

ಭಗವಾನ್ ರಾಮನು ಭಗವಾನ್ ಶಿವನನ್ನು ಪೂಜಿಸುತ್ತಿದ್ದರು. ಭಗವಾನ್ ಕೃಷ್ಣನೂ ಭಗವಾನ್ ಶಿವನನ್ನು ಪೂಜಿಸುತ್ತಿದ್ದರು, ಮತ್ತು ಭಗವಾನ್ ಕೃಷ್ಣನು ದೇವಿಯ(ಭಗವತೀ ಮಾತೆ) ಪರಮ ಭಕ್ತರೂ ಆಗಿದ್ದರು. ಅವರು ಯಾವಾಗಲೂ ಭಗವತೀ ಮಾತೆಯನ್ನು ಪೂಜಿಸುತ್ತಿದ್ದರು.
ಇಲ್ಲಿ ದೇವಿ ಎಂದರೆ ಎಲ್ಲರಲ್ಲೂ ಚೈತನ್ಯ ಸ್ವರೂಪದಲ್ಲಿ, ಜೀವ ಸ್ವರೂಪದಲ್ಲಿ, ಹಸಿವಿನ ರೂಪದಲ್ಲಿ, ಬುದ್ಧಿ, ಯಶಸ್ಸು, ಶಕ್ತಿ ಮತ್ತು ಬೇರೆ ಅನೇಕ ರೂಪಗಳಲ್ಲಿ ವಾಸವಾಗಿರುವ ದಿವ್ಯ ಶಕ್ತಿ.
ಇಂದು ಭಗವತೀ ಮಾತೆ ನಮ್ಮ ಮುಂದೆ ಅನ್ನಪೂರ್ಣೆಯಾಗಿ ಸ್ಥಿತವಾಗಿದ್ದಾಳೆ. ನಮ್ಮ ಮುಂದೆ ಎಷ್ಟೊಂದು ಆಹಾರವಿದೆ! (ಅನ್ನಕೂಟದ ಆಚರಣೆಗೆಂದು ಗುಜರಾತಿನ ಭಕ್ತರು ತಯಾರಿಸಿದ್ದ 451 ಆಹಾರ ಪದಾರ್ಥಗಳನ್ನು ಸೂಚಿಸಿದರು).