ಸೋಮವಾರ, ಮಾರ್ಚ್ 31, 2014

ಅಪೇಕ್ಷೆಗಳನ್ನು ತ್ಯಜಿಸಿ ನಿರಾಳವಾಗಿರಿ

೩೧ ಮಾರ್ಚ್ ೨೦೧೪
ಬೆಂಗಳೂರು, ಭಾರತ

ನಾವು ಭೂತಕಾಲದಿಂದ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಭೂತಕಾಲದಿಂದ ಆಘಾತವನ್ನಲ್ಲ.
ಸಾಮಾನ್ಯವಾಗಿ, ಜನರು ಭೂತಕಾಲದ ನಕಾರಾತ್ಮಕತೆಗಳನ್ನು ಹಿಡಿದಿಟ್ಟುಕೊಂಡಿರುತ್ತಾರೆ ಮತ್ತು ಭವಿಷ್ಯದ ಬಗ್ಗೆ ಅನಿಶ್ಚಿತತೆ, ಆತಂಕ ಮತ್ತು ಭಯಗಳನ್ನು ಅನುಭವಿಸುತ್ತಾರೆ. ಇದು ಜೀವಿಸುವ ಮೂರ್ಖ ವಿಧಾನವಾಗಿದೆ. ಜ್ಞಾನಿಗಳು, ಬುದ್ಧಿವಂತ ಜನರು ತದ್ವಿರುದ್ಧವಾಗಿ ಮಾಡುತ್ತಾರೆ. ಅವರು ಭೂತಕಾಲದಿಂದ ಪಾಠವನ್ನು ಕಲಿಯುತ್ತಾರೆ ಮತ್ತು ಭವಿಷ್ಯಕ್ಕಾಗಿ ಭರವಸೆ ಹಾಗೂ ಉತ್ಸಾಹಗಳನ್ನು ಇಟ್ಟುಕೊಳ್ಳುತ್ತಾರೆ, ಆತಂಕವನ್ನಲ್ಲ. ಹಾಗಾದರೆ ನೀವೆಲ್ಲರೂ ಬುದ್ಧಿವಂತ ಜನರು, ಅಲ್ಲವೇ?

ಪ್ರಶ್ನೆ: ಗುರುದೇವ, ಪ್ರೀತಿಯು ಕಹಿಯಾಗಿ ಮಾರ್ಪಾಡಾಗುವಾಗ ಏನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಸುಮ್ಮನೆ ಕಾಯುತ್ತಿರು, ಪ್ರತಿಕ್ರಿಯಿಸಬೇಡ, ಕಹಿತನವು ಮತ್ತೆ ಪ್ರೀತಿಯಾಗಿ ತಿರುಗುವುದು. ನೀವು ಹೆಚ್ಚಾಗಿ ನೋಡುವುದೇನೆಂದರೆ, ಯಾವ ಜನರಿಗಾಗಿ ನೀವು ಬಹಳಷ್ಟನ್ನು ಮಾಡಿರುವಿರೋ ಅವರು ಕಹಿಯಾಗುತ್ತಾರೆ! ಮತ್ತು ನೀವು, ಎಲ್ಲರೂ ಒಂದು ಜ್ಞಾನೋದಯದ ಸ್ಥಿತಿಯಲ್ಲಿರಬೇಕೆಂದು ನಿರೀಕ್ಷಿಸುತ್ತೀರಿ, ಜಗತ್ತಿನಲ್ಲಿ ಅದು ಸಾಧ್ಯವಿಲ್ಲ.
ಎಲ್ಲರೂ ನಗುತ್ತಾ, ನಿಮ್ಮನ್ನು ನೀವಿರುವಂತೆಯೇ ಸ್ವೀಕರಿಸುವುದಿಲ್ಲ ಮತ್ತು ಬೇಷರತ್ತಾಗಿ ಪ್ರೀತಿಸುವ ಹಾಗೂ ಕೊಡುವ ಜಾಗದಲ್ಲಿರುವುದಿಲ್ಲ. ಅದು ಸಾಧ್ಯವಿಲ್ಲ. ನೀವು ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ನೀವದನ್ನು ಎದುರಿಸಬೇಕು, ಅಷ್ಟೇ.

ಪ್ರಶ್ನೆ: ಗುರುದೇವ, ವೀಕ್ಷಕನು ಯಾರು? ನಮ್ಮ ಗುರಿಯು ವೀಕ್ಷಕನೊಂದಿಗೆ ವಿಲೀನಗೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ಗುರಿಯಿಲ್ಲ, ವಿಲೀನವಾಗಲು ಏನೂ ಇಲ್ಲ. ಅದು ಅಲ್ಲಿದೆ, ಅಷ್ಟೇ. ತಿಳಿಯಿತೇ? ಅಲ್ಲೇನಿರುವುದೋ ಅದು ಅಲ್ಲಿದೆ. ವರ್ತಮಾನದ ಕ್ಷಣದಲ್ಲಿ ಅದು ಯಾವತ್ತೂ ಇದೆ; ಸಾಕ್ಷಿಯು ಅಲ್ಲಿದೆ. ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆ, ಅದು ಸಾಕ್ಷಿಯಾಗಿದೆ.
ನೀನು ಮಾಡಬೇಕಾಗಿರುವುದು ಏನೆಂದರೆ, ಮನಸ್ಸು ಒಂದರ ನಂತರ ಒಂದರಂತೆ ಬಯಕೆಗಳಿಂದ ಮುಚ್ಚಿಕೊಳ್ಳುತ್ತಾ ಇದೆ ಎಂಬುದನ್ನು ತಿಳಿಯುವುದು. ಬಯಕೆಗಳ ಈ ಸುರಿಮಳೆಯು, ನೀನು ಯಾವ ಶುಭ್ರ ಆಕಾಶವಾಗಿರುವೆಯೋ ಅದನ್ನು ನೋಡಲು ನಿನಗೆ ಬಿಡುವುದಿಲ್ಲ. ಹೀಗಾಗಿ, ಬಯಕೆಗಳನ್ನು ಎಸೆದುಬಿಡು.
’ವಿಹಾಯ ಕಾಮನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ  I
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ II’ (೨.೭೧)
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳಿರುವನು, ’ಬಯಕೆಗಳನ್ನು ಎಸೆ, ಮತ್ತು ನಂತರ ನಿನಗೆ ವಿಶ್ರಾಮ ದೊರೆಯುವುದು.’ ಇಲ್ಲದಿದ್ದರೆ, ಒಂದಲ್ಲ ಒಂದಕ್ಕಾಗಿ ಸುಡುವ ಬಯಕೆಯಿರುತ್ತದೆ, ಮತ್ತು ಇದು ನಿಮ್ಮನ್ನು ಓಡಿಸಿಕೊಂಡಿರುತ್ತದೆ.
ನೀವು ಟ್ರೆಡ್‌ಮಿಲ್‌ನ ಮೇಲೆ ಓಡುತ್ತಿರುವವರೆಗೆ (ಅಂದರೆ ಬಯಕೆಗಳ ಹಿಂದೆ), ವಿಶ್ರಾಮವಿಲ್ಲ. ಎಲ್ಲೋ ಒಂದುಕಡೆ ನೀವು ’ನಿಲ್ಲು’ ಎಂಬ ಗುಂಡಿಯನ್ನು ಅದುಮಿ ಕುಳಿತುಕೊಳ್ಳಬೇಕಾಗುತ್ತದೆ! ಇದನ್ನೇ ನಾವು ಮಾಡುತ್ತಿರುವುದು. ಟ್ರೆಡ್‌ಮಿಲ್‌ನ ಮೇಲೆ ಓಡುವುದು ಮತ್ತು ನಾಗಾಲೋಟದಿಂದ ಓಡುವುದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಕಾಲದಿಂದ ಕಾಲಕ್ಕೆ ನೀವು ಮತ್ತೆ ಮತ್ತೆ ವಿಶ್ರಾಮ ಮಾಡುವಾಗ, ನಿಮಗೆ ಸತ್ಯದ ಅರಿವಾಗುತ್ತದೆ. ಆದರೆ ಆ ಸ್ಥಿತಿ ಕೂಡಾ ಯಾವತ್ತೂ ಇರಲು ಸಾಧ್ಯವಿಲ್ಲ. ಪುನಃ ಇನ್ನೊಂದು ಯೋಚನೆ, ಇನ್ನೊಂದು ಬಯಕೆ ಬರುವುದು.
ಯೋಗಿ ಅಂದರೆ ಏನರ್ಥ? ಯಾರಿಗೆ ಒಂದು ವರ್ಷದಲ್ಲಿ ಒಂದು ಬಯಕೆ ಬರುವುದೋ ಅವನು.
ಅಯೋಗಿ ಅಂದರೆ ಏನರ್ಥ? ಯಾರಿಗೆ ಪ್ರತಿಕ್ಷಣದಲ್ಲೂ, ಪ್ರತಿದಿನವೂ ಒಂದು ದಶಲಕ್ಷ ಬಯಕೆಗಳು ಬರುವುವೋ ಅವನು.
ಹೀಗಾಗಿ ನಿಮ್ಮ ಬಯಕೆಗಳನ್ನು ಕಡಿಮೆಮಾಡಿಕೊಳ್ಳಿ. ತಿಳಿಯಿತೇ?
ಈಗ ನೀವು ಕೇಳಲೂಬಹುದು, "ನಾನು ನನ್ನ ಬಯಕೆಗಳನ್ನು ಹೇಗೆ ಕಡಿಮೆಮಾಡಿಕೊಳ್ಳಬಹುದು?" ಎಲ್ಲವೂ ಮುಕ್ತಾಯವಾಗಲಿದೆ ಎಂಬುದನ್ನು ತಿಳಿಯಿರಿ! ಅಷ್ಟೇ. ಇದು ವೈರಾಗ್ಯ, ಮತ್ತು ಇದಕ್ಕಾಗಿ ನಿಮಗೆ ಯಾವುದೇ ಅಭ್ಯಾಸದ ಅಗತ್ಯವಿಲ್ಲ.
ಎಲ್ಲವೂ ಮುಕ್ತಾಯವಾಗಲಿದೆ! ಈ ಒಂದು ಯೋಚನೆಯು ಬಯಕೆಗಳಿಗಿರುವ ಪ್ರತಿವಿಷವಾಗಿದೆ. ಎಲ್ಲವೂ ಮುಕ್ತಾಯಗೊಳ್ಳಲಿದೆ. ಇದು ಧ್ಯಾನವಾಗಿದೆ. ವೈರಾಗ್ಯವಿಲ್ಲದೆ, ಧ್ಯಾನವು ಅಸಾಧ್ಯಕ್ಕೆ ಹತ್ತಿರವೆಂದು ಹೇಳಬಹುದು!
   
ಪ್ರಶ್ನೆ: ಗುರುದೇವ, ದೇವರೇ ಒಂದು ತೊಂದರೆಯಾಗಿರುವಾಗ, ಮಾಡುವುದೇನು?

ಶ್ರೀ ಶ್ರೀ ರವಿ ಶಂಕರ್: ದೇವರಿಗೆ ಒಂದು ತೊಂದರೆಯಾಗಬೇಡ!
ದೇವರು ನಿಮಗೆ ಒಂದು ತೊಂದರೆಯೆಂದು ನೀವು ಯೋಚಿಸುವಾಗ, ನೀವು ದೇವರಿಗೆ ಒಂದು ತೊಂದರೆಯಾಗಿರುತ್ತೀರಿ! ಇದೊಂದು ಸಮಸ್ಯೆಯಾಗುತ್ತದೆ.
ಒಮ್ಮೆ ಜೆಮ್ಶದ್‌ಪುರದಲ್ಲೋ ಅಥವಾ ಎಲ್ಲೋ ಒಬ್ಬಳು ಮಹಿಳೆಯು ೮ ದಿನಗಳವರೆಗೆ ಉಪವಾಸ ಮಾಡಿದಳು ಮತ್ತು ತಾನು ಗುರುದೇವರೊಂದಿಗೆ ಮಾತನಾಡುವಲ್ಲಿಯವರೆಗೆ ಆಹಾರ ತೆಗೆದುಕೊಳ್ಳುವುದಿಲ್ಲವೆಂದು ಅವಳು ಹೇಳಿದಳು.
ನಾನಂದೆ, "ಇದೊಂದು ದೊಡ್ಡ ಸಮಸ್ಯೆ". ನಾನು ಪ್ರಪಂಚದ ಸುತ್ತಲೂ ಪ್ರಯಾಣ ಮಾಡುತ್ತಿರುತ್ತೇನೆ, ಕೆಲವು ಸ್ಥಳಗಳಲ್ಲಿ ದೂರವಾಣಿ ಸಂಪರ್ಕ ಸಾಧ್ಯವಾಗುತ್ತದೆ, ಮತ್ತು ಇತರ ಸ್ಥಳಗಳಲ್ಲಿ ಸಂಪರ್ಕ ಸಾಧ್ಯವಾಗುವುದಿಲ್ಲ. ಜನರು ಈ ರೀತಿ ಯೋಚಿಸಲು ತೊಡಗಿದರೆ, ಆಗ ಅಲ್ಲೊಂದು ದೊಡ್ಡ ಸಮಸ್ಯೆಯಾಗುವುದು!
ನಂತರ ನಾನು ಅವಳಿಗೆ ಬೈದು ಹೀಗೆಂದು ಹೇಳಬೇಕಾಯಿತು, "ಈ ರೀತಿ ಮಾಡಬೇಡ, ಮೊದಲು ಆಹಾರ ತಿನ್ನು".
ನನಗೆ ನಾನೇ ಹೇಳಿಕೊಂಡೆ, "ಇದೊಂದು ಸೇವೆಯಲ್ಲ, ಬದಲಾಗಿ ಇದು ನಾನು ಸೇವೆ ಮಾಡುವಂತೆ ಮಾಡುವುದಾಗಿದೆ!" ನಾನು ಸೇವೆ ಮಾಡಲು ಸಿದ್ಧನಾಗಿದ್ದೇನೆ, ಆದರೆ ಇದು ನನಗೊಂದು ತಲೆನೋವಾಗುತ್ತದೆ! "ಈ ರೀತಿಯ ವಿಷಯಗಳಲ್ಲಿ ನನಗೆ ನಂಬಿಕೆಯಿಲ್ಲ" ಎಂದು ನಾನಂದೆ.
ದೇವರು ನಿಮಗೊಂದು ಸಮಸ್ಯೆಯಾಗಿರುವರು ಎಂದು ನೀವು ಯಾವತ್ತೂ ಹೇಳಬಾರದು. ದೇವರಿಗಾಗಿ ಅಥವಾ ನಿಮ್ಮ ಗುರುವಿಗಾಗಿ ನಿಮ್ಮ ಹೃದಯವು ಹಾತೊರೆಯುತ್ತಿದ್ದರೆ, ಆಗ ಅದು ಒಳ್ಳೆಯದು. ಇದು ನಿಮ್ಮನ್ನು ಪ್ರಗತಿಯ ಪಥದಲ್ಲಿ ಕರೆದೊಯ್ಯುತ್ತದೆ. ಆ ಹಾತೊರೆತ ಇಲ್ಲದಿದ್ದರೆ, ಆಗ ಜೀವನದಲ್ಲಿ ಯಾವುದೇ ರಸವಿರುವುದಿಲ್ಲ.
ಹಾತೊರೆತ ಕೊನೆಗೊಂಡ ದಿನ ಜೀವನದಲ್ಲಿ ಶುಷ್ಕತೆ ಬರಲು ಆರಂಭವಾಗುತ್ತದೆ. ಜನರು ಐಹಿಕ ಪ್ರಪಂಚಕ್ಕಾಗಿ ಹಂಬಲಿಸುತ್ತಿರುತ್ತಾರೆ, ಐಹಿಕ ವಸ್ತುಗಳಿಗಾಗಿ ಜನರು ಹಾತೊರೆಯುತ್ತಾರೆ ಮತ್ತು ಅವರು ಸಾಯುತ್ತಾರೆ. ಆದರೆ ನೀವು ದೇವರಿಗಾಗಿ ಹಾತೊರೆಯಬೇಕು, ಆಗ ನೀವು ಜ್ಞಾನೋದಯವನ್ನು ಹೊಂದುವಿರಿ. ನೀವು ಉನ್ನತಿ ಹೊಂದುವಿರಿ ಮತ್ತು ಜೀವನದಲ್ಲಿ ಎಲ್ಲವನ್ನೂ ಗಳಿಸುವಿರಿ, ದೇವರಿಗಾಗಿರುವ ಹಾತೊರೆತವು ಅಂತಹುದಾಗಿರಬೇಕು.

ಪ್ರಶ್ನೆ: ಗುರುದೇವ, ಆತ್ಮವು ಶಾಶ್ವತವಾದುದು, ಶುದ್ಧ ಹಾಗೂ ಪುರಾತನವಾದುದಾಗಿದೆ. ಹಾಗಾದರೆ ತನ್ನನ್ನು ತಾನೇ ತನ್ನ ನಿಜವಾದ ಸ್ವಭಾವದಲ್ಲಿ ತಿಳಿಯದಷ್ಟು ಅದು ಹೇಗೆ ವಿಭ್ರಾಂತಗೊಂಡಿತು? 

ಶ್ರೀ ಶ್ರೀ ರವಿ ಶಂಕರ್: ಇದು ಅತಿಪ್ರಶ್ನ ಎಂದು ಕರೆಯಲ್ಪಡುತ್ತದೆ, ಅಂದರೆ, ನಿನ್ನನ್ನು ನಿಜಕ್ಕೂ ಚಿಂತೆಗೊಳಪಡಿಸದಿರುವ ಪ್ರಶ್ನೆ ಮತ್ತು ಕೇಳುವುದು ಅತಿಯಾಯ್ತು.
ಹಾಗಾದರೆ ಮೊದಲ ಅಜ್ಞಾನವು ಯಾಕೆ ಸಂಭವಿಸಿತು? - ಈ ಪ್ರಶ್ನೆಗಳನ್ನು ಯಾವತ್ತಿಗೂ ಉತ್ತರಿಸಲಾಗಿಲ್ಲ. ಧರ್ಮಗ್ರಂಥಗಳಲ್ಲಿ ಕೂಡಾ, ಇದು ಅತಿಪ್ರಶ್ನ ಎಂದು ಹೇಳಲಾಗಿದೆ. ಅದನ್ನು ತಿಳಿಯುವುದರಿಂದ ನೀನೇನು ಮಾಡಲಿರುವೆ? ಯಾರಾದರೊಬ್ಬರು, "ಸರಿ, ಇದು ಎರಡು ಬಿಲಿಯನ್ ವರ್ಷಗಳ ಮೊದಲು ಸಂಭವಿಸಿತು" ಎಂದು ಹೇಳಿದರೂ ಕೂಡಾ, ಏನು ಪ್ರಯೋಜನ? ಅದರಿಂದ ನೀನೇನು ಸಾಧಿಸಲಿರುವೆ ಅಥವಾ ಬಗೆಹರಿಸಲಿರುವೆ?
ತಿಳಿಯಲು ಬೇರೆ ಹಲವಾರು ವಿಷಯಗಳಿವೆ. ಮೊದಲು ನೀನು ಯಾರು ಎಂಬುದನ್ನು ತಿಳಿ, ಮತ್ತು ನಂತರ, ಮೊದಲ ಅಜ್ಞಾನವು ಹೇಗೆ ಬಂತು ಎಂಬುದನ್ನು ನೀನು ಹೇಳಬಹುದು.

ಪ್ರಶ್ನೆ: ಗುರುದೇವ, ನಾನು ಸಾಕಷ್ಟು ಸಂಘಟಿತ ವ್ಯಕ್ತಿ, ಆದರೆ ನನ್ನ ಪತ್ನಿ ಮತ್ತು ಮಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದಾರೆ. ಕೆಲವೊಮ್ಮೆ ನಾನು ಕೋಪಗೊಳ್ಳುವ ಕಾರಣಗಳಲ್ಲಿ ಇದು ಒಂದಾಗಿದೆ. ನಾನು ಅವರನ್ನು ಸರಿಪಡಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಪರವಾಗಿಲ್ಲ, ಅವರು ಹೆಚ್ಚು ಸಂಘಟಿತರಾಗಿರುವುದನ್ನು ಕಲಿಯುವುದಕ್ಕಾಗಿ ನೀನು ಇದನ್ನು ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಜೀವನದಲ್ಲಿ ಯಾವುದೇ ವಿನೋದವಿಲ್ಲ! ಒಬ್ಬರು ಕೋಪಿಸಬೇಕು, ಒಬ್ಬರು ಒಲಿಸ ಬೇಕು ಮತ್ತು ಸಮಾಧಾನ ಮಾಡಬೇಕು. ಇಲ್ಲದಿದ್ದರೆ ಬಹಳ ಬೇಜಾರೆನಿಸುವುದು; ಘಟನಾರಹಿತ, ನೀರಸ, ರುಚಿಯಿಲ್ಲದ ಜೀವನವಾಗುವುದು. ಆದರೆ ಅದನ್ನು ಅತಿಯಾಗಿ ದೂರಕ್ಕೆ ಒಯ್ಯಬೇಡ! ಕೆಲವೊಮ್ಮೆ ಪರವಾಗಿಲ್ಲ.

ಸೋಮವಾರ, ಮಾರ್ಚ್ 24, 2014

ವ್ಯಕ್ತಿತ್ವಕ್ಕನುಗುಣವಾದ ಜ್ಞಾನದ ಮಟ್ಟ

೨೪ ಮಾರ್ಚ್ ೨೦೧೪
ಬಾದ್ ಅಂತೋಗಸ್ಟ್, ಜರ್ಮನಿ

ವಿವೇಕದ ಕೊರತೆಯಿರುವ ಜನರು ಇತರರ ತಪ್ಪುಗಳನ್ನು ದೊಡ್ಡದಾಗಿ ಮತ್ತು ತಮ್ಮ ಸ್ವಂತ ತಪ್ಪುಗಳನ್ನು ಸಣ್ಣದಾಗಿ ಕಾಣುತ್ತಾರೆ. ಸ್ವಲ್ಪ ಹೆಚ್ಚಿನ ಬುದ್ಧಿವಂತಿಕೆಯ ಜನರು ತಮ್ಮ ಸ್ವಂತ ತಪ್ಪುಗಳನ್ನು ದೊಡ್ಡದಾಗಿ ಮತ್ತು ಇತರರ ತಪ್ಪುಗಳನ್ನು ಸಣ್ಣದಾಗಿ ಕಾಣುತ್ತಾರೆ. ಸಂಪೂರ್ಣ ಜ್ಞಾನವಿರುವ ಜನರು ತಪ್ಪುಗಳನ್ನು ತಮ್ಮದೂ ಅಲ್ಲ, ಇತರರದ್ದೂ ಅಲ್ಲವೆಂಬುದಾಗಿ ನೋಡುತ್ತಾರೆ.’ ಅವರು ತಪ್ಪುಗಳನ್ನು, ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲದಿರುವ ಒಂದು ಸಂಭವವನ್ನಾಗಿ ನೋಡುತ್ತಾರೆ. ಇವುಗಳು ಮೂರು ದರ್ಜೆಗಳಾಗಿವೆ, ಅಷ್ಟೇ.
ಕಡಿಮೆ ಬುದ್ಧಿವಂತಿಕೆ: ನನ್ನ ತಪ್ಪು ಏನೂ ಅಲ್ಲ, ಇತರರ ತಪ್ಪು ದೊಡ್ಡದು.
ಸ್ವಲ್ಪ ಹೆಚ್ಚು ಬುದ್ಧಿವಂತಿಕೆ: ನನ್ನ ತಪ್ಪು ತುಂಬಾ ದೊಡ್ಡದು, ಇತರರ ತಪ್ಪು ಸಣ್ಣದು.
ನಿಜವಾದ ಜ್ಞಾನ: ತಪ್ಪು ನನ್ನದೂ ಅಲ್ಲ, ಇತರರದ್ದೂ ಅಲ್ಲ. ಅದೊಂದು ಘಟನೆ.

ಪ್ರಶ್ನೆ: ನಿರಂತರವಾಗಿ ನನ್ನನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ, ನನಗೆ ಸಲಹೆ ನೀಡುತ್ತಿರುವುದಕ್ಕಾಗಿ, ದಾರಿ ತೋರಿಸುತ್ತಿರುವುದಕ್ಕಾಗಿ ಮತ್ತು ಸಹಾಯ ನೀಡುತ್ತಿರುವುದಕ್ಕಾಗಿ ನಿಮಗೆ ಧನ್ಯವಾದಗಳು ಗುರುದೇವ. ನಾನು ಬಹಳಷ್ಟನ್ನು ಸಾಧಿಸುತ್ತಿದ್ದೇನೆ. ನಾನು ನಿಮಗಾಗಿ ಮಾಡಬಹುದಾದಂತಹದ್ದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ನಾವೆಲ್ಲರೂ ಸಂತೋಷದ ಸಮೀಕ್ಷೆಯನ್ನು ಮಾಡಬಹುದೆಂದು ನನಗನ್ನಿಸುತ್ತದೆ. ನಾವು ಮನೆಮನೆಗೆ ಹೋಗಬೇಕು ಮತ್ತು ಜನರಲ್ಲಿ, "ನೀವು ಸಂತೋಷವಾಗಿರುವಿರೇ? ಇಲ್ಲವಾದರೆ, ಕಾರಣವೇನು?" ಎಂದು ಕೇಳಬೇಕು.
ನಮ್ಮಲ್ಲೊಂದು ಸಂತೋಷದ ಸಮೀಕ್ಷೆಯಿದೆ; ನೀವು ಇಬ್ಬರು ಅಥವಾ ಮೂವರು ಜೊತೆಸೇರಿಕೊಂಡು, ನಿಮ್ಮ ಪ್ರದೇಶದಲ್ಲಿರುವ ಜನರನ್ನು ಭೇಟಿಯಾಗಿ, ಅವರ ಬಾಗಿಲನ್ನು ಬಡಿದು, "ನಾವೊಂದು ಸಣ್ಣ ಸಮೀಕ್ಷೆಯನ್ನು ಮಾಡಲು ಬಯಸುತ್ತೇವೆ. ನೀವು ಸಂತೋಷವಾಗಿರುವಿರೇ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ. ಇಲ್ಲವಾದರೆ, ನಿಮ್ಮ ಅಸಂತೋಷಕ್ಕಿರುವ ಕಾರಣಗಳೇನು?" ಎಂದು ಹೇಳಿ.
ಅವರು ಸಂತೋಷವಾಗಿದ್ದರೆ, ಆಗ ಅವರಲ್ಲಿ, "ನೀವು ಎಷ್ಟು ಹೊತ್ತು ಸಂತೋಷವಾಗಿರುತ್ತೀರಿ? ((ಶೇ. ೭೦ರಷ್ಟು ಸಮಯ, ಶೇ. ೮೦ರಷ್ಟು ಸಮಯ, ಶೇ. ೨೦ರಷ್ಟು ಸಮಯ)" ಎಂದು ಕೇಳಿ. ಈ ಪ್ರಶ್ನೆಗಳೊಂದಿಗೆ ಸುಮಾರು ಏಳೆಂಟು ಪ್ರಶ್ನೆಗಳಿವೆ.
ಕಳೆದ ಕೆಲವು ತಿಂಗಳುಗಳಲ್ಲಿ ನಾವು ಈ ಸಂತೋಷದ ಸಮೀಕ್ಷೆಯನ್ನು ಮುಂದಿಟ್ಟಾಗ, ಜನರಿಗೆ ಅದ್ಭುತ ಅನುಭವಗಳಾಗಿವೆ. ಸಂದರ್ಶಕನಿಗೆ ಒಂದು ಅದ್ಭುತವಾದ ಅನುಭವವಾಗಿದೆ, ಮತ್ತು ಸಂದರ್ಶನ ಮಾಡಲ್ಪಟ್ಟವರಿಗೆ ಕೂಡಾ ಸಂತೋಷವಾಗಿದೆ. ನೀವು ಸಮೀಕ್ಷೆಯನ್ನು ಮಾಡುವಾಗ, ತಮ್ಮ ಬಗ್ಗೆ ಕಾಳಜಿ ವಹಿಸಲಾಗುತ್ತಿದೆಯೆಂದು ಜನರಿಗೆ ಅನ್ನಿಸುತ್ತದೆ ಮತ್ತು ಅವರಿಗೆ ಅದರ ಬಗ್ಗೆ ಬಹಳ ಹಿತವೆನಿಸುತ್ತದೆ.
ಕೆಲವು ಜನರು, "ನಾನು ಸಂತೋಷವಾಗಿರುವೆನೇ? ನನ್ನ ಅಸಂತೋಷಕ್ಕೆ ಕಾರಣವೇನು? ಎಂಬುದಾಗಿ ಯಾರೋ ಬಂದು ನನ್ನಲ್ಲಿ ಕೇಳಿದುದು ಇದು ಮೊದಲನೇ ಸಾರಿ" ಎಂದರು.
ಅರುವತ್ತರ ವಯಸ್ಸಿನಲ್ಲಿದ್ದ ಒಬ್ಬಳು ಮಹಿಳೆಯು, "ಇಷ್ಟೊಂದು ವರ್ಷಗಳಲ್ಲಿ, ನಾನು ಯಾಕೆ ಅಸಂತೋಷವಾಗಿರುವೆನೆಂದು ಒಬ್ಬನೇ ಒಬ್ಬ ವ್ಯಕ್ತಿಯೂ ನನ್ನಲ್ಲಿ ಕೇಳಿರಲಿಲ್ಲ. ಪ್ರಪಂಚದಲ್ಲಿ ಕಾಳಜಿ ವಹಿಸುವ ಜನರು ಹೆಚ್ಚಿದ್ದಾರೆಂದು ನನಗೆ ಈಗ ಅನ್ನಿಸುತ್ತದೆ" ಎಂದು ಹೇಳಿದಳು.
ನೀವೆಲ್ಲರೂ ಧ್ಯಾನ ಮಾಡುವವರು; ನೀವೆಲ್ಲರೂ ಯೋಗ, ಪ್ರಾಣಾಯಾಮ, ಧ್ಯಾನ ಮಾಡುತ್ತೀರಿ ಮತ್ತು ನೀವು ನಿಮ್ಮೊಂದಿಗೆ ಒಂದು ಧನಾತ್ಮಕ ಹೊಳಪು, ಒಂದು ಶಕ್ತಿಯನ್ನು ಒಯ್ಯುತ್ತೀರಿ. ಹೀಗಾಗಿ ನೀವು ಹೋಗಿ ಜನರೊಂದಿಗೆ ಮಾತನಾಡುವಾಗ, ಅದಾಗಲೇ ಸ್ವಲ್ಪ ಶಕ್ತಿಯು ಅವರಿಗೆ ವರ್ಗಾವಣೆಯಾಗಿರುವುದು ಅವರಿಗೆ ಅನುಭವವಾಗುತ್ತದೆ. ಅದಾಗಲೇ ಅವರು ಸಂತೋಷವನ್ನು ಅನುಭವಿಸುತ್ತಾರೆ. ಒಂದು ರೀತಿಯಲ್ಲಿ ನಾವು ಸಂತೋಷವನ್ನು ಹರಡುತ್ತಿದ್ದೇವೆ. ಎಷ್ಟು ಜನರು ಸಂತೋಷವಾಗಿಲ್ಲ ಮತ್ತು ಹೇಗೆ ನಾವು ಅವರಿಗೆ ಸಂತೋಷವನ್ನು ತರಬಹುದು ಎಂಬುದು ಕೂಡಾ ನಮಗೆ ತಿಳಿಯುತ್ತದೆ.
ಕೊನೆಯಲ್ಲಿ, ನಾವು ಆರ್ಟ್ ಆಫ್ ಲಿವಿಂಗ್‌ನ ಆನಂದದ ಅನುಭೂತಿ ಕಾರ್ಯಕ್ರಮ(ಹ್ಯಾಪ್ಪಿನೆಸ್ ಪ್ರೋಗ್ರಾಮ್)ವನ್ನು (ನಮ್ಮ ಅನುಭವದ ವಿವರಗಳನ್ನು) ಹಂಚಿಕೊಳ್ಳಬೇಕು. ಅವರು ಅದನ್ನು ಮಾಡಲು ಬಯಸುವುದಾದರೆ, ಅವರು ನೋಂದಾಯಿಸಿಕೊಂಡು ಕೋರ್ಸನ್ನು ಕೂಡಾ ಮಾಡಬಹುದು.
ಒಂದು ಪ್ರಾಪಂಚಿಕ ಸ್ಥರದಲ್ಲಿ, ಇದು ಜನರನ್ನು ತಲುಪಲಿರುವ ಮತ್ತು ಜೋಡಲಿರುವ ಒಂದು ಮಾರ್ಗ; ಅವರು ನಿಮ್ಮನ್ನು ತಿಳಿಯಲು ಇದೊಂದು ಬಹಳ ಒಳ್ಳೆಯ ಮಾರ್ಗವಾಗಿದೆ.
ನಿಮ್ಮ ಮುಖದ ಮೇಲೆ ಬಾಗಿಲನ್ನು ಬಡಿಯುವ ಕೆಲವು ಜನರು ಇರಲೂಬಹುದು, ಪರವಾಗಿಲ್ಲ. ನಗುನಗುತ್ತಾ ಹೊರಟುಹೋಗಿ; ಅದು ನಿಮ್ಮ ಅಹಂಕಾರವನ್ನು ಒಡೆಯುವ ಪ್ರಕ್ರಿಯೆಯಾಗಿದೆ.
ನೋಡಿ, ಯಾರಾದರೂ ನಿಮ್ಮನ್ನು ಇಷ್ಟಪಡದೇ ಇದ್ದರೂ ಸಹ, ಅದು ನಿಮಗೆ ತೊಂದರೆಯನ್ನುಂಟುಮಾಡುವುದಿಲ್ಲ, ಅದು ನಿಮಗೊಂದು ದೊಡ್ಡ ವಿಷಯವೇ ಅಲ್ಲ. ಒಂದು ಸಂತೋಷವಾದ ಹಾಗೂ ನಗುಮುಖದೊಂದಿಗೆ ಮುಂದಿನ ಜಾಗಕ್ಕೆ ಹೋಗಿ. ನೀವು ಹತ್ತು ಜನರನ್ನು ಭೇಟಿಯಾದರೆ, ಕೆಲವು ಜನರು ಆ ರೀತಿ ಇರಲೂಬಹುದು (ನಿಮ್ಮ ಮುಖದ ಮೇಲೆ ಬಾಗಿಲನ್ನು ಬಡಿಯುವ), ಆದರೆ ನೀವು ಯಾರೊಂದಿಗೆ ಮಾತನಾಡುವಿರೋ, ಅವರು ನಿಮ್ಮ ಮೇಲೆ ಬಹಳ ಕೃತಜ್ಞರಾಗಿರುತ್ತಾರೆ. ನೀವು ಅವರನ್ನು ಕೇಳಿದಿರಿ, ನೀವು ಅವರ ಬಗ್ಗೆ ಕಾಳಜಿ ವಹಿಸಿದಿರೆಂದು ಅವರು ಬಹಳ ಕೃತಜ್ಞರಾಗಿರುವರು. ನೀವೇನು ಹೇಗೆ ಳುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿಗೆ ಈ ಯೋಚನೆ ಇಷ್ಟವಾಯಿತು?
ನಾವು ಕೋರ್ಸನ್ನು ಬಿಟ್ಟುಹೋಗುವ ಮೊದಲು, ಎಲ್ಲಾ ಭಾಷೆಗಳಲ್ಲೂ ನಾವು ಹಲವಾರು ಅರ್ಜಿಗಳನ್ನು ಮಾಡೋಣ. ನೀವು ಸಂತೋಷದ ಸಮೀಕ್ಷೆಯನ್ನು ಮಾಡಿ ಮತ್ತು ಅವುಗಳನ್ನು ನನಗೆ ಕಳುಹಿಸಿ. ನಾವು ಅಂಕಿ ಅಂಶಗಳನ್ನು ವಿಶ್ಲೇಶಿಸಿ ಒಂದು ನಕ್ಷೆಯನ್ನು ಮಾಡೋಣ ಮತ್ತು ಪ್ರತಿಯೊಂದು ಪ್ರದೇಶದಲ್ಲಿ ಎಷ್ಟು ಜನರು ಸಂತೋಷವಾಗಿರುವರು ಮತ್ತು ಪ್ರತಿಯೊಂದು ವಯೋಮಾನದ ಗುಂಪಿನಲ್ಲಿ ಅಸಂತೋಷಕ್ಕಿರುವ ಕಾರಣಗಳೇನು ಎಂದು ನೋಡೋಣ. ಇದೊಂದು ಒಳ್ಳೆಯ ಉಪಾಯ!

ಪ್ರಶ್ನೆ: ಪ್ರೀತಿಯ ಗುರುದೇವ, ಶಿಕ್ಷಣದ ಭವಿಷ್ಯದ ಬಗ್ಗೆ ನೀವು ಮಾತನಾಡಬಲ್ಲಿರಾ? ನಮ್ಮ ಪಠ್ಯಕ್ರಮವು ಹಳೆಯ ಮಾದರಿಯದ್ದು, ಕೆಲಸಕ್ಕೆ ಉಪಯೋಗವಿಲ್ಲದ್ದು ಮತ್ತು ಪ್ರಪಂಚದಲ್ಲಿ ಶಾಂತಿಯನ್ನು ಬೆಂಬಲಿಸುವುದಿಲ್ಲವೆಂದು ತೋರುತ್ತದೆ. ಇದು ಬದಲಾಗುವುದೇ ಮತ್ತು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಹೌದು, ನೀನು ಹೇಳುವುದು ಖಂಡಿತವಾಗಿಯೂ ಸರಿ! ಇದು ಬದಲಾಗಬೇಕು ಹಾಗೂ ನೀನು ಮತ್ತು ನಾನು ಅದನ್ನು ಬದಲಾಯಿಸಬೇಕು. ಅದನ್ನು ಬದಲಾಯಿಸಲು ನಾವು ನಮ್ಮೆಲ್ಲಾ ಪ್ರಯತ್ನಗಳನ್ನು ಹಾಕಬೇಕು.
ಭಾರತದಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ನಮ್ಮ ಶಾಲೆಗಳಿಗಾಗಿ ಹೊಸ ಶೈಕ್ಷಣಿಕ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದೆ. ನಾವು ಭಾರತದಲ್ಲಿ ಸುಮಾರು ೭೦-೮೦ ಶುಲ್ಕ ಸಹಿತ ಶಾಲೆಗಳು ಮತ್ತು ೪೦೦ಕ್ಕಿಂತಲೂ ಹೆಚ್ಚು ಉಚಿತ ಶಾಲೆಗಳನ್ನು ಹೊಂದಿದ್ದೇವೆ. (ದಿನಕ್ಕೊಂದು ಯುರೋ ಮತ್ತು ದಿನಕ್ಕೊಂದು ಡಾಲರ್ ಯೋಜನೆಗಳ ಮೂಲಕ, ೪೦೪ ಉಚಿತ ಶಾಲೆಗಳನ್ನು ನಡೆಸಲಾಗುತ್ತಿದ್ದು ೪೦,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ.) ಮಕ್ಕಳಲ್ಲಿ ಪರಿವರ್ತನೆಯನ್ನು ನೋಡುವುದು ಎಂತಹ ಒಂದು ಆನಂದ.
ನಾವೊಂದು ಹೊಸ ರೀತಿಯ ಕಲಿಸುವಿಕೆಯನ್ನು ಸ್ವೀಕರಿಸಿದ್ದೇವೆ. ಅವರು ತಮ್ಮ ಚೀಲಗಳಲ್ಲಿ ಪುಸ್ತಕಗಳ ಒಂದು ದೊಡ್ಡ ಹೊರೆಯನ್ನು ಹೊತ್ತೊಯ್ಯುವುದಿಲ್ಲ. ಸೃಜನಶೀಲರಾಗಿರುವುದನ್ನು, ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದನ್ನು ನಾವು ಅವರಿಗೆ ಕಲಿಸುತ್ತೇವೆ.  
ಹೌದು, ಅದೇ ರೀತಿಯಲ್ಲಿ ನಾವು ಯುರೋಪಿನಲ್ಲಿ ಕೂಡಾ ಏನನ್ನಾದರೂ ಮಾಡಬೇಕು. ನೋಡೋಣ.

ಪ್ರಶ್ನೆ: ಗುರುದೇವ, ಪ್ರಪಂಚವು ಯಾಕೆ ಸೃಷ್ಟಿಸಲ್ಪಟ್ಟಿತು?

ಶ್ರೀ ಶ್ರೀ ರವಿ ಶಂಕರ್: ನೀನು ಈ ಪ್ರಶ್ನೆಯನ್ನು ಕೇಳಲೆಂದು! ಅದು ಸೃಷ್ಟಿಸಲ್ಪಡದೇ ಇರುತ್ತಿದ್ದರೆ, ನೀನು ಈ ಪ್ರಶ್ನೆಯನ್ನಾದರೂ ಹೇಗೆ ಕೇಳುತ್ತಿದ್ದೆ?
ನಾವೆಲ್ಲರೂ ಪ್ರಪಂಚದ ಸೃಷ್ಟಿಯ ಬಗ್ಗೆ ಯೋಚಿಸುತ್ತಿದ್ದೇವೆ. ಒಂದು ಮರೀಚಿಕೆ ಸೃಷ್ಟಿಸಲ್ಪಟ್ಟಿದೆಯೇ? ಅದು ಯಾವಾಗ ಸೃಷ್ಟಿಸಲ್ಪಟ್ಟಿತು?
ಒಂದು ಮರೀಚಿಕೆ (ಬಿಸಿಲ್ಗುದುರೆ) ಅಂದರೇನು ಎಂಬುದು ನಿನಗೆ ಗೊತ್ತೇ? ಒಂದು ಬಿಸಿಯಾದ ಸೆಖೆಗಾಲದಲ್ಲಿ, ಮರುಭೂಮಿಯಲ್ಲಿ, ನೀರಿನಂತೆ ಕಾಣಿಸುವುದನ್ನು ನೀನು ನೋಡುವೆ, ಆದರೆ ಅದು ನೀರಲ್ಲ. ಅದೊಂದು ಮರೀಚಿಕೆ. ಯಾರಾದರೊಬ್ಬರು, "ಈ ನೀರು ಯಾವಾಗ ಸೃಷ್ಟಿಸಲ್ಪಟ್ಟಿತು?" ಎಂದು ಕೇಳಿದರೆ, ನೀನು, "ಇದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಇದು ಕೇವಲ ಕಾಣುತ್ತದೆ" ಎಂದು ಹೇಳುವೆ. ಹಾಗೆಯೇ, ಈ ಪ್ರಪಂಚವು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಅದು ಕಾಣುವುದಾಗಿದೆ.
ಇದೊಂದು ಉನ್ನತ ಜ್ಞಾನವಾಗಿದೆ, ಇದು ಯೋಗ ವಸಿಷ್ಠದ ಜ್ಞಾನವಾಗಿದೆ. ಅದು ತಲೆಯ ಮೇಲಿಂದ ಹೋಗುವುದಾದರೆ, ಪರವಾಗಿಲ್ಲ! ನಾವದನ್ನು ಮುಂದೆ ಯಾವತ್ತಾದರೂ ಚರ್ಚಿಸಬಹುದು. ಸತ್ಯವೇನೆಂದರೆ, ಈ ಪ್ರಪಂಚವು ಯಾವತ್ತೂ ಸೃಷ್ಟಿಸಲ್ಪಟ್ಟಿಲ್ಲ, ಅದು ಕೇವಲ ತೋರುತ್ತದೆ.
ನಾನು ನಿಮಗೆ ಇದರ ಬಗ್ಗೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ, ಇದೊಂದು ಅತ್ಯಂತ ಗುಪ್ತ ರಹಸ್ಯವಾಗಿದೆ.

ಪ್ರಶ್ನೆ: ಗುರುದೇವ, ನಾನು ನನ್ನ ಜೀವನದಲ್ಲಿ ಎಲ್ಲದಕ್ಕೂ ಕೃತಜ್ಞನಾಗಿದ್ದೇನೆ; ನನ್ನ ಹೆತ್ತವರು, ಶಿಕ್ಷಣ, ಕೆಲಸ, ಉದ್ಯೋಗ. ನಾನು ಭೇಟಿಯಾಗಿರುವ ಪ್ರೇಮಮಯ, ಕಾಳಜಿವಹಿಸುವ ಮತ್ತು ಕರುಣಾಮಯ ಜನರಿಗಾಗಿ ನಾನು ಕೃತಜ್ಞನಾಗಿದ್ದೇನೆ. 

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ಇದು ಜೀವನವನ್ನು ಪ್ರಾರಂಭಿಸಲಿರುವ ಒಂದು ಬಹಳ ಒಳ್ಳೆಯ ರೀತಿಯೆಂದು ನನಗನ್ನಿಸುತ್ತದೆ. ಒಂದು ಕಮಲದ ಹೂವಾಗಿರುವ ರೀತಿ ಇದು, ಕೃತಜ್ಞನಾಗಿರುವ ಮೂಲಕ. ನಿಮ್ಮಲ್ಲಿರುವ ಎಲ್ಲದಕ್ಕೂ ಕೃತಜ್ಞರಾಗಿರಿ. ನಾವು ಹೆಚ್ಚು ಕೃತಜ್ಞರಾದಷ್ಟೂ, ಜೀವನವು ಎಷ್ಟೋ ಹೆಚ್ಚು ಸುಲಭವಾಗುತ್ತದೆ, ಉತ್ತಮವಾಗುತ್ತದೆ. ನಾವು ಹೆಚ್ಚು ಗೊಣಗಿದಷ್ಟೂ, ಜೀವನವು ಒಂದು ಕಲ್ಲಿನಂತೆ ನಮಗೆ ಹೆಚ್ಚು ಭಾರವೆನಿಸುತ್ತದೆ.

ಪ್ರಶ್ನೆ: ಗುರುದೇವ, ಈ ಸುಂದರವಾದ ಜ್ಞಾನವನ್ನು ನಾವು ಪ್ರಪಂಚಕ್ಕೆ ಹರಡುವುದು ಹೇಗೆ? ಈಗಾಗಲೇ ಕೋರ್ಸನ್ನು ಮಾಡಿರುವ, ಆದರೆ ಕ್ರಿಯಾಶೀಲರಾಗಿಲ್ಲದಿರುವ ಜನರನ್ನು ನಾವು ಮರಳಿ ತರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಹ್ಯಾಪ್ಪಿನೆಸ್ ಸರ್ವೇಯು(ಸಂತೋಷದ ಸಮೀಕ್ಷೆ) ಒಂದು ವಿಧಾನವಾಗಿದೆ.
ಇನ್ನೊಂದು ವಿಧಾನವೆಂದರೆ, ಒಂದು ಭೌತಿಕವಾದ ಕೇಂದ್ರವನ್ನು ಹೊಂದಿರುವುದು; ಆಗ ಜನರು ಮರಳಿ ಬರುತ್ತಿರುತ್ತಾರೆ. ಪ್ಯಾರಿಸ್‌ನಲ್ಲಿ ಹಲವಾರು ವರ್ಷಗಳವರೆಗೆ ನಮ್ಮಲ್ಲಿ ಇದೇ ಪ್ರಶ್ನೆಯಿತ್ತು. ಇವತ್ತು, ನಾವು ಪ್ಯಾರಿಸ್ ಕೇಂದ್ರವನ್ನು ಹೊಂದಿದಂದಿನಿಂದ, ಅದು ಬಹಳಷ್ಟು ಚಟುವಟಿಕೆಯಿಂದ ಝೇಂಕಾರ ಮಾಡುತ್ತಿದೆಯೆಂದು ನನ್ನಲ್ಲಿ ಹೇಳಲಾಯಿತು. ಅದೊಂದು ಬದಲಾವಣೆಯನ್ನು ಮಾಡುತ್ತದೆಯೆಂದು ನನಗನ್ನಿಸುತ್ತದೆ.
ಮೇಲಾಗಿ, ಶಿಕ್ಷಕರು ಕೇಂದ್ರಗಳನ್ನು ಹೆಚ್ಚು ಆಸಕ್ತಿಕರವಾಗಿ ಮಾಡಬೇಕು. ಕೇವಲ ಅವರು ಕ್ರಿಯೆಯನ್ನು ಮಾಡಿ ಮನೆಗೆ ಮರಳಿ ಹೋಗುವಂತೆ ಮಾಡುವುದಲ್ಲ, ಆದರೆ ಪ್ರತಿಯೊಬ್ಬರನ್ನೂ ಯಾವುದಾದರೂ ರೀತಿಯ ಸೇವಾಕಾರ್ಯದಲ್ಲಿ ತೊಡಗುವಂತೆ ಮಾಡುವುದು.
ಅವರೆಲ್ಲರನ್ನೂ ಒಂದು ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿ, ಜನ್ಮದಿನಗಳನ್ನು ಆಚರಿಸಿ. ನಿಮ್ಮೆಲ್ಲಾ ಹಳೆಯ ಭಾಗಿಗಳ ಒಂದು ಪಟ್ಟಿ ಮಾಡಿ ಮತ್ತು ಯಾರೆಲ್ಲಾ ಧ್ಯಾನ ಹಾಗೂ ಸತ್ಸಂಗಗಳಿಗೆ ಬರುವುದಿಲ್ಲವೆಂಬುದನ್ನು ನೋಡಿ. ಅವರ ಜನ್ಮದಿನಗಳನ್ನು ನೋಡಿ ಮತ್ತು ಅವುಗಳನ್ನು ಆಚರಿಸಿ. ನೀವು ಇದೆಲ್ಲವನ್ನು ಮಾಡಿದರೆ, ಆಗ ಅವರು ಯಾಕೆ ಬರುವುದಿಲ್ಲ?
ನಿಮ್ಮಲ್ಲಿ ಕೆಲವರು ಒಂದು ಜನ್ಮದಿನದ ಕೇಕ್ ತೆಗೆದುಕೊಂಡು, ಅವರಿಗೆ ದೂರವಾಣಿ ಕರೆಯನ್ನು ಮಾಡಿ, "ನಾವು ಬಂದು ನಿಮಗೆ ಶುಭಾಶಯಗಳನ್ನು ಕೋರಲಿದ್ದೇವೆ" ಎಂದು ಹೇಳಬೇಕು. ನೀವು ಬೆರೆಯುವುದು ಹೀಗೆ. ಮುಂದಿನ ಸಲ ಬೇರೊಬ್ಬರ ಜನ್ಮದಿನವಿರುವಾಗ, ಅವರು ಬಂದು ನಿಮ್ಮೊಂದಿಗೆ ಸೇರುವರು. ಅದನ್ನು ಮಾಡಲಿರುವ ಇನ್ನೊಂದು ವಿಧಾನ ಇದೆಂದು ನನಗನ್ನಿಸುತ್ತದೆ.

ಪ್ರಶ್ನೆ: ಗುರುದೇವ, ಅಹಂಕಾರವು ನಮಗೆ ಸಾಧನೆ ಮಾಡಲು ಸಹಾಯ ಮಾಡುವುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಮೊದಲನೆಯ ಹಂತಗಳಲ್ಲಿ, ನಂತರ ಅದು ನಿಮ್ಮ ಕುತ್ತಿಗೆಯ ಸುತ್ತಲಿನ ಒಂದು ಕುಣಿಕೆಯಾಗುತ್ತದೆ. ಏನನ್ನಾದರೂ ಸಾಧಿಸಲು ಅದು ಆರಂಭದಲ್ಲಿ ಇರಬೇಕು, ಆದರೆ ನಂತರ ಅದರಿಂದ ಹೊರಬರುವುದು ಹೇಗೆಂಬುದು ಕೂಡಾ ನಿಮಗೆ ತಿಳಿದಿರಬೇಕು.

ಪ್ರಶ್ನೆ: ಗುರುದೇವ, ಮಹಿಳೆಯರು ಮೇಕಪ್ ಧರಿಸುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಅವರು ಆ ರೀತಿ ಮಾಡಲ್ಪಟ್ಟಿದ್ದಾರೆ!
ಮಹಿಳೆಯರು ಮೇಕಪ್ ಬಳಸುವುದರಿಂದಾಗಿ, ಹಲವಾರು ಜನರಿಗೆ ಉದ್ಯೋಗ ದೊರಕುತ್ತಿದೆ ಮತ್ತು ಕರಾಳ ಆರ್ಥಿಕ ಸ್ಥಿತಿಯ ದಿನಗಳಲ್ಲೂ ಕೂಡಾ ಸಂಪೂರ್ಣ ಉದ್ಯಮವು ಸಮೃದ್ಧವಾಗಿರುತ್ತದೆ. ಆರ್ಥಿಕ ಸ್ಥಿತಿಯು ಕೆಳಮುಖವಾಗುವಾಗ, ಒಂದು ಉದ್ಯಮವು ತನ್ನನ್ನು ತಾನೇ ಮೇಲೆ ಇಟ್ಟುಕೊಳ್ಳುತ್ತದೆ, ಅದು ಮೇಕಪ್! ಅದು ಎಲ್ಲ ಕೊರತೆಗಳನ್ನೂ ಮುಚ್ಚುತ್ತದೆ.


ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್:

Three degrees of wisdom

ಶನಿವಾರ, ಮಾರ್ಚ್ 22, 2014

ಗುರುವಿನ ದೃಶ್ಯಾದೃಶ್ಯ ಸ್ವರೂಪ

೨೨ ಮಾರ್ಚ್ ೨೦೧೪
ಬಾದ್ ಅಂತೋಗಸ್ಟ್, ಜರ್ಮನಿ

ಸ್ವಿಟ್ಜರ್‌ಲ್ಯಾಂಡ್‌ನಿಂದ ಬಂದಿರುವ ಶ್ರೀಲಂಕಾದ ದೇವಾಲಯದ ಸದಸ್ಯರನ್ನು ನಾವು ಸ್ವಾಗತಿಸುತ್ತೇವೆ. ಅವರೊಂದು ಬಹಳ ಒಳ್ಳೆಯ ಪ್ರಾಚೀನವಾದ ತಮಿಳು ಹಾಡನ್ನು ಹಾಡಿದರು. ಅದಕ್ಕೊಂದು ಸುಂದರವಾದ ಅರ್ಥವಿದೆ.
ತಮಿಳು ಒಂದು ಬಹಳ ಹಳೆಯ ಭಾಷೆಯಾಗಿದೆ, ಬಹುಶಃ ೧೦,೦೦೦-೧೫,೦೦೦ ವರ್ಷಗಳಷ್ಟು ಹಳೆಯದು. ತಮಿಳು ಮತ್ತು ಸಂಸ್ಕೃತ, ಎರಡೂ ಸುಮಾರು ಒಂದೇ ಯುಗದವು. ನಿಮಗೆ ಗೊತ್ತೇ, ಜಪಾನೀ ಭಾಷೆಯಲ್ಲಿ ಬಹಳಷ್ಟು ತಮಿಳು ಇದೆ. ಜಪಾನೀ ಭಾಷೆಯಲ್ಲಿ ಸುಮಾರು ೭೦ ಶೇಕಡಾ ತಮಿಳು ಇದೆಯೆಂದು ನನಗೆ ಹೇಳಲಾಯಿತು. ತಮಿಳು ಭಾಷೆಯು ಇಂಡೋನೇಶ್ಯಾ ಮತ್ತು ಆ ಭಾಗದ ಇತರ ಜಾಗಗಳಲ್ಲಿ ಕಂಡುಬರುತ್ತದೆ ಹಾಗೂ ಹವಾಯಿಯವರೆಗೂ ತಲುಪಿದೆ. ಯು.ಎಸ್.ಎ.ಯಲ್ಲಿ ಕೂಡಾ, ಅವರು ಹಲವಾರು ತಮಿಳು ಹೆಸರುಗಳನ್ನು ಹೊಂದಿದ್ದಾರೆ.
ಇವರು ಈಗಷ್ಟೇ ಹಾಡಿದ ಹಾಡು ಬಹಳ ಪುರಾತನವಾದುದು. ಈ ಹಾಡಿನಲ್ಲಿ ಅವರು ಹೇಳುತ್ತಿರುವುದೇನೆಂದರೆ:
ಗುರುವು ತಾಯಿಯಂತೆ; ಅವರು ನಿಮ್ಮನ್ನು ತಾಯಿಯಂತೆ ಆಲಿಂಗಿಸುತ್ತಾರೆ. ಗುರುವು ತಂದೆಯಂತೆಯೂ ಕೂಡಾ; ಮಕ್ಕಳು ಆಟವಾಡಿ ಬಿದ್ದಾಗ, ಅವರು ಬರುತ್ತಾರೆ, ಅವರನ್ನು ಎತ್ತುತ್ತಾರೆ, ಅವರ ಬೆನ್ನು ತಟ್ಟುತ್ತಾರೆ ಮತ್ತು ಅವರನ್ನು ಪ್ರೋತ್ಸಾಹಿಸುತ್ತಾರೆ.
ಗುರುವು ಒಬ್ಬಳು ತಾಯಿಯಂತೆ ಪ್ರೀತಿಸುತ್ತಾರೆ, ಒಬ್ಬ ತಂದೆಯಂತೆ ಸಂರಕ್ಷಿಸುತ್ತಾರೆ ಮತ್ತು ಒಬ್ಬ ಮಿತ್ರನಂತೆ ಆಟವಾಡುತ್ತಾರೆ. ಅವರೊಬ್ಬ ಸಖ, ಅಂದರೆ, ಜೊತೆಗಾರ ಅಥವಾ ಮಿತ್ರ.
ಒಬ್ಬರು ಗುರುವನ್ನು ಹೊಂದಿರುವ owns ಯಾರೇ ಆದರೂ, ಅವರಿಗೆ ಅವರೊಬ್ಬ(ಗುರು) ಮಗುವಿನಂತೆ.
ಗುರುವು ತಂದೆಯಂತೆ, ತಾಯಿಯಂತೆ, ಮಿತ್ರನಂತೆ, ಜೊತೆಗಾರನಂತೆ ಮತ್ತು ಒಂದು ಮಗುವಿನಂತೆ (ಗುರುವನ್ನು ಯಾರು ಸ್ವಂತದವರನ್ನಾಗಿಸುವರೋ ಅವರಿಗೆ); ಆ ಗುರುವನ್ನು ನಾನು ಆರಾಧಿಸುತ್ತೇನೆ.  
ಗುರು ತತ್ವವು ಎಲ್ಲಿದೆ? ಗುರುವು ನಿಮ್ಮ ಜೀವನದೊಳಕ್ಕೆ ಹೇಗೆ ಬರುತ್ತಾರೆ? ಗುರುವು ಉರುವೈಯಲ್ಲಿ, ಅರುವೈಯಲ್ಲಿ ಬರುತ್ತಾರೆ; ಅಂದರೆ, ಆಕಾರದಲ್ಲಿ ಮತ್ತು ನಿರಾಕಾರದಲ್ಲಿ. ಅವರು ನಿಮ್ಮ ಬುದ್ಧಿಯಾಗಿ ನಿಮ್ಮ ಬಳಿಗೆ ಬರುತ್ತಾರೆ. ಗುರುವು ನಿಮ್ಮ ಬಳಿಗೆ ಪ್ರಕಾಶವಾಗಿ, ಜ್ಞಾನವಾಗಿ ಬರುತ್ತಾರೆ. ಹೀಗೆ ಈ ಹಾಡಿನಲ್ಲಿ ಹಲವಾರು ವಿಷಯಗಳಿವೆ.
ಗುರುವು, ಯಾವುದಿರುವುದೋ ಅದಾಗಿ ಮತ್ತು ಯಾವುದಿಲ್ಲವೋ ಅದಾಗಿ ಬರುತ್ತಾರೆ.
ಇದಕ್ಕೊಂದು ಬಹಳ ಆಳವಾದ ಅರ್ಥವಿದೆ. ಗುರುವು ನಿಮ್ಮ ಬಳಿಗೆ, ಯಾವುದಿರುವುದೋ ಅದಾಗಿ ಮತ್ತು ಯಾವುದಿಲ್ಲವೋ ಅದಾಗಿ ಬರುತ್ತಾರೆ, ಅಂದರೆ, ಇಲ್ಲದಿರುವ ಪ್ರಪಂಚವಾಗಿ ಹಾಗೂ ಇರುವ ದೇವರಾಗಿ. ’ಯಾವುದು ಇರುವುದೋ’ ಎಂಬುದರ ಅರ್ಥ, ’ಯಾವುದು ಶಾಶ್ವತವಾಗಿ ಇರುವುದೋ ಅದು’ ಎಂದು.
ಗುರುವಿನ ಸ್ವಭಾವವು ಕಾಣಿಸುತ್ತದೆ; ಒಂದು ರತ್ನದಂತೆ ಮತ್ತು ಅದು ಕಾಣಿಸುವುದಿಲ್ಲ; ಪ್ರಜ್ಞೆಯಂತೆ. ಅದೊಂದು ಹೂವಿನಂತೆ ಹಗುರವಾದುದು ಮತ್ತು ಬೆಳಕಿನಂತೆ ಪ್ರಕಾಶಮಾನವಾದುದು.
ಹಾಡು ಹೀಗೆಂದು ಹೇಳುತ್ತದೆ:
ದೈವತ್ವವು ಈ ಎಲ್ಲಾ ರೂಪಗಳಲ್ಲಿದೆ, ಮತ್ತು ನೀನು ನನ್ನ ಬಳಿಗೆ ಒಬ್ಬ ಗುರುವಿನ ರೂಪದಲ್ಲಿ ಬರುತ್ತಿರುವೆ; ನನ್ನ ಮೇಲೆ ಕೃಪೆ ತೋರಲು ಮತ್ತು ನನ್ನನ್ನು ಆಶೀರ್ವದಿಸಲು.
ಆಕಾರದಲ್ಲಿ ಮತ್ತು ನಿರಾಕಾರದಲ್ಲಿರುವ, ಕಾಣಿಸುವ ಮತ್ತು ಕಾಣಿಸದೇ ಇರುವುದರಲ್ಲಿರುವ, ಒಂದು ಹೂವಿನಷ್ಟು ಹಗುರವಾಗಿರುವ ಮತ್ತು ಒಂದು ಬೆಳಕಿನಷ್ಟು ಪ್ರಕಾಶಮಾನವಾಗಿರುವ, ಒಬ್ಬ ಗುರುವಾಗಿ ನನ್ನ ಜೀವನಕ್ಕೆ ಬಂದು ನನ್ನನ್ನು ಆಶೀರ್ವದಿಸುವ, ನನ್ನ ಮೇಲೆ ಕೃಪೆದೋರುವ ಆ ಒಂದು ದೇವರು, ನನಗೆ ಆಶೀರ್ವಾದ ನೀಡು.
ಪ್ರಾಚೀನ ದಿನಗಳಲ್ಲಿ ಜನರು ಇದನ್ನು ತಮಿಳಿನಲ್ಲಿ ಬರೆದಿರುವರು. ಆ ದಿನಗಳಲ್ಲಿ ಶಿವ ತತ್ವವನ್ನು ಬರೆದ ೬೪ ಸಂತರಿದ್ದರು, ಮತ್ತು ವಿಷ್ಣು ತತ್ವವನ್ನು ಬರೆದ ೧೪ ಸಂತರಿದ್ದರು, ಎಲ್ಲವೂ ತಮಿಳಿನಲ್ಲಿ. ಅವರು ಬರೆದಿರುವುದು ಅಷ್ಟೊಂದು ಮಹತ್ತರವಾದ ಜ್ಞಾನವನ್ನು ಒಳಗೊಂಡಿದೆ. ಶಿವನ ಬಗ್ಗೆ ಅವರು ಹೀಗೆ ಹೇಳಿದರು, ಶಿವನು ಹೇಗಿರುವನು? ಶಿವನು ಆಂತರಿಕ ಆಕಾಶದಂತೆ ಚಿದಂಬರನು. ಶಿವನು ಪ್ರಜ್ಞೆಯ ಆಂತರಿಕ ಆಕಾಶವಾಗಿರುವನು.
ಒಬ್ಬರು ಗುರು ಯಾರು? ಯಾರು ನಿಮಗೆ ಪ್ರಜ್ಞೆಯ ಮಾಲೆಯನ್ನು ಕೊಡುವರೋ; ಆಕಾಶದ ಮಣಿಗಳನ್ನು ಕೊಡುವರೋ ಅವರು. ಇದೊಂದು ವಿರೋಧಾಭಾಸವಾಗಿದೆ, ಅವುಗಳು ಎರಡು ಬೇರೆ ಬೇರೆ ವಿಷಯಗಳಾಗಿವೆ; ಮಣಿಗಳು ಸೀಮಿತವಾದವು, ಆಕಾಶವು ಅನಂತವಾದುದು.
ಅನಂತತೆಯು ಮಣಿಗಳಂತೆ ಕೊಡಲ್ಪಡುತ್ತದೆ, ಅಂದರೆ, ಧ್ಯಾನ ! ಮೂಲತಃ, (ಗುರುವೆಂದರೆ) ಯಾರು ನಿಮಗೆ ಧ್ಯಾನವನ್ನು ಕೊಡುವರೋ (ಧ್ಯಾನದ ಅನುಭವವನ್ನು) ಅವರು.
ಸಂರಕ್ಷಿಸಲಾದ ಒಂದು ಸುಂದರವಾದ ಹಾಡಾಗಿದೆ ಇದು. ಇದನ್ನು ಶತಮಾನಗಳ ಕಾಲ ಸಂರಕ್ಷಿಸಿದ ಶ್ರೀಲಂಕಾದವರಿಗೆ ನಾವು ಧನ್ಯವಾದವನ್ನರ್ಪಿಸಬೇಕು. ಭಾರತದಲ್ಲಿ ಸಹ, ಜನರು ಇದನ್ನು ಕಳೆದುಕೊಂಡಿದ್ದಾರೆ. ಇದನ್ನು ಸಂರಕ್ಷಿಸಿರುವುದು ಶ್ರೀಲಂಕಾದ ತಮಿಳರಾಗಿರುವರು.
೨೦ ವರ್ಷಗಳ ಹಿಂದೆ, ಶ್ರೀಲಂಕಾದಲ್ಲಿ ಒಂದು ಜನಾಂಗೀಯ ಶುದ್ಧೀಕರಣವಿದ್ದಾಗ, ತಮಿಳರಲ್ಲಿ ಹಲವರು ಯುರೋಪಿಗೆ ವಲಸೆ ಹೋದರು, ಮತ್ತು ಯುರೋಪಿಗೆ ಬಂದರೂ ಕೂಡಾ, ಅವರು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿದರು. ಇದೊಂದು ಬಹಳ ಒಳ್ಳೆಯ ವಿಷಯ. ಯುರೋಪಿನ ವಿವಿಧ ಭಾಗಗಳಲ್ಲಿ ಸುಮಾರು ೧,೦೦,೦೦೦ ಶ್ರೀಲಂಕಾದ ಜನರು ವಾಸಿಸುತ್ತಿದ್ದಾರೆ, ಆದರೂ ಅವರು ತಮ್ಮ ಸಂಪ್ರದಾಯವನ್ನು ಸಂರಕ್ಷಿಸಿದ್ದಾರೆ. ಅವರ ಯುವಜನತೆ ಕೂಡಾ ಅದನ್ನು ಸಂರಕ್ಷಿಸಿಡಬೇಕು; ಯುವಜನರು ಕೂಡಾ ಕಲಿಯಬೇಕೆಂದು ನನಗನ್ನಿಸುತ್ತದೆ. ಇದೊಂದು ಬಹಳ ಶ್ರೀಮಂತವಾದ ಭಾಷೆ ಮತ್ತು ಸಂಸ್ಕೃತಿಯಾಗಿದೆ.
ಪ್ರಾಚೀನ ಸಂಪ್ರದಾಯದಲ್ಲಿ ಹಲವಾರು ಸಂತರು ಮತ್ತು ಗುರುಗಳಿದ್ದರು. ಅವರ ವೈಯಕ್ತಿಕ ಹೆಸರುಗಳು ಅಥವಾ ಅವರ ಪ್ರತಿಮೆಗಳನ್ನು ಹಾಕುವ ಬದಲು, ಅವರು ಕೇವಲ ಒಂದು ಚಿಹ್ನೆಯನ್ನು ಮಾಡಿದರು ಮತ್ತು ಅದನ್ನು ಬಳಸಿದರು.
ಅವರು ಮಾಡಿದುದೇನೆಂದರೆ, ಅವರು ಕೈಯಲ್ಲಿ ಒಂದು ಕೋಲನ್ನು ಹಿಡಿದಿರುವ ಒಬ್ಬ ಯುವಕನ ಚಿಹ್ನೆಯನ್ನು ಮಾಡಿದರು ಮತ್ತು ಅವರು ಅದನ್ನು ಮುರುಗ (ಅಥವಾ ಕಾರ್ತಿಕೇಯ) ಎಂದು ಕರೆದರು; ಶಿವನ ಮಗ. ಅವರು ಅವನನ್ನು (ಕಾರ್ತಿಕೇಯ), ಎಲ್ಲಾ ಗುರುಗಳನ್ನು ಪ್ರತಿನಿಧಿಸುವವನಂತೆ ಸಂಕೇತಿಸಿದರು ಮತ್ತು ಹೀಗಾಗಿ ಅವರು, ಎಲ್ಲಾ ಸಂತರು ಹಾಗೂ ಗುರುಗಳಿಗಾಗಿ ಈ ಒಂದು ಸಂಕೇತವನ್ನು ಬಳಸುವರು.
ದಕ್ಷಿಣ ಭಾರತದಲ್ಲಿ, ಮುರುಗ ಅಥವಾ ಕಾರ್ತಿಕೇಯ ದೇವಸ್ಥಾನಗಳಲ್ಲಿ, ಒಬ್ಬ ಸಂತನ; ಓರ್ವ ಸಿದ್ಧನ; ಒಬ್ಬ ಜ್ಞಾನೋದಯಗೊಂಡ ವ್ಯಕ್ತಿಯ ಶರೀರವಿರುತ್ತದೆ ಮತ್ತು ಅವನ ಸಮಾಧಿಯ ಮೇಲೆ ಈ ಪ್ರತಿಮೆ (ಒಂದು ಕೋಲಿನೊಂದಿಗಿರುವ ಯುವಕ) ಇರುತ್ತದೆ. ಹೀಗೆ, ಕಂಪನಗಳು (ದೇವಸ್ಥಾನದಲ್ಲಿ) ಬಹಳ ಶಕ್ತಿಯುತವಾಗಿರುತ್ತವೆ.
ಕೆಲವೊಮ್ಮೆ, ಒಂದು ಯಂತ್ರ; ಅಂದರೆ ಒಂದು ರೇಖಾಚಿತ್ರವನ್ನು ದೇವಸ್ಥಾನಗಳಲ್ಲಿ ಇಡಲಾಗುತ್ತದೆ. ನೀವೊಂದು ರೇಡಿಯೋವನ್ನು ತೆರೆದರೆ, ಒಂದು ವಿನ್ಯಾಸವನ್ನೊಳಗೊಂಡ ಒಂದು ಬಿಲ್ಲೆ (ಚಿಪ್) ಅಲ್ಲಿರುತ್ತದೆ. ನಿಮ್ಮ ಸೆಲ್ ಫೋನಿನಲ್ಲಿ ಕೂಡಾ ಒಂದು ಬಿಲ್ಲೆಯಿರುತ್ತದೆ. ಬಿಲ್ಲೆಯಲ್ಲೊಂದು ಸಣ್ಣ ವಿನ್ಯಾಸವಿರುತ್ತದೆ; ಅದನ್ನು ನೀವು ಮತ್ತು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ, ನೀವು ಆ ಬಿಲ್ಲೆಯನ್ನು ಹಾಕಿದಾಗ, ಕೇವಲ ಆ ಸಂಖ್ಯೆ ಮಾತ್ರ ನಿಮ್ಮ ಸೆಲ್ ಫೋನಿನಲ್ಲಿ ಬರುತ್ತದೆ.
ಅದೇ ರೀತಿಯಲ್ಲಿ ಈ ಯಂತ್ರಗಳು ಜಾಗತಿಕ ಚೈತನ್ಯದ ರೇಖಾಚಿತ್ರಗಳಾಗಿದ್ದವು, ಕಾಸ್ಮಿಕ್ ಚೈತನ್ಯದ ರೇಖಾಚಿತ್ರಗಳಾಗಿದ್ದವು. ಹಲವಾರು ಯಂತ್ರಗಳಿವೆ; ಅವುಗಳಲ್ಲಿ ಒಂದು ಸ್ಟಾರ್ ಆಫ್ ಡೇವಿಡ್ ; ಅದನ್ನು ಯಹೂದಿ ಸಂಪ್ರದಾಯದಲ್ಲಿ ಬಳಸಲಾಗುತ್ತದೆ.
ಈ ಯಂತ್ರಗಳನ್ನು ಚಾರ್ಜ್ ಮಾಡಿ ಇಡಲಾಗುತ್ತದೆ (ದೇವಸ್ಥಾನಗಳಲ್ಲಿ), ಮತ್ತು ಪ್ರತಿಮೆಗಳನ್ನು ಈ ಯಂತ್ರಗಳ ಮೇಲೆ ಇರಿಸಲಾಗುತ್ತದೆ. ಪ್ರತಿಮೆಯು ಮುಖ್ಯವಲ್ಲ. ಆದರೆ ಅಡಿಯಲ್ಲಿರುವ ಈ ಯಂತ್ರ, ಈ ರೇಖಾಚಿತ್ರವು ಅತ್ಯಂತ ಮುಖ್ಯವಾಗಿದೆ.
ಮಂತ್ರ, ಯಂತ್ರ ಮತ್ತು ತಂತ್ರಗಳಿವೆ. ತಂತ್ರ; ಅಂದರೆ, ಯಂತ್ರ, ರೇಖಾಚಿತ್ರವನ್ನು ಹೇಗೆ ಚೈತನ್ಯಭರಿತಗೊಳಿಸುವುದು; ಅದನ್ನು ಮಾಡಲಿರುವ ವಿಧಾನವು ತಂತ್ರವಾಗಿದೆ. ಇದಕ್ಕಾಗಿಯೇ ನಮ್ಮಲ್ಲಿ ಯಜ್ಞಗಳಿರುವುದು (ಪಂಚಭೂತಗಳ ಮೂಲಕ ಕಾಸ್ಮಿಕ್ ಚೈತನ್ಯವನ್ನು ಕೆಳತರಲು ಉಪಯೋಗಿಸುವ ತಂತ್ರಗಳಲ್ಲೊಂದು). ಎಷ್ಟು ಗಿಡಮೂಲಿಕೆಗಳನ್ನು ತೆಗೆದುಕೊಳ್ಳಬೇಕು, ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು, ಮಂತ್ರೋಚ್ಛಾರಣೆಯನ್ನು ಹೇಗೆ ಮಾಡಬೇಕು ಎಂಬುದು ಒಬ್ಬನಿಗೆ ತಿಳಿದಿರಬೇಕು.
ಒಂದು ಯಜ್ಞದಲ್ಲಿ, ಮಂತ್ರೋಚ್ಛಾರಣೆಯ ಮೂಲಕ ಚೈತನ್ಯವನ್ನು ಆಕಾಶ ತತ್ವದಿಂದ ವಾಯು ತತ್ವಕ್ಕೆ; ನಂತರ ಅಗ್ನಿ ತತ್ವಕ್ಕೆ; ನಂತರ ಅಗ್ನಿಯಿಂದ ಜಲಕ್ಕೆ ಮತ್ತು ಜಲದಿಂದ ಯಂತ್ರ; ರೇಖಾಚಿತ್ರಕ್ಕೆ (ಪೃಥ್ವಿ ತತ್ವ) ಕೆಳತರಲಾಗುತ್ತದೆ. ಹೀಗೆ ಯಜ್ಞಗಳಲ್ಲಿ, ಈ ಶಕ್ತಿಯನ್ನು ಸೂಕ್ಷ್ಮದಿಂದ ಸ್ಥೂಲಕ್ಕೆ ಕೆಳತರಲಾಗುತ್ತದೆ; ಇದು ಇಡೀ ತಂತ್ರವಾಗಿದೆ.
ಈ ಸಂಪ್ರದಾಯದ, ಈ ತಂತ್ರದ ಶುದ್ಧತೆಯೆಲ್ಲಾ ಕಳೆದುಹೋಗುತ್ತಾ ಇತ್ತು, ಆದರೆ ನಾವು ಅದನ್ನು ನಮ್ಮ ಬೆಂಗಳೂರಿನ ಆಶ್ರಮದಲ್ಲಿ ಪುನರುಜ್ಜೀವನಗೊಳಿಸಿದೆವು. ನೀವು ಆಶ್ರಮದಲ್ಲಿ ವೇದ ಆಗಮ ಹುಡುಗರನ್ನು ನೋಡಿರಬಹುದು; ಅವರು ಈ ಪ್ರಾಚೀನ ಸಂಪ್ರದಾಯವನ್ನು ಕಲಿಯುತ್ತಿದ್ದಾರೆ, ಅಧ್ಯಯನ ನಡೆಸುತ್ತಿದ್ದಾರೆ ಮತ್ತು ಪುನರುಜ್ಜೀವನಗೊಳಿಸುತ್ತಿದ್ದಾರೆ, ಇಲ್ಲದಿದ್ದರೆ ಅದು ಬಹುತೇಕ ಹೋಗಿತ್ತೆಂದೇ ಹೇಳಬಹುದು.
ನಾವು ಈ ಶಾಲೆಯನ್ನು (ವೇದ ಪಾಠಶಾಲಾ) ೧೯೮೧ರಲ್ಲಿ ಆರಂಭಿಸಿದೆವು; ಬಹುತೇಕ ನಾವು ದಿ ಆರ್ಟ್ ಆಫ್ ಲಿವಿಂಗ್‌ನ್ನು ಆರಂಭಿಸಿದ ಸಮಯದಲ್ಲೇ. ಈ ಸಾಯುತ್ತಿರುವ ಸಂಪ್ರದಾಯವನ್ನು ಸಂರಕ್ಷಿಸಲು ನಾವು ಈ ಶಾಲೆಯನ್ನು ಆರಂಭಿಸಿದೆವು.
ಆ ಸಮಯದಲ್ಲಿ, ಈ ಜ್ಞಾನವಿದ್ದ ಹಲವಾರು ವಯಸ್ಸಾದ ವ್ಯಕ್ತಿಗಳನ್ನು ನಾವು ಕರೆದೆವು ಮತ್ತು ಅದನ್ನು ಯುವಜನರಿಗೆ ವರ್ಗಾಯಿಸುವಂತೆ ಅವರಲ್ಲಿ ಕೇಳಿಕೊಂಡೆವು. ಇದೊಂದು ವಿಶ್ವ ಪರಂಪರೆಯಾಗಿದೆ, ಅದು ಕಳೆದುಹೋಗುವುದನ್ನು ನಾವು ಬಯಸುವುದಿಲ್ಲ. ನಿಜವಾಗಿ, ವೈದಿಕ ಜ್ಞಾನದಲ್ಲಿ ಹೆಚ್ಚಿನದು ಕಳೆದುಹೋಗಿದೆ.
ಆಯುರ್ವೇದವನ್ನು ಈಗ ಪುನರುಜ್ಜೀವನಗೊಳಿಸಲಾಗುತ್ತಿದೆ. ೧೯೮೧ರಲ್ಲಿ, ಆಯುರ್ವೇದ ಕೂಡಾ ಬಹುತೇಕ ಕಳೆದುಹೋಗುತ್ತಲಿತ್ತು. ಇದೆಲ್ಲಾ; ಶಿರೋಧಾರ ಮತ್ತು ಇತರ ಕೆಲವು ಚಿಕಿತ್ಸೆಗಳು ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಮಾತ್ರ ಇತ್ತು; ನೀವು ಊಹಿಸಬಲ್ಲಿರೇ? ಉತ್ತರ ಭಾರತದಲ್ಲಿ, ಜನರಿಗೆ ಅದರ ಬಗ್ಗೆ ತಿಳಿದೂ ಇರಲಿಲ್ಲ! ದಿಲ್ಲಿಯಲ್ಲಿ, ಶಿರೋಧಾರ ಎಂದರೇನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅದರ ಬಗ್ಗೆ ದಿಲ್ಲಿಯಲ್ಲೇ ತಿಳಿದಿರಲಿಲ್ಲ ಎಂದ ಮೇಲೆ, ಪ್ರಪಂಚದಲ್ಲಿ ಬೇರೆ ಯಾರಾದರೂ ತಿಳಿದಿರುವುದು ಹೇಗೆ? ಮೊದಲ ಆಯುರ್ವೇದ ಸಮ್ಮೇಳನವನ್ನು ನಾವು ದಿಲ್ಲಿಯಲ್ಲಿ ಆಯೋಜಿಸಿದೆವು. ನಾವು ಈ ಎಲ್ಲಾ ಜನರನ್ನು ಹಳ್ಳಿಗಳಿಂದ ಕರೆತಂದೆವು ಮತ್ತು ಎಲ್ಲರಿಗೂ ಕಲಿಸುವಂತೆ ಅವರಲ್ಲಿ ಕೇಳಿಕೊಂಡೆವು. ಈಗ, ಕಳೆದ ೩೫ ವರ್ಷಗಳಲ್ಲಿ ಆಯುರ್ವೇದವು ಹೇಗೋ ಮುನ್ನಡೆಯುತ್ತಿದೆ.
ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯಗಳಂತಹ ಇತರ ಹಲವಾರು ವೈದಿಕ ಜ್ಞಾನವು ಕಳೆದುಹೋಗಿದೆ. ನಮ್ಮಲ್ಲಿ ಈಗ ವಾಸ್ತು ಶಾಸ್ತ್ರದ ಎಲ್ಲಾ ಗ್ರಂಥಗಳಿಲ್ಲ.
ವೇದಗಳು ಕೂಡಾ; ಸಾಮವೇದದ ೧,೦೦೦ ಶಾಖೆಗಳಿದ್ದವು ಎಂದು ಹೇಳಲಾಗಿದೆ, ಇವತ್ತು ಕೇವಲ ಮೂರು ಮಾತ್ರ ಲಭ್ಯವಾಗಿವೆ, ಉಳಿದವು ಹೋಗಿವೆ. ಋಗ್ವೇದದಲ್ಲಿ ೨೧ ಶಾಖೆಗಳಿದ್ದವು, ಆದರೆ ಇವತ್ತು ಒಂದೇ ಒಂದು ಲಭ್ಯವಿದೆ.
ಬಹಳಷ್ಟು ಜ್ಞಾನವು ಮಧ್ಯಯುಗಗಳಲ್ಲೇ ಕಳೆದುಹೋಗಿತ್ತು. ಒಬ್ಬ ಬಹಳ ಹುಚ್ಚ ಮೊಗಲ್ ರಾಜನಿದ್ದ, ಅವನು, ಎಲ್ಲಾ ಗ್ರಂಥಗಳನ್ನು ಹಾಗೂ ವಿಶ್ವವಿದ್ಯಾಲಯಗಳನ್ನು ಸುಟ್ಟುಹಾಕುವಂತೆ ಜನರಿಗೆ ಆಜ್ಞೆ ನೀಡಿದ. ಕೆಲವು ಜನರು ಈ ಗ್ರಂಥಗಳಲ್ಲಿ ಹಲವನ್ನು ಬಾಯಿಪಾಠ ಮಾಡಿದ್ದರು. ಈಗ, ಅದು ಕೂಡಾ ಕಳೆದುಹೋಗುತ್ತಲಿತ್ತು. ಹಾಗಾಗಿ ನಾವು, "ಇಲ್ಲ, ನಾವಿದನ್ನು ಸಂರಕ್ಷಿಸಬೇಕು" ಎಂದು ಹೇಳಿದೆವು! ತಮಿಳುನಾಡಿನಲ್ಲಿ, ಅವರು ಇದನ್ನೆಲ್ಲಾ ಸಂರಕ್ಷಿಸಿಟ್ಟಿದ್ದಾರೆ, ಅದು ಕಳೆದುಹೋಗಿಲ್ಲ. ಸಂಸ್ಕೃತದಲ್ಲಿ, ಅದರಲ್ಲಿ ಹೆಚ್ಚಿನದು ಕಳೆದುಹೋಗಿತ್ತು. ಹೀಗಾಗಿ ಶ್ರೀಲಂಕಾದವರಿಗೆ ಧನ್ಯವಾದಗಳು, ಅವರಲ್ಲಿ ಈ ಎಲ್ಲಾ ಜ್ಞಾನವಿದೆ.
ಹಾಗೆಯೇ ಶ್ರೀಲಂಕಾದಲ್ಲಿ ಒಂದು ವಿಭಿನ್ನ ವೈದ್ಯಕೀಯ ಪದ್ಧತಿಯಿದೆ, ಇದು ಸಿದ್ಧ ಔಷಧಿ ಎಂದು ಕರೆಯಲ್ಪಡುತ್ತದೆ; ಅದು ಬಹುತೇಕ ಮಸುಕಾಗಿ ಹೋಗುತ್ತಿದೆ. ಸಿದ್ಧ ಔಷಧಿಯು ಆಯುರ್ವೇದದ ಹಾಗೆಯೇ, ಆದರೂ ವಿಭಿನ್ನವಾದುದು. ನಾವದನ್ನು ಪುನಶ್ಚೇತನಗೊಳಿಸಬೇಕಾಗಿದೆ. ಜನರು ಈಗ ಈ ಜ್ಞಾನವನ್ನು ಸ್ವೀಕರಿಸುವಲ್ಲಿ ಹೆಚ್ಚು ತೆರೆದ ಮನಸ್ಸಿನವರಾಗಿದ್ದಾರೆಂದು ನನಗನ್ನಿಸುತ್ತದೆ; ಅವರದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಲಾಭಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಚೈನಾದ ಔಷಧಿ ಕೂಡಾ ಆಯುರ್ವೇದದ ಒಂದು ಶಾಖೆಯಾಗಿದೆ; ಅದು ಚೈನಾಕ್ಕೆ ಭಾರತದಿಂದ, ಬೌದ್ಧಧರ್ಮದೊಂದಿಗೆ ಹೋಯಿತು. ಅದು ಕೂಡಾ ಅದೇ ನಾಡಿ ಪರೀಕ್ಷೆಯನ್ನು ಆಧರಿಸಿದೆ. ಚೈನಾದಲ್ಲಿ ಹಲವಾರು ವಿಭಿನ್ನ ಗಿಡಮೂಲಿಕೆಗಳು ಲಭ್ಯವಿದ್ದವು. ಜಾಗ ಮತ್ತು ಆಹಾರ ಅಭ್ಯಾಸಗಳಿಗೆ ಸರಿಹೊಂದಲು ಅವರಲ್ಲಿ ವಿವಿಧ ಬದಲಿ ಔಷಧಿಗಳಿದ್ದವು. ಚೈನಾದ ಔಷಧಿಯು ಅಲ್ಲಿ ಅಭಿವೃದ್ಧಿ ಹೊಂದಿತು, ಆದರೆ ಅದರ ಬೇರುಗಳು ಮೂಲತಃ ಭಾರತದಲ್ಲಿವೆ.
ಅದೇ ರೀತಿಯಲ್ಲಿ, ನಾವು ಸಿದ್ಧ ಔಷಧಿಯ ಬಗ್ಗೆ ಕೂಡಾ ಏನನ್ನಾದರೂ ಮಾಡಬೇಕು. ಅದು ಕರ್ಪೂರದ ಮೇಲೆ ಆಧಾರಿತವಾದುದು ಮತ್ತು ಅದರಲ್ಲಿ ಹೆಚ್ಚಿನದು ಒಂದು ಹಿಟ್ಟು ಆಗಿದೆ; ಜಾಮ್‌ನ ಹಾಗೆ ಸ್ವಲ್ಪ. ಅವರದನ್ನು ಬ್ರೆಡ್ಡಿನ ಮೇಲೆ ಹಾಕಿ ತಿನ್ನಬಹುದು. ಅದರಲ್ಲಿ ಹೆಚ್ಚಿನದಕ್ಕೆ ಒಂದು ಕರ್ಪೂರದ ವಾಸನೆಯಿರುತ್ತದೆ.
ಅದು ಚರಿತ್ರೆ!
ಎಲ್ಲರೂ ಸಂತೋಷವಾಗಿರುವಿರೇ? ಕೇವಲ ಎರಡು ದಿನಗಳ ಹಿಂದೆ, ವಿಶ್ವ ಸಂತೋಷದ ದಿನವಾಗಿತ್ತು. ನಮಗೆ, ಪ್ರತಿದಿನವೂ ಒಂದು ಸಂತೋಷದ ದಿನವಾಗಿದೆ. ನಾವು ಮಾಡಬೇಕಾದ ಮುಖ್ಯ ಸಂಗತಿಯೆಂದರೆ, ಒಂದು ವಿಷಯವನ್ನು ಗೌರವಿಸುವುದು. ಆ ಒಂದು ವಿಷಯ ಯಾವುದು? ಅದು ಏನೂ ಇಲ್ಲ! ನೀವು ಏನೂ ಇಲ್ಲದಿರುವುದನ್ನು ಗೌರವಿಸಲು ಕಲಿಯಬೇಕು!
ಏನನ್ನಾದರೂ ಮಾಡುವ ಮೊದಲು, ಅಲ್ಲಿ ಏನೂ ಇರುವುದಿಲ್ಲ. ಏನನ್ನಾದರೂ ಮಾಡಿದ ಬಳಿಕ, ಅಲ್ಲಿ ಏನೂ ಇರುವುದಿಲ್ಲ. ಹೀಗಾಗಿ, ಎನೂ ಇಲ್ಲದಿರುವುದೇ ನಿಜಕ್ಕೂ ಎಲ್ಲವೂ ಆಗಿದೆ! ಎಲ್ಲವೂ ಆಗಿರುವ ಆ ಏನೂ ಇಲ್ಲದಿರುವುದನ್ನು ಗೌರವಿಸಿ! ಅದು ನಿರ್ವಾಣ! ಅದು ಯೇಸುಕ್ರಿಸ್ತನ ಮುಕ್ತಿ! ಅದು ಬುದ್ಧನ ನಿರ್ವಾಣ! ಅದು ವೇದ ಸಂಪ್ರದಾಯದ ಶಂಕರಾಚಾರ್ಯರ ಮುಕ್ತಿ ಅಥವಾ ಮೋಕ್ಷ!
ಯಾವುದೇ ಭಾವನೆಯ ಮೊದಲು, ಅಲ್ಲಿ ಏನೂ ಇಲ್ಲ. ಯಾವುದೇ ಭಾವನೆಯ ನಂತರ, ಅಲ್ಲಿ ಏನೂ ಇಲ್ಲ. ಯಾವುದು ಯಾವತ್ತೂ ಅಲ್ಲಿರುವುದೋ ಅದು ಏನೂ ಇಲ್ಲ!
ನೋಡಿ ನೀವು ಎಷ್ಟು ಸಂತೋಷಗೊಂಡಿರಿ! ಎಲ್ಲವೂ ಏನೂ ಅಲ್ಲ!
ಕೆಲವು ಹಿತಕರ ವಿಷಯಗಳು ಜೀವನದಲ್ಲಿ ಸಂಭವಿಸುತ್ತವೆ, ಕೆಲವು ಅಹಿತಕರ ವಿಷಯಗಳು ಜೀವನದಲ್ಲಿ ಸಂಭವಿಸುತ್ತವೆ; ಕೆಲವು ಜನರು ನಿಮ್ಮನ್ನು ಬೈಯುತ್ತಾರೆ, ಕೆಲವು ಜನರು ನಿಮ್ಮನ್ನು ಹೊಗಳುತ್ತಾರೆ, ಆದರೆ ಅಂತಿಮವಾಗಿ, ಎಲ್ಲವೂ ಏನೂ ಅಲ್ಲ!
ಹಲವು ಸಂಬಂಧಗಳು ಬರುತ್ತವೆ ಮತ್ತು ಹಲವು ಸಂಬಂಧಗಳು ಹೋಗುತ್ತವೆ, ಅಂತಿಮವಾಗಿ, ಎಲ್ಲವೂ ಏನೂ ಅಲ್ಲ! ಅರ್ಥವಾಯಿತೇ?
ಜೀವನವು ಏನೂ ಇಲ್ಲದಿರುವುದರಿಂದ ಪ್ರತ್ಯಕ್ಷವಾಗಿದೆ, ಮತ್ತು ಏನೂ ಇಲ್ಲದಿರುವುದಕ್ಕೆ ಮರಳಿ ಹೋಗುತ್ತದೆ. ಅದಕ್ಕಾಗಿ ಇದಕ್ಕಾಗಿ ಹಂಬಲಿಸುವುದು ಯಾಕೆ? ಹೇಗಿದ್ದರೂ ಎಲ್ಲವೂ ಮಾಡಲ್ಪಡುತ್ತದೆ. ಎಲ್ಲವೂ ಏನೂ ಅಲ್ಲ!
ಭಗವಾನ್ ಬುದ್ಧನು ಇದನ್ನು ಹೃದಯ ಸೂತ್ರ ಎಂದು ಕರೆದನು; ಅದು ಯಾವುದೆಂದರೆ, ’ಎಲ್ಲವೂ ಏನೂ ಅಲ್ಲ!’
ಎಲ್ಲವೂ ಏನೂ ಅಲ್ಲವೆಂಬುದನ್ನು ನೀವು ತಿಳಿದಾಗ, ನಿಮ್ಮಲ್ಲಿ ಪ್ರೇಮವು ಉದಯಿಸುತ್ತದೆ. ಇಲ್ಲದಿದ್ದರೆ, "ನನಗೆ ಇದು ಬೇಕು! ನಾನಿದನ್ನು ಹಿಡಿದಿಡಲು ಬಯಸುತ್ತೇನೆ!", ಆಗ ಅಹಂಕಾರವು ಬರುತ್ತದೆ. ಎಲ್ಲವೂ ಏನೂ ಅಲ್ಲವೆಂಬುದನ್ನು ನೀವು ಅರಿತುಕೊಂಡಾಗ, ಅಹಂಕಾರವು ಕರಗುತ್ತದೆ. ಅಹಂಕಾರವು ಕರಗಿದಾಗ, ಪ್ರೇಮವು ಏಳುತ್ತದೆ ಮತ್ತು ಅದು ನೀವು ಈಗಾಗಲೇ ಆಗಿರುವಿರಿ!
ಸಾರ್ವತ್ರಿಕವಾದ, ಶಾಶ್ವತವಾದ ಒಂದು ಪ್ರೇಮ; ಇದುವೇ ಪ್ರತಿಯೊಬ್ಬ ಮನುಷ್ಯನ ಉತ್ಕಟ ಇಚ್ಛೆ, ಮತ್ತು ನೀವದನ್ನು ಹೃದಯ ಸೂತ್ರದ ಮೂಲಕ ಪಡೆದುಕೊಳ್ಳಬಹುದು. ಹೃದಯ ಸೂತ್ರ ಯಾವುದು? ಎಲ್ಲವೂ ಏನೂ ಅಲ್ಲ ಎಂಬುದನ್ನು ನೀವು ಅರಿತುಕೊಂಡಾಗ!
ನೀವೊಂದು ಕಮಲದಂತಿರಬೇಕು ಎಂದು ಹೇಳಲಾಗಿದೆ, ಯಾಕೆಂದು ನಿಮಗೆ ಗೊತ್ತಾ? ಕಮಲವು ಒಂದು ಕೆಸರಿನ ಕೊಳದಲ್ಲಿದ್ದರೂ, ಕೆಸರಿನ ಒಂದು ಹನಿಯೂ, ಒಂದು ಚಿಟಿಕೆ ಕೆಸರು ಕೂಡಾ ಕಮಲದ ಎಲೆಗೆ ಅಥವಾ ಹೂವಿಗೆ ಅಂಟಿಕೊಳ್ಳುವುದಿಲ್ಲ. ಕಮಲದ ಎಲೆಯು ನೀರಿನಲ್ಲಿರುತ್ತದೆ, ಆದರೆ ನೀವೊಂದು ಹನಿ ನೀರನ್ನು ಅದರ ಮೇಲೆ ಹಾಕಿದರೆ, ಅದೊಂದು ರತ್ನದಂತೆ ನಿಲ್ಲುತ್ತದೆ, ಅದು ಎಲೆಗೆ ಅಂಟಿಕೊಳ್ಳುವುದಿಲ್ಲ. ಆದುದರಿಂದ, ಈ ಪ್ರಪಂಚದಲ್ಲಿ ಒಂದು ಕಮಲದ ಎಲೆಯಂತಿರಿ ಅಂದರೆ, ಇಲ್ಲಿರಿ (ಪ್ರಪಂಚದಲ್ಲಿ) ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡಿ ಎಂದು ಅರ್ಥ. ಎಲ್ಲಾ ಕೆಲಸ ಮಾಡಿ, ಆದರೆ ಅದನ್ನು ನಿಮ್ಮ ತಲೆಯೊಳಕ್ಕೆ ಒಯ್ಯಬೇಡಿ.
ಅದು ಸುಂದರವಾಗಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಈ ಯೋಚನೆಯನ್ನು ಇಷ್ಟಪಡುತ್ತೀರಿ? ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿಟ್ಟುಕೊಳ್ಳುವ ವಿಧಾನ ಇದು. ನಾವು ಮಕ್ಕಳಾಗಿದ್ದಾಗ ನಮಗೆ ನೀಡಲಾಗಿದ್ದ ಸಲಹೆ ಅದು; ನಾವೊಂದು ಕಮಲದ ಎಲೆಯಂತಿರಬೇಕು. 

ಗುರುವಾರ, ಮಾರ್ಚ್ 13, 2014

ಏಳು ಅಂಶದ ಆರ್ಥಿಕ ಪ್ರಗತಿ

ಮಾರ್ಚ್ ೧೩, ೨೦೧೪
ಅಲಾಹಾಬಾದ್, ಉತ್ತರ ಪ್ರದೇಶ

ಸಂಗಮದ (ಗಂಗಾ, ಯಮುನಾ ಮತ್ತು ಸರಸ್ವತಿ - ಈ ಮೂರು ಪವಿತ್ರ ನದಿಗಳು ಸೇರುವ ಸ್ಥಳವಾದ, ಅಲಾಹಾಬಾದ್‌ ನಗರದಲ್ಲಿನ ಜಾಗದ ಹೆಸರು) ನಗರವು, ಭಕ್ತಿ, ಜ್ಞಾನ ಮತ್ತು ಕರ್ಮಗಳ ಒಂದು ಸಂಗಮಕ್ಕೆ ಸಾಕ್ಷಿಯಾಗುತ್ತಿದೆ.

ನಾವೆಲ್ಲರೂ ಜೊತೆಯಲ್ಲಿ ಹಾಡುವಾಗ ಎಷ್ಟು ಅದ್ಭುತವಾಗಿರುತ್ತದೆ, ಅಲ್ಲವೇ? ಸಂಸ್ಕೃತದಲ್ಲಿ ಒಂದು ಮಾತಿದೆ: ’ಶಬ್ದ ಬ್ರಹ್ಮಣೆ ನಿಷ್ಣಾತ ಪರಬ್ರಹ್ಮಾದಿ ಗಚ್ಛತಿ’ (ಪವಿತ್ರ ಗ್ರಂಥವಾದ ’ಶತಪಥ ಬ್ರಾಹ್ಮಣ’ದಿಂದ. ’ಶಬ್ದಬ್ರಹ್ಮ’ ಎಂದರೆ, ಸೃಷ್ಟಿಯ ಆದಿಸ್ವರೂಪದ, ಅತೀಂದ್ರಿಯ ಶಬ್ದವಾಗಿದೆ. ಅಕ್ಷರಶಃ ಅರ್ಥವೆಂದರೆ, ಎಲ್ಲದರ ಮೂಲ ಎಂದು.)
ಇದರರ್ಥವೇನೆಂದರೆ, ಶಬ್ದ ಬ್ರಹ್ಮ(ಓಂ)ನಲ್ಲಿ ಸಂಪೂರ್ಣವಾಗಿ ಮುಳುಗಿರುವವನೊಬ್ಬನು ಅನಾಯಾಸವಾಗಿ ಪರಬ್ರಹ್ಮನನ್ನು(ಸರ್ವೋಚ್ಚವಾದ, ಎಲ್ಲಾ ಕಡೆ ವ್ಯಾಪಿಸಿರುವ ಏಕ ಚೇತನ) ಪಡೆಯುತ್ತಾನೆ.

ಹೀಗಾಗಿ, ಯಾವಾಗೆಲ್ಲಾ ಭಜನೆಗಳನ್ನು ಹಾಡಲಾಗುತ್ತವೆಯೋ ಮತ್ತು ಕೀರ್ತನೆಗಳು ಆಗುತ್ತಿರುತ್ತವೋ, ಆಗ ನಾವು ಸೇರಿಕೊಂಡು ತುಂಬು ಹೃದಯದಿಂದ ಹಾಡಬೇಕು. ಅಷ್ಟೊಂದು ಸಂಪೂರ್ಣವಾಗಿ ತನ್ಮಯರಾಗಿರುವುದರಿಂದ ನಮ್ಮೆಲ್ಲಾ ಚಿಂತೆಗಳು ಮತ್ತು ದುಃಖಗಳು ಮಾಯವಾಗುತ್ತವೆ, ಜೀವನದಲ್ಲಿರುವ ಯಾವುದೇ ಅಸಾಮರಸ್ಯ ಇಲ್ಲವಾಗುತ್ತದೆ ಮತ್ತು ಜೀವನವು ಮತ್ತೆ ಆನಂದ ಹಾಗೂ ಸಾಮರಸ್ಯಗಳಿಂದ ತುಂಬುತ್ತದೆ.

ಜೀವನದಲ್ಲಿ ಅಸಾಮರಸ್ಯ ಇರುವುದು ಯಾಕೆಂದರೆ, ಒತ್ತಡ, ಚಡಪಡಿಕೆ ಮತ್ತು ಮನಸ್ಸಿನಲ್ಲಿರುವ ರಾಗ-ದ್ವೇಷಗಳಿಂದಾಗಿ ಬರುವ ಜ್ವರತೆಗಳಿಂದಾಗಿ. ಈ ನಕಾರಾತ್ಮಕತೆಗಳಿಂದ ಮುಕ್ತರಾಗಲು ನಾವೆಲ್ಲರೂ ಪ್ರತಿದಿನವೂ ಕೆಲವು ನಿಮಿಷಗಳ ಕಾಲ ಅದ್ಭುತವಾದ ಸಂಗೀತವನ್ನು ಆಲಿಸಬೇಕು. ನಾವೆಲ್ಲರೂ ಹಾಡಬೇಕು, ನಮಗೆ ಸರಿಯಾಗಿ ಹಾಡಲು ತಿಳಿದಿದ್ದರೂ ಅಥವಾ ಇಲ್ಲವಾದರೂ; ಅದೇನು ಪರವಾಗಿಲ್ಲ.

ಇವತ್ತು ಇಂತಹ ಒಂದು ಅದ್ಭುತವಾದ ಪ್ರದರ್ಶನವನ್ನು ನೀಡಿದ, ಇಲ್ಲಿ ಕುಳಿತಿರುವ ಯುವಜನರನ್ನು ನಾವೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸಿಸಬೇಕು. ಅವರು ಬೆಳೆದು ದೊಡ್ಡವರಾಗುವಾಗ, ತಮ್ಮ ಪ್ರತಿಭೆಯಿಂದ ಈ ದೇಶ ಹೆಮ್ಮೆ ಪಡುವಂತೆ ಮಾಡುವರು. ನಮ್ಮ ದೇಶದ ಶಾಸ್ತ್ರೀಯ ಸಂಗೀತಕ್ಕೆ ಅವರು ಮಹತ್ತರವಾದ ವೈಭವವನ್ನು ತರುವರು. ಇದನ್ನು ನೋಡಲು ನನಗೆ ನಿಜಕ್ಕೂ ಸಂತೋಷವಾಗುತ್ತಿದೆ.

ಭಾರತವು ಏಳು ಮಹತ್ತರವಾದ ಹಾಗೂ ಸರಿಸಾಟಿಯಿಲ್ಲದ ಸಂಪ್ರದಾಯಗಳಿಗೆ ತವರಾಗಿದೆ. ಅವುಗಳು ಯಾವುವು?
ಮೊತ್ತಮೊದಲನೆಯದು, ಭಾರತದ ಆಧ್ಯಾತ್ಮ. ಜನರ ಹೃದಯವನ್ನು ಗೆಲ್ಲಬಲ್ಲ ಹಾಗೂ ಅವರು ಒಳಗಿನಿಂದ ಅರಳುವಂತೆ ಮಾಡಬಲ್ಲ, ಇಂತಹ ಅಗಾಧವಾದ ಹಾಗೂ ಆಳವಾದ ಆಧ್ಯಾತ್ಮಿಕತೆಯು ನಿಮಗೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗದು. ಜೀವನವನ್ನು ಅಷ್ಟೊಂದು ಸಂಪೂರ್ಣವಾಗಿ ಪರಿವರ್ತಿಸಲು ಸಾಧ್ಯವಾಗುವ ಇಂತಹ ಅನನ್ಯ ಗುಣವು ಕೇವಲ ಭಾರತೀಯ ಆಧ್ಯಾತ್ಮಿಕತೆಗೆ ಮಾತ್ರ ಸೇರುತ್ತದೆ. ಭಾರತವು ಇದರ ಬಗ್ಗೆ ಬಹಳ ಹೆಮ್ಮೆ ಪಡಬೇಕು. ಭಾರತೀಯ ಆಧ್ಯಾತ್ಮಿಕತೆಯು ಎಲ್ಲವನ್ನೂ ಒಳಗೊಂಡಿದೆ; ಯೋಗ, ವೇದಾಂತ ತತ್ವಶಾಸ್ತ್ರ, ಮೊದಲಾದಂತಹವು.

ಎರಡನೆಯದು ಭಾರತೀಯ ಆಯುರ್ವೇದ. ೨೧ನೆಯ ಶತಮಾನದ ಔಷಧೀಯ ಪದ್ಧತಿಗಳು ಮಸುಕಾಗಲು ತೊಡಗಿವೆ. ಇನ್ನೊಂದು ಕಡೆಯಲ್ಲಿ, ಭಾರತೀಯ ಆಯುರ್ವೇದವು ಎಂತಹ ಒಂದು ಅನನ್ಯವಾದ ಪದ್ಧತಿಯೆಂದರೆ, ಅದರಲ್ಲಿ ಔಷಧಿಗಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲ ಮತ್ತು ಕೇವಲ ಒಬ್ಬರ ಆರೋಗ್ಯ ಹಾಗೂ ಒಟ್ಟು ಯೋಗಕ್ಷೇಮವನ್ನು ಸಂರಕ್ಷಿಸಲು ಹಾಗೂ ವರ್ಧಿಸಲು ಮಾತ್ರ ಕೆಲಸ ಮಾಡುತ್ತವೆ.

ಇವತ್ತು ಜಗತ್ತಿನಾದ್ಯಂತ ಯೋಗ ಮತ್ತು ಆಧ್ಯಾತ್ಮಿಕತೆಗಳಿಗೆ ಪ್ರಚಂಡವಾದ ಗೌರವವನ್ನು ನೀಡಲಾಗುತ್ತದೆ. ರಾಷ್ಟ್ರಭೇದವಿಲ್ಲದೆ, ಎಲ್ಲೆಡೆಯಿರುವ ಜನರು ಯೋಗವನ್ನು ತಮ್ಮ ಜೀವನದಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಒಂದಾಗಿಸುತ್ತಿದ್ದಾರೆ.

ನೀವು ನೋರ್ವೇಯಲ್ಲಿನ ಟ್ರೋಮ್ಸೆ ಎಂಬ ನಗರಕ್ಕೆ ಹೋದರೆ, ಅದು ದೇಶದ ಕೊನೆಯ ಜಾಗವಾಗಿದೆ, ಅದು ಆರ್ಕ್ಟಿಕ್ ವೃತ್ತಕ್ಕೆ ಅತ್ಯಂತ ಸಮೀಪದಲ್ಲಿದೆ. ಅಲ್ಲಿ ಒಂದು ವರ್ಷದಲ್ಲಿ ಕೇವಲ ಎರಡು ತಿಂಗಳುಗಳಷ್ಟು ಕಾಲ ಮಾತ್ರ ಸೂರ್ಯನು ಪ್ರಕಾಶಿಸುವುದು. ಆದರೆ ಅಲ್ಲಿ ಕೂಡಾ, ಜನರು ಪ್ರಾಣಾಯಾಮವನ್ನು ಅಭ್ಯಸಿಸುತ್ತಿದ್ದಾರೆ ಮತ್ತು ಧ್ಯಾನ ಮಾಡುತ್ತಿದ್ದಾರೆ. ಅಂತಹ ದೂರದ ಜಾಗದಲ್ಲಿ ಕೂಡಾ ’ಓಂ ನಮಃ ಶಿವಾಯ’ ಮಂತ್ರೋಚ್ಛಾರಣೆಗಳು ಅನುರಣಿಸುತ್ತಿವೆ.

ಅದೇ ರೀತಿಯಲ್ಲಿ, ಭೂಮಿಯ ದಕ್ಷಿಣ ಗೋಳಾರ್ಧದಲ್ಲಿ ಕಡೆಯ ನಗರವಾಗಿದೆ ಟಿಯೆರಾ ಡೆಲ್ ಫಿಗೋ. ಅದರ ನಂತರ ಅಂಟಾರ್ಕ್ಟಿಕ್ ವೃತ್ತವು ಪ್ರಾರಂಭವಾಗುತ್ತದೆ; ಅಲ್ಲಿ ಕೂಡಾ ’ಓಂ ನಮಃ ಶಿವಾಯ’ವನ್ನು ಉಚ್ಛರಿಸಲು ಮತ್ತು ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡಲು ಸಾವಿರಾರು ಜನರು ಒಟ್ಟುಸೇರಿರುವುದು ನಿಮಗೆ ಕಾಣಿಸುತ್ತದೆ. ಇದು ಪ್ರಪಂಚಕ್ಕೆ ಭಾರತದ ಕೊಡುಗೆಯಾಗಿದೆ.

ಪ್ರಪಂಚದಲ್ಲಿ ಪ್ರತಿಯೊಂದು ಮನೆಯಲ್ಲೂ ಭಾರತವು ತನಗಾಗಿ ಒಂದು ಸ್ಥಾನವನ್ನು ಮಾಡಿಕೊಂಡಿದೆ (ಭಾರತೀಯ ಆಧ್ಯಾತ್ಮಿಕತೆಯ ಕಾರಣದಿಂದ). ನಮ್ಮ ಋಷಿಗಳು ಹೀಗೆಂದು ಹೇಳಿದ್ದಾರೆ, ’ಕೃಣವಂತೋ ವಿಶ್ವಂ ಆರ್ಯಂ’. ಇದರರ್ಥ, ’ನಾವು ಬೆಳೆಯುವೆವು ಮತ್ತು ವೈಭವದಿಂದ ಪ್ರಪಂಚದ ಮೂಲಕ ಹರಡುವೆವು.’ ಅವರ ಕನಸು ಇವತ್ತು ನನಸಾಗಿ ಮಾರ್ಪಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ.

ಮೂರನೆಯ ಉಜ್ವಲವಾದ ಪದ್ಧತಿಯೆಂದರೆ ನಮ್ಮ ಭಾರತೀಯ ಸಂಗೀತ. ಭಾರತವು ಹಲವಾರು ವಿವಿಧ ರೀತಿಗಳ ಮತ್ತು ಶಾಖೆಗಳ ಸಂಗೀತಕ್ಕೆ ತವರಾಗಿದೆ. ಸಂಗೀತ ಮತ್ತು ನೃತ್ಯಗಳಲ್ಲಿ ಇಂತಹ ಒಂದು ಶ್ರೀಮಂತ ವೈವಿಧ್ಯತೆಯು ನಿಮಗೆ ಪ್ರಪಂಚದಲ್ಲಿ ಬೇರೆಲ್ಲೂ ಕೂಡಾ ಕಂಡುಬರದು.

ಅನಾದಿ ಕಾಲದಿಂದಲೂ ನಾವು ಸಂಗೀತ ಮತ್ತು ನೃತ್ಯಗಳನ್ನು ನಮ್ಮ ಸಂಸ್ಕೃತಿಯ ಮತ್ತು ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದೇವೆ. ಸರಸ್ವತಿ ದೇವಿಯು ತನ್ನ ವೀಣೆಯಿಂದ ದೈವಿಕ ನುಡಿಗಳನ್ನು ಬಾರಿಸಿದಾಗ ಭಗವಾನ್ ಶಿವನೇ ತಾಂಡವವನ್ನಾಡಿದನು. ಭಗವಂತನು ಆನಂದಪರವಶನಾಗಿ ನರ್ತಿಸುವುದನ್ನು ನೋಡಿ, ನಂದಿ, ಭೃಂಗಿಯರಂತಹ ಅವನ ಭಕ್ತರೂ ಕೂಡಾ ನರ್ತಿಸಲು ಪ್ರಾರಂಭಿಸಿದರು. ಹೀಗೆ, ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಯಾವತ್ತೂ ಒಂದು ಬಹಳ ಮುಖ್ಯವಾದ ಸ್ಥಾನವನ್ನು ಕೊಡಲಾಗಿದೆ.

ಭಾರತದ ನಾಲ್ಕನೆಯ ಮಹಾನ್ ಪದ್ಧತಿಯೆಂದರೆ ನಮ್ಮ ಭಾರತೀಯ ಆಹಾರ ಮತ್ತು ಅಡುಗೆಯ ಶೈಲಿಗಳು. ದೇಶದುದ್ದಕ್ಕೂ ನಾವು ಅಷ್ಟೊಂದು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತೇವೆ. ಕೆಲವು ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ, ಅನ್ನಂಬ್ರಹ್ಮಂ ಎಂಬ ಒಂದು ನಮ್ಮ ಕಾರ್ಯಕ್ರಮವಿತ್ತು. ಅದು ಭಾರತೀಯ ಆಹಾರದ ವೈವಿಧ್ಯತೆಯ ಒಂದು ಆಚರಣೆಯಾಗಿತ್ತು. ಕಾರ್ಯಕ್ರಮಕ್ಕಾಗಿ ಸುಮಾರು ೫೭೦೦ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಆ ಖಾದ್ಯಗಳನ್ನು ತಯಾರಿಸಲು ನಮ್ಮ ಸ್ವಯಂಸೇವಕರಿಂದ ೨೬೫ ಅಡುಗೆಮನೆಗಳಲ್ಲಿ, ಏಳು ಟನ್ನುಗಳಷ್ಟು ಆಹಾರ ಪದಾರ್ಥಗಳು ಮತ್ತು ಧವಸ ಧಾನ್ಯಗಳನ್ನು ಬಳಸಲಾಗಿತ್ತು. ಪ್ರಪಂಚದಲ್ಲೆಲ್ಲೂ ಯಾರೂ ಅಷ್ಟೊಂದು ಸಂಖ್ಯೆಯ ಖಾದ್ಯಗಳ ಬಗ್ಗೆ ಕೇಳಿರಲಿಕ್ಕೂ ಇಲ್ಲ.

ಇದು ಭಾರತದ ಒಂದು ವಿಶೇಷತೆಯಾಗಿದೆ. ಈ ದಿನಗಳಲ್ಲಿ ನಾವೇನು ಮಾಡುತ್ತಿರುವೆವು ಎಂಬುದು ನಿಮಗೆ ಗೊತ್ತೇ? ಈ ದಿನಗಳಲ್ಲಿ ನಾವು ಪಿಡ್ಝಾ ಹಟ್‌ಗೆ ಹೋಗುವುದಕ್ಕೆ ಆದ್ಯತೆ ಕೊಡುತ್ತೇವೆ. ಆಹಾರದಲ್ಲಿನ ನಮ್ಮ ಶ್ರೀಮಂತ ಪರಂಪರೆಯನ್ನು ನಾವು ಮರೆತುಬಿಟ್ಟಿದ್ದೇವೆ. ಪಿಡ್ಝಾದ ಕಥೆಯು ನಿಮಗೆ ಗೊತ್ತೇ? ಪಿಡ್ಝಾವು ಹೇಗೆ ಹುಟ್ಟಿಕೊಂಡಿತು ಎಂಬುದು ನಿಮಗೆ ಗೊತ್ತೇ? ಇಟೆಲಿಯಲ್ಲಿ ಅವರು, ಉಳಿದ ಎಲ್ಲಾ ಹಿಟ್ಟು ಮತ್ತು ತರಕಾರಿಗಳನ್ನು ಉಪಯೋಗಿಸಿ ಪಿಡ್ಝಾವನ್ನು ಮಾಡಿದರು. ಇಟೆಲಿಯಲ್ಲಿನ ಜನರು, ತಮ್ಮ ಊಟವನ್ನು ಮುಗಿಸಿದ ಬಳಿಕ ಕೆಲಸದವರಿಗೆ ಪಿಡ್ಝಾವನ್ನು ಆಹಾರವಾಗಿ ನೀಡುತ್ತಿದ್ದರು.

ನಮ್ಮದೇ ದೇಶಕ್ಕೆ ಸೇರಿರುವ ಆಹಾರದ ಶ್ರೀಮಂತ ವೈವಿಧ್ಯತೆಗಳನ್ನು ನಾವು ಮರೆತುಬಿಟ್ಟಿದ್ದೇವೆ. ನಮ್ಮ ಹೊಟ್ಟೆ ಮತ್ತು ಕರುಳುಗಳಿಗೆ ತೊಂದರೆಯನ್ನುಂಟುಮಾಡುವ ಮೈದಾದಿಂದ ಮಾಡಲ್ಪಟ್ಟಿರುವ ಪಿಡ್ಝಾಗಳಂತಹ ಆಹಾರ ಪದಾರ್ಥಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ.

ನೀವು ತ್ರಿಪುರಕ್ಕೆ ಹೋದರೆ, ಅಲ್ಲಿ ತಯಾರಿಸಲಾಗುವ ಆಹಾರ ಪದಾರ್ಥಗಳ ವೈವಿಧ್ಯತೆಯನ್ನು ನೋಡಿ ನೀವು ಅಚ್ಚರಿಪಡುವಿರಿ. ಇವತ್ತು ಮೂರು ರಾಜ್ಯಗಳಲ್ಲಿ ಪ್ರವಾಸ ಮಾಡಿದ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಬೆಳಗ್ಗೆ ನಾನು ಬಿಹಾರ್ ರಾಜ್ಯದ ಬೋಧ್ ಗಯಾ ನಗರವನ್ನು ಸಂದರ್ಶಿಸಿದೆ. ಮಧ್ಯಾಹ್ನ ನಾನು ಪಶ್ಚಿಮ ಬಂಗಾಳದಲ್ಲಿದ್ದೆ ಮತ್ತು ಈಗ ಸಂಜೆ ನಾನು ಉತ್ತರ ಪ್ರದೇಶಕ್ಕೆ ಬಂದಿದ್ದೇನೆ. ಪ್ರತಿಯೊಂದು ಪ್ರಾಂತ್ಯವೂ ವೈವಿಧ್ಯಮಯ ಆಹಾರ ಖಾದ್ಯಗಳನ್ನು ಹೊಂದಿದೆ. ಆಹಾರದಲ್ಲಿನ ಈ ವೈವಿಧ್ಯತೆಯು ನಮ್ಮ ಸಾಂಸ್ಕೃತಿಕ ಗುರುತಿನ ಒಂದು ಅನನ್ಯ ಭಾಗವಾಗಿದೆ ಮತ್ತು ನಾವದನ್ನು ಪ್ರಚಾರಗೊಳಿಸಬೇಕು.
ಭಾರತದ ಐದನೆಯ ಮಹತ್ತರವಾದ ಪದ್ಧತಿಯೆಂದರೆ, ಭಾರತೀಯ ವಸ್ತ್ರ ಮತ್ತು ಪೋಷಾಕಿನ ವೈವಿಧ್ಯತೆ.

ನೀವು ವಿದೇಶಕ್ಕೆ ಹೋದರೆ, ಜನರು ಧರಿಸುವ ಬಟ್ಟೆಗಳು ಸಾಮಾನ್ಯವಾಗಿ, ಯಾವುದೇ ವೈವಿಧ್ಯತೆಯಿಲ್ಲದೆ, ಒಂದೇ ಅಥವಾ ಸುಮಾರಾಗಿ ಒಂದೇ ರೀತಿಯ ಬಣ್ಣಗಳದ್ದು ಎಂಬುದು ನಿಮಗೆ ಕಾಣಿಸುತ್ತದೆ; ಆದರೆ ಭಾರತದಲ್ಲಿ, ಬಹಳಷ್ಟು ವೈವಿಧ್ಯಮಯ ಬಟ್ಟೆಗಳು ಮತ್ತು ಉಡುಪಿನ ಶೈಲಿಗಳನ್ನು, ಹಾಗೂ ಅವುಗಳೊಂದಿಗೆ ಧರಿಸಲಾಗುವ ವಿವಿಧ ಆಭರಣಗಳು ಮತ್ತು ಉಪಸಾಧನಗಳನ್ನು ಕೂಡಾ ನೀವು ಕಾಣಬಹುದು. ಯುಗಗಳಿಂದ ಇದು ರೂಢಿಯಲ್ಲಿದೆ.

ಭಾರತೀಯ ದೇವಾಲಯಗಳಲ್ಲಿರುವ ಪ್ರತಿಮೆಗಳು ಕೂಡಾ ಶೃಂಗರಿಸಲ್ಪಡುತ್ತವೆ- ಪ್ರತಿದಿನವೂ ಅವುಗಳಿಗೆ ಬಹಳ ಸುಂದರವಾಗಿ ಉಡುಪು ತೊಡಿಸಿ ಅಲಂಕರಿಸಲಾಗುತ್ತದೆ. ಈ ಗುಣ ಮತ್ತು ಸಂಪ್ರದಾಯಗಳು ಹಲವಾರು ಯುಗಗಳಿಂದ ನಮ್ಮ ಸಂಸ್ಕೃತಿಯ ಇನ್ನೊಂದು ಮುಖ್ಯವಾದ ಭಾಗವಾಗಿದೆ.

ಮುಂದಿನದೆಂದರೆ, ಭಾರತೀಯ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ವೃತ್ತಿಯು ಭಾರತದಲ್ಲಿ; ವಿಶೇಷವಾಗಿ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ; ಅಷ್ಟೊಂದು ಚೆನ್ನಾಗಿ ಯಾಕೆ ಬೆಳೆಯಿತು ಎಂಬುದನ್ನು ತಿಳಿಯಲು ಲಂಡನ್ನಿನ ಸಂಶೋಧಕರಿಂದ ಇತ್ತೀಚೆಗೆ ಒಂದು ಅಧ್ಯಯನವನ್ನು ನಡೆಸಲಾಯಿತು. ಭಾರತೀಯ ಭಾಷೆಗಳ ಬೇರುಗಳು ಸಂಸ್ಕೃತದಲ್ಲಿವೆ ಎಂಬುದನ್ನು ಅವರು ಕಂಡುಹಿಡಿದರು. ನಂತರ ಅವರು ಸಂಸ್ಕೃತ ಭಾಷೆಯನ್ನು ಆಳವಾಗಿ ಪರೀಕ್ಷಿಸಿದರು ಮತ್ತು ಅಧ್ಯಯನ ನಡೆಸಿದರು. ನಮ್ಮ ಮೆದುಳಿನ ನರ-ಭಾಷಾಧ್ಯಯನ (ನ್ಯೂರೋ-ಲಿಂಗ್ವಿಸ್ಟಿಕ್) ಕ್ರಿಯೆಗೆ ಒಂದು ಭಾಷೆಯಾಗಿ ಸಂಸ್ಕೃತವು ಅತ್ಯಂತ ಹೆಚ್ಚು ಸಹಾಯಕ ಎಂಬುದಾಗಿ ಅವರು ಕಂಡುಹಿಡಿದರು. ಮೆದುಳಿನ ನರ-ಭಾಷಾ ಅಂಗಗಳು ಚೆನ್ನಾಗಿ ಬೆಳೆಯಲು ಮತ್ತು ಮಾಹಿತಿಗಳನ್ನು ವೇಗವಾಗಿ ಹಾಗೂ ಸರಿಯಾಗಿ  ಗ್ರಹಿಸಲು ಸಂಸ್ಕೃತವು ಅನುಮತಿಸುತ್ತದೆ.

ಹೀಗೆ, ಈ ಸಂಶೋಧನೆ ನಡೆದು ೨೦ ವರ್ಷಗಳ ಬಳಿಕ, ಇಂಗ್ಲೇಂಡ್‌ನಲ್ಲಿ ಮೂರು ಶಾಲೆಗಳಲ್ಲಿ ಅವರು ಸಂಸ್ಕೃತವನ್ನು ಒಂದು ಕಡ್ಡಾಯವಾದ ವಿಷಯವನ್ನಾಗಿ ಮಾಡಿದ್ದಾರೆ. ನೀವು ಇದರ ಬಗ್ಗೆ ಕೇಳಿರಬೇಕು; ಅಥವಾ ವಾರ್ತಾಪತ್ರಿಕೆಗಳಲ್ಲಿ ಇದರ ಬಗ್ಗೆ ಓದಿರಬೇಕು. ಕಂಪ್ಯೂಟರ್‌ಗಳನ್ನು ಪ್ರೋಗ್ರಾಮ್ ಮಾಡಲು ಸಂಸ್ಕೃತವು ಅತ್ಯಂತ ಸೂಕ್ತ ಭಾಷೆಯೆಂಬುದಾಗಿ ಕಂಡುಹಿಡಿಯಲ್ಪಟ್ಟಿದೆ, ಮತ್ತು ನಮ್ಮೆಲ್ಲಾ ಭಾರತೀಯ ಭಾಷೆಗಳು ಸಂಸ್ಕೃತವನ್ನು ಆಧರಿಸಿವೆ. ನಾವು ಸಂಸ್ಕೃತವನ್ನು ಅಥವಾ ನಮ್ಮ ಭಾರತೀಯ ಭಾಷೆಗಳಲ್ಲಿ ಯಾವುದನ್ನಾದರೂ ಮಾತನಾಡುವಾಗ, ಮೆದುಳಿನ ನರ-ಭಾಷಾಧ್ಯಯನ ಕ್ರಿಯೆಗಳು ಕೂಡಾ ಸಮರಸವಾಗಿ ಪ್ರತಿಕ್ರಿಯಿಸುತ್ತವೆ ಮತ್ತು ಬೆಳವಣಿಗೆ ಹೊಂದುತ್ತವೆ. ಇದನ್ನೇ ಇಂದಿನ ವಿಜ್ಞಾನಿಗಳು ಹೇಳಿರುವುದು.

ಭಾರತೀಯ ಪ್ರವಾಸೋದ್ಯಮವು ಭಾರತದ ಸಂಪ್ರದಾಯದ ಏಳನೆಯ ಮಹತ್ತರವಾದ ಅಂಶವಾಗಿದೆ. ಭಾರತದಲ್ಲಿ ಸಂದರ್ಶಿಸಲು ಒಬ್ಬರಿಗೆ ಸಿಗಬಹುದಾದ ಪ್ರವಾಸಿ ತಾಣಗಳ ಬೃಹತ್ ಸಂಖ್ಯೆಯೊಂದಿಗೆ ಪ್ರಪಂಚದ ಇತರ ಯಾವುದೇ ದೇಶಕ್ಕೆ ಸ್ಪರ್ಧಿಸಲು ಸಾಧ್ಯವಿಲ್ಲ. ಒಮ್ಮೆ, ಆರ್ಟ್ ಆಫ್ ಲಿವಿಂಗ್‌ನ ಒಂದು ಕಾರ್ಯಕ್ರಮದ ಮುಕ್ತಾಯವಾದ ಬಳಿಕ ನಾನು ಗ್ರೀಸ್‌ನ ಒಂದು ಪ್ರವಾಸಕ್ಕೆ ಹೋದೆ. ಭಾರತದಿಂದಲೂ ಕೆಲವರು ಅಲ್ಲಿ ನನ್ನ ಜೊತೆಗಿದ್ದರು. ಅವರು ನನ್ನಲ್ಲಿ ಹೀಗೆಂದು ಹೇಳಿದರು, "ಗುರುದೇವ, ಇಲ್ಲಿ ನೋಡಲಿರುವುದು ಸ್ವಲ್ಪ ಮಾತ್ರ; ಈ ದೊಡ್ಡ ಕಲ್ಲಿನ ಕಂಬಗಳು ಮಾತ್ರ. ಆದರೂ ಇಡೀ ಪ್ರಪಂಚವೇ ಅವುಗಳನ್ನು ನೋಡಲು ಹಿಂಡು ಹಿಂಡಾಗಿ ಬರುತ್ತದೆ. ನಮ್ಮದೇ ದೇಶದಲ್ಲಿ ನೋಡಲು ಎಷ್ಟೋ ಹೆಚ್ಚಿದೆ." ಆದರೆ ದುರದೃಷ್ಟವಶಾತ್ ನಮ್ಮ ದೇಶದ ಪ್ರವಾಸಿ ತಾಣಗಳನ್ನು ಮತ್ತು ಪರಂಪರೆಯನ್ನು ನಾವೊಂದು ಸರಿಯಾದ ರೀತಿಯಲ್ಲಿ ಪ್ರಪಂಚದ ಮುಂದಿಟ್ಟಿಲ್ಲ ಮತ್ತು ಪ್ರಚಾರ ಮಾಡಿಲ್ಲ.

ಗ್ರೀಸ್ ಒಂದು ಚಿಕ್ಕ ದೇಶವಾಗಿದೆ, ಮತ್ತು ಹಾಗಿದ್ದರೂ ಅದರ ಪರಂಪರೆಯ ಸ್ಥಳಗಳನ್ನು ಮತ್ತು ಪ್ರವಾಸಿ ತಾಣಗಳನ್ನು ನೋಡಲು ಸುಮಾರು ೧೨ ದಶಲಕ್ಷ ಜನರು ಗ್ರೀಸಿಗೆ ಪ್ರಯಾಣಿಸುತ್ತಾರೆ; ಅದೇ ವೇಳೆಗೆ, ಭಾರತವು ಕೇವಲ ನಾಲ್ಕು ದಶಲಕ್ಷ ಜನರನ್ನು ಮಾತ್ರ ವಾರ್ಷಿಕವಾಗಿ ಪ್ರವಾಸಿಗಳಾಗಿ ಸ್ವಾಗತಿಸುತ್ತದೆ. ನಮ್ಮ ಶ್ರೀಮಂತವಾದ ಮತ್ತು ವೈವಿಧ್ಯಮಯವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚದ ಮುಂದೆ ಪ್ರಸ್ತುತ ಪಡಿಸಲು ನಾವು ಪ್ರಯತ್ನ ಪಟ್ಟಿಲ್ಲ. ನಾವಿನ್ನೂ ನಮ್ಮ ದೇಶದಲ್ಲಿ ಸರಿಯಾದ ಮೂಲಭೂತ ಸೌಕರ್ಯ ಹಾಗೂ ಇತರ ಹಲವಾರು ಸೌಲಭ್ಯಗಳಲ್ಲಿ ಹಿಂದಿದ್ದೇವೆ.

ಈ ಏಳು ಅಂಶಗಳ ಬಗ್ಗೆ ನಿಜಕ್ಕೂ ಭಾರತವು ಹೆಮ್ಮೆ ಪಡಬಹುದು. ಈ ಏಳು ಅಂಶಗಳನ್ನು ನಾವು ಗೌರವಿಸಿದರೆ ಮತ್ತು ಚೆನ್ನಾಗಿ ಅಭಿವೃದ್ಧಿಪಡಿಸಿದರೆ, ಭಾರತದ ಆರ್ಥಿಕತೆಯು ನಿಜಕ್ಕೂ ಸುಧಾರಿಸುವುದನ್ನು ಮತ್ತು ಮತ್ತೊಮ್ಮೆ ಬೆಳೆಯಲು ತೊಡಗುವುದನ್ನು ನೀವು ನೋಡುವಿರಿ. ಇದು ನನ್ನ ನಂಬಿಕೆ. ನಾನು ಮಾತನಾಡಿದ ಈ ಏಳು ವಿಷಯಗಳನ್ನು ನೀವೆಲ್ಲರೂ ಜ್ಞಾಪಕದಲ್ಲಿಡುವಿರೇ?

ಮೊದಲನೆಯದು ಭಾರತೀಯ ಆಧ್ಯಾತ್ಮ; ಅದು ಎಲ್ಲರ ಹೃದಯಗಳಲ್ಲೂ ಆನಂದವನ್ನು ಮತ್ತು ಅಂತಹ ಒಂದು ಅಲ್ಲಾಡಿಸಲು ಸಾಧ್ಯವಿಲ್ಲದ ಮುಗುಳ್ನಗೆಯನ್ನು ತರುತ್ತದೆ. ನಮ್ಮ ಆಧ್ಯಾತ್ಮಿಕತೆಯು ಪುಸ್ತಕದ ಜ್ಞಾನವಲ್ಲ ಮತ್ತು ಗ್ರಂಥಗಳಿಗೆ ಮಾತ್ರ ಸೀಮಿತವಾದುದಲ್ಲ, ಅದು ಬಹಳ ಪ್ರಾಯೋಗಿಕ ಮತ್ತು ವೈಜ್ಞಾನಿಕವಾದುದು ಹಾಗೂ ನಮ್ಮ ದೈನಂದಿನ ಜೀವನಗಳಲ್ಲಿ ಅಳವಡಿಸಿಕೊಳ್ಳಬಹುದು. ಒಬ್ಬನ ಜೀವನವನ್ನು ಅಷ್ಟೊಂದು ಸಂಪೂರ್ಣವಾಗಿ ಪರಿವರ್ತಿಸುವ ಸಾಮರ್ಥ್ಯವು ಇದಕ್ಕಿದೆ. ಜೀವನದ ಎಲ್ಲಾ ದೆಸೆಗಳಲ್ಲೂ ನೀವು ಅರಳುವಂತೆ ಅದು ಮಾಡಬಲ್ಲದು.

ಕೆಲವು ದಿನಗಳ ಹಿಂದೆ ನಾನು ಬಿಹಾರದಲ್ಲಿದ್ದೆ. ವಿವಿಧ ಗ್ರಾಮಗಳಿಂದ ಮತ್ತು ಗ್ರಾಮೀಣ ಪ್ರದೇಶಗಳಿಂದ ಸುಮಾರು ೧೦೦ ಯುವಕರು ನನ್ನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು.

ಮೂರು ವಾರಗಳ ಹಿಂದೆ, ಅವರೆಲ್ಲರೂ ಆರ್ಟ್ ಆಫ್ ಲಿವಿಂಗ್ ಆನಂದದ ಅನುಭೂತಿ ಶಿಬಿರವನ್ನು (ಹ್ಯಾಪ್ಪಿನೆಸ್ ವರ್ಕ್‌ಶಾಪ್) ಹಾಜರಾಗುವ ಮೊದಲು, ತಮ್ಮ ಹಕ್ಕುಗಳನ್ನು ಬಲದಿಂದ ಪಡೆಯಲಿಕ್ಕಾಗಿ ಬಂದೂಕುಗಳನ್ನು ಹಾಗೂ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಅವರು ನಿರ್ಧರಿಸಿದ್ದರು. ಮಾವೋವಾದಿಗಳ ಜೀವನಶೈಲಿಯನ್ನು ಸ್ವೀಕರಿಸಿಕೊಳ್ಳಲು ಅವರು ನಿರ್ಧರಿಸಿದ್ದರು.
ಆನಂದದ ಅನುಭೂತಿ   ಶಿಬಿರದಲ್ಲಿ ಅವರು ಪ್ರಾಣಾಯಾಮವನ್ನು ಅಭ್ಯಸಿಸಿದರು, ಅವರು ಧ್ಯಾನ ಮಾಡಿದರು ಮತ್ತು ಅವರು ತಮ್ಮ ಜೀವನಗಳಲ್ಲಿ ಹಾಗೂ ತಮ್ಮ ದೃಷ್ಟಿಕೋನದಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಯನ್ನು ಅನುಭವಿಸಿದರು. ಕಾರ್ಯಾಗಾರವನ್ನು ಮುಗಿಸಿದ ಬಳಿಕ, ಅವರೆಲ್ಲರೂ ನನ್ನನ್ನು ಭೇಟಿಯಾಗಲು ಬಂದರು. ಅವರ ಕಣ್ಣುಗಳು ಒದ್ದೆಯಾಗಿದ್ದವು ಮತ್ತು ಅವರು ಹೀಗೆಂದು ಹೇಳಿದರು, "ಗುರುದೇವ, ನಾವು ಮತ್ತೆಂದೂ ಶಸ್ತ್ರಗಳನ್ನು ಮತ್ತು ಹಿಂಸೆಯನ್ನು ಕೈಗೆತ್ತಿಕೊಳ್ಳೆವು. ನಾವು ನಮ್ಮೆಲ್ಲಾ ಶಸ್ತ್ರಗಳನ್ನು ನಿಮ್ಮ ಪಾದಗಳಲ್ಲಿ ಸಮರ್ಪಿಸುತ್ತೇವೆ."

ಅವರಲ್ಲಿ ಬಂದಿದ್ದ ಬದಲಾವಣೆಯನ್ನು ನೋಡಿ ಯಾರ ಕಣ್ಣುಗಳಾದರೂ ಕಣ್ಣೀರಿನಿಂದ ತುಂಬುತ್ತಿತ್ತು. ಅವರೆಲ್ಲರೂ ಅಷ್ಟೊಂದು ಸಹೃದಯಿ ಜನರಾಗಿದ್ದರು, ಆದರೆ ಅವರು ತಪ್ಪು ದಾರಿ ಹಿಡಿದಿದ್ದರು. ಯಾಕೆಂದು ನಿಮಗೆ ಗೊತ್ತೇ? ಇದು ಯಾಕೆಂದರೆ, ಹಾಗೆ ಮಾಡಬಾರದೆಂದು ಯಾರೂ ಅವರಿಗೆ ಸಲಹೆ ನೀಡಲಿಲ್ಲ, ಮತ್ತು ಅವರು ಯಾವತ್ತೂ ಅಂತಹ ಶಾಂತಿ ಮತ್ತು ಆನಂದವನ್ನು ತಮ್ಮ ಜೀವನಗಳಲ್ಲಿ ಅನುಭವಿಸದೇ ಇದ್ದ ಕಾರಣದಿಂದ. ಜ್ಞಾನ, ಧ್ಯಾನ ಮತ್ತು ಗಾನ (ಇಲ್ಲಿ ಸತ್ಸಂಗ ಎಂದು ಅರ್ಥ)ಗಳ ಸಿಹಿಯಾದ ಅಮೃತವನ್ನು ಅವರು ಸವಿದಿರಲಿಲ್ಲ.

ನಮ್ಮ ಆಧ್ಯಾತ್ಮಿಕತೆಯ ಮೂರು ಪ್ರಧಾನ ಅಂಶಗಳು ಇವುಗಳಾಗಿವೆ: ಜ್ಞಾನ, ಗಾನ ಮತ್ತು ಧ್ಯಾನ.

ಆಧುನಿಕ ವಿಜ್ಞಾನವು ಇವುಗಳನ್ನು ಎಡ ಮೆದುಳಿನ ಚಟುವಟಿಕೆ (ಜ್ಞಾನ), ಬಲ ಮೆದುಳಿನ ಚಟುವಟಿಕೆ (ಗಾನ) ಮತ್ತು ಸುಸಂಬದ್ಧ ಚಟುವಟಿಕೆ (ಧ್ಯಾನ) ಎಂದು ಕರೆಯುತ್ತದೆ. ಭಾರತೀಯ ಆಧ್ಯಾತ್ಮವು ಎಲ್ಲಾ ಮೂರನ್ನು ಒಳಗೊಂಡಿದೆ ಮತ್ತು ಅದಕ್ಕಾಗಿಯೇ ಸಮಾಜದಲ್ಲಿ ಅಷ್ಟೊಂದು ಮಹತ್ತರವಾದ ಪರಿವರ್ತನೆಯನ್ನು ತರುವ ಸಾಮರ್ಥ್ಯವು ಅದಕ್ಕಿರುವುದು. ದುರದೃಷ್ಟವಶಾತ್, ನಾವು ನಮ್ಮ ದೇಶದಲ್ಲಿ ಆಧ್ಯಾತ್ಮವನ್ನು ಅಲಕ್ಷಿಸಿದ್ದೇವೆ; ಅಥವಾ ನಾವದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ.

ಶನಿವಾರ, ಮಾರ್ಚ್ 1, 2014

ಜ್ಞಾನಿಯ ಲಕ್ಷಣ

ಮಾರ್ಚ್ ೦೧, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಕುಟುಂಬವನ್ನು ನಿರ್ವಹಿಸುವುದು ಹೆಚ್ಚು ಕಷ್ಟವಾಗುತ್ತಾ ಹೋಗುವುದು ಯಾಕೆ? ನಾನು ಪ್ರೀತಿಸುವವರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ನಾನು ನಿರ್ವಹಿಸಬಲ್ಲೆನು ಮತ್ತು ಪ್ರಭಾವಿತಗೊಳಿಸಬಲ್ಲೆನು. ನನ್ನಲ್ಲಿ ಏನು ಕೊರತೆಯಿದೆ? 

ಶ್ರೀ ಶ್ರೀ ರವಿ ಶಂಕರ್: ನೀನದನ್ನು ಪರೋಕ್ಷವಾಗಿ ಮಾಡಬೇಕು. ನಿನ್ನ ಕುಟುಂಬಕ್ಕೆ ಸನಿಹವಾಗಿರುವ ಒಬ್ಬರಲ್ಲಿ ನೀನು ಹೇಳಬೇಕು ಮತ್ತು ಕುಟುಂಬವನ್ನು ಅವರ ಮೂಲಕ ಪ್ರಭಾವಿತಗೊಳಿಸಬೇಕು.
ಬಹುಶಃ ಅವರಿಗೆ ನಿನ್ನನ್ನು ತುಂಬಾ ಚೆನ್ನಾಗಿ ಗೊತ್ತು!

ನೀನು ಅಷ್ಟೊಂದು ಕೇಂದ್ರಿತನಾಗಿದ್ದರೆ ಮತ್ತು ನೀನು ಜ್ಞಾನವನ್ನು ನೂರು ಶೇಕಡಾ ಜೀವಿಸುವುದಾದರೆ, ಆಗ ನೀನವರನ್ನು ಪ್ರಭಾವಿತಗೊಳಿಸಲು ಪ್ರಯತ್ನಿಸಬೇಕಾಗಿಲ್ಲ, ಅವರೇ ಆಗಿ ಪ್ರಭಾವಿತಗೊಳ್ಳುವರು ಎಂಬುದು ನಿನಗೆ ಕಾಣಿಸುವುದು.

ನಿನಗೆ ಅತ್ಯಂತ ನಿಕಟರಾಗಿರುವ ಜನರು ನಿನ್ನ ಮೇಲೆ ಅತ್ಯಂತ ಹೆಚ್ಚಿನ ಗೌರವವನ್ನು ಹೊಂದಿರುವಾಗ ಅದು, ನೀನು ಜ್ಞಾನದಲ್ಲಿ ಚೆನ್ನಾಗಿ ಸ್ಥಾಪನೆಯಾಗಿರುವುದನ್ನು ಸೂಚಿಸುತ್ತದೆ, ಯಾಕೆಂದರೆ ಅವರಿಗೆ ನಿನ್ನನ್ನು ತಿಳಿದಿರುತ್ತದೆ. ನೀನು ಪ್ರತಿಯೊಂದು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವೆ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲೂ ನೀನು ಹೇಗೆ ಶಾಂತನಾಗಿರುವೆ ಎಂಬುದನ್ನು ಅವರು ನೋಡುತ್ತಾರೆ.

ಹೀಗಾಗಿ ನಿಮ್ಮ ನಿಕಟವರ್ತಿಗಳು ನಿಮ್ಮನ್ನು ಹೊಗಳಿದರೆ, ಅದರರ್ಥ ನೀವು ನಿಜಕ್ಕೂ ಅರಳಿರುವಿರಿ ಎಂದು. ಅದರರ್ಥ, ನಿಮಗಿನ್ನು ಮುಂದುವರಿಯುವುದು ಸ್ವಲ್ಪ ಮಾತ್ರ ಬಾಕಿಯಿದೆ. ಉನ್ನತ ಜ್ಞಾನವನ್ನು ಹೊಂದಿದ್ದಾಗ ನಿಮ್ಮ ಸಮೀಪವರ್ತಿಗಳನ್ನು ಹೊರತುಪಡಿಸಿ, ಉಳಿದವರ ಮೇಲೆ ಪ್ರಭಾವ ಬೀರಬಹುದು, ಹಾಗಾಗುತ್ತದೆ.

ಪ್ರಶ್ನೆ: ಗುರುದೇವ, ೪೦-೪೫ ವರ್ಷಗಳವರೆಗೆ ಆಧ್ಯಾತ್ಮಿಕ ಪಥದಲ್ಲಿದ್ದ ಅಮೇರಿಕಾದ ಒಬ್ಬ ರಾಯಭಾರಿಯನ್ನು ಭೇಟಿಯಾಗುವ ಸಂದರ್ಭ ನನಗೆ ಒದಗಿ ಬಂತು. ಕೆಲವು ಸಂತರಿಗೆ ದೇವರ ರಾಜ್ಯದ ದರ್ಶನಗಳಾದುವೆಂದೂ, ಅದು ನೀಲಿಯಾಗಿರುವುದೆಂದೂ, ದೇವರ ರಾಜ್ಯದೊಳಕ್ಕೆ ಪ್ರವೇಶಿಸಲು ಲಕ್ಷಗಟ್ಟಲೆ ಆತ್ಮಗಳು ಸುತ್ತುತ್ತಿರುತ್ತವೆ, ಆದರೆ ಅದು ಒಬ್ಬರು ಗುರುವಿನ ಮೂಲಕ ಮಾತ್ರ ಸಾಧ್ಯ ಎಂದೂ ಅವನು ಹೇಳಿದನು. ಇದೆಲ್ಲವೂ ನಿಜವೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ಗೀತೆಯಲ್ಲಿ ಕೂಡಾ ಹೀಗೆಂದು ಹೇಳಲಾಗಿದೆ: ಲಕ್ಷಗಟ್ಟಲೆ ಜನರಲ್ಲಿ ಕೇವಲ ಕೆಲವರು ಮಾತ್ರ ಪಥದಲ್ಲಿ ನಡೆಯುವರು, ಮತ್ತು ಪಥದಲ್ಲಿ ನಡೆಯುವ ಕೆಲವರಲ್ಲಿ ಕೇವಲ ಕೆಲವರು ಮಾತ್ರ ನನ್ನನ್ನು ಚೆನ್ನಾಗಿ ತಿಳಿಯುವರು.

ಭೂಮಿಯ ಮೇಲಿರುವ ಈ ೮.೪ ದಶಲಕ್ಷ ರೀತಿಯ ಜೀವಿಗಳಲ್ಲಿ, ಮಾನವ ಜೀವಿಯು ಒಂದೇ ಒಂದು. ೮.೪ ದಶಲಕ್ಷ ಶರೀರಗಳ ನಂತರ, ನಿಮಗೆ ಮಾನವ ಶರೀರವು ದೊರೆಯುತ್ತದೆ. ಸುಮ್ಮನೇ ಕಲ್ಪಿಸಿಕೊಳ್ಳಿ, ೮.೪ ದಶಲಕ್ಷ ಶರೀರಗಳು!

ಬ್ಯಾಕ್ಟೀರಿಯಾ, ಪಕ್ಷಿಗಳು, ಪ್ರಾಣಿಗಳು, ಮೊದಲಾದವುಗಳಿಂದ, ೮.೪ ದಶಲಕ್ಷ ಜೀವನಗಳ ನಂತರ ಒಂದು ಮಾನವ ಜನ್ಮ ಬರುತ್ತದೆ. ಈ ಮಾನವ ಜೀವನದಲ್ಲಿ, ಕೆಲವರಿಗೆ ನಿಜವಾದ ಆಧ್ಯಾತ್ಮಿಕ ಪಥವನ್ನು ತಿಳಿಯುವ ಅವಕಾಶ ದೊರೆಯುತ್ತದೆ. ಮತ್ತು ಇವರಲ್ಲಿ, ಪಥದ ಮೇಲೆ ನಡೆಯುವ ಕೆಲವರು ಭಾಗ್ಯಶಾಲಿಗಳು. ಇದು ಹೊಸತೇನೂ ಅಲ್ಲ.

ಆದಿಶಂಕರರು ಕೂಡಾ ಹೀಗೆಂದು ಹೇಳಿದ್ದಾರೆ: ಮಾನವು ಜನ್ಮವು ಸಿಗುವುದು ಬಹಳ ಕಷ್ಟ. ಮಾನವ ಜನ್ಮ ಲಭಿಸಿದ ಬಳಿಕ, ಆಧ್ಯಾತ್ಮಿಕ ಪಥದ ಮೇಲೆ ನಡೆಯಬೇಕೆಂಬ ಬಯಕೆ ಸಿಗುವುದು ಬಹಳ ಕಷ್ಟ. ಕೆಲವು ಜನರಿಗೆ ಇದು ಸಿಗುತ್ತದೆ. ಈ ಬಯಕೆ ಬಂದ ನಂತರವೂ ಆಧ್ಯಾತ್ಮಿಕ ಪಥದ ಮೇಲೆ ನಡೆಯುವ ಅವಕಾಶ ಕೆಲವೇ ಕೆಲವರಿಗೆ ಸಿಗುತ್ತದೆ; ಅವರಿಗೆ ಸರಿಯಾದ ದಾರಿ ಸಿಗುತ್ತದೆ.

ಆಧ್ಯಾತ್ಮಿಕ ಪಥದ ಮೇಲೆ ನಡೆಯಲು ಬಯಸುವ ಹಲವಾರು ಜನರು, ಒಂದು ದಿನ ಜಗತ್ತು ನಾಶವಾಗಲಿದೆಯೆಂಬ ಅಥವಾ ಪ್ರಳಯವಾಗಲಿದೆಯೆಂಬ ಈ ಎಲ್ಲಾ ತಪ್ಪು ಕಲ್ಪನೆಗಳಲ್ಲಿ ಸಿಕ್ಕಿಬೀಳುತ್ತಾರೆ. ಮತ್ತು ಹೀಗಾಗಿ ಈ ಜನರು ಭಯದಿಂದಾಗಿ ಪ್ರಾರ್ಥಿಸುತ್ತಾರೆ. ಭಯ ಮತ್ತು ಅಪರಾಧಿ ಮನೋಭಾವಗಳ ಅಚ್ಚನ್ನುಂಟುಮಾಡುವ ಪಥಗಳನ್ನು ಅವರು ಸೇರುತ್ತಾರೆ. ನೋಡಿ, ನೀವು ನಿಮ್ಮೊಳಗೆ ಆಳವಾಗಿ ಹೋಗಲು ಅನುಮತಿಸದಿರುವ ಎರಡು ವಿಷಯಗಳಾಗಿವೆ - ಭಯ ಮತ್ತು ಅಪರಾಧಿ ಮನೋಭಾವ. ಮತ್ತು ಇದನ್ನೇ (ಆಧ್ಯಾತ್ಮಿಕ) ಪಥಗಳೆಂದು ಕರೆಯಲ್ಪಡುವ ಈ ಕೆಲವು ಪಥಗಳು ಮಾಡುವುದು. ಕೆಲವು ಆಧ್ಯಾತ್ಮಿಕ ಪಥಗಳು ನರಕ ಮತ್ತು ಸ್ವರ್ಗ ಹಾಗೂ ಇತರ ವಿಷಯಗಳ ಭಯವನ್ನು ಸೃಷ್ಟಿಸುತ್ತವೆ ಮತ್ತು ಜನರನ್ನು ಅಪರಾಧಿ ಮನೋಭಾವ ಹಾಗೂ ಭಯಗಳ ಎಂತಹ ಒಂದು ಕೋಲಾಹಲದಲ್ಲಿ ಹಾಕುತ್ತವೆಯೆಂದರೆ, ಮನಸ್ಸು ಯಾವತ್ತೂ ಶಾಂತವಾಗಲು ಸಾಧ್ಯವಾಗುವುದಿಲ್ಲ. ಧ್ಯಾನವು ಯಾವತ್ತೂ ಆಗಲು ಸಾಧ್ಯವಿಲ್ಲ. ಇದು ಬಹಳ ದುರದೃಷ್ಟಕರ. ಹೀಗೆ ಈ ಜನರು ಮಹತ್ವಾಕಾಂಕ್ಷಿಗಳಾಗಿದ್ದರೂ ಸಹ, ಅವರಿಗೆ ಪಥವು ಸಿಗುವುದಿಲ್ಲ. ಮತ್ತೆ, ಇದೊಂದು ದೊಡ್ಡ ಭಾಗ್ಯವಾಗಿದೆ.

ಈ ಜನರಿಗೆ ಜ್ಞಾನಕ್ಕೆ ಪ್ರವೇಶ ಸಿಗುವುದಿಲ್ಲ: ’ಹೇ, ಮನಸ್ಸು ಒಂದು ನದಿಯಂತೆ, ನೀನು ಯಾವುದಕ್ಕೆ ತಗಲು ಹಾಕಿಕೊಂಡಿರುವೆ? ಅದಕ್ಕೆ ತಗಲುಹಾಕಬೇಡ. ಎಲ್ಲಾ ಘಟನೆಗಳು ಆಗಿಹೋದವು. ಅದನ್ನು ಬಿಟ್ಟುಬಿಡು ಮತ್ತು ಮುಂದುವರಿ. ವರ್ತಮಾನದ ಕ್ಷಣದಲ್ಲಿ ಜೀವಿಸು’ - ಈ ಜ್ಞಾನವು ಹಲವು ಜನರಿಗೆ ಲಭ್ಯವಿಲ್ಲ (ಆಧ್ಯಾತ್ಮಿಕ ಪಥದಲ್ಲಿ ನಡೆಯಲು ಬಯಸುವವರಿಗೆ). ಅವರು ತಪ್ಪಿತಸ್ಥ ಭಾವನೆಯನ್ನು ಅನುಭವಿಸುತ್ತಾ, ಭೂತಕಾಲದ ಬಗ್ಗೆ ಮರುಗುತ್ತಾ ಹೋಗುತ್ತಾರೆ ಮತ್ತು ಮನಸ್ಸು ಅಸ್ತವ್ಯಸ್ತವಾಗುತ್ತದೆ. ಖಂಡಿತಾ, ಅವರು ಪ್ರಾರ್ಥಿಸುತ್ತಾರೆ. ಅವರ ಪ್ರಾರ್ಥನೆಗಳು ಸಹಾಯ ಮಾಡುತ್ತವೆ ಮತ್ತು ಅವರು ಸ್ವಲ್ಪ ಆಶೀರ್ವಾದವನ್ನು ಪಡೆಯುತ್ತಾರೆ. ಆಶೀರ್ವಾದವು ಎಲ್ಲರ ಬಳಿಗೂ ಬರುತ್ತದೆ, ಅದರಲ್ಲಿ ಸಂಶಯವಿಲ್ಲ, ಆದರೆ ಜ್ಞಾನ, ಸರಿಯಾದ ಪಥ ಮತ್ತು ಮೋಕ್ಷ - ಇವುಗಳು ಅವರಿಗೆ ಒಂದು ದೂರದ ಕನಸಾಗಿ ಉಳಿಯುತ್ತವೆ. ಅವರ ಜೀವನದಲ್ಲಿ ಶಾಂತಿಯುಂಟಾಗುವುದಿಲ್ಲ. ಒಂದು ದಿನ ತಾವು ಸ್ವರ್ಗಕ್ಕೆ ಹೋಗುವೆವೆಂಬ ಆಸೆಯೊಂದಿಗೆ ಅವರು ಕುಳಿತುಕೊಳ್ಳುತ್ತಾರೆ. ಮತ್ತು ಹೀಗಾಗಿ ಈ ಆತ್ಮಗಳು, ಭಯ ಮತ್ತು ಬಯಕೆಗಳೊಂದಿಗೆ ಸಿಕ್ಕಿಹಾಕಿಕೊಳ್ಳುತ್ತವೆ.

ಇದೆಲ್ಲದರಿಂದ ಮುಕ್ತವಾಗಲಿಕ್ಕಾಗಿ ಅವರು ಮಾನವ ಜೀವನಕ್ಕೆ ಬಂದಿದ್ದಾರೆ, ಮತ್ತು ದೇವರು ಒಂದು ದಿನ ನಮ್ಮನ್ನು ಬಿಡುಗಡೆಗೊಳಿಸುತ್ತಾರೆ ಎಂದು ಅವರು ಯೋಚಿಸುತ್ತಾರೆ. ಆದರೆ ಈ ಎಲ್ಲಾ ವಿಷಯಗಳನ್ನು ಕಾರ್ಯಗತ ಮಾಡಲು ಅವರು ಮತ್ತೆ ಮರಳಿ ಬರಬೇಕಾಗುತ್ತದೆ. ಪುನಃ ಅವರು ಧ್ಯಾನವನ್ನು ಪಡೆಯುವರು.

ಆದುದರಿಂದ, ಒಂದು ಮಾನವ ಜನ್ಮ, ಒಂದು ಪಥಕ್ಕಾಗಿರುವ ಬಯಕೆಗಳು, ಮತ್ತು ಅವರಿಗೆ ಪಥವು ಲಭ್ಯವಾಗಿರುವುದು (ಮಹಾಪುರುಷ ಸನ್ನಿಧೋ: ಒಬ್ಬರು ಆಧ್ಯಾತ್ಮಿಕ ಗುರುವನ್ನು ಪಡೆಯುವುದು) - ಈ ಮೂರು ಸಂಗತಿಗಳು ವಿರಳ ಮತ್ತು ಪಡೆಯಲು ಕಷ್ಟವಾದದ್ದು. ನೀವು ಎಲ್ಲಾ ಮೂರನ್ನು ಹೊಂದಿದ್ದರೆ, ನೀವು ಭಾಗ್ಯವಂತರು. ಇದನ್ನೇ ಹೇಳಲಾಗಿರುವುದು.
ಆದರೆ ಚಿಂತಿಸಬೇಡಿ, ನೀವು ಸುತ್ತುಹಾಕುತ್ತಾ ಇಲ್ಲ. ನೀವು ಈಗಾಗಲೇ ಪಥದಲ್ಲಿರುವಿರಿ ಮತ್ತು ನೀವು ಸಂತೋಷವಾಗಿಯೂ, ನಿರಾಳವಾಗಿಯೂ ಇರುವಿರಿ.

ಪ್ರಶ್ನೆ: ಗುರುದೇವ, ನಾವು ಯುವಜನರು ಆಧ್ಯಾತ್ಮಿಕ ಪಥವನ್ನು ಹಿಡಿಯುತ್ತಿರುವುದನ್ನು ನೋಡಿ ಹಲವು ಜನರು ಹೆದರುತ್ತಾರೆ. ಪ್ರತಿಯೊಂದು ಆತ್ಮಕ್ಕೂ ಇದೊಂದು ಹರಸಲ್ಪಟ್ಟ ಪಥ ಮತ್ತು ವಾಸ್ತವವಾಗಿ ಒಂದು ಸೌಭಾಗ್ಯ ಎಂಬುದಾಗಿ ಅವರನ್ನು ನಾವು ಒಪ್ಪಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅವರನ್ನು ಒಪ್ಪಿಸಲು ಪ್ರಯತ್ನಿಸಬೇಡ. ಸುಮ್ಮನೇ ನೀನಾಗಿಯೇ ಇರು ಮತ್ತು ಅವರು ಒಪ್ಪುವರು. ಅದು ತನ್ನಿಂತಾನೇ ಆಗುವುದು. ನೀನು ಅವರನ್ನು ಒಪ್ಪಿಸಲು ಪ್ರಯತ್ನಿಸುವುದು, ಅದನ್ನು ಇನ್ನಷ್ಟು ಬಿಗಡಾಯಿಸುವುದು. ಅದು ಸುಮ್ಮನೆ ನಿನ್ನ ವರ್ತನೆಯಲ್ಲಿ; ನಿನ್ನ ಪ್ರೀತಿ ಮತ್ತು ಕರುಣೆಗಳಲ್ಲಿ ಕಾಣಿಸಬೇಕು.

ಪ್ರಶ್ನೆ: ಪ್ರೀತಿಯ ಗುರುದೇವ, ಓಂ ಎಂಬುದು ಮೌನದಿಂದ ಉತ್ಪತ್ತಿಯಾಯಿತೇ ಅಥವಾ ಮೌನವು ಓಂನಿಂದ ಉತ್ಪತ್ತಿಯಾಯಿತೇ? ಮೂಲ ಯಾವುದು, ಓಂ ಎಂಬುದೇ ಅಥವಾ ಎನೂ ಇಲ್ಲದಿರುವಿಕೆಯೇ?

ಶ್ರೀ ಶ್ರೀ ರವಿ ಶಂಕರ್: ಓಂ ಎಲ್ಲದರ ಮೂಲವಾಗಿದೆ.

ಅದು ಎಲ್ಲದರ ಮೂಲವೆಂದು ಕರೆಯಲ್ಪಡುವುದಾದರೆ, ಓಂ ಎಂಬುದು ಮೌನದಿಂದ ಉತ್ಪತ್ತಿಯಾಗಲು ಹೇಗೆ ಸಾಧ್ಯ? ಮೌನವೆಂಬುದು ಶಬ್ದ ಇಲ್ಲದಿರುವಿಕೆಯಾಗಿದೆ, ಆದರೆ ಓಂ ಮೌನವನ್ನು ಮೀರಿದುದು. ಎಲ್ಲಾ ಶಬ್ದಗಳು ಮೌನದಿಂದ ಬರುತ್ತವೆ, ಆದರೆ ಓಂ ಎಂಬುದು ಇತರ ಎಲ್ಲಾ ಶಬ್ದಗಳಂತೆ ಒಂದು ಶಬ್ದವಲ್ಲ. ಓಂ ಎಂಬುದು ಇಡೀ ಅಸ್ತಿತ್ವದ ಕಂಪನವೇ ಆಗಿದೆ, ಅದಕ್ಕಾಗಿಯೇ ಅದು ಒಂದು ಕೈಯ ಚಪ್ಪಾಳೆಯ ಶಬ್ದವೆಂದು ಕರೆಯಲ್ಪಡುತ್ತದೆ; ಅನಹದ್. ಎರಡು ಕೈಗಳ ಹೊಡೆತದಿಂದ ಆದಂತಹದ್ದಲ್ಲ ಅದು. ಅದು ಆಕಾಶವನ್ನು ಮೀರಿದುದು ಮತ್ತು ಕಾಲವನ್ನು ಮೀರಿದುದು  ಹಾಗೂ ಪದಗಳನ್ನು ಮೀರಿದುದು ಆಗಿದೆ. ಓಂ ಎಂಬುದು ಸೃಷ್ಟಿಯ ಪ್ರಾರಂಭಿಕ ಕಂಪನವಾಗಿದೆ.

ಪ್ರಶ್ನೆ: ಗುರುದೇವ, ಒಂದು ದೊಡ್ಡ ಮಟ್ಟಿಗೆ ಧರ್ಮವನ್ನು ಅನುಸರಿಸುವುದು ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ನಿಷ್ಠುರನನ್ನಾಗಿಸುತ್ತದೆ. ಕೆಲವು ಜನರು ನ್ಯಾಯವಂತರಾಗುತ್ತಾರೆ, ಆದರೆ ಅಂತಿಮವಾಗಿ ಅವರು ದುಃಖವನ್ನು ಅನುಭವಿಸುತ್ತಾರೆ ಮತ್ತು ಸುತ್ತಲಿರುವ ಇತರರು ಕೂಡಾ ಬಳಲುತ್ತಾರೆ. ನಾವು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿರುವೆವೇ?

ಶ್ರೀ ಶ್ರೀ ರವಿ ಶಂಕರ್: ಅದೇ! ನೀನದನ್ನು ಸರಿಯಾಗಿ ಹೇಳಿದೆ. ನಾವು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಈಗ ನಾವು ಧರ್ಮದಿಂದ ಆಧ್ಯಾತ್ಮದ ಕಡೆಗೆ ಹೋಗಬೇಕಾಗಿದೆ. ಬುದ್ಧಿವಂತರು ಹಾಗೆ ಮಾಡುವರು.

ಬುದ್ಧಿವಂತರು ಧಾರ್ಮಿಕ ಭಾವುಕತೆಗಳಲ್ಲಿ ಸಿಕ್ಕಿಹಾಕಿಕೊಳ್ಳರು. ನಾವು ಧಾರ್ಮಿಕ ಭಾವುಕತೆಗಳನ್ನು ಮೀರಿದ್ದೇವೆ. ನಾವು ಆಧ್ಯಾತ್ಮಿಕ ಆಯಾಮದೊಳಕ್ಕೆ ಚಲಿಸಬೇಕು.

ಪ್ರಶ್ನೆ: ನಾನು ಸಂಶೋಧನಾ ಕ್ಷೇತ್ರದಿಂದ ಬಂದಿರುವೆನು. ಹೊಸ ವಿಷಯಗಳನ್ನು ಕಂಡುಹಿಡಿಯುವುದು ಮತ್ತು ಹೊಸ ಸಂಶೋಧನೆ ಮಾಡುವುದು ನನಗೆ ಬಹಳ ಕಷ್ಟವಾಗುತ್ತದೆ. ನಾವು ನಮ್ಮ ಸೃಜನಾತ್ಮಕ ಪ್ರತಿಭೆಯನ್ನು ವರ್ಧಿಸಲು ಸಾಧ್ಯವಾಗುವುದಕ್ಕೆ, ನನ್ನಂತಹ ಸಂಶೋಧಕರಿಗೆ ನೀವು ಯಾವ ಸಲಹೆಯನ್ನು ನೀಡಬಲ್ಲಿರಿ? 

ಶ್ರೀ ಶ್ರೀ ರವಿ ಶಂಕರ್: ನೀವು ನಿಯಮಿತವಾಗಿ ಧ್ಯಾನ ಮಾಡಬೇಕು. ಧ್ಯಾನ ಮತ್ತು ವೈರಾಗ್ಯಗಳು ನಿಜಕ್ಕೂ ಇದರಲ್ಲಿ ಸಹಕಾರಿಯಾಗುವುವು.

ಆಗಾಗ್ಗೆ, ನೀವು ಸುಮ್ಮನೆ ಕುಳಿತುಕೊಂಡು, ಈ ಸಂಪೂರ್ಣ ಜಗತ್ತು ಕೇವಲ ಒಂದು ಕನಸಿನಂತೆ ಎಂಬುದನ್ನು ಅರಿತುಕೊಳ್ಳಬೇಕು. ಈ ಸಂಪೂರ್ಣ ಜಗತ್ತು ಒಂದು ದಿನ ಕೊನೆಯಾಗಲಿದೆ. ನಿಮಗೆ ಇಲ್ಲಿಂದ ತೆಗೆದುಕೊಂಡು ಹೋಗಲು ಏನೂ ಇಲ್ಲ. ಇದನ್ನೇ ನೀವು ಮತ್ತೆ ಮತ್ತೆ ನಿಮ್ಮ ಅರಿವಿಗೆ ತರಬೇಕು. ಇದು ನಿಮ್ಮ ವೈರಾಗ್ಯವನ್ನು ಬಲಪಡಿಸುವುದು. ನೀವು ವೈರಾಗ್ಯದಲ್ಲಿ ಬೆಳೆದಂತೆ, ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ನಿಮಗೆ ಸಾಧ್ಯವಾಗುತ್ತದೆಯೆಂಬುದು ನಿಮಗೆ ಕಂಡುಬರುವುದು.

ಪ್ರಶ್ನೆ: ಗುರುದೇವ, ಧ್ಯಾನದ ಸಂದರ್ಭದಲ್ಲಿ, ನಮ್ಮ ಕಣ್ಣುಗಳನ್ನು ಕೇವಲ ಐದರಿಂದ ಹತ್ತು ಶೇಕಡಾ ತೆರೆದಿಡುವುದರಿಂದ ಆಗುವ ಲಾಭವೇನು? ಭಗವಾನ್ ಬುದ್ಧನ ಹಲವಾರು ಪ್ರತಿಮೆಗಳಲ್ಲಿ ಮತ್ತು ಮೂರ್ತಿಗಳಲ್ಲಿ,  ಅವನನ್ನು ಹೆಚ್ಚಾಗಿ, ಅವನ ಕಣ್ಣುಗಳು ಅರ್ಧ ಮುಚ್ಚಿರುವಂತೆ ಬಿಂಬಿಸಲಾಗಿದೆ. ಇದರ ಬಗ್ಗೆ ದಯವಿಟ್ಟು ನಮಗೆ ಸ್ವಲ್ಪ ಹೇಳಿ. 

ಶ್ರೀ ಶ್ರೀ ರವಿ ಶಂಕರ್: ನಾವು ನಮ್ಮ ಕಣ್ಣುಗಳನ್ನು ಮುಚ್ಚುವಾಗ ನಾವು, ಮನೋರಾಜ್ಯವೆಂದು ಕರೆಯಲ್ಪಡುವ, ನಮ್ಮ ಮನಸ್ಸಿನ ಪ್ರಪಂಚದೊಳಕ್ಕೆ, ನಮ್ಮ ಯೋಚನೆಗಳು ಮತ್ತು ಭಾವನೆಗಳೊಳಕ್ಕೆ ಹೋಗಿ ಬಿಡುತ್ತೇವೆ. ನಮ್ಮ ಕಣ್ಣುಗಳು ತೆರೆದಿರುವಾಗ, ನಾವು ಹೊರಜಗತ್ತಿನಲ್ಲಿ ತೊಡಗಿರುತ್ತೇವೆ. ಹೀಗೆ, ನೀವು ನಿಮ್ಮ ಕಣ್ಣುಗಳನ್ನು ಕೇವಲ ಪಾರ್ಶ್ವವಾಗಿ ಮುಚ್ಚುವಾಗ, ಮನಸ್ಸು ಯೋಚನೆಗಳು ಮತ್ತು ಭಾವನೆಗಳ ಆಂತರಿಕ ಜಗತ್ತಿನಲ್ಲಿ ಸಿಕ್ಕಿಬೀಳುವುದೂ ಇಲ್ಲ. ಹೊರಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುವುದೂ ಇಲ್ಲ.  ನಂತರ ಮನಸ್ಸು ನಿಧಾನವಾಗಿ ಸ್ಥಿರವಾಗುತ್ತದೆ ಮತ್ತು ಒಂದು ವಿಶ್ರಾಂತಿಯ ಸ್ಥಿತಿಗೆ ಬರುತ್ತದೆ. ತಮ್ಮ ಕಣ್ಣುಗಳನ್ನು ಮುಚ್ಚಿ ಕನಸುಗಳ ಲೋಕಕ್ಕೆ ತೇಲಿ ಹೋಗುವವರಿಗೆ ಇದೊಂದು ಬಹಳ ಲಾಭದಾಯಕವಾದ ತಂತ್ರವಾಗಿದೆ. ಇದೊಂದು ಸಿದ್ಧೌಷಧಿಯಂತೆ.

ಪ್ರಶ್ನೆ: ಗುರುದೇವ, ನಾನು ದೇವರಿಗೆ ಸಮೀಪವಾಗಿರುವೆನೆಂದು ಅನ್ನಿಸುವ ಕೆಲವು ಸಮಯಗಳಿರುತ್ತವೆ ಮತ್ತು ಇತರ ಸಮಯಗಳಲ್ಲಿ ದೇವರು ಬಹಳ ದೂರದಲ್ಲಿರುವನೆಂದು ನನಗನಿಸುತ್ತದೆ. ಈ ಏರಿಳಿತ ಯಾಕೆ?

ಶ್ರೀ ಶ್ರೀ ರವಿ ಶಂಕರ್: ನಿನಗೆ ಕುಳಿತುಕೊಂಡು, ನೀನು ಸಮೀಪವಾಗಿರುವೆಯೇ ಅಥವಾ ಇಲ್ಲವೇ ಎಂದು ನಿನ್ನ ಬಗ್ಗೆಯೇ ಯೋಚಿಸಲು ಅತಿಯಾದ ಸಮಯವಿದೆಯೆಂದು ನನಗನಿಸುತ್ತದೆ. ಹೊರಗೆ ಹೋಗು ಮತ್ತು ಪ್ರಪಂಚಕ್ಕಾಗಿ ಕೆಲಸ ಮಾಡು. ಸಮಾಜಕ್ಕಾಗಿ ಏನಾದರೂ ಮಾಡು. ನಿನ್ನನ್ನು ವ್ಯಸ್ತನಾಗಿರಿಸು.

ನೀವು ಸೇವೆ ಮಾಡುವಾಗ, ನಿಮಗೆ ಪುಣ್ಯ ಸಿಗುತ್ತದೆ ಮತ್ತು ಪುಣ್ಯದ ಕಾರಣದಿಂದಾಗಿ ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬಹುದು. ಅವುಗಳೆಲ್ಲವೂ ಸಂಬಂಧ ಹೊಂದಿವೆ. ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ.   

ಅಪ್ರಯತ್ನದ ಆಗುಹೋಗುಗಳು

ಮಾರ್ಚ್ ೦೧, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಅಕರ್ಮದಲ್ಲಿ ಕರ್ಮ ಮತ್ತು ಕರ್ಮದಲ್ಲಿ ಅಕರ್ಮ ಎಂದರೇನು?

ಶ್ರೀ ಶ್ರೀ ರವಿ ಶಂಕರ್: ಇದು ಬಹಳ ಸ್ಪಷ್ಟವಾಗಿದೆ. ಇದುವೇ ಇಡೀ ರಹಸ್ಯ.
ನೀನು ನೂರು ಶೇಕಡಾ ಗಮನವಿಟ್ಟು ಕರ್ಮವನ್ನು ಮಾಡುವಾಗ, ನಿನ್ನಲ್ಲಿರುವ ಏನೋ ಒಂದು ಹೀಗೆಂದು ಹೇಳುತ್ತದೆ, "ಇದನ್ನು ನಾನು ಮಾಡುತ್ತಿಲ್ಲ, ನಾನು ಕರ್ಮವನ್ನು ಮಾಡುತ್ತಿಲ್ಲ. ಅದು ಸುಮ್ಮನೆ ಸಂಭವಿಸುತ್ತಿದೆ.’ ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? (ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ). ಇದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ ಅಥವಾ ನೀವು ಯಾವುದೋ ರೀತಿಯಲ್ಲಿ ವರ್ತಿಸುತ್ತೀರಿ ಮತ್ತು ನೀವದನ್ನು ಮಾಡುತ್ತಿಲ್ಲವೆಂದೂ, ಅದು ಆಗುತ್ತಿದೆಯೆಂದೂ ನಿಮಗನ್ನಿಸುತ್ತದೆ.

ಯಾರೋ ಒಬ್ಬರು ನಿಮ್ಮ ಮುಂದೆ ಬರುತ್ತಾರೆ ಮತ್ತು ನೀವದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿಲ್ಲವೆಂಬುದನ್ನು ಬಹಳ ಚೆನ್ನಾಗಿ ತಿಳಿದುಕೊಂಡೂ ನೀವು ಸುಮ್ಮನೆ ಉರಿದುಬೀಳುತ್ತೀರಿ. ಆ ವ್ಯಕ್ತಿಯಲ್ಲಿರುವ ಏನೋ ಒಂದು ನಿಮ್ಮಲ್ಲಿ ಏನೋ ಒಂದನ್ನು ಪ್ರಚೋದಿಸುತ್ತದೆ ಮತ್ತು ನೀವು ಆ ರೀತಿ ವರ್ತಿಸಲು ತೊಡಗುತ್ತೀರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? (ಹಲವರು ಕೈಗಳನ್ನು ಮೇಲೆತ್ತುತ್ತಾರೆ).

"ಓ ದೇವರೇ, ನಾನಿದನ್ನು ಮಾಡಲು ಯಾವತ್ತೂ ಬಯಸಿರಲಿಲ್ಲ" ಎಂದು ನೀವು ಅಚ್ಚರಿಪಡುತ್ತೀರಿ! ಅದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ನೀವು ಕರ್ಮವನ್ನು ಮಾಡುವಿರಿ ಯಾಕೆಂದರೆ, ಆ ವ್ಯಕ್ತಿಯು ನಿಮ್ಮಿಂದ ಆ ಮಾತುಗಳನ್ನು ಅಥವಾ ಆ ಕರ್ಮವನ್ನು ಪಡೆಯಬೇಕಾಗಿತ್ತು.

ಹಾಗಾಗಿ ಅವನು ಕೇವಲ ಆ ಮಾತುಗಳನ್ನು ನಿಮ್ಮಿಂದ ಹೊರಕ್ಕೆ ಎಳೆದುಕೊಂಡನು, ಮತ್ತು ನೀವು ನಿಜಕ್ಕೂ ಯಾವತ್ತೂ ಅದನ್ನು ಹೇಳಲು ಬಯಸಿರಲಿಲ್ಲ. ಆ ಘಟನೆಯು ನಡೆಯಲೇಬೇಕಾಗಿತ್ತು ಮತ್ತು ಅದೊಂದು ಕರ್ಮವಾಗಿತ್ತು. ಇದು ಸ್ವಲ್ಪ ಉನ್ನತ ಮಟ್ಟದ ಜ್ಞಾನವಾಗಿದೆ.

ಈಗ, ಈ ಜ್ಞಾನವನ್ನು ನೀವು ಮಾಡುವ ಪ್ರತಿಯೊಂದು ತಪ್ಪುಗಳಿಗೂ ಅನ್ವಯಿಸಲು ಪ್ರಯತ್ನಿಸಬೇಡಿ. ನೀವು ಯಾರ ಮೇಲಾದರೂ ರೇಗಾಡಿ, "ನಾನು ಬೇಕೆಂದೇ ಮಾಡಲಿಲ್ಲ. ಅದು ಕರ್ಮವಾಗಿತ್ತು ಮತ್ತು ನೀವದನ್ನು ಪಡೆಯಲೇಬೇಕಾಗಿತ್ತು, ಹೀಗಾಗಿ ನಾನು ರೇಗಾಡಲೇಬೇಕಾಗಿತ್ತು!" ಎಂದು ಹೇಳಿದರೆ, ಇದು ಜ್ಞಾನದ ದುರುಪಯೋಗವಾಗಿದೆ. ಹಾಗೆ ಮಾಡಬೇಡಿ. ಆ ರೀತಿಯಲ್ಲಿ ಜ್ಞಾನವನ್ನು ದುರುಪಯೋಗ ಮಾಡಬೇಡಿ.

ಕೆಲವೊಮ್ಮೆ ಒಂದು ಕೃತ್ಯವನ್ನು ಮಾಡಲು ನಿಮಗೆ ಬಯಕೆಯಿಲ್ಲದಿದ್ದರೂ ನೀವದನ್ನು ಮಾಡುತ್ತೀರಿ. ನೀವದನ್ನು ಮಾಡಲು ಬಯಸುವುದಿಲ್ಲ, ಆದರೆ ನಿಮಗೆ ನಿಸ್ಸಹಾಯಕತೆಯ ಅನುಭವವಾಗುತ್ತದೆ ಮತ್ತು ನೀವು ಆ ಕೃತ್ಯವು ನಡೆಯುತ್ತಿರುವುದನ್ನು ಸುಮ್ಮನೆ ನೋಡುತ್ತಿರುತ್ತೀರಿ. ನೀವದನ್ನು ಮಾಡುತ್ತಿಲ್ಲವೆಂಬುದನ್ನು ನೀವು ನೋಡುತ್ತೀರಿ, ಆದರೂ ಒಂದು ಕೃತ್ಯವು ನಡೆಯುತ್ತಿದೆ, ಇದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ನೀವು ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನ ಮಾಡುತ್ತಾ ಕುಳಿತಿದ್ದೀರಿ. ನೀವು ಏನನ್ನೂ ಮಾಡುತ್ತಿಲ್ಲ, ಆದರೂ ನೀವು ನಿಮ್ಮೊಳಗಿನಿಂದ ಉತ್ಪಾದಿಸುತ್ತಿರುವ ಕಂಪನವು ಪ್ರಪಂಚವನ್ನು ಬದಲಾಯಿಸುತ್ತಿದೆ. ಇದು ಅಕರ್ಮದಲ್ಲಿ ಕರ್ಮವಾಗಿದೆ.
ನೀವು ಕುಳಿತುಕೊಂಡು ಧ್ಯಾನ ಮಾಡುತ್ತಿರುವಿರಿ, ನೀವು ಕರುಣೆಯ ಅಲೆಗಳನ್ನು, ಶುದ್ಧವಾದ ಪ್ರೇಮ ಮತ್ತು ಭಕ್ತಿಯ ಅಲೆಗಳನ್ನು, ಸಾಮರಸ್ಯದ ಅಲೆಗಳನ್ನು ಹರಡುತ್ತಿರುವಿರಿ ಮತ್ತು ಆ ಸಾಮರಸ್ಯವು ಇತರರನ್ನು ಬಡಿಯುತ್ತಿದೆ ಹಾಗೂ ಅದು ಅವರ ಮನೋಭಾವಗಳನ್ನು ಬದಲಾಯಿಸುತ್ತಿದೆ, ಅದು ವಾತಾವರಣವನ್ನು ಬದಲಾಯಿಸುತ್ತಿದೆ, ಅದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತಿದೆ, ಅದು ವಿಷಯಗಳನ್ನು ಹೆಚ್ಚು ಸಕಾರಾತ್ಮಕವನ್ನಾಗಿ ಮಾಡುತ್ತಿದೆ.

ನೀವು ಜನರಿಗೆ ಆಶೀರ್ವಾದ ನೀಡುತ್ತಿರುವಿರಿ. ನಿಮ್ಮ ಆಶೀರ್ವಾದದಿಂದ ವಿಷಯಗಳು ಬದಲಾಗುತ್ತಿವೆ. ಇದು ಅಕರ್ಮದಲ್ಲಿ ಕರ್ಮವಾಗಿದೆ. ನೀವು ಸಮಾಧಿಯಲ್ಲಿ ಕುಳಿತುಕೊಳ್ಳುತ್ತೀರಿ, ನೀವು ಆಳವಾದ ಧ್ಯಾನದಲ್ಲಿ ಕುಳಿತುಕೊಳ್ಳುತ್ತೀರಿ, ಆ ಸಮಾಧಿಯು ಖಂಡಿತವಾಗಿಯೂ ಪ್ರಪಂಚದಲ್ಲಿ ಬಹಳಷ್ಟು ಕರ್ಮವನ್ನು ಸೃಷ್ಟಿಸುತ್ತಿದೆ. ಅದು ಅಕರ್ಮದಲ್ಲಿ ಕರ್ಮವಾಗಿದೆ.
ಇದನ್ನು ವಿವರಿಸುವುದು ಬಹಳ ಕಷ್ಟ. ನಾನು ಯಾವುದೋ ಕೆಲವು ಉದಾಹರಣೆಗಳೊಂದಿಗೆ ಅದನ್ನು ವಿವರಿಸುವ ಒಂದು ಪ್ರಯತ್ನ ಮಾಡಿದ್ದೇನೆ.

ಪ್ರಶ್ನೆ: ಪ್ರೀತಿಯ ಗುರುದೇವ, ಸೃಷ್ಟಿ ಮತ್ತು ಪ್ರಳಯಗಳ ಹಿನ್ನೆಲೆಯಲ್ಲಿ ಎರಡು ಪದಗಳು ಹೆಚ್ಚಾಗಿ ಬಳಸಲ್ಪಡುತ್ತವೆ: ಮಹಾತತ್ವ ಮತ್ತು ತನ್ಮಾತ್ರ. ಇವುಗಳೆರಡೂ ಅರ್ಥಮಾಡಿಕೊಳ್ಳಲು ಕಷ್ಟವಾದಂತಹವು. ದಯವಿಟ್ಟು ನೀವು ಇದರ ಮೇಲೆ ಸ್ವಲ್ಪ ಪ್ರಕಾಶ ಬೀರಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ತನ್ಮಾತ್ರ ಎಂದರೆ, ನಮ್ಮ ಶರೀರದೊಳಗೆ ಆಗುವ ಯಾವುದೇ ಸಂವೇದನೆ ಅಥವಾ ಸಂಭವದ ಒಂದು ಅಳತೆ (ನಮ್ಮ ಪಂಚೇಂದ್ರಿಯಗಳಿಂದ ಗ್ರಾಹ್ಯವಾಗಬಹುದಾದಂತಹ ದೃಶ್ಯ, ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಷಗಳ ಕನಿಷ್ಠ ಪ್ರಮಾಣ).

ಭೌತಿಕ ಶರೀರದ ಮಟ್ಟದಲ್ಲಿ ಪ್ರಕಟವಾಗುವ ಯಾವುದೇ ವಿಷಯದ ಒಂದು ಅಳತೆಯಾಗಿದೆ ಅದು. ಉದಾಹರಣೆಗೆ, ನಮ್ಮ ಕಣ್ಣುಗಳು, ನಮ್ಮ ಕಣ್ಣುಗಳನ್ನು ಪ್ರವೇಶಿಸುವ ಬೆಳಕಿನ ಸಹಾಯದಿಂದ ವಸ್ತುಗಳನ್ನು ನೋಡುತ್ತವೆ. ನಮ್ಮ ಕಣ್ಣುಗಳೊಳಗೆ ಬೆಳಕು ಇರುವ ಕಾರಣದಿಂದಲೇ ನಮಗೆ ವಸ್ತುಗಳನ್ನು ನೋಡಲು ಸಾಧ್ಯವಾಗುವುದು.

ಹೆಚ್ಚಾಗಿ ಜನರು ತಮ್ಮ ದೃಷ್ಟಿಶಕ್ತಿಯನ್ನು ಕಳೆದುಕೊಳ್ಳುವಾಗ, ಅವರ ಕಣ್ಣುಗಳು ಪ್ರಕಾಶವನ್ನು ಕಳಕೊಂಡಿವೆ ಎಂದು ಹೇಳಲಾಗುತ್ತದೆ. (ಅಂದರೆ, ಅವರಿಗೆ ನೋಡಲು ಸಹಾಯ ಮಾಡಲು, ಬೆಳಕು ಅವರ ಕಣ್ಣುಗಳನ್ನು ಪ್ರವೇಶಿಸುತ್ತಿಲ್ಲ) ಈಗ, ನೋಡಲು ಸಾಧ್ಯವಿರುವ ಬೆಳಕಿನ ಪ್ರಮಾಣವು ಬೇರೆ ಬೇರೆ ಜೀವಜಾತಿಗಳಲ್ಲಿ ವ್ಯತ್ಯಸ್ತವಾಗಿದೆ. ಒಂದು ಗೂಬೆಯು ಕತ್ತಲಿನಲ್ಲಿ ಅಥವಾ ಬಹಳ ಮಸುಕಾದ ಬೆಳಕಿನಲ್ಲಿ ಕೂಡಾ ನೋಡಬಲ್ಲದು, ಆದರೆ ನಮಗದು ಸಾಧ್ಯವಾಗಲಾರದು. ಒಂದು ಬೆಕ್ಕು ಕೂಡಾ ಕತ್ತಲಿನಲ್ಲಿ ಬಹಳ ಚೆನ್ನಾಗಿ ನೋಡಬಲ್ಲದು. ಹೀಗಾಗಿ ನಾವು, ಒಂದು ಗೂಬೆಯ ಅಥವಾ ಒಂದು ಬೆಕ್ಕಿನ ತನ್ಮಾತ್ರವು ನಮ್ಮದಕ್ಕಿಂದ ಎಷ್ಟೋ ಹೆಚ್ಚು ಎಂದು ಹೇಳುತ್ತೇವೆ. ಮಾನವರಾಗಿ, ಮಬ್ಬಾದ ಬೆಳಕಿನಲ್ಲಿ ನೋಡಲು ಸಾಧ್ಯವಿರುವ ನಮ್ಮ ತನ್ಮಾತ್ರವು ಬಹಳಷ್ಟು ಕಡಿಮೆಯಾಗಿದೆ. ಅದಕ್ಕಾಗಿಯೇ, ವಿದ್ಯುಚ್ಛಕ್ತಿ ಇಲ್ಲದಿರುವಾಗ ಅಥವಾ ಬೆಳಕು ಇಲ್ಲದಿರುವಾಗ ಕೂಡಾ ಒಂದು ಬೆಕ್ಕಿಗೆ ಯಾವುದನ್ನು ಎಲ್ಲಿಡಲಾಗಿದೆಯೆಂಬುದು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದು.

ಅದೇ ರೀತಿಯಲ್ಲಿ, ವಾಸನೆಯ ಅರಿವಿನ ವಿಷಯಕ್ಕೆ ಬಂದಾಗ, ತನ್ಮಾತ್ರದಲ್ಲಿರುವ ಈ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಒಂದು ಆನೆಗೆ ಬಹಳ ಶಕ್ತಿಯುತವಾದ ಆಘ್ರಾಣಿಸುವ ಸಾಮರ್ಥ್ಯವಿದೆ (ಅಥವಾ ತನ್ಮಾತ್ರ).    
ಅದು ವಸ್ತುಗಳನ್ನು ದೂರದಿಂದಲೇ ಸ್ಪಷ್ಟವಾಗಿ ಆಘ್ರಾಣಿಸಬಲ್ಲದು ಮತ್ತು ಮುಂದೇನಿದೆ ಅಥವಾ ತನ್ನ ಕಡೆಗೆ ಏನು ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಸರಿಯಾಗಿ ನಿರ್ಣಯಿಸಬಲ್ಲದು. ಅದನ್ನು ಅದು ಮುಂಬರುವ ಹಲವಾರು ವರ್ಷಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.

ಅದೇ ರೀತಿಯಲ್ಲಿ, ರುಚಿಯ ಅರಿವಿನೊಂದಿಗೆ ಸಂಬಂಧಪಟ್ಟ ಒಂದು ತನ್ಮಾತ್ರವಿದೆ. ಒಂದು ಆಹಾರವಸ್ತುವಿಗೆ ಅದರದ್ದೇ ಆದ ಒಂದು ರುಚಿಯಿರುತ್ತದೆ, ಆದರೆ ನಾವದನ್ನು ತಿನ್ನುವಾಗ ನಮಗೆ ಬೇರೆ ಬೇರೆ ರುಚಿಗಳ ಅನುಭವವಾಗುತ್ತದೆ. ಉದಾಹರಣೆಗೆ, ನೀವು ಸ್ವಲ್ಪ ಸಕ್ಕರೆಯನ್ನು ತಿಂದು, ನಂತರ ಚಹಾವನ್ನು ಕುಡಿದರೆ, ಆಗ ನಿಮಗೆ ಚಹಾದಲ್ಲಿನ ಸಿಹಿಯ ರುಚಿ ತಿಳಿಯುವುದಿಲ್ಲ. ಒಂದು ನಿರ್ದಿಷ್ಟ ಅನುಭವವು, ಅದಕ್ಕೆ ಸಂಬಂಧಿಸಿದ ತನ್ಮಾತ್ರಕ್ಕಿಂತ ಕಡಿಮೆಯಾಗಿದ್ದರೆ, ಆಗ ನಿಮಗೆ ಅದನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಆದರೆ ಅದು ಅದಕ್ಕೆ ಸಂಬಂಧಿಸಿದ ತನ್ಮಾತ್ರಕ್ಕಿಂತ ಅಧಿಕವಾಗಿದ್ದರೆ, ಆಗ ಅದನ್ನು ಸರಿಯಾಗಿ ಗ್ರಹಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗೆ ನೀವು ಮೊದಲು ಸಕ್ಕರೆಯನ್ನು ತಿಂದು ನಂತರ ಚಹಾವನ್ನು ಕುಡಿದಾಗ, ನಿಮಗೆ ಸಿಹಿ ತಿಳಿಯುವುದಿಲ್ಲ, ಯಾಕೆಂದರೆ ತನ್ಮಾತ್ರವು ಬದಲಾಗಿರುತ್ತದೆ. ಹೀಗೆ ತನ್ಮಾತ್ರವೆಂಬುದರ ಅರ್ಥ ಇದು.

ನಮ್ಮ ಇಂದ್ರಿಯಗಳು - ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮ - ಇವುಗಳು ಒಟ್ಟಾಗಿ ಐದು ಜ್ಞಾನೇಂದ್ರಿಯಗಳು ಎಂದು ಕರೆಯಲ್ಪಡುತ್ತವೆ ಮತ್ತು ಇವುಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದಂತೆ ಒಂದೊಂದು ತನ್ಮಾತ್ರವಿದೆ. ಈ ತನ್ಮಾತ್ರದ ಕಾರಣದಿಂದಲೇ ನಮಗೆ ನೋಡಲು, ಕೇಳಲು, ಆಘ್ರಾಣಿಸಲು, ರುಚಿನೋಡಲು ಮತ್ತು ಸ್ಪರ್ಷವನ್ನು ಅನುಭವಿಸಲು ಸಾಧ್ಯವಾಗುವುದು.

ಪ್ರಶ್ನೆ: ಗುರುದೇವ, ಭಾರತವು ಪ್ರಪಂಚದಲ್ಲಿನ ಅತ್ಯಂತ ಯುವ ದೇಶಗಳಲ್ಲೊಂದಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಯುವಕರ ಈ ಎಲ್ಲಾ ಶಕ್ತಿಯನ್ನು ದೇಶದ ಪ್ರಗತಿಯ ಕಡೆಗೆ ಪ್ರವಹಿಸುವಂತೆ ನಾವು ಮಾಡುವುದು ಹೇಗೆ? ತಮ್ಮ ಜೀವನದಲ್ಲಿ ಮುಂದೆ ಸಾಗುತ್ತಿರುವಾಗ ಈ ದೇಶದ ಯುವಜನತೆಯು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದೇನು? 

ಶ್ರೀ ಶ್ರೀ ರವಿ ಶಂಕರ್: ಇದಕ್ಕಾಗಿಯೇ ನಾವು "ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ" (ವಾಲಂಟಿಯರ್ ಫಾರ್ ಎ ಬೆಟರ್ ಇಂಡಿಯಾ (ವಿ.ಬಿ.ಐ.))ನ್ನು ಸೃಷ್ಟಿಸಿದುದು. ನಿಮ್ಮಲ್ಲಿ ಎಲ್ಲರೂ ವಿ.ಬಿ.ಐ.ಯ ಸಕ್ರಿಯ ಸದಸ್ಯರಾಗಬೇಕು.

ದೇಶದ ಪ್ರತಿಯೊಂದು ಮೂಲೆಯಲ್ಲೂ ನಾವೆಲ್ಲರೂ ಒಂದು ಸಂತೋಷದ ಅಲೆಯನ್ನು ತರಬೇಕೆಂದು ನಾನು ಬಯಸುತ್ತೇನೆ. ಇದಕ್ಕಾಗಿ ನೀವೆಲ್ಲರೂ ಕೆಲಸ ಮಾಡಬೇಕು. ನಮ್ಮ ದೇಶದ ಜನಸಂಖ್ಯೆಯು ೧೨೦ ಕೋಟಿ. ಜನಸಂಖ್ಯೆಯ ಕೇವಲ ೧೦% ದಷ್ಟಾದರೂ ವಿ.ಬಿ.ಐ.ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ, ಆಗ ನಮ್ಮ ಸಮಾಜದಲ್ಲಿ ಮತ್ತು ನಮ್ಮ ದೇಶದಲ್ಲಿ ಒಂದು ಬಹಳ ದೊಡ್ಡದಾದ ಪರಿವರ್ತನೆಯಾಗುವುದು. ಆದುದರಿಂದ ನಿಮ್ಮಲ್ಲಿ ಎಲ್ಲರೂ ಇದನ್ನೊಂದು ನಿಮಗಿರುವ ಗುರಿಯಾಗಿ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬರೂ ವಿ.ಬಿ.ಐ.ಯೊಳಕ್ಕೆ ೧೦,೦೦೦ ಹೊಸ ಸ್ವಯಂಸೇವಕರನ್ನು ತರಬೇಕು. ಇದು ಕಷ್ಟವೇ ಅಲ್ಲ. ಜನರು ಸಂತೋಷದ ಸಮೀಕ್ಷೆಯನ್ನು ಭರ್ತಿ ಮಾಡುವಂತೆ ಮಾಡಿ. ಮೂವರ ಗುಂಪುಗಳನ್ನಾಗಿ ಮಾಡಿ, ಜನರ ಬಳಿಗೆ ಹೋಗಿ ಮತ್ತು ಎಲ್ಲರೂ ಸಂತೋಷದ ಸಮೀಕ್ಷೆಯ ಅರ್ಜಿಗಳನ್ನು ಭರ್ತಿ ಮಾಡುವಂತೆ ಮಾಡಿ.

ನೀವು ೫,೦೦೦ ಅಥವಾ ೭,೦೦೦ ಸಮೀಕ್ಷೆಗಳನ್ನು ದಾಟಿದಾಗ, ಇದರ ಬಗ್ಗೆ ತಿಳಿಸುವ ಒಂದು ಇ-ಮೈಲ್‌ನ್ನು ನಮಗೆ ಕಳುಹಿಸಿ. ಮಹಿಳೆಯರೂ ಕೂಡಾ ಒಟ್ಟು ಸೇರಿ ಇದನ್ನು ಮಾಡಬಹುದು.

ಪ್ರತಿದಿನವೂ ಕನಿಷ್ಠಪಕ್ಷ ಒಂದು ಗಂಟೆಯನ್ನು ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಅರ್ಪಿಸಬಲ್ಲ, ೧೦ ಕೋಟಿ ಕಂಕಣಬದ್ಧ ಸ್ವಯಂಸೇವಕರ ಒಂದು ಶಕ್ತಿಶಾಲಿ ಬಣವನ್ನು ನಾವು ಭಾರತಕ್ಕೆ ನೀಡಬಲ್ಲೆವಾದರೆ, ಆಗ ಈ ದೇಶದ ಸಂಪೂರ್ಣ ಮುಖವೇ ಬದಲಾಗುವುದು. ನಮ್ಮಲ್ಲಿ ಎಂತಹ ಮಹತ್ತರವಾದ ಜ್ಞಾನವಿದೆ, ಆದರೂ ನಾವು ದುಃಖಿತರಾಗಿದ್ದೇವೆ ಮತ್ತು ವಿಷಣ್ಣರಾಗಿದ್ದೇವೆ. ಹಾಗಾದರೆ ಅಂತಹ ಮಹತ್ತರವಾದ ಜ್ಞಾನದ ಉಪಯೋಗವಾದರೂ ಏನು? ನಾವೊಂದು ಮಹತ್ತರವಾದ ಸಂಪತ್ತಿನ (ಜ್ಞಾನದ) ಮೇಲೆ ಕುಳಿತಿದ್ದೇವೆ, ಆದರೂ ನಾವು ಸಣ್ಣಪುಟ್ಟ ವಿಷಯಗಳಿಗಾಗಿ ಅತ್ತು ಕರೆದು ಮಾಡುತ್ತೇವೆ.  

ನಮ್ಮ ದೇಶದ ಇವತ್ತಿನ ಪರಿಸ್ಥಿತಿಯ ಬಗ್ಗೆ ಸುಮ್ಮನೇ ಯೋಚಿಸಿ. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಮತ್ತು ಮಲೇಷಿಯಾದಂತಹ ರಾಷ್ಟ್ರಗಳಲ್ಲಿ ತೈಲವು ಸಮೃದ್ಧವಾಗಿದೆ, ಆದರೂ ನಾವು ಈ ರಾಷ್ಟ್ರಗಳಿಗೆ ತೈಲ ಹಾಗೂ ಪೆಟ್ರೋಲಿಯಂಗಳನ್ನು ರಫ್ತು ಮಾಡುತ್ತಿದ್ದೇವೆ. ನಾವು ನಮ್ಮ ದೇಶದಲ್ಲಿ ತೈಲ ಮತ್ತು ಪ್ರಾಕೃತಿಕ ಅನಿಲದ ಒಂದು ದೊಡ್ಡ ಸಂಪತ್ತಿನ ಮೇಲೆ ಕುಳಿತಿದ್ದೇವೆ, ಆದರೂ ನಾವು ತೈಲದ ಆಮದಿಗಾಗಿ ಕೇಳಿಕೊಳ್ಳುತ್ತಾ ಭಿಕ್ಷುಕರಂತೆ ವರ್ತಿಸುತ್ತಿದ್ದೇವೆ. ಇದು ಸರಕಾರದ ಆಡಳಿತದಲ್ಲಿರುವ ಭ್ರಷ್ಟ ಜನರ ಕೆಲಸವಾಗಿದೆ.

ನಿನ್ನೆಯಷ್ಟೇ ನಾನು ಒಂದು ವಿಷಯದ ಬಗ್ಗೆ ಓದುತ್ತಿದ್ದೆ. ಕೇವಲ ಆರು ತಿಂಗಳ ಅವಧಿಯಲ್ಲಿ, ಭಾರತೀಯ ನೌಕಾಪಡೆಯಿಂದ ಹತ್ತು ದೊಡ್ಡ ಸಮುದ್ರ ಅಪಘಾತಗಳುಂಟಾಗಿವೆ. ಇತರ ಯಾವುದೇ ದೇಶದಲ್ಲಿ ಇಂತಹದ್ದೇನಾದರೂ ಸಂಭವಿಸುವುದನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಅಂತಹ ಅಪಘಾತಗಳು ಕೇವಲ ಆಕಸ್ಮಿಕವಾಗಿ ಸಂಭವಿಸುವುದಿಲ್ಲ (ಕೆಲವು ಭ್ರಷ್ಟ ಅಧಿಕಾರಿಗಳಿಂದ ನಡೆದ ಷಡ್ಯಂತ್ರದ ಕೆಲಸದ ಕಡೆಗೆ ಸೂಚಿಸುತ್ತಾ). ಅಂತಹ ಅಪಘಾತಗಳು ಸಂಭವಿಸುವಾಗ, ದೇಶದಲ್ಲಿ ಎಲ್ಲರೂ ನೌಕಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಅಂತಹ ಒಂದು ಅಪಘಾತ ಏಕೆ ಸಂಭವಿಸಿತೆಂದು ಅವರನ್ನು ಪ್ರಶ್ನಿಸುತ್ತಾರೆ (ನಿರ್ಲಕ್ಷ್ಯತೆಯನ್ನು ಆಪಾದಿಸುವ ನೆಲೆಯಲ್ಲಿ). ಇಂತಹ ಹತ್ತು ಅಪಘಾತಗಳಾಗಿದ್ದರೂ ಸಹ ನಮ್ಮ ಮಂತ್ರಿಗಳು ಅಲ್ಲಿ ಕುಳಿತುಕೊಂಡು ಅದನ್ನು ನೋಡುವುದಲ್ಲದೆ ಅದರ ಬಗ್ಗೆ ಏನನ್ನೂ ಮಾಡುವುದಿಲ್ಲ. ಇದು ಬಹಳ ದುರದೃಷ್ಟಕರ.

ಇದು ಜಗತ್ತಿನ ಬೇರೆ ಯಾವುದಾದರೂ ದೇಶದಲ್ಲಿ ಆಗಿರುತ್ತಿದ್ದರೆ, ಜನರು ಅದರ ಬಗ್ಗೆ ಗಾಬರಿ ಮತ್ತು ಕೋಪಗೊಳ್ಳುತ್ತಿದ್ದರು. ಆದರೆ ನಮ್ಮ ದೇಶದಲ್ಲಿ, ನಮ್ಮ ಅಧಿಕಾರಿಗಳು ಮತ್ತು ನಮ್ಮ ಜನರು ಸುಮ್ಮನಾಗಿದ್ದಾರೆ.

ಸಮುದ್ರದಲ್ಲಿನ ಅಂತಹ ಅಪಘಾತಗಳಲ್ಲಿ ಎಷ್ಟು ಜೀವಗಳು ಕಳೆದುಹೋದವು ಎಂಬುದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಅವರಿಗೆ ಆಸಕ್ತಿಯಿರುವುದೆಂದರೆ ತಮ್ಮ ಜೇಬುಗಳನ್ನು ಹಣದಿಂದ ತುಂಬಿಸಿಕೊಳ್ಳುವುದರ ಬಗ್ಗೆ ಮಾತ್ರ.

ನಮ್ಮಲ್ಲಿ ಕಲ್ಲಿದ್ದಲು ಮತ್ತು ಖನಿಜ ಸಂಪನ್ಮೂಲಗಳ ಒಂದು ದೊಡ್ಡ ಸಂಪತ್ತಿದೆ, ಆದರೂ ನಾವು ಕಲ್ಲಿದ್ದಲನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶವು ಬಾಕ್ಸೈಟ್ ಅದಿರಿನಲ್ಲಿ (ಅಲ್ಯುಮಿನಿಯಂನ್ನು ತಯಾರಿಸಲಾಗುವ ಅದಿರು) ಬಹಳ ಶ್ರೀಮಂತವಾಗಿದೆ, ಆದರೂ ನಾವು ಅದನ್ನು ಕೂಡಾ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಕಬ್ಬಿಣದ ಅದಿರಿನ ಎಂತಹ ದೊಡ್ಡ ಸಂಪತ್ತಿದೆ, ಅದರೂ ನಾವು ನಮ್ಮ ಶ್ರೀಮಂತ ಅದಿರು ನಿಕ್ಷೇಪಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಿ (ಕಡಿಮೆ ದರದಲ್ಲಿ), ಸಿದ್ಧವಾದ ಉಕ್ಕಿನ ಉತ್ಪನ್ನಗಳನ್ನು ಅವರಿಂದ ಆಮದು ಮಾಡಿಕೊಳ್ಳುತ್ತೇವೆ (ಹೆಚ್ಚಿನ ದರದಲ್ಲಿ). ಇದು ಅತ್ಯಂತ ದುರದೃಷ್ಟಕರವಾಗಿದೆ.

ನಮ್ಮ ದೇಶದಲ್ಲಿ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಸಂಶೋಧಕರಿಗೇನೂ ಕೊರತೆಯಿಲ್ಲ. ನಮ್ಮ ದೇಶದಲ್ಲಿ ಎಲ್ಲೆಡೆಯೂ ಪ್ರತಿಭಾವಂತ ಜನರಿದ್ದಾರೆ. ಹೀಗಾಗಿ, ಒಂದು ದೊಡ್ಡ ಪರಿವರ್ತನೆಯನ್ನು ತರುವುದರಲ್ಲಿ ಈ ದೇಶದ ಯುವಜನತೆಯು ಬಹಳ ಸಮರ್ಥರಾಗಿದ್ದಾರೆ. ಒಟ್ಟಾಗಿ ಸೇರಿ, ಹೆಚ್ಚಿನ ಜನರನ್ನು ವಿ.ಬಿ.ಐ.ಗೆ ಕರೆತರಬೇಕೆಂದು ನಾನು ಯುವಜನರಲ್ಲಿ ಕೇಳಿಕೊಳ್ಳುತ್ತೇನೆ. ಮುಂಬರುವ ೩-೪ ವರ್ಷಗಳಲ್ಲಿ ಏನಾದರೂ ದೊಡ್ಡದನ್ನು ಮಾಡುವುದರ ಬಗ್ಗೆ ನಾವೆಲ್ಲರೂ ಯೋಚಿಸಬೇಕು. ನೀವೆಲ್ಲರೂ ನಾನು ಹೇಳುವುದನ್ನು ಒಪ್ಪುತ್ತೀರಾ? ನೀವೆಲ್ಲರೂ ಸೇರುವಿರಾ? ಹಾಗೆ ಮಾಡಿ.

ಪ್ರಶ್ನೆ: ಗುರುದೇವ, ಎಲ್ಲವೂ ಪೂರ್ವನಿರ್ಧಾರಿತವಾದರೆ, ಆಗ ಕ್ರಿಯೆ ಅಥವಾ ಸ್ವ-ಇಚ್ಛೆಯ ಪ್ರಯೋಜನವೇನು?

ಶ್ರೀ ಶ್ರೀ ರವಿ ಶಂಕರ್: ಎಲ್ಲವೂ ಪೂರ್ವನಿರ್ಧಾರಿತವಾಗಿದ್ದರೆ, ಆಗ ಸ್ವ-ಇಚ್ಛೆಯ ಉಪಯೋಗವೇ ಇರುತ್ತಿರಲಿಲ್ಲ. ಇಲ್ಲ, ನೀನು ನಿನ್ನ ವಿವೇಕವನ್ನು ಬಳಸಬೇಕು ಮತ್ತು ಕೆಲವು ವಿಷಯಗಳು ಪೂರ್ವನಿರ್ಧಾರಿತವಾದವು, ಆದರೆ ಸರಿಯಾದ ಆಯ್ಕೆಗಳನ್ನು ಮಾಡುವ ಹಾಗೂ ಒಂದು ನ್ಯಾಯದ ರೀತಿಯಲ್ಲಿ ಕೆಲಸ ಮಾಡುವ ಸ್ವೇಚ್ಛೆಯನ್ನು ಕೂಡಾ ನಿನಗೆ ಕೊಡಲಾಗಿದೆಯೆಂಬುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಎಲ್ಲಿ ನೀನು ನಿನ್ನ ವಿವೇಕವನ್ನು ಬಳಸಲು ಸಾಧ್ಯವಿಲ್ಲವೋ ಅಲ್ಲಿ, ನಿರ್ದಿಷ್ಟ ವಿಷಯಗಳನ್ನು ಮಾಡುವುದಕ್ಕಾಗಿ ನಿಗದಿತ ದಾರಿಗಳಿವೆ. ಜೀವನವು ವಿಧಿ ಮತ್ತು ಸ್ವೇಚ್ಛೆ ಇವುಗಳೆರಡರ ಒಂದು ಸಂಯೋಗವಾಗಿದೆ. ಅದರಲ್ಲಿ ಕೆಲವನ್ನು ಬರೆಯಲಾಗಿದೆ (ಪೂರ್ವನಿರ್ಧಾರಿತ), ಆದರೆ ನೀನು ವರ್ತಿಸುವ ರೀತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೂಡಾ ನಿನಗೆ ನೀಡಲಾಗಿದೆ.

ಈ ಸತ್ಸಂಗದ ಪ್ರಶ್ನೋತ್ತರ ಮಾಲಿಕೆಯ ’ಸ್ಲೈಡ್ ಷೋ’ಗೆ ಲಿಂಕ್: http://goo.gl/j8mzqu