ಶನಿವಾರ, ಜೂನ್ 16, 2012

ನಿಮ್ಮ ಆತ್ಮದ ಒಂದು ಇಣುಕುನೋಟ

ಆಂಟ್‌ವೆರ್ಪ್, ಬೆಲ್ಜಿಯಂ
೧೬ ಜೂನ್ ೨೦೧೨


ಜೀವನವನ್ನು ಒಂದು ದೊಡ್ಡದಾದ ದೃಷ್ಟಿಕೋನದಿಂದ ನೋಡಬೇಕು.

ಜೀವನವೆಂದರೇನು? ನಾವಿಲ್ಲಿ ಎಷ್ಟು ಕಾಲ ಜೀವಿಸಲಿದ್ದೇವೆ? ಜೀವನದ ಸತ್ಯವೇನು? ಇದರ ಮೇಲೆ ನಾವು ಸ್ವಲ್ಪ ಬೆಳಕು ಚೆಲ್ಲಬೇಕು ಮತ್ತು ನಾವದನ್ನು ಮಾಡುವಾಗ, ತಾತ್ಪರ್ಯವು ಧ್ಯಾನಿಸುವದಾಗುತ್ತದೆ. 

ನೋಡಿ, ನಮ್ಮೆಲ್ಲಾ ದೇವಾಲಯಗಳಲ್ಲಿ ಇದನ್ನೇ ನಮಗೆ ತೋರಿಸಲಾಗಿರುವುದು; ದೇವರು ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, ಸ್ಥಿರವಾಗಿ ಧ್ಯಾನದಲ್ಲಿ ಕುಳಿತಿರುವುದು. ಆ ಧ್ಯಾನವನ್ನು ನಾವೆಲ್ಲರೂ ಮಾಡಬೇಕು ಯಾಕೆಂದರೆ ಜೀವನದಲ್ಲಿ ಧ್ಯಾನಕ್ಕೆ ಬಹಳಷ್ಟು ಪ್ರಾಮುಖ್ಯತೆಯಿದೆ.

ಭಗವಾನ್ ಬುದ್ಧನು ಹೀಗೆಂದು ಹೇಳಿದನು, "ಜೀವನದಲ್ಲಿ ಶೋಕ ಮತ್ತು ದುಃಖಗಳಿವೆ, ಆದರೆ ದುಃಖದಿಂದ ಹೊರಬರಲು ಅಲ್ಲೊಂದು ದಾರಿಯಿದೆ."

ಭಗವಾನ್ ಮಹಾವೀರನು ಹೀಗೆಂದು ಹೇಳಿದನು, "ಆತ್ಮದಲ್ಲಿ ವಿಶ್ರಾಂತಿ ಮಾಡು; ಆತ್ಮದ ಸ್ವಭಾವವು ಆನಂದವಾಗಿದೆ."
ಈ ಎರಡೂ ಸಂದೇಶಗಳಿಗಿರುವ ದಾರಿಯು ಧ್ಯಾನವಾಗಿದೆ. ದುಃಖವನ್ನು ಕಡಿಮೆಗೊಳಿಸುವುದು ಮತ್ತು ಸಂತೋಷದ ಪ್ರಾಪ್ತಿ, ಇವುಗಳೆರಡೂ ಧ್ಯಾನದ ಮೂಲಕ ಸಂಭವಿಸುವುದು.

(ಸಭಿಕರಲ್ಲಿ ಯಾರೋ ಒಬ್ಬರು ತಮ್ಮ ವಾಹನ ನಿಲುಗಡೆಯ ಜಾಗವನ್ನು ಬದಲಾಯಿಸಬೇಕೆಂದು ಒಬ್ಬ ಸ್ವಯಂಸೇವಕನು ಘೋಷಿಸುತ್ತಾನೆ.)

ಪರವಾಗಿಲ್ಲ; ಜೀವನವು ಅಡಚಣೆಗಳಿಂದಲೇ ತುಂಬಿದೆ. ನಾವು ಮಾಡಬೇಕಾದುದು ಇದನ್ನೇ; ನಾವು ಮುಂದೆ ಸಾಗುತ್ತಾ ಇರಬೇಕು. ನಾವು ಎಲ್ಲೋ ನಿಲ್ಲಿಸುತ್ತೇವೆ ಮತ್ತು ನಂತರ ನಾವು ಮತ್ತೆ ಸಾಗುತ್ತೇವೆ.

ಈಗ, ನೀವೊಂದು ತಪ್ಪಾದ ಜಾಗದಲ್ಲಿ ನಿಲ್ಲಿಸಿದರೆ, ನೀವದನ್ನು ಕೂಡಲೇ ಸರಿಸಬೇಕಾಗುತ್ತದೆ ಮತ್ತು ನೀವು ಸರಿಯಾದ ಜಾಗದಲ್ಲಿ ನಿಲ್ಲಿಸಿದರೆ, ನಿಮಗೆ ಸ್ವಾತಂತ್ರ್ಯವಿರುತ್ತದೆ; ನಿಮಗೆ ಬೇಕಾದಾಗ ನೀವದನ್ನು ಅಲ್ಲಿಂದ ಸಾಗಿಸಬಹುದು. ಅದೇ ರೀತಿಯಲ್ಲಿ, ನೀವು ನಿಮ್ಮ ಮನಸ್ಸನ್ನು ಕೂಡಾ ಯಾವ ರೀತಿಯಲ್ಲಿ ನಿಲ್ಲಿಸಬೇಕೆಂದರೆ, ಅದೊಂದು ಸುರಕ್ಷಿತವಾದ ಜಾಗದಲ್ಲಿರಬೇಕು.

ನೀವು ನಿಮ್ಮ ಮನಸ್ಸನ್ನು ನಿಮ್ಮದೇ ಗ್ಯಾರೇಜಿನಲ್ಲಿ ನಿಲ್ಲಿಸಿರುವುದಾದರೆ, ಅದನ್ನು ಯಾವಾಗ ಸಾಗಿಸಬೇಕೆಂದು ಯಾರೂ ನಿಮಗೆ ಹೇಳಲು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಮನಸ್ಸನ್ನು ಬೇರೊಬ್ಬರ ಗ್ಯಾರೇಜಿನಲ್ಲಿ ನಿಲ್ಲಿಸಿದರೆ, ಅವರು ನಿಮ್ಮ ಬೆನ್ನು ಹತ್ತುವರು. ಆಗಲೂ ನೀವು ಸಾಗಿಸದಿದ್ದರೆ, ಪೋಲೀಸರು ಬರುವರು.

ಅದೇ ರೀತಿಯಲ್ಲಿ, ನಿಮ್ಮ ಜೀವನದ ಅಧಿಕಾರವನ್ನು ಬೇರೊಬ್ಬರ ಕೈಗೆ ನೀಡಬೇಡಿ. ನೀವದನ್ನು ಕೊಟ್ಟರೆ, ಇದುವೇ ಆಗುವುದು. ನಿಮಗೆ ಯಾವುದೇ ಸ್ವಾತಂತ್ರ್ಯವಿರಲಾರದು. ನೀವು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೀರಿ. ಮತ್ತು ನೀವು ಸ್ವಾತಂತ್ರವನ್ನು ಕಳೆದುಕೊಂಡಾಗ, ನೀವು ಕಳೆದುಕೊಳ್ಳುವ ಮುಂದಿನ ವಿಷಯಗಳೆಂದರೆ ಪ್ರೀತಿ ಮತ್ತು ಸಹಾನುಭೂತಿ, ಯಾಕೆಂದರೆ ಒತ್ತಡಕ್ಕೆ ಸಿಲುಕಿರುವ ಒಬ್ಬರಿಗೆ ತಮ್ಮ ಸಹಾನುಭೂತಿ ಅಥವಾ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ.
ಹಾಗಾಗಿ, ನಿಮ್ಮನ್ನು ಓಡಿಸುವ, ಮನಸ್ಸೆಂದು ಕರೆಯಲ್ಪಡುವ ಕಾರಿನ ಬಗ್ಗೆ ಕಾಳಜಿ ವಹಿಸಿ.

ಮನಸ್ಸು ನಿಮ್ಮನ್ನು ಚಲಾಯಿಸುವ ಬದಲಾಗಿ ನೀವು ಮನಸ್ಸನ್ನು ಚಲಾಯಿಸಬೇಕು. ನಿಮಗೇನು ಅನ್ನಿಸುತ್ತದೆ? ಅದು ಸರಿಯೇ?

ಜ್ಞಾನವು ಏನು ಮಾಡುತ್ತದೆ? ಜ್ಞಾನವು, ನೀವು ಮನಸ್ಸನ್ನು ಹೇಗೆ ಚಲಾಯಿಸಲು ಬಯಸುವಿರೋ ಹಾಗೆ ಚಲಾಯಿಸುವಂತೆ ಸಶಕ್ತಗೊಳಿಸುತ್ತದೆ. ಅಲ್ಲದಿದ್ದರೆ, ನೀವು ವಾಹನ ಚಲಾಯಿಸುವ ಸೀಟಿನಲ್ಲಿರುವುದಿಲ್ಲ, ಮನಸ್ಸು ಚಲಾಯಿಸುತ್ತಿರುತ್ತದೆ. ಅದು ತಾನಾಗಿಯೇ ಹೋಗುವಂತಹ ಒಂದು ಸ್ವಯಂಚಾಲಿತ ಕಾರು ಆಗಿರುತ್ತದೆ. ನೀವು ಎಡಕ್ಕೆ ಹೋಗಲು ಬಯಸುತ್ತೀರಿ ಮತ್ತು ಕಾರು ಬಲಕ್ಕೆ ಹೋಗುತ್ತಿದೆಯೆಂದು ಅಚ್ಚರಿಪಡುತ್ತಾ ಕುಳಿತಿರುತ್ತೀರಿ ಮತ್ತು ನೀವು ಅಸಹಾಯಕರಾಗುತ್ತೀರಿ.

ನಮ್ಮಲ್ಲಿ ಹೆಚ್ಚಿನವರ ಜೀವನವಿರುವುದು ಹೀಗೆಯೇ. ನಾವೇನು ಮಾಡುತ್ತಿರುವೆವೆಂದು ನಮಗೆ ತಿಳಿಯದು, ನಮಗೇನು ಬೇಕೆಂಬುದು ನಮಗೆ ತಿಳಿಯದು ಮತ್ತು ನಾವೆಲ್ಲಿಗೆ ಹೋಗುತ್ತಿರುವೆವೆಂಬುದು ನಮಗೆ ತಿಳಿಯದು. ಕಾರು ಸುಮ್ಮನೇ ಹೋಗುತ್ತಿದೆ ಮತ್ತು ನಾವು ಹಿಂದೆ ಕುಳಿತುಕೊಂಡು, "ನಾನು ಎಡಕ್ಕೆ ಹೋಗಲು ಬಯಸುತ್ತೇನೆ" ಎಂದು ಹೇಳುತ್ತಿರುತ್ತೇವೆ ಹಾಗೂ ಕಾರು ಬಲಕ್ಕೆ ಹೋಗುತ್ತದೆ. ಹೀಗೆ ಆಗುತ್ತಿಲ್ಲವೇ?

ನಾವು ಬೇರೆ ಯಾವುದರಿಂದಲೋ ಚಲಾಯಿಸಲ್ಪಡುತ್ತಿದ್ದೇವೆ. ಆದುದರಿಂದ ನಾವು, "ಹಿಂದೆ ಕುಳಿತುಕೊಳ್ಳುವುದರಿಂದ ನಾನು ಚಾಲಕನ ಸೀಟಿಗೆ ಹೇಗೆ ಜಿಗಿಯಬಹುದು, ಆ ನೆಗೆತವನ್ನು ನಾನು ಹೇಗೆ ಮಾಡಬಹುದು" ಎಂಬುದರ ಕಡೆಗೆ ನೋಡಬೇಕಾಗಿದೆ, ಮತ್ತು ಅದುವೇ ಆಧ್ಯಾತ್ಮಿಕತೆಯಾಗಿದೆ. ಅದುವೇ ಎಲ್ಲಾ ಧರ್ಮಗ್ರಂಥಗಳ ಸಾರವಾಗಿದೆ.

ನೀವು ಭಗವದ್ಗೀತೆಯನ್ನು ಓದಿದರೆ, ಆಗ ನಿಮಗೆ ತಿಳಿಯುವುದು ಇದುವೇ. ಕಾಲಾನಂತರದಲ್ಲಿ, ನಿಮಗೆ ಕೇಳಿಸುವುದು ಇದೇ ಸಾರ, ನಿಮ್ಮ ಆತ್ಮವು ಅವಿನಾಶಿ; ಆತ್ಮದಲ್ಲಿ ವಿಶ್ರಾಂತಿ ಮಾಡಿ. ಇದು ಸಾರವಾಗಿದೆ. ಇದೇ ವಿಷಯವು, ಅಂದರೆ ಆತ್ಮವು ಅವಿನಾಶಿಯೆಂಬುದಾಗಿ ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಕೃಷ್ಣ ಪರಮಾತ್ಮನಿಂದ ಹೇಳಲ್ಪಟ್ಟಿದೆ.

ನೀವು ಹೇಳಲೂಬಹುದು, "ಸರಿ, ಅದೆಲ್ಲಾ ಒಳ್ಳೆಯದು, ಇದನ್ನು ನಾವು ಓದಿದ್ದೇವೆ, ಇದನ್ನು ಅರ್ಥ ಮಾಡಿಕೊಂಡಿದ್ದೇವೆ, ಆದರೆ ಗುರುದೇವ ಇದನ್ನೇ ಜೀವನದಲ್ಲಿ ಬಳಸಲು ನಾವು ಅಸಮರ್ಥರಾಗಿರುವುದು."

ಇದನ್ನು ನಾನು ಇಲ್ಲಿ ಕುಳಿತಿರುವ ಎಲ್ಲಾ ವೃದ್ಧರನ್ನು ಸಂಬೋಧಿಸಿ ಹೇಳುತ್ತಿದ್ದೇನೆ. ನಿಮಗೆ ವಯಸ್ಸಾಗಿದೆಯೆಂದು ಯಾವತ್ತಾದರೂ ನಿಮಗೆ ಅನ್ನಿಸಿದೆಯೇ? ಇಲ್ಲಿ ಕುಳಿತಿರುವ ಎಲ್ಲಾ ತಾಯಂದಿರು, ವೃದ್ಧರು ಉತ್ತರಿಸಿ. ನಿಮಗೆ ವಯಸ್ಸಾಗಿದೆಯೆಂದು ನಿಮಗೆ ಯಾವತ್ತಾದರೂ ಅನ್ನಿಸಿದೆಯೇ? ಇಲ್ಲ! ತನಗೆ ವಯಸ್ಸಾಗಿದೆಯೆಂದು ಒಬ್ಬನಿಗೆ ಯಾವತ್ತೂ ಅನ್ನಿಸುವುದಿಲ್ಲ.

ನಮ್ಮ ಚಿಕ್ಕ ಮಕ್ಕಳು ದೊಡ್ಡವರಾಗಿದ್ದಾರೆ, ಆದರೆ ನಾವಿನ್ನೂ ಹಾಗೆಯೇ ಇದ್ದೇವೆಂದು ನಮಗನ್ನಿಸುತ್ತದೆ. ನಮಗನ್ನಿಸುವುದು ಹೀಗೆ; ನಮಗೆ ವಯಸ್ಸಾಗದಿರುವುದು ಮಾತ್ರವಲ್ಲ, ನಾವು ಹಾಗೆಯೇ ಇದ್ದೇವೆ ಎಂದು - ಇದು ಆತ್ಮದ ಒಂದು ಣುಕುನೋಟವಾಗಿದೆ.

ನೋಡಿ, ನಮ್ಮೊಳಗೆ ಯಾವತ್ತೂ ಬದಲಾಗದೇ ಇದ್ದ ಏನೋ ಒಂದಿದೆ. ಶರೀರವು ಬದಲಾಗಿದೆ, ಮನಸ್ಸು ಬದಲಾಗಿದೆ ಮತ್ತು ಬುದ್ಧಿಯು ಬದಲಾಗಿದೆ, ಆದರೆ ಮನಸ್ಸಿನಲ್ಲಿ ಬದಲಾಗದಿರುವ ಏನೋ ಒಂದಿದೆ. ಅಲ್ಲಿ ಇಲ್ಲಿ ನಮಗೆ ಇದರ ಒಂದು ಚಿಕ್ಕ ಇಣುಕುನೋಟವು ಸಿಗುತ್ತದೆ. ಆದರೆ ನೀವು ಧ್ಯಾನ ಮಾಡುವಾಗ ಇದು ಸಾಕಷ್ಟು ಉತ್ತಮವಾಗಿ ಅರ್ಥವಾಗುತ್ತದೆ. ಆಗ ನಿಮ್ಮ ಮುಖದಲ್ಲಿ ಎಂತಹ ಒಂದು ನಗೆ ಬರುವುದೆಂದರೆ, ಯಾರಿಗೂ ಅದನ್ನು ಅಳಿಸಿಹಾಕಲು ಸಾಧ್ಯವಾಗದು.

ನಾವಿಲ್ಲಿರುವುದು ಇದೇ ಮೊದಲ ಸಾರಿಯಲ್ಲ. ನಾವಿಲ್ಲಿ ಹಲವಾರು ಸಾರಿ ಇದ್ದೆವು, ಹಲವಾರು ಸಾರಿ ಭೇಟಿಯಾಗಿರುವೆವು; ಹಲವಾರು ಸಾರಿ ನಾವು ಜನ್ಮ ತಾಳಿರುವೆವು. ನನಗದು ತಿಳಿದಿದೆ, ಬಹುಶಃ ನಿಮಗದು ತಿಳಿಯದು. ನಿಮಗದು ತಿಳಿದಿದ್ದರೂ ಅಥವಾ ತಿಳಿಯದೇ ಇದ್ದರೂ, ನಾವು ಮೊದಲು ಭೇಟಿಯಾಗಿರುವೆವು; ನಾವು ಮೊದಲು ಬಂದಿರುವೆವು ಎಂಬುದು ನನಗೆ ತಿಳಿದಿದೆ. ನಿಮಗೆ ನೆನಪಿಲ್ಲ, ನೀವು ಮರೆತುಬಿಟ್ಟಿರುವಿರಿ.

ನಮ್ಮ ಜೀವನವು ಅನಂತವಾದುದು. ಅದು ಇಲ್ಲಿಗೇ ಮುಗಿಯುವುದಿಲ್ಲ. ಇದರ ನಂತರ, ನಾವು ಮತ್ತೆ ಬರುವೆವು. ನಾವು ಅನಂತವೂ, ಚಿರಸ್ಥಾಯಿಯೂ ಆಗಿರುವೆವು; ಶಾಶ್ವತವಾಗಿರುವ ಒಂದು ಅಂಶವು ನಮ್ಮಲ್ಲಿದೆ. ನನಗೇನೂ ಸಂಭವಿಸಿಲ್ಲ, ನನ್ನಲ್ಲೇನೂ ಬದಲಾಗಿಲ್ಲವೆಂಬುದನ್ನು ನೀವು ಅರಿತಾಗ ಇದರ ಒಂದು ಚಿಕ್ಕ ಇಣುಕುನೋಟವು ಅನುಭವವಾಗುತ್ತದೆ.

ಧ್ಯಾನದಲ್ಲಿ ಆಳಕ್ಕೆ ಹೋಗಿ; ಬೇರೆಲ್ಲವೂ ಬರುತ್ತಾ ಹೋಗುತ್ತಾ ಇರುವುದು; ಆದರೆ ಒಬ್ಬರು ಧ್ಯಾನ ಮಾಡಬೇಕು.

ಪ್ರಶ್ನೆ: ಜೀವನದ ಮೂಲ ಯಾವುದು? ಜೀವನವು ಹೇಗೆ ಆರಂಭವಾಯಿತು? ಜನಸಂಖ್ಯೆಯು ಹೆಚ್ಚುತ್ತಾ ಹೋಗುವುದು ಹೇಗೆ? ಆತ್ಮಗಳು ವಿಭಜಿಸಲ್ಪಡುತ್ತಿವೆಯೇ?

ಶ್ರೀ ಶ್ರೀ ರವಿ ಶಂಕರ್: ಪ್ರಾಚೀನ ಕಾಲದಿಂದ ಬಳಸಲ್ಪಡುತ್ತಿರುವ ಎರಡು ಪದಗಳಿವೆ. ಒಂದು ಅನಾದಿ ಎಂದು ಕರೆಯಲ್ಪಡುತ್ತದೆ, ಅಂದರೆ ಆರಂಭವಿಲ್ಲದುದು ಮತ್ತು ಇನ್ನೊಂದು ಅನಂತ ಅಂದರೆ ಕೊನೆಯಿಲ್ಲದುದು.

ನೀನು ನನಗೊಂದು ನೇರವಾದ ಗೆರೆಯನ್ನು ತೋರಿಸಿ, ಅದು ಎಲ್ಲಿಂದ ಆರಂಭವಾಯಿತು ಎಂದು ನನ್ನಲ್ಲಿ ಕೇಳಿದರೆ, ಅದು ಇಲ್ಲಿಂದ ಆರಂಭವಾಯಿತು ಮತ್ತು ಇಲ್ಲಿ ಕೊನೆಯಾಯಿತು; ಅಥವಾ ಅದು ಈ ಬದಿಯಿಂದ ಆರಂಭವಾಯಿತು ಮತ್ತು ಆ ಬದಿಯಲ್ಲಿ ಕೊನೆಯಾಯಿತು ಎಂದು ನಾನು ಹೇಳಬಹುದು. ಆದರೆ ನೀನು ನನಗೊಂದು ಗೋಲವನ್ನು ತೋರಿಸಿ, ಗೋಲದ ಆರಂಭ ಬಿಂದು ಎಲ್ಲಿದೆ ಎಂದು ನನ್ನಲ್ಲಿ ಕೇಳಿದರೆ, ನಾನೇನು ಹೇಳಲು ಸಾಧ್ಯ?

ನಾನು ನಿನಗೊಂದು ಟೆನ್ನಿಸ್ ಚೆಂಡನ್ನು ಕೊಡುವೆನು ಮತ್ತು ಅದರ ಆರಂಭ ಬಿಂದು ಎಲ್ಲಿದೆಯೆಂದು ನೀನು ನನಗೆ ಹೇಳು. ಅದರಲ್ಲೇನಾದರೂ ಅರ್ಥವಿದೆಯೇ? ಇಲ್ಲ!

ಹಾಗಾಗಿ ಅದೇ ರೀತಿಯಲ್ಲಿ, ಮೂರು ವಿಷಯಗಳು ಶಾಶ್ವತವಾಗಿವೆ: ಒಂದನೆಯದು ಜೀವನ, ಇನ್ನೊಂದು ಪದಾರ್ಥ ಮತ್ತು ಮೂರನೆಯದು, ನೀವು ದೇವರು ಅಥವಾ ಆತ್ಮ ಎಂದು ಕರೆಯುವ ಸರ್ವೋಚ್ಛ ಶಕ್ತಿ. ಈ ಮೂರು ವಿಷಯಗಳು ಆರಂಭವಾಗುವುದೂ ಇಲ್ಲ, ಅಂತ್ಯವಾಗುವುದೂ ಇಲ್ಲ, ಆದರೆ ಅವುಗಳ ಕ್ರಮಪಲ್ಲಟನೆ ಮತ್ತು ಸಂಯೋಜನೆಗಳು ಈ ಸಂಪೂರ್ಣ ವಿಶ್ವವನ್ನು ಮಾಡುತ್ತದೆ.

ಹಾಗಾದರೆ, ಹೊಸ ಆತ್ಮಗಳು ಬರುತ್ತಿರುವುದು ಹೇಗೆ? ನಿನಗೆ ಗೊತ್ತಾ, ನಶಿಸಿ ಹೋಗುತ್ತಿರುವ ಹಲವಾರು ಜೀವಜಾತಿಗಳಿವೆ. ಹಲವಾರು ಹಾವುಗಳು ಮತ್ತು ಚೇಳುಗಳಿದ್ದವು, ಅವುಗಳೆಲ್ಲಾ ಮಾಯವಾಗಿವೆ ಮತ್ತು ಈಗ ಜನರಾಗಿ ಬಂದಿವೆ.

ಭೂಮಿಯ ಮೇಲೆ ಹಲವಾರು ಎಮ್ಮೆಗಳು ಮತ್ತು ಕತ್ತೆಗಳಿದ್ದವು, ಅವುಗಳೆಲ್ಲಾ ಮಾಯವಾಗಿವೆ. ಒಂದನೊಂದು ಕಾಲದಲ್ಲಿ ಪ್ರತಿಯೊಂದು ಭೂಖಂಡದಲ್ಲೂ ಮಂಗಗಳಿದ್ದವು, ಅವುಗಳು ಈಗ ಎಲ್ಲಿವೆ? ನಿಮಗೆ ಆಂಟ್‌ವೆರ್ಪ್‌ನಲ್ಲಿ ಯಾವುದೂ ಕಾಣಸಿಗುವುದಿಲ್ಲ. ನನಗೆ ಹಾಗೆ ಅನ್ನಿಸುವುದಿಲ್ಲ. ಹೀಗೆ, ಆತ್ಮಗಳು ಹಲವಾರಿವೆ, ಅವುಗಳು ಹಲವಾರು ರೂಪಗಳನ್ನು ತೆಗೆದುಕೊಳ್ಳುತ್ತವೆ ಹಾಗೂ ಅವುಗಳು ಬರುತ್ತವೆ, ಹೋಗುತ್ತವೆ.

ಐದು ರಹಸ್ಯಗಳಿವೆ ಮತ್ತು ಅವುಗಳಲ್ಲೊಂದು ಸೃಷ್ಟಿಯ ರಹಸ್ಯವಾಗಿದೆ. ಅದರ ಬಗ್ಗೆ ಹೆಚ್ಚಿನದನ್ನು ತಿಳಿಯಲು, ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬೇಕು.

ಪ್ರಶ್ನೆ: ಕೋಪವನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನಿನಗೆ ಕೋಪ ಯಾಕೆ ಬರುವುದೆಂದು ನಿನಗೆ ಗೊತ್ತೇ? ಅದು ಯಾಕೆಂದರೆ, ನೀನು ಪರಿಪೂರ್ಣತೆಯನ್ನು ಬಯಸುವೆ ಅಥವಾ ನಿರ್ದಿಷ್ಟ ವಿಷಯಗಳು ಒಂದು ನಿರ್ದಿಷ್ಟ ರೀತಿಯಲ್ಲಿರಬೇಕೆಂದು ನೀನು ಬಯಸುವೆ. ಎಲ್ಲವೂ ಆ ರೀತಿ ಇರಲು ಸಾಧ್ಯವಿಲ್ಲವೆಂಬುದು; ಅದನ್ನು ಎದುರಿಸೋಣ, ಇದು ಜೀವನವೆಂಬುದು ನಿನಗೆ ತಿಳಿದಾಗ ಅಚಾನಕ್ಕಾಗಿ ಮೆದುಳು ವಿಶ್ರಮಿಸಲು ತೊಡಗುತ್ತದೆ.

ನೀನು ಕೋಪಗೊಳ್ಳುವುದು ನಿನಗೆ ಯಾವುದೇ ರೀತಿಯಲ್ಲಿಯೂ ಸಹಾಯ ಮಾಡುವುದಿಲ್ಲ. ಅದು ಕೆಲಸವಾಗುವಂತೆ ಮಾಡುವುದಿಲ್ಲ, ಅಲ್ಲವೇ? ಆದರೆ ನೀನು ಕೋಪವನ್ನು ತೋರಿಸಿದರೆ ಮತ್ತು ಅದು ಕೆಲಸ ಮಾಡಿದರೆ ಅದು ಒಳ್ಳೆಯದು, ಆಗ ಅದನ್ನು ಉಪಯೋಗಿಸು. ಅದರಲ್ಲೇನೂ ತಪ್ಪಿಲ್ಲ.

ಕೋಪವನ್ನು ಒಂದು ಆಯುಧದಂತೆ ಬಳಸುವುದರಲ್ಲೇನೂ ತಪ್ಪಿಲ್ಲ, ಆದರೆ ಅದು ನಿಮ್ಮದೇ ಮನಃಶಾಂತಿಯನ್ನು ಕತ್ತರಿಸುತ್ತಿದ್ದರೆ, ಆಗ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ನೀವು ಜ್ಞಾನವನ್ನು ಬಳಸಬೇಕು.

ಅಪರಿಪೂರ್ಣತೆಗೆ ಕೂಡಾ ಸ್ವಲ್ಪ ಜಾಗ ಕೊಡುವುದು ಬುದ್ಧಿವಂತಿಕೆಯಾಗಿದೆ.

ಒಂದು ಮನೆಯಲ್ಲಿ, ನೀವೊಂದು ಕಸದಬುಟ್ಟಿಯನ್ನು ಇಡುವುದಿಲ್ಲವೇ? ಹೌದು, ನೀವು ಇಡುತ್ತೀರಿ. ಹೀಗೆ ಕಸದಬುಟ್ಟಿಗೆ ಕೂಡಾ ಒಂದು ಜಾಗವಿದೆ. ಅದೇ ರೀತಿಯಲ್ಲಿ, ಅಪರಿಪೂರ್ಣತೆಗೆ ಸ್ವಲ್ಪ ಜಾಗ ಕೊಡಿ. ಇದರಿಂದ ಕನಿಷ್ಠಪಕ್ಷ ನಿಮ್ಮ ಮನಸ್ಸಾದರೂ ಶಾಂತವಾಗಿರುವುದು.

ನಿಮ್ಮ ಮನಸ್ಸನ್ನು ಅಶಾಂತವಾಗಿಟ್ಟುಕೊಳ್ಳುವುದರಲ್ಲಿ ಏನಿದೆ ಅರ್ಥ? ಪ್ರಪಂಚದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ.  

ಆರ್ಟ್ ಆಫ್ ಲಿವಿಂಗ್‌ನಲ್ಲಿ ನಾನೊಂದು ನಿಯಮವನ್ನು ಮಾಡಿದ್ದೇನೆ, ಯಾರನ್ನೂ ದೂರ ಕಳಿಸದೇ ಇರುವುದು. ಜನರು ಹೇಗಿರುವರೋ ಹಾಗೆಯೇ ಅವರನ್ನು ಸ್ವೀಕರಿಸುವುದು. ಇದರಿಂದಾಗಿ, ನಾನೀಗ ಸಿಕ್ಕಿಹಾಕಿಕೊಂಡಿದ್ದೇನೆ! ಎಷ್ಟೊಂದು ವಿವಿಧ ರೀತಿಯ ಜನರು ಆರ್ಟ್ ಆಫ್ ಲಿವಿಂಗ್‌ಗೆ ಬರುತ್ತಾರೆ, ಮತ್ತು ನಾನು ಎಲ್ಲರಿಗೂ ಜಾಗ ಮಾಡುತ್ತೇನೆ.

ನಿಮಗೆ ಗೊತ್ತಾ, ಸಮಾಜವು ೧೨ ರೀತಿಯ ಜನರಿಂದ ಮಾಡಲ್ಪಟ್ಟಿದೆ, ಯೇಸುಕ್ರಿಸ್ತನ ದೇವದೂತರಿಂದ ಮಾತ್ರವಲ್ಲ. ಅವುಗಳು ಯಾವುವು? ನಾಲ್ಕು ಒಳ್ಳೆಯ, ನಾಲ್ಕು ಮಧ್ಯಮ ಮತ್ತು ನಾಲ್ಕು ನಿರಾಶಾಜನಕವಾದುದು. ನಿರಾಶಾಜನಕ ಜನರು, ನೀವು ನಿಮ್ಮಲ್ಲಿರುವ ಸತ್ವಗುಣವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತಾರೆ. ನಿರಾಶಾಜನಕ ಜನರ ಮುಂದೆ, ನಿಮ್ಮ ಮನಸ್ಸು ಶಾಂತವಾಗಿರಬೇಕು. ಸಾಧಾರಣವಾದ ಜನರು ನಿಮ್ಮಲ್ಲಿರುವ ಕುಶಲತೆಗಳನ್ನು ಹೊರತರುತ್ತಾರೆ ಮತ್ತು ಒಳ್ಳೆಯ ಜನರು ಯಾವಾಗಲೂ ನಿಮಗೆ ಸಹಾಯ ಮಾಡುತ್ತಾರೆ.

ಹೀಗೆ ಈ ೧೨ ವಿಧದ ಜನರು ಸಮಾಜದಲ್ಲಿ ಯಾವತ್ತೂ ಇರುತ್ತಾರೆ. ನಾವವರನ್ನು ಅವರಿರುವಂತೆಯೇ ಸ್ವೀಕರಿಸಬೇಕು ಮತ್ತು ಮುಂದೆ ಸಾಗಬೇಕು.

ಯಾರೋ ನನ್ನಲ್ಲಿ ಕೇಳಿದರು, "ಗುರುದೇವ, ನೀವು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರಬೇಕಾದರೆ, ಭ್ರಷ್ಟ ಜನರು ಯಾಕೆ ನಿಮ್ಮ ಆಶ್ರಮಕ್ಕೆ ಬರುತ್ತಿದ್ದಾರೆ? ನೀವು ಪ್ರಾಮಾಣಿಕತೆ ಮತ್ತು ಸತ್ಯಗಳ ಒಂದು ಪ್ರತೀಕವಾಗಿರುವಿರಿ, ಈ ಭ್ರಷ್ಟ ಜನರು ಯಾಕೆ ನಿಮ್ಮ ಬಳಿಗೆ ಬರುತ್ತಿದ್ದಾರೆ?"

ನಾನಂದೆ, "ಎಲ್ಲಾ ಭ್ರಷ್ಟ ಜನರು ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ. ಅವರು ನನ್ನ ಬಳಿಗೆ ಬಂದರೆ ಮಾತ್ರ ಅವರು ಉತ್ತಮರಾಗಲು ಸಾಧ್ಯ."

ಹಾಗಾಗಿ ನಾನು ಯಾರಿಗೂ ನನ್ನ ಬಾಗಿಲನ್ನು ಮುಚ್ಚುವುದಿಲ್ಲ. ನಾನು ನಿಮಗೂ ಅದನ್ನೇ ಹೇಳುತ್ತಿದ್ದೇನೆ, ಅಪರಿಪೂರ್ಣ ಜನರಿದ್ದಾರೆ, ಅವರು ನಿಮ್ಮ ಸಹನೆ ಪರೀಕ್ಷಿಸುತ್ತಾರೆ ಮತ್ತು ನೀವು ಕೋಪಗೊಳ್ಳುವಂತೆ ಮಾಡುತ್ತಾರೆ. ಅವರು ನಿಮ್ಮನ್ನು ಶಕ್ತಿಶಾಲಿಗಳನ್ನಾಗಿ ಮಾಡುವುದಕ್ಕೋಸ್ಕರ ಇರುವರೆಂಬುದನ್ನು ತಿಳಿಯಿರಿ. ನೀವು ನೋಡಬೇಕಾದುದೇನೆಂದರೆ, ನೀವು ನಿಮ್ಮ ಸಮಚಿತ್ತತೆಯನ್ನು ಹೇಗೆ ಇಟ್ಟುಕೊಳ್ಳಬಹುದು ಮತ್ತು ಹಾಗಿದ್ದೂ, ಅವರೆಲ್ಲಿರುವರೋ ಅಲ್ಲಿಂದ ಅವರೆಲ್ಲಿ ಇರಬಹುದೋ ಅಲ್ಲಿಗೆ ಒಯ್ಯಲು ಅವರಿಗೆ ನೀವು ಹೇಗೆ ಸಹಾಯ ಮಾಡಬಹುದು ಎಂದಾಗಿದೆ.

ಪ್ರಶ್ನೆ: ಗುರುದೇವ, ಯಾರಾದರೂ ನಿಮ್ಮೊಂದಿಗೆ ಕೋಪಗೊಂಡರೆ? ನೀವೇನು ಮಾಡುವಿರಿ?

ಶ್ರೀ ಶ್ರೀ ರವಿ ಶಂಕರ್: , ನಿನಗೆ ಗೊತ್ತಾ, ನಾನು ನಿನಗಿಂತ ಸ್ವಲ್ಪ ದೊಡ್ಡವನಾಗಿದ್ದಾಗ, ನಾನು ಧ್ಯಾನ ಕಲಿಸುತ್ತಿದ್ದೆ, ಮತ್ತು ಅಲ್ಲೊಬ್ಬರು ವಯಸ್ಸಾದ ವ್ಯಕ್ತಿಯಿದ್ದರು. ಅವರೊಬ್ಬ ಧ್ಯಾನದ ಶಿಕ್ಷಕರಾಗಿದ್ದರು. ಅವರು ಧ್ಯಾನವನ್ನು ಕಲಿಸುತ್ತಿದ್ದರು, ಆದರೆ ಹಲವಾರು ಜಾಹೀರಾತುಗಳ ಹೊರತಾಗಿಯೂ ಜನರು ಅವರ ಬಳಿಗೆ ಹೋಗುತ್ತಿರಲಿಲ್ಲ. ನಾನು ಸುಮ್ಮನೆ ಕುಳಿತುಕೊಳ್ಳುತ್ತಿದ್ದೆ ಮತ್ತು ಜನರು ಬಂದು ನನ್ನಿಂದ ಕಲಿಯಲು ಬಯಸುತ್ತಿದ್ದರು. ನಂತರ ಒಂದು ದಿನ, ಅವರು ಅಸಮಾಧಾನ ಮತ್ತು ಕೋಪಗೊಂಡರು. ಅವರು ಬಹಳ ಕೋಪದೊಂದಿಗೆ ನನ್ನ ಬಳಿಗೆ ಬಂದರು. ಅವರು ಎಲ್ಲಾ ರೀತಿಯಾಗಿ ಹೇಳಲು ಶುರು ಮಾಡಿದರು. ನಾನು ಸುಮ್ಮನೆ ಒಂದು ಲೋಟದಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಹೋಗಿ ಅವರ ಮುಂದೆ ಇಟ್ಟೆ.

ನಾನಂದೆ, "ದಯವಿಟ್ಟು ನೀರು ಕುಡಿಯಿರಿ. ನೀವು ನಿಮಗೇ ಬಳಲಿಕೆಯುಂಟು ಮಾಡುತ್ತಿರುವಿರೆಂದು ನನಗನ್ನಿಸುತ್ತಿದೆ" ಮತ್ತು ನಂತರ ಅವರು ಸುಮ್ಮನೆ ಬಹಳ ಮೌನವಾದರು. ಅದರ ನಂತರ ಅವರಿಗೆ ಒಂದು ಶಬ್ದವನ್ನೂ ಮಾತನಾಡಲಾಗಲಿಲ್ಲ.

ಅವರ ಕುತ್ತಿಗೆಯ ನರಗಳೆಲ್ಲಾ ಬಹಳ ಬಿಗಿಗೊಳ್ಳುವುದನ್ನು ಮತ್ತು ಅವರ ಶರೀರವು ಬಹಳ ಬಿಗಿಗೊಳ್ಳುವುದನ್ನು ನಾನು ನೋಡಿದೆ. ಅವರಿಗೆ ಏನಾದರೂ ಆಗಬಹುದೆಂದು ನಾನು ಯೋಚಿಸಿದೆ. ನಾನೇನೂ ತಪ್ಪು ಮಾಡಿರಲಿಲ್ಲ, ಆದರೆ ಅವರು ಅಷ್ಟೊಂದು ಕೋಪಗೊಂಡಿದ್ದರು, ಯಾಕೆಂದರೆ ಜನರು ನನ್ನ ಮುಂದೆ ಕುಳಿತುಕೊಂಡು ಧ್ಯಾನ ಕಲಿಯಲು ಬರುತ್ತಿದ್ದರು ಎಂಬ ಕಾರಣಕ್ಕಾಗಿ. ಹೀಗೆ, ಅವರು ಹೇಗೆ ಕೋಪಗೊಂಡರು ಎಂಬುದನ್ನು ನಾನು ಸುಮ್ಮನೆ ನೋಡಿದೆ.

ನಿಮಗೆ ಗೊತ್ತಾ, ಈ ಎಲ್ಲಾ ೫೬ ವರ್ಷಗಳಲ್ಲಿ ನಾನು ಯಾವತ್ತೂ ಒಂದು ಕೆಟ್ಟ ಪದವನ್ನೂ ಹೇಳಿಲ್ಲ. ಈಗಿನವರೆಗೆ, ನಾನು ಯಾರ ವಿರುದ್ಧವೂ ಯಾವುದೇ ಅವಾಚ್ಯ ಶಬ್ದವನ್ನು ಬಳಸಿಲ್ಲ, ಅದು ಬರುವುದೇ ಇಲ್ಲ. ನಾನು ಚಿಕ್ಕವನಾಗಿದ್ದಾಗ ಕೂಡಾ, ನಾನು ಯಾವತ್ತೂ ಯಾವುದೇ ಅವಾಚ್ಯ ಶಬ್ದವನ್ನು ಬಳಸಲಿಲ್ಲ. ಯಾಕೆಂದು ನನಗೆ ತಿಳಿಯದು, ಬಹುಶಃ ಅದು ಈ ಶರೀರ ಮತ್ತು ಮನಸ್ಸಿನ ರಚನೆಯಿರಲೂಬಹುದು. ಆದರೆ ನಾನು ಹೇಳುತ್ತಿರುವುದೇನೆಂದರೆ, ಯಾರಾದರೂ ನಿಮ್ಮ ಮೇಲೆ ಕೋಪಗೊಂಡಾಗ, ನೀವೇನು ಮಾಡಬಹುದೆಂದರೆ, ಒಂದೋ ನೀವು ಕೋಪಗೊಳ್ಳಬಹುದು ಅಥವಾ ನೀವು ಸುಮ್ಮನೆ ಮೌನವಾಗಬೇಕು. ಸುಮ್ಮನೆ ಅವರನ್ನು ನೋಡಿ ಮತ್ತು ನಂತರ ಅವರಿಗೆ, "ಶಾಂತಿ" ಎಂದು ಹೇಳಿ.  

ಪ್ರಶ್ನೆ: ಗುರುದೇವ, ನಾವು ದಿನವೂ ಹಿಂಸೆಯ, ರಕ್ತಪಾತದ ಮತ್ತು ಜನರು ನರಳುತ್ತಿರುವ ಚಿತ್ರಗಳನ್ನು ನೋಡುತ್ತೇವೆ. ಆ ಜನರಿಗೆ ಸಹಾಯ ಮಾಡಲು ನಾವೇನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಅದನ್ನು ಜ್ಞಾನದ ಮೂಲಕ ಮಾತ್ರ ಮಾಡಲು ಸಾಧ್ಯ. ಪ್ರಪಂಚದಲ್ಲಿನ ಈ ಸಮಸ್ಯೆಯನ್ನು ನಾವು ಎದುರಿಸಲು ಸಾಧ್ಯವಾಗುವುದು ಜ್ಞಾನದ ಮೂಲಕವಾಗಿದೆ. ಅದಕ್ಕಾಗಿಯೇ ನಾವು ಆರ್ಟ್ ಆಫ್ ಲಿವಿಂಗ್ ಮತ್ತು ಐ.ಎ.ಹೆಚ್.ವಿ.ಗಳನ್ನು ಪ್ರಾರಂಭಿಸಿದುದು.

ನಿಮಗೆ ಗೊತ್ತಾ, ದಿನವಿಡೀ ಕುಳಿತುಕೊಂಡು ಧ್ಯಾನ ಮಾಡುವುದರಿಂದ ನಾನು ಬಹಳ ಸಂತೋಷಗೊಳ್ಳುವೆನು. ನಾನು ಸಂತೋಷವಾಗಿ ಒಂದು ಜಾಗದಲ್ಲಿರಬಹುದಾಗಿತ್ತು. ನಾನು ಪ್ರಪಂಚದ ಎಲ್ಲೆಡೆಗೂ ಹೋಗುವುದು ಯಾಕೆ? ಅದು ಯಾಕೆಂದರೆ, ಜನರ ದುಃಖವು ಕಡಿಮೆಯಾಗಲೆಂದು. ನಾನೊಂದು ಸಂಸ್ಥೆಯನ್ನು ರೂಪಿಸಿದುದು ಯಾಕೆ? ಅದು ಯಾಕೆಂದರೆ, ಇತರರು ತಮ್ಮಲ್ಲಿಯೇ ಶಾಂತಿಯಿಂದಿರಲು ಅವರಿಗೆ ಸಹಾಯ ಮಾಡಲು ನಮಗೆ ಸಾಧ್ಯವಾಗಲೆಂದು. ಅದಕ್ಕಾಗಿಯೇ ನಮ್ಮಲ್ಲಿ ಸೇವೆ, ಸಾಧನೆ ಮತ್ತು ಸತ್ಸಂಗಗಳಿರುವುದು. ಈ ಎಲ್ಲಾ ಮೂರೂ ಜೊತೆಯಲ್ಲಿರಬೇಕು.

ನಾನು ಸಂಪೂರ್ಣ ಪ್ರಪಂಚವನ್ನು ಒಂದು ಕುಟುಂಬವಾಗಿ ನೋಡುತ್ತೇನೆ ಮತ್ತು ಪ್ರತಿಯೊಬ್ಬರೂ ನನ್ನ ಭಾಗವಾಗಿರುವರು ಎಂಬುದು ನನಗೆ ತಿಳಿದಿದೆ. ಹಾಗಾಗಿ, ನಾನೇನು ಮಾಡಬೇಕೋ ಅದನ್ನು ನಾನು ಮಾಡುತ್ತಾ ಇರುವೆನು. ಅದೇ ರೀತಿಯಲ್ಲಿ, ನಿಮಗೇನು ಮಾಡಲು ಸಾಧ್ಯವೋ ಅದನ್ನು ನೀವು ಮಾಡುತ್ತಾ ಇರಿ, ಮತ್ತು ಎಲ್ಲವನ್ನೂ ನಿಯಂತ್ರಿಸುವ ಒಂದು ದೊಡ್ಡ ಶಕ್ತಿಯಿದೆ ಎಂಬುದನ್ನು ತಿಳಿಯಿರಿ. ಅದರ ಬಗ್ಗೆ ಒತ್ತಡವನ್ನು ಅನುಭವಿಸಬೇಡಿ.

ಪ್ರಶ್ನೆ: ಗುರುದೇವ, ನಾವೊಬ್ಬ ಭಯೋತ್ಪಾದಕನನ್ನು ಪ್ರೀತಿಸಬೇಕಾದುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ನೀವು ಭಯೋತ್ಪಾದಕರನ್ನು ಪ್ರೀತಿಸಬೇಕೆಂದು ನಾನು ಹೇಳುತ್ತಿಲ್ಲ. ನೀವು ಭಯೋತ್ಪಾದಕರನ್ನು ಸ್ವೀಕರಿಸಬೇಕು. ನೀವು ಅವನನ್ನು ಅಥವಾ ಅವಳನ್ನು ಸ್ವೀಕರಿಸಿದಾಗ ಮಾತ್ರ ನಿಮಗೆ ಅವನಲ್ಲಿ ಅಥವಾ ಅವಳಲ್ಲಿ ಒಂದು ಪರಿವರ್ತನೆಯನ್ನು ತರಲು ಸಾಧ್ಯ.

ಇವರು ತಪ್ಪು ಮಾರ್ಗದರ್ಶನ ಹೊಂದಿದ ಜನರಾಗಿರುವರು. ಅವರಿಗೆ ಪ್ರೀತಿ, ಸಹಾನುಭೂತಿ ಮತ್ತು ಅಹಿಂಸೆಗಳಲ್ಲಿ ಶಿಕ್ಷಣ ಪಡೆಯುವ ಒಂದು ಅವಕಾಶ ದೊರೆಯಲಿಲ್ಲ. ಆದುದರಿಂದ ನಾವು ಅವರಿಗಾಗಿ ಕಲಿಯಲು ಬಾಗಿಲುಗಳನ್ನು ತೆರೆಯಬೇಕು ಮತ್ತು ನಾವು ಅವರ ಕಡೆಗೆ ಸಹಾನುಭೂತಿಯನ್ನು ಹೊಂದಬೇಕು. ಇದನ್ನೇ ನಾನು ಹೇಳುತ್ತಿರುವುದು.

ಅವರಿಗೆ ಈ ಶಿಕ್ಷಣ ದೊರಕಿರುತ್ತಿದ್ದರೆ, ಅವರು ಯಾವತ್ತೂ ಭಯೋತ್ಪಾದಕರಾಗಿರುತ್ತಿರಲಿಲ್ಲ. ಇದು ನಮ್ಮ ಅನುಭವ, ಯಾಕೆಂದರೆ ನಾವು ಸೆರೆಮನೆಯಲ್ಲಿ ಕೋರ್ಸುಗಳನ್ನು ಕಲಿಸಿದಾಗ ಅವರಂದರು, "ನಮಗೆ ಈ ಜ್ಞಾನವಿರುತ್ತಿದ್ದರೆ, ನಾವು ಮೊದಲೇ ಸುದರ್ಶನ ಕ್ರಿಯೆ ಮಾಡಿರುತ್ತಿದ್ದರೆ, ನಮ್ಮ ಜೀವನವು ಭಿನ್ನವಾಗಿರುತ್ತಿತ್ತು."

ಪ್ರಶ್ನೆ: ಜ್ಞಾನೋದಯವಾದ ಸ್ಥಿತಿ ಹೇಗಿರುತ್ತದೆ? ಆ ಸಮಯದಲ್ಲಿ ಒಬ್ಬರಿಗೆ ಹೇಗೆ ಅನ್ನಿಸುತ್ತದೆ? ಆಗಲೂ ಒಬ್ಬರಿಗೆ ಪ್ರಪಂಚದಲ್ಲಿನ ತಮ್ಮೆಲ್ಲಾ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವೇ?

ಶ್ರೀ ಶ್ರೀ ರವಿ ಶಂಕರ್: ಮತ್ತೆ ಒಂದು ಮಗುವಿನಂತೆ. ಮತ್ತು ಹೌದು, ಒಬ್ಬರಿಗೆ ಏನನ್ನು ಬೇಕಾದರೂ ನಿರ್ವಹಿಸಲು ಸಾಧ್ಯವಿದೆ, ಸಾಮಾನ್ಯದಂತೆ.

ಪ್ರಶ್ನೆ: ಒಬ್ಬರು ನಿಜವಾಗಿಯೂ ಜ್ಞಾನೋದಯವನ್ನು ಹೊಂದಿರುವರೇ ಅಥವಾ ಅದು ಸುಳ್ಳಾದ ಜ್ಞಾನೋದಯವೇ ಎಂಬುದನ್ನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಸುಳ್ಳು ಜ್ಞಾನೋದಯವೆಂದು ಕರೆಯಲ್ಪಡುವುದು ಯಾವುದೂ ಇಲ್ಲ. ಜ್ಞಾನೋದಯವು ನಿಮ್ಮ ಸ್ವಭಾವದಲ್ಲಿದೆ. ಭತ್ತದ ಒಳಗೆ ಅಕ್ಕಿಯಿರುವಂತೆಯೇ, ನಿಮ್ಮೊಳಗೆ ಜ್ಞಾನವಿದೆ, ನೀವು ಕೇವಲ ಸಿಪ್ಪೆಯನ್ನು ತೆಗೆಯಬೇಕಷ್ಟೆ. ಒಮ್ಮೆ ಸಿಪ್ಪೆಯು ತೆಗೆಯಲ್ಪಟ್ಟರೆ, ನೀವು ಶರೀರವಲ್ಲವೆಂಬುದು, ಆದರೆ ಅನಂತತೆಯೆಂಬುದು ನಿಮ್ಮ ಅನುಭವಕ್ಕೆ ಬರುತ್ತದೆ. ಮನಸ್ಸು ಸಂತೋಷವಾಗಿರುತ್ತದೆ, ತೃಪ್ತವಾಗಿರುತ್ತದೆ ಮತ್ತು ನೀವು ಯಾರನ್ನಾದರೂ ಹರಸಿದರೆ ಅದು ಈಡೇರುತ್ತದೆ.

ಪ್ರಶ್ನೆ: ಗುರುದೇವ, ನನ್ನ ಕಾರ್ಯಾಲಯದಲ್ಲಿನ ಅಕ್ಷಮತೆಯನ್ನು ನಿವಾರಿಸಲು ನಾನು ಬಳಸಬೇಕಾದ ಕಾರ್ಯವಿಧಾನಗಳು ಯಾವುವು? ಗ್ರಾಹಕರ ನಿರೀಕ್ಷೆಯನ್ನು ನಿಭಾಯಿಸಲು ಅಸಮರ್ಥರಾಗಿರುವ ಅನೇಕ ಜನರು ನನ್ನೊಂದಿಗಿದ್ದಾರೆ. ಕೆಲವೊಮ್ಮೆ ಇದು ನಿಜಕ್ಕೂ ನನಗೆ ಕೋಪ ಬರುವಂತೆ ಮಾಡುತ್ತದೆ.

ಶ್ರೀ ಶ್ರೀ ರವಿ ಶಂಕರ್: ಜನರು ಯಾಕೆ ತಮ್ಮ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವುದಿಲ್ಲ ಅಥವಾ ನಿಧಾನವಾಗಿ ಕಲಿಯುತ್ತಾರೆಂಬುದು ನಿನಗೆ ಗೊತ್ತಿದೆಯೇ? ಇದು ಯಾಕೆಂದರೆ ಅವರ ಮನಸ್ಸು ಅಸ್ಪಷ್ಟವಾಗಿರುವುದರಿಂದ. ಅವರು ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡಿಲ್ಲ. ಅವರೊಳಗೆ ಯಾವುದೇ ಭದ್ರತೆಯಿಲ್ಲ ಮತ್ತು ಅವರು ಸಂತೋಷವಾಗಿಲ್ಲ. ಅವರಿಗೆ ಧ್ಯಾನವನ್ನು ಕಲಿಸು. ಅವರು ಧ್ಯಾನ ಮಾಡುವಾಗ, ಅವರು ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು ಧ್ಯಾನ ಮಾಡುವಾಗ, ಅವರಿಗೆ ಪ್ರಶಾಂತತೆ, ಸಂತೋಷ ಮತ್ತು ಶಾಂತಿ ಸಿಗುತ್ತದೆ ಹಾಗೂ ನಂತರ ಬಹಳಷ್ಟು ಉತ್ತಮವಾಗಿ ಕೆಲಸ ಮಾಡಲು ಅವರಿಗೆ ಸಾಧ್ಯವಾಗುವುದು.

ಊಟ ಮತ್ತು ಧ್ಯಾನ; ಇದನ್ನು ನಿನ್ನ ಕಂಪೆನಿಯ ಭಾಗವನ್ನಾಗಿ ಮಾಡು. ಸ್ವಲ್ಪ ಧ್ಯಾನದೊಂದಿಗೆ ಮನಸ್ಸು ನಿರಾಳವಾಗುತ್ತದೆ ಮತ್ತು ಅದು ತೀಕ್ಷ್ಣವೂ, ಜಾಗರೂಕವೂ, ಕೆಲಸ ಮಾಡಲು ಹೆಚ್ಚು ಚೈತನ್ಯಭರಿತವೂ ಆಗುತ್ತದೆ. ಅದು ಕೆಲಸ ಮಾಡುವುದು ಹೀಗೆ.

ಹೀಗೆ ಧ್ಯಾನವು ಖಂಡಿತವಾಗಿಯೂ ಹೆಚ್ಚಿನ ಉತ್ಪಾದಕತೆಯನ್ನು ತರಲು ಸಹಾಯ ಮಾಡುತ್ತದೆ.

ಪ್ರಶ್ನೆ: ನಾವು ಪ್ರೇಮ ವೈಫಲ್ಯದ ನೋವಿನಿಂದ ಹೊರಬಂದು ನಿಜವಾದ ಪ್ರೇಮವನ್ನು ಕಂಡುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: , ನಿನ್ನ ಹೃದಯ ಒಡೆದಿದ್ದರೆ, ಜೀವನವನ್ನು ಒಂದು ವಿಶಾಲ ಚಿತ್ರದಂತೆ ನೋಡು. ಒಬ್ಬರು ನಿನ್ನ ಹೃದಯವನ್ನು ಒಡೆಯುವ ಮೊದಲೂ ಕೂಡಾ ನೀನು ಜೀವಂತವಾಗಿದ್ದೆ, ಈಗ ಕೂಡಾ ನೀನು ಜೀವಂತವಾಗಿರುವೆ ಮತ್ತು ಜೀವನವು ಮುಂದುವರಿಯುವುದು.

ಈ ಭೂಮಿಯ ಮೇಲೆ ಏಳು ಬಿಲಿಯನ್ ಜನರಿದ್ದಾರೆ ಮತ್ತು ಅಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಹೃದಯಗಳನ್ನು ಒಡೆಯುವ ಅಭ್ಯಾಸವಿರುವ ಒಬ್ಬರಲ್ಲಿ ನೀನು ಸಿಕ್ಕಿಬಿದ್ದೆ. ಹಾಗಾಗಿ ಚಿಂತಿಸಬೇಡ, ಮುಂದೆ ಸಾಗು.

ನಿನಗೆ ಗೊತ್ತಾ, ಜನರು ಬರುತ್ತಾರೆ, ಅವರು ನಿನ್ನ ಜೀವನದಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಾರೆ ಮತ್ತು ಅವರು ಹೋಗುತ್ತಾರೆ. ಇದು ಪ್ರಪಂಚವಾಗಿದೆ. ನಿನಗೆ ತೊಂದರೆ ಪಡಿಸುತ್ತಾ ಇರುವ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ವಿಷಯಕ್ಕೆ ಸಿಕ್ಕಿಬೀಳಬೇಡ. ಮುಕ್ತನಾಗು!   

ಪ್ರಶ್ನೆ: ಗುರುದೇವ, ಪಾಪ ಪ್ರಜ್ಞೆಯನ್ನು ನಿವಾರಿಸುವುದು ಹೇಗೆ?


ಶ್ರೀ ಶ್ರೀ ರವಿ ಶಂಕರ್: ಯಾವಾಗೆಲ್ಲಾ ಒಂದು ತಪ್ಪು ನಡೆಯಿತೋ ಆ ಕ್ಷಣದಲ್ಲಿ ನಿಮ್ಮಲ್ಲಿ ತಿಳುವಳಿಕೆಯಿರಲಿಲ್ಲ, ನಿಮಗೆ ಅರಿವಿರಲಿಲ್ಲ. ನಿಮ್ಮ ಮನಸ್ಸು ದೊಡ್ಡದಾಗಿರಲಿಲ್ಲ. ನೀವು ನಿಮ್ಮ ಚಿಕ್ಕ ಮನಸ್ಸಿನಲ್ಲಿದ್ದಿರಿ. ಹೀಗೆ ಇದನ್ನು ಒಪ್ಪಿಕೊಂಡು ಮುಂದೆ ಸಾಗಿ. ಮತ್ತೆ, ಸುದರ್ಶನ ಕ್ರಿಯೆ ಮತ್ತು ಧ್ಯಾನವು, ಇದನ್ನು ತೊಲಗಿಸಲು ನಿಮಗೆ ಸಹಾಯ ಮಾಡುವುದು.