ಶುಕ್ರವಾರ, ಅಕ್ಟೋಬರ್ 24, 2014

ಆನಂದ, ಸಮೃದ್ಧಿ, ಜ್ಞಾನ, ಮತ್ತು ವಿವೇಕ

ಅಕ್ಟೋಬರ್ ೨೪, ೨೦೧೪
ಶಿಕಾಗೋ, ಅಮೇರಿಕಾ
ಲ್ಲರಿಗೂ ದೀಪಾವಳಿಯ ಶುಭಾಶಯಗಳು!

ದೀಪಾವಳಿಯು ಬೆಳಕಿನ ಹಬ್ಬವಾಗಿದೆ, ಆನಂದ, ಸಮೃದ್ಧಿ, ಜ್ಞಾನ, ವಿವೇಕ ಮತ್ತು ಎಲ್ಲದರ ಹಬ್ಬವಾಗಿದೆ, ಯಾಕೆಂದರೆ ಬೆಳಕು ಹಲವಾರು ವಿಷಯಗಳನ್ನು ಸೂಚಿಸುತ್ತದೆ ಮತ್ತು ಒಂದು ದೀಪವನ್ನು ಬೆಳಗಿದರೆ ಸಾಲದು, ಜ್ಞಾನವು ಅರಳಿ ಕತ್ತಲೆಯು ಹೋಗಬೇಕಾದರೆ ನಾವು ಹಲವಾರು ದೀಪಗಳನ್ನು ಬೆಳಗುವುದರ ಅಗತ್ಯವಿದೆ. ದೀಪಾವಳಿಯಂದು ಹಲವಾರು ದೀಪಗಳನ್ನು ಬೆಳಗುವುದು ಅದಕ್ಕಾಗಿಯೇ.

ಒಂದು ಭೌತಿಕ ದೀಪವು ಕೇವಲ ಒಂದು ಚಿಹ್ನೆ ಮಾತ್ರ. ನಿಜವಾದ ದೀಪವು ನೀವು. ನೀವು ಬೆಳಗಬೇಕು, ಹೊಳೆಯುತ್ತಿರಬೇಕು, ಮುಗುಳ್ನಗುತ್ತಾ, ಆನಂದವಾಗಿ ಮತ್ತು ಚೈತನ್ಯ ತುಂಬಿಕೊಂಡಿರಬೇಕು, ಯಾಕೆಂದರೆ ಅದು ನಿಜವಾದ ಹಬ್ಬ. ಇದು ಜ್ಞಾನದಿಂದ ಮಾತ್ರ ಆಗಲು ಸಾಧ್ಯ; ಕೇವಲ ಸೌಕರ್ಯಗಳಿಂದ, ಯಂತ್ರೋಪಕರಣ(ಗಾಜೆಟ್‌)ಗಳಿಂದ, ಹಣ ಅಥವಾ ಸ್ನೇಹಿತರಿಂದ ಮಾತ್ರವಲ್ಲ. ನಿಜವಾದ ಸಂತೋಷವು ಜ್ಞಾನದೊಂದಿಗೆ ಬರುತ್ತದೆ.

ಇವತ್ತು ನಾವೊಂದು ಲಕ್ಷ್ಮಿ ಪೂಜೆಯನ್ನು ಮಾಡುವೆವು. ಇದು ಜಗನ್ಮಾತೆಗೆ, ದೇವ ದೇವತೆಗಳಿಗೆ, "ವರ್ಷವಿಡೀ ನೀವು ನನ್ನನ್ನು ಸಂರಕ್ಷಿಸಿರುವಿರಿ ಹಾಗೂ ನನಗೇನು ಬೇಕಿತ್ತೋ ಅದನ್ನು ನೀಡಿರುವಿರಿ, ಅದಕ್ಕಾಗಿ ನಿಮಗೆ ಬಹಳ ಧನ್ಯವಾದಗಳು. ದಯವಿಟ್ಟು ಮುಂದಿನ ವರ್ಷವೂ ಹಾಗೆ ಮಾಡುವುದನ್ನು ಮುಂದುವರಿಸಿರಿ" ಎಂದು ಹೇಳುತ್ತಾ ಧನ್ಯವಾದವನ್ನರ್ಪಿಸುವುದಾಗಿದೆ.
ಹೀಗೆ ನಾವು ಅವರೊಂದಿಗೆ ನಮ್ಮ ಸಂಪರ್ಕವನ್ನು; ಒಪ್ಪಂದವನ್ನಲ್ಲ (ಕಾಂಟ್ರ್ಯಾಕ್ಟ್), ಸಂಪರ್ಕ(ಕಾಂಟ್ಯಾಕ್ಟ್)ವನ್ನು ನವೀಕರಿಸಲು ಅವರನ್ನು ಪ್ರಾರ್ಥಿಸುತ್ತೇವೆ ಹಾಗೂ ಅವರಲ್ಲಿ ಕೇಳಿಕೊಳ್ಳುತ್ತೇವೆ. ದೇವರೊಂದಿಗೆ ಸಂಪರ್ಕವನ್ನು ನವೀಕರಿಸಲು ನಾವು ಪ್ರಾರ್ಥಿಸುತ್ತೇವೆ.

ದೈವತ್ವದೊಂದಿಗೆ ಸಂಪರ್ಕದಲ್ಲಿರುವ ಯಾರಿಗೇ ಆದರೂ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಹೀಗಾಗಿ, ಮತ್ತೆ ಮತ್ತೆ ದೈವತ್ವದೊಂದಿಗೆ ಸಂಪರ್ಕದಲ್ಲಿರುವುದು (ಅದು ನಮ್ಮ ಪ್ರತಿಯೊಂದು ಕಣದಲ್ಲೂ ಇದೆ, ಆದರೆ ಅದನ್ನು ಎಚ್ಚರಗೊಳಿಸಬೇಕಾಗಿದೆಯಷ್ಟೆ.) ದೈವತ್ವವು ಎಲ್ಲೆಡೆಯೂ ಇದೆ, ಆದರೆ ಅದು ಸುಪ್ತವಾಗಿದೆ, ಮತ್ತು ಪೂಜೆಯು (ಪ್ರಾರ್ಥನೆ) ಅದನ್ನು ಎಚ್ಚರಗೊಳಿಸಲಿರುವ ಪ್ರಕ್ರಿಯೆಯಾಗಿದೆ. ದೈವತ್ವವನ್ನು ಎಚ್ಚರಗೊಳಿಸುವುದು!

ಇಲ್ಲಿ ಪಂಡಿತರು ಒಂದು ಬಹಳ ಹಳೆಯದಾದ ಪ್ರಾರ್ಥನೆಯನ್ನು ಉಚ್ಛರಿಸುವರು, ಅದು ಮಾನವಕುಲದ ಮೊದಲಿನ ಪ್ರಾರ್ಥನೆಗಳಲ್ಲಿ ಒಂದಾಗಿದೆ, ಅದು ಋಗ್ವೇದದಲ್ಲಿದೆ. ಅವರು ನಮಗಾಗಿ ಶ್ರೀ ಸೂಕ್ತವನ್ನು ಪಠಿಸಲಿದ್ದಾರೆ.

ಮೊದಲಿಗೆ ನಾವು, ನಮ್ಮ ಜೀವನದಿಂದ ಎಲ್ಲಾ ವಿಘ್ನಗಳನ್ನು ನಿವಾರಿಸಲು ಗಣಪತಿ ಪೂಜೆಯನ್ನು ಮಾಡುವೆವು ಮತ್ತು ನಂತರ ನಾವು ಕಲಶ ಪೂಜೆಯನ್ನು ಮಾಡುವೆವು. ನೀರಿನ ಒಂದು ಕಲಶದೊಂದಿಗೆ ನಾವು ಎಲ್ಲಾ ದೇವತೆಗಳನ್ನು ಆವಾಹನೆ ಮಾಡುವೆವು ಮತ್ತು ಎಲ್ಲರೂ ಒಂದು ಒಳ್ಳೆಯ ಮನಸ್ಸು, ಒಂದು ಒಳ್ಳೆಯ ಹೃದಯ, ಒಂದು ಒಳ್ಳೆಯ ಬುದ್ಧಿ ಹಾಗೂ ಜ್ಞಾನದಿಂದ ಭಾಜನರಾಗುವುದಕ್ಕಾಗಿ, ಈ ಭೂಮಿಯ ಮೇಲೆ ಎಲ್ಲರನ್ನೂ ಆಶೀರ್ವದಿಸಬೇಕೆಂದು ಪ್ರಾರ್ಥಿಸುವೆವು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮೂರು ರೀತಿಯ ಶಕ್ತಿಗಳಿವೆ. ಅವುಗಳು:

೧. ಇಚ್ಛಾ ಶಕ್ತಿ

೨. ಕ್ರಿಯಾ ಶಕ್ತಿ ಮತ್ತು

೩. ಜ್ಞಾನ ಶಕ್ತಿ

ಅದೇ ರೀತಿಯಲ್ಲಿ, ಮಹಾಕಾಳಿ (ಶಕ್ತಿಯನ್ನು ಸೂಚಿಸುವ), ಮಹಾಲಕ್ಷ್ಮಿ (ಪ್ರಾಪಂಚಿಕ ಸಂಪತ್ತನ್ನು ಸೂಚಿಸುವ) ಮತ್ತು ಮಹಾಸರಸ್ವತಿ (ಜ್ಞಾನವನ್ನು ಸೂಚಿಸುವ) ಇದ್ದಾರೆ. ಇವುಗಳು ಸೂಕ್ಷ್ಮ ಶಕ್ತಿಯಿಂದ ಆಳಲ್ಪಡುವ, ಜೀವನದ ವಿವಿಧ ಅಂಶಗಳಾಗಿವೆ, ಮತ್ತು ಪೂಜೆಯು ಸೂಕ್ಷ್ಮ ಜಗತ್ತಿನೊಂದಿಗೆ ಜೋಡಿಸುವ ಒಂದು ಮಾರ್ಗವಾಗಿದೆ.

ನಾವು ನೋಡುವ ಜಗತ್ತು ಹಿಮಖಂಡದ ಕೇವಲ ಒಂದು ತುದಿಯಾಗಿದೆ, ಯಾಕೆಂದರೆ ಇನ್ನೂ ಹೆಚ್ಚು ಎಷ್ಟೋ ಇದೆ. ಪೂಜೆ ಮತ್ತು ಮಂತ್ರೋಚ್ಛಾರಗಳು ಇನ್ನೊಂದು ಭಾಗದೊಂದಿಗೆ ಸಂಪರ್ಕ ಸಾಧಿಸುವ ಪುರಾತನ ಪದ್ಧತಿಯಾಗಿದೆ.

ಈಗ ನಾವದನ್ನು ಮಾಡುವುದು ಹೇಗೆ? ನಾವು ಕೇವಲ ಆಳವಾದ ಧ್ಯಾನದಲ್ಲಿ ಕುಳಿತುಕೊಳ್ಳಬೇಕು ಮತ್ತು ಮಂತ್ರಗಳನ್ನು ಆಲಿಸಬೇಕು; ಮಂತ್ರಗಳಲ್ಲಿ ಮೀಯಬೇಕು. ಭಾರತದಲ್ಲಿ ಅದು ’ಮಂತ್ರ ಸ್ನಾನ’ ಎಂದು ಕರೆಯಲ್ಪಡುತ್ತದೆ. ಇದು ಕೇವಲ ಕುಳಿತುಕೊಂಡು ಮಂತ್ರಗಳನ್ನಾಲಿಸುವುದು ಹಾಗೂ ಶಬ್ದದಲ್ಲಿ ಮೀಯುವುದಾಗಿದೆ. ಈ ಪ್ರಾಚೀನ ಮಂತ್ರೋಚ್ಛಾರಗಳ ತರಂಗಗಳು ನಮ್ಮ ಇಡೀ ಆತ್ಮವನ್ನು ಚೈತನ್ಯಭರಿತಗೊಳಿಸುತ್ತವೆ.

ಪೂಜೆಯಲ್ಲಿ ಆಗುತ್ತಿರುವುದೆಲ್ಲವೂ ನಮಗೆ ಅರ್ಥವಾಗದೇ ಇದ್ದರೂ ಸಹ, ನಾವು ಕಣ್ಣುಗಳನ್ನು ಮುಚ್ಚಿಕೊಂಡು ಅಥವಾ ತೆರೆದುಕೊಂಡು ಆಗುತ್ತಿರುವುದೆಲ್ಲವನ್ನೂ ಆನಂದಿಸುವೆವು. ಅದನ್ನೇ ಶ್ರದ್ಧೆ ಎಂದು ಕರೆಯುವುದು, ಅಂದರೆ, ಅಜ್ಞಾತವಾದುದನ್ನು ಪ್ರೇಮಿಸುವುದು ಎಂದು ಅರ್ಥ. ಏನೋ ಇದೆಯೆಂಬುದು ನಮಗೆ ತಿಳಿದಿದೆ, ಆದರೆ ಅದು ಏನು ಎಂಬುದು ನಮಗೆ ತಿಳಿಯದು. ಒಮ್ಮೆ ನಾವು ಅದನ್ನು ಪ್ರೇಮಿಸಿದರೆ, ಆಗ ಅದು ನಮಗೆ ತಿಳಿಯತೊಡಗುತ್ತದೆ. ಆಗ ನಿಮಗೆ, "ಓ, ಇದೊಂದು ಶಕ್ತಿ" ಎಂದನಿಸುತ್ತದೆ. ಆಗ ನಿಮಗೆ, ಜಗನ್ಮಾತೆಯೆಂದರೆ ಯಾರೋ ಒಬ್ಬರ ಮನಸ್ಸಿನಿಂದ ಬಂದಿರುವ ಕೇವಲ ಒಂದು ಪರಿಕಲ್ಪನೆ ಮಾತ್ರವಲ್ಲ, ಆದರೆ ಅದೊಂದು ವಾಸ್ತವ ಎಂಬುದು ಮನದಟ್ಟಾಗುತ್ತದೆ. ಅದು ವಿಶ್ವದ ಒಂದು ವಾಸ್ತವಿಕತೆಯಾಗಿದೆ. ಸೂಕ್ಷ್ಮ ಶಕ್ತಿಯು ಅಷ್ಟೊಂದು ನಿಜವಾದುದಾಗಿದೆ.

ಹೀಗಾಗಿ, ಇದು ಅಷ್ಟೊಂದು ನಿಜವಾದುದೂ ಸ್ಪಷ್ಟವೂ ಆಗುವಲ್ಲಿಯವರೆಗೆ, ನಾವು ಈ ಅಜ್ಞಾತವಾದುದನ್ನು ಪ್ರೇಮಿಸಲು ತೊಡಗುತ್ತೇವೆ. ಎರಡು ಹೆಜ್ಜೆಗಳಿವೆ:

೧. ಅಜ್ಞಾತವಾದುದನ್ನು ಪ್ರೀತಿಸುವುದು, ಮತ್ತು ಒಮ್ಮೆ ನೀವದನ್ನು ಮಾಡಿದ ಬಳಿಕ

೨. ನೀವು ಅಜ್ಞಾತವಾದುದನ್ನು ತಿಳಿಯಲು ತೊಡಗುತ್ತೀರಿ.

ನೀವದನ್ನು ತಿಳಿದಾಗ, ಅದು ನಿಮ್ಮ ಒಂದು ಭಾಗವಾಗಿದೆಯೆಂಬುದೂ, ನಿಮ್ಮಿಂದ ಬೇರೆಯಾಗಿಲ್ಲ ಅಥವಾ ನಿಮ್ಮಿಂದ ದೂರವಿಲ್ಲವೆಂಬುದೂ ನಿಮಗೆ ಮನದಟ್ಟಾಗುತ್ತದೆ. ಇದುವೇ ವೇದ ಮತ್ತು ವೇದಾಂತವಾಗಿದೆ; ಅಂದರೆ, ದೈವತ್ವವನ್ನು ಅರಿಯುವುದು ಮತ್ತು ಅದರೊಂದಿಗೆ ವಿಲೀನವಾಗುವುದು.

ಇವತ್ತು ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷ ಕೂಡಾ ಆಗಿದೆ. ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಇತರರೆಲ್ಲರಿಗೂ ದೀಪಾವಳಿಯ ಶುಭಾಶಯಗಳು! ಜಗನ್ಮಾತೆಯನ್ನು ಪ್ರಾರ್ಥಿಸುವುದರೊಂದಿಗೆ ಹಾಗೂ ಕಾಣುವ ಹಾಗೂ ಕಾಣದ ದೈವಿಕ ಅಭಿವ್ಯಕ್ತಿಗಳೊಂದಿಗೆ ಹೊಸ ವರ್ಷವನ್ನು ಆರಂಭಿಸುವುದು ಎಷ್ಟೊಂದು ಚೆನ್ನಾಗಿದೆ.

ನಾವೆಲ್ಲರೂ ಇಲ್ಲಿ ಪೂಜೆಯಲ್ಲಿ ಜೊತೆಯಲ್ಲಿ ಕುಳಿತಿರುವುದು, ಜೊತೆಯಲ್ಲಿ ಧ್ಯಾನ ಮಾಡುವುದು ಮತ್ತು ಜೊತೆಯಲ್ಲಿ ಹಾಡುವುದು ಯಜ್ಞ ಎಂದು ಕರೆಯಲ್ಪಡುತ್ತದೆ. ಈಗ, ಯಜ್ಞ ಏನು ಮಾಡುತ್ತದೆ? ಅದು ಸ್ವಸ್ತಿ (ಆರೋಗ್ಯ ಮತ್ತು ಕೇಂದ್ರಿತವಾಗಿರುವುದು), ಶ್ರದ್ಧೆ, ಮೇಧಾ (ಜಾಗೃತಗೊಂಡ ಬುದ್ಧಿ) - ಇವುಗಳನ್ನು ತರುತ್ತದೆ. ಶ್ರದ್ಧೆ ಮತ್ತು ಬುದ್ಧಿ ಇವುಗಳು ಹೆಚ್ಚಾಗಿ ಒಂದು ಇನ್ನೊಂದನ್ನು ವಿರೋಧಿಸುವುದಾಗಿ ಪರಿಗಣಿಸಲ್ಪಡುತ್ತವೆ, ಆದರೆ ಒಂದು ಯಜ್ಞದಲ್ಲಿ ಎರಡೂ ತೀಕ್ಷ್ಣಗೊಳ್ಳುತ್ತವೆ. ಶ್ರದ್ಧೆಯು ಆಳವಾಗುತ್ತದೆ ಮತ್ತು ತಾರ್ಕಿಕತೆಯು ಬಹಳ ತೀಕ್ಷ್ಣವಾಗುತ್ತದೆ.

ಹೀಗೆ ಯಜ್ಞದಿಂದ ಹಲವಾರು ಲಾಭಗಳಿವೆ: ಯಶ, ಪ್ರಜ್ಞೆ, ವಿದ್ಯೆ, ಬುದ್ಧಿ, ಬಲ, ವೀರ್ಯ, ಆಯುಷ್ಯ, ಐಶ್ವರ್ಯ ಮತ್ತು ಇನ್ನೂ ಹಲವಾರು.

ಮಂಗಳವಾರ, ಅಕ್ಟೋಬರ್ 14, 2014

ಬಯಕೆಗಳ ವರ್ತುಲ

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಬಯಕೆಯನ್ನು ಜಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದು ಇನ್ನೊಂದು ಬಯಕೆ! ನಾವು ತಿಳಿಯಬೇಕಾಗಿರುವುದೇನೆಂದರೆ, ಈಡೇರಿದ ಒಂದು ಬಯಕೆಯು ನಿಮ್ಮನ್ನು, ಬಯಕೆಯು ಏಳುವುದಕ್ಕೆ ಮೊದಲು ನೀವೆಲ್ಲಿದ್ದಿರೋ ಅದೇ ಜಾಗಕ್ಕೆ ಮರಳಿ ಕರೆದೊಯ್ಯುತ್ತದೆ. ನಿಮ್ಮಲ್ಲಿ ಒಂದು ಬಯಕೆಯು ಏಳುವುದಕ್ಕೆ ಮೊದಲಿನ ನಿಮ್ಮ ಮನಃಸ್ಥಿತಿಯನ್ನು ಸುಮ್ಮನೇ ಊಹಿಸಿಕೊಳ್ಳಿ. ಒಂದು ಬಯಕೆಯನ್ನು ಹೊಂದಿ ಅದನ್ನು ಈಡೇರಿಸಿದ ಎಲ್ಲಾ ಸರ್ಕಸ್ಸಿನ ಬಳಿಕ, ನೀವು ಅದೇ ಜಾಗಕ್ಕೆ ಮರಳಿ ಬರುತ್ತೀರಿ.

ಪ್ರಶ್ನೆ: ನನ್ನ ದೈನಂದಿನ ಬದುಕಿನಲ್ಲಿ ಮತ್ತು ಸಂಕಟದ ಸಮಯದಲ್ಲಿ ದೇವರೊಂದಿಗೆ ನನ್ನ ಸಂಪರ್ಕವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಸಂಪರ್ಕವನ್ನಿಟ್ಟುಕೊಳ್ಳಲಿರುವ ಈ ಉದ್ದೇಶವೇ, ನೀನು ಮತ್ತೆ ಮತ್ತೆ ಸಂಪರ್ಕವನ್ನು ಅನುಭವಿಸುತ್ತಿರುವೆ ಎಂಬುದನ್ನು ಸೂಚಿಸುತ್ತದೆ.
ಕೇವಲ ಇದನ್ನೊಂದು ಅಭ್ಯಾಸವನ್ನಾಗಿ ಮಾಡು. ನೀನು ಎದ್ದ ಕೂಡಲೇ ಸಂಪರ್ಕವನ್ನು ಅನುಭವಿಸು. ಮಲಗುವ ಮುನ್ನ, ನೀನು ಪಡೆದಿರುವುದಕ್ಕೆಲ್ಲಾ ದೇವರಿಗೆ ಧನ್ಯವಾದವನ್ನರ್ಪಿಸು. ಇದನ್ನು ಕೂಡಾ ನೀನು ಮಾತಿನ ಮೂಲಕ ಪುನರಾವರ್ತಿಸುವ ಅಗತ್ಯವಿಲ್ಲ, ಅದಿದೆಯೆಂದು ನೀನು ಸುಮ್ಮನೇ ಭಾವಿಸಿಕೊಳ್ಳಬೇಕು ಮತ್ತು ಸಹಜವಾಗಿರಬೇಕು.
ದೈವಿಕತೆಯೆಂಬುದು ಅರಿವಿನ ಅತ್ಯಂತ ಸರಳವಾದ ರೂಪವಾಗಿದೆ. ದೈವಿಕತೆಯು ನಮ್ಮ ಅತ್ಯಂತ ಸಹಜವಾದ ಸ್ಥಿತಿಯಾಗಿದೆ. ನೀವು ಸಂಪೂರ್ಣವಾಗಿ ನಿರಾಳವಾಗಿರುವ ಹಾಗೂ ಆತ್ಮೀಯವಾಗಿರುವ ಯಾವುದೇ ಕ್ಷಣವಿರಲಿ, ಆಗ ನೀವು ದೈವಿಕತೆಯಲ್ಲಿರುವಿರಿ ಎಂಬುದನ್ನು ತಿಳಿಯಿರಿ. ಅಷ್ಟೇ.
ಅತ್ಯಂತ ದೊಡ್ಡ ಅವಶ್ಯಕತೆಗಳಲ್ಲಿ ಒಂದು ಸಂಪೂರ್ಣ ತೃಪ್ತಿಯಾಗಿದೆ. ನೀವು ಸಂಪೂರ್ಣ ತೃಪ್ತಿಯನ್ನು ಅನುಭವಿಸುವಾಗ, ಆ ಕ್ಷಣದಲ್ಲಿ ನೀವು ದೇವರೊಂದಿಗಿರುತ್ತೀರಿ ಮತ್ತು ಅದು ನೀವು ಆ ಕ್ಷಣದಲ್ಲಿರುವ, ’ಈಗ’ದಲ್ಲಿರುವ ಸಮಯವಾಗಿದೆ, ಯಾಕೆಂದರೆ ’ಈಗ’ ಎಂದರೆ ’ಸಂಪೂರ್ಣ ತೃಪ್ತಿ’ ಎಂದರ್ಥ.
’ಈಗ’ ಎಂಬುದು ’ಸಂಪೂರ್ಣ ತೃಪ್ತಿ’ಗೆ ಮತ್ತು ’ನಾಳೆ’ ಎಂಬುದು ’ಆಸೆಗಳು, ಯೋಜನೆಗಳು ಮತ್ತು ಬಯಕೆಗಳು’ ಇವುಗಳಿಗೆ. ಹೀಗಾಗಿ, ಇಲ್ಲಿರಿ ಮತ್ತು ಈಗ ಇರಿ; ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆಯಲ್ಲಿ. ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆ ನಿಮ್ಮಲ್ಲಿ ಎಷ್ಟು ಸಲ ಬರುತ್ತದೆಯೆಂಬುದು ನಿಮಗೆ ಬಿಟ್ಟದ್ದು. ಕೆಲವೊಮ್ಮೆ ಅದು ನಿಮಗೆ ಆಗಿಹೋಗುತ್ತದೆ. ಹಿಂದಿನ ಅನೇಕ ಸಂತರು ಅದನ್ನು ತಾವು ಪಡಕೊಂಡ ಒಂದು ಉಡುಗೊರೆಯೆಂದು ಹೇಳಿದುದು ಅದಕ್ಕಾಗಿಯೇ.

ಪ್ರಶ್ನೆ: ಕರ್ವಾ ಚೌತ್‌ ಉತ್ಸವದ ಮಹತ್ವವೇನು? ಅದರ ಹಿಂದಿನ ಕಥೆಯೇನು? ವಿವಾಹಿತ ಸ್ತ್ರೀಯರು ಮಾತ್ರ ಅದನ್ನು ಮಾಡಬಹುದೇ? ಧ್ಯಾನ ಮಾಡಲು ಈ ದಿನವು ನಿಜಕ್ಕೂ ಒಂದು ಒಳ್ಳೆಯ ಸಮಯವೇ?

ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಹಲವಾರು ಉತ್ಸವಗಳಿವೆ, ಬಹುತೇಕ ಒಂದು ವರ್ಷದಲ್ಲಿ ಎಷ್ಟು ರವಿವಾರಗಳಿವೆಯೋ ಅಷ್ಟು.
ಕರ್ವಾ ಚೌತ್ ಎಂಬುದು, ಸ್ತ್ರೀಯರು ತಮ್ಮ ಪತಿಯ ದೀರ್ಘಾಯುಸ್ಸಿಗಾಗಿ ಪ್ರಾರ್ಥಿಸುವ ಒಂದು ಉತ್ಸವವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಥೆಗಳಿವೆ. ಈ ಕಥೆಗಳ ಬಗ್ಗೆ ನನಗೆ ಹೆಚ್ಚು ತಿಳಿಯದು.
ಪ್ರಾಚೀನ ಕಾಲದಲ್ಲಿ ಸ್ತ್ರೀಯರು ಬಹಳ ಶಕ್ತಿಶಾಲಿಗಳಾಗಿದ್ದರೆಂದು ತೋರುತ್ತದೆ. ಅವರು ಸೂರ್ಯನಲ್ಲಿ ಅಸ್ತಮಿಸಬೇಡವೆಂದು ಹೇಳಿದರೆ, ಅದು ಅಸ್ತಮಿಸುತ್ತಿರಲಿಲ್ಲ. ಸ್ತ್ರೀಯರು ಅಷ್ಟರ ಮಟ್ಟಿಗೆ ಶಕ್ತಿಶಾಲಿಗಳಾಗಿದ್ದರೆಂದು ಹೇಳುತ್ತಾರೆ. ಅಂತಹ ಹಲವಾರು ಕಥೆಗಳಿವೆ, ಮತ್ತು ಅವುಗಳೆಲ್ಲವೂ ಒಂದು ಮಹತ್ತರವಾದ ಉದ್ದೇಶವನ್ನು ಒಬ್ಬರಿಗೆ ನೆನಪಿಸಲಿರುವ ಸ್ಫೂರ್ತಿದಾಯಕ ಕಥೆಗಳಾಗಿವೆ. ಹೀಗೆ, ಭಾರತದಲ್ಲಿ ಇದು ಅಂತಹ ಒಂದು ಉತ್ಸವವಾಗಿದೆ. ಉಪವಾಸ ಮತ್ತು ಪ್ರಾರ್ಥನೆಗಳು ಹೇಗೋ ಸಂಬಂಧ ಹೊಂದಿವೆ. ಜಗತ್ತಿನ ಬಹುತೇಕ ಪ್ರತಿಯೊಂದು ಧರ್ಮದಲ್ಲೂ ಹಾಗೂ ಪ್ರತಿಯೊಂದು ಸಂಪ್ರದಾಯದಲ್ಲೂ ಅವರು ಉಪವಾಸ ಮತ್ತು ಪ್ರಾರ್ಥನೆಗಳನ್ನು ಜೊತೆಗೂಡಿಸಿದ್ದಾರೆ.
ನೀವು ಉಪವಾಸ ಮಾಡುವಾಗ, ನಿಮ್ಮ ಉಪವಾಸದಿಂದ ನೀವು ಅಲ್ಲಿರುವ ಯಾವುದೋ ದೇವರನ್ನು ಸಂತೋಷಪಡಿಸುತ್ತಿರುವುದಿಲ್ಲ. ಅದು ಕೇವಲ ನಿಮ್ಮ ಶರೀರದಿಂದ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಶರೀರದಿಂದ ವಿಷಯುಕ್ತ ಪದಾರ್ಥಗಳು ಹೊರಹಾಕಲ್ಪಟ್ಟಾಗ, ಯೋಚನೆಗಳು ಸಕಾರಾತ್ಮಕವಾಗುತ್ತವೆ. ಶರೀರದಲ್ಲಿ ಹಲವಾರು ವಿಷಯುಕ್ತ ಪದಾರ್ಥಗಳಿರುವಾಗ ಹಾಗೂ ಪ್ಯಾಂಕ್ರಿಯಾಸ್, ಪಿತ್ತಕೋಶ ಹಾಗೂ ಕರುಳುಗಳೆಲ್ಲಾ ತುಂಬಿಹೋಗಿ ಇಕ್ಕಟ್ಟಾಗಿರುವಾಗ ನಿಮ್ಮ ಯೋಚನೆಗಳೆಲ್ಲಾ ನಕಾರಾತ್ಮಕವಾಗಿಯೂ ಅಸ್ಪಷ್ಟವಾಗಿಯೂ ಇರುತ್ತವೆ. ಹೀಗಾಗಿ, ನಿಮ್ಮ ಶರೀರದ ಮೇಲೆ ಆ ಶುದ್ಧೀಕರಣದ ಪರಿಣಾಮವಾಗುವುದಕ್ಕಾಗಿ ಉಪವಾಸ ಮಾಡಲಾಗುತ್ತದೆ, ದೇವರನ್ನು ಪ್ರಸನ್ನಗೊಳಿಸುವುದಕ್ಕಾಗಿಯಲ್ಲ.
ಉಪವಾಸವೂ ಕೂಡಾ ಕೆಲವು ನಿಯಮಗಳನ್ನು ಹೊಂದಿದೆ, ಆದರೆ ಜನರು ಉಪವಾಸದ ನಿಯಮಗಳನ್ನು ಕೂಡಾ ಸರಿಯಾಗಿ ಅನುಸರಿಸುವುದಿಲ್ಲ. ಉಪವಾಸವೆಂದರೆ ತಾವು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಹುದು ಮತ್ತು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಾರದೆಂದು ಜನರು ಯೋಚಿಸುತ್ತಾರೆ. ’ಬಹಳಷ್ಟು ಬೀಜಗಳು ಮತ್ತು ಹಣ್ಣುಗಳನ್ನು ತಿನ್ನಬಹುದು, ಆದರೆ ಬೇಯಿಸಿದ ಆಹಾರ ಅಥವಾ ಅನ್ನ ಅಥವಾ ಬ್ರೆಡ್ ತಿನ್ನಬಾರದು’ - ಇದು ಉಪವಾಸ ಅಲ್ಲ.
ಕೆಲವು ದಿನ ಜನರು ಬೇಯಿಸಿದ ಆಲೂಗಡ್ಡೆ ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಾರೆ, ಹಾಗೂ ತಾವು ಉಪವಾಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಅವರು ತಮ್ಮನ್ನೇ ಮೂರ್ಖರನ್ನಾಗಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ, ದಿನವಿಡೀ ಉಪವಾಸವಿರಲು ಬಯಸುವ ಕೆಲವರು ಸೂರ್ಯೋದಯದ ಮೊದಲೇ ಎದ್ದು ತಮ್ಮೊಳಗೆ ಆಹಾರವನ್ನು ತುಂಬುತ್ತಾರೆ. ನಂತರ ಅವರು ಉಪವಾಸ ಮಾಡುತ್ತಾರೆ ಮತ್ತು ಸೂರ್ಯನು ಅಸ್ತಮಿಸಿದ ಕೂಡಲೇ, ಮತ್ತೆ ಅವರು ತಮ್ಮಲ್ಲಿ ಆಹಾರ ತುಂಬುತ್ತಾರೆ. ಇದು ಉಪವಾಸ ಮಾಡುವ ಒಂದು ಬಹಳ ಕೆಟ್ಟ ವಿಧಾನವಾಗಿದೆ.
ಉಪವಾಸವು ವೈಜ್ಞಾನಿಕವಾಗಿ ಆಗಬೇಕು. ಹಣ್ಣಿನ ರಸ, ನೀರು ಮತ್ತು ಕೆಲವು ಹಣ್ಣುಗಳೊಂದಿಗೆ ಉಪವಾಸ ಮಾಡಿ. ಇದರಿಂದ ಶರೀರದಲ್ಲಿ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಅಜೀರ್ಣವಾದ ಆಹಾರವು ಜೀರ್ಣವಾಗುತ್ತದೆ. ಉಪವಾಸದ ದಿನಗಳಂದು ರಾತ್ರಿ ಬಹಳ ತಡವಾಗಿ ತಿನ್ನುವುದು ಬಹಳ ಕೆಟ್ಟದ್ದು, ಯಾಕೆಂದರೆ ಆ ಆಹಾರವನ್ನು ಜೀರ್ಣಿಸಲು ನಿಮ್ಮ ಜಠರಾಗ್ನಿಯು ಅಲ್ಲಿರುವುದಿಲ್ಲ. ಹೀಗಾಗಿ ನೀವದನ್ನು ಮಾಡಬಾರದು.
ಜನರು ಒಂದು ಅವೈಜ್ಞಾನಿಕ ರೀತಿಯಲ್ಲಿ ಉಪವಾಸ ಮಾಡುತ್ತಾರೆ. ಉಪವಾಸವು ವಿವೇಕಪೂರ್ಣವಾಗಿರಬೇಕು. ಬಹುತೇಕ ಪ್ರತಿಯೊಂದು ಸಂಪ್ರದಾಯದಲ್ಲೂ ಜನರು ಈ ರೀತಿಯಾಗಿ ಉಪವಾಸ ಮಾಡುತ್ತಾರೆ. ಯಹೂದ್ಯರು, ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು - ಇವರೆಲ್ಲರೂ ಉಪವಾಸ ಮಾಡುವ ವೈಜ್ಞಾನಿಕ ವಿಧಾನವನ್ನು ತಿಳಿದಿರಬೇಕು.
ಆಯುರ್ವೇದದ ರೀತಿಯಲ್ಲಿ ಉಪವಾಸ ಮಾಡುವುದನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸ್ವಲ್ಪ ಹಣ್ಣುಗಳು, ಹಣ್ಣುಗಳ ರಸ, ನೀರು ಮತ್ತು ನಿಂಬೆ. ಮತ್ತು ನಿಮ್ಮಲ್ಲಿ ಆ ಸಹನಶೀಲತೆ ಇದ್ದರೆ, ಆಗ ಒಂದೆರಡು ದಿನಗಳ ಕಾಲ ಕೇವಲ ನೀರನ್ನು ಕುಡಿದು ಉಪವಾಸ ಮಾಡಿ. ---- ನಾವು ಜನರಿಗೆ ಕೊಡಬೇಕಾಗಿರುವ ಶಿಕ್ಷಣ ಇದುವೇ. ರಾಮದಾನ್ ತಿಂಗಳಿನಲ್ಲಿ ಕೂಡಾ, ಅವರು ದಿನವಿಡೀ ಉಪವಾಸ ಮಾಡುತ್ತಾರೆ, ಪಿತ್ತವು ಏರುತ್ತದೆ ಹಾಗೂ ಸಂಜೆ ಅವರು ಬಹಳಷ್ಟು ತಿನ್ನುತ್ತಾರೆ. ಇದು ತಪ್ಪು. ಸಂಜೆ ಅವರು ಆಹಾರ ಸೇವಿಸುವಾಗ, ಅವರು ಸಲಾಡುಗಳನ್ನು, ಹಣ್ಣುಗಳನ್ನು ಹಾಗೂ ಲಘುವಾದುದೇನನ್ನಾದರೂ; ದೇಹಕ್ಕೆ ವಿಶ್ರಾಂತಿ ನೀಡುವ ಯಾವುದನ್ನಾದರೂ ಸೇವಿಸಬೇಕು.
ಹಿಂದೂಗಳು ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಅವರು ಜಿಲೇಬಿಗಳನ್ನು ತಿನ್ನುತ್ತಾರೆ! ಅವರು ಎಲ್ಲಾ ಸಿಹಿತಿಂಡಿಗಳನ್ನು ಮತ್ತು ಪಿಷ್ಟವಾಗಿರುವ ಬೇಯಿಸಿದ ಆಲೂಗಡ್ಡೆಗಳನ್ನು ತಿನ್ನುತ್ತಾರೆ! ಇದು ಸರಿಯಾದ ವಿಧಾನವಲ್ಲ, ಕೇವಲ ಹಣ್ಣುಗಳು ಮತ್ತು ಹಣ್ಣಿನ ರಸಗಳಿರಬೇಕು.

ಪ್ರಶ್ನೆ: ಕೆಲವೊಮ್ಮೆ, ಆರ್ಟ್ ಆಫ್ ಲಿವಿಂಗ್‌ನಲ್ಲಿ ಇರುವುದಕ್ಕೂ ಇಸ್ಲಾಂನ್ನು ಅನುಸರಿಸುತ್ತಿರುವುದಕ್ಕೂ ಮಧ್ಯೆ ಒಂದು ಸಂಘರ್ಷವಿದೆಯೆಂದು ನನಗನಿಸುತ್ತದೆ. ವಿಶೇಷವಾಗಿ ನಾನು ’ಶಿವ’ ಅಥವಾ ’ರಾಮ’ ಎಂದು ಉಚ್ಛರಿಸುವಾಗ. ದುರದೃಷ್ಟವಶಾತ್, ಇಸ್ಲಾಂ ಒಂದು ಕುಖ್ಯಾತಿಯನ್ನು ಪಡೆದಿದೆ. 

ಶ್ರೀ ಶ್ರೀ ರವಿ ಶಂಕರ್: ನೋಡು, ನೀನು ಇಸ್ಲಾಮಿನ ಚರಿತ್ರೆಯನ್ನು ತಿಳಿದಿರಬೇಕು. ಇಸ್ಲಾಂ ಹೇಗೆ ಹುಟ್ಟಿತು, ಅದನ್ನು ಯಾವಾಗ ಬರೆಯಲಾಯಿತು ಮತ್ತು ಕಾಲಾಂತರದಲ್ಲಿ ಅದು ಹೇಗೆ ಬದಲಾಯಿತು, ಹಿಂದೆ ಏನನ್ನು ಹೇಳಲಾಯಿತು ಮತ್ತು ಯಾಕೆ; ಯಾವುದು ಪ್ರಾಯೋಗಿಕ ಮತ್ತು ಯಾವುದು ಪ್ರಾಯೋಗಿಕವಲ್ಲ. ಆ ದಿನಗಳಲ್ಲಿ ಸ್ತ್ರೀಯರ ಸಂಖ್ಯೆಯು ಹೆಚ್ಚಾಗಿತ್ತು, ಹೀಗಾಗಿ ಒಬ್ಬ ಪುರುಷನು ನಾಲ್ವರು ಸ್ತ್ರೀಯರನ್ನು ವಿವಾಹವಾಗಲು ಅನುಮತಿಸಲಾಗಿತ್ತು, ಯಾಕೆಂದರೆ ಪುರುಷರ ಸಂಖ್ಯೆಯು ಬಹಳ ಕಡಿಮೆಯಾಗಿತ್ತು. ಇವತ್ತು ನೀವದನ್ನು ಅನುಸರಿಸುವ ಅಗತ್ಯವಿಲ್ಲ.
ಅದೇ ರೀತಿಯಾಗಿ ಆ ದಿನಗಳಲ್ಲಿ, ಒಂದು ನಿರ್ದಿಷ್ಟ ಸಮಯದಲ್ಲಿ, ಎಲ್ಲಾ ತಂತಿವಾದ್ಯಗಳನ್ನು ದೂರಮಾಡಬೇಕು; ಸಂಗೀತವಿರಕೂಡದೆಂದು ಮೊಹಮ್ಮದರು ಹೇಳಿದರು. ಸಂಗೀತದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಇವತ್ತು, ಸಂಗೀತವನ್ನು ನಿಷೇಧಿಸಲಾಗಿರುವ ಯಾವುದಾದರೂ ಒಂದು ದೇಶದ; ಇಸ್ಲಾಂ ದೇಶಗಳೇ ಆಗಿರಬಹುದು, ಅದರ ಹೆಸರನ್ನು ನನಗೆ ಹೇಳು ನೋಡೋಣ?
"ನೀವು ಹಾಡಿದರೆ ಅಥವಾ ನೀವು ನರ್ತಿಸಿದರೆ ಅದು ಹರಾಮ್, ಅದು ಇಸ್ಲಾಮಿನ ವಿರುದ್ಧ. ನೀವು ಹಾಗೆ ಯಾವತ್ತೂ ಮಾಡಬಾರದು" ಎಂದು ಪುರಿಟಾರಿಯದ ಮುಸ್ಲಿಮರು ಹೇಳುತ್ತಾರೆ.
ಎರಡನೆಯದ್ದು, ಯಾವುದೇ ಮಾನವ ಮುಖಗಳ ಫೋಟೋ ತೆಗೆಯುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಅದು ಇಸ್ಲಾಮಿನಲ್ಲಿ ಹರಾಮ್ ಆಗಿದೆ. ಆದರೆ, ನಿನ್ನ ಫೋಟೋ ತೆಗೆಯದೆ ನಿನ್ನ ಪಾಸ್‌ಪೋರ್ಟನ್ನಾದರೂ ಹೇಗೆ ಮಾಡಲು ಸಾಧ್ಯ? ಅದು ಅಸಾಧ್ಯ.
ನನ್ನನ್ನು ಬಹರೈನ್‌ಗೆ ಆಮಂತ್ರಿಸಲಾಗಿತ್ತು. ಅಲ್ಲಿ ಅರಮನೆಯಲ್ಲಿ ಒಂದು ಸಮ್ಮೇಳನವಿದ್ದುದರಿಂದ ಬಹರೈನ್‌ನ ರಾಜರು ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಇಸ್ಲಾಮಿನ ಉನ್ನತ ವಿದ್ವಾಂಸರಿದ್ದರು ಮತ್ತು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾಗ, "ಹಜ್ ತೀರ್ಥಯಾತ್ರೆಗೆ ಹೋದಾಗ ಕಾಬಾದ (ಕಪ್ಪು ಕಲ್ಲು) ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ" ಎಂದು ಹೇಳಿದರು. ಆದರೆ ಇವತ್ತು, ಜನರು ತಮ್ಮ ಸೆಲ್ ಫೋನುಗಳೊಂದಿಗೆ ಬರುತ್ತಾರೆ ಮತ್ತು ಎಲ್ಲರೂ ಫೋಟೋ ತೆಗೆಯುತ್ತಿದ್ದಾರೆ. ಅವರು ಕಾಬಾ ಕಲ್ಲಿನ ಮತ್ತು ತಮ್ಮದೇ ಚಿತ್ರಗಳನ್ನು ಕೂಡಾ ತೆಗೆಯುತ್ತಿದ್ದಾರೆ.
ಅದಕ್ಕಾಗಿಯೇ ನೀನು ನೋಡಬಹುದು, ಇಸ್ಲಾಮಿನಲ್ಲಿ ಮಾನವ ಮುಖದ ಶಿಲ್ಪಗಳು ಇಲ್ಲವೇ ಇಲ್ಲ. ಶಿಲ್ಪಗಳಿಲ್ಲ, ಛಾಯಾಗ್ರಹಣವಿಲ್ಲ, ಯಾರದ್ದೂ ಯಾವುದೇ ವರ್ಣಚಿತ್ರವಿಲ್ಲ ಯಾಕೆಂದರೆ, ಪುರಿಟಾರಿಯನ್ ಇಸ್ಲಾಮಿನಲ್ಲಿ ಅದು ನಿಷೇಧವಾಗಿದೆ. ಆದರೆ ಇವತ್ತು, ಇದು ಸಾಧ್ಯವೇ? ಕೆಲವು ಇಮಾಮರು ದೂರದರ್ಶನದ ವಿರುದ್ಧ ಒಂದು ಫತ್ವಾ ನೀಡಿದರು. ದೂರದರ್ಶನಕ್ಕೆ ಭೂತ ಹೊಕ್ಕಿದೆಯೆಂದು ಅವರು ಹೇಳಿದರು. ನಿಮಗೆ ಗೊತ್ತೇ, ಭಾರತದ ಒಂದು ನಿರ್ದಿಷ್ಟ ಹಳ್ಳಿಯಲ್ಲಿ, ಒಂದು ದಿನ ಎಲ್ಲರೂ ತಮ್ಮ ದೂರದರ್ಶನಗಳನ್ನು ಎಸೆಯಬೇಕೆಂದು ಹೇಳಲಾಯಿತು. ಒಂದು ದಿನದಲ್ಲಿ ೫,೦೦೦ ಕುಟುಂಬಗಳು ತಮ್ಮ ದೂರದರ್ಶನಗಳನ್ನು ತಂದು ಅವುಗಳನ್ನೊಂದು ಹೊಂಡದಲ್ಲಿ ಎಸೆದರು ಮತ್ತು ಇದೆಲ್ಲವೂ ಹರಾಮ್ ಎಂದು ಹೇಳುತ್ತಾ ಅವುಗಳಿಗೆ ಕಲ್ಲು ಹೊಡೆದರು, ಯಾಕೆಂದರೆ ಮಾನವ ಮುಖಗಳನ್ನು ಮತ್ತು ಚಿತ್ರಗಳನ್ನು ನೋಡಲು ಒಬ್ಬರಿಗೆ ಅನುಮತಿಯಿಲ್ಲ.
ಹೀಗೆ, ಇವತ್ತು ಇಸ್ಲಾಂ ಏನಾಗಿದೆ, ಮತ್ತು ಇಸ್ಲಾಮಿನ ಉದ್ದೇಶಿತ ಗುರಿ ಏನಾಗಿತ್ತು? ಅವುಗಳ ನಡುವೆ ಅಜಗಜಾಂತರವಿದೆ.
ನನ್ನ ದೇವರನ್ನು ನಂಬದೇ ಇರುವವರೆಲ್ಲಾ ನಾಸ್ತಿಕರು ಮತ್ತು ನಾಸ್ತಿಕರಿಗೆ ಇರಲು ಹಕ್ಕಿಲ್ಲವೆಂದು ಇಸ್ಲಾಂ ಹೇಳುತ್ತದೆ. ಇದುವೇ ಐಸಿಸ್ (ಐ.ಎಸ್.ಐ.ಎಸ್.)ನೊಂದಿಗೆ ಆಗುತ್ತಿರುವುದು. ಇದುವೇ ಪುರಿಟಾರಿಯನ್ ಇಸ್ಲಾಮಿಗರು, ನಿಜವಾದ ಇಸ್ಲಾಂ. ಸೂಫಿಗಳು ಸಂಗೀತವನ್ನು ಸ್ವೀಕರಿಸುವುದರಿಂದ ಹಾಗೂ ಅವರು ಜಪ ಮಾಡುವುದರಿಂದ ಅವರು ಕೆಟ್ಟವರೆಂದು ಅವರು ಯೋಚಿಸುತ್ತಾರೆ. ಒಬ್ಬರು ಸೂಫಿ ಸಂತರು ಮರಣ ಹೊಂದಿ ಒಂದು ಗೋರಿಯನ್ನು ಮಾಡಿದಾಗ, ಈ ಗೋರಿಗಳು ಇಸ್ಲಾಮಿನವಲ್ಲ ಎಂದು ಅವರು ಹೇಳಿದರು. ಗೋರಿಗಳನ್ನು ಅಳಿಸಿಹಾಕಬೇಕೆಂದು ಅವರು ಹೇಳುತ್ತಾರೆ. ಅದನ್ನೇ ಅವರು ಮೊಹಮ್ಮದರ ಗೋರಿಗೂ ಮಾಡಿದರು, ಯಾಕೆಂದರೆ ಅದು ಇಸ್ಲಾಮಿನದ್ದಲ್ಲ ಎಂದು ಅವರು ಹೇಳಿದರು. ಶಿಯಾ ಪಂಥವನ್ನು ಇಸ್ಲಾಮಿನದ್ದಲ್ಲವೆಂದು ಘೋಷಿಸಲಾದುದು ಇದಕ್ಕಾಗಿಯೇ, ಯಾಕೆಂದರೆ ಶಿಯಾಗಳು ಈ ಗೋರಿಗಳನ್ನು ಗೌರವಿಸುತ್ತಾರೆ.
ಹೀಗೆ ಇಸ್ಲಾಮಿನಲ್ಲಿ ಈ ಸೈದ್ಧಾಂತಿಕ ಹೋರಾಟಗಳು ಹಲವಾರು ಸಮಸ್ಯೆಗಳನ್ನು ಉಂಟುಮಾಡಿವೆ. ಇಸ್ಲಾಮಿನ ಪ್ರಕಾರ, ನೀನು ಏನನ್ನಾದರೂ ಕದ್ದರೆ ನಿನ್ನ ಕೈಗಳನ್ನು ತುಂಡುಮಾಡಬೇಕು. ಒಂದು ಮಗು ಹೋಗಿ ಏನನ್ನಾದರೂ ಕದಿಯುತ್ತದೆಯೆಂದು ಸುಮ್ಮನೇ ಊಹಿಸಿಕೊಳ್ಳಿ, ಆಗ ನೀವು ಅವನ ಕೈಯನ್ನು ತುಂಡರಿಸುತ್ತೀರಿ, ಇದು ಇವತ್ತು ಪ್ರಾಯೋಗಿಕವೇ? ಯಾರ ಕೈಯನ್ನೇ ಆದರೂ ತುಂಡರಿಸುವುದು ಪ್ರಾಯೋಗಿಕವೇ? ಒಂದು ಮಗುವಿನ ಕೈಗಳನ್ನು ಕೊಚ್ಚಿಹಾಕಬೇಕೇ?
ಸಂಗೀತವನ್ನು ದೂರ ಮಾಡಬೇಕು, ಛಾಯಾಗ್ರಹಣಕ್ಕೆ ಅನುಮತಿ ನೀಡಬಾರದು; ಈ ನಿಯಮಗಳು ಪ್ರಾಯೋಗಿಕವೇ? ಎಲ್ಲೆಡೆಯೂ ವೈವಿಧ್ಯಮಯ ಜನರಿದ್ದಾರೆ, ನೀವು ಎಲ್ಲರೊಂದಿಗೂ ಹೊಂದಿಕೊಂಡಿರಬೇಕು. ಪುರಿಟಾರಿಯನ್ ಎಂದು ಕರೆಯಲ್ಪಡುವ ಇಸ್ಲಾಂ, ಎಲ್ಲರೂಂದಿಗೂ ಅಷ್ಟೊಂದು ಸಂಘರ್ಷಗಳನ್ನು ಸೃಷ್ಟಿಸುತ್ತದೆ.
ನಾವು ಹಲವಾರು ವಿವಿಧ ಬುಡಕಟ್ಟುಗಳನ್ನು ಹಾಗೂ ವಿವಿಧ ಜ್ಞಾನಗಳನ್ನು ಸೃಷ್ಟಿಸಿದ್ದೇವೆ ಮತ್ತು ಇವುಗಳೆಲ್ಲವೂ ಗೌರವಿಸಲ್ಪಡಬೇಕೆಂದು ಹೇಳುವ ಇನ್ನೊಂದು ಪಂಥವೂ ಇಸ್ಲಾಮಿನಲ್ಲಿದೆ. ಇದು ಪೈಗಂಬರರಿಂದ ಹೇಳಲ್ಪಟ್ಟ ಒಂದು ವಿಷಯ.
ಹೀಗೆ, ಜಗತ್ತಿನಲ್ಲಿ ವೈವಿಧ್ಯತೆಯಿದೆ, ವೈವಿಧ್ಯತೆಯನ್ನು ಗೌರವಿಸಿ. ನೀವು ವೈವಿಧ್ಯತೆಯನ್ನು ಗೌರವಿಸಿದಾಗ, ನೀವು ನಿಮ್ಮ ಶ್ರದ್ಧೆಯನ್ನು ಕಡೆಗಣಿಸಿದಂತಾಗುವುದಿಲ್ಲ.
ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಒಬ್ಬರು ಶಿಕ್ಷಕರು ಒಂದು ಶಿಬಿರವನ್ನು ಕಲಿಸುತ್ತಿದ್ದರು. ನಮ್ಮ ಸುದರ್ಶನ ಕ್ರಿಯೆಯಲ್ಲಿ ನಾವು ’ಓಂ’ ಎಂದು ಹೇಳುತ್ತೇವೆ. ತಾನು ’ಓಂ’ ಎಂದು ಉಚ್ಛರಿಸಲು ಸಾಧ್ಯವಿಲ್ಲವೆಂದೂ, ಯಾಕೆಂದರೆ ಅದು ತನ್ನ ಧರ್ಮಕ್ಕೆ ವಿರುದ್ಧವಾದುದೆಂದೂ ಒಬ್ಬ ವ್ಯಕ್ತಿ ಹೇಳಿದನು.
ಅದಕ್ಕೆ ಶಿಕ್ಷಕರು, "’ಓಂ’ ಎಂದು ಉಚ್ಛರಿಸಿದರೆ ನಿನ್ನ ಶ್ರದ್ಧೆಯನ್ನು ನೀನು ಕಳೆದುಕೊಳ್ಳುವಷ್ಟು ಬಲಹೀನವಾದುದೇ ನಿನಗೆ ನಿನ್ನ ಧರ್ಮದ ಮೇಲಿರುವ ಶ್ರದ್ಧೆ? ನನಗೆ ಹಾಗನಿಸುವುದಿಲ್ಲ. ನಾನು ’ಹಲಲುಯಾ’ ಅಥವಾ ’ಅಲ್ಲಾ-ಹು-ಅಕ್ಬರ್’ ಅಥವಾ ’ಬುದ್ಧಂ ಶರಣಂ ಗಚ್ಛಾಮಿ’ ಎಂದು ಉಚ್ಛರಿಸಬಲ್ಲೆ, ಆದರೆ ಆವಾಗಲೂ ನಾನು ನನ್ನ ಶ್ರದ್ಧೆಯನ್ನು ಉಳಿಸಿಕೊಳ್ಳಬಲ್ಲೆ. ಆಗಲೂ ನಾನಿರುವ ಧರ್ಮವನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದರು.
ಈ ಮಾತುಗಳು ಅವನ ಕಣ್ಣುಗಳನ್ನು ತೆರೆಯಿಸಿದವು. ಕೇವಲ ’ಓಂ’ ಎಂದು ಹೇಳುವುದರಿಂದ ನಿಮಗೇನೂ ನಷ್ಟವಾಗುವುದಿಲ್ಲ. ವಾಸ್ತವವಾಗಿ, ನಿಮಗೆ ಲಾಭವಾಗುವುದು.
ಅದೇ ರೀತಿಯಲ್ಲಿ, ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡಿದರೆ, ಕೂಡಲೇ ನೀವು ಕ್ರಿಶ್ಚಿಯನ್ನರಾಗಿ ಪರಿವರ್ತಿತರಾಗುವುದಿಲ್ಲ. ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡುವುದರಿಂದಾಗಿ ದೇವರು ನಿಮ್ಮಲ್ಲಿ ಕೋಪಗೊಳ್ಳುವುದಿಲ್ಲ.
ನೀವು ಭಜನೆಗಳನ್ನು ಹಾಡಿದರೆ ದೇವರು ನಿಮಗೆ ಶಿಕ್ಷೆ ನೀಡುವುದಿಲ್ಲ. ’ಶಿವ’ ಅಂದರೆ ಏನು? ಯಾವುದು ಬಹಳ ಸುಂದರವಾಗಿರುವುದೋ ಅದು, ಯಾವುದು ಬಹಳ ದಯಾಳುವೋ ಅದು. ಬಹಳ ದಯಾಳುವಾಗಿರುವ ಶಕ್ತಿ ಅಥವಾ ದೈವತ್ವ. ’ನಾರಾಯಣ’ ಅಂದರೆ ಏನು? ಎಲ್ಲಾ ನರಮಂಡಲಗಳಲ್ಲಿರುವ, ಸಂಪೂರ್ಣ ಸೃಷ್ಟಿಯಲ್ಲಿರುವ ಆ ಶಕ್ತಿ. ಜೀವಿಗಳಲ್ಲಿ ಶೋಭಿಸುವುದೇನೇ ಇರಲಿ ಅದು ’ನಾರಾಯಣ’ ಎಂದು ಕರೆಯಲ್ಪಡುತ್ತದೆ.
’ನರಮಂಡಲ’ ಎಂಬ ಪದವು ’ನರ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ಅದಕ್ಕೆ ಮನುಷ್ಯರು ಎಂಬ ಅರ್ಥವೂ ಇದೆ.
’ನಾರಾಯಣ’ ಅಂದರೆ, ಸುಂದರವಾದ ಹಾಗೂ ಅದ್ಭುತವಾದ ನರಮಂಡಲದಲ್ಲಿ ಆಶ್ರಯಪಡೆದಿರುವುದು ಯಾವುದೋ ಅದು. ಒಂದು ನರಮಂಡಲವಿರದ ಒಬ್ಬ ಮನುಷ್ಯನನ್ನು ಸುಮ್ಮನೇ ಕಲ್ಪಿಸಿಕೊಳ್ಳಿ, ಅವನು ಬದುಕಿರಲಾರ. ನೀವು ನಿಮ್ಮನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು ನಿಮ್ಮ ನರಮಂಡಲದ ಕಾರಣದಿಂದಾಗಿ. ಸಂಪೂರ್ಣ ವಿಶ್ವದಲ್ಲಿ ಯಾವ ಶಕ್ತಿಯು ಗ್ರಹಿಸುವುದೋ ಮತ್ತು ಯಾವುದು ವ್ಯಕ್ತಪಡಿಸುವುದೋ ಆ ಶಕ್ತಿಯು ನಾರಾಯಣ ಆಗಿದೆ.
ಆದ್ದರಿಂದ, ವಿವಿಧ ಸಂಪ್ರದಾಯಗಳ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡುವುದು ಯಾವುದೇ ದೇವರು ಅಥವಾ ನಿರ್ದಿಷ್ಟ ಸಂಪ್ರದಾಯದ ವಿರುದ್ಧವಾಗಿಲ್ಲ. ಅದು ಕೇವಲ ಗ್ರಹಿಕೆ. ಮೂಲಭೂತವಾದಿಗಳು ತಮ್ಮನ್ನು ತಾವೇ ಹಾಗೂ ಇತರರನ್ನು ತರಬೇತುಗೊಳಿಸುವುದು ಹೀಗೆಯೇ. ನೀವು ಬೇರೆ ಯಾವುದೋ ದೇವರ ಹೆಸರನ್ನು ಉಚ್ಛರಿಸಿದರೆ ನೀವು ನಾಸ್ತಿಕರೆಂದು ಅಥವಾ ಹಾಗೇನೋ ಅವರು ನಿಮಗೆ ಹೇಳುತ್ತಾರೆ.
ಇವತ್ತು ಇಲ್ಲಿಗೆ ಬರುವುದಕ್ಕೆ ಸ್ವಲ್ಪ ಮೊದಲು, ಇರಾಕಿನಲ್ಲಿನ ಒಂದು ಆತ್ಮಹತ್ಯಾ ಕಾರ್ ಬಾಂಬಿನ ಬಗ್ಗೆ ನಾನು ಓದಿದೆ. ಹಲವಾರು ಜನರು ಮರಣ ಹೊಂದಿದರು. ಪಾಕಿಸ್ತಾನದಲ್ಲಿ ಪ್ರತಿದಿನವೂ ಆತ್ಮಹತ್ಯಾ ಬಾಂಬುಗಳು, ಪ್ರತಿದಿನವೂ ಹಿಂಸಾಚಾರಗಳು ನಡೆಯುತ್ತಿವೆ. ಇದೆಲ್ಲವೂ ಶಾಂತಿಯ ಹೆಸರಿನಲ್ಲಿ. ಇಸ್ಲಾಂ ಎಂದರೆ ಶಾಂತಿ ಎಂದು ಅರ್ಥ. ಆದರೂ ಇಸ್ಲಾಮಿನ ಹೆಸರಿನಲ್ಲಿರುವುದೆಲ್ಲಾ ಬಹಳಷ್ಟು ಹಿಂಸಾಚಾರ; ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಾರದ ಹಿಂಸಾಚಾರ.
ಇರಾಕಿನಲ್ಲಿನ ಯಾಝಿದಿಗಳು ಸಾವಿರಾರು ವರ್ಷಗಳಿಂದ ಒಂದು ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ, ಆದರೆ ಈಗ ಅವರನ್ನು ಚಿತ್ರಹಿಂಸೆಪಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ, ಹತ್ಯೆಗೈಯಲಾಗುತ್ತಿದೆ ಹಾಗೂ ಅವರು ಅಲ್ಲಾನ ವಿರುದ್ಧವೆಂದೂ, ದೇವರ ವಿರುದ್ಧವೆಂದೂ ಹೇಳಲಾಗುತ್ತಿದೆ. ದೇವರು ಅವರಿಗೆ ವಿರುದ್ಧವಾಗಿರುತ್ತಿದ್ದರೆ ಅವನು ಅವರಿಗೆ ಏನಾದರೂ ಮಾಡಿರುತ್ತಿದ್ದ. ದೇವರು ಸರ್ವಶಕ್ತನು, ಅವನಿಗೆ ಅವರು ಬದುಕಿರುವುದು ಇಷ್ಟವಿರದೇ ಇರುತ್ತಿದ್ದರೆ, ಅವನು ಅವರನ್ನು ಡೈನೋಸಾರ್‌ಗಳಂತೆ ಅಳಿಸಿಹಾಕಿರುತ್ತಿದ್ದ. ದೇವರಿಗಾಗಿ ನಾವದನ್ನು ಮಾಡಬೇಕಾದ ಅಗತ್ಯವಿಲ್ಲ. ದೇವರು ಅವನ ಕೆಲಸವನ್ನು ಮಾಡಲು ಬಿಡಿ, ನಾವು ನಮ್ಮ ಕೆಲಸವನ್ನು ಮಾಡೋಣ. ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಅಷ್ಟೊಂದು ಹಿಂಸಾಚಾರವಿರುವುದು ಬಹಳ ದುರದೃಷ್ಟಕರವಾಗಿದೆ. ಅದಕ್ಕಾಗಿಯೇ ನಾವು ಧರ್ಮಗಳ ನಡುವೆಯಿರುವ ಈ ಅಡೆತಡೆಗಳನ್ನು ಮುರಿಯಬೇಕಾಗಿರುವುದು.
ಇಸ್ಲಾಮಿನಲ್ಲಿ, ಎಲ್ಲರೂ ಒಂದೆನ್ನುವ ನಂಬಿಕೆಯಂತಹ ಕೆಲವು ಮಹತ್ತರ ವಿಷಯಗಳಿವೆ. ಸಾಮೂಹಿಕ ಪ್ರಾರ್ಥನೆಗಳಿವೆ - ಎಲ್ಲರೂ ಜೊತೆಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಮಹತ್ತರ ವಿಷಯಗಳನ್ನು ಇಟ್ಟುಕೊಳ್ಳಿ ಹಾಗೂ ವಿಭಜನೆ, ಹಿಂಸಾಚಾರ ಮತ್ತು ನಾನು ಮೇಲಣ ದರ್ಜೆಯವನು, ಇತರರೆಲ್ಲರೂ ಕೆಳದರ್ಜೆಯವರೆಂಬ ಮೇಲರಿಮೆಗಳನ್ನು ಉತ್ತೇಜಿಸುವ ಇತರ ವಿಷಯಗಳನ್ನು ಬಿಟ್ಟುಬಿಡಿ. ಅಂತಹ ವಿಷಯಗಳನ್ನು ದೂರ ಮಾಡಬೇಕು. ನಾನು ಹೇಳುತ್ತೇನೆ ಕೇಳಿ, ಜ್ಞಾನೋದಯವನ್ನು ಹೊಂದಿದ ಹಲವಾರು ಮುಸ್ಲಿಮರಿದ್ದಾರೆ. ಈ ಭೂಮಿಯ ಮೇಲೆ ಹಲವಾರು ಒಳ್ಳೆಯ ಮುಸ್ಲಿಮರಿದ್ದಾರೆ, ಆದರೆ ಕೇವಲ ಈ ಕೆಲವು ಜನರು ಹಾಗೂ ಅವರ ಮತಾಂಧತೆಯ ಕಾರಣದಿಂದಾಗಿ ಇವತ್ತು ಅವರ ಧರ್ಮಕ್ಕೆ ಅಷ್ಟೊಂದು ಕೆಟ್ಟ ಹೆಸರು ಬಂದಿದೆ. ಅದು ಬಹಳ ದುರದೃಷ್ಟಕರ.
ಪ್ರವಾದಿಗಳ ಪತ್ನಿ ಖದೀಜಾ ಯಾವತ್ತೂ ಬುರ್ಖಾವನ್ನು ಧರಿಸಲಿಲ್ಲ. ಅವಳು ಯಾವತ್ತೂ ಒಂದು ಹಿಜಾಬ್ ಕೂಡಾ ಧರಿಸಲಿಲ್ಲ. ಅವಳಿಗೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿತ್ತು. ಆನಂತರದಲ್ಲಿ ಪುರುಷ ಪ್ರಧಾನ ಸಮಾಜವು ಎಲ್ಲೋ ಸ್ತ್ರೀಯರ ಹಕ್ಕುಗಳನ್ನು ಕಸಿದುಕೊಂಡಿತೆಂದು ನನಗನಿಸುತ್ತದೆ. ಅವರದನ್ನು ಈಗ ಮಾಡಬೇಕಾಗಿಲ್ಲ.

ನಂಬಿಕೆಯ ಮೂಲಕ ಬಲವನ್ನು ಕಂಡುಕೊಳ್ಳುವುದು

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಒಬ್ಬ ವ್ಯಕ್ತಿಯು ನಂಬಿಕೆ(ವಿಶ್ವಾಸ/ಶ್ರದ್ಧೆ)ಯನ್ನು ಹೇಗೆ ನಿರ್ಮಿಸಿಕೊಳ್ಳಬಹುದು? ಅಥವಾ ಅದು ಒಬ್ಬನು ಹುಟ್ಟುವಾಗಲೇ ಪಡೆದುಕೊಂಡು ಬಂದಿರುವ ಒಂದು ಪ್ರತಿಭೆಯೇ?

ಶ್ರೀ ಶ್ರೀ ರವಿ ಶಂಕರ್: ನೀವು ನಂಬಿಕೆಯನ್ನು ಉಂಟುಮಾಡಲು ಸಾಧ್ಯವಿಲ್ಲ, ನೀವು ಕೇವಲ ನಿಮ್ಮ ಸಂಶಯಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಅವುಗಳನ್ನು ಬಿಟ್ಟುಬಿಡಬೇಕು. ನೀವು ನಿಮ್ಮ ಸಂಶಯಗಳನ್ನು ಬಿಟ್ಟುಬಿಡುವಾಗ, ಅಲ್ಲಿ ನಂಬಿಕೆಯು ಅದಾಗಲೇ ಇರುತ್ತದೆ. ಒಂದು ಸಂಶಯವು, ಮನಸ್ಸಿನ ಮೇಲೆ ಸುಳಿಯುತ್ತಿರುವ ಒಂದು ಮೋಡದಂತೆ. ಎಚ್ಚೆತ್ತುಕೊಳ್ಳಿ ಮತ್ತು "ಈ ಸಂಶಯವೇನು? ಅದು ನನ್ನನ್ನು ಕೇವಲ ಕೆಳಕ್ಕಿಳಿಸುತ್ತಿದೆ ಮತ್ತು ನನ್ನನ್ನು ಭಾರವಾಗಿಸುತ್ತದೆ. ನನಗೆ ಇದರ ಅಗತ್ಯವಿಲ್ಲ" ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ಹಿಂದೆ ಹಲವಾರು ಸಾರಿ ಆದಂತೆ ಸಂಶಯದಲ್ಲಿ ಸಿಕ್ಕಿಹಾಕಿಕೊಳ್ಳಲು ನೀವು ನಿರಾಕರಿಸಿದರೆ, ಆಗ ನೀವು ಎಚ್ಚೆತ್ತುಕೊಳ್ಳುವಿರಿ ಮತ್ತು ನೀವು ಎಚ್ಚೆತ್ತುಕೊಳ್ಳುವಾಗ, ಅಲ್ಲಿ ಅದಾಗಲೇ ನಂಬಿಕೆಯು ಇರುತ್ತದೆ.
ನಂಬಿಕೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಆದರೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು.
ಸಂಶಯಗಳನ್ನು ಸ್ಪಷ್ಟೀಕರಿಸಿಕೊಳ್ಳುವುದಕ್ಕೆ ಯಾವುದೇ ಕೊನೆಯಿಲ್ಲ. ನೀವು ಸಂಶಯಗಳನ್ನು ಸ್ಪಷ್ಟೀಕರಿಸುವುದಕ್ಕೆ ಹೋಗಬಾರದು, ಯಾಕೆಂದರೆ ನೀವು ಒಂದು ಸಂಶಯವನ್ನು ಉತ್ತರಿಸಿದಾಗ ಅದು ಬೇರೆ ಹತ್ತು ಸಂಶಯಗಳನ್ನು ಏಳಿಸುತ್ತದೆ. "ಇದು ನನಗೆ ಭಾರವಾಗುತ್ತಿದೆ" ಎಂಬುದಾಗಿ ಸುಮ್ಮನೇ ಅರಿತುಕೊಳ್ಳಿ, ಮತ್ತು ಅದನ್ನು ಬಿಟ್ಟುಬಿಡಿ. ಆಗ ನೀವು ಅದರಿಂದ ಕ್ಷಿಪ್ರವಾಗಿ ಕೊಡವಿಕೊಂಡು ಹೊರಬರುತ್ತೀರಿ ಹಾಗೂ ನೀವು ನಿಮ್ಮೊಳಗಿರುವ ಶಕ್ತಿ, ಸತ್ಯ ಮತ್ತು ಸಹಿಷ್ಣುತೆಗಳಿಂದ ಕೂಡಿದ ಒಂದು ಆಳವಾದ ಜಾಗಕ್ಕೆ ಬರುತ್ತೀರಿ. ಅದು ನಂಬಿಕೆಯೆಂದು ಕರೆಯಲ್ಪಡುತ್ತದೆ.
ನಿಮ್ಮಲ್ಲಿ ಸಂಶಯವುಂಟಾದಾಗಲೆಲ್ಲಾ ನಿಮಗೆ ಬಲಹೀನತೆಯ ಅನುಭವವಾಗುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಿ ವಿಶ್ವಾಸವಿರುವಾಗ ನಿಮಗೆ ಬಹಳ ಬಲದ ಅನುಭವವಾಗುತ್ತದೆ; ಬಹುತೇಕ ಒಳಗಿನಿಂದ ಅಜೇಯರಾದ ಹಾಗೆ. ಹೀಗಾಗಿ ಆಯ್ಕೆಯಿರುವುದು ಶಕ್ತಿ, ಅಜೇಯತನಗಳನ್ನು ಅನುಭವಿಸುವುದರ ಹಾಗೂ ಬಲಹೀನತೆಯನ್ನು ಅನುಭವಿಸುವುದರ ನಡುವೆ.
ಸಂಶಯಗಳು ಯಾವತ್ತೂ ಏನಾದರೂ ಒಳ್ಳೆಯದರ ಬಗ್ಗೆಯಿರುತ್ತದೆ. ಏನಾದರೂ ನಕಾರಾತ್ಮಕವಾದುದರ, ಕೆಟ್ಟದ್ದರ ಬಗ್ಗೆ ನಾವು ಯಾವತ್ತೂ ಸಂಶಯಿಸುವುದಿಲ್ಲ. ಏನಾದರೂ ಒಳ್ಳೆಯದ್ದರ ಬಗ್ಗೆ ನಾವು ಸಂಶಯಿಸುತ್ತೇವೆ. ಈ ಒಂದು ಅರಿವು ಸಾಕು ನಿಮ್ಮನ್ನು ಅದರಿಂದ ಹೊರಬರುವಂತೆ ಮಾಡಲು.

ಪ್ರಶ್ನೆ: ಪ್ರೀತಿಯ ಗುರುದೇವ, ದಯವಿಟ್ಟು ನಾನು ತಂತ್ರ ಸಾಧನೆಯನ್ನು ಮಾಡಬಹುದೇ? ಪರವಾಗಿಲ್ಲ ತಾನೇ? ಹತ್ತು ಮಹಾವಿದ್ಯಾ ಸಾಧನೆಗಳಲ್ಲಿ ಒಂದನ್ನು ನಾನು ಮಾಡುತ್ತಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ನೋಡು, ನಾನು ನಿನಗೆ ಹೇಳುತ್ತೇನೆ ಕೇಳು, ಹತ್ತು ಮಹಾವಿದ್ಯೆಗಳನ್ನು ತಿಳಿದ ಜನರು ಅನೇಕರಿಲ್ಲ. ಹೀಗಾಗಿ ನೀನು ಅದು ಯಾವುದನ್ನೂ ಮಾಡಬೇಕಾಗಿಲ್ಲ. ನೀನು ಸುಮ್ಮನೇ ವಿಶ್ರಾಮ ಮಾಡು ಮತ್ತು ಸ್ವಲ್ಪ ಮಂತ್ರೋಚ್ಛಾರಣೆಯನ್ನು ಕೇಳು. ಆರ್ಟ್ ಆಫ್ ಲಿವಿಂಗ್ ಹಲವಾರು ಮಂತ್ರೋಚ್ಛಾರಣೆಗಳನ್ನು ಬಿಡುಗಡೆ ಮಾಡಿದೆ, ಮತ್ತು ಅವುಗಳೆಲ್ಲವೂ ಅದರದ್ದೇ ಒಂದು ಭಾಗವಾಗಿದೆ.
ನಿಮಗೆ ನೀಡಲಾಗುವ ಸಹಜ ಮಂತ್ರಗಳು (ಸಹಜ ಸಮಾಧಿ ಧ್ಯಾನ ಶಿಬಿರದಲ್ಲಿ ನೀಡಲಾಗುವ ಮಂತ್ರ) ಬೀಜ ಮಂತ್ರಗಳಾಗಿವೆ, ಅವುಗಳೆಲ್ಲವೂ ಮಹತ್ತರವಾದವು.
ತಾವು ನಿಮಗೆ ಹತ್ತು ಮಹಾವಿದ್ಯೆಗಳ ಜ್ಞಾನವನ್ನು ನೀಡುವುದಾಗಿ ಯಾರಾದರೂ ನಿಮಗೆ ಹೇಳಲೂಬಹುದು, ಆದರೆ ಅದು ತುಂಬಾ ಸಂಕೀರ್ಣವಾದುದು. ನಾನು ಹೇಳುವುದೇನೆಂದರೆ, ನೀವದನ್ನು ಸುಮ್ಮನೆ ದೂರದಿಂದ ಗೌರವಿಸಿ. ನಿಮ್ಮ ಅಭ್ಯಾಸಕ್ಕಾಗಿ, ನಿಮಗೇನನ್ನು ನೀಡಲಾಗಿದೆಯೋ ಅದು ಉತ್ತಮವಾದುದು. ನಿಮಗೆ ಬೇಕಿದ್ದರೆ, ನಮ್ಮ ಕೇಂದ್ರಗಳಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ನೀವು ಸೇರಿಕೊಳ್ಳಬಹುದು. ೪೦ ದಿನಗಳಲ್ಲಿ ನೀವು ಈ ವಿಷಯಗಳ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು. ನೀವು ಭಾರತಕ್ಕೆ ಬಂದರೆ, ನಾವು ಉಪನಯನವನ್ನು ಕೂಡಾ ಮಾಡುತ್ತೇವೆ ಹಾಗೂ ಆಗ ನೀವು ಮಂತ್ರಗಳನ್ನು ಕಲಿತುಕೊಳ್ಳಬಹುದು.
’ನಾನು ನಿನಗೆ ಈ ಜ್ಞಾನವನ್ನು ನೀಡುತ್ತೇನೆ, ಆ ಜ್ಞಾನವನ್ನು ನೀಡುತ್ತೇನೆ’ ಎಂದು ಹೇಳುವ ಹಲವಾರು ಜನರಿರುತ್ತಾರೆ, ಆದರೆ ಅದೊಂದು ಅವ್ಯವಸ್ಥಿತವಾದ ಗೊಂದಲವಾಗುತ್ತದೆಯಷ್ಟೆ.

ಪ್ರಶ್ನೆ: ಯೋಗ ನಿದ್ರೆಯ ಉದ್ದೇಶವೇನು ಮತ್ತು ಅದು ಕೆಲಸ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಕೆಲಸ ಮಾಡುತ್ತದೆ, ಅಲ್ಲವೇ? ನೀವು ನಿಮ್ಮ ಗಮನವನ್ನು ಒಂದೊಂದಾಗಿ ಶರೀರದ ವಿವಿಧ ಭಾಗಗಳ ಕಡೆಗೆ ತೆಗೆದುಕೊಂಡು ಹೋಗುತ್ತೀರಿ. ಶರೀರ ಮತ್ತು ಪ್ರಜ್ಞೆಯು ಹೇಗೆ ಬೇರೆ ಬೇರೆಯಾದುದು ಎಂಬುದನ್ನು ನೀವು ನೋಡುತ್ತೀರಿ. ಆದರೂ ಅವುಗಳು ಪರಸ್ಪರ ಬೆಸೆದುಕೊಂಡಿವೆ.

ಪ್ರಶ್ನೆ: ಎಲ್ಲಾ ಸಂಕಷ್ಟ ಮತ್ತು ಅನ್ಯಾಯಗಳ ಹೊರತಾಗಿಯೂ ಆಂತರಿಕವಾಗಿ ಶಾಂತಿಯಿಂದಿರುವುದರ ಪ್ರಾಮುಖ್ಯತೆಯನ್ನು ನಾನು ಅರಿತಿದ್ದೇನೆ. ಆದರೆ ಎಲ್ಲಾ ರೀತಿಯ ದಬ್ಬಾಳಿಕೆಗಳ ವಿರುದ್ಧ ಹೋರಾಡುವ ಒಬ್ಬ ಕಾರ್ಯಕರ್ತನಾಗಿ, ಹಿಂಸಾಚಾರವನ್ನು ಹೊಂದಿದ ಒಬ್ಬ ದಬ್ಬಾಳಿಕೆಗಾರನೊಂದಿಗೆ ಒಬ್ಬನು ಹೇಗೆ ವ್ಯವಹರಿಸಬೇಕು?

ಶ್ರೀ ಶ್ರೀ ರವಿ ಶಂಕರ್: ನಾವು ತಲ್ಲಣಗೊಂಡರೆ, ನಮ್ಮ ಕಾರ್ಯವು ಫಲಿಸದು. ನಾವು ಶಾಂತರಾಗಿರುವಾಗ ನಮಗೆ ಅಂತರ್ಜ್ಞಾನದ ಚಿಂತನೆಗಳು ಬರುತ್ತವೆ ಮತ್ತು ಈ ಆಲೋಚನೆಗಳೊಂದಿಗೆ ನೀವೊಂದು ಯೋಜನೆಯನ್ನು ಹಾಕಬೇಕು ಹಾಗೂ ಅದರಂತೆ ಕ್ರಮ ತೆಗೆದುಕೊಳ್ಳಬೇಕು. ನೀವೊಬ್ಬ ದಬ್ಬಾಳಿಕೆಗಾರನನ್ನು ಒಬ್ಬಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ನೀವು ಅರಿವನ್ನು ಮೂಡಿಸಬೇಕು ಮತ್ತು ಒಂದು ಗುಂಪಿನಲ್ಲಿ ಇದು ಸಾಧ್ಯವಿದೆ. ಅದೇ ಸಮಯಕ್ಕೆ, ನಿಮ್ಮ ಸಂಕಲ್ಪವನ್ನು ಬಲವಾಗಿರಿಸಿ ಹಾಗೂ ನಿಮಗೆ ಮಾರ್ಗದರ್ಶನ ಮಾಡುವ ಮತ್ತು ನಿಮ್ಮನ್ನು ಆಧರಿಸುವ ಒಂದು ಶಕ್ತಿಯಿದೆಯೆಂಬುದನ್ನು ತಿಳಿಯಿರಿ.
ಕೆಲವೊಮ್ಮೆ ಮಹಾತ್ಮಾ ಗಾಂಧಿಯವರು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂತು ಎಂಬುದನ್ನು ನೆನಪಿನಲ್ಲಿಡಿ. ಇತರ ಸಮಯದಲ್ಲಿ ಅವರು ಅರಿವಿನ ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿದರು ಹಾಗೂ ಇಡೀ ಭೂಖಂಡದಲ್ಲಿ ಸಂಚಲನೆಯನ್ನು ಉಂಟುಮಾಡಿದರು, ಅಲ್ಲವೇ? ಮತ್ತು ಅವರು ಯಾವಾಗಲೂ ಧ್ಯಾನ ಮಾಡುತ್ತಿದ್ದರು. ಪ್ರತಿದಿನವೂ ಅವರು ಸತ್ಸಂಗ ಮಾಡುತ್ತಿದ್ದರು, ಪ್ರತಿದಿನ ಸಾಯಂಕಾಲವೂ ಅವರು ಭಜನೆಗಳನ್ನು ಹಾಡುತ್ತಿದ್ದರು. ಬೆಳಗಿನ ಹೊತ್ತು ಅವರು ಭಗವದ್ಗೀತೆಯನ್ನು ಓದುತ್ತಿದ್ದರು. ಹೀಗೆ ಮಹಾತ್ಮಾ ಗಾಂಧಿಯವರಲ್ಲಿ ಆಧ್ಯಾತ್ಮಿಕ ಬಲವಿತ್ತು, ಇಲ್ಲದೇ ಹೋಗಿದ್ದರೆ ಅವರೇನು ಸಾಧಿಸಿರುವರೋ ಅದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಪ್ರಶ್ನೆ: ಜಗತ್ತು ತನ್ನ ಗಡಿಗಳನ್ನು ಮತ್ತು ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಿ ಒಂದಾಗಬೇಕಾದ ಅಗತ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ಅವರು ಅವುಗಳನ್ನು ಹೊಂದಿರಬಹುದು, ಆದರೆ ಅವುಗಳ ಜೊತೆಯಲ್ಲಿಯೇ ಅವರೊಂದು ಇನ್ನೂ ವಿಶಾಲವಾದ ದೃಷ್ಟಿಯನ್ನು ಹೊಂದಿರಬಹುದು.
ನೋಡಿ, ನೀವು ನಿಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ಅದೇ ಸಮಯದಲ್ಲಿ ನೀವು ನಿಮ್ಮ ಗ್ರಾಮ, ನಿಮ್ಮ ನಗರ ಅಥವಾ ನಿಮ್ಮ ದೇಶವನ್ನು ಕೂಡಾ ನೋಡಿಕೊಳ್ಳಬಹುದು. ನೀವು ಎರಡೂ ಪಾತ್ರಗಳನ್ನು ವಹಿಸಬಹುದು ಮತ್ತು ಅವುಗಳ ನಡುವೆ ಯಾವುದೇ ಸಂಘರ್ಷವಿಲ್ಲ.

ಪ್ರಶ್ನೆ: ಜನರು ನನ್ನ ತಾಳ್ಮೆ, ಕರುಣೆ, ಕ್ಷಮೆ ಮತ್ತು ಸಹನಶೀಲತೆಗಳನ್ನು ಒಂದು ಬಲಹೀನತೆಯನ್ನಾಗಿ ಕಂಡರೆ ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಬೇರೊಬ್ಬರು ಬೇರೆ ರೀತಿಯಲ್ಲಿ ಯೋಚಿಸುವಂತೆ ಮಾಡಲು ಅಥವಾ ಅವರ ಗ್ರಹಿಕೆಯನ್ನು ಬದಲಾಯಿಸಲು ನಿನಗೆ ಸಾಧ್ಯವಿಲ್ಲ. ಅವರು ಆ ರೀತಿ ಯೋಚಿಸಿದರೆ, ಅದು ಅವರಿಗೆ ಬಿಟ್ಟದ್ದು. ನೀನು ಕೇಂದ್ರಿತನಾಗಿಯೂ ಬಲಶಾಲಿಯಾಗಿಯೂ ಇರುವಲ್ಲಿಯವರೆಗೆ, ನೀನು ಕ್ಷೇಮವಾಗಿರುವೆ. ನೀನು ಮುಂದೆ ಸಾಗು.

ಪ್ರಶ್ನೆ: ನನ್ನ ಪ್ರೀತಿಯ ಗುರುದೇವ, ಒಂದು ದಿನದಲ್ಲಿ ಇನ್ನೂ ಹಲವು ಗಂಟೆಗಳಷ್ಟು ಕಾಲವನ್ನು ನಾನು ಆರ್ಟ್ ಆಫ್ ಲಿವಿಂಗ್‌ಗಾಗಿ ಮೀಸಲಾಗಿರಿಸಲು ಬಯಸುತ್ತೇನೆ. ಆದರೆ ನನಗೆ ಮಕ್ಕಳಿದ್ದಾರೆ ಹಾಗೂ ನಾನು ಅವರೊಂದಿಗೆ ಕೂಡಾ ಇರಬೇಕಾಗುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ಮಕ್ಕಳೊಂದು ಅಡಚಣೆಯೆಂದು ಯೋಚಿಸಬೇಡ. ಚಿಕ್ಕ ಮಕ್ಕಳಿರುವ ಮತ್ತು ಆದರೂ ಅತ್ಯಧಿಕ ಕೆಲಸವನ್ನು ಮಾಡುತ್ತಿರುವ ಹಲವರಿದ್ದಾರೆ. ಬಹಳ ಚಿಕ್ಕ ಮಕ್ಕಳಿರುವ ಹಲವಾರು ಶಿಕ್ಷಕರು ನಮ್ಮಲ್ಲಿದ್ದಾರೆ ಮತ್ತು ಆದರೂ ಅವರು ಕೆಲಸ ಮಾಡುತ್ತಿದ್ದಾರೆ.
ಜಾನಿಸ್ ಅಂತಹ ಒಂದು ಉದಾಹರಣೆಯಾಗಿದ್ದಾಳೆ. ಇಬ್ಬರು ಪುಟ್ಟ ಮಕ್ಕಳಿದ್ದಾಗಲೂ ಅವಳು ಎಷ್ಟೊಂದು ಮಾಡಿದ್ದಾಳೆ ಮತ್ತು ಪೋಲೇಂಡಿನಲ್ಲಿ ನಮ್ಮ ಇನ್ನೊಬ್ಬಳು ಶಿಕ್ಷಕಿಯಿದ್ದಾಳೆ, ಅವಳಿಗೆ ಮೂವರು ಚಿಕ್ಕ ಮಕ್ಕಳಿದ್ದರು ಮತ್ತು ಮಕ್ಕಳೊಂದಿಗೆ ಅವಳು ನೂರು ಅಥವಾ ಇನ್ನೂರು ಮಂದಿಗೆ ಕಲಿಸುತ್ತಿದ್ದಳು.
ಆದುದರಿಂದ, ಮಕ್ಕಳಿಂದಾಗಿ ನಾವು ಏನನ್ನಾದರೂ ಮಾಡಲು ಸಾಧ್ಯವಾಗುತ್ತಿಲ್ಲವೆಂದು ನಾವು ಯೋಚಿಸಬಾರದು. ನೀವು ಖಂಡಿತವಾಗಿಯೂ ಅವರನ್ನು ನಿರ್ಲಕ್ಷ್ಯ ಮಾಡಬಾರದು, ನೀವವರನ್ನು ನೋಡಿಕೊಳ್ಳಬೇಕು. ಮಕ್ಕಳ ಕಡೆಗೆ ಗಮನ ಕೊಡಿ, ಆದರೆ ಅದೇ ಸಮಯಕ್ಕೆ, ಸಮಾಜಕ್ಕಾಗಿ ಏನನ್ನಾದರೂ ಮಾಡುವ ಒಂದು ಉದ್ದೇಶ ನಿಮಗಿದ್ದರೆ, ನಿಮಗದನ್ನು ಮಾಡಲು ಸಾಧ್ಯವಿದೆ. ಅದಕ್ಕಾಗಿ ಸ್ವಲ್ಪ ಸಮಯವನ್ನಿರಿಸಿ.