ಶನಿವಾರ, ಜೂನ್ 30, 2012

ಕ್ಷಮಾಪಣೆಯು ಬಲಹೀನತೆಯ ಲಕ್ಷಣವಲ್ಲ

30
2012
Jun

ಬೂನ್, ನಾರ್ತ್ ಕೆರೋಲಿನಾ

ಪ್ರಶ್ನೆ: ಗುರೂಜಿ, ಕೆಲವೊಮ್ಮೆ ಮಕ್ಕಳೊಂದಿಗೆ ವ್ಯವಹರಿಸಲು ಎಷ್ಟು ಯುಕ್ತಿ ಬೇಕಾಗುತ್ತದೆಯೆಂದರೆ, ನಾನು ನನ್ನ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ಪ್ರತಿದಿನವೂ ನಾನು ಶಾಂತವಾಗಿರಬೇಕೆಂದು ನಿರ್ಧರಿಸುತ್ತೇನೆ, ಆದರೆ ಪರಿಸ್ಥಿತಿ ಏಳುವಾಗ ನನಗೆ ನನ್ನನ್ನೇ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿಶಂಕರ್:
ನೀನು ಅದರ ಬಗ್ಗೆ ಈಗ ಏನೂ ಮಾಡಲು ಸಾಧ್ಯವಿಲ್ಲ, ನೀನು ಜೀವನವನ್ನು ಆಗಿಂದಾಗಲೇ ಸಹಜವಾಗಿ ಜೀವಿಸಬೇಕು. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ? ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವುದು ಪರವಾಗಿಲ್ಲ, ಚಿಂತಿಸಬೇಡ. ಜೀವನದಲ್ಲಿ ನೀವು ಅಸಂಪೂರ್ಣತೆಗೆ ಸ್ವಲ್ಪ ಜಾಗ ಬಿಡಬೇಕು ಮತ್ತು ಸ್ವೀಕರಿಸಲು ಪ್ರಾರಂಭಿಸಬೇಕು. ನೀವು ಪಾರ್ಟ್ ೧ ಕೋರ್ಸಿನಲ್ಲಿ ಏನು ಕಲಿತಿದ್ದೀರಿ? ಜನರು ಮತ್ತು ಪರಿಸ್ಥಿತಿಗಳನ್ನು ಅವುಗಳಿದ್ದಂತೆಯೇ ಸ್ವೀಕರಿಸಿ. ಇದೊಂದು ಜೀವಿತಾವಧಿಯ ಪ್ರಕ್ರಿಯೆ. ಪ್ರತಿದಿನವೂ ನಿಮಗೆ ಇದರ ಬಗ್ಗೆ ನೆನಪಿಸಲಾಗುತ್ತದೆ. ನಿಮಗೆ ಈ ಪರಿಸ್ಥಿತಿಗಳು ಬಂದಾಗ, ನಿಮಗೆ ನೆನಪಿಸಲಾಗುತ್ತದೆ, "ಹೌದು, ನಾನಿದನ್ನು, ಇದನ್ನು ಮತ್ತು ಇದನ್ನು ಮಾಡಬೇಕು." ಆದುದರಿಂದ ನಾವು ಹೋಗಬೇಕಾಗಿರುವ ದಿಕ್ಕು ಇದು. ಕೆಲವೊಮ್ಮೆ ನೀವು ಇಲ್ಲಿ ಅಲ್ಲಿ ಜಾರುತ್ತೀರಿ, ಚಿಂತಿಸಬೇಡಿ, ಮುಂದುವರಿಯುತ್ತಾ ಇರಿ. ಖಂಡಿತವಾಗಿ ಒಂದು ದಿನ ನೀವು ಸಂಪೂರ್ಣತೆಯನ್ನು ಸಾಧಿಸುವಿರಿ. ಒಂದು ದಿನ, ಆರ್ಟ್ ಆಫ್ ಲಿವಿಂಗಿನಲ್ಲಿ ಸುಮಾರು ೨೦ ವರ್ಷಗಳಿಂದ ಇದ್ದ ಶಿಕ್ಷಕನೊಬ್ಬನು ನನ್ನಲ್ಲಿ ಹೇಳಿದನು, "ಗುರೂಜಿ, ಕೆಲವೊಮ್ಮೆ, ನಾನು ಎಲ್ಲಾ ಸಮಯದಲ್ಲೂ ಸಂತೋಷವಾಗಿರುವುದು ನನಗೆ ವಿಚಿತ್ರವಾಗಿ ಅನ್ನಿಸುತ್ತದೆ. ಏನೇ ಬರಲಿ ನಾನು ಸಂತೋಷವಾಗಿರುತ್ತೇನೆ." ಮತ್ತು ನಾನಂದೆ, "ಕೊನೆಯದಾಗಿ! ಈಗಲಾದರೂ!" ೨೦ ವರ್ಷವೆಂದರೆ ಅಷ್ಟು ದೀರ್ಘ ಕಾಲವಲ್ಲ, ಅದು ಪರವಾಗಿಲ್ಲ. ಆದರೆ ನೀವು ೨೦ ವರ್ಷ ತೆಗೆದುಕೊಳ್ಳಬೇಕೆಂದಿಲ್ಲ. ಹಿಂದೆ ತಿರುಗಿ ನಿಮ್ಮಲ್ಲಿನ ಬೆಳವಣಿಗೆಯನ್ನು ನೋಡಿ; ಅದಕ್ಕಾಗಿಯೇ ಈ ಆಚರಣೆಗಳನ್ನು ಮಾಡುವುದು. ಗುರು ಪೌರ್ಣಿಮೆಯ ಉದ್ದೇಶವೇನು? ವರ್ಷಕ್ಕೊಮ್ಮೆ, ನೀವೆಲ್ಲಿದ್ದಿರೆಂದು ಹಾಗೂ ನೀವು ಎಷ್ಟು ಪ್ರಗತಿ ಹೊಂದಿದ್ದೀರೆಂದೂ ನೀವು ಹಿಂದೆ ತಿರುಗಿ ನೋಡಿ. ಈಗ ನೀವು ಪರಿಸ್ಥಿತಿಗಳಿಗೆ ಹೇಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತೀರಿ, ಪ್ರತ್ಯಾಘಾತಗಳು ಕಡಿಮೆಯಾಗಿ ಪ್ರತಿಕ್ರಿಯೆಗಳು ಹೇಗೆ ಹೆಚ್ಚಾಗಿವೆ. ಆದುದರಿಂದ, ಜೀವನವೆಂಬುದು ಒಂದು ನಿರಂತರ ಪ್ರಕ್ರಿಯೆ. ಅದು ಹಾಗಲ್ಲವೇ? ಬಹಳಷ್ಟು ಪರಿವರ್ತನೆಯು ಈಗಾಗಲೇ ಆಗಿದೆಯೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ಏನೂ ಆಗಲಿಲ್ಲವೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. "ನಾನು ಪರಿವರ್ತನೆಗೊಳ್ಳಲಿಲ್ಲ. ನನ್ನಲ್ಲಿ ಅಣುವಿನಷ್ಟೂ ಬದಲಾವಣೆಯಾಗಲಿಲ್ಲ" ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಯಾರಾದರೂ ಹಾಗೆ ಹೇಳಿದರೆ ನೀವು ಅವರಿಗೆ ನಮಸ್ಕರಿಸಬೇಕು ಯಾಕೆಂದರೆ ಅವರು ಹುಟ್ಟಿನಿಂದಲೇ ಆತ್ಮಸಾಕ್ಷಾತ್ಕಾರ ಹೊಂದಿದವರು. ಕೆಲವು ಮಕ್ಕಳಿರುವುದು ನಿಮಗೆ ಹಲವಾರು ಪಾಠಗಳನ್ನು ಕಲಿಸಲು. ಕೆಲವೊಮ್ಮೆ ತಾಯಿಯಂದಿರು ಮತ್ತು ತಂದೆಯಂದಿರು ತಮ್ಮ ಮಕ್ಕಳ ಮೇಲೆ ಕೋಪಗೊಳ್ಳಬಹುದು, ಪರವಾಗಿಲ್ಲ. ನೀವವರನ್ನು ಯಾವತ್ತೂ ಒಳ್ಳೊಳ್ಳೆಯ ಮತ್ತು ಸಿಹಿಯಾದ ಮಾತುಗಳನ್ನಾಡಿ ಬೆಳೆಸಬೇಕೆಂದಿಲ್ಲ. ಆಗ ನೀವವರನ್ನು ಬಹಳ ಬಲಹೀನರನ್ನಾಗಿ ಮಾಡುತ್ತೀರಿ. ತಮ್ಮ ಮಕ್ಕಳನ್ನು ಯಾವತ್ತೂ ಬೈಯದೇ ಇದ್ದ ಹೆತ್ತವರನ್ನು ನಾನು ನೋಡಿದ್ದೇನೆ. ಈ ಮಕ್ಕಳು ಬೆಳೆದು ದೊಡ್ದವರಾದಾಗ, ಅವರಿಗೆ ಯಾವುದೇ ಟೀಕೆಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಯಾರಿಂದಲಾದರೂ ಸ್ವಲ್ಪ ಟೀಕೆ, ಸ್ವಲ್ಪ ಅಗೌರವ ಅಥವಾ ಸ್ವಲ್ಪ ಸೋಲು ಅವರನ್ನು ತಳಮಳಗೊಳಿಸುತ್ತದೆ. ಅವರು ಬಹಳ ಕಂಗೆಡುತ್ತಾರೆ ಯಾಕೆಂದರೆ ಅವರು ಮನೆಯಲ್ಲಿ ಅಂತಹದ್ದೇನನ್ನೂ ಅನುಭವಿಸಿರುವುದಿಲ್ಲ. ಆದುದರಿಂದ ಮನೆಯಲ್ಲಿ, ಕೆಲವೊಮ್ಮೆ (ಯಾವತ್ತೂ ಅಲ್ಲ) ಮಕ್ಕಳಲ್ಲಿ ಕೋಪಗೊಳ್ಳುವುದು, ಅವರು ಮನೆಯಿಂದ ಹೊರಗೆ ಜಗತ್ತಿನಲ್ಲಿ ಶಕ್ತಿಯುತವಾಗಿರಲು ಅವರಿಗೆ ಲಸಿಕೆ ನೀಡುವಂತೆ. ಆದರೆ ಇದನ್ನು, ಮಕ್ಕಳ ಮೇಲೆ ಯಾವತ್ತೂ ಕೋಪಗೊಳ್ಳಲು ಒಂದು ನೆಪವಾಗಿ ತೆಗೆದುಕೊಳ್ಳಬೇಡಿ, ಅದು ಕೆಲಸ ಮಾಡುವುದಿಲ್ಲ. ಅತಿ ಹೆಚ್ಚು ಮಾಡುವುದು ಕೂಡಾ ಕೆಟ್ಟದು. ನೀವು ನಿಮ್ಮ ಮಕ್ಕಳನ್ನು ಪ್ರತಿದಿನವೂ ದಿನಚರಿಯೆಂಬಂತೆ ಬೈಯುತ್ತಾ ಇದ್ದರೆ, ಅವರು ಎಷ್ಟು ದಪ್ಪ ಚರ್ಮದವರಾಗಿ ಬಿಡುತ್ತಾರೆಂದರೆ ಅವರು ಇನ್ನೊಂದು ಬದಿಗೆ ಹೋಗುತ್ತಾರೆ. ಇದು ಕೂಡಾ ಒಳ್ಳೆಯದಲ್ಲ. ಇಲ್ಲಿ ಅಲ್ಲಿ ಸ್ವಲ್ಪ ಬೈಗುಳ ಪರವಾಗಿಲ್ಲ. ಪ್ರಶ್ನೆ: ಒಬ್ಬನು ಜ್ಯೋತಿಷ್ಯಕ್ಕೆ ಎಷ್ಟು ಪ್ರಾಧಾನ್ಯತೆಯನ್ನು ನೀಡಬೇಕು, ವಿಶೇಷವಾಗಿ ಸಂಗಾತಿಯನ್ನು ಆಯ್ಕೆ ಮಾಡುವಾಗ? ಶ್ರೀ ಶ್ರೀ ರವಿಶಂಕರ್: ಅದು ಒಳ್ಳೆಯದು; ನೀವಿಬ್ಬರು ಪರಸ್ಪರ ಸಹಜವಾಗಿ ಎಷ್ಟು ಹೊಂದುತ್ತೀರಿ ಹಾಗೂ ನೀವು ಎಷ್ಟು ಒಪ್ಪಂದ ಮಾಡಬೇಕಾಗುತ್ತದೆ ಎಂಬುದನ್ನು ನೋಡಲು ನೀವು ಜಾತಕಗಳನ್ನು ತಾಳೆ ಮಾಡಬಹುದು. ಸಾಧಾರಣವಾಗಿ ವೈದಿಕ ಜ್ಯೋತಿಷ್ಯದಲ್ಲಿ, "೩೦ ಅಂಶಗಳಲ್ಲಿ ೨೦ ಹೊಂದುತ್ತವೆ ಮತ್ತು ೧೦ ನೀವು ಒಪ್ಪಂದ ಮಾಡಿಕೊಳ್ಳಬೇಕು" ಎಂದು ಹೇಳುತ್ತಾರೆ. ಹೀಗೆ ಈ ಲೆಕ್ಕಾಚಾರಗಳು ಇವೆ. ಇದನ್ನು ತಿಳಿಯುವುದು ಒಳ್ಳೆಯದು ಯಾಕೆಂದರೆ ನಿಮ್ಮಲ್ಲೊಬ್ಬರು ಕೋಪಗೊಂಡರೆ, ನೀವು ಇನ್ನೂ ಸ್ವಲ್ಪ ಹೆಚ್ಚು ಒಪ್ಪಂದ ಮಾಡಿಕೊಳ್ಳಬೇಕೆಂದು ನಿಮಗೆ ನೆನಪಾಗುತ್ತದೆ; ಹೌದು! ಖಂಡಿತಾ, ಗ್ರಹಗಳು ಒಂದು ಪ್ರಭಾವ ಬೀರುತ್ತವೆ, ಆದರೆ ಇದು ಒಂದೇ ದಿಕ್ಕಿನಲ್ಲಿ ಮಾತ್ರವೆಂದು ಯೋಚಿಸಬೇಡಿ ನೀವು ಕೂಡಾ ಗ್ರಹಗಳ ಮೇಲೆ ಪ್ರಭಾವ ಬೀರುತ್ತೀರಿ. ಇದು ಎರಡೂ ದಿಕ್ಕುಗಳಲ್ಲಿವೆ. ವಿಶ್ವದಲ್ಲಿ ಎಲ್ಲವೂ ಎರಡೂ ದಿಕ್ಕುಗಳಲ್ಲಿರುತ್ತವೆ. ಹಾಗಾದರೆ ನಿಮಗೇನು ಮಾಡಲು ಸಾಧ್ಯ? ನೀವು ಜಪ ಮಾಡಬಹುದು. ಇದಕ್ಕಾಗಿಯೇ, ’ಓಂ ನಮಃ ಶಿವಾಯ’ ಎಂಬುದು ಎಲ್ಲಾ ಗ್ರಹಗಳನ್ನು ನಿಯಂತ್ರಿಸುವ ಒಂದು ಜಪವೆಂದು ಹೇಳಲಾಗುತ್ತದೆ. ಎಲ್ಲಾ ಗ್ರಹಗಳ ಮೇಲೆ ಶಿವ ತತ್ವವಿದೆ. ಆದುದರಿಂದ ಅಲ್ಲಿ ತಿದ್ದುಪಡಿ ಲಭ್ಯವಿದೆ. ತಿದ್ದುಪಡಿಯೆಂದರೆ ಓಂ ನಮಃ ಶಿವಾಯ ಯಾಕೆಂದರೆ ಈ ಮಂತ್ರದಲ್ಲಿ ಯಾವುದೇ ಕೆಟ್ಟ ಪರಿಣಾಮವನ್ನು ತೊಡೆದು ಹಾಕುವ ಎಲ್ಲಾ ಅಂಶಗಳಿವೆ. ೧೦೮ ಸಂಖ್ಯೆ ಇರುವ ಕಾರಣವೇನೆಂದು ನಿಮಗೆ ತಿಳಿದಿದೆಯೇ? ೧೦೮ ಯಾವುದನ್ನು ಸೂಚಿಸುತ್ತದೆಯೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಗೊತ್ತಿಲ್ಲ? ೧೦೮ ಎಂಬುದು ಒಂಭತ್ತು ಗ್ರಹಗಳು ಮತ್ತು ಹನ್ನೆರಡು ಮನೆಗಳನ್ನು, ನಕ್ಷತ್ರಕೂಟಗಳನ್ನು ಸೂಚಿಸುತ್ತದೆ. ಒಂಭತ್ತು ಗ್ರಹಗಳು ಹನ್ನೆರಡು ನಕ್ಷತ್ರಕೂಟಗಳ ಮೂಲಕ ಹಾದು ಹೋಗುವಾಗ, ಅವುಗಳು ೧೦೮ ಬೇರೆ ಬೇರೆ ಬದಲಾವಣೆಗಳನ್ನು ಮಾಡುತ್ತವೆ. ಆದುದರಿಂದ ಆ ಬದಲಾವಣೆಗಳನ್ನು ಅಥವಾ ಯಾವುದೇ ಅಹಿತಕರ ಪರಿಣಾಮವನ್ನು ಇಲ್ಲದಂತೆ ಮಾಡಲು, ನಾವು ಓಂ ನಮಃ ಶಿವಾಯ ಎಂದು ಹೇಳುತ್ತೇವೆ. ಆದುದರಿಂದ ಇದೊಂದು ಕವಚದಂತೆ. ಇದೊಂದು ಬಹಳ ಶ್ರೇಯಸ್ಕರ ಮಂತ್ರವೆಂದು ಪರಿಗಣಿಸಲ್ಪಡುತ್ತದೆ. ಕೆಳಗಿನಿಂದ ಈ ಹಜಾರಕ್ಕಿರುವ ಮೆಟ್ಟಿಲುಗಳು ಕೂಡಾ ೧೦೮. ಅದರರ್ಥ ನೀವು ಎಲ್ಲಾ ಗ್ರಹಗಳ ಪರಿಣಾಮಗಳನ್ನು ದಾಟಿ ಶುದ್ಧವಾದ ಪ್ರಜ್ಞೆಯ ಕಡೆಗೆ ಏರುತ್ತೀರಿ. ಎಲ್ಲವೂ ಗ್ರಹಗಳಿಂದ ಆಳಲ್ಪಡುವುದಾದರೆ, ಸಾಧನೆ, ಪ್ರಾಣಾಯಾಮ, ಧ್ಯಾನ, ಸತ್ಸಂಗ, ಜಪ, ಹಾಡು ಇವುಗಳನ್ನೆಲ್ಲಾ ಮಾಡುವುದರ ಅರ್ಥವವೇನು? ಇಲ್ಲ, ಇವುಗಳು ಚೆಕ್ ಮತ್ತು ಬ್ಯಾಲೆನ್ಸ್ ಇರುವಂತೆ. ಅವುಗಳು ಪರಿಣಾಮಗಳನ್ನು ಎದುರಿಸಿ ಹೆಚ್ಚು ಸ್ವಾತಂತ್ರ್ಯವನ್ನು ತರುತ್ತವೆ; ಅಲ್ಲದಿದ್ದರೆ ನಮ್ಮ ಪ್ರಜ್ಞೆಯು, ಸಮಯ ಮತ್ತು ಆಕಾಶಗಳ ಮೇಲೆ ಅವಲಂಬಿತವಾಗಿದೆ. ಸಾಧನೆಯು ದೊಡ್ಡ ಪ್ರಮಾಣದಲ್ಲಿ ಸ್ವಾತಂತ್ರ್ಯವನ್ನು ತರುತ್ತದೆ ಕೂಡಾ. ೧೦೦% ಎಂದು ನಾನು ಹೇಳುವುದಿಲ್ಲ, ಆದರೆ ಹೌದು, ಒಂದು ದೊಡ್ಡ ಪ್ರಮಾಣದಲ್ಲಿ. ಇದು ಹೇಗೆಂದರೆ, ಮಳೆ ಬರುವಾಗ ನೀವು ಹೊರಹೋಗುತ್ತೀರಿ, ನಿಮಗೊಂದು ಆಯ್ಕೆಯಿರುತ್ತದೆ; ಒಂದೋ ನೀವು ಹೊರಹೋಗಿ ಒದ್ದೆಯಾಗುವುದು ಅಥವಾ ಒಂದು ರೈನ್ ಕೋಟನ್ನು ತೆಗೆದುಕೊಂಡು ಹೋಗಿ ಒದ್ದೆಯಾಗದೇ ಇರುವುದು.

ಪ್ರಶ್ನೆ: ನೀವೊಂದು ನಿರ್ಧಾರದ ಬಗ್ಗೆ ಖಚಿತವಾಗಿಲ್ಲದೇ ಇದ್ದರೆ, ಉದಾಹರಣೆಗೆ, ವಿವಾಹವಾಗುವುದು, ನೀವು ಸುಮ್ಮನೇ ಪ್ರವಾಹದೊಂದಿಗೆ ಹೋಗಿ ವಿವಾಹವಾಗಬೇಕೇ ಅಥವಾ ನೀವು ಖಚಿತವಾಗುವಲ್ಲಿಯ ವರೆಗೆ ಕಾಯಬೇಕೇ?

ಶ್ರೀ ಶ್ರೀ ರವಿಶಂಕರ್:
ನೀವು ವಿವಾಹವಾಗಲು ಬಯಸುವ ನಿಮ್ಮ ಸಂಗಾತಿಯೊಡನೆ ಕೇಳಬೇಕು. ಚಂಚಲ ಮನಸ್ಸಿನ ಕೆಲವರಿರುತ್ತಾರೆ. ಅವರಿಗೆ ವಿವಾಹವನ್ನೊಳಗೊಂಡು ಏನನ್ನು ಮಾಡಬೇಕಾದರೂ ಒಂದು ತಳ್ಳುವಿಕೆಯ ಅಗತ್ಯವಿರುತ್ತದೆ್, ಮತ್ತು ಇನ್ನು ಕೆಲವರಿರುತ್ತಾರೆ, ಅವರು ಇಂತಹ ಪರಿಸ್ಥಿಗಳನ್ನು ಯಾವಾಗಾದರೊಮ್ಮೆ ಎದುರಿಸುತ್ತಾರೆ. ಆದುದರಿಂದ ನಾನು ಆಯ್ಕೆಯನ್ನು ನಿಮಗೆ ಬಿಡುತ್ತೇನೆ. ಇನ್ನೂ ಕೆಲವರಿರುತ್ತಾರೆ, ಅವರು ಪ್ರತಿಸಾರಿಯೂ ಒಬ್ಬಳು ಸುಂದರವಾದ ಹುಡುಗಿ ಅಥವಾ ಒಬ್ಬ ಸುಂದರನಾದ ಹುಡುಗನನ್ನು ನೋಡಿದಾಗ ವಿವಾಹವಾಗಲು ಬಯಸುತ್ತಾರೆ ಹಾಗೂ ಅದು ಸ್ವಲ್ಪ ಹೆಚ್ಚು ಗಟ್ಟಿಯಾಗಲು ತೊಡಗುವ ಕ್ಷಣ, ವಿವಾಹವಾಗಬೇಕೇ ಬೇಡವೇ ಅಥವಾ ಬೇರೆ ಯಾರಾದರೂ ಉತ್ತಮವಾಗಿರಬಹುದೇ ಎಂಬ ಸಂಶಯಗಳು ಅವರಿಗೆ ಬರುತ್ತವೆ. ಪುನಃ, ಇಲ್ಲಿ ನಾನು ಹೇಳುವುದೇನೆಂದರೆ, ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಿ, ಅವರು ನಿಮ್ಮಂತಹ ಅಷ್ಟೊಂದು ಚಂಚಲ ಮನಸ್ಸಿನ ಒಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಲು ಬಯಸುತ್ತಾರೆಯೇ ಎಂದು. ಈ ಎಲ್ಲಾ ಪ್ರಶ್ನೆಗಳಿಗೆ ನಾನು ಸಾಧಾರಣವಾಗಿ ಕೊಡುವ ಉತ್ತರವೇನೆಂದು ನಿಮಗೆ ಗೊತ್ತಿದೆಯಾ? ಆಯ್ಕೆ ನಿಮ್ಮದು, ಆಶೀರ್ವಾದ ನನ್ನದು!

ಪ್ರಶ್ನೆ: ಪ್ರಿಸನ್ ಸ್ಮಾರ್ಟ್ ಕಾರ್ಯಕ್ರಮವನ್ನು ಮಯಾಮಿ, ಫ್ಲೋರಿಡಾಕ್ಕೆ ತರಬೇಕೆಂದು ನನ್ನದೊಂದು ಪ್ರಾಮಾಣಿಕ ಬಯಕೆಯಿದೆ. ನನ್ನ ಪದವಿಯು ಅಪರಾಧ ಮತ್ತು ಮನಃಶಾಸ್ತ್ರ (ಕ್ರಿಮಿನಾಲಜಿ ಆಂಡ್ ಸೈಕಾಲಜಿ). ನಮ್ಮ ರಾಜ್ಯವು ಸೆರೆಮನೆಗಳಿಗೆ, ಕಟ್ಟಡಗಳಿಗೆ ಮತ್ತು ಶಿಕ್ಷಣಕ್ಕೆ ಹೆಚ್ಚು ಹಣವನ್ನು ಗೊತ್ತುಮಾಡಿದೆ. ನಾನು ಹೇಗೆ ಸಹಾಯ ಮಾಡಲು ಸಾಧ್ಯ?

ಶ್ರೀ ಶ್ರೀ ರವಿಶಂಕರ್:
ಅದು ಒಳ್ಳೆಯದು, ಮುಂದುವರಿ. ನೀನು ಜೈಲಿನ ಅಧಿಕಾರಿಗಳನ್ನು ಭೇಟಿ ಮಾಡಲು ಹೋಗುವಾಗ ಒಂಟಿಯಾಗಿ ಹೋಗಬೇಡ. ನಾಲ್ಕರಿಂದ ಐದು ಜನರ ಗುಂಪಿನಲ್ಲಿ ಹೋಗಿ ಅವರೊಡನೆ ಮಾತನಾಡಿ ಮತ್ತು ಅವರನ್ನು ಒಪ್ಪಿಸಿ. ಅವರಿಗೆ ವಿಡಿಯೋಗಳನ್ನು ಮತ್ತು ಈ ಕಾರ್ಯಕ್ರಮದಲ್ಲಿ ಭಾಗಿಯಾದ ಜನರ ಅನುಭವಗಳನ್ನು ಹಾಗೂ ಅವರ ಜೀವನದಲ್ಲಿ ಯಾವ ರೀತಿಯ ಪರಿವರ್ತನೆಗಳುಂಟಾಗಿವೆಯೆಂಬುದನ್ನು ತೋರಿಸಿ. ಈ ಎಲ್ಲಾ ಅನುಭವಗಳನ್ನು ನೋಡುವಾಗ ವಿವೇಕವುಳ್ಳ ಯಾವುದೇ ವ್ಯಕ್ತಿಗೂ ’ಇಲ್ಲ’ ಎಂದು ಹೇಳಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ಅವುಗಳು ಬಹಳ ಅಚ್ಚರಿ ಹುಟ್ಟಿಸುವಂತಹವು ಮತ್ತು ಯಾರ ಹೃದಯವನ್ನಾದರೂ ತಟ್ಟುತ್ತದೆ.

ಪ್ರಶ್ನೆ: ಸಾವಿಗೆ ಯಾವುದೇ ವಯಸ್ಸಿಲ್ಲ. ಆದುದರಿಂದ ಒಬ್ಬ ವ್ಯಕ್ತಿ, ಯುವಕನಿರಬಹುದು ಅಥವಾ ವಯಸ್ಸಾದವರಿರಬಹುದು, ಸಾಯುವಾಗ ಅವರ ಆತ್ಮವು ಅದೇ ವಯಸ್ಸಿನದಾಗಿರುತ್ತದೆಯೇ?

ಶ್ರೀ ಶ್ರೀ ರವಿಶಂಕರ್:
ಆತ್ಮಕ್ಕೆ ಒಂದು ವಯಸ್ಸಿಲ್ಲ ಹಾಗೂ ನೀನು ಸರಿಯಾಗಿ ಹೇಳಿದೆ, ಸಾವಿಗೂ ವಯಸ್ಸಿಲ್ಲ. ಸಾವಿಗೆ ಒಂದು ಸಮಯವಿಲ್ಲ ಮತ್ತು ಆತ್ಮಕ್ಕೆ ಒಂದು ವಯಸ್ಸಿಲ್ಲ, ಸರಿ! ಎಲ್ಲವೂ ಆರಂಭದಿಂದ ಶುರುವಾಗುತ್ತದೆ.

ಪ್ರಶ್ನೆ: ಸಂಗತಿಗಳು ಬಹಳ ಅಸ್ಪಷ್ಟವಾಗಿರುವಾಗ ನಾನು ಸ್ಪಷ್ಟತೆಯನ್ನು ಪಡಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿಶಂಕರ್:
ಚೈನೀಸಿನಲ್ಲಿ ಒಂದು ಗಾದೆಯಿದೆ - ನೀನು ಬಹಳ ಗೊಂದಲವನ್ನನುಭವಿಸುವಾಗ, ಒಂದು ತಲೆದಿಂಬನ್ನು ತೆಗೆದುಕೊಂಡು ಮಲಗಲು ಹೋಗು. ಮರುದಿನ ಬೆಳಗ್ಗೆ ನೀನು ಎದ್ದೇಳುವಾಗ, ನೀನು ಸಾಕಷ್ಟು ಉತ್ತಮವಾಗಿರುವೆ. ನೋಡಿ, ನಮ್ಮ ಬಯಕೆ; ನಮ್ಮ ಮಹತ್ವಾಕಾಂಕ್ಷೆಯು ನಾವು ವಿಷಯಗಳನ್ನು ಆಯ್ಕೆ ಮಾಡಲು ಬಿಡುವುದಿಲ್ಲ. ಈಗಷ್ಟೇ ನಾನು ಒಬ್ಬರಿಂದ ಒಂದು ಆಸಕ್ತಿಕರ ಎಸ್.ಎಮ್.ಎಸ್. ಪಡೆದೆ. ಒಬ್ಬ ಭಕ್ತನು ಒಬ್ಬ ಶ್ರೀಮಂತ ವ್ಯಕ್ತಿಯ ಮನೆಗೆ ಹೋದನು. ಅಲ್ಲಿ ಅವರು ಅವನಲ್ಲಿ ಕೇಳಿದರು, "ನೀವು ಕುಡಿಯಲು ಏನು ತೆಗೆದುಕೊಳ್ಳುತ್ತೀರಿ - ಕಾಫಿ, ಚಹಾ, ಕೋಕ್, ಹಾಟ್ ಚಾಕ್ಲೇಟ್, ಹಾಲು, ಓಜಸ್ವೀಟಾ", ಹಾಗೂ ಪಟ್ಟಿ ಬೆಳೆಯುತ್ತಾ ಹೋಯಿತು. ಆಗ ಭಕ್ತನಂದನು, "ಸರಿ, ನಾನು ಚಹಾ ತೆಗೆದುಕೊಳ್ಳುತ್ತೇನೆ." ಆಗ ಅವರಂದರು, "ನೀವು ಯಾವ ಚಹಾ ತೆಗೆದುಕೊಳ್ಳುವಿರಿ? ಸಿಲೋನ್ ಚಹಾ, ಹಣ್ಣಿನ ಚಹಾ, ಡಾರ್ಜೀಲಿಂಗ್ ಚಹಾ, ಭಾರತೀಯ ಚಹಾ ಅಥವಾ ಬರ್ಮೀಸ್ ಚಹಾ", ಅವರು ಇನ್ನೊಂದು ಹತ್ತು ಚಹಾಗಳ ಆಯ್ಕೆಯನ್ನು ಕೊಟ್ಟರು. ಅವನಂದನು, "ಸರಿ, ಸಿಲೋನ್ ಚಹಾ." ಅವರಂದರು, "ನಿಮಗೆ ಹಾಲಿಲ್ಲದ ಚಹಾ ಬೇಕೇ, ಹಾಲಿರುವ ಚಹಾ ಬೇಕೇ, ತಂಪು ಚಹಾ ಬೇಕೇ ಅಥವಾ ನಿಂಬೆರಸ ಸೇರಿಸಿದ ಚಹಾ ಬೇಕೇ, ಯಾವ ರೀತಿಯ ಚಹಾ?" ಅವನಂದನು, "ಹಾಲಿರುವ ಚಹಾ." "ನಿಮಗೆ ಯಾವ ರೀತಿಯ ಹಾಲು ಬೇಕು? ಪ್ಯಾಶ್ಚರೈಸ್ ಮಾಡಿದುದು, ಪ್ಯಾಶ್ಚರೈಸ್ ಮಾಡಿಲ್ಲದುದು, ಸಂಪೂರ್ಣ ಹಾಲು, ೨%, ೨.೫% ಅಥವಾ ೧೦%" ಅವನಂದನು, "ಓ ದೇವರೇ! ನಾನು ಹಾಲಿಲ್ಲದ ಚಹಾ ಕುಡಿಯುತ್ತೇನೆ." "ಹಾಗಾದರೆ ನಿಮಗೆ ಅದರಲ್ಲಿ ಸಕ್ಕರೆ ಬೇಕೇ?" ಅವನಂದನು, "ಹೌದು." ಆಗ ಅವರಂದರು, "ನಿಮಗೆ ಯಾವ ಸಕ್ಕರೆ ಬೇಕು? ಸ್ಫಟಿಕ ಸಕ್ಕರೆ, ಕಂದು ಸಕ್ಕರೆ ಅಥವಾ ಜೇನು; ನಿಮಗೇನು ಬೇಕು?" ಅವನಂದನು, "ಓಹ್! ನಾನು ಬಾಯಾರಿಕೆಯಿಂದ ಸಾಯುತ್ತಿದ್ದೇನೆ!" ಆಗ ಆ ವ್ಯಕ್ತಿ ಕೇಳಿದನು, "ನೀವು ಹೇಗೆ ಸಾಯಲು ಬಯಸುತ್ತೀರಿ? ನಮ್ಮ ಸಂಸ್ಥೆಯಲ್ಲಿ ಭಾಗಿದಾರರಾಗುತ್ತೀರೇ ಅಥವಾ ನಮ್ಮ ಪೂರೈಕೆದಾರರಾಗುತ್ತೀರೇ?" ಆದುದರಿಂದ ಬಹಳಷ್ಟು ಆಯ್ಕೆಗಳು ನಿಮ್ಮ ತಲೆ ತಿರುಗುವಂತೆ ಮಾಡಬಲ್ಲದು.

ಪ್ರಶ್ನೆ: ದಯವಿಟ್ಟು ಇದರ ಬಗ್ಗೆ ವ್ಯಾಖ್ಯಾನ ನೀಡಿ. ನಿಮಗೆ ಬಹಳ ಹತ್ತಿರವಿರುವ ಹಲವಾರು ಜನರನ್ನು ನಾನು ನೋಡುತ್ತೇನೆ. ನಾನು ವಿಶೇಷವಲ್ಲವೆಂದು ನನಗನಿಸುತ್ತದೆ. ನಾನು ನಿಮ್ಮೊಂದಿಗೆ ವೈಯಕ್ತಿಕ ಸಂಪರ್ಕವನ್ನು ಅನುಭವಿಸುವುದು ಹೇಗೆ? ಈ ಪಥದಲ್ಲಿ ೧೦೦% ಇರಲು, ವೈಯಕ್ತಿಕ ಸಂಪರ್ಕವಿರುವುದು ಅಗತ್ಯವೆಂದು ನನಗನಿಸುತ್ತದೆ.

ಶ್ರೀ ಶ್ರೀ ರವಿಶಂಕರ್:
ಕೆಲವು ವಿಷಯಗಳನ್ನು ನೀವು ಊಹಿಸಬೇಕು ಹಾಗೂ ಇದು ನೀವು ಊಹಿಸಿಕೊಳ್ಳಬೇಕಾದ ವಿಷಯಗಳಲ್ಲೊಂದು - ನಮಗೆ ಒಂದು ವೈಯಕ್ತಿಕ ಸಂಬಂಧವಿದೆ; ಅಷ್ಟೆ, ಪೂರ್ಣ ವಿರಾಮ. ಈಗ, ಇನ್ನೊಂದು ಸಲ ಇದನ್ನು ಪ್ರಶ್ನಿಸಬೇಡಿ. ನಿಮ್ಮ ಸಂಬಂಧವನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ. ನಾವೆಲ್ಲರೂ ಸಂಬಂಧ ಹೊಂದಿದ್ದೇವೆ. ಅಲ್ಲಿ ಯಾವುದೇ ಆಯ್ಕೆಯಿಲ್ಲ. ನನಗೂ ಯಾವುದೇ ಆಯ್ಕೆಯಿಲ್ಲ, ನಿಮಗೂ ಯಾವುದೇ ಆಯ್ಕೆಯಿಲ್ಲ. ಆದುದರಿಂದ ವಿಶ್ರಾಮ ಮಾಡಿ, ಈ ನಿರ್ದಿಷ್ಟ ಪ್ರಶ್ನೆಯು ನಿಮಗೆ ತೊಂದರೆಯನ್ನುಂಟುಮಾಡುತ್ತಿದ್ದರೆ ಅದನ್ನು ವಿಶ್ರಮಿಸಲು ಬಿಡಿ. ಕೆಲವರು ನನಗೆ ಹತ್ತಿರದವರು ಮತ್ತು ಕೆಲವರಲ್ಲವೆಂದೂ, ಕೆಲವರು ವಿಶೇಷವಾದವರು ಮತ್ತು ಕೆಲವರು ವಿಶೇಷವಾದವರಲ್ಲವೆಂದೂ ಯೋಚಿಸಬೇಡಿ. ಇಲ್ಲ, ನೀವೂ ಅಷ್ಟೇ ವಿಶೇಷವಾದವರು ಹಾಗೂ ಪ್ರತಿಯೊಬ್ಬರೂ ಅದ್ವಿತೀಯರು. ನಿಮ್ಮನ್ನು ನೀವು ಯಾವುದಾದರೊಂದು ಯೋಜನೆಯಲ್ಲಿ ತೊಡಗಿಸಿಕೊಳ್ಳಿ. ನೀವು ಒಂದಲ್ಲ ಒಂದು ಯೋಜನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಂಡಷ್ಟೂ, ನಾವು ಹೆಚ್ಚು ಹೆಚ್ಚು ಒಡನಾಡಬೇಕಾಗುತ್ತದೆ. ಅಲ್ಲದಿದ್ದರೆ ಅಲ್ಲಿ ಒಡನಾಡಲು ಏನಿರುತ್ತದೆ? "ನಮಸ್ಕಾರ! ನೀವು ಹೇಗಿದ್ದೀರಿ? ನೀವು ಚೆನ್ನಾಗಿದ್ದೀರಾ?" ಮತ್ತು ನೀವು ಹೇಳುವಿರಿ, "ಹೌದು" ಮತ್ತು ನಾನು ಹೇಳುವೆನು, "ಹೌದು." ಅಷ್ಟೆ, ನಾವು ಬೀಳ್ಕೊಳ್ಳುತ್ತೇವೆ. ಆದರೆ ನಿಮಗೇನಾದರೂ ಮಾಡಲಿದ್ದರೆ, ಉದಾಹರಣೆಗೆ ಸುಶಾಂತನು ಟ್ವಿಟ್ಟರಿನಲ್ಲಿ ಏನೋ ಮಾಡಿದ್ದಾನೆ. ಆದುದರಿಂದ ನಾನು ಸುಶಾಂತನಿಗೆ ಹೇಳಿದೆ, "ನೋಡೋಣ, ಬಾ. ನಾವು ಚರ್ಚಿಸೋಣ. ಟ್ವಿಟ್ಟರ್ ಅಂದರೆ ಏನೆಂದು ನಾನು ಕಲಿಯಲು ಬಯಸುತ್ತೇನೆ." ಸುಶಾಂತನಿಗೆ ಒಂದು ಪ್ರಶಸ್ತಿ ದೊರೆಯಿತು, ನಿಮಗೆ ಅದರ ಬಗ್ಗೆ ತಿಳಿದಿದೆಯೇ? ಅವನು ಒಬಾಮಾರ ಅಭಿಯಾನದಲ್ಲಿದ್ದನು ಹಾಗೂ ಅವನು ಟ್ವಿಟ್ಟರಿನಲ್ಲಿ ಏನೋ ಮಾಡಿದ ಮತ್ತು ಅದಕ್ಕಾಗಿ ಪ್ರಶಸ್ತಿಯನ್ನು ಪಡೆದ, ಈಗ ಎರಡು ದಿನಗಳ ಮೊದಲು. ಹೀಗೆ, ಎಲ್ಲರೂ ತಮ್ಮ ತಲೆಕೆರೆಯುತ್ತಿದ್ದಾಗ, ಅವನು ಒಂದು ಹೊಸ ಕಲ್ಪನೆಯೊಂದಿಗೆ ಬಂದನು. ಅವನು ಸಾಮಾನ್ಯ ಮಿತಿಯಿಂದಾಚೆಗೆ ಯೋಚಿಸಿದ ಹಾಗೂ ಸಂಸ್ಥೆಯು ಅವನನ್ನು ಗೌರವಿಸಿತು. ಸಾಮಾನ್ಯ ಮಿತಿಯಿಂದಾಚೆಗೆ ಯೋಚಿಸಿದುದಕ್ಕಾಗಿ ಟ್ವಿಟ್ಟರ್ ಸಂಸ್ಥೆಯು ಅವನನ್ನು ಗೌರವಿಸಿತು. ಆದುದರಿಂದ ಅಂತಹ ಯೋಜನೆಯನ್ನು ಕೈಗೊಳ್ಳಿ. ನೀವು ಯಾವುದನ್ನು ಇಷ್ಟಪಡುತ್ತೀರೋ ಅದರ ಬಗ್ಗೆಯಿರುವ ಯೋಜನೆಯನ್ನು ಕೈಗೊಳ್ಳಿ. ಈಗ ಮೀನಾಕ್ಷಿಯು ಒಂದು ಅಪೂರ್ವವಾದ ಅಡುಗೆ ಪುಸ್ತಕವನ್ನು ಹೊರತಂದಿದ್ದಾಳೆ. ಅದು ನಿಜವಾಗಿ ಒಂದು ಪುಸ್ತಕವಲ್ಲ, ಆದರೆ ಅಡುಗೆಯವರು ತಮ್ಮ ಮುಂದಿಟ್ಟುಕೊಂಡು ಅಡುಗೆ ಮಾಡಬಹುದಾದಂತಹ ಪುಟಗಳು. ಹೀಗೆ, ಇದೊಂದು ಯೋಜನೆ ಮತ್ತು ಈ ರೀತಿಯಲ್ಲಿ ಎಲ್ಲರೂ ಒಂದು ಯೋಜನೆಯನ್ನು ಹಾಕಿದರೆ, ಆಗ ಅಲ್ಲಿ ಕುಳಿತು ಮಾತನಾಡಲು ಏನಾದರೂ ಇರುತ್ತದೆ. ಅಲ್ಲದಿದ್ದರೆ, ಮೌನದಲ್ಲಿ, ಧ್ಯಾನದಲ್ಲಿ ನಾವು ಈಗಾಗಲೇ ಜೋಡಲ್ಪಟಿದ್ದೇವೆ, ನಾವು ಸಂಪರ್ಕ ಹೊಂದಿದ್ದೇವೆ. ಯಾವಾಗಲಾದರೂ ಎಲ್ಲಾದರೂ ನಿಮಗೆ ಏನಾದರೂ ಸಹಾಯ ಬೇಕಿದ್ದರೆ, ಆಗ ನೀವು ಕೇಳಿ, ತಿಳಿಯಿತೇ ಇಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ ತಿಳಿಯಿತು? (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ನೋಡಿ, ಎಲ್ಲರಿಗೂ ತಿಳಿಯಿತು. ಹಾಗಾದರೆ ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ!

ಪ್ರಶ್ನೆ: ನನಗೆ ಹಲವಾರು ಕಾಮಪ್ರಚೋದಕ ಯೋಚನೆಗಳು ಬರುತ್ತವೆ. ಅವುಗಳು ಹಾನಿಕಾರಕವೇ?

ಶ್ರೀ ಶ್ರೀ ರವಿಶಂಕರ್:
ಪರವಾಗಿಲ್ಲ, ಚಿಂತಿಸಬೇಡ; ನಿನ್ನನ್ನು ನಿನ್ನ ಯೋಚನೆಗಳೊಂದಿಗೆ ಗುರುತಿಸಬೇಡ. ಯೋಚನೆಗಳೆಂದರೆ ಯೋಚನೆಗಳು, ಅವುಗಳು ಬರುತ್ತವೆ, ಹೋಗುತ್ತವೆ, ಚಿಂತಿಸಬೇಡ. ನೀನು ಅವುಗಳಿಗೆ ಅಧಿಕಾರ ಕೊಡದೇ ಇರುವಲ್ಲಿಯ ವರೆಗೆ, ನೀನು ಅವುಗಳಂತೆ ನಡಕೊಳ್ಳದೇ ಇರುವಲ್ಲಿಯ ವರೆಗೆ, ನೀನು ಬಹಳ ಸುರಕ್ಷಿತವಾಗಿರುವೆ. ಅಂತಹ ಯೋಚನೆಗಳು ನಿಮ್ಮ ಮನಸ್ಸಿಗೆ ಬರದಿರುವಷ್ಟು ವೈರಾಗಿಯಾಗಿರಲು ಹಾಗೂ ಅಷ್ಟೊಂದು ಕೇಂದ್ರಿತವಾಗಿರಲು ನಿಮ್ಮ ಪ್ರಜ್ಞೆಗೆ ಸಮಯ ಹಿಡಿಯುತ್ತದೆ. ಅದು ಕೂಡಲೇ ಆಗುವುದಿಲ್ಲ. ನಾನು ಹೇಳುತ್ತೇನೆ, ಅದು ಅದರದ್ದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ನೀವು ಗಮನಿಸಿರಬಹುದು, ನಿಮ್ಮ ಸಾಧನೆಯು ಸುಧಾರಿಸಿದಂತೆಲ್ಲಾ, ಈ ರೀತಿಯ ಯೋಚನೆಗಳು ಕಡಿಮೆಯಾಗುತ್ತಾ ಹೋಗುತ್ತವೆ, ಅಲ್ಲವೇ? ಕಾಮಪ್ರಚೋದಕ ಮತ್ತು ಹಿಂಸಾತ್ಮಕ ಯೋಚನೆಗಳು ಕಡಿಮೆಯಾಗುತ್ತಾ ಹೋಗುತ್ತವೆ.

ಪ್ರಶ್ನೆ: ಈ ಉದ್ಘಾಟನೆಯಲ್ಲಿ ನಾನು ಇಲ್ಲಿರುವಂತೆ ಆಶೀರ್ವದಿಸಿದುದಕ್ಕಾಗಿ ನಿಮಗೆ ಬಹಳ ಧನ್ಯವಾದಗಳು. ಅದು ಬಹಳ ಅಪೂರ್ವವಾಗಿತ್ತು. ಭಾಷಣಕಾರರಲ್ಲಿ ಪ್ರತಿಯೊಬ್ಬರೂ ತಮ್ಮ ಮಾತುಗಳಿಂದ ನನ್ನ ಹೃದಯವನ್ನು ಮುಟ್ಟಿದರು. ಧ್ಯಾನ, ಬದ್ಧತೆ ಮತ್ತು ಸೇವೆಗಳ ಸಂಯೋಗವಾಗಿರುವ ನನ್ನ ಸಹೋದರಿ ಹಾಗೂ ನನ್ನ ಹೆತ್ತವರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಈ ಕ್ಷಣದಲ್ಲಿ, ಇಲ್ಲಿ ನಾನಿರುವೆನೆಂದು ನಾನು ಯಾವತ್ತೂ ಕಲ್ಪಿಸಿಕೊಳ್ಳಲೂ ಇಲ್ಲ! ಈ ಪಥದಲ್ಲಿ ಉಳಿಯಲು ನನಗೆ ಬೇರೆ ಬೇರೆ ಸಮಯಗಳಲ್ಲಿ ಸ್ಫೂರ್ತಿ ನೀಡಿದ ನನ್ನ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಿಗೆ, ಸಹೋದರ, ಸಹೋದರಿಯರಿಗೆ ಕೂಡಾ ನಾನು ಧನ್ಯವಾದಗಳನ್ನರ್ಪಿಸಲು ಬಯಸುತ್ತೇನೆ. ನನ್ನ ಗಂಡ ನನಗೆ ಬಹಳ ಸ್ಫೂರ್ತಿಯಾಗಿದ್ದಾರೆ ಹಾಗೂ ನನ್ನ ಮಗ ಕೂಡಾ, ಅವನನ್ನು ನಾನು ನನ್ನ ಮೊದಲ ಗುರುವೆಂದು ಪರಿಗಣಿಸುತ್ತೇನೆ. ಅವನು ನನ್ನನ್ನೊಬ್ಬಳು ಅನ್ವೇಷಕಿಯನ್ನಾಗಿ ಮಾಡಿದ್ದಾನೆ. ನಿಮಗೆಲ್ಲರಿಗೂ ಎಲ್ಲದಕ್ಕೂ ಬಹಳ ಧನ್ಯವಾದಗಳು.

ಶ್ರೀ ಶ್ರೀ ರವಿಶಂಕರ್:
ಅದು ಒಳ್ಳೆಯದು. ನಾವು ಗುರುತಿಸಬೇಕಾದುದು ಅದನ್ನೇ. ನಮ್ಮ ಸಂಗವು ಪ್ರಮುಖವಾದುದು. ನಮ್ಮ ಮಿತ್ರರು, ನಮ್ಮ ಸಂಬಂಧಿಕರು ನಮ್ಮನ್ನು ಮೇಲಕ್ಕೆ ಕರೆದೊಯ್ಯಬಲ್ಲರು ಹಾಗೂ ಅವರು ನಮ್ಮನ್ನು ಕೆಳಕ್ಕೆಳೆಯಬಲ್ಲರೂ ಕೂಡಾ. ಯಾರಾದರೂ ನಕಾರಾತ್ಮಕತೆಯ ಕಡೆಗೆ ಹೋಗುವ ಪ್ರವೃತ್ತಿಯುಳ್ಳವರಾಗಿದ್ದರೆ, ನೀವು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಕು. ಇದನ್ನು ಕೂಡಾ ನೀವು ನೋಡಬೇಕು. ಅವರನ್ನು ನಕಾರಾತ್ಮಕ ಪ್ರವೃತ್ತಿಯಿಂದ ಹೊರಕ್ಕೆ ತನ್ನಿ. ನಕಾರಾತ್ಮಕ ಭಾವನೆಗಳಿಗೀಡಾಗುವುದು ಬಹಳ ಸುಲಭ; ತೆಗಳುವುದು, ದೂರುವುದು, ಇವುಗಳು ಪ್ರಪಂಚದಲ್ಲೆಲ್ಲಾ ಪ್ರಚಲಿತವಾಗಿದೆ, ಅಲ್ಲವೇ? ಆದರೆ ಬಹಳ ಅಮೂಲ್ಯವಾಗಿರುವುದೆಂದರೆ ಜ್ಞಾನ. ನಾವು ನಮ್ಮನ್ನು ಜ್ಞಾನದಲ್ಲಿ ಹೆಚ್ಚು ಹೆಚ್ಚು ನೆನೆಯಿಸಿದಷ್ಟು, ನಮಗೆ ಮೇಲಕ್ಕೇರಲು ಹಾಗೂ ಎಲ್ಲರನ್ನೂ ಮೇಲಕ್ಕೆಳೆಯಲು ಬೇಕಾದ ಆ ಶಕ್ತಿ ಲಭಿಸುತ್ತದೆ. ಸಾಧಾರಣವಾಗಿ ಔಪಚಾರಿಕ ಕಾರ್ಯಕ್ರಮಗಳು ಬಹಳ ಬೇಸರ ತರಿಸುತ್ತವೆ. ಅರ್ಧಕ್ಕರ್ಧ ಜನರು ನಿದ್ರಿಸುತ್ತಾರೆ ಅಥವಾ ತೂಕಡಿಸುತ್ತಾರೆ. ಆದರೆ ಇವತ್ತಿನ ಕಾರ್ಯಕ್ರಮವು ಬಹಳ ಚೆನ್ನಾಗಿತ್ತು, ಎಲ್ಲರೂ ಜೀವಂತಿಕೆಯಿಂದಿದ್ದರು. ಇನ್ನೊಂದು ವಿಷಯ, ಎಲ್ಲಾ ಕೀರ್ತಿಯೂ ಭಾಷಣಕಾರರಿಗೆ ಸಲ್ಲುತ್ತದೆಯೆಂದು ಯೋಚಿಸಬೇಡಿ; ಅದು ಸಭಿಕರನ್ನೂ ಅವಲಂಬಿಸಿದೆ. ಒಬ್ಬ ಭಾಷಣಕಾರನಲ್ಲಿರುವ ಒಳ್ಳೆಯ ವಿಷಯಗಳನ್ನು ಹೊರಕ್ಕೆ ತರುವುದು ಕೂಡಾ ಸಭಿಕರು. ಆದುದರಿಂದ, ನೀವೆಲ್ಲರೂ; ಬಹಳ ಪ್ರಜ್ಞಾವಂತ ಹಾಗೂ ಅರಿವುಳ್ಳ ಜನರು ಇಲ್ಲಿರುವಾಗ, ನೀವೆಲ್ಲರೂ ಅಷ್ಟೊಂದು ಒಳ್ಳೆಯ ಹೃದಯದೊಂದಿಗೆ, ಸುಂದರ ಉದ್ದೇಶಗಳೊಂದಿಗೆ ಮತ್ತು ದೊಡ್ಡ ಕಲ್ಪನೆಯೊಂದಿಗೆ ಇಲ್ಲಿ ಕುಳಿತಿರುವಾಗ, ಭಾಷಣಕಾರನು ಸೂಕ್ತ ವಿಷಯಗಳನ್ನಲ್ಲದೆ ಬೇರೇನನ್ನೂ ಮಾತನಾಡಲು ಸಾಧ್ಯವಿಲ್ಲ. ಆದುದರಿಂದ ಅದು ಯಾವತ್ತಿಗೂ ಭಾಷಣಕಾರ ಹಾಗೂ ಕೇಳುಗರ ಸಂಯೋಗವಾಗಿರುತ್ತದೆ. ಭಾಷಣಕಾರರು ಎಷ್ಟೇ ಚೆನ್ನಾಗಿದ್ದರೂ, ಸಭಿಕರು ಗ್ರಹಿಸುವವರಾಗಿರದೇ ಇದ್ದಲ್ಲಿ, ಸರಿಯಾದ ಶಬ್ದಗಳು ಹರಿಯುವುದೇ ಇಲ್ಲ. ಅಲ್ಲೊಂದು ತಡೆಯಿರುತ್ತದೆ. ಪ್ರಶ್ನೆ: ನಾವು ಯಾರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ, ಅಂತಹವರ ಕಡೆಗಿರುವ ಕೋಪ ಹಾಗೂ ದ್ವೇಷದೊಂದಿಗೆ ವ್ಯವಹರಿಸುವುದು ಹೇಗೆ; ವಿಶೇಷವಾಗಿ ಇಬ್ಬರೂ ಸಂಪೂರ್ಣ ವ್ಯತ್ಯಸ್ತ ಫ್ರೀಕ್ವೆನ್ಸಿಯಲ್ಲಿರುವಾಗ? ಶ್ರೀ ಶ್ರೀ ರವಿಶಂಕರ್: ಮೊದಲಿಗೆ, ನೀನು ಉದಾರಿ ಎಂಬುದನ್ನು ಅರ್ಥ ಮಾಡಿಕೋ. ನೀನು ನಿನ್ನ ಉದಾರತೆಯಲ್ಲಿ ಹಾಗೂ ನಿನ್ನ ಆಂತರಿಕ ಸೌಂದರ್ಯದಲ್ಲಿ ನಂಬಿಕೆಯನ್ನಿರಿಸಿದರೆ, ಇಂತಹ ಎಲ್ಲಾ ಪರಿಸ್ಥಿತಿಗಳನ್ನು ನಿರ್ವಹಿಸಲು ನಿನಗೆ ಸುಲಭವಾಗಬಹುದು. ನೀನು ಒಳಗೆ ನೋಡದೇ ಇರುವಾಗ, ನೀನು ಕೇವಲ ಇತರರ ವರ್ತನೆಗಳ ಮೇಲೆ ಗಮನವಿರಿಸಿದಾಗ, ಅದು ಖಂಡಿತವಾಗಿ ನಿನ್ನ ಮನಸ್ಸನ್ನು ತಳಮಳಗೊಳಿಸುತ್ತದೆ. ಆಗ ನೀನು ಇನ್ನೊಬ್ಬ ವ್ಯಕ್ತಿಯನ್ನು ಸರಿಪಡಿಸಲು ಪ್ರಯತ್ನಿಸುವೆ ಹಾಗೂ ನೀನು ಯಶಸ್ವಿಯಾಗುವುದಿಲ್ಲ. ನಿನ್ನನ್ನು ಕಿರಿಕಿರಿಗೊಳಿಸುವ ಜನರು, ಒಂದಲ್ಲ ಒಂದು ರೀತಿಯಲ್ಲಿ ನಿನ್ನಲ್ಲಿರುವ ಅತ್ಯುತ್ತಮವಾದುದನ್ನು ಹೊರತರುತ್ತಾರೆ. ಅವರು ನಿನ್ನಲ್ಲಿರುವ ಪ್ರತಿಭೆಗಳು ಹಾಗೂ ಕುಶಲತೆಗಳನ್ನು ಹೊರತರಬಲ್ಲರು. ನೋಡಿ, ನಿಮ್ಮ ಸುತ್ತಲಿರುವವರೆಲ್ಲರೂ ಒಳ್ಳೆಯವರಾಗಿರುವಾಗ, ಒಂದು ಪರಿಸ್ಥಿತಿಯನ್ನು ನಿರ್ವಹಿಸಲು ನಿಮಗೆ ಯಾವುದೇ ಕುಶಲತೆಯು ಬೇಕಾಗುವುದಿಲ್ಲ. ಅವಿವೇಕಿಗಳೆಂದು ನೀವಂದುಕೊಳ್ಳುವ ಜನರಿರುವಾಗ ಮಾತ್ರ ಅದು ಆಗುವುದು. ಆದುದರಿಂದ ಇದೊಂದು ಅಭ್ಯಾಸ, ಸಾಧ್ಯವಾದಷ್ಟೂ ಇದನ್ನೊಂದು ಅಭ್ಯಾಸವನ್ನಾಗಿ ತೆಗೆದುಕೊಳ್ಳಿ. ಇದೊಂದು ಸುಲಭವಾದ ಕೆಲಸವಲ್ಲವೆಂದು ನನಗೆ ಗೊತ್ತು. ಕನಿಷ್ಠಪಕ್ಷ, ನೀವು ನಿಮ್ಮ ಮನಸ್ಸನ್ನು ರಕ್ಷಿಸಿಕೊಳ್ಳಿ. ನಾನು ಮೌನದ ಮಾರ್ದನಿ ಮತ್ತು ಸೆಲೆಬ್ರೇಟಿಂಗ್ ಲವ್ ಎಂಬ ಪುಸ್ತಕಗಳಲ್ಲಿ ಇದರ ಬಗ್ಗೆ ಬಹಳಷ್ಟು ಮಾತನಾಡಿದ್ದೇನೆ. ಅವುಗಳನ್ನೋದಿ. ನಿಮ್ಮೊಳಗಿನಿಂದ ಆಳವಾದ ಸ್ವೀಕಾರವು ಬರಲು ಪ್ರಾರಂಭವಾಗುವ ಕ್ಷಣದಲ್ಲಿ, ಇನ್ನೊಬ್ಬ ವ್ಯಕ್ತಿ ಕೂಡಾ ಬದಲಾಗುವುದನ್ನು ನೀವು ನೋಡುತ್ತೀರಿ. ಇದು ವಿಚಿತ್ರ, ಆದರೆ ಸತ್ಯ. ನಾವು ಬದಲಾಗುವಾಗ, ಅವರು ಕೂಡಾ ಬದಲಾಗುತ್ತಾರೆ.

ಪ್ರಶ್ನೆ: ನಾನು ನನ್ನ ಕುಟುಂಬದ ಸದಸ್ಯರಿಗಾಗಿ ಬಹಳಷ್ಟು ಮಾಡುತ್ತೇನೆ ಮತ್ತು ಹಾಗಿದ್ದರೂ ನಾನು ತಪ್ಪೆಂದು ಅವರೆಲ್ಲ ಯಾವತ್ತೂ ಹೇಳುತ್ತಿರುತ್ತಾರೆ. ನಾನೇನು ಮಾಡಬೇಕು? ಇದನ್ನು ನಿರ್ವಹಿಸುವುದು ಹೇಗೆ?

ಶ್ರೀ ಶ್ರೀ ರವಿಶಂಕರ್:
ಇಲ್ಲ, ನೀನು ತಪ್ಪೆಂದು ಅವರು ಯಾವತ್ತೂ ಹೇಳುತ್ತಾರೆಂದು ಅನ್ನಬೇಡ. ನೀನು ತಪ್ಪೆಂದು ಅವರು ಯಾವತ್ತೂ ಹೇಳುವುದಿದ್ದರೆ, ಅದು ನಿನಗೆ ತೊಂದರೆಯನ್ನುಂಟುಮಾಡುವುದಿಲ್ಲ ಅಥವಾ ನಿನ್ನನ್ನು ಮುಟ್ಟುವುದು ಕೂಡಾ ಇಲ್ಲ. ಅದನ್ನು ನೀನು ಅವರ ಸ್ವಭಾವವಾಗಿ ತೆಗೆದುಕೊಳ್ಳುವೆ. ಕೆಲವೊಮ್ಮೆ, ನೀನು ಸರಿಯಾದುದನ್ನು ಮಾಡಿರುವೆಯೆಂದು ಕೂಡಾ ಅವರು ಹೇಳಿರಬಹುದು. ಅದು ಹಾಗಲ್ಲವೇ? ಅವರು ನೀನು ಮಾಡಿದುದು ಸರಿಯೆಂದು ಹೇಳುವಾಗ, ನಿನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವಾಗ, ನೀನು ಅವರನ್ನು ಮೆಚ್ಚಬಲ್ಲೆಯಾದರೆ, ನೀನು ಮಾಡಿದುದನ್ನು ಅವರು ಮೆಚ್ಚದೇ ಇರುವಾಗ, ನೀನು ತಪ್ಪು ಮಾಡಿರುವೆಯೆಂದು ಅವರು ಹೇಳುವಾಗ, ಅದನ್ನು ಕೂಡಾ ನೀನು ಸ್ವೀಕರಿಸಬೇಕು. ನೀನೊಂದು ನಡುದಾರಿಯನ್ನು ಕಂಡುಕೊಳ್ಳಬೇಕು. ನಿಮಗೆ ಗೊತ್ತಾ, ಹೆಚ್ಚಾಗಿ, ನಾವು ಸಮಸ್ಯೆಯನ್ನು ಎಲ್ಲದಕ್ಕೂ ಅನ್ವಯಿಸುತ್ತೇವೆ ಹಾಗೂ ಹೊರಗಿನದನ್ನಾಗಿಸುತ್ತೇವೆ. "ಓಹ್, ನಾನು ಯಾವತ್ತೂ ತಪ್ಪು ಮಾಡುತ್ತೇನೆ", "ಓಹ್, ನಾನು ಯಾವತೂ ಸರಿ", "ಓಹ್, ನಾನು ಯಾವತ್ತೂ ಹೀಗೆ", "ಎಲ್ಲರೂ ಕೆಟ್ಟವರು." ಈ ರೀತಿಯ, ಸಮಸ್ಯೆಗಳ ಸಾಮಾನ್ಯೀಕರಿಸುವಿಕೆ ಹಾಗೂ ಹೊರಗಿನದನ್ನಾಗಿಸುವಿಕೆಯು ಬಹಳ ಸಾಮಾನ್ಯ. ಅದರಿಂದ ಹೊರಬಂದು, ಅದರಾಚೆಗೆ ಹೋಗಲು ನಾವೊಂದು ಪ್ರಯತ್ನವನ್ನು ಮಾಡಬೇಕು. ಕೇವಲ ನಕ್ಕುಬಿಡಿ. ಅವರು ತಮ್ಮ ಹೇಳಿಕೆಗಳಲ್ಲಿ ಅನುಚಿತರಾಗಿದ್ದಾರೆಂದು ಹಾಗೂ ಅವರು ಯಾವತ್ತೂ ನಿಮ್ಮನ್ನು ಟೀಕಿಸುತ್ತಿರುವರೆಂದು ನಿಮಗನ್ನಿಸಿದರೆ, ಸುಮ್ಮನೇ ನಕ್ಕುಬಿಡಿ. ಅದರಿಂದ ಚಿಂತೆಗೊಳಗಾಗಲೇಬೇಡಿ. ಶಿಕ್ಷಣ ನೀಡಿ ಹಾಗೂ ನಿರ್ಲಕ್ಷಿಸಿ ಮತ್ತು ನಿಮ್ಮ ಪಥದಲ್ಲಿ ನಡೆಯಿರಿ. ನಿಮಗೇನು ಮಾಡಲು ಸಾಧ್ಯ? ಪ್ರತಿಸಲವೂ ನೀವು ಧ್ಯಾನ ಮಾಡಲು ಕುಳಿತಾಗ, ಯಾರಾದರೂ ಬಂದು ದೂರುತ್ತಾರೆ, "ನೀನು ಯಾಕೆ ಕುಳಿತುಕೊಂಡು ಕಣ್ಣುಗಳನ್ನು ಮುಚ್ಚಿಕೊಂಡಿದ್ದೀಯಾ, ಅದು ನಿಷ್ಪ್ರಯೋಜಕ, ಅದನ್ನು ಮಾಡಬೇಡ", ಚಿಂತಿಸಬೇಡಿ. ನೀವು ಎಚ್ಚರಗೊಂಡಾಗ ನಕ್ಕುಬಿಡಿ ಮತ್ತು ಮರುದಿನ ಪುನಃ ಕುಳಿತುಕೊಳ್ಳಿ ಮತ್ತು ಅವರು ಹಿಂದೆ ತಿರುಗುತ್ತಾರೆ. ಪ್ರಶ್ನೆ: ಪ್ರೀತಿಯು ನಮ್ಮ ನಿಜವಾದ ಸ್ವಭಾವವಾದರೆ, ನಮಗೇ ನೋವಾಗಿದ್ದಾಗಲೂ ಸಹ ಒಬ್ಬರಿಗೆ ನೋವುಂಟುಮಾಡಲು ಒಳ್ಳೆಯದೆನಿಸುವುದು ಯಾಕೆ? ನಾವು ಇತರರ ವಿರುದ್ಧ ಸೇಡು ತೀರಿಸುವುದರಿಂದ ನಮ್ಮನ್ನು ತಡೆಯುವುದು ಹೇಗೆ? ಶ್ರೀ ಶ್ರೀ ರವಿಶಂಕರ್: ಪುನಃ, ನೀನು ಆತ್ಮೀಯರಿಗೊಂದು ಕಿವಿಮಾತು ಪುಸ್ತಕವನ್ನು ಓದಬೇಕು. ಈ ವಿಷಯಗಳ ಬಗ್ಗೆ ನಾನು ಹಲವಾರು ಶಬ್ದಗಳಲ್ಲಿ ಮಾತನಾಡಿದ್ದೇನೆ. ಸರಪಣಿಯು ಮುಂದುವರಿಯಬೇಕೆಂದು ನೀನು ಬಯಸುತ್ತೀಯಾ? ನೀನು ಅವರನ್ನು ನೋಯಿಸುವೆ, ಅವರು ನಿನ್ನನ್ನು ನೋಯಿಸುವರು ಹಾಗೂ ಅವರು ಸೇಡು ತೀರಿಸುವರು. ಸೇಡು ತೀರಿಸಲ್ಪಡಲು ನೀನು ಇಷ್ಟಪಡುತ್ತೀಯಾ? ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಉದ್ದೇಶಪೂರ್ವಕವಲ್ಲದೆ ನಿನ್ನಿಂದ ಒಂದು ತಪ್ಪು ಆಗಿದೆ. ನೀನೇನೋ ತಪ್ಪು ಮಾಡಿದೆಯೆಂದು ಯಾರೋ ಒಬ್ಬರು ನಿನ್ನ ಮೇಲೆ ಸೇಡು ತೀರಿಸಲು ಶುರು ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ನೀನು ಹೇಳಿದುದೇನೋ ಅಥವಾ ಮಾಡಿದುದೇನೋ ಅವರಿಗೆ ಆಳವಾದ ನೋವನ್ನುಂಟುಮಾಡಿತು ಹಾಗೂ ನೀನೊಂದು ನೂರು ಸಾರಿ ಕ್ಷಮೆ ಕೇಳಿಕೊಂಡೆ. ಆಗಲೂ ಅವರು ಸೇಡುತೀರಿಸಿಕೊಳ್ಳಲು ಮತ್ತು ದ್ವೇಷ ಸಾಧಿಸಲು ಬಯಸುತ್ತಾರೆ, ನಿನ್ನ ಮನಸ್ಸಿನ ಸ್ಥಿತಿಯು ಹೇಗಿರಬಹುದು? ನಿನಗೆ ಅದು ಇಷ್ಟವಾಗಬಹುದೇ? ನೀನು ಯಾಕೆ ಇನ್ನೊಬ್ಬ ವ್ಯಕ್ತಿಯ ಸ್ಥಾನದಲ್ಲಿ ಒಂದು ನಿಮಿಷ ನಿಂತು ನೋಡಬಾರದು? ನೀನು ಅದನ್ನು ಬಯಸಲಾರೆ. ನೀನು, "ಇಲ್ಲ! ನಾನು ಕ್ಷಮಾಪಣೆ ಕೇಳಿದೆ. ನಾನು ಕ್ಷಮಿಸಲ್ಪಡಬೇಕೆಂದು ಕೇಳಿಕೊಂಡೆ" ಎಂದು ಹೇಳುವೆ. ಸುಮ್ಮನೇ ಕಲ್ಪಿಸಿಕೋ, ನೀನು ಉದ್ದೇಶಪೂರ್ವಕವಲ್ಲದೆ ಅಥವಾ ಅಜ್ಞಾನದಿಂದಾಗಿ ಮಾಡಿದ ಚಿಕ್ಕ ವಿಷಯಗಳಿಗೆ ನಿನ್ನನ್ನು ಕ್ಷಮಿಸಲು ಯಾರಾದರೂ ನಿರಾಕರಿಸಿದರೆ, ನೀನದನ್ನು ಇಷ್ಟಪಡುವೆಯಾ? ನೀನು ಕ್ಷಮಿಸಲ್ಪಡಲು ಇಚ್ಛಿಸುವಾಗ, ನೀನು ಕ್ಷಮಿಸಲು ಬಯಸದೇ ಇರುವುದಾದರೂ ಹೇಗೆ? ಮತ್ತು ಇದು, ಇತರರಿಗೆ ನೋವುಂಟುಮಾಡಲು ಖುಷಿಪಡುವುದು, ಸರಿಯಲ್ಲ. ಅದು ಕೇವಲ ನೀನು ಇತರರ ಗಮನವನ್ನು ಬಯಸುವುದು, ಅಷ್ಟೆ. ಇದನ್ನು ನೀನು ಸರಿಪಡಿಸಬೇಕು. ಇದು ನಮ್ಮ ಮನಸ್ಸಿನ ರೋಗ. ಇದು, ಇತರರನ್ನು ದುಃಖಿತರನ್ನಾಗಿ ಮಾಡಿ ನಾವು ಸಂತೋಷಪಡುವ ನಮ್ಮದೇ ಮನಸ್ಸಿನ ರೋಗ. ಅದನ್ನು ನೀವು ಏನೆಂದು ಕರೆಯುತ್ತೀರಿ? ಸ್ಯಾಡಿಸ್ಟಿಕ್! ಒಬ್ಬರ ದುಃಖವನ್ನು ಆಸ್ವಾದಿಸುವುದು ನಿಮ್ಮನ್ನು ಖುಷಿಪಡಿಸುತ್ತದೆ. "ನೋಡು, ನೀನು ನಾನು ದುಃಖಪಡುವಂತೆ ಮಾಡಿದೆ ಮತ್ತು ನಾನು ನೀನು ದುಃಖಪಡುವಂತೆ ಮಾಡುತ್ತೇನೆ", ಆ ರೀತಿಯ ಸಂತೋಷವು ನಿಮಗಲ್ಲ, ಅಲ್ಲ! ಅದು ಕ್ಷಣಮಾತ್ರಕ್ಕೆ ಸಂತೋಷವಾಗಿ ಕಾಣಿಸುತ್ತದೆ, ಆದರೆ ಅದು ದಶಲಕ್ಷಪಟ್ಟು ಜಾಸ್ತಿಯಾಗಿ ನಿಮ್ಮೆಡೆಗೆ ಮರಳಿ ಬರುತ್ತದೆ, ಆದುದರಿಂದ ಅದನ್ನು ಮಾಡಬೇಡಿ. ಸಂತೋಷವಾಗಿರಲು ಬೇರೆ ಉತ್ತಮ ಮಾರ್ಗಗಳಿವೆ. ನೀವು ಕ್ಷಮಿಸುವಾಗ, ಅದು ನಿಮಗೆ ಯಾವ ದೊಡ್ಡ ಸಂತೋಷವನ್ನು, ಯಾವ ದೊಡ್ಡ ಸುಖವನ್ನು ತರುತ್ತದೆ ಎಂದು ನೋಡಿ. ಯಾರಾದರೂ ಬಂದು ಕ್ಷಮೆ ಕೇಳಿಕೊಂಡಾಗ, "ಓಹ್, ಸರಿ, ಪರವಾಗಿಲ್ಲ" ಎಂದು ಹೇಳುವುದು ನಮ್ಮ ದೊಡ್ಡತನ. ನಾನು ಹೇಳುವುದೇನೆಂದರೆ, ನಮ್ಮ ದೊಡ್ಡತನವಿರುವುದು ಕ್ಷಮಿಸುವುದರಲ್ಲಿ ಮತ್ತು ಅದನ್ನೇ ನಾವು ಮಾಡುವುದು. ಆದರೆ ಅವರು ತಪ್ಪು ಮಾಡುವುದನ್ನು ಮುಂದುವರಿಸಿದರೆ, ಅವರು ನಿಮ್ಮ ಕ್ಷಮೆಯನ್ನು ಗೌರವಿಸದಿದ್ದರೆ, ಆಗ ಒಂದು ಕೋಲು ತೆಗೆದುಕೊಳ್ಳಿ. ಆಗ ಹೋಗಿ, ಅವರಿಗೆ ಸವಾಲೊಡ್ಡಿ; ನ್ಯಾಯಾಲಯಕ್ಕೆ ಹೋಗಿ ಅಥವಾ ಏನಾದರೂ ಮಾಡಿ. ಆದರೆ ಒಬ್ಬರು ತಮ್ಮನ್ನು ತಿದ್ದಿಕೊಳ್ಳಲು ಅವರಿಗೆ ನೀವು ಸಾಕಷ್ಟು ಅವಕಾಶವನ್ನು ಕೊಡಬೇಕು. ಕ್ಷಮಾಪಣೆಯು ಬಲಹೀನತೆಯ ಒಂದು ಲಕ್ಷಣವಲ್ಲ; ಅದನ್ನು ಕೇವಲವಾಗಿ ತೆಗೆದುಕೊಳ್ಳಬಾರದು. ಅದೇ ಸಮಯದಲ್ಲಿ, ಕ್ಷಮೆ ನೀಡದಿರುವುದು, ನಿಮ್ಮ ಬಗ್ಗೆ ಬಹಳ ಒಳ್ಳೆಯದನ್ನು ತೋರಿಸುವುದಿಲ್ಲ ಅಥವಾ ಮಾತನಾಡುವುದಿಲ್ಲ. ನಿಮಗೇನನ್ನಿಸುತ್ತಿದೆ? ಅಲ್ಲವೇ?

ಪ್ರಶ್ನೆ: ಒಂದು ತೊಂದರೆಗೊಳಗಾಗಿರುವ ಮದುವೆಯನ್ನು, ಎರಡು ಮಕ್ಕಳಿರುವ ಒಂದು ಮದುವೆಯನ್ನು ನಿಭಾಯಿಸುವುದು ಹೇಗೆ? ಈ ವೈವಾಹಿಕ ಪ್ರವಾಹದ ಮಧ್ಯೆ ಸಿಕ್ಕಿಬಿದ್ದ ಎರಡು ಚಿಕ್ಕ ಮಗಳಿಂದಿರಿಗೆ ಮಾರ್ಗದರ್ಶನ ಹಾಗೂ ಸಾಂತ್ವನವನ್ನು ನೀಡುವುದು ಹೇಗೆ?

ಶ್ರೀ ಶ್ರೀ ರವಿಶಂಕರ್:
ವಿವಾಹಗಳು ಮುರಿದು ಬಿದ್ದಾಗ ನೀವು ಮಕ್ಕಳ ಮನಸ್ಸಿನೊಂದಿಗೆ ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ. ಹೆಚ್ಚಾಗಿ ಹೆತ್ತವರು ತಮ್ಮೆಲ್ಲಾ ದುಃಖಗಳನ್ನು ಆ ಚಿಕ್ಕ ಮನಸ್ಸುಗಳ ಮೇಲೆ ಎರೆದುಬಿಡುತ್ತಾರೆ. ಮಕ್ಕಳು ತಮಗೆ ಹತ್ತಿರವಾಗಿರಲಿ ಎಂಬ ಕಾರಣಕ್ಕೆ ಅವರು ತಮ್ಮ ಸಂಗಾತಿಯ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಅದನ್ನು ಮಾಡಬೇಡಿ. ನಿಮ್ಮ ತಂದೆ ಅಥವಾ ನಿಮ್ಮ ತಾಯಿ ಬಹಳ ಕೆಟ್ಟವರೆಂದು ಹೇಳಬೇಡಿ; ಇದು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ. ನೀವಿಬ್ಬರೂ ಜೊತೆಯಲ್ಲಿ ಸೇರಿ ಅವರಿಗೆ ಅರ್ಥ ಮಾಡಿಸಿಕೊಡಬೇಕಾದುದೇನೆಂದರೆ, "ನಾವು ನಮ್ಮ ಬೇರೆ ಬೇರೆ ದಾರಿಗಳಲ್ಲಿ ಹೋಗಲು ನಿರ್ಧರಿಸಿದ್ದೇವೆ, ಆದರೆ ನಮಗಿಬ್ಬರಿಗೂ ನಿಮ್ಮ ಬಗ್ಗೆ ಕಾಳಜಿಯಿದೆ." ಅಷ್ಟೆ. ಇದೊಂದು ಬಹಳ ಸೂಕ್ಷ್ಮವಾದ ಹಾಗೂ ಬಹಳ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ, ಆದರೆ ಕ್ಷಣಿಕವಾದುದು. ಈ ಕಷ್ಟಕಾಲವು ಕಳೆದು ಹೋಗುತ್ತದೆ; ಇದನ್ನು ನೀವು ತಿಳಿದಿರಬೇಕು. ಕೇವಲ ತಾಳ್ಮೆ ಮತ್ತು ಭಕ್ತಿಯಿಂದಿರಿ. ನಿಮ್ಮ ಭಕ್ತಿ, ನಿಮ್ಮ ಧ್ಯಾನ, ನಿಮ್ಮ ಸಾಧನೆ, ಇವುಗಳೆಲ್ಲಾ ನಿಮ್ಮ ಸಹಾಯಕ್ಕೆ ಬರುತ್ತವೆ, ಸರಿಯಾ? ಕೆಲವೊಮ್ಮೆ ನಾವು ಜೀವನದ ಕಠಿಣ ವಾಸ್ತವತೆಯನ್ನು, ಪರಿತಪಿಸದೆಯೇ ಎದುರಿಸಬೇಕು ಮತ್ತು ಒಂದು ಉತ್ತಮ ಕಲ್ಪನೆಯನ್ನು ಹೊಂದಬೇಕು. ಹಾಗೆಯೇ, ನಿಮ್ಮ ಮಕ್ಕಳಿಗೆ ಭವಿಷ್ಯದ ಬಗ್ಗೆ ಒಂದು ದೊಡ್ಡ ಕಲ್ಪನೆಯನ್ನು ನೀಡಿ. ನೀವು ಅವರನ್ನು ಭವಿಷ್ಯದ ಬಗ್ಗೆ ಯಾವುದಾದರೊಂದು ವಿಷಯದಲ್ಲಿ ತೊಡಗಿಸಿಟ್ಟುಕೊಂಡರೆ, ಅವರು ಈಗಿನ ಕಹಿಕ್ಷಣಗಳನ್ನು ಮೆಲುಕು ಹಾಕುತ್ತಾ ಹೋಗುವುದಿಲ್ಲ ಮತ್ತು ಅದನ್ನು ಹೃದಯಕ್ಕೆ ಬಹಳವಾಗಿ ಹಚ್ಚಿಕೊಳ್ಳುವುದಿಲ್ಲ. ಆದುದರಿಂದ ನೀವು ಅವರಿಗೆ ಒಂದು ಉತ್ತಮ ಭವಿಷ್ಯದ ಕಲ್ಪನೆಯನ್ನು ನೀಡಬೇಕು ಅಥವಾ ಅವರು ದೊಡ್ಡವರಾದ ಬಳಿಕ ಏನು ಮಾಡಬೇಕೆಂಬುದರ ಬಗ್ಗೆ ಅಥವಾ ದೇಶಕ್ಕೇನು ಬೇಕು ಎಂಬುದರ ಬಗ್ಗೆ ಅವರೊಂದಿಗೆ ಮಾತನಾಡಬೇಕು. ದೊಡ್ಡ ಸವಾಲುಗಳು ಮತ್ತು ದೊಡ್ಡ ಸಮಸ್ಯೆಗಳು ನಿಮ್ಮ ಮುಂದೆ ಬಂದಂತೆಲ್ಲಾ, ಚಿಕ್ಕ ವೈಯಕ್ತಿಕ ಕಲಹಗಳು ಮತ್ತು ಸಮಸ್ಯೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು ಇದು ಅತ್ಯುತ್ತಮ ಮಾರ್ಗ.

ಪ್ರಶ್ನೆ: ಒಂದು ಚಿಕ್ಕ ಪೂಜೆಗೆ ವಿರುದ್ಧವಾಗಿ ಒಂದು ದೀರ್ಘ ಪೂಜೆ ಮಾಡುವುದರ ಉದ್ದೇಶವೇನು?

ಶ್ರೀ ಶ್ರೀ ರವಿಶಂಕರ್:
ಅದು ಕೇವಲ ನಿಮ್ಮ ದೈನಂದಿನ ಧ್ಯಾನಗಳು ಮತ್ತು ದೀರ್ಘ ಧ್ಯಾನಗಳನ್ನೊಳಗೊಂಡ ಉನ್ನತ ಶಿಬಿರಗಳಂತೆ. ಅವುಗಳೆಲ್ಲದಕ್ಕೂ ತಮ್ಮದೇ ಆದ ಪ್ರಭಾವವಿದೆ. ಪೂಜೆಗಳು ಬಹಳ ದೀರ್ಘವಾಗಿರಬೇಕೆಂದಿಲ್ಲ, ಆದರೆ ಈ ಪೂಜೆಗಳನ್ನು ಜನಸಮೂಹಕ್ಕಾಗಿ ಮಾಡಲಾಗುತ್ತವೆ. ಒಬ್ಬ ವ್ಯಕ್ತಿಗಾಗಿ ಅಲ್ಲ, ಆದರೆ ಸಂಪೂರ್ಣ ಜನತೆಗಾಗಿ.

ಪ್ರಶ್ನೆ: ಕ್ರಿಯೆಯ ಕೊನೆಯಲ್ಲಿ ನಾವು ಬಲಭಾಗಕ್ಕೆ ತಿರುಗುತ್ತೇವೆ, ಎಡಭಾಗಕ್ಕಲ್ಲ, ಯಾಕೆ? ಇದನ್ನು ನಾನು ಮೊದಲು ಕೇಳಿದ್ದೇನೆ, ಯಾರೂ ಉತ್ತರ ಕೊಡುವುದಿಲ್ಲ.

ಶ್ರೀ ಶ್ರೀ ರವಿಶಂಕರ್:
ಓ, ಅವರು ಬುದ್ಧಿವಂತರು! ನೀನು ಶಿಕ್ಷಕರ ತರಬೇತಿ ಶಿಬಿರಕ್ಕೆ (ಟಿ.ಟಿ.ಸಿ.) ಹಾಗೂ ಟೀಚರ್ಸ್ ರಿಫ್ರೆಶರ್ ಮೀಟ್ ಗಳಿಗೆ ಬರಬೇಕೆಂದು ಅವರು ನಿರೀಕ್ಷಿಸುತ್ತಾರೆ. ಅಲ್ಲೇ ನಾವು ಇಂತಹ ವಿಷಯಗಳನ್ನು ಚರ್ಚಿಸುವುದು. ಅವುಗಳು ನಿಜವಾದ ರಹಸ್ಯಗಳು!