ಸೋಮವಾರ, ಜನವರಿ 3, 2011

ಜ್ಞಾನದ ನಾಲ್ಕು ಅಂಶಗಳು

ಜನವರಿ  ೩, ೨೦೧೧, ಬೆಂಗಳೂರು ಆಶ್ರಮ.

ಪ್ರಶ್ನೆ;- ಒಬ್ಬರು ತಾವು ಮಾಡುವ ಎಲ್ಲದರಲ್ಲೂ ನಿಷ್ಪ್ರಯೋಜಕರು ಎಂದುಕೊಂಡರೆ, ಅವರು ಹೇಗೆ ಜೀವನದಲ್ಲಿ ಮುನ್ನಡೆಯುವುದು? 

ಶ್ರೀ ಶ್ರೀ;-
ಸ್ವಲ್ಪ ಕಾಲದವರೆಗೆ ಇಲ್ಲೇ ಇರಿ ಮತ್ತು ಭಗವಂತ ಕಸವನ್ನು ಸೃಷ್ಟಿ ಮಾಡುವುದಿಲ್ಲ ಎಂದು ತಿಳಿದುಕೊಳ್ಳಿ. ಈ ಭೂಮಿಯ ಮೇಲೆ ಸೃಷ್ಟಿ ಮಾಡಲಾಗಿರುವ ಎಲ್ಲರೂ ಯಾವುದೋ ಒಂದರಲ್ಲಿ ಒಳ್ಳೆಯದಾಗಿರುತ್ತಾರೆ.


ಪ್ರಶ್ನೆ;- ಯಾವುದು ಉತ್ತಮ-ಮೋಕ್ಷವೇ ಅಥವಾ ಪ್ರೇಮ ಮತ್ತು ಕೃತಜ್ಞತೆಯೆ? 
                         
ಶ್ರೀ ಶ್ರೀ;-
ಪ್ರೇಮ ಮತ್ತು ಕೃತಜ್ಞತೆಯು ಸ್ವಲ್ಪ ಮಟ್ಟದ ಆಂತರಿಕ ಸ್ವಾತಂತ್ರ್ಯವಿಲ್ಲದೆ ಸಾಧ್ಯವಿಲ್ಲ. ಅವೆರಡೂ ಜೊತೆ ಜೊತೆಯಾಗೇ ಹೋಗುತ್ತವೆ. ನಿಮಗೆ ಎಷ್ಟು ಮಟ್ಟದವರೆಗೆ ಸ್ವಾತಂತ್ರ್ಯ ಅನುಭವವಾಗುತ್ತದೋ, ಅಷ್ಟು ಮಟ್ಟದಷ್ಟು ಕೃತಜ್ಞತೆಯನ್ನು ಅನುಭವಿಸುತ್ತೀರಿ.


ಪ್ರಶ್ನೆ;- ಈ ವಿಶ್ವದ ಸೃಷ್ಟಿಯಾದಾಗಿನಿಂದಲೂ ಆತ್ಮಗಳಿವೆ.  ಆತ್ಮಗಳು ಹೆಚ್ಚುತ್ತಿವೆಯೆ ಅಥವಾ ಹಾಗೆಯೇ ಇವೆಯೆ? ಆತ್ಮಗಳ ಗಣಿತ ನನಗರ್ಥವಾಗುವುದಿಲ್ಲ.

ಶ್ರೀ ಶ್ರೀ;-
ಮಾಯವಾಗುತ್ತಿರುವ ಅನೇಕ ವರ್ಗಗಳ ಜೀವಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕ ಹಾವುಗಳು, ಚೇಳುಗಳು, ಗುಬ್ಬಚ್ಚಿಗಳು, ಚಿಟ್ಟೆಗಳು ......ಅವೆಲ್ಲವೂ ಮಾನವರಾಗಿ ಬರಲು ಸಾಧ್ಯ.


ಪ್ರಶ್ನೆ;- ಭಗವದ್ಗೀತೆಯ ಹತ್ತನೆಯ ಅಧ್ಯಾಯದ ಕೊನೆಯ ಶ್ಲೋಕದ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲುವಿರಾ?

ಶ್ರೀ ಶ್ರೀ;-
ಭಗವಾನ್ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, "ಈ ಜಗತ್ತಿನಲ್ಲಿ ನೀನು ಏನೆಲ್ಲಾ ನೋಡುತ್ತಿದೆಯೋ, ಅವೆಲ್ಲವೂ ನನ್ನ ಚಿಕ್ಕ ಭಾಗಗಳು. ಎಲ್ಲೆಲ್ಲಿ ಪುಣ್ಯವನ್ನು ಕಾಣುತ್ತೀಯೋ ಅವೆಲ್ಲವೂ ನನ್ನಿಂದಲೇ ಬಂದಿದೆ. ಯಾರಲ್ಲಾದರೂ ನೀನು ಬುದ್ಧಿಯನ್ನು ಕಂಡರೆ ಅದು ನಾನೇ. ಯಾರಲ್ಲಾದರೂ ನೀನು ಶೌರ್ಯವನ್ನು ಕಂಡರೆ ಅದೂ ನಾನೇ. ಇಡೀ ಜಗತ್ತು ನನ್ನ ಸ್ವಲ್ಪ ಭಾಗದಲ್ಲಿ ಪ್ರತಿಬಿಂಬಿತವಾಗಿದೆ."


ಪ್ರಶ್ನೆ;- ಅನೇಕ ಜನರು ಹನುಮಂತ ಹಿಮಾಲಯದ ಪರ್ವತಗಳಲ್ಲಿ ಇನ್ನೂ ಇದ್ದಾನೆ ಎನ್ನುತ್ತಾರೆ. ಇದು ನಿಜವೆ? 

ಶ್ರೀ ಶ್ರೀ;-
ನೋಡಿ, ಇಡೀ ಜಗತ್ತು ಅಲೆಗಳ ತರಂಗಗಳು. ಇಲ್ಲಿ ಘನವಾಗಿರುವಂತದ್ದು ಏನೂ ಇಲ್ಲ. ಕ್ವಾಂಟಮ್ ಭೌತಶಾಸ್ತ್ರಜ್ಞರನ್ನು ಕೇಳಿದರೆ, ಯಾವೆದೆಲ್ಲವೂ ಕಾಣಿಸುತ್ತಿದೆಯೋ, ವಾಸ್ತವದಲ್ಲಿ ಅದು ಯಾವುದೂ ಇಲ್ಲ ಎನ್ನುತ್ತಾರೆ. ಸೂಕ್ಷ್ಮ ಸ್ತರದಲ್ಲಿ ಎಲ್ಲಾ ಶಕ್ತಿಗಳೂ ಇವೆ. ಭಗವಾನ್ ಹನುಮಂತನು ಅಲ್ಲೆಲ್ಲೋ ಕುಳಿತಿರುವ ಒಂದು ವ್ಯಕ್ತಿಯಲ್ಲ. ನಮ್ಮ ಪ್ರಾಣಶಕ್ತಿಯಲ್ಲೇ ಹನುಮಂತನ ಚೈತನ್ಯವಿದೆ. 


ಪ್ರಶ್ನೆ;- ಆತ್ಮಸಾಕ್ಷಾತ್ಕಾರವು ಒಂದು ಪಯಣವೆ ಅಥವಾ ಒಂದು ಗುರಿಯೆ? ನಾವೆಲ್ಲಾದರೂ ತಲುಪಿದರೆ, ನಾವು ತಲುಪಿದ್ದೇವೆ ಎಂದು ತಿಳಿಯುತ್ತದೆಯೆ ಅಥವಾ ನಡೆಯುವುದನ್ನು ಮುಂದುವರಿಸುತ್ತಿರಬೇಕೆ? 

ಶ್ರೀ ಶ್ರೀ;- ಹೌದು, ಎರಡೂ ಹೌದು. ಒಂದು ರೀತಿಯಲ್ಲಿ ಅದು ಪಯಣವೂ ಹೌದು, ಮತ್ತೊಂದು ರೀತಿಯಲ್ಲಿ  ಅದೇ ಅಂತಿಮ ಗುರಿ.  ನಿಮಗೆ ಬಹಳ ತೃಪ್ತವಾದಾಗ ನಿಮಗೇನೂ ಬೇಡವೆನ್ನಿಸುತ್ತದೆ. ಯಾವ ಅವಶ್ಯಕತೆಗಳೂ ಇರುವುದಿಲ್ಲ. ನಾವು ಬಹಳ ಪೂರ್ಣರು ಎಂಬ ಅನುಭವವಾಗುತ್ತದೆ. ಎಷ್ಟು ತೃಪ್ತಿ ಬರುತ್ತದೆಯೆಂದರೆ, ನೀವು ಬಹಳ ಪರಿಪೂರ್ಣರು ಎಂಬ ಅನುಭವವಾಗುತ್ತದೆ. ಎಂದಿಗೂ ಬಾಡಿ ಹೋಗದಂತಹ ಮುಗುಳ್ನಗೆಯಿರುತ್ತದೆ ಮತ್ತು ಇದೆಲ್ಲವೂ ಬಹಳ ಪ್ರಯತ್ನರಹಿತವಾಗಿಯೇ  ಆಗುತ್ತದೆ. 


ಪ್ರಶ್ನೆ;- ಇತರರ ನಕಾರಾತ್ಮಕತೆಯಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು? 

ಶ್ರೀ ಶ್ರೀ;-
"ಓಂ ನಮಃ ಶಿವಾಯ" ಎಂದು ಉಚ್ಚರಿಸುವುದರಿಂದ. "ಜೈಗುರುದೇವ್" ಎಂದರೂ ಸರಿಯೆ. 


ಪ್ರಶ್ನೆ ;- ಮನಸ್ಸಿಗೂ ಆತ್ಮಕ್ಕೂ ಇರುವ ವ್ಯತ್ಯಾಸವೇನು?
 
ಶ್ರೀ ಶ್ರೀ;-
ಮನಸ್ಸು ಆಲೋಚನೆಗಳು ಮತ್ತು ಎಲ್ಲವೂ ನಡೆಯುವುದು ಆತ್ಮದಲ್ಲಿ. 


ಪ್ರಶ್ನೆ;- ಒಬ್ಬರೇಕೆ ಮದುವೆಯಾಗುತ್ತಾರೆ? ಯಶಸ್ವಿ ಮದುವೆಯ ರಹಸ್ಯವೇನು? 

ಶ್ರೀ ಶ್ರೀ;-
ಇಬ್ಬರೂ ಸಂತೋಷವಾಗಿದ್ದರೆ, ಅದೇ ಯಶಸ್ವಿಯಾದ ಮದುವೆ. ಆಗ ಮಕ್ಕಳೂ ಸಂತೋಷವಾಗಿರುತ್ತಾರೆ. ನೀವೇ ಆಯ್ಕೆ ಮಾಡಿಕೊಳ್ಳಿ. ಆಯ್ಕೆ ನಿಮ್ಮದು, ಆಶೀರ್ವಾದಗಳು ನಮ್ಮದು. ಇದನ್ನು ನಿಮ್ಮ ತಲೆಯಿಂದ ಆಯ್ಕೆ ಮಾಡಲು ಸಾಧ್ಯವಿಲ್ಲ.  ಭವಿಷ್ಯದಲ್ಲಿ ಏನಾದರೊಂದು ನಡೆದರೆ, ಆಯ್ಕೆ ಮಾಡಿಕೊಳ್ಳಿ.


ಪ್ರಶ್ನೆ;- ಜ್ಞಾನದ ವಿವರಣೆಯೇನು?

ಶ್ರೀ ಶ್ರೀ ;-
ಜ್ಞಾನವೆಂದರೆ ಮಾಹಿತಿಯಲ್ಲ. ಯಾವುದು ಅರಿವೋ, ಅದೇ ಜ್ಞಾನ.  ಮಾಹಿತಿಯನ್ನು ಹೊತ್ತಿರುವ ವ್ಯಕ್ತಿಯನ್ನು ಜ್ಞಾನ ಎನ್ನುತ್ತಾರೆ, ಮಾಹಿತಿಯು ಜ್ಞಾನವಲ್ಲ.  ಎಲ್ಲಾ ಮಾಹಿತಿಯು ಯಾವುದರಲ್ಲಿ ಆಗುತ್ತದೋ, ಅದೇ ಜ್ಞಾನ.  ಚೈತನ್ಯವೊಂದೇ ಜ್ಞಾನ.  ಸತ್ಯಂ ಜ್ಞಾನಂ ಅನಂತಂ ಬ್ರಹ್ಮ- ಇವು ಬ್ರಹ್ಮನ ನಾಲಕ್ಕು ಮುಖಗಳು, ಜ್ಞಾನದ ನಾಲಕ್ಕು ಅಂಶಗಳು. ಎಲ್ಲವೂ ಒಂದೇ.  ಜ್ಞಾನವು ಮಾಹಿತಿ ಮತ್ತು ಶುದ್ಧ ಜ್ಞಾನ.


ಪ್ರಶ್ನೆ;- ನನ್ನ ಜೀವನದ ಗುರಿಯೇನು? ಈ ಭೂಮಿಯ ಮೇಲೆ ನಾನೇಕೆ ಜನಿಸಿದ್ದೇನೆ? 

ಶ್ರೀ ಶ್ರೀ;-
ಈಗ ನೀವು ಯಾವ ರೀತಿಯಲ್ಲಿ ನಗುತ್ತಿದ್ದೀರೋ, ಆ ನಗೆಯನ್ನು ಇತರರ ಮುಖಗಳಲ್ಲೂ ತರುವುದೇ ನಿಮ್ಮ ಜೀವನದ ಗುರಿ. 


ಜ್ಞಾನವಾಹಿನಿ;-

ಶ್ರೀ ಶ್ರೀ ;-
ಡಿಸೆಂಬರ್ ತಿಂಗಳಿನ ಅರ್ಥ ನಿಮಗೆ ಗೊತ್ತೆ?
ಸಭಿಕರು;- ಇಲ್ಲ; 
ಶ್ರೀ ಶ್ರೀ;-ನವೆಂಬರ್‌ನ ಅರ್ಥ?
ಸಭಿಕರು;-ಇಲ್ಲ !


ಡಿಸೆಂಬರ್ ಎಂದರೆ ಸಂಸ್ಕೃತದಲ್ಲಿ ದಶ+ಅಂಬರ. "ದಶ" ಎಂದರೆ "ಹತ್ತು" "ಅಂಬರ" ಎಂದರೆ "ಆಕಾಶ". ಆದ್ದರಿಂದ ಡಿಸೆಂಬರ್ ಹತ್ತನೆಯ ಆಕಾಶ.  ಅದೇ ರೀತಿಯಾಗಿ ನವೆಂಬರ್ ಎಂದರೆ "ನವ"+ "ಅಂಬರ"-ಒಂಭತ್ತನೆಯ ಆಕಾಶ.  ಹೀಗೆ, ಈ ಎಲ್ಲಾ ಹೆಸರುಗಳೂ ಸಂಸ್ಕೃತದ ಮೂಲವನ್ನು ಹೊಂದಿವೆ.


ಒಂದಾನೊಂದು ಕಾಲದಲ್ಲಿ ಮಾರ್ಚ್ ತಿಂಗಳಿನಲ್ಲಿ ನವ ವರ್ಷವನ್ನು ಆಚರಿಸುತ್ತಿದ್ದರು. ಮಾರ್ಚ್ ಎಂದರೆ ಮೊದಲನೆಯ ತಿಂಗಳು, ಎಂದರೆ ಮುಂದಕ್ಕೆ ಹೋಗುವುದು, ಮುನ್ನಡೆಯುವುದು.  ಆ ತಿಂಗಳಲ್ಲಿ ಸೂರ್ಯನು ಮೊದಲ ರಾಶಿಗೆ ಹೋಗುತ್ತಾನೆ-ಮೇಷರಾಶಿಗೆ.  ಇಂದಿಗೂ ಸಹ ಇರಾಕ್‌ನಲ್ಲಿ, ಇರಾನಿನಲ್ಲಿ, ಆಫ್ಛಾನಿಸ್ತಾನದಲ್ಲಿ, ತುರ್ಕಿಯಲ್ಲಿ ಮತ್ತು ಭಾರತದ ಅನೇಕ ಭಾಗಗಳಲ್ಲಿ ಮಾರ್ಚ್ ತಿಂಗಳಲ್ಲಿ ಹೊಸವರ್ಷವನ್ನು ಆಚರಿಸುತ್ತಾರೆ. ಆದ್ದರಿಂದ, ನಿಜವಾದ ಹೊಸ ವರ್ಷ ಪ್ರಾರಂಭವಾಗುವುದು ಮಾರ್ಚ್ ತಿಂಗಳಲ್ಲಿ. ಜನವರಿಯು ಹನ್ನೊಂದನೆಯ ತಿಂಗಳು ಮತ್ತು ಫೆಬ್ರವರಿ ಕೊನೆಯ ತಿಂಗಳು.