ಸೋಮವಾರ, ಮೇ 5, 2014

ಇತರರ ಅಭಿಪ್ರಾಯಗಳ ಕಾಲ್ಚೆಂಡಾಗಬೇಡಿ

ಮೇ ೫, ೨೦೧೪
ಬಹರೈನ್

ಲ್ಲಿರುವ ನನ್ನ ಪ್ರೀತಿಪಾತ್ರರೇ, ಇದನ್ನೇ ನಾವು ಮಾಡಬೇಕಾಗಿರುವುದು: ಪ್ರಪಂಚದಲ್ಲಿ ಆನಂದದ ಅಲೆಗಳನ್ನು ಸೃಷ್ಟಿಸುವುದು.
ನೀವೆಲ್ಲರೂ ನಾನು ಹೇಳುತ್ತಿರುವುದನ್ನು ಒಪ್ಪುತ್ತೀರಿ ಎಂದು ನನಗೆ ಖಾತ್ರಿಯಿದೆ.
ಇಂದಿನ ಪ್ರಪಂಚದಲ್ಲಿ ಬಹಳಷ್ಟು ಸಂಘರ್ಷವಿದೆ. ಒಂದು ಟೋಪಿ ಬೀಳುವಷ್ಟರಲ್ಲಿ ಜನರು ಜಗಳವಾಡಲು ತೊಡಗುತ್ತಾರೆ. ಒಂದೇ ರೀತಿಯ ಮನೋಭಾವವುಳ್ಳವರು, ಒಳ್ಳೆಯ ಹೃದಯವಂತ ಜನರು ಒಟ್ಟುಸೇರಿ ಆನಂದದ ಒಂದು ಅಲೆಯನ್ನು ಸೃಷ್ಟಿಸುವ ಸಮಯ ಬಂದಿದೆ. ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡಿ.

ಜೀವನವು ಬಹಳ ಚಿಕ್ಕದಾಗಿದೆ! ನಾವು ೬೦ರಿಂದ ೯೦ ವರ್ಷಗಳವರೆಗೆ ಬದುಕುತ್ತೇವೆ. ಇವತ್ತು ಜನರು ಇನ್ನೂ ಬಹಳ ಬೇಗ ಸಾಯುತ್ತಿದ್ದಾರೆ. ೫೦ ಅಥವಾ ೬೦ ವರ್ಷಗಳಲ್ಲಿ ಜನರು ಹೋಗಿಯಾಯಿತು. ಈ ಅಲ್ಪಾವಧಿಯ ಜೀವನದಲ್ಲಿ ಸಂತೋಷವಾಗಿರಲು ಸಾಕಷ್ಟು ಸಮಯವಿಲ್ಲ. ಹಾಗಾದರೆ ಅಷ್ಟೊಂದು ಸಂಘರ್ಷ, ಅಷ್ಟೊಂದು ಜಗಳ, ಅಷ್ಟೊಂದು ಯಾತನೆ ಮತ್ತು ದುಃಖ ಯಾಕಿದೆ? ನಾವು ಇದರ ಬಗ್ಗೆ ಚಿಂತನೆ ಮಾಡಬೇಕು.

ಇಲ್ಲಿರಲು ನನಗೆ ಬಹಳ ಸಂತೋಷವಾಗುತ್ತಿದೆ. ಬಹರೈನ್ ಎಂಬುದು ಅರಬ್ ದೇಶಗಳಿಗಿರುವ ಪ್ರವೇಶದ್ವಾರ ಎಂದು ನನಗೆ ಹೇಳಲಾಯಿತು. ಮತ್ತು ಈಗ ನಾನು ಅರಬ್‌ನ ಪ್ರವೇಶದ್ವಾರದಲ್ಲಿದ್ದೇನೆ, ನಿಮ್ಮೆಲ್ಲರೊಂದಿಗೆ ಇಲ್ಲಿರಲು ನನಗೆ ಸಂತೋಷವಾಗುತ್ತಿದೆ.

ಮಹಾಮಹಿಮರಾದ ಡಾ.ಮುಸ್ತಫಾ ಅವರೊಂದಿಗೆ ನಾನು ಮಾತನಾಡುತ್ತಿದ್ದಾಗ ಅವರು ನನ್ನಲ್ಲಿ, ನಾವು ಹಳೆಯದನ್ನು ಮತ್ತು ಹೊಸದನ್ನು ಎರಡನ್ನೂ ಹೊಂದಿರುವ ಆವಶ್ಯಕತೆಯಿದೆಯೆಂದು ಹೇಳುತ್ತಿದ್ದರು. ಪ್ರತಿಯೊಂದು ಸಂಪ್ರದಾಯವೂ, ಪ್ರತಿಯೊಂದು ಧರ್ಮವೂ ಆಧುನಿಕ ಮಾರ್ಗವನ್ನು ತನ್ನದಾಗಿಸಿಕೊಳ್ಳಲು ಆರಂಭಿಸಬೇಕು. ನಮ್ಮಲ್ಲಿ ಈ ಹೊಂದಿಕೊಳ್ಳುವ ಸಾಮರ್ಥ್ಯವಿರಬೇಕು. ಸಂಗೀತವು ಇಸ್ಲಾಮಿನದ್ದಲ್ಲವೆಂದು ಪರಿಗಣಿಸಲಾಗುತ್ತಿದೆಯೇ, ಅದನ್ನು ಅನುಮತಿಸಲಾಗುತ್ತದೆಯೇ ಎಂದು ನಾನು ಅವರಲ್ಲಿ ಕೇಳಿದೆ. ಅವರಂದರು, ಅದನ್ನು ಅನುಮತಿಸಲಾಗುವುದಿಲ್ಲವೆಂದು ಕೆಲವು ಜನರು ಈಗಲೂ ಯೋಚಿಸುತ್ತಾರೆ. ಆದರೆ ಸಂಗೀತವು ಪ್ರಪಂಚದಲ್ಲಿರುವುದು ಮುಂದುವರಿಯುತ್ತದೆ. ನಿಮಗೆ ಗೊತ್ತಾ, ಹಲವಾರು ಪಂಥಗಳಿವೆ!
ಹೇಗೆ ನಾವು ಪ್ರಗತಿಪರರೂ, ಹೊಂದಿಕೊಳ್ಳುವವರೂ, ಸಹಕಾರ ಮನೋಭಾವ ಹೊಂದಿರುವವರೂ ಆಗಿರಬೇಕು ಮತ್ತು ಎಲ್ಲರನ್ನೂ ನಮ್ಮೊಂದಿಗೆ ಕರೆದುಕೊಂಡು ಮುಂದೆ ಸಾಗಬೇಕು ಎಂಬುದನ್ನು ಅವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ನಾನು ಅವರು ಹೇಳುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ.

ಜೀವನವೊಂದು ಮರವಿದ್ದಂತೆ, ಅದಕ್ಕೆ ಸ್ವಲ್ಪ ಬೇರುಗಳು ಹಾಗೂ ಸ್ವಲ್ಪ ಶಾಖೆಗಳಿವೆ. ನಾವು ಹಳೆಯ ಬೇರುಗಳನ್ನು ಹೊಂದಿರಬೇಕು ಮತ್ತು ಅದೇ ಸಮಯದಲ್ಲಿ, ಶಾಖೆಗಳು ಹೊಸದಾಗಿರಬೇಕು.

ಇವತ್ತು ಬೆಳಗ್ಗೆ ನಾನು ಮಹಾಮಹಿಮರಾದ, ಬಹರೈನ್‌ನ ರಾಜರೊಂದಿಗಿದ್ದೆ. ಅವರು ಕೂಡಾ ಅದನ್ನೇ ಹೇಳಿದರು. ಅತ್ಯಂತ ತೆರೆದ ಹಾಗೂ ಇತರ ನಾಗರೀಕತೆ, ಸಂಸ್ಕೃತಿಗಳನ್ನು ಸ್ವೀಕರಿಸುವ ನಾಗರೀಕತೆಯಾಗಿದೆ ಬಹರೈನ್, ಹಾಗೂ ಜಗತ್ತಿಗೆ ಸಾಮರಸ್ಯದ ಉದಾಹರಣೆಯನ್ನು ನೀಡುತ್ತಿದೆ. ಇದೇ ಸಂದೇಶವು ಪ್ರತಿಯೊಂದು ಪ್ರಾಂತ್ಯಕ್ಕೂ, ಪ್ರತಿಯೊಂದು ದೇಶಕ್ಕೂ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಗೂ ಹೋಗಬೇಕೆಂದು ನಾನು ಆಶಿಸುತ್ತೇನೆ.

ನಾವೆಲ್ಲರೂ ಈ ಪ್ರಪಂಚವನ್ನು ಒಂದು ಕುಟುಂಬವಾಗಿ ಪರಿಗಣಿಸಬೇಕು. ಪ್ರಪಂಚವು ಒಂದು ಕುಟುಂಬವಾಗಿದೆ ಮತ್ತು ಅದುವೇ ಆರ್ಟ್ ಆಫ್ ಲಿವಿಂಗ್ ಆಗಿರುವುದು. ಒಂದು ವಿಶ್ವ ಕುಟುಂಬ.

ಇವತ್ತು ಬೆಳಗ್ಗಿನ ಸಭೆಯಲ್ಲಿ, ಆರಬ್ ಪ್ರದೇಶದ ಮಹಾನ್ ನಾಯಕರಿದ್ದರು ಮತ್ತು ಶಾಂತಿಯು ನಮ್ಮ ಭಾಷೆಯಾಗಿರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಒಂದೇ ವ್ಯಕ್ತ ಅಥವಾ ಅವ್ಯಕ್ತ ಮೂಲಭೂತ ವೈಚಾರಿಕ ಮೌಲ್ಯಗಳು ನಮ್ಮ ಮಾನದಂಡಗಳಾಗಿವೆ. ಎಲ್ಲಾ ಲಿಂಗ, ಸಂಪ್ರದಾಯ, ಧರ್ಮ, ಸಂಸ್ಕೃತಿಗಳ ಜನರನ್ನು ಒಂದು ಮಾನವೀಯ ಮೌಲ್ಯವಾಗಿ, ಒಂದು ಮಾನವೀಯತೆಯಾಗಿ, ಒಂದು ಮಾನವ ಕುಟುಂಬವಾಗಿ ಒಗ್ಗೂಡಿಸುವುದು ಅತ್ಯಗತ್ಯವಾಗಿದೆ.
ಕಳೆದ ಮೂವತ್ತೈದು ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಮ್ಮ ಕನಸು ಇದಾಗಿದೆ. ನಾವು ನಮ್ಮ ಮಧ್ಯೆ ಕೃತಕವಾಗಿ ನಿರ್ಮಿಸಿರುವ ಗೋಡೆಗಳನ್ನು ಜನರು ತೊಡೆದು ಹಾಕುವುದನ್ನು ನೋಡಲು ನಾವು ಬಯಸಿದ್ದೆವು, ಯಾಕೆಂದರೆ ಇರುವುದು ಒಂದು ದೈವತ್ವ, ಒಬ್ಬ ದೇವರು ಮತ್ತು ನಾವೆಲ್ಲರೂ ಆ ಒಂದು ದೈವತ್ವದ ಭಾಗವಾಗಿದ್ದೇವೆ; ಒಂದೇ ದೇವರ ಮಕ್ಕಳು.
ಆದುದರಿಂದ ನಾವು ಭೇದಭಾವಗಳ ಗೋಡೆಗಳನ್ನು ಉರುಳಿಸಬೇಕು, ಹೀಗಿದ್ದರೂ ನಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಬಹರೈನ್‌ಗೆ ತನ್ನದೇ ಆದ ವಿಶಿಷ್ಟತೆಯಿದೆ, ಪಾಕಿಸ್ತಾನಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ, ಭಾರತಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಅದನ್ನೊಂದು ವಿವಾದದ ಅಂಶವಾಗಿಸುವ ಬದಲಾಗಿ, ನಾವು ನಮ್ಮೆಲ್ಲಾ ವಿಶಿಷ್ಟವಾದ ವಿಭಿನ್ನತೆಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಅದನ್ನು ಆಚರಿಸಬೇಕು.

ಪ್ರಪಂಚಕ್ಕೆ ಬೇಕಾಗಿರುವುದೇನೆಂದರೆ, ವೈವಿಧ್ಯತೆಯಲ್ಲಿ ಸಾಮರಸ್ಯತೆ ಅಥವಾ ವೈವಿಧ್ಯತೆಯಲ್ಲಿ ಆಚರಣೆ.
ಈಗ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದರೆ, ಕೋಪಗೊಂಡಿದ್ದರೆ ಅಥವಾ ಉದ್ವಿಗ್ನನಾಗಿದ್ದರೆ ಇದಾಗಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ. ಹೀಗಾಗಿ ಮೊದಲಿಗೆ ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಳ್ಳಬೇಕು. ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಎಲ್ಲರೊಂದಿಗೂ ಒಂದೆಂದು ಭಾವಿಸಿಕೊಳ್ಳಬೇಕು. ನಾವು ಈ ಇಡೀ ವಿಶ್ವದ ಭಾಗವಾಗಿದ್ದೇವೆ. ಮಕ್ಕಳಾಗಿ ನಾವು ಈ ಪ್ರಪಂಚಕ್ಕೆ ಬಂದಾಗ ನಾವು ಹೇಗಿದ್ದೆವು? ನಾವು ದಿನವೊಂದಕ್ಕೆ ನಾನ್ನೂರು ಸಲ ನಗುತ್ತಿದ್ದೆವು. ಪ್ರತಿಯೊಂದು ಮಗುವೂ ದಿನವೊಂದರಲ್ಲಿ ನಾನ್ನೂರು ಸಲ ನಗುತ್ತದೆ. ಒಬ್ಬ ಹದಿಹರೆಯದವನು ಕೇವಲ ಹದಿನೇಳು ಸಲ ಮಾತ್ರ ನಗುತ್ತಾನೆ. ಒಬ್ಬ ವಯಸ್ಕನು ನಗುವುದೇ ಇಲ್ಲ ಅಥವಾ ಕೆಲವೊಮ್ಮೆ ಮಾತ್ರ ನಗುತ್ತಾನೆ.

ಒಂದು ಮುಗುಳ್ನಗೆಯು ನಮ್ಮ ಭಾಷೆಯಾಗಿರಬೇಕು. ನಮ್ಮೆಲ್ಲರನ್ನೂ ಒಗ್ಗೂಡಿಸಬಲ್ಲ ಆ ಏನೋ ಒಂದು ಮುಗುಳ್ನಗೆಯಾಗಿದೆ.
ನಾನು ನಿಮಗೊಂದು ಕಥೆಯನ್ನು ಹೇಳಲು ಬಯಸುತ್ತೇನೆ.

ಒಬ್ಬರು ಜ್ಞಾನಿ ವ್ಯಕ್ತಿಯು ಮೌನದಲ್ಲಿದ್ದರು. ಇಬ್ಬರು ವ್ಯಕ್ತಿಗಳು ಅವರನ್ನು ಸಮೀಪಿಸಿದರು ಮತ್ತು ಅವರಲ್ಲಿ, "ನಮಗೆ ಏನಾದರೂ ಸಂದೇಶವನ್ನು ನೀಡಿ" ಎಂದು ಕೇಳಿಕೊಂಡರು. ಜ್ಞಾನಿ ವ್ಯಕ್ತಿಯು ಕೇವಲ ತಮ್ಮ ತೋರುಬೆರಳನ್ನು ತೋರಿಸಿ, ನಂತರ ತಮ್ಮ ಮುಷ್ಠಿಯನ್ನು ತೋರಿಸಿದರು, ಯಾಕೆಂದರೆ ಅವರು ಮೌನದಲ್ಲಿದ್ದರು.

ಒಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಒಗ್ಗಟ್ಟಾಗಿರಬೇಕೆಂದು ಹೇಳುತ್ತಿದ್ದಾರೆ."

ಇನ್ನೊಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಜಗಳವಾಡಬೇಕೆಂದು, ಇತರರನ್ನು ಹೊಡೆಯಬೇಕೆಂದು ಹೇಳುತ್ತಿದ್ದಾರೆ."
ನೀವು ನಿಮ್ಮ ಮುಷ್ಠಿಯನ್ನು ತೋರಿಸಿದರೆ, ಒಬ್ಬರು ಅದನ್ನು, ’ಎಲ್ಲರೂ ಒಂದುಗೂಡಿ ಬನ್ನಿ’ ಎಂದು ಅರ್ಥೈಸಬಹುದು ಅಥವಾ ಅದನ್ನು, ’ಹೋಗಿ ಇತರರನ್ನು ಹೊಡೆಯಿರಿ’ ಎಂಬುದಾಗಿ ಅರ್ಥೈಸಿಕೊಳ್ಳಬಹುದು.

ಹೊಡೆಯುವುದರ ಬಗ್ಗೆ ನೀವು ಯಾಕೆ ಯೋಚಿಸುವಿರಿ? ಅದು ಯಾಕೆಂದರೆ, ನೀವು ಸೌಖ್ಯವಾಗಿಲ್ಲ, ನೀವು ರೋಗಿಷ್ಠರಾಗಿರುವಿರಿ, ನೀವು ಬಲಹೀನರಾಗಿರುವಿರಿ ಮತ್ತು ಅಭದ್ರರಾಗಿರುವಿರಿ. ಎಲ್ಲೋ ನೀವು ಭಯಭೀತರಾಗಿರುವಿರಿ, ಆದುದರಿಂದ ನೀವು ಹೋಗಿ ಇತರರನ್ನು ಹೊಡೆಯಲು ಬಯಸುತ್ತೀರಿ. ಹಿಂಸೆಯು ಆಂತರಿಕ ಬಲಹೀನತೆಯ ಒಂದು ಲಕ್ಷಣವಾಗಿದೆ.

ಇದು ಹೇಗೆ ಹೋಗಲು ಸಾಧ್ಯ? ನೀವು ಆರೋಗ್ಯವಂತರಾಗಿರುವಾಗ ಮತ್ತು ಎಲ್ಲರೊಂದಿಗೂ ಒಂದೇ ಮನೆಯವರಂತಿದ್ದಾಗ.
ನೀವು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡುವಾಗ ಆಂತರಿಕ ಶಕ್ತಿಯು ಬರುತ್ತದೆ. ಆಗ ಹಿಂಸೆಯು ಸುಮ್ಮನೇ ಬಿಟ್ಟುಹೋಗುತ್ತದೆ.

ಹೀಗಾಗಿ, ಇವತ್ತು ನಾವು ಮಾಡಬೇಕಾಗಿರುವುದು ಇದನ್ನೇ: ಆನಂದದ ಅಲೆಗಳನ್ನು ಸೃಷ್ಟಿಸುವುದು. ನಿಮ್ಮಲ್ಲಿ ಎಷ್ಟು ಮಂದಿ ನಾನು ಹೇಳುವುದನ್ನು ಒಪ್ಪುತ್ತೀರಿ? ನಾವೆಲ್ಲರೂ, ನಾವೆಲ್ಲೇ ಇದ್ದರೂ ಆನಂದದ ಅಲೆಗಳನ್ನು ಸೃಷ್ಟಿಸಬೇಕಾಗಿದೆ.

"ಹೇ, ಚಿಂತಿಸಬೇಡ, ನಾವು ನಿಮ್ಮೊಂದಿಗಿದ್ದೇವೆ. ಪ್ರಪಂಚದಲ್ಲಿ ಸಾಕಷ್ಟು ಮಾನವೀಯತೆಯಿದೆ. ನಾವೆಲ್ಲರೂ ಒಂದು ಸಮಾಜದ, ಒಂದು ಪ್ರಪಂಚದ ಭಾಗವಾಗಿದ್ದೇವೆ" ಎಂದು ಜನರಿಗೆ ಹೇಳಿ.

ಸಾಂಸಾರಿಕ ಹಿಂಸೆ, ಸಾಮಾಜಿಕ ಹಿಂಸೆ ಮತ್ತು ಆತ್ಮಹತ್ಯೆಗಳಿವೆ. ಇದು ಕೇವಲ ತಿಳುವಳಿಕೆಯ ಕೊರತೆಯಿಂದಾಗಿ, ಜ್ಞಾನದ ಕೊರತೆಯಿಂದಾಗಿ, ನಿಕಟತೆಯ ಕೊರತೆಯಿಂದಾಗಿ ಮತ್ತು ನಮ್ಮ ಜೀವನದಲ್ಲಿನ ಒತ್ತಡ ಹಾಗೂ ಚಿಂತೆಗಳನ್ನು ಹೇಗೆ ಹೋಗಲಾಡಿಸುವುದು ಎಂಬ ಅರಿವಿನ ಕೊರತೆಯಿಂದಾಗಿ.

ನಾನು ಇಸ್ಲಾಮಿನ ಹಲವು ಪಂಡಿತರುಗಳು ಹೇಳುವುದನ್ನು ಕೇಳಿದ್ದೇನೆ. "ಪೂರ್ವದಿಂದ ನನಗೆ ತಂಪಾದ ಗಾಳಿಯು ಬರುತ್ತಿದೆ" ಎಂಬುದಾಗಿ ಪ್ರವಾದಿ ಮೊಹಮ್ಮದರು ಹೇಳಿದ್ದರೆಂದು ಅವರು ಹೇಳುತ್ತಾರೆ. ಮರುಭೂಮಿಯಲ್ಲಿ, ತಂಪಾದ ಗಾಳಿ ಬೀಸುವುದೆಂದರೆ ಬಹಳಷ್ಟು ಸುಖ ಮತ್ತು ಸಂತೋಷವೆಂದು ಅರ್ಥ. ತನಗೆ ಪೂರ್ವದಿಂದ ತಂಪಾದ ಗಾಳಿಯು ಬರುತ್ತಿರುವುದಾಗಿ ಅವರು ಹೇಳಿದಾಗ, ಆ ತಂಪಾದ ಗಾಳಿಯೆಂದರೆ, ಸಾಮರಸ್ಯ. ಬಹರೈನ್ ಕೂಡಾ ಪೂರ್ವದ ಭಾಗವೇ ಆಗಿದೆ. ನಾವೆಲ್ಲರೂ ಪೂರ್ವದವರು.

ಇವತ್ತು ಪೂರ್ವ ಪೂರ್ವವಾಗಿ, ಪಶ್ಚಿಮ ಪಶ್ಚಿಮವಾಗಿ ಉಳಿದಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ, ಎಲ್ಲೆಡೆಯೂ ಬಹುತೇಕ ಒಂದೇ ರೀತಿ. ಆದರೆ ಅದೇನೇ ಇದ್ದರೂ, ಸಾಮರಸ್ಯದ ಈ ಸಂದೇಶವು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಬೇಕು.
ಎಲ್ಲೆಡೆಯೂ ಬಾಂಬ್ ಸ್ಫೋಟಗಳು ನಡೆಯುತ್ತಿವೆ ಮತ್ತು ಜನರು ಸಾಯುತ್ತಿದ್ದಾರೆ ಎಂಬುದನ್ನು ಕೇಳುವಾಗ ನನಗೆ ಬಹಳ ನೋವಾಗುತ್ತದೆ. ಸಿರಿಯಾ ಮತ್ತು ಈಜಿಪ್ಟ್‌ಗಳಲ್ಲಿ ಏನು ನಡೆಯುತ್ತಿರುವುದೋ ಅದನ್ನು ಕೇಳುವಾಗ ನನಗೆ ನೋವಾಗುತ್ತದೆ.
ಇವತ್ತು ಬೆಳಗ್ಗೆ ನಾವು ಪ್ರಪಂಚದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದೆವು, ಮತ್ತು ನಾನು ಹೇಳುತ್ತೇನೆ ಕೇಳಿ, ಪ್ರತಿಯೊಬ್ಬರೂ ಚಿಂತೆಗೊಳಗಾಗಿದ್ದಾರೆ ಹಾಗೂ ಕಾಳಜಿಯನ್ನು ಹೊಂದಿದ್ದಾರೆ. ಅಂತಿಮವಾಗಿ ದೇವರು ನೋಡಿಕೊಳ್ಳಲಿದ್ದಾರೆಂದು ಖಂಡಿತವಾಗಿಯೂ ನಮಗೆ ತಿಳಿದಿದೆ. ಆದರೆ ನಮಗೆಲ್ಲರಿಗೂ ಮಾಡಲು ಕರ್ತವ್ಯವಿದೆ, ಮಾಡಲು ನಮ್ಮ ಕೆಲಸವಿದೆ. ನಮ್ಮ ಕೆಲಸವೆಂದರೆ ಜನರನ್ನು ಹತ್ತಿರಕ್ಕೆ ತರುವುದು, ಅವರನ್ನು ಒಂದುಗೂಡಿಸುವುದು. ’ನೋಡು ನಿನ್ನೊಳಗೆ, ಎಂತಹ ಸುಂದರವಾದ ನೀನಿರುವೆ. ನಿನ್ನೊಳಗೆ ಬಹಳಷ್ಟು ಒಳ್ಳೆಯದಾದ ಶಕ್ತಿಯಿದೆ’ ಎಂಬುದನ್ನು ಅವರು ತಿಳಿಯುವಂತೆ ಮಾಡುವುದು.

ಸಕಾರಾತ್ಮಕ ಶಕ್ತಿಯನ್ನು ನಮ್ಮೊಳಗೆ ಮತ್ತು ನಮ್ಮ ಸುತ್ತಲೂ ಬೆಳಗಿಸೋಣ ಹಾಗೂ ಎಲ್ಲರ ಮುಖದ ಮೇಲೂ ಮುಗುಳ್ನಗೆಯಿರುವ, ನಮ್ಮ ಕನಸಿನ ಪ್ರಪಂಚವನ್ನು ನಾವು ಖಂಡಿತವಾಗಿಯೂ ಕಾಣಬಹುದು. ನಾವು ಪುನಃ ಮಕ್ಕಳಂತೆ ಆಗುತ್ತೇವೆ ಮತ್ತು ವರ್ತಮಾನದ ಕ್ಷಣದಲ್ಲಿ ಜೀವಿಸಲು ತೊಡಗುತ್ತೇವೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿರುವುದು ಕೇವಲ ಐದು ಮೂಲ ತತ್ವಗಳು.

೧. ಜೀವನದಲ್ಲಿ ಏಳುಬೀಳುಗಳಿವೆಯೆಂಬುದು ನಿಮಗೆ ಗೊತ್ತು. ಹಿತಕರವಾದ ವಿಷಯಗಳು ಸಂಭವಿಸುತ್ತವೆ, ಅಹಿತಕರವಾದ ವಿಷಯಗಳು ಸಂಭವಿಸುತ್ತವೆ. ಮೊದಲನೆಯ ತತ್ವವೆಂದರೆ: ಎಲ್ಲಾ ಪರಿಸ್ಥಿತಿಗಳಲ್ಲೂ, ಮನಸ್ಸಿನ ಸಂತುಲನವನ್ನು ಇಟ್ಟುಕೊಳ್ಳಿ.
ಹೆಚ್ಚಾಗಿ ಏನಾಗುತ್ತದೆಯೆಂದರೆ, ವಿಷಯಗಳು ನಾವಂದುಕೊಂಡಂತೆ ನಡೆಯುವಾಗ ನಮಗೆ ಬಹಳ ಸಂತೋಷವಾಗುತ್ತದೆ. ಆದರೆ ವಿಷಯಗಳು ನಾವಂದುಕೊಂಡಂತೆ ನಡೆಯದಿರುವಾಗ ನಾವು ಖಿನ್ನರಾಗುತ್ತೇವೆ ಮತ್ತು ಕೋಪಗೊಳ್ಳುತ್ತೇವೆ. ಸಮಚಿತ್ತತೆಯನ್ನು ಕಾಪಾಡಿಕೊಳ್ಳುವುದು ಮೊದಲನೆಯ ತತ್ವವಾಗಿದೆ.

೨. ಮುಂದಿನ ತತ್ವವೆಂದರೆ, ಜನರನ್ನು ಅವರಿರುವಂತೆಯೇ ಸ್ವೀಕರಿಸುವುದು. ಭಿನ್ನತೆಯನ್ನು ಸ್ವೀಕರಿಸಿ; ಅದು ಸ್ವಭಾವ, ವಿಚಾರಧಾರೆಯಾಗಿರಬಹುದು, ಏನೇ ಆಗಿರಬಹುದು. ಅವರಿರುವಂತೆಯೇ ಅವರನ್ನು ಸ್ವೀಕರಿಸಿ. ಒಂದು ಬಹಳ ಮುಖ್ಯವಾದ ತತ್ವ.

೩. ಮೂರನೆಯ ತತ್ವವೆಂದರೆ, ಇತರರ ಅಭಿಪ್ರಾಯಗಳ ಒಂದು ಕಾಲ್ಚೆಂಡಾಗಬೇಡಿ. ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಿರುವರೆಂಬುದಾಗಿ ಚಿಂತಿಸಬೇಡಿ. ವಾಸ್ತವವಾಗಿ, ನಿಮ್ಮ ಬಗ್ಗೆ ಯೋಚಿಸಲು ಯಾರಿಗೂ ಸಮಯವಿಲ್ಲ. ನಿಮ್ಮೊಳಗೆ ನೋಡಿ ಮತ್ತು ನಿಮಗೆ ಯಾವುದು ಸರಿ, ಯಾವುದು ಸರಿಯಲ್ಲ ಎಂಬುದನ್ನು ನೀವೇ ನೋಡಿ.

೪. ಮುಂದಿನ ಅಂಶವೆಂದರೆ, ಇತರರ ತಪ್ಪುಗಳ ಹಿಂದೆ ಉದ್ದೇಶವನ್ನು ಹುಡುಕಬೇಡಿ. ಬಹಳ ಮುಖ್ಯ. ಪ್ರತಿಯೊಬ್ಬ ದೋಷಿಯ ಒಳಗೂ ಸಹಾಯಕ್ಕಾಗಿ ಕೂಗುವ ಒಬ್ಬ ಪೀಡಿತನಿರುತ್ತಾನೆ. ಅದನ್ನು ಗುರುತಿಸುವುದು.

೫. ಹಾಗೂ, ವರ್ತಮಾನದ ಕ್ಷಣದಲ್ಲಿ ಜೀವಿಸಿ.

ಇವುಗಳು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಐದು ಮೂಲ ತತ್ವಗಳಾಗಿವೆ. ಈ ಮೂಲ ತತ್ವಗಳಿಂದ ಏನಾಗುತ್ತದೆ? ಮೂರು ಸಂಗತಿಗಳಾಗುತ್ತವೆ. ಹೃದಯದ ಶುದ್ಧತೆ, ಮನಸ್ಸಿನ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಅಷ್ಟೇ.