ಸೋಮವಾರ, ಜನವರಿ 12, 2015

ಗಾನದ ಮೂಲಕ ಜ್ಞಾನದ ವಿನಿಮಯ

೧೨ ಜನವರಿ ೨೦೧೫
ನಾಸಿಕ್, ಭಾರತ
ವೇಣುನಾದವು ಒಂದು ಐತಿಹಾಸಿಕ ಕಾರ್ಯಕ್ರಮ. ನಾಸಿಕ್ (ಮಹಾರಾಷ್ಟ್ರ) ನಗರದಲ್ಲಿ ೫೩೭೮ ಭಾರತೀಯ ಕೊಳಲು ವಾದಕರು, ಶ್ರೀ ರೋನು ಮಜುಂದಾರ್ ಅವರ ಮಾರ್ಗದರ್ಶನದಲ್ಲಿ , ಶ್ರೀ ಶ್ರೀ ರವಿ ಶಂಕರ್ ಹಾಗೂ ಪಂಡಿತ್ ಹರಿಪ್ರಸಾದ್ ಚೌರಸಿಯಾ ಅವರ ಸಮ್ಮುಖದಲ್ಲಿ ಪಾಲ್ಗೊಂಡರು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀಯವರ ಸಂದೇಶವು ಕೆಳಕಂಡಂತಿದೆ.

ನೀವೆಲ್ಲರೂ ಈಗಷ್ಟೇ ಕೇಳಿದಂತೆ, ೫೧೦೦ ವರ್ಷಗಳ ಹಿಂದೆ ಈ ನೆಲದಲ್ಲಿ ಒಂದು ದೈವಿಕ ಕೊಳಲು ನುಡಿಸಲ್ಪಟ್ಟಿತು. ಅದರ ಇಂಪಾದ ಸ್ವರಗಳು ಈಗಲೂ ದೇಶದಾದ್ಯಂತ ಪ್ರತಿಧ್ವನಿಸುತ್ತಿವೆ. ಇವತ್ತು, ನಾಸಿಕ್ ನಗರದಲ್ಲಿ ೫೩೭೮ ಕಲಾವಿದರು ಕೊಳಲನ್ನು ನುಡಿಸಲು ಒಟ್ಟುಸೇರಿದ್ದಾರೆ ಮತ್ತು ಹಾಗೆ ಮಾಡುವುದರ ಮೂಲಕ ಅವರು ಒಂದು ನಿಜವಾದ ಐತಿಹಾಸಿಕ ಹೆಗ್ಗುರುತನ್ನು ಸೃಷ್ಟಿಸಿದ್ದಾರೆ.

ನಿಮಗೆ ಗೊತ್ತಾ, ಒಂದು ಕೊಳಲನ್ನು ಸಂಗೀತ ನುಡಿಸಲು ಬಳಸಬಹುದು ಮತ್ತು ಹಾಗೆಯೇ, ಒಬ್ಬರನ್ನು ಹೊಡೆದು ಓಡಿಸಲು ಕೂಡಾ ಬಳಸಬಹುದು (ನಗು). ನಮ್ಮ ಜೀವನ, ನಮ್ಮ ಸ್ವಂತ ಶರೀರ ಒಂದು ಕೊಳಲಿದ್ದಂತೆ. ನಾವು ಎಲ್ಲಾ ನಕಾರಾತ್ಮಕತೆಗಳನ್ನು, ರಾಗದ್ವೇಷಗಳನ್ನು  ಬಿಟ್ಟು ಒಳಗಿನಿಂದ ಟೊಳ್ಳು ಹಾಗೂ ಖಾಲಿಯಾಗುವಾಗ ನಮ್ಮೊಳಗೆ ಚೇತನವು ಉದಯಿಸುತ್ತದೆ ಮತ್ತು ಅರಳುತ್ತದೆ. ಮುಂದೆಂದೂ ನಮಗೆ ಒಂದು ಕೋಲನ್ನು ತೋರಿಸಬೇಕಾಗಿ ಬರುವುದಿಲ್ಲ.  (ಅಂದರೆ, ಚೇತನದ ಉದಯದೊಂದಿಗೆ ಒಬ್ಬನು ಸಹಜವಾಗಿ ಧರ್ಮದ ಪಥದಲ್ಲಿ ನಡೆಯುತ್ತಾನೆ ಮತ್ತು ಅವನನ್ನು ಶಿಕ್ಷಿಸಬೇಕಾಗಿ ಬರುವುದಿಲ್ಲ.)

ಕೊಳಲಿನೊಳಗೆ ಸ್ವಲ್ಪ ಮಣ್ಣು ಅಥವಾ ಕೊಳೆ ಸಿಕ್ಕಿಹಾಕಿಕೊಂಡಿದ್ದರೆ, ಆಗ ಅದು ಒಂದು ಇಂಪಾದ ದನಿಯನ್ನು ಉತ್ಪತ್ತಿ ಮಾಡುವುದಿಲ್ಲ. ಇಂಪಾದ ಸ್ವರಗಳನ್ನು ಉತ್ಪತ್ತಿ ಮಾಡಬೇಕಾದರೆ ಒಂದು ಕೊಳಲು, ಹೊರಗಿನಿಂದ ಸ್ವಚ್ಛವಾಗಿಯೂ ಹೊಳಪಾಗಿಯೂ ಇರುವಂತೆಯೇ ಒಳಗಿನಿಂದಲೂ ಸ್ವಚ್ಛವಾಗಿ, ಶುದ್ಧವಾಗಿ ಇರಬೇಕು. ಸಾಮರಸ್ಯವನ್ನು ಉತ್ಪತ್ತಿ ಮಾಡಲು ಸಾಧ್ಯವಾಗಬೇಕಾದರೆ ಒಂದು ಕೊಳಲು ಟೊಳ್ಳು ಮತ್ತು ಖಾಲಿಯಾಗಿರಬೇಕು.

ನಿಮಗೆ ಗೊತ್ತಾ, ಸಂಗೀತವು ನಮ್ಮ ಜೀವನದ ಒಂದು ಬಹಳ ಪ್ರಮುಖವಾದ ಅಂಶವಾಗಿದೆ. ನಾವು ಮಾತನಾಡಲು ಪ್ರಾರಂಭಿಸುವುದಕ್ಕೆ ಮೊದಲು ನಾವು ಹಾಡಲು ಪ್ರಾರಂಭಿಸುತ್ತೇವೆ. ಚಿಕ್ಕ ಮಕ್ಕಳು ಒಂದು ಭಾಷೆಯನ್ನು ಬಹಳ ತಡವಾಗಿ ಕಲಿಯುತ್ತಾರೆ, ಆದರೆ ಸಂಗೀತದ ಶಬ್ದಗಳನ್ನು ಅವರು ತಮ್ಮ ಜೀವನದಲ್ಲಿ ಆರಂಭದಲ್ಲೇ ಮಾಡಲು ತೊಡಗುತ್ತಾರೆ ಮತ್ತು ಆ ಶಬ್ದಗಳು ಸಂಗೀತಮಯವಾಗಿರುತ್ತವೆ, ಯಾಕೆಂದರೆ ಅಲ್ಲಿ ಸಂಪೂರ್ಣವಾದ ಸಾಮರಸ್ಯವಿರುತ್ತದೆ - ಒಳಗೂ ಸಾಮರಸ್ಯ ಮತ್ತು ನಮ್ಮ ಸುತ್ತಲೂ ಸಾಮರಸ್ಯ.

ಇವತ್ತು, ಜಗತ್ತು ಖಿನ್ನತೆ, ಭಯೋತ್ಪಾದನೆ, ಭಯ ಮತ್ತು ಅನಿಶ್ಚಿತತೆಗಳ ಮೂಲಕ ಹಾದುಹೋಗುತ್ತಿರುವಾಗ, ನಾವು ಎಚ್ಚೆತ್ತುಕೊಂಡು, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಆಳವಾಗಿ ಸೇರಿಕೊಂಡಿರುವ ಮಾನವೀಯತೆಯನ್ನು ಜಾಗೃತಗೊಳಿಸುವ ಸಮಯ ಬಂದಿದೆ. ಸಂಗೀತವನ್ನು ಕಲಿಯಲು ಹಾಗೂ ಸಮಾಜ ಸೇವೆ ಮಾಡುತ್ತಾ ಸಮಯ ಕಳೆಯಲು ಹಾಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಜ್ಞಾನವನ್ನು ಮುಂದುವರಿಸುತ್ತಿರುವಂತೆಯೇ ಒಂದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ನಾವು ನಮ್ಮ ಮಕ್ಕಳಿಗೆ ಪ್ರೋತ್ಸಾಹ ಮಾಡುವ ಸಮಯ ಬಂದಿದೆ.

ಜಗತ್ತಿನಾದ್ಯಂತ ನಾವಿದನ್ನು ನಮ್ಮ ಕಾರ್ಯಕ್ರಮಗಳ ಮೂಲಕ ಮಾಡುತ್ತಾ ಇದ್ದೇವೆ. ದೇಶದ ಪುರಾತನ ಸಂಸ್ಕೃತಿ, ಶಾಸ್ತ್ರೀಯ ಮತ್ತು ಜಾನಪದ ಸಂಗೀತಗಳ ಸಂರಕ್ಷಣೆ ಹಾಗೂ ಪ್ರಚಾರಗಳನ್ನು ನಾವು ಯಾವತ್ತೂ ಪ್ರೋತ್ಸಾಹಿಸಿದ್ದೇವೆ. ಇವತ್ತು ಇದು ನಮ್ಮಲ್ಲಾಗುತ್ತಿರುವ ೧೧ನೆಯ ದೊಡ್ಡ ಕಾರ್ಯಕ್ರಮ. ಜಗತ್ತಿನಲ್ಲಿರುವ ಎಲ್ಲಾ ಜನರಿಗೆ ಶಾಂತಿ ಮತ್ತು ಸಂತೋಷಗಳನ್ನು ತರಲು ಇದರಲ್ಲಿ ೫೩೭೮ ವೇಣುವಾದಕರು ಒಟ್ಟಾಗಿ ಭಾಗವಹಿಸುತ್ತಿದ್ದಾರೆ.

ಇವತ್ತು ಭಯೋತ್ಪಾದನೆಯು ನಮ್ಮ ದೇಶದಲ್ಲಿ ವ್ಯಾಪಕವಾಗಿದೆ. ಹಾಗೆಯೇ ಇಡೀ ಜಗತ್ತಿನಲ್ಲಿ ಕೂಡಾ. ಇಂತಹ ಕಷ್ಟಕಾಲದಲ್ಲಿ ಹೆಚ್ಚಾಗಿ ಜನರು, "ಗುರುದೇವ, ಜಗತ್ತಿನಲ್ಲಿ ಅಷ್ಟೊಂದು ಒತ್ತಡವಿರುವಾಗ, ಅಷ್ಟೊಂದು ಜನರು ಒಂದು ಸೇರಿ ಕೊಳಲು ನುಡಿಸುವಂತೆ ನೀವು ಹೇಳಿರುವುದು ಯಾಕೆ?" ಎಂದು ಕೇಳುತ್ತಾರೆ.

ಸಂಸ್ಕೃತದಲ್ಲಿ ಒಂದು ಪ್ರಾಚೀನ ನಾಣ್ನುಡಿಯಿದೆ, "ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್; ವ್ಯಸನೇನ ತು ಮೂರ್ಖನಾಂ ನಿದ್ರಯಾ ಕಲಹೇನ ವಾ" (ಹಿತೋಪದೇಶದಿಂದ).

ಇದರ ಅರ್ಥವೇನೆಂದರೆ, ಒಬ್ಬ ಬುದ್ಧಿವಂತ ವ್ಯಕ್ತಿಯ ಚಿಹ್ನೆಯೆಂದರೆ, ಅವನು ತನ್ನ ಸಮಯವನ್ನು ಕಲೆ, ಸಾಹಿತ್ಯ, ಸಂಗೀತಗಳನ್ನು ಕಲಿಯುತ್ತಾ ಹಾಗೂ ಅವುಗಳನ್ನು ಕರಗತ ಮಾಡಿಕೊಳ್ಳುತ್ತಾ ಮತ್ತು ಜ್ಞಾನದ ಚರ್ಚೆ ಮಾಡುತ್ತಾ ಕಳೆಯುತ್ತಾನೆ. ನಮ್ಮ ದೇಶದಲ್ಲಿ ಹಲವಾರು ಯುಗಗಳಿಂದ ಇದ್ದ ಸಂಪ್ರದಾಯ ಇದಾಗಿತ್ತು. ನಮ್ಮ ದೇಶದಲ್ಲಿ ನಾವು ಜೀವನದ ಬಗ್ಗೆ ಯಾವತ್ತೂ ಒಂದು ಬಹಳ ಸಮಗ್ರವಾದ ಹಾಗೂ ಸಂಪೂರ್ಣವಾದ ದೃಷ್ಟಿಯನ್ನು ಹೊಂದಿದ್ದೆವು. ಪ್ರತ್ಯೇಕ ಮತ್ತು ಸಂಬಂಧವಿಲ್ಲದ ವಿಭಾಗಗಳು ಅಥವಾ ಹಂತಗಳಾಗಿ ವಿಭಜನೆಯಾದ ದೃಷ್ಟಿಯಿಂದ ಅದನ್ನು ನೋಡಿಲ್ಲ. ನಾವು ಯಾವತ್ತೂ ಗಾನ, ಜ್ಞಾನ ಮತ್ತು ಧ್ಯಾನಗಳನ್ನು ಸೇರಿಸಿದ್ದೇವೆ. ನಿಜವಾಗಿ ಭಾರತೀಯನಾಗುವುದೆಂಬುದರ ಅರ್ಥ ಇದುವೇ.
ಇವತ್ತು, ಶಾಂತಿ ಮತ್ತು ಸಮೃದ್ಧಿಗಳ ಒಂದು ಸಂದೇಶವನ್ನು ಜಗತ್ತು ನಿರೀಕ್ಷಿಸುವುದು ಮತ್ತು ಹುಡುಕುವುದು ಭಾರತದಿಂದ. ಪ್ರೇಮ ಮತ್ತು ಶಾಂತಿಗಳ ಈ ಅನನ್ಯವಾದ ಸಂದೇಶವನ್ನು ಜಗತ್ತಿಗೆ ತಲುಪಿಸಲು ಭಾರತೀಯರಿಗೆ ಮಾತ್ರ ಸಾಧ್ಯ.
ಇವತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನವಾಗಿದೆ. ಮಹಾನ್ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಮಹಾಋಷಿ ಮಹೇಶ್ ಯೋಗಿ ಅವರ ಜನ್ಮ ದಿನ ಕೂಡಾ ಇವತ್ತಾಗಿದೆ. ಅವರು ಧ್ಯಾನವನ್ನು ಜಗತ್ತಿನ ಎಲ್ಲಾ ಭಾಗಗಳಲ್ಲಿ ಹರಡಲು ಮತ್ತು ಜನಪ್ರಿಯಗೊಳಿಸಲು ಮಹತ್ತರವಾದ ಪ್ರಯತ್ನಗಳನ್ನು ಮಾಡಿದರು.

ಭಾರತೀಯ ಆಧ್ಯಾತ್ಮ ಮತ್ತು ಭಾರತೀಯ ಸಂಸ್ಕೃತಿಗಳನ್ನು ಜಗತ್ತಿನ ಎಲ್ಲಾ ಮೂಲೆಯಲ್ಲೂ ಪ್ರಚಾರ ಮಾಡಲು ಹಾಗೂ ಜನಪ್ರಿಯಗೊಳಿಸಲು ಸಹಾಯ ಮಾಡಿದ, ಬಹಳ ಗೌರವಾನ್ವಿತರಾದ ಹಾಗೂ ಮಹಾನ್ ವ್ಯಕ್ತಿಗಳಾಗಿದ್ದಾರೆ ಅವರಿಬ್ಬರೂ.
ಅವರ ಗೌರವಾರ್ಥವಾಗಿ ಹಾಗೂ ಅವರು ಮಾಡಿದ ಎಲ್ಲಾ ಕಾರ್ಯಕ್ಕೂ ನಮ್ಮ ಗೌರವವನ್ನು ಅವರಿಗೆ ಸಲ್ಲಿಸುವ ಸಲುವಾಗಿ ಇವತ್ತು ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ನಾಸಿಕ್ ನಗರವು ಕುಂಭ ನಗರಿ ಎಂದು ಕರೆಯಲ್ಪಡುತ್ತದೆ (ನಾಸಿಕ್ ನಗರದಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಪವಿತ್ರವಾದ ಮಹಾ ಕುಂಭ ಮೇಳ ನಡೆಯುವುದರಿಂದ). ಇಂದಿನಿಂದ ಇನ್ನು ಎಂಟು ತಿಂಗಳುಗಳ ನಂತರ ನಾವು ಕುಂಭ ರಾಶಿಯನ್ನು ಪ್ರವೇಶಿಸಲಿದ್ದೇವೆ.

ನಿಮಗೆ ಗೊತ್ತಾ, ನಾಸಿಕ್ ನಗರವು ಮೂರು ಪವಿತ್ರ ನದಿಗಳ; ಗೋದಾವರಿ, ಕಪಿಲಾ ಮತ್ತು ನಸರ್ದಿ ನದಿಗಳ ಸಂಗಮ ಸ್ಥಾನವೂ ಆಗಿದೆ. ಆದರೆ ಇವತ್ತು ಈ ಎಲ್ಲಾ ಮೂರು ನದಿಗಳು ಬಹಳಷ್ಟು ಮಾಲಿನ್ಯದಿಂದ ಬಳಲುತ್ತಿವೆ. ವಾಸ್ತವವಾಗಿ, ನಸರ್ದಿ ನದಿಯು ಒಂದು ನದಿಗಿಂತ ಹೆಚ್ಚಾಗಿ ಒಂದು ಚರಂಡಿಯಂತೆ ಕಾಣಿಸುತ್ತಿದೆ. ನಾವು ಈ ನದಿಗಳನ್ನು ಮತ್ತೊಮ್ಮೆ ಸ್ವಚ್ಛವಾಗಿಯೂ, ಶುದ್ಧವಾಗಿಯೂ ಮಾಡಬೇಕಾಗಿದೆ.

ನಗರದ ಎಲ್ಲಾ ಚರಂಡಿಗಳೂ ತಮ್ಮ ತ್ಯಾಜ್ಯಗಳನ್ನು ಈ ನದಿಗಳಿಗೆ ಬಿಡುತ್ತವೆ. ಋಷಿಗಳು ಮತ್ತು ಸಂತರು ಈ ಪವಿತ್ರ ನಗರಿಗೆ ಬಂದು ಇಂತಹ ನೀರಿನಲಿ ಮುಳುಗೇಳಲು ಬಯಸಬೇಕೆಂದು ನಾವು ನಿರೀಕ್ಷಿಸಲು ಹೇಗೆ ಸಾಧ್ಯ?

ಸ್ವಲ್ಪ ಹೊತ್ತು ಮುಂಚೆಯಷ್ಟೇ ಮಾಧ್ಯಮದವರು ನನ್ನನ್ನು ಭೇಟಿಯಾಗಿ ಈ ರೀತಿ ಕೇಳಿದರು, "ಗುರುದೇವ, ಇವತ್ತು ಈ ನದಿಗಳಿಗೆ ಬಂದು ಮುಳುಗೇಳಲು ನೀವು ಬಯಸುವಿರಾ?"

ನಾನು ಅವರಿಗಂದೆ, "ನದಿಗಳು ಎಷ್ಟೊಂದು ಕೊಳಕು ಮತ್ತು ಕಲುಷಿತಗೊಂಡಿದೆಯೆಂದರೆ ಅವುಗಳ ನೀರಿನಲ್ಲಿ ಕಾಲನ್ನೂರಲೂ ಅವುಗಳು ಯೋಗ್ಯವಲ್ಲ" ಎಂದು. ಈ ನದಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಮತ್ತೆ ಶುದ್ಧೀಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನದಿಗಳನ್ನು ಸ್ವಚ್ಛಗೊಳಿಸುವ ಈ ಸಂಕಲ್ಪವನ್ನು ನಾವೆಲ್ಲರೂ ತೆಗೆದುಕೊಳ್ಳೋಣ.

ಇವತ್ತಿನ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನಮ್ಮ ಸ್ವಯಂಸೇವಕರನ್ನು ನಾನು ಅಭಿನಂದಿಸಲು ಇಚ್ಛಿಸುತ್ತೇನೆ. ಜಲಮಾಲಿನ್ಯವನ್ನು ತೊಲಗಿಸುವ ಮತ್ತು ನದಿಗಳನ್ನು ಪುನಶ್ಚೇತನಗೊಳಿಸುವ ಸೇವಾ ಯೋಜನೆಗಳಲ್ಲಿ ಅವರು ನಿಜಕ್ಕೂ ಅಷ್ಟೊಂದು ಮಹತ್ತರವಾದ ಕೆಲಸವನ್ನು ಮಾಡುತ್ತಿದ್ದಾರೆ. ಮರಾಠವಾಡ ಮತ್ತು ವಿದರ್ಭ ಪ್ರದೇಶಗಳಲ್ಲಿ ಅವರು ಐದು ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಈಗ ನಾಸಿಕ್ ನಗರದ ಸರದಿ ಬಂದಿದೆ. ಮತ್ತೊಮ್ಮೆ ನಗರದ ಮೂರು ನದಿಗಳನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸಬೇಕಾಗಿದೆ, ಮತ್ತು ನಾವೆಲ್ಲರೂ ಈ ಯೋಜನೆಯಲ್ಲಿ ಸೇರಿಕೊಳ್ಳಬೇಕು.

ಈ ಯೋಜನೆಯನ್ನು ಒಂದು ತುರ್ತು ಆಧಾರದ ಮೇಲೆ ಬೆಂಬಲಿಸಿ ಸಹಾಯ ಮಾಡಬೇಕೆಂದು ಕೂಡಾ ನಾನು ಸ್ಥಳೀಯ ಆಡಳಿತ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ. ಈ ತೊಡಗುವಿಕೆಗಾಗಿ ಕೆಲಸ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಕೈಜೋಡಿಸಬೇಕಾಗುತ್ತದೆ. ನಮ್ಮ ಮುಂದೆ ಎಂಟು ತಿಂಗಳುಗಳಿವೆ. ಖಂಡಿತವಾಗಿಯೂ ನಮಗೆ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಿದೆ. ನಮ್ಮ ಬಾಹ್ಯಾಕಾಶ ಉಪಗ್ರಹಗಳನ್ನುಪಯೋಗಿಸಿ ಮಂಗಳ ಗ್ರಹವನ್ನು ತಲಪಲು ನಮಗೆ ಸಾಧ್ಯವಾಗಿರುವಾಗ, ಈ ಯೋಜನೆಯನ್ನು ಕೂಡಾ ಯಶಸ್ವಿಯಾಗಿಸುವ ಸಾಮರ್ಥ್ಯವು ನಮ್ಮಲ್ಲಿ ಖಂಡಿತಾ ಇದೆ.

ಸಂತೋಷ ಮತ್ತು ಆಚರಣೆಯನ್ನು ಮತ್ತೊಮ್ಮೆ ಈ ನಗರಕ್ಕೆ ತರಲು ಹಾಗೂ ಈ ಮೂರು ನದಿಗಳನ್ನು ಪುನಶ್ಚೇತನಗೊಳಿಸಲು ಎಂಟು ತಿಂಗಳುಗಳು ಸಾಕು. ಇವತ್ತು ನಮ್ಮೊಂದಿಗೆ ಇಲ್ಲಿರುವ ನಾಸಿಕ್ ನಗರದ ಪುರಸಭಾಧ್ಯಕ್ಷರು ಹಾಗೂ ರಾಜ್ಯ ವಿಧಾನಸಭೆ ಮತ್ತು ಕೇಂದ್ರ ಸಂಸತ್ತಿನ ಸದಸ್ಯರಲ್ಲಿ ಕೂಡಾ  ಈ ವಿನಂತಿಯನ್ನು ಮಾಡಲು ನಾನು ಇಚ್ಛಿಸುತ್ತೇನೆ. ಈ ಯೋಜನೆಯಲ್ಲಿ ಮುಂದಾಳುಗಳಾಗಲು ಮುಂದೆ ಬಂದು, ಈ ಯೋಜನೆಯ ಯಶಸ್ಸಿಗೆ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಬೇಕೆಂದು ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ.      

ಇದನ್ನು ಕೇವಲ, ನಿಮಗಾಗಿಯಿರುವ ಒಂದು ಪವಿತ್ರವಾದ ತಪಸ್ಸೆಂದು ಯೋಚಿಸಿ. ಇದಕ್ಕಾಗಿ ನಿಮಗೆ ನಾಸಿಕದ ಎಲ್ಲಾ ನಾಗರಿಕರ ಬೆಂಬಲವಿದೆ. ಈ ತೊಡಗುವಿಕೆಗಾಗಿ ಪ್ರತಿಯೊಬ್ಬರೂ ಪ್ರತಿ ಭಾನುವಾರದಂದು ಮೂರರಿಂದ ನಾಲ್ಕು ಗಂಟೆಗಳನ್ನು ಬಿಡುವಾಗಿರಿಸಬೇಕು. ಕಸವನ್ನು ನದಿಯೊಳಕ್ಕೆ ಎಸೆಯುವುದನ್ನು ತಡೆಯಿರಿ. ನದಿದಡಗಳನ್ನು ಹೂದೋಟಗಳಂತೆ ಸ್ವಚ್ಛವಾಗಿಯೂ ಸುಂದರವಾಗಿಯೂ ಮಾಡೋಣ. ನದಿಗಳ ನೀರಿನೊಂದಿಗೆ ಬಂದು ಸೇರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ನಗರದ ಜನರಿಗೆ ಸಾಧ್ಯವಿಲ್ಲ. ಇದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಇದಕ್ಕೆ ಅತೀ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ತುರ್ತು ಆಧಾರದ ಮೇಲೆ ಈ ಸಮಸ್ಯೆಯ ಮೇಲೆ ಕಾರ್ಯನಿರ್ವಹಿಸಬೇಕೆಂದು ಮತ್ತೊಮ್ಮೆ ನಾನು ಸ್ಥಳೀಯ ಆಡಳಿತ ಮಂಡಳಿಗಳಲ್ಲಿ ನಿವೇದಿಸುತ್ತೇನೆ. ಇಲ್ಲದಿದ್ದರೆ ನಾವೆಲ್ಲರೂ ಇದಕ್ಕಾಗಿ ಒಂದು ಶಾಂತಿಯುತ ಪ್ರತಿಭಟನಾ ನಡಿಗೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಋಷಿಗಳು ಮತ್ತು ಸಂತರು ಮಹಾಕುಂಭಕ್ಕೆ ಇಲ್ಲಿಗೆ ಬಂದು ಗೋದಾವರಿ ನದಿಯ ನೀರಿನಲ್ಲಿ ಮುಳುಗಿ ಸ್ನಾನ ಮಾಡಿ ಇದನ್ನು ಮತ್ತೊಮ್ಮೆ ಪವಿತ್ರವೆಂದು ಪರಿಗಣಿಸುವುದಕ್ಕಾಗಿ, ಗೋದಾವರಿ ನದಿಯ  ನೀರು ಮತ್ತೊಮ್ಮೆ ಸ್ವಚ್ಛವಾಗಿಯೂ ಶುದ್ಧವಾಗಿಯೂ ಆಗಬೇಕಾಗಿದೆ. ಗೋದಾವರಿ ನದಿಯು ದಕ್ಷಿಣದ ಗಂಗಾನದಿಯೆಂದು ಕರೆಯಲ್ಪಡುತ್ತದೆ. ಹೀಗಾಗಿ ದಕ್ಷಿಣದ ಗಂಗೆಯ ನೀರನ್ನು ಶುದ್ಧೀಕರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  

ಒಂದು ಪ್ರಾಚೀನವಾದ ಮಾತಿದೆ:

"ಅನಾಹತೆ ಪಾತ್ರಕರ್ಣೆ, ಅಭಗ್ನಶಬ್ದೆ ಸರಿದ್ರುತೆ I
ಶಬ್ದಬ್ರಹ್ಮಾಣಿ ನಿಷ್ಣಾತಃ ಪರಂ ಬ್ರಹ್ಮಾದಿಗಚ್ಛತಿ II"

ಇದರರ್ಥವೇನೆಂದರೆ, ನಾವು ಬ್ರಹ್ಮನ (ಚೇತನದ)ಶಬ್ದದಲ್ಲಿ ನಮ್ಮನ್ನು ಮುಳುಗಿಸಿ, ಅದರ ಮೇಲೆ ಆಳವಾಗಿ ಧ್ಯಾನ ಮಾಡಿದಾಗ, ತಕ್ಷಣವೇ ನಾವು ದೇವರೊಂದಿಗೆ, ಪರ-ಬ್ರಹ್ಮನೊಂದಿಗೆ (ಒಂದು ಚೇತನ)ಲೀನವಾಗುವುದರ ಕಡೆಗಿನ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಇದು ಮನಸ್ಸನ್ನು ಶಾಂತಗೊಳಿಸಲು ಹಾಗೂ ಅದನ್ನು ಚಿಂತೆ ಮತ್ತು ಬಂಧನಗಳಿಂದ ಮುಕ್ತಗೊಳಿಸಲು ಸಹಾಯ ಮಾಡುವ ಒಂದು ಅನನ್ಯವಾದ ತಂತ್ರವಾಗಿದೆ. ಒಂದು ಒತ್ತಡ-ಮುಕ್ತ ಜೀವನ, ರೋಗ-ಮುಕ್ತ ಶರೀರ, ಪೂರ್ವಾಗ್ರಹ-ಮುಕ್ತ ಹಾಗೂ ತೀಕ್ಷ್ಣ ಬುದ್ಧಿಶಕ್ತಿ, ಮತ್ತು ಒಂದು ಆನಂದದಾಯಕ ಮನಸ್ಸು - ಇದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕಾಗಿದೆ. ಇದನ್ನು ಸಾಧಿಸಲು ಹಲವಾರು ಮಾರ್ಗಗಳಿವೆ. ಇವುಗಳಲ್ಲಿ ಸಂಗೀತವು ಒಂದು ಅದ್ಭುತ ಮಾರ್ಗವಾಗಿದೆ. ನಾವು ಗಾನ, ಜ್ಞಾನ ಮತ್ತು ಧ್ಯಾನ ಇವು ಮೂರನ್ನೂ ಜೊತೆಯಾಗಿ ಜೀವನದಲ್ಲಿ ನಮ್ಮೊಂದಿಗೆ ತೆಗೆದುಕೊಳ್ಳಬೇಕು. ಮತ್ತು ನಾನು ಮೊದಲೇ ಹೇಳಿದಂತೆ, ನಾವೆಲ್ಲರೂ ಹೃದಯಪೂರ್ವಕವಾಗಿ ಸೇವೆಗಾಗಿ ಕೊಡುಗೆ ನೀಡಬೇಕು. ನೀವೆಲ್ಲರೂ ಅದನ್ನು ಮಾಡುವಿರಾ?

ನಮ್ಮ ಪ್ರಧಾನ ಮಂತ್ರಿಯವರು ಸ್ವಚ್ಛ ಹಾಗೂ ಆರೋಗ್ಯಕರ ಭಾರತಕ್ಕಾಗಿ ಸ್ವಚ್ಛ ಭಾರತ ಅಭಿಯಾನವೆಂದು ಕರೆಯಲ್ಪಡುವ ಒಂದು ಬೃಹತ್ ಪ್ರಚಾರವನ್ನು ಆರಂಭಿಸಿದ್ದಾರೆ. ನಮ್ಮ ದೇಶವನ್ನು ಸ್ವಚ್ಛವಾಗಿಸಲು ಅವರೊಂದು ಬಲವಾದ ದನಿಯನ್ನೆತ್ತಿದ್ದಾರೆ. ನಿಮ್ಮಲ್ಲಿ ಹಲವರು ಈಗಾಗಲೇ ಈ ಯೋಜನೆಗಳಲ್ಲಿ ತೊಡಗಿರುವಿರಿ, ಆದರೆ ಈಗ ನಿಮಗೆ ಇದಕ್ಕಾಗಿ ಬಲವಾದ ಬೆಂಬಲವಿದೆ. ಈ ಪ್ರಚಾರವನ್ನು ಬೆಂಬಲಿಸಲು ಹಾಗೂ ಚುರುಕುಗೊಳಿಸಲು ನಾವೆಲ್ಲರೂ ಸಹಾಯ ಮಾಡಬೇಕು.
ದೇಶದ ನೀರು ಸರಬರಾಜಿನ ಮೂಲಗಳಾದ ನದಿಗಳು ಸ್ವಚ್ಛ ಹಾಗೂ ಶುದ್ಧವಾಗುವಾಗ ನಮಗೆ ಹಲವಾರು ಲಾಭಗಳುಂಟಾಗುತ್ತವೆ. ಅದು ಹಲವಾರು ರೋಗಗಳನ್ನು ಕೊನೆಗಾಣಿಸುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ, ಅದೇ ಕಲುಷಿತ ಮತ್ತು ಕೊಳೆಯಾದ ನೀರನ್ನು ಬೆಳೆಗಳಿಗೆ ಹಾಕಲು ಮತ್ತು ನೀರಾವರಿಗಾಗಿ ಉಪಯೋಗಿಸಲಾಗುತ್ತದೆ. ಇದು ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಅದನ್ನು ಅಶುದ್ಧಗೊಳಿಸುತ್ತದೆ. ಈ ಆಹಾರ ಧಾನ್ಯಗಳನ್ನು ನಾವು ಸೇವಿಸಿದಾಗ, ಅದು ನಮ್ಮ ಮನಸ್ಸು, ನಮ್ಮ ಯೋಚನೆಗಳು ಮತ್ತು ನಮ್ಮ ವರ್ತನೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ, "ಜೈಸಾ ಅನ್ನ್ ವೈಸಾ ಮನ್" (ಅಂದರೆ ಅನ್ನ ಹೇಗಿದೆಯೋ ಅದರಂತೆ ನಿಮ್ಮ ಮನಸ್ಸಿನ ಸ್ಥಿತಿ) ಎಂದು ಹೇಳಲಾಗಿರುವುದು. ಆದ್ದರಿಂದ ನಿಮ್ಮ ಯೋಚನೆಗಳು ಶುದ್ಧವಾಗಿರಬೇಕಾದರೆ, ನಿಮ್ಮ ಆಹಾರ ಕೂಡಾ ಶುದ್ಧವಾಗಿ ಹಾಗೂ ಆರೋಗ್ಯಕರವಾಗಿ ಇರಬೇಕು. ರಾಸಾಯನಿಕ-ಮುಕ್ತ ಕೃಷಿ ತಂತ್ರಗಳು, ನಮ್ಮ ವಾಯು ಮತ್ತು ಜಲ ಸಂಪನ್ಮೂಲಗಳನ್ನು ಸ್ವಚ್ಛ ಹಾಗೂ ಶುದ್ಧೀಕರಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತವೆ. ಈ ದಿನಗಳಲ್ಲಿ ನಾವು ಪ್ಲಾಸ್ಟಿಕ್‌ಗಳನ್ನು ತೆರೆದ ಜಾಗದಲ್ಲಿ ಸುಡುತ್ತೇವೆ ಮತ್ತು ಗಾಳಿಯು ಕಲುಷಿತಗೊಳ್ಳುತ್ತದೆ. ನಾವು ಪ್ಲಾಸ್ಟಿಕ್ಕನ್ನು ಸುಡಬಾರದು. ಒಂದು ತುಂಡು ಪ್ಲಾಸ್ಟಿಕ್ ಸುಡುವುದರಿಂದ ಉತ್ಪತ್ತಿಯಾಗುವ ವಿಷವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ಪ್ರಚೋದಿಸಲು ಸಾಕು. ಕೇವಲ ಒಂದು ತುಂಡು ಪ್ಲಾಸ್ಟಿಕ್ಕನ್ನು ಸುಡುವುದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಡಯಾಕ್ಸಿನ್‌ಗಳ ಪರಿಣಾಮ ಅಷ್ಟೊಂದಿರುತ್ತದೆ. ನಮ್ಮ ನಗರಗಳನ್ನು ಮತ್ತೊಮ್ಮೆ ಸ್ವಚ್ಛ ಹಾಗೂ ಹಸಿರಾಗಿಸಲು ನಾವೆಲ್ಲರೂ ಮುಂದೆ ಬರಬೇಕು. ನೀವೆಲ್ಲರೂ ಅದನ್ನು ಮಾಡುವಿರಾ?

ಇದೇ ವಿಷಯವನ್ನು ನಾನು ಶ್ರೀ. ಹನುಮಂತ್ ಗಾಯಕ್‌ವಾಡ್ ಅವರೊಂದಿಗೆ ಕೂಡಾ ಚರ್ಚಿಸುತ್ತಿದ್ದೆ. ಈ ಉದ್ದೇಶಕ್ಕಾಗಿ ಅವರು ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ತೊಡಗುವಿಕೆಗೆ ನಗರದ ಮೇಯರ್, ರಾಜ್ಯದ ವಿಧಾನಸಭೆಯ ಸದಸ್ಯರು, ವಿವಿಧ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮುಖಂಡರು ಮತ್ತು ನಗರದ ಜನರನ್ನೊಳಗೊಂಡಂತೆ ಎಲ್ಲಾ ಜನರ ಬೆಂಬಲ ದೊರೆಯಲಿದೆಯೆಂದು ನಾನು ಅವರಿಗೆ ಹೇಳಿದೆ. ಇಲ್ಲಿ ಉಪಸ್ಥಿತರಿರುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮುಖಂಡರು ಕೂಡಾ ಜನರಿಗೆ ಆಶೀರ್ವದಿಸಿ, ಈ ಕಾರ್ಯಕ್ಕೆ ಬೆಂಬಲ ನೀಡುವರೆಂದು ನಾನು ಬಲವಾಗಿ ನಂಬುತ್ತೇನೆ. ಈ ವರ್ಷದ ಮಹಾ ಕುಂಭದ ಮೊದಲು ನಾವು ಈ ನಗರವನ್ನು ಹೊಳೆಯುವಂತೆ ಸ್ವಚ್ಛಗೊಳಿಸಬೇಕು. 

ಗುರುವಾರ, ಜನವರಿ 8, 2015

ವಿಶ್ವಾಸವು ಅಖಂಡವಾಗಿರಲಿ

೦೮/೦೧/೨೦೧೫
ಬೆಂಗಳೂರು, ಭಾರತ

"ನಾನು ಯಾರು?" - ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಿಮ್ಮಲ್ಲಿಯೇ ಕೇಳುತ್ತಾ ಇರಿ. ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ಇದುವೇ ದಾರಿ ಮಾಡಿಕೊಡುತ್ತದೆ. ನೀವು ನಿಮ್ಮ ಬಗ್ಗೆ ಏನನ್ನು ಯೋಚಿಸುವಿರೋ ಅಥವಾ ನೀವೇನೆಂದು ನಿಮಗನ್ನಿಸುವುದೋ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟುಬಿಡಿ. ಈ ಪ್ರಶ್ನೆಗೆ ಶಬ್ದಗಳ ಮೂಲಕ ಉತ್ತರಿಸಲು ಸಾಧ್ಯವಿಲ್ಲ. ಅದನ್ನು ಶಬ್ದಗಳ ಮೂಲಕ ಉತ್ತರಿಸುವವನಿಗೆ ನಿಜಕ್ಕೂ ಅದು ತಿಳಿಯದು. ಈ ಪ್ರಶ್ನೆಯು ಬಹಳ ಮುಖ್ಯವಾದುದು. ಹೀಗಾಗಿ ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಿಮ್ಮಲ್ಲೇ ಕೇಳುತ್ತಾ ಇರಿ - ಅದು ನೂರು ಅಥವಾ ಸಾವಿರ ಬಾರಿ ಆಗಿರಬಹುದು; ಮತ್ತೆ ಮತ್ತೆ.
ನಂತರ ನಿಮ್ಮಲ್ಲೇ ಕೇಳಿಕೊಳ್ಳಿ, "ನಾನು ಯಾಕೆ?" ನಾನು ಹೇಳುವುದೇನೆಂದರೆ, ನೀವು ನಿಜಕ್ಕೂ ಯಾರೆಂಬುದು ನಿಮಗೆ ಮೊದಲು ತಿಳಿದಿರಬೇಕು. ನೀವು ಯಾಕಿರುವಿರಿ ಮತ್ತು ಹಾಗೆಯೇ ನೀವು ಯಾಕಿಲ್ಲ ಎಂಬುದನ್ನು ಆಮೇಲೆ ಯೋಚಿಸಿ. ಯಾರೊಬ್ಬರಿಗಾದರೂ ನೀವು ಅಸ್ತಿತ್ವದಲ್ಲಿ ಇಲ್ಲವೇ ಎಂದು ಯೋಚಿಸಿ.

ನೀವಿಲ್ಲಿರುವುದು ತೊಂದರೆಯನ್ನು ಅನುಭವಿಸುವುದಕ್ಕಾಗಿಯಲ್ಲ, ನೀವಿಲ್ಲಿರುವುದು ಇತರರಿಗೆ ತೊಂದರೆಯನ್ನು ಕೊಡುವುದಕ್ಕಾಗಿಯೂ ಅಲ್ಲ. ನೀವಿಲ್ಲಿರುವುದು ಕೇವಲ ಒಂದು ದಿನದಿಂದ ಇನ್ನೊಂದು ದಿನಕ್ಕೆ ನಿದ್ದೆ ಮಾಡಿ, ತಿಂದು ಕುಡಿದು ಮಾಡುವುದಕ್ಕಾಗಿಯಲ್ಲ. ನೀವಿಲ್ಲಿರುವುದು ಹರಟೆಹೊಡೆಯುವುದಕ್ಕಲ್ಲ. ಹೀಗೆ ನೀವು ಈ ರೀತಿ ಆಳವಾಗಿ ಯೋಚಿಸುವಾಗ, ನೀವು ಯಾಕೆ ಇಲ್ಲಿರುವಿರಿ ಎಂಬುದು ನಿಮಗೆ ನಿಧಾನವಾಗಿ ಅರ್ಥವಾಗಲು ತೊಡಗುತ್ತದೆ. ನೀವು ಯಾವುದಲ್ಲ ಎಂಬ ವಿಷಯಗಳ ಒಂದು ಪಟ್ಟಿಯನ್ನು ಮಾಡಲು ಆರಂಭಿಸಿ. ನೀವಲ್ಲದಿರುವುದನ್ನು (ಗುರುತು ಅಥವಾ ಲೇಬಲ್) ಒಂದರ ನಂತರ ಒಂದು ವಿಷಯದಂತೆ ನಿರಾಕರಿಸುತ್ತಾ ಬನ್ನಿ. ಆಗ ನಿಮಗೆ ತಿಳಿಯುತ್ತದೆ ನೀವಿಲ್ಲಿ ಯಾಕಿರುವಿರಿ ಎಂಬುದು ಮತ್ತು ನೀವಿಲ್ಲಿರುವುದು ನಿಮ್ಮ ಸುತ್ತಲಿರುವವರಿಗೆ ಹಾಗೂ ನಿಮಗೆ ಕೂಡಾ ಪ್ರಯೋಜನಕಾರಿಯಾಗಿಯೂ ಸಹಾಯಕವಾಗಿಯೂ ಇರವುದಕ್ಕಾಗಿಯೆಂಬುದು. ನಿಮ್ಮಿಂದಾಗಿ ಕೆಲವು ಜನರಿಗೆ ಆರಾಮ ಮತ್ತು ಸಮಾಧಾನ ಸಿಗುವಾಗ, ನಿಮಗೆ ಸಿಗುವ ಸಂತೋಷ ಮತ್ತು ತೃಪ್ತಿಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ.

ಪ್ರಶ್ನೆ: ಗುರುದೇವ, ನಾನು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳತೊಡಗಿರುವೆ. ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು. ಒಂದು ಮುಕ್ತಾಯಕ್ಕೆ ಬರಬಲ್ಲಂತಹದ್ದಲ್ಲ ನಂಬಿಕೆಯೆಂದರೆ, ಇದು ಮೊದಲನೆಯ ವಿಷಯ. ನೀನು ನಿನ್ನ ಜೀವನದಲ್ಲಿ ಯಾವುದರಿಂದಲೋ ಓಡಿಹೋಗಲು ಪ್ರಯತ್ನಿಸುತ್ತಿರುವೆ, ಮತ್ತು ಹಾಗೆ ಮಾಡುವುದಕ್ಕೆ ದೇವರು ಅಥವಾ ನಿನ್ನ ಗುರುವನ್ನು ಒಂದು ನೆಪವಾಗಿ ಅಥವಾ ಕಾರಣವಾಗಿ ಬಳಸುತ್ತಿರುವೆ. ಅಂತಹ ರೀತಿಯಲ್ಲಿ ಕಟ್ಟಲ್ಪಟ್ಟ ನಂಬಿಕೆಯು ಖಂಡಿತವಾಗಿಯೂ ಒಂದಲ್ಲ ಒಂದು ಸಮಯದಲ್ಲಿ ಅಲುಗಾಡಬಹುದು. ಪ್ರತಿಸಲವೂ ನಿನ್ನ ನಂಬಿಕೆಯು ಅಲುಗಾಡುವಾಗ, ನಿನ್ನ ಭಕ್ತಿಯು ಮತ್ತೊಮ್ಮೆ ಒಳಗಿನಿಂದ ನವೀಕೃತಗೊಳ್ಳುವುದು. ಸತ್ಯವು ಯಾವತ್ತೂ ಸೋಲುವುದಿಲ್ಲ ಅಥವಾ ಅಲುಗಾಡುವುದಿಲ್ಲ. ನಿಜವಾದ ನಂಬಿಕೆಯು ಸಂಭವಿಸುವ ಯಾವುದನ್ನೂ ಲೆಕ್ಕಿಸದೆ ದೃಢವಾಗಿ ಉಳಿಯುತ್ತದೆ. ಅಲುಗಾಡುವುದು ಯಾವುದೆಂದರೆ, ಬಹಳ ಬಾಹ್ಯಮಟ್ಟದಲ್ಲಿರುವ ಯಾವುದೋ ಸಣ್ಣ ನಂಬಿಕೆ. ನಿನ್ನದೇ ಆದ ನಿರೀಕ್ಷೆಗಳು ಮತ್ತು ಬಯಕೆಗಳು ನಿನ್ನನ್ನು ಅಲುಗಾಡಿಸುವುದು.

ಸ್ವಲ್ಪ ಹೊತ್ತಿಗೆ ಮೊದಲು ಒಬ್ಬಳು ಮಹಿಳೆಯು ನನ್ನ ಬಳಿಗೆ ಬಂದಳು. ಅವಳು ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಒಬ್ಬ ಗಂಡಸನ್ನು ಪ್ರೀತಿಸುತಿದ್ದಳು. ಅವಳು ನನ್ನಲ್ಲಿ, "ಗುರುದೇವ, ನೀವು ದೇವರು ಮತ್ತು ನೀವು ಏನನ್ನು ಬೇಕಾದರೂ ಮಾಡಬಲ್ಲಿರಿ. ದಯವಿಟ್ಟು ನನ್ನನ್ನು ಆ ಗಂಡಸಿನೊಂದಿಗೆ ಮದುವೆ ಮಾಡಿಸಿ" ಎಂದು ಹೇಳಿದಳು.

ಈ ರೀತಿ ಅವಳು ನನ್ನನ್ನು ಪ್ರಶ್ನಿಸತೊಡಗಿದಳು. ಆ ಯುವಕನಿಗೆ ಅವಳನ್ನು ವಿವಾಹವಾಗಲು ಇಷ್ಟವೇ ಇರಲಿಲ್ಲ ಮತ್ತು ಅದರ ಬಗ್ಗೆ ಯೋಚಿಸಿದರೇ ಅವನು ಓಡಿ ಹೋಗುತ್ತಿದ್ದ. ನಾನು ಅವಳಿಗಂದೆ, "ನಾನು ಆ ಹುಡುಗನನ್ನು ಕೂಡಾ ಕೇಳುತ್ತೇನೆ, ಅವನಿಗೆ ನಿನ್ನನ್ನು ಮದುವೆಯಾಗಲು ಇಷ್ಟವಿದೆಯೇ ಇಲ್ಲವೇ ಎಂಬುದಾಗಿ".

ಅವಳಂದಳು, "ಇಲ್ಲ ಗುರುದೇವ, ಅವನಿಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲ. ಆದರೆ ಅವನಿಗೆ ಮನದಟ್ಟು ಮಾಡಿಸಿ ಅವನ ಮನಸ್ಸನ್ನು ಬದಲಾಯಿಸಲು ನಿಮಗೆ ಸಾಧ್ಯವಿದೆ. ನಿಮಗೆ ಏನು ಬೇಕಾದರೂ ಮಾಡಲು ಸಾಧ್ಯವಿದೆಯೆಂಬುದು ನನಗೆ ಗೊತ್ತು. ದಯವಿಟ್ಟು ನಿಮ್ಮ ಶಕ್ತಿಯನ್ನು ಬಳಸಿ ಅವನ ಮನಸ್ಸಿನ ಮೇಲೆ ಪ್ರಭಾವ ಬೀರಿ ಹಾಗೂ ನನ್ನನ್ನು ಮದುವೆಯಾಗಲು ಅವನು ಒಪ್ಪುವಂತೆ ಮಾಡಿ".

ನಾನವಳಿಗಂದೆ, "ಒಬ್ಬ ಆರೋಗ್ಯವಂತ ಸ್ಥೂಲಕಾಯದ ವ್ಯಕ್ತಿಯೊಬ್ಬನಿದ್ದಾನೆ. ಅವನು ಬಂದು ನನ್ನಲ್ಲಿ, ಅದನ್ನೇ ನಿನಗಾಗಿ ಮಾಡಲು ಕೇಳಿಕೊಂಡ. ಅವನು ನಿನ್ನನ್ನು ಮದುವೆಯಾಗಲು ಬಯಸುತ್ತಾನೆ. ಹೀಗಾಗಿ ಅವನು ನನ್ನಲ್ಲಿಗೆ ಬಂದು, ನಿನ್ನ ಮನಸ್ಸನ್ನು ಜಾದೂ ರೀತಿಯಿಂದ ಬದಲಾಯಿಸಿ, ಅವನನ್ನು ಮದುವೆಯಾಗುವಂತೆ ನಿನ್ನನ್ನು ಒಪ್ಪಿಸಲು ನನ್ನಲ್ಲಿ ಕೇಳಿಕೊಂಡ. ಅವನು ನಿನ್ನನ್ನು ಪ್ರೀತಿಸುತ್ತಾನೆ. ಈಗ ನಾನೇನು ಮಾಡುವುದು?"

ಇದನ್ನು ಕೇಳಿದಾಗ ಅವಳಂದಳು, "ಓ ಗುರುದೇವ! ಆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾದರೆ ನಾನು ಸತ್ತೇ ಹೋಗುವೆನು".
ನಾನಂದೆ, "ಆ ಯುವಕನೂ ನಿನ್ನನ್ನು ಮದುವೆಯಾಗುವುದರ ಬಗ್ಗೆ ಅದನ್ನೇ ಹೇಳುತ್ತಿದ್ದಾನೆ!" (ನಗು)

ನಾನು ಅವಳಲ್ಲಿ ಕೇಳಿದೆ, "ಇದು ನಿಜಕ್ಕೂ ನಿನಗೆ ನನ್ನ ಮೇಲಿರುವ ವಿಶ್ವಾಸವೇ ಅಥವಾ ನಿನ್ನ ಲೋಭ ಮತ್ತು ಬಯಕೆಗಳು ನೀನು ಅಂತಹದ್ದರನ್ನು ನಂಬುವಂತೆ ಮಾಡುತ್ತಿರುವುದೇ?"

ಹೆಚ್ಚಾಗಿ ನಾವು ನಮ್ಮ ತೀವ್ರವಾದ ಬಯಕೆಗಳನ್ನು ನಮ್ಮ ತೀವ್ರವಾದ ವಿಶ್ವಾಸವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ ಹಾಗೂ ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಮತ್ತು ನಮ್ಮ ಕೆಲಸವನ್ನು ಸಾಧಿಸಲು ದೇವರನ್ನು ಕುಶಲತಾಪೂರ್ವಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ. ಕೇವಲ ನಿಮ್ಮ ಬಯಕೆಗಳ ಪೂರೈಕೆಗಾಗಿ ನೀವು ದೇವರಲ್ಲಿ ವಿಶ್ವಾಸವನ್ನಿರಿಸುವುದಾದರೆ, ಆಗ ಅದು ಕೆಲಸ ಮಾಡದು.

ಯಾವುದು ಹೆಚ್ಚಿನದು: ದೇವರಾ ಅಥವಾ ನಿಮ್ಮ ಬಯಕೆಯಾ? ಸುಮ್ಮನೆ ಇದರ ಬಗ್ಗೆ ಯೋಚಿಸಿ. ನೀವು ದೇವರನ್ನು, ಕೊಡುಕೊಳ್ಳುವಿಕೆಗಿರುವ ಚಲಾವಣೆಯ ನಾಣ್ಯದಂತೆ ಉಪಯೋಗಿಸಲು ಬಯಸುತ್ತೀರಿ, ಮತ್ತು ಅದನ್ನೇ ನೀವು ನಿಮ್ಮ ಗುರುವಿನೊಂದಿಗೆ ಮಾಡಲು ಬಯಸುತ್ತೀರಿ. ಜೀವನದಲ್ಲಿ ಎತ್ತರಕ್ಕೇರುವುದಕ್ಕೆ ಮತ್ತು ನಿಮ್ಮೊಳಗೆ ಆಳವಾಗಿ ಹೋಗುವುದಕ್ಕೆ ಸಹಾಯ ಮಾಡಲು ವಿಶ್ವಾಸ ಮತ್ತು ಭಕ್ತಿ ಬೇಕು.

ಕಷ್ಟಗಳು ಮತ್ತು ಅಹಿತಕರ ಸಮಯಗಳು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತವೆ. ತಮ್ಮ ಜೀವನದಲ್ಲಿ ಸಮಸ್ಯೆಗಳಿರದ ಯಾರಾದರೂ ಇದ್ದಾರೆಯೇ? ಕೃಷ್ಣ ಪರಮಾತ್ಮನು ತನ್ನ ಜೀವಿತಾವಧಿಯಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದನು. ಭಗವಂತ ರಾಮನೂ ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಮಾಹಾತ್ಮಾ ಗಾಂಧಿ ಕೂಡಾ ತಮ್ಮ ಜೀವನದಲ್ಲಿ ಹಲವಾರು ತಡೆಗಳನ್ನು ಎದುರಿಸಿದರು. ಆದ್ದರಿಂದ ಜೀವನದಲ್ಲಿ ಕಷ್ಟಗಳು ಬರುತ್ತವೆ ಹೋಗುತ್ತವೆ. ಅಂತಹ ಪ್ರಕ್ಷುಬ್ಧ ಸಮಯದಲ್ಲಿ ನಿಮ್ಮ ವಿಶ್ವಾಸ ಮತ್ತು ಭಕ್ತಿಯು ಹಾಗೆಯೇ ಅಖಂಡವಾಗಿಯೂ ದೃಢವಾಗಿಯೂ ಉಳಿಯುವಾಗ, ಆ ಪರಿಸ್ಥಿತಿಗಳು ನಿಮಗೆ ಅಹಿತಕರವಾಗಿ ಅನ್ನಿಸುವುದಿಲ್ಲ. ಈ ಕಷ್ಟಕಾಲಗಳಲ್ಲಿ ವಿಶ್ವಾಸವು ನಿಮ್ಮ ಆಸರೆಯಾಗುತ್ತದೆ ಮತ್ತು ನಿಮ್ಮನ್ನು ಸ್ಥಿರವಾಗಿ ಇರಿಸುತ್ತದೆ. ಒಂದು ಸಂಪೂರ್ಣವಾದ ಕತ್ತಲಿನ ರಾತ್ರಿಯಲ್ಲಿ, ಒಂದು ಮಿಣುಕು ದೀಪ ಕೂಡಾ ನೀವು ನಿಮ್ಮ ದಾರಿಯನ್ನು ಕಂಡುಕೊಂಡು ಮುಂದೆ ನಡೆಯುವುದಕ್ಕೆ ಸಹಾಯ ಮಾಡಬಲ್ಲದು. ಆದರೆ ನೀವು ಬೆಳಕಿನ ಆ ಮೂಲವನ್ನೇ ನಂದಿಸಲು ಪ್ರಯತ್ನಿಸಿದರೆ, ಆಗ ಅದು ಒಳ್ಳೆಯದಲ್ಲ. ಹೀಗೆ ಮಾಡುವ ಜನರು ನಂತರ ಕಷ್ಟಕರ ಪರಿಸ್ಥಿತಿಗಳನ್ನು ನಿಭಾಯಿಸಲು ಮದ್ಯಪಾನ ಮೊದಲಾದಂತಹ ಇತರ ಮಾರ್ಗಗಗಳನ್ನು ಪ್ರಯತ್ನಿಸುತ್ತಾರೆ. ವಿಶ್ವಾಸವೆಂಬುದು ಒಂದು ದೊಡ್ಡ ಸಂಪತ್ತು ಮತ್ತು ಅದು ನಿಮಗೆ ಬಲವನ್ನು ನೀಡುತ್ತದೆ. ಕೇವಲ ಕೆಲವು ಸಣ್ಣ ವಿಷಯಗಳು ನಿಮಗೆ ಬೇಕಾದಂತೆ ನಡೆಯಲಿಲ್ಲವೆಂಬ ಕಾರಣಕ್ಕೆ, ನೀವು ನಿಮ್ಮ ವಿಶ್ವಾಸವನ್ನು ಆಗಾಗ ಮುರಿಯುವಷ್ಟು ದುರ್ಬಲ ಹಾಗೂ ಸೂಕ್ಷ್ಮಮಾಡಿಕೊಳ್ಳಬೇಕೆಂದಲ್ಲ.

ನೀನು ಬಯಸಿದುದು ಯಾವುದೋ ಒಂದು ನಡೆಯಲಿಲ್ಲವೆಂಬ ಕಾರಣಕ್ಕೆ ನಿನ್ನ ವಿಶ್ವಾಸವು ಬಲಹೀನವಾಗುತ್ತಿದೆ ಹಾಗೂ ವಿಫಲವಾಗುತ್ತಿದೆಯೆಂದು ನಿನಗನ್ನಿಸುವುದು ಒಳ್ಳೆಯದೆಂದು ನಾನು ಹೇಳಿದ್ದು ಅದಕ್ಕೇ. ಅದು ಪರವಾಗಿಲ್ಲ. ಕ್ರಮೇಣವಾಗಿ ನೀನು ಯಾರ ಮೇಲಾದರೂ ಅಥವಾ ಯಾವುದರ ಮೇಲಾದರೂ ನಿನ್ನ ವಿಶ್ವಾಸವನ್ನಿರಿಸುವೆ.

ಪ್ರಶ್ನೆ: ಗುರುದೇವ, ನಾವು ನಮ್ಮ ಮಕ್ಕಳನ್ನು ಆಧ್ಯಾತ್ಮಿಕವಾಗಿ ಬಲಶಾಲಿಗಳನ್ನಾಗಿ ಮಾಡುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮಕ್ಕಳು ಸ್ವಾಭಾವಿಕವಾಗಿ ಆಧ್ಯಾತ್ಮಿಕರಾಗಿರುತ್ತಾರೆ. ಅವರನ್ನು ಧೂಮಪಾನ, ಮದ್ಯಪಾನಗಳಂತಹ ಕೆಟ್ಟ ಅಭ್ಯಾಸಗಳು, ಹಿಂಸಾತ್ಮಕ ಚಟುವಟಿಕೆಗಳು ಹಾಗೂ ಹಿಂಸಾತ್ಮಕ ಆಟಗಳು ಮೊದಲಾದವುಗಳಿಂದ ದೂರವಿಡಿ. ನೀವಿದನ್ನು ಮಾಡಿದರೆ ಆಗ ಅವರು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕರಾಗಿರುತ್ತಾರೆ.

ಪ್ರಶ್ನೆ: ಗುರುದೇವ, ನಾನು ಮೋಕ್ಷವನ್ನು ಪಡೆಯುವುದು ಹೇಗೆ ಮತ್ತು ಧ್ಯಾನದಿಂದ ಒಬ್ಬನಿಗೆ ಏನು ಸಿಗುತ್ತದೆ? ನನ್ನೆಲ್ಲಾ ಸ್ನೇಹಿತರು ಹಲವು ಸಲ ನನಗೆ ಇದೇ ಪ್ರಶ್ನೆಯನ್ನು ಕೇಳುತ್ತಾರೆ.

ಶ್ರೀ ಶ್ರೀ ರವಿ ಶಂಕರ್: ಧ್ಯಾನವು ನಿಮ್ಮ ಶರೀರವನ್ನು ಬಲಶಾಲಿಯನ್ನಾಗಿಸುತ್ತದೆ ಮತ್ತು ಹುರುಪನ್ನು ತರುತ್ತದೆ. ಅದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಮನಸ್ಸಿಗೆ ಆನಂದವನ್ನು ತರುತ್ತದೆ. ನಿಮ್ಮ ವರ್ತನೆಯನ್ನು ಹಾಗೂ ನಿಮ್ಮ ಸುತ್ತಲಿನ ಜನರೊಂದಿಗೆ ನೀವು ವ್ಯವಹರಿಸುವ ರೀತಿಯನ್ನು ಸುಧಾರಿಸಲು ಹಾಗೂ ಹೆಚ್ಚಿಸಲು ಅದು ಸಹಾಯ ಮಾಡುತ್ತದೆ. ಅದು ಒತ್ತಡವನ್ನು ನಿವಾರಿಸುತ್ತದೆ. ಒಬ್ಬನಿಗೆ ಬೇರೇನು ಬೇಕು? ಮತ್ತು ಈ ಎಲ್ಲಾ ಲಾಭಗಳ ಹೊರತಾಗಿ, ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಅದು ನಿಮಗೆ ಸಹಾಯ ಮಾಡುತ್ತದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಹಾಗೂ ಪಡೆಯಲಿರುವ ಒಂದೇ ಮಾರ್ಗವೆಂದರೆ ಧ್ಯಾನ.

ಒಂದು ಮಾತಿದೆ, "ನಾನ್ಯ ಪಂಥಾ ವಿದ್ಯತೇ ಅಯನಾಯ" (ಪುರುಷ ಸೂಕ್ತ, ಋಗ್ವೇದದ ಶ್ಲೋಕ). ಇದರರ್ಥ: ದೇವರ ಸಾಕ್ಷಾತ್ಕಾರಕ್ಕೆ ಧ್ಯಾನವಲ್ಲದೆ ಬೇರೆ ದಾರಿಯಿಲ್ಲ. ದೇವರೊಂದಿಗೆ ಒಂದುಗೂಡಲು ಧ್ಯಾನವು ಮಾತ್ರ ಒಬ್ಬನಿಗೆ ಸಹಾಯ ಮಾಡಬಲ್ಲದು.

ಪ್ರಶ್ನೆ: ಗುರುದೇವ, ಆಧ್ಯಾತ್ಮದಲ್ಲಿ ನಂಬಿಕೆ ಮೊದಲು ಬರುತ್ತದೆ, ನಂತರ ಅನುಭವವಾಗುತ್ತದೆ, ಆದರೆ ಒಂದು ವೈಜ್ಞಾನಿಕ ಮನೋಭಾವವಿರುವ ಜನರಿಗೆ ಅದು ತದ್ವಿರುದ್ಧವೆಂಬುದಾಗಿ ನೀವು ಹೇಳಿರುವಿರಿ. ಇದು ಸ್ವಲ್ಪ ವಿರೋಧಾತ್ಮಕವೆಂದು ಅನ್ನಿಸುತ್ತದೆ ಮತ್ತು ನನಗದು ಅರ್ಥವಾಗಲಿಲ್ಲ. ದಯವಿಟ್ಟು ತಾವು ವಿವರಿಸುವಿರೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ನನಗನಿಸುತ್ತದೆ ನೀನೆಲ್ಲೋ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರುವೆ. ಅದು, ವಿಷಯಗಳನ್ನು ನೋಡುವ ರೀತಿಯಲ್ಲಿ ಪೌರಾಸ್ತ್ಯ ಮತ್ತು ಪಾಶ್ಚಿಮಾತ್ಯಗಳ ನಡುವೆಯಿರುವ ವ್ಯತ್ಯಾಸವಾಗಿದೆ. ಪೂರ್ವದಲ್ಲಿ, ನಾವು ಯಾವತ್ತೂ ಹೇಳುವುದೇನೆಂದರೆ ಮೊದಲು ಅನುಭವವಾಗಬೇಕು, ಆನಂತರ ಮಾತ್ರವೇ ನೀವು ಆ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಿ ಮತ್ತು ಗ್ರಹಿಸಿಕೊಳ್ಳುತ್ತೀರಿ. ಆದರೆ ಪಾಶ್ಚಿಮಾತ್ಯದಲ್ಲಿ, ಮೊದಲು ನೀವು ವಿಷಯವನ್ನು ನಂಬಬೇಕು ಮತ್ತು ತಿಳಿದುಕೊಳ್ಳಬೇಕು, ಹಾಗೂ ನಂತರ ನಿಮಗೆ ಅನುಭವವಾಗುತ್ತದೆ. ಇವುಗಳು ಎರಡು ಬೇರೆ ಬೇರೆ ರೀತಿಗಳು.

ಅದು ಯಾಕೆಂದರೆ ಪಾಶ್ಚಿಮಾತ್ಯದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಗಳಲ್ಲಿನ ಕಾರ್ಯಪ್ರಣಾಳಿಯು ವ್ಯತ್ಯಸ್ತವಾಗಿದ್ದು, ಅಲ್ಲಿ ಹಲವಾರು ಸಂಘರ್ಷಗಳಿವೆ. ಸ್ಪ್ಯಾನಿಷ್ ಅನ್ವೇಷಣೆ ನಡೆದಾಗ ಹಲವಾರು ವಿಜ್ಞಾನಿಗಳು ಹತ್ಯೆಗೊಳಗಾಗಿದ್ದು ಮತ್ತು ಚಿತ್ರಹಿಂಸೆಗೊಳಪಟ್ಟಿದ್ದು ಇದೇ ಕಾರಣಕ್ಕಾಗಿ. ಎರಡರ ಕಾರ್ಯಪ್ರಣಾಳಿಗಳು ಅಷ್ಟೊಂದು ಭಿನ್ನವಾಗಿದ್ದುದೇ ಅದಕ್ಕೆ ಕಾರಣ.
ಭಾರತದಲ್ಲಿ, ಒಬ್ಬನೇ ಒಬ್ಬ ವಿಜ್ಞಾನಿಯೂ ಯಾವತ್ತೂ ಮರಣದಂಡನೆಗೆ ಅಥವಾ ವಿಚಾರಣೆಗೆ ಒಳಗಾಗಲಿಲ್ಲ. ಯಾಕೆ ಹಾಗೆ? ಅದು ಯಾಕೆಂದರೆ, ಧರ್ಮ ಮತ್ತು ವಿಜ್ಞಾನ ಎರಡಕ್ಕೂ ಕಾರ್ಯಪ್ರಣಾಳಿಯು ಒಂದೇ ಆಗಿತ್ತು. ಇಲ್ಲಿ ಭಾರತದಲ್ಲಿ ನಾವು "ತತ್ವ ಜ್ಞಾನ" ಎಂದು ಹೇಳುತ್ತೇವೆ. ಅಂದರೆ, ಮೊದಲು ಆಧಾರವಾಗಿರುವ ಮೂಲಭೂತ ತತ್ವವನ್ನು ತಿಳಿದುಕೊಳ್ಳುವುದು. ಆದ್ದರಿಂದ ಮೊದಲು ನಾವು ಪಂಚಭೂತಗಳ; ಅಂದರೆ, ಪೃಥ್ವಿ, ಜಲ, ವಾಯು, ಅಗ್ನಿ ಮತ್ತು ಆಕಾಶಗಳ ಗುಣವನ್ನು ತಿಳಿದುಕೊಳ್ಳುತ್ತೇವೆ. ಅದರ ನಂತರ ನಾವು ಮನಸ್ಸು, ಬುದ್ಧಿ, ಸ್ಮರಣೆ ಶಕ್ತಿ, ಅಹಂಕಾರಗಳನ್ನು ಅರಿತುಕೊಳ್ಳುವತ್ತ ಸಾಗುತ್ತೇವೆ. ಬಳಿಕ ಕೊನೆಯದಾಗಿ ನಾವು ದೇವರನ್ನು ಅರಿತುಕೊಳ್ಳುವತ್ತ ಸಾಗುತ್ತೇವೆ.

ಇಲ್ಲಿ ನಾವು ಯಾವತ್ತೂ ಹೇಳುವುದೇನೆಂದರೆ, ಒಬ್ಬರು ಮೊದಲಿಗೆ ಅನುಭವಿಸಬೇಕೆಂದು. ನೀವು ಉಪನಿಷತ್ತುಗಳನ್ನು ಓದುವಾಗ ಇದು ನಿಮಗೆ ಹೆಚ್ಚು ಅರ್ಥವಾಗುತ್ತದೆ. ಉಪನಿಷತ್ತುಗಳು ನಿಮ್ಮನ್ನು ಒಂದು ಹಂತದಿಂದ ಇನ್ನೊಂದಕ್ಕೆ ಹೆಜ್ಜೆ ಹೆಜ್ಜೆಯಾಗಿ ಕರೆದೊಯ್ಯುತ್ತವೆ. ಪೌರಾಸ್ತ್ಯದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಗಳು ಯಾವತ್ತೂ ಸಂಘರ್ಷದಲ್ಲಿ ಇರದೇ ಇದ್ದುದು ಇದೇ ಕಾರಣಕ್ಕಾಗಿ.

ಬುಧವಾರ, ಜನವರಿ 7, 2015

ಕಠಿಣ ಪರಿಸ್ಥಿತಿ ಸ್ಥೈರ್ಯವನ್ನು ಹೆಚ್ಚಿಸುತ್ತದೆ

೭ ಜನವರಿ ೨೦೧೫
ಡಾಲಸ್, ಅಮೇರಿಕಾ

ಪ್ರಶ್ನೆ: ನನ್ನ ಅತ್ತೆಯವರು ನಮ್ಮನ್ನು ಭೇಟಿ ಮಾಡಲು ಬರುವಾಗ, ನಾನು ಕೇಳಿರುವ ಎಲ್ಲಾ ಜ್ಞಾನವೂ ನನ್ನಿಂದ ಮಾಯವಾಗಿಬಿಡುವುದೆಂದು ತೋರುತ್ತದೆ. ಯಾವಾಗಲೂ ಒರಟಾದ ರೀತಿಯಲ್ಲಿ ವರ್ತಿಸುವ ಒಬ್ಬರನ್ನು ಮರೆತುಬಿಡುವುದು ಮತ್ತು ಕ್ಷಮಿಸುವುದು ಹೇಗೆ? ದಯವಿಟ್ಟು ಅತ್ತೆಯವರಿಗೆ ಸಲಹೆ ನೀಡಿ.

ಶ್ರೀ ಶ್ರೀ ರವಿ ಶಂಕರ್: ಕೇಳು, ನಿನ್ನ ತಾಯಿಯವರು ಹೇಗೆ ವರ್ತಿಸುತ್ತಾರೆಂದು ನೀನೊಮ್ಮೆ ನೋಡಬೇಕೆಂದು ನಾನು ಬಯಸುತ್ತೇನೆ. ಎಷ್ಟು ಸಲ ನೀನು ನಿನ್ನ ಸ್ವಂತ ತಾಯಿಯೊಂದಿಗೆ ಜಗಳ ಮಾಡಿದ್ದೀಯಾ ಮತ್ತು ಎಷ್ಟು ಸಲ ಅವರು ನಿನ್ನ ಮೇಲೆ ಹತಾಶರಾಗಿದ್ದರು? ನಿನಗೆ ನಿನ್ನ ತಾಯಿಯಿಂದ ಬೈಗುಳ ಸಿಕ್ಕಿಲ್ಲವೇ? ಯಾವುದೇ ಹುಡುಗಿ ಅಥವಾ ಹುಡುಗ ತನ್ನ ತಾಯಿಯಿಂದ ಬೈಯಿಸಿಕೊಳ್ಳದೆಯೇ ಬೆಳೆದಿರಬಹುದೆಂದು ನನಗನ್ನಿಸುವುದಿಲ್ಲ. ನನಗೆ ನನ್ನ ತಾಯಿಯವರಿಂದ ಬಹಳಷ್ಟು ಬೈಗುಳ ಸಿಕ್ಕಿದೆ. ನಾನು ಅವರಷ್ಟು ಚೆನ್ನಾಗಿ ಕಾರ್ಯಗಳನ್ನು ಮಾಡುವುದಿಲ್ಲವೆಂದೂ, ಅವರು ಯಾವತ್ತೂ ಹೆಚ್ಚು ಚೆನ್ನಾಗಿ ತಿಳಿದಿದ್ದರೆಂದೂ ಅವರು ಯಾವಾಗಲೂ ಅಂದುಕೊಳ್ಳುತ್ತಿದ್ದರು.

ಆಶ್ರಮವನ್ನು ನಡೆಸುವ ಬಗ್ಗೆ ಕೂಡಾ ಅವರು ಹೀಗೆಂದು ಹೇಳುತ್ತಿದ್ದರು, "ಇಲ್ಲ, ನೀನು ಆಶ್ರಮವನ್ನು ಸರಿಯಾಗಿ ನಡೆಸುತ್ತಿಲ್ಲ". ನನ್ನ ಅತ್ಯಂತ ದೊಡ್ಡ ವಿಮರ್ಶಕಿಯೆಂದರೆ ನನ್ನ ಸ್ವಂತ ತಾಯಿಯವರಾಗಿದ್ದರು. ಹೀಗೆ ಈ ಅನುಭವವಿದೆ. ನಿನ್ನ ತಾಯಿಯವರು ನಿನ್ನ ಬಗ್ಗೆ ವಿಮರ್ಶೆ ಮಾಡುವಾಗ, ನೀನು ಅವರೊಂದಿಗೆ ಜಗಳ ಮಾಡಿ ನಂತರ ಅದನ್ನು ಮರೆತು ಬಿಡುತ್ತೀಯಾ. ಅದು ನಿಜಕ್ಕೂ ನಿನ್ನನ್ನು ಮುಟ್ಟುವುದಿಲ್ಲ. ನೆನಪಿಟ್ಟುಕೋ, ನಿನ್ನ ತಾಯಿ ಮತ್ತು ನಿನ್ನ ಅತ್ತೆ ಇಬ್ಬರೂ ಒಂದೇ ವಯಸ್ಸಿನವರು, ಒಂದೇ ರೀತಿಯವರು ಮತ್ತು ಒಂದೇ ಗುಂಪಿಗೆ ಸೇರಿದವರು. ನಿನ್ನ ತಾಯಿಯವರು ನಿನಗೆ ಬೈಯುತ್ತಿದ್ದುದರಲ್ಲಿ ಕೇವಲ ೧೦% ದಷ್ಟು ಮಾತ್ರ ಅವರು ನಿನಗೆ ಬೈಯುತ್ತಾರೆ, ಮತ್ತೆ ಯಾಕೆ ಅದು ನಿನಗೆ ಆಳವಾಗಿ ನೋಯಿಸುತ್ತದೆ? ಹೀಗಾಗಿ, ಸುಮ್ಮನೆ ಅವರನ್ನು ಸ್ವೀಕರಿಸು. ನಿನಗೆ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ.

ನೀನು ನಿನ್ನ ಜ್ಞಾನವನ್ನು ಇತರ ಸಮಯಗಳಲ್ಲಿ ಮರೆತರೆ ಅದು ಪರವಾಗಿಲ್ಲ. ಆದರೆ ನಿನ್ನ ಅತ್ತೆಯವರು ಬರುವಾಗ, ಆಗಲೇ ನಿನ್ನ ಎಲ್ಲಾ ಜ್ಞಾನವೂ ಬೇಕಾಗಿರುವುದು. ಆ ದಿನಗಳಲ್ಲಿ ಜ್ಞಾನದ ಮಾತುಗಳನ್ನು ಕೇಳುವುದನ್ನು ಮರೆಯಬೇಡ.
ಕಛೇರಿಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ನಿರ್ವಹಿಸಲು ಕಠಿಣವಾಗಿರುವ ಜನರು, ನೀವು ನಿಮ್ಮ ಕುಶಲತೆಗಳನ್ನು ಬೆಳೆಸಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತಾರಷ್ಟೆ. ನೀವು ನಿಜವಾಗಿಯೂ ಅವರಿಗೆ ಧನ್ಯವಾದವನ್ನರ್ಪಿಸಬೇಕು. ಅವರು ನಿಮ್ಮನ್ನು ಹೆಚ್ಚು ಕುಶಲರನ್ನಾಗಿ, ಹೆಚ್ಚು ಪರಿಷ್ಕೃತರನ್ನಾಗಿ, ಹೆಚ್ಚು ಸಹಾನುಭೂತಿಯುಳ್ಳವರನ್ನಾಗಿ ಮಾಡುತ್ತಾರೆ ಮತ್ತು ನಿಮ್ಮ ಕೆಟ್ಟ ಮುಖವು ವ್ಯಕ್ತವಾಗುವುದಕ್ಕೆ ಬದಲಾಗಿ, ನಿಮ್ಮೆಲ್ಲಾ ಒಳ್ಳೆಯ ಗುಣಗಳು ವ್ಯಕ್ತವಾಗಲು ಆರಂಭವಾಗಬಹುದು.
ನೋಡಿ, ಇದು ಇರುವ ವ್ಯತ್ಯಾಸ. ನಿಮ್ಮಲ್ಲಿ ಜ್ಞಾನವಿದ್ದರೆ, ಕಠಿಣ ಪರಿಸ್ಥಿತಿಗಳಲ್ಲಿವಿವೇಕವು ಪ್ರಕಟಗೊಳ್ಳುತ್ತದೆ ಮತ್ತು ಅದರಿಂದಾಗಿ ಒಳ್ಳೆಯ ವಿಚಾರಗಳು ಪ್ರಕಟವಾಗುತ್ತವೆ. ನಿಮ್ಮಲ್ಲಿ ಕುಶಲತೆಗಳ ಕೊರತೆಯಿದ್ದರೆ, ಅದರಿಂದಾಗಿ ಅತ್ಯಂತ ಕೆಟ್ಟ ವಿಚಾರಗಳು ಹೊರಬರುತ್ತವೆ. ಹೀಗಾಗಿ ಈ ಒಂದು ವಿಷಯದಲ್ಲಿ ನಾವು ನಿಪುಣರಾಗಬೇಕು. ಏನು? ವ್ಯಕ್ತಪಡಿಸುವ ಮತ್ತು ಸಂಪರ್ಕಿಸುವ ಕುಶಲತೆಯಲ್ಲಿ ನಿಪುಣರಾಗಿ ಮತ್ತು ಹಾಗೆ ಮಾಡುವುದಕ್ಕಾಗಿ ಇದನ್ನು ಒಂದು ಅವಕಾಶವೆಂಬಂತೆ ಹಿಡಿದುಕೊಳ್ಳಿ.

ಪ್ರಶ್ನೆ: ಗುರುದೇವ, ನಾವು ಯಾರೆಂಬುದನ್ನು ಹಾಗೂ ನಾವು ಎಲ್ಲಿಂದ ಬಂದಿರುವೆವು ಎಂಬುದನ್ನು ತಿಳಿದುಕೊಳ್ಳದೆ ನಾವು ಈ ಪ್ರಪಂಚದಿಂದ ನಿರ್ಗಮಿಸಬಾರದೆಂದು ನೀವು ಹೇಳಿದ ಒಂದು ಬರಹವನ್ನು ನಾನೊಮ್ಮೆ ಓದಿದ್ದೆ. ನನ್ನ ಉದ್ದೇಶವನ್ನು ತಿಳಿಯಲು ದಯವಿಟ್ಟು ನನಗೆ ಮಾರ್ಗದರ್ಶನ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಆತ್ಮ-ಚಿಂತನೆಯ ಈ ಬಯಕೆ ಮತ್ತು "ನಾನು ಯಾರು?" ಎಂದು ತಿಳಿಯುವ ಇಚ್ಛೆಯೇ ನಮ್ಮನ್ನು ಮಾನವರನ್ನಾಗಿಸುತ್ತದೆ. ಇದು ಬಹಳ ಮುಖ್ಯ. ಈ ಪ್ರಶ್ನೆಯು ನಮ್ಮ ಮನಸ್ಸು ಅಚ್ಚರಿಗೊಳ್ಳುವಂತೆ ಮಾಡುತ್ತದೆ ಹಾಗೂ ನಮ್ಮ ಜೀವನಕ್ಕೆ ಗಹನತೆಯನ್ನೂ ವೈಶಾಲ್ಯತೆಯನ್ನೂ ನೀಡುತ್ತದೆ. ಹೀಗಾಗಿ ಮೊದಲು, ನಿನಗೆ ಈ ಪ್ರಶ್ನೆ ಬಂದುದಕ್ಕಾಗಿಯೇ ಸಂತೋಷ ಪಡು. ಮತ್ತೆ ನಿನ್ನಲ್ಲಿ ಸ್ವಲ್ಪ ತಾಳ್ಮೆ ಇರಬೇಕಾಗುತ್ತದೆ. ಅದು ಬಹಳ ಮುಖ್ಯ.
"ಚೆನ್ನಾಗಿ ಶುರುವಾದುದು ಅರ್ಧ ಮುಗಿದಂತೆಯೇ" ಎಂಬ ಗಾದೆ ಮಾತು ನಿಮಗೆ ತಿಳಿದಿದೆಯೇ? ಇದು ಅರ್ಧಕ್ಕಿಂತಲೂ ಹೆಚ್ಚಿನದು ಮುಗಿದಂತೆ, ಇದು ಮುಕ್ಕಾಲು ಅಂಶ ಮುಗಿದಂತೆ.

ಪ್ರಶ್ನೆ: ಒಮ್ಮೆ ನೀವು ಒಂದು ಕೋರ್ಸಿನಲ್ಲಿ ಹೀಗೆಂದು ಹೇಳಿದ್ದಿರಿ, "ಒಂದು ಕಾರಣಕ್ಕಾಗಿ ಧ್ಯಾನ ಮಾಡಬೇಡಿ", ಹಾಗಾದರೆ ಧ್ಯಾನ ಮಾಡುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಮೊದಮೊದಲಿಗೆ ಯಾವುದಾದರೂ ಕಾರಣಕ್ಕಾಗಿ ಧ್ಯಾನ ಮಾಡಿದರೆ ಪರವಾಗಿಲ್ಲ. ಆದರೆ ನೀವು ಮುಂದೆ ಸಾಗಿದಂತೆ, ನೀವದನ್ನು ಬಿಟ್ಟುಬಿಡಬೇಕು. ಅದು ಹೇಗೆಂದರೆ, ರೈಲಿನೊಳಕ್ಕೆ ಅಥವಾ ವಿಮಾನದೊಳಕ್ಕೆ ಹೋಗಲು ನೀವು ನಿಮ್ಮ ಸಾಮಾನಿನ ಪೆಟ್ಟಿಗೆಯನ್ನು ಹೊರಬೇಕು. ಒಮ್ಮೆ ನೀವು ವಿಮಾನದೊಳಕ್ಕೆ ಹೋದ ಬಳಿಕ, ನೀವದನ್ನು ಸಾಮಾನಿರಿಸುವ ವಿಭಾಗದಲ್ಲಿ ಇಟ್ಟು ವಿಶ್ರಾಮ ಮಾಡಬೇಕು. ಅದಕ್ಕಾಗಿಯೇ ಈ ಆಧ್ಯಾತ್ಮಿಕ ಪಥದಲ್ಲಿ, ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಸೂಚನೆಗಳಿರುತ್ತವೆ. ಅವುಗಳೆಲ್ಲವೂ ಒಂದಕ್ಕೊಂದು ವಿರೋಧಾತ್ಮಕವಾಗಿ ತೋರಬಹುದು, ಆದರೆ ಅವುಗಳೆಲ್ಲವೂ ಸರಿ ಮತ್ತು ಅವುಗಳನ್ನು ಅನುಸರಿಸಬೇಕು. ಸತ್ಯವು ಗೋಲಾಕಾರದ್ದು. ಅದು ಸಂಕೀರ್ಣವಾದುದು, ಹಾಗೆಯೇ ಅದು ಸರಳವಾದುದು. ಹೀಗಾಗಿ, ಸೂಚನೆಗಳು ಬಹಳ ಗೊಂದಲಮಯವಾಗಿರಬಹುದು, ಆದರೆ ಅದು ಸರಿ.

ಪ್ರಶ್ನೆ: ಒಂದು ಜ್ಞಾನೋದಯಗೊಂಡ ಆತ್ಮವಾಗಿದ್ದುಕೊಂಡು ನಿಮಗೆ, ಯಾವುದೇ ವಿಚಲನೆಯಿಲ್ಲದೆ ಅಥವಾ ಓಡಾಡುತ್ತಿರುವ ಚಿಂತೆಗಳಿಲ್ಲದೆ ನಿಮ್ಮ ಗಮನವನ್ನು ೧೦೦% ಕೇಂದ್ರೀಕೃತಗೊಳಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಅಥವಾ ಶಾಲೆಯಲ್ಲಿ ಆ ರೀತಿ ಮಾಡಲು ನಾವು ಮಾಡಬಹುದಾದದ್ದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಸ್ಥಿರವಾಗಿರುವುದು, ಸ್ವಲ್ಪ ವೈರಾಗ್ಯ, ಸ್ವಲ್ಪ ಆಧ್ಯಾತ್ಮಿಕ ಸಾಧನೆ ಮತ್ತು ಸ್ವಲ್ಪ ವಿಶ್ವಾಸ, ಅಷ್ಟೇ. "ಎಲ್ಲಾ ಸರಿಹೋಗುತ್ತದೆ", ಆ ವಿಶ್ವಾಸವು ಮನಸ್ಸನ್ನು ಬಡಬಡಿಸಲು ಬಿಡುವುದಿಲ್ಲ. ಅಲ್ಲಿ ಇಲ್ಲಿ ಅದು ಬಡಬಡಿಸಿದರೂ, ಅದು ಬಹಳ ಬೇಗನೇ ಹಿಂತಿರುಗಿ ಬರುತ್ತದೆ.

ಪ್ರಶ್ನೆ: ಗುರುದೇವ, ಕೃಪೆ ಮತ್ತು ಸಮರ್ಪಣೆ ಇವುಗಳನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ ಮತ್ತು ನಾನು ಸಮರ್ಪಣೆ ಮಾಡಲು ಬಯಸುತ್ತೇನೆ. ಆದರೆ ನನಗೆ ಸಾಧ್ಯವಾಗುತ್ತಿಲ್ಲ. ಹೇಗೆಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಕೇಳು, ಸಮರ್ಪಣೆ ಇದೆಲ್ಲದರ ಬಗ್ಗೆ ಚಿಂತಿಸಬೇಡ. ಈ ಸಮರ್ಪಣೆ ಎಂಬ ಪದದೊಂದಿಗೆ ಯಾಕೆ ನೀನು ಹೋರಾಡುತ್ತಿರುವೆ? ಯಾವುದನ್ನೂ ಸಮರ್ಪಿಸಬೇಕಾಗಿಲ್ಲವೆಂದು ನಾನು ಹೇಳುತ್ತೇನೆ, ಎಲ್ಲವನ್ನೂ ಹಿಡಿದಿಟ್ಟುಕೋ. ನೀನು ಹೇಗಿರುವೆಯೋ ಹಾಗೆಯೇ ದೇವರು ನಿನ್ನನ್ನು ಪ್ರೀತಿಸುತ್ತಾರೆ ಮತ್ತು ನೀನು ಎಲ್ಲೇ ಇದ್ದರೂ ಹೇಗಿದ್ದರೂ ನೀನು ದೇವರೊಂದಿಗೆ ಇರುತ್ತೀಯಾ. ನೀನು ದೇವರಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ನಿನಗೆ ಸಮರ್ಪಿಸಲು ಏನಿದೆ? ಎಲ್ಲವೂ ಹೇಗಿದ್ದರೂ ಪ್ರಕೃತಿಗೆ ಸೇರಿದ್ದು; ದೇವರಿಗೆ ಸೇರಿದ್ದು. ಹೌದು, ನಿನ್ನ ನಕಾರಾತ್ಮಕತೆ ಮತ್ತು ನಿನ್ನ ಚಿಂತೆಗಳು ಅತಿಯಾದವೆಂದು ನಿನಗನ್ನಿಸುವಾಗ, ಮತ್ತು ನಿನಗೆ ಇನ್ನು ಮುಂದೆ ಅವುಗಳನ್ನು ಸಹಿಸಲು ಅಸಾಧ್ಯವಾದಾಗ, ಈ ಉಪಾಯವನ್ನು ನೀಡಲಾಯಿತು - ನೀನದನ್ನು ಸಮರ್ಪಿಸಬೇಕೆಂದು.

ನಾನು ಹೇಳುವುದೇನೆಂದರೆ, ಸಮರ್ಪಣೆ ಕೂಡಾ ಒಂದು ನಾಟಕ. ನೀನು ಸುಮ್ಮನೇ ಎಚ್ಚೆತ್ತುಕೊಂಡು ಇದನ್ನು ಅರಿಯಬೇಕು, "ಯಾವುದೂ ನನ್ನ ಸ್ವಂತದ್ದಲ್ಲ. ಎಲ್ಲವೂ ಹೇಗಿದ್ದರೂ ಒಂದು ದೈವಿಕತೆಗೆ ಸೇರಿದ್ದು". ಹೀಗಾಗಿ ಅದರ ಬಗ್ಗೆ ಚಿಂತೆ ಮಾಡಬೇಡ.
ನೀನು ಹತಾಶನಾದಾಗ ನೀನು, "ನಾನು ಬಿಟ್ಟುಕೊಡುತ್ತೇನೆ" ಎಂದು ಹೇಳುವೆ. "ನಾನು ಬಿಟ್ಟುಕೊಡುತ್ತೇನೆ" ಎಂದು ನೀನು ಸಂತೋಷವಾಗಿ ಹೇಳಲು ಸಾಧ್ಯವಾದರೆ, ಆಗ ನೀನು ಹತಾಶನಾಗುವುದೇ ಇಲ್ಲ. ಎಲ್ಲವೂ ಹೇಗಿದ್ದರೂ "ಮೇಲಿನಿಂದ" ನಡೆಯುತ್ತದೆ ಎಂಬುದನ್ನು ನೀನು ಸುಮ್ಮನೇ ಅರಿತುಕೊಳ್ಳುವೆ ಮತ್ತು ಅಷ್ಟೇ. ಹೇಗಿದ್ದರೂ, ಎಲ್ಲವೂ ಮೇಲಿರುವ ಒಬ್ಬನಿಗೆ ಅಥವಾ ನಿನ್ನೊಳಗೆ ಆಳದಲ್ಲಿರುವ ಒಬ್ಬನಿಗೆ ಸೇರಿದ್ದು, ಅಷ್ಟೇ. ಮುಖ್ಯವಾದ ವಿಷಯವೆಂದರೆ ವಿಶ್ರಾಮ ಮಾಡುವುದು ಮತ್ತು ನಿನ್ನಲ್ಲಿಯೇ ನೀನು ವಿರಮಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಈ ದಿನಗಳಲ್ಲಿ ಹಲವಾರು ಮಕ್ಕಳಲ್ಲಿ ಸ್ವಲೀನತೆ (ಆಟಿಸಂ) ಖಾಯಿಲೆಯಿರುವುದು ಪತ್ತೆಹಚ್ಚಲ್ಪಡುತ್ತಿದೆ. ಇದು ಯಾಕೆ ಹೀಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲಿರುವ ವಿಜ್ಞಾನಿಗಳಲ್ಲಿ ಕೆಲವರು ಅದರ ಬಗ್ಗೆ ಸಂಶೋಧನೆ ಮಾಡಬೇಕೆಂದು ನಾನು ಬಯಸುತ್ತೇನೆ. ಈ ಆಟಿಸಂನ ಕಾರಣವೇನು? ಒಬ್ಬಳು ಮಹಿಳೆಯು ಗರ್ಭಿಣಿಯಾಗಿರುವಾಗ ಅವಳು ತಿನ್ನುವ ಆಹಾರವೇ ಅಥವಾ ಇದು ನಾವು ಸೇವಿಸುವ ಜಿ.ಎಮ್.ಒ. (ಜೆನೆಟಿಕಲ್ಲೀ ಮೋಡಿಫೈಡ್ ಆರ್ಗೇನಿಸಮ್: ತಳೀಯವಾಗಿ ಬಬದಲಾಯಿಸಲ್ಪಟ್ಟ ಜೀವಿ) ಮತ್ತು ಎಮ್.ಎಸ್.ಜಿ.(ಮೋನೋ ಸೋಡಿಯಮ್ ಗ್ಲುಟಮೇಟ್)ಯೇ? ನಾವು ಸೇವಿಸುವ ಈ ಎಲ್ಲಾ ಗೊಬ್ಬರಗಳು ಹಾಗೂ ಗೊಬ್ಬರಗಳ ಅಲ್ಪಸ್ವಲ್ಪ ಅವಶೇಷಗಳು ಇದಕ್ಕೆ ಕಾರಣವಾಗಿವೆಯೇ? ಬಹಳ ಅಲ್ಪವನ್ನು ಹೊಂದಿದ ಜನರಿರುವಂತಹ ಬಡದೇಶಗಳಲ್ಲಿ ನೀವಿದನ್ನು ಬಹಳವಾಗಿ ಕಾಣುವುದಿಲ್ಲ. ಇಲ್ಲಿ ನಮ್ಮಲ್ಲಿ ಎಲ್ಲವೂ ಇರುವಾಗ, ಮತ್ತೆ ಯಾಕೆ ಈ ಸಮಸ್ಯೆಯು ಬೆಳೆಯುತ್ತಿದೆ? ನಾವು ಇದರ ಬಗ್ಗೆ ಗಮನ ಹರಿಸಬೇಕು.

ಇದು ತ್ವರಿತ ಆಹಾರ(ಫಾಸ್ಟ್ ಫುಡ್)ದಿಂದಾಗಿಯೇ? ಇದು ಮೈಕ್ರೋವೇವ್ ಅವನ್‌ಗಳಿಂದಾಗಿಯೇ? ಯಾವುದು ಇದಕ್ಕೆ ಕಾರಣ? ಕೆಲವು ವಿಜ್ಞಾನಿಗಳು ಇದರ ಬಗ್ಗೆ ಸ್ವಲ್ಪ ಅಧ್ಯಯನ ಮಾಡಬೇಕೆಂದು ನಾನು ಇಚ್ಛಿಸುತ್ತೇನೆ. ಇದೊಂದು ಒಳ್ಳೆಯ ಉಪಾಯವೆಂದು ನಿಮಗನ್ನಿಸುವುದಿಲ್ಲವೇ? ಒಂದು ಸ್ವತಂತ್ರವಾದ ಅಧ್ಯಯನವು ಸಹಾಯಕವಾಗಬಹುದು; ತನ್ನದೇ ಆದ ನಿಹಿತ ಸ್ವಾರ್ಥವಿರುವ ಒಂದು ಕಂಪೆನಿಯ ಮೂಲಕವಾಗಿಯಲ್ಲ.

ಪ್ರಶ್ನೆ: ನಮ್ಮ ಶರೀರದಲ್ಲಿ ನಮ್ಮ ಆತ್ಮವು ಎಲ್ಲಿದೆ?

ಶ್ರೀ ಶ್ರೀ ರವಿ ಶಂಕರ್: ಕೇಳು, ನೀನು ಆತ್ಮ, ಸರಿ ತಾನೆ? ಆತ್ಮವು ನಿನ್ನಿಂದ ಬೇರೆಯಾಗಿದೆಯೇ? ಮತ್ತು ನಿನಗೊಂದು ಶರೀರವಿದೆ. ಹೀಗಾಗಿ, ಅದನ್ನು ನೋಡಿ ನಿನ್ನ ಶರೀರದಲ್ಲಿ ನೀನು ಎಲ್ಲಿರುವೆಯೆಂದು ನೀನು ಯಾಕೆ ತಿಳಿಯಬಾರದು? ಈ ಪ್ರಶ್ನೆಯು ನಿನಗೊಂದು ಬಹಳ ಒಳ್ಳೆಯದಾದ ಮನೆಕೆಲಸವಾಗಬಲ್ಲದು. ನೀನು ಸುಮ್ಮನೆ ಕುಳಿತುಕೊಂಡು, "ನನ್ನ ಶರೀರದಲ್ಲಿ ನಾನು ಎಲ್ಲಿದ್ದೇನೆ?" ಎಂದು ಹೇಳಿದರೆ ಅದು ಬಹಳ ಒಳ್ಳೆಯದು.

ಪ್ರಶ್ನೆ: ಪ್ರೀತಿಯ ಗುರುದೇವ, ನಿಮ್ಮ ಭಕ್ತ ಹಾಗೂ ಯೇಸುಕ್ರಿಸ್ತನ ಭಕ್ತ ಇವೆರಡೂ ಏಕಕಾಲಕ್ಕೆ ಆಗಲು ಸಾಧ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಕೇಳು, ನೀನೊಬ್ಬ ಭಕ್ತನಾಗಿದ್ದರೆ ಅಷ್ಟು ಸಾಕು. ಒಂದೇ ಒಂದು ಪ್ರಜ್ಞೆಯಿರುವುದು, ಅಷ್ಟೇ. ಎಲ್ಲರಲ್ಲಿ ಒಬ್ಬರನ್ನು ಮತ್ತು ಒಬ್ಬರಲ್ಲಿ ಎಲ್ಲರನ್ನು ಕಾಣು. ಬಹಳ ಹಿಂದೆ, ೩೦ ವರ್ಷಗಳ ಮೊದಲು ಇಂಗ್ಲೇಂಡಿನಲ್ಲಿ ನನ್ನನ್ನು ಭೇಟಿಯಾದ ಒಬ್ಬರು ಕ್ಯಾಥೋಲಿಕ್ ಸನ್ಯಾಸಿನಿ ನನಗೆ ನೆನಪಿದ್ದಾರೆ. ಆಗ ಅವರಿಗೆ ಬಹಳ ವಯಸ್ಸಾಗಿತ್ತು ಮತ್ತು ಅವರು ಏನು ಹೇಳಿದರೆಂದು ನಿನಗೆ ಗೊತ್ತೇ? ಅವರಂದರು, "ಬೆಳಗ್ಗೆ ನೀವು ನೋಡುವ ಮೊದಲ ವ್ಯಕ್ತಿಯಲ್ಲಿ ನೀವು ಯೇಸುಕ್ರಿಸ್ತನನ್ನು ಕಾಣುವುದಿಲ್ಲವೆಂದಾದರೆ, ನೀವು ಅವನನ್ನು ಎಂದಿಗೂ ಕಾಣಲಾರಿರಿ".

ಹೀಗಾಗಿ, ಪ್ರೀತಿ, ಒಂದಾಗಿರುವಿಕೆ ಮತ್ತು ಸಹಾನುಭೂತಿ ಇದುವೇ ಇಡಿಯ ತತ್ವ ಹಾಗೂ ಆರ್ಟ್ ಆಫ್ ಲಿವಿಂಗ್ ಇದೇ ಆಗಿದೆ.

ಪ್ರಶ್ನೆ: ಗುರುದೇವ, "ಅಯಾಹುವಾಸ್ಕ" ಎಂಬ ಒಂದು ಔಷಧಿ (ಮಾದಕ ದ್ರವ್ಯ) ಇದೆಯೆಂದೂ ಅದು ಆಧ್ಯಾತ್ಮಿಕ ಪ್ರಗತಿಗೆ ನೆರವಾಗುವುದೆಂದೂ ನಾನು ಕೇಳಿದ್ದೇನೆ. ನಮ್ಮನ್ನು ದೇವರಿಂದ ದೂರವಿರಿಸುವ ಅಡೆತಡೆಗಳನ್ನು ಮತ್ತು ಭಯಗಳನ್ನು ಅದು ಹೊರಹಾಕುತ್ತದೆಯೆಂದು ತೋರುತ್ತದೆ. ಅದು ಹೆಚ್ಚಾಗಿ ದಕ್ಷಿಣ ಅಮೇರಿಕಾದಲ್ಲಿ ಸಿಗುತ್ತದೆ. ಅಂತಹ ಒಂದನ್ನು ನೀವು ಶಿಫಾರಸು ಮಾಡುವಿರೇ? ಅದೊಂದು ಪ್ರಾಕೃತಿಕವಾದ ಮೂಲಿಕೆ. 

ಶ್ರೀ ಶ್ರೀ ರವಿ ಶಂಕರ್: ಹೌದು, ಕೊಕೈನ್ ಕೂಡಾ ಪ್ರಾಕೃತಿಕವಾದುದೇ. ಅದು ಕೂಡಾ ಒಂದು ಮೂಲಿಕೆ, ಆದರೆ ಅದರಿಂದ ದೂರವಿರು.

ಮಾದಕದ್ರವ್ಯಗಳನ್ನು ಸೇವಿಸಿದ ಜನರನ್ನು ನೋಡು, ಅವರು ಭಾವಪರವಶತೆಯಲ್ಲಿರುವಂತೆ ಕಾಣುತ್ತಾರೆಯೇ? ಇಲ್ಲವೇ ಇಲ್ಲ. ನೀನು ಅವರನ್ನು ನೋಡಿದರೆ, ನಿನಗೆ ಅವರ ಮೇಲೆ ಕರುಣೆಯುಂಟಾಗುತ್ತದೆ. ಅವರೆಲ್ಲಾ ಶಕ್ತಿಯು ಬತ್ತಿಹೋಗುತ್ತದೆ. ಮತ್ತು ಮೇಲಾಗಿ, ಒಂದು ಸೂಕ್ಷ್ಮ ಮಟ್ಟದಲ್ಲಿ, ಅವರ ಪ್ರಭಾಮಂಡಲವು ಸಂಪೂರ್ಣವಾಗಿ ತುಂಡಾಗುತ್ತದೆ. ಮಾದಕ ದ್ರವ್ಯಗಳನ್ನುಪಯೋಗಿಸುವ ಜನರ ಸೂಕ್ಷ್ಮ ಶರೀರವು (ಪ್ರಾಣ ಶರೀರ)ಛಿದ್ರಛಿದ್ರವಾಗುತ್ತದೆ ಮತ್ತು ಅವರ ಪ್ರಭಾಮಂಡಲವೆಲ್ಲಾ ತುಂಡಾಗುತ್ತದೆ. ಹೀಗಾಗಿ, ಯಾವತ್ತೂ ಆ ವಸ್ತುಗಳನ್ನು ಉಪಯೋಗಿಸಬೇಡಿ. ನಿಮ್ಮ ಉಸಿರನ್ನು ಬಳಸಿ ಅಷ್ಟೆ.

ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನಗಳೊಂದಿಗೆ ನೀವು ಎತ್ತರಕ್ಕೇರಬಹುದು ಮತ್ತು ಆರೋಗ್ಯವಂತರಾಗಬಹುದು, ಹಾಗೂ ಇದರೊಂದಿಗೆ ಹಲವಾರು ಜನರು ಮಾದಕದ್ರವ್ಯಗಳಿಂದ ಹೊರಬಂದಿದ್ದಾರೆ. ಇದನ್ನು ಮಾಡಲು ಹಣವನ್ನು ಖರ್ಚು ಮಾಡಬೇಕಾಗಿಲ್ಲವೆಂದು ಅವರು ಅರಿಯುತ್ತಾರೆ. ನೀವೆಲ್ಲೇ ಕುಳಿತು ಧ್ಯಾನ ಮಾಡಿದರೂ ನೀವು ಅತ್ಯಾನಂದದಲ್ಲಿರುತ್ತೀರಿ. ಇದೊಂದು ಬಹಳ ಒಳ್ಳೆಯ ವಿಷನಾಶಕವಾಗಿದೆ.

ನೀವು ಶಕ್ತಿ ಕ್ರಿಯೆ ಮಾಡಿಲ್ಲವಾದರೆ, ನೀವದನ್ನು ಮಾಡಬೇಕು. ೨೦ ನಿಮಿಷಗಳ ಶಕ್ತಿ ಕ್ರಿಯೆಯಲ್ಲಿ ನೀವು ನಿಮ್ಮನ್ನು ಶಕ್ತಿಯ ಒಂದು ಉನ್ನತವಾದ ಹಾಗೂ ಆಹ್ಲಾದಕರವಾದ ಸ್ಥಿತಿಯಲ್ಲಿ ಪಡೆಯುವಿರಿ.

ಪ್ರಶ್ನೆ: ಗುರುದೇವ, ಆತ್ಮ-ಪ್ರೇಮವು ಅಷ್ಟೊಂದು ಕಷ್ಟ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಅದು ಕಷ್ಟ ಅಲ್ಲವೇ ಅಲ್ಲ. ಆತ್ಮವೇ ಪ್ರೇಮ, ನಿನಗೆ ಅರ್ಥವಾಗುತ್ತಿದೆಯೇ? ಬಾಲ್ಯದಿಂದಲೇ ನೀವು ಕೆಟ್ಟವರೆಂದು ನಿಮಗೆ ಹೇಳಲಾಯಿತು ಮತ್ತು ಆತ್ಮದ ವೈರಿಯಾಗಿರುವುದು ಮನಸ್ಸು. ಈ ಜ್ಞಾನದ ಮೂಲಕ ಮನಸ್ಸು, "ನಾನು ಪ್ರೇಮ ಮತ್ತು ನಾನು ನನ್ನನ್ನೇ ಪ್ರೀತಿಸುವ ಅಗತ್ಯವಿಲ್ಲ" ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ಟಾರ್ಚನ್ನು ನೋಡಲು ನಿಮಗೊಂದು ಟಾರ್ಚಿನ ಅಗತ್ಯವಿಲ್ಲ. ಒಂದು ಮೇಣದಬತ್ತಿಯನ್ನು ನೋಡಲು ನಿಮಗೊಂದು ಮೇಣದಬತ್ತಿಯ ಅಗತ್ಯವಿದೆಯೇ? ಮೇಣದಬತ್ತಿಯೇ ತನ್ನನ್ನು ತೋರಿಸುತ್ತದೆ. ಅದೇ ರೀತಿಯಲ್ಲಿ, ನೀವು ಪ್ರೇಮವಾಗಿರುವಿರಿ. ನೀವು ಕುಳಿತುಕೊಂಡು, "ನಾನು ನನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಬೇಕಾದ ಅಗತ್ಯವಿಲ್ಲ.

ನೀವು ಹೇಗೇ ಇದ್ದರೂ, ಅದೆಲ್ಲವನ್ನೂ ದೇವರಿಗೆ ಅರ್ಪಿಸಿ; ನಿಮ್ಮ ಯೋಚನೆಗಳು, ನಿಮ್ಮ ಭಾವನೆಗಳು, ನಿಮ್ಮ ಮನಸ್ಸು - ಸಕಾರಾತ್ಮಕ ಅಥವಾ ನಕಾರಾತ್ಮಕ, ಅದು ಹೇಗೇ ಇರಲಿ, ಅದೆಲ್ಲವನ್ನೂ ಅರ್ಪಿಸಿ ಮುಕ್ತವಾಗಿರಿ. ಇದು ನಿಮ್ಮ ಮನಸ್ಸಲ್ಲ, ಇವುಗಳು ನಿಮ್ಮ ಯೋಚನೆಗಳಲ್ಲ ಎಂಬುದನ್ನು ತಿಳಿಯಿರಿ. ನಿಜವಾಗಿ, ನಿಮಗಿದರ ಅನುಭವವಾಗಿರಬಹುದು - ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮಗೆ ಕೋಪ ಬರುತ್ತದೆ ಅಥವಾ ಅಸಮಾಧಾನವಾಗುತ್ತದೆ. ಕೆಲವು ಜನರೊಂದಿಗೆ ಇರುವುದರಿಂದಲೇ ಅಥವಾ ಒಂದು ನಿರ್ದಿಷ್ಟ ಸ್ಥಳದಲ್ಲಿರುವುದರಿಂದಲೇ ಇದ್ದಕ್ಕಿದ್ದಂತೆ ನಿಮಗೆ ಕೋಪ ಬರುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ಇದ್ದಕ್ಕಿದ್ದಂತೆ ನಿಮಗೆ ಕೋಪ ಬರುತ್ತದೆ. ಅದು ನಿಮ್ಮದಲ್ಲ. ಆ ಸ್ಥಳದಲ್ಲಿ ಈ ಕಂಪನಗಳಿದ್ದವು ಮತ್ತು ನೀವು ಹೋದಾಗ, ನೀವದನ್ನು ಪ್ರತಿಫಲಿಸಲು ತೊಡಗಿದಿರಿ.

ಹಲವು ಸಲ ನೀವು ಏನನ್ನಾದರೂ ಹೇಳಲು ಬಯಸುವುದಿಲ್ಲ, ಆದರೆ ಕೆಲವು ಜನರ ಕಂಪನಗಳು ನೀವದನ್ನು ಹೇಳುವಂತೆ ಮಾಡುತ್ತದೆ ಮತ್ತು ನಂತರ ನೀವದರ ಬಗ್ಗೆ ಮರುಗುತ್ತೀರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ಹೀಗೆ, ನೀವೊಂದು ದ್ವೀಪದಲ್ಲಿ ವಾಸಿಸುತ್ತಿಲ್ಲ. ನಾವು ಇತರರ ಮೇಲೆ ಪರಿಣಾಮ ಬೀರುತ್ತೇವೆ ಮತ್ತು ಇತರರ ಪರಿಣಾಮ ನಮ್ಮ ಮೇಲೆ ಆಗುತ್ತದೆ. ಇದು ನನ್ನ ಗಾಳಿಯೆಂದು ನೀವು ಹೇಳಲು ಸಾಧ್ಯವೇ? ಇಲ್ಲ, ನಿಮ್ಮ ಉಸಿರಿನಿಂದ ಹೊರಬರುವ ಗಾಳಿಯು ಇತರರ ಶ್ವಾಸಕೋಶದೊಳಕ್ಕೂ ಹೋಗುತ್ತದೆ. ನಾವು ಗಾಳಿಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ನೀವು ನಿಮ್ಮ ಗಾಳಿಯನ್ನು ಕೂಡಾ ಕಾಪಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ, ಮನಸ್ಸು ಗಾಳಿಗಿಂತ ಸಾವಿರ ಪಾಲು ಸೂಕ್ಷ್ಮವಾದುದು. ಮತ್ತು ಖಂಡಿತವಾಗಿಯೂ ಯೋಚನೆಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಇಲ್ಲಿಯೇ ಮಂತ್ರಗಳು ಬಹಳ ಉಪಯೋಗವಾಗುವುದು. ಸಾವಿರಾರು ವರ್ಷಗಳ ವರೆಗೆ ಜನರು ಈ ಮಂತ್ರಗಳನ್ನು ಪಠಿಸಿದ್ದಾರೆ, ಹೀಗಾಗಿ ನೀವು ಕುಳಿತುಕೊಂಡು ಕೆಲವು ನಿಮಿಷಗಳ ಕಾಲ "ಓಂ ನಮಃ ಶಿವಾಯ" ಎಂದು ಜಪಿಸಿದಾಗ, ಅದು ಹೇಗೋ ಮನಸ್ಸನ್ನು ಮತ್ತು ಶಕ್ತಿಯನ್ನು ಬಲಪಡಿಸುತ್ತದೆ ಹಾಗೂ ಇದು ನಿಮ್ಮನ್ನು ಖಿನ್ನತೆಯಿಂದ ದೂರವಿರಿಸುತ್ತದೆ.  

ನಿಮ್ಮ ಸೂಕ್ಷ್ಮ ಶರೀರವು ನಿಮ್ಮ ಭೌತಿಕ ಶರೀರಕ್ಕಿಂತ ದೊಡ್ಡದು. ನಿಮ್ಮ ಪ್ರಾಣ ಶರೀರವು ನಿಮ್ಮ ಭೌತಿಕ ಶರೀರಕ್ಕಿಂತ ಒಂದೂವರೆ ಅಡಿಗಳಷ್ಟು ದೊಡ್ಡದು. ನೀವು "ಫ್ಯಾಂಟಮ್(ಭ್ರಮೆ) ನೋವು" ಎಂಬುದನ್ನು ಕೇಳಿದ್ದೀರಾ? ಅದರಲ್ಲಿ, ಕೈ ಅಥವಾ ಕಾಲನ್ನು ಕತ್ತರಿಸಿ ತೆಗೆಯಲಾದ ಒಬ್ಬ ವ್ಯಕ್ತಿಗೆ, ಹಾಗೆ ತೆಗೆಯಲಾದ ಭಾಗದಲ್ಲಿ ನೋವಿನ ಅನುಭವವಾಗುತ್ತದೆ. ಇದಕ್ಕೇನು ಮಾಡುವುದೆಂದು ವೈದ್ಯರಿಗೆ ತಿಳಿಯುವುದಿಲ್ಲ. ಅಲ್ಲೊಂದು ಭೌತಿಕವಾದ ಕೈಯಿದ್ದರೆ, ನೀವು ಅದರ ಮೇಲೆ ಯಾವುದಾದರೂ ಮುಲಾಮು ಹಚ್ಚಬಹುದು. ಆದರೆ ಅಲ್ಲಿ ಕೈಯಿಲ್ಲ ಮತ್ತು ಅವರಿಗೆ ಅದರಲ್ಲೊಂದು "ಫ್ಯಾಂಟಮ್ ನೋವು" ಇದೆ. ಇದು ಪ್ರಾಣ ಶರೀರ ಅಥವಾ ಸೂಕ್ಷ್ಮ ಶರೀರ. ನೀವು ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನ ಮಾಡುವಾಗ, ನೀವು ತಡವಿಲ್ಲದೆ ಕ್ಷಿಪ್ರವಾಗಿ ಅದರಿಂದ ಹೊರಬರಬಹುದು.

ಹೀಗೆ ನಮ್ಮ ಸೂಕ್ಷ್ಮ ಶರೀರವು ನಮ್ಮ ಭೌತಿಕ ಶರೀರಕ್ಕಿಂತ ದೊಡ್ಡದಾಗಿದೆ, ಮತ್ತು ಸೂಕ್ಷ್ಮ ಶರೀರವು ಕುಗ್ಗುವಾಗಲೇ ನಿಮಗೆ ಖಿನ್ನತೆಯುಂಟಾಗುವುದು. ಅದು ಸ್ವಲ್ಪ ಕುಗ್ಗುವಾಗ ನಿಮಗೆ ದುಃಖವುಂಟಾಗುತ್ತದೆ, ಅದು ಇನ್ನೂ ಹೆಚ್ಚು ಕುಗ್ಗುವಾಗ ನಿಮಗೆ ಖಿನ್ನತೆಯ ಅನುಭವವಾಗುತ್ತದೆ ಮತ್ತು ಅದು ಭೌತಿಕ ಶರೀರಕ್ಕಿಂತ ಚಿಕ್ಕದಾಗುವಾಗ ಆತ್ಮಹತ್ಯೆಯ ಪ್ರವೃತ್ತಿಗಳು ಬರುತ್ತವೆ. ಆತ್ಮಹತ್ಯೆಯ ಪ್ರವೃತ್ತಿ ಅಂದರೆ ಏನು? ಈ ಉಡುಪು ನನಗೆ ಅತಿಯಾಗಿ ಬಿಗಿಯಾದರೆ, ನಾನು ಅದರಿಂದ ಹೊರಬರಲು ಬಯಸುತ್ತೇನೆ. ನೋಡಿ, ನೀವು ನಿಮ್ಮ ಅಳತೆಗಿಂತ ಎರಡು ಅಥವಾ ಮೂರು ಅಳತೆಯಷ್ಟು ಚಿಕ್ಕದಾದ ಕೋಟನ್ನು ಧರಿಸಿದರೆ, ನಿಮಗೆ ಆರಾಮವಾಗಿರಲು ಸಾಧ್ಯವೇ? ನೀವೇನು ಮಾಡಲು ಬಯಸುತ್ತೀರಿ? ನೀವು ಅದರಿಂದ ಹೊರಬರಲು ಬಯಸುತ್ತೀರಿ. ಜನರಲ್ಲಿ ಆತ್ಮಹತ್ಯೆಯ ಪ್ರವೃತ್ತಿಯಿರುವಾಗ ಆಗುವುದು ಇದೇ. ಸೂಕ್ಷ್ಮ ಶರೀರವು ಕುಗ್ಗಿ ಭೌತಿಕ ಶರೀರಕ್ಕಿಂತ ಚಿಕ್ಕದಾಗಿದೆ, ಮತ್ತು ಅದಕ್ಕಾಗಿಯೇ ಆತ್ಮಹತ್ಯೆಯ ಪ್ರವೃತ್ತಿ ಬರುವುದು. ಆದರೆ ನೀವು ಸುದರ್ಶನ ಕ್ರಿಯೆ ಅಥವಾ ಧ್ಯಾನ ಅಥವಾ ಪ್ರಾಣಾಯಾಮ ಮಾಡಿದಾಗ ಸೂಕ್ಷ್ಮ ಶರೀರವು ದೊಡ್ಡದಾಗಿ ಸಾಮಾನ್ಯವಾಗುತ್ತದೆ ಮತ್ತು ಈ ಪ್ರವೃತ್ತಿಯು ಮಾಯವಾಗುತ್ತದೆ.

ನಿಮಗೆ ಗೊತ್ತಾ, ಇತ್ತೀಚೆಗೆ ನಾನು ಟಾಂಪಾಕ್ಕೆ ಹೋಗಿದ್ದಾಗ, ಒಬ್ಬರು ಮನಃಶಾಸ್ತ್ರಜ್ಞರು ನನ್ನಲ್ಲಿ ಏನು ಹೇಳಿದರೆಂದರೆ, ಪ್ರತಿ ೩೦ ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆಂದು. ಅದು ಬಹಳ ಹೆಚ್ಚು. ನನಗೆ ಬಹಳ ಚಕಿತವಾಯಿತು. ಆಗ ನನಗನಿಸಿತು, ನಾವು ಈ ಜ್ಞಾನವನ್ನು ಜನರಿಗೆ ತಲುಪಿಸಬೇಕೆಂದು. ಅವರು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನಗಳನ್ನು ಮಾಡಿದಾಗ ಸೂಕ್ಷ್ಮ ಶರೀರವು ಬಲಯುತವೂ ದೊಡ್ಡದೂ ಆಗುತ್ತದೆ. ಮೊದಲಿಗೆ ನಿಮಗೆ ಸಾಮಾನ್ಯವಾಗಿರುವ ಹಾಗೂ ಸಂತೋಷದ ಅನುಭವವಾಗುತ್ತದೆ, ನಂತರ ಸೂಕ್ಷ್ಮ ಶರೀರವು ಇನ್ನೂ ದೊಡ್ಡದಾಗುತ್ತದೆ ಮತ್ತು ನಿಮಗೆ ಹೆಚ್ಚಿನ ಸಂತೋಷದ ಅನುಭವವಾಗುತ್ತದೆ. ನಂತರ ಅದು ಇನ್ನೂ ದೊಡ್ಡದಾದ ಕಾರಣಾತ್ಮಕ (ಕಾಸಲ್)ಶರೀರದೊಂದಿಗೆ ಒಂದಾದರೆ, ಆಗ ನೀವು ಪರಮಸುಖಿಗಳಾಗುತ್ತೀರಿ ಮತ್ತು ಎಲ್ಲಾ ಸಮಯವೂ ಬಹಳ ಸಂತೋಷವಾಗಿರುವಿರಿ.