ಸೋಮವಾರ, ಜುಲೈ 30, 2012

ತ್ರಿವಿಧ ಭ್ರಾ೦ತಿ

30
2012
Jul
ಬೆ೦ಗಳೂರು ಆಶ್ರಮ, ಭಾರತ



ಪ್ರಶ್ನೆ: ಪ್ರೀತಿಯ ಗುರುದೇವ, ಧ್ಯಾನಿಸಿದಾಗ ಪರಮಾನ೦ದ ನಮಗು೦ಟಾಗುತ್ತದೆ, ಧ್ಯಾನಿಸಿಯೂ ಧ್ಯಾನಿಸದೆಯೂ ಇದೇ ಮನಃಸ್ಥಿತಿಯನ್ನು ಹೊ೦ದಿರುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ಜ್ಞಾನದಿಂದ ಮತ್ತು ವೈರಾಗ್ಯದಿಂದ. ಇಡೀ ಪ್ರಪಂಚವನ್ನು ಒಂದು ಕನಸಿನ೦ತೆ ನೀವು ಕಾಣಲಾರ೦ಭಿಸಿದಾಗ, ಧ್ಯಾನಸ್ಥಿತಿ ನಿಮ್ಮ ಇತರ ಚಟುವಟಿಕೆಗಳನ್ನೂ ಆವರಿಸಿಕೊಳ್ಳುತ್ತದೆ. ಆದರೆ ಆ ಸ್ಥಿತಿಗೆ ಆಪೇಕ್ಷೆ ನಿರಪೇಕ್ಷೆಗಳ ಹಣೆಪಟ್ಟಿಯನ್ನು ಅ೦ಟಿಸಬೇಡಿ.  ಸಹಜವಾಗಿ ಜೀವನಯಾಪನೆ ಮಾಡಿ, ಇತರರೆಲ್ಲರೂ ಜೀವಿಸುವ ಹಾಗೆ; ಸರಳವಾಗಿ, ಸಹಜವಾಗಿ. ಅದೊ೦ದು ದೊಡ್ಡ ಸಾಧನೆಯೆ೦ಬ ಭಾವ ಮನವನ್ನು ಮುಸುಕದ ಹಾಗೆ, ಆಗಬಹುದೆ?
ಹಾಗೂ ಸದಾಕಾಲ ಶಾಂತಿಪ್ರಿಯರಾಗಬೇಡಿ,  ನೀವು ಶಾಂತಿಯನ್ನು ಬಯಸಿದಷ್ಟು ತೊಂದರೆಗಳು ಹೆಚ್ಚುತ್ತವೆ, ಯಾವುದನ್ನೂ ಹತೋಟಿಯಲ್ಲಿಡಲು ಪ್ರಯತ್ನಿಸಬೇಡಿ, ಖಾಲಿಯಾಗಿರಿ, ಕೆಲವೊಮ್ಮೆ ಶಾಂತಿಭಂಗವಾಗುತ್ತದೆ, ಕ್ಷೋಭೆಗೊಳಗಾಗುತ್ತೀರಿ, ಆಗಲಿ ಏನಾಯಿತು! ಯೋಚಿಸಬೇಡಿ. ಹೀಗಾಗುವುದು, ಇವು ಈ ಪ್ರಪಂಚದ ಸಹಜಸ್ವಭಾವಗಳೆಂದು ನೀವು ತಿಳಿಯುವ ತನಕ ಮಾತ್ರ.
ಅಕ್ಕಮಹಾದೇವಿಯವರ ವಚನಗಳ ಬಹು ಸುಂದರವಾದ ಎರಡು ಸಾಲುಗಳು ಹೀಗಿವೆ:
"ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದಡೆಂತಯ್ಯ !
 ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯ !
 ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯ ! "
ಸಂತೆಯ ಒಳಗೆಯೆ ಮನೆಯನ್ನು ಕಟ್ಟಿದ್ದಾನೆ ಮತ್ತು ಶಬ್ದಕ್ಕೆ ಅಂಜುತ್ತಾನೆ, ಆತನಿಗೆ ಏನು ಹೇಳಬೇಕು ?
ಇದೇ ರೀತಿ , ಈ ಭೂಮಿಯಲ್ಲಿ ಹುಟ್ಟಿದ ಬಳಿಕ , ಈ ಲೋಕದಲ್ಲಿ ಹಿತವಾದ ಸನ್ನಿವೇಶಗಳು ಬರುತ್ತವೆ ಮತ್ತು ಅಹಿತವಾದ ಸನ್ನಿವೇಶಗಳೂ ಬರುತ್ತವೆ. ಜನರು ನಿಮ್ಮನ್ನು ಹೊಗಳುತ್ತಾರೆ ಮತ್ತು ಕಾರಣವಿಲ್ಲದೆ ನಿಂದಿಸುತ್ತಾರೆ. ಇವನ್ನೆಲ್ಲಾ ಸುಮ್ಮನೆ ಸ್ವೀಕರಿಸುತ್ತಾ ಮುಂದೆ ಸಾಗಬೇಕು.
ಇದು ಒಳ್ಳೆಯ ನೀತಿಯಲ್ಲವೇನು ?
ಇಂದು ಕೆಲವರು ನಮ್ಮಲ್ಲಿ ಬಂದು, ಒಬ್ಬ ವ್ಯಕ್ತಿಯನ್ನು ಕುರಿತು ಈ ರೀತಿ ಹೇಳಿದರು "ಆತ ತುಂಬಾ ಒರಟ, ಒಳ್ಳೆಯವನಲ್ಲ, ಬಹಳಷ್ಟು ಕೆಟ್ಟ ಗುಣಗಳನ್ನು ಹೊಂದಿದ್ದಾನೆ, ಎಲ್ಲಾ ಸಂದರ್ಭಗಳಲ್ಲೂ ತಾಳ್ಮೆ ಕಳೆದು ಕೊಳ್ಳುತ್ತಾನೆ, ನೀವು ಆತನನ್ನು ಈ ಸಂಸ್ಥೆಯಲ್ಲಿ ಏಕೆ ಇರಿಸುತ್ತೀರಾ?"
ನಾವು ಹೇಳಿದೆವು "ಇಲ್ಲ, ಆತನನ್ನು ಈ ಪ್ರಪಂಚದಲ್ಲಿ ಬೇರೆ ಎಲ್ಲಾದರೂ ಕಳಿಸಿದರೂ ಕೂಡ, ಆತನು ಈ ರೀತಿಯೇ ಮಾಡುತ್ತಾನೆ. ನಿಮಗೀಗ ಆತನು ತೊಂದರೆ ಕೊಡುತ್ತಿದ್ದಾನೆ ಎಂದು ಅನಿಸುತ್ತಿದೆ,  ಆದರೆ ಆತನನ್ನು ಈ ಸಂಸ್ಥೆಯಿಂದ ಹೊರಗೆ ಕಳಿಸಿದರೂ ಕೂಡ ಆತನು ನಿಮ್ಮನ್ನು ಕಾಡಿಸುತ್ತಾನೆ, ಇಲ್ಲಿಯಾದರು ಆತನಿಗೆ ಸುಧಾರಿಸುವ ಅವಕಾಶವಿದೆ ಅಲ್ಲವೆ?"
ನಾವು ತಾಳ್ಮೆಯಿಂದ, ಅವರು ಇಲ್ಲಿಯೇ ಇರಲಿ, ಬೆಳೆಯಲಿ ಎಂದು ಹೇಳಿದೆವು.

ಪ್ರಶ್ನೆ: ಪ್ರೀತಿಯ ಗುರುದೇವ,  ಬೈಬಲ್’ನಲ್ಲಿ ಈ ರೀತಿ ಹೇಳಲಾಗಿದೆ "ಒಬ್ಬ ಶ್ರೀಮಂತನು ಭಗವಂತನಲ್ಲಿ ಪ್ರವೇಶಿಸುವುದಕ್ಕಿಂತಲೂ, ಒಂದು ಒಂಟೆಗೆ ಸೂಜಿಯ ಕಣ್ಣನ್ನು ಪ್ರವೇಶಿಸುವುದು ಹೆಚ್ಚು ಸುಲಭ" ಇದರ ಅರ್ಥ, ಸಿರಿವಂತನಾದ ಮಾತ್ರಕ್ಕೆ ಶ್ರೀಮಂತನು ನರಕಯಾತನೆ ಪಡುತ್ತಾನೆ ಎಂದೆ ?
ಶ್ರೀ ಶ್ರೀ ರವಿ ಶಂಕರ್: ಇಲ್ಲ! ಹಲವು ಸಂತರ ಮತ್ತು ಧರ್ಮೋಪದೇಶಕರ ಈ ವಿಚಾರಧಾರೆಗಳು ಪ್ರತ್ಯೇಕ ಸಂದರ್ಭಗಳಲ್ಲಿ ಪ್ರತ್ಯೇಕ ಜನರಿಗೆ ಕೊಡಲ್ಪಟ್ಟಿವೆ. ಯೇಸುಕ್ರಿಸ್ತನು ಹೇಳುತ್ತಾನೆ "ನಾನು ಶಾಂತಿ ಸ್ಥಾಪಿಸಲು ಬಂದಿಲ್ಲ; ನಾನು ತಾಯಿಯನ್ನು ಮಗಳ ವಿರುದ್ಧ ಮತ್ತು ಮಗನನ್ನು ತಂದೆಯ ವಿರುದ್ಧ ಇರಿಸಲು ಬಂದಿದ್ದೇನೆ" ಎಂದು, ಹಾಗಾದರೆ ಆತನಿಗೆ ಸಂಸಾರಗಳು ಇಷ್ಟವಿರಲಿಲ್ಲ ಅಥವಾ ಕುಟುಂಬಗಳನ್ನು ಒಡೆಯಲು ಬಂದಿದ್ದಾನೆ ಎಂದಲ್ಲ.
ಈ ರೀತಿ ಹೇಳಿರುವುದು, ಜನರಲ್ಲಿ ಅನುಕಂಪ ಮೂಡಬೇಕು ಎಂದು.
ಎಲ್ಲೆಡೆ ಬಡತನವಿದ್ದಾಗ, ಒಬ್ಬ ಮಾತ್ರ ಸುಖಾನುಭಾವದಲ್ಲಿ ನಲಿಯುತ್ತಾ ಏನೂ ಸೇವೆ ಮಾಡದೆಯೆ, ತಾನು ದುಡಿದದ್ದನ್ನೆಲ್ಲಾ ತನಗಾಗಿ ಮಾತ್ರ ಖರ್ಚು ಮಾಡಿದರೆ, ಆ ವ್ಯಕ್ತಿಯ ಹೃದಯವು ಕಲ್ಲಿನ ಹಾಗೆ ಬಹಳ ಕಠಿಣವಾದದ್ದು. ಹೀಗೆ ಯಾರಾದರೂ ಆಂತರ್ಯದಲ್ಲಿ ಕಠಿಣವಾಗಿದ್ದರೆ ಅವರಿಗೆ ಸ್ವರ್ಗವು ಬಹಳ ದೂರ, ಎಂಬುದು ಇದರ ಸಾರಾಂಶ.
ಈಗಷ್ಟೆ ನಮಗೊಂದು ಆಲೋಚನೆ ಬಂತು, ನಾವು ಸುಮಾರು ಐವತ್ತು ಲಕ್ಷಗಳು ಬೆಲೆ ಬಾಳುವ ಔಷಧಗಳನ್ನು ಅಸ್ಸಾಂಗೆ ಕಳಿಸಬೇಕು. ಐವತ್ತು ಲಕ್ಷಗಳು ಬೆಲೆ ಬಾಳುವಷ್ಟು ಆಯುರ್ವೇದ ಔಷಧಗಳನ್ನು ನಾವು ಖರೀದಿಸಬೇಕು. ಆದುದರಿಂದ ನೀವೆಲ್ಲರೂ ಸ್ವಲ್ಪ ಕೊಡುಗೆ ನೀಡಿ ಮತ್ತು ನಾವು ಅಲ್ಲಿಯ ಜನರಿಗೆ ನೀಡಬಹುದು. ನಾವು ಕೂಡಲೆ ಅಸ್ಸಾಂಗೆ ಭೇಟಿ ನೀಡಲು ಯೋಜಿಸುತ್ತಿದ್ದೇವೆ.
ಮೊದಲನೆಯದಾಗಿ ಅವರಿಗೆ ಸ್ವಲ್ಪ ಔಷಧಗಳು ಬೇಕಾಗಬಹುದು, ನಾವೆಲ್ಲ ಏನಾದರೂ ಮಾಡೋಣ. ನಮ್ಮಲ್ಲಿ ಒಬ್ಬೊಬ್ಬರು ಐನೂರು ರೂಪಾಯಿಗಳು ಕೊಟ್ಟರೆ ಏನಾದರೂ ಮಾಡಬಹುದು. ಅವರಿಗೆ ಮೊದಲನೆಯದಾಗಿ ಔಷಧಗಳನ್ನು ಕಳಿಸಬಹುದು ಮತ್ತು ಇಲ್ಲಿಂದ ಸ್ವಲ್ಪ ಆಯುರ್ವೇದ ವೈದ್ಯರೂ ಕೂಡ ಅಸ್ಸಾಂಗೆ ಹೋಗಬೇಕು.


ಪ್ರಶ್ನೆ: ಪ್ರೀತಿಯ ಗುರುದೇವ, ತಿಳಿದವರು ಹೇಳಿದ್ದಾರೆ, ಯಾರಾದರೂ ನಿಮ್ಮ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸಿ ಎಂದು, ಈ ರೀತಿಯಲ್ಲಿ ನಾನು ಎರಡು ಬಾರಿ ಪೆಟ್ಟು ತಿಂದೆ, ಏನು ಮಾಡುವುದು, ಇದು ನನ್ನ ದಡ್ಡತನವೇ?
ಶ್ರೀ ಶ್ರೀ ರವಿ ಶಂಕರ್: ನಿಮಗೆ ಎರಡು ಬಾರಿ ಪೆಟ್ಟಾಗಿರುವುದು ಒಬ್ಬ ವ್ಯಕ್ತಿಯಿಂದಲೇ ಅಥವಾ ಬೇರೆ ವ್ಯಕ್ತಿಗಳಿಂದಲೇ? ಇದರಲ್ಲಿದೆ ವ್ಯತ್ಯಾಸ. ನೋಡಿ ನೀವು ಪ್ರತ್ಯೇಕ ವ್ಯಕ್ತಿಗಳಿಗೆ ನಿಮ್ಮ ಮತ್ತೊಂದು ಕೆನ್ನೆಯನ್ನು ತೋರಿಸಬಹುದು ಮತ್ತು ಅವರು ನಿಮಗೆ ಒಂದೇ ಬಾರಿ ಪೆಟ್ಟು ಕೊಡುತ್ತಾರೆ, ಹಾಗಾದಲ್ಲಿ ನೀವು ಬುದ್ಧಿವಂತರು ಎಂದಲ್ಲ. ನಿಮಗೆ ಪೆಟ್ಟು ಕೊಟ್ಟ ವ್ಯಕ್ತಿಯನ್ನು ಗಮನಿಸಿ. ಅವರು ಸೂಕ್ಷ್ಮ ಮನಸ್ಸುಳ್ಳವರು ಹಾಗೂ ಸುಸಂಸ್ಕೃತರಾಗಿದ್ದರೆ ನಿಮ್ಮ ಮತ್ತೊಂದು ಕೆನ್ನೆಯನ್ನು ತೋರಿಸಿ, ಇದರಲ್ಲಿ ಸಂಶಯಬೇಡ. ಆದರೆ ಆ ವ್ಯಕ್ತಿಯು ಒರಟನಾಗಿದ್ದಲ್ಲಿ ಮೂರನೆಯ ಬಾರಿ ಬೇಡ, ಏಕೆಂದರೆ ನಮ್ಮಲ್ಲಿರುವುದು ಕೇವಲ ಎರಡು ಕೆನ್ನೆಗಳು ಮಾತ್ರ, ತಿಳಿಯಿತೇ?

ಪ್ರಶ್ನೆ: ಗುರುದೇವ, ತಪಶ್ಚರ್ಯ ಎಂದರೇನು ? ನಾವು ತಪಶ್ಚರ್ಯರಾಗಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜೀವನದಲ್ಲಿ ಅಗತ್ಯಗಳನ್ನು ಸ್ಥಿಮಿತಗೊಳಿಸಿ, ಅಪೇಕ್ಷೆಗಳನ್ನು ಕಡಿಮೆಮಾಡಿಕೊಳ್ಳುವುದು. ನನಗೆ ಅದು ಬೇಕು, ನನಗೆ ಇದು ಬೇಕು, ಮತ್ತೊಂದು ಬೇಕು - ಈ ರೀತಿ ಬೇಡ . ನಮ್ಮ ಬಳಿ ಏನಿರುವುದೊ ಅಷ್ಟರಲ್ಲಿ ನಾವು ತೃಪ್ತಿ ಪಡಬೇಕು. ನಿಮ್ಮ ಬಳಿ ಒಂದು ವಾಹನ ಇದ್ದರೆ ಅಷ್ಟು ಸಾಕು. ನನಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನ ಬೇಕು ಎಂದು ಹೇಳುವುದು ಬೇಡ, ಸರಳವಾದ ಒಳ್ಳೆಯ ವಾಹನವಿದ್ದರೆ ಅಷ್ಟು ಸಾಕು.
ಧರಿಸಲು ಯೊಗ್ಯವಾದ ಉಡುಪುಗಳು, ತಿನ್ನಲು ಹಿತವಾದ ಭೋಜನ, ಅಷ್ಟು ಸಾಕು. ತಪಶ್ಚರ್ಯರಾಗಿರುವುದೆಂದರೆ ನಿಮ್ಮನ್ನು ನೀವು ಹಿಂಸಿಸುವುದು ಎಂದಲ್ಲ, ನೀವು ಅರೆಹೊಟ್ಟೆ ಇರಬೇಕು - ಈ ರೀತಿಯಲ್ಲ. ತಪಶ್ಚರ್ಯ ಎಂದರೆ ಸರಳತೆ, ಸ್ವಲ್ಪ ಮಾತ್ರದಲ್ಲಿ ಜೀವಿಸುವುದು, ನಿಮಗೆ ಅಗತ್ಯವಾಗಿ ಬೇಕಾಗಿರುವ ಸ್ವಲ್ಪ ಮಾತ್ರ ಸೌಕರ್ಯಗಳಲ್ಲಿ ಸಂತೋಷದಿಂದ ಬದುಕುವುದು ಎಂದು.

ಪ್ರಶ್ನೆ: ಪ್ರೀತಿಯ ಗುರುದೇವ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ’ಯೋಗಕ್ಷೇಮಂ ವಹಾಮ್ಯಹಂ " ಎಂದು ಹೇಳಿದ್ದಾರೆ, ನಮಗೆಲ್ಲಾ ದೊರೆಯುತ್ತಿರುವುದು ಆ ಭಗವಂತನಿಂದ, ಆದರೆ ನಮಗೆ ಸಕಲವನ್ನು ಕೊಡುವ ಭಗವಂತನೇ ನಮ್ಮಿಂದ ಹೇಗೆ ಕಸಿದುಕೊಳ್ಳುತ್ತಾನೆ ಎಂದು ಅರ್ಥವಾಗುತ್ತಿಲ್ಲ?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು, ಹಾಗೆಯೇ ಯೋಚಿಸುತ್ತಿರಿ. ಇದೀಗ ಈ ಸಂಪೂರ್ಣ ಜಗತ್ತು ನಿಮಗೆ ಕೊಡಲ್ಪಟ್ಟಿದೆ ಮತ್ತು ಒಂದು ದಿನ ಈ ಪ್ರಪಂಚವನ್ನು ನಿಮ್ಮಿಂದ ತೆಗೆದುಕೊಳ್ಳಲಾಗುವುದು. ಇದು ಈ ಸೃಷ್ಟಿಯ ರೀತಿ. ಅಲ್ಲೆಲ್ಲೊ ಮೇಲೆ ಒಬ್ಬ ಭಗವಂತ ಕುಳಿತು ಇವೆಲ್ಲಾ ನೋಡುತ್ತಾನೆ ಎಂದಲ್ಲ. ಈ ಸಮಸ್ತ ಜಗತ್ತು, ಈ ವಿಶ್ವವೇ ಒಂದು ಪ್ರಕ್ರಿಯೆ. ಇದು ಸದಾಕಾಲ ನಡೆಯುತ್ತಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಮ್ಮ ಸಾಮರ್ಥ್ಯ, ನಮ್ಮ ಶಕ್ತಿ ಮತ್ತು ಗುರುವಿನಲ್ಲಿ ನಂಬಿಕೆ ಈ ರೀತಿಯ ವಿಷಯಗಳಲ್ಲಿ ನಮಗಿರುವ ಸಂದೇಹವನ್ನು ಹೇಗೆ ಹೋಗಲಾಡಿಸಬಹುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಪ್ರಾಣವನ್ನು ಹೆಚ್ಚಿಸಿರಿ, ಅಷ್ಟು ಸಾಕು. ನಿಮಗೆ ಪ್ರಾಣ ಕಡಿಮೆಯಾದಾಗ ಆತ್ಮ ವಿಶ್ವಾಸ ಕಡಿಮೆಯಾಗುತ್ತದೆ. ಸ್ವಸಾಮರ್ಥ್ಯದ ಮೇಲೆ ಅಪನ೦ಬಿಕೆಯು೦ಟಾದಾಗ ಅದರ ಪ್ರಭಾವ ಶಿಕ್ಷಕರ ಎಡೆಗೆ, ಗುರುಗಳೆಡೆಗೆ,  ಸ್ನೇಹಿತರೆಡೆಗೆ, ಕುಟುಂಬ ವರ್ಗದವರೆಡೆಗೆ, ಸಮಸ್ತ ಜಗತ್ತಿನೆಡೆಗೆ ಹರಿಹಾಯುವುದು ಸ್ವಾಭಾವಿಕ. ಆದುದರಿಂದ ನಮ್ಮಲ್ಲಿಯ ಪ್ರಾಣಶಕ್ತಿ, ನಮ್ಮ ಹಿತವಾದ ಕಂಪನಗಳ, ನಮ್ಮ ಶಕ್ತಿ ಸಾಮರ್ಥ್ಯಗಳು ಮತ್ತು ಆತ್ಮ ಬಲವು ನಮ್ಮ ನಂಬಿಕೆಗೆ ಅನುಗುಣವಾಗಿರುತ್ತವೆ!

ಪ್ರಶ್ನೆ: ಪ್ರೀತಿಯ ಗುರುದೇವ, ಮಾಯೆಯೆಂದರೆ ಏನು, ವಿವಿಧ ಬಗೆಯ ಮಾಯೆಗಳಾವುವು? ದಯವಿಟ್ಟು ಈ ವಿಷಯದ ಮೇಲೆ ಬೆಳಕು ಚೆಲ್ಲಿ.
ಶ್ರೀ ಶ್ರ‍ೀ ರವಿ ಶಂಕರ್: ಮಾಯೆಯಲ್ಲಿ ಮೂರು ವಿಧಗಳಿವೆ, ಮೋದಲನೆಯದಾಗಿ ಮೋಹ ಮಾಯೆ, ಕೆಲವರಿಗೆ ಧನ ಅಥವ ಮಕ್ಕಳಲ್ಲಿ ಪ್ರೀತಿ ಎಷ್ಟು ಹೆಚ್ಚಾಗುತ್ತದೆ ಎಂದರೆ ಅದು ಅವರನ್ನು ಕುರುಡರನ್ನಾಗಿರಿಸುತ್ತದೆ, ಇದನ್ನು ಮೋಹ ಮಾಯೆಯೆಂದು ಕರೆಯುತ್ತಾರೆ. ಬಹಳಷ್ಟು ಜನರು ಹಣ, ಹಣ ಎಂದು ಹಣವನ್ನು ಹಿಂಬಾಲಿಸುತ್ತಾರೆ. ಅವರು ತಮ್ಮ ಹೆಂಡತಿ, ಮಕ್ಕಳು, ತಾಯಿ, ತಂದೆ, ಸ್ನೆಹಿತರು ಅಥವಾ ಯಾವ ಸಂಬಂಧಗಳನ್ನೂ ಲೆಕ್ಕಿಸುವುದಿಲ್ಲ. ಅವರಿಗೆ ಕೇವಲ ಹಣ ಮಾತ್ರ ಮುಖ್ಯವಾಗಿರುತ್ತದೆ, ಹಣಕ್ಕಾಗಿ ಅವರು ಯಾರನ್ನಾದರೂ ಕಾನೂನು ವ್ಯಾಜ್ಯಗಳಲ್ಲಿ ಸಿಲುಕಿಸಲು ಲೆಕ್ಕಿಸುವುದಿಲ್ಲ. ತಮ್ಮ ತಾಯಿ ತಂದೆಯರ ವಿರುದ್ಧ ಕಾನೂನು ಮೊಕದ್ದಮೆಗಳನ್ನು ಹೂಡುತ್ತಾರೆ. ಅವರುಗಳು ಮಾನಸಿಕವಾಗಿ ದುರ್ಬಲರೆಂದು ನಿರೂಪಿಸುತ್ತಾರೆ ಮತ್ತು ಎಲ್ಲರೊಡನೆ ಹಣಕ್ಕಾಗಿ ಜಗಳವಾಡುತ್ತಾರೆ, ಕೊಲೆ ಮಾಡುವ ಹಂತಕ್ಕೂ ಹೋಗುತ್ತಾರೆ. ಇದು ಮೋಹ ಮಾಯೆ.
ಇದೇ ರೀತಿ ಕೆಲವರು ತಮ್ಮ ಮಕ್ಕಳಿಗಾಗಿ ಅಳುತ್ತಾರೆ. ಅವರಿಗೆ ಮಕ್ಕಳು ದಿನದ ಇಪ್ಪತ್ತನಾಲ್ಕು ಗಂಟೆಗಳೂ ತಮ್ಮೊಂದಿಗೇ ಇರಬೇಕು, ತಮ್ಮ ಮಕ್ಕಳಿಗೆ ಯಾವುದು ಒಳಿತು ಎಂದು ಕೂಡ ಅವರು ಅರ್ಥಮಾಡಿಕೊಳ್ಳುವುದಿಲ್ಲ. ಈ ರೀತಿ ತಮ್ಮ ಮಕ್ಕಳ ಜೀವನವನ್ನು ಹಾಳು ಮಾಡುತ್ತರೆ. ಇದು ಮೋಹ ಮಾಯೆ. ಅದು ಯಾವುದು? ಅದರಿಂದ ನಿಮಗೆ ಮಹತ್ವದ ಸಂತೋಷವಾಗದಿದ್ದರೂ, ಅದು ಇಲ್ಲದಿದ್ದಾಗ ನೀವು ವ್ಯಥೆ ಪಡುತ್ತೀರಿ. ಅದು ಮೋಹ ಮಾಯೆ.
ಎರಡನೆಯದಾಗಿ ಮಹಾ ಮಾಯೆ, ಮಹಾ ಮಾಯೆಯು ಪ್ರಕೃತಿಯಿಂದ ಉಂಟಾಗುತ್ತದೆ. ಅದು ನಮ್ಮ ದೃಷ್ಟಿಯನ್ನು ಮಬ್ಬಾಗಿಸುತ್ತದೆ, ಆದ್ದರಿಂದ ನಮಗೆ ಯಾವುದೂ ಕೂಡ ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ. ನಾವು ಜಡತ್ವದಿಂದ ಆವೃತಗೊಂಡಿರುತ್ತೇವೆ, ನಾವು ಭಾವನಾಶೂನ್ಯರಾಗಿರುತ್ತೇವೆ ಮತ್ತು ಸಂವೇದನೆಗಳು ಬರಿದಾಗುತ್ತವೆ, ಒಂದು ಕಲ್ಲಿನಹಾಗೆ.
ಮೂರನೆಯದಾಗಿ ಯೋಗ ಮಾಯೆ, ಯೋಗದಲ್ಲಿಯೂ ಕೂಡ ಮಾಯೆಯಿದೆ, ಇದು ಅತ್ಯಂತ ಅದ್ಬುತವಾಗಿದೆ. ನೀವು ಇತ್ತೀಚಿಗೆ ನಿರ್ಮಲ್ ಬಾಬಾರವರ ಪರಿಸ್ಥಿತಿಯನ್ನು ಗಮನಿಸಿರಬೇಕು (ಇವರು ಭಾರತದ ಒಬ್ಬ ಆಧ್ಯತ್ಮ ನಾಯಕ, ಆಧ್ಯಾತ್ಮದ ಹೆಸರಿನಲ್ಲಿ ಮೋಸ ಮತ್ತು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಲ್ಪಟ್ಟಿದ್ದಾರೆ). ಇವರು ಜನರನ್ನು ಆಶೀರ್ವದಿಸುತ್ತಿದ್ದರು. ಆದರೆ ಜನರು ಇವರನ್ನು ಮೋಸಗಾರ, ವಂಚಕ ಎಂದರು. ಅವರು ಆ ರೀತಿಯವರಲ್ಲ, ಅವರೊಬ್ಬ ಮುಗ್ಧ ಮತ್ತು ಒಳ್ಳೆಯ ವ್ಯಕ್ತಿ, ಆದರೆ ಅವರು ಯೋಗ ಮಾಯೆಯಲ್ಲಿ ಸಿಲುಕ್ಕಿದ್ದಾರೆ.
ಕೆಲವೊಮ್ಮೆ ಈ ರೀತಿಯಾಗುತ್ತದೆ, ಸತತವಾಗಿ ಯೋಗ ಮತ್ತು ಸಾಧನೆ (ಆಧ್ಯಾತ್ಮಿಕ ಆಚರಣೆ) ಮಾಡುವುದರಿಂದ ಕೆಲವು ದೈವಿಕ ಶಕ್ತಿಗಳು  ಜಾಗೃತವಾಗುತ್ತವೆ. ಈ ರೀತಿಯಾದಾಗ, ಭವಿಷ್ಯದ ಆಗು ಹೋಗುಗಳನ್ನು ಊಹಿಸಲು ಸಾಧ್ಯವಾಗುತ್ತದೆ. ಭವಿಷ್ಯದ ಸಂಗತಿಗಳು ಮತ್ತು ಆಗು ಹೋಗುಗಳ ಒಳ ಅರಿವು ಅವರಿಗಾಗುತ್ತದೆ. ಈ ಅವಸ್ಥೆಯಲ್ಲಿ ಅವರ ಆಂತರ್ಯವು ಸಂಪೂರ್ಣವಾಗಿ ನಿಷ್ಕಪಟ ಮತ್ತು ಬರಿದಾಗದಿದ್ದಲ್ಲಿ, ತಮ್ಮಲ್ಲಿ ಹಂಬಲಗಳು ಮತ್ತು ತಿರಸ್ಕಾರ ಭಾವನೆಗಳು ಇದ್ದಲ್ಲಿ, ಅವುಗಳು ಅವರ ಒಳ ಅರಿವಿಗೆ ಅಡ್ಡವಾಗುತ್ತವೆ. ಆದಕಾರಣ ಅವರ ಒಳ ಅರಿವು ಶತ ಪ್ರತಿ ಶತ ಸರಿಯಾಗಿರುವುದಿಲ್ಲ. ಸುಮಾರು ಐವತ್ತರಿಂದ ಅರುವತ್ತರಷ್ಟು ಸರಿಯಿದ್ದರೆ ಇನ್ನುಳಿದವುಗಳು ಸುಳ್ಳಾಗುತ್ತವೆ.
ಇದೇ ರೀತಿ ಯೋಗ ಮಾಯೆಯಲ್ಲಿ ಸಿಲುಕಿದ ಓರ್ವ ಯುವತಿಯನ್ನು ನಾವು ಕಂಡಿದ್ದೇವೆ. ಆಕೆಯು ಇಪ್ಪತೈದು ಮೂವತ್ತು ವರ್ಷಗಳ ಕಾಲ ತೀವ್ರವಾಗಿ ಸಾಧನೆ ಮಾಡಿ ಸಿದ್ಧಿ ಪಡೆದಿದ್ದರು. ದೇವಿ ಮಾತೆಯು ಅವರ ಬಳಿ ಇರುವರೆಂದು ಮತ್ತು ಅವರಿಗೆ ಯಾವ ಕಾರ್ಯಗಳನ್ನು ಮಾಡಬೇಕು ಎಂದು ಮಾರ್ಗದರ್ಶನ ನೀಡುತ್ತಿರುವಂತೆ ಅವರಿಗೆ ಅನಿಸುತ್ತಿತ್ತು . ಒಮ್ಮೆ ಅವರು ತಮ್ಮ ಪತಿಯ ಬಳಿ ಇದ್ದಾಗ, ದೇವಿ ಮಾತೆಯು ಅವರಿಗೆ ನಿನ್ನ ಪತಿಗೆ ಡಯಾಬಿಟಿಸ್ ಔಷಧಗಳನ್ನು ಕೊಡಬೇಡ ಎಂದು ಹೇಳಿದಂತೆ ಅನಿಸಿತು, ’ಅವರು ಗುಣಮುಖರಾಗುತ್ತಾರೆ, ಅವರಿಗೆ ಆಶೀರ್ವಾದಗಳನ್ನು ಮಾತ್ರ ಕೊಡುತ್ತಿರು’, ಅವರು ಕೇಳಿಸಿಕೊಂಡಿದ್ದು ಇದನ್ನು. ಆದ್ದರಿಂದ ಅವರು ಪತಿಗೆ ಹರಸುತ್ತಾ ಬಂದರು ಮತ್ತು ತಮ್ಮ ಪತಿಯವರಿಗೆ ಈ ರೀತಿ ಹೇಳುತ್ತಿದ್ದರು, "ಸ್ವತಃ ದೇವಿ ಮಾತೆಯು ನನ್ನ ಬಳಿ ಬಂದು ನನ್ನಲ್ಲಿ ಡಯಾಬಿಟಿಸ್ ಔಷಧಗಳನ್ನು ಕೊಡಬಾರದು ಎಂದು ಹೇಳಿದ್ದಾರೆ". ಆದ್ದರಿಂದ ಅವರು ಔಷಧಗಳನ್ನು ಕೊಡಲಿಲ್ಲ, ನಂತರ ಅವರ ಪತಿಯು ದೃಷ್ಟಿಹೀನರಾದರು. ಅವರು ತಮ್ಮ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. ಆಕೆಯು ಜನರೊಂದಿಗೆ ಮಾತನಾಡಿದಾಗ, ಅ ಜನರಿಗೆ ಬಹಳ ಸಂತೊಷವಾಗುತ್ತಿತ್ತು. ಆಕೆಯು ಹೇಳಿದ್ದು ಬಹಳಷ್ಟು ಸತ್ಯವಾಗುತ್ತಿತ್ತು, ಆದರೆ ಈ ಘಟನೆಯ ಬಳಿಕ ಆಕೆಯು ಕ್ಷೋಭೆಗೊಳಗಾಗಿ ನಂತರ ನಮ್ಮಲ್ಲಿ ಬಂದು ಕೇಳಿದರು, ’ಗುರುದೇವ ನನಗೆ ಏಕೆ ಹೀಗಾಗಿದೆ? ನನ್ನ ಪತಿಯು ಏಕೆ ದೃಷ್ಟಿಹೀನರಾದರು?  ನಾವು ಹೇಳಿದೆವು, ’ನೀವು ಯೋಗ ಮಾಯೆಯಲ್ಲಿ ಸಿಲುಕಿರುವಿರಿ’. ನಿರ್ಮಲ್ ಬಾಬಾ ಅವರಿಗೂ ಕೂಡ ಇದೇ ರೀತಿ ಆಗಿದೆ. ನೋಡಿ, ಕೆಲವು ವಿಷಯಗಳನ್ನು ನೀವು ಅರ್ಥಮಾಡಿಕೊಳ್ಳಬಹುದು ಮತ್ತು ಕೆಲವು ವಿಷಯಗಳನ್ನು ನಿಮಗೆ ಅರ್ಥಮಾಡಿಕೊಳ್ಳಲಾಗುವುದಿಲ್ಲ. ನಮ್ಮಲ್ಲಿ ಕುಂಡಲಿನಿ ಶಕ್ತಿಯು ಮೂಡಿದಾಗ, ಜನರನ್ನು ಹರಸುವ ಶಕ್ತಿಯುಂಟಾಗುತ್ತದೆ ಮತ್ತು ನಿಮ್ಮ ಆಶೀರ್ವಾದಗಳು  ಜನರಿಗೆ ಒಳ್ಳೆಯದು ಮತ್ತು ಹಿತವನ್ನುಂಟುಮಾಡುತ್ತವೆ, ಆದರೆ ನಮ್ಮೊಳಗಿನ ಹಂಬಲಗಳು; ಉದಾಹರಣೆಗೆ ರುಚಿಯಾದ ಭೋಜನಗಳಿಗೆ ಹಂಬಲಿಸುವುದು, ಈ ಹಂಬಲಗಳು ನಮ್ಮ ಒಳ ಅರಿವಿಗೆ ಅಡ್ಡಿಯಾಗುತ್ತವೆ. ಈ ರೀತಿಯಾದಾಗ ನಮ್ಮ ಆಶೀರ್ವಾದಗಳು ಮತ್ತು ನಮ್ಮ ಸಂದೇಶಗಳೂ ಕೂಡ ಅದೇ ರೀತಿಯ ಗುಣಗಳನ್ನು ಹೊಂದಿರುತ್ತವೆ. ಇದು ಸ್ವಲ್ಪ ಕಾಲ ಮು೦ದುವರೆದು ನ೦ತರ ಕಾಣೆಯಾಯಿತು. ಅವರು ಯೋಗ ಮಾಯೆಯಲ್ಲಿ ಸಿಲುಕಿಕೊಂಡರು ಮತ್ತು ಅವರಿಗೆ ಈ ವಿಷಯವನ್ನು ತಿಳಿಸುವಂತಹ ಅಥವಾ ಅರ್ಥಮಾಡಿಸುವಂತಹ ಜನರು ಇರಲಿಲ್ಲ, ಆತನಿಗೂ ಅದು ಅರ್ಥವಾಗಲಿಲ್ಲ.
ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡವರು ಸಿದ್ಧಿಗಳನ್ನು ಪಡೆದು ಅದರಿಂದ ಮೋಸಹೋಗುವುದಿಲ್ಲ ಅಥವಾ ಸಿಲುಕುವುದಿಲ್ಲ, ಅವರು ತಮ್ಮಲ್ಲಿ ಹಾಗೂ ಜ್ಞಾನದಲ್ಲಿ ಕೇಂದ್ರೀಕೃತರಾಗಿರುತ್ತಾರೆ. ಈ ರೀತಿ ಇರುವವರಲ್ಲಿ ಆಶೀರ್ವಾದಗಳು ನೈಸರ್ಗಿಕವಾಗಿ ಹರಿಯುತ್ತವೆ. ನಮ್ಮಲ್ಲಿ ಬಹಳ ಮಂದಿ ಹರಸುವವರಿದ್ದಾರೆ, ಇಲ್ಲಿ ಎಷ್ಟು ಜನ ಹರಸುವವರಿದ್ದೀರಿ? ಕೈಗಳನ್ನು ಮೇಲಕ್ಕೆ ಎತ್ತಿ! ನಿಮ್ಮ ಆಶೀರ್ವಾದಗಳು ಫಲಕಾರಿಯಲ್ಲವೇನು? (ಹರಸಬಲ್ಲ ಸಭಿಕರು ಕೂಗಿದರು, "ಹೌದು!")
ನೋಡಿ, ನೀವು ಕೂಡ ಜನರನ್ನು ಆಶಿರ್ವದಿಸಬಹುದು. ನೀವು ಭಕ್ತಿಯುಳ್ಳವರಾದಾಗ ಮತ್ತು ನಿಮ್ಮ ಸಾಧನೆಗಳಲ್ಲಿ ಸ್ಥಾಪಿತರಾದಾಗ, ನಿಮಗೂ ಕೂಡಾ ಜನರನ್ನು ಆಶೀರ್ವದಿಸುವ ಶಕ್ತಿಯುಂಟಾಗುತ್ತದೆ ಮತ್ತು ಜನರು ವ್ಯಾಧಿಗಳಿಂದ ಗುಣಮುಖರಾಗುತ್ತಾರೆ, ಆಸೆ ಆಕಾಂಕ್ಷೆಗಳು ಮತ್ತು ಕೋರಿಕೆಗಳು ನೆರೆವೇರುತ್ತವೆ. ಯೋಗಾಭ್ಯಾಸ ಮತ್ತು ಆಧ್ಯಾತ್ಮ ಸಾಧನೆಗಳಿಂದ ಖಂಡಿತವಾಗಿಯೂ ಇಂತಹ ಸಿದ್ಧಿಯುಂಟಾಗುತ್ತದೆ. ಆದರೆ ಇದನ್ನು ಮೂಢನಂಬಿಕೆಗಳಿಗೆ ಹೋಲಿಸುವುದು; ಉದಾಹರಣೆಗೆ ಹತ್ತು ಮಂದಿಗೆ ಊಟ ಕೊಟ್ಟರೆ ಅಥವಾ ನಾಯಿಗಳಿಗೆ ರೊಟ್ಟಿ ಕೊಟ್ಟಾಗ ಮಾತ್ರ ಆಶೀರ್ವಾದಗಳು ಉಂಟಾಗುತ್ತವೆ - ಈ ರೀತಿ ದಾರಿ ತಪ್ಪಿಸುವುದು ಸರಿಯಲ್ಲ.
ಅನುಗ್ರಹವು ಕಾರಣರಹಿತ, ಯೋಗ್ಯತೆ ಅರ್ಹತೆಗಳು ಬೇಕಿಲ್ಲ (ಅಹೇತು ಕೀ ಕೃಪಾ). ಯಾವ ಕಾರಣಗಳಿಂದ ಅಥವಾ ಅರ್ಹತೆಗಳಿಂದ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಅನುಗ್ರಹವು ಯಾವುದೇ ಕಾರಣವಿಲ್ಲದೆ ಸಿಗುತ್ತದೆ. ಯಾವುದೊಂದು ಆಚರಣೆಯಿಂದ ಅನುಗ್ರಹ ಉಂಟಾಗುತ್ತದೆ ಎಂಬುದು ಸರಿಯಲ್ಲ, ಹಾಗಾದರೆ ಅದು ಅನುಗ್ರಹವಲ್ಲ,  ಅದು ವ್ಯಾಪಾರ.
ನಿಮಗೆ ಅನುಗ್ರಹ, ಆಶೀರ್ವಾದಗಳು ಯಾವ ಕಾರಣವಿಲ್ಲದೆ ಉಂಟಾಗುತ್ತವೆ. ಭಗವಂತನ ಅನುಗ್ರಹವು ನಿರಂತರವಾಗಿದೆ, ಇದನ್ನು ನೀವು ಅರಿಯಿರಿ ಮತ್ತು ಭಗವಂತನ ಅನುಗ್ರಹ ಧಾರೆಯು ನಿಮ್ಮ ಮೇಲು೦ಟಾಗುತ್ತಿದೆ ಎಂಬುದನ್ನು ತಿಳಿಯಿರಿ.
ನಾವು ಹೆಚ್ಚು ಕೃತಜ್ಞರಾದಷ್ಟು ನಮ್ಮ ಜೀವನದಲ್ಲಿ ಹೆಚ್ಚು ಅನುಗ್ರಹದ ಅನುಭವವಾಗುತ್ತದೆ. ಸದಾಕಾಲ ಆಕ್ಷೇಪಿಸುವ ಮನಸ್ಸಿಗೆ ಅನುಗ್ರಹವನ್ನು ಅನುಭವಿಸಲಾಗುವುದಿಲ್ಲ. ಹೆಚ್ಚು ಕೃತಜ್ಞರಾಗಿರಿ ಮತ್ತು ಸ್ಮರಿಸಿರಿ. ನೀವು ಹೆಚ್ಚು ಸಂತೃಪ್ತರಾದಷ್ಟು ಹೆಚ್ಚು ಅನುಗ್ರಹವನ್ನು ಅನುಭವಿಸುವಿರಿ.
ಯಾವುದೋ ಒಂದು ವಿಶೇಷವಾದ ಅನುಗ್ರಹವಿದೆ ಎಂದು ತಿಳಿಯಬೇಡಿರಿ, ಅನುಗ್ರಹವು ನಿರಂತರವಾಗಿದೆ, ಅದರ ಮೌಲ್ಯವನ್ನು ನಾವು ಅರಿಯುತ್ತೇವಷ್ಟೆ, ಅನುಗ್ರಹವು ಮುಚ್ಚಿದ ಹಣದ ಚೀಲದಲ್ಲೂ ಪ್ರವೇಶಿಸಬಹುದು. ಅನುಗ್ರಹ ಪಡೆಯಲು ನೀವು ನಿಮ್ಮ ಹಣದ ಚೀಲವನ್ನು ತೆರೆಯುವ ಅಗತ್ಯವಿಲ್ಲ. ಯಾರಾದರೂ ನಿಮಗೆ ಅನುಗ್ರಹವನ್ನು ಹಣದಿಂದ ಪಡೆಯಬಹುದು ಎಂದು ಹೇಳಿದರೆ, ಖಚಿತವಾಗಿಯೂ ಅಲ್ಲಿ ಎನೋ ಲೋಪವಿದೆ ಎಂದು ತಿಳಿಯಿರಿ. ಭಗವಂತನು ಯಾವಾಗಲೂ ನಿಮ್ಮನ್ನು ಧಾರಾಳವಾಗಿಯೇ ಆಶೀರ್ವದಿಸುತ್ತಾನೆ. ಆಶೀರ್ವಾದ ಪಡೆಯಲು ನಿಮ್ಮ ಜೇಬಿನಿಂದ ಹಣ ತಗೆಯಬೇಕಿಲ್ಲ. ಇಂತಹ ತಪ್ಪುಭಾವನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿದರೆ ಅದನ್ನು ಯೋಗ ಮಾಯೆ ಎಂದು ಹೇಳಲಾಗುವುದು. ಇದಕ್ಕೆ ಯಾರನ್ನೂ ನಿಂದಿಸಲಾಗದು. ಆಧ್ಯಾತ್ಮ ಮಾರ್ಗದಲ್ಲಿರುವ, ಈ ಬಗೆಯ ಅಭ್ಯಾಸಗಳನ್ನು ರೂಢಿಸಿಕೊಂಡಿರುವಂತವರನ್ನೂ ಕೂಡ ನಾವು ದೂಷಿಸುವಂತಿಲ್ಲ. ಎಲ್ಲರನ್ನು ಹಾರೈಸುವಂತಹ ಮನಸ್ಸುಳ್ಳ ಅವರ ಹೃದಯದಲ್ಲಿ ದ್ವೇಷ ಇರುವುದಿಲ್ಲ. ಆದರೆ ಇಂತಹ ನಾಯಕರು ಅಥವಾ ಆಧ್ಯಾತ್ಮ ಮಾರ್ಗಾನುಯಾಯಿಗಳು ಇದರಿಂದ ಹಣ ಪಡೆಯುವ ವ್ಯವಹಾರದಲ್ಲಿ ತೊಡಗಿದಾಗ, ಅವರಲ್ಲಿಯ ಹರಸುವ ಚೈತನ್ಯವೂ ಕೂಡ ಮಾಯವಾಗುತ್ತದೆ, ಇದನ್ನು ನೀವು ಅರಿತುಕೊಂಡಿರಾ? ಅವರು ಸದ್ಬುದ್ಧಿಯನ್ನು ಕಳೆದುಕೊಂಡವರಾಗುತ್ತಾರೆ.
ಆದಕಾರಣ ನೀವು ಯಾರನ್ನಾದರೂ ಆಶೀರ್ವದಿಸುವಾಗ, ವ್ಯಾಪಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಡಿ. ನೀವು ಆಶೀರ್ವಾದಗಳನ್ನು ಧಾರಾಳವಾಗಿ ನೀಡಬೇಕು, ಹಣವನ್ನು ತೆಗೆದುಕೊಳ್ಳಬಾರದು. ಆದರೆ ಭಕ್ತಿ ಭಾವದಿಂದ ನಿಮಗೆ ಅವರು ಕಾಣಿಕೆ ನೀಡಿದರೆ, ನೀವು ಸ್ವೀಕರಿಸಿರಿ ಮತ್ತು ಆ ಹಣವನ್ನು ಒಳ್ಳೆಯ ಮಹತ್ವವುಳ್ಳ ಕಾರ್ಯಗಳಿಗೆ ಉಪಯೋಗಿಸಿರಿ. ಈ ರೀತಿ ಆಶೀರ್ವಾದಗಳಿಗೆ ಹಣ ಪಡೆಯುವ ಪದ್ದತಿಯು, ಯಾವುದೋ ಬಗೆಯಲ್ಲಿ ಎಲ್ಲಾ ಧರ್ಮಗಳಲ್ಲಿಯೂ ಕೂಡ ಆವರಿಸಿದೆ. ಇದು ಸರಿಯಲ್ಲ. ಆಶೀರ್ವಾದಗಳು ಯಾವುದೇ ಕಾರಣವಿಲ್ಲದೆ ನಿಮ್ಮಲ್ಲಿಗೆ ಧಾವಿಸುತ್ತವೆ.
ಇದೀಗ ನೀವು ಕೇಳಬಹುದು, ಜೀವನ ಕಲೆ ಶಿಬಿರಗಳಿಗೆ ಏಕೆ ಹಣ ಕೊಡಬೇಕು ಎಂದು. ಯಾರ ಮನಸ್ಸಿನಲ್ಲೋ ಈ ಮತ್ತೊಂದು ಪ್ರಶ್ನೆ ಮೂಡಿರಬಹುದು. ಇದಕ್ಕೆ ಕಾರಣವೇನೆಂದರೆ, ಶಿಕ್ಷಣ ಅಥವಾ ಜ್ಞಾನವು, ದಕ್ಷಿಣೆ ಕೊಡದೆ ಪಡೆಯಲಾಗುವುದಿಲ್ಲ. ನೋಡಿ ಆಶೀರ್ವಾದಗಳನ್ನು ಉಚಿತವಾಗಿ ಕೊಡಲಾಗುವುದು, ಆದರೆ ವಿದ್ಯಾರ್ಥಿಯಾಗಿ ಏನಾದರೂ ಕಲಿಯುವ ಇಚ್ಛೆಯುಳ್ಳವರಾದಾಗ, ದಕ್ಷಿಣೆ ಕೊಡದಿದ್ದರೆ, ಆ ಕೃತ್ಯವು ತಾಮಸಿಕ ಯಜ್ಞವಾಗುತ್ತದೆ (ಅನಿರ್ದೇಶಿತ ಅಥವಾ ನಕಾರಾತ್ಮಕತೆಯಿ೦ದ ಪ್ರೇರಿತ ಪ್ರಕ್ರಿಯೆ).
ಜ್ಞಾನಾರ್ಜನೆಯು ಒಂದು ಯಜ್ಞ. ನಾವಿಲ್ಲಿ ಕಲ್ಲಿಯುತ್ತಿದ್ದೇವೆ, ಜ್ಞಾನಾರ್ಜನೆಗೆ ಏನಾದರೂ ಕೊಡಬೇಕಾಗುತ್ತದೆ. ನಮಗೆ ಜ್ಞಾನವು ಲಭ್ಯವಾಗಲು ನಾವು ದಕ್ಷಿಣೆಯನ್ನು ಅಥವಾ ಬದಲಾಗಿ ಏನಾದರೂ ಅರ್ಪಣೆ ಮಾಡಬೇಕು. ಇದು ಶಾಸ್ತ್ರಗಳಲ್ಲಿ ಮತ್ತು ಪವಿತ್ರ ಗ್ರಂಥಗಳಲ್ಲಿನ ವಿಷಯ. ಇದನ್ನು ಸ್ವಲ್ಪ ಸಮಯ ಬದಿಗಿಡೋಣ. ಸಾಮಾನ್ಯವಾಗಿ ನಮ್ಮ ಅನುಭವದಿಂದ ಅರಿತಿರುವುದೇನು? ಶುಲ್ಕ ಪಾವತಿಸಿದ ನಂತರ ನೀವು ತರಗತಿಗಳಲ್ಲಿ ಕುಳಿತಾಗ, ನೀವು ಗಮನವಿಟ್ಟು ನಿಷ್ಠೆಯಿಂದ ಕಲಿಯಲು ಸಾಧ್ಯವಾಗುತ್ತದೆ. ನಾವು ಶುಲ್ಕವಿಲ್ಲದೆ ಶಿಬಿರಗಳನ್ನು ಆಯೋಜಿಸಿದರೆ, ಜನರು ಒಂದೆರೆಡು ದಿನಗಳು ಬಂದು ಮೂರನೆಯ ದಿನ ಓಡಿ ಹೋಗುತ್ತಾರೆ.  ಅವರು ಸಂಪೂರ್ಣ ಗಮನವಿಡುವುದಿಲ್ಲ ಮತ್ತು ತದೇಕಚಿತ್ತರಾಗುವುದಿಲ್ಲ.
ಆದುದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ನಾವು ಶುಲ್ಕ ಪಡೆಯುತ್ತೇವೆ. ಆದರೆ, ನಿಮಗೆ ಯಾರಾದರೂ, ನೀವು ದುಡ್ಡು ಕೊಟ್ಟರೆ ಮಾತ್ರ ಆಶೀರ್ವಾದ ಪಡೆಯಬಹುದು ಎಂದು ಹೇಳಿದರೆ,  ಅಂತಹ ಜನರಿಂದ ನೀವು ದೂರವಿರಬೇಕು. ಅವರು ಯೋಗ ಮಾಯೆಯಲ್ಲಿ ಸಿಲುಕಿರುತ್ತಾರೆ.
ಮಾಧ್ಯಮದವರು ಮತ್ತು ಜನರು ನಿರ್ಮಲ್ ಬಾಬಾರವರನ್ನು ಕಪಟಿಗ ಮಾತ್ತು ಮೋಸಗಾರ ಎಂದು ಕರೆಯುತ್ತಿದ್ದಾರೆ. ಹೀಗೆಲ್ಲಾ ನಡೆಯುತ್ತಿರುವುದನ್ನು ಅರ್ಥಮಾಡಿಕೊಳ್ಳಲಾಗದೆ ಆತನಿಗೆ ಸ್ಮೃತಿತಪ್ಪಿದಂತಾಗಿರಬೇಕು. ಹಿಂದೆ ಫಲಿಸಿದ ಆಶೀರ್ವಾದಗಳು ಈಗ ಏನಾಗಿದೆ? ಆ ಶಕ್ತಿಯು ಇದ್ದಕ್ಕಿದಂತೆ ಈಗ ಎಲ್ಲಿ ಮಾಯವಾಯಿತು? ಸಾಧನೆಯ ಹಾದಿಯಲ್ಲಿ ಹೀಗಾಗುತ್ತದೆ. ಆದುದರಿಂದಲೇ ಈ ರೀತಿ ಹೇಳಲಾಗಿದೆ, ’ಶ್ರೋತ್ರಿಯಾಮ್ ಬ್ರಹ್ಮನಿಷ್ಠಂ’ (ಒಬ್ಬ ಗುರುವು ಶ್ರೋತ್ರಿಯ ಮತ್ತು ಬ್ರಹ್ಮನಿಷ್ಠನಾಗಿರಬೇಕು ), ಶ್ರೋತ್ರಿಯ ಎಂದರೆ - ಶಾಸ್ತ್ರಗಳಲ್ಲಿ ಪರಿಪೂರ್ಣವಾದ ಒಳನೋಟ ಮತ್ತು ಅತ್ಯುತ್ತಮ ಭಾಷೆಯಲ್ಲಿ ಅದನ್ನು ಸ್ಪಷ್ಟವಾಗಿ ತಿಳಿಸುವ ನೈಪುಣ್ಯತೆ ಹೊಂದಿರುವವನು. ಬ್ರಹ್ಮನಿಷ್ಠ ಎಂದರೆ - ಸತ್ಯದ ಜ್ಞಾನದಲ್ಲಿ ಸ್ಥಾಪಿತನಾಗಿರುವವನು.
ಶ್ರೋತ್ರಿಯ ಮತ್ತು ಬ್ರಹ್ಮನಿಷ್ಠನಾಗುವವರೆಗೂ ಇಂತಹ ಚಮತ್ಕಾರಗಳು ಮತ್ತು ಸಾಮರ್ಥ್ಯವು ಸ್ವಲ್ಪ ದಿನಗಳ ಕಾಲ ಮಾತ್ರ ಫಲಿಸುತ್ತದೆ, ನಂತರ ಇವುಗಳು ಕೊನೆಗೊಳ್ಳುತ್ತವೆ. ಇದು ಯೋಗ ಮಾಯೆಯ ಆಟ.
ನಮ್ಮಲ್ಲಿ ಓರ್ವ ಮಹಿಳೆ ಬಂದಿದ್ದರು ಮತ್ತು ಆಕೆಯನ್ನು ಕಂಡ ಜನರು, ಇವರು ದೇವಿ ಮಾತೆಯ ಅವತಾರವೆಂದು ಹೇಳ ತೊಡಗಿದರು, ನಾವು ಆಕೆಗೆ ಗೌರವಾನ್ವಿತವಾಗಿ ಅವರ ಸ್ಥಾನವನ್ನು ಅಲಂಕರಿಸುವಂತೆ ಹೇಳಿದೆವು.
ಹೌದು, ಇದನ್ನೆಲ್ಲಾ ನೋಡಿದಾಗ ಕೋಪವುಂಟಾಗುತ್ತದೆ, ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವುದು ಸಹಜವೇ, ಆದರೆ ಕೋಪಗೊಂಡು ಏನಾದರೂ ಹೇಳುವುದು ಅಥವಾ ಪ್ರತಿಕ್ರಿಯೆ ಮಾಡುವುದರಿಂದ  ನಿಮ್ಮ ಶಕ್ತಿಯು ಕ್ಷೀಣಿಸುತ್ತದೆ.
ನಿಮಗೆ ಗೊತ್ತಾ, ಒಬ್ಬ ವ್ಯಕ್ತಿಯಲ್ಲಿ ಸಿದ್ಧಿಗಳು ಅಥವಾ ಶಕ್ತಿ ಸಾಮರ್ಥ್ಯಗಳು ವ್ಯಕ್ತವಾದಾಗ, ಅದು ಆತನನ್ನು ಬೇರೆ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಈ ಸಂದರ್ಭಗಳಲ್ಲಿ ಅವರಿಗೆ ಇಲ್ಲಿಯ ಸಂಪರ್ಕ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ಮನಸ್ಸು ತನ್ನ ಆಟಗಳನ್ನು ತೋರಿಸುತ್ತದೆ. ಆದಕಾರಣ, ಅವರು ದುಷ್ಟರು, ಅಪ್ರಾಮಾಣಿಕರು ಎಂದಲ್ಲ. ಕೆಲವರು ಅಪ್ರಾಮಾಣಿಕರಿದ್ದಾರೆ, ಆದರೆ ಬಹಳಷ್ಟು ಜನರು ಯೋಗ ಮಾಯೆಯಲ್ಲಿ ಸಿಲುಕಿದ್ದಾರೆ.
ಆದುದರಿಂದ ಯೋಗ ಸಾಧನೆಯಲ್ಲಿ ಕೂಡ ಯೋಗ ಮಾಯೆಯನ್ನು ಜಯಿಸಬೇಕಾಗುತ್ತದೆ, ತದನಂತರವೇ ಪರಿಪೂರ್ಣತೆ ಮತ್ತು ಸಿದ್ಧಿಗಳು ಲಭಿಸಲು ಸಾಧ್ಯ. ಅಲ್ಲಿಯವರೆಗೂ ಜೀವನದಲ್ಲಿ ಪರಿಪೂರ್ಣತೆಯು ಗೋಚರವಾಗಲು ಸಾಧ್ಯವಾಗುವುದಿಲ್ಲ.
ನೀವು ಸಾಧನೆಯ ಹಾದಿಯಲ್ಲಿರುವಾಗ, ನೀವು ಗಮನಿಸಿದರೆ, ಸಾಧಕರು ಮೊದಲು ಜನರನ್ನು ಶಪಿಸುವ ಶಕ್ತಿಯನ್ನು ಹೊಂದುತ್ತಾರೆ.  ಆದಕಾರಣ ಯಾರಿಗೂ ಕೆಟ್ಟದನ್ನು ಹೇಳಬಾರದು, ನಿಮ್ಮ ಮನಸ್ಸಿನಲ್ಲಿ ಅನ್ಯರಿಗೆ ಕೆಟ್ಟ ಆಲೋಚನೆಗಳು ಅಥವಾ ಕೋಪ ಬಂದರೆ, ಅವರಿಗೆ ತಕ್ಷಣವೇ ಏನಾದರೂ ತೊಂದರೆಯಾಗುತ್ತದೆ, ಅಲ್ಲವೆ?
ನಿಮ್ಮಲ್ಲಿ ಎಷ್ಟು ಜನರಿಗೆ ಈ ರೀತಿಯ ಅನುಭವವಾಗಿದೆ? ನಿಮಗೆ ಬೇರೊಬ್ಬರಲ್ಲಿ ಕೋಪ ಬಂತು ಮತ್ತು ಅವರು ತಕ್ಷಣವೇ ನಷ್ಟ ಅನುಭವಿಸಿದರು, ನಿಮಗೆ ಈ ರೀತಿಯ ಅನುಭವವಾಗಿಲ್ಲವೇ? (ಸಭಿಕರಲ್ಲಿ ಬಹಳ ಮಂದಿ ತಮ್ಮ ಕೈಗಳನ್ನು ಮೇಲಕ್ಕೆ ಎತ್ತಿದರು). ಆದುದರಿಂದ ಯಾರಿಗೂ ಕೂಡಾ ಕೆಟ್ಟದನ್ನು ಬಯಸಬೇಡಿರಿ. ಎಲ್ಲರನ್ನೂ ಆಶೀರ್ವದಿಸಿರಿ, ಆಶೀರ್ವಾದಗಳನ್ನು ಕೊಡುವುದರಲ್ಲಿ ಜಿಪುಣರಾಗಬೇಡಿ. ಆಶೀರ್ವಾದ ಮಾಡುವುದರಿಂದ ನಿಮ್ಮ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಯಬೇಡಿ. ಕೆಲವರಿಗೆ ಈ ರೀತಿಯ ತಪ್ಪು ಅಭಿಪ್ರಾಯಗಳಿರುತ್ತವೆ. ಇದು ಕೂಡ ಯೋಗ ಮಾಯೆ.
ಹಲವು ಬಗೆಯ ಯೋಗ ಮಾಯೆಗಳಿವೆ. ಕೆಲವರು ಅವರನ್ನು ಯಾರಾದರೂ ಮುಟ್ಟಿದರೆ ಸಹನೆ ಕಳೆದುಕೊಂಡು ಕೋಪಗೊಳ್ಳುತ್ತಾರೆ, ನಮ್ಮ ಶಕ್ತಿಯನ್ನು ಅವರು ತೆಗೆದುಕೊಂಡರೆಂದು ಅವರು ತಿಳಿಯುತ್ತಾರೆ. ನೀವು ಏಕೆ ಭಯ ಪಡುವಿರಿ? ಪ್ರಜ್ಞಾ ಸಾಗರದಲ್ಲಿ ನಾವು ಮುಳುಗಿದ್ದೇವೆ. ಹೌದು , ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಶಿಸ್ತಿನಿಂದ ಇರಬೇಕು; ಅದು ಮುಖ್ಯ.
ಆದುದರಿಂದ, ಕೆಲವೇ ಸಿದ್ಧಿಗಳಲ್ಲಿ ಒಲವುಹೊಂದುವ ಪ್ರವೃತಿಯನ್ನು ಯೊಗ ಮಾಯೆ ಎಂದು ಹೇಳಬಹುದು. ಇದನ್ನು ನೀವು ದಾಟಿದಾಗ, ನೀವು ಸ್ವಾಭಾವಿಕವಾಗಿಯೇ ಸಿದ್ಧಿಗಳನ್ನು ಗಳಿಸುವಿರಿ. ನಂತರ ನೀವು ಜನರನ್ನು ಆಶೀರ್ವದಿಸಿರಿ, ಅವರ ಆಸೆ ಆಕಾಂಕ್ಷೆಗಳು ಕೂಡಾ ಸ್ವಾಭಾವಿಕವಾಗಿ ನೆರೆವೇರುತ್ತವೆ. 

ಪ್ರಶ್ನೆ: ಅಹಂಕಾರ,  ಗರ್ವ ಮತ್ತು ಆತ್ಮ ಗೌರವ ಇವುಗಳ ನಡುವಿರುವ ವ್ಯತ್ಯಾಸವೇನು?
ಶ್ರೀ ಶ್ರೀ ರವಿ ಶಂಕರ್: ಅಹಂಕಾರ ಮತ್ತು ಗರ್ವ ಇವುಗಳಲ್ಲಿ ವ್ಯತ್ಯಾಸವಿಲ್ಲ,  ’ನಾನು’ ಅನ್ನುವುದು ಅಹಂಕಾರ. ನಾನು ಮಾತ್ರ ಒಳ್ಳಯವ, ಬೇರೆ ಯಾರೂ ಕೂಡ ಒಳ್ಳೆಯವರಲ್ಲ; ಇದು ಗರ್ವ. ವಿವಿಧ ಬಗೆಯ ಗರ್ವಗಳಿವೆ. ಆತ್ಮ ಗೌರವವು ನೀವು ಎಂದೂ ಕಳೆದುಕೊಳ್ಳಲಾರದಂತದ್ದು,  ಆತ್ಮವನ್ನು ನೀವು ಅರಿತಾಗ, ನಿಮಗೆ ಆತ್ಮನಲ್ಲಿ ಗೌರವ ಇರುತ್ತದೆ ಮತ್ತು ಅದೇ ಆತ್ಮ ಗೌರವ.
ಯಾರಾದರೂ ನಿಮ್ಮನ್ನು ಅವಮಾನಿಸುತ್ತಿದ್ದರೆ, ನೀವು ಅಲ್ಲಿಂದ ದೂರ ಸರಿಯಿರಿ. ನಿಮ್ಮನ್ನು ಯಾರಾದರೂ ಕೆಟ್ಟ ಶಬ್ದಗಳಿಂದ ದೂಷಿಸಿದಾಗ, ಅದನೆಲ್ಲಾ ನೀವು ಕೇಳಿಸಿಕೊಳ್ಳುತ್ತಾ ಅದನ್ನು ಯೋಚಿಸುತ್ತಿದ್ದರೆ, ನಿಮ್ಮ ಆತ್ಮಕ್ಕೆ ನೋವಾಗುತ್ತದೆ ಮತ್ತು ನಿಮ್ಮ ಉತ್ಸಾಹ ಕಡಿಮೆಯಾಗುತ್ತದೆ. ಆದುದರಿಂದ ಯಾರದರೂ ನಿಮ್ಮನ್ನು ಕೆಟ್ಟ ಶಬ್ದಗಳಿಂದ ನಿಂದಿಸುವುದನ್ನು ಅಥವಾ ಅವಮಾನಗೊಳಿಸುವುದನ್ನು ನೀವು ಕೇಳಿಸಿಕೊಳ್ಳಬಾರದು.
ಇದು ಇಂದು ನಾವು ಕಲಿತ ಹೊಸ ವಿಷಯ.

ಪ್ರಶ್ನೆ: ಅಹಂಭಾವವಿಲ್ಲದೆ ಸ್ವಪ್ರಯತ್ನವಾಗುವುದಿಲ್ಲ ಎಂದು ಹೇಳಲಾಗಿದೆ, ಹಾಗೂ ನಮಗೆ ಅಹಂಭಾವ ಇರಬಾರದು ಎಂದು ಕೂಡಾ ಹೇಳಲಾಗಿದೆ. ಇದು ಸ್ವಲ್ಪ ಗೊಂದಲಮಯವಾಗಿದೆ.
ಶ್ರೀ ಶ್ರೀ ರವಿ ಶಂಕರ್: ಹೌದು, ಎರಡೂ ನಿಜ. ನೀವು ’ಆತ್ಮಿಯರಿಗೊಂದು ಕಿವಿಮಾತು’ ಈ ಪುಸ್ತಕವನ್ನು ಓದಿರಿ, ಇವೆಲ್ಲಾ ವಿಷಯಗಳನ್ನು ನಾವು ವಿವರವಾಗಿ ಹೇಳಿದ್ದೇವೆ.