ಭಾನುವಾರ, ಜೂನ್ 17, 2012

ಪ್ರೀತಿಯಿಲ್ಲದ ಜೀವನಕ್ಕೆ ಯಾವುದೇ ಬೆಲೆಯಿಲ್ಲ


17
2012............................... ಹಾರ್ಲೆಮ್, ಹಾಲೆಂಡ್
Jun



ಗ ನನಗೆ ಹೇಳಿ, ಈ ಸಂಜೆಯನ್ನು ಹೇಗೆ ಕಳೆಯಬೇಕೆಂದು ನೀವು ಬಯಸುತ್ತೀರಿ? ಈ ಸಂಜೆ ಏನನ್ನು ಚರ್ಚಿಸಲು ನೀವು ಬಯಸುತ್ತೀರಿ?
(ಸಭಿಕರು: ಶಮನದ ಬಗ್ಗೆ ಮಾತನಾಡಿ; ನಾವು ಧ್ಯಾನ ಮಾಡೋಣ; ಆಯುರ್ವೇದದ ಬಗ್ಗೆ ಹೇಳಿ; ಮುಗ್ಗಟ್ಟಿನ ಬಗ್ಗೆ ಮಾತನಾಡಿ)
ನೋಡಿ, ಮುಗ್ಗಟ್ಟು ಎಂಬ ಶಬ್ದವು ನಿಮ್ಮ ಮುಖದ ಮೇಲೆ ನಗೆಯನ್ನು ತರುತ್ತಿದೆ; ಇದು ಏನೋ ಒಂದು ಬಹಳ ಏಕೈಕವಾದುದು, ಅಲ್ಲವೇ?! ಸಾಧಾರಣವಾಗಿ ಜನರು ಮುಗ್ಗಟ್ಟಿನ ಬಗ್ಗೆ ಮಾತನಾಡುವಾಗ ಅಳುತ್ತಿರುತ್ತಾರೆ, ಆದರೆ ಇಲ್ಲಿ ಇದು ವ್ಯತ್ಯಸ್ತವಾಗಿದೆ ಮತ್ತು ಇದುವೇ ಜೀವನ ಕಲೆ - ಪ್ರತಿಯೊಂದು ಸಮಸ್ಯೆಯನ್ನೂ ಒಬ್ಬನ ಪ್ರಯೋಜನಕ್ಕಾಗಿ ತಿರುಗಿಸುವುದು. ಪ್ರತಿಯೊಂದು ಸಮಸ್ಯೆಯನ್ನು ಒಂದು ಸವಾಲಾಗಿ, ಒಂದು ಅವಕಾಶವಾಗಿ ತೆಗೆದುಕೊಳ್ಳುವುದನ್ನೇ ನಾವು ಪ್ರಪಂಚದಲ್ಲಿ ಪ್ರಚಾರ ಮಾಡಬೇಕಾಗಿರುವುದು. ನಿಮಗೆ ಹಾಗೆ ಅನ್ನಿಸುತ್ತಿಲ್ಲವೇ? ನಿಮಗೆ ಗೊತ್ತಿದೆಯಾ, ಚೈನೀಸ್ ಭಾಷೆಯಲ್ಲಿ ಅವಕಾಶ ಹಾಗೂ ಸಮಸ್ಯೆ ಎರಡಕ್ಕೂ ಒಂದೇ ಪದವಿರುವುದು! ನೀವು ಸಮಸ್ಯೆ ಎಂದು ಹೇಳಿದರೆ, ಅದರರ್ಥ ಅವಕಾಶ ಎಂದು ಕೂಡಾ ಆಗುತ್ತದೆ.
ಬೇರೇನನ್ನು ಚರ್ಚಿಸಲು ನೀವು ಬಯಸುತ್ತೀರಿ?
(ಸಭಿಕರು: ಸ್ವಾತಂತ್ರ್ಯ; ಪ್ರೀತಿ; ನಿರ್ಣಯ ಮಾಡುವುದು ಹೇಗೆ; ಅವ್ಯವಸ್ಥೆ; ಅಂತರರಾಷ್ಟ್ರೀಯವಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ; ಫುಟ್ಬಾಲ್)
ಈಗ ನನಗೆ ಹೇಳಿ, ನನಗೆ ಇವುಗಳಲ್ಲಿ ಯಾವುದೇ ವಿಷಯದ ಬಗ್ಗೆಯೂ ಏನೂ ಗೊತ್ತಿಲ್ಲದೇ ಇದ್ದರೆ ಹೇಗೆ. ನನಗೆ ಫುಟ್ಬಾಲಿನ ಬಗ್ಗೆ ಏನೂ ತಿಳಿಯದು. ಭಾರತದಲ್ಲಿ ಫುಟ್ಬಾಲ್ ಅಷ್ಟೇನೂ ಜನಪ್ರಿಯವಾಗಿಲ್ಲ, ಜನಪ್ರಿಯವಾಗಿರುವುದು ಯಾವುದೆಂದರೆ, ಕ್ರಿಕೆಟ್. ನನಗೆ ಅದರ ಬಗ್ಗೆಯೂ ತಿಳಿದಿಲ್ಲ.
ಆದುದರಿಂದ ನನಗೆ ಇವುಗಳಲ್ಲಿ ಯಾವುದೇ ವಿಷಯಗಳ ಬಗ್ಗೆಯೂ ತಿಳಿದಿಲ್ಲ.
(ಸಭಿಕರು: ಪರವಾಗಿಲ್ಲ, ಕೇವಲ ಇಲ್ಲಿರುವುದಕ್ಕೆ ಚೆನ್ನಾಗಿದೆ!)
ನಿಮಗೆ ಗೊತ್ತಿದೆಯಾ, ನಾವು ನಮ್ಮ ಮಾತಿಗಿಂತ ನಮ್ಮ ಇರುವಿಕೆಯ ಮೂಲಕ ಹೆಚ್ಚು ತಿಳಿಸುತ್ತೇವೆ; ನೀವಿದನ್ನು ಗಮನಿಸಿದ್ದೀರಾ? ನಮ್ಮ ಇರುವಿಕೆಯು ಬಹಳಷ್ಟನ್ನು ತಿಳಿಯಪಡಿಸುತ್ತದೆ. ಶಬ್ದಗಳು ಅವಶ್ಯಕ, ಆದರೆ ಶಬ್ದಗಳಿಗಿಂತಲೂ ನಮ್ಮ ಇರುವಿಕೆಯು ಹೆಚ್ಚು ಅವಶ್ಯಕ.
ಸಾಧಾರಣವಾಗಿ ನಾನೊಂದು ಉದಾಹರಣೆಯನ್ನು ನೀಡುತ್ತೇನೆ. ನೀವೊಂದು ವಿಮಾನದಿಂದ ಇಳಿಯುವಾಗ, ಗಗನಸಖಿಯರು, "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುತ್ತಾರೆ. ಆದರೆ ಅವರು ಅದನ್ನು ನಿಜವಾದ ಮನಸ್ಸಿನಿಂದ ಹೇಳುವುದಲ್ಲ. ಅದು ಕೇವಲ ತುಟಿಗಳಿಂದ ಬರುತ್ತದೆ. ಅವರ ಮನಸ್ಸು ಬೇರೆಲ್ಲೋ ಕೆಲಸ ಮಾಡುತ್ತಿರುತ್ತದೆ. ಆದರೆ ಅದೇ ಶಬ್ದಗಳು, ನಿಮಗೆ ಬಹಳ ಆತ್ಮೀಯರಾಗಿರುವ ಒಬ್ಬರಿಂದ, ನಿಮ್ಮ ತಾಯಿ, ಅಜ್ಜಿ, ಮಾವ, ಅಥವಾ ಅತ್ತೆಯಿಂದ ಬಂದರೆ, ಅದರೊಂದಿಗೆ ಸ್ವಲ್ಪ ಕಂಪನಗಳು, ಸ್ವಲ್ಪ ಭಾವನೆ ಇರುತ್ತದೆ. ನೀವದನ್ನು ಗಮನಿಸಿದ್ದೀರಾ?
ಮಗುವಾಗಿದ್ದಾಗ, ಈ ಆಯಾಮವು ನಮ್ಮೊಳಗಿತ್ತು - ಭಾವನೆಗಳು. ನಾವು ಹೇಳಿದುದೆಲ್ಲವೂ ಅಥವಾ ಮಾಡಿದುದೆಲ್ಲವೂ ಬಹಳ ವಿಶ್ವಾಸಾರ್ಹವಾಗಿತ್ತು. ಅದು ನೇರವಾಗಿ ಹೃದಯದಿಂದ ಬರುತ್ತಿತ್ತು. ಹೃದಯ ಮತ್ತು ಮನಸ್ಸು ಒಂದಾಗಿದ್ದವು. ಆದರೆ ನಾವು ದೊಡ್ಡವರಾದಂತೆ, ಎಲ್ಲೋ, ಹೇಗೋ, ಏನಾಯಿತೆಂದು ನಮಗೆ ಗೊತ್ತಿಲ್ಲ, ಆದರೆ ಇವುಗಳೆರಡರ ನಡುವಿನ ಕೊಂಡಿ ಕಳಚಿತು ಹಾಗೂ ನಾವು ಉದ್ದೇಶಪೂರ್ವಕವಲ್ಲದ ವಿಷಯಗಳನ್ನು ಹೇಳುತ್ತೇವೆ.
ಕೆಲವೊಮ್ಮೆ ಜನರನ್ನುತ್ತಾರೆ, "ಓಹ್, ನಿಮಗೆ ಬಹಳ ಧನ್ಯವಾದಗಳು!" ವಿಶೇಷವಾಗಿ ಅಮೇರಿಕಾದಲ್ಲಿ ನೀವಿದನ್ನು ನೋಡಬಹುದು. ನೀವು ಯಾರಿಗಾದರೂ ಒಂದು ಲೋಟ ನೀರು ಕೊಟ್ಟರೆ ಅವರು, "ಓಹ್, ನಿಮಗೆ ಬಹಳ ಧನ್ಯವಾದಗಳು!" ಎಂದು ಹೇಳುತ್ತಾರೆ. ಒಂದು ಲೋಟ ನೀರು ಕೊಟ್ಟಿದ್ದಕ್ಕಾಗಿ ಒಬ್ಬರಿಗೆ ’ಬಹಳ’ ಧನ್ಯವಾದ ನೀಡಲು ಏನಿದೆ? ನೀವು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಬಾಯಾರಿಕೆಯಿಂದ ಸಾಯುತ್ತಿಲ್ಲ. ಅಲ್ಲಿ ಯಾರಾದರೂ ನಿಮಗೆ ನೀರನ್ನು ಕೊಟ್ಟರೆ ನೀವು, "ನಿಮಗೆ ಬಹಳ ಧನ್ಯವಾದಗಳು! ನೀವು ನನ್ನ ಜೀವವನ್ನು ರಕ್ಷಿಸಿದಿರಿ" ಎಂದು ಹೇಳಬಹುದು. ಸಂಗತಿ ಹಾಗಿಲ್ಲ. ಅಲ್ಲವೇ? ನೀವು "ಧನ್ಯವಾದಗಳು" ಎಂದು ಹೇಳಬಾರದೆಂದು ನಾನು ಹೇಳುತ್ತಿಲ್ಲ. ನಿಮ್ಮ ಮಾತುಗಳು ಮತ್ತು ಭಾವನೆಗಳ ನಡುವೆ ಕಳಚಿ ಹೋಗಿರುವ ಕೊಂಡಿಯ ಕಡೆಗೆ ನಿಮ್ಮ ಗಮನ ಹರಿಸಿ ಎಂದು ನಾನು ಹೇಳುತ್ತಿರುವುದು. ಅಲ್ಲಿಯೇ ವಿಶ್ವಾಸಾರ್ಹತೆಯ ಕೊರತೆ ಉಂಟಾಗುವುದು. ನಾವು ನಮ್ಮ ಒಡನಾಟದಲ್ಲಿ ವಿಶ್ವಾಸಾರ್ಹವಾಗಿಲ್ಲದೇ ಇರುವಾಗ, ಜೀವನವು ಬಹಳ ಮಂಕಾಗುತ್ತದೆ, ಒಣಗುತ್ತದೆ ಹಾಗೂ ಬೇಸರಿಕೆಯನ್ನುಂಟುಮಾಡುತ್ತದೆ.
ನಿಮಗೆ ಜೀವನದಲ್ಲಿ ಏನು ಬೇಕು? ನಿಮ್ಮಲ್ಲಿ ಎಲ್ಲಾ ಸೌಕರ್ಯಗಳೂ ಇವೆ ಎಂದು ಕಲ್ಪಿಸಿಕೊಳ್ಳಿ; ಮಲಗಲೊಂದು ಒಳ್ಳೆಯ ಹಾಸಿಗೆ, ತಿನ್ನಲು ಒಳ್ಳೆಯ ಆಹಾರ, ಆದರೆ ಪ್ರೀತಿಯಿಲ್ಲ, ಆತ್ಮೀಯತಾ ಭಾವನೆಯಿಲ್ಲ, ನಿಮ್ಮ ಕಾಳಜಿ ವಹಿಸುವವರಿಲ್ಲ. ನೀವು ಹೇಗೆ ಜೀವಿಸುತ್ತಿದ್ದೀರಿ ಅಥವಾ ನಿಮಗೇನಾಗುತ್ತಿದೆಯೆಂದು ಕಾಳಜಿ ವಹಿಸುವವರಿಲ್ಲ. ನೀವು ಈ ಭೂಮಿಯ ಮೇಲೆ ಜೀವಿಸಲು ಬಯಸುವಿರಾ?
ಪ್ರೀತಿಯಿಲ್ಲದಿದ್ದರೆ, ಆತ್ಮೀಯತಾ ಭಾವನೆಯಿಲ್ಲದಿದ್ದರೆ, ಜೀವನಕ್ಕೆ ಯಾವುದೇ ಬೆಲೆಯಿಲ್ಲ. ಇದು ಮಾನವ ಜೀವನದ ಅಥವಾ ಹೇಳುವುದಿದ್ದರೆ ಯಾವುದೇ ಜೀವನದ ಗುಣವಾಗಿದೆ. ನಾಯಿಗಳು, ಬೆಕ್ಕುಗಳು, ಹಸುಗಳು ಮತ್ತು ಕುದುರೆಗಳಲ್ಲೂ ಕೂಡಾ ಆ ಭಾವನೆಯಿದೆ. ನಿಮ್ಮ ಮನೆಯಲ್ಲೊಂದು ಕುದುರೆಯಿದ್ದರೆ ಮತ್ತು ನೀವು ಒಂದು ತಿಂಗಳು ಅಲ್ಲಿಲ್ಲದೇ ಇದ್ದರೆ, ನೀವು ಹಿಂದಿರುಗುವಾಗ ಕುದುರೆಯು ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ, ಅಲ್ಲವೇ? ಮಾನವನಾಗಿರುವುದು ಎಂದರೆ ನಮ್ಮ ಭಾವನೆಗಳೊಂದಿಗೆ ಜೋಡಿರುವುದು.
ಅದರರ್ಥ, ನಾವು ಆರ್ಟ್ ಆಫ್ ಲಿವಿಂಗಿನಲ್ಲಿ ಕರೆಯುವಂತೆ ’ಬ್ಲೂ ಸ್ಟಾರ್’ ಆಗಿರಬೇಕೆಂದಲ್ಲ. ಒಬ್ಬ ’ಬ್ಲೂ ಸ್ಟಾರ್’ ಎಂದರೆ ಯಾರು ಬಹಳ ಏರು-ಪೇರಾಗಿರುತ್ತಾರೋ, ಬುದ್ಧಿವಂತಿಕೆಯಿಲ್ಲದೆ, ಭಾವನೆಗಳಿಗೆ ಬಹಳವಾಗಿ ಒಳಗಾಗಿರುತ್ತಾರೋ ಅವರು. ಅದು ಕೂಡಾ ಒಳ್ಳೆಯದಲ್ಲ. ನಮ್ಮಲ್ಲಿ ಭಾವನೆಗಳು ಮತ್ತು ಬುದ್ಧಿಯ ನಡುವೆ ಒಂದು ಸಮತೋಲನವಿರಬೇಕು. ವೈಯಕ್ತಿಕ ಮತ್ತು ಸಾಮಾಜಿಕ ಜೀವನಗಳ ನಡುವೆ ಒಂದು ಸಮತೋಲನವಿರಬೇಕು.
ಕೇವಲ ತಮ್ಮ ಬಗ್ಗೆ ಮಾತ್ರ ಚಿಂತಿಸುವ ಜನರಿದ್ದಾರೆ. ತಮ್ಮ ಬಗ್ಗೆ ಚಿಂತಿಸದೇ ಇರುವ ಇನ್ನು ಕೆಲವರಿದ್ದಾರೆ. ಅವರು ಯಂತ್ರಗಳಂತೆ ಕೆಲಸ ಮಾಡುತ್ತಾರೆ ಹಾಗೂ ಅದರಲ್ಲಿ ಮುಳುಗಿ ಹೋಗುತ್ತಾರೆ. ಅವರು, ಜೀವನದ ಉದ್ದೇಶವೇನು ಎಂಬುದರ ಕಡೆಗೆ ಮತ್ತು ಜೀವನದಿಂದ ತಮಗೇನು ಬೇಕು ಎಂಬುದರ ಕಡೆಗೆ ಕೂಡಾ ನೋಡುವುದಿಲ್ಲ.
ಜೀವನ ಕಲೆಯು ಇವುಗಳೆರಡರ ನಡುವಿನ ಒಂದು ಸಮತೋಲನ - ಖಾಸಗಿ ಜೀವನ ಮತ್ತು ಸಾಮಾಜಿಕ ಜೀವನ. ನೀವು ನಿಮ್ಮ ಬಗ್ಗೆ, ನಿಮ್ಮ ಮನಸ್ಸಿನ ಬಗ್ಗೆ, ನಿಮ್ಮ ಶರೀರದ ಬಗ್ಗೆ, ನಿಮ್ಮ ಭಾವನೆಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ನೀವು ನಿಮ್ಮ ಸಮಾಜದ ಬಗ್ಗೆ ಕೂಡಾ ಕಾಳಜಿ ತೆಗೆದುಕೊಳ್ಳಬೇಕು. ಸಮಾಜದ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಮತ್ತು ಅದೇ ಸಮಯದಲ್ಲಿ ನಿಮ್ಮ ವೈಯಕ್ತಿಕ ಬೆಳವಣಿಗೆ ಅಥವಾ ಸ್ವಂತ ಅಭಿವೃದ್ಧಿಯ ಕಡೆಗೆ ನಿರ್ಲಕ್ಷ್ಯ ಮಾಡಬೇಡಿ.
ಮನೆಯಲ್ಲಾಗಲೀ ಅಥವಾ ಶಾಲೆಯಲ್ಲಾಗಲೀ, ನಮ್ಮ ಕಂಪನಾಂಶ ಮತ್ತು ಭಾವನಾತ್ಮಕ ಅಂಶಗಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸುವುದು ಹಾಗೂ ನಮ್ಮ ಭಾವನೆಗಳನ್ನು ಶುದ್ಧವಾಗಿ, ಸ್ಪಷ್ಟವಾಗಿ, ಮೆತ್ತಗೆ, ಮೃದುವಾಗಿ, ಸಂತೋಷವಾಗಿರಿಸುವುದು ಹೇಗೆ ಎಂದು ಯಾರೂ ಕಲಿಸುವುದಿಲ್ಲ. ಸಂತೋಷವಾಗಿರುವುದು ಹೇಗೆ ಎಂದು ಯಾರೂ ಕಲಿಸುವುದಿಲ್ಲ. ಅದು ನಮ್ಮ ಸ್ವಭಾವವೆಂದು ನಾವು ತಿಳಿದುಕೊಂಡು ಬಿಡುತ್ತೇವೆ. ಅದು ನಮ್ಮ ಸ್ವಭಾವವೆಂಬುದರಲ್ಲಿ ಸಂಶಯವಿಲ್ಲ, ಆದರೆ ಎಲ್ಲೋ ನಾವು ಅದನ್ನು ಕಳೆದುಕೊಂಡಿದ್ದೇವೆ. ಅಲ್ಲವೇ? ನಾನು ಹೇಳುತ್ತೇನೆ; ಅದಕ್ಕೂ ಷೇರು ಮಾರುಕಟ್ಟೆಗೂ ಯಾವುದೇ ಸಂಬಂಧವಿಲ್ಲ. ನೀವು ಬಹಳ ಬಡದೇಶಗಳಾದ ಭೂತಾನ, ಬಾಂಗ್ಲಾದೇಶಗಳಿಗೆ ಹೋದರೆ, ಅಲ್ಲಿನ ಜನರು ಬಹಳ ಸಂತೋಷವಾಗಿರುವುದನ್ನು ನೋಡಬಹುದು.
ಇತ್ತೀಚೆಗೆ, ಸಂಯುಕ್ತ ರಾಷ್ಟ್ರಗಳಲ್ಲಿ (ಯು.ಎನ್.) ಭೂತಾನದ ಪ್ರಧಾನ ಮಂತ್ರಿಗಳು ’ದ ಜಿ.ಡಿ.ಹೆಚ್.’ (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್) ಎಂಬ ಒಂದು ವಿಚಾರಗೋಷ್ಠಿಯನ್ನು ಮಾಡಿದರು. ಇದು, ಸಂತೋಷವನ್ನು ತರುವುದು ಹೇಗೆ ಎಂಬುದರ ಬಗ್ಗೆಯಾಗಿತ್ತು. ಇವತ್ತು, ಎಲ್ಲರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಕಳೆದ ಮೂವತ್ತು ವರ್ಷಗಳಿಂದ ನಾವು ಇದರ ಬಗ್ಗೆ ಮಾತನಾಡುತ್ತಿದ್ದೇವೆ. ಕೊನೆಯಲ್ಲಿ, ಮೂವತ್ತು ದೀರ್ಘ ವರ್ಷಗಳು ಅಥವಾ ಇನ್ನೂ ಹೆಚ್ಚಿನ ಕಾಲದ ಬಳಿಕ ಪ್ರಪಂಚದ ನಾಯಕರು ಮಾನವ ಸಂತೋಷದ ಬಗ್ಗೆ ಗಮನ ಹರಿಸಲು ಶುರು ಮಾಡಿರುವುದರಿಂದ ನನಗೆ ಬಹಳ ಸಂತೋಷವಾಗಿದೆ.
ಐವತ್ತು ವರ್ಷಗಳ ಹಿಂದೆ, ಜನರ ಆರೋಗ್ಯದ ಬಗ್ಗೆ ಸರಕಾರಗಳು ಕಾಳಜಿ ವಹಿಸುತ್ತಿರಲಿಲ್ಲ. ನಂತರ, ಅವರು ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದರು. ಆಮೇಲೆ ಅವರು ಮಾನಸಿಕ ಆರೋಗ್ಯವನ್ನು ಸೇರಿಸಿದರು. ಅದರ ನಂತರ, ಅವರು ಆಧ್ಯಾತ್ಮಿಕ ಆರೋಗ್ಯವನ್ನು ಸೇರಿಸಿದರು. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಹತ್ತು ವರ್ಷಗಳ ಹಿಂದೆ ಸೇರಿಸಿತು. ಈಗ, ಪ್ರಪಂಚದಾದ್ಯಂತದ ಸರಕಾರಗಳು ’ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್’ (=ಒಟ್ಟು ಸಾಂಸಾರಿಕ  ಸಂತೋಷ) ಬಗ್ಗೆ ಮಾತನಾಡುತ್ತಿವೆ. ನಾನಿಲ್ಲಿರುವುದರ ಉದ್ದೇಶವೆಂದರೆ, ಹಾಲೆಂಡಿನಲ್ಲಿ ಸಂತೋಷದ ಒಂದು ಅಲೆಯನ್ನು ಸೃಷ್ಟಿಸುವುದು.
ನಾನೆಲ್ಲೇ ಹೋದರೂ ಜನರನ್ನುತ್ತಾರೆ, "ಗುರೂಜಿ, ದಯವಿಟ್ಟು ಇಲ್ಲಿರಿ. ನಾವು ಜೊತೆಯಲ್ಲಿರುವಾಗ ನಮಗೆಲ್ಲರಿಗೂ ಸಂತೋಷವಾಗುತ್ತದೆ". ನಾನನ್ನುತ್ತೇನೆ, "ನಾನಿಲ್ಲಿ ಇಲ್ಲದಿರುವಾಗ ಸಂತೋಷವಾಗಿಲ್ಲದೇ ಇರಲು ಇದೊಂದು ಸಮಜಾಯಿಷಿಯಲ್ಲ". ನನಗೆ ಗೊತ್ತು, ನಾನು ಬಂದು ಸಂತೋಷದ ಒಂದು ಅಲೆಯನ್ನು ಸೃಷ್ಟಿಸುತ್ತೇನೆ ಹಾಗೂ ಈ ಅಲೆಗಳನ್ನು ಹೊತ್ತೊಯ್ದು ಅವುಗಳನ್ನು ಎಲ್ಲೆಡೆ ಹರಡುವುದು ನಿಮ್ಮ ಜವಾಬ್ದಾರಿ. ಜೀವನ ಕಲೆ ಶಿಬಿರವನ್ನು ಮಾಡಿದ ಜನರು ಅಷ್ಟೊಂದು ಪರಿವರ್ತನೆಯನ್ನು ಹೊಂದುತ್ತಾರೆ. ನಾವು ನಮಗಾಗಿ ಸ್ವಲ್ಪ ಸಮಯವನ್ನು ವ್ಯಯಿಸಬೇಕು ಮತ್ತು ಧ್ಯಾನ ಮಾಡಬೇಕು ಹಾಗೂ ನಂತರ ನಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ಇಲ್ಲಿರುವ ಪ್ರತಿಯೊಬ್ಬರೂ ಮುಂದಾಳುತ್ವವನ್ನು ವಹಿಸಿ, ಮಾರ್ಗದರ್ಶಕರಾಗಬೇಕೆಂದು ನಾನು ಬಯಸುತ್ತೇನೆ. ಮೊದಲನೆಯದಾಗಿ, "ಜೀವನದಲ್ಲಿ ನನ್ನ ಉದ್ದೇಶವು ಜನರಲ್ಲಿ ಸಂತೋಷವನ್ನು ಸೃಷ್ಟಿಸುವುದು" ಎಂಬ ಸಂಕಲ್ಪವನ್ನು ತೆಗೆದುಕೊಳ್ಳಿ. "ನನಗೆ ಸಾಧ್ಯವಾಗುವ ಯಾವುದೇ ಚಿಕ್ಕ ರೀತಿಯಲ್ಲಾದರೂ ನಾನು ನನ್ನ ಕೊಡುಗೆಯನ್ನೀಯೋಣ". ನೀವು ನಿಮ್ಮ ಸಮಯವನ್ನು, ಸಂಪನ್ಮೂಲಗಳನ್ನು, ಸಾಮರ್ಥ್ಯವನ್ನು ಅಥವಾ ನಿಮ್ಮ ಯೋಚನೆಗೆ ಬರುವ ಬೇರೆ ಯಾವುದನ್ನಾದರೂ ಕೊಡುಗೆಯಾಗಿ ನೀಡಬಹುದು. ಸೃಜನಾತ್ಮಕ ಕಲ್ಪನೆಗಳೊಂದಿಗೆ ಬನ್ನಿ ಮತ್ತು ಈ ಸಮಾಜವನ್ನು ಹೆಚ್ಚು ಸಂತೋಷಮಯವಾಗಿಸಲು ನಾವು ಏನು ಮಾಡಬಹುದು ಎಂದು ನೋಡಿ.
ಹಿಂಸಾರಹಿತವಾದ ಪ್ರಪಂಚವನ್ನು ನೋಡುವುದು ನನ್ನ ಕನಸು. ಒಂದು ಹಿಂಸಾ-ರಹಿತ ಸಮಾಜ, ರೋಗ-ರಹಿತ ಶರೀರ, ಗೊಂದಲ-ರಹಿತ ಮನಸ್ಸು, ತಡೆ-ರಹಿತ ಬುದ್ಧಿ, ಆಘಾತ-ರಹಿತ ನೆನಪು ಮತ್ತು ಒಂದು ದುಃಖ-ರಹಿತ ಆತ್ಮ ಇದು ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು. ಜನರ ಮನಸ್ಸುಗಳಲ್ಲಿ ಬಹಳಷ್ಟು ತಡೆಗಳಿವೆ. ನಾವು ತಡೆಗಳನ್ನು ನಿವಾರಿಸಬೇಕು. ಯುರೋಪಿನ ೩೦% ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಆತ್ಮಹತ್ಯೆಯ ಪ್ರಮಾಣವು ಹೆಚ್ಚಾಗುತ್ತಿದೆ. ನಾವೆಲ್ಲರೂ ಇದರ ಬಗ್ಗೆ ಏನಾದರೂ ಮಾಡಬೇಡವೇ? ಅದಕ್ಕೇ ನಾನು ಹೇಳುವುದು, ನಾವು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಕೆಲವು ಪ್ರಾಚೀನ ಜ್ಞಾನವನ್ನು ಕೂಡಾ ಜೊತೆಗೂಡಿಸಬೇಕು. ಪ್ರಾಚೀನ ದಿನಗಳಲ್ಲಿದ್ದ ಜನರು ಹಲವಾರು ವಿಷಯಗಳನ್ನು ಅರಿತಿದ್ದರು. ನಾವು ಎರಡನ್ನೂ ಜೋಡಿಸಬೇಕು; ಹಿಂದಿನ ತಲೆಮಾರಿನ ಕೆಲವು ವಿಷಯಗಳು ಮತ್ತು ಈಗಿನ ತಲೆಮಾರಿನ ಕೆಲವು ವಿಷಯಗಳು. ಜೊತೆಯಲ್ಲಿ, ಈ ಪ್ರಪಂಚವನ್ನು ಬದುಕಲು ಒಂದು ಉತ್ತಮ ಜಾಗವಾಗುವಂತೆ ನಾವು ಮಾಡಬಹುದು.
ತಂತ್ರಜ್ಞಾನವು, ಪ್ರಪಂಚವು ಒಂದು ಗ್ರಾಮವಾಗಿ ಕುಗ್ಗುವಂತೆ ಮಾಡಿದೆ. ಒಂದು ಕುಟುಂಬವನ್ನಾಗಿ ಮಾಡುವುದು ಮಾನವೀಯತೆ ಮತ್ತು ಆಧ್ಯಾತ್ಮ. ನಮ್ಮ ಕಲ್ಪನೆಯು ಒಂದು ಪ್ರಾಪಂಚಿಕ ಕುಟುಂಬ. ನಾವು ಒಂದು ಕುಟುಂಬದ ಭಾಗ. ನಾವೆಲ್ಲರೂ ಒಂದು ಕುಟುಂಬದ ಭಾಗವೆಂದು ನೀವು ಅಂದುಕೊಂಡ ಕ್ಷಣ, ನಿಮ್ಮಲ್ಲಿ ಹೇಗೆ ಭಾವನೆಯು ಏಳುತ್ತದೆಯೆಂಬುದನ್ನು ನೋಡಿ. ನಿಮ್ಮಲ್ಲಿ ಸತ್ಯತೆಯು ಬರುತ್ತದೆ. ನೀವು ಸಹಜವಾಗುತ್ತೀರಿ. ನೀವು ಎಲ್ಲರೊಂದಿಗೂ  ಆರಾಮವಾಗಿ ಬೆರೆಯುವಿರಿ. ನಿಮಗೆ ಭಯವಾಗುವುದಿಲ್ಲ, "ಓಹ್, ಆ ವ್ಯಕ್ತಿಯು ನನ್ನ ಬಗ್ಗೆ ಏನೆಂದು ಯೋಚಿಸಬಹುದು?" "ಆ ವ್ಯಕ್ತಿಯು ನನ್ನನ್ನು ಹೇಗೆ ತೂಗಿ ನೋಡಬಹುದು?" ಈ ಎಲ್ಲಾ ಆಶಂಕೆಗಳು ಬಿದ್ದುಹೋಗುತ್ತವೆ. ಅಲ್ಲಿ ಬಚ್ಚಿಡಲು ಏನೂ ಇಲ್ಲ. ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಅಥವಾ ಇತರರಿಂದ ಏನನ್ನಾದರೂ ಬಚ್ಚಿಡಬೇಕೆಂದು ನಿಮಗನಿಸುವುದಿಲ್ಲ, ಯಾಕೆಂದರೆ ಅವರು ನಿಮ್ಮ ಕುಟುಂಬದವರು ಎಂದು ನಿಮಗೆ ತಿಳಿದಿರುತ್ತದೆ. ನಮಗೆ ರಕ್ಷಣೆ ಬೇಕೆಂದು ನಾವು ಹೇಳುವಾಗ, ಅಲ್ಲಿ ಭಯವಿದೆಯೆಂದು ಅದರರ್ಥ. ಭಯವಿರುವುದು ಯಾಕೆಂದರೆ, ಅಲ್ಲಿ ಆತ್ಮೀಯತೆಯ ಭಾವನೆಯಿಲ್ಲದಿರುವುದರಿಂದ.
ಇರಾಕಿನ ಪ್ರಧಾನ ಮಂತ್ರಿಗಳು ನನ್ನನ್ನು ಆಮಂತ್ರಿಸಿದರು. ನಾನು ಅಲ್ಲಿಗೆ ಹೋದಾಗ, ಅವರು ನನ್ನ ಸುರಕ್ಷತೆಗಾಗಿ ಹನ್ನೆರಡು ವಾಹನಗಳನ್ನು ನೀಡಿದರು. ಇದು ಸುಮಾರು ನಾಲ್ಕರಿಂದ ಐದು ವರ್ಷಗಳ ಮೊದಲು. ಯುದ್ಧವು ಆಗಷ್ಟೇ ಮುಗಿದಿತ್ತು. ಎರಡು ಟ್ಯಾಂಕರುಗಳಿದ್ದವು ಮತ್ತು ಸಾಮಾನ್ಯವಾಗಿ ಅರ್ಧ ಗಂಟೆಯಲ್ಲಿ ಕ್ರಮಿಸಬಹುದಾದ ಒಂದು ದೂರವನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾದವು. ನಾನು ಉಳಕೊಂಡಿದ್ದ ಹೋಟೇಲು ಕಾವಲುಗಾರರಿಂದ ಸುತ್ತುವರಿಯಲ್ಪಟ್ಟಿತ್ತು. ಅದು ಹಸಿರು ವಲಯವಾಗಿತ್ತು. ಅಲ್ಲಿ ಮೂರು ವಲಯಗಳಿದ್ದವು - ಹಸಿರು ವಲಯ, ಹಳದಿ ವಲಯ ಮತ್ತು ಕೆಂಪು ವಲಯ. ನಾನು ಭದ್ರತೆಯ ಬೇಲಿಯಲ್ಲಿರಲು ಇಲ್ಲಿಗೆ ಬಂದಿಲ್ಲವೆಂದು ಅಲ್ಲಿನ ಮಂತ್ರಿಗಳಿಗೆ ಹೇಳಿದೆ. ನಾನು ಹೋಗಿ ಜನರನ್ನು ಭೇಟಿಯಾಗಲು ಬಯಸುತ್ತೇನೆ. ಅವರಂದರು, "ಓಹ್, ಅದೊಂದು ಕೆಂಪು ವಲಯ; ನೀವಲ್ಲಿಗೆ ಹೋಗಲು ಸಾಧ್ಯವಿಲ್ಲ. ನೀವೊಬ್ಬರು ಪ್ರಮುಖವಾದ ವ್ಯಕ್ತಿ ಹಾಗೂ ಭಾರತದಿಂದ ಬಂದ ಅತಿಥಿ. ಅಲ್ಲಿಗೆ ಹೋಗಲು ನಿಮಗೆ ನಾವು ಅನುಮತಿ ನೀಡಲು ಸಾಧ್ಯವಿಲ್ಲ". ನಾನಂದೆ, "ನನಗೆ ನನ್ನ ಸ್ವಂತ ಭದ್ರತೆ ಇದೆ. ದಯವಿಟ್ಟು ನನ್ನನ್ನು ಹೋಗಲು ಬಿಡಿ" ಹಾಗೂ ಅಲ್ಲಿಗೆ ಹೋಗುವಂತೆ ನಾನು ಪಟ್ಟು ಹಿಡಿದೆ. ಮಾತನಾಡಲು ಬಯಸದೆ ಇರುವವರ ಜೊತೆ ಸಂಪರ್ಕಿಸಲು ನಾನು ಬಯಸಿದ್ದೆ. ಸರಕಾರವು ಬಹಳ ಆತಂಕಗೊಂಡಿತ್ತು ಆದರೆ ಒಬ್ಬ ಅತಿಥಿಯ ವಿನಂತಿಯನ್ನು ತಳ್ಳಿಹಾಕಲು ಅವರಿಗೆ ಸಾಧ್ಯವಾಗಲಿಲ್ಲ. ಆದುದರಿಂದ, ನಾನು ಅಲ್ಲಿಗೆ ಹೋಗಿ ಜನರನ್ನು ಭೇಟಿಯಾದೆ. ಮೊದಮೊದಲು ಜನರಲ್ಲಿ ಬಹಳಷ್ಟು ಕ್ರೋಧವಿತ್ತು. ನಾನು ಆದಿವಾಸಿ ಮುಖಂಡರನ್ನು ಭೇಟಿಯಾದೆ. ಶಿಯಾ ಮಂಡಳಿಯು ನನಗಾಗಿ ಒಂದು ಸತ್ಕಾರಕೂಟವನ್ನು ಆಯೋಜಿಸಿತು. ಅವರು ಬಹಳ ಕೃತಜ್ಞರಾಗಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರಿತ್ತು. ಅವರಂದರು, "ಗುರೂಜಿ, ಇದು ನಿಮ್ಮ ಎರಡನೆಯ ಮನೆ. ದಯವಿಟ್ಟು ನಮ್ಮ ಬಳಿಗೆ ತಿರುಗಿ ಬನ್ನಿ. ನಮ್ಮನ್ನು ಬಿಟ್ಟುಬಿಡಬೇಡಿ". ಅವರು ನನ್ನ ಭಾಷೆಯನ್ನು ಮಾತನಾಡುವುದಿಲ್ಲ, ನನ್ನ ಧರ್ಮಕ್ಕೆ ಸೇರಿದವರೂ ಅಲ್ಲ, ಆದರೆ ಅಲ್ಲಿ ಅಷ್ಟೊಂದು ಕಾಳಜಿ, ಪ್ರೀತಿ ಮತ್ತು ಆತ್ಮೀಯತೆಯ ಭಾವನೆಗಳಿದ್ದವು. ನಂತರ, ಇರಾಕಿನ ಪ್ರಧಾನ ಮಂತ್ರಿಗಳು, ಶಾಂತಿ ದೂತರಾಗುವ ತರಬೇತಿ ಪಡೆಯಲು ಐವತ್ತು ಯುವಜನರನ್ನು ಭಾರತಕ್ಕೆ ಕಳುಹಿಸಿದರು.
ಈ ಐವತ್ತು ಯುವಕರು ಬೆಂಗಳೂರಿಗೆ ಬಂದಿಳಿದರು. ಅವರು ಇಂಗ್ಲೀಷಿನ ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಅವರಿಗಾಗಿ ನಮ್ಮಲ್ಲಿ ಒಬ್ಬರು ಅನುವಾದಕರಿದ್ದರು. ಈ ಯುವಕರು ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರವಿರುತ್ತಿದ್ದರು ಹಾಗೂ ಯಾವುದೇ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಅವರು ತಮ್ಮೊಳಗೆ ಜಗಳವಾಡುತ್ತಿದ್ದರು.
ಆಶ್ರಮವು ಬಹಳ ಶಾಂತವಾಗಿರುತ್ತದೆ. ಅಲ್ಲಿನ ಜನರು ಇಂತಹ ಒಂದು ದೃಶ್ಯವನ್ನು ನೋಡಿರಲಿಲ್ಲ. ಅದು ಬಹಳ ಕಠಿಣವಾಗಿತ್ತು. ಅವರು ಬಹಳ ಮಾಂಸವನ್ನು ಕೂಡಾ ತಿನ್ನುತ್ತಾರೆ ಹಾಗೂ ಆಶ್ರಮದಲ್ಲಿ ನಾವು ಕೇವಲ ಸಸ್ಯಾಹಾರ ಮತ್ತು ಆರೋಗ್ಯಕರವಾದ ಆಹಾರವನ್ನು ಮಾತ್ರ ನೀಡುತ್ತೇವೆ. ಆದುದರಿಂದ, ಮೊದಲನೆಯ ದಿನವು ಕಷ್ಟಕರವಾಗಿತ್ತು. ಎರಡನೆಯ ದಿನವು ಅದಕ್ಕಿಂತ ಹೆಚ್ಚು ಕಷ್ಟಕರವಾಗಿತ್ತು. ಮೂರನೆಯ ದಿನವು ಸಹಿಸಲಸಾಧ್ಯವಾಗಿತ್ತು. ಅವರು ಓಡಿಹೋಗಲು ಬಯಸಿದರು. ನಾನು ಅವರೊಂದಿಗೆ ಮಾತನಾಡಿದೆ ಮತ್ತು ಹೇಗೋ ಅವರು ಉಳಕೊಂಡರು. ನಾಲ್ಕನೆಯ ದಿನ, ಬದಲಾವಣೆಯಾಯಿತು.
ಈ ಯುವಕರು ಮರಳಿ ಹೋದರು ಹಾಗೂ ಅವರಲ್ಲೊಬ್ಬನು ಸಚಿವಾಲಯದಲ್ಲಿ ಪ್ರಧಾನ ಮಂತ್ರಿಗೆ ಸಹಾಯ ಮಾಡುತ್ತಿದ್ದಾನೆಂದು ತಿಳಿಸಲು ನನಗೆ ಇವತ್ತು ಸಂತೋಷವಾಗುತ್ತಿದೆ. ಈ ಜನರು ನಗುವಿನಿಂದ ತುಂಬಿಹೋಗಿದ್ದಾರೆ. ಪ್ರಧಾನ ಮಂತ್ರಿಗಳು ನನ್ನಲ್ಲಿ ಕೇಳಿದರು, "ನೀವು ಅವರಿಗೆ ಏನು ಮಾಡಿದಿರಿ? ಒತ್ತಡದ ಪರಿಸ್ಥಿತಿಗಳ ನಡುವೆಯೂ ಅವರು ಎಲ್ಲಾ ಸಮಯದಲ್ಲೂ ನಗು ನಗುತ್ತಿರುತ್ತಾರೆ ಹಾಗೂ ಅಷ್ಟೊಂದು ಉತ್ಸಾಹದಿಂದ ತುಂಬಿಹೋಗಿದ್ದಾರೆ".
ಈ ಮುಂದಾಳುಗಳು ಶಾಂತಿದೂತರಾಗಿ ಹಿಂದಿರುಗಿದರು ಹಾಗೂ ಸಾವಿರಾರು ಜನರಿಗೆ, ಶಾಂತವಾಗಿರುವುದು ಹೇಗೆ, ತಮ್ಮೊಂದಿಗೆ ಮತ್ತು ಇತರರೊಂದಿಗೆ ಸಂಪರ್ಕ ಕಲ್ಪಿಸಿಕೊಳ್ಳುವುದು ಹೇಗೆ, ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಸಲು ಪ್ರಾರಂಭಿಸಿದರು. ಖಂಡಿತಾ, ಇದು ಸಾಗರದಲ್ಲಿ ಕೇವಲ ಒಂದು ಹನಿಯಷ್ಟೆ; ಎಲ್ಲವೂ ಪರಿವರ್ತನೆಯಾಯಿತೆಂದು ಹೇಳಲು ನನಗೆ ಸಾಧ್ಯವಿಲ್ಲ. ಇವತ್ತು ಕೂಡಾ ಇರಾಕಿನಲ್ಲಿ ಬಾಂಬ್ ಸ್ಫೋಟಗಳು ಆಗುತ್ತಿವೆ. ಇದು ಇಡಿಯ ಇರಾಕನ್ನು ಸಂಪೂರ್ಣವಾಗಿ ಪರಿವರ್ತನೆಗೊಳಿಸಿಲ್ಲ ಆದರೆ ಇದು, ಅಲ್ಲದಿದ್ದರೆ ಶಾಂತರಾಗಿರುವುದು ಹೇಗೆಂದು ತಿಳಿಯದೇ ಇದ್ದ ಅದೇ ಯುವಕರಲ್ಲಿ ಕೆಲವು ಮಹತ್ವಪೂರ್ಣ ಬದಲಾವಣೆಗಳನ್ನು ತಂದಿದೆ.
ಆದುದರಿಂದ, ಪ್ರಪಂಚಕ್ಕೆ ಈ ಜ್ಞಾನದ ಅಗತ್ಯವಿದೆಯೆಂದು ನನಗನ್ನಿಸುತ್ತದೆ - ತನ್ನೊಂದಿಗಿನ ಸಂಬಂಧವನ್ನು ಹಾಗೂ ಇತರರೊಂದಿಗಿನ ಸಂಬಂಧವನ್ನು ಉತ್ತಮಗೊಳಿಸುವುದು ಹೇಗೆಂಬುದು. ನಿಮಗೇನನ್ನಿಸುತ್ತದೆ?
ಪ್ರೀತಿಯೆಂಬುದು ಜೀವನದ ಸಾರ, ಜೀವನದ ಗುರಿ ಹಾಗೂ ಜೀವನದ ಆರಂಭ ಕೂಡಾ. ಜೀವನವು ಪ್ರೀತಿಯಿಂದಾಗಿ ಶುರುವಾಯಿತು, ಜೀವನವು ಪ್ರೀತಿಯಿಂದಾಗಿ ಉಳಕೊಂಡಿದೆ. ಪ್ರೀತಿಯಿಲ್ಲದಿದ್ದರೆ, ಯಾರಿಗೂ ಉಳಿಯಲು ಸಾಧ್ಯವಿಲ್ಲ. ನೋಡಿ, ನೀವು ಒಂದು ಮಗುವಾಗಿದ್ದಾಗ, ನೀವು ಸ್ವಂತಂತ್ರವಾಗಿರಲಿಲ್ಲ. ಪ್ರತಿಯೊಂದು ಮಗುವೂ ಅವಲಂಬಿಯಾಗಿರುತ್ತದೆ, ಆದರೆ ಅವಲಂಬಿಯೆಂದು ನಿಮಗನ್ನಿಸಲಿಲ್ಲ ಯಾಕೆಂದರೆ ಅಲ್ಲಿ ನಿಮ್ಮ ತಾಯಿಯ ಪ್ರೀತಿಯಿತ್ತು. ಅದು ನೀವು ಅವಳ ಭಾಗವಾಗಿರುವಂತೆ ಮಾಡುತ್ತದೆ. ನೀವು ಬೆಳೆದಾಗ, ನೀವು ಜೀವನದಲ್ಲಿ ಪ್ರೀತಿಯನ್ನು ಹುಡುಕುತ್ತೀರಿ. ನೀವು ಅದನ್ನು ಸಂಬಂಧಗಳಲ್ಲಿ ಹುಡುಕುತ್ತೀರಿ, ನಿಮ್ಮ ಮಕ್ಕಳಲ್ಲಿ ಹುಡುಕುತ್ತೀರಿ, ನಿಮ್ಮ ಹಿರಿಯರಲ್ಲಿ ಹುಡುಕುತ್ತೀರಿ; ಎಲ್ಲೆಡೆಗಳಲ್ಲಿಯೂ. ನಿಮಗೆ ವಯಸ್ಸಾದಾಗ ಕೂಡಾ ನೀವು ನಿರಾವಲಂಬಿಯಾಗಿರಲಾರಿರಿ, ಯಾರಾದರೂ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ ಮತ್ತು ಅಲ್ಲಿ ಸಾಕಷ್ಟು ಪ್ರೀತಿಯಿದೆ. ನೀವು ವಸ್ತು ದೃಷ್ಟಿಕೋನದಾಚೆಯಿಂದ ನೋಡಿದಾಗ, ಇದನ್ನು ಎಲ್ಲರಿಗೂ ತರುವ ಒಂದು ಆಧ್ಯಾತ್ಮಿಕ ಶಕ್ತಿಯಿರುವುದು; ಒಂದು ಚೈತನ್ಯವಿರುವುದು ನಿಮಗೆ ಕಾಣಿಸುತ್ತದೆ. ಅದೇ ಶಕ್ತಿ; ನೀವದನ್ನು ಹೇಗೆ ಬೇಕಾದರೂ ಕರೆಯಿರಿ; ಒಬ್ಬನ ಅಥವಾ ಇನ್ನೊಬ್ಬನ ಮೂಲಕ, ನಾವು ಪ್ರೀತಿ ಅಥವಾ ಕಾಳಜಿ ಎಂದು ಕರೆಯುವ ಈ ಸುಂದರವಾದ ಕಂಪನವನ್ನು ನಿಮಗೆ ತರುತ್ತದೆ. ನಾವು ಅದರಿಂದ ಮಾಡಲ್ಪಟ್ಟಿದ್ದೇವೆ. ನಾವು ಜೀವನದಲ್ಲಿ ಯಾವುದನ್ನು ಹುಡುಕುತ್ತಿದ್ದೇವೆಯೋ ಆ ವಸ್ತುವಿನಿಂದ ನಾವು ಮಾಡಲ್ಪಟ್ಟಿದ್ದೇವೆ. ಧ್ಯಾನವೆಂದರೆ, ನಾವೆಲ್ಲರೂ ಯಾವುದರಿಂದ ಬಂದಿದ್ದೇವೆಯೋ ಅದರಲ್ಲಿ ವಿಶ್ರಾಮ ಮಾಡುವುದು ಅಥವಾ ವಿಶ್ರಾಂತಿ ಪಡೆಯುವುದು. ಅದು ನಮ್ಮ ಮೂಲಸ್ಥಾನಕ್ಕೆ ತಿರುಗಿ ಬರುವುದು. ಅಷ್ಟೇ! ಯಾವ ಮೂಲದಿಂದ ಈ ಸಂಪೂರ್ಣ ಸೃಷ್ಟಿಯು ಜಿಗಿದು ಬಂತೋ ಅದು ಅಳೆಯಲು ಸಾಧ್ಯವಿಲ್ಲದುದು, ಅನಂತವಾದುದು, ಬಹಳ ಸುಂದರವಾದುದು ಹಾಗೂ ಅಗಾಧವಾದುದು. ಅದು ಏನೆಂದು ವಿವರಿಸಲು ಕೂಡಾ ನನಗೆ ಸಾಧ್ಯವಿಲ್ಲ.
ನಾವು ಪ್ರೀತಿಯ ಬಗ್ಗೆ ಅಧಿಕವಾಗಿ ಮಾತನಾಡಬಾರದು ಯಾಕೆಂದರೆ ಅದು ವ್ಯಕ್ತಪಡಿಸಲು ಸಾಧ್ಯವಿಲ್ಲದುದು, ನಿಜವಾಗಿ! ನನಗೆ ಆಸಕ್ತಿದಾಯಕವಾಗಿ ಕಾಣುವ, ನನ್ನ ವೀಕ್ಷಣೆಯಲ್ಲೊಂದು ಏನೆಂದರೆ, ಪೂರ್ವದಲ್ಲಿ ಪ್ರೀತಿಯನ್ನು ಅಷ್ಟೊಂದು ವ್ಯಕ್ತಪಡಿಸುವುದಿಲ್ಲ. ಅವರಿಗೆ ಪ್ರೀತಿಯಿರುತ್ತದೆ ಆದರೆ ಅದನ್ನು ವ್ಯಕ್ತಪಡಿಸುವುದಿಲ್ಲ. ಯಾರಿಗಾದರೂ, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಲು ಅವರಿಗೆ ನಾಚಿಕೆಯಾಗುತ್ತದೆ. ಅವರು ಬಹಳ ನಾಚಿಕೊಳ್ಳುತ್ತಾರೆ ಮತ್ತು ಸಾಧಾರಣವಾಗಿ ಈ ಶಬ್ದಗಳನ್ನು ಹೇಳುವುದಿಲ್ಲ.
ನನ್ನ ತಾಯಿಯು ನನ್ನನ್ನು ಬಹಳ ಪ್ರೀತಿಸಿದರು ಎಂದು ನನಗೆ ತಿಳಿದಿದೆ ಮತ್ತು ನಾನು ಅವರನ್ನು ಪ್ರೀತಿಸಿದೆ. ಆದರೆ ಒಂದು ಸಲವೂ ಅವರು ನನಗೆ, "ಓಹ್, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂದು ಹೇಳಲಿಲ್ಲ ಮತ್ತು ನಾನೂ ಅವರಿಗೆ ಹೇಳಲಿಲ್ಲ. ನಾವು ಈ ಶಬ್ದಗಳನ್ನು ಹೇಳಲೇ ಇಲ್ಲ. ಸಾಧಾರಣವಾಗಿ ಭಾರತದಲ್ಲಿ ನಾವು, "ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ" ಎಂಬ ಶಬ್ದಗಳನ್ನು ಹೇಳುವುದಿಲ್ಲ; ನಾವು ಹೇಳುವುದೇ ಇಲ್ಲ. ಗಂಡ ಮತ್ತು ಹೆಂಡತಿಯ ನಡುವೆ ಕೂಡಾ, ನಾವು ಭಾವನೆಗಳನ್ನು ಶಬ್ದಗಳಾಗಿ ಮಾಡಿ ತೋರಿಸುವುದಿಲ್ಲ. ಅದೇ ಸಮಯದಲ್ಲಿ ಅಮೇರಿಕಾದಲ್ಲಿ, ಇದು ತದ್ವಿರುದ್ಧವಾಗಿದೆ. ಒಬ್ಬರು ಕುಳಿತಿದ್ದರೂ ಅಥವಾ ನಿಂತಿದ್ದರೂ ಅವರು, "ಓಹ್, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ ಡಿಯರ್", "ಓಹ್ ನನ್ನ ಹನೀ, ನಾನು ನಿನ್ನನ್ನು ಪ್ರೀತಿಸುತ್ತೇನೆ ಹನೀ" ಎಂದು ಹೇಳುತ್ತಾ ಇರುತ್ತಾರೆ. ಬೆಳಗ್ಗಿನ ಚಹಾದಿಂದ ಹಿಡಿದು, ನೀವು ಮಲಗಲು ಹೋಗುವ ವರೆಗೆ ಅದನ್ನು ಲಕ್ಷ ಸಾರಿ ಪುನರುಚ್ಛರಿಸುತ್ತಾ ಇರುತ್ತೀರಿ.
ನನಗನಿಸುತ್ತದೆ ಅಲ್ಲೆಲ್ಲೋ ಒಂದು ಮಧ್ಯ ದಾರಿಯಿರಬೇಕು. ನೋಡಿ, ಭಾರತದಲ್ಲಿ, ಹಳ್ಳಿಗಳಲ್ಲಿ, ಜನರು ಪ್ರೀತಿಸುತ್ತಿರಬಹುದು ಆದರೆ ಅವರು ಯಾವತ್ತೂ ಅದನ್ನು ಹೇಳುವುದಿಲ್ಲ, ಅವರು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದಿಲ್ಲ. ಪ್ರೀತಿಯೆಂಬುದು ನೆಲದಲ್ಲಿ ಬಿತ್ತಿದ ಒಂದು ಬೀಜದಂತಿರಬೇಕು. ಆದರೆ ನೀವು ಅದನ್ನು ತುಂಬಾ ಆಳದಲ್ಲಿ ಬಿತ್ತಿದರೆ, ಅದು ಮೊಳಕೆಯೊಡೆಯಲಾರದು ಮತ್ತು ನೀವದನ್ನು ಮಣ್ಣಿನ ಮೇಲ್ಮೈಯಲ್ಲಿ ಇಟ್ಟರೆ, ಆಗಲೂ ಅದು ಮೊಳಕೆಯೊಡೆಯಲಾರದು, ಅದಕ್ಕೆ ಬೇರುಗಳು ಬರಲಾರವು.
ಅದು ಅಮೇರಿಕಾದಲ್ಲಿರುವಂತೆಯೂ ಇರಬಾರದು, ದೂರಪ್ರಾಚ್ಯದಲ್ಲಿರುವಂತೆಯೂ ಇರಬಾರದು. ಆದರೆ ಎಲ್ಲೋ ನಡುವೆ ಇರಬೇಕು. ಅದು ಒಳ್ಳೆಯದು. ಆದುದರಿಂದ ನೀವು ವ್ಯಕ್ತಪಡಿಸಿ, ಆದರೆ ನೀವು ನಿಮ್ಮ ಸಂಗಾತಿಯನ್ನು ಮೊದ ಮೊದಲು "ಹನೀ, ಹನೀ, ಹನೀ" ಎಂದು ಕರೆದು ನಂತರ ಸಿಹಿಮೂತ್ರ ಬರಿಸುವಷ್ಟು ಹೆಚ್ಚು ವ್ಯಕ್ತಪಡಿಸಬಾರದು. ನೀವು, "ನಾನು ನಿನ್ನನ್ನು ಬಿಟ್ಟು ಜೀವಿಸಿರಲಾರೆ" ಎಂದು ಶುರು ಮಾಡುತ್ತೀರಿ ಮತ್ತು ನಂತರ, "ನಾನು ನಿನ್ನನ್ನು ಸಹಿಸಲಾರೆ" ಎಂದು ಹೇಳುತ್ತೀರಿ. ಇದು ಅನೇಕವೇಳೆ ಆಗುತ್ತದೆ. ಆದುದರಿಂದ ನಾವೊಂದು ನಡುಮಾರ್ಗವನ್ನು ಬಳಸಬೇಕೆಂದು ನನಗನ್ನಿಸುತ್ತದೆ. ಸ್ವಲ್ಪ ವ್ಯಕ್ತಪಡಿಸಿ ಆದರೆ ಬಹಳವಾಗಿಯಲ್ಲ.
ಅದೇ ಸಮಯದಲ್ಲಿ, ಬೇಡಿಕೆಯು ಪ್ರೀತಿಯನ್ನು ನಾಶಗೊಳಿಸುತ್ತದೆ. ಬೇಡಿಕೆಯನ್ನಿಡಬೇಡಿ. ಸಾಧಾರಣವಾಗಿ ಸಂಗಾತಿಗಳು ಕೇಳುತ್ತಾರೆ, "ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ಅವರು ಇದನ್ನು ಪರಸ್ಪರರಿಗೆ ಕೇಳುತ್ತಾ ಇರುತ್ತಾರೆ. "ನೀನು ಈ ದಿನಗಳಲ್ಲಿ ನನ್ನನ್ನು ಪ್ರೀತಿಸುತ್ತಿಲ್ಲ. ನೀನು ನಿಜವಾಗಿ ನನ್ನನ್ನು ಪ್ರೀತಿಸುತ್ತೀಯಾ?" ನೀವು ಈ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದಾಗ, ಅವರಿಗೆ ನಿಮ್ಮ ಮೇಲೆ ಸ್ವಲ್ಪ ಪ್ರೀತಿಯಿದ್ದರೆ, ಅದು ಕೂಡಾ ಹೊರಟು ಹೋಗುತ್ತದೆ. "ಓಹ್ ದೇವರೇ, ಈ ವ್ಯಕ್ತಿಯನ್ನು ನಾನು ನಿಜವಾಗಿ ಪ್ರೀತಿಸುತ್ತೇನೆಂದು ನಾನು ಅವರಿಗೆ ಸಾಬೀತುಪಡಿಸಬೇಕು". ತಮಗೆ ನಿಮ್ಮ ಬಗ್ಗೆಯಿರುವ ಭಾವನೆಗಳನ್ನು ಸಾಬೀತುಪಡಿಸುವುದು ಒಬ್ಬರಿಗೆ ಬಹಳ ದೊಡ್ಡ ಹೊರೆಯಾಗುತ್ತದೆ ಯಾಕೆಂದರೆ, ಭಾವನೆಗಳು ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹವು. ನೀವು ಹೇಗೆಯೇ ವ್ಯಕ್ತಪಡಿಸಿದರೂ, ಆಗಲೂ ಅದು ಅವ್ಯಕ್ತವಾಗಿಯೇ ಉಳಿಯುತ್ತದೆ. ಮೊದಲೇ ಒಬ್ಬ ವ್ಯಕ್ತಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುತ್ತಿರುತ್ತದೆ ಮತ್ತು ಅದರ ಮೇಲೆ, ಅದನ್ನು ವ್ಯಕ್ತಪಡಿಸಬೇಕೆಂದು ನೀವು ಬೇಡಿಕೆಯನ್ನೊಡ್ಡುತ್ತೀರಿ. ಆಗ ಅವರು ಯೋಚಿಸಲು ಶುರು ಮಾಡುತ್ತಾರೆ, "ಓಹ್ ದೇವರೇ, ಇದೊಂದು ದೊಡ್ಡ ತಲೆನೋವು". ಹಲವಾರು ಸಂಬಂಧಗಳು ಮುರಿದು ಬೀಳುವುದು ಹಾಗೂ ಸ್ವಲ್ಪ ನಂತರ ಸೋತು ಹೋಗುವುದು ಹೀಗೆಯೇ.  ನಾನು ನಿಮಗೆ ಅನುಸರಿಸಲು ಒಂದು ಸುಂದರವಾದ ತಂತ್ರವನ್ನು ಕೊಡುತ್ತೇನೆ - ಒಬ್ಬರಿಗೆ ನಿಮ್ಮ ಮೇಲಿರುವ ಪ್ರೀತಿಯು ಕಡಿಮೆಯಾಗುತ್ತಿರುವುದು ನಿಮಗೆ ತಿಳಿದರೆ, ನೀವು ಅವರನ್ನು ಕೇಳಬೇಕು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುತ್ತೀಯಾ? ನನಗೆ ನಿಜವಾಗಿ ಅದರ ಅರ್ಹತೆಯಿಲ್ಲ, ನೀನು ನನ್ನನ್ನು ಬಹಳ ಪ್ರೀತಿಸುತ್ತಿ!" ಆಗ ಅವರು ಹೆಚ್ಚು ಎತ್ತರಕ್ಕೇರಿದ ಅನುಭವ ಹೊಂದುತ್ತಾರೆ ಮತ್ತು ಹೆಚ್ಚು ಸಂತೋಷಗೊಳ್ಳುತ್ತಾರೆ.
ನೀವು ತೃಪ್ತರಾಗಿದ್ದರೆ ಜನರು ನಿಮ್ಮೊಂದಿಗಿರಲು ಇಷ್ಟಪಡುತ್ತಾರೆ. ನೀವು ಹತಾಶರಾಗಿದ್ದರೆ ಅಥವಾ ಕೊರತೆಯನ್ನನುಭವಿಸುತ್ತಿದ್ದರೆ, ಜನರು ನಿಮ್ಮಿಂದ ದೂರ ಸರಿಯಲು ಪ್ರಯತ್ನಿಸುತ್ತಾರೆ. ಇದು ನನ್ನ ವೀಕ್ಷಣೆ, ನಿಮಗೇನನ್ನಿಸುತ್ತದೆ?
ಹಾಗಾದರೆ, ನಾನು ನೀವು ಹೇಳಿದ ಎಲ್ಲಾ ವಿಷಯಗಳನ್ನು ಸಂಬೋಧಿಸಿದ್ದೇನೆಯೇ? ಏನಾದರೂ ಬಾಕಿಯಾಗಿದೆಯೇ? ಯಾವುದಕ್ಕಾದರೂ ಗಮನ ಕೊಡಲಿಲ್ಲವೇ?
(ಸಭಿಕರು: ಮೌನ)
ಹಾಗಿದ್ದರೆ ನಾವು ಎಲ್ಲ ವಿಷಯವನ್ನೂ ಮಾತನಾಡಿದೆವು, ಸರಿ!
ಪ್ರಶ್ನೆ: ಈ ತಡೆಯು ಬರುವುದು ಎಲ್ಲಿಂದ?
ಶ್ರೀ ಶ್ರೀ ರವಿಶಂಕರ್:
ಒಂದು ರೀತಿಯ ಅಸುರಕ್ಷತೆ, ಒಂದು ರೀತಿಯ ಅಹಿತ ಅಥವಾ ಭೂತಕಾಲದ ನೆನಪು. ಆದುದರಿಂದ ನೀವು ತಡೆಯನ್ನು ಗಮನಿಸಿದಾಗ, ಅದರ ಮೂಲಕ ಹಾದು ಹೋಗುವ ಸಂಕಲ್ಪವನ್ನು ತೆಗೆದುಕೊಳ್ಳಿ. ನೋಡಿ, ಅತ್ಯಂತ ಕೆಟ್ಟ ಸಂಗತಿಯೆಂದರೆ, ತಡೆಯನ್ನು ನೀವು ಗಮನಿಸದೆ ಮತ್ತು ಗುರುತಿಸದೆ ಇರುವುದು. ಒಮ್ಮೆ ನೀವು ಅದನ್ನು ಗಮನಿಸಿದರೆ ಮತ್ತು ಗುರುತಿಸಿದರೆ, ನೀವು ಖಂಡಿತವಾಗಿ ಅದರ ಮೂಲಕ ಹಾದುಹೋಗುವಿರಿ. ನೀವು ಬುದ್ಧಿವಂತರಲ್ಲವೆಂದು ಯೋಚಿಸಬೇಡಿ. ನಿಮ್ಮಲ್ಲಿ ಸಾಕಷ್ಟು ಬುದ್ಧಿವಂತಿಕೆಯಿದೆ. ನಿಮಗೆ ಸ್ವಲ್ಪ ಒತ್ತಾಯದ ಅಗತ್ಯವಿದೆ ಮತ್ತು ಅದಕ್ಕಾಗಿಯೇ ನಾನು ಸುತ್ತಲೂ ಸಂಚರಿಸುತ್ತಾ ಇರುವುದು. ನಿಮಗೊಂದು ಬೆಂಬಲದ ಗುಂಪು ಬೇಕು. ಹೇಗೆಂದರೆ, ಮದ್ಯಪಾನವು ಕೆಟ್ಟದೆಂದು ಹಲವರಿಗೆ ತಿಳಿದಿದ್ದರೂ ಅವರು ಅದರೊಳಗೆ ಬೀಳುತ್ತಾರೆ ಮತ್ತು ಅದಕ್ಕಾಗಿ ಈ ಎ.ಎ.(ಅಲ್ಕೊಹಾಲಿಕ್ಸ್ ಅನಾನಿಮಸ್) ಗ್ರೂಪ್ ಎಂಬುದೊಂದಿದೆ. ಅಲ್ಲಿ ಜನರು ಅವರಿಗೆ ಅಗತ್ಯವಾದ ಆ ಸ್ವಲ್ಪ ಬೆಂಬಲವನ್ನು ನೀಡುತ್ತಾರೆ. 
ಆದುದರಿಂದ, ಎಲ್ಲೆಡೆಗಳಲ್ಲಿ ನಮ್ಮ ಸುದರ್ಶನ ಕ್ರಿಯೆ ಗುಂಪಿದೆ. ಈ ಗುಂಪು ಯಾಕಿದೆಯೆಂದರೆ, ಅಭ್ಯಾಸಗಳನ್ನು ಒಂಟಿಯಾಗಿ ಮಾಡಲು ನಿಮಗೆ ಉದಾಸೀನವಾಗುವುದಿದ್ದರೆ, ನೀವದನ್ನು ಒಂದು ಗುಂಪಿನಲ್ಲಿ ಮಾಡಬಹುದು ಹಾಗೂ ಇದು ಸಹಾಯಕವಾಗುತ್ತದೆ. ಅದೇ ರೀತಿ ವ್ಯಾಯಾಮ ಕೂಡಾ; ಜಿಮ್ ಇರುವುದು ಏತಕ್ಕೆ? ಮನೆಯಲ್ಲಿ ಎಲ್ಲರಿಗೂ ವ್ಯಾಯಾಮ ಮಾಡಬಹುದು, ಜಿಮ್ ಗೆ ಯಾಕೆ ಹೋಗಬೇಕು? ಇದು ಯಾಕೆಂದರೆ, ಮನೆಯಲ್ಲಿ ಅದನ್ನು ಮಾಡಲು ನಿಮಗೆ ಬಹಳ ಉದಾಸೀನವಾಗುತ್ತದೆ, ಆದರೆ ನೀವು ಒಂದು ಜಿಮ್ ಗೆ ಹೋದಾಗ, ಅಲ್ಲಿ ನಿಮಗೆ ಜೊತೆಯಲ್ಲಿ ವ್ಯಾಯಾಮ ಮಾಡಲು ಹಲವು ಜನರಿರುತ್ತಾರೆ ಹಾಗೂ ಅಲ್ಲೊಬ್ಬ ತರಬೇತುದಾರನಿದ್ದರೆ, ಇನ್ನೂ ಸುಲಭವಾಗುತ್ತದೆ ಯಾಕೆಂದರೆ, ತರಬೇತುದಾರನು ನಿಮ್ಮನ್ನು ಪ್ರೋತ್ಸಾಹಿಸುತ್ತಾನೆ ಮತ್ತು ಅದು ನೀವು ಅದರೊಳಗೆ ಹೋಗಲು ಸಹಾಯಕವಾಗುತ್ತದೆ.
ಸಂಸ್ಕೃತದಲ್ಲಿ ಒಂದು ಪ್ರಾಚೀನ ಗಾದೆಯಿದೆ, "ನೀವು ಜವಾಬ್ದಾರಿಯನ್ನು ಹೊರಬೇಕಾಗಿ ಬಂದಾಗ ನೀವದನ್ನು ಒಂಟಿಯಾಗಿ ಮಾಡಿ ಆದರೆ ನೀವು ಕಲಿಯಲು ಮತ್ತು ಅಭ್ಯಾಸ ಮಾಡಲು ಬಯಸಿದಾಗ, ಇತರರೊಂದಿಗೆ ಮಾಡಿ" - ಏಕಸ್ ತಪಸ್ವಿ ದ್ವಿರ್ ಅಧ್ಯಾಯಿ.
ನಿಮಗೇನಾದರೂ ಸಮಸ್ಯೆ ಅಥವಾ ಏನಾದರೂ ನಕಾರಾತ್ಮಕತೆಯಿದ್ದರೆ, ಅದರ ಬಗ್ಗೆ ಟಾಮ್, ಡಿಕ್ ಮತ್ತು ಹ್ಯಾರಿಯೊಡನೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನಿಮ್ಮ ಸಮಸ್ಯೆಗಳನ್ನು ಸುತ್ತಲೂ ಹರಡುವುದರಿಂದ ಅವರು ಕೇವಲ, "ಓಹ್, ಈ ವ್ಯಕ್ತಿಯು ಯಾವತ್ತೂ ಭೀಕರವಾಗಿ, ನಕಾರಾತ್ಮಕವಾಗಿ ಇರುತ್ತಾನೆ" ಎಂದು ನಿಮಗೆ ಹಣೆಪಟ್ಟಿ ಕಟ್ಟುವಂತಾಗುತ್ತದೆ. ಅವರು ಮೇಲಕ್ಕೆತ್ತಲ್ಪಟ್ಟ ಭಾವನೆ ಪಡೆಯುವುದಿಲ್ಲ. ಆದುದರಿಂದ ನಿಮ್ಮ ನಕಾರಾತ್ಮಕತೆ ಮತ್ತು ನಿರಾಶೆಗಳ ಬಗ್ಗೆ ಮಾತನಾಡುವುದರಿಂದ ನಿಮಗೆ ಯಾವುದೇ ಸಹಾಯವಾಗುವುದಿಲ್ಲ, ಅವುಗಳು ಹೊರಟು ಹೋಗುವುದಿಲ್ಲ. ಸಾಧಾರಣವಾಗಿ ಜನರು, ಎಲ್ಲಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿರುತ್ತದೆಯೋ ಅಲ್ಲಿ ಬಿಟ್ಟು ಬೇರೆ ಎಲ್ಲರೊಡನೆ ತಮ್ಮ ಸಮಸ್ಯೆಯ ಬಗ್ಗೆ ಮಾತನಾಡುತ್ತಾರೆ.
ನಿಮಗೊಂದು ಅನಾರೋಗ್ಯವಿದ್ದರೆ, ನೀವು ವೈದ್ಯರಲ್ಲಿ ಮಾತ್ರ ಮಾತನಾಡಬೇಕು; ಅವರಿಗೆ ಅದರ ಬಗ್ಗೆ ಏನಾದರೂ ಮಾಡಲು ಸಾಧ್ಯವಿದೆ. ನಿಮ್ಮ ಅನಾರೋಗ್ಯದ ಬಗ್ಗೆ ಫೋನಿನಲ್ಲಿ ನಿಮ್ಮ ಮಿತ್ರರಿಗೆ ಅರ್ಧ ಗಂಟೆಗಳ ಕಾಲ ವಿವರಿಸುವುದರಲ್ಲಿ ಅರ್ಥವಿಲ್ಲ, ಯಾಕೆಂದರೆ ಅವರು ನಿಮಗಾಗಿ ಏನೂ ಮಾಡಲು ಸಾಧ್ಯವಿಲ್ಲ. ಕೇವಲ ಫೋನ್ ಕಂಪೆನಿಗೆ ಇದರಿಂದ ಲಾಭ. ನಾನು ಹೇಳುವುದೇನೆಂದರೆ, ಪ್ರಪಂಚದಲ್ಲಿನ ಜನರು ತಮ್ಮ ಮಿತ್ರರಿಗೆ ಫೋನಿನಲ್ಲಿ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ, ಫೋನ್ ಕಂಪೆನಿಗಳ ಆದಾಯವು ಕಡಿಮೆಯೆಂದರೆ ೪೦% ದಷ್ಟು ಕಡಿಮೆಯಾಗಬಹುದು. ಎಲ್ಲರೊಡನೆ ನಿಮ್ಮ ಸಮಸ್ಯೆಯ ಬಗ್ಗೆ ಮಾತನಾಡುವುದರ ಅಗತ್ಯವಿಲ್ಲ. ನಿಮಗೆ ಸಮಸ್ಯೆ ಅಥವಾ ಕಷ್ಟವಿದ್ದರೆ, ಅದನ್ನು ಸಹಿಸಿ ಮತ್ತು ಅದು ಹಾದು ಹೋಗುತ್ತದೆ. ನೀವು ಏನನ್ನಾದರೂ, ಉದಾಹರಣೆಗೆ ಪಿಯಾನೋ ಅಥವಾ ವಯೋಲಿನ್ ಏನನ್ನಾದರೂ ಅಭ್ಯಾಸ ಮಾಡಲು ಬಯಸಿದಾಗ,  ಯಾರಾದರೂ ಜೊತೆಯಲ್ಲಿರುವುದು ಯಾವತ್ತಿಗೂ ಒಳ್ಳೆಯದು, ಸರಿಯಾ!
ಆದುದರಿಂದ ಸಂಗೀತ ಅಥವಾ ಓದು ಅಥವಾ ಜಿಮ್ ಅಥವಾ ಯೋಗ ಮತ್ತು ಧ್ಯಾನ, ಯಾವುದೇ ಆಗಿರಲಿ, ಅದನ್ನು ಗುಂಪಿನಲ್ಲಿ ಮಾಡುವುದು ಒಳ್ಳೆಯದು.
ಇವತ್ತು ಬೆಳಗ್ಗೆ ನಮ್ಮಲ್ಲಿ ಸುಮಾರು ೯೦೦ ಜನರು ಪ್ರಾಣಾಯಾಮ ಮತ್ತು ಧ್ಯಾನ ಮಾಡಿದರು. ನಾನು ಅವರಲ್ಲಿ ಕೇಳಿದೆ, "ನಮ್ಮಲ್ಲಿ ಎಷ್ಟು ಕೇಂದ್ರಗಳಿವೆ?" ಮತ್ತು ಅವರಂದರು, "ಹಾಲೆಂಡಿನಲ್ಲಿ ನಮ್ಮದು ಐದು ಕೇಂದ್ರಗಳಿವೆ". ಆಗ ನಾನವರಿಗೆ, ಅದು ಸಾಲದು ಎಂದು ಹೇಳಿದೆ. ನಮ್ಮ ಕೇಂದ್ರಗಳು ಎಲ್ಲೆಡೆ ಇರಬೇಕು. ಜನರು ಒಟ್ಟು ಸೇರಿ, ಉಸಿರಾಟದ ವ್ಯಾಯಾಮಗಳನ್ನು ಮತ್ತು ಯೋಗಾಭ್ಯಾಸಗಳನ್ನು ಮಾಡಲು ಪ್ರಾರಂಭಿಸಬೇಕು ಮತ್ತು ಅದು ಅವರ ಚೈತನ್ಯವನ್ನು ಮೇಲೆತ್ತುತ್ತದೆ. ನೀವು ಇದನ್ನು ಒಪ್ಪುವುದಿಲ್ಲವೇ?
ಎಲ್ಲಿ ಬಂದು ಜನರು ಸಂತೋಷಗೊಳ್ಳುವರೋ ಅಂತಹ ಹೆಚ್ಚು ಹೆಚ್ಚು ಜಾಗಗಳನ್ನು ಸೃಷ್ಟಿಸಲು ನಿಮ್ಮಲ್ಲಿ ಎಷ್ಟು ಮಂದಿಗೆ ಆಸಕ್ತಿಯಿದೆ? ಸಂತೋಷದ ಕೇಂದ್ರಗಳು!
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಜನರು  ವಾರಕ್ಕೊಮ್ಮೆ ಜೊತೆಯಲ್ಲಿ ಬಂದು, ಜೊತೆಯಲ್ಲಿ ಹಾಡಿ, ಜೊತೆಯಲ್ಲಿ ತಿಂದು, ಆತ್ಮೀಯತೆಯ ಒಂದು ಭಾವನೆಯನ್ನು ಹೊಂದಿ, ಪರಸ್ಪರರನ್ನು ಮೇಲೆತ್ತುವ ಸಂತೋಷದ ಕೇಂದ್ರಗಳನ್ನು ನೀವೆಲ್ಲರೂ ಸೃಷ್ಟಿಸಬೇಕು. ಆದುದರಿಂದ, ಸಮಾಜದಲ್ಲಿ ಸಂತೋಷವನ್ನು ಸೃಷ್ಟಿಸಲು ನೀವೆಲ್ಲರೂ ಮುಂದಾಳುಗಳಾಗಿ.
ನಾನು ನಿಜವಾಗಿಯೂ ಹಾಲೆಂಡಿನಲ್ಲಿ ಸಂತೋಷದ ಅಲೆಗಳನ್ನು ತರಲು ಬಯಸುತ್ತೇನೆ. ನಾವು ಪ್ರತಿಯೊಂದು ಹಳ್ಳಿಯನ್ನೂ ತಲಪಬೇಕು ಹಾಗೂ ಮುಂದಿನ ಒಂದು ವರ್ಷದಲ್ಲಿ ಹಾಲೆಂಡಿನಲ್ಲೆಲ್ಲೂ ಯಾರೂ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು. ಆರ್ಟ್ ಆಫ್ ಲಿವಿಂಗಿನ ಯಶಸ್ಸು, ಪ್ರೋಜ಼್ಯಾಕಿನ ಮಾರಾಟದಲ್ಲಾಗುವ ಕುಸಿತದಿಂದ ಅಳೆಯಲ್ಪಡುತ್ತದೆ. ಹಾಲೆಂಡಿನ ಔಷಧಿಗಳ ಅಂಗಡಿಗಳಿಂದ ಪ್ರೋಜ಼್ಯಾಕ್ ಹೊರಹೋಗಬೇಕೆಂಬ ಗುರಿಯನ್ನು ನಾವು ಇಟ್ಟುಕೊಳ್ಳಬೇಕು, ಯಾಕೆಂದರೆ ಅಲ್ಲಿ ಅದನ್ನು ಕೊಳ್ಳುವವರು ಯಾರೂ ಇರುವುದಿಲ್ಲ. ಇದನ್ನು ನಮ್ಮ ಕಲ್ಪನೆಯನ್ನಾಗಿ ಇರಿಸಿ - ಯಾರೊಬ್ಬರಿಗೂ ಹೋಗಿ ಪ್ರೋಜ಼್ಯಾಕನ್ನು ಕೊಂಡುಕೊಳ್ಳಬೇಕಾದ ಅಗತ್ಯವಿಲ್ಲ. ನಾವಿದನ್ನು ಮಾಡೋಣವೇ? ಆದುದರಿಂದ ನಾವು ಈ ದಿಕ್ಕಿನಲ್ಲಿ ಚಲಿಸಬೇಕು.  ನಮ್ಮ ಗುರಿಯು ಪ್ರೋಜ಼್ಯಾಕಿನ ಮಾರಾಟವನ್ನು ಕೆಳತರುವುದಾಗಿದೆ.