ಸೋಮವಾರ, ಮಾರ್ಚ್ 30, 2015

ನೀವು ಯಾರು?

೩೦ ಮಾರ್ಚ್ ೨೦೧೫
ಸಿಂಗಾಪುರ

ನೀವೊಂದು ಹೊಸ ಜಾಗಕ್ಕೆ ಹೋಗುವಾಗ ಏನು ಮಾಡುತ್ತೀರಿ? ನೀವು ನಿಮ್ಮ  ಪರಿಚಯ ನೀಡುತ್ತೀರಿ. ನೀವು ಯಾರು, ನೀವೆಲ್ಲಿಂದ ಬಂದಿರುವಿರಿ ಎಂಬುದರ ಬಗ್ಗೆ ನೀವು ಮಾತನಾಡುತ್ತೀರಿ, ಅಲ್ಲವೇ? ಈಗ ನಾವು ಇದನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡೋಣ. ನಾವು ಯಾರು, ನಾವು ಎಲ್ಲಿಂದ ಬಂದಿರುವೆವು ಹಾಗೂ ಜೀವನವೆಂದು ಕರೆಯಲ್ಪಡುವ ಈ ಸಣ್ಣ ಪಯಣದ ಬಳಿಕ ನಾವು ಎಲ್ಲಿಗೆ ಹೋಗುವೆವು ಎಂಬುದು ನಮಗೆ ತಿಳಿದಿದೆಯೇ?
ಈ ಸಭಾಂಗಣವು ಬಹುಶಃ ಮುಂದಿನ ೩೦೦ ವರ್ಷಗಳವರೆಗೂ ಇಲ್ಲಿ ಉಳಿಯಬಹುದು, ಆದರೆ ಈ ಸಭಾಂಗಣದಲ್ಲಿ ಕುಳಿತಿರುವ ಶರೀರಗಳಲ್ಲಿ ಯಾವುದೂ ಅಷ್ಟು ದೀರ್ಘಕಾಲ ಇರಲಾರದು. ನಮ್ಮ ಸುತ್ತಲಿರುವ ವಸ್ತುಗಳಿಗೆ ಹೋಲಿಸಿದಾಗ, ನಮ್ಮ ಬಾಳಿಕೆ (ಇಲ್ಲಿ ಶರೀರವನ್ನು ಉಲ್ಲೇಖಿಸುತ್ತಾ) ಬಹಳ ಚಿಕ್ಕದಾಗಿದೆ. ನೀವು ಉಟ್ಟಿರುವ ಬಟ್ಟೆಗಳೂ ಕೂಡಾ, ಅದರೊಳಗಿರುವ ಶರೀರಕ್ಕಿಂತ ಉತ್ತಮವಾದ ಬಾಳಿಕೆಯನ್ನು ಹೊಂದಿವೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ಹೀಗಾಗಿ, ಜೀವನದಲ್ಲಿ ಕೆಲವೊಮ್ಮೆ, "ನನ್ನ ಮೂಲ ಯಾವುದು? ನಾನು ಎಲ್ಲಿಂದ ಬಂದಿರುವೆನು? ನಾನು ಇಲ್ಲಿ ಹಲವಾರು ವರ್ಷಗಳಿಂದ ಇರುವೆನು, ಆದರೆ ಅದಕ್ಕಿಂತಲೂ ಮೊದಲು ನಾನೆಲ್ಲಿದ್ದೆ? ನನ್ನ ಈಗಿನ ವಯಸ್ಸಿಗಿಂತಲೂ ಮೊದಲು ನಾನು ಅಸ್ತಿತ್ವದಲ್ಲಾದರೂ ಇದ್ದೆನೇ?" ಎಂಬುದರ ಬಗ್ಗೆ ವಿಚಾರ ಮಾಡಿ.

ಎಲ್ಲಾ ಗ್ರಂಥಗಳು ಮತ್ತು ತತ್ವಶಾಸ್ತ್ರಗಳ ಬಗ್ಗೆ ಮರೆತುಬಿಡಿ ಹಾಗೂ ಕೇವಲ ಈ ಪ್ರಶ್ನೆಯನ್ನು ನಿಮ್ಮೊಂದಿಗೆ ನೀವು ಕೇಳಿಕೊಳ್ಳಿ, 'ನನ್ನ ಮೂಲ ಯಾವುದು? ನಾನು ಎಲ್ಲಿಂದ ಬಂದಿರುವೆನು?' ನೀವು ಕೇವಲ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ, ಬೇರೇನೂ ಅಲ್ಲ! ಅದು ಒಳಗಿನಿಂದ ಬರುವ ಒಂದು ನಿಜವಾದ ಪ್ರಶ್ನೆಯಾಗಿರಬೇಕು ಮತ್ತು ನಾನು ನಿಮಗೆ ಹೇಳುತ್ತಿದ್ದೇನೆ ಎಂಬ ಕಾರಣಕ್ಕಾಗಿಯಲ್ಲ.

ನಿಮಗೆ ಸಿಗುವ ಉತ್ತರವು ಉತ್ತೇಜನಕಾರಿಯಾಗಿರಬಹುದು, ಅದು ಬೆರಗುಗೊಳಿಸುವಂತಹದ್ದಾಗಿರಬಹುದು ಅಥವಾ ಅದು ಸಂಪೂರ್ಣವಾಗಿ ಗೊಂದಲಮಯವಾಗಿರಬಹುದು! ಎಲ್ಲಾ ಮೂರೂ ಒಳ್ಳೆಯದೆಂದು ನಾನು ಹೇಳುತ್ತೇನೆ. ಈ ವಿಚಾರಿಸುವಿಕೆಯು ಬುದ್ಧಿಯ ಒಂದು ಲಕ್ಷಣವಾಗಿದೆ.

ನನಗೆ ನೆನಪಿದೆ, ಮಕ್ಕಳಾಗಿದ್ದಾಗ ನಾನು ಮತ್ತು ನನ್ನ ತಂಗಿ ನಮ್ಮ ಹೆತ್ತವರೊಂದಿಗೆ ಪಾರ್ಕಿಗೆ ಹೋಗುತ್ತಿದ್ದೆವು ಮತ್ತು ನಾವು ಅವರಲ್ಲಿ, "ಮೋಡಗಳು ಎಲ್ಲಿಂದ ಬಂದವು?" ಎಂದು ಕೇಳುತ್ತಿದ್ದೆವು. ಸಾಧಾರಣವಾಗಿ ಅದಕ್ಕೆ ಅವರಲ್ಲಿ ಉತ್ತರವಿರುತ್ತಿರಲಿಲ್ಲ. "ಅದು ಎಲ್ಲಿಗೆ ಹೋಗುತ್ತಿದೆ?" ಎಂದು ನಾವು ಅವರಲ್ಲಿ ಕೇಳುತ್ತಿದ್ದೆವು. ಯಾಕೆಂದರೆ, ಮೋಡಗಳು ಚಲಿಸುತ್ತಿರುವುದನ್ನು ನಾವು ನೋಡುತ್ತಿದ್ದೆವು. ತಿಳಿಯುವುದೆಂಬುದು ಪ್ರತಿಯೊಂದು ಮಗುವಿನ ಮನಸ್ಸಿನಲ್ಲಿರುವ ಒಂದು ಸಹಜ ಪ್ರವೃತ್ತಿಯಾಗಿದೆ. ಮೂರು ವರ್ಷ ವಯಸ್ಸಿನಿಂದ ನಾವು ಪ್ರಶ್ನೆಗಳನ್ನು ಕೇಳತೊಡಗುತ್ತೇವೆ. ನಮ್ಮಲ್ಲಿ ಬುದ್ಧಿ ಎಂದು ಕರೆಯಲ್ಪಡುವ ಒಂದು ಸಹಜಶಕ್ತಿಯಿರುವುದನ್ನು ಪ್ರಶ್ನೆಗಳು ಸೂಚಿಸುತ್ತವೆ. ನಾವು ಮಕ್ಕಳನ್ನು ಪ್ರಶ್ನೆಗಳನ್ನು ಕೇಳುವುದರಿಂದ ದೂರವಿಡಬಾರದು. ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುವಂತೆ ನಾವು ಅವರನ್ನು ಪ್ರೋತ್ಸಾಹಿಸಬೇಕು.

ಕೇವಲ ಪ್ರಶ್ನೆಗಳನ್ನು ಕೇಳುವುದರಿಂದಲೇ ಮಕ್ಕಳು ತೃಪ್ತರಾಗುವುದನ್ನು ನೀವು ಅನೇಕ ಸಾರಿ ನೋಡುವಿರಿ; ನೀವು ಅವರಿಗೆ ಯಾವ ಉತ್ತರವನ್ನು ನೀಡುವಿರಿ ಎಂಬುದು ದೊಡ್ಡ ವಿಷಯವಲ್ಲ.  

ಒಬ್ಬ ಸಹೋದರ ಅಥವಾ ಸಹೋದರಿಯನ್ನು ಪಡೆದಾಗ ಮಕ್ಕಳು, "ಅಮ್ಮಾ, ಈ ಮಗು ಎಲ್ಲಿಂದ ಬಂತು?" ಎಂದು ಕೇಳುತ್ತಾರೆ. ಪಶ್ಚಿಮದಲ್ಲಿ ಜನರು, ಮಗುವನ್ನು 'ಸ್ಟಾಕ್ಸ್' ತಂದರೆಂದು ಹೇಳುತ್ತಾರೆ, ಮತ್ತು ಬೇರೆ ಬೇರೆ ಸಂಸ್ಕೃತಿಗಳಲ್ಲಿ ನಾವು ಬೇರೆ ಬೇರೆ ವಿವರಣೆಗಳನ್ನು ನೀಡುತ್ತೇವೆ. ಹೆತ್ತವರು ಏನನ್ನೇ ಹೇಳಿದರೂ ಪರವಾಗಿಲ್ಲ, ಮಗು ತೃಪ್ತವಾಗುವಂತೆ ತೋರುತ್ತದೆ. ನೀವಿದನ್ನು ಅನುಭವಿಸಿದ್ದೀರಾ?

ವಾಸ್ತವವಾಗಿ, ಪ್ರತಿಯೊಂದು ಮಗುವೂ ನಿಮ್ಮ ಬುದ್ಧಿಯನ್ನು, ನಿಮ್ಮ ಸಾಮಾನ್ಯ ಜ್ಞಾನವನ್ನು ಮತ್ತು ನಿಮ್ಮ ಅರಿವನ್ನು ಪರೀಕ್ಷೆ ಮಾಡುತ್ತಿರುತ್ತದೆ.

ಹೀಗೆ ನಾವು ಹುಟ್ಟುವಾಗ ಪಡಕೊಂಡು ಬಂದ, ವಿಚಾರಣೆ ಮಾಡುವ ಈ ಚೈತನ್ಯವನ್ನು ನಾವು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು ಮತ್ತು ನಮ್ಮೊಂದಿಗೆ ಒಯ್ಯಬೇಕು. ಇದುವೇ ಆಧ್ಯಾತ್ಮಿಕತೆ ಮತ್ತು ಇದುವೇ ವಿಜ್ಞಾನ ಕೂಡಾ.
ವಿಜ್ಞಾನದಲ್ಲಿ ನೀವು, 'ಇದು ಏನು? ಇದು ಹೇಗೆ ಆಯಿತು?' ಎಂದು ಕೇಳುತ್ತೀರಿ, ಮತ್ತು ಆಧ್ಯಾತ್ಮದಲ್ಲಿ ನೀವು, 'ನಾನು ಯಾರು? ನಾನು ಎಲ್ಲಿಂದ ಬಂದಿರುವೆನು?' ಎಂದು ಕೇಳುತ್ತೀರಿ.

ವಿಷಯ ಮತ್ತು ವಸ್ತು ಇಲ್ಲದೆ ಯಾವುದೇ ಜ್ಞಾನವೂ ಸಂಪೂರ್ಣವಲ್ಲ.

ನೀವು ಹಳದಿ ಕನ್ನಡಕವನ್ನು ಧರಿಸುತ್ತೀರಿ ಎಂದಿಟ್ಟುಕೊಳ್ಳಿ, ಆಗ ನೀವು ನೋಡುವ ಎಲ್ಲವೂ ಹಳದಿಯಾಗಿ ಕಾಣಿಸುವುದು. ಆದರೆ ಎಲ್ಲವೂ ಹಳದಿಯೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ನೀವು ಯಾವ ರೀತಿಯ ಕನ್ನಡಕವನ್ನು ಧರಿಸಿದ್ದೀರೆಂಬುದನ್ನು ನೀವು ನೋಡಬೇಕು. ಇದು ವಸ್ತುನಿಷ್ಠ ಜ್ಞಾನ.

ವಿಷಯ ಮತ್ತು ವಸ್ತುಗಳ ನಡುವಿನ ಸಂಬಂಧವು ಎಷ್ಟು ಅತೀವವಾದುದೆಂದರೆ, ಎಷ್ಟು ನಿಕಟವಾದುದೆಂದರೆ ಅವುಗಳು ಒಂದು ಇನ್ನೊಂದಿಲ್ಲದೆ ಉಳಿಯಲಾರವು. ಇದು ಜ್ಞಾನದ ಕ್ಷೇತ್ರವಾಗಿದೆ.

ಒಂದು ಆಧ್ಯಾತ್ಮಿಕ ಅನ್ವೇಷಣೆಯಿಲ್ಲದೆ ವಿಜ್ಞಾನವು ಅಪೂರ್ಣವಾಗಿದೆ ಮತ್ತು ಒಂದು ವೈಜ್ಞಾನಿಕ ಮನೋಭಾವವಿಲ್ಲದೆ ಆಧ್ಯಾತ್ಮಿಕ ಅನ್ವೇಷಣೆಯು ಒಂದು ಇಂಚಿನಷ್ಟೂ ಪ್ರಗತಿ ಹೊಂದಲಾರದು. ಒಂದು ವೈಜ್ಞಾನಿಕ ಮನೋಭಾವವು ಆಧ್ಯಾತ್ಮಿಕ ಅನ್ವೇಷಣೆಗಿರುವ ತಳಹದಿಯಾಗಿದೆ. ಆದುದರಿಂದ, ಆಧ್ಯಾತ್ಮ ಮತ್ತು ವಿಜ್ಞಾನ ಇವುಗಳೆರಡನ್ನೂ ತಿಳಿದುಕೊಳ್ಳುವುದು ಜ್ಞಾನವಾಗಿದೆ.

ಮತ್ತೆ ಈ ಪ್ರಶ್ನೆಗೆ ಮರಳಿ ಬರೋಣ, 'ನಾನು ಎಲ್ಲಿಂದ ಬಂದಿದ್ದೇನೆ?' ಯಾವತ್ತಾದರೂ ನೀವು ಇದರ ಬಗ್ಗೆ ಯೋಚಿಸಿದ್ದೀರಾ? ನೀವು ಇಲ್ಲಿಗೆ ಬರುವ ಮೊದಲು ನೀವು ಎಲ್ಲಿದ್ದಿರಿ? ಇದು ಅತೀಂದ್ರಿಯ ಸಾಮ್ರಾಜ್ಯದೊಳಕ್ಕಿರುವ ಒಂದು ಪಯಣವಾಗಿದೆ, ಅದು ಬಹಳ ನಿಜವಾದುದಾಗಬಹುದು; ನೀವೊಬ್ಬ ಸ್ನೇಹಿತನೊಂದಿಗೆ ಮಾತನಾಡುವುದು ಎಷ್ಟು ನಿಜವೋ ಅಷ್ಟು ನಿಜವಾದುದು.
ನಾನು ನಿಮಗೆ ಹೇಳುವುದೇನೆಂದರೆ, ನಾವು ಯಾರು ಮತ್ತು ನಾವು ಎಲ್ಲಿಂದ ಬಂದಿರುವೆವು ಎಂಬುದನ್ನು ಕಂಡುಹುಡುಕದೇ ನಾವು ಈ ಜಗತ್ತಿನಿಂದ ನಿರ್ಗಮಿಸಬಾರದು. ಇದು ಬಹಳ ಪ್ರಧಾನವಾದುದು. ವಿಚಾರಣೆಯ ಈ ಉತ್ಸಾಹವೇ ನಮ್ಮನ್ನು ಇನ್ನೊಂದು ಆಯಾಮದ ಕಡೆಗೆ ಮೇಲೆತ್ತುತ್ತದೆ; ಅದು ಖಿನ್ನತೆ, ಚಿಂತೆ ಮತ್ತು ಇತರ ಎಲ್ಲಾ ರೀತಿಯ ಮಾನಸಿಕ ಕೊರತೆಗಳಿಂದ ಮುಕ್ತವಾಗಿರುತ್ತದೆ.

ನಿಜವಾದ ಆಧ್ಯಾತ್ಮಿಕ ವಿಚಾರಣೆಯ ಅಡ್ಡ ಪರಿಣಾಮಗಳೆಂದರೆ, ಸಂತೋಷ, ವಿಶ್ವಾಸ ಮತ್ತು ಅಂತಃಸ್ಫುರಣೆ.
ಈ ಮೂರು ವಿಷಯಗಳು ಯಾರಿಗೆ ಬೇಡವೆಂದು ನನಗೆ ಹೇಳಿರಿ. ಈ ಮೂರು ವಿಷಯಗಳು ಬೇಡವಾಗಿರುವ ಯಾರೇ ಆದರೂ, ಯಾವುದೇ ರೀತಿಯ ಆಧ್ಯಾತ್ಮಿಕ ವಿಚಾರಣೆ ಅಥವಾ ಆಧ್ಯಾತ್ಮಿಕ ಅಭ್ಯಾಸಗಳಿಂದ ದೂರ ಉಳಿಯಬಹುದು.

ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡುವುದೇ ಅತೀಂದ್ರಿಯತೆ ಹಾಗೂ ಆಧ್ಯಾತ್ಮದ ಸಾರ.

ಅತೀಂದ್ರಿಯತೆಯೆಂದರೆ ಬೆಂಕಿಯ ಮೇಲೆ ನಡೆಯುವುದು ಅಥವಾ ಒಂದು ಕಾಲಿನ ಮೇಲೆ ನಿಲ್ಲುವಂತಹ ಏನಾದರೂ ವಿಚಿತ್ರ ಸಂಗತಿಗಳನ್ನು ಮಾಡುವುದಲ್ಲ. ನೀವು ಅವುಗಳಲ್ಲಿ ಯಾವುದನ್ನೂ ಮಾಡಬೇಕಾಗಿಲ್ಲ. ಕೇವಲ ಮೂಲದ ಒಂದು ವಿಚಾರಣೆ ಮಾಡಬೇಕಷ್ಟೆ.

ನಿನ್ನೆ ಒಬ್ಬನು ನನ್ನಲ್ಲಿ, 'ಯೋಚನೆಗಳು ಎಲ್ಲಿಂದ ಬರುತ್ತವೆ?' ಎಂದು ಕೇಳಿದನು. ನಾನಂದೆ, 'ನಿನಗೆ ಯೋಚನೆಗಳು ಬರುತ್ತವೆಯೇ?'

ಅವನಂದನು, 'ಹೌದು'.

ಆಗ ನಾನಂದೆ, 'ಕಂಡುಹಿಡಿ! ಅದು ನಿನ್ನ ವ್ಯಾಪ್ತಿಯೊಳಗೆಯೇ ಇದೆ'.

'ನನ್ನ ಮೂಲ ಯಾವುದು?' ಈ ಪ್ರಶ್ನೆಯು ನಿಮ್ಮನ್ನು ಕಾಡಬೇಕು. ಇದು ಬುದ್ಧಿಯ ಒಂದು ಲಕ್ಷಣವಾಗಿದೆ. ಬುದ್ಧಿಯ ಮೊದಲ ಲಕ್ಷಣವೆಂದರೆ, ಒಬ್ಬನು ಅಥವಾ ಒಬ್ಬಳು ತನ್ನ ಮೂಲದ ಬಗ್ಗೆ ವಿಚಾರಿಸುವಾಗ ಅದು. ಬುದ್ಧಿಯ ಎರಡನೆಯ ಲಕ್ಷಣವೆಂದರೆ, ಒಂದು ಪ್ರಶ್ನೆಯನ್ನು ಕೇಳುವಲ್ಲಿಯವರೆಗೆ ಏನನ್ನೂ ಹೇಳದಿರುವುದು - ಹೀಗೆಂದು ಹೇಳಲಾಗಿದೆ. ಖಂಡಿತವಾಗಿಯೂ, ನೀವು ಕಷ್ಟದಲ್ಲಿರುವಾಗ, ನೀವು ಸಮಸ್ಯೆಯಲ್ಲಿರುವಾಗ, ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ.

ನಾವು ಜನರಲ್ಲಿ ಬಹಳ ನಿರರ್ಥಕವಾದ ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ. ಒಬ್ಬರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುತ್ತಾರೆ, ನೀವು "ನೀನು ಹೇಗಿದ್ದೀಯಾ?" ಎಂದು ಕೇಳುತ್ತೀರಿ.

ಅವರನ್ನುತ್ತಾರೆ, "ನಾನು ಚೆನ್ನಾಗಿದ್ದೇನೆ!" ಅವರು ಚೆನ್ನಾಗಿದ್ದರೆ, ಮತ್ತೆ ಅವರು ಯಾಕೆ ಆಸ್ಪತ್ರೆಯಲ್ಲಿದ್ದಾರೆ? ಅದೊಂದು ಸ್ಲಾಟ್ ಮೆಶೀನಿನಂತೆ, ನೀವೊಂದು ನಾಣ್ಯವನ್ನು ಹಾಕುತ್ತೀರಿ ಮತ್ತು ಏನಾದರೂ ಹೊರಬರುತ್ತದೆ. ನಮ್ಮ ಉತ್ತರಗಳು ಮತ್ತು ನಮ್ಮ ವಿಚಾರಣೆಗಳು ಕೂಡಾ ಹಾಗೆಯೇ. ಈ ಪ್ರಶ್ನೆಗಳಿಗೆ ಮತ್ತು ಈ ಉತ್ತರಗಳಿಗೆ ಇರುವ ಅರ್ಥ ಬಹಳ ಕಡಿಮೆ. ನಿಜವಾದ ಪ್ರಶ್ನೆಯೆಂದರೆ, 'ನನ್ನ ಮೂಲ ಯಾವುದು?' ಅದು ನಮ್ಮನ್ನು ಅಸ್ತಿತ್ವದ ಇನ್ನೊಂದು ಆಯಾಮಕ್ಕೆ ಸಾಗಿಸುತ್ತದೆ, ಅಲ್ಲಿ ನಾವು ಖಿನ್ನತೆಯನ್ನು ಯಾವುದೇ ತಡವಿಲ್ಲದೆಯೇ ತೊಡೆದುಹಾಕಲು ಸಾಧ್ಯವಿದೆ.

ಜೀವನವು ಉದಾತ್ತವಾದುದು, ನೀವು ನಿಮ್ಮ ಸುತ್ತಲಿರುವ ಕೆಲವು ಜನರೊಂದಿಗೆ ಇಲ್ಲಿ ಒಂದು ನಿರ್ದಿಷ್ಟ ಪಾತ್ರ ವಹಿಸುವುದಕ್ಕೆ ಮಾತ್ರ ಅದು ಸೀಮಿತವಾದುದಲ್ಲ. ನನ್ನ ಪ್ರೀತಿಪಾತ್ರರೇ, ನೀವು ಅದಕ್ಕಿಂತ ಎಷ್ಟೋ ಹೆಚ್ಚಿನವರು!

ಮಂಗಳವಾರ, ಮಾರ್ಚ್ 24, 2015

ಮುಗುಳ್ನಗುತ್ತ ಸಮಸ್ಯೆಗಳನ್ನು ಎದುರಿಸೋಣ

೨೪ ಮಾರ್ಚ್ ೨೦೧೫
ಸಿಯೆಮ್ ರೀಪ್, ಕಂಬೋಡಿಯಾ


ಕೋಲಾಹಲಗಳ ನಡುವೆ ಶಾಂತಿಯನ್ನು ಕಂಡುಹಿಡಿಯುವುದು ಜೀವನದಲ್ಲಿನ ಸವಾಲಾಗಿದೆ. ನೋಡಿ, ಇಲ್ಲಿ ತುಂಬಾ ಗದ್ದಲವಿದೆ. ಹಿನ್ನೆಲೆಯಲ್ಲಿ ಅಷ್ಟೊಂದು ಗದ್ದಲವಿರುವುದರಿಂದ ನಿಮ್ಮಲ್ಲಿ ಎಷ್ಟು ಮಂದಿಗೆ ಕಿರಿಕಿರಿಯಾಗುತ್ತಿದೆ ಹೇಳಿ ನನಗೆ.

(ಸಭಿಕರಲ್ಲಿ ಕೆಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನನಗನಿಸುತ್ತಿದೆ, ನಿಮ್ಮಲ್ಲಿ ಇನ್ನೂ ಹೆಚ್ಚಿನವರಿಗೆ ಹಾಗಾಗುತ್ತಿದೆ. ಸಭಿಕರಲ್ಲಿ ಕೆಲವರು ತಮ್ಮ ಕೈಗಳನ್ನು ಮೇಲೆತ್ತಲು ಹಿಂದುಮುಂದು ನೋಡುತ್ತಿದ್ದಾರೆ. ಈಗ, ಆರ್ಟ್ ಆಫ್ ಲಿವಿಂಗ್ ಇಲ್ಲಿ ಆರಂಭವಾಗುತ್ತದೆ; ಶಬ್ದವಿದ್ದರೂ ಅದನ್ನು ಸ್ವೀಕರಿಸುವುದು ಮತ್ತು ಶಾಂತಿಯಿಂದಿರುವುದು.

ನೀವು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೀರೆಂದು ಇಟ್ಟುಕೊಳ್ಳೋಣ. ಈಗ ನಿಮಗೆ ಎರಡು ಆಯ್ಕೆಗಳಿವೆ:

೧. ನೀವು ಹತಾಶೆಗೊಳ್ಳುವುದು, ಅಥವಾ

೨. ನೀವು ನಿಮ್ಮ ಸಮಯವನ್ನು ಯೋಜನೆಗಳನ್ನು ಹಾಕುತ್ತಾ ಅಥವಾ ಓದುತ್ತಾ ಅಥವಾ ಯಾವುದಾದರೂ ಸಂಗೀತವನ್ನು ಆಲಿಸುತ್ತಾ ಕಳೆಯುವುದು.

ಜೀವನವು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಬುದ್ಧಿವಂತರ ವಿಧಾನವೆಂದರೆ ಪರಿಸ್ಥಿತಿಗಳನ್ನು ಸ್ವೀಕರಿಸುವುದು ಮತ್ತು ಒಂದು ಮುಗುಳ್ನಗೆಯೊಂದಿಗೆ ಅವುಗಳ ಮೂಲಕ ಸಾಗುವುದು.

ಜಗತ್ತಿನ ಈ ಭಾಗವು ಎಷ್ಟೊಂದು ಯಾತನೆಗಳಿಗೆ ಒಳಗಾಯಿತು ಎಂಬುದನ್ನು ನಾನು ಕೇಳಿದೆ. ಘಟನೆಗಳ ಬಗ್ಗೆ ಕೇಳುವಾಗ ಅದು ನಿಜಕ್ಕೂ ನನ್ನ ಹೃದಯವನ್ನು ಒಡೆಯುತ್ತದೆ. ಆದರೆ ಹಿಂದಿನದನ್ನು ಹೋಗಲು ಬಿಟ್ಟು ಒಂದು ಹೊಸತಾದ ದೃಢ ವಿಶ್ವಾಸದೊಂದಿಗೆ ಮುಂದುವರಿಯುವ ಸಮಯ ಇದಾಗಿದೆ ಮತ್ತು ಅದನ್ನೇ ನಾನು ಆರ್ಟ್ ಆಫ್ ಲಿವಿಂಗ್ (ಜೀವನ ಕಲೆ) ಎಂದು ಕರೆಯುತ್ತೇನೆ.

ನಾವು ಆನಂದದ ಅಲೆಗಳನ್ನು ಸೃಷ್ಟಿಸಬೇಕಾಗಿದೆ. ಬೌದ್ಧ ಧರ್ಮದಲ್ಲಿ ಒಂದು ಪ್ರಾರ್ಥನೆಯಿದೆ. ಅದು ಹೀಗೆಂದು ಹೇಳುತ್ತದೆ, ’ರಕ್ಖಂತು ಸಬ ದೇವತಾ’, ಇದರರ್ಥ: ಎಲ್ಲಾ ದೇವದೇವತೆಯರು ನಮ್ಮನ್ನು ರಕ್ಷಿಸಲಿ!

ಭಾರತದಲ್ಲಿ ನಾವು, ’ಸರ್ವೇ ಭವಂತು ಸುಖಿನಾಃ’ ಎಂದು ಹೇಳುತ್ತೇವೆ. ಇದರರ್ಥ: ಎಲ್ಲರೂ ಸಂತೋಷವಾಗಿರಲಿ! ಹೀಗಾಗಿ ಆನಂದದ ಒಂದು ಅಲೆಯನ್ನು ಸೃಷ್ಟಿಸುವುದು ನಾವೆಲ್ಲರೂ ಮಾಡಬೇಕಾಗಿರುವ ಒಂದು ಬಹಳ ಮುಖ್ಯವಾದ ವಿಷಯವಾಗಿದೆ. ನಿಮಗೆ ಹಾಗನಿಸುವುದಿಲ್ಲವೇ?

ನಿಮ್ಮ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಂತೋಷವಾಗಿಲ್ಲದಿದ್ದರೂ ಕೂಡಾ, ನೀವು ಸಂಪೂರ್ಣವಾಗಿ ಸಂತೋಷವಾಗಿರಲು ಸಾಧ್ಯವೇ? ಸಾಧ್ಯವಿಲ್ಲ! ಹೀಗಾಗಿ ನಿಮ್ಮ ಸಂತೋಷವು ನಿಮ್ಮ ಕುಟುಂಬದ ಸಂತೋಷವನ್ನು ಅವಲಂಬಿಸಿದೆ. ಆದರೆ ಅಕ್ಕಪಕ್ಕದವರು ಸಂತೋಷವಾಗಿಲ್ಲದಿರುವ ಒಂದು ದೇಶದಲ್ಲಿ ಒಂದು ಸಂತೋಷವಾದ ಕುಟುಂಬವು ವಾಸಿಸಲು ಸಾಧ್ಯವಿದೆಯೇ? ಅದು ಕೂಡಾ ಸಾಧ್ಯವಿಲ್ಲ, ಯಾಕೆಂದರೆ ಅಕ್ಕಪಕ್ಕದವರ ಅಸಂತೋಷವು ಕೆಲವೊಮ್ಮೆ ನಿಮಗೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದುದರಿಂದ ಎಲ್ಲರೂ ಸಂತೋಷವಾಗಿರಲು, ನಾವು ಸಮಾಜದಲ್ಲೊಂದು ಸಕ್ರಿಯವಾದ ಪಾತ್ರವನ್ನು ವಹಿಸಬೇಕಾಗಿದೆ ಮತ್ತು ಆ ಸಕ್ರಿಯವಾದ ಪಾತ್ರ ಸಮಾಜ ಸೇವೆಯಾಗಿದೆ.

ನಾವದನ್ನು ಹೇಗೆ ಮಾಡಬಹುದು? ನಾವು ನಮ್ಮ ಆಂತರಿಕ ಶಾಂತಿಯನ್ನು ಕಂಡುಕೊಂಡಾಗ ನಾವದನ್ನು ಮಾಡಬಹುದು. ಇವತ್ತು, ತಂತ್ರಜ್ಞಾನದ ಈ ಯುಗದಲ್ಲಿ, ನಮ್ಮನ್ನು ನಾವು ಗುಣಪಡಿಸಿಕೊಳ್ಳಲು ನಾವು ದೀರ್ಘಕಾಲ ಕಾಯಬೇಕಾಗಿಲ್ಲ. ನಾವು ನಮ್ಮನ್ನು, ನಮ್ಮ ಮನಸ್ಸುಗಳನ್ನು, ನಮ್ಮ ಚಿತ್ತವನ್ನು ಉಸಿರಾಟದ ತಂತ್ರಗಳೊಂದಿಗೆ ಬಹಳ ತ್ವರಿತವಾಗಿ ಗುಣಪಡಿಸಿಕೊಳ್ಳಬಹುದು. ಧ್ಯಾನದೊಂದಿಗೆ ನಮ್ಮ ಮನಸ್ಸು ಸಕಾರಾತ್ಮಕತೆಯಿಂದ ಬೆಳಗಬಹುದು. ಹೀಗಾಗಿ ಇದು ಬಹಳ ಅಮೂಲ್ಯವಾದುದು.

ಜೀವನವು ಒಂದು ಮರದಂತೆ: ಹಳೆಯದು ಮತ್ತು ಹೊಸತರ ಒಂದು ಸಂಯೋಗ. ಬೇರುಗಳು ಹಳೆಯದು ಮತ್ತು ಶಾಖೆಗಳು ಹೊಸತು. ಜೀವನವು ಹಾಗಿರಬೇಕು. ನಮಗೆ ಪುರಾತನವಾದುದು ಹಾಗೂ ಆಧುನಿಕವಾದುದು ಎರಡೂ ಬೇಕು. ಕಾಂಬೋಡಿಯಾವು ಎರಡರಿಂದಲೂ ಹರಸಲ್ಪಟ್ಟಿದೆ: ಒಂದು ಪುರಾತನ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನ.

ಈ ದೇಶದ ಜನಸಂಖ್ಯೆಯಲ್ಲಿ ೬೦ ಶೇಕಡಾ ಯುವಜನತೆಯೆಂಬುದು ನನಗೆ ತಿಳಿದಿದೆ. ಹೀಗೆ ನಾವು ತಂತ್ರಜ್ಞಾನದಲ್ಲಿ, ಓದಿನಲ್ಲಿ, ಕುಶಲತೆಗಳಲ್ಲಿ   ಮುಂದುವರಿಯುತ್ತಿರುವ ಅದೇ ವೇಳೆಗೆ, ಪುರಾತನ ಸಂಸ್ಕೃತಿಯನ್ನು ಕೂಡಾ ಸಂರಕ್ಷಿಸುವುದು ಆವಶ್ಯಕವಾಗಿದೆ. ಇದನ್ನು ಮಾಡಲು ಕಾಂಬೋಡಿಯಾಕ್ಕೆ ಸಾಧ್ಯವಿದೆಯೆಂಬುದು ನನಗೆ ಖಾತ್ರಿಯಿದೆ, ಯಾಕೆಂದರೆ ಕಾಂಬೋಡಿಯಾದ ಪುರಾತನ ಸಂಸ್ಕೃತಿಯಲ್ಲಿ ಪ್ರವಾಸಿಗರು ಬಹಳಷ್ಟು ಆಸಕ್ತರಾಗಿದ್ದಾರೆ.  

ಹೃದಯವು ಯಾವತ್ತೂ ಹಳೆಯದಕ್ಕಾಗಿ ಹಾತೊರೆಯುತ್ತದೆ. ನಾವು ಯಾವುದರ ಮೇಲೆ ಹೆಮ್ಮೆ ಪಡುತ್ತೇವೆ? ನಾವು ಹಳೆಯ ಸ್ನೇಹದ ಮೇಲೆ ಹೆಮ್ಮೆ ಪಡುತ್ತೇವೆ. ’ಇವನು ನನ್ನ ಹಳೆಯ ಸ್ನೇಹಿತ’ ಎಂದು ನಾವು ಹೇಳುತ್ತೇವೆ, ಯಾಕೆಂದರೆ ಹೃದಯವು ಹಳೆಯದನ್ನು ಬಯಸುತ್ತದೆ. ಆದರೆ ಮನಸ್ಸು, ಯಾವುದು ಹೊಸತೋ ಅದನ್ನು ಬಯಸುತ್ತದೆ; ಇತ್ತೀಚಿನ ತಂತ್ರಜ್ಞಾನ, ಇತ್ತೀಚಿನ ಪ್ಯಾಷನ್ - ಇದರ ಕಡೆಗೆ ಮನಸ್ಸು ಓಡುತ್ತದೆ. ಮತ್ತು ನಮಗದು ಬೇಕು, ಆದರೆ ಅದೇ ವೇಳೆಗೆ ನಾವು ಹೃದಯವನ್ನು ಮರೆಯಬಾರದು. ಇವತ್ತು ನಾನು ಅರಮನೆಯನ್ನು ಸಂದರ್ಶಿಸಲು ಹೋದೆ. ಅಲ್ಲಿ ಅವರು ನನಗೆ ಎಲ್ಲಾ ಪುರಾತನ ವಸ್ತುಗಳನ್ನು ತೋರಿಸುತ್ತಿದರು. ಹಳೆಯದಾದುದನ್ನು, ಪುರಾತನವಾದುದನ್ನು ತನ್ನದಾಗಿಸುವಲ್ಲಿ ಒಂದು ಹೆಮ್ಮೆಯಿದೆ! ಹೀಗಾಗಿ ಯುವಕರು ಎರಡನ್ನೂ ಹೊಂದಿರುವುದು ಅಗತ್ಯವಾಗಿದೆ; ಹಳೆಯ ಕೌಟುಂಬಿಕ ಮೌಲ್ಯಗಳು ಮತ್ತು ನೈತಿಕತೆ ಹಾಗೂ ಅದೇ ವೇಳೆ ತಂತ್ರಜ್ಞಾನ, ವಿಜ್ಞಾನ, ನವೀನೀಕರಣ, ವ್ಯಾಪಾರ ಮೊದಲಾದವುಗಳಲ್ಲಿ ಪ್ರಗತಿ. ಹೀಗಾಗಿ, ನೈತಿಕತೆಯನ್ನು ಕಳೆದುಕೊಳ್ಳದೆಯೇ ಉದ್ಯಮಿಗಳಾಗಲು ಯುವಜನತೆಗೆ ಇಲ್ಲಿನ ವ್ಯಾಪಾರೀ ಸಮುದಾಯವು ಪ್ರೇರೇಪಣೆಯನ್ನು ನೀಡಬೇಕೆಂದು ನಾನು ಬಯಸುತ್ತೇನೆ.

ಯುವಕರು ವ್ಯಾಪಾರ ಮಾಡಿ ಬೇಗನೇ ಹಣ ಸಂಪಾದಿಸಲು ಬಯಸುತ್ತಾರೆ ಮತ್ತು ನೈತಿಕತೆಯ ಬಗ್ಗೆ ಕಾಳಜಿ ವಹಿಸಲು ಬಯಸುವುದಿಲ್ಲ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆ ರೀತಿಯಲ್ಲಿ ಮೇಲಕ್ಕೇರಿದ ಮತ್ತು ಬಹಳ ಬೇಗನೇ ಕೆಳಕ್ಕೆ ಬಿದ್ದ ಜನರ ಬಗ್ಗೆ ನಾವು ಅವರಿಗೆ ಹೇಳಬೇಕು. ನೀವು ವ್ಯಾಪಾರದಲ್ಲಿ ನೈತಿಕತೆಯನ್ನು ಅನುಸರಿಸದಿದ್ದರೆ, ಪತನವು ಬಹಳ ತೀಕ್ಷ್ಣವಾಗಿಯೂ, ಬಹಳ ಕಠಿಣವಾಗಿಯೂ ಆಗುವುದು. ಹೀಗಾಗಿ, ವ್ಯಾಪಾರೀ ಸಮುದಾಯ ಮತ್ತು ಯುವ ಉದ್ಯಮಿಗಳಿಗೆ ನಾನು ಇದರ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ.

ನೀವೆಲ್ಲರೂ ಕಾರ್ಪೊರೇಟ್ ಸೋಶಿಯಲ್ ರೆಸ್ಪಾಂಸಿಬಿಲಿಟಿ (ಸಿ.ಎಸ್.ಆರ್. ಅಂದರೆ ಸಾಮೂಹಿಕ(ಸಂಸ್ಥೆಯ) ಸಾಮಾಜಿಕ ಜವಾಬ್ದಾರಿ)ಯಲ್ಲಿ ತೊಡಗಿರುತ್ತೀರಿ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಇಲ್ಲವೆಂದಾದಲ್ಲಿ, ನೀವೆಲ್ಲರೂ ಯಾವುದಾದರೂ ಸಿ.ಎಸ್.ಆರ್. ಚಟುವಟಿಕೆಯಲ್ಲಿ ತೊಡಗಬೇಕು. ಶಾಲೆಗಳನ್ನು ಪ್ರಾರಂಭಿಸಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡಿ. ಇದು ನಾವೆಲ್ಲರೂ ಮಾಡಬೇಕಾದ ವಿಷಯವಾಗಿದೆ; ಜನತೆಯ ಶಿಕ್ಷಣಕ್ಕಾಗಿ ಕೊಡುಗೆಯನ್ನು ನೀಡಿ.

ಶಿಕ್ಷಣವೆಂದರೆ ಕೇವಲ ಮಾಹಿತಿಯಲ್ಲ, ಅದು ನಡತೆಯನ್ನು ನಿರ್ಮಿಸುವುದಾಗಿದೆ. ಅದೊಂದು ವ್ಯಕ್ತಿತ್ವವನ್ನು ನಿರ್ಮಿಸುವುದಾಗಿದೆ. ಪೂಜ್ಯ ಸನ್ಯಾಸಿಗಳು ಇಲ್ಲಿ ಉಪಸ್ಥಿತರಿದ್ದಾರೆ. ನಾವು ಮೌಲ್ಯಗಳನ್ನು, ನೈತಿಕತೆಯನ್ನು ಮತ್ತು ಧರ್ಮವನ್ನು ಸೃಷ್ಟಿಸಬೇಕಾಗಿದೆ ಎಂಬುದನ್ನು ಅವರೆಲ್ಲರೂ ಒಪ್ಪುವರೆಂಬ ಬಗ್ಗೆ ನನಗೆ ಖಾತ್ರಿಯಿದೆ.

ಪ್ರತಿದಿನವೂ, ಮನಸ್ಸನ್ನು ಶಾಂತಪಡಿಸುವುದಕ್ಕಾಗಿ ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು ಹಾಗೆಯೇ ದಿನಕ್ಕೆ ಎರಡು ಸಾರಿ ಧ್ಯಾನ ಮಾಡುವುದು - ಇವುಗಳು ಆನಂದ, ಸಂತೋಷ, ಕರುಣೆ, ಪ್ರೀತಿ ಮತ್ತು ದೈವಿಕತೆಗಳಿಂದ ತುಂಬಿದ ಒಂದು ಜೀವನವನ್ನು ಜೀವಿಸಲು ನಿಮಗೆ ಸಾಧ್ಯವಾಗುವಂತೆ ಮಾಡುತ್ತವೆ.

ಮೂರು ವಿಷಯಗಳು ಮುಖ್ಯವಾಗಿವೆ:

೧. ಮನಸ್ಸಿನಲ್ಲಿ ಸ್ಪಷ್ಟತೆ

೨. ಹೃದಯದಲ್ಲಿ ಪರಿಶುದ್ಧತೆ ಮತ್ತು

೩. ಕಾರ್ಯದಲ್ಲಿ ಪ್ರಾಮಾಣಿಕತೆ

ಇದು ಧರ್ಮದ ಸಾರವಾಗಿದೆ ಮತ್ತು ಇದನ್ನೇ ಭಗವಾನ್ ಬುದ್ಧನು ಕಲಿಸಿದುದು. ಬುದ್ಧನು ಭಾರತದಲ್ಲಿ ನಡೆದಾಡಿದಾಗ, ಆ ದಿನಗಳಲ್ಲಿ ಜನರ ಬೌದ್ಧಿಕ ಮಟ್ಟ ಬಹಳ ಉನ್ನತವಾಗಿತ್ತು. ಅವರಿಗೆ ದೇವರ ಬಗ್ಗೆ ತಿಳಿದಿತ್ತು, ಅವರಿಗೆ ಎಲ್ಲದರ ಬಗ್ಗೆಯೂ ತಿಳಿದಿತ್ತು, ಆದರೆ ಕೇವಲ ಬೌದ್ಧಿಕವಾಗಿ ಮಾತ್ರ. ಭಗವಾನ್ ಬುದ್ಧನು ಏನು ಹೇಳಿದನೆಂದರೆ, "ನನ್ನಲ್ಲಿ ನಿಮಗಾಗಿ ಒಂದು ಸರಳ ತಂತ್ರವಿದೆ. ಕುಳಿತುಕೊಂಡು ನಿಮ್ಮ ಉಸಿರಾಟವನ್ನು ಗಮನಿಸಿ, ನಿಮ್ಮ ಶರೀರವನ್ನು ಗಮನಿಸಿ, ಶರೀರದಲ್ಲಿನ ಸಂವೇದನೆಗಳನ್ನು ಗಮನಿಸಿ ಮತ್ತು ನಿಮ್ಮ ನಿಜಸ್ವರೂಪವನ್ನು ತಲುಪಿ". ಇದನ್ನೇ ಕಲಿಸಲಾದುದು (ಮೂಲಭೂತವಾಗಿ ಧ್ಯಾನ), ಮತ್ತು ಧ್ಯಾನವು ವೇದಾಂತದ ಸಾರ ಕೂಡಾ ಆಗಿದೆ.

ಸಂಪೂರ್ಣ ವೈದಿಕ ಸಾಹಿತ್ಯವು ಒಂದು ವಿಷಯದ ಬಗ್ಗೆ ಮಾತನಾಡುತ್ತದೆ, ನಿಮ್ಮೊಳಗಿರುವ ಆ ದೈವತ್ವವನ್ನು ಕಂಡುಹಿಡಿಯಿರಿ, ಅದು ವೇದಾಂತವಾಗಿದೆ. ವಾಸ್ತವವಾಗಿ ಅದ್ವೈತ, ವೇದಾಂತ ಮತ್ತು ಬೌದ್ಧಧರ್ಮಗಳು ಒಂದೇ ಆಗಿವೆ, ಆದರೆ ಅವುಗಳನ್ನು ಬೇರೆ ಬೇರೆಯಾಗಿ ಕಾಣಲಾಗುತ್ತದೆ.

ಈ ದೇಶದ ಮಕ್ಕಳು ಇದಕ್ಕೆ ಅರ್ಹರಾಗಿದ್ದಾರೆ. ಅವರು ಯಾವುದಕ್ಕೆ ಅರ್ಹರಾಗಿದ್ದಾರೆ? ಒಂದು ಹಿಂಸಾ-ಮುಕ್ತ ಸಮಾಜ, ಒಂದು ರೋಗ-ಮುಕ್ತ ಶರೀರ, ಒಂದು ಗೊಂದಲ-ಮುಕ್ತ ಮನಸ್ಸು, ಒಂದು ತಡೆ-ಮುಕ್ತ ಬುದ್ಧಿ, ಒಂದು ಆಘಾತ-ಮುಕ್ತ ಸ್ಮರಣೆ ಮತ್ತು ಒಂದು ದುಃಖ-ಮುಕ್ತ ಆತ್ಮ. ಅದನ್ನೊಂದು ವಾಸ್ತವಿಕತೆಯನ್ನಾಗಿ ಮಾಡುವುದರ ಕಡೆಗೆ ನಾವೆಲ್ಲರೂ ಕೆಲಸ ಮಾಡೋಣ, ಮತ್ತು ಇದನ್ನು ಮಾಡುವುದಕ್ಕಾಗಿಯೇ ಆರ್ಟ್ ಆಫ್ ಲಿವಿಂಗ್ ಬದ್ಧವಾಗಿರುವುದು. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಶುಭ ಹಾರೈಕೆಗಳು.

ಈ ಕೆಲವು ಮಾತುಗಳೊಂದಿಗೆ ನಾನು ನಿಮಗೆಲ್ಲರಿಗೂ ಒಂದು ಸಮೃದ್ಧವಾದ, ಸಂತೋಷವಾದ ಹಾಗೂ ಜ್ಞಾನ-ಸಂಪನ್ನವಾದ ಜೀವನವನ್ನು ಹಾರೈಸುತ್ತೇನೆ. ಮಾನವತೆಯ ಸೇವೆ ಮಾಡುವುದಕ್ಕಾಗಿ ನಿಮಗೆಲ್ಲರಿರೂ ಒಳ್ಳೆಯ ಆರೋಗ್ಯ ಮತ್ತು ಒಂದು ಒಳ್ಳೆಯ ಹೃದಯವು ಅನುಗ್ರಹಿಸಲ್ಪಡಲಿ!

Link to go through this blog as a slide show:
http://www.speakingtree.in/spiritual-slideshow/seekers/self-improvement/smile-through-every-challenge/266684

ಬುಧವಾರ, ಮಾರ್ಚ್ 18, 2015

ಬುದ್ಧಿಯ ಮೌಲ್ಯಮಾಪನ

೧೮ ಮಾರ್ಚ್ ೨೦೧೫
ಟೋಕಿಯೋ, ಜಪಾನ್
ಮಾರ್ಚ್ ೧೮, ೨೦೧೫ರಂದು ಶ್ರೀ ಶ್ರೀಯವರು ಟೋಕಿಯೋದ ಭಾರತೀಯ ದೂತಾವಾಸದಲ್ಲಿ ಸಮಗ್ರ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ಅವರ ಪ್ರವಚನದ ಭಾಗ ಕೆಳಕಂಡಂತಿದೆ.

ಇಲ್ಲಿ ಉದಯ ಸೂರ್ಯನ ನಾಡಿನಲ್ಲಿ ಇರುವುದಕ್ಕೆ ಸಂತೋಷವಾಗುತ್ತಿದೆ. ನಿಜಕ್ಕೂ ಜಗತ್ತು ಇಲ್ಲಿಂದ ಆರಂಭವಾಗುತ್ತದೆ.
ನನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಇರುವ ಒಂದು ನಿಯಮವೆಂದರೆ, ಎಲ್ಲರೂ ಮನೆಯಲ್ಲಿರುವಂತೆ ನಿರಾಳವಾಗಿರಬೇಕೆಂದು ನಾನು ಬಯಸುತ್ತೇನೆ. ಯಾವುದೇ ಔಪಚಾರಿಕತೆ ಇರಬಾರದು, ಯಾಕೆಂದರೆ ನಾವು ಹೃದಯದಿಂದ ಹೃದಯಕ್ಕೆ ಮಾತನಾಡುತ್ತೇವೆ. ಹೀಗಾಗಿ ಇದೊಂದು ಸ್ವಗತವಾಗಿರದು, ನಾವೊಂದು ಸಂವಾದವನ್ನು ಮಾಡೋಣ. ನಿಮ್ಮಲ್ಲಿ ಯಾವುದಾದರೂ ಪ್ರಶ್ನೆಗಳಿದ್ದರೆ ನೀವು ನನಗೆ ಕೇಳಬಹುದು, ನನ್ನಲ್ಲಿ ಯಾವುದಾದರೂ ಪ್ರಶ್ನೆಗಳಿದ್ದರೆ ನಾನು ನಿಮ್ಮನ್ನು ಕೇಳುವೆನು.

ನಿಮಗೆ ಗೊತ್ತೇ, ನಿಜವಾದ ಜ್ಞಾನವು, ಸೌಹಾರ್ದಯುತ ಮತ್ತು ಅನೌಪಚಾರಿಕ ವಾತಾವರಣವಿರುವಾಗ ಮಾತ್ರ ಆಗಲು ಸಾಧ್ಯ.

ನೀವೆಲ್ಲರೂ ನಿರಾಳವಾಗಿರುವಿರಾ?

(ಸಭಿಕರಲ್ಲಿ ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ಇವತ್ತಿನ ವಿಷಯವೆಂದರೆ: ಬುದ್ಧಿಶಕ್ತಿ, ವಿಜ್ಞಾನ ಮತ್ತು ಸೃಜನಶೀಲತೆ.

ಬುದ್ಧಿಶಕ್ತಿ

ಬುದ್ಧಿಶಕ್ತಿಯ ಗುಣಗಳಲ್ಲಿ ಒಂದೆಂದರೆ ಎಚ್ಚರಿಕೆಯಿಂದಿರುವುದು. ’ನಾನು ಬುದ್ಧಿವಂತ ಆದರೆ ನಾನು ಸ್ವಲ್ಪ ತೂಕಡಿಸುತ್ತಿದ್ದೇನೆ’ ಎಂದು ನೀವು ಹೇಳಲು ಸಾಧ್ಯವಿಲ್ಲ. ಹೀಗೆ ಬುದ್ಧಿವಂತಿಕೆಯೆಂದರೆ ಎಚ್ಚರಿಕೆ.

ನೀವೆಲ್ಲರೂ ಈಗ ಎಚ್ಚರಿಕೆಯಲ್ಲಿರುವಿರಾ?

ನಾವು ಎಚ್ಚರಿಕೆಯಲ್ಲಿರುವಾಗ ಏನಾಗುತ್ತದೆ? ನಮ್ಮ ಗ್ರಹಿಕೆಯ ಶಕ್ತಿ ಮತ್ತು ನಮ್ಮ ಅವಲೋಕನ ಶಕ್ತಿಗಳು ಸುಧಾರಿಸುತ್ತವೆ ಹಾಗೂ ನಮ್ಮ ಅಭಿವ್ಯಕ್ತಿಯು ಪರಿಪೂರ್ಣವಾಗುತ್ತದೆ.

ಹಲವಾರು ಸಲ ಜನರು, "ಓ, ಯಾರೂ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಹೇಳುತ್ತಾರೆ. ಇದಕ್ಕೆ ಬದಲಾಗಿ ಅವರು, "ನನಗೆ ನನ್ನನ್ನು ವ್ಯಕ್ತಪಡಿಸಲು ಸಾಧ್ಯವಾಗಿಲ್ಲ" ಎಂದು ಹೇಳಬೇಕು. ನಿಮ್ಮಲ್ಲಿ ವ್ಯಕ್ತಪಡಿಸುವ ಕೌಶಲ್ಯವಿದ್ದರೆ (ಅದು ಬುದ್ಧಿವಂತಿಕೆಯಿಂದ ಬರುತ್ತದೆ) ಆಗ ಅಲ್ಲಿ ಯಾವುದೇ ಅಪಾರ್ಥವಾಗಲು ಸಾಧ್ಯವಿಲ್ಲ. ಹೀಗೆ ಗ್ರಹಿಕೆ, ಅವಲೋಕನೆ ಮತ್ತು ಅಭಿವ್ಯಕ್ತಿ ಇವುಗಳೆಲ್ಲವೂ ಎಚ್ಚರಿಕೆಯಲ್ಲಿರುವುದರಿಂದ ಬರುತ್ತವೆ.

ಈಗ, ನೀವೊಂದು ದೀರ್ಘಾವಧಿಯವರೆಗೆ ನಿಮ್ಮನ್ನು ಬಹಳ ಎಚ್ಚರವಾಗಿರಿಸಿದರೆ ಏನಾಗುತ್ತದೆ? ನಿಮಗೆ ಆಯಾಸವಾಗುತ್ತದೆ ಮತ್ತು ಬಹಳ ದಣಿವೆನಿಸುತ್ತದೆ. ಹೀಗಾಗಿ, ಸದಾಕಾಲವೂ ಎಚ್ಚರವಾಗಿರುವುದು ನಿಮ್ಮ ಮೆದುಳಿನ ಸ್ವಭಾವವಲ್ಲ. ಹೀಗಾಗಿ, ನಮಗೆ ಬೇಕಾಗಿರುವುದೇನೆಂದರೆ ವಿಶ್ರಾಂತಿ. ಹೆಚ್ಚಾಗಿ ನಮಗೆ ತಿಳಿದಿರುವ ವಿಶ್ರಾಂತಿಯ ರೀತಿಯೆಂದರೆ, ಒಂದು ತಲೆದಿಂಬು ತೆಗೆದುಕೊಂಡು ನಿದ್ರಿಸಲು ಹೋಗುವುದು, ಅಷ್ಟೇ. ನಿದ್ರೆಯು ಅಗತ್ಯವಾಗಿದೆ, ಆದರೆ ಇನ್ನೊಂದು ರೀತಿಯ ವಿಶ್ರಾಂತಿಯಿದೆ. ಅದರಲ್ಲಿ ನೀವು ಎಚ್ಚರವಾಗಿರುತ್ತೀರಿ ಮತ್ತು ಅದೇ ವೇಳೆಗೆ ವಿರಮಿಸುತ್ತಿರುತ್ತೀರಿ. ಅದು ಸುಶಿಯಂತೆ (ಜಪಾನಿನ ಒಂದು ತಿನಿಸು); ಅಂದರೆ, ಸಮುದ್ರಕಳೆಯಲ್ಲಿ ಸುತ್ತಲ್ಪಟ್ಟ ಅನ್ನದಂತೆ. ಸಮುದ್ರಕಳೆಯು ತಣ್ಣಗಾಗಿರುತ್ತದೆ, ಆದರೆ ಅನ್ನವು ಬಿಸಿಯಾಗಿರುತ್ತದೆ (ಅದನ್ನು ಸುತ್ತಿದಾಗ). ಅದೇ ರೀತಿಯಲ್ಲಿ, ನಿಮ್ಮಲ್ಲಿ ಎಚ್ಚರಿಕೆ ಮತ್ತು ವಿಶ್ರಾಂತಿ ಇರುತ್ತವೆ, ಹಾಗೂ ಇದುವೇ ಧ್ಯಾನವಾಗಿದೆ.

ನೀವೆಲ್ಲರೂ ಇಲ್ಲಿದ್ದೀರಾ?

ಹೀಗೆ ನಾವು ಬುದ್ಧಿವಂತಿಕೆಗೆ ಮೂರು ಅಂಶಗಳನ್ನು ಲೆಕ್ಕ ಹಾಕಿದ್ದೇವೆ:

೧. ಎಚ್ಚರಿಕೆ
೨. ಸರಿಯಾದ ಗ್ರಹಿಕೆ ಮತ್ತು ಅವಲೋಕನ
೩. ಸರಿಯಾದ ಅಭಿವ್ಯಕ್ತಿ

ಬುದ್ಧಿವಂತಿಕೆಗೆ ಇನ್ನೊಂದು ಲಕ್ಷಣವಿದೆ, ಅದೇನೆಂದು ಈಗ ನೀವು ನನಗೆ ಹೇಳಿ ನೋಡೋಣ? ಇದೊಂದು ಸಂವಾದ, ಆದ್ದರಿಂದ ಈಗ ನೀವು ನನಗೆ ಹೇಳಿ, ಬುದ್ಧಿಯ ಇನ್ನೊಂದು ಲಕ್ಷಣ ಯಾವುದೆಂದು ನಿಮಗನಿಸುತ್ತದೆ?

ಸಭಿಕರು: ಪ್ರಜ್ಞಾವಂತರಾಗಿರುವುದು.

ಶ್ರೀ ಶ್ರೀ ರವಿ ಶಂಕರ್: ಅದು ಎಚ್ಚರಿಕೆ.

ಸಭಿಕರು: ಇತರರ ಕಡೆಗೆ ಕರುಣೆ.

ಶ್ರೀ ಶ್ರೀ ರವಿ ಶಂಕರ್: ಸರಿ, ಬೇರೇನು?

ಸಭಿಕರು: ಸಂತೋಷ, ಗಮನ, ತಾಳ್ಮೆ, ಜ್ಞಾನ, ನಗು ಮತ್ತು ದಕ್ಷತೆ.

ಶ್ರೀ ಶ್ರೀ ರವಿ ಶಂಕರ್: ಹೌದು, ದಕ್ಷತೆ. ಬೇರೇನು?

ಸಭಿಕರು: ಸೃಜನಶೀಲತೆ.

ಶ್ರೀ ಶ್ರೀ ರವಿ ಶಂಕರ್: ಸೃಜನಶೀಲತೆ! ಹೌದು, ಬುದ್ಧಿವಂತಿಕೆಯ ಇನ್ನೊಂದು ಅಂಶವೆಂದರೆ ಸೃಜನಶೀಲತೆ. ಸರಿ ಇನ್ನೂ ಒಂದು. ನಿಮ್ಮ ಬುದ್ಧಿವಂತಿಕೆಯನ್ನುಪಯೋಗಿಸಿ.

ಸಭಿಕರು: ಅದೇ ತಪ್ಪುಗಳನ್ನು ಪುನರಾವರ್ತಿಸದಿರುವುದು ಮತ್ತು ವರ್ತಮಾನದ ಕ್ಷಣದಲ್ಲಿರುವುದು. 

ಶ್ರೀ ಶ್ರೀ ರವಿ ಶಂಕರ್: ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವೆಂದರೆ ಸಂಘರ್ಷವನ್ನು ಪರಿಹರಿಸುವ ಸಾಮರ್ಥ್ಯ! ಮೂರ್ಖರು ತಮ್ಮಲ್ಲಿ ಹಾಗೂ ಇತರರಲ್ಲಿ ಸಂಘರ್ಷವನ್ನು ಸೃಷ್ಟಿಸುತ್ತಾರೆ. ಒಬ್ಬ ಬುದ್ಧಿವಂತ ವ್ಯಕ್ತಿಯು ತನ್ನಲ್ಲಿ ಹಾಗೂ ತನ್ನ ಸುತ್ತುಮುತ್ತಲಿನಲ್ಲಿರುವ ಸಂಘರ್ಷಗಳನ್ನು ಪರಿಹರಿಸುವುದು ಹೇಗೆಂಬುದನ್ನು ತಿಳಿದಿರುತ್ತಾನೆ. ನೀವೇನು ಹೇಳುತ್ತೀರಿ, ಇದು ಸರಿಯೆಂದು ಅನಿಸುತ್ತಿದೆಯಾ?

ನಾನು ನಿಮಗೆ ಎರಡು ಕಥೆಗಳನ್ನು ಹೇಳಲು ಬಯಸುತ್ತೇನೆ:

೧. ಹಣವೇ ಅಥವಾ ಜ್ಞಾನವೇ? 

ಸ್ವಾಮಿ ವಿವೇಕಾನಂದರು ಇಂಗ್ಲೇಂಡಿಗೆ ಹೋದಾಗ, ಆ ಕಾಲದಲ್ಲಿ ಇಂಗ್ಲೇಂಡಿನಲ್ಲಿ ಬಹಳಷ್ಟು ಜನಾಂಗೀಯ ಭೇದಭಾವವಿತ್ತು. ಇದು ಎರಡನೇ ಜಾಗತಿಕ ಯುದ್ಧದ ಮೊದಲು.

ಅವರು ಕಲಿಯುತ್ತಿದ್ದ ಕಾಲೇಜಿನ ಉಪನ್ಯಾಸಕರು ಸ್ವಾಮಿ ವಿವೇಕಾನಂದರನ್ನು ಕೆರಳಿಸುವುದಕ್ಕಾಗಿ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದರು. ಅವರು ಹೀಗೆಂದು ಕೇಳಿದರು, "ನೀವು ರಸ್ತೆಯಲ್ಲಿ ನಡೆಯುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಒಂದು ಬದಿಯಲ್ಲಿ ನಿಮಗೆ ಸ್ವಲ್ಪ ಹಣ ಸಿಗುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಜ್ಞಾನದ ಬಗೆಗಿನ ಪುಸ್ತಕ ಸಿಗುತ್ತದೆ. ಅವುಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನಿಮಗೆ ಕೊಡಲಾಗುತ್ತದೆ, ನೀವು ಯಾವುದನ್ನು ಹೆಕ್ಕಿಕೊಳ್ಳುವಿರಿ?"

ಸ್ವಾಮಿ ವಿವೇಕಾನಂದರು, "ನಾನು ಹಣವನ್ನು ಆಯ್ದುಕೊಳ್ಳುವೆನು" ಎಂದು ಹೇಳಿದರು.

ಆಗ ಉಪನ್ಯಾಸಕರು ಅವರನ್ನು ಗೇಲಿ ಮಾಡುತ್ತಾ, "ನೋಡಿ, ಈ ವ್ಯಕ್ತಿ ಜ್ಞಾನಕ್ಕೆ ಯಾವುದೇ ಬೆಲೆಯನ್ನು ನೀಡುವುದಿಲ್ಲ; ಅವರು ಕೇವಲ ಹಣವನ್ನು ಆಯ್ದುಕೊಳ್ಳುವರು. ನಾನು ಪುಸ್ತಕವನ್ನು ಆಯ್ದುಕೊಳ್ಳುವೆನು, ನಾನು ಹಣವನ್ನು ಆಯ್ದುಕೊಳ್ಳೆನು" ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಏನು ಹೇಳಿದರೆಂದು ನಿಮಗೆ ಗೊತ್ತೇ? ಅವರು ಬಹಳ ವಿನಯವಾಗಿ, "ಸರ್, ಒಬ್ಬ ವ್ಯಕ್ತಿಯು ತನ್ನಲ್ಲಿ ಯಾವುದಿಲ್ಲವೋ ಅದನ್ನು ಆಯ್ದುಕೊಳ್ಳುವನು" ಎಂದು ಹೇಳಿದರು.

ಇದು ಬುದ್ಧಿವಂತಿಕೆ!

೨. ಹಂದಿ ಮತ್ತು ಪಕ್ಷಿ

ಸ್ವಾಮಿ ವಿವೇಕಾನಂದರು ಒಂದು ಹೋಟೇಲಿಗೆ ಹೋದರು ಮತ್ತು ತಮ್ಮ ಉಪನ್ಯಾಸಕರು ಕುಳಿತಿದ್ದ ಮೇಜಿಗೆ ಹೋಗಿ ಕುಳಿತುಕೊಂಡರು. ಉಪನ್ಯಾಸಕರು ಸ್ವಾಮಿ ವಿವೇಕಾನಂದರಲ್ಲಿ, "ಒಂದು ಹಂದಿ ಮತ್ತು ಒಂದು ಪಕ್ಷಿ ಒಂದೇ ಮೇಜಿನಲ್ಲಿ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲ" ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಏನು ಹೇಳಿದರೆಂದು ನಿಮಗೆ ಗೊತ್ತೇ? ಅವರಂದರು, "ಸರ್, ನೀವು ಯಾವಾಗ ಬೇಕಾದರೂ ಹೇಳಿ, ನಾನು ಯಾವುದೇ ಕ್ಷಣದಲ್ಲಾದರೂ ಹಾರಿ ಹೋಗುವೆನು."

ಬುದ್ಧಿವಂತಿಕೆಗೆ ಪ್ರತಿಯೊಂದು ಸಂಘರ್ಷವನ್ನೂ ಹಾಸ್ಯವನ್ನಾಗಿ ತಿರುಗಿಸುವ ಸಾಮರ್ಥ್ಯವಿದೆ. ಹಾಸ್ಯವು ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವಾಗಿದೆ. ನಿಮ್ಮಲ್ಲಿ ಹಾಸ್ಯವಿದ್ದರೆ ಯಾವುದೇ ಸಂಘರ್ಷದ ಪರಿಸ್ಥಿತಿಯನ್ನು ನೀವು ಜಯಿಸಬಲ್ಲಿರಿ.
ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವೆಂದರೆ, ಒತ್ತಡದಲ್ಲಿ ಸಿಲುಕದಿರುವುದು, ಮತ್ತು ನೀವು ಒತ್ತಡದಲ್ಲಿ ಸಿಲುಕಿದರೆ, ಒತ್ತಡದಿಂದ ಹೊರಬರುವುದು ಹೇಗೆಂಬುದನ್ನು ತಿಳಿಯುವುದು. ಇದು ಬುದ್ಧಿವಂತಿಕೆ.

ಬುದ್ಧಿವಂತಿಕೆಯ ಬಗ್ಗೆ ನಾವೀಗ ಬಹಳಷ್ಟು ಕೇಳಿದೆವೆಂದು ನನಗನಿಸುತ್ತದೆ ಮತ್ತು ಇಲ್ಲಿ ಹಲವಾರು ಬುದ್ಧಿವಂತ ಜನರು ನಮ್ಮೊಂದಿಗಿದ್ದಾರೆ. ಬುದ್ಧಿವಂತಿಕೆಯೆಂದರೆ, ನಮ್ಮ ಮನಸ್ಸು ಮತ್ತು ನಮ್ಮ ಶರೀರಗಳನ್ನು ಎಷ್ಟು ಉಪಯೋಗಿಸಬೇಕೆಂಬುದನ್ನು ತಿಳಿದಿರುವುದು ಹಾಗೂ ಅವುಗಳನ್ನು ಅತಿಯಾಗಿ ಬಳಸದಿರುವುದು. ನಾವು ನಮ್ಮ ಮನಸ್ಸು ಮತ್ತು ಶರೀರಗಳನ್ನು ಮಿತಿಮೀರಿ ಬಳಕೆ ಮಾಡಿದರೆ ನಮ್ಮ ಶಕ್ತಿ ಕುಂದಿಹೋಗುತ್ತದೆ, ದಣಿವು ಮತ್ತು ಆಯಾಸವಾಗುತ್ತದೆ. ಬುದ್ಧಿವಂತಿಕೆಯೆಂದರೆ ನಡುದಾರಿಯ ಸಣ್ಣ ಗೆರೆಯಲ್ಲಿ ನಡೆಯುವುದು. ಅದನ್ನೇ ಭಗವಾನ್ ಬುದ್ಧನು ಹೇಳಿರುವುದು.

ವಿಜ್ಞಾನ:

ನಿಮಗೆ ಗೊತ್ತೇ, ಬುದ್ಧ ಎಂದರೆ, ಜ್ಞಾನೋದಯಗೊಂಡವನು ಎಂದು, ಹಾಗೆಯೇ ಅತೀ ಬುದ್ಧಿವಂತ ಎಂದು ಅರ್ಥ. ಸಂಸ್ಕೃತದಲ್ಲೂ ಬುದ್ಧಿಗೆ ಬುದ್ಧಿ ಎಂದು ಹೇಳುತ್ತಾರೆ. ’ಬುದ್ಧ’ ಎಂದರೆ, ಪರಿಪಕ್ವವಾದ ಬುದ್ಧಿಯನ್ನು ಹೊಂದಿದವನು, ಮತ್ತು ವಿಜ್ಞಾನವೆಲ್ಲಾ ಇರುವುದು ಬುದ್ಧಿಯ ಮೇಲೆಯೇ. ’ಏನಿದೆ’ ಎಂಬುದರ ಬಗೆಗಿನ ಹಂತಹಂತವಾದ ತಾರ್ಕಿಕ ತಿಳುವಳಿಕೆಯೇ ವಿಜ್ಞಾನವಾಗಿದೆ.

ಪೂರ್ವದಲ್ಲಿ ಮತ್ತು ದೂರಪ್ರಾಚ್ಯದಲ್ಲಿ ನಾವು ಯವತ್ತೂ ವಿಜ್ಞಾನವನ್ನು ಪ್ರೋತ್ಸಾಹಿಸಿದ್ದೇವೆ. ಶತಮಾನಗಳಿಂದ ಒಬ್ಬನೇ ಒಬ್ಬ ವಿಜ್ಞಾನಿಯೂ ಇಲ್ಲಿ ದಂಡಿಸಲ್ಪಟ್ಟಿಲ್ಲ. ಹೀಗಾಗಿ ತಾರ್ಕಿಕ ತಿಳುವಳಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರಯೋಗ ಮಾಡುವುದೇ ವಿಜ್ಞಾನವಾಗಿದೆ. ವಿಜ್ಞಾನ ಮತ್ತು ಆಧ್ಯಾತ್ಮಗಳು ಯಾವತ್ತೂ ಪರಸ್ಪರ ಸಂಘರ್ಷದಲ್ಲಿಲ್ಲ, ಅವುಗಳು ಯಾವತ್ತೂ ಪರಸ್ಪರ ಪೂರಕವಾಗಿವೆ.

’ಇದು ಏನು?’ ಎಂಬುದು ವಿಜ್ಞಾನವಾಗಿದೆ ಮತ್ತು ’ನಾನು ಯಾರು?’ ಎಂಬುದು ಆಧ್ಯಾತ್ಮವಾಗಿದೆ. ವಸ್ತುವನ್ನು ವಿಶ್ಲೇಷಿಸುವುದು ವಿಜ್ಞಾನವಾಗಿದೆ ಮತ್ತು ವಿಷಯವನ್ನು ವಿಶ್ಲೇಷಿಸುವುದು ಆಧ್ಯಾತ್ಮವಾಗಿದೆ. ವಸ್ತು ಮತ್ತು ವಿಷಯಗಳ ಅಧ್ಯಯನವು ಯಾವತ್ತೂ ವಿರೋಧಾತ್ಮಕವಾಗಿಲ್ಲ; ಕನಿಷ್ಠಪಕ್ಷ ಪೂರ್ವದಲ್ಲಂತೂ ಅಲ್ಲ.

ಸೃಜನಶೀಲತೆ:

ವಿಜ್ಞಾನ ಮತ್ತು ಕಲೆಗಳು ಇವೆರಡರಲ್ಲೂ ಸಾಮಾನ್ಯವಾಗಿರುವುದೆಂದರೆ ಸೃಜನಶೀಲತೆ. ನಮ್ಮ ಮೆದುಳಿನಲ್ಲಿ ಒಂದು ಭಾಗವು (ಬಲ ಮೆದುಳು) ತರ್ಕಕ್ಕಾಗಿದೆ ಮತ್ತು ಇನ್ನೊಂದು ಭಾಗವು (ಎಡ ಮೆದುಳು) ಸಂಗೀತಕ್ಕಾಗಿದೆ. ಈಗ ಅವುಗಳೆರಡರಲ್ಲೂ ಇರುವ ಸಾಮಾನ್ಯ ಅಂಶ ಯಾವುದು? ಅದು ಸೃಜನಶೀಲತೆ, ಮತ್ತು ನೀವು ಒತ್ತಡದಲ್ಲಿರುವಾಗ ಸೃಜನಶೀಲತೆ ಬರುವುದಿಲ್ಲ, ಆದರೆ ಕೇಂದ್ರಿತವಾಗಿರುವುದರಿಂದ ಅದು ಬರುತ್ತದೆ. ನಾವು ಹೆಚ್ಚು ಕೇಂದ್ರಿತರಾದಷ್ಟೂ ಹೆಚ್ಚು ಸೃಜನಶೀಲತೆಯು ನಮ್ಮಿಂದ ಸಹಜವಾಗಿ ಹೊರಬರುತ್ತದೆ.

ಆದ್ದರಿಂದ, ನೀವೊಬ್ಬ ಚಿತ್ರಕಾರರಾಗಿದ್ದರೆ, ಇತರರ ಚಿತ್ರಕಲೆಗಳನ್ನು ನೋಡುತ್ತಾ ಹೋಗಬೇಡಿರೆಂದು ನಾನು ನಿಮಗೆ ಸಲಹೆ ನೀಡುತ್ತೇನೆ. ಆದರೆ ಅದಕ್ಕೆ ಬದಲಾಗಿ ಸಂಗೀತವನ್ನು ಆಲಿಸಿ. ಈ ಕಲ್ಪನೆಯು ಸಂಪೂರ್ಣವಾಗಿ ಕ್ರಾಂತಿಕಾರಿಯಾದುದಾಗಿರಲೂಬಹುದು ಯಾಕೆಂದರೆ, ಚಿತ್ರಕಾರರಾಗಿರುವವರಲ್ಲಿ ಹೆಚ್ಚಿನವರಿಗೆ, ಇತರ ಚಿತ್ರಕಾರರ ಕೆಲಸವನ್ನು ಅಧ್ಯಯನ ನಡೆಸಲು ಮಾತ್ರ ಕಲಿಸಲಾಗುತ್ತದೆ. ಸಂಗೀತವನ್ನಾಲಿಸುವಂತೆ ಅವರಿಗೆ ಹೇಳಲಾಗುವುದಿಲ್ಲ. ಆದರೆ ನನಗನಿಸುವುದೇನೆಂದರೆ, ನೀವು ಇತರ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು ಮತ್ತು ಸಂಗೀತವನ್ನು ಆಲಿಸಬೇಕು. ನಂತರ ನಿಮ್ಮ ಕುಂಚವನ್ನು ತೆಗೆದುಕೊಂಡು ಚಿತ್ರಿಸಲು ಪ್ರಾರಂಭಿಸಿ.

ನಾನು ಶಾಲೆಯಲ್ಲಿದ್ದಾಗ, ಇತರರಿಂದ ಬರೆಯಲ್ಪಟ್ಟ ಹಲವಾರು ಕವನಗಳನ್ನು ನಾನು ಓದಿದೆ. "ಓ, ನಾನು ಬರೆಯಲು ಬಯಸಿದ್ದೆ, ಆದರೆ ಯಾರೋ ಇದರ ಬಗ್ಗೆ ಈಗಾಗಲೇ ಬರೆದಿದ್ದಾರೆ" ಎಂದು ನಾನು ಯೋಚಿಸಿದೆ. ಆದ್ದರಿಂದ, ನೀವೊಬ್ಬ ಕವಿಯಾಗಿದ್ದರೆ, ಇತರರು ಬರೆದ ಕವನಗಳನ್ನು ಓದುವುದನ್ನು ನಿಲ್ಲಿಸಿ. ಇತರರು ಬರೆದ ಕವನಗಳನ್ನು ಓದುವುದನ್ನು ನಾನು ನಿಲ್ಲಿಸಿದ ನಂತರ ನಾನು ನನ್ನದೇ ಆದ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನೀವೊಬ್ಬ ಸೃಜನಾತ್ಮಕ ಅಡಿಗೆಯವರಾಗಲು ಬಯಸಿದರೆ, ಆಗ ಅಡುಗೆ ಪುಸ್ತಕಗಳನ್ನು ಓದಲು ಹೋಗಬೇಡಿ. ನೀವು ನಿಮ್ಮದೇ ಆದ ಪ್ರಯೋಗಗಳನ್ನು ಮಾಡಿ. ನೀವು ಅಡಿಗೆಯಲ್ಲಿ ಸೃಜನಶೀಲರಾಗಲು ಬಯಸಿದರೆ, ಯಾವತ್ತೂ ಯಾವುದೇ ಅಡಿಗೆ ಪುಸ್ತಕವನ್ನು ಓದಬೇಡಿ. ಇದು ನಿಜಕ್ಕೂ ಫಲಪ್ರದವಾಗುವುದೆಂದು ನನಗನಿಸುತ್ತದೆ.

ಸೃಜನಶೀಲತೆಗಾಗಿ ಬಹಳ ಮುಖ್ಯವಾಗಿರುವ ಇನ್ನೊಂದು ಸಂಗತಿಯೆಂದರೆ ಅಂತಃಸ್ಫುರಣೆ. ಅಂತಃಸ್ಫುರಣೆಯನ್ನು ಹೊಂದಿರಲು ಹಾಗೂ ಸೃಜನಶೀಲರಾಗಿರಲು ನೀವು ಟೊಳ್ಳು ಮತ್ತು ಖಾಲಿಯಾಗಬೇಕು ಹಾಗೂ ಕೇಂದ್ರಿತರಾಗಿರಬೇಕು. ಯಾವುದೇ ವ್ಯಾಪಾರಿಗೂ ಕೂಡಾ ಅಂತಃಸ್ಫುರಣೆಯು ಬಹಳ ಮುಖ್ಯವಾಗಿದೆ. ನಿಮ್ಮ ಅಂತಃಸ್ಫುರಣೆಯನ್ನು ಆಧರಿಸಿ ಬಂಡವಾಳ ಹೂಡಿದಾಗ ನೀವು ಯಶಸ್ವಿಯಾಗುವಿರಿ. ವ್ಯಾಪಾರಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ರಾಜಕಾರಣಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ಸೃಜನಶೀಲತೆಗೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ಸಂಶೋಧನೆ ಮತ್ತು ವಿಜ್ಞಾನಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು. ಮತ್ತೆ ಅಂತಃಸ್ಫುರಣೆಗೆ ನಿಮಗೇನು ಬೇಕು? ಧ್ಯಾನ!

ಚಲಿಸುವ ಚಿತ್ರಗಳ ರೂಪದಲ್ಲಿ ಈ ಬ್ಲಾಗ್ ವೀಕ್ಷಿಸಲು ಲಿಂಕ್:
http://www.speakingtree.in/public/spiritual-slideshow/seekers/self-improvement/the-measure-of-intelligence