ಗುರುವಾರ, ನವೆಂಬರ್ 20, 2014

ಶಾಂತಿಯನ್ನು ನೆಲೆಗೊಳಿಸಲು ನಾವು ಒಂದಾಗೋಣ

೨೦/೧೧/೨೦೧೪
ರ್ಬಿಲ್, ಇರಾಕ್
ಸ್ವಲ್ಪ ಸಮಯ ತೆಗೆದುಕೊಂಡು, ಶಿಬಿರಗಳಲ್ಲಿರುವ ಜನರಿಗೆ ಭರವಸೆ ತುಂಬಲು ಹಾಗೂ ಅವರ ಮುಗುಳ್ನಗೆಯನ್ನು ಮರಳಿ ತರಲು ಶಿಬಿರಗಳಿಗೆ ಭೇಟಿ ನೀಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿನ್ನೆ ನಾನು ಕೆಲವು ಶಿಬಿರಗಳ ಮೂಲಕ ನಡೆದುಹೋದಾಗ ಜನರು, "ಇವತ್ತು ನಾವು ಸಂತೋಷಗೊಂಡಿದ್ದೇವೆ ಮತ್ತು ನಮಗೆ ಮುಗುಳ್ನಗಲು ಸಾಧ್ಯವಾಗುತ್ತಿದೆ" ಎಂದು ಹೇಳಿದರು. ಅದೊಂದು ಬಹಳ ಒಳ್ಳೆಯ ಭೇಟಿಯಾಗಿತ್ತು. 

ಎಲ್ಲಾ ದುಃಖಗಳ ಹೊರತಾಗಿಯೂ ಹಾಗೂ ವಿಪತ್ತಿನ ನಡುವೆಯೂ ಒಂದು ಮುಗುಳ್ನಗೆಯನ್ನು ತರುವುದು ನಮ್ಮಿಂದ ಸಾಧ್ಯವಾಗಬಲ್ಲ ಒಂದು ವಿಷಯವಾಗಿದೆ. ನಾವೆಲ್ಲರೂ ಗಮನ ಹರಿಸಬೇಕಾದಂಥ ಸಂಗತಿ ಇದು. ನಾವು ಗಮನ ಹರಿಸಬೇಕಾಗಿರುವ ಮುಂದಿನ ವಿಷಯವೆಂದರೆ, ತಡೆಯುವುದು. ಜನರು ಅಂತಹ ಪಡೆಗಳನ್ನು ಸೇರುವುದನ್ನು ನಾವು ಹೇಗೆ ತಡೆಗಟ್ಟಬಹುದು? ಈ ಪ್ರಪಂಚದ ಪ್ರತಿಯೊಂದು ಸರಕಾರದೊಂದಿಗೂ ನಾವು ಮಾತುಕತೆ ನಡೆಸಬೇಕಾಗುತ್ತದೆ ಹಾಗೂ ಅವರಲ್ಲಿ, ಶಾಂತಿಯನ್ನು ಕಟ್ಟುವ ಚಟುವಟಿಕೆಗಳು ಮತ್ತು ಶಾಂತಿ ಶಿಕ್ಷಣಗಳಿಗೆ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವಂತೆ ಹೇಳಬೇಕು. ರಕ್ಷಣೆಗಾಗಿ ವ್ಯಯಿಸುವುದರಲ್ಲಿ ಒಂದು ಸಣ್ಣ ಭಾಗವನ್ನಾದರೂ ಶಾಂತಿ ಶಿಕ್ಷಣಕ್ಕಾಗಿ ವ್ಯಯಿಸಿದಲ್ಲಿ, ಯುವಕರು ಇಂತಹ ಒಂದು ಅಮಾನವೀಯ ವರ್ತನೆಯಲ್ಲಿ ತೊಡಗುವುದಕ್ಕೆ ಅದು ಅನುವು ಮಾಡಿ ಕೊಡದು.

ಈ ಎಲ್ಲಾ ತಪ್ಪು ಮಾರ್ಗದರ್ಶನ ಹೊಂದಿದ ಯುವಕರು ನಮ್ಮ ಸಮಾಜದ ನಡುವಿವನರು, ಅವರು ನಮ್ಮ ಸ್ವಂತ ಸಹೋದರರು. ಅವರಿಗೆ ಯಾಕೆ ತಪ್ಪು ಮಾರ್ಗದರ್ಶನ ನೀಡಲಾಯಿತು? ಅದು ಯಾಕೆಂದರೆ, ಶಾಂತಿಯ ಬಗ್ಗೆ ಅವರು ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ. ರಕ್ತಪಾತ ಮತ್ತು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡು, ತಾನು ದೇವರ ಕೆಲಸ ಮಾಡುತ್ತಿದ್ದೇನೆಂದು ಯೋಚಿಸುತ್ತಾ ಯಾವುದೇ ಮಗುವು ಈ ಭೂಮಿಯ ಮೇಲೆ ಬೆಳೆಯದಿರುವುದಕ್ಕೋಸ್ಕರ, ನಮ್ಮೆಲ್ಲಾ ಪಠ್ಯಕ್ರಮದಲ್ಲಿ ಶಾಂತಿ ಶಿಕ್ಷಣವನ್ನು ಸೇರ್ಪಡೆ ಮಾಡುವುದು ಈಗ ಖಂಡಿತವಾಗಿಯೂ ಅಗತ್ಯವಾಗಿದೆ.

ಶಾಂತಿ ಶಿಕ್ಷಣ, ಒಂದು ಬಹು-ಸಾಂಸ್ಕೃತಿಕ, ಬಹು-ಧಾರ್ಮಿಕ ಶಿಕ್ಷಣ ಮತ್ತು ತನ್ನ ಭಾವನೆಗಳು ಹಾಗೂ ಮನಸ್ಸಿನ ಆಘಾತಗಳನ್ನು ನಿರ್ವಹಿಸುವ ಶಿಕ್ಷಣವನ್ನು ಪರಿಚಯಿಸುವ ನೇತೃತ್ವನ್ನು ದಯವಿಟ್ಟು ತೆಗೆದುಕೊಳ್ಳಬೇಕಾಗಿ ನಾನು ಇಲ್ಲಿರುವ ಎಲ್ಲಾ ಶೈಕ್ಷಣಿಕ ತಜ್ಞರಲ್ಲಿ ವಿನಂತಿಸುತ್ತಿದ್ದೇನೆ.

ಮಾಡಲ್ಪಟ್ಟಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಪ್ರದರ್ಶಿಸುವಂತೆ ಹಾಗೂ ಹಲವಾರು ದೇಶಗಳಲ್ಲಿ ಬೇರೆ ಬೇರೆ ಸಮುದಾಯಗಳ ಜನರಿಂದ ತೋರಲ್ಪಟ್ಟ ಸಹಾನುಭೂತಿಯನ್ನು ಎತ್ತಿ ತೋರಿಸುವ ಮೂಲಕ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೂಡಾ ಕೆಲಸ ಮಾಡಬೇಕೆಂದು ನಾನು ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.
ಒತ್ತಡದಲ್ಲಿರುವಾಗ, ಅದನ್ನು ತೊಡೆದುಹಾಕಲು ಮಾರ್ಗಗಳಿವೆ; ಯಾವತ್ತೂ ಅವರು ಮನಸ್ಸು ಮತ್ತು ಹೃದಯಗಳಲ್ಲಿ ಒತ್ತಡದೊಂದಿಗೆ ಜೀವಿಸಬೇಕಾಗಿಲ್ಲ ಎಂದು ಜನರಲ್ಲಿ ಹೇಳಬೇಕಾಗಿಯೂ ನಾನು ಮಾಧ್ಯಮಗಳ ಬಳಿ ಕೇಳಿಕೊಳ್ಳುತ್ತೇನೆ. ಅಹಿಂಸಾ ಮಾರ್ಗವನ್ನು ಅನುಸರಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕಾಗಿ ನಾನು ಮುಖ್ಯವಾಹಿನಿ ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.

ಪತ್ರಿಕೋದ್ಯಮದಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದನೆಯದೆಂದರೆ ವಾಸ್ತವವನ್ನು ಅದಿರುವಂತೆಯೇ ಜನರ ಮುಂದೆ ಬಿತ್ತರಿಸುವುದು. ಕೆಲವೊಮ್ಮೆ ಅದು ದುಃಖವನ್ನುಂಟು ಮಾಡುತ್ತದೆ. ಆದರೆ ಅದೇ ಸಮಯದಲ್ಲಿ, ಪ್ರತಿದಿನವೂ ಹಲವಾರು ಜನರು ಮಾಡುತ್ತಿರುವ ಒಳ್ಳೆಯ ಕೆಲಸಗಳೊಂದಿಗೆ ಅವರು ಅದನ್ನು ಸಮತೋಲನಗೊಳಿಸಬೇಕು.

ನೀವು ಶಿಬಿರಗಳಿಗೆ ಹೋದರೆ, ತಮ್ಮ ಶಿಕ್ಷಣ, ವೃತ್ತಿ ಮತ್ತು ಹಣ ಮಾಡುವುದರ ಕಡೆಗೆ ಗಮನ ನೀಡಿರಬಹುದಾದ, ತಮ್ಮ ಜೀವನದ ಉತ್ತುಂಗದಲ್ಲಿರುವ ಹಲವಾರು ಯುವಕರನ್ನು ನೀವು ನೋಡಬಹುದು. ಆದರೆ ಅದಕ್ಕೆ ಬದಲಾಗಿ, ಅವರು ಅದೆಲ್ಲವನ್ನೂ ತೊರೆದಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಜನರು ತಮ್ಮ ಜೀವನದಲ್ಲಿ ಏನಾದರೂ ಉತ್ತಮವಾದುದನ್ನು ಮಾಡುವುದಕ್ಕೆ ಸ್ಫೂರ್ತಿ ಪಡೆಯುವುದಕ್ಕೋಸ್ಕರ ಇಂತಹ ರೀತಿಯ ಸಮಾಚಾರಗಳನ್ನು ಎದ್ದು ತೋರಿಸಬೇಕು. ಖಿನ್ನತೆಯಲ್ಲಿ ಮುಳುಗುವುದರ ಬದಲಾಗಿ,  ಸಾಮಾಜಿಕ ಕಾರ್ಯಗಳನ್ನು ತೆಗೆದುಕೊಂಡು ಕಾರ್ಯಪ್ರವೃತ್ತರಾಗುವಂತೆ ಮಾಧ್ಯಮಗಳು ಜನರನ್ನು ಹುರಿದುಂಬಿಸಬಲ್ಲವು.

ಪ್ರಶ್ನೆ: ಪ್ರತಿಯೊಂದು ಧರ್ಮವೂ ಎರಡು ಅಂಶಗಳನ್ನು ಹೊಂದಿದೆ, ಒಂದು ಅಂಶವೆಂದರೆ ನಂಬಿಕೆಗಳು ಮತ್ತು ಇನ್ನೊಂದು ರೀತಿ-ರಿವಾಜುಗಳು. ಇದು ನಮಗೆ ತಿಳಿದಿದೆ. ಯಾವುದು ಜೋಡಿಸುವ ಮತ್ತು ಯಾವುದು ವಿಭಾಗಿಸುವ ಅಂಶ?

ಶ್ರೀ ಶ್ರೀ ರವಿ ಶಂಕರ್: ನಾನು ಹೇಳುವುದೇನೆಂದರೆ, ಧರ್ಮವು ಮೂರು ಅಂಶಗಳನ್ನು ಹೊಂದಿದೆ:

೧. ಮೌಲ್ಯಗಳು
೨. ಚಿಹ್ನೆಗಳು ಮತ್ತು
೩. ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು

ಎಲ್ಲಾ ಧರ್ಮಗಳ ನಡುವೆ ಮೌಲ್ಯಗಳು ಒಂದೇ ಆಗಿ ತೋರುತ್ತದೆ. ಉದಾಹರಣೆಗೆ, ಸಹೋದರತ್ವ, ದೇವರ ಏಕತ್ವ, ಪ್ರೇಮ ಮತ್ತು ಕರುಣೆ, ಬಡ ಮತ್ತು ಅಗತ್ಯವಿರುವವರ ಸೇವೆ. ಇದು ಧರ್ಮದ ಆಧ್ಯಾತ್ಮಿಕ ಅಂಶವಾಗಿದೆ.

ಎರಡನೆಯದೆಂದರೆ, ಚಿಹ್ನೆ. ಪ್ರತಿಯೊಂದು ಧರ್ಮವೂ ಚಿಹ್ನೆಗಳನ್ನು, ಪವಿತ್ರ ಸ್ಥಳಗಳನ್ನು ಮತ್ತು ಗ್ರಂಥಗಳನ್ನು ಹೊಂದಿದೆ.
ಮೂರನೆಯದೆಂದರೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು. ಹಲವಾರು ಬೇರೆ ಬೇರೆ ರಿವಾಜುಗಳಿರಬಲ್ಲವು.

ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆಂದರೆ, ಅವರು ಮೌಲ್ಯಗಳನ್ನು ಬಿಡುತ್ತಾರೆ ಮತ್ತು ರಿವಾಜುಗಳು ಹಾಗೂ ಚಿಹ್ನೆಗಳಿಗೆ ಕಟ್ಟುಬೀಳುತ್ತಾರೆ. ಇಲ್ಲಿಯೇ ಸಂಘರ್ಷ ಉಂಟಾಗುವುದು. ಅದಕ್ಕಾಗಿಯೇ ನಾನು, "ಆಧ್ಯಾತ್ಮವು ಜನರನ್ನು ಒಂದುಗೂಡಿಸುತ್ತದೆ, ಆದರೆ ಧರ್ಮಗಳು ಜನರನ್ನು ವಿಭಜಿಸಬಲ್ಲವು" ಎಂದು ಹೇಳುವುದು.

ಪ್ರಪಂಚದ ಪ್ರಮುಖ ಧರ್ಮಗಳನ್ನು ನೀವು ನೋಡಿದರೆ, ಅಬ್ರಹಾಮಿಕ್ ಧರ್ಮಗಳು ಅದೇ ಮೂಲದಿಂದ ಬರುತ್ತವೆ ಎಂಬುದು ನಿಮಗೆ ಕಾಣಿಸುತ್ತದೆ. ಇದು, ಒಂದೇ ಕುಟುಂಬದ ಮೂವರು ಸಹೋದರರಂತೆ. ಆದರೆ, ಅಲ್ಲಿ ಬಹಳಷ್ಟು ಸಂಘರ್ಷಗಳಾಗಿವೆ.
ಶಿಂಟೋ, ಟಾವೋ, ಬೌದ್ಧ, ಹಿಂದೂ, ಸಿಖ್, ಜೈನ ಧರ್ಮಗಳಂತಹ ಇತರ ಧರ್ಮಗಳಲ್ಲಿ ಯಾವುದೇ ಸಂಘರ್ಷವಾಗಿಲ್ಲ.

ದೂರಪ್ರಾಚ್ಯದ ಆರು ಧರ್ಮಗಳು ಯಾವತ್ತೂ ಜೊತೆಯಾಗಿ ಅಸ್ತಿತ್ವದಲ್ಲಿದ್ದವು ಮತ್ತು ಅವರ ರೀತಿ-ರಿವಾಜುಗಳು ಸಂಪೂರ್ಣವಾಗಿ ಬೇರೆ ಬೇರೆ. ಹಿಂದೂ ಧರ್ಮದ ಒಳಗೆ ನೂರಾರು ಪಂಥಗಳಿವೆ, ಆದರೆ ಅವುಗಳೊಳಗೆ ಯಾವತ್ತೂ ಯಾವುದೇ ಸಂಘರ್ಷವಾಗಿಲ್ಲ. ಮೂಲಭೂತವಾದ ನಿಯಮವೆಂದರೆ ಪರಸ್ಪರರನ್ನು ಗೌರವಿಸುವುದು ಮತ್ತು ಆದರಿಸುವುದು. ಇಸ್ಲಾಂನಲ್ಲಿಯೂ ಅದೇ ರೀತಿಯಾಗಿತ್ತು. ಇಸ್ಲಾಂನಲ್ಲಿ ಐದು ಅಥವಾ ಇನ್ನೂ ಹೆಚ್ಚು ಬೇರೆ ಬೇರೆ ಪಂಥಗಳಿವೆ. ಅವರೆಲ್ಲರೂ ಶಾಂತಿಯುತವಾಗಿ ಜೊತೆಯಲ್ಲಿ ನೆಲೆಸಿದ್ದ ಕಾಲಘಟ್ಟಗಳು ಚರಿತ್ರೆಯಲ್ಲಿದ್ದವು. ಇರಾಕ್‌ನಲ್ಲಿ ಕೂಡಾ ಶಿಯಾ ಮತ್ತು ಸುನ್ನಿಗಳು ಜೊತೆಯಾಗಿ ನೆಲೆಸಿದ್ದರು.

ಕಲಹಗಳು ಉಂಟಾಗುವಾಗ, ಇತರ ಯಾವುದೇ ಗುರುತುಗಳಿಗಿಂತಲೂ, ಅದು ಒಂದು ಧರ್ಮದ ಹೆಸರಿಗೆ ಹೆಚ್ಚಾಗಿ ಅಂಟಿಕೊಳ್ಳುತ್ತದೆ ಮತ್ತು ತದನಂತರ ಇಡೀ ಸಮಸ್ಯೆಯು ಪ್ರಾರಂಭವಾಗುತ್ತದೆ. ಎಲ್ಲಾ ಧರ್ಮಗಳ ಜನರನ್ನು ಜೊತೆಗೂಡಿಸಬಲ್ಲ ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ಜಪಾನಿನಲ್ಲಿ ಸಂಭವಿಸಿದ ಒಂದು ಘಟನೆಯ ಬಗ್ಗೆ ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ. ಒಮ್ಮೆ ರಾಷ್ಟ್ರಾಧ್ಯಕ್ಷ ನಿಕ್ಸನ್ (ಅಮೆರಿಕಾದ) ಅವರು ಜಪಾನಿಗೆ ಹೋದರು ಮತ್ತು ಅವರು ಎಲ್ಲಾ ಧಾರ್ಮಿಕ ಮುಖಂಡರನ್ನು ಭೇಟಿಯಾಗಲು ಬಯಸಿದರು. ಅವರ ಒಂದು ಭಾಗದಲ್ಲಿ ಒಬ್ಬರು ಬೌದ್ಧ ಸನ್ಯಾಸಿಗಳು ಕುಳಿತಿದ್ದರು ಮತ್ತು ಇನ್ನೊಂದು ಭಾಗದಲ್ಲಿ ಒಬ್ಬರು ಶಿಂಟೋ ಸಂತರು ಕುಳಿತಿದ್ದರು.

ನಿಕ್ಸನ್ ಅವರು ಶಿಂಟೋ ಸಂತರಲ್ಲಿ, "ಜಪಾನಿನಲ್ಲಿ ಶಿಂಟೋ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅವರು ನಂತರ ಬೌದ್ಧ ಸನ್ಯಾಸಿಗಳ ಕಡೆಗೆ ತಿರುಗಿ ಅವರಲ್ಲಿ, "ಜಪಾನಿನಲ್ಲಿ ಬೌದ್ಧ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅದು ಹೇಗೆ ಸಾಧ್ಯವೆಂಬುದಾಗಿ ಅಧ್ಯಕ್ಷರಿಗೆ ಅರ್ಥವಾಗಲಿಲ್ಲ, ಆದರೆ ಅದು ಸಾಧ್ಯವಿದೆ. ಅದೇ ರೀತಿಯಲ್ಲಿ, ನೀವು ಭಾರತಕ್ಕೆ ಬಂದರೆ, ಜೈನರು ಮತ್ತು ಹಿಂದೂಗಳು ಸಂಪೂರ್ಣವಾಗಿ ವ್ಯತ್ಯಸ್ತವಾದ ನಂಬಿಕೆಗಳನ್ನು ಮತ್ತು ರೀತಿ-ರಿವಾಜುಗಳನ್ನು ಹೊಂದಿದ್ದಾರೆ, ಆದರೆ ಅವರು ಅಷ್ಟೊಂದು ಸಾಮರಸ್ಯದಿಂದ ಜೊತೆಯಲ್ಲಿ ವಾಸಿಸುತ್ತಾರೆ. ಅದೇ ರೀತಿಯಲ್ಲಿ, ಸಿಕ್ಖರು ಮತ್ತು ಹಿಂದೂಗಳು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪರಸ್ಪರರನ್ನು ಗೌರವಿಸುತ್ತಾರೆ, ಆದರೆ ಯಾವತ್ತೂ ಅಲ್ಲಿ ಯಾವುದೇ ಸಂಘರ್ಷವಾಗಿಲ್ಲ. "ನಾನು ಮಾತ್ರ ಸ್ವರ್ಗಕ್ಕೆ ಹೋಗುತ್ತೇನೆ" ಎಂದು ಅವರು ಯಾವತ್ತೂ ಹೇಳಲಿಲ್ಲ.

ದೂರಪ್ರಾಚ್ಯದಿಂದ ಮಧ್ಯಪ್ರಾಚ್ಯವು ಕಲಿಯಬಹುದಾದುದು ಇದನ್ನೇ. ಅವರು ಯಾಝಿದಿಗಳಿರಲಿ, ಕ್ರಿಶ್ಚಿಯನ್ನರಾಗಿರಲಿ, ಮುಸ್ಲಿಮರಾಗಿರಲಿ; ಶಿಯಾಗಳು ಅಥವಾ ಸುನ್ನಿಗಳು, ಅಹ್ಮೆದಿಯಾ ಅಥವಾ ಸೂಫಿಗಳಾಗಿರಲಿ, ಅವರೆಲ್ಲರೂ ಜೊತೆಯಲ್ಲಿರಲು ಸಾಧ್ಯವಿದೆ. ಮುಖ್ಯವಾದುದೇನೆಂದರೆ, ವಿವಿಧತೆಯನ್ನು ಗೌರವಿಸುವುದು.

ಪ್ರಶ್ನೆ: ಅಪಹೃತಗೊಂಡವರನ್ನು, ವಿಶೇಷವಾಗಿ ಸ್ತ್ರೀಯರು ಮತ್ತು ಮಕ್ಕಳನ್ನು ಕಾಪಾಡುವಂತೆ ನೀವು ಪ್ರಪಂಚದ, ವಿಶೇಷವಾಗಿ ಅರಬ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಧಾರ್ಮಿಕ ಮುಖಂಡರ ಮೇಲೆ ಒತ್ತಡ ಹೇರುವಿರಾ? ಅಮೇರಿಕಾದ ಸರಕಾರವು ನಮಗೆ ಆಹಾರವನ್ನು ಕಳುಹಿಸುವಂತೆ ನಾವು ವಿನಂತಿಸಿದಾಗ, ಅವರು ನಮಗೆ ನೀಡಿದ ಉತ್ತರವೆಂದರೆ, ಅಪಹೃತಗೊಂಡವರನ್ನು ಕಾಪಾಡುವಂತೆ ಇರಾಕ್ ಮತ್ತು ಇತರ ನೆರೆ ರಾಷ್ಟ್ರಗಳ ಸರಕಾರಗಳಿಗೆ ಅವರು ಬರೆಯಬೇಕಾಗಿ ಬಂತು ಎಂಬುದಾಗಿ. 

ಶ್ರೀ ಶ್ರೀ ರವಿ ಶಂಕರ್: ಇದು ಸರಕಾರಗಳ ನಡುವಿನದು. ಅವರದ್ದು ಹಲವಾರು ನಿಯಮಗಳಿವೆ. ಒಂದು ಸರಕಾರೇತರ ಸಂಸ್ಥೆ (ಎನ್.ಜಿ.ಒ.) ಆಗಿ, ನಾವೇನು ಮಾಡಬಲ್ಲೆವೋ ಅದನ್ನು ನಾವು ಮಾಡಬಲ್ಲೆವು. ಸರಕಾರದ ವಿದೇಶ ನೀತಿಗಳೊಳಕ್ಕೆ ಹಸ್ತಕ್ಷೇಪ ಮಾಡಲು ನಮಗೆ ಸಾಧ್ಯವಿಲ್ಲವೆಂದು ನನಗನಿಸುತ್ತದೆ. ಒಂದು ಸರಕಾರವು ಇನ್ನೊಂದರ ವಿರುದ್ಧ ನಿಲ್ಲುವಂತೆ ಮಾಡಲು ನಮಗೆ ಸಾಧ್ಯವಿಲ್ಲ; ಅದು ಸ್ನೇಹಪರತೆಯ ವಿರುದ್ಧವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಾನು ನಿಮಗೆ ಸಲಹೆ ನೀಡುವುದೇನೆಂದರೆ, ಬೇರೆ ಬೇರೆ ಸರಕಾರಗಳಿಗೆ ಪತ್ರ ಬರೆಯಿರಿ ಮತ್ತು ತುರ್ತು ಸಹಾಯ ಬೇಕಾಗಿರುವ ಸಮುದಾಯಗಳ ಮೇಲೆ ಹಾಗೂ ನಾವು ಆ ಸರಕಾರಗಳಿಂದ ನೇರವಾದ ಸಹಾಯವನ್ನು ಪಡೆಯಲು ಬಯಸುವೆವು ಎನ್ನುವುದರ ಮೇಲೆ ಅವರ ಗಮನ ತನ್ನಿರಿ.

ಪ್ರಶ್ನೆ: ಭಾರತದಲ್ಲಿ, ಒಂದು ಬಹಳ ಪ್ರಸಿದ್ಧವಾದ ನದಿಯಿದೆ. ಅದು ಕೀಟಾಣುಗಳಿಂದ ಕಲುಷಿತವಾಗಿದೆ ಮತ್ತು ಅಲ್ಲಿನ ಗುರುಗಳು ಹೇಳುವುದೇನೆಂದರೆ, ನೀವು ಹಿಂದೂ ಅಥವಾ ಬೌದ್ಧ ಧರ್ಮದಲ್ಲಿ ಆಸಕ್ತಿ ಹೊಂದಿರುವುದಾದರೆ, ಆಗ ಶಾಸ್ತ್ರಗಳ ಒಂದು ಭಾಗವಾಗಿ ನೀವು ಹೋಗಿ ಆ ಕೊಳಕು ನದಿಯಲ್ಲಿ ಸ್ನಾನ ಮಾಡಬೇಕೆಂದು. ಇದರ ಹಿಂದೆ ನಿಜಕ್ಕೂ ಏನಿದೆಯೆಂದು ನೀವು ನಮಗೆ ಹೇಳಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಒಂದಾನೊಂದು ಕಾಲದಲ್ಲಿ ಗಂಗಾ ನದಿಯು ಬಹಳ ಶುದ್ಧವಾದ ನೀರನ್ನು ಹೊಂದಿತ್ತು, ಮತ್ತು ಬಹಳ ಪವಿತ್ರವೆಂದು ಪರಿಗಣಿಸಲಾಗುವ ಆ ಇಡೀ ನದಿಯನ್ನು ಶುಚಿಗೊಳಿಸುವ ಕೆಲಸವನ್ನು ಇವತ್ತು ನಮ್ಮ ಪ್ರಧಾನ ಮಂತ್ರಿಯವರು ಕೈಗೆತ್ತಿಕೊಂಡಿದ್ದಾರೆ. ಭಾರತದಲ್ಲಿ ನಾವು ನದಿಗಳನ್ನು, ಮರಗಳನ್ನು ಮತ್ತು ಪ್ರಾಣಿಗಳನ್ನು ಗೌರವಿಸುತ್ತೇವೆ. ಸಂಪೂರ್ಣ ಸೃಷ್ಟಿಯನ್ನು ಗೌರವಿಸುವುದು ಪ್ರಕೃತಿಯ ಒಂದು ಭಾಗವಾಗಿದೆ. ನೀರಿನಲ್ಲಿ ಒಂದು ಮುಳುಗು ಹಾಕಿ ಏಳಬೇಕೆಂದು ಅಥವಾ ಯೋಗ ಮತ್ತು ಧ್ಯಾನ ಮಾಡಲು ಒಬ್ಬರಿಗೆ ಅದೊಂದು ಪೂರ್ವಾಪೇಕ್ಷಿತವಾದುದು ಎಂದು ಯಾವುದೇ ಗ್ರಂಥದಲ್ಲೂ ಎಲ್ಲೂ ಹೇಳಿಲ್ಲ. ಇವುಗಳೆಲ್ಲವೂ ರೀತಿ-ರಿವಾಜುಗಳು. ನಾನು ಹೇಳಿದಂತೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು ಬೇರೆ. ಕಾಲಾಂತರದಲ್ಲಿ ಜನರು ರೀತಿ-ರಿವಾಜುಗಳನ್ನು ಬೆಳೆಸಿಕೊಳ್ಳುತ್ತಾರೆ, ಆದರೆ ಮುಖ್ಯವಾದ ಸಂಗತಿಯೆಂದರೆ ಮೌಲ್ಯಗಳನ್ನು ಗೌರವಿಸುವುದು. ಮೌಲ್ಯಗಳು ಜ್ಞಾನವಾಗಿದೆ.

ಕವಿತೆಗಳಲ್ಲಿ ಎಂದಿನಿಂದಲೂ ಹೀಗೆಂದು ಹೇಳಲಾಗಿದೆ, "ಜ್ಞಾನವು ಒಂದು ನದಿಯಂತೆ. ಜ್ಞಾನವನ್ನು ನೀವು ಕ್ರೋಢೀಕರಿಸಿದರೆ ನೀವು ಸಂತೋಷವಾಗಿರುವಿರಿ, ನೀವು ಮುಕ್ತರಾಗುವಿರಿ", ಇದು ನಿಜವಾದ ಸಂದೇಶವಾಗಿದೆ. ಕಲುಷಿತವಾಗಿದೆಯೆಂದು ನೀನು ಹೇಳಿದ ಗಂಗಾ ನದಿಯ ಅರ್ಥ ಕೂಡಾ ಜ್ಞಾನವೆಂದು.

ಒಂದು ಉಪಮೆಯಾಗಿ ಹೀಗೆ ಹೇಳಲಾಗಿದೆ, "ನೀವು ಜ್ಞಾನದಲ್ಲಿ ಸ್ನಾನ ಮಾಡಿದರೆ, ಆಗ ನೀವು ಮುಕ್ತರಾಗುವಿರಿ (ಇಲ್ಲಿ ಮೋಕ್ಷ ಹೊಂದುವುದೆಂಬ ಅರ್ಥ)". ಆದರೆ ಜನರು ಅಕ್ಷರಶಃ ಅದನ್ನು,  ಅವರು ನದಿಯಲ್ಲಿ ಮಿಂದರೆ ಮಾತ್ರ ಅವರು ಮೋಕ್ಷ ಹೊಂದುತ್ತಾರೆ ಎಂಬುದಾಗಿ ತೆಗೆದುಕೊಳ್ಳುತ್ತಾರೆ. ಇದು ಪ್ರಾಸಂಗಿಕ ಅಥವಾ ಆಕಸ್ಮಿಕ, ಆದರೆ ಮೌಲ್ಯಗಳನ್ನು ಜೀವಿಸುವುದು ಸಾರವಾಗಿದೆ.

ಪ್ರಶ್ನೆ: ಯೋಗ ಎಂದರೇನು? ಶಾಂತಿಯನ್ನು ತರುವಲ್ಲಿ ಅದು ಹೇಗೆ ಸಹಾಯಕವಾಗಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಯೋಗವೆಂದರೆ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ತಂತ್ರವಾಗಿದೆ. ಯೋಗವು ನಿಮ್ಮನ್ನು ಒತ್ತಡ ಹಾಗೂ ಬಿಗಿತಗಳಿಂದ ಬಿಡುಗಡೆಗೊಳಿಸುತ್ತದೆ. ಬಲಹೀನತೆ, ಕೋಪ, ಮಾತ್ಸರ್ಯ ಮತ್ತು ಎಲ್ಲಾ ನಕಾರಾತ್ಮಕ ಭಾವನೆಗಳನ್ನುಂಟು ಮಾಡುವುದು ಒತ್ತಡವಾಗಿದೆ. ಉಸಿರಾಟದ ತಂತ್ರಗಳು, ಧ್ಯಾನ ಮತ್ತು ಕೆಲವು ಸರಳವಾದ ವ್ಯಾಯಾಮಗಳನ್ನುಪಯೋಗಿಸಿ ನೀವು ಒತ್ತಡವನ್ನು ನಿವಾರಿಸಿಕೊಂಡಾಗ, ಅದು ನಿಮ್ಮ ಶರೀರ ಹಾಗೂ ಮನಸ್ಸುಗಳಿಗೆ ಸಹಕಾರಿಯಾಗುತ್ತದೆ ಮತ್ತು ಒಳಗಿನಿಂದ ಆರೋಗ್ಯ ಹಾಗೂ ಸಂತೋಷದ ಒಂದು ಭಾವನೆಯನ್ನು ಸೃಷ್ಟಿಸುತ್ತದೆ. ನೀವು ಚೆನ್ನಾಗಿಯೂ ಸಂತೋಷವಾಗಿಯೂ ಇದ್ದರೆ ನೀವು ಹಿಂಸಾಚಾರಿಗಳಾಗಿರುವುದಿಲ್ಲ. ಒಬ್ಬರು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಹಿಂಸೆಯ ಹಿಂದೆ ಕೋಪ ಮತ್ತು ಹತಾಶೆಗಳಿವೆ ಎಂಬುದನ್ನು ತಿಳಿಯಿರಿ.

ಮಕ್ಕಳಾಗಿ ನಾವೆಲ್ಲರೂ ಯೋಗ ಮಾಡಿದ್ದೇವೆ. ಒಂದು ಮಗುವು ಹುಟ್ಟಿದಂದಿನಿಂದ ಅದಕ್ಕೆ ಮೂರು ವರ್ಷ ವಯಸ್ಸಾಗುವಲ್ಲಿಯವರೆಗೆ ನೀವು ಆ ಮಗುವನ್ನು ನೋಡಿದರೆ, ಅದು ಎಲ್ಲಾ ಯೋಗ ವ್ಯಾಯಾಮಗಳನ್ನು ಮಾಡಿರುತ್ತದೆ. ಒಂದು ಮಗುವು ಉಸಿರಾಡುವ ರೀತಿಯು, ಒಬ್ಬ ವಯಸ್ಕನು ಉಸಿರಾಡುವ ರೀತಿಗಿಂತ ಭಿನ್ನವಾಗಿದೆ. ಶರೀರ ಮತ್ತು ಭಾವನೆಗಳ ನಡುವಿನ ಕೊಂಡಿಯು ಉಸಿರಾಟವಾಗಿದೆ ಹಾಗೂ ಉಸಿರಾಟದ ಬಗ್ಗೆ ಗಮನ ಹರಿಸುವುದರ ಮೂಲಕ ನಿಮಗೆ ಭಾವನೆಗಳನ್ನು ಮೃದುವಾಗಿಸಲು ಹಾಗೂ ನಕಾರಾತ್ಮಕ ಭಾವನೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಗುರುವಾರ, ನವೆಂಬರ್ 13, 2014

ಸಾತ್ವಿಕ ಜಗತ್ತು

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ಸಂಪೂರ್ಣ ಜಗತ್ತು ತರಂಗಗಳಿಂದ ನಿರ್ಮಿಸಲ್ಪಟ್ಟಿದೆ, ಮತ್ತು ಈ ತರಂಗಗಳು ಸಾತ್ವಿಕವಾಗಿರುವಂತೆ ನಾವು ನೋಡಿಕೊಳ್ಳಬೇಕು.
ಒಬ್ಬ ವೈದ್ಯನು ಚೆನ್ನಾಗಿರುವಾಗ ಮತ್ತು ಎಲ್ಲರನ್ನೂ ಚೆನ್ನಾಗಿ ಶುಷ್ರೂಷಿಸುವಾಗ ಸಾಮಾನ್ಯವಾಗಿ ನಾವು ಆ ವೈದ್ಯನ ಕೈಗುಣ ಚೆನ್ನಾಗಿದೆಯೆಂದು ಹೇಳುತ್ತೇವೆ. ನೋಡಿ, ಎಲ್ಲಾ ವೈದ್ಯರು ಒಂದೇ ರೀತಿ, ಆದರೆ ಕೆಲವರು ತಮ್ಮ ರೋಗಿಗಳನ್ನು ಇತರರಿಗಿಂತ ಉತ್ತಮವಾಗಿ ಶುಶ್ರೂಷಿಸುತ್ತಾರೆ. ಅವರ ಕೈಗಳಲ್ಲಿ ಒಂದು ವಾಸಿಪಡಿಸುವ ಗುಣ ಇರುವಂತೆ ತೋರುತ್ತದೆ. ಯೋಚನೆಯ ಯಾವೆಲ್ಲಾ ಬೀಜಗಳನ್ನು ನಾವು ಪ್ರಜ್ಞೆಯೊಳಕ್ಕೆ ಬಿತ್ತುವೆವೋ, ನಮ್ಮ ಸುತ್ತಲಿರುವ ತರಂಗವು ಅದೇ ಆಗಿರುವುದು. ಅದಕ್ಕಾಗಿಯೇ ನಾವು ನಿಯಮಿತವಾಗಿ ಯೋಗ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಹೀಗಾಗಿ, ನಿಮಗೆಲ್ಲರಿಗೂ ನಿಮ್ಮ ಮನಸ್ಸು ಮತ್ತು ನಿಮ್ಮ ಜೀವದ ಗುಣಗಳನ್ನು ವರ್ಧಿಸಲು ಇದೊಂದು ಅದ್ಭುತ ಅವಕಾಶವಾಗಿದೆ.  

ಪ್ರತಿ ಶುಕ್ರವಾರದಂದು ಇಲ್ಲಿ ಆಶ್ರಮದಲ್ಲಿ ಲಕ್ಷ್ಮಿದೇವಿಯ ಗೌರವಾರ್ಥವಾಗಿ ನಾವೊಂದು ಸಣ್ಣ ಪೂಜೆಯನ್ನು ಮಾಡುತ್ತೇವೆ. ನಾಳೆ, ಪೂಜೆಯಲ್ಲಿ ಭಾಗವಹಿಸಲು ನಿಮ್ಮಲ್ಲಿ ಯಾರು ಇಚ್ಛಿಸುವಿರೋ ಅವರಿಗೆ ಹಾಗೆ ಮಾಡಲು ಸ್ವಾಗತವಿದೆ. ಮೊದಲಿಗೆ, ನಮ್ಮ ಹೊಲಗಳಲ್ಲಿ ಯಾವೆಲ್ಲಾ ಬೀಜಗಳನ್ನು ನಾವು ಬಿತ್ತುವೆವೋ ಅವುಗಳು ಬೆಳೆದು ಆಹಾರವನ್ನು ನೀಡಲಿಕ್ಕಾಗಿ ಹಾಗೂ ನಮ್ಮ ದೇಶದಲ್ಲಿ ಯಾರೂ ಹಸಿವಿನಿಂದ ಇರದೇ ಇರುವುದಕ್ಕಾಗಿ ನಮಗೆ ಕಾಲಕಾಲಕ್ಕೆ ಮಳೆಯನ್ನು ನೀಡಿ ಆಶೀರ್ವದಿಸಬೇಕೆಂದು ನಾವು ದೇವರನ್ನು ಪ್ರಾರ್ಥಿಸೋಣ.

ಪೂಜೆಯ ಬಳಿಕ ನಾವು ಇತರ ಸಭೆಗಳು ಮತ್ತು ಚಟುವಟಿಕೆಗಳನ್ನು ಮಾಡೋಣ. ಹೊಸತನ್ನೇನಾದರೂ ಪ್ರಾರಂಭಿಸುವ ಮೊದಲು ನಾವು ದೇವರನ್ನು ಪ್ರಾರ್ಥಿಸಬೇಕೆಂದು ಹೇಳಲಾಗಿದೆ. ಈ ಸಂಪ್ರದಾಯವು ಭಾರತದ ವಿಶೇಷತೆಯಾಗಿದೆ ಮತ್ತು ಅದು ಜಗತ್ತಿನ ಇತರ ಯಾವುದೇ ದೇಶದಲ್ಲೂ ಕಾಣಸಿಗುವುದಿಲ್ಲ. ನಾವು ಈ ಜಗತ್ತಿನಲ್ಲಿ ಜನ್ಮ ತಾಳಿದಾಗ, ನಮ್ಮೆಲ್ಲಾ ಆವಶ್ಯಕತೆಗಳಿಗಾಗಿ ನಾವು ನಮ್ಮ ಹೆತ್ತವರು ಮತ್ತು ಕುಟುಂಬದ ಮೇಲೆ ಬಹಳಷ್ಟು ಅವಲಂಬಿತರಾಗಿದ್ದೆವು ಎಂಬುದನ್ನು ನಾವು ಪ್ರಾರ್ಥಿಸುವಾಗ ನೆನಪಿಸಿಕೊಳ್ಳಬೇಕು. ನಮಗೆ ವಯಸ್ಸಾಗುವಾಗ, ಒಂದಲ್ಲ ಒಂದು ಕಾರಣಕ್ಕಾಗಿ ಮತ್ತೆ ನಾವು ನಮ್ಮ ಮಕ್ಕಳು ಮತ್ತು ಕುಟುಂಬದ ಮೇಲೆ ಅವಲಂಬಿತರಾಗುತ್ತೇವೆ. ಹೀಗೆ, ಬಾಲ್ಯದಲ್ಲಿ ಮತ್ತು ವೃದ್ಧಾಪ್ಯದಲ್ಲಿ ಎರಡು ಸಮಯದಲ್ಲೂ ನಾವು ಇತರರ ಮೇಲೆ ಅವಲಂಬನೆಯನ್ನು ಹೊಂದಿದ್ದೇವೆ. ನಮ್ಮ ಜೀವನದ ಈ ಎರಡು ಘಟ್ಟಗಳ ನಡುವೆಯೂ ನಾವು ಮಳೆ, ಸಮಾಜ, ಮೊದಲಾದ ಹಲವಾರು ವಿಷಯಗಳ ಮೇಲೆ ಅವಲಂಬಿತರಾಗಿದ್ದೇವೆ. ಹೀಗೆ ನಮ್ಮ ಜೀವನದುದ್ದಕ್ಕೂ ಯಾವುದಾದರ ಮೇಲಾದರೂ ಅಥವಾ ಯಾವುದಾದರೂ ವ್ಯಕ್ತಿಯ ಮೇಲಾದರೂ ನಾವು ಅವಲಂಬನೆಯ ಒಂದು ಭಾವವನ್ನು ಹೊಂದಿದ್ದೇವೆ. ಆದರೆ ಈ ಅವಲಂಬನೆಯು ನಿಜಕ್ಕೂ ನಮ್ಮೆಲ್ಲಾ ಅಗತ್ಯಗಳಿಗಾಗಿ ದೇವರ ಮೇಲಿರುವ ನಮ್ಮ ಅವಲಂಬನೆಯಾಗಿದೆ ಎಂಬುದನ್ನು ನಾವು ನೆನಪಿಸಿಕೊಂಡಾಗ, ಅವಲಂಬನೆಯ ಈ ಭಾವವು, ಬಲಹೀನತೆಯ ಒಂದು ಮೂಲಕ್ಕಿಂತ ಹೆಚ್ಚಿನ ಆಂತರಿಕ ಶಕ್ತಿಯ ಒಂದು ಮೂಲವಾಗುತ್ತದೆ. ಆಗ ಅಸಹಾಯಕತೆಯ ಕ್ಷಣಗಳಲ್ಲೂ ಕೂಡಾ ನಾವು ಶಕ್ತಿಯನ್ನು ಕಂಡುಕೊಳ್ಳಬಹುದು. ಇದು ದೇವರನ್ನು ಆರಾಧಿಸುವ ರಹಸ್ಯವಾಗಿದೆ.

ಹಿಂದಿಯಲ್ಲಿನ ಈ ಮಾತನ್ನು ನೀವು ಕೇಳಿರಬೇಕು, ’ನಿರ್ಬಲ್ ಕೆ ಬಲ್ ರಾಮ್’ (ನಿರ್ಬಲನ ಬಲವಾಗಿರುವನು ಭಗವಂತ). ಹೀಗಾಗಿ, ನೀವು ಬಲಹೀನರೆಂದು ಮೊದಲು ಒಪ್ಪಿಕೊಳ್ಳಿ ಮತ್ತು ನಂತರ, ನಿರ್ಬಲರ ಬಲವು ದೇವರೆಂಬುದನ್ನು ತಿಳಿಯಿರಿ. ನಿಮ್ಮಲ್ಲಿ ಈ ಬಲವಾದ ನಂಬಿಕೆಯಿರುವಾಗ, ನೀವು ಬಲಹೀನತೆ ಮತ್ತು ನಿಸ್ಸಹಾಯಕತೆಯನ್ನು ಅನುಭವಿಸುವುದು ಮುಂದುವರಿಯುವುದೇ? ಇಲ್ಲ, ಈ ಅರಿವು ಅಪಾರವಾದ ಶಕ್ತಿಯನ್ನು ತರುತ್ತದೆ ಹಾಗೂ ನಿಮ್ಮನ್ನು ಸ್ವಾವಲಂಬಿಯನ್ನಾಗಿಯೂ ಸ್ವತಂತ್ರರನ್ನಾಗಿಯೂ ಮಾಡುತ್ತದೆ. ನಮ್ಮ ರೈತರು ಸ್ವತಂತ್ರರಾಗಿಯೂ ಸ್ವಾವಲಂಬಿಗಳಾಗಿಯೂ ಆಗುವುದು ಬಹಳ ಅಗತ್ಯವಾಗಿದೆ.

ಹೇಳಿದ ಹಾಗೆ, ಇವತ್ತು ನಮ್ಮ ಆರ್ಟ್ ಆಫ್ ಲಿವಿಂಗ್ ಸ್ಥಾಪನೆ ವಾರ್ಷಿಕೋತ್ಸವವೂ ಆಗಿದೆ. ವಾಸ್ತವವಾಗಿ, ಈ ಜ್ಞಾನಕ್ಕೆ ನಿಜಕ್ಕೂ ಯಾವುದೇ ಆರಂಭವಿಲ್ಲ; ಅದು ಕಾಲಾತೀತವೂ, ಅನಾದಿಯೂ ಆಗಿದೆ. ಆದರೆ ಔಪಚಾರಿಕವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ವೇದ ವಿಜ್ಞಾನ ಮಹಾ ವಿದ್ಯಾಪೀಠವನ್ನು ನಾವು ಇವತ್ತು ಸ್ಥಾಪಿಸಿದೆವು, ಮತ್ತು ಸಂಸ್ಥೆಯು ನವೆಂಬರ್ ೧೩, ೧೯೮೧ರಂದು ನೋಂದಣಿಯಾಯಿತು. ಇವತ್ತು ಸೇವೆಯ ೩೩ ವರ್ಷಗಳನ್ನು ನಾವು ಪೂರ್ತಿಗೊಳಿಸಿದ್ದೇವೆ.
ಸಂಸ್ಥೆಯ ಮೊದಲ ಟ್ರಸ್ಟಿಗಳಲ್ಲಿ ಒಬ್ಬರು ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯ ಆಗಿದ್ದರು. ಇವತ್ತು ಅವರಿಗೆ ೧೦೦ ವರ್ಷಗಳು ತುಂಬಿವೆ. ಇವತ್ತು ಅವರ ೧೦೦ನೆಯ ಜನ್ಮದಿನವಾಗಿದೆ. ಅವರು ಭಾರತದ ಅತೀ ಹೆಚ್ಚು ಮೆಚ್ಚುಗೆ ಪಡೆದ ಕಾನೂನು ತಜ್ಞ ಹಾಗೂ ನ್ಯಾಯಲಯದ ನ್ಯಾಯಾಧೀಶರಾಗಿರುವರು. ಆ ದಿನಗಳಲ್ಲಿ ಅವರು ತಮ್ಮನ್ನು ತಾವು ಒಬ್ಬ ನಾಸ್ತಿಕರೆಂದು ಕರೆದುಕೊಳ್ಳುತ್ತಿದ್ದರು. ಆದರೆ ನಂತರ, ನನ್ನನ್ನು ಭೇಟಿಯಾದ ಬಳಿಕ, ನಾವು ಆಧ್ಯಾತ್ಮದ ಬಗ್ಗೆ ಹಲವಾರು ಚರ್ಚೆಗಳನ್ನು ಮಾಡುತ್ತಿದ್ದೆವು ಹಾಗೂ ನಿಧಾನವಾಗಿ ಅವರು ಕೂಡಾ ಆಸಕ್ತರಾದರು. ಆ ದಿನಗಳಲ್ಲಿ ನಾನು ನಡೆಸುತ್ತಿದ್ದ ಮಾರ್ಗದರ್ಶಿತ ಧ್ಯಾನಗಳಲ್ಲಿ ಅವರು ಉಪಸ್ಥಿತರಿರುತ್ತಿದ್ದರು, ಯಾಕೆಂದರೆ ಆ ಕಾಲದಲ್ಲಿ ಸುದರ್ಶನ ಕ್ರಿಯೆಯಿರಲಿಲ್ಲ, ಮತ್ತು ನಾನು ಧ್ಯಾನವನ್ನು ಮಾತ್ರ ಮಾಡಿಸುತ್ತಿದ್ದೆ. ಅವರು ನನ್ನೊಂದಿಗೆ ಬಹಳ ಸಮಯವನ್ನು ಕಳೆದರು. ನಂತರ, ಆಧ್ಯಾತ್ಮದಲ್ಲೇನೋ ನಿಜಕ್ಕೂ ಅದ್ಭುತವಾದುದೇನೋ ಇದೆ ಎಂದು ಅವರಿಗನ್ನಿಸಿತು, ಹಾಗೂ ಆ ನಂತರ ಅವರು ಒಬ್ಬ ಭಕ್ತರಾಗಿ ಮತ್ತು ಒಬ್ಬ ಆಸ್ತಿಕರಾಗಿ ತಮ್ಮ ಪಯಣವನ್ನು ಪ್ರಾರಂಭಿಸಿದರು. ಅವರೊಬ್ಬ ಬಹಳ ಉದಾತ್ತ ಹೃದಯದ ವ್ಯಕ್ತಿಯಾಗಿದ್ದರು.

ನಿಮಗೆ ಗೊತ್ತಾ, ಒಬ್ಬ ವ್ಯಕ್ತಿಯು ನಾಸ್ತಿಕನಾಗಿರಲಿ ಅಥವಾ ಒಬ್ಬ ಆಸ್ತಿಕನಾಗಿರಲಿ (ದೇವರ ಅಥವಾ ಆಧ್ಯಾತ್ಮದ), ಅವನು ದೃಢವಾಗಿರುವವರೆಗೆ ಮತ್ತು ತನ್ನ ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕನಾಗಿರುವಲ್ಲಿಯವರೆಗೆ, ಅವನು ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಮತ್ತು ಸಮಯ ಮುಂದೆ ಹೋದಂತೆ, ನಿಧಾನವಾಗಿ ಮತ್ತು ಖಂಡಿತವಾಗಿಯೂ ಅವರು ಆಧ್ಯಾತ್ಮದಲ್ಲಿ ಒಂದು ಆಸಕ್ತಿಯನ್ನು ಬೆಳೆಸಿಕೊಳ್ಳಲು ಶುರುಮಾಡುತ್ತಾರೆ ಮತ್ತು ಬಲವಾದ ನಂಬಿಕೆಯುಳ್ಳವರಾಗುತ್ತಾರೆ. ನಾವಿದನ್ನು ಹಲವಾರು ಸಾರಿ ಗಮನಿಸಿದ್ದೇವೆ. ಒಬ್ಬ ವ್ಯಕ್ತಿಯು ಕೆಲವೊಮ್ಮೆ, "ಓ, ನಾನೊಬ್ಬ ನಾಸಿಕ" ಎಂದು ಹೇಳಲೂಬಹುದು, ಆದರೆ ಅವರದನ್ನು ಒಂದು ಬಹಳವಾದ ಬಾಹ್ಯ ಮಟ್ಟದಿಂದ ಹೇಳುತ್ತಾರೆ. ಕೆಳಗೆ ಆಳದಲ್ಲಿ, ತಮ್ಮ ಸೀಮಿತವಾದ ತಿಳುವಳಿಕೆಯನ್ನು ಮೀರಿದುದು ನಿಜಕ್ಕೂ ಏನೋ ಇದೆಯೆಂಬುದು ಅವರಿಗೂ ತಿಳಿದಿರುತ್ತದೆ. ಹೀಗಾಗಿ, ಅಂತಹ ಜನರು ನಿಧಾನವಾಗಿ ಮತ್ತು ಖಂಡಿತವಾಗಿಯೂ ಆಧ್ಯಾತ್ಮದ ಬೆಲೆಯನ್ನು ಅರ್ಥಮಾಡಿಕೊಳ್ಳುತ್ತಾರೆ.

ವಾಸ್ತವವಾಗಿ, ಆ ಕಾಲದಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಮನಸ್ಸಿರಲಿಲ್ಲ. ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಸ್ಫೂರ್ತಿ ನೀಡಿದುದು ಮತ್ತು ಬೆಂಬಲಿಸಿದುದು ಈ ಕೆಲವು ಜನರಾಗಿದ್ದರು; ಪಿತಾಜಿ (ಗುರುದೇವರ ತಂದೆಯ ಒಂದು ಪ್ರೀತಿಪೂರ್ವಕವಾದ ಹೆಸರು), ನ್ಯಾಯಮೂರ್ತಿ ಕೃಷ್ಣಯ್ಯ, ನ್ಯಾಯಮೂರ್ತಿ ಭಗವತಿ, ಬೆಂಗಳೂರಿನ ಮೇಯರ್ ಆಗಿದ್ದ ಶ್ರೀ ಲಕ್ಷ್ಮಣ ರಾವ್ ಮತ್ತು ಆ ಸಮಯದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ನರಸಿಂಹ ರಾವ್. ಈ ಐದು ಮಂದಿ ನನ್ನಲ್ಲಿ, "ಇಲ್ಲ, ನೀವು ಈ ಸಂಸ್ಥೆಯನ್ನು ಪ್ರಾರಂಭಿಸಬೇಕು" ಎಂದು ಹೇಳಿದರು. ೩೩ ವರ್ಷಗಳ ಹಿಂದೆ ಅವರು ಔಪಚಾರಿಕವಾಗಿ ಸಂಸ್ಥೆಯನ್ನು ನೋಂದಣಿಗೊಳಿಸಿದ ದಿನ ಇವತ್ತಾಗಿದೆ.

ಹೀಗೆ, ಇವತ್ತು ನಮ್ಮ ಆಶ್ರಮವು ತನ್ನ ಅಸ್ತಿತ್ವದ ೩೩ ವರ್ಷಗಳನ್ನು ಪೂರೈಸಿದೆ. ಆ ದಿನಗಳಲ್ಲಿ ಆಶ್ರಮವು ಇವತ್ತು ಕಾಣಿಸುವಂತೆ ಇರಲಿಲ್ಲ. ಆ ಮೊದಲಿನ ದಿನಗಳಲ್ಲಿ ಕೋಣೆಗಳು ಹಾಗೂ ವಸತಿಗೃಹಗಳು ಹುಲ್ಲು ಮತ್ತು ಮಣ್ಣಿನಿಂದ ಮಾಡಲ್ಪಟ್ಟ ಗುಡಿಸಲುಗಳಾಗಿದ್ದವು. ಆ ದಿನಗಳಲ್ಲಿ, ಸಿಮೆಂಟಿನಿಂದ ಮಾಡಲ್ಪಟ್ಟ ಒಂದೇ ಒಂದು ಗಟ್ಟಿಮುಟ್ಟಾದ ಮನೆಯಿರಲಿಲ್ಲ; ಎಲ್ಲರೂ ಗುಡಿಸಲುಗಳನ್ನು ಕಟ್ಟುತ್ತಿದ್ದರು. ಆದರೆ ಇವತ್ತಿನ ಬದಲಾವಣೆಯನ್ನು ನೋಡಿ. ಇವತ್ತು ಎಲ್ಲರೂ ಸಿಮೆಂಟಿನಿಂದ ಮಾಡಿದ ಬಲವಾದ ಮನೆಗಳನ್ನು ಕಟ್ಟುತ್ತಾರೆ. ಆ ದಿನಗಳಲ್ಲಿ, ಮಳೆ ಬರುವಾಗ ಹುಲ್ಲಿನ ಛಾವಣಿಯಿಂದ ನೆಲಕ್ಕೆ ನೀರು ಹನಿಹನಿಯಾಗಿ ಸೋರುತ್ತಿತ್ತು. ನಾನು ಯಾವತ್ತೂ ಸರಳತೆಯನ್ನು ಇಷ್ಟಪಡುತ್ತಿದ್ದೆ. ಹೆಚ್ಚಾಗಿ ನಾನು, ಮನೆಗಳು ಮತ್ತು ಗುಡಿಸಲುಗಳನ್ನು ಹಳೆ ಕಾಲದಲ್ಲಿ ಹೇಗಿತ್ತೋ ಹಾಗೆ, ತೆಂಗಿನ ನಾರು ಹಾಗೂ ಒಣಹುಲ್ಲುಕಡ್ಡಿಗಳಿಂದ ಕಟ್ಟಬೇಕೆಂದು ಹೇಳುತ್ತಿದ್ದೆ. ಆ ಸಮಯದಲ್ಲಿ ನನ್ನೊಂದಿಗೆ ಕೇವಲ ಸುಮಾರು ೧೦೦-೨೦೦ ಜನರು ಮಾತ್ರ ಇದ್ದರು. ನಿಮ್ಮಲ್ಲಿ ಕೆಲವರು ಈಗಲೂ ಇಲ್ಲಿ ಇವತ್ತು ಕುಳಿತಿರುವಿರಿ. ನಾವು ಬಾವಿಯಿಂದ ನೀರು ಸೇದುತ್ತಿದ್ದೆವು ಮತ್ತು ಆಶ್ರಮವನ್ನು ಬೆಳಗಲಿಕ್ಕಾಗಿ ಒಂದು ಜನರೇಟರ್ ವಿದ್ಯುತ್ತನ್ನು ಪೂರೈಸುತ್ತಿತ್ತು. ವಿದ್ಯುಚ್ಛಕ್ತಿಯು ಒಂದು ದಿನಕ್ಕೆ ಒಂದರಿಂದ ಎರಡು ಗಂಟೆಗಳಷ್ಟು ಕಾಲ ಮಾತ್ರ ಪೂರೈಕೆಯಾಗುತ್ತಿತ್ತು. ಆ ದಿನಗಳಲ್ಲಿ ಬಹಳಷ್ಟು ಮಳೆ ಬರುತ್ತಿತ್ತು ಮತ್ತು ಎಷ್ಟೊಂದು ಗಾಳಿ ಬೀಸುತ್ತಿತ್ತೆಂದರೆ, ಬಲವಾದ ಗಾಳಿಯೊಂದಿಗೆ ಎಲ್ಲವೂ ಹಾರಿಹೋಗುತ್ತಿತ್ತು. ಆಗ ನಾವು, ಇರಲಿಕ್ಕಾಗಿ ಹೆಚ್ಚು ಗಟ್ಟಿಯಾದ ಜಾಗಗಳನ್ನು ಮಾಡಬೇಕೆಂದು ಯೋಚಿಸಿದೆವು. ವಿದೇಶಗಳಿಂದ ಕೂಡಾ ಹಲವಾರು ಜನರು ನನ್ನನ್ನು ಭೇಟಿಯಾಗಲು ಬರತೊಡಗಿದರು. ಅವರಲ್ಲೊಬ್ಬರು ನನ್ನಲ್ಲಿ, "ಗುರುದೇವ, ಹಲವಾರು ಭಕ್ತರು ಆಶ್ರಮಕ್ಕೆ ಈಗ ಹರಿದುಬರುತ್ತಿದ್ದಾರೆ. ಈ ಎಲ್ಲಾ ಜನರು ಉಳಿದುಕೊಳ್ಳುವುದಕ್ಕಾಗಿ ನೀವು ನಿಜಕ್ಕೂ ಒಂದು ದೊಡ್ಡ ಧ್ಯಾನ ಮಂದಿರವನ್ನು ಬೇಗನೇ ಕಟ್ಟಿಸಬೇಕಾಗುವುದು. ಅವರಿಗೆ ಹೆಚ್ಚು ಸಮಯ ಗುಡಿಸಲುಗಳಲ್ಲಿ ಮತ್ತು ಟೆಂಟುಗಳಲ್ಲಿ ಇರಲು ಸಾಧ್ಯವಾಗದು" ಎಂದು ಹೇಳಿದರು.

ನಾನು ಸಮ್ಮತಿಸಿದೆ ಮತ್ತು ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲು ಅವರಿಗೆ ಹೇಳಿದೆ. ಧ್ಯಾನ ಮಂದಿರದ ವಿನ್ಯಾಸವನ್ನು ನಾನೇ ಮಾಡಿದೆ ಹಾಗೂ ಅವರಿಗೆ ಸೂಚನೆಗಳನ್ನು ನೀಡಿದೆ. ಆ ಧ್ಯಾನ ಮಂದಿರವು ಈಗ, ಇವತ್ತು ನೀವು ಕುಳಿತಿರುವ ವಿಶಾಲಾಕ್ಷಿ ಮಂಟಪವಾಗಿದೆ.

ಸುಮಾರು ೧೦-೧೫ ವರ್ಷಗಳ ಬಳಿಕ ಹೆಚ್ಚು ಹೆಚ್ಚು ಗಟ್ಟಿಮುಟ್ಟಾದ ಮನೆಗಳು ನಿರ್ಮಾಣವಾಗತೊಡಗಿದವು. ನಾವು ನಮಗಾಗಿ ಗಟ್ಟಿಯಾದ ಮನೆಗಳನ್ನು ನಿರ್ಮಿಸುವುದಾದರೆ, ಆಗ ನಾವು ಹಳ್ಳಿಯ ಹಾಗೂ ಸುತ್ತುಮುತ್ತಲಿನ ಪ್ರದೇಶಗಳ ಜನರಿಗೂ, ಗಟ್ಟಿಯಾದ ಮನೆಗಳನ್ನು ಕಟ್ಟುವಲ್ಲಿ ಸಹಾಯ ಮಾಡಬೇಕೆಂದು ನಾನು ಹೇಳಿದೆ. ಇಲ್ಲಿ ವಾಸಿಸುವ ಎಲ್ಲರಿಗೂ ಕೂಡಾ ಒಂದು ಗಟ್ಟಿಯಾದ ಮನೆ ಸಿಗುವುದಾದರೆ ಮಾತ್ರ ಅಂತಹ ಕಟ್ಟಡ ನಿರ್ಮಾಣಕ್ಕೆ ನಾನು ಅನುಮತಿ ನೀಡುವೆನೆಂದು ಆ ಸಮಯದಲ್ಲಿ ನನ್ನೊಂದಿಗಿದ್ದ ಭಕ್ತರಲ್ಲಿ ನಾನು ಹೇಳಿದೆ. ಅವರೆಲ್ಲರೂ ಒಟ್ಟು ಸೇರಿ, ಆಶ್ರಮದ ಸಮೀಪ ಹಾಗೂ ಸುತ್ತಲೂ ಇರುವ ಎಲ್ಲರಿಗೂ ಕೂಡಾ ವಾಸಿಸಲಿಕ್ಕಾಗಿ ಗಟ್ಟಿಯಾದ ಮನೆಗಳು ಸಿಗುವಂತೆ ನೋಡಿಕೊಂಡರು. ಪ್ರತಿಯೊಂದು ಮನೆಯೂ ಒಂದು ಸರಿಯಾದ ಶೌಚಾಲಯವನ್ನು ಹೊಂದಿತ್ತು. ಆಶ್ರಮದ ಆವರಣದ ಹಿಂದೆ ವಾಸಿಸುವ ಜನರಿಗಾಗಿ ಒಂದು ಚಿಕ್ಕ ಉಪನಿವೇಶ(ಕೋಲೊನಿ)ವನ್ನು ಕೂಡಾ ನಾವು ಮಾಡಿಸಿದೆವು. ಮೊದಲು ಅವರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅದು, ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ನಿಜಕ್ಕೂ ಸಹಾಯಕವಾಯಿತು.

ಸಂತೃಪ್ತ ರೈತನೇ ರಾಷ್ಟ್ರದ ಸಮೃದ್ಧಿಯ ಸಂಕೇತ

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ವತ್ತು, ದೇಶದ ಎಲ್ಲೆಡೆಗಳಿಂದ ಹಲವಾರು ರೈತರು ಇಲ್ಲಿ ಬೆಂಗಳೂರು ಆಶ್ರಮದಲ್ಲಿ ಸೇರಿದ್ದಾರೆ. ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ!
ಒಂದು ದೇಶದ ರೈತರು ಸಂತೋಷವಾಗಿಯೂ ಸಮೃದ್ಧವಾಗಿಯೂ ಇದ್ದರೆ, ಆಗ ಖಂಡಿತವಾಗಿಯೂ ಆ ದೇಶದ ಜನರು ಕೂಡಾ ಸಂತೋಷವಾಗಿರುವರು. ಯಾವ ದೇಶದ ರೈತರು ಅಸಂತೋಷವಾಗಿರುವರೋ ಆ ದೇಶವು ಸಂತೋಷವಾಗಿಯೂ, ಆರೋಗ್ಯಕರವಾಗಿಯೂ ಇರಲಾರದು. ಹೀಗಾಗಿ ರೈತನು ಸಂತೋಷವಾಗಿಯೂ ತೃಪ್ತನಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಎರಡು ಮಾರ್ಗಗಳಿವೆ:

೧. ನಮ್ಮ ಅಂತರ್ಬಲವನ್ನು ಹೆಚ್ಚಿಸುವುದು ಮತ್ತು ನಮ್ಮ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವುದು. ನಮ್ಮ ದಾರಿಯಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸಹಿಸಲು ನಾವು ಸಮರ್ಥರಾಗುವಂತೆ ಇದು ಮಾಡುತ್ತದೆ.

೨. ಕಷ್ಟಗಳಾಗದಿರಲೆಂದು, ಏನನ್ನಾದರೂ ಮಾಡುವ ಮೊದಲು ನಾವು ಎಚ್ಚರಿಕೆಯಿಂದ ಯೋಜನೆ ಮತ್ತು ಉಪಾಯಗಳನ್ನು ಮಾಡಬೇಕು.

ನೋಡಿ, ಕೆಲವು ವಿಷಯಗಳು ನಮ್ಮ ಕೈಯಲ್ಲಿರುತ್ತವೆ ಮತ್ತು ಕೆಲವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಕೈಯಲ್ಲೇನಿದೆಯೋ ಅದನ್ನು ಉತ್ತಮಗೊಳಿಸಲು ನಾವು ಪ್ರಯತ್ನಿಸಬೇಕು. ನಮ್ಮ ನಿಯಂತ್ರಣವನ್ನು ಮೀರಿದುದನ್ನೆಲ್ಲಾ ನಾವು ಸುಮ್ಮನೇ ದೇವರಿಗೆ ಸಮರ್ಪಿಸಬೇಕು, ಎಲ್ಲವೂ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಬೇಕು ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು. ಆಗ ನಿಮ್ಮೆಲ್ಲಾ ಕೆಲಸಗಳು ಈಡೇರಲು ತೊಡಗುವುದನ್ನು ನೀವು ನೋಡುವಿರಿ.

(ಶ್ರೀ ಶ್ರೀಯವರು ರೈತರಲ್ಲಿ: ಈ ಮೂರು ದಿನಗಳ ಕಾರ್ಯಾಗಾರದಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸೋಣ. ಇದೆಲ್ಲದರಿಂದ ನಿಮಗೆಲ್ಲರಿಗೂ ಬಹಳವಾಗಿ ಲಾಭವಾಗುವುದೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ನಿಮಗೆ ಲಾಭವಾದಾಗ ಹಾಗೂ ನೀವು ಸಮೃದ್ಧರಾದಾಗ ಈ ದೇಶದಲ್ಲಿನ ಹಲವು ನೂರಾರು ಸಾವಿರಾರು ಜನರು ಕೂಡಾ ಲಾಭ ಪಡೆಯುವರು. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಮ್ಮ ದೇಶದಲ್ಲಿ ಹಲವಾರು ಜನರಿಗೆ, ಜೀವನೋಪಾಯಕ್ಕೆ ಹಾಗೂ ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿದೆ.)

ತಮ್ಮ ಊಟವನ್ನು ಪ್ರಾರಂಭಿಸುವ ಮೊದಲು ಒಂದು ಪ್ರಾರ್ಥನೆಯಾಗಿ ಒಂದು ಸಣ್ಣ ಮಂತ್ರವನ್ನು ಹೇಳಬೇಕೆಂದು ನಾನು ಹೋದಲ್ಲೆಲ್ಲಾ ಜನರಲ್ಲಿ ಯಾವಾಗಲೂ ಹೇಳುತ್ತಿರುತ್ತೇನೆ. ಅದು ’ಅನ್ನದಾತಾ ಸುಖೀ ಭವ’ ಎಂಬುದಾಗಿ. (ಈ ಊಟಕ್ಕೆ ಸಹಕರಿಸಿದವರೆಲ್ಲಾ ಸಂತೋಷವಾಗಿಯೂ ಸಮೃದ್ಧವಾಗಿಯೂ ಇರಲಿ).

ನಾವು ಚಿಕ್ಕ ಮಕ್ಕಳಾಗಿದ್ದಾಗ, ನಾವು ಊಟ ಪ್ರಾರಂಭಿಸುವುದಕ್ಕೆ ಮೊದಲು ಈ ಮಂತ್ರವನ್ನುಚ್ಛರಿಸುವಂತೆ ನನ್ನ ತಂದೆಯವರು ಯಾವತ್ತೂ ನಮಗೆ ಹೇಳುತ್ತಿದ್ದರು. ನಿಜ ಹೇಳಬೇಕೆಂದರೆ, ನಾವು ನಮ್ಮ ಊಟ ಮುಗಿಸಿದ ಬಳಿಕವೂ ಈ ಮಂತ್ರವನ್ನುಚ್ಛರಿಸುವಂತೆ ಅವರು ನಮ್ಮಲ್ಲಿ ಹೇಳುತ್ತಿದ್ದರು. ಅವರಿಂದ ಬೇರೆ ಯಾವುದೇ ಶ್ಲೋಕವನ್ನು ನಾನು ಯಾವತ್ತೂ ಕೇಳಲಿಲ್ಲ. ಅವರು ಯಾವತ್ತೂ ಈ ಮಂತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ನೀವು ಈ ಮಂತ್ರವನ್ನುಚ್ಛರಿಸುವಾಗ ನಿಜವಾಗಿ, ಆಹಾರವನ್ನು ಒದಗಿಸುವ ಮೂವರು ವ್ಯಕ್ತಿಗಳಿಗಾಗಿ ನೀವು ಪ್ರಾರ್ಥಿಸುತ್ತಿರುತ್ತೀರಿ. ಮೊದಲನೆಯ ವ್ಯಕ್ತಿಯೆಂದರೆ ಸ್ವಾಭಾವಿಕವಾಗಿ, ಆಹಾರ ಧಾನ್ಯಗಳನ್ನು ಬೆಳೆಸುವ ರೈತ. ಎರಡನೆಯ ವ್ಯಕ್ತಿಯೆಂದರೆ, ಈ ಆಹಾರ ಧಾನ್ಯಗಳನ್ನು ವ್ಯಾಪಾರ ಮಾಡಿ ನಮ್ಮ ಮನೆಗಳಿಗೆ ಅವುಗಳನ್ನು ತರುವ ವ್ಯಾಪಾರಿ. ವ್ಯಾಪಾರಿ ಯಾಕೆಂದು ನೀವು ಕೇಳಲೂಬಹುದು. ನೋಡಿ, ರೈತನು ಬೆಳೆಗಳನ್ನು ಬೆಳೆಯುತ್ತಾನೆ. ಆದರೆ ವ್ಯಾಪಾರಿಯು ಧಾನ್ಯಗಳನ್ನು ಮಾರುಕಟ್ಟೆಗಳಿಗೆ ತರದೇ ಇದ್ದರೆ, ಆಗ ರೈತ ಮತ್ತು ಜನರು, ಇಬ್ಬರೂ ಕಷ್ಟಕ್ಕೊಳಗಾಗುತ್ತಾರೆ.

ಆಹಾರ ಧಾನ್ಯಗಳನ್ನು ಶೇಖರಿಸಿಟ್ಟು ಅವುಗಳಿಗೆ ನ್ಯಾಯಯುತವಾದ ಬೆಲೆಯನ್ನು ನೀಡದೇ ಇರುವ ಅಥವಾ ಸಾಮಾನ್ಯ ಜನರಿಗೆ ಅವುಗಳನ್ನು ಬಹಳ ಅಧಿಕ ಬೆಲೆಗೆ ಮಾರುವ ಜನರು ಆಹಾರ ಧಾನ್ಯಗಳು ಹಾಳಾಗುವಂತೆ ಮಾಡುತ್ತಾರೆ. ನಿಮಗೆ ಗೊತ್ತಾ, ನಮ್ಮ ದೇಶದಲ್ಲಿ ಆಹಾರ ಧಾನ್ಯಗಳು ಹೇರಳವಾಗಿವೆ, ಆದರೆ ಆಹಾರ ಧಾನ್ಯಗಳ ಕಳಪೆ ವಿತರಣೆಯಿಂದಾಗಿ ಹಲವಾರು ಜನರು ಹಸಿವೆಯಿಂದಿರಬೇಕಾಗುತ್ತದೆ ಮತ್ತು ಅದೇ ವೇಳೆ ಆಹಾರ ಧಾನ್ಯಗಳು ಕೂಡಾ ಹಾಳಾಗುತ್ತವೆ (ಅಕ್ರಮಣ ಸಂಗ್ರಹಣೆಯಿಂದಾಗಿ).

ಟೊಮ್ಯಾಟೋಗಳ ಬೆಲೆಯು ಇದ್ದಕ್ಕಿದ್ದಂತೆ ಬಹಳ ಏರುವುದು ಮತ್ತು ಮುಂದಿನ ತಿಂಗಳುಗಳಲ್ಲಿ ಪುನಃ ಇದ್ದಕ್ಕಿದ್ದಂತೆ ಕೆಳಕ್ಕಿಳಿಯುವುದು ತಪ್ಪು ಚಟುವಟಿಕೆಗಳಿಂದಾಗಿ.  ನಿಮಗೆಲ್ಲರಿಗೂ ಇದರ ಅನುಭವವಾಗಿದೆಯೇ? ಈ ಅನುಭವವಾಗಿರುವವರೆಲ್ಲರೂ ನಿಮ್ಮ ಕೈಗಳನ್ನು ಮೇಲೆತ್ತಿ.

(ಸಭಿಕರಲ್ಲಿ ಅನೇಕರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ವ್ಯಾಪಾರಿಗಳು ಮತ್ತು ವರ್ತಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅಥವಾ ಅವರು ಅಸಂತುಷ್ಟರಾಗಿದ್ದರೆ, ನೀವೆಲ್ಲರೂ ಈ ನಷ್ಟದ ಹೊರೆಯನ್ನು ಹೊರಬೇಕಾಗುತ್ತದೆ.

ಅಸಂತೋಷವಾಗಿರುವವರು, ಅನಾರೋಗ್ಯದಿಂದಿರುವವರು ಅಥವಾ ಅತೃಪ್ತರಾಗಿರುವವರು ಮಾತ್ರ ಕೆಟ್ಟದ್ದನ್ನು ಮಾಡುತ್ತಾರೆ. ಅನಾರೋಗ್ಯವಾಗಿರುವ ಮತ್ತು ಅಸಂತೋಷವಾಗಿರುವವರೊಬ್ಬರು ಮಾತ್ರ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದಿಲ್ಲ ಹಾಗೂ ಮೋಸದ ಚಟುವಟಿಕೆಗಳನ್ನು ಮಾಡುತ್ತಾರೆ. ಒಳಗಿನಿಂದ ತೃಪ್ತನಾಗಿರುವ ಒಬ್ಬ ವ್ಯಕ್ತಿಯು ಬೇರೊಬ್ಬರಿಗೆ ತೊಂದರೆಯನ್ನು ಸೃಷ್ಟಿಸುವ ಬಗ್ಗೆ ಯಾವತ್ತೂ ಯೋಚಿಸಲಾರ.

ಹೀಗೆ ಒಬ್ಬ ವ್ಯಾಪಾರಿಯು ಸಂತುಷ್ಟನಾಗಿರುವಾಗ ಹಾಗೂ ನಿಯಮ, ನಿಬಂಧನೆಗಳನ್ನು ನ್ಯಾಯಯುತವಾಗಿ ಅನುಸರಿಸುವಾಗ, ರೈತರನ್ನು ಶೋಷಿಸಲು ಅಥವಾ ವಂಚಿಸಲು ಅವನು ಬಯಸಲಾರ. ಇವತ್ತು, ನಮ್ಮ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರಿ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ನಿಮಗೆ ಗೊತ್ತಾ, ಭಾರತದಲ್ಲಿ ನಾವು ಬೆಳೆಯುವ ಸಕ್ಕರೆಯ ಬೆಲೆ ಒಂದು ಕಿಲೋಕ್ಕೆ ೧೨ ರೂಪಾಯಿಗಳು. ಆದರೆ ನಾವು ವಿದೇಶಗಳಿಂದ ಸಕ್ಕರೆಯನ್ನು ಆಮದು ಮಾಡುತ್ತೇವೆ ಮತ್ತು ಅದಕ್ಕೆ ಒಂದು ಕಿಲೋಕ್ಕೆ ೩೦ ರೂಪಾಯಿಗಳನ್ನು ನೀಡುತ್ತೇವೆ. ನಮ್ಮ ಭಾರತೀಯ ಸಕ್ಕರೆಯು ಆಮದು ಮಾಡಿಕೊಳ್ಳಲಾದ ಸಕ್ಕರೆಗಿಂತ ಸಿಹಿಯಲ್ಲಿ ಕಡಿಮೆಯಿದೆಯೇ? ಇದೆಲ್ಲಾ ಯಾಕಾಗುತ್ತಿದೆ?

ಕೆಲವು ಭ್ರಷ್ಟ ರಾಜಕಾರಣಿಗಳು ಕೆಲವು ಉದ್ಯಮಿಗಳೊಂದಿಗೆ ಸೇರಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹೀಗೆ ವ್ಯಾಪಾರಿಗಳು ಅಸಂತುಷ್ಟರಾಗಿದ್ದರೆ, ಆಗ ಕೂಡಾ ರೈತ ಮತ್ತು ಇಡೀ ಜನರು ಅಸಂತುಷ್ಟರಾಗುವರು ಹಾಗೂ ಕಷ್ಟಪಡಬೇಕಾಗುತ್ತದೆ.

ವ್ಯಾಪಾರಿಗಳು ಅಸಂತುಷ್ಟರಾಗಿರುವಾಗ ಹೆಚ್ಚು ಲಾಭ ಗಳಿಸುವುದಕ್ಕಾಗಿ ಅವರು ಆಹಾರ ಧಾನ್ಯಗಳ ಹಾಗೂ ಸಕ್ಕರೆಯ ಕಲಬೆರಕೆಗೆ ಮೊರೆಹೋಗುತ್ತಾರೆ ಮತ್ತು ಅವುಗಳನ್ನು ಜನರಿಗೆ ಮಾರುತ್ತಾರೆ. ನೀವು ಒಂದು ಕಿಲೋ ಅಕ್ಕಿಯನ್ನು ಖರೀದಿಸಿದರೆ ಅದರ ಪ್ಯಾಕೆಟ್‌ನಲ್ಲಿ ಸುಮಾರು ೧೦೦-೨೦೦ ಗ್ರಾಂಗಳಷ್ಟು ಕಲ್ಮಶಗಳು ಮತ್ತು ತರಿಗಳು ಇರುವುದು ನಿಮಗೆ ಕಂಡುಬರುತ್ತದೆ. ಈ ದಿನಗಳಲ್ಲಿ, ಹಾಲು, ಗೋಧಿಹಿಟ್ಟು ಮತ್ತು ತುಪ್ಪಗಳಲ್ಲೂ ಕಲಬೆರಕೆ ಮಾಡಲಾಗುತ್ತದೆ. ಅಂತಹ ಕಲಬೆರಕೆಯಲ್ಲಿ ತೊಡಗಿರುವ ಒಬ್ಬ ವ್ಯಾಪಾರಿಯು ಖಂಡಿತವಾಗಿಯೂ ಹೃದಯದಿಂದ ಅಸಂತುಷ್ಟನಾಗಿರುವ ಹಾಗೂ ಅತೃಪ್ತನಾಗಿರುವ ಒಬ್ಬ ವ್ಯಾಪಾರಿಯಾಗಿರುತ್ತಾನೆ. ಇದಕ್ಕಾಗಿಯೇ, ಆಹಾರೋತ್ಪನ್ನಗಳಲ್ಲಿ ಅವರು ಕಲಬೆರಕೆ ಮಾಡದಿರಲು ಹಾಗೂ ರೈತರು ಮಾರುಕಟ್ಟೆಯಿಂದ ತಮ್ಮ ನ್ಯಾಯಸಮ್ಮತವಾದ ಲಾಭಗಳ ಭಾಗವನ್ನು ಪಡೆಯುವಂತೆ ಅವರು ನೋಡಿಕೊಳ್ಳುವುದಕ್ಕಾಗಿ, ನಾವು ಅವರ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು. ಒಬ್ಬ ವ್ಯಾಪಾರಿಯು ಲೋಭಿಯಾಗಬಾರದು ಮತ್ತು ಹೆಚ್ಚು ಹಣ ಗಳಿಸುವುದಕ್ಕಾಗಿ ಆಹಾರವನ್ನು ಅನ್ಯಾಯದ ಬೆಲೆಗೆ ಮಾರಾಟ ಮಾಡಬಾರದು. ತಾನು ಆಹಾರ ಧಾನ್ಯಗಳನ್ನು ರೈತರಿಂದ ಯಾವ ಬೆಲೆಗೆ ಖರೀದಿಸುವೆನೋ ಅದೇ ಬೆಲೆಗೆ ಮಾರಾಟ ಮಾಡುವುದಾಗಿ ಅವನು ಖಚಿತಪಡಿಸಿಕೊಳ್ಳಬೇಕು.

ಧರ್ಮಶಾಸ್ತ್ರಗಳಲ್ಲಿ ಬರೆಯಲ್ಪಟ್ಟ ಪ್ರಕಾರ, ಒಬ್ಬ ವ್ಯಾಪಾರಿಯು ಲಾಭದಲ್ಲಿ ೨೦% ವನ್ನು ತನಗಾಗಿ ಇಟ್ಟುಕೊಳ್ಳಬಹುದು, ಆದರೆ ಅದಕ್ಕಿಂತ ಹೆಚ್ಚಲ್ಲ. ಆದರೆ ಇವತ್ತು ಆಗುತ್ತಿರುವುದೇನೆಂದರೆ, ವ್ಯಾಪಾರಿಗಳು ಸ್ವಾರ್ಥಪರವಾಗಿ ಗಳಿಕೆಯ ೫೦% ಅಥವಾ ಹೆಚ್ಚನ್ನು ತಮಗಾಗಿ ತೆಗೆದಿರಿಸುತ್ತಾರೆ ಹಾಗೂ ರೈತರಿಗೆ ಬಹಳ ಕಡಿಮೆ ಬಿಡುತ್ತಾರೆ. ಇದು ಸರಿಯಲ್ಲ. ಬದಲಾಗಿ, ಕೆಲವು ಆಹಾರ ಧಾನ್ಯಗಳು ಅಥವಾ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಹೆಚ್ಚು ಮಾರಾಟವಾದರೆ ಆಗ ವ್ಯಾಪಾರಿಯು, ರೈತರು ಕೂಡಾ ಲಾಭಗಳಲ್ಲಿ ಸಮಭಾಗವನ್ನು ಪಡೆಯುವಂತೆ ನೋಡಿಕೊಳ್ಳಬೇಕು.

ಈ ಮಂತ್ರದ ಮೂಲಕ ನಾವು ಯಾರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆವೋ ಆ ಮೂರನೆಯ ವ್ಯಕ್ತಿಯೆಂದರೆ, ನಮಗಾಗಿ ಬಳಲದೆಯೇ ಅಡುಗೆ ಮಾಡುವ ಮನೆಯ ಮಹಿಳೆ. ಅವಳು ಅಸಂತುಷ್ಟಳಾದರೆ, ಆಗ ಮನೆಯೂ ಕೂಡಾ ಕಷ್ಟಪಡುತ್ತದೆ. ಮನೆಯ ಮಹಿಳೆಯು ಒಳಗಿನಿಂದ ತೃಪ್ತಳಾಗಿಲ್ಲದೆ ಮತ್ತು ಸಂತೋಷವಾಗಿಲ್ಲದೇ ಇದ್ದರೆ, ಆಗ ಅವಳು ಬೇಯಿಸಿದ ಆಹಾರವನ್ನು ಆನಂದಿಸಲು ಅಥವಾ ಜೀರ್ಣಿಸಲು ಯಾರಿಗೂ ಸಾಧ್ಯವಾಗದು. ಅಡುಗೆ ಮಾಡುವಾಗ ಅವಳು ದುಃಖದ ಕಣ್ಣೀರು ಹಾಕಿದರೆ, ಆಗ ಆ ಆಹಾರವನ್ನು ತಿನ್ನುವ ಗಂಡಸು ಕೂಡಾ ಕಣ್ಣೀರು ಹಾಕಬೇಕಾಗುತ್ತದೆ. ಆದುದರಿಂದ ಮನೆಯ ಮಹಿಳೆಯು ಸಂತೋಷವಾಗಿಯೂ ಆನಂದವಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಈ ಮಂತ್ರವನ್ನು ಒಂದು ಪ್ರಾರ್ಥನೆಯಾಗಿ ಉಚ್ಛರಿಸುವುದರ ಮೂಲಕ ಇದನ್ನೇ ನಾವು ಹೇಳುವುದು.

ನಿಜಕ್ಕೂ ನೀವಿದರ ಕಡೆಗೆ ನೋಡಿದರೆ, ನಿಜವಾದ ಅನ್ನದಾತನು ದೇವರಲ್ಲದೆ ಬೇರೆ ಯಾರೂ ಅಲ್ಲ, ಮತ್ತು ದೇವರು ಯಾವತ್ತೂ ಸಂತೋಷವಾಗಿಯೂ ತೃಪ್ತನಾಗಿಯೂ ಇರುತ್ತಾನೆ. ದೇವರು ಯಾವತ್ತಾದರೂ ಅಸಂತುಷ್ಟನಾಗುತ್ತಾನೆಯೇ? ಇಲ್ಲ! ಆದರೂ, ನಾವಿರುವ ಈ ಭೌತಿಕ ಜಗತ್ತಿನ ಮಟ್ಟದಲ್ಲಿ, ನಮಗೆ ಆಹಾರ ನೀಡಲು ನೆರವಾಗುವ ಈ ಮೂರು ವ್ಯಕ್ತಿಗಳ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ನಾವು, ಸರ್ವಶ್ರೇಷ್ಠ ಪೋಷಕನಾದ ದೇವರಲ್ಲಿ ಪ್ರಾರ್ಥಿಸುತ್ತೇವೆ. ನಾವೆಲ್ಲರೂ ಇದನ್ನು ಪ್ರತಿದಿನವೂ ಹೇಳಬೇಕು; ನಮ್ಮ ಊಟದ ಮೊದಲು ಮತ್ತು ನಂತರ ಎರಡೂ ಸಲವೂ. ನೀವು ನಿಮ್ಮ ಆಹಾರ ಸೇವಿಸುವ ಮೊದಲು ಹಾಗೂ ಸೇವಿಸಿದ ಬಳಿಕ ಅವರನ್ನು ಆಶೀರ್ವದಿಸಿ.

ಪ್ರಪಂಚದಲ್ಲಿ ಅತೀ ಹೆಚ್ಚಿನ ಮಳೆಯನ್ನು ಪಡೆಯುವ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿ ಬಹಳಷ್ಟು ಮಳೆಯಾಗುತ್ತದೆ, ಆದರೆ ಅದಕ್ಕೆ ಹೊರತಾಗಿಯೂ ನಾವು ನಮ್ಮ ಜಲ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈಗಲೂ ನಾವು ಹಲವಾರು ರಾಸಾಯನಿಕ ತ್ಯಾಜ್ಯಗಳನ್ನು ನಮ್ಮ ಜಲಾಶಯಗಳಿಗೆ ಬಿಡುತ್ತಿದ್ದೇವೆ.

ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ರಾಸಾಯನಿಕಗಳು ಮತ್ತು ಕೃತಕ ಗೊಬ್ಬರಗಳು ಈಗಲೂ ನಮ್ಮ ಗದ್ದೆಗಳಲ್ಲಿ ಮತ್ತು ಜಮೀನುಗಳಲ್ಲಿ ಬಳಸಲ್ಪಡುತ್ತಿವೆ. ಈ ರಾಸಾಯನಿಕಗಳಿಗಾಗಿ ನಾವು ಎಷ್ಟೋ ಹೆಚ್ಚು ಹಣವನ್ನು ಹಾಳು ಮಾಡುತ್ತಿದ್ದೇವೆ ಹಾಗೂ ನಮ್ಮ ಮಣ್ಣಿನ ಸ್ವಾಭಾವಿಕ ಗುಣ ಮತ್ತು ಆರೋಗ್ಯವನ್ನು ಕೂಡಾ ನಾಶಪಡಿಸುತ್ತಿದ್ದೇವೆ. ನಮ್ಮ ಹಣದ ವಿಷಯದಲ್ಲಿ ನಾವು ನಷ್ಟವನ್ನನುಭವಿಸುವುದು ಮಾತ್ರವಲ್ಲದೆ, ನಮ್ಮ ಮಣ್ಣು ಮತ್ತು ಪ್ರಾಕೃತಿಕ ಸಂಪನ್ಮೂಲಗಳ ವಿಷಯದಲ್ಲಿಯೂ ಕೂಡಾ ನಾವು ನಷ್ಟವನ್ನನುಭವಿಸುತ್ತೇವೆ. ಈ ವಿಷಯಗಳ ಬಗ್ಗೆ ನಾವೊಂದು ಆಳವಾದ ಚರ್ಚೆಯನ್ನು ನಡೆಸಬೇಕಾಗಿದೆ.

(ಶ್ರೀ ಶ್ರೀಯವರು ರೈತರನ್ನು ಉದ್ದೇಶಿಸಿ: ಇಲ್ಲಿ ಆಶ್ರಮದಲ್ಲಿ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಹಲವಾರು ತಜ್ಞರು ಹಾಗೂ ವಿಜ್ಞಾನಿಗಳು ಕೂಡಾ ಬಂದಿದ್ದಾರೆ. ಅವರೆಲ್ಲರೂ ನಿಮ್ಮೊಂದಿಗೆ ಮಾತನಾಡುವರು, ಮತ್ತು ನೀವು ಕೂಡಾ ಮುಕ್ತವಾಗಿ ಚರ್ಚೆ ಮಾಡಬೇಕು ಮತ್ತು ನಿಮ್ಮ ಸಮಸ್ಯೆಗಳನ್ನು ಮುಂದಿಡಬೇಕು. ನೀವು ನಿಮ್ಮದೇ ಮನೆಗೆ ಬಂದಿರುವಿರೆಂದು ಭಾವಿಸಿ. ನೀವೀಗ ನಿಮ್ಮ ಆಧ್ಯಾತ್ಮಿಕ ನಿವಾಸದಲ್ಲಿರುವಿರಿ. ಇದು ನಿಮ್ಮದೇ ಜಾಗ, ಆದುದರಿಂದ ಸಂತೋಷವಾಗಿರಿ ಮತ್ತು ಇಲ್ಲಿನ ನಿಮ್ಮ ವಾಸವನ್ನು ಆನಂದಿಸಿ. ಬೆಳಗಿನ ಹೊತ್ತು ಒಂದೆರಡು ಗಂಟೆಗಳ ಕಾಲ ಸ್ವಲ್ಪ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಕೂಡಾ ಅಭ್ಯಾಸ ಮಾಡಿ. ನೀವು ಆರೋಗ್ಯಕರವಾಗಿಯೂ ಸ್ವಸ್ಥವಾಗಿಯೂ ಇರಲು ನಿಮಗೆ ಇವುಗಳೆಲ್ಲವನ್ನೂ ಕಲಿಸಲು ಇಲ್ಲಿ ಹಲವಾರು ಶಿಕ್ಷಕರಿದ್ದಾರೆ. ನೀವೆಲ್ಲರೂ ಆರೋಗ್ಯಕರವಾಗಿರುವಾಗ ದೇಶ ಕೂಡಾ ಆರೋಗ್ಯಕರವಾಗಿರುವುದು. ನೀವೆಲ್ಲರೂ ಆರೋಗ್ಯಕರವಾಗಿಯೂ ಸಂತೋಷವಾಗಿಯೂ ಇರುವಾಗ, ನೀವು ನಿಮ್ಮ ಹೊಲಗಳಲ್ಲಿ ಬೆಳೆಯುವ ಆಹಾರ ಧಾನ್ಯಗಳು, ದೇಶದಲ್ಲಿ ಅದನ್ನು ಸೇವಿಸುವವರೆಲ್ಲರಿಗೂ ಸಂತೋಷ ಮತ್ತು ಆರೋಗ್ಯವನ್ನು ತರುವುದು.)

ಚಲಿಸುವ ಚಿತ್ರಗಳ ರೂಪದಲ್ಲಿ, ಆಂಗ್ಲ ಭಾಷೆಯಲ್ಲಿ ಈ ಬ್ಲಾಗ್ ವೀಕ್ಷಿಸಲು ಲಿಂಕ್: http://www.speakingtree.in/public/spiritual-slideshow/seekers/self-improvement/nation-is-happy-if-its-farmers-are-happy/227388

ಸೋಮವಾರ, ನವೆಂಬರ್ 3, 2014

ಗೋಹತ್ಯೆಗೆ ಪೂರ್ಣವಿರಾಮ ಹಾಕಿ

ನವೆಂಬರ್ ೩, ೨೦೧೪
ದೆಹಲಿ, ಭಾರತ

ಲ್ಲಿ ಶ್ರೀಯುತ ಗೋಪಾಲ ಅವರು ನಿಜಕ್ಕೂ ತಮ್ಮ ಹೆಸರಿಗೆ ತಕ್ಕಂತೆ ಜೀವಿಸುತ್ತಿದ್ದಾರೆ - ಗೋಪಾಲ (ಶ್ರೀಕೃಷ್ಣ ಪರಮಾತ್ಮನ ಇನ್ನೊಂದು ಹೆಸರು, ದನಗಳನ್ನು ನೋಡಿಕೊಳ್ಳುವವನು ಎಂಬ ಅರ್ಥ). ಗೋವುಗಳ ಸಂರಕ್ಷಣೆಗಾಗಿ ಅವರು ತಮ್ಮನ್ನು ತಾವು ಮೀಸಲಾಗಿಟ್ಟಿದ್ದಾರೆ.

ಬಹಳ ದೀರ್ಘ ಕಾಲದಿಂದ ನಾನು ಇಲ್ಲಿಗೆ ಬರಲು ಬಯಸುತ್ತಿದ್ದೇನೆ, ಆದರೆ ಹೇಗೋ ಅದು ಕೂಡಿಬರುತ್ತಿರಲಿಲ್ಲ. ಇವತ್ತು ಮಧ್ಯಾಹ್ನ ೧:೪೫ಕ್ಕೆ ನಾನು ದಿಲ್ಲಿಯಿಂದ ಹೈದರಾಬಾದಿಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಇವತ್ತು ಸಂಜೆ ಅಲ್ಲಿ ಗೋಪಾಷ್ಟಮಿ (ಗೋವನ್ನು ತಾಯಿಯಾಗಿ ಗೌರವಿಸುವುದಕ್ಕಾಗಿ ಆಚರಿಸಲಾಗುವ ಭಾರತದ ಒಂದು ಸಾಂಪ್ರದಾಯಿಕ ಹಬ್ಬ) ಆಚರಣೆಯೊಂದಿಗೆ ಒಂದು ಸತ್ಸಂಗವಿದೆ ಹಾಗೂ ಗೋಶಾಲೆಯಲ್ಲಿ ಒಂದು ಕಾರ್ಯಕ್ರಮವಿದೆ. ಆದರೆ ಇವತ್ತು ಜೈಪುರ ಮಾರ್ಗವಾಗಿ ಹೈದರಾಬಾದಿಗೆ ಹೋಗುವ ದಾರಿಯಲ್ಲಿ ಗೋಶಾಲೆಯನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿದೆ.
ನಾನು ಕಾರಿನಲ್ಲಿ ಪ್ರಯಾಣಿಸುವಾಗ, ಒಂದು ಹಸುವು ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುವನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಬಹಳ ದುಃಖವಾಗುತ್ತಿತ್ತು. ಹಿಂದೆಯೂ ಕೂಡಾ, ಯಾವುದೇ ಹಸುವು ಪ್ಲಾಸ್ಟಿಕ್ಕನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಯಾವತ್ತೂ ಹೀಗನಿಸುತ್ತಿತ್ತು. ನೀವು ದಿಲ್ಲಿ ನಗರಕ್ಕೆ ಹೋಗಿ ರಿಂಗ್ ರಸ್ತೆಯುದ್ದಕ್ಕೂ ಪ್ರಯಾಣಿಸಿದರೂ ಸಹ, ಹಲವಾರು ಹಸುಗಳು ಮಾರ್ಗ ಮಧ್ಯದಲ್ಲಿ ನಿಂತುಕೊಂಡು ಪ್ಲಾಸ್ಟಿಕ್ಕನ್ನು ಅಗಿಯುತ್ತಿರುವುದು ನಿಮಗೆ ಕಾಣಿಸುವುದು. ಅಂತಹ ಹಸುಗಳ ಆರೈಕೆಗಾಗಿ ಅವುಗಳನ್ನು ಗೋಶಾಲೆಗೆ ಕರೆದುಕೊಂಡು ಬರುವ ಪ್ರಯತ್ನವನ್ನು ನೀವು ಮಾಡಿರುವಿರೆಂಬುದನ್ನು ಕೇಳಿ ಇಂದು ನನಗೆ ಬಹಳ ಸಂತೋಷವಾಗುತ್ತಿದೆ. ಹಸುಗಳನ್ನು ಸಂರಕ್ಷಿಸುವ ಈ ಕಾರ್ಯವು ನಮ್ಮ ಅತ್ಯಂತ ಪ್ರಮುಖ ದೈವಿಕ ಕರ್ತವ್ಯಗಳಲ್ಲಿ ಒಂದಾಗಿದೆ.

ನೋಡಿ, ಶ್ರೇಷ್ಠ ಹಾಗೂ ಅತ್ಯುತ್ಕೃಷ್ಟವಾದುದೆಲ್ಲಾ ’ಗ’ ಎಂಬ ಶಬ್ದದಿಂದ ಆರಂಭವಾಗುತ್ತದೆ, ಉದಾಹಾಣೆಗೆ ಗುರು, ಗ್ಯಾನ್, ಗೀತಾ, ಗಂಗಾ, ಗತಿ, ಗಮನ (ಒಬ್ಬನ ಅಂತಿಮ ಗುರಿಯೆಡೆಗೆ ಚಲಿಸುವುದು), ಮೊದಲಾದವುಗಳು. ಅವುಗಳನ್ನೆಲ್ಲಾ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.

ಜನರು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪ್ರವಾಸ ಮಾಡುವಾಗ, ಗೋಶಾಲೆಯು ಬಸ್ ಪ್ರವಾಸದ ಒಂದು ಮುಖ್ಯ ಭಾಗವಾಗಿದೆ. ಆಶ್ರಮದಲ್ಲಿ ಈಗ ೩೦೦ ಹಸುಗಳಿವೆ. ದೊಡ್ಡ ಆಶ್ರಮಗಳಿರುವಲ್ಲೆಲ್ಲಾ, ಖಂಡಿತವಾಗಿಯೂ ಹಸುಗಳನ್ನು ಅವರು ಒಂದು ಒಳ್ಳೆಯ ಪರಿಸರದಲ್ಲಿ ಬೆಳೆಸುತ್ತಾರೆ. ಹೀಗಾಗಿ, ಗೋವುಗಳ ಸಂರಕ್ಷಣೆಯು ನಮ್ಮ ಜೀವನದ ಒಂದು ಪ್ರಧಾನವಾದ ಹಾಗೂ ಅವಿಭಾಜ್ಯ ಅಂಗವಾಗಿದೆ. ನೀವೆಲ್ಲರೂ ಗೋಶಾಲೆಗೆ ಭೇಟಿ ನೀಡುತ್ತಾ ಇರಬೇಕು ಹಾಗೂ ನೀವು ಬರುವಾಗ ಇಲ್ಲಿನ ಗೋವುಗಳಿಗೆ ಆಹಾರ ತಿನ್ನಿಸಬೇಕು.

’ಗೌ’ ಎಂಬ ಪದಕ್ಕೆ ನಾಲ್ಕು ಅರ್ಥಗಳಿವೆ; ಜ್ಞಾನ, ಗಮನ (ಮುಂದುವರಿಯು), ಪ್ರಾಪ್ತಿ ಮತ್ತು ಮೋಕ್ಷ. ಒಂದು ಗೋವು ಈ ಎಲ್ಲಾ ನಾಲ್ಕನ್ನು ಒದಗಿಸುತ್ತದೆ.

ಹಸುವಿನ ಹಾಲು ಮನಸ್ಸು ಹಾಗೂ ಬುದ್ಧಿಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ಭಾರತೀಯ ಹಸುಗಳ ಹಾಲಿನಲ್ಲಿ ಒಂದು ಬಹಳ ವಿಶೇಷವಾದ ಪ್ರೊಟೀನ್ ಅಂಶವಿದೆ, ಅದು ಒಬ್ಬನ ಬುದ್ಧಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತದೆ. ಮುಂದಿನದ್ದು ಗಮನ - ಅಂದರೆ ಮುಂದುವರಿ ಎಂದು ಅರ್ಥ. ಒಂದು ಹಸುವು ನಮಗೆ ನೀಡುವ ಇತರ ಎಲ್ಲಾ ಉತ್ಪನ್ನಗಳು, ನಾವು ನಮ್ಮ ದೈನಂದಿನ ಜೀವನದಲ್ಲಿ ಮುಂದೆ ಸಾಗಲು ನಮಗೆ ಸಹಾಯ ಮಾಡುತ್ತವೆ. ಹೀಗೆ ಈ ನಾಲ್ಕನ್ನೂ ನಮಗೆ ನೀಡುವುದು ಹಸುವಾಗಿದೆ. ನಾವು ಇದಕ್ಕೆ ಗಮನ ನೀಡಬೇಕು ಮತ್ತು ಹಸುವನ್ನು ಗೌರವಿಸಬೇಕು.

ನೋಡಿ, ಕೇವಲ ಪೂಜೆ ಮಾಡುವುದರಿಂದ ಮತ್ತು ಹಸುವಿನ ಮುಂದೆ ನಮಸ್ಕಾರ ಮಾಡುವುದರಿಂದ ಪ್ರಯೋಜನವಾಗದು. ನೀವು ನಿಜವಾಗಿ ಹಸುವಿನ ಸೇವೆ ಮಾಡಬೇಕು. ಸಾಧಾರಣವಾಗಿ ನಾವೇನು ಮಾಡುತ್ತೇವೆಂದರೆ, ಹಸುವಿಗೆ ಹಾರವನ್ನು ಹಾಕಿ, ಕರ್ಪೂರದ ದೀಪವನ್ನು ಹಚ್ಚಿ ಅದನ್ನು ಹಸುವಿಗೆ ತೋರಿಸುವ ಮೂಲಕ ಒಂದು ಪೂಜೆ ಮಾಡುತ್ತೇವೆ. ಇದು ಸರಿಯಲ್ಲ, ಯಾಕೆಂದರೆ ಇದು ಹಸುವಿಗೆ ಭಯವನ್ನುಂಟುಮಾಡುತ್ತದೆ. ಹೀಗಾಗಿ, ನೀವು ನಿಜವಾಗಿಯೂ ಹಸುವಿನ ಸೇವೆ ಮಾಡಬೇಕು.
ನಿಮ್ಮ ಜೀವನವು ಈ ನಾಲ್ಕು ವಿಷಯಗಳಿಂದ ಸಂಪೂರ್ಣವಾಗಿ ಅರಳಬೇಕು - ದಯೆ, ಕರುಣೆ, ಸಹನಾಶೀಲತೆ ಮತ್ತು ಶಾಂತಿ. ಇತರರ ನೋವನ್ನು ಅನುಭವಿಸದೇ ಇರುವ ಒಂದು ಹೃದಯದಿಂದ ಏನು ಪ್ರಯೋಜನ? ಅಂತಹ ಹೃದಯವು ಇತರರಿಗೆ ಕೇವಲ ನೋವು ಮತ್ತು ಹಿಂಸೆಯನ್ನು ಮಾತ್ರ ತರಬಲ್ಲದು.

ಇವತ್ತು ಸಂಸತ್ತಿನ ಸಚಿವರೆಲ್ಲಾ ಕೂಡಾ ಇಲ್ಲಿದ್ದಾರೆ. ಇವತ್ತು ಭಾರತದಾದ್ಯಂತದ ಜನರು ಗೋಹತ್ಯೆಗೆ ಒಂದು ಕೊನೆಯನ್ನು ತರಲು ಬಯಸುತ್ತಿದ್ದಾರೆ.

ಭಾರತವು ಸ್ವಾತಂತ್ರ್ಯವನ್ನು ಗಳಿಸಿದಾಗ, ಪ್ರಾಣಿಗಳ ಸಂಖ್ಯೆಯು ೧೨೦ ದಶಲಕ್ಷಗಳಿಗೆ ಹತ್ತಿರವಾಗಿತ್ತು ಮತ್ತು ನಾವು ಸಂಖ್ಯೆಯಲ್ಲಿ ಕೇವಲ ೩೦ ದಶಲಕ್ಷಗಳಷ್ಟು ಇದ್ದೆವೆಂದು ಹೇಳಲಾಗುತ್ತದೆ. ಇವತ್ತು ಆ ಸಂಖ್ಯೆಯು ತಿರುಗುಮುರುಗಾಗಿದೆ. ಇವತ್ತು, ನಾವು ಸಂಖ್ಯೆಯಲ್ಲಿ ಸುಮಾರು ೧೨೦ ದಶಲಕ್ಷಗಳಷ್ಟಿದ್ದೇವೆ ಮತ್ತು ನಮ್ಮ ಪ್ರಾಣಿ ಸಂಖ್ಯೆಯು ಸುಮಾರು ೩೦ ದಶಲಕ್ಷಗಳಿಗೆ ಇಳಿದಿದೆ. ಈ ಅನುಪಾತವು ಒಳ್ಳೆಯದೇ ಅಲ್ಲ. ಇದು ಸರಿಯೆಂದು ನಿಮಗನಿಸುತ್ತದೆಯೇ? ಹೀಗಾಗಿ ನಾವೆಲ್ಲರೂ ನಮ್ಮ ಹಸುಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಅವುಗಳ ಯೋಗಕ್ಷೇಮದ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡಬೇಕು. ಗೋಹತ್ಯೆಗೆ ಒಂದು ಪೂರ್ಣವಿರಾಮವನ್ನು ಹಾಕುವಂತೆ ನಾವು ನಮ್ಮ ಭಾರತ ಸರಕಾರಕ್ಕೆ ಮನವಿ ಮಾಡುವುದನ್ನು ಮುಂದುವರಿಸಬೇಕು.

ಈ ಸತ್ಸಂಗದ ಸಂದೇಶವನ್ನು ಚಲಿಸುವ ಚಿತ್ರಗಳ ಸಮೇತ ಆಂಗ್ಲ ಭಾಷೆಯಲ್ಲಿ ಅವಲೋಕಿಸಲು ಲಿಂಕ್:
http://www.speakingtree.in/public/spiritual-slideshow/seekers/self-improvement/treat-animals-with-dignity

ಶುಕ್ರವಾರ, ಅಕ್ಟೋಬರ್ 24, 2014

ಆನಂದ, ಸಮೃದ್ಧಿ, ಜ್ಞಾನ, ಮತ್ತು ವಿವೇಕ

ಅಕ್ಟೋಬರ್ ೨೪, ೨೦೧೪
ಶಿಕಾಗೋ, ಅಮೇರಿಕಾ
ಲ್ಲರಿಗೂ ದೀಪಾವಳಿಯ ಶುಭಾಶಯಗಳು!

ದೀಪಾವಳಿಯು ಬೆಳಕಿನ ಹಬ್ಬವಾಗಿದೆ, ಆನಂದ, ಸಮೃದ್ಧಿ, ಜ್ಞಾನ, ವಿವೇಕ ಮತ್ತು ಎಲ್ಲದರ ಹಬ್ಬವಾಗಿದೆ, ಯಾಕೆಂದರೆ ಬೆಳಕು ಹಲವಾರು ವಿಷಯಗಳನ್ನು ಸೂಚಿಸುತ್ತದೆ ಮತ್ತು ಒಂದು ದೀಪವನ್ನು ಬೆಳಗಿದರೆ ಸಾಲದು, ಜ್ಞಾನವು ಅರಳಿ ಕತ್ತಲೆಯು ಹೋಗಬೇಕಾದರೆ ನಾವು ಹಲವಾರು ದೀಪಗಳನ್ನು ಬೆಳಗುವುದರ ಅಗತ್ಯವಿದೆ. ದೀಪಾವಳಿಯಂದು ಹಲವಾರು ದೀಪಗಳನ್ನು ಬೆಳಗುವುದು ಅದಕ್ಕಾಗಿಯೇ.

ಒಂದು ಭೌತಿಕ ದೀಪವು ಕೇವಲ ಒಂದು ಚಿಹ್ನೆ ಮಾತ್ರ. ನಿಜವಾದ ದೀಪವು ನೀವು. ನೀವು ಬೆಳಗಬೇಕು, ಹೊಳೆಯುತ್ತಿರಬೇಕು, ಮುಗುಳ್ನಗುತ್ತಾ, ಆನಂದವಾಗಿ ಮತ್ತು ಚೈತನ್ಯ ತುಂಬಿಕೊಂಡಿರಬೇಕು, ಯಾಕೆಂದರೆ ಅದು ನಿಜವಾದ ಹಬ್ಬ. ಇದು ಜ್ಞಾನದಿಂದ ಮಾತ್ರ ಆಗಲು ಸಾಧ್ಯ; ಕೇವಲ ಸೌಕರ್ಯಗಳಿಂದ, ಯಂತ್ರೋಪಕರಣ(ಗಾಜೆಟ್‌)ಗಳಿಂದ, ಹಣ ಅಥವಾ ಸ್ನೇಹಿತರಿಂದ ಮಾತ್ರವಲ್ಲ. ನಿಜವಾದ ಸಂತೋಷವು ಜ್ಞಾನದೊಂದಿಗೆ ಬರುತ್ತದೆ.

ಇವತ್ತು ನಾವೊಂದು ಲಕ್ಷ್ಮಿ ಪೂಜೆಯನ್ನು ಮಾಡುವೆವು. ಇದು ಜಗನ್ಮಾತೆಗೆ, ದೇವ ದೇವತೆಗಳಿಗೆ, "ವರ್ಷವಿಡೀ ನೀವು ನನ್ನನ್ನು ಸಂರಕ್ಷಿಸಿರುವಿರಿ ಹಾಗೂ ನನಗೇನು ಬೇಕಿತ್ತೋ ಅದನ್ನು ನೀಡಿರುವಿರಿ, ಅದಕ್ಕಾಗಿ ನಿಮಗೆ ಬಹಳ ಧನ್ಯವಾದಗಳು. ದಯವಿಟ್ಟು ಮುಂದಿನ ವರ್ಷವೂ ಹಾಗೆ ಮಾಡುವುದನ್ನು ಮುಂದುವರಿಸಿರಿ" ಎಂದು ಹೇಳುತ್ತಾ ಧನ್ಯವಾದವನ್ನರ್ಪಿಸುವುದಾಗಿದೆ.
ಹೀಗೆ ನಾವು ಅವರೊಂದಿಗೆ ನಮ್ಮ ಸಂಪರ್ಕವನ್ನು; ಒಪ್ಪಂದವನ್ನಲ್ಲ (ಕಾಂಟ್ರ್ಯಾಕ್ಟ್), ಸಂಪರ್ಕ(ಕಾಂಟ್ಯಾಕ್ಟ್)ವನ್ನು ನವೀಕರಿಸಲು ಅವರನ್ನು ಪ್ರಾರ್ಥಿಸುತ್ತೇವೆ ಹಾಗೂ ಅವರಲ್ಲಿ ಕೇಳಿಕೊಳ್ಳುತ್ತೇವೆ. ದೇವರೊಂದಿಗೆ ಸಂಪರ್ಕವನ್ನು ನವೀಕರಿಸಲು ನಾವು ಪ್ರಾರ್ಥಿಸುತ್ತೇವೆ.

ದೈವತ್ವದೊಂದಿಗೆ ಸಂಪರ್ಕದಲ್ಲಿರುವ ಯಾರಿಗೇ ಆದರೂ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಹೀಗಾಗಿ, ಮತ್ತೆ ಮತ್ತೆ ದೈವತ್ವದೊಂದಿಗೆ ಸಂಪರ್ಕದಲ್ಲಿರುವುದು (ಅದು ನಮ್ಮ ಪ್ರತಿಯೊಂದು ಕಣದಲ್ಲೂ ಇದೆ, ಆದರೆ ಅದನ್ನು ಎಚ್ಚರಗೊಳಿಸಬೇಕಾಗಿದೆಯಷ್ಟೆ.) ದೈವತ್ವವು ಎಲ್ಲೆಡೆಯೂ ಇದೆ, ಆದರೆ ಅದು ಸುಪ್ತವಾಗಿದೆ, ಮತ್ತು ಪೂಜೆಯು (ಪ್ರಾರ್ಥನೆ) ಅದನ್ನು ಎಚ್ಚರಗೊಳಿಸಲಿರುವ ಪ್ರಕ್ರಿಯೆಯಾಗಿದೆ. ದೈವತ್ವವನ್ನು ಎಚ್ಚರಗೊಳಿಸುವುದು!

ಇಲ್ಲಿ ಪಂಡಿತರು ಒಂದು ಬಹಳ ಹಳೆಯದಾದ ಪ್ರಾರ್ಥನೆಯನ್ನು ಉಚ್ಛರಿಸುವರು, ಅದು ಮಾನವಕುಲದ ಮೊದಲಿನ ಪ್ರಾರ್ಥನೆಗಳಲ್ಲಿ ಒಂದಾಗಿದೆ, ಅದು ಋಗ್ವೇದದಲ್ಲಿದೆ. ಅವರು ನಮಗಾಗಿ ಶ್ರೀ ಸೂಕ್ತವನ್ನು ಪಠಿಸಲಿದ್ದಾರೆ.

ಮೊದಲಿಗೆ ನಾವು, ನಮ್ಮ ಜೀವನದಿಂದ ಎಲ್ಲಾ ವಿಘ್ನಗಳನ್ನು ನಿವಾರಿಸಲು ಗಣಪತಿ ಪೂಜೆಯನ್ನು ಮಾಡುವೆವು ಮತ್ತು ನಂತರ ನಾವು ಕಲಶ ಪೂಜೆಯನ್ನು ಮಾಡುವೆವು. ನೀರಿನ ಒಂದು ಕಲಶದೊಂದಿಗೆ ನಾವು ಎಲ್ಲಾ ದೇವತೆಗಳನ್ನು ಆವಾಹನೆ ಮಾಡುವೆವು ಮತ್ತು ಎಲ್ಲರೂ ಒಂದು ಒಳ್ಳೆಯ ಮನಸ್ಸು, ಒಂದು ಒಳ್ಳೆಯ ಹೃದಯ, ಒಂದು ಒಳ್ಳೆಯ ಬುದ್ಧಿ ಹಾಗೂ ಜ್ಞಾನದಿಂದ ಭಾಜನರಾಗುವುದಕ್ಕಾಗಿ, ಈ ಭೂಮಿಯ ಮೇಲೆ ಎಲ್ಲರನ್ನೂ ಆಶೀರ್ವದಿಸಬೇಕೆಂದು ಪ್ರಾರ್ಥಿಸುವೆವು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮೂರು ರೀತಿಯ ಶಕ್ತಿಗಳಿವೆ. ಅವುಗಳು:

೧. ಇಚ್ಛಾ ಶಕ್ತಿ

೨. ಕ್ರಿಯಾ ಶಕ್ತಿ ಮತ್ತು

೩. ಜ್ಞಾನ ಶಕ್ತಿ

ಅದೇ ರೀತಿಯಲ್ಲಿ, ಮಹಾಕಾಳಿ (ಶಕ್ತಿಯನ್ನು ಸೂಚಿಸುವ), ಮಹಾಲಕ್ಷ್ಮಿ (ಪ್ರಾಪಂಚಿಕ ಸಂಪತ್ತನ್ನು ಸೂಚಿಸುವ) ಮತ್ತು ಮಹಾಸರಸ್ವತಿ (ಜ್ಞಾನವನ್ನು ಸೂಚಿಸುವ) ಇದ್ದಾರೆ. ಇವುಗಳು ಸೂಕ್ಷ್ಮ ಶಕ್ತಿಯಿಂದ ಆಳಲ್ಪಡುವ, ಜೀವನದ ವಿವಿಧ ಅಂಶಗಳಾಗಿವೆ, ಮತ್ತು ಪೂಜೆಯು ಸೂಕ್ಷ್ಮ ಜಗತ್ತಿನೊಂದಿಗೆ ಜೋಡಿಸುವ ಒಂದು ಮಾರ್ಗವಾಗಿದೆ.

ನಾವು ನೋಡುವ ಜಗತ್ತು ಹಿಮಖಂಡದ ಕೇವಲ ಒಂದು ತುದಿಯಾಗಿದೆ, ಯಾಕೆಂದರೆ ಇನ್ನೂ ಹೆಚ್ಚು ಎಷ್ಟೋ ಇದೆ. ಪೂಜೆ ಮತ್ತು ಮಂತ್ರೋಚ್ಛಾರಗಳು ಇನ್ನೊಂದು ಭಾಗದೊಂದಿಗೆ ಸಂಪರ್ಕ ಸಾಧಿಸುವ ಪುರಾತನ ಪದ್ಧತಿಯಾಗಿದೆ.

ಈಗ ನಾವದನ್ನು ಮಾಡುವುದು ಹೇಗೆ? ನಾವು ಕೇವಲ ಆಳವಾದ ಧ್ಯಾನದಲ್ಲಿ ಕುಳಿತುಕೊಳ್ಳಬೇಕು ಮತ್ತು ಮಂತ್ರಗಳನ್ನು ಆಲಿಸಬೇಕು; ಮಂತ್ರಗಳಲ್ಲಿ ಮೀಯಬೇಕು. ಭಾರತದಲ್ಲಿ ಅದು ’ಮಂತ್ರ ಸ್ನಾನ’ ಎಂದು ಕರೆಯಲ್ಪಡುತ್ತದೆ. ಇದು ಕೇವಲ ಕುಳಿತುಕೊಂಡು ಮಂತ್ರಗಳನ್ನಾಲಿಸುವುದು ಹಾಗೂ ಶಬ್ದದಲ್ಲಿ ಮೀಯುವುದಾಗಿದೆ. ಈ ಪ್ರಾಚೀನ ಮಂತ್ರೋಚ್ಛಾರಗಳ ತರಂಗಗಳು ನಮ್ಮ ಇಡೀ ಆತ್ಮವನ್ನು ಚೈತನ್ಯಭರಿತಗೊಳಿಸುತ್ತವೆ.

ಪೂಜೆಯಲ್ಲಿ ಆಗುತ್ತಿರುವುದೆಲ್ಲವೂ ನಮಗೆ ಅರ್ಥವಾಗದೇ ಇದ್ದರೂ ಸಹ, ನಾವು ಕಣ್ಣುಗಳನ್ನು ಮುಚ್ಚಿಕೊಂಡು ಅಥವಾ ತೆರೆದುಕೊಂಡು ಆಗುತ್ತಿರುವುದೆಲ್ಲವನ್ನೂ ಆನಂದಿಸುವೆವು. ಅದನ್ನೇ ಶ್ರದ್ಧೆ ಎಂದು ಕರೆಯುವುದು, ಅಂದರೆ, ಅಜ್ಞಾತವಾದುದನ್ನು ಪ್ರೇಮಿಸುವುದು ಎಂದು ಅರ್ಥ. ಏನೋ ಇದೆಯೆಂಬುದು ನಮಗೆ ತಿಳಿದಿದೆ, ಆದರೆ ಅದು ಏನು ಎಂಬುದು ನಮಗೆ ತಿಳಿಯದು. ಒಮ್ಮೆ ನಾವು ಅದನ್ನು ಪ್ರೇಮಿಸಿದರೆ, ಆಗ ಅದು ನಮಗೆ ತಿಳಿಯತೊಡಗುತ್ತದೆ. ಆಗ ನಿಮಗೆ, "ಓ, ಇದೊಂದು ಶಕ್ತಿ" ಎಂದನಿಸುತ್ತದೆ. ಆಗ ನಿಮಗೆ, ಜಗನ್ಮಾತೆಯೆಂದರೆ ಯಾರೋ ಒಬ್ಬರ ಮನಸ್ಸಿನಿಂದ ಬಂದಿರುವ ಕೇವಲ ಒಂದು ಪರಿಕಲ್ಪನೆ ಮಾತ್ರವಲ್ಲ, ಆದರೆ ಅದೊಂದು ವಾಸ್ತವ ಎಂಬುದು ಮನದಟ್ಟಾಗುತ್ತದೆ. ಅದು ವಿಶ್ವದ ಒಂದು ವಾಸ್ತವಿಕತೆಯಾಗಿದೆ. ಸೂಕ್ಷ್ಮ ಶಕ್ತಿಯು ಅಷ್ಟೊಂದು ನಿಜವಾದುದಾಗಿದೆ.

ಹೀಗಾಗಿ, ಇದು ಅಷ್ಟೊಂದು ನಿಜವಾದುದೂ ಸ್ಪಷ್ಟವೂ ಆಗುವಲ್ಲಿಯವರೆಗೆ, ನಾವು ಈ ಅಜ್ಞಾತವಾದುದನ್ನು ಪ್ರೇಮಿಸಲು ತೊಡಗುತ್ತೇವೆ. ಎರಡು ಹೆಜ್ಜೆಗಳಿವೆ:

೧. ಅಜ್ಞಾತವಾದುದನ್ನು ಪ್ರೀತಿಸುವುದು, ಮತ್ತು ಒಮ್ಮೆ ನೀವದನ್ನು ಮಾಡಿದ ಬಳಿಕ

೨. ನೀವು ಅಜ್ಞಾತವಾದುದನ್ನು ತಿಳಿಯಲು ತೊಡಗುತ್ತೀರಿ.

ನೀವದನ್ನು ತಿಳಿದಾಗ, ಅದು ನಿಮ್ಮ ಒಂದು ಭಾಗವಾಗಿದೆಯೆಂಬುದೂ, ನಿಮ್ಮಿಂದ ಬೇರೆಯಾಗಿಲ್ಲ ಅಥವಾ ನಿಮ್ಮಿಂದ ದೂರವಿಲ್ಲವೆಂಬುದೂ ನಿಮಗೆ ಮನದಟ್ಟಾಗುತ್ತದೆ. ಇದುವೇ ವೇದ ಮತ್ತು ವೇದಾಂತವಾಗಿದೆ; ಅಂದರೆ, ದೈವತ್ವವನ್ನು ಅರಿಯುವುದು ಮತ್ತು ಅದರೊಂದಿಗೆ ವಿಲೀನವಾಗುವುದು.

ಇವತ್ತು ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷ ಕೂಡಾ ಆಗಿದೆ. ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಇತರರೆಲ್ಲರಿಗೂ ದೀಪಾವಳಿಯ ಶುಭಾಶಯಗಳು! ಜಗನ್ಮಾತೆಯನ್ನು ಪ್ರಾರ್ಥಿಸುವುದರೊಂದಿಗೆ ಹಾಗೂ ಕಾಣುವ ಹಾಗೂ ಕಾಣದ ದೈವಿಕ ಅಭಿವ್ಯಕ್ತಿಗಳೊಂದಿಗೆ ಹೊಸ ವರ್ಷವನ್ನು ಆರಂಭಿಸುವುದು ಎಷ್ಟೊಂದು ಚೆನ್ನಾಗಿದೆ.

ನಾವೆಲ್ಲರೂ ಇಲ್ಲಿ ಪೂಜೆಯಲ್ಲಿ ಜೊತೆಯಲ್ಲಿ ಕುಳಿತಿರುವುದು, ಜೊತೆಯಲ್ಲಿ ಧ್ಯಾನ ಮಾಡುವುದು ಮತ್ತು ಜೊತೆಯಲ್ಲಿ ಹಾಡುವುದು ಯಜ್ಞ ಎಂದು ಕರೆಯಲ್ಪಡುತ್ತದೆ. ಈಗ, ಯಜ್ಞ ಏನು ಮಾಡುತ್ತದೆ? ಅದು ಸ್ವಸ್ತಿ (ಆರೋಗ್ಯ ಮತ್ತು ಕೇಂದ್ರಿತವಾಗಿರುವುದು), ಶ್ರದ್ಧೆ, ಮೇಧಾ (ಜಾಗೃತಗೊಂಡ ಬುದ್ಧಿ) - ಇವುಗಳನ್ನು ತರುತ್ತದೆ. ಶ್ರದ್ಧೆ ಮತ್ತು ಬುದ್ಧಿ ಇವುಗಳು ಹೆಚ್ಚಾಗಿ ಒಂದು ಇನ್ನೊಂದನ್ನು ವಿರೋಧಿಸುವುದಾಗಿ ಪರಿಗಣಿಸಲ್ಪಡುತ್ತವೆ, ಆದರೆ ಒಂದು ಯಜ್ಞದಲ್ಲಿ ಎರಡೂ ತೀಕ್ಷ್ಣಗೊಳ್ಳುತ್ತವೆ. ಶ್ರದ್ಧೆಯು ಆಳವಾಗುತ್ತದೆ ಮತ್ತು ತಾರ್ಕಿಕತೆಯು ಬಹಳ ತೀಕ್ಷ್ಣವಾಗುತ್ತದೆ.

ಹೀಗೆ ಯಜ್ಞದಿಂದ ಹಲವಾರು ಲಾಭಗಳಿವೆ: ಯಶ, ಪ್ರಜ್ಞೆ, ವಿದ್ಯೆ, ಬುದ್ಧಿ, ಬಲ, ವೀರ್ಯ, ಆಯುಷ್ಯ, ಐಶ್ವರ್ಯ ಮತ್ತು ಇನ್ನೂ ಹಲವಾರು.

ಮಂಗಳವಾರ, ಅಕ್ಟೋಬರ್ 14, 2014

ಬಯಕೆಗಳ ವರ್ತುಲ

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಬಯಕೆಯನ್ನು ಜಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದು ಇನ್ನೊಂದು ಬಯಕೆ! ನಾವು ತಿಳಿಯಬೇಕಾಗಿರುವುದೇನೆಂದರೆ, ಈಡೇರಿದ ಒಂದು ಬಯಕೆಯು ನಿಮ್ಮನ್ನು, ಬಯಕೆಯು ಏಳುವುದಕ್ಕೆ ಮೊದಲು ನೀವೆಲ್ಲಿದ್ದಿರೋ ಅದೇ ಜಾಗಕ್ಕೆ ಮರಳಿ ಕರೆದೊಯ್ಯುತ್ತದೆ. ನಿಮ್ಮಲ್ಲಿ ಒಂದು ಬಯಕೆಯು ಏಳುವುದಕ್ಕೆ ಮೊದಲಿನ ನಿಮ್ಮ ಮನಃಸ್ಥಿತಿಯನ್ನು ಸುಮ್ಮನೇ ಊಹಿಸಿಕೊಳ್ಳಿ. ಒಂದು ಬಯಕೆಯನ್ನು ಹೊಂದಿ ಅದನ್ನು ಈಡೇರಿಸಿದ ಎಲ್ಲಾ ಸರ್ಕಸ್ಸಿನ ಬಳಿಕ, ನೀವು ಅದೇ ಜಾಗಕ್ಕೆ ಮರಳಿ ಬರುತ್ತೀರಿ.

ಪ್ರಶ್ನೆ: ನನ್ನ ದೈನಂದಿನ ಬದುಕಿನಲ್ಲಿ ಮತ್ತು ಸಂಕಟದ ಸಮಯದಲ್ಲಿ ದೇವರೊಂದಿಗೆ ನನ್ನ ಸಂಪರ್ಕವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಸಂಪರ್ಕವನ್ನಿಟ್ಟುಕೊಳ್ಳಲಿರುವ ಈ ಉದ್ದೇಶವೇ, ನೀನು ಮತ್ತೆ ಮತ್ತೆ ಸಂಪರ್ಕವನ್ನು ಅನುಭವಿಸುತ್ತಿರುವೆ ಎಂಬುದನ್ನು ಸೂಚಿಸುತ್ತದೆ.
ಕೇವಲ ಇದನ್ನೊಂದು ಅಭ್ಯಾಸವನ್ನಾಗಿ ಮಾಡು. ನೀನು ಎದ್ದ ಕೂಡಲೇ ಸಂಪರ್ಕವನ್ನು ಅನುಭವಿಸು. ಮಲಗುವ ಮುನ್ನ, ನೀನು ಪಡೆದಿರುವುದಕ್ಕೆಲ್ಲಾ ದೇವರಿಗೆ ಧನ್ಯವಾದವನ್ನರ್ಪಿಸು. ಇದನ್ನು ಕೂಡಾ ನೀನು ಮಾತಿನ ಮೂಲಕ ಪುನರಾವರ್ತಿಸುವ ಅಗತ್ಯವಿಲ್ಲ, ಅದಿದೆಯೆಂದು ನೀನು ಸುಮ್ಮನೇ ಭಾವಿಸಿಕೊಳ್ಳಬೇಕು ಮತ್ತು ಸಹಜವಾಗಿರಬೇಕು.
ದೈವಿಕತೆಯೆಂಬುದು ಅರಿವಿನ ಅತ್ಯಂತ ಸರಳವಾದ ರೂಪವಾಗಿದೆ. ದೈವಿಕತೆಯು ನಮ್ಮ ಅತ್ಯಂತ ಸಹಜವಾದ ಸ್ಥಿತಿಯಾಗಿದೆ. ನೀವು ಸಂಪೂರ್ಣವಾಗಿ ನಿರಾಳವಾಗಿರುವ ಹಾಗೂ ಆತ್ಮೀಯವಾಗಿರುವ ಯಾವುದೇ ಕ್ಷಣವಿರಲಿ, ಆಗ ನೀವು ದೈವಿಕತೆಯಲ್ಲಿರುವಿರಿ ಎಂಬುದನ್ನು ತಿಳಿಯಿರಿ. ಅಷ್ಟೇ.
ಅತ್ಯಂತ ದೊಡ್ಡ ಅವಶ್ಯಕತೆಗಳಲ್ಲಿ ಒಂದು ಸಂಪೂರ್ಣ ತೃಪ್ತಿಯಾಗಿದೆ. ನೀವು ಸಂಪೂರ್ಣ ತೃಪ್ತಿಯನ್ನು ಅನುಭವಿಸುವಾಗ, ಆ ಕ್ಷಣದಲ್ಲಿ ನೀವು ದೇವರೊಂದಿಗಿರುತ್ತೀರಿ ಮತ್ತು ಅದು ನೀವು ಆ ಕ್ಷಣದಲ್ಲಿರುವ, ’ಈಗ’ದಲ್ಲಿರುವ ಸಮಯವಾಗಿದೆ, ಯಾಕೆಂದರೆ ’ಈಗ’ ಎಂದರೆ ’ಸಂಪೂರ್ಣ ತೃಪ್ತಿ’ ಎಂದರ್ಥ.
’ಈಗ’ ಎಂಬುದು ’ಸಂಪೂರ್ಣ ತೃಪ್ತಿ’ಗೆ ಮತ್ತು ’ನಾಳೆ’ ಎಂಬುದು ’ಆಸೆಗಳು, ಯೋಜನೆಗಳು ಮತ್ತು ಬಯಕೆಗಳು’ ಇವುಗಳಿಗೆ. ಹೀಗಾಗಿ, ಇಲ್ಲಿರಿ ಮತ್ತು ಈಗ ಇರಿ; ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆಯಲ್ಲಿ. ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆ ನಿಮ್ಮಲ್ಲಿ ಎಷ್ಟು ಸಲ ಬರುತ್ತದೆಯೆಂಬುದು ನಿಮಗೆ ಬಿಟ್ಟದ್ದು. ಕೆಲವೊಮ್ಮೆ ಅದು ನಿಮಗೆ ಆಗಿಹೋಗುತ್ತದೆ. ಹಿಂದಿನ ಅನೇಕ ಸಂತರು ಅದನ್ನು ತಾವು ಪಡಕೊಂಡ ಒಂದು ಉಡುಗೊರೆಯೆಂದು ಹೇಳಿದುದು ಅದಕ್ಕಾಗಿಯೇ.

ಪ್ರಶ್ನೆ: ಕರ್ವಾ ಚೌತ್‌ ಉತ್ಸವದ ಮಹತ್ವವೇನು? ಅದರ ಹಿಂದಿನ ಕಥೆಯೇನು? ವಿವಾಹಿತ ಸ್ತ್ರೀಯರು ಮಾತ್ರ ಅದನ್ನು ಮಾಡಬಹುದೇ? ಧ್ಯಾನ ಮಾಡಲು ಈ ದಿನವು ನಿಜಕ್ಕೂ ಒಂದು ಒಳ್ಳೆಯ ಸಮಯವೇ?

ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಹಲವಾರು ಉತ್ಸವಗಳಿವೆ, ಬಹುತೇಕ ಒಂದು ವರ್ಷದಲ್ಲಿ ಎಷ್ಟು ರವಿವಾರಗಳಿವೆಯೋ ಅಷ್ಟು.
ಕರ್ವಾ ಚೌತ್ ಎಂಬುದು, ಸ್ತ್ರೀಯರು ತಮ್ಮ ಪತಿಯ ದೀರ್ಘಾಯುಸ್ಸಿಗಾಗಿ ಪ್ರಾರ್ಥಿಸುವ ಒಂದು ಉತ್ಸವವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಥೆಗಳಿವೆ. ಈ ಕಥೆಗಳ ಬಗ್ಗೆ ನನಗೆ ಹೆಚ್ಚು ತಿಳಿಯದು.
ಪ್ರಾಚೀನ ಕಾಲದಲ್ಲಿ ಸ್ತ್ರೀಯರು ಬಹಳ ಶಕ್ತಿಶಾಲಿಗಳಾಗಿದ್ದರೆಂದು ತೋರುತ್ತದೆ. ಅವರು ಸೂರ್ಯನಲ್ಲಿ ಅಸ್ತಮಿಸಬೇಡವೆಂದು ಹೇಳಿದರೆ, ಅದು ಅಸ್ತಮಿಸುತ್ತಿರಲಿಲ್ಲ. ಸ್ತ್ರೀಯರು ಅಷ್ಟರ ಮಟ್ಟಿಗೆ ಶಕ್ತಿಶಾಲಿಗಳಾಗಿದ್ದರೆಂದು ಹೇಳುತ್ತಾರೆ. ಅಂತಹ ಹಲವಾರು ಕಥೆಗಳಿವೆ, ಮತ್ತು ಅವುಗಳೆಲ್ಲವೂ ಒಂದು ಮಹತ್ತರವಾದ ಉದ್ದೇಶವನ್ನು ಒಬ್ಬರಿಗೆ ನೆನಪಿಸಲಿರುವ ಸ್ಫೂರ್ತಿದಾಯಕ ಕಥೆಗಳಾಗಿವೆ. ಹೀಗೆ, ಭಾರತದಲ್ಲಿ ಇದು ಅಂತಹ ಒಂದು ಉತ್ಸವವಾಗಿದೆ. ಉಪವಾಸ ಮತ್ತು ಪ್ರಾರ್ಥನೆಗಳು ಹೇಗೋ ಸಂಬಂಧ ಹೊಂದಿವೆ. ಜಗತ್ತಿನ ಬಹುತೇಕ ಪ್ರತಿಯೊಂದು ಧರ್ಮದಲ್ಲೂ ಹಾಗೂ ಪ್ರತಿಯೊಂದು ಸಂಪ್ರದಾಯದಲ್ಲೂ ಅವರು ಉಪವಾಸ ಮತ್ತು ಪ್ರಾರ್ಥನೆಗಳನ್ನು ಜೊತೆಗೂಡಿಸಿದ್ದಾರೆ.
ನೀವು ಉಪವಾಸ ಮಾಡುವಾಗ, ನಿಮ್ಮ ಉಪವಾಸದಿಂದ ನೀವು ಅಲ್ಲಿರುವ ಯಾವುದೋ ದೇವರನ್ನು ಸಂತೋಷಪಡಿಸುತ್ತಿರುವುದಿಲ್ಲ. ಅದು ಕೇವಲ ನಿಮ್ಮ ಶರೀರದಿಂದ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಶರೀರದಿಂದ ವಿಷಯುಕ್ತ ಪದಾರ್ಥಗಳು ಹೊರಹಾಕಲ್ಪಟ್ಟಾಗ, ಯೋಚನೆಗಳು ಸಕಾರಾತ್ಮಕವಾಗುತ್ತವೆ. ಶರೀರದಲ್ಲಿ ಹಲವಾರು ವಿಷಯುಕ್ತ ಪದಾರ್ಥಗಳಿರುವಾಗ ಹಾಗೂ ಪ್ಯಾಂಕ್ರಿಯಾಸ್, ಪಿತ್ತಕೋಶ ಹಾಗೂ ಕರುಳುಗಳೆಲ್ಲಾ ತುಂಬಿಹೋಗಿ ಇಕ್ಕಟ್ಟಾಗಿರುವಾಗ ನಿಮ್ಮ ಯೋಚನೆಗಳೆಲ್ಲಾ ನಕಾರಾತ್ಮಕವಾಗಿಯೂ ಅಸ್ಪಷ್ಟವಾಗಿಯೂ ಇರುತ್ತವೆ. ಹೀಗಾಗಿ, ನಿಮ್ಮ ಶರೀರದ ಮೇಲೆ ಆ ಶುದ್ಧೀಕರಣದ ಪರಿಣಾಮವಾಗುವುದಕ್ಕಾಗಿ ಉಪವಾಸ ಮಾಡಲಾಗುತ್ತದೆ, ದೇವರನ್ನು ಪ್ರಸನ್ನಗೊಳಿಸುವುದಕ್ಕಾಗಿಯಲ್ಲ.
ಉಪವಾಸವೂ ಕೂಡಾ ಕೆಲವು ನಿಯಮಗಳನ್ನು ಹೊಂದಿದೆ, ಆದರೆ ಜನರು ಉಪವಾಸದ ನಿಯಮಗಳನ್ನು ಕೂಡಾ ಸರಿಯಾಗಿ ಅನುಸರಿಸುವುದಿಲ್ಲ. ಉಪವಾಸವೆಂದರೆ ತಾವು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಹುದು ಮತ್ತು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಾರದೆಂದು ಜನರು ಯೋಚಿಸುತ್ತಾರೆ. ’ಬಹಳಷ್ಟು ಬೀಜಗಳು ಮತ್ತು ಹಣ್ಣುಗಳನ್ನು ತಿನ್ನಬಹುದು, ಆದರೆ ಬೇಯಿಸಿದ ಆಹಾರ ಅಥವಾ ಅನ್ನ ಅಥವಾ ಬ್ರೆಡ್ ತಿನ್ನಬಾರದು’ - ಇದು ಉಪವಾಸ ಅಲ್ಲ.
ಕೆಲವು ದಿನ ಜನರು ಬೇಯಿಸಿದ ಆಲೂಗಡ್ಡೆ ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಾರೆ, ಹಾಗೂ ತಾವು ಉಪವಾಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಅವರು ತಮ್ಮನ್ನೇ ಮೂರ್ಖರನ್ನಾಗಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ, ದಿನವಿಡೀ ಉಪವಾಸವಿರಲು ಬಯಸುವ ಕೆಲವರು ಸೂರ್ಯೋದಯದ ಮೊದಲೇ ಎದ್ದು ತಮ್ಮೊಳಗೆ ಆಹಾರವನ್ನು ತುಂಬುತ್ತಾರೆ. ನಂತರ ಅವರು ಉಪವಾಸ ಮಾಡುತ್ತಾರೆ ಮತ್ತು ಸೂರ್ಯನು ಅಸ್ತಮಿಸಿದ ಕೂಡಲೇ, ಮತ್ತೆ ಅವರು ತಮ್ಮಲ್ಲಿ ಆಹಾರ ತುಂಬುತ್ತಾರೆ. ಇದು ಉಪವಾಸ ಮಾಡುವ ಒಂದು ಬಹಳ ಕೆಟ್ಟ ವಿಧಾನವಾಗಿದೆ.
ಉಪವಾಸವು ವೈಜ್ಞಾನಿಕವಾಗಿ ಆಗಬೇಕು. ಹಣ್ಣಿನ ರಸ, ನೀರು ಮತ್ತು ಕೆಲವು ಹಣ್ಣುಗಳೊಂದಿಗೆ ಉಪವಾಸ ಮಾಡಿ. ಇದರಿಂದ ಶರೀರದಲ್ಲಿ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಅಜೀರ್ಣವಾದ ಆಹಾರವು ಜೀರ್ಣವಾಗುತ್ತದೆ. ಉಪವಾಸದ ದಿನಗಳಂದು ರಾತ್ರಿ ಬಹಳ ತಡವಾಗಿ ತಿನ್ನುವುದು ಬಹಳ ಕೆಟ್ಟದ್ದು, ಯಾಕೆಂದರೆ ಆ ಆಹಾರವನ್ನು ಜೀರ್ಣಿಸಲು ನಿಮ್ಮ ಜಠರಾಗ್ನಿಯು ಅಲ್ಲಿರುವುದಿಲ್ಲ. ಹೀಗಾಗಿ ನೀವದನ್ನು ಮಾಡಬಾರದು.
ಜನರು ಒಂದು ಅವೈಜ್ಞಾನಿಕ ರೀತಿಯಲ್ಲಿ ಉಪವಾಸ ಮಾಡುತ್ತಾರೆ. ಉಪವಾಸವು ವಿವೇಕಪೂರ್ಣವಾಗಿರಬೇಕು. ಬಹುತೇಕ ಪ್ರತಿಯೊಂದು ಸಂಪ್ರದಾಯದಲ್ಲೂ ಜನರು ಈ ರೀತಿಯಾಗಿ ಉಪವಾಸ ಮಾಡುತ್ತಾರೆ. ಯಹೂದ್ಯರು, ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು - ಇವರೆಲ್ಲರೂ ಉಪವಾಸ ಮಾಡುವ ವೈಜ್ಞಾನಿಕ ವಿಧಾನವನ್ನು ತಿಳಿದಿರಬೇಕು.
ಆಯುರ್ವೇದದ ರೀತಿಯಲ್ಲಿ ಉಪವಾಸ ಮಾಡುವುದನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸ್ವಲ್ಪ ಹಣ್ಣುಗಳು, ಹಣ್ಣುಗಳ ರಸ, ನೀರು ಮತ್ತು ನಿಂಬೆ. ಮತ್ತು ನಿಮ್ಮಲ್ಲಿ ಆ ಸಹನಶೀಲತೆ ಇದ್ದರೆ, ಆಗ ಒಂದೆರಡು ದಿನಗಳ ಕಾಲ ಕೇವಲ ನೀರನ್ನು ಕುಡಿದು ಉಪವಾಸ ಮಾಡಿ. ---- ನಾವು ಜನರಿಗೆ ಕೊಡಬೇಕಾಗಿರುವ ಶಿಕ್ಷಣ ಇದುವೇ. ರಾಮದಾನ್ ತಿಂಗಳಿನಲ್ಲಿ ಕೂಡಾ, ಅವರು ದಿನವಿಡೀ ಉಪವಾಸ ಮಾಡುತ್ತಾರೆ, ಪಿತ್ತವು ಏರುತ್ತದೆ ಹಾಗೂ ಸಂಜೆ ಅವರು ಬಹಳಷ್ಟು ತಿನ್ನುತ್ತಾರೆ. ಇದು ತಪ್ಪು. ಸಂಜೆ ಅವರು ಆಹಾರ ಸೇವಿಸುವಾಗ, ಅವರು ಸಲಾಡುಗಳನ್ನು, ಹಣ್ಣುಗಳನ್ನು ಹಾಗೂ ಲಘುವಾದುದೇನನ್ನಾದರೂ; ದೇಹಕ್ಕೆ ವಿಶ್ರಾಂತಿ ನೀಡುವ ಯಾವುದನ್ನಾದರೂ ಸೇವಿಸಬೇಕು.
ಹಿಂದೂಗಳು ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಅವರು ಜಿಲೇಬಿಗಳನ್ನು ತಿನ್ನುತ್ತಾರೆ! ಅವರು ಎಲ್ಲಾ ಸಿಹಿತಿಂಡಿಗಳನ್ನು ಮತ್ತು ಪಿಷ್ಟವಾಗಿರುವ ಬೇಯಿಸಿದ ಆಲೂಗಡ್ಡೆಗಳನ್ನು ತಿನ್ನುತ್ತಾರೆ! ಇದು ಸರಿಯಾದ ವಿಧಾನವಲ್ಲ, ಕೇವಲ ಹಣ್ಣುಗಳು ಮತ್ತು ಹಣ್ಣಿನ ರಸಗಳಿರಬೇಕು.

ಪ್ರಶ್ನೆ: ಕೆಲವೊಮ್ಮೆ, ಆರ್ಟ್ ಆಫ್ ಲಿವಿಂಗ್‌ನಲ್ಲಿ ಇರುವುದಕ್ಕೂ ಇಸ್ಲಾಂನ್ನು ಅನುಸರಿಸುತ್ತಿರುವುದಕ್ಕೂ ಮಧ್ಯೆ ಒಂದು ಸಂಘರ್ಷವಿದೆಯೆಂದು ನನಗನಿಸುತ್ತದೆ. ವಿಶೇಷವಾಗಿ ನಾನು ’ಶಿವ’ ಅಥವಾ ’ರಾಮ’ ಎಂದು ಉಚ್ಛರಿಸುವಾಗ. ದುರದೃಷ್ಟವಶಾತ್, ಇಸ್ಲಾಂ ಒಂದು ಕುಖ್ಯಾತಿಯನ್ನು ಪಡೆದಿದೆ. 

ಶ್ರೀ ಶ್ರೀ ರವಿ ಶಂಕರ್: ನೋಡು, ನೀನು ಇಸ್ಲಾಮಿನ ಚರಿತ್ರೆಯನ್ನು ತಿಳಿದಿರಬೇಕು. ಇಸ್ಲಾಂ ಹೇಗೆ ಹುಟ್ಟಿತು, ಅದನ್ನು ಯಾವಾಗ ಬರೆಯಲಾಯಿತು ಮತ್ತು ಕಾಲಾಂತರದಲ್ಲಿ ಅದು ಹೇಗೆ ಬದಲಾಯಿತು, ಹಿಂದೆ ಏನನ್ನು ಹೇಳಲಾಯಿತು ಮತ್ತು ಯಾಕೆ; ಯಾವುದು ಪ್ರಾಯೋಗಿಕ ಮತ್ತು ಯಾವುದು ಪ್ರಾಯೋಗಿಕವಲ್ಲ. ಆ ದಿನಗಳಲ್ಲಿ ಸ್ತ್ರೀಯರ ಸಂಖ್ಯೆಯು ಹೆಚ್ಚಾಗಿತ್ತು, ಹೀಗಾಗಿ ಒಬ್ಬ ಪುರುಷನು ನಾಲ್ವರು ಸ್ತ್ರೀಯರನ್ನು ವಿವಾಹವಾಗಲು ಅನುಮತಿಸಲಾಗಿತ್ತು, ಯಾಕೆಂದರೆ ಪುರುಷರ ಸಂಖ್ಯೆಯು ಬಹಳ ಕಡಿಮೆಯಾಗಿತ್ತು. ಇವತ್ತು ನೀವದನ್ನು ಅನುಸರಿಸುವ ಅಗತ್ಯವಿಲ್ಲ.
ಅದೇ ರೀತಿಯಾಗಿ ಆ ದಿನಗಳಲ್ಲಿ, ಒಂದು ನಿರ್ದಿಷ್ಟ ಸಮಯದಲ್ಲಿ, ಎಲ್ಲಾ ತಂತಿವಾದ್ಯಗಳನ್ನು ದೂರಮಾಡಬೇಕು; ಸಂಗೀತವಿರಕೂಡದೆಂದು ಮೊಹಮ್ಮದರು ಹೇಳಿದರು. ಸಂಗೀತದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಇವತ್ತು, ಸಂಗೀತವನ್ನು ನಿಷೇಧಿಸಲಾಗಿರುವ ಯಾವುದಾದರೂ ಒಂದು ದೇಶದ; ಇಸ್ಲಾಂ ದೇಶಗಳೇ ಆಗಿರಬಹುದು, ಅದರ ಹೆಸರನ್ನು ನನಗೆ ಹೇಳು ನೋಡೋಣ?
"ನೀವು ಹಾಡಿದರೆ ಅಥವಾ ನೀವು ನರ್ತಿಸಿದರೆ ಅದು ಹರಾಮ್, ಅದು ಇಸ್ಲಾಮಿನ ವಿರುದ್ಧ. ನೀವು ಹಾಗೆ ಯಾವತ್ತೂ ಮಾಡಬಾರದು" ಎಂದು ಪುರಿಟಾರಿಯದ ಮುಸ್ಲಿಮರು ಹೇಳುತ್ತಾರೆ.
ಎರಡನೆಯದ್ದು, ಯಾವುದೇ ಮಾನವ ಮುಖಗಳ ಫೋಟೋ ತೆಗೆಯುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಅದು ಇಸ್ಲಾಮಿನಲ್ಲಿ ಹರಾಮ್ ಆಗಿದೆ. ಆದರೆ, ನಿನ್ನ ಫೋಟೋ ತೆಗೆಯದೆ ನಿನ್ನ ಪಾಸ್‌ಪೋರ್ಟನ್ನಾದರೂ ಹೇಗೆ ಮಾಡಲು ಸಾಧ್ಯ? ಅದು ಅಸಾಧ್ಯ.
ನನ್ನನ್ನು ಬಹರೈನ್‌ಗೆ ಆಮಂತ್ರಿಸಲಾಗಿತ್ತು. ಅಲ್ಲಿ ಅರಮನೆಯಲ್ಲಿ ಒಂದು ಸಮ್ಮೇಳನವಿದ್ದುದರಿಂದ ಬಹರೈನ್‌ನ ರಾಜರು ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಇಸ್ಲಾಮಿನ ಉನ್ನತ ವಿದ್ವಾಂಸರಿದ್ದರು ಮತ್ತು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾಗ, "ಹಜ್ ತೀರ್ಥಯಾತ್ರೆಗೆ ಹೋದಾಗ ಕಾಬಾದ (ಕಪ್ಪು ಕಲ್ಲು) ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ" ಎಂದು ಹೇಳಿದರು. ಆದರೆ ಇವತ್ತು, ಜನರು ತಮ್ಮ ಸೆಲ್ ಫೋನುಗಳೊಂದಿಗೆ ಬರುತ್ತಾರೆ ಮತ್ತು ಎಲ್ಲರೂ ಫೋಟೋ ತೆಗೆಯುತ್ತಿದ್ದಾರೆ. ಅವರು ಕಾಬಾ ಕಲ್ಲಿನ ಮತ್ತು ತಮ್ಮದೇ ಚಿತ್ರಗಳನ್ನು ಕೂಡಾ ತೆಗೆಯುತ್ತಿದ್ದಾರೆ.
ಅದಕ್ಕಾಗಿಯೇ ನೀನು ನೋಡಬಹುದು, ಇಸ್ಲಾಮಿನಲ್ಲಿ ಮಾನವ ಮುಖದ ಶಿಲ್ಪಗಳು ಇಲ್ಲವೇ ಇಲ್ಲ. ಶಿಲ್ಪಗಳಿಲ್ಲ, ಛಾಯಾಗ್ರಹಣವಿಲ್ಲ, ಯಾರದ್ದೂ ಯಾವುದೇ ವರ್ಣಚಿತ್ರವಿಲ್ಲ ಯಾಕೆಂದರೆ, ಪುರಿಟಾರಿಯನ್ ಇಸ್ಲಾಮಿನಲ್ಲಿ ಅದು ನಿಷೇಧವಾಗಿದೆ. ಆದರೆ ಇವತ್ತು, ಇದು ಸಾಧ್ಯವೇ? ಕೆಲವು ಇಮಾಮರು ದೂರದರ್ಶನದ ವಿರುದ್ಧ ಒಂದು ಫತ್ವಾ ನೀಡಿದರು. ದೂರದರ್ಶನಕ್ಕೆ ಭೂತ ಹೊಕ್ಕಿದೆಯೆಂದು ಅವರು ಹೇಳಿದರು. ನಿಮಗೆ ಗೊತ್ತೇ, ಭಾರತದ ಒಂದು ನಿರ್ದಿಷ್ಟ ಹಳ್ಳಿಯಲ್ಲಿ, ಒಂದು ದಿನ ಎಲ್ಲರೂ ತಮ್ಮ ದೂರದರ್ಶನಗಳನ್ನು ಎಸೆಯಬೇಕೆಂದು ಹೇಳಲಾಯಿತು. ಒಂದು ದಿನದಲ್ಲಿ ೫,೦೦೦ ಕುಟುಂಬಗಳು ತಮ್ಮ ದೂರದರ್ಶನಗಳನ್ನು ತಂದು ಅವುಗಳನ್ನೊಂದು ಹೊಂಡದಲ್ಲಿ ಎಸೆದರು ಮತ್ತು ಇದೆಲ್ಲವೂ ಹರಾಮ್ ಎಂದು ಹೇಳುತ್ತಾ ಅವುಗಳಿಗೆ ಕಲ್ಲು ಹೊಡೆದರು, ಯಾಕೆಂದರೆ ಮಾನವ ಮುಖಗಳನ್ನು ಮತ್ತು ಚಿತ್ರಗಳನ್ನು ನೋಡಲು ಒಬ್ಬರಿಗೆ ಅನುಮತಿಯಿಲ್ಲ.
ಹೀಗೆ, ಇವತ್ತು ಇಸ್ಲಾಂ ಏನಾಗಿದೆ, ಮತ್ತು ಇಸ್ಲಾಮಿನ ಉದ್ದೇಶಿತ ಗುರಿ ಏನಾಗಿತ್ತು? ಅವುಗಳ ನಡುವೆ ಅಜಗಜಾಂತರವಿದೆ.
ನನ್ನ ದೇವರನ್ನು ನಂಬದೇ ಇರುವವರೆಲ್ಲಾ ನಾಸ್ತಿಕರು ಮತ್ತು ನಾಸ್ತಿಕರಿಗೆ ಇರಲು ಹಕ್ಕಿಲ್ಲವೆಂದು ಇಸ್ಲಾಂ ಹೇಳುತ್ತದೆ. ಇದುವೇ ಐಸಿಸ್ (ಐ.ಎಸ್.ಐ.ಎಸ್.)ನೊಂದಿಗೆ ಆಗುತ್ತಿರುವುದು. ಇದುವೇ ಪುರಿಟಾರಿಯನ್ ಇಸ್ಲಾಮಿಗರು, ನಿಜವಾದ ಇಸ್ಲಾಂ. ಸೂಫಿಗಳು ಸಂಗೀತವನ್ನು ಸ್ವೀಕರಿಸುವುದರಿಂದ ಹಾಗೂ ಅವರು ಜಪ ಮಾಡುವುದರಿಂದ ಅವರು ಕೆಟ್ಟವರೆಂದು ಅವರು ಯೋಚಿಸುತ್ತಾರೆ. ಒಬ್ಬರು ಸೂಫಿ ಸಂತರು ಮರಣ ಹೊಂದಿ ಒಂದು ಗೋರಿಯನ್ನು ಮಾಡಿದಾಗ, ಈ ಗೋರಿಗಳು ಇಸ್ಲಾಮಿನವಲ್ಲ ಎಂದು ಅವರು ಹೇಳಿದರು. ಗೋರಿಗಳನ್ನು ಅಳಿಸಿಹಾಕಬೇಕೆಂದು ಅವರು ಹೇಳುತ್ತಾರೆ. ಅದನ್ನೇ ಅವರು ಮೊಹಮ್ಮದರ ಗೋರಿಗೂ ಮಾಡಿದರು, ಯಾಕೆಂದರೆ ಅದು ಇಸ್ಲಾಮಿನದ್ದಲ್ಲ ಎಂದು ಅವರು ಹೇಳಿದರು. ಶಿಯಾ ಪಂಥವನ್ನು ಇಸ್ಲಾಮಿನದ್ದಲ್ಲವೆಂದು ಘೋಷಿಸಲಾದುದು ಇದಕ್ಕಾಗಿಯೇ, ಯಾಕೆಂದರೆ ಶಿಯಾಗಳು ಈ ಗೋರಿಗಳನ್ನು ಗೌರವಿಸುತ್ತಾರೆ.
ಹೀಗೆ ಇಸ್ಲಾಮಿನಲ್ಲಿ ಈ ಸೈದ್ಧಾಂತಿಕ ಹೋರಾಟಗಳು ಹಲವಾರು ಸಮಸ್ಯೆಗಳನ್ನು ಉಂಟುಮಾಡಿವೆ. ಇಸ್ಲಾಮಿನ ಪ್ರಕಾರ, ನೀನು ಏನನ್ನಾದರೂ ಕದ್ದರೆ ನಿನ್ನ ಕೈಗಳನ್ನು ತುಂಡುಮಾಡಬೇಕು. ಒಂದು ಮಗು ಹೋಗಿ ಏನನ್ನಾದರೂ ಕದಿಯುತ್ತದೆಯೆಂದು ಸುಮ್ಮನೇ ಊಹಿಸಿಕೊಳ್ಳಿ, ಆಗ ನೀವು ಅವನ ಕೈಯನ್ನು ತುಂಡರಿಸುತ್ತೀರಿ, ಇದು ಇವತ್ತು ಪ್ರಾಯೋಗಿಕವೇ? ಯಾರ ಕೈಯನ್ನೇ ಆದರೂ ತುಂಡರಿಸುವುದು ಪ್ರಾಯೋಗಿಕವೇ? ಒಂದು ಮಗುವಿನ ಕೈಗಳನ್ನು ಕೊಚ್ಚಿಹಾಕಬೇಕೇ?
ಸಂಗೀತವನ್ನು ದೂರ ಮಾಡಬೇಕು, ಛಾಯಾಗ್ರಹಣಕ್ಕೆ ಅನುಮತಿ ನೀಡಬಾರದು; ಈ ನಿಯಮಗಳು ಪ್ರಾಯೋಗಿಕವೇ? ಎಲ್ಲೆಡೆಯೂ ವೈವಿಧ್ಯಮಯ ಜನರಿದ್ದಾರೆ, ನೀವು ಎಲ್ಲರೊಂದಿಗೂ ಹೊಂದಿಕೊಂಡಿರಬೇಕು. ಪುರಿಟಾರಿಯನ್ ಎಂದು ಕರೆಯಲ್ಪಡುವ ಇಸ್ಲಾಂ, ಎಲ್ಲರೂಂದಿಗೂ ಅಷ್ಟೊಂದು ಸಂಘರ್ಷಗಳನ್ನು ಸೃಷ್ಟಿಸುತ್ತದೆ.
ನಾವು ಹಲವಾರು ವಿವಿಧ ಬುಡಕಟ್ಟುಗಳನ್ನು ಹಾಗೂ ವಿವಿಧ ಜ್ಞಾನಗಳನ್ನು ಸೃಷ್ಟಿಸಿದ್ದೇವೆ ಮತ್ತು ಇವುಗಳೆಲ್ಲವೂ ಗೌರವಿಸಲ್ಪಡಬೇಕೆಂದು ಹೇಳುವ ಇನ್ನೊಂದು ಪಂಥವೂ ಇಸ್ಲಾಮಿನಲ್ಲಿದೆ. ಇದು ಪೈಗಂಬರರಿಂದ ಹೇಳಲ್ಪಟ್ಟ ಒಂದು ವಿಷಯ.
ಹೀಗೆ, ಜಗತ್ತಿನಲ್ಲಿ ವೈವಿಧ್ಯತೆಯಿದೆ, ವೈವಿಧ್ಯತೆಯನ್ನು ಗೌರವಿಸಿ. ನೀವು ವೈವಿಧ್ಯತೆಯನ್ನು ಗೌರವಿಸಿದಾಗ, ನೀವು ನಿಮ್ಮ ಶ್ರದ್ಧೆಯನ್ನು ಕಡೆಗಣಿಸಿದಂತಾಗುವುದಿಲ್ಲ.
ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಒಬ್ಬರು ಶಿಕ್ಷಕರು ಒಂದು ಶಿಬಿರವನ್ನು ಕಲಿಸುತ್ತಿದ್ದರು. ನಮ್ಮ ಸುದರ್ಶನ ಕ್ರಿಯೆಯಲ್ಲಿ ನಾವು ’ಓಂ’ ಎಂದು ಹೇಳುತ್ತೇವೆ. ತಾನು ’ಓಂ’ ಎಂದು ಉಚ್ಛರಿಸಲು ಸಾಧ್ಯವಿಲ್ಲವೆಂದೂ, ಯಾಕೆಂದರೆ ಅದು ತನ್ನ ಧರ್ಮಕ್ಕೆ ವಿರುದ್ಧವಾದುದೆಂದೂ ಒಬ್ಬ ವ್ಯಕ್ತಿ ಹೇಳಿದನು.
ಅದಕ್ಕೆ ಶಿಕ್ಷಕರು, "’ಓಂ’ ಎಂದು ಉಚ್ಛರಿಸಿದರೆ ನಿನ್ನ ಶ್ರದ್ಧೆಯನ್ನು ನೀನು ಕಳೆದುಕೊಳ್ಳುವಷ್ಟು ಬಲಹೀನವಾದುದೇ ನಿನಗೆ ನಿನ್ನ ಧರ್ಮದ ಮೇಲಿರುವ ಶ್ರದ್ಧೆ? ನನಗೆ ಹಾಗನಿಸುವುದಿಲ್ಲ. ನಾನು ’ಹಲಲುಯಾ’ ಅಥವಾ ’ಅಲ್ಲಾ-ಹು-ಅಕ್ಬರ್’ ಅಥವಾ ’ಬುದ್ಧಂ ಶರಣಂ ಗಚ್ಛಾಮಿ’ ಎಂದು ಉಚ್ಛರಿಸಬಲ್ಲೆ, ಆದರೆ ಆವಾಗಲೂ ನಾನು ನನ್ನ ಶ್ರದ್ಧೆಯನ್ನು ಉಳಿಸಿಕೊಳ್ಳಬಲ್ಲೆ. ಆಗಲೂ ನಾನಿರುವ ಧರ್ಮವನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದರು.
ಈ ಮಾತುಗಳು ಅವನ ಕಣ್ಣುಗಳನ್ನು ತೆರೆಯಿಸಿದವು. ಕೇವಲ ’ಓಂ’ ಎಂದು ಹೇಳುವುದರಿಂದ ನಿಮಗೇನೂ ನಷ್ಟವಾಗುವುದಿಲ್ಲ. ವಾಸ್ತವವಾಗಿ, ನಿಮಗೆ ಲಾಭವಾಗುವುದು.
ಅದೇ ರೀತಿಯಲ್ಲಿ, ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡಿದರೆ, ಕೂಡಲೇ ನೀವು ಕ್ರಿಶ್ಚಿಯನ್ನರಾಗಿ ಪರಿವರ್ತಿತರಾಗುವುದಿಲ್ಲ. ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡುವುದರಿಂದಾಗಿ ದೇವರು ನಿಮ್ಮಲ್ಲಿ ಕೋಪಗೊಳ್ಳುವುದಿಲ್ಲ.
ನೀವು ಭಜನೆಗಳನ್ನು ಹಾಡಿದರೆ ದೇವರು ನಿಮಗೆ ಶಿಕ್ಷೆ ನೀಡುವುದಿಲ್ಲ. ’ಶಿವ’ ಅಂದರೆ ಏನು? ಯಾವುದು ಬಹಳ ಸುಂದರವಾಗಿರುವುದೋ ಅದು, ಯಾವುದು ಬಹಳ ದಯಾಳುವೋ ಅದು. ಬಹಳ ದಯಾಳುವಾಗಿರುವ ಶಕ್ತಿ ಅಥವಾ ದೈವತ್ವ. ’ನಾರಾಯಣ’ ಅಂದರೆ ಏನು? ಎಲ್ಲಾ ನರಮಂಡಲಗಳಲ್ಲಿರುವ, ಸಂಪೂರ್ಣ ಸೃಷ್ಟಿಯಲ್ಲಿರುವ ಆ ಶಕ್ತಿ. ಜೀವಿಗಳಲ್ಲಿ ಶೋಭಿಸುವುದೇನೇ ಇರಲಿ ಅದು ’ನಾರಾಯಣ’ ಎಂದು ಕರೆಯಲ್ಪಡುತ್ತದೆ.
’ನರಮಂಡಲ’ ಎಂಬ ಪದವು ’ನರ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ಅದಕ್ಕೆ ಮನುಷ್ಯರು ಎಂಬ ಅರ್ಥವೂ ಇದೆ.
’ನಾರಾಯಣ’ ಅಂದರೆ, ಸುಂದರವಾದ ಹಾಗೂ ಅದ್ಭುತವಾದ ನರಮಂಡಲದಲ್ಲಿ ಆಶ್ರಯಪಡೆದಿರುವುದು ಯಾವುದೋ ಅದು. ಒಂದು ನರಮಂಡಲವಿರದ ಒಬ್ಬ ಮನುಷ್ಯನನ್ನು ಸುಮ್ಮನೇ ಕಲ್ಪಿಸಿಕೊಳ್ಳಿ, ಅವನು ಬದುಕಿರಲಾರ. ನೀವು ನಿಮ್ಮನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು ನಿಮ್ಮ ನರಮಂಡಲದ ಕಾರಣದಿಂದಾಗಿ. ಸಂಪೂರ್ಣ ವಿಶ್ವದಲ್ಲಿ ಯಾವ ಶಕ್ತಿಯು ಗ್ರಹಿಸುವುದೋ ಮತ್ತು ಯಾವುದು ವ್ಯಕ್ತಪಡಿಸುವುದೋ ಆ ಶಕ್ತಿಯು ನಾರಾಯಣ ಆಗಿದೆ.
ಆದ್ದರಿಂದ, ವಿವಿಧ ಸಂಪ್ರದಾಯಗಳ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡುವುದು ಯಾವುದೇ ದೇವರು ಅಥವಾ ನಿರ್ದಿಷ್ಟ ಸಂಪ್ರದಾಯದ ವಿರುದ್ಧವಾಗಿಲ್ಲ. ಅದು ಕೇವಲ ಗ್ರಹಿಕೆ. ಮೂಲಭೂತವಾದಿಗಳು ತಮ್ಮನ್ನು ತಾವೇ ಹಾಗೂ ಇತರರನ್ನು ತರಬೇತುಗೊಳಿಸುವುದು ಹೀಗೆಯೇ. ನೀವು ಬೇರೆ ಯಾವುದೋ ದೇವರ ಹೆಸರನ್ನು ಉಚ್ಛರಿಸಿದರೆ ನೀವು ನಾಸ್ತಿಕರೆಂದು ಅಥವಾ ಹಾಗೇನೋ ಅವರು ನಿಮಗೆ ಹೇಳುತ್ತಾರೆ.
ಇವತ್ತು ಇಲ್ಲಿಗೆ ಬರುವುದಕ್ಕೆ ಸ್ವಲ್ಪ ಮೊದಲು, ಇರಾಕಿನಲ್ಲಿನ ಒಂದು ಆತ್ಮಹತ್ಯಾ ಕಾರ್ ಬಾಂಬಿನ ಬಗ್ಗೆ ನಾನು ಓದಿದೆ. ಹಲವಾರು ಜನರು ಮರಣ ಹೊಂದಿದರು. ಪಾಕಿಸ್ತಾನದಲ್ಲಿ ಪ್ರತಿದಿನವೂ ಆತ್ಮಹತ್ಯಾ ಬಾಂಬುಗಳು, ಪ್ರತಿದಿನವೂ ಹಿಂಸಾಚಾರಗಳು ನಡೆಯುತ್ತಿವೆ. ಇದೆಲ್ಲವೂ ಶಾಂತಿಯ ಹೆಸರಿನಲ್ಲಿ. ಇಸ್ಲಾಂ ಎಂದರೆ ಶಾಂತಿ ಎಂದು ಅರ್ಥ. ಆದರೂ ಇಸ್ಲಾಮಿನ ಹೆಸರಿನಲ್ಲಿರುವುದೆಲ್ಲಾ ಬಹಳಷ್ಟು ಹಿಂಸಾಚಾರ; ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಾರದ ಹಿಂಸಾಚಾರ.
ಇರಾಕಿನಲ್ಲಿನ ಯಾಝಿದಿಗಳು ಸಾವಿರಾರು ವರ್ಷಗಳಿಂದ ಒಂದು ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ, ಆದರೆ ಈಗ ಅವರನ್ನು ಚಿತ್ರಹಿಂಸೆಪಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ, ಹತ್ಯೆಗೈಯಲಾಗುತ್ತಿದೆ ಹಾಗೂ ಅವರು ಅಲ್ಲಾನ ವಿರುದ್ಧವೆಂದೂ, ದೇವರ ವಿರುದ್ಧವೆಂದೂ ಹೇಳಲಾಗುತ್ತಿದೆ. ದೇವರು ಅವರಿಗೆ ವಿರುದ್ಧವಾಗಿರುತ್ತಿದ್ದರೆ ಅವನು ಅವರಿಗೆ ಏನಾದರೂ ಮಾಡಿರುತ್ತಿದ್ದ. ದೇವರು ಸರ್ವಶಕ್ತನು, ಅವನಿಗೆ ಅವರು ಬದುಕಿರುವುದು ಇಷ್ಟವಿರದೇ ಇರುತ್ತಿದ್ದರೆ, ಅವನು ಅವರನ್ನು ಡೈನೋಸಾರ್‌ಗಳಂತೆ ಅಳಿಸಿಹಾಕಿರುತ್ತಿದ್ದ. ದೇವರಿಗಾಗಿ ನಾವದನ್ನು ಮಾಡಬೇಕಾದ ಅಗತ್ಯವಿಲ್ಲ. ದೇವರು ಅವನ ಕೆಲಸವನ್ನು ಮಾಡಲು ಬಿಡಿ, ನಾವು ನಮ್ಮ ಕೆಲಸವನ್ನು ಮಾಡೋಣ. ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಅಷ್ಟೊಂದು ಹಿಂಸಾಚಾರವಿರುವುದು ಬಹಳ ದುರದೃಷ್ಟಕರವಾಗಿದೆ. ಅದಕ್ಕಾಗಿಯೇ ನಾವು ಧರ್ಮಗಳ ನಡುವೆಯಿರುವ ಈ ಅಡೆತಡೆಗಳನ್ನು ಮುರಿಯಬೇಕಾಗಿರುವುದು.
ಇಸ್ಲಾಮಿನಲ್ಲಿ, ಎಲ್ಲರೂ ಒಂದೆನ್ನುವ ನಂಬಿಕೆಯಂತಹ ಕೆಲವು ಮಹತ್ತರ ವಿಷಯಗಳಿವೆ. ಸಾಮೂಹಿಕ ಪ್ರಾರ್ಥನೆಗಳಿವೆ - ಎಲ್ಲರೂ ಜೊತೆಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಮಹತ್ತರ ವಿಷಯಗಳನ್ನು ಇಟ್ಟುಕೊಳ್ಳಿ ಹಾಗೂ ವಿಭಜನೆ, ಹಿಂಸಾಚಾರ ಮತ್ತು ನಾನು ಮೇಲಣ ದರ್ಜೆಯವನು, ಇತರರೆಲ್ಲರೂ ಕೆಳದರ್ಜೆಯವರೆಂಬ ಮೇಲರಿಮೆಗಳನ್ನು ಉತ್ತೇಜಿಸುವ ಇತರ ವಿಷಯಗಳನ್ನು ಬಿಟ್ಟುಬಿಡಿ. ಅಂತಹ ವಿಷಯಗಳನ್ನು ದೂರ ಮಾಡಬೇಕು. ನಾನು ಹೇಳುತ್ತೇನೆ ಕೇಳಿ, ಜ್ಞಾನೋದಯವನ್ನು ಹೊಂದಿದ ಹಲವಾರು ಮುಸ್ಲಿಮರಿದ್ದಾರೆ. ಈ ಭೂಮಿಯ ಮೇಲೆ ಹಲವಾರು ಒಳ್ಳೆಯ ಮುಸ್ಲಿಮರಿದ್ದಾರೆ, ಆದರೆ ಕೇವಲ ಈ ಕೆಲವು ಜನರು ಹಾಗೂ ಅವರ ಮತಾಂಧತೆಯ ಕಾರಣದಿಂದಾಗಿ ಇವತ್ತು ಅವರ ಧರ್ಮಕ್ಕೆ ಅಷ್ಟೊಂದು ಕೆಟ್ಟ ಹೆಸರು ಬಂದಿದೆ. ಅದು ಬಹಳ ದುರದೃಷ್ಟಕರ.
ಪ್ರವಾದಿಗಳ ಪತ್ನಿ ಖದೀಜಾ ಯಾವತ್ತೂ ಬುರ್ಖಾವನ್ನು ಧರಿಸಲಿಲ್ಲ. ಅವಳು ಯಾವತ್ತೂ ಒಂದು ಹಿಜಾಬ್ ಕೂಡಾ ಧರಿಸಲಿಲ್ಲ. ಅವಳಿಗೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿತ್ತು. ಆನಂತರದಲ್ಲಿ ಪುರುಷ ಪ್ರಧಾನ ಸಮಾಜವು ಎಲ್ಲೋ ಸ್ತ್ರೀಯರ ಹಕ್ಕುಗಳನ್ನು ಕಸಿದುಕೊಂಡಿತೆಂದು ನನಗನಿಸುತ್ತದೆ. ಅವರದನ್ನು ಈಗ ಮಾಡಬೇಕಾಗಿಲ್ಲ.

ನಂಬಿಕೆಯ ಮೂಲಕ ಬಲವನ್ನು ಕಂಡುಕೊಳ್ಳುವುದು

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಒಬ್ಬ ವ್ಯಕ್ತಿಯು ನಂಬಿಕೆ(ವಿಶ್ವಾಸ/ಶ್ರದ್ಧೆ)ಯನ್ನು ಹೇಗೆ ನಿರ್ಮಿಸಿಕೊಳ್ಳಬಹುದು? ಅಥವಾ ಅದು ಒಬ್ಬನು ಹುಟ್ಟುವಾಗಲೇ ಪಡೆದುಕೊಂಡು ಬಂದಿರುವ ಒಂದು ಪ್ರತಿಭೆಯೇ?

ಶ್ರೀ ಶ್ರೀ ರವಿ ಶಂಕರ್: ನೀವು ನಂಬಿಕೆಯನ್ನು ಉಂಟುಮಾಡಲು ಸಾಧ್ಯವಿಲ್ಲ, ನೀವು ಕೇವಲ ನಿಮ್ಮ ಸಂಶಯಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಅವುಗಳನ್ನು ಬಿಟ್ಟುಬಿಡಬೇಕು. ನೀವು ನಿಮ್ಮ ಸಂಶಯಗಳನ್ನು ಬಿಟ್ಟುಬಿಡುವಾಗ, ಅಲ್ಲಿ ನಂಬಿಕೆಯು ಅದಾಗಲೇ ಇರುತ್ತದೆ. ಒಂದು ಸಂಶಯವು, ಮನಸ್ಸಿನ ಮೇಲೆ ಸುಳಿಯುತ್ತಿರುವ ಒಂದು ಮೋಡದಂತೆ. ಎಚ್ಚೆತ್ತುಕೊಳ್ಳಿ ಮತ್ತು "ಈ ಸಂಶಯವೇನು? ಅದು ನನ್ನನ್ನು ಕೇವಲ ಕೆಳಕ್ಕಿಳಿಸುತ್ತಿದೆ ಮತ್ತು ನನ್ನನ್ನು ಭಾರವಾಗಿಸುತ್ತದೆ. ನನಗೆ ಇದರ ಅಗತ್ಯವಿಲ್ಲ" ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ಹಿಂದೆ ಹಲವಾರು ಸಾರಿ ಆದಂತೆ ಸಂಶಯದಲ್ಲಿ ಸಿಕ್ಕಿಹಾಕಿಕೊಳ್ಳಲು ನೀವು ನಿರಾಕರಿಸಿದರೆ, ಆಗ ನೀವು ಎಚ್ಚೆತ್ತುಕೊಳ್ಳುವಿರಿ ಮತ್ತು ನೀವು ಎಚ್ಚೆತ್ತುಕೊಳ್ಳುವಾಗ, ಅಲ್ಲಿ ಅದಾಗಲೇ ನಂಬಿಕೆಯು ಇರುತ್ತದೆ.
ನಂಬಿಕೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಆದರೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು.
ಸಂಶಯಗಳನ್ನು ಸ್ಪಷ್ಟೀಕರಿಸಿಕೊಳ್ಳುವುದಕ್ಕೆ ಯಾವುದೇ ಕೊನೆಯಿಲ್ಲ. ನೀವು ಸಂಶಯಗಳನ್ನು ಸ್ಪಷ್ಟೀಕರಿಸುವುದಕ್ಕೆ ಹೋಗಬಾರದು, ಯಾಕೆಂದರೆ ನೀವು ಒಂದು ಸಂಶಯವನ್ನು ಉತ್ತರಿಸಿದಾಗ ಅದು ಬೇರೆ ಹತ್ತು ಸಂಶಯಗಳನ್ನು ಏಳಿಸುತ್ತದೆ. "ಇದು ನನಗೆ ಭಾರವಾಗುತ್ತಿದೆ" ಎಂಬುದಾಗಿ ಸುಮ್ಮನೇ ಅರಿತುಕೊಳ್ಳಿ, ಮತ್ತು ಅದನ್ನು ಬಿಟ್ಟುಬಿಡಿ. ಆಗ ನೀವು ಅದರಿಂದ ಕ್ಷಿಪ್ರವಾಗಿ ಕೊಡವಿಕೊಂಡು ಹೊರಬರುತ್ತೀರಿ ಹಾಗೂ ನೀವು ನಿಮ್ಮೊಳಗಿರುವ ಶಕ್ತಿ, ಸತ್ಯ ಮತ್ತು ಸಹಿಷ್ಣುತೆಗಳಿಂದ ಕೂಡಿದ ಒಂದು ಆಳವಾದ ಜಾಗಕ್ಕೆ ಬರುತ್ತೀರಿ. ಅದು ನಂಬಿಕೆಯೆಂದು ಕರೆಯಲ್ಪಡುತ್ತದೆ.
ನಿಮ್ಮಲ್ಲಿ ಸಂಶಯವುಂಟಾದಾಗಲೆಲ್ಲಾ ನಿಮಗೆ ಬಲಹೀನತೆಯ ಅನುಭವವಾಗುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಿ ವಿಶ್ವಾಸವಿರುವಾಗ ನಿಮಗೆ ಬಹಳ ಬಲದ ಅನುಭವವಾಗುತ್ತದೆ; ಬಹುತೇಕ ಒಳಗಿನಿಂದ ಅಜೇಯರಾದ ಹಾಗೆ. ಹೀಗಾಗಿ ಆಯ್ಕೆಯಿರುವುದು ಶಕ್ತಿ, ಅಜೇಯತನಗಳನ್ನು ಅನುಭವಿಸುವುದರ ಹಾಗೂ ಬಲಹೀನತೆಯನ್ನು ಅನುಭವಿಸುವುದರ ನಡುವೆ.
ಸಂಶಯಗಳು ಯಾವತ್ತೂ ಏನಾದರೂ ಒಳ್ಳೆಯದರ ಬಗ್ಗೆಯಿರುತ್ತದೆ. ಏನಾದರೂ ನಕಾರಾತ್ಮಕವಾದುದರ, ಕೆಟ್ಟದ್ದರ ಬಗ್ಗೆ ನಾವು ಯಾವತ್ತೂ ಸಂಶಯಿಸುವುದಿಲ್ಲ. ಏನಾದರೂ ಒಳ್ಳೆಯದ್ದರ ಬಗ್ಗೆ ನಾವು ಸಂಶಯಿಸುತ್ತೇವೆ. ಈ ಒಂದು ಅರಿವು ಸಾಕು ನಿಮ್ಮನ್ನು ಅದರಿಂದ ಹೊರಬರುವಂತೆ ಮಾಡಲು.

ಪ್ರಶ್ನೆ: ಪ್ರೀತಿಯ ಗುರುದೇವ, ದಯವಿಟ್ಟು ನಾನು ತಂತ್ರ ಸಾಧನೆಯನ್ನು ಮಾಡಬಹುದೇ? ಪರವಾಗಿಲ್ಲ ತಾನೇ? ಹತ್ತು ಮಹಾವಿದ್ಯಾ ಸಾಧನೆಗಳಲ್ಲಿ ಒಂದನ್ನು ನಾನು ಮಾಡುತ್ತಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ನೋಡು, ನಾನು ನಿನಗೆ ಹೇಳುತ್ತೇನೆ ಕೇಳು, ಹತ್ತು ಮಹಾವಿದ್ಯೆಗಳನ್ನು ತಿಳಿದ ಜನರು ಅನೇಕರಿಲ್ಲ. ಹೀಗಾಗಿ ನೀನು ಅದು ಯಾವುದನ್ನೂ ಮಾಡಬೇಕಾಗಿಲ್ಲ. ನೀನು ಸುಮ್ಮನೇ ವಿಶ್ರಾಮ ಮಾಡು ಮತ್ತು ಸ್ವಲ್ಪ ಮಂತ್ರೋಚ್ಛಾರಣೆಯನ್ನು ಕೇಳು. ಆರ್ಟ್ ಆಫ್ ಲಿವಿಂಗ್ ಹಲವಾರು ಮಂತ್ರೋಚ್ಛಾರಣೆಗಳನ್ನು ಬಿಡುಗಡೆ ಮಾಡಿದೆ, ಮತ್ತು ಅವುಗಳೆಲ್ಲವೂ ಅದರದ್ದೇ ಒಂದು ಭಾಗವಾಗಿದೆ.
ನಿಮಗೆ ನೀಡಲಾಗುವ ಸಹಜ ಮಂತ್ರಗಳು (ಸಹಜ ಸಮಾಧಿ ಧ್ಯಾನ ಶಿಬಿರದಲ್ಲಿ ನೀಡಲಾಗುವ ಮಂತ್ರ) ಬೀಜ ಮಂತ್ರಗಳಾಗಿವೆ, ಅವುಗಳೆಲ್ಲವೂ ಮಹತ್ತರವಾದವು.
ತಾವು ನಿಮಗೆ ಹತ್ತು ಮಹಾವಿದ್ಯೆಗಳ ಜ್ಞಾನವನ್ನು ನೀಡುವುದಾಗಿ ಯಾರಾದರೂ ನಿಮಗೆ ಹೇಳಲೂಬಹುದು, ಆದರೆ ಅದು ತುಂಬಾ ಸಂಕೀರ್ಣವಾದುದು. ನಾನು ಹೇಳುವುದೇನೆಂದರೆ, ನೀವದನ್ನು ಸುಮ್ಮನೆ ದೂರದಿಂದ ಗೌರವಿಸಿ. ನಿಮ್ಮ ಅಭ್ಯಾಸಕ್ಕಾಗಿ, ನಿಮಗೇನನ್ನು ನೀಡಲಾಗಿದೆಯೋ ಅದು ಉತ್ತಮವಾದುದು. ನಿಮಗೆ ಬೇಕಿದ್ದರೆ, ನಮ್ಮ ಕೇಂದ್ರಗಳಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ನೀವು ಸೇರಿಕೊಳ್ಳಬಹುದು. ೪೦ ದಿನಗಳಲ್ಲಿ ನೀವು ಈ ವಿಷಯಗಳ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು. ನೀವು ಭಾರತಕ್ಕೆ ಬಂದರೆ, ನಾವು ಉಪನಯನವನ್ನು ಕೂಡಾ ಮಾಡುತ್ತೇವೆ ಹಾಗೂ ಆಗ ನೀವು ಮಂತ್ರಗಳನ್ನು ಕಲಿತುಕೊಳ್ಳಬಹುದು.
’ನಾನು ನಿನಗೆ ಈ ಜ್ಞಾನವನ್ನು ನೀಡುತ್ತೇನೆ, ಆ ಜ್ಞಾನವನ್ನು ನೀಡುತ್ತೇನೆ’ ಎಂದು ಹೇಳುವ ಹಲವಾರು ಜನರಿರುತ್ತಾರೆ, ಆದರೆ ಅದೊಂದು ಅವ್ಯವಸ್ಥಿತವಾದ ಗೊಂದಲವಾಗುತ್ತದೆಯಷ್ಟೆ.

ಪ್ರಶ್ನೆ: ಯೋಗ ನಿದ್ರೆಯ ಉದ್ದೇಶವೇನು ಮತ್ತು ಅದು ಕೆಲಸ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಕೆಲಸ ಮಾಡುತ್ತದೆ, ಅಲ್ಲವೇ? ನೀವು ನಿಮ್ಮ ಗಮನವನ್ನು ಒಂದೊಂದಾಗಿ ಶರೀರದ ವಿವಿಧ ಭಾಗಗಳ ಕಡೆಗೆ ತೆಗೆದುಕೊಂಡು ಹೋಗುತ್ತೀರಿ. ಶರೀರ ಮತ್ತು ಪ್ರಜ್ಞೆಯು ಹೇಗೆ ಬೇರೆ ಬೇರೆಯಾದುದು ಎಂಬುದನ್ನು ನೀವು ನೋಡುತ್ತೀರಿ. ಆದರೂ ಅವುಗಳು ಪರಸ್ಪರ ಬೆಸೆದುಕೊಂಡಿವೆ.

ಪ್ರಶ್ನೆ: ಎಲ್ಲಾ ಸಂಕಷ್ಟ ಮತ್ತು ಅನ್ಯಾಯಗಳ ಹೊರತಾಗಿಯೂ ಆಂತರಿಕವಾಗಿ ಶಾಂತಿಯಿಂದಿರುವುದರ ಪ್ರಾಮುಖ್ಯತೆಯನ್ನು ನಾನು ಅರಿತಿದ್ದೇನೆ. ಆದರೆ ಎಲ್ಲಾ ರೀತಿಯ ದಬ್ಬಾಳಿಕೆಗಳ ವಿರುದ್ಧ ಹೋರಾಡುವ ಒಬ್ಬ ಕಾರ್ಯಕರ್ತನಾಗಿ, ಹಿಂಸಾಚಾರವನ್ನು ಹೊಂದಿದ ಒಬ್ಬ ದಬ್ಬಾಳಿಕೆಗಾರನೊಂದಿಗೆ ಒಬ್ಬನು ಹೇಗೆ ವ್ಯವಹರಿಸಬೇಕು?

ಶ್ರೀ ಶ್ರೀ ರವಿ ಶಂಕರ್: ನಾವು ತಲ್ಲಣಗೊಂಡರೆ, ನಮ್ಮ ಕಾರ್ಯವು ಫಲಿಸದು. ನಾವು ಶಾಂತರಾಗಿರುವಾಗ ನಮಗೆ ಅಂತರ್ಜ್ಞಾನದ ಚಿಂತನೆಗಳು ಬರುತ್ತವೆ ಮತ್ತು ಈ ಆಲೋಚನೆಗಳೊಂದಿಗೆ ನೀವೊಂದು ಯೋಜನೆಯನ್ನು ಹಾಕಬೇಕು ಹಾಗೂ ಅದರಂತೆ ಕ್ರಮ ತೆಗೆದುಕೊಳ್ಳಬೇಕು. ನೀವೊಬ್ಬ ದಬ್ಬಾಳಿಕೆಗಾರನನ್ನು ಒಬ್ಬಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ನೀವು ಅರಿವನ್ನು ಮೂಡಿಸಬೇಕು ಮತ್ತು ಒಂದು ಗುಂಪಿನಲ್ಲಿ ಇದು ಸಾಧ್ಯವಿದೆ. ಅದೇ ಸಮಯಕ್ಕೆ, ನಿಮ್ಮ ಸಂಕಲ್ಪವನ್ನು ಬಲವಾಗಿರಿಸಿ ಹಾಗೂ ನಿಮಗೆ ಮಾರ್ಗದರ್ಶನ ಮಾಡುವ ಮತ್ತು ನಿಮ್ಮನ್ನು ಆಧರಿಸುವ ಒಂದು ಶಕ್ತಿಯಿದೆಯೆಂಬುದನ್ನು ತಿಳಿಯಿರಿ.
ಕೆಲವೊಮ್ಮೆ ಮಹಾತ್ಮಾ ಗಾಂಧಿಯವರು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂತು ಎಂಬುದನ್ನು ನೆನಪಿನಲ್ಲಿಡಿ. ಇತರ ಸಮಯದಲ್ಲಿ ಅವರು ಅರಿವಿನ ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿದರು ಹಾಗೂ ಇಡೀ ಭೂಖಂಡದಲ್ಲಿ ಸಂಚಲನೆಯನ್ನು ಉಂಟುಮಾಡಿದರು, ಅಲ್ಲವೇ? ಮತ್ತು ಅವರು ಯಾವಾಗಲೂ ಧ್ಯಾನ ಮಾಡುತ್ತಿದ್ದರು. ಪ್ರತಿದಿನವೂ ಅವರು ಸತ್ಸಂಗ ಮಾಡುತ್ತಿದ್ದರು, ಪ್ರತಿದಿನ ಸಾಯಂಕಾಲವೂ ಅವರು ಭಜನೆಗಳನ್ನು ಹಾಡುತ್ತಿದ್ದರು. ಬೆಳಗಿನ ಹೊತ್ತು ಅವರು ಭಗವದ್ಗೀತೆಯನ್ನು ಓದುತ್ತಿದ್ದರು. ಹೀಗೆ ಮಹಾತ್ಮಾ ಗಾಂಧಿಯವರಲ್ಲಿ ಆಧ್ಯಾತ್ಮಿಕ ಬಲವಿತ್ತು, ಇಲ್ಲದೇ ಹೋಗಿದ್ದರೆ ಅವರೇನು ಸಾಧಿಸಿರುವರೋ ಅದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಪ್ರಶ್ನೆ: ಜಗತ್ತು ತನ್ನ ಗಡಿಗಳನ್ನು ಮತ್ತು ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಿ ಒಂದಾಗಬೇಕಾದ ಅಗತ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ಅವರು ಅವುಗಳನ್ನು ಹೊಂದಿರಬಹುದು, ಆದರೆ ಅವುಗಳ ಜೊತೆಯಲ್ಲಿಯೇ ಅವರೊಂದು ಇನ್ನೂ ವಿಶಾಲವಾದ ದೃಷ್ಟಿಯನ್ನು ಹೊಂದಿರಬಹುದು.
ನೋಡಿ, ನೀವು ನಿಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ಅದೇ ಸಮಯದಲ್ಲಿ ನೀವು ನಿಮ್ಮ ಗ್ರಾಮ, ನಿಮ್ಮ ನಗರ ಅಥವಾ ನಿಮ್ಮ ದೇಶವನ್ನು ಕೂಡಾ ನೋಡಿಕೊಳ್ಳಬಹುದು. ನೀವು ಎರಡೂ ಪಾತ್ರಗಳನ್ನು ವಹಿಸಬಹುದು ಮತ್ತು ಅವುಗಳ ನಡುವೆ ಯಾವುದೇ ಸಂಘರ್ಷವಿಲ್ಲ.

ಪ್ರಶ್ನೆ: ಜನರು ನನ್ನ ತಾಳ್ಮೆ, ಕರುಣೆ, ಕ್ಷಮೆ ಮತ್ತು ಸಹನಶೀಲತೆಗಳನ್ನು ಒಂದು ಬಲಹೀನತೆಯನ್ನಾಗಿ ಕಂಡರೆ ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಬೇರೊಬ್ಬರು ಬೇರೆ ರೀತಿಯಲ್ಲಿ ಯೋಚಿಸುವಂತೆ ಮಾಡಲು ಅಥವಾ ಅವರ ಗ್ರಹಿಕೆಯನ್ನು ಬದಲಾಯಿಸಲು ನಿನಗೆ ಸಾಧ್ಯವಿಲ್ಲ. ಅವರು ಆ ರೀತಿ ಯೋಚಿಸಿದರೆ, ಅದು ಅವರಿಗೆ ಬಿಟ್ಟದ್ದು. ನೀನು ಕೇಂದ್ರಿತನಾಗಿಯೂ ಬಲಶಾಲಿಯಾಗಿಯೂ ಇರುವಲ್ಲಿಯವರೆಗೆ, ನೀನು ಕ್ಷೇಮವಾಗಿರುವೆ. ನೀನು ಮುಂದೆ ಸಾಗು.

ಪ್ರಶ್ನೆ: ನನ್ನ ಪ್ರೀತಿಯ ಗುರುದೇವ, ಒಂದು ದಿನದಲ್ಲಿ ಇನ್ನೂ ಹಲವು ಗಂಟೆಗಳಷ್ಟು ಕಾಲವನ್ನು ನಾನು ಆರ್ಟ್ ಆಫ್ ಲಿವಿಂಗ್‌ಗಾಗಿ ಮೀಸಲಾಗಿರಿಸಲು ಬಯಸುತ್ತೇನೆ. ಆದರೆ ನನಗೆ ಮಕ್ಕಳಿದ್ದಾರೆ ಹಾಗೂ ನಾನು ಅವರೊಂದಿಗೆ ಕೂಡಾ ಇರಬೇಕಾಗುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ಮಕ್ಕಳೊಂದು ಅಡಚಣೆಯೆಂದು ಯೋಚಿಸಬೇಡ. ಚಿಕ್ಕ ಮಕ್ಕಳಿರುವ ಮತ್ತು ಆದರೂ ಅತ್ಯಧಿಕ ಕೆಲಸವನ್ನು ಮಾಡುತ್ತಿರುವ ಹಲವರಿದ್ದಾರೆ. ಬಹಳ ಚಿಕ್ಕ ಮಕ್ಕಳಿರುವ ಹಲವಾರು ಶಿಕ್ಷಕರು ನಮ್ಮಲ್ಲಿದ್ದಾರೆ ಮತ್ತು ಆದರೂ ಅವರು ಕೆಲಸ ಮಾಡುತ್ತಿದ್ದಾರೆ.
ಜಾನಿಸ್ ಅಂತಹ ಒಂದು ಉದಾಹರಣೆಯಾಗಿದ್ದಾಳೆ. ಇಬ್ಬರು ಪುಟ್ಟ ಮಕ್ಕಳಿದ್ದಾಗಲೂ ಅವಳು ಎಷ್ಟೊಂದು ಮಾಡಿದ್ದಾಳೆ ಮತ್ತು ಪೋಲೇಂಡಿನಲ್ಲಿ ನಮ್ಮ ಇನ್ನೊಬ್ಬಳು ಶಿಕ್ಷಕಿಯಿದ್ದಾಳೆ, ಅವಳಿಗೆ ಮೂವರು ಚಿಕ್ಕ ಮಕ್ಕಳಿದ್ದರು ಮತ್ತು ಮಕ್ಕಳೊಂದಿಗೆ ಅವಳು ನೂರು ಅಥವಾ ಇನ್ನೂರು ಮಂದಿಗೆ ಕಲಿಸುತ್ತಿದ್ದಳು.
ಆದುದರಿಂದ, ಮಕ್ಕಳಿಂದಾಗಿ ನಾವು ಏನನ್ನಾದರೂ ಮಾಡಲು ಸಾಧ್ಯವಾಗುತ್ತಿಲ್ಲವೆಂದು ನಾವು ಯೋಚಿಸಬಾರದು. ನೀವು ಖಂಡಿತವಾಗಿಯೂ ಅವರನ್ನು ನಿರ್ಲಕ್ಷ್ಯ ಮಾಡಬಾರದು, ನೀವವರನ್ನು ನೋಡಿಕೊಳ್ಳಬೇಕು. ಮಕ್ಕಳ ಕಡೆಗೆ ಗಮನ ಕೊಡಿ, ಆದರೆ ಅದೇ ಸಮಯಕ್ಕೆ, ಸಮಾಜಕ್ಕಾಗಿ ಏನನ್ನಾದರೂ ಮಾಡುವ ಒಂದು ಉದ್ದೇಶ ನಿಮಗಿದ್ದರೆ, ನಿಮಗದನ್ನು ಮಾಡಲು ಸಾಧ್ಯವಿದೆ. ಅದಕ್ಕಾಗಿ ಸ್ವಲ್ಪ ಸಮಯವನ್ನಿರಿಸಿ.

ಸೋಮವಾರ, ಜೂನ್ 2, 2014

ದುಃಖಿತರಲ್ಲಿ ಧೈರ್ಯವನ್ನು ಪ್ರೇರೇಪಿಸುವ ಮನವಿರಲಿ

ಜೂನ್ ೨, ೨೦೧೪
ಬೆಂಗಳೂರು

ಬೋಸ್ನಿಯಾ ಮತ್ತು ಹರ್ಝೆಗೋವ್ನಿಯಾ, ಸರ್ಬಿಯಾ, ಕ್ರೊಯೇಷಿಯಾ, ಮೆಸಿಡೋನಿಯಾ, ಅಲ್ಬೇನಿಯಾ ದೇಶಗಳ ಚರಿತ್ರೆಯಲ್ಲೇ ಅತ್ಯಂತ ಕೆಟ್ಟದಾದ ನೆರೆಯಿಂದ, ಮೇ ೧೪ ಮತ್ತು ೧೭, ೨೦೧೪ರ ನಡುವೆ ೧೦ ಲಕ್ಷಕ್ಕಿಂತಲೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಬೋಸ್ನಿಯಾದಲ್ಲಿರುವ ೧,೦೦,೦೦೦ ಕ್ಕಿಂತಲೂ ಹೆಚ್ಚು ಮನೆಗಳು ಮತ್ತು ಇತರ ಕಟ್ಟಡಗಳು ಉಪಯೋಗಕ್ಕೆ ಯೋಗ್ಯವಾಗಿ ಉಳಿದಿಲ್ಲ. ೧೦ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಶುದ್ಧವಾದ ನೀರಿನ ಪೂರೈಕೆಯಿಲ್ಲದಾಗಿದೆ.

ಯುರೋಪಿನ ಆರ್ಟ್ ಆಫ್ ಲಿವಿಂಗ್ ಕುಟುಂಬವು ಬಾಲ್ಕನ್ಸ್‌(ದಕ್ಷಿಣ ಪೂರ್ವ ಯುರೋಪಿನ ಒಂದು ಭೌಗೋಳಿಕ ಪ್ರದೇಶ)ನ ವಿವಿಧ ಭಾಗಗಳಲ್ಲಿ  ಪರಿಹಾರ ಯತ್ನಗಳ ಕೆಲಸ ಮಾಡುತ್ತಿದೆ.

(ಜೂನ್ ೨, ೨೦೧೪ರಂದು, ಸಂತ್ರಸ್ತ ಕುಟುಂಬಗಳಿಗಾಗಿ, ಶಾಂತಿಗಾಗಿ ಒಂದು ವಿಶೇಷವಾದ ಧ್ಯಾನವನ್ನು ಪೂಜ್ಯ ಶ್ರೀ ಶ್ರೀ ರವಿಶಂಕರರೊಂದಿಗೆ ನಡೆಸಲಾಯಿತು. ಅದರಲ್ಲಿ, ಶಾಂತಿ ಮತ್ತು ಜೀವನದ ಪುನಃಸ್ಥಾಪನೆಗಾಗಿ ಧ್ಯಾನ ಮಾಡಲು ಹಾಗೂ ಪ್ರಾರ್ಥಿಸಲು ಜಗತ್ತಿನೆಲ್ಲೆಡೆಗಳಿಂದ ಸಾವಿರಾರು ಜನರು ಒಂದುಗೂಡಿದರು. ಶ್ರೀ ಶ್ರೀಯವರ ಸಂದೇಶದ ಪ್ರತಿಲಿಪಿಯು ಕೆಳಕಂಡಂತಿದೆ.)

ಬಾಲ್ಕನ್ಸ್‌ನ ಜನರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿರುವಂತೆಯೇ, ಪರಿಸರವನ್ನು ಸಂರಕ್ಷಿಸಲು ಕೂಡಾ ನಾವೊಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇವೆ.

ಇವತ್ತು ಏನಾಗುತ್ತಿದೆಯೆಂದರೆ, ಎಲ್ಲೋ ಒಂದೆಡೆ ಕ್ಷಾಮವಿದೆ; ಎಲ್ಲೋ ಒಂದೆಡೆ ಬರವಿದೆ; ಎಲ್ಲೋ ಒಂದೆಡೆ ನೆರೆಯಿದೆ. ಈ ದಶಕಗಳಲ್ಲಿ ಮನುಕುಲವು ಎದುರಿಸುತ್ತಿರುವ ಪ್ರಕೃತಿ ವಿಕೋಪಗಳು, ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು ಎಂಬುದರ ಕಡೆಗಿರುವ ಒಂದು ಸೂಚನೆಯಾಗಿದೆ.

ಈಗ, ನಾನು ಮಾತನಾಡುತ್ತಿರುವಂತೆಯೇ, ಇಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹಲವು ವರ್ಷಗಳಿಂದ ನಮ್ಮಲ್ಲಿ ಇಷ್ಟು ಭಾರೀ ಮಳೆಯಾಗಿಲ್ಲ. ಈ ವರ್ಷ ಬಹಳ ಕಡಿಮೆ ಮಳೆಯಾಗುವುದೆಂದೂ, ಮತ್ತು ಅದು ಭಾರತದಲ್ಲಿ ಬೆಳೆಗಳ ಮೇಲೆ ಪರಿಣಾಮ ಬೀರುವುದೆಂದೂ ಎಲ್ಲಾ ಹವಾಮಾನ ಇಲಾಖೆಗಳೂ ಭವಿಷ್ಯ ನುಡಿದಿದ್ದವು. ಆದರೆ ಇವತ್ತು ನಾವು ಏನನ್ನು ನೋಡುತ್ತಿರುವೆವೋ ಅದು ಭವಿಷ್ಯವಾಣಿಗಳನ್ನು ಸುಳ್ಳಾಗಿಸುತ್ತಿರುವಂತೆ ತೋರುತ್ತಿದೆ. ನಮ್ಮಲ್ಲಿ ಈಗ ಅಷ್ಟೊಂದು ಭಾರೀ ಮಳೆ ಬರುತ್ತಿದೆ.

ಈ ದೇಶದಲ್ಲಿ, ತೀವ್ರವಾದ ನೀರಿನ ಕೊರತೆಯಿದೆ. ಕೆಲವು ದಿನಗಳ ಹಿಂದೆ ನಾನು ಕೆಲವು ಹಳ್ಳಿಗಳ ಮೂಲಕ ಪ್ರಯಾಣಿಸುತ್ತಿದ್ದೆ ಮತ್ತು ಅಲ್ಲಿ ನಾಲ್ಕು ವರ್ಷಗಳಿಂದ ಬತ್ತಿದ್ದ ಹೊಳೆಗಳಿರುವುದನ್ನು ನಾನು ನೋಡಿದೆ. ಪಶು ಪಕ್ಷಿಗಳಿಗೆ ಅಲ್ಲಿ ನೀರಿರಲಿಲ್ಲ. ಕುಡಿಯಲು ನೀರಿಲ್ಲ. ಕೃಷಿಗೆ ನೀರಿಲ್ಲ.

ಇವತ್ತಿನ ಮಳೆಯು ಆ ಪ್ರಾರ್ಥನೆಗಿರುವ ಒಂದು ಉತ್ತರವೆಂದು ನನಗನ್ನಿಸುತ್ತದೆ. ಈಗ, ಈ ಎಲ್ಲಾ ಹಳ್ಳಿಗಳಲ್ಲಿ ಸಾಕಷ್ಟು ನೀರಿರಬಹುದು.

ಈಗ, ಬಾಲ್ಕನ್ ರಾಜ್ಯಗಳಲ್ಲಿ, ನಾವು ನೆರೆಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಮಾಡುವ ಒಂದು ವ್ಯವಸ್ಥೆ ನಮ್ಮ ಬಳಿಯಿರುವುದಕ್ಕಾಗಿ,  ನಾವೊಂದು ಉತ್ತಮವಾದ ಮೂಲಭೂತ ಸೌಕರ್ಯವನ್ನು ನಿರ್ಮಿಸಬೇಕಾಗಿದೆ.

ಕೆಲವೊಮ್ಮೆ, ನೆರೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವಾಗ, ಜನರು ತಮಗಾಗಿ ಒಂದು ಹೆಚ್ಚು ಸುರಕ್ಷಿತ ಪ್ರದೇಶವನ್ನು ಕಂಡುಕೊಳ್ಳಲು ಸಾಧ್ಯವಾಗುವುದಕ್ಕಾಗಿ ಹವಾಮಾನ ಮುನ್ಸೂಚನಾ ಇಲಾಖೆಯು ಜನರಿಗೆ ಎಚ್ಚರಿಕೆಯನ್ನು ನೀಡಬೇಕು.

ಪರಿಹಾರ ಕಾರ್ಯವನ್ನು: ಆಘಾತದ ಪರಿಹಾರ ಮತ್ತು ಧ್ಯಾನದ ಕಾರ್ಯಕ್ರಮಗಳನ್ನು ಒದಗಿಸುವುದರಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸ್ವಯಂಸೇವಕರು ತಮ್ಮ ೧೦೦% ವನ್ನು ಹಾಕುತ್ತಿರುವರೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಇದು ಬಹಳ ಮುಖ್ಯ.
ಧ್ಯಾನವು ಪ್ರಕೃತಿಯನ್ನು ಸಮಾಧಾನಗೊಳಿಸಲು ಸಹಾಯ ಮಾಡುತ್ತದೆ. ಧ್ಯಾನವು, ಸವಾಲಿನ ಪರಿಸ್ಥಿತಿಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ. ಅದು ನಮಗೆ ಬಹಳಷ್ಟು ಅಗತ್ಯವಿರುವ ವಿಶ್ವಾಸವನ್ನು ಮತ್ತು ಅಪೇಕ್ಷಿತ ಹಾಗೂ ಲಾಭದಾಯಕ ಫಲಿತಾಂಶಗಳನ್ನು ಯಾವ ಕಾರ್ಯವು ನಮಗೆ ನೀಡಬಲ್ಲದು ಎಂಬುದನ್ನು ಮುಂಗಾಣಲಿರುವ ಅಂತಃಸ್ಫುರಣ ಸಾಮರ್ಥ್ಯವನ್ನು ಕೂಡಾ ನೀಡುತ್ತದೆ.

ಬಿಕ್ಕಟ್ಟಿನ ಸಮಯದಲ್ಲಿ ಧ್ಯಾನವು ಜನರಲ್ಲಿ, ಸಾಮೂಹಿಕ ಉತ್ಸಾಹದ ಒಂದು ಭಾವನೆಯನ್ನು ಕೂಡಾ ಸೃಷ್ಟಿಸುತ್ತದೆ. ಹೀಗಾಗಿ, ನಾನು ಹೇಳುವುದೇನೆಂದರೆ, ಎದೆಗುಂದಬೇಡಿ. ಬಿಕ್ಕಟ್ಟು ಮುಗಿದುಹೋಗುತ್ತದೆ. ಮತ್ತು ಈ ಸಂಕಟಕಾಲದಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ.

ಎಲ್ಲಾ ಸಂಕಟವನ್ನು, ಎಲ್ಲಾ ದುಃಖವನ್ನು ಮತ್ತು ಎಲ್ಲಾ ಸಂತೋಷವನ್ನು ಕೂಡಾ ನಾವು ಒಟ್ಟಿಗೆ ಹಂಚಿಕೊಳ್ಳೋಣ.
ಇದು ಜನರಿಗೆ, ಎಚ್ಚೆತ್ತುಕೊಂಡು ತಮ್ಮ ಸ್ವಾರ್ಥಪರವಾದ ಉದ್ದೇಶಗಳಿಂದಾಚೆಗೆ ನೋಡಲಿರುವ ಒಂದು ಅವಕಾಶ ಕೂಡಾ ಆಗಿದೆ. ಜೀವನದಲ್ಲಿ ಇನ್ನೂ ಹೆಚ್ಚಿನ ಗುರಿಗಳಿವೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಾವು ಪರಸ್ಪರರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಮುಂದಕ್ಕೆ ಪ್ರಗತಿ ಹೊಂದಬೇಕು.

ಸಂಕಟವು ಜನರನ್ನು ಒಟ್ಟು ಸೇರಿಸುತ್ತದೆ. ಮತ್ತು ಈ ಸಂಕಟದಲ್ಲಿ ಜನರು ಒಟ್ಟಾಗಿದ್ದಾರೆ. ಅವರು ತಮ್ಮ ವೈರವನ್ನು, ಭಿನ್ನತೆಗಳನ್ನು ಮತ್ತು ದ್ವೇಷವನ್ನು ಮರೆತಿದ್ದಾರೆ. ಬೋಸ್ನಿಯಾ ಮತ್ತು ಇತರ ಪ್ರದೇಶಗಳಲ್ಲಿ ಜನಾಂಗೀಯ ಹಾಗೂ ಧಾರ್ಮಿಕ ಹಿಂಸೆಯು ನಡೆದಿವೆಯೆಂಬುದು ನನಗೆ ತಿಳಿದಿದೆ. ನಾವು ಸ್ಲೊವೇನಿಯಾದವರಾಗಿರಲಿ, ಕ್ರೊಯೇಷಿಯಾದವರಾಗಿರಲಿ ಅಥವಾ ಬೋಸ್ನಿಯಾದವರಾಗಿರಲಿ, ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯಲಿರುವ ಸಮಯವು ಇದಾಗಿದೆ. ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು ಮತ್ತು ಒಂದು ಮಾನವೀಯತೆಯಾಗಿ, ಜನರ ಸೇವೆ ಮಾಡುವುದರಲ್ಲಿ ಹಾಗೂ ಬಾಲ್ಕನ್ಸ್‌ನಲ್ಲಿ ಯಥಾಸ್ಥಿತಿಯನ್ನು ಪುನಃ ಸ್ಥಾಪಿತಗೊಳಿಸುವುದರಲ್ಲಿ ನಾವು ಒಟ್ಟಾಗಬೇಕು.

ಪ್ರಶ್ನೆ: ಇಂತಹ ಪರಿಸ್ಥಿತಿಗಳಲ್ಲಿ, ಆಹಾರವಿಲ್ಲದಿರುವಾಗ ಮತ್ತು ವಿದ್ಯುಚ್ಛಕ್ತಿ ಇಲ್ಲದಿರುವಾಗ ಜ್ಞಾನವನ್ನು ಅನ್ವಯಿಸಲು ನನಗೆ ಕಷ್ಟವಾಗುತ್ತದೆ. 

ಶ್ರೀ ಶ್ರೀ ರವಿ ಶಂಕರ್: ನೀನು ಜ್ಞಾನವನ್ನು ಅನ್ವಯಿಸಬೇಕಾಗಿಲ್ಲ, ಕೇವಲ ಸ್ವಾಭಾವಿಕವಾಗಿರು.

ಜ್ಞಾನವು ಈಗಾಗಲೇ ನಿಮ್ಮಲ್ಲಿ ಅಂತರ್ಗತವಾಗಿದೆ. ನೀವು ಪರಿಸ್ಥಿತಿಗಳನ್ನು ಸ್ವೀಕರಿಸಬೇಕು, ವರ್ತಮಾನದ ಕ್ಷಣದಲ್ಲಿ ಜೀವಿಸಬೇಕು ಮತ್ತು ಜನರ ಸೇವೆ ಮಾಡಬೇಕು. ಇದು ಜ್ಞಾನ. ಇನ್ನೂ ಹೆಚ್ಚಿನ ಯಾವುದೇ ಜ್ಞಾನವನ್ನು ಅನ್ವಯಿಸಲು ಪ್ರಯತ್ನಿಸಬೇಡಿ; ಅದರ ಅಗತ್ಯವಿಲ್ಲ. ಸ್ವಾಭಾವಿಕವಾಗಿರಿ ಮತ್ತು ಏನಾದರೂ ಒಳ್ಳೆಯದಾಗಲಿದೆಯೆಂಬ ವಿಶ್ವಾಸವನ್ನು ಹೊಂದಿ. ನಿಮ್ಮ ಪ್ರಾಥನೆಗಳಿಗೆ ಉತ್ತರಿಸಲಾಗುತ್ತದೆಯೆಂಬ ವಿಶ್ವಾಸವನ್ನಿಡಿ.

ಪ್ರಶ್ನೆ: ನನ್ನ ವಿಶ್ವಾಸವು ಅಲುಗಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು, ಈ ಆಘಾತದಿಂದ ಹೊರಬರಲು ಇತರರಿಗೆ ಸಹಾಯ ಮಾಡಲು ಸಾಧ್ಯವೇ?

ಶ್ರೀ ಶ್ರೀ ರವಿ ಶಂಕರ್: ಹೇ! ಒಂದು ನೆರೆಯು ನಿನ್ನ ವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದು ವಿಶ್ವಾಸವೇ ಅಲ್ಲ. ಸಂಕಟದ ಪ್ರತಿ ಕ್ಷಣದಲ್ಲೂ ನಿನಗೆ ಸಹಾಯವು ದೊರಕುವುದು ಮತ್ತು ನಿನಗೆ ಸಹಾಯ ಮಾಡಲಾಗುವುದು ಎಂಬುದನ್ನು ಸುಮ್ಮನೇ ತಿಳಿ. ನಿನ್ನೊಂದಿಗೆ ನಿಲ್ಲುವ, ನಿನಗೆ ಸಹಾಯ ಮಾಡುವ ಒಂದು ಶಕ್ತಿಯಿದೆ. ಅಷ್ಟನ್ನೇ ನೀನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದು.

ಒಂದು ಧಾರಾಕಾರ ಮಳೆ ಅಥವಾ ಒಂದು ನೆರೆ ಅಥವಾ ಒಂದು ಕ್ಷಾಮವು ನಿನ್ನ ವಿಶ್ವಾಸವನ್ನು ಅಲುಗಾಡಿಸಬಲ್ಲದಾದರೆ, ಆಗ ಅದು ನಿಜವಾಗಿಯೂ ವಿಶ್ವಾಸವಲ್ಲ. ಅದೊಂದು ಪ್ರಾಸಂಗಿಕ ಪರಿಕಲ್ಪನೆ ಅಷ್ಟೇ. ಇದು ವಿಶ್ವಾಸಕ್ಕಿರುವ ಪರೀಕ್ಷೆಯ ಸಮಯವಾಗಿದೆ, ಹೀಗಾಗಿ ಅದನ್ನು ಅಚಲವಾಗಿರಿಸು.

ಪ್ರಶ್ನೆ: ಜನಸಂಖ್ಯೆಯಲ್ಲಿ ೧% ಜನರು ಧ್ಯಾನ ಮಾಡಿದರೆ, ಅದು ಉಳಿದ ೯೯% ಜನರಿಗೆ ಲಾಭದಾಯಕವಾಗಿದೆ ಎಂದು ನೀವು ಹೇಳುತ್ತೀರಿ. ನೀವು ದಯವಿಟ್ಟು ವಿವರಿಸಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಇಡೀ ವಿಶ್ವವು ಕೇವಲ ತರಂಗಗಳಾಗಿವೆ. ನೀನಿದನ್ನು ನೋಡಬಹುದು. ಒಂದು ಗುಂಪಿನಲ್ಲಿ ಒಬ್ಬ ವ್ಯಕ್ತಿಯು ಕ್ಷೋಭೆಗೊಳಗಾಗುತ್ತಾನೆಂದಿಟ್ಟುಕೊಳ್ಳೋಣ. ನೋಡು ಅದು ಹೇಗೆ ಎಲ್ಲರಿಗೂ ಹರಡುತ್ತದೆಯೆಂದು. ಎಲ್ಲರೂ ವ್ಯಾಕುಲರಾಗುತ್ತಾರೆ. ಅದೇ ರೀತಿಯಲ್ಲಿ, ಒಬ್ಬ ವ್ಯಕ್ತಿಯು ಶಾಂತಿಯುತವಾಗಿದ್ದರೆ, ಆ ಶಾಂತಿಯು ಪಸರಿಸುತ್ತದೆ.

ಪ್ರಶ್ನೆ: ನೈಸರ್ಗಿಕ ವಿಕೋಪಗಳುಂಟಾಗುವಾಗ, ನೈಸರ್ಗಿಕ ವಿಕೋಪಗಳಲ್ಲಿ ದೇವರ ಕೈಯಿದೆಯೇ ಅಥವಾ ಮನುಷ್ಯನು ಒಂದು ಪಾತ್ರವನ್ನು ವಹಿಸುತ್ತಾನೆಯೇ?

ಶ್ರೀ ಶ್ರೀ ರವಿ ಶಂಕರ್: ಎರಡೂ. ಕೆಲವೊಮ್ಮೆ ಅದೊಂದು ರಹಸ್ಯ; ಅದು ಹೇಗೆ ಆಗುತ್ತಿದೆಯೆಂಬುದನ್ನು ವಿವರಿಸಲು ನಿಮಗೆ ಸಾಧ್ಯವಿಲ್ಲ. ಮತ್ತು ಇತರ ಹಲವಾರು ಸಂದರ್ಭಗಳಲ್ಲಿ, ನಾವು ಪ್ರಕೃತಿಯ ಕಡೆಗೆ ದಯಾಪರರಾಗಿಲ್ಲ. ನಾವದನ್ನು ಮಿತಿಮೀರಿ ಶೋಷಣೆ ಮಾಡುತ್ತಿದ್ದೇವೆ. ಮತ್ತು ಅದಕ್ಕಾಗಿಯೇ ಪ್ರಕೃತಿಯು ಒಂದು ಉಗ್ರ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.

ಪ್ರಶ್ನೆ: ಈ ಪ್ರಾಕೃತಿಕ ವಿಕೋಪವು ಸುತ್ತಲೂ ಬಹಳಷ್ಟು ವಿಪತ್ತನ್ನು ತಂದಿದೆ, ಆದರೆ ಅದು ಏಕತ್ವದ ಸ್ಫೂರ್ತಿಯನ್ನು ಹಾಗೂ ಆತ್ಮೀಯತೆಯನ್ನು ಕೂಡಾ ತಂದಿದೆ. ನಾವಿದನ್ನು ಹೇಗೆ ಕಾಪಾಡಿಕೊಳ್ಳಬಹುದು?

ಶ್ರೀ ಶ್ರೀ ರವಿ ಶಂಕರ್: ನಿಮಗೆ ಗೊತ್ತಾ, ಭಾವನೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಯಾವಾಗಲೂ ನೀವು ಒಂದೇ ಭಾವನೆಯನ್ನು ಹೊಂದಿರಲು ಸಾಧ್ಯವಿಲ್ಲ. ಭಾವನೆಗಳು ಅಲೆಗಳಂತೆ, ಅವುಗಳು ಬರುತ್ತವೆ ಮತ್ತು ಹೋಗುತ್ತವೆ. ಅವುಗಳು ಮೇಲೆ ಬರುತ್ತವೆ ಮತ್ತು ಕೆಳಕ್ಕೆ ಹೋಗುತ್ತವೆ. ಹೀಗಾಗಿ, ಭಾವನೆಗಳನ್ನು ಅಥವಾ ಐಕ್ಯತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ನೀವು ಚಿಂತಿಸಬಾರದು. ಐಕ್ಯತೆಯಿದೆ ಎಂದು ಸುಮ್ಮನೇ ದೃಢವಾಗಿ ನಂಬಿಕೊಂಡು ಮುಂದುವರೆಯಿರಿ.

ಸೋಮವಾರ, ಮೇ 5, 2014

ಇತರರ ಅಭಿಪ್ರಾಯಗಳ ಕಾಲ್ಚೆಂಡಾಗಬೇಡಿ

ಮೇ ೫, ೨೦೧೪
ಬಹರೈನ್

ಲ್ಲಿರುವ ನನ್ನ ಪ್ರೀತಿಪಾತ್ರರೇ, ಇದನ್ನೇ ನಾವು ಮಾಡಬೇಕಾಗಿರುವುದು: ಪ್ರಪಂಚದಲ್ಲಿ ಆನಂದದ ಅಲೆಗಳನ್ನು ಸೃಷ್ಟಿಸುವುದು.
ನೀವೆಲ್ಲರೂ ನಾನು ಹೇಳುತ್ತಿರುವುದನ್ನು ಒಪ್ಪುತ್ತೀರಿ ಎಂದು ನನಗೆ ಖಾತ್ರಿಯಿದೆ.
ಇಂದಿನ ಪ್ರಪಂಚದಲ್ಲಿ ಬಹಳಷ್ಟು ಸಂಘರ್ಷವಿದೆ. ಒಂದು ಟೋಪಿ ಬೀಳುವಷ್ಟರಲ್ಲಿ ಜನರು ಜಗಳವಾಡಲು ತೊಡಗುತ್ತಾರೆ. ಒಂದೇ ರೀತಿಯ ಮನೋಭಾವವುಳ್ಳವರು, ಒಳ್ಳೆಯ ಹೃದಯವಂತ ಜನರು ಒಟ್ಟುಸೇರಿ ಆನಂದದ ಒಂದು ಅಲೆಯನ್ನು ಸೃಷ್ಟಿಸುವ ಸಮಯ ಬಂದಿದೆ. ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡಿ.

ಜೀವನವು ಬಹಳ ಚಿಕ್ಕದಾಗಿದೆ! ನಾವು ೬೦ರಿಂದ ೯೦ ವರ್ಷಗಳವರೆಗೆ ಬದುಕುತ್ತೇವೆ. ಇವತ್ತು ಜನರು ಇನ್ನೂ ಬಹಳ ಬೇಗ ಸಾಯುತ್ತಿದ್ದಾರೆ. ೫೦ ಅಥವಾ ೬೦ ವರ್ಷಗಳಲ್ಲಿ ಜನರು ಹೋಗಿಯಾಯಿತು. ಈ ಅಲ್ಪಾವಧಿಯ ಜೀವನದಲ್ಲಿ ಸಂತೋಷವಾಗಿರಲು ಸಾಕಷ್ಟು ಸಮಯವಿಲ್ಲ. ಹಾಗಾದರೆ ಅಷ್ಟೊಂದು ಸಂಘರ್ಷ, ಅಷ್ಟೊಂದು ಜಗಳ, ಅಷ್ಟೊಂದು ಯಾತನೆ ಮತ್ತು ದುಃಖ ಯಾಕಿದೆ? ನಾವು ಇದರ ಬಗ್ಗೆ ಚಿಂತನೆ ಮಾಡಬೇಕು.

ಇಲ್ಲಿರಲು ನನಗೆ ಬಹಳ ಸಂತೋಷವಾಗುತ್ತಿದೆ. ಬಹರೈನ್ ಎಂಬುದು ಅರಬ್ ದೇಶಗಳಿಗಿರುವ ಪ್ರವೇಶದ್ವಾರ ಎಂದು ನನಗೆ ಹೇಳಲಾಯಿತು. ಮತ್ತು ಈಗ ನಾನು ಅರಬ್‌ನ ಪ್ರವೇಶದ್ವಾರದಲ್ಲಿದ್ದೇನೆ, ನಿಮ್ಮೆಲ್ಲರೊಂದಿಗೆ ಇಲ್ಲಿರಲು ನನಗೆ ಸಂತೋಷವಾಗುತ್ತಿದೆ.

ಮಹಾಮಹಿಮರಾದ ಡಾ.ಮುಸ್ತಫಾ ಅವರೊಂದಿಗೆ ನಾನು ಮಾತನಾಡುತ್ತಿದ್ದಾಗ ಅವರು ನನ್ನಲ್ಲಿ, ನಾವು ಹಳೆಯದನ್ನು ಮತ್ತು ಹೊಸದನ್ನು ಎರಡನ್ನೂ ಹೊಂದಿರುವ ಆವಶ್ಯಕತೆಯಿದೆಯೆಂದು ಹೇಳುತ್ತಿದ್ದರು. ಪ್ರತಿಯೊಂದು ಸಂಪ್ರದಾಯವೂ, ಪ್ರತಿಯೊಂದು ಧರ್ಮವೂ ಆಧುನಿಕ ಮಾರ್ಗವನ್ನು ತನ್ನದಾಗಿಸಿಕೊಳ್ಳಲು ಆರಂಭಿಸಬೇಕು. ನಮ್ಮಲ್ಲಿ ಈ ಹೊಂದಿಕೊಳ್ಳುವ ಸಾಮರ್ಥ್ಯವಿರಬೇಕು. ಸಂಗೀತವು ಇಸ್ಲಾಮಿನದ್ದಲ್ಲವೆಂದು ಪರಿಗಣಿಸಲಾಗುತ್ತಿದೆಯೇ, ಅದನ್ನು ಅನುಮತಿಸಲಾಗುತ್ತದೆಯೇ ಎಂದು ನಾನು ಅವರಲ್ಲಿ ಕೇಳಿದೆ. ಅವರಂದರು, ಅದನ್ನು ಅನುಮತಿಸಲಾಗುವುದಿಲ್ಲವೆಂದು ಕೆಲವು ಜನರು ಈಗಲೂ ಯೋಚಿಸುತ್ತಾರೆ. ಆದರೆ ಸಂಗೀತವು ಪ್ರಪಂಚದಲ್ಲಿರುವುದು ಮುಂದುವರಿಯುತ್ತದೆ. ನಿಮಗೆ ಗೊತ್ತಾ, ಹಲವಾರು ಪಂಥಗಳಿವೆ!
ಹೇಗೆ ನಾವು ಪ್ರಗತಿಪರರೂ, ಹೊಂದಿಕೊಳ್ಳುವವರೂ, ಸಹಕಾರ ಮನೋಭಾವ ಹೊಂದಿರುವವರೂ ಆಗಿರಬೇಕು ಮತ್ತು ಎಲ್ಲರನ್ನೂ ನಮ್ಮೊಂದಿಗೆ ಕರೆದುಕೊಂಡು ಮುಂದೆ ಸಾಗಬೇಕು ಎಂಬುದನ್ನು ಅವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ನಾನು ಅವರು ಹೇಳುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ.

ಜೀವನವೊಂದು ಮರವಿದ್ದಂತೆ, ಅದಕ್ಕೆ ಸ್ವಲ್ಪ ಬೇರುಗಳು ಹಾಗೂ ಸ್ವಲ್ಪ ಶಾಖೆಗಳಿವೆ. ನಾವು ಹಳೆಯ ಬೇರುಗಳನ್ನು ಹೊಂದಿರಬೇಕು ಮತ್ತು ಅದೇ ಸಮಯದಲ್ಲಿ, ಶಾಖೆಗಳು ಹೊಸದಾಗಿರಬೇಕು.

ಇವತ್ತು ಬೆಳಗ್ಗೆ ನಾನು ಮಹಾಮಹಿಮರಾದ, ಬಹರೈನ್‌ನ ರಾಜರೊಂದಿಗಿದ್ದೆ. ಅವರು ಕೂಡಾ ಅದನ್ನೇ ಹೇಳಿದರು. ಅತ್ಯಂತ ತೆರೆದ ಹಾಗೂ ಇತರ ನಾಗರೀಕತೆ, ಸಂಸ್ಕೃತಿಗಳನ್ನು ಸ್ವೀಕರಿಸುವ ನಾಗರೀಕತೆಯಾಗಿದೆ ಬಹರೈನ್, ಹಾಗೂ ಜಗತ್ತಿಗೆ ಸಾಮರಸ್ಯದ ಉದಾಹರಣೆಯನ್ನು ನೀಡುತ್ತಿದೆ. ಇದೇ ಸಂದೇಶವು ಪ್ರತಿಯೊಂದು ಪ್ರಾಂತ್ಯಕ್ಕೂ, ಪ್ರತಿಯೊಂದು ದೇಶಕ್ಕೂ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಗೂ ಹೋಗಬೇಕೆಂದು ನಾನು ಆಶಿಸುತ್ತೇನೆ.

ನಾವೆಲ್ಲರೂ ಈ ಪ್ರಪಂಚವನ್ನು ಒಂದು ಕುಟುಂಬವಾಗಿ ಪರಿಗಣಿಸಬೇಕು. ಪ್ರಪಂಚವು ಒಂದು ಕುಟುಂಬವಾಗಿದೆ ಮತ್ತು ಅದುವೇ ಆರ್ಟ್ ಆಫ್ ಲಿವಿಂಗ್ ಆಗಿರುವುದು. ಒಂದು ವಿಶ್ವ ಕುಟುಂಬ.

ಇವತ್ತು ಬೆಳಗ್ಗಿನ ಸಭೆಯಲ್ಲಿ, ಆರಬ್ ಪ್ರದೇಶದ ಮಹಾನ್ ನಾಯಕರಿದ್ದರು ಮತ್ತು ಶಾಂತಿಯು ನಮ್ಮ ಭಾಷೆಯಾಗಿರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಒಂದೇ ವ್ಯಕ್ತ ಅಥವಾ ಅವ್ಯಕ್ತ ಮೂಲಭೂತ ವೈಚಾರಿಕ ಮೌಲ್ಯಗಳು ನಮ್ಮ ಮಾನದಂಡಗಳಾಗಿವೆ. ಎಲ್ಲಾ ಲಿಂಗ, ಸಂಪ್ರದಾಯ, ಧರ್ಮ, ಸಂಸ್ಕೃತಿಗಳ ಜನರನ್ನು ಒಂದು ಮಾನವೀಯ ಮೌಲ್ಯವಾಗಿ, ಒಂದು ಮಾನವೀಯತೆಯಾಗಿ, ಒಂದು ಮಾನವ ಕುಟುಂಬವಾಗಿ ಒಗ್ಗೂಡಿಸುವುದು ಅತ್ಯಗತ್ಯವಾಗಿದೆ.
ಕಳೆದ ಮೂವತ್ತೈದು ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಮ್ಮ ಕನಸು ಇದಾಗಿದೆ. ನಾವು ನಮ್ಮ ಮಧ್ಯೆ ಕೃತಕವಾಗಿ ನಿರ್ಮಿಸಿರುವ ಗೋಡೆಗಳನ್ನು ಜನರು ತೊಡೆದು ಹಾಕುವುದನ್ನು ನೋಡಲು ನಾವು ಬಯಸಿದ್ದೆವು, ಯಾಕೆಂದರೆ ಇರುವುದು ಒಂದು ದೈವತ್ವ, ಒಬ್ಬ ದೇವರು ಮತ್ತು ನಾವೆಲ್ಲರೂ ಆ ಒಂದು ದೈವತ್ವದ ಭಾಗವಾಗಿದ್ದೇವೆ; ಒಂದೇ ದೇವರ ಮಕ್ಕಳು.
ಆದುದರಿಂದ ನಾವು ಭೇದಭಾವಗಳ ಗೋಡೆಗಳನ್ನು ಉರುಳಿಸಬೇಕು, ಹೀಗಿದ್ದರೂ ನಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಬಹರೈನ್‌ಗೆ ತನ್ನದೇ ಆದ ವಿಶಿಷ್ಟತೆಯಿದೆ, ಪಾಕಿಸ್ತಾನಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ, ಭಾರತಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಅದನ್ನೊಂದು ವಿವಾದದ ಅಂಶವಾಗಿಸುವ ಬದಲಾಗಿ, ನಾವು ನಮ್ಮೆಲ್ಲಾ ವಿಶಿಷ್ಟವಾದ ವಿಭಿನ್ನತೆಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಅದನ್ನು ಆಚರಿಸಬೇಕು.

ಪ್ರಪಂಚಕ್ಕೆ ಬೇಕಾಗಿರುವುದೇನೆಂದರೆ, ವೈವಿಧ್ಯತೆಯಲ್ಲಿ ಸಾಮರಸ್ಯತೆ ಅಥವಾ ವೈವಿಧ್ಯತೆಯಲ್ಲಿ ಆಚರಣೆ.
ಈಗ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದರೆ, ಕೋಪಗೊಂಡಿದ್ದರೆ ಅಥವಾ ಉದ್ವಿಗ್ನನಾಗಿದ್ದರೆ ಇದಾಗಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ. ಹೀಗಾಗಿ ಮೊದಲಿಗೆ ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಳ್ಳಬೇಕು. ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಎಲ್ಲರೊಂದಿಗೂ ಒಂದೆಂದು ಭಾವಿಸಿಕೊಳ್ಳಬೇಕು. ನಾವು ಈ ಇಡೀ ವಿಶ್ವದ ಭಾಗವಾಗಿದ್ದೇವೆ. ಮಕ್ಕಳಾಗಿ ನಾವು ಈ ಪ್ರಪಂಚಕ್ಕೆ ಬಂದಾಗ ನಾವು ಹೇಗಿದ್ದೆವು? ನಾವು ದಿನವೊಂದಕ್ಕೆ ನಾನ್ನೂರು ಸಲ ನಗುತ್ತಿದ್ದೆವು. ಪ್ರತಿಯೊಂದು ಮಗುವೂ ದಿನವೊಂದರಲ್ಲಿ ನಾನ್ನೂರು ಸಲ ನಗುತ್ತದೆ. ಒಬ್ಬ ಹದಿಹರೆಯದವನು ಕೇವಲ ಹದಿನೇಳು ಸಲ ಮಾತ್ರ ನಗುತ್ತಾನೆ. ಒಬ್ಬ ವಯಸ್ಕನು ನಗುವುದೇ ಇಲ್ಲ ಅಥವಾ ಕೆಲವೊಮ್ಮೆ ಮಾತ್ರ ನಗುತ್ತಾನೆ.

ಒಂದು ಮುಗುಳ್ನಗೆಯು ನಮ್ಮ ಭಾಷೆಯಾಗಿರಬೇಕು. ನಮ್ಮೆಲ್ಲರನ್ನೂ ಒಗ್ಗೂಡಿಸಬಲ್ಲ ಆ ಏನೋ ಒಂದು ಮುಗುಳ್ನಗೆಯಾಗಿದೆ.
ನಾನು ನಿಮಗೊಂದು ಕಥೆಯನ್ನು ಹೇಳಲು ಬಯಸುತ್ತೇನೆ.

ಒಬ್ಬರು ಜ್ಞಾನಿ ವ್ಯಕ್ತಿಯು ಮೌನದಲ್ಲಿದ್ದರು. ಇಬ್ಬರು ವ್ಯಕ್ತಿಗಳು ಅವರನ್ನು ಸಮೀಪಿಸಿದರು ಮತ್ತು ಅವರಲ್ಲಿ, "ನಮಗೆ ಏನಾದರೂ ಸಂದೇಶವನ್ನು ನೀಡಿ" ಎಂದು ಕೇಳಿಕೊಂಡರು. ಜ್ಞಾನಿ ವ್ಯಕ್ತಿಯು ಕೇವಲ ತಮ್ಮ ತೋರುಬೆರಳನ್ನು ತೋರಿಸಿ, ನಂತರ ತಮ್ಮ ಮುಷ್ಠಿಯನ್ನು ತೋರಿಸಿದರು, ಯಾಕೆಂದರೆ ಅವರು ಮೌನದಲ್ಲಿದ್ದರು.

ಒಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಒಗ್ಗಟ್ಟಾಗಿರಬೇಕೆಂದು ಹೇಳುತ್ತಿದ್ದಾರೆ."

ಇನ್ನೊಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಜಗಳವಾಡಬೇಕೆಂದು, ಇತರರನ್ನು ಹೊಡೆಯಬೇಕೆಂದು ಹೇಳುತ್ತಿದ್ದಾರೆ."
ನೀವು ನಿಮ್ಮ ಮುಷ್ಠಿಯನ್ನು ತೋರಿಸಿದರೆ, ಒಬ್ಬರು ಅದನ್ನು, ’ಎಲ್ಲರೂ ಒಂದುಗೂಡಿ ಬನ್ನಿ’ ಎಂದು ಅರ್ಥೈಸಬಹುದು ಅಥವಾ ಅದನ್ನು, ’ಹೋಗಿ ಇತರರನ್ನು ಹೊಡೆಯಿರಿ’ ಎಂಬುದಾಗಿ ಅರ್ಥೈಸಿಕೊಳ್ಳಬಹುದು.

ಹೊಡೆಯುವುದರ ಬಗ್ಗೆ ನೀವು ಯಾಕೆ ಯೋಚಿಸುವಿರಿ? ಅದು ಯಾಕೆಂದರೆ, ನೀವು ಸೌಖ್ಯವಾಗಿಲ್ಲ, ನೀವು ರೋಗಿಷ್ಠರಾಗಿರುವಿರಿ, ನೀವು ಬಲಹೀನರಾಗಿರುವಿರಿ ಮತ್ತು ಅಭದ್ರರಾಗಿರುವಿರಿ. ಎಲ್ಲೋ ನೀವು ಭಯಭೀತರಾಗಿರುವಿರಿ, ಆದುದರಿಂದ ನೀವು ಹೋಗಿ ಇತರರನ್ನು ಹೊಡೆಯಲು ಬಯಸುತ್ತೀರಿ. ಹಿಂಸೆಯು ಆಂತರಿಕ ಬಲಹೀನತೆಯ ಒಂದು ಲಕ್ಷಣವಾಗಿದೆ.

ಇದು ಹೇಗೆ ಹೋಗಲು ಸಾಧ್ಯ? ನೀವು ಆರೋಗ್ಯವಂತರಾಗಿರುವಾಗ ಮತ್ತು ಎಲ್ಲರೊಂದಿಗೂ ಒಂದೇ ಮನೆಯವರಂತಿದ್ದಾಗ.
ನೀವು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡುವಾಗ ಆಂತರಿಕ ಶಕ್ತಿಯು ಬರುತ್ತದೆ. ಆಗ ಹಿಂಸೆಯು ಸುಮ್ಮನೇ ಬಿಟ್ಟುಹೋಗುತ್ತದೆ.

ಹೀಗಾಗಿ, ಇವತ್ತು ನಾವು ಮಾಡಬೇಕಾಗಿರುವುದು ಇದನ್ನೇ: ಆನಂದದ ಅಲೆಗಳನ್ನು ಸೃಷ್ಟಿಸುವುದು. ನಿಮ್ಮಲ್ಲಿ ಎಷ್ಟು ಮಂದಿ ನಾನು ಹೇಳುವುದನ್ನು ಒಪ್ಪುತ್ತೀರಿ? ನಾವೆಲ್ಲರೂ, ನಾವೆಲ್ಲೇ ಇದ್ದರೂ ಆನಂದದ ಅಲೆಗಳನ್ನು ಸೃಷ್ಟಿಸಬೇಕಾಗಿದೆ.

"ಹೇ, ಚಿಂತಿಸಬೇಡ, ನಾವು ನಿಮ್ಮೊಂದಿಗಿದ್ದೇವೆ. ಪ್ರಪಂಚದಲ್ಲಿ ಸಾಕಷ್ಟು ಮಾನವೀಯತೆಯಿದೆ. ನಾವೆಲ್ಲರೂ ಒಂದು ಸಮಾಜದ, ಒಂದು ಪ್ರಪಂಚದ ಭಾಗವಾಗಿದ್ದೇವೆ" ಎಂದು ಜನರಿಗೆ ಹೇಳಿ.

ಸಾಂಸಾರಿಕ ಹಿಂಸೆ, ಸಾಮಾಜಿಕ ಹಿಂಸೆ ಮತ್ತು ಆತ್ಮಹತ್ಯೆಗಳಿವೆ. ಇದು ಕೇವಲ ತಿಳುವಳಿಕೆಯ ಕೊರತೆಯಿಂದಾಗಿ, ಜ್ಞಾನದ ಕೊರತೆಯಿಂದಾಗಿ, ನಿಕಟತೆಯ ಕೊರತೆಯಿಂದಾಗಿ ಮತ್ತು ನಮ್ಮ ಜೀವನದಲ್ಲಿನ ಒತ್ತಡ ಹಾಗೂ ಚಿಂತೆಗಳನ್ನು ಹೇಗೆ ಹೋಗಲಾಡಿಸುವುದು ಎಂಬ ಅರಿವಿನ ಕೊರತೆಯಿಂದಾಗಿ.

ನಾನು ಇಸ್ಲಾಮಿನ ಹಲವು ಪಂಡಿತರುಗಳು ಹೇಳುವುದನ್ನು ಕೇಳಿದ್ದೇನೆ. "ಪೂರ್ವದಿಂದ ನನಗೆ ತಂಪಾದ ಗಾಳಿಯು ಬರುತ್ತಿದೆ" ಎಂಬುದಾಗಿ ಪ್ರವಾದಿ ಮೊಹಮ್ಮದರು ಹೇಳಿದ್ದರೆಂದು ಅವರು ಹೇಳುತ್ತಾರೆ. ಮರುಭೂಮಿಯಲ್ಲಿ, ತಂಪಾದ ಗಾಳಿ ಬೀಸುವುದೆಂದರೆ ಬಹಳಷ್ಟು ಸುಖ ಮತ್ತು ಸಂತೋಷವೆಂದು ಅರ್ಥ. ತನಗೆ ಪೂರ್ವದಿಂದ ತಂಪಾದ ಗಾಳಿಯು ಬರುತ್ತಿರುವುದಾಗಿ ಅವರು ಹೇಳಿದಾಗ, ಆ ತಂಪಾದ ಗಾಳಿಯೆಂದರೆ, ಸಾಮರಸ್ಯ. ಬಹರೈನ್ ಕೂಡಾ ಪೂರ್ವದ ಭಾಗವೇ ಆಗಿದೆ. ನಾವೆಲ್ಲರೂ ಪೂರ್ವದವರು.

ಇವತ್ತು ಪೂರ್ವ ಪೂರ್ವವಾಗಿ, ಪಶ್ಚಿಮ ಪಶ್ಚಿಮವಾಗಿ ಉಳಿದಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ, ಎಲ್ಲೆಡೆಯೂ ಬಹುತೇಕ ಒಂದೇ ರೀತಿ. ಆದರೆ ಅದೇನೇ ಇದ್ದರೂ, ಸಾಮರಸ್ಯದ ಈ ಸಂದೇಶವು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಬೇಕು.
ಎಲ್ಲೆಡೆಯೂ ಬಾಂಬ್ ಸ್ಫೋಟಗಳು ನಡೆಯುತ್ತಿವೆ ಮತ್ತು ಜನರು ಸಾಯುತ್ತಿದ್ದಾರೆ ಎಂಬುದನ್ನು ಕೇಳುವಾಗ ನನಗೆ ಬಹಳ ನೋವಾಗುತ್ತದೆ. ಸಿರಿಯಾ ಮತ್ತು ಈಜಿಪ್ಟ್‌ಗಳಲ್ಲಿ ಏನು ನಡೆಯುತ್ತಿರುವುದೋ ಅದನ್ನು ಕೇಳುವಾಗ ನನಗೆ ನೋವಾಗುತ್ತದೆ.
ಇವತ್ತು ಬೆಳಗ್ಗೆ ನಾವು ಪ್ರಪಂಚದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದೆವು, ಮತ್ತು ನಾನು ಹೇಳುತ್ತೇನೆ ಕೇಳಿ, ಪ್ರತಿಯೊಬ್ಬರೂ ಚಿಂತೆಗೊಳಗಾಗಿದ್ದಾರೆ ಹಾಗೂ ಕಾಳಜಿಯನ್ನು ಹೊಂದಿದ್ದಾರೆ. ಅಂತಿಮವಾಗಿ ದೇವರು ನೋಡಿಕೊಳ್ಳಲಿದ್ದಾರೆಂದು ಖಂಡಿತವಾಗಿಯೂ ನಮಗೆ ತಿಳಿದಿದೆ. ಆದರೆ ನಮಗೆಲ್ಲರಿಗೂ ಮಾಡಲು ಕರ್ತವ್ಯವಿದೆ, ಮಾಡಲು ನಮ್ಮ ಕೆಲಸವಿದೆ. ನಮ್ಮ ಕೆಲಸವೆಂದರೆ ಜನರನ್ನು ಹತ್ತಿರಕ್ಕೆ ತರುವುದು, ಅವರನ್ನು ಒಂದುಗೂಡಿಸುವುದು. ’ನೋಡು ನಿನ್ನೊಳಗೆ, ಎಂತಹ ಸುಂದರವಾದ ನೀನಿರುವೆ. ನಿನ್ನೊಳಗೆ ಬಹಳಷ್ಟು ಒಳ್ಳೆಯದಾದ ಶಕ್ತಿಯಿದೆ’ ಎಂಬುದನ್ನು ಅವರು ತಿಳಿಯುವಂತೆ ಮಾಡುವುದು.

ಸಕಾರಾತ್ಮಕ ಶಕ್ತಿಯನ್ನು ನಮ್ಮೊಳಗೆ ಮತ್ತು ನಮ್ಮ ಸುತ್ತಲೂ ಬೆಳಗಿಸೋಣ ಹಾಗೂ ಎಲ್ಲರ ಮುಖದ ಮೇಲೂ ಮುಗುಳ್ನಗೆಯಿರುವ, ನಮ್ಮ ಕನಸಿನ ಪ್ರಪಂಚವನ್ನು ನಾವು ಖಂಡಿತವಾಗಿಯೂ ಕಾಣಬಹುದು. ನಾವು ಪುನಃ ಮಕ್ಕಳಂತೆ ಆಗುತ್ತೇವೆ ಮತ್ತು ವರ್ತಮಾನದ ಕ್ಷಣದಲ್ಲಿ ಜೀವಿಸಲು ತೊಡಗುತ್ತೇವೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿರುವುದು ಕೇವಲ ಐದು ಮೂಲ ತತ್ವಗಳು.

೧. ಜೀವನದಲ್ಲಿ ಏಳುಬೀಳುಗಳಿವೆಯೆಂಬುದು ನಿಮಗೆ ಗೊತ್ತು. ಹಿತಕರವಾದ ವಿಷಯಗಳು ಸಂಭವಿಸುತ್ತವೆ, ಅಹಿತಕರವಾದ ವಿಷಯಗಳು ಸಂಭವಿಸುತ್ತವೆ. ಮೊದಲನೆಯ ತತ್ವವೆಂದರೆ: ಎಲ್ಲಾ ಪರಿಸ್ಥಿತಿಗಳಲ್ಲೂ, ಮನಸ್ಸಿನ ಸಂತುಲನವನ್ನು ಇಟ್ಟುಕೊಳ್ಳಿ.
ಹೆಚ್ಚಾಗಿ ಏನಾಗುತ್ತದೆಯೆಂದರೆ, ವಿಷಯಗಳು ನಾವಂದುಕೊಂಡಂತೆ ನಡೆಯುವಾಗ ನಮಗೆ ಬಹಳ ಸಂತೋಷವಾಗುತ್ತದೆ. ಆದರೆ ವಿಷಯಗಳು ನಾವಂದುಕೊಂಡಂತೆ ನಡೆಯದಿರುವಾಗ ನಾವು ಖಿನ್ನರಾಗುತ್ತೇವೆ ಮತ್ತು ಕೋಪಗೊಳ್ಳುತ್ತೇವೆ. ಸಮಚಿತ್ತತೆಯನ್ನು ಕಾಪಾಡಿಕೊಳ್ಳುವುದು ಮೊದಲನೆಯ ತತ್ವವಾಗಿದೆ.

೨. ಮುಂದಿನ ತತ್ವವೆಂದರೆ, ಜನರನ್ನು ಅವರಿರುವಂತೆಯೇ ಸ್ವೀಕರಿಸುವುದು. ಭಿನ್ನತೆಯನ್ನು ಸ್ವೀಕರಿಸಿ; ಅದು ಸ್ವಭಾವ, ವಿಚಾರಧಾರೆಯಾಗಿರಬಹುದು, ಏನೇ ಆಗಿರಬಹುದು. ಅವರಿರುವಂತೆಯೇ ಅವರನ್ನು ಸ್ವೀಕರಿಸಿ. ಒಂದು ಬಹಳ ಮುಖ್ಯವಾದ ತತ್ವ.

೩. ಮೂರನೆಯ ತತ್ವವೆಂದರೆ, ಇತರರ ಅಭಿಪ್ರಾಯಗಳ ಒಂದು ಕಾಲ್ಚೆಂಡಾಗಬೇಡಿ. ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಿರುವರೆಂಬುದಾಗಿ ಚಿಂತಿಸಬೇಡಿ. ವಾಸ್ತವವಾಗಿ, ನಿಮ್ಮ ಬಗ್ಗೆ ಯೋಚಿಸಲು ಯಾರಿಗೂ ಸಮಯವಿಲ್ಲ. ನಿಮ್ಮೊಳಗೆ ನೋಡಿ ಮತ್ತು ನಿಮಗೆ ಯಾವುದು ಸರಿ, ಯಾವುದು ಸರಿಯಲ್ಲ ಎಂಬುದನ್ನು ನೀವೇ ನೋಡಿ.

೪. ಮುಂದಿನ ಅಂಶವೆಂದರೆ, ಇತರರ ತಪ್ಪುಗಳ ಹಿಂದೆ ಉದ್ದೇಶವನ್ನು ಹುಡುಕಬೇಡಿ. ಬಹಳ ಮುಖ್ಯ. ಪ್ರತಿಯೊಬ್ಬ ದೋಷಿಯ ಒಳಗೂ ಸಹಾಯಕ್ಕಾಗಿ ಕೂಗುವ ಒಬ್ಬ ಪೀಡಿತನಿರುತ್ತಾನೆ. ಅದನ್ನು ಗುರುತಿಸುವುದು.

೫. ಹಾಗೂ, ವರ್ತಮಾನದ ಕ್ಷಣದಲ್ಲಿ ಜೀವಿಸಿ.

ಇವುಗಳು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಐದು ಮೂಲ ತತ್ವಗಳಾಗಿವೆ. ಈ ಮೂಲ ತತ್ವಗಳಿಂದ ಏನಾಗುತ್ತದೆ? ಮೂರು ಸಂಗತಿಗಳಾಗುತ್ತವೆ. ಹೃದಯದ ಶುದ್ಧತೆ, ಮನಸ್ಸಿನ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಅಷ್ಟೇ.

ಮನವನ್ನು ನಿಯಂತ್ರಿಸಿ

೫ ಮೇ ೨೦೧೪
ಬಹರೈನ್

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

ಪ್ರಶ್ನೆ: ಯಾರಾದರೊಬ್ಬರ ಮೇಲೆ ನಿಮಗೆ ಕಡೆಯ ಸಲ ಕೋಪ ಬಂದಿದ್ದು ಯಾವಾಗ?

ಶ್ರೀ ಶ್ರೀ ರವಿ ಶಂಕರ್: ನನಗೆ ನೆನಪು ಕೂಡಾ ಇಲ್ಲ! ನಿನಗೆ ಯಾರಾದರೊಬ್ಬರ ಮೇಲೆ ಕೋಪ ಬಂತೆಂದು ಇಟ್ಟುಕೊಳ್ಳೋಣ, ಅದರ ಬಗ್ಗೆ ವಿಷಾದಿಸಲು ತೊಡಗಬೇಡ.  ವಿಷಾದವು ನೀವು ಮತ್ತೊಮ್ಮೆ ಕೋಪಗೊಳ್ಳುವಂತೆ ಮಾಡುತ್ತದೆ. ನನ್ನ ಬಗ್ಗೆ ಹೇಳುವುದಾದರೆ, ನಾನು ಎಷ್ಟು ಸಲ ಕೋಪಗೊಂಡಿರುವೆನೆಂಬುದನ್ನು ನಾನು ನನ್ನ ಬೆರಳುಗಳಲ್ಲಿ ಲೆಕ್ಕ ಹಾಕಬಲ್ಲೆನು. ಅದು ನನ್ನ ಸ್ವಭಾವದಲ್ಲಿಲ್ಲ.

ಕೋಪಗೊಳ್ಳದಿರಲು ನಾನು ವಿಶೇಷವಾದುದೇನನ್ನೂ ಮಾಡಿಲ್ಲ. ಹೇಗೋ ನಾನು ಈ ರೀತಿ ಮಾಡಲ್ಪಟ್ಟಿದ್ದೇನೆ, ಅದಕ್ಕಾಗಿ ನಾನು ಯಾವುದೇ ಶ್ಲಾಘನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವರ್ಷಗಳಲ್ಲಿ ಯಾರಿಗೂ ನಾನು ಒಂದೇ ಒಂದು ಕೆಟ್ಟ ಪದವನ್ನೂ ಹೇಳಿಲ್ಲ. ಅದು ಯಾವತ್ತೂ ಆಗಲಿಲ್ಲ. ನಾನು ಯಾರನ್ನೂ ಯಾವತ್ತೂ ದೂಷಿಸಿಲ್ಲ, ಶಪಿಸಿಲ್ಲ ಅಥವಾ ಯಾವುದೇ ಕೆಟ್ಟ ಪದವನ್ನು ಹೇಳಿಲ್ಲ.

ಪ್ರಶ್ನೆ: ಅದೇ ಮರುಕಳಿಸುವ ಯೋಚನೆಯನ್ನು ನಾವು ಹೇಗೆ ನಿಲ್ಲಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಯಾವುದೇ ದಾರಿಯಿಲ್ಲ, ಯಾಕೆಂದರೆ ಯೋಚನೆಗಳು ಅದಾಗಲೇ ಬಂದ ಬಳಿಕ ಮಾತ್ರವಷ್ಟೇ ನೀವು ಅವುಗಳನ್ನು ಗುರುತಿಸುವಿರಿ, ಅಲ್ಲವೇ? ಅವುಗಳು ಬರುತ್ತವೆ ಮತ್ತು ನಂತರ ನೀವು ಅವುಗಳನ್ನು ಗುರುತಿಸುತ್ತೀರಿ. ಹೀಗಾಗಿ, ನೀವದನ್ನು ಗುರುತಿಸುವಾಗ, ಕಾರ್ಯಪ್ರವೃತ್ತರಾಗಿ. ನೀವು ಸುಮ್ಮನೆ ಕುಳಿತರೆ, ನೀವು ಬಹಳಷ್ಟು ಯೋಚಿಸುತ್ತಾ ಇರುವಿರಿ. ನೀವು ಕಾರ್ಯಪ್ರವೃತ್ತರಾಗಿದ್ದರೆ, ನೀವು ಆಗು ಹೋಗುಗಳೊಂದಿಗೆ ಒಂದಾಗಿ ಹರಿಯುತ್ತಿರುವುದು ನಿಮಗೆ ಭಾಸವಾಗುವುದು.

ಪ್ರಶ್ನೆ: ಈ ದಿನಗಳಲ್ಲಿ ಆಕ್ರಮಣಶೀಲತೆಯನ್ನು ಶಕ್ತಿಯ ಒಂದು ಚಿಹ್ನೆಯಾಗಿ ಪರಿಗಣಿಸಲಾಗುತ್ತದೆ. ಇದನ್ನು ಬದಲಾಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಆಕ್ರಮಣಶೀಲತೆಯೆಂಬುದು ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯಾಗಿದ್ದರೆ, ಪ್ರಪಂಚದ ಹಲವು ಭಾಗಗಳಲ್ಲಿ ಆಗಿರುವ ಮತ್ತು ಈಗ ಆಗುತ್ತಿರುವ ಎಲ್ಲಾ ಆಕ್ರಮಣಶೀಲತೆಯ ಮೂಲಕ, ಪ್ರಪಂಚವು ಬಹಳಷ್ಟು ಬದಲಾಗಿರುತ್ತಿತ್ತು. ಆದರೆ ನಾವು ನೋಡುತ್ತಿರುವುದು ಅದನ್ನಲ್ಲ. ಎಲ್ಲಿ ಆಕ್ರಮಣಶೀಲತೆಯಿರುವುದೋ ಅಲ್ಲಿ ಯಾತನೆಯಿರುತ್ತದೆ. ಅಲ್ಲಿ ಹೆಚ್ಚಿನ ವಿವಾದಗಳು, ಹೆಚ್ಚಿನ ಸಮಸ್ಯೆಗಳು ಮತ್ತು ಹೆಚ್ಚಿನ ಬಡತನಗಳಿರುತ್ತವೆ. ಆಕ್ರಮಣಶೀಲತೆಯೊಂದಿಗೆ ನಾವು ಹಿಂದಕ್ಕೆ ಚಲಿಸುತ್ತೇವೆ. ಎಲ್ಲೆಲ್ಲಾ ಆಕ್ರಮಣಶೀಲತೆಯಿರುವುದೋ, ಅಲ್ಲೆಲ್ಲಾ ಜನರು; ಹೆಚ್ಚಲ್ಲದಿದ್ದರೂ ಕಡಿಮೆಪಕ್ಷ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿರುವುದನ್ನು ನೀವು ಕಾಣುತ್ತೀರಿ. ಸಹಕಾರವು ಪ್ರಮುಖವಾಗಿದೆ.

ಉತ್ತಮ ಫಲಿತಾಂಶವನ್ನು ನೀಡದೇ ಇದ್ದ ಹಲವಾರು ಆಕ್ರಮಣಶೀಲತೆಗಳನ್ನು ಪ್ರಪಂಚವು ನೋಡಿದೆ. ಯುದ್ದವು ನಿಯಮಗಳನ್ನು ಬದಲಾಯಿಸಬಲ್ಲದಾದುದರಿಂದ ಅದು ಬಹಳ ಒಳ್ಳೆಯದೆಂದು ಕೆಲವೊಮ್ಮೆ ಜನರು ಯೋಚಿಸುತ್ತಾರೆ. ಮೊದಲೇ ಇದ್ದುದನ್ನು ನಾಶಪಡಿಸಿ, ನಿಯಮದಲ್ಲಿ ಒಂದು ಬದಲಾವಣೆಯನ್ನು ಯುದ್ಧವು ತರಬಲ್ಲದೆಂದು ಅವರು ಯೋಚಿಸುತ್ತಾರೆ. ಆದರೆ ನಿಮಗೆ ಗೊತ್ತಾ, ಹಾಗಾಗುವುದಕ್ಕೆ ಹಲವಾರು ಪೀಳಿಗೆಗಳು ಯಾತನೆಯನ್ನನುಭವಿಸುತ್ತವೆ.
ಮಾಹಿತಿ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಜನರು ಬುದ್ಧಿವಂತರೆಂದು ನನಗನಿಸುತ್ತದೆ. ನಾವು ಆ ಯಾತನೆಯ ಮೂಲಕ ಹಾದುಹೋಗಬೇಕಾಗಿಲ್ಲ. ನಾವು ಎಷ್ಟೋ ಹೆಚ್ಚು ಬುದ್ಧಿವಂತರು ಹಾಗೂ ಎಷ್ಟೋ ಹೆಚ್ಚು ಮಾಹಿತಿ ಹೊಂದಿದವರು, ಹಾಗಾಗಿ ನಮಗೆ ಯುದ್ಧದ ಅಗತ್ಯವಿಲ್ಲವೆಂದು ನನಗನಿಸುತ್ತದೆ. ನಮಗೆ ಬೇಕಾದುದೆಂದರೆ ಅರಿವು ಮಾತ್ರ.

ಪ್ರಶ್ನೆ: ಸಮಾಜ ಸೇವೆ, ವ್ಯವಹಾರ ಮತ್ತು ಮನೆಯಲ್ಲಿನ ಜವಾಬ್ದಾರಿಗಳ ನಡುವೆ ಒಬ್ಬನು ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾದುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲಿ ಬಹರೈನ್‌ನಲ್ಲಿ ನೀವೆಲ್ಲರೂ ಕಾರು ಚಲಾಯಿಸುತ್ತೀರಾ? ಹೌದು! ನೀವು ಕಾರು ಚಲಾಯಿಸುವಾಗ ನೀವೇನು ಮಾಡುವಿರಿ? ನೀವು ಬದಿಗಳಲ್ಲಿರುವ ಕನ್ನಡಿಗಳನ್ನು, ಹಿಂದಿನದನ್ನು ನೋಡಲಿರುವ ಕನ್ನಡಿಯನ್ನು ಮತ್ತು ಮುಂದಿನ ಗಾಜನ್ನು ಕೂಡಾ ನೋಡುತ್ತೀರಿ. ಈ ಎಲ್ಲಾ ಮೂರನ್ನು ನೀವು ಹೇಗೆ ಸಮತೋಲನ ಮಾಡುವಿರಿ?

"ನಾನು ಕೇವಲ ಹಿಂದಿನದನ್ನು ನೋಡುವ ಕನ್ನಡಿಯನ್ನು ಮಾತ್ರ ನೋಡುವೆನು" ಅಥವಾ "ನಾನು ಕೇವಲ ಮುಂದೆ ಮಾತ್ರ ನೋಡುತ್ತೇನೆ" ಅಥವಾ "ನಾನು ಕೇವಲ ಬದಿಗಳನ್ನು ಮಾತ್ರ ನೋಡುತ್ತೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಏಕಕಾಲದಲ್ಲಿ ಎಲ್ಲಾ ಮೂರನ್ನು ಮಾಡಬೇಕು ಮತ್ತು ನೀವದನ್ನು ಮಾಡುತ್ತೀರಿ.

ಸರಿಯಾಗಿ ಅದೇ ರೀತಿಯಲ್ಲಿ!

ಹಿಂದಿನದನ್ನು ನೋಡುವ ಕನ್ನಡಿಯು ಭೂತಕಾಲವನ್ನು ತಿಳಿಯುವಂತೆ. ನಿಮಗೆ ಭೂತಕಾಲದ ಬಗ್ಗೆ ಸ್ವಲ್ಪ ನೆನಪಿರಬೇಕು. ನೀವು ಯಾವುದಾದರೂ ತಪ್ಪನ್ನು ಮಾಡಿದ್ದರೆ, ಅದು ಪುನರಾವರ್ತನೆಯಾಗಬಾರದು. ಮುಂದಿರುವ ಗಾಜು, ಮುಂದಿನ ಜೀವನದ ದೃಷ್ಟಿ ಇದ್ದಂತೆ. ಅದಕ್ಕಾಗಿಯೇ ಮುಂದಿರುವ ಗಾಜು (ವಿಂಡ್‌ಶೀಲ್ಡ್) ಬಹಳ ದೊಡ್ಡದು ಮತ್ತು ಹಿಂದಿರುವುದನ್ನು ನೋಡುವ ಕನ್ನಡಿಯು ಬಹಳ ಚಿಕ್ಕದಾಗಿರುವುದು. ನಂತರ ಅಲ್ಲಿ ಬದಿಯ ಕನ್ನಡಿಗಳಿರುತ್ತವೆ, ಇವುಗಳಿರುವುದು ಸದಾಕಾಲವೂ ನಿಮ್ಮ ಸುತ್ತಲೂ ಏನಾಗುತ್ತಿದೆಯೆಂಬುದರ ಬಗ್ಗೆ ನಿಮಗೆ ಅರಿವು ಇರುವುದಕ್ಕಾಗಿ. ಹೀಗೆ ಈ ಎಲ್ಲಾ ಮೂರನ್ನು ನೀವು ಹೇಗೆ ಬಳಸುತ್ತೀರಿ? ಸರಿಯಾಗಿ ಅದೇ ರೀತಿಯಲ್ಲಿ!

ಪ್ರಶ್ನೆ: ನಾನು ಯಾವಾಗಲೂ ಸಂತೋಷವಾಗಿರುವುದು ಹಾಗೂ ಶರೀರ, ಮನಸ್ಸು ಮತ್ತು ಯೋಚನೆಗಳಿಂದ ನಿರ್ಧಾರಿತವಾದ ಗಡಿಗಳಿಂದ ಸಿಕ್ಕಿಹಾಕಿಕೊಳ್ಳದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಈ ಯಾವಾಗಲೂ ಎಂಬುದನ್ನು ಬಿಟ್ಟುಬಿಟ್ಟರೆ, ನೀನು ಸಂತೋಷವಾಗಿರುವೆ. ಸ್ವಲ್ಪ ಹೊತ್ತು ನೀನು ಅಸಂತೋಷವಾಗಿದ್ದರೆ ಚಿಂತಿಸಬೇಡ, ಹಾಗಾದರೇನಂತೆ? ನಾನು ಯಾವತ್ತೂ ದುಃಖಿತನಾಗಿರಬಾರದು ಎಂದು ನೀನು ಯೋಚಿಸಿದರೆ, ಆಗ ಅದುವೇ ದುಃಖಕ್ಕೆ ಒಂದು ಕಾರಣವಾಗುತ್ತದೆ. 

ಭಾನುವಾರ, ಮೇ 4, 2014

ನಿಮ್ಮನ್ನೇ ನೀವು ಅರಿಯುವ ಅಗತ್ಯವಿದೆ

ಮೇ ೪, ೨೦೧೪
ರೋಮ್, ಇಟಲಿ

ಪ್ರಶ್ನೆ: ಭಾರತದಲ್ಲಿ ನಾವು ದೇವರ ಮೇಲೆ ಬಹಳವಾಗಿ ಕೇಂದ್ರಿತವಾದಂತೆ ತೋರುತ್ತದೆ ಮತ್ತು ಕೆಲವು ಜನರು ಅಂಧರಾಗಿ ಧರ್ಮನಿಷ್ಠರಾಗಿದ್ದಾರೆ. ದೇವರಲ್ಲಿ ನಂಬಿಕೆಯನ್ನಿರಿಸದೆಯೇ ಸಂತೋಷವಾಗಿರಲು ಸಾಧ್ಯವೇ? ಕೆಲವೊಮ್ಮೆ ನಾವು ಜೀವನದಲ್ಲಿ ದೇವರನ್ನಿರಿಸಿದಾಗ, ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ.  

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ದೇವರ ಯಾವುದೇ ಪರಿಕಲ್ಪನೆಯೂ ಇಲ್ಲದೆಯೇ ಆಧ್ಯಾತ್ಮವು ಗೌರವಿಸಲ್ಪಟ್ಟ ಏಕಮಾತ್ರ ದೇಶವೆಂದರೆ ಭಾರತ.

ಜೈನ ಪಂಥದಲ್ಲಿ, ದೇವರು ಹೊರಗೆಲ್ಲೋ ಕುಳಿತಿರುವ ಯಾವುದೇ ಪರಿಕಲ್ಪನೆಯಿಲ್ಲ, ಮತ್ತು ಬೌದ್ಧ ಧರ್ಮದಲ್ಲಿ ಕೂಡಾ ಹಾಗೆಯೇ. ಹೀಗಾಗಿ, ದೇವರೆಂದರೇನು ಅಥವಾ ದೇವರೆಲ್ಲಿರುವರು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ದೇವರಲ್ಲಿ ವಿಶ್ವಾಸವಿರಿಸಬೇಕಾಗಿಲ್ಲ, ಕನಿಷ್ಠಪಕ್ಷ ನೀನು ನಿನ್ನಲ್ಲೇ ವಿಶ್ವಾಸವನ್ನಿಡು. ಆಗ ನಿನಗೆ ನೀನು ಯಾರೆಂಬುದು ತಿಳಿಯುವುದು. ನೀನು ಯಾರು? ನೀನು ಶರೀರವೇ? ನೀನು ಮನಸ್ಸೇ? ನೀನು ಯೋಚನೆಯೇ? ನೀನು ಯಾರು! ನೀನು ಯಾರೆಂಬುದನ್ನು ತಿಳಿ, ಅಷ್ಟು ಸಾಕು.

ನೀನು ಯಾರೆಂಬುದನ್ನು ತಿಳಿಯಲು ಬಯಸುವ ಪಥದಲ್ಲಿ, ನಿನ್ನ ಅಖಂಡತೆ, ನಿನ್ನ ಪ್ರಾಮಾಣಿಕತೆ, ಎಲ್ಲರ ಕಡೆಗಿರುವ ನಿನ್ನ ಕರುಣೆ ಹಾಗೂ ಪ್ರೇಮ, ನಿನ್ನ ಸಂವೇದನಾಶೀಲತೆ ಇವೆಲ್ಲವೂ ಬರುತ್ತವೆ, ಮತ್ತು ಇದುವೇ ಧರ್ಮಶ್ರದ್ಧೆ!

ಭಾರತದಲ್ಲಿ, ಉಪನಿಷತ್ತುಗಳಲ್ಲಿ, ಮೊದಲು ದೇವರನ್ನು ನಂಬುವಂತೆ ಹೇಳಲಾಗಿಲ್ಲ. ’ನಿನ್ನನ್ನೇ ತಿಳಿ’ ಎಂದು ಉಪನಿಷತ್ತುಗಳು ಹೇಳುತ್ತವೆ. ಇದನ್ನೇ ಒತ್ತಿ ಹೇಳಲಾಗಿರುವುದು.

ನಾನು ಯಾವುದನ್ನೂ ನಂಬುವುದಿಲ್ಲ, ನಾನೊಬ್ಬ ನಾಸ್ತಿಕ ಎಂದು ನೀವು ಹೇಳಿದರೆ, ಆಗ ನಿಮಗೆ ಗೊತ್ತಾ, ನಾಸ್ತಿಕರಲ್ಲೊಂದು ಬಹಳ ದೊಡ್ಡ ಸಮಸ್ಯೆಯಿದೆ. ಅವರೊಳಗೆ ಭಯವಿದೆ.

ಎರಡು ರೀತಿಯ ಜನರಿದ್ದಾರೆ, ಒಂದು ದೇವರನ್ನು ನಂಬುವವರು ಮತ್ತು ಒಂದು, ದೇವರನ್ನು ನಂಬದೇ ಇದ್ದು, ತಮಗೇನಾಗಲಿದೆಯೆಂದು ತಿಳಿದಿಲ್ಲವಾದ್ದರಿಂದ ಭಯಾನಕವಾದ ಭಯವನ್ನು ಹೊಂದಿರುವವರು. ವಿಶ್ವಾಸದ ಕೊರತೆ, ಕರುಣೆಯ ಕೊರತೆ, ಇವುಗಳೆಲ್ಲವೂ ಬರುತ್ತವೆ.

ನಾನು ಹೇಳುವುದೇನೆಂದರೆ, ನೀನು ದೇವರನ್ನು ನಂಬುವೆಯೋ ಇಲ್ಲವೋ ಎಂಬುದು ಅಪ್ರಸ್ತುತ. ನೀನು ತಿಳಿಯಬೇಕಾಗಿರುವುದೇನೆಂದರೆ, ನೀನು ಯಾರೆಂಬುದು. ನೀನು ಯಾರೆಂಬುದನ್ನು ತಿಳಿಯಲು ನಿನಗೆ ಯಾವುದಾದರೂ ಆಧ್ಯಾತ್ಮಿಕ ಅಭ್ಯಾಸದ, ಯಾವುದಾದರೂ ದಾರಿಯ ಅಗತ್ಯವಿದೆ.

ನಿಮಗೆ ಯಾವುದರಲ್ಲೂ ನಂಬಿಕೆಯಿಲ್ಲವೆಂದು ನೀವು ಹೇಳುವುದಾದರೆ, ಕನಿಷ್ಠಪಕ್ಷ ನೀವು ಹೇಳುತ್ತಿರುವುದರ ಮೇಲಾದರೂ ನೀವು ನಂಬಿಕೆಯನ್ನಿಡಿ, ಸರಿಯಾ? ನೀವು ಹೇಳಬೇಕಾದುದು ಏನೆಂದರೆ, "ನನ್ನನ್ನು ಹೊರತುಪಡಿಸಿ ಬೇರೆ ಯಾವುದರಲ್ಲೂ ನನಗೆ ವಿಶ್ವಾಸವಿಲ್ಲ" ಎಂದು.

"ನನಗೆ ಯಾವುದರಲ್ಲೂ ನಂಬಿಕೆಯಿಲ್ಲ" ಎಂದು ನೀವು ಹೇಳಲು ಸಾಧ್ಯವಿಲ್ಲ, ಆಗ ನೀವು, ನೀವು ಹೇಳುತ್ತಿರುವ ಶಬ್ದಗಳನ್ನು ಕೂಡಾ ನಂಬುವುದಿಲ್ಲ!

ನಾನು ಹೇಳುವುದೇನೆಂದರೆ, ಧರ್ಮ ಅಥವಾ ದೇವರ ಒಂದು ಪರಿಕಲ್ಪನೆಗೆ ತನ್ನದೇ ಆದ ಬೆಲೆಯಿದೆ. ಅದು ದುಃಖದಲ್ಲಿರುವ ಜನರಿಗೆ ಸಹಾಯ ಮಾಡುತ್ತದೆ, ಅದು ಜನರ ಉತ್ಸಾಹವನ್ನು ಮೇಲೆತ್ತುತ್ತದೆ ಮತ್ತು ಅದು ನೈತಿಕ ಹೊಣೆಗಾರಿಕೆಯನ್ನು ಕಾಪಾಡುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಅಥವಾ ಆಧ್ಯಾತ್ಮದಲ್ಲಿ ಮುಂದುವರಿಯಲು ಇದು ಅತ್ಯಗತ್ಯವೆಂದು ನನಗೆ ಅನ್ನಿಸುತ್ತಿಲ್ಲ. ಅದು ತನ್ನಿಂತಾನೇ ಬರುವುದು.

ಪ್ರಶ್ನೆ: ಒಬ್ಬ ಉತ್ತಮ ವ್ಯಾಪಾರಿಯಾಗಲು ಆಧ್ಯಾತ್ಮಿಕತೆಯು ನನಗೆ ಹೇಗೆ ಸಹಾಯ ಮಾಡಬಲ್ಲದು? ಆಧ್ಯಾತ್ಮಿಕತೆಯು ವ್ಯಾಪಾರಕ್ಕಿಂತ ಭಿನ್ನವಾದುದೇ?

ಶ್ರೀ ಶ್ರೀ ರವಿ ಶಂಕರ್: ವ್ಯಾಪಾರವು ನಿನ್ನಿಂದ ಭಿನ್ನವಾದುದೇ? ನೀನು ಕೊಂಡಿಯಾಗಿರುವೆ. ನೀನು ಚೆನ್ನಾಗಿದ್ದು, ನೀನು ಸಂತೋಷವಾಗಿದ್ದರೆ, ನೀನು ಬುದ್ಧಿಶಾಲಿಯಾಗಿದ್ದು, ಅಂತರ್ಜ್ಞಾನ ಹೊಂದಿದವನಾಗಿದ್ದರೆ, ಆಗ ನೀನು ಒಳ್ಳೆಯ ವ್ಯಾಪಾರವನ್ನು ಮಾಡಬಹುದು.

ನನಗೆ ಹೇಳು, ವ್ಯಾಪಾರಕ್ಕೆ ನಿನಗೆ ಯಾವುದರ ಅಗತ್ಯವಿದೆ? ನಿನಗೆ ಅಂತರ್ಜ್ಞಾನ ಬೇಕು, ನಿನ್ನಲ್ಲಿ ನಾವೀನ್ಯತೆಯಿರಬೇಕು ಮತ್ತು ನಿನಗೆ ಸ್ಫೂರ್ತಿ ಬೇಕು. ಯಾವುದೇ ಸ್ಪರ್ಧೆಯಿಲ್ಲದಿದ್ದರೆ ನೀನು ಹೇಗೆ ಮುಂದೆ ಸಾಗುವೆ? ಸ್ಪರ್ಧೆಯು ನಿನಗೆ ಸ್ಫೂರ್ತಿ ನೀಡುತ್ತದೆ.

ಹೀಗಾಗಿ, ಅಂತರ್ಜ್ಞಾನ, ನಾವೀನ್ಯತೆ ಮತ್ತು ಸ್ಫೂರ್ತಿ, ಈ ಎಲ್ಲಾ ಮೂರು ವಿಷಯಗಳು ಆಧ್ಯಾತ್ಮಿಕತೆಯಿಂದ ಬರುತ್ತವೆ.
ಆಧ್ಯಾತ್ಮಿಕತೆಯೆಂದರೇನು? ನಿಮ್ಮನ್ನೇ ಶಾಂತಗೊಳಿಸುವುದು, ನಿಮ್ಮನ್ನೇ ಕೇಂದ್ರೀಕೃತರಾಗಿಸುವುದು ಮತ್ತು ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡುವುದು. ಇದುವೇ ನಿಮ್ಮ ಸುತ್ತಲೂ ಒಂದು ಹಿತಕರವಾದ ವಾತಾವರಣವನ್ನು ಉಂಟುಮಾಡುವುದು. ಆಧ್ಯಾತ್ಮಿಕತೆಯೊಂದಿಗೆ, ನಿಮ್ಮ ಸಂಪರ್ಕದ ಗುಣಮಟ್ಟ ಕೂಡಾ ಸುಧಾರಿಸುತ್ತದೆ.

ಜನರೊಂದಿಗೆ ನೀವು ಉತ್ತಮ ಸಂಪರ್ಕವನ್ನು ಬಯಸುವುದಿಲ್ಲವೇ? ಸಂಪರ್ಕ, ಕರುಣೆ, ಒಳ್ಳೆಯ ನಡತೆ, ಸ್ಥಿರತೆ - ಇವುಗಳೆಲ್ಲವೂ ಆಧ್ಯಾತ್ಮಿಕತೆಯ ಉಡುಗೊರೆಗಳಾಗಿವೆ.

ಆದುದರಿಂದ, ನೇರವಾಗಿ ಅಲ್ಲ, ಆದರೆ ಪರೋಕ್ಷವಾಗಿ ಈ ಅಂಶಗಳು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತವೆ. ನಿಮ್ಮ ಜೀವನವು ಸಮೃದ್ಧಗೊಂಡಾಗ, ನೀವೊಬ್ಬ ಉತ್ತಮ ಸಂರ್ಕಶಾಲಿಯಾಗುತ್ತೀರಿ, ಉತ್ತಮ ವ್ಯಾಪಾರೀ ಸಮಾಲೋಚಕರಾಗುತ್ತೀರಿ, ನಿಮ್ಮ ಅಂತರ್ಜ್ಞಾನವು ಉತ್ತಮವಾಗಿ ಕೆಲಸ ಮಾಡುತ್ತದೆ, ನೀವು ಇನ್ನೂ ಹೆಚ್ಚು ಹೊಸತನವನ್ನು ತರುವವರಾಗುತ್ತೀರಿ ಮತ್ತು ನೀವು ಇತರರಿಗೆ ಒಂದು ಪ್ರೇರಣೆಯಾಗುವಿರಿ. ಹೀಗೆ, ಈ ವಿಧಾನಗಳಲ್ಲಿ ಆಧ್ಯಾತ್ಮಿಕತೆಯು ನಿಮಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತದೆ.

ಇನ್ನೊಂದು ವಿಷಯವೆಂದರೆ ನೈತಿಕತೆ. ಆಧ್ಯಾತ್ಮಿಕತೆಯು ವ್ಯಾಪಾರದಲ್ಲಿ ನೈತಿಕತೆಯನ್ನು ಕೂಡಾ ತರುತ್ತದೆ. ಇತರರು ತಮ್ಮ ಕಡೆಗೆ ಅನೈತಿಕವಾಗಿರಬೇಕೆಂದು ಯಾರೂ ಬಯಸುವುದಿಲ್ಲ. ನಿಮ್ಮ ಗ್ರಾಹಕರು ನಿಮ್ಮ ಕಡೆಗೆ ಅನೈತಿಕರಾಗಿರಬೇಕೆಂದು ನೀವು ಬಯಸುವಿರಾ? ಇಲ್ಲ!

ಇತರರು ನಿಮಗೆ ಯಾವುದನ್ನು ಮಾಡುವುದನ್ನು ನೀವು ಬಯಸುವುದಿಲ್ಲವೋ ಅದನ್ನು ನೀವು ಮಾಡದಿರುವುದು ನೈತಿಕತೆಯಾಗಿದೆ, ಹಾಗೂ ವ್ಯಾಪಾರದಲ್ಲಿ ನೈತಿಕತೆಗೆ ಪುಷ್ಟಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.
ವ್ಯಾಪಾರವೂ ಯಾವಾಗಲೂ ಮೇಲೆ ಕೆಳಗೆ ಹೋಗುತ್ತದೆ. ವ್ಯಾಪಾರದಲ್ಲೊಂದು ಇಳಿಮುಖವಿರುವಾಗ, ಸಂಭಾಳಿಸಿಕೊಂಡು ಮುಂದಕ್ಕೆ ಸಾಗಲು  ನಿಮಗೆ ಅಪಾರ ಶಕ್ತಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.

ಪ್ರಶ್ನೆ: ಒತ್ತಡವನ್ನು ಬಿಟ್ಟುಬಿಡುವುದು ಹೇಗೆ? ನಿಜವಾದ ಸಂತೋಷವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಶ್ರೀ ಶ್ರೀ ರವಿ ಶಂಕರ್: ಒತ್ತಡವನ್ನು ಬಿಟ್ಟುಬಿಡಲು ಸ್ವಲ್ಪ ಧ್ಯಾನ, ಸ್ವಲ್ಪ ಉಸಿರಾಟದ ಅಭ್ಯಾಸಗಳು ಮತ್ತು ಪ್ರಾಣಾಯಾಮಗಳನ್ನು ಮಾಡು; ಇದು ಮೊದಲನೆಯದು.

ಎರಡನೆಯದು, ಹಿಂದೆ ತಿರುಗಿ ನೋಡು, ಭೂತಕಾಲದಲ್ಲೂ ನೀನು ಕೆಲವು ಸವಾಲುಗಳನ್ನು ಹೊಂದಿರಲಿಲ್ಲವೇ? ನೀನು ಹೊಂದಿದ್ದೆ, ಅಲ್ಲವೇ? ಇವತ್ತು ನೀನು ಆತಂಕಗೊಂಡಿದ್ದರೆ (ಯಾವುದಾದರೂ ಕಾರಣಕ್ಕಾಗಿ), ಹಿಂದೆ ಕೂಡಾ ನೀನು ಅದೇ ಪರಿಸ್ಥಿತಿಯನ್ನು ಎದುರಿಸಿದ್ದೆ, ಅಲ್ಲವೇ? ಇದು ಮೊದಲ ಸಲವಲ್ಲ. ಮತ್ತು ಆ ಪರಿಸ್ಥಿತಿಯನ್ನು ನೀನು ಜಯಿಸಿರುವೆ. ಹೀಗೆ, ಭೂತಕಾಲದಲ್ಲಿ ನಿನಗೆ ಜಯಿಸಲು ಸಾಧ್ಯವಾಗಿದ್ದ ಒಂದು ಒತ್ತಡಕಾರಿ ಪರಿಸ್ಥಿತಿಯ ಸ್ಮರಣೆಯು, ಈಗ ಒತ್ತಡವನ್ನು ಬಿಟ್ಟುಬಿಡಲಿರುವ ವಿಶ್ವಾಸವನ್ನು ನಿನಗೆ ನೀಡುವುದು.

ಮೂರನೆಯದು ವಿಶ್ವಾಸ; ನನಗೆ ಸಹಾಯ ಮಾಡಲು ಒಂದು ಹೆಚ್ಚಿನ ಶಕ್ತಿಯಿದೆ, ನಾನು ಒಬ್ಬಂಟಿಯಲ್ಲ ಎಂಬ ವಿಶ್ವಾಸ. ಮತ್ತು ಈ ಒತ್ತಡಕಾರಿ ಪರಿಸ್ಥಿತಿಯು ಏನೂ ಅಲ್ಲ, ಇದು ಹೊರಟುಹೋಗಲಿದೆ.

ನಾಲ್ಕನೆಯ ಆಯ್ಕೆಯೆಂದರೆ, ಸುತ್ತಲೂ ನೋಡು ಮತ್ತು ನಿನಗಿಂತ ಹೆಚ್ಚು ಒತ್ತಡವಿರುವ ಜನರನ್ನು ನೋಡು! ನಿಮಗೊಂದು ನಷ್ಟವಾಗಿದ್ದರೆ ಮತ್ತು ಒಬ್ಬರಿಗೆ ನಿಮಗಿಂತ ಒಂದು ದೊಡ್ಡ ನಷ್ಟವಾಗಿದ್ದರೆ, ನಿಮಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ! ನಾನು ಹೇಳುವುದೆಂದರೆ, ನಿಮ್ಮನ್ನೇ ಸಮಾಧಾನಪಡಿಸಲು ಇದು ಕಡೆಯ ಆಯ್ಕೆಯಾಗಿದೆ.

ನಿಮ್ಮ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗುತ್ತಿದೆಯೆಂದಿಟ್ಟುಕೊಳ್ಳೋಣ. ಆಗ ನೀವು, ಈಜಿಪ್ಟ್‌ನಲ್ಲಿ ಏನಾಗುತ್ತಿದೆಯೆಂಬುದನ್ನು ನೆನಪಿಸಿಕೊಳ್ಳಿ! ಕಡಿಮೆಪಕ್ಷ ನಿಮ್ಮ ಪರಿಸ್ಥಿತಿಯು ಅವರದ್ದಕ್ಕಿಂತ ಉತ್ತಮವಾಗಿದೆಯೆಂದು ನಿಮಗನ್ನಿಸುವುದು.

ಮನೆಯಲ್ಲಿ ಬಹಳಷ್ಟು ಸೋಲನ್ನನುಭವಿಸುವವರು ಅಥವಾ ಯಾರಾದರೂ ತಮಗೆ ತೊಂದರೆಯನ್ನು ನೀಡುವಾಗ ಅಂತಹವರು ಹೆಚ್ಚಾಗಿ ಇದನ್ನು ಮಾಡುತ್ತಾರೆ. ತಮಗಾಗುವುದನ್ನು ಸಮರ್ಥಿಸಿಕೊಳ್ಳಲು ಅವರು ಇತರರ ವೈಫಲ್ಯಗಳನ್ನು ಎಣಿಸಲು ತೊಡಗುತ್ತಾರೆ.

ಹೀಗೆ, ಈ ರೀತಿಗಳಲ್ಲಿ ನಾವು ಒತ್ತಡವನ್ನು ತೊಡೆದುಹಾಕಬಹುದು.

ಯೋಗಸೂತ್ರಗಳಲ್ಲಿ ಪತಂಜಲಿಯು ಹೀಗೆಂದು ಹೇಳಿದ್ದಾರೆ, ’ಸಂತೋಷ ಅನುತ್ತಮಃ ಸುಖ ಲಾಭಃ’. ’ಏನೇ ಆಗಲಿ ನಾನು ನನ್ನ ಮುಗುಳ್ನಗೆಯನ್ನು ಕಳೆದುಕೊಳ್ಳೆನು’  ಎಂಬ ಒಂದು ಸಂಕಲ್ಪವು ನಿಮಗೆ ಸಹಾಯ ಮಾಡುವುದು. ನೀವದನ್ನು ಕಳೆದುಕೊಳ್ಳಲೂಬಹುದು, ಆದರೆ ನೀವದನ್ನು ಕಳೆದುಕೊಳ್ಳದೇ ಇರುವ ಒಂದು ಸಮಯವು ಬರುವುದು.

ಪ್ರಶ್ನೆ: ಪ್ರತಿದಿನವೂ ಅದೇ ಕೆಲಸವನ್ನು ಮಾಡಲು ನನ್ನನ್ನು ನಾನು ಗಮನವಿಟ್ಟುಕೊಳ್ಳುವಂತೆ ಮಾಡುವುದು ಮತ್ತು ಪ್ರೇರೇಪಿತನಾಗಿಟ್ಟುಕೊಳ್ಳುವುದು ಹೇಗೆಂದು ನಾನು ತಿಳಿಯಲು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನನಗೆ ಹೇಳು, ನೀನು ಯಾಕೆ ಗಮನವಿಟ್ಟು ಮಾಡಲು ಬಯಸುವೆ?

(ಉತ್ತರ: ಇದು ನನ್ನ ನೌಕರಿ ಮತ್ತು ಜೀವನೋಪಾಯದ ಪ್ರಶ್ನೆ!)

ಅಷ್ಟೇ! ಇದೊಂದು ನಿನ್ನ ಜೀವನೋಪಾಯದ ಪ್ರಶ್ನೆಯೆಂಬ ಈ ಅರಿವೇ ಸಾಕು ನೀನು ಗಮನವಿಡುವಂತೆ ಮಾಡಲು!
ನೋಡು, ಗಮನ ಬೇಕಾಗಿರುವುದು ಅಲ್ಲಿ ಯಾವುದೇ ಪ್ರೇಮ ಮತ್ತು ಅನುರಾಗವಿಲ್ಲದಿರುವಾಗ. ನಿನಗೆ ಯಾವುದರ ಕಡೆಗಾದರೂ ಒಂದು ಅನುರಾಗವಿದ್ದರೆ, ಆಗ ನೀನು ಅದರ ಮೇಲೆ ಗಮನ ನೀಡಬೇಕಾದ ಅಗತ್ಯವಿಲ್ಲ. ಇದು ಮೊದಲನೆಯದು.

ಎರಡನೆಯದಾಗಿ, ಅದನ್ನು ಸ್ವಂತದ್ದಾಗಿಸಿಕೊಳ್ಳುವುದರಿಂದ, ’ಇದು ನನ್ನದೇ ವ್ಯವಹಾರ’ ಎಂದು ಯೋಚಿಸುವುದರಿಂದ, ಗಮನವು ತನ್ನಿಂತಾನೇ ಬರುತ್ತದೆ. ಅದು ಒಬ್ಬ ಮಾವನ ವ್ಯವಹಾರವಾಗಿದ್ದರೆ ಅಥವಾ ನಿನ್ನ ತಂದೆಯ ವ್ಯವಹಾರವಾಗಿದ್ದರೆ, ಆಗ ಗಮನವು ಕಡಿಮೆಯಾಗಿರುತ್ತದೆ! ಆದರೆ ಅದು ನಿನ್ನ ಸ್ವಂತದ್ದಾಗಿದ್ದರೆ, ಆಗ ನೀನು ಗಮನ ಕೊಡಬೇಕಾಗಿಯೇ ಇಲ್ಲ. ಗಮನವು ಅದರಷ್ಟಕ್ಕೆ ಬರುತ್ತದೆ.

ಮಂಗಳವಾರ, ಏಪ್ರಿಲ್ 8, 2014

’ರಾಮ’ನೆಂಬ ನಮ್ಮೊಳಗಿನ ದೈವೀ ಶಕ್ತಿ

ಎಪ್ರಿಲ್ ೮, ೨೦೧೪
ಕೋಲ್ಕತ್ತಾ, ಪಶ್ಚಿಮ ಬಂಗಾಳ

ಪ್ರಶ್ನೆ: ಗುರೂಜಿ, ರಾಮ ಎಂದರೆ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ರಾಮ ಎಂದರೆ ನಮ್ಮೊಳಗಿನ ಪ್ರಭೆ; ಆತ್ಮನ ಪ್ರಕಾಶ. ’ರವಿ’ ಎಂಬ ಪದಕ್ಕೂ ಅದೇ ಅರ್ಥ. ’ರ’ ಎಂದರೆ ಪ್ರಕಾಶ, ’ವಿ’ ಎಂದರೆ ವಿಶೇಷ. ಇದರರ್ಥ, ನಮ್ಮೊಳಗಿನ ಶಾಶ್ವತವಾದ ಈ ವಿಶೇಷ ಪ್ರಕಾಶ. ನಮ್ಮ ಹೃದಯದಲ್ಲಿನ ಪ್ರಕಾಶವು ರಾಮ ಎಂದು ಕರೆಯಲ್ಪಡುತ್ತದೆ.

ಹೀಗೆ ನಮ್ಮ ಆತ್ಮದ ಪ್ರಕಾಶವು ರಾಮ ಆಗಿದೆ.

’ರಾಮ ನವಮಿ’ಯ ಈ ದಿನವು, ಈ ದೈವಿಕವಾದ ಆಂತರಿಕ ಪ್ರಕಾಶದ ಜನ್ಮವನ್ನು ಆಚರಿಸುತ್ತದೆ. ಭಗವಾನ್ ರಾಮನು ದಶರಥ ರಾಜ ಮತ್ತು ಕೌಶಲ್ಯಾ ರಾಣಿಗೆ ಹುಟ್ಟಿದನು. ಕೌಶಲ್ಯಾ ಎಂದರೆ ಕುಶಲತೆ ಮತ್ತು ದಶರಥ ಎಂದರೆ ಹತ್ತು ರಥಗಳುಳ್ಳವನು. ನಮ್ಮ ಶರೀರದಲ್ಲಿ ಹತ್ತು ಇಂದ್ರಿಯಗಳಿವೆ - ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು (ಎರಡು ಕೈಗಳು, ಎರಡು ಕಾಲ್ಗಳು, ಜನನೇಂದ್ರಿಯ, ವಿಸರ್ಜನಾಂಗ ಮತ್ತು ಬಾಯಿ).

ಸುಮಿತ್ರ ಎಂದರೆ ಎಲ್ಲರೊಂದಿಗೂ ಸ್ನೇಹದಿಂದ ಇರುವವರು. ಕೈಕೇಯಿ ಎಂದರೆ, ಯಾವಾಗಲೂ ಎಲ್ಲರಿಗೂ ನಿಸ್ವಾರ್ಥವಾಗಿ ಕೊಡುವವರು.

ದಶರಥ ರಾಜನು ತನ್ನ ಮೂವರು ಪತ್ನಿಯರೊಂದಿಗೆ ಋಷಿಗಳ ಬಳಿಗೆ ಹೋದನು. ಋಷಿಗಳು ಅವರಿಗೆ ಪ್ರಸಾದವನ್ನು ನೀಡಿದಾಗ ಅದರ ಕೃಪೆಯಿಂದ ಭಗವಾನ್ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತ ಹುಟ್ಟಿದರು.

ರಾಮ ಎಂದರೆ ಆಂತರಿಕ ಪ್ರಕಾಶ ಮತ್ತು ಲಕ್ಷ್ಮಣ ಎಂದರೆ ಅರಿವು. ಶತ್ರುಘ್ನ ಎಂದರೆ, ಯಾರಿಗೆ ಶತ್ರುಗಳಿಲ್ಲವೋ ಅವನು ಅಥವಾ ಯಾರು ಯಾವುದೇ ವಿರೋಧವನ್ನು ಎದುರಿಸುವುದಿಲ್ಲವೋ ಅವನು. ಭರತ ಎಂದರೆ ಪ್ರತಿಭಾನ್ವಿತನಾದ ಒಬ್ಬನು.
ಅಯೋಧ್ಯ (ಭಗವಾನ್ ರಾಮನ ಜನ್ಮಸ್ಥಳ) ಎಂದರೆ, ಯಾವುದನ್ನು ನಾಶಪಡಿಸಲು ಸಾಧ್ಯವಿಲ್ಲವೋ ಅದು. ಕಥೆಯ ಸಾರವು ಹೀಗಿದೆ: ನಮ್ಮ ಶರೀರವು ಅಯೋಧ್ಯೆಯಾಗಿದೆ. ನಮ್ಮ ಶರೀರದ ರಾಜನು ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಶರೀರದ ರಾಣಿಯು ಕುಶಲತೆ ಆಗಿದೆ. ನಮ್ಮೆಲ್ಲಾ ಜ್ಞಾನಗಳು ಹೊರಮುಖವಾಗಿವೆ. ಕುಶಲತೆಯನ್ನು ಬಳಸಿ ನಾವು ಅವುಗಳನ್ನು ಒಳಮುಖವಾಗಿ ತರುತ್ತೇವೆ ಮತ್ತು ಆಗಲೇ ದೈವಿಕವಾದ ಶಾಶ್ವತ ಪ್ರಕಾಶ, ಅಂದರೆ ಭಗವಾನ್ ರಾಮನು ನಮ್ಮೊಳಗೆ ಉದಯಿಸುವುದು.

ಭಗವಾನ್ ರಾಮನು ನವಮಿಯಂದು ಜನಿಸಿದನು. ನವಮಿಯ (ಒಂಭತ್ತನೆಯ ದಿನದ) ಮಹತ್ವವನ್ನು ನಾನು ಬೇರೆ ಯಾವಾಗಲಾದರೂ ವಿವರಿಸುತ್ತೇನೆ.

ಮನಸ್ಸು (ಸೀತೆ), ಅಹಂಕಾರದಿಂದ (ರಾವಣ) ಅಪಹರಿಸಲ್ಪಟ್ಟಾಗ, ದೈವಿಕ ಪ್ರಕಾಶವು ಅರಿವಿನೊಂದಿಗೆ (ಲಕ್ಷ್ಮಣ) ಜೊತೆಯಾಗಿ, ಭಗವಾನ್ ಹನುಮಂತನ (ಪ್ರಾಣವನ್ನು ಸೂಚಿಸುತ್ತಾ) ಭುಜಗಳ ಮೇಲೆ ಅವಳನ್ನು ಮನೆಗೆ ಮರಳಿ ತಂದರು. ಈ ರಾಮಾಯಣವು ನಮ್ಮ ಶರೀರದಲ್ಲಿ ಸದಾಕಾಲ ನಡೆಯುತ್ತಾ ಇರುತ್ತದೆ.

ಪ್ರಶ್ನೆ: ಗುರುದೇವ, ಪ್ರೀತಿಯು ಒಂದು ಭಾವನೆಯಲ್ಲದಿದ್ದರೆ ಮತ್ತದು ಏನು?

ಶ್ರೀ ಶ್ರೀ ರವಿ ಶಂಕರ್: ಅದು ನಮ್ಮ ಅಸ್ತಿತ್ವವೇ ಆಗಿದೆ. ನಾನು ನಿಮಗೆ ಕೇವಲ ಮೂರು ವಿಷಯಗಳನ್ನು ಮಾತ್ರ ಹೇಳುತ್ತೇನೆ: ಹೃದಯದಲ್ಲಿ ಶುದ್ಧತೆ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಇದು ಆಧ್ಯಾತ್ಮದ ಸಾರವಾಗಿದೆ. ನಿಮ್ಮಲ್ಲಿ ಈ ಮೂರು ಇದ್ದರೆ, ಹಲವಾರು ಸಮಸ್ಯೆಗಳು ಮೊಗ್ಗಾಗಿರುವಾಗಲೇ ಅಲ್ಲಿಯೇ ಆಗಲೇ ಕಿತ್ತು ಹಾಕಲ್ಪಡುತ್ತದೆ.

ಪ್ರಶ್ನೆ: ಗುರುದೇವ, ನಿಮ್ಮನ್ನು ಭೇಟಿಯಾದ ಬಳಿಕವೂ ಜನರು ನಿಷ್ಠುರವಾಗಿ ಹಾಗೂ ಮತ್ಸರದಿಂದ ವರ್ತಿಸುವುದನ್ನು ಮುಂದುವರಿಸುವುದು ಯಾಕೆ? ಇದಕ್ಕೆ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಇತರರ ಬಗ್ಗೆ ಚಿಂತಿಸುವುದು ಬೇಡವೆಂದು ನಾನು ನಿನಗೆ ಸಲಹೆ ನೀಡುವೆ. ಸುಮ್ಮನೆ ಊಹಿಸಿ ನೋಡು, ಅವರು ಈ ಪಥದ ಮೇಲೆ ಇರದಿರುತ್ತಿದ್ದರೆ, ಅವರು ಎಷ್ಟೊಂದು ನಿಷ್ಠುರರಾಗಿರುತ್ತಿದ್ದರು. ನಾನು ಅವರನ್ನು ಸ್ವೀಕರಿಸುತ್ತೇನೆ ಮತ್ತು ಸುಧಾರಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡುತ್ತೇನೆ. ಸಮಯದೊಂದಿಗೆ ಜನರು ಬದಲಾಗುತ್ತಾರೆ. ಜನರು ಸುಧಾರಿಸುತ್ತಾರೆ. ಇತರರನ್ನು ನೋಡುವುದರಲ್ಲಿ ಮತ್ತು ಅವರನ್ನು ಗಮನಿಸುವುದರಲ್ಲಿ ನೀನು ಸಿಕ್ಕಿಹಾಕಿಕೊಳ್ಳಬಾರದು. ನೀನು ನಿನ್ನನ್ನೇ ನೋಡು. ಪಥದ ಮೇಲೆ ಬಂದ ಬಳಿಕ ನೀನು ಎಷ್ಟು ಬದಲಾಗಿರುವೆ ಎಂಬುದರ ಬಗ್ಗೆ ಸುಮ್ಮನೆ ಮೌನವಾಗಿ ಚಿಂತನೆ ಮಾಡು ಮತ್ತು ಗಮನಿಸು. ನೀನು ನಿನ್ನದೇ ಪ್ರಗತಿಯನ್ನು ನೋಡು. ಕೆಲವು ಜನರು ನಿಧಾನವಾಗಿ ಕಲಿಯುವವರಾಗಿರುತ್ತಾರೆ, ಕೆಲವರು ವೇಗವಾಗಿ ಕಲಿಯುವವರಾಗಿರುತ್ತಾರೆ. ಜೀವನದಲ್ಲಿ ಹೀಗೆ ಆಗುತ್ತದೆ.

ಪ್ರಶ್ನೆ: ಗುರುದೇವ, ಸೇಡು ಸಮರ್ಥನೀಯವೇ?

ಶ್ರೀ ಶ್ರೀ ರವಿ ಶಂಕರ್: ಸೇಡು ಎಂಬುದು ಅವಿವೇಕ ಮತ್ತು ಮೂರ್ಖತನದ ಒಂದು ಸಂಕೇತವಾಗಿದೆ. ಯಾವುದೇ ಸೇಡು ತೋರಿಸುವುದೇನೆಂದರೆ, ನೀವು ನಿಮ್ಮ ದೃಷ್ಟಿಯನ್ನು ಕಳಕೊಂಡಿರುವಿರೆಂದು, ನೀವು ಕುರುಡರಾಗಿರುವಿರೆಂದು.

ಪ್ರಶ್ನೆ: ಗುರುದೇವ, ನನ್ನ ಎಲ್ಲಾ ಬಯಕೆಗಳು ಪೂರೈಸಲ್ಪಡುತ್ತಿರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ನೀನು ಏನನ್ನಾದರೂ ಬಯಸುವಾಗ ನಿನಗದು ಸಿಗುತ್ತದೆ. ಅದು ಸಹಜವೇ ಆಗಿದೆ. ಒಂದು ಕಂಪ್ಯೂಟರ್‌ನಲ್ಲಿ ನೀನೊಂದು ಗುಂಡಿಯನ್ನು ಅದುಮಿದಾಗ ಅದು ಕೆಲಸ ಮಾಡುವಂತೆಯೇ, ಅದೇ ರೀತಿಯಲ್ಲಿ, ನಿನ್ನ ಮನಸ್ಸಿನಲ್ಲೊಂದು ಬಯಕೆಯಿರುವಾಗ, ಅದು ಖಂಡಿತವಾಗಿಯೂ ಪ್ರಕಟವಾಗುತ್ತದೆ. ಅದು ಯಾಕೆ ಪೂರೈಸಲ್ಪಡುತ್ತದೆಯೆಂದು ಯಾರಾದರೂ ಕೇಳುತ್ತಿರುವುದು ಇದು ಮೊದಲ ಸಲವೆಂದು ನನಗನಿಸುತ್ತದೆ. ನಿನ್ನ ಬಯಕೆಗಳು ಪೂರೈಸಲ್ಪಡುವುದು ನಿನಗೆ ಅಷ್ಟೊಂದು ಒಗ್ಗಿ ಹೋಗಿದೆಯಾ? ನೀನೊಬ್ಬ ಅನ್ವೇಷಕನಾಗಿ, ನಿಯಮಿತವಾಗಿ ನಿನ್ನ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸಗಳು) ಕಡೆಗೆ ಗಮನ ಹರಿಸಿದಾಗ, ನಿನ್ನ ಬಯಕೆಗಳು ತನ್ನಿಂತಾನೇ ಪೂರೈಸಲ್ಪಡಲು ತೊಡಗುವುದನ್ನು ನೀನು ನೋಡುವೆ. ಆಗ ನೀನು, ಅದು ಯಾಕೆ ಪೂರೈಸಲ್ಪಡುವುದೆಂದು ಕೇಳಲೂಬಹುದು ಮತ್ತು ಅದು ಸ್ವಲ್ಪ ಅಸ್ವಾಭಾವಿಕವಾದುದೆಂದು ಯೋಚಿಸಲೂಬಹುದು. ನಾನು ಹೇಳುವುದಾದರೆ, ಅದು ಸಂಪೂರ್ಣವಾಗಿ ಸ್ವಾಭಾವಿಕವಾದುದು. ನಿನಗದು ಅಭ್ಯಾಸವಾಗಿಬಿಡುತ್ತದೆ.

ಪ್ರಶ್ನೆ: ಗುರುದೇವ, ತಮ್ಮ ಹೆಣ್ಣು ಮಗುವಿನ ಸೂಕ್ತ ಮತ್ತು ಸುರಕ್ಷಿತವಾದ ಜೀವನಕ್ಕೆ ವಿವಾಹವು ಆವಶ್ಯಕವೆಂದು ಹಲವು ಹೆತ್ತವರು ನಂಬುತ್ತಾರೆ. ನಿಮಗೇನನ್ನಿಸುತ್ತದೆ? ಆರಾಮದಾಯಕವಾದ ಹಾಗೂ ಸುರಕ್ಷಿತವಾದ ಜೀವನಕ್ಕೆ ವಿವಾಹವು ಎಷ್ಟರ ಮಟ್ಟಿಗೆ ಆವಶ್ಯಕವಾದುದು?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ವಿವಾಹವು ಕೇವಲ ಒಬ್ಬಳು ಹುಡುಗಿಯ ಸುರಕ್ಷತೆಗಾಗಿ ಮಾತ್ರ ಇರುವುದಲ್ಲ. ಅದೊಂದು ವೈಯಕ್ತಿಕ ಆಯ್ಕೆ ಕೂಡಾ ಆಗಿದೆ. ಆದರೆ ನಾನು ನಿನಗೆ ಒಂದು ವಿಷಯವನ್ನು ಹೇಳುತ್ತೇನೆ. ವಿವಾಹವಾದ ನಂತರ ಕೂಡಾ, ಸಂತೋಷವಾಗಿರು. ವಿವಾಹವಾದ ಹೊರತಾಗಿಯೂ ಕೆಲವು ಜನರು ದುಃಖಿತರಾಗಿದ್ದಾರೆ ಮತ್ತು ಕೆಲವರು ಅವಿವಾಹಿತರಾಗಿದ್ದುಕೊಂಡು ಕೂಡಾ ದುಃಖಿತರಾಗಿದ್ದಾರೆ.

ಪ್ರಶ್ನೆ: ಗುರುದೇವ, ನಾನು ಮೊದಲ ಬಾರಿಗೆ ಮತದಾರನಾಗಿದ್ದೇನೆ. ನನ್ನ ಕ್ಷೇತ್ರದ ನಾಯಕನು, ಒಬ್ಬರು ಬಯಸಬಹುದಾದಷ್ಟು ಪ್ರಬಲ ಅಭ್ಯರ್ಥಿಯಲ್ಲ. ಆದರೂ ನಾನು, ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತೇನೆ. ಹಾಗಾದರೆ ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ರಾಷ್ಟ್ರೀಯ ಚುನಾವಣೆಯ ವಿಷಯದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ನೋಡಿ ಮತದಾನ ಮಾಡುವುದು ಬೇಡವೆಂದು ನಾನು ಸಲಹೆ ನೀಡುತ್ತೇನೆ. ದೇಶದ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ಮಾಡಬೇಕೆಂದು ನೀವು ಬುದ್ಧಿವಂತಿಕೆಯಿಂದ ಮೌಲ್ಯಮಾಪನ ಮಾಡಬೇಕು.

ಪುರಸಭೆಯ ಚುನಾವಣೆಯ ವಿಷಯ ಬಂದಾಗ, ನೀವು ಅಭ್ಯರ್ಥಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.

ಆದರೆ ರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರದ ಹಿತಾಸಕ್ತಿಗಳ ಕಡೆಗೆ ನೋಡಿ. ಯಾರು ಹೃದಯದಿಂದ ಮಾತನಾಡುವರೋ ಅವರಿಗೆ ಮತ ಹಾಕಿ. ಬೇರೆ ಯಾರಿಂದಲೋ ಸಿದ್ಧಪಡಿಸಲ್ಪಟ್ಟ ಒಂದು ಭಾಷಣವನ್ನೋದುವ ಒಬ್ಬ ಪ್ರಧಾನ ಮಂತ್ರಿಯು ನಮಗೆ ಬೇಕಾಗಿಲ್ಲ. ಒಬ್ಬ ಪ್ರಬಲನಾದ ನಾಯಕ ಮತ್ತು ತನ್ನ ಮನಸ್ಸು ಹಾಗೂ ಅಭಿಪ್ರಾಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಒಬ್ಬರು ನಮಗೆ ಬೇಕು.

ನೋಡಿ, ಒಂದು ರಾಜಕೀಯ ಪಕ್ಷ ಅಥವಾ ಇನ್ನೊಂದರ ಕಡೆಗೆ ಒಲವು ತೋರುವ ಅಥವಾ ಬೆಂಬಲಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅದು ಪರವಾಗಿಲ್ಲ. ಆದರೆ ರಾಷ್ಟ್ರ ಮತ್ತು ಅದರ ಹಿತಾಸಕ್ತಿಗಳ ವಿಷಯದಲ್ಲಿ, ನೀವು ನಿಮ್ಮೆಲ್ಲಾ ರಾಜಕೀಯ ಮತ್ತು ಪ್ರಾದೇಶಿಕ ಆದ್ಯತೆಗಳನ್ನು ಬದಿಗಿಟ್ಟು, ಮೊದಲು ದೇಶದ ಬಗ್ಗೆ ಏಕಮನಸ್ಕತೆಯಿಂದ ಯೋಚಿಸಬೇಕು.

ತಾನು ನೀಡಿದ ಭರವಸೆಗಳನ್ನು ಯಾರು ನಿಜಕ್ಕೂ ಪೂರೈಸಬಲ್ಲರೋ ಮತ್ತು ಒಳ್ಳೆಯ ಕೆಲಸವನ್ನು ಮಾಡಬಲ್ಲರೋ ಅಂತಹ ಒಬ್ಬ ಪ್ರಬಲ ಅಭ್ಯರ್ಥಿಗಾಗಿ ಹುಡುಕಿ ಮತ್ತು ನಂತರ ಅದರಂತೆ ಅವರಿಗೆ ಮತ ನೀಡಿ. ಇತರರಿಗೆ ಕೂಡಾ ಇದನ್ನು ಹೇಳಿ ಮತ್ತು ಅವರು ಅದನ್ನು ಅರ್ಥೈಸಿಕೊಳ್ಳುವಂತೆ ಮಾಡಿ. ನಾನಿದನ್ನು ಯಾಕೆ ಹೇಳುತ್ತಿರುವೆನೆಂದು ನಾನು ಹೇಳುತ್ತೇನೆ.

ಇವತ್ತು ಒಂದು ಡಾಲರ್ ೬೫ ರೂಪಾಯಿಗಳಿಗೆ ಸರಿಸಮಾನವಾಗಿದೆ. ಕೇಂದ್ರದಲ್ಲಿ ಒಬ್ಬ ಬಲಹೀನ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಒಂದು ಡಾಲರ್ ಬೆಲೆ ಬಲವಾಗಿ, ೧೦೦ ರೂಪಾಯಿಗಳಿಗೆ ಸಮಾನವಾಗುತ್ತದೆ. ಹೀಗಾಗಬೇಕೆಂದು ಇತರ ರಾಷ್ಟ್ರಗಳು ಬಯಸುತ್ತವೆ ಯಾಕೆಂದರೆ, ಆಗ ಭಾರತದಿಂದ ವಸ್ತುಗಳನ್ನು ಖರೀದಿಸುವುದು ಅಗ್ಗವಾಗುತ್ತದೆ. ಆದರೆ ಇಲ್ಲಿ, ನಮಗೆ ಎಲ್ಲವೂ ಹೆಚ್ಚು ದುಬಾರಿಯಾಗುತ್ತವೆ. ದೈನಂದಿನ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಕೇಂದ್ರದಲ್ಲಿ ಒಬ್ಬ ಪ್ರಬಲನಾದ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಆಗ ರೂಪಾಯಿಯು ಶಕ್ತಿ ಗಳಿಸಿಕೊಂಡು, ಡಾಲರ್‌ನ ಖರೀದಿಸುವ ಶಕ್ತಿಯು ೪೦ ರೂಪಾಯಿಗಳಿಗೆ ಇಳಿಯಬಹುದೆಂದು ಇತರ ರಾಷ್ಟ್ರಗಳು ಹೆದರುತ್ತಿವೆ.

ನಮ್ಮ ರಾಷ್ಟ್ರದ ಆರ್ಥಿಕ ಸ್ಥಿತಿಯು ಬಲವಾಗುವುದು ನಿರ್ದಿಷ್ಟವಾದ ವಿದೇಶಗಳಿಗೆ ಬೇಕಾಗಿಲ್ಲ.

ಕಳೆದ ಐದು ವರ್ಷಗಳಲ್ಲಿ ನಮ್ಮಲ್ಲಿ ಕೋಟಿಗಟ್ಟಲೆ ರೂಪಾಯಿಗಳಷ್ಟು ಮೌಲ್ಯದ ೩೦ ಹಗರಣಗಳಾಗಿವೆ. ೧.೪ ಟ್ರಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ಅಕ್ರಮವಾದ ಕಪ್ಪುಹಣದ ರೂಪದಲ್ಲಿ ರಹಸ್ಯವಾಗಿ ನಮ್ಮ ದೇಶದಿಂದ ಹೊರಕ್ಕೆ ಕಳ್ಳಸಾಗಾಣಿಕೆ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಒಮ್ಮೆ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ಆ ದೇಶದ ಒಬ್ಬ ಸಜ್ಜನನು ನನ್ನಲ್ಲಿ, ಎರಡು ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ತನ್ನ ದೇಶದ ಬ್ಯಾಂಕ್‌ನಲ್ಲಿ ಒಬ್ಬ ಭಾರತೀಯ ರಾಜಕಾರಣಿಯಿಂದ ಇರಿಸಲ್ಪಟ್ಟದ್ದಾಗಿ ಹೇಳಿದನು.
ಅವನು ನನ್ನಲ್ಲಿ ಕುತೂಹಲದಿಂದ, "ನಿಮ್ಮ ದೇಶದಲ್ಲಿ ಅಷ್ಟೊಂದು ಭ್ರಷ್ಟಾಚಾರವಿರುವುದನ್ನು ನೀವು ಹೇಗೆ ಸಹಿಸುತ್ತಿರುವಿರಿ?" ಎಂದು ಕೇಳಿದನು.
ಈಗ ನಾನು ಅವನಿಗೆ ಏನೆಂದು ಹೇಳಲು ಸಾಧ್ಯ! ಜನರು ಈಗ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಅವರು ಅಂತಹ ಭ್ರಷ್ಟ ಜನರನ್ನು ಕಂಬಿ ಎಣಿಸುವಂತೆ ಮಾಡುತ್ತಾರೆ ಎಂದು ನಾನು ಅವನಿಗೆ ಹೇಳಿದೆ. ಬದಲಾವಣೆಯ ಸಮಯ ಬಂದಿದೆ. ನಾವೆಲ್ಲರೂ ಇದನ್ನು ಮಾಡಬೇಕು. ಆಹಾರ ಧಾನ್ಯಗಳ ಬೆಲೆಗಳು ಪ್ರಪಂಚದ ಬೇರೆ ಎಲ್ಲೆಡೆಗಳಲ್ಲೂ ನಿಜಕ್ಕೂ ಇಳಿಯುತ್ತಿರುವಾಗ, ಅದು ಭಾರತದಲ್ಲಿ ಮಾತ್ರ ಯಾಕೆ ಏರುತ್ತಿದೆಯೆಂದು ಯಾರಿಗೂ ಅರ್ಥವಾಗುತ್ತಿಲ್ಲ! ಯಾವುದೇ ಅರ್ಥಶಾಸ್ತ್ರಜ್ಞರಿಗೂ ಇದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಭ್ರಷ್ಟಾಚಾರದಿಂದಾಗಿ.

ನಾವೊಂದು ಬೃಹತ್ತಾದ ತೈಲ ನಿಕ್ಷೇಪಗಳ ಸಂಪತ್ತಿನ ಮೇಲೆ ಕುಳಿತಿದ್ದೇವೆ ಮತ್ತು ಆದರೂ ನಾವು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬಹಳಷ್ಟು ಕಬ್ಬಿಣದ ಅದಿರಿದೆ, ಆದರೂ ನಾವು ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಅದೇ ರೀತಿಯಲ್ಲಿ ಚಿನ್ನ ಕೂಡಾ.

ಇದು ಬಹಳ ವಿವಾದಾತ್ಮಕವಾದುದು. ಈ ದೇಶಕ್ಕೆ ಅತ್ಯಗತ್ಯವಾಗಿ ಬದಲಾವಣೆಯು ಬೇಕಾಗಿದೆ ಎಂದು ನಾನು ಹೇಳುವುದು ಇದಕ್ಕೇ.

ಪ್ರಶ್ನೆ: ಗುರುದೇವ, ದೇಶದ ಸಂಸದೀಯ ವ್ಯವಸ್ಥೆಯು ಕೆಟ್ಟದಾಗಿರುವುದರಿಂದ ನಾವು ಮತದಾನ ಮಾಡಬಾರದೆಂದು ಕೆಲವು ಜನರು ಹೇಳುತ್ತಾರೆ. ಇದರ ಬಗ್ಗೆ ನಾವೇನು ಮಾಡುವುದು? ನಾವು ಮತದಾನ ಮಾಡಬಾರದೇ?

ಶ್ರೀ ಶ್ರೀ ರವಿ ಶಂಕರ್: ಮತದಾನ ಮಾಡಬಾರದೆಂದೂ, ’ನೋಟಾ’ (’ಅನ್ವಯಿಸುವುದಿಲ್ಲ’ ಎಂಬುದನ್ನು ಸೂಚಿಸುವ, ಅಂದರೆ ಯಾರಿಗೂ ಮತವಿಲ್ಲ ಎಂದು ಅರ್ಥ) ಆಯ್ಕೆಯನ್ನು ಮಾಡಬೇಕೆಂದೂ ಮಾವೋವಾದಿಗಳು ಹೇಳುತ್ತಿದ್ದಾರೆಂದು ನಾನು ಕೇಳಿದೆ. ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಮತವು ಬಹಳ ಮುಖ್ಯ.

ಭ್ರಷ್ಟರನ್ನು ಎದುರಿಸಲು ನಿಮಗೆ ಶಕ್ತಿಯಿಲ್ಲದಿರುವಾಗ, ನೀವು ಕಡಿಮೆ ಭ್ರಷ್ಟರಾಗಿರುವ ಜನರನ್ನು ಬಳಸಿ ಹೆಚ್ಚು ಭ್ರಷ್ಟರಾಗಿರುವ ಜನರನ್ನು ತೆಗೆದುಹಾಕಬೇಕು.

ಪ್ರಶ್ನೆ: ಗುರುದೇವ, ಹೆಚ್ಚಿನ ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳನ್ನು ಕೇವಲ ಒಂದು ವಾರ ಮೊದಲು ಘೋಷಿಸಿವೆ. ಇದು ಸರಿಯೇ?

ಶ್ರೀ ಶ್ರೀ ರವಿ ಶಂಕರ್: ಅಲ್ಲ, ಇದು ತಪ್ಪು. ಇಲ್ಲಿ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಬೇಕು ಮತ್ತು ಜನರಿಗೆ ಅಭ್ಯರ್ಥಿಗಳೊಂದಿಗೆ ಸಂವಾದ ಮಾಡಲು ಸಾಧ್ಯವಾಗಲು ಹಾಗೂ ಮತ ಹಾಕಲು ನಿರ್ಧರಿಸುವ ಮೊದಲು ಅವರ ಕೆಲಸವನ್ನು ನೋಡಲು, ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯ ಆರು ತಿಂಗಳು ಮೊದಲು ಪ್ರಕಟಿಸಬೇಕು.

ಪ್ರಶ್ನೆ: ಗುರುದೇವ, ಭಾರತದಲ್ಲಿ ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳಿವೆ, ಹೀಗಿರುವಾಗ ಶ್ರೀ ಶ್ರೀ ವಿಶ್ವವಿದ್ಯಾಲಯ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಹಲವು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಏಟು ತಿನ್ನುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ವರ್ಷದಲ್ಲಿ, ೨೨ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ.

ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುತ್ತಮವಾದುದನ್ನು ಇಲ್ಲಿಯೇ ಪಡೆಯಲು ಸಾಧ್ಯವಿರುವಾಗ ನಮ್ಮ ಜನರು ಜನಾಂಗೀಯ ತಾರತಮ್ಯವನ್ನು ಯಾಕೆ ಎದುರಿಸಬೇಕು?

ಹೀಗಾಗಿ ನಾವು ಈ ವಿಶ್ವವಿದ್ಯಾಲಯವನ್ನು ಮತ್ತು ಇದರ ಪ್ರಕಾರವಾಗಿ ಕೋರ್ಸಿನ ಪಠ್ಯಕ್ರಮಗಳನ್ನು ಸಂಘಟಿಸಿದೆವು. ನಾವು ನಿಜಕ್ಕೂ ಮತ್ತೊಮ್ಮೆ ನಲಂದ ಮತ್ತು ತಕ್ಷಶಿಲೆಗಳಂತಹ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಬಲ್ಲೆವು. ಅಲ್ಲಿ ಪ್ರಪಂಚದೆಲ್ಲೆಡೆಯಿಂದ ಜನರು ಬಂದು ಶಿಕ್ಷಣವನ್ನು ಪಡೆಯಬಹುದು.

ಪ್ರಶ್ನೆ: ಗುರುದೇವ, ನಾನು ದೇವರನ್ನು ಭೇಟಿಯಾಗುವಂತೆ ನೀವು ಮಾಡಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಖಂಡಿತಾ, ನಾನಿಲ್ಲಿರುವುದು ಸರಿಯಾಗಿ ಅದನ್ನೇ ಮಾಡಲು. ಮೊದಲು, ಒಳಗಿನಿಂದ ಸಂಪೂರ್ಣವಾಗಿ ತೃಪ್ತನಾಗು ಮತ್ತು ಸಂತೋಷದಿಂದಿರು. ನಂತರ ನಿನಗೆ ಬೇಕಾಗಿರುವುದೆಲ್ಲಾ ನಿನಗೆ ಸಿಗುವುದು.


ಈ ಬರಹದ ’ಸ್ಪೀಕಿಂಗ್ ಟ್ರೀ’ ಲಿಂಕ್:
http://www.speakingtree.in/public/spiritual-slideshow/seekers/self-improvement/ramayana-values-remembered-during-election-season