ಮಂಗಳವಾರ, ಜೂನ್ 25, 2013

Face2Face with Sri Sri: 23 June, 7:30 pm IST

ಭೂಮಿಯ ಮೇಲೆ ನಮ್ಮ ಅಸ್ತಿತ್ವವಿರುವುದು ಪ್ರಕೃತಿ ನಿರ್ದೇಶಿತ ಕರ್ತವ್ಯವೊಂದನ್ನು ಪೂರ್ಣಗೊಳಿಸುವ ಸಲುವಾಗಿ. ಆ ಕರ್ತವ್ಯ ಪೂರ್ಣಗೊಳ್ಳಲು ಹತ್ತು, ಇಪ್ಪತ್ತು, ಮೂವತ್ತು, ನೂರು ಅಥವ ಇನ್ನೂ ಹೆಚ್ಚು ಜನ್ಮಗಳ ಅವಧಿ ತಗುಲಿದರೂ ಆಶ್ಚರ್ಯವೇನಲ್ಲ. ಪ್ರತಿ ಜನ್ಮದಲ್ಲೂ ಆ ಕರ್ತವ್ಯವನ್ನು ಒಂದು ನಿರ್ದಿಷ್ಟ ಶೇಕಡಾವಾರು ಅಂಶದಷ್ಟು ನಿರ್ವಹಿಸಬೇಕಾದ್ದು ನಮ್ಮ ಜವಾಬ್ದಾರಿ. ಇನ್ನಷ್ಟು ಪಕ್ವವಾಗಿ ಅದರ ಮುಂದಿನ ಜನ್ಮದಲ್ಲೂ, ಅದಕ್ಕಿಂತಲೂ ಪರಿಪೂರ್ಣವಾಗಿ ನಂತರದ ಜನ್ಮದಲ್ಲೂ, ಜನ್ಮದಿಂದ ಜನ್ಮಕ್ಕೆ ಹೆಚ್ಚುಹೆಚ್ಚು ಸುಧಾರಿತ ರೀತಿಯಲ್ಲೂ ಆ ಕರ್ತವ್ಯವನ್ನು ನಾವು ಮುನ್ನಡೆಸುತ್ತೇವೆ. ಸಾವು ಬದುಕುಗಳ ಚಕ್ರದಿಂದ ನಾವು ಮುಕ್ತರಾಗುವುದು ಆ ಕರ್ತವ್ಯ ಪೂರ್ಣಗೊಂಡ ನಂತರವೇ. ನಾವು ನಮ್ಮ ಮೈಮೇಲಿನ ಬಟ್ಟೆಯನ್ನು ಕಳಚಿದಷ್ಟೇ ಸರಾಗವಾಗಿ, ಈ ಜನ್ಮಕ್ಕೆ ಮೀಸಲಿಟ್ಟ ಕರ್ತವ್ಯದ ಹಂತವನ್ನು ನಾವು ದಾಟಿದ ಮರುಕ್ಷಣ, ಸದಾ ಸಚೇತನ ಆತ್ಮವು ನಮ್ಮ ಶರೀರವನ್ನು ತೊರೆದು ಅವ್ಯಕ್ತ ರೂಪಕ್ಕೆ ಜಾರಿ, ಆ ಕರ್ತವ್ಯದ ಮುಂದಿನ ಹಂತದ ಸಿದ್ದತೆಯಲ್ಲಿ ತೊಡಗಿಕೊಳ್ಳುತ್ತದೆ. ಈ ಮೇರೆಗೆ ಜನ್ಮದ ನಂತರ ಜನ್ಮವನ್ನೆತ್ತುತ್ತ ಭೂಮಿಯ ಮೇಲೆ ಸಾವಿರ, ಲಕ್ಷ ವರ್ಷಗಳ ಅವಧಿಯವರೆಗೆ ನಮ್ಮ ಆತ್ಮ ಜೀವಂತವಾಗಿರುವುದೆಂಬುದು ಆಶ್ಚರ್ಯ ಉಂಟುಮಾಡುವ ಸಂಗತಿಯಲ್ಲವೆ?

ಇಪ್ಪತ್ತು, ನೂರು ವಯೋಮಾನದ ನಮ್ಮ ಶರೀರದ ರೂಪುರೇಷೆಯನ್ನು ಅರಿತು ನಾವು ತರುಣರು, ವೃದ್ಧರೆಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ ಪ್ರಕೃತಿ ನಿರ್ದೇಶಿಸಿರುವ ನಮ್ಮ ಕರ್ತವ್ಯ ಯಾವುದೆಂದು ಅರಿಯುವುದು, ಆಯಾ ಜನ್ಮದ ಕರ್ತವ್ಯಾಂಶವನ್ನು ಯಶಸ್ವಿಯಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ನಾವು ಬೆಳೆಯುವ ಪರಿಸರ, ನಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನ ಮತ್ತಿತರ ಬಹಿರಾಕರ್ಷಣೆಗಳ ಹಿಂದೆ ನಮ್ಮ ಬದುಕಿನ ನಿಜವಾದ ಕರ್ತವ್ಯ ಅಗೋಚರವಾಗಿಬಿಟ್ಟಿರುತ್ತದೆ. ಆ ಕರ್ತವ್ಯವನ್ನು ಶೀಘ್ರದಲ್ಲಿ ಗುರ್ತಿಸುವಷ್ಟು ಅದೃಷ್ಟಶಾಲಿಗಳಾಗಿದ್ದರೆ, ಗಿನ್ನೆಸ್ ದಾಖಲೆ ಸ್ಥಾಪಿಸಿದ ಹದಿಹರೆಯದವನೆಂ/ಳೆಂಬ ಗೌರವ ನಮ್ಮದಾಗಬಹುದು. ಆ ಕರ್ತವ್ಯ ಅರಿಯುವಲ್ಲಿ ಏರ್ಪಡುವ ವಿಳಂಬದಿಂದ ನಾವು ಅನಾಮಿಕರಾಗಿ ಸಾಯಲೂಬಹುದು.

ಬದುಕಿನ ಕ್ರಮವನ್ನು ಚುರುಕುಗೊಳಿಸಬಲ್ಲಂಥ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆರ್ಟ್ ಆಫ಼್ ಲಿವಿಂಗ್ ಮತ್ತಿತರ NGOಗಳು ರೂಪಿಸಿವೆ. ಈ ತರಬೇತಿಗಳಲ್ಲಿ ಭಾಗವಹಿಸಿದರೆ ನಮಗೆ ನಮ್ಮ ಪ್ರಕೃತಿ ನಿರ್ದೇಶಿತ ಕರ್ತವ್ಯದ ಶೀಘ್ರ ಅರಿವು ಮೂಡಬಹುದು. ಆರ್ಟ್ ಆಫ಼್ ಲಿವಿಂಗ್ ಬೆಂಗಳೂರು ಕೇಂದ್ರ, ತಾನು ನಿರೂಪಿಸಿದ ಹಲವು ವಿಧದ ತರಬೇತಿಗಳು ಬೀರಬಲ್ಲ ಪರಿಣಾಮವೆಂಥದ್ದು ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವಂಥ Face2Face with Sri Sri ಎಂಬ facebook ಸಹಭಾಗಿತ್ವದ ಜಾಗತಿಕ ಅಂತರ್ಜಾಲ ಸಮಾವೇಶವನ್ನು ಇತ್ತೀಚೆಗೆ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲೆಡೆಯಲ್ಲಿ ಕೆಳಕಂಡ ಚಿತ್ರಿಕೆಗಳು ಕಾಣಿಸಿಕೊಂಡು ಜನ ಸಮುದಾಯದಲ್ಲಿ ಸಾತ್ವಿಕ ಮನೋಭಾವ ಅಂಕುರಿಸಲು ಕಾರಣವಾದವು.




ಟೈಮ್ಸ್ ಆಫ಼್ ಇಂಡಿಯಾದ ಸಹೋದರ ಪತ್ರಿಕೆ 'ವಿಜಯ ಕರ್ನಾಟಕ' ಈ ಸಮಾವೇಶವನ್ನು ಕುರಿತ ವರದಿಯನ್ನು ಪ್ರಕಟಿಸಿತು. ಆ ವರದಿಯ ಕ್ಲಿಪ್ಪಿಂಗ್ ಕೆಳಕಂಡಂತಿತ್ತು.