ಗುರುವಾರ, ನವೆಂಬರ್ 20, 2014

ಶಾಂತಿಯನ್ನು ನೆಲೆಗೊಳಿಸಲು ನಾವು ಒಂದಾಗೋಣ

೨೦/೧೧/೨೦೧೪
ರ್ಬಿಲ್, ಇರಾಕ್
ಸ್ವಲ್ಪ ಸಮಯ ತೆಗೆದುಕೊಂಡು, ಶಿಬಿರಗಳಲ್ಲಿರುವ ಜನರಿಗೆ ಭರವಸೆ ತುಂಬಲು ಹಾಗೂ ಅವರ ಮುಗುಳ್ನಗೆಯನ್ನು ಮರಳಿ ತರಲು ಶಿಬಿರಗಳಿಗೆ ಭೇಟಿ ನೀಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿನ್ನೆ ನಾನು ಕೆಲವು ಶಿಬಿರಗಳ ಮೂಲಕ ನಡೆದುಹೋದಾಗ ಜನರು, "ಇವತ್ತು ನಾವು ಸಂತೋಷಗೊಂಡಿದ್ದೇವೆ ಮತ್ತು ನಮಗೆ ಮುಗುಳ್ನಗಲು ಸಾಧ್ಯವಾಗುತ್ತಿದೆ" ಎಂದು ಹೇಳಿದರು. ಅದೊಂದು ಬಹಳ ಒಳ್ಳೆಯ ಭೇಟಿಯಾಗಿತ್ತು. 

ಎಲ್ಲಾ ದುಃಖಗಳ ಹೊರತಾಗಿಯೂ ಹಾಗೂ ವಿಪತ್ತಿನ ನಡುವೆಯೂ ಒಂದು ಮುಗುಳ್ನಗೆಯನ್ನು ತರುವುದು ನಮ್ಮಿಂದ ಸಾಧ್ಯವಾಗಬಲ್ಲ ಒಂದು ವಿಷಯವಾಗಿದೆ. ನಾವೆಲ್ಲರೂ ಗಮನ ಹರಿಸಬೇಕಾದಂಥ ಸಂಗತಿ ಇದು. ನಾವು ಗಮನ ಹರಿಸಬೇಕಾಗಿರುವ ಮುಂದಿನ ವಿಷಯವೆಂದರೆ, ತಡೆಯುವುದು. ಜನರು ಅಂತಹ ಪಡೆಗಳನ್ನು ಸೇರುವುದನ್ನು ನಾವು ಹೇಗೆ ತಡೆಗಟ್ಟಬಹುದು? ಈ ಪ್ರಪಂಚದ ಪ್ರತಿಯೊಂದು ಸರಕಾರದೊಂದಿಗೂ ನಾವು ಮಾತುಕತೆ ನಡೆಸಬೇಕಾಗುತ್ತದೆ ಹಾಗೂ ಅವರಲ್ಲಿ, ಶಾಂತಿಯನ್ನು ಕಟ್ಟುವ ಚಟುವಟಿಕೆಗಳು ಮತ್ತು ಶಾಂತಿ ಶಿಕ್ಷಣಗಳಿಗೆ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವಂತೆ ಹೇಳಬೇಕು. ರಕ್ಷಣೆಗಾಗಿ ವ್ಯಯಿಸುವುದರಲ್ಲಿ ಒಂದು ಸಣ್ಣ ಭಾಗವನ್ನಾದರೂ ಶಾಂತಿ ಶಿಕ್ಷಣಕ್ಕಾಗಿ ವ್ಯಯಿಸಿದಲ್ಲಿ, ಯುವಕರು ಇಂತಹ ಒಂದು ಅಮಾನವೀಯ ವರ್ತನೆಯಲ್ಲಿ ತೊಡಗುವುದಕ್ಕೆ ಅದು ಅನುವು ಮಾಡಿ ಕೊಡದು.

ಈ ಎಲ್ಲಾ ತಪ್ಪು ಮಾರ್ಗದರ್ಶನ ಹೊಂದಿದ ಯುವಕರು ನಮ್ಮ ಸಮಾಜದ ನಡುವಿವನರು, ಅವರು ನಮ್ಮ ಸ್ವಂತ ಸಹೋದರರು. ಅವರಿಗೆ ಯಾಕೆ ತಪ್ಪು ಮಾರ್ಗದರ್ಶನ ನೀಡಲಾಯಿತು? ಅದು ಯಾಕೆಂದರೆ, ಶಾಂತಿಯ ಬಗ್ಗೆ ಅವರು ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ. ರಕ್ತಪಾತ ಮತ್ತು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡು, ತಾನು ದೇವರ ಕೆಲಸ ಮಾಡುತ್ತಿದ್ದೇನೆಂದು ಯೋಚಿಸುತ್ತಾ ಯಾವುದೇ ಮಗುವು ಈ ಭೂಮಿಯ ಮೇಲೆ ಬೆಳೆಯದಿರುವುದಕ್ಕೋಸ್ಕರ, ನಮ್ಮೆಲ್ಲಾ ಪಠ್ಯಕ್ರಮದಲ್ಲಿ ಶಾಂತಿ ಶಿಕ್ಷಣವನ್ನು ಸೇರ್ಪಡೆ ಮಾಡುವುದು ಈಗ ಖಂಡಿತವಾಗಿಯೂ ಅಗತ್ಯವಾಗಿದೆ.

ಶಾಂತಿ ಶಿಕ್ಷಣ, ಒಂದು ಬಹು-ಸಾಂಸ್ಕೃತಿಕ, ಬಹು-ಧಾರ್ಮಿಕ ಶಿಕ್ಷಣ ಮತ್ತು ತನ್ನ ಭಾವನೆಗಳು ಹಾಗೂ ಮನಸ್ಸಿನ ಆಘಾತಗಳನ್ನು ನಿರ್ವಹಿಸುವ ಶಿಕ್ಷಣವನ್ನು ಪರಿಚಯಿಸುವ ನೇತೃತ್ವನ್ನು ದಯವಿಟ್ಟು ತೆಗೆದುಕೊಳ್ಳಬೇಕಾಗಿ ನಾನು ಇಲ್ಲಿರುವ ಎಲ್ಲಾ ಶೈಕ್ಷಣಿಕ ತಜ್ಞರಲ್ಲಿ ವಿನಂತಿಸುತ್ತಿದ್ದೇನೆ.

ಮಾಡಲ್ಪಟ್ಟಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಪ್ರದರ್ಶಿಸುವಂತೆ ಹಾಗೂ ಹಲವಾರು ದೇಶಗಳಲ್ಲಿ ಬೇರೆ ಬೇರೆ ಸಮುದಾಯಗಳ ಜನರಿಂದ ತೋರಲ್ಪಟ್ಟ ಸಹಾನುಭೂತಿಯನ್ನು ಎತ್ತಿ ತೋರಿಸುವ ಮೂಲಕ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೂಡಾ ಕೆಲಸ ಮಾಡಬೇಕೆಂದು ನಾನು ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.
ಒತ್ತಡದಲ್ಲಿರುವಾಗ, ಅದನ್ನು ತೊಡೆದುಹಾಕಲು ಮಾರ್ಗಗಳಿವೆ; ಯಾವತ್ತೂ ಅವರು ಮನಸ್ಸು ಮತ್ತು ಹೃದಯಗಳಲ್ಲಿ ಒತ್ತಡದೊಂದಿಗೆ ಜೀವಿಸಬೇಕಾಗಿಲ್ಲ ಎಂದು ಜನರಲ್ಲಿ ಹೇಳಬೇಕಾಗಿಯೂ ನಾನು ಮಾಧ್ಯಮಗಳ ಬಳಿ ಕೇಳಿಕೊಳ್ಳುತ್ತೇನೆ. ಅಹಿಂಸಾ ಮಾರ್ಗವನ್ನು ಅನುಸರಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕಾಗಿ ನಾನು ಮುಖ್ಯವಾಹಿನಿ ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.

ಪತ್ರಿಕೋದ್ಯಮದಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದನೆಯದೆಂದರೆ ವಾಸ್ತವವನ್ನು ಅದಿರುವಂತೆಯೇ ಜನರ ಮುಂದೆ ಬಿತ್ತರಿಸುವುದು. ಕೆಲವೊಮ್ಮೆ ಅದು ದುಃಖವನ್ನುಂಟು ಮಾಡುತ್ತದೆ. ಆದರೆ ಅದೇ ಸಮಯದಲ್ಲಿ, ಪ್ರತಿದಿನವೂ ಹಲವಾರು ಜನರು ಮಾಡುತ್ತಿರುವ ಒಳ್ಳೆಯ ಕೆಲಸಗಳೊಂದಿಗೆ ಅವರು ಅದನ್ನು ಸಮತೋಲನಗೊಳಿಸಬೇಕು.

ನೀವು ಶಿಬಿರಗಳಿಗೆ ಹೋದರೆ, ತಮ್ಮ ಶಿಕ್ಷಣ, ವೃತ್ತಿ ಮತ್ತು ಹಣ ಮಾಡುವುದರ ಕಡೆಗೆ ಗಮನ ನೀಡಿರಬಹುದಾದ, ತಮ್ಮ ಜೀವನದ ಉತ್ತುಂಗದಲ್ಲಿರುವ ಹಲವಾರು ಯುವಕರನ್ನು ನೀವು ನೋಡಬಹುದು. ಆದರೆ ಅದಕ್ಕೆ ಬದಲಾಗಿ, ಅವರು ಅದೆಲ್ಲವನ್ನೂ ತೊರೆದಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಜನರು ತಮ್ಮ ಜೀವನದಲ್ಲಿ ಏನಾದರೂ ಉತ್ತಮವಾದುದನ್ನು ಮಾಡುವುದಕ್ಕೆ ಸ್ಫೂರ್ತಿ ಪಡೆಯುವುದಕ್ಕೋಸ್ಕರ ಇಂತಹ ರೀತಿಯ ಸಮಾಚಾರಗಳನ್ನು ಎದ್ದು ತೋರಿಸಬೇಕು. ಖಿನ್ನತೆಯಲ್ಲಿ ಮುಳುಗುವುದರ ಬದಲಾಗಿ,  ಸಾಮಾಜಿಕ ಕಾರ್ಯಗಳನ್ನು ತೆಗೆದುಕೊಂಡು ಕಾರ್ಯಪ್ರವೃತ್ತರಾಗುವಂತೆ ಮಾಧ್ಯಮಗಳು ಜನರನ್ನು ಹುರಿದುಂಬಿಸಬಲ್ಲವು.

ಪ್ರಶ್ನೆ: ಪ್ರತಿಯೊಂದು ಧರ್ಮವೂ ಎರಡು ಅಂಶಗಳನ್ನು ಹೊಂದಿದೆ, ಒಂದು ಅಂಶವೆಂದರೆ ನಂಬಿಕೆಗಳು ಮತ್ತು ಇನ್ನೊಂದು ರೀತಿ-ರಿವಾಜುಗಳು. ಇದು ನಮಗೆ ತಿಳಿದಿದೆ. ಯಾವುದು ಜೋಡಿಸುವ ಮತ್ತು ಯಾವುದು ವಿಭಾಗಿಸುವ ಅಂಶ?

ಶ್ರೀ ಶ್ರೀ ರವಿ ಶಂಕರ್: ನಾನು ಹೇಳುವುದೇನೆಂದರೆ, ಧರ್ಮವು ಮೂರು ಅಂಶಗಳನ್ನು ಹೊಂದಿದೆ:

೧. ಮೌಲ್ಯಗಳು
೨. ಚಿಹ್ನೆಗಳು ಮತ್ತು
೩. ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು

ಎಲ್ಲಾ ಧರ್ಮಗಳ ನಡುವೆ ಮೌಲ್ಯಗಳು ಒಂದೇ ಆಗಿ ತೋರುತ್ತದೆ. ಉದಾಹರಣೆಗೆ, ಸಹೋದರತ್ವ, ದೇವರ ಏಕತ್ವ, ಪ್ರೇಮ ಮತ್ತು ಕರುಣೆ, ಬಡ ಮತ್ತು ಅಗತ್ಯವಿರುವವರ ಸೇವೆ. ಇದು ಧರ್ಮದ ಆಧ್ಯಾತ್ಮಿಕ ಅಂಶವಾಗಿದೆ.

ಎರಡನೆಯದೆಂದರೆ, ಚಿಹ್ನೆ. ಪ್ರತಿಯೊಂದು ಧರ್ಮವೂ ಚಿಹ್ನೆಗಳನ್ನು, ಪವಿತ್ರ ಸ್ಥಳಗಳನ್ನು ಮತ್ತು ಗ್ರಂಥಗಳನ್ನು ಹೊಂದಿದೆ.
ಮೂರನೆಯದೆಂದರೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು. ಹಲವಾರು ಬೇರೆ ಬೇರೆ ರಿವಾಜುಗಳಿರಬಲ್ಲವು.

ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆಂದರೆ, ಅವರು ಮೌಲ್ಯಗಳನ್ನು ಬಿಡುತ್ತಾರೆ ಮತ್ತು ರಿವಾಜುಗಳು ಹಾಗೂ ಚಿಹ್ನೆಗಳಿಗೆ ಕಟ್ಟುಬೀಳುತ್ತಾರೆ. ಇಲ್ಲಿಯೇ ಸಂಘರ್ಷ ಉಂಟಾಗುವುದು. ಅದಕ್ಕಾಗಿಯೇ ನಾನು, "ಆಧ್ಯಾತ್ಮವು ಜನರನ್ನು ಒಂದುಗೂಡಿಸುತ್ತದೆ, ಆದರೆ ಧರ್ಮಗಳು ಜನರನ್ನು ವಿಭಜಿಸಬಲ್ಲವು" ಎಂದು ಹೇಳುವುದು.

ಪ್ರಪಂಚದ ಪ್ರಮುಖ ಧರ್ಮಗಳನ್ನು ನೀವು ನೋಡಿದರೆ, ಅಬ್ರಹಾಮಿಕ್ ಧರ್ಮಗಳು ಅದೇ ಮೂಲದಿಂದ ಬರುತ್ತವೆ ಎಂಬುದು ನಿಮಗೆ ಕಾಣಿಸುತ್ತದೆ. ಇದು, ಒಂದೇ ಕುಟುಂಬದ ಮೂವರು ಸಹೋದರರಂತೆ. ಆದರೆ, ಅಲ್ಲಿ ಬಹಳಷ್ಟು ಸಂಘರ್ಷಗಳಾಗಿವೆ.
ಶಿಂಟೋ, ಟಾವೋ, ಬೌದ್ಧ, ಹಿಂದೂ, ಸಿಖ್, ಜೈನ ಧರ್ಮಗಳಂತಹ ಇತರ ಧರ್ಮಗಳಲ್ಲಿ ಯಾವುದೇ ಸಂಘರ್ಷವಾಗಿಲ್ಲ.

ದೂರಪ್ರಾಚ್ಯದ ಆರು ಧರ್ಮಗಳು ಯಾವತ್ತೂ ಜೊತೆಯಾಗಿ ಅಸ್ತಿತ್ವದಲ್ಲಿದ್ದವು ಮತ್ತು ಅವರ ರೀತಿ-ರಿವಾಜುಗಳು ಸಂಪೂರ್ಣವಾಗಿ ಬೇರೆ ಬೇರೆ. ಹಿಂದೂ ಧರ್ಮದ ಒಳಗೆ ನೂರಾರು ಪಂಥಗಳಿವೆ, ಆದರೆ ಅವುಗಳೊಳಗೆ ಯಾವತ್ತೂ ಯಾವುದೇ ಸಂಘರ್ಷವಾಗಿಲ್ಲ. ಮೂಲಭೂತವಾದ ನಿಯಮವೆಂದರೆ ಪರಸ್ಪರರನ್ನು ಗೌರವಿಸುವುದು ಮತ್ತು ಆದರಿಸುವುದು. ಇಸ್ಲಾಂನಲ್ಲಿಯೂ ಅದೇ ರೀತಿಯಾಗಿತ್ತು. ಇಸ್ಲಾಂನಲ್ಲಿ ಐದು ಅಥವಾ ಇನ್ನೂ ಹೆಚ್ಚು ಬೇರೆ ಬೇರೆ ಪಂಥಗಳಿವೆ. ಅವರೆಲ್ಲರೂ ಶಾಂತಿಯುತವಾಗಿ ಜೊತೆಯಲ್ಲಿ ನೆಲೆಸಿದ್ದ ಕಾಲಘಟ್ಟಗಳು ಚರಿತ್ರೆಯಲ್ಲಿದ್ದವು. ಇರಾಕ್‌ನಲ್ಲಿ ಕೂಡಾ ಶಿಯಾ ಮತ್ತು ಸುನ್ನಿಗಳು ಜೊತೆಯಾಗಿ ನೆಲೆಸಿದ್ದರು.

ಕಲಹಗಳು ಉಂಟಾಗುವಾಗ, ಇತರ ಯಾವುದೇ ಗುರುತುಗಳಿಗಿಂತಲೂ, ಅದು ಒಂದು ಧರ್ಮದ ಹೆಸರಿಗೆ ಹೆಚ್ಚಾಗಿ ಅಂಟಿಕೊಳ್ಳುತ್ತದೆ ಮತ್ತು ತದನಂತರ ಇಡೀ ಸಮಸ್ಯೆಯು ಪ್ರಾರಂಭವಾಗುತ್ತದೆ. ಎಲ್ಲಾ ಧರ್ಮಗಳ ಜನರನ್ನು ಜೊತೆಗೂಡಿಸಬಲ್ಲ ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ಜಪಾನಿನಲ್ಲಿ ಸಂಭವಿಸಿದ ಒಂದು ಘಟನೆಯ ಬಗ್ಗೆ ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ. ಒಮ್ಮೆ ರಾಷ್ಟ್ರಾಧ್ಯಕ್ಷ ನಿಕ್ಸನ್ (ಅಮೆರಿಕಾದ) ಅವರು ಜಪಾನಿಗೆ ಹೋದರು ಮತ್ತು ಅವರು ಎಲ್ಲಾ ಧಾರ್ಮಿಕ ಮುಖಂಡರನ್ನು ಭೇಟಿಯಾಗಲು ಬಯಸಿದರು. ಅವರ ಒಂದು ಭಾಗದಲ್ಲಿ ಒಬ್ಬರು ಬೌದ್ಧ ಸನ್ಯಾಸಿಗಳು ಕುಳಿತಿದ್ದರು ಮತ್ತು ಇನ್ನೊಂದು ಭಾಗದಲ್ಲಿ ಒಬ್ಬರು ಶಿಂಟೋ ಸಂತರು ಕುಳಿತಿದ್ದರು.

ನಿಕ್ಸನ್ ಅವರು ಶಿಂಟೋ ಸಂತರಲ್ಲಿ, "ಜಪಾನಿನಲ್ಲಿ ಶಿಂಟೋ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅವರು ನಂತರ ಬೌದ್ಧ ಸನ್ಯಾಸಿಗಳ ಕಡೆಗೆ ತಿರುಗಿ ಅವರಲ್ಲಿ, "ಜಪಾನಿನಲ್ಲಿ ಬೌದ್ಧ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅದು ಹೇಗೆ ಸಾಧ್ಯವೆಂಬುದಾಗಿ ಅಧ್ಯಕ್ಷರಿಗೆ ಅರ್ಥವಾಗಲಿಲ್ಲ, ಆದರೆ ಅದು ಸಾಧ್ಯವಿದೆ. ಅದೇ ರೀತಿಯಲ್ಲಿ, ನೀವು ಭಾರತಕ್ಕೆ ಬಂದರೆ, ಜೈನರು ಮತ್ತು ಹಿಂದೂಗಳು ಸಂಪೂರ್ಣವಾಗಿ ವ್ಯತ್ಯಸ್ತವಾದ ನಂಬಿಕೆಗಳನ್ನು ಮತ್ತು ರೀತಿ-ರಿವಾಜುಗಳನ್ನು ಹೊಂದಿದ್ದಾರೆ, ಆದರೆ ಅವರು ಅಷ್ಟೊಂದು ಸಾಮರಸ್ಯದಿಂದ ಜೊತೆಯಲ್ಲಿ ವಾಸಿಸುತ್ತಾರೆ. ಅದೇ ರೀತಿಯಲ್ಲಿ, ಸಿಕ್ಖರು ಮತ್ತು ಹಿಂದೂಗಳು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪರಸ್ಪರರನ್ನು ಗೌರವಿಸುತ್ತಾರೆ, ಆದರೆ ಯಾವತ್ತೂ ಅಲ್ಲಿ ಯಾವುದೇ ಸಂಘರ್ಷವಾಗಿಲ್ಲ. "ನಾನು ಮಾತ್ರ ಸ್ವರ್ಗಕ್ಕೆ ಹೋಗುತ್ತೇನೆ" ಎಂದು ಅವರು ಯಾವತ್ತೂ ಹೇಳಲಿಲ್ಲ.

ದೂರಪ್ರಾಚ್ಯದಿಂದ ಮಧ್ಯಪ್ರಾಚ್ಯವು ಕಲಿಯಬಹುದಾದುದು ಇದನ್ನೇ. ಅವರು ಯಾಝಿದಿಗಳಿರಲಿ, ಕ್ರಿಶ್ಚಿಯನ್ನರಾಗಿರಲಿ, ಮುಸ್ಲಿಮರಾಗಿರಲಿ; ಶಿಯಾಗಳು ಅಥವಾ ಸುನ್ನಿಗಳು, ಅಹ್ಮೆದಿಯಾ ಅಥವಾ ಸೂಫಿಗಳಾಗಿರಲಿ, ಅವರೆಲ್ಲರೂ ಜೊತೆಯಲ್ಲಿರಲು ಸಾಧ್ಯವಿದೆ. ಮುಖ್ಯವಾದುದೇನೆಂದರೆ, ವಿವಿಧತೆಯನ್ನು ಗೌರವಿಸುವುದು.

ಪ್ರಶ್ನೆ: ಅಪಹೃತಗೊಂಡವರನ್ನು, ವಿಶೇಷವಾಗಿ ಸ್ತ್ರೀಯರು ಮತ್ತು ಮಕ್ಕಳನ್ನು ಕಾಪಾಡುವಂತೆ ನೀವು ಪ್ರಪಂಚದ, ವಿಶೇಷವಾಗಿ ಅರಬ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಧಾರ್ಮಿಕ ಮುಖಂಡರ ಮೇಲೆ ಒತ್ತಡ ಹೇರುವಿರಾ? ಅಮೇರಿಕಾದ ಸರಕಾರವು ನಮಗೆ ಆಹಾರವನ್ನು ಕಳುಹಿಸುವಂತೆ ನಾವು ವಿನಂತಿಸಿದಾಗ, ಅವರು ನಮಗೆ ನೀಡಿದ ಉತ್ತರವೆಂದರೆ, ಅಪಹೃತಗೊಂಡವರನ್ನು ಕಾಪಾಡುವಂತೆ ಇರಾಕ್ ಮತ್ತು ಇತರ ನೆರೆ ರಾಷ್ಟ್ರಗಳ ಸರಕಾರಗಳಿಗೆ ಅವರು ಬರೆಯಬೇಕಾಗಿ ಬಂತು ಎಂಬುದಾಗಿ. 

ಶ್ರೀ ಶ್ರೀ ರವಿ ಶಂಕರ್: ಇದು ಸರಕಾರಗಳ ನಡುವಿನದು. ಅವರದ್ದು ಹಲವಾರು ನಿಯಮಗಳಿವೆ. ಒಂದು ಸರಕಾರೇತರ ಸಂಸ್ಥೆ (ಎನ್.ಜಿ.ಒ.) ಆಗಿ, ನಾವೇನು ಮಾಡಬಲ್ಲೆವೋ ಅದನ್ನು ನಾವು ಮಾಡಬಲ್ಲೆವು. ಸರಕಾರದ ವಿದೇಶ ನೀತಿಗಳೊಳಕ್ಕೆ ಹಸ್ತಕ್ಷೇಪ ಮಾಡಲು ನಮಗೆ ಸಾಧ್ಯವಿಲ್ಲವೆಂದು ನನಗನಿಸುತ್ತದೆ. ಒಂದು ಸರಕಾರವು ಇನ್ನೊಂದರ ವಿರುದ್ಧ ನಿಲ್ಲುವಂತೆ ಮಾಡಲು ನಮಗೆ ಸಾಧ್ಯವಿಲ್ಲ; ಅದು ಸ್ನೇಹಪರತೆಯ ವಿರುದ್ಧವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಾನು ನಿಮಗೆ ಸಲಹೆ ನೀಡುವುದೇನೆಂದರೆ, ಬೇರೆ ಬೇರೆ ಸರಕಾರಗಳಿಗೆ ಪತ್ರ ಬರೆಯಿರಿ ಮತ್ತು ತುರ್ತು ಸಹಾಯ ಬೇಕಾಗಿರುವ ಸಮುದಾಯಗಳ ಮೇಲೆ ಹಾಗೂ ನಾವು ಆ ಸರಕಾರಗಳಿಂದ ನೇರವಾದ ಸಹಾಯವನ್ನು ಪಡೆಯಲು ಬಯಸುವೆವು ಎನ್ನುವುದರ ಮೇಲೆ ಅವರ ಗಮನ ತನ್ನಿರಿ.

ಪ್ರಶ್ನೆ: ಭಾರತದಲ್ಲಿ, ಒಂದು ಬಹಳ ಪ್ರಸಿದ್ಧವಾದ ನದಿಯಿದೆ. ಅದು ಕೀಟಾಣುಗಳಿಂದ ಕಲುಷಿತವಾಗಿದೆ ಮತ್ತು ಅಲ್ಲಿನ ಗುರುಗಳು ಹೇಳುವುದೇನೆಂದರೆ, ನೀವು ಹಿಂದೂ ಅಥವಾ ಬೌದ್ಧ ಧರ್ಮದಲ್ಲಿ ಆಸಕ್ತಿ ಹೊಂದಿರುವುದಾದರೆ, ಆಗ ಶಾಸ್ತ್ರಗಳ ಒಂದು ಭಾಗವಾಗಿ ನೀವು ಹೋಗಿ ಆ ಕೊಳಕು ನದಿಯಲ್ಲಿ ಸ್ನಾನ ಮಾಡಬೇಕೆಂದು. ಇದರ ಹಿಂದೆ ನಿಜಕ್ಕೂ ಏನಿದೆಯೆಂದು ನೀವು ನಮಗೆ ಹೇಳಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಒಂದಾನೊಂದು ಕಾಲದಲ್ಲಿ ಗಂಗಾ ನದಿಯು ಬಹಳ ಶುದ್ಧವಾದ ನೀರನ್ನು ಹೊಂದಿತ್ತು, ಮತ್ತು ಬಹಳ ಪವಿತ್ರವೆಂದು ಪರಿಗಣಿಸಲಾಗುವ ಆ ಇಡೀ ನದಿಯನ್ನು ಶುಚಿಗೊಳಿಸುವ ಕೆಲಸವನ್ನು ಇವತ್ತು ನಮ್ಮ ಪ್ರಧಾನ ಮಂತ್ರಿಯವರು ಕೈಗೆತ್ತಿಕೊಂಡಿದ್ದಾರೆ. ಭಾರತದಲ್ಲಿ ನಾವು ನದಿಗಳನ್ನು, ಮರಗಳನ್ನು ಮತ್ತು ಪ್ರಾಣಿಗಳನ್ನು ಗೌರವಿಸುತ್ತೇವೆ. ಸಂಪೂರ್ಣ ಸೃಷ್ಟಿಯನ್ನು ಗೌರವಿಸುವುದು ಪ್ರಕೃತಿಯ ಒಂದು ಭಾಗವಾಗಿದೆ. ನೀರಿನಲ್ಲಿ ಒಂದು ಮುಳುಗು ಹಾಕಿ ಏಳಬೇಕೆಂದು ಅಥವಾ ಯೋಗ ಮತ್ತು ಧ್ಯಾನ ಮಾಡಲು ಒಬ್ಬರಿಗೆ ಅದೊಂದು ಪೂರ್ವಾಪೇಕ್ಷಿತವಾದುದು ಎಂದು ಯಾವುದೇ ಗ್ರಂಥದಲ್ಲೂ ಎಲ್ಲೂ ಹೇಳಿಲ್ಲ. ಇವುಗಳೆಲ್ಲವೂ ರೀತಿ-ರಿವಾಜುಗಳು. ನಾನು ಹೇಳಿದಂತೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು ಬೇರೆ. ಕಾಲಾಂತರದಲ್ಲಿ ಜನರು ರೀತಿ-ರಿವಾಜುಗಳನ್ನು ಬೆಳೆಸಿಕೊಳ್ಳುತ್ತಾರೆ, ಆದರೆ ಮುಖ್ಯವಾದ ಸಂಗತಿಯೆಂದರೆ ಮೌಲ್ಯಗಳನ್ನು ಗೌರವಿಸುವುದು. ಮೌಲ್ಯಗಳು ಜ್ಞಾನವಾಗಿದೆ.

ಕವಿತೆಗಳಲ್ಲಿ ಎಂದಿನಿಂದಲೂ ಹೀಗೆಂದು ಹೇಳಲಾಗಿದೆ, "ಜ್ಞಾನವು ಒಂದು ನದಿಯಂತೆ. ಜ್ಞಾನವನ್ನು ನೀವು ಕ್ರೋಢೀಕರಿಸಿದರೆ ನೀವು ಸಂತೋಷವಾಗಿರುವಿರಿ, ನೀವು ಮುಕ್ತರಾಗುವಿರಿ", ಇದು ನಿಜವಾದ ಸಂದೇಶವಾಗಿದೆ. ಕಲುಷಿತವಾಗಿದೆಯೆಂದು ನೀನು ಹೇಳಿದ ಗಂಗಾ ನದಿಯ ಅರ್ಥ ಕೂಡಾ ಜ್ಞಾನವೆಂದು.

ಒಂದು ಉಪಮೆಯಾಗಿ ಹೀಗೆ ಹೇಳಲಾಗಿದೆ, "ನೀವು ಜ್ಞಾನದಲ್ಲಿ ಸ್ನಾನ ಮಾಡಿದರೆ, ಆಗ ನೀವು ಮುಕ್ತರಾಗುವಿರಿ (ಇಲ್ಲಿ ಮೋಕ್ಷ ಹೊಂದುವುದೆಂಬ ಅರ್ಥ)". ಆದರೆ ಜನರು ಅಕ್ಷರಶಃ ಅದನ್ನು,  ಅವರು ನದಿಯಲ್ಲಿ ಮಿಂದರೆ ಮಾತ್ರ ಅವರು ಮೋಕ್ಷ ಹೊಂದುತ್ತಾರೆ ಎಂಬುದಾಗಿ ತೆಗೆದುಕೊಳ್ಳುತ್ತಾರೆ. ಇದು ಪ್ರಾಸಂಗಿಕ ಅಥವಾ ಆಕಸ್ಮಿಕ, ಆದರೆ ಮೌಲ್ಯಗಳನ್ನು ಜೀವಿಸುವುದು ಸಾರವಾಗಿದೆ.

ಪ್ರಶ್ನೆ: ಯೋಗ ಎಂದರೇನು? ಶಾಂತಿಯನ್ನು ತರುವಲ್ಲಿ ಅದು ಹೇಗೆ ಸಹಾಯಕವಾಗಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಯೋಗವೆಂದರೆ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ತಂತ್ರವಾಗಿದೆ. ಯೋಗವು ನಿಮ್ಮನ್ನು ಒತ್ತಡ ಹಾಗೂ ಬಿಗಿತಗಳಿಂದ ಬಿಡುಗಡೆಗೊಳಿಸುತ್ತದೆ. ಬಲಹೀನತೆ, ಕೋಪ, ಮಾತ್ಸರ್ಯ ಮತ್ತು ಎಲ್ಲಾ ನಕಾರಾತ್ಮಕ ಭಾವನೆಗಳನ್ನುಂಟು ಮಾಡುವುದು ಒತ್ತಡವಾಗಿದೆ. ಉಸಿರಾಟದ ತಂತ್ರಗಳು, ಧ್ಯಾನ ಮತ್ತು ಕೆಲವು ಸರಳವಾದ ವ್ಯಾಯಾಮಗಳನ್ನುಪಯೋಗಿಸಿ ನೀವು ಒತ್ತಡವನ್ನು ನಿವಾರಿಸಿಕೊಂಡಾಗ, ಅದು ನಿಮ್ಮ ಶರೀರ ಹಾಗೂ ಮನಸ್ಸುಗಳಿಗೆ ಸಹಕಾರಿಯಾಗುತ್ತದೆ ಮತ್ತು ಒಳಗಿನಿಂದ ಆರೋಗ್ಯ ಹಾಗೂ ಸಂತೋಷದ ಒಂದು ಭಾವನೆಯನ್ನು ಸೃಷ್ಟಿಸುತ್ತದೆ. ನೀವು ಚೆನ್ನಾಗಿಯೂ ಸಂತೋಷವಾಗಿಯೂ ಇದ್ದರೆ ನೀವು ಹಿಂಸಾಚಾರಿಗಳಾಗಿರುವುದಿಲ್ಲ. ಒಬ್ಬರು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಹಿಂಸೆಯ ಹಿಂದೆ ಕೋಪ ಮತ್ತು ಹತಾಶೆಗಳಿವೆ ಎಂಬುದನ್ನು ತಿಳಿಯಿರಿ.

ಮಕ್ಕಳಾಗಿ ನಾವೆಲ್ಲರೂ ಯೋಗ ಮಾಡಿದ್ದೇವೆ. ಒಂದು ಮಗುವು ಹುಟ್ಟಿದಂದಿನಿಂದ ಅದಕ್ಕೆ ಮೂರು ವರ್ಷ ವಯಸ್ಸಾಗುವಲ್ಲಿಯವರೆಗೆ ನೀವು ಆ ಮಗುವನ್ನು ನೋಡಿದರೆ, ಅದು ಎಲ್ಲಾ ಯೋಗ ವ್ಯಾಯಾಮಗಳನ್ನು ಮಾಡಿರುತ್ತದೆ. ಒಂದು ಮಗುವು ಉಸಿರಾಡುವ ರೀತಿಯು, ಒಬ್ಬ ವಯಸ್ಕನು ಉಸಿರಾಡುವ ರೀತಿಗಿಂತ ಭಿನ್ನವಾಗಿದೆ. ಶರೀರ ಮತ್ತು ಭಾವನೆಗಳ ನಡುವಿನ ಕೊಂಡಿಯು ಉಸಿರಾಟವಾಗಿದೆ ಹಾಗೂ ಉಸಿರಾಟದ ಬಗ್ಗೆ ಗಮನ ಹರಿಸುವುದರ ಮೂಲಕ ನಿಮಗೆ ಭಾವನೆಗಳನ್ನು ಮೃದುವಾಗಿಸಲು ಹಾಗೂ ನಕಾರಾತ್ಮಕ ಭಾವನೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಗುರುವಾರ, ನವೆಂಬರ್ 13, 2014

ಸಾತ್ವಿಕ ಜಗತ್ತು

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ಸಂಪೂರ್ಣ ಜಗತ್ತು ತರಂಗಗಳಿಂದ ನಿರ್ಮಿಸಲ್ಪಟ್ಟಿದೆ, ಮತ್ತು ಈ ತರಂಗಗಳು ಸಾತ್ವಿಕವಾಗಿರುವಂತೆ ನಾವು ನೋಡಿಕೊಳ್ಳಬೇಕು.
ಒಬ್ಬ ವೈದ್ಯನು ಚೆನ್ನಾಗಿರುವಾಗ ಮತ್ತು ಎಲ್ಲರನ್ನೂ ಚೆನ್ನಾಗಿ ಶುಷ್ರೂಷಿಸುವಾಗ ಸಾಮಾನ್ಯವಾಗಿ ನಾವು ಆ ವೈದ್ಯನ ಕೈಗುಣ ಚೆನ್ನಾಗಿದೆಯೆಂದು ಹೇಳುತ್ತೇವೆ. ನೋಡಿ, ಎಲ್ಲಾ ವೈದ್ಯರು ಒಂದೇ ರೀತಿ, ಆದರೆ ಕೆಲವರು ತಮ್ಮ ರೋಗಿಗಳನ್ನು ಇತರರಿಗಿಂತ ಉತ್ತಮವಾಗಿ ಶುಶ್ರೂಷಿಸುತ್ತಾರೆ. ಅವರ ಕೈಗಳಲ್ಲಿ ಒಂದು ವಾಸಿಪಡಿಸುವ ಗುಣ ಇರುವಂತೆ ತೋರುತ್ತದೆ. ಯೋಚನೆಯ ಯಾವೆಲ್ಲಾ ಬೀಜಗಳನ್ನು ನಾವು ಪ್ರಜ್ಞೆಯೊಳಕ್ಕೆ ಬಿತ್ತುವೆವೋ, ನಮ್ಮ ಸುತ್ತಲಿರುವ ತರಂಗವು ಅದೇ ಆಗಿರುವುದು. ಅದಕ್ಕಾಗಿಯೇ ನಾವು ನಿಯಮಿತವಾಗಿ ಯೋಗ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಹೀಗಾಗಿ, ನಿಮಗೆಲ್ಲರಿಗೂ ನಿಮ್ಮ ಮನಸ್ಸು ಮತ್ತು ನಿಮ್ಮ ಜೀವದ ಗುಣಗಳನ್ನು ವರ್ಧಿಸಲು ಇದೊಂದು ಅದ್ಭುತ ಅವಕಾಶವಾಗಿದೆ.  

ಪ್ರತಿ ಶುಕ್ರವಾರದಂದು ಇಲ್ಲಿ ಆಶ್ರಮದಲ್ಲಿ ಲಕ್ಷ್ಮಿದೇವಿಯ ಗೌರವಾರ್ಥವಾಗಿ ನಾವೊಂದು ಸಣ್ಣ ಪೂಜೆಯನ್ನು ಮಾಡುತ್ತೇವೆ. ನಾಳೆ, ಪೂಜೆಯಲ್ಲಿ ಭಾಗವಹಿಸಲು ನಿಮ್ಮಲ್ಲಿ ಯಾರು ಇಚ್ಛಿಸುವಿರೋ ಅವರಿಗೆ ಹಾಗೆ ಮಾಡಲು ಸ್ವಾಗತವಿದೆ. ಮೊದಲಿಗೆ, ನಮ್ಮ ಹೊಲಗಳಲ್ಲಿ ಯಾವೆಲ್ಲಾ ಬೀಜಗಳನ್ನು ನಾವು ಬಿತ್ತುವೆವೋ ಅವುಗಳು ಬೆಳೆದು ಆಹಾರವನ್ನು ನೀಡಲಿಕ್ಕಾಗಿ ಹಾಗೂ ನಮ್ಮ ದೇಶದಲ್ಲಿ ಯಾರೂ ಹಸಿವಿನಿಂದ ಇರದೇ ಇರುವುದಕ್ಕಾಗಿ ನಮಗೆ ಕಾಲಕಾಲಕ್ಕೆ ಮಳೆಯನ್ನು ನೀಡಿ ಆಶೀರ್ವದಿಸಬೇಕೆಂದು ನಾವು ದೇವರನ್ನು ಪ್ರಾರ್ಥಿಸೋಣ.

ಪೂಜೆಯ ಬಳಿಕ ನಾವು ಇತರ ಸಭೆಗಳು ಮತ್ತು ಚಟುವಟಿಕೆಗಳನ್ನು ಮಾಡೋಣ. ಹೊಸತನ್ನೇನಾದರೂ ಪ್ರಾರಂಭಿಸುವ ಮೊದಲು ನಾವು ದೇವರನ್ನು ಪ್ರಾರ್ಥಿಸಬೇಕೆಂದು ಹೇಳಲಾಗಿದೆ. ಈ ಸಂಪ್ರದಾಯವು ಭಾರತದ ವಿಶೇಷತೆಯಾಗಿದೆ ಮತ್ತು ಅದು ಜಗತ್ತಿನ ಇತರ ಯಾವುದೇ ದೇಶದಲ್ಲೂ ಕಾಣಸಿಗುವುದಿಲ್ಲ. ನಾವು ಈ ಜಗತ್ತಿನಲ್ಲಿ ಜನ್ಮ ತಾಳಿದಾಗ, ನಮ್ಮೆಲ್ಲಾ ಆವಶ್ಯಕತೆಗಳಿಗಾಗಿ ನಾವು ನಮ್ಮ ಹೆತ್ತವರು ಮತ್ತು ಕುಟುಂಬದ ಮೇಲೆ ಬಹಳಷ್ಟು ಅವಲಂಬಿತರಾಗಿದ್ದೆವು ಎಂಬುದನ್ನು ನಾವು ಪ್ರಾರ್ಥಿಸುವಾಗ ನೆನಪಿಸಿಕೊಳ್ಳಬೇಕು. ನಮಗೆ ವಯಸ್ಸಾಗುವಾಗ, ಒಂದಲ್ಲ ಒಂದು ಕಾರಣಕ್ಕಾಗಿ ಮತ್ತೆ ನಾವು ನಮ್ಮ ಮಕ್ಕಳು ಮತ್ತು ಕುಟುಂಬದ ಮೇಲೆ ಅವಲಂಬಿತರಾಗುತ್ತೇವೆ. ಹೀಗೆ, ಬಾಲ್ಯದಲ್ಲಿ ಮತ್ತು ವೃದ್ಧಾಪ್ಯದಲ್ಲಿ ಎರಡು ಸಮಯದಲ್ಲೂ ನಾವು ಇತರರ ಮೇಲೆ ಅವಲಂಬನೆಯನ್ನು ಹೊಂದಿದ್ದೇವೆ. ನಮ್ಮ ಜೀವನದ ಈ ಎರಡು ಘಟ್ಟಗಳ ನಡುವೆಯೂ ನಾವು ಮಳೆ, ಸಮಾಜ, ಮೊದಲಾದ ಹಲವಾರು ವಿಷಯಗಳ ಮೇಲೆ ಅವಲಂಬಿತರಾಗಿದ್ದೇವೆ. ಹೀಗೆ ನಮ್ಮ ಜೀವನದುದ್ದಕ್ಕೂ ಯಾವುದಾದರ ಮೇಲಾದರೂ ಅಥವಾ ಯಾವುದಾದರೂ ವ್ಯಕ್ತಿಯ ಮೇಲಾದರೂ ನಾವು ಅವಲಂಬನೆಯ ಒಂದು ಭಾವವನ್ನು ಹೊಂದಿದ್ದೇವೆ. ಆದರೆ ಈ ಅವಲಂಬನೆಯು ನಿಜಕ್ಕೂ ನಮ್ಮೆಲ್ಲಾ ಅಗತ್ಯಗಳಿಗಾಗಿ ದೇವರ ಮೇಲಿರುವ ನಮ್ಮ ಅವಲಂಬನೆಯಾಗಿದೆ ಎಂಬುದನ್ನು ನಾವು ನೆನಪಿಸಿಕೊಂಡಾಗ, ಅವಲಂಬನೆಯ ಈ ಭಾವವು, ಬಲಹೀನತೆಯ ಒಂದು ಮೂಲಕ್ಕಿಂತ ಹೆಚ್ಚಿನ ಆಂತರಿಕ ಶಕ್ತಿಯ ಒಂದು ಮೂಲವಾಗುತ್ತದೆ. ಆಗ ಅಸಹಾಯಕತೆಯ ಕ್ಷಣಗಳಲ್ಲೂ ಕೂಡಾ ನಾವು ಶಕ್ತಿಯನ್ನು ಕಂಡುಕೊಳ್ಳಬಹುದು. ಇದು ದೇವರನ್ನು ಆರಾಧಿಸುವ ರಹಸ್ಯವಾಗಿದೆ.

ಹಿಂದಿಯಲ್ಲಿನ ಈ ಮಾತನ್ನು ನೀವು ಕೇಳಿರಬೇಕು, ’ನಿರ್ಬಲ್ ಕೆ ಬಲ್ ರಾಮ್’ (ನಿರ್ಬಲನ ಬಲವಾಗಿರುವನು ಭಗವಂತ). ಹೀಗಾಗಿ, ನೀವು ಬಲಹೀನರೆಂದು ಮೊದಲು ಒಪ್ಪಿಕೊಳ್ಳಿ ಮತ್ತು ನಂತರ, ನಿರ್ಬಲರ ಬಲವು ದೇವರೆಂಬುದನ್ನು ತಿಳಿಯಿರಿ. ನಿಮ್ಮಲ್ಲಿ ಈ ಬಲವಾದ ನಂಬಿಕೆಯಿರುವಾಗ, ನೀವು ಬಲಹೀನತೆ ಮತ್ತು ನಿಸ್ಸಹಾಯಕತೆಯನ್ನು ಅನುಭವಿಸುವುದು ಮುಂದುವರಿಯುವುದೇ? ಇಲ್ಲ, ಈ ಅರಿವು ಅಪಾರವಾದ ಶಕ್ತಿಯನ್ನು ತರುತ್ತದೆ ಹಾಗೂ ನಿಮ್ಮನ್ನು ಸ್ವಾವಲಂಬಿಯನ್ನಾಗಿಯೂ ಸ್ವತಂತ್ರರನ್ನಾಗಿಯೂ ಮಾಡುತ್ತದೆ. ನಮ್ಮ ರೈತರು ಸ್ವತಂತ್ರರಾಗಿಯೂ ಸ್ವಾವಲಂಬಿಗಳಾಗಿಯೂ ಆಗುವುದು ಬಹಳ ಅಗತ್ಯವಾಗಿದೆ.

ಹೇಳಿದ ಹಾಗೆ, ಇವತ್ತು ನಮ್ಮ ಆರ್ಟ್ ಆಫ್ ಲಿವಿಂಗ್ ಸ್ಥಾಪನೆ ವಾರ್ಷಿಕೋತ್ಸವವೂ ಆಗಿದೆ. ವಾಸ್ತವವಾಗಿ, ಈ ಜ್ಞಾನಕ್ಕೆ ನಿಜಕ್ಕೂ ಯಾವುದೇ ಆರಂಭವಿಲ್ಲ; ಅದು ಕಾಲಾತೀತವೂ, ಅನಾದಿಯೂ ಆಗಿದೆ. ಆದರೆ ಔಪಚಾರಿಕವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ವೇದ ವಿಜ್ಞಾನ ಮಹಾ ವಿದ್ಯಾಪೀಠವನ್ನು ನಾವು ಇವತ್ತು ಸ್ಥಾಪಿಸಿದೆವು, ಮತ್ತು ಸಂಸ್ಥೆಯು ನವೆಂಬರ್ ೧೩, ೧೯೮೧ರಂದು ನೋಂದಣಿಯಾಯಿತು. ಇವತ್ತು ಸೇವೆಯ ೩೩ ವರ್ಷಗಳನ್ನು ನಾವು ಪೂರ್ತಿಗೊಳಿಸಿದ್ದೇವೆ.
ಸಂಸ್ಥೆಯ ಮೊದಲ ಟ್ರಸ್ಟಿಗಳಲ್ಲಿ ಒಬ್ಬರು ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯ ಆಗಿದ್ದರು. ಇವತ್ತು ಅವರಿಗೆ ೧೦೦ ವರ್ಷಗಳು ತುಂಬಿವೆ. ಇವತ್ತು ಅವರ ೧೦೦ನೆಯ ಜನ್ಮದಿನವಾಗಿದೆ. ಅವರು ಭಾರತದ ಅತೀ ಹೆಚ್ಚು ಮೆಚ್ಚುಗೆ ಪಡೆದ ಕಾನೂನು ತಜ್ಞ ಹಾಗೂ ನ್ಯಾಯಲಯದ ನ್ಯಾಯಾಧೀಶರಾಗಿರುವರು. ಆ ದಿನಗಳಲ್ಲಿ ಅವರು ತಮ್ಮನ್ನು ತಾವು ಒಬ್ಬ ನಾಸ್ತಿಕರೆಂದು ಕರೆದುಕೊಳ್ಳುತ್ತಿದ್ದರು. ಆದರೆ ನಂತರ, ನನ್ನನ್ನು ಭೇಟಿಯಾದ ಬಳಿಕ, ನಾವು ಆಧ್ಯಾತ್ಮದ ಬಗ್ಗೆ ಹಲವಾರು ಚರ್ಚೆಗಳನ್ನು ಮಾಡುತ್ತಿದ್ದೆವು ಹಾಗೂ ನಿಧಾನವಾಗಿ ಅವರು ಕೂಡಾ ಆಸಕ್ತರಾದರು. ಆ ದಿನಗಳಲ್ಲಿ ನಾನು ನಡೆಸುತ್ತಿದ್ದ ಮಾರ್ಗದರ್ಶಿತ ಧ್ಯಾನಗಳಲ್ಲಿ ಅವರು ಉಪಸ್ಥಿತರಿರುತ್ತಿದ್ದರು, ಯಾಕೆಂದರೆ ಆ ಕಾಲದಲ್ಲಿ ಸುದರ್ಶನ ಕ್ರಿಯೆಯಿರಲಿಲ್ಲ, ಮತ್ತು ನಾನು ಧ್ಯಾನವನ್ನು ಮಾತ್ರ ಮಾಡಿಸುತ್ತಿದ್ದೆ. ಅವರು ನನ್ನೊಂದಿಗೆ ಬಹಳ ಸಮಯವನ್ನು ಕಳೆದರು. ನಂತರ, ಆಧ್ಯಾತ್ಮದಲ್ಲೇನೋ ನಿಜಕ್ಕೂ ಅದ್ಭುತವಾದುದೇನೋ ಇದೆ ಎಂದು ಅವರಿಗನ್ನಿಸಿತು, ಹಾಗೂ ಆ ನಂತರ ಅವರು ಒಬ್ಬ ಭಕ್ತರಾಗಿ ಮತ್ತು ಒಬ್ಬ ಆಸ್ತಿಕರಾಗಿ ತಮ್ಮ ಪಯಣವನ್ನು ಪ್ರಾರಂಭಿಸಿದರು. ಅವರೊಬ್ಬ ಬಹಳ ಉದಾತ್ತ ಹೃದಯದ ವ್ಯಕ್ತಿಯಾಗಿದ್ದರು.

ನಿಮಗೆ ಗೊತ್ತಾ, ಒಬ್ಬ ವ್ಯಕ್ತಿಯು ನಾಸ್ತಿಕನಾಗಿರಲಿ ಅಥವಾ ಒಬ್ಬ ಆಸ್ತಿಕನಾಗಿರಲಿ (ದೇವರ ಅಥವಾ ಆಧ್ಯಾತ್ಮದ), ಅವನು ದೃಢವಾಗಿರುವವರೆಗೆ ಮತ್ತು ತನ್ನ ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕನಾಗಿರುವಲ್ಲಿಯವರೆಗೆ, ಅವನು ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಮತ್ತು ಸಮಯ ಮುಂದೆ ಹೋದಂತೆ, ನಿಧಾನವಾಗಿ ಮತ್ತು ಖಂಡಿತವಾಗಿಯೂ ಅವರು ಆಧ್ಯಾತ್ಮದಲ್ಲಿ ಒಂದು ಆಸಕ್ತಿಯನ್ನು ಬೆಳೆಸಿಕೊಳ್ಳಲು ಶುರುಮಾಡುತ್ತಾರೆ ಮತ್ತು ಬಲವಾದ ನಂಬಿಕೆಯುಳ್ಳವರಾಗುತ್ತಾರೆ. ನಾವಿದನ್ನು ಹಲವಾರು ಸಾರಿ ಗಮನಿಸಿದ್ದೇವೆ. ಒಬ್ಬ ವ್ಯಕ್ತಿಯು ಕೆಲವೊಮ್ಮೆ, "ಓ, ನಾನೊಬ್ಬ ನಾಸಿಕ" ಎಂದು ಹೇಳಲೂಬಹುದು, ಆದರೆ ಅವರದನ್ನು ಒಂದು ಬಹಳವಾದ ಬಾಹ್ಯ ಮಟ್ಟದಿಂದ ಹೇಳುತ್ತಾರೆ. ಕೆಳಗೆ ಆಳದಲ್ಲಿ, ತಮ್ಮ ಸೀಮಿತವಾದ ತಿಳುವಳಿಕೆಯನ್ನು ಮೀರಿದುದು ನಿಜಕ್ಕೂ ಏನೋ ಇದೆಯೆಂಬುದು ಅವರಿಗೂ ತಿಳಿದಿರುತ್ತದೆ. ಹೀಗಾಗಿ, ಅಂತಹ ಜನರು ನಿಧಾನವಾಗಿ ಮತ್ತು ಖಂಡಿತವಾಗಿಯೂ ಆಧ್ಯಾತ್ಮದ ಬೆಲೆಯನ್ನು ಅರ್ಥಮಾಡಿಕೊಳ್ಳುತ್ತಾರೆ.

ವಾಸ್ತವವಾಗಿ, ಆ ಕಾಲದಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಮನಸ್ಸಿರಲಿಲ್ಲ. ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಸ್ಫೂರ್ತಿ ನೀಡಿದುದು ಮತ್ತು ಬೆಂಬಲಿಸಿದುದು ಈ ಕೆಲವು ಜನರಾಗಿದ್ದರು; ಪಿತಾಜಿ (ಗುರುದೇವರ ತಂದೆಯ ಒಂದು ಪ್ರೀತಿಪೂರ್ವಕವಾದ ಹೆಸರು), ನ್ಯಾಯಮೂರ್ತಿ ಕೃಷ್ಣಯ್ಯ, ನ್ಯಾಯಮೂರ್ತಿ ಭಗವತಿ, ಬೆಂಗಳೂರಿನ ಮೇಯರ್ ಆಗಿದ್ದ ಶ್ರೀ ಲಕ್ಷ್ಮಣ ರಾವ್ ಮತ್ತು ಆ ಸಮಯದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ನರಸಿಂಹ ರಾವ್. ಈ ಐದು ಮಂದಿ ನನ್ನಲ್ಲಿ, "ಇಲ್ಲ, ನೀವು ಈ ಸಂಸ್ಥೆಯನ್ನು ಪ್ರಾರಂಭಿಸಬೇಕು" ಎಂದು ಹೇಳಿದರು. ೩೩ ವರ್ಷಗಳ ಹಿಂದೆ ಅವರು ಔಪಚಾರಿಕವಾಗಿ ಸಂಸ್ಥೆಯನ್ನು ನೋಂದಣಿಗೊಳಿಸಿದ ದಿನ ಇವತ್ತಾಗಿದೆ.

ಹೀಗೆ, ಇವತ್ತು ನಮ್ಮ ಆಶ್ರಮವು ತನ್ನ ಅಸ್ತಿತ್ವದ ೩೩ ವರ್ಷಗಳನ್ನು ಪೂರೈಸಿದೆ. ಆ ದಿನಗಳಲ್ಲಿ ಆಶ್ರಮವು ಇವತ್ತು ಕಾಣಿಸುವಂತೆ ಇರಲಿಲ್ಲ. ಆ ಮೊದಲಿನ ದಿನಗಳಲ್ಲಿ ಕೋಣೆಗಳು ಹಾಗೂ ವಸತಿಗೃಹಗಳು ಹುಲ್ಲು ಮತ್ತು ಮಣ್ಣಿನಿಂದ ಮಾಡಲ್ಪಟ್ಟ ಗುಡಿಸಲುಗಳಾಗಿದ್ದವು. ಆ ದಿನಗಳಲ್ಲಿ, ಸಿಮೆಂಟಿನಿಂದ ಮಾಡಲ್ಪಟ್ಟ ಒಂದೇ ಒಂದು ಗಟ್ಟಿಮುಟ್ಟಾದ ಮನೆಯಿರಲಿಲ್ಲ; ಎಲ್ಲರೂ ಗುಡಿಸಲುಗಳನ್ನು ಕಟ್ಟುತ್ತಿದ್ದರು. ಆದರೆ ಇವತ್ತಿನ ಬದಲಾವಣೆಯನ್ನು ನೋಡಿ. ಇವತ್ತು ಎಲ್ಲರೂ ಸಿಮೆಂಟಿನಿಂದ ಮಾಡಿದ ಬಲವಾದ ಮನೆಗಳನ್ನು ಕಟ್ಟುತ್ತಾರೆ. ಆ ದಿನಗಳಲ್ಲಿ, ಮಳೆ ಬರುವಾಗ ಹುಲ್ಲಿನ ಛಾವಣಿಯಿಂದ ನೆಲಕ್ಕೆ ನೀರು ಹನಿಹನಿಯಾಗಿ ಸೋರುತ್ತಿತ್ತು. ನಾನು ಯಾವತ್ತೂ ಸರಳತೆಯನ್ನು ಇಷ್ಟಪಡುತ್ತಿದ್ದೆ. ಹೆಚ್ಚಾಗಿ ನಾನು, ಮನೆಗಳು ಮತ್ತು ಗುಡಿಸಲುಗಳನ್ನು ಹಳೆ ಕಾಲದಲ್ಲಿ ಹೇಗಿತ್ತೋ ಹಾಗೆ, ತೆಂಗಿನ ನಾರು ಹಾಗೂ ಒಣಹುಲ್ಲುಕಡ್ಡಿಗಳಿಂದ ಕಟ್ಟಬೇಕೆಂದು ಹೇಳುತ್ತಿದ್ದೆ. ಆ ಸಮಯದಲ್ಲಿ ನನ್ನೊಂದಿಗೆ ಕೇವಲ ಸುಮಾರು ೧೦೦-೨೦೦ ಜನರು ಮಾತ್ರ ಇದ್ದರು. ನಿಮ್ಮಲ್ಲಿ ಕೆಲವರು ಈಗಲೂ ಇಲ್ಲಿ ಇವತ್ತು ಕುಳಿತಿರುವಿರಿ. ನಾವು ಬಾವಿಯಿಂದ ನೀರು ಸೇದುತ್ತಿದ್ದೆವು ಮತ್ತು ಆಶ್ರಮವನ್ನು ಬೆಳಗಲಿಕ್ಕಾಗಿ ಒಂದು ಜನರೇಟರ್ ವಿದ್ಯುತ್ತನ್ನು ಪೂರೈಸುತ್ತಿತ್ತು. ವಿದ್ಯುಚ್ಛಕ್ತಿಯು ಒಂದು ದಿನಕ್ಕೆ ಒಂದರಿಂದ ಎರಡು ಗಂಟೆಗಳಷ್ಟು ಕಾಲ ಮಾತ್ರ ಪೂರೈಕೆಯಾಗುತ್ತಿತ್ತು. ಆ ದಿನಗಳಲ್ಲಿ ಬಹಳಷ್ಟು ಮಳೆ ಬರುತ್ತಿತ್ತು ಮತ್ತು ಎಷ್ಟೊಂದು ಗಾಳಿ ಬೀಸುತ್ತಿತ್ತೆಂದರೆ, ಬಲವಾದ ಗಾಳಿಯೊಂದಿಗೆ ಎಲ್ಲವೂ ಹಾರಿಹೋಗುತ್ತಿತ್ತು. ಆಗ ನಾವು, ಇರಲಿಕ್ಕಾಗಿ ಹೆಚ್ಚು ಗಟ್ಟಿಯಾದ ಜಾಗಗಳನ್ನು ಮಾಡಬೇಕೆಂದು ಯೋಚಿಸಿದೆವು. ವಿದೇಶಗಳಿಂದ ಕೂಡಾ ಹಲವಾರು ಜನರು ನನ್ನನ್ನು ಭೇಟಿಯಾಗಲು ಬರತೊಡಗಿದರು. ಅವರಲ್ಲೊಬ್ಬರು ನನ್ನಲ್ಲಿ, "ಗುರುದೇವ, ಹಲವಾರು ಭಕ್ತರು ಆಶ್ರಮಕ್ಕೆ ಈಗ ಹರಿದುಬರುತ್ತಿದ್ದಾರೆ. ಈ ಎಲ್ಲಾ ಜನರು ಉಳಿದುಕೊಳ್ಳುವುದಕ್ಕಾಗಿ ನೀವು ನಿಜಕ್ಕೂ ಒಂದು ದೊಡ್ಡ ಧ್ಯಾನ ಮಂದಿರವನ್ನು ಬೇಗನೇ ಕಟ್ಟಿಸಬೇಕಾಗುವುದು. ಅವರಿಗೆ ಹೆಚ್ಚು ಸಮಯ ಗುಡಿಸಲುಗಳಲ್ಲಿ ಮತ್ತು ಟೆಂಟುಗಳಲ್ಲಿ ಇರಲು ಸಾಧ್ಯವಾಗದು" ಎಂದು ಹೇಳಿದರು.

ನಾನು ಸಮ್ಮತಿಸಿದೆ ಮತ್ತು ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲು ಅವರಿಗೆ ಹೇಳಿದೆ. ಧ್ಯಾನ ಮಂದಿರದ ವಿನ್ಯಾಸವನ್ನು ನಾನೇ ಮಾಡಿದೆ ಹಾಗೂ ಅವರಿಗೆ ಸೂಚನೆಗಳನ್ನು ನೀಡಿದೆ. ಆ ಧ್ಯಾನ ಮಂದಿರವು ಈಗ, ಇವತ್ತು ನೀವು ಕುಳಿತಿರುವ ವಿಶಾಲಾಕ್ಷಿ ಮಂಟಪವಾಗಿದೆ.

ಸುಮಾರು ೧೦-೧೫ ವರ್ಷಗಳ ಬಳಿಕ ಹೆಚ್ಚು ಹೆಚ್ಚು ಗಟ್ಟಿಮುಟ್ಟಾದ ಮನೆಗಳು ನಿರ್ಮಾಣವಾಗತೊಡಗಿದವು. ನಾವು ನಮಗಾಗಿ ಗಟ್ಟಿಯಾದ ಮನೆಗಳನ್ನು ನಿರ್ಮಿಸುವುದಾದರೆ, ಆಗ ನಾವು ಹಳ್ಳಿಯ ಹಾಗೂ ಸುತ್ತುಮುತ್ತಲಿನ ಪ್ರದೇಶಗಳ ಜನರಿಗೂ, ಗಟ್ಟಿಯಾದ ಮನೆಗಳನ್ನು ಕಟ್ಟುವಲ್ಲಿ ಸಹಾಯ ಮಾಡಬೇಕೆಂದು ನಾನು ಹೇಳಿದೆ. ಇಲ್ಲಿ ವಾಸಿಸುವ ಎಲ್ಲರಿಗೂ ಕೂಡಾ ಒಂದು ಗಟ್ಟಿಯಾದ ಮನೆ ಸಿಗುವುದಾದರೆ ಮಾತ್ರ ಅಂತಹ ಕಟ್ಟಡ ನಿರ್ಮಾಣಕ್ಕೆ ನಾನು ಅನುಮತಿ ನೀಡುವೆನೆಂದು ಆ ಸಮಯದಲ್ಲಿ ನನ್ನೊಂದಿಗಿದ್ದ ಭಕ್ತರಲ್ಲಿ ನಾನು ಹೇಳಿದೆ. ಅವರೆಲ್ಲರೂ ಒಟ್ಟು ಸೇರಿ, ಆಶ್ರಮದ ಸಮೀಪ ಹಾಗೂ ಸುತ್ತಲೂ ಇರುವ ಎಲ್ಲರಿಗೂ ಕೂಡಾ ವಾಸಿಸಲಿಕ್ಕಾಗಿ ಗಟ್ಟಿಯಾದ ಮನೆಗಳು ಸಿಗುವಂತೆ ನೋಡಿಕೊಂಡರು. ಪ್ರತಿಯೊಂದು ಮನೆಯೂ ಒಂದು ಸರಿಯಾದ ಶೌಚಾಲಯವನ್ನು ಹೊಂದಿತ್ತು. ಆಶ್ರಮದ ಆವರಣದ ಹಿಂದೆ ವಾಸಿಸುವ ಜನರಿಗಾಗಿ ಒಂದು ಚಿಕ್ಕ ಉಪನಿವೇಶ(ಕೋಲೊನಿ)ವನ್ನು ಕೂಡಾ ನಾವು ಮಾಡಿಸಿದೆವು. ಮೊದಲು ಅವರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅದು, ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ನಿಜಕ್ಕೂ ಸಹಾಯಕವಾಯಿತು.

ಸಂತೃಪ್ತ ರೈತನೇ ರಾಷ್ಟ್ರದ ಸಮೃದ್ಧಿಯ ಸಂಕೇತ

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ವತ್ತು, ದೇಶದ ಎಲ್ಲೆಡೆಗಳಿಂದ ಹಲವಾರು ರೈತರು ಇಲ್ಲಿ ಬೆಂಗಳೂರು ಆಶ್ರಮದಲ್ಲಿ ಸೇರಿದ್ದಾರೆ. ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ!
ಒಂದು ದೇಶದ ರೈತರು ಸಂತೋಷವಾಗಿಯೂ ಸಮೃದ್ಧವಾಗಿಯೂ ಇದ್ದರೆ, ಆಗ ಖಂಡಿತವಾಗಿಯೂ ಆ ದೇಶದ ಜನರು ಕೂಡಾ ಸಂತೋಷವಾಗಿರುವರು. ಯಾವ ದೇಶದ ರೈತರು ಅಸಂತೋಷವಾಗಿರುವರೋ ಆ ದೇಶವು ಸಂತೋಷವಾಗಿಯೂ, ಆರೋಗ್ಯಕರವಾಗಿಯೂ ಇರಲಾರದು. ಹೀಗಾಗಿ ರೈತನು ಸಂತೋಷವಾಗಿಯೂ ತೃಪ್ತನಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಎರಡು ಮಾರ್ಗಗಳಿವೆ:

೧. ನಮ್ಮ ಅಂತರ್ಬಲವನ್ನು ಹೆಚ್ಚಿಸುವುದು ಮತ್ತು ನಮ್ಮ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವುದು. ನಮ್ಮ ದಾರಿಯಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸಹಿಸಲು ನಾವು ಸಮರ್ಥರಾಗುವಂತೆ ಇದು ಮಾಡುತ್ತದೆ.

೨. ಕಷ್ಟಗಳಾಗದಿರಲೆಂದು, ಏನನ್ನಾದರೂ ಮಾಡುವ ಮೊದಲು ನಾವು ಎಚ್ಚರಿಕೆಯಿಂದ ಯೋಜನೆ ಮತ್ತು ಉಪಾಯಗಳನ್ನು ಮಾಡಬೇಕು.

ನೋಡಿ, ಕೆಲವು ವಿಷಯಗಳು ನಮ್ಮ ಕೈಯಲ್ಲಿರುತ್ತವೆ ಮತ್ತು ಕೆಲವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಕೈಯಲ್ಲೇನಿದೆಯೋ ಅದನ್ನು ಉತ್ತಮಗೊಳಿಸಲು ನಾವು ಪ್ರಯತ್ನಿಸಬೇಕು. ನಮ್ಮ ನಿಯಂತ್ರಣವನ್ನು ಮೀರಿದುದನ್ನೆಲ್ಲಾ ನಾವು ಸುಮ್ಮನೇ ದೇವರಿಗೆ ಸಮರ್ಪಿಸಬೇಕು, ಎಲ್ಲವೂ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಬೇಕು ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು. ಆಗ ನಿಮ್ಮೆಲ್ಲಾ ಕೆಲಸಗಳು ಈಡೇರಲು ತೊಡಗುವುದನ್ನು ನೀವು ನೋಡುವಿರಿ.

(ಶ್ರೀ ಶ್ರೀಯವರು ರೈತರಲ್ಲಿ: ಈ ಮೂರು ದಿನಗಳ ಕಾರ್ಯಾಗಾರದಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸೋಣ. ಇದೆಲ್ಲದರಿಂದ ನಿಮಗೆಲ್ಲರಿಗೂ ಬಹಳವಾಗಿ ಲಾಭವಾಗುವುದೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ನಿಮಗೆ ಲಾಭವಾದಾಗ ಹಾಗೂ ನೀವು ಸಮೃದ್ಧರಾದಾಗ ಈ ದೇಶದಲ್ಲಿನ ಹಲವು ನೂರಾರು ಸಾವಿರಾರು ಜನರು ಕೂಡಾ ಲಾಭ ಪಡೆಯುವರು. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಮ್ಮ ದೇಶದಲ್ಲಿ ಹಲವಾರು ಜನರಿಗೆ, ಜೀವನೋಪಾಯಕ್ಕೆ ಹಾಗೂ ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿದೆ.)

ತಮ್ಮ ಊಟವನ್ನು ಪ್ರಾರಂಭಿಸುವ ಮೊದಲು ಒಂದು ಪ್ರಾರ್ಥನೆಯಾಗಿ ಒಂದು ಸಣ್ಣ ಮಂತ್ರವನ್ನು ಹೇಳಬೇಕೆಂದು ನಾನು ಹೋದಲ್ಲೆಲ್ಲಾ ಜನರಲ್ಲಿ ಯಾವಾಗಲೂ ಹೇಳುತ್ತಿರುತ್ತೇನೆ. ಅದು ’ಅನ್ನದಾತಾ ಸುಖೀ ಭವ’ ಎಂಬುದಾಗಿ. (ಈ ಊಟಕ್ಕೆ ಸಹಕರಿಸಿದವರೆಲ್ಲಾ ಸಂತೋಷವಾಗಿಯೂ ಸಮೃದ್ಧವಾಗಿಯೂ ಇರಲಿ).

ನಾವು ಚಿಕ್ಕ ಮಕ್ಕಳಾಗಿದ್ದಾಗ, ನಾವು ಊಟ ಪ್ರಾರಂಭಿಸುವುದಕ್ಕೆ ಮೊದಲು ಈ ಮಂತ್ರವನ್ನುಚ್ಛರಿಸುವಂತೆ ನನ್ನ ತಂದೆಯವರು ಯಾವತ್ತೂ ನಮಗೆ ಹೇಳುತ್ತಿದ್ದರು. ನಿಜ ಹೇಳಬೇಕೆಂದರೆ, ನಾವು ನಮ್ಮ ಊಟ ಮುಗಿಸಿದ ಬಳಿಕವೂ ಈ ಮಂತ್ರವನ್ನುಚ್ಛರಿಸುವಂತೆ ಅವರು ನಮ್ಮಲ್ಲಿ ಹೇಳುತ್ತಿದ್ದರು. ಅವರಿಂದ ಬೇರೆ ಯಾವುದೇ ಶ್ಲೋಕವನ್ನು ನಾನು ಯಾವತ್ತೂ ಕೇಳಲಿಲ್ಲ. ಅವರು ಯಾವತ್ತೂ ಈ ಮಂತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ನೀವು ಈ ಮಂತ್ರವನ್ನುಚ್ಛರಿಸುವಾಗ ನಿಜವಾಗಿ, ಆಹಾರವನ್ನು ಒದಗಿಸುವ ಮೂವರು ವ್ಯಕ್ತಿಗಳಿಗಾಗಿ ನೀವು ಪ್ರಾರ್ಥಿಸುತ್ತಿರುತ್ತೀರಿ. ಮೊದಲನೆಯ ವ್ಯಕ್ತಿಯೆಂದರೆ ಸ್ವಾಭಾವಿಕವಾಗಿ, ಆಹಾರ ಧಾನ್ಯಗಳನ್ನು ಬೆಳೆಸುವ ರೈತ. ಎರಡನೆಯ ವ್ಯಕ್ತಿಯೆಂದರೆ, ಈ ಆಹಾರ ಧಾನ್ಯಗಳನ್ನು ವ್ಯಾಪಾರ ಮಾಡಿ ನಮ್ಮ ಮನೆಗಳಿಗೆ ಅವುಗಳನ್ನು ತರುವ ವ್ಯಾಪಾರಿ. ವ್ಯಾಪಾರಿ ಯಾಕೆಂದು ನೀವು ಕೇಳಲೂಬಹುದು. ನೋಡಿ, ರೈತನು ಬೆಳೆಗಳನ್ನು ಬೆಳೆಯುತ್ತಾನೆ. ಆದರೆ ವ್ಯಾಪಾರಿಯು ಧಾನ್ಯಗಳನ್ನು ಮಾರುಕಟ್ಟೆಗಳಿಗೆ ತರದೇ ಇದ್ದರೆ, ಆಗ ರೈತ ಮತ್ತು ಜನರು, ಇಬ್ಬರೂ ಕಷ್ಟಕ್ಕೊಳಗಾಗುತ್ತಾರೆ.

ಆಹಾರ ಧಾನ್ಯಗಳನ್ನು ಶೇಖರಿಸಿಟ್ಟು ಅವುಗಳಿಗೆ ನ್ಯಾಯಯುತವಾದ ಬೆಲೆಯನ್ನು ನೀಡದೇ ಇರುವ ಅಥವಾ ಸಾಮಾನ್ಯ ಜನರಿಗೆ ಅವುಗಳನ್ನು ಬಹಳ ಅಧಿಕ ಬೆಲೆಗೆ ಮಾರುವ ಜನರು ಆಹಾರ ಧಾನ್ಯಗಳು ಹಾಳಾಗುವಂತೆ ಮಾಡುತ್ತಾರೆ. ನಿಮಗೆ ಗೊತ್ತಾ, ನಮ್ಮ ದೇಶದಲ್ಲಿ ಆಹಾರ ಧಾನ್ಯಗಳು ಹೇರಳವಾಗಿವೆ, ಆದರೆ ಆಹಾರ ಧಾನ್ಯಗಳ ಕಳಪೆ ವಿತರಣೆಯಿಂದಾಗಿ ಹಲವಾರು ಜನರು ಹಸಿವೆಯಿಂದಿರಬೇಕಾಗುತ್ತದೆ ಮತ್ತು ಅದೇ ವೇಳೆ ಆಹಾರ ಧಾನ್ಯಗಳು ಕೂಡಾ ಹಾಳಾಗುತ್ತವೆ (ಅಕ್ರಮಣ ಸಂಗ್ರಹಣೆಯಿಂದಾಗಿ).

ಟೊಮ್ಯಾಟೋಗಳ ಬೆಲೆಯು ಇದ್ದಕ್ಕಿದ್ದಂತೆ ಬಹಳ ಏರುವುದು ಮತ್ತು ಮುಂದಿನ ತಿಂಗಳುಗಳಲ್ಲಿ ಪುನಃ ಇದ್ದಕ್ಕಿದ್ದಂತೆ ಕೆಳಕ್ಕಿಳಿಯುವುದು ತಪ್ಪು ಚಟುವಟಿಕೆಗಳಿಂದಾಗಿ.  ನಿಮಗೆಲ್ಲರಿಗೂ ಇದರ ಅನುಭವವಾಗಿದೆಯೇ? ಈ ಅನುಭವವಾಗಿರುವವರೆಲ್ಲರೂ ನಿಮ್ಮ ಕೈಗಳನ್ನು ಮೇಲೆತ್ತಿ.

(ಸಭಿಕರಲ್ಲಿ ಅನೇಕರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ವ್ಯಾಪಾರಿಗಳು ಮತ್ತು ವರ್ತಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅಥವಾ ಅವರು ಅಸಂತುಷ್ಟರಾಗಿದ್ದರೆ, ನೀವೆಲ್ಲರೂ ಈ ನಷ್ಟದ ಹೊರೆಯನ್ನು ಹೊರಬೇಕಾಗುತ್ತದೆ.

ಅಸಂತೋಷವಾಗಿರುವವರು, ಅನಾರೋಗ್ಯದಿಂದಿರುವವರು ಅಥವಾ ಅತೃಪ್ತರಾಗಿರುವವರು ಮಾತ್ರ ಕೆಟ್ಟದ್ದನ್ನು ಮಾಡುತ್ತಾರೆ. ಅನಾರೋಗ್ಯವಾಗಿರುವ ಮತ್ತು ಅಸಂತೋಷವಾಗಿರುವವರೊಬ್ಬರು ಮಾತ್ರ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದಿಲ್ಲ ಹಾಗೂ ಮೋಸದ ಚಟುವಟಿಕೆಗಳನ್ನು ಮಾಡುತ್ತಾರೆ. ಒಳಗಿನಿಂದ ತೃಪ್ತನಾಗಿರುವ ಒಬ್ಬ ವ್ಯಕ್ತಿಯು ಬೇರೊಬ್ಬರಿಗೆ ತೊಂದರೆಯನ್ನು ಸೃಷ್ಟಿಸುವ ಬಗ್ಗೆ ಯಾವತ್ತೂ ಯೋಚಿಸಲಾರ.

ಹೀಗೆ ಒಬ್ಬ ವ್ಯಾಪಾರಿಯು ಸಂತುಷ್ಟನಾಗಿರುವಾಗ ಹಾಗೂ ನಿಯಮ, ನಿಬಂಧನೆಗಳನ್ನು ನ್ಯಾಯಯುತವಾಗಿ ಅನುಸರಿಸುವಾಗ, ರೈತರನ್ನು ಶೋಷಿಸಲು ಅಥವಾ ವಂಚಿಸಲು ಅವನು ಬಯಸಲಾರ. ಇವತ್ತು, ನಮ್ಮ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರಿ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ನಿಮಗೆ ಗೊತ್ತಾ, ಭಾರತದಲ್ಲಿ ನಾವು ಬೆಳೆಯುವ ಸಕ್ಕರೆಯ ಬೆಲೆ ಒಂದು ಕಿಲೋಕ್ಕೆ ೧೨ ರೂಪಾಯಿಗಳು. ಆದರೆ ನಾವು ವಿದೇಶಗಳಿಂದ ಸಕ್ಕರೆಯನ್ನು ಆಮದು ಮಾಡುತ್ತೇವೆ ಮತ್ತು ಅದಕ್ಕೆ ಒಂದು ಕಿಲೋಕ್ಕೆ ೩೦ ರೂಪಾಯಿಗಳನ್ನು ನೀಡುತ್ತೇವೆ. ನಮ್ಮ ಭಾರತೀಯ ಸಕ್ಕರೆಯು ಆಮದು ಮಾಡಿಕೊಳ್ಳಲಾದ ಸಕ್ಕರೆಗಿಂತ ಸಿಹಿಯಲ್ಲಿ ಕಡಿಮೆಯಿದೆಯೇ? ಇದೆಲ್ಲಾ ಯಾಕಾಗುತ್ತಿದೆ?

ಕೆಲವು ಭ್ರಷ್ಟ ರಾಜಕಾರಣಿಗಳು ಕೆಲವು ಉದ್ಯಮಿಗಳೊಂದಿಗೆ ಸೇರಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹೀಗೆ ವ್ಯಾಪಾರಿಗಳು ಅಸಂತುಷ್ಟರಾಗಿದ್ದರೆ, ಆಗ ಕೂಡಾ ರೈತ ಮತ್ತು ಇಡೀ ಜನರು ಅಸಂತುಷ್ಟರಾಗುವರು ಹಾಗೂ ಕಷ್ಟಪಡಬೇಕಾಗುತ್ತದೆ.

ವ್ಯಾಪಾರಿಗಳು ಅಸಂತುಷ್ಟರಾಗಿರುವಾಗ ಹೆಚ್ಚು ಲಾಭ ಗಳಿಸುವುದಕ್ಕಾಗಿ ಅವರು ಆಹಾರ ಧಾನ್ಯಗಳ ಹಾಗೂ ಸಕ್ಕರೆಯ ಕಲಬೆರಕೆಗೆ ಮೊರೆಹೋಗುತ್ತಾರೆ ಮತ್ತು ಅವುಗಳನ್ನು ಜನರಿಗೆ ಮಾರುತ್ತಾರೆ. ನೀವು ಒಂದು ಕಿಲೋ ಅಕ್ಕಿಯನ್ನು ಖರೀದಿಸಿದರೆ ಅದರ ಪ್ಯಾಕೆಟ್‌ನಲ್ಲಿ ಸುಮಾರು ೧೦೦-೨೦೦ ಗ್ರಾಂಗಳಷ್ಟು ಕಲ್ಮಶಗಳು ಮತ್ತು ತರಿಗಳು ಇರುವುದು ನಿಮಗೆ ಕಂಡುಬರುತ್ತದೆ. ಈ ದಿನಗಳಲ್ಲಿ, ಹಾಲು, ಗೋಧಿಹಿಟ್ಟು ಮತ್ತು ತುಪ್ಪಗಳಲ್ಲೂ ಕಲಬೆರಕೆ ಮಾಡಲಾಗುತ್ತದೆ. ಅಂತಹ ಕಲಬೆರಕೆಯಲ್ಲಿ ತೊಡಗಿರುವ ಒಬ್ಬ ವ್ಯಾಪಾರಿಯು ಖಂಡಿತವಾಗಿಯೂ ಹೃದಯದಿಂದ ಅಸಂತುಷ್ಟನಾಗಿರುವ ಹಾಗೂ ಅತೃಪ್ತನಾಗಿರುವ ಒಬ್ಬ ವ್ಯಾಪಾರಿಯಾಗಿರುತ್ತಾನೆ. ಇದಕ್ಕಾಗಿಯೇ, ಆಹಾರೋತ್ಪನ್ನಗಳಲ್ಲಿ ಅವರು ಕಲಬೆರಕೆ ಮಾಡದಿರಲು ಹಾಗೂ ರೈತರು ಮಾರುಕಟ್ಟೆಯಿಂದ ತಮ್ಮ ನ್ಯಾಯಸಮ್ಮತವಾದ ಲಾಭಗಳ ಭಾಗವನ್ನು ಪಡೆಯುವಂತೆ ಅವರು ನೋಡಿಕೊಳ್ಳುವುದಕ್ಕಾಗಿ, ನಾವು ಅವರ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು. ಒಬ್ಬ ವ್ಯಾಪಾರಿಯು ಲೋಭಿಯಾಗಬಾರದು ಮತ್ತು ಹೆಚ್ಚು ಹಣ ಗಳಿಸುವುದಕ್ಕಾಗಿ ಆಹಾರವನ್ನು ಅನ್ಯಾಯದ ಬೆಲೆಗೆ ಮಾರಾಟ ಮಾಡಬಾರದು. ತಾನು ಆಹಾರ ಧಾನ್ಯಗಳನ್ನು ರೈತರಿಂದ ಯಾವ ಬೆಲೆಗೆ ಖರೀದಿಸುವೆನೋ ಅದೇ ಬೆಲೆಗೆ ಮಾರಾಟ ಮಾಡುವುದಾಗಿ ಅವನು ಖಚಿತಪಡಿಸಿಕೊಳ್ಳಬೇಕು.

ಧರ್ಮಶಾಸ್ತ್ರಗಳಲ್ಲಿ ಬರೆಯಲ್ಪಟ್ಟ ಪ್ರಕಾರ, ಒಬ್ಬ ವ್ಯಾಪಾರಿಯು ಲಾಭದಲ್ಲಿ ೨೦% ವನ್ನು ತನಗಾಗಿ ಇಟ್ಟುಕೊಳ್ಳಬಹುದು, ಆದರೆ ಅದಕ್ಕಿಂತ ಹೆಚ್ಚಲ್ಲ. ಆದರೆ ಇವತ್ತು ಆಗುತ್ತಿರುವುದೇನೆಂದರೆ, ವ್ಯಾಪಾರಿಗಳು ಸ್ವಾರ್ಥಪರವಾಗಿ ಗಳಿಕೆಯ ೫೦% ಅಥವಾ ಹೆಚ್ಚನ್ನು ತಮಗಾಗಿ ತೆಗೆದಿರಿಸುತ್ತಾರೆ ಹಾಗೂ ರೈತರಿಗೆ ಬಹಳ ಕಡಿಮೆ ಬಿಡುತ್ತಾರೆ. ಇದು ಸರಿಯಲ್ಲ. ಬದಲಾಗಿ, ಕೆಲವು ಆಹಾರ ಧಾನ್ಯಗಳು ಅಥವಾ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಹೆಚ್ಚು ಮಾರಾಟವಾದರೆ ಆಗ ವ್ಯಾಪಾರಿಯು, ರೈತರು ಕೂಡಾ ಲಾಭಗಳಲ್ಲಿ ಸಮಭಾಗವನ್ನು ಪಡೆಯುವಂತೆ ನೋಡಿಕೊಳ್ಳಬೇಕು.

ಈ ಮಂತ್ರದ ಮೂಲಕ ನಾವು ಯಾರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆವೋ ಆ ಮೂರನೆಯ ವ್ಯಕ್ತಿಯೆಂದರೆ, ನಮಗಾಗಿ ಬಳಲದೆಯೇ ಅಡುಗೆ ಮಾಡುವ ಮನೆಯ ಮಹಿಳೆ. ಅವಳು ಅಸಂತುಷ್ಟಳಾದರೆ, ಆಗ ಮನೆಯೂ ಕೂಡಾ ಕಷ್ಟಪಡುತ್ತದೆ. ಮನೆಯ ಮಹಿಳೆಯು ಒಳಗಿನಿಂದ ತೃಪ್ತಳಾಗಿಲ್ಲದೆ ಮತ್ತು ಸಂತೋಷವಾಗಿಲ್ಲದೇ ಇದ್ದರೆ, ಆಗ ಅವಳು ಬೇಯಿಸಿದ ಆಹಾರವನ್ನು ಆನಂದಿಸಲು ಅಥವಾ ಜೀರ್ಣಿಸಲು ಯಾರಿಗೂ ಸಾಧ್ಯವಾಗದು. ಅಡುಗೆ ಮಾಡುವಾಗ ಅವಳು ದುಃಖದ ಕಣ್ಣೀರು ಹಾಕಿದರೆ, ಆಗ ಆ ಆಹಾರವನ್ನು ತಿನ್ನುವ ಗಂಡಸು ಕೂಡಾ ಕಣ್ಣೀರು ಹಾಕಬೇಕಾಗುತ್ತದೆ. ಆದುದರಿಂದ ಮನೆಯ ಮಹಿಳೆಯು ಸಂತೋಷವಾಗಿಯೂ ಆನಂದವಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಈ ಮಂತ್ರವನ್ನು ಒಂದು ಪ್ರಾರ್ಥನೆಯಾಗಿ ಉಚ್ಛರಿಸುವುದರ ಮೂಲಕ ಇದನ್ನೇ ನಾವು ಹೇಳುವುದು.

ನಿಜಕ್ಕೂ ನೀವಿದರ ಕಡೆಗೆ ನೋಡಿದರೆ, ನಿಜವಾದ ಅನ್ನದಾತನು ದೇವರಲ್ಲದೆ ಬೇರೆ ಯಾರೂ ಅಲ್ಲ, ಮತ್ತು ದೇವರು ಯಾವತ್ತೂ ಸಂತೋಷವಾಗಿಯೂ ತೃಪ್ತನಾಗಿಯೂ ಇರುತ್ತಾನೆ. ದೇವರು ಯಾವತ್ತಾದರೂ ಅಸಂತುಷ್ಟನಾಗುತ್ತಾನೆಯೇ? ಇಲ್ಲ! ಆದರೂ, ನಾವಿರುವ ಈ ಭೌತಿಕ ಜಗತ್ತಿನ ಮಟ್ಟದಲ್ಲಿ, ನಮಗೆ ಆಹಾರ ನೀಡಲು ನೆರವಾಗುವ ಈ ಮೂರು ವ್ಯಕ್ತಿಗಳ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ನಾವು, ಸರ್ವಶ್ರೇಷ್ಠ ಪೋಷಕನಾದ ದೇವರಲ್ಲಿ ಪ್ರಾರ್ಥಿಸುತ್ತೇವೆ. ನಾವೆಲ್ಲರೂ ಇದನ್ನು ಪ್ರತಿದಿನವೂ ಹೇಳಬೇಕು; ನಮ್ಮ ಊಟದ ಮೊದಲು ಮತ್ತು ನಂತರ ಎರಡೂ ಸಲವೂ. ನೀವು ನಿಮ್ಮ ಆಹಾರ ಸೇವಿಸುವ ಮೊದಲು ಹಾಗೂ ಸೇವಿಸಿದ ಬಳಿಕ ಅವರನ್ನು ಆಶೀರ್ವದಿಸಿ.

ಪ್ರಪಂಚದಲ್ಲಿ ಅತೀ ಹೆಚ್ಚಿನ ಮಳೆಯನ್ನು ಪಡೆಯುವ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿ ಬಹಳಷ್ಟು ಮಳೆಯಾಗುತ್ತದೆ, ಆದರೆ ಅದಕ್ಕೆ ಹೊರತಾಗಿಯೂ ನಾವು ನಮ್ಮ ಜಲ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈಗಲೂ ನಾವು ಹಲವಾರು ರಾಸಾಯನಿಕ ತ್ಯಾಜ್ಯಗಳನ್ನು ನಮ್ಮ ಜಲಾಶಯಗಳಿಗೆ ಬಿಡುತ್ತಿದ್ದೇವೆ.

ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ರಾಸಾಯನಿಕಗಳು ಮತ್ತು ಕೃತಕ ಗೊಬ್ಬರಗಳು ಈಗಲೂ ನಮ್ಮ ಗದ್ದೆಗಳಲ್ಲಿ ಮತ್ತು ಜಮೀನುಗಳಲ್ಲಿ ಬಳಸಲ್ಪಡುತ್ತಿವೆ. ಈ ರಾಸಾಯನಿಕಗಳಿಗಾಗಿ ನಾವು ಎಷ್ಟೋ ಹೆಚ್ಚು ಹಣವನ್ನು ಹಾಳು ಮಾಡುತ್ತಿದ್ದೇವೆ ಹಾಗೂ ನಮ್ಮ ಮಣ್ಣಿನ ಸ್ವಾಭಾವಿಕ ಗುಣ ಮತ್ತು ಆರೋಗ್ಯವನ್ನು ಕೂಡಾ ನಾಶಪಡಿಸುತ್ತಿದ್ದೇವೆ. ನಮ್ಮ ಹಣದ ವಿಷಯದಲ್ಲಿ ನಾವು ನಷ್ಟವನ್ನನುಭವಿಸುವುದು ಮಾತ್ರವಲ್ಲದೆ, ನಮ್ಮ ಮಣ್ಣು ಮತ್ತು ಪ್ರಾಕೃತಿಕ ಸಂಪನ್ಮೂಲಗಳ ವಿಷಯದಲ್ಲಿಯೂ ಕೂಡಾ ನಾವು ನಷ್ಟವನ್ನನುಭವಿಸುತ್ತೇವೆ. ಈ ವಿಷಯಗಳ ಬಗ್ಗೆ ನಾವೊಂದು ಆಳವಾದ ಚರ್ಚೆಯನ್ನು ನಡೆಸಬೇಕಾಗಿದೆ.

(ಶ್ರೀ ಶ್ರೀಯವರು ರೈತರನ್ನು ಉದ್ದೇಶಿಸಿ: ಇಲ್ಲಿ ಆಶ್ರಮದಲ್ಲಿ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಹಲವಾರು ತಜ್ಞರು ಹಾಗೂ ವಿಜ್ಞಾನಿಗಳು ಕೂಡಾ ಬಂದಿದ್ದಾರೆ. ಅವರೆಲ್ಲರೂ ನಿಮ್ಮೊಂದಿಗೆ ಮಾತನಾಡುವರು, ಮತ್ತು ನೀವು ಕೂಡಾ ಮುಕ್ತವಾಗಿ ಚರ್ಚೆ ಮಾಡಬೇಕು ಮತ್ತು ನಿಮ್ಮ ಸಮಸ್ಯೆಗಳನ್ನು ಮುಂದಿಡಬೇಕು. ನೀವು ನಿಮ್ಮದೇ ಮನೆಗೆ ಬಂದಿರುವಿರೆಂದು ಭಾವಿಸಿ. ನೀವೀಗ ನಿಮ್ಮ ಆಧ್ಯಾತ್ಮಿಕ ನಿವಾಸದಲ್ಲಿರುವಿರಿ. ಇದು ನಿಮ್ಮದೇ ಜಾಗ, ಆದುದರಿಂದ ಸಂತೋಷವಾಗಿರಿ ಮತ್ತು ಇಲ್ಲಿನ ನಿಮ್ಮ ವಾಸವನ್ನು ಆನಂದಿಸಿ. ಬೆಳಗಿನ ಹೊತ್ತು ಒಂದೆರಡು ಗಂಟೆಗಳ ಕಾಲ ಸ್ವಲ್ಪ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಕೂಡಾ ಅಭ್ಯಾಸ ಮಾಡಿ. ನೀವು ಆರೋಗ್ಯಕರವಾಗಿಯೂ ಸ್ವಸ್ಥವಾಗಿಯೂ ಇರಲು ನಿಮಗೆ ಇವುಗಳೆಲ್ಲವನ್ನೂ ಕಲಿಸಲು ಇಲ್ಲಿ ಹಲವಾರು ಶಿಕ್ಷಕರಿದ್ದಾರೆ. ನೀವೆಲ್ಲರೂ ಆರೋಗ್ಯಕರವಾಗಿರುವಾಗ ದೇಶ ಕೂಡಾ ಆರೋಗ್ಯಕರವಾಗಿರುವುದು. ನೀವೆಲ್ಲರೂ ಆರೋಗ್ಯಕರವಾಗಿಯೂ ಸಂತೋಷವಾಗಿಯೂ ಇರುವಾಗ, ನೀವು ನಿಮ್ಮ ಹೊಲಗಳಲ್ಲಿ ಬೆಳೆಯುವ ಆಹಾರ ಧಾನ್ಯಗಳು, ದೇಶದಲ್ಲಿ ಅದನ್ನು ಸೇವಿಸುವವರೆಲ್ಲರಿಗೂ ಸಂತೋಷ ಮತ್ತು ಆರೋಗ್ಯವನ್ನು ತರುವುದು.)

ಚಲಿಸುವ ಚಿತ್ರಗಳ ರೂಪದಲ್ಲಿ, ಆಂಗ್ಲ ಭಾಷೆಯಲ್ಲಿ ಈ ಬ್ಲಾಗ್ ವೀಕ್ಷಿಸಲು ಲಿಂಕ್: http://www.speakingtree.in/public/spiritual-slideshow/seekers/self-improvement/nation-is-happy-if-its-farmers-are-happy/227388

ಸೋಮವಾರ, ನವೆಂಬರ್ 3, 2014

ಗೋಹತ್ಯೆಗೆ ಪೂರ್ಣವಿರಾಮ ಹಾಕಿ

ನವೆಂಬರ್ ೩, ೨೦೧೪
ದೆಹಲಿ, ಭಾರತ

ಲ್ಲಿ ಶ್ರೀಯುತ ಗೋಪಾಲ ಅವರು ನಿಜಕ್ಕೂ ತಮ್ಮ ಹೆಸರಿಗೆ ತಕ್ಕಂತೆ ಜೀವಿಸುತ್ತಿದ್ದಾರೆ - ಗೋಪಾಲ (ಶ್ರೀಕೃಷ್ಣ ಪರಮಾತ್ಮನ ಇನ್ನೊಂದು ಹೆಸರು, ದನಗಳನ್ನು ನೋಡಿಕೊಳ್ಳುವವನು ಎಂಬ ಅರ್ಥ). ಗೋವುಗಳ ಸಂರಕ್ಷಣೆಗಾಗಿ ಅವರು ತಮ್ಮನ್ನು ತಾವು ಮೀಸಲಾಗಿಟ್ಟಿದ್ದಾರೆ.

ಬಹಳ ದೀರ್ಘ ಕಾಲದಿಂದ ನಾನು ಇಲ್ಲಿಗೆ ಬರಲು ಬಯಸುತ್ತಿದ್ದೇನೆ, ಆದರೆ ಹೇಗೋ ಅದು ಕೂಡಿಬರುತ್ತಿರಲಿಲ್ಲ. ಇವತ್ತು ಮಧ್ಯಾಹ್ನ ೧:೪೫ಕ್ಕೆ ನಾನು ದಿಲ್ಲಿಯಿಂದ ಹೈದರಾಬಾದಿಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಇವತ್ತು ಸಂಜೆ ಅಲ್ಲಿ ಗೋಪಾಷ್ಟಮಿ (ಗೋವನ್ನು ತಾಯಿಯಾಗಿ ಗೌರವಿಸುವುದಕ್ಕಾಗಿ ಆಚರಿಸಲಾಗುವ ಭಾರತದ ಒಂದು ಸಾಂಪ್ರದಾಯಿಕ ಹಬ್ಬ) ಆಚರಣೆಯೊಂದಿಗೆ ಒಂದು ಸತ್ಸಂಗವಿದೆ ಹಾಗೂ ಗೋಶಾಲೆಯಲ್ಲಿ ಒಂದು ಕಾರ್ಯಕ್ರಮವಿದೆ. ಆದರೆ ಇವತ್ತು ಜೈಪುರ ಮಾರ್ಗವಾಗಿ ಹೈದರಾಬಾದಿಗೆ ಹೋಗುವ ದಾರಿಯಲ್ಲಿ ಗೋಶಾಲೆಯನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿದೆ.
ನಾನು ಕಾರಿನಲ್ಲಿ ಪ್ರಯಾಣಿಸುವಾಗ, ಒಂದು ಹಸುವು ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುವನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಬಹಳ ದುಃಖವಾಗುತ್ತಿತ್ತು. ಹಿಂದೆಯೂ ಕೂಡಾ, ಯಾವುದೇ ಹಸುವು ಪ್ಲಾಸ್ಟಿಕ್ಕನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಯಾವತ್ತೂ ಹೀಗನಿಸುತ್ತಿತ್ತು. ನೀವು ದಿಲ್ಲಿ ನಗರಕ್ಕೆ ಹೋಗಿ ರಿಂಗ್ ರಸ್ತೆಯುದ್ದಕ್ಕೂ ಪ್ರಯಾಣಿಸಿದರೂ ಸಹ, ಹಲವಾರು ಹಸುಗಳು ಮಾರ್ಗ ಮಧ್ಯದಲ್ಲಿ ನಿಂತುಕೊಂಡು ಪ್ಲಾಸ್ಟಿಕ್ಕನ್ನು ಅಗಿಯುತ್ತಿರುವುದು ನಿಮಗೆ ಕಾಣಿಸುವುದು. ಅಂತಹ ಹಸುಗಳ ಆರೈಕೆಗಾಗಿ ಅವುಗಳನ್ನು ಗೋಶಾಲೆಗೆ ಕರೆದುಕೊಂಡು ಬರುವ ಪ್ರಯತ್ನವನ್ನು ನೀವು ಮಾಡಿರುವಿರೆಂಬುದನ್ನು ಕೇಳಿ ಇಂದು ನನಗೆ ಬಹಳ ಸಂತೋಷವಾಗುತ್ತಿದೆ. ಹಸುಗಳನ್ನು ಸಂರಕ್ಷಿಸುವ ಈ ಕಾರ್ಯವು ನಮ್ಮ ಅತ್ಯಂತ ಪ್ರಮುಖ ದೈವಿಕ ಕರ್ತವ್ಯಗಳಲ್ಲಿ ಒಂದಾಗಿದೆ.

ನೋಡಿ, ಶ್ರೇಷ್ಠ ಹಾಗೂ ಅತ್ಯುತ್ಕೃಷ್ಟವಾದುದೆಲ್ಲಾ ’ಗ’ ಎಂಬ ಶಬ್ದದಿಂದ ಆರಂಭವಾಗುತ್ತದೆ, ಉದಾಹಾಣೆಗೆ ಗುರು, ಗ್ಯಾನ್, ಗೀತಾ, ಗಂಗಾ, ಗತಿ, ಗಮನ (ಒಬ್ಬನ ಅಂತಿಮ ಗುರಿಯೆಡೆಗೆ ಚಲಿಸುವುದು), ಮೊದಲಾದವುಗಳು. ಅವುಗಳನ್ನೆಲ್ಲಾ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.

ಜನರು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪ್ರವಾಸ ಮಾಡುವಾಗ, ಗೋಶಾಲೆಯು ಬಸ್ ಪ್ರವಾಸದ ಒಂದು ಮುಖ್ಯ ಭಾಗವಾಗಿದೆ. ಆಶ್ರಮದಲ್ಲಿ ಈಗ ೩೦೦ ಹಸುಗಳಿವೆ. ದೊಡ್ಡ ಆಶ್ರಮಗಳಿರುವಲ್ಲೆಲ್ಲಾ, ಖಂಡಿತವಾಗಿಯೂ ಹಸುಗಳನ್ನು ಅವರು ಒಂದು ಒಳ್ಳೆಯ ಪರಿಸರದಲ್ಲಿ ಬೆಳೆಸುತ್ತಾರೆ. ಹೀಗಾಗಿ, ಗೋವುಗಳ ಸಂರಕ್ಷಣೆಯು ನಮ್ಮ ಜೀವನದ ಒಂದು ಪ್ರಧಾನವಾದ ಹಾಗೂ ಅವಿಭಾಜ್ಯ ಅಂಗವಾಗಿದೆ. ನೀವೆಲ್ಲರೂ ಗೋಶಾಲೆಗೆ ಭೇಟಿ ನೀಡುತ್ತಾ ಇರಬೇಕು ಹಾಗೂ ನೀವು ಬರುವಾಗ ಇಲ್ಲಿನ ಗೋವುಗಳಿಗೆ ಆಹಾರ ತಿನ್ನಿಸಬೇಕು.

’ಗೌ’ ಎಂಬ ಪದಕ್ಕೆ ನಾಲ್ಕು ಅರ್ಥಗಳಿವೆ; ಜ್ಞಾನ, ಗಮನ (ಮುಂದುವರಿಯು), ಪ್ರಾಪ್ತಿ ಮತ್ತು ಮೋಕ್ಷ. ಒಂದು ಗೋವು ಈ ಎಲ್ಲಾ ನಾಲ್ಕನ್ನು ಒದಗಿಸುತ್ತದೆ.

ಹಸುವಿನ ಹಾಲು ಮನಸ್ಸು ಹಾಗೂ ಬುದ್ಧಿಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ಭಾರತೀಯ ಹಸುಗಳ ಹಾಲಿನಲ್ಲಿ ಒಂದು ಬಹಳ ವಿಶೇಷವಾದ ಪ್ರೊಟೀನ್ ಅಂಶವಿದೆ, ಅದು ಒಬ್ಬನ ಬುದ್ಧಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತದೆ. ಮುಂದಿನದ್ದು ಗಮನ - ಅಂದರೆ ಮುಂದುವರಿ ಎಂದು ಅರ್ಥ. ಒಂದು ಹಸುವು ನಮಗೆ ನೀಡುವ ಇತರ ಎಲ್ಲಾ ಉತ್ಪನ್ನಗಳು, ನಾವು ನಮ್ಮ ದೈನಂದಿನ ಜೀವನದಲ್ಲಿ ಮುಂದೆ ಸಾಗಲು ನಮಗೆ ಸಹಾಯ ಮಾಡುತ್ತವೆ. ಹೀಗೆ ಈ ನಾಲ್ಕನ್ನೂ ನಮಗೆ ನೀಡುವುದು ಹಸುವಾಗಿದೆ. ನಾವು ಇದಕ್ಕೆ ಗಮನ ನೀಡಬೇಕು ಮತ್ತು ಹಸುವನ್ನು ಗೌರವಿಸಬೇಕು.

ನೋಡಿ, ಕೇವಲ ಪೂಜೆ ಮಾಡುವುದರಿಂದ ಮತ್ತು ಹಸುವಿನ ಮುಂದೆ ನಮಸ್ಕಾರ ಮಾಡುವುದರಿಂದ ಪ್ರಯೋಜನವಾಗದು. ನೀವು ನಿಜವಾಗಿ ಹಸುವಿನ ಸೇವೆ ಮಾಡಬೇಕು. ಸಾಧಾರಣವಾಗಿ ನಾವೇನು ಮಾಡುತ್ತೇವೆಂದರೆ, ಹಸುವಿಗೆ ಹಾರವನ್ನು ಹಾಕಿ, ಕರ್ಪೂರದ ದೀಪವನ್ನು ಹಚ್ಚಿ ಅದನ್ನು ಹಸುವಿಗೆ ತೋರಿಸುವ ಮೂಲಕ ಒಂದು ಪೂಜೆ ಮಾಡುತ್ತೇವೆ. ಇದು ಸರಿಯಲ್ಲ, ಯಾಕೆಂದರೆ ಇದು ಹಸುವಿಗೆ ಭಯವನ್ನುಂಟುಮಾಡುತ್ತದೆ. ಹೀಗಾಗಿ, ನೀವು ನಿಜವಾಗಿಯೂ ಹಸುವಿನ ಸೇವೆ ಮಾಡಬೇಕು.
ನಿಮ್ಮ ಜೀವನವು ಈ ನಾಲ್ಕು ವಿಷಯಗಳಿಂದ ಸಂಪೂರ್ಣವಾಗಿ ಅರಳಬೇಕು - ದಯೆ, ಕರುಣೆ, ಸಹನಾಶೀಲತೆ ಮತ್ತು ಶಾಂತಿ. ಇತರರ ನೋವನ್ನು ಅನುಭವಿಸದೇ ಇರುವ ಒಂದು ಹೃದಯದಿಂದ ಏನು ಪ್ರಯೋಜನ? ಅಂತಹ ಹೃದಯವು ಇತರರಿಗೆ ಕೇವಲ ನೋವು ಮತ್ತು ಹಿಂಸೆಯನ್ನು ಮಾತ್ರ ತರಬಲ್ಲದು.

ಇವತ್ತು ಸಂಸತ್ತಿನ ಸಚಿವರೆಲ್ಲಾ ಕೂಡಾ ಇಲ್ಲಿದ್ದಾರೆ. ಇವತ್ತು ಭಾರತದಾದ್ಯಂತದ ಜನರು ಗೋಹತ್ಯೆಗೆ ಒಂದು ಕೊನೆಯನ್ನು ತರಲು ಬಯಸುತ್ತಿದ್ದಾರೆ.

ಭಾರತವು ಸ್ವಾತಂತ್ರ್ಯವನ್ನು ಗಳಿಸಿದಾಗ, ಪ್ರಾಣಿಗಳ ಸಂಖ್ಯೆಯು ೧೨೦ ದಶಲಕ್ಷಗಳಿಗೆ ಹತ್ತಿರವಾಗಿತ್ತು ಮತ್ತು ನಾವು ಸಂಖ್ಯೆಯಲ್ಲಿ ಕೇವಲ ೩೦ ದಶಲಕ್ಷಗಳಷ್ಟು ಇದ್ದೆವೆಂದು ಹೇಳಲಾಗುತ್ತದೆ. ಇವತ್ತು ಆ ಸಂಖ್ಯೆಯು ತಿರುಗುಮುರುಗಾಗಿದೆ. ಇವತ್ತು, ನಾವು ಸಂಖ್ಯೆಯಲ್ಲಿ ಸುಮಾರು ೧೨೦ ದಶಲಕ್ಷಗಳಷ್ಟಿದ್ದೇವೆ ಮತ್ತು ನಮ್ಮ ಪ್ರಾಣಿ ಸಂಖ್ಯೆಯು ಸುಮಾರು ೩೦ ದಶಲಕ್ಷಗಳಿಗೆ ಇಳಿದಿದೆ. ಈ ಅನುಪಾತವು ಒಳ್ಳೆಯದೇ ಅಲ್ಲ. ಇದು ಸರಿಯೆಂದು ನಿಮಗನಿಸುತ್ತದೆಯೇ? ಹೀಗಾಗಿ ನಾವೆಲ್ಲರೂ ನಮ್ಮ ಹಸುಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಅವುಗಳ ಯೋಗಕ್ಷೇಮದ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡಬೇಕು. ಗೋಹತ್ಯೆಗೆ ಒಂದು ಪೂರ್ಣವಿರಾಮವನ್ನು ಹಾಕುವಂತೆ ನಾವು ನಮ್ಮ ಭಾರತ ಸರಕಾರಕ್ಕೆ ಮನವಿ ಮಾಡುವುದನ್ನು ಮುಂದುವರಿಸಬೇಕು.

ಈ ಸತ್ಸಂಗದ ಸಂದೇಶವನ್ನು ಚಲಿಸುವ ಚಿತ್ರಗಳ ಸಮೇತ ಆಂಗ್ಲ ಭಾಷೆಯಲ್ಲಿ ಅವಲೋಕಿಸಲು ಲಿಂಕ್:
http://www.speakingtree.in/public/spiritual-slideshow/seekers/self-improvement/treat-animals-with-dignity