ಭಾನುವಾರ, ಮೇ 27, 2012

ಬದುಕಿಗೆ ಗುರಿಯೊ೦ದಿರಬೇಕು


27
2012............................... ಬೆಂಗಳೂರು ಆಶ್ರಮ
May

ಬುದ್ಧಿವಂತರ ಲಕ್ಷಣವೆಂದರೆ ಅವರು ಕೆಟ್ಟ ಜನರಿಂದಲೂ ಒಳ್ಳೆಯ ಗುಣಗಳನ್ನು ಮೇಲೆ ತರುತ್ತಾರೆ. ಮೂರ್ಖರ ಲಕ್ಷಣವೆಂದರೆ ಅವರು ಸಂತರಲ್ಲೂ ಅಪರಾಧಿಯನ್ನು ಕಾಣುತ್ತಾರೆ. ಒಳ್ಳೆಯ ಜನರಲ್ಲೂ ಅವರು ತಪ್ಪು ಕಂಡುಹುಡುಕುತ್ತಾರೆ. ಬುದ್ಧಿವಂತರು ಒಬ್ಬ ಅಪರಾಧಿಯಲ್ಲೂ ವಾಲ್ಮೀಕಿಯನ್ನು (ಸಂತನಾದ ಒಬ್ಬ ದರೋಡೆಕೋರ ಮತ್ತು ರಾಮಾಯಣದ ಲೇಖಕ) ಕಾಣುತ್ತಾರೆ. ನಿಮ್ಮನ್ನು ಸ್ವತಃ ಪರೀಕ್ಷಿಸಿಕೊಳ್ಳಿ - ನಿಮ್ಮಲ್ಲಿ ಎಷ್ಟು ಬುದ್ಧಿವಂತಿಕೆಯಿದೆ ಮತ್ತು ಎಷ್ಟು ಮೂರ್ಖತನವಿದೆ, ಎಷ್ಟು ಸಲ ಇತರರಲ್ಲಿನ ಒಳ್ಳೆಯ ಗುಣಗಳನ್ನು ನೀವು ಹೊರತಂದಿದ್ದೀರಿ ಮತ್ತು ಎಷ್ಟು ಸಲ ನೀವು ಅವರಲ್ಲಿ ತಪ್ಪು ಕಂಡುಹುಡುಕಿದ್ದೀರಿ ಎಂಬುದನ್ನು ನೋಡಿ.
ಪ್ರಶ್ನೆ: ದೇವರು ಹುಟ್ಟಿದ್ದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವನು ಹುಟ್ಟಿದ್ದರೆ, ಆಗ ಅವನು ದೇವರಲ್ಲ. ದೇವರೆಂದರೆ, ಯಾರು ಎಂದೂ ಹುಟ್ಟಿಲ್ಲವೋ ಮತ್ತು ಎಂದಿಗೂ ಸಾಯುವುದಿಲ್ಲವೋ ಅವನು.
ಪ್ರಶ್ನೆ: ನನ್ನ ಮಗನು ಹಲವಾರು ಶಿಬಿರಗಳನ್ನು ಮಾಡಿದ್ದಾನೆ, ಆದರೆ ಅವನು ಬದಲಾಗಲು ತಯಾರಿಲ್ಲ. ಪದೇ ಪದೇ ಹೇಳಿದರೂ ಅವನು ಕ್ರಿಯೆ ಮಾಡುವುದಿಲ್ಲ. ನಾನು ಏನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಹೌದು, ಹದಿಹರೆಯದ ಕಾಲದಲ್ಲಿ ಮಕ್ಕಳನ್ನು ಸುಧಾರಿಸುವುದು ಸ್ವಲ್ಪ ಕಷ್ಟ. ತಾಳ್ಮೆಯಿಂದಿರು. ಯಾವುದೇ ಬದಲಾವಣೆಯೂ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲಾ ಶಿಬಿರಗಳನ್ನು ಮಾಡಿದ ಬಳಿಕ, ಅವನಲ್ಲಿ ಖಂಡಿತವಾಗಿ ಸ್ವಲ್ಪ ಬದಲಾವಣೆಯಾಗಿರುತ್ತದೆ.
ಪ್ರಶ್ನೆ: ಮಕ್ಕಳಿಗಾಗಿ ಆರ್ಟ್ ಎಕ್ಸೆಲ್ ಮತ್ತು ಯೆಸ್ ಶಿಬಿರಗಳನ್ನು ಆಯೋಜಿಸಿದ ನಂತರ, ತಮ್ಮ ಮಕ್ಕಳು, ಅವರಿಗೆ ಕಲಿಸಲಾದವುಗಳನ್ನು ಅಭ್ಯಾಸ ಮಾಡುತ್ತಿಲ್ಲವೆಂಬ ದೂರು ಅವರ ಹೆತ್ತವರಿಂದ ನಮಗೆ ಸಿಗುತ್ತಿದೆ. ಇದನ್ನು ನಾವು ಸಂಬೋಧಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಆಗಾಗ್ಗೆ ಅನುಸರಿಸುವ ತರಗತಿಗಳನ್ನು (ಫಾಲೋ ಅಪ್ ಸೆಶನ್) ನಡೆಸಬೇಕು. ಅವರು ಆಟಗಳನ್ನಾಡುವಂತೆ ಮಾಡಿ. ನಿಮ್ಮ ಕಡೆಯಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಹಾಕಿ. ಒಮ್ಮೆ ನೀವು ಒಂದು ಬೀಜವನ್ನು ಬಿತ್ತಿದ ಮೇಲೆ, ಆ ಬೀಜವು ಸರಿಯಾಗಿ ಬೆಳೆಯುತ್ತಿದೆಯೇ ಇಲ್ಲವೇ ಎಂಬುದನ್ನು ನೀವು ಪರೀಕ್ಷಿಸುವುದಿಲ್ಲವೇ?
ಪ್ರಶ್ನೆ: ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಪವಾಡಗಳಾಗಲು ಸಾಧ್ಯವೇ?
ಶ್ರೀ ಶ್ರೀ ರವಿಶಂಕರ್:
ಹೌದು. ಬಹಳಷ್ಟು ಆಗುತ್ತವೆ.  ಹಲವಾರು ಜನರು ಅಂತಹ ಪವಾಡಗಳನ್ನು ತಮ್ಮ ಜೀವನದಲ್ಲಿ ಅನುಭವಿಸಿದ್ದಾರೆ.
ಪ್ರಶ್ನೆ: ಹತ್ತನೆಯ ತರಗತಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು ಪ್ರಕಟಿಸಲ್ಪಟ್ಟಿವೆ. ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದವು. ವಿದ್ಯಾರ್ಥಿಗಳಿಗೆ ನೀವು ಯಾವ ಸಂದೇಶವನ್ನು ಕೊಡಲು ಬಯಸುತ್ತೀರಿ?
ಶ್ರೀ ಶ್ರೀ ರವಿಶಂಕರ್:
ಯಾರು ತೇರ್ಗಡೆಯಾಗಿದ್ದೀರೋ ಅವರು ಹೆಚ್ಚಿನ ಉತ್ಸಾಹದೊಂದಿಗೆ ಮುಂದೆ ಸಾಗಿ.  ತೇರ್ಗಡೆಯಾಗಿಲ್ಲದವರು, ನಿಮ್ಮ ಸಂತೋಷ ಮತ್ತು ಉತ್ಸಾಹಗಳನ್ನು ಕಳೆದುಕೊಳ್ಳಬೇಡಿ. ಒಂದು ದೊಡ್ಡದನ್ನೇನೂ ನೀವು ಕಳೆದುಕೊಂಡಿಲ್ಲ.
ಕೇವಲ ಒಂದು ಪರೀಕ್ಷೆಯನ್ನು ಪಾಸು ಮಾಡದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಮಾನಸಿಕವಾಗಿ ತುಂಬಾ ಕಂಗೆಡುತ್ತಾರೆ. ಒಂದು ಪರೀಕ್ಷೆಯನ್ನು ಪಾಸು ಮಾಡದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಹಲವಾರು ಘಟನೆಗಳಾಗಿವೆ.
ತಮ್ಮ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಂತಹ ವಿದ್ಯಾರ್ಥಿಗಳಿಗೆ ನನ್ನ ಸಂದೇಶವೇನೆಂದರೆ, ಅದೊಂದು ದೊಡ್ಡ ಸಂಗತಿಯಲ್ಲ. ಪ್ರತಿಯೊಂದು ಯಶಸ್ಸಿನ ಹಿಂದೆಯೂ ಅಲ್ಲೊಂದು ಸೋಲು ಅಡಗಿರುತ್ತದೆ ಮತ್ತು ಪ್ರತಿಯೊಂದು ಸೋಲಿನ ಹಿಂದೆಯೂ ಅಲ್ಲೊಂದು ಯಶಸ್ಸು ಅಡಗಿರುತ್ತದೆ. ಆದುದರಿಂದ, ಚಿಂತಿಸಬೇಡಿ, ಪುನಃ ಓದಲು ಶುರು ಮಾಡಿ ಮತ್ತು ಮುಂದೆ ಸಾಗಿ. ನೀವೊಂದು ವರ್ಷವನ್ನು ಕಳೆದುಕೊಂಡಿದ್ದೀರೆಂದು ಯೋಚಿಸಬೇಡಿ; ಅದೊಂದು ದೊಡ್ಡ ಸಂಗತಿಯಲ್ಲ. ಕೇವಲ ಒಂದು ಪರೀಕ್ಷೆಯನ್ನು ಪಾಸು ಮಾಡದಿರುವುದರಿಂದ, ನೀವು ಸಮಯವನ್ನು ವ್ಯರ್ಥ ಮಾಡಿದ್ದೀರೆಂದು ಯೋಚಿಸಬೇಡಿ. ಜೀವನವೇ ಒಂದು ಕಲಿಯುವ ಪ್ರಕ್ರಿಯೆ, ಒಂದು ಕಲೆ. ಜೀವನದ ಪ್ರತಿಯೊಂದು ಹಂತದಲ್ಲೂ, ಗೆಲುವು ಹಾಗೂ ಸೋಲುಗಳ ಮೂಲಕ ನಾವು ಪಾಠಗಳನ್ನು ಕಲಿಯುತ್ತೇವೆ. ಗೆಲುವು ಮತ್ತು ಸೋಲುಗಳಿಂದ  ಕಲಿಯಿರಿ, ನಿಮ್ಮ ಮನಸ್ಸನ್ನು ಸಮತೋಲನವಾಗಿರಿಸಿಕೊಳ್ಳಿ, ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ ಮತ್ತು ಮುಂದೆ ಸಾಗುತ್ತಾ ಇರಿ.
ಹಲವಾರು ಕೈಗಾರಿಕೋದ್ಯಮಿಗಳಿದ್ದಾರೆ, ಅವರು ರಾಂಕ್ ಪಡೆದವರಲ್ಲ. ಎರಡನೆಯ ತರಗತಿಯಲ್ಲಿ ಅನುತ್ತೀರ್ಣರಾದ ಕೈಗಾರಿಕೋದ್ಯಮಿಗಳಿದ್ದಾರೆ, ಆದರೆ ಅವರು ದೊಡ್ಡ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಸೂರತ್ (ಗುಜರಾತ್, ಭಾರತ) ಗೆ ಭೇಟಿ ನೀಡಿದಾಗ, ಎಂಟು ಉದ್ಯಮಿಗಳು - ಎಲ್ಲರೂ ಸಹೋದರರು, ನನ್ನನ್ನು ಪಾದಪೂಜೆಗೆ ಆಹ್ವಾನಿಸಿದರು. ತಮ್ಮ ಕುಟುಂಬದಲ್ಲಿ ಯಾರೂ ಎಂಟನೆಯ ತರಗತಿಯಾಚೆಗೆ ಓದಿಲ್ಲವೆಂದು ಅವರಂದರು. ಅವರಲ್ಲಿ ಹೆಚ್ಚಿನವರು ಎರಡರಿಂದ ನಾಲ್ಕನೆಯ ತರಗತಿಯ ವರೆಗೆ ಓದಿದ್ದರು. ಹೀಗಿದ್ದರೂ, ಪ್ರಪಂಚದಲ್ಲಿ ಮಾರಾಟವಾಗುವ ವಜ್ರಗಳ ಪೈಕಿ ಹತ್ತರಲ್ಲಿ ಒಂಭತ್ತು ಸೂರತ್ತಿನಿಂದ ಉತ್ಪತ್ತಿಯಾಗುತ್ತವೆಯೆಂದು ಅವರು ಹೇಳಿದರು. ಅವರು ಸರಿಯಾಗಿ ಓದಲಿಲ್ಲ, ಆದರೆ ದೊಡ್ಡ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ, ಸಾವಿರಾರು ಜನರಿಗೆ ನೌಕರಿಯನ್ನು ನೀಡಿದ್ದಾರೆ ಮತ್ತು ಸಂತೋಷವಾಗಿ ಜೀವಿಸುತ್ತಿದ್ದಾರೆ. ಆದುದರಿಂದ, ಕೇವಲ ಒಂದು ಪರೀಕ್ಷೆ ಪಾಸಾಗದಿರುವುದಕ್ಕಾಗಿ ಖಿನ್ನತೆಗೊಳಗಾಗಬೇಡಿ ಮತ್ತು ಯಾವುದೇ ಅತಿರೇಕದ ಹೆಜ್ಜೆಯನ್ನು ತೆಗೆದುಕೊಳ್ಳಬೇಡಿ.
ಕಳೆದ ಕೆಲವು ತಿಂಗಳುಗಳಲ್ಲಿ ನಾನು ಇಪ್ಪತ್ತು ನಗರಗಳಿಗೆ ಹಾಗೂ ಹದಿನಾಲ್ಕು ದೇಶಗಳಿಗೆ ಹೋಗಿದ್ದೇನೆ. ನಾನು ಜಪಾನಿಗೆ ಹೋದಾಗ, ಅಲ್ಲಿನ ಪ್ರಧಾನ ಮಂತ್ರಿಯು, ಜಪಾನಿನಲ್ಲಿ ಪ್ರತಿವರ್ಷವೂ ೩೦,೦೦೦ ಯುವ ಜನರು ಆತ್ಮಹತ್ಯೆ ಮಾಡುತ್ತಾರೆಂದು ನನ್ನಲ್ಲಿ ಹೇಳಿದರು. ಜನರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಹಣವಿಲ್ಲದೆಯಲ್ಲ. ಎಲ್ಲರ ಬಳಿಯೂ ಧಾರಾಳವಾಗಿ ಹಣವಿದೆ. ಎಲ್ಲರಲ್ಲೂ ಟಿವಿಗಳು, ವಾಹನಗಳು ಮತ್ತು ಸಾಕಷ್ಟು ಸಂಪತ್ತುಗಳಿವೆ. ಆದರೂ ಅಂತಹ ಒಂದು ದೇಶದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬಡವರಾಗಿರುತ್ತಿದ್ದರೆ ಇನ್ನೊಂದು ವಿಷಯವಾಗಿರುತ್ತಿತ್ತು. ಇಲ್ಲಿನ ಸಂಗತಿ ಅದಲ್ಲ. ಶ್ರೀಮಂತ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 
ಆದುದರಿಂದ ಅವರಂದರು, ಕೇವಲ ನನಗೆ ಮಾತ್ರ ಇದರ ಬಗ್ಗೆ ಏನಾದರೂ ಮಾಡಲು ಸಾಧ್ಯವೆಂದು. ನಾನಂದೆ, ಅಲ್ಲಿ ಸಂತೋಷದ ಅಲೆಯನ್ನು ತರಲಿರುವ ಮಾರ್ಗವೆಂದರೆ ಭಾರತದ ಆಧ್ಯಾತ್ಮಿಕ ಜ್ಞಾನವೊಂದೇ ಎಂದು. ಆದುದರಿಂದ ನಾವು ದೇಶದ ಹಲವಾರು ಭಾಗಗಳಲ್ಲಿ ಪಾರ್ಟ್ ೧ ಮತ್ತು ನವ ಚೇತನಾ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಅದೇ ರೀತಿಯಲ್ಲಿ ಹಲವಾರು ದೇಶಗಳಲ್ಲಿ ಇಂತಹ ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಅದು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿಲ್ಲ ಯಾಕೆಂದರೆ, ಆಧ್ಯಾತ್ಮದಲ್ಲಿ ಮತ್ತು ಮಾನವ ಮೌಲ್ಯಗಳಲ್ಲಿರುವ ಆಸಕ್ತಿಯ ಬೀಜವು ಜನರಲ್ಲಿದೆ. ಹೀಗಿದ್ದರೂ ಅದನ್ನು ಕಾಪಾಡುವುದು ಮತ್ತು ಅದು ಬೆಳೆಯುವಂತೆ ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಇರಿ. ಅವರು ಪರೀಕ್ಷೆಗಳಲ್ಲಿ ಸೋತರೆ ಅದೊಂದು ದೊಡ್ಡ ವಿಷಯವಲ್ಲ. ನಾವು ಚೆನ್ನಾಗಿ ಓದಬೇಕು, ಓದಿನಲ್ಲಿ ಆಸಕ್ತಿಯಿರಿಸಬೇಕು ಮತ್ತು ಜೀವನದಲ್ಲಿ ಸಮೃದ್ಧಿಯನ್ನು ಹೊಂದಬೇಕು.
ಪ್ರಶ್ನೆ: ನಾನು ಕಳೆದ ತಿಂಗಳು ನನ್ನ ತಾಯಿಯನ್ನು ಕಳೆದುಕೊಂಡೆ ಮತ್ತು ನೀವು ಹೇಳಿದ್ದೀರಿ ೨೦೧೨ ಎಲ್ಲರಿಗೂ ಒಳ್ಳೆಯದೆಂದು. ಇಲ್ಲಿರುವ ಒಳ್ಳೆಯ ಸಂಗತಿಯೇನು? ನನಗೆ ಅರ್ಥವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಜೀವನ ಮತ್ತು ಮೃತ್ಯು ಎಂಬುದು ತಪ್ಪಿಸಿಕೊಳ್ಳಲಾಗದಂತಹುದು. ಸಾವೆಂಬುದು ತಪ್ಪಿಸಿಕೊಳ್ಳಲಾಗದಂತಹುದು. ಕೆಲವೊಮ್ಮೆ ಅದು ಸ್ವಲ್ಪ ಬೇಗನೇ ಬರುತ್ತದೆ ಮತ್ತು ಅದು ಆಗುವಾಗಲೆಲ್ಲಾ, ಖಂಡಿತವಾಗಿಯೂ ಅದು ನೋವುಂಟುಮಾಡುತ್ತದೆ. ಆದುದರಿಂದ, ನಾವು ದುಃಖದಲ್ಲಿರುವಾಗ, ಒಂದು ಕಾರಣವನ್ನು ಹುಡುಕಲು ಪ್ರಯತ್ನಿಸುವುದರ ಬದಲು, ಪ್ರಾರ್ಥನೆ ಮಾಡಿಕೊಂಡು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ಅತ್ಯುತ್ತಮವಾದುದು. "ಇದು ಯಾಕಾಯಿತು? ದೇವರು ಯಾಕೆ ನನಗೆ ಈ ರೀತಿ ಮಾಡಿದರು? ದೇವರು ಯಾಕೆ ಕ್ರೂರಿಯಾಗಿದ್ದಾರೆ?" ಈ ರೀತಿಯ ಪ್ರಶ್ನೆಗಳಿಗೆ ಯಾವುದೇ ಉತ್ತರಗಳಿಲ್ಲ ಮತ್ತು ಯಾವುದೇ ಅರ್ಥವೂ ಇಲ್ಲ. ಸೃಷ್ಟಿಯಲ್ಲಿ ಎಲ್ಲಾ ಸಮಯದಲ್ಲೂ ಇಂತಹ ವಿಷಯಗಳು ಆಗುತ್ತಲೇ ಇರುತ್ತವೆ.
ಅತೀವ ಅಗತ್ಯವಿರುವ ಇಂತಹ ಕ್ಷಣದಲ್ಲಿ ನಂಬಿಕೆಯನ್ನು ದೃಢಗೊಳಿಸುವ ಬದಲು, ನಾವು ನಮ್ಮ ಸ್ವಂತ ನಂಬಿಕೆಯನ್ನು ಪ್ರಶ್ನಿಸಿದರೆ, ಅದು ನಮ್ಮನ್ನು ಎಲ್ಲಿಗೂ ಮುನ್ನಡೆಸುವುದಿಲ್ಲ. ಅದು ನಮ್ಮನ್ನು ಕೇವಲ ಖಿನ್ನತೆಯ ಕಡೆಗೆ, ಹೆಚ್ಚಿನ ಕಿರಿಕಿರಿಯೆಡೆಗೆ, ಪ್ರಕ್ಷುಬ್ಧತೆಯೆಡೆಗೆ ಮತ್ತು ಅಶಾಂತಿಯೆಡೆಗೆ  ಒಯ್ಯಬಹುದು. ಅದರ ಬದಲು, ಇದನ್ನು, ತಪ್ಪಿಸಲು ಸಾಧ್ಯವಿಲ್ಲದ ಒಂದು ಸಂಗತಿಯೆಂದು ಸ್ವೀಕರಿಸು.
ಪ್ರಶ್ನೆ: ನನಗೆ ನಿಮ್ಮ ಮೇಲೆ ಒಂದು ದೂರಿದೆ. ನಾನೇನೇ ಕೇಳಿದರೂ, ನೀವದನ್ನು ಕೂಡಲೇ ಕೊಡುತ್ತೀರಿ. ಇದು ನನ್ನನ್ನು ಹಾಳುಮಾಡಬಹುದೇ ಎಂದು ನಾನು ನಿಮ್ಮಲ್ಲಿ ಕೇಳಬಯಸಿದ್ದೆ.
ಶ್ರೀ ಶ್ರೀ ರವಿಶಂಕರ್:
ಒಳ್ಳೆಯದು. ನೀನು ಕೇಳಿದ್ದೆಲ್ಲವೂ ನಿನಗೆ ಸಿಗುತ್ತಿದೆಯೆಂಬುದು ನಿನಗೀಗ ತಿಳಿದಿರುವುದರಿಂದ, ದೊಡ್ಡದಾದವುಗಳನ್ನು ಕೇಳು ಮತ್ತು ಚಿಕ್ಕದಾದವುಗಳನ್ನಲ್ಲ. ನಿನಗಾಗಿ ಕೇಳಬೇಡ; ದೇಶಕ್ಕಾಗಿ ಕೇಳು, ಎಲ್ಲರಿಗಾಗಿ. ಧರ್ಮವು ಹೆಚ್ಚಾಗಲಿ ಮತ್ತು ಅಧರ್ಮವು ಕಡಿಮೆಯಾಗಲಿ ಎಂದು ಪ್ರಾರ್ಥಿಸು; ನ್ಯಾಯ ಹೆಚ್ಚಾಗಲಿ, ಅನ್ಯಾಯ ಕಡಿಮೆಯಾಗಲಿ, ಕೊರತೆ ಕಡಿಮೆಯಾಗಲಿ ಮತ್ತು ಸಮೃದ್ಧಿ ಹೆಚ್ಚಾಗಲಿ ಎಂದು. ಎಲ್ಲರ ಒಳಿತಿಗಾಗಿ ಪ್ರಾರ್ಥಿಸು.
ಪ್ರಶ್ನೆ: ನಮ್ಮ ಹಿಂದಿನ ಜನ್ಮಗಳ ಕರ್ಮಗಳು ಎಲ್ಲವನ್ನೂ ಆಳುತ್ತವೆಯೇ? ನಾವು ಈಗ ಏನೆಲ್ಲಾ ಮಾಡುತ್ತೇವೋ ಅದು ನಮ್ಮ ಜೀವನದಲ್ಲಿ ಯಾವುದೇ ಪ್ರಭಾವವನ್ನು ಬೀರುವುದಿಲ್ಲವೇ?
ಶ್ರೀ ಶ್ರೀ ರವಿಶಂಕರ್:
ಹಾಗೆಂದು ಯಾರು ಹೇಳಿದರು? ನೀವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ನೀವು ಕೂಡಲೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನೀವು ನಿಮ್ಮ ಕೈಯನ್ನು ಬೆಂಕಿಗೊಡ್ಡಿದರೆ, ಅದು ಕೂಡಲೇ ಸುಟ್ಟುಹೋಗುತ್ತದೆ.
ಪ್ರಶ್ನೆ: ಒಬ್ಬ ಮನುಷ್ಯನಾಗಿ ಹುಟ್ಟಿದ ಬಳಿಕ, ನಾವು ಏನನ್ನಾದರೂ ಸಾಧಿಸಬೇಕಾಗಿದೆಯೇ? ಸಾಧಿಸುವವರ ಮತ್ತು ಸಾಧಿಸದಿರುವವರ ಕೊನೆಯ ಫಲಿತಾಂಶವೇನು? ಪ್ರತಿಯೊಬ್ಬ ವ್ಯಕ್ತಿಗೂ ಒಂದು ಗುರಿಯಿರುವುದರ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ಒಂದು ಗುರಿಯಿಲ್ಲದ ಜೀವನವು ಸಂತೋಷದಾಯಕವಾಗಿರದು. ಒಂದು ಗುರಿಯಿಲ್ಲದೆ, ಮನಸ್ಸು ಮತ್ತು ಬುದ್ಧಿಯು ಸರಿಯಾದ ದಿಕ್ಕಿನಲ್ಲಿ ಹೋಗಲಾರವು. ಆದುದರಿಂದ, ಜೀವನದಲ್ಲಿ ಒಂದು ಗುರಿಯಿರಬೇಕು, ಮತ್ತು ಗುರಿ ಹೇಗಿರಬೇಕೆಂದರೆ, ನಾವು ಅಭಿವೃದ್ಧಿ ಹೊಂದಬೇಕು ಹಾಗೂ ನಮ್ಮಿಂದಾಗಿ ಇತರರಿಗೆ ಸಹಾಯವಾಗಬೇಕು.
ಪ್ರಶ್ನೆ: ಬೆಂಗಳೂರು ಹವಾನಿಯಂತ್ರಿತ ನಗರವೆಂದು ಕರೆಯಲ್ಪಡುತ್ತಿತ್ತು. ಹೀಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇಲ್ಲಿ ಬೇಸಗೆಯಲ್ಲಿ ತುಂಬಾ ಬಿಸಿಯಾಗುತ್ತಿದೆ. ಇದು ಇದೇ ರೀತಿಯಲ್ಲಿ ಮುಂದುವರಿದರೆ, ನಮ್ಮ ಭವಿಷ್ಯವು ಹೇಗಾಗಬಹುದು?
ಶ್ರೀ ಶ್ರೀ ರವಿಶಂಕರ್:
ನಾನು ಕೂಡಾ ಇದರ ಬಗ್ಗೆ ಕಾಳಜಿ ಹೊಂದಿದ್ದೇನೆ. ನಾನು ಓದುತ್ತಿದ್ದ ಸಮಯದಲ್ಲಿ, ಫ್ಯಾನುಗಳ ಅಗತ್ಯವಿರಲಿಲ್ಲ. ೧೯೮೦ ರಲ್ಲಿ, ಉತ್ತರ ಭಾರತದಿಂದ ಕೆಲವು ಜನರು ಮತ್ತು ಕೆಲವು ಅಂತರರಾಷ್ಟ್ರೀಯ ಭಾಗಿಗಳು ಇಲ್ಲಿಗೆ ಬಂದಿದ್ದರು. ಅವರಿಗೆ ಒಂದು ಏರ್-ಕೂಲರ್ ಬೇಕಾಗಿತ್ತು. ನಾವು ನಗರದಲ್ಲಿ ಎಲ್ಲಾ ಕಡೆಗಳಲ್ಲೂ ಹುಡುಕಿದೆವು, ಆದರೆ ಒಂದೇ ಒಂದು ಕೂಲರ್ ಕೂಡಾ ಸಿಗಲಿಲ್ಲ. ಯಾವುದನ್ನು ಕೊಂಡುಕೊಳ್ಳುವವರಿಲ್ಲವೋ ಅದನ್ನು ತಾವು ಮಾರುವುದಿಲ್ಲವೆಂದು ಅಂಗಡಿ ಮಾಲೀಕರು ಹೇಳಿದರು. ಏರ್-ಕೂಲರ್ ಕೂಡಾ ಇರಲಿಲ್ಲ, ಹವಾ ನಿಯಂತ್ರಕಗಳೂ ಇರಲಿಲ್ಲ. ಇದು ತುಂಬಾ ಹಿಂದೆಯಾದುದಲ್ಲ.
ಈ ದಿನಗಳಲ್ಲಿ, ಇದು ಯಾವ ಪರಿಸ್ಥಿತಿ ತಲುಪಿದೆಯೆಂದರೆ, ಎಲ್ಲರಿಗೂ ಹವಾ-ನಿಯಂತ್ರಕಗಳ ಅಗತ್ಯವಿದೆ. ನಾವು ಬಹಳಷ್ಟು ಮರಗಳನ್ನು ಕಡಿಯುತ್ತಿದ್ದೇವೆ. ಸರೋವರಗಳು ಬತ್ತಿ ಹೋಗುತ್ತಿವೆ. ನಾವು ನಮ್ಮ ಸರೋವರಗಳ ಬಗ್ಗೆ ಜಾಗ್ರತೆ ವಹಿಸಿರುತ್ತಿದ್ದರೆ ಮತ್ತು ಅಷ್ಟೊಂದು ಮರಗಳನ್ನು ಕಡಿಯದೇ ಇರುತ್ತಿದ್ದರೆ, ಇಂತಹ ಒಂದು ಪರಿಸ್ಥಿತಿ ಬರುತ್ತಿರಲಿಲ್ಲವೆಂದು ನನಗನಿಸುತ್ತದೆ.
ಪ್ರಶ್ನೆ: ಧರ್ಮವೆಂದರೇನು?
ಶ್ರೀ ಶ್ರೀ ರವಿಶಂಕರ್:
ಧರ್ಮವೆಂದರೆ ನಿಮ್ಮನ್ನು ಆಧರಿಸುವಂಥಹದ್ದು, ನೀವು ಬೀಳುವುದರಿಂದ ನಿಮ್ಮನ್ನು ತಡೆಯುವುದು ಮತ್ತು ನೀವು ಮೇಲೆ ಬರಲು ಸಹಾಯ ಮಾಡುವಂಥಹದ್ದು.
ಪ್ರಶ್ನೆ: ಗುರೂಜಿ, ಜೀವನವು ಅನಂತವಾದುದೆಂದೂ, ನಾವಿಲ್ಲಿಗೆ ಪುನಃ ಪುನಃ ಬರುತ್ತಿರಬೇಕಾಗುತ್ತದೆಯೆಂದೂ ನೀವು ಹೇಳಿದ್ದೀರಿ. ಒಬ್ಬನಿಗೆ ಒಬ್ಬರು ಗುರುವಿದ್ದರೆ, ಅವರು ಜೀವನ ಮತ್ತು ಮೃತ್ಯುವಿನ ಚಕ್ರದಿಂದ ಬಿಡುಗಡೆ ಹೊಂದುತ್ತಾರೆಂದು ಕೂಡಾ ಹೇಳಲಾಗಿದೆ. ಹೀಗಿದ್ದರೂ, ನಾವು ಬರುತ್ತಿರಬೇಕಾಗುತ್ತದೆಯೆಂದು ನೀವು ಹೇಳಿದ್ದೀರಿ. ಹಾಗಾದರೆ, ನಾವು ಬರುತ್ತಿರುತ್ತೇವೆಯೇ ಅಥವಾ ಬಿಡುಗಡೆ ಹೊಂದುತ್ತೇವೆಯೇ?
ಶ್ರೀ ಶ್ರೀ ರವಿಶಂಕರ್:
ಎರಡೂ ಸರಿ. ನಾನು ಬರುತ್ತಾ ಇರುತ್ತೇನೆ. ನೀನು ಬರಬೇಕೆಂದೇನೂ ಕಡ್ಡಾಯವಿಲ್ಲ; ಈಗಲೇ ಬಿಡುಗಡೆ ಹೊಂದು.
ಪ್ರಶ್ನೆ: ಸಮಾಜವು ಪ್ರಾಮಾಣಿಕವಾಗಿ ಕೆಲಸ ಮಾಡುವವನೊಬ್ಬನಿಗೆ ತೊಂದರೆ ಕೊಡುತ್ತಿರುತ್ತದೆ, ಇದು ಯಾಕಾಗುತ್ತದೆ? ಅವನು ತನಗಾಗಿ ಏನೂ ಬಯಸದೇ ಸಮಾಜಕ್ಕಾಗಿ ಕೆಲಸ ಮಾಡಲು ಬಯಸಿದರೂ, ಸಮಾಜವು ಅವನಿಗೆ ತೊಂದರೆ ನೀಡುವುದು ಯಾಕೆ?
ಶ್ರೀ ಶ್ರೀ ರವಿಶಂಕರ್:
ಈ ದಿನಗಳಲ್ಲಿ ಅದು ಈ ರೀತಿ ಆಗುತ್ತಿದೆ. ಅದು ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿಯಬೇಕೆಂಬ ನಿಯಮವೇನೂ ಇಲ್ಲ. ಒಂದು ದೊಡ್ಡ ಕೆಲಸವನ್ನು ಮಾಡಲು, ನೀವು ನಿಮ್ಮ ಕಡೆಯಿಂದ ಏನಾದರೂ ತ್ಯಾಗ ಮಾಡಬೇಕು. ನೀವು, "ನಾನು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇನೆ, ಆದರೆ ಜನರು ಯಾಕೆ ನನ್ನನ್ನು ಟೀಕಿಸುತ್ತಿದ್ದಾರೆ?" ಎಂದು ಯೋಚಿಸಲು ಸಾಧ್ಯವಿಲ್ಲ. ಅದು ಅವರ ಸ್ವಭಾವ. ಒಂದು ಮುಳ್ಳಿನ ಸ್ವಭಾವವೆಂದರೆ ಚುಚ್ಚುವುದು ಮತ್ತು ಒಂದು ಹೂವಿನ ಸ್ವಭಾವವೆಂದರೆ ಸುವಾಸನೆಯನ್ನು ಹರಡುವುದು. ಪ್ರಪಂಚದಲ್ಲಿ ಮುಳ್ಳುಗಳು ಮತ್ತು ಹೂಗಳು ಎರಡೂ ಇವೆ. ಹೂವು ಮುಳ್ಳಿನಲ್ಲಿ, "ನೀನು ಯಾಕೆ ಚುಚ್ಚುವೆ?" ಎಂದು ಕೇಳಿದರೆ, ಮುಳ್ಳು "ಅದು ನನ್ನ ಸ್ವಭಾವ" ಎಂದು ಉತ್ತರಿಸಬಹುದು.
ಪ್ರಶ್ನೆ: ಒಂದು ವ್ಯಾಪಾರವನ್ನು ನೋಡಿಕೊಳ್ಳುವ ಹುದ್ದೆಗೆ ನನ್ನನ್ನು ಭಾರತದಲ್ಲಿ ನಿಯುಕ್ತಿಗೊಳಿಸಲಾಗಿದೆ ಹೀಗಿದ್ದರೂ, ಭಾರತದಲ್ಲಿ ಜೀವಿಸಲು ನನಗೆ ಅಷ್ಟು ಹಿತವಾಗುವುದಿಲ್ಲ. ನಾನೇನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಕೆಲವೊಮ್ಮೆ ಕೆಲವು ವಿಷಯಗಳು ನಮಗೆ ಇಷ್ಟವಾಗುವುದಿಲ್ಲ, ಆದರೆ ಅದೊಂದು ವೃತ್ತಿಯಾಗಿದ್ದರೆ, ನೀನದನ್ನು ಮಾಡಬೇಕಾಗಬಹುದು. ಮನಸ್ಸಿನೊಂದಿಗೆ ಹೋಗಬೇಡ ಯಾಕೆಂದರೆ ಮನಸ್ಸಿಗೆ ಕೆಲವೊಮ್ಮೆ ಅವುಗಳನ್ನು ಮಾಡಲು ಇಷ್ಟವಾಗುತ್ತದೆ ಮತ್ತು ಕೆಲವೊಮ್ಮೆ ಅವುಗಳನ್ನು ಮಾಡಲು ಇಷ್ಟವಾಗುವುದಿಲ್ಲ. ನೀನು ನಿನ್ನ ಅಭ್ಯಾಸಗಳನ್ನು, ಧ್ಯಾನವನ್ನು, ಸತ್ಸಂಗವನ್ನು ಮತ್ತು ಸೇವೆಯನ್ನು ಮಾಡುತ್ತಾ ಇದ್ದರೆ, ನೀನು ನಿನ್ನನ್ನೇ ಎಲ್ಲೇ ಬೇಕಾದರೂ ಹಾಯಾಗಿರುವಂತೆ ಮಾಡಬಹುದು. ನಮಗೆ ಯಾವುದರ ಕಡೆಗೂ ತಿರಸ್ಕಾರ ಅಥವಾ ಕಡುಬಯಕೆ ಇರಬಾರದು. ಅದು ನಿಜವಾದ ಯೋಗ.

ಶುಕ್ರವಾರ, ಮೇ 25, 2012

ಬದುಕೇ ಒ೦ದು ಸಾಧನೆಯೆ೦ದು ಭಾವಿಸಿರಿ

ಮೇ ೨೫, ೨೦೧೨
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಗುರೂಜಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಹೇಳುತ್ತಾನೆ, 'ನನ್ನ ಹುಟ್ಟು (ಜನ್ಮ) ಮತ್ತು ಕಾರ್ಯ (ಕರ್ಮ) ಇವೆರಡು ದೈವಿಕ’ ವೆ೦ದು.  ದಯವಿಟ್ಟು ಇದನ್ನು ವಿವರಿಸಿ.

ಶ್ರೀ ಶ್ರೀ ರವಿಶಂಕರ್:
  ಹೌದು, ನೀವು ಅತ್ಮಜ್ಞಾನ ಪಡೆದಾಗ ನಿಮ್ಮ ಹುಟ್ಟು ಮತ್ತು ಕೆಲಸ ಇವೆರಡೂ ದೈವಿಕ ಎ0ಬ ತಿಳುವಳಿಕೆ ನಿಮ್ಮಲ್ಲಿ ಮೂಡುತ್ತದೆ. ತದನ೦ತರ ನಿಮ್ಮಲ್ಲಿ ಶಿಸ್ತೂ, ನೈತಿಕತೆಯೂ ಸ್ತಾಪಿತವಾಗುತ್ತವೆ. ಆಗ ನೀವು ತಪ್ಪು ಮಾಡುವುದಿಲ್ಲ, ನಿಮ್ಮ ಬಾಯಿಂದ ಒಂದು ಕೆಟ್ಟ ಶಬ್ಧ ಬರುವುದಿಲ್ಲ. ನಿಮ್ಮ ಹೃದಯದಲ್ಲಿ ಅನ್ಯರನ್ನು ಕುರಿತು ದ್ವೇಷ ಅಥವಾ ಕೆಟ್ಟ ಭಾವನೆಗಳು ಇರುವುದಿಲ್ಲ, ಏಕೆಂದರೆ ಎಲ್ಲರೂ ನಿಮ್ಮವರು, ನಿಮ್ಮ ಸ್ವಂತದವರೇ  ಎಂದು ನೀವು ಭಾವಿಸಿರುತ್ತೀರಿ. ಇದೇ ಪ್ರೀತಿಯ ಶಿಖರ.

ಈ ರೀತಿಯ ಪ್ರೀತಿಯ ಅವಸ್ಥೆಯಲ್ಲಿ ನಿಮ್ಮ ಹೃದಯದಲ್ಲಿ ಅನ್ಯರನ್ನು ದೂರೀಕರಿಸುವ ಭಾವನೆಗಳು ಇರುವುದಿಲ್ಲ. ಒಮ್ಮೆ ನಿಮ್ಮಲ್ಲಿ ಈ ಜ್ಞಾನ, ಈ ಪ್ರಜ್ಞೆ ಸ್ಥಿರವಾಗಿ ಸ್ಥಾಪಿತವಾದಾಗ ನೀವು ಸಾಂಧರ್ಭಿಕವಾಗಿ ನಿಮ್ಮನ್ನು ಅನುಭವಿಸುತ್ತೀರ. ಗೀತೆಯಲ್ಲಿ ಇದನ್ನೇ ಹೇಳಲಾಗಿದೆ 'ತತ್ ಸ್ವಯಂ ಯೋಗ ಸಂಸಿದ್ಧಾಃ ಕಾಲೇ ಆತ್ಮಾನಿ ವಿಂದತಿ'.

’ನಾನು ಈಗ ಮಾಡುತ್ತಿರುವುದು ಮತ್ತು ಹಿಂದೆ ಮಾಡಿರುವುದು ಇವೆಲ್ಲವು ದೈವ ಪ್ರೇರಣೆಯಿಂದ ಮತ್ತು ಈ ಕ್ರಿಯೆಗಳೆಲ್ಲವೂ ಆ ಪರಮಾತ್ಮನಿಗೆ ಸಮರ್ಪಣೆಯಾಗುತ್ತವೆ’ . ಮೊದಲನೆಯದಾಗಿ ನೀವು ಆ ಪರಮಾತ್ಮನಿಗೆ ಶರಣಾಗಿದ್ದೇನೆ’ ಎಂಬಷ್ಟನ್ನು ಜೀವನದಲ್ಲಿ ನೀವು ಅರ್ಥಮಾಡಿಕೊಳ್ಳಬೇಕು. ಇ೦ಥ ಭಾವನೆಯ ಪರಿಣಾಮ ಸ್ವರೂಪವಾಗಿ, ನೀವೇ ಎಸಗಿದ ತಪ್ಪುಗಳಲ್ಲಿಯೂ ನಿಮ್ಮ ಕೈವಾಡ ಇಲ್ಲದಿರುವುದನ್ನು ಕಾಣುತ್ತೀರ.

ಹಾಗೆಂದರೆ ನಿಮ್ಮಿಂದಾದ ತಪ್ಪುಗಳು ಅಥವಾ ನಿಮ್ಮಲ್ಲಿನ ನ್ಯೂನತೆಗಳನ್ನು ನೀವು ನಿರ್ಲಕ್ಷಿಸಬೇಕೆಂದಲ್ಲ. ನಿಮ್ಮಲ್ಲಿನ ಆಸೆ, ಹಂಬಲಗಳ ಕಾರಣ ನಿಮ್ಮಿಂದಾದ ತಪ್ಪುಗಳು, ಅಪಕೃತ್ಯಗಳಿಗೆ ನೀವು ಪರಿಹಾರ ಕಂಡುಕೊಳ್ಳಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು . ಈ ರೀತಿಯಲ್ಲಿ ಮುಂದುವರಿದಾಗ ನೀವು ಆ ಪ್ರೀತಿಯ ಪರಿಸ್ಥಿತಿಯನ್ನು ಸಾಧಿಸುತ್ತೀರ. ಆ ಹಂತದಲ್ಲಿ ಎಲ್ಲವು ದೈವ ಪ್ರೇರಣೆಯಿಂದ ಎಂದು ಭಾವಿಸುತ್ತೀರ.

ಪ್ರಶ್ನೆ: ಗುರೂಜಿ, ನಿಮ್ಮನ್ನು ನಾನು ಹೇಗೆ ತಿಳಿಯಲಿ, ಗುರುವು ಶರೀರವನ್ನು ಮೀರಿದವನೆಂದೊ? ಗುರುತತ್ವವನ್ನು ನಾನು ಹೇಗೆ ತಿಳಿಯಬಹುದು? ನನ್ನಲ್ಲಿಯ ಅಂತಃಕರಣ ಕಡಿಮೆಯೆಂದು ಅನಿಸುತ್ತಿದೆ.

ಶ್ರೀ ಶ್ರೀ ರವಿಶಂಕರ್:
ನಿಮ್ಮಲ್ಲಿಯ ತಿಳುವಳಿಕೆ ಕಡಿಮೆಯೆಂದು ಅನಿಸಿದರೆ ಅಷ್ಟೇ ಸಾಕು , ವಿಶ್ರಮಿಸಿ ಹಾಗು ಅಂತರ್ಯವನ್ನು ಗಮನಿಸಿರಿ. ಪ್ರೀತಿಯೆಂದರೆ ಇದೇ, ಪ್ರೀತಿ ಅಭೇದ - ’ನಾನು ಅವನಿಂದ ಬೇರೆಯಲ್ಲ ಮತ್ತು ಅವನು ನನ್ನಿಂದ ಬೇರೆಯಲ್ಲ’ ಎ೦ಬ ಭಾವ.
ನೋಡಿ, ಯಾರಾದರೂ ಒಂದು ಮಗುವನ್ನು ದೂಷಿಸಿದರೆ ಆ ಮಗುವಿನ ತಂದೆ ಏನು ಹೇಳುತ್ತಾರೆ? ನೀವು ನಮ್ಮ ಮಗುವನ್ನು ದೂಷಿಸಿದರೆ ನಮ್ಮನ್ನು ದೂಷಿಸಿದ ಹಾಗೆಯೇ, ಅಥವಾ ನೀವು ಮತ್ತೊಬ್ಬರ  ತಾಯಿ ತಂದೆಯನ್ನು ದೂಷಿಸಿದರೆ, ಅವರ ಮಗುವು ಏನು ಹೇಳುತ್ತದೆ? ನಮ್ಮ ತಂದೆ ತಾಯಿಯನ್ನು ದೂಷಿಸುವುದು ನಮ್ಮನು ದೂಷಿಸಿದ ಹಾಗೆಯೇ. ಈ ರೀತಿ ಅವರು ಇದನ್ನು ವಿರೋದಿಸುತ್ತಾರೆ ಅಲ್ಲವೇ? ಹಾಗೆಂದರೆ ಅವರಲ್ಲಿ ಒಗ್ಗಟ್ಟಿದೆ. ಈ ರೀತಿಯ ಒಗ್ಗಟ್ಟು ಮತ್ತು ಐಕ್ಯತ್ವದ ಭಾವನೆಗಳು ಪ್ರೀತಿಯ ಸಂಕೇತ.

ಪ್ರಶ್ನೆ: ಗುರೂಜಿ, ಗರುಡ ಪುರಾಣದಲ್ಲಿ ಮರಣಾನಂತರದ ವಿವರಣೆ ಭಯಾನಕವಾಗಿದೆ, ಆದರೆ ನೀವು 'ಸಾವು ಸುಂದರವಾದ ಧೀರ್ಘ ವಿಶ್ರಾಂತಿಯಂತೆ ' ಎಂದು ಹೇಳಿದ್ದೀರ .  ದಯವಿಟ್ಟು ಇದರ ಮೇಲೆ ಬೆಳಕು ಚೆಲ್ಲಿ.

ಶ್ರೀ ಶ್ರೀ:
ಹೌದು, ನಾವು ಮರಣದ ಬಗ್ಗೆ ಆಮೇಲೆ ಮಾತನಾಡೋಣ. ಇದೀಗ ನಾವು ಬದುಕಿನ ಬಗ್ಗೆ ಮಾತನಾಡೋಣ. ಈ ಬದುಕಿನಲ್ಲಿಯೇ ನಾವು ತೃಪ್ತರಾಗಿ, ಧನ್ಯತಾ ಭಾವನೆಯುಳ್ಳವರಾಗಿ ನಿರ್ಗಮಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ನಾವು ನಮ್ಮ ಕಡೆಗಾಲದಲ್ಲಿಯೂ ದುಃಖಿತರಾಗಿ ಅಥವಾ ಬೇರೆಯವರನ್ನು ದೂಷಿಸುತ್ತಾ ಅಥವಾ ಶಪಿಸುತ್ತಾ, ಕೋಪದಿಂದ ಇದ್ದಲ್ಲಿ ಸಮಸ್ಯೆ ಉಂಟಾಗುತ್ತದೆ. ಬದುಕಿನ ಕೊನೆವರೆಗೂ ವಿಶೇಷವಾಗಿ ವರ್ತಿಸಿ ಅ೦ತಿಮ ಕ್ಷಣದಲ್ಲಿ ನಮ್ಮ ದೇಹವನ್ನು ನಾವು ಸಂತೋಷದಿಂದ, ತೃಪ್ತಿಯಿಂದ ಬಿಡಬೇಕು.

ಬದುಕಿನ ಕಡೇ ಕ್ಷಣ ಯಾವಾಗ ಎ೦ದು ನಮಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದಾಕಾಲ ಸಂತೋಷದಿಂದ ಪ್ರಸನ್ನತೆಯಿಂದ ಜೀವಿಸಿರಿ.

ಪ್ರಶ್ನೆ: ಅತ್ಮವು ಚಿರಾಯುವೇ ಅಲ್ಲವೆ ? ಭೂಲೋಕದಲ್ಲಿ ನಾವು ಕಳೆಯುವ ಒಂದು ವರ್ಷವು ಪಿತೃಲೋಕದಲ್ಲಿ ನಮ್ಮ ಪೂರ್ವಜರು ಕಳೆಯುವ ಒಂದು ದಿನಕ್ಕೆ ಸಮ ಎಂದು ಏಕೆ ಹೇಳುತ್ತೇವೆ ?

ಶ್ರೀ ಶ್ರೀ :
ಅದು ಹಾಗೆಯೇ. ಭೂಲೋಕದ ನಮ್ಮ ಜೀವನದ ಒಂದು ವರ್ಷವು ನಮ್ಮ ಪೂರ್ವಜರ ಲೋಕದ ಒಂದು ದಿನಕ್ಕೆ ಸಮಾನವಾಗಿದೆ. ಶಾಸ್ತ್ರಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ನಾವೆಲ್ಲ ಅಲ್ಲಿಗೆ ಹೋಗಿ ಹಿಂದಿರುಗಿದ್ದೀವಿ, ಆದರೆ ನಮಗೆ ಆ ಸಮಯದ ನೆನಪಿಲ್ಲ. ನಿಮಗೆ ನೀವು ಅಲ್ಲಿ ಕಳೆದ ಸಮಯದ ಅರಿವಿಲ್ಲವಾದ್ದರಿಂದ ಅದನ್ನು ನಂಬಲೇಬೇಕು.

ಪ್ರಶ್ನೆ: ಗುರೂಜಿ ನೀವು ಶಿವನ ಬಗ್ಗೆ ಬಹಳಷ್ಟು ಹೇಳಿದ್ದೀರಿ, ಲಿಂಗರೂಪಿಯಾದ ಶಿವನನ್ನು ನಾವು ನೋಡುತ್ತೇವೆ ಮತ್ತು ಆರಾಧಿಸುತ್ತೇವೆ, ಭಗವ೦ತ ಆಕಾರರಹಿತನಾದರೂ ಈ ಮೂರ್ತಿಪೂಜೆಯೇಕೆ?
ಶ್ರೀ ಶ್ರೀ ರವಿಶಂಕರ್:
ಲಿಂಗ ಎಂದರೆ ಗುರುತು ಎಂದರ್ಥ, ಯಾವ ಒಂದು ಚಿಹ್ನೆಯ ಮೂಲಕ ನೀವು ಸತ್ಯವನ್ನು ಗುರುತಿಸಬಹುದೋ, ಯಾವುದು ಕಾಣಿಸದಿದ್ದರೂ ಒಂದು ರೀತಿಯಲ್ಲಿ ಗುರುತಿಸಲು ಸಾಧ್ಯವೋ ಅದು ಲಿಂಗ. ಹುಟ್ಟಿದ ಶಿಶುವು ಗಂಡು ಹೆಣ್ಣು ಎಂದು ಹೇಗೆ ತಿಳಿಯುವಿರಿ? ಶರೀರದ ಒಂದು ಅಂಗದಿಂದ ಮಾತ್ರ ಶಿಶುವು ಗಂಡು ಹೆಣ್ಣು ಎಂದು ನೀವು ಗುರುತಿಸಬಹುದು. ಇದರ ಹೊರತು ಎಲ್ಲಾ ಮಕ್ಕಳು ಸ್ವಲ್ಪ ವಯಸ್ಸಿನವರೆಗೆ ಒಂದೇ ರೀತಿಯಲ್ಲಿ ಕಾಣುತ್ತಾರೆ. ಭವಿಷ್ಯವನ್ನು ಒಂದು ಭಾಗ ಮಾತ್ರ ಹೇಳುತ್ತದೆ . ಈ ಕಾರಣದಿಂದ ಶರೀರದ ಆ ಅಂಗವನ್ನು ಲಿಂಗವೆಂದು ಹೇಳಬಹುದು .

ಅ೦ತೆಯೇ ಈ ಸೃಷ್ಟಿಯ ಪ್ರಭುವನ್ನು ಹೇಗೆ ಗುರುತಿಸುವಿರಿ? ಅವನಿಗೆ ಆಕಾರವಿಲ್ಲ, ಹಾಗಾದರೆ ಆತನನ್ನು ಗುರುತಿಸಲು ಒಂದು ಚಿಹ್ನೆ ಇರಬೇಕು ಎಂದು ಹೇಳಲಾಯಿತು. ಯಾವ ಅ೦ಗಗಳ ಮೂಲಕ ನೀವು ಸ್ತ್ರೀ ಮತ್ತು ಪುರುಷರನ್ನು ಗುರುತ್ತಿಸುತ್ತೀರೋ, ಅವೆರಡನ್ನೂ ಒಗ್ಗೂಡಿಸಲ್ಪಟ್ಟ ಒಂದು ಚಿಹ್ನೆಯಿಂದ. ಆಕಾರ ಮತ್ತು ಗುರುತುಗಳಿಲ್ಲದ, ಸಮಸ್ತ ಬ್ರಹ್ಮಾಂಡದಲ್ಲಿ ವ್ಯಾಪ್ತನಾಗಿರುವ ಈ ಸೃಷ್ಠಿಯ ಒಡೆಯನನ್ನು ಗುರುತಿಸಲು ನಾವು ಆರಿಸಿಕೊ೦ಡ ಚಿಹ್ನೆ ಶಿವ ಲಿಂಗ.

ಆದುದರಿಂದಲೇ ಈ ರೀತಿ ಹೇಳಲಾಗಿದೆ, ’ನಮಾಮಿಶಮೀಶಾನ ನಿರ್ವಾಣರೂಪಂ ವಿಭುಂ ವ್ಯಾಪಕ೦ ಬ್ರಹ್ಮವೇದಸ್ವರೂಪ೦ ನಿರ್ವಾಣರೂಪಂ - ಆತನಿಗೆ ಶರೀರವಾಗಲಿ ಆಕಾರವಾಗಲಿ ಇಲ್ಲ; ವಿಭುಂ - ಆತನು ಎಲ್ಲೆಡೆಯೂ ಇರುವನು, ಬ್ರಹ್ಮವೇದಸ್ವರೂಪಂ - ಆತನು ಪರಮಜ್ಞಾನಮೂರ್ತಿ.      

ನೋಡಿ, ಅಂತರ್ಜಾಲ ಮತ್ತು ದೂರವಾಣಿಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? ಇವೆಲ್ಲಾ ಹೇಗೆ ಕೆಲಸ ಮಾಡುತ್ತವೆ?

ಆಕಾಶದಲ್ಲಿ ಪ್ರತಿ ಕಣವೂ ಜ್ಞಾನ ಭರಿತವಾಗಿದೆ. ಇದೀಗ ಇಲ್ಲಿ, ನಾವು ಕುಳಿತಿರುವಲ್ಲಿ, ಪ್ರಪಂಚದ ಅದೆಷ್ಟೋ ವಾಹಿನಿಗಳು ಚಾಲ್ತಿಯಲ್ಲಿವೆ. ಅದೆಷ್ಟೊ ಕಂಪನಗಳು ಇಲ್ಲಿವೆ . ಆದುದರಿಂದಲೇ ನಮ್ಮ ಕಂಪ್ಯೂಟರಲ್ಲಿ ಅವು ಇ-ಮೇಲ್ ರೂಪದಲ್ಲಿ ವ್ಯಕ್ತಗೊಳ್ಳಲು ಸಾಧ್ಯವಾಗಿದೆ.

ನೀವು ಎಸ್-ಎಮ್-ಎಸ್ ನಲ್ಲಿ ಮುದ್ರಿಸಿ ಕಳಿಸುವ ಅಕ್ಷರಗಳು ಈ ಆಕಾಶದಲ್ಲಿವೆ! ನೀವು ಯಾರೋರ್ವರ ಮೇಲೆ ಕೋಪಿಸಿಕೊ೦ಡರೆ ಆ ಪ್ರಕ್ರಿಯೆ ಆಕಾಶದಲ್ಲಿ ಲೀನವಾಗುತ್ತದೆ, ನೀವು ಯಾರನ್ನಾದರೂ ಅಭಿನಂದಿಸಿದರೆ ಅದು ಕೂಡ ಆಕಾಶಾನ್ಮುಖವಾಗಿ ಸಾಗುತ್ತದೆ. ಈ ರೀತಿಯಲ್ಲಿ ಅವು ನಮ್ಮ ’ಸೆಲ್ ಫ಼ೋನ್'ಗಳಿಗೆ ಲಭ್ಯವಾಗುತ್ತದೆ, ಈ ಕಾರಣದಿಂದಲೇ ಆಕಾಶ ತತ್ವದಲ್ಲಿ ಜ್ಞಾನವು ಸಹಜವಾಗಿದೆ. ಇಂದಿನ ಜ್ಞಾನ ಮಾತ್ರವಲ್ಲ, ಹಿಂದಿನ ಸಾವಿರಾರು ವರ್ಷಗಳ ಜ್ಞಾನವು ಇಲ್ಲಿದೆ. ಇದೀಗ ಈ ಕ್ಷಣದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಮತ್ತು ಮುಂದಿನ ಸಾವಿರಾರು ವರ್ಷಗಳ ನಂತರ ನಡೆಯುವುದನ್ನು ನೋಡಬಹುದು, ಏಕೆಂದರೆ ಎಲ್ಲವೂ ಆಕಾಶ ತತ್ವದಲ್ಲಿ ಲಿಖಿತವಾಗಿವೆ, ದಾಖಲಾಗಿವೆ ಮತ್ತು ಅವೆಲ್ಲ ಇದೀಗ ಇಲ್ಲಿ ವರ್ತಮಾನದಲ್ಲಿವೆ.

ಹಾಗಾದರೆ ಆಕಾಶ ತತ್ವವನ್ನು ಹೇಗೆ ಗುರುತಿಸಬಹುದು? ನಮ್ಮ ಪೂರ್ವಿಕರು ಒಂದು ಗುಂಡು ಕಲ್ಲನ್ನು ಪ್ರತಿಷ್ಠಾಪಿಸಿದರು, ಅದರ ಮೂಲಕ ನಾವು ಸೃಷ್ಠಿಕರ್ತನನ್ನು ಸ್ಮರಿಸುತ್ತೇವೆ.

ಪ್ರಶ್ನೆ: ಗುರುದೇವ , ಜ್ಞಾನ ಮತ್ತು ಭಕ್ತಿಗಳ ಸಂಬಂದವೇನು? ಜ್ಞಾನವಿಲ್ಲದ ಭಕ್ತಿಯು ಫಲಕಾರಿಯೆ?

ಶ್ರೀ ಶ್ರೀ ರವಿಶಂಕರ್:
ನಿಮಗೆ ರಸಗುಲ್ಲ ಇಷ್ಟವಾದರೆ ಮಾತ್ರ ಅದನ್ನು ತಿನ್ನಲು ಆಸೆ ಪಡುತ್ತೀರ ಅಲ್ಲವೇ? ಏನೂ ಅರಿಯದ ವಸ್ತುವಿನಲ್ಲಿ ನಿಮಗೆ ಆಸಕ್ತಿ ಇರಲು ಹೇಗೆ ಸಾಧ್ಯ? ಭಕ್ತಿ ಇಷ್ಟವಾಗುತ್ತದೆ - ಹೌದೆ? ಈಗ ಆಲೋಚಿಸಿ ನೀವು ಯಾವುದನ್ನು ಪ್ರೀತಿಸುತ್ತೀರ ಅಥವಾ ಯಾತಕ್ಕಾಗಿ ಆಸೆ ಪಡುತ್ತೀರ? ಯಾವುದರ ಬಗ್ಗೆ ನೀವು ಸ್ವಲ್ಪ ಈಗಾಗಲೇ ತಿಳಿದಿರುವಿರೋ ಅದನ್ನು; ಈ ತಿಳುವಳಿಕೆಯೇ ಜ್ಞಾನ. ಒಮ್ಮೆ ನೀವು ಯಾರನ್ನಾದರೂ ಅಥವಾ ಯಾವುದನ್ನಾದರೂ ಇಷ್ಟ ಪಟ್ಟಾಗ ನೀವು ಆ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಲು ಶ್ರಮಿಸುತ್ತೀರ.

ಸಾಮಾನ್ಯವಾಗಿ ಪತಿ ಪತ್ನಿಯರಲ್ಲಿ ಇದೇ ರೀತಿ ಇರುತ್ತದೆ. ವಿವಾಹಕ್ಕೆ ಪೂರ್ವದಲ್ಲಿಯೇ ಅವರು ಪರಸ್ಪರ ಪ್ರೀತಿಸುತ್ತಾರೆ ಮತ್ತು ವಿವಾಹದ ನಂತರ ಒಬ್ಬರನೊಬ್ಬರು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಪರಸ್ಪರರು ಏನು ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಬೇರೆ ಬೇರೆ ನಗರಗಳಲ್ಲಿದ್ದರೂ ದೂರವಾಣಿಯಲ್ಲಿ, ’ನೀನು ಈಗ ಏನು ಮಾಡುತ್ತಿರುವೆ? ನೀನು ಏನು ತಿಂದೆ?” ಎಂದು ವಿಚಾರಿಸುತ್ತಾರೆ. ತಾಯಿ ಸಹಜವಾಗಿಯೇ ತನ್ನ ಮಕ್ಕಳು ಬೇರೆ ನಗರದಲ್ಲಿದಾಗ ವಿಚಾರಿಸುತ್ತಾಳೆ, ’ನೀನು ಇಂದು ಏನು ತಿಂದೆ? ಎಲ್ಲಿಗೆ ಹೋಗಿದ್ದೆ? ಯಾವ ಉಡುಪು ಧರಿಸಿದ್ದೆ?’

ನಿಮಗೆ ಪ್ರೀತಿಪಾತ್ರರಾದವರು ನಿಮ್ಮಿಂದ ದೂರದಲ್ಲಿದ್ದಾಗ ಅವರು ಏನು ಮಾಡುತ್ತಿದ್ದಾರೆ ಏನು ಧರಿಸಿದ್ದಾರೆ ಎಂದೆಲ್ಲಾ ತಿಳಿಯುವ ಕಾತುರತೆ ನಿಮ್ಮಲ್ಲಿರುತ್ತದೆ. ಅವರನ್ನು ನಾವು ಪ್ರೀತಿಸುವ ಕಾರಣದಿಂದಲೇ ನಾವು ಅವರ ಬಗ್ಗೆ ಎಲ್ಲವನ್ನೂ ತಿಳಿಯುವ ಪ್ರಯತ್ನ ಮಾಡುತ್ತೇವೆ. ಅದಕ್ಕೇ ವೈವಾಹಿಕ ಜೀವನದಲ್ಲಿ ಪತಿ-ಪತ್ನಿ  ಒಬ್ಬರನ್ನೊಬ್ಬರು ಆ೦ತರಿಕವಾಗಿ ತಿಳಿಯುತ್ತಿದ್ದಾರೆ ಎಂದೆನಿಸುತ್ತದೆ. ಇದು ಸರಳ ಮತ್ತು ಸ್ವಾಭಾವಿಕ.   

ಜ್ಞಾನವಿರುವಲ್ಲಿ ಪ್ರೀತಿಯು ತನ್ನಷ್ಟಕ್ಕೆ ತಾನೇ ಅರಳುತ್ತದೆ. ಒಬ್ಬ ಗಗನವಿಜ್ಞಾನಿಯು ಈ ವಿಶ್ವದ ಬಗ್ಗೆ ಹೆಚ್ಚೆಚ್ಚು ತಿಳಿಯುತ್ತಾ ಆತನ ಆಸಕ್ತಿಯು ಎಷ್ಟು ಹೆಚ್ಚುತ್ತದೆಯೆಂದರೆ ಅವನು ಅದರಲ್ಲಿ ಸಂಪೂರ್ಣವಾಗಿ ವಿಲೀನನಾಗುತ್ತಾನೆ. ಆ ವಿಷಯದಲ್ಲಿ ಪ್ರೀತಿಯುಳ್ಳವನಾಗುತ್ತಾನೆ. ಆದ್ದರಿಂದಲೇ ಪ್ರೀತಿ ಮತ್ತು ಭಕ್ತಿ ಗಳನ್ನು ನೀವು ಬೇರ್ಪಡಿಸಲಾಗುವುದಿಲ್ಲ. ಪ್ರಾರಂಭದಲ್ಲಿ, ಜ್ಞಾನವಿದ್ದಲ್ಲಿ ಭಕ್ತಿಯು ಮೂಡುತ್ತದೆ. ಹಾಗೆಯೇ ಭಕ್ತಿಯಿರುವಲ್ಲಿಗೆ ಜ್ಞಾನವು ತಡಮಾಡದೆ ಧಾವಿಸುತ್ತದೆ. ಆದಕಾರಣ ಪ್ರೀತಿ ಮತ್ತು ಭಕ್ತಿ ಎಂದೂ ವಿಭಿನ್ನವಾಗಿರುವ ಮಾರ್ಗಗಳೆಂದು ಭಾವಿಸಬೇಡಿರಿ.      

ಪ್ರಶ್ನೆ: ಗುರುದೇವ, ಸುಖ ದಾಂಪತ್ಯಕ್ಕೆ ಪತಿ-ಪತ್ನಿ ಪಾತ್ರಗಳೇನೆ೦ದು ತಿಳಿಸಿರುತ್ತೀರ, ಇಂದು ದಯವಿಟ್ಟು ದಾಂಪತ್ಯದ ಯಶಸ್ಸಿಗೆ ಅತ್ತೆ, ಮಾವಂದಿರ ಪಾತ್ರಗಳನ್ನು ತಿಳಿಸಿರಿ.

ಶ್ರೀ ಶ್ರೀ ರವಿಶಂಕರ್:
ನಿಮ್ಮ ತಾಯಿ-ತಂದೆ ನಿಮ್ಮನ್ನು ಹಲವು ಬಾರಿ ದೂಷಿಸಿರುತ್ತಾರೆ, ಅಲ್ಲವೇ? ನಿಮ್ಮ ತಾಯಿಯು ನಿಮ್ಮನ್ನು ದೂಷಿಸುವುದನ್ನು ನೀವು ಸುಲಭವಾಗಿ ಸ್ವೀಕರಿಸುತ್ತೀರ. ಆದರೆ ಇದೇ ರೀತಿ ನಿಮ್ಮ ಅತ್ತೆ ನಿಮ್ಮನ್ನು ದೂಷಿಸಿದರೆ ನಿಮಗೆ ನೋವಾಗುತ್ತದೆ ಮತ್ತು ಕ್ಷೋಭೆಗೊಳಗಾಗುತ್ತೀರ. ನಿಮ್ಮ ಗಂಟಲಿನಲ್ಲಿ ಏನೊ ಸಿಕ್ಕಿಕೊಂಡ ಹಾಗೆ ಅನಿಸುತ್ತದೆ. ವಾಸ್ತವದಲ್ಲಿ ನಿಮ್ಮ ಅತ್ತೆಯವರಾಗಲಿ ಅಥವಾ ನಿಮ್ಮ ಮಾವನವರಾಗಲಿ ನಿಮಗೆ ಏನಾದರೂ ಹೇಳುವ ಮುನ್ನ ಸ್ವಲ್ಪ ಹಿಂಜರಿಯುತ್ತಾರೆ. ನಿಮ್ಮ ಪೋಷಕರು ನಿಮ್ಮನ್ನು ದೂಷಿಸುವಷ್ಟು ಅಧಿಕಾರದಲ್ಲಿ ಸೊಸೆಯನ್ನಾಗಲಿ ಅಥವಾ ಅಳಿಯನ್ನಾಗಲಿ ದೂಷಿಸುವುದಿಲ್ಲ. ಮತ್ತು ಯಾರಾದರೂ ನಿಮ್ಮಲ್ಲಿ ಅಧಿಕಾರದ ಭಾವನೆಯಿಂದ ವರ್ತಿಸಿದಾಗ ಕೆಲುವೊಮ್ಮೆ ಅವರು ನಿಮ್ಮನ್ನು ದೂಷಿಸುವುದು ಅಥವಾ ಅಹಿತವಾಗಿ ವರ್ತಿಸುವುದುಂಟು. ಆದರೆ ಅದರಿಂದ ನಿಮಗೆ ನೋವಾಗುತ್ತದೆ ಏಕೆಂದರೆ ನೀವು ಅವರನ್ನು ನಿಮ್ಮ ಸ್ವಂತದವರೆಂದು ತಿಳಿದಿರುವುದಿಲ್ಲ, ಅವರು ಅಪರಿಚಿತರೆ೦ಬುದು ನಿಮ್ಮ ಭಾವನೆ. ನಿಮ್ಮ ಅತ್ತೆಯವರನ್ನು ತಾಯಿಯಂತೆ ಭಾವಿಸಿದಲ್ಲಿ, ಪರಸ್ಪರ ವಿವಾದಗಳ ಬಳಿಕ ನೀವು ಅವರನ್ನು ಅಪ್ಪಿಕೊಳ್ಳುವಿರಿ. ಅಪರಿಚಿತರಂತೆ ಭಾವಿಸಿದರೆ ವಿವಾದಗಳ ಬಳಿಕ ಅವರೇ ನಿಮ್ಮನ್ನು ಕ್ಷಮಾಪಣೆ ಕೇಳಲಿ ಅಥವಾ ನಿಮ್ಮನ್ನು ಓಲೈಸಲಿ ಎಂದು ನಿರೀಕ್ಷಿಸುತ್ತೀರ. ವಾಸ್ತವದಲ್ಲಿ, ನಿಮ್ಮ ಅತ್ತೆ ಅಥವಾ ಮಾವ ನಿಮ್ಮನ್ನು ದೂಷಿಸಿದರೆ ಅದು ಒಳ್ಳೆಯ ವಿಷಯವೇ! ನಿಮ್ಮ ಕೊರತೆಯನ್ನು ನೀವು ಅರಿಯಲು ಅದು ಸಹಾಯಕ!! ಅವರು ನಿಮ್ಮಲ್ಲಿ ಮತ್ತು ತಮ್ಮ ಮಕ್ಕಳಲ್ಲಿ ಏನೂ ವ್ಯತ್ಯಾಸ ಕಾಣುತ್ತಿಲ್ಲ ಎ೦ಬುದನ್ನು ನೀವು ಅರ್ಥಮಾಡಿಕೊಳ್ಳಬೇಕು .

ಎಂದಿಗೂ ನೀವು ನಿಮ್ಮ ತಾಯಿಯೊಡನೆ ಜಗಳವಾಡಿಲ್ಲವೆ? ಒಮ್ಮೆ ಹೋಲಿಸಿ, ಎರಡನ್ನೂ ಗಮನವಿಟ್ಟು ನೋಡಿ! ಅದೆಷ್ಟೋ ಬಾರಿ ನೀವು ನಿಮ್ಮ ತಾಯಿಯೊಡನೆ ಜಗಳವಾಡಿದ್ದೀರ, ಬಹಳಷ್ಟು ಬಾರಿ ಅವರು ನಿಮ್ಮನ್ನು ದೂಷಿಸಿದ್ದಾರೆ, ಆದರೆ ಎಂದಾದರೂ ಅ೦ಥ ಸನ್ನಿವೇಶ ನಿಮ್ಮ ಹೃದಯವನ್ನು ಬಾಧಿಸಿದ್ದು೦ಟೆ? ಸ್ವಲ್ಪ ಸಹ ಇಲ್ಲ, ನೀವು ಅದನ್ನು ಲಕ್ಷಿಸುವುದೇ ಇಲ್ಲ.

ಎ೦ದು ತಾಯಿಯೊಡನೆ ಜಗಳವಾಡುವಿರೋ ಅಂದೇ ಅವರನ್ನು ಓಲೈಸುತ್ತೀರ ಮತ್ತು ಏನೂ ಆಗದಂತೆ ಅವರೊಡನೆ ಕುಳಿತು ಮಾತಾಡುತ್ತೀರ. ನಿಮ್ಮ ಅತ್ತೆಯವರೊಡನೆಯೂ ಈ ರೀತಿಯೇ ವರ್ತಿಸಿರಿ! ಕಾದಾಡಿದ ಬಳಿಕ ಅವರೊಡನೆ ಕುಳಿತು ಮಾತಾಡಿರಿ, ನಿಮ್ಮ ತಾಯಿಯ ಬಳಿ ನೀವು ಇರುವಂತೆಯೇ. ಜಗಳವನ್ನು ಹೃದಯದ ಸಮೀಪಕ್ಕೆ ಎಳೆದುಕೊಳ್ಳಬೇಡಿ, ನಿಧಾನವಾಗಿ ಅವರೂ ಕೂಡ ನಿಮ್ಮ ಬಗ್ಗೆ ಅವರು ಹೊ೦ದಿರುವ ಭಾವನೆಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅವರ ಹೃದಯವೂ ಬದಲಾಗುತ್ತದೆ.

ಪ್ರೀತಿಯಿಂದ ನೀವು ಯಾರನ್ನಾದರೂ ಏನು, ಪ್ರತಿಯೊಬ್ಬರನ್ನೂ ಗೆಲ್ಲಬಹುದು. ನಿಮ್ಮಲ್ಲಿಯ ಸಂಕಲ್ಪದಿಂದ ನೀವು ಅವರನ್ನು ಗೆಲ್ಲಬಹುದು. ಪ್ರೀತಿ ಮತ್ತು ಸಂಕಲ್ಪಗಳೆರಡೂ ಸೋತರೆ ಪ್ರಾರ್ಥನೆ ಮಾಡಿ, ಕೃಪೆಯಿಂದ ನೀವು ಖಂಡಿತ ಜಯಿಸುತ್ತೀರ.

ಪ್ರಶ್ನೆ:  ಗುರೂಜಿ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಪರಮಾತ್ಮನೆಂದು ಮತ್ತು ಆತನೇ ಸರ್ವಸ್ವವೆಂದು ಹೇಳಲಾಗಿದೆ. ಶಿವ ತತ್ತ್ವದಲ್ಲಿ ಸರ್ವಸ್ವವೂ ಶಿವನೇ ಎಂಬ ಉಲ್ಲೇಖ ಇದೆ. ಎ೦ದಾಗ ಯಾವುದು ಸತ್ಯ?

ಶ್ರೀ ಶ್ರೀ ರವಿಶಂಕರ್:
ಎರಡೂ, ಏಕೆಂದರೆ ಇವರಿಬ್ಬರಲ್ಲಿ ಏನೂ ವ್ಯತ್ಯಾಸವಿಲ್ಲ. ಶಿವನಾರೋ ಅವನೇ ಕೃಷ್ಣ ಮತ್ತು ಆ ಪರಮಾತ್ಮನೇ ಸರ್ವಸ್ವ. ಆ ಈರ್ವರು ಬೇರೆಯಲ್ಲ, ಒಬ್ಬರೇ. ಓರ್ವ ಋಷಿವರರು ಹರಿ ಹರರು ಬೇರೆಯೆಂದು ನಂಬಿದ್ದರು. ಕೆಲವರು ಹರಿನಾಮ ಸ್ಮರಿಸಿದರೆ ಮತ್ತು ಕೆಲವರು ಹರನನ್ನು ಸ್ಮರಿಸುತ್ತಿದ್ದದ್ದರಿ೦ದ ಅವರಲ್ಲಿ ಆ ಭಾವನೆಯಿತ್ತು. ಅದಕ್ಕೇ ಭಗವಂತ, ಆ ಸಂತನಿಗೆ ತನ್ನ ಸ್ವರೂಪವನ್ನು ದರ್ಶಿಸಿದ. ಆ ಸ್ವರೂಪದಲ್ಲಿ ಭಗವಂತ ಅರ್ಧ ಹರಿ ಮತ್ತು ಅರ್ಧ ಹರನ ರೂಪದಲ್ಲಿ ಕಾಣಿಸಿಕೊ೦ಡು ಸಾಧುವಿಗೆ ಹರಿ ಹರರು ಬೇರೆಯಲ್ಲವೆಂದು ತಿಳಿಸಿದ.

ಇದೇ ರೀತಿ ಕೆಲವರು ಶಿವ, ಶಕ್ತಿ  ಬೇರೆಬೇರೆಯೆಂಬ ಅಭಿಪ್ರಾಯದಲ್ಲಿರುತ್ತಾರೆ. ಭೃ೦ಗಿಯೆಂಬ ಮುನಿಶ್ರೇಷ್ಠರು ಇದೇ ರೀತಿಯ ಭಾವನೆ ಹೊ೦ದಿದ್ದರು. ಪುರುಷ ಸ್ವರೂಪವು ಸ್ತ್ರೀ ಸ್ವರೂಪಕ್ಕಿಂತ ಶ್ರೇಷ್ಠವೆಂದು ತಿಳಿದಿದ್ದರು.

ಹಲವು ಜಾತಿ ವರ್ಗಗಳಲ್ಲಿ, ಸ್ತ್ರೀಯರಿಗೆ ಯೋಗ್ಯವಾದ ಸ್ಥಾನಮಾನಗಳು ದೊರೆತಿಲ್ಲ, ಅವರನ್ನು ಕೀಳಾಗಿ ಕಾಣುತ್ತಾರೆ ಮತ್ತು ಪುರುಷರಿಗೆ ಮಾತ್ರ ಪ್ರಾಧಾನ್ಯತೆ ಕೊಡುತ್ತಾರೆ.
ಪುರುಷ ತತ್ವ ಸ್ತ್ರೀ ತತ್ವಕ್ಕಿ೦ತ ಶ್ರೇಷ್ಠವೆ೦ದು ಭಾವಿಸುವವರ ಗು೦ಪಿನಲ್ಲಿ ಋಷಿ ಭೃ೦ಗಿಯೂ ಓರ್ವರಾಗಿದ್ದರು.
.
ಹಲವು ಧರ್ಮೀಯರು ಹಕ್ಕಿಗೆ ಅನುಗುಣವಾದ ಸ್ಥಾನಮಾನಗಳನ್ನು ಮಹಿಳೆಯರಿಗೆ ನೀಡುತ್ತಿಲ್ಲ. ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನ ನೀಡಿ, ಪುರುಷರು ಶ್ರೇಷ್ಠರೆ೦ದು ಅವರು ಪರಿಗಣಿಸುತ್ತಾರೆ.

ಕೆಲುವೊಮ್ಮೆ ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳು ಕೂಡ ಹಾದಿ ತಪ್ಪುತ್ತಾರೆ. ಅವರೆಲ್ಲಾ ಒಳ್ಳೆಯವರೆ, ಆದರೆ ತಪ್ಪು ಅಭಿಪ್ರಾಯಗಳನ್ನು ಹೊಂದಿರುತ್ತಾರೆ, ಅವರ ಬುದ್ಧಿ ಶಕ್ತಿಗೆ ಮೋಡ ಕವಿದಂತಾಗುತ್ತದೆ , ಆದಕಾರಣ ಭೃಂಗಿ ಋಷಿಗಳಿಗೆ ಯೋಗ್ಯವಾದ ಜ್ಞಾನ ತರಲು ಭಗವಂತನು ಆತನಿಗೆ ತನ್ನ ಪುರುಷ ಮತ್ತು ಸ್ತ್ರೀ ಅವತಾರವನ್ನು ದರ್ಶಿಸಿದರು. ಅರ್ಧ ಶಿವ ಮತ್ತು ಅರ್ಧ ಶಕ್ತಿ (ಅರ್ಧನಾರೀಶ್ವರ) ಸ್ವರೂಪವನ್ನು ದರ್ಶಿಸಿದ ಋಷಿ ಭೃಂಗಿಗೆ , ಭಗವಂತನ ಶಿವ ಸ್ವರೂಪಕ್ಕೆ ಮಾತ್ರ ಪ್ರದಕ್ಷಿಣೆ ಮಾಡಲು ಸಾಧ್ಯವಾಗಲಿಲ್ಲ ಏಕೆಂದರೆ ಎರಡೂ ರೂಪಗಳು , ಒಂದೇ ಅವತಾರದಲ್ಲಿತ್ತು. ಆದರಿಂದ ಆತನು ಎರಡು ರೂಪಗಳಿಗೂ ಪ್ರದಕ್ಷಿಸುತ್ತ , ಶಕ್ತಿಯನ್ನು ಪೂಜಿಸಿದರು.

ಒಬ್ಬ ಪುರುಷನಿಗೆ ಸಲ್ಲುವ ಗೌರವವು ಒಬ್ಬ ಮಹಿಳೆಗೂ ಸಲ್ಲಬೇಕು . ಸ್ತ್ರೀ ಪುರುಷರಲ್ಲಿ ಬೇದ ಮಾಡಬಾರದು. ಇಂದಿಗೂ ನಾವು ವಿಚಾರಮಾಡುವ , ಸ್ತ್ರೀ ಸಬಲತೆ ಎಂಬ ವಿಷಯವನ್ನು ನೂರಾರು ವಾರ್ಷಗಳ ಹಿಂದೆ ನಮ್ಮ ದೇಶದಲ್ಲಿ ಚರ್ಚಿಸಿದ್ದಾರೆ. ಅರ್ಧನಾರೀಶ್ವರನ ಅವತಾರದಲ್ಲಿ ಭಗವಂತನು ಈ ಜ್ಞಾನವನ್ನು ಭೃಂಗಿ ಋಷಿಗಳಿಗೆ ತಿಳಿಸಿದರು.

ಭೃಂಗಿ ಎಂಬ ಪದದ ಅರ್ಥವು , ಒಂದು ದೊಡ್ದ ಜೇನು ನೊಣ ಎಂದು. ಭೃಂಗಿ ಋಷಿಗಳ ಹೃದಯದಲ್ಲಿ ದೈವ ಭಕ್ತಿಯು ಅಚಲವಾಗಿ ಅನುರಣಿಸುತ್ತಿತ್ತು,
ಸತತವಾಗಿ ಝೇಂಕರಿಸುವ ಜೇನಿನ ಶಬ್ದದ ಹಾಗೆ. ಹೇಗೆ ಒಂದು ದುಂಬಿಯು ಹೂವಿಂದ ಹೂವಿಗೆ ಹಾರುತ್ತಾ ಮಕರಂದವನ್ನು ಮಾತ್ರ ಸ್ವೀಕರಿಸುತ್ತದೆಯೋ , ಅದೇ ರೀತಿ ಋಷಿ ಭೃಂಗಿಯು ಒಬ್ಬ ಮನುಷ್ಯನಲ್ಲಿ ಶಿವ ತತ್ತ್ವವನ್ನು ಮಾತ್ರ ಹುಡುಕ್ಕುತ್ತಿದ್ದರು ಮತ್ತು ಸ್ವೀಕಾರ ಮಾಡುತ್ತಿದ್ದರು. ಅಂತಹ ಮಹಾ ಭಕ್ತರಾಗಿದ್ದರು. ಆದರೆ ಸ್ತ್ರೀಯರನ್ನು ಅಷ್ಟು ಗೌರವಿಸದ ಕಾರಣ , ಭಗವಂತನು ಸ್ತ್ರೀ ಮತ್ತು ಪುರುಷನ ಅವತಾರವನ್ನು ದರ್ಶನ ಕೊಟ್ಟು ಆತನನ್ನು ಸರಿಪಡಿಸಿದರು.

ಇದು ಪುರಾಣ ಅಥವಾ ನಿಜವಾದ ಕಥೆಯಾಗಿರಬಹುದು , ಆದರೆ ಇದರ ಸಾರವೆನೆಂದರೆ ಈ ರೀತಿಯಲ್ಲಿ ಆತನಿಗೆ ಹರ ಮತ್ತು ಹರಿ ಬೇರೇಯಲ್ಲವೆಂಬುದು ಅರಿವಾಯಿತು.

ಇತಿಹಾಸದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಒಬ್ಬ ಶ್ರೇಷ್ಠ ವ್ಯಕ್ತಿ . ಆದರೆ ಶಿವನಿಗೆ ಜನನವಿಲ್ಲ , ಆದರಿಂದಲೇ ಅವನನ್ನು ಸ್ವಯಂಭು ಎಂದು ಕರೆಯುತ್ತಾರೆ , ಅವನಿಗೆ ಜನನವೇ ಇಲ್ಲ.

ಇಸ್ಲಾಂ ಧರ್ಮದಲ್ಲಿಯೂ ಕೂಡ , ಅಲ್ಲಾಃ ಹುಟ್ಟಿರಲಿಲ್ಲ ಎಂದು ಹೆಳುತ್ತಾರೆ , ಶಿವನಿಗೂ ಕೂಡ ಇದೇ ರೀತಿ ಹೇಳಲಾಗಿದೆ . ಆತನು ಹಾಗೆಯೇ ಪ್ರತ್ಯಕ್ಷವಾದ ಅಥವಾ ತನ್ನಿಂದಲೇ ಪ್ರಕಟವಾದ. ಅವನು ಸಮಯವನ್ನು ಆಳುವವ , ಆದ್ದರಿಂದ ಮೃತ್ಯುವು ಅವನನ್ನು ಮುಟ್ಟಲೂ ಸಾಧ್ಯವಿಲ್ಲ . ಸಿಖರ ಧರ್ಮದಲ್ಲಿಯೂ ಇದೇ ರೀತಿ ಹೇಳಲಾಗಿದೆ , ದೇವರು ಚಿರಾಯು ಎಂದು - ಏಕ್ ಓಂಕಾರ್ ಸತ್ನಮ್ ಕರ್ತ ಪುರಖ್ ನಿರ್ಭೌ ನಿರ್ವೈರ್ ಆಕಲ್ ಮುರತ್ . ಎಲ್ಲಾ ಧರ್ಮಗಳು ಒಂದೇ ತತ್ತ್ವವನ್ನು ಹೆಳುತ್ತವೆ ಹಾಗು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಇದನ್ನೇ ಹೇಳಿದ್ದಾರೆ. 'ಅವಜನ೦ತಿ  ಮಾ೦ ಮುಧಾ ಮಾನುಸಿ೦ ತನು೦ ಆಶ್ರಿತ೦; ಪರ೦ ಭಾವ೦ ಅಜನ೦ತೋ ಮಮ ಭುತಾ - ಮಹೇಶ್ವರಂ'

ಅಜ್ಞಾನಿಗಳು ನನ್ನನ್ನು ಈ ದೇಹವೆಂದು ತಿಳಿಯುತ್ತಾರೆ , ನನ್ನ ಆ ಅಲೌಕಿಕ ಸ್ವರೂಪವನ್ನು ಅರಿಯದೆ, ಜನರು ನನ್ನನ್ನು ಕೇವಲ ಮನುಷ್ಯ ದೇಹ ಅಥವಾ ಮನಸ್ಸು ಎಂದು ತಿಳಿಯುತ್ತಾರೆ . ಮೂರ್ಖರು ಇದನ್ನು ಅರಿಯರು ,  ನಾನು ಮನುಷ್ಯ ದೇಹದಲ್ಲಿರುವೆ ಆದರೆ ನನ್ನಲ್ಲಿಯ ಪ್ರಜ್ಞೆಯು ಆ ಪರಮ ಶ್ರೇಷ್ಠ ಪ್ರಜ್ಞೆಯಾಗಿದೆ. ಎಲೇ ಅರ್ಜುನನೆ ! ನೀನು ನನ್ನಲ್ಲಿ ಆ ದೈವಾಂಶ ಮಾತ್ರ ಕಾಣಬೇಕು.

ಅದಕ್ಕಾಗಿಯೆ ದೇವರಲ್ಲಿ ಮನುಷ್ಯ ಬುದ್ಧಿಯಿಂದ ನೋಡಬೇಡ ಎಂದು ಹೇಳಿದ್ದಾರೆ , ಏಕೆಂದರೆ ನೀವು ನೋಡುವ ರೀತಿಯಲ್ಲಿಯೆ ಅದು ನಿಮಗೆ ಕಾಣಿಸುತ್ತದೆ . ಒಂದು ಶಿಲೆಯನ್ನು ಕೇವಲ ಕಲ್ಲು ಎಂದು ತಿಳಿದರೆ ಅದು ಕಲ್ಲಿನ ಹಾಗೆಯೆ ಕಾಣುತ್ತದೆ , ಆದರೆ ಆ ಶಿಲೆಯನ್ನು ಪೂಜ್ಯ ಭಾವನೆಯಿಂದ ಕಂಡರೆ ಅಲ್ಲಿಯೂ ದೇವರನ್ನು ಕಾಣಬಹುದು .

ಇದೇ ರೀತಿ , ಪ್ರತಿಯೊಬ್ಬರಲ್ಲಿಯೂ ದೈವಾಂಶ ಮತ್ತು ಪ್ರೀತಿಯನ್ನು ನಾವು ಗುರುತಿಸಿದಾಗ ನಮ್ಮ ಸುತ್ತಲೂ ಇರುವ ಜನರಲ್ಲಿಯ ಐಕ್ಯತೆಯನ್ನು ನಾವು ಕಾಣಬಹುದು , ಏಕೆಂದರೆ ಅವರೆಲ್ಲ ಒಬ್ಬ ಪರಮಾತ್ಮನಿಂದ ಬಂದಿರುತ್ತಾರೆ. ಮನುಷ್ಯ ಬುದ್ಧಿ ಎಂದರೆ ಸ್ತಿಮಿತವಾದ ಲೌಕಿಕ ಅವತಾರವನ್ನು ಕಾಣುವುದು , ಆದರೆ ನಾವು ಸಕಲದಲೂ ವ್ಯಾಪಿಸಿರುವ ದೈವವನ್ನು , ಎಲ್ಲೆಡೆಯೂ ಎಲ್ಲರಲ್ಲೂ ಕಾಣಬೇಕು.

ಪ್ರಶ್ನೆ : ಗುರುದೇವ , ಜ್ಞಾನವನ್ನು ನಾವು ಪಡೆಯುತ್ತೇವೆ ಮತ್ತು ತಿಳಿಯುತ್ತೇವೆ ಹಾಗೆಯೆ ನಾವು ಅದನ್ನು ಕಳೆದುಕೊಳ್ಳುತ್ತೇವಾ ?

ಶ್ರೀ ಶ್ರೀ ರವಿಶಂಕರ್ :
ನಾವು ಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದಿಲ್ಲ , ಪರಿಪೂರ್ಣವಾದ ಜ್ಞಾನ ಪಡೆದಾಗ , ಅದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ , ಆದರೆ ಯಾರಾದರು ಅಪೂರ್ಣವಾದ ಜ್ಞಾನ ಪಡೆದಾಗ , ಅವರ ತಿಳುವಳಿಕೆಯಲ್ಲಿ ಸ್ವಲ್ಪ ಹಿಂದು ಮುಂದು ಹೋಗಬಹುದು.

ಪ್ರಶ್ನೆ : ನಾನು ಸಾಧನೆಗೆ ಕುಳಿತಾಗಲೆಲ್ಲ, ನನ್ನ ಮನಸ್ಸು ದಾರಿತಪ್ಪಿ ಹೋಗುತ್ತದೆ , ಮನಸನ್ನು ನಿಯಂತ್ರಿಸಲು ನಾನು ಏನು ಮಾಡಬೇಕು ?

ಶ್ರೀ ಶ್ರೀ ರವಿಶಂಕರ್ :
ಕಿವಿಗೊಟ್ಟು ಆಲಿಸಿರಿ , ನಿಮ್ಮ ಜೀವನವನ್ನೇ ಸಾಧನೆಯೆಂದು ಪರಿಗಣಿಸಿರಿ. ನಿಮ್ಮ ಸಂಪೂರ್ಣ ಜೀವನವನ್ನೇ ಸಾಧನೆಯಂದು ತಿಳಿಯಿರಿ.
ಮನಸ್ಸು ಎಲ್ಲಿ ಅಲೆದಾಡುತ್ತದೆ ? ಅದು ಎಲ್ಲಿ ಸಂತೃಪ್ತಿ ಪಡೆಯುತ್ತದೆಯೋ ಅಲ್ಲಿ ಹೋಗುತ್ತದೆ , ಮತ್ತೊಮ್ಮೆ ಈ ರೀತಿಯಾದಗ ಗಮನಿಸಿರಿ , 'ನನ್ನ ಮನಸ್ಸು ನಾನು ಸಂತೃಪ್ತಿ ಪಡೆಯುವಲ್ಲಿ ಅಲೆದಾಡುತ್ತಿದಯೇ ?'

ಈ ರೀತಿ ನೀವು ಗಮನಿಸಿ , ಜ್ಞಾನದಿಂದ ವಿವೇಚಿಸಿದಾಗ ಮನಸ್ಸು ಅಲ್ಲಿಯೂ ಇಲ್ಲ , ಅಲ್ಲೆಲೂ ಇಲ್ಲ ಎಂದು ನೀವು ಕಾಣುತ್ತೀರ. ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ಸ್ಥಾಪಿತವಾಗುತ್ತದೆ . ಅದು ಆಂತರ್ಯದಲ್ಲಿ ವಿಶ್ರಾಂತಿ ಪಡೆಯುತ್ತದೆ.
ಈ ಕಾರಣದಿಂದಲೇ , ಧ್ಯಾನ ಮತ್ತು ಸಾಧನೆಗಳ ಹಲವಾರು ಸೀಡಿಗಳು ಕೊಡಲಾಗಿದೆ , ಇವನ್ನು ಅಭ್ಯಾಸ ಮಾಡಿ , ಆದರೆ ಧ್ಯಾನವಷ್ಟೆ ಸಹಾಯವಾಗುವುದಿಲ್ಲ , ಧ್ಯಾನ ಮತ್ತು ಜ್ಞಾನಗಳು ನಿಮ್ಮ ಮನಸ್ಸು ಸ್ಥಾಪಿತವಾಗಲು  ಸಹಕಾರಿಯಾಗುತ್ತದೆ.

ಪ್ರಶ್ನೆ : ಗುರುದೇವ , ನಮಗೆ ಪ್ರೀತಿಪಾತ್ರವಾದ ಅಥವಾ ನಮಗೆ ಹತ್ತಿರವಾದ ಜನರು ನಮ್ಮಿಂದ ದೂರವಾದಾಗ , ಅವರನ್ನು ನಮ್ಮ ಜೀವನದಲ್ಲಿ ಹೇಗೆ ತಂದುಕೊಳ್ಳಬಹುದು , ವಿಶೇಷವಾಗಿ ನಾವು ಆಧ್ಯಾತ್ಮಿಕ ಮಾರ್ಗದಲ್ಲಿರುವಾಗ?

ಶ್ರೀ ಶ್ರೀ ರವಿಶಂಕರ್ :
ಯಾರು ನಮ್ಮನ್ನು ಅಗಲಿರುವರೋ ಅವರುಗಳು ಯೊಗ್ಯವಾದ ಸ್ಥಳವನ್ನು ಸೇರಿದ್ದಾರೆ, ಪ್ರೀತಿಪಾತ್ರರಾದವರು ನಮ್ಮನ್ನು ಅಗಲಿದಾಗ , ನಮಗೆ ನಮ್ಮ ಜೀವನ ತಾತ್ಕಲಿಕವಾದದ್ದು ಮತ್ತು ನಿಶ್ಚಿತವಾಗಿ ಅಂತ್ಯವಾಗುವುದು ಎಂದು ತಿಳಿಸುತ್ತದೆ. ನೀವು ತಿಳಿದುಕೊಂಡಿರಾ ?

ನಾನು ಕೂಡ ಒಂದು ದಿನ ವಿಧಾಯ ಹೇಳಬೇಕು, ನೀವು ಕೂಡ ಎಲ್ಲವನ್ನು ಬಿಟ್ಟು ಹೋಗುವಿರಿ. ಹೌದು ಇಂತಹ ಸಂಧರ್ಭಗಳಲ್ಲಿ ನಿಮಗೆ ದುಃಖವಾಗುತ್ತದೆ, ಆದರಿಂದಲೆ ಧ್ಯಾನ , ಸಾಧನಾ ಮತ್ತು ಸತ್ಸಂಗಗಳಿವೆ , ಇವುಗಳಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿಯ ದುಃಖ ಮತ್ತು ಅವರನ್ನು ಅಗಲಿದ ಶೋಖದಿಂದ , ನೀವು ಹೊರಬರಲು ಸಾಧ್ಯವಾಗುತ್ತದೆ.

ಪ್ರಶ್ನೆ : ಗುರೂಜಿ , ನಾನು ಆಶ್ರಮದಲ್ಲಿರಬೇಕೆಂದು ಇಚ್ಛಿಸುತ್ತೇನೆ .

ಶ್ರೀ ಶ್ರೀ ರವಿಶಂಕರ್ :
ಸರಿ , ಆಶ್ರಮದ ಆದಳಿತ ವರ್ಗದವರೊಡನೆ ಮಾತಾಡಿರಿ , ನಾವು ಹೇಳಿರುವ ಹಾಗೆ , ಈ ಸಮಸ್ತ ಪ್ರಪಂಚವೇ ನನ್ನ ಆಶ್ರಮ. ನೀವು ಇರುವಲ್ಲಿ ಜನರಿಗೆ ಜ್ಞಾನವನ್ನು ಕೊಡಿ , ಸಹೃದಯಿಗಳಾಗಿ ಮತ್ತು ಪರೋಪಕಾರಿಯಾಗಿರಿ ಆಗ ಅದೇ ಆಶ್ರಮ. ಎಲ್ಲಾ ಮನೆಗಳು ಆಶ್ರಮವೇ.
ಆಶ್ರಮ ಎಂದರೆ ಏನು ? ಎಲ್ಲಿ ಮನಸ್ಸು ಶ್ರಮವಿಲ್ಲದೆಯೆ ಗಾಢವಾದ ವಿಶ್ರಾಂತಿಯಿಂದ ಇರುವುದೊ , ದೇಹವು ಶಕ್ತಿ ಪಡೆಯುವುದೊ , ಬುದ್ದಿಯು ವಿವೇಕವನ್ನು ಕಾಣುವುದೊ , ಆತ್ಮಕ್ಕೆ ಶಾಂತಿ ಸಿಗುವುದೊ , ಮತ್ತು ಜೀವನವೇ ಸಂಭ್ರಮವಾಗುವುದೊ , ಅದು ಆಶ್ರಮ. 

ಪ್ರಶ್ನೆ : ಜೀವಾತ್ಮನಿಗೆ ಸಾವಿಲ್ಲವಾದರೆ , ಈ ಗ್ರಹದಲ್ಲಿ ಜನಸಂಖ್ಯೆ ಹೇಗೆ ಹೆಚ್ಚುತ್ತಿದೆ ?

ಶ್ರೀ ಶ್ರೀ ರವಿಶಂಕರ್ :
ವಿವಿದ ಮೃಗಗಳ ಜಾತಿಗಳು ಈ ಭೂಮಿಯಿಂದ ಮರೆಯಾಗುತ್ತಿದೆ . ಹಾವುಗಳು , ಕ್ರಿಮಿಗಳು , ಹುಲಿಗಳು ಇತ್ಯಾದಿ ಈ ಭೂಮಿಯಿಂದ ಮರೆಯಾಗುತ್ತಿವೆ . ಕತ್ತೆಗಳ ಸಂಖ್ಯೆಯು ಕೂಡ ಕಡಿಮೆಯಾಗುತ್ತಿದೆ! ಹಿಂದೆ ಕಂಡಷ್ಟು ಮಂಗಗಳನ್ನು ಈಗ ನಾವು ಕಾಣುವುದಿಲ್ಲ. ಕಾಡುಗಳು ಬೇರುಸಹಿತ ನಾಷವಾಗುತ್ತಿವೆ , ಎಲ್ಲೆಡೆ ನಗರಗಳು ಮೂಡುತ್ತಿವೆ. ಹೀಗಿರುವಾಗ , ಮಂಗಗಳು ಎಲ್ಲಿಗೆ ಹೋಗುತ್ತವೆ? ಮನೆಗಳು, ಸಾಮೂಹಿಕ ವಸತಿಗಳನ್ನು ಸೇರುತ್ತವೆ.

ಪ್ರಶ್ನೆ : ಯಾವಾಗಲದರೂ ನಾನು ಬಾಂಬ್ ಸ್ಪೋಟ , ಅಥವಾ ವಿಮಾನ ದುರಂತಗಳಲ್ಲಿ ಪುಟ್ಟ ಮಕ್ಕಳು ಮರಣಹೊಂದಿರುವುದನ್ನು ಕೇಳಿದಾಗ , ನಾನಗೆ ದಿನವಿಡಿ ಬೇಸರವಾಗುತ್ತದೆ ಮತ್ತು ಮರಣಾನಂತರ ಅವರು ಕ್ಷೆಮದಿಂದಿರುತ್ತಾರೆಂದು ನಿರೀಕ್ಷಿಸುತ್ತೇನೆ , ಅವರನ್ನು ಕೂಡ ನೀವು ಲಕ್ಷಿಸುವಿರಾ?

ಶ್ರೀ ಶ್ರೀ ರವಿಶಂಕರ್ :
ಹೌದು , ಚಿಂತಿಸಬೇಡಿರಿ , ಈ ರೀತಿ ಅನಿಸುವುದು ಸಹಜವೇ. ಇತರರ ನೋವನ್ನು ಕಂಡ ನಿಮಗೂ ನೋವಿನ ಅನುಭವವಾದಗ , ನಿಮ್ಮಲ್ಲಿ ಮಾನವೀಯತೆ ಇದೆ ಎಂದರ್ಥ. ಇತರರ ನೋವನ್ನು ಅರಿಯಲಾರದಂತಹ ಹೃದಯದಿಂದ ಪ್ರಯೊಜನವೇನು ?  ಆದರೆ ನೀವು ಏನೂ ಮಾಡಲಾರದಷ್ಟು ಸಿಕ್ಕಿಕ್ಕೊಳ್ಳಬೇಡಿರಿ , ಈ ಕನಿಕರವನ್ನು ಸೇವೆಯತ್ತ ತಿರುಗಿಸಿ ಮತ್ತು ಸೇವೆ ಮಾಡಿರಿ, ಸರಿಯೆ.   

ಗುರುವಾರ, ಮೇ 24, 2012

ಬದುಕಿನ ವಾಹನಕ್ಕೆ ನ೦ಬಿಕೆಯೇ ಇ೦ಧನ


24
2012............................... ಬೆಂಗಳೂರು ಆಶ್ರಮ, ಭಾರತ
May

 
ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಪ್ರಾಪಂಚಿಕ ವಸ್ತುಗಳಿಂದ, ಬಯಕೆಗಳಿಂದ ಮತ್ತು ಚಂಚಲತೆಯಿಂದ ದೊಡ್ಡ ಮಟ್ಟಿಗೆ ಬಿಡುಗಡೆಯನ್ನು ಹೊಂದಿದ್ದೇನೆ, ಆದರೆ ನಿಮ್ಮ ವಿಷಯ ಬರುವಾಗ ನನ್ನ ದಾಹವು ಹೆಚ್ಚುತ್ತಾ ಹೋಗುತ್ತದೆ. ಇದಕ್ಕಿರುವ ಪರಿಹಾರವೇನು?
ಶ್ರೀ ಶ್ರೀ ರವಿಶಂಕರ್:
ಅದು ಪರವಾಗಿಲ್ಲ. ಒಬ್ಬನು ಪ್ರಾಪಂಚಿಕ ವಸ್ತುಗಳಿಂದ ಹಿಂದೆ ಸರಿದು ಆತ್ಮದ ಕಡೆಗೆ ಚಲಿಸಿದಾಗ, ಇದುವೇ ಆಗುವುದು. ಜೀವನದಲ್ಲಿ ಸ್ವಲ್ಪ ರಸವಿದೆ, ಅದು ನೀರಸವಾದುದಲ್ಲ. ಪಥವು ನೀರಸವಾದುದಲ್ಲ ಮತ್ತು ಅಲ್ಲಿ ಸ್ವಲ್ಪ ರಸವಿರಬೇಕು, ಅಲ್ಲವೇ? ಇಲ್ಲದಿದ್ದರೆ ಅದು ಶುಷ್ಕ ವೈರಾಗ್ಯವಾಗುತ್ತದೆ. ನಮಗೆ ತುಂಬಾ ಪ್ರಿಯವಾದವರು, ಯಾರನ್ನು ನಾವು ತುಂಬಾ ಪ್ರೀತಿಸುತ್ತೇವೋ ಅವರು ನಮ್ಮ ಬಳಿಯಿರುವಾಗ ಜೀವನವು ಆಸಕ್ತಿದಾಯಕವಾಗುತ್ತದೆ. ನಮ್ಮ ಜೀವನದಲ್ಲಿ ನಾವು ಗಾಢವಾಗಿ ಪ್ರೀತಿಸಬಲ್ಲಂತಹವರು ಯಾರೂ ಇಲ್ಲವಾದರೆ, ಆಗ ಜೀವನವು ಆಸಕ್ತಿದಾಯಕವಾಗಿರುವುದಿಲ್ಲ, ಅದರಲ್ಲಿ ಯಾವುದೇ ರಸವಿರುವುದಿಲ್ಲ ಮತ್ತು ಪ್ರೀತಿಯು ಉದಯಿಸುವುದಿಲ್ಲ. ಅದಕ್ಕಾಗಿಯೇ ಈ ಸಾರ ಅಥವಾ ರಸದ ಅಗತ್ಯವಿರುವುದು ಮತ್ತು ಆಗ ಆ ಒಂದು ಎಲ್ಲಾ ಕಡೆಗಳಲ್ಲೂ ಕಾಣಿಸುತ್ತದೆ. ಅದೇ ದೈವಿಕತೆಯು ನನ್ನಲ್ಲಿದೆ, ಎಲ್ಲರಲ್ಲೂ ಇದೆ ಮತ್ತು ಎಲ್ಲೆಡೆಯೂ ಇದೆ ಎಂಬುದು ನಿಮಗೆ ಕ್ರಮೇಣವಾಗಿ ಅರ್ಥವಾಗುತ್ತದೆ.
ಪ್ರಶ್ನೆ: ಗುರೂಜಿ, ನಾವು ಸಾಕ್ಷಿ ಭಾವದಲ್ಲಿರುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಸಾಕ್ಷಿ ಭಾವದಲ್ಲಿರಲು ನೀವು ಏನೂ ಮಾಡಬೇಕಾದ ಅಗತ್ಯವಿಲ್ಲ; ಅದು ಅದಾಗಿಯೇ ಉದಯಿಸುತ್ತದೆ. ನೀವು ಹೆಚ್ಚು ಹೆಚ್ಚು ಶಾಂತರಾದಷ್ಟು, ನಿಮ್ಮಲ್ಲೇ ನೀವು ವಿಶ್ರಾಂತಿ ಪಡೆದಷ್ಟು, ಅದು ನಿಮ್ಮಲ್ಲಿ ಹೆಚ್ಚು ಉದಯಿಸುತ್ತದೆ. ಇದನ್ನು ಹೊಂದಲು ನೀವು ಏನನ್ನೂ ಮಾಡಬೇಕಾಗಿಲ್ಲ. ಈ ದಿನಗಳಲ್ಲಿ ಏನಾಗಿದೆಯೆಂದರೆ, ಎಲ್ಲಾ ಸಾಧಕರು ಕೇಳುತ್ತಾ ಇರುತ್ತಾರೆ (ಗುರುಗಳನ್ನು), "ನಾನೇನು ಮಾಡಬೇಕು? ನಾನೇನು ಮಾಡಬೇಕು?" ಮತ್ತು ಗುರುಗಳು ಹೇಳುತ್ತಾ ಇರುತ್ತಾರೆ, "ಇದನ್ನು ಮಾಡು, ಇದನ್ನು ಮಾಡು ಮತ್ತು ಅದನ್ನು ಮಾಡು", ಮತ್ತು ಇಬ್ಬರೂ ಹತಾಶರಾಗುತ್ತಾರೆ. ನಾನು ಹೇಳುವುದೇನೆಂದರೆ, ಏನನ್ನೂ ಮಾಡುವುದರ ಅಗತ್ಯವಿಲ್ಲ, ಕೇವಲ ವಿಶ್ರಾಮ ಮಾಡಿ! ವಿಶ್ರಾಮವು ಸಾಮರ್ಥ್ಯ, ಶಾಂತಿ ಮತ್ತು ಪರಿಪೂರ್ಣತೆಗಳ ಜನನಿಯಾಗಿದೆ. ಪ್ರತಿಯೊಂದರ ಮೂಲವೂ ವಿಶ್ರಾಮವಾಗಿದೆ. ವಿಶ್ರಾಮ’ದಲ್ಲಿ ’ರಾಮ’ನಿದ್ದಾನೆ.  ಕ್ರಿಯೆಯನ್ನು ಹೆಚ್ಚು ಮಾಡಿ ಅದನ್ನು ಹೊಂದಲು ಸಾಧ್ಯವಿಲ್ಲ. ಇದರರ್ಥ ನೀವು ಇಡೀ ದಿನ ಕೇವಲ ತಿಂದು ನಿದ್ದೆ ಮಾಡಬೇಕೆಂದಲ್ಲ, ಅಲ್ಲ! ಮಿತ-ಆಹಾರ, ಮಿತ-ವ್ಯವಹಾರ, ಮಿತ-ಭಾಷಿ, ಹಿತ-ಭಾಷಿ, ಇವುಗಳೆಲ್ಲಾ ಮುಖ್ಯವಾದವುಗಳು.
ಪ್ರಶ್ನೆ: ಗುರೂಜಿ, ಜೀವನವು ಸುಲಭವೇ ಅಥವಾ ಕಷ್ಟವೇ? ಬೌದ್ಧ ಧರ್ಮದಲ್ಲಿ ಹೇಳುತ್ತಾರೆ, "ಮೊದಲನೆಯ ಸತ್ಯವೆಂದರೆ ಜೀವನವು ಕಷ್ಟವಾದುದು" ಮತ್ತು ನೀವು ಹೇಳುತ್ತೀರಿ ಜೀವನವು ಆನಂದಮಯವೆಂದು. ಯಾವುದು ಸರಿ? ಎರಡೂ ಸರಿಯೆಂದು ಹೇಳಬೇಡಿ.
ಶ್ರೀ ಶ್ರೀ ರವಿಶಂಕರ್:
ಯಾಕೆ? ನಾನು ಅದನ್ನೇ ಹೇಳುತ್ತೇನೆ! ಎರಡೂ ವ್ಯಾಖ್ಯಾನಗಳು ಸರಿ. ಒಬ್ಬ ದುಃಖಿತ ವ್ಯಕ್ತಿಯು ಜೀವನವು ದುಃಖಮಯವೆಂದು ಭಾವಿಸುವಾಗ, ನೀನು ಅವನಿಗೆ, ಜೀವನವು ಆನಂದಮಯವೆಂದು ಹೇಳಿದರೆ, ಅವನಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ದುಃಖವಿದೆಯೆಂಬುದನ್ನು ಮಾತ್ರ ಅವನಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಿದ್ದರೂ, ಅವನು ಜ್ಞಾನದಲ್ಲಿ ಪ್ರಗತಿ ಹೊಂದುತ್ತಿದ್ದಂತೆ, "ದುಃಖವೆಲ್ಲಿದೆ?" ಎಂಬುದು ಅವನಿಗೆ ಅರ್ಥವಾಗಲು ತೊಡಗುತ್ತದೆ. ಅವನು ಜ್ಞಾನದ ಪಥದಲ್ಲಿ ಪ್ರಗತಿ ಹೊಂದುತ್ತಿದ್ದಂತೆ ದುಃಖವು ಮಾಯವಾಗುತ್ತದೆ. ಯೋಗ ಮತ್ತು ಧ್ಯಾನಗಳ ಲಾಭವೇನೆಂದರೆ ಅವುಗಳು ನಿಮ್ಮ ಜೀವನದಿಂದ ದುಃಖವನ್ನು ನಿವಾರಿಸುತ್ತವೆ. ನಂತರ ನೀವು, ಜೀವನವು ಆನಂದಮಯವಾದುದು ಮತ್ತು ನೀವು ಅನಗತ್ಯವಾಗಿ ಚಿಂತೆಗೀಡಾಗಿದ್ದಿರಿ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತೀರಿ. ಹಿಂದೆ ನೀವು ಚಿಂತೆಗೀಡಾಗಿದ್ದು ನೆನೆಸಿದಾಗಲೆಲ್ಲಾ, ಎಚ್ಚೆತ್ತುಕೊಳ್ಳಿ ಮತ್ತು ನೋಡಿ, ನೀವು ಅನಗತ್ಯವಾಗಿ ಚಿಂತೆಗೀಡಾಗಿದ್ದಿರಿ ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ರೀತಿ ಅನ್ನಿಸಿದೆ?
ಪರೀಕ್ಷೆಗಳ ಫಲಿತಾಂಶಗಳು ನಿನ್ನೆ ಹೊರ ಬಂದಿವೆ. ಹೀಗಿದ್ದರೂ, ಕೆಲವು ದಿನಗಳ ಹಿಂದೆ, ನೀವು ಪಾಸಾಗುತ್ತೀರೋ ಇಲ್ಲವೋ ಎಂಬುದರ ಬಗ್ಗೆ ನೀವು ತುಂಬಾ ಚಿಂತೆಗೊಳಗಾಗಿದ್ದಿರಿ. ಈಗ ನಿಮಗನಿಸುವುದಿಲ್ಲವೇ, ಚಿಂತೆಪಡುವುದರೊಂದಿಗೆ ನೀವು ಅನಗತ್ಯವಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿದಿರೆಂದು? ಎಲ್ಲವೂ ಚೆನ್ನಾಗಿ ಬಂತು. ಉದಾಹರಣೆಗೆ, ಆಶ್ರಮದ ಶಾಲೆಯ ವಿದ್ಯಾರ್ಥಿಗಳು; ಅವರೆಲ್ಲರೂ ಡಿಸ್ಟಿಂಕ್ಷನ್ ಪಡೆದು ಪಾಸಾದರು.
ಚಿಂತೆ ಮಾಡುವುದರಿಂದ, ಸಮಯ ವ್ಯರ್ಥವಾಗುತ್ತದೆ ಮತ್ತು ಮನಸ್ಸಿಗೆ ತೊಂದರೆಯಾಗುತ್ತದೆ. ಅದಕ್ಕೇ ಹೇಳಿರುವುದು, ಘಟನೆಯು ಮುಗಿದ ಬಳಿಕ ಮಾತ್ರವೇ, ಚಿಂತಿಸಿದುದು ಅನಗತ್ಯವಾಗಿತ್ತು ಎಂಬುದು ನಮಗೆ ಅರ್ಥವಾಗುವುದು. ಆದುದರಿಂದ ಸಂತೋಷವೆಂಬುದು ವಾಸ್ತವ. ಸಂತೋಷವು ಯಾವತ್ತಿಗೂ ನಮ್ಮ ಒಂದು ಭಾಗವಾಗಿತ್ತು, ಅದು ನಮ್ಮ ಸ್ವಭಾವ. ಚಿಂತೆಗಳು ಕೇವಲ ಮೋಡದಂತೆ ಬಂದವು ಮತ್ತು ಮಾಯವಾದವು. ಯಾವುದು ಬದಲಾಗದೆ ಉಳಿಯುತ್ತದೆಯೋ ಅದನ್ನು ಮಾತ್ರ ’ಸತ್ಯ’ ಎಂದು ಕರೆಯಬಹುದು; ಹೇಗೆ ಆಕಾಶವು ಸತ್ಯವಾಗಿದ್ದು ಮೋಡಗಳು ಕೇವಲ ಬಂದು ಹೋಗುತ್ತವೆಯೋ ಹಾಗೆ.
ಪ್ರಶ್ನೆ: ಖರ್ಚು ವೆಚ್ಚಗಳನ್ನು ಸರಿದೂಗಿಸುವುದು ನನಗೆ ತುಂಬಾ ಕಷ್ಟವಾಗುತ್ತಿದೆ ಮತ್ತು ಹದಿನೈದು ವರ್ಷಗಳಿಂದ ಹೋರಾಡುತ್ತಿದ್ದೇನೆ. ನನ್ನ ಭಾಗ್ಯವನ್ನು ಬದಲಾಯಿಸಲು ನಾನು ಕೆಲವು ಪೂಜೆಗಳನ್ನು ಮಾಡಬೇಕೆಂದು ಜ್ಯೋತಿಷ್ಯರು ಸಲಹೆ ಕೊಡುತ್ತಿದ್ದಾರೆ. ದಯವಿಟ್ಟು ಸಲಹೆ ನೀಡಿ.
ಶ್ರೀ ಶ್ರೀ ರವಿಶಂಕರ್:
ಓ, ನಿನ್ನ ವೆಚ್ಚಗಳು ನಿನ್ನ ಆದಾಯಕ್ಕಿಂತ ಹೆಚ್ಚಾಗಿವೆ. ನಿನಗೆ ಸಮೃದ್ಧಿ ಸಿಗುತ್ತದೆಯೆಂಬ ಒಂದು ಸಂಕಲ್ಪವನ್ನು ತೆಗೆದುಕೋ, ಅದು ಸಾಕು. ಪೂಜೆ ಮಾಡುವುದು ಒಂದು ಒಳ್ಳೆಯ ವಿಷಯ; ಸ್ವಲ್ಪ ಪೂಜೆ ಒಳ್ಳೆಯದು, ಆದರೆ ಅಧಿಕವಾಗಿ ಪೂಜೆ ಮಾಡುವುದರ ಅಗತ್ಯವಿಲ್ಲ. ನೀನು ಧ್ಯಾನ ಮಾಡಬೇಕು; ಸತ್ಸಂಗಕ್ಕೆ, ರುದ್ರಾಭಿಷೇಕಕ್ಕೆ ಹೋಗು ಮತ್ತು ಹವನ ಮಾಡು. ಒಬ್ಬನು ಹವನ ಮಾಡುವಾಗ, ವಾತಾವರಣ ಮತ್ತು ಮನಸ್ಸು ಶುದ್ಧಗೊಳ್ಳುತ್ತವೆ. ಆದರೆ ಕೆಲವೊಮ್ಮೆ ಅವರು ಜನರಲ್ಲಿ, ನಿಜವಾಗಿ ಅಗತ್ಯವಿಲ್ಲದೇ ಇರುವ ಅನೇಕ ಶಾಸ್ತ್ರೋಕ್ತ ಪದ್ಧತಿಗಳನ್ನು ಮತ್ತು ಪೂಜೆಗಳನ್ನು ನೆರವೇರಿಸಲು ಹೇಳುತ್ತಾರೆ.
ಪ್ರಶ್ನೆ: ನಾನು ಬೇರೆ ಜಾತಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಮತ್ತು ನನ್ನ ಹೆತ್ತವರು ತುಂಬಾ ಸಂಪ್ರದಾಯ ಬದ್ಧರು. ಅವರಿಗೆ ಇದು ಅರ್ಥವಾಗುವುದಿಲ್ಲ. ಅವರಿಗೆ ಮನವರಿಕೆ ಮಾಡಿಸಲು ನಾನು ನನ್ನಿಂದಾದಷ್ಟು ಪ್ರಯತ್ನ ಮಾಡಿದೆ, ಆದರೆ ಅದು ಕೆಲಸ ಮಾಡುತ್ತಿಲ್ಲ. ನಾನೇನು ಮಾಡಬೇಕು? ನನ್ನ ಧರ್ಮವೇನು? ನಾನು ನನಗಾಗಿ ಜೀವಿಸಬೇಕೇ ಅಥವಾ ಅವರಿಗಾಗಿಯೇ?
ಶ್ರೀ ಶ್ರೀ ರವಿಶಂಕರ್:
ಕುಶಲತೆಯಿಂದಿರು. ಪರಿಣಾಮಗಳನ್ನು ತೂಗಿ ನೋಡು. ಅವರು ಅವರ ಪಟ್ಟು ಬಿಡದಿದ್ದರೆ, ಆಗ ಅವರನ್ನು ಅಷ್ಟೊಂದು ದುಃಖದಲ್ಲಿ ಸಿಲುಕಿಸಿ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ. ನೀನು ಕೂಡಾ ಸಂತೋಷವಾಗಿರಲಾರೆ. ನೀವಿಬ್ಬರೂ ದುಃಖ ಪಡುವಿರಿ. ಅವರನ್ನು ಒಪ್ಪಿಸಲು ನಿನ್ನ ಕುಶಲತೆಯನ್ನು ಉಪಯೋಗಿಸು. ಯಾವುದಾದರೂ ಮಧ್ಯಮ ಮಾರ್ಗವನ್ನು ಪ್ರಯತ್ನಿಸು. ನಿನಗೆ ಆಗದಿದ್ದರೆ, ಆಗ ನೀನು ಪರಿಣಾಮಗಳನ್ನು ತೂಗಿ ನೋಡಬೇಕು.
ಪ್ರಶ್ನೆ: ಆದರೆ ಧರ್ಮವೇನು ಹೇಳುತ್ತದೆ? ಮಗಳಾಗಿ ನಾನು ಅವರಿಗೆ ನೋವುಂಟು ಮಾಡಲು ಸಾಧ್ಯವಿಲ್ಲ, ಆದರೆ ನಾನು ಕೂಡಾ ನನ್ನ ಜೀವನವನ್ನು ಜೀವಿಸಬೇಕು.
ಶ್ರೀ ಶ್ರೀ ರವಿಶಂಕರ್:
ನೀನು ಸರಿ. ನಿನ್ನ ಮಕ್ಕಳಿಗೆ ನೀನು ಆ ರೀತಿ ಮಾಡು. ಆದರೆ ಈಗ, ನೀನು ಒಬ್ಬಳೇ ಮಗಳಾಗಿದ್ದರೆ, ನೀನು ನಿನ್ನ ಹೆತ್ತವರನ್ನು ನೋಡಿಕೊಳ್ಳಬೇಕು. ನೀನು ಮಗಳಂದಿರಲ್ಲಿ ಒಬ್ಬಳಾಗಿದ್ದರೂ ಸಹ ಅಲ್ಲೊಂದು ಸಮಸ್ಯೆಯಿದೆ. ಅವರನ್ನು ಒಪ್ಪಿಸಲು ನಿನ್ನ ಎಲ್ಲಾ ಕುಶಲತೆಗಳನ್ನು ಬಳಸು ಮತ್ತು ಒಂದು ಪರಿಹಾರವನ್ನು ಕಂಡುಹಿಡಿ. ನಿನ್ನಿಂದ ಆಗದಿದ್ದರೆ, ಆಗ ಕೆಲವೊಮ್ಮೆ ಇತರರ ಸಂತೋಷಕ್ಕಾಗಿ ತ್ಯಾಗಗಳನ್ನು ಮಾಡಬೇಕಾಗುತ್ತದೆ.
ಪ್ರಶ್ನೆ: ವೃತ್ತಿ ಜೀವನದಲ್ಲಿ ದುರಹಂಕಾರಿ ಜನರೊಂದಿಗೆ ನಾವು ವ್ಯವಹರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವರ ದುರಹಂಕಾರವನ್ನು ಮೇಲೆತ್ತಿ. ಅವರು ದುರಹಂಕಾರಿಗಳಾಗಿದ್ದರೆ, ಅವರೊಂದಿಗೆ ವ್ಯವಹರಿಸಲು ಎರಡು ಮಾರ್ಗಗಳಿವೆ. ಒಂದನೆಯದೆಂದರೆ ಅವರನ್ನು ಕೇವಲ ನಿರ್ಲಕ್ಷಿಸುವುದು ಮತ್ತು ಕಡೆಗಣಿಸುವುದು. ಅವರು ಬಹಳ ವೇಗವಾಗಿ ಪ್ರತಿಕ್ರಿಯಿಸುವರು. ಇನ್ನೊಂದೆಂದರೆ, ಅವರ ಅಹಂಕಾರವನ್ನು ಹೆಚ್ಚಿಸುವುದು. "ನೀನು ಬಹಳ ಒಳ್ಳೆಯವನು, ನೀನು ಇಷ್ಟೊಂದು ಸಮರ್ಥನಾಗಿರಲು ಹೇಗೆ ಸಾಧ್ಯ? ನಾನು ನಿನ್ನಿಂದ ಸ್ವಲ್ಪ ತರಬೇತಿ ಪಡೆಯಬೇಕು" ಎಂದು ಹೇಳಿ. ಆಗ ಅವರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ತಿಳಿಯಿತಾ? ಅವರಿಗೆ ಸ್ವಲ್ಪ ಹೊಗಳಿಕೆ ನೀಡುವುದರಿಂದ ನೀವೇನೂ ಕಳೆದುಕೊಳ್ಳುವುದಿಲ್ಲ. ಒಬ್ಬರು, ಮೂರ್ಖರನ್ನು ಹೊಗಳಿ ಕಾರ್ಯ ಸಾಧಿಸಬೇಕು. ಒಳ್ಳೆಯ ಜನರು ಹೇಗಿದ್ದರೂ, ನೀವು ಅವರನ್ನು ಹೊಗಳಿದರೂ ಇಲ್ಲದಿದ್ದರೂ ಕೆಲಸ ಮಾಡುತ್ತಾರೆ. ದುರಹಂಕಾರಿ ಮತ್ತು ಮೂರ್ಖ ಜನರು ಹೊಗಳಿಕೆಗೆ ತಲೆಬಾಗುತ್ತಾರೆ. ಆದುದರಿಂದ ನೀವು ಅವರನ್ನು ಹೊಗಳಿ ಮತ್ತು ನಿಮ್ಮ ಕೆಲಸವಾಗುವಂತೆ ಮಾಡಿ.
ಅವರ ದುರಹಂಕಾರವು ಅವರಿಗೆ ದುಃಖವನ್ನು ತರುತ್ತದೆ. ನೀವು ಯಾಕೆ ಅದರ ಬಗ್ಗೆ ಚಿಂತಿಸಬೇಕು? ಮತ್ತು ಅದು ಒಳ್ಳೆಯದು ಯಾಕೆಂದರೆ ಆ ದುಃಖವು ಅವರನ್ನು ಪುನಃ ಅವರ ವಿವೇಚನೆಗೆ ತರುತ್ತದೆ. ದುಃಖ ಪಡುವಿಕೆಗೂ ಸಹ ಅದರದ್ದೇ ಆದ ಮಹತ್ವವಿದೆ. ಒಬ್ಬ ವ್ಯಕ್ತಿಯ ದುರಹಂಕಾರವನ್ನು ಮುರಿದು ಅವನಿಗೆ ಜ್ಞಾನದ ಹಾದಿಯನ್ನು ತೋರಿಸುವ ಕಾಲ ಹೋಗಿ ಬಿಟ್ಟಿದೆ. ಈ ದಿನಗಳಲ್ಲಿ, ಯಾರದ್ದಾದರೂ ಅಹಂಕಾರವನ್ನು ಮುರಿಯುವುದು ಕಷ್ಟ. ಅಹಂಕಾರವು ಹೇಗಾದರೂ ಮಾಡಿ ತನ್ನನ್ನು ತಾನೇ ಪ್ರದರ್ಶಿಸುವಲ್ಲಿ ಸಫಲವಾಗುತ್ತದೆ. ಆದುದರಿಂದ ನೀವು ಅವರನ್ನು ಹೊಗಳುವುದು ಉತ್ತಮ, ಅವರು ಸ್ವಯಂ ಆಗಿ ಕಲಿಯುತ್ತಾರೆ.
ಪ್ರಶ್ನೆ: ಮಕ್ಕಳನ್ನು ಸರಿಯಾದ ಮೌಲ್ಯಗಳೊಂದಿಗೆ ಬೆಳೆಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಅವುಗಳನ್ನು ನೀವೇ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ.
ಪ್ರಶ್ನೆ: ನಾನು ಆಶ್ರಮದಲ್ಲಿ ಉಳಕೊಳ್ಳಲು ಬಯಸುತ್ತೇನೆ. ನಾನು ನನ್ನ ಜವಾಬ್ದಾರಿಗಳನ್ನು ಪೂರೈಸಿದ್ದೇನೆಂದು ನನಗೆ ಅನ್ನಿಸುತ್ತದೆ ಮತ್ತು ಈಗ ನಾನು ಆಶ್ರಮದಲ್ಲಿ ಸಾಧನೆ, ಸತ್ಸಂಗ ಮತ್ತು ಸೇವೆಗಳನ್ನು ಮಾಡಲು ಬಯಸುತ್ತೇನೆ. ನನ್ನ ಸಂಬಂಧಿಕರು ಮತ್ತು ಅತ್ತೆ-ಮಾವಂದಿರು ಆಶ್ರಮವನ್ನು ಸೇರುವ ನನ್ನ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.
ಶ್ರೀ ಶ್ರೀ ರವಿಶಂಕರ್:
ನಿನಗೆ ಗೊತ್ತಿದೆಯಾ, ಇಡಿಯ ಪ್ರಪಂಚವೇ ನನ್ನ ಆಶ್ರಮ! ನೀನೆಲ್ಲೇ ಉಳಕೊಂಡರೂ ಅದು ಒಂದು ಆಶ್ರಮವಾಗಿರುತ್ತದೆ. ಮೇಲಾಗಿ, ನಾನು ಒಂದು ಜಾಗದಲ್ಲಿ ಉಳಕೊಳ್ಳುವುದಿಲ್ಲ, ನಾನು ಸಂಚರಿಸುತ್ತಾ ಇರುತ್ತೇನೆ. ನಾನಿಲ್ಲಿಗೆ ಎರಡು ತಿಂಗಳುಗಳ ಬಳಿಕ ಬಂದಿದ್ದೇನೆ ಮತ್ತು ನಾನಿಲ್ಲಿ ಎರಡು ವಾರಗಳ ವರೆಗೆ ಮಾತ್ರ ಇರುತ್ತೇನೆ. ನಾನು ಹೋಗುತ್ತಾ, ಬರುತ್ತಾ ಮತ್ತು ಪುನಃ ಹೋಗುತ್ತಾ ಇರುತ್ತೇನೆ.
ನೀನು ನಿನ್ನ ಸಂಬಂಧಿಕರನ್ನು ಮತ್ತು ಅತ್ತೆ-ಮಾವಂದಿರನ್ನು ಪ್ರೀತಿಯಿಂದ ಗೆಲ್ಲು. ಅಲ್ಲಿ ನಿನ್ನ ಸಾಧನೆ ಮತ್ತು ಸೇವೆಗಳನ್ನು ಮಾಡು ಹಾಗೂ ನಿನ್ನ ಮನೆಯನ್ನು ಒಂದು ಆಶ್ರಮವನ್ನಾಗಿ ಮಾಡು. ಇಲ್ಲಿಗೆ ವರ್ಷದಲ್ಲಿ ಒಂದು ಸಾರಿ ಅಥವಾ ಎರಡು ಸಾರಿ ಬರುತ್ತಾ ಇರು. ನೀನು ಅವರಲ್ಲಿ, ನೀನು ಆಶ್ರಮಕ್ಕೆ ಹೋಗಿ ಬಿಡುವೆಯೆಂದು ಹೇಳಿದರೆ, ಅವರು ಚಿಂತೆಗೀಡಾಗುವರು. ಅವರಿಗನ್ನಿಸಬಹುದು, "ಅವಳು ನಮ್ಮ ಸೊಸೆ, ಆದರೆ ಅವಳು ಮನೆಬಿಟ್ಟು ಹೋಗಲು ಬಯಸುತ್ತಾಳೆ". ಅದನ್ನು ಮಾಡಬೇಡ, ಸರಿಯಾ!
ಪ್ರಶ್ನೆ: ನಾನು ಆಶ್ರಮಕ್ಕೆ ಬರುವಾಗಲೆಲ್ಲಾ, ನನ್ನ ಮನೆಮಂದಿಗೆ ತಿಳಿಸುವುದಿಲ್ಲ.  ಇಲ್ಲಿರಲು ನಾನು ಕಾಲೇಜಿನಲ್ಲಿ ಕೂಡಾ ಸುಳ್ಳುಗಳನ್ನು ಹೇಳುತ್ತೇನೆ ಮತ್ತು ನೆಪಗಳನ್ನೊಡ್ಡುತ್ತೇನೆ. ಈ ವಿಷಯಗಳನ್ನು ನಾನು ಕುಶಲತೆಯಿಂದ ನಿರ್ವಹಿಸುತ್ತೇನೆ. ಹೀಗಿದ್ದರೂ, ಕೆಲವೊಮ್ಮೆ ಈ ಸುಳ್ಳುಗಳನ್ನು ಹೇಳಿ ನನಗೆ ಸಾಕಾಗಿ ಬಿಡುತ್ತದೆ.
ಶ್ರೀ ಶ್ರೀ ರವಿಶಂಕರ್:
ಇಲ್ಲ, ನೀನು ಸುಳ್ಳುಗಳನ್ನು ಹೇಳಬಾರದು. ನೋಡು, ನೀನಿಲ್ಲಿಗೆ ಪದೇ ಪದೇ ಬರುತ್ತಿರಬೇಕೆಂದಿಲ್ಲ. ನೀನೆಲ್ಲೇ ಇದ್ದರೂ, ಪ್ರತಿದಿನವೂ ನಿನ್ನ ಧ್ಯಾನವನ್ನು ಮಾಡುತ್ತಾ ಇರು. ಹೇಗಿದ್ದರೂ ನಿನಗೆ ನನ್ನನ್ನು ಪ್ರತಿದಿನವೂ ನೋಡಲು ಸಾಧ್ಯವಿದೆ. ಈಗಲೂ ಕೂಡಾ, ಈ ಸತ್ಸಂಗವನ್ನು ಅಂತರ್ಜಾಲದ ಮೂಲಕ ನೇರ ಪ್ರಸಾರ (ವೆಬ್ ಕಾಸ್ಟ್) ಮಾಡಲಾಗುತ್ತಿದೆ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರು ನನ್ನನ್ನು ನೋಡುತ್ತಿದ್ದಾರೆ. ನೀನಿಲ್ಲಿಗೆ ವರ್ಷಕ್ಕೆ ಒಂದು ಸಾರಿ ಅಥವಾ ಎರಡು ಸಾರಿ ಬಂದರೆ ಪರವಾಗಿಲ್ಲ, ಆದರೆ ನೀನಿಲ್ಲಿಗೆ ಪ್ರತಿದಿನವೂ ಬಂದರೆ, ಆಗ ಖಂಡಿತವಾಗಿ ಮನೆಯಲ್ಲಿ ಅವರು ಇದನ್ನು ವಿರೋಧಿಸುತ್ತಾರೆ. ನಾನು ಅವರ ಜಾಗದಲ್ಲಿರುತ್ತಿದ್ದರೆ, ನಾನು ಕೂಡಾ ಇದನ್ನು ವಿರೋಧಿಸುತ್ತಿದ್ದೆ. ಆದುದರಿಂದ ಈ ರೀತಿ ಮಾಡಬೇಡ. ನಿನ್ನ ಓದಿನ ಮೇಲೆ ಮತ್ತು ನಿನ್ನ ವೃತ್ತಿಯ ಮೇಲೆ ಗಮನವಿರಿಸು ಹಾಗೂ ಒಬ್ಬ ಮಾದರಿ ವ್ಯಕ್ತಿಯಾಗಲು ಪ್ರಯತ್ನಿಸು, ಸರಿಯಾ? ಕೇವಲ ಆಶ್ರಮಕ್ಕೆ ಬಂದು ನನ್ನ ಮುಖವನ್ನು ನೋಡುವುದಕ್ಕಿಂತ, ಬೋಧನೆಗಳನ್ನು ಅನುಸರಿಸುವುದು ಹೆಚ್ಚು ಮುಖ್ಯವಾದುದು.
ಪ್ರಶ್ನೆ:  ನನ್ನ ತಾಯಿ ಹೇಳುವುದೇನೆಂದರೆ,  "ನೀನು ನಮಗೆ ಸುಳ್ಳುಗಳನ್ನು ಹೇಳಿ, ನಮಗೆ ನೋವುಂಟು ಮಾಡಿ, ಜೀವನ ಕಲೆಯ ಕಾರ್ಯಕ್ರಮಗಳಿಗೆ ಹೋದರೆ, ಆಗ ಅದಕ್ಕೆ ನಿನಗೆ ಪುಣ್ಯವು ಸಿಗುವುದಿಲ್ಲ" ಎಂದು. ಅದು ಸರಿಯಾ?
ಶ್ರೀ ಶ್ರೀ ರವಿಶಂಕರ್:
ಹೌದು, ಒಂದು ರೀತಿಯಲ್ಲಿ ಅದು ಸರಿ.
ಪ್ರಶ್ನೆ: ಆದರೆ ಅವರಿಗೆ ಅರ್ಥವಾಗುವುದಿಲ್ಲ. ಅವರು ಕ್ರಿಯೆಯನ್ನು ಕೂಡಾ ಮಾಡುವುದಿಲ್ಲ. ನಾನು ಬಲವಂತ ಮಾಡಿದರೂ ಸಹ ಅವರು ಕ್ರಿಯೆ ಮಾಡುವುದಿಲ್ಲ. ದಯವಿಟ್ಟು ನನ್ನ ತಂದೆ ಮತ್ತು ತಾಯಿ ಇಬ್ಬರ ಬಗ್ಗೆಯೂ ಕಾಳಜಿ ವಹಿಸಿ.
ಶ್ರೀ ಶ್ರೀ ರವಿಶಂಕರ್:
ಈಗ ನೀನು ನಿನ್ನ ಕೆಲಸವನ್ನು ನನಗೆ ಕೊಟ್ಟೆ! ನೀನು ಅವರ ಕಾಳಜಿ ವಹಿಸಬೇಕಾಗಿರುವುದು ಅಲ್ಲವೇ? ಹೇಗಿದ್ದರೂ, ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನೋಡಿ, ಇದೇ ಆಗುತ್ತಿರುವುದು. ಜನರು, "ಗುರೂಜಿ ಇದನ್ನು ಮಾಡಿ, ಅದನ್ನು ಮಾಡಿ" ಎಂದು ಹೇಳುತ್ತಾ ಇರುತ್ತಾರೆ. ನನಗೆ ಎಲ್ಲಾ ಕಡೆಗಳಿಂದಲೂ ಆದೇಶಗಳು ಸಿಗುತ್ತಾ ಇರುತ್ತವೆ.
ಪ್ರಶ್ನೆ: ಇತರ ಜನರ ತಪ್ಪುಗಳ ಬಗ್ಗೆ ಯೋಚಿಸುವಾಗ, ನಾನು ದುರಹಂಕಾರಿಯಾಗುತ್ತೇನೆ; ಮತ್ತು ನಾನು ನನ್ನ ತಪ್ಪುಗಳನ್ನು ನೋಡುವಾಗ, ನನ್ನ ಅಹಂಕಾರಕ್ಕೆ ಪೆಟ್ಟಾಗುತ್ತದೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: 
ನಿನ್ನಲ್ಲಿರುವ ಕೊರತೆಗಳನ್ನು ನೋಡು ಮತ್ತು ಅವುಗಳನ್ನು ನಿವಾರಿಸುವುದಕ್ಕೆ ಕನಿಷ್ಠಪಕ್ಷ ಯಾರೋ ಒಬ್ಬರು ಇದ್ದಾರೆ ಎಂಬುದನ್ನು ಅರ್ಥ ಮಾಡಿಕೋ. ನಿನ್ನ ಕೊರತೆಗಳನ್ನು ನಿವಾರಿಸಲು ಯಾರೋ ಒಬ್ಬರು ಇದ್ದಾರೆ ಎಂಬ ನಂಬಿಕೆಯನ್ನಿರಿಸು. ಕೇವಲ ಈ ನಂಬಿಕೆಯನ್ನಿರಿಸುವುದರಿಂದ ಸಂಗತಿಗಳು ಮುಂದಕ್ಕೆ ಸಾಗುತ್ತವೆ. ನಿನ್ನ ಕೊರತೆಗಳನ್ನು ನೋಡು ಮತ್ತು ಅವುಗಳನ್ನು ನಂಬಿಕೆಯೊಂದಿಗೆ ಸಮರ್ಪಣೆ ಮಾಡು, "ಇವುಗಳು ನನ್ನಲ್ಲಿರುವ ಕೊರತೆಗಳು, ಅವುಗಳನ್ನು ನಾನು ನಿಮಗೆ ಸಮರ್ಪಣೆ ಮಾಡುತ್ತಿದ್ದೇನೆ". ನಿನಗೆ ಸಮರ್ಪಣೆ ಮಾಡಲು ಕಷ್ಟವಾದರೆ, ಆಗ ಕೇವಲ, "ನನ್ನಿಂದ ಈ ಕೊರತೆಗಳನ್ನು ದೂರ ಮಾಡುವುದಕ್ಕೆ ಯಾರೋ ಒಬ್ಬರು ಇದ್ದಾರೆ" ಎಂಬುದನ್ನು ತಿಳಿದುಕೋ. ಹೇಗೆಂದರೆ, ಒಬ್ಬ ಶಾಲಾ ವಿದ್ಯಾರ್ಥಿಗೆ, ತನಗೆ ಅಂಕೆಗಳನ್ನೆಣಿಸಲು ಬರುವುದಿಲ್ಲವೆಂಬುದು ಅರ್ಥವಾಗುತ್ತದೆ, ಆದರೆ ಅವನಿಗೆ, ಅದನ್ನು ಶಿಕ್ಷಕರು ಕಲಿಸುವರೆಂಬ ನಂಬಿಕೆಯಿರುತ್ತದೆ. ಅವನು ಮೊದಲನೆಯ ಪುಟವನ್ನು ತೆರೆದಾಗ ಮತ್ತು ಅಲ್ಲಿ ಬರೆದಿರುವುದೇನು ಎಂಬುದನ್ನು ಅರ್ಥೈಸಲು ಸಾಧ್ಯವಾಗದೇ ಇರುವಾಗಲೂ ಅವನಿಗೆ, ತನಗೆ ಆ ಪುಸ್ತಕವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆಯೆಂಬ ವಿಶ್ವಾಸವಿರುತ್ತದೆ ಯಾಕೆಂದರೆ ಅವನಿಗಾಗಿ ಅಲ್ಲಿ ಶಿಕ್ಷಕರಿರುತ್ತಾರೆ.
ನಂಬಿಕೆಯಿಲ್ಲದೆ, ಜೀವನದ ಗಾಡಿಯು ಮುಂದಕ್ಕೆ ಸಾಗಲಾರದು. ನಂಬಿಕೆಯು ಜೀವನವೆಂಬ ಗಾಡಿಯ ಪೆಟ್ರೋಲ್ ಆಗಿದೆ. ನಂಬಿಕೆಯೆಂದು ಕರೆಯಲ್ಪಡುವ ಪೆಟ್ರೋಲ್ ಕೂಡಾ ತುಂಬಾ ದುಬಾರಿಯಾಗಲು ಶುರುವಾಗಿದೆ! ನೀವು ಅದನ್ನು ದುಬಾರಿಯಾಗಲು ಬಿಡದಿದ್ದರೆ, ಜೀವನದ ಗಾಡಿಯು ಮುಂದಕ್ಕೆ ಚಲಿಸುತ್ತದೆ ಮತ್ತು ಅದರ ಗುರಿಯನ್ನು ತಲಪುತ್ತದೆ.
ಪ್ರಶ್ನೆ: ಎಲ್ಲವೂ ದೇವರಿಂದ ಸೃಷ್ಟಿಯಾಗಿರುವುದಾದರೆ, ಅವನನ್ನು ಸೃಷ್ಟಿಸಿರುವುದು ಯಾರು?
ಶ್ರೀ ಶ್ರೀ ರವಿಶಂಕರ್:
ಎಲ್ಲವೂ ದೇವರಿಂದ ಸೃಷ್ಟಿಯಾಗಿರುವುದು ಎಂದು ನಿನಗೆ ಯಾರು ಹೇಳಿದರು? ನೀನು ಯಾಕೆ ಸೃಷ್ಟಿ ಮತ್ತು ವಿನಾಶಗಳೆಂಬ ಪರಿಕಲ್ಪನೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೀಯಾ? ಅಲ್ಲೇನಿದೆ, ಅದು ಇದೆ. ಒಂದು ನಿರ್ದಿಷ್ಟ ಪದವಿದೆ - ಸ್ವಯಂಭು; ಇದು ದೇವರನ್ನು ವಿವರಿಸಲು ಬಳಸಲ್ಪಡುತ್ತದೆ. ಇದರರ್ಥ, ತಾನೇ ಆಗಿ ಹುಟ್ಟಿಕೊಂಡಂತಹ ಒಂದು. ಅದು ಯಾವತ್ತೂ ಅಸ್ಥಿತ್ವದಲ್ಲಿತ್ತು. ನಾವು "ಹುಟ್ಟಿದುದು" ಎಂದು ಕೂಡಾ ಹೇಳುವಂತಿಲ್ಲ; ಅದು ಹಾಗೇ ಅಸ್ಥಿತ್ವದಲ್ಲಿದೆ.
ನಾವನ್ನುತ್ತೇವೆ, ಸೂರ್ಯನು ಹುಟ್ಟಿದನು. ನಾವು ಸೂರ್ಯನು ಉದಯಿಸುವುದನ್ನು ಮತ್ತು ಅಸ್ತಮಿಸುವುದನ್ನು ನೋಡುತ್ತೇವೆ; ಆದರೆ ನಿಜವಾಗಿ ಸೂರ್ಯನು ಉದಯಿಸುವುದೂ ಇಲ್ಲ, ಅಸ್ತಮಿಸುವುದೂ ಇಲ್ಲ. ವಾಸ್ತವವಾಗಿ ಸೂರ್ಯನು ಅಲ್ಲಿದ್ದಾನೆ, ಆದರೆ ಕೇವಲ ಅವನು ಕಾಣುವುದಿಲ್ಲವೆಂಬ ಮಾತ್ರಕ್ಕೆ, ಅವನು ಅಲ್ಲಿಲ್ಲವೆಂದು ಅರ್ಥವಲ್ಲ. ಆದುದರಿಂದ, ಯಾರು ಯಾವತ್ತಿಗೂ ಅಲ್ಲಿದ್ದಾರೋ ಮತ್ತು ಯಾವತ್ತೂ ಹುಟ್ಟಲಿಲ್ಲವೋ ಅವರು ದೇವರು.
ಪ್ರಶ್ನೆ: ನನ್ನ ಪತ್ನಿ ಮತ್ತು ನನ್ನ ತಾಯಿ ಜಗಳವಾಡುತ್ತಾರೆ. ಅವರಿಬ್ಬರೂ ತಮ್ಮದೇ ಆದ ರೀತಿಯಲ್ಲಿ ಸರಿಯಾಗಿದ್ದಾರೆ. ನನಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.
ಶ್ರೀ ಶ್ರೀ ರವಿಶಂಕರ್:
ಸರಿಯಾದ ಮಾರ್ಗವೆಂದರೆ ನೀನು ಮೌನವಾಗಿರುವುದು ಮತ್ತು ಸಹಜವಾಗಿರುವುದು. ಯಾರ ಪರ ವಹಿಸಿಯೂ ಮಾತನಾಡಬೇಡ. ನಿನ್ನ ತಾಯಿಗೆ ಹೇಳು, "ಸೊಸೆಯಂದಿರು ಹೀಗೆಯೇ ಇರುವುದು"; ಮತ್ತು ನಿನ್ನ ಪತ್ನಿಗೆ ಹೇಳು, "ಅವರಿರುವುದು ಹಾಗೆ. ನನ್ನ ತಾಯಿಯು ನಿನ್ನ ತಾಯಿಯಂತೆಯೇ. ಅವರ ತಪ್ಪನ್ನು ಹೃದಯಕ್ಕೆ ತೆಗೆದುಕೊಳ್ಳಬೇಡ". ಇಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರ ಕೊಂಡೊಯ್ಯಲು ಜ್ಞಾನದ ಮಾರ್ಗದಿಂದ ಮಾತ್ರ ಸಾಧ್ಯ.
ಪ್ರಶ್ನೆ: ಒಂದು ದೇವಸ್ಥಾನದಲ್ಲಿರುವ ’ಕಲಶ’ದ ಮಹತ್ವವೇನು?
ಶ್ರೀ ಶ್ರೀ ರವಿಶಂಕರ್:
ವಾಸ್ತುವಿನ ಪ್ರಕಾರ ಮತ್ತು ವಾಸ್ತುಶಿಲ್ಪದ ಕಾರಣದಿಂದ ಕಲಶವು ಮುಖ್ಯವಾದುದು. ಅದು ವಿದ್ಯುಚ್ಛಕ್ತಿ ಮತ್ತು ಇತರ ಕಂಪನಗಳನ್ನು ಸ್ಥಿರಗೊಳಿಸುತ್ತದೆ. ಎರಡನೆಯದಾಗಿ, ಇದು ದೈವಿಕ ಶಕ್ತಿಯ ಒಂದು ಸಂಕೇತ ಕೂಡಾ. ಅದು ವಿಶ್ವದ (ಕಾಸ್ಮಿಕ್) ಶಕ್ತಿಯನ್ನು ಭೂಮಿಗೆ ಸೆಳೆಯುವ ಒಂದು ಮಾಧ್ಯಮ.
ಪ್ರಶ್ನೆ: ನಾನು ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ಆದರೆ ಆತ್ಮ-ಗೌರವ ಮತ್ತು ಅಹಂಕಾರಗಳ ನಡುವಿರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಯಾರಿಗೂ ನಿನ್ನಿಂದ ನಿನ್ನ ಆತ್ಮ-ಗೌರವವನ್ನು ಕಸಿಯಲು ಸಾಧ್ಯವಿಲ್ಲ. ಆದರೆ ಅಹಂಕಾರವು ಇತರರ ಮೇಲೆ ಅವಲಂಬಿಸಿರುತ್ತದೆ. ಅಹಂಕಾರವಿರುವಾಗಲೆಲ್ಲಾ ಅದು ನಿಮ್ಮನ್ನು ನೋಯಿಸುತ್ತದೆ ಮತ್ತು ನಿಮಗೆ ದುಃಖವನ್ನು ತರುತ್ತದೆ; ಆದರೆ ಆತ್ಮ-ಗೌರವವು ಯಾವತ್ತೂ ನಿಮಗೆ ಶಾಂತಿಯನ್ನು ತರುತ್ತದೆ. ತಿಳಿಯಿತಾ? ನಿಮ್ಮ ಅಹಂಕಾರಕ್ಕೆ ಪೆಟ್ಟಾಗಬಹುದು, ಆದರೆ ನಿಮ್ಮ ಆತ್ಮ-ಗೌರವಕ್ಕೆ ಪೆಟ್ಟಾಗುವುದಿಲ್ಲ. ಸಮಾಜದಲ್ಲಿ ಜನರನ್ನು ನಿಂದಿಸುವ ಹಲವಾರು ತಿಳುವಳಿಕೆಯಿಲ್ಲದ ಮೂರ್ಖರಿದ್ದಾರೆ. ನೀವೆಷ್ಟೇ ಒಳ್ಳೆಯದನ್ನು ಮಾಡಿದರೂ, ನಕಾರಾತ್ಮಕವಾಗಿ ಮಾತನಾಡುವ ಜನರು ಯಾವತ್ತೂ ಇರುತ್ತಾರೆ. ನಾವು ಅದರಿಂದ ತೊಂದರೆಗೊಳಪಡಬಾರದು.
ಪ್ರಶ್ನೆ: ಒತ್ತಡದ ಕಾರಣದಿಂದ ನನಗೆ ನನ್ನ ನೌಕರಿಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್:
ಇಲ್ಲ. ನೀನು ನಗುತ್ತಾ ಇರು ಮತ್ತು ನಿನ್ನ ಕೆಲಸವನ್ನು ಮಾಡು, ಜನರೇನಂದರೂ ಪರವಾಗಿಲ್ಲ. ಯಾರೋ ಏನೋ ಹೇಳಿದರೆಂಬ ಮಾತ್ರಕ್ಕೆ ನಿನ್ನ ನೌಕರಿಯನ್ನು ಬಿಡಬೇಡ. ನೀನು ರಾಜನಂತೆ ನಡೆ ಮತ್ತು ಯಾರಾದರೂ ನಿನ್ನಲ್ಲಿ ಏನಾದರೂ ತಪ್ಪು ಕೆಲಸವನ್ನು ಮಾಡಲು ಹೇಳಿದರೆ, ಅದನ್ನು ನೀನು ಮಾಡುವುದಿಲ್ಲವೆಂದು ನಮ್ರತೆಯಿಂದ ಹೇಳು. "ಏನಾದರೂ ಕೆಟ್ಟದನ್ನು ಮಾಡಿ ನಾನು ಜೈಲಿಗೆ ಹೋಗಲು ಬಯಸುವುದಿಲ್ಲ", ಇದನ್ನು ಹೇಳುತ್ತಾ, ಕೇವಲ ನಿನ್ನ ಕೆಲಸವನ್ನು ಮಾಡುತ್ತಾ ಇರು. ಮುಂದೆ ನಿನ್ನನ್ನು ಸಮಸ್ಯೆಯಲ್ಲಿ ಸಿಕ್ಕಿಸಬಹುದಾದಂತಹ ಯಾವುದೇ ಕೆಟ್ಟ ಕೆಲಸವನ್ನು ನೀನು ಮಾಡುವುದಿಲ್ಲವೆಂಬ ನಿರ್ಧಾರವನ್ನು ತೆಗೆದುಕೋ. ನಾವಿದನ್ನು ಮಾಡುವಾಗ, ನಾವು ನಮ್ಮನ್ನೇ ಗೌರವಿಸುವಾಗ ಅದು ಆತ್ಮ-ಗೌರವವೆಂದು ಕರೆಯಲ್ಪಡುತ್ತದೆ.
ಪ್ರಶ್ನೆ: ಪ್ರಪಂಚದಾದ್ಯಂತ ಕೋಟಿಗಟ್ಟಲೆ ಹಿಂದೂಗಳಿದ್ದಾರೆ. ಹೀಗಿದ್ದರೂ, ಹಿಂದೂ ದೇವ-ದೇವತೆಯರನ್ನು ಅವಮಾನಗೊಳಿಸಲಾಗುತ್ತಿದೆ. ದೇವರು ನಮ್ಮ ಮೇಲೆ ಕೋಪಗೊಂಡಿದ್ದಾರೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ದೇವರು ಕೋಪಗೊಂಡಿಲ್ಲ. ಕೆಲವು ಜನರು ಇವುಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಚಿಂತಿಸಬೇಡ.
ಯಾರಿಗೂ ಹಿಂದೂ ಧರ್ಮವನ್ನು ಅವಮಾನಿಸಲು ಸಾಧ್ಯವಿಲ್ಲ. ಇದನ್ನು ಮಾಡುವವರು ಕೇವಲ ಅವರ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಮಾಧ್ಯಮದಲ್ಲಿ ಅಥವಾ ಸಿನೆಮಾದಲ್ಲಿ ಯಾರಾದರೂ ಹಿಂದುತ್ವದ ಬಗ್ಗೆ ಅವಮಾನಕಾರಿಯಾಗಿ ವರ್ತಿಸುತ್ತಿದ್ದರೂ ಕೂಡಾ, ಅದು ನಮ್ಮನ್ನು ದುಃಖಕ್ಕೀಡು ಮಾಡಬಾರದು. ಹಿಂದುತ್ವವು ನೂರಾರು ಸಾವಿರಾರು ವರ್ಷಗಳಿಂದ ಇದೆ ಮತ್ತು ಅದು ಅದೇ ರೀತಿ ಮುಂದುವರಿಯಲಿದೆ. ಆದುದರಿಂದ ಯಾರಾದರೂ ಹಿಂದುತ್ವದ ವಿರುದ್ಧವಾಗಿ ಏನಾದರೂ ಹೇಳಿದರೆ, ಅದನ್ನು ಕೇವಲ ಅವರ ಅಜ್ಞಾನ ಮತ್ತು ಮೂರ್ಖತನವೆಂಬಂತೆ ತೆಗೆದುಕೊಳ್ಳಿ. ನಾವು ಕೋಪಗೊಂಡು ಒಂದು ಸರಿಯಲ್ಲದ ರೀತಿಯಲ್ಲಿ ಸೇಡು ತೀರಿಸಿಕೊಂಡರೆ - ಬಸ್ಸುಗಳನ್ನು ಸುಡುವುದು, ಕಲ್ಲುಗಳನ್ನೆಸೆಯುವುದು ಅಥವಾ ಹಿಂದುತ್ವದ ವಿರುದ್ಧ ಮಾತನಾಡಿದವರಿಗೆ ತೊಂದರೆ ನೀಡುವುದು - ಅದು ಸಮಾಜದಲ್ಲಿ ಹಿಂದುತ್ವದ ಗೌರವವನ್ನು ಹೆಚ್ಚಿಸಲಾರದು. ಹಿಂದುತ್ವದ ಕಡೆಗಿರುವ ಗೌರವವು, ನಮ್ಮ ವರ್ತನೆಯೊಂದಿಗೆ, ನಮ್ಮ ಮೃದುತ್ವದೊಂದಿಗೆ, ನಮ್ಮ ಸೇವೆಯೊಂದಿಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದರೊಂದಿಗೆ ಸುಧಾರಣೆಯಾಗುತ್ತದೆ.

ಬುಧವಾರ, ಮೇ 23, 2012

ಜ್ಞಾನೋದಯವು ನಿಮ್ಮಲ್ಲಿ ಬೀಜ ರೂಪದಲ್ಲಿದೆ


23
2012............................... ಬೆಂಗಳೂರು ಆಶ್ರಮ, ಭಾರತ
May

ನಾವು ಜೀವನದಲ್ಲಿ ಏನನ್ನು ಬಯಸುತ್ತೇವೋ ಅದು ಈಗಾಗಲೇ ನಮ್ಮಲ್ಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನೀವು ಈ ಸಂಕಲ್ಪದಿಂದ ಪ್ರಾರಂಭಿಸಿ, "ನಾನು ಏನನ್ನು ಬಯಸುತ್ತೇನೋ ಅದು ಈಗಾಗಲೇ ನನ್ನಲ್ಲಿದೆ". ಆಗ ನೀವು ಬಯಸುವುದು ಸುಲಭವಾಗಿ ಸಿದ್ಧಿಸುತ್ತದೆ. "ಅದು ನನ್ನಲ್ಲಿದೆ" ಎಂದು ಯೋಚಿಸುವುದು, ಒಂದು ಬೀಜವನ್ನು ಬಿತ್ತುವಂತೆ. ಒಮ್ಮೆ ನೀವು ಬೀಜವನ್ನು ಬಿತ್ತಿದ ಬಳಿಕ, ನೀವು ನೀರು, ಗೊಬ್ಬರಗಳನ್ನು ಹಾಕುತ್ತೀರಿ ಮತ್ತು ಅದು ಮೊಳಕೆಯೊಡೆದು ಬೆಳೆಯುತ್ತದೆ. ಹೀಗೆ, ಅಲ್ಲಿ ಬೀಜವಿದೆ ಎಂಬುದು ಮಾನಸಿಕವಾಗಿ ನಿಮಗೆ ತಿಳಿದಿರುತ್ತದೆ. ಅದೇ ರೀತಿಯಲ್ಲಿ, ನಿಮ್ಮ ಜೀವನದಲ್ಲಿ ನೀವು ಯಾವುದನ್ನೆಲ್ಲಾ ಸಾಧಿಸಲು ಬಯಸುತ್ತೀರೋ, ನೀವು ಅದಾಗಿದ್ದೀರಿ ಮತ್ತು ಅದು ನಿಮ್ಮಲ್ಲಿದೆ ಎಂಬುದನ್ನು ತಿಳಿಯಿರಿ. ಅದು ನಿಮ್ಮಲ್ಲಿಲ್ಲ ಎಂದು ನೀವು ಯೋಚಿಸಿದರೆ, ಆಗ ಕೇವಲ ಆ ಕೊರತೆಯು ಬೆಳೆಯುತ್ತದೆ.
ಅದಕ್ಕಾಗಿಯೇ ಹಣವಿರುವ ಜನರು ಇನ್ನೂ ಹೆಚ್ಚು ಹಣವನ್ನು ಗಳಿಸುತ್ತಾ ಇರುತ್ತಾರೆ ಮತ್ತು ಯಾರಲ್ಲಿಲ್ಲವೋ ಅವರಿಗೆ ಸಿಗುವುದಿಲ್ಲ ಯಾಕೆಂದರೆ ಅವರು, "ನನ್ನಲ್ಲಿಲ್ಲ, ನನ್ನಲ್ಲಿಲ್ಲ" ಎಂದು ಹೇಳುತ್ತಾ ಇರುತ್ತಾರೆ. ಆದುದರಿಂದ ಮನಸ್ಸು ಕೊರತೆಯ ದಿಕ್ಕಿನಲ್ಲಿ ಹೋಗುತ್ತದೆ.
ನಿಮಗೆ ಗೊತ್ತಾ, ಮನೆಯಲ್ಲಿ ಯಾವುದಾದರೂ ವಸ್ತುಗಳಿಲ್ಲದಿದ್ದಾಗ ಅಥವಾ ನಾವು ಮಿಠಾಯಿ ಕೇಳುತ್ತಿದ್ದಾಗ ನಮ್ಮ ಅಜ್ಜಿ ಯಾವತ್ತೂ ಹೇಳುತ್ತಿದ್ದರು, "ಅದು ತುಂಬಾ ಇದೆ, ಧಾರಾಳವಾಗಿದೆ, ನಾವು ಅಂಗಡಿಗೆ ಹೋಗೋಣ". ಅದನ್ನು ಕೇಳಿದವರಿಗೆ, ಅದು ಪೂರ್ತಿ ಅಸಂಬದ್ಧವಾಗಿ ತೋರುತ್ತದೆ. ನಮ್ಮಲ್ಲಿಲ್ಲ ಎಂದು ಅವರು ಹೇಳುವುದನ್ನು ನಾವು ಕೇಳಲಿಲ್ಲ.
ಆದುದರಿಂದ ಆ ’ಕೊರತೆ’ ಎಂಬ ಪ್ರಜ್ಞೆಯು ಹೋಗಬೇಕು ಮತ್ತು ನೀವು ಧಾರಾಳತೆಯನ್ನು ಅನುಭವಿಸಬೇಕು. ನೀವು ಯಾವುದೇ ಗುರಿಯನ್ನು ಸಾಧಿಸಲು ಬಯಸಿದರೂ, ಅದು ನಿಮ್ಮಲ್ಲಿದೆ, ಅದನ್ನು ನೀವು ಸಾಧಿಸಿದ್ದೀರಿ ಎಂಬುದನ್ನು ಮೊದಲು ತಿಳಿಯಿರಿ ಮತ್ತು ನಂತರ ಅದನ್ನು ಸಾಧಿಸಲು ನಿಮ್ಮ ಪ್ರಯತ್ನವನ್ನು ಹಾಕಿ. ಪ್ರಯತ್ನವನ್ನು ಹಾಕಬೇಕು, ಆದರೆ ಕೇವಲ ಪ್ರಯತ್ನವು ಕೆಲಸ ಮಾಡುವುದಿಲ್ಲ. ಪ್ರಯತ್ನದ ಮೊದಲು, ಅಲ್ಲಿ ಗುರಿಯ ಬೀಜವೂ ಕೂಡಾ ಇರಬೇಕು. ಆದುದರಿಂದ, ಅನ್ವೇಷಕನಲ್ಲಿ ಗುರಿಯು ಅದಾಗಲೇ ಇರುತ್ತದೆ. ಗುರಿಯು ಅಲ್ಲೆಲ್ಲೋ ಹೊರಗಡೆಯಿದ್ದು ನೀವು ಅದನ್ನು ತಲಪಲು ಪ್ರಯತ್ನಿಸಬೇಕಾಗಿಲ್ಲ, ಇಲ್ಲ! ಕೇವಲ ವಿಶ್ರಾಮ ಮಾಡಿ; ಗುರಿಯು ಇಲ್ಲಿದೆ ಮತ್ತು ಈಗ ಇದೆ.
ಆದುದರಿಂದ, ಜ್ಞಾನೋದಯ ನಿಮ್ಮಲ್ಲಿದೆ. ನಿಮಗೆ ಅದರ ಕೊರತೆಯಿದೆ ಎಂದು ನೀವು ಯೋಚಿಸಿದರೆ, ನೀವು ಯಾವತ್ತಿಗೂ ಅದನ್ನು ಸಾಧಿಸಲು ಸಾಧ್ಯವಾಗದು. ಅದು ನಿಮ್ಮಲ್ಲಿ ಒಂದು ಬೀಜವಾಗಿ ಇದೆ ಎಂಬುದನ್ನು ನೀವು ತಿಳಿಯಬೇಕು. ನೀವು ಈಗಾಗಲೇ ಒಬ್ಬ ಯೋಗಿ ಎಂಬುದನ್ನು ನೀವು ತಿಳಿಯಬೇಕು ಮತ್ತು ಯೋಗ ಮಾಡುತ್ತಾ ಇರಬೇಕು, ನೀವು ಅದರಲ್ಲಿ ಪರಿಪೂರ್ಣತೆಯನ್ನು ಹೊಂದುತ್ತೀರಿ. ನೀವೊಬ್ಬ ಯೋಗಿಯಲ್ಲವೆಂದು ನೀವು ಯೋಚಿಸಿದರೆ ಮತ್ತು ನಂತರ ಯೋಗದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸಿದರೆ ಅದು ಕೆಲಸ ಮಾಡುವುದಿಲ್ಲ. ಆದುದರಿಂದ, ಬೀಜವು ಈಗಾಗಲೇ ಅಲ್ಲಿದೆ ಎಂಬುದನ್ನು ತಿಳಿಯಿರಿ.
ನೀವೊಬ್ಬ ಉದ್ಯಮಿಯಾಗಲು ಬಯಸಿದರೆ, "ನಾನೊಬ್ಬ ಉದ್ಯಮಿ" ಎಂಬ ಬೀಜವನ್ನು ಹಾಕಿ ಮತ್ತು ನಂತರ ಉದ್ಯಮಿಯಾಗುವುದರ ನಿಟ್ಟಿನಲ್ಲಿ ಕೆಲಸ ಮಾಡಿ. ಇದು ತುಂಬಾ ಅಸಂಬದ್ಧವಾಗಿ ತೋರಬಹುದು. ಸಾಧಾರಣವಾಗಿ ಜನರು, "ನನ್ನಲ್ಲಿಲ್ಲ, ಆದುದರಿಂದ ನಾನು ಸಾಧಿಸಬೇಕು" ಎಂದು ಯೋಚಿಸುತ್ತಾರೆ. ಆದರೆ ಅಪರೂಪವಾಗಿ ಮಾತ್ರ ಅವರಿಗೆ ಅದನ್ನು ಮಾಡಲು ಸಾಧ್ಯವಾಗುತ್ತದೆ. ಗುರಿಯು ಅದಾಗಲೇ ಅನ್ವೇಷಕನಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಯಶಸ್ಸಿನ ರಹಸ್ಯವಿದೆ.
ಇವತ್ತು ನಿಮಗೆ ತುಂಬಾ ದೊಡ್ಡ ರಹಸ್ಯ ಜ್ಞಾನ ದೊರಕಿತು. 
ಪ್ರಶ್ನೆ: ಪ್ರೀತಿಯ ಗುರೂಜಿ, ಮಹಾಭಾರತದ ಸಮಯದಲ್ಲಿ ತಂತ್ರಜ್ಞಾನವು ಈಗಿರುವುದಕ್ಕಿಂತ ಎಷ್ಟೋ ಹೆಚ್ಚು ಮುಂದುವರಿದಿತ್ತು ಎಂದು ಹೇಳಲಾಗುತ್ತದೆ. ಏನಾಯಿತು? ಎಲ್ಲಾ ಅಭಿವೃದ್ಧಿ ಮತ್ತು ಪ್ರಗತಿಗಳು ಎಲ್ಲಿ ಮಾಯವಾದವು? ನಾವು ಹಿಂದಕ್ಕೆ ಚಲಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಇದು ಪ್ರಕೃತಿಯಲ್ಲಿನ ಒಂದು ಚಕ್ರ. ಎಲ್ಲವೂ ಚಕ್ರದಂತೆ ಸುತ್ತುತ್ತದೆ. ಈ ಗ್ರಹದಲ್ಲಿ ಡೈನೋಸಾರುಗಳಿದ್ದವು ಮತ್ತು ತರಬೇತುಗೊಳಿಸಬಲ್ಲಂತಹ ದೊಡ್ಡ ಪಕ್ಷಿಗಳಿದ್ದವು. ಈ ಪಕ್ಷಿಗಳ ಬೆನ್ನ ಮೇಲೆ ಮಂಟಪಗಳನ್ನು ಕಟ್ಟುತ್ತಿದ್ದರು ಮತ್ತು ಬೇರೆ ಜಾಗಗಳಿಗೆ ಹೋಗಲು ಪಕ್ಷಿಗಳಿಗೆ ತರಬೇತಿ ನೀಡುತ್ತಿದ್ದರು. ಅದು ಹಾರಿಕೊಂಡು ಹೋಗುತ್ತಿತ್ತು. ಡೈನೋಸಾರ್ ಯುಗದಲ್ಲಿ, ಸುಮಾರು ನಮ್ಮ ವಿಮಾನಗಳ ಗಾತ್ರದ ಬೃಹತ್ ಪಕ್ಷಿಗಳಿರುತ್ತಿದ್ದವು. ಅದರ ಬಗ್ಗೆಯಿರುವ ಸಾಕ್ಷ್ಯಚಿತ್ರವನ್ನು ನೀವು ನೋಡಿದ್ದೀರಾ? ಕೆಲವು ಪಕ್ಷಿಗಳು ಸುಮಾರು ೩೦೦೦ ಕಿಲೋಗಳಷ್ಟು ಭಾರವಿರುತ್ತಿದ್ದವು ಮತ್ತು ಜನರು ಅವುಗಳ ಮೇಲೆ ಕೋಣೆಗಳನ್ನು ಕಟ್ಟುತ್ತಿದ್ದರು. ರಾಮಾಯಣದಲ್ಲಿ, ಹೇಗೆ ರಾವಣನು ಸೀತೆಯನ್ನು ಜೊತೆಯಲ್ಲಿ ಕೊಂಡೊಯ್ಯುವಾಗ ಜಟಾಯು (ಒಂದು ದೊಡ್ಡ ಪಕ್ಷಿ) ದಾರಿಯಲ್ಲಿ ಬಂತು ಮತ್ತು ರಾವಣನು ಅದರ ರೆಕ್ಕೆಯನ್ನು ತುಂಡರಿಸಿದ ಎಂಬುದನ್ನು ಬರೆಯಲಾಗಿದೆ.
ಅದನ್ನು ನಾವು ಹೇಗೆ ಕಳೆದುಕೊಂಡೆವು ಮತ್ತು ಯಾಕೆ ಕಳೆದುಕೊಂಡೆವು ಎಂಬುದು ನನಗೆ ತಿಳಿಯದು, ಆದರೆ ಈಗ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ತುಂಬಾ ಕಷ್ಟಪಟ್ಟು ನಮ್ಮ ದೇಶವು ಸ್ವಾತಂತ್ರ್ಯವನ್ನು ಗಳಿಸಿತು, ಆದರೆ ಈಗ ಈ ದೇಶದಲ್ಲಿ ಭ್ರಷ್ಟಾಚಾರವು ಬೆಳೆಯುತ್ತಿರುವ ರೀತಿಯನ್ನು ನೋಡಿದರೆ, ಅದು ಕರುಣಾಜನಕವಾಗಿದೆ. ನಾವು ಆ ವಿಷಯಗಳನ್ನು ಸರಿಪಡಿಸಬೇಕು.
ಪ್ರಶ್ನೆ: ಪ್ರೀತಿಯ ಗುರೂಜಿ, ನಾನು ಉದ್ಯಮದಲ್ಲಿ ಬಹಳ ಯಶಸ್ವಿಯಾಗಿದ್ದೇನೆ ಆದರೆ ವೈಯಕ್ತಿಕ ಜೀವನದಲ್ಲಿ ದುರಂತ ಹೊಂದಿದವನು. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್:
ಮೊದಲನೆಯದಾಗಿ, "ನಾನೊಬ್ಬ ದುರಂತ ಹೊಂದಿದವನು" ಎಂಬ ಈ ಲೇಬಲ್ಲನ್ನು ನಿನ್ನಿಂದ ತೆಗೆ. ನೀನು ಹಿಂದೆ ಒಂದು ತಪ್ಪನ್ನು ಮಾಡಿದ್ದೀಯೆಂಬುದನ್ನು ನೀನು ಅರ್ಥ ಮಾಡಿಕೊಂಡಿದ್ದರೆ, ನೀನು ಈಗಾಗಲೇ ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿರುವೆ. ದುರಂತ ಸಂಭವಿಸುವುದು, ನಿನ್ನಿಂದ ದುರಂತವಾಗಿದೆ ಎಂಬುದನ್ನು ನೀನು ಅರ್ಥ ಮಾಡಿಕೊಳ್ಳದೇ ಇರುವಾಗ. ನಿನ್ನಿಂದ ದುರಂತ ಸಂಭವಿಸಿದಾಗ ಮತ್ತು ಅದೊಂದು ದುರಂತ ಎಂಬುದನ್ನು ನೀನು ತಿಳಿದುಕೊಂಡಾಗ ನೀನು ಅದರಿಂದ ಹೊರ ಬಂದಾಯಿತು. ಆದುದರಿಂದ ಈಗ ಸ್ವತಂತ್ರನಾಗಿ ನಡೆ, ಚಿಂತಿಸಬೇಡ.
ಪ್ರಶ್ನೆ: ಪ್ರೀತಿಯ ಗುರೂಜಿ, ಡಮರು, ತ್ರಿಶೂಲ ಮತ್ತು ಶಿವನ ತಲೆಯ ಮೇಲಿರುವ ಅರ್ಧ ಚಂದ್ರನ ಮಹತ್ವವನ್ನು ದಯವಿಟ್ಟು ವಿವರಿಸಿ.
ಶ್ರೀ ಶ್ರೀ ರವಿಶಂಕರ್:
ಶಿವ ತತ್ವವೆಂದರೆ ಎಲ್ಲಿ ಮನಸ್ಸಿಲ್ಲವೋ ಅದು ಮತ್ತು ಚಂದ್ರನು ಮನಸ್ಸನ್ನು ಸೂಚಿಸುತ್ತಾನೆ. ಮನಸ್ಸಿಲ್ಲದೇ ಇರುವಾಗ ಈ "ಮನಸ್ಸಿಲ್ಲದಿರುವಿಕೆ" ಯು ವ್ಯಕ್ತವಾಗುವುದು ಹೇಗೆ ಮತ್ತು ಯಾರಿಗಾದರೂ ಅರ್ಥವಾಗುವುದು ಹೇಗೆ? ಅರ್ಥ ಮಾಡಿಕೊಳ್ಳಲು, ಅನುಭವಿಸಲು ಮತ್ತು ವ್ಯಕ್ತಪಡಿಸಲು ನಿಮಗೆ ಸ್ವಲ್ಪ ಮನಸ್ಸಿನ ಅವಶ್ಯಕತೆಯಿದೆ. ಆದುದರಿಂದ, ಅದು ಪೂರ್ಣ ಚಂದ್ರನಲ್ಲ, ಆದರೆ ತಲೆಯ ಮೇಲಿರುವುದು ಚಿಕ್ಕದಾದ ಅರ್ಧಚಂದ್ರ. ಅದರರ್ಥ, ಅವ್ಯಕ್ತವಾದುದನ್ನು ವ್ಯಕ್ತಪಡಿಸಲು ಕೇವಲ ಸ್ವಲ್ಪವೇ ಸ್ವಲ್ಪ ಮನಸ್ಸಿನ ಅಗತ್ಯವಿದೆಯೆಂದು. ಶಿವ ತತ್ವವು ಅವ್ಯಕ್ತವಾದುದು; ಯಾರಿಗೂ ಅದರ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಇದರ ಬಗ್ಗೆ ಒಂದು ಕಥೆಯಿದೆ. ಬ್ರಹ್ಮನು ತಲೆಯನ್ನೂ, ವಿಷ್ಣುವು ಪಾದಗಳನ್ನೂ ಕಂಡುಹುಡುಕಲು ಹೋದರು, ಆದರೆ ಯಾರಿಗೂ ಏನೂ ಸಿಗಲಿಲ್ಲ. ಆದುದರಿಂದ, ಒಂದು ಮನಸ್ಸಿಲ್ಲದೆ, ಅನಂತತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.
ನೀವು ಧ್ಯಾನದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಏನೂ ಇಲ್ಲದಿರುವಿಕೆಯನ್ನು ಅನುಭವಿಸುತ್ತೀರಿ, ಆದರೆ ಆಗ ಯೋಚನೆಯು ಬರುತ್ತದೆ, "ನಾನು ಈ ಸುಂದರವಾದ ಧ್ಯಾನವನ್ನು ಅನುಭವಿಸುತ್ತಿದ್ದೇನೆ". ಅದನ್ನು ಯಾರು ಅನುಭವಿಸಿದರು? ಅದು ಮನಸ್ಸು. ಮನಸ್ಸು "ಓ, ನಾನು ಚೆನ್ನಾಗಿ ನಿದ್ರಿಸಿದೆ" ಅಥವಾ "ನನಗೆ ಒಳ್ಳೆಯ ಧ್ಯಾನವಾಯಿತು" ಎಂದು ಗ್ರಹಿಸುತ್ತದೆ. ಆದುದರಿಂದ ಆ ಅವ್ಯಕ್ತವಾದುದನ್ನು ವ್ಯಕ್ತಪಡಿಸಲು, ನಿಮಗೆ ಸ್ವಲ್ಪ ಮನಸ್ಸಿನ ಅಗತ್ಯವಿದೆ ಮತ್ತು ಅದಕ್ಕೇ ಆ ಸ್ವಲ್ಪ ಮನಸ್ಸು (ಅರ್ಧ ಚಂದ್ರ) ತಲೆಯ ಮೇಲಿರುವುದು. ತಲೆಯು ಪೂರ್ತಿಯಾಗಿ ಬುದ್ಧಿವಂತಿಕೆಯಾಗಿದೆ. ಬುದ್ಧಿವಂತಿಕೆಯು ಮನಸ್ಸಿನಾಚೆಯದು, ಆದರೆ ಅದು ಸ್ವಲ್ಪ ಮನಸ್ಸಿನೊಂದಿಗೆ ವ್ಯಕ್ತಗೊಳ್ಳಬೇಕಾಗುತ್ತದೆ ಮತ್ತು ಇದು ಅರ್ಧಚಂದ್ರದಿಂದ ಸೂಚಿಸಲ್ಪಟ್ಟಿದೆ.
ಡಮರು, ಯಾವತ್ತೂ ವಿಸ್ತರಿಸುವ ಮತ್ತು ಸಂಕುಚಿಸುವ ವಿಶ್ವವನ್ನು ಸೂಚಿಸುತ್ತದೆ. ಒಂದು ವಿಸ್ತರಿಕೆಯಿಂದ ಅದು ಸಂಕುಚಿಸುತ್ತದೆ ಮತ್ತು ಅದು ಪುನಃ ವಿಸ್ತರಿಸುತ್ತದೆ, ಇದು ಸೃಷ್ಟಿಯ ಪ್ರಕ್ರಿಯೆಯಾಗಿದೆ. ನೀವು ನಿಮ್ಮ ಹೃದಯ ಬಡಿತವನ್ನು ನೋಡಿದರೆ, ಅದು ಕೇವಲ ಒಂದು ನೇರವಾದ ರೇಖೆಯಲ್ಲ ಆದರೆ ಮೇಲೆ ಕೆಳಗೆ ಹೋಗುವ ಒಂದು ಲಯವಾಗಿದೆ.
ಇಡಿಯ ಪ್ರಪಂಚವು ಲಯಗಳಲ್ಲದೆ ಮತ್ತೇನೂ ಅಲ್ಲ; ಶಕ್ತಿಯು ಮೇಲೇರುವುದು ಮತ್ತು ಕುಸಿಯುವುದು, ಪುನಃ ಮೇಲೇರುವುದು. ಆದುದರಿಂದ ಡಮರು ಅದನ್ನು ಸೂಚಿಸುತ್ತದೆ. ಡಮರುವಿನ ಆಕಾರವನ್ನು ನೋಡಿ, ವಿಸ್ತಾರದಿಂದ ಅದು ಸಂಕುಚಿಸುತ್ತದೆ ಮತ್ತು ಪುನಃ ವಿಸ್ತಾರವಾಗುತ್ತದೆ. ಅದು ಶಬ್ದದ ಒಂದು ಚಿಹ್ನೆ ಕೂಡಾ. ಶಬ್ದವು ಲಯವಾಗಿದೆ ಮತ್ತು ಶಬ್ದವು ಶಕ್ತಿಯಾಗಿದೆ. ಸಂಪೂರ್ಣ ವಿಶ್ವವು ಒಂದು ತರಂಗ ಕ್ರಿಯೆಯಲ್ಲದೆ ಮತ್ತೇನೂ ಅಲ್ಲ, ಲಯಗಳಲ್ಲದೆ ಮತ್ತೇನೂ ಅಲ್ಲ.
ಕ್ವಾಂಟಮ್ ಭೌತಶಾಸ್ತ್ರವು ಏನೆಂದು ಹೇಳುತ್ತದೆ? ಅದು ಅದೇ ವಿಷಯವನ್ನು ಹೇಳುತ್ತದೆ - ಸಂಪೂರ್ಣ ವಿಶ್ವವು ಲಯಗಳಲ್ಲದೆ ಮತ್ತೇನೂ ಅಲ್ಲ. ಆದುದರಿಂದ, ಎರಡೆಂಬುದಿಲ್ಲ, ಒಂದೇ ಇರುವುದು. ಅದು ಕೇವಲ ಒಂದು ತರಂಗ. ಅದನ್ನೇ ಆದಿ ಶಂಕರರು ಹೇಳಿದುದು, ಕೇವಲ ಒಂದೇ ವಿಷಯವಿರುವುದು.
ನಿಮಗೆ ಈ ಬಲ್ಬು ಬೇರೆ, ಆ ಬಲ್ಬು ಬೇರೆ, ಫ್ಯಾನು ಬೇರೆ  ಎಂದು ತೋರಿದರೆ, ಆಗ ನೀವು ಗೊಂದಲಗೊಂಡಿರುತ್ತೀರಿ, ನಿಮಗೆ ಸತ್ಯಾಂಶ ತಿಳಿದಿಲ್ಲ. ಸತ್ಯಾಂಶವೇನೆಂದರೆ, ಒಂದೇ ಒಂದು ವಿದ್ಯುಚ್ಛಕ್ತಿಯಿರುವುದು, ಒಂದೇ ಒಂದು ಪ್ರಧಾನ ಸ್ವಿಚ್ ಇರುವುದು ಮತ್ತು ಅದು ಆನ್ ಆಗಿದ್ದರೆ, ಎಲ್ಲಾ ಬಲ್ಬುಗಳು ಉರಿಯುತ್ತವೆ. ಆ ಸ್ವಿಚ್ ಆಫಾಗಿದ್ದರೆ, ಎಲ್ಲವೂ ಆಫಾಗಿರುತ್ತವೆ. ಆದುದರಿಂದ ಆ ಒಂದು ವಿಷಯವು ಎಲ್ಲವನ್ನೂ ಓಡಿಸುತ್ತದೆ ಮತ್ತು ಅದುವೇ ವಿದ್ಯುಚ್ಛಕ್ತಿ. ಆದುದರಿಂದ ಈ ಸಂಪೂರ್ಣ ವಿಶ್ವವು ಪ್ರಜ್ಞೆ ಅಥವಾ ಒಂದು ಶಕ್ತಿಯಾಗಿದೆ. ಈಗ, ವಿದ್ಯುಚ್ಛಕ್ತಿಯು ಒಳ್ಳೆಯದೇ ಅಥವಾ ಕೆಟ್ಟದ್ದೇ? ಎರಡೂ ಅಲ್ಲ. ನೀವು ನಿಮ್ಮ ಕೈಯನ್ನು ಸಾಕೆಟಿನೊಳಗೆ ಹಾಕಿ ನಿಮಗೆ ಶಾಕ್ ತಗಲಿದರೆ, ಅದು ಒಳ್ಳೆಯದೇ? ಆದರೆ ಅದೇ ಸಮಯದಲ್ಲಿ, ನಿಮಗೆ ಒಂದು ಶಾಕ್ ತಗಲಿದರೆ, ವಿದ್ಯುಚ್ಛಕ್ತಿ ಕೆಟ್ಟದ್ದೇ? ಅಲ್ಲ! ವಿದ್ಯುಚ್ಛಕ್ತಿ ಕೆಟ್ಟದ್ದೆಂದು ಹೇಳುವುದು ಮೂರ್ಖತನ. ಯಾಕೆಂದರೆ ಅದು ಅಷ್ಟೊಂದು ಸೌಕರ್ಯಗಳನ್ನು ನೀಡುತ್ತದೆ - ಬೆಳಕು, ಶಬ್ದ, ಗಾಳಿ, ಆಹಾರ - ಎಲ್ಲವೂ ವಿದ್ಯುಚ್ಛಕ್ತಿಯಿಂದ ಬರುತ್ತದೆ. ಅದೇ ಸಮಯದಲ್ಲಿ ವಿದ್ಯುಚ್ಛಕ್ತಿಯು ತುಂಬಾ ಹಾನಿಕಾರಕವಾದುದು. ನಿಮ್ಮ ಮನೆಯ ಮೇಲಿನಿಂದಾಗಿ ಹೈ ಟೆನ್ಶನ್ ತಂತಿಗಳು ಹಾದು ಹೋಗುತ್ತಿದ್ದರೆ, ಅಲ್ಲಿ ಬಹಳ ವಿಕಿರಣವಿರುತ್ತದೆ, ಅದು ತುಂಬಾ ಕೆಟ್ಟದು.
ಆದುದರಿಂದ ವಿದ್ಯುಚ್ಛಕ್ತಿಯು ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಇದನ್ನೇ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು. ಅದಕ್ಕೇ ನಾವು ಹೇಳುವುದು, ಬ್ರಹ್ಮತತ್ವಂ ಅಥವಾ ಜೀವವು ಒಳ್ಳೆಯದು ಮತ್ತು ಕೆಟ್ಟದ್ದರ ಆಚಿನದು. ಒಳ್ಳೆಯದು ಮತ್ತು ಕೆಟ್ಟದು ಯಾವತ್ತೂ ಸಾಪೇಕ್ಷವಾದುದು. ಯಾವುದೇ ಕೆಟ್ಟದು ಅಥವಾ ಯಾವುದೇ ಒಳ್ಳೆಯದು ಇಲ್ಲ, ಅದೆಲ್ಲವೂ ಅದರಾಚಿನದು, ಇರುವುದು ಒಂದೇ - ಅದು ತತ್ವ ಜ್ಞಾನ ಎಂದು ಕರೆಯಲ್ಪಡುತ್ತದೆ, ಸತ್ಯ ಜ್ಞಾನ.
ಪ್ರಶ್ನೆ: ಪ್ರೀತಿಯ ಗುರೂಜಿ, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ ಮತ್ತು ತಮಗೆ ಕೊರತೆಯಿದೆಯೆಂದುಕೊಂಡಾಗ ಬಡವರು ಇನ್ನೂ ಹೆಚ್ಚು ಬಡವರಾಗುತ್ತಾರೆ ಎಂದು ನೀವು ಉಲ್ಲೇಖಿಸಿದಿರಿ. ಈ ಅಸಮತೋಲನಗಳನ್ನು ಪ್ರಕೃತಿಯು ಯಾವುದಾದರೂ ರೀತಿಯಲ್ಲಿ ಸರಿದೂಗಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು, ಜ್ಞಾನದ ಮೂಲಕ. ಅದಕ್ಕೇ ನಾವು ಎಲ್ಲರನ್ನೂ ಆತ್ಮ ವಿಶ್ವಾಸ ಹೊಂದುವಂತೆ ಮತ್ತು ’ಕೊರತೆ’ಯ ಪ್ರಜ್ಞೆಯಿಂದ ಹೊರಬರುವಂತೆ ಪ್ರೋತ್ಸಾಹಿಸಬೇಕಾಗಿರುವುದು. ಇರುವವರು ಸೇವೆ ಮಾಡಲು ಪ್ರಾರಂಭಿಸಬೇಕು. ಇಲ್ಲದವರು, ತಮಗೆ ಬೇಕಾಗಿರುವುದು ಸಿಗುವುದೆಂದು ತಿಳಿಯಲು ಪ್ರಾರಂಭಿಸಬೇಕು ಮತ್ತು ಕಷ್ಟಪಟ್ಟು ಕೆಲಸ ಮಾಡಬೇಕು.
ಪ್ರಶ್ನೆ: ನೀವು ಗುರೂಜಿಯಾಗಲು ಇರುವವರೆಂದು ನಿಮಗೆ ತಿಳಿದದ್ದು ಯಾವಾಗ?
ಶ್ರೀ ಶ್ರೀ ರವಿಶಂಕರ್:
ರಾಮಾಯಣದಲ್ಲಿ ಒಂದು ಒಳ್ಳೆಯ ಕಥೆಯಿದೆ. ಒಂದು ಬೀದಿ ನಾಯಿಯು ಬೀದಿಯಲ್ಲಿ ನಡೆಯುತ್ತಿತ್ತು ಮತ್ತು ಯಾರೋ ಒಬ್ಬರು ಅದಕ್ಕೆ ಒಂದು ಕಲ್ಲನ್ನೆಸೆದು ಅದನ್ನು ಅಟ್ಟಿದರು. ಹಾಗೆ ನಾಯಿಯು ನ್ಯಾಯಾಲಯಕ್ಕೆ ಹೋಯಿತು. ಭಗವಾನ್ ರಾಮನ ನ್ಯಾಯಾಲಯದಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತಿತ್ತು ಎಂದು ಹೇಳಲಾಗುತ್ತದೆ, ಪ್ರಾಣಿಗಳಿಗೂ ಕೂಡಾ. ಆದುದರಿಂದ ನಾಯಿಯು ನ್ಯಾಯಾಲಯಕ್ಕೆ ಹೋಗಿ ಹೇಳಿತು, "ರಸ್ತೆಯಿರುವುದು ಎಲ್ಲರಿಗಾಗಿ. ಇಲ್ಲಿ ನಾಯಿಗಳಿಗೆ ಪ್ರವೇಶವಿಲ್ಲವೆಂದು ರಸ್ತೆಯ ಮೇಲೆಲ್ಲೂ ಹೇಳಿಲ್ಲ. ನಾನು ರಸ್ತೆಯ ಮೇಲೆ ನಡೆಯುತ್ತಿದ್ದೆ ಮತ್ತು ಈ ವ್ಯಕ್ತಿಯು ನನಗೆ ನೋಯಿಸಿದನು. ನೀವು ಅವನಿಗೆ ಶಿಕ್ಷೆ ಕೊಡಬೇಕು".
ಭಗವಾನ್ ರಾಮನು ಆ ವ್ಯಕ್ತಿಯಲ್ಲಿ ಇದು ನಿಜವೇ ಎಂದು  ಕೇಳಿದನು. ಆ ವ್ಯಕ್ತಿಗೆ ಸುಳ್ಳು ಹೇಳಲು ಸಾಧ್ಯವಾಗಲಿಲ್ಲ ಮತ್ತು ತಾನು ನಾಯಿಯನ್ನು ನೋಯಿಸಿದುದಾಗಿ ಒಪ್ಪಿಕೊಂಡನು. ಆ ದಿನಗಳಲ್ಲಿ, ಅಪರಾಧಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ಬಲಿಪಶುವಾದವನಲ್ಲಿ ಕೇಳುತ್ತಿದ್ದರು. ಆದುದರಿಂದ, ತನಗೆ ಕಲ್ಲಿನಿಂದ ನೋಯಿಸಿದ ವ್ಯಕ್ತಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ನಾಯಿಯಲ್ಲಿ ಕೇಳಿದಾಗ, ನಾಯಿಯೆಂದಿತು, "ಅವನನ್ನು ಒಂದು ಧಾರ್ಮಿಕ ಸಂಸ್ಥೆಯ ಮುಖ್ಯಸ್ಥನನ್ನಾಗಿ ಮಾಡಿ. ಅವನನ್ನು ಯಾವುದಾದರೂ ಆಶ್ರಮದ ಒಬ್ಬ ಗುರುವನ್ನಾಗಿ ಮಾಡಿ" ಎಂದು. ಜನರಂದರು, ಇದು ಬಹಳ ವಿಚಿತ್ರವಾದ ಶಿಕ್ಷೆಯೆಂದು. ನಾಯಿಯೆಂದಿತು, "ನೀವು ಯಾಕೆ ಕೇಳುತ್ತೀರಿ? ಸುಮ್ಮನೇ ಅವನನ್ನು ಆ ರೀತಿ ಮಾಡಿ. ನಾನು ಕೂಡಾ ನನ್ನ ಹಿಂದಿನ ಜನ್ಮದಲ್ಲಿ ಒಬ್ಬ ಗುರುವಾಗಿದ್ದೆ. ನೋಡಿ ಏನಾಯಿತು! ಆಗ ಸಾಯುವ ಮೊದಲು ನಾನಂದುಕೊಂಡೆ, ನಾನೊಂದು ಬೀದಿ ನಾಯಿಯಾಗಿರಬೇಕಿತ್ತು, ಅದು ಗುರುವಾಗಿರುವುದಕ್ಕಿಂತ ಚೆನ್ನಾಗಿರುತ್ತಿತ್ತು ಎಂದು. ನೋಡಿ, ಅದಕ್ಕೇ ನಾನೀಗ ಒಂದು ನಾಯಿಯಾಗಿರುವುದು. ನನಗೆ ಬಹಳ ಸಮಸ್ಯೆಗಳಿದ್ದವು. ಅವನು ಕೂಡಾ ಒಂದು ಆಶ್ರಮದ ಮುಖ್ಯಸ್ಥನಾಗಬೇಕು ಮತ್ತು ಆಗ ಅವನಿಗೆ ಜೀವನದ ಸಮಸ್ಯೆಗಳೆಂದರೇನು, ನೋವೆಂದರೇನು ಮತ್ತು ನರಳುವಿಕೆಯೆಂದರೇನು ಎಂಬುದರ ಅನುಭವವಾಗುತ್ತದೆ". ಇದು ರಾಮಾಯಣದಲ್ಲಿನ ಒಂದು ಹಾಸ್ಯ ಕಥೆ.
ನೋಡಿ, "ನಾನೊಬ್ಬ ಗುರು" ಎಂದು ಹೇಳುತ್ತಾ ಸುತ್ತುವವನು ಗುರುವಾಗುವುದಿಲ್ಲ. ತಾನು ಗುರುವೆಂಬುದಾಗಿ ಘೋಷಿಸಿಕೊಳ್ಳದಿರುವವನಲ್ಲಿ ಗುರು ತತ್ವವು ಪ್ರಕಟವಾಗುತ್ತದೆ. ಯಾರು ಸರಳವಾಗಿ ಮತ್ತು ಸಹಜವಾಗಿ ಉಳಿಯುತ್ತಾರೋ ಅವರು ಸದ್ಗುರು. ಈ ಗುರು ತತ್ವದ ಸ್ವಲ್ಪ ಅಂಶವು ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ಕೂಡಾ ಇದೆ. ನೀವು ಕೂಡಾ ಈಗೊಮ್ಮೆ ಆಗೊಮ್ಮೆ ಒಬ್ಬರಲ್ಲ ಒಬ್ಬರಿಗೆ ಸ್ವಲ್ಪ ಒಳ್ಳೆಯ ಸಲಹೆಯನ್ನು ಕೊಡುತ್ತೀರಿ ಮತ್ತು ನೀವು ಕೂಡಾ ನಿಮ್ಮ ಸುತ್ತಲಿರುವವರಿಗೆ ಪ್ರೀತಿ ಹಾಗೂ ಸಂತೋಷವನ್ನು ಹರಡುತ್ತೀರಿ, ಅಲ್ಲವೇ?!
ನಾವೇನು ಮಾಡಬೇಕು? ಏನನ್ನೂ ಹಿಂದಿರುಗಿ ಪಡೆಯಲು ಬಯಸದೆಯೇ ನಾವು ಇತರರನ್ನು ಪ್ರೀತಿಸಬೇಕು ಮತ್ತು ಇತರರಿಗೆ ಸೇವೆ ಮಾಡಬೇಕು. ಇದು ಮುಖ್ಯವಾದುದು. ಸಾಧಾರಣವಾಗಿ ನಾವು ಯೋಚಿಸುತ್ತೇವೆ, ನಾನು ಆ ವ್ಯಕ್ತಿಗೆ ಅಷ್ಟೊಂದು ಪ್ರೀತಿಯನ್ನು ನೀಡಿದೆ, ಅವನು ನನಗೆ ತಿರುಗಿ ಏನು ಕೊಟ್ಟ? ಈ ರೀತಿಯಲ್ಲಿ, ಒಬ್ಬ ವ್ಯಕ್ತಿಯನ್ನು ಪ್ರೀತಿಸುವ ಮೂಲಕ ನಾವು ಅವರಿಗೆ ಒಂದು ದೊಡ್ಡ ಉಪಕಾರವನ್ನು ಮಾಡಿದ್ದೇವೆಂದು ಆ ವ್ಯಕ್ತಿಯು ಅಂದುಕೊಳ್ಳುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ, ಇದನ್ನು ನಾವು ಮಾಡಬಾರದು.
ಪ್ರೀತಿಯೆಂಬುದು ನಿಮ್ಮ ಸ್ವಭಾವ. ಪ್ರೀತಿಯೆಂದರೆ, "ಓ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಹೇಳುತ್ತಾ ಇರುವುದೆಂದು ಅರ್ಥವಲ್ಲ. ಅಲ್ಲ! ಅದು ಯೋಗ್ಯವಾಗಿ, ಸಹಜವಾಗಿ, ಸಹಾನುಭೂತಿ ಮತ್ತು ಸರಳತೆಯೊಂದಿಗೆ ವರ್ತಿಸುವುದು ಮತ್ತು ನಾವು ಈ ಗುಣಗಳೊಂದಿಗೆ ಹುಟ್ಟಿದ್ದೇವೆ. ಕೆಲವೊಮ್ಮೆ ನೀವು ದೃಢವಾಗಿರಬೇಕಾದರೆ, ಆಗ ದೃಢವಾಗಿರಿ. ಸ್ವಲ್ಪ ಪ್ರೀತಿಯಿರುವಾಗ ಮಾತ್ರ ನಿಮಗೆ ಕೋಪಗೊಳ್ಳಲು ಸಾಧ್ಯ.
ಅದಾಗ್ಗೆಯೂ, ನಿಮ್ಮೆಲ್ಲಾ ಗುಣಗಳನ್ನು ಸಮರ್ಪಣೆ ಮಾಡಿ ಮತ್ತು ಟೊಳ್ಳು ಹಾಗೂ ಖಾಲಿಯಾಗಿ. ಗುರು ತತ್ವದ ಸಮೀಪ ಬರಲು ಇದನ್ನೇ ನೀವು ಮಾಡಬೇಕಾಗಿರುವುದು - ನಿಮ್ಮೆಲ್ಲಾ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳನ್ನು ಸಮರ್ಪಣೆ ಮಾಡಿ ಹಾಗೂ ಸಂತೋಷವಾಗಿರಿ.
ಪ್ರಶ್ನೆ: ಗುರೂಜಿ, ಹಿಂದಿನ ಕಾಲದಲ್ಲಿ, ಜನರು ವರ್ಷಗಟ್ಟಲೆ ಸಮಾಧಿಯಲ್ಲಿರುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಯುಗದಲ್ಲಿ, ಇಪ್ಪತ್ತು ನಿಮಿಷಗಳಲ್ಲಿ ಕೆಲಸ ಆಗಿ ಮುಗಿಯುತ್ತದೆ. ಆ ಕಥೆಗಳು ನಿಜವೇ?
ಶ್ರೀ ಶ್ರೀ ರವಿಶಂಕರ್:
ಹೌದು, ಹೇಗೆ ಒಬ್ಬರು ಸಮಾಧಿಯಲ್ಲಿ ಕುಳಿತುಕೊಂಡರು ಮತ್ತು ಕಾಲ ಸರಿಯುತ್ತಿದ್ದಂತೆ ಹೇಗೆ ಅವರ ಮೇಲೆ ಒಂದು ಹುತ್ತವು ಬೆಳೆಯಿತು ಎಂಬುದಾಗಿ ಅವರು ಕಥೆಗಳನ್ನು ಬರೆದರು. ಅದು ಆ ರೀತಿಯಲ್ಲ. ಅದು ಏನನ್ನು ಸೂಚಿಸುತ್ತದೆಯೆಂದರೆ, ಒಬ್ಬನು ಧ್ಯಾನದಲ್ಲಿ ಕುಳಿತುಕೊಳ್ಳುವಾಗ, ಇರುವೆಗಳು ಹರಿದಾಡುವಂತಹ ನಿರ್ದಿಷ್ಟ ಸಂವೇದನೆಗಳು ಮೈಮೇಲೆಲ್ಲಾ ಏಳುತ್ತವೆ. ಒಬ್ಬ ಒಳ್ಳೆಯ ಶಿಕ್ಷಕನಿದ್ದರೆ ಆಗ ಒಬ್ಬನು ಸುಲಭವಾಗಿ ಸಮಾಧಿಯನ್ನು ಹೊಂದಬಹುದು. ಒಬ್ಬರು ಗುರುವಿಲ್ಲದೆ, ಸಮಾಧಿಯನ್ನು ಅನುಭವಿಸಲು ಸಾಧ್ಯವಿಲ್ಲ.
ಪ್ರಶ್ನೆ: ಗುರೂಜಿ, ಕುಂಡಲಿನಿಯೆಂದರೇನು ಮತ್ತು ಕುಂಡಲಿನಿಯನ್ನು ಜಾಗೃತಗೊಳಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಕುಂಡ ಎಂದರೆ ಶರೀರ ಮತ್ತು ಕುಂಡಲಿನಿ ಎಂದರೆ ಈ ಶರೀರದಲ್ಲಿರುವ ಪ್ರಜ್ಞಾಶಕ್ತಿ. ಉನ್ನತ ಶಿಬಿರದಲ್ಲಿ ಧ್ಯಾನಗಳಲ್ಲಿ ಏನೆಲ್ಲಾ ಆಗುತ್ತದೆಯೋ ಅದೆಲ್ಲಾ ಕುಂಡಲಿನಿಯೇ ಆಗಿದೆ. ಕುಂಡಲಿನಿಯನ್ನು ವ್ಯಾಖ್ಯಾನಿಸಲು ಬೇರೆ ಯಾವುದೇ ಮಾರ್ಗವಿಲ್ಲ. ಧ್ಯಾನವಾಗಿದ್ದೇ ಆದರೆ, ಕುಂಡಲಿನಿಯನ್ನು ಜಾಗೃತಗೊಳಿಸದೆಯೇ ಅದಾಗಲು ಸಾಧ್ಯವಿಲ್ಲ. ನೀವು ಧ್ಯಾನದೊಳಕ್ಕೆ ಹೋಗಿದ್ದರೆ, ಅದರರ್ಥ ನಿಮ್ಮಲ್ಲಿ ಕುಂಡಲಿನಿಯು ಜಾಗೃತವಾಗಿದೆಯೆಂದು.
ಪ್ರಶ್ನೆ: ಗುರೂಜಿ, ನೀವು ಹೇಳಿದಂತೆ, ಜೀವನದಲ್ಲಿ ನಮಗೇನು ಬೇಕು ಅದು ಈಗಾಗಲೇ ನಮ್ಮಲ್ಲಿದೆಯೆಂದು ನಾವು ತಿಳಿದುಕೊಳ್ಳಬೇಕು. ನಾನು ನನ್ನ ಜೀವನದಲ್ಲಿ ಬಯಸುವ ಒಬ್ಬ ವ್ಯಕ್ತಿಯ ಬಗ್ಗೆಯೂ ನಾನು ಆ ರೀತಿ ಅಂದುಕೊಳ್ಳಬಹುದಾ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಆಗಲೂಬಹುದು ಆದರೆ ಅದು ಈ ಜನ್ಮದಲ್ಲಿಯೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದು ಮುಂದಿನ ಜನ್ಮದಲ್ಲಿ ಅಥವಾ ಹತ್ತು ಜನ್ಮಗಳ ಬಳಿಕವೂ ಆಗಬಹುದು. ಅದಕ್ಕೇ ನಾನು ಹೇಳಿದುದು, ಒಂದು ಸಂಕಲ್ಪವು ಅದರದ್ದೇ ಆದ ಸಮಯದಲ್ಲಿ ಫಲಿಸುತ್ತದೆಯೆಂದು.
ಪ್ರಶ್ನೆ: ಗುರೂಜಿ, ನಾನು ಒಂದು ಒಳ್ಳೆಯ ಸಾಂಸಾರಿಕ ಜೀವನವನ್ನು, ಒಂದು ಒಳ್ಳೆಯ ವೃತ್ತಿಯನ್ನು, ಒಳ್ಳೆಯ ಅಂತರ್ವ್ಯಕ್ತೀಯ ಸಂಬಂಧಗಳನ್ನು ಹೊಂದಿದ್ದೇನೆ ಮತ್ತು ನಾನು ತುಂಬಾ ತೃಪ್ತನಾಗಿದ್ದೇನೆ ಹಾಗೂ ದೇವರು ನನ್ನೊಳಗಿದ್ದಾರೆ ಎಂಬುದನ್ನು ತಿಳಿದಿದ್ದೇನೆ. ಆದರೂ ಕೂಡಾ ನಾನು ಧ್ಯಾನ ಮಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನೋಡು, ಧ್ಯಾನವೆಂಬುದು ನೀನು ಏನನ್ನು ಹೊಂದಿದ್ದೀಯೋ ಅದನ್ನು ಉಳಿಸಿಕೊಳ್ಳುವಂತಹುದು. ನಿನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ, ನೀನು ಅದನ್ನು ಉಳಿಸಿಕೊಳ್ಳಲು ಬಯಸುತ್ತೀಯಾ? ನೀನು ಒಳ್ಳೆಯ ಆರೋಗ್ಯವನ್ನು, ಒಳ್ಳೆಯ ಸಂಬಂಧಗಳನ್ನು ಉಳಿಸಿಕೊಳ್ಳಲು ಬಯಸುತ್ತೀಯಾ? ಹಾಗಿದ್ದರೆ ನೀನು ಧ್ಯಾನ ಮಾಡಬೇಕು. ಧ್ಯಾನವು ಒತ್ತಡವನ್ನು ಕಡಿಮೆ ಮಾಡುತ್ತದೆ. ಇಲ್ಲದಿದ್ದರೆ ಮಾನಸಿಕ ಉದ್ವೇಗವು ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಐದರಿಂದ ಹತ್ತು ವರ್ಷಗಳ ಬಳಿಕ ನೀನು ಬಿರಿದು ಹೋಗುವೆ. ಧ್ಯಾನವು, ನೀನು ಮಾನಸಿಕವಾಗಿ ಸ್ವಸ್ಥನಾಗಿರಲು ಸಹಾಯ ಮಾಡುತ್ತದೆ ಮತ್ತು ನೀನು ಈಗಾಗಲೇ ಹೊಂದಿರುವುದನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕೇ ಅದು ಯೋಗಕ್ಷೇಮಂ ಎಂದು ಕರೆಯಲ್ಪಟ್ಟಿರುವುದು; ಯೋಗ ಎಂದರೆ ನಿಮ್ಮಲ್ಲಿಲ್ಲದುದನ್ನು ಹೊಂದಲು ಇರುವುದು ಮತ್ತು ಕ್ಷೇಮಂ ಎಂದರೆ ನಿಮ್ಮಲ್ಲಿ ಈಗಾಗಲೇ ಇರುವುದನ್ನು ಸಂರಕ್ಷಿಸಲು ಇರುವುದು. ನಿಮ್ಮಲ್ಲಿ ಈಗಾಗಲೇ ಇದ್ದು, ನೀವು ಅದನ್ನು ಉಳಿಸಿಕೊಳ್ಳಲು ಬಯಸಿದರೆ, ಆಗಲೂ ಕೂಡಾ ಧ್ಯಾನವು ಅಗತ್ಯವಾಗಿದೆ. ನಿಮ್ಮಲ್ಲಿ ಏನಾದರೂ ಇಲ್ಲದಿದ್ದರೆ, ಅದನ್ನು ಪಡೆಯಲು ಕೂಡಾ ನೀವು ಧ್ಯಾನ ಮಾಡಬೇಕು.

ಮಂಗಳವಾರ, ಮೇ 22, 2012

ಪ್ರಜ್ಞೆ ಪರಿಪಕ್ವವಾಗುವುದನ್ನು ಪ್ರತೀಕ್ಷೆಯು ಸಂಕೇತಿಸುತ್ತದೆ

22
2012
May
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಪ್ರೀತಿಯ ಗುರೂಜಿ, ಯೋಗಸಾರ ಉಪನಿಷತ್ತಿನಲ್ಲಿ,  ನೀವು ಪರಮಾತ್ಮನು ನಿರಾಕಾರ ಸ್ವರೂಪನೆಂದು ಹಾಗೂ ಗುರುಗಳು, ಸಾಕಾರ ಸ್ವರೂಪಿ ಮತ್ತು ದೈವಸಂಭೂತರು ಎಂದು ಹೇಳಿದ್ದೀರಿ.ಇದರ ಬಗ್ಗೆ ಹೇಳುವಿರಾ? ಪರಮಾತ್ಮನು ಹೇಗೆ ನಿರಾಕಾರ?
ಶ್ರೀ ಶ್ರೀ ರವಿಶಂಕರ್: ಹೌದು, ಎರಡೂ ನಿಜ. ನೀವು ಆಕಾರ ಹೊಂದಿದ್ದರೂ ನಿರಾಕಾರರಾಗಿದ್ದೀರಿ. ನಿಮ್ಮ ದೇಹಕ್ಕೆ ಆಕಾರವಿದೆ ಆದರೆ ನಿಮ್ಮ ಮನಸ್ಸಿಗೆ ರೂಪ,ಆಕಾರವಿದೆಯೇ ? ಇಲ್ಲ. ಹಾಗೆಯೇ ಸುವ್ಯಕ್ತವಾಗಿರುವ ಈ ಬ್ರಹ್ಮಾಂಡ ಪರಮಾತ್ಮನ ಸ್ವರೂಪವಾಗಿದೆ ಮತ್ತು ಅವ್ಯಕ್ತ ರೂಪದಲ್ಲಿರುವ ಪ್ರಜ್ಞೆ, ಆಕಾಶ ಒಂದು ನಿರಾಕಾರ ರೂಪ.

ಪ್ರಶ್ನೆ: ಗುರೂಜಿ,ಯಾವಾಗ ಆತ್ಮ ಸ್ವತಃ ತಾನೇ ಬಹಿರಂಗಗೊಳ್ಳಲು ಅಪೇಕ್ಷಿಸುತ್ತದೆಯೋ ಆಗ ಮಾತ್ರ ನಾವು ಸಾಕ್ಷಾತ್ಕಾರ ಹೊಂದಬಹುದು ಎಂಬುದನ್ನು ಉಪನಿಷತ್ತಿನಲ್ಲಿ ನೀವು ಹೇಳಿದ್ದೀರಿ. ಹಾಗಿದ್ದಾಗ ಈ ಸನ್ನಿವೇಶದಲ್ಲಿ ತವಕದ ಮಹತ್ವವೇನು ? ನನ್ನಲ್ಲಿ ಏನೋ ಒಂದು ತನ್ನನ್ನು ತಾನು ತಿಳಿಯಲು ಹಾತೊರೆಯುತ್ತಿದೆ ಆದರೆ ತನ್ನನ್ನು ಬಹಿರಂಗಗೊಳಿಸುತ್ತಿಲ್ಲ. ಏಕೆ?
ಶ್ರೀ ಶ್ರೀ ರವಿಶಂಕರ್: ಹೌದು,  ಹಣ್ಣು ಪಕ್ವವಾದಾಗ ಅದರ ಬಣ್ಣವೂ ಬದಲಾಗುತ್ತದೆ ಅಲ್ಲವೇ. ಸೇಬು ಮಾಗಿದ ನಂತರ ಅದರ ಬಣ್ಣ ಬದಲಾಗುತ್ತದೆ. ಪರಂಗಿ ಹಣ್ಣು ಮಾಗಿದ ನಂತರ ಹಳದಿ ಬಣ್ಣವಾಗುತ್ತದೆ.ಹಾಗೆಯೇ ಹಾತೊರೆಯುವಿಕೆ(ತವಕ) ಪ್ರಜ್ಞೆಯು ಪರಿಪಕ್ವವಾಗುತ್ತಿರುವ ಸಂಕೇತವಾಗಿದೆ.

ಪ್ರಶ್ನೆ: ಗುರೂಜಿ, ಆತ್ಮವು ಒಂದೇ ಆಗಿದ್ದಾಗ, ನಮ್ಮ ವೈಯಕ್ತಿಕ ಕರ್ಮಗಳನ್ನು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕೊಂಡೊಯ್ಯುವುದು ಯಾವುದು?
ಶ್ರೀ ಶ್ರೀ ರವಿಶಂಕರ್: ಹೌದು, ಆತ್ಮದಲ್ಲಿ ಎರಡು ಹಂತಗಳಿವೆ, ಒಂದು ಸರ್ವಾತ್ಮ ಮತ್ತು ಇನ್ನೊಂದು ಜೀವಾತ್ಮ. ಒಂದು ಬಲೂನಿನ ಒಳಗೆ ಕೂಡ ಗಾಳಿಯಿದೆ ಆದರೆ ಆ ಗಾಳಿಯು ಬಲೂನಿನಿಂದ ಆವರಿಸಲ್ಪಟ್ಟಿದೆ, ಅಲ್ಲವೇ? ಅದೇ ಜೀವ. ಆದ್ದರಿಂದ ಸಂಸ್ಕಾರಗಳು ಜೀವದ ರೂಪವನ್ನು ತಾಳುತ್ತವೆ, ಆದರೆ ಬಲೂನಿನ ಒಳಗೆ ಹಾಗು ಹೊರಗೆ ಇರುವ ಗಾಳಿ ಮಾತ್ರ ಒಂದೇ ಆಗಿದೆ.

ಪ್ರಶ್ನೆ: ಗುರೂಜಿ, ಎಲ್ಲದರಲ್ಲೂ ಅಡ್ಡ ಪರಿಣಾಮಗಳು ಇದ್ದೇ ಇವೆ.  ಜ್ಞಾನೋದಯದ ಅಡ್ಡ ಪರಿಣಾಮಗಳೇನು?  
ಶ್ರೀ ಶ್ರೀ ರವಿಶಂಕರ್: ಯಾವುದೇ ಅಡ್ಡ ಪರಿಣಾಮಗಳಿಲ್ಲ ಆದರೆ ಇದು ನೇರವಾದ ಪರಿಣಾಮವನ್ನು ಬೀರುತ್ತದೆ.

ಪ್ರಶ್ನೆ: ಗುರೂಜಿ, ’ಡಾರ್ಕ್ ಎನರ್ಜಿ’ ಎಂದರೇನೆಂದು ತಿಳಿಸಿ. ಇತ್ತೀಚಿನ ಒಂದು ಸತ್ಸಂಗದಲ್ಲಿ ನೀವು ಅದನ್ನು ಪ್ರಸ್ತಾಪಿಸಿದಿರಿ. ಗೂಗಲ್ ನಲ್ಲಿ ನೀಡಿರುವ ವಿವರಣೆಯಿಂದ ಅರ್ಥ ಮಾಡಿಕೊಳ್ಳುವುದು ಕ್ಲಿಷ್ಟವಾಗಿದೆ.
ಶ್ರೀ ಶ್ರೀ ರವಿಶಂಕರ್: ’ಡಾರ್ಕ್ ಎನರ್ಜಿ’ಯ ಬಗ್ಗೆ ಬೇಕಾದಷ್ಟು ಜ್ಞಾನವಿದೆ. ಇಡೀ ಬ್ರಹ್ಮಾಂಡವು ’ಡಾರ್ಕ್ ಎನರ್ಜಿ’ಯಿಂದ ತುಂಬಿದೆ. ಸೂರ್ಯವು ದುಂಡಗಿದೆ ಎಂದು ಹೇಳುವುದಾದರೆ, ಅದಕ್ಕೆ ಕಾರಣ ಅದರ ಸುತ್ತಲೂ ಇರುವ ’ಡಾರ್ಕ್ ಎನರ್ಜಿ’ ಅದನ್ನು ದುಂಡಗಿರುವಂತೆ ಮಾಡಿದೆ. ಹಾಗಾಗಿ ಎಲ್ಲ ನಕ್ಷತ್ರಗಳು, ಗ್ರಹಗಳು ಈ ’ಡಾರ್ಕ್ ಎನರ್ಜಿ’ಯಲ್ಲಿಯೇ ಇವೆ.
ಆಕಾಶವು ಕಪ್ಪಾಗಿದೆ ಆದರೆ ಆಕಾಶದಲ್ಲಿನ ನಕ್ಷತ್ರಗಳು ಬೆಳಕಿನ ಬಿಂದುಗಳು. ನಾವು ಕೇವಲ ಈ ನಕ್ಷತ್ರಗಳು ಮಾತ್ರ  ಆಕಾಶದ ಭೌತಿಕವಸ್ತು  ಎಂದುಕೊಂಡಿದ್ದೇವೆ. ಆದರೆ ನಕ್ಷತ್ರಗಳ ನಡುವಿನ ಪ್ರದೇಶವು ಕೂಡ  ದಟ್ಟವಾದ ಸಾಗರದಂತೆ ಶಕ್ತಿಯಿಂದ ತುಂಬಿದೆ ಎಂದು ವಿಜ್ಞಾನವು ಹೇಳುತ್ತದೆ. ಇದೇ ’ಡಾರ್ಕ್ ಎನರ್ಜಿ’. ನಿಮಗೆ ಅದು ಗೋಚರಿಸುವುದಿಲ್ಲ  ಆದರೆ ನಕ್ಷತ್ರಗಳ ನಡುವಿನ ಈ  ಶಕ್ತಿಗೆ  ’ಡಾರ್ಕ್ ಎನರ್ಜಿ’ ಎಂದು ಕರೆಯುತ್ತಾರೆ.
ಇದೇ ಶಿವ ತತ್ವವಾಗಿದೆ. ನಮ್ಮ ಪೂರ್ವಜರು ಇದನ್ನು ಬಲ್ಲವರಾಗಿದ್ದು ಇದನ್ನು 'ಶಿವ  ತತ್ವ' ಎಂದು ಕರೆದರು. ’ಸರ್ವಂ ಶಿವಮಯಂ ಜಗತ್ ’  - ಇಡೀ ಬ್ರಹ್ಮಾಂಡವು ಶಿವ  ತತ್ವದಿಂದ ಧರಿಸಲ್ಪಟ್ಟಿದೆ.

ಪ್ರಶ್ನೆ: ಅಷ್ಟಾವಕ್ರಗೀತೆಯಲ್ಲಿ ನೀವು ಮಹಾತ್ಮ ಗಾಂಧಿಯವರು ಏಕೆ ಹಿಂಸಾತ್ಮಕವಾದ ಸಾವನ್ನು ಹೊಂದಿದರು ಎಂಬುದರ ಬಗ್ಗೆ ಮಾತನಾಡಿದ್ದೀರಿ. ಜೀಸಸ್ ಏಕೆ ಶಿಲುಬೆಯ ಮೇಲೆ ಮೃತರಾಗಬೇಕಾಯಿತು ಎಂದು ಹೇಳಬಲ್ಲಿರಾ?
ಶ್ರೀ ಶ್ರೀ ರವಿಶಂಕರ್: ಅದರ ಬಗ್ಗೆ ಚರ್ಚೆ ಮಾಡಬೇಕಾದ ಅಗತ್ಯವಿದೆಯೆಂದು ನಮಗನ್ನಿಸುತ್ತಿಲ್ಲ. ಏಕೆ? ಏನಾಯಿತು? ಯಾವಾಗ? ಎಂಬುದರ ಬಗ್ಗೆ ಬೇಡ. ಬ್ರಹ್ಮಾಂಡ ಮತ್ತು ಇಲ್ಲಿ ಸಂಭವಿಸುವ ಎಲ್ಲ ಘಟನೆಗಳಿಗೆ ಒಂದೇ ಕಾರಣ – ’ಪರಮ ಕಾರಣ ಕಾರಣಾಯ’ – ಎಲ್ಲ ಕಾರಣಗಳಿಗೆ ಕಾರಣವಾದ ಶಿವ ತತ್ವ, ದೈವೇಚ್ಛೆ ಎಂದುಕೊಳ್ಳೋಣ.

ಪ್ರಶ್ನೆ: ಕರ್ಮ ಅಥವಾ ಪಾಪಗಳನ್ನು ಮಾಡುವವರು ಯಾರು? ದೇಹವೋ ಅಥವಾ ಆತ್ಮವೋ ಹಾಗೂ ಆತ್ಮವು ಪಾಪವೆಸಗಿದರೆ ದೇಹವೇಕೆ ನೋವನ್ನು ಅನುಭವಿಸಬೇಕು?
ಶ್ರೀ ಶ್ರೀ ರವಿಶಂಕರ್: ಈ ಎಲ್ಲ ತರ್ಕ ಮತ್ತು ಗೊಂದಲಗಳಲ್ಲಿ ಸಿಲುಕಬೇಡಿ. ನಿಮಗೆ ತಿಳಿಯುವ ಆಸಕ್ತಿಯಿದ್ದರೆ ಆತ್ಮಸಂಶೋಧನೆಯನ್ನು ಕೈಗೊಳ್ಳಿ – ನಾನು ಯಾರು? ನಾನು ಕರ್ಮವನ್ನು ಹೊಂದಿದ್ದೇನೆಯೋ ಇಲ್ಲವೋ? ಕರ್ಮ ಎಂಬುದಿದ್ದರೆ ಅದೆಲ್ಲಿದೆ? ಇವೆಲ್ಲವೂ ನೀವು ಕುಳಿತು ಆಲೋಚನೆ ಮಾಡಬೇಕಾದುದು
ನಾವು ನೀಡಿದ ಉತ್ತರದಿಂದ ನಿಮಗೆ ಎಂದಿಗೂ ಸಮಾಧಾನವಾಗುವುದಿಲ್ಲ ಏಕೆಂದರೆ ಅದು ನಿಮ್ಮ  ಸ್ವಾನುಭೂತಿಯ ಸ್ತರದಲ್ಲಿರುವುದಿಲ್ಲ . ಹಾಗಾಗಿ, ನೀವು ನನ್ನ ಉತ್ತರವನ್ನು ಆಲಿಸುವಿರಿ, ಆಮೇಲೆ  ಕೆಲದಿನಗಳ  ನಂತರ ಇನ್ನೊಂದು ಸಂದೇಹ ಹುಟ್ಟುತ್ತದೆ. ಹೀಗೆ ಪುನಃ ಪುನಃ ಅದೇ ಪುನರಾವರ್ತಿಸುತ್ತದೆ. ಅತ್ಯುತ್ತಮವಾದ ವಿಧಾನವೆಂದರೆ, ಮೌನವಾಗಿರುವುದು, ಧ್ಯಾನದಲ್ಲಿ ಆಳವಾಗಿ ಮುಳುಗುವುದು. ಆಗ ಈ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಅನುಭವದ ರೂಪದಲ್ಲಿ ಸಹಜವಾಗಿ  ಸ್ಫುರಿಸುತ್ತವೆ.

ಪ್ರಶ್ನೆ: ಗುರೂಜಿ, ನನ್ನೆಲ್ಲ ಪ್ರಯತ್ನಗಳನ್ನು ಮಾಡಿದಾಗಲೂ ನಾನೇಕೆ ವಿಫಲನಾಗುವೆ? ಇಂತಹ ಪರಿಸ್ಥಿತಿಗಳಲ್ಲಿ ನಾವೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀವು ಬೆನ್ನಟ್ಟಿರುವ ಗುರಿಯು ನಿಮಗೆ ನಿಜವಾಗಲೂ ಅಗತ್ಯವೆನಿಸಿದರೆ, ಕುಗ್ಗದೇ ಮುನ್ನಡೆಯಿರಿ. ಆದರೆ ಇಷ್ಟೊಂದು ಪರಿಶ್ರಮವನ್ನು ಅದಕ್ಕಾಗಿ ವ್ಯಯಿಸುವುದು ವ್ಯರ್ಥವೆಂದು ನಿಮಗೆನಿಸಿದರೆ ಇದಕ್ಕಿಂತ ಸುಲಭವಾದ ಯಾವುದಾದರೂ ಲಕ್ಷ್ಯದೆಡೆಗೆ ಸಾಗಿರಿ.  ಭಾರತದ ಒಬ್ಬ ಪ್ರಧಾನಿಯಿದ್ದರು. ಅವರು ಕೇವಲ ಕೆಲವೇ ತಿಂಗಳುಗಳ ಕಾಲ ಪ್ರಧಾನಿಯಾಗಿದ್ದರು. ಅವರು ಒಂದು ದಿನ ದೆಹಲಿಯ ಆಚೆ ಇರುವ ತಮ್ಮ ತೋಟದ ಮನೆಗೆ  ನನ್ನನ್ನು ಆಹ್ವಾನಿಸಿದರು. ನಾವು ಒಪ್ಪಿ  ಅಲ್ಲಿಗೆ ಹೋದೆವು. ನಾವು ಅಲ್ಲಿದ್ದಾಗ ಅವರು 'ಗುರೂಜಿ, ನಾನು ನಲವತ್ತು ವರ್ಷಗಳ ಕಾಲ ಈ ಹುದ್ದೆಯನ್ನು ಪಡೆಯಲು ಎಲ್ಲವನ್ನೂ ಮಾಡಿದೆ,  ಉಚಿತ ಹಾಗೂ ಅನುಚಿತವಾದ  ಆಟಗಳನ್ನು ಆಡಿದೆ. ಈಗ ನಾನು ಪ್ರಧಾನಿಯಾಗಿದ್ದೇನೆ, ಈ ಹುದ್ದೆಗಾಗಿ ನಾನು ಜೀವನವಿಡೀ ಹೋರಾಡಿದೆ, ಆದರೆ ಈಗ ಇದು ನನಗೆ ನಿರರ್ಥಕವೆನಿಸುತ್ತಿದೆ. ಮೊದಲು ನಾನು ಇಲ್ಲಿ ಹಾಯಾಗಿ ಮಲಗಬಹುದಿತ್ತು, ಆದರೆ ಈಗ ೫೦ ಪೊಲೀಸರು ನನ್ನನ್ನು  ಕಾವಲು ಕಾಯುತ್ತಿದ್ದಾರೆ ಮತ್ತು ನನ್ನದೇ ಮನೆಯ ಹೊರಗೆ ನಾನು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.  ಇದು ನನ್ನ ಜೀವಮಾನದ ನಿಷ್ಫಲವಾದ ಹೋರಾಟವಾಗಿತ್ತು.’’ ಎಂದು ಹೇಳಿದರು.
ನಾವು ಅವರಿಗೆ ಹೇಳಿದೆವು, ’ಇದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಇಷ್ಟು ವರ್ಷಗಳು ಬೇಕಾಯಿತು. ಹೋಗಲಿ, ಈಗಲಾದರೂ ಅರಿತುಕೊಂಡಿರಲ್ಲ. ಎಷ್ಟೋ ಜನರು ಇದನ್ನು ಅರಿತುಕೊಳ್ಳುವುದೇ ಇಲ್ಲ’ ಎಂದು.
ಉತ್ತರ ಆಫ್ರಿಕಾದ ಸರ್ವಾಧಿಕಾರಿಗಳೆಲ್ಲ ಮಾಡುತ್ತಿರುವುದೇನು, ಕೇವಲ ಅಧಿಕಾರವನ್ನು ಉಳಿಸಿಕೊಳ್ಳಲು ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ. ಇದು ಮೂರ್ಖತನ. ಆ ಸಭ್ಯರಿಗೆ ಕನಿಷ್ಠ ಪಕ್ಷ  ಇದೆಲ್ಲ ವ್ಯರ್ಥವೆಂದು ಅರಿಯುವ ವಿವೇಚನೆಯಾದರೂ ಇತ್ತು. ’ನೀವು ಈ ವಿಷಯದಲ್ಲಿ ಅದೃಷ್ಟವಂತರು’ ಎಂದು ನಾವು ಅವರಿಗೆ ತಿಳಿಸಿದೆವು.
ಹಾಗೆ, ನೀವು ಏನಾದರೂ ಸಾಧಿಸಬೇಕೆಂದಿದ್ದರೆ ನಿಮ್ಮ ಇಡೀ ಜೀವನವನ್ನು ಆ  ಸಾಧನೆಯಲ್ಲಿ ತೊಡಗಿಸಿ. ಆದರೆ ನಿಮ್ಮ  ಶಕ್ತಿಯನ್ನು  ಬಳಸಲು  ಬೇರೆ  ಇನ್ನಾವುದಾದರೂ ಉತ್ತಮವಾದ  ಉದ್ದೇಶವಿದ್ದರೆ ಆ ಮಾರ್ಗದಲ್ಲಿ ಸಾಗಿ.
ಒಂದು ದಿನ ಒಬ್ಬ ಯುವಕನು ನಮ್ಮ ಬಳಿಗೆ ಬಂದು ಹೇಳಿದ- ಅವನು ಸಿ. ಎ. ಪರೀಕ್ಷೆಯನ್ನು ಬರೆಯುತ್ತಿದ್ದಾನಂತೆ ಹಾಗೂ ಏಳು ಬಾರಿ ಅನುತ್ತೀರ್ಣನಾಗಿದ್ದಾನಂತೆ. ಅವನ ಪೋಷಕರು ಅವನು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಲೆಂದು ಅಪೇಕ್ಷಿಸುತ್ತಿದ್ದಾರಂತೆ.
ನಾವು ಅವನನ್ನು ’ನೀನೇಕೆ ಅದನ್ನು ಮಾಡಲು ಬಯಸುತ್ತೀ ? ಏಳು ಬಾರಿ ಆಗಲೇ ಅನುತ್ತೀರ್ಣನಾಗಿರುವೆ! ಈ ಬಾರಿಯಾದರೂ ತೇರ್ಗಡೆ ಹೊಂದುವ ಭರವಸೆಯಿದೆಯೆ?’ ಎಂದು ಕೇಳಿದೆವು.
ಅವನು, ’ಇಲ್ಲ, ಪಾಸಾಗುವ ಯಾವುದೇ ಭರವಸೆ ನನಗಿಲ್ಲ’ ಎಂದನು.
ಸಫಲವಾಗುವ ಯಾವುದೇ ಲಕ್ಷಣಗಳಿಲ್ಲದೇ ಇದ್ದಾಗ ಸುಮ್ಮನೆ ಏಕೆ ಸಮಯವನ್ನು ವ್ಯರ್ಥ ಮಾಡುವುದು, ಯಾವುದಾದರೂ ಉದ್ಯಮವನ್ನು ಆರಂಭಿಸಿ. ಯಾವುದಾದರೂ ಉದ್ಯೋಗವನ್ನು ಮಾಡಿ. ಅದು ಬುದ್ಧಿವಂತಿಕೆಯ ಕೆಲಸ.

ಪ್ರಶ್ನೆ: ನನಗೆ ಯಾವಾಗಲೂ ಮಾತ್ಸರ್ಯ ಹಾಗೂ ಅಹಂಕಾರದ ಭಾವವು ಕಾಡುತ್ತದೆ ಮತ್ತು ನನ್ನನ್ನು ನಾನು ಇತರರೊಂದಿಗೆ  ಹೋಲಿಸಿಕೊಳ್ಳುತ್ತೇನೆ. ಈ ಸ್ವಭಾವದಿಂದ ನಾನು ಹೊರಬರಲು ಇಚ್ಛಿಸುತ್ತಿದ್ದೇನೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀವು ಈ ಅಭ್ಯಾಸ ( ಸ್ವಭಾವ)ದಿಂದ ಹೊರಬರಲು  ಇಚ್ಛಿಸುತ್ತಿದ್ದೀರೆಂದರೆ  ನೀವಾಗಲೇ ಆ ಮಾರ್ಗದಲ್ಲಿ  ಅರ್ಧ ಕ್ರಮಿಸಿದ್ದೀರಿ. ಹಾಗೇ ಮುನ್ನಡೆಯಿರಿ.  ಹೆಚ್ಚು ಸಾಧನೆ, ಸತ್ಸಂಗದಲ್ಲಿರಿ. ಆಗ ಇದರಿಂದ ಹೊರಬರುತ್ತೀರಿ.

ಪ್ರಶ್ನೆ: ಗುರೂಜಿ, ದೇವರ ನಾಮಸ್ಮರಣೆ ಮಾಡುವ ಮಹತ್ವವೇನು? ಮನಸಾರೆ ವಿಠ್ಠಲನ ನಾಮಸ್ಮರಣೆ ಮಾಡುವುದರಿಂದ ಯೋಗದ ಎಲ್ಲ ಲಾಭಗಳು ದೊರಕುತ್ತವೆ ಎಂದು ಮಹಾರಾಷ್ಟ್ರದಲ್ಲಿ ಹೇಳುತ್ತಾರೆ. 
ಶ್ರೀ ಶ್ರೀ ರವಿಶಂಕರ್:  ಹೇಗಿದ್ದರೂ ನಾವು ಪ್ರತಿ ಸಂಜೆ ಸತ್ಸಂಗದಲ್ಲಿ ಇದನ್ನು ಮಾಡುತ್ತೇವೆ. ಪರಮಾತ್ಮನ ನಾಮವನ್ನು ಜಪಿಸುತ್ತೇವೆ. ಹೌದು, ಜಪ ಮಾಡುತ್ತಾ ಹೋದಂತೆ ನೀವು ಒಂದು ಅಜಪ ( ಮಂತ್ರ ಉಚ್ಚರಿಸುವ ಮಾನಸಿಕ ಪ್ರಯತ್ನವಿಲ್ಲದೆ ಜಪವಾಗುವ ಅಭ್ಯಾಸ) ಸ್ಥಿತಿಗೆ ತಲುಪುವಿರಿ.ನೀವು ಸ್ತಬ್ಧರಾಗಿ, ಜಪವನ್ನು ಮೀರಿ ನಾಮಕ್ಕೆ ಅತೀತವಾದ ಸಮಾಧಿಯ ಸ್ಥಿತಿಯನ್ನು ತಲುಪುವಿರಿ. ಇದನ್ನು ಭಾವ ಸಮಾಧಿ ಎಂದು ಕರೆಯುತ್ತಾರೆ.
ಭಾವ ಸಮಾಧಿಯೂ ಸಾಧನೆಯ ಒಂದು ಅಂಗ. ಆದರೆ ಜ್ಞಾನವಿಲ್ಲದೆ ಭಕ್ತಿಯು ಪಕ್ವವಾಗುವುದಿಲ್ಲ. ಜ್ಞಾನ ಹಾಗೂ ಭಕ್ತಿ ಜೊತೆ ಜೊತೆಗೆ ಸಾಗಬೇಕು.

ಪ್ರಶ್ನೆ: ಗುರೂಜಿ,  ಮೊಟ್ಟೆಯು ಶಾಕಾಹಾರಿಯೋ ಅಥವಾ ಮಾಂಸಾಹಾರಿಯೋ?
ಶ್ರೀ ಶ್ರೀ ರವಿಶಂಕರ್: ಸತ್ಸಂಗದಲ್ಲಿ ಕುಳಿತುಕೊಂಡು ಮೊಟ್ಟೆಗಳ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ ಎಂದು ನಮಗನಿಸುತ್ತದೆ. ಮೊಟ್ಟೆಗಳನ್ನು ಬಿಡಿ, ಬ್ರಹ್ಮಾಂಡ (ಬ್ರಹ್ಮನಾದ)ದ ಬಗ್ಗೆ ಮಾತನಾಡಿ. ಇಲ್ಲಿ ನಾವು ಶರೀರ ಹಾಗೂ ಬ್ರಹ್ಮಾಂಡದ ಬಗ್ಗೆ ಚರ್ಚಿಸುತ್ತೇವೆ, ಮೊಟ್ಟೆಗಳ ಬಗ್ಗೆ ಅಲ್ಲ. ಮೊಟ್ಟೆಗಳ ಪ್ರಯೋಜನ ಮತ್ತು ಹಾನಿಗಳ ಬಗ್ಗೆ ಗೂಗಲ್ ನಲ್ಲಿ ಹುಡುಕಿ.
ಪ್ರತಿದಿನ ೧೦ ನಿಮಿಷಗಳ ಕಾಲ ಸೂರ್ಯನನ್ನು ದಿಟ್ಟಿಸಬೇಕು ಎಂದು ಸಾಕಷ್ಟು ಸಂಶೋಧನೆಯನ್ನು ಮಾಡಿರುವ ವೈದ್ಯರೊಬ್ಬರು ನೆನ್ನೆ ನಮಗೆ ಹೇಳಿದರು. ಸೌರಶಕ್ತಿಯನ್ನು ಹೀರಿಕೊಂಡು ಶರೀರದಲ್ಲಿ ರಕ್ತವನ್ನು ಉತ್ಪಾದಿಸುವ   ಕೆಲವು ಅನನ್ಯವಾದ ಜೀವಕೋಶಗಳು ನಮ್ಮ ಕಣ್ಣುಗಳಲ್ಲಿವೆ ಎಂದು ಹೇಳಲಾಗುತ್ತದೆ. ಇದು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಇರುವ ಹಾಗೆ. ಸೂರ್ಯನ ಕಿರಣಗಳನ್ನು ಹೀರಿಕೊಂಡು ಗಿಡಮರಗಳು ಅದನ್ನು ಸಸ್ಯಹರಿತ್ತನ್ನಾಗಿ (ಕ್ಲೋರೋಫಿಲ್) ಪರಿವರ್ತಿಸುತ್ತವೆ.
ಸೂರ್ಯನ ಬೆಳಕಿನ ಅದೇ ಪದಾರ್ಥವನ್ನು ನಮ್ಮ ಕಣ್ಣುಗಳ ರಕ್ತನಾಳಗಳು ಹೀರಿಕೊಂಡು ರಕ್ತವನ್ನಾಗಿ ಪರಿವರ್ತಿಸುತ್ತವೆ. ಹಾಗಾಗಿ, ರಕ್ತವನ್ನು ಶುದ್ಧೀಕರಿಸಲು ಅಥವಾ ಉತ್ಪನ್ನವನ್ನು ಹೆಚ್ಚಿಸಲು ಸೂರ್ಯನನ್ನು ದಿಟ್ಟಿಸಿ - ಇದನ್ನೇ ನಮ್ಮ ಪೂರ್ವಜರು ಹೇಳುತ್ತಿದ್ದರು!
ಸಂಧ್ಯಾವಂದನೆಯ ಅರ್ಥವೇನು?  ಕೈಯಲ್ಲಿ ನೀರನ್ನು ಹಿಡಿದು ಸೂರ್ಯೋದಯದ ದಿಕ್ಕಿನಲ್ಲಿ ನಿಂತು ಆ ನೀರು ಕೈಯಿಂದ ಜಾರುವವರೆಗೆ ಸೂರ್ಯನನ್ನು ನೋಡುವುದು. ಇದನ್ನು ನೀವು ಮೂರು ಬಾರಿ ಮಾಡುವಿರಿ. ಇದು ಸುಮಾರು ೧೦ ನಿಮಿಷ ಹಿಡಿಯುತ್ತದೆ. ನಂತರ ಸೂರ್ಯನನ್ನು ನೋಡುತ್ತಾ ನೀವು ಗಾಯತ್ರಿ ಮಂತ್ರವನ್ನು ಜಪಿಸುವಿರಿ. ಇದೇ ರೀತಿ ಸಂಜೆಯೂ ಮಾಡುವಿರಿ. ಸೂರ್ಯನನ್ನು ನೋಡಿದಾಗ ದೇಹದಲ್ಲಿ ಶಕ್ತಿಸಂವಹನವಾಗುತ್ತದೆ.
ನಾವು ಹೆಚ್ಚು ಹಸಿ ತರಕಾರಿ, ಆಹಾರ, ಹಣ್ಣುಗಳು ಹಾಗೂ ಹಣ್ಣಿನ ರಸವನ್ನು ಸೇವಿಸಬೇಕು ಎಂದು ಕೂಡ ಹೇಳಲಾಗಿದೆ. ನಾವು ೮೦%  ಹಸಿಯಾದ ಆಹಾರ  ಮತ್ತು ೨೦% ಬೇಯಿಸಿದ ಆಹಾರವನ್ನು ಸೇವಿಸಬೇಕು. ಮೆದುಳಿನ ವ್ರಣ, ಕ್ಯಾನ್ಸರ್ ಇರುವ ಹಲವರು ಮೂರು ತಿಂಗಳ ಕಾಲ ಕೇವಲ ಹಸಿಯ ಆಹಾರದ ಸೇವನೆ  ಹಾಗೂ ಸೂರ್ಯ ದರ್ಶನದ ಮೂಲಕ ರೋಗವನ್ನು ಗುಣಪಡಿಸಿಕೊಂಡ  ಉದಾಹರಣೆಗಳನ್ನೂ ಅವರು ನೀಡಿದರು. ವ್ಯಾಧಿಗಳ ಉಪಶಮನವು ಸುದರ್ಶನ ಕ್ರಿಯೆಯ ಮೂಲಕವೂ ಖಂಡಿತವಾಗಿ ಆಗುತ್ತದೆ.
ನಮ್ಮ ಶರೀರದ ಮೇಲೆ ನಾವು ಹಾಕಿಕೊಳ್ಳುವ ಕ್ರೀಂಗಳನ್ನು ನೀವು ಸೇವಿಸಿದರೆ ಸತ್ತು ಹೋಗುವಿರಿ ಏಕೆಂದರೆ ಅವುಗಳಲ್ಲಿ ಅಷ್ಟು ಹಾನಿಕಾರಕ ರಾಸಾಯನಿಕ ಪದಾರ್ಥಗಳಿರುತ್ತವೆ. ಈ ಕ್ರೀಂಗಳನ್ನು ನಮ್ಮ ದೇಹ ಹೀರಿಕೊಳ್ಳುತ್ತದೆ. ಅದು ನೇರವಾಗಿ ನಮ್ಮ ರಕ್ತವಾಹಿನಿಯನ್ನು ಸೇರುತ್ತದೆ. ಹಾಗಾಗಿ ನಾವು ಸೇವಿಸಲಾಗದ ಯಾವುದನ್ನೂ ನಮ್ಮ ತ್ವಚೆಗೆ ಲೇಪಿಸಬಾರದು. ಹಾಗಾಗಿಯೇ ಆಯುರ್ವೇದೀಯ ಲೇಪನಗಳನ್ನು ಹೊರತುಪಡಿಸಿ ಇತರ ಯಾವುದೇ ಕ್ರೀಂಗಳು ಲೇಪಿಸಿಕೊಳ್ಳಲು ಯೋಗ್ಯವಲ್ಲ. ಕ್ರೀಂಗಳಲ್ಲಿ ಇಲಿ ಪಾಷಾಣವನ್ನೂ ಸೇರಿಸುತ್ತಾರೆ, ಅದನ್ನು ಸೇವಿಸಿದ ಜನ ಸಾಯುವರು. ಇದನ್ನು ತ್ವಚೆಗೆ ಲೇಪಿಸಿದಾಗ ನಿಧಾನವಾಗಿ ಜನ ಸಾವಿಗೀಡಾಗುವರು.
ಪ್ರಾಚೀನ ಕಾಲದಲ್ಲಿ, ಮಣ್ಣಿನ ಪ್ಯಾಕ್ ಗಳು, ಹಾಲಿನ ಕೆನೆ, ಕಡಲೆ ಹಿಟ್ಟು ಹಾಗೂ ಅರಿಸಿನವನ್ನು ಹಚ್ಚಿಕೊಳ್ಳುತ್ತಿದ್ದರು. ಚರ್ಮವನ್ನು ಶುಚಿಯಾಗಿಡಲು ನಾವು ಇವುಗಳನ್ನು ಬಳಸುತ್ತಿದ್ದೆವು. ಈಗಲೂ ನಾವು ಇದನ್ನೇ ಬಳಸಬೇಕು. ನಾವು ಇದನ್ನು ಅವಲೋಕಿಸುತ್ತೇವೆ. ಕಡಲೆ ಹಿಟ್ಟು ಮುಂತಾದ ಸಾಮಗ್ರಿಗಳಿಂದ ಸೇವಿಸಲು ಹಾಗೂ ದೇಹಕ್ಕೆ ಲೇಪಿಸಲು ಯೋಗ್ಯವಾದ ಹೆಚ್ಚು ಉತ್ಪನ್ನಗಳನ್ನು ನಾವು ತಯಾರಿಸಬೇಕು. ನಾವು ನಮ್ಮ ವೈದ್ಯರೊಂದಿಗೆ ಮಾತನಾಡಿ  ಯಾವುದೇ ವಿಷಕಾರಕಗಳಿಲ್ಲದ  ಅಂಗಲೇಪವನ್ನು ತಯಾರಿಸುವೆವು.

ಪ್ರಶ್ನೆ:  ವಿವೇಕದ ಜಾಗೃತಿಯು ಮಾನವರನ್ನು ಸಂವೇದನಾಶೀಲರನ್ನಾಗಿ ಮಾಡುವುದಿಲ್ಲವೇ? ಹೌದಾದರೆ ಎಷ್ಟೊಂದು ಜ್ಞಾನಿಗಳು ಅನವಶ್ಯಕವಾದ ರೀತಿಯಲ್ಲಿ ಏಕೆ ವರ್ತಿಸುತ್ತಾರೆ?
ಶ್ರೀ ಶ್ರೀ ರವಿಶಂಕರ್: ಇಲ್ಲಿ ಕೇಳಿ, ಈ ಪ್ರಪಂಚದಲ್ಲಿ ಎಲ್ಲ ವಿಧದ ಜನರಿದ್ದಾರೆ. ಸಜ್ಜನರು, ಸಾಧಾರಣ ಜನರು, ನಿಷ್ಪ್ರಯೋಜಕರು ಎಲ್ಲರೂ ಇದ್ದಾರೆ. ನೀವು ಎಲ್ಲರನ್ನೂ ನಿಭಾಯಿಸಬೇಕು. ನಿಷ್ಪ್ರಯೋಜಕರು ನಿಮ್ಮ ಸಂಕಲ್ಪವನ್ನು ಇನ್ನಷ್ಟು ದೃಢವಾಗಿಸುತ್ತಾರೆ, ಸಾಧಾರಣವಾದ ಜನರು ನಿಮ್ಮ ಕೌಶಲ್ಯಗಳನ್ನು ಹೊರಗೆಡಹುವರು ಹಾಗೂ ಸಜ್ಜನರು ನಿಮ್ಮನ್ನು ಬೆಂಬಲಿಸುವರು. ಹಾಗಾಗಿ, ನೀವು ಈ ಮೂರೂ ವಿಧದ ಜನರನ್ನು  ನಿಭಾಯಿಸಬೇಕು.

ಪ್ರಶ್ನೆ:  ನನಗೆ ಮೋಕ್ಷದ ಬಗ್ಗೆ ಹೆಚ್ಚೇನೂ ತಿಳಿಯದೇ ಇರುವಾಗ ಮೋಕ್ಷವನ್ನು ಪಡೆಯುವ ಇಚ್ಛೆಯು ಹೇಗೆ ಉಂಟಾಗಲು ಸಾಧ್ಯ?
ಶ್ರೀ ಶ್ರೀ ರವಿಶಂಕರ್: ನೀವು ಬಂಧನದ ಭಾವವನ್ನು ಅನುಭವಿಸಿದಾಗ ಮಾತ್ರ ನಿಮಗೆ ಮುಕ್ತಿಯನ್ನು ಹೊಂದುವ ಅಪೇಕ್ಷೆಯುಂಟಾಗುವುದು. ನೀವು ಸಂತೋಷವಾಗಿದ್ದು ಯಾವುದೇ ಬಂಧನವನ್ನು ಅನುಭವಿಸದೆ ಇದ್ದಾಗ ಮೋಕ್ಷದ ಹಂಬಲವಿರುವುದಿಲ್ಲ. ಯಾರು ಸಂತೋಷಕ್ಕಾಗಿ ಹಂಬಲಿಸುವುದಿಲ್ಲವೋ ಅವರಿಗೆ ಮೋಕ್ಷ ಸಿಗುತ್ತದೆ ಹಾಗೂ ಯಾರು  ಮೋಕ್ಷವನ್ನೂ ಬಯಸುವುದಿಲ್ಲವೋ ಅವರು ಪ್ರೇಮವನ್ನು ಪಡೆಯುತ್ತಾರೆ.
ಪ್ರೇಮದಲ್ಲಿರುವವರು ಮೋಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರೇಮಿಯು  'ಮೋಕ್ಷವೆಂದರೇನು? ನನಗದರ ಅಗತ್ಯವಿಲ್ಲ'  ಎಂದು ಆಲೋಚಿಸುತ್ತಾನೆ. ಗೋಪಿಯರು ಇದನ್ನೇ  ಹೇಳುತ್ತಿದ್ದರು ' ನಮಗೆ ಯಾವುದೇ ಮೋಕ್ಷದ ಅಗತ್ಯವಿಲ್ಲ; ನಮಗೆ ಯಾವುದೇ ಜ್ಞಾನದ ಅಗತ್ಯವಿಲ್ಲ, ಪ್ರೇಮದಲ್ಲೇ ನಾವು ಆನಂದವಾಗಿದ್ದೇವೆ' ಎಂದು. ಪ್ರೇಮದ ಸಹಜ ಸ್ವಭಾವವೇ ಮುಕ್ತಿ.

ಪ್ರಶ್ನೆ: ಗುರೂಜಿ, ಪರಮಾತ್ಮನೊಂದಿಗೆ ಧರ್ಮದ ಸಂಬಂಧವೇನು?
ಶ್ರೀ ಶ್ರೀ ರವಿಶಂಕರ್: ಪರಮಾತ್ಮನು ಯಾವುದರೊಂದಿಗೆ ಸಂಬಂಧವನ್ನು ಹೊಂದಿಲ್ಲವೆಂದು ನಮಗೆ ತಿಳಿಸಿ? ಪರಮಾತ್ಮನು ಧರ್ಮ ಹಾಗೂ ಅಧರ್ಮ ಎರಡರೊಂದಿಗೂ ಸಂಬಂಧವನ್ನು ಹೊಂದಿದ್ದಾನೆ. ಅಧರ್ಮವನ್ನು ಅಳಿಸಿ ಧರ್ಮವನ್ನು ಎತ್ತಿ ಹಿಡಿಯುವುದು ಕೂಡ ಪರಮಾತ್ಮನ ಜವಾಬ್ದಾರಿಯೇ. ಹಾಗಾಗಿ ಪರಮಾತ್ಮನು ಎಲ್ಲದಕ್ಕೂ ಸಂಬಂಧಿಸಿದ್ದಾನೆ.
ಅದೇ ರೀತಿಯಲ್ಲಿ ಪೂಜೆಯ ವಿಧಾನದಲ್ಲಿ ’ಧರ್ಮಾಯ ನಮಃ, ಅಧರ್ಮಾಯ ನಮಃ’ ಎಂದಿದ್ದಾರೆ. ಎರಡಕ್ಕೂ ನಮಿಸುತ್ತೇವೆ. ಈ ಪ್ರಪಂಚವು ಧರ್ಮ ಹಾಗೂ ಅಧರ್ಮದ ಮಿಶ್ರಣ. ಪರಮಾತ್ಮನು ಎರಡರೊಂದಿಗೂ ಸಂಬಂಧವನ್ನು ಹೊಂದಿದ್ದಾನೆ – ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸುವುದರೊಂದಿಗೆ.

ಪ್ರಶ್ನೆ: ಶಿವ ತತ್ವ ಎಂದರೇನು ?
ಶ್ರೀ ಶ್ರೀ ರವಿಶಂಕರ್: ನೀವು ಇದಲ್ಲ, ಇದಲ್ಲ , ಇದಲ್ಲ ಎಂದು ಎಲ್ಲವನ್ನೂ  ತಿರಸ್ಕರಿಸಿದ ನಂತರ ಯಾವುದು  ಉಳಿಯುವುದೋ ಅದೇ ಶಿವ ತತ್ವ.

ಪ್ರಶ್ನೆ: ಗುರೂಜಿ, ನಾನು ಒಂದು ಆನ್ಲೈನ್ ವ್ಯವಹಾರದಲ್ಲಿ  ಸಾಕಷ್ಡು ಹಣವನ್ನು ಹೂಡಿ ಎಲ್ಲವನ್ನೂ ಕಳೆದುಕೊಂಡೆ, ಅದಾದನಂತರ ನಾನು ಸತ್ಸಂಗದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಕೇಳು, ಎಲ್ಲವೂ ಒಂದಲ್ಲ ಒಂದು ದಿನ ಹೋಗಲೇ ಬೇಕು, ಹೌದಲ್ಲವೇ ? ನೀನೂ ಹೋಗಬೇಕು ನಾವು ಕೂಡ ಒಂದು ದಿನ ಹೋಗಬೇಕು. ಸಾಮಾನ್ಯವಾಗಿ, ಮೊದಲು ನಾವು ಹೋಗುತ್ತೇವೆ ನಂತರ ನಮ್ಮ ವ್ಯವಹಾರ ಕುಸಿಯುತ್ತದೆ. ಇಲ್ಲಿ ಮೊದಲು ವ್ಯವಹಾರ ಹೋಗಿದೆ ನಂತರ ನಾವು ಅದನ್ನು ಹಿಂಬಾಲಿಸುತ್ತೇವೆ. ಹಾಗಾಗಿ ಹೋಗಿರುವುದನ್ನು ಮರೆತು, ಮುನ್ನಡೆಯಿರಿ. ನೀವು ಹುಟ್ಟಿದಾಗ ನಿಮ್ಮ ವ್ಯವಹಾರದೊಂದಿಗೆ ಬಂದಿರಲಿಲ್ಲ. ನೀವು ಸಣ್ಣ ಮಗುವಾಗಿದ್ದಾಗ ಯಾರೋ ಒಬ್ಬರು ನಿಮ್ಮನ್ನು ನೋಡಿಕೊಂಡರಲ್ಲವೇ?
ನಿಮಗೆ ಅವರು ಆಹಾರ ನೀಡಿದರು,ನಿಮ್ಮ ಕೈಗಳನ್ನು ಹಿಡಿದು ನಿಮ್ಮನ್ನು ನಡೆಸಿದರು,ನಿದ್ದೆ ಮಾಡಿಸಿದರು. ಹಾಗೆಯೇ ಯಾರಾದರೊಬ್ಬರು ನಿಮ್ಮನ್ನು ಆರೈಕೆ ಮಾಡುತ್ತಾರೆ. ಜೀವನ ಸಾಗುತ್ತಲೇ ಇರುತ್ತದೆ, ಯಾವುದರ ಬಗ್ಗೆಯೂ ಯೋಚಿಸದೇ ಮುಂದೆ ಸಾಗುತ್ತಲಿರಿ.
ಹೌದು, ನಿಮಗೆ ನೋವಾಗುತ್ತದೆ, ನೀವು ನಿಮ್ಮ ಜೀವಮಾನದ ಸಂಪಾದನೆಯೆಲ್ಲವನ್ನೂ ಒಂದು ವ್ಯವಹಾರದಲ್ಲಿ ಹೂಡಿದಿರಿ, ಅದು ಈಗ ವಿಫಲವಾಗಿದೆ. ಇದರಿಂದ ನೀವು ನೋವನ್ನು ಅನುಭವಿಸುವುದು ಸಹಜ, ಆದರೆ ನಿಮ್ಮ ಎಲ್ಲಾ ನೋವುಗಳನ್ನು ತೊರೆಯಲು ನೀವು ಸರಿಯಾದ ಸ್ಥಳಕ್ಕೇ ಬಂದಿದ್ದೀರಿ.

ಪ್ರಶ್ನೆ: ಲೋಭಕ್ಕೆ ಕೊನೆಯೆಲ್ಲಿದೆ?
ಶ್ರೀ ಶ್ರೀ ರವಿಶಂಕರ್: ಸ್ಮಶಾನದಲ್ಲಿ. ಅಲ್ಲಿ ನೀವು ಲೋಭಿಯಾಗಲು ಸಾಧ್ಯವಿಲ್ಲ. ಲೋಭವು ನಮ್ಮ ಸಮಾಜ ಹಾಗೂ ಇಡೀ ವಿಶ್ವವನ್ನೇ ಆವರಿಸಿರುವುದು ಅತ್ಯಂತ ದುರದೃಷ್ಟಕರವಾದ ಸಂಗತಿ. ಭ್ರಷ್ಟಾಚಾರವು ಬರೀ ಭಾರತಕ್ಕೆ ಮಾತ್ರ ನಿರ್ದಿಷ್ಟವೆಂದು ತಿಳಿಯಬೇಡಿ.
ನಾವು ಎಲ್ಲಿ ಹೋದರೂ ಅದೇ ವಿಷಯ,  ಬಲ್ಗೇರಿಯಾದಲ್ಲಿ ಭ್ರಷ್ಟಾಚಾರ, ರಷ್ಯಾದಲ್ಲಿ ಭ್ರಷ್ಟಾಚಾರ, ಉಕ್ರೇನ್ ನಲ್ಲಿ ಭ್ರಷ್ಟಾಚಾರ, ಪ್ರತೀ ದೇಶವು ಭ್ರಷ್ಟಾಚಾರದಿಂದ ನರಳುತ್ತಿದೆ. ಗ್ರೀಸ್ ದೇಶದಲ್ಲಿ ಮಹತ್ತರ ಪ್ರಮಾಣದ ಭ್ರಷ್ಟಾಚಾರವಿದೆ, ಭ್ರಷ್ಟಾಚಾರದಿಂದ ಆ ದೇಶವು ಮುಳುಗಿಹೋಗಿದೆ. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಭ್ರಷ್ಟಾಚಾರವು ಒಂದು ಸಮಸ್ಯೆಯಾಗಿದೆ.

ಪ್ರಶ್ನೆ: ಗುರೂಜಿ, ಅನಾಹತ ನಾದ ಎಂದರೇನು? ಅದನ್ನು ಉಂಟುಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು?
ಶ್ರೀ ಶ್ರೀ ರವಿಶಂಕರ್: ಯಾವ ಶಬ್ಧವನ್ನು ಎರಡು ವಸ್ತುಗಳಿಂದ ಉತ್ಪತ್ತಿ ಮಾಡಲು ಸಾಧ್ಯವಾಗದೆ ಸ್ವಾಭಾವಿಕವಾಗಿ ಉದಯಿಸುವುದೋ  ಅದೇ ಅನಾಹತ ನಾದ. ಧ್ಯಾನದಲ್ಲಿ ಆಳವಾಗಿ ಹೋಗಿ. ಕೇವಲ ಧ್ಯಾನದಲ್ಲಿ ಮಾತ್ರ ಕೆಲವೊಮ್ಮೆ ನೀವು ಅದನ್ನು ಕೇಳಬಹುದು. ಇದು ಪ್ರತಿಯೊಬ್ಬರಿಗೂ ಕೇಳಿಸಬೇಕು ಎಂದೇನೂ ಇಲ್ಲ. ಕೆಲವರು  ಅನಾಹತ ನಾದವನ್ನು ಕೇಳಬಹುದು, ಕೆಲವರಿಗೆ ಬೆಳಕಿನ ಅನುಭವ ಆಗಬಹುದು, ಕೆಲವರಿಗೆ ಸಾನ್ನಿಧ್ಯದ ಅನುಭೂತಿಯಾಗಬಹುದು. ಇವೆಲ್ಲವೂ ಅನುಭವದ ಹಲವಾರು ಬಗೆಗಳು.

ಪ್ರಶ್ನೆ: ಗುರೂಜಿ, ನಮ್ಮ ಹಿಂದೂ ಪುರಾಣದಲ್ಲಿ ಈ ಭೂಮಿಯು ಒಂದು ಸರ್ಪದ ಹೆಡೆಯ ಮೇಲೆ ನಿಂತಿದೆಯೆಂದೂ ಮತ್ತು ಯಾವಾಗ ಆ ಸರ್ಪ ಹೆಡೆ ಎತ್ತುತ್ತದೆಯೋ ಆಗ ಈ ಇಡೀ ಭೂಮಿಯು ಕಂಪಿಸುತ್ತದೆ ಎಂದು ಹೇಳಲಾಗಿದೆ. ಇದರ ಹಿಂದಿನ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್: ಭೂಮಿಗೆ ಸಂಭಂಧ ಪಟ್ಟಂತೆ ಎರಡು ರೀತಿಯ ಶಕ್ತಿಗಳಿವೆ. ಒಂದು ಕೇಂದ್ರಾಭಿಗಾಮಿ ಶಕ್ತಿ (Centripetal force) ಮತ್ತು ಇನ್ನೊಂದು ಕೇಂದ್ರಾಪಗಾಮಿ ಶಕ್ತಿ (Centrifugal force). ಈ ಶಕ್ತಿಗಳ ಚಲನೆಯು ನೇರವಾಗಿಲ್ಲದೆ ಹಾವಿನ ಚಲನೆಯ ಹಾಗೆ ಅಂಕುಡೊಂಕಾಗಿದೆ. ಈ ವಾಸ್ತವವು ನಮ್ಮ ಪೂರ್ವಜರಿಗೆ ತಿಳಿದಿತ್ತು, ಭೂಮಿಯು ಸರ್ಪದ ಹೆಡೆಯ ಮೇಲೆ ನಿಂತಿಲ್ಲ, ಇಲ್ಲಿ ಸರ್ಪ ಎಂದರೆ, ಕೇಂದ್ರಾಭಿಗಾಮಿ ಶಕ್ತಿ ಮತ್ತು ಕೇಂದ್ರಾಪಗಾಮಿ ಶಕ್ತಿ ಎಂದರ್ಥ. ಆದ್ದರಿಂದ, ವಾಸ್ತವವಾಗಿ ಅವರು ಇದನ್ನು ಈ ರೂಪದಲ್ಲಿ ವಿವರಿಸಿದ್ದಾರೆ.
ಉದಾಹರಣೆಗೆ, ಶಿವನು ತನ್ನ ಕುತ್ತಿಗೆಯ ಸುತ್ತ ಒಂದು ಹಾವನ್ನು ಧರಿಸಿ ಕುಳಿತಿದ್ದಾನೆ - ಇದು ಏನನ್ನು ಸೂಚಿಸುತ್ತದೆ ಎಂದರೆ, ಇದು ಧ್ಯಾನಾವಸ್ಥೆಯನ್ನು ಸೂಚಿಸುತ್ತದೆ. ಇಲ್ಲಿ ಕಣ್ಣುಗಳು ಮುಚ್ಚಿದ್ದು, ವ್ಯಕ್ತಿಯು ನಿದ್ರಾವಸ್ಥೆಯಲ್ಲಿರುವಂತೆ ಭಾಸವಾಗುತ್ತದೆ, ಆದರೆ ಅವನು ನಿದ್ರಿಸುತ್ತಿಲ್ಲ, ಒಳಗಿನಿಂದ ಜಾಗೃತನಾಗಿದ್ದಾನೆ. ಇದನ್ನು ವ್ಯಕ್ತಪಡಿಸಲು, ಶಿವನ ಕುತ್ತಿಗೆಯ ಸುತ್ತ ಒಂದು ಹಾವನ್ನು ತೋರಿಸಲಾಗಿದೆ. ಇಲ್ಲದಿದ್ದರೆ, ಶಿವನು ಏಕೆ ತನ್ನ ಕುತ್ತಿಗೆಯ ಸುತ್ತ ಹಾವನ್ನು ಧರಿಸಬೇಕು? ಅವನು ಇಡೀ ವಿಶ್ವಕ್ಕ ಒಡೆಯನು, ಅವನಿಗೆ ಧರಿಸಲು ಬೇರೆ ಏನನ್ನಾದರೂ ಹುಡುಕಿಕೊಳ್ಳಲು ಸಾಧ್ಯವಿಲ್ಲವೇ? ಈ ವಿಶ್ವದ ಒಡೆಯನು ಬಗೆಬಗೆಯ ಬೆಲೆಬಾಳುವ ವಸ್ತುಗಳಿಂದ ಕೂಡಿದ ಮಾಲೆಗಳನ್ನು ಧರಿಸಬಲ್ಲನು. ಏಕೆ ತನ್ನ ಕುತ್ತಿಗೆಗೆ ಒಂದು ಹಾವನ್ನು ನೇತು ಹಾಕಿಕೊಳ್ಳಬೇಕು? ಇಲ್ಲ, ನಮ್ಮ ಪೂರ್ವಜರು ಏನನ್ನೇ ಹೇಳಿರಲಿ ಅದರ ಹಿಂದೆ ಅತ್ಯಂತ ಗಾಢವಾದ ರಹಸ್ಯಗಳು ಅಡಗಿರುತ್ತವೆ.
ಇದೇ ರೀತಿ, ಭೂಮಿಯು, ಶೇಷನಾಗನ ಮೇಲೆ- ಇಲ್ಲಿ ನಾಗ ಎಂದರೆ ಕೇಂದ್ರಾಭಿಗಾಮಿ ಶಕ್ತಿ ಎಂದರ್ಥ. ಹಾವು ಎಂದಿಗೂ ಒಂದು ನೇರವಾದ ಹಾದಿಯಲ್ಲಿ ಚಲಿಸುವುದಿಲ್ಲ, ಅದು ಮುಂದೆ ಹರಿದಂತೆಲ್ಲ ವಕ್ರರೇಖೆಗಳನ್ನು ನಿರ್ಮಿಸುತ್ತದೆ ಇದು ಕೇಂದ್ರಾಭಿಗಾಮಿ ಶಕ್ತಿ ಎಂದೆನಿಸಿಕೊಳ್ಳುತ್ತದೆ. ಯಾವುದು ನೇರವಾಗಿ ಚಲಿಸುವುದಿಲ್ಲವೋ ಅದು ಕೇಂದ್ರಾಭಿಗಾಮಿ ಶಕ್ತಿ ಎಂದರ್ಥ. ಭೂಮಿಯು ತನ್ನ ಅಕ್ಷದಲ್ಲಿ ತಿರುಗುತ್ತಾ ಸೂರ್ಯನ ಸುತ್ತ ಸುತ್ತುತ್ತದೆ. ಆದ್ದರಿಂದ ಇಲ್ಲಿ ಎರಡು ರೀತಿಯ ಶಕ್ತಿಗಳಿವೆ  ಕೇಂದ್ರಾಭಿಗಾಮಿ ಮತ್ತು ಕೇಂದ್ರಾಪಗಾಮಿ.
ಇದನ್ನೇ ನಮ್ಮ ಪೂರ್ವಜರು  ಒಂದು ಹಾವಿನ ಆಕಾರದಲ್ಲಿ ವರ್ಣಿಸಿದ್ದಾರೆ.
ಹಾಗಾದರೆ ಸರ್ಪವು ಯಾವುದರ ಮೇಲೆ ನಿಂತಿದೆ? ಅದು ಒಂದು ಆಮೆಯ ಮೇಲೆ ನಿಂತಿದೆ, ಆಮೆಯು ಸ್ಥಿರತೆಯನ್ನು ಸಂಕೇತಿಸುತ್ತದೆ. ಇದು ಬಹಳ ಕುತೂಹಲಕಾರಿಯಾಗಿದೆ!
ಈಗ ಜ್ಯುಪಿಟರ್ ಗ್ರಹ (ಗುರು) ವಿಲ್ಲದಿದ್ದರೆ,ಭೂಮಿಯು ಉಳಿಯುತ್ತಲೇ ಇರಲಿಲ್ಲ ಎಂದು ಹೇಳಲಾಗಿದೆ.  ಜ್ಯುಪಿಟರ್ ಗ್ರಹವು (ಗುರು) ಏನು ಮಾಡುತ್ತದೆ ಎಂದರೆ, ಬಾಹ್ಯಾಕಾಶದಿಂದ ಬರುವ ಎಲ್ಲ ಉಲ್ಕೆಗಳನ್ನು ತನ್ನೆಡೆಗೆ ಎಳೆದುಕೊಳ್ಳುತ್ತದೆ, ಇದರಿಂದ ಜ್ಯುಪಿಟರ್ ಗ್ರಹವು (ಗುರು) ಭೂಮಿಗೆ ರಕ್ಷಣೆ ನೀಡುತ್ತದೆ. ಭೂಮಿಯ ಮೇಲೆ ಬಾಹ್ಯಾಕಾಶದಿಂದ ಉಲ್ಕೆಗಳ, ಸಣ್ಣ ಸಣ್ಣ ಆಕಾಶಕಾಯಗಳ ಸುರಿಮಳೆಯೇ ಆಗುತ್ತದೆ, ಜ್ಯುಪಿಟರ್ ಗ್ರಹವು (ಗುರು) ಇವುಗಳೆಲ್ಲವನ್ನು ತನ್ನೆಡೆಗೆ ಆಕರ್ಷಿಸಿ ಭೂಮಿಯನ್ನು ಸುರಕ್ಷಿತವಾಗಿಡುತ್ತದೆ.
ನಾಸಾ ಸಂಸ್ಥೆಯು ಇದರ ಸುಂದರವಾದ ವಿವರಣೆ ಸೃಷ್ಟಿಸಿದೆ, ಗುರುವು ಇಡೀ ಬ್ರಹ್ಮಾಂಡದ ರಕ್ಷಕ ಎಂದು ನಮಗೆಲ್ಲ ಹೇಳಲಾಗಿದೆ, ಹಾಗಾಗಿ, ಭೂಮಿಯನ್ನು ಸಂರಕ್ಷಿಸುವ ಕಾರಣದಿಂದಾಗಿ ಆ ಗ್ರಹಕ್ಕೂ ಕೂಡ ಗುರು (ಜ್ಯುಪಿಟರ್) ಎಂಬ ಹೆಸರನ್ನಿಡಲಾಗಿದೆ.

ಗುರುವಾರ, ಮೇ 17, 2012

ಉಗ್ರ ಕ್ಷಣಗಳು ಜ್ಞಾನವಿರುವಲ್ಲಿ ಸಿಹಿ ಕನಸಿನ ರೂಪ ತಳೆಯುತ್ತವೆ

17
2012
May
ಸೋಫಿಯಾ, ಬಲ್ಗೇರಿಯಾ


ಪ್ರಶ್ನೆ: ನಾವು ನಮ್ಮ ವಾಸ್ತವವನ್ನು ಸೃಷ್ಟಿಸುತ್ತೇವೆಯೇ ಅಥವಾ ಎಲ್ಲವೂ ಪೂರ್ವ ನಿರ್ಧಾರಿತವೇ?
ಶ್ರೀ ಶ್ರೀ ರವಿಶಂಕರ್:
ನಿನ್ನ ಮನೆಯಲ್ಲಿ ಒಂದು ನಾಯಿಯಿದೆಯೇ?
(ಉತ್ತರ: ಹೌದು)
ನೋಡು, ನೀನು ಪಾರ್ಕಿಗೆ ಹೋಗುವಾಗ, ನಾಯಿಯ ಕೊರಳಿಗೆ ಹಗ್ಗವನ್ನು ಕಟ್ಟಿಕೊಂಡು ಹೋಗುವೆ. ಅದು ಕಾನೂನು. ಈಗ, ನಾಯಿಗೆ ಸ್ವಾತಂತ್ರ್ಯವಿರುವುದು ಹಗ್ಗದ ಉದ್ದದಷ್ಟು ಮಾತ್ರ. ಸರಿಯಾ? ಅದು ಹಗ್ಗವೆಲ್ಲಿದೆಯೋ ಅದಕ್ಕೆ ಬಹಳ ಸಮೀಪದಲ್ಲಿ ಕುಳಿತುಕೊಳ್ಳಬಹುದು, ಅಥವಾ ಹಗ್ಗ ಎಷ್ಟು ಉದ್ದವಿದೆಯೋ ಅಷ್ಟು ದೂರಕ್ಕೆ ಹೋಗಬಹುದು. ಅಷ್ಟು ಅದಕ್ಕಿರುವ ಸ್ವಾತಂತ್ರ್ಯ. ಒಂದು ಪ್ರದೇಶದಲ್ಲಿರುವಂತೆ ನೀವು ಒಂದು ನಾಯಿಗೆ ತರಬೇತಿ ನೀಡಿದ್ದರೆ, ಅದು ಅದರ ಸ್ವಾತಂತ್ರ್ಯ. ಅದು ಇಪ್ಪತ್ತು ಕಿಲೋಮೀಟರ್ ದೂರಕ್ಕೆ ಹೋಗುವುದಿಲ್ಲ. ಅದೇ ರೀತಿಯಲ್ಲಿ, ಜೀವನದಲ್ಲಿ, ಪ್ರತಿಯೊಬ್ಬರಿಗೂ ಸ್ವಲ್ಪ ಸ್ವಾತಂತ್ರ್ಯವಿದೆ ಮತ್ತು ಕೆಲವು ವಿಷಯಗಳು ನಿಶ್ಚಿತವಾಗಿವೆ. ಮನುಷ್ಯರಿಗೆ ಈ ಸ್ವಾತಂತ್ರ್ಯವಿದೆ, ಯಾಕೆಂದರೆ ಮನುಷ್ಯರಿಗೆ ಬುದ್ಧಿಯಿದೆ. ಪ್ರಾಣಿಗಳ ಜೀವನವು ಯೋಜಿತಗೊಳಿಸಲ್ಪಟ್ಟಿವೆ. ಅವುಗಳು ಅತಿಯಾಗಿ ತಿನ್ನುವುದಿಲ್ಲ. ಅವುಗಳ ಜೀವನವು ಪ್ರಕೃತಿಯೊಂದಿಗೆ ಹೊಂದಾಣಿಕೆಯಲ್ಲಿದೆ, ಆದರೆ ನಮಗೆ ಪ್ರಕೃತಿಯೊಂದಿಗೆ ಹೊಂದಿಕೊಳ್ಳುವ ಅಥವಾ ನಿಯಮವನ್ನು ಉಲ್ಲಂಘಿಸುವ ಸ್ವಾತಂತ್ರ್ಯವಿದೆ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?
ನೀವು ಪ್ರಕೃತಿಯೊಂದಿಗೆ ಹೊಂದಿಕೊಂಡಾಗ, ಅಲ್ಲಿ ಸಾಮರಸ್ಯವಿರುತ್ತದೆ ಮತ್ತು ನೀವು ಪ್ರಕೃತಿ ನಿಯಮಗಳಿಗೆ ವಿರುದ್ಧವಾಗಿ ಹೋದಾಗ, ಅಲ್ಲಿ ಸಾಮರಸ್ಯವಿರುವುದಿಲ್ಲ. ಆದುದರಿಂದ ಜೀವನದಲ್ಲಿ, ಹಲವಾರು ವಿಷಯಗಳು ನಿಶ್ಚಿತವಾಗಿರುತ್ತವೆ ಮತ್ತು ಕೆಲವು ವಿಷಯಗಳು ಸ್ವತಂತ್ರ ಇಚ್ಛೆಯಾಗಿರುತ್ತವೆ.
ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ. ಮಳೆ ಸುರಿಯುತ್ತಿರುವಾಗ ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಸ್ವತಂತ್ರ ಇಚ್ಛೆ. ನೀವೊಂದು ಛತ್ರಿ ಅಥವಾ ರೈನ್ ಕೋಟನ್ನು ತೆಗೆದುಕೊಂಡು ಹೋಗಿ ಒದ್ದೆಯಾಗದೇ ಇರಬಹುದು. ಆದುದರಿಂದ, ಜೀವನವು ಸ್ವತಂತ್ರ ಇಚ್ಛೆ ಮತ್ತು ವಿಧಿಯ ಒಂದು ಸಂಯೋಗ. ನೀವು ಧ್ಯಾನದಲ್ಲಿ ಹೆಚ್ಚು ಆಳಕ್ಕೆ ಹೋದಷ್ಟೂ, ನೀವು ಹೆಚ್ಚು ಸಂತೋಷವಾಗಿದ್ದಷ್ಟೂ, ನೀವು ನಿಮ್ಮನ್ನು ಪ್ರಕೃತಿಯೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿದಷ್ಟೂ, ನಿಮ್ಮಲ್ಲಿರುವ ಸ್ವತಂತ್ರ ಇಚ್ಛೆಯೂ ಹೆಚ್ಚಾಗುತ್ತದೆ.

ಪ್ರಶ್ನೆ: ಜೀವನವು ಕೊನೆಯಾಗುವಾಗ ಪ್ರಪಂಚವು ಕೊನೆಯಾಗುವುದಿಲ್ಲ. ಆದರೆ ಪ್ರಪಂಚವು ಕೊನೆಯಾಗುವಾಗ ಜೀವನವು ಕೊನೆಯಾಗುತ್ತದೆ. ಈ ಪ್ರಪಂಚಕ್ಕೆ ಒಂದು ಕೊನೆಯಿದೆಯೇ?
ಶ್ರೀ ಶ್ರೀ ರವಿಶಂಕರ್:
ನೀನೊಂದು ಟೆನ್ನಿಸ್ ಚೆಂಡನ್ನು ನೋಡಿ, ಅದು ಎಲ್ಲಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲಿ ಕೊನೆಯಾಗುತ್ತದೆ ಎಂದು ನನ್ನಲ್ಲಿ ಕೇಳಿದರೆ, ನಾನೇನು ಹೇಳಲು ಸಾಧ್ಯ?
ಪ್ರಪಂಚದಲ್ಲಿರುವ, ಪ್ರಾರಂಭವೂ ಆಗದ ಕೊನೆಯೂ ಆಗದ ಮೂರು ವಿಷಯಗಳೆಂದರೆ:
೧. ದೈವಿಕ ಪ್ರಕಾಶ ಅಥವಾ ಪ್ರಜ್ಞೆಗೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ.
೨. ಜೀವನಕ್ಕೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ. ಅದು ಅನಂತವಾದುದು.
೩. ಈ ಭೂಮಿ, ನಮ್ಮ ಪ್ರಪಂಚಕ್ಕೆ ಪ್ರಾರಂಭವೂ ಇಲ್ಲ ಮತ್ತು ಕೊನೆಯೂ ಇಲ್ಲ.
 ಈ ಭೂಮಿಯು ಗೋಳವಾಗಿದೆ. ಅದು ಅದರ ರೂಪವನ್ನು ಬದಲಾಯಿಸುತ್ತದೆ ಆದರೆ ಅದು ಮುಂದುವರಿಯುತ್ತಾ ಹೋಗುತ್ತದೆ. ಚಿಂತಿಸಬೇಡಿ; ಪ್ರಪಂಚವು ಕೊನೆಯಾಗುವುದಿಲ್ಲ, ವಿಶೇಷವಾಗಿ ೨೦೧೨ರಲ್ಲಿ. ಪ್ರಪಂಚವು ಕೊನೆಯಾಗುವುದು ಅಮೇರಿಕಾದ ಸಿನೆಮಾಗಳಲ್ಲಿ ಮಾತ್ರ.

ಪ್ರಶ್ನೆ: ನಾನು ಈ ಕೋರ್ಸಿಗೆ ಬರುವುದಾಗಿಯೂ ಮತ್ತು ನಿಮ್ಮ ಬಗ್ಗೆಯೂ ನನಗೆ ಕನಸು ಬಿದ್ದಿತ್ತು. ಕನಸುಗಳು ಒಂದು ರೀತಿಯ ಅಂತಃಸ್ಫುರಣೆಯೇ?
ಶ್ರೀ ಶ್ರೀ ರವಿಶಂಕರ್:
ಆರು ರೀತಿಯ ಕನಸುಗಳಿವೆ. ನೀನು ತಿಳಿಯಲು ಬಯಸುತ್ತೀಯಾ?
ಮೊದಲನೆಯ ರೀತಿಯದ್ದು ಹಗಲುಗನಸು. ಅದನ್ನು ನಾವು ಪಕ್ಕಕ್ಕಿಡೋಣ. ಅದು ಒಂದು ಕನಸೆಂದು ಹೇಳಲಾಗುವುದಿಲ್ಲ.
ನಿಮಗೆ ಬೀಳುವ ಎರಡನೆಯ ರೀತಿಯ ಕನಸು, ನಿಮ್ಮ ಹಿಂದಿನ ಅನುಭವಗಳ ಬಗ್ಗೆ. ನಿಮ್ಮ ಹಿಂದಿನ ಅನುಭವಗಳು ಮತ್ತು ಅಚ್ಚುಗಳು ಕನಸುಗಳಾಗಿ ನಿಮ್ಮಲ್ಲಿಗೆ ಬರುತ್ತವೆ.
ಮೂರನೆಯ ರೀತಿಯ ಕನಸೆಂದರೆ, ನಿಮ್ಮ ಬಯಕೆಗಳು ಮತ್ತು ಭಯಗಳು; ಅವುಗಳು ನಿಮ್ಮಲ್ಲಿಗೆ ಕನಸುಗಳಾಗಿ ಬರುತ್ತವೆ.
ನಾಲ್ಕನೆಯ ರೀತಿಯ ಕನಸೆಂದರೆ, ನಿಮ್ಮ ಅಂತಃಸ್ಫುರಣೆ ಅಥವಾ ಪೂರ್ವಸೂಚನೆ. ಮುಂದೆ ಆಗಲಿರುವ ಏನಾದರೂ ನಿಮಗೆ ಕನಸಾಗಿ ಬರಬಹುದು.
ಐದನೆಯ ರೀತಿಯದಕ್ಕೆ ನಿಮ್ಮ ಜೊತೆ ಯಾವುದೇ ಸಂಬಂಧವಿಲ್ಲ, ಆದರೆ ನೀವು ಮಲಗುವ ಜಾಗದೊಂದಿಗೆ ಸಂಬಂಧ ಹೊಂದಿದೆ. ನೀವು ನಿಮಗೆ ಅಪರಿಚಿತವಾಗಿರುವ ಮುಖಗಳನ್ನು ನೋಡುತ್ತೀರಿ ಮತ್ತು ಭಾಷೆಗಳನ್ನು ಕೇಳುತ್ತೀರಿ.
ಆರನೆಯ ರೀತಿಯ ಕನಸು ಇವುಗಳೆಲ್ಲದರ ಮಿಶ್ರಣವಾಗಿದೆ ಮತ್ತು ಕನಸುಗಳಲ್ಲಿ ೯೯% ಈ ರೀತಿಯದ್ದು. ಆದುದರಿಂದ, ಅವುಗಳ ಬಗ್ಗೆ ಅರ್ಥ ಕಲ್ಪಿಸಿಕೊಳ್ಳಲು ಪ್ರಯತ್ನಿಸದಿರುವುದು ಅಥವಾ ಬಹಳವಾಗಿ ಚಿಂತಿಸದಿರುವುದು ಅತ್ಯುತ್ತಮವಾದುದು.  ನಿಮಗೆ ತಿಳಿಯದು, ಕೆಲವು ಕನಸುಗಳು ನಿಮ್ಮ ಪೂರ್ವಸೂಚನೆ ಅಥವಾ ಅಂತಃಸ್ಫುರಣೆ ಆಗಿರಲೂಬಹುದು ಮತ್ತು ಕೆಲವು ಕೇವಲ ನಿಮ್ಮ ಭಯ ಅಥವಾ ಆತಂಕವಾಗಿರಲೂಬಹುದು. ಆದುದರಿಂದ, ಕೇವಲ ಹೋಗಲು ಬಿಡುವುದು, ಒಂದು ಲೋಟ ಚಹಾ ಕುಡಿಯುವುದು ಮತ್ತು ಸಂತೋಷವಾಗಿರುವುದು ಉತ್ತಮ. ಕನಸಿನಿಂದ ಎಚ್ಚೆತ್ತುಕೊಳ್ಳಿ.
ಜ್ಞಾನಿಗಳು ಈ ಜೀವನವನ್ನು ಕೂಡಾ ಒಂದು ಕನಸಿನಂತೆ ಕಾಣುತ್ತಾರೆ. ಸಂಪೂರ್ಣ ಭೂತಕಾಲವನ್ನು ನೀವೊಂದು ಕನಸಾಗಿ ಕಾಣಬೇಕು. ಅದೆಲ್ಲವೂ ಹೋಯಿತು, ಅಲ್ಲವೇ? ಅದೊಂದು ಕನಸಿನಂತೆ. ಕನಸುಗಳೆಂದರೆ ಅಚ್ಚುಗಳ ನೆನಪುಗಳಲ್ಲದೆ ಬೇರೇನೂ ಅಲ್ಲ. ಅದೆಲ್ಲವೂ ಹೋಯಿತು, ಮತ್ತು ಇದು (ವರ್ತಮಾನ) ಒಂದು ಕನಸಾಗಲಿದೆ. ಇದು ಹೋಗುತ್ತದೆ. ನಾಳೆ, ನಾಡಿದ್ದು ಮತ್ತು ಮೂರು ದಿನಗಳ ಬಳಿಕ ನೀವೆಲ್ಲರೂ ಮರಳಿ ಮನೆಗೆ ಹೋಗಿ, "ಓ, ನಾವು ಬಲ್ಗೇರಿಯಾದಲ್ಲಿದ್ದೆವು. ಅದೆಲ್ಲವೂ ಒಂದು ಕನಸಿನಂತೆ" ಎಂದು ಹೇಳುವಿರಿ.
ಅದೇ ರೀತಿಯಲ್ಲಿ, ನೀವು ಅದರ ಬಗ್ಗೆ ಯೋಚಿಸಿದರೆ, ನೀವು ದಿನ ಕಳೆದು ದಿನ, ದಿನ ಕಳೆದು ದಿನ ಹೀಗೆ ಇನ್ನೊಂದು ೫೦ ವರ್ಷಗಳು ಈ ಭೂಮಿಯ ಮೇಲೆ ಜೀವಿಸುವಿರಿ ಮತ್ತು ನಂತರ ಎಚ್ಚೆತ್ತು ನೀವು ಹೇಳುವಿರಿ, "ಓ, ಅದೊಂದು ಕನಸಿನಂತೆ, ಅದೆಲ್ಲವೂ ಹೋಯಿತು." ಸರಿಯಾ!
ಪ್ರತಿಯೊಂದು ದುಃಸ್ವಪ್ನವನ್ನು ಒಂದು ಸಿಹಿ ಸ್ವಪ್ನವಾಗಿ ಬದಲಾಯಿಸುವುದು ಜ್ಞಾನವಾಗಿದೆ.

ಪ್ರಶ್ನೆ: ಆತ್ಮವು ಅದೇ ಕುಟುಂಬದಲ್ಲಿ ಮತ್ತೆ ಜನ್ಮತಾಳಲು ಸಾಧ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ವ್ಯಕ್ತಿಗೆ ತನ್ನ ಮೊಮ್ಮಕ್ಕಳ ಮೇಲೆ ಅಷ್ಟೊಂದು ಮೋಹವಿದ್ದರೆ, ಅದು ಸಾಧ್ಯವಿದೆ. ಮನಸ್ಸಿನಲ್ಲಿರುವ ಒಂದೇ ಯೋಚನೆಯು "ನನ್ನ ಮೊಮ್ಮಕ್ಕಳು, ನನ್ನ ಮೊಮ್ಮಕ್ಕಳು" ಎಂದಾಗಿದ್ದರೆ, ಆಗ ಅವರು ಅಲ್ಲಿ ಹುಟ್ಟುತ್ತಾರೆ. ನಮ್ಮ ಮನಸ್ಸಿನಲ್ಲಾಗುವ ಆಳವಾದ ಅಚ್ಚುಗಳು ಮುಂದಿನ ಜನ್ಮಕ್ಕೆ ಕಾರಣವಾಗುತ್ತವೆ.

ಪ್ರಶ್ನೆ: ಕೇವಲ ವೈಯಕ್ತಿಕ ಕರ್ಮ ಮಾತ್ರವಿರುವುದೇ ಅಥವಾ ಒಂದು ದೇಶದ ಕರ್ಮ ಎಂದಿದೆಯೇ?
ಶ್ರೀ ಶ್ರೀ ರವಿಶಂಕರ್:
ಕರ್ಮದ ಹಲವಾರು ಪದರಗಳಿವೆ. ವೈಯಕ್ತಿಕ ಕರ್ಮವಿದೆ, ಕೌಟುಂಬಿಕ ಕರ್ಮವಿದೆ, ಸಮುದಾಯ ಕರ್ಮವಿದೆ, ದೇಶೀಯ ಕರ್ಮವಿದೆ ಮತ್ತು ಸಮಯದ ಕರ್ಮವೂ ಇದೆ. ಕರ್ಮದ ಹಲವಾರು ಪದರಗಳಿವೆ. ಆದರೆ ಅದೆಲ್ಲವನ್ನೂ ಬದಲಾಯಿಸಬಹುದು. ನೀವು ಕುಳಿತುಕೊಂಡು ಧ್ಯಾನ ಮಾಡುವಾಗ, ಹಲವಾರು ರೀತಿಗಳಲ್ಲಿ ಬದಲಾವಣೆಗಳಾಗುತ್ತವೆ. ನೀವು ಕೇವಲ ನಿಮಗಾಗಿ ಮಾತ್ರ ಧ್ಯಾನ ಮಾಡುವುದು ಎಂದು ಯೋಚಿಸಬೇಡಿ. ನೀವು ಕ್ರಿಯೆ ಅಥವಾ ಧ್ಯಾನ ಮಾಡುವಾಗ, ನೀವು ನಿಮ್ಮ ಕರ್ಮವನ್ನು ಸಕಾರಾತ್ಮಕ ಮಾಡಿಕೊಳ್ಳುವುದು ಮಾತ್ರವಲ್ಲ, ನೀವು ಭೂಮಿಯ ಮೇಲೆ ಕೂಡಾ ಪ್ರಭಾವ ಬೀರುತ್ತೀರಿ ಮತ್ತು ಇತರ ಸೂಕ್ಷ್ಮ ಸ್ತರಗಳ ಮೇಲೂ ನೀವು ಪ್ರಭಾವ ಬೀರುತ್ತೀರಿ. ನೀವು ಧ್ಯಾನ ಮಾಡುವಾಗ, ಸತ್ತುಹೋದ ಜನರ ಮೇಲೂ ಅದೊಂದು ಬಹಳ ಹಿತ ನೀಡುವ ಮತ್ತು ಶಾಂತಗೊಳಿಸುವ  ಪ್ರಭಾವವನ್ನು ಬೀರುತ್ತದೆ.

ಪ್ರಶ್ನೆ: ನಾವು ನಮ್ಮ ಜೀವನದ ಧ್ಯೇಯವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ನಿಮ್ಮ ಧ್ಯೇಯವನ್ನು ಕಂಡುಕೊಳ್ಳಲು, ನಿಮ್ಮ ಮನಸ್ಸು ಸ್ಪಷ್ಟವಾಗಬೇಕು ಮತ್ತು ಟೊಳ್ಳು ಹಾಗೂ ಖಾಲಿ ಧ್ಯಾನವು ಮನಸ್ಸನ್ನು ಬಹಳ ಸ್ಪಷ್ಟವಾಗಿಸುತ್ತದೆ. ಮನಸ್ಸು ಸ್ಪಷ್ಟವಾದಾಗ ಅಂತಃಸ್ಫುರಣೆಯು ಬರುತ್ತದೆ.
ನಾನು ಜನರಿಗೆ ಯಾವ ರೀತಿಯಲ್ಲಿ ಅತ್ಯುತ್ತಮವಾಗಿ ಪ್ರಯೋಜನಕಾರಿಯಾಗಬಹುದು ಎಂಬುದನ್ನು ಯೋಚಿಸಿ ಮತ್ತು ನೀವು ನಿಮ್ಮ ಸುತ್ತಲಿರುವ ಜನರಿಗೆ ಪ್ರಯೋಜನಕಾರಿಯಾದಾಗ, ನಿಮ್ಮ ಜೀವನವು ಸೇವೆಗಾಗಿರುವಾಗ, ಜೀವನವು ಬಹಳ ಅರ್ಥಪೂರ್ಣವಾದುದು ಮತ್ತು ಬಹಳ ಸಾಫಲ್ಯವಾದುದು ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.
ನಿಮ್ಮ ಜೀವನವು ಕೇವಲ ನಿಮ್ಮ ಮೇಲೆ ಮಾತ್ರ ಕೇಂದ್ರಿತವಾಗಿದ್ದರೆ, "ನನಗೆ? ನನಗೇನು ಸಿಗುವುದು? ನಾನು ಇನ್ನೂ ಎಷ್ಟು ಹೆಚ್ಚು ಆನಂದವಾಗಿರಬಹುದು?" - ನೀವು ಅದರ ಮೇಲೆ ಮಾತ್ರ ಗಮನವಿರಿಸಿದರೆ, ಆಗ ನೀವು ಖಿನ್ನತೆಗೊಳಗಾಗುವಿರಿ.
ನೋಡಿ, ನಿಮ್ಮ ಶಕ್ತಿ ಮತ್ತು ಪ್ರತಿಭೆಗಳು ಇತರರಿಗೆ ಒಳ್ಳೆಯ ಉಪಯೋಗವಾಗಲು ಇರುವುದು. ಪ್ರಕೃತಿಯು ನಿಮಗೆ ಒಂದು ಒಳ್ಳೆಯ ಸ್ವರವನ್ನು ಕೊಟ್ಟಿದ್ದರೆ, ಅದು ನಿಮಗಾಗಿ ಇರುವುದೇ ಅಥವಾ ಇತರರಿಗಾಗಿಯೇ? ನೀವು ಹಾಡಿಕೊಂಡು, ನಿಮ್ಮದೇ ಹಾಡನ್ನು ಕೇಳುವಿರೇ? ಪ್ರಕೃತಿಯು ನಿಮಗೆ ಒಂದು ಒಳ್ಳೆಯ ಸ್ವರವನ್ನು ಕೊಟ್ಟಿದ್ದರೆ, ಅದು ಇತರರಿಗೆ ಆನಂದಿಸಲು ಇರುವುದು.
ಪ್ರಕೃತಿಯು ನಿಮಗೆ ಒಂದು ಒಳ್ಳೆಯ ರೂಪವನ್ನು ಕೊಟ್ಟಿದ್ದರೆ, ಅದು ನಿಮಗಾಗಿ ಇರುವುದೇ ಅಥವಾ ಇತರರಿಗಾಗಿಯೇ? ಅದು ಇರುವುದು ಇತರರು ನಿಮ್ಮನ್ನು ನೋಡಿ ಆನಂದಿಸಲು.
ಆದುದರಿಂದ, ನಿಮ್ಮಲ್ಲಿರುವ ಯಾವುದೇ ಶಕ್ತಿಯು ನಿಮಗಾಗಿಯಲ್ಲ; ಅದು ಇತರರಿಗಾಗಿ. ನಿಮ್ಮಲ್ಲಿರುವ ಯಾವುದೇ ಬಲ ಅಥವಾ ಶಕ್ತಿಯನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು. ಒಂದೋ ನೀವು ಶಕ್ತಿಯನ್ನು, ಇತರರೊಂದಿಗೆ ಜಗಳವಾಡಲು ಉಪಯೋಗಿಸಬಹುದು, ಅಥವಾ ಶಕ್ತಿಯನ್ನು ಇತರರ ಸೇವೆ ಮಾಡಲು ಉಪಯೋಗಿಸಬಹುದು. ಶತಮಾನಗಳ ಕಾಲ, ಪ್ರಪಂಚದಲ್ಲಿನ ಜನರು, ಕೇವಲ ಇತರರೊಂದಿಗೆ ಯುದ್ಧ ಮಾಡುವುದಕ್ಕಾಗಿ ಶಕ್ತಿಯನ್ನು ಗಳಿಸುತ್ತಿದ್ದಾರೆ, ಅಲ್ಲವೇ? ಇನ್ನೊಬ್ಬರೊಂದಿಗೆ ಯುದ್ಧ ಮಾಡಲು ಸಾಧ್ಯವಾಗುವುದಕ್ಕಾಗಿ ಒಬ್ಬರು ಶಕ್ತಿಯನ್ನು ಗಳಿಸಿದರು ಮತ್ತು ನೀವು ಯುದ್ಧ ಮಾಡುವುದು ಯಾರೊಂದಿಗೆ - ಯಾರು ನಿಮಗೆ ಸರಿಸಮಾನರೋ ಅವರೊಂದಿಗೆ. ಖಂಡಿತವಾಗಿಯೂ ಒಬ್ಬನು ತನಗಿಂತ ಕಡಿಮೆ ಶಕ್ತಿ ಹೊಂದಿದವನೊಬ್ಬನೊಡನೆ ಯುದ್ಧ ಮಾಡುವುದಿಲ್ಲ. ಒಬ್ಬನು ತನಗೆ ಸರಿಸಮಾನವಾದ ಒಬ್ಬನೊಂದಿಗೆ ಯುದ್ಧ ಮಾಡುತ್ತಾನೆ. ಶಕ್ತಿಯೊಂದಿಗೆ ಯುದ್ಧ ಮಾಡುವುದರಿಂದ ಯಾರಿಗೂ ಸಂತೋಷ ಸಿಗಲಿಲ್ಲ. ನಿಮಗೆ ನೀಡಲಾದ ಶಕ್ತಿಯನ್ನು ಒಳ್ಳೆಯ ಉಪಯೋಗಕ್ಕಾಗಿ ಹಾಕಿದರೆ, ಸೇವೆ ಮಾಡಲು, ಅದು ನಿಮಗೆ ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ. ಆದುದರಿಂದ, ನಿಮ್ಮಲ್ಲಿರುವ ಎಲ್ಲವೂ - ಶಕ್ತಿ, ಸೌಂದರ್ಯ, ಹಣ, ಸ್ವರೂಪ, ಸ್ವರ, ಅವುಗಳೆಲ್ಲವೂ ಒಳ್ಳೆಯ ಉಪಯೋಗಕ್ಕೆ ಹಾಕಲು ಇರುವುದು, ಇತರರ ಸೇವೆಗಾಗಿ. ಆಗ, ಜೀವನವು ಬಹಳ ತೃಪ್ತಿಕರವಾದುದೆಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರಶ್ನೆ: (ಮಾನಸಿಕವಾಗಿ ಕುಂಠಿತವಾದ ಮಕ್ಕಳಿಗೆ ಸಹಾಯ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಶ್ನೆ)
ಶ್ರೀ ಶ್ರೀ ರವಿಶಂಕರ್:
ಕೇವಲ ಅವರಲ್ಲಿಗೆ ಹೋಗಿ, ಅವರೊಂದಿಗೆ ಸ್ವಲ್ಪ ಹೊತ್ತು ಆಟವಾಡಿ. ಅಷ್ಟು ಸಾಕು. ಅವರು ದುಃಖಿತರು ಅಥವಾ ಸಂತೋಷವಾಗಿಲ್ಲವೆಂದು ಯೋಚಿಸಬೇಡಿ. ಅವರು ಇನ್ನೊಂದು ಆಯಾಮದಲ್ಲಿ ಜೀವಿಸುತ್ತಾರೆ. ಅವರು ಇಲ್ಲಿರುವುದು ನಿಮ್ಮಿಂದ ಸೇವೆಯನ್ನು ಪಡೆಯಲು, ಅಷ್ಟೆ.

ಪ್ರಶ್ನೆ: ಸಹಾಯವನ್ನು ನಿರಾಕರಿಸಿದ ಒಬ್ಬರಿಗೆ ಸಹಾಯ ಮಾಡಲು ನಮಗೆ ಅಧಿಕಾರವಿದೆಯೇ? ಅವರ ಸ್ವತಂತ್ರ ಇಚ್ಛೆಯು ಪವಿತ್ರವಾದುದು ಎಂಬುದನ್ನು ಗಮನದಲ್ಲಿರಿಸಿಕೊಂಡು, ನಾವು ಅವರಿಗೆ ಸಹಾಯ ಮಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನಾನು ನಿನಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಂದು ಮಗುವು ಒಂದು ಎತ್ತರದ ಗೋಡೆಯ ಮೇಲೆ ಓಡುತ್ತಿರುವುದಾಗಿ ಹಾಗೂ ಅಲ್ಲಿ ಬೀಳುವ ಅಪಾಯವಿದೆ ಎಂಬುದಾಗಿ ಊಹಿಸು. ನೀನೇನು ಮಾಡುವೆ? ಮಗುವು ಸ್ವತಂತ್ರವಾಗಿರಲು ಬಿಡುವೆಯಾ? ಇಲ್ಲ, ನೀನು ಮಗುವಿಗೆ ಮಾರ್ಗದರ್ಶನ ಮಾಡಿ ಹಿಂದೆ ಕರೆದುತರುವೆ, ಸರಿಯಾ?
ಅದೇ ರೀತಿಯಲ್ಲಿ, ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ ಮತ್ತು ಅದು ಅವರಿಗೆ ಅಪಾಯಕಾರಿ ಎಂಬುದು ನಿನಗೆ ತಿಳಿದಿದ್ದರೆ, ನೀನು ಹೋಗಿ ಅವರಿಗೆ ಸಹಾಯ ಮಾಡುವುದಿಲ್ಲವೇ? ಅದೇ ರೀತಿಯಲ್ಲಿ ನಾವು ಸಾಧ್ಯವಾದಷ್ಟೂ ನಮ್ಮ ಕುಶಲತೆಯಿಂದ, ಜನರನ್ನು ತೊಂದರೆಯಿಂದ ಹೊರತರಲು ಸಹಾಯ ಮಾಡುವುದಕ್ಕಾಗಿ  ಪ್ರಯತ್ನಿಸಬೇಕು.
ಒಬ್ಬನು ಮಾನಸಿಕವಾಗಿ ರೋಗಿಯಾಗಿದ್ದಾನೆ ಹಾಗೂ ಔಷಧಿಯನ್ನು ತೆಗೆದುಕೊಳ್ಳುವುದಿಲ್ಲವೆಂದಿಟ್ಟುಕೊಳ್ಳೋಣ. ಕುಟುಂಬದವರು ಏನು ಮಾಡುತ್ತಾರೆ? ಅವನನ್ನು ಹಾಗೆಯೇ ಇರಲು ಬಿಡುತ್ತಾರೆಯೇ? ಅವನು ಹಿಂಸಾತ್ಮಕವಾಗಿ ಎಲ್ಲರನ್ನೂ ಹೊಡೆಯಲೂಬಹುದು. ಬುದ್ಧಿವಂತರಾದ ಕುಟುಂಬದ ಸದಸ್ಯರು ಅವನಿಗೆ ವೈದ್ಯರು ಹೇಳಿದ ಔಷಧಿಯನ್ನು ಜ್ಯೂಸಿನಲ್ಲೋ ಅಥವಾ ಹಾಲಿನಲ್ಲೋ ಹಾಕಿ ಕೊಡುತ್ತಾರೆ ಮತ್ತು ಅದನ್ನು ಕುಡಿದ ಬಳಿಕ ಅವನು ಉತ್ತಮವಾಗುತ್ತಾನೆ.
ಆದುದರಿಂದ, ’ಪರಿಪೂರ್ಣ’ ಎಂದು ಕರೆಯಲ್ಪಡುವುದು ಯಾವುದೂ ಇಲ್ಲ. ನೀವು ಯಾವತ್ತೂ ಪರಿಸ್ಥಿತಿಗೆ ತಕ್ಕಂತೆ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಒಬ್ಬರಿಗೆ ಸಹಾಯ ಮಾಡುವುದಕ್ಕಾಗಿ ನೀವು ಅವರ ಮೇಲೆ ಬಲ ಪ್ರಯೋಗಿಸುವಂತಿಲ್ಲ. ಒಬ್ಬರು ರಸ್ತೆಯ ಮೇಲೆ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸಲು ಬಯಸುತ್ತಾರೆಂದಿಟ್ಟುಕೊಳ್ಳೋಣ. ರಸ್ತೆಯ ತಪ್ಪಾದ ಬದಿಯಲ್ಲಿ ವಾಹನ ಚಲಾಯಿಸುವುದು ನನ್ನ ಸ್ವತಂತ್ರ ಇಚ್ಛೆ ಎಂದು ಅವರು ಹೇಳಲು ಸಾಧ್ಯವಿಲ್ಲ. ನೀವು ಸಮಾಜದಲ್ಲಿ ಜೀವಿಸುತ್ತಿರುವಾಗ, ನೀವು ನಿರ್ದಿಷ್ಟ ಆದರ್ಶಗಳನ್ನು ಅನುಸರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ, ನೀವು ಒಬ್ಬರಿಗೆ ಸಹಾಯ ಮಾಡಲು ಬಯಸುವಾಗ ಕೂಡಾ, ನೀವು ನಿರ್ದಿಷ್ಟ ಆದರ್ಶಗಳನ್ನು ಅನುಸರಿಸಬೇಕಾಗುತ್ತದೆ. ಬಲವಂತ ಮಾಡಬೇಡಿ, ಅದೇ ಸಮಯದಲ್ಲಿ, ತಮ್ಮ ಮನೆಯಲ್ಲಾದ ಬೆಂಕಿಯನ್ನು ಆರಿಸಲು ಯಾರಾದರೂ ನಿಮ್ಮನ್ನು ಆಮಂತ್ರಿಸಬಹುದು ಎಂದು ಕಾಯಬೇಡಿ. ನಿಮ್ಮ ಪಕ್ಕದ ಮನೆಗೆ ಬೆಂಕಿ ಬಿದ್ದಿದ್ದರೆ, ಹೋಗಿ ಅದನ್ನು ಆರಿಸಲು ಒಂದು ದೂರವಾಣಿ ಕರೆಯನ್ನು ಅಥವಾ ಒಂದು ಆಮಂತ್ರಣವನ್ನು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಬೆಂಕಿಯನ್ನು ಆರಿಸಲು ನೀವು ನುಗ್ಗುತ್ತೀರಿ. ನೀವು ನೀವಾಗಿಯೇ ಸಹಾಯ ಮಾಡಲು ಸಿದ್ಧರಾಗುತ್ತೀರಿ, ಸರಿಯಾ? ಅರ್ಥವಾಯಿತಾ! ಆದುದರಿಂದ ನಡುಮಾರ್ಗವನ್ನು ಹಿಡಿಯಿರಿ.

ಪ್ರಶ್ನೆ: (ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಅವರಿಗೆ ಸಹಾಯ ಮಾಡಲು ನಾವು ನಮ್ಮಿಂದ ಸಾಧ್ಯವಾದುದನ್ನೆಲ್ಲಾ ಮಾಡಬೇಕು. ನಾನು ನಿಮ್ಮೊಂದಿಗಿದ್ದೇನೆ. ನಾವೆಲ್ಲರೂ ಸೇರಿ ಒಂದು ತಂಡವನ್ನು ರಚಿಸಬೇಕು. ಅವರನ್ನು ಸಂಪರ್ಕಿಸಿ ಅವರಿಗೆ ಉಸಿರಾಟ-ನೀರು-ಶಬ್ದ (ಉಸಿರಾಟ-ನೀರು-ಶಬ್ದ ಶಿಬಿರದ ಬಗ್ಗೆ ಉಲ್ಲೇಖಿಸುತ್ತಾ) ಮಾಡಿಸಬೇಕು ಮತ್ತು ಮದ್ಯಪಾನ ವ್ಯಸನದಿಂದ ಹೊರಬರಲು ಅವರಿಗೆ ಸಹಾಯ ಮಾಡಬೇಕು. ಜಿಪ್ಸಿ ಅಲ್ಪಸಂಖ್ಯಾತರಲ್ಲಿರುವ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಅವರು ಕುಡಿಯುತ್ತಾರೆ, ಕುಡಿಯುತ್ತಾರೆ ಮತ್ತು ಕುಡಿಯುತ್ತಾರೆ. ಅವರು ತಮ್ಮ ಆದಾಯದ ಐವತ್ತರಿಂದ ಅರುವತ್ತು ಶೇಕಡಾವನ್ನು ಮದ್ಯಕ್ಕಾಗಿ ವೆಚ್ಚ ಮಾಡುತ್ತಾರೆ ಮತ್ತು ತಮ್ಮ ಹೆಂಗಸರಿಗೆ ಹೊಡೆಯುತ್ತಾರೆ ಕೂಡಾ. ಮಹಿಳೆಯರು ಬಹಳಷ್ಟು ದೊಡ್ಡ ನೋವಲ್ಲಿದ್ದಾರೆ. ನಾವಿದನ್ನು ಬದಲಾಯಿಸಬೇಕು. ನಾವು ಅವರಿಗಾಗಿ ಉಚಿತ ಕೋರ್ಸುಗಳನ್ನು ಆಯೋಜಿಸಬಹುದು.

ಪ್ರಶ್ನೆ: ನಾನು ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತೇನೆ. ಅವರು ಯಾಕೆ ಕುಟುಂಬಗಳನ್ನು ಸೃಷ್ಟಿಸಬಾರದು? ಅವರು ಪರಸ್ಪರ ಕಂಡುಕೊಂಡು ಒಂದು ಸಂಬಂಧವನ್ನು ಮಾಡಬಾರದು?
ಶ್ರೀ ಶ್ರೀ ರವಿಶಂಕರ್:
ನೀನು ಒಂದು ಸಂಬಂಧಕ್ಕಾಗಿ ಹುಡುಕುತ್ತಿರುವೆಯಾ? ಹೌದಾ? ಸರಿ, ನಾವು ಇಲ್ಲಿ ಒಂದು ವೈವಾಹಿಕ ಸೇವೆಯನ್ನು ಪ್ರಾರಂಭಿಸೋಣ. ಎಲ್ಲಾ ಅವಿವಾಹಿತರು ನೋಂದಾಯಿಸಬಹುದು.

ಪ್ರಶ್ನೆ: ನಾನು ಪ್ರಾಮಾಣಿಕವಾಗಿ ಈ ಎಲ್ಲಾ ಅಭ್ಯಾಸಗಳನ್ನು ಮಾಡುತ್ತಿದ್ದೇನೆ, ಆದರೆ ನಾನು ಬದಲಾಗಿರುವೆನೆಂಬ ಬಗ್ಗೆ ನನಗೆ ಖಚಿತವಿಲ್ಲ. ನಾನು ಈಗಲೂ ಅಸಮಾಧಾನಗೊಳ್ಳುತ್ತಿರುತ್ತೇನೆ ಮತ್ತು ಅದರಿಂದ ನನಗೆ ದುಃಖವಾಗುತ್ತದೆ.
ಶ್ರೀ ಶ್ರೀ ರವಿಶಂಕರ್:
ಕೇಳು, ನೀನು ಈಗ ಹೇಗಿದ್ದೀಯಾ? ಈಗ ನೀನು ಸಂತೋಷವಾಗಿದ್ದೀಯಾ? ಹಿಂದಿನ ಬಗ್ಗೆ ಮರೆತುಬಿಡು. ಇಲ್ಲಿರುವುದಕ್ಕೆ ನಿನಗೆ ಸಂತೋಷವಾಗುತ್ತಿದೆಯಾ? ನೀನು ಆನಂದಿಸುತ್ತಿರುವೆಯಾ? ಅಷ್ಟೆ. ನಮ್ಮಲ್ಲಿ ಪ್ರತಿಯೊಬ್ಬರ ಒಳಗೆ ಎರಡು ವಿಷಯಗಳಿವೆ. ಬದಲಾಗದೇ ಇರುವ ಒಂದು ವಿಷಯವಿದೆ. ಬದಲಾಗದೇ ಇರುವ ಪ್ರಜ್ಞೆಯ ಒಂದು ನಿರಂತರ ಹರಿವಿದೆ. ಸುತ್ತಲಿರುವ ಇತರ ಹಲವಾರು ಸಂಗತಿಗಳು ಬದಲಾಗುತ್ತಾ ಇರುತ್ತವೆ. ಆದುದರಿಂದ, ನೀನು ನಿನ್ನ ಜೀವನದಲ್ಲಿ ಹಿಂದಿನದನ್ನು ನೋಡುವಾಗ, ನೀನು ಯಾವ ವ್ಯಕ್ತಿಯಾಗಿದ್ದೆಯೋ ಅದೇ ವ್ಯಕ್ತಿಯಾಗಿ ಉಳಿದಿಲ್ಲ. ಆದರೆ ಅದೇ ಸಮಯದಲ್ಲಿ, ನೀನು ನೋಡುವಾಗ, ನೀನು ಅದೇ ವ್ಯಕ್ತಿಯಾಗಿರುವೆ. ಅವುಗಳೆರಡೂ ಒಂದೇ ಸಲಕ್ಕೆ ಅಲ್ಲಿವೆ.
ನೀನು ಬದಲಾಗಿಲ್ಲವೆಂದು ನಿನಗನಿಸುವುದು ಯಾವಾಗ? ನೀನು ಅಸಮಾಧಾನಗೊಂಡಾಗ. ಯಾರಾದರೂ ನಿನಗೆ ಕಿರಿಕಿರಿಯನ್ನುಂಟುಮಾಡಿದರು ಮತ್ತು ನೀನು ಕೋಪಗೊಳ್ಳುವೆ ಎಂದಿಟ್ಟುಕೊಳ್ಳೋಣ. ನೀನನ್ನುವೆ, "ಓ, ನಾನು ಬದಲಾಗಿಲ್ಲ, ಈಗಲೂ ನಾನು ಕೋಪಗೊಳ್ಳುತ್ತೇನೆ." ಅದು ಇರುವ ಸಮಸ್ಯೆ, ಸರಿಯಾ? ಅದು ನಿಜವಲ್ಲ. ಹಿಂದೆ ನೀನು ಕೋಪಗೊಳ್ಳುತ್ತಿದ್ದೆ. ಆದರೆ ಆ ಕೋಪವು ನಿನ್ನ ಮನಸ್ಸಿನಲ್ಲಿ ತಿಂಗಳುಗಟ್ಟಲೆ ಉಳಿಯುತ್ತಿತ್ತು. ನೀನು ಈಗಲೂ ಕೂಡಾ ಕೋಪಗೊಳ್ಳುವೆ, ಆದರೆ ಅದು ಕೇವಲ ಕೆಲವು ನಿಮಿಷಗಳ ವರೆಗೆ ಅಥವಾ ನೀನು ಒಂದು ಚಿಕ್ಕ ಕ್ರಿಯೆ ಮಾಡುವ ವರೆಗೆ ಮಾತ್ರ ಉಳಿಯುತ್ತದೆ ಮತ್ತು ನಂತರ ನೀನು ಪುನಃ ತಾಜಾವಾಗುವೆ.

ಬುಧವಾರ, ಮೇ 16, 2012

ಕೆಟ್ಟವನ ಆ೦ತರ್ಯದಲ್ಲಿ ಹುದುಗಿ ಕುಳಿತ ಒಳ್ಳೆಯವನನ್ನು ಗುರ್ತಿಸಿ

16
2012
May
ಬಲ್ಗೇರಿಯಾ

ನಾವು ತಂತ್ರಜ್ಞಾನದ ಯುಗದಲ್ಲಿದ್ದೇವೆ. ತಂತ್ರಜ್ಞಾನವು ಪ್ರಪಂಚವನ್ನು ಒಂದು ಗ್ರಾಮವನ್ನಾಗಿ ಕುಗ್ಗಿಸಿದೆ. ಅದನ್ನು ಒಂದು ಪ್ರಪಂಚ ಕುಟುಂಬವಾಗಿ ನೋಡಲು ನಾನು ಬಯಸುತ್ತೇನೆ. ಇದು ನನ್ನ ಕನಸು, ಪ್ರಪಂಚವನ್ನು ಒಂದು ಪ್ರಪಂಚ ಕುಟುಂಬವನ್ನಾಗಿ ನೋಡುವುದು. ಈ ಪ್ರಪಂಚದಲ್ಲಿ ಹಲವಾರು ವಿವಿಧ ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು ಮತ್ತು ಧರ್ಮಗಳಿರುವುದು ನಮ್ಮ ಅದೃಷ್ಟ. ಬುದ್ಧಿವಂತ ಜನರು ಏನು ಮಾಡುವರೆಂದು ನಿಮಗೆ ತಿಳಿದಿದೆಯೇ? ಅವರು ಯಾವತ್ತೂ ಭಿನ್ನತೆಯನ್ನು ಮತ್ತು ವಿವಿಧತೆಯನ್ನು ಆಚರಿಸುತ್ತಾರೆ. ಮೂರ್ಖರು ಜಗಳವಾಡುತ್ತಾರೆ ಮತ್ತು ಯುದ್ಧಗಳನ್ನು ಸೃಷ್ಟಿಸುತ್ತಾರೆ. ಅಲ್ಲವೇ?
ನಾವು ಈ ಪ್ರಪಂಚದಲ್ಲಿ ಮಾಡಲು ಬಯಸುವುದೇನೆಂದರೆ ಜನರಿಗೆ ಶಿಕ್ಷಣ ನೀಡುವುದು. ಜನರು ಅಷ್ಟೊಂದು ಅಜ್ಞಾನಿಗಳಾಗಿರಲು ಹಾಗೂ ಮೂರ್ಖರಾಗಿರಲು ಕಾರಣವೇನೆಂದರೆ, ಅವರಿಗೆ ತಮ್ಮ ದೃಷ್ಟಿಯನ್ನು ವಿಶಾಲವಾಗಿಸಲು ಅವಕಾಶ ಸಿಗಲಿಲ್ಲ. ಆರ್ಟ್ ಆಫ್ ಲಿವಿಂಗಿನ ಗುರಿಯೆಂದರೆ, ಜೀವನಕ್ಕೆ ಅಂತಹ ಒಂದು ವಿಶಾಲ ದೃಷ್ಟಿಕೋನವನ್ನು ನೀಡುವುದು; ಪ್ರತಿಯೊಂದು ಕಣ್ಣೀರನ್ನು ಒಂದು ನಗೆಯಾಗಿ ಪರಿವರ್ತಿಸುವುದು, ಕ್ರೋಧವನ್ನು ಸಹಾನುಭೂತಿಯಾಗಿ ಪರಿವರ್ತಿಸುವುದು ಮತ್ತು ದ್ವೇಷವನ್ನು ಅಪೇಕ್ಷಾ-ರಹಿತ ಪ್ರೀತಿಯನ್ನಾಗಿ ಪರಿವರ್ತಿಸುವುದು. ಅಂತಹ ಒಂದು ಪ್ರಪಂಚವನ್ನು ನೋಡಲು ನಾವೆಲ್ಲರೂ ಕೈಗಳನ್ನು ಜೋಡಿಸೋಣ - ಹಿಂಸೆಯಿಂದ, ರೋಗದಿಂದ, ದುಃಖದಿಂದ ಮತ್ತು ಬಡತನದಿಂದ ಮುಕ್ತವಾದ ಒಂದು ಪ್ರಪಂಚ!
ಮೊದಲನೆಯದಾಗಿ, ನಾವು ದೊಡ್ಡ ಕನಸನ್ನು ಕಾಣಬೇಕು. ನಾನು ಶಾಲೆಯಲ್ಲಿದ್ದಾಗ, ನಾನೊಬ್ಬ ಹುಡುಗನಾಗಿದ್ದಾಗ - ಈಗಲೂ ನಾನೊಬ್ಬ ಬಾಲಕನೇ - ನಾನು ನನ್ನ ಸ್ನೇಹಿತರಲ್ಲಿ, ನನ್ನ ಕುಟುಂಬವು ಪ್ರಪಂಚದಾದ್ಯಂತವಿದೆ ಎಂದು ಹೇಳುತ್ತಿದ್ದೆ. ಅವರು ನನ್ನ ತಾಯಿಯ ಬಳಿಗೆ ಬಂದು, ನಮಗೆ ಲಂಡನ್ನಿನಲ್ಲಿ, ಜರ್ಮನಿಯಲ್ಲಿ, ಫ್ರಾನ್ಸಿನಲ್ಲಿ, ಅಮೇರಿಕಾದಲ್ಲಿ ಕುಟುಂಬದವರು ಇರುವರೇ ಎಂದು ಕೇಳುತ್ತಿದ್ದರು, ಮತ್ತು ನನ್ನ ತಾಯಿಯು "ಇಲ್ಲ" ಎಂದು ಉತ್ತರಿಸುತ್ತಿದ್ದರು. ನನ್ನ ತಾಯಿಯು ನನ್ನ ಕಿವಿಹಿಡಿದು ಕೇಳುತ್ತಿದ್ದರು, "ನೀನು ಯಾಕೆ ಸುಳ್ಳು ಹೇಳುವೆ?" ನನ್ನ ತಾಯಿ ಹೇಳುತ್ತಿದ್ದರು, "ಅವನು ಯಾವತ್ತೂ ಸುಳ್ಳು ಹೇಳುವುದಿಲ್ಲ, ಆದರೆ ಇದೊಂದು ವಿಷಯ, ಅವನಿಗೆ ಸಂಬಂಧಿಕರು ಮತ್ತು ಕುಟುಂಬದವರು ಪ್ರಪಂಚದಾದ್ಯಂತ ಇರುವುದಾಗಿಯೂ ಮತ್ತು ಅವನಿಗೆ ಪ್ರಪಂಚದಾದ್ಯಂತದ ಜನರು ತಿಳಿದಿರುವರೆಂದೂ ಅವನು ಹೇಳುತ್ತಾ ಇರುತ್ತಾನೆ."
ನಾನು ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ, "ನಿಮಗೇನು ಬೇಕು? ಸ್ಟ್ಯಾಂಪುಗಳಾ ಅಥವಾ ನಾಣ್ಯಗಳಾ ಅಥವಾ ನೋಟುಗಳಾ? ಅದನ್ನು ನಾನು ನಿಮಗೆ ಕಳುಹಿಸುತ್ತೇನೆ, ಚಿಂತಿಸಬೇಡಿ. ಪ್ರಪಂಚದಾದ್ಯಂತ ನನಗೆ ಎಲ್ಲರೂ ಇದ್ದಾರೆ." ನಾನು ಇದನ್ನು ಯಾಕೆ ಹೇಳಿದೆನೆಂದರೆ, ನಮ್ಮೆಲ್ಲರ ಒಳಗೆ ಆಳದಲ್ಲಿ, ಎಲ್ಲರನ್ನೂ ಜೋಡಿಸುವಂತಹ ಒಂದು ಆತ್ಮವಿದೆ.
ಪ್ರತಿಯೊಬ್ಬ ಮನುಷ್ಯನೂ ಆನಂದ, ಉತ್ಸಾಹ, ಪ್ರೀತಿ ಮತ್ತು ಬುದ್ಧಿಯೊಂದಿಗೆ ಹುಟ್ಟುತ್ತಾನೆ. ಆದರೆ ನಾವು ಬೆಳೆದಂತೆಲ್ಲಾ, ಎಲ್ಲೋ ನಾವು ಅದನ್ನು ಕಳೆದುಕೊಳ್ಳುತ್ತೇವೆ. ನಾವದನ್ನು ಕಳೆದುಕೊಳ್ಳಬಾರದು. ನಮಗೆಲ್ಲರಿಗೂ ಲಭಿಸಿದ ಈ ಉಡುಗೊರೆಯನ್ನು ನಾವು ಉಳಿಸಿಕೊಳ್ಳಬೇಕು. ಸರಿ, ನಾವದನ್ನು ಕಳೆದುಕೊಂಡಿದ್ದರೆ, ನಾವದನ್ನು ಪುನಃ ಪಡೆದುಕೊಳ್ಳಬೇಕು. ನೀವದನ್ನು ಪುನಃ ಪಡೆದುಕೊಳ್ಳುವುದು ಹೇಗೆ? ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸುವುದರಿಂದ ಮತ್ತು ನಿಮ್ಮ ಸುತ್ತಲಿರುವ ಎಲ್ಲರೊಂದಿಗೂ ಒಂದು ಆತ್ಮೀಯತೆಯ ಭಾವವನ್ನು ಸೃಷ್ಟಿಸಿಕೊಳ್ಳುವುದರಿಂದ.
ಇದು ಬಲ್ಗೇರಿಯಾಕ್ಕೆ ನನ್ನ ಎರಡನೆಯ ಭೇಟಿ. ನಾನು ಈಗಾಗಲೇ ಇಲ್ಲಿ ಬಹಳಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇನೆ. ಮೂಲಭೂತ ಸೌಲಭ್ಯಗಳು ಬರುತ್ತಿವೆ, ಆರ್ಥಿಕತೆಯು ಮೊದಲಿಗಿಂತ ಉತ್ತಮವಾಗಿದೆ; ಅದು ಇನ್ನೂ ಉತ್ತಮವಾಗಲು ಸಾಧ್ಯವಿದೆ. ಅದೇ ಸಮಯದಲ್ಲಿ, ನಾನು ಹೇಳುವುದೇನೆಂದರೆ, ನಿಮಗೆ ನಿಮ್ಮ ಆಳವಾದ ಬೇರುಗಳಿವೆ - ಸಾವಿರಾರು ವರ್ಷಗಳ ಸಂಸ್ಕೃತಿ ಮತ್ತು ಸಂಪ್ರದಾಯ. ಅದನ್ನು ಕಳೆದುಕೊಳ್ಳಬೇಡಿ. ಯುವಜನತೆಯು ತಮ್ಮ ಬೇರುಗಳನ್ನು ಉಳಿಸಿಕೊಳ್ಳಬೇಕು ಮತ್ತು ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಳ್ಳಬೇಕು. ಇವತ್ತು ಬ್ಯಾಗ್-ಪೈಪರುಗಳ ದೊಡ್ಡದೊಂದು ಕಾರ್ಯಕ್ರಮವನ್ನು ನಾವು ಆಯೋಜಿಸುವೆವು ಎಂದು ನಾವು ಹೇಳಿದುದು ಇದೇ ಕಾರಣಕ್ಕಾಗಿ. ಹಳೆಯ ಸಂಪ್ರದಾಯಗಳನ್ನು ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ. ಬಲ್ಗೇರಿಯಾದ ಗಾಯಕರಲ್ಲಿ ಮತ್ತು ನೃತ್ಯಗಾರರಲ್ಲಿ ಕೆಲವರು ಭಾರತಕ್ಕೂ ಭೇಟಿ ನೀಡಿದರು ಮತ್ತು ಭಾರತದಲ್ಲೂ ಅವರ ಪ್ರದರ್ಶನಗಳು ನಡೆದವು ಎಂಬುದನ್ನು ಕೂಡಾ ನಾನು ಹೇಳಲು ಬಯಸುತ್ತೇನೆ.
ಅದುದರಿಂದ, ನಾವು ಜನರನ್ನು ಒಂದುಗೂಡಿಸುವುದರ ಅಗತ್ಯವಿದೆ. ಅದು ಬುದ್ಧಿವಂತಿಕೆ. ಒಂದು ಹಿಂಸಾ-ರಹಿತ ಸಮಾಜ, ರೋಗ-ರಹಿತ ಶರೀರ, ಗೊಂದಲ-ರಹಿತ ಮನಸ್ಸು, ತಡೆ-ರಹಿತ ಬುದ್ಧಿ, ದುಃಖ-ರಹಿತ ಆತ್ಮ, ಆಘಾತ-ರಹಿತ ನೆನಪು ಮತ್ತು ಒಂದು ಒತ್ತಡ-ರಹಿತ ಜೀವನವು ಪ್ರತಿಯೊಬ್ಬರ ಜನ್ಮಸಿದ್ಧ ಅಧಿಕಾರವಾಗಿದೆ. ಇದರ ಕಡೆಗೆಯೇ ಆರ್ಟ್ ಆಫ್ ಲಿವಿಂಗ್ ಹಾಗೂ ಅದರ ಎಲ್ಲಾ ಸ್ವಯಂ-ಸೇವಕರೂ ಕೆಲಸ ಮಾಡುತ್ತಿರುವುದು. ನಾನು ಬಹಳ ಸಂತೋಷಗೊಂಡಿದ್ದೇನೆ ಮತ್ತು ನಾನು ಅವರನ್ನು ಅಭಿನಂದಿಸುತ್ತೇನೆ. ಜನರ ಮುಖದ ಮೇಲೆ ನಗುವನ್ನು ತರಲು ಹಗಲಿರುಳು ಆಯಾಸಗೊಳ್ಳದೇ ಕೆಲಸ ಮಾಡುತ್ತಿರುವ ನೂರಾರು ಸ್ವಯಂಸೇವಕರು ಇಲ್ಲಿದ್ದಾರೆ.
ಸಂತೋಷವಾಗಿರುವುದು ಹೇಗೆಂಬುದರ ಬಗ್ಗೆ ನಾನು ನಿಮಗೆ ಕೇವಲ ೫ ಅಂಶಗಳನ್ನು ಅಥವಾ ೫ ರಹಸ್ಯಗಳನ್ನು ನೀಡುತ್ತೇನೆ.
ಒಮ್ಮೆ ಒಬ್ಬ ಜ್ಞಾನಿಯು ಒಂದು ರೇಖೆಯನ್ನು ಬರೆದು ತನ್ನ ವಿದ್ಯಾರ್ಥಿಯಲ್ಲಿ, ಆ ರೇಖೆಯನ್ನು ಮುಟ್ಟದೇ ಅಥವಾ ಒರಸದೇ ಅದನ್ನು ಚಿಕ್ಕದಾಗಿಸಲು ಹೇಳಿದರು. ನೀವದನ್ನು ಹೇಗೆ ಮಾಡುವಿರಿ? ಒಂದು ರೇಖೆಯನ್ನು ಮುಟ್ಟದೆಯೇ ಚಿಕ್ಕದಾಗಿಸಬೇಕು. ಒಬ್ಬ ಬುದ್ಧಿವಂತ ವಿದ್ಯಾರ್ಥಿಯು ಆ ರೇಖೆಯ ಕೆಳಗೆ ಸಾಕಷ್ಟು ಉದ್ದವಾದ ಒಂದು ರೇಖೆಯನ್ನು ಬರೆದನು. ಹೀಗೆ, ಆ ರೇಖೆಯು ತನ್ನಿಂತಾನೇ ಚಿಕ್ಕದಾಯಿತು. ಇಲ್ಲಿರುವ ಪಾಠವೇನೆಂದರೆ, ನಿಮ್ಮ ಕಷ್ಟಗಳು ಬಹಳ ದೊಡ್ಡದಾಗಿ ತೋರಿದರೆ, ನಿಮ್ಮ ಕಣ್ಣುಗಳನ್ನು ಮೇಲೆತ್ತಿ, ಯಾಕೆಂದರೆ ನೀವು ನಿಮ್ಮ ಮೇಲೆ ಮಾತ್ರ ಗಮನ ಹರಿಸುತ್ತಿರುವಿರಿ. ನೀವು ನಿಮ್ಮ ಕಣ್ಣುಗಳನ್ನು ಮೇಲೆತ್ತಿ, ನಿಮಗಿಂತ ಕೆಟ್ಟ ಪರಿಸ್ಥಿತಿಯಲ್ಲಿರುವವರ ಕಡೆಗೆ ನೋಡಿದರೆ, ನಿಮ್ಮ ಕಷ್ಟವು ನೀವು ಯೋಚಿಸಿದಷ್ಟು ಕೆಟ್ಟದಾಗಿಲ್ಲವೆಂದು ಹಠಾತ್ತನೇ ನಿಮಗೆ ಅನ್ನಿಸುತ್ತದೆ. ನಿಮಗೆ ಸ್ವಲ್ಪ ದೊಡ್ಡ ಸಮಸ್ಯೆಯಿದೆಯೆಂದು ನಿಮಗನ್ನಿಸಿದರೆ, ಹೆಚ್ಚಿನ ಸಮಸ್ಯೆಗಳಿರುವ ಜನರ ಕಡೆಗೆ ನೋಡಿ. ಕೂಡಲೇ, ನನ್ನ ಸಮಸ್ಯೆಯು ಬಹಳಷ್ಟು ಚಿಕ್ಕದು ಮತ್ತು ನಾನದನ್ನು ನಿಭಾಯಿಸಬಲ್ಲೆನು ಎಂಬ ವಿಶ್ವಾಸವು ನಿಮಗೆ ಬರುತ್ತದೆ.
ಆದುದರಿಂದ, ಸಂತೋಷವಾಗಿರುವುದು ಹೇಗೆಂಬುದರ ಬಗ್ಗೆಯಿರುವ ಮೊದಲನೆಯ ಅಂಶವೆಂದರೆ, ಹೆಚ್ಚಿನ ಮತ್ತು ದೊಡ್ಡ ಸಮಸ್ಯೆಗಳಿರುವ ಪ್ರಪಂಚದ ಕಡೆಗೆ ನೋಡುವುದು. ಆಗ, ನಿಮ್ಮ ಸಮಸ್ಯೆಗಳು ಚಿಕ್ಕದಾಗಿ ತೋರುತ್ತವೆ. ನಿಮ್ಮ ಸಮಸ್ಯೆಗಳು ಚಿಕ್ಕದಾಗಿ ತೋರಿದ ಕ್ಷಣದಲ್ಲಿ, ಅವುಗಳೊಂದಿಗೆ ವ್ಯವಹರಿಸಲಿರುವ ಅಥವಾ ಅವುಗಳನ್ನು ಬಗೆಹರಿಸಲಿರುವ ಚೈತನ್ಯ ಮತ್ತು ವಿಶ್ವಾಸವು ನಿಮಗೆ ಲಭಿಸುತ್ತದೆ. ಸರಳವಾದ ಮಾತಿನಲ್ಲಿ ಹೇಳುವುದಾದರೆ, ಹೆಚ್ಚಿನ ಅವಶ್ಯಕತೆಯಿರುವವರ ಸೇವೆ ಮಾಡಿ.
ಎರಡನೆಯದು, ನಿಮ್ಮ ಸ್ವಂತ ಜೀವನದ ಕಡೆಗೆ ನೋಡಿ. ಹಿಂದೆ ನಿಮಗೆ ಹಲವಾರು ಸಮಸ್ಯೆಗಳಿದ್ದವು. ಅವುಗಳೆಲ್ಲಾ ಬಂದವು ಮತ್ತು ಹೋದವು. ಇದು ಕೂಡಾ ಹೋಗುವುದು ಮತ್ತು ಅದನ್ನು ನಿವಾರಿಸಲಿರುವ ಚೈತನ್ಯ ಹಾಗೂ ಶಕ್ತಿಯು ನಿಮ್ಮಲ್ಲಿದೆ ಎಂಬುದನ್ನು ತಿಳಿಯಿರಿ. ನಿಮ್ಮದೇ ಸ್ವಂತ ಭೂತಕಾಲವನ್ನು ಅರ್ಥೈಸುವುದರ ಮೂಲಕ ಹಾಗೂ ಅದರ ಕಡೆಗೆ ನೋಡುವುದರ ಮೂಲಕ ನಿಮಗೆ ಆತ್ಮ-ವಿಶ್ವಾಸವು ಸಿಗುತ್ತದೆ.

ಮೂರನೆಯದು ಮತ್ತು ಅತ್ಯಂತ ಪ್ರಧಾನವಾದುದು, ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು ವಿಶ್ರಾಮ ಮಾಡಿ.
ನಾಲ್ಕನೆಯದು, ನಿಮಗೆ ಗೊತ್ತಾ, ಕೋಪದಲ್ಲಿ ನಾವು, "ನಾನು ಬಿಟ್ಟು ಬಿಡುತ್ತೇನೆ" ಎಂದು ಹೇಳುತ್ತೇವೆ. ಹತಾಶರಾಗದೇ ಅಥವಾ ಕೋಪಗೊಳ್ಳದೇ, "ನಾನು ಈ ಸಮಸ್ಯೆಯನ್ನು ಬಿಟ್ಟುಬಿಡುತ್ತೇನೆ, ನನಗೆ ಇದನ್ನು ಪರಿಹರಿಸಲು ಸಾಧ್ಯವಿಲ್ಲ, ದೇವರು ನನಗೆ ಸಹಾಯ ಮಾಡಲಿ" ಎಂದು ಹೇಳಿ ಮತ್ತು ನಿಮಗೆ ಯಾವತ್ತೂ ಸಹಾಯ ಲಭಿಸುತ್ತದೆ ಎಂಬುದನ್ನು ತಿಳಿಯಿರಿ. ನಿಮಗೆ ಸಹಾಯ ಮಾಡಲಾಗುತ್ತದೆ ಎಂಬ ವಿಶ್ವಾಸವನ್ನಿರಿಸಿ. ವಿಶ್ವದಲ್ಲಿರುವ ಒಂದು ಶಕ್ತಿಯು ನಿಮಗೆ ಸಹಾಯ ಮಾಡುತ್ತದೆ.
ಐದನೆಯದು - ಐದನೆಯದು ಯಾವುದೆಂದು ನಿಮಗನಿಸುತ್ತದೆ? ಅದನ್ನು ನಾನು ನಿಮಗೆ ಬಿಡುತ್ತೇನೆ. ಐದನೆಯದರ ಬಗ್ಗೆ ನೀವು ಯೋಚಿಸಿ. ನಾನು ೨೫ ಅಥವಾ ೩೦ ಅಂಶಗಳ ವರೆಗೆ ಹೋಗಬಲ್ಲೆನು, ಆದರೆ ನೀವು ಉತ್ತರದೊಂದಿಗೆ ಬರಬೇಕೆಂದು ನಾನು ಬಯಸುತ್ತೇನೆ. ನಾವು ಯಾವತ್ತೂ ಬೇರೆ ಯಾರಿಂದಲೋ ಪರಿಹಾರವನ್ನು ಎದುರು ನೋಡುತ್ತೇವೆ. ನಾವು ನಮ್ಮ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿದರೆ, ನಮಗೆ ಸ್ವಲ್ಪ ಉಪಾಯಗಳು, ಸ್ವಲ್ಪ ಪರಿಹಾರಗಳು ಸಿಗಬಹುದು ಎಂಬುದನ್ನು ನಾವು ಮರೆಯುತ್ತೇವೆ. ಇದು ಐದನೆಯದು - ಸ್ವಾಭಾವಿಕತೆ! ಸ್ವಾಭಾವಿಕವಾಗಿರಿ. ನಿಮ್ಮೊಳಗೆ ಆಳಕ್ಕೆ ಹೋಗಲು ನೀವು ಕೆಲವು ನಿಮಿಷಗಳನ್ನು ತೆಗೆದುಕೊಂಡಾಗ ಸ್ವಾಭಾವಿಕತೆಯು ಬರುತ್ತದೆ. ಎಲ್ಲವೂ ಸರಿಯಿರುವಾಗ ಮತ್ತು ಎಲ್ಲವೂ ನೀವಂದುಕೊಂಡ ರೀತಿಯಲ್ಲಿ ನಡೆಯುತ್ತಿರುವಾಗ ನಗುತ್ತಿರುವುದರಲ್ಲಿ ಯಾವುದೇ ಹೆಚ್ಚುಗಾರಿಕೆಯಿಲ್ಲ. ಆದರೆ ನೀವು ನಿಮ್ಮೊಳಗಿರುವ ಪರಾಕ್ರಮವನ್ನು ಎಬ್ಬಿಸಿ, "ಏನೇ ಬರಲಿ, ನಾನು ನಗುತ್ತಾ ಇರುತ್ತೇನೆ" ಎಂದು ಹೇಳಿದರೆ, ನಿಮ್ಮೊಳಗಿನಿಂದ ಪ್ರಚಂಡ ಶಕ್ತಿಯು ಹಾಗೆಯೇ ಉದಯಿಸುವುದನ್ನು ನೀವು ಗಮನಿಸುವಿರಿ, ಮತ್ತು ಸಮಸ್ಯೆಗಳು ಏನೂ ಅಲ್ಲ; ಅವುಗಳು ಸುಮ್ಮನೇ ಬರುತ್ತವೆ ಮತ್ತು ಮಾಯವಾಗುತ್ತವೆ.
ನಮ್ಮ ಸ್ವಯಂಸೇವಕರು ಬಲ್ಗೇರಿಯಾದ ಎಲ್ಲಾ ಸೆರೆಮನೆಗಳಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ನಾನು ಹೇಳಲು ಬಯಸುತ್ತೇನೆ. ಕೋರ್ಸ್ ಮಾಡಿದ ಬಳಿಕ, ಸೆರೆಮನೆಯಲ್ಲಿರುವ ನೂರಾರು ಜನರ ಸಂಪೂರ್ಣ ಜೀವನಗಳು ಬದಲಾಗಿವೆ. ಅದು ಬಹಳ ಒಳ್ಳೆಯದು!
ಇದುವೇ ಬುದ್ಧಿವಂತಿಕೆ. ಬುದ್ಧಿವಂತಿಕೆಯೆಂದರೆ, ಅಪರಾಧಿಯಾಗಿರುವ ಒಬ್ಬನ ಒಳಗಿನಿಂದಲೂ ಒಳ್ಳೆಯದನ್ನು ಹೊರತರುವುದು. ಅತ್ಯಂತ ಕೆಟ್ಟ ಅಪರಾಧಿಯ ಒಳಗೂ ಏನೋ ಒಳ್ಳೆಯದಿರುತ್ತದೆ; ಕೆಲವು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ನಾವು ಹೊರಕ್ಕೆ ತರಬೇಕು. ಅದಕ್ಕೆ ಬುದ್ಧಿವಂತಿಕೆಯ ಅಗತ್ಯವಿದೆ. ಒಬ್ಬರನ್ನು ತೆಗಳಲು ಅಷ್ಟು ಬುದ್ಧಿವಂತಿಕೆಯ ಅಗತ್ಯವಿರುವುದಿಲ್ಲ, ಆದರೆ ತೆಗಳಲ್ಪಟ್ಟವರಿಂದ ಸಹಾನುಭೂತಿಯನ್ನು ಹೊರತರಲು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸ್ವಾರ್ಥ ಉದ್ದೇಶಗಳಿಲ್ಲದೆ, ಅವರ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಹಿಂದೆ ತರುವ ಒಂದೇ ಒಂದು ಇಚ್ಛೆಯಿಂದ ಸೆರೆಮನೆಗಳಿಗೆ ಹೋದ ನಮ್ಮ ಎಲ್ಲಾ ಸ್ವಯಂಸೇವಕರು ಮತ್ತು ಶಿಕ್ಷಕರನ್ನು ನಾನು ನಿಜವಾಗಿ ಅಭಿನಂದಿಸುತ್ತೇನೆ.
ಮೂರ್ಖ ಜನರು ಎಲ್ಲರನ್ನೂ ರಾಕ್ಷಸರೆಂದು ಮತ್ತು ’ಕೆಟ್ಟ’ವರೆಂದು ತೋರಿಸಲು ಪ್ರಯತ್ನಿಸುತ್ತಾರೆ; ಧರ್ಮನಿಷ್ಠೆಯುಳ್ಳ ವ್ಯಕ್ತಿಗಳನ್ನು ಕೂಡಾ. ಜನರು, ಎಲ್ಲರೂ ಕೆಟ್ಟವರೆಂದು, ಸಂಪೂರ್ಣ ಪ್ರಪಂಚ ಕೆಟ್ಟದು ಎಂದು ಹೇಳುತ್ತಾರೆ. ಅದು ಬಹಳ ದೌರ್ಭಾಗ್ಯಕರ; ಅದು ಒಳ್ಳೆಯ ಸಂಗವಲ್ಲ. ಕಳೆದ ವಾರ ನಾನು ಕೆನಡಾದಲ್ಲಿದ್ದಾಗ, ಒಬ್ಬರು ದಂಪತಿಗಳು ನನ್ನ ಬಳಿಗೆ ಬಂದರು. ಅವರು ಕಣ್ಣೀರು ಹರಿಸುತ್ತಿದ್ದರು.  ಅವರ ಹದಿಹರೆಯದ ಮಗನು ಆತ್ಮಹತ್ಯೆ ಮಾಡಿಕೊಂಡಿದ್ದನು. ಆತ್ಮಹತ್ಯೆಯ ಮುನ್ನ ಪತ್ರದಲ್ಲಿ, ಇಡಿಯ ಪ್ರಪಂಚವು ಕೆಟ್ಟದು, ಬದುಕುಳಿಯಲು ಯೋಗ್ಯವಲ್ಲ. ಒಳ್ಳೆಯ ಜನರಿಗೆ ಈ ಭೂಮಿಯ ಮೇಲೆ ಜಾಗವಿಲ್ಲ. ಎಲ್ಲಾ ದುಷ್ಟ ಮತ್ತು ಕೆಟ್ಟ ಜನರು ಪ್ರಭುತ್ವವನ್ನು ಪಡೆದುಕೊಂಡಿದ್ದಾರೆ ಎಂದು ಬರೆದಿದ್ದನು.
ಆ ಯುವಕನು ಎಷ್ಟೊಂದು ನೋವನ್ನು ಅನುಭವಿಸಿರಬೇಕು, ಯಾಕೆಂದರೆ ಪ್ರತಿಯೊಬ್ಬರು ಇತರರು ಹೇಗೆ ಕೆಟ್ಟವರೆಂದು ನಿಮ್ಮಲ್ಲಿ ಹೇಳುತ್ತಾರೆ. ಅದು ಒಳ್ಳೆಯ ಸಂಗವಲ್ಲ. ಒಬ್ಬ ಕೆಟ್ಟ ವ್ಯಕ್ತಿಯ ಒಳಗೆ ಕೂಡಾ, ಒಬ್ಬ ಒಳ್ಳೆಯ ವ್ಯಕ್ತಿಯು ಅಡಗಿದ್ದಾನೆ. ಅವನು ಮೇಲಕ್ಕೆ ಬರಬೇಕು. ಒಳ್ಳೆಯತನವು ಮೇಲಕ್ಕೆ ಬರುವಾಗ, ನಕಾರಾತ್ಮಕತೆಯು ತನ್ನಿಂತಾನೇ ಮಾಯವಾಗುತ್ತದೆ.

ಪ್ರಶ್ನೆ: ೨೧ ಡಿಸೆಂಬರ್ ೨೦೧೨ ಮತ್ತು ಮುಂಬರಲಿರುವ ವರ್ಷಗಳ ಬಗ್ಗೆ ನಾವು ತಿಳಿಯಬೇಕಾಗಿರುವುದು ಏನಾದರೂ ಇದೆಯೇ?
ಶ್ರೀ ಶ್ರೀ ರವಿಶಂಕರ್:
ಏನೂ ಇಲ್ಲ. ಎಲ್ಲವೂ ಒಳ್ಳೆಯದಾಗಿರುತ್ತದೆ. ಕೇವಲ ವಿಶ್ರಾಮ ಮಾಡಿ. ಪ್ರಪಂಚವು ಕೊನೆಯಾಗುವುದಿಲ್ಲವೆಂದು ನಾನು ಹೇಳುತ್ತೇನೆ. ಅದು ಆಗುವುದು ಕೇವಲ ಅಮೇರಿಕಾದ ಸಿನೆಮಾಗಳಲ್ಲಿ. ಹಿಂದೂ ಕ್ಯಾಲೆಂಡರಿನ ಪ್ರಕಾರ, ಈ ವರ್ಷವು ’ನಂದ’ ಎಂದು ಕರೆಯಲ್ಪಡುತ್ತದೆ. ಅದರರ್ಥ ’ಆನಂದದ ವರ್ಷ’. ಜನರು ಹೆಚ್ಚು ಹೆಚ್ಚು ಆಧ್ಯಾತ್ಮಿಕರಾಗುತ್ತಾರೆ ಮತ್ತು ಇತರರಿಗೆ ಹೆಚ್ಚು ಹೆಚ್ಚು ಸಂತೋಷವನ್ನು ನೀಡಲು ಬಯಸುತ್ತಾರೆ. ಇದು ಹೆಚ್ಚಾಗಬೇಕೆಂದು ಆಶಿಸಲು ನಾನು ಬಯಸುತ್ತೇನೆ. ಎರಡು ರೀತಿಯ ಸಂತೋಷವಿದೆ. ಒಂದನೆಯದು, ಪಡೆಯುವುದರಲ್ಲಿರುವ ಸಂತೋಷ. ಇನ್ನೊಂದು ರೀತಿಯ ಸಂತೋಷ ನಿಮಗೆ ಸಿಗುವುದು, ನೀವು ಕೊಡುವಾಗ.

ಪ್ರಶ್ನೆ: ನಾವು ನಮ್ಮ ಕೆಲಸವನ್ನು ಆನಂದಿಸದೇ ಇರುವಾಗ  ನಾವೇನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ಜೀವನ ಸಾಗಿಸಲು ನೀವು ಕೆಲಸ ಮಾಡಬೇಕು. ಆದರೆ ಸಂತೋಷಕ್ಕಾಗಿ, ನೀವು ಸ್ವಲ್ಪ ಸೇವೆ ಮಾಡಬೇಕು. ನೀವು ನಿಮ್ಮನ್ನು ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಅದು ನಿಮಗೆ ತೃಪ್ತಿ ಮತ್ತು ಸಂತೋಷವನ್ನು ತರುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಈ ಪ್ರಶ್ನೆ ಬರಲಿದೆಯೆಂಬುದು ನನಗೆ ತಿಳಿದಿತ್ತು, ಆದುದರಿಂದ, ಕೊಡುವುದರಲ್ಲಿ ಸಂತೋಷವಿದೆಯೆಂದು ನಾನು ಹೇಳಿದೆ. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಿ.
ಪ್ರಶ್ನೆ: ಉತ್ತಮವಾಗುವುದು ಹೇಗೆ ಮತ್ತು ಒಳ್ಳೆಯದು ಜಯಶಾಲಿಯಾಗುವಂತೆ ಮಾಡುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅದಕ್ಕಾಗಿಯೇ ನಮ್ಮಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳಿರುವುದು; ಎಲ್ಲರಲ್ಲಿರುವ ಒಳ್ಳೆಯತನವನ್ನು ಹೊರತರಲು, ಮತ್ತು ಅದು ಖಂಡಿತವಾಗಿಯೂ ಜಯಶಾಲಿಯಾಗುವುದೆಂಬುದನ್ನು ನೀನು ನೋಡುವೆ.

ಪ್ರಶ್ನೆ: ಇವತ್ತಿನ ವೇಗದ ಸಮಯದಲ್ಲಿ ನಾವು ನಮ್ಮ ಮಕ್ಕಳೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಅದಕ್ಕಾಗಿ ನಾವೊಂದು ಕೋರ್ಸನ್ನು ವಿನ್ಯಾಸಗೊಳಿಸಿದ್ದೇವೆ. ಅದು ಕೆ.ವೈ.ಸಿ. - ನೋ ಯುವರ್ ಚೈಲ್ಡ್ (ನಿಮ್ಮ ಮಗುವನ್ನು ತಿಳಿದುಕೊಳ್ಳಿ) ಮತ್ತು ಕೆ.ವೈ.ಟಿ. - ನೋ ಯುವರ್ ಟೀನ್ (ನಿಮ್ಮ ಹದಿಹರೆಯದವರನ್ನು ತಿಳಿದುಕೊಳ್ಳಿ) ಎಂದು ಕರೆಯಲ್ಪಡುತ್ತದೆ. ಅದು ಕೇವಲ ದಿನಕ್ಕೆ ಎರಡು ಗಂಟೆಗಳಂತೆ, ಎರಡು ದಿನಗಳಿರುವುದು. ಈ ಕೋರ್ಸಿನಲ್ಲಿ ನಿಮಗೆ ಹಲವಾರು ಸುಂದರವಾದ ಉಪಾಯಗಳು ಸಿಗುತ್ತವೆ. ಅದು ಎಲ್ಲೆಡೆಗಳಲ್ಲಿ ಬಹಳ ಜನಪ್ರಿಯವಾಗಿದೆ ಯಾಕೆಂದರೆ ಅದು ಬಹಳ ಪರಿಣಾಮಕಾರಿಯಾಗಿದೆ. ನಿಮ್ಮ ಮಕ್ಕಳೊಂದಿಗಿನ ನಿಮ್ಮ ಸಂಬಂಧವು ಬದಲಾಗುತ್ತದೆ ಮತ್ತು ಅವರು ನಿಮ್ಮೊಂದಿಗೆ ಪ್ರತಿಕ್ರಿಯಿಸುವ ರೀತಿಯೂ ಬದಲಾಗುತ್ತದೆ.

ಪ್ರಶ್ನೆ: ನಮ್ಮಲ್ಲಿರುವ ಭಯಗಳನ್ನು ನಿವಾರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ.